Category Archives: ಪ್ರಸಾದ್ ರಕ್ಷಿದಿ

ನಮ್ಮೂರಿನ “ಯೆತ್ನಳ್ಳ” ಹೊಳೆಯಾದದ್ದು

– ಪ್ರಸಾದ್ ರಕ್ಷಿದಿ

ನಮ್ಮೂರಿನ ರಂಗ ಚಟುವಟಿಕೆಗಳು ಮತ್ತು ಆಮೂಲಕ ನಾವು ಕಟ್ಟಿಕೊಂಡ ಬದುಕು, ಹೋರಾಟಗಳು ದುಖಃ-ಸಂಭ್ರಮಗಳು, ಅದರ ಮೂಲಕ ಹೊರಜಗತ್ತಿನೊಡನೆ ನಾವು ನಡೆಸುತ್ತಿರುವ ಸಂವಾದ, ಈ ಎಲ್ಲದರ ಜೊತೆ ಎತ್ತಿನ ಹಳ್ಳದ ಸಂಬಂಧವಿದೆ. ಸಂಬಂಧ ಅನ್ನುವುದು ಯಾವಾಗಲೂ ದೊಡ್ಡದೇ.

“ಲಕ್ಷಯ್ಯ” ಎಂಬ ಅನಕ್ಷರ ಕೂಲಿಕಾರ್ಮಿಕನೊಬ್ಬ, ಸ್ವಾಭಿಮಾನಿಯಾಗಿ, ಸ್ವಾಧ್ಯಾಯಿಯಾಗಿ ಅಕ್ಷರಕಲಿತು, ತಲೆಯೆತ್ತಿ ನಿಲ್ಲುವ ಘಟನೆ (ನೋಡಿ: ಇದೇ ಲೇಖಕನ ‘ಬೆಳ್ಳೇಕೆರೆ ಹಳ್ಳಿ ಥೇಟರ್’) ಮುಂದೆ ನಮ್ಮೂರಿನ ರಾತ್ರಿ ಶಾಲೆಗೆ, ಆ ಶಾಲೆಯ ಅಕ್ಷರದಾಹಿಗಳ ಮೂಲಕ ನಮ್ಮೆಲ್ಲ ಸಾಂಸ್ಕøತಿಕ ಸಾಹಸಗಳಿಗೆ ಕಾರಣವಾಯಿತು. “ಲಕ್ಷ್ಮಯ್ಯ”ನ ಸ್ವಾಧ್ಯಾಯದ ಹಿನ್ನೆಲೆಯಲ್ಲಿ ಎತ್ತಿನ ಹಳ್ಳದ ಸಂಗೀತವಿದೆ. ಆತ ನನ್ನಿಂದ ಕಾಗುಣಿತವನ್ನು ಹೇಳಿಸಿಕೊಂಡು ಗುಟ್ಟಾಗಿ ಯಾರಿಗೂ ತಿಳಿಯದಂತೆ ರಾಗವಾಗಿ ಹಾಡಿ ಬಾಯಿಪಾಠ ಮಾಡಿಕೊಂಡದ್ದು ಇದೇ ಎತ್ತಿನ ಹಳ್ಳದಲ್ಲಿ ಸ್ನಾನ ಮಾಡುತ್ತ, ಈಜಾಡುತ್ತ. ಎತ್ತಿನ ಹಳ್ಳದ ನೀರಿನಲ್ಲಿ ಗುಣಿತಾಕ್ಷರಗಳು ಅನುರಣಗೊಂಡಿವೆ.

ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿರುವ ಮೂರ್ಕಣ್ಣು ಗುಡ್ಡ ಬೆಟ್ಟಸಾಲಿನಲ್ಲಿ ಎತ್ತಿನ ಹಳ್ಳ ಹುಟ್ಟುತ್ತದೆ. ಅಲ್ಲಿ ಮೂರು ತೊರೆಗಳು ಹುಟ್ಟುತ್ತವೆ. ಎತ್ತಿನಹಳ್ಳ, ಚಿಟ್ಟನಹಳ್ಳ ಮತ್ತು ಜಪಾವತಿ. yettinahole_streamಉಳಿದೆರಡು ತೊರೆಗಳು ಪೂರ್ವಕ್ಕೆ ಹರಿದು ಹೇಮಾವತಿಯ ಮಡಿಲಿಗೆ ಬಿದ್ದರೆ, ಎತ್ತಿನಹಳ್ಳ ಪಶ್ಚಿಮಾಭಿಮುಖಿ. ಇದರ ಹರಿವು, ಎಂಟ್ಹತ್ತು ಕಿಲೋಮೀಟರುಗಳು ಅಷ್ಟೆ. ನಂತರ ಶಿರಾಡಿ ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಲೀನವಾಗುತ್ತದೆ.

ನಾವೆಲ್ಲ ಚಿಕ್ಕವರಿದ್ದಾಗ ಬೇಸಗೆಯ ರಜಾದಿನಗಳಲ್ಲಿ ಕಾಲ ಕಳೆಯುತ್ತಿದ್ದುದು, ಈಜು ಕಲಿತದ್ದು ಎತ್ತಿನ ಹಳ್ಳದಲ್ಲೇ ಆ ಕಾಲದಲ್ಲಿ ಮಧ್ಯಾಹ್ನದ ವೇಳೆಗೆ ನೂರಾರು ದನಕರುಗಳನ್ನು ನೀರಿಗಾಗಿ ಎತ್ತಿನಹಳ್ಳಕ್ಕೆ ತರುತ್ತಿದ್ದರು. ಆಗ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ಗೋಮಾಳವೂ ಇತ್ತು. ದನಕಾಯುವ ಹುಡುಗರ ದಂಡೇ ಅಲ್ಲಿ ನೆರೆಯುತ್ತಿತ್ತು. ಬುಗುರಿ, ಚಿಣ್ಣಿಂದಾಡು ಆಡುತ್ತಾ, ಬೀಡಿ ಸೇದುತ್ತ, ನಿತ್ಯ ಜಲಕ್ರೀಡೆಯ ವೈಭೋಗದಲ್ಲಿದ್ದ ಆ ಹುಡುಗರನ್ನು ಕಂಡಾಗ. ಶಾಲೆಗೆ ಹೋಗಲೇಬೇಕಾದ ಶಿಕ್ಷೆಗೊಳಗಾಗಿದ್ದ ನಮ್ಮಂತವರಿಗೆ, ದನಕಾಯುವವರು ಪರಮ ಸುಖಿಗಳೆಂದು ಅನ್ನಿಸಿ ಬುಗುರಿ, ಚಿಣ್ಣಿದಾಂಡಿಗಾಗಿ ಅವರ ಸ್ನೇಹಕ್ಕೆ ಹಾತೊರೆಯುತ್ತಿದ್ದೆವು. ಹರಕು ಬಟ್ಟೆ ತೊಟ್ಟು ಒಪ್ಪೊತ್ತಿನ ಊಟದ ಶ್ರೀಮಂತಿಕೆಯಲ್ಲಿದ್ದ ಆ ದನಗಾಹಿಗಳಿಗೆ, ಸಾಲೆ ಕಲಿಯುತ್ತಿದ್ದ ನಮ್ಮಂತವರ ಬಗ್ಗೆ ವಿಶೇಷ ಗೌರವವೇನೂ ಇರಲಿಲ್ಲ. ಅವರೆಲ್ಲ ನಮ್ಮನ್ನು ಕೈಲಾಗದ ‘ಹೇತ್ಲಾಂಡಿ’ಗಳಂತೆ ಕಾಣುತ್ತಿದ್ದರಲ್ಲದೆ, ತಾವುಗಳು ಮಹಾನ್ ವೀರಾಧಿವೀರರಂತೆ ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಅವರದ್ದೇ ಆದ ಅನೇಕ ತರದ ಸಾಹಸದ ರೋಚಕ ಕತೆಗಳಿರುತ್ತಿದ್ದವು. ಅವುಗಳಲ್ಲಿ ಮಾಮುಬ್ಯಾರಿಯ ಅಂಗಡಿಯಿಂದ ಕದ್ದ ಬೀಡಿ ಬಂಡಲಿನ ಕತೆ, ಇನ್ಯಾರದೋ ತೋಟದಲ್ಲಿ ಬೈನೆ ಬಿಚ್ಚಿ ಸೇಂದಿ ಕುಡಿದು ಏಟುತಿಂದದ್ದು ಮುಂತಾದ ಸಾಹಸಗಳಿರುತ್ತಿದ್ದವು.

ಎತ್ತಿನಹಳ್ಳದ ಎರಡೂ ದಡಗಳ ಉದ್ದಕ್ಕೂ ಸೊಂಪಾಗಿ ಬೆಳೆದ ವಾಟೆ ಮೆಳೆಗಳಿದ್ದವು. ಸುತ್ತಲಿನ ಗ್ರಾಮಗಳ ಸಮಸ್ತ ಕೃಷಿ ಚಟುವಟಿಕೆಗಳಿಗೆ ಪೂರಕ ಸಾಮಗ್ರಿಗಳಾದ ಅಂದರೆ ಕುಕ್ಕೆ, ಮಂಕರಿ, ಪಾತಿ-ಚಪ್ಪರಗಳಿಗೆ , ಮಳೆಗಾಲಕ್ಕೆ ಗೊರಗ, ಗುಡಿಸಲುಗಳ ಮಾಡಿಗೆ ಹುಲ್ಲು ಹೊದೆಸಲು ಅಡ್ಡಗಳು, ಗೋಡೆಗೆ ನೆರಿಕೆ, ತಟ್ಟಿ, ಎಲ್ಲಕ್ಕೂ ಎತ್ತಿನ ಹಳ್ಳದ ವಾಟೆಯೇ ಆಧಾರ. ಎಲ್ಲ ದನಗಾಹಿಗಳ ಕೈಯಲ್ಲೂ ದನಗಳನ್ನು ಅಟ್ಟುವ ಕೋಲಿನೊಂದಿಗೆ ವಾಟೆಯಿಂದ ತಯಾರಿಸಿದ ಕೊಳಲೂ ಇರುತ್ತಿತ್ತು. ದನಗಾಹಿಗಳು ದಾರಿಯುದ್ದಕ್ಕೂ ಯಾವುದಾದರೂ ಸಿನಿಮಾ ಹಾಡಿನ ಅಥವಾ ಜಾನಪದ ಗೀತೆಗಳ ದಾಟಿಯನ್ನು ನುಡಿಸುತ್ತ ಸಾಗುತ್ತಿದ್ದರು, ಇದು ಬಹಳ ದೂರದವರೆಗೆ ಕೇಳುತ್ತಿತ್ತು. ಅವರಲ್ಲೂ ಅನೇಕರು ಸುಶ್ರಾವ್ಯವಾಗಿ ನುಡಿಸುತ್ತಿದ್ದು ಮಾರ್ಗದರ್ಶನ ದೊರೆತಿದ್ದರೆ ಉತ್ತಮ ಕೊಳಲು ವಾದಕರಾಗುವ ಸಾಧ್ಯತೆ ಇತ್ತು. ಎತ್ತಿನ ಹಳ್ಳದ ಬಳಿ ಮೇಳೈಸಿರುತ್ತಿದ್ದ ನೂರಾರು ದನಕರುಗಳ ಹಿಂಡು ವಾಪಸ್ ಹೋಗುವಾಗ ತಮ್ಮ ಒಡೆಯನ ಕೊಳಲಿನ ದನಿಯನ್ನನುಸರಿಸಿ ತಮ್ಮತಮ್ಮ ಗುಂಪನ್ನು ಸೇರಿಕೊಳ್ಳುತ್ತಿದ್ದವು.

ಹಿಂದಿನ ಕಾಲದಲ್ಲಿ ಮಂಗಳೂರಿನತ್ತ ಸಾಗುತ್ತಿದ್ದ ಎತ್ತಿನ ಗಾಡಿಗಳು, ಇದೇ ಎತ್ತಿನ ಹಳ್ಳದ ಬಳಿ ತಂಗುತ್ತಿದ್ದವಂತೆ. ಎತ್ತುಗಳನ್ನು ತೊಳೆದು, ನೀರು ಕುಡಿಸಿ ದಣಿವಾರಿಕೊಳ್ಳುತ್ತಿದ್ದ ಈ ಸ್ಥಳವನ್ನು ಎತ್ತಿನ ಹಳ್ಳವೆಂದು ಕರೆದಿರಬೇಕು. ಮುಂದೆ ಇದೇ ಹೆಸರು ರೂಡಿಗೆ ಬಂತು. ಜನರ ಬಾಯಲ್ಲಿ “ಯೆತ್ನಳ್ಳ”ವಾಯಿತು. (ಸಕಲೇಶಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸ್ಥಳಕ್ಕೆ “ಎತ್ತಿನಹಳ್ಳ” ಎಂದೇ ಹೆಸರು. ಇದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ನದಿತಿರುವು ಯೋಜನೆಯ ಅಣೆಕಟ್ಟೊಂದು ನಿರ್ಮಾಣವಾಗುತ್ತಿದೆ).

ಹೀಗೆ ಹಾಡುತ್ತ, ಕುಣಿಯುತ್ತ, ಮಳೆಗಾಲದಲ್ಲಿ ಆರ್ಭಟಿಸುತ್ತ, ಭೋರ್ಗರೆಯುತ್ತ, ತಣ್ಣಗೆ ಹರಿಯುತ್ತಿದ್ದ, ಎತ್ತಿನ ಹಳ್ಳಕ್ಕೆ ಶುಕ್ರ, ಶನಿಯೋ ಅಂತೂ ಒಂದು ದೆಸೆ ಪ್ರಾರಂಭವಾದದ್ದು, ಮೂರೂವರೆ ದಶಕಗಳ ಹಿಂದೆ. ಸಕಲೇಶಪುರ yettinahole_streamನಗರಕ್ಕೆ ಪೂರೈಕೆಯಾಗುತ್ತಿರುವ ಹೇಮಾವತಿ ನದಿಯ ನೀರು ಕಲುಷಿತವಾಗಿದೆ, ಕುಡಿಯಲು ಯೋಗ್ಯವಾಗಿಲ್ಲ ಎಂದು ಕೆಲವರು ಅದಕ್ಕೆ ಪರಿಹಾರವನ್ನು ಹುಡುಕತೊಡಗಿದರು. ಅಂದಿನ ರಾಜಕಾರಣಿಗಳು, ಸಕಲೇಶಪುರ ಪುರಸಭೆಯ ಹಿರಿಯರೂ ಸೇರಿ ಎತ್ತಿನ ಹಳ್ಳದ ನೀರನ್ನು ಸಕಲೇಶಪುರ ನಗರಕ್ಕೆ ತಂದರೆ ಶುದ್ಧವಾದ ನೀರು ಸಿಗುತ್ತದೆಂದು ಭಾವಿಸಿದರು. ಇದಕ್ಕೆ ಅಂದಿನ ಹಿರಿಯ ರಾಜಕಾರಣಿಗಳಲ್ಲೊಬ್ಬರಾದ ಎನ್.ಕೆ.ಗಣಪಯ್ಯನವರೂ ದನಿಗೂಡಿದರು. ಗಣಪಯ್ಯನವರ “ಹಾರ್ಲೆ ಎಸ್ಟೇಟ್” ಕೂಡಾ ಎತ್ತಿನ ಹಳ್ಳದ ಪಕ್ಕದಲ್ಲೇ ಇತ್ತು. ಹಾರ್ಲೆ ಎಸ್ಟೇಟಿನ ಪಕ್ಕದಲ್ಲಿ ಸಣ್ಣ ಕಟ್ಟೆಯೊಂದನ್ನು ಕಟ್ಟಿ ನೀರನ್ನು ಆರು ಕಿ.ಮೀ ದೂರದ ಸಕಲೇಪುರಕ್ಕೆ ತರುವ ಸಣ್ಣಯೋಜನೆ ಇದಾಗಿತ್ತು. ಆದರೆ ಬಹಳ ಬೇಗ ಈ ಯೋಜನೆಯ ಮೇಲೆ ಅಧಿಕಾರಿಗಳ, ರಾಜಕಾರಣಿಗಳ ಗಮನ ಹರಿಯಿತು. ಎತ್ತಿನಹಳ್ಳದ ನೀರನ್ನು ಬರಿಯ ಸಕಲೇಶಪುರ ನಗರಕ್ಕೆ ತರುವುದರೊಂದಿಗೆ, ಸ್ವಲ್ಪ ದೊಡ್ಡ ಯೋಜನೆಯನ್ನಾಗಿ ಮಾಡಿ ಹೇಮಾವತಿ ನದಿಗೆ ಸೇರಿಸಿದರೆ ನೀರಾವರಿಗೂ ಮತ್ತಷ್ಟು ನೀರು ದೊರೆಯುವುದೆಂಬ ಮಾತು ಕೇಳಿಬರತೊಡಗಿತು. ಇದನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದವರು ಅಂದಿನ ನೀರಾವರಿ ಮಂತ್ರಿಗಳಾಗಿದ್ದ ಹೆಚ್.ಸಿ. ಶ್ರೀಕಂಠಯ್ಯ. ಆಗಲೇ ಮುಂದಾಗಲಿರುವ ಅನಾಹುತವನ್ನು ಗ್ರಹಿಸಿ ಎನ್.ಕೆ.ಗಣಪಯ್ಯ ಈ ಯೋಜನೆಯನ್ನು ವಿರೋಧಿಸತೊಡಗಿದರು. ಆಗ ಕೆಲವರು “ಈಗ ಗಣಪಯ್ಯ ತನ್ನ ಕಾಫಿತೋಟ ಮುಳುಗಡೆ ಆಗುತ್ತೆ ಅಂತ ವಿರೋಧ ಮಾಡ್ತಾರೆ, ಮೊದ್ಲು ಶುರು ಮಾಡಿದ್ದೂ ಇವರೇ” ಎಂದು ದೂರತೊಡಗಿದರು. ವಾಸ್ತವದ ಸಂಗತಿಯೆಂದರೆ, ಈ ಯೋಜನೆಯಿಂದ ಗಣಪಯ್ಯನವರ ತೋಟ ಮುಳಗಡೆಯಾಗುತ್ತಿರಲಿಲ್ಲ, ಬದಲಿಗೆ ಅಕ್ಕ ಪಕ್ಕದ ಕೆಲವು ಕಾಫಿ ತೋಟಗಳು ಭಾಗಶಃ ಮುಳುಗಡೆಯಾಗುತ್ತಿದ್ದವು.

ಆ ನಂತರದ ದಿನಗಳಲ್ಲಿ ಇದಕ್ಕಾಗಿ ಸರ್ವೆ ಇತ್ಯಾದಿ ಕಾರ್ಯಗಳು ಪ್ರಾರಂಭವಾದವು. ಪ್ರತಿನಿತ್ಯ ನೀರಿನ ಹರಿವನ್ನು ಅಳೆಯಲು ಒಬ್ಬ ನೌಕರನ ನೇಮಕವೂ ಆಯ್ತು. ಹಾರ್ಲೆ ಎಸ್ಟೇಟಿನ ಬಳಿ ಎತ್ತಿನ ಹಳ್ಳಕ್ಕೆ, ಅಬ್ಬಿ ಹಳ್ಳ ಎನ್ನುವ ಪುಟ್ಟ ತೊರೆಯೊಂದು ಸೇರುವ ಜಾಗವಿದೆ. ಅಲ್ಲಿ ಕಟ್ಟೆಯೊಂದನ್ನು ಕಟ್ಟಿ ನಾಲೆಯಮೂಲಕ, ಹೆಬ್ಬಸಾಲೆ, ಮಾವಿನಕೂಲು, ಗ್ರಾಮಗಳನ್ನು ಹಾದು, ಸಕಲೇಶಪುರ ಮೂಡಿಗೆರೆ ರಸ್ತೆಯನ್ನು ಹಾರ್ಲೆಕೂಡಿಗೆ ಎನ್ನುವ ಸ್ಥಳದಲ್ಲಿ ದಾಟಿ, ಗಾಣದಹೊಳೆ ಗ್ರಾಮವನ್ನು ಸೇರಿ ಅಲ್ಲಿಂದ ಹೇಮಾವತಿ ನದಿಗೆ ನೀರನ್ನು ಸಾಗಿಸುವ ಯೋಜನೆಯೂ ಸುದ್ದಿಯಾಯಿತು. ಯಾರ ಜಮೀನು ಹೋಗಬಹುದು, ಪರಿಹಾರವೆಷ್ಟು ಸಿಕ್ಕೀತು ಎನ್ನುವ ಲೆಕ್ಕಾಚಾರಗಳು ಪ್ರಾರಂಭವಾದವು. ಇದೆಲ್ಲ ಆಗಲು ಇನ್ನೂ ಇಪ್ಪತ್ತು ವರ್ಷವಾದರೂ ಬೇಕು. ಆವಾಗ ನೋಡೋಣ ಎನ್ನುವವರೂ ಇದ್ದರು.

ಆಗಿನ ಅಂದಾಜಿನ ಪ್ರಕಾರ, ಹಾರ್ಲೆ ಎಸ್ಟೇಟಿನ ಬಳಿ ಕಟ್ಟೆಯನ್ನು ಕಟ್ಟಿ ನೀರನ್ನು ತಿರುಗಿಸಿದರೆ,ಎತ್ತಿನ ಹಳ್ಳದಿಂದ ದೊರೆಯುವ ನೀರಿನ ಪ್ರಮಾಣ ಸುಮಾರು ಒಂದೂವರೆ ಟಿ.ಎಮ್.ಸಿ ಎಂದು ನೀರಾವರಿ ಇಲಾಖೆ ಪ್ರಕಟಿಸಿತ್ತು.

ನಂತರದ ವರ್ಷಗಳಲ್ಲಿ ಈ ನೀರು ತಿರುಗಿಸುವ ಯೋಜನೆ ಗುಪ್ತಗಾಮಿನಿಯಾಗಿ ಹರಿಯುತ್ತಲೇಇತ್ತು.

ಎತ್ತಿನ ಹಳ್ಳಕ್ಕೆ ಈ ಕಟ್ಟೆಯನ್ನು ಕಟ್ಟಲು ಯೋಜಿಸಿದ್ದ ಜಾಗ ಪೂರ್ಣ ಚಂದ್ರ ತೇಜಸ್ವಿಯವರ ಮೆಚ್ಚಿನ ತಾಣಗಳಲ್ಲಿ ಒಂದು. tejasviಅವರು ಎಪ್ಪತ್ತರ ದಶಕದಲ್ಲಿ ಹಲವು ಬಾರಿ ಇಲ್ಲಿಗೆ ಮೀನು ಹಿಡಿಯಲು ಬರುತ್ತಿದ್ದರು. ಆಗ ನಮ್ಮ ಸುತ್ತಮುತ್ತಲಿನ ಗ್ರಾಮಗಳ ಕೆಲವರು ಯುವಕರೂ ಅವರೊಂದಿಗೆ ಹೋಗುವುದಿತ್ತು. ಆಗಿನ್ನೂ ಈ ಎತ್ತಿನ ಹಳ್ಳದ ನೀರನ್ನು ಸಕಲೇಶಪುರಕ್ಕೆ ಸಾಗಿಸುವ ಮಾತಷ್ಟೆ ಪ್ರಚಾರದಲ್ಲಿತ್ತು. ನನ್ನ ಗೆಳೆಯರು ಯಾರೋ ತೇಜಸ್ವಿಯವರಿಗೆ. ಈ ವಿಚಾರವನ್ನು ತಿಳಿಸಿದ್ದರು. ಅದಕ್ಕೆ ತೇಜಸ್ವಿ “ಹೇಮಾವತಿ ನೀರು ಕ್ಲೀನಿಲ್ಲ ಅಂದ್ರೆ ಅದನ್ನ ಕೆಡಸಿದವ್ರು ಯಾರು, ನಾವೇ ಅಲ್ವೆ, ಈಗೆಲ್ಲ ಏನೇನೋ ವಿಧಾನಗಳು ಬಂದಿವೆ, ಅದೇ ನೀರನ್ನು ಕ್ಲೀನ್ ಮಾಡಿ ಬಳಸಬೇಕು, ಮನೆಬಾಗಲ ನೀರು ಕೆಡಸಿ ಇನ್ನೊಂದು ಕಡೆಯಿಂದ ನೀರು ತರ್ತೀನಿ ಅನ್ನೋದು ಮೂರ್ಖತನ ಕಣ್ರೀ ನೀವೆಲ್ಲಾ ವಿರೋಧಿಸಬೇಕು” ಎಂದಿದ್ದರಂತೆ. ನಂತರದ ದಿನಗಳಲ್ಲಿ ತೇಜಸ್ವಿಯವರೂ ಇತ್ತ ಬರುವುದನ್ನು ಕಡಿಮೆ ಮಾಡಿದರು. (ಇತ್ತೀಚೆಗೆ ಖಾಸಗಿ ಟಿ.ವಿ ಛಾನಲ್ ಒಂದಕ್ಕೆ ತೇಜಸ್ವಿಯವರ ಬಗ್ಗೆ ನಾವೊಂದಷ್ಟು ಜನ ಗೆಳೆಯರು ಸೇರಿ, ಸಾಕ್ಷ್ಯ ಚಿತ್ರವೊಂದನ್ನು ಮಾಡಿದೆವು, ಆಗ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎತ್ತಿನ ಹೊಳೆಯೋಜನೆ ಪೂರ್ಣಗೊಂಡರೆ ಈ ಸ್ಥಳಗಳೆಲ್ಲ ನೆನಪು ಮಾತ್ರವಾಗಲಿದೆ)

ಎತ್ತಿನಹಳ್ಳ ಹುಟ್ಟಿ ಹರಿಯುವ ಮೂರ್ಕಣ್ಣುಗುಡ್ಡ ಸಾಲಿನ ತಪ್ಪಲಿನಲ್ಲೇ ನಮ್ಮ ರಂಗ ತಂಡವೂ ಹುಟ್ಟಿ ಬೆಳೆದಿದೆ. ಎಪ್ಪತ್ತರ ದಶಕದ ಕೊನೆಯಭಾಗದಲ್ಲಿ ಹುಟ್ಟಿದ ನಮ್ಮ ರಂಗಬಳಗದ ಗೆಳೆಯರೆಲ್ಲ ಸೇರಿ, ಹತ್ತು ವರ್ಷಗಳ ಚಟುವಟಿಕೆಯ ನಂತರ ಪ್ರಥಮ ಬಾರಿಗೆ ರಂಗ ತರಬೇತಿ ಶಿಬಿರವೊಂದನ್ನು ಆಯೋಜಿಸಿದ್ದೆವು. ಅದರ ಉದ್ಘಾಟನೆಯನ್ನು ತೇಜಸ್ವಿಯವರೇ ನಡೆಸಿಕೊಟ್ಟರು. ಆ ದಿನ ನಮ್ಮೂರ ಶಾಲಾಮಕ್ಕಳಿಂದ ನಾಟಕ ಪ್ರದರ್ಶನವಿತ್ತು. ನಾಟಕವನ್ನು ನಾನೇ ಬರೆದು ನಿರ್ದೇಶಿಸಿದ್ದೆ. ನಾಟಕದ ಹೆಸರು “ಮೂರ್ಕಣ್ಣು ಗುಡ್ಡ”. ನಾಟಕದ ವಸ್ತುವೂ ಪರಿಸರ ನಾಶದಿಂದಾಗುವ ಹಾನಿಯ ಬಗ್ಗೆ ಇತ್ತು. ಮಕ್ಕಳ ಅಭಿನಯವನ್ನು ತೇಜಸ್ವಿಯವರು ತುಂಬಾ ಮೆಚ್ಚಿಕೊಂಡರು. ಮುಂದೆ ನಮ್ಮ ರಂಗ ತಂಡಕ್ಕೆ. “ಪ್ರಕೃತಿ ರಂಗ ಮಂಚ” ಎಂದೇ ಹೆಸರಿಟ್ಟೆವು.

ಈಗ ನಮ್ಮೆಲ್ಲ ರಂಗ ಚಟುವಟಿಕೆಗಳು ನಡೆಯುತ್ತಿರುವ, ಇನ್ನೂ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರಕ್ಕೆ ‘ಪೂರ್ಣಚಂದ್ರ ತೇಜಸ್ವಿ ರಂಗಮಂದಿರ’ ವೆಂದು ಕರೆದಿದ್ದೇವೆ. ಇಲ್ಲಿ ನಿಂತು ನೋಡಿದರೆ, ಪೂರ್ವ ದಿಕ್ಕಿಗೆ ಸಕಲೇಶಪುರದ ಮಂಜ್ರಾಬಾದ್ ಕೋಟೆಯೂ, ದಕ್ಷಿಣದಲ್ಲಿ ಬಾನಿನಂಚಿಗೆ ಕುಮಾರ ಪರ್ವತವೂ ಪಶ್ಚಿಮದಲ್ಲಿ ಮೂರ್ಕಣ್ಣು ಗುಡ್ಡ ಸಾಲೂ, ವಾಯುವ್ಯದಲ್ಲಿ ದೂರದಲ್ಲಿ ಬಾಬಾಬುಡನ್ ಗಿರಿಶಿಖರಗಳೂ ಗೋಚರಿಸುತ್ತವೆ. ರಂಗಮಂದಿರದಲ್ಲಿ ನಿಂತು, ಅಲ್ಲಿಂದಲೇ ಸಂಪೂರ್ಣ ಎತ್ತಿನ ಹಳ್ಳದ ಜಲಾನಯನ ಪ್ರದೇಶವನ್ನು ವೀಕ್ಷಿಸಬಹುದು.

ಘಟ್ಟ ಪ್ರದೇಶದ ಕೆಂಪೊಳೆಯಲ್ಲಿ ಹಾಗೂ ಕಾಡುಮನೆ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳು ಪ್ರಾರಂಭವಾದ್ದರಿಂದ, ಎತ್ತಿನ ಹಳ್ಳವನ್ನು ತಿರುಗಿಸುವ ಯೋಜನೆಯ ಮಾತು ಹಿನ್ನೆಲೆಗೆ ಸರಿಯಿತು. ಈ ನೀರನ್ನು ತಿರುಗಿಸಿದರೆ ಕೆಳಭಾಗದಲ್ಲಿ ಸ್ಥಾಪಿಸಿರುವ ಜಲವಿದ್ಯುತ್ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗುವುದರಿಂದ ಇದನ್ನು ಕೈಬಿಡಲಾಗುವುದೆಂದೇ ಎಲ್ಲರೂ ನಂಬಿದರು. ಈ ವಿದ್ಯುತ್ ಯೋಜನೆಗಳಲ್ಲಿ ಕೆಲವು ಆನೆದಾರಿಯಲ್ಲೇ ಅಡ್ಡವಾಗಿ ಸ್ಥಾಪಿತವಾದವು. ಇದರಿಂದಾಗಿ ಸುತ್ತಲಿನ ಗ್ರಾಮಗಳಲ್ಲಿ ಆನೆ ಮತ್ತಿತರ ಕಾಡುಪ್ರಾಣಿಗಳಿಂದ ತೊಂದರೆಯೂ ಆರಂಭವಾದವು. ಆದರೆ ಈ ಜಲ ವಿದ್ಯುತ್ ಯೋಜನೆಗಳಿಂದ ನಮ್ಮೂರು ಬೆಳಕಾದೀತೆಂತು ಕಾದು ಕುಳಿತವರಿಗೆ ನಿರಾಸೆಯಾದದ್ದು ಈ ವಿದ್ಯುತ್ ಆಂದ್ರದ ಪಾಲಾಗಿದೆಯೆಂದು ತಿಳಿದಾಗ.

ಇದೊಂದಿಗೆ ಮಲೆನಾಡಿನ ಅತ್ಯಂತ ಸೂಕ್ಷ್ಮ ಹಾಗೂ ಸುಂದರ ಅರಣ್ಯಪ್ರದೇಶಗಳಾದ ಬಿಸಲೆ, ಕಾಗಿನಹರೆ, ಹೊಂಗಡಹಳ್ಳ ಪ್ರದೇಶಗಳನ್ನೆಲ್ಲ ಮುಳುಗಿಸಿ ವಿದ್ಯುತ್ ತಯಾರಿಸುವ ‘ಗುಂಡ್ಯಜಲ ವಿದ್ಯುತ್‍ಯೋಜನೆ’ಯೂ ಪ್ರಕಟವಾಯ್ತು. yettinahole-projectನಂತರ ನಡೆದ ಹೋರಾಟದ ವಿವರಗಳು ಎಲ್ಲರಿಗೂ ತಿಳಿದಿರುವಂತದ್ದೇ ಆಗಿದೆ.

ಗುಂಡ್ಯ ಜಲ ವಿದ್ಯುತ್ ಯೋಜನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಯಿತು. ಸುಂದರಲಾಲ ಬಹುಗುಣ ಅವರೂ ಬಂದು ಈ ಹೋರಾಟದಲ್ಲಿ ಭಾಗಿಯಾದರು. ನಮ್ಮೂರಿನಲ್ಲೂ ಒಂದು ರಾತ್ರಿ ಉಳಿದರು. ನಮ್ಮ ರಂಗಮಂದಿರದಲ್ಲಿ ಕುಳಿತು ಜನರನ್ನು ಭೇಟಿಯಾದರು ಮಾತನಾಡಿದರು. ಅವರೂ ಕೂಡಾ ರಂಗಕರ್ಮಿಗಳೆಂದು ನಮಗೆ ತಿಳಿದ್ದು ಆಗಲೇ. ಪೂರ್ಣಚಂದ್ರ ತೇಜಸ್ವಿ ರಂಗಮಂದಿರದ ಅಹ್ಲಾದಕರ ಪರಿಸರದಿಂದ ಖುಷಿಗೊಂಡಂತಿದ್ದ ಬಹುಗುಣ ಲಹರಿಬಂದಂತೆ ಮಾತನಾಡುತ್ತ ಹೋದರು. ಚಿಪ್ಕೊ ಚಳಿವಳಿಯಿಂದ ಆರಂಭಿಸಿದ ಅಜ್ಜನ ಮಾತು ಹೆಚ್ಚಾಗಿ ರಂಗಭೂಮಿಯ ಸುತ್ತಲೇ ತಿರುಗಿತು. ಬೀದಿ ನಾಟಕ, ಹಾಡುಗಳ ಮೂಲಕ ಜನ ಸಂಘಟನೆ ಮಾಡಿದ ದಿನಗಳನ್ನು ನೆನಪಿಸಿಕೊಂಡು ಉತ್ಸಾಹದಿಂದ ಮಾತನಾಡಿದರು. ‘ಭಾಷಣಕ್ಕೆ ಬಾಯಿ ಮಾತ್ರ ಇದೆ, ಆದರೆ ರಂಗಭೂಮಿಗೆ ಬಾಯಿ, ಕಣ್ಣು, ಕಿವಿ ಎಲ್ಲವೂ ಇವೆ ಹಾಗಾಗಿ ಯಾವುದೇ ಚಳುವಳಿಗೂ ರಂಗಭೂಮಿ ಅತ್ಯಂತ ಶಕ್ತ ಮಾಧ್ಯಮ ನಾಟಕಗಳನ್ನು ನೋಡಲು ಮಕ್ಕಳು ದೊಡ್ಡವರು ಮಹಿಳೆಯರು,ಎಲ್ಲರೂ ಬರುತ್ತಾರೆ ಅದರಲ್ಲೂ ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಕರುಣಾಮಯಿಗಳು, ನಾಟಕ ನೇರವಾಗಿ ಹೃದಯಕ್ಕೆ ತಟ್ಟುವುದರಿಂದ ಅದರ ಪರಿಣಾಮ ಮಹಿಳೆಯರಲ್ಲಿ ಹೆಚ್ಚಿನದಾಗಿರುತ್ತದೆ. ಅದರಿಂದ ಚಳುವಳಿಗೂ ಹೆಚ್ಚಿನ ಬಲ ಬರುತ್ತದೆ’ ಎಂದ ಅವರು, ನೀವು ಈ ಪರಿಸರ ಕಾಳಜಿಯ ಯಾತ್ರೆಯನ್ನು ರಂಗಕ್ರಿಯೆಗಳ ಮೂಲಕವೂ ಮುಂದುವರಿಸಿ, ಈ ಕೆಲಸವನ್ನು ಯಾವ ಭಾಷಣಕಾರರಾಗಲೀ ಸರ್ಕಾರವಾಗಲೀ ಮಾಡಲಾಗದು, ಎಂದರು. ಪರಿಸರ ಯಾತ್ರೆಯ ಕಾರ್ಯಕ್ರಮದಬಗ್ಗೆ ಮಾತನಾಡುತ್ತ ನಾವು ಮಾಡುವ ಈ ಕೆಲಸ ಮನುಷ್ಯರಿಗೆ ಮಾತ್ರವಲ್ಲ ಇಡೀ ಭೂಮಂಡಲದ ಉಳಿವಿಗೆ ಆ ಮೂಲಕ ಸಕಲ ಜೀವರಾಶಿಯ ಉಳಿವಿಗೆ ಅಗತ್ಯ ಆದರೆ ನಮಗೆ ಹಿರಿಯರಿಗೆ ಇನ್ನು ಹೆಚ್ಚು ಕಾಲಾವಕಾಶ ಉಳಿದಿಲ್ಲ. ನಮ್ಮ ಮುಂದಿರುವ ಈ ಎಳೆಯರಿಗೆ ಸಾಕಷ್ಟು ಅವಕಾಶವಿದೆ ಆದ್ದರಿಂದ ಮಕ್ಕಳೇ ನಮ್ಮ ಮುಂದಿನ ಭರವಸೆ, ಎಂದ ಅವರು, ನಿಮ್ಮ ಪರಿಸರ ಯಾತ್ರೆಗೆ ನಾನೇನು ಕೊಡಬಲ್ಲೆ ಒಂದು ಧ್ಯೇಯವಾಕ್ಯ ನೀಡುತ್ತೇನೆ, “ಥಿes ಣo ಐiಜಿe, ಓo ಣo ಆeಚಿಣh” ಇದು ನಿಮ್ಮ ಚಿಂತನೆಯಲ್ಲಿರಲಿ, ಇದೇ ಪರಿಸರದ ಉಳಿವಿಗೆ ದಾರಿ ತೋರುತ್ತದೆ ಎಂದರು.

ನಿಧಾನವಾಗಿ ಗುಂಡ್ಯ ಜಲವಿದ್ಯುತ್ ಯೋಜನೆ ಹಿನ್ನೆಲೆಗೆ ಸರಿಯಿತು.

ಆ ಸಂದರ್ಭದಲ್ಲಿ “ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ” ಎಂಬ ಬೀದಿ ನಾಟಕವನ್ನು ನಾವು (ಜೈಕರ್ನಾಟಕ ಸಂಘ ಬೆಳ್ಳೇಕೆರೆ) ಸಿದ್ಧಪಡಿಸಿಕೊಂಡು ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿದೆವು. ಮೈಸೂರಿನ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲೂ ಇದನ್ನು ಪ್ರದರ್ಶಿಸಿದೆವು. ಸ್ವಲ್ಪ ಸಮಯದ ಹಿಂದಷ್ಟೇ ಮೈಸೂರು ನಗರಕ್ಕೇ ಕಾಡಾನೆ ನುಗ್ಗಿ ಬಂದು ಇಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದರು.

ಮಲೆನಾಡಿನಲ್ಲಿ ಆನೆಗಳು ಅನೇಕ ವರ್ಷಗಳಿಂದಲೂ ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿ. ಮಲೆನಾಡಿನ ಜನ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನುyettinahole-project-diverting-west-flowing-water-to-an-arid-land ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದುಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ. ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ.

ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತವು, ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸಿದರು. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋದವು. ಪರಂಪರಾಗತ ಆನೆದಾರಿಗಳು ತುಂಡರಿಸಿಹೋದವು. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯೆತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ, ಕೆಲವೊಮ್ಮೆ ಮೋಟಾರ್ ರ್ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಗಾಂಜಾ ಬೆಳೆ ಮತ್ತು ಕಳ್ಳನಾಟಾದಂದೆಯಂತಹ ಕಾನೂನುಬಾಹಿರ ಕೃತ್ಯಗಳು ಕೂಡಾ ಪಶ್ಚಿಮಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳಿಗೆ ದೊಡ್ಡಪ್ರಮಾಣದಲ್ಲಿ ತೊಂದರೆಯನ್ನುಂಟುಮಾಡಿವೆ.

ಇಷ್ಟೆಲ್ಲ ಆಗುವಾಗಲೂ ನಮ್ಮ “ಯೆತ್ನಳ್ಳ” ತಣ್ಣಗೆ ಹರಿಯುತ್ತಲೇಇತ್ತು.

ಕೋಲಾರ- ತುಮಕೂರು ಪ್ರದೇಶಗಳಿಗೆ ನೀರೊದಗಿಸುವ ಪ್ರಸ್ತಾಪ ಬಂದಾಗಲೂ ಮೊದಲಿಗೆ ರಾಜಕಾರಣಿಗಳು ಹೇಳಿದ್ದು ಪಶ್ಚಿಮಕ್ಕೆ ಹರಿದು ‘ವ್ಯರ್ಥ’ವಾಗುತ್ತಿರುವ ನೇತ್ರಾವತಿ ನದಿಯ ಬಗ್ಗೆಯೇ. ಆದರೆ ಜನರ ವಿರೋಧದ ಸುಳಿವು ಸಿಕ್ಕಿದೊಡನೆಯೇ ಅವರ ಭಾಷೆ ನುಡಿಕಟ್ಟುಗಳು ಬದಲಾದವು. ನೇತ್ರಾವತಿ ನದಿಯ ಬದಲಾಗಿ ಘಟ್ಟದ ಮೇಲ್ಭಾಗದಲ್ಲಿ ಪಶ್ಚಿಮದತ್ತ ಹರಿಯುವ ಎತ್ತಿನ ಹಳ್ಳದಂತಹ ಸಣ್ಣ ಸಣ್ಣ ಹೊಳೆಗಳನ್ನು ಒಗ್ಗೂಡಿಸಿ, ಬಯಲು ಸೀಮೆಯ ಜನರಿಗೆ ಕುಡಿಯುವ ನೀರೊದಗಿಸುವ ಅತ್ಯಂತ ಅಗತ್ಯದ ಯೋಜನೆಯಿದೆಂದು ಬಿಂಬಿಸಿದರು. ಮಲೆನಾಡಿನ ಮತ್ತು ಕರಾವಳಿಯ ಜನರಿಗೆ ಹೀಗೆ ಹೇಳಿ, ಬಯಲು ಸೀಮೆಯ ಜನರ ಮುಂದೆ ಇಪ್ಪತ್ತನಾಲ್ಕು ಟಿ.ಎಮ್.ಸಿ ನೀರಿನ ಚಿತ್ರಣ ನೀಡಿದರು. ಇಷ್ಟು ನೀರೊದಗಿಸುವ ಜಲಮೂಲ ಸಣ್ಣ “ಹಳ್ಳ”ವಾಗಿರಲು ಸಾಧ್ಯವಿಲ್ಲ ಎಂದೋ ಎನೋ. “ಎತ್ತಿನ ಹಳ್ಳ” ಮೊದಲು ರಾಜಕಾರಣಿಗಳ ಬಾಯಲ್ಲಿ ನಂತರ ವ್ಯಾಪಕವಾಗಿ ಮಾಧ್ಯಮಗಳಲ್ಲಿ “ಎತ್ತಿನಹೊಳೆ” ಯೋಜನೆಯಾಯಿತು.

ಹೀಗೆ ನಮ್ಮ “ಯೆತ್ನಳ್ಳ” ಎತ್ತಿನಹೊಳೆಯಾಗಿ ಲೋಕವಿಖ್ಯಾತವಾಯಿತು.

ಕಳೆದ ಮೂರು ದಶಕಗಳಲ್ಲಿ ಬೇರೆ ಕಡೆಗಳಂತೆ ಮಲೆನಾಡಿನಲ್ಲೂ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇಲ್ಲಿನ ಯುವಜನರು ವಿದ್ಯಾವಂತರಾಗಿ, ಕುಶಲಕರ್ಮಿಗಳಾಗಿ ಬೇರೆಡೆಗೆ ಹೋಗಿದ್ದರೂ, ಗದ್ದೆ ಬೇಸಾಯವನ್ನುಳಿದು ಇತರ ಕಾಫಿ, ಮೆಣಸು, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳ ಕೃಷಿ ಹೆಚ್ಚಾಗಿದೆ. ಯಂತ್ರೋಪಕರಣಗಳ ಬಳಕೆ, ನೀರಾವರಿ ಎರಡೂ ಹೆಚ್ಚಳವಾಗಿದ್ದು ನೀರಿನ ಬಳಕೆ ಗಣನೀಯವಾಗಿ ಹೆಚ್ಚಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಾಫಿ ತೋಟಗಳು, ವ್ಯಾಪಕವಾಗಿ ಕಾರ್ಪೊರೇಟ್ ಧನಿಗಳ ಕೈಸೇರುತ್ತಿದೆ. ಇವರು ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳಿಂದ ಕೂಲಿಕಾರ್ಮಿಕರನ್ನು ಕರೆತರುತ್ತಿರುವುದರಿಂದ, ಜನವಸತಿ ಹೆಚ್ಚಾಗುತ್ತಿದೆ. ಇದರೊಂದಿಗೆ ಸರ್ಕಾರದ ಅನೇಕ ಯೋಜನೆಗಳ ಮೂಲಕ ಸ್ವಂತ ನಿವೇಶನ-ಮನೆ ಹೊಂದಿದವರೂ ಹೆಚ್ಚಾಗಿದ್ದಾರೆ. ಇವೆಲ್ಲವೂ ಸೇರಿ ಮಲೆನಾಡಿನಲ್ಲೂ ಕೃಷಿ ಮಾತ್ರವಲ್ಲ ಕುಡಿಯುವ ನೀರಿನ ಬೇಡಿಕೆಯೂ ಹೆಚ್ಚಿದೆ. ಕಳೆದೆರಡು ದಶಕಗಳಲ್ಲಿ ಕೊರೆದ ಕೊಳವೆಬಾವಿಗಳು ನಿರುಪಯುಕ್ತವಾಗಿವೆ. ಆದ್ದರಿಂದ ಇಲ್ಲೂ ಸಹ ಹಳ್ಳ-ಹೊಳೆಗಳ ನೀರನ್ನೇ ಜನರು ಬಳಸತೊಡಗಿದ್ದಾರೆ.

ಎತ್ತಿನಹಳ್ಳದ ಜಲಾನಯನ ಪ್ರದೇಶದಲ್ಲೇ ಸುಮಾರು ಏಳೆಂಟು ಸಾವಿರ ಎಕರೆಗಳಷ್ಟು, ಕಾಫಿ ತೋಟಗಳಿವೆ. ಏಲಕ್ಕಿ ಮೆಣಸು, ಅಡಿಕೆ ಬೆಳೆಯೂ ಸಾಕಷ್ಟಿದೆ. ಈ ಪ್ರದೇಶದಲ್ಲೇ ಬರುವ ಹೆಗ್ಗದ್ದೆ, ದೋಣಿಗಾಲ್, ಕುಂಬರಡಿ, ನಡಹಳ್ಳಿ, ಹೆಬ್ಬಸಾಲೆ, yettinahole_works-ringsಮಾವಿನಕೂಲು, ಗಾಣದಹೊಳೆ, ರಕ್ಷಿದಿ. ಕ್ಯಾಮನಹಳ್ಳಿ, ಅಗಲಟ್ಟಿ ಮುಂತಾದ ಗ್ರಾಮಗಳಿವೆ. ಇವುಗಳಲ್ಲಿ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿಗೂ ಇಂದು ಎತ್ತಿನಹಳ್ಳದ ನೀರೇ ಆಧಾರ. ಈ ಎಲ್ಲಾ ಗ್ರಾಮಪಂಚಾಯತಿಗಳು ಕುಡಿಯುವನೀರಿನ ಯೋಜನೆಯಲ್ಲಿ ಎತ್ತಿನಹಳ್ಳದ ನೀರನ್ನು ಬಳಸುತ್ತಿವೆ. ಈ ಎಲ್ಲ ಕಾರಣಗಳಿಂದ ಕಡು ಬೇಸಗೆಯಲ್ಲಿ ಎತ್ತಿನಹಳ್ಳ ಸಂಪೂರ್ಣ ಬರಿದಾಗುವ ಹಂತ ತಲಪಿರುತ್ತದೆ.

ರಕ್ಷಿದಿ, ಅಗಲಟ್ಟಿ ಗ್ರಾಮಗಳಲ್ಲಿ ಹಾಗೂ ನಮ್ಮ ರಂಗಮಂದಿರದಲ್ಲಿ ಬಳಸುತ್ತಿರುವುದೂ ಎತ್ತಿನಹಳ್ಳದ ನೀರನ್ನೇ. ವೇದಿಕೆಗಳಿಂದ ಮಾತನಾಡುವಾಗೆಲ್ಲ ನಾವು ‘ನಮಗಿದೇ ಗಂಗೆ, ಕಾವೇರಿ, ಗೋದಾವರಿ’ ಎನ್ನುತ್ತೇವೆ.

ಇಷೆಲ್ಲ ಇದ್ದರೂ ಗುಂಡ್ಯಜಲವಿದ್ಯುತ್ ಯೋಜನೆ ಅಥವಾ ಎತ್ತಿನಹೊಳೆ ತಿರುವು ಯೋಜನೆಗೆ ಸ್ಥಳೀಯರ ವಿರೋಧ ಕಡಿಮೆ. ಹೋರಾಟ-ಹಾರಾಟವೇನಿದ್ದರೂ ಹೊರಗಿನವರದ್ದು ಎಂಬ ಮಾತು ಆಗಾಗ, ಮಾಧ್ಯಮಗಳಲ್ಲಿ, ಮತ್ತು ಮುಖ್ಯವಾಗಿ ರಾಜಕಾರಣಿಗಳ ಮಾತಿನಲ್ಲಿ ಕೇಳಿಬರುತ್ತದೆ.

ಆದರೆ ಇವರೆಲ್ಲ ಹೇಳುತ್ತಿರುವಷ್ಟು ಸರಳವಾಗಿ ಈ ಸಮಸ್ಯೆ ಖಂಡಿತ ಇಲ್ಲ. ಮೊದಲನೆಯದಾಗಿ ಪರಿಸರವನ್ನು ಉಳಿಸಬೇಕೆನ್ನುವವರಲ್ಲೂ ಹಲವು ಅಭಿಪ್ರಾಯಗಳಿವೆ. ಇವರೆಲ್ಲರೂ ಪರಿಸರದ ಬಗ್ಗೆ ನಿಜವಾದ ಕಾಳಜಿಯನ್ನು ಇಟ್ಟುಕೊಂಡಿರುವವರೇ, ಆದರೆ ಆಧುನಿಕ ಜೀವನ ಕ್ರಮವನ್ನು ಒಪ್ಪಿಕೊಂಡ ಮೇಲೆ ಸ್ವಲ್ಪ ಮಟ್ಟಿನ ರಾಜಿ ಅನಿವಾರ್ಯ ಎನ್ನುವವರಿದ್ದಾರೆ. ನಮಗೆ ರಸ್ತೆ, ವಿದ್ಯುತ್, ಮುಂತಾದವು ಬೇಕೇಬೇಕು ಎಂದಮೇಲೆ ಅರಣ್ಯನಾಶವೂ ಅನಿವಾರ್ಯವಾದ್ದರಿಂದ ಮರಗಿಡಗಳನ್ನು ಬೆಳೆದರಾಯ್ತು ಎಂದುಕೊಂಡವರಿದ್ದಾರೆ. ನೀರಿಲ್ಲದವರಿಗೆ ನೀರು ನೀಡುವುದು, ಪುಣ್ಯಕಾರ್ಯ ಎನ್ನುವವರಿದ್ದಾರೆ. ಹಾಗೇ ಪರಿಸರದ ವಿಚಾರದಲ್ಲಿ ಯಾವದೇ ರಾಜಿಗೂ ಸಿದ್ಧವಿಲ್ಲದವರೂ ಇದ್ದಾರೆ.

ಈ, ಎಲ್ಲ ವಿಚಾರಗಳನ್ನು ಬಿಟ್ಟು ಯೋಚನೆ ಮಾಡಿದರೂ ಕೂಡಾ ಈ ಜಲವಿದ್ಯುತ್ ಯೋಜನೆಗಳಿಗಾಗಲೀ, ನದೀತಿರುವು ಯೋಜನೆಗಳಿಗಾಗಲೀ, ಪಶ್ಚಿಮ ಘಟ್ಟಗಳ ಜೀವ ವೈವಿದ್ಯವನ್ನು ನಾಶ ಮಾಡುವ ಯಾವುದೇ ಯೋಜನೆಗೆ ಸ್ಥಳೀಯ ಕೃಷಿಕರಿಂದ ಅಥವಾ ಕೃಷಿಕಾರ್ಮಿಕರಿಂದ ಯಾಕೆ ವ್ಯಾಪಕವಾದ ವಿರೋಧ ಬರುತ್ತಿಲ್ಲ ?. ಇದಕ್ಕೆ ಹಲವು ಕಾರಣಗಳಿವೆ. ಪರಿಸರವಾದಿಗಳ ಸಂಘಟನಾತ್ಮಕ ಸಮಸ್ಯೆಗಳು ಸ್ವಲ್ಪಮಟ್ಟಿಗೆ ಕಾರಣವಿದ್ದರೆ. ಇನ್ನಿತರೆ ಕಾರಣಗಳು ಹಲವಿವೆ. ಮುಖ್ಯವಾಗಿ ಇಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿ ಹೋಗಿದ್ದಾನೆ. ಎಲ್ಲ ಸರ್ಕಾರಗಳು ಮೂಗಿಗೆ ತುಪ್ಪ ಸವರಿದಂತೆ ನೀಡಿದ ಯಾವುದೇ ‘ಪ್ಯಾಕೇಜ್’ ಅವನಿಗೆ ಭರವಸೆಯನ್ನು ತುಂಬಿಲ್ಲ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನ ಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಆ ಪ್ರದೇಶದ ಪಾರಂಪರಿಕ ಬೆಳೆಗಳನ್ನು ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ಇದರೊಂದಿಗೆ ಈಗಾಗಲೇ ಅನುಷ್ಠಾನಕ್ಕೆ ಬಂದಿರುವ ಹಲವು ಯೋಜನೆಗಳಿಂದಾಗಿ ನಡೆದ ಅರಣ್ಯಪ್ರದೇಶದ ಅತಿಕ್ರಮಣದಿಂದಾಗಿ ಆನೆಯೊಂದೇ ಅಲ್ಲ ಇತರ ಕಾಡು ಪ್ರಾಣಿಗಳೂ ಊರೊಳಗೆ ಬರಲಾರಂಭಿಸಿವೆ. ಇವೆಲ್ಲದರ ಜೊತೆ ಕೃಷಿಗೆ ಕೆಲಸಗಾರರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತು ಹೋಗಿದ್ದಾನೆ. ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲದೆ ಕೃಷಿಕ ನಿರಾಶನಾಗಿ ಕುಳಿತಿದ್ದಾನೆ. (ಈ ಭಾಗದ ಜಮೀನನ್ನು ಕಾರ್ಪೊರೇಟ್ ವಲಯದವರೂ ಸಹ ಖರೀದಿಸುತ್ತಿಲ್ಲ). ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ. ಹೇಗೂ ಮಾರಲು ಅಸಾಧ್ಯವಾಗಿರುವ ತನ್ನ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿಪಡೆಯಬಹುದು, ಇಲ್ಲವೇ ಯೋಜನೆಗಳಿಂದಾಗಿ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವುದರಿಂದ ಬೇರೇನಾದರೂ ಕೆಲಸವೋ ವ್ಯಾಪಾರವೋ ಮಾಡಬಹುದೆಂಬ ಹವಣಿಕೆಯಲ್ಲಿದ್ದಾನೆ. ಇವರಲ್ಲಿ ಕೆಲವರ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಪ್ರತೀ ಬಾರಿಯೂ ಈ ಯೋಜನೆಗಳ ವಿಚಾರ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ ಮತ್ತು ಇನ್ನಿತರ ಮಾಧ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಸಾಧ್ಯವಿದ್ದವರು ಈಗಾಗಲೇ ತಮ್ಮ ಕಾಫಿ ತೋಟಗಳನ್ನು ಉದ್ಯಮಿಗಳಿಗೆ ಮಾರಿದ್ದಾರೆ. ಅಲ್ಲೆಲ್ಲ ರೆಸಾರ್ಟುಗಳು ಪ್ರಾರಂಭವಾಗಿವೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕು.

ದೊಡ್ಡ ಕೈಗಾರಿಕೆಗಳಿಗೆ ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು. ಯಾವುದೇ ಯೋಜನೆಯಲ್ಲಿ ಸ್ಥಳಾಂತರಿಸ ಬೇಕಾಗಿರುವ ಎಲ್ಲ ಜನರಿಗೆ ಕೊಡಬೇಕಾದ ಪರಿಹಾರದ ಮೊತ್ತ ಕೆಲವು ಕೋಟಿ ರೂಪಾಯಿಗಳು ಮಾತ್ರವಾಗಿರುತ್ತದೆ.

ಇನ್ನು ಇಲ್ಲಿರುವ ಹಳೆಯ ತಲೆಮಾರಿನ ಸ್ಥಳೀಯ ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿ ದೊರೆಯುವ ನಿರೀಕ್ಷೆಯಲ್ಲಿ ಇವರಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮೀ ಪರಿಣಾಮಗಳ ಬಗ್ಗೆ ಯೋಚಿಸದೆ ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.

ಇದಕ್ಕಿಂತ ಶಕ್ತಿಶಾಲಿ, ಪ್ರಭಾವಶಾಲಿ ಗುಂಪೊಂದಿದೆ. ಇವರಲ್ಲಿ ಕೆಲವರು ನೇರವಾಗಿ ಅಭಿವೃದ್ಧಿಯ ಹರಿಕಾರರಂತೆ ಮಾತನಾಡುತ್ತ ಈ ಎಲ್ಲ ಯೋಜನೆಗಳನ್ನು ನೇರವಾಗಿ ಸಮರ್ಥಿಸುತ್ತ ಈ ಮೊದಲು ತಿಳಿಸಿದ, ಸ್ವಲ್ಪ ಮಟ್ಟಿಗೆ ರಾಜಿ ಅನಿವಾರ್ಯ ಎನ್ನುವ, ಪ್ರಗತಿಪರರ ಹಾಗೂ ಬುದ್ಧಿಜೀವಿಗಳ ಮಾತನ್ನು ತಮ್ಮ ಸಮರ್ಥನೆಗಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ಇವರಿಗಿಂತಲೂ ಹೆಚ್ಚು ಅಪಾಯಕಾರಿಗಳು. ಇವರು ಈ ಯೋಜನೆಗಳನ್ನು ವಿರೋಧಿಸುವವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾ, ಈ ಎಲ್ಲ ಯೋಜನೆಗಳ ಅನುಷ್ಟಾನವಾದರೆ ತಮಗೆ ದೊರೆಯಬಹುದಾದ ಲಾಭದ ಲೆಕ್ಕಾಚಾರದಲ್ಲಿರುತ್ತಾರೆ.

ಇವರುಗಳು ಮಾತ್ರವಲ್ಲ, ಈ ಎಲ್ಲ ಯೋಜನೆಗಳಿಂದ ಲಾಭಪಡೆಯುವವರು, ಇನ್ನೂ ಅನೇಕರಿದ್ದಾರೆ. ಇವರಲ್ಲಿ ಗುತ್ತಿಗೆದಾರರದು, ಮರದ ವ್ಯಾಪಾರಿಗಳು, ಮರಳು ದಂಧೆಯವರು, ಗ್ರಾನೈಟ್ ಗಣಿಗಾರಿಕೆಯವರು, ರಿಯಲ್ ಎಸ್ಟೇಟ್ ದಳ್ಳಾಳಿಗಳು, yettinahole-ringsಮತ್ತು ಇವರಿಂದ ಲಾಭ ಪಡೆಯುತ್ತಿರುವ ಅನೇಕ ಸ್ಥಳೀಯರು ಮತ್ತು ಕೆಲವರು ಪರ್ತಕರ್ತರೂ ಇದ್ದಾರೆ. ಇವರಿಗೆ ಜಲವಿದ್ಯುತ್ ಯೋಜನೆಯಾಗಲೀ, ನದೀ ತಿರುವು ಯೋಜನೆಯಾಗಲೀ, ರಸ್ತೆ ನಿರ್ಮಾಣವಾಗಲೀ ಯಾವ ವೆತ್ಯಾಸವೂ ಇಲ್ಲ. ಯಾವುದೇ ಯೋಜನೆ ಇವರ ಪಾಲಿಗೆ ಹಿಂಡುವ ಹಸುವಾಗಬಲ್ಲದು. ಇವರುಗಳು ಬಹಳ ಸಮರ್ಥವಾಗಿ ಸ್ಥಳೀಯ ಜನರಲ್ಲಿ ಹೊಸ ಆಸೆ-ಆಕಾಂಕ್ಷೆಗಳನ್ನು ತುಂಬಬಲ್ಲರು. ಈ ಕಾರಣಗಳಿಂದಾಗಿ ಈ ಎಲ್ಲ ಯೋಜನೆಗಳ ವಿರೋಧವಾಗಿ ಸಭೆ, ಜಾತಾ, ಸತ್ಯಾಗ್ರಹ, ಜನಾಭಿಪ್ರಾಯ ಸಂಗ್ರಹ ಸಭೆ ಏನೇ ನಡೆಯಲಿ, ಸ್ಥಳೀಯ ಕೃಷಿಕ-ಕಾರ್ಮಿಕರಿಂದ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿಲ್ಲ, ಆದ್ದರಿಂದ ಈ ಕಾರ್ಯಕ್ರಮಗಳಲ್ಲಿ ಹೊರಗಿನವರ ಸಂಖ್ಯೆಯೇ ಹೆಚ್ಚಾಗಿ ಕಾಣಸಿಗುತ್ತದೆ ಇದರಿಂದಾಗಿ ಈ ಯೋಜನೆಗಳಿಗೆ ಸ್ಥಳೀಯರ ವಿರೋಧವಿಲ್ಲ, ಈ ಪರಿಸರವಾದಿಗಳು ಹೊರಗಿನವರು, ಹೊಟ್ಟೆ ತುಂಬಿದ ಸುಶಿಕ್ಷಿತರು, ಮೇಲ್ವರ್ಗದ ಜನ, ಇತ್ಯಾದಿ ವಾದಗಳು ಹುಟ್ಟಿಕೊಳ್ಳುತ್ತಿವೆ.

ಕೆಲವು ತಿಂಗಳ ಹಿಂದೆ ತುಮಕೂರಿನ ಶಾಲೆಯೊಂದರ ಮಕ್ಕಳು ಎತ್ತಿನಹೊಳೆ ಯೋಜನೆಯ ಬಗ್ಗೆ ಮತ್ತು ಎತ್ತಿನಹೊಳೆ ಪರಿಸರದ ಅಧ್ಯಯನಕ್ಕಾಗಿ ಬಂದಿದ್ದರು ಮೂರುದಿನಗಳಕಾಲ ನಮ್ಮ ರಂಗ ಮಂದಿರದಲ್ಲಿ ಉಳಿದು, ಎತ್ತಿನಹಳ್ಳ ಹುಟ್ಟುವಲ್ಲಿಂದ ಕೆಂಪೊಳೆ ಸೇರುವ ತನಕದ ಒಟ್ಟು ಜಲಾನಯನ ಪ್ರದೇಶದಲ್ಲಿ ತಿರುಗಾಡಿದರು. ಜೀವ ವೈವಿದ್ಯವನ್ನೆಲ್ಲ ನೋಡಿದರು. ದಾಖಲಿಸಿದರು. ಪೋಟೋತೆಗೆದುಕೊಂಡರು. ಇಲ್ಲಿಯ ನೆಲದ ವಿಸ್ತೀರ್ಣ, ಹಾಗೂ ಅದೇಸ್ಥಳದ ಮೇಲ್(ಏರಿಯಲ್)ವಿಸ್ತೀರ್ಣ, ಮಳೆಮಾಪನ ವಿಧಾನಗಳು, (ಕಾಫಿ ತೋಟಗಳಲ್ಲಿ ಪ್ರತಿದಿನ ಮಳೆಮಾಪನ ಮಾಡುವುದು ಬ್ರಿಟಿಷರ ಕಾಲದಿಂದಲೂ ನಡೆದು ಬಂದಿದೆ). ಒಂದು ಟಿ.ಎಮ್.ಸಿ ನೀರೆಂದರೆ ಎಷ್ಟು?. ವರ್ಷಕ್ಕೆ ಸರಾಸರಿ ನೂರರಿಂದ ನೂರಿಪ್ಪತ್ತು ಇಂಚುಗಳಷ್ಟು ಮಳೆಬೀಳುವ ಈ ಜಲಾನಯನ ಪ್ರದೇಶದಲ್ಲಿ ಒಂದು ಮಳೆಗಾಲದಲ್ಲಿ ಭೂಮಿಗೆ ಬೀಳುವ ನೀರಿನ ಒಟ್ಟು ಮೊತ್ತ. ಅದರಲ್ಲಿ ಆವಿಯಾಗುವ ಪ್ರಮಾಣ, ಭೂಮಿಯಲ್ಲಿ ಇಂಗುವ ಪ್ರಮಾಣ, ಈ ಪ್ರದೇಶದ ಜೀವರಾಶಿಗೆ ಬಳಕೆಗೆ ಬೇಕಾದ ನೀರು ಇವೆಲ್ಲವನ್ನೂ ಕಳೆದು, ಹೆಚ್ಚುವರಿಯಾಗಿ ಸಿಗಬಹುದಾದ ನೀರು ಹೀಗೆ ಎಲ್ಲವನ್ನೂ ತಾವೇ ಪ್ರಾಯೋಗಿಕವಾಗಿ ನೋಡಿ ಕಲಿತು, ಕೊಳವೆಗಳ ಮೂಲಕ ಸಾಗಿಸಬಹುದಾದ ನೀರು ಎತ್ತಿನ ಹಳ್ಳದಲ್ಲಿ ದೊರಕುವುದು ಕೇವಲ ಮೂರರಿಂದ ಮೂರೂವರೆ ಟಿ.ಎಮ್.ಸಿ. ಮಾತ್ರ ಎಂದು ಲೆಕ್ಕಹಾಕಿದರು. ಎತ್ತಿನಹಳ್ಳವಲ್ಲದೆ, ಸರ್ಕಾರ ಹೇಳುವ ಕಾಡುಮನೆಹಳ್ಳ, ಕೆಂಕೇರಿಹಳ್ಳ, ಮಂಜನಹಳ್ಳ ಸೇರಿದರೂ ಒಟ್ಟು ನೀರಿನ ಮೊತ್ತ ಎಂಟರಿಂದ ಒಂಭತ್ತು ಟಿ.ಎಮ್.ಸಿ ಮೀರಲಾರದೆಂದು ತೀರ್ಮಾನಿಸಿದರು. ಅಂದರೆ ಈಗಾಗಲೇ ತಯಾರಿಸಿಟ್ಟಿರುವ ಬೃಹತ್ ಗಾತ್ರದ ಕೊಳವೆಗಳಿಗೂ ಇಲ್ಲಿರುವ ನೀರಿನ ಪ್ರಮಾಣಕ್ಕೂ ತಾಳೆಯಾಗುವುದಿಲ್ಲವೆಂದು. ಅವರಿಗೂ ಅರಿವಾಯ್ತು. ಇಪ್ಪತ್ತನಾಲ್ಕು ಟಿ.ಎಮ್.ಸಿ. ನೀರು ದೊರೆಯಬೇಕಾದರೆ ಘಟ್ಟದ ಕೆಳಗಿನ ನೇತ್ರಾವತಿಯನ್ನೋ ಕುಮಾರಧಾರೆಯನ್ನೋ ತಿರುಗಿಸುವುದು ಅನಿವಾರ್ಯವೆಂದು, ಅದರಿಂದ ಅಲ್ಲಿನ ಪರಿಸರಕ್ಕೆ ಇನ್ನೂ ಹೆಚ್ಚಿನ ಹಾನಿ ಆಗಲಿದೆ ಎಂದು ಮಕ್ಕಳು ಅಭಿಪ್ರಾಯಪಟ್ಟರು.

ಈ ಮಕ್ಕಳೆಲ್ಲ ಎತ್ತಿನಹೊಳೆ ಯೋಜನೆಯ ಫಲಾನುಭವಿ ಪ್ರದೇಶಗಳ ಮಕ್ಕಳು, ಇವರೊಂದಿಗೆ ನಮ್ಮೂರ ಶಾಲೆಯ ಅದೇ ವಯಸ್ಸಿನ ಮಕ್ಕಳೊಂದಿಗೆ ಮಾತನಾಡಲು ಬಿಟ್ಟೆವು. ಮಕ್ಕಳು ಅವರವರೇ ಮಾತಾಡಿ ಕೊನೆಗೆ ತೀರ್ಮಾನಿಸಿದ್ದೆಂದರೆ “ತುಮಕೂರಿನ ನೀರಿನ ಸಮಸ್ಯೆ ಅಲ್ಲಿಯ ಜನರು ಅಲ್ಲೇ ಪರಿಹಾರ ಕಂಡುಕೊಳ್ಳಬೇಕು… ಹಾಗೇ ಮಲೆನಾಡಿನ ಜನ ತಮ್ಮ ಪ್ರಾಣಿಗಳಕಾಟ ಇತ್ಯಾದಿ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು”ಎಂದು.

ಇವರೆಲ್ಲ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು. ಆ ಮಕ್ಕಳಿಗಿರುವ ಅರಿವು- ಕಾಳಜಿ ನಮಗಿದ್ದಿದ್ದರೆ……….

ಕೇಂದ್ರ ಸರ್ಕಾರವೀಗ ಹಸಿರುನಾಶಕ್ಕೆ ಹಸಿರು ನಿಶಾನೆ ತೋರಿದೆ. ನಮ್ಮ ರಂಗತಂಡ “ಎತ್ತಿನ ಹೊಳೆ” ಎಂಬ ನಾಟಕವನ್ನು ರಚಿಸಿಕೊಂಡು ತಾಲೀಮಿನಲ್ಲಿ ತೊಡಗಿದೆ.

ಅಭಿವೃದ್ಧಿಯ ಫಲ ಕೃಷಿಕನನ್ನು ತಲುಪಬಲ್ಲುದೆ?

– ಪ್ರಸಾದ್ ರಕ್ಷಿದಿ

ಇಂದು ಎಲ್ಲ ಸರ್ಕಾರಗಳೂ ಅಭಿವೃಧ್ದಿಯ ಮಾತನ್ನು ನಿತ್ಯ ವಿಧಿಯ ಮಂತ್ರದಂತೆ ಪಠಿಸುತ್ತಿವೆ. ದೇಶ ಅಭಿವೃದ್ಧಿಯಾದರೆ ಉಳಿದೆಲ್ಲ ಸಮಸ್ಯೆಗಳೂ ತಾನಾಗಿಯೇ ನಿವಾರಣೆಯಾಗುತ್ತದೆ ಎಂಬಂತ ಮಾತನ್ನು ಅನೇಕ ರಾಜಕಾರಣಿಗಳು. ಹಲವರು ಸಾಮಾಜಿಕ ಕಾರ್ಯಕರ್ತರೂ ಆಡುತ್ತಿದ್ದಾರೆ. ಆದರೆ ಅಭಿವೃದ್ಧಿ ಎಂದರೇನು ಎಂಬುದಕ್ಕೆ ರಾಜಕೀಯ ಪಕ್ಷಗಳಲ್ಲಿ ಸಾಮಾಜಿಕ ಕಾರ್ಯಕರ್ತರಲ್ಲಿ ಚಿಂತಕರಲ್ಲಿ ಹಲವಾರು ನಮೂನೆಗಳು, ವಿಭಿನ್ನ ಅಭಿಪ್ರಾಯಗಳೂ ಇವೆ. ಇವೆರಡರಲ್ಲಿ ಎರಡು ಮುಖ್ಯಧಾರೆಯ ಚಿಂತನೆಯನ್ನು ನಾವು ಗಮನಿಸಬಹುದು.

ಮೊದಲನೆಯದಾಗಿ ಅಭಿವೃದ್ಧಿ ಎಂದರೆ, ಜನ ಸಾಮಾನ್ಯನ ಜೀವನ ಮಟ್ಟವನ್ನು ಸುಧಾರಿಸುವುದು ಅದಕ್ಕಾಗಿ ಹಲವು ಜನಪರ farmersಯೋಜನೆಗಳು, ಎಲ್ಲರಿಗೂ ಉದ್ಯೋಗ, ವಸತಿ, ಆಹಾರ ಭದ್ರತೆ, ವೈದ್ಯಕೀಯ ಸೌಲಭ್ಯ. ವಿದ್ಯಾಭ್ಯಾಸದ ಅವಕಾಶ ಇತ್ಯಾದಿಯನ್ನು ಸರ್ಕಾರದ ಮೂಲಕ ಒದಗಿಸುವುದು. ಹಲವು ಕ್ಷೇತ್ರಗಳಲ್ಲಿ ಅನಗತ್ಯ ಸ್ಪರ್ಧೆಯನ್ನು ನಿಯಂತ್ರಿಸಿ, ಸರ್ಕಾರವೇ ಹಲವು ಉದ್ಯಮಗಳನ್ನು ನಡೆಸುವುದು, ಸೇವಾ ಸೌಲಭ್ಯಗಳನ್ನುಗಳನ್ನು ಒದಗಿಸುವುದು,ಇತ್ಯಾದಿಗಳು.

ಎರಡನೇ ಮಾದರಿಯೆಂದರೆ, ಮೊದಲು ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಮಾಡುತ್ತ ಹೋಗುವುದು. ಅದಕ್ಕಾಗಿ ಸರ್ಕಾರದ ನಿಯಂತ್ರಣವನ್ನು ಕನಿಷ್ಟಗೊಳಿಸಿ ಖಾಸಗಿಯವರಿಗೆ ಉತ್ತೇಜನ ನೀಡುವುದು. ಉದ್ಯೋಗವಕಾಶಗಳು ಹೆಚ್ಚಿದಂತೆಲ್ಲ, ಎಲ್ಲಕಡೆ ಸ್ಪರ್ಧೆಗೆ ಅವಕಾಶ ನೀಡುವುದರಿಂದ ಉತ್ತಮ ಗುಣಮಟ್ಟದ ಸೇವೆ ಹಾಗೂ ಉತ್ಪನ್ನಗಳು, ಎರಡೂ ಜನರಿಗೆ ದೊರಕಿ ಅವನ ಜೀವನ ಮಟ್ಟ ತಾನಾಗಿಯೇ ಸುಧಾರಿಸುತ್ತದೆ. ಎನ್ನುವುದು.

ಭಾರತ ಸ್ವತಂತ್ರವಾದ ಮೊದಲ ಮೂವತ್ತೈದು ವರ್ಷಗಳು ಮೊದಲನೆಯ ಅಂದರೆ ಸಮಾಜವಾದಿ ನಮೂನೆಯ –ಚಿಂತನೆಯ ಸರ್ಕಾರಗಳಿದ್ದರೆ, ನಂತರದ ವರ್ಷಗಳಲ್ಲಿ ಎರಡನೆಯ, ಬಲಪಂಥೀಯ ವಾದದ ಆಡಳಿತವನ್ನು ಕಾಣುತ್ತಿದ್ದೇವೆ. ವಿಷೇಶವೆಂದರೆ ಎರಡೂ ಮಾದರಿಯ ಸರ್ಕಾರ- ಆಡಳಿತಗಳೂ ಅಭಿವೃದ್ಧಿಯನ್ನೇ ಮೂಲಗುರಿಯಾಗಿಸಿಕೊಂಡು ಆಡಳಿತ ನಡೆಸಿವೆ. ನಾನು ಉದ್ಧೇಶ ಪೂರ್ವಕವಾಗಿಯೇ ಯಾವುದೇ ಪಕ್ಷಗಳನ್ನು ಹೆಸರಿಸುತ್ತಿಲ್ಲ. ಯಾಕೆಂದರೆ ಮೇಲ್ನೋಟಕ್ಕೆ ಕಾಣುವ ಕೆಲವು ಮುಖವಾಡ ಸದೃಶ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ ನಮ್ಮ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದೊಡ್ಡಮಟ್ಟದ ಸೈದ್ಧಾಂತಿಕ ವೆತ್ಯಾಸವೂ ಇಲ್ಲ. ಆಡಳಿತಾತ್ಮಕ ಭಿನ್ನತೆಯೂ ಇಲ್ಲ.

ಹೀಗಿದ್ದರೂ ಭಾರತದ ಹಲವಾರು ಸಮಸ್ಯೆಗಳ ನಡುವೆಯೂ ಯಾವುದೇ ಅಭಿವೃದ್ದಿ ಆಗಿಯೇ ಇಲ್ಲವೆ? ಎಂದರೆ ಖಂಡಿತ ಇಂದು ನಾವು ಹಲವಾರು ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿ ಗಣನೀಯವಾಗಿಯೇ ಇದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಕಲೆ, ಕ್ರೀಡೆ, ಉದ್ಯಮ ಹೀಗೆ ಎಲ್ಲ ವಿಚಾರಗಳಲ್ಲೂ ನಮ್ಮ ಸಾಧನೆ ಖಂಡಿತ ವಿಶ್ವವೇ ಗಮನಿಸುವಂತೆ ಇದೆ. ರಾಷ್ಟ್ರೀಯ ಉತ್ಪನ್ನ ಹಲವಾರು ಪಟ್ಟು ಹೆಚ್ಚಾಗಿದೆ. ಹಾಗೇ ಉದ್ಯೋಗಾವಕಾಶಗಳು ಹೆಚ್ಚಿವೆ. ಶ್ರೀಮಂತ ವರ್ಗ ಬಲೂನಿನಂತೆ ಉಬ್ಬಿದ್ದರೆ, ಮಧ್ಯಮ ವರ್ಗವೂ ದೊಡ್ಡ ಪ್ರಮಾಣದ ಫಲಾನುಭವಿಯಾಗಿದೆ. ಆದರೆ ಒಟ್ಟು ಏರಿಕೆಯಾಗಿರುವ ನಮ್ಮ ಜನಸಂಖ್ಯೆಯ ಪ್ರಮಾಣ ಮತ್ತು ತಲಾ ಆದಾಯವನ್ನು ಹೋಲಿಸಿದರೆ. ಕೆಳವರ್ಗದ, ಸಣ್ಣರೈತರ, ಕೂಲಿಕಾರ್ಮಿಕರ ಆದಾಯದಲ್ಲೂ ಸಾಕಷ್ಟು ಏರಿಕೆಯಾಗಿದ್ದು ಅವರ ಜೀವನ ಮಟ್ಟದಲ್ಲೂ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಆದರೆ ನಮ್ಮ ಜನಸಂಖ್ಯೆಯ ಗಣನೀಯ ಭಾಗವಿನ್ನೂ ಬಡತನದಲ್ಲೇ ಉಳಿದಿದೆ. ಹಾಗೂ ಒಟ್ಟು ಸಂಪತ್ತಿನ ಹಂಚಿಕೆಯ ಅನುಪಾತ ಹಿಂದೆಂದಿಗಿಂತ ವಿಷಮವಾಗಿದೆ. ಇದು ಭಾರತದಾದ್ಯಂತ ರಾಜ್ಯದಿಂದ ರಾಜ್ಯಕ್ಕೆ ಮತ್ತೆ ರಾಜ್ಯಗಳೊಳಗೆ ಪ್ರಾದೇಶಿಕವಾಗಿಯೂ ಭಿನ್ನವಾಗಿದೆ. ಆದ್ದರಿಂದ ಸರ್ಕಾರ ಯೋಜಿಸುವ ಯಾವದೇ ಜನಪರ-ಅಭಿವೃದ್ದಿ ಯೋಜನೆಗಳು ನಮ್ಮ ಅಪಾರ ಪ್ರಾದೇಶಿಕ ಭಿನ್ನತೆ ಹಾಗೂ ಸಾಂಸ್ಕøತಿಕ ಬಹುತ್ವಗಳನ್ನು ಗಮನದಲ್ಲಿಟ್ಟುಕೊಂಡು. ಸ್ಥಳೀಯವಾಗಿ ರೂಪಿತವಾಗದಿದ್ದರೆ ನಿಶ್ಚಿತ ಪರಿಣಾಮವನ್ನು ಬೀರಲು ಅಸಮರ್ಥವಾಗುತ್ತದೆ. (ಉದಾ: ಉದ್ಯೋಗ ಖಾತ್ರಿಯಂತಹ ಯೋಜನೆಗಳು, ಪ್ರಾದೇಶಿಕ ಭಿನ್ನತೆ ಮತ್ತು ಅಗತ್ಯಗಳನ್ನು ಪರಿಗಣಿಸದೆ ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ತಂದದ್ದರಿಂದ ನಿಶ್ಚಿತ ಫಲವನ್ನೂ ನೀಡದೆ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಯಿತು.)

ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಅಭಿವೃದ್ಧಿಯು ಕೃಷಿಕ್ಷೇತ್ರವನ್ನು ಹೇಗೆ ತಲುಪಿದೆ, ಅದರ ಪರಿಣಾಮಗಳೇನಾಗಿವೆ ಎಂದು ಪರಿಶೀಲಿಸಬೇಕಾಗಿದೆ.

ಕೃಷಿವಲಯವೆಂದರೆ, ರೈತಾಪಿವರ್ಗ ಮಾತ್ರವಲ್ಲ ಭೂರಹಿತ, ಅಲ್ಪಸ್ವಲ್ಪ ಭೂಮಿಹೊಂದಿದ ಕೃಷಿ ಕೂಲಿಗಾರರು, ಕೃಷಿಕರನ್ನೇ ಅವಲಂಬಿಸಿ ಬದುಕುತ್ತಿರುವ ಕಮ್ಮಾರ, ಬಡಗಿ, ಗಾರೆಯವರು, ಹಳ್ಳಿಗಳಲ್ಲಿರುವ ಯಂತ್ರೋಪಕರಣಗಳ ರಿಪೇರಿಯವರು, ದರ್ಜಿಗಳು ಇತರ ಸಣ್ಣಪುಟ್ಟ ಉಪಕಸುಬುದಾರರು ಎಲ್ಲರೂ ಬರುತ್ತಾರೆ. ಇವರೆಲ್ಲರೂ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವುದರಿಂದ ಕೃಷಿಯ ಮೇಲಾಗುವ ಯಾವುದೇ ಪರಿಣಾಮವೂ ಇವರನ್ನೂ ಆವರಿಸಿಕೊಳ್ಳುತ್ತದೆ.

ಇದರೊಂದಿಗೆ ಗಮನಿಸಬೇಕಾದ ಮುಖ್ಯವಾದ ಸಂಗತಿಯೆಂದರೆ. ದೇಶದಲ್ಲಿ ಸಮಾಜವಾದೀ ಮಾದರಿಯ ಸರ್ಕಾರ ಇದ್ದ ಕಾಲದಲ್ಲಿ. ನಮ್ಮ ಹಳ್ಳಿಗಳಲ್ಲಿ ಪಾಳೇಗಾರೀ-ಜಮೀನ್ದಾರೀ ಸಂಬಂಧಗಳೇ ಮುಂದುವರೆದಿದ್ದವು. ಕರ್ನಾಟಕದಂತಹ ಕೆಲವು ರಾಜ್ಯಗಳಲ್ಲಿ ಭೂಸುಧಾರಣೆ ಜಾರಿಗೆ ಬಂದ ನಂತರವೂ, ಹಳ್ಳಿಗಳಲ್ಲಿ ಭೂರಹಿತ ಕೃಷಿಕೂಲಿಗಾರರ ಬದುಕಿನಲ್ಲಿ ಮಹತ್ತರ ಬದಲಾವಣೆಯೇನೂ ಆಗಿರಲಿಲ್ಲ. ಭೂಸುಧಾರಣೆಯ ಫಲಾನುಭವಿಗಳಾದ ಗೇಣಿದಾರರು, ಕೂಲಿಗಾರ ಪಾಲಿಗೆ ಭೂಮಾಲಿಕರಾಗಿ ಹಳೆಯ ಜಮೀನ್ದಾರೀ ಸಂಬಂಧಗಳಲ್ಲೇ ಮುಂದುವರೆದರು. ಆದರೆ ಈ ಪಾಳೇಗಾರೀ ಸ್ವರೂಪದ ಸಂಬಂಧಗಳು ಬದಲಾಗಲು ಪ್ರಾರಂಭವಾದದ್ದು. ಭಾರತ ಸಮಾಜವಾದಿ ಮಾದರಿಯನ್ನು ಬಿಟ್ಟು ಬಲಪಂಥೀಯ ಮಾದರಿ ಆಡಳಿತವನ್ನು ಪ್ರಾರಂಭಿಸಿದ ನಂತರವೇ. ಇದಕ್ಕೆ ಅನೇಕ ಕಾರಣಗಳಿವೆ.

ಇತ್ತೀಚಿನ ಎಲ್ಲ (ರಾಜ್ಯ-ಕೇಂದ್ರಗಳ) ರೈತರಬಗ್ಗೆ, ಕೃಷಿವಲಯದ ಬಗ್ಗೆ ಬಹಳ ಮಾತನಾಡುತ್ತಿವೆ. ಪ್ರತ್ಯೇಕ ಬಜೆಟ್ಟನ್ನೂ ತಂದಿವೆ. farmer-land-acquisition-2ಕೃಷಿವಲಯಕ್ಕೆಂದೇ ಹಲವಾರು ಯೋಜನೆಗಳನ್ನು-ಕಾರ್ಯಕ್ರಮಗಳನ್ನೂ ಘೋಷಣೆ ಮಾಡುತ್ತಿದೆ. ಆದರೆ ಹಳ್ಳಿಗಳು ಬರಡಾಗುತ್ತ, ದುಡಿಯುವ ಶಕ್ತಿಯಿರುವ ಯುವಜನತೆ ನಗರ ವಲಸೆ ಹೋಗುತ್ತಿದ್ದಾರೆ. ಯಾವ ಹಳ್ಳಿಯನ್ನು ಪ್ರವೇಶಿಸಿ ಪ್ರತಿಯೊಂದು ಮನೆಯಲ್ಲಿ ಪ್ರಶ್ನಿಸಿದರೆ ಮನೆಯಲ್ಲಿ ಒಬ್ಬನಾ(ಳಾ)ದರೂ ಬೆಂಗಳೂರು, ಮುಂಬೈ ಅಥವಾ ಇನ್ನಾವುದೇ ನಗರ ಇಲ್ಲವೇ ವಿದೇಶದಲ್ಲಿದ್ದಾರೆ. ಇವರಲ್ಲೂ ಅನೇಕರು ತಮ್ಮ ಜೀವನಾವಶ್ಯಕತೆ ತಕ್ಕಷ್ಟು ಮಾತ್ರ ಗಳಿಸುತ್ತಿದ್ದು ಹಳ್ಳಿಯಲ್ಲಿರುವ ತಮ್ಮ ಕುಟುಂಬದವರಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಆದರೆ ಹೀಗೆ ಹೊರ ಹೋದವರಲ್ಲಿ ಗಣನೀಯವಾದ ಸಂಖ್ಯೆಯ ಜನ ತಮ್ಮ ಗಳಿಕೆಯ ಒಂದು ಪಾಲನ್ನು ತಮ್ಮ ಕುಟುಂಬಕ್ಕೆ ನೀಡುತ್ತಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಮಟ್ಟವೂ ಸುಧಾರಿಸಿದೆ. ಜೊತೆಯಲ್ಲೇ ಹಳ್ಳಿಗಳಲ್ಲೇ ಕೂಲಿಕಾರ್ಮಿಕರ ಕೊರತೆ ಉಂಟಾಗಿರುವುದರಿಂದ, ಭೂರಹಿತ ಕೂಲಿಯಾಳುಗಳು ಕೂಲಿಗಾಗಿ ಭೂಮಾಲಿಕರ ಮುಂದೆ ದೈನೇಸಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿ ದೇಶಾದ್ಯಂತ ಕೆಲವು ರಾಜ್ಯ-ಭಾಗಗಳಲ್ಲಿ ಕಂಡುಬಂದರೆ ಇನ್ನು ಕೆಲವು ಭಾಗಗಳಲ್ಲಿ ತೀವ್ರ ಬಡತನ ನಿರುದ್ಯೋಗವೇ ಮುಂದುವರೆದಿದೆ. ಈ ಪ್ರದೇಶಗಳಿಂದ ಜನರು ಕೂಲಿ-ಕೆಲಸಗಳಿಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ನಿರಂತರವಾಗಿದೆ. ಉದಾಹರಣೆಗೆ ಕರ್ನಾಟಕದ ದಕ್ಷಿಣ ಒಳನಾಡು ,ಮಲೆನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಕೇವಲ ಮೂರು -ನಾಲ್ಕು ವರ್ಷಗಳ ಹಿಂದೆ ಕೃಷಿ ಸಾಧ್ಯವೇ ಇಲ್ಲವೆನ್ನುವಷ್ಟು ಕಾರ್ಮಿಕರ ಕೊರತೆ ಉಂಟಾಗಿತ್ತು. ಈಗ ಉದ್ಯೋಗವಕಾಶಗಳು ಕಡಿಮೆ ಇರುವ ಬಿಹಾರ, ಒರಿಸ್ಸಾ ಹಾಗೂ ಅಸ್ಸಾಮಿನಿಂದ ಸಾಕಷ್ಟು ಜನರು ವಲಸೆ ಬರುತ್ತಿದ್ದಾರೆ. ಆದರೆ ಇವರಿಗೆ ಈ ನೆಲದಲ್ಲಿ ಯಾವುದೇ ಸಂಬಂಧಗಳಿಲ್ಲದಿರುವುದರಿಂದ, ಇವರಿಗೆ ಸಂಬಳ ಸಾರಿಗೆ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಆಯ್ಕೆಯ ಸ್ವಾತಂತ್ರ್ಯ ಇದೆ. ಇಲ್ಲೇ ಇರುವ ಸ್ಥಳೀಯ ಕುಶಲ ಕರ್ಮಿಗಳು-ಕೂಲಿಕಾರರಿಗೂ ಸ್ವಲ್ಪಮಟ್ಟಿಗೆ ಚೌಕಾಸಿಯ ಬಲ ಬಂದಿರುವುದರಿಂದ ತಮ್ಮ ಕೂಲಿ ಮತ್ತು ಕೆಲಸದ ಪರಿಸ್ಥಿತಿ ಇನ್ನಿತರ ವಿಷಯಗಳ ಬಗ್ಗೆ ಮಾಲೀಕರೊಂದಿಗೆ ಮಾತು ಕತೆಗೆ ನಿಲ್ಲಬಲ್ಲರು. ಇವೆಲ್ಲದರಿಂದ ಹಳೆಯ ಪಾಳೇಗಾರೀ ಸಂಬಂಧಗಳಿಗೆ ಬದಲಾಗಿ ಭಂಡವಾಳಶಾಹಿ ವ್ಯವಸ್ಥೆಯ ಮಾಲೀಕ ನೌಕರ ಸಂಬಂಧಗಳು ಏರ್ಪಡುತ್ತಿವೆ. ಮತ್ತು ಹಣ ಮುಖ್ಯ ಭೂಮಿಕೆಗೆ ಬಂದಿದೆ.

ಇದರಿಂದಾಗಿ ತಮ್ಮ ಬೆಳೆಗೆ ತಾವೇ ಬೆಲೆ ನಿರ್ಧರಿಸಲಾಗದ ಅಸಹಾಯಕತೆಯಲ್ಲಿರುವ ಕೃಷಿಕರು,farmers-suicide ಕೂಲಿಕಾರ್ಮಿಕರು ಕೂಲಿ ಮತ್ತು ಇತರ ಸೌಲಭ್ಯಗಳಿಗಾಗಿ ಚೌಕಾಸಿ ಮಾಡುವುದನ್ನು ಕಂಡು “ಕೂಲಿಗಾರರೆಲ್ಲ ಹೆಚ್ಚಿಹೋಗಿದ್ದಾರೆಂದೂ ಯಾರೂ ಕೆಲಸ ಮಾಡುತ್ತಿಲ್ಲವೆಂದೂ, ಸರ್ಕಾರ ಅನೇಕ ಯೋಜನೆಗಳ ಮೂಲಕ ಇವರನ್ನು ಇನ್ನಷ್ಟು ಸೋಮಾರಿಗಳಾಗಿ ಮಾಡುತ್ತಿದೆ”ಯೆಂದೂ ದೂರುತ್ತಿರುತ್ತಾರೆ. ಎಲ್ಲ ವಿದ್ಯಮಾನಗಳ ಅರಿವಿರುವ ದೊಡ್ಡ ಭೂಮಾಲಕರೂ ಮತ್ತು ಕೆಲವರು ನಗರಪ್ರದೇಶದ ಮಧ್ಯಮ ವರ್ಗದವರು ಇವರೊಂದಿಗೆ ಅಲಂಕಾರಿಕವಾಗಿ ದನಿಗೂಡಿಸುತ್ತಾರೆ. ಇದರಿಂದಾಗಿಯೇ ಮಾಧ್ಯಮಗಳಲ್ಲಿ ಸರ್ಕಾರದ ಆಹಾರ ಭದ್ರತಾ ಕಾರ್ಯಕ್ರಮ ಮತ್ತು ಇತರ ಜನಪ್ರಿಯ ಯೋಜನೆಗಳ ಬಗ್ಗೆ ಪರ-ವಿರೋಧಗಳ ಯುದ್ಧವೇ ನಡೆಯುತ್ತಿರುತ್ತದೆ.

ಇಂದು ಯಾವುದೇ ಹಳ್ಳಿಗೆ ಹೋದರೂ, ಅಂಗಡಿಗಳಲ್ಲಿ ನೇತುಹಾಕಿರುವ ಹಲವಾರು ಬಗೆಯ ಬಣ್ಣಗಳ ಪ್ಯಾಕೆಟ್‍ಗಳು. ಖರ್ಚಾಗುವ, ಪೆಪ್ಸಿ-ಕೋಕಾಕೋಲಾ ಬಾಟಲಿಗಳು. ಅಲ್ಲೇ ಗುಟ್ಟಾಗಿ ಮಾರಾಟವಾಗುವ ಮಧ್ಯದ ಪ್ರಮಾಣ, ಮನೆಮನೆಗಳನ್ನು ತಲುಪಿರುವ ಸ್ಮಾರ್ಟ್‍ಫೋನ್‍ಗಳು, (ಹಳ್ಳಿಗಳಲ್ಲಿಂದು ಆಹಾರ ಪಧಾರ್ಥಗಳಿಗಿಂತ ಹೆಚ್ಚಿನ ಮೊತ್ತದ ಹಣ ಮೊಬೈಲ್ ಕರೆನ್ಸಿಗೆ ಖರ್ಚಾಗುತ್ತಿದೆ) ಇದನ್ನು ಕಂಡಾಗ, ಹೊರಗಿನಿಂದ ಬಂದವರಿಗೆ ಹಳ್ಳಿಗಳಿಂದು ಸಮೃದ್ಧವಾಗಿದೆ ಎನ್ನಿಸದೆ ಇರದು.

ಆದರೆ ನಿಜವಾದ ಸಮಸ್ಯೆಯಿರುವುದು ಹೊರಗಿನ ಯಾವ ಆದಾಯವೂ ಇಲ್ಲದ, ಕೃಷಿಯನ್ನು ಮಾತ್ರ ನಂಬಿ ಬದುಕುತ್ತಿರುವವರಲ್ಲಿ, ಮತ್ತು ನಾನಾ ಕಾರಣಗಳಿಂದ ದುಡಿಯಲು ಅಸಮರ್ಥರಾಗಿರುವ ಕೂಲಿಕಾರ್ಮಿಕರಲ್ಲಿ, ಹಾಗೂ ಮಿತ ಆದಾಯ ಆಥವಾ ನಿಶ್ಚಿತ ಆದಾಯವಿಲ್ಲದ ದರ್ಜಿ, ಟ್ಯಾಕ್ಸಿ-ರಿಕ್ಷಾ ಓಡಿಸುವವರು, ಸಣ್ಣ ಉದ್ಯೋಗಿಗಳು ಮುಂತಾದವರಲ್ಲಿ. ಇವರ ಸಂಖ್ಯೆಯೂ ಗಣನೀಯವಾಗಿದೆ. ಸಾಮಾನ್ಯವಾಗಿ ಕಷ್ಟನಷ್ಟಗಳಲ್ಲಿ ಸೋತು ಆತ್ಮಹತ್ಯೆಯೋ ಪಲಾಯನವೋ ಮಾಡುವವರು. ಇಲ್ಲವೇ ಎಲ್ಲವನ್ನೂ ಮಾರಿ ಬೀದಿ ಪಾಲಾಗುವವರು ಇವರಲ್ಲೇ ಹೆಚ್ಚಾಗಿದ್ದಾರೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆಬಿವೃದ್ಧಿ ಫಲ ಕೃಷಿಕ್ಷೇತ್ರಕ್ಕೆ ದೊರೆತಿದೆಯೆ ಅಥವಾ ಅದರ ಪರಿಣಾಮಗಳೇನು ಎಂದು ನೋಡಬೇಕಾದರೆ. ಇದನ್ನು ಮಾತ್ರ ಗಮನಿಸಿದರೆ ಸಾಲದು. naxalite24fo4ಅನ್ಯ ಆದಾಯಗಳನ್ನು ಹೊರತು ಪಡಿಸಿದರೆ ಕೃಷಿಕ್ಷೇತ್ರ ಹೇಗಿದೆ. ನಿಜವಾಗಿಯೂ ಅಭಿವೃಧ್ಧಿಯ ಫಲ “ಕೃಷಿಭಾರತ’ ವನ್ನು ತಲಪಿದೆಯೆ? ಇಲ್ಲದಿದ್ದರೆ ಮುಂದೇನು ಎಂದು ಪರಿಶೀಲಿಸೋಣ.

ಎಲ್ಲ ಸರ್ಕಾರಗಳೂ ಕೃಷಿಗೆ ಉತ್ತೇಜನ ನೀಡುತ್ತೇವೆಂದು ಹೇಳುತ್ತ ಆಧುನಿಕ ತಂತ್ರಜ್ಞಾನದ ಫಲ ರೈತನಿಗೆ ಸಿಗಬೇಕೆಂದು ಹೇಳುತ್ತ ಅದಕ್ಕಾಗಿಯೇ ಒಂದಷ್ಟು ಹಣವನ್ನು ಮೀಸಲಿಡುತ್ತಿವೆ; ಜೊತೆಯಲ್ಲಿಯೇ ಸಾವಯವ ಕೃಷಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಪ್ರಚಾರವನ್ನೂ ಮಾಡುತ್ತವೆ. ಇದೆಲ್ಲದರ ಹಿನ್ನೆಲೆನ್ನೂ ಪರಿಶೀಲಿಸಿದರೆ ಅನೇಕ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ.

ಒಂದೆಡೆ ಸಾವಯವ ಕೃಷಿಯ ಬಗ್ಗೆ ಮಾತನಾಡುವ ಸರ್ಕಾರ, ಹೈಟೆಕ್ ಕೃಷಿಗೆ ನೀಡುತಿರ್ತುವ ಸವಲತ್ತು ಮತ್ತು ಪ್ರಚಾರ ಊಹೆಗೂ ಮೀರಿದ್ದು. ಈ ಹೈಟೆಕ್ ತಂತ್ರಜ್ಞಾನವೆಂಬುದು ನಮ್ಮ ಜೀವನದ ಎಲ್ಲ ರಂಗಗಳನ್ನು ಪ್ರವೇಶಿಸಿದಂತೆಯೇ ಅಗಾಧ ಪ್ರಮಾಣದಲ್ಲಿ ಕೃಷಿ ವಲಯವನ್ನು ಆವರಿಸಿಕೊಳ್ಳುತ್ತಿದೆ. ಸರ್ಕಾರದ ಕೃಷಿ ಇಲಾಖೆಯ ವಿಜ್ಷಾನಿಗಳು, ಅಧಿಕಾರಿಗಳು, ತಂತ್ರಜ್ಷರ ಸಾಲು ಸಾಲುಗಳಲ್ಲದೆ, ಈ ಹೈಟೆಕ್ ತಂತ್ರಜ್ಞಾನದ ಪ್ರಚಾರ, ಮಾರಾಟ, ನಿರ್ವಹಣೆ ಮತ್ತು ತಾಂತ್ರಿಕಸಲಹೆಗಾಗಿ ದೊಡ್ಡ ಪಡೆಯನ್ನೇ ನಿರ್ಮಿಸಿರುವ ಬೃಹತ್ ವ್ಯಾಪಾರಿ ಸಂಸ್ಥೆಗಳು, ಇವರೆಲ್ಲರೂ ಸೇರಿ ಕೃಷಿಕರಿಗೆ ಒಡ್ಡುತ್ತಿರುವ ಆಮಿಷಗಳು ಹಲವಾರು. ನೀಟಾಗಿ ಡ್ರೆಸ್‍ಮಾಡಿ ಸರ್ಜರಿ ಆಪರೇಷನ್‍ಗೆ ಹೊರಟ ತಜ್ಞವೈದ್ಯರಂತೆ ಕಂಗೊಳಿಸುತ್ತ “ಕೃಷಿ ಕ್ಷೇತ್ರ’ಕ್ಕೆ ಭೇಟಿನೀಡುವ ‘ತಾಂತ್ರಿಕ ಸಲಹೆಗಾರರು’, ‘ಕ್ಷೇತ್ರ ಪರಿವೀಕ್ಷಕರು’ ಇವರನ್ನೆಲ್ಲ ಕಂಡಾಗ, ನಮ್ಮ ಕೃಷಿವಲಯ ಇಷ್ಟೊಂದು ಸಮೃದ್ಧವಾಗಿದೆಯೇ? ಎಂದು ಅನ್ನಿಸದೆ ಇರದು. ಅವರು ಬಳಸುವ ನುಡಿಗಟ್ಟುಗಳನ್ನು ಗಮನಿಸಿ, ತೋಟ ಹೊಲ ಗದ್ದೆಗಳ ಬದಲಾಗಿ. ‘ಕೃಷಿ ಕ್ಷೇತ್ರ’ ‘ಕೃಷಿಉದ್ಯಮ’ ಜೊತೆಗೆ ‘ಅಗ್ರಿಕ್ಲಿನಿಕ್’ ‘ಅಗ್ರಿಟೆಕ್ನಿಕ್’ ಇತ್ಯಾದಿ ಮಾಯಾಜಾಲದ ತಾಂತ್ರಿಕ ಪದಗಳು. ಇವುಗಳೊಂದಿಗೆ ಅವರು ತಯಾರಿಸಿಕೊಂಡ ತಜ್ಞವರದಿಗಳು, ಸಂಶೋಧನಾ ಪ್ರಬಂಧಗಳು. ಇವುಗಳೆಲ್ಲವೂ ಸೇರಿ ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡದ ‘ತೋಟ, ಗದ್ದೆ, ಹೊಲ’ ಗಳೆಲ್ಲ ಮಾಯವಾಗಿಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಸದ್ಯಕ್ಕೆ ಇವರನ್ನೆಲ್ಲ ನೋಡುತ್ತ ರೈತ ದಂಗಾಗಿರುವುದಂತೂ ನಿಜ.

ಸಾವಯವ ಕೃಷಿ ಮತ್ತು ಹೈಟೆಕ್ ಕೃಷಿ ಇವುಗಳು, ಪೂರ್ವ ಪಶ್ಚಿಮ ತುದಿಗಳಾದರೆ, ಇನ್ನೊಂದು ನಾವೀಗ ಹೆಚ್ಚಾಗಿ ರೂಪಿಸಿಕೊಂಡಿರುವ guj-agricultureಆಧುನಿಕ ಕೃಷಿ. ಸಾಕಷ್ಟು ರಸಗೊಬ್ಬರ, ಹೆಚ್ಚು ಇಳುವರಿಯ ಹೈಬ್ರಿಡ್ ತಳಿಗಳು, ಹೆಚ್ಚು ನೀರು, ತರಹೇವಾರಿ ಕೃಷಿವಿಷಗಳನ್ನೆಲ್ಲ ಬಳಸಿ ಬೆಳೆಯುವ, ಸಾಕಷ್ಟು ಯಂತ್ರೋಪಕರಣಗಳನ್ನು ಉಪಯೋಗಿಸಲು ಅವಕಾಶವಿರುವ ಕೃಷಿಯೇ ಈ ಆಧುನಿಕ ಕೃಷಿ.

ಆಧುನಿಕ ಕೃಷಿಯ ಸಮರ್ಥಕರು ನೀಡುವ ಅತಿ ಮುಖ್ಯ ಉದಾಹರಣೆಯೆಂದರೆ ಸ್ವಾತಂತ್ರ್ಯೋತ್ತರ ಭಾರತದ ಆಹಾರ ಪರಿಸ್ಥಿತಿ. ಸುಮಾರು ಎಪ್ಪತ್ತರ ದಶಕದವರೆಗೂ ಭಾರತದ ಆಹಾರ ಮಂತ್ರಿಯೆಂದರೆ ಭಿಕ್ಷಾನ್ನ ಮಂತ್ರಿಯೆಂದೇ ಪ್ರಖ್ಯಾತ!. ಆಗ ಅಮೆರಿಕಾ ಕೊಟ್ಟರೆ ಮಾತ್ರ ನಮಗೆ ಅನ್ನ ಎಂಬ ಪರಿಸ್ಥಿತಿ, “ಆದರೆ ಈಗ ನೋಡಿ ನಾವು ಆಹಾರವನ್ನು ರಫ್ತು ಮಾಡುತ್ತಿದ್ದೇವೆ… ಜನಸಂಖ್ಯೆಯ ಅಗಾಧ ಏರಿಕೆಯ ಜೊತೆಯಲ್ಲೇ ಆಹಾರ ದಾಸ್ತಾನು ಕೂಡಾ ಅದೇ ಪ್ರಮಾಣದಲ್ಲಿ ಹೆಚ್ಚಿದೆ ………..” ಇತ್ಯಾದಿ. ಇದು ಅಂಕಿ ಅಂಶಗಳ ಮತ್ತು ಆಹಾರದ ಲಭ್ಯತೆಯ ಮಟ್ಟದಲ್ಲಿ ಖಂಡಿತ ನಿಜ. ಆದರೆ ಇದಕ್ಕೆ ಆಧುನಿಕ ಕೃಷಿಪದ್ಧತಿ ಒಂದೇ ಕಾರಣವಲ್ಲ. ಇತ್ತೀಚಿನ ವರ್ಷಗಳಲ್ಲಿ ಆದ ನಮ್ಮ ಅನೇಕ ಹೊಸ ನೀರಾವರಿ ಯೋಜನೆಗಳು ಮತ್ತು ಅದರಿಂದಾದ ಕೃಷಿ ಭೂಮಿಯ ವಿಸ್ತರಣೆ, ಹಾಗೂ ನಾವು ಹೊಸದಾಗಿ ಕೃಷಿಗೆ ಒಳಪಡಿಸಿದ ಅರಣ್ಯ ಭೂಮಿಯ ಪ್ರಮಾಣ ಇವುಗಳನ್ನೆಲ್ಲ ಸಮಗ್ರವಾಗಿ ಅಧ್ಯಯನ ಮಾಡಿದರಷ್ಟೇ ಸರಿಯಾದ ಚಿತ್ರಣ ದೊರೆತೀತು. ಈ ಆಧುನಿಕ ಕೃಷಿಯನ್ನೇ ವೈಜ್ಞಾನಿಕವೆಂದು ನಂಬಿಕೊಂಡವರಿಂದ ಈ ಸಮೀಕ್ಷೆ- ಅಧ್ಯಯನಗಳು ನಡೆದಲ್ಲಿ ಯಾವುದೇ ಪ್ರಯೋಜನವಿಲ್ಲ. ಕೆಲವು ವರ್ಷಗಳ ಹಿಂದೆಯೇ, ನಮ್ಮ ಹತ್ತಿರದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯೊಬ್ಬರಿಗೆ ಅವರ ಸಂಶೋಧನೆಯ ಕೆಲವು ಲೇಖನಗಳನ್ನು ಪ್ರಕಟಿಸಲು ಅವರ ನಿರ್ದೇಶನಾಲಯದಿಂದ ಅನುಮತಿ ಸಿಗಲಿಲ್ಲ. ಯಾಕೆಂದರೆ ಅವರ ಸಂಶೋಧನೆಯ ಫಲಶ್ರುತಿ, ಸರ್ಕಾರ ಪ್ರಚಾರ ಮಾಡುತ್ತಿದ್ದ ವಿಷಯಗಳ ಹಾಗೂ ಕೆಲವು ಕಂಪೆನಿಗಳ ಹಿತಾಸಕ್ತಿಯ ವಿರುದ್ಧವಾಗಿತ್ತು. ಅವರ ಅಭಿಪ್ರಾಯ ಹೀಗಿತ್ತು “ಈಗ ನಮ್ಮ ಮುಂದಿರುವುದು ಕೆಲವು ಕೃಷಿ ಪದ್ಧತಿಗಳು, ಸಾಂಪ್ರದಾಯಿಕ ಕೃಷಿ, ಸಾವಯವ ಕೃಷಿ, ಮತ್ತು ಆಧುನಿಕ ಕೃಷಿ ಇತ್ಯಾದಿ… ವೈಜ್ಞಾನಿಕ ಕೃಷಿ ಎನ್ನುವುದು ನಾವಿನ್ನು ಕಂಡುಕೊಳ್ಳಬೇಕಾದ ಮತ್ತು ನಿರಂತರ ಹುಡುಕಾಟದಲ್ಲಿರಬೇಕಾದ ಮಾರ್ಗ ಅಷ್ಟೆ”. ಈ ನಿರಂತರ ಹುಡುಕಾಟದ ಕ್ರಿಯೆ ನಮ್ಮ ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗಬೇಕಾದ ವಿಷಯ. ಅದಲ್ಲದೆ ಆ ವಿಜ್ಞಾನಿ ಮತ್ತೂ ಮುಂದುವರಿದು “ಆಧುನಿಕ ಕೃಷಿಯೆನ್ನುವುದು ದೊಡ್ಡ ಪ್ರಮಾಣದ ಕೃಷಿಗೆ ಅನುಕೂಲಕರವಾಗಿದೆ, ಯಾಕೆಂದರೆ ಯಂತ್ರಗಳು, ನೀರಾವರಿ, ಸುಧಾರಿತ ಬೀಜಗಳು, ಹಾಗೇ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರ-ಕೀಟನಾಶಕ, ಕಳೆನಾಶಕ ಮುಂತಾದವುಗಳ ಬಳಕೆ ಇದಕ್ಕೆ ಬೇಕಾಗುವ ದೊಡ್ಡ ಪ್ರಮಾಣದ ಭಂಡವಾಳ ಹೂಡಿಕೆ ಎಲ್ಲವನ್ನೂ ಒಳಗೊಂಡು ಕೈಗಾರಿಕೆ ಆಧಾರಿತ ಕೃಷಿಯಾಗಿದೆ” ಎಂದಿದ್ದರು. ಈ ಎಲ್ಲ ಕಾರಣಗಳಿಗಾಗಿಯೇ ಈ ಆಧುನಿಕ ಕೃಷಿ ನಮ್ಮನ್ನಾಳುವವರಿಗೂ ಅತ್ಯಂತ ಆಪ್ಯಾಯಮಾನವಾದದ್ದಾಗಿದೆ.

ಇದೀಗ ಇನ್ನೊಂದು ಮಧ್ಯಮ ಮಾರ್ಗವಾದ ‘ಸಾವಯವ ಕೃಷಿ’ಯನ್ನು ಗಮನಿಸೋಣ. ಈಗ ಸರ್ಕಾರವೇ ಸಾವಯವ rural-indiaಕೃಷಿಯ ಬಗ್ಗೆ ಆಸಕ್ತಿ ತೋರಿದೆಯೆಂದರೆ, ಸರ್ಕಾರಕ್ಕೆ ಈ ಆಧುನಿಕ ಕೃಷಿಯ ಅನಾಹುತಗಳು ಅರ್ಥವಾಗಿ ಸಾವಯವ ಕೃಷಿಯ ಪ್ರತಿಪಾದಕನಾಗಿದೆ ಎಂದುಕೊಂಡರೆ ಅದು ನಮ್ಮ ದಡ್ಡತನವಷ್ಟೆ. ಯಾವುದೇ ಸರ್ಕಾರಕ್ಕೂ ಯಾವಾಗಲೂ ಬೃಹತ್ ಯೋಜನೆಗಳೇ ಅಚ್ಚುಮೆಚ್ಚು. ಯೋಜನೆಗಳ ಗಾತ್ರ ಹಿರಿದಾದಷ್ಟೂ ಆಳುವವರ ಹಿತವೂ ದೊಡ್ಡ ಪ್ರಮಾಣದಲ್ಲಿ ರಕ್ಷಣೆಯಾಗುತ್ತದೆ. ಇದಕ್ಕೆ ಆಧುನಿಕ ಹಾಗೂ ಹೈಟೆಕ್ ಕೃಷಿಯ ದೊಡ್ಡ ಕಂಪೆನಿಗಳೇ ಸೂಕ್ತವಾದದ್ದು. ಹೀಗಿದ್ದೂ ಸರ್ಕಾರ ಈಗೇಕೆ ಸಾವಯವದ ಧ್ವನಿಯೆತ್ತಿದೆ? ವೈಯಕ್ತಿಕ ಮಟ್ಟದಲ್ಲಿ ಈ ರೀತಿ ಯೋಚಿಸುವ ಕೆಲವರು ಶಾಸಕರೋ ಮಂತ್ರಿಗಳೋ ಇರಬಹುದು, ಆದರೆ ಒಟ್ಟೂ ಆಡಳಿತ ಯಂತ್ರ ಯಾವತ್ತೂ ದೊಡ್ಡ ಪ್ರಮಾಣದ ಆಧುನಿಕ ಕೃಷಿಯ ಪರವೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಪರ್ಯಾಯ ಕೃಷಿಗೆ ಮತ್ತು ಪರ್ಯಾಯ ಆರೋಗ್ಯ ಪದ್ಧತಿಗೆ ಸಿಗುತ್ತಿರುವ ಪ್ರಚಾರ ಜೊತೆಗೆ ಅಂತಾರಾಷ್ಟ್ರೀಯಮಟ್ಟದಲ್ಲೂ ಈ ಬಗ್ಗೆ ಮೂಡುತ್ತಿರುವ ಜಾಗೃತಿ ಹಾಗೂ ನಮ್ಮಲ್ಲೂ ಕೃಷಿಕರಲ್ಲಿ ಹಾಗೂ ಸಮಾಜದ ಅನೇಕ ವಲಯಗಳಲ್ಲಿ ಹೆಚ್ಚುತ್ತಿರುವ ತಿಳುವಳಿಕೆ, ಇವೆಲ್ಲವುಗಳಿಂದ ಸರ್ಕಾರದ ಮೇಲೆ ಬೀಳುತ್ತಿರುವ ಒತ್ತಡದಿಂದಾಗಿ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆಯಷ್ಟೆ.

ಇರಲಿ, ಸರ್ಕಾರದ ಉದ್ದೇಶ ಒಳ್ಳೆಯದೆಂದೇ ಇಟ್ಟುಕೊಳ್ಳೋಣ. ಸರ್ಕಾರ ಹೇಳುವಂತಹ ಅಥವಾ ನಾವು ಅಂದುಕೊಂಡಿರುವಂತಹ ಸಾವಯವ ಕೃಷಿ ಅಂದರೇನು? ರಾಸಾಯನಿಕ ವಸ್ತುಗಳನ್ನು ಅಂದರೆ ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳನ್ನು ಉಪಯೋಗಿಸದೆ, ಹಟ್ಟಿಗೊಬ್ಬರ- ಸಸ್ಯಜನ್ಯ ಕೀಟನಾಶಕಗಳು, ಸಾವಯವಗೊಬ್ಬರ ಇತ್ಯಾದಿಗಳನ್ನು ಮಾತ್ರ ಬಳಸಿ ಆದಷ್ಟೂ ಸ್ಥಳೀಯವಾಗಿ ಲಭ್ಯವಾಗುವ ಸಾವಯವ ತ್ಯಾಜ್ಯವಸ್ತುಗಳನ್ನು ಉಪಯೋಗಿಸಿ ಮಾಡುವ ಕೃಷಿ. (ರಾಸಾಯನಿಕಗಳೇ ಆಗಿರುವ ಸುಣ್ಣ, ಬೋರ್ಡೋ ಮಿಶ್ರಣ ಇವುಗಳ ಬಳಕೆ ಇಲ್ಲಿ ನಿಷಿದ್ಧವಲ್ಲ ಕೆಲವರು ರಂಜಕಯುಕ್ತ ಗೊಬ್ಬರವಾದ ರಾಕ್ ಫಾಸ್ಫೇಟಿಗೂ ಅದು ಕಲ್ಲಿನ ಪುಡಿಯೆಂದು ವಿನಾಯಿತಿ ನೀಡಿದ್ದಾರೆ) ಇದರೊಂದಿಗೆ ಇತರ ಪೂರಕ ಚಟುವಟಿಕೆಗಳನ್ನು ಅಂದರೆ ಹೈನುಗಾರಿಕೆ, ಕೋಳಿಸಾಕಣೆ ಇತ್ಯಾದಿಗಳನ್ನು ಮಾಡಿದರೆ ಇನ್ನೂ ಒಳ್ಳೆಯದು. ಸಣ್ಣ ಮತ್ತು ಮಧ್ಯಮ ಗಾತ್ರದ ಹಿಡುವಳಿಗಳು ಇದಕ್ಕೆ ಹೆಚ್ಚು ಅನುಕೂಲದ್ದಾಗಿರುತ್ತವೆ.

ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಕೃಷಿಕರು ಒಂದೆರಡು ದನಕರುಗಳನ್ನು ಜೊತೆಯಲ್ಲಿ ಕುರಿಕೋಳಿಗಳನ್ನು ಸಾಕುತ್ತ ಸಾವಯವ ಗೊಬ್ಬರ ತಯಾರಿಸಿ ಉಪಯೋಗಿಸುತ್ತಾ, ಅತಿ ಕಡಿಮೆ ರಾಸಾಯನಿಕ ಅಥವಾ ರಾಸಾಯನಿಕರಹಿತ ಕೃಷಿ ಮಾಡುತ್ತಾ ತಾನೂ ಆರೋಗ್ಯವಂತನಾಗಿ- ಭೂಮಿ ಮತ್ತು ಸಮಾಜದ ಎಲ್ಲರ ಆರೋಗ್ಯವನ್ನು ಕಾಪಾಡುತ್ತ ಸುಖವಾಗಿ ಇರಬಹುದಾಗಿತ್ತಲ್ಲವೇ?.

ಆದರೆ ನಾವೆಂದುಕೊಂಡಂತೆ ಪರಿಸ್ಥಿತಿ ಅಷ್ಟು ಸರಳವಾಗಿ ಖಂಡಿತ ಇಲ್ಲ. ಒಂದೆಡೆ ಪರಿಸರ ಪ್ರಿಯರು, ಕೃಷಿಪಂಡಿತರುಗಳು, ಭಾನುವಾರದ ಕೃಷಿಕರು, ಹವ್ಯಾಸಿ ಕೃಷಿಕರು, ಹಾಗೂ ಅನೇಕ ಸಂಘಟನೆಗಳು-ಸಹಜಕೃಷಿ, ಸಾವಯವ ಕೃಷಿ, ನೆಲಜಲ ಸಂರಕ್ಷಣೆ ಮುಂತಾದುವುಗಳ ಬಗ್ಗೆ ನಡೆಸುವ ಕಾರ್ಯಕ್ರಮಗಳು, ವಿಚಾರಸಂಕಿರಣಗಳು, ಚಳುವಳಿಗಳು, ಜೊತೆಗೆ ಹಲವು ಕೃಷಿಪತ್ರಿಕೆಗಳಲ್ಲಿ ನಿರಂತರವಾಗಿ ಬರುತ್ತಿರು ಲೇಖನಗಳು, ಇವೆಲ್ಲವುಗಳಿಂದ ಸಾವಯವ ಕೃಷಿಗೆ ಸಿಕ್ಕಿದ ಪ್ರಚಾರದಿಂದಾಗಿ, ಸಾವಯವ ಪರಿಸರ ಸ್ನೇಹಿವಸ್ತುಗಳ ದೊಡ್ಡ ಉತ್ಪಾದಕರುಗಳೇ ಹುಟ್ಟಿಕೊಂಡಿದ್ದಾರೆ. Tilling_Rice_Fieldsಇವರುಗಳು ಮುದ್ರಿಸಿ ಹಂಚುತ್ತಿರುವ ಕರಪತ್ರಗಳು ಯಾವುದೇ ದೊಡ್ಡ ರಾಸಾಯನಿಕ ಕಂಪೆನಿಗಳ ಪ್ರಚಾರ ಸಾಮಗ್ರಿಯನ್ನೂ ನಾಚಿಸುವಂತಿದೆ. ರಾಸಾಯನಿಕ ವಸ್ತುಗಳಿಗೆ ಹೋಲಿಸಿದರೆ ಇವುಗಳ ಬೆಲೆಯೂ ದುಬಾರಿಯಾಗಿದೆ. ಈ ವಿಚಾರ ಆಯುರ್ವೇದ ಔಷಧಿಗಳಂತಹ ವೈದ್ಯಕೀಯ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಸದ್ಯಕ್ಕಂತೂ ಇವುಗಳಲ್ಲಿ ಯಾವುದು ನಿಜವಾದ ಸಾವಯವ ಅಥವಾ ಪರಿಸರ ಸ್ನೇಹಿ ಎಂದು ನಿರ್ಧರಿಸಲು ಯಾವುದೇ ಮಾನದಂಡವೂ ಇಲ್ಲ. ವೈಯಕ್ತಿಕ ಪರಿಚಯ, ಅನುಭವ ನಂಬಿಕೆಗಳನ್ನಾಧರಿಸಿ ಇವುಗಳನ್ನು ಕೊಳ್ಳಬೇಕಷ್ಟೆ.

ನಮ್ಮ ರೈತರು ಸಾವಯವ-ಸುಸ್ಥಿರ ಕೃಷಿಯ ವಿರೋಧಿಗಳಂತೂ ಖಂಡಿತ ಅಲ್ಲ. ಇಂದು ಸಾಮಾನ್ಯನಿಗೂ ಭೂಮಿ ಬರಡಾಗುತ್ತಿರುವುದು, ಆಹಾರದಲ್ಲಿ ರುಚಿ ಸತ್ವ ಎರಡೂ ಇಲ್ಲದಿರುವುದು ಚೆನ್ನಾಗಿಯೇ ತಿಳಿದಿದೆ. ನಾಟಿ ಕೋಳಿಮಾಂಸದ ಮತ್ತು ನಾಟಿ ಹಸುಗಳಹಾಲಿನ ರುಚಿ ಹಾಗೇ ಸೆಗಣಿಯ ಶಕ್ತಿಯೂ ತಿಳಿದಿದೆ. ಎಲ್ಲಿಯವರೆಗೆ ಎಂದರೆ ಘನಘೋರ ವಿಷಸುರಿದು ಶುಂಠಿ ಬೆಳೆಯುತ್ತಿರುವ ರೈತ ತಾನು ಅದನ್ನು ತಪ್ಪಿಯೂ ಉಪಯೋಗಿಸುವುದಿಲ್ಲ. ಸ್ವಂತಕ್ಕೆ ತನ್ನ ಜಮೀನಿನ ಮೂಲೆಯಲ್ಲೊಂದಿಷ್ಟು ನಾಟಿ ಶುಂಟಿಯನ್ನು ವಿಷವುಣಿಸದೆ ಬೆಳೆದುಕೊಂಡಿರುತ್ತಾನೆ. ಕೃಷಿವಲಯದ ಆರ್ಥಿಕ ಪರಿಸ್ಥಿತಿಯೇ ಅವನನ್ನು ಸುಸ್ಥಿರ-ಸಾವಯವ ಕೃಷಿಯಿಂದ ದೂರವಿರುವಂತೆ ಮಾಡುತ್ತಿದೆ.

ನಮ್ಮ ರೈತರು ಇಂದು ಸಹಜ ಕೃಷಿಯ ಋಷಿ ಮುನಿಗಳಂತೆ ಬದುಕಲು ಖಂಡಿತ ಸಾಧ್ಯವಿಲ್ಲ. ಇಂದು ವಿದ್ಯುತ್, ಫೋನು, ಟಿ.ವಿ., ಸಾಧ್ಯವಾದರೆ ಕನಿಷ್ಟ ಒಂದು ಬೈಕು ಇತ್ಯಾದಿಗಳು ಆತನಿಗೂ ಬೇಕು. ಇಂದು ಟಿ.ವಿ. ಆಧುನಿಕ ಜಗತ್ತನ್ನು ಅವನ ಮನೆಯೊಳಗೇ ತಂದು ತೋರಿಸುತ್ತ ಹಲವು ಆಮಿಷಗಳನ್ನು ಒಡ್ಡುತ್ತಿದೆ. ಅಭಿವೃಧ್ದಿಗಿಂದ ಹೆಚ್ಚಾಗಿ ಕೊಳ್ಳುಬಾಕ ಸಂಸ್ಕøತಿ ಇಂದು ಹಳ್ಳಿಗಳನ್ನೂ ಆವರಿಸಿಬಿಟ್ಟಿದೆ. ಹೇಗಾದರೂ ಮಾಡಿ ಹಣ ಗಳಿಸಬೇಕಾದ ಒತ್ತಡದಲ್ಲಿ ಇಂದು ರೈತನೂ ಸಿಕ್ಕಿಬಿದ್ದಿದ್ದಾನೆ.

ಯಾವುದೇ ಬೆಳೆಯನ್ನು ಬೆಳೆಯುವಾಗ ಎಕರೆವಾರು ಖರ್ಚು ಮತ್ತು ಆದಾಯವನ್ನು ನೋಡಿದರೆ. ಸಧ್ಯದಲ್ಲಿ ರಾಸಾಯನಿಕಗಳನ್ನು paddy-rice-cropಬಳಸಿ ಮಾಡುವ ಕೃಷಿಯೇ ಅಗ್ಗದ್ದಾಗಿದ್ದು ರೈತನಿಗೆ ಸ್ವಲ್ಪಮಟ್ಟಿನ ಲಾಭವನ್ನು ತಂದುಕೊಡುತ್ತಿದೆ. ಅಲ್ಲದೇ ಅಧಿಕ ಇಳುವರಿ ನೀಡುತ್ತದೆಂದು ಹೇಳಲಾಗುವ ಹೈಬ್ರಿಡ್ ತಳಿಗಳು ರಾಸಾಯನಿಕ ಕೃಷಿಯನ್ನೇ ಅವಲಂಬಿಸಿವೆ.

ಶುದ್ಧ ಸಾವಯವವೆಂದು ಪ್ರಮಾಣೀಕರಿಸಿದ ಉತ್ಪನ್ನಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಬೆಲೆ ದೊರಕುತ್ತದೆಂಬ ವಿಚಾರ ನಮ್ಮ ರೈತರಿಗೂ ತಿಳಿದಿದೆ. ಆದರೆ ಅದನ್ನು ಪ್ರಮಾಣೀಕರಿಸಲು ಇರುವ ವಿಧಿ ವಿಧಾನಗಳು ಮತ್ತು ಅವರ ಮಾನದಂಡಗಳು ಅದಕ್ಕೆ ತಕ್ಕಂತೆ ಅನುಸರಿಸ ಬೇಕಾದ ಕ್ರಮಗಳು, ಇಡಬೇಕಾದ ಠೇವಣಿ ಹಣ ಮತ್ತಿತರ ವೆಚ್ಚಗಳು ನಮ್ಮ ರೈತರ ಪಾಲಿಗೆ ತುಂಬ ದುಬಾರಿಯಾದವು.

ಇದನ್ನೆಲ್ಲ ನೋಡುತ್ತ ನೋಡುತ್ತ ಸಾಮಾನ್ಯ ಕೃಷಿಕ- ರೈತರು ಮೊದಲ ಬಾರಿಗೆ ಜಾತ್ರೆಗೆ ಹೋದ ಮಗುವಿನಂತಾಗಿ ಹೋಗಿದ್ದಾರೆ. ಎಲ್ಲವನ್ನೂ ನೋಡುತ್ತ ಬೆರಗುಗೊಳ್ಳುತ್ತ ಅಪ್ಪ ಕೊಟ್ಟ ಒಂದೇ ಒಂದು ರೂಪಾಯಿಯನ್ನು ಜೇಬೊಳಗಿಟ್ಟುಕೊಂಡು, ಕೈಹಾಕಿ ಅಲ್ಲೇ ಮುಟ್ಟಿ ನೋಡಿಕೊಳ್ಳುತ್ತ ಏನನ್ನೂ ಕೊಳ್ಳದೆ, ಏನನ್ನೂ ತಿನ್ನದೆ ಮನೆಗೆ ಬರುವಂತಹ ಸ್ಥಿತಿಯಲ್ಲಿದ್ದಾರೆ.

ಹೀಗಾಗಿ ಒಂದುವೇಳೆ ಸಾವಯವ ವಿಧಾನದಿಂದ ಬೆಳೆ ಬೆಳೆದರೂ ಸಹ ಇದರಿಂದ ಲಾಭ ಪಡೆಯುವ ಸ್ಥಿತಿಯಲ್ಲಿ ರೈತರು ಖಂಡಿತ ಇಲ್ಲ. ಆದ್ದರಿಂದ ಎಲ್ಲ ತೊಂದರೆಗಳ ಅರಿವಿದ್ದರೂ ಹೆಚ್ಚು ಲಾಭ ಬರಬಹುದೆಂಬ ಆಸೆಯಿಂದ ರಾಸಾಯನಿಕಗಳನ್ನು ಬಳಸಿ ಮಾಡುವ ಆಧುನಿಕ ಕೃಷಿಯತ್ತ ವಾಲುತ್ತಾರೆ. ದುಬಾರಿ ಬಡ್ಡಿಯ ಖಾಸಗಿ ಸಾಲಕ್ಕೆ ತಲೆಯೊಡ್ಡುತ್ತಾರೆ. ಸರೀಕರೊಡನೆ ತಲೆಯೆತ್ತಿ ನಿಲ್ಲಬೇಕೆಂದು, ವಾಹನ ಕೊಳ್ಳುತ್ತಾರೆ, ಸರಿಯಾದ ಯೋಜನೆಗಳಿಲ್ಲದೆ ಮನೆ ಕಟ್ಟಿಕೊಳ್ಳುತ್ತಾರೆ, ಮದುವೆ ಮುಂಜಿಗಳಲ್ಲಿ ಅಂದಾದುಂದಿ ಖರ್ಚು ಮಾಡುತ್ತಾರೆ. ಬೆಳೆ ಮತ್ತು ಬೆಲೆ ಅಥವಾ ಎರಡೂ ಕೈಕೊಟ್ಟರೆ ದಿಕ್ಕು ತೋಚದೆ ಆತ್ಮಹತ್ಯೆಯಂತಹ ವಿಪರೀತ ಕ್ರಮಕ್ಕೆ ಮುಂದಾಗುತ್ತಾರೆ.

ಹಿಂದಿನ ಕಾಲದಂತೆ ರೈತರು ತಮಗೆ ಬೇಕಾದ ಆಹಾರ, ತರಕಾರಿ, ಹಾಲು, ಮಾಂಸ, ಹಣ್ಣುಹಂಪಲು ಎಲ್ಲವನ್ನು ತಾವೇ ಬೆಳೆದುಕೊಳ್ಳುತ್ತ, ತಮ್ಮ ಅಗತ್ಯಕ್ಕೆ ಹೆಚ್ಚಿನದನ್ನು ಮಾರುತ್ತ ಬದುಕುವುದು ಇಂದಿನ ಆರ್ಥಿಕತೆಗೆ ಒಗ್ಗುವ ಸಂಗತಿಯಾಗಿ ಉಳಿದಿಲ್ಲ. ಇಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವಂತೆ ಪ್ರತಿಯೊಂದನ್ನು ದೊಡ್ಡ ಪ್ರಮಾಣದಲ್ಲಿ ‘ಉತ್ಪಾದಿಸುವುದು’ ಅನಿವಾರ್ಯವಾಗುವಂತ ಸನ್ನಿವೇಶ ಸೃಷ್ಟಿಯಾಗಿದೆ. ಆದ್ದರಿಂದ ತರಕಾರಿ ಬೆಳೆಯುವವರು, ಮೆಣಸಿನಕಾಯಿ ಬೆಳೆಯುವವರು, ಶುಂಠಿ ಬೆಳೆಯುವವರು, ಹೈನೋಧ್ಯಮದವರು, ಕೋಳಿಫಾರಂಗಳು, ಹೀಗೆ ಎಲ್ಲವೂ ಸಣ್ಣ ಪ್ರಮಾಣದಿಂದ ನಿಧಾನವಾಗಿ ದೊಡ್ಡ ಪ್ರಮಾಣಕ್ಕೆ ಬೆಳೆಯುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತ ಉತ್ಪಾದನೆ, ಸ್ಪರ್ಧಾತ್ಮಕ ಬೆಲೆಗಳು, ಬ್ರಾಂಡೆಡ್ ಉತ್ಪಾದನೆ ಇತ್ಯಾದಿಗಳ ಜಾಗತೀಕರಣದ ಉನ್ಮಾದದ ಮಾರುಕಟ್ಟೆಯಲ್ಲಿ ಹೆಚ್ಚು ‘ಉತ್ಪಾದನೆ’ಯ ಒತ್ತಡಕ್ಕೊಳಗಾದ ಕೃಷಿಕ ಸಾವಯವ ಕೃಷಿಯತ್ತ ತಿರುಗಿ ನೋಡುವುದೂ ಇಲ್ಲ. ದ್ವೀಪಗಳಂತೆ ಅಲ್ಲಲ್ಲಿ ಕೆಲವು ಸ್ಥಳಗಳಲ್ಲಿ ಕೆಲವು ವಸ್ತುಗಳನ್ನು- ಅದೂ ಮುಖ್ಯ ಆಹಾರ ಪದಾರ್ಥಗಳನ್ನಲ್ಲ, ಅವುಗಳಿಗೆ ಅಸಾಮಾನ್ಯ ಕೆಲವೊಮ್ಮೆ ಊಹೆಗೂ ನಿಲುಕದಂತಹ ಹೆಚ್ಚನ ಬೆಲೆ ಬಂದಾಗ ಸಾವಯವ ವಿಧಾನದಲ್ಲಿ ಬೆಳೆ ಬೆಳೆಯಲು ತೊಡಗಬಲ್ಲರು. ಉದಾ: ವೆನಿಲ್ಲಾ, ಆ್ಯಂತೋರಿಯಂ ನಂತಹ ರಫ್ತು ಆಧಾರಿತ ಬೆಳೆಗಳು.

ಅಧಿಕ ಉತ್ಪಾದನೆಯ ಮಂತ್ರ ಜಪಿಸುವುದು, ಅದಕ್ಕಾಗಿ ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳ ಬಳಕೆಯಾಗುವಂತೆ ನೋಡಿಕೊಳ್ಳುವುದು, ಇದೆಲ್ಲದರ ಮೇಲೆ ಮೂಗಿಗೆ ತುಪ್ಪ ಸವರಿದಂತೆ ಒಟ್ಟು ಉತ್ಪನ್ನದ ಸ್ವಲ್ಪಭಾಗಕ್ಕೆ ವಿಶೇಷ ಬೆಲೆ ನೀಡಿ, ಉಳಿದದ್ದನ್ನು ಅವರ ಅನುಕೂಲಕ್ಕೆ ತಕ್ಕಂತೆ ಕೊಳ್ಳುವುದು, ಇದರಿಂದ ಬೆಳೆಗಾರ ಗಳಿಸಿದ ಅಲ್ಪಸ್ವಲ್ಪ ಹೆಚ್ಚವರಿ ಹಣವನ್ನು ಯಂತ್ರೋದ್ಯಮದ ಮೂಲಕ ತಮ್ಮಲ್ಲಿಗೇ ಬರುವಂತೆ ಮಾಡುವುದು, ಇದೆಲ್ಲಕ್ಕಿಂತ ಅಧಿಕ ಉತ್ಪಾದನೆಯಿಂದ ಬೆಳೆಗಾರ ಮಾರುಕಟ್ಟೆಯಲ್ಲಿ ಕ್ಯೂ ನಿಲ್ಲುವಂತ ಪರಿಸ್ಥಿತಿ ನಿರ್ಮಾಣ ಮಾಡಿ ಯಾವಾಗಲೂ ಕೊಳ್ಳುವವರ ಮರ್ಜಿಯನ್ನೇ ಕಾಯಬೇಕಾದ ಸ್ಥಿತಿಯಲ್ಲಿಡುವುದು, ಇವುಗಳೆಲ್ಲಾ ಅವರ ಉದ್ದೇಶವಾಗಿದೆ. ಅಧಿಕ ಉತ್ಪಾದನೆಯಿಂದ ರೈತನಿಗೆ ಲಾಭವಾಗುದೆನ್ನುವುದು ನಿಜವಲ್ಲವೆನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. (ನಮ್ಮ ದೇಶದ ಹಾಗೂ ವಿಯೆಟ್ನಾಂನ ಕಬ್ಬು ಬೆಳೆಗಾರರನ್ನು ನೋಡಿ)

ಮುಂದುವರೆದ ದೇಶಗಳಿಂದ ನಮ್ಮಲ್ಲಿಗೆ ಆಮದಾಗುವ ಹಲವಾರು ಔಷಧಿಗಳು, ಕ್ರಿಮಿನಾಶಕಗಳು, ತಳುಕಿನ ಐಷಾರಾಮೀ ಸಾಮಗ್ರಿಗಳು, Working_in_the_rice_paddyಅಷ್ಟೇಕೆ ಅಲ್ಲಿನ ಸಾವಯವ ಗೊಬ್ಬರಗಳು ಕೂಡಾ ಅಲ್ಲೇ ನಿಷೇಧಿಸಲ್ಪಟ್ಟವುಗಳು. ಅವುಗಳನ್ನು ಹಿಂದುಳಿದ ದೇಶಗಳಿಗೆ ಸಹಾಯದ- ದಾನದ ಹೆಸರಲ್ಲಿ ಸಾಗಹಾಕುವಾಗ ಇಲ್ಲದಿರುವ ನೈತಿಕತೆ-ಗುಣಮಟ್ಟ ಕಾಳಜಿ, ಅವರಲ್ಲಿಗೆ ಆಮದಾಗುವ ಹಿಂದುಳಿದ ದೇಶಗಳ ವಸ್ತುಗಳ ಬಗ್ಗೆ ಪ್ರತ್ಯಕ್ಷವಾಗಿಬಿಡುತ್ತದೆ. ಯಾವುದೋ ಒಂದು ಸಾರಿ ಕಳುಹಿಸಿದ ವಸ್ತುವಿನಲ್ಲಿ ಕಲಬೆರಲಕೆ ಕಂಡುಬಂದರೂ ಸಹ (ಕಲಬೆರಕೆ ಸರಿಯೆಂದು ನನ್ನ ವಾದವಲ್ಲ) ಇಡೀ ದೇಶದ ಉತ್ಪನ್ನವನ್ನೇ ತಿರಸ್ಕರಿಸುವ ಬೆದರಿಕೆ ಹಾಕುವ ಅಂತಾರಾಷ್ಟ್ರೀಯ ಮಾರುಕಟ್ಟೆ ಮುಂದುವರಿದ ದೇಶಗಳ ಹಾನಿಕಾರಕ ವಸ್ತುಗಳ ಬಗ್ಗೆ ದಿವ್ಯಮೌನ ವಹಿಸುತ್ತದೆ. ತೆಂಗಿನೆಣ್ಣೆಯಲ್ಲಿ ಕ್ಯಾನ್ಸರ್‍ಕಾರಕ ಗುಣವಿರುವುದನ್ನು ಸಂಶೋಧನೆ ಮಾಡುವ ಇವರು, ಕ್ರಿಮಿನಾಶಕವಾಗಿರುವ ಪೆಪ್ಸಿ- ಕೋಕಾಕೋಲಾ ಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಹಾಲಿನ ಪುಡಿಯಲ್ಲಿ ಡಿ.ಡಿ.ಟಿ. ಪತ್ತೆಹಚ್ಚುವ ಇವರು ಆ ಡಿ.ಡಿ.ಟಿ.ಯನ್ನು ಪ್ರಪಂಚಕ್ಕೆಲ್ಲಾ ಹಂಚಿದ್ದು ತಾವೇ ಎನ್ನುವುದನ್ನು ಮರೆಯುತ್ತಾರೆ!.

ಇತ್ತೀಚಿನ ಇನ್ನು ಕೆಲವು ಬೆಳವಣಿಗೆಗಳನ್ನು ಗಮನಿಸಿ. ನೂರೈವತ್ತು ರೂಗಳಿಗೆ ಒಂದು ಟೀ ಶರ್ಟು ದೊರೆಯುತ್ತದೆಂದು ನಾವು ಖುಷಿ ಪಡುತ್ತಿರುವಾಗಲೇ, ಸಣ್ಣ ಊರುಗಳ- ಹಳ್ಳಿಗಳ ಟೈಲರ್‍ಗಳು ಅಂಗಡಿ ಮುಚ್ಚುತ್ತಿದ್ದಾರೆ. ಈಗಾಗಲೇ ಸಣ್ಣ ಸಣ್ಣ ಗರಾಜ್‍ಗಳು ಕೆಲಸವಿಲ್ಲದೆ ಒದ್ದಾಡುತ್ತಿವೆ. ಸಣ್ಣ ಹಿಡುವಳಿಯ ರೈತರು ಜಮೀನನ್ನು ಮಾರಿ ನಗರ ಸೇರುವ ಧಾವಂತದಲ್ಲಿದಾರೆ. ಹಲವು ಪ್ಲಾಂಟೇಷನ್ ಕಂಪೆನಿಗಳು ನಿರಂತರವಾಗಿ ತೋಟಗಳ ವಿಸ್ತರಣಾ ಖರೀದಿಯಲ್ಲಿ ತೊಡಗಿವೆ. ಈ ಸಂಗತಿಗಳಲ್ಲಾ ಏನನ್ನು ಸೂಚಿಸುತ್ತವೆ? ನಮ್ಮ ಕೃಷಿ ಭೂಮಿ ಪರಭಾರೆ ಕಾನೂನು ಮತ್ತು ಭೂಮಿತಿ ಕಾನೂನನ್ನು ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಏನಾಗಬಹುದು? ಯೋಚಿಸಿ.

ಗುಣಮಟ್ಟದ ಹೆಸರಿನಲ್ಲಿ ಇವರು ಸೂಚಿಸುವ ಒತ್ತಾಯಿಸುವ ಕೃಷಿ ಪದ್ಧತಿಗಳು ಇನ್ನೂ ವಿಚಿತ್ರವಾಗಿವೆ. ಉದಾಹರಣೆಗೆ; Organic_farm_Turmericಕಾಫಿ ಒಣಗಿಸುವ ಕಣದ ಸುತ್ತಲೂ ನೀಲಗಿರಿ ಮರಗಳಿರಬಾರದು, ಮೆಣಸಿನ ಬಳ್ಳಿಗಳಿರಬಾರದು, ಕಾಫಿ ಒಣಗಿಸುವ ಕಣಕ್ಕೆ ಸೆಗಣಿಸಾರಿಸಬಾರದು ಇತ್ಯಾದಿ ಪ್ರತಿಬಂಧಗಳಿವೆ. (ಕಾಫಿಯ ಇಡಿಯ ಹಣ್ಣನ್ನು ನೇರವಾಗಿ ಒಣಗಿಸುವಾಗ ಮಾತ್ರ ಸೆಗಣಿ ಸಾರಿಸಿದ ಕಣವನ್ನು ಬಳಸುತ್ತಾರೆ. ಪಲ್ಪಿಂಗ್ ಮಾಡಿದ ಕಾಫಿಯನ್ನು ಯಾರೂ ಸೆಗಣಿಸಾರಿಸಿದ ಕಣದಲ್ಲಿ ಒಣಗಿಸುವದಿಲ್ಲ) ನಾವು ಸಾವಿರಾರು ವರ್ಷಗಳಿಂದ ಸೆಗಣಿ ಸಾರಿಸಿದ ಕಣದಲ್ಲೇ ಆಹಾರ ಧಾನ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಒಣಗಿಸುತ್ತಿದ್ದೇವೆ. ಸೆಗಣಿಯಿಂದಾಗಿ ಕಾಫಿಗೆ ಕೆಟ್ಟ ವಾಸನೆ ಬರುತ್ತದೆಂದು ದೂರುವ ಇವರು ಯಂತ್ರಗಳಲ್ಲಿ ಬಳಕೆಯಾಗುವ ಪೈಂಟ್‍ಗಳ ಬಗ್ಗೆಯಾಗಲೀ ಒಟ್ಟು ಉದ್ಯಮದಲ್ಲಿ ಬಳಕೆಯಾಗುವ ಇತರ ರಾಸಾಯನಿಕಗಳ ಬಗ್ಗೆಯಾಗಲೀ ಮಾತನಾಡುವುದಿಲ್ಲ.

ಈಗಾಗಲೇ ಅಕ್ಕಿಯಲ್ಲಿ- ಅಕ್ಕಿಯ ಗಾತ್ರ, ಉದ್ದ, ಬಣ್ಣಗಳ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದೆ ಇಂತಿತಹ ಕಂಪೆನಿಗಳು ಒದಗಿಸಿದ ನೀರಿನಿಂದ ಬೆಳೆದ ಇಂತಿಂತಹ ಬೆಳೆಗಳು ಮಾತ್ರ ಪರಿಶುದ್ಧವಾದವು ಎಂದು ಪ್ರಮಾಣ ಪತ್ರ ನೀಡುವ ದಿನಗಳೂ ಬರಬಹುದು. ಆದ್ದರಿಂದ ಜಾಗತೀಕರಣವೆಂದರೆ ಮುಂದುವರಿದ ದೇಶಗಳ ಇನ್ನಷ್ಟು ಸಬಲೀಕರಣವಲ್ಲದೆ ಇನ್ನೇನೂ ಅಲ್ಲ. ನಾವು ಅಲ್ಲೊಂದು ಇಲ್ಲೊಂದು ಕ್ಷೇತ್ರದಲ್ಲಿ ಇವರೊಂದಿಗೆ ಸ್ಪರ್ಧಿಸುತ್ತಿದ್ದೇವೆಂದು ಹೆಮ್ಮೆ ಪಟ್ಟುಕೊಳ್ಳುತ್ತಾ, ನಮ್ಮ ಬೆನ್ನನ್ನೇ ನಾವು ತಟ್ಟಿಕೊಳ್ಳುತ್ತಾ ಕುಳಿತಿದ್ದೇವೆ ಅಷ್ಟೆ!

ಇವೆಲ್ಲವನ್ನೂ ಮೀರಿ ನಾವು ಕೆಲವು ಕ್ಷೇತ್ರಗಳಲ್ಲಿ ಅಥವಾ ಕೆಲವು ವಸ್ತುಗಳ ಉತ್ಪಾದನೆಯಲ್ಲಿ ಮುಂದುವರಿದ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದೆವೆಂದರೆ, ಆಗ ಇನ್ನೂ ಕೆಲವು ಅಸ್ತ್ರಗಳು ಹೊರ ಬರುತ್ತವೆ. ಕೆಲವು ವಸ್ತುಗಳ ತಯಾರಿಕೆಯಲ್ಲಿ ಬಾಲ ಕಾರ್ಮಿಕರ ದುಡಿಮೆಯಿದೆ ಎಂದೂ ಇನ್ನು ಕೆಲವು ಉತ್ಪನ್ನಗಳು ಪ್ರಾಣಿ ಹಿಂಸೆಯಿಂದ ಕೂಡಿದ್ದೆಂದೂ ನಿಷೇಧಕ್ಕೆ ಒಳಗಾಗುತ್ತವೆ. ಅನೇಕ ಹಿಂದುಳಿದ ದೇಶಗಳಲ್ಲಿ ಇಂದು ಮಕ್ಕಳ ದುಡಿಮೆ ಅನಿವಾರ್ಯ ಅಗತ್ಯವೆನ್ನುವುದನ್ನು ಮರೆಯದಿರೋಣ. ದುಡಿಯದಿದ್ದಲ್ಲಿ ಅವರ ಹೊಟ್ಟೆಪಾಡಿಗೆ ಗತಿಯೇ ಇಲ್ಲದಿರುವ ಪರಿಸ್ಥಿತಿ ಅನೇಕ ದೇಶಗಳಲ್ಲಿ ಇದೆ. ಅವರು ದುಡಿದೂ ವಂಚನೆಗೊಳಗಾಗದಿರುವ-ದುಡಿಯುತ್ತ ಸ್ವಲ್ಪ ಮಟ್ಟಿಗಾದರೂ ವಿದ್ಯೆ ಕಲಿಯುವ ಬೇರೆ ಮಾರ್ಗಗಳತ್ತ ನಾವು ಯೋಚಿಸಬೇಕಾಗಿದೆ. ಅದನ್ನು ಬಿಟ್ಟು ದುಡಿಯುವ ಮಕ್ಕಳ ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸದೆ ದುಡಿಮೆಯಿಂದ ಹೊರಗಿಡುವುದೆಂದರೆ ಅವರನ್ನು ಹಸಿವಿನತ್ತ ದೂಡುವುದೇ ಆಗಿದೆ. Indian-Cow-calfಇನ್ನು ಪ್ರಾಣಿ ಹಿಂಸೆಯ ಬಗ್ಗೆ ಹೇಳುವುದಾದರೆ ಯಾವುದೇ ಜಾತಿಯ ಪ್ರಾಣಿಗೆ ಸಾಂಕ್ರಾಮಿಕ ರೋಗವೊಂದು ಬಂದಿದೆಯೆಂದರೆ ಅದರ ಕುಲವನ್ನೇ ಗುಂಡಿಟ್ಟು ಸಾಯಿಸಿಬಿಡುವ ದೇಶಗಳು- ಪ್ರಾಣಿಹಿಂಸೆಯ ಮಾತನಾಡುತ್ತವೆ!

ಇವೆಲ್ಲವೂ ತಿಳಿದಿದ್ದರೂ ಸಹ ಈ ಮುಂದುವರಿದ ದೇಶಗಳು ಸಹಾಯದ ಹೆಸರಿನಲ್ಲೋ ಇನ್ನಾವುದೇ ರೀತಿಯಲ್ಲೋ ನಮ್ಮಲ್ಲಿಗೆ ಕಳಹಿಸುವ ಯಾವುದೇ ವಸ್ತುವನ್ನು ಅದು ಎಷ್ಟೇ ಹಾನಿಕಾರಕವಾಗಿದ್ದರೂ ಅದನ್ನು ನಿಷೇಧಿಸುವ ಧೈರ್ಯವನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ಯಾವುದೇ ಹಿಂದುಳಿದ-ಅಭಿವೃದ್ಧಿಶೀಲ ದೇಶಗಳು ತೋರುವುದಿಲ್ಲ. ಯಾಕೆಂದರೆ ಈ ದೇಶಗಳ ರಾಜಕೀಯ-ಸಾಮಾಜಿಕ ಪರಿಸ್ಥಿತಿಗಳೇ ಇದಕ್ಕೆ ಅವಕಾಶ ನೀಡುವುದಿಲ್ಲ.

ಹೀಗಿರುವಾಗ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಸಾವಯವ ಕೃಷಿಯ ಬಗ್ಗೆ ಒಲವು ತೋರುತ್ತಿದೆಯೆಂದು ನಾವು ನಂಬಿಕೊಂಡರೆ ನಮ್ಮ ದಡ್ಡತನವಷ್ಟೆ. ಇದೂ ಕೂಡಾ ಅಂತರಾಷ್ಟ್ರೀಯ ಮಟ್ಟದ ಹುನ್ನಾರದ ಭಾಗ. ಇದರ ಅಂಗವಾಗಿ ಭಾರತ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಬೊಬ್ಬೆಯಲ್ಲಿ ತೊಡಗಿವೆ ಅಷ್ಟೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಹೈಟೆಕ್ ಸಾವಯವ ಕೃಷಿ ಮೇಳವನ್ನು ಗಮನಿಸಿ, ಈ ಬಗ್ಗೆ ವರದಿ ಮಾಡಿದ ಹಲವು ಪತ್ರಿಕೆಗಳು “ಭಾರತದ ಸಾವಯವ ಕೃಷಿಗೆ ಸಿದ್ಧತೆ- ಸಾವಯವ ಕೃಷಿ ಮೇಳ” ಎಂದು ದೊಡ್ಡದಾಗಿ ಬರೆದವು. ಅವು ವರದಿ ಮಾಡಿದ ರೀತಿ ಭಾರತ ದೇಶಕ್ಕೆ ಸಾವಯವ ಕೃಷಿ ಅನ್ನುವ ಸಂಗತಿಯೇ ಹೊಸತೇನೋ ಅನ್ನುವಂತಿತ್ತು. ಅದೃಷ್ಟವಷಾತ್ ಕೆಲವು ಪತ್ರಿಕೆಗಳು ಈ ಮೇಳದ ವಿರುದ್ಧವಾಗಿದ್ದ ಅನೇಕ ಕೃಷಿಕರ ಅಭಿಪ್ರಾಯಗಳನ್ನೂ ಪ್ರಕಟಿಸಿದ್ದವು.

ಈ ಸರ್ಕಾರಿ ಸಾವಯವ ಕೃಷಿ ಪ್ರಚಾರದ ಹಿಂದೆ ಬೆಕ್ಕಿನಂತೆ ಹೊಂಚುಹಾಕುತ್ತ ನಿಂತಿದೆ, ಬಯೋಟೆಕ್ನಾಲಜಿ ಉದ್ದಿಮೆದಾರರ ಗುಂಪು! ಈ ದೃಷ್ಟಿಯಿಂದಲೇ ಈ ‘ಸಾವಯವ ಕೃಷಿ’ಎನ್ನುವುದು ಈಗ ಆಧುನಿಕ ಕೃಷಿಗಿಂತಲೂ ಅಪಾಯಕಾರಿಯಾಗಿ ಕಾಣುತ್ತಿರುವುದು.

ನಮ್ಮ ಕೃಷಿಕರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ಅಂದರೆ ಅನ್ನ, ವಸತಿ, ವಸ್ತ್ರ, ವಿದ್ಯೆಗಳಂತಹ ಮೂಲಭೂತ ಅಗತ್ಯಗಳ ಜೊತೆಗೆ ಆಧುನಿಕ ವಿಜ್ಞಾನದ ಕೊಡುಗೆಗಳ ಕನಿಷ್ಟ ಬಳಕೆಯೂ ಸೇರಿದಂತೆ, ಈಗ ನಾವು ಅನುಭವಿಸುತ್ತಿರುವ ವಾಹನ ಸೌಕರ್ಯ, ವಿದ್ಯುತ್, ಕನಿಷ್ಟ ವೈದ್ಯಕೀಯ ಸೌಲಭ್ಯಗಳು, ಟಿ.ವಿ., ಕಂಪ್ಯೂಟರ್, ಫೋನು ಇವುಗಳನ್ನು ನಿರಾಕರಿಸದೆ, ನಮ್ಮ ಪರಿಸರವನ್ನು ಸಂರಕ್ಷಿಸುವ ಚಿಂತನೆ ಮಾಡಬೇಕಾಗುತ್ತದೆ. ಮತ್ತು ಈ ಕನಿಷ್ಟ ಸೌಲಭ್ಯಗಳನ್ನು ಹೊಂದಲು ಕೃಷಿಕ-ಕೃಷಿ ಕೂಲಿಗಾರ ಸೇರಿದಂತೆ, ಸಾಮಾನ್ಯನೊಬ್ಬನಿಗೆ ಇರಬೇಕಾದ ಆದಾಯ ಮತ್ತು ಅದನ್ನು ಗಳಿಸಬಹುದಾದ ರೀತಿಯ ಬಗ್ಗೆಯೂ ಯೋಚಿಸ ಬೇಕಾಗುತ್ತದೆ.

ಕನಿಷ್ಟ ಖರ್ಚಿನಲ್ಲಿ ಮಾಡಬಹುದಾದ ಕೃಷಿ, ಮತ್ತು ಎಲ್ಲವನ್ನೂ ನಿರಾಕರಿಸದೆ ಬದುಕಬಹುದಾದ ಸಾಧ್ಯತೆಯನ್ನು ಸಮೀಕರಿಸಿ ಮಾಡಬಹುದಾದ ಯಾವುದೇ ಕೃಷಿ ಆಧಾರಿತ ಉದ್ಯಮ- ಉದ್ಯೋಗಗಳ ಶೋಧನೆ ಅಗತ್ಯವಾಗಿದೆ. ಇದಕ್ಕೆ ಬರೀ ಕೃಷಿ ವಲಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡರೆ ಸಾಧ್ಯವಾಗಲಾರದು. ಇದಕ್ಕೆ ಮುಖ್ಯ ಕಾರಣವೆಂದರೆ. ನಮ್ಮ ಕೃಷಿಕ್ಷೇತ್ರ ಅನುಭವಿಸುವ ನಷ್ಟವೇ ಕೈಗಾರಿಕಾರಂಗದ ಲಾಭವಾಗಿ ಪರಿವರ್ತನೆಯಾಗುತ್ತಿರುವುದು. ರೈತ ಭೂಮಿ ಕಳೆದುಕೊಳ್ಳಲಿ ಅಥವಾ ಆತನ ಉತ್ಪನ್ನದ ಬೆಲೆ ಕಳೆದುಕೊಳ್ಳಲಿ ಅದರ ಲಾಭ ಸದಾ ದೊರೆಯುತ್ತಿರುವುದು ಉದ್ಯಮ ರಂಗಕ್ಕೆ. ಇದನ್ನು ತಿಳಿಯಲು ಮಹತ್ತರವಾದ ಆರ್ಥಿಕ ತಜ್ಞತೆಯೇನೂ ಬೇಕಾಗಿಲ್ಲ. ಈ ವೈರುಧ್ಯವನ್ನು ನಿವಾರಿಸದೆ ನಾವು ಮಾಡುವ ಯಾವುದೇ ಆಭಿವೃದ್ಧಿ ಕೃಷಿಕನನ್ನು ತಲುಪಲಾರದು. ಆದ್ದರಿಂದ ಕೈಗಾರಿಕಾ ಮತ್ತಿತರ ಉದ್ಯಮರಂಗ ಗಳಿಸುತ್ತಿರುವ ಲಾಭದ ಗಣನೀಯ ಅಂಶ ಕೃಷಿಕ್ಷೇತ್ರಕ್ಕೆ ಅಂದರೆ ರೈತ-ಕಾರ್ಮಿಕರಿಗೆ ಮರಳಿಸುವ ಕೆಲಸವನ್ನು ಮಾಡಬೇಕಾಗಿದೆ. ಮತ್ತು ಭೂಮಿಯ ಅತ್ಯುತ್ತಮ ಬಳಕೆಗಾಗಿ ಹಿಡುವಳಿಗಳ ಅಸಮಾನ ಹಂಚಿಕೆಯನ್ನು ನಿವಾರಿಸಬೇಕಾಗಿದೆ. ಈ ವೈರುಧ್ಯಗಳನ್ನು ನಿವಾರಿಸದೆ ಕೃಷಿ ಉತ್ಪನ್ನಗಳಿಗೆ ನೀಡುವ ಯಾವ ಬೆಲೆಯೂ ರೈತನ ಪಾಲಿಗೆ ನ್ಯಾಯಬೆಲೆ ಆಗಲಾರದು.

ನಮ್ಮ ಎಲ್ಲ ಉದ್ಯೋಗಗಳ ತಳಹದಿಯಾದ ಕೃಷಿಯನ್ನು ಮೂಲವಾಗಿಟ್ಟುಕೊಂಡು ಕಲೆ, ಸಾಹಿತ್ಯ, ವಿಜ್ಞಾನ, ಕ್ರೀಡೆ, harohalli-slaughter-house-areaಉದ್ಯಮಗಳು, ವಿದ್ಯಾಭ್ಯಾಸ, ಹೀಗೆ ಎಲ್ಲವನ್ನೂ ಒಳಗೊಂಡ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದು ಅನಿವಾರ್ಯ. ಇಡೀ ಪ್ರಪಂಚವನ್ನು ಮಾರುಕಟ್ಟೆಯನ್ನಾಗಿ ನೋಡುವ, ಭೂಮಿಯಿರುವುದೇ ಮನುಷ್ಯನ ಉಪಯೋಗಕ್ಕಾಗಿ ಎಂದು ಯೋಚಿಸುವ ಮುಂದುವರಿದ ದೇಶಗಳ ಉದ್ದಿಮೆದಾರರು, ವ್ಯಾಪಾರಿಗಳು (ಮುಂದುವರಿದ ದೇಶಗಳಲ್ಲೂ ರೈತರು ಕೆಲಮಟ್ಟಿಗೆ ಬೇರೆಯೇ ಆಗಿ ಉಳಿದಿದ್ದಾರೆ. ಅವರಿಗೂ ಅವರದ್ದೇ ಆದ ಸಮಸ್ಯೆಗಳಿವೆ.) ಅವರ ಮಾರುಕಟ್ಟೆ ವಿಸ್ತರಣೆ ಯೋಜನೆಯ ಅಂಗವಾಗಿಯೇ ಅವರ ಕ್ರೀಡೆಗಳು, ಸಂಗೀತ, ನೃತ್ಯ, ಕಲೆ, ಭಾಷೆ, ಜೀವನಶೈಲಿ ಎಲ್ಲವೂ ಇತರರಿಗಿಂತ ಉತ್ತಮವಾದದ್ದು ಮತ್ತು ಇತರರಿಗೆ ಅನುಕರಣೆಗೆ ಯೋಗ್ಯವಾದದ್ದೆಂದು ವಿಶ್ವಾದ್ಯಂತ ಭ್ರಮೆ ಹುಟ್ಟಿಸುತ್ತಿರುವಾಗ- ನಾವು ನಿಜವಾದ ಜಾಗತೀಕರಣಕ್ಕೆ ಸಿದ್ಧವಾಗುವುದು ಅಗತ್ಯ. ಆ ನಿಟ್ಟಿನ ಪ್ರಯತ್ನಗಳು ವೈಯಕ್ತಿಕವಾಗಿರುವುದಂತೂ ಸಾಧ್ಯವೇ ಇಲ್ಲ. ಸಾಂಘಿಕ- ಸಾಂಸ್ಥಿಕ ಹಾಗೂ ಜಾಗತಿಕ ಮಟ್ಟದ ಅರಿವು-ಎಚ್ಚರಗಳಿಂದ ಯೋಚಿಸಿ ಕಾರ್ಯಕ್ರಮಗಳನ್ನು ಯೋಜಿಸಬೇಕಾಗುತ್ತದೆ. ಇದೊಂದು ರೀತಿಯಲ್ಲಿ Think globally act locally ಎಂಬ ಮಾತಿಗೆ ಬದಲಾಗಿ Think locally act globally ಇರಬಹುದೇನೋ? ನಮ್ಮ ಸಾಮಾಜಿಕ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಉಳಿಸಿಕೊಂಡೂ ಪರ್ಯಾಯ ಕೃಷಿ, ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಉದ್ಯಮ, ವಿದ್ಯೆ ಹೀಗೆ ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯೊಂದನ್ನು ಕಟ್ಟುತ್ತಾ ಅದನ್ನು ಜಾಗತೀಕರಿಸುತ್ತಾ ಹೋಗುವ ಮೂಲಕ ನಮ್ಮ ನೆಲ, ಜಲ, ಆಕಾಶಗಳನ್ನು ಉಳಿಸಿಕೊಳ್ಳಲು ಸಾಧ್ಯವಾದೀತು.

ಅಂಬೇಡ್ಕರ್ ನಮ್ಮ ಭಾವವಲಯವನ್ನು ಪ್ರವೇಶಿಸಿದ್ದು…

– ಪ್ರಸಾದ್ ರಕ್ಷಿದಿ

[೧೪/೪/೨೦೧೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ತಾಲ್ಲೂಕು ಆಡಳಿತ ಆಚರಿಸಿದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಮಾಡಿದ ಭಾಷಣ.]

ವೇದಿಕೆಯ ಮೇಲಿರುವ ಮತ್ತು ಇಲ್ಲಿ ಸೇರಿರುವ ಎಲ್ಲ ಸಹ ಚಿಂತಕರೆ, ನಾವೆಲ್ಲ ಇಂದು ಬಾಬಾಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಚಿಂತಿಸಲು ಮತ್ತು ಚಿಂತನೆ ನಡೆಸಲು ಇಲ್ಲಿ ಸೇರಿದ್ದೇವೆ ಅಂದುಕೊಂಡಿದ್ದೇನೆ. ಚಿಂತೆ ಯಾಕೆಂದರೆ ಇಂದು ನಾವು ಪ್ರತಿನಿತ್ಯದ ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಕಂಡಾಗ ನಮ್ಮ ಇದುವರೆಗಿನ ಎಲ್ಲ ಜನಪರ ಹೋರಾಟಗಳೂ ವ್ಯರ್ಥವಾದುವೇ ಎಂಬ ಚಿಂತೆಯಾಗುತ್ತದೆ. ಇದೇ ನಮಗೆ ಚಿಂತನೆಗೂ ಕಾರಣವಾಗಬೇಕಾದ್ದರಿಂದ ನಾವಿಂದು nehru_ambedkarಈ ದಿನವನ್ನು ಅಂಬೇಡ್ಕರ್ ಅವರ ಗುಣಗಾನ ಮಾಡುತ್ತ ಕಾಲಕಳೆಯುವುದನ್ನು ಬಿಟ್ಟು, ಅಂಬೇಡ್ಕರ್ ಜೀವನ ಮತ್ತು ತತ್ವಗಳ ಬೆಳಕಿನಲ್ಲಿ ಅರಿವನ್ನು ತಂದುಕೊಳ್ಳುವ ಕೆಲಸವನ್ನು ಮಾಡಬೇಕಾಗಿದೆ.

ಸಾಮಾನ್ಯವಾಗಿ ನಾವು ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವಾಗ, ಬರೆಯುವಾಗ, ಆಹ್ವಾನ ಪತ್ರಿಕೆಗಳಲಿ, ಪ್ರಚಾರ ಪತ್ರಿಕೆ-ಫಲಕಗಳಲ್ಲಿ ‘ಸಂವಿಧಾನ ಶಿಲ್ಪಿ’ ಎಂಬ ಪದವನ್ನು ಒಂದು ಸಂಪ್ರದಾಯವೆಂಬಂತೆ ಬಳಸುತ್ತಿದ್ದೇವೆ. ನಾನಿಂದು ನಿಮ್ಮ ಗಮನ ಸೆಳೆಯಬಯಸುವುದು ಸಂವಿಧಾನ ರಚನೆಗಿಂತ ಹೆಚ್ಚು ಪ್ರಮುಖವಾದ ವಿಷಯಗಳಲ್ಲಿ  ಅಂಬೇಡ್ಕರ್ ಅವರು ನೀಡಿರುವ ಕೊಡುಗೆಗಳ ಬಗ್ಗೆ.

ನಮ್ಮ ಸಂವಿಧಾನದಲ್ಲಿ ಅದರ ಅಡಕವಾಗಿರುವ ವಿಷಯಗಳ ಬಗ್ಗೆ ಹಾಗೂ ಅವರು ಬಯಸಿದ್ದ ಅನೇಕ ಸಂಗತಿಗಳನ್ನು ಅದರಿಂದ ಹೊರಗಿಟ್ಟ ಬಗ್ಗೆ ಅಂಬೇಡ್ಕರ್ ಅವರಿಗೆ ಸಂಪೂರ್ಣ ಒಪ್ಪಿಗೆ ಇರಲಿಲ್ಲ. ಸಂವಿಧಾನ ರಚನೆಗೆ ತನ್ನನ್ನು ಹೊಣೆಗಾರನನ್ನಾಗಿಸಿ ಮಾತನಾಡುವುದರ ಬಗ್ಗೆ ಅವರು ಯಾವಾಗಲೂ ವಿರೋಧಿಯಾಗಿದ್ದರು, ಹಿಂದೆ ರೈತ ಚಳುವಳಿ ಪ್ರಬಲವಾಗಿದ್ದ ಕಾಲದಲ್ಲಿ ಪ್ರೊಫೆಸರ್ ನಂಜುಡಸ್ವಾಮಿಯವರು ಕೂಡಾ ‘ಈ ಸಂವಿಧಾನ ರೈತರದ್ದಲ್ಲ ಅದು ನಮಗೆ ಬೇಕಿಲ್ಲ, ಕಿತ್ತೆಸೆಯಿರಿ’ ಎಂದಾಗ ಅನೇಕ ದಲಿತ ನಾಯಕರು ನಂಜಂಡಸ್ವಾಮಿಯವರನ್ನು ವಿರೋಧಿಸಿ ಟೀಕಿಸಿದರೂ periyar-ambedkarನಂತರದ ದಿನಗಳಲ್ಲಿ ನಂಜಂಡಸ್ವಾಮಿಯವರ ನಿಲುವನ್ನು ಅರ್ಥಮಾಡಿಕೊಂಡರು. ಈಎಲ್ಲ ಕಾರಣಗಳಿಂದ ನಾವಿಂದು ಅಂಬೇಡ್ಕರ್ ಅವರನ್ನು ಕುರಿತು ಹೇಳುತ್ತಿರುವ ‘ಸಂವಿಧಾನ ಶಿಲ್ಪಿ’ ಎಂಬ ಪದ ಸರಿಯಾದದ್ದಲ್ಲ ಮಾತ್ರವಲ್ಲ ಅವರ ಇತರ ಅನೇಕ ಪ್ರಮುಖ ಸಾಧನೆಗಳನ್ನು ಮರೆಮಾಚುವಂತಹ ಪದ ಪ್ರಯೋಗವೂ ಆಗಿದೆ.

ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯು “ಅಂಬೇಡ್ಕರ್ ಅವರು ನಮ್ಮ ಭಾವವಲಯವನ್ನು ಪ್ರವೇಶಿದ ಬಗ್ಗೆ ಮತ್ತು ಈಗ ನಾವು ಅವರನ್ನು ಪರಿಭಾವಿಸುವ ಬಗ್ಗೆ” ಹಲವರ ಅಭಿಪ್ರಾಯಗಳನ್ನು ಪ್ರಕಟಿಸಿತ್ತು. ನಾನಿಲ್ಲಿ ಇದೇ ವಿಚಾರದಲ್ಲಿ ನನ್ನ ಅನುಭವದ ಉದಾಹರಣೆಗಳೊಂದಿಗೆ ಮಾತನಾಡಬಯಸುತ್ತೇನೆ. ನಾನು ಪ್ರಾಥಮಿಕ ಶಾಲಾವಿದ್ಯಾಭ್ಯಾಸ ಮಾಡುತ್ತಿದ್ದ ಸಮಯ. ಹಾಸನ ಜಿಲ್ಲೆಯ ಕಾಫಿ ತೋಟವೊಂದರಲ್ಲಿ ನನ್ನ ತಂದೆ ಉದ್ಯೋಗಿಯಾಗಿದ್ದರು, ನಾವು ತೋಟದಲ್ಲೇ ವಾಸವಿದ್ದೆವು. ಅದೃಷ್ಟವಶಾತ್ ತೋಟದಲ್ಲಿ ಕೆಲಸಮಾಡುತಿದ್ದ ಎಲ್ಲ ಜಾತಿಯ ಕೂಲಿಕಾರ್ಮಿಕರ ಮಕ್ಕಳೊಂದಿಗೆ ಆಟವಾಡುತ್ತ, ಅವರ ಮನೆಗಳಲ್ಲಿ ಕೊಟ್ಟದ್ದನ್ನು ತಿನ್ನುತ್ತ ಬೆಳೆದಿದ್ದ ನನಗೆ ಅಸ್ಪೃಶ್ಯತೆ ಅನ್ನುವುದೊಂದು ಇದೆ ಎಂದೇ ತಿಳಿದಿರಲಿಲ್ಲ. ನನ್ನ ತಂದೆತಾಯಿಯರೂ ಇದೇ ರೀತಿಯಲ್ಲಿ ನನ್ನನ್ನು ಬೆಳೆಸಿದ್ದರು. (ಇದ್ದನ್ನೇ ನಾನು ಅದೃಷ್ಟ ಎಂದು ಕರೆದದ್ದು ಅನೇಕ ಮೇಲ್ಜಾತಿಯವರ ಮಕ್ಕಳಿಗೆ ಈ ಸೌಭಾಗ್ಯ ದೊರೆಯದೆ ಅವರ ಅವರು ಜಾತಿಯ ಕೂಪದಲ್ಲೇ ಬೆಳೆದುಬಿಡುತ್ತಾರೆ) ಸಾಮಾನ್ಯವಾಗಿ ಆ ಕಾಲದಲ್ಲಿ ಶಾಲೆಗೆ ಮಧ್ಯಾಹ್ನದ ಊಟವನ್ನು ತರುತ್ತಿದ್ದವರ ಸಂಖ್ಯೆಯೇ ಕಡಿಮೆ. ಕೆಲವರು ಅನುಕೂಲಸ್ತರ ಮಕ್ಕಳು, ಅದೂ ಕೂಡಾ ಮನಸ್ಸಿಗೆ ಬಂದಾಗ ಮಾತ್ರ ಊಟ ತರುತ್ತಿದ್ದರು. ಮನೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿ ನಮ್ಮ ಶಾಲೆಯಿತ್ತು. ನಾನು ಒಣಕಲಾಗಿ ಪೀಚಾಗಿ ಇದ್ದುದರಿಂದ ನನ್ನಮ್ಮ ನನಗೆ ಊಟ ಒಯ್ಯುವುದನ್ನ ಕಡ್ಡಾಯ ಮಾಡಿದ್ದಳು. ನಾನು ಪ್ರೈಮೆರಿ ಮುಗಿಸಿ ಮಿಡ್ಲ್ ಸ್ಕೂಲ್‌ಗೆ ಬಂದ ಮೊದಲನೇ ದಿನವೇ (ಆಗೆಲ್ಲ ಪ್ರೈಮೆರಿ ಮತ್ತು ಮಿಡ್ಲ್ ಸ್ಕೂಲ್ ಎಂದು ಬೇರೆ ಬೇರೆ ಶಾಲೆಗಳು ಇದ್ದವು) ಮಧ್ಯಾಹ್ನ ಊಟದ ವೇಳೆಗೆ ಕೆಲವರು ಹುಡುಗರು ‘ನೀನು ನಮ್ಮ ಜೊತೆ ಊಟಮಾಡುವಂತಿಲ್ಲ ಹೊರಗೆ ಅಂಗಳದಲ್ಲಿ ಕುಳಿತು ಊಟ ಮಾಡು’ ಎಂದು ಕ್ಲಾಸ್‌ರೂಮಿನಿಂದ ಹೊರಕ್ಕೆ ಕಳುಹಿಸಿದರು. ನಾನು ಆಳುತ್ತ ಅಂಗಳಕ್ಕೆ ಬಂದು ಕುಳಿತಿದ್ದೆ, ಇತರ ಮಕ್ಕಳಿಂದ ವಿಷಯ ತಿಳಿದ ಮುಖ್ಯೋಪಾಧ್ಯಾಯರು, ಆ ಹುಡುಗರಲ್ಲಿ ಯಾಕೆಂದು ವಿಚಾರಿಸಿದಾಗ, ‘ಅವ್ನು ಮಾಂಸ ತರ್‍ತಾನೆ ಸಾರ್’ ಎಂದರು. ಮುಖ್ಯೋಪಾಧ್ಯಾಯರು ನನ್ನನ್ನು ಆಫೀಸ್ ರೂಮಿನಲ್ಲಿ ಕುಳಿತು ಊಟಮಾಡುವಂತೆ ತಿಳಿಸಿದರು. (ಆ ಕಾಲದಲ್ಲಿ ಮಾಂಸಹಾರಿಗಳೂ ಕೂಡಾ ಶಾಲೆಗೆ ಮಾಂಸಾಹಾರ ತರುತ್ತಿರಲಿಲ್ಲ) ಮುಂದಿನ ದಿನಗಳಲ್ಲಿ, ನಾನು ಮಾಂಸ ತರುವುದಿಲ್ಲ ಎಂದು ಖಾತ್ರಿಯಾದ ಬಳಿಕ ಇತರ ಹುಡುಗರು ನನ್ನೊಂದಿಗೆ ಕುಳಿತು ಊಟಮಾಡಲು ಒಪ್ಪಿದರು. ಆ ಹುಡುಗರಲ್ಲಿ ಕೆಲವರು ಇಂದಿಗೂ ನನ್ನ ಗೆಳೆಯರಾಗಿ ಇದ್ದಾರೆ. ಮತ್ತು ಈ ಘಟನೆಯನ್ನು ನೆನಪಿಸಿಕೊಂಡು ಇಂದಿಗೂ ನಾವು ನಗುತ್ತೇವೆ. ಆದರೆ ನನಗೆ ಅಸ್ಪೃಶ್ಯತೆಯ ಪ್ರಥಮ ಪರಿಚಯವಾದದ್ದು ಆ ಮೂಲಕವೇ. ಮತ್ತು ಮುಂದೆ ಅಂಬೇಡ್ಕರ್ ಅವರ ಬಗ್ಗೆ ನಾನು ಅವರಿವರಿಂದ ಕೇಳುತ್ತ, ಓದುತ್ತ ಹೋದಂತೆ ಅಂಬೇಡ್ಕರ್ ಚಿಂತನೆಗಳು ನನ್ನೊಳಗೆ ಪ್ರವೇಶಿಸಲು ಕಾರಣವಾಯಿತು. ಹಾಗೇ ನಾನು ಕಾರ್ಮಿಕ ಸಂಘಟನೆ, ದಲಿತ-ರೈತ ಚಳುವಳಿಗಳು, ಸಾಕ್ಷರತಾ ಆಂದೋಲನ, ರಂಗಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಕಾರಣವಾಯಿತು.

ಇನ್ನೊಂದು ಘಟನೆ ನಾನು ವಿದ್ಯಾಭ್ಯಾಸವನ್ನು ಮುಗಿಸಿ ನನ್ನೂರಿನಲ್ಲೇ ಅದೇ ಕಾಫಿ ತೋಟದಲ್ಲಿ ಉದ್ಯೋಗಿಯಾಗಿ ಸೇರಿದ ನಂತರದ್ದು.

ನಾನು ಕೆಲಸ ಮಾಡುತ್ತಿದ್ದ ಹಾರ್ಲೆ ತೋಟಗಳ ಮಾಲೀಕರಾದ ಎನ್.ಕೆ.ಗಣಪಯ್ಯ ಹಲವಾರು ದಲಿತ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿಸಿ, ತಾವೇ ನಿಂತು ತೋಟ ಮಾಡಿಸಿಕೊಟ್ಟಿದ್ದರು. ಅವರೆಲ್ಲ ಇಂದಿಗೂ ಅಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಇದಲ್ಲದೆ ಇನ್ನೂ ನೂರಾರು ಜನರಿಗೆ ಜನತಾ ಮನೆಗಳನ್ನು ಮಂಜೂರು ಮಾಡಿಸಿ ಕೊಟ್ಟಿದ್ದರು. ಈಮನೆಗಳ ನಿರ್ಮಾಣ ಇತ್ಯಾದಿಗಳ ಉಸ್ತುವಾರಿ ನನ್ನ ಮೇಲೆ ಬಿದ್ದಿತ್ತು. ನಾನು ಮನೆ ಕೆಲಸದ ಸ್ಥಳಗಳು, ತಾಲ್ಲೂಕು ಕಛೇರಿ, ಬಿಡಿಓ ಕಛೇರಿ ಇತ್ಯಾದಿ ಕಡೆಗಳಿಗೆ ಹೋಗಬೇಕಾಗುತ್ತಿತ್ತು.

ಈ ಮನೆಗಳನ್ನು ಕಟ್ಟಿಕೊಂಡವರಿಗೆ ಗಣಪಯ್ಯನವರ ಮಗ ಎನ್. ಜಿ. ರವೀಂದ್ರನಾಥ್ ಬ್ಯಾಂಕಿನಿಂದ ಸಾಲ ಕೊಡಿಸಿದ್ದರು. Young_Ambedkarಆದರೆ ಬ್ಯಾಂಕಿನಿಂದ ಸಾಲ ತೆಗೆದುಕೊಂಡವರಲ್ಲಿ ಅನೇಕರು ವಾಪಸ್ ಕಟ್ಟಲೇ ಇಲ್ಲ. ಹಾಗಾಗಿ ರವೀಂದ್ರನಾಥ್ ಆ ಕಡೆ ಬಂದಾಗಲೆಲ್ಲ ಈ ಸಾಲಗಾರರಲ್ಲಿಗೆ ಹೋಗಿ ಬ್ಯಾಂಕ್ ಸಾಲ ತೀರಿಸಿ ಎಂದು ಹೇಳುತ್ತಿದ್ದರು. ಅನೇಕ ಸಾರಿ ನಾನು ಅವರೊಂದಿಗೆ ಇರುತ್ತಿದ್ದೆ.

ಒಂದು ಸಾರಿ ಪಕ್ಕದ ಅಗಲಟ್ಟಿ ಗ್ರಾಮದ ಪಕ್ಕದಲ್ಲೇ ಇರುವ ಮಾವಿನಹಳ್ಳಿ ಕಾಲೊನಿಗೆ ಹೋದೆವು. ಅಲ್ಲಿ ಸುಮಾರು ನಲವತ್ತು ಮನೆಗಳನ್ನು ನಾವು ಕಟ್ಟಿಸಿದ್ದೆವು. ಅಲ್ಲಿನ ದಲಿತರಲ್ಲಿ ಸ್ವಲ್ಪ ಮುಂದಾಳತ್ವ ವಹಿಸುತ್ತಿದ್ದ ಕಾಳೀಪ್ರಸಾದ್ (ಇವರು ಮುಂದೆ ಜಿಲ್ಲಾ ಪರಿಷತ್ ಸದಸ್ಯರೂ ಆದರು.) ಮತ್ತಿತರರನ್ನು ಒಂದೆಡೆ ಸೇರಿಸಿ ರವೀಂದ್ರನಾಥರು, “ನೋಡಿ ನೀವೆಲ್ಲ ತೆಗೆದುಕೊಂಡಿರುವುದು ಬ್ಯಾಂಕ್ ಸಾಲ-ಇದು ಸಾರ್ವಜನಿಕ ಹಣ. ನೀವು ಇದನ್ನು ತೀರಿಸಿದರೆ, ನಿಮಗೆ ಇನ್ನೊಮ್ಮೆ ಸಾಲ ಬೇಕಾದರೆ ಸಿಗುತ್ತದೆ. ನೀವು ಸಾಲ ತೀರಿಸದಿದ್ದರೆ- ನಿಮ್ಮಲ್ಲೇ ಯಾರಿಗಾದರೂ ಅಗತ್ಯ ಬಿದ್ದರೂ ಸಾಲ ಸಿಕ್ಕುವುದಿಲ್ಲ. ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಲು ಯಾರಿಗೂ ಅಧಿಕಾರ ಇಲ್ಲ” ಎಂದೆಲ್ಲ ತಿಳಿವಳಿಕೆ ಹೇಳಿ, “ನೀವೆಲ್ಲ ತಪ್ಪು ಮಾಡುತ್ತಿದ್ದೀರಿ, ಯೋಚನೆ ಮಾಡಿ, ನಿಮಗೆ ಕೆಲವು ದಿನ ಸಮಯ ಕೊಡುತ್ತೇನೆ. ಆಗಲೂ ನೀವು ಸಾಲ ವಾಪಸ್ ಕಟ್ಟದಿದ್ದರೆ ನಾನು ಇಲ್ಲಿ ಬಂದು ಧರಣಿ ಕೂರುತ್ತೇನೆ” ಎಂದರು.

ಆಗಲೇ ಸಂಜೆ ಆರು ಗಂಟೆ ಕಳೆದಿತ್ತು. ಕೆಲವರಾಗಲೇ ಕುಡಿದು ತೇಲಾಡುತ್ತಿದ್ದರು. ಇನ್ನು ಕೆಲವರು ಜಗಳ ಪ್ರಾರಂಭಿಸಿದರು. ಕಾಳೀಪ್ರಸಾದ್ ಮತ್ತಿತರರು ಅವರನ್ನು ಬೇರೆಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದರು. ಉಳಿದವರು “ಇವರು ಈ ಹೊತ್ತಿಗೆ ಇಲ್ಲಿಗ್ಯಾಕೆ ಬಂದರು? ಇವರ ಜೀಪಿಗೆ ಬೆಂಕಿ ಕೊಟ್ಟರೇನು? ಬೇಕಾದರೆ ಸಾಲವನ್ನು ಇವರೇ ಕಟ್ಟಲಿ” ಎಂದೆಲ್ಲಾ ತಲೆಗೊಂದು ಮಾತಾಡಿದರು!

ನಾವು ಹೇಗೋ ಅಲ್ಲಿಂದ ಹೊರಟು ಬಂದೆವು. ಇವರ ಹುಚ್ಚಾಟಗಳನ್ನು ನೋಡಿ ನನಗೆ ರೇಗಿಹೋಗಿತ್ತು. ದಾರಿಯಲ್ಲಿ ಬರುವಾಗ ನಾನು ರವೀಂದ್ರನಾಥರೊಡನೆ ಜಗಳ ಪ್ರಾರಂಭಿಸಿದೆ.

“ನಿಮಗೆ ಬೇರೆ ಕೆಲಸ ಇಲ್ಲ ಇಂಥವರಿಗೆಲ್ಲಾ ಸಹಾಯ ಮಾಡ್ತೀರಿ, ಇವರಿಗೆ ಅದರ ನೆನಪೇ ಇಲ್ಲ. ಯಾರಾದರೂ ನಮ್ಮಂಥವರಿಗೆ ಸಹಾಯ ಮಾಡಿ, ನೋಡಿದಿರಲ್ಲ ಇವರ ಬುದ್ಧಿ” ಎಂದೆ.

ಅವರು ಸ್ವಲ್ಪ ಹೊತ್ತು ಮಾತಾಡಲಿಲ್ಲ. ಆಮೇಲೆ,
“ನೋಡು ನಿನ್ನಂಥವರಿಗೆ ಯಾರ ಸಹಾಯವೂ ಅಗತ್ಯ ಇಲ್ಲ: ಆದರೆ ಅವರಿಗೆ ಸಹಾಯದ ಅಗತ್ಯ ಇದೆ”, ಎಂದರು.

“ಹೌದು ಅವರಿಗೆ ಅಗತ್ಯ ಇರಬಹುದು, ಆದರೆ ಅರ್ಹತೆ ಇಲ್ಲ.” ಅಸಹನೆಯಿಂದ ಜೋರಾಗಿ ಹೇಳಿದೆ. ನನಗೆ ಸಮಾಧಾನವಾಗಿರಲಿಲ್ಲ.

“ಅದು ಬೇರೇ ಮಾತು. ಅರ್ಹತೆ ಇದೆಯೋ ಇಲ್ಲವೋ ಗೊತ್ತಾಗುವುದು ತುಂಬ ನಿಧಾನ. ಆದರೆ ಅವರು ಸಾವಿರ ವರ್ಷಗಳಿಂದ ಮೋಸ ಹೋಗಿದ್ದಾರೆ. ಈಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಅವರಿಲ್ಲ.”

“ಯಾರೋ ಮೋಸ ಮಾಡಿದ್ದರೆ ಅದಕ್ಕೆ ನಾವೇನು ಮಾಡಬೇಕು. ಅವರು ಹೀಗೆ ಮಾಡಿದರೆ ಅವರಿಗೆ ಯಾರು ಸಹಾಯ ಮಾಡುತ್ತಾರೆ. ಅಯೋಗ್ಯರು.” ನನ್ನ ಸಿಟ್ಟು ಇಳಿದಿರಲಿಲ್ಲ.

ರವೀಂದ್ರನಾಥ್ ಮತ್ತೆ ಮೌನವಾದರು. ಕೆಲವು ಕ್ಷಣಗಳ ನಂತರ, “ನೋಡು ಅವರು ಏನು ಹೇಳಿದರು ಎನ್ನುವುದು ಮುಖ್ಯ ಅಲ್ಲ. ನಮ್ಮೆಲ್ಲರಿಗೆ ಅವರ ಸಾವಿರ ವರ್ಷಗಳ ಋಣ ಇದೆ. ಅದರಲ್ಲಿ ಸ್ವಲ್ಪ ತೀರಿತು ಅಂದುಕೊಂಡರಾಯಿತು” ಎಂದರು. ಆಗ ನನ್ನ ಸಿಟ್ಟೇನು ತಣಿಯಲಿಲ್ಲ. ಆದರೆ ಅವರು ಹೇಳಿದ ಮಾತು ನನಗೆ ಅರ್ಥವಾಗಲು ಅನೇಕ ವರ್ಷಗಳು ಬೇಕಾದವು.

ರವೀಂದ್ರನಾಥ್ ವೈದ್ಯಕೀಯ ಕಲಿತವರು. ಒಳ್ಳೆಯ ಸಂಸ್ಕೃತಾಭ್ಯಾಸಿ ಕೂಡಾ. ಅಥರ್ವವೇದವನ್ನು ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಬಗ್ಗೆಯೂ ಆಳವಾಗಿ ಆಧ್ಯಯನ ಮಾಡಿದವರು.

ನಾನು ಇದನೆಲ್ಲ ಯಾಕೆ ಹೇಳುತ್ತಿದ್ದೇನೆಂದರೆ, ಈಗ ಶಾ ಬಾಲುರಾವ್ ಅವರ ಸೂರ್ಯ ಇವನೊಬ್ಬನೇ ಕವನಸಂಗ್ರಹದ ಒಂದು ಪದ್ಯ ನೆನಪಾಗುತ್ತದೆ.

“ಇವ (ಸೂರ್ಯ) ಸಮಾಜವಾದಿ
ಉಳ್ಳಪ್ಪ ಇಲ್ಲಪ್ಪ ಇಬ್ಬರಿಗೂ ಇವನ ಬೆಳ್ಳಿ ತಟ್ಟೆಯಲಿ ಊಟ”

ಹಾಗೇ ನಾವು ‘ದಲಿತ ಸೂರ್ಯ’ನೆಂದು ಕರೆಯುವ ಅಂಬೇಡ್ಕರ್, ಶೋಷಿತರಿಗೆ ಮತ್ತು ಶೋಷಕರಿಗೆ ಇಬ್ಬರಿಗೂ ಬೆಳಕನ್ನು ನೀಡಿದ ಮಹಾನುಭಾವರೆನ್ನುವದಕ್ಕೆ ಈ ಮೇಲಿನ ಘಟನೆಗಳ ಉದಾಹರಣೆ ಸಾಕೆನಿಸುತ್ತದೆ.

ಇಲ್ಲಿ ಅನೇಕರು ಕಾಲೇಜು ವಿದ್ಯಾರ್ಥಿಗಳು ಮತ್ತು ತರುಣರು ಸೇರಿರುವುದರಿಂದ ಅನೇಕ ಕಡೆಗಳಲ್ಲಿ ಪ್ರಸ್ತಾಪಿತವಾಗಿರುವ ಈ ವಿಷಯವನ್ನು ಮತ್ತೊಮ್ಮೆ ನಿಮ್ಮ ಮುಂದಿಡುತ್ತೇನೆ. ಸಾಮಾನ್ಯವಾಗಿ ಗಾಂಧಿ ಮತ್ತು ಅಂಬೇಡ್ಕರ್ ಇವರಿಬ್ಬರ ಭಾವಚಿತ್ರವನ್ನು ನೋಡಿ, ಅಂಬೇಡ್ಕರ್ ಅವರು ಸೂಟು-ಬೂಟುಧಾರಿಯಾಗಿ ಪೂರ್ಣ ಉಡುಗೆಯಲ್ಲಿದ್ದರೆ, ಗಾಂಧಿ ಅರೆ ಉಡುಪಿನ ಫಕೀರನಾಗಿ ಕಾಣಿಸುತ್ತಾರೆ. ಇದು ಇವರಿಬ್ಬರ ಮಾತ್ರವಲ್ಲ ಅವರು ಪ್ರತಿನಿಧಿಸಿದ ಜನ ಸಮುದಾಯಗಳ ಮುನ್ನಡೆಯ ಸಂಕೇತ-ರೂಪಕಗಳೂ ಹೌದು. ಎಲ್ಲ ಉಳ್ಳವನಾಗಿ ಜನಿಸಿದ ಗಾಂಧಿಗೆ ಅಂತಸ್ತು, ಅಧಿಕಾರ, ಶ್ರೀಮಂತಿಕೆ, ಅಹಂಕಾರ ಎಲ್ಲವನ್ನೂ ತ್ಯಜಿಸುತ್ತಾ ಹೋದರೆ ಮಾತ್ರ ಮನುಷ್ಯನಾಗಲು ಸಾಧ್ಯವಿತ್ತು. ಅದೇ ಏನೂ ಇಲ್ಲದ ಅಂಬೇಡ್ಕರವರ ಜನ ಸಮುದಾಯ ಎಲ್ಲವನ್ನೂ ಗಳಿಸುತ್ತ ಮನುಷ್ಯರಾಗಬೇಕಿತ್ತು. ಈಗ ಇವರಿಬ್ಬರ ಉಡುಪನ್ನು ನಿಮ್ಮ ಕಲ್ಪನೆಯಲ್ಲಿ ಬದಲಿಸಿ ನೋಡಿ, ಸೂಟುಬೂಟು ತೊಟ್ಟ ಗಾಂಧಿ ಭಾರತದ ಸಾವಿರಾರು ವಕೀಲರಲ್ಲಿ ಒಬ್ಬರಾಗಿ ಬಿಡುತ್ತಾರೆ. ಗಾಂಧಿಯ ಉಡುಪಿನ ಅಂಬೇಡ್ಕರ್ ಇಲ್ಲ ಲಕ್ಷಾಂತರ ದಲಿತರಲ್ಲಿ ಒಬ್ಬರಾಗಿ ಕಳೆದುಹೋಗುತ್ತಾರೆ. ಗಾಂಧಿ ಎಲ್ಲವನ್ನೂ ತ್ಯಜಿಸಿ ಮನುಷ್ಯರಾಗಬೇಕಾದ ಮೇಲ್ವರ್ಗಕ್ಕೆ ಸಂಕೇತವಾದರೆ, ಅಂಬೇಡ್ಕರ್ ಎಲ್ಲವನ್ನೂ ಗಳಿಸಿ ಸಮಾನತೆಯತ್ತ ಸಾಗಬೇಕಾದ ಕೆಳವರ್ಗಕ್ಕೆ ದಾರಿದೀಪವಾಗಿದ್ದಾರೆ.

ಇನ್ನು ಅಂಬೇಡ್ಕರ್ ಅವರ ಅತಿ ಮುಖ್ಯವಾದ ಕೊಡುಗೆಗಳತ್ತ ಗಮನ ಹರಿಸಿದರೆ, ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳ ಬಗ್ಗೆಯಾಗಲೀ ಅವರ ಕೃತಿಗಳನ್ನಾಗಲೀ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ರಸ್ತಾಪಿಸುವುದೇ ಕಡಿಮೆ. ಭಾರತೀಯ ರಿಸರ್ವಬ್ಯಾಂಕ್‌ನ ಸ್ಥಾಪನೆ, ರೂಪಾಯಿಯ ಸಮಸ್ಯೆಗಳಬಗ್ಗೆ ಅವರು ಬರೆದ-ನೀಡಿದ ಸಲಹೆಗಳು. ಇವುಗಳಿರಲಿ ಕೃಷಿಯಲ್ಲಿ ಹೂಡಬೇಕಾದ ಭಂಡವಾಳ ಮತು ಅದರ ಪೂರೈಕೆ, ಕೈಗಾರಿಕಾ ಸಂಬಂಧಗಳು, ಕುಟುಂಬ ಯೋಜನೆ, ಆಹಾರ ಭದ್ರತಾ ಕಾನೂನು, ಮಹಿಳಾ ಸಬಲೀಕರಣ, ಭೂಸುಧಾರಣೆ, ಭೂಮಿ ಮತ್ತು ಕೈಗಾರಿಕೆಗಳ ರಾಷ್ಟ್ರೀಕರಣ ಇವೆಲ್ಲಕ್ಕಾಗಿ ಅವರು ನಡೆಸಿ ಹೋರಾಟಗಳು, ಅವರ ದುಡಿಮೆ-ಕೊಡುಗೆಗಳ ಬಗ್ಗೆಯೂ, ಅದರ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಅಪಾರವಾದ ಜ್ಞಾನ ಮತ್ತು ಅನುಭವಗಳ ಬಗ್ಗೆಯೂ ನಮ್ಮ ಯುವ ಪೀಳಿಗೆಗೆ ಸಾಕಷ್ಟು ತಿಳುವಳಿಕೆ ಇಲ್ಲ. ಆದರೆ ನಾವು ಪದೇಪದೇ ವೇದಿಕೆಗಳಲ್ಲಿ, ಬರಹಗಳಲ್ಲಿ ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’, ‘ದಲಿತ ಹೋರಾಟಗಾರ’ ಇತ್ಯಾದಿಯಾಗಿ ವರ್ಣಿಸುತ್ತ, ಅವರ ನಿಜ ವ್ಯಕ್ತಿತ್ವವನ್ನು ಹಾಗೂ ಇತರ ಅನೇಕ ಪ್ರಮುಖ ಸಾಧನೆಗಳನ್ನು ಮರೆಮಾಚುತ್ತಿದ್ದೇವೆ, ಆದರೆ ಇವೆಲ್ಲವನ್ನೂ ನಾವು ಮತ್ತೆ ಅಂಬೇಡ್ಕರ್ ಬರಹಗಳನ್ನು ಓದುವ ಮೂಲಕ ತಿಳಿದುಕೊಳ್ಳಲು ಸಾಧ್ಯವಿರುವುದರಿಂದ, ನಾನು ಬೇರೆ ವಿಷಯಗಳತ್ತ ಗಮನಹರಿಸುತ್ತೇನೆ.

೧೯೩೦ರಲ್ಲೇ ಅಂಬೇಡ್ಕರ್ ಅವರು ಜಾತಿಗಣತಿಗಾಗಿ ಬ್ರಿಟಿಷ್‌ಸರ್ಕಾರವನ್ನು ಒತ್ತಾಯಿಸಿದ್ದರು. ಅದರಿಂದ ದಲಿತರ ನಿಜವಾದ ಸಂಖ್ಯೆ ದೊರೆತು ಅವರ ನ್ಯಾಯಬದ್ಧ ಹಕ್ಕು ಮಂಡಿಸಲು ಸಾಧ್ಯವಾಗುತ್ತದೆಂದು ಅವರು ವಾದಿಸಿದ್ದರು. ಇದೀಗ ಮತ್ತೊಮ್ಮೆ ಜಾತಿಗಣತಿ ನಡೆಯತ್ತಿದೆ, ಇದರೊಂದಿಗೆ ಇನ್ನೂ ಒಂದು ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಜಾತಿಗಣತಿಯೊಂದಿಗೆ ಭೂಮಿ ಮತ್ತು ಸಂಪತ್ತಿನ ಗಣತಿಯೂ ವೈಜ್ಞಾನಿಕವಾಗಿ ನಡೆಸಲು ಒತ್ತಾಯಿಸಬೇಕು. ಈಗ ಜಾತಿಯೊಂದಿಗೆ ಭೂಮಿಯ ಒಡೆತನದ ವಿವರವನ್ನೇನೋ ಕೇಳಿದ್ದಾರೆ. ಅದರಲ್ಲಿ ಕಾರ್ಪೋರೇಟ್ ವಲಯದ ಕಂಪೆನಿಗಳ ಹಾಗೂ ಸಹಕಾರಿ ಸಂಸ್ಥೆಗಳ ಮಠ ಮಾನ್ಯಗಳ ಹೆಸರಿನಲ್ಲಿ ಹೊಂದಿರುವ ಭೂಮಿಯ ಲೆಕ್ಕ ಸಿಗುವುದಿಲ್ಲ ಹಾಗೇ ಚಿನ್ನ ನಗದು ಷೇರುಗಳಂತಹ ಚರಾಸ್ತಿಗಳ ವಿವರವೂ ಸಿಗುವುದಿಲ್ಲ. ಇದೆಲ್ಲದರ ಗಣತಿಯೂ ನಡೆದರೆ ಯಾವ ಯಾವ ಜಾತಿಗಳಲ್ಲೇ ಸಂಪತ್ತು ಕೇಂದ್ರೀಕೃತವಾಗಿದೆ ಯಾವ ಅನುಪಾತದಲ್ಲಿ ಕೇಂದ್ರೀಕೃತವಾಗಿದೆ, ಹಾಗೂ ಜಾತಿಗಳೊಗೇ ಉಳ್ಳವರ ಇಲ್ಲದವರ ಅನುಪಾತ ಏನು ಎಂಬ ವಿವರಗಳೂ ಸಿಗುತ್ತಿತ್ತು, ಈಗ ಈ ಯಾವ ವಿವರಗಳೂ ನಮ್ಮಲ್ಲಿ ಸ್ಪಷ್ಟವಾಗಿ ಇಲ್ಲ.

ನನ್ನ ಗೆಳೆಯರೊಬ್ಬರು ಇದೀಗ ಮಾತನಾಡುತ್ತ, ನಾವು ದಿನದಿಂದ ದಿನಕ್ಕೆ ಅಸಹನೆ ಸಮಾಜವಾಗಿ ಪರಿವರ್ತನೆಯಾಗುತ್ತಿದ್ದೇವೆ. ಎಲ್ಲದರಲ್ಲೂ ಪರ ಮತ್ತು ವಿರೋಧ ಎಂಬ ಎರಡೇ ಗುಂಪುಗಳಾಗುತ್ತಿವೆ. ಎರಡೂ ಅಲ್ಲದೆ ಇರಬಹುದಾದ ಮೂರನೆಯ ಸಾಧ್ಯತೆಯನ್ನೇ ನಿರಾಕರಿಸಲಾಗುತ್ತಿದೆ ಎಂದರು. ಇದು ಇಂದು ಬಹುಷಃ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿರುವ ಸಮಸ್ಯೆ. ಅವರು ಮುಂದುವರಿದು ಕೆಲವು ವ್ಯಕ್ತಿಗಳನ್ನು ಟೀಕೆಮಾಡುವುದಿರಲಿ ವಿಮರ್ಶಿಸಲೂ ಬಾರದೆಂಬ ಅಲಿಖಿತ ನಿಯಮವೊಂದು ಜಾರಿಗೆ ಬರುತ್ತಿದೆ ಎಂದರು. ಇದೂ ಕೂಡಾ ನಮ್ಮೆಲ್ಲರ ಅನುಭವವೇ ಆಗಿದೆ. ಇದಕ್ಕೆ ಕಾರಣ ನಮ್ಮ ಅನೇಕ ನಾಯಕರನ್ನು, ಮಹಾನ್ ಚೇತನರನ್ನು ಕೆಲವು ವರ್ಗ-ಜಾತಿಗಳು ತಮ್ಮ ಸ್ವತ್ತನ್ನಾಗಿ ಕಾಣುವುದು. ಇನ್ನು ಕೆಲವರನ್ನು ಉಳಿದವರೇ ಒಂದು ವರ್ಗಕ್ಕೆ ಸೀಮಿತಗೊಳಿಸಿ ನೋಡುವುದು. ಅಂಬೇಡ್ಕರ್ ಅವರ ವಿಚಾರ ಬಂದಾಗ ಅವರನ್ನು ಇತರರೇ ದಲಿತರಿಗೆ ಸೀಮಿತಗೊಳಿಸಿ ನೋಡುತ್ತಿರುವುದನ್ನು ಹೆಚ್ಚಾಗಿ ಕಾಣಬಹುದು.

ಆದರೆ ಮೇಲಿನ ಈ ಸಂಗತಿಗೆ ಇದಿಷ್ಟೇ ಕಾರಣವೆಂದು ನನಗನಿಸುತ್ತಿಲ್ಲ. ಇದರೊಂದಿಗೆ ನಾವು ಬದುಕಿನ ಎಲ್ಲ ವಿಭಾಗಗಳಲ್ಲೂ ಸಹ ಯಾವುದನ್ನೇ ಆಗಲಿ ಸಮಗ್ರವಾಗಿ ನೋಡದೆ ಬಿಡಿಬಿಡಿಯಾಗಿ ನೋಡುವದು ಕೂಡಾ ಕಾರಣವೆನ್ನಿಸುತ್ತದೆ. (ಇರಲಿ ಇದೊಂದು ಬೇರೆಯೇ ವಿದ್ಯಮಾನವಾಗಿದ್ದು ಈ ಸಂದರ್ಭದಲ್ಲಿ ಪ್ರಸ್ತುತವಲ್ಲ) ಎಲ್ಲ ಮಹಾನ್ ವ್ಯಕ್ತಿಗಳ ಜೀವನವನ್ನು (ಪ್ರಪಂಚದಾದ್ಯಂತ) ಗಮನಿಸಿದರೆ ಅವರೆಲ್ಲರೂ ತಮ್ಮ ಜೀವಿತಾವಧಿಯಲ್ಲಿ ಬೆಳೆಯುತ್ತ ಸ್ವವಿಮರ್ಶೆಗೊಳಪಡುತ್ತ ಅನೇಕಬಾರಿ ತಾವು ಹಿಂದೆ ಹೇಳಿದ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿ ತೀರ್ಮಾನಿಸಿರುವುದನ್ನು ಕಾಣುತ್ತೇವೆ. ಆದರೆ ಇಂದು ಈ ಪರ ವಿರೋಧಿ ಗುಂಪುಗಳು ಅವರು ನಡೆದುಬಂದ ದಾರಿ ಮತ್ತು ನಂತರದ ತೀರ್ಮಾನಗಳನ್ನು ಸಮಗ್ರವಾಗಿ ಗ್ರಹಿಸದೆ, ಯಾವುದೋ ಕಾಲಘಟ್ಟದಲ್ಲಿನ ಅವರ ನಡೆಯನ್ನು ಉಲ್ಲೇಖಿಸುತ್ತಿರುತ್ತಾರೆ. ಇದರಿಂದ ಸಾಕಷ್ಟು ಗೊಂದಲ ಮತ್ತು ತಪ್ಪು ಗ್ರಹಿಕೆಗಳಾಗುತ್ತಿರುತ್ತದೆ. ಗಾಂಧಿ ಅಂಬೇಡ್ಕರ್, ಕುವೆಂಪು, ವಿವೇಕಾನಂದ, ರವಿಂದ್ರನಾಥ ಟಾಗೋರ್, ಹೀಗೆ ಅನೇಕರ ಬಗ್ಗೆ ನಡೆಯುತ್ತಿರುವ. ಹಾಗೇ ಅನೇಕ ಸಾಹಿತ್ಯ-ಕಾವ್ಯ ಕೃತಿಗಳಬಗ್ಗೆ ಆಗುತ್ತಿರುವ ವಾಗ್ವಾದಗಳಲ್ಲೂ ನಾವಿದನ್ನು ಕಾಣಬಹುದು.

ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರ ಭಿನ್ನಾಭಿಪ್ರಾಯಗಳ ಬಗ್ಗೆ ನಾವು ಸಾಕಷ್ಟು ತಿಳಿದಿದ್ದೇವೆ. gandhi-art2ಅಂಬೇಡ್ಕರ್ ಅವರಷ್ಟು ತೀಕ್ಷ್ಣವಾಗಿ ಗಾಂಧಿಯನ್ನು ವಿಮರ್ಶೆಗೊಳಪಡಿಸಿದವರು- ಟೀಕಿಸಿದವರು, ಇರಲಾರರು, ಆದರೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಲ್ಲೂ ಕೆಲವು ಸಾಮಾನ್ಯ ಅಂಶಗಳಿದ್ದವು. ಇಬ್ಬರೂ ಅಹಿಂಸೆಯ ಪ್ರಬಲ ಪ್ರತಿಪಾದಕರಾಗಿದ್ದರು. ಗಾಂಧಿ ಹೊರಗಿನಿಂದ ಅಂದರೆ ಹಿಂಸೆಯನ್ನು ನೋಡಿ ಅಹಿಂಸಾವಾದಿಯಾದರೆ, ಅಂಬೇಡ್ಕರ್ ಒಳಗಿನಿಂದಲೇ ಹಿಂಸೆಯನ್ನು ಅನುಭವಿಸುತ್ತ ಅಹಿಂಸಾವಾದಿಯಾಗಿದ್ದರು. ಇದರಿಂದಾಗಿಯೇ ಅವರು ಕೆಲವುಸಾರಿ ಒಲ್ಲದ ಮನಸ್ಸಿನಿಂದಲೇ ತಮ್ಮ ತೀರ್ಮಾನಗಳನ್ನು ಬಿಟ್ಟುಕೊಟ್ಟಿದ್ದಾರೆ. (ಈ ಬಗ್ಗೆ ಸಾಧ್ಯವಿದ್ದವರು ಸಿ.ಬಸವಲಿಂಗಯ್ಯ ನಿರ್ದೇಶನದ ಗಾಂಧಿ ಅಂಬೇಡ್ಕರ್ ನಾಟಕವನ್ನು ನೋಡಬೇಕಾಗಿ ಕೇಳಿಕೊಳ್ಳುತ್ತೇನೆ). ಈ ಇಬ್ಬರು ವ್ಯಕ್ತಿಗಳ ಸಂಗಮದಂತಿರುವ ವ್ಯಕ್ತಿಯೋರ್ವರಿಂದ ಮುಂದೆ ಹೋರಾಟ ನಡೆಸಿದ್ದು ಭಾರತದಲ್ಲಲ್ಲ ಬದಲಿಗೆ ಗಾಂಧಿ ತನ್ನ ಹೋರಾಟವನ್ನು ಪ್ರಾರಂಭಿಸಿದ ದಕ್ಷಿಣ ಆಫ್ರಿಕಾದಲ್ಲಿ-ನೆಲ್ಸನ್ ಮಂಡೇಲಾರಿಂದ

ಈ ವಿಚಾರಗಳನ್ನು ಮಾತಾನಾಡುವಾಗ ನನ್ನ ಅನೇಕ ಗೆಳೆಯರು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರಿಗೂ ನೊಬೆಲ್ ಪ್ರಶಸ್ತಿ ಬರಬೇಕಿತ್ತು ಅನ್ನುತ್ತಾರೆ. ಅವರ ಅಭಿಪ್ರಾಯ ಸರಿಯೇ ಆದರೆ ನನ್ನ ಅಭಿಪ್ರಾಯದಲ್ಲಿ ಇವರಿಬ್ಬರೂ ನೊಬೆಲ್ ಪ್ರಶಸ್ತಿಗಿಂತಲೂ ದೊಡ್ಡವರು. ಹಾಗೇನಾದರೂ ಕೊಡಬೇಕೆನ್ನಿಸಿದರೆ, ಸುಡುಮದ್ದಿನ ವ್ಯಾಪಾರಿಯಾಗಿ ಕೊನೆಗೊಂದು ಒಳ್ಳೆಯ ಕೆಲಸ ಮಾಡಿದ ನೊಬೆಲ್‌ಗೆ ಇವರ ಹೆಸರಿನ ಪ್ರಶಸ್ತಿಯನ್ನು ಕೊಡಬಹುದು!

ಗೆಳೆಯರೆ ನಾನೀಗ ನನ್ನ ನಂಬಿಕೆಯ ಪ್ರಕಾರ ಅಂಬೇಡ್ಕರ್ ಅವರ ಎರಡು ಮಹೋನ್ನತ ಕೊಡುಗೆಗಳ ಬಗ್ಗೆ ಹೇಳುತ್ತೇನೆ

ಮೊದಲನೆಯದಾಗಿ ನಮ್ಮ ಎಲ್ಲ ಮೇಲ್‌ವರ್ಗದ ಜನರೂ ಅಂಬೇಡ್ಕರ್ ಅವರ ಬಗ್ಗೆ ನೆನಪಿಡಬೇಕಾದ ಹಾಗೂ ಕೃತಜ್ಞರಾಗಿಬೇಕಾದ ಸಂಗತಿಯೆಂದರೆ. ಒಂದು ವೇಳೆ ಅಂಬೇಡ್ಕರ್ ಅವರು ತಮ್ಮ ಹಿಂದಿರುವ ಬಲುದೊಡ್ಡ ಶೋಷಿತ ಸಮುದಾಯಕ್ಕೆ ಅಹಿಂಸೆಯ ದೀಕ್ಷೆ ನೀಡದಿದ್ದರೆ ಭಾರತದೇಶ ಇಂದು ಒಂದಾಗಿ ಇರುತ್ತಿರಲಿಲ್ಲ. ಮೇಲ್ವರ್ಗದ ನೆಮ್ಮದಿಯೂ ಕನಸಾಗಿರುತ್ತಿತ್ತು. ಶತಮಾನಗಳಿಂದ ನೋವು ಅವಮಾನಗಳನ್ನು ಅನುಭವಿಸಿದ ಜನಾಂಗಗಳು ಎಲ್ಲವನ್ನೂ ಭೂಮಿತಾಯಿಯಂತೆ ಸಹಿಸಿಕೊಂಡು ಇಂದೂ ಅಹಿಂಸಾತ್ಮಕವಾಗಿಯೇ ಇದ್ದರೆ, ಇದರ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಸಹಿಷ್ಣುತೆ, ಮಾನವೀಯತೆ, ದೂರದೃಷ್ಟಿ ಇದೆ. ಆ ಕಾರಣಕ್ಕಾಗಿಯಾದರೂ ನಾವಿಂದು ಅಂಬೇಡ್ಕರ್ ಅವರಿಗೆ ಕೃತಜ್ಞತಾರೂಪವಾಗಿ ಸಮಾನತೆಯ ಸಮಾಜದ ಅಗತ್ಯದ ಮನಗಾಣಬೇಕು.

ಎರಡನೆದಾಗಿ, ಅಂಬೇಡ್ಕರ್ ಅವರಿಗೆ ಕೊನೆಗೆ ಏನೇ ಆದರೂ ಭಾರತದ ಈ ಹಿಂದೂ ಸಮಾಜ ತಮ್ಮ ಸಮುದಾಯವನ್ನು ಮನುಷ್ಯರನ್ನಾಗಿ ಕಾಣಲಾರರು ಅನ್ನಿಸತೊಡಗಿತ್ತು. ತಮ್ಮ ಹಿಂದಿದ್ದ ದೊಡ್ಡ ಜನ ಸಮುದಾಯದ ಅಸ್ಮಿತೆಯನ್ನು ಕಾಪಾಡುತ್ತ ಅವರನ್ನು ಮಾನವರನ್ನಾಗಿ ಪರಿಗಣಿಸುವಂತ ಸಮಾಜದ- ಧರ್ಮದ ಅವರ ಹುಡುಕಾಟ ನಿರಂತರವಾಗಿತ್ತು, ಅಂತಿಮವಾಗಿ ಅವರು ತೀರ್ಮಾನಿಸಿದ್ದು ಬೌಧ್ಧದರ್ಮದತ್ತ ಪಯಣ. ಆದರೆ ಗೆಳೆಯರೆ ನನಗೆ ಅನ್ನಿಸುತ್ತಿರುವುದು ಅಂಬೇಡ್ಕರ್ ಅವರ ಎರಡು ಮಹೋನ್ನತ ಕೆಲಸಗಳಲ್ಲಿ ಅತಿ ಮುಖ್ಯವಾದದ್ದೆಂದು ನಾನು ಭಾವಿಸುವ ಈ ನಡೆಯಲ್ಲಿ ಅವರು ಬುದ್ಧಧಮ್ಮದತ್ತ ಸಾಗಲಿಲ್ಲ ಬದಲಿಗೆ ನಾವು ನಮ್ಮೊಳಗಿನಿಂದ ಓಡಿಸಿದ-ಕಳೆದುಕೊಂಡ ಬುದ್ಧನನ್ನು ಮರಳಿ ಕರೆತಂದುಕೊಟ್ಟರು. ಎಲ್ಲ ಅರಿವಿನಿಂದ, ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳದ, ಪ್ರಬುದ್ಧರಾಗುವ ಅವಕಾಶವನ್ನು ಎಲ್ಲರಿಗೂ ಸಮಾನವಾಗಿ ನೀಡುವ ಬುದ್ಧನನ್ನು ದೊರಕಿಸಿಕೊಟ್ಟರು.

ಇಂದು ಬುದ್ಧದಮ್ಮವೂ ಕೂಡಾ ಇತರ ಧರ್ಮಗಳಂತೆ ಹಲವು ರೀತಿಯಲ್ಲಿ ಕಲುಷಿತವಾಗಿ ಹೋಮ ಹವನ ಮಾಡುವ, ಮೂಢ ನಂಬಿಕೆಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಪಂಥಗಳಾಗಿ ಒಡೆದಿವೆ. ಬುದ್ಧನ ಕಾಲಾನಂತರ ಹಲವು ಶತಮಾನಗಳ ಕಾಲ ಬುಧ್ಧನ ಮೂರ್ತಿಯೇ ಇರಲಿಲ್ಲ ಬುದ್ಧನನ್ನು ಸಂಕೇತಗಳಲ್ಲಿ ಪೂಜಿಸಲಾಗುತ್ತಿತ್ತು, ನಿಧಾನವಾಗಿ ಬುದ್ಧನನ್ನೂ ಆಲಯಗಳಲ್ಲಿ ಬಂಧಿಸಲಾಯಿತು. ಇಂದು ಈಗಾಗಲೇ ನಾವು ಅಂಬೇಡ್ಕರ್ ದೇವಾಲಯವನ್ನು ಕಟ್ಟಿ ಅರ್ಚಕನ್ನು ನೇಮಿಸಿದ್ದೇವೆ. ಆದ್ದರಿಂದ ಗೆಳೆಯರೆ ನಮಗೆ ಬೇಕಾಗಿರುವದು, ಅವೆಲ್ಲದರಿಂದ ಬೇರೆಯಾದ, ಅಂಬೇಡ್ಕರ್ ನಮಗೆ ದೊರಕಿಸಿಕೊಟ್ಟಿರುವ ಪ್ರಖರ ವಿಚಾರವಾದಿ ಬುದ್ಧ, ಬಯಲಿನಲ್ಲಿರುವ ಬುದ್ಧ. ಸ್ಥಾವರನಲ್ಲ- ನಮ್ಮನ್ನು ಬೆಳಕಿನತ್ತ ಕರೆದೊಯ್ಯಬಲ್ಲ ಜಂಗಮ ಬುಧ್ಧ.

ಬುದ್ಧನ ಬೆಳಕಿನಲ್ಲಿ ನಾವೆಲ್ಲ ಪ್ರಬುದ್ಧರಾಗಲು ಪ್ರಯತ್ನಿಸುವುದೇ ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸಬಹುದಾದ ಅತಿ ದೊಡ್ಡ ಗೌರವ. ನಾವೆಲ್ಲ ಆ ದಿಕ್ಕಿನಲ್ಲಿ ಸಾಗೋಣ ಎಂದು ಹಾರೈಸುತ್ತಾ, ಅಂಬೇಡ್ಕರ್ ಜನ್ಮದಿನಾಚರಣೆಯ ದಿನದಂದು ನನ್ನನ್ನಿಲ್ಲಿಗೆ ಆಹ್ವಾನಿಸಿ, ಇಷ್ಟುಹೊತ್ತು ಆಲಿಸಿದ ನಿಮಗೆಲ್ಲರಿಗೂ ಕೃತಜ್ಞತೆಗಳು.

ನೆಲದ ಭಾಷೆ ಮತ್ತು ಕಲಿಕೆಯ ಮಾಧ್ಯಮ

– ಪ್ರಸಾದ್ ರಕ್ಷಿದಿ

ಭಾರತದ ಸರ್ವೋಚ್ಛ ನ್ಯಾಯಾಲಯ ‘ಮಕ್ಕಳಿಗೆ ಯಾವ ಭಾಷಾ ಮಾಧ್ಯಮದಲ್ಲಿ ವಿದ್ಯೆ ನೀಡಬೇಕೆನ್ನುವುದನ್ನು ನಿರ್ಧರಿಸುವ ಹಕ್ಕು ಪೋಷಕರದ್ದು’ ಎಂದು ತೀರ್ಪು ನೀಡಿದೆ. ಈ ತೀರ್ಪು ಭಾರತದ ಸಂವಿಧಾನದ ಅಡಿಯಲ್ಲಿ ಮಾತ್ರವಲ್ಲ ಯಾವುದೇ ಪ್ರಜಾಪ್ರಭುತ್ವ ದೇಶದ ನ್ಯಾಯಾಲಯ ನೀಡಬಹುದಾದ, ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಹಜವಾದ ತೀರ್ಪಿನಂತೇ ಇದೆ. Supreme Courtಆದರೆ ಇದರ ಸಾಧಕ ಭಾಧಕಗಳ ಚರ್ಚೆಯಾಗಬೇಕಾಗಿರುವುದು, ಭಾರತದಂತಹ ಬಹುಭಾಷಾ, ಬಹುಜಾತೀಯ ಮತ್ತು ಬಹು ಸಂಸ್ಕೃತಿಯ ಸಮಾಜದ ಹಿನ್ನೆಲೆಯಲ್ಲಿ.

ಇಲ್ಲಿ ಕನ್ನಡದ ಸಂದರ್ಭವನ್ನು ಮಾತ್ರ ಪರಿಗಣಿಸಿ ಈವಿಚಾರಗಳನ್ನು ಹೇಳುತ್ತಿದ್ದೇನಾದರೂ ಹಿಂದಿ ಭಾಷೆಯನ್ನಾಡುವ ಪ್ರದೇಶಗಳನ್ನುಳಿದು ಬೇರೆ ಎಲ್ಲಾ ಪ್ರಾದೇಶಿಕ ಭಾಷೆಗಳ ಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿದೆ. ಹಿಂದಿ ಭಾಷೆಯು ಕೇಂದ್ರ ಸರ್ಕಾರದಿಂದ ವಿಶೇಷ ಪೋಷಣೆಯನ್ನು ಪಡೆಯುತ್ತಿದ್ದರೂ ಸಹ ಕಲಿಕಾ ಮಾಧ್ಯಮದ ವಿಚಾರಕ್ಕೆ ಬಂದಾಗ ಇಂಗ್ಲಿಷ್‌ನೊಂದಿಗೆ ಅವರಿಗೂ ಸಮಸ್ಯೆಗಳಿವೆ.

ಸಾಮಾನ್ಯವಾಗಿ ನಾವು ಮಾತನಾಡುವಾಗ, ನಮ್ಮ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸಲು, ಸಹಜವಾಗಿ ಯೋಚಿಸಲು, ಪ್ರಪಂಚದ ಎಲ್ಲ ಅನುಭವಗಳನ್ನು ಮತ್ತು ಅದರ ಮೂಲಕ ದೊರೆಯುವ ಜ್ಞಾನವನ್ನು ಸ್ವೀಕರಿಸಿ ಗ್ರಹಿಸಲು ಮಾತೃಭಾಷೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳುತ್ತಲೇ ಇರುತ್ತೇವೆ. ಇದಕ್ಕೊಂದು ತಮಾಷೆಯ ಉದಾಹರಣೆಯನ್ನು ನೀಡುತ್ತೇನೆ. ಸುಮಾರು ಮೂವತ್ತು ವರ್ಷಗಳಕಾಲ ಆಸ್ಟೇಲಿಯಾದಲ್ಲಿ ವಿಜ್ಞಾನಿಯಾಗಿದ್ದು ಇದೀಗ ವಾಪಸ್ ಬಂದು ಹಳ್ಳಿಯಲ್ಲಿ ನೆಲೆಸಿದವರೊಬ್ಬರು ಇತ್ತೀಚೆಗೆ ಪರಿಚಯವಾದರು. ಅವರು ಆಸ್ಟೇಲಿಯಾದಲ್ಲಿನ ಅನುಭವಗಳ ಬಗ್ಗೆ ಮಾತನಾನಾಡುತ್ತ ಒಂದು ವಿಚಾರವನ್ನು ಹೇಳಿದರು. Kavi_kannadaಅವರು ಅಲ್ಲಿದ್ದಾಗ ಯಾರಿಗಾದರೂ ಬಯ್ಯುತ್ತಿದ್ದರೆ ಮಾತು ತನ್ನಷ್ಟಕ್ಕೆ ಕನ್ನಡ ಭಾಷೆಗೆ ಹೊರಳುತ್ತಿತ್ತಂತೆ!. ಅಂದರೆ ನಾವು ಕಲಿತ ಭಾಷೆಯಲ್ಲಿ ಪೂರ್ಣ ಅಭಿವ್ಯಕ್ತಿ ಕಷ್ಟ ಎನ್ನುವುದನ್ನವರು ಪರೋಕ್ಷವಾಗಿ ತಿಳಿಸಿದರು. ಆದರೆ ನಾವು ವ್ಯಾವಹಾರಿಕ ಜಗತ್ತಿಗೆ ಬಂದಾಗ ಇಂಗ್ಲಿಷ್ ಭಾಷೆಯೇ ನಮ್ಮ ಆದ್ಯತೆಯಾಗಿಬಿಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ.

ಮಾತೃಭಾಷೆ ಎನ್ನುವ ಪದವೇ ಸ್ವಲ್ಪ ಗೊಂದಲವುಂಟುಮಾಡುವಂಥದ್ದು ಕರ್ನಾಟಕದಲ್ಲೇ, ತುಳು, ಕೊಡವ, ಮುಂತಾದ ಪ್ರಾದೇಶಿಕ ಭಾಷೆಗಳಿದ್ದ ಹಾಗೆ ಬಂಜಾರ, ಅರೆಗನ್ನಡ, ಹೈಗ, ಬೋವಿ, ಬ್ಯಾರಿ ಮುಂತಾದ ಜನಾಂಗೀಯ ಭಾಷೆಗಳಿವೆ. ತಮಿಳು, ತೆಲುಗು, ಉರ್ದು, ಕೊಂಕಣಿ. ಮಲೆಯಾಳಂ, ಭಾಷಿಕರಿದ್ದಾರೆ. ನಾವು ಮನೆಯಲ್ಲಿ ಆಡುವ ಮಾತನ್ನು ಮಾತೃಭಾಷೆ ಎಂದುಕೊಂಡರೆ, ಮಧ್ಯ ಕರ್ನಾಟಕದ ಅಚ್ಚಕನ್ನಡದ ನೆಲದಲ್ಲೂ ನಾವು ಹೊರಗೆ ಮಾತನಾಡುವ ಕನ್ನಡಕ್ಕೂ ಮನೆ ಮಾತಿಗೂ ತುಂಬ ವ್ಯತ್ಯಾಸಗಳಿವೆ. ಇವರೆಲ್ಲರಿಗೂ ತಮ್ಮ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಕ್ಕು ಸಂವಿಧಾನಾತ್ಮಕವಾಗಿ, ಇದೀಗ ನ್ಯಾಯಾಲಯದ ಮೂಲಕ ದೊರೆತಿದೆ. ಈಗ ಅಧಿಕೃತವಲ್ಲದ ಭಾಷೆಗಳವರೂ ತಮ್ಮ ಭಾಷೆಗಳನ್ನು ಅಧಿಕೃತಗೊಳಿಸಿ ಶಿಕ್ಷಣ ಸೌಲಭ್ಯವನ್ನು ಕೊಡಿ ಎಂದು ಕೇಳಬಹುದು. ಆದ್ದರಿಂದ ಮಾತೃಭಾಷೆಯೆಂಬ ಸುಂದರವಾದ ಪದವನ್ನು ಪಕ್ಕಕ್ಕಿಟ್ಟು, ಪರಿಸರದ ಭಾಷೆ ಅಥವಾ ಆ ರಾಜ್ಯದಲ್ಲಿ ಅಧಿಕೃತವಾಗಿ ಆಡಳಿತ- ವ್ಯವಹಾರಗಳಲ್ಲಿರುವ ಪ್ರಾದೇಶಿಕ ಭಾಷೆ ಎಂಬ ಪದವನ್ನು ಬಳಸಿದರೆ ಸ್ವಲ್ಪಮಟ್ಟಿನ ಖಚಿತತೆ ಬಂದೀತು.

ಈಗ ನಮ್ಮ ಪ್ರಾದೇಶಿಕ ಭಾಷೆಗಳಿಗೆ ನ್ಯಾಯಾಲಯದ ತೀರ್ಪಿನಿಂದ ಬಂದ ಕುತ್ತಿನ ಬಗ್ಗೆ ಚರ್ಚಿಸುವ ಮೊದಲು ಎರಡು ಉದಾಹರಣೆಗಳನ್ನು ಕೊಡುತ್ತೇನೆ.

ಕೆಲವು ವರ್ಷಗಳ ಹಿಂದೆ ನಮ್ಮೂರು ಸಕಲೇಶಪುರದಲ್ಲಿ ಒಬ್ಬರು ಶಿಕ್ಷಣಾಧಿಕಾರಿಗಳಿದ್ದರು. kannada-schoolತುಂಬ ದಕ್ಷರೆಂದೂ ಸಜ್ಜನರೆಂದೂ ಹೆಸರಾದವರು. ಆ ಕಾಲದಲ್ಲೇ ಸಕಲೇಶಪುರದಲ್ಲಿ ಎರಡು ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಿದ್ದವು. ಸರ್ಕಾರಿ ಪ್ರೌಡಶಾಲೆಯಲ್ಲೂ ಇಂಗ್ಲಿಷ್ ಮಾಧ್ಯಮ ಇತ್ತು. ಸಕಲೇಶಪುರದ ಬೇರೆಲ್ಲ ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದರು. ಆದರೆ ಈ ಶಿಕ್ಷಣಾಧಿಕಾರಿಯವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದರು. ಯಾರೋ ಈಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಅವರೆಂದರು, “ನಾನೇ ಶಿಕ್ಷಣಾಧಿಕಾರಿಯಾಗಿ ನನ್ನ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲೆ? ನನ್ನ ಮಕ್ಕಳು ಕನ್ನಡಲ್ಲೇ ಕಲಿತು ಒಳ್ಳೆಯವರಾಗಿ ಬಾಳಿದರೆ ಸಾಕು.” ಈ ಮಾತು ಇಂದಿಗೆ ಸ್ವಲ್ಪ ಅಪ್ರಸ್ತುತವೆನಿಸಿಕೊಳ್ಳುವ ಆದರ್ಶದ ಸ್ಥಿತಿಯೆನಿಸಿದರೂ ಇಂಥವರು ಈಗಲೂ ಇದ್ದಾರೆ. ಆದರೆ ಇಂತಹ ಉದಾಹರಣೆಯನ್ನು ಸಾರ್ವತ್ರಿಕವಾಗಿ ನಾವು ಕಾಣಲು ಸಾಧ್ಯವಿಲ್ಲ.

ಎರಡನೆಯದು; ಇತ್ತೀಚೆಗೆ ಸಕಲೇಶಪುರದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಿತು. ಅಂದಿನ ಗೋಷ್ಟಿಯೊಂದರಲ್ಲಿ ಬ್ಯಾಂಕಿನ ಅಧಿಕಾರಿಯೊಬ್ಬರು ಮಾತನಾಡುತ್ತಾ “ನಾವು ಕನ್ನಡ ಉಳಿಯಬೇಕೆನ್ನುತ್ತೇವೆ, ಆದರೆ ಉಳಿಸುವ ಪ್ರಯತ್ನವಾಗಿ ನಮ್ಮಲ್ಲಿ ಈಗ ಇರುವ ಸೌಲಭ್ಯಗಳನ್ನೂ ಬಳಸಿಕೊಳ್ಳದಿದ್ದರೆ ಹೇಗೆ?” ಎಂದು ಹೇಳಿ “ಈಗ ಎಲ್ಲ ಎ.ಟಿ.ಎಂ.ಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದರೆ ಅದನ್ನು ಬಳಸುವವರ ತೀರ ಕಡಿಮೆ (ಗ್ರಾಹಕ ಯಾವ ಭಾಷೆಯನ್ನು ಬಳಸುತ್ತಾನೆಂಬ ಅಂಕಿ ಅಂಶವೂ ಎ.ಟಿ.ಎಂ. ಮೂಲಕವೇ ಬ್ಯಾಂಕಿಗೆ ತಿಳಿಯುತ್ತದೆ) ಕನ್ನಡ ಭಾಷಾ ಸೌಲಭ್ಯವನ್ನು ಬಳಸುವವರ ಸಂಖ್ಯೆ ಹೆಚ್ಚಾದರೆ ಇತರ ವ್ಯವಹಾರಗಳಿಗೂ ಕನ್ನಡ ಭಾಷಾ ಸೌಲಭ್ಯ ಕಲ್ಪಿಸುವುದು ಬ್ಯಾಂಕುಗಳಿಗೆ ಅನಿವಾkannada_Kuvempuರ್ಯವಾಗುತ್ತದೆ. ಅದಕ್ಕಾಗಿ ಕನ್ನಡ ತಂತ್ರಾಂಶಗಳ ನಿರ್ಮಾಣ ಮಾಡಬೇಕಾಗುತ್ತದೆ. ಕನ್ನಡ ಉದ್ಯೋಗಗಳು ಹೆಚ್ಚುತ್ತವೆ” ಎಂದರು. ಖಂಡಿತವಾಗಿಯೂ ಇದು ಅತ್ಯಂತ ಪ್ರಾಕ್ಟಿಕಲ್ ಆದಂತಹ ಆದರ್ಶ. ಸಾರ್ವತ್ರಿಕವಾಗಿ ನಾವು ಮಾಡಬಹುದಾದದ್ದು.

ಆದರೆ ಇಂಗ್ಲಿಷ್‌ ಜ್ಞಾನ ಅಷ್ಟಾಗಿ ಇಲ್ಲದೆ ಇರುವವರೂ ಸಹ ಹೆಚ್ಚಾಗಿ ಎ.ಟಿ.ಎಂ.ಗಳಲ್ಲಿ. ಬ್ಯಾಂಕಿನ ಇತರ ವ್ಯವಹಾರಗಳಲ್ಲಿ ಇಂಗ್ಲಿಷನ್ನೇ ಬಳಸುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಅವರಲ್ಲಿ ಅನೇಕರು (ತೀರ ಕಡಿಮೆ ಶಾಲಾವಿದ್ಯಾಭ್ಯಾಸ ಇರುವವರು) ಇಂಗ್ಲಿಷ್ ಬಳಸದಿದ್ದರೆ ಇತರರು ತಮ್ಮನ್ನು ಕೀಳಾಗಿ ಕಾಣುತ್ತಾರೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು ಇಂಗ್ಲಿಷ್ ಸುಲಭವೆಂದೋ ಇಲ್ಲವೇ ಆ ಮೂಲಕ ನಾವು ಇಂಗ್ಲಿಷ್ ಕಲಿಯುತ್ತಿದ್ದೇವೆಂದೋ ಹೇಳುತ್ತಾರೆ. ಇದಕ್ಕೆ ಪೂರಕವಾಗಿ ಎಷ್ಟೋ ಕಡೆಗಳಲ್ಲಿ ಸರಿಯಾದ ತಂತ್ರಾಂಶ ಮತ್ತು ಭಾಷೆ ಬಳಕೆಯಾಗದೆ ಕನ್ನಡದ ವಿವರಣೆಗಳೇ ಗೊಂದಲಮಯವಾಗಿವೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಮಾನ, ಪ್ರಾದೇಶಿಕ ಭಾಷೆಗಳು ಮತ್ತು ಜನಸಾಮಾನ್ಯರ ನಡವಳಿಕೆಗಳ ಬಗ್ಗೆ ಯೋಚಿಸೋಣ.

ಎಲ್ಲ ಜನರೂ ಸಾಮಾನ್ಯರೇ. ಆದರೆ ಕಲಿತ ವಿದ್ಯೆ-ಸಂಸ್ಕಾರಗಳಿಂದ, ಜೀವನಾನುಭವದಿಂದ ಅಸಾಮಾನ್ಯರಾಗಿ ಬೆಳೆಯುತ್ತಾರೆ. ಅಂತಹವರಲ್ಲಿ ಅನೇಕ ವಿಜ್ಞಾನಿಗಳು, ಸಾಹಿತಿಗಳು, ಚಿಂತಕರು, ಜನಪರ ಹೋರಾಟಗಾರರೂ ಇರುತ್ತಾರೆ. ಇವರಲ್ಲಿ ತಮಗೆ ಮಾತ್ರವಲ್ಲ ಸಮಾಜಕ್ಕೆ ಯಾವುದು ಒಳಿತು ಎನ್ನುವುದರ ಬಗ್ಗೆ ತಮ್ಮದೇ ಆದ ಖಚಿತ ನಿಲುವು- ಅಭಿಪ್ರಾಯಗಳಿವೆ. ಹಾಗೆಯೇ ಜನಸಾಮಾನ್ಯರು ಎನಿಸಿಕೊಂಡವರಲ್ಲೂ ಹೆಚ್ಚಿನವರು ಸಜ್ಜನರೂ ತಮ್ಮ ನಾಡು-ನುಡಿಯ ಬಗ್ಗೆ ಅಪಾರ ಅಭಿಮಾನ ಪ್ರೀತಿಗಳನ್ನಿಟ್ಟುಕೊಂಡವರೂ ಇದ್ದಾರೆ. ಆದರೆ ಇದರೊಂದಿಗೆ ಇವರಿಗೆ ಬದುಕು ಕಲಿಸಿಕೊಟ್ಟಂತಹ ವಿವೇಕವಿದೆ. ಪ್ರತಿಕ್ಷಣವೂ ಬದುಕಿನ ಹೋರಾಟವಿದೆ. ಇಂದು ನಾಳೆಯ ಕನಸುಗಳಿವೆ ಒಂದುಕಾಲದಲ್ಲಿ ಕನಸು ಕಾಣಲೂ ಸಾಧ್ಯವಿಲ್ಲದಿದ್ದ ಜನಾಂಗಗಳು ಇಂದು ಕನಸು ಕಾಣುವ ಮಟ್ಟಿಗಾದರೂ ಬೆಳೆದಿವೆ. ಇವೆಲ್ಲದರ ನಡುವೆ ಹಗಲುಗನಸನ್ನು ಮಾರುವ ಮಾಧ್ಯಮಗಳಿವೆ.

ಇದಕ್ಕೆ ಎರಡು ಉದಾಹರಣೆಗಳನ್ನು ನೀಡುತ್ತೇನೆ. ನಮ್ಮೂರಿನಲ್ಲಿ ಗಾರೆಕೆಲಸ ಮಾಡುತ್ತಿದ್ದವರ ಮಗನೊಬ್ಬ ಮುಂಬೈಗೆ ಹೋದ ಅಲ್ಲಿ ಅಡಿಗೆ ಕೆಲಸ ಕಲಿತು ವೆಸ್ಟ್ ಇಂಡೀಸ್‌ನ ಹಡಗೊಂದರಲ್ಲಿ ಕೆಲಸಕ್ಕೆ ಸೇರಿದ. ಅಲ್ಲೀಗ ಮುಖ್ಯ ಬಾಣಸಿಗನಾಗಿದ್ದಾನೆ. government_schoolಆಗಾಗ ಊರಿಗೂ ಬರುತ್ತಾನೆ. ಇಲ್ಲಿ ಒಳ್ಳೆಯ ಮನೆಯೊಂದನ್ನು ಕಟ್ಟಿಸಿದ್ದಾನೆ. ಆತನ ಸಂಸಾರವೂ ಇಲ್ಲೇ ನೆಲೆಸಿದೆ. ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿಯತ್ತಿದ್ದಾರೆ. ಹಲವಾರು ದೇಶ ಸುತ್ತಿರುವ ಈತ ಬಂದಾಗಲೆಲ್ಲ ಊರಿನ ಮಕ್ಕಳಿಗೆ ಇಂಗ್ಲಿಷ್ ಶಾಲೆಯಲ್ಲಿ ಓದಿ ಎಂದು ಸಲಹೆ ನೀಡುತ್ತಾನೆ. ಅವನ ಅನುಭವ ಸುಳ್ಳಲ್ಲ.

ನಮ್ಮ ತಾಲ್ಲೂಕಿನ ಹುಡುಗಿಯೊಬ್ಬಳು ಕಷ್ಟದಿಂದ ಕನ್ನಡ ಶಾಲೆಯಲ್ಲಿ ಕಲಿತು ಮುಂದೆ ಎಂ.ಎಸ್‌ಸಿ ಓದಿ ಇಲ್ಲೇ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದಳು. ಇದೀಗ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಬೆಂಗಳೂರಿನ ಯಾವ ಕಾಲೇಜಿನಲ್ಲೂ ಅವಳಿಗೆ ಕೆಲಸ ಸಿಗಲಿಲ್ಲ. ಕಾರಣ ಸಂದರ್ಶನಕ್ಕೆ ಹೋದಲ್ಲೆಲ್ಲ “ನೀನು ಪಾಠವೇನೋ ಮಾಡುತ್ತೀಯಾ, ಆದರೆ ಮಾತನಾಡುವಾಗ ನಿನ್ನ ಇಂಗ್ಲಿಷ್ ಸರಿಯಾಗಿಲ್ಲ” ಎನ್ನುತ್ತಿದ್ದರಂತೆ. ಈಗ ಇಂಗ್ಲಿಷ್ ಕ್ಲಾಸಿಗೆ ಸೇರಿದ್ದಾಳೆ ಮತ್ತು ಊರಿಗೆ ಬಂದಾಗಲೆಲ್ಲ ಬೇರೆಯವರಿಗೆ ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೇ ಕಳುಹಿಸಿ ಎನ್ನುತ್ತಾಳೆ.

ಪ್ರಾದೇಶಿಕ ಭಾಷೆಗಳು ಇದುವರೆಗೂ ಉಳಿದು ಬಂದಿರುವುದು ಹಳ್ಳಿಗಳಲ್ಲಿ ಅದೂ ಸ್ಥಿತಿವಂತರಲ್ಲದ ಕೆಳವರ್ಗದ ಜನರಿಂದ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರೂ ಅವರ ಮಕ್ಕಳೇ. (ಗ್ರಾಮೀಣ ಪ್ರದೇಶದ ಮೇಲ್ವರ್ಗದ-ಶ್ರೀಮಂತರ ಮನೆಗಳಲ್ಲಿ ಈಗಾಗಲೇ ಇಂಗ್ಲಿಷ್ ಆಡುಭಾಷೆಯಾಗಿಯೇ ಪ್ರವೇಶಿಸಿದೆ.) ಪ್ರಪಂಚದ ಅನೇಕ ಮುಂದುವರೆದ ದೇಶಗಳಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಲ್ಲ. ಹಾಗೇ ಹಲವು ದೇಶಗಳಲ್ಲಿ ಇಂಗ್ಲಿಷ್ ಇಲ್ಲವೇ ಇಲ್ಲ ಎಂದು ಯಾರೆಷ್ಟೇ ಹೇಳಿದರೂ ಸಾಮಾನ್ಯರಿಗೆ ಇಂಗ್ಲಿಷ್ ಇಂದು ಪ್ರಪಂಚದ ಹೆಬ್ಬಾಗಿಲಾಗಿಯೇ ಕಾಣುತ್ತಿದೆ. ಮತ್ತು ಆ ಮೂಲಕ ಒಳ್ಳೆಯ ಉದ್ಯೋಗಾವಕಾಶ ಮತ್ತು ಬದುಕಿನ ಕನಸನ್ನು ಕಾಣುತ್ತಿದ್ದಾರೆ. ಇಂಗ್ಲಿಷ್ ಕಲಿಯದಿದ್ದರೆ ನಾವು ಎರಡನೆ ದರ್ಜೆ ಪ್ರಜೆಗಳಾಗಿಯೇ ಉಳಿದುಬಿಡುತ್ತೇವೆನ್ನುವ ಭಯವೂ ಕೆಳವರ್ಗದ ಜನರಲ್ಲಿ ವ್ಯಾಪಕವಾಗಿದೆ.

ಆದರೆ ನಾವು ಅಸಾಮಾನ್ಯರೆಂದು ಹೇಳುವ ಅನೇಕರಲ್ಲೂ ಈ ರೀತಿಯ ಭಾವನೆ ಮತ್ತು ಸಾಮಾನ್ಯನ ಕನಸುಗಳಿವೆ. ಅವರಲ್ಲಿ ನೆಲ-ಜಲ-ಭಾಷೆಗಳಿಗೆ ಸಂಬಂಧಪಟ್ಟಂತೆ ಖಚಿತ ನಿಲುವು, ಸಿದ್ಧಾಂತ ಏನೇ ಇದ್ದರೂ ಸ್ವಂತದ ವಿಷಯಕ್ಕೆ ಬಂದಾಗ ಸಾಮಾನ್ಯನ ವಿವೇಕದ ಕಡೆಗೆ ವಾಲುತ್ತಾರೆ ಮತ್ತು ಪರಿಸ್ಥಿತಿಯೊಡನೆ ರಾಜಿ ಮಾಡಿಕೊಳ್ಳುತ್ತಾರೆ. ಆದ್ದರಿಂದಲೇ ನಾವು ಅನೇಕ ಬಾರಿ ’ಈ ಬುದ್ಧಿವಂತರು- ಹೋರಾಟಗಾರರು ನಮ್ಮ ಮಕ್ಕಳಿಗೆ ಮಾತ್ರ ಕನ್ನಡ ಶಾಲೆಯ ಉಪದೇಶಮಾಡಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುತ್ತಿದ್ದಾರೆ’ ಎಂಬ ದೂರು ಕೇಳಿಬರುತ್ತದೆ

ಈ ಎಲ್ಲ ಕಾರಣಗಳಿಂದಾಗಿ ಇಂದು ನಗರ- ಹಳ್ಳಿ ಎರಡೂ ಕಡೆಗಳಲ್ಲೂ ನಾನಾ ರೀತಿಯ ಇಂಗ್ಲಿಷ್ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಇವುಗಳ ಗುಣಮಟ್ಟದಲ್ಲಿ ಕೂಡಾ ಅಪಾರ ವೆತ್ಯಾಸಗಳಿವೆ. ಆದರೂ ಜನ ತಮ್ಮ ಅನುಕೂಲಕ್ಕೆ ತಕ್ಕಂತ ಇಂಗ್ಲಿಷ್ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇದರಿಂದ ಹಳೆಯ ತಾರತಮ್ಯದ ಸಮಾಜವೇ ಹೊಸ ವೇಷದಲ್ಲಿ ಮುಂದುವರಿಯುತ್ತಿದೆ.

ಇವುಗಳ ಮಧ್ಯೆ ಕನ್ನಡವೇ ಅಥವಾ ಮಾತೃಭಾಷೆಯೇ ಎಂಬ ವಿವಾದ ಹುಟ್ಟಿಕೊಂಡಿದೆ. ಭಾಷಾ ಅಲ್ಪಸಂಖ್ಯಾತರ ಹೆಸರಿರಲಿ ಇನ್ನೇನೇ ಇರಲಿ, ಎಲ್ಲ ಶಾಲೆಗಳಲ್ಲೂ ಭಾರತೀಯ ಭಾಷೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿರುವುದು ಇಂಗ್ಲಿಷ್ ಭಾಷೆಯೇ. ಅನೇಕ ಉರ್ದು ಶಾಲೆಗಳೂ ಸಹ ಸರ್ಕಾರಿ ಕನ್ನಡ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿವೆ.

ನನಗೆ ಪರಿಚಯದರೊಬ್ಬರ ಮಗ ಇತ್ತೀಚೆಗೆ ಚೆನ್ನೈನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ. private-schoolಅತ್ಯಲ್ಪ ಕಾಲದಲ್ಲೇ ಭಡ್ತಿಯನ್ನೂ ಪಡೆದ. ಅವನ ಮೇಲಧಿಕಾರಿಯೊಬ್ಬರು (ಅವರು ತಮಿಳರು) ಅವನನ್ನು ಕರೆದು ’ನಿನ್ನ ಬಗ್ಗೆ ನನಗೆ ತುಂಬಾಹೆಮ್ಮೆ, ನೀನು ಇಲ್ಲಿ ಎಲ್ಲರೊಡನೆ ಬೆರೆತು ಖುಷಿಯಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಇಲ್ಲಿನ ಭಾಷೆ ನಿನಗೆ ಅರ್ಥವಾಗಬೇಕು, ಜೋಕುಗಳಿಗೆ ನಗಬೇಕು, ಇತರರು ನಿನ್ನ ಬಗ್ಗೆ ಆಡಿದ ಮಾತು ನಿನಗೆ ತಿಳಿಯಬೇಕು, ಆದ್ದರಿಂದ ನೀನು ತಮಿಳು ಕಲಿಯಬೇಕು. ಇಂದಿನಿಂದ ನಾನು ನಿನ್ನೊಡನೆ ತಮಿಳಿನಲ್ಲಿ ಮಾತ್ರ ಮಾತನಾಡುತ್ತೇನೆ’ ಎಂದು ಹೇಳಿ ಅದರಂತೆ ನಡೆದು, ಮೂರು ತಿಂಗಳಲ್ಲಿ ಆತ ತಮಿಳಿನಲ್ಲಿ ಮಾತನಾಡುವಂತೆ ಮಾಡಿದ್ದಾರೆ.

ಎಲ್ಲಿ ನಮ್ಮ ದಿನ ನಿತ್ಯದ ಬದುಕಿಗೆ ಯಾವ ಭಾಷೆ ಅನಿವಾರ್ಯವೋ ಆ ಭಾಷೆಯನ್ನು ಜನರು ಸ್ವೀಕರಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ. ಇತ್ತೀಚೆಗೆ ಕಾಫಿ ತೋಟಗಳಿಗೆ ಕೆಲಸಕ್ಕಾಗಿ ಬರುತ್ತಿರುವ ಅಸ್ಸಾಮಿಗಳೆಂದುಕೊಳ್ಳುತ್ತಿರುವ ಕೃಷಿ ಕಾರ್ಮಿಕರು, ಬಂದು ವರ್ಷವಾಗುವಷ್ಟರಲ್ಲೇ ಇವರಲ್ಲಿ ಸಾಕಷ್ಟು ಮಂದಿ ಕನ್ನಡದಲ್ಲಿ ವ್ಯವಹರಿಸುವಷ್ಟು ಕಲಿತಿದ್ದಾರೆ. ಬ್ಯಾಂಕುಗಳಲ್ಲಿರುವ ಉತ್ತರ ಬಾರತೀಯರೂ ಇಲ್ಲಿ ಬಂದು ಸಾಕಷ್ಟು ಕನ್ನಡ ಕಲಿತಿದ್ದಾರೆ. ಆದರೆ ತಲೆಮಾರುಗಳಿಂದ ಇಲ್ಲೇ ನೆಲಸಿದ್ದ ತಮಿಳು ಕಾರ್ಮಿಕರು ಇತ್ತೀಚೆಗಷ್ಟೇ ಕನ್ನಡ ಮಾತನಾಡುತ್ತಿದ್ದಾರೆ. ಈ ಬದಲಾವಣೆಗೆ ತಮಿಳರಲ್ಲ, ಕೆಲಮಟ್ಟಿಗೆ ಬದಲಾದ ಕನ್ನಡಿಗರ ಮನೋಭಾವವೂ ಕಾರಣ. ಆದರೆ ಈ ಮೇಲಿನ ಎರಡು ಸಂದರ್ಭದ ನಡವಳಿಕೆಗಳಿಂದ ಇಂಗ್ಲಿಷಿನ ವಿರುದ್ಧ ತಮಿಳಿಗಾಗಲೀ ಕನ್ನಡಕ್ಕಾಗಲೀ ಬಹಳ ದೊಡ್ಡ ಲಾಭವೇನೂ ಆಗಲಾರದು.

ಎಲ್ಲಿಯವರೆಗೆ ಯಾವುದೇ ಭಾಷೆ ಜನಪದರ ಅನ್ನ ಮತ್ತು ಅಭಿವ್ಯಕ್ತಿ ಎರಡರ ಭಾಷೆಯೂ ಆದಾಗ ಮಾತ್ರ ಅದು ಉಳಿದು ಬೆಳೆಯಬಲ್ಲದು. ಅನೇಕ ವರ್ಷಗಳ ಹಿಂದೆಯೇ ಲಂಕೇಶರು “ಆಧುನಿಕ ಸಮಸ್ಯೆಗಳನ್ನು, ಪ್ರಜ್ಞೆಯನ್ನು ಹೇಳಲಾಗದಿದ್ದರೆ ಕನ್ನಡ ಕೂಡಾ ಬೇಡವಾಗುತ್ತದೆ” ಎಂದದ್ದು ಈ ಅರ್ಥದಲ್ಲಿಯೇ.

ಈ ಎಲ್ಲ ವಿಚಾರಗಳನ್ನೂ ಗಮನಿಸಿ ನಮ್ಮ ಭಾಷೆಗಳನ್ನು ಉಳಿಸಿಕೊಳ್ಳಬೇಕಾದ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವಾಗಲೀ ಕನ್ನಡ ಸಾಹಿತ್ಯ ಪರಿಷತ್ತಾಗಲೀ ಏನು ಮಾಡಬಹುದೆಂಬ ವಿಚಾರಕ್ಕೆ ಬರೋಣ. ಯಾವುದೇ ಸರ್ಕಾರವಾಗಲೀ ಜನರಿಂದ ಬಲವಾದ ಒತ್ತಡ ಬಾರದೆ ಯಾವ ಕೆಲಸವನ್ನೂ ಮಾಡಲಾರದು. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಅನಿವಾರ್ಯವಾದ್ದರಿಂದ ಮತ್ತು ಆಕಾರಣಕ್ಕಾಗಿಯೇ ಹೆಚ್ಚಿನ ಎಲ್ಲಾ ರಾಜಕಾರಣಿಗಳೂ ಎಲ್ಲವನ್ನೂ ಓಟಿನ ಸಂಖ್ಯೆಗಳಾಗಿ ನೋಡುವುದರಿಂದ ಬಲವಾದ ಚಳುವಳಿಯ ರೂಪದ ಸಂಘಟನೆಗಳ ಮೂಲಕ- ಆಂದೋಲನಗಳ ಮೂಲಕ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಮಾಡಬೇಕಾಗಿದೆ.

ಆದರೆ ಆ ರೀತಿಯ ಸಂಚಲನವನ್ನು ಉಂಟುಮಾಡಬಲ್ಲ ವ್ಯಕ್ತಿಗಳ ಬಗೆಗೇ ಜನ devanurಇಂದು ನಂಬಿಕೆ ಕಳೆದುಕೊಂಡಿದ್ದಾರೆ. ದೇವನೂರು ಮಹಾದೇವರಂತೆ, ಸುಂದರಲಾಲ್ ಬಹುಗುಣರಂತೆ, ಆದಷ್ಟೂ ನಡೆ-ನುಡಿಗೆ ಹತ್ತಿರವಾಗಿ ಬದುಕುತ್ತಿರುವವರು ಅನೇಕರು ಇಂದೂ ಇದ್ದಾರೆ. ಆದರೆ ವೈಯಕ್ತಿಕ ಪ್ರಯತ್ನಗಳು ಒಂದು ರೀತಿಯ ಸರ್ವಾಧಿಕಾರಿ ನಡೆಯತ್ತ ಚಲಿಸಬಲ್ಲುದೆಂಬ ಅರಿವೇ ಇಂದು ದೇವನೂರು ಮಹಾದೇವರಂತವರನ್ನು ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗೆ, ಒಂದು ರೀತಿಯ ‘ಶಾಕ್ ಟ್ರೀಟ್‌ಮೆಂಟ್’ ನೀಡುವುದಕ್ಕೆ ಪ್ರೇರೇಪಿಸಿರಬೇಕು. ಆ ಕಾರಣಕ್ಕಾಗಿಯೇ ಅವರು “ಕನ್ನಡ ಸಾಹಿತ್ಯ ಪರಿಷತ್ತು ಪೊರೆ ಕಳಚಿ ನಿಲ್ಲಲಿ, ನಾನೂ ನಿಮ್ಮೊಡನಿರುವೆ” ಎಂದಿದ್ದಾರೆ ಎನಿಸುತ್ತದೆ.

ಇದನ್ನೇ ಇನ್ನೊಂದು ರೀತಿಯಲಿ ಹೇಳುವುದಾದರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದದ್ದೇ “ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ” ಎಂಬ ಘೋಷವಾಕ್ಯದೊಡನೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಥಿಕ ರಚನೆಯೂ ಅದಕ್ಕೆ ಅನುಗುಣವಾಗಿ ಪ್ರಜಾಸತ್ತಾತ್ಮಕವಾಗಿ ಇದೆ. ಆದರೆ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿರುವ “ಸಾಹಿತ್ಯ” ಎಂಬುದನ್ನು ವಾಙ್ಮಯ ಸಾಹಿತ್ಯ ಎಂಬುದಕ್ಕೆ ಸೀಮಿತಗೊಳಿಸಿಕೊಂಡದ್ದರಿಂದಲೇ, ಇಂದು ಅನೇಕ ಗೊಂದಲಗಳಿಗೆ ಕಾರಣವಾಗಿದೆ ಎನಿಸುತ್ತದೆ. ಸಾಹಿತ್ಯ ಅಕಾಡೆಮಿ ಮಾಡಬಲ್ಲಂತ ಅನೇಕ ಕೆಲಸಗಳನ್ನು ಮಾಡುತ್ತ ನಿಜವಾದ ಕನ್ನಡದ ಕೆಲಸವನ್ನು ಮಾಡಬೇಕಿದ್ದ ಸಂಸ್ಥೆ ಭಾವನಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡಿದೆ. ಇದರಿಂದಲೇ ವಿಜ್ಞಾನ ಪರಿಷತ್ತು, ರಂಗಭೂಮಿ ಪರಿಷತ್ತು ಇತ್ಯಾದಿ ಹೆಸರುಗಳೂ ಇತ್ತೀಚೆಗೆ ಕೇಳಿಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಈಗಲಾದರೂ ತನ್ನ ಮೂಲ ಉದ್ದೇಶಕ್ಕೆ ಮರಳಿ ಕನ್ನಡದ ಸಮಗ್ರತೆಯನ್ನು ಕನ್ನಡ ನೆಲದ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಸಂಸ್ಥೆಯಾಗಬೇಕಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ ಅದರ ಸಾಂಸ್ಥಿಕ ನಿಯಮದಂತೆ, kannada-sahithya-sammelanaಕನ್ನಡ ಬಲ್ಲ ಅಂದರೆ ಕನ್ನಡದಲ್ಲಿ ಮಾತಾಡಬಲ್ಲ, ವ್ಯವಹರಿಸಬಲ್ಲ ಯಾರು ಬೇಕಾದರೂ ಅದರ ಸದಸ್ಯರಾಗಬಹುದು. ಅಂದರೆ ಇದು ಕೇವಲ ಸಾಹಿತಿಗಳ, ಕಲಾವಿದರ ಸಂಸ್ಥೆ ಅಲ್ಲ, ಸಮಸ್ತ ಕನ್ನಡಿಗರ ಸಂಸ್ಥೆ. (ಮನೆಮಾತು ಬೇರೆ ಯಾವುದಿದ್ದರೂ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಯಾವ ಅಡ್ಡಿಯೂ ಇಲ್ಲ, ಸಾವಿರಾರು ಜನರು ಸದಸ್ಯರಾಗಿ ಇದ್ದಾರೆ) ಇದರ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಘಟಕಗಳ ಅಧ್ಯಕ್ಷರು ನೇರವಾಗಿ ಜನರಿಂದ ಚುನಾಯಿತರಾಗಿರುತ್ತಾರೆ. ಒಂದುವೇಳೆ ಕನ್ನಡದ ನೆಲದ ಶೇ. ೪೦ ರಷ್ಟು ಜನ ಇದರ ಸದಸ್ಯರಾಗಿದ್ದರೆ ಹಾಗೂ ಇದರ ಚುನಾಯಿತ ಪದಾಧಿಕಾರಿಗಳು ಸರ್ಕಾರಕ್ಕೆ ಸಲಹೆ ನೀಡುವಷ್ಟು ಮತ್ತು ಅದನ್ನು ಅನುಷ್ಟಾನಗೊಳಿಸುವಂತೆ ಒತ್ತಡ ತರುವಷ್ಟು ಶಕ್ತರಾದರೆ ಏನಾದರೂ ಕೆಲಸ ಆಗಬಹುದು. ಸಮಾನ ಶಿಕ್ಷಣ ವ್ಯವಸ್ಥೆಯ ಜೊತೆಗೆ, ಕನ್ನಡ ಭಾಷೆಯ ಮೂಲಕವೇ ಉದ್ಯೋಗ ಸೃಷ್ಟಿ ಮಾಡಬಲ್ಲಂತ ವಾತಾವರಣ ನಿರ್ಮಾಣವಾದರೆ ಆಗ ಕನ್ನಡ ಜನರಿಗೆ ಅಗತ್ಯದ ಭಾಷೆಯಾಗುತ್ತದೆ, ಅನಿವಾರ್ಯವಾಗುತ್ತದೆ.

ಈಗ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ (ಪ್ರಾದೇಶಿಕ ಭಾಷೆಗಳ) ಸಾಂಸ್ಕೃತಿಕ ಲೋಕ ಮಾತ್ರ ಕನ್ನಡವನ್ನೇ (ಪ್ರಾದೇಶಿಕ ಭಾಷೆಗಳನ್ನೇ) ಹಿಡಿದುಕೊಂಡಿದೆ. (ಇಲ್ಲೂ ಕೂಡಾ ಕೆಲವು ಪ್ರಾದೇಶಿಕ ಭಾಷೆಗಳ ಮೇಲೆ, ರಾಷ್ರ್ಟೀಯತೆ- ರಾಷ್ಟ್ರಭಾಷೆಯ ಹೆಸರಿನಲ್ಲಿ ಹಿಂದಿಯ ಹೇರಿಕೆಯೂ ನಡೆಯುತ್ತಿದೆ. ಇದಕ್ಕೆ ಉದಾಹರಣೆಯೆಂದರೆ ರಾಷ್ಟ್ರೀಯ ನಾಟಕ ಶಾಲೆಗೆ ಪ್ರವೇಶ ಪಡೆಯಲು ಹಿಂದಿಜ್ಞಾನವನ್ನು ಕಡ್ಡಾಯಗೊಳಿಸಿರುವುದು). ಇದಕ್ಕೆ ಕಾರಣ ನಮ್ಮ ಅದು ನಮ್ಮ ಅಭಿವ್ಯಕ್ತಿಯ ಅತ್ಯಂತ ಸಹಜ ಸಾಧನವೆಂಬುದಷ್ಟೇ ಅಲ್ಲ, ಅದಕ್ಕೆ ಸಂಬಂಧಪಟ್ಟ ಎಲ್ಲ ಜ್ಞಾನವೂ ಆ ಭಾಷೆಗಳಲ್ಲಿರುವದು.

ಇದರೊಂದಿಗೆ ನಮ್ಮ ಕೃಷಿ ಮತ್ತು ಇನ್ನೂ ಉಳಿದಿರುವ ಕೃಷಿಸಂಬಂಧಿ ಕಸುಬುಗಳಾದ ಕಮ್ಮಾರಿಕೆ, ಬಡಗಿ, ಇತ್ಯಾದಿಗಳು, ಮತ್ತು ನೇಕಾರಿಕೆ, ಕುಂಭಕಲೆ, ಶಿಲ್ಪಕಲೆ, ಮುಂತಾದ ನಮ್ಮ ಅನೇಕ ಪಾರಂಪರಿಕ ವಿದ್ಯೆಗಳು. ನಾಟಿ ಮತ್ತು ಆಯುರ್ವೇದ ವೈದ್ಯ ಪದ್ಧತಿಗಳು. ಇವುಗಳ ಜ್ಞಾನವೆಲ್ಲ ಹೆಚ್ಚಾಗಿ ಅವರವರ ಮನೆಮಾತು ಮತ್ತು ಪರಿಸರದ ಭಾಷೆಗಳಲ್ಲಿ ಇದೆ. ಅವರ ಪಾರಂಪರಿಕ ಜ್ಞಾನದ ಭಾಷೆಯ ಮೂಲಕ ಈ ವಿದ್ಯೆಯನ್ನವರು ಮುಂದಿನ ಪೀಳಿಗೆಗೆ ದಾಟಿಸುತ್ತಾ ಬಂದಿದ್ದಾರೆ. ಅವರು ಅದರ ಮೂಲಕವೇ ಅನ್ನ ಗಳಿಸುತ್ತ ವ್ಯವಹಾರಕ್ಕೆ ತಕ್ಕಷ್ಟು ರಾಜ್ಯ ಭಾಷೆಯ ಜ್ಞಾನವನ್ನು ಪಡೆದಿದ್ದಾರೆ. ಆದ್ದರಿಂದ ನಮ್ಮ ಯಾವುದೇ ಪ್ರಾದೇಶಿಕ ಭಾಷೆಯೂ ಜನರಿಗೆ ಬದುಕಿಗೆ ನೆಮ್ಮದಿ ತರುವಷ್ಟು ಶಕ್ತವಾಗುವಂತೆ ಮಾಡುತ್ತಲೇ ವ್ಯವಹಾರ ಸಂಪರ್ಕಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನೋ ಇನ್ನಾವುದೇ ಭಾಷೆಯನ್ನು ಚೆನ್ನಾಗಿ ಕಲಿಯುವದು ಕಷ್ಟವಲ್ಲ. ಅದಕ್ಕಾಗಿ ಆ ಭಾಷೆಯ ಮಾಧ್ಯಮದಲ್ಲೇ ಕಲಿಯುವ ಅಗತ್ಯವೂ ಇಲ್ಲ. ಈ ವಿಚಾರ ಜನರಿಗೆ ಮನದಟ್ಟಾಗುವಂತಹ, ಅದರಲ್ಲಿ ನಂಬಿಕೆ ಬರುವಂತಹ ಕೆಲಸವನ್ನು ವ್ಯಾಪಕವಾಗಿ ಮಾಡದೆ, ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಹೇಳುತ್ತ-ಚರ್ಚಿಸುತ್ತಾ ಕುಳಿತರೆ ಪ್ರಯೋಜನವಾಗಲಾರದು.

ಇದರಿಂದಲೇ ನಮ್ಮ ಬದುಕಿನ ಎಲ್ಲಾ ವಿಭಾಗಗಳ ಅಂದರೆ ಸಾಹಿತ್ಯ ಕಲೆಗಳ ಜೊತೆಯಲ್ಲಿ ವಿಜ್ಞಾನ, ಗಣಿತ, ಲೆಕ್ಕ ಪತ್ರಗಳ ವ್ಯವಹಾರಗಳು, ತಂತ್ರಜ್ಞಾನ, ಕೃಷಿ, ವೈದ್ಯಕೀಯ ಸಂಬಂಧಿತ ಎಲ್ಲ ತಿಳುವಳಿಕೆಯನ್ನು ಕನ್ನಡದಲ್ಲಿ ದೊರಕಿಸಿಕೊಡುವ ಕೆಲಸವನ್ನು ಸಾಹಿತ್ಯ ಪರಿಷತ್ತು ಸರ್ಕಾರದ ಮೂಲಕ ಮಾಡಿಸುವ ಕೆಲಸಕ್ಕೆ ತೊಡಗಿಕೊಳ್ಳಬೇಕು. ಪರಿಷತ್ತಿಗೆ ಸಮ್ಮೇಳನ, ಜಾತ್ರೆ, ಉತ್ಸವಗಳು, ಗೋಷ್ಟಿಗಳಿಗಿಂತ ಈ ಕೆಲಸಗಳು ಪ್ರಥಮ ಆದ್ಯತೆಯದ್ದಾಗಬೇಕು.

ನಮಗೆ ಇಂಗ್ಲಿಷಿನ ಮೂಲಕ ಮಾತ್ರ ಬರಬಹುದಾದ ಜ್ಞಾನದಲ್ಲಿ ಸಾಕಷ್ಟನ್ನು ಕೇವಲ ಪ್ರಾದೇಶಿಕ ಭಾಷೆಗೆ ತರ್ಜುಮೆ ಮತ್ತು ಡಬ್ಬಿಂಗ್ ಮೂಲಕ ಪಡೆಯಬಹುದಾಗಿದೆ. ಟಿ.ವಿ. ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಇದಕ್ಕೆ ವಿಪುಲ ಅವಕಾಶಗಳಿವೆ. ವಿಷಾದದ ಸಂಗತಿಯೆಂದರೆ ಕೃಷಿಯಲ್ಲಿ ನಮ್ಮ ಪಾರಂಪರಿಕ ಮತ್ತು ಆಧುನಿಕ ಜ್ಞಾನಗಳೆರಡೂ ಸಾಕಷ್ಟಿದ್ದರೂ ಕೃಷಿ ವಿದ್ಯಾಲಯಗಳೂ ಇಂಗ್ಲಿಷಿನಲ್ಲಿ ಬೋಧಿಸುತ್ತಿರುವುದು.

ಇಂಗ್ಲಿಷಿನ ಅಥವಾ ಇನ್ನಾವುದೇ ಭಾಷೆಯನ್ನು ಅಗತ್ಯವಿದ್ದಷ್ಟು ಕಲಿಯತ್ತಲೇ ಕನ್ನಡವನ್ನು ನಮ್ಮ ಸಹಜ ಅಭಿವ್ಯಕ್ತಿ ಮತ್ತು ಅನ್ನಗಳಿಕೆಯ ಭಾಷೆಯನ್ನಾಗಿಸಿ, ಅದರಿಂದ ಬರುವ ಜ್ಞಾನದಮೂಲಕ ಕಟ್ಟದಬಹುದಾದ ಬದುಕಿನ ವೈವಿದ್ಯಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಮಾಡಲು. ಅದಕ್ಕಾಗಿ ನ್ಯಾಯಾಲಯದ ಯಾವುದೇ ಆದೇಶಕ್ಕೆ ವಿರುದ್ಧವಾಗದಂತೆ ಕಾರ್ಯಕ್ರಮ ರೂಪಿಸಲು ಪ್ರಜಾಪ್ರಭುತ್ವದಲ್ಲಿ ಯಾವುದೇ ಚುನಾಯಿತ ಸರ್ಕಾರಕ್ಕೆ ಸಾಧ್ಯವಿದೆ. ಸರ್ಕಾರವನ್ನು ಎಚ್ಚರಿಸುವ, ತಿದ್ದುವ, ಜನರತ್ತ ನೋಡುವಂತೆ ಮಾಡುವ ಕೆಲಸವನ್ನು, ಕನ್ನಡ ಸಾಹಿತ್ಯ ಪರಿಷತ್ತಾಗಲೀ ಇನ್ನಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ಮಾಡಲಿ ಅದರೊಂದಿಗೆ ಸೇರಿ ಕೆಲಸ ಮಾಡತೊಡಗುವುದನ್ನು ಬಿಟ್ಟು ದೇವನೂರರ ಸಾತ್ವಿಕ ಸಿಟ್ಟಿಗಾಗಲೀ, ನಮ್ಮಂತವರ ತುಡಿತಕ್ಕಾಗಲೀ ಸಧ್ಯಕ್ಕೆ ಅನ್ಯಮಾರ್ಗವಿಲ್ಲವೆನಿಸುತ್ತದೆ.

“ನುಡಿಸಿರಿ”ಯ ನಂತರ

– ಪ್ರಸಾದ್ ರಕ್ಷಿದಿ

“ಆಳ್ವಾಸ್ ನುಡಿಸಿರಿ” ಮತ್ತು ಅಲ್ಲಿನ ವಿಚಾರಗಳ ಬಗೆಗೆ ನಡೆಯುತ್ತಿರುವ ಚರ್ಚೆ ಹಾಗೂ ರವಿ ಕೃಷ್ಣಾರೆಡ್ಡಿಯವರ ಲೇಖನ ಇವುಗಳನ್ನು ನೋಡಿ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕೆನಿಸಿತು. ರವಿಯವರ ನಿಲುವು ಸರಿಯಾಗಿಯೇ ಇದೆ. ಇದಕ್ಕೆ ಪೂರಕವಾಗಿ ನಾನು ಕೆಲವು ಸಂಗತಿಗಳನ್ನು ಹೇಳಬಯಸುತ್ತೇನೆ.

ಮೊದಲನೆಯದಾಗಿ ಆಳ್ವಾಸ್ ಪ್ರತಿಷ್ಟಾನ ಮತ್ತು ಅದರ ಚಟುವಟಿಕೆಗಳ ಬಗ್ಗೆ. alvas-nudisiri-3ಆಳ್ವರ ಸಾಂಸ್ಕೃತಿಕ ಆಸಕ್ತಿಗಳನ್ನು ನಮ್ಮಂತವರು ಹಲವು ವರ್ಷಗಳಿಂದ ನೋಡುತ್ತ ಬಂದಿದ್ದೇವೆ. ಬಹುಶಃ ಮೋಹನ ಆಳ್ವರ ಅಭಿರುಚಿಗಳ ಬಗ್ಗೆ ಮತ್ತು ಅವರ ಸಾಂಸ್ಕೃತಿಕ ಆಸಕ್ತಿಗಳ ಬಗ್ಗೆ ಯಾರದೂ ತಕರಾರು ಇರಲಾರದು. ಆದರೂ ಹೀಗೇಕೆ ಆಗುತ್ತಿದೆ. ಎನ್ನುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಆಳ್ವರು ನಮ್ಮ ಊಳಿಗಮಾನ್ಯ ಪದ್ಧತಿಯ ತುಂಡರಸರ ಪರಂಪರೆಯಲ್ಲಿ ಬಂದವರು. ಅವರ ಮಾತಿನ ಕ್ರಮ, ನಿಲುವುಗಳು, ಹಾವಭಾವಗಳು ಕೂಡಾ ಇದೇ ರೀತಿ ಇವೆ. ಆದರೆ ವೈಯಕ್ತಿವಾಗಿ ಅವರು ತುಂಬ ವಿನಯವಂತರೆಂದೇ ಕೇಳಿದ್ದೇನೆ. (ನನಗೆ ವೈಯಕ್ತಿಕವಾಗಿ ಆಳ್ವರ ಪರಿಚಯ ಇಲ್ಲ. ನಾನು ಇದುವರೆಗೂ ಅಲ್ಲಿಯ ಯಾವುದೇ ಕಾರ್ಯಕ್ರಮದಲ್ಲೂ ಭಾಗವಹಿಸಿಲ್ಲ.)

ಮೋಹನ ಆಳ್ವರ ವಿದ್ಯಾಸಂಸ್ಥೆಗಳ ಪ್ರಚಾರಕ್ಕೆ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಳಸಿಕೊಳ್ಳುತ್ತಾರೆ ಎಂಬ ದೂರಿದೆ. ಅದು ನಿಜ ಕೂಡಾ, ಆದರೆ ಹಲವಾರು ವಿದ್ಯಾಸಂಸ್ಥೆಗಳನ್ನು ಹೊಂದಿ, ಜಾತಿ-ರಾಜಕೀಯ, ಅಧಿಕಾರಗಳನ್ನು ಬಳಸಿ ನಡೆಸುವ (ಅವರೂ ಕೂಡಾ ತೋರಿಕೆಗಾದರೂ ಕೆಲವು ಬಡಮಕ್ಕಳಿಗೆ ಉಚಿತ ವಿದ್ಯೆಯನ್ನೊ ಅಥವಾ ರಿಯಾಯಿತಿಗಳನ್ನೋ ಕೊಡುತ್ತಾರೆ) ಮಠಮಾನ್ಯರು, ಮಂತ್ರಿಗಳಿಗಿಂತ ಯಾವುದೇ ತಾರತಮ್ಯ ತೋರದೆ ಎಲ್ಲ ವರ್ಗ-ಜಾತಿಗಳ ನೂರಾರು Alvas-Campusವಿದ್ಯಾರ್ಥಿಗಳಿಗೆ ಉಚಿತ ವಿದ್ಯೆ ನೀಡಿದ, ನೀಡುತ್ತಿರುವ ಮೋಹನ ಆಳ್ವರ ಬಗ್ಗೆ ನಾವು ಅಷ್ಟೊಂದು ಕಠಿಣರಾಗಬೇಕಿಲ್ಲವೆನಿಸುತ್ತದೆ. ಆದರೆ ಆಳ್ವರು ಇದಕ್ಕೆ ಯಾವರೀತಿಯಲ್ಲಿ ಹಣಸಂಗ್ರಹ ಮಾಡುತ್ತಾರೆ. ಮತ್ತು ಇವರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣವೆಲ್ಲಿಂದ ಬರುತ್ತದೆಯೆಂಬ ಬಗ್ಗೆ ತಿಳಿದುಕೊಳ್ಳುವ ಹಕ್ಕು ಖಂಡಿತ ನಮಗೆಲ್ಲರಿಗೂ ಇದೆ. ಯಾಕೆಂದರೆ ನನಗೆ ಕೋಟ್ಯಂತರ ರೂಪಾಯಿಗಳ ಸಾಲವಿದೆಯೆಂದು ಆಳ್ವರು ಅನೇಕ ವೇದಿಕೆಗಳಲ್ಲಿ ಹೇಳಿದ್ದಾರೆ. ಅಲ್ಲದೆ ಆಳ್ವರ ಸಾಲದಲ್ಲಿ ಬಹುಪಾಲು ಹಣ ಧರ್ಮಸ್ಥಳದ್ದೆಂದು ಜನ ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಇದರ ಸತ್ಯಾಸತ್ಯತೆಯನ್ನು ಆಳ್ವರೇ ತಿಳಿಸಬೇಕು. ಆಳ್ವರ ವಿದ್ಯಾಸಂಸ್ಥೆಗಳ ಆಡಳಿತದ ವಿಚಾರದಲ್ಲಿ ಯಾರದ್ದಾದರೂ ತಕರಾರಿದ್ದರೆ ಅದಕ್ಕೂ ಆಳ್ವರು ಉತ್ತರಿಸಬೇಕು. ನಾಡು ನುಡಿಯ ಸೇವೆ ಮಾಡುತ್ತೇನೆನ್ನುವ ಆಳ್ವರು ಅಷ್ಟಾದರೂ ಪಾರದರ್ಶಕರಾಗಿರುವದು ಅತೀ ಅಗತ್ಯ. ಹಿಂದೆ ನಮ್ಮ ಒಬ್ಬ ಹಿರಿಯ ರಂಗ ನಿರ್ದೇಶಕರು ತಾನು ’ನಾಟಕ ಮಾಡಿಸಿ ನಷ್ಟಪಟ್ಟುಕೊಂಡೆ’ vijaykarnataka-mohan-alva-22122013ಎಂದು ದೂರಿದಾಗ ’ನಿಮ್ಮಲ್ಲಿ ನಾಟಕ ಮಾಡಿಸಿ ಎಂದು ಕನ್ನಡಿಗರು ಕೇಳಿಕೊಂಡಿದ್ದರೇ’ ಎಂದು ಲಂಕೇಶರು ಮೊಟಕಿದ್ದರು.

ಇದಲ್ಲದೆ ಆಳ್ವರು ತಮ್ಮ ಕಾರ್ಯಕ್ರಮಗಳಿಗೆ “ಆಳ್ವಾಸ್ ವಿರಾಸತ್”. “ಆಳ್ವಾಸ್ ನುಡಿಸಿರಿ” ಇವುಗಳಿಗೆ ಬದಲಾಗಿ ಕನ್ನಡ ನುಡಿಸಿರಿ ಎಂದೋ ಕರಾವಳಿ ವಿರಾಸತ್ ಎಂದೋ ಅಥವಾ ಬೇರೇನಾದರೂ ಹೆಸರಿನಿಂದ ಕರೆದಿದ್ದರೆ ಅದು ಇನ್ನು ಹೆಚ್ಚು ವಿಸ್ತ್ರುತವಾಗುತ್ತಿತ್ತು, ಆಳ್ವರು ಇನ್ನೂ ದೊಡ್ಡವರಾಗುತ್ತಿದ್ದರು. ಆದರೆ ಅದು ಅವರ ವಿವೇಚನೆಗೆ ಬಿಟ್ಟ ವಿಷಯ.

ಇನ್ನು ಆಳ್ವರ ವೈಚಾರಿಕ ದೃಷ್ಟಿಕೋನಗಳ ಬಗ್ಗೆ, ಅವರು ನಡೆಸುತ್ತಿರುವ ಪಲ್ಲಕ್ಕಿಸೇವೆ ಸನ್ಮಾನಗಳು ಇತ್ಯಾದಿಗಳ ಬಗ್ಗೆ, ಹಾಗೇ ಶ್ರೀಮಂತಿಕೆಯ ವೈಭವೀಕರಣ ಇತ್ಯಾದಿ ವಿಚಾರವಾಗಿ ಅವರಲ್ಲಿ ಯಾರಾದರೂ ಹಿರಿಯರು ಕುಳಿತು ತಿಳಿಹೇಳಿದರೆ ಅವರು ಖಂಡಿತ ಬದಲಾಗುತ್ತಾರೆಂಬ ನಂಬಿಕೆ ನನಗಿನ್ನೂ ಉಳಿದಿದೆ. ಯಾಕೆಂದರೆ ಆಳ್ವರಂಥ ಸಂಘಟಕರನ್ನು ಒಂದಿಷ್ಟು ಒಳ್ಳೆಯ ಅಭಿರುಚಿ ಹೊಂದಿದವರನ್ನು ಅಪ್ಪಟ ಕೋಮುವಾದಿಗಳ ಬಲೆಗೆ ಬೀಳದಂತೆ ಪ್ರಯತ್ನಿಸುವ ಕೆಲಸವೂ ನಮ್ಮದಾಗಬೇಕು.

ಇನ್ನು ಬರಗೂರು ರಾಮಚಂದ್ರಪ್ಪನವರು ಮತ್ತು ಇನ್ನು ಕೆಲವರು ನಡೆದುಕೊಂಡ ರೀತಿ ನಮ್ಮಂತವರಿಗೆ ಖಂಡಿತ ಬೇಸರವೆನಿಸುತ್ತದೆ. ಬರಗೂರಿಗೆ ಆಳ್ವಾಸ್ ನುಡಿಸಿರಿಯ ಬಗ್ಗೆ ಎಲ್ಲ ವಿವರಗಳೂ ಮೊದಲೇ ಇತ್ತು. ಅವರು ಸನ್ಮಾನವನ್ನು ನಿರಾಕರಿಸಿ, alva-nudisiri-baraguru-mohan-alva-veerendra-heggade-vivek-raiನಂತರ ಭಾಷಣದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರೆ ಸಾಕಿತ್ತು. ಈ ಎಲ್ಲ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಆದರೆ ಆಳ್ವರ ವಿಚಾರದಲ್ಲಿ ಕೊಡಬಯಸುವ ರಿಯಾಯತಿಯನ್ನು ನಾನು ಬರಗೂರರಿಗೆ ಕೊಡಬಯಸುವುದಿಲ್ಲ. ಯಾಕೆಂದರೆ ಬರಗೂರರ ಶಕ್ತಿ ಮತ್ತು ಜವಾಬ್ದಾರಿ ಆಳ್ವರಿಗಿಂತ ದೊಡ್ಡದು. (ಆಳ್ವರೊಳಗೊಬ್ಬ ಒಳ್ಳೆಯ ಹುಂಬ ಇನ್ನೂ ಇದ್ದಾನೆ ಎಂದೇ ನನ್ನ ಅನಿಸಿಕೆ. ಹಿಂದೊಮ್ಮೆ ಅವರ ಕಾಲೇಜಿನ ವಿದ್ಯಾರ್ಥಿಗಳು ರಾತ್ರಿ ಏನೋ ಗಲಾಟೆ ಮಾಡಿದಾಗ, ಪೋಲಿಸ್ ಕರೆಸಿದ್ದರು. ಆಗ ಪೋಲಿಸರಿಂದ ಏಟುತಿಂದ ವಿದ್ಯಾರ್ಥಿಗಳನ್ನು ನೋಡಿ ಆಳ್ವರು ’ನನ್ನ ಮಕ್ಕಳಿಗೆ ನಾನೇ ಹೊಡೆಸಿದೆನಲ್ಲ’ ಎಂದು ಗಳಗಳನೆ ಅತ್ತರಂತೆ. ಇದು ನನ್ನ ಗೆಳೆಯನೊಬ್ಬನ ಮಗ ಹೇಳಿದ ವಿಷಯ.)

ನನ್ನದೇ ಅನುಭವದ ಎರಡು ಉದಾಹರಣೆ ನೀಡುತ್ತೇನೆ. ಎರಡು ವರ್ಷಗಳ ಹಿಂದೆ ನಮ್ಮೂರಿನ ಕೆಲವರು ಯುವಕರು, ಬಜರಂಗದಳ-ಆರ್.ಎಸ್.ಎಸ್.ವತಿಯಿಂದ ಗುರುವಂದನೆ ಕಾರ್ಯಕ್ರಮವಿದೆ. ನೀವು ಬಂದು ಮಾತಾಡಬೇಕು ಎಂದರು. ನಾನು ತುಸು ಗೊಂದಲಕ್ಕೊಳಗಾದೆ. ಎಲ್ಲರೂ ನಮ್ಮೂರಿನ ಸುತ್ತಲಿನ ಹಳ್ಳಿಗಳ ಯುವಕರು. ಕೆಲವರು ನನ್ನ ಸ್ನೇಹಿತರ ಮಕ್ಕಳೇ. ಯೋಚಿಸಿ ನಂತರ ಅಲ್ಲಿಗೆ ಹೋದೆ. ನಮ್ಮೂರಿನ ಹೈಸ್ಕೂಲ್ ಒಳಗಡೆ ಸಣ್ಣ ಕಾರ್ಯಕ್ರಮ. ಅಲ್ಲಿ ವಿವೇಕಾನಂದರ ಹಾಗೇ ಭಗತ್ ಸಿಂಗರ ಫೋಟೋಗಳಿದ್ದವು. ಹೊರಗಿನಿಂದ ಬಂದ ಒಂದಿಬ್ಬರು ಕಾರ್ಯಕರ್ತರೂ ಇದ್ದರು. ನನ್ನ ಮಾತಿನ ಸರದಿ ಬಂದಾಗ ಭಗತ್ ಸಿಂಗ್ ಹೇಗೆ ಉಗ್ರ ಕ್ರಾಂತಿಕಾರಿ ಮತ್ತು ತೀವ್ರ ಮಾರ್ಕ್ಸವಾದಿ ಎಂದೂ, ವಿವೇಕಾನಂದರು ನಮ್ಮ ಜಾತಿ ಪದ್ಧತಿಗಳಬಗ್ಗೆ ಆಹಾರಗಳ ಬಗ್ಗೆ ಏನು ಹೇಳಿದ್ದರೆಂದೂ ವಿವರಿಸಿದೆ. ಇವೆಲ್ಲ ಅವರಿಗೆ ಹೊಸ ಸಂಗತಿಗಳಾಗಿದ್ದವು. ಅಲ್ಲದೆ ಕೊನೆಯಲ್ಲಿ ನಾನು ಗುರುಕಾಣಿಕೆಯೆಂಬ ಚಂದಾವನ್ನೂ ನಿಮಗೆ ಕೊಡಲಾರೆ ಎಂದೆ. ಈಗ ಆ ಹುಡುಗರಲ್ಲಿ ಹೆಚ್ಚಿನವರು ಪುಸ್ತಕಗಳನ್ನು ಓದಲು ತೊಡಗಿದ್ದಾರೆ. ಮತ್ತು ಆ ಸಂಘಟನೆಗಳಿಂದ ದೂರವಿದ್ದಾರೆ.

ಇನ್ನೊಂದು ಘಟನೆ ಇಷ್ಟು ಸರಳವಾದದ್ದಲ್ಲ. ಇದೂ ಸುಮಾರು ಎರಡು ವರ್ಷ ಹಿಂದಿನ ಘಟನೆಯೇ. ಉಡುಪಿ ಜಿಲ್ಲೆಯ ಹಳ್ಳಿಯಲ್ಲಿ ಸಂಘ ಪರಿವಾರ, ಮತ್ತು ಗೋಸಂರಕ್ಷಣಾ ಸಂಘಟನೆ, ಕೆಲವು ಮಠಗಳ ಆಶ್ರಯದಲ್ಲಿ ಗೋಸಂರಕ್ಷಣೆ, ಸಾವಯವ ಕೃಷಿ ಬಗ್ಗೆ ಕಾರ್ಯಕ್ರಮ, ನಾರಾಯಣರೆಡ್ಡಿಯವರೂ ಸೇರಿದಂತೆ ಕರ್ನಾಟಕದ ಹಲವು ಗಣ್ಯ ಸಾವಯವ ಕೃಷಿಕರೂ ಅತಿಥಿಗಳಾಗಿದ್ದರು. ಆ ಕಾರ್ಯಕ್ರಮಕ್ಕೆ ನಾನು ನನ್ನ ಗೆಳೆಯ ಹಮೀದ್ರೊಂದಿಗೆ (ಇವರು ಒಳ್ಳೆಯ ಸಾವಯವ ಕೃಷಿಕರು) ಅಲ್ಲಿಗೆ ಹೋಗಿದ್ದೆ. Two old and weak cows looking hungry, weak and unhealthy standinನಾವಿಬ್ಬರೂ ಅಲ್ಲಿ ಮಾತನಾಡಲು ಆಹ್ವಾನಿತರಾಗಿದ್ದೆವು. ಹಮೀದ್ ಕಾಫಿ-ಮೆಣಸಿನ ಬೆಳೆಯಲ್ಲಿ ಸಾವಯವ ಕೃಷಿಯ ಬಗ್ಗೆ, ಹಾಗೇ ಜೀವಾಮೃತ ಇತ್ಯಾದಿಗಳ ಬಗ್ಗೆ ಮಾತನಾಡಿದರು. ನನ್ನ ಸರದಿ ಬಂದಾಗ ಮಲೆನಾಡಿನಲ್ಲೂ ಕೂಡಾ ಇಂದು ದನಕರುಗಳನ್ನು ಸಾಕುವ ಕಷ್ಟಗಳ ಬಗ್ಗೆ (ನಮ್ಮ ಮನೆಯಲ್ಲೂ ಒಂದು ಕಾಲದಲ್ಲಿ ಹತ್ತು ಹಸುಗಳಿದ್ದವು, ನಂತರ ನಾನು ಹದಿನಾಲ್ಕು ವರ್ಷಕಾಲ ನಮ್ಮೂರಿನ ಖಾಸಗಿ ಡೇರಿ ಫಾರಂನಲ್ಲಿ ನೌಕರನಾಗಿದ್ದೆ.) ಹೇಳುತ್ತ ಅದರಲ್ಲೂ ಹೈಬ್ರಿಡ್ ಹಸು ಸಾಕಣೆ ಅದಕ್ಕೆ ಖಾಯಿಲೆಯಾದರೆ ಆಗುವ ತೊಂದರೆಗಳ ಬಗ್ಗೆ ಹೇಳುತ್ತ ನಾನು ನೌಕರನಾಗಿದ್ದ ಸಂದರ್ಭದಲ್ಲಿ (ಹದಿನಾಲ್ಕು ವರ್ಷಗಳಲ್ಲಿ) ತೀವ್ರ ಖಾಯಿಲೆಗೊಳಗಾಗಿದ್ದ ಸುಮಾರು ಅರುವತ್ತು ಹಸುಗಳನ್ನು ಇಂಜೆಕ್ಷನ್ ನೀಡಿ ಸಾಯಿಸಬೇಕಾಯಿತು. ಹೀಗಾಗಿ ಹಸು ಸಾಕಣೆ ಅದರಲ್ಲೂ ಮುದಿಯಾದ ಮತ್ತು ಬರಡಾದ ಹಸುಗಳ, ಹೋರಿಗಳ ವಿಚಾರದಲ್ಲಿ ನಾವು ಹೆಚ್ಚು ವಾಸ್ತವ ಪ್ರಜ್ಞೆ ಹೊಂದಿರುವುದು ಸೂಕ್ತ ಎಂದೆ. ಆಗಲೇ ಜನರ ನಡುವೆ ಗುಜು ಗುಜು ಚರ್ಚೆ ಆರಂಭವಾಯಿತು. ಕಾರ್ಯಕ್ರಮದ ನಂತರ ಅನೇಕರು ನನ್ನಲ್ಲಿ ’ನೀವು ಸರಿಯಾಗಿಯೇ ಹೇಳಿದಿರಿ’ ಎಂದರು. ಹಾಗೇ ಗೋಶಾಲೆಗಳ ಹೆಸರಲ್ಲಿ ನಡೆಯತ್ತಿರುವ ಅವ್ಯವಹಾರಗಳ ಬಗ್ಗೆಯೂ ಹೇಳಿದರು. ಆದರೆ ಮರುದಿನ ಕಾರ್ಯಕ್ರಮದ ಸಂಘಟಕರ ನಡುವೆ ಆ ಕಾರ್ಯಕ್ರಮಕ್ಕೆ ನನ್ನನ್ನು ಕರೆಸಿದ ಬಗ್ಗೆ ದೊಡ್ಡ ಜಗಳ ನಡೆಯಿತೆಂದು ತಿಳಿದುಬಂತು.

ಇದನ್ನೆಲ್ಲ ನಾನು ಯಾಕೆ ಹೇಳುತ್ತಿದ್ದೇನೆಂದರೆ ನಾವು ಯಾರ ವಿರುದ್ಧವಾಗಿಯೂ ಕಾರ್ಯಕ್ರಮಗಳನ್ನು ಮಾಡಬೇಕಾಗಿಲ್ಲ. abhimata-page5ಹಾಗೇ ನಮ್ಮ ನಿಲುವನ್ನು ಹೇಳಲು ಸದಾಕಾಲ ಇನ್ನೊಬ್ಬರನ್ನು ಬಯ್ಯುವ ಅಗತ್ಯವೂ ಇಲ್ಲ. (ನಾವು ಬೇಕಾದರೇ ನಮ್ಮದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ.) ನಮ್ಮ ನಿಲುವು ಹಾಗೇ ಬದುಕು ಪಾರದರ್ಶಕವಾಗಿದ್ದರೆ ಜನ ಖಂಡಿತ ಅರ್ಥಮಾಡಿಕೊಳ್ಳುತ್ತಾರೆ. ನಮಗೀಗ ಬೇಕಾಗಿರುವುದು ಎಲ್ಲರನ್ನೂ ಒಳಗೊಳ್ಳುತ್ತ ಹಾಗೇ ನಮ್ಮ ವಿಚಾರಧಾರೆಯಿಂದ ವಿಮುಖರಾಗದೆ ನಡೆ-ನುಡಿ ಒಂದಾಗಿರುವ ರಾಜಕಾರಣ. ಇದಕ್ಕೆ ಪ್ರಬಲ ಇಚ್ಛಾಶಕ್ತಿಯೂ ನಿರಂತರ ಜನಸಂಪರ್ಕವೂ ಬೇಕು. ನಾವು ಭ್ರಷ್ಟರಾಗದೇ (ಎಲ್ಲ ರೀತಿಯ) ಉಳಿದರೆ ಸಾಲದು, ಪ್ರತಿ ಚುನಾವಣೆಯಲ್ಲಿ ಕೆಲವು ನೂರು-ಸಾವಿರ ಮತಗಳನ್ನು ಪಡೆದು ಸಂತೃಪ್ತಿಗೊಳ್ಳಬಾರದು. ನಿಧಾನವಾಗಿಯಾದರೂ ಅಧಿಕಾರದತ್ತ ಚಲಿಸಿ ಅದರ ಮೂಲಕವೇ ಏನನ್ನಾದರೂ ಸಾಧಿಸುವ ಪ್ರಯತ್ನ ಮಾಡಬೇಕು. ಯಾಕೆಂದರೆ ಪ್ರಜಾಪ್ರಭುತ್ವಕ್ಕೆ ಮತ್ತು ನಮ್ಮ ಬಹುಸಂಸ್ಕೃತಿಯ ಉಳಿವಿಗೆ ಬೇರೆದಾರಿ ಇಲ್ಲ. ಪ್ರಜಾಪ್ರಭುತ್ವ ಶಕ್ತಿಗುಂದಿದಾಗ, ತನ್ನ ಜವಾಬ್ದಾರಿಯನ್ನು ನಿರ್ವಹಿಸದಿದ್ದಾಗ ಮಾತ್ರ ಎಲ್ಲ ರೀತಿಯ ಖಾಸಗಿ ಸಾಹಸಗಳು ಮೆರೆದಾಡಲು ಸಾಧ್ಯವಾಗುತ್ತದೆ.

ಈ ವಿಚಾರದಲ್ಲಿ ’ಆಮ್ ಆದ್ಮಿ ಪಾರ್ಟಿ’ಯಿಂದ ಖಂಡಿತ ಇಡೀ ದೇಶಕ್ಕೆ ಒಂದು ಪಾಠವಿದೆ. Arvind_Kejriwal_party_launchಸದ್ಯಕ್ಕಂತೂ ಆ ಪಾರ್ಟಿ ಒಂದು ಊದಿದ ಬೆಲೂನಿನಂತೆ ಗೋಚರಿಸಿದರೂ ಅವರೇನು ಮಾಡುತ್ತಾರೆಂದು ಕಾದುನೋಡಬೇಕು. ಆದರೆ ಸಂಘಟನೆ ದೃಷ್ಟಿಯಿಂದ ಖಂಡಿತ ನಮ್ಮ ಸರ್ವೋದಯ ಪಕ್ಷದಂತವರೂ (ತಮ್ಮ ವಿಚಾರ ಬಿಟ್ಟುಕೊಡದೆ) ಅವರಿಂದ ಕಲಿಯುವುದಿದೆ ಅನ್ನಿಸುತ್ತದೆ.

ಇದೆಲ್ಲ ಒಂದಕ್ಕೊಂದು ಸಂಬಂಧವಿಲ್ಲದ ವಿಚಾರಗಳಂತೆ ಕಾಣಿಸುತ್ತದೆ. ಆದರೆ ಇವೆಲ್ಲದರ ಹಿಂದೆ ನಮ್ಮ ಸಾಂಸ್ಕೃತಿಕ ರಾಜಕಾರಣವಿದೆಯೆಂದೇ ನನ್ನ ನಂಬಿಕೆ. ಇಲ್ಲದಿದ್ದರೆ ನಾವು ಎಲ್ಲರನ್ನೂ ಉಗ್ರವಾಗಿ ಖಂಡಿಸುತ್ತಾ, ವೇದಿಕೆಯೇರಿ ದೊಡ್ಡಗಂಟಲಿನಲ್ಲಿ ಕೂಗಾಡುತ್ತ ಇದ್ದಲ್ಲಿಯೇ ಇರುತ್ತೇವೆ.