Monthly Archives: February 2014

ಶಾಂತಿ ಪ್ರಕಾಶನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನೇಶ್ ಅಮೀನ್ ಮಟ್ಟುರವರಿಗೊಂದು ಪತ್ರ…

[ದಿನೇಶ್ ಅಮಿನ್ ಮಟ್ಟುರವರು ಮಂಗಳೂರಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ಪ್ರಾಯೋಜಿತ ಮುಸ್ಲಿಂ ಲೇಖಕರ ಸಂಘದ ಸಾಹಿತ್ಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಹೋಗುವ ಒಂದು ದಿನ ಮೊದಲು ನವೀನ್ ಸೂರಿಂಜೆಯವರು ಬರೆದಿದ್ದ ಪತ್ರ.]

ಪ್ರೀತಿಯ ಗುರುಗಳಾದ ದಿನೇಶ್ ಅಮೀನ್ ಮಟ್ಟುರವರಿಗೆ,

ಮಹಿಳಾ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳೊಂದಿಗೆ…..

ನೀವು ನಾಳೆ ಮಂಗಳೂರಿನಲ್ಲಿ ನಡೆಯುತ್ತಿರುವ ಮುಸ್ಲಿಂ ಲೇಖಕರ ಸಂಘದ ”ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪ್ರಧಾನ” dinesh-amin-mattu-2ಸಮಾರಂಭ ಮತ್ತು ಹಿರಿಯ ಮುಸ್ಲಿಂ ಸಾಹಿತಿಗೆ ಸನ್ಮಾನ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಿರೆಂದು ತಿಳಿಯಿತು.

ಈ ಹಿನ್ನೆಲೆಯಲ್ಲಿ ಮುಸ್ಲಿಂ ಲೇಖಕರ ಸಂಘ ಮತ್ತು ಅದರ ಸ್ಥಾಪಕ ಸಂಘಟನೆ ಮತ್ತು ಅದರ ಉದ್ದೇಶಗಳ ಬಗ್ಗೆ ತಮ್ಮಲ್ಲಿ ಚರ್ಚೆ ಮಾಡಬೇಕು ಎಂದುಕೊಂಡು ಈ ಪತ್ರ. ನನಗೆ ಗೊತ್ತಿರುವ ಪ್ರಕಾರ ಮುಸ್ಲಿಂ ಲೇಖಕರ ಸಂಘವು ”ಹಿದಾಯತ್ ಸೆಂಟರ್, ಬೀಬಿ ಅಲಬಿ ರೋಡ್, ಮಂಗಳೂರು 575001” ಎಂಬ ವಿಳಾಸದಿಂದ ಕಾರ್ಯಾಚರಿಸುತ್ತಿದೆ. ಈ ಸಂಘವು ಜಮಾತೆ ಇಸ್ಲಾಮೀ ಹಿಂದ್ ಎಂಬ ಮುಸ್ಲಿಂ ಸಂಘಟನೆಯು ಸ್ಥಾಪನೆ ಮಾಡಿರುವುದಾಗಿದೆ. ಲೇಖಕರ ಸಂಘ ಮತ್ತು ಜಮಾತೆ ಇಸ್ಲಾಮೀ ಹಿಂದ್ ಒಂದೇ ವಿಳಾಸದಿಂದ ಕಾರ್ಯನಿರ್ವಹಿಸುತ್ತಿದೆ.

ಜಮಾತೆ ಇಸ್ಲಾಮೀ ಹಿಂದ್ ಎಂಬುದು ಒಂದು ಇಸ್ಲಾಮಿಕ್ ಮೂಲಭೂತವಾದಿ ಧಾರ್ಮಿಕ ಸಂಘಟನೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟರ್ ಇಸ್ಲಾಂ ವಾದಿ ಅಬುಲ್ ಅಲ ಮೌದೂದಿಯಿಂದ ಸ್ಥಾಪನೆಗೊಂಡ ಆಂದೋಲನ. shantiprakashanaಇಸ್ಲಾಂ ಧರ್ಮದ ಆಡಳಿತವನ್ನು ಸ್ಥಾಪಿಸುವುದು ತಮ್ಮ ಧಾರ್ಮಿಕ ಕರ್ತವ್ಯ ಎಂದು ತಿಳಿದು ರಾಜಕೀಯ ಚಳುವಳಿ ನಡೆಸುತ್ತಾ ಬಂದಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಸಾಹಿತ್ಯ ಹೀಗೆ ವಿವಿಧ ರಂಗಗಳಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿವಿದ ಹೆಸರಿನ ಸಾಮೂಹಿಕ ಸಂಘಟನೆಗಳನ್ನು ಜಮಾತೆ ಇಸ್ಲಾಮಿ ಹುಟ್ಟು ಹಾಕಿದೆ.

ಇಸ್ಲಾಂ ಮೂಲಭೂವಾದಿ ಸಾಹಿತ್ಯವನ್ನು ಜನರ ಮಧ್ಯೆ ವ್ಯಾಪಕವಾಗಿ ಕೊಂಡು ಹೋಗಲು ಜಮಾತೆಯ ಕರ್ನಾಟಕ ಶಾಖೆಯು “ಶಾಂತಿ ಪ್ರಕಾಶನ” ಎಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದೆ. ಹಾಗೆಯೇ ಮುಸ್ಲಿಂ ಬರಹಗಾರರ ಮಧ್ಯೆ ತನ್ನ ಪ್ರಭಾವವನ್ನು ಹರಡಲು ಮತ್ತು ಧಾರ್ಮಿಕ ಮೂಲಭೂತವಾದಿ ಸಾಹಿತ್ಯ ಮತ್ತು ಸಾಹಿತಿಗಳನ್ನು ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ಲೇಖಕರ ಸಂಘವನ್ನು ಕರ್ನಾಟಕದಲ್ಲಿ ಸ್ಥಾಪಿಸಿದೆ.

ಉದಾಹರಣೆಗಳನ್ನು ನಾನು ಈ ರೀತಿ ಕೊಡಬಲ್ಲೆ….

“ನಿಮ್ಮ ಸ್ತ್ರಿಯರಿಂದ ಆಜ್ಞೆ ಉಲ್ಲಂಘನೆಯ ಶಂಕೆ ನಿಮಗಿದ್ದರೆ ನೀವು ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ದೂರ ಇರಿ ಮತ್ತು ಅವರಿಗೆ ಹೊಡೆಯಿರಿ. ಆನಂತರ ಅವರು ನಿಮಗೆ ವಿಧೇಯರಾಗಿ ನಡೆದರೆ ಅವರ ಮೇಲೆ ಕೈ ಎತ್ತಲು ಬೇಕು ಬೇಕೆಂದೇ ನೆಪ ಹುಡುಕಬೇಡಿ.” (ಪವಿತ್ರ ಕುರಾನ್ 4:34)

ಎಂದು ಕುರಾನ್ ಉಲ್ಲೇಖಿಸಿದ ಪ್ರೊ ಮಹಮ್ಮದ್ ಕುತುಬ್ ಎಂಬವರು ಬರೆದ ಪುಸ್ತಕ ”ಮಹಿಳೆ ಇಸ್ಲಾಮಿನಲ್ಲಿ” ಎಂಬ ಪುಸ್ತಕವನ್ನು ಜಮಾತೆ ಇಸ್ಲಾಮಿಯ ಶಾಂತಿ ಪ್ರಕಾಶನ ಪ್ರಕಟಿಸಿದೆ. ಈ ಸಣ್ಣ ಹೇಳಿಕೆಗೆ ಜಮಾತೆ ಮಾದರಿಯಲ್ಲಿ ವಿವರಣೆ ನೀಡಲಾಗಿದೆ. ಪುಸ್ತಕದ ಪುಟ ಸಂಖ್ಯೆ 27 ರಲ್ಲಿ ವಿವರಣೆ ನೀಡಿರುವ ಪ್ರೋ ಮಹಮ್ಮದ್ ಕುತುಬ್ ”ಶಿಸ್ತು ಕ್ರಮವನ್ನು ಸ್ಪಷ್ಟಗೊಳಿಸುವ ಪ್ರಸ್ತುತ ವಾಕ್ಯವು ಅಂತಿಮವಾಗಿ ಗಾಯವಾಗದ ದಂಡನೆಯನ್ನು ಆದೇಶಿಸಿದೆ. ಕುರಾನ್ ನೀಡಿರುವ ಈ ಹಕ್ಕುಗಳನ್ನು ದುರುಪಯೋಗಗೊಳಿಸುವ ಸಂಧರ್ಭಗಳ ಕುರಿತು ನಾವಿಲ್ಲಿ ಚರ್ಚಿಸುತ್ತಿಲ್ಲ. ಯಾಕೆಂದರೆ ಲೋಕದ ಎಲ್ಲಾ ಹಕ್ಕುಗಳನ್ನೂ ದುರುಪಯೋಗ ಮಾಡಲಾಗುತ್ತಿದೆ. ಮಹಿಳೆಯರ ಚಾರಿತ್ರ್ಯ ಸಂಸ್ಕರಣೆ ಮತ್ತು ನೈತಿಕ ಉನ್ನತಿ ಮಾತ್ರ ಅದಕ್ಕಿರುವ ಪರಿಹಾರ” ಎಂದು ಲೇಖಕರು ಬರೆಯುತ್ತಾರೆ. ಶಾಂತಿ ಪ್ರಕಾಶನ ಅದನ್ನು ಪ್ರಕಟಿಸುತ್ತದೆ.

ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದು. ಶಾಂತಿ ಪ್ರಕಾಶನ ಪ್ರಕಟಿತ ಇಬ್ರಾಹಿಂ ಸ ಈದ್ ರ ”ಮಹಿಳೆ ಮತ್ತು ಸಮಾಜ” ಎಂಬ ಪುಸ್ತಕದಲ್ಲೂ ಕೂಡಾ ಇಂತಹುದೇ ಮಹಿಳಾ ವಿರೋಧಿ ನಿಲುವುಗಳನ್ನು ಹೇಳಲಾಗಿದೆ.

“ಮಹಿಳೆಯರು ನಿಮ್ಮ ನಿಮ್ಮ ಮನೆಗಳಲ್ಲಿ ಇದ್ದುಕೊಳ್ಳಿರಿ, ಗತ ಕಾಲದಂತಹ ಸೌಂದರ್ಯ ಪ್ರದರ್ಶನ ಮಾಡುತ್ತಾ ತಿರುಗಬೇಡಿರಿ.” (ಪ್ರವಾದಿ ಪತ್ನಿಯರನ್ನುದ್ದೇಶಿಸಿ ಹೇಳಲಾದ ಸೂಕ್ತ) (ಪವಿತ್ರ ಕುರಾನ್ 33;33)

ಈ ಚಿಕ್ಕ ಸೂಕ್ತವನ್ನು ಲೇಖಕ ತನ್ನದೇ ದಾಟಿಯಲ್ಲಿ ಈಗಿನ ಕಾಲಕ್ಕೆ ಬೇಕಾದ ಹಾಗೆ ತಿರುಚಿ ವಿವರಣೆ ನೀಡುತ್ತಾರೆ. ಅದು ಹೀಗಿದೆ… (ಮಹಿಳೆ ಮತ್ತು ಸಮಾಜದ ಪುಟ ಸಂಖ್ಯೆ 47 ಮತ್ತು 48 )… “ಈ ಮೇಲಿನ ಸೂಕ್ತದಂತೆ ಇಸ್ಲಾಂ ಧರ್ಮವು ರಾಷ್ಟ್ರ ಮತ್ತು ಸಮಾಜದ ಹೊಣೆಯನ್ನು ಪುರುಷರ ಮೇಲೆ ಹಾಕಿದೆ. ಸ್ತ್ರಿಯ ಚಟುವಟಿಕೆಯನ್ನು ಕೇವಲ ಮನೆಗೆ ಸೀಮಿತಗೊಳಿಸಿದೆ. ಪೇಟೆಯ ವ್ಯಾಪಾರಿ, ಕಚೇರಿಯ ಗುಮಾಸ್ತ, ನ್ಯಾಯಾಲಯದ ನ್ಯಾಯಾಧೀಶ, ಸೈನ್ಯದ ಸಿಪಾಯಿಯಾಗುವುದು ಆಕೆಯ ಕಾರ್ಯಕ್ಷೇತ್ರವಲ್ಲ. ಮನೆ ಮಾತ್ರ ಆಕೆಯ ಕಾರ್ಯಕ್ಷೇತ್ರ.”

ಇದೇ ಪುಸ್ತಕದ 89 ನೇ ಪುಟದಲ್ಲಿ “ಸ್ತ್ರಿ ಮತ್ತು ಪುರುಷರು ಒಟ್ಟಿಗೆ ಸೇರಬಾರದು. ಓರ್ವ ಮುಸ್ಲಿಂ ಮಹಿಳೆ ಸೈನಿಕ ತರಬೇತಿಯಲ್ಲಾಗಲೀ, ಆಟೋಟದಲ್ಲಾಗಲೀ ಭಾಗವಹಿಸುವಂತಿಲ್ಲ. ಪೇಟೆಯಿಂದ ಪಾರ್ಲಿಮೆಂಟ್ ತನಕ ಮಹಿಳೆಯು ಪುರುಷನೊಂದಿಗೆ ಬೆರೆಯುವುದು ಬೆರೆಯುವುದು ಇಸ್ಲಾಂ ವಿರುದ್ದವಾಗಿದೆ” ಎಂದು ಬರೆಯುತ್ತಾರೆ. ಇವ್ಯಾವ ವಾಕ್ಯಗಳೂ ಕುರಾನ್ ಹೇಳಿದ್ದಲ್ಲ. ಕುರಾನ್ ಹೇಳಿದ ಒಂದು ವಾಕ್ಯವನ್ನು ತನ್ನ ಮೂಲಭೂತವಾದಿ ಚಿಂತನೆಯಲ್ಲಿ ಈಗಿನ ಮಹಿಳೆಯರ ಮೇಲೆ ಹೇರಲಾಗುತ್ತಿರುವಂತದ್ದು. ಇಂಹತ ಪುಸ್ತಕಗಳನ್ನು ಮಾತ್ರ ಶಾಂತಿ ಪ್ರಕಾಶನ ಪ್ರಕಟಿಸುತ್ತದೆ. Sara-Abubakarಸಾರಾ ಅಬೂಬಕ್ಕರ್, ಕೆ ಷರೀಫಾರಂತಹ ಮುಸ್ಲಿಂ ಸಂವೇದನಾಶೀಲ ಪ್ರಗತಿಪರರು ಬರೆದ ಯಾವುದೇ ಪುಸ್ತಕವನ್ನು ಶಾಂತಿ ಪ್ರಕಾಶನ ಪ್ರಕಟ ಮಾಡುವುದಿಲ್ಲ. ಧಾರ್ಮಿಕ ಮೂಲಭೂತವಾದ ಸಾರುವ ಪುಸ್ತಕಗಳ ಪ್ರಕಟಣೆಗಾಗಿಯೇ ಸಾಹಿತಿಗಳನ್ನು ಸಿದ್ದಗೊಳಿಸುವ ಕಾರ್ಖಾನೆಯೇ ”ಮುಸ್ಲಿಂ ಲೇಖಕರ ಸಂಘ”.

ಈ ರೀತಿ ಮೂಲಭೂತವಾದಿ ಸಾಹಿತ್ಯವನ್ನು ಬೆಳೆಸಲು ಜಮಾತೆ ಇಸ್ಲಾಮೀ ಹಿಂದ್ ಇನ್ನಿಲ್ಲದ ಶ್ರಮ ಪಡುತ್ತಿದೆ. ಮುಸ್ಲಿಂ ಲೇಖಕರ ಸಂಘ ನೇರವಾಗಿ ಜಮಾತೆ ಇಸ್ಲಾಮೀ ಹಿಂದ್ ಅಧೀನದಲ್ಲಿ ಇದ್ದರೂ ಕೂಡಾ ತನ್ನ ವಿಚಾರಧಾರೆಯಿಂದ ಹೊರಗಿರುವ ಮುಸ್ಲಿಂ ಸಾಹಿತ್ಯ ಲೋಕವನ್ನು ತಲುಪಲು ಮತ್ತು ಪ್ರಗತಿಶೀಲ ಮುಸ್ಲಿಂ ಸಾಹಿತಿಗಳ ಪ್ರಭಾವಕ್ಕೆ ಯುವ ಮುಸ್ಲಿಂ ಬರಹಗಾರರು ಒಳಗಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಒಂದು ವಿಶಾಲವಾದ ವೇದಿಕೆಯನ್ನು ನಿರ್ಮಿಸಲು ಜಮಾತೆ ಪ್ರಯತ್ನಿಸುತ್ತಿದೆ. ಆ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮೀ ಹಿಂದ್ ಸದಸ್ಯರಲ್ಲದ ಒಂದಿಷ್ಟು ಪ್ರಗತಿಪರರಂತೆ ಕಾಣುವ ಮುಸ್ಲಿಂ ಬರಹಗಾರರನ್ನು ಮುಸ್ಲಿಂ ಲೇಖಕರ ಸಂಘಕ್ಕೆ ಪದಾಧಿಕಾರಿಗಳನ್ನು ನೇಮಿಸುತ್ತದೆ. ತನ್ನ ಕಾರ್ಯಕ್ರಮಗಳಲ್ಲಿ ಮತ್ತು ಸಮಿತಿಯ ಚಟುವಟಿಕೆಗಳಲ್ಲಿ ವಿಶಾಲ ಮನೋಭಾವ ಹೊಂದಿರುವಂತೆ ತೋರ್ಪಡಿಸಿಕೊಂಡರೂ ಅಂತಿಮವಾಗಿ ಎಲ್ಲರನ್ನೂ ಸೇರಿಸಿ ತನ್ನ ಹಿಡನ್ ಅಜೆಂಡಾವನ್ನು ಸೇರಲು ಯತ್ನಿಸುತ್ತದೆ.

ಮುಸ್ಲಿಂ ಲೇಖಕರ ಸಂಘವು ಜಮಾತೆ ಇಸ್ಲಾಮೀ ಹಿಂದ್ ಮಾರ್ಗದರ್ಶನದಲ್ಲಿ ಸಾಹಿತಿಗಳಿಗೆ ಪ್ರಶಸ್ತಿ ವಿತರಣೆ, ಸನ್ಮಾನ, ಸಾಹಿತ್ಯ ಸಮಾವೇಶದಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಕನ್ನಡದ ಹೆಸರಾಂತ ಪ್ರಗತಿಪರ ಸಾಹಿತಿ, ಬರಹಗಾರರು, ಚಿಂತಕರನ್ನು ಅತಿಥಿಗಳಾಗಿ, ಉದ್ಘಾಟಕರಾಗಿ ಆಹ್ವಾನಿಸುತ್ತದೆ. ಹೀಗೆ ಪ್ರಗತಿಪರ ಸೋಗಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಒಟ್ಟು ಕಾರ್ಯಕ್ರಮದಲ್ಲಿ ಇಸ್ಲಾಂ ಮೂಲಭೂತವಾದಿ ಚೌಕಟ್ಟಿನೊಳಗಿರುವ ಸಾಹಿತ್ಯಗಳಿಗೆ ಪ್ರಶಸ್ತಿ ನೀಡುವುದು ಮತ್ತು ತನ್ನ ಶಾಂತಿ ಪ್ರಕಾಶನದ ಮೂಲಭೂತವಾದಿ ಬರಹಗಾರರಿಗೆ ಸನ್ಮಾನ ಮಾಡಿಸುವುದು ಮತ್ತು ಶಾಂತಿ ಪ್ರಕಾಶನದ ತನ್ನ ಇಸ್ಲಾಂ ಮೂಲಭೂತವಾದಿ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಬಹಳ ಶಿಸ್ತು ಬದ್ಧವಾಗಿ ಮಾಡುತ್ತಿದೆ. ಹೀಗೆ ಬಹಳ ಯೋಜನಾ ಬದ್ಧವಾಗಿ ಕೆಲಸ ಮಾಡುವ ಮೂಲಕ ಸೂಫಿ ಸಾಹಿತ್ಯ ಪರಂಪರೆ ಮತ್ತು ಇತ್ತಿಚ್ಚಿನ ದಶಕಗಳಲ್ಲಿ ಎದ್ದು ಬಂದಿರುವ ಪ್ರಗತಿಪರ ಬಂಡಾಯ ಮುಸ್ಲಿಂ ಮಹಿಳಾ ಮತ್ತು ಪುರುಷ ಸಾಹಿತಿಗಳ ಸಾಹಿತ್ಯವನ್ನು ಮುಸ್ಲಿಂ ಸಮುದಾಯದ ಒಳಗಡೆ ನಗಣ್ಯ ಗೊಳಿಸಲು ಮತ್ತು ಅವರನ್ನು ಮುಸ್ಲಿಂ ಸಮುದಾಯದ ಸಾಹಿತ್ಯ ವಲಯದಿಂದ ಪ್ರತ್ಯೇಕಿಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಇಡುತ್ತಿದೆ.

ಮಾರ್ಚ್ ತಿಂಗಳಲ್ಲಿ ಮಹಿಳಾ ದಿನಾಚರಣೆಯನ್ನು ನಾವು ಬಹಳ ಖುಷಿ ಮತ್ತು ಆತ್ಮಾವಲೋಕನದ ಹಿನ್ನೆಲೆಯಲ್ಲಿ ಆಚರಿಸುವುದರಿಂದ ಮತ್ತು ತಾವು ಜಮಾತೆ ಇಸ್ಲಾಮೀ ಹಿಂದ್ ಪ್ರಾಯೋಜಿತ ಮುಸ್ಲಿಂ ಲೇಖಕರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವೆರೆಂದು ತಿಳಿದು ಬಂದಿದ್ದರಿಂದ ತಮ್ಮ ಜೊತೆ ಇವೆಲ್ಲವನ್ನೂ ಹಂಚಿಕೊಂಡಿದ್ದೇವೆ.

ತಮ್ಮ ವಿಶ್ವಾಸಿ,
ನವೀನ್ ಸೂರಿಂಜೆ

ಫ್ರೆಂಚ್ ಸಿನಿಮಾದ ಹಣೆಬರಹಗಾರ ಟ್ರೋಫೋ…

– ಶಾಂತರಾಜು ಎಸ್.ಮಳವಳ್ಳಿ

ಅದು ಎರಡನೇ ಮಹಾಯುದ್ಧದ ನಂತರದ ಕಾಲ. ಇಡೀ ಜಗತ್ತಿಗೆ ಮಂಕುಕವಿದಂತಾಗಿತ್ತು. ಯುದ್ಧದಲ್ಲಿ ನೇರವಾಗಿ ಭಾಗವಹಿಸಿ ಗೆದ್ದ ಅಥವಾ ಸೋತ ದೇಶಗಳ ಗೋಳು ಒಂದೇ ತೆರನಾದದ್ದಾಗಿತ್ತು. ದೇಶವೊಂದು ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗಾಗಿಯೇ ಆರ್ಥಿಕ ದಿಗ್ಭಂಧನ ಎಂಬ ಅಸಹಕಾರ ಅಸ್ತ್ರಕ್ಕೆ ಯಾವುದೇ ದೇಶಗಳು ಹೆದರುವುದು (ಕ್ಯೂಬಾದಂತಹ ದೇಶಗಳನ್ನೊರೆತುಪಡಿಸಿ). ಜಾಗತಿಕ ಯುದ್ಧದಲ್ಲಿ ಅಮೇರಿಕಾ-ಇಂಗ್ಲೆಂಡ್‌ ಅನ್ನು ಬೆಂಬಲಿಸಿದ ದೇಶಗಳಲ್ಲಿ ಫ್ರಾನ್ಸ್ ಕೂಡ ಒಂದು. ಯುದ್ಧದ ಬರ್ಬರತೆಯನ್ನು ಕಂಡ ದೇಶದ ಜನರು ಬಹಳ ಲೋಲುಪರಾಗಿ ದೈಹಿಕ ವಾಂಛೆಗೆ ಬಲಿಯಾಗುವುದೂ ಸೇರಿದರಂತೆ ನೈತಕ ಅಧಃಪತನ ಹಿಡಿಯುವುದು ಸಾಮಾನ್ಯ ಪ್ರಕ್ರಿಯೆ. ಇಂಥಹ ನಿದರ್ಶನಗಳನ್ನು ಜರ್ಮನ್ ನಾಟಕಕಾರ ಬ್ರೆಕ್ಟ್‌ನ ನಾಟಕಗಳಲ್ಲಿ ಬಿಂಬಿಸಲು ಪ್ರಯತ್ನಿಸಿದ್ದಾನೆ.

1940 ರಷ್ಟೊತ್ತಿಗಾಗಲೇ ಫ್ರಾನ್ಸ್‌ನ ಸಿನಿಮಾ ಜಗತ್ತಿಗೆ ಇಟಾಲಿಯನ್ ’ನಿಯೋರಿಯಲಿಸ್ಂ’ ಪ್ರಭಾವ ಬೀರಿರುತ್ತದೆ. ’ನಿಯೋರಿಯಲಿಸ್ಂ’ ಅಂದರೆ ಸಿನಿಮಾವನ್ನು ಸಾಧ್ಯವಾದಷ್ಟು ವಸ್ತುನಿಷ್ಠವಾಗಿ ಮಾಡುತ್ತಾ ನೈಜತೆಯನ್ನು ಮೆರೆಸುವುದು. ಅತೀ ವರ್ಣರಂಜಿತ ಕಾಲ್ಪನಿಕ ಕಥಾನಕದ ಬದಲು, ತೀರಾ ಸಾಮಾನ್ಯವಾದ ಕಥೆಯೇ ಆದರೂ ಆ ವಸ್ತುವಿಗೆ ತಕ್ಕಂತೆ ವಾತವರಣ ಸೃಷ್ಠಿಸಿ, ನಾಟಕೀಯತೆಗಿಂತ ನೈಜತೆಯನ್ನು ತುಂಬುವುದು. ಜಗತ್ತಿನೆಲ್ಲೆಡೆ, ಜೀನ್ ರೆನಾಯ್ರ್, ವಿಟ್ಟೊರಿಯಾ ಡಿ ಸಿಕಾರನ್ನು ನಿಯೋರಿಯಲಿಂನ ಪ್ರವರ್ತಕರೆಂದು ಗುರುತಿಸುತ್ತಾರೆ. ಫ್ರಾನ್ಸ್‌ನ ಚಿತ್ರಪ್ರೇಮಿಗಳ ಒಂದು ಗುಂಪು ನಿಯೋರಿಯಲಿಸ್ಂನನ್ನು ಒಪ್ಪಿಕೊಳ್ಳಲಾಗಲಿಲ್ಲ. ಸಿನಿಮಾ ಇರುವುದು ಪ್ರೇಕ್ಷಕನ ನಂಬುಗೆಗಳನ್ನು ಒಡೆದು, ಹೊಸ ಸತ್ಯವನ್ನು ಕಟ್ಟಿಕೊಡಲೇ ಹೊರತು ಕೇವಲ ನೈಜತೆಯನ್ನು ಪ್ರತಿಫಲಿಸಲು ಅಲ್ಲ ಎಂಬುದು ಈ ಗುಂಪಿನ ವಾದ. ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋ (François Truffaut), ಜೀನ್ ಲೂಕ್ ಗೊದಾರ್‍ಡ್, ಕ್ಲೌಡ್ ಚಾರ್ಬೆಲ್, ಜಾಕ್ವೆಸ್ ರಿವಟ್ಟೆ ಈ ಗುಂಪಿನ ಪ್ರಮುಖ ಸಿನಿಮಾ ನಿರ್ದೇಶಕರು. ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋನ The400blows“ದಿ 400 ಬ್ಲೋಸ್” (1959) ನಿಂದ ಆರಂಭವಾದ ಹೊಸ ಚಿಂತನೆಯ, ಪ್ರಯೋಗಾತ್ಮಕ ಸಿನಿಮಾದ ಕಾಲಘಟ್ಟವನ್ನು ’ಹೊಸಅಲೆ’ ಅಥವಾ ’ನ್ಯೂವೇವ್ ಸಿನಿಮಾ’ ಎಂದು ಕರೆಯಲಾಯಿತು. ಈ ಹೊಸ ಅಲೆಯ ನಿರ್ದೇಶಕರ ಸಿನಿಮಾಗಳು ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತಾ, ಸಣ್ಣ ಮಗುವಿನಿಂದಿಡಿದು ಕಮ್ಯೂನಿಸ್ಟ್ ಸಿದ್ಧಾಂತ-ಚಳುವಳಿಯ ಭಾಷಣದವರೆಗೆ ಎಲ್ಲಾ ರೀತಿಯ ವಿಭಿನ್ನ ದೃಶ್ಯಗಳನ್ನು-ಕಥನಗಳನ್ನು ಒಳಗೊಳ್ಳುತ್ತವೆ. ನಿಯೋರಿಯಲಿಸ್ಂ ಬಹಳ ಸುಲಭವಾಗಿ ಹಾಲಿವುಡ್ ಸಿನಿಮಾದ ಸರಕಾಗಿಬಿಟ್ಟಿತು. ಆದರೆ ನ್ಯೂ ವೇವ್ ಸಿನಿಮಾಗಳು ಹಾಲಿವುಡ್‌ನ ಅಡ್ಡಾದಿಡ್ಡಿ ಸಿನಿಮಾಕರ್ತರಿಗೆ ಪ್ರತ್ಯುತ್ತರ-ಪಾಠವಾಗಿಬಿಟ್ಟಿತು.

ಜೈಲಿನಲ್ಲಿ ಕೊಳೆಯುತಿದ್ದ ಹದಿಹರೆಯದ ಫ್ರಾಂಕೊಸ್ ರೋಲ್ಯಾಂಡ್ ಟ್ರೋಫೋ, ಪ್ರಪಂಚದ ಅಗ್ರಮಾನ್ಯ ಸಿನಿಮಾಕಾರನಾಗಿ ಬೆಳದದ್ದು ಒಂದು ರೋಚಕ ಕಥೆ. ನಿರ್ದೇಶಕ, ನಟ, ನಿರ್ಮಾಪಕ ಮತ್ತು ಕಥೆಗಾರ ಟ್ರೋಫೋನ ದುರ್ಗಮ ಬಾಲ್ಯವೇ ಆತನ ಅನೇಕ ಸಿನಿಮಾದ ಮುಖ್ಯ ಜೀವಾಳ. ಟ್ರೋಫೋನ ತಾಯಿಯ ಬಸುರಿಯಾಗಿದ್ದಾಗ, ರೋಲ್ಯಾಂಡ್ ಎಂಬವವ ಆಕೆಯ ಎರಡನೇ ಗಂಡನಾಗುತ್ತಾನೆ. ಮಲತಂದೆಯಾದರೂ ಟ್ರೋಫೋನನ್ನ ಆದರದಿಂದ ಕಾಣುತ್ತಾನೆ ರೋಲ್ಯಾಂಡ್. ಬಹುಶಃ ಈ ಕಾರಣಕ್ಕಾಗಿಯೇ ಏನೋ ಟ್ರೋಫೋನ ಅನೇಕ ಸಿನಿಮಾಗಳಲ್ಲಿ ತಾಯಿಯಿಲ್ಲದ ನಾಯಕ ಅಥವಾ ತಾಯಿ ಪ್ರೀತಿಯ ಕನವರಿಕೆಯ ಪಾತ್ರಗಳು ಕಾಣಸಿಗುತ್ತವೆ. ಮನೋವೈಜ್ಞಾನಿಕವಾಗಿ ಇದೊಂದು ಭೂತದಲ್ಲಿ ನರಳುವ ಖಾಯಿಲೆ. ಭೂತದಲ್ಲಿ ಸಿಗದ ಕನವರಿಕೆ ವರ್ತಮಾನದಲ್ಲಿ ಅನೇಕ ರೀತಿ ವ್ಯಕ್ತವಾಗುವುದಂತೆ. ಟ್ರೋಫೋ ’ಸ್ಮಾಲ್ ಚೇಂಜ್ (1976)’ ಸಿನಿಮಾದಲ್ಲಂತೂ ಎಲ್ಲ ರೀತಿಯ ತಾಯಿಯನ್ನು ಬಿಂಬಿಸುತ್ತಾನೆ. ಶಾಲೆಗೆ ಹೋಗುವ ಮಗನನ್ನು ಪ್ರತಿದಿನ ಹೊಡೆದು, ಹೇಗಾದರೂ ಸರಿ ಸಾರಾಯಿ ಸಂಪಾದಿಸಿ ತರುವಂತೆ ಮಾಡುವ ತಾಯಿಯೂ ಕೂಡ ಈ ಸಿನಿಮಾದಲ್ಲಿ ಬರುತ್ತಾಳೆ. ಚಿತ್ರದ ಕೊನೆಯಲ್ಲಿ ಆಕೆ ಜೈಲು ಸೇರಿ, ಕಳ್ಳತನವನ್ನು ರೂಢಿಸಿಕೊಂಡ ಹುಡುಗನನ್ನು ಸಮಾಜ ಕಲ್ಯಾಣ ಇಲಾಖೆ ಓದಿಸುತ್ತದೆ.

ತನ್ನ ಬಾಲ್ಯದ ಕಹಿಯಿಂದ ಪೋಲಿಯಾದ ಟ್ರೋಫೋ, ಮುಂದೆ ಇಷ್ಟವಿಲ್ಲದ ಫ್ರೆಂಚ್ ಸೇನೆಯನ್ನು ಸೇರಿ, ಎರಡು ವರ್ಷಗಳ ಕಾಲ ನಿರಂತರವಾಗಿ ಅಲ್ಲಿಂದ ಕಂಬಿ ಕೀಳುವ ಪ್ರಯತ್ನದಲ್ಲಿದ್ದಾಗ ಜೈಲುವಾಸ ಅನುಭವಿಸಬೇಕಾಗುತ್ತದೆ. ಆಗ, ಆಂದ್ರೆ ಬಾಝಿನ್ ಎಂಬ ಮಹಾನ್ ಸಿನಿಮಾ ವಿಮರ್ಶಕನಿಂದಾಗಿ ಟ್ರೋಫೋ ಕ್ರಿಮಿನಲ್ ಕೇಸ್‌ನಿಂದ ಮುಕ್ತನಾಗುತ್ತಾನೆ. ಜೊತೆಗೆ ಆರ್ಥಿಕವಾಗಿ ಸದೃಢವಾಗಲು ಪತ್ರಕರ್ತನಾಗಿ ಕೆಲಸವೊಂದು ದೊರೆಯುತ್ತದೆ. ಬಾಝಿನ್‌ನ ’ಆಯ್ಟ್‌ರ್ ಸಿದ್ಧಾಂತ’ ಸಿನಿಮಾದ ಇತಿಹಾಸದಲ್ಲಿ ಓದಲೇಬೇಕಾದ ಮುಖ್ಯ ಸಿದ್ಧಾಂತ. ಅಕಿರೋ ಕುರುಸೋವಾ ಅಥವಾ ಜೀನ್ ರೇನಾಯ್ರ್‌ರಂಥವರ ಸಿನಿಮಾಗಳು ನಿರ್ದೇಶಕರ ಸಿನಿಮಾವಾಗಿ ಹೇಗೆ ಭಿನ್ನವಾಗಿ ನಿಲ್ಲುತ್ತವೆ ಎಂಬ ಅಂಶವನ್ನು ಗಮನಿಸಿದರೆ ’ಆಯ್ಟ್‌ರ್ ಸಿದ್ಧಾಂತ’ ಅರ್ಥವಾಗುತ್ತದೆ. ಸಿನಿಮಾವೆಂಬುದು ನಿರ್ದೇಶಕನ ಮಾಧ್ಯಮ ಎಂಬ ಪ್ರಬಲ ಅಂಶವನ್ನೊಳಗೊಂಡ ಈ ಸಿದ್ಧಾಂತ ಮುಂದೆ François_Truffaut_(1965)ಟ್ರೋಫೋ, ಗೊದಾರ್‍ಡ್ ನಿರ್ದೇಶಕರಿಂದ ಇನ್ನೂ ಶ್ರೀಮಂತವಾಗುತ್ತದೆ. ಬಾಝಿನ್‌ರ ಒಲವಿನಿಂದ ಟ್ರೋಫೋ ಸಿನಿಮಾ ಪತ್ರಿಕೆಯಾದ ’ಕಹೇರ್‍ಸ್ ದು ಸಿನಿಮಾ’ದಲ್ಲಿ ವಿಮರ್ಶಕನಾಗಿ ಮುಂದೆ ಅದೇ ಪತ್ರಿಕೆಯ ಸಂಪಾದಕನೂ ಆಗುತ್ತಾನೆ. ಇದೇ ಪತ್ರಿಕೆ ಹಲವಾರು ’ನ್ಯೂ ವೇವ್’ ಸಿನಿಮಾಕರ್ತರ ಬೌದ್ಧಿಕ ಮೂಲವಾಗುತ್ತದೆ. ವಿಮರ್ಶಕನಾಗಿ ಟ್ರೋಫೋ ಯಾವ ಮಟ್ಟಕ್ಕೆ ಪ್ರಸಿದ್ಧಿಯಾಗುತ್ತಾನೆ ಎಂದರೆ, ಈತನ ಎರಡು ಸಾಲು ವಿಮರ್ಶೆ, ಸಿನಿಮಾವೊಂದರ ಹಣಬರಹವನ್ನೇ ಬದಲಾಯಿಸುವಷ್ಟು ಖ್ಯಾತಿ ಪಡೆಯುತ್ತಾನೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ವಿರೋಧಿಗಳನ್ನೂ ಸಂಪಾದಿಸುತ್ತಾನೆ.

ಫ್ರಾನ್ಸ್‌ನಲ್ಲೇ ನಡೆಯುವ ಕ್ಯಾನ್ಸ್ ಚಲನಚಿತ್ರೋತ್ಸವಕ್ಕೆ 1958 ರಲ್ಲಿ ಆಹ್ವಾನಿಸದ ಏಕೈಕ ಪತ್ರಕರ್ತನೆಂದರೆ ಟ್ರೋಫೋ. ಅಷ್ಟೊತ್ತಿಗಾಗಲೇ 30 ರ ಹಾಸುಪಾಸಿನಲ್ಲಿದ್ದ ಟ್ರೋಫೋ, ವಿಮರ್ಶಿಸುತ್ತಲೇ ಸ್ವತಃ ತಾನೇಕೆ ಸಿನಿಮಾದಲ್ಲಿ ಒಂದು ಕೈ ನೋಡಬಾರದು ಎಂದು ತೀರ್ಮಾನಿಸುತ್ತಾನೆ. 1955-57ರ ನಡುವೆ ’ಉನ್ ವಿಸಿಟೆ’ ಮತ್ತು ’ಲೆಸ್ ಮಿಸ್‌ಟೋನ್ಸ್’ ಎಂಬ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾನೆ. ಇದೇ ಸಮಯದಲ್ಲಿ ಕಾಕತಾಳೀಯವಾಗಿ ಫ್ರಾನ್ಸ್‌ನ ಅತೀ ದೊಡ್ಡ ಸಿನಿಮಾ ವಿತರಕನ ಮಗಳಾದ ಲೈನ್ ಮಾರ್ಗೈನ್‌ಸ್ಟರ್‍ನ್‌ಳನ್ನು 1957ರಲ್ಲಿ ವರಿಸುತ್ತಾನೆ. ಹಾಗಾಗಿ 1965 ರ ಸಂಸಾರಿಕ ಜೀವನ ಹದಗೆಡುವ ಹಂತದವರೆಗೆ ಈತನ ಚಿತ್ರಗಳಿಗೆ ನಿರ್ಮಾಣದ ಕೊರತೆ ಇರಲಿಲ್ಲ. ಮುಂದೆ ಆತನ ಬಹುತೇಕ ನಟಿಯರೊಂದಿಗೆ ಕೆಲಕಾಲ ಬದುಕಿದ್ದನ್ನು ಹೊರೆತುಪಡಿಸಿ ಮತ್ತೆ ವಿವಾಹವಾಗಲಿಲ್ಲ. ವಿವಾಹ ಜೀವನ ಮುರಿಯುವಷ್ಟೊತ್ತಿಗೆ 400 ಬ್ಲೋಸ್ (1959), ಶೂಟ್ ದಟ್ ಪಿಯನೋ ಪ್ಲೇಯರ್ (1960), ಜೂಲ್ಸ್ ಅಂಡ್ ಜಿಮ್ (1962), ಫ್ಯಾರನ್‌ಹೀಟ್ 451 (1965) ಚಿತ್ರಗಳ ಮೂಲಕ ಪ್ರಖ್ಯಾತಿ ಗಳಿಸಿರುತ್ತಾನೆ. ಮೊದಲ ಸಿನಿಮಾ 400 ಬ್ಲೋಸ್, ಬಾಲಾಪರಾಧಿಯಾಗುವ ಹುಡುಗನೊಬ್ಬನ ಕಥೆ. ತನ ನಿಜ ಜೀವನದಂತೆ ಚಿತ್ರದಲ್ಲೂ ತಾಯಿಗೆ ಎರಡನೇ ಗಂಡನಿರುತ್ತಾನೆ. ತಾಯಿಗಿಂತ, ಮಲತಂದೆಯೇ ಆತ್ಮೀಯವಾಗಿರುತ್ತಾನೆ. ಶಾಲೆಯಿಂದ ತಪ್ಪಿಸಿಕೊಂಡು ಕಳ್ಳತನ, ವೇಶ್ಯೆಯರ ಓಣಿಯಲ್ಲಿ ಓಡಾಡುವಂತಾಗುತ್ತದೆ. 1976 ರ ’ಸ್ಮಾಲ್ ಚೇಂಜ್’ ಸಿನಿಮಾ ಕೂಡ ಇದರ ಪಡಿಯಚ್ಚಿನಂತೆ ಇದ್ದರೂ, ಇದು ದೊಡ್ಡ ಬಜೆಟ್‌ನಿಂದಗಿ, ಬಣ್ಣದ ಸಿನಿಮಾವಾಗಿ ರೂಪುಗೊಂಡಿದೆ. ಅಪಾರ್ಟ್‌ಮೆಂಟಿನೊಳಗಿನ ಕಾಗೆಗೂಡಿನ ಸಂಸಾರ, ಚಿಕ್ಕವರ ಅವಶ್ಯಕತೆಗಳು-ದೊಡ್ಡವರ ಸಣ್ಣತನಗಳು, ಹದಗೆಟ್ಟ ಶಾಲೆಗಳೂ ಹೀಗೆ ಅನೇಕ ವಸ್ತುಗಳು ಇಣುಕುವ ’ಸ್ಮಾಲ್ ಚೇಂಜ್’ ಮಕ್ಕಳಿಗೆ ಚುನಾವಣಾ ಹಕ್ಕಿರಬೇಕೆಂಬ ನೀತಿಯನ್ನು ಪ್ರತಿಪಾದಿಸುತ್ತದೆ. ಮಕ್ಕಳಿಗೆ ಈ ಹಕ್ಕು ಕೊಟ್ಟರೆ ತಮಗೆ ಬೇಕಾದ ಶಾಲೆ, ಕಾಲೇಜು, ಮೈದಾನ, ಅಧ್ಯಯನದ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವತಂತ್ರ ದೊರೆಯುತ್ತದೆ ಎನ್ನುತ್ತಾನೆ ಟ್ರೋಫೋ.

1965 ರ ’ಫ್ಯಾರನ್‌ಹೀಟ್ 451’ ಟ್ರೋಫೋನ ಇದರಿಂದಿನ ಮತ್ತು ಮುಂದಿನ ಸಿನಿಮಾಗಳಿಗೆ ಒಂದು ಗೆರೆ ಎಳೆಯುತ್ತದೆ. ಮುಂದಿನ ಬಹುತೇಕ ಸಿನಿಮಾಗಳು ಟ್ರೋಫೋನ ಸಾಂಸಾರಿಕ ಅಂಶಗಳನ್ನು ಒಳಗೊಂಡಿದ್ದರೆ, ಹಿಂದಿನ ಸಿನಿಮಾಗಳು ಬಾಲ್ಯದಿಂದ ಪ್ರೇರಿತವಾಗಿವೆ. ’ಫ್ಯಾರನ್‌ಹೀಟ್ 451’, ಪುಸ್ತಕ ಪ್ರಿಯರ ಮತ್ತು ಪುಸ್ತಕವನ್ನು ನಾಶ ಮಾಡಲು ಸಿದ್ಧಪಡಿಸಿದ ವಿಶೇಷ ತಂಡದ ನಡುವೆ ನಡೆಯುವ ಪ್ರಹಸನದ ಕಾಲ್ಪನಿಕ ಚಿತ್ರ. Fahrenheit451ವ್ಯಕ್ತಿಯ ಆಲೋಚನೆಯನ್ನು ವಿಸ್ತರಿಸುವ ಪುಸ್ತಕಗಳು ಪ್ರಭುತ್ವದ ವಿರೋಧಿ ಎಂದು ಪರಿಗಣಿಸಿ, ಪುಸ್ತಕವನ್ನು ಓದು ಮತ್ತು ಸಂಗ್ರಹಿಸುವುದು ಅಪರಾಧವಾಗಿರುವ ದೇಶದಲ್ಲಿ, ಪುಸ್ತಕಗಳನ್ನು ಮುಂದಿನ ಪೀಳಿಗೆಗೆ ಕದ್ದು, ಸಂಗ್ರಹಿಸಿ, ಓದಲು ಕೊಡುವ ಗುಂಪೊಂದನ್ನು ಪ್ರಧಾನ ಪಾತ್ರಗಳು ಪ್ರವೇಶಿಸುವುರೊಂದಿಗೆ ಸಿನಿಮಾ ಮುಗಿಯುತ್ತದೆ. ಹಿಟ್ಲ್‌ರ್‌ನ ಅಥವಾ ಮುಸಲೋನಿ ಕಾಲದಲ್ಲಿ ಅಲ್ಲಲ್ಲಿ ಇಂಥಹ ಪ್ರಯತ್ನಗಳು ನಡೆದಿರುಬಹುದಾದ ನೆನಪನ್ನು ಮರುಕಳಿಸುತ್ತವೆ.
ದ ಬ್ರೈಡ್ ವೋರ್ ಬ್ಲಾಕ್ (1968), ದಿ ಸ್ಟೋಲನ್ ಕಿಸೆಸ್ (1968), ಮೆಸಿಸಿಪ್ಪಿ ಮೆರ್‌ಮೇಯ್ಡ್, ಟೂ ಇಂಗ್ಲೀಷ್ ಗರ್ಲ್ಸ್(1971), ಡೇ ಫಾರ್ ನೈಟ್ (1973), ದ ವುಮನ್ ನೆಕ್ಟ್ ಡೋರ್ (1981), ಬೆಡ್ ಅಂಡ್ ಬೋರ್‍ಡ್, ಕಾನ್ಪೀಡೆನ್ಷಿಯಲಿ ಯುವರ್‍ಸ್ ಇನ್ನಿತರ ಚಿತ್ರಗಳು ಟ್ರೋಫೋಗೆ ಆಸ್ಗರ್ ಸೇರಿದಂತೆ ಜಾಗತಿಕವಾದ ಬಹುತೇಕ ಪ್ರಶಸ್ತಿಗಳನ್ನು ತಂದುಕೊಟ್ಟ ಸಿನಿಮಾಗಳು. ಇಲ್ಲಿನ ಬಹುತೇಕ ಚಿತ್ರಗಳು ಮಾನವನ ಪಂಚೇಂದ್ರಿಯಗಳ ಅಳತೆ ಮೀರಿದ ವಿಚಾರಗಳನ್ನು ಗ್ರಹಿಸಲೆತ್ನಿಸುತ್ತವೆ. ಸಿನಿಮಾ ತಯಾರಿಸಲು ಹೋದ ಗುಂಪೊಂದರ ವೈಯಕ್ತಿಕ ಸಮಸ್ಯೆಗಳು (ಡೇ ಫಾರ್ ನೈಟ್), ವೈವಾಹಿಕ ಜೀವನದಾಚೆಗಿನ ಸಂಬಂಧದಿಂದ ತನ್ನ ಜೀವನದಲ್ಲಿ ತಂದೊಡ್ಡುವ ಅನಾಹುತಗಳು… ಹೀಗೆ ಮೇಲಿನ ಚಿತ್ರಗಳ ತಿರುಳು ಭಿನ್ನ ಮತ್ತು ಅಲ್ಲಲ್ಲಿ ಟ್ರೋಫೋನ ವೈಯಕ್ತಿಕ ಜೀವನದ ಮಜಲುಗಳೇನೋ ಎನ್ನುವಂತಿವೆ. ’ದ ವುಮನ್ ನೆಕ್ಟ್ ಡೋರ್’ನಲ್ಲಿ ಕಾಮದ ನೆರಳಲ್ಲಿ ಬೆವರು ಸುರಿಸುವ ಅನ್ಯವಿವಾಹಿತ ಜೋಡಿ ಸಾರ್ವಜನಿಕ ಮುಗ್ಧತೆ ಮತ್ತು ಅಪರಾಧಿ ಮನೋಭಾವದಲ್ಲಿ ನರಳಿ, ಕೊನೆಗೆ ಕಾಮದ ತುತ್ತತುದಿಯಲ್ಲಿರುವ ಘಳಿಗೆಯಲ್ಲಿ ಒಬ್ಬರ ಕೊಲೆ ಮತ್ತೊಬ್ಬರ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾಗುವ ದೃಶ್ಯ ಸರಮಾಲೆಗಳು ಎಂಥವರನ್ನೂ ಅಲುಗಾಡಿಸಿಬಿಡುತ್ತವೆ.

ಟ್ರೋಫೋನ ಹಿಂದಿನ ಸಿನಿಮಾ ’ದಿ ಸಾಫ್ಟ್ ಸ್ಕಿನ್’, ಜನಮೆಚ್ಚುಗೆಯ ಬುದ್ಧಿಜೀವಿಯೊಬ್ಬ ಯುವತಿಯ ಪ್ರೇಮಪಾಶದಲ್ಲಿ ತನ್ನ ಪತ್ನಿಯಿಂದ ದೂರಾಗ ಬಯಸುತ್ತಾನೆ. ಇನ್ನೇನೋ ವಿಚ್ಛೇದನ ತೆಗೆದುಕೊಂಡು ಮದುವೆಯಾಗುವ ಹೊತ್ತಿನಲ್ಲಿ, ಆ ಯುವತಿಗೆ ಈ ಸಂಬಂಧ ಸರಿಹೊಂದುವುದಿಲ್ಲ ಎನಿಸಿ ದೂರಾಗುತ್ತಾಳೆ. ನಾಯಕನಿಗೆ ತನ್ನ ತಪ್ಪಿನ ಅರಿವಾಗಿ ಪರಿತಪಿಸಿ, ಹೆಂಡತಿಯಲ್ಲಿ ಕ್ಷಮೆಯಾಚಿಸಲು ತೀರ್ಮಾನಿಸುತ್ತಾನೆ. ಗಂಡನನ್ನು ತನ್ನ ರಕ್ತದ ಕಣಕಣದಲ್ಲೂ ಪ್ರೀತಿಸಿದ ಆಕೆಗೆ, ಆತ ಇನ್ನೊಂದು ಹೆಣ್ಣಿಗಾಗಿ ತನ್ನನ್ನು ದೂರಮಾಡುತ್ತಿರುವ ವಿಷಯ ಅರಗಿಸಿಕೊಳ್ಳಲಾಗುವುದಿಲ್ಲ. ಮನೆಗೆ ಬಂದು ದೊಡ್ಡದೊಂದು ಗನ್‌ನ್ನು ತನ್ನ ಉದ್ದನೆಯ ಕೋಟ್‌ನೊಳಗೆ ಇರಿಸಿಕೊಂಡು, ಮಗುವನ್ನು ಸ್ನೇಹಿತೆಯ ಮನೆಯಲ್ಲಿ ಬಿಟ್ಟು ಹೊರಡುತ್ತಾಳೆ. ಮತ್ತೆ ಹೆಂಡತಿಗೆ ಮುಖ ತೋರಲು ಅಳುಕುವ ನಾಯಕ, ಅಂಜಿಕೆಯಿಂದಲೇ ಹೋಟೆಲ್‌ವೊಂದರಿಂದ ಹೆಂಡತಿಗೆ ಕರೆಮಾಡಲು ಯತ್ನಿಸಿದರೂ ಆಕೆ ಮಾತಿಗೆ ಸಿಗುವುದಿಲ್ಲ. ಇವನನ್ನೇ ಹುಡುಕಿಕೊಂಡು ಹೋಗಿರುತ್ತಾಳೆ. ಏನೂ ತೋಚದೆ, ಹೋಟೆಲ್‌ವೊಂದರಲ್ಲಿ ಕುಳಿತಿರುವ ಗಂಡನಲ್ಲಿಗೆ ಬಂದು, ಒಂದು ಮಾತಾಡುವ ಮೊದಲೇ ಗನ್ ತೆಗೆದು ಗುಂಡು ಹಾರಿಸಿಬಿಡುತ್ತಾಳೆ. ಅಲ್ಲೇ ನೆಲದ ಮೇಲೆ ನಡುಗುತ್ತಾ ನಿಶ್ಯಬ್ಧವಾಗಿ ಕುಳಿತುಕೊಳ್ಳುತ್ತಾಳೆ. ಅತ್ತ ಪೋಲಿಸ್ ಸೈರನ್ ಸದ್ದು ಮಾಡುತ್ತದೆ. ಪ್ರೀತಿಸುವ ವ್ಯಕ್ತಿ ಕೊಲ್ಲುವ ಹಂತಕ್ಕೆ ಹೋಗುವ ಈ ದೃಶ್ಯ ಎಂಥವರ ಭಾವನೆಗಳನ್ನು ಒಮ್ಮೆ ವಿಮರ್ಶೆಗೆ ಒಳಪಡಿಸುತ್ತದೆ.

ಈ ಮೇಲಿನ ಚಿತ್ರಗಳು ಕೊಂಚ ಆಟೋಬಯೋಗ್ರಾಫಿಕಲ್ ಎನಿಸಿ, ಪ್ರಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಪಡೆದಿದ್ದ ಗೊದಾರ್‍ಡ್ ಗೆಳೆಯ ಟ್ರೋಫೋನೊಂದಿಗೆ ಜಗಳವಾಡಿಕೊಳ್ಳುತ್ತಾನೆ. ನಿನ್ನ ಸಿನಿಮಾಗಳು ಸಿನಿಮಾವೇ ಅಲ್ಲವೆನ್ನುವ ಮಟ್ಟಕ್ಕೆ ಅಲ್ಲಗೆಳೆಯುತ್ತಾನೆ. ಗೊದಾರ್‍ಡ್‌ನ ಮೊದಲ ಸಿನಿಮಾ ’ಬ್ರೆತ್‌ಲೆಸ್’ನ ಸ್ಕ್ರಿಪ್ಟ್ ಟ್ರೋಫೋನದೇ ಆಗಿದ್ದರೂ ಮುಂದಿನ ಸಿನಿಮಾಗಳಲ್ಲಿ ಇಬ್ಬರೂ ಭಿನ್ನ ಹಾದಿಯನ್ನೇ ಹಿಡಿದರು. ಗೊದಾರ್‍ಡ್ ಪ್ರಯೋಗಗಳು ಹಾಲಿವುಡ್ಡಿನ ತಿಕ್ಕಲುತನಕ್ಕೆ ಪ್ರತ್ಯುತ್ತರವಾದರೂ ಪ್ರಯೋಗತ್ಮಾಕ ಮಟ್ಟದಿಂದ ಮುಂದುವರಿದು ಜನರ ಸಿನಿಮಾ ಆಗಲಿಲ್ಲ. ಗೋದಾರ್‍ಡ್‌ಗೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸಿನಿಮಾ ಮಾಡುವುದೇ ಕಷ್ಟವಾಗಿಬಿಟ್ಟಿತು. ಇದೇ ಗೊದಾರ್‍ಡ್ ಅಮೆರಿಕಾದ್ಯಂತ ಸಂಚರಿಸಿ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಿನಿಮಾದ ಭ್ರಾಮಕತೆ ಬಗ್ಗೆ ಉಪನ್ಯಾಸ ನೀಡಿ ಹಣ ಸಂಗ್ರಹಿಸಿ ಸಿನಿಮಾ ಮಾಡಲೆತ್ನಿಸಿದ. ಆದರೂ ಕ್ರಮೇಣ ಗೊದಾರ್‍ಡ್‌ನ ಸಿನಿಮಾಗಳು ಸೋಲುತ್ತಲೇ ಬಂದು, ಇಂದು ಗೋದಾರ್‍ಡ್ ಬದುಕಿದ್ದಾನಾ ಅಥವಾ ಸತ್ತಿದ್ದಾನಾ? ಎಂಬಷ್ಟು ಅಗೋಚರವಾಗಿಬಿಟ್ಟಿದ್ದಾನೆ. ಆದರೆ ಇದೇ ಗೋದಾರ್‍ಡ್ ತನ್ನ ಇರುವಿಕೆಯನ್ನು ಕಳೆದ ವರ್ಷ ಒಂದು ಸಿನಿಮಾವನ್ನು ತಯಾರಿಸಿ ಬಿಡುಗಡೆ ಮಾಡುವ ಮೂಲಕ ತೋರಿದರೂ, ಅದು ಜನಪ್ರಿಯವಾಗಲಿಲ್ಲ. ಗೊದಾರ್‍ಡ್ ಸಿನಿಮಾ ಆತನೇ ಹೇಳುವಂತೆ ರಾಜಕೀಯ ಪ್ರಬಂಧದಂತೆ. ಆದ್ದರಿಂದ ಪ್ರತೀ ಅಕ್ಷರ, ದೃಶ್ಯವನ್ನೂ ಸೂಕ್ಷ್ಮವಾಗಿ ನೋಡಿದರೇನೇ ಅರ್ಥವಾಗುವುದು.

ಬಹುಶಃ ಟ್ರೋಫೋ ಸಿನಿಮಾದ ಆರ್ಥಿಕ ಕಾರಣಗಳಿಗಾಗಿ ಭಿನ್ನ ಹಾದಿಯನ್ನು ತುಳಿದ ಎನ್ನಿಸುತ್ತದೆ. ಇಲ್ಲದಿದ್ದರೆ ಗೋದಾರ್‍ಡ್‌ನಂತೆಯೇ ಟ್ರೋಫೋನೋ ಆಗಿಬಿಡುತ್ತಿದ್ದನೇನೊ. 52 ವಸಂತಗಳನ್ನು ಕಳೆದು ಮರೆಯಾದ ಟ್ರೋಫೋ 20 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ ಮತ್ತು ಇತರರ ಸಿನಿಮಾಗಳಿಗೆ ಬರವಣಿಗೆಯನ್ನೂ ನಿರಂತರವಾಗಿ ಮುಂದುರೆಸಿದ್ದ. ಟ್ರೋಫೊನ ಸಿನಿಮಾಗಳು ಒಮ್ಮೆಮ್ಮೆ ಆತನ ಇತರೆ ಚಿತ್ರಗಳ ಪುನಾರವರ್ತಿ ಎನಿಸಿದರೂ, ನೋಡಲೇಬೇಕಾದ ಸಿನಿಮಾಗಳೆಂದರೆ ತಪ್ಪಿಲ್ಲ. ಎಂಥಹ ಭಾವನೆಗಳನ್ನೂ ನಾಟಕೀಯವಲ್ಲದ ಸ್ಮಿತಪ್ರಜ್ಞೆಯಿಂದ ತೋರಿಬಿಡುವ ಟ್ರೋಫೋನ ಮೊಂಟ್ಯಾಜ್‌ಗಳು ಪ್ರೇಕ್ಷಕನ ಮೇಲೆ ಬೀರುವ ಪ್ರಭಾವ ಅಗಾಧವಾದದ್ದು. ಸಿನಿಮಾ ನೋಡಿದ ಅನೇಕ ದಿನಗಳೂ ಕೂಡ ಕಳೆದರೂ ಆತನ ದೃಶ್ಯ ಜಗತ್ತಿನಿಂದ ಆಚೆ ಬರಲು ಕಷ್ಟವಾಗಿಬಿಡಬಹುದು.

ಅಸಹಾಯಕರಿಗೆ ನ್ಯಾಯ ಎಲ್ಲಿದೆ?


– ರೂಪ ಹಾಸನ


 

ಮರೆಯಬೇಕೆಂದರೂ ಆ ಚಿತ್ರವನ್ನು ಮರೆಯಲಾಗುತ್ತಿಲ್ಲ. ತುಂಬಿದ ಬಸಿರಿನ ಪುಟ್ಟ ಹುಡುಗಿ…… ಆಕಾಶದತ್ತ ದೃಷ್ಟಿ ನೆಟ್ಟು ತನ್ನನ್ನೇ ಮರೆತು ವಶೀಕರಣಗೊಂಡವಳಂತೆ ಕುಳಿತಿದ್ದ ಆ ಗೊಂಬೆಯಂತಾ ಹುಡುಗಿಯ ನೆನಪು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ನಾನು, ನನ್ನ ಗೆಳತಿ ಯಾವುದೋ ಕೆಲಸಕ್ಕೆಂದು ಹೋದವರು, ಅದನ್ನು ಮುಗಿಸಿ ಬರುವಾಗ ಈ ಪುಟ್ಟ ಪುಟ್ಟ ಗುಡಿಸಿಲಿನಾಕಾರದ ಚಿಂದಿ ಬಟ್ಟೆಯ ಗುಡಾರಗಳು ಕಾಣಿಸಿದ್ದವು. ಕುತೂಹಲದಿಂದ ಅದನ್ನು ನೋಡುತ್ತಾ ಬರುತ್ತಿರುವ ನಮಗೆ, ಅವಳು ಕಂಡಿದ್ದಳು!

ಇನ್ನೂ 12-13 ವಯಸ್ಸಿನ ಎಳೆಯ ಬಾಲೆ. ಆ ಗುಡಾರಗಳ ಮುಂದಿನ ಮರದ ನೆರಳಲ್ಲಿ ತನಗೂ ಈ ಲೋಕಕ್ಕೂ ಸಂಬಂಧವೇ ಇಲ್ಲವೆಂಬಂತೆ, ಅಕ್ಷರಶಃ ಕಲ್ಲಿನಂತೆ ಕುಳಿತಿದ್ದಳು. ಬಡಕಲು ದೇಹದಲ್ಲಿ, ಅವಳ ವಯಸ್ಸಿಗೆ ಮೀರಿ ಬೆಳೆದು ನಿಂತ ಅವಳ ಬಸಿರು ನಮ್ಮ ಕುತೂಹಲ ಕೆರಳಿಸಿತ್ತು. ಇಷ್ಟು ಚಿಕ್ಕ ಹುಡುಗಿಗೆ ಮದುವೆ… ಮಕ್ಕಳ…. ಜಂಜಾಟವೇ ಎಂದು ನೊಂದುಕೊಳ್ಳುತ್ತಿರುವಾಗಲೇ ಸ್ವಲ್ಪ ದೂರದಲ್ಲಿ ಮುದುಕನೊಬ್ಬ ಬೀಡಿ ಸೇದುತ್ತಾ ಕುಳಿತಿರುವುದು ಕಾಣಿಸಿತ್ತು.

ಮೆಲ್ಲಗೆ ಆ ಮುದುಕನ ಬಳಿ ಹೋಗಿ ನಿಂತಾಗ ಅವನು ಬೆಚ್ಚಿ ಬಿದ್ದಿದ್ದ. ಮೋಟು ಬೀಡಿಯನ್ನು ಆಚೆಗೆಸೆದು ‘ಏನ್ ಬೇಕ್ ತಾಯಿ?’ ಎಂದು ತೊದಲುತ್ತಾ ನುಡಿದಿದ್ದ. ‘ಇಷ್ಟು ಚಿಕ್ಕ ಹುಡುಗಿಗೆ ಮದ್ವೆ ಮಾಡಿದ್ದೀರಲ್ಲ? ಬಸುರಿ ಬೇರೆ?’ ಎಂದು ಪ್ರಶ್ನಿಸಿದ್ದೆವು. ಅದಕ್ಕೆ ಆ ಮುದುಕ ಹೇಳಿದ ಕಥೆ ನಮ್ಮನ್ನು ಬೆಚ್ಚಿಬೀಳಿಸಿತ್ತು.

ಬಳ್ಳಾರಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರಿಂದ ಗುಳೆ ಬಂದ ಹದಿನೈದು ಜನರ ಕುಟುಂಬ ಅದಾಗಿತ್ತು. ಬದುಕಿನ ದಾರಿ ಹುಡುಕುತ್ತಾ ಅವರು ಊರೂರು ಅಲೆಯುತ್ತಿದ್ದರು. ಹೀಗೇ ಒಂದೂರಿನ ಬಸ್ ನಿಲ್ದಾಣದಲ್ಲಿ ಮಲಗಿ, ರಾತ್ರಿ ಎಲ್ಲರೂ ಗಾಢ ನಿದ್ದೆಯಲ್ಲಿದ್ದ ಹೊತ್ತಿನಲ್ಲಿ ಈ ಹುಡುಗಿಯನ್ನು ಯಾರೋ ಪೋಕರಿಗಳು ಸದ್ದಿಲ್ಲದೇ ಹೊತ್ತೊಯ್ದು, child-rapeಭೀಕರವಾಗಿ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. ಅಂದಿನಿಂದ ಇವಳು ಸಂವೇದನೆಗಳೇ ಸತ್ತು ಹೋದ ಜೀವಚ್ಛವವಾಗಿದ್ದಳು. ಇದರೊಂದಿಗೆ ಆ ಹುಡುಗಿಯ ಬಸಿರು, ಕುಟುಂಬಕ್ಕೆ ಮತ್ತೊಂದು ಆತಂಕ ಸೃಷ್ಟಿಸಿತ್ತು.

‘ಅತ್ಯಾಚಾರ ಆಗಿದೆ ಅಂತಾ ಗೊತ್ತಾದ ತಕ್ಷಣ ಪೊಲೀಸ್ನೊರಿಗೆ ಕಂಪ್ಲೆಂಟ್ ಕೊಡ್ಬಾರ್‍ದಿತ್ತಾ ಅಜ್ಜಾ’ ಎಂದು ಪ್ರಶ್ನಿಸಿದ್ದಕ್ಕೆ ‘ಏನಂತಾ ಕೊಡನವ್ವ? ಅವರು ನೀವ್ಯಾರು? ಎಲ್ಲಿಂದ ಬಂದಿದ್ದೀರಾ? ಯಾತಕ್ಕೆ ಬಂದಿದ್ದೀರ? ಅಲ್ಯಾಕೆ ಮಲಗಿದ್ರಿ? ಅತ್ಯಾಚಾರ ಆಗಿದ್ದಕ್ಕೆ ಸಾಕ್ಷಿ ಏನು? ಅಂತೆಲ್ಲ ಕೇಳ್ತಾರೆ. ಏನ್ ಹೇಳಿದ್ರು ನಮ್ಮದೇ ತಪ್ಪು ಅಂತ ಸಾಧಿಸಿ ನಮ್ಮಂತ ಬಡವರ ಹತ್ರನೇ ದುಡ್ಡು ಕಿತ್ತತ್ತಾರೆ. ನಮಗೆ ಏನೂ ಅರ್ಥ ಆಗದೂ ಇಲ್ಲ. ಕಾನೂನೆಲ್ಲ ನಮ್ಮಂತವರಿಗಲ್ಲ ಬುಡಿ. ಉಳ್ಳವರಿಗೆ, ನಗರದವರಿಗೆ, ನಿಮ್ಮಂತ ವಿದ್ಯಾವಂತರಿಗೆ. ನಮಗೆ ಇವತ್ತೊಂದ್ ಊರು ನಾಳೆ ಒಂದ್ ಊರು. ಕೋರ್ಟು, ಕೇಸು ಅಂತ ಎಲ್ಲಿ ಅಲೆಯದು? ಅದಕ್ಕೆಲ್ಲ ದುಡ್ಡೆಲ್ಲಿಂದ ತರದು? ಇಂತವೆಲ್ಲ ನಮಗೆ ಮಾಮೂಲು. ದೇವರಿಟ್ಟಹಂಗ್ ಬದುಕು…..’ ಅಂತ ನಿಟ್ಟುಸಿರಿಟ್ಟ. ಆ ಹುಡುಗಿಯ ಸ್ಥಿತಿ ನೋಡಿ ನಮ್ಮ ಕಣ್ಣು ಮಂಜಾಗಿತ್ತು.

ಇವರ ಕಥೆಯನ್ನು ಕೇಳಿದ ನಮಗೆ ಖಂಡಿತ ಇವರು, ಈ ಹುಡುಗಿಗೆ ಹುಟ್ಟುವ ಮಗುವನ್ನು ನೋಡಿಕೊಳ್ಳಲಾರರು ಎಂದೆನಿಸಿತ್ತು. ಹೀಗೆಂದೇ ‘ಅಜ್ಜಾ ಈ ಹುಡುಗಿಗೆ ಹುಟ್ಟೋ ಮಗು ಏನ್ಮಾಡ್ತಿರಾ?’ ಎಂದು ಕೇಳಿದ್ದೆವು. ಅಜ್ಜಾ ನಿರ್ಭಾವುಕನಾಗಿ ‘ಎಲ್ಲಾದ್ರೂ ಬಿಸಾಕ್ತಿವಿ. ಇದೇ ಒಂದು ಹೊರೆ. ಇದನ್ನೇ ಸಾಕಕ್ಕಾಗ್ತಾ ಇಲ್ಲ. ಇನ್ನು ಆ ಮಗುನ ಏನು ಮಾಡೋದು?’ ಎಂದಿದ್ದ.

ತಕ್ಷಣ ನಾವು ‘ಅಯ್ಯೋ ಹಾಗ್ಮಾಡಬೇಡಿ ಅಜ್ಜಾ. ಆ ಹುಡುಗಿನ ಅವಳ ಹೆರಿಗೆ ಆಗುವವರೆಗೂ ಚೆನ್ನಾಗಿ ನೋಡಿಕೊಂಡು ಹುಟ್ಟುವ ಮಗುವಿಗೆ, ಹಾಗೂ child-rape-indiaಇವಳಿಗೆ ಒಂದು ನೆಲೆ ಮಾಡಬಹುದು. ನಾಳೆ ಎಲ್ಲಾ ವ್ಯವಸ್ಥೆ ಮಾಡಿಕೊಂಡು ಬರ್‍ತಿವಿ. ಇಲ್ಲೇ ಇರ್‍ತೀರ ಅಲ್ವಾ?’ ಎಂದು ಎಲ್ಲವನ್ನೂ ವಿವರವಾಗಿ ಹೇಳಿ ಅಜ್ಜನ ಮನವೊಲಿಸಿದ್ದೆವು.

‘ಇರ್‍ತಿವಿ. ಎಲ್ಲಾ ಏನೇನೋ ಕೆಲಸಕ್ಕೆ ಹೋಗವರೆ. ಬಂದ್ ಮೇಲೆ ಅವರಿಗೆಲ್ಲ ಹೇಳ್ತಿನಿ’ ಎಂದ ತಾತ. ನಾವು ಆ ಹುಡುಗಿಯನ್ನಿಡುವ ವ್ಯವಸ್ಥೆಗಾಗಿ ಆ ದಿನವೆಲ್ಲಾ ಸಿದ್ಧತೆ ನಡೆಸಿ, ಮಾರನೆ ದಿನ ಆ ಗುಡಾರಗಳಿದ್ದ ಜಾಗಕ್ಕೆ ಹೋದರೆ…… ಅಲ್ಲಿ ಯಾರೂ ಇರಲಿಲ್ಲ! ಅವರಿಗೆ ಬಹುಶಃ ಮತ್ತೆ ಮತ್ತೆ ಮೋಸ, ನೋವು, ಅವಮಾನ, ಹಿಂಸೆಯನ್ನು ಅನುಭವಿಸಿ ಈ ನಾಗರಿಕ ಪ್ರಪಂಚದ ಮೇಲೆಯೇ ಅಪನಂಬಿಕೆ ಮೂಡಿರಬೇಕು.

ಇದು ಒಂದು ಘಟನೆಯಷ್ಟೇ. ಎಲ್ಲಿಯೂ ಸುದ್ದಿಯಾಗದ, ಕಾನೂನು ವ್ಯವಸ್ಥೆಯ ಅಡಿಯಲ್ಲಿಯೂ ದಾಖಲಾಗದ ಹಲವಾರು ಅಪರಾಧಗಳು ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ಪೊಲೀಸ್, ಕೇಸು, ಕಾನೂನು ಎಲ್ಲದರಿಂದ ಹೊರತಾಗಿ ಮೋಸಕ್ಕೆ, ಅತ್ಯಾಚಾರಕ್ಕೆ, ದುರಾಚಾರಕ್ಕೆ ಒಳಗಾಗಿಯೂ ಎಲ್ಲಿಯೂ ದಾಖಲಾಗದಂತಹ ಇಂತಹ ಪ್ರಕರಣಗಳು ಸದ್ದಿಲ್ಲದೇ ಸುದ್ದಿಯಾಗದೇ ಸತ್ತು ಹೋಗುತ್ತವೆ. ಮೋಸ ಹೋದ ಮುಗ್ಧ ಜೀವಗಳು ಒಳಗೇ ಕುದಿಯುತ್ತಲೇ ಬದುಕು ಸವೆಸುತ್ತವೆ.

ಅಜ್ಜ ಹೇಳಿದಂತೆ ಸಂವಿಧಾನಬದ್ಧ ಹಕ್ಕು, ಕಾನೂನು, ಪೊಲೀಸ್ ವ್ಯವಸ್ಥೆ, ಎಲ್ಲವೂ ಉಳ್ಳವರಿಗೆ, ನಗರದವರಿಗೆ, ವಿದ್ಯಾವಂತರಿಗೆ ಮಾತ್ರ ಸೀಮಿತವಾಗಿಬಿಟ್ಟಿದೆಯೇ? ನಮ್ಮ ಸಮಾನತೆ, ಸ್ವಾತಂತ್ರ್ಯದ ಹಕ್ಕಿನ ಪ್ರತಿಪಾದನೆ, ಅದಕ್ಕಾಗಿ ನಡೆವ ಪ್ರತಿಭಟನೆ, ಹೋರಾಟಗಳೆಲ್ಲವೂ ಬಹುಸಂಖ್ಯಾತ ಬಡವರನ್ನು, ಶೋಷಿತರನ್ನು ಇನ್ನೂ ತಲುಪಲು ಸಾಧ್ಯವೇ ಆಗಿಲ್ಲವೇ? ಅಪರಾಧಿಗಳು ರಾಜಾರೋಷವಾಗಿ ಬೀದಿಯಲ್ಲಿ ತಿರುಗುತ್ತಿದ್ದಾರೆ. ದಮನಿತರು ಬಾಯಿಬಿಡಲಾಗದೇ ನಿತ್ಯ ಒಳಗೇ ಸಾಯುತ್ತಿದ್ದಾರೆ. ಸತ್ಯವೂ ಸದ್ದಿಲ್ಲದೇ ಸತ್ತುಹೋಗಿದೆ! ಬಡವರಿಗೆ ನ್ಯಾಯ ನೀಡುವವರು ಎಲ್ಲಿದ್ದಾರೆ? ಅಪರಾಧಿಗಳನ್ನು ಶಿಕ್ಷಿಸಲು ಪರ್ಯಾಯ ಮಾರ್ಗಗಳೇ ಇಲ್ಲವೇ? ಇವು ನಮ್ಮ ಒಳಗನ್ನು ಅಲುಗಾಡಿಸಿ ಕಾಡುತ್ತಿರುವ ಪ್ರಶ್ನೆಗಳು.

ಪೂತಾತ್ಮ-ಹೂತಾತ್ಮ ಹುತಾತ್ಮ- ಮಹಾತ್ಮ : ದ.ರಾ.ಬೇಂದ್ರೆಯವರ ಕವನ

– ದ.ರಾ.ಬೇಂದ್ರೆ

[“ಗಾಂಧಿ ಸಾವು ಮತ್ತು ಬೇಂದ್ರೆ ಕವನ” ಲೇಖನದಲ್ಲಿ ಚರ್ಚಿಸಿದ ಕವನದ ಪೂರ್ಣಪಾಠ ]


ಓ ಮಹಾತ್ಮ! ಶತಸಾಂವತ್ಸರಿಕಕ್ಕೆ
ಸತ್ಯ ವರದಿ ಮಾಡೋಣ
ನೀನು ಹೋದ ಮೇಲೆ, ನಾವು
ತಿನ್ನುವ ಭಿಕ್ಷೆ ಅನ್ನ, ಪರದೇಶಿ
ಬಳಸುವ ಕಳ್ಳ ಹೊನ್ನು, ಪರದೇಶಿ
ಸಿಂಗರಿಸುವ ಮಳ್ಳ ಹೆಣ್ಣು, ಪರದೇಶಿ
ಕಲಿಸುವ ಮಂತ್ರ, ಯಂತ್ರ, ತಂತ್ರ, ವಿದ್ಯೆ, ಪರದೇಶಿ.


ಅಹಿಂಸಾ ಯಜ್ಞದಂತೆ, ಪರ್ಜನ್ಯ ಮಳೆ
ಮಳೆಯಂತೆ ಬೆಳೆ
ಅನ್ನದಂತೆ ಪ್ರಜೆ
ಪ್ರಜೆಯಂತೆ ರಾಜ್ಯ.


ಪಶುಯಜ್ಞ ಅಡಗಿ, ನರಯಜ್ಞ ದಿನದ ಪಾಕವಾಗಿದೆ
ನೀನು ಅಮರ ನಿಜ! ನಿನಗೆ ಗೊತ್ತಿಲ್ಲದ್ದೇನು?
ನಿನ್ನ ಕಣ್ಣಿಗೆ ಇದೆಲ್ಲಾ ಬಿದ್ದಿಲ್ಲಾ- ಎಂದಲ್ಲಾ
ಊದೋ ಶಂಖ ಊದಬೇಕು!


ಭಾರತದ ಅಪೂರ್ವ ಪುಣ್ಯಪುಂಜ
ಎಂದಿನಿಂದಲೋ ಹುದುಗಿತ್ತು, ಎಲ್ಲೋ ಹೂಳಿ ಹೋಗಿತ್ತು
ಮೋಹನದಾಸ ಹೂತನು, ಪರಮ ಪೂತನು.DRBendre
“ಬೆಂಕಿ ಬೇರೆ! ಬೆಳಕು ಬೇರೆ! ಬಣ್ಣ ಬೇರೆ!”
ಬಿಡಿಬಿಡಿಸಿ ಹೇಳಿದ ಮಹಾತ್ಮ.


ಹಸಿವು, ಕಸಿವಿಸಿ, ಕಿಚ್ಚು
ಒಂದರಿಂದೊಂದು ದೂರ ಇಲ್ಲ
ಒಂದನ್ನು ಹೊತ್ತಿಸಿ, ಇನ್ನೊಂದನ್ನು ನಂದಿಸುವುದು
ತೂಕದ ಕೆಲಸ.


ಯಜ್ಞವೇ ಹಿಂಸೆ ಆಗುತ್ತದೆ
ಹಿಂಸೆ ನುಂಗಿದರೆ, ಅಹಿಂಸೆ ಹುಟ್ಟುವುದಿಲ್ಲ.
ಮಾನವರು ದಾಯಾದಿಗಳು, ದೈತ್ಯರು
ಪಾಲಿನ ನ್ಯಾಯ ಇನ್ನೂ ತೀರಿಯೇ ಇಲ್ಲ
ಅಹಿಂಸೆಯು ಸತ್ಯದ ತಪಸ್ಸು!
ಹಿಂಸೆ ಅನಿವಾರ್‍ಯ ತಾಪ
ಹೊತ್ತಿದ ಬೆಂಕಿ ಹೊತ್ತಿಸದವನನ್ನೂ ನೆಕ್ಕುವುದು
ಹೊತ್ತಿಸಿದವರನ್ನೂ ಮುಕ್ಕುವುದು.
ಯಾರು ಹುಟ್ಟಿಸಿದರೋ ಈ ಅವಳಿ-ಜವಳಿ ಮಾತು
ಹಿಂಸೆ – ಅಹಿಂಸೆ.


ಈ ಅದಲು-ಬದಲು- ತೊದಲು ಮಾತು
ಪಂಜು ಹೊತ್ತಿಸಿ ಹಿಲ್ಲಾಲು ಹಿಡಿದವರೆಲ್ಲಾ
ಶಾಂತಿಃ ಶಾಂತಿಃ! ಅಹಿಂಸೆಗೆ ಜಯ ಜಯಕಾರ!
ಕೂಗಿದ್ದೇ ಕೂಗಿದ್ದು,
ಕೊನೆಗೆ ಊರೆಲ್ಲಾ ಬೂದಿ.
ಹೇಳಿದ್ದು- ಅಹಿಂಸಾ- ಪುರಾಣ
ತಿಂದದ್ದು ಹಿಂಸೆಯ ಯಮ- ಬದನೆಕಾಯಿ!
ಅಹಿಂಸೆ ಹುಸಿ ಹೋಗುತ್ತದೆ
ಹಿಂಸೆ ಹೇಸಿಗೆಗೆ ಹೇಸುವುದಿಲ್ಲ
’ದಯಾ ಧರ್ಮಕಾ ಮೂಲ ಹೈ’
ಎಂದು ಡಂಗುರ ಸಾರಿಸುವುದು
ಮತ್ತೆ ಏನೂ ಮಾಡದವರಂತೆ, ಗಪ್ಪು ಗಡದ್ದು
ಹೊಸ ಲೆಕ್ಕ, ಹೊಸ ಲೆಕ್ಚರು!


’ಹಿಂಸೆ’ ಮಹಾತ್ಮರ ಮುಂಚೆಯೇ ಹುಟ್ಟಿತ್ತು
ಅಹಿಂಸೆ ಅವರ ಮುಂಚೆಯೇ ಅರೆ ಸತ್ತಿತ್ತು gandhi_dead_body
ಅವರು ಊದಿದ ಮಂತ್ರದಿಂದ
ಅಹಿಂಸೆಗೆ ಬಹಳಷ್ಟು ತ್ರಾಣ ಬರಲಿಲ್ಲ
ಹಿಂಸೆಗಂತೂ ಲಂಗೂ ಲಗಾಮು ಇರಲೇ ಇಲ್ಲ.
ದಯೆಯಿಲ್ಲದ ನಿರ್ದಯರೂ
ಇನ್ನೊಬ್ಬರಿಂದ ದಯೆ ಅಪೇಕ್ಷಿಸುತ್ತಾರೆ!


ಬುದ್ಧಿಗೇಡಿಗೂ ಆಗ್ರಹ ಗೊತ್ತಿದೆ
ಎಂಥ ಬುದ್ಧಿವಂತನಿಗೂ ಸತ್ಯ ಸರಿಯಾಗಿ ತಿಳಿದಿಲ್ಲ,
ಸತ್ಯಾಗ್ರಹದಲ್ಲಿ ಸತ್ಯ ಕಡಿಮೆಯಾಗಿ
ಆಗ್ರಹ ಹೆಚ್ಚಾಗುತ್ತಲೆ,
ಅಹಿಂಸೆಯ ಹಚ್ಚಿದ ಬಣ್ಣ ಉದರಿ,
ಹಿಂಸೆಯ ಉಗ್ರರೂಪ ಉರಿದೇಳುತ್ತದೆ.

೧೧
ತಗಲು, ತಂಟೆ, ಉಪವಾಸ! ಮೋಸಂಬಿ ರಸ!
ಮೋಸ, ದೋಷ, ಉಪದೇಶ!
ದೇಶದ ತುಂಬೆಲ್ಲಾ ಸುದ್ದಿ
ಯಾವುದು ನಿಜವೋ?
ಯಾವುದು ಸುಳ್ಳೋ?
ವರ್ತಮಾನ ಪತ್ರಕ್ಕೆ ಹೊಟ್ಟೆತುಂಬ ಸುದ್ದಿ!
ನಮಗೆ ಬೇಕಾಗಿದ್ದುದು ಶುದ್ಧಿ.
ಓಹೋ ಹೂತಾತ್ಮ ! ಹಾಹಾ ಹುತಾತ್ಮ !

೧೧
ಹೂವಿಗೆ ಬೇಗೆ ಹಚ್ಚಿದರು
ಅದರ ಸೌಂದರ್‍ಯ ಮೆಚ್ಚಿದರು
ಸಂಸ್ಕೃತಿಯ ಜಂಭ ಕೊಚ್ಚಿದರು
ಕೊನೆಗೆ ಸುಟ್ಟವನ ಬೂದಿ
ಹಣೆಗೆ ಹಚ್ಚಿಕೊಂಡರು.
ಮತ್ತೆ ಹಣೆಬರಹದ ಹಣೆ, ಬರಿದೋ ಬರಿದು.
ಮಾರ್ಟಿನ್ ಲೂಥರ್ ಕಿಂಗ್!
ಅದೇ ಹಾದಿ ಹಿಡಿಸಿದರು ಹಿಂಸಾ ಭಕ್ತರು,
ಅಹಿಂಸೆ ಎಂಬುದು ಗೋಡೆ
ಹಿಂಸೆ ಎಂಬುದು ಚಿತ್ರ
ಮತ್ತೆ ಮತ್ತೆ ಜನ ಓದುವುದು- ಅದೇ ವಿಚಿತ್ರ !!

ಗಾಂಧಿ ಸಾವು ಮತ್ತು ಬೇಂದ್ರೆ ಕವನ

– ಜಯಪ್ರಕಾಶ್ ಶೆಟ್ಟಿ

ಇದು ‘ಸಂಭವಾಮಿ ಯುಗೇಯುಗೇ..’ ಎಂದು ನಂಬಿಸುತ್ತಲೇ ಬಂದ ದೇಶ. ಯಾವ ಯಾವುದೋ ಹೊಸಹೊಸ ಹರಿಕಾರರು, ಅವತಾರಪುರುಷರು, ಏನೇನನ್ನೋ ಮಾರುವವರು, ಕೊಳ್ಳುವವರು, ಬಿಡುಗಡೆಯ ಭಾಗ್ಯದಾತರುಗಳನ್ನು ಎದುರಿಗಿಟ್ಟು ಮತ್ತದೇ ಯುಗ ಯುಗದ ಅವತಾರದ ಕಥನಗಳನ್ನು ಪಠಿಸುತ್ತಲೇ ಬರುತ್ತಿರುವ ದೇಶವೂ ಹೌದು. ಆದರೆ ಏನೆಲ್ಲಾ ಕಸರತ್ತುಗಳ ನಡುವೆಯೂ ದೇಶದ ನರನಾಡಿಗಳಲ್ಲಿ ಬೆರೆತುಹೋದ ಗಾಂಧಿ ಮತ್ತು ಅಂಬೇಡ್ಕರ್ ಎಂಬೆರಡು ಹೆಸರುಗಳನ್ನು ಪ್ರಾಯಶಃ ಇನ್ನೂ ಕೆಲಕಾಲದವರೆಗೆ ಅಳಿಸಿ ಹಾಕಲಾಗದು. ಪ್ರಕಾಶಿಸುವ ಭಾರತದ ಕೋರೈಸುವ ಬೆಳಕಾಗಲೀ, ಗೆಲ್ಲಬೇಕಾದ ಭಾರತದ ಆರ್ಭಟವಾಗಲೀ ಗಾಂಧಿ ಮತ್ತು ಅಂಬೇಡ್ಕರರನ್ನು ನಾಪತ್ತೆ ಮಾಡುವಷ್ಟು ಎಂದಿಗೂ ಸಶಕ್ತವಲ್ಲ. ಆದರೆ ಇವರುಗಳಲ್ಲೊಬ್ಬರಾದ ಗಾಂಧಿಯನ್ನು ಈ ದೇಶದ ಕೆಟ್ಟಮನಸ್ಸೊಂದು “ಬಲಿ” ಪಡೆಯಿತು. gandhi_dead_bodyಅದು ಒಬ್ಬ ವ್ಯಕ್ತಿ ಮಾಡಿದ ಕೊಲೆಯಲ್ಲ. ಅಸಹನೆಯ ಮನೋಧರ್ಮವೊಂದರ ಹಿಂಸೆ. ಆದರೆ ಅದರ ಹೊಣೆ ಅಷ್ಟಕ್ಕೇ ಸೀಮಿತವಲ್ಲ. ಮೌನಸಮ್ಮತಿ ನೀಡುತ್ತಲೇ ಬಂದ “ಸಜ್ಜನಿಕೆಯ” ಭಾರತೀಯರೆಲ್ಲರೂ ಅದರ ಹೊಣೆಗಾರರು. ಅದು ನಾವೇ ಮಾಡಿದ ಕೊಲೆ. ಹೀಗಾಗಿ ಪ್ರತೀವರ್ಷದ ಫೆಬ್ರವರಿಗೆ ಕಾಲಿಡುತ್ತಿದ್ದಂತೆಯೇ, ಉತ್ತರಾಯಣದ ಆದಿಯಲ್ಲಿನ ಈ ನರಳಾಟದಿಂದ ನಮಗೆ ಬಿಡುಗಡೆಯಿಲ್ಲ. ದೇಶಸಮಸ್ತವೂ ತಲೆತಗ್ಗಿಸಬೇಕಾದ ಈ “ಪಾಪದಹೂರಣ” ನಮಗೆ ಅಂಟಿ ಕೂತಿರುವ ಬಿಡುಗಡೆಯೇ ಇಲ್ಲದ “ಹತ್ಯೆಯಕೆಸರು”. ರಾಷ್ಟ್ರಪಿತನನ್ನು ಗುಂಡಿಟ್ಟುಕೊಂದ ಕೊಲೆಯ ಕಪ್ಪುಕಲೆಯನ್ನು ಹೀಗೆ ಬೆತ್ತಲಾಗಿ ಒಪ್ಪಿಕೊಳ್ಳಲೇಬೇಕಾದುದರಿಂದ “ಗಾಂಧೀ ಸಾವಿನ” ಈ ನೋವಿನಿಂದ ಯಾರಿಗೂ ಮುಕ್ತಿ ಇಲ್ಲದಾಗಿದೆ.

ದೇಶಸ್ಮೃತಿಯ ಭಾಗವೇ ಆಗಿಹೋದ ಆ ಅರೆಬೆತ್ತಲೆಯ ಫಕೀರನ ಕೊಲೆ, ಯಾವ ಗಂಗೆಯಲ್ಲಿಯೂ ತೊಳೆದು ತೀರದ ಪಾಪ. ಇದಕ್ಕೂ ಸಿಹಿ ಹಂಚಿ ಸಂಭ್ರಮಿಸಿದವರಿದ್ದರೆಂಬುದು ಕೇಳಬಾರದ ಮಾತು. ಅದು ಬೇರೆ ಸಂಗತಿ. ಆದರೆ “ರಕ್ತ-ಮಾಂಸ ಸಹಿತವಾಗಿ ಇಂತಹದ್ದೊಂದು ಜೀವ ಲೋಕದಲ್ಲಿ ಓಡಾಡಿಕೊಂಡಿತ್ತೇ?” ಎಂಬುದು ಈ ಜೀವದ ಕುರಿತು ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟಿನ್ ತೆಗೆದ ಉದ್ಗಾರ. ಆದರೆ ಆ ಜೀವವೂ ನರಳಿ ನೆಲಕ್ಕುರುಳಿದ್ದು, “ಹೇ ರಾಮ್” ಎಂಬ ಸೊಲ್ಲಿನೊಂದಿಗೇ. ಅದು “ದೇವರೇ, ಕ್ಷಮೆ ಮಾಡು, ಕೊಲೆಗಡುಕರಾರೇ ಇರಲಿ; ಸರ್ವೇಜನರು ಸುಖವಾಗಿರಲಿ ಎಂದು ರಾಮನಲಿ ಮೊರೆಯಿಟ್ಟು” (ಔದುಂಬರಗಾಥೆ,ಸಂ-1,ಪು.446) ಪ್ರಾಣಬಿಟ್ಟಿತ್ತು. ವಿಚಿತ್ರವೆಂದರೆ ಕೊಂದವನ ಹೆಸರಲ್ಲಿಯೂ ರಾಮನೇ ಅಂಟಿಕೊಂಡಿತ್ತು! Gandhi's Funeralಅವನೂ ರಾಮನೇ! ಕೊಲೆಗಾರ ನಾಥೂರಾಮ. ಸ್ವತಂತ್ರಭಾರತದ ಮೊತ್ತಮೊದಲ ಭಯೋತ್ಪಾದಕ. ಮೊಟ್ಟೆ ಮಾಂಸವನ್ನೂ ತಿನ್ನದ ಶುದ್ಧ ಶಾಖಾಹಾರಿ! ಸಾತ್ವಿಕ ಆಹಾರದೊಳಗಿಂದಲೇ ತೂರಿಬಂದ ನೆತ್ತರ ಹಸಿಹಸಿವು. ಆದರೆ ನಾಥೂರಾಮನ ಮೂಲಕ ಸಿಡಿದ ಗುಂಡು, ಅದನ್ನು ಹೊರಚಲ್ಲಿದ ಕೋವಿಯ ನಳಿಕೆ, ಕುದುರೆಯನ್ನು ಅಮುಕಿದ ಗೋಡ್ಸೆಯ ಕೈಗಳು ಕೇವಲ ಬಹಿರಂಗಕ್ಕೊದಗಿದ ಸಾಕ್ಷಿಗಳು. ಇದು ಲೋಕಕ್ಕೇ ಗೊತ್ತಿದೆ. ಆತ ಸಾಧನ ಅಷ್ಟೇ. ಸೂತ್ರವಾದರೋ “ಹಿಂಸೆಯ ಹೆಪ್ಪು”. ಆ ಹೆಪ್ಪೇ, ಅಹಿಂಸೆಯೆಂಬ ಗೋಡೆಯ ಮೇಲೆ ಮತ್ತೆಮತ್ತೆ ಅರಳಿ ಉದುರುತ್ತಲೇ ಇರುವ ಹೊಸಚಿತ್ರಗಳ ಮೂಲಬಿಂದು. ಆ ಹೆಪ್ಪಿನ್ನೂ ಕರಗಿಲ್ಲ. ಗಟ್ಟಿಯಾಗಿಯೇ ಉಳಿದು ಚಿಗುರೊಡೆಯುತ್ತಲೇ ಇದೆ.

ಕನ್ನಡದಲ್ಲಿ ಗಾಂಧೀ ಕುರಿತ ತೀವ್ರಾನುಭವಕ್ಕೆ ತುತ್ತಾದವರಲ್ಲಿ ವರಕವಿ ಬೇಂದ್ರೆಯವರೊಬ್ಬರು. ಹಿಂಸೆಯ ಮಾಸದ ವಿಕರಾಳ ಚಿತ್ರವಾಗುಳಿದ ಗಾಂಧೀ ಸಾವನ್ನೇ ಕೇಂದ್ರೀಕರಿಸಿ ಬೇಂದ್ರೆಯವರ ಸುಮಾರು ಹದಿನೆಂಟು ಕವಿತೆಗಳಿವೆ. ಅವು ಆ ಕಾಲದ ಕನ್ನಡಕವಿತೆಗಳಲ್ಲಿ ಕಾಣಸಿಗದ ತಾತ್ವಿಕ ಖಚಿತತೆಯೊಂದಿಗೆ ಗಾಂಧೀ ಸಾವನ್ನು ಮುಖಾಮುಖಿಯಾಗುತ್ತವೆ. ಗಾಂಧಿ ಕೊಲೆಯನ್ನು ತಮ್ಮ ವಿಜಯವೆಂದೇ ಭಾವಿಸಿ ಇಂದಿಗೂ ಒಳಗೊಳಗೇ ಗುಟ್ಟಾಗಿ ಸಂಭ್ರಮಿಸುತ್ತಿರುವ ನೀಚ ಮನಸ್ಸುಗಳನ್ನು ತೀಕ್ಷ್ಣವಾಗಿ ಇರಿಯುತ್ತವೆ. ಬೇಂದ್ರೆ ಈ ಕೊಲೆಯನ್ನು ಒಂದು ಘಟನೆಯಂದಷ್ಟೇ ನೋಡಿಲ್ಲ. ಅವರ ಪಾಲಿಗೆ ಅದೊಂದು ವಿದ್ಯಮಾನ. ಗುಂಡು ಹಾರಿಸಿದ ಕೈಗಿಂತ ಮಿಗಿಲಾಗಿ ಅವರು ಎದುರಾಗುವುದು ಆಯುಧವಾಗಿಸಿಕೊಂಡ ಮನಸ್ಸುಗಳನ್ನು. ಅವರ ಕವನಗಳಲ್ಲಿರುವುದು ಆ ಮನಸ್ಸುಗಳ ನಿರಂತರ ಸೋಲಿನ ಗೇಲಿಯ ಚಿತ್ರ.. ಸತ್ತೂ ಸಶಕ್ತವಾದ ಗಾಂಧಿ. DRBendreಪ್ರಸ್ತುತ ಲೇಖನವು “ಪೂತಾತ್ಮ-ಹೂತಾತ್ಮ-ಹುತಾತ್ಮ-ಮಹಾತ್ಮ” ಕವನದ ವಿವರಗಳನ್ನು ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಚರ್ಚೆಗೊಡ್ಡಿದೆ.

ರಾಷ್ಟ್ರೀಯ ಹೋರಾಟದ ಉರುಬಿನ ಕಾಲವೇ ಕನ್ನಡ ನವೋದಯದ ಕಾಲವೂ ಹೌದು. ಆಧುನಿಕ ಕನ್ನಡಕಾವ್ಯದ ಈ ಯುಗ ಗಾಂಧೀಯುಗದ ಜೊತೆಗೇ ಆರಂಭಗೊಂಡಿತ್ತು. ಇದರಿಂದಾಗಿ ಈ ಯುಗ ಗಾಂಧಿ ಕುರಿತು ಪ್ರತಿಕ್ರಿಯಿಸಲೇಬೇಕಾದ ಒತ್ತಡವನ್ನು ಅನುಭವಿಸಿತು. 20ನೇ ಶತಮಾನದ ಆರಂಭದ ದಶಕಗಳಲ್ಲಿ ಬದುಕಿದ ಕವಿಯೊಬ್ಬನಿಗೆ ಗಾಂಧಿಯೊಂದಿಗಿನ ಮುಖಾಮುಖಿ ಎಂಬುದು ತಪ್ಪಿಸಿಕೊಳ್ಳಲಾಗದ ವಾಸ್ತವ ಎನಿಸಿತು. ಆದರೆ ಹೀಗೆ ಗಾಂಧಿಯನ್ನು ಆವಾಹಿಸಿಕೊಳ್ಳುವಲ್ಲಿ ಅಲ್ಲಿ ಮೈತಳೆದುದು ಏಕಾಕಾರಿ ಮಾದರಿಯ ಗಾಂಧಿ ಅಲ್ಲ ಎಂಬುದನ್ನೂ ಮರೆಯಲಾಗದು. ಜೊತೆಗೆ ಗಾಂಧೀಜಿ ಅಲ್ಲಿ ಕೇವಲ ಒಬ್ಬ ವ್ಯಕ್ತಿಯಾಗದೆ, ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಳ್ಳಲಾದ ಮಾದರಿಯೊಂದರ ಪ್ರತಿನಿಧಿಯಾಗಿಯೇ ದಾಖಲಾಗುತ್ತಾರೆ. ಹೀಗೆ ಒಂದು ಶಕ್ತಿಯಂತೆ ದೇಶದ ಮನಸ್ಸನ್ನು ಆವರಿಸಿಕೊಂಡಿದ್ದ ಕಾಲದಲ್ಲೇ ಹಠಾತ್ತಾಗಿ ಗಾಂಧೀಕೊಲೆ ಸಂಭವಿಸಿತ್ತು. ಅವರು ಕೊಲೆಗಡುಕನ ಗುಂಡಿಗೆ ಬಲಿಯಾಗಿ ಸಾಯಬಾರದ ಸಾವು ಸತ್ತಿದ್ದರು. “ಬೆಳಗುಜಾವಕೆ ಬಿದಿರು ಸಿಳ್ಳುಹಾಕಿದ ಹಾಗೆ” ಬಂದ ಈ ದುರಂತ ಸಾವಿನ ಸುದ್ದಿ ಆಧುನಿಕ ಕನ್ನಡಕಾವ್ಯವನ್ನು ವಿಶೇಷವಾಗಿ ಬಾಧಿಸಿತ್ತು. ಇದು ನವೋದಯ ಕಾಲದ ಕನ್ನಡ ಕಾವ್ಯದಲ್ಲಿ ದಾಖಲಾದ ಘಟನೆಗಳಲ್ಲಿಯೇ ಅತಿಮುಖ್ಯ ಘಟನೆ ಎನಿಸಿತು.

ಗಾಂಧಿಯನ್ನು ಒಪ್ಪಿಕೊಳ್ಳುವುದೆಂದರೆ ಮತೀಯವಾದಿ, ಅಸಹಿಷ್ಣುತೆಯ ಮಾದರಿಯ ರಾಷ್ಟ್ರೀಯತೆಯ ನಿರಾಕರಣವೂ ಹೌದು. ಯಾಕೆಂದರೆ ರಾಷ್ಟ್ರೀಯತೆಯ ಪರಿಭಾಷೆಯನ್ನು ಗಾಂಧಿ ವಿವರಿಸಿಕೊಂಡ ಬಗೆಗೂ, ರಾಷ್ಟ್ರೀಯ ಹೋರಾಟದ ಇತರ ಮುಂಚೂಣಿ ನಾಯಕರು ವಿವರಿಸಿಕೊಂಡ ಬಗೆಗೂ ಮೂಲಭೂತ ವ್ಯತ್ಯಾಸವೊಂದಿದೆ. gandhiಈ ಎರಡು ಕವಲುಗಳು ಭಾರತದ ರಾಷ್ಟ್ರೀಯತೆಯನ್ನು ಮರುಸಂಘಟಿಸಿಕೊಳ್ಳುವಲ್ಲಿ, ಗತ ಅಥವಾ ಮಧ್ಯಯುಗೀನ ಭಾರತವನ್ನು ವಿವರಿಸಿಕೊಂಡ ಕ್ರಮದಲ್ಲಿ ಅಗಾಧ ವ್ಯತ್ಯಾಸವಿದೆ. ಡಿ.ಆರ್.ನಾಗರಾಜ ಅವರು ಗುರುತಿಸುವಂತೆ, ಈ “ಪರಕೀಯ ಸಾಮ್ರಾಜ್ಯದ ಗರ್ಭದಲ್ಲಿದ್ದವರಿಗೆ ತಮ್ಮ ಗತಕಾಲದ ‘ಸಾಮ್ರಾಜ್ಯ’ದ ಬಗೆಗೆ ತೀವ್ರ ಹಂಬಲ, ಭಾರತೀಯ ರಾಷ್ಟ್ರೀಯವಾದಿಗಳಲ್ಲಿ ಗಾಂಧಿ ಒಬ್ಬರಿಗೆ ಬಿಟ್ಟರೆ ಇನ್ನುಳಿದವರಿಗೆ ಬಲಿಷ್ಠ ಸಾಮ್ರಾಜ್ಯ ರಾಷ್ಟ್ರೀಯತೆಯ ಹುಚ್ಚು” (ಡಿ.ಆರ್.ನಾಗರಾಜ, ಸಾಹಿತ್ಯ ಕಥನ, ಪು.257). ಮತೀಯ ನೆಲೆಯಲ್ಲಿ ಭಾರತದ ರಾಷ್ಟ್ರೀಯತೆಯನ್ನು ವಿವರಿಸಿಕೊಂಡ ಗುಂಪು ಗತವನ್ನು ವೀರ್‍ಯವತ್ತಾದ ಕ್ಷಾತ್ರ ಮಾದರಿಯಲ್ಲಿ ವಿವರಿಸಿಕೊಂಡಿತು. ಅದು ಹೆಣ್ಣಿಗನಲ್ಲದ ವೀರಭಾರತವನ್ನು ಸಂಘಟಿಸಿಕೊಂಡಿತು. ಅಹಿಂಸೆ ಈ ಪಥಕ್ಕೆ ಕ್ಲೈಬ್ಯದ ಮಾದರಿಯಾಗಿ ಕಂಡಿತ್ತು, ಹೇಡಿತನದ ಲಕ್ಷಣವಾಗಿತ್ತು. ದೇಶದ ಬಹುಸಂಖ್ಯಾತರ ವಕ್ತಾರನಂತೆ ಮಾತನಾಡುವ, ಸಾಂಸ್ಕೃತಿಕ ರಾಷ್ಟ್ರೀಯತೆಯೆಂದು ಕರೆಯಲಾಗುವ ಇದನ್ನು ತಿಲಕ್‌ ಮಾದರಿಯ ರಾಷ್ಟ್ರೀಯತೆ ಎಂದೇ ಗುರುತಿಸಲಾಗುತ್ತದೆ. ವೀರಭಾರತವನ್ನು ಸಂಘಟಿಸಿಕೊಳ್ಳಬಯಸುವ ಈ ಮತೀಯನೆಲೆಯ ರಾಷ್ಟ್ರೀಯತೆ ಸಹಜವಾಗಿ ಹಿಂಸಾಮಾದರಿಯದು. ಈ ಹಿಂಸಾ ಮಾದರಿಗೆ ಪ್ರತಿಯಾಗಿ ಗಾಂಧಿಯದು ಅಹಿಂಸೆ ಮತ್ತು ಒಳಗೊಳ್ಳುವ ಮಾದರಿಯ ರಾಷ್ಟ್ರೀಯತೆಯಾಗಿತ್ತು.

ಗಾಂಧಿ ಮಾದರಿಗೆ ಬಲಕ್ಕಿಂತ ಸಾಮರಸ್ಯ, ಆಯ್ಕೆ ಮತ್ತು ಪ್ರತ್ಯೇಕತೆಗಿಂತ ಸಹಬಾಳ್ವೆಯ ಒಡಬದುಕು ಮುಖ್ಯವಾಗಿತ್ತು. ಭಾರತದ ಸಂಕರಶೀಲ ಸಾಂಸ್ಕೃತಿಕ ಸಂದರ್ಭದ ಸಹಜ ಸಾಹಚರ್‍ಯ ಹೊಂದಿದ್ದ ಈ ಮಾದರಿ ಬಲಿಷ್ಠ ಸಾಮ್ರಾಜ್ಯದ ಹುಚ್ಚಿನಿಂದ ತನ್ನನ್ನು ದೂರವಿರಿಸಿಕೊಂಡಿತ್ತು. ತಿಲಕ್‌ ಮಾದರಿಯಲ್ಲಿ ಮಧ್ಯಕಾಲೀನ ಚರಿತ್ರೆಯ ವಲಸೆಯ ಮೂಲಕ ಕೋಮುವಾರು ವಿಂಗಡಣೆಯಲ್ಲಿ ರೂಪುಪಡೆದ ‘ಸ್ವ’ ಮತ್ತು ‘ಅನ್ಯ’ವೆಂಬ ಸಮುದಾಯ ವಿಘಟನೆಯ ಶಕ್ತಿಗಳು ಸಕ್ರಿಯವಾಗಿದ್ದವು. ಅಲ್ಲಿ ಮತೀಯ ಅಂತಃಕಲಹವನ್ನು ಹುಟ್ಟುಹಾಕುವ ಅಪಾಯವಿತ್ತು. ಆದರೆ ಗಾಂಧೀಜಿ ಉಪವಾಸಗಳ ಮೂಲಕ ಅವುಗಳನ್ನು ಮೆಟ್ಟಿನಿಂತವರು. ಈ ಮಾದರಿಗಳು ಒಂದನ್ನೊಂದು ಅನುಸರಿಸಲಿಲ್ಲ, ಒಂದನ್ನೊಂದು ಆಂತರಿಕವಾವಾಗಿ ವಿರೋಧಿಸಿದುವು. ಹೀಗೆ ಭಾರತದ ರಾಷ್ಟ್ರೀಯ ಹೋರಾಟಕ್ಕೆ ಕೋಮುವಾದ ಮತ್ತು ಗಾಂಧಿವಾದದ ನಡುವಿನ ಸಂಘರ್ಷದ ಆಂತರಿಕ ಆಯಾಮವಿದೆ. ಈ ಸಂಘರ್ಷದ ಹೇತುವಾದ ಕ್ಷಾತ್ರದ ಹುಚ್ಚೇ ಆತ್ಯಂತಿಕವಾಗಿ ಗಾಂಧಿಯನ್ನು ಬಲಿಪಡೆದಿತ್ತು.

ಪ್ರಸ್ತುತ ಚರ್ಚಿಸಲಾಗಿರುವ ಬೇಂದ್ರೆಯವರ ಈ ಕವನವು ಮರಣೋತ್ತರವಾಗಿ ಗಾಂಧೀಜಿಯನ್ನು ಆವಾಹಿಸಿಕೊಳ್ಳುತ್ತದೆ. ಮಹಾತ್ಮನನ್ನು ನೆನೆಯುತ್ತಲೇ, ಗಾಂಧಿಯನ್ನು ತಾತ್ವಿಕವಾಗಿ ವಿರೋಧಿಸಿದ ರಾಷ್ಟ್ರೀಯತೆಯ ಅನ್ಯಧಾರೆಯ ಜೊತೆಗಿನ ಮುಖಾಮುಖಿಯಲ್ಲಿ ವಿಶಿಷ್ಟವಾಗುತ್ತದೆ. ಸಾವಿನ ನೋವಿನಲ್ಲೂ, “ಅಹಿಂಸೆ ಎಂಬುದು ಗೋಡೆ ಹಿಂಸೆ ಎಂಬುದು ಚಿತ್ರ” da.ra.bendreಎನ್ನುವ ಮೂಲಕ ಗಾಂಧೀಯತೆಯ ಯಶವನ್ನು ಭಿನ್ನನೆಲೆಯಲ್ಲಿ ದಾಖಲಿಸುತ್ತದೆ. ಮರಣಿಸಿದ ಗಾಂಧಿಯನ್ನು ಜೀವಂತ ಗಾಂಧಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ವಿವರಿಸಿಕೊಳ್ಳುವ ಅವರ “ಶೃದ್ಧಾಂಜಲಿ” ಕವನವಂತೂ ಗಾಂಧೀ ತರುವಾಯ ದೇಶ ಕತ್ತಲೆಯಲ್ಲಿ ಮುಳುಗಿತೆಂಬ ರಾಷ್ಟ್ರನಾಯಕರುಗಳ ನೈರಾಶ್ಯಕ್ಕೆ ಪ್ರತಿಕ್ರಿಯೆಯಂತೆಯೇ ಇದೆ. ಗೋವಿಂದ ಪೈ ಅವರಲ್ಲಿರುವ ‘ಮಹಾತ್ಮ ನೀನು ಇನ್ನೂ ಒಂದಿಷ್ಟು ಕಾಲ ಬದುಕಬೇಕಿತ್ತೆ’ನ್ನುವ ಶೂನ್ಯತೆ, ನಿರ್ವಾತದ ದನಿ ಬೇಂದ್ರೆಯವರಲ್ಲಿಲ್ಲ. ಅದರ ಬದಲಿಗೆ ಉದಾರವಾದಿ ನಿಲುವಿನಲ್ಲಿ ತಿಲಕ ಮಾದರಿಯ ರಾಷ್ಟ್ರೀಯತೆಯನ್ನು ಧಿಕ್ಕರಿಸುವ ಬೇಂದ್ರೆಯವರ ಕವನಗಳು, ಕೋಮುವಾದದ ಖಚಿತ ವಿರೋಧದಲ್ಲಿ ಗಾಂಧೀಜಿಯ ಸಂಕರಶೀಲ ರಾಷ್ಟ್ರೀಯತೆಯ ಪರವಾಗಿ ನಿಲ್ಲುತ್ತವೆ. ಅಲ್ಲಿ ಗಾಂಧಿ ಎನ್ನುವುದು ವ್ಯಕ್ತಿಯಾಗದೆ ಒಂದು ತತ್ವವಾಗುತ್ತದೆ. ಕೊಲೆಯ ಆಪಾದನೆ ವ್ಯಕ್ತಿಯ ನೆಲೆಗೆ ಸೀಮಿತಗೊಳ್ಳದೆ, ಒಂದು ವಿದ್ಯಮಾನವಾಗಿ ಗಣಿತವಾಗುತ್ತದೆ. ಅವರ “ಮಹಾತ್ಮಾ” ಕವನವಾದರೋ, “ಕೊಂದರೋ ಲೋಕಕಾಶೀರ್ವಾದ ಪ್ರಾರ್ಥಿಸುವ ಸಮಯಕ್ಕೆ” ಎಂದೆನ್ನುವ ಮೂಲಕ ಅದನ್ನೊಂದು ಕಾಲವಲ್ಲದ ಕಾಲದಲ್ಲಿ ನಡೆದ ಕೂಟವೊಂದರ ಕಾರ್‍ಯಾಚರಣೆಯೆಂದೇ ಪರಿಗಣಿಸುತ್ತದೆ. ಹಾಗಾಗಿ ಪೈ ಅವರಲ್ಲಿರುವ ಆಪಾದಿತರಪರ ಸಹಾನುಭೂತಿ ಬೇಂದ್ರೆ ಅವರಲ್ಲಿಲ್ಲ.

ಈ ಕವನ ಆರಂಭವಾಗುವುದೇ “ಓ ಮಹಾತ್ಮ! ಶತಸಾಂವತ್ಸರಿಕಕ್ಕೆ ಸತ್ಯ ವರದಿ ಮಾಡೋಣ” ಎಂದು. ಮಹಾತ್ಮನಿಲ್ಲದ ಜಗತ್ತಿನಿಂದ ಮಹಾತ್ಮನಿಗೆ ವರದಿಯೊಪ್ಪಿಸುವ ಮಾದರಿಯಲ್ಲಿ. ಗಾಂಧೀತತ್ವಗಳಿಗೆ ಬೆನ್ನುಹಾಕಿ ನಡೆಯುತ್ತಿರುವ ಭಾರತದ ಪರದೇಶಿಸ್ಥಿತಿ ಹಾಗೂ gandhi-art“ಪಶುಯಜ್ಞ ಅಡಗಿ, ನರಯಜ್ಞ ದಿನದ ಪಾಕ”ವಾದ ಹಿಂಸೆಯ ವಿಸ್ತರಣೆಗೆ ಹೇಸಿ. ಆದರೆ ಈ ನೈರಾಶ್ಯವೇ ಕವನದ ಸ್ಥಾಯಿ ಅಲ್ಲ. ಯಾಕೆಂದರೆ ಅಲ್ಲಿಯ ನಿರೂಪಣೆ ಮುಂಬರಿಯುವುದು “ನಿನಗೆ ಗೊತ್ತಿಲ್ಲದ್ದೇನು? ನಿನ್ನ ಕಣ್ಣಿಗೆ ಇವೆಲ್ಲಾ ಬಿದ್ದಿಲ್ಲಾ-ಎಂದಲ್ಲಾ” ಎಂದು, ನಮ್ಮ ನಡುವೆಯೇ ಇರುವ ಗಾಂಧೀಜಿಗೆ ಮಾಡುವ ವರದಿಯಾಗಿ. ಇಲ್ಲಿ ಗಾಂಧಿ ಒಂದು ತಾತ್ವಿಕತೆಯಾಗಿ, ನಮ್ಮೊಳಗಿನ ನಾವಾಗುತ್ತದೆ. ನಮ್ಮೊಳ:ಗಿನ ತಿಳುವಳಿಕೆಯಾಗುತ್ತದೆ. ಗಾಂಧಿ ಬಿತ್ತಿದ ಅರಿವಿನ ಬೆಳಕನ್ನು ಪ್ರಸ್ತಾಪಿಸಿ, “ಬೆಂಕಿ ಬೇರೆ! ಬೆಳಕು ಬೇರೆ! ಬಣ್ಣ ಬೇರೆ! ಬಿಡಿಬಿಡಿಸಿ, ತಿಳಿತಿಳಿಸಿ ಹೇಳಿದ ಮಹಾತ್ಮ” ಎಂದು ಕೃತಜ್ಞತೆ ಸೂಚಿಸುವ ಕವನ, ನಮ್ಮೊಳಗಡೆಯೇ ಉಳಿದು ಹೋದ ಗಾಂಧಿಗೆ ನಾವೇ ಸಲ್ಲಿಸುವ ವರದಿಯಾಗುತ್ತದೆ. ಈ ನೆನಕೆ ಒಂದು ಕಡೆಯಿಂದ ಗುರುವಿನಂತೆ ಎಚ್ಚರವನ್ನು ಬೋಧಿಸಿದ ಗಾಂಧಿಗೆ ಕೃತಜ್ಞತೆ ಸಲ್ಲಿಸುತ್ತದೆ. ಇನ್ನೊಂದು ಕಡೆಯಿಂದ ಗಾಂಧಿ ಬಿತ್ತಿದ ಅರಿವಿನಲ್ಲಿರುವ ಗೊಂದಲವಿಲ್ಲದ ಖಚಿತತೆಯ ಹೂರಣವನ್ನು ದಾಖಲಿಸುತ್ತದೆ.

ಗಾಂಧೀ ಕೊಲೆಯನ್ನು ಆ ಹೊತ್ತಿನ ಅಗತ್ಯವೆಂದವರೂ, ಎನ್ನುತ್ತಿರುವವರೂ ಇಂದಿಗೂ ಇದ್ದಾರೆ. ಆ ಸಮರ್ಥನೆಯ ಭಾಗವಾಗಿ ಒದಗಿಬಂದದ್ದು ಅಖಂಡ ಭಾರತದ ವಿಭಜನೆಯ ನೆಪ. ಆದರೆ ಕವನ ಆ ಸಮರ್ಥನೆಯನ್ನೇ ಕೆಣಕಿ ಲೇವಡಿ ಮಾಡುವಂತೆ, “ಪಾಲಿನ ನ್ಯಾಯ ಇನ್ನೂ ತೀರಿಯೇ ಇಲ್ಲ” ಎನ್ನುತ್ತದೆ. ಹೀಗೆ ಕೊಲೆಯ ಘೋಷಿತ ಕಾರಣವನ್ನು ನಿರಾಕರಿಸಿ, ಅದನ್ನೊಂದು ಸುದೀರ್ಘ ಕಾರ್‍ಯಾಚರಣೆಯ ಭಾಗವೆಂದೇ ಸೂಚಿಸುತ್ತದೆ. ಬೇಂದ್ರೆಯವರ ಕವನದಲ್ಲಿ ಭಾರತ ವಿಭಜನೆಯ ಕಾರಣದೊಂದಿಗೆ Mahatma-Gandhiಗಾಂಧೀ ಕೊಲೆಯನ್ನು ವಿವರಿಸಿಕೊಳ್ಳುವ ಯತ್ನವಿಲ್ಲ. ಹಾಗೆಯೇ ಅದು ಯಾವುದೋ ಒಂದು ಕಾಲದ ಉರುಬಿನ ಫಲಿತವೆಂಬ ಪರಿಭಾವನೆಯೂ ಇಲ್ಲ. ಅಲ್ಲಿರುವುದು ಅಹಿಂಸೆಯ ಗೋಡೆಯನ್ನೆ ಬಳಸಿ ಬರೆಯುತ್ತಾ ಬಂದ ಕೊಲೆಯ ಈ ’ಚಿತ್ರ’ಗಳಿಗೆ ಶತಮಾನಗಳ ಇತಿಹಾಸವಿದೆ ಎಂಬ ಅರಿವು. ಹಾಗಾಗಿಯೇ ಗೋವಿಂದ ಪೈ ಅವರಂತೆ ಬೇಂದ್ರೆಗೆ ಅದೊಂದು ವ್ಯಕ್ತಿಗತ ಮಟ್ಟದ ಹತ್ಯಾಯತ್ನವಲ್ಲ. ಅವರಲ್ಲಿ ಅದು ಭಿನ್ನ ಬಗೆಯ ಅಲೋಚನೆಗಳ ಸಂಘರ್ಷ. ಹಿಂಸೆ-ಅಹಿಂಸೆಗಳ ಮುಖಾಮುಖಿ. ಅಹಿಂಸೆಯ ಸ್ಥಿರಭಿತ್ತಿಯಲ್ಲಿ ಮಾನವವಿಕೃತಿ ಬಿಡಿಸಿದ ಹಿಂಸೆ ಎಂಬ ಕೃತಕಚಿತ್ರ. ಆ ಕಾರ್‍ಯಾಚರಣೆ ಇನ್ನೂ ನಿಂತಿಲ್ಲ ಎಂಬಂತೆ ಅವರಲ್ಲಿ ಹಿಂಸೆ-ಅಹಿಂಸೆಗಳು ಅವಳಿ ವೈರುಧ್ಯಗಳಾಗಿ ಎದುರು-ಬದುರು ನಿಲ್ಲುತ್ತವೆ. ಆದರೆ ಅಷ್ಟೇ ರಾಜಕೀಯ ಖಚಿತತೆಯೊಂದಿಗೆ ಹಿಂಸೆಯ ವಿಜಯದ ನಿರಾಕರಣೆಯೂ ಅವರಲ್ಲಿದೆ. ಅಹಿಂಸೆಯ ಎದುರು ಯುದ್ಧ ಹೂಡುವ ಹಿಂಸೆಗೆ ಪ್ರತೀಬಾರಿಯೂ ನೆತ್ತರು ಸಿಗಬಹುದಲ್ಲದೆ, ಜಯವಲ್ಲ ಎಂಬ ಖಚಿತ ಸಂದೇಶ ರವಾನಿಸುವಂತೆ, “ಹೊತ್ತಿಸಿದ ಬೆಂಕಿ ಹೊತ್ತಿಸದವನನ್ನೂ ನೆಕ್ಕುವುದು, ಹೊತ್ತಿಸಿದವರನ್ನೂ ಮುಕ್ಕುವುದು” ಎಂದು ಅವರು ಕೋಮುವಾದಿ ಅಸಹಿಷ್ಣುತೆಯ ರಾಜಕಾರಣದ ವಿನಾಶಮುಖೀ ಗುಣವನ್ನು ದಾಖಲಿಸುತ್ತಾರೆ. ವಿಶ್ವದ ವಿನಾಶ ನಾಯಕರುಗಳಾದ ಹಿಟ್ಲರ್, ಮುಸೋಲಿನಿಯರುಗಳ ಲೋಕನಾಶ ಮತ್ತು ಸ್ವನಾಶಗಳೆರಡನ್ನೂ ಒಟ್ಟೊಟ್ಟಿಗೇ ಧ್ವನಿಸುತ್ತಾರೆ.

ಈ ಕವನವು ಗಾಂಧೀವಿರೋಧಿ ಸ್ವಘೋಷಿತ ದೇಶಪ್ರೇಮಿ ರಾಷ್ಟ್ರೀಯವಾದಿಗಳ ಪೊಳ್ಳುತನವನ್ನು ಎಳೆ ಎಳೆಯಾಗಿ ಬಯಲಿಗಿಡುತ್ತದೆ. “ಅಹಿಂಸೆಯ ಹಚ್ಚಿದಬಣ್ಣ ಉದುರಿ, ಹಿಂಸೆಯ ಉಗ್ರರೂಪ ಉರಿದೇಳುವ” ಅದರ ನಯವಂಚಕತೆಯನ್ನು ವಿವರವಾಗಿ ಬಿಡಿಸಿಡುತ್ತದೆ. ಪಂಜು ಹೊತ್ತಿಸಿ ಹಿಲ್ಲಾಲು ಹಿಡಿದವರೂ ಅಹಿಂಸೆ, ಶಾಂತಿ ಮಂತ್ರವನ್ನು ಪಠಿಸುವ ವಿಸಂಗತಿಯನ್ನು ಎದುರಿಗಿಡುತ್ತದೆ. ಕೋಮುವಾದಿ ರಾಜಕಾರಣದ ವಿರುದ್ಧದ ನಿರ್ಣಾಯಕ ಪ್ರತಿದಾಳಿಯ ಭಾಗವಾಗಿ, “ಹೇಳಿದ್ದು-ಅಹಿಂಸಾ-ಪುರಾಣ ತಿಂದದ್ದು ಹಿಂಸೆಯ ಯಮ-ಬದನೆಕಾಯಿ” ಎಂದು ನಡೆಗೂ- ನುಡಿಗೂ ಸಂಬಂಧವಿರದ ಬಿರುಕನ್ನು ತೋರುತ್ತದೆ. ಜೀವದಯೆಯ ಉಪನ್ಯಾಸ ನೀಡುತ್ತಲೇ ಕೊಲೆಯ ಕಲೆಯಲ್ಲಿ ಪಳಗಿರುವ ಅದರ ಸಂಸ್ಕೃತಿ ಪ್ರೀತಿಯನ್ನು, “ಹೂವಿಗೆ ಬೇಗೆ ಹಚ್ಚಿದರು, ಅದರ ಸೌಂದರ್‍ಯ ಮೆಚ್ಚಿದರು, ಸಂಸ್ಕೃತಿ ಜಂಭ ಕೊಚ್ಚಿದರು” ಎಂದು ಸ್ಪಷ್ಟವಾಗಿಯೇ ವ್ಯಾಖ್ಯಾನಕ್ಕೊಳಪಡಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆ ಗುಂಪನ್ನು ಹಿಂಸಾಭಕ್ತರೆಂದೇ ಹೆಸರಿಸುತ್ತದೆ. ಗಾಂಧಿಯನ್ನು ಕುರಿತ ಅವರ “ಮಹಾತ್ಮಾ” ಕವನವಾದರೋ, ಈ ಕೊಲೆಗಡುಕ ಮಂದಿಯನ್ನು “ಮುಗಿದ ಕೈಗಳಲಿ ಮುಚ್ಚಿದ ದೊಣ್ಣಿ!”, “ರೇಸಿಮೆಯ ತೊಟ್ಟವರು, ಬಂಗಾರ ಇಟ್ಟವರು, ಬೆರಳಾಡಿಸಿದಲ್ಲಲ್ಲಿ ’ವಂದೇ ಮಾತರಂ’ ಗೀತ” ಎಂದು ನಿಖರವಾಗಿ ವಿವರಿಸಿಕೊಡುತ್ತದೆ. ಗಾಂಧಿಯನ್ನು ಇಲ್ಲವಾಗಿಸಿದ ಈ ಅವಿವೇಕಿ ಗುಂಪನ್ನು “ಆ ಜನ ದನ, ತಾಯಿ” ಎಂಬ ಸೊಲ್ಲಂತೂ “ಮಹಾತ್ಮ” ಕವನದುದ್ದಕ್ಕೂ ಪಲ್ಲವಿಯಂತೆ ಅನುರಣಿಸುತ್ತದೆ.

ಚಾರಿತ್ರಿಕವಾಗಿ ಗಾಂಧೀಜಿಯ ರಾಜಕೀಯ ಪ್ರವೇಶ ಕಾಂಗ್ರೆಸಿನೊಳಗಿನ ಹಿಂದೂ ಮೂಲಭೂತವಾದಿ ಶಕ್ತಿಗಳಿಗೊಂದು ಹಿನ್ನಡೆಯೇ. 200px-MKGandhi[1]ಕೋಮುವಾದವು ನಿರೂಪಿಸಿದ ಧರ್ಮಾಧಾರಿತ ರಾಷ್ಟ್ರೀಯತೆಗೆ ಪ್ರತಿಯಾಗಿ ಗಾಂಧಿ ಎಲ್ಲ ಮತೀಯರನ್ನು ಸಮಾನವಾಗಿ ಒಳಗೊಳ್ಳುವ ಚಿಂತನೆಗಾಗಿ ತಮ್ಮ ಜೀವಿತವನ್ನೇ ಪಣಕ್ಕಿಟ್ಟವರು. ಆದರೆ ಮುಸ್ಲಿಂ ಮೂಲಭೂತವಾದವೂ ಇಷ್ಟೇ ಅಪಾಯಕಾರಿಯಾಗಿ ಬೆಳೆದು, ಅಸಹಾಯಕತೆಯ ಕಟ್ಟಕಡೆಯಲ್ಲಿ ಗಾಂಧಿ ದೇಶವಿಭಜನೆಗೆ ಸಮ್ಮತಿಸಬೇಕಾಗಿ ಬಂದುದು ಚಾರಿತ್ರಿಕ ಸತ್ಯ. ‘ಭಾರತದ ವಿಭಜನೆಯಲ್ಲಿ ನಾನೂ ಪಾಲುಗಾರನೆಂದು ಜನ ಹೇಳದಿದ್ದರೆ ಸಾಕು’ (ಬೊಳುವಾರು ಮಹಮ್ಮದ್ ಕುಂಞಿ, ಪಾಪು ಗಾಂಧಿ ಆದ ಕಥೆ,ಪು.173)ಎಂದು ಸಂಕಟಪಟ್ಟ ಗಾಂಧೀ ಕೈಮೀರಿ ವಿಭಜನೆ ಸಂಭವಿಸಿತ್ತು. ಅದು ಗಾಂಧೀ ಕನಸಿನ “ಸಾಮರಸ್ಯ ಪರಂಪರೆ”ಗೆ ಕೊಟ್ಟ ದೊಡ್ಡ ಏಟಾಗಿತ್ತು. ಗಾಂಧಿಯನ್ನು ಖಳನಾಯಕನಂತೆ ಬಿಂಬಿಸಲು ಒದಗಿದ ಕಾರಣವಾಗಿತ್ತು. ಮತೀಯವಾದಿ ರಾಷ್ಟ್ರೀಯತೆಯ ಪ್ರಸರಣಕ್ಕೆ ಒದಗಿದ ನೀರು ಗೊಬ್ಬರವಾಗಿತ್ತು. ವಿಭಜನೆಯನ್ನೇ ಬಯಸಿದ್ದ ವಿಭಜಕವಾದಿಗಳು ಹೇಳುತ್ತಲೇ ಬಂದ ತೋರಿಕೆಯ ಅಖಂಡ ಭಾರತವು ಗಾಂಧಿ ಪಾಲಿಗೆ ಬರಿಯ ಭೂಖಂಡವಾಗಿರಲಿಲ್ಲ. ಅದು ಮನುಷ್ಯರ ನಡುವಿನ ಸಾಮರಸ್ಯವನ್ನು ಉಳಿಸಿಕೊಡಬಲ್ಲ ಸೌಹಾರ್ದತೆಯ ಮನುಷ್ಯ ಸಂಬಂಧವಾಗಿತ್ತು. ಈ ಸೌಹಾರ್ದತೆಯನ್ನು ವಿರೋಧಿಸಿಕೊಂಡೇ ಬಂದ ಮತೀಯವಾದ ಗಾಂಧಿಯನ್ನೇನೋ ಬಲಿಪಡೆಯಿತು. ಆದರೆ ಅದಕ್ಕೆ ಗಾಂಧೀವಾದವನ್ನು ಬಲಿಪಡೆಯಲಾಗಿಲ್ಲ. ಇದು ಬೇಂದ್ರೆ ಕವನದ ಕೇಂದ್ರಧ್ವನಿಯೂ ಹೌದು.