Tag Archives: ಹೊಸ ದಿಗಂತ

ಹೊಸ ಪತ್ರಿಕೆಯ ಸುತ್ತಮುತ್ತ..


– ಪರಶುರಾಮ ಕಲಾಲ್    


ವಿಜಯ ಸಂಕೇಶ್ವರರ ಹೊಸ ಪತ್ರಿಕೆ ರಂಗಕ್ಕಿಳಿಯಲು ದಿನಗಣನೆ ಆರಂಭವಾಗಿವೆ. ಪತ್ರಿಕೆ ಯಾವಾಗ ಆರಂಭವಾಗುತ್ತದೆಯೋ ಗೊತ್ತಿಲ್ಲ. ಜಿಲ್ಲಾ ವರದಿಗಾರರು, ಸುದ್ದಿ ಸಂಪಾದಕರು, ಉಪ ಸಂಪಾದಕರು ಎಲ್ಲರೂ ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಸುದ್ದಿ ಕಳಿಸುವುದು. ತಿದ್ದುವುದು. ಪೇಜು ಸಿದ್ಧಪಡಿಸುವುದು ಎಲ್ಲಾ ನಡೆಯುತ್ತಿದೆ. ತಾವು ರೂಪಿಸಿದ ಪತ್ರಿಕೆಯನ್ನು ತಾವೇ ನೋಡಿಕೊಂಡು ಡೆಸ್ಕಿನಲ್ಲಿರುವವರು ಸಂತೋಷ ಪಡುತ್ತಿದ್ದಾರೆ.

ಜಿಲ್ಲಾ ವರದಿಗಾರರು, ಹಿರಿಯ ವರದಿಗಾರರು ಯುದ್ಧ ಎದುರಿಸಲು ಸಜ್ಜಾಗಿ ಸೇನಾನಿಗಳಂತೆ ಪೆನ್ನು ಚಾಚಿಯೇ ಕುಳಿತುಕೊಂಡಿದ್ದಾರೆ. ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ ಪತ್ರಿಕೆಗಳನ್ನು ಹೇಗೆ ಎದುರಿಸಬೇಕೆಂದು ಯೋಜಿಸಲಾಗಿದೆ. ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ ಬರೆಯುವ ‘ಬೆತ್ತಲೆ ಜಗತ್ತು’ ರೀತಿಯಲ್ಲಿ ಹೊಸ ದಿಗಂತ ಪತ್ರಿಕೆಯಲ್ಲಿ ‘ಮೇರಾ ಭಾರತ್ ಮಹಾನ್’ ಎಂಬ ಅಂಕಣ ಬರೆಯುತ್ತಿದ್ದ ರವೀಂದ್ರ ದೇಶಮುಖ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿರಿಯ ಉಪ ಸಂಪಾದಕ ಸ್ಥಾನ ನೀಡಲಾಗಿದ್ದು, ಪ್ರತಿವಾರ ಅಂಕಣ ಹಾಗೂ ಸಂಪಾದಕೀಯ ಬರೆಯುವ ಕೆಲಸ ಒಪ್ಪಿಸಿದ್ದಾರೆ. ಆರೆಸೆಸ್ಸ್ ಪತ್ರಿಕೆಯಲ್ಲಿ ಬರುವ ಲೇಖನವನ್ನು ಕನ್ನಡಕ್ಕೆ ಅನುವಾದ ಮಾಡಿ ‘ಮೇರಾ ಭಾರತ್ ಮಹಾನ್’ ಎಂದು ತಮ್ಮ ಬೈಲೈನ್ ಹಾಕಿಕೊಳ್ಳುತ್ತಿದ್ದರು ರವೀಂದ್ರ ದೇಶಮುಖ್. ಈಗ ಸ್ವತಂತ್ರವಾಗಿ ಮತ್ತೊಂದು ಬೆತ್ತಲೆ ಜಗತ್ತು ಅವರು ಅನಾವರಣ ಮಾಡಬೇಕಿದೆ.

ವಿಜಯ ಕರ್ನಾಟಕ ಮಾತ್ರ ಬರಲಿರುವ ಹೊಸ ಪತ್ರಿಕೆಯನ್ನು ಎದುರಿಸಲು ಸಜ್ಜಾಗಿ, ಕೋಟೆಯನ್ನು ಭದ್ರ ಪಡಿಸಿಕೊಳ್ಳುವ ಕೆಲಸ ನಡೆಸಿದೆ. ಯುವ ಘರ್ಜನೆ ಎನ್ನುವುದು ಅದರ ಅಂತಹ ಒಂದು ಪ್ರಯತ್ನದ ಭಾಗ. ಪ್ರಜಾವಾಣಿಯು ಇಷ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳದಿದ್ದರೂ ಆಪಾಯ ಎದುರಿಸಲು ಅದು ಪ್ರಯತ್ನ ಮಾಡುತ್ತಿದೆ. ಸಾಪ್ತಾಹಿಕ ಪುರವಣಿ ಜೊತೆ ದೇಶಕಾಲದ ಜೊತೆಗೆ ನೀಡುತ್ತಿದ್ದ ಸಾಹಿತ್ಯ ಪುರವಣಿಯನ್ನು ಈಗ ತಾನೇ ನಿರ್ವಹಿಸುತ್ತಾ ಉಳಿಸಿಕೊಂಡಿದೆ. ಯುವಜನರಿಗಾಗಿ ಕಾಮನ ಬಿಲ್ಲು ಎಂಬ ಸಣ್ಣ ಪುರವಣಿಯನ್ನು ಹೊರ ತರುತ್ತಿದೆ. ಕನ್ನಡ ಪ್ರಭದ ಸ್ಥಿತಿಯಂತೂ ಶೋಚನೀಯವಾಗಿದೆ. ಅದರ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ‘ನೋಡುತ್ತಾ ಇರಿ, ಏನೋ ಮಾಡುತ್ತೇವೆ’ ಅಂತಾ ಎಂದು ಸಂಪಾದಕ ವಿಶ್ವೇಶ್ವರ ಭಟ್ರು, ಹಾವಾಡಿಗರು ತಮ್ಮ ತೆರೆಯದ ಬುಟ್ಟಿ ತೋರಿಸಿ “ಧರ್ಮಸ್ಥಳದಿಂದ ಹಿಡಿದುಕೊಂಡು ಬಂದಿರುವ ಹಾವು ಇದೆ, ತೋರಿಸುತ್ತೇವೆ” ಎಂದು ಆಟದಲ್ಲಿ ಹೇಳುತ್ತಾ ಕೊನೆಗೂ ಹಾವು ತೋರಿಸುವುದಿಲ್ಲ, ಹಾಗೇ ಆಗಿ ಬಿಟ್ಟಿದೆ ಅವರ ಹೇಳಿಕೆ.

ಉದಯವಾಣಿ, ಸಂಯುಕ್ತ ಕರ್ನಾಟಕ  ತಮ್ಮ ಲೇಔಟ್ ಚೇಂಜ್ ಮಾಡಿಕೊಂಡಿದ್ದು ಬಿಟ್ಟರೆ ಉಳಿದಂತೆ ಆದರ ಪ್ರಯತ್ನ ಆಟಕ್ಕೆ ಉಂಟು, ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಈಗ್ಗೆ 12 ವರ್ಷದ ಹಿಂದೆ ವಿಜಯ ಕರ್ನಾಟಕದಲ್ಲಿ ಹುಟ್ಟಿದಾಗ ಏನಿತ್ತು ಪರಿಸ್ಥಿತಿ. ಇವತ್ತಿನ ಪರಿಸ್ಥಿತಿ ಏನಿದೆ ಎನ್ನುವುದು ಪರಿಶೀಲಿಸುವುದು ಇಲ್ಲಿ ಬಹಳ ಮುಖ್ಯ ಸಂಗತಿಯಾಗಿದೆ. ಪ್ರಜಾವಾಣಿ ಕನ್ನಡದ ಅತ್ಯಂತ ಜನಪ್ರಿಯ ದಿನ ಪತ್ರಿಕೆ ಎಂಬ ಹೆಗ್ಗಳಿಕೆಯನ್ನು ಹೊಂದಿ, ನಂದಿಯಂತೆ ವಿರಾಜಮಾನವಾಗಿತ್ತು. ಕನ್ನಡ ಪ್ರಭ ಎರಡನೇಯ ಸ್ಥಾನದಲ್ಲಿತ್ತು. ಉದಯವಾಣಿ, ಸಂಯುಕ್ತ ಕರ್ನಾಟಕ ಬೆಂಗಳೂರಿನಲ್ಲಿ ಕಚೇರಿ, ಎಡಿಷನ್ ಹೊಂದಿದ್ದರೂ ಅವು ಪ್ರಾದೇಶಿಕ ಪತ್ರಿಕೆಗಳಾಗಿಯೇ ಇದ್ದವು.

ಪ್ರಜಾವಾಣಿಯ ಏಜೆನ್ಸಿ ತೆಗೆದುಕೊಳ್ಳುವುದು ಎಂದರೆ ಪೆಟ್ರೂಲ್ ಬಂಕ್ ಪಡೆಯುವಂತೆ ಕಷ್ಟ ಪಡಬೇಕಿತ್ತು. ಅಷ್ಟು ಡಿಮ್ಯಾಂಡ್ ಆಗ. ಕನ್ನಡ ಪ್ರಭದ ಏಜೆಂಟ್ರು ಹತ್ತು ಪತ್ರಿಕೆ ಹೆಚ್ಚು ಮಾಡಲು ಹರ ಸಾಹಸ ಮಾಡಬೇಕಿತ್ತು. ಆಗ ಕನ್ನಡ ಪ್ರಭದ ಪ್ರಸರಣ ವಿಭಾಗದವರು ಪತ್ರಿಕೆ ಸಂಖ್ಯೆ ಹೆಚ್ಚಿಸಬೇಡಿ, ಇದ್ದಷ್ಟೇ ಮುಂದುವರೆಸಿಕೊಂಡು ಹೋಗಿ ಎಂದು ಹೇಳುತ್ತಿದ್ದರು. ಕಳೆದ 20 ವರ್ಷದಲ್ಲಿ ಕನ್ನಡ ಓದುಗರ ಸಂಖ್ಯೆ ಹೆಚ್ಚಿದೆ. ಅವರನ್ನು ತಲುಪಬೇಕೆಂಬ ಉದ್ದೇಶ ಯಾರಲ್ಲೂ ಇರಲಿಲ್ಲ. ಯಾಕೆಂದರೆ ಪ್ರಸರಣ ಹೆಚ್ಚಾದರೆ ಲಾಭವಿಲ್ಲ. ಬದಲು ನಷ್ಠವೇ ಹೆಚ್ಚು ಎಂಬ ಲೆಕ್ಕಾಚಾರ ಎಲ್ಲರದ್ದೂ ಆಗಿತ್ತು. ಬೆಲೆ ಏರಿಕೆ ನಡೆಯುತ್ತಾ ಹೋಗುತ್ತಿರುವ ಲೆಕ್ಕದಲ್ಲಿ ಹೋದರೆ ಇವತ್ತು ಕನ್ನಡ ದಿನ ಪತ್ರಿಕೆಗಳ ಬೆಲೆಯು 8 ರೂ. ಮುಟ್ಟಬೇಕಿತ್ತು.

ಇಂತಹ ಸಂದರ್ಭದಲ್ಲಿಯೇ ವಿಜಯ ಕರ್ನಾಟಕ ಕಾಲಿಟ್ಟಿತು. ಎಲ್ಲಾ ಕಡೆ ಎಡಿಷನ್ ಮಾಡುವ ಮೂಲಕ ಎಲ್ಲರಿಗೂ ಪತ್ರಿಕೆ ಮುಟ್ಟಿಸುವ ಕೆಲಸ ಆರಂಭಿಸಿತು. ಹಳ್ಳಿಗಳಲ್ಲಿ ಬೆಳಿಗ್ಗೆ 10, 11ಕ್ಕೆ ಸಿಗುತ್ತಿದ್ದ ಪ್ರಜಾವಾಣಿಯ ಬದಲು ಬೆಳಿಗ್ಗೆ 6ಕ್ಕೆಲ್ಲಾ ಸಿಗುವಂತಾಯಿತು. ಪತ್ರಿಕೆ ಏಜೆನ್ಸಿ ಅನ್ನುವುದು ಇಷ್ಟು ಸುಲಭ ಎನ್ನುವುದನ್ನು ತೋರಿಸಿ ಬಿಟ್ಟರು. ಹಳ್ಳಿ ಹಳ್ಳಿಗೂ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಒಂದು ಊರಿನಲ್ಲಿ ಎಷ್ಟು ಬೇಕು ಅಷ್ಟು ಏಜೆನ್ಸಿ ಕೊಡುವ ಮೂಲಕ ಪತ್ರಿಕೆ ಪ್ರಸರಣವನ್ನು ವಿಸ್ತರಿಸಿಬಿಟ್ಟರು. ದರ ಸಮರವನ್ನು ಸಾರಿ ಬಿಟ್ಟರು. ಉಳಿದ ಪತ್ರಿಕೆಗಳು ಎಚ್ಚೆತ್ತುಕೊಂಡು ಪ್ರಸರಣ ವಿಸ್ತರಿಸುವ ಪ್ರಯತ್ನಗಳ ನಡುವೆ ವಿಜಯಕರ್ನಾಟಕ ನಂಬರ್ ವನ್ ಆಗಿಯೇ ಬಿಟ್ಟಿತು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ ತ್ರಿವಳಿ ಮಂತ್ರವನ್ನು ಜಪಿಸಲಾರಂಭಿಸಲಾಯಿತೋ ಆಗ ಬಹುರಾಷ್ಟ್ರೀಯ ಕಂಪನಿಗಳ ಜಾಹಿರಾತು ಪಡೆಯಲು ಎಬಿಸಿ ಎನ್ನುವ ಪ್ರಸರಣ ಸಂಖ್ಯೆಯ ಪಟ್ಟಿ ಮುಖ್ಯವಾಗಿ ಹೊಯಿತು. ಪತ್ರಿಕೆಗಳ ಸರಕಾಗಲು ತುದಿಗಾಲಿನ ಮೇಲೆ ನಿಂತವು. ಈಗಾಗಿ ಪತ್ರಿಕೆಗೆ ಮೌಲಿಕ ಓದುಗರಗಿಂತ ಗ್ರಾಹಕ ಓದುಗರು ಮುಖ್ಯವಾದರು. ಅಥವಾ ಓದುಗರನ್ನು ಗ್ರಾಹಕರನ್ನಾಗಿ ಮಾಡಲು ಪೈಪೋಟಿಗೆ ಇಳಿಯಬೇಕಾಯಿತು. ವಿಜಯ ಕರ್ನಾಟಕ ಇದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿತು. ಈಗ ಎಲ್ಲಾ ದಿನ ಪತ್ರಿಕೆಗಳು ಎಡಿಷನ್ ಮಾಡಿ, ತಮ್ಮ ಪತ್ರಿಕೆಯ ವಿಸ್ತರಣೆ ಕೆಲಸಕ್ಕೆ ಕೈ ಹಾಕಿವೆ. ಪ್ರಜಾವಾಣಿ ಎಡಿಷನ್ ಮಾಡಿ, ಏಜೆನ್ಸಿಯ ಬಿಗಿ ನೀತಿ ಸಡಿಲಿಸಿ, ಅದು ಹಳ್ಳಿ ಹಳ್ಳಿಗೂ ಏಜೆನ್ಸಿಯನ್ನು ನೀಡಿ ಪ್ರಸರಣಕ್ಕೆ ಅದ್ಯತೆ ನೀಡುತ್ತಿದೆ. ಇದೇ ಸಾಲಿನಲ್ಲಿ ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ ನಡೆಸಿವೆ. ಇವುಗಳ ಜೊತೆಗೆ ಈಗ ಹೊಸ ದಿಗಂತವೂ ಸೇರಿಕೊಂಡಿದೆ.

ಮುಖ ಪುಟದಲ್ಲಿ ಪದಗಳ ಜೊತೆ ಆಟ, ಅದೇ ದೊಡ್ಡದು ಎನ್ನುವ ರೀತಿಯ ವಿಜೃಂಭಣೆ, ಟ್ಯಾಬ್ಲೊಯಿಡ್ ಪತ್ರಿಕೆಗಳ ಭಾಷೆ ಬಳುಸುವುದು, ಇಂತಹ ಸರ್ಕಸ್ ನಡೆಸುವ ಮೂಲಕ ಸಂಪಾದಕರು ಎನ್ನುವವರು ಈಗ ಸರ್ಕಸ್ ಕಂಪನಿಯ ಮ್ಯಾನೇಜರ್ ಆಗಿ ಬಿಟ್ಟಿದ್ದಾರೆ. ಅದೇ ಸಂಪಾದಕರ ಚಹರೆ ಹಾಗೂ ಮಾನದಂಡವಾಗಿ ಬಿಟ್ಟಿದೆ. ಪತ್ರಿಕೆಯನ್ನು ಅಗ್ಗದ ಸರಕಾಗಿ ಮಾರಾಟ ಮಾಡಲು ತುದಿಗಾಲಿನ ಮೇಲೆ ನಿಂತಿದ್ದಾರೆ. ಇಂತಹ ವಾತಾವರಣದಲ್ಲಿ ಹೊಸ ಪತ್ರಿಕೆ ವಿಜಯ ವಾಣಿಯ ನಡಿಗೆ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಎಲ್ಲರೂ ಈಗ ಓಡುತ್ತಿದ್ದಾರೆ. ಈ ಓಟದ ಸಾಲಿನಲ್ಲಿ ವಿಜಯವಾಣಿ ಸೇರಿಕೊಳ್ಳಬೇಕಾಗಿದೆ. ಅನ್ಯಮಾರ್ಗವೇ ಇಲ್ಲ.

Deccan Herald - Mining Payments

ಆದರ್ಶ ಎಂಬುವುದು ಮಾರುಕಟ್ಟೆಯ ಸರಕಲ್ಲ


– ಡಾ.ಎನ್.ಜಗದೀಶ ಕೊಪ್ಪ


[ಕರ್ನಾಟಕ ವಿ.ವಿ.ಯ ಪತ್ರಿಕೋದ್ಯಮ ವಿದಾರ್ಥ್ಯಿಗಳು  ಪತ್ರಿಕೋದ್ಯಮ ಮತ್ತು ಆದರ್ಶ ಕುರಿತಂತೆ ಕೇಳಿದ್ದ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆಯ ಲಿಖಿತ ರೂಪ.]

ವರ್ತಮಾನದ ಬದುಕಲ್ಲಿ ಅದರಲ್ಲೂ ವಿಶೇಷವಾಗಿ ಪತ್ರಿಕೋದ್ಯಮಕ್ಕೆ ಸಂಬಧಪಟ್ಟಂತೆ ಆದರ್ಶ ಮತ್ತು ವಾಸ್ತವ ಕುರಿತು ಮಾತನಾಡುವುದು ಅಥವಾ ಬರೆಯುವುದು ಕ್ಲೀಷೆಯ ಸಂಗತಿ. ಇವತ್ತಿನ ಪತ್ರಿಕೋದ್ಯಮದಲ್ಲಿ ನೀತಿ, ಅನೀತಿಗಳ ನಡುವಿನ ಗಡಿರೇಖೆ ಸಂಪೂರ್ಣ ಅಳಿಸಿ ಹೋಗಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಆಧ್ಯತೆ ಕೂಡ ಬದಲಾಗಿದೆ. ಎಲ್ಲರೂ ಎಲ್ಲವನ್ನು ವ್ಯವಹಾರದ ದೃಷ್ಟಿಕೋನದಿಂದ ನೋಡುತ್ತಾ, ಇಡೀ ಮಾಧ್ಯಮ ಲೋಕವನ್ನು ಲಾಭದಾಯಕ ಉಧ್ಯಮವನ್ನಾಗಿ ಪರಿವರ್ತಿಸುವ ಉಮೇದಿನಲ್ಲಿರುವಾಗ ಆದರ್ಶ ಕುರಿತು ಮಾತನಾಡುವುದು ಅಸಂಗತ ಎಂದು ಅನಿಸತೊಡಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಎಂದರೆ, ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಇರಬೇಕಾದ ಸಂವಹನದ ಸೇತುವೆ ಎಂಬ ಭಾವನೆ ಇತ್ತು. ಪತ್ರಿಕೆ ಮತ್ತು ಪತ್ರಕರ್ತ ಇಬ್ಬರೂ ಓದುಗರಿಗೆ ಉತ್ತರದಾಯಕತ್ವದ ಭಾಗವಾಗಿದ್ದರು. ಒಬ್ಬ ಪತ್ರಕರ್ತನಿಗೆ ನಾನು ಯಾರಿಗಾಗಿ ಬರೆಯುತಿದ್ದೇನೆ, ನನ್ನ ಓದುಗರು ಯಾರು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ದೃಶ್ಯ ಮಾಧ್ಯಮಗಳು ಬಂದ ನಂತರ ಅದೃಶ್ಯ ವೀಕ್ಷಕರಿಗೆ ಸುದ್ಧಿಯನ್ನು ಉಣಬಡಿಸುತ್ತಿರುವಾಗ ಏನೂ ಮಾಡಿದರೂ ಚಲ್ತಾ ಹೈ ಎಂಬ ಉಢಾಪೆತನ ಈಗ ಪತ್ರಕರ್ತ್ರನಲ್ಲಿ ಮನೆ ಮಾಡಿಕೊಂಡಿದೆ. ಹಾಗಾಗಿ ಇಲ್ಲಿ ಯಾವುದೇ ಪತ್ರಕರ್ತನಿಗೆ ಆದರ್ಶಗಳು ಇರಬೇಕು ಎಂಬ ಕಟ್ಟುಪಾಡುಗಳಿಲ್ಲ. ಜೊತೆಗೆ ಆದರ್ಶವೆಂಬುವುದು ಅಂಗಡಿಯಲ್ಲಿ ದೊರೆಯುವ ವಸ್ತು ಕೂಡ ಅಲ್ಲ.

ಇತ್ತೀಚೆಗಿನ ಪತ್ರಿಕೋದ್ಯಮದ ಧೋರಣೆ ಕುರಿತು ಆಕ್ಷೇಪ ವ್ಯಕ್ತವಾದಾಗಲೆಲ್ಲಾ, ಪತ್ರಿಕೋದ್ಯಮಿಗಳು ತಮ್ಮ ರಕ್ಷಣೆಗಾಗಿ ಗುರಾಣಿಯಂತೆ ಬಳಸುವುದು, ಲಾಭ ಮತ್ತು ನಷ್ಟದ ವಿಷಯಗಳನ್ನು ಮಾತ್ರ. ಭಾರತದ ಒಂದು ಶತಮಾನದ ಪತ್ರಿಕೆಗಳ ಇತಿಹಾಸ ಗಮನಿಸಿದರೆ, ಇವರು ಅಪ್ಪಟ ಸುಳ್ಳುಗಾರರು ಎಂಬುದು ಸಾಬೀತಾಗುತ್ತದೆ. ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ಸಂಸ್ಥಾಪಕರು ಚೆನ್ನೈ ನಗರದ ನಾಲ್ವರು ವಕೀಲರು, ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯನ್ನು ಬ್ರಿಟಿಷರಿಂದ ಕೊಂಡವರು ಮಾರವಾಡಿ ಮನೆತನದ ಜೈನ್ ಕುಟುಂಬ, ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಸಂಸ್ಥಾಪಕ ರಾಮನಾಥ್ ಗೊಯಂಕ ವ್ಯಾಪಾರಸ್ಥ ಕುಟುಂಬದಿಂದ ಬಂದ ವ್ಯಕ್ತಿ, ಅಷ್ಟೇ ಏಕೆ, ನಮ್ಮ ಕನ್ನಡದ ದಿನಪತ್ರಿಕೆ ಪ್ರಜಾವಾಣಿಯ ಸಂಸ್ಥಾಪಕ ಕೆ. ಎನ್. ಗುರುಸ್ವಾಮಿ ಹೆಂಡ ಮಾರುವ ವೃತ್ತಿಯಿಂದ ಬಂದವರು (ಇವರ ಮೂಲ, ಆಂಧ್ರಪ್ರದೇಶದ ಆಧೋನಿ).

ಇವರುಗಳಿಗೆ ಸಮಾಜಕ್ಕೆ ನಾವು ಏನಾದರೂ ಮಾಡಬೇಕು ಎಂಬ ಆದರ್ಶ ಇದ್ದುದರಿಂದಲೇ ಪತ್ರಿಕೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಇವರುಗಳಿಗೆ ಲಾಭ ಮೊದಲ ಆದ್ಯತೆಯಾಗಿರಲಿಲ್ಲ. ಈ ಎಲ್ಲಾ ಪತ್ರಿಕೆಗಳು ನಷ್ಟದಲ್ಲಿದ್ದರೆ, ಇಷ್ಟು ದೂರ ಸಾಗಿಬಂದು ಇವತ್ತಿನ ಹೆಮ್ಮರಗಳಾಗಿ ಬೆಳೆಯಲು ಸಾಧ್ಯವಿತ್ತೆ? ಈ ಆದರ್ಶವಾದಿಗಳಿಗೆ ಲಾಭಕೋರತನ ಎಂದೂ ಗುರಿಯಾಗಿರಲಿಲ್ಲ ಅಂದ ಮಾತ್ರಕ್ಕೆ ಪತ್ರಿಕೆಯನ್ನು ನಷ್ಟದಲ್ಲಿ ನಡೆಸಬೇಕೆಂಬ ಉಮೇದು ಇರಲಿಲ್ಲ. ಪತ್ರಿಕೆಯ ಓದುಗರೇ ನಿಜವಾದ ವಾರಸುದಾರರು ಎಂದು ಇವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಪತ್ರಿಕೆಯ ಮುಖಪುಟದ ಜಾಹಿರಾತು ಯಾವ ಕಾರಣಕ್ಕೂ ಕಾಲು ಪುಟಕ್ಕೆ ಮೀರದಂತೆ ಅಲಿಖಿತ ನಿಯಮವನ್ನು ರೂಪಿಸಿಕೊಂಡಿದ್ದರು.

ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಬಲಿಷ್ಟ ರಾಜಕಾರಣಿಗಳ ಮತ್ತು ಕಾರ್ಪೋರೇಟ್ ಕುಳಗಳ ಪಾಲಾಗಿವೆ ಹಾಗಾಗಿ ಹಣ ತರುವ ಜಾಹಿರಾತಿಗಾಗಿ ಇಡೀ ಮುಖಪುಟವನ್ನು ಒತ್ತೆ ಇಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತನಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯ?.

ಮೂರು ದಶಕಗಳ ಹಿಂದೆ ನನ್ನ ತಲೆಮಾರು ಪತ್ರಿಕೋದ್ಯಮ ಪ್ರವೇಶಿಸಿದಾಗ ಪತ್ರಿಕೋದ್ಯಮ ಕುರಿತಂತೆ ಬೋಧಿಸುವ ಯಾವ ಪಠ್ಯಗಳು ಇರಲಿಲ್ಲ,  ಯಾವುದೇ ವಿ.ವಿ.ಯಲ್ಲಿ ಇದು ಜ್ಞಾನ ಶಿಸ್ತುವಾಗಿ ಬೆಳದಿರಲಿಲ್ಲ. ನಮಗೆ ಪತ್ರಿಕೋದ್ಯಮದ ಅ. ಆ. ಇ. ಈ. ಕಲಿಸಿದ ಹಿರಿಯರ ಬದುಕು, ಬರವಣಿಗೆ, ಅವರುಗಳು ನೈತಿಕತೆ ಕುರಿತಂತೆ ಹಾಕಿಕೊಂಡಿದ್ದ ಲಕ್ಷ್ಮಣರೇಖೆ ಇವೆಲ್ಲೂ ನಮ್ಮ ಪಾಲಿಗೆ ನಿಜವಾದ ಪಠ್ಯಗಳಾಗಿದ್ದವು.

ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷ ಇರಬಾರದು. ಓದುಗರಿಗೆ ನಮ್ಮ ಬರವಣೆಗೆ ಮೂಲಕ ನಿಷ್ಟರಾಗಿರಲು ಇರುವ ಏಕೈಕ ಮಾರ್ಗವೆಂದರೆ ಅಧಿಕಾರಯುತ ವ್ಯಕ್ತಿಗಳಿಂದ (ರಾಜಕಾರಣಿ ಮತ್ತು ಅಧಿಕಾರಿ ಇವರುಗಳಿಂದ) ಅಂತರ ಕಾಪಾಡಿಕೊಳ್ಳುವುದು, ಜಾತಿ, ಧರ್ಮ ಇವುಗಳ ವಕಾಲತ್ತು ವಹಿಸಿ ಬರವಣಿಗೆ ಮಾಡಬಾರದು, ನಾವು ಬರೆಯುವ ಒಂದೊಂದು ಅಕ್ಷರದಲ್ಲಿ ಜೀವಪರವಾದ ಧ್ವನಿ ಇರಬೇಕು, ಇವೆಲ್ಲವನ್ನೂ ನನ್ನ ತಲೆಮಾರಿನ ಪತ್ರಕರ್ತರು, ಖಾದ್ರಿ ಶಾಮಣ್ಣ, ಟಿ.ಎಸ್.ಆರ್.,  ವೈ.ಎನ್.ಕೆ.,  ಕೆ. ಶಾಮರಾವ್,  ಎಂ.ಬಿ. ಸಿಂಗ್, ವಡ್ಡರ್ಸೆ ರಘುರಾಮಶೆಟ್ಟಿ, ಪಿ.ಲಂಕೇಶ್, ಜಯಶೀಲರಾವ್, ಐ.ಕೆ. ಜಾಗೀರ್‌ದಾರ್, ಪಾ.ವೆಂ. ಆಚಾರ್ಯ, ಸುರೇಂದ್ರಧಾನಿ ಮುಂತಾದ ಮಹನೀಯರಿಂದ ಕಲಿತುಕೊಂಡಿದ್ದರು.

Deccan Herald - Mining Paymentsಈ ತಲೆಮಾರಿನ ಮುಂದಿರುವ ಆದರ್ಶವೆಂದರೆ, ಸಾಧ್ಯವಾದಷ್ಟು ಹಣ ಮಾಡಬೇಕು, ಬೆಂಗಳೂರಿನಲ್ಲಿ ಒಂದು ಮನೆ ಮಾಡಬೇಕು, ಓಡಾಡಲು ಕಾರಿರಬೇಕು. ಇನ್ನೂ ಸಾಧ್ಯವಾದರೆ, ನಗರದ ಹೊರವಲಯದಲ್ಲಿ ಒಂದು ತೋಟ ಇರಬೇಕು. ಇಂತಹವರಿಂದ ಏನನ್ನು ತಾನೆ ಕಲಿಯಲು ಸಾಧ್ಯ? ಕೇವಲ 15 ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದಿದ್ದವರೆಲ್ಲಾ ಇಂದು ಕೋಟಿ ಕೋಟಿ ರೂಗಳ ಒಡೆಯರು. ಗಣಿಧಣಿಗಳ ಎಂಜಲು ಕಾಸಿಗೆ ಕೈಯೊಡ್ಡಿದವರೆಲ್ಲಾ ಇಂದು ಸ್ಟಾರ್ ಪತ್ರಕರ್ತರು. ಇಂತಹ ಅಯೋಮಯ ಸ್ಥಿತಿಯಲ್ಲಿ ಹೊಸ ತಲೆಮಾರಿನ ಪತ್ರಕರ್ತರಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಇತ್ತೀಚೆಗಿನ ಯುವ ಜನಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಹನೆ ಎದ್ದು ಕಾಣುತ್ತಿದೆ. ಎಲ್ಲೆಡೆ ಪ್ರಾಮಾಣಿಕತೆಯನ್ನು ಬಯಸುವ ಮನೋಭಾವ ಬೆಳೆದು ಬಂದಿದೆ. ಜೊತೆಗೆ ತಾವೂ ಪ್ರಾಮಾಣಿಕರಾಗಿ ಇರಲು ಬಯಸುತ್ತಾರೆ. ಇದು ಪತ್ರಿಕೋದ್ಯಮ ಹೊರತು ಪಡಿಸಿ ಉಳಿದ ರಂಗಗಳ ಯುವಜನತೆಯಲ್ಲಿ ಕಾಣುವ ಅಂಶ ಎಂದು ತೀವ್ರ ವಿಷಾದದಿಂದ ಹೇಳಲು ಬಯಸುತ್ತೇನೆ.

ಇವತ್ತಿನ ಕಾಲೇಜು ಅಥವಾ ವಿ.ವಿ ಗಳಲ್ಲಿ ನಾವು ಪಡೆಯುತ್ತಿರುವ ಪದವಿ ಉದ್ಯೋಗಕ್ಕೆ ಒಂದು ಪರವಾನಗಿ ಅಷ್ಟೇ, ಅದರಾಚೆ ಅದು ಈ ಯುವ ತಲೆಮಾರಿಗೆ ಏನನ್ನೂ ಕಲಿಸಿಕೊಡುವುದಿಲ್ಲ, ಬೋಧಿಸುವುದಿಲ್ಲ. ಅದು ದೃಶ್ಯಮಾಧ್ಯಮವಾಗಿರಲಿ, ಮುದ್ರಣ ಮಾಧ್ಯಮವಾಗಿರಲಿ, ಇಲ್ಲಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುವ ಯುವಕರು ನೈತಿಕತೆ ಮತ್ತು ಆದರ್ಶಗಳನ್ನು ಸ್ವಯಂ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬನೂ ಏಕಲವ್ಯನಾಗಲು ಸಿದ್ಧನಿರಬೇಕು. ಆದರ್ಶಗಳನ್ನು ಮೈಗೂಡಿಸಿಕೊಂಡರೆ, ಬದುಕಿನ ಕಟು ವಾಸ್ತವಗಳು ಏನು ಎಂಬುದು ತಂತಾನೆ ಅರ್ಥವಾಗುವ ಸಂಗತಿ.

objection-to-yeddyurappa's-approval-for-statewide-paper-page2

ಕಾಸಿಗಾಗಿ ಸುದ್ದಿ ಪ್ರಕಟಿಸದ ದಿನಪತ್ರಿಕೆಗಳು ಈಗ ಯಾವು ಉಳಿದಿವೆ?

– ಪರಶುರಾಮ ಕಲಾಲ್

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕೋದ್ಯಮ ಇವತ್ತು ತನ್ನ ಮೂಲ ಅಸ್ತಿತ್ವ ಉಳಿಸಿಕೊಳ್ಳಲು ಸೆಣಸಾಡುತ್ತಿದೆ.

ಒಂದು ಕಡೆ 2ಜಿ ಸ್ಟೆಕ್ರಮ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಡದ ಹಗರಣಗಳು ಬಯಲಾಗುವುದಕ್ಕೆ ಕಾರಣವಾಗಿ ಆಳುವವರ ಕಣ್ಣಿಗೆ ಖಳನಾಗಿ ಕಾಣತೊಡಗಿದೆ. ಪಿ.ಸಾಯಿನಾಥ್ ಅವರ ಬರಹಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿದರ್ಭ ಪ್ಯಾಕೇಜ್ ಘೋಷಿಸಿದ ಉದಾಹರಣೆಯು ನಮ್ಮ ಮುಂದಿದೆ. ಪ್ರಜಾಪ್ರಭುತ್ವದ ಕಾವಲು ನಾಯಿಯಾಗಿ ಪತ್ರಿಕಾರಂಗ ಈ ವಿಷಯಗಳಲ್ಲಿ ಕೆಲಸ ಮಾಡಿ ಸೈ ಅನ್ನಿಸಿಕೊಂಡಿದೆ.

ಇಷ್ಟು ಮಾತ್ರ ಆಗಿದ್ದರೆ ಸಮಸ್ಯೆ ಏನೋ ಇಲ್ಲ. ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಟು ಅವರ ಹೇಳಿಕೆಯನ್ನು ಅತ್ಯುಗ್ರವಾಗಿ ಖಂಡಿಸಿ ಬಿಡಬಹುದಿತ್ತು. ಆದರೆ ಕಾವಲು ನಾಯಿಯಾಗಿ ಕೆಲಸ ಮಾಡುವ ಜೊತೆಗೆ ರಾಜಕಾರಣಿಗಳ, ಕಾರ್ಪೊರೇಟ್ ಸಂಸ್ಥೆಗಳ ಮುದ್ದಿನ ನಾಯಿ ಆಗಿಯೂ ಕೆಲಸ ಮಾಡಿರುವ ಉದಾಹರಣೆಗಳು ಇವೆಯಲ್ಲಾ? ಇವೆಲ್ಲವಕ್ಕೂ ಏನು ಹೇಳಬೇಕು. ದೆಹಲಿಯ ಶಾಲೆಯ ಶಿಕ್ಷಕಿ ಉಮಾ ಖುರಾನ ಪ್ರಕರಣವಾಗಲಿ, ಅಥವಾ ವೈದ್ಯರ ಪುತ್ರಿ ಅರುಶಿ ಕೊಲೆ ಪ್ರಕರಣದ ಬಗ್ಗೆ ವಿದ್ಯುನ್ಮಾನ ಮಾಧ್ಯಮ ನಡೆದುಕೊಂಡು ರೀತಿ ಹೇಗಿತ್ತು? ಈ ವಿದ್ಯುನ್ಮಾನ ಮಾಧ್ಯಮಗಳ ಹುಳುಕುಗಳನ್ನು ಇವೆಲ್ಲಾ ಬಯಲುಗೊಳಿಸಿಲ್ಲವೇ? ಕಾರ್ಪೊರೇಟ್ ಕಂಪನಿಗಳು ಮತ್ತು ಪತ್ರಕರ್ತರ ನಡುವೆ ಇರುವ ಅನೈತಿಕ ಸಂಬಂಧ ನೀರಾ ರಾಡಿಯ ಪ್ರಕರಣ ಬಯಲಿಗೆ ತಂದಿತು. ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆಯುವವರು ಇವುಗಳನ್ನು ಕೂಡಾ ಗಮನಿಸಬೇಕಾಗುತ್ತದೆ.

ಪತ್ರಿಕೋದ್ಯಮದ ಅಲಿಖಿತ ನಿಯಮಗಳನ್ನು ಎಷ್ಟು ಪತ್ರಿಕೆಗಳು ಪಾಲಿಸುತ್ತಿವೆ? ಕೋಮು ಸಂಘರ್ಷ ನಡೆದಾಗ ಎರಡು ಕೋಮುಗಳ ಹೆಸರುಗಳನ್ನು ಬಯಲುಗೊಳಿಸಬಾರದು ಎಂದಿದೆ. ಎಷ್ಟು ಪತ್ರಿಕೆಗಳು ಈ ನಿಯಮಕ್ಕೆ ಬದ್ಧವಾಗಿವೆ? ಕೋಮು ಹೆಸರು ಹೇಳದಿದ್ದರೂ ಆಸ್ಪತ್ರೆಗೆ ದಾಖಲಾದವರು, ಬಂಧಿತರ ಹೆಸರನ್ನು ಒಂದು ಕೋಮು ದೃಷ್ಠಿಯಲ್ಲಿಟ್ಟುಕೊಂಡು ಪ್ರಕಟಿಸುತ್ತವೆಯಲ್ಲ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಹೆಸರನ್ನು ಪ್ರಕಟಿಸಬಾರದು. ಆಕೆಯ ಫೋಟೋ ಹಾಕಬಾರದು ಎಂದಿದೆ. ಈಗ ಅದು ಪಾಲಿಸಲಾಗುತ್ತಿದೆಯೆ? ಕೆಲವು ಟಿವಿ ಚಾನಲ್‌ಗಳಂತೂ ಅವರನ್ನು ಸಂದರ್ಶನ ಮಾಡಿ ಅಸಹ್ಯ ಪ್ರಶ್ನೆ ಕೇಳುವ ಮೂಲಕ ಎಲ್ಲವನ್ನೂ ಬಟ್ಟಾಬಯಲಾಗಿಸಿ, ರಂಜನೆ ಒದಗಿಸುತ್ತಿಲ್ಲವೇ?

ಇನ್ನು, ಕಾಸಿಗಾಗಿ ಸುದ್ದಿ ಪ್ರಕಟಿಸದ ಕನ್ನಡ ದಿನಪತ್ರಿಕೆಗಳು ಈಗ ಯಾವು ಉಳಿದಿವೆ? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಸು ತೆಗೆದುಕೊಂಡು ಚುನಾವಣೆ ಸುದ್ದಿ ಬರೆದು ಹಣ ಮಾಡಿಲ್ಲವೇ? ಪತ್ರಿಕಾ ಮಾಲೀಕರೇ ಈ ಅಡ್ಡ ಹಾದಿ ಹಿಡಿದ ಮೇಲೆ ಬಿಡಿ ಸುದ್ದಿಗಾರರು, ವರದಿಗಾರರು ಅದೇ ಹಾದಿ ತುಳಿದರೆ ಇದನ್ನು ಟೀಕಿಸುವ ನೈತಿಕತೆ ಪತ್ರಿಕಾ ಮಾಲೀಕರಿಗೆ ಎಲ್ಲಿದೆ? ಪ್ರಶ್ನಿಸುವ ಹಕ್ಕನ್ನು ಸಂಪಾದಕರು ಕಳೆದುಕೊಂಡಂತಾಗಲಿಲ್ಲವೇ?

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

ಸಂಪಾದಕರು, ಸಂಪಾದಕರ ಬಳಗ ಆಕ್ರಮವೆಸಗಿ, ಒಂದು ಪತ್ರಿಕೆಯಿಂದ ಹೊರ ಬಂದ ಮೇಲೆ ಅವರಿಗೆ ರತ್ನಗಂಬಳಿ ಹಾಸಿ ಮತ್ತೊಂದು ಪತ್ರಿಕೆ ಅವಕಾಶ ಮಾಡಿಕೊಡುತ್ತಿರುವುದನ್ನು ನೋಡಿದರೆ ಈ ಆಕ್ರಮವೆಸಗುವವರು ಪತ್ರಿಕೆಯ ಮಾಲೀಕರಿಗೆ ಬೇಕು ಎಂದಾಗುವುದಿಲ್ಲವೇ? ಅವರು ಈ ಆಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದೇ ಅರ್ಥವಲ್ಲವೇ? ಪತ್ರಿಕೋದ್ಯಮ ಇಂತಹ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿದೆ.

ಭಾರತೀಯ ಪತ್ರಿಕಾ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದ ಅನೇಕ ಉದಾಹರಣೆಗಳು ಇವೆ. ಎಷ್ಟೇ ಆಗಲಿ ಈ ಮಂಡಳಿ ಹಲ್ಲಿಲ್ಲದ ಹಾವು. ಛೀಮಾರಿ ಹಾಕುವುದನ್ನು ಬಿಟ್ಟು ಬೇರೇನೋ ಅದರಿಂದ ಸಾಧ್ಯವಿಲ್ಲ. ತಪ್ಪೊಪ್ಪಿಗೆಯನ್ನು ಸಣ್ಣದಾಗಿ ಪ್ರಕಟಿಸಿ ಕೈತೊಳೆದುಕೊಂಡು ಏನೋ ಆಗಿಲ್ಲ ಎನ್ನುವಂತೆ ವರ್ತಿಸಿಲ್ಲವೇ? ಕೆಲವರು ಸ್ವಯಂ ನೈತಿಕತೆಯ ಪಾಠ ಹೇಳುತ್ತಿದ್ದಾರೆ. ಈ ಸ್ವಯಂ ನೈತಿಕತೆಯ ಪಾಠ ಇವತ್ತು ಯಾರು ಪಾಲಿಸುತ್ತಾರೆ. ಯಾರಿಗೆ ಈ ಉಪದೇಶ? ಈ ಕುರಿತ ಮುಖಾಮುಖಿ ಮಾತ್ರ ವಸ್ತುನಿಷ್ಠತೆಗೆ ಹತ್ತಿರ ಬರಲು ಸಾಧ್ಯವಾಗುತ್ತದೆ.

ಯಾಕ್ರೀ, ಎಷ್ಟೊಂದು ಜಾಹಿರಾತು ನೀಡಿದ್ದೇವೆ, ಇಷ್ಟೇನಾ ಸುದ್ದಿ ನಮ್ಮದು?

– ಪರಶುರಾಮ ಕಲಾಲ್

ಜಾಹಿರಾತು ಇಲ್ಲದೇ ಯಾವುದೇ ಪತ್ರಿಕೆಗಳು ಬದಕಲಾರವು. ಒಂದು ಪತ್ರಿಕೆಗೆ ನಾವು ಕೊಡುವ 3 ರೂ. ಏನೇನೂ ಅಲ್ಲ. ಪತ್ರಿಕೆಯನ್ನು ಮನೆಗೆ ಮುಟ್ಟಿಸುವ ಹುಡುಗ, ವಿತರಕರಿಗೆ, ಸಾಗಾಣಿಕೆಗೆ ಅದರ ಎಲ್ಲಾ ಖರ್ಚು ಹೆಚ್ಚುಕಡಿಮೆ ಸಾಟಿಯಾಗಿ ಬಿಡುತ್ತದೆ. ಅಂದರೆ ಪತ್ರಿಕೆಯೊಂದು ಉಚಿತವಾಗಿಯೇ ಪತ್ರಿಕೆಯನ್ನು ವಿತರಿಸುತ್ತದೆ ಎಂದೇ ಅರ್ಥ.

ಕಳೆದ 20 ವರ್ಷಗಳಲ್ಲಿ ಎಲ್ಲದರ ಬೆಲೆಯೂ ಏರಿದೆ. ಪೆಟ್ರೋಲ್ ಅಂತೂ ಜ್ವರದಂತೆ ಏರುತ್ತಲೇ ಇದೆ. ಆದರೆ ದಿನ ಪತ್ರಿಕೆಗಳು ಮಾತ್ರ ಬೆಲೆ ಏರಿಸಿಲ್ಲ. ವಿಜಯ ಕರ್ನಾಟಕ ಆರಂಭವಾದಾಗ ಬೆಲೆ ಏರಿಕೆಯ ಸಮರದಲ್ಲಿ ಎಲ್ಲಾ ಪತ್ರಿಕೆಗಳು ಬೆಲೆ ಇಳಿಸಿಕೊಂಡು ಸ್ಪರ್ಧೆ ನಡೆಸಿದ ಇತಿಹಾಸವೂ ಇದೆ. ಈಗ ಸದ್ಯ ಯಾವ ಪತ್ರಿಕೆಯೂ ಬೆಲೆ ಏರಿಸುವ ಸಾಹಸಕ್ಕೆ ಇಳಿಯುತ್ತಿಲ್ಲ. ಕಾದು ನೋಡುತ್ತಾ ಇವೆ.

ಹೊಸ ಪತ್ರಿಕೆಗಳು ಕಾಲಿಡುತ್ತಾ ಇವೆ. ಅವುಗಳ ಸ್ವರೂಪ, ಬೆಲೆ ಎಲ್ಲವೂ ಮತ್ತೊಮ್ಮೆ ದರ ಸಮರ ನಡೆದು ನಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ.

ಪತ್ರಿಕೆಗಳಿಗೆ ಸರ್ಕಾರ ನೀಡಿರುವ ಜಾಹಿರಾತು ಕುರಿತು “ವರ್ತಮಾನ” ಪ್ರಕಟಿಸಿದೆ. ಇದರ ಬಗ್ಗೆ ಇನ್ನಷ್ಟು ಚರ್ಚೆ ಬೆಳೆಸಲು ಇದನ್ನು ಪೀಠಿಕೆಯಾಗಿ ಬರೆದಿರುವೆ.

ಪತ್ರಿಕೆಗಳಿಗೆ ಜಾಹಿರಾತು ಅನಿವಾರ್ಯ ಅವಲಂಬನೆಯಾಗಿ ಬಿಟ್ಟಿದೆ. ಒಂದು ಕಾಲದಲ್ಲಿ ಒಂದು ಪತ್ರಿಕೆಯು ಮುಖಪುಟದಲ್ಲಿ ಕಾಲುಪುಟ ಜಾಹಿರಾತಿಗೆ ಮಾತ್ರ ಜಾಗ ಮೀಸಲಿಟ್ಟಿತ್ತು. ಒತ್ತಡ ಬಂದಾಗಲೂ ಅದು ರಾಜೀ ಆಗಿರಲಿಲ್ಲ. ಬೇರೆ ಪತ್ರಿಕೆಗಳು ಈ ನಿಯಮ ಉಲ್ಲಂಘಿಸಿ, ಮುಖಪುಟದ ತುಂಬಾ ಜಾಹಿರಾತು ಹಾಕಲು ಆರಂಭಿಸಿದರೂ. ಈಗ ಆ ಪತ್ರಿಕೆಯೂ ಕೂಡಾ ಜಾಹಿರಾತಿಗೆ ಮೈ ತೆರೆದುಕೊಂಡು ಬಿಟ್ಟಿದೆ. ಕೆಲವು ಜಾಹಿರಾತುಗಳನ್ನು ಹಾಕಲು ಈ ಹಿಂದೆ ಒಪ್ಪುತ್ತಿರಲಿಲ್ಲ. ಈಗ ಯಾವ ಜಾಹಿರಾತು ಕೊಟ್ಟರೂ ನಡೆಯುತ್ತೇ ಎಂದೇ ಎಲ್ಲಾ ಜಾಹಿರಾತು ತೆಗೆದುಕೊಳ್ಳಲಾರಂಭಿಸಲಾಗಿದೆ. ಒಂದು ಕಡೆ ಸಿಂಗಲ್ ಕಾಲಂನಲ್ಲಿ “ಜಾಹಿರಾತುವಿನಲ್ಲಿ ಪ್ರಕಟವಾದ ವಿಷಯಕ್ಕೂ ಪತ್ರಿಕೆಗೂ ಯಾವುದೇ ಸಂಬಂಧವಿಲ್ಲ,” ಎಂದು ಪ್ರಕಟಿಸಿ ಈ ಸಂಕಷ್ಟದಿಂದ ಪಾರಾಗಿ ಕೈ ತೊಳೆದುಕೊಂಡಿವೆ.

ರಾಜ್ಯ ಸರ್ಕಾರ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳ ಜಾಹಿರಾತು ಕೊಡುವುದು ಗಣ ರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ, ಉದಾಹರಣೆಗೆ, ಅಣೆಕಟ್ಟು ಲೋಕಾರ್ಪಣೆ, ಮೈಸೂರು ದಸರಾ ಹಬ್ಬ ಇಂತಹ ಸಂದರ್ಭದಲ್ಲಿ ಜಾಹಿರಾತು ನೀಡುತ್ತದೆ.

ಈ ಜಾಹಿರಾತು ನೀಡುವಲ್ಲಿ ಕೆಲವು ನಿಬಂಧನೆಗಳು ಇವೆ. ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮಾತ್ರ ಬಳಸಬೇಕು ಎನ್ನುವುದು. ಆದರೆ ರಾಜ್ಯ ಸರ್ಕಾರ ಈ ಎಲ್ಲಾ ನಿಬಂಧನೆಗಳನ್ನು ಉಲ್ಲಂಘಿಸಿದೆ. ಬೇಕಾಬಿಟ್ಟಿ ಜಾಹಿರಾತು ನೀಡಿದೆ. ಮುಖ್ಯಮಂತ್ರಿ, ಸಚಿವರ ನಿಂತಿರುವ, ಕುಳಿತಿರುವ ಫೋಟೋಗಳನ್ನು ಹಾಕಿದೆ. ಈ ನಿಬಂಧನೆಗಳನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಎಲ್ಲರಿಗೂ ಜಾಹಿರಾತು ಬೇಕೇ ಬೇಕು.

ಇದು ಒಂದಾದರೆ ಮತ್ತೊಂದು ಸರ್ಕಾರಿ ಇಲಾಖೆಯ ಜಾಹಿರಾತುಗಳು. ಭೂಸ್ವಾಧೀನ ಪ್ರಕ್ರಿಯೆಯ ಜಾಹಿರಾತುಗಳಂತೂ ಎರಡು ಮೂರು ಫೇಜಿಗಳಷ್ಟು ಬರುತ್ತವೆ. ಇವೆಲ್ಲವೂ ಎಲ್ಲಾ ಎಡಿಸನ್ ದರದಲ್ಲಿ ಪ್ರಕಟವಾಗುತ್ತದೆ. ಸರ್ಕಾರಿ ಇಲಾಖೆಯ ಜಾಹಿರಾತು, ಅರೆ ಸರ್ಕಾರಿ ಇಲಾಖೆಯ ಜಾಹಿರಾತುಗಳನ್ನು ಎಲ್ಲಾ ಎಡಿಷನ್‌ನಲ್ಲೂ ಮುದ್ರಿಸಲಾಗುತ್ತದೆ. ಲೋಕಲ್ ಎಡಿಷನ್‌ನಲ್ಲಿ ಹಾಕಿ ಎಂದರೂ ಯಾವ ಪತ್ರಿಕೆಗಳು ಅದನ್ನು ಒಪ್ಪುವುದಿಲ್ಲ. ಜಾಹಿರಾತು ಮುಖ್ಯಸ್ಥರು ನೇರವಾಗಿಯೇ ಎಲ್ಲಾ ಎಡಿಷನ್ ಅಂತಾ ಹೇಳ್ರಿ, ಕೊಡಲಿಲ್ಲ ಅಂದರೆ ದಬಾಯಿಸಿ ಎಂದೇ ಹೇಳುತ್ತಾರೆ.

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

ಒಂದು ಉದಾಹರಣೆಯನ್ನು ಇಲ್ಲಿ ಹೇಳುತ್ತೇನೆ. ಪ್ರಾದೇಶಿಕ ಸಾರಿಗೆ ಇಲಾಖೆಯು ತನ್ನ ಒಂದು ಹಳೇಯ ಜೀಪನ್ನು ಹರಾಜು ಹಾಕಬೇಕಾಯಿತು. ಹರಾಜಿನಲ್ಲಿ ಜೀಪು 30 ಸಾವಿರ ರೂ.ಗೆ ಹೋದರೆ ಅದೇ ಹೆಚ್ಚು. ಆದರೆ ಈ ಜೀಪು ಹರಾಜು ಜಾಹಿರಾತಿಗೆ ನೀಡಿದ ಹಣ 60 ಸಾವಿರಕ್ಕೂ ಅಧಿಕ. ಎಲ್ಲಾ ಪತ್ರಿಕೆಗಳು ಈ ಜಾಹಿರಾತು ಪಡೆಯಲು ತಮ್ಮದೇ ಆದ ಮಾರ್ಗ ಅನುಸರಿಸುತ್ತವೆ. ಬಿಡಿ ಸುದ್ದಿಗಾರರು ಈ ಜಾಹಿರಾತು ಹಿಡಿಯಲು ಹರಸಾಹಸ ಮಾಡುತ್ತಾರೆ. ಕೆಲವರು ಸರ್ಕಾರಿ ಇಲಾಖೆಯ ಗುಮಾಸ್ತರಿಗೆ ಬರುವ ಕಮೀಷನ್‌ನಲ್ಲಿ ಸ್ವಲ್ಪಪಾಲು ನೀಡುತ್ತಾರೆ. ಹಾಗೇ ನೀಡುವಂತೆ ಜಾಹಿರಾತು ಮುಖ್ಯಸ್ಥರು ಹೇಳಿ ಕೊಡುವುದು ಉಂಟು.

ರಾಜ್ಯಮಟ್ಟದ ಲೋಕಲ್ ಪೇಜ್‌ನಲ್ಲಿ ರಾಜ್ಯಮಟ್ಟದ ಸರ್ಕಾರಿ ಜಾಹಿರಾತುಗಳನ್ನು ಹಾಕಲಾಗುತ್ತದೆ. ಇದು ಲೋಕಲ್ ಜಾಹಿರಾತು ಎಂಬ ಭ್ರಮೆ ಹುಟ್ಟಿಸಲಾಗುತ್ತದೆ. ಆದರೆ ಅದು ಬೇರೆ ಎಡಿಷನ್‌ನಲ್ಲೂ ಪುನರಾವರ್ತನೆಯಾಗಿರುತ್ತದೆ. ಎಲ್ಲಾ ಎಡಿಷನ್ ಪೇಜ್‌ಗೆ ಜಾಹಿರಾತು ಬಿಲ್ ನೀಡುವಾಗ ಸಲ್ಲಿಸಲಾಗುತ್ತದೆ.

ರಾಜ್ಯಮಟ್ಟದ ದಿನ ಪತ್ರಿಕೆಯ ಜಿಲ್ಲಾ ಪೇಜುಗಳ ಜಾಹಿರಾತುಗಳ ದರವೂ ಕೂಡಾ ಸ್ಪರ್ಧಾತ್ಮಕವಾಗಿರುತ್ತದೆ. ಜಾಹಿರಾತು ಪುರವಣಿಯಂತೂ 1 ಲಕ್ಷಕ್ಕೆ ನೀಡಲಾಗುತ್ತದೆ. ಎರಡು ಪೇಜ್ ಕಲರ್, ಎರಡು ಪೇಜ್ ಕಪ್ಪು ಬಿಳಪು. ಅದರಲ್ಲಿ ಒಂದು ಪುಟ ಜಾಹಿರಾತು ಕೊಟ್ಟವರ ಗುಣಗಾನಕ್ಕೆ ಮೀಸಲಿರುತ್ತದೆ. ಜನ್ಮದಿನದ ಜಾಹಿರಾತು ಪುರಾವಣಿಯಂತೂ ಲಿಮ್ಕಾ ದಾಖಲೆಯಾಗುವ ಮಟ್ಟಕ್ಕೆ ಮುಟ್ಟಿವೆ. ತಮ್ಮ ತಂದೆ ತೀರಿಕೊಂಡು 12 ವರ್ಷಗಳ ತರುವಾಯ ಒಬ್ಬ ವ್ಯಕ್ತಿಯು ತನ್ನ ತಂದೆಯ ತಿಥಿಗೆ 24 ಪುಟಗಳ ಜಾಹಿರಾತು ನೀಡಿ ವಿಕ್ರಮ ಸ್ಥಾಪಿಸಿದನು. ಮತ್ತೊಬ್ಬರು ತಮ್ಮ ಜನ್ಮದಿನಕ್ಕಾಗಿ 63 ಪುಟಗಳ ಜಾಹಿರಾತು ಪುರವಣಿ ತಂದು ಲಿಮ್ಕಾ ದಾಖಲೆಗೆ ಹೆಸರು ಕಳಿಸಿದ್ದಾರೆ. ಇಲ್ಲಿಗೆ ಬಂದು ನಿಂತಿದೆ ಜಾಹಿರಾತು. ಜಾಹಿರಾತು ಕೊಡುವ ಶಿಕ್ಷಣ ಸಂಸ್ಥೆ, ರಾಜಕಾರಣಿ, ಉದ್ಯಮಿಯ ಬಗ್ಗೆ ವರ್ಷಪೂರ್ತಿ ಅವರ ಫೋಟೋ ಛಾಪಿಸಿ, ಅವರ ಕಾರ್ಯಕ್ರಮದ ವರದಿ, ಕರೆ ನೀಡಿದ ಸುದ್ದಿ ಬರೆಯುತ್ತಾ ಇರಬೇಕು. ಯಾಕ್ರೀ ಎಷ್ಟೊಂದು ಜಾಹಿರಾತು ನೀಡಿದ್ದೇವೆ. ಇಷ್ಟೇನಾ ಸುದ್ದಿ ನಮ್ಮದು. ನಮ್ಮ ಫೋಟೋ ಬಂದಿಲ್ಲ ಯಾಕ್ರಿ ಎಂದು ಕೇಳುವ ಅಧಿಕಾರ ಅವರಿಗೆ ಇದ್ದೇ ಇರುತ್ತದೆ. ಅವರನ್ನು ಸಮಾಧಾನ ಪಡೆಸಲೇಬೇಕು. ಈ ದೊಡ್ಡ ಪತ್ರಿಕೆಗಳ ಜಾಹಿರಾತು ಭರಾಟೆಯಲ್ಲಿ ಸ್ಥಳೀಯ ದಿನ ಪತ್ರಿಕೆಗಳು ಉಸಿರಾಡಲು ಆಗದೇ ಉಬ್ಬಸ ರೋಗಕ್ಕೆ ತುತ್ತಾಗಿ ಬಿಟ್ಟಿವೆ. ಕೆಲವೊಂದು ಸತ್ತೇ ಹೋಗಿವೆ.

advt-details-from-news-information-dept-to-various-dailies

ಮಾಧ್ಯಮ ಫಲಾನುಭವಿಗಳು – ಕೆಲವು ದಾಖಲೆಗಳು…

 -ರವಿ ಕೃಷ್ಣಾರೆಡ್ಡಿ

ನಮ್ಮಲ್ಲಿ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಸ್ವಾತಂತ್ರ್ಯವಿದೆ. ಆದರೆ ಅವು ಸ್ವತಂತ್ರವಾಗಿಲ್ಲ.

ನಾನು ಕಳೆದ ವಾರ ಬರೆದ ಪತ್ರಕ್ಕೆ ಉತ್ತರವಾಗಿ ಸಂಪಾದಕೀಯ ಬಳಗ ಒಂದು ಪತ್ರ ಬರೆದಿತ್ತು. ಅದರಲ್ಲಿ “ಹೊಸ ದಿಗಂತ” ಪತ್ರಿಕೆಯ ಕುರಿತು ಹೀಗೆ ಬರೆಯಲಾಗಿತ್ತು:

“ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?”

ಇಂದು ಯಡ್ಡ್‌ಯೂರಪ್ಪನವರಿಗೆ ಜಾಮೀನು ಸಿಕ್ಕರೂ ಸಿಗಬಹುದು. ನಾಳೆ ಯಾವಯಾವ ಪತ್ರಿಕೆಗಳು ಹೇಗೆ ಪ್ರತಿಕ್ರಿಯಿಸುತ್ತವೊ? ಇಂದು ಕನ್ನಡ ಪತ್ರಿಕೆಗಳನ್ನು ಸುದ್ದಿಗಾಗಿ ಓದುವುದಕ್ಕಿಂತ ಅವುಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ಪ್ರಾಮಾಣಿಕತೆ/ಅಪ್ರಾಮಾಣಿಕತೆಯನ್ನು ಅಳೆಯಲು ಅವುಗಳ ಪತ್ರಿಕೆಗಳ ಪುಟ ತಿರುವಬೇಕಿದೆ.

ತೆಹಲ್ಕಾದಲ್ಲಿ ಬಂದಿರುವ ಲೇಖನವೊಂದರ ಬಗ್ಗೆ ನಮ್ಮಲ್ಲಿ ನೆನ್ನೆ ಒಂದು ಸಣ್ಣ “ದುರಾಡಳಿತದ ಲಾಭ ಪಡೆದವರು” ಲೇಖನ ಪ್ರಕಟವಾಗಿತ್ತು. ಅದಕ್ಕೆ ಪೂರಕವಾಗಿ ನಮಗೆ ಕೆಲವು ದಾಖಲೆಗಳು ಲಭ್ಯವಾಗಿದ್ದು ಅವನ್ನು ಇಲ್ಲಿ ಕೊಡಲಾಗುತ್ತಿದೆ.

ಆದರೆ, ಇಷ್ಟಕ್ಕೂ ಇದರಿಂದ ಏನಾಗುತ್ತದೆ? ಸರ್ಕಾರದ ಭ್ರಷ್ಟತೆಯನ್ನು ಮತ್ತು ಅನೀತಿಯನ್ನು ಹುಡುಕಿ, ವಿಚಾರಣೆಗೆ ಕೋರ್ಟಿಗೆಳೆಯುವ ಒಂದು ಸರ್ಕಾರಿ ಸಂಸ್ಥೆ ನಮ್ಮಲ್ಲಿ ಇಲ್ಲ. ಲೋಕಾಯುಕ್ತವೂ ಸಹ ದೂರು ಕೊಟ್ಟರೆ ವಿಚಾರಣೆ ಎಂಬ ಹಂತದಲ್ಲಿದೆ. ಸ್ವತಂತ್ರ ಆಂತರಿಕ ವಿಚಾರಣಾ ಸಂಸ್ಠೆಯೊಂದು ಇಂದು ತೀರಾ ಅಗತ್ಯವಿದೆ. ಇಲ್ಲದಿದ್ದರೆ, ಇಂತಹ ಕರ್ಮಕಾಂಡಗಳು ಜನರಿಗೆ ಗೊತ್ತಾಗುತ್ತದೆ. ಆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಫಲಾನುಭವಿಗಳು ವಿಚಾರಣೆಗೊಳಪಡುವುದಿಲ್ಲ. ಸುಳ್ಳು ದಾಖಲೆ ಕೊಟ್ಟ ತಪ್ಪಿತಸ್ಥರಿಗೆ, ಅದರ ಮೇಲೆ ತೀರ್ಮಾನ ಕೈಗೊಳುವ ಸ್ವಜನಪಕ್ಷಪಾತಿಗಳಿಗೆ ಶಿಕ್ಷೆಯಾಗುವುದಿಲ್ಲ. ಎಂದು ನಾವು ಇದನ್ನು ಮೀರುವುದು?

ಆದರೂ…

hosadiganta-requesting-recognition-as-statewide-paper-Yeddyurappas-approval

hosadiganta-requesting-recognition-as-statewide-paper-Yeddyurappas-approval

 

objection-to-yeddyurappa's-approval-for-statewide-paper-page1

objection-to-yeddyurappa's-approval-for-statewide-paper-page1

 

objection-to-yeddyurappa's-approval-for-statewide-paper-page2

objection-to-yeddyurappa's-approval-for-statewide-paper-page2

 

objection-to-yeddyurappa's-approval-for-statewide-paper-page3

objection-to-yeddyurappa's-approval-for-statewide-paper-page3

 

hosadiganta-requesting-industrial-shed-yeddyurappas-approval

hosadiganta-requesting-industrial-shed-yeddyurappas-approval

 

industrial-shed-approval-letter-to-hosadiganta

industrial-shed-approval-letter-to-hosadiganta

 

advt-details-from-news-information-dept-to-various-dailies

advt-details-from-news-information-dept-to-various-dailies

 

20-lakhs-advt-in-2months-to-hosadiganta