Category Archives: ಎನ್.ಎಸ್.ಶಂಕರ್

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – ಕೊನೆ ಕಂತು


– ಎನ್.ಎಸ್. ಶಂಕರ್


 

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 6

 

2002ರ ನಾಗಲಾಪಲ್ಲಿ ದುರಂತದ ವೇಳೆಗೆ ದಲಿತ ಸಂಘದೊಳಗಿನ ಎಡಗೈ- ಬಲಗೈ ಒಡಕು ಮುಗಿದು, ಬಲಗೈ ಸಮುದಾಯದ ಒಳಗೇ ವಿಭಜನೆಯ ಸೊಲ್ಲು ಏಳತೊಡಗಿತ್ತು. ಉತ್ತರವಾಗಿ, ಮೊಟ್ಟ ಮೊದಲ ಒಡಕಿನ ಸಂದರ್ಭದಲ್ಲೇ ಕ್ಷೀಣವಾಗಿ ಆರಂಭವಾಗಿದ್ದ ‘ದಲಿತ ಸಂಘಟನೆ ವಿಸರ್ಜನೆ’ಯ ಸೊಲ್ಲು ಈಗ ಗಟ್ಟಿಯಾಗತೊಡಗಿತು. (86- 87ರಲ್ಲೇ ರಾಮಯ್ಯ, ‘ದಲಿತ ಚಳವಳಿಯ ಹೆಣದ ಮೆರವಣಿಗೆ ಮಾಡಬೇಕಾ?’ ಎಂಬ ಪ್ರಶ್ನೆಯೆತ್ತಿದ್ದರು.) ಇದೀಗ ಕೋಲಾರದ ಒಂದು ಸಭೆಯಲ್ಲಿ ರಾಮಯ್ಯ, ಗೋವಿಂದಯ್ಯ ಇಬ್ಬರೂ ‘ದಲಿತ ಚಳವಳಿ ಸತ್ತಿದೆ. ಇನ್ನು ಅದನ್ನು ವಿಧ್ಯುಕ್ತವಾಗಿ ದಫನ್ ಮಾಡುವುದೊಂದೇ ಮಾರ್ಗ. ಈಗ ಸಂಘರ್ಷ ಸಮಿತಿಯನ್ನು ವಿಸರ್ಜಿಸಿ  ಒಂದು ವರ್ಷ ಪೂರ್ತಿ ರಾಜ್ಯಾದ್ಯಂತ ಓಡಾಡೋಣ; ಮರು ಸಂಘಟನೆ ಮಾಡೋಣ. ಅದೊಂದೇ ದಾರಿ’ ಎಂಬ ಚಿಂತನೆ ಮುಂದಿಟ್ಟರು.

ನಾಗಲಾಪಲ್ಲಿ ಪ್ರತಿಭಟನೆ ಸಮಯದಲ್ಲಿ ಒಗ್ಗೂಡಿದ ಎಲ್ಲ ಮುಂದಾಳುಗಳು ಮತ್ತೆ ಇದೇ ಚರ್ಚೆಯನ್ನು ಕೈಗೆತ್ತಿಕೊಂಡರು. ಆಗ ಡಿ.ಜಿ. ಸಾಗರ್ ದಸಂಸ ರಾಜ್ಯ ಸಂಚಾಲಕರು. ಈ ವಿಸರ್ಜನೆಯ ಪ್ರಸ್ತಾಪವನ್ನು ಸಮಿತಿ ಪದಾಧಿಕಾರಿಗಳ ಮುಂದಿಟ್ಟು ‘ಬೇಡಿಕೊಂಡಾದರೂ ಒಪ್ಪಿಸೋಣ’ ಎಂಬ ಸೂಚನೆ- ಮುಖ್ಯವಾಗಿ ಗೋವಿಂದಯ್ಯನವರಿಂದ- ಬಂತು. ಕೆಲವೇ ದಿನಗಳಲ್ಲಿ ಈ ಚಿಂತನೆಗೆ ಅಂತಿಮ ರೂಪ ಕೊಡಲು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂದಿನ ‘ಸಂಸ’ ಬಯಲು ರಂಗಮಂದಿರದ ಕಟ್ಟೆಯ ಮೇಲೆ ದಲಿತ ಮುಂದಾಳುಗಳು ಸಭೆ ಸೇರಿದರು. ಅಲ್ಲಿ ಚರ್ಚೆ ಆರಂಭವಾದಾಗ ಆ ವೇಳೆಗಿನ್ನೂ ದೇವನೂರ ಮಹಾದೇವ ಸಭೆಗೆ ಬಂದಿರಲಿಲ್ಲ. ಮಾತಾಡುತ್ತ ಆಡುತ್ತ ಬಹುತೇಕ ಎಲ್ಲರೂ ಆ ಚಿಂತನೆಗೆ ಸಹಮತ ವ್ಯಕ್ತಪಡಿಸಿದರು. ಆದರೆ ಮಹಾದೇವ ಬರಬರುತ್ತಿದ್ದಂತೆಯೇ ‘ಈಗ ದಲಿತರಿಗೆ ಇದೊಂದು ದನಿಯಾದರೂ ಇದೆ. ಇದೂ ಇಲ್ಲವಾದರೆ ದಲಿತರು ತಬ್ಬಲಿಗಳಾಗಬಹುದು, ಬೇಡ ಬೇಡ’ ಎನ್ನುತ್ತ ವಿಸರ್ಜನೆಯ ಸೂಚನೆಯನ್ನು ತಳ್ಳಿಹಾಕಿ ಎಲ್ಲರನ್ನೂ ಎಬ್ಬಿಸಿಯೇಬಿಟ್ಟರು…

(‘ಹಾಗೇಕೆ ಮಾಡಿದಿರಿ?’ ಎಂದು ಈಗ ಕೇಳಿದ್ದಕ್ಕೆ ದೇವನೂರು ನೀಡಿದ ಸ್ಪಷ್ಟನೆ: ‘ನಾನು ಆ ಸಮಯದಲ್ಲಿ ದಸಂಸ ಪದಾಧಿಕಾರಿಯೂ ಅಲ್ಲ, ಏನೂ ಅಲ್ಲ. ಕೇವಲ ಹಿತೈಷಿ ಅಷ್ಟೇ. ಆದರೆ ನಾನೊಬ್ಬ ತೀರ್ಮಾನಿಸಿದರೆ ಸಂಘಟನೆಯನ್ನು ಸುಲಭವಾಗಿ ವಿಸರ್ಜಿಸಬಹುದು ಅಂತ ಮಿಕ್ಕವರು ತಿಳಿದುಕೊಂಡಿದ್ದರು. ಹಾಗಲ್ಲ. ಎಲ್ಲರೂ ಒಪ್ಪಿದರೆ ವಿಸರ್ಜನೆಯೇ ಒಳ್ಳೆಯದು ಎಂದು ನಾನೂ ಪ್ರಯತ್ನ ಮಾಡಿ ಸುಸ್ತಾಗಿದ್ದೆ. ಮೊದಲ ಒಡಕಿನ ಸಮಯದಲ್ಲೇ ನಾನು, ಸಿದ್ದಲಿಂಗಯ್ಯ ವಿಭಜನೆ ತಪ್ಪಿಸಲು ಕೈ ಕಾಲು ಹಿಡಿದು ಗೋಗರೆದರೂ ಯಾರೂ ನಮ್ಮ ಮಾತು ಕೇಳಿರಲಿಲ್ಲ. ಈಗ ನಾವು ಹಟ ಹಿಡಿದರೆ ಅದು ನಮ್ಮ ಅಹಂಕಾರವಾಗುತ್ತದೆ. ಹೆಚ್ಚೆಂದರೆ ನಮ್ಮದೇ ಒಂದು ‘ದಲಿತ ಸಂಘರ್ಷ ವಿಸರ್ಜನಾ ಸಮಿತಿ’ ಅಂತ ಸೃಷ್ಟಿಯಾಗಬಹುದಿತ್ತು..’) ಅಂತೂ ಸಂಘಟನೆಯನ್ನು ಮುರಿದು ಮತ್ತೆ ಕಟ್ಟುವ ನೈತಿಕ ತ್ರಾಣ ಯಾರಲ್ಲೂ ಉಳಿದಿರಲಿಲ್ಲ ಎಂಬುದು ಸ್ಪಷ್ಟವಾಯಿತು.

ಇದಾದ ಮೇಲೂ ಅದೇ ಚಿಂತನೆಯಿಂದ ಸ್ಫೂರ್ತಿ ಪಡೆದಂತೆ, ಮಹಾದೇವ ಮತ್ತು ಸಿದ್ದಲಿಂಗಯ್ಯ ಇಬ್ಬರೂ ಸೇರಿ ರಾಜ್ಯಾದ್ಯಂತ ಒಂದು ವರ್ಷ ಕಾಲ ಪ್ರವಾಸ ಮಾಡಿ ಎಲ್ಲರನ್ನೂ ಮಾತಾಡಿಸುತ್ತ, ಗಾಯಗಳನ್ನು ವಾಸಿ ಮಾಡುತ್ತ ಸಂಘಟನೆಯನ್ನು ಹೊಸದಾಗಿ ಕಟ್ಟುವ ಪ್ರಯತ್ನ ಮಾಡುವುದಾಗಿ ಒಂದು ಹೇಳಿಕೆ ನೀಡಿದರು (2004). ಅದಾಗಿ ಹದಿನೈದೇ ದಿನಕ್ಕೆ ಬಲಗೈ ಗುಂಪಿನಲ್ಲೇ ದೊಡ್ಡ ಒಡಕು ಸಂಭವಿಸಿ ಸಾಗರ್- ಲಕ್ಷ್ಮೀನಾರಾಯಣ ನಾಗವಾರ ಬಣಗಳು ಉದ್ಭವಿಸಿದವು. ಅಷ್ಟೇ ಅಲ್ಲ, ಮರುಸಂಘಟನೆಯ ಹೇಳಿಕೆಗೆ ಸಹಿ ಹಾಕಿದ್ದ ಸಿದ್ದಲಿಂಗಯ್ಯ, ನಾಗವಾರ ನೇತೃತ್ವದ ಸಮಾವೇಶದಲ್ಲಿ ಹಾಜರಾಗಿ ಒಂದು ಬಣದೊಂದಿಗೆ ಅಳುಕಿಲ್ಲದೆ ಗುರುತಿಸಿಕೊಂಡೂ ಬಿಟ್ಟರು! ಅತ್ತ ಒಂದೇ ವರ್ಷದಲ್ಲಿ ದೇವನೂರು ‘ಸರ್ವೋದಯ’ದಲ್ಲಿ ಮುಳುಗಿಹೋದರು…!

ಅಲ್ಲಿಂದಾಚೆಗೆ ದಲಿತ ಸಂಘಟನೆ ‘ಎತ್ತಿ ಬಿಸಾಡಿದ ಗಾಜಿನಂತೆ’ ಚುಪ್ಪಾನ ಚೂರಾಗುತ್ತ ಛಿದ್ರಛಿದ್ರವಾಯಿತು. ಲೆಟರ್‌ಹೆಡ್ ಸಂಸ್ಥೆಗಳು ಅಣಬೆಯಂತೆ ತಲೆಯೆತ್ತಿದವು. ಸಂಘಟನೆಯ ಕಿರಿಯ ಗೆಳೆಯರೊಬ್ಬರು ಹೇಳಿದಂತೆ- ಇಂದು ಅಂಥ 360 ಲೆಟರ್‌ಹೆಡ್ ಸಂಸ್ಥೆಗಳು ಅಸ್ತಿತ್ವದಲ್ಲಿವೆ…!

ರೈತಸಂಘದ ಒಡಲಲ್ಲೂ ಇಂಥದೇ ಒಡಕಿನ ಪುರಾಣವಿರಬಹುದೆಂಬ ಸೂಚನೆ ಕಡಿದಾಳು ಶಾಮಣ್ಣನವರ ಪುಸ್ತಕದಲ್ಲಿ ಸಿಕ್ಕುತ್ತದೆ.

ಇಂದು ದಲಿತ ಹೋರಾಟದ ಮೂರು ಮಾದರಿಗಳು ನಮ್ಮ ಕಣ್ಣ ಮುಂದಿವೆ. ಒಂದು: ಇದೇ ಲೆಟರ್‌ಹೆಡ್ ಸಂಸ್ಥೆಗಳ ‘ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ರೋಲ್ಕಾಲ್’ನ ಮಾದರಿ. ಎರಡನೆಯದು- ಎಷ್ಟೇ ಕ್ಷೀಣ ಪ್ರಯತ್ನದಂತಿದ್ದರೂ, ಚಳವಳಿಯ ಮುಂದುವರಿಕೆಯಂತೆಯೇ ಕಾಣುವ- ಕೋಟಿಗಾನಹಳ್ಳಿ ರಾಮಯ್ಯನವರ ‘ಆದಿಮ’ದ ಸಾಂಸ್ಕೃತಿಕ ಮರುಎಚ್ಚರದ ಪ್ರಯೋಗ. ಮೂರನೆಯದು ರೈತಸಂಘದ ಪುಟ್ಟಣ್ಣಯ್ಯನವರನ್ನು ಒಳಗೊಂಡ ದೇವನೂರರ ಚುನಾವಣಾಕೇಂದ್ರಿತ ರಾಜಕೀಯದ ಮಾದರಿ. (ಕರ್ನಾಟಕದಲ್ಲಿ ಬಿಎಸ್ಪಿ ಪ್ರಯತ್ನಗಳೂ ಮೊದಲ ಹಾಗೂ ಮೂರನೇ ಮಾದರಿಗಳಲ್ಲಿ ಹಂಚಿಹೋದದ್ದನ್ನು ಕಾಣಬಹುದು.)

ಆಗ ಆ ಚಳವಳಿಗಳು ನನ್ನ ಪೀಳಿಗೆಯಲ್ಲಿ ಸಮಾನತೆಯ, ಸಮಾಜ ಪರಿವರ್ತನೆಯ ಮಹಾ ಕನಸು ಬಿತ್ತಿದ್ದವು. ಒಂದು ಇಡೀ ತಲೆಮಾರಿನ ಜನರಲ್ಲಿ, ಸ್ವಂತದ್ದನ್ನು ಮೀರಿದ ಸ್ಪಂದನ ಹುಟ್ಟಲು ಕಾರಣವಾಗಿದ್ದವು. ಅಷ್ಟಕ್ಕಾದರೂ ಅವು ಇಂದಿಗೂ ಜೀವಂತವಾಗಿ ಉಳಿದು ಬರಬೇಕಿತ್ತು ಎಂದು ಆಸೆಪಟ್ಟರೆ ನನ್ನ ನಿಟ್ಟುಸಿರನ್ನು ಯಾರೂ ಅಪಹಾಸ್ಯ ಮಾಡಲಾರರು ಅಂದುಕೊಂಡಿರುವೆ. ಆದರೆ ಚಳವಳಿಗಳ ದೋಣಿಯಲ್ಲಿ ಒಡಕು ಮೂಡಿದ ಕೂಡಲೇ ದೋಣಿ ಮುಳುಗುವುದು ನಿಶ್ಚಯವಾಯಿತು. ಒಡಕನ್ನು ಜೀರ್ಣಿಸಿಕೊಳ್ಳುವ ಆತ್ಮಬಲ ಯಾವ ಚಳವಳಿಗೂ ಇರುವುದಿಲ್ಲ ಎಂದು ಮತ್ತೊಮ್ಮೆ ಸಾಬೀತಾಯಿತು. ಯಾಕೆಂದರೆ ಎಲ್ಲ ಒಡಕಿನ ಮೂಲ- ಸ್ವಾರ್ಥ ಮಾತ್ರ. ಪ್ರೊಫೆಸರರು ಸ್ವತಃ ಎಷ್ಟು ದೈತ್ಯಬಲದವರಾದರೂ, ಅಂತಾರಾಷ್ಟ್ರೀಯ ರೈತ ನಾಯಕರಾಗಿ ಬೆಳೆದರೂ, ರೈತಸಂಘದ ಒಡಕಿನ ನಂತರ (80ರ ದಶಕದ ಉತ್ತರಾರ್ಧ ಮತ್ತು 90ರ ದಶಕಗಳಲ್ಲಿ) ಏನು ಹೋರಾಟ ಮಾಡಿದರೂ ಅದು ನರಪೇತಲನ ಕುಸ್ತಿಯಂತೆ ಕಂಡಿದ್ದು ಅವರ ತಪ್ಪೇನಲ್ಲ.

ಚಳವಳಿಗಳು ಇಂದು ನೆಲೆ ಕಳೆದುಕೊಂಡಿದ್ದರೆ ಅದರ ಹಿಂದಿರುವ- ಅನಿವಾರ್ಯವೂ ಅಗೋಚರವೂ ಆದ ಚಾರಿತ್ರಿಕ ಒತ್ತಾಯವನ್ನೂ ಮರೆಯುವಂತಿಲ್ಲ. ಯಾವ ಸಮಾಜವೂ ತನ್ನ ದಿಕ್ಕು ಮತ್ತು ಜಾಯಮಾನಕ್ಕೆ ಎದುರಾಗುವ ಸವಾಲುಗಳನ್ನು ತಾಳಿಕೊಳ್ಳುವುದು ಸಂಕ್ರಮಣ ಕಾಲದಲ್ಲಿ ಮಾತ್ರ. ಆ ಕಾಲ ಜಾರಿದಂತೆ, ಇಡೀ ಸಮಾಜವೇ ಸಹಸ್ರ ಸಹಸ್ರ ಸ್ಥೂಲ ಸೂಕ್ಷ್ಮ ವಿಧಾನಗಳಲ್ಲಿ ತಿರುಗೇಟು ಕೊಡುವ ಮೂಲಕ ತನ್ನ ಮೂಲ ‘ಸಹಜ’ ರೂಪಕ್ಕೆ ಮರಳಲು ಹವಣಿಸುತ್ತದೆ. 90ರ ದಶಕದ ಜಾಗತೀಕರಣದ ನಂತರ ನಾವೀಗ ಕೈ ಚೆಲ್ಲಿ ವೀಕ್ಷಿಸುತ್ತಿರುವುದು ಈ ಛಚಿಛಿಞಟಚಿ- ತಿರುಗೇಟನ್ನೇ. 70-80ರ ದಶಕಗಳ ಕಲಮಲಕ್ಕೆ ಈಗಿನ ಎರಡು ದಶಕಗಳು ನೀಡುತ್ತಿರುವ ಮಾರುತ್ತರವಿದು. ರೈತಸಂಘ, ಫ್ಯೂಡಲ್ ಜಾತಿಗಳ ಒಕ್ಕೂಟವಾಗಿ ಹುಟ್ಟಿ ಅದನ್ನು ಮೀರಲು ಹೆಣಗಿ ಸೋತದ್ದಾಗಲೀ; ಅಥವಾ ಜಾತ್ಯತೀತ ಆಶಯವಾಗಿ ಹುಟ್ಟಿದರೂ ಹೊರಳಿ ಬಂದು ಜಾತಿಯಲ್ಲೇ ಹೂತುಹೋದ ದಲಿತ ಸಂಘವಾಗಲೀ- ಇವೆರಡರ ಹಿಂದೆಯೂ ಕಾಣುವುದು ಈ ಚಾರಿತ್ರಿಕ ಒತ್ತಾಯದ ಚಿಹ್ನೆಗಳೇ ತಾನೇ?

ಇಂದು ಆ ಅಳಿದುಳಿದ ಚಳವಳಿಗಳು- ಒಂದು ಕಡೆ ರೈತರ ಸರಣಿ ಆತ್ಮಹತ್ಯೆ, ಇನ್ನೊಂದು ಕಡೆ ದಲಿತರ ಜಲಿಯನ್ವಾಲಾಬಾಗ್ ಎನಿಸಿದ ಕಂಬಾಲಪಲ್ಲಿ ಮಾರಣಹೋಮದಂಥ- ವಿರಾಟ್ ದುರಂತಗಳೆದುರು ನಿಸ್ಸಹಾಯಕವಾದ ಸ್ಥಿತಿಯಲ್ಲಿವೆ. ಅಂದರೆ ಚಳವಳಿಗಳ ಪ್ರಾಣಶಕ್ತಿ ಇಂಗಿಹೋಗಿದೆ. ‘ಸರ್ವೋದಯ’ದ ಸ್ವರೂಪದಲ್ಲಿ ಉಳಿದಿರುವುದು ಅದರ ಸಿಪ್ಪೆಹೊಟ್ಟು ಮಾತ್ರ . ಆ ದಿನಗಳಲ್ಲಿ ‘ಕಣ್ಣೆದುರೇ ಕಳೆದುಹೋದ ಸಮಾಜವಾದಿ ಚಳವಳಿಯನ್ನು’ ನೆನೆಸಿಕೊಂಡು ದೇವನೂರ ಮಹಾದೇವ ‘ನಾನು ಅತ್ತೆ’ ಎಂದು ಬರೆದಿದ್ದರು.

ವಿಷಾದವೆಂದರೆ, ಈಗ ನಮ್ಮ ‘ಕಣ್ಣೆದುರೇ ಕಳೆದುಹೋದ ಚಳವಳಿಗಳನ್ನು’ ನೆನೆದು ಅಳುವವರೂ ಉಳಿದಿಲ್ಲ…

(ಮುಗಿಯಿತು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 6


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5

94ರ ಚುನಾವಣೆಯಲ್ಲಿ ಕಾನ್ಶಿರಾಂ ನೇತೃತ್ವದ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ನೀಡಲು ತೀರ್ಮಾನಿಸಿದ್ದ ದಸಂಸ ಕಡೆಗೆ ಇಡಿಯಾಗಿ ಆ ಪಕ್ಷದಲ್ಲೇ ವಿಲೀನಗೊಂಡುಬಿಟ್ಟಿತು. …ಬಹುಶಃ ಇಂಡಿಯಾದ ಪರ್ಯಾಯ ರಾಜಕಾರಣದ ಇತಿಹಾಸದಲ್ಲಿ ಜನಚಳವಳಿಯ ಸಂಘಟನೆಯೊಂದು ಇಷ್ಟೊಂದು ಅಮಾಯಕವಾಗಿ ತನ್ನ ಕಣ್ಣನ್ನೇ ತಾನು ಚುಚ್ಚಿಕೊಂಡ ಮೊದಲ ನಿದರ್ಶನ ಇದೇ ಇರಬೇಕು. ಮುಖಂಡರೆಲ್ಲರೂ ಉತ್ಸಾಹದಿಂದ ಬಿಎಸ್ಪಿ ಚಿಹ್ನೆಯ ಮೇಲೇ ವಿಧಾನಸಭೆಗೆ ಸ್ಪರ್ಧಿಸಿ ಒಬ್ಬರು (ಬೀದರ್‌ನಿಂದ) ಗೆದ್ದೂಬಿಟ್ಟರು…

ಆಯಿತಾ? 95ರಲ್ಲಿ ಬಿಎಸ್ಪಿ, ಉತ್ತರಪ್ರದೇಶದಲ್ಲಿ ಬಿಜೆಪಿ ಜತೆ ಗೆಳೆತನ ಬೆಳೆಸಿ ಅಧಿಕಾರಕ್ಕೆ ಬಂತು. ಮಾಯಾವತಿ ಮುಖ್ಯಮಂತ್ರಿಯೂ ಆದರು. ಆಗ ಇಲ್ಲಿನ ದಲಿತ ಸಂಘಟನೆಯ ಒಂದು ಗುಂಪು ಬಿಜೆಪಿ ಸಖ್ಯವನ್ನು ವಿರೋಧಿಸಿ ಒಡೆದುಕೊಂಡು ಹೊರಬಂತು. ಆಗ ಬಿಎಸ್ಪಿ ಜೊತೆಗೇ ಉಳಿದ ಬಿ. ಕೃಷ್ಣಪ್ಪ, ‘ಇದೇನೋ ಹೊಸ ಕಣಿ ತೆಗೆದರಲ್ಲಪ್ಪ…?’ ಎಂದು ಉದ್ಗರಿಸಿದರು. ಮತ್ತು ಈಗಿನ ಒಡಕು, ಮೂಲದಲ್ಲಿ ಎಡಗೈ- ಬಲಗೈ ಬಣಗಳ- ಅಂದರೆ ಸಾಗರ್- ಜಯಣ್ಣ ಬಣಗಳ- ವಿಭಜನೆಯಾಗಿತ್ತು. ಅಥವಾ ಗೋವಿಂದಯ್ಯನವರು ಹೇಳಿದಂತೆ ‘ಮಹಾದೇವ- ಕೃಷ್ಣಪ್ಪ ಎಂಬ ಜಾತಿಧ್ರುವಗಳ ಇಬ್ಭಾಗವಾಗಿತ್ತು’. ಹೀಗಾಗಿ ಹುಟ್ಟಿದ ಇಪ್ಪತ್ತೈದು ವರ್ಷಗಳಲ್ಲಿ ಒಂದು ಮಹಾನ್ ಬದಲಾವಣೆಗೆ ಕಾರಣವಾಗಬಹುದಾಗಿದ್ದ ದಲಿತ ಶಕ್ತಿ, ವಿಭಜಕ ರಾಜಕಾರಣದ ಸ್ವವಂಚನೆಗೆ ಒಳಗಾಗಿ ಚಳವಳಿ ರಾಜಕಾರಣವನ್ನು ಪಕ್ಷ ರಾಜಕಾರಣದ ಮಟ್ಟಕ್ಕೆ ತಂತಾನೇ ತಂದು ನಿಲ್ಲಿಸಿಕೊಂಡಿತು. ಪಕ್ಷ ರಾಜಕಾರಣ ಪ್ರವೇಶದ ನಂತರ ದಲಿತ ಅಸ್ತಿತ್ವ ರೂಪಿಸುವ ಒಂದೇ ಒಂದು ಕಾರ್ಯಕ್ರಮ ಕೂಡ ಯಾವುದೇ ಬಣದಿಂದಲೂ ಮೂಡಿ ಬರದೆ ಹೋಯಿತು….

ತನ್ನ ಹುಟ್ಟಿನಲ್ಲಿ ಭೂಹೀನರ, ಆಧಾರ ತಪ್ಪಿದವರ ವೇದಿಕೆಯಾಗಿದ್ದ ದಲಿತ ಸಂಘಟನೆ ಕ್ರಮೇಣ ಹೊಟ್ಟೆ ತುಂಬಿದ ದಲಿತ ನೌಕರಶಾಹಿಯ ವೇದಿಕೆಯಾಗಿ ಪರಿವರ್ತನೆಗೊಳ್ಳುತ್ತ ಬಂದಿತ್ತು. ಕಟ್ಟಕಡೆಯ ಮನುಷ್ಯನ ಕಣ್ಣೀರು ತೊಡೆಯಲು ಬಳಕೆಯಾಗುತ್ತಿದ್ದ ಸಂಘಟನೆಗಳ ಲೆಟರ್‌ಹೆಡ್‌ಗಳು ಇಂತಿಂಥ ನೌಕರರನ್ನು ಇಂತಿಂಥ ಜಾಗಗಳಿಗೆ ವರ್ಗಾವಣೆ ಮಾಡಿ ಎಂದು ಮೊರೆಯಿಡುತ್ತ ವಿಧಾನಸೌಧದ ಮಂತ್ರಿ ಶಾಸಕರ, ಸಚಿವಾಲಯದ ಮೇಜುಗಳನ್ನು ಅಲಂಕರಿಸತೊಡಗಿದವು.

ಹೀಗಾಗಬೇಕಿರಲಿಲ್ಲ.

**

ಆ ದಶಕಗಳ ಒಟ್ಟೂ ಎಚ್ಚರ, ಸಮೂಹ ರಾಜ್ಯಾಧಿಕಾರವಾಗಿ ಪರಿವರ್ತನೆಗೊಳ್ಳಲೆಂದು ನಾಡಿನ ಸಮಸ್ತ ಪ್ರಜ್ಞಾವಂತ ವಲಯ ನಿರೀಕ್ಷಿಸಿತ್ತು. ಕಿಷನ್ ಪಟ್ನಾಯಕ್‌ರಂಥ ಧೀಮಂತ ಸಮಾಜವಾದಿ ನಾಯಕ ಕೂಡ- ‘ಕರ್ನಾಟಕದಲ್ಲಿ ರೈತಸಂಘ, ದಲಿತ ಸಂಘಟನೆ ಮತ್ತು ಪ್ರಗತಿರಂಗ ಒಗ್ಗೂಡಿ ಸಮಾನ ವೇದಿಕೆ ಮಾಡಿಕೊಂಡು ಹೊಸ ರಾಜಕೀಯ ಆರಂಭಿಸಬೇಕೆಂದು’ ಸೂಚಿಸಿದ್ದರು. ಪ್ರೊಫೆಸರ್ ನಂಜುಂಡಸ್ವಾಮಿಯವರಿಗೇನೋ ಯಾವಾಗಿನಿಂದಲೂ ದಲಿತ ಸಂಘದ ಜೊತೆ ಸೇರುವ ಬಯಕೆ ಇದ್ದೇ ಇತ್ತು. 87ರಲ್ಲಿ ಅವರು ರೈತರದೇ ರಾಜಕೀಯ ಪಕ್ಷ ‘ಕನ್ನಡ ದೇಶ’ ಸ್ಥಾಪಿಸುವ ಮುನ್ನವೂ ತಮ್ಮ ಜೊತೆಗೂಡಲು ದಲಿತ ಸಂಘವನ್ನು ಆಹ್ವಾನಿಸಿದ್ದರು. ಅವರ ವಿರೋಧ ಇದ್ದದ್ದು ಲಂಕೇಶರೊಂದಿಗೆ ಕೈ ಜೋಡಿಸುವ ವಿಷಯದಲ್ಲಿ ಮಾತ್ರ. ಆದರೆ ಕಿಷನ್ರ ಚಿಂತನೆಯ ಹಾದಿಯಲ್ಲೇ ಮೂರೂ ಶಕ್ತಿಗಳ ಒಕ್ಕೂಟದ ಕನಸು ಕಾಣುತ್ತಿದ್ದ ದೇವನೂರ ಮಹಾದೇವ, ಪ್ರೊಫೆಸರರ ಆಹ್ವಾನಕ್ಕೆ ಆ ಸಂದರ್ಭದಲ್ಲಿ ಪ್ರತಿಕ್ರಿಯಿಸದೆ ಸುಮ್ಮನಿದ್ದರು.

ಮುಂದೆ 89ರ ಚುನಾವಣೆ ಸಮಯದಲ್ಲಿ ತೃತೀಯ ಶಕ್ತಿ ರಚನೆಯ ಪ್ರಯತ್ನಕ್ಕೆ ದಲಿತ ಸಂಘರ್ಷ ಸಮಿತಿ ಹಾಗೂ ಮಹಾದೇವ ಮತ್ತೊಮ್ಮೆ ಕೈ ಹಾಕಿದರು. ಎಲ್ಲರೂ ಒಪ್ಪಿದರೆ ಹಾಸನದಲ್ಲಿ ಸಭೆ ಸೇರಿ ಮಾತಾಡುವುದು ಎಂದೂ ಆಯಿತು. ಆಗ ಪರಸ್ಪರ ಮುಖ ನೋಡದಿದ್ದ ಲಂಕೇಶ್- ಪ್ರೊ. ನಂಜುಂಡಸ್ವಾಮಿಯವರ ನಡುವೆ, ದಲಿತ ಸಂಘಟನೆ ಪರವಾಗಿ ದೇವನೂರು ಮತ್ತು ಪ್ರೊ. ಗೋವಿಂದಯ್ಯನವರ ನಿರ್ದೇಶನದ ಮೇರೆಗೆ ರಾಜಿ ಸಂಧಾನಕ್ಕೆ ಓಡಾಡಿದವನು ನಾನೇ ಆದ್ದರಿಂದ ವಿವರಗಳು ನೆನಪಿವೆ. ಆಗ ನಾನು ಮೊದಲು ಭೇಟಿ ಮಾಡಿದ್ದು ಪ್ರೊಫೆಸರ್ರನ್ನು. ಅದಕ್ಕೆ ಮುಂಚೆ ಒಮ್ಮೆ ಯಾರೋ ನಂಜುಂಡಸ್ವಾಮಿಯವರ ಮುಂದೆ ‘ನೀವೂ, ಲಂಕೇಶರೂ ರಾಜಕೀಯವಾಗಿ ಸೇರಬಾರದೇಕೆ?’ ಎಂದು ಕೇಳಿ, ಅದಕ್ಕೆ ಉತ್ತರವಾಗಿ ಪ್ರೊಫೆಸರ್ ‘ಹೆಣ್ಣು ಕೇಳೋಕೆ ಬರೋರು ಯಾರಾದರೂ ಕೈಯಲ್ಲಿ ಬೆಕ್ಕು ಹಿಡಕೊಂಡು ಬರ್ತಾರೇನ್ರೀ?’ ಎಂದು ಗದರಿದ್ದರಂತೆ! ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನನಗಿದು ಗೊತ್ತೂ ಇರಲಿಲ್ಲ. ಅದೇನು ನನ್ನಅದೃಷ್ಟವೋ, ಪ್ರೊಫೆಸರ್ ನನ್ನೊಂದಿಗೆ ಅಂಥ ಅಡ್ಡಮಾತೂ ಆಡಲಿಲ್ಲ. ಪ್ರೊಫೆಸರರ ಮೊದಲ ಪ್ರಶ್ನೆ:

‘ನಿಮಗೆ- ದಲಿತರಿಗೆ- ಲಂಕೇಶ್ ಅಂದ್ರೆ ಯಾಕೆ ಅಷ್ಟು ಮೋಹ?’
‘ನಮಗೆ ನಿಮ್ಮನ್ನು ಕಂಡರೂ ಅಷ್ಟೇ ಮೋಹ ಸಾರ್’.
‘ಪ್ರಗತಿರಂಗ ಪ್ರಣಾಳಿಕೆ ನೋಡಿದ್ದೀರೇನು? ಏನಿದೆ ಅದರಲ್ಲಿ? ರೈತಸಂಘದ್ದೂ ನೋಡಿದ್ದೀರಲ್ಲ?…’

ಆ ವೇಳೆಗಾಗಲೇ ಲಂಕೇಶರು ಪ್ರಗತಿರಂಗ ಹುಟ್ಟುಹಾಕಿ ರಾಜ್ಯಾದ್ಯಂತ ಓಡಾಡಿ ಪಕ್ಷದ ಪ್ರಣಾಳಿಕೆಯನ್ನೂ ಅಚ್ಚು ಹಾಕಿದ್ದರು. ಅದರಲ್ಲಿ ಎಲ್ಲರಿಗೂ ಹಿಡಿಸುವ ಹಲವಾರು ಅಂಶಗಳಿದ್ದವು. ಆದರೆ ಆ ಯಾವ ಉಸಾಬರಿಗೂ ಹೋಗದೆ- ‘ಮೊದಲು ಎಲ್ಲರೂ ಒಂದಾಗಲಿ ಸಾರ್. ಆಮೇಲೆ, ಎಲ್ಲರೂ ಸೇರಿ ಹೊಸ ಪ್ರಣಾಳಿಕೆ ಬರಕೋಬಹುದು’ ಅಂದೆ.

ಅವರಿಗೇನನಿಸಿತೋ, ಅದೂ ಇದೂ ಮಾತಾಡಿ ‘ಆಯ್ತು, ಸಭೆಗೆ ಬರ್ತೀನಿ ಬಿಡಿ’ ಅಂದುಬಿಟ್ಟರು! ನನಗಾಗಲೇ ಅರ್ಧ ಯುದ್ಧ ಗೆದ್ದಂತಾಗಿಬಿಟ್ಟಿತು.

ಮತ್ತೆ ಲಂಕೇಶರ ಹತ್ತಿರ ಇದೇ ಪ್ರಸ್ತಾಪ ಇಟ್ಟಾಗ, ಅವರು ಹೆಚ್ಚು ಮಾತೇ ಆಡದೆ ‘ಆಯ್ತು, ಮಾತಾಡಕ್ಕೇನಂತೆ? ಹಾಸನಕ್ಕೆ ಹೋಗಣ’ ಅಂದರು. ನಾನು ಸಂತೋಷದಿಂದ ಇಷ್ಟೂ ಬೆಳವಣಿಗೆ ಗೋವಿಂದಯ್ಯನವರಿಗೆ ತಿಳಿಸಿದೆ. ಅಲ್ಲಿಗೆ ಎಲ್ಲರ ಮನಸ್ಥಿತಿಯೂ ಒಂದು ಹದಕ್ಕೆ ಬಂದು ಇನ್ನೇನು ಸಭೆ ನಡೆದೇ ತೀರುವುದು ಎಂದಾದಾಗ, ಇಂಥದೊಂದು ಸಮಾವೇಶವೇ ನಡೆಯದಂತೆ ಕೆಲವರು ಅಟ ಆಡಿ ಎಲ್ಲ ಮುರಿದುಬಿತ್ತು….!

‘ಅವರೆಲ್ಲ ಆಗ ಸೇರಿ ಮಾತಾಡಿದ್ದರೂ, ಒಂದಾಗುತ್ತಿದ್ದುದು ಅನುಮಾನ’ ಅನ್ನುತ್ತಾರೆ ಮಹಾದೇವ: “ಅವರಿಗೇನು ಕಡಿಮೆ ಸ್ವಪ್ರತಿಷ್ಠೆಯಿತ್ತೇ…?” ನಿಜವೇ. ‘ದೇವರಂಥ ಮನುಷ್ಯ’ ಕಡಿದಾಳು ಶಾಮಣ್ಣನವರನ್ನೇ ರಾಜ್ಯಸಮಿತಿಯಿಂದ ಕೈ ಬಿಟ್ಟ ಪ್ರಸಂಗ ರೈತಸಂಘದಲ್ಲಿ ನಡೆಯಿತೆಂದರೆ…! (22 ಜುಲೈ 89) ಆ ಸಂದರ್ಭದಲ್ಲಿ ಶಾಮಣ್ಣನವರಿಗೆ ತೇಜಸ್ವಿ ಬರೆದಿದ್ದನ್ನೂ ನೋಡಬೇಕು (ಆ ದಶಕ): …ನಂಜುಂಡಸ್ವಾಮಿ ಇಡೀ ರೈತಸಂಘವನ್ನು ಚೇಲಾಗಳ ಸಂಘಟನೆ ಮಾಡಬೇಕೆಂದಿದ್ದಾರೆ…. ಈಗ ನಿಮ್ಮ ಮೇಲೆ ಹಾರಾಡಿರುವ ಅವಿವೇಕಿಗಳೇ ಇನ್ನು ಒಂದೆರಡು ತಿಂಗಳೊಳಗಾಗಿ ನಿಮ್ಮದೆ ಸರಿ ಎಂದು ಹೇಳದಿದ್ದರೆ ಕೇಳಿ. ಎಂಡಿಎನ್‌ಗೆ ಈಗ ರೈತಸಂಘ ಬಿಟ್ಟರೆ ಬೇರೆಲ್ಲೂ ಗತಿ ಇಲ್ಲ. ಹಾಗಾಗಿ ರೈತಸಂಘ ನಾಶವಾದರೂ ಅದರ ನಾಯಕ ನಾನೇ ಆಗಿರಬೇಕೆಂದು ತೀರ್ಮಾನಿಸಿರುವಂತಿದೆ… (29 ಜುಲೈ 89.)

ಕೇವಲ ಕಬ್ಬು ಬೆಳೆಗಾರರ ಸಂಘವಾಗಿದ್ದ ರೈತ ಸಂಘಟನೆಯನ್ನು ಜನಾಂದೋಲನವಾಗಿ ರೂಪಿಸಿ ಬೆಳೆಸಿದ ಪ್ರೊಫೆಸರ್ ಇರುವವರೆಗೆ, ರೈತಸಂಘ ತನ್ನ ‘ಒನ್ ಮ್ಯಾನ್ ಷೋ’ ಸ್ವರೂಪ ಕಳೆದುಕೊಳ್ಳಲೇ ಇಲ್ಲ. ಆ ಸ್ಥಿತಿಯ ಅನುಕೂಲ ಹಾಗೂ ತೊಡಕುಗಳನ್ನು, ಜೊತೆಗೆ ಆ ವಾತಾವರಣದಲ್ಲಿ ತೇಜಸ್ವಿ ಮತ್ತು ಶಾಮಣ್ಣನಂಥವರು ಎಷ್ಟು ತಲೆ ಚಚ್ಚಿಕೊಂಡಿರಬಹುದೆಂಬುದನ್ನು, ಊಹಿಸುವುದು ಕಷ್ಟವೇನಲ್ಲ. ಅಷ್ಟಾದರೂ 84ರ ಲೋಕಸಭಾ ಚುನಾವಣಾ ಸಂದರ್ಭದಿಂದಲೇ ಅಧಿಕಾರ ರಾಜಕೀಯಕ್ಕಿಳಿದು, 89ರಲ್ಲಿ ಒಂಟಿಯಾಗಿ ನೇರ ಸ್ಪರ್ಧೆಗಿಳಿದು ಬಾಬಾಗೌಡರನ್ನು ಗೆಲ್ಲಿಸಿಕೊಂಡು, ಕೇವಲ 200ರಿಂದ 2000 ಮತಗಳ ಅಂತರದಲ್ಲಿ ಇಪ್ಪತ್ತು ಕ್ಷೇತ್ರಗಳನ್ನು ಕಳೆದುಕೊಂಡ ರೈತಸಂಘ, ದಲಿತ ಸಂಘಟನೆಯ ಹಾಗೆ ರಾಜಕೀಯ ಸಂಗದಲ್ಲಿ ಕಕ್ಕಾಬಿಕ್ಕಿಯಾಗಲಿಲ್ಲ ಎಂಬುದೂ ಗಮನಾರ್ಹವಾಗಿದೆ.

ಅದು ಹೇಗೇ ಹೋಗಲಿ, ದಲಿತ ಸಂಘಟನೆ, ರೈತಸಂಘ, ಪ್ರಗತಿರಂಗ ಮೂರೂ ನಿಜಕ್ಕೂ ಸೇರುತ್ತಿದ್ದವೋ ಇಲ್ಲವೋ, ಸೇರಿದ್ದರೂ ಒಗ್ಗಟ್ಟು ಉಳಿಯುತ್ತಿತ್ತೋ ಇಲ್ಲವೋ, ಅವೆಲ್ಲ ಈಗ ನಿರರ್ಥಕ ಪ್ರಶ್ನೆಗಳು. ಆದರೆ ಆ ಕಾಲದಲ್ಲಿ ಅಂಥದೊಂದು ಪ್ರಯತ್ನ- ಅಲ್ಪ ಕಾಲಕ್ಕೇ ಆದರೂ- ಯಶಸ್ವಿಯಾಗಿದ್ದಿದ್ದರೆ ಅದು ಎಬ್ಬಿಸುತ್ತಿದ್ದ ಮಹತ್ತರ ಕಂಪನಗಳ ಕಲ್ಪನೆಯೇ ರೋಮಾಂಚಕ….**

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 5


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4

85ರ ಸಾರ್ವತ್ರಿಕ ಚುನಾವಣೆಯಲ್ಲಿ ದಸಂಸ, ಹೆಗಡೆ ಸರ್ಕಾರಕ್ಕೆ ಬಹಿರಂಗ ಬೆಂಬಲ ಘೋಷಿಸಿದ ಮೇಲೆ ಏನಾಯಿತು ಎಂದು ಈಗ ಬಿಡಿಸಿ ನೋಡಿದರೆ, ಮೊಟ್ಟಮೊದಲ ಬಾರಿ ಕುರ್ಚಿಯ ಸಖ್ಯ ಪಡೆದ ದಲಿತ ಚಳವಳಿಯ ಅವಸಾನ ಆ ದಿನವೇ ಆರಂಭವಾದಂತೆ ತೋರುತ್ತದೆ. (ಆದರೆ 83ರಲ್ಲೇ ಜನತಾರಂಗದ ಪರ ನಿಲುವು ತಳೆದಿದ್ದ ರೈತ ಚಳವಳಿಗೆ ಆ ಬಿಕ್ಕಟ್ಟು ಎದುರಾಗಲಿಲ್ಲ.)

ಆವರೆಗೆ ಹೋರಾಟದಲ್ಲೇ ಹಣ್ಣಾಗಿದ್ದ ದಲಿತರು ಈಗ ಅಧಿಕಾರದ ಬೆಚ್ಚನೆ ಸಾಮೀಪ್ಯ ಪಡೆದರು. ಕೈಯಲ್ಲಿ ದುಡ್ಡು ಕಾಸು, ಓಡಾಡಲು ಕಾರು. ಮುಂಚೆ ವಾರಗಟ್ಟಳೆ ಧರಣಿ ಕೂತು ಮಾಡಿಸಬೇಕಿದ್ದ ಕೆಲಸಕ್ಕೆ ಈಗ ಒಂದು ಫೋನು ಸಾಕು… ಈ ಹೊಸ ‘ಅಧಿಕಾರ’ ಕೆಲವರ ಪಾಲಿಗೆ ಜೀವನೋಪಾಯ ಒದಗಿಸತೊಡಗಿದ್ದೂ ಆಶ್ಚರ್ಯವಲ್ಲ. ಅದಕ್ಕೇ ಈವರೆಗೆ ಬೆವರು ಬಸಿಯಬೇಕಾದ ಪ್ರಯಾಸವಾಗಿದ್ದ ಚಳವಳಿ ಈಗ ಲಾಭದ ಸಾಧ್ಯತೆಯಾಗಿ ‘ಅಸ್ತಿ’ಯ ಸ್ವರೂಪ ಪಡೆಯಿತು. ಮುಂದಿನ ಹೆಜ್ಜೆಯಾಗಿ ಸಂಘಟನೆಯಲ್ಲಿ ಮೊಟ್ಟ ಮೊದಲ ಒಡಕು ದನಿ ಹುಟ್ಟಿತು- ‘ದಲಿತ ಚಳವಳಿಯಲ್ಲಿ ದಲಿತೇತರರಿಗೇನು ಕೆಲಸ?’ ಪರಿಣಾಮ ದಲಿತ ಸಂಘಟನೆ ಮೊದಲ ಬಾರಿ ಒಡೆಯಿತು (1986). ಆ ಒಡಕು- ಇನ್ನೊಂದು ಅರ್ಥದಲ್ಲಿ ‘ಆಸ್ತಿ ಹಿಸ್ಸೆ’ಯ ವಿಧಿಯಾಗಿತ್ತು.

ಅಂದರೆ ದಲಿತ ಸಂಘಟನೆಯೂ ಜಾತಿವಾದಿಯಾಗತೊಡಗಿತ್ತು. ಅಂದ ಮೇಲೆ ಈ ಬೆಳವಣಿಗೆ ಮುಂದೊಮ್ಮೆ ‘ಎಡಗೈ- ಬಲಗೈ’ಯಾಗಿ ಸೀಳುವುದು ಅನಿವಾರ್ಯವಾಗಿತ್ತು.

(ದೇವನೂರ ಮಹಾದೇವ ಈಗ ನೆನಪಿಸಿಕೊಂಡಿದ್ದು: ಆ ವೇಳೆಗಾಗಲೇ ಎರಡು ಬಣಗಳಾಗಿತ್ತಲ್ಲ, ಆ ಎರಡೂ ಬಣಗಳು ದಲಿತೇತರರ ಪ್ರಶ್ನೆಯೆತ್ತುತ್ತಿದ್ದುದು- ತಮ್ಮ ಎದುರು ಬಣದ ದಲಿತೇತರರ ವಿಷಯದಲ್ಲಿ ಮಾತ್ರ. ಅಂದರೆ ತಮ್ಮದೇ ಬಣದಲ್ಲಿದ್ದ ದಲಿತೇತರರ ಬಗ್ಗೆ ಅವರ ತಕರಾರಿರಲಿಲ್ಲ. ಅಂಥವರು ತಮ್ಮೊಡನಿದ್ದು ರಾಜಕೀಯವಾಗಿ ಉಪಯೋಗವಾಗುವಂತಿದ್ದರೆ ಆಗಲಿ ಎಂಬ ಧೋರಣೆ…!)

86ರ ಅಂದಿನ ಮೊದಲ ಒಡಕಿನಿಂದ ಸಂಘಟನೆಗೆ ದೊಡ್ಡ ರೀತಿಯ ಧಕ್ಕೆ ಒದಗಲಿಲ್ಲವೇನೋ ಸರಿ. ಆದರೆ ಅಂದು ಆರಂಭವಾದ ವಿಘಟನೆಯ ಇಳಿಹಾದಿಯ ಓಟ, ಅಷ್ಟಕ್ಕೇ ನಿಲ್ಲುವುದೂ ಸಾಧ್ಯವಿರಲಿಲ್ಲ… ಮುಂದಕ್ಕೆ ಏನೆಲ್ಲ ಆಗಿ ಎಷ್ಟೆಲ್ಲ ನಡೆದ ಮೇಲೆ 2002ರಲ್ಲಿ ಕೆಲವು ಗೆಳೆಯರು ‘ದಸಂಸ ಒಡಕುಗಳು- ಒಂದು ಅವಲೋಕನ’ ಎಂಬ ಕಿರುಹೊತ್ತಗೆ ತಂದರು. ಚಳವಳಿಗಳು, ಅದರಲ್ಲೂ ದಲಿತ ಚಳವಳಿ ಛಿದ್ರಗೊಂಡ ಕತೆ ತಿಳಿಯಬೇಕೆನ್ನುವವರು 25 ಪುಟಗಳ ಈ ಪುಟ್ಟ ಪುಸ್ತಕ ಓದಬೇಕು. ಆ ಹೊತ್ತಗೆ ಕೇವಲ ವಿಘಟನೆಯ ಚರಿತ್ರೆಯಲ್ಲ- ಕಳೆದುಹೋದ ಸಾಮ್ರಾಜ್ಯದ ಅವಶೇಷಗಳ ನಡುವೆ ನಿಂತು ಸುರಿಸಿದ ಕಂಬನಿ. ಪಶ್ಚಾತ್ತಾಪದ, ಆತ್ಮಶುದ್ಧಿಯ ಕಣ್ಣೀರು.

**

2002ರ ಏಪ್ರಿಲ್ 26ರಂದು ಬಂಗಾರಪೇಟೆ ತಾಲೂಕಿನ ನಾಗಲಾಪಲ್ಲಿಯಲ್ಲಿ ಜಮೀನು ವಿವಾದದಲ್ಲಿ ದಲಿತ ಮಹಿಳೆ ಯಶೋದಮ್ಮ ಮತ್ತು ಆಕೆಯ ಇಬ್ಬರು ಮಕ್ಕಳ ಬರ್ಬರ ಕಗ್ಗೊಲೆ ನಡೆಯಿತು. ಯಶೋದಮ್ಮನನ್ನು ತುಂಡು ತುಂಡು ಮಾಡಿದ ಹಂತಕರು, ಅಷ್ಟಕ್ಕೂ ಬಿಡದೆ ಆಕೆಯ ಮರ್ಮಾಂಗದಲ್ಲಿ ಕಟ್ಟಿಗೆ ತುರುಕಿದರು. ಅದಕ್ಕೆ ಎರಡೇ ವರ್ಷಗಳ ಹಿಂದೆ ಕಂಬಾಲಪಲ್ಲಿಯಲ್ಲಿ ದಲಿತರ ನರಮೇಧ ನಡೆದಿತ್ತು. ಅವೆರಡೂ ಸಂದರ್ಭಗಳಲ್ಲಿ ದಲಿತ ಚಳವಳಿಗಳು ತೋರಿದ ಕಾಟಾಚಾರದ ಪ್ರತಿಕ್ರಿಯೆಯಿಂದ ದಿಗ್ಭ್ರಮೆಗೊಂಡ ಕೆಲವು ದಲಿತ ಲೇಖಕ ಕಲಾವಿದರು (ದಲೇಕ) ‘ಏನಾದರೂ ಮಾಡಲೇಬೇಕೆಂದು’ ನಾಗಲಾಪಲ್ಲಿಯಲ್ಲೇ ಒಂದು ದಿನದ ಮೌನ ಪ್ರತಿಭಟನೆ ನಡೆಸಿದರು. ‘ಕಗ್ಗೊಲೆಯ ಅಂಗಳದಲ್ಲಿ ಒಂದು ದಿನದ ಮೌನ’ ಎಂಬ ಆ ಕಾರ್ಯಕ್ರಮ- ‘ಮುಂದೇನು?’ ಎಂಬ ಪ್ರಶ್ನೆಗೆ ದಾರಿಯಾಯಿತು. ಆ ಪ್ರಶ್ನೆಗೆ ಉತ್ತರವಾಗಿ ದಲಿತ ಚಳವಳಿಯ ತಾಯಿಬೇರಾದ ‘ದಲಿತ ಲೇಖಕ ಕಲಾವಿದರ’ ಬಳಗಕ್ಕೇ ಮರುಜೀವ ಬಂದಂತೆ ‘ದಲೇಕ’ ಅಸ್ತಿತ್ವಕ್ಕೆ ಬಂತು. ಈ ಹೊತ್ತಗೆಯನ್ನು ಪ್ರಕಟಿಸಿದ್ದು ಅದೇ ‘ದಲೇಕ’.

‘ಒಡಕಿನ ಮೂಲ ಕಾರಣಗಳನ್ನು ಶೋಧಿಸಲು’ ದಲೇಕ, ಎಲ್ಲ ದಲಿತ ಲೇಖಕರು, ಚಿಂತಕರು, ನೇತಾರರು, ಕಾರ್ಯಕರ್ತರು ಹಾಗೂ ಚಳವಳಿ ಬೆಂಬಲಿಗರ ಸಭೆ ಕರೆದು, ಅವರ ಮುಂದೆ ಈ ‘ಅವಲೋಕನ’ ಮಂಡಿಸಿ ಚರ್ಚೆಗೆ ಬಿಟ್ಟಿತು. ಆ ಹೊತ್ತಗೆ ಸಭೆಯ ಹಿನ್ನೆಲೆಯನ್ನು ಕಟ್ಟಿಕೊಟ್ಟಿದ್ದು ಹೀಗೆ:

…ಇದೀಗ ದಿನೇ ದಿನೇ ಚರಿತ್ರೆಯಲ್ಲಿ ಹಿಂದೆಂದೂ ಕಂಡಿರದಷ್ಟು ದಲಿತರ ಮೇಲಿನ ದ್ವೇಷ, ಕ್ರೌರ್ಯ ಪ್ರಕಟಗೊಳ್ಳುತ್ತಿವೆ. ಬೆಲ್ಚಿಯನ್ನು ಮೀರಿಸಿದ ಕಂಬಾಲಪಲ್ಲಿಯ ದಲಿತರ ಸಜೀವದಹನ, ವಣೇನೂರಿನ ಬೆತ್ತಲೆ ಪ್ರಕರಣ… ನಾಗಲಾಪಲ್ಲಿಯ ತಾಯಿ ಮಕ್ಕಳ ಕಗ್ಗೊಲೆ, ದೊಡ್ಡಬೆಲೆಯ ಪ್ರತೀಕಾರದ ಕಗ್ಗೊಲೆಗಳು, ಶಿಡ್ಲಘಟ್ಟದ ಮುತ್ತೂರಿನ ದಲಿತ ಯುವಕನ ಕೊಲೆ, ಹೀಗೆ ಮನುಕುಲವೇ ಬೆಚ್ಚಿ ಬೀಳುವಂತಹ ಬರ್ಬರ ಪ್ರಕರಣಗಳು ಸಂಭವಿಸಿವೆ. ಆದರೂ ಇಂತಹ ಹತ್ಯಾಕಾಂಡಗಳಿಗೆ ಪ್ರಬಲ ಸಾಮೂಹಿಕ ಪ್ರತಿರೋಧ ಕಂಡುಬಂದಿಲ್ಲ. ಇವು ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಭೌತಿಕ ಹಲ್ಲೆಯಾದರೆ ಇನ್ನು ದೇಶದ ಬದಲಾಗುತ್ತಿರುವ ಆರ್ಥಿಕ ನೀತಿ ಅವರನ್ನು ಹಸಿವು, ದಾರಿದ್ರ್ಯ, ನಿರುದ್ಯೋಗದ ದವಡೆಗೆ ನೂಕಿದೆ. ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಲಭ್ಯವಿದ್ದ ಮೀಸಲಾತಿ ಸೌಲಭ್ಯ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ‘ದಲಿತ ಮತ ಬ್ಯಾಂಕ್’ನ ಪರಿಕಲ್ಪನೆಯೇ ಬದಲಾಗಿಹೋಗಿರುವುದರಿಂದ ಹಾಗೂ ದಲಿತ ಚಳವಳಿಯ ನೇತಾರರ ಮುಖ್ಯವಾಹಿನಿ ರಾಜಕಾರಣದ ಮೋಹಿನಿ ಭಸ್ಮಾಸುರ ಆಟದಿಂದಾಗಿ ದಲಿತ ಅಸ್ತಿತ್ವ ರಾಜಕಾರಣದ ಅಡಿಪಾಯವೇ ಸಡಿಲುಗೊಂಡಿದೆ. ಹೀಗಾಗಿ ಕನಿಷ್ಠ ಪ್ರಜಾಸತ್ತಾತ್ಮಕ ಮಾನವ ಹಕ್ಕುಗಳಿಂದಲೂ ದಲಿತ ಸಮುದಾಯ ಇಂದು ವಂಚಿತವಾಗಿದೆ…

ಚಳವಳಿಯ ಆವರೆಗಿನ ಸ್ವರೂಪವನ್ನು ಸಾಕಷ್ಟು ವಿಸ್ತಾರವಾಗಿ, ಭಾರವಾದ ಎದೆಯಿಂದ ನಿರೂಪಿಸುವ ಮುಂದಿನ ಬರಹ, ದಲಿತ ಸಂಘರ್ಷ ಸಮಿತಿಯ ರಾಜಕೀಯ ನಿರ್ಧಾರವನ್ನು ಅವಲೋಕಿಸುವುದು ಹೀಗೆ:

…ಅದಮ್ಯ ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿದ್ದ ಇವರ (ದಲಿತ ಮುಖಂಡರ) ಕಣ್ಣುಗಳಿಗೆ, ಮುಖ್ಯವಾಹಿನಿಯ ಕಬಂಧಬಾಹುಗಳು ತಮ್ಮತ್ತ ಚಾಚಿ ಬರುತ್ತಿರುವ ಅಪಾಯದ ಸುಳಿವು ಕಾಣದೆ ಹೋಯಿತು. ಅಧಿಕಾರ ರಾಜಕಾರಣದ ಸಂಚಿನ ನೆರಳೊಂದು ಸಂಘಟನೆಯ ಒಳಗೆ ಸುಳಿಯತೊಡಗಿತು. ಅದು ಸಹಜ ಬೆಳವಣಿಗೆಯೂ ಆಗಿತ್ತು. ಅಷ್ಟರಲ್ಲಾಗಲೇ ರಾಜಕೀಯ ಅಧಿಕಾರವೊಂದೇ ಸಮಸ್ತ ದಲಿತ ಸಮಸ್ಯೆಗಳಿಗೆ ಕೀಲಿ ಕೈ ಎಂಬ ಅರಿವು ಸಂಘಟನೆಗಾಗಿತ್ತು. ಆದರೆ ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ಪಷ್ಟ ನಿಲುವು, ಖಚಿತ ಕಣ್ಣೋಟ ಸಾಧ್ಯವಾಗದೇ ಹೋಯಿತು… (ಇದು) ಸಮೂಹ ರಾಜ್ಯಾಧಿಕಾರದ ಬದಲಿಗೆ ವೈಯಕ್ತಿಕ ರಾಜಕೀಯ ಪ್ರಾತಿನಿಧ್ಯದ ‘ಮೋಹಿನಿ ಭಸ್ಮಾಸುರ’ ಆಟಕ್ಕೆ ನಾಂದಿಯಾಯಿತು…

ಮಹಾದೇವ ತಮ್ಮ ಮುನ್ನೋಟ ಹಾಗೂ ನೈತಿಕ ಬಲದಿಂದ ದಸಂಸದ ರಾಜಕೀಯ ಕ್ರಿಯಾಶೀಲತೆಗೆ ಪ್ರೌಢಿಮೆ ತಂದಿದ್ದೇನೋ ಹೌದು. ಆದರೆ ಅದನ್ನು ನಿರ್ವಹಿಸುವ ನಿಟ್ಟಿನಲ್ಲಿ ಸ್ಪಷ್ಟ ನಿಲುವು, ಖಚಿತ ಕಣ್ಣೋಟ ಸಾಧ್ಯವಾಗದೇ ಹೋದದ್ದರ ಹೊಣೆಯನ್ನೂ ಅವರೇ ಹೊರಬೇಕಾಯಿತು. ಮಹಾದೇವರ ಅಭಿಮಾನಿಗಳೂ ಸೇರಿದಂತೆ, ಎಲ್ಲರೂ ಅವರ ಮೇಲೆ ಇಂದಿಗೂ ಮಾಡುವ ಆಪಾದನೆ ಇದೇ.

ಅವರ ವಿರುದ್ಧದ ತಕರಾರುಗಳು ಇದಿಷ್ಟೇ ಅಲ್ಲ ಕೂಡ. 90ರ ದಶಕದಲ್ಲಿ ಆರಂಭವಾದ ವಿಭಜನೆಯ ವ್ಯಾಧಿಯನ್ನು ತಡೆಯುವುದಿರಲಿ, ತಮ್ಮದೇ ಗೊಂದಲಗಳ ಮೂಲಕ ಮಹಾದೇವ ಅದಕ್ಕೆ ಪರೋಕ್ಷವಾಗಿ ನೀರೆರೆದರು ಎಂಬ ಮಾತುಗಳೂ ಇವೆ. ಅಷ್ಟೇಕೆ, ‘ಎಡಗೈ ಬಲಗೈ ವಿಭಜನೆಗಳು ಮೂಲದಲ್ಲಿ ದೇವನೂರ ಮಹಾದೇವ ಮತ್ತು ಬಿ. ಕೃಷ್ಣಪ್ಪ ಎಂಬ ದಲಿತರೊಳಗಿನ ಎರಡು ಜಾತಿಧ್ರುವಗಳ ನಡುವಣ ಇಬ್ಭಾಗವೇ ಆಗಿತ್ತು’ ಎಂದು ಗೋವಿಂದಯ್ಯ ಬರೆದೂ ಬರೆದರು.

**

ನನ್ನ ಪ್ರಕಾರ ಎಲ್ಲಕ್ಕಿಂತ ಗುರುತರವಾದದ್ದು, ದೇವನೂರರು ರೈತಸಂಘದ ಪುಟ್ಟಣ್ಣಯ್ಯನವರ ಜೊತೆ ಸೇರಿ ಕಟ್ಟಿದ ‘ಸರ್ವೋದಯ ಕರ್ನಾಟಕ’ ಎಂಬ ರಾಜಕೀಯ ಪಕ್ಷ.

ಮುಖ್ಯ, ಸಂಘಟನೆಯಲ್ಲಿ ತಾನು ‘ಪೋಷಕ ನಟ’ ಮಾತ್ರ ಎಂದು ಮಹಾದೇವ ಎಷ್ಟೇ ಹೇಳಿಕೊಂಡರೂ ಒಂದು ದಶಕಕ್ಕೂ ಹೆಚ್ಚು ಕಾಲ ಚಳವಳಿಗೆ ನೈತಿಕ ದಿಕ್ಕು ನೀಡಿದ್ದೇ ಅವರು ಎಂಬುದನ್ನೂ; ಅವರು ಯಾವ ಸ್ಥಾನದಲ್ಲಿರಲಿ ಬಿಡಲಿ, ಇಡೀ ಸಂಘಟನೆ ಮಾರ್ಗದರ್ಶನಕ್ಕಾಗಿ ಅವರತ್ತಲೇ ಕತ್ತೆತ್ತಿ ನೋಡುತ್ತಿದ್ದುದನ್ನೂ ಇಲ್ಲಿ ಕಾಣಿಸಲೇಬೇಕು. ಆದರೆ ಮಹಾದೇವ ಸರ್ವೋದಯ ಕರ್ನಾಟಕ ದ ಮೂಲಕ ಚಳವಳಿ ರಾಜಕಾರಣದ ಸಾಧ್ಯತೆಗಳನ್ನೇ ಮುರುಟಿಸಿಬಿಟ್ಟರು. ಅಂದರೆ ಜನಾಂದೋಲನದ ರಾಜಕಾರಣವನ್ನು ಕುರಿ ಮಾಡಿ, ಅಧಿಕಾರ ರಾಜಕಾರಣದ ಹುಲಿಯ ಬಾಯಿಗೆ ತಂದೊಪ್ಪಿಸಿಬಿಟ್ಟರು. ಚಳವಳಿಯು ಅಧಿಕಾರ ರಾಜಕಾರಣಕ್ಕೆ ಶರಣು ಹೋದದ್ದರ ಪರಿಣಾಮವನ್ನು ‘ದಲೇಕ’ ಹೊತ್ತಗೆಗಿಂತ ಸಮರ್ಪಕವಾಗಿ ವಿವರಿಸಲು ಸಾಧ್ಯವಿಲ್ಲ:

…ಇದರ ಫಲವಾಗಿ ‘ದಸಂಸ’ದ ತುಂಬಿದ ಕೊಡಕ್ಕೆ ಒಂದೆರಡು ಒಡಕಿನ ಸಣ್ಣ ರಂಧ್ರಗಳು ಮೂಡಿ ಅದುವರೆಗೂ ಸಾವಿರಾರು ಜನರ ಶ್ರಮದ ಬೆವರು ತುಂಬಿದ ಕೊಡ ಸೋರತೊಡಗಿತು….

ಹಾಗೆ ‘ಕೊಡ ಸೋರತೊಡಗಿದ್ದು’ ಸರ್ವೋದಯಕ್ಕಿಂತಲೂ ಇನ್ನೂ ತೀರಾ ಹಿಂದೆಯೇ.

ಜನತಾ ಪರಿವಾರದ ಬೆಂಬಲಕ್ಕೆ ನಿಲ್ಲುವ 85ರ ನಿರ್ಧಾರದ ಹಿಂದೆ ಅಮಾಯಕ ನಿಸ್ಪೃಹತೆಯಿತ್ತು. ಆದರೆ ಒಮ್ಮೆ ತಗುಲಿದ ಅಧಿಕಾರ ರಾಜಕಾರಣದ ‘ಸೋಂಕು’ ದಲಿತ ಸಂಘಟನೆಗೆ ಹತ್ತಿದ ಗೆದ್ದಲಾಯಿತು. ರಾಜಕೀಯ ಆಕಾಂಕ್ಷೆಯೆಂಬುದು ಚಪಲವಾಯಿತು, ಗೀಳಾಯಿತು, ಕಡೆಗೆ ಆತ್ಮಘಾತುಕ ವ್ಯಸನವಾಗಿಹೋಯಿತು. ಮುಂದಿನ ಒಂದು ದಶಕದ್ದು- ದಲೇಕ ಬಣ್ಣಿಸಿದಂತೆ- ಮೋಹಿನಿ ಭಸ್ಮಾಸುರ ಆಟದ ಚರಿತ್ರೆಯೇ.

89ರ ಚುನಾವಣೆ ಬಂತು. ಆ ವೇಳೆಗಾಗಲೇ ಮತ್ತು ಅಲ್ಲಿಂದಾಚೆಗೆ, ಸಂಘಟನೆಯಲ್ಲಿ ರಾಜಕೀಯ ಬಿರುಗಾಳಿಯೇ ಬೀಸತೊಡಗಿತು. ಅಷ್ಟೇ ಅಲ್ಲ, ರಾಜಕೀಯ ನೂಕುನುಗ್ಗಲಿನ ಹುರುಪಿಗೆ ಸಮಸಮನಾಗಿ ಸಂಘಟನೆಯಲ್ಲಿ ಬಿರುಕಿನ ವಿಷಮ ಲಕ್ಷಣಗಳೂ ಒಡೆದು ಕಾಣತೊಡಗಿದವು. ಈ ಗುಂಪುಗುಳಿತನದ ವಾತಾವರಣದಲ್ಲೂ ಕೆಲವರು ಚಳವಳಿಯನ್ನು ಮತ್ತೆ ಹಳಿ ಮೇಲೆ ತರುವ ಪ್ರಯತ್ನಗಳನ್ನು ಕೈ ಬಿಟ್ಟಿರಲಿಲ್ಲ.

‘….ಬಿರುಕು ನಿವಾರಣೆಗಾಗಿ ಚಳವಳಿಯು ದಲಿತ ಸಾಂಸ್ಕೃತಿಕ ಪರಂಪರೆಯ ಆಶ್ರಯ ಪಡೆಯಬೇಕೆಂದು ಚಿಂತಿಸಿದ ಹೆಸರಾಂತ ಸಾಂಸ್ಕೃತಿಕ ಚಿಂತಕ ಕೆ. ರಾಮಯ್ಯ ಇದಕ್ಕಾಗಿ 1991ರ ವೇಳೆಗೆ ಬೆಂಗಳೂರಿನಲ್ಲಿ ಐತಿಹಾಸಿಕವಾದ ಬೃಹತ್ ಜನಕಲಾಮೇಳ ನಡೆಸಿದರು ಕೂಡ..’ ಎಂದು ಗೋವಿಂದಯ್ಯನವರ ಲೇಖನ ದಾಖಲಿಸುತ್ತದೆ. ಮುಂದಿನದನ್ನು ದಲೇಕ ಹೊತ್ತಗೆ ಬಣ್ಣಿಸುವುದು ಹೀಗೆ:

…’ಜನಕಲಾಮೇಳದ’ದ ಒಟ್ಟು ಆಶಯ ಇಡೀ ದಲಿತಲೋಕ ತನ್ನೊಳಗೆ ಅಡಗಿರುವ ಅಪಾರವಾದ ಸಾಂಸ್ಕೃತಿಕ ಜಲನಿಧಿಯನ್ನು ಕಂಡುಕೊಳ್ಳುವುದು, ಹಾಗೂ ತನ್ನೊಳಗಿನ ಆ ಜೀವದ್ರವ್ಯವನ್ನೇ ರಕ್ಷಾಕವಚವನ್ನಾಗಿ ಪರಿವರ್ತಿಸಿ ಅವಕಾಶವಾದಿ, ವೈಯಕ್ತಿಕ ಹಿತಾಸಕ್ತಿ ಪ್ರಧಾನ ರಾಜಕೀಯದ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವಂತೆ ಮಾಡುವುದೇ ಆಗಿತ್ತು. ಅಷ್ಟೇ ಅಲ್ಲದೆ ಸಮುದಾಯದ ಒಡಲಲ್ಲೇ ಹುದುಗಿರುವ ಸಂಪನ್ಮೂಲಗಳನ್ನೇ ನೀರು ಗೊಬ್ಬರವಾಗಿಸಿ ಬಿಡುಗಡೆಯ ಸಸಿಯೊಂದನ್ನು ಹೆಮ್ಮರವಾಗಿಸುವ ಕನಸಿನದಾಗಿತ್ತು. ಆದರೆ ಇಂತಹ ಸಸಿಯೊಂದನ್ನು ನೆಡಲು ಕೂಡ ಅವಕಾಶವಾಗದಂತೆ ಅವಕಾಶವಾದಿ ರಾಜಕಾರಣ ದಿಕ್ಕು ತಪ್ಪಿಸಿತು… ಈ ಅನಾಹುತದಿಂದಾಗಿ ಚಾರಿತ್ರಿಕ ಸಂದರ್ಭ, ಸಂಘಟನೆಯನ್ನು ಅನಿವಾರ್ಯವಾಗಿ ಪಕ್ಷ ರಾಜಕಾರಣದ ಬಾಗಿಲ ಮುಂದೆ ತಂದು ನಿಲ್ಲಿಸಿತ್ತು….

ಯಾಕೆಂದರೆ ಜನಕಲಾಮೇಳಕ್ಕೆ ರಾಂವಿಲಾಸ್ ಪಾಸ್ವಾನ್ರನ್ನು ಕರೆದು ರಾಜಕೀಯ ಮಸಾಲೆ ಬೆರೆಸಲು ಅದಾಗಲೇ ಕೆಲವರು ತಯಾರಾಗಿ ನಿಂತಿದ್ದರು! ಅಂದರೆ ಮೇಳದ ಯಶಸ್ಸು ಚಳವಳಿಯ ಅಂತಸ್ಥೈರ್ಯ ಹೆಚ್ಚಿಸಿತೋ ಬಿಟ್ಟಿತೋ, ಅದನ್ನು ರಾಜಕೀಯ ಬಂಡವಾಳವಾಗಿ ಬಳಸುವುದರಲ್ಲೇ ಹೆಚ್ಚಿನವರ ಆಸಕ್ತಿಯಿದ್ದಂತೆ ತೋರುತ್ತದೆ. ಅದಕ್ಕೆ ತಕ್ಕಂತೆ 91ರ ಚುನಾವಣೆಗಳಲ್ಲಿ ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಜನತಾ ಪರಿವಾರದ ಅಭ್ಯರ್ಥಿಯಾಗಿ ದಲಿತ ಸಂಘಟನೆಯ ಪ್ರತಿನಿಧಿಗೆ ಅವಕಾಶವೂ ಸಿಕ್ಕಿತು!

ಆಗ ಇಬ್ಬರು ಸ್ಥಳೀಯ ನಾಯಕರ ಜಟಾಪಟಿ ಬಗೆಹರಿಸಲು ಬಂದ ಬಿ. ಕೃಷ್ಣಪ್ಪನವರು ತಮ್ಮನ್ನೇ ಅಭ್ಯರ್ಥಿ ಎಂದು ಘೋಷಿಸಿಕೊಂಡುಬಿಟ್ಟರು! ಆ ಸಂದರ್ಭದಲ್ಲಿ ಅವರ ನಿರ್ಧಾರ ತಪ್ಪೆಂದು ಮನವರಿಕೆ ಮಾಡಲು ರಾಮಯ್ಯ ಇನ್ನಿಲ್ಲದಂತೆ ಪ್ರಯತ್ನಿಸಿದರು. ಸಾಧಾರಣವಾಗಿ ಹೇಳಿದವರ ಮಾತಿಗೆ ಹ್ಞೂಂಗುಡುತ್ತಿದ್ದ ಹಸುಗೂಸಿನಂಥ ಕೃಷ್ಣಪ್ಪನವರು ಆಗ ಕೇಳಲಿಲ್ಲ. ನಿಂತರು. ಹೀನಾಯವಾಗಿ ಸೋತರು.

ಇಷ್ಟು ಹೊತ್ತಿಗೆ ಪರಿಸ್ಥಿತಿ ಎಲ್ಲರ ಕೈ ಮೀರಿಹೋಗಿತ್ತು. ರಾಜಕೀಯ ಆಕಾಂಕ್ಷೆ ಯಾರ ನಿಯಂತ್ರಣಕ್ಕೂ ಸಿಗದ ಹುಚ್ಚುಕುದುರೆಯಾಗಿಬಿಟ್ಟಿತ್ತು. ಅಷ್ಟಾದರೂ, ಸಂಘಟನೆಯನ್ನು ಮೂಲಸ್ವರೂಪದಲ್ಲಿ ಹೋರಾಟದ ವೇದಿಕೆಯಾಗಿಯೇ ಉಳಿಸಿಕೊಳ್ಳುವ ಹಂಬಲ ಕೆಲವರಿಗಾದರೂ ಇತ್ತು.

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 4


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3

ನನ್ನ ಕುತೂಹಲವಿಷ್ಟೇ: ದಲಿತ ಚಳವಳಿ ಕೂಡ ರೈತಸಂಘದಷ್ಟೇ ಬಲಿಷ್ಠವಾಗಿತ್ತಾದರೂ, ರೈತಸಂಘದ ಭಾಷೆ ಅಥವಾ ಧೋರಣೆ ದಲಿತರಿಗೇಕೆ ಸಾಧ್ಯವಾಗಲಿಲ್ಲ? ಯಾಕೆಂದರೆ ರೈತಸಂಘಕ್ಕೆ ದಲಿತರಿಗಿಲ್ಲದ ಅನುಕೂಲವಿತ್ತು. ರೈತಸಂಘದ ತಿರುಳು, ಪರಂಪರಾಗತವಾಗಿ ಕರ್ನಾಟಕದಲ್ಲಿ ರಾಜಕೀಯ ಅಧಿಕಾರದ ಗುತ್ತಿಗೆ ಹಿಡಿದಿದ್ದ ಒಕ್ಕಲಿಗ, ಲಿಂಗಾಯಿತ ಸಮೂಹದ್ದೇ ಆಗಿತ್ತು. ಅರಸು ಬರುವವರೆಗೆ ಕರ್ನಾಟಕವನ್ನು ಮುಖ್ಯಮಂತ್ರಿಗಳಾಗಿ ಆಳಿದವರು ಲಿಂಗಾಯಿತರು, ಒಕ್ಕಲಿಗರು ಮಾತ್ರ. ಹಾವನೂರ್ ವರದಿಯಿಂದಾಗಿ ಹಿಂದುಳಿದ ವರ್ಗಗಳಿಗೆ ವ್ಯವಸ್ಥಿತ ಮೀಸಲಾತಿ ಸಿಕ್ಕುವವರೆಗೆ ಕಾಂಗ್ರೆಸ್ಸಿನಲ್ಲೂ ವೀರಪ್ಪ ಮೊಯ್ಲಿ, ಬಂಗಾರಪ್ಪ, ಧರಂಸಿಂಗ್ ರಂಥ ‘ಇತರರು’ ಮುಖ್ಯಮಂತ್ರಿ ಪದವಿ ಏರುವುದು ಸಾಧ್ಯವಾಗಿರಲಿಲ್ಲ!… ಹಾಗಾಗಿಯೇ ರೈತಸಂಘವನ್ನು ರೂಪಿಸಿದ್ದ ಆ ಜಾತಿ ಸಮುದಾಯಗಳಿಗೆ ಅಧಿಕಾರಯುಕ್ತ ಧೋರಣೆ ಸಹಜವಾಗಿಯೇ ಮೈಗೂಡಿತ್ತು ಎಂದರೆ, ಅದು ಚಳವಳಿಯ ನೈತಿಕ ಶಕ್ತಿಯನ್ನು, ಅದರ ಹಿಂದಿನ ಬೆವರನ್ನು ಅಲ್ಲಗಳೆದಂತೇನಲ್ಲ.

ಈ ಮೂಲಪ್ರವೃತ್ತಿ ರೈತ ಚಳವಳಿಯ ಉತ್ತುಂಗ ಕಾಲದಲ್ಲೂ ಮರೆಯಾಗಿರಲಿಲ್ಲ. 82-83ರ ಸುಮಾರಿನಲ್ಲಿ ಹಾಸನ ಜಿಲ್ಲೆಯಲ್ಲಿ ರೈತಸಂಘ ಕೆಲ ಕಾಲ ‘ಜನತಾ ನ್ಯಾಯಾಲಯ’ಗಳ ಪ್ರಯೋಗಕ್ಕೆ ಕೈ ಹಾಕಿತ್ತು. ಅಂದರೆ ಸ್ಥಳೀಯ ವ್ಯಾಜ್ಯಗಳಿಗೆ ಪೊಲೀಸ್ ಠಾಣೆ, ಕೋರ್ಟು ಕಚೇರಿ ಮೆಟ್ಟಿಲು ಹತ್ತದೆ ಊರ ಪ್ರಮುಖರೇ ಬಗೆಹರಿಸಿಕೊಳ್ಳುವ ಕ್ರಮ. ರೈತ ಚಳವಳಿ ಬಗ್ಗೆ ಅಪಾರ ಸಹಾನುಭೂತಿಯಿದ್ದ ನನ್ನ ಗೆಳೆಯರು ಈ ಪ್ರಯೋಗ ಕುರಿತು ಆಗ ರೋಮಾಂಚನಗೊಂಡು ಮಾಡುತ್ತಿದ್ದ ಬಣ್ಣನೆ ನನಗೀಗಲೂ ನೆನಪಿದೆ. ನಿಜ. ಸರ್ಕಾರದ ಮೇಲಿನ ಅವಲಂಬನೆ ಹಂತ ಹಂತವಾಗಿ ತಗ್ಗುತ್ತ ಬಂದು ಕ್ರಮೇಣ ಸ್ವಯಮಾಧಿಕಾರ ಸಾಧ್ಯವಾಗಬೇಕು ಎಂಬುದು ಉನ್ನತ ಆದರ್ಶವೇನೋ ಹೌದು; ಮತ್ತು ಚಳವಳಿಗಳ ಅಂತಿಮ ಗುರಿಯೂ ಅದೇ. ಸರಿ. ಆದರೆ ಹಳ್ಳಿಗಾಡಿನ ಅಧಿಕಾರದ ಹಂದರದಲ್ಲಿ ಯಾವ ಮಾರ್ಪಾಡೂ ತರದೆ, ಅದರ ಚೌಕಟ್ಟಿನಲ್ಲೇ ಕೊಡಮಾಡುವ ನ್ಯಾಯ, ಎಷ್ಟರ ಮಟ್ಟಿಗೆ ನ್ಯಾಯವಾಗಿರಲು ಸಾಧ್ಯ ಎಂಬ ಅನುಮಾನಗಳು ನನಗೆ ಆಗಲೂ ಇದ್ದವು. ಆ ಅನುಮಾನ ನಿರಾಧಾರವಲ್ಲವೆಂದು, ರಾಜ್ಯದಲ್ಲಿ ಮುಂದಕ್ಕೆ ಜಿಲ್ಲಾ ಪಂಚಾಯ್ತಿ ಇತ್ಯಾದಿಗಳು ಬಂದ ಮೇಲೆ ನಿಸ್ಸಂದಿಗ್ಧವಾಗಿ ಸಾಬೀತಾಗಿಹೋಯಿತು.

ನಜೀರ್ ಸಾಬ್ ಅಧಿಕಾರ ವಿಕೇಂದ್ರೀಕರಣ ಪ್ರಯೋಗಕ್ಕೆ ಕೈ ಹಾಕಿ (1986) ಜಿಲ್ಲಾ ಪಂಚಾಯ್ತಿ, ಮಂಡಲ್ ಪಂಚಾಯ್ತಿಗಳನ್ನು ರೂಪಿಸಿದ ಮೇಲೆ, ಒಮ್ಮಿಂದೊಮ್ಮೆಲೇ ದಲಿತರ ಮೇಲಿನ ದೌರ್ಜನ್ಯಗಳು ಇನ್ನಷ್ಟು ಹೆಚ್ಚಿದಂತೆ, ಕರಾಳವಾದಂತೆ ಕಾಣತೊಡಗಿತು. ಬೆಂಡಿಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿದ್ದು (1987) ಆ ದೌರ್ಜನ್ಯಗಳ ಪರಾಕಾಷ್ಠೆ. (ಬೆಂಡಿಗೇರಿಯಲ್ಲಿ ದೌರ್ಜನ್ಯ ಎಸಗಿದವರು- ಲಿಂಗಾಯಿತರು). ಮತ್ತು ಇಂಥ ಬಹುಪಾಲು ದೌರ್ಜನ್ಯಗಳ ಹಿಂದೆ ಗ್ರಾಮ ಮಂಚಾಯ್ತಿ, ಮಂಡಲ ಪಂಚಾಯ್ತಿ ಸದಸ್ಯರೇ ಇದ್ದರು! ಇದರರ್ಥ, ದಲಿತ ದ್ವೇಷಿಗಳೇ ಹಳ್ಳಿ ಹಳ್ಳಿಗಳಲ್ಲಿ ಅಧಿಕಾರಕ್ಕೆ ಬಂದರು ಎಂದಲ್ಲ; ಈ ವಿಕೇಂದ್ರೀಕರಣ ಪ್ರಯೋಗವೂ ಮೊದಮೊದಲು ಪರಂಪರಾಗತ ಅಧಿಕಾರ ಕೇಂದ್ರಗಳ ಸ್ವರೂಪವನ್ನೇ ಗಟ್ಟಿಗೊಳಿಸಿತು ಎಂದಷ್ಟೇ. ಎಲ್ಲ ಸಮುದಾಯಗಳಿಗೂ ಸ್ಥಳೀಯ ಆಡಳಿತದಲ್ಲಿ ಸಮಾನ ಪಾಲು ದೊರೆಯತೊಡಗಿದ್ದು ನಂತರವೇ. ಆದರೆ ಆ ಹಂತ ಬರುವ ಮುಂಚೆ ಹೊಸ ರಾಜಕೀಯ ಅಧಿಕಾರವೂ, ಸಾಮಾಜಿಕ ಅಧಿಕಾರವಿದ್ದ ‘ಉಳ್ಳವರ’ ಕೈಗೇ ಸೇರಿತ್ತು.

ರೈತಸಂಘ ಹೋಳಾದ ಮೇಲೆ, ಸಿಡಿದು ಹೋದ ಹೆಚ್ಚಿನವರು ನೆಲೆ ಕಂಡುಕೊಂಡಿದ್ದು,- ಆಗಂತೂ ಒಕ್ಕಲಿಗ ಲಿಂಗಾಯಿತರದ್ದೇ ಪಕ್ಷವಾಗಿದ್ದ ಜನತಾ ಪರಿವಾರದಲ್ಲೇ ಎಂಬುದೂ ಆಕಸ್ಮಿಕವಲ್ಲ… ಅಧಿಕಾರಿಯ ಕೊರಳಪಟ್ಟಿ ಹಿಡಿಯುವ ‘ಆತ್ಮವಿಶ್ವಾಸ’,- ಇಂಥ ಪರಂಪರಾಗತ ಅಧಿಕಾರದ ನೆನಪುಗಳಿರದ ದಲಿತ ಸಂಘಟನೆಗೆ ದಕ್ಕುವುದು ಸಾಧ್ಯವಿರಲಿಲ್ಲ.

ಇನ್ನು ದಲಿತ ಚಳವಳಿಯ ಸ್ವರೂಪವನ್ನು ಅರಿಯಲು ಒಂದೇ ಒಂದು ಕಾರ್ಯಕ್ರಮದ ಉದಾಹರಣೆ ಸಾಕು: ಉದ್ದಕ್ಕೂ ಅನಿವಾರ್ಯವಾಗಿ ಭೂಹೋರಾಟಗಳು ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟನೆಯಲ್ಲೇ ಜೀವ ಸವೆಸಿದ ದಸಂಸ, ರಾಜ್ಯದಲ್ಲಿ ಒಮ್ಮೆ ಸ್ವಾತಂತ್ರ್ಯೋತ್ಸವಕ್ಕೆ ಆಯೋಜಿಸಿದ ಕಾರ್ಯಕ್ರಮವದು. (ಸಂಘರ್ಷ ಸಮಿತಿಯ ಭೂಹೋರಾಟಗಳಿಂದಾಗಿ, ದಲಿತರೂ ಸೇರಿದಂತೆ ರಾಜ್ಯದಲ್ಲಿ ಎಲ್ಲ ಜಾತಿಯ ಭೂಹೀನರ ಒಡೆತನಕ್ಕೆ ಸಿಕ್ಕಿದ ಒಟ್ಟು ಜಮೀನು- ನಾಲ್ಕು ಲಕ್ಷ ಎಕರೆ!) ಅಂದು ಊರೂರುಗಳಲ್ಲಿ ದಲಿತ ಕೇರಿಯ ಪ್ರವೇಶದಲ್ಲಿ ಒಂದು ಗಡಿಗೆ ತುಂಬ ನೀರು ಇಟ್ಟುಕೊಂಡ ದಲಿತರು, ‘ನಾವು ಇನ್ನೇನೂ ಕೊಡಲಾರೆವು. ನಮ್ಮದೊಂದು ಲೋಟ ನೀರು ಕುಡಿದು ಹೋಗಿ’ ಎಂದು ಊರಿನ ಎಲ್ಲ ಜಾತಿ ಸಮುದಾಯಗಳನ್ನು ಆಹ್ವಾನಿಸಿದರು! ‘ದಲಿತ ಚಳವಳಿ ಬ್ರಾಹ್ಮಣರಿಗೂ ಬಿಡುಗಡೆ ಕೊಡುವಂತಿರಬೇಕು’ ಎನ್ನುತ್ತ ದೇವನೂರರು ರೂಪಿಸಿದ ಆ ಕಾರ್ಯಕ್ರಮದ ಮೂಲಕ ಗಾಂಧಿಯ ತುಣುಕೊಂದು ಮತ್ತೆ ಹುಟ್ಟಿ ಬಂದಂತಾಗಿತ್ತು. ನನ್ನ ಕಣ್ಣಲ್ಲಿ ನೀರು ತರಿಸಿದ ಏಕೈಕ ಸ್ವಾತಂತ್ರ್ಯೋತ್ಸವವದು. ಊರೂರುಗಳಲ್ಲಿ ಗಮನಾರ್ಹ ಯಶಸ್ಸನ್ನೂ ಪಡೆದ ಈ ಕಾರ್ಯಕ್ರಮದ ಹಿಂದಿನ ಉದಾತ್ತ ಅಂತಃಕರಣ,’ದೊಡ್ಡ ಮನಸ್ಸ’ನ್ನು- ರೈತಸಂಘದ ಧೋರಣೆಗೆ ಹೋಲಿಸಿದರೆ, ಅಂಥ ‘ಪರಿವರ್ತನೆ’ಯ ಕಾಲಘಟ್ಟದಲ್ಲೂ ನಮ್ಮ ಮೂಲ ಸಾಮಾಜಿಕ ಹಂದರ ಅಲ್ಲಾಡಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ…

ಇಷ್ಟು ಹೇಳುತ್ತ ಅವೆರಡು ಸ್ವಾಭಿಮಾನ ಚಳವಳಿಗಳ ಅಭೂತಪೂರ್ವ ಸಾಧನೆಗೆ, ತಂದ ಸಂಚಲನಕ್ಕೆ ಕುರುಡಾಗಬಾರದು. ಆ ಚಳವಳಿಗಳು ತೆತ್ತ ಬೆಲೆ; ಅನುಭವಿಸಿದ ಸಾವು ನೋವು, ಪ್ರಯಾಸ, ಸಂಕಟ, ಪರಿಶ್ರಮ; ಎದುರಿಸಿದ ಎಡರು ತೊಡರು, ಸಂದಿಗ್ಧಗಳು… ಎಲ್ಲವೂ ವಿರಾಟ್ ಸ್ವರೂಪದ್ದೇ. ನಮ್ಮ ಪಾಲಿಗೆ ಆಗಿನ ಸಂಭ್ರಮ, ಹುರುಪು, ಹುಂಬತನಗಳೆಲ್ಲ ಈಗಲೂ ನಲ್ಮೆಯ ನೆನಪುಗಳೇ. ‘ಅಕಾರಣ ಪ್ರೀತಿ, ಸಕಾರಣ ಸಿಟ್ಟು’ ನಮ್ಮ ನೆಚ್ಚಿನ ಮಂತ್ರವಾಗಿದ್ದ ಕಾಲವದು. ಆ ಸಾಮಾಜಿಕ ಚಳವಳಿಗಳಿಗೆ ಪೂರಕವಾಗಿಯೇ ಉದಿಸಿದ ಭಾಷಾ ಚಳವಳಿ, ಲಂಕೇಶ್ ಪತ್ರಿಕೆ, ದೇವರಾಜ ಅರಸರ ಆಡಳಿತಾತ್ಮಕ ಕ್ರಾಂತಿ, ನಾವೇ ಮಾಡಿದ ‘ಮುಂಗಾರು’ ದಿನಪತ್ರಿಕೆ, ‘ಸುದ್ದಿ ಸಂಗಾತಿ’ ವಾರಪತ್ರಿಕೆ… ಎಲ್ಲವೂ ಒಂದೊಂದು ಕಾಲಘಟ್ಟದಲ್ಲಿ ಸಾಧ್ಯವಾಗುವ ಮಹಾನ್ ಚೈತನ್ಯ ಸ್ಫೋಟದ ಕುರುಹುಗಳು.

ಮತ್ತೆ ದಲಿತ ಚಳವಳಿಗೆ ಬಂದರೆ ಅದರ ನೈತಿಕ ಶಕ್ತಿಯ ಕುರುಹಾಗಿ ಕವಿ ಸಿದ್ದಲಿಂಗಯ್ಯನವರು ದಾಖಲಿಸುವ ಹಾಸನ ಜಿಲ್ಲೆಯ ಒಂದು ‘ಅತಿಮಾನುಷ’ ಪ್ರಕರಣ ನೋಡಬೇಕು:

ಹಾಸನ ಜಿಲ್ಲೆಯ ಒಂದು ಹಳ್ಳಿಯಲ್ಲಿ ಗ್ರಾಮದೇವತೆ ಪೂಜಾರಿಗೆ ವಾರಕ್ಕೊಮ್ಮೆ ಮೈದುಂಬುತ್ತಿತ್ತು. ಪೂಜಾರಿಯು ಮೇಲುಜಾತಿಗೆ ಸೇರಿದವರು. ದಲಿತ ವ್ಯಕ್ತಿಯೊಬ್ಬ ತನ್ನ ಕಷ್ಟ ಪರಿಹಾರಕ್ಕಾಗಿ ಆ ದೇವತೆಗೆ ಮೊರೆಯಿಡಲು ಪ್ರತಿ ವಾರವೂ ಬರುತ್ತಿದ್ದ. ಅದೇ ಗ್ರಾಮದ ಬಲಾಢ್ಯನೊಬ್ಬ ಈ ಬಡ ದಲಿತನಿಗೆ ಅಪಾರ ಕಿರುಕುಳ ನೀಡುತ್ತಿದ್ದ. ಬಲಾಢ್ಯನಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಈ ಮುಗ್ಧ ದಲಿತ ಗ್ರಾಮದೇವತೆಯಲ್ಲಿ ಬೇಡಿಕೊಳ್ಳುತ್ತಿದ್ದ.

ಮೂರು ನಾಲ್ಕು ವಾರಗಳು ದೇವತೆಯ ಬಳಿ ಹೋದರೂ ದಲಿತನಿಗೆ ಯಾವುದೇ ಪರಿಹಾರ ದೊರೆಯಲಿಲ್ಲ. ದಲಿತ ಬೇಸರದಿಂದ ಒಮ್ಮೆ ದೇವತೆಯನ್ನು ‘ತಾಯಿ, ಇಷ್ಟು ದಿನಗಳಿಂದ ಬಂದರೂ, ನನಗೆ ದಿಕ್ಕು ತೋರಿಸುತ್ತಿಲ್ಲ, ಯಾಕವ್ವಾ?’ ಎಂದು ಪ್ರಶ್ನಿಸಿದ. ಈ ಪ್ರಶ್ನೆಯಿಂದ ದೇವತೆ ವಿಚಲಿತವಾಗಿ ‘ನಿನ್ನ ಕಷ್ಟ ಪರಿಹರಿಸಲು ನನ್ನಿಂದ ಸಾಧ್ಯವಿಲ್ಲ’ ಎಂದು ತನ್ನ ಅಸಹಾಯಕತೆ ತೋಡಿಕೊಂಡಿತು. ‘ನಾನೇನು ಮಾಡಲಿ ತಾಯಿ?’ ಎಂದು ಈತ ಕೇಳಿದ. ‘ದಲಿತ ಸಂಘ ಸೇರು. ಹೋರಾಡು’ ಎಂದು ದೇವತೆ ಅಪ್ಪಣೆ ಮಾಡಿತು…!

ಹೀಗೆ ‘ದೇವತೆಗಳ ಆಶೀರ್ವಾದ ಪಡೆದೇ’ ಬಂದಂತಿದ್ದ ಸಂಘಟನೆಗಳು ನಿತ್ರಾಣವಾಗತೊಡಗಿದ್ದು; ಆ ಅಖಂಡ ಎಚ್ಚರದ ವಾತಾವರಣ ಹಳಸತೊಡಗಿದ್ದು ಯಾವಾಗಿನಿಂದ? ನಾಡನ್ನೇ ಆವರಿಸಿದ್ದ ಆ ಮಟ್ಟಿನ ಜಾಗೃತಿಗೆ ತುಕ್ಕು ಹಿಡಿಯತೊಡಗಿದ್ದು ಯಾವಾಗ? ಹೇಗೆ? ಯಾಕೆ?

ಈ ಪ್ರಶ್ನೆಗೆ ಆ ಸಂಘಟನೆಗಳ ರಾಜಕೀಯ ನಡಾವಳಿಯಲ್ಲೇ ಉತ್ತರ ಹುಡುಕಬೇಕು.

ಇಂದಿರಾ ಗಾಂಧಿ ಇರುವವರೆಗೆ ದಲಿತ ಚಳವಳಿ ಒಂದು ಸಂಘಟನೆಯಾಗಿ ಆರಿಸಿಕೊಂಡಿದ್ದ ಹಾದಿ- ಚುನಾವಣೆಗಳ ಬಹಿಷ್ಕಾರದ್ದು. ಸಂಘಟನೆಯ ರಾಜಕೀಯ ಧೋರಣೆಯೇ ಅದು. ಆ ‘ಎಳಸು’ ನಿಲುವನ್ನು ಸರಿ ಮಾಡಲು ದೇವನೂರ ಮಹಾದೇವ 80ರ ದಶಕದ ಆರಂಭದಲ್ಲಿ ಪಟ್ಟು ಹಿಡಿದು ನಿಂತರು. ಮಂಗಳೂರು ಮತ್ತು ಹಾಸನಗಳಲ್ಲಿ ದಸಂಸ ರಾಜ್ಯಸಮಿತಿ ಸಭೆ. ಅಲ್ಲಿ ಎರಡು ಮುಖ್ಯ ವಿಷಯಗಳ ಬಗ್ಗೆ ತೀರ್ಮಾನವಾಗಬೇಕೆಂದು ಮಹಾದೇವ ಹಟ ಹಿಡಿದರು. ಒಂದು ಚುನಾವಣೆ; ಇನ್ನೊಂದು ಹಿಂಸೆ-ಅಹಿಂಸೆಯ ಪ್ರಶ್ನೆ. “ಅಲ್ರಪ್ಪ, ಎಷ್ಟೋ ದೇಶಗಳಲ್ಲಿ ಮತದಾನದ ಹಕ್ಕೇ ಇಲ್ಲ. ಕೆಲವು ಕಡೆ ಹೆಂಗಸರಿಗೆ ಮತದಾನವಿಲ್ಲ. ಹೀಗಿರುವಾಗ ನಾವು ಮತದಾನ ಬಹಿಷ್ಕರಿಸಿ ಕೂತರೆ, ಸರ್ಕಾರ ಹೀಗೂ ಮಾಡಬಹುದು: ನಿಮಗೆ ಹೇಗಿದ್ದರೂ ಮತದಾನ ಬೇಕಿಲ್ಲವಲ್ಲ, ನಿಮಗ್ಯಾಕೆ ಕಷ್ಟ? ದಲಿತರಿಗೆ ಮತದಾನದ ಹಕ್ಕಿಲ್ಲ ಅಂತ ಸರ್ಕಾರವೇ ಕಾನೂನು ಮಾಡಿಬಿಡುತ್ತೇವೆ ಅಂದರೆ, ಆಗ ನಾವೇನು ಮಾಡುತ್ತೇವೆ? ‘ನಮ್ಮ ರಕ್ತ ಚೆಲ್ಲಿದರೂ ಸರಿ, ಮತದಾನದ ಹಕ್ಕು ಬೇಕು’ ಅನ್ನುತ್ತೇವೆ! ಈಗ ಅನಾಯಾಸವಾಗಿ ಆ ಹಕ್ಕಿದೆ. ಅದನ್ನು ಗೌರವಿಸೋಣ ಎಂದು ವಿವರಿಸಿದಾಗ ಎಲ್ಲರೂ ಕಕ್ಕಾಬಿಕ್ಕಿಯಾದರು. ಹಾಗೇ ಹಿಂಸೆಯ ಪ್ರಶ್ನೆ. ‘ಚುನಾವಣೆ ಬೇಡ, ಅಹಿಂಸೆ ಬೇಡ ಅನ್ನುವುದಾದರೆ ನಾವು ನಕ್ಸಲೀಯರಾಗಬೇಕಾಗುತ್ತೆ’ ಎಂದು ಮಹಾದೇವ ಹೇಳಿದಾಗಲೂ ಗೆಳೆಯರಿಗೆ ದಿಕ್ಕು ತೋಚದಂತಾಯಿತು. ಇವೆರಡೂ ಪ್ರಶ್ನೆಗಳು ಅಂದೇ ಬಗೆಹರಿಯದಿದ್ದರೂ, ದಲಿತ ಚಿಂತನೆಯಲ್ಲಿ ದೊಡ್ಡದೊಂದು ಪಲ್ಲಟಕ್ಕೆ ಈ ಮಾತುಗಳೇ ನಾಂದಿಯಾದವು.

ಕರ್ನಾಟಕದಲ್ಲಿ ಆಗ ಗುಂಡೂರಾಯರ ದರ್ಬಾರಿನ ಕಾಲ. ಇಡೀ ನಾಡು ಕಾಂಗ್ರೆಸ್ ವಿರೋಧವನ್ನೇ ಉಸಿರಾಡುತ್ತಿತ್ತು. ಅಷ್ಟೂ ಕಾಲ ಅವಿರತವಾಗಿ ಕಾಂಗ್ರೆಸ್ಸಿನ ಠೇಂಕಾರ, ನಿರಂಕುಶತೆ, ಜೋಭದ್ರಗೇಡಿತನ, ಭಕ್ಷಣೆಗಳನ್ನು ಕಂಡ ಜನತೆ ರೋಸಿಹೋಗಿದ್ದರು. ಕಾಂಗ್ರೆಸ್ ಬಗ್ಗೆ ಜನರಲ್ಲಿ ಎಂಥ ಹೇವರಿಕೆ ಹುಟ್ಟಿತ್ತೆಂದರೆ, ಈ ನಾಡು ಕಂಡ ಸರ್ವಶ್ರೇಷ್ಠ ಮುಖ್ಯಮಂತ್ರಿ ದೇವರಾಜ ಅರಸರ ಕೊಡುಗೆಯೂ ಕಾಂಗ್ರೆಸ್ಸಿನ ಒಟ್ಟಾರೆ ದುರ್ನಾತದಲ್ಲಿ ಮುಚ್ಚಿಹೋಗಿದೆ. (ಅರಸು ಕುರಿತು ನಮಗೆ ಈ ತಿಳುವಳಿಕೆ ಆಗ ಇರಲಿಲ್ಲ ಎಂಬ ಮಾತು ಬೇರೆ.) ಅರಸು ಆಡಳಿತದ ಸರಿಯಾದ ಮೌಲ್ಯಮಾಪನವೇ ಇಂದಿಗೂ ಸಾಧ್ಯವಾಗಿಲ್ಲ ಎನ್ನುವುದು ಕಾಂಗ್ರೆಸ್ ಕುರಿತ ಸಗಟು ಜನಾಭಿಪ್ರಾಯವೇ ಹೊರತು, ಅರಸು ಕುರಿತ ವ್ಯಾಖ್ಯಾನವಲ್ಲ. ಅರಸರ ಈ ‘ಶ್ರೇಷ್ಠ’ದ ಬೆನ್ನಿಗೇ ಬಂದಿದ್ದು ಗುಂಡೂರಾಯರ ‘ಕನಿಷ್ಠ’. ಕರ್ನಾಟಕದಲ್ಲಿ ಕಾಂಗ್ರೆಸ್ ಶವಪೆಟ್ಟಿಗೆಗೆ ಮೊಳೆ ಹೊಡೆಯಲು ಅಷ್ಟು ಸಾಕಿತ್ತು. ‘ಲಂಕೇಶ್ ಪತ್ರಿಕೆ’ ಪ್ರಸಾರ ಉತ್ತುಂಗ ತಲುಪಿದ್ದು, ಆ ಕಾಂಗ್ರೆಸ್- ಗುಂಡೂರಾವ್ ವಿರೋಧಿ ಅಲೆಯಲ್ಲಿ ಎಂಬುದೇ ಆಗಿನ ಸಾಮೂಹಿಕ ಮನಸ್ಥಿತಿಯ ದ್ಯೋತಕ. ರೈತಸಂಘವೂ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ರೈತರಿಗೆ ಕರೆ ನೀಡಿತ್ತು. ಆದರೆ ದಲಿತ ಸಮೂಹ? ಕಾಂಗ್ರೆಸ್ಸು ಅಷ್ಟೂ ಕಾಲ ದಲಿತರನ್ನು ಗುತ್ತಿಗೆಗೆ ಪಡೆದಿತ್ತು. ಅಂಥ ವಾತಾವರಣದಲ್ಲಿ ಇಂದಿರಾ ಹತ್ಯೆಯಾಯಿತು. (‘ಇಂದಿರಾಗಾಂಧಿ ಸತ್ತಾಗ ದಲಿತರು ಅತ್ತ ಕಣ್ಣೀರು ಒಂದು ಸಮುದ್ರದಷ್ಟಾಗಬಹುದು’ ಎಂದು ಮಹಾದೇವ ಕರಪತ್ರ ಬರೆದಿದ್ದು ಆಗಲೇ). ಒಂದು ಲೆಕ್ಕದಲ್ಲಿ ಇಂದಿರಾ ಸಾವಿನೊಂದಿಗೆ ದಲಿತರ ಮಟ್ಟಿಗೆ ಕಾಂಗ್ರೆಸ್ಸಿನ ಋಣ ಹರಿಯಿತು. ಇಡೀ ದಲಿತ ಸಮೂಹವನ್ನು ಕಾಂಗ್ರೆಸ್ ವಿರೋಧಿ ನಿಲುವಿಗೆ ಒಗ್ಗಿಸುವುದು ಅಂದಿನ ಚಾರಿತ್ರಿಕ ಅಗತ್ಯವೂ ಆಗಿತ್ತು. ಕಾಂಗ್ರೆಸ್ಸಿನ ಹಿಡಿತದಿಂದ ದಲಿತರನ್ನು ಪಾರು ಮಾಡಲು ಆಗ ಕಣ್ಣೆದುರಿಗಿದ್ದ ಆಯ್ಕೆ ಒಂದೇ- ಕಾಂಗ್ರೆಸ್ಸೇತರ ಜನತಾ ಪಕ್ಷಕ್ಕೆ ಸಕ್ರಿಯ ಬೆಂಬಲ ಘೋಷಿಸುವುದು. (ಹಾಗೆಯೇ ಕಾಲಾಂತರದಲ್ಲಿ ದಲಿತ ಚಳವಳಿ ಅಹಿಂಸೆಯನ್ನೇ ತನ್ನ ಮಾರ್ಗವಾಗಿ ಸ್ವೀಕರಿಸಿತು ಕೂಡ.)

ಗುಂಡೂರಾವ್ ನಂತರ ಅನಿರೀಕ್ಷಿತವಾಗಿ ಅಧಿಕಾರಕ್ಕೆ ಬಂದ ರಾಮಕೃಷ್ಣ ಹೆಗಡೆ (1983), ಬರುವಾಗಲೇ ಸಜ್ಜನ ಸೌಜನ್ಯಮೂರ್ತಿಯಾಗಿ ಕಂಡು, ಜನಸಾಮಾನ್ಯರಲ್ಲಿ ಹೊಸ ಭರವಸೆ, ಸಾರ್ಥಕ್ಯಭಾವ ತಂದಿದ್ದರು. ಇನ್ನೊಂದೆಡೆ, ತಮ್ಮ ಇಂಥ ಜನಾನುರಾಗವನ್ನೂ ಲೆಕ್ಕಿಸದೆ ತಮ್ಮ ವಿರುದ್ಧ ಕಠೋರ ವಿಮರ್ಶಾಧೋರಣೆ ತಳೆದಿದ್ದ ಚಳವಳಿಗಳನ್ನು- ವಿಶೇಷವಾಗಿ ರೈತ ಚಳವಳಿಯನ್ನು ಹಣಿಯಲು ಹೆಗಡೆ ಒಳಗಿಂದೊಳಗೇ ಕತ್ತಿ ಮಸೆಯತೊಡಗಿದರು. ದಲಿತರತ್ತ ಸ್ನೇಹ ಹಾಗೂ ರೈತರ ದಮನ- ಇದು ಅವರು ಅನುಸರಿಸಿದ ತಂತ್ರ. ಆದರೆ ನಿಜಕ್ಕೂ ಶಕ್ತವಾದ ಚಳವಳಿಗಳು ಅಷ್ಟಕ್ಕೇ ನಿಸ್ತೇಜವಾಗಬೇಕಿರಲಿಲ್ಲ. ವಿಷಯವೆಂದರೆ, ಜನಸಮೂಹದ ಒಲವು ಹೆಗಡೆ ಪರ ಇದ್ದು, ಅವರ ವಿರುದ್ಧದ ಟೀಕೆಗಳನ್ನು ಸಹಿಸಲು ಜನರೇ ತಯಾರಿರಲಿಲ್ಲ. ಅದುವರೆಗೆ ಸಕರ್ಾರವನ್ನು ಎದುರು ಹಾಕಿಕೊಂಡಿದ್ದ ಚಳವಳಿಗಳು ಆಗ ‘ಕಾಂಗ್ರೆಸ್ ವಿರೋಧಿ’ಯಾಗಿ ಜನಸ್ತೋಮದ ಚಡಪಡಿಕೆಯನ್ನು ಪ್ರತಿನಿಧಿಸುತ್ತಿದ್ದವು. ಆದರೆ ‘ಜನಾನುರಾಗಿ’ ಹೆಗಡೆ ಬಂದೊಡನೆ, ಜನಕ್ಕೆ ಇದೇ ಚಳವಳಿಗಳು ಅನಗತ್ಯ ಕಿರಿಕಿರಿಯಾಗಿ ಗೋಚರಿಸಿರಬೇಕು. ಜೊತೆಗೆ ಆಗ ಬ್ರಾಹ್ಮಣ ಹೆಗಡೆಯವರನ್ನು ಎತ್ತಿ ಮೆರೆಸಿದ ಮೇಲ್ಜಾತಿ ಮಾಧ್ಯಮಗಳ ಪಾತ್ರವೇನೂ ಕಮ್ಮಿಯಲ್ಲ. ರೇವಜಿತು, ಬಾಟ್ಲಿಂಗ್, ಫೋನ್ ಕದ್ದಾಲಿಕೆ… ಹೆಗಡೆ ಕಾಲದಲ್ಲಿ ಹಗರಣಗಳಿಗೇನೂ ಕೊರತೆಯಿರಲಿಲ್ಲ. ಆದರೆ ಕೊನೆ ಗಳಿಗೆವರೆಗೆ ಅವರಿಗೆ ಮಾಧ್ಯಮಗಳ ಬೆಂಬಲ ಕುಗ್ಗಲಿಲ್ಲ!… ‘ಇಂಡಿಯಾ ಟುಡೇ’ ಅವರನ್ನು ಮುಂದಿನ ಪ್ರಧಾನಿಯಾಗಿಯೇ ಕಂಡಿರಲಿಲ್ಲವೇ?

(ಮುಂದುವರೆಯುವುದು)

ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 3


– ಎನ್.ಎಸ್. ಶಂಕರ್


ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 1
ದಲಿತ ರೈತ ಚಳವಳಿಗಳು : ಈಗ ಅಳುವವರೂ ಇಲ್ಲ – 2

ಬಾಳ್ಳುಪೇಟೆ ರೈತ ದಲಿತರಿಬ್ಬರ ಒಗ್ಗಟ್ಟಿನ ಪ್ರಯೋಗಶಾಲೆಯಾಗಿತ್ತು. ರೈತಸಂಘ ಪಾಳೇಗಾರರಿಗೆ ‘ಥ್ರೆಟ್’ ನೀಡಬಲ್ಲ ಸಂಘಟನೆಯಾಗಿತ್ತು. ಅಷ್ಟೆಲ್ಲ ಆಗಿಯೂ ‘ಲಿಂಗಾಯಿತರು ರೈತಸಂಘ ಬಿಟ್ಟು ಹೋಗಿಬಿಡಬಹುದು’ ಎಂಬ ಹುಷಾರಿನ ಲೆಕ್ಕಾಚಾರವನ್ನು ಮೀರಲು ಸಂಘಟನೆಗೆ ಸಾಧ್ಯವಾಗಲಿಲ್ಲ. ಅಂದರೆ ರೈತಸಂಘ ತನ್ನ ಸುತ್ತ ತಾನೇ ಕಟ್ಟಿಕೊಂಡ ಜಾತಿಬೇಲಿಯಿಂದ ನಿರ್ಣಾಯಕವಾಗಿ  ಹೊರಬರಲು ಆಗಲೇ ಇಲ್ಲ! ಈ ನಿಟ್ಟಿನಲ್ಲಿ ಶಿವಪ್ರಸಾದ್ ಹೇಳಿದ್ದು ಮಾರ್ಮಿಕ ವಾಗಿದೆ:

ಪೆರಿಯಾರ್ ಮೂವ್ಮೆಂಟ್ ಥರದ ಕೆಲವು ಸಾಂಸ್ಕೃತಿಕ ಚಳವಳಿಯ ಪ್ರಯತ್ನವನ್ನು ನಾವು ರೈತಸಂಘ ಶುರುವಾಗೋದಿಕ್ಕೆ ಮುಂಚೆ ಮಾಡಿದ್ದೊ. ಆದ್ರೆ ರೈತಸಂಘ ಶುರುವಾದ ಮೇಲೆ ಆ ರೀತಿ ಮಾತಾಡಬೇಡಿ ಅಂತ್ಲೂ ನಮಗೆ ಆದೇಶಗಳು ಬಂದವು. ಏಕೆಂದರೆ it will affect the organisation, people wont join ಅಂತ. ನನಗೆ ಅನ್ಸೋದು cultural movement ಅಂದ್ರೆ ಪೆರಿಯಾರ್ ಥರದ ಚಳವಳಿ ಆಗ್ದೆ ಇದ್ರೆ ಈ caste barrier ನ ತೆಗೆಯೋದು ತುಂಬಾ ಕಷ್ಟ. ರೈತಸಂಘದ cultural wing ಅಂತಾನೆ ಮಾಡ್ಕೊಂಡು ಈ  problem tackle ಮಾಡಬಹುದು. ಆದರೆ ರೈತಸಂಘ ಈ ಬಗ್ಗೆ ಏನೇನೂ ಚಿಂತಿಸಿದಂತೆ ಕಾಣಲಿಲ್ಲ…

ಇದೆಲ್ಲ ಸರಿ. ಆದರೆ ಪ್ರೊಫೆಸರರು ಕೊಟ್ಟ ಒಂದು ಕರೆಗೆ ರೈತರು ಲಕ್ಷಾಂತರ ಸಮೂಹವಾಗಿ ಬಂದು ಕಬ್ಬನ್ ಪಾರ್ಕಿನಲ್ಲಿ ನೆರೆದಿದ್ದನ್ನು ಕಂಡಾಗ ನಿಜಕ್ಕೂ ಅದು ನಾಡು ಕಟ್ಟಬಲ್ಲ ಸಂಘಟನೆಯಾಗೇ ಕಂಡಿತ್ತು! ವಿಚಿತ್ರವೆಂದರೆ ಅಂದಿನ ಸಭೆಯಲ್ಲಿ ತೇಜಸ್ವಿ- ಒಂದು ವೇಳೆ ರೈತರ ಸರ್ಕಾರವೇ ಬಂದರೂ, ಆ ಸರ್ಕಾರದಲ್ಲಿ ‘ರೈತರೇ ಎದುರಿಸಬೇಕಾಗಬಹುದಾದ ಗಂಡಾಂತರಗಳ’ ಬಗ್ಗೆ ಮಾತಾಡಿ ಪ್ರೊಫೆಸರರ ಸಿಟ್ಟಿಗೆ ಗುರಿಯಾಗಿದ್ದರು…!

ಎಲ್ಲರಿಗೂ ಗೊತ್ತಿದ್ದಂತೆ, ಇವೆಲ್ಲಕ್ಕೆ ನಾಂದಿಯಾದದ್ದು ಸಮಾಜವಾದಿ ಯುವಜನ ಸಭಾ ಮತ್ತು ಜಾತಿವಿನಾಶ ಸಮ್ಮೇಳನ (1973). ಇಲ್ಲಿದ್ದವರೇ ‘ಬರಹಗಾರರು ಮತ್ತು ಕಲಾವಿದರ ಒಕ್ಕೂಟ’ವಾಗಿ ಕವಲೊಡೆದು ಮತ್ತೆ ಜೇಪಿ ಚಳವಳಿಗೂ ನುಗ್ಗಿದರು. ಅಂದು ಯುವಜನ ಸಭಾದಲ್ಲಿ ಒಗ್ಗೂಡಿದವರೇ ಎರಡು ದಶಕಗಳ ಕಾಲ ಇಡೀ ನಾಡಿನ ಚಿಂತನ ಪರಿಸರವನ್ನು ರೂಪಿಸಿ ಆಳಿದ್ದನ್ನು ನೆನೆದರೆ ಆಗಿನ ಸಮಾಜ ಮೈ ಮುರಿದೆದ್ದ ರೀತಿಯ ಕಲ್ಪನೆ ಬರುತ್ತದೆ. ಮತ್ತು ಆ ಸಮೂಹದ ಸದಸ್ಯರ ಸಹಚರ್ಯ-ಮನಸ್ತಾಪಗಳ ಚರಿತ್ರೆಯೇ ನಾಡಿನ ಸಾಮಾಜಿಕ/ ಸಾಂಸ್ಕೃತಿಕ ಚರಿತ್ರೆಯೂ ಆಗಿ ಗೋಚರಿಸುತ್ತದೆ.

74ರ ಬರಹಗಾರರ ಒಕ್ಕೂಟ ಜನಿಸಿದ್ದೇ ಬ್ರಾಹ್ಮಣೇತರ ಆಂದೋಲನವಾಗಿ. ಹಾಗಾಗಿ ಸಮಾವೇಶಕ್ಕೆ ಯು.ಆರ್. ಅನಂತಮೂರ್ತಿ ಯವರನ್ನು ಕರೆಯದೆ ಹೊರಗಿಟ್ಟರು. ಹಾಗೆ ಮಾಡಿದ್ದಕ್ಕೆ ಶ್ರೀಕೃಷ್ಣ ಆಲನಹಳ್ಳಿ ಪ್ರತಿಭಟಿಸಿದರು. ನಂಜುಂಡಸ್ವಾಮಿಯವರ ಬಗ್ಗೆ ಬರೆಯುವಾಗ (ಪ್ರೊಫೆಸರ್ ಎಂಡಿಎನ್- ನೆನಪಿನ ಸಂಪುಟ) ಆ ಘಟನೆಯನ್ನು ಅನಂತಮೂರ್ತಿ ಮೆಲುಕು ಹಾಕುವುದು ಹೀಗೆ:

ಬರಹಗಾರರ ಒಕ್ಕೂಟ ಮೈಸೂರಿನಲ್ಲಿ ಸೇರಿದ್ದಾಗ ನನ್ನನ್ನು ಹುಟ್ಟಿನಲ್ಲಿ ಬ್ರಾಹ್ಮಣನೆಂಬ ಕಾರಣಕ್ಕಾಗಿ ಆಮಂತ್ರಿಸಲಿಲ್ಲವೆಂದು ಆಲನಹಳ್ಳಿ ಕೃಷ್ಣ ಪ್ರತಿಭಟಿಸಿದ್ದರು… ನನ್ನ ಜೊತೆ ಸತತವಾದ ಪ್ರೀತಿ ಮತ್ತು ಜಗಳದಲ್ಲಿ ತೊಡಗಿರುತ್ತಿದ್ದ ಲಂಕೇಶರು ಒಂದು ರಾತ್ರಿ ಗತಿಸಿದ ಗೆಳೆಯ ರಾಜಶೇಖರ್ ಎಂಬೊಬ್ಬರ ಸ್ಕೂಟರ್ನಲ್ಲಿ ಸೀದಾ ಏಳನೆ ಮೈನಿನ ನನ್ನ ಸರಸ್ವತಿಪುರಂ ಮನೆಗೆ ಬಂದರು. ಅವರು ತೀವ್ರತೆಯಲ್ಲೂ ಆತಂಕದಲ್ಲೂ ನನ್ನೊಡನೆ ಆಡಿದ ಮಾತು ನನಗೆ ನೆನಪಿದೆ: ‘ಅನಂತಮೂರ್ತಿ, ನಾವೆಲ್ಲಾ ಒಟ್ಟಾಗಿ ಎಲ್ಲ ಬ್ರಾಹ್ಮಣರನ್ನೂ ಕಟುವಾಗಿ ವಿರೋಧಿಸುವುದಕ್ಕೆ ಹೊರಟಿದ್ದೇವೆ. ಈ ಅತಿರೇಕದಲ್ಲಿ ನಾವು ತಪ್ಪುಗಳನ್ನು ಮಾಡಬಹುದು. ಆದರೆ ಇದರಿಂದ ಬೇಸರಪಟ್ಟು ನೀವು ಮಾತ್ರ ಬ್ರಾಹ್ಮಣವಾದಿಯಾಗಕೂಡದು. ನೀವು ತಾಳಿಕೊಂಡು ಇದ್ದರೆ ಮುಂದೆಲ್ಲಾ ಸರಿ ಹೋಗುತ್ತದೆ. ಈ ವಿರೋಧ ಒಂದು ಚಾರಿತ್ರಿಕ ಅಗತ್ಯ’…

ಹೀಗೆ ಒಬ್ಬಂಟಿಯಾದ ಅನಂತಮೂರ್ತಿಯವರು ಪ್ರವಾಹದ ವಿರುದ್ಧ ಈಜುತ್ತಲೇ ಕರ್ನಾಟಕದಲ್ಲಿ ಹಲವು ಮುಖ್ಯ ವಾಗ್ವಾದಗಳನ್ನು ಹುಟ್ಟು ಹಾಕಿದರು. ಅಸಂಖ್ಯ ಬಾರಿ ಜೊತೆಗಾರರಿಂದ ಗೇಲಿಗೊಳಗಾಗುತ್ತ, ಜಗಳವಾಡಿದರು. ಅಷ್ಟಾದರೂ ತಮ್ಮ ನಡೆಯ ಮೂಲ ದಿಕ್ಕಿನ ಬಗ್ಗೆ ಬಹುಕಾಲ ಗೊಂದಲಗೊಳ್ಳದೆ, ನಾಡಿನ ಸಾಕ್ಷಿಪ್ರಜ್ಞೆಯ ಭಾಗವೂ ಆದರು. ಅನಂತಮೂರ್ತಿಯವರ ಈ ‘ಹಾದಿ ತಪ್ಪದ’ ಎಚ್ಚರಕ್ಕೂ ಜೊತೆಗಾರರೊಂದಿಗಿನ ಜಗಳವೇ ಕಾರಣವಾಗಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಅದಕ್ಕೇ ಆಗಿನ ದೊಡ್ಡ ಜಗಳಗಳು ಕೂಡ ಕಿರಿಯರಾದ ನಮ್ಮ ಪಾಲಿಗೆ ಒಂದೇ ಕುಟುಂಬದೊಳಗಿನ ಮುನಿಸುಗಳಂತೆ ಸುಖಕರವೂ, ಸಾರ್ಥಕವೂ ಆಗಿದ್ದವು.

ಹೇಳಲೇಬೇಕಾದ ಮಾತು: ಒಟ್ಟಾರೆ ಆ ದಶಕಗಳ ಸಮಗ್ರ ಎಚ್ಚರದ ಹಿಂದೆ ಕುವೆಂಪು ನೀಡಿದ್ದ ಒಳಗಣ್ಣಿತ್ತು; ಸೃಷ್ಟಿಸಿದ್ದ ‘ಆಧ್ಯಾತ್ಮಿಕ ವೈಚಾರಿಕತೆ’ಯಿತ್ತು; ಬಂಡುಕೋರತನವಿತ್ತು. ಜೊತೆಗೆ ಲೋಹಿಯಾ ಚಿಂತನೆಯ ತಾತ್ವಿಕ ಚೌಕಟ್ಟಿತ್ತು.

ಹಾಗೂ, ಆ ಪೀಳಿಗೆಯ ಚಿಕ್ಕ ತಮ್ಮಂದಿರಂತಿದ್ದ ನನ್ನ ತಲೆಮಾರು ಈ ಎಲ್ಲ ಚಾರಿತ್ರಿಕ ಮುಖಾಮುಖಿಗಳ ವಾರಸುದಾರನಾಗಿತ್ತು.

ಒಕ್ಕೂಟದ ಸಂದರ್ಭದಲ್ಲಿ ಲಂಕೇಶರ ಮಾತಿಗೆ ಉತ್ತರವಾಗಿ ಅನಂತಮೂರ್ತಿ ಹೇಳಿದ ಮಾತುಗಳು:

…ಆಗ ನಾನು ಲಂಕೇಶರಿಗೆ ಹೀಗೆ ಹೇಳಿದೆ: ‘ಈ ನಮ್ಮ ಜಾತಿ ವ್ಯವಸ್ಥೆಯಲ್ಲಿ ನೂರಕ್ಕೆ ನೂರು ಜಾತಿವಾದಿಗಳಾಗಲು ಅರ್ಹತೆ ಇರದವನು ಬ್ರಾಹ್ಮಣ. ಗೌಡರಿಗೆ, ಕುರುಬರಿಗೆ, ಲಿಂಗಾಯಿತರಿಗೆ ಶೇಕಡಾ ಎಪ್ಪತ್ತೋ, ಅರವತ್ತೋ, ಐವತ್ತೋ ಅಧಿಕಾರ ಇರಬಹುದು. ಹೀಗಿರುವಾಗ ನಾನು ಯಾಕೆ ದಾರಿ ತಪ್ಪಲಿ? ನೀವು ನಿಮಗೇ ಕೇಳಿಕೊಳ್ಳಬೇಕಾದ ಆತಂಕದ ಪ್ರಶ್ನೆಗಳು ಇವೆ’… ಸುಮಾರು 1967ರಲ್ಲಿ ಎಂದು ನೆನಪಾಗುತ್ತದೆ; ಗತಿಸಿದ ಶಿವರಾಮ ಐತಾಳ್ರಿಗೆ ಉತ್ತರವಾಗಿ ‘ಸಾಹಿತ್ಯದಲ್ಲಿ ಬ್ರಾಹ್ಮಣ ಮತ್ತು ಶೂದ್ರ’ ಎಂಬ ಲೇಖನವನ್ನು ಬರೆದ ನಾನು ಈ ಬಗ್ಗೆ ದೃಢನಾಗಿದ್ದೆ. ಜಾತಿಯ ಹೊರಗೆ ಮದುವೆಯೂ ಆಗಿದ್ದೆ. ನಾನು ಪ್ರೀತಿಸುವವರಲ್ಲಿ ಯಾವತ್ತಿನಿಂದಲೂ, ನನ್ನ ಪ್ರೈಮರಿ ಸ್ಕೂಲ್ ದಿನಗಳಿಂದಲೂ, ಎಲ್ಲ ಜಾತಿಯವರೂ ಇದ್ದರು. ನಾನು ಮೈಸೂರಿನಲ್ಲಿ ಆನರ್ಸ್ ಓದಿದ್ದು ಎಲ್ಲ ಜಾತಿಯ ವಿದ್ಯಾರ್ಥಿಗಳಿದ್ದ ಉಚಿತ ಹಾಸ್ಟೆಲ್ ಆದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ….

ಹೀಗೆ ಬರೆದುಕೊಂಡ, ಹಾಗೇ ನಮ್ಮ ಸಮಾಜದ ಜಾತಿಯೇ ಮುಂತಾದ ಬಿಕ್ಕಟ್ಟುಗಳನ್ನು ಅಸೀಮ ಧೈರ್ಯದಿಂದ ಎದುರಿಸಿ ವಿಶ್ಲೇಷಿಸುತ್ತಲೇ ಸಾಗಿದ ಅನಂತಮೂರ್ತಿ ಕೂಡ ಆಗಾಗ ಜಾತಿಪದ್ಧತಿಯಲ್ಲೂ ‘ಸೃಜನಶೀಲತೆ’ ಕಾಣುತ್ತ  ನೀವೇ ಬ್ರಾಹ್ಮಣರ ಬಗ್ಗೆ ಕಟುವಾಗಿ ಮಾತಾಡಿ ಅದನ್ನು ನಂಜುಂಡಸ್ವಾಮಿಯವರು ಮಾತಾಡಿದರೆ ಅಸಹನೆಗೆ ಒಳಗಾಗುತ್ತೀರಿ. ಯಾಕೆ ಹೀಗೆ? ಎಂಬ- ದೇವನೂರ ಮಹಾದೇವರ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ! ಹಾಗೇ ಅವರು ಉಲ್ಲೇಖಿಸಿದ ‘ಬ್ರಾಹ್ಮಣ- ಶೂದ್ರ’ (ಲೋಹಿಯಾ ಚಿಂತನೆಯಿಂದ ಪ್ರೇರಣೆ ಪಡೆದ) ಲೇಖನ ಕೂಡ ಅನಂತ ಮೂರ್ತಿಯವರಿಗೇ ವಿಶಿಷ್ಟವಾದ ‘ದ್ವಂದ್ವ ಸಾಮರಸ್ಯ’ದ ನುಣುಪು ಶೈಲಿಯಲ್ಲಿದ್ದುದನ್ನೂ ಮರೆಯಬೇಕಿಲ್ಲ. ಜೊತೆಗೆ ಅವರು ನಮ್ಮೆಲ್ಲರ ಗೌರವಕ್ಕೆ ಪಾತ್ರರಾದ ಹಿರಿಯರಾಗಿ ಆಗಾಗ ಇಂಥ ತಪ್ಪುಗಳನ್ನು ಮಾಡುವುದನ್ನು ಈವತ್ತಿಗೂ ನಿಲ್ಲಿಸಿಲ್ಲ; ನಮ್ಮ ಗೌರವಪೂರ್ವಕ ಆಕ್ಷೇಪಣೆಗಳೂ ನಿಂತಿಲ್ಲ…!

ಇಲ್ಲಿ ಆ ಕಾಲದ ಪ್ರಮುಖ ತವಕ, ತಾಕಲಾಟ, ದುಗುಡಗಳನ್ನು ತಿಳಿಯಲೆತ್ನಿಸುತ್ತಿದ್ದೇನೆ. ಆಗಿನ ಬಹುದೊಡ್ಡ ಪ್ರೇರಕ ಘಟನೆಗಳಲ್ಲೊಂದು ಎಂದು ಗುರುತಿಸಿ ಹೇಳುವುದಿದ್ದರೆ ಅದು ಬಸವಲಿಂಗಪ್ಪನವರ ಬೂಸಾ ಪ್ರಕರಣ. 70ರ ದಶಕದ ಸಮಗ್ರ ವೈಚಾರಿಕ ಎಚ್ಚರಕ್ಕೆ ನಿಮಿತ್ತವಾಗಿ ನಮ್ಮ ಯುಗದ ಮುಖ್ಯ ಮುಖಾಮುಖಿಗಳನ್ನು ಮುನ್ನೆಲೆಗೆ ತಂದ ಘಟನೆಯಿದು. ಈ ಪ್ರಕರಣದ ಪ್ರತಿಧ್ವನಿಯಾಗಿ ಜನಿಸಿದ ದಲಿತ ಲೇಖಕ ಕಲಾವಿದರ ಯುವ ಸಂಘಟನೆ (ದಲೇಕಯುಸಂ)- ದಲಿತ ಪ್ರಜ್ಞೆಯ ಮೊಟ್ಟ ಮೊದಲ ವೇದಿಕೆ. ಈ ಸಂಘಟನೆ ಹುಟ್ಟಿದ್ದು ತುರ್ತುಸ್ಥಿತಿಯಲ್ಲಿ (1976). ಅನಂತ ಮೂರ್ತಿಯವರ ಪ್ರಕಾರವೇ, ಒಗ್ಗೂಡಲು ಅಥವಾ ಜಾತಿವಾದಿಯಾಗಲು ನೂರಕ್ಕೆ ನೂರು ಅರ್ಹತೆ ಪಡೆದ ದಲಿತ ಸಮೂಹ (ಶಿವಮೊಗ್ಗದ ಕಬ್ಬು ಬೆಳೆಗಾರರ ಸಂಘ, ಹಾಸನದ ಸಮತಾ ವೇದಿಕೆಯೊಂದಿಗೆ ಸೇರಿಕೊಂಡು ರೈತಸಂಘವಾದ ಹಾಗೆಯೇ) ಅನತಿ ಕಾಲದಲ್ಲೇ ತಾನು ಪ್ರೊ. ಬಿ. ಕೃಷ್ಣಪ್ಪನವರ ಭದ್ರಾವತಿ ಕಾರ್ಮಿಕ ಸಂಘಟನೆಯೊಂದಿಗೆ ವಿಲೀನಗೊಂಡು ದಲಿತ ಸಂಘರ್ಷ ಸಮಿತಿಯಾಯಿತು. ಹುಟ್ಟುತ್ತಲೇ ಲೇಖಕ ಕಲಾವಿದರ ಬಳಗವಾಗಿದ್ದ ಈ ಸಂಘಟನೆ, ಆ ಕಾರಣಕ್ಕೇ ದೊಡ್ಡ ದಲಿತೇತರ ಸಮೂಹದ ಸಕ್ರಿಯ ಸಹಾನುಭೂತಿಯನ್ನೂ ಪಡೆಯಿತು. ಮುಸ್ಲಿಮರ ಹೊರತು, ಬ್ರಾಹ್ಮಣರಾದಿಯಾಗಿ ಎಲ್ಲ ಸಮುದಾಯಗಳ ಪ್ರತಿನಿಧಿಗಳೂ ದಲಿತ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಮತ್ತು ಜಾತಿವಿನಾಶವನ್ನೇ ತನ್ನ ಗುರಿಯಾಗಿ ಮಾಡಿಕೊಂಡಿದ್ದ ದಲಿತ ಚಳವಳಿಯಿಂದಾಗಿ, ದಲಿತ ಪ್ರಜ್ಞೆ ಎಂಬುದು ಒಟ್ಟು ಸಾಮೂಹಿಕ ಸಂವಾದದ ಕೇಂದ್ರ ಪ್ರಶ್ನೆಯಾಯಿತು; ದಲಿತ ಚಳವಳಿಯೆಂಬುದು ಸಮಷ್ಟಿ ನಡಿಗೆಯ ಪವಾಡವಾಯಿತು.

ಬರಹಗಾರರ ಒಕ್ಕೂಟ ತನ್ನ ಸಮಾವೇಶದ ಅಂಗವಾಗಿ, ಲಂಕೇಶರ ಸಂಪಾದಕತ್ವದಲ್ಲಿ ಹೊರತಂದ ಪಾಂಚಾಲಿ ದೀಪಾವಳಿ/ ರಾಜ್ಯೋತ್ಸವ ವಿಶೇಷಾಂಕವೇ, ಬೂಸಾ ಪ್ರಕರಣ ಹಾಗೂ ದಲಿತ ಚಿಂತನೆ ಆ ಕಾಲಘಟ್ಟವನ್ನು ಆವರಿಸಿಕೊಂಡ ರೀತಿಗೆ ಸಾಕ್ಷಿಯಾಗಿದೆ. (ಶ್ರೀಕೃಷ್ಣ ಆಲನಹಳ್ಳಿಯವರ ‘ಪರಸಂಗದ ಗೆಂಡೆತಿಮ್ಮ’ ಮೊದಲು ಅಚ್ಚಾಗಿದ್ದು ಈ ಸಂಚಿಕೆಯಲ್ಲೇ.) ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಲೇಖನ- ‘ಪಂಚಮರನ್ನು ಮರೆತ ಪಂಚವಾರ್ಷಿಕ ಯೋಜನೆ’. ಕವಿ ಸಿದ್ದಲಿಂಗಯ್ಯ ‘ಬೂಸಾ ಪ್ರಕರಣ- ನನ್ನ ಅನುಭವ’ ಬರೆದರೆ, ವಿಜಯ ಸಾಸನೂರರು ಬರೆದ ಕತೆ- ‘ಅಸ್ಪೃಶ್ಯ’! ಸ್ವತಃ ಲಂಕೇಶರು ಬರೆದ ಎರಡು ವ್ಯಕ್ತಿಚಿತ್ರಗಳು- ಜೇಪಿ ಮತ್ತು ಬಸವಲಿಂಗಪ್ಪ. ದೇವನೂರ ಮಹದೇವ ಮತ್ತು ಶ್ರೀಧರ ಕಲಿವೀರ- ಈ ಇಬ್ಬರು ಬರೆದ ಇಬ್ಬರು ‘ಹೊಲೆಯ’ರ ರಕ್ತಸಂವೇದನೆಯ ಮಾತುಗಳು; ಅಷ್ಟೇಕೆ, ಸಾಕ್ಷಾತ್ ಡಾ. ಎಂ. ಚಿದಾನಂದಮೂರ್ತಿ ಬರೆದಿದ್ದು- ‘ದೇವದಾಸಿಯೊಬ್ಬಳೊಡನೆ ಸಂಭಾಷಣೆ’…!

ಆಗಿನ ಎಲ್ಲ ಪ್ರಗತಿಪರ ಕದಲಿಕೆಗಳೂ ಹೇಗೆ ದಲಿತ ಪ್ರಜ್ಞೆಯ ಸುತ್ತಲೇ ಗಸ್ತು ತಿರುಗುತ್ತಿದ್ದವು ಎಂಬುದಕ್ಕೆ, ಕಮ್ಯೂನಿಸ್ಟ್ ತಾತ್ವಿಕತೆಯ ಸಾಂಸ್ಕೃತಿಕ ಸಂಘಟನೆ ‘ಸಮುದಾಯ’, ‘ಬಂಡಾಯ ಸಾಹಿತ್ಯ ಸಂಘಟನೆ’ಗಳ ಚಟುವಟಿಕೆಗಳನ್ನೂ ಗಮನಿಸಬಹುದು.

ಹೀಗೆಲ್ಲ ಇದ್ದರೂ, ಜಾತಿವಿನಾಶವೆಂಬುದು ರೈತಸಂಘದ ಪಾಲಿಗೆ ಕೇಂದ್ರ ಪ್ರಶ್ನೆಯಾಗದೆ ಹೋದದ್ದರಿಂದಲೇ, ಆ ಸಂಘಟನೆ-  ಆರಂಭದಲ್ಲೇ ಸೂಚಿಸಿದ ಹಾಗೆ, ಒಮ್ಮೆ ದಲಿತರ ಮಿತ್ರನಾಗಿ ಇನ್ನೊಮ್ಮೆ ಶತ್ರುವಾಗಿ ದ್ವಿಪಾತ್ರಾಭಿನಯ ಮಾಡುತ್ತ ಬಂತು!

ಇಲ್ಲಿ ನನಗೆ ಮುಖ್ಯವಾದದ್ದು- ದಲಿತ ಸಂಘರ್ಷ ಸಮಿತಿ, ಯಾವ ಮಾನದಂಡದಲ್ಲೂ ದಲಿತನಲ್ಲದ ನನ್ನಂಥವರನ್ನೂ ಸಂಘಟನೆಯ ಅಂತರಂಗಕ್ಕೆ ಬಿಟ್ಟುಕೊಂಡು ಪೊರೆದದ್ದು. ದೇವನೂರ ಮಹಾದೇವ, ಬಹುಕಾಲ ನಾನು ಮನಸಾ ಸ್ವೀಕರಿಸಿದ್ದ ನನ್ನ ನಾಯಕರಾಗಿದ್ದರು. ಜೊತೆಗೆ ನನ್ನ ತಿಳುವಳಿಕೆಯ ಬಹುಭಾಗ ನನಗೆ ದಕ್ಕಿದ್ದೇ ದಲಿತ ಸಂಘಟನೆಯ ಸಂಪರ್ಕದಲ್ಲಿ. ನಾನೊಬ್ಬನೇ ಅಲ್ಲ, ನನ್ನ ಥರದ ಇನ್ನೂ ಅನೇಕರನ್ನು ನಾನೇ ಬಲ್ಲೆ. ಇಂದಿಗೂ ದಲಿತ ಚಿಂತನೆಯೇ ನನ್ನ ತಾತ್ವಿಕ ತವರುಮನೆ ಎಂದು ಹೇಳಲು ನನಗೆ ಯಾವ ಅಳುಕೂ ಇಲ್ಲ. (ಆತ್ಮೀಯರೊಬ್ಬರು, ನನಗೆ ‘ದಲಿತ ಕಾಮಾಲೆ’ ಎಂದು ಛೇಡಿಸಿದ್ದೂ ಇದೆ!)

ಆ ಎರಡೂ ಸಂಘಟನೆಗಳ ವ್ಯತ್ಯಾಸ ಇನ್ನೂ ಸ್ಪಷ್ಟವಾಗಬೇಕಾದರೆ, ಅವೆರಡರ ನಿರ್ದಿಷ್ಟ ಕಾರ್ಯಕ್ರಮಗಳನ್ನೇ ನೋಡಬಹುದು.

ಎಲ್ಲರಿಗೂ ಗೊತ್ತು- ರೈತಸಂಘದ ಮುಖ್ಯ ಸಾಧನೆ ಅಧಿಕಾರಶಾಹಿಯನ್ನು ಮಣಿಸಿದ್ದು. ‘ಬ್ರಹ್ಮ ಬಂದರೂ ಬಗ್ಗದ’ ಪೊಲೀಸರೂ ಸೇರಿದಂತೆ ಎಲ್ಲ ಅಧಿಕಾರಿಗಳೂ, ವಿಶೇಷವಾಗಿ ರೈತ ಚಳವಳಿ ಪ್ರಬಲವಾಗಿದ್ದ ಜಿಲ್ಲೆಗಳಲ್ಲಿ, ಹಸಿರು ಶಾಲು ಕಂಡರೆ ತಗ್ಗಿ ಬಗ್ಗಿ ನಡೆಯುವ ಪರಿಸ್ಥಿತಿ ಉಂಟಾಗಿದ್ದು ಹುಡುಗಾಟದ ಮಾತಲ್ಲ. ರೈತ ಕಾರ್ಯಕರ್ತರು ಅಧಿಕಾರಿಯ ಕೊರಳಪಟ್ಟಿ ಹಿಡಿದು, ಅವನ ಜೋಬಿಗೆ ಕೈ ಹಾಕಿ, ತಿಂದ ಲಂಚ ವಾಪಸು ಕೊಡಿಸಿದ ನಿದರ್ಶನಗಳು ನನಗೇ ಗೊತ್ತು. ಇನ್ನೊಂದು ಮಹತ್ವದ ಕಾರ್ಯಕ್ರಮ- ಮರುಜಫ್ತಿ,- ಕೆ.ಟಿ. ಶಿವಪ್ರಸಾದ್ರ ಪರಿಕಲ್ಪನೆ. ಸಹಕಾರ ಸಂಘಗಳ ಅಧಿಕಾರಿಗಳು ಜಫ್ತಿ ಮಾಡಿಕೊಂಡು ಹೋದ ಮನೆ ಸಾಮಾನುಗಳನ್ನು ರೈತರೇ ಮರುಜಫ್ತಿ ಮಾಡಿ ವಾಪಸು ತರುವುದು! ಸಾಲ ವಸೂಲು ಮಾಡಲು ಬರುವ ಆ ಅಧಿಕಾರಿಗಳು ರೈತರ ಮನೆಯ ಪಾತ್ರೆ ಪಡಗಗಳನ್ನೂ ಬಿಡದೆ ಜಫ್ತಿ ಮಾಡಿ ಒಯ್ಯುವುದು ಅತ್ಯಾಚಾರಕ್ಕೆ ಸಮಾನವಾದ ದೌರ್ಜನ್ಯ. ಗುಂಡೂರಾಯರ ಕಾಂಗ್ರೆಸ್ ಸರ್ಕಾರದಲ್ಲಿ ಅವ್ಯಾಹತವಾಗಿ ನಡೆದ ಅತಿರೇಕವಿದು. ‘ನನ್ನ ಕಣ್ಣೆದುರೇ ನಮ್ಮ ಮನೆ ಜಫ್ತಿಯಾಗಿತ್ತು. ಅದು ತರುವ ವೇದನೆ ಅಪಾರ. ಅವಮಾನ, ಅಸಹಾಯಕತೆ, ಆಕ್ರಂದನ ಜೊತೆಯಾಗಿಯೇ ತರುವ, ಹಳ್ಳಿಗರ ವ್ಯಕ್ತಿತ್ವವನ್ನೇ ನಾಶಪಡಿಸುವ ಕಾರ್ಯಕ್ರಮವದು. ಈ ಮರುಜಫ್ತಿ ರೈತರಲ್ಲಿ ಆತ್ಮಸ್ಥೈರ್ಯವನ್ನು ಹುಟ್ಟುಹಾಕಿತು. ಅಧಿಕಾರಿಗಳನ್ನು ಕಂಡರೆ ಹೆದರುತ್ತಿದ್ದವರು ಕಪಾಳಕ್ಕೆ ಬಾರಿಸಲು ಹಿಂದೆಗೆಯದಂತೆ ಮಾಡಿಸಿತು…’ ಎಂದು ರೈತ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಂಚಾಲಕರಾಗಿದ್ದ ಪಾಂಡುರಂಗ ವಿಠಲ (ಕಲ್ಲರಳಿ ಹೂವ್ವಂತೆ ಕೃತಿಯಲ್ಲಿ) ನೆನೆಸಿಕೊಂಡಿದ್ದರು. (ಇದನ್ನು ಬರೆಯುತ್ತಿರುವ ಸಂದರ್ಭದಲ್ಲೇ ಕಡಿದಾಳು ಶಾಮಣ್ಣನವರ ಆ ದಶಕ ಎಂಬ ಅಪೂರ್ವ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಈ ಜಫ್ತಿ ಎಂಬ ಹೆಸರಿನ ಅತ್ಯಾಚಾರದ ಎದೆಯೊಡೆಯುವ ವಿವರಗಳಿವೆ…)

ಅದು ಹಾಗಿದ್ದರೂ, ಅಧಿಕಾರಿಗಳಿಗೆ ‘ಕಪಾಳಕ್ಕೆ ಬಾರಿಸುವುದು’; ಅಥವಾ ಪ್ರೊಫೆಸರ್ ಸ್ವತಃ ಒಮ್ಮೆ ರಾಮಕೃಷ್ಣ ಹೆಗಡೆಯವರನ್ನು ‘ಕಂಬಕ್ಕೆ ಕಟ್ಟಿ ಹಾಕಿ ಹೊಡೆಸುತ್ತೇವೆ’ ಅಂದಿದ್ದು, (ಆರಂಭದ ‘ಕರಿಮೀನು’ ಪ್ರಸಂಗ ಸಹ)- ಸೂಚಿಸುವುದು ಫ್ಯೂಡಲ್ ಮನೋಧರ್ಮವನ್ನೇ ಅಂದರೆ ಕೆಲವರಿಗೆ ಇರಿಸು ಮುರಿಸಾಗಬಹುದು. (ಫ್ಯೂಡಲ್ ಶಬ್ದದ ಸೀಮಿತ ಅರ್ಥವ್ಯಾಪ್ತಿ ತಿಳಿದೂ ಎಲ್ಲರ ಗ್ರಹಿಕೆಗೆ ಅನುವಾಗಲೆಂಬ ಒಂದೇ ಕಾರಣಕ್ಕೆ ಅದನ್ನು ಬಳಸುತ್ತಿದ್ದೇನೆ.)

(ಮುಂದುವರೆಯುವುದು)