Tag Archives: Corruption

ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

Deccan Herald - Mining Payments

ಆದರ್ಶ ಎಂಬುವುದು ಮಾರುಕಟ್ಟೆಯ ಸರಕಲ್ಲ


– ಡಾ.ಎನ್.ಜಗದೀಶ ಕೊಪ್ಪ


[ಕರ್ನಾಟಕ ವಿ.ವಿ.ಯ ಪತ್ರಿಕೋದ್ಯಮ ವಿದಾರ್ಥ್ಯಿಗಳು  ಪತ್ರಿಕೋದ್ಯಮ ಮತ್ತು ಆದರ್ಶ ಕುರಿತಂತೆ ಕೇಳಿದ್ದ ಪ್ರಶ್ನೆಗೆ ನೀಡಿದ ಪ್ರತಿಕ್ರಿಯೆಯ ಲಿಖಿತ ರೂಪ.]

ವರ್ತಮಾನದ ಬದುಕಲ್ಲಿ ಅದರಲ್ಲೂ ವಿಶೇಷವಾಗಿ ಪತ್ರಿಕೋದ್ಯಮಕ್ಕೆ ಸಂಬಧಪಟ್ಟಂತೆ ಆದರ್ಶ ಮತ್ತು ವಾಸ್ತವ ಕುರಿತು ಮಾತನಾಡುವುದು ಅಥವಾ ಬರೆಯುವುದು ಕ್ಲೀಷೆಯ ಸಂಗತಿ. ಇವತ್ತಿನ ಪತ್ರಿಕೋದ್ಯಮದಲ್ಲಿ ನೀತಿ, ಅನೀತಿಗಳ ನಡುವಿನ ಗಡಿರೇಖೆ ಸಂಪೂರ್ಣ ಅಳಿಸಿ ಹೋಗಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಆಧ್ಯತೆ ಕೂಡ ಬದಲಾಗಿದೆ. ಎಲ್ಲರೂ ಎಲ್ಲವನ್ನು ವ್ಯವಹಾರದ ದೃಷ್ಟಿಕೋನದಿಂದ ನೋಡುತ್ತಾ, ಇಡೀ ಮಾಧ್ಯಮ ಲೋಕವನ್ನು ಲಾಭದಾಯಕ ಉಧ್ಯಮವನ್ನಾಗಿ ಪರಿವರ್ತಿಸುವ ಉಮೇದಿನಲ್ಲಿರುವಾಗ ಆದರ್ಶ ಕುರಿತು ಮಾತನಾಡುವುದು ಅಸಂಗತ ಎಂದು ಅನಿಸತೊಡಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಎಂದರೆ, ಪ್ರಭುತ್ವ ಮತ್ತು ಪ್ರಜೆಗಳ ನಡುವೆ ಇರಬೇಕಾದ ಸಂವಹನದ ಸೇತುವೆ ಎಂಬ ಭಾವನೆ ಇತ್ತು. ಪತ್ರಿಕೆ ಮತ್ತು ಪತ್ರಕರ್ತ ಇಬ್ಬರೂ ಓದುಗರಿಗೆ ಉತ್ತರದಾಯಕತ್ವದ ಭಾಗವಾಗಿದ್ದರು. ಒಬ್ಬ ಪತ್ರಕರ್ತನಿಗೆ ನಾನು ಯಾರಿಗಾಗಿ ಬರೆಯುತಿದ್ದೇನೆ, ನನ್ನ ಓದುಗರು ಯಾರು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿತ್ತು. ದೃಶ್ಯ ಮಾಧ್ಯಮಗಳು ಬಂದ ನಂತರ ಅದೃಶ್ಯ ವೀಕ್ಷಕರಿಗೆ ಸುದ್ಧಿಯನ್ನು ಉಣಬಡಿಸುತ್ತಿರುವಾಗ ಏನೂ ಮಾಡಿದರೂ ಚಲ್ತಾ ಹೈ ಎಂಬ ಉಢಾಪೆತನ ಈಗ ಪತ್ರಕರ್ತ್ರನಲ್ಲಿ ಮನೆ ಮಾಡಿಕೊಂಡಿದೆ. ಹಾಗಾಗಿ ಇಲ್ಲಿ ಯಾವುದೇ ಪತ್ರಕರ್ತನಿಗೆ ಆದರ್ಶಗಳು ಇರಬೇಕು ಎಂಬ ಕಟ್ಟುಪಾಡುಗಳಿಲ್ಲ. ಜೊತೆಗೆ ಆದರ್ಶವೆಂಬುವುದು ಅಂಗಡಿಯಲ್ಲಿ ದೊರೆಯುವ ವಸ್ತು ಕೂಡ ಅಲ್ಲ.

ಇತ್ತೀಚೆಗಿನ ಪತ್ರಿಕೋದ್ಯಮದ ಧೋರಣೆ ಕುರಿತು ಆಕ್ಷೇಪ ವ್ಯಕ್ತವಾದಾಗಲೆಲ್ಲಾ, ಪತ್ರಿಕೋದ್ಯಮಿಗಳು ತಮ್ಮ ರಕ್ಷಣೆಗಾಗಿ ಗುರಾಣಿಯಂತೆ ಬಳಸುವುದು, ಲಾಭ ಮತ್ತು ನಷ್ಟದ ವಿಷಯಗಳನ್ನು ಮಾತ್ರ. ಭಾರತದ ಒಂದು ಶತಮಾನದ ಪತ್ರಿಕೆಗಳ ಇತಿಹಾಸ ಗಮನಿಸಿದರೆ, ಇವರು ಅಪ್ಪಟ ಸುಳ್ಳುಗಾರರು ಎಂಬುದು ಸಾಬೀತಾಗುತ್ತದೆ. ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ಸಂಸ್ಥಾಪಕರು ಚೆನ್ನೈ ನಗರದ ನಾಲ್ವರು ವಕೀಲರು, ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯನ್ನು ಬ್ರಿಟಿಷರಿಂದ ಕೊಂಡವರು ಮಾರವಾಡಿ ಮನೆತನದ ಜೈನ್ ಕುಟುಂಬ, ಇಂಡಿಯನ್ ಎಕ್ಸ್‌ಪ್ರೆಸ್ ಬಳಗದ ಸಂಸ್ಥಾಪಕ ರಾಮನಾಥ್ ಗೊಯಂಕ ವ್ಯಾಪಾರಸ್ಥ ಕುಟುಂಬದಿಂದ ಬಂದ ವ್ಯಕ್ತಿ, ಅಷ್ಟೇ ಏಕೆ, ನಮ್ಮ ಕನ್ನಡದ ದಿನಪತ್ರಿಕೆ ಪ್ರಜಾವಾಣಿಯ ಸಂಸ್ಥಾಪಕ ಕೆ. ಎನ್. ಗುರುಸ್ವಾಮಿ ಹೆಂಡ ಮಾರುವ ವೃತ್ತಿಯಿಂದ ಬಂದವರು (ಇವರ ಮೂಲ, ಆಂಧ್ರಪ್ರದೇಶದ ಆಧೋನಿ).

ಇವರುಗಳಿಗೆ ಸಮಾಜಕ್ಕೆ ನಾವು ಏನಾದರೂ ಮಾಡಬೇಕು ಎಂಬ ಆದರ್ಶ ಇದ್ದುದರಿಂದಲೇ ಪತ್ರಿಕೆಗಳನ್ನು ಸ್ಥಾಪಿಸಲು ಸಾಧ್ಯವಾಯಿತು. ಇವರುಗಳಿಗೆ ಲಾಭ ಮೊದಲ ಆದ್ಯತೆಯಾಗಿರಲಿಲ್ಲ. ಈ ಎಲ್ಲಾ ಪತ್ರಿಕೆಗಳು ನಷ್ಟದಲ್ಲಿದ್ದರೆ, ಇಷ್ಟು ದೂರ ಸಾಗಿಬಂದು ಇವತ್ತಿನ ಹೆಮ್ಮರಗಳಾಗಿ ಬೆಳೆಯಲು ಸಾಧ್ಯವಿತ್ತೆ? ಈ ಆದರ್ಶವಾದಿಗಳಿಗೆ ಲಾಭಕೋರತನ ಎಂದೂ ಗುರಿಯಾಗಿರಲಿಲ್ಲ ಅಂದ ಮಾತ್ರಕ್ಕೆ ಪತ್ರಿಕೆಯನ್ನು ನಷ್ಟದಲ್ಲಿ ನಡೆಸಬೇಕೆಂಬ ಉಮೇದು ಇರಲಿಲ್ಲ. ಪತ್ರಿಕೆಯ ಓದುಗರೇ ನಿಜವಾದ ವಾರಸುದಾರರು ಎಂದು ಇವರೆಲ್ಲಾ ನಂಬಿದ್ದರು. ಈ ಕಾರಣಕ್ಕಾಗಿ ಪತ್ರಿಕೆಯ ಮುಖಪುಟದ ಜಾಹಿರಾತು ಯಾವ ಕಾರಣಕ್ಕೂ ಕಾಲು ಪುಟಕ್ಕೆ ಮೀರದಂತೆ ಅಲಿಖಿತ ನಿಯಮವನ್ನು ರೂಪಿಸಿಕೊಂಡಿದ್ದರು.

ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಬಲಿಷ್ಟ ರಾಜಕಾರಣಿಗಳ ಮತ್ತು ಕಾರ್ಪೋರೇಟ್ ಕುಳಗಳ ಪಾಲಾಗಿವೆ ಹಾಗಾಗಿ ಹಣ ತರುವ ಜಾಹಿರಾತಿಗಾಗಿ ಇಡೀ ಮುಖಪುಟವನ್ನು ಒತ್ತೆ ಇಡುವ ಸಂಪ್ರದಾಯ ಇತ್ತೀಚೆಗೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತನಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯ?.

ಮೂರು ದಶಕಗಳ ಹಿಂದೆ ನನ್ನ ತಲೆಮಾರು ಪತ್ರಿಕೋದ್ಯಮ ಪ್ರವೇಶಿಸಿದಾಗ ಪತ್ರಿಕೋದ್ಯಮ ಕುರಿತಂತೆ ಬೋಧಿಸುವ ಯಾವ ಪಠ್ಯಗಳು ಇರಲಿಲ್ಲ,  ಯಾವುದೇ ವಿ.ವಿ.ಯಲ್ಲಿ ಇದು ಜ್ಞಾನ ಶಿಸ್ತುವಾಗಿ ಬೆಳದಿರಲಿಲ್ಲ. ನಮಗೆ ಪತ್ರಿಕೋದ್ಯಮದ ಅ. ಆ. ಇ. ಈ. ಕಲಿಸಿದ ಹಿರಿಯರ ಬದುಕು, ಬರವಣಿಗೆ, ಅವರುಗಳು ನೈತಿಕತೆ ಕುರಿತಂತೆ ಹಾಕಿಕೊಂಡಿದ್ದ ಲಕ್ಷ್ಮಣರೇಖೆ ಇವೆಲ್ಲೂ ನಮ್ಮ ಪಾಲಿಗೆ ನಿಜವಾದ ಪಠ್ಯಗಳಾಗಿದ್ದವು.

ಯಾವುದೇ ವ್ಯಕ್ತಿಯ ಬಗ್ಗೆ ಪ್ರೀತಿ ಅಥವಾ ದ್ವೇಷ ಇರಬಾರದು. ಓದುಗರಿಗೆ ನಮ್ಮ ಬರವಣೆಗೆ ಮೂಲಕ ನಿಷ್ಟರಾಗಿರಲು ಇರುವ ಏಕೈಕ ಮಾರ್ಗವೆಂದರೆ ಅಧಿಕಾರಯುತ ವ್ಯಕ್ತಿಗಳಿಂದ (ರಾಜಕಾರಣಿ ಮತ್ತು ಅಧಿಕಾರಿ ಇವರುಗಳಿಂದ) ಅಂತರ ಕಾಪಾಡಿಕೊಳ್ಳುವುದು, ಜಾತಿ, ಧರ್ಮ ಇವುಗಳ ವಕಾಲತ್ತು ವಹಿಸಿ ಬರವಣಿಗೆ ಮಾಡಬಾರದು, ನಾವು ಬರೆಯುವ ಒಂದೊಂದು ಅಕ್ಷರದಲ್ಲಿ ಜೀವಪರವಾದ ಧ್ವನಿ ಇರಬೇಕು, ಇವೆಲ್ಲವನ್ನೂ ನನ್ನ ತಲೆಮಾರಿನ ಪತ್ರಕರ್ತರು, ಖಾದ್ರಿ ಶಾಮಣ್ಣ, ಟಿ.ಎಸ್.ಆರ್.,  ವೈ.ಎನ್.ಕೆ.,  ಕೆ. ಶಾಮರಾವ್,  ಎಂ.ಬಿ. ಸಿಂಗ್, ವಡ್ಡರ್ಸೆ ರಘುರಾಮಶೆಟ್ಟಿ, ಪಿ.ಲಂಕೇಶ್, ಜಯಶೀಲರಾವ್, ಐ.ಕೆ. ಜಾಗೀರ್‌ದಾರ್, ಪಾ.ವೆಂ. ಆಚಾರ್ಯ, ಸುರೇಂದ್ರಧಾನಿ ಮುಂತಾದ ಮಹನೀಯರಿಂದ ಕಲಿತುಕೊಂಡಿದ್ದರು.

Deccan Herald - Mining Paymentsಈ ತಲೆಮಾರಿನ ಮುಂದಿರುವ ಆದರ್ಶವೆಂದರೆ, ಸಾಧ್ಯವಾದಷ್ಟು ಹಣ ಮಾಡಬೇಕು, ಬೆಂಗಳೂರಿನಲ್ಲಿ ಒಂದು ಮನೆ ಮಾಡಬೇಕು, ಓಡಾಡಲು ಕಾರಿರಬೇಕು. ಇನ್ನೂ ಸಾಧ್ಯವಾದರೆ, ನಗರದ ಹೊರವಲಯದಲ್ಲಿ ಒಂದು ತೋಟ ಇರಬೇಕು. ಇಂತಹವರಿಂದ ಏನನ್ನು ತಾನೆ ಕಲಿಯಲು ಸಾಧ್ಯ? ಕೇವಲ 15 ವರ್ಷಗಳ ಹಿಂದೆ ಕನ್ನಡ ಪತ್ರಿಕೋದ್ಯಮಕ್ಕೆ ಅಪರಿಚಿತರಾಗಿ ಉಳಿದಿದ್ದವರೆಲ್ಲಾ ಇಂದು ಕೋಟಿ ಕೋಟಿ ರೂಗಳ ಒಡೆಯರು. ಗಣಿಧಣಿಗಳ ಎಂಜಲು ಕಾಸಿಗೆ ಕೈಯೊಡ್ಡಿದವರೆಲ್ಲಾ ಇಂದು ಸ್ಟಾರ್ ಪತ್ರಕರ್ತರು. ಇಂತಹ ಅಯೋಮಯ ಸ್ಥಿತಿಯಲ್ಲಿ ಹೊಸ ತಲೆಮಾರಿನ ಪತ್ರಕರ್ತರಿಂದ ಯಾವ ಆದರ್ಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಇತ್ತೀಚೆಗಿನ ಯುವ ಜನಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ತೀವ್ರ ಅಸಹನೆ ಎದ್ದು ಕಾಣುತ್ತಿದೆ. ಎಲ್ಲೆಡೆ ಪ್ರಾಮಾಣಿಕತೆಯನ್ನು ಬಯಸುವ ಮನೋಭಾವ ಬೆಳೆದು ಬಂದಿದೆ. ಜೊತೆಗೆ ತಾವೂ ಪ್ರಾಮಾಣಿಕರಾಗಿ ಇರಲು ಬಯಸುತ್ತಾರೆ. ಇದು ಪತ್ರಿಕೋದ್ಯಮ ಹೊರತು ಪಡಿಸಿ ಉಳಿದ ರಂಗಗಳ ಯುವಜನತೆಯಲ್ಲಿ ಕಾಣುವ ಅಂಶ ಎಂದು ತೀವ್ರ ವಿಷಾದದಿಂದ ಹೇಳಲು ಬಯಸುತ್ತೇನೆ.

ಇವತ್ತಿನ ಕಾಲೇಜು ಅಥವಾ ವಿ.ವಿ ಗಳಲ್ಲಿ ನಾವು ಪಡೆಯುತ್ತಿರುವ ಪದವಿ ಉದ್ಯೋಗಕ್ಕೆ ಒಂದು ಪರವಾನಗಿ ಅಷ್ಟೇ, ಅದರಾಚೆ ಅದು ಈ ಯುವ ತಲೆಮಾರಿಗೆ ಏನನ್ನೂ ಕಲಿಸಿಕೊಡುವುದಿಲ್ಲ, ಬೋಧಿಸುವುದಿಲ್ಲ. ಅದು ದೃಶ್ಯಮಾಧ್ಯಮವಾಗಿರಲಿ, ಮುದ್ರಣ ಮಾಧ್ಯಮವಾಗಿರಲಿ, ಇಲ್ಲಿ ಬದುಕು ಕಟ್ಟಿಕೊಳ್ಳಲು ಇಚ್ಚಿಸುವ ಯುವಕರು ನೈತಿಕತೆ ಮತ್ತು ಆದರ್ಶಗಳನ್ನು ಸ್ವಯಂ ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬನೂ ಏಕಲವ್ಯನಾಗಲು ಸಿದ್ಧನಿರಬೇಕು. ಆದರ್ಶಗಳನ್ನು ಮೈಗೂಡಿಸಿಕೊಂಡರೆ, ಬದುಕಿನ ಕಟು ವಾಸ್ತವಗಳು ಏನು ಎಂಬುದು ತಂತಾನೆ ಅರ್ಥವಾಗುವ ಸಂಗತಿ.

ಕೃಷ್ಣ ಪಾಲೇಮಾರ್ ಮತ್ತು ಮಂಗಳೂರಿನ ಪತ್ರಕರ್ತರು

– ಸದಾನಂದ ಕೋಟ್ಯಾನ್

ಮಂಗಳೂರಿನಲ್ಲಿ ಪತ್ರಿಕಾ ಭವನದ ಮೂರನೇ ಮಹಡಿ ಉದ್ಘಾಟನೆ ಆಗಿದೆ. ಕರಾವಳಿಯವರೇ ಆದ ಮುಖ್ಯಮಂತ್ರಿ ಸದಾನಂದ ಗೌಡರು ಭವನ ಉದ್ಘಾಟಿಸಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ರಾಜ್ಯಾಂಗಕ್ಕೆ ದಾಸನಾಗಿರುವುದಕ್ಕೆ ಇಡೀ ಉದ್ಘಾಟನಾ ಸಮಾರಂಭವೇ ಸಾಕ್ಷಿ ಎಂಬಂತೆ ಕಾರ್ಯಕ್ರಮ ನಡೆಯಿತು. ವೇದಿಕೆಯ ತುಂಬ ರಾಜಕಾರಣಿಗಳು. ಅವರ ಅಕ್ಕಪಕ್ಕದಲ್ಲಿ ರಾಜಕಾರಣಿಗಳು ನೀಡಿದ ಕೊಡುಗೆಯನ್ನು ಪ್ರಶಂಸಿಸುವ ಆಸ್ಥಾನ ಭಟರ ಪಾತ್ರಧಾರಿಗಳಾಗಿ ಪರಿವರ್ತನೆ ಹೊಂದಿದ ಪತ್ರಕರ್ತರು. ಇಡೀ ಸಮಾರಂಭ ಮಂಗಳೂರಿನಲ್ಲಿ ಮಾಧ್ಯಮ ಎತ್ತ ಸಾಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುವಂತಿತ್ತು.

ಸೋರುತ್ತಿರುವ ಸ್ಥೈರ್ಯ, ರಾಜ್ಯಾಂಗ ಮತ್ತು ಕಾರ್ಯಾಂಗವನ್ನು ತರಾಟೆಗೆ ತೆಗೆದುಕೊಳ್ಳುವ, ವಿಮರ್ಶಿಸುವ ಸಾಮರ್ಥ್ಯ ಕಳೆದುಕೊಂಡ ಲೇಖನಿಗಳಿಗೆ ಪ್ರಸ್ತುತ ಅಗತ್ಯವಾಗಿ ಶಕ್ತಿ ತುಂಬಬೇಕಾಗಿದೆ. ಪತ್ರಿಕಾ ಭವನದಲ್ಲಿ ಅಪಾರ ಹಣವಿದೆ. ದೇಶದಲ್ಲಿ ಅಪಾರ ಸಾಧನೆಗಳನ್ನು ಮಾಡಿದ ಪತ್ರಕರ್ತರು ಇದ್ದಾರೆ. ಅವರ ಸ್ಫೂರ್ತಿಯ ಗೊಡವೆಗೆ ಹೋಗದ, ಲೋಕಲ್ ದಾಸ್ಯಕ್ಕೆ ಶರಣಾದ ಪತ್ರಕರ್ತರು ಭವನದ ನೆಪದಲ್ಲಿ ಮತ್ತಷ್ಟು ಕೆಳಗಿಳಿದರು. ಅದಕ್ಕೆ ಪಕ್ಕಾ ಸಾಕ್ಷಿ ಉದ್ಘಾಟನಾ ಆಹ್ವಾನ ಪತ್ರದಲ್ಲಿರುವ ಕಳಂಕಿತ ಶಾಸಕರೊಬ್ಬರ ಹೆಸರು.

ಹಾಗೆ ನೋಡಿದರೆ ಮಂಗಳೂರಿನ ಪತ್ರಕರ್ತ ಗೆಳೆಯರಿಗೆ ಈಗ ಕಡು ಕಷ್ಠದ ಕಾಲ. ಅವರನ್ನು ಕಷ್ಟದಿಂದ ಪಾರು ಮಾಡುವ ಕೃಷ್ಣಣ್ಣ ಅಧಿಕಾರ ಕಳೆದುಕೊಂಡಿದ್ದಾರೆ. ರಾಜ್ಯ ರಾಷ್ಟ್ರ ಮಟ್ಟದ ಪತ್ರಿಕೆಗಳು ವಿದ್ಯುನ್ಮಾನ ಮಾಧ್ಯಮಗಳು ಈ ನೀಲಿಚಿತ್ರದ ಪೊಲೀ ಹುಡುಗನ ಕೃಷ್ಣ ಲೀಲೆಗಳನ್ನು ವರದಿ ಮಾಡುತ್ತಾ ಛೀ ಥೂ ಎಂದು ಉಗಿಯುತ್ತಿದ್ದರೆ ಮಂಗಳೂರಿನ ಮಾಧ್ಯಮದ ಗೆಳೆಯರು ತಮ್ಮ ಪತ್ರಕರ್ತರ ಸಂಘದ ಮೂರನೇ ಮಹಡಿಯ ಸಭಾಂಗಣದ ಉದ್ಘಾಟಣೆಗೆ ಕೃಷ್ಣ ಲೀಲೆ ಬಹಿರಂಗಗೊಂಡ ಮರು ದಿವಸವೇ ಕಾರ್‍ಯಕಾರಿ ಸಮಿತಿಯ ಸಭೆ ಸೇರಿ ಆಹ್ವಾನಿಸಿದ್ದಾರೆ.

ಆಹ್ವಾನ ಪತ್ರಿಕೆಯಲ್ಲಿ ಬಹಳ ನೋವಿನಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಂದು ಕೃಷ್ಣ ಪಾಲೇಮಾರ್ ಹೆಸರಿನ ಕೆಳಗೆ ನಮೂದಿಸಿದ್ದಾರೆ. ನೀಲಿಚಿತ್ರ ಸರಬರಾಜುದಾರ ಎಂದು ಇಡೀ ರಾಜ್ಯ ಮತ್ತು ದೇಶದ ಜನತೆ ಟೀಕಿಸುತ್ತಿದ್ದರೆ ಮಂಗಳೂರಿನ ಕಾರ್‍ಯನಿರತ ಪತ್ರಕರ್ತರಿಗೆ ಕೃಷ್ಣ ಜೆ ಪಾಲೇಮಾರ್ “ಮುಖ್ಯ ಅತಿಥಿ”. ಅಷ್ಟು ಮಾತ್ರವಲ್ಲದೆ ತಾವು ಕೆಲಸ ಮಾಡುವ ಮಾಧ್ಯಮಗಳಲ್ಲಿ ತಮ್ಮ ಋಣ ತೀರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಕೃಷ್ಣಣ್ಣನಿಗೆ ಮೊಬೈಲ್ ಬಳಸಲೇ ಗೊತ್ತಿಲ್ಲ, ಯಾರೋ ಅಪಾಪೋಲಿಗಳು ಕಳುಹಿಸಿರುವ ಎಂಎಂಎಸ್ ಎಂದು ವೈಭವೀಕರಿಸಿ ಬರೆಯುವುದರ ಜೊತೆಗೆ ಕೃಷ್ಣಣ್ಣ ನೈತಿಕ ಹೊಣೆ ಹೊತ್ತು (ಹಿಂದೆ ರೈಲು ಅಪಘಾತವಾದಾಗ ಲಾಲ್ ಬಹುದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದಂತೆ) ರಾಜೀನಾಮೆ ನೀಡಿದ್ದಾರೆ ಎಂದು ಹುತಾತ್ಮ ಪಟ್ಟವನ್ನು ಕಟ್ಟಲು ಹೆಣಗಾಡಿ ನಗೆಪಾಟೀಲಿಗೀಡಾಗುತ್ತಿದ್ದಾರೆ.

ಹೀಗೆ ಮಂಗಳೂರು ಪತ್ರಕರ್ತರ ಕಾರುಬಾರು ಪಟ್ಟಿ ಮಾಡುವುದಾದರೆ :

  • ಇಡೀ ಕರ್ನಾಟಕ ರಾಜ್ಯದಲ್ಲಿ ಕೆಐಎಡಿಬಿ ಹಗರಣಗಳು ಹೊರಬೀಳುತ್ತಿದ್ದರೆ ಮಂಗಳೂರಿನ ಪತ್ರಕರ್ತರು ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ.
  • ವರದಿಗಾರಿಕೆಯಲ್ಲಿ ಪ್ರಾಯೋಜಕರತ್ತಲೇ ನಿಷ್ಠೆ ಹೊರತು ಸ್ಥಳೀಯ ಸಮಸ್ಯೆಗಳತ್ತ ಗಮನ ಹರಿಸಿಲ್ಲ
  • ನೈತಿಕ ಪೊಲೀಸ್‌ಗಿರಿಗೆ ಸದಾ ಬೆಂಬಲಿಸುತ್ತಿದ್ದ ಮಾಧ್ಯಮ, ರಾಷ್ಟ್ರೀಯ ಮಾಧ್ಯಮಗಳು ಪ್ರಸಾರ ಆರಂಭಿಸಿದ ನಂತರವಷ್ಟೇ ಬಹಿರಂಗ ಬೆಂಬಲವನ್ನು ನಿಲ್ಲಿಸಿ, ನಿಜವಾದ ಸುದ್ದಿಯತ್ತ ಪ್ರಾಮುಖ್ಯತೆ ಕೊಟ್ಟರು.
  • ಬ್ರಹ್ಮಕಲಶ, ನಾಗಮಂಡಲಗಳ ಜಾಹೀರಾತಿಗೇ ಕಾಯುವ ಪತ್ರಿಕೆಗಳು ದೇವರ ಆರಾಧನೆಗಿಂತಲೂ ಜಾಹೀರಾತು ಆರಾಧನೆಗೇ ಒತ್ತು ಕೊಡುತ್ತಿರುವುದು ಇಂದಿಗೂ ವಾಸ್ತವ.

ಇನ್ನು  ಕೃಷ್ಣ ಜೆ. ಪಾಲೇಮಾರ್ ಕೃಪಾಪೋಷಿತ ಮಾಫಿಯಾಗಳ ವಿಚಾರ ಕೇಳಬೇಕೇ? ನಗರದಲ್ಲಿರುವ ಅಕ್ರಮ ಮಾಲ್ ಒಂದರ ಪಾಲುದಾರರೊಬ್ಬರಿಗೆ ಪಾಲೇಮಾರ್ ಪರವಾದ ಪ್ರತಿಭಟನೆ ಮಾಡಲು ಐಡಿಯಾ ಕೊಟ್ಟವರೂ ಪತ್ರಕರ್ತರು. ನಾವೇ ನಮ್ಮಷ್ಟಕ್ಕೆ ಬರೆದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ, ನಮ್ಮ ವರದಿಗೆ ಪೂರಕವಾಗಿ ನಿಮ್ಮ ದ್ವನಿಯೂ ಇದ್ದರೆ ಚೆನ್ನ ಎಂಬ ಅಭಿಪ್ರಾಯ ಪತ್ರಕರ್ತರದ್ದು. ಬಳ್ಳಾರಿಯಿಂದ ಗಣಿ ಮಂಗಳೂರು ಬಂದರು ಮೂಲಕ ವಿದೇಶಕ್ಕೆ ಸಾಗಿಸುತ್ತಿದ್ದ ಮಾಫಿಯಾದ ಹಿಂದೆ ಬಂದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೇಮಾರ್ ಕೈ ಕೆಲಸ ಮಾಡಿತ್ತು. ಆದರೆ ಮಂಗಳೂರಿನ ಪತ್ರಕರ್ತರು ಈ ಬಗ್ಗೆ ವರದಿಗಳನ್ನು ಮಾಡಿದ್ದೇ ಇಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ರಾಜೀನಾಮೆಗೆ ಪಾಲೇಮಾರ್ ಕಾರಣರಾಗಿದ್ದ ಸಂಧರ್ಭ ಬೆಂಗಳೂರು ಮತ್ತು ಕಾರವಾರದಿಂದ ಪಾಲೇಮಾರ್ ವಿರುದ್ಧ ವರದಿಗಳು ಪ್ರಕಟಗೊಂಡವು. ಆದರೆ ಮಂಗಳೂರಿನ ಶಾಸಕ, ಸಚಿವರಾಗಿದ್ದ ಪಾಲೇಮಾರ್ ಬಗ್ಗೆ ಪತ್ರಕರ್ತರು ಆಸಕ್ತಿ ವಹಿಸಿ ಪ್ರಕರಣವನ್ನು ಫಾಲೋ ಮಾಡಲೇ ಇಲ್ಲ. ಕೆಐಎಡಿಬಿ ಹಗರಣ ರಾಜ್ಯಾಧ್ಯಂತ ಸುದ್ಧಿಯಾದಾಗ ಮಂಗಳೂರು ಕೆಐಎಡಿಬಿ ಹಗರಣಗಳ ಹೂರಣವನ್ನು ಕೆದಕಲು ಹೋಗಲೇ ಇಲ್ಲ. ಕೆಐಎಡಿಬಿ ಕಡತಗಳ ಯಾವುದೋ ಒಂದು ಮೂಲೆಯಲ್ಲಿ ಪಾಲೇಮಾರ್ ಹೆಸರು ಇರಲೇ ಬೇಕು ಎಂಬುದು ಕರಾವಳಿಯ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಇರುವ ಸರಕಾರಿ ಜಮೀನುಗಳನ್ನು ಅತಿಕ್ರಮಿಸಿ ಫ್ಲ್ಯಾಟು, ಲೇಔಟ್, ಮಾಲ್, ಬಹುಮಹಡಿ ಕಟ್ಟಡಗಳ ನಿರ್ಮಾಣದ ಹಿಂದೆ ಪಾಲೇಮಾರ್ ಪಾಲುದಾರಿಕೆ ಇದೆ. ಪಾಲೇಮಾರ್ ಜಮೀನಿನಲ್ಲಿ ಪತ್ತೆಯಾದ ಅಕ್ರಮ ಮರಳು ಶೇಖರಣೆಗೆ ಜಿಲ್ಲಾಧಿಕಾರಿ ತಂಡ ದಾಳಿ ಮಾಡಿದಾಗಲೂ ಮಂಗಳೂರಿನ ಕೆಲವೊಂದು ಪತ್ರಿಕೆಗಳಿಗೆ ಅದು ಸುದ್ಧಿಯೇ ಆಗಿರಲಿಲ್ಲ. ಸಚಿವರೊಬ್ಬರ ವ್ಯವಹಾರಕ್ಕೆ ಅಧಿಕಾರಿಗಳು ತಂಡ ದಾಳಿ ಮಾಡಿ ಮರಳನ್ನು ವಶಪಡಿಸಿಕೊಳ್ಳುವುದು ಸುದ್ಧಿಯೇ ಅಲ್ಲ ಎಂಬುದು ಪಾಲೇಮರ್ ಮತ್ತು ಪತ್ರಕರ್ತರ ಮಧ್ಯದ ಸಂಬಂಧವನ್ನು ಎತ್ತಿ ತೋರಿಸುತ್ತದೆ.

‘ಸರಿತಾ ಅವರ ಮನೆಗೆ ಹೋಗಿದ್ದೇಕೆ?’

-ಭೂಮಿ ಬಾನು

ಮೊನ್ನೆ ವಿಧಾನಸಭೆಯಲ್ಲಿ ನಡೆದ ಅಸಹ್ಯಕರ ಘಟನೆಯಲ್ಲಿ ಸವದಿ ಮತ್ತು ಸಿ.ಸಿ ಪಾಟೀಲರ ಬದಲಿಗೆ ಬೇರೆ ಕೋಮಿನ ಬೇರೆ ಯಾರೇ ಇದ್ದರೂ ಇತರೆ ರಾಜಕೀಯ ಮುಖಂಡರ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ಕಾರಣ ಈ ಹೊತ್ತು ಸ್ವಜಾತಿ ಪ್ರೇಮ ಭ್ರಷ್ಟನನ್ನು, ಲಂಪಟನನ್ನೂ ಸಮರ್ಥಿಸುವ ಮಟ್ಟಿಗೆ ವ್ಯಾಪಿಸಿದೆ.

ಇತ್ತೀಚೆಗೆ ತಮ್ಮ ಸ್ವಜಾತಿ ಪ್ರೇಮವನ್ನು ವಿಧಾನ ಪರಿಷತ್ತಿನಲ್ಲಿ ಢಾಳಾಗಿ ಪ್ರದರ್ಶನಕ್ಕಿಟ್ಟವರು ವಿರೋಧ ಪಕ್ಷದ ನಾಯಕಿ ಶ್ರೀಮತಿ ಮೋಟಮ್ಮ. ಕಾಂಗ್ರೆಸ್ ನಲ್ಲಿರುವ ದಲಿತ ಸಮುದಾಯದ ನಾಯಕರ ಪೈಕಿ ಆಯಕಟ್ಟಿನ ಸ್ಥಾನಗಳನ್ನು ಅಲಂಕರಿಸಿದವರು ಮೋಟಮ್ಮ. ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಅದು ಪಕ್ಷದ ಚೌಕಟ್ಟಿನಲ್ಲಿ ಒಬ್ಬ ಕಾರ್ಯಕರ್ತನಿಗೆ ಸಿಗಬಹುದಾದ ಅತ್ಯುನ್ನತ ಸ್ಥಾನ. ಸದ್ಯ ಅವರು ವಿಧಾನಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕರು.

ತಮ್ಮ ಮಾತಿಗೆ ಹೆಚ್ಚಿನ ಮಹತ್ವ ಇರುತ್ತದೆ, ತಾವು ಯಾರೋ ಹೇಳಿದ ಮಾತನ್ನು ಕೇಳಿ ಸದನದಲ್ಲಿ ಮಾತನಾಡಿದರೆ ತಪ್ಪಾಗುತ್ತದೆ ಎಂಬ ಜಾಣ್ಮೆ ಅವರಿಗಿಲ್ಲ ಎನಿಸುತ್ತದೆ.

ಮೈಸೂರು ವಿಶ್ವವಿದ್ಯಾನಿಲಯ ಸಂಶೋಧನಾ ವಿದ್ಯಾರ್ಥಿ ಸರಿತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಚರ್ಚೆಯಲ್ಲಿ ಪಾಲ್ಗೊಂಡ ಮೋಟಮ್ಮ, “ಸರಿತಾ ಅವರು ಪ್ರೋ. ಶಿವಬಸವಯ್ಯ ನವರ ಮನೆಗೆ ಆತನ ಪತ್ನಿ ಇಲ್ಲದಿರುವಾಗ ಹೋಗಿದ್ದು ತಪ್ಪು. ಅವರೇಕೆ ಹೋಗಬೇಕಿತ್ತು?’ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆ ಕೇಳುವಾಗ ಮೋಟಮ್ಮನವರಿಗೆ ಪ್ರಕರಣದ ಪೂರ್ಣ ವಿವರ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಸರಿತಾ ಅವರ ಮನೆಗೆ ಅವರ ಗೈಡ್ ಪ್ರೊ. ಶಿವಬಸವಯ್ಯ ಭೇಟಿ ನೀಡಿದಾಗ ನಡೆದದ್ದು ಆ ಘಟನೆ. ಸರಿತಾ ತನ್ನ ಗೈಡ್ ಮನೆಗೆ ಹೋಗಿರಲಿಲ್ಲ. ಒಂದು ಪಕ್ಷ ತನ್ನ ಗೈಡ್ ಮನೆಗೆ ಹೋದರೂ ಅದರಲ್ಲಿ ತಪ್ಪೇನು? ಹೋದ ತಕ್ಷಣ ಅವರ ಮೇಳೆ ಲೈಂಗಿಕ ದೌರ್ಜನ್ಯ ನಡೆಸಲು ಅನುಮತಿ ನೀಡಿದಂತೆಯೇ?

ಒಬ್ಬ ಮಹಿಳೆ ತನ್ನಮೇಲೆ ಆದ ದೌರ್ಜನ್ಯವನ್ನು ಪ್ರಶ್ನೆ ಮಾಡಲು ಬೀದಿಗಿಳಿಯುವುದೇ ಅಪರೂಪ. ಹಾಗೆ ಮಾಡಬೇಕೆಂದರೆ ಧೈರ್ಯ, ಪತಿಯ ಬೆಂಬಲ ಬೇಕಾಗುತ್ತದೆ. ಇಷ್ಟೆಲ್ಲದರ ನಡುವೆ ತನ್ನ ಮೇಲೆ ದೌರ್ಜನ್ಯ ಆಗಿದೆ ಎಂದು ಪದೇ ಪದೇ ಹೇಳಿಕೊಳ್ಳುವುದೇ ಹಿಂಸೆಯ ಕೆಲಸ. ಅಷ್ಟರ ಮೇಲೆ ಹೀಗೆಲ್ಲಾ ಅನ್ನಿಸಿಕೊಳ್ಳಬೇಕೆ? ಅದೂ ಮತ್ತೊಬ್ಬ ಮಹಿಳೆಯಿಂದ!

ಶಿವಬಸವಯ್ಯ ದಲಿತರಿರಬಹುದು. ಆದರೆ ಅವರ ಮೇಲೆ ಕೇಳಿ ಬಂದ ಆರೋಪಗಳನ್ನು ಎದುರಿಸಲಾರದಷ್ಟು ನಿಶಕ್ತರೇನಲ್ಲ. ಯಾವ ದಲಿತ ಸಂಘಟನೆಗಳ, ದಲಿತ ನಾಯಕರ ಬೆಂಬಲವೂ ಅವರಿಗೇನು ಅಗತ್ಯವಿರಲಿಲ್ಲ. ವಿಚಿತ್ರ ನೋಡಿ, ಈ ಆರೋಪ ಕೇಳಿ ಬಂದ ಮರುದಿನವೇ ಮೈಸೂರಿನ ಕೆಲ ದಲಿತ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತವು, ಸರಿತಾ ಬಗ್ಗೆ ಆರೋಪ ಮಾಡಿದವು.

ಇಷ್ಟೆಲ್ಲಾ ಆದ ನಂತರ, ವಿಶ್ವವಿದ್ಯಾನಿಲಯ ತನಿಖೆ ನಡೆಸಿತು. ಫ್ರೊ. ಶಿವಬಸವಯ್ಯ ತಪ್ಪಿತಸ್ಥ ಎಂದು ತನಿಖೆ ನಡೆಸಿದ ಸಮಿತಿ ವರದಿ ನೀಡಿತು. ಅದರ ಆಧಾರದ ಮೇಲೆ ಅವರ ಒಂದಿಷ್ಟು ಇಂಕ್ರಿಮೆಂಟ್‌ಗಳನ್ನು ಕಟ್ ಮಾಡಿ, ಚಾಮರಾಜನಗರಕ್ಕೆ ವರ್ಗಮಾಡಿದರು. ಅದು ಶಿಕ್ಷೆಯೆ?

ಸರಿತಾ ಮತ್ತು ಅವರ ಪತಿ ಪ್ರಕಾರ ಅದು ತೀರಾ ಕನಿಷ್ಟ ಶಿಕ್ಷೆ. ಅವರ ಮೇಲಿರುವ ಆರೋಪಗಳು ಸಾಬೀತಾಗಿರುವ ಕಾರಣ ಇನ್ನೂ ಹೆಚ್ಚಿನ ಶಿಕ್ಷೆಗೆ ಅವರು ಗುರಿಯಾಗಬೇಕಿತ್ತು ಎನ್ನುವುದು ಅವರ ವಾದ. ಆದರೆ ಮೋಟಮ್ಮ ಈ ಹಂತದಲ್ಲಿ ‘ಸರಿತಾ ಅವರ ಮನೆಗೆ ಹೋಗಿದ್ದೇಕೆ’ ಎಂದು ಅಸಂಬದ್ಧ ಪ್ರಶ್ನೆ ಕೇಳಿ ತಾವೆಷ್ಟು ಸಣ್ಣವರು ಎಂದು ತೋರಿಸಿದ್ದಾರೆ.

ಯಡಿಯೂರಪ್ಪನ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ಅವರ ಬೆಂಬಲವಾಗಿ ಒಂದಿಷ್ಟು ಮಠಾಧೀಶರು, ಒಂದು ಜಾತಿಯ ಬಂಧುಗಳು ನಿಂತುಕೊಳ್ಳುತ್ತಾರೆ. ಅವರಾರಿಗೂ ತಮ್ಮ ಜಾತಿಯ ರಾಜಕಾರಣಿಯೊಬ್ಬ ಇಂತಹ ಆರೋಪ ಎದುರಿಸಬೇಕಾಯಿತಲ್ಲ ಎಂಬ ಕಾರಣಕ್ಕ ಕನಿಷ್ಟ ನಾಚಿಕೆಯೂ ಇರುವುದಿಲ್ಲ. ಲೋಕಾಯುಕ್ತ ಸಂಸ್ಥೆ ಗೃಹ ಮಂತ್ರಿ ಆರ್. ಅಶೋಕ್ ವಿರುದ್ಧ ಪ್ರಕರಣ ದಾಖಲು ಮಾಡಿದಾಗಲೂ ಜೆಡಿಎಸ್ ಪಕ್ಷದ ಹೆಚ್.ಡಿ. ರೇವಣ್ಣ ‘ಅಶೋಕ್ ರಾಜೀನಾಮೆ ಕೊಡುವ ಅಗತ್ಯವೇನಿಲ್ಲ’ ಎನ್ನುತ್ತಾರೆ.

ಈ ವರ್ತನೆಯ ಮುಂದುವರಿದ ಭಾಗವಾಗಿಯೇ ಮೋಟಮ್ಮನ ಈ ಪ್ರತಿಕ್ರಿಯೆಯನ್ನು ಗ್ರಹಿಸಬೇಕು. ಅಮಾಯಕ ದಲಿತರು ಉಳ್ಳವರ ಸಂಚಿಗೆ ಬಲಿಯಾಗಿ ಅನೇಕಬಾರಿ ವಿನಾಕಾರಣ ಆರೋಪಗಳಿಗೆ ಗುರಿಯಾಗುತ್ತಾರೆ. ಅಂತಹ ಪ್ರಕರಣಗಳಲ್ಲಿ ಅವರ ಬೆಂಬಲಕ್ಕೆ ಕೆಲವರು ನಿಲ್ಲಬೇಕಾಗುತ್ತದೆ. ಅದು ಕೇವಲ ದಲಿತ ಸಂಘಟನೆಗಳ ಕೆಲಸ ಮಾತ್ರ ಅಲ್ಲ. ಎಲ್ಲಾ ಪ್ರಜ್ಞಾವಂತರೂ ದಲಿತರ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ.

ಮೋಟಮ್ಮ ಇನ್ನೂ ಮುಂದೆ ಹೋಗಿ, ಸಂಘ ಪರಿವಾರದ ವಕ್ತಾರರಂತೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆ ಬೇಕು ಎಂದಿದ್ದಾರೆ. ಆ ಮೂಲಕ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಬಹುದು ಎನ್ನುವುದು ಅವರ ಲೆಕ್ಕಾಚಾರ. ಆದಷ್ಟು ಬೇಗ, ಮೋಟಮ್ಮ ಸಂಘ ಪರಿವಾರ ಸೇರಿಕೊಳ್ಳುವುದು ಉತ್ತಮ.

ಇಷ್ಟೆಲ್ಲಕ್ಕೂ ಕಾರಣ ಒಂದು ನಿರ್ದಿಷ್ಟ ‘ಜನಪರ ಸಿದ್ಧಾಂತ’ ಇಲ್ಲದ ಪಕ್ಷದಲ್ಲಿ ಅವರು ಇದ್ದದ್ದು. ಕಾಂಗ್ರೆಸ್ ಗೆ ಇತರೆ ಪ್ರಮುಖ ಪಕ್ಷಗಳ ಹಾಗೆ (ಬಿಜೆಪಿ, ಎಡ ಪಕ್ಷ) ಒಂದು ಸಿದ್ಧಾಂತ ಇಲ್ಲ. ಆ ಪಕ್ಷದಲ್ಲಿ ಕಟ್ಟಾ ಹಿಂದೂವಾದಿಗಳು, ಜಾತಿವಾದಿಗಳು, ಕೋಮುವಾದಿಗಳು..ಹೀಗೆ ಎಲ್ಲರೂ ಇದ್ದಾರೆ. ಚುನಾವಣೆ ಬಂದಾಗ ಅವರು ತಾವು ಸೆಕುಲರ್ ಎಂದು ಹೇಳಿಕೊಂಡರೂ ಅದು ಕೇವಲ ಸ್ಟಂಟ್.

ಆದರೆ ಬಿಜೆಪಿಗೆ ಅಂತಹ ತೊಂದರೆ ಇಲ್ಲ. ಕಾರಣ ಅವರ ಸಿದ್ಧಾಂತ ನಿರೂಪಿಸುವ ಕೆಲಸವನ್ನು ಆರ್.ಎಸ್.ಎಸ್. ಎಂಬಂತಹ ಕೋಮುವಾದಿ ಸಂಘಟನೆ ಮಾಡುತ್ತದೆ. ಅದೆಷ್ಟೇ ಅಪಾಯಕಾರಿ ಸಿದ್ಧಾಂತವಾದರೂ, ತನ್ನ ಕಾರ್ಯಕರ್ತರನ್ನು ಅದಕ್ಕೆ ಬದ್ಧರನ್ನಾಗಿ ಮಾಡುವಲ್ಲಿ ಒಂದಿಷ್ಟು ಪ್ರಯತ್ನಗಳು ನಡೆಯುತ್ತವೆ. ಅಂತೆಯೇ ಎಡ ಪಕ್ಷಗಳಿಗೆ ಒಂದು ಪ್ರಬಲ ಸಿದ್ಧಾಂತ ಇದೆ. ತಮ್ಮ ಗಳಿಕೆ ಇಂತಿಷ್ಟನ್ನು ಸಂಘಟನೆಗೆಂದೇ ಕೊಟ್ಟು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಪರಂಪರೆ ಇದೆ.

ಆದರೆ ಇದಾವುದೂ ಇಲ್ಲದಿರುವುದು ಕಾಂಗ್ರೆಸ್. ಅದೇ ಕಾರಣಕ್ಕೆ ಮೋಟಮ್ಮ ನಂತಹವರು ನಾಲ್ಕು ದಶಕಗಳ ಕಾಲ ಅಲ್ಲಿಯೇ ಇದ್ದರೂ ಆರ್.ಎಸ್.ಎಸ್. ವಕ್ತಾರರಂತೆ ಮಾತನಾಡುವುದು.

Shameless

Bhoomi Banu

Shameless! What else they can be?

Life with criminals around is far better than with shameless people in the vicinity. The absence of shame or remorse on faces of the accused, charges against whom are proven beyond doubt thanks to media and RTI, is conspicuous everywhere. A fair trial in courts is required to nail them all.

Alleged prostitutes cover their faces when TV cameras focus them. They are ashamed of their profession though economic inequalities in society forced them take up the job. But politicians hardly admit to their misdeeds, forget covering their faces in public.

Gujarat Chief Minister Narendra Modi has never been apologetic in the last 10 years after the communal riots which killed many and rendered thousands homeless. The fact that he advanced the assembly elections only to cash in on the communal disharmony prevailing then in the state was enough to prove that he was shameless. Today he has a coterie of thinkers who find fault with human rights activists fighting for justice to the victims of the pogrom orchestrated by the Modi-led dispensation.

Coming to Karnataka, former Chief Minister B.S Yeddyurappa was not in poverty either to loot property or demand donations in the guise of investment for his enterprise. Katta Subramanya Naidu and his son had no shortage of land for a dwelling place to eye on poor farmers’ land either. Yet, they wanted more property, more money. Any legal procedure against Yeddyurappa is looked down upon as an assault on a particular community. The shameless accused had the temerity to term the high command’s decision to shunt him out of the position as a conspiracy to avoid him enjoying the post because he hailed from a particular community.

Two ministers watched a porn clip in the House and exhibited the audacity to defend their act citing that it was a ‘knowledge acquiring exercise’. A Speaker, who forgot that his post expects him to conduct the business of the House in a non-partisan way, shows no sign of remorse when the highest court of the land finds fault with his conduct.

All are shameless. They are so because some chelas, benefitted religious institutions, businessmen profited by them stand by them. Their support and incessant shower of praises prompt them believe that they had done nothing wrong and need not sulk.

All these accused find defence in their opponents’ misdeeds. Every sin and a sinner have a defence. Whenever the justice for post-Godhra violence victims was discussed, the BJP people question whether the victims of anti-Sikh riots were delivered justice?

Even when the three ministers are criticised for their act in the House, members in the treasury benches bring in the issue of a governor’s misconduct at Raj Bhavan in a neighbour state. Then who will answer the public? For the sake of debate, let us agree, no political party has moral right to blame others, then for the god sake, do these politicians agree that at least the public have the right to demand a decent behaviour from their so called representatives.