Daily Archives: August 19, 2012

ಭೂಮಿ ಹುಟ್ಟಿದ್ದು ಹೇಗೆ – ಲೇಖನ : ಭಾಗ – 2

 


ಕಮಲಾಕರ
© ಹಕ್ಕು: ಮೌಲ್ಯಾಗ್ರಹ ಪ್ರಕಾಶನ


456 ಕೋಟಿ ವರ್ಷಗಳ ಹಿಂದೆ ಹುಟ್ಟಿದ ಭೂಮಿ ಬೆಂಕಿ ಉಂಡೆಯಾಗಿ, ಹಿಮದ ಉಂಡೆಯಾಗಿ, ಹಾಗೇ ವಿಷಮ ವಾತಾವರಣವನ್ನು, ಉಕ್ಕುವ ಕಡಲನ್ನು ತುಂಬಿಕೊಂಡು ವಿಶಿಷ್ಟ ಗ್ರಹವಾಗಿ ರೂಪಾಂತರವಾಯಿತು.

ಸೂರ್ಯನನ್ನು ಸುತ್ತುತ್ತಿರುವ ಎಂಟು ಗ್ರಹಗಳಲ್ಲಿ ಭೂಮಿ ದೂರದ ದೃಷ್ಟಿಯಿಂದ ಮೂರನೆಯದು. ಸುಮಾರು 150 ದಶಲಕ್ಷ ಕಿ.ಮೀ. ದೂರದಲ್ಲಿ ತನ್ನ ಪಥದಲ್ಲಿ ಸುತ್ತುತ್ತಾ ಇರುವ ಈ ಗ್ರಹ ಜೀವಿಗಳಿಗೆ ನೆಲೆನೀಡಿರುವ ಸೌರಮಂಡಲದ ಏಕೈಕ ಸದಸ್ಯ.

ಕೋಟ್ಯಂತರ ವರ್ಷಗಳ ಹಿಂದೆ ನಿಹಾರಿಕೆಯಿಂದ ಸಿಡಿದ ಕಣಗಳು ಕಾಲಾನಂತರ ಧೂಳು, ಶಿಲೆ, ಅನಿಲಗಳಿಂದ ಕೂಡಿ ಆದ ಗ್ರಹಗಳಲ್ಲಿ ಭೂಮಿಯೂ ಒಂದು. ಇದು ಭೂಮಿಯ ಭ್ರೂಣಾವಸ್ಥೆಯಷ್ಟೆ.

ಇಷ್ಟನ್ನು ತಿಳಿಯುವುದಕ್ಕೂ ವಿಜ್ಞಾನಿಗಳಿಗೆ ಸಾಕಷ್ಟು ಸಮಯವೇ ಬೇಕಾಯಿತು. ಇಷ್ಟಕ್ಕೂ ಭೂಮಿ ಕುರಿತ ಅಧ್ಯಯನ ಸಂಶೋಧನೆಗಳ ಆರಂಭವಾಗಿದ್ದು ಕೇವಲ 2000 ವರ್ಷಗಳ ಹಿಂದೆ. ಈ  ಹುಡುಕಾಟಕ್ಕೆ ಸರಿಯಾದ ದಾರಿ ಸಿಕ್ಕಿದ್ದು ಸ್ಕಾಟ್‍ಲ್ಯಾಂಡಿನಲ್ಲಿ…

ಗುಟ್ಟು ಬಿಟ್ಟು ಕೊಟ್ಟ ಬಂಡೆ

1778 ರಲ್ಲಿ ಸ್ಕಾಟ್ಲೆಂಡ್ ದೇಶದ ಎಡಿನ್‍ಬರೊ ಕರಾವಳಿ ಪ್ರದೇಶದಲ್ಲಿ ಒಂದು ಬಂಡೆ ಪತ್ತೆಯಾಯಿತು. ಇದು ಭೂಮಿಯ ಜನ್ಮರಹಸ್ಯದ ಹುಡುಕಾಟಕೆ ಹೊಸತಿರುವು ನೀಡಿತು.

ಶಿಲೆಗಳು ಹೇಗಾದವು ಎಂದು ಅಧ್ಯಯನ ನಡೆಸುತ್ತಿದ್ದ ಜೇಮ್ಸ್ ಹಟ್ಟನ್ ಈ ಬಂಡೆಯನ್ನು ಪತ್ತೆ ಮಾಡಿದರು. ಆಧುನಿಕ ಭೂಗರ್ಭ ಶಾಸ್ತ್ರದ ಪಿತಾಮಹ ಎನಿಸಿಕೊಂಡ ಜೇಮ್ಸ್ ಕಲ್ಲುಗಳ ಅಧ್ಯಯನ ಮಾಡುತ್ತ ಎಡಿನ್‍ಬರೊ ಕರಾವಳಿ ಪ್ರದೇಶಕ್ಕೆ ಬಂದಾಗ ಈ ಬಂಡೆ ಅವರಲ್ಲಿ ಬೆರಗು ಹುಟ್ಟಿಸಿತು.

ಕೆಲವು ಪದರಗಳಲ್ಲಿದ್ದ ಈ ಶಿಲೆಯನ್ನು ನೋಡಿದ ಅವರು ಇದರ ರಚನೆಗೆ ಧೀರ್ಘಕಾಲ ತೆಗೆದುಕೊಂಡಿದೆ ಎಂದು ಊಹಿಸಿದರು. ತೀವ್ರ ಪರಿಶೀಲನೆ, ಅಧ್ಯಯನದ ಬಳಿಕ, ’ಶಿಲಾರಚನೆ ಅತಿ ನಿಧಾನ ಕ್ರಿಯೆ. ಈ ಬಂಡೆ ರಚನೆಗೆ ಸಾವಿರಾರು ವರ್ಷಗಳೇ ಆಗಿರಬಹುದು’ ಎಂದು ಅಂದಾಜು ಮಾಡಿದರು. ಹಾಗಾದರೆ ಈ ಭೂಮಿ ಕೂಡ ಕೆಲವೇ ವರ್ಷಗಳಲ್ಲಿ ಆಗಿಲ್ಲ ಎಂಬುದು ಅವರಿಗೆ ಸ್ಪಷ್ಟವಾಯಿತು. ಈ ವಿಚಾರ ಅಲ್ಲಿಯವರೆಗೆ ಚರ್ಚ್‌ಗಳು ಹೇಳುತ್ತಿದ್ದ ನಂಬಿಕೆಗೆ ವಿರುದ್ಧವಾಗಿತ್ತು.

ಬೆಂಕಿಯುಂಡೆಯಾಗಿದ್ದ ಭೂಮಿ

ಜೇಮ್ಸ್ ಹಟ್ಟನ್

ಹಲವು ಶತಮಾನಗಳ ಕಾಲ ಕ್ರೈಸ್ತ ಧರ್ಮೀಯರ ಗ್ರಂಥ ಬುಕ್ ಆಫ್ ಜೆನೆಸಿಸ್ ಜನರಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಭೂಮಿಗಳ ಬಗ್ಗೆ, ಮನುಷ್ಯನ ಹುಟ್ಟಿನ ಬಗ್ಗೆ, ಹಲವು ಅವೈಜ್ಞಾನಿಕ ವಿಚಾರಗಳನ್ನು ಬಿತ್ತಿತ್ತು. ಆ ಗ್ರಂಥದ ಪ್ರಕಾರ ಭೂಮಿಯು ಆರು ಸಾವಿರ ವರ್ಷಗಳ ಹಿಂದೆ ಹುಟ್ಟಿತ್ತು. ಕ್ರೈಸ್ತ ಗುರುಗಳು ಇದನ್ನೇ ಪ್ರಚಾರ ಮಾಡುತ್ತಿದ್ದರು. ಜೇಮ್ಸ್ ಹಟ್ಟನ್‍ನ ಸಂಶೋಧನೆ ಎತ್ತಿದ ಪ್ರಶ್ನೆ ಆ ನಂಬಿಕೆಯ ಬುಡವನ್ನೆ ಅಲ್ಲಾಡಿಸಿತು.

ಶಿಲೆಗಳನ್ನು ಅಧ್ಯಯನ ಮಾಡುತ್ತ ಭೂಮಿಯು ಆರು ಸಾವಿರ ವರ್ಷಗಳಿಗಿಂತ ಪುರಾತನವೆಂದು ಅನುಮಾನಿಸುತ್ತಿದ್ದ ಹಟ್ಟನ್‌ಗೆ ಪುರಾವೆಯಾಗಿ ಸಿಕ್ಕ ಈ ಬಂಡೆ ಭೂಮಿಯ ರಚನೆ ಹೇಗಾಗಿರಬಹುದು ಎಂಬ ಸುಳಿವನ್ನು ಬಿಟ್ಟುಕೊಟ್ಟಿತು.

ಎರಡು ಪದರಗಳಲ್ಲಿ ರಚನೆಯಾಗಿದ್ದ ಈ ಬಂಡೆ ಲಂಬವಾಗಿತ್ತು. ಸಾವಿರಾರು ವರ್ಷಗಳ ಹಿಂದೆ ಇದು ಭೂಮಿಗೆ ಸಮಾನಾಂತರವಾಗಿಯೇ ಇದ್ದು, ಭೂಚಲನೆಯ ಪರಿಣಾಮ ಲಂಬವಾಗಿ ನಿಂತಿದ್ದವು.

ಸಾವಿರಾರು ವರ್ಷಗಳ ಅವಧಿಯಲ್ಲಿ ಇಂತಹ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದ ಈ ಬಂಡೆಯ ಅಧ್ಯಯನದ ಬಳಿಕ ಭೂಮಿಯ ಇತಿಹಾಸ ಲಕ್ಷಾಂತರ ವರ್ಷಗಳದ್ದಿರಬಹುದು ಇಲ್ಲವೇ ಅದರಾಚೆಗೂ ಇರಬಹುದು ಎಂಬ ನಿಲುವಿಗೆ ಬಂದರು ಹಟ್ಟನ್. ಇದು ಭೂಮಿಯ ಜನ್ಮರಹಸ್ಯ ಅರಿಯುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆಯಾಯಿತು. ಇಲ್ಲಿಂದ ಮುಂದೆ ಭೂಮಿಯ ಇತಿಹಾಸ ಅರಿಯಲು ಕಲ್ಲುಗಳತ್ತ ಮುಖ ಮಾಡಿದರು.

ಹಟ್ಟನ್ ಸಂಶೋಧನೆಯ ನಂತರದ 200 ವರ್ಷಗಳಲ್ಲಿ ಶಿಲಾರಚನೆ ಹಾಗೂ ವಿವಿಧ ರೀತಿಯ ಬಂಡೆಗಳ ಬಗ್ಗೆ ಅಧ್ಯಯನ ನಡೆದವು. ಈ ಮೂಲಕ ಭೂಮಿಯ ಹುಟ್ಟು ಅದರ ರಚನೆ ಕುರಿತ ಹಲವು ಅಚ್ಚರಿಯ ಅಂಶಗಳು ಹೊರಬಂದವು.

ಭಯಾನಕವಾಗಿತ್ತು ಭೂಮಿ!

ಅಕ್ಷರಶಃ ಕಲ್ಪನೆಗೂ ಮೀರಿದ ವಿದ್ಯಮಾನಗಳು ಭೂಮಿಯ ಆರಂಭಿಕ ದಿನಗಳಲ್ಲಿ ನಡೆದವು. ಇಂದು ಸುಂದರ ನೀಲಿಗ್ರಹ ಎಂದು ಕರೆಸಿಕೊಳ್ಳುವ ಈ ಭೂಮಿ ಒಂದು ಕಾಲದಲ್ಲಿ ಬೆಂಕಿಯುಂಡೆಯಾಗಿತ್ತು.

ಭೂಗ್ರಹದ ಮೇಲ್ಮೈ ಲಾವಾರಸದಿಂದ ತುಂಬಿ ತುಳುಕುತ್ತಿತ್ತು. ಮೈಲುಗಟ್ಟಲೆ ಆಳದವರೆಗೆ, ಸಾವಿರಾರು ಮೈಲು ವಿಸ್ತಾರವಾಗಿ, ವ್ಯಾಪಿಸಿಕೊಂಡಿತ್ತು. 4500 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಭೂಮಿ ಬೆಂಕಿಯ ಚೆಂಡಾಗಿತ್ತು. ಅಂತರಿಕ್ಷದಿಂದ ಅಪ್ಪಳಿಸುತ್ತಿದ್ದ ಉಲ್ಕೆಗಳ ಮಳೆ ಈ ಬೆಂಕಿಯನ್ನು ಹೆಚ್ಚಿಸುತ್ತಲೇ ಇದ್ದವು.

ಭೂಮಿ ಇಂತಹ ಸ್ಥಿತಿಯಲ್ಲಿತ್ತು ಅನ್ನೋ ಸಿದ್ಧಾಂತವನ್ನು ನಮ್ಮ ಮುಂದೆ ಇಟ್ಟಿದ್ದು ಇಂಗ್ಲೆಂಡಿನ ವಿಜ್ಞಾನಿ ಲಾರ್ಡ್ ಕೆಲ್ವಿನ್.

ಹೀಗೆ ಬೆಂಕಿಯ ಉಂಡೆಯಂತೆ ಇದ್ದ ಭೂಮಿ ನಿಧಾನವಾಗಿ ತಣ್ಣಗಾಗುತ್ತ ಬಂತು. 2 ಕೋಟಿ ವರ್ಷಗಳಲ್ಲಿ ಭೂಮಿ ತಣ್ಣಗಾಯಿತು ಎಂಬ ಲೆಕ್ಕಾಚಾರವನ್ನು ಕೆಲ್ವಿನ್ ಮುಂದಿಟ್ಟರು.

ಲಾರ್ಡ್ ಕೆಲ್ವಿನ್

ಕೆಲ್ವಿನ್ ಪ್ರತಿಪಾದಿಸಿದ ವಿಚಾರಗಳಲ್ಲಿ ಎಲ್ಲವೂ ಸರಿ ಇರಲಿಲ್ಲ. ಅವರು ಹೇಳಿದಂತೆ ಭೂಮಿ ಲಾವಾರಸದಿಂದ ತುಂಬಿ ಬೆಂಕಿ ಚೆಂಡಾಗಿತ್ತು, ನಿಜ. ಆದರೆ ಅದು ತಣ್ಣಗಾಗಲು ತೆಗೆದುಕೊಂಡ ಅವಧಿ 2 ಕೋಟಿ ವರ್ಷಗಳಷ್ಟೇ ಆಗಿರಲಿಲ್ಲ.

ಕೆಲ್ವಿನ್ ಭೂಮಿಯ ಒಡಲೊಳಗೆ ಹುಟ್ಟಿದ್ದ ಶಾಖದ ಮೂಲವನ್ನು ತಿಳಿಯುವಲ್ಲಿ ಸೋತಿದ್ದರು. ಇದೇ ಅವರ ಲೆಕ್ಕಾಚಾರವನ್ನು ಸುಳ್ಳು ಮಾಡಿತ್ತು. ಭೂಮಿಯೊಳಗಿದ್ದ ಯುರೇನಿಯಂ, ಥೋರಿಯಂ, ರಾಸಾಯನಿಕಗಳಿಂದ ಹೊರಬೀಳುತ್ತಿದ್ದ ವಿಕಿರಣ ಭೂಮಿ ತಣ್ಣಗಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದವು. ಹಾಗಾಗಿ ಭೂಮಿಯ ಗರ್ಭ ಬಹುಕಾಲ ಬೆಂಕಿ ಕುಂಡದಂತೇ ಇತ್ತು.

ಭೂಮಿ ಕಾವು ಹೆಚ್ಚಿಸುತ್ತಲೇ ಇದ್ದ ಯುರೇನಿಯಂ 20ನೇ ಶತಮಾನದ ಯುದ್ಧದಲ್ಲಿ ದೊಡ್ಡ ಅಸ್ತ್ರವಾಗಿ ನಮ್ಮೆಲ್ಲರಿಗೂ ಗೊತ್ತು. ಅದು ವಿಜ್ಞಾನಿಗಳ ಭೂಮಿಯ ಇತಿಹಾಸ ಪತ್ತೆಗೆ ಸಾಧನವೂ ಆಯಿತು.

1911 ರಲ್ಲಿ 21 ವರ್ಷದ ವಿಜ್ಞಾನಿ ಆರ್ಥರ್ ಹೋಮ್ಸ್ ವಿಕಿರಣ ಬಳಸಿ ಭೂಮಿಯ ಅಧ್ಯಯನ ಮಾಡಿದರು. ಈ ಅಧ್ಯಯನದ ಬಳಿಕ ಭೂಮಿಯ ಇತಿಹಾಸವನ್ನು ಸಾವಿರ, ಲಕ್ಷ ವರ್ಷಗಳ ಲೆಕ್ಕ ಬಿಟ್ಟು ಕೋಟಿಗಳಲ್ಲಿ ಮಾತನಾಡಲಾರಂಭಿಸಿದರು.

(ಮುಂದುವರೆಯುವುದು…)

ಭೂಮಿ ಹುಟ್ಟಿದ್ದು ಹೇಗೆ? ವಿಡಿಯೊ ಡಾಕ್ಯುಮೆಂಟರಿ:

ಪುಸ್ತಕ ಪರಿಚಯ : ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ

 ಡಾ.ಎಂ.ಚಂದ್ರ ಪೂಜಾರಿ

[“ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ” ಪುಸ್ತಕಕ್ಕೆ ಬರೆದಿರುವ ಮುನ್ನುಡಿ.]

ಇದೊಂದು ಸಣ್ಣ ಪುಸ್ತಕವಾದರೂ ಇದು ಕಟ್ಟಿಕೊಡುವ ಸತ್ಯಗಳು ಇಂದಿನ ಸಂದರ್ಭದಲ್ಲಿ ತುಂಬಾ ಮಹತ್ವದ್ದಾಗಿವೆ. ಶೇಕಡಾ ಮೂವತ್ತರಷ್ಟು ಜನರು ಶೇಕಡಾ ಎಪ್ಪತ್ತರಷ್ಟು ಜನರ ಆಸಕ್ತಿಗಳನ್ನು ಬಲಿಕೊಟ್ಟು ಬದುಕುತ್ತಿರುವುದು ಇಂದಿನ ಸಮಾಜದ ಲಕ್ಷಣ. ಸಮಾಜದ ಎಲ್ಲರ ಸುಖಸಂತೋಷಗಳಿಗಾಗಿ ಬಳಸಬೇಕಾದ ಭೌತಿಕ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳನ್ನು ಅಲ್ಪಸಂಖ್ಯೆಯ ಜನರ ಸುಖಸಂತೋಷಗಳಿಗಾಗಿ ಬಳಸುವುದು ಇಂದಿನ ಸಮಸ್ಯೆಯ ಮೂಲ. ಇಂತಹ ಸಮಾಜ ನಿರ್ಮಾಣವಾಗಿರುವುದು ಪರದೇಶದ ಅಥವಾ ಪರಲೋಕದ ಶಕ್ತಿಗಳಿಂದಲ್ಲ. ನಾವು ನೀವೆಲ್ಲ ಸೇರಿ ಮತ ಹಾಕಿ ಚುನಾಯಿಸಿದ ಜನಪ್ರತಿನಿಧಿಗಳಿಂದ ಈ ಸಮಾಜ ನಿರ್ಮಾಣವಾಗಿದೆ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ಇಂದು ಆಚರಣೆಯಲ್ಲಿರುವ ಪ್ರಜಾಪ್ರಭುತ್ವದಲ್ಲಿ ಮತದಾರರ ಆಸಕ್ತಿಗಿಂತ ಪಾರ್ಟಿ ಫಂಡ್‌ಗೆ ದೇಣಿಗೆ ನೀಡುವವರ ಆಸಕ್ತಿಗಳು ಮುಖ್ಯವಾಗಿವೆ. ಇಂತಹ ಪ್ರಜಾಪ್ರಭುತ್ವವನ್ನು ಎಲ್ಲ ಬಗೆಯ ಚಳವಳಿಗಳು ಮಾತ್ರ ಸುಧಾರಿಸಲು ಸಾಧ್ಯ ಎನ್ನುವ ಸಂದೇಶವನ್ನು ಈ ಪುಸ್ತಕ ನೀಡುತ್ತಿದೆ.

ಆದರೆ ಚಳವಳಿಗಳ ಬೆಳವಣಿಗೆಯ ದೃಷ್ಟಿಯಿಂದ ತೊಂಬತ್ತರ ನಂತರದ ದಶಕಗಳು ಬರಡು ಭೂಮಿಯಂತಾಗಿವೆ. ವಿದ್ಯಾರ್ಥಿ ಚಳವಳಿಗಳು, ಅಧ್ಯಾಪಕರ ಚಳವಳಿಗಳು, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಚಳವಳಿಗಳು, ನೀರಿನ ಚಳವಳಿಗಳು ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಪ್ರತಿನಿತ್ಯದ ಬೆಳವಣಿಗೆಗಳು. ತೊಂಬತ್ತರ ನಂತರ ವಿದ್ಯಾರ್ಥಿ ಚಳವಳಿಗಳು, ಅಧ್ಯಾಪಕರ ಚಳವಳಿಗಳು ಸಂಪೂರ್ಣ ಮಾಯವಾಗಿವೆ. ಸಂಘಟಿತ ವಲಯದ ಕಾರ್ಮಿಕರು ವರ್ಷಕ್ಕೊಮ್ಮೆ ಚಳವಳಿಯ ದಿನವನ್ನು ಆಚರಿಸುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಂತೂ ಚಳವಳಿ ಮಾಡಲಾರದಷ್ಟು ಬಲಹೀನರಾಗಿದ್ದಾರೆ. ಇನ್ನೂ ಕೂಡ ಜೀವಂತ ಇರುವ ಮತ್ತು ಬೇರೆ ಬೇರೆ ರೂಪದಲ್ಲಿ ಮತ್ತು ಪ್ರಮಾಣದಲ್ಲಿ ದೇಶವ್ಯಾಪಿ ಸುದ್ದಿ ಮಾಡುತ್ತಿರುವುದು ರೈತ ಚಳವಳಿಗಳು ಮಾತ್ರ. ಪ್ರತಿಭಟನೆ, ಚಳವಳಿ, ಅನ್ಯಾಯದ ವಿರುದ್ಧದ ಹೋರಾಟ ಇತ್ಯಾದಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಇಂತಹ ಸಂದರ್ಭದಲ್ಲಿ ಕರ್ನಾಟಕದ ಯಾವುದೋ ಮೂಲೆಯಲ್ಲಿ ಹೇಳಹೆಸರಿಲ್ಲದ ರೈತರು ರಾಜ್ಯ ರಾಜಕೀಯದ ದಿಕ್ಕುದಿಶೆಯನ್ನು ಬದಲಾಯಿಸುವ ಚಳವಳಿಯನ್ನು ಸಂಘಟಿಸಿದ ಕಥನ ಇಂದಿನ ಅನಿವಾರ್ಯತೆ. ಸೊಪ್ಪಿನ ಅವರ ನರಗುಂದ-ನವಲಗುಂದ ರೈತರ ಬಂಡಾಯದ ಕಥನ ರಾಜ್ಯ ಅಧಿಕಾರಶಾಹಿಯಿಂದ ಹಿಂಸೆ ಅನುಭವಿಸುವ ಬಹುತೇಕರಿಗೆ ಪ್ರತಿರೋಧಗಳನ್ನು ಕಟ್ಟಿಕೊಳ್ಳಲು ಪ್ರೇರಕ ಶಕ್ತಿಯಾಗಬಹುದು.

ಎಂಬತ್ತರ ದಶಕದಲ್ಲಿ ಕರ್ನಾಟಕದಲ್ಲಾದ ರಾಜಕೀಯ ಬದಲಾವಣೆಯನ್ನು ಎಲ್ಲರೂ ಅವರವರ ಆಸಕ್ತಿಗನುಸಾರ ಕಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಗೋಕಾಕ್ ಚಳವಳಿ ಮತ್ತು ಗುಂಡೂರಾವ್ ಅವರ ದುರಾಡಳಿತದ ಮೂಲಕ ರಾಜ್ಯ ರಾಜಕೀಯದ ಬದಲಾವಣೆಯನ್ನು ಗುರುತಿಸಿದರೆ ಇನ್ನು ಕೆಲವರು ಬಲಾಢ್ಯ ಸಮುದಾಯದ ನಾಯಕರು ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವಿನ ತಿಕ್ಕಾಟದ ರೂಪದಲ್ಲಿ ಬದಲಾವಣೆಯನ್ನು ಗುರುತಿಸುತ್ತಿದ್ದಾರೆ. ಆದರೆ ಎಲ್ಲೂ ಕೂಡ ರೈತರು, ಕಾರ್ಮಿಕರು ಬದಲಾವಣೆಯ ಪ್ರೇರಕ ಶಕ್ತಿಯಾಗಿದ್ದರು ಎನ್ನುವ ಕಥನಗಳು ಮುಂಚೂಣಿಗೆ ಬಂದಿಲ್ಲ. ಸೊಪ್ಪಿನ ಅವರ ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತರು ಈ ಕೊರತೆಯನ್ನು ತುಂಬಿದೆ. ಲೇಖಕರ ಮಾತಲ್ಲೇ ಹೇಳುವುದಾದರೆ, ನರಗುಂದ ರೈತ ಬಂಡಾಯದ ಬೆನ್ನ ಹಿಂದೆ ಬೆಲೆ ಏರಿಕೆಯನ್ನು ವಿರೋಧಿಸಿ ಹಾಗೂ ನರಗುಂದ ರೈತರಿಗೆ ಬೆಂಬಲ ಸೂಚಿಸಿ ಸ್ವಯಂಪ್ರೇರಿತವಾಗಿ ಜನರು ನಡೆಸಿದ ಪ್ರತಿಭಟನೆಗಳು, ಪೋಲಿಸರ ಗೋಲಿಬಾರಿನಿಂದ 135 ಜನ ರೈತರು ಹಾಗೂ ನಾಗರೀಕರು ಪ್ರಾಣ ಕಳೆದುಕೊಂಡಿದ್ದು ಮುಂತಾದ ಘಟನೆಗಳು ಜನಮಾನಸದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಜಿಗುಪ್ಸೆ ಉಂಟುಮಾಡಿದವು. ಆಡಳಿತಾರೂಢ ಪಕ್ಷದ ಬಗ್ಗೆ ಜನರು ತಿರಸ್ಕಾರ ಭಾವನೆಯಿಂದ ನೋಡುವಂತಾಗಿತ್ತು. ಇವೆಲ್ಲದರ ಒಟ್ಟು ಪರಿಣಾಮವೇ 1983ರ ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು.

ನರಗುಂದ ನವಲಗುಂದ ರೈತ ಪ್ರತಿಭಟನೆಯ ಕಾರಣವನ್ನು ಶಾಂತಿಯುತ ರೈತ ಹೋರಾಟ ಹಿಂಸಾರೂಪಕ್ಕೆ ಪರಿವರ್ತನೆಗೊಂಡ ಬಗೆಯನ್ನು ಮತ್ತು ರೈತ ದಂಗೆಯ ಪರಿಣಾಮಗಳನ್ನು ಪುಸ್ತಕ ಬಿಡಿಬಿಡಿಯಾಗಿ ವಿವರಿಸುತ್ತದೆ. ಮಲಪ್ರಭ ನದಿಗೆ ಅಣೆಕಟ್ಟು ನಿರ್ಮಾಣ ಕೆಲಸ 1960ರಲ್ಲಿ  ಆರಂಭವಾಗಿ, ಆಮೆಗತಿಯಲ್ಲಿ ಸಾಗಿ, 1976-77ರಲ್ಲಿ ಹೊಲಗಳಿಗೆ ನೀರು ಹರಿಯಲಾರಂಭಿಸಿತು. ನೀರಾವರಿ ಬಂದ ಕೂಡಲೇ ಸ್ವರ್ಗವೇ ನಿರ್ಮಾಣವಾಗುತ್ತದೆ ಎಂದು ನಂಬಿದ್ದ ರೈತರಿಗೆ ನೀರಾವರಿ ಜತೆ ಬರುವ ಸಮಸ್ಯೆಗಳ ಬಗ್ಗೆ ಅರಿವಿರಲಿಲ್ಲ. ಮೂರು ಹೊತ್ತಿನ ಊಟಕ್ಕಾಗಿ ಬೆಳೆಯುತ್ತಿದ್ದವರು ಮಾರುಕಟ್ಟೆಗೆ ಬೆಳೆಯಲಾರಂಭಿಸಿದರು. ಉತ್ಪಾದಕತೆಯನ್ನು ಹೆಚ್ಚಿಸುವ ಭರದಲ್ಲಿ ಹೆಚ್ಚು ಹೆಚ್ಚು ಉತ್ಪಾದನಾ ಪರಿಕರಗಳ ಮೇಲೆ ವಿನಿಯೋಜನೆ ಮಾಡಿದರು. ಉತ್ಪಾದನೆಯಲ್ಲಿ ವಿನಿಯೋಜಿಸಲು ಹೆಚ್ಚು ಹೆಚ್ಚು ಸಾಲ ಮಾಡಿದರು. ಉತ್ಪಾದನೆಯನ್ನು ಮಾರಿ ಸಾಲ ಸಂದಾಯ ಮಾಡಲು ಸಾಧ್ಯವಾಗದೆ ಸಾಲ ಸಂದಾಯಕ್ಕಾಗಿ ಸಾಲ ಮಾಡಿದರು. ರೈತರ ಬವಣೆ ಹೆಚ್ಚಿಸಲು ಇವೆಲ್ಲ ಸಾಲದೆನ್ನುವ ರೀತಿಯಲ್ಲಿ ಜಲಾಶಯ ಅಭಿವೃದ್ದಿ ಕರವನ್ನು 1977-74ರಿಂದಲೇ ರೈತರು ಸಂದಾಯ ಮಾಡಬೇಕೆಂದು ಅಧಿಕಾರಿಗಳು ಒತ್ತಡ ಹೇರಲಾರಂಭಿಸಿದರು. ಈ ಎಲ್ಲ ಸಮಸ್ಯೆಗಳನ್ನು ರೈತರು ಸರಕಾರದ ಗಮನಕ್ಕೆ ಹಲವಾರು ಬಾರಿ ತಂದರು. ಮಂತ್ರಿಗಳಿಗೆ ಮನವಿ ನೀಡಿದರು. ಅಧಿಕಾರಿಗಳಿಂದ ಮಂತ್ರಿಗಳಿಂದ ಸಮಸ್ಯೆ ಪರಿಹಾರದ ಭರವಸೆ ಅಥವಾ ಸಾಂತ್ವನದ ಮಾತುಗಳ ಬದಲು, ರೈತರು ಮೈಗಳ್ಳರು, ಶ್ರಮಜೀವಿಗಳಲ್ಲ ಎನ್ನುವ ಕಹಿ ಮಾತುಗಳು ಬಂದವು. ಅಭಿವೃದ್ದಿ ಕರ, ನೀರಿನ ಕರ ಇತ್ಯಾದಿಗಳ ಬಾಕಿ ವಸೂಲಿಗೆ ರೈತರ ಚರಾಸ್ತಿಗಳನ್ನು, ಪಾತ್ರೆ ಪಗಡೆಗಳನ್ನು ಹರಾಜು ಹಾಕಲಾರಂಭಿಸಿದರು. ಇವೆಲ್ಲವೂ ರೈತರ ಕಷ್ಟ ಧಾರಣ ಶಕ್ತಿಯನ್ನೇ ಪರೀಕ್ಷಿಸಲಾರಂಭಿಸಿದವು.

ಸರ್ಕಾರದ ರೈತ ವಿರೋಧಿ ಧೋರಣೆಗಳನ್ನು ರೈತರು ಸಂಘಟಿತರಾಗಿ ಶಾಂತಿಯುತರಾಗಿ ಪ್ರತಿಭಟಿಸಲು ತೀರ್ಮಾನಿಸಿದರು. ಇದಕ್ಕಾಗಿ ಮಲಪ್ರಭಾ ನೀರಾವರಿ ರೈತ ಸಮನ್ವಯ ಸಮಿತಿಯನ್ನು ರಚಿಸಿಕೊಂಡರು. ಜುಲೈ 21, 1980ರಲ್ಲಿ ನರಗುಂದದಲ್ಲಿ ಏಳೆಂಟು ಸಾವಿರ ರೈತರು ಸೇರಿ ತಹಶೀಲ್ದಾರರು ಕಚೇರಿ ಕೆಲಸವನ್ನು ಸ್ಥಗಿತಗೊಳಿಸಿ ತಮ್ಮ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಕೇಳಿದರು. ಪ್ರತಿಭಟನಾಕಾರರ ಕೋರಿಕೆಯನ್ನು ತಹಶೀಲ್ದಾರರು ವಿವೇಚನೆಯಿಂದ ಪರಿಗಣಿಸಲಿಲ್ಲವೆಂದು ಘಟನೆಯ ತನಿಖೆಗೆ ಸರ್ಕಾರ ನೇಮಿಸಿದ ವಿಚಾರಣಾ ಆಯೋಗವೇ ತೀರ್ಮಾನಿಸಿದೆ. ಇದರಿಂದ ಕೆರಳಿದ ಪ್ರತಿಭಟನಾಕಾರರು ಕಚೇರಿ ಒಳಗೆ ನುಗ್ಗಲು ಯತ್ನಿಸಿದಾಗ ಬಲ ಪ್ರಯೋಗ ಮಾಡಲಾಯಿತು. ಪೋಲಿಸ್ ಗುಂಡಿಗೆ ಒಬ್ಬ ರೈತ ಹತನಾದ. ಈ ಘಟನೆಯಿಂದ ಪ್ರತಿಭಟನೆ ಹಿಂಸಾರೂಪ ತಾಳಿತು, ಮೂವರು ಪೋಲಿಸ್ ಅಧಿಕಾರಿಗಳು ಪ್ರಾಣ ಕಳೆದುಕೊಂಡರು, ಆಸ್ತಿ ಪಾಸ್ತಿ ಹಾನಿಯಾಯಿತೆಂದು ಆಯೋಗ ವರದಿ ಮಾಡಿದೆ. ಕಂದಾಯ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳ ಬೇಜವಾಬ್ದಾರಿತನದ ನಡವಳಿಕೆ ಬಗ್ಗೆನೂ ಆಯೋಗ ಕಿಡಿಕಾರಿದೆ. ರೈತರು ತಮ್ಮ ಸಮಸ್ಯೆಗಳನ್ನು ಕೇಳಿಕೊಂಡಾಗ ಅವುಗಳನ್ನು ಸಹಾನುಭೂತಿಯಿಂದ ಕೇಳುವ ಸೌಜನ್ಯವನ್ನು ಅಧಿಕಾರಿಗಳು ರೂಢಿಸಿಕೊಂಡಿಲ್ಲ. ಕರಗಳ ವಸೂಲಾತಿಯನ್ನು ಮುಂದಕ್ಕೆ ಹಾಕುವ ಮನವಿಯನ್ನು ಕೂಡಾ ಕಂದಾಯ ಇಲಾಖೆ ಮಾನ್ಯ ಮಾಡಲಿಲ್ಲ. ಅದೂ ಅಲ್ಲದೆ ಅಧಿಕಾರಿಗಳು ಈ ವಿಷಯದಲ್ಲಿ ಪೂರ್ವಗ್ರಹ ಪೀಡಿತರಾಗಿ ವರ್ತಿಸಿದರು. ಅಂದರೆ ಕೆಲವು ಶ್ರೀಮಂತ ರೈತರು ಕರಗಳನ್ನು ಉಳಿಸಿಕೊಳ್ಳಲು ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಎತ್ತಿಕಟ್ಟಿ ಹೋರಾಟಕ್ಕೆ ಇಳಿಸಿದ್ದಾರೆ. ಅಧಿಕಾರಿಗಳ ಈ ನಿಲುವು ಸರಿಯಾದುದಲ್ಲ, ಯಾಕೆಂದರೆ ಕರಗಳ ಜೊತೆಗೆ ರೈತರ ಉತ್ಪನ್ನಗಳಿಗೆ ಯೋಗ್ಯಬೆಲೆ ಕಟ್ಟುವ ಸಾಮರ್ಥ್ಯವನ್ನು ಕುಗ್ಗಿಸಿವೆ. ರೈತರ ಬಗ್ಗೆ ಕಿಂಚಿತ್ ಕಾಳಜಿಯುಳ್ಳ ಅಧಿಕಾರಿಗಳಾಗಿದ್ದರೆ ಈ ಎಲ್ಲ ಸಮಸ್ಯೆಗಳನ್ನು ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತರುತ್ತಿದ್ದರು. ಆದರೆ ರೈತರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ಅಧಿಕಾರಿಗಳು ಇಂತಹ ಸಕರಾತ್ಮಕ ಸ್ಪಂದನೆಗೆ ಬದಲು ಕರ ಸಂಗ್ರಹಕ್ಕೆ ಒತ್ತಡ ಹೇರಿದ ಕಾರಣದಿಂದಲೇ ಸಮಸ್ಯೆ ಬಿಗಡಾಯಿಸಿತೆಂದು ಆಯೋಗ ಟೀಕಿಸಿದೆ. ಹೀಗೆ ಶಾಂತಿಯುತವಾದ ಪ್ರತಿಭಟನೆಯನ್ನು ಹಿಂಸಾತ್ಮಕ ಪ್ರತಿಭಟನೆಯನ್ನಾಗಿ ಪರಿವರ್ತಿಸುವಲ್ಲಿ ಸರ್ಕಾರಿ ಮೆಶಿನರಿಯ ಪಾತ್ರ ದೊಡ್ಡದಿದೆ.

ನರಗುಂದ-ನವಲಗುಂದ ರೈತ ಬಂಡಾಯ ರಾಜ್ಯಾದ್ಯಂತ ವ್ಯಾಪಕ ಪರಿಣಾಮ ಉಂಟು ಮಾಡಿದೆಯೆಂದು ಲೇಖಕರು ಅಭಿಪ್ರಾಯ ಪಡುತ್ತಾರೆ. ಸರ್ಕಾರಗಳು ರೈತರ ಸಮಸ್ಯೆಗಳನ್ನು ಕಡೆಗಣಿಸಿದರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಈ ಚಳವಳಿ ಸಾಕ್ಷಿಯಾಯಿತು. ಈ ಹೋರಾಟದ ಫಲವಾಗಿ ಕರ್ನಾಟಕ ಪ್ರಾಂತ ರೈತ ಸಂಘ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಲೇಖಕರು ಮತ್ತೊಂದು ಮಹತ್ವದ ಬೆಳವಣಿಗೆಯ ಮೇಲೆ ಬೆಳಕು ಚೆಲ್ಲಿದ್ದಾರೆ. 1983ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡು ಜನತಾ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಿತು. ಆದರೆ ಮಲಪ್ರಭಾ ನೀರಾವರಿ ಪ್ರದೇಶದ ಮೂರು ಮತಕ್ಷೇತ್ರಗಳ ಪೈಕಿ (ಸವದತ್ತಿ, ನರಗುಂದ ಮತ್ತು ನವಲಗುಂದ) ಎರಡು ಕ್ಷೇತ್ರಗಳಲ್ಲಿ (ಸವದತ್ತಿ ಮತ್ತು ನವಲಗುಂದ) ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಒಂದರಲ್ಲಿ (ನರಗುಂದ) ಮಾತ್ರ ಸೋತರು. ನರಗುಂದ ಕ್ಷೇತ್ರದಲ್ಲಿ ಕ್ರಾಂತಿರಂಗದ ಅಭ್ಯರ್ಥಿ ಮತ್ತು ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿಯ ಸಂಚಾಲಕರೊಬ್ಬರು ಗೆದ್ದರು. ಆಯ್ಕೆಯಾದ ಎಲ್ಲ ಅಭ್ಯರ್ಥಿಗಳು ಭೂಮಾಲೀಕ ವರ್ಗಕ್ಕೆ ಸೇರಿದವರು. ಈ ಬೆಳವಣಿಗೆಯನ್ನು ಗುರುತಿಸುವ ಮೂಲಕ ಲೇಖಕರು ಪ್ರಗತಿಪರ ನಿಲುವುಗಳು ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಳ್ಳಲು ಕ್ರಮಿಸಬೇಕಾದ ದೂರವನ್ನು ಗುರುತಿಸಿದ್ದಾರೆ. ಇದು ಸತ್ಯ ಕೂಡ. ದಿನಗೂಲಿ ನೌಕರರಿಗೆ, ಬೀಡಿ ಕಾರ್ಮಿಕರಿಗೆ, ಅಂಗನವಾಡಿ ಟೀಚರುಗಳಿಗೆ, ಬಹುತೇಕ ಇಲಾಖೆಗಳ ನೌಕರರಿಗೆ, ಅಸಂಘಟಿತ ಕಾರ್ಮಿಕರಿಗೆ ತಮ್ಮ ಉದ್ಯೋಗದ ಸೇವಾ ಸೌಲಭ್ಯಗಳನ್ನು ಪಡೆಯಲು ಎಡಪಂಥೀಯ ಸಂಘಟನೆಗಳು ಬೇಕು. ಆದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಸಂಘಟನೆಗಳ ಸದಸ್ಯರ ಮತ ಎಡಪಂಥೀಯ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬಹುದೆನ್ನುವ ಗ್ಯಾರಂಟಿ ಇಲ್ಲ. ವೇದಿಕೆಗಳಲ್ಲಿ ಗಂಟೆಗಟ್ಟಲೆ ಪ್ರಗತಿಪರತೆಯ ಬಗ್ಗೆ ಭಾಷಣ ಬಿಗಿಯುವ, ಪುಟಗಟ್ಟಲೆ ಲೇಖನ ಬರೆಯುವ ಬುದ್ದಿಜೀವಿಗಳು ಕೂಡ ಮತ ಚಲಾವಣೆಯ ಸಂದರ್ಭದಲ್ಲಿ ಯಥಾರೀತಿ ಮುಖ್ಯವಾಹಿನಿಯ ಪಕ್ಷಗಳನ್ನು ಬೆಂಬಲಿಸುತ್ತಾರೆ. ಪ್ರಗತಿಪರ ನಿಲುವುಗಳು, ಮಾತುಗಳು, ಬರಹಗಳು, ಪ್ರಗತಿಪರ ರಾಜಕೀಯವಾಗಿ ಪರಿವರ್ತನೆಗೊಳ್ಳದಿದ್ದರೆ ಪ್ರಗತಿಪರತೆಗೆ ಅರ್ಥ ಇದೆಯೇ ಎನ್ನುವ ಪ್ರಶ್ನೆಯನ್ನು ಸೊಪ್ಪಿನ ಅವರ ಪುಸ್ತಕ ಕೇಳುತ್ತಿದೆ.

ಶೀರ್ಷಿಕೆ: ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ
ಲೇಖಕರು: ಬಿ.ಎಸ್. ಸೊಪ್ಪಿನ
ಪ್ರಕಾಶಕರು:ಚಿಂತನ ಪುಸ್ತಕ
ನಂ. 405, 1 ನೇ ಮುಖ್ಯ ರಸ್ತೆ, 10 ನೇ ಅಡ್ಡರಸ್ತೆ, ಡಾಲರ್ಸ್ ಕಾಲನಿ, ಜೆ.ಪಿ. ನಗರ ನಾಲ್ಕನೇ ಹಂತ, ಬೆಂಗಳೂರು – 78
ಪುಟ:104+4
ಬೆಲೆ: ರೂ.70/-


ಪ್ರಕಟಿತ ಪುಸ್ತಕಗಳ ಲೇಖಕರು/ಪ್ರಕಾಶಕರ ಗಮನಕ್ಕೆ…