– ಡಾ.ಎನ್.ಜಗದೀಶ್ ಕೊಪ್ಪ
ಉತ್ತರ ಕರ್ನಾಟಕದ ಸಜ್ಜನ ರಾಜಕಾರಣಿ ಮತ್ತು ಸೋಲಿಲ್ಲದ ಸರದಾರ ಎಂದೇ ಪ್ರಸಿದ್ಧರಾದ ಹುಬ್ಬಳ್ಳಿಯ ಶಾಸಕ ಜಗದೀಶ್ ಶೆಟ್ಟರ್ ಕರ್ನಾಟಕದ 27ನೇ ಮುಖ್ಯಮಂತ್ರಿಯಾಗಿ ಹಾಗೂ ನಾಲ್ಕು ವರ್ಷಗಳ ಅವಧಿಯ ಬಿ.ಜೆ.ಪಿ. ಸರ್ಕಾರದ ಮೂರನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ ಇನ್ನೊಂದು ವರ್ಷದ ಅವಧಿಯಲ್ಲಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಜನತೆಗೆ ಭರವಸೆ ನೀಡಿದ್ದಾರೆ. ಆದರೆ, ಸಧ್ಯದ ಬಿ.ಜೆ.ಪಿ. ಪಕ್ಷದ ಆಂತರೀಕ ಗೊಂದಲಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಗಾದಿ ಶೆಟ್ಟರ್ ಪಾಲಿಗೆ ಮುಳ್ಳಿನ ಹಾಸಿಗೆಯಾಗುವ ಲಕ್ಷಣಗಳು ಕಾಣತೊಡಗಿವೆ.
ಆರ್.ಎಸ್.ಎಸ್. ಸಂಘಟನೆಯ ನಿಷ್ಟಾವಂತ ಅನುಯಾಯಿಯಾಗಿ, ಬಿ.ಜೆ.ಪಿ. ಕಾರ್ಯಕರ್ತನಾಗಿ ಮೂರು ದಶಕಗಳ ಕಾಲ ದುಡಿದು, 1994ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್, ಬೊಮ್ಮಾಯಿ ಅವರನ್ನು ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಮಣಿಸಿ, ವಿಧಾನಸಭೆ ಪ್ರವೇಶಿಸಿದ ಜಗದೀಶ್ ಶೆಟ್ಟರ್, ಮೃದು ಹೃದಯದ ಹಾಗೂ ಮಿತವಾದ ಮಾತಿಗೆ ಹೆಸರಾದವರು. ಬಿ.ಜೆ.ಪಿ. ಪಕ್ಷದಲ್ಲಿ ಇರುವ ಹಲವು ಸಜ್ಜನ ರಾಜಕಾರಣಿಗಳಲ್ಲಿ ಇವರೂ ಒಬ್ಬರು.
ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಮೈತ್ರಿ ಸರ್ಕಾರದಲ್ಲಿ ಕಂದಾಯ ಸಚಿವರಾಗಿ, ನಂತರ ತಮ್ಮದೇ ಪಕ್ಷ ಅಧಿಕಾರಕ್ಕೆ ಬಂದಾಗ, ವಿಧಾನಸಭೆಯ ಅದ್ಯಕ್ಷರಾಗಿ,ಆನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಗ್ರಾಮೀಣಾಭಿವೃದ್ಧಿಯ ಸಚಿವರಾಗಿ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಶೆಟ್ಟರ್ ಈಗ ಮುಖ್ಯಮಂತ್ರಿಯಾಗದ್ದಾರೆ. ಆದರೆ, ಅವರ ಮುಂದಿನ ಹಾದಿ ಮಾತ್ರ ಅತ್ಯಂತ ಕಠಿಣವಾಗಿದೆ.
ಎಡ ಮತ್ತು ಬಲಕ್ಕೆ ಇಬ್ಬರು ಉಪ ಮುಖ್ಯಮಂತ್ರಿಗಳು. ಜೊತೆಗೆ ತಲೆಯ ಮೇಲೆ ಮುಖ್ಯಮಂತ್ರಿ ಮಾಡಿದ ಯಡಿಯೂರಪ್ಪನವರ ಭಯ ಮತ್ತು ಅತಂತ್ರತೆಯ ತೂಗುಕತ್ತಿ, ಇವುಗಳ ನಡುವೆ ಕಳಸವಿಟ್ಟಂತೆ ಸಚಿವ ಸ್ಥಾನ ಸಿಗದ ಶಾಸಕರ ಅಸಹನೆ, ಅಸಹಕಾರ; ಇವುಗಳನ್ನು ಮಡಿಲಲ್ಲಿ ಕೆಂಡ ಕಟ್ಟಿಕೊಂಡಂತೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವುದು ಜಗದೀಶ್ ಶೆಟ್ಟರ್ ಪಾಲಿಗೆ ಸುಲಭದ ಸಂಗತಿಯಲ್ಲ.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿ.ಜೆ.ಪಿ. ಸರ್ಕಾರದ ಹಗರಣಗಳು, ಸಚಿವರ ನಡುವಳಿಕೆಗಳು, ಪಕ್ಷದ ನಾಯಕರ ಜಾತಿ ಸಂಘರ್ಷ ಇವುಗಳಿಂದ ಜನಸಾಮಾನ್ಯರಷ್ಟೇ ಅಲ್ಲ, ಸ್ವತಃ ಪಕ್ಷದ ನಿಷ್ಟಾವಂತ ಕಾರ್ಯಕರ್ತರೇ ರೋಸಿ ಹೋಗಿದ್ದಾರೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಬಿ.ಜೆ.ಪಿ. ಸರ್ಕಾರದಿಂದಾಗಲಿ, ಅಥವಾ ನೂತನ ಮುಖ್ಯಮಂತ್ರಿಯಿಂದಾಗಲಿ ಯಾವುದೇ ಪವಾಡಗಳನ್ನು ಯಾರೊಬ್ಬರು ನಿರಿಕ್ಷಿಸಿಲ್ಲ.
ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಬರಗಾಲದಿಂದ ಉತ್ತರ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಇಲ್ಲದೆ, ಅವುಗಳನ್ನ ಕಸಾಯಿಖಾನೆಗೆ ಅಟ್ಟಿ ಇಲ್ಲಿನ ಜನ ದೂರದ ನಗರಗಳಿಗೆ ವಲಸೆ ಹೋಗುತಿದ್ದಾರೆ. ಮೂರು ವರ್ಷದ ಹಿಂದೆ ಸಂಭವಿಸಿದ ಅತಿವೃಷ್ಟಿಯಲ್ಲಿ ಮನೆ ಮಠಗಳನ್ನು ಕಳೆದುಕೊಂಡ ಉತ್ತರ ಕರ್ನಾಟಕದ ಜನರಿಗೆ ಈವರೆಗೆ ಮನೆಗಳನ್ನು ನಿರ್ಮಿಸಿಕೊಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಸರ್ಕಾರ ಗುರಿ ಹಾಕಿಕೊಂಡಿದ್ದ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಗಳಲ್ಲಿ ಈವರೆಗೆ ಸಿದ್ಧವಾಗಿರುವ 33 ಸಾವಿರ ಮನೆಗಳು ಧಾನಿಗಳು ಕಟ್ಟಿಸಿಕೊಟ್ಟ ಮನೆಗಳು ಮಾತ್ರ.
ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕರ್ನಾಟಕದ ಇತಿಹಾಸದಲ್ಲಿ ಕಂಡರಿಯದ ಭೂ ಹಗರಣ, ಸಚಿವರ ಮಿತಿ ಮೀರಿದ ಭ್ರಷ್ಟಾಚಾರ, ಲೈಂಗಿಕ ಹಗರಣ, ಗಣಿ ಹಗರಣ, ಇವುಗಳ ಫಲವಾಗಿ ಸಚಿವ ಸಂಪುಟ ಸದಸ್ಯರ ಸರತಿಯ ರಾಜಿನಾಮೆ ಇವೆಲ್ಲವೂ ಶಿಸ್ತಿಗೆ ಹೆಸರಾದ ಬಿ.ಜೆ.ಪಿ. ಪಕ್ಷದ ಮುಖಕ್ಕೆ ರಾಷ್ಟ್ರ ಮಟ್ಟದಲ್ಲಿ ಕಪ್ಪು ಮಸಿ ಬಳಿದಿವೆ. ಈಗ ಇವುಗಳ ಜೊತೆಗೆ ಜಾತಿ ರಾಜಕಾರಣ ಹೊಸದಾಗಿ ಸೇರ್ಪಡೆಯಾಗಿದ್ದು, ಇಂತಹ ಬೆಳವಣಿಗೆಗಳು ಪ್ರಜ್ಞಾವಂತರಲ್ಲಿ ಅಸಹ್ಯ ಮಾತ್ರವಲ್ಲ, ಜಿಗುಪ್ಸೆ ಮೂಡಿಸಿವೆ.
ಅತ್ಯಂತ ಸಜ್ಜನಿಕೆ ಸ್ವಭಾವದ ಜಗದೀಶ್ ಶೆಟ್ಟರಿಗೆ ಅವರ ಗುಣವೇ ಅವರ ಪಾಲಿಗೆ ಮಾರಕವಾಗುವ ಸಂಭವವಿದೆ. ಇಲ್ಲಿಯವರೆಗೆ, ಯಡಿಯೂರಪ್ಪನವರನ್ನು ಓಲೈಕೆ ಮಾಡಿಕೊಂಡು ಸಚಿವ ಸ್ಥಾನದಲ್ಲಿ ಮುಂದುವರಿದ, ಅಸಮರ್ಥ ಸಚಿವರುಗಳೆಲ್ಲಾ ಈಗಿನ ಶೆಟ್ಟರ್ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆದಿರುವುದು ನಿರಾಶೆಯ ಸಂಗತಿ.
ಈವರೆಗೆ ಹೆಚ್ಚುವರಿಯಾಗಿ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಾಗದ, ರಾಜ್ಯದ ರಸ್ತೆಗಳನ್ನು ದುರಸ್ತಿ ಮಾಡಲಾಗದ, ಗ್ರಾಮೀಣ ಜನತೆಗೆ ಕುಡಿಯುವ ನೀರು ಒದಗಿಸಲಾಗದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗದ ಬಿ.ಜೆ.ಪಿ. ಸರ್ಕಾರದಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳದ ಜನತೆ ಜಗದೀಶ್ ಶೆಟ್ಟರ್ರಿಂದ ಏನು ನಿರಿಕ್ಷಿಸಲು ಸಾಧ್ಯ?
ಉಳಿದ ಒಂದು ವರ್ಷದ ಅವಧಿಯಲ್ಲಿ ಸ್ವಚ್ಛ ಆಡಳಿತ ನೀಡುತ್ತೇನೆ ಎನ್ನುವ ಮಾತು ಕೇವಲ ಅವರ ಆವೇಶದ ಮಾತಾಗಬಹುದು. ಏಕೆಂದರೆ, ಹನ್ನೊಂದು ತಿಂಗಳ ಕಾಲ ಯಾವುದೇ ಹಗರಣಗಳಿಗೆ ಎಡೆ ಮಾಡಿಕೊಡದಂತೆ ಆಡಳಿತ ನಡೆಸಿದ ಸದಾನಂದ ಗೌಡರಿಗೆ ಪಕ್ಷ ನೀಡಿರುವ ಬಳುವಳಿ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ.
ಆಡಳಿತ ಒಳಸುಳಿಗಳನ್ನು ಅರ್ಥ ಮಾಡಿಕೊಳ್ಳಲು ಒಂದು ವರ್ಷದ ಅವಧಿ ಅಗತ್ಯವಿರುವಾಗ, ಸಮರ್ಥ ಆಡಳಿತವನ್ನು ಜಗದೀಶ್ ಶೆಟ್ಟರ್ ಮತ್ತು ಅವರ ಮಂತ್ರ ಮಂಡಲದಿಂದ ಬಯಸಲು ಸಾಧ್ಯವಿಲ್ಲ. ಯಡಿಯೂರಪ್ಪನಂತಹ ಮೋಹಿನಿ ಭಸ್ಮಾಸುರನ ಮನಸ್ಸಿರುವ ವ್ಯಕ್ತಿಯಿಂದ ಆಯ್ಕೆಯಾಗಿರುವ ಜಗದೀಶ್ ಶೆಟ್ಟರ್ ಈವರಗೆ ತಾವು ಕಾಪಾಡಿಕೊಂಡು ಬಂದಿದ್ದ ತಮ್ಮ ವರ್ಚಸ್ಸನು ಹಾಗೇ ಉಳಿಸಿಕೊಂಡರೆ ಸಾಕು ಅದು ಅವರ ಪಾಲಿಗೆ ದೊಡ್ಡ ಸಾಧನೆಯಾಗಬಲ್ಲದು. ಏಕೆಂದರೆ ಇಂಗ್ಲೀಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ, ’ರೈಟ್ ಪರ್ಸನ್ ಇನ್ ದ ರಾಂಗ್ ಪ್ಲೇಸ್’ ಎಂದು. ಅದೇ ಸ್ಥಿತಿ ಈಗ ಶೆಟ್ಟರಿಗೆ ಎದುರಾಗಿದೆ.