Monthly Archives: September 2017

ನಾರಾಯಣ ಗುರು ವಿಚಾರ ಕಮ್ಮಟ: ‘ವಿಚಾರ ಕ್ರಾಂತಿಗೆ ಆಹ್ವಾನ’

Naveen Soorinje


ನವೀನ್ ಸೂರಿಂಜೆ


 

ಕೊನೆಗೂ ಮಂಗಳೂರು ವಿಚಾರ ಕ್ರಾಂತಿಗೆ ಸಿದ್ಧವಾಗಿದೆ. ಕೋಮುವಾದದ ದಳ್ಳುರಿಯಲ್ಲಿ ಬೇಯುತ್ತಿದ್ದ ಮಂಗಳೂರಿನ ಬಿಲ್ಲವರು ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ) ಎಂಬ ವೇದಿಕೆಯಡಿಯಲ್ಲಿ ವಿಚಾರ ಮಂಥನಕ್ಕೆ ಮುಂದಾಗಿದ್ದಾರೆ. ಜನಪರ ಹೋರಾಟಗಳಲ್ಲಿ ರಾಜಿರಹಿತವಾಗಿ ತೊಡಗಿಸಿಕೊಂಡಿರುವ ಸುನೀಲ್ ಕುಮಾರ್ ಬಜಾಲ್, ಹಿರಿಯ ವಕೀಲರಾದ ಯಶವಂತ ಮರೋಳಿ ಈ ಪ್ರಯತ್ನದ ನೇತೃತ್ವ ವಹಿಸಿದ್ದಾರೆ. ಈ ಹೊಸ ಚಳುವಳಿಯ ಹಿಂದೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರ ಆಲೋಚನೆಗಳಿವೆ. ಬಿಲ್ಲವ ಸಮುದಾಯ ಈ ರೀತಿ ಹೊಸ ಚಳುವಳಿಗೆ ತೆರೆದುಕೊಂಡಿರುವುದು ವೈದಿಕಶಾಹಿಗಳಿಗೆ, ಕೋಮುವಾದಿಗಳಿಗೆ ಮತ್ತು ಬಳಸಿ ಎಸೆಯುವ ಕ್ಷುದ್ರ ಶಕ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ.

ಕರಾವಳಿಯ ಸಮಕಾಲೀನ ಸಂಧರ್ಭದಲ್ಲಿ ಅತ್ಯಂತ ಸಂದಿಗ್ಧ ಮತ್ತು ಇಕ್ಕಟ್ಟಿನ ಸ್ಥಿತಿಯಲ್ಲಿರುವ ಸಮುದಾಯವೆಂದರೆ ಬಿಲ್ಲವರು. ಶ್ರಮಜೀವಿಗಳೂ ಸಾಂಸ್ಕೃತಿಕವಾಗಿ ಹಿರೀಕರೂ ಆಗಿರುವ ಬಿಲ್ಲವರು ಇಂದು ವೈದಿಕ ಶಕ್ತಿಗಳ ಪಿತೂರಿಗೆ ಸಿಲುಕಿ ಏಳಿಗೆಯ ದಿಕ್ಕನ್ನು ಕಳೆದುಕೊಂಡಿದ್ದಾರೆ. ಫ್ಯೂಡಲ್ ಶಕ್ತಿಗಳ ಆಟಕ್ಕೆ ದಾಳವಾಗಿ ಬಳಕೆಯಾಗುತ್ತಾ ಸ್ವತಂತ್ರ ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ. ಕೋಮು ಹಾಗೂ ಧಾರ್ಮಿಕ ಮೂಲಭೂತವಾದ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡು ಗುತ್ತಿನ ಗೌಜಿಗೆ ‘ಎಳನೀರು ಕೆತ್ತಿ ಕೊಡುವ’ ಕೆಲಸಕ್ಕೆ ಸೀಮಿತರಾಗುತ್ತಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಬಿಲ್ಲವರನ್ನು ದಳ್ಳುರಿಯಿಂದ ಪಾರುಮಾಡಬಲ್ಲ ವಿಚಾರಗಳೆಂದರೆ ನಾರಾಯಣ ಗುರುಗಳು ಚಿಂತನೆಗಳು ಮತ್ತು ಕೋಟಿಚೆನ್ನಯರ ಪ್ರತಿರೋಧದ ಚರಿತ್ರೆಯ ಪುಟಗಳ ಮರು ಓದು. ನಾರಾಯಣ ಗುರುಗಳು ಬಿಲ್ಲವರಿಗೆ ಆಧುನಿಕ ಜಗತ್ತಿನಲ್ಲಿ ಒಂದು ಆಸ್ಮಿತೆಯನ್ನು ಒದಗಿಸಿಕೊಟ್ಟವರು. ಶತಮಾನಗಳ ಶೋಷಣೆಗೆ ಒಳಗಾಗಿ ದೈನ್ಯರಾಗಿದ್ದ ಬಿಲ್ಲವರಿಗೆ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಾನತೆ ಮತ್ತು ಆಧುನಿಕತೆಯ ಹೋರಾಟದಲ್ಲಿ ನೆಲೆ ಹುಡುಕಿಕೊಟ್ಟವರು. ಬಿಲ್ಲವರು ಕಟ್ಟಿಕೊಂಡಿದ್ದ ದೈವ-ದೇವರ, ಸಿರಿ ಪಾಡ್ದನಗಳ ಜಗತ್ತಿನೊಳಗಡೆಯೇ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದವರು.

ನಾರಾಯಣ ಗುರುಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಿಗಲಿದ್ದ ಸಮಾನತೆಯ ಮತ್ತು ಅಗಾಧ ಅವಕಾಶಗಳ ಬದುಕಿಗೆ ಬಿಲ್ಲವರನ್ನು ಸಿದ್ಧಗೊಳಿಸಿದ್ದರು. ಹೊಸಕಾಲದಲ್ಲಿ ತನ್ನ ನ್ಯಾಯದ ಬದುಕಿಗೆ ಹಕ್ಕೊತ್ತಾಯಿಸಲು ಅವರನ್ನು ಬಲಗೊಳಿಸಿದ್ದರು. ಆದರೆ ಹೊಸದಾಗಿ ಹುಟ್ಟಿಕೊಂಡ ರಾಜಕೀಯ ಹಾಗೂ ಆರ್ಥಿಕ ಸನ್ನಿವೇಶದಲ್ಲಿ ಬಿಲ್ಲವರು ಯಾವ ಮಟ್ಟಿನ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾರೆ ಎಂಬುವುದನ್ನು ಅವಲೋಕಿಸಿದ್ದಲ್ಲಿ ಬಿಲ್ಲವರು ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಎಷ್ಟರಮಟ್ಟಿಗೆ ಮುನ್ನಡೆದಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಭೂಸುಧಾರಣೆ ಕಾಯ್ದೆ ಜಾರಿ ಪೂರ್ವದಲ್ಲಿ ಬಿಲ್ಲವರನ್ನು ಜಮೀನ್ದಾರಿ ಬಂಟರು, ಬ್ರಾಹ್ಮಣರು ಹಾಗೂ ಜೈನರು ಯಾವ ರೀತಿ ನಡೆಸಿಕೊಂಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಭೂಸುದಾರಣೆ ಕಾಯ್ದೆ ಜಾರಿ ಬಳಿಕ ಶ್ರಮಿಕ ಬಿಲ್ಲವರು ಕರಾವಳಿಯ ಸಾಂಸ್ಕೃತಿಕ ಬದುಕಿನಲ್ಲಿ ಸಮಾನತೆಯ ಅವಕಾಶಗಳಿಗೆ ಹಕ್ಕೊತ್ತಾಯಿಸಬಹುದು ಹಾಗೂ ಜಮೀನ್ದಾರಿ ಯಜಮಾನಿಕೆಯನ್ನು ಮೆಟ್ಟಿ ನಿಲ್ಲಬಹುದು ಎಂಬುವುದನ್ನು ಅರಿತ ಫ್ಯೂಡಲ್ ವ್ಯವಸ್ಥೆ ಹಿಂದುತ್ವವಾದಿ ಸಂಘಟನೆಗಳ ರೂಪದಲ್ಲಿ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿತು. ನಾರಾಯಣ ಗುರುಗಳ ಸಮಾನತೆ ಹಾಗೂ ಸಾಮರಸ್ಯದ ಚಿಂತನೆಗಳ ಜಾಗದಲ್ಲಿ ಮತಭ್ರಾಂತಿಯನ್ನು ಬಿಲ್ಲವರಲ್ಲಿ ಪ್ರಸರಿಸಿತು. ಮುಂದೆ ಬರಲಿರುವ ಅನಾಹುತಗಳ ಅರಿವೇ ಇಲ್ಲದೆ ಬಿಲ್ಲವರು ಗುತ್ತುಗಳ ಖೆಡ್ಡಾಕ್ಕೆ ಬಿದ್ದರು.

ಹಿಂದುತ್ವವಾದಿ ಸಂಘಟನೆಗಳ ಪ್ರಧಾನ ಕಾರ್ಯಸೂಚಿ ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಯಲ್ಲಿಡುವುದೇ ಆಗಿದೆ. ಈ ವರೆಗಿನ ಹಿಂದುತ್ವವಾದಿ ಸಂಘಟನೆಗಳ ಕಾರ್ಯವಿಧಾನ ಮತ್ತು ಪರಿಣಾಮವನ್ನು ಅವಲೋಕಿಸಿದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಭೂಮಿ ಕಳೆದುಕೊಂಡ ಬಂಟರು, ಬ್ರಾಹ್ಮಣರು ಮತ್ತು ಜೈನರು ವ್ಯಾಪಾರ, ಉದ್ಯೋಗದ ಮೂಲಕ ಮತ್ತಷ್ಟೂ ಬಲಿಷ್ಠರಾದರೆ, ಭೂಮಿ ಪಡೆದುಕೊಂಡು ಶ್ರೇಣಿಕೃತ ವ್ಯವಸ್ಥೆಯನ್ನು ದಾಟಿ ಬರಬೇಕಿದ್ದ ಬಿಲ್ಲವರು ಫ್ಯೂಡಲ್ ವ್ಯವಸ್ಥೆ ಅವರನ್ನು ಹದ್ದುಬಸ್ತಿನಲ್ಲಿಡಲು ಕೊಟ್ಟ ವೈದಿಕ ಧರ್ಮ ಸಂರಕ್ಷಣೆಯ ಕೈಂಕರ್ಯವನ್ನು ಪಡೆದು ಕಾಲದ ಓಟದಲ್ಲಿ ಹಿಂದಕ್ಕೆ ತಳ್ಳಲ್ಪಟ್ಟರು. ತತ್ಪರಿಣಾಮವಾಗಿ ಭೂಮಿ ಇಲ್ಲದೆ ಕೃಷಿ ಕಾರ್ಮಿಕರಾಗಿದ್ದ ಕಾಲಘಟ್ಟದ ಪಾಡಿಗಿಂತಲೂ ಭೀಕರವಾದ ಸಾಮಾಜಿಕ ರಾಜಕೀಯ ಬಿಕ್ಕಟ್ಟನ್ನು ಈಗ ಬಿಲ್ಲವ ಸಮುದಾಯ ಅನುಭವಿಸುತ್ತಿದೆ. ಧರ್ಮ ರಕ್ಷಣೆಗಾಗಿ ಬಿಲ್ಲವರು ಕೊಲೆಗೀಡಾಗುತ್ತಿದ್ದಾರೆ ಮತ್ತು ಕೊಲೆಗಾರರಾಗುತ್ತಿದ್ದಾರೆ. ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ನಿಧಾನವಾಗಿ ಹಿನ್ನಲೆಗೆ ಸರಿಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಾರಾಯಣ ಗುರು ವಿಚಾರ ಕಮ್ಮಟ ಕತ್ತಲ್ಲೆಯಲ್ಲಿ ಬೆಳಕಿನ ಕಿಂಡಿಯಂತೆ ಕಂಡುಬರುತ್ತಿದೆ.

ದಿನೇಶ್ ಅಮೀನ್ ಮಟ್ಟುರವರು ಹೇಳುವಂತೆ ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ)ದ ಯೋಜನೆ ತರ್ಕ ನಡೆಸಲೂ ಅಲ್ಲ, ಗೆಲ್ಲುವುದಕ್ಕೂ ಅಲ್ಲ, ಪರಸ್ಪರ ತಿಳಿದುಕೊಳ್ಳಲು ಮತ್ತು ತಿಳಿಸಿಕೊಡಲು ಎಂಬ ನಾರಾಯಣ ಗುರುಗಳ ಆಶಯದಂತೆ ನಡೆಯುತ್ತದೆ. ಬಿಲ್ಲವರ ಕಿರು ಸಂಸ್ಕೃತಿ ವೈದಿಕ ಸಂಸ್ಕೃತಿಗಿಂತ ಉದಾತ್ತ ಚಿಂತನೆಯದ್ದು ಮತ್ತು ವಿಶಾಲ ಒಳಗೊಳ್ಳುವಿಕೆ ಇರುವಂತದ್ದು; ಸಾಮರಸ್ಯದ ಮತ್ತು ಅನ್ಯಾಯದ ವಿರುದ್ಧ ಸಿಡಿದೇಳುವ ಪರಂಪರೆಯನ್ನು ಹೊಂದಿರುವಂತದ್ದು. ಅದನ್ನು ಇಂದು ಮತ್ತೆ ಬಿಲ್ಲವರಿಗೆ ನೆನಪಿಸಿಕೊಡಬೇಕಾಗಿದೆ. ಸತ್ಯದ ಹಾದಿಯಲ್ಲಿ, ನ್ಯಾಯದ ಬದುಕಿಗೆ ಜೀವದ ಕೊನೆ ಉಸಿರಿನ ತನಕವೂ ಹೋರಾಡಿದ ಕೋಟಿ ಚೆನ್ನಯರ ಹಕ್ಕೊತ್ತಾಯದ ಕಥನವನ್ನು ಬಿಲ್ಲವರು ಮತ್ತೆ ಮತ್ತೆ ಓದಿಕೊಳ್ಳಬೇಕಾಗಿದೆ. ವೈದಿಕರ ಗುಡಿಗಳನ್ನು ಸ್ವಚ್ಚಗೊಳಿಸುವುದನ್ನು ಬಿಟ್ಟು ತಮ್ಮ ಅವರ ಸ್ವಾಭಿಮಾನಿ ಬದುಕಿನ ಸ್ಮಾರಕಗಳಂತಿರುವ ಗರಡಿಗಳಿಗೆ ಹಿಂದಿರುಗಬೇಕಿದೆ. ಅಂತಹ ಪ್ರಯತ್ನ ಇಂದು ಬಿಲ್ಲವ ಸಮುದಾಯಕ್ಕೆ ಸೇರಿದ ಸುನೀಲ್ ಕುಮಾರ್ ಬಜಾಲ್ ಎಂಬ ಪ್ರಾಮಾಣಿಕ ಚಳುವಳಿಗಾರನ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ.

ಈಗಲೂ ಮಂಗಳೂರಿನಲ್ಲಿ ಕೋಮುವಾದದ ಪ್ರಸರಣಕ್ಕೆ ತಡೆಹಾಕಿ ಸಮಾನತೆಯತ್ತ, ಸಬಲೀಕರಣದತ್ತ ಸಮಾಜವನ್ನು ಕೊಂಡೊಯ್ಯುವ ಶಕ್ತಿ ಇರುವುದು ಬಿಲ್ಲವರಿಗೆ ಮಾತ್ರ. ಇಂದಿಗೂ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಾರಾಯಣ ಗುರು ಸೇವಾ ಸಂಘಗಳಿವೆ. ಎಲ್ಲಾ ತಾಲೂಕುಗಳಲ್ಲಿ ಬಿಲ್ಲವ ಯುವ ವಾಹಿನಿ ಇದೆ. ನಾರಾಯಣ ಗುರುಗಳನ್ನು ಆರಾಧಿಸುವ ಈ ದೊಡ್ಡ ಬಳಗವನ್ನು ಅವರ ಸಿದ್ದಾಂತದ ಕಾರ್ಯಪಡೆಯನ್ನಾಗಿಸಬೇಕಾಗಿದೆ.

ಸುಮಾರು ಮೂವತ್ತು ವರ್ಷಗಳ ಹಿಂದೆ ಬಿಲ್ಲವರ ಸಾಂಸ್ಕೃತಿಕ ಆಂದೋಲನ ಯುವ ವಾಹಿನಿ ಪ್ರಾರಂಭಿಸಿದವರಲ್ಲಿ ದಿನೇಶ್ ಅಮೀನ್ ಮಟ್ಟು ಕೂಡಾ ಒಬ್ಬರು. ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಆಶಯದಡಿಯಲ್ಲಿ ಪ್ರಾರಂಭವಾದ ಬಿಲ್ಲವ ಯುವವಾಹಿನಿ ಇಂದು ಆಟಿಡೊಂಜಿ ದಿನ, ಕೆಸರುಗದ್ದೆ ಕಾರ್ಯಕ್ರಮಗಳನ್ನು ಮಾಡುತ್ತಾ ಮೂಲ ಅಶಯವನ್ನು ಮರೆತಿದೆ. ಈ ನಿಟ್ಟಿನಲ್ಲಿ ಬಿಲ್ಲವ ಯುವ ವಾಹಿನಿ, ನಾರಾಯಣ ಗುರು ಸೇವಾ ಸಂಘಗಳನ್ನು ನಾರಾಯಣ ಗುರು ವಿಚಾರ ಕಮ್ಮಟ ಒಳಗೊಂಡರೆ ವಿಚಾರ ಕ್ರಾಂತಿಯ ದಿನಗಳು ದೂರವಿಲ್ಲ.

ಉತ್ತಮ ನಾಳೆಗಳಿಗಾಗಿ, ಆ ನಾಳೆಗಳಲ್ಲಿ ನಾವು ಇರಲಿಕ್ಕಾಗಿ, ಆ ನಾಳೆಗಳು ನಮ್ಮದೇ ಆಗಲಿಕ್ಕಾಗಿ, ನಾರಾಯಣ ಗುರುಗಳ ತತ್ವಾದಾರ್ಶಗಳನ್ನು ಪಾಲಿಸೋಣಾ, ಸುಂದರ ಸಮಾಜದ ನಿರ್ಮಾಣಕ್ಕೆ ಪಣತೊಡೋಣ ಎಂಬ ಆಶಯದಲ್ಲಿ ಪ್ರಾರಂಭವಾದ ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ) ಯಶಸ್ವಿಯಾದರೆ ಬಿಲ್ಲವರ ನಾಳೆಗಳು ಮತ್ತು ದಕ್ಷಿಣ ಕನ್ನಡದ ನಾಳೆಗಳು ಸುಂದರವಾಗಲಿದೆ.

 

ದಲಿತ-ಮುಸ್ಲಿಂ ಯುವತಿಯರ ಪ್ರೇಮ ವಿವಾಹಗಳು ಮತ್ತು ಬಿಜೆಪಿ ಕಾಂಗ್ರೆಸ್ ರಾಜಕಾರಣ

Naveen Soorinje


ನವೀನ್ ಸೂರಿಂಜೆ


 

ದಲಿತ ಹುಡುಗಿಯನ್ನು ಮದುವೆಯಾಗುವ ಪಂಥಾಹ್ವಾನಗಳು ಕಾಂಗ್ರೆಸ್ ಬಿಜೆಪಿ ಮದ್ಯೆ ನಡೆಯುತ್ತಿವೆ. ಇಷ್ಟಕ್ಕೂ ದಲಿತ ಹುಡುಗಿಯನ್ನು ಮನೆಗೆ ತಂದುಕೊಳ್ಳೋದು(!?) ದೊಡ್ಡ ಸಂಗತಿಯಾಗಿ ಏನೂ ಉಳಿದುಕೊಂಡಿಲ್ಲ. ಮೇಲ್ಜಾತಿಯ ಹುಡುಗಿಯನ್ನು ದಲಿತ ಹುಡುಗ ಮದುವೆಯಾಗುವ ಸವಾಲಿಗಿಂತ ಇದು ಕಠಿಣವಾದುದಲ್ಲ.

ರಾಹುಲ್ ಗಾಂಧಿಗೆ ದಲಿತ ಹೆಣ್ಣು ಮಗಳನ್ನು ಮದುವೆ ಮಾಡಿಸಲು ಮುಂದೆ ಬಂದಿರೋ ಬಿಜೆಪಿ ಮಾಜಿ ಸಚಿವ ಗೋವಿಂದ ಕಾರಜೋಳ್, ಬಿಎಸ್ ಯಡಿಯೂರಪ್ಪನವರ ಪರಮಾಪ್ತರು. ದಲಿತರಾಗಿರುವ ಗೋವಿಂದ ಕಾರಜೋಳ್ ಗೆ ಯಡಿಯೂರಪ್ಪರ ಕುಟುಂಬದ ಹುಡುಗನಿಗೆ ದಲಿತ ಹುಡುಗಿಯನ್ನು ಮದುವೆ ಮಾಡಿಸೋದು ದೊಡ್ಡ ಸಮಸ್ಯೆಯಾಗಲಿಕ್ಕಿಲ್ಲ. ಆದರೆ ಯಡಿಯೂರಪ್ಪರ ಕಡೆಯ  ಹುಡುಗಿಯನ್ನು ದಲಿತ ಹುಡುಗನೊಬ್ಬನ ಜೊತೆಗಿನ ವಿವಾಹವನ್ನು ಕಾರಜೋಳರು ಒಮ್ಮೆ ಕಲ್ಪಿಸಿಕೊಳ್ಳಲಿ. ಕನಸಲ್ಲೂ ನಡುಗಬೇಕಾಗುತ್ತದೆ.

ದಲಿತ ಯುವತಿಯನ್ನು ಮದುವೆಯಾಗಲಿ ಎಂದು ಬಿಜೆಪಿಗರಿಗೆ ಸಿಎಂ ಸಿದ್ದರಾಮಯ್ಯ ಹಾಕಿದ ಸವಾಲೇ ಸರಿಯಿಲ್ಲ. ಯಾವುದೇ ಮೇಲ್ವರ್ಗದ ಕುಟುಂಬದ ಯುವಕ ಕೆಳವರ್ಗದ ಯುವತಿಯನ್ನು ಮದುವೆಯಾಗುವುದಕ್ಕೆ ಯಾವುದೇ ಸಮಾಜವು ವಾದ ವಿವಾದದ ಬಳಿಕ ಕೊನೆಗಾದರೂ ಒಪ್ಪಿಕೊಳ್ಳುತ್ತದೆ. ಕಾರಣ, ಯುವತಿಯನ್ನು ಗಂಡನ ಮನೆಯ ಆಚಾರ ವಿಚಾರ, ಸಂಪ್ರದಾಯಕ್ಕೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಮತ್ತು ಅಗತ್ಯ ಬಿದ್ದರೆ ಮತಾಂತರ ಮಾಡಬಹುದು ಎಂಬ ಕಾರಣಕ್ಕೆ. ಜಾತಿ ಎನ್ನೋದು ತಂದೆಯ ಜಾತಿಯ ಮೂಲಕ ಮುಂದುವರೆಯೋದ್ರಿಂದ ಯುವತಿ ಯಾವ ಜಾತಿಯಾದರೂ ಹುಟ್ಟೋ ಮಗು ತಂದೆಯ ಜಾತಿಯಾಗೋದ್ರಿಂದ ಭವಿಷ್ಯದಲ್ಲಿ ಜಾತಿ ಮರ್ಯಾದೆಗೆ ದಕ್ಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಯುವತಿ ಕೆಳ ವರ್ಗಕ್ಕೆ ಸೇರಿದರೂ ದುರಂತಗಳು ಶೇಕಡಾವಾರು ಕಡಿಮೆ. ಅದೇ ಯುವತಿ ಬ್ರಾಹ್ಮಣ ಸಮುದಾಯಕ್ಕೋ, ಒಕ್ಕಲಿಗ, ಬಂಟ, ರೆಡ್ಡಿ ಸಮುದಾಯಕ್ಕೋ ಸೇರಿದವಳಗಾಗಿದ್ದು ಯುವಕ ದಲಿತನಾಗಿದ್ದರೆ ಅದರ ಕತೆ ಕೇಳೋದೆ ಬೇಡ!

2017 ಎಪ್ರಿಲ್ ನಲ್ಲಿ ಬೆಳಗಾವಿ ಗಡಿ ಭಾಗದಲ್ಲಿ ತಂದೆಯೇ ಮಗಳನ್ನು ಕೊಡಲಿಯಿಂದ ಕಡಿದು ಕೊಲೆ ಮಾಡುತ್ತಾನೆ. ಬಾಬು ಶಿವಾರೆ ಎಂಬಾತ ತನ್ನ ಮಗಳಾಗಿರುವ ಮಣೀಷಾಳನ್ನು ಈ ರೀತಿ ಕೊಲ್ಲುವ ನಿರ್ಧಾರಕ್ಕೆ ಬರಲು ಕಾರಣವಾಗಿದ್ದು ಮಗಳ ಪ್ರೇಮ. ಮೇಲ್ವರ್ಗಕ್ಕೆ ಸೇರಿರೋ ನನ್ನ ಮಗಳು ದಲಿತರ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಕೊಡಲಿಯಿಂದ ಕಡಿದು ಕೊಲೆ ಮಾಡುತ್ತಾನೆ. ದಲಿತ ಹುಡುಗ ಮತ್ತಾತನ ಕುಟುಂಬಕ್ಕೆ ಇನ್ನಿಲ್ಲದ ಹಿಂಸೆ ನೀಡಲಾಗುತ್ತದೆ.

ಇದೇ ಗೋವಿಂದ ಕಾರಜೋಳ ಪ್ರತಿನಿಧಿಸುವ ಬಿಜೆಪಿ ಪ್ರಭಾವಿ ಸಂಸದನೊಬ್ಬನ ಮಗಳು ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದಾಗ ದಲಿತ ಹುಡುಗನಿಗೆ ಚಿತ್ರ ಹಿಂಸೆ ನೀಡುತ್ತಾರೆ. ಆ ಪ್ರಭಾವಿ ಬಿಜೆಪಿ ಸಂಸದರ ಹೆಸರಿನ ಸಹಿತ ಸ್ಥಳೀಯ ಪತ್ರಿಕೆಯಲ್ಲಿ/ವೆಬ್ ಗಳಲ್ಲಿ ಸುದ್ದಿ ಪ್ರಕಟವಾಗುತ್ತದೆ. ಕೊನೆಗೂ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಸಂಸದರು ತನ್ನ ಮಗಳನ್ನು ಪ್ರೇಮಿಸುತ್ತಿದ್ದ ದಲಿತ ಯುವಕನನ್ನು ದೂರ ಮಾಡುತ್ತಾರೆ.

ಮೇಲ್ವರ್ಗಗಳು ತನ್ನ ಮನೆ ಹುಡುಗಿ ಕೆಳವರ್ಗದ ಯುವಕರ ಜೊತೆ ಸಂಬಂಧ ಬೆಳೆಸುವುದನ್ನು ಸಹಿಸೋದೆ ಇಲ್ಲ. ಇತಿಚ್ಚೆಗೆ ಹಳ್ಳಿಯಲ್ಲಿ ಪೌರೋಹಿತ್ಯ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಹುಡುಗರು, ತಮಗೆ ಬ್ರಾಹ್ಮಣ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಕಾಶ್ಮೀರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕೆಳಜಾತಿಯ ಬಡ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ. ಅದಕ್ಕಾಗಿ ವಧುವರರ ಕೂಟಗಳನ್ನೇ ನಡೆಸುತ್ತಿದ್ದಾರೆ. ಅಂದರೆ ಆಕೆ ಕೆಳವರ್ಗಕ್ಕೆ ಸೇರಿದವಳಾದರೂ ಆಕೆಯನ್ನು ಮತಾಂತರ ಮಾಡಬಹುದು ಮತ್ತು ತಮ್ಮ ಸಂಪ್ರದಾಯಕ್ಕೆ ಹೊಂದಿಸಿಕೊಳ್ಳಬಹುದು ಎಂಬ ಭರವಸೆಯಿಂದ ಮದುವೆಯಾಗುತ್ತಿದ್ದಾರೆ. ಅದೇ ಬ್ರಾಹ್ಮಣ ಹುಡುಗಿಯೊಬ್ಬಳು ಹಳ್ಳಿಯ ದಲಿತ ಅಥವಾ ಹಿಂದುಳಿದ ಹುಡುಗನನ್ನು ಮದುವೆಯಾಗುವುದು ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಹಾಗೇನಾದರೂ ಆದರೆ ಆ ಬ್ರಾಹ್ಮಣ ಯುವತಿಯ ಮನೆಯವರು ಯುವತಿಯ ಶ್ರಾಧ್ದವನ್ನೂ ಮಾಡಿ ಮುಗಿಸಿ ಸಂಬಂಧ ಕಳೆದುಕೊಂಡ ಉದಾಹರಣೆಯೂ ಹಲವಿದೆ.

ಅಂತರ್ಜಾತಿ ವಿವಾಹಗಳು ಹೆಚ್ಚಬೇಕು ಎಂದು ಸಿಎಂ ಸಿದ್ದರಾಮಯ್ಯ ಸರಕಾರ ಯೋಜನೆಯೊಂದನ್ನು ರೂಪಿಸಿದೆ.  ದಲಿತ ಯುವತಿಯನ್ನು ದಲಿತೇತರ ಯುವಕ ವಿವಾಹವಾದರೆ 3 ಲಕ್ಷ ರೂಪಾಯಿ ಹಾಗೂ ದಲಿತ ಪುರುಷ ಇತರೆ ಜಾತಿಯ ಮಹಿಳೆಯನ್ನು ವಿವಾಹವಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಸರಕಾರದ ಈ ಯೋಜನೆ ಅತ್ಯುತ್ತಮವಾಗಿದ್ದರೂ ಸಣ್ಣ ತಪ್ಪಿದೆ. ಯುವಕ ಕುಟುಂಬದ ಆರ್ಥಿಕ ಆಧಾರ ಸ್ಥಂಭ ಆಗಿರೋದ್ರಿಂದಲೋ, ತಂದೆಯ ಜಾತಿಯೇ ಕುಟುಂಬದ ಜಾತಿಯಾಗುತ್ತದೆ ಎಂಬ ಕಾರಣಕ್ಕೋ ಮೇಲ್ವರ್ಗದ ಯುವಕ ದಲಿತ ಯುವತಿಯನ್ನು ಮದುವೆಯಾದರೆ ಅಂತಹ ದುರಂತಗಳು ಸಂಭವಿಸೋದಿಲ್ಲ. ನಮ್ಮ ಜಾತಿಯ ಯುವತಿ ಮೇಲ್ವರ್ಗದ ಯುವಕನನ್ನು ಮದುವೆಯಾದಳೆಂದು ದ್ವೇಷದಿಂದ ದಲಿತರು ಮೇಲ್ವರ್ಗದ ಯುವಕನ ಮನೆ ಮಠ ಸುಟ್ಟ ಉದಾಹರಣೆ ಇಲ್ಲ. ದಲಿತರು ಮೇಲ್ವರ್ಗದ ಯುವಕನನ್ನು ಊರು ಬಿಟ್ಟು ಓಡಿಸಿದ ಉದಾಹರಣೆಯೂ ಇಲ್ಲ. ಮೇಲ್ವರ್ಗದ ಯುವಕನ ಜೊತೆ ಮದುವೆಯಾದಳೆಂದು ದಲಿತರು ಯುವತಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಉದಾಹರಣೆಯೂ ಇಲ್ಲ.  ಆದರೆ ದಲಿತ ಯುವಕನೊಬ್ಬ ಇತರೆ ಜಾತಿಯ ಯುವತಿಯನ್ನು ಪ್ರೀತಿಸಿದಾಗ ಇಬ್ಬರೂ ಊರು ಬಿಟ್ಟು ಓಡಿ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಇಬ್ಬರಿಗೂ ಸಾಮಾಜಿಕ ಬಹಿಷ್ಕಾರಗಳು ಹಾಕಲ್ಪಡುತ್ತದೆ.  ಊರು ಬಿಟ್ಟು ಬಂದು ಹೊಸ ಸಮಾಜದಲ್ಲಿ ಹೊಸದಾಗಿ ಆರ್ಥಿಕ, ಸಾಮಾಜಿಕ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಆದ್ದರಿಂದ ದಲಿತ ಯುವಕನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ ರಾಜ್ಯ ಸರಕಾರವು ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಬೇಕು.

ಇದರ ಹೊರತುಪಡಿಸಿ, ಹಿಂದೂ ಮುಸ್ಲಿಂ ಮದುವೆಗಳನ್ನೇ ನೋಡಿ. ಯುವತಿ ಹಿಂದೂವಾಗಿದ್ದುಕೊಂಡು ಯುವಕ ಮುಸ್ಲೀಮನಾಗಿದ್ದರೆ ಕೋಮುಗಲಭೆಯೇ ನಡೆದುಹೋಗುತ್ತದೆ. ಇಷ್ಟೊಂದು ಭೀಕರವಾಗಿ ಮುಸ್ಲೀಮರನ್ನು ವಿರೋಧಿಸುವ ಕೋಮು/ಜಾತಿವಾದಿಗಳು ಹುಡುಗಿ ಮುಸ್ಲೀಮಳಾಗಿದ್ದು ಹುಡುಗ ಹಿಂದುವಾಗಿದ್ದರೆ ಮದುವೆ ಮಾಡಿಕೊಡ್ತಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಗೋವಿಂದ ಕಾರಜೋಳರ ದಲಿತ ವಿವಾಹದ ಸವಾಲುಗಳು ನಿಜಕ್ಕೂ ಪರಿವರ್ತನೆಗಾಗಿ ಪ್ರಾಮಾಣಿಕ ಸವಾಲುಗಳಾಗಿದ್ದರೆ, ನಿಮ್ಮ ಸವಾಲನ್ನು ಹೀಗೆ ಬದಲಿಸಿ : “ನಿಮಗೆ ನಿಜವಾಗಿಯೂ ಸಮಾನತೆಯನ್ನು ಸಾಧಿಸಬೇಕಿದ್ದರೆ ದಲಿತ ಯುವಕರ ಜೊತೆ ಮೇಲ್ವರ್ಗದ ಯುವತಿ ಮದುವೆಯಾಗುವುದನ್ನು ಪ್ರೋತ್ಸಾಹಿಸಿ. ಅವರ ಪ್ರೀತಿಯನ್ನು ಬೆಂಬಲಿಸಿ”

ಇದೇ ರೀತಿಯ ಸವಾಲನ್ನು ಮುಸ್ಲೀಮರ ವಿಷಯದಲ್ಲೂ ಹಾಕಿಕೊಂಡರೆ ಅದೊಂದು ಒಳ್ಳೆ ರಾಜಕಾರಣವಾಗುತ್ತದೆ.