Daily Archives: August 11, 2012

ಮಂಗಳೂರು ಹೋಮ್‌ಸ್ಟೇ ದಾಳಿಯಲ್ಲಿ 28/07/12 ರಂದು ಹಲ್ಲೆಗೊಳಗಾದವರ ಪತ್ರಿಕಾ ಪ್ರಕಟಣೆ

ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಯಲ್ಲಿ ಬರ್ತ್‌ಡೇ ಪಾರ್ಟಿ ಆಚರಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯ ನಂತರ ಹಲವಾರು ಬೆಳವಣಿಗೆಗಳು ನಡೆದಿದೆ. ವಿದ್ಯಾರ್ಥಿಗಳ ನಡತೆಯ ಬಗ್ಗೆ, ವಿದ್ಯಾರ್ಥಿಗಳ ಹೆತ್ತವರ ಹಿನ್ನೆಲೆಯ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆಯಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರಿ ಮಂಜುಳಾ ಸರಕಾರಕ್ಕೆ ಬಹಳ ಬೇಜವಾಬ್ದಾರಿಯುತ ಮತ್ತು ಪಕ್ಷಪಾತಿ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ಘಟನೆ ಮತ್ತು ಒತ್ತಾಯಗಳ ಬಗ್ಗೆ ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳೇ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಇಂದು, (11/08/12) ಪತ್ರಿಕಾಗೋಷ್ಠಿ ನಡೆಸಿದ್ದಾರೆ. ವಿದ್ಯಾರ್ಥಿಗಳು ನೀಡಿದ ಪತ್ರಿಕಾ ಪ್ರಕಟಣೆಯ ಯಥಾಪ್ರತಿ ಇದು.

ದಿನಾಂಕ : 11 ಆಗಸ್ಟ್
ಸ್ಥಳ : ಪ್ರೆಸ್ ಕ್ಲಬ್, ಮಂಗಳೂರು

ದಿನಾಂಕ 28-07-2012 ರಂದು ನಡೆದ ಘಟನೆ

ವಿಜಯ್ ಮತ್ತು ಸಂಜನಾ ಆತ್ಮೀಯ ಸ್ನೇಹಿತರಾಗಿದ್ದು ಜುಲೈ 28 ರಂದು ಇಬ್ಬರದ್ದೂ ಹುಟ್ಟುಹಬ್ಬವಾಗಿರುತ್ತದೆ. ಅವರಿಬ್ಬರಿಗೂ ತಮ್ಮ  ತಮ್ಮ ಮಿತ್ರರಿಗೆ ಖಾಸಗಿಯಾಗಿ ಊಟ ನೀಡಿ ಹುಟ್ಟು ಹಬ್ಬವನ್ನು ಸ್ನೇಹಿತರ ಹಾಜರಾತಿಯಲ್ಲಿ ಆಚರಿಸಬೇಕು ಎಂಬ ಹಂಬಲವಿತ್ತು. ವಿಜಯ್ ಮತ್ತು ಸಂಜನಾ ಈ ವಿಷಯವನ್ನು ಪರಸ್ಪರ ಹಂಚಿಕೊಂಡಾಗ ಹುಟ್ಟು ಹಬ್ಬದ ದಿನದಂದು ಯಾವುದಾದರೂ ಬಾಡಿಗೆಗೆ ಸಿಗುವ ಸಾರ್ವಜನಿಕ ಸ್ಥಳದಲ್ಲಿ ಆಚರಿಸಿಕೊಂಡು ಅದರ ಬಾಡಿಗೆಯನ್ನು ಪರಸ್ಪರ ಇಬ್ಬರೂ ಸಮಾನವಾಗಿ ಭರಿಸಿಕೊಳ್ಳುವುದೆಂದು ನಿರ್ಧರಿಸಲಾಗಿತ್ತು. ಈ ಕೂಟಕ್ಕೆ ಸಂಜನಾಳು ತನ್ನ ಆತ್ಮೀಯ ಸ್ನೇಹಿತರು ಮತ್ತು ಒಂದಿಷ್ಟು ಸಹಪಾಠಿಗಳನ್ನು ಕರೆದುಕೊಂಡು ಬರುವುದಾಗಿಯೂ ಮತ್ತಿ  ತಾನು ತನ್ನ ಸ್ನೇಹಿತರ ಜೊತೆ ಸಂಜೆ ಮೂರರಿಂದ ಸಂಜೆ ಏಳು ಗಂಟೆಯವರೆಗೆ ಮಾತ್ರ ಆಚರಿಸುವುದಾಗಿಯೂ ಆ ಬಳಿಕ ತಮ್ಮ ತಂದೆ ತಾಯಿ ನಮ್ಮನ್ನು ಕರೆದುಕೊಂಡು ಹೋಗಲು ಬರುವುದಾಗಿಯೂ ನಮಗೆ ಹೇಳಿದ್ದಳು. ಹಾಗೂ ತನ್ನ ಹುಟ್ಟು ಹಬ್ಬದ ಸಲುವಾಗಿ ತಿಂಡಿ ತಿನಸುಗಳನ್ನು ಮತ್ತು ಕೇಕನ್ನು ಹೊಟೇಲ್‌ನಿಂದ ತರುವುದಾಗಿಯೂ ಹೇಳಿದ್ದಳು.
ವಿಜಯ್‌ನ ಹುಟ್ಟು ಹಬ್ಬದ ಆಚರಣೆಯನ್ನು ರಾತ್ರಿ ಏಳು ಗಂಟೆಯಿಂದ ತನ್ನ ಆತ್ಮೀಯ ಸ್ನೇಹಿತ ಹುಡುಗರೊಂದಿಗೆ ಆಚರಿಸುವುದಾಗಿಯೂ ನಿರ್ಧರಿಸಲಾಗಿತ್ತು. ಸಂಜನಾಳ ಹುಟ್ಟು ಹಬ್ಬದ ಮತ್ತು ವಿಜಯ್‌ನ ಹುಟ್ಟು ಹಬ್ಬದ ಸಮಯ ಬೇರೆ ಬೇರೆ ಆಗಿದ್ದರಿಂದ ಅದೇ ರೀತಿ ಆಚರಿಸಲು ನಿರ್ಧರಿಸಲಾಗಿತ್ತು.

ಈ ಹುಟ್ಟು ಹಬ್ಬಕ್ಕಾಗಿ ಒಂದು ಹಾಲ್  ಹುಡುಕುತ್ತಿದ್ದಾಗ ಪಡೀಲ್‌ನಲ್ಲಿ ಒಂದು ಹಾಲ್ ಇದೆ ಎಂದು ತಿಳಿದು ಬಂದಿದ್ದರಿಂದ ಆ ಬಗ್ಗೆ ಸಂಬಂಧಿತ ವ್ಯಕ್ತಿಗಳನ್ನು ಹುಡುಕುತ್ತಿದ್ದೆವು. ಸುಮಾರು 1.30 ರ ವೇಳೆಗೆ ಹೋಂ ಸ್ಟೇ ಮಾಲೀಕರು ಮಂಗಳೂರು ಜಸ್ಟ್ ಕ್ಯಾಶುವಲ್ ಎಂಬ ಬಟ್ಟೆ ಅಂಗಡಿ ಮಾಲಕರಾಗಿದ್ದು ಅವರನ್ನು ಸಂಪರ್ಕಿಸಿ 24 ಗಂಟೆಗೆ ಐದು ಸಾವಿರ ರೂಪಾಯಿಯ ಒಟ್ಟು ಬಾಡಿಗೆಯನ್ನು ನಿಗದಿಪಡಿಸಿ ಒಂದು ಸಾವಿರ ರೂಪಾಯಿ ಹೆಚ್ಚುವರಿ ಠೇವಣಿಯಾಗಿ ಒಟ್ಟು ಆರು ಸಾವಿರ ರೂಪಾಯಿಯನ್ನು ನೀಡಿದ್ದೆವು. ಹುಟ್ಟು ಹಬ್ಬ ಆಚರಿಸಲು ಸ್ಥಳ ದೊರಕಿದ ಕೂಡಲೇ ಸಂಜನಾಳಿಗೆ ತಿಳಿಸಿದೆವು. ಆಕೆ ತನ್ನ ಸ್ನೇಹಿತೆಯರು ಮತ್ತು ಸ್ನೇಹಿತರೊಂದಿಗೆ ಸುಮಾರು 2.30 ಅಥವಾ 3.00 ಗಂಟೆಯ ವೇಳೆಗೆ ಜೀಪಿನಲ್ಲಿ ಹೋಂ ಸ್ಟೇಗೆ ಬಂದಿದ್ದಳು. ಸಂಜನಾಳು 3.15 ರಿಂದ 3.30 ರವೇಳೆಯಲ್ಲಿ ಕೇಕ್ ಕಟ್ ಮಾಡಿ, ಎಲ್ಲರಿಗೂ ಸಿಹಿ ಹಂಚಿ ಬರ್ತ್‌ಡೇ ಆಚರಿಸಿದ್ದಳು. ಈ ಸಮಯ ವಿಜಯ್ ಮತ್ತು ಆತನ ನಾಲ್ಕು ಮಂದಿ ಸ್ನೇಹಿತರು ರಾತ್ರಿ ನಡೆಯಲಿದ್ದ ವಿಜಯ್‌ನ ಹುಟ್ಟು ಹಬ್ಬದ ಆಚರಣೆಗಾಗಿ ವ್ಯವಸ್ಥೆ ಮಾಡುತ್ತಿದ್ದರು.

ಸಂಜನಾಳ ಹುಟ್ಟು ಹಬ್ಬ ಮುಗಿದ ಬಳಿಕ ಸುಮಾರು 5.40ರ ವೇಳೆಗೆ ಆಕೆಯ ಇಬ್ಬರು ಸ್ನೇಹಿತರು ಮನೆಗೆ ಮರಳಿದ್ದರು. ಸಂಜನಾ ಸೇರಿದಂತೆ ಉಳಿದವರು ಮನೆಗೆ ಹೋಗಲು ಸಿದ್ದರಾಗಿ ತಮ್ಮನ್ನು ಕರೆದುಕೊಂಡು ಹೋಗಲು ಬರಲಿದ್ದ ಹೆತ್ತವರಿಗಾಗಿ ಹೊಂ ಸ್ಟೇಯ ಹೊರಗಡೆ ಕಾಯುತ್ತಿದ್ದರು.

ಸುಮಾರು 7.00 ರಿಂದ 7.30 ರ ಸಂಜೆ ವೇಳೆಗೆ ನಾವಿದ್ದ ಹೋಂ ಸ್ಟೇಗೆ ಅಂದಾಜು ಮೂವತ್ತು ಮಂದಿಯಷ್ಟಿದ್ದ ತಂಡವೊಂದು ದಾಳಿ ಮಾಡುವಂತೆ ಪ್ರವೇಶ ಮಾಡಿತು. ಮನೆಗೆ ಹೊರಡಲು ತಯಾರಾಗಿ ಹೋಂ ಸ್ಟೇಯ ಹೊರಗಡೆ ನಿಂತಿದ್ದ ಸಂಜನಾ ದಾಳಿ ಮಾಡುವಂತೆ ಬರುತ್ತಿದ್ದ ಯುವಕರನ್ನು ಕಂಡು ಹೆದರಿ ಹೋಂ ಸ್ಟೇಯ ಒಳ ಬಂದು ಬಾಗಿಲು ಹಾಕಲು ಪ್ರಯತ್ನಿಸುತ್ತಿದ್ದಳು. ಆದರೆ 25ಕ್ಕೂ ಹೆಚ್ಚು ಯುವಕರು ಬಾಗಿಲನ್ನು ತಳ್ಳಿ ಒಳ ಬಂದು ಹುಡುಗಿಯರಿಗೆ ಹಲ್ಲೆಯನ್ನು ಮಾಡಿದ್ದಾರೆ. ಯುವತಿಯರು ಹಾಕಿಕೊಂಡಿದ್ದ ಬಟ್ಟೆ, ಕೋಟ್‌ಗಳನ್ನು ಎಳೆದಾಡಿದ್ದಾರೆ. ಯುವತಿಯರ ಅತ್ಯಾಚಾರಕ್ಕೆ ಯತ್ನಿಸುವ ರೀತಿಯಲ್ಲಿ ಕೈಯಾಡಿಸಿದ್ದಾರೆ. ಯುವತಿಯರು ಪ್ರತಿಭಟಿಸಿದಾಗ ಕೂದಲಿನಲ್ಲಿ ಹಿಡಿದು ತಲೆಯನ್ನು ಗೋಡೆಗೆ ಬಡಿದಿದ್ದಾರೆ. ಎಲ್ಲಾ ಯುವತಿಯರನ್ನು ಎಳೆದುಕೊಂಡು ಕೋಣೆಯ ಹಾಸಿಗೆಗೆ ದೂಡಿ ಕೆನ್ನೆಗೆ ಹೊಡೆದಿದ್ದಾರೆ. ಯುವಕರ ದಾಳಿಗೆ ಬೆಚ್ಚಿ ಬಿದ್ದ ಯುವತಿಯರಿಬ್ಬರು ಮೊದಲನೇ ಮಹಡಿಯಿಂದ ಜೀವದ ಹಂಗು ತೊರೆದು ಕೆಳಗೆ ಹಾರಿದ್ದಾರೆ. ನೆಲಕ್ಕೆ ಬಿದ್ದ ಯುವತಿಯರನ್ನೂ ಕನಿಷ್ಠ ಮಾನವೀಯತೆ ತೋರದೆ ಕೂದಲು ಹಿಡಿದುಕೊಂಡು ನೆಲದಲ್ಲಿ ಎಳೆದುಕೊಂಡೇ ಕೋಣೆಗೆ ತಂದಿದ್ದಾರೆ. ಇದನ್ನು ಪ್ರತಿಭಟಿಸಿದ ಹುಡುಗರ ಮೇಲೂ ಹಲ್ಲೆಗಳಾಗಿದ್ದಾವೆ. ಹುಡುಗರನ್ನು ಹಿಗ್ಗಾಮುಗ್ಗ ಬಡಿದು ಹಿಂಸಿಸಿ ಗಾಯಗೊಳಿಸಿದ್ದಾರೆ. ಇವೆಲ್ಲವನ್ನೂ ಕೂಡಾ ಮೀಡಿಯಾದ ಕ್ಯಾಮರಾಗಳು ಶೂಟಿಂಗ್ ಮಾಡುತ್ತಿದ್ದವು. ಇದಲ್ಲದೆ ನಮ್ಮನ್ನೆಲ್ಲಾ ಒಂದು ಕೋಣೆಯಲ್ಲಿ ಕೂಡಿ ಹಾಕಿ ದಾಳಿ ನಡೆಸಿದ ಯುವಕರು ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ.

ನಮ್ಮ ಮೇಲೆ ಇಷ್ಟೆಲ್ಲಾ ದಾಳಿಯಾಗುತ್ತಿದ್ದಾಗ ಮಾಧ್ಯಮದ ಕ್ಯಾಮರಾಗಳು ಎಲ್ಲವನ್ನೂ ಶೂಟಿಂಗ್ ಮಾಡುತ್ತಿದ್ದವು. ನಮ್ಮ ಮೇಲೆ ದಾಳಿ ನಡೆಸುತ್ತಿದ್ದ ಹತ್ತಾರು ಮಂದಿ ಮೊಬೈಲ್‌ನಲ್ಲೂ ಶೂಟಿಂಗ್ ಮಾಡುತ್ತಿದ್ದರು. ಕ್ಯಾಮರಾ ಹಿಡಿದುಕೊಂಡವರು ಮತ್ತು ಅವರ ಜೊತೆ ಇದ್ದ ಮತ್ತೊಬ್ಬರು ಹುಡುಗಿಯರಿಗೆ ಹೊಡೆಯಬೇಡಿ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆಗ ದಾಳಿ ನಡೆಸಿದವರು ಮೀಡಿಯಾದ ಕ್ಯಾಮರ ಆಫ್ ಮಾಡುವಂತೆ ಹೇಳಿದರು. ಆದರೆ ಮೀಡಿಯಾದವರು ಕ್ಯಾಮರ ಹಿಡಿದುಕೊಂಡೇ ಇದ್ದರು. ಒಂದು ವೇಳೆ ಮೀಡಿಯಾದ ಕ್ಯಾಮರ ಇಲ್ಲದೇ ಇರುತ್ತಿದ್ದರೆ ಹುಡುಗಿಯರನ್ನು ನಮ್ಮೆದುರೇ ಅವರು ಅತ್ಯಾಚಾರ ಮಾಡುವ ಸಾಧ್ಯತೆ ಇರುವಂತೆ ಕಂಡು ಬಂತು. ದಾಳಿ ಮಾಡಿದವರೆಲ್ಲರೂ ಕುಡಿದಿದ್ದರು. ಕ್ಯಾಮರ ಇಲ್ಲದೇ ಇರುತ್ತಿದ್ದರೆ ಹುಡುಗಿಯರನ್ನು ಅತ್ಯಾಚಾರ ಮಾಡುತ್ತಿದ್ದರೂ ಅಲ್ಲಿ ಕೇಳುವವರೇ ಇಲ್ಲದ ಸ್ಥಿತಿ ಇತ್ತು.

ದಾಳಿಕೋರರ ಹಿಂದೆಯೇ ಪೊಲೀಸರು ಬಂದಿದ್ದು, ಪೊಲೀಸರ ಎದುರೇ ನಮ್ಮ ಮೇಲೆ ದಾಳಿಯಾಗಿದೆ. ದಾಳಿಕೋರರ ಜೊತೆ ಬಂದ ಇನ್ಸ್‌ಪೆಕ್ಟರ್ ನಮ್ಮ ಕೆನ್ನೆಗೆ ಹೊಡೆದರು. ನಂತರ ಬಾಗಿಲು ಹಾಕಿ ವಿಜಯ್ ಕೆನ್ನೆಗೂ ಮತ್ತೊಬ್ಬರು ಪೊಲೀಸರು ಹೊಡೆದರು. ನಮಗೆ ದಾಳಿಕೋರರು ಹೊಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದರು. ದಾಳಿಕೋರರನ್ನು ಪೊಲೀಸರು ಅರೆಸ್ಟ್ ಮಾಡದೆ ಅವರನ್ನು ಅಲ್ಲಿಂದ ಬೇಗ ಜಾಗ ಖಾಲಿ ಮಾಡುವಂತೆ ಸೂಚಿಸಿದರು.

ಆರೋಪಿಗಳನ್ನು ಮುಕ್ತವಾಗಿ ಬಿಟ್ಟ ಪೊಲೀಸರು ನಮ್ಮನ್ನು ರಾತ್ರಿ ಒಂದು ಗಂಟೆಯವರೆಗೆ ಪಾಂಡೇಶ್ವರ ಠಾಣೆಯಲ್ಲಿ ಕೂಡಿ ಹಾಕಿದರು. ಅಲ್ಲಿ ನಮಗೆ ಊಟ ತಿಂಡಿಯೂ ನೀಡದೆ, ಕನಿಷ್ಠ ಕುಡಿಯಲು ನೀರೂ ನೀಡದೆ, ಚಿಕಿತ್ಸೆಯನ್ನೂ ಕೊಡದೆ ಮಧ್ಯರಾತ್ರಿಯವರೆಗೆ ನಮಗೆ ಬೈಯ್ಯುತ್ತಿದ್ದರು. ಸುಮಾರು ಹನ್ನೊಂದು ಗಂಟೆಯವರೆಗೆ ನಮ್ಮನ್ನೇ ಆರೋಪಿಗಳಂತೆ ನೋಡಿಕೊಂಡು ದಾಳಿ ಮಾಡಿದ ಆರೋಪಿಗಳ ವಿರುದ್ದ ಯಾವುದೇ ಪ್ರಕರಣ ದಾಖಲಿಸದೆ ನಮಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಯಿಸಿ ಕಳುಹಿಸುವ ಯೋಚನೆ ಪೊಲೀಸರಿಗಿತ್ತು ಎಂಬಂತೆ ಅವರ ವರ್ತನೆ ಮತ್ತು ಮಾತುಕತೆಗಳಿದ್ದವು. ಮಾಧ್ಯಮಗಳಲ್ಲಿ ಸುದ್ಧಿ ಪ್ರಸಾರವಾಗುತ್ತಿರುವ ಬಗ್ಗೆ ಮತ್ತು ಸರಕಾರದಿಂದ ಒತ್ತಡ ಬರುತ್ತಿರುವ ಬಗ್ಗೆ ಪೊಲೀಸರು ಪರಸ್ಪರ ಮಾತನಾಡುತ್ತಿದ್ದು, ತಕ್ಷಣ ಒಮ್ಮೆಲೆ ಅವಸರಿಸಿಕೊಂಡ ಪೊಲೀಸರು ನಮ್ಮಲ್ಲಿ ದೂರು ನೀಡುವಂತೆ ಹೇಳಿದರು.

ದಾಳಿಕೋರರು ಹಿಂದೂ ಜಾಗರಣ ವೇದಿಕೆಗೆ ಸೇರಿದವರು ಎಂದು ಮಾತ್ರ ನಮಗೆ ಗೊತ್ತಿದ್ದು ಅವರುಗಳ ಹೆಸರುಗಳು ಗೊತ್ತಿಲ್ಲ. ಆದುದರಿಂದ ಯಾರ ಹೆಸರನ್ನೂ ನಾನು ನೀಡದೆ ಘಟನೆಯ ಬಗ್ಗೆ ಮಾತ್ರ ವಿವರಿಸಿದ್ದೆ. ನಂತರ ಖಾಲಿ ಕಾಗದಕ್ಕೆ ನನ್ನಿಂದ ಸಹಿ ಪಡೆದುಕೊಂಡ ಪೊಲೀಸರೇ ದೂರು ಸಿದ್ದಪಡಿಸಿದರು. ಮರುದಿವಸ ರವಿವಾರವೂ ನಮ್ಮನ್ನು ಠಾಣೆಗೆ ಬರುವಂತೆ ಹೇಳಿದ್ದರು. ಬೆಳಿಗ್ಗೆ ಠಾಣೆಗೆ ಹೋದಾಗ ನಮ್ಮನ್ನು ಸಾಲಾಗಿ ನಲ್ಲಿಸಿದ ಪೊಲೀಸರು ಅವಾಚ್ಯವಾಗಿ ಬೈದಿದ್ದಾರೆ.

ಕೇಂದ್ರ, ರಾಜ್ಯ ಸರಕಾರದ ಮುಂದೆ ನಮ್ಮ ಬೇಡಿಕೆಗಳು :

  1. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಘಟನೆಯ ಬಗ್ಗೆ ವರದಿಯನ್ನು ಸಿದ್ದಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದು ನಮಗೆ ಅಘಾತ ಉಂಟು ಮಾಡಿದೆ. ಹಲ್ಲೆಗೆ ಒಳಗಾದ ಹುಡುಗರು ಗಾಂಜಾ ಸೇವಿಸಿದ್ದರು ಎಂದು ಅವರು ಹೇಳಿದ್ದಾರೆ. ಅವರು ಯಾವ ಆಧಾರದ ಮೇಲೆ ಅದನ್ನು ಹೇಳಿದರು? ಪೊಲೀಸರು ಇಡೀ ಹೋಂ ಸ್ಟೇಯನ್ನು ಪರಿಶೀಲಿಸಿದ್ದಾರೆ. ಎಲ್ಲೂ ಗಾಂಜಾ ಸಿಕ್ಕಿಲ್ಲ. ಆಯೋಗದ ಅಧ್ಯಕ್ಷರಾಗಲೀ ಸದಸ್ಯರಾಗಲೀ ಸಂತ್ರಸ್ತರಾಗಿ ದೂರುದಾರರಾಗಿರುವ ನಮ್ಮನ್ನು ಬೇಟಿಯಾಗಿಲ್ಲ. ಹಲ್ಲೆಗೆ ಒಳಗಾಗಿರೋ ಹುಡುಗಿಯರನ್ನೂ ಕನಿಷ್ಠ ಬೇಟಿಯಾಗಿಲ್ಲ. ಆದುದರಿಂದ ರಾಜ್ಯ ಮಹಿಳಾ ಆಯೋಗದ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಮತ್ತು ಮಹಿಳಾ ಆಯೋಗದ ಅಧ್ಯಕ್ಷರನ್ನು ವಜಾಗೊಳಿಸಬೇಕು.
  2. ಮೀಡಿಯಾದ ಕ್ಯಾಮರ ಮತ್ತು ವರದಿಗಾರರು ಘಟನೆಯ ಸ್ಥಳದಲ್ಲಿ ಇದ್ದಿದ್ದರಿಂದಲೇ ಹುಡುಗಿಯರ ಮೇಲೆ ನಡೆಯುತ್ತಿದ್ದ ಇನ್ನಷ್ಟೂ ದೌರ್ಜನ್ಯಗಳು ನಿಂತಿದೆ. ಕ್ಯಾಮರ ಇಲ್ಲದೆ ಇರುತ್ತಿದ್ದರೆ ಖಂಡಿತವಾಗಿಯೂ ಮೃಗೀಯ ವರ್ತನೆ ತೋರುತ್ತಿದ್ದ ದಾಳಿಕೋರರು ಹುಡುಗಿಯರ ಅತ್ಯಾಚಾರ ಮಾಡುತ್ತಿದ್ದರು. ಹೊಡೆಯುವಾಗ ಕ್ಯಾಮರ ಆಫ್ ಮಾಡಲು ದಾಳಿಕೋರರು ಹೇಳಿದರೂ ಕ್ಯಾಮರ ಆಫ್ ಮಾಡದೆ ಶೂಟಿಂಗ್ ಮಾಡುತ್ತಿದ್ದರು. ಕ್ಯಾಮರಗಳು ಅಲ್ಲಿದ್ದ ಹುಡುಗಿಯರ ಅತ್ಯಾಚಾರವಾಗುವುದನ್ನು ತಪ್ಪಿಸಿದೆ. ನಾವು ಮೀಡಿಯಾ ವಿರುದ್ಧ ಯಾವ ದೂರನ್ನೂ ನೀಡಿಲ್ಲ. ನಾವು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿದ್ದಾಗ ಮೀಡಿಯಾದ ಸುದ್ಧಿ ಪ್ರಸಾರವನ್ನು ನೋಡಿಯೇ ಪೊಲೀಸರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದು ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತು. ಪೊಲೀಸರು ಖಾಲಿ ಕಾಗದಕ್ಕೆ ನಮ್ಮ ಸಹಿ ಪಡೆದುಕೊಂಡು ದೂರಿನಲ್ಲಿ ಮೀಡಿಯಾದವರ ಹೆಸರನ್ನು ಸೇರಿಸಿದ್ದಾರೆ. ಆದುದರಿಂದ ನಮ್ಮನ್ನು ರಕ್ಷಿಸಿದ ಮೀಡಿಯಾದವರ ಹೆಸರನ್ನು ಕೈಬಿಡಬೇಕು.
  3. ಪೊಲೀಸರು ದಾಳಿಕೋರರ ಜೊತೆಯೇ ಹೋಂ ಸ್ಟೇ ಪ್ರವೇಶ ಮಾಡಿದ್ದಾರೆ. ದಾಳಿಕೋರರ ಹಿಂದೆಯೇ ಪೊಲೀಸ್ ವಾಹನ ಕೂಡಾ ಬಂದಿದೆ. ದಾಳಿಕೋರರು ಬಾಗಿಲು ದೂಡಿ ಒಳ ನುಗ್ಗುವಾಗ ಪೊಲೀಸ್ ವಾಹನ ವಾಪಾಸ್ಸು ಹೋಗಿದ್ದು, ದಾಳಿ ಮುಗಿದ ನಂತರ ಅದೇ ಪೊಲೀಸ್ ವಾಹನ ಮತ್ತೆ ಬಂದಿದೆ. ಬಂದ ಪೊಲೀಸರು ಆರೋಪಿಗಳ ಜೊತೆ ಸೇರಿ ಮತ್ತೆ ಹಲ್ಲೆ ಮಾಡಿದ್ದಾರೆ. ದಾಳಿಕೋರರು ದಾಳಿ ಮಾಡುವುದು ಪೊಲೀಸರಿಗೆ ಮೊದಲೇ ಗೊತ್ತಿತ್ತು ಮತ್ತು ಪೊಲೀಸರ ಜೊತೆಯೇ ದಾಳಿಕೋರರು ಬಂದಿದ್ದರಿಂದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು.
  4. ನಮ್ಮ ಮೇಲೆ ನಡೆದ ದಾಳಿಯ ದಾರಿ ತಪ್ಪಿಸಲು ಏನೆಲ್ಲಾ ಕತೆಗಳನ್ನು ಕಟ್ಟುತ್ತಿದ್ದು, ಬರ್ತ್‌ಡೇಯನ್ನು ಆಚರಿಸಲು ಹೋಂ ಸ್ಟೇ ಯಾಕೆ ಬುಕ್ ಮಾಡಬೇಕಿತ್ತು? ನಮ್ಮ ತಂದೆ ತಾಯಿಯ ಚಾರಿತ್ರ್ಯ ಸರಿ ಇಲ್ಲ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದ್ದು ಹಲವಾರು ವಿಧದಲ್ಲಿ ನಮ್ಮ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ದಾರಿ ತಪ್ಪುವಂತೆ ಮಾಡಲಾಗುತ್ತಿದೆ. ಆದುದರಿಂದ ಈ ಪ್ರಕರಣದ ತನಿಖೆಗೆ ವಿಶೇಷ ಕೋರ್ಟ್ ಸ್ಥಾಪಿಸಬೇಕು.
  5. ಪ್ರಕರಣದ ತನಿಖೆಯಲ್ಲಿ ನಾವು ಪೊಲೀಸ್ ಇಲಾಖೆಯನ್ನು ಒಂದಿನಿತೂ ನಂಬುವುದಿಲ್ಲ. ಆದುದರಿಂದ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ವಾದ ಮಾಡಲು ನಮ್ಮ ಆಯ್ಕೆಯ ಸ್ಪೆಷಲ್  ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಬೇಕು.
  6. ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸರು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುವ ಭಾಗವಾಗಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೋಂ ಸ್ಟೇ ಮೇಲೆ ನಡೆದ ದಾಳಿ ಪ್ರಕರಣವನ್ನು ದಯವಿಟ್ಟು ಸಿಬಿಐಗೆ ವಹಿಸಬೇಕು ಎಂಬುದು ನಮ್ಮ ವಿನಮ್ರ ವಿನಂತಿ.

ಇಂತಿ ತಮ್ಮ ವಿಶ್ವಾಸಿಗಳು,
ವಿಜಯ್ ಮತ್ತು ಗುರುದತ್ ಕಾಮತ್

ಮಾನ ಹರಾಜಾಗಿದ್ದು ಪ್ರಭುತ್ವದ್ದೇ ಹೊರತು ಹುಡುಗಿಯರದ್ದಲ್ಲ


-ನವೀನ್ ಸೂರಿಂಜೆ


 

[ಮಂಗಳೂರು ಹೋಂ ಸ್ಟೇ ಮೇಲಿನ ದಾಳಿಯನ್ನು ಖಂಡಿಸಿ ರಾಜ್ಯಪಾಲರಿಗೆ “ಎದ್ದೇಳು ಮಂಗಳೂರು” ಎಂಬ ಸಂಘಟನೆಯ ಮೂಲಕ ಮಂಗಳೂರಿನ ವ್ಯಾಪಾರಿ ಮನಸ್ಸಿನ ಗಣ್ಯರು ಮನವಿಯನ್ನು ಸಲ್ಲಿಸಿದ್ದಾರೆ. ಈ ಮನವಿಯ ಭಾಗವೊಂದರಲ್ಲಿ ಟಿವಿ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಉಲ್ಲೇಖವಿದೆ. ಈ ಹಿನ್ನೆಲೆಯಲ್ಲಿ “ಎದ್ದೇಳು ಮಂಗಳೂರು” ಸಂಘಟನೆಗೆ ನವೀನ್ ಸೂರಿಂಜೆಯವರು ಈ ಪತ್ರ ಬರೆದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಟಿವಿ ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲೂ ಸಂದೇಹಗಳಿರುವುದರಿಂದ ಆ ಪತ್ರವನ್ನು ವರ್ತಮಾನ.ಕಾಮ್‌ನಲ್ಲಿ ಪ್ರಕಟಿಸಲಾಗುತ್ತಿದೆ.]

ಮಂಗಳೂರಿನಲ್ಲಿ ಬರ್ತ್‌ಡೇ ಪಾರ್ಟಿ ನಿರತ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹಲವಾರು ಜನಪರ ಸಂಘಟನೆಗಳು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಎಲ್ಲರಿಗೂ ಮಹಿಳೆಯರ ಹಕ್ಕು, ಸ್ವಾತಂತ್ರ್ಯದ ಪ್ರಶ್ನೆಯಾದರೆ ಮಂಗಳೂರಿನ ಗಣ್ಯರು ಎನಿಸಿಕೊಂಡ ನಿಟ್ಟೆ ವಿನಯ ಹೆಗ್ಡೆ, ಡಾ ಸಿ ಪಿ ಹಬೀಬ್ ರೆಹ್ಮಾನ್, ಲತಾ ಆರ್ ಕಿಣಿ, ಇನ್ಫೋಸಿಸ್‌ನ ನರೇನ್, ವಾಲ್ಟರ್ ಡಿಸೋಜಾ, ಪಣಂಬೂರ್  ಬೀಚ್‌ನ ಯತೀಶ್ ಬೈಕಂಪಾಡಿ ಮತ್ತಿತರರಿಗೆ ಅವರ ವ್ಯವಹಾರದ ಚಿಂತೆ. ಆದುದರಿಂದಲೇ ಮಂಗಳೂರಿನಲ್ಲಿ ಇಂತಹ ದಾಳಿಗಳಾದರೆ ಹೂಡಿಕೆ, ಪ್ರವಾಸ, ಶೈಕ್ಷಣಿಕ ವಲಯದ ಮೇಲೆ ಪರಿಣಾಮ ಬೀರುತ್ತದೆ. ಮಾಹಿತಿ ತಂತ್ರಜ್ಞಾನ, ಆಸ್ಪತ್ರೆ, ನರ್ಸಿಂಗ್ ಹೋಂ, ಹೊಟೇಲ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ ಎಂದು ಇವರುಗಳು “ಎದ್ದೇಳು ಮಂಗಳೂರು” ಎಂಬ ಹೆಸರಿನಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಇದಲ್ಲದೆ ಪ್ರಕರಣದಲ್ಲಿ ಮಾಧ್ಯಮಗಳ ಪಾತ್ರವೇನು, ದಾಳಿಕೋರರು ಮತ್ತು ಮಾಧ್ಯಮದ ನಡುವಿನ ನಂಟೇನು ಎಂಬ ಪ್ರಶ್ನೆಯನ್ನು ಮನವಿಯಲ್ಲಿ ಎತ್ತಲಾಗಿದೆ. “ಕೆಲವು ಟಿವಿ ವಾಹಿನಿಗಳು ಸ್ಕೂಪ್‌ಗಾಗಿ ದಾಳಿಕೋರರ ಜೊತೆ ಕೈಜೋಡಿಸಿದೆ. ಅವು ಪೊಲೀಸರಿಗೆ ಸಕಾಲದಲ್ಲಿ ತಿಳಿಸುವುದಕ್ಕಿಂತಲೂ ಸ್ಕೂಪ್‌ಗೆ ಮಹತ್ವ ಕೊಟ್ಟಿದೆ. ವರದಿಗಾರರು ವಿಡಿಯೋ ಕ್ಲಿಪ್ಪಿಂಗ್ ಪ್ರಸಾರ ಮಾಡುವ ಮುನ್ನ ಸರಿಯಾದ ಸಮಯಕ್ಕೆ ಪೊಲೀಸರಿಗೆ ತಿಳಿಸಿದ್ದರೆ ಘಟನೆ ತಡೆಯಬಹುದಿತ್ತು. 2009 ರ ಜನವರಿಯಲ್ಲಿ ನಡೆದ ಪಬ್ ದಾಳಿಗೂ, ಹೋಂ ಸ್ಟೆ ದಾಳಿಗೂ ಸಾಮ್ಯತೆ ಇರುವುದರಿಂದ ಮಾಧ್ಯಮ ಮತ್ತು ಪುಂಡರ ನಡುವಿನ ಸಂಬಂಧವನ್ನು ತನಿಖೆ ಮಾಡಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.

“ಟಿವಿ ವಾಹಿನಿಗಳು ಸ್ಕೂಪ್‌ಗಾಗಿ ದಾಳಿಕೋರರ ಜೊತೆ ಕೈಜೋಡಿಸಿದ್ದವು” ಎಂಬ ತೀರ್ಮಾನಕ್ಕೆ ನೀವು ಬಂದಿದ್ದಾದರೂ ಹೇಗೆ? ನೀವು ಸತ್ಯ ಶೋಧನಾ ವರದಿಯನ್ನೇನಾದರೂ ಮಾಡಿದ್ದೀರಾ? ನಾವು ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ? ನೀವು ನಿಜವಾದ ಕಾಳಜಿಯನ್ನು ಇಟ್ಟುಕೊಂಡು ರಾಜ್ಯಪಾಲರಿಗೆ ಮನವಿ ಸಲ್ಲಿಸುವುದೇ ಆಗಿದ್ದಲ್ಲಿ ಘಟನಯನ್ನು ವರದಿ ಮಾಡಿದ ವರದಿಗಾರರ ಹೇಳಿಕೆಯನ್ನು ಪಡೆಯಬಹುದಿತ್ತು. ಮಂಗಳೂರಿನ ಮಹಿಳಾ ಪರ ಸಂಘಟನೆಗಳು ಈ ಘಟನೆಯ ಬಗ್ಗೆ ಸತ್ಯಶೋಧನಾ ವರದಿಯನ್ನು ಸಿದ್ಧಪಡಿಸಿದ್ದು, ಅದಕ್ಕಾಗಿ ನನ್ನನ್ನು “ವಿಚಾರಣೆ” ಮಾಡಿ ಹೇಳಿಕೆಯನ್ನು ಪಡೆದುಕೊಂಡಿದೆ. ನೀವು ಏಕಪಕ್ಷೀಯವಾಗಿ ಹೇಗೆ ತೀರ್ಮಾನಕ್ಕೆ ಬಂದಿದ್ದೀರಿ? ನಮ್ಮ ವರದಿಗಾರಿಕೆಯ ಸಂಧರ್ಭ ಪ್ರತಿಯೊಂದಕ್ಕೂ ದಾಖಲೆಗಳನ್ನು ಇಟ್ಟುಕೊಂಡೇ ವರದಿಯನ್ನು ಮಾಡುತ್ತೇವೆ. ಸರಿಯಾಗಿ ಏಳು ಗಂಟೆ ಹನ್ನೆರಡು ನಿಮಿಷ ಮೂವತ್ತೆಂಟು ಸೆಕೆಂಡಿಗೆ ದಾಳಿ ಪ್ರಾರಂಭವಾಗಿದೆ. ಏಳು ಗಂಟೆ ಹದಿನೈದು ನಿಮಿಷಕ್ಕೆ ನಾನೂ ಸೇರಿದಂತೆ ಇಬ್ಬರು ವರದಿಗಾರರು ಪೊಲೀಸ್ ನಿರೀಕ್ಷಕರಿಗೆ ದೂರವಾಣಿ ಕರೆ ಮಾಡಿದ್ದೇವೆ. ಏಳು ಗಂಟೆ ಇಪ್ಪತೆಂಟು ನಿಮಿಷ ಮೂರು ಸೆಕೆಂಡಿಗೆ ದಾಳಿ ಮುಗಿದಿದೆ. ಏಳು ಗಂಟೆ ಮೂವತ್ತೆರಡು ನಿಮಿಷ ಹನ್ನೆರಡು ಸೆಕೆಂಡಿಗೆ ಪೊಲೀಸರು ಬಂದಿದ್ದಾರೆ. ಇದಕ್ಕೆ ಸಂಬಂದಿಸಿದ ಎಲ್ಲಾ ದಾಖಲೆಗಳು ನಮ್ಮಲ್ಲಿ ಇದೆ. ಯಾವುದೇ ಸಂಘಟನೆ ಅಥವಾ ತನಿಖಾ ತಂಡಕ್ಕೆ ನಾವು ದಾಖಲೆ ಸಹಿತ ಮಾಹಿತಿ ನೀಡಲು ಸಿದ್ದ ಎಂದು ರಾಷ್ಟ್ರಮಟ್ಟದ ಪತ್ರಿಕೆಗಳು, ಮ್ಯಾಗಜೀನ್‌ಗಳು, ರಾಜ್ಯ ಮತ್ತು ರಾಷ್ಟ್ರೀಯ ಟಿವಿ ವಾಹಿನಿಗಳಲ್ಲಿ ಸಂದರ್ಶನ ನೀಡಿದ್ದರೂ ನೋಡದ ಕೂಪ ಮಂಡೂಕ “ಎದ್ದೇಳು ಮಂಗಳೂರಿನ” ಸದಸ್ಯರು ನಿದ್ದೆ ಮಾಡುತ್ತಿದ್ದರೆ?

ಟಿವಿ ಮಾಧ್ಯಮವೊಂದು ಸ್ಕೂಪ್‌ಗೆ ಮಹತ್ವ ಕೊಟ್ಟಿದೆ ಎಂದಿದ್ದೀರಿ. ಸ್ಕೂಪ್‌ಗೆ ಮಹತ್ವ ಕೊಟ್ಟಿದ್ದು ಹೌದಾದರೆ ಬೇರೆ ಟಿವಿ ವಾಹಿನಿಗಳಲ್ಲಿ ದಾಳಿ ದೃಶ್ಯಗಳು ಪ್ರಸಾರ ಆಗಿದ್ದು ಹೇಗೆ? ನಮ್ಮ ಒಂದೇ ಚಾನೆಲ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಪ್ರಸಾರ ಆಗಬೇಕಿತ್ತಲ್ಲವೇ? ಇಷ್ಟಕ್ಕೂ ಟಿವಿ ಮಾಧ್ಯಮಗಳು ಈ ದೃಶ್ಯವನ್ನು ಪ್ರಸಾರ ಮಾಡಿದ್ದರಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಕರಣ ಚರ್ಚೆಯಾಯಿತು ಮತ್ತು 25 ಮಂದಿಯ ಬಂಧನವಾಯಿತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಕೂಡಾ ಘಟನೆಯನ್ನು ಖಂಡಿಸಿ ಸರಕಾರಕ್ಕೆ ಎಚ್ಚರಿಕೆ ಕೊಡುವಂತಾಯಿತು. ಅದಕ್ಕಿಂತಲೂ ಮುಖ್ಯವಾಗಿ “ಆ ನೀಲಿ ಚೆಕ್ಸ್ ಶರ್ಟ್‌ನ ವ್ಯಕ್ತಿ ಯಾರು” ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸುವಂತಾಯಿತು. ಇದೆಲ್ಲವೂ ಸಾಧ್ಯವಾಗಿದ್ದು ನಮ್ಮ ವಿಝುವಲ್ಸ್‌ನಿಂದ.

ಹೋಂ ಸ್ಟೇ ದಾಳಿಯಲ್ಲಿ ಮಾಧ್ಯಮಗಳು ಕೈ ಜೋಡಿಸಿವೆ ಎಂದು ಆರೋಪಿಸುವ ನೀವು ಯಾವ ಆಧಾರದ ಮೇಲೆ ಪ್ರತಿಭಟನಾ ಸಭೆ ಮಾಡಿದ್ದೀರಿ? ಜಪ್ಪಿನ ಮೊಗರು ಮೋರ್ಗನ್ ಗೇಟ್ ಬಳಿಯ ಎಂಫಾಸಿಸ್ ಉದ್ಯೋಗಿ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಗೆ ಎರಡು ತಿಂಗಳ ಹಿಂದೆ ಹಿಂದೂ ಯುವ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಮುಖ ಮೂತಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದೇ ಅಲ್ಲದೆ ದಾಳಿಕೋರರೇ ಹಲ್ಲೆಗೊಳಗಾದ ಜೋಡಿಯನ್ನು ಪಾಂಡೇಶ್ವರ ಪೊಲೀಸರಿಗೆ ಒಪ್ಪಿಸಿದ್ದರು. ಪಾಂಡೇಶ್ವರ ಪೊಲೀಸರು ಹಲ್ಲೆಗೊಳಗಾದ ಪ್ರೇಮಿಗಳ ಮನೆಯವರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆಗ ಯಾಕೆ ಯಾರೂ ಮಾತನಾಡಿಲ್ಲ? ಯಾಕೆಂದರೆ ಅದು ವಿಝುವಲ್  ಆಗಿರಲಿಲ್ಲ.

ಒಂದು ತಿಂಗಳ ಹಿಂದೆ ಮೇರಿಹಿಲ್  ಹೆಲಿಪ್ಯಾಡಿನ ವಿಹಂಗಮ ನೋಟ ಸವಿಯಲು ಬಂದ ವಿದ್ಯಾರ್ಥಿಗಳು ಕಾರಿನಲ್ಲಿ ಕುಳಿತು ಚಿಪ್ಸ್ ತಿನ್ನುತ್ತಿದ್ದರು. ಕಾರಿನ ನಾಲ್ಕೂ ಡೋರ್ ಓಪನ್ ಮಾಡಿ ವಿದ್ಯಾರ್ಥಿಗಳು ಚಿಪ್ಸ್ ತಿನ್ನುತ್ತಾ ಹರಟುತ್ತಿದ್ದರು. ಈ ಸಂಧರ್ಭ ದಾಳಿ ಮಾಡಿದ ಶ್ರೀರಾಮ ಸೇನೆ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿ ವಿದ್ಯಾರ್ಥಿಗಳನ್ನು ದಾಳಿಕೋರರೇ ಕಾವೂರು ಪೊಲೀಸರಿಗೆ ಒಪ್ಪಿಸಿದ್ದರು. ಆಗ ಯಾಕೆ ಯಾರೂ ಮಾತನಾಡಿಲ್ಲ? ಯಾಕೆ ಅಂದರೆ ಆಗಲೂ ಅದು ವಿಝುವಲ್  ಆಗಿರಲಿಲ್ಲ.

ಅದೆಲ್ಲಾ ಬಿಟ್ಟು ಬಿಡಿ. ಹೋಂ ಸ್ಟೇ ದಾಳಿಯ ಮರುದಿನವೇ ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲೇ ಯುವಕ ಯುವತಿಯ ಮೇಲೆ ದಾಳಿಯಾಗಿತ್ತು ಎಂಬುದು ಯಾರಿಗಾದರೂ ಗೊತ್ತಿದ್ಯಾ? ಕೆಲಸದ ಸಂದರ್ಶನಕ್ಕೆ ವಿಟ್ಲದಿಂದ ಮಂಗಳೂರಿಗೆ ಬಂದಿಳಿದ ಯುವತಿಗೆ ಆಕೆಯ ಸಹಪಾಠಿ ಎದುರಿಗೆ ಸಿಕ್ಕಾಗ ಮಾತನಾಡಿದ್ದಳು. ಅದೂ ಜನನಿಬಿಡ ಬಸ್ ನಿಲ್ದಾಣದಲ್ಲಿ.  ಅಷ್ಟಕ್ಕೇ ಆಕೆ ಮತ್ತು ಆತನ ಮೇಲೆ ಸಂಘಟನೆಯೊಂದು ಮುಗಿ ಬಿದ್ದು ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿತ್ತು. ಯಥಾ ಪ್ರಕಾರ ಪೊಲೀಸರು ಗೆಳೆಯರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಆಗ ಯಾಕೆ ಯಾರೂ ದ್ವನಿ ಎತ್ತಿಲ್ಲ? ಅಗಲೂ ಅದು ವಿಝುವಲ್  ಆಗಿಲ್ಲ. ಯಾರು ಯಾರನ್ನು ಬೇಕಿದ್ದರೂ ಹೊಡೆಯಲಿ. ಅದನ್ನು ಶೂಟಿಂಗ್ ಮಾಡಿ ಸುದ್ದಿ ಮಾಡಬೇಡಿ. ನಮ್ಮಲ್ಲಿಗೆ ಬರೋ ಹೂಡಿಕೆ ಕಡಿಮೆಯಾಗಿ ನಮ್ಮ ಬ್ಯಸಿನೆಸ್ ಕುಸಿಯುತ್ತದೆ ಎಂಬುದಷ್ಟೇ ಇಲ್ಲಿ ಹಲವಾರು ಗಣ್ಯರ ಒಮ್ಮತಾಭಿಪ್ರಾಯ ಎಂಬುದು ಸ್ಪಷ್ಟ.

ಆರೋಪಿಗಳ ಪೋಷಕರು ಯಾರು?

ಬರ್ತ್‌ಡೇ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ದಾಳಿ ಅನಿರೀಕ್ಷಿತ ಪುಂಡರ ದಾಳಿಯಲ್ಲ. “ಇದು ನೈತಿಕ ಪೊಲೀಸ್‌ಗಿರಿಯಲ್ಲ. ಪುಂಡರ ಕೃತ್ಯ” ಎಂಬ ವಿನಯ ಹೆಗ್ಡೆಯವರ ಹೇಳಿಕೆಯಲ್ಲೇ ಈ ಪ್ರಕರಣದ ನಿಜವಾದ ಆರೋಪಿಗಳನ್ನು ರಕ್ಷಿಸುವ ಹುನ್ನಾರ ಇದೆ. ಇದು ಯಾವುದೋ ಪುಂಡರ ದಾಳಿಯಲ್ಲ. ಕೋಮುವಾದಿಗಳ ಅಜೆಂಡಾ ಈಡೇರಿಕೆಗಾಗಿ ನಡೆದಿರುವ ದಾಳಿ. ಅದರಲ್ಲಿ ನಿಟ್ಟೆ ವಿನಯ ಹೆಗ್ಡೆ ಕೂಡಾ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಹಿಂದೂ ಸಮಾಜೋತ್ಸವಗಳನ್ನು ನಡೆಸುವ ಮೂಲಕ ಜಿಲ್ಲೆಯ ಹಿಂದುಳಿದ ವರ್ಗದ ಯುವಕರ ತಲೆಯಲ್ಲಿ ಧರ್ಮದ ಅಫೀಮು ತುಂಬಿಸಲಾಗುತ್ತದೆ. ಅದರ ಭಾಗವಾಗಿಯೇ ಇಂತಹ ದಾಳಿಗಳು ನಡೆಯುತ್ತದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಇಂತಹ ಸಮಾಜೋತ್ಸವಗಳನ್ನು ಸಂಘಟಿಸಿದವರಲ್ಲಿ ನಿಟ್ಟೆ ವಿನಯ ಹೆಗ್ಡೆ ಕೂಡಾ ಒಬ್ಬರು. ಹಿಂದೂ ಸಮಾಜೋತ್ಸವದಲ್ಲಿ ನಿಟ್ಟೆ ವಿನಯ ಹೆಗ್ಡೆ ಗೌರವಾಧ್ಯಕ್ಷರಾಗಿದ್ದರು. ಆದುದರಿಂದ ಈ ದಾಳಿಯಲ್ಲಿ ವಿನಯ ಹೆಗ್ಡೆಯವರೂ ಕೂಡಾ ಒರ್ವ “ನೈತಿಕ ಆರೋಪಿ” ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದೀಗ ದಾಳಿಯಿಂದಾಗಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ವಿನಯ ಹೆಗ್ಡೆಯವರ ಕಾಲೇಜಿಗೆ ಹೊರ ರಾಜ್ಯದಿಂದ ಬರುವ ಶ್ರೀಮಂತ ಮಕ್ಕಳ ಸಂಖ್ಯೆ ಕಡಿಮೆಯಾಗಬಹುದು ಎಂಬ ಬೀತಿಯಿಂದ “ಎಚ್ಚೆತ್ತಿದ್ದಾರೆ”. ಆದರೆ ಅವರು ಎಚ್ಚೆತ್ತಿರುವುದು ಕೋಮುವಾದದ ವಿರುದ್ಧವೂ ಅಲ್ಲ. ನೈತಿಕ ಪೊಲೀಸ್‌ಗಿರಿಯ ವಿರುದ್ಧವೂ ಅಲ್ಲ. ಜನರ ಹಕ್ಕಿನ ಪರವೂ ಅಲ್ಲ.

ದಾಳಿಯ ಪ್ರಮುಖ ಆರೋಪಿ ಸುಭಾಷ್ ಪಡೀಲ್‌ಗೆ ಗೂಂಡಾಗಿರಿ ವೃತ್ತಿ ನೀಡಿದ್ದೇ ಮಂಗಳೂರು ವಿಶೇಷ ಆರ್ಥಿಕ ವಲಯ. ಅಂದರೆ ಕೆಸಿಸಿಐ ಪಾಲುದಾರಿಕೆಯ ಎಸ್ಇಝಡ್. ಇದೀಗ ಕೆಸಿಸಿಐ ಕೂಡಾ “ಎದ್ದೇಳು ಮಂಗಳೂರು” ಸಂಘಟನೆಯಲ್ಲಿ ಭಾಗಿಯಾಗಿ ಘಟನೆಯನ್ನು ವಿರೋಧಿಸುತ್ತಿದೆ. ರೌಡಿಸಂ ಮಾಡುವುದು ಮತ್ತು ರೌಡಿಗಳ ಪಡೆಯನ್ನು ತಯಾರು ಮಾಡುವುದು ಭಾರತೀಯ ದಂಢ ಸಂಹಿತೆ ಪ್ರಕಾರ ಅಪರಾಧವಾಗುತ್ತದೆ. ಆದರೆ ಕೆಸಿಸಿಐ ಪಾಲುದಾರಿಕೆಯ ಮಂಗಳೂರು ವಿಶೇಷ ಆರ್ಥಿಕ ವಲಯವು ಭೂಸ್ವಾಧೀನಕ್ಕಾಗಿ ರೌಡಿಗಳನ್ನು ಬಳಕೆ ಮಾಡಿದೆ. ಬಜಪೆ ನೆಲ್ಲಿದಡಿಯ ಕೃಷಿ ಭೂಮಿ ಸ್ವಾಧೀನಕ್ಕೆ ಇದೇ ಸುಭಾಷ್ ಪಡೀಲ್ ನೇತೃತ್ವದ ತಂಡವನ್ನು ಸೆಝ್ ಬಳಕೆ ಮಾಡಿಕೊಂಡಿದೆ. ಈ ಬಗ್ಗೆ ಎರಡು ಪ್ರಕರಣಗಳು ಬಜಪೆ ಠಾಣೆಯಲ್ಲಿ ದಾಖಲಾಗಿದೆ. ಹಾಗಾದರೆ ಕೆಸಿಸಿಐ ಯಾವ ನೈತಿಕತೆಯಲ್ಲಿ ಹೋಂ ಸ್ಟೇ ದಾಳಿಯನ್ನು ವಿರೋಧಿಸುತ್ತದೆ?

ದಶಕಗಳಿಂದ ಮಂಗಳೂರಿನಲ್ಲಿ ಸಮಾಜೋತ್ಸವಗಳನ್ನು ನಡೆಸಿ ಹಿಂದುಳಿದ ವರ್ಗದ ಯುವಕರ ತಲೆಯಲ್ಲಿ ಕೋಮುವಾದವನ್ನು ಬಿತ್ತಿ ಸರಿಪಡಿಸಲಾರದ ಮಟ್ಟಕ್ಕೆ ತಂದು ನಿಲ್ಲಿಸಿದ ಸಮಾಜೋತ್ಸವದ ಸಂಚಾಲಕರುಗಳನ್ನು ಮತ್ತು ಸಮಿತಿ ಪದಾಧಿಕಾರಿಗಳನ್ನು ಬಂಧಿಸಬೇಕು ಎಂದು ಎಚ್ಚೆತ್ತ ಜನತೆ ಆಗ್ರಹಿಸಿದರೆ ಬಂಧಿತರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಬಹುದು.

ಹುಡುಗಿಯರು ಪಾರ್ಟಿ ಮಾಡುವುದು ಮಾನವಂತಿಕೆಯಲ್ಲ ಎಂದು ಘೋಷಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯರಿಗೆ ಹಲ್ಲೆ ನಡೆಸಿದ್ದನ್ನು ಪ್ರಸಾರ ಮಾಡಿದ್ದರಿಂದ ಮಂಗಳೂರಿನ ಮಾನ ಹರಾಜಾಯಿತು ಮತ್ತು ಹುಡುಗಿಯರ ಮಾನ ಹರಾಜಾಯಿತು ಎಂದು ಹೇಳುವವರ ಮನಸ್ಥಿತಿಗೂ ನೈತಿಕ ಪೊಲೀಸರ ಮನಸ್ಥಿತಿಗೂ ಯಾವುದೇ ವ್ಯತ್ಯಾಸ ಇಲ್ಲ. ಮಾನ ಹರಾಜಾಗಿದ್ದು ಹುಡುಗಿಯರ ಮೇಲೆ ಹಲ್ಲೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರದ್ದು ಮತ್ತು ಅವರನ್ನು ಈ ಮಟ್ಟಕ್ಕೆ ಪೋಷಿಸಿದ ಪ್ರಭುತ್ವದ್ದೇ ಹೊರತು ಹುಡುಗಿಯರದ್ದಾಗಲೀ, ಪ್ರದೇಶದ್ದಾಗಲೀ ಅಲ್ಲ.

“ಪುಸ್ತಕ ಪರಿಚಯ”ಕ್ಕೆ ಲೇಖಕರು/ಪ್ರಕಾಶಕರು ಪುಸ್ತಕ ಕಳುಹಿಸಿಕೊಡಿ…

ಲೇಖಕ ಮತ್ತು ಪ್ರಕಾಶಕ ಮಿತ್ರರೇ,

ವರ್ತಮಾನ.ಕಾಮ್‌ನಲ್ಲಿ ನಾವು ಆಗಾಗ ಪುಸ್ತಕ ಪರಿಚಯ ಅಥವಾ ವಿಮರ್ಶೆ ಮಾಡುತ್ತಿರುವುದನ್ನು ತಾವು ಗಮನಿಸಿರುತ್ತೀರಿ (ಹೊತ್ತು ಕಂತುವ ಮುನ್ನ, ಇದು ಮುಂಗಾರು, ಬುಕ್ ಆಫ್ ಟೀ). ಇದನ್ನು ಸಾಧ್ಯವಾದಷ್ಟು ನಿಯಮಿತವಾಗಿ ಮಾಡುವ ಉದ್ದೇಶ ನಮ್ಮದು. ಹಾಗಾಗಿ ನಮ್ಮ ಜಾಲತಾಣಕ್ಕೆ ತಮ್ಮ ಪುಸ್ತಕಗಳನ್ನು ಪರಿಚಯ ಅಥವಾ ವಿಮರ್ಶೆಗೆ ಕಳುಹಿಸಬೇಕೆಂದು ಬಯಸುವ ಲೇಖಕ ಮತ್ತು ಪ್ರಕಾಶಕ ಮಿತ್ರರು ತಮ್ಮ ಪುಸ್ತಕದ ಒಂದು ಪ್ರತಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದೆಂದು ಈ ಮೂಲಕ ತಿಳಿಸುತ್ತೇವೆ. ದಯವಿಟ್ಟು ಇಂತಹ ಪುಸ್ತಕಗಳನ್ನು ಪರಿಚಯ/ವಿಮರ್ಶೆಗಾಗಿ ಎಂದು ಸ್ಪಷ್ಟವಾಗಿ ಸೂಚಿಸಿ.

ನಮ್ಮ ಕಾಲಮಿತಿ ಮತ್ತು ಆದ್ಯತೆಗಳ ಮೇಲೆ ವಾರಕ್ಕೊಂದಾದರೂ ಪುಸ್ತಕವನ್ನು ಪರಿಚಯಿಸುವುದು ನಮ್ಮ ಗುರಿ. ಮತ್ತು ಯಾವುದಾದರು ಪುಸ್ತಕವನ್ನು ಪರಿಚಯಿಸುವ ಅಥವಾ ಬಿಡುವ ಹಕ್ಕು ನಮ್ಮದೇ ಆಗಿರುತ್ತದೆ. ಅದಕ್ಕೆ ಬೇರೆಲ್ಲ ಕಾರಣಗಳಿಗಿಂತ ನಮ್ಮ ಸಮಯ ಮತ್ತು ಅಭಿರುಚಿಯೇ ಮುಖ್ಯವಾಗಿರುತ್ತದೆ ಹೊರತು ಬೇರೇನಲ್ಲ.

ಪುಸ್ತಕವನ್ನು ಕಳುಹಿಸಬೇಕಾದ ವಿಳಾಸ:

ವರ್ತಮಾನ.ಕಾಮ್
೨೨೨, B೪, ತುಂಗಭದ್ರ,
ರಾಷ್ಟ್ರೀಯ ಕ್ರೀಡಾಗ್ರಾಮ, ಕೋರಮಂಗಲ,
ಬೆಂಗಳೂರು – ೫೬೦೦೪೭

ಮತ್ತು, ನಮ್ಮ ಓದುಗರು ಓದಿದ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆನಿಸಿದ ಪುಸ್ತಕದ ಬಗ್ಗೆ ತಾವು ಬರೆದ ಅಪ್ರಕಟಿತ ಪರಿಚಯ/ವಿಮರ್ಶೆಯನ್ನೂ ಸಹ ಕಳುಹಿಸಬಹುದು. ಅಂತಹ ಸಂದರ್ಭದಲ್ಲಿ ಪುಸ್ತಕದ ಮುಖಪುಟದ ಚಿತ್ರವನ್ನೂ ಸಹ ಕಡ್ಡಾಯವಾಗಿ ಕಳುಹಿಸಿ.

ಇಂತಿ,
ರವಿ ಕೃಷ್ಣಾರೆಡ್ಡಿ