Tag Archives: ಸಿ.ಎಚ್.ಹನುಮಂತರಾಯ

ಯಡಿಯೂರಪ್ಪ ಮತ್ತು ಸಿ.ಎಚ್. ಹನುಮಂತರಾಯ

ಬಿ.ಎಸ್. ಕುಸುಮ

ಸಮಾಜದಲ್ಲಿ ’ನ್ಯಾಯ’ ಎಂಬ ಕಲ್ಪನೆಯೂ ಇತ್ತೀಚಿನ ದಿನಗಳಲ್ಲಿ ಬಹಳ ಸೂಕ್ಷ್ಮಗೊಳ್ಳುತ್ತಿದೆ. ಮನುಷ್ಯ-ಸಮಾಜ-ಕಾನೂನು ಇವುಗಳ ಸಂಬಂಧ ಬಹಳ ಸಂಕೀರ್ಣವಾದದ್ದು. ಸಮಾಜದ ಉನ್ನತ ಹುದ್ದೆಯಲ್ಲಿರುವ ಅನೇಕ ವ್ಯಕ್ತಿಗಳು ಭ್ರಷ್ಟಚಾರದ ಪಾಲ್ಗೊಂಡು ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನೇ ಮರೆತು ಮೆರೆಯುತ್ತಿದ್ದಾರೆ. ಇಂತಹ ವ್ಯಕ್ತಿಗಳ ಅನ್ಯಾಯದ ವಿರುದ್ದ ಹೋರಾಡುವವರ ಪರವಾಗಿ ನಿಂತು ನ್ಯಾಯಾಲಯದಲ್ಲಿ ನ್ಯಾಯ ದೊರಕಿಸುವುದು ವಕೀಲರ ಕರ್ತವ್ಯ. ನಮ್ಮ ಉದ್ಯಾನನಗರಿಯಲ್ಲಿ ಸುಮಾರು 7000 ಕ್ಕೂ ಹೆಚ್ಚು ಮಂದಿ ವಕೀಲ ವೃತ್ತಿಯಲ್ಲಿದ್ದಾರೆ. ಇವರಲ್ಲಿ ಕ್ರಿಮಿನಲ್ ಕೇಸ್‌ಗಳಲ್ಲಿ ಪ್ರಾವೀಣ್ಯತೆ ಪಡೆದು ಅವುಗಳನ್ನು ಕೈಗೆತ್ತಿಕೊಳ್ಳುವ ವಕೀಲರು ಕೇವಲ 350 ಮಂದಿ ಮಾತ್ರ. ಈ 350 ವಕೀಲರಲ್ಲಿ ಅನೇಕ ಜನರು ತಮ್ಮ ವೃತ್ತಿಯಲ್ಲಿ ಹೆಸರು ಮಾಡಿದ್ದಾರೆ. ಇವರಲ್ಲಿ ಕಳೆದ ನಾಲ್ಕು ದಶಕಗಳಿಂದ ವಕೀಲಿ ವೃತ್ತಿಯಲ್ಲಿ ತೊಡಗಿರುವ ಸಿ.ಎಚ್. ಹನುಮಂತರಾಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಕರ್ನಾಟಕದಲ್ಲಿ ಗಣಿ ಅವ್ಯವಹಾರ ಮತ್ತು ಭೂಹಗರಣಗಳದ್ದೇ ಸುದ್ದಿ. ಲೋಕಾಯುಕ್ತ ಸಂತೋಷ ಹೆಗಡೆಯವರು ಗಣಿ ಅವ್ಯವಹಾರದ ಬಗ್ಗೆ ನೀಡಿದ್ದ ವರದಿಯನ್ನು ಸರ್ಕಾರ ಇಲ್ಲಿಯತನಕ ಒಪ್ಪಿಕೊಂಡಿಲ್ಲ. ಹಾಗೆಯೇ ತಳ್ಳಿಯೂ ಹಾಕಿಲ್ಲ. ಇನ್ನು ಭೂಹಗರಣಗಳದ್ದು ಇನ್ನೊಂದು ಕತೆ. ಇಲ್ಲಿ ಯಾವುದೇ ಸರ್ಕಾರಿ ಅಥವ ಸಂವಿಧಾನಿಕ ಸಂಸ್ಥೆ ರಾಜ್ಯದಲ್ಲಿ ಆಗಿರುವ ಭೂಹಗರಣಗಳ ಬಗ್ಗೆ ಯಾವುದೇ ವರದಿ ನೀಡಿಲ್ಲ. ಹಾಗೆಯೇ ಸ್ವಯಂಪ್ರೇರಿತವಾಗಿ ಈ ಅವ್ಯವಹಾರಗಳ ಪತ್ತೆ ಮಾಡಿ ತಪ್ಪಿತಸ್ತರ ವಿರುದ್ಧ ಮೊಕದ್ದಮೆ ದಾಖಲಿಸಿಲ್ಲ. ಈ ವಿಭಾಗದಲ್ಲಿ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿಕೊಂಡು ಅನೇಕ ಸಮಾಜಮುಖಿ ವ್ಯಕ್ತಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ, ಸರ್ಕಾರದ ಭ್ರಷ್ಟಾಚಾರವನ್ನು ತಡೆಯಲು ಹೋರಾಡುತ್ತಿದ್ದಾರೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇಂತಹುದೇ ಭೂಹಗರಣಕ್ಕೆ (ಡಿ-ನೋಟಿಫಿಕೇಷನ್) ಸಂಬಂಧಿಸಿದಂತೆ 22.01.2011 ರಂದು ಶಿವಮೊಗ್ಗದ ವಕೀಲಾರದ ಸಿರಾಜಿನ್ ಪಾಷಾ ಮತ್ತು ಕೆ.ಎನ್, ಬಾಲ್‌ರಾಜ್‌‍ರವರು ಯಡಿಯೂರಪ್ಪರವರ ವಿರುದ್ದದ 1625 ಪುಟಗಳ ಪ್ರಕರಣವನ್ನು ರಾಜ್ಯಪಾಲರ ಅನುಮತಿ ಪಡೆದು ಲೋಕಾಯುಕ್ತ ಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದರು. 2 ಮತ್ತು 3ನೇ ಪ್ರಕರಣದ ಫಲವಾಗಿ 15.10.2011ರಂದು ಜೈಲು ಸೇರಿದ ಕರ್ನಾಟಕ ಮಾಜಿ ಮುಖ್ಯಮಂತ್ರಿಯೆಂಬ ಕುಖ್ಯಾತಿಗೆ ಯಡಿಯೂರಪ್ಪ ಪಾತ್ರವಾಗಿದ್ದಾರೆ. ಇದೇ ಪ್ರಕರಣದಲ್ಲಿ ಯಡಿಯೂರಪ್ಪನವರಿಗೆ ಜೈಲಿನಲ್ಲಿ ಜೊತೆಯಾಗಿದ್ದವರು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ. ಈ ಪ್ರಕರಣದಲ್ಲಿ ಯಡಿಯೂರಪ್ಪ 25 ದಿನಗಳ ಜೈಲುವಾಸವನ್ನು ಅನುಭವಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇನ್ನೂ ಮುಂದುವರೆಯುತ್ತಿದೆ.

ಈ ಮೊಕದ್ದಮೆಯಲ್ಲಿ ಸಿರಾಜಿನ್ ಪಾಷಾ ಮತ್ತು ಬಾಲ್‌ರಾಜ್‌ರ ಪರ ವಕೀಲರಾಗಿದ್ದವರು ಸಿ.ಎಚ್.ಹನುಮಂತರಾಯರು, ಮತ್ತವರ ಸಹೋದ್ಯೋಗಿ ನಿತಿನ್. ಒಟ್ಟು 5 ಖಾಸಗಿ ಪ್ರಕರಣಗಳಲ್ಲಿ 4 ಪ್ರಕರಣಗಳಿಗೆ ಕೋರ್ಟ್ ಈಗಾಗಲೇ ಸಮನ್ಸ್ ಜಾರಿಮಾಡಿದ್ದು, 5ನೇ ಖಾಸಗಿ ದೂರಿನ ವಿಚಾರಣೆ ನಡೆಸಲು ಲೋಕಾಯುಕ್ತ ಕೋರ್ಟ್‌ನ ನ್ಯಾಯಧೀಶರಾದ ಸುಧೀಂದ್ರರಾವ್ ಅವರು ಯಡಿಯೂರಪ್ಪ ಹಾಗೂ ಇನ್ನಿತರ ಆರೋಪಿಗಳಾದ ಧವಳಗಿರಿ ಪ್ರಾಪರ್ಟಿಸ್‌ನ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಆದರ್ಶ ಡೆವಲಪರ್ಸ್‌ನ ಜೈಶಂಕರ್ ಸೇರಿದಂತೆ ಆರೋಪಿತರೆಲ್ಲರಿಗೂ ಮೇ 24 ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಿಂದ ಬಂದ ಹನುಮಂತರಾಯರು ಹೈಸ್ಕೂಲ್ ತರಗತಿಯಲ್ಲಿದ್ದಾಗಲೇ ವಕೀಲನಾಗಬೇಕು ಎಂಬ ಆಕಾಂಕ್ಷೆ ಹೊತ್ತವರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಮುಗಿಸಿದರು. ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಹನುಮಂತರಾಯರು ಮುಂದೆ ಕಾನೂನಿನ ಕ್ಷೇತವನ್ನು ಆಯ್ದುಕೊಂಡರು. 1972ರಲ್ಲಿ ಕಾನೂನು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಹನುಮಂತರಾಯರು ಕರ್ನಾಟಕದ ಆಗಿನ ಖ್ಯಾತ ಕ್ರಿಮಿನಲ್ ವಕೀಲರಾದ ಪಿ,ಎಸ್. ದೇವದಾಸರ ಬಳಿ ಜೂನಿಯರ್ ಆಗಿ ಕೆಲಸ ಆರಂಭಿಸಿದರು. 1980ರಲ್ಲಿ ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದ ಹನುಮಂತರಾಯರು ಈ 40 ವರ್ಷದ ವೃತ್ತಿ ಜೀವನದಲ್ಲಿ 1000ಕ್ಕೂ ಹೆಚ್ಚು ಖಾಸಗಿ ಕ್ರಿಮಿನಲ್ ಕೇಸ್‌ಗಳನ್ನು ನಡೆಸಿದ್ದಾರೆ. ಬಹುಶಃ ಕರ್ನಾಟಕದಲ್ಲಿ ಇಷ್ಟೊಂದು ಕ್ರಿಮಿನಲ್ ಮೊಕದ್ದಮೆಗಳನ್ನು ನಡೆಸಿದ ವಕೀಲರು ಅಪರೂಪವೆ. ಹನುಮಂತರಾಯರ ಅನೇಕ ಕೇಸುಗಳಲ್ಲಿ ಬಹಳ ಮುಖ್ಯವಾದವುಗಳೆಂದರೆ ಡಿ.ಸಿ.ಪಿ. ಎನ್. ಸೋಮಶೇಖರ್ ಅವರ ಕೇಸ್, ಬೀನ ಕೊಲೆ ಕೇಸ್, ಶ್ರದ್ದಾನಂದಸ್ವಾಮಿ ಕೇಸ್, ನಗರಿ ಬಾಬಯ್ಯ ಕೇಸ್, ಇತ್ಯಾದಿ..

ಹನುಮಂತರಾಯರು ಸಾಹಿತ್ಯ ವಿದ್ಯಾರ್ಥಿ ಆಗಿದ್ದ ಕಾರಣ ಅವರ ವೃತ್ತಿ ಜೀವನದ ಅನುಭವಗಳನ್ನು ಆಗಾಗ ಅಕ್ಷರರೂಪದಲ್ಲೂ ದಾಖಲಿಸುತ್ತಿದ್ದರು. ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಪಿ.ಲಂಕೇಶರ ಶಿಷ್ಯರೂ ಆಗಿದ್ದ ಹನುಮಂತ ರಾಯರು ’ಲಂಕೇಶ್ ಪತ್ರಿಕೆ’ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ಜೊತೆಗೆ ಕೆಲವು ಪುಸ್ತಕಗಳನ್ನು ಸಹ ಬರೆದಿದ್ದಾರೆ. ’ರುದ್ರಮಣೀಯ ಬೆಟ್ಟದಲ್ಲಿ ಹೆಜ್ಜೇನಿನ ಹೊಳೆ’,’ದೆವ್ವದ ದಿಗಿಲಿನಲ್ಲಿ’,’ಮಾಯಾಡುವ ಸಸ್ಯಗಳ ಯಕ್ಷಲೋಕ’,’ತಾಜ್‌ಮಹಲ್ ಬಡವರ ಪ್ರೇಮವನ್ನು ಅಣಕಿಸುತ್ತದೆ’,’ಕುಮಾರನ ಚಿತ್ತ ಛಿದ್ರಗೊಳಿಸಿದ ಸಮುದ್ರವತಿ’,’ಗರುಡಗಣ್ಣುಗಳ ಗಾರುಡಿಗ’, ಇವು ಅವರ ಪ್ರಕಟಿತ ಪುಸ್ತಕಗಳು. ಲಂಕೇಶರ ನಿಧನಾನಂತರ ’ಲಂಕೇಶ್ ಪತ್ರಿಕೆ’ಯಲ್ಲಿ ಹನುಮಂತರಾಯರು ’ವಕೀಲರೊಬ್ಬರ ವಗೈರೆಗಳು’ ಎಂಬ ಅಂಕಣ/ಧಾರಾವಾಹಿ ರೂಪದ ಲೇಖನಗಳನ್ನು ಬರೆದರು. ನಂತರ ಈ ಲೇಖನ ಮಾಲೆ “ವಕೀಲರೊಬ್ಬರ ವಗೈರೆಗಳು” ಪುಸ್ತಕವಾಗಿ ಪ್ರಕಟವಾಗಿದೆ. ಈ ಕೃತಿ ಓದುಗರಲ್ಲಿ ಕುತೂಹಲವನ್ನು ಕಾಪಾಡಿಕೊಳ್ಳುತ್ತಾ ನ್ಯಾಯಶಾಸ್ತ್ರದ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತದೆ. ಕಾನೂನು ಅಭ್ಯಾಸ ಮಾಡಿದವರಿಗಷ್ಟೇ ಅಲ್ಲದೆ, ಕಾನೂನಿನ ಪರಿಚಯ ಇಲ್ಲದ ಸಾಮಾನ್ಯ ಓದುಗರ ಮನಸ್ಸನ್ನು ಸಹ ಸೆರೆಹಿಡಿಯುತ್ತದೆ. ಕನ್ನಡ ಪುಸ್ತಕ ಪ್ರಾಧಿಕಾರರಿಂದ ಪ್ರಕಟಗೊಂಡ ಈ ಕೃತಿಗೆ 2008ನೇ ಸಾಲಿನ ’ಸಂಕೀರ್ಣ’ ವಿಭಾಗದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.