Category Archives: ಸಂಜ್ಯೋತಿ

ಮೋದಿಯ ಹಿಂದಣ ಸತ್ಯ, ಮಿಥ್ಯಗಳು…


– ಸಂಜ್ಯೋತಿ ವಿ.ಕೆ.


 

ಪ್ರಜಾಪ್ರಭುತ್ವ ವ್ಯವಸ್ಥೆ (ತನ್ನೆಲ್ಲ ಕೊರೆಗಳಿದ್ದಾಗ್ಯೂ) ಮನುಷ್ಯನ ಅತ್ಯುನ್ನತ ಸಾಮಾಜಿಕ ಆವಿಷ್ಕಾರಗಳಲ್ಲೊಂದು. ಮನುಷ್ಯನ ಸ್ವಾತಂತ್ರ್ಯ, ಘನತೆ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತೊಂದು ಪರ್ಯಾಯವಿಲ್ಲದಿರುವುದರಿಂದ ಈ ವ್ಯವಸ್ಥೆಯ ಕೊರೆಗಳನ್ನು ಮುಂದಿಟ್ಟುಕೊಂಡು ಇದನ್ನು ನಿರಾಕರಿಸಲು ಸಾಧ್ಯವಿಲ್ಲ. ಬದಲಿಗೆ ಆ ಕೊರೆಗಳನ್ನು ಸರಿಪಡಿಸಿ ಇದನ್ನು ಮತ್ತಷ್ಟು ಬಲಪಡಿಸುವುದೇ ನಮ್ಮ ಮುಂದಿರುವ ಸವಾಲು ಮತ್ತು ಸಾಧ್ಯತೆ.

ಈ ವ್ಯವಸ್ಥೆಯ ಅತಿ ಮುಖ್ಯ ಹಕ್ಕು ಮತ್ತು ಭಾದ್ಯತೆ ಅಡಗಿರುವುದು ಚುನಾವಣೆ ಮತ್ತು ಮತದಾನದಲ್ಲಿ. ಭಾರತದಂತಹ ಬಹುಧರ್ಮೀಯ, ಬಹುಸಂಸ್ಕೃತಿಯ, ಶ್ರೇಣೀಕೃತ ಅಸಮಾನ ಸಮಾಜದಲ್ಲಿ; ವಿಚಾರ-ಮಾಹಿತಿಗಳ ಪ್ರಸರಣ ಕೆಲವೇ ವ್ಯಕ್ತಿ, ಸಂಸ್ಥೆ, ವ್ಯವಸ್ಥೆಗಳ ಮರ್ಜಿಗೆ ಸಿಲುಕಿರುವಾಗ; grass-map-indiaಸಂಪೂರ್ಣ ಸಾಕ್ಷರತೆಯನ್ನೇ ಇನ್ನೂ ಸಾಧಿಸದ, ಅಕ್ಷರಸ್ಥರಾದರೂ ವಿದ್ಯಾವಂತರಾಗದ, ವಿದ್ಯೆಯ ಜೊತೆಗೆ ಜ್ಞಾನ ವಿವೇಚನೆಗಳನ್ನು ಸಮಾನವಾಗಿ ನಿರೀಕ್ಷಿಸಲಾಗದ ವ್ಯವಸ್ಥೆಯಲ್ಲಿ ಚುನಾವಣೆ-ಮತದಾನದ ಹಕ್ಕುಗಳು ನಿಚ್ಚಳವಾಗಿ ಚಲಾಯಿಸಲ್ಪಡುತ್ತವೆ ಮತ್ತು ಬಾಧ್ಯತೆಗಳು ನಿಭಾಯಿಸಲ್ಪಡುತ್ತವೆ ಎಂದು ನಿರೀಕ್ಷಿಸಲಾಗದು. ಜೊತೆಗೆ ತೃತೀಯ ರಂಗ ಎಂಬುದು ಇನ್ನೂ ಒಂದು ಆದರ್ಶ ಕನಸಾಗಿಯೇ ಉಳಿದಿರುವಾಗ ಚುನಾವಣೆ ಎನ್ನುವುದು ಭಾಜಪ ಮತ್ತು ಕಾಂಗ್ರೆಸ್ ಎಂಬ ಎರಡು ಧೃವಗಳ ನಡುವಣ ಪೈಪೋಟಿಯಾಗಿರುವಾಗ ಚುನಾವಣಾ ಫಲಿತಾಂಶಗಳು ಜನರ ನೈಜ ಆಯ್ಕೆಯನ್ನು ಸಂಪೂರ್ಣವಾಗಿ ಬಿಂಬಿಸುತ್ತದೆಂದು ಹೇಳಲಾಗದು.

ಇಷ್ಟೆಲ್ಲ ಸಂಕೀರ್ಣತೆಗಳ ನಡುವೆಯೂ 2004 ರ ಸಾರ್ವತಿಕ ಚುನಾವಣೆಯಲ್ಲಿ ಜನರನ್ನು ಮತ-ಧರ್ಮಗಳ ಹೆಸರಿನಲ್ಲಿ ಒಡೆಯುವ, ಭಾರತ ಹೊಳೆಯುತ್ತಿದೆ ಎಂಬ ಮಂಕುಬೂದಿ ಎರಚಲು ಹೊರಟ ಭಾಜಪವನ್ನು ಸೋಲಿಸಿದ್ದು ಇದೇ ಮತದಾರರು ದೇಶವನ್ನು ಅವೈಜ್ಞಾನಿಕ ರೀತಿಯಲ್ಲಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳಿಗೆ (LPG) ಒಡ್ಡಿ ಅನೂಹ್ಯ ಆರ್ಥಿಕ, ಸಾಮಾಜಿಕ ಪರಿಣಾಮಗಳಿಗೆ ಕಾರಣವಾದ ಕಾಂಗ್ರೆಸ್ಸಿನ ಮೇಲೆ ಕಮ್ಯುನಿಸ್ಟರ ಕಣ್ಗಾವಲನ್ನು ಇರಿಸಲು ಸಾಧ್ಯವಾಗಿಸಿದ್ದು ಸಹ ಇದೇ ಮತದಾರರು. ಪಶ್ಚಿಮ ಬಂಗಾಳದಲ್ಲಿ ದೀರ್ಘಾವಧಿಯ ಅಧಿಕಾರ ದೊರೆತರೂ ಭ್ರಷ್ಟಾಚಾರವನ್ನು ವೈಯುಕ್ತಿಕ ನೆಲೆಯಲ್ಲಿ ಹತ್ತಿರ ಸುಳಿಯಗೊಡದಿದ್ದ ಕಮ್ಯುನಿಸ್ಟರು ತಮ್ಮದೇ ಸಿದ್ಧಾಂತಗಳನ್ನು ಸ್ವವಿಮರ್ಶೆಗೊಳಪಡಿಸಿ ಆಧುನಿಕತೆಗೆ ತೆರೆದುಕೊಳ್ಳದೆ ಸಂಕೋಲೆಗಳಾಗಿಸಿಕೊಂಡಾಗ ಅವರನ್ನು ನಿರಾಕರಿಸಿದ್ದು ಇದೇ ಪ್ರಜಾತಂತ್ರ ವ್ಯವಸ್ಥೆ. ನಂತರದ ಬೆಳವಣಿಗೆಗಳು ಇತಿಹಾಸದಲ್ಲಿ ಕಲಿಯಬೇಕಾದ ಪಾಠಗಳಾಗಿ ದಾಖಲಾಗಿದ್ದು ನಿಜ (ರಾಜಕೀಯ ಪಕ್ಷಗಳಿಗೆ ಆ ಪಾಠಗಳನ್ನು ಕಲಿಯುವ ಮನಸ್ಸಿಲ್ಲದಿರುವುದು ವಿಷಾದನೀಯ). ಆದರೆ ಇಂತಹ ಅನಾಮಿಕ ಮತದಾರನ ಗುಪ್ತಗಾಮಿ ಶಕ್ತಿ (under current) ಯಾವಾಗಲೂ ಸರಿಯಾದ ದಿಕ್ಕಿನಲ್ಲೇ ಹರಿಯುತ್ತದೆ ಎನ್ನಲಾಗದು. ಧರ್ಮಾಂದತೆಯ ಅಫೀಮು ತಲೆಗೆ ಹತ್ತಿರುವ ಬಹುಸಂಖ್ಯಾತರ ಮತಗಳು ಧ್ರುವೀಕರಣಗೊಂಡು ಗುಜರಾತಿನಲ್ಲಿ ಮೋದಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದು.

ಈಗ ಈ ಗುಜರಾತ್ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ಉಮೇದಿನಲ್ಲಿ ಭಾಜಪ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುತ್ತಿದೆ. ಭಾಜಪ ಮುಖ್ಯವಾಗಿ ನೆಚ್ಚಿಕೊಂಡಿರುವುದು ಒಂದು ಕಡೆ ಮತಾಂಧತೆಯ ಅಮಲು ಹತ್ತಿರುವ ಹಿಂದೂಗಳ ಮತಗಳನ್ನು; ಮತ್ತೊಂದೆಡೆ ಅಭಿವೃದ್ಧಿ ಮಾದರಿಯನ್ನು ಮುಂದಿಟ್ಟುಕೊಂಡು ಮಧ್ಯಮವರ್ಗದ ಮತಗಳನ್ನು. ಇದಲ್ಲದೆ ಮಾಧ್ಯಮಗಳು ಸೃಷ್ಟಿಸುವ ಭ್ರಮಾಲೋಕದಲ್ಲಿ, ಜಾಲತಾಣಗಳಲ್ಲಿ ವಿಹರಿಸುತ್ತ ತಮಗೆ Modiಅನುಕೂಲವೆನಿಸುವ ಸತ್ಯಗಳನ್ನು ಅನುಮೋದಿಸುವ ವಿದ್ಯಾವಂತರೆನಿಸಿಕೊಂಡ ಅಕ್ಷರಸ್ಥರ ಮತಗಳನ್ನು ಸೆಳೆಯಲು ಇತ್ತೀಚಿನ ದಿನಗಳಲ್ಲಿ ಮೋದಿಯನ್ನು ‘ಸೆಕ್ಯುಲರ್’, ‘ಭ್ರಷ್ಟಾಚಾರ ವಿರೋಧಿ’ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.

ಆದರೆ ಕನಿಷ್ಠ ವಿವೇಚನಾಶಕ್ತಿಯಿಂದ ನೈಜ ಸ್ಥಿತಿಯನ್ನು ವಸ್ತುನಿಷ್ಠವಾಗಿ ನೋಡುವ ಮನಸ್ಸಿದ್ದರೆ ಸಾಕು ಮತಾಂಧತೆಯಿಂದ ಜನಮಾನಸವನ್ನು ವಿಷಮಯವಾಗಿಸುವ, ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯುವ ‘ದೇಶಭಕ್ತ’ ಭಾಜಪವನ್ನು; ‘ಭಾರತೀಯ ಸಂಸ್ಕೃತಿ’ ಎಂಬ ಮಾಯಾಜಿಂಕೆಯನ್ನು ತೋರಿ ಬಹುಸಂಸ್ಕೃತಿಯನ್ನು ಅಳಿಸಿ ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಮರುಸ್ಥಾಪಿಸಬಯಸುವಂತ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂಪರಿಷತ್‌ಗಳನ್ನು; ಮತ್ತು ಭಾರತದ ಸಂವಿಧಾನ ಕಾನೂನುಗಳ ಬಗ್ಗೆ ಯಾವುದೇ ಗೌರವವಿರದೆ ಉಳ್ಳವರ ಸೇವೆಗಾಗಿ ಇಡೀ ವ್ಯವಸ್ಥೆಯನ್ನು ಬಗ್ಗಿಸಲು ಹಿಂಜರಿಯದ ಭಾಜಪದ ಉತ್ಸವಮೂರ್ತಿ ಮೋದಿಯನ್ನು ಖಡಾಖಂಡಿತವಾಗಿ ನಿರಾಕರಿಸಲೇಬೇಕಾದ ಅನಿವಾರ್ಯತೆ ಏಕಿದೆ ಎಂದು ತಿಳಿಯುತ್ತದೆ.

ಗುಜರಾತ್ ಅಭಿವೃದ್ಧಿ ಎಂಬ ಭ್ರಮೆ

ಒಂದು ದೇಶ/ ರಾಜ್ಯದ ಒಟ್ಟಾರೆ ಆದಾಯ ಅಥವಾ ಸರಾಸರಿ ತಲಾವಾರು ಆದಾಯ ಹೆಚ್ಚಾಗುವುದನ್ನು Poverty_4C_--621x414ಆರ್ಥಿಕ ಬೆಳವಣಿಗೆ (economic growth) ಎಂದೂ, ಹಾಗೆ ಹೆಚ್ಚಾಗುವ ಆದಾಯ ಹೆಚ್ಚು ಸಮಾನವಾಗಿ ಹಂಚಿಕೆಯಾಗಿ ಉಳ್ಳವರ ಮತ್ತು ಬಡವರ ನಡುವಣ ಅಂತರವನ್ನು ಕಡಿಮೆಮಾಡಿದರೆ ಅದನ್ನು ಆರ್ಥಿಕ ಅಭಿವೃದ್ಧಿ (economic development) ಎಂದೂ ಗುರುತಿಸಬಹುದು. ಹೀಗೆ ಸಮಾನವಾಗಿ ಹಂಚಿಕೆಯಾದ ಆದಾಯವು ಜನರ ಜೀವನ ಮಟ್ಟವನ್ನು ಉತ್ತಮಗೊಳಿಸುವುದನ್ನು ಮಾನವ ಅಭಿವೃದ್ಧಿ ಸೂಚ್ಯಂಕ (HDI) ಸೂಚಿಸುತ್ತದೆ. ಮೋದಿ ಆಳ್ವಿಕೆಯಲ್ಲಿ ‘HDI’ ನ ಬಹುತೇಕ ಎಲ್ಲ ಸೂಚಕಗಳೂ ಹಿಮ್ಮುಖ ಚಲನೆಯನ್ನೇ ತೋರುತ್ತವೆ. ಮೋದಿ ಮತ್ತು ಭಾಜಪ ಹೇಳಿಕೊಳ್ಳುವಂತೆ ಗುಜರಾತ್ ಹೊಳೆಯುತ್ತಲೂ ಇಲ್ಲ, ಅಭಿವೃದ್ಧಿಯ ಮುಂಚೂಣಿಯಲ್ಲೂ ಇಲ್ಲ.

  • ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಗುಜರಾತಿಗೆ ದೇಶದಲ್ಲಿ 11 ನೇ ಸ್ಥಾನ.
  • 2004-10 ರ ನಡುವಣ ಶೇಕಡವಾರು ಬಡತನ ನಿವಾರಣೆಯಲ್ಲಿ ಗುಜರಾತ್ ಕೊನೆಯ ಸ್ಥಾನದಲ್ಲಿದೆ. (8.6%).
  • 1990-95 ರ ನಡುವೆ ರಾಜ್ಯದ ಒಟ್ಟಾರೆ ವೆಚ್ಚದ 4.25 %ರಷ್ಟಿದ್ದ ಸಾರ್ವಜನಿಕ ಆರೋಗ್ಯದ ಮೇಲಣ ಖರ್ಚು 2005-10 ರ ನಡುವೆ ಕೇವಲ 0.77 %ಕ್ಕೆ ಇಳಿದಿದೆ.
  • ಕಳೆದ ಹತ್ತು ವರ್ಷಗಳಲ್ಲಿ ರೈತರಿಗೆ ವಿದ್ಯುತ್ ಲಭ್ಯತೆ ದಿನಂಪ್ರತಿ 10 ರಿಂದ 6 ಗಂಟೆಗಳಿಗೆ ಇಳಿದಿದೆ.
  • ಕಳೆದ ಹನ್ನೆರಡು ವರ್ಷಗಳಲ್ಲಿ ಔದ್ಯೋಗಿಕ ಬೆಳವಣಿಗೆ ದರ ಶೂನ್ಯದಲ್ಲಿ ನಿಂತಿದೆ.
  • ಗುಜರಾತಿನಲ್ಲಿ ಕೇವಲ 16.7 % ಜನರಿಗೆ ಸಾರ್ವಜನಿಕ ಕೊಳಾಯಿಯ ಮೂಲಕ ಸಂಸ್ಕರಿಸಿದ ನೀರು ಪೂರೈಸಲಾಗುತ್ತಿದೆ.
  • ಇಲ್ಲಿನ 47% ಕ್ಕೂ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ (ಇದು ಆಫ್ರಿಕಾದ ಅತೀ ಬಡ ರಾಷ್ಟ್ರಗಳ ಸರಾಸರಿಯನ್ನು ಮೀರಿಸಿದೆ).
  • ಶಿಶುಮರಣ ಅನುಪಾತ ಕಡಿತಗೊಳಿಸುವಲ್ಲಿ ಗುಜರಾತ್ ಹನ್ನೊಂದನೆ ಸ್ಥಾನದಲ್ಲಿದೆ.
  • ಇಲ್ಲಿ ಕೇವಲ 45% ರಷ್ಟು ಮಕ್ಕಳಿಗೆ ಜೀವರಕ್ಷಕ ಲಸಿಕೆಗಳನ್ನು ಕೊಡಲಾಗುತ್ತದೆ. ಗುಜರಾತಿಗೆ ಇದರಲ್ಲಿ 19 ನೇ ಸ್ಥಾನ.
  • ದೇಶದಲ್ಲಿ ನಾಲ್ಕನೇ ಅತಿಹೆಚ್ಚು ಬಾಲ್ಯವಿವಾಹಗಳು ನಡೆಯುವುದು ಗುಜರಾತಿನಲ್ಲಿ.
  • ಗುಜರಾತಿನಲ್ಲಿ ಶಾಲೆ ಬಿಡುವ ಮಕ್ಕಳ ಅನುಪಾತ 59%. ಮಕ್ಕಳು ಶಾಲೆ ಬಿಡುವುದನ್ನು ತಡೆಯುವ ನಿಟ್ಟಿನಲ್ಲಿ ಗುಜರಾತ್ 18 ನೇ ಸ್ಥಾನದಲ್ಲಿದೆ.
  • ಹೆಣ್ಣು-ಗಂಡು ಮಕ್ಕಳ ಅನುಪಾತದ ಅನುಸಾರ ಗುಜರಾತ್‌ಗೆ 24 ನೇ ಸ್ಥಾನ.
  • ಸಾಕ್ಷರತೆಯ ಸಾಧನೆಯಲ್ಲಿ ಗುಜರಾತ್ 12 ನೇ ಸ್ಥಾನದಲ್ಲಿದೆ.
  • ಯೋಜಿತ ಕಾರ್ಯಕ್ರಮಗಳ (ವಿಶೇಷವಾಗಿ ಅಭಿವೃದ್ಧಿ-ಬಡತನ ನಿರ್ಮೂಲನ ಕಾರ್ಯಕ್ರಮಗಳು) ಅನುಷ್ಟಾನದ ಅನುಪಾತ 73% ರಿಂದ (2003) 13% ಕ್ಕೆ (2011) ಕುಸಿದಿದೆ.
  • ಗುಜರಾತಿನ 28.2% ರಷ್ಟು ಪುರುಷರು ಮತ್ತು 32,3 %ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
  • ಮೂಲಸೌಕರ್ಯದ ಅಭಿವೃದ್ಧಿಯಲ್ಲಿ ಮೋದಿಯ ಗುಜರಾತ್ ದೇಶಕ್ಕೆ ಮಾದರಿ ಉತ್ತರಾಖಂಡದ ಪ್ರವಾಹಕ್ಕೆ ಸಿಲುಕಿದ್ದ 15,000 ಜನರನ್ನು ಮೋದಿ ಒಂದೇ ದಿನದಲ್ಲಿ ರಕ್ಷಿಸಿದರು ಎಂಬೆಲ್ಲ ಸುಳ್ಳುಗಳು ಸರಾಗವಾಗಿ ಹರಿದಾಡುತ್ತಿರುವಾಗಲೇ ರಾತ್ರಿಯಿಡೀ ಸುರಿದ ಮಳೆಗೆ ಅಹiದಾಬಾದ್ ನಗರ ನೀರಿನಲ್ಲಿ ಮುಳುಗಿದ್ದ ಚಿತ್ರಗಳು (ಸೆಪ್ಟಂಬರ್ 25) ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಭೂಸುಧಾರಣೆಯಲ್ಲ, ಇದು ಭೂ ಕಬಳಿಕೆ

ಗುಜರಾತ್ ಅಭಿವೃದ್ಧಿ ಪ್ರಾಧಿಕಾರ (GIDC) ೮೦ರ ದಶಕದಲ್ಲಿ ಮುಖ್ಯವಾಗಿ ಎರಡು ಉದ್ದೇಶಗಳಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿತ್ತು. (1) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಭೂಮಿ ಒದಗಿಸುವುದು. (2) ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ವಿತರಿಸುವುದು. GIDC ವತಿಯಿಂದ ಪ್ರಾರಂಭವಾದ 262 ಕೈಗಾರಿಕಾ ಪ್ರದೇಶಗಳಲ್ಲಿ ಈಗ ಚಾಲ್ತಿಯಲ್ಲಿರುವುದು 182. ಅದೂ ಸಹ ದೊಡ್ಡ ಕೈಗಾರಿಕೆಗಳ/ಉದ್ದಿಮೆದಾರರ ಕೈ ಕೆಳಗೆ. ಸಾರ್ವಜನಿಕ ಉದ್ದೇಶಗಳಿಗಾಗಿ ಎಂದು ವಶಪಡಿಸಿಕೊಂಡ ರೈತರ ಭೂಮಿಯನ್ನು ಈಗ ಅಕ್ರಮವಾಗಿ ಖಾಸಗಿ ಉದ್ದಿಮೆದಾರರಿಗೆ ಮಾರುಕಟ್ಟೆದರದಲ್ಲಿ ಮಾರಿ ಲಾಭಗಳಿಸುತ್ತಿರುವುದು. ಅಂದು ಭೂಮಿ ಕಳೆದುಕೊಂಡ ರೈತರಿಗೆ ಎಸಗುತ್ತಿರುವ ದ್ರೋಹ.

ಗೋಮಾಳದ ಭೂಮಿಯನ್ನು ವಶಪಡಿಸಿಕೊಳ್ಳುವಾಗಲೂ ಮೋದಿ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಗೋಮಾಳಗಳು ಗ್ರಾಮಸಭೆ/ಪಂಚಾಯ್ತಿಗಳ ಒಡೆತನದಲ್ಲಿದ್ದು ಅವುಗಳನ್ನು ಅತೀ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಾರುಕಟ್ಟೆಯ ದರಕ್ಕಿಂತ 30% ಹೆಚ್ಚಿನ ಬೆಲೆ ಕೊಟ್ಟು ಸರ್ಕಾರ ವಶಪಡಿಸಿಕೊಳ್ಳಬಹುದು. ಗುಜರಾತಿನಲ್ಲಿ ಹಳ್ಳಿಗಳ ಭೂರಹಿತರ (ಸಾಮಾನ್ಯವಾಗಿ ದಲಿತರು ಮತ್ತು ಮುಸ್ಲಿಂರು) ಆರ್ಥಿಕತೆ ಬಹುತೇಕ ಈ ಗೋಮಾಳಗಳನ್ನು ಅವಲಂಭಿಸಿದೆ. ಆದಾಗ್ಯೂ ಗ್ರಾಮಸಭೆ/ಪಂಚಾಯಿತಿಯ ಅನುಮತಿ ಪಡೆಯದೆಯೆ ಸಾಕಷ್ಟು ಗೋಮಾಳದ ಜಾಗವನ್ನು ಖಾಸಗಿ ಕೈಗಾರಿಕೆಗಳಿಗೆ ನೀಡಲು/SEZ ಗಳಿಗಾಗಿ ವಶಪಡಿಸಿಕೊಳ್ಳಲಾಗಿದೆ. Reliance-Gujarathಹಾಗೆ ವಶಪಡಿಸಿಕೊಳ್ಳುವಾಗ ಅವುಗಳ ಮಾರುಕಟ್ಟೆ ದರವನ್ನು ಬಹಳ ಕಡಿಮೆಯಾಗಿ ನಮೂದಿಸಲಾಗಿದೆ.

ಭಾವ್‌ನಗರದ ಮಹುವ ಕಡಲತೀರದ ಭೂಮಿಯನ್ನು ಕೃಷಿಯೋಗ್ಯವಲ್ಲದ ಜೌಳುಭೂಮಿಯೆಂದು ವರ್ಗೀಕರಿಸಿ ನಿರ್ಮಾ ವಿಶೇಷ ಆರ್ಥಿಕ ವಲಯದ ಸ್ಥಾಪನೆಗಾಗಿ ಮಂಜೂರು ಮಾಡಲಾಗಿದೆ. ಆದರೆ ಇದು ಗುಜರಾತಿನ ಅತ್ಯಂತ ಫಲವತ್ತಾದ ಭೂಪ್ರದೇಶಗಳಲ್ಲೊಂದು. ಮಹಾರಾಷ್ಟ್ರದ ನಾಸಿಕ್‌ನ ನಂತರ ಭಾರತದ ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಪ್ರದೇಶ ಈ ಮಹುವ. ಗುಜರಾತಿನ ಬಹುತೇಕ ಕಡಲತೀರ ಸುಣ್ಣದ ಕಲ್ಲಿನಿಂದ ಆವೃತ್ತವಾಗಿದ್ದು ಇದು ಸಮುದ್ರದ ನೀರಿನಿಂದ ಉಪ್ಪನ್ನು ಹೀರಿ ತೀರಕ್ಕೆ ಹೊಂದಿಕೊಂಡ ಸುಮಾರು 50 ಕಿ.ಮೀ. ಪ್ರದೇಶಕ್ಕೆ ಶುದ್ಧ ಸಿಹಿ ನೀರನ್ನು ಬಿಡುಗಡೆ ಮಾಡುತ್ತದೆ. ಇದರಿಂದ ತೀರ ಪ್ರದೇಶದ ರೈತರು ವರ್ಷದಲ್ಲಿ ಮೂರು ಬೆಳೆ ತೆಗೆಯುವಷ್ಟು ಈ ಭೂಮಿ ಫಲವತ್ತಾಗಿದೆ. ನಿರ್ಮಾದ ಲೆಕ್ಕಾಚಾರವೇ ಬೇರೆ. ಇಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಿದರೆ ಈ ಸುಣ್ಣದ ಕಲ್ಲುಗಳನ್ನು ಒಡೆದು ಸಿಮೆಂಟ್ ತಯಾರಿಸಿ ಇಲ್ಲೇ ಅಭಿವೃದ್ಧಿ ಪಡಿಸುವ ಬಂದರಿನ ಮೂಲಕ ಸಾಗಿಸಬಹುದಾದ್ದರಿಂದ ಸಾಗಾಣಿಕಾ ವೆಚ್ಚವೂ ಉಳಿಯಿತು. ಅಲ್ಲಿಗೆ ಫಲವತ್ತಾದ ಈ ಭೂಮಿ ನಿಜಕ್ಕೂ ಜೌಳು ಭೂಮಿಯೇ ಆಗುವುದಲ್ಲ! ಈ SEZ ಸ್ಥಾಪಿಸಿದರೆ ತೀರ ಪ್ರದೇಶದ ರೈತರು ಮಾತ್ರವಲ್ಲದೆ ಮೀನುಗಾರರು ಸೇರಿದಂತೆ ಸುಮಾರು 15,000 ಜನರ ಆರ್ಥಿಕತೆಗೆ ಕುತ್ತು ಬರುತ್ತದೆ. ಆದರೆ ಮೋದಿ ಸರ್ಕಾರ ನಿರ್ಮಾಕ್ಕೆ ಜಮೀನು ಮಂಜೂರು ಮಾಡಲು ನೀಡಿರುವ ಕಾರಣ ‘ಇದರಿಂದ ಸುಮಾರು 416 ಜನರಿಗೆ ಉದ್ಯೋಗಾವಕಾಶ ದೊರೆಯುವುದು’ ಎಂದು!

ಕಛ್‌ನ ಮುಂದ್ರಾದಲ್ಲಿ ಅದಾನಿ ಸಮೂಹ ಸಂಸ್ಥೆಗೆ ಬಂದರು ಮತ್ತು ವಿಶೇಷ ವ್ಯಾಪಾರ ವಲಯ ಸ್ಥಾಪನೆಗಾಗಿ ಅರಣ್ಯಹಕ್ಕು ಕಾಯ್ದೆ (2008) ಯನ್ನು ಧಿಕ್ಕರಿಸಿ 56 ಮೀನುಗಾರಿಕಾ ಗ್ರಾಮಗಳನ್ನು, 126 ಠರಾವಣೆಗಳನ್ನು ಈಗಾಗಲೇ ಒಕ್ಕಲೆಬ್ಬಿಸಲಾಗಿದೆ. ಇದು ಮೀನುಗಾರರ ಸಮುದ್ರದ ಮೇಲಣ ಸಹಜ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ ಅರಣ್ಯ ಉತ್ಪನ್ನಗಳ ಅವಲಂಬಿತರ, ದನಗಾಹಿಗಳ ಹಾಗೂ ತೀರ ಪ್ರದೇಶದ ರೈತರ ಜೀವನಾಧಾರವನ್ನೇ ಕಸಿಯುತ್ತವೆ. ಒಟ್ಟಾರೆಯಾಗಿ ಮೋದಿಯ ಈ ಮಾದರಿ ಗ್ರಾಮೀಣ ಆರ್ಥಿಕತೆಯ ಮೇಲೆ ಗದಾಪ್ರಹಾರ.

ಅದಾನಿ ಸಂಸ್ಥೆಗೆ ಈಗಾಗಲೇ ಪ್ರತಿ ಚ.ಮೀ.ಗೆ ರೂ.1 – ರೂ.32 ರಂತೆ (ಮಾರುಕಟ್ಟೆ ಬೆಲೆ ರೂ.1500) 5 ಕೋಟಿ ಚ.ಮೀ. ಕಡಲ ತೀರದ ಭೂಮಿಯನ್ನು ಮಂಜೂರು ಮಾಡಲಾಗಿದೆ. ಬಂದರು ಅಭಿವೃದ್ಧಿ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಪಡೆದ ಈ ಭೂಮಿಯ ಸಾಕಷ್ಟು ಭಾಗವನ್ನು ಅದಾನಿ ಸಂಸ್ಥೆ ಬೇರೆ ಕಾರ್ಪೊರೆಟ್ ಸಂಸ್ಥೆಗಳಿಗೆ ಮಾರಿದೆ/ಭೋಗ್ಯಕ್ಕೆ ನೀಡಿದೆ. ಇದು ಸರ್ಕಾರದೊಂದಿಗಿನ ಖರೀದಿ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ.

ಹಾಜೀರಾ ಪ್ರದೇಶದಲ್ಲಿ ಪ್ರತಿ ಚ.ಮೀ.ಗೆ ಜಿಲ್ಲಾ ಭೂಮೌಲ್ಯಮಾಪನ ಸಮಿತಿ (DLVC) ರೂ.1000 – ರೂ.1050 ಎಂದೂ ರಾಜ್ಯ ಭೂಮೌಲ್ಯಮಾಪನ ಸಮಿತಿ (SLVC) ರೂ.2020 ಎಂದೂ ಬೆಲೆ ನಿಗದಿ ಮಾಡಿದ್ದರೂ L&T ಸಂಸ್ಥೆಗೆ ರೂ.700/ ಚ.ಮೀ.ಯಂತೆ 8.53 ಲಕ್ಷ ಚದುರ ಕಿಮೀ ಭೂಮಿಯನ್ನು ಹಸ್ತಾಂತರಿಸುವ ನಿರ್ಧಾರವನ್ನು ಮೋದಿಯ ಸಂಪುಟ (2008) ಅನುಮೋದಿಸಿತು. ಇದರಿಂದ ಉತ್ತೇಜನಗೊಂಡು 2009 ರಲ್ಲಿ ಯೋಜನೆಯ ವಿಸ್ತರಣೆಗಾಗಿ ಇನ್ನೂ 12.14 ಲಕ್ಷ ಚ.ಮೀ. ಭೂಮಿಗಾಗಿ L&T ಸಂಸ್ಥೆ ಕೋರಿಕೆ ಸಲ್ಲಿಸಿತು. ಈ ಬಾರಿ DVLC ನಿಗದಿಪಡಿಸಿದ ಬೆಲೆ ರೂ.2400-ರೂ.2800. ಆಗಲೂ ಮೋದಿಯ ಸಂಪುಟ ಹಳೆಯ ದರದಲ್ಲೇ 5.8 ಲಕ್ಷ ಚ.ಮೀ. ಭೂಮಿಯನ್ನು L&T ಸಂಸ್ಥೆಗೆ ನೀಡಿತು. ಇದರಿಂದ ಸರ್ಕಾರಕ್ಕಾದ ನಷ್ಟ ರೂ.128.71 ಕೋಟಿ. ಇದು ಇಲ್ಲಿಗೇ ನಿಲ್ಲದೆ ಹಾಜಿರಾದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಆವರಿಸಿಕೊಂಡಿದ್ದ ಎಸ್ಸಾರ್ ಸ್ಟೀಲ್ ಅದನ್ನು ಸಕ್ರಮಗೊಳಿಸಿಕೊಳ್ಳಲು ಅರ್ಜಿ ಹಾಕಿದಾಗ ಇದೇ ರಿಯಾಯಿತಿ ದರದಲ್ಲಿ ಅದನ್ನು ಸಕ್ರಮಗೊಳಿಸಿ ಸರ್ಕಾರ ರೂ.238.5 ಕೋಟಿ ನಷ್ಟಮಾಡಿಕೊಂಡಿತು.

ಮೋದಿ ಸರ್ಕಾರದ ವಿವೇಚನಾರಹಿತ (ಅಥವ ಉದ್ದೇಶಪೂರ್ವಕ) ಯೋಜನೆಗಳಿಗೆ ಮತ್ತೊಂದು ನಿದರ್ಶನ ವಾಗ್ರಾ ಮತ್ತು ಭರೂಛ್‌ನ ರೈತರ ಪರಿಸ್ಥಿತಿ. ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲೆಂದೇ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಿಸಲಾಯಿತಾದರೂ ಈಗ ಇದೇ ಭಾಗದ ನರ್ಮದಾ ಅಚ್ಚುಕಟ್ಟು ಪ್ರದೇಶದ 14,977 ಹೆಕ್ಟೇರ್ ಭೂಮಿಯನ್ನು ಪೆಟ್ರೋಲಿಯಂ ಮತ್ತು ರಾಸಾಯನಿಕಗಳ ವಿಶೇಷ ಹೂಡಿಕೆ ವಲಯ ಸ್ಥಾಪನೆಗೆಂದು ವಶಪಡಿಸಿಕೊಳ್ಳಲಾಗಿದೆ. ನರ್ಮದಾ ನದಿಯ ಬಹುತೇಕ ನಾಲೆಗಳ ನೀರು ಜನರ ದಾಹವನ್ನು, ರೈತರ ಬವಣೆಯನ್ನು ತೀರಿಸುವ ಬದಲು ಬೃಹತ್ ಕೈಗಾರಿಕೆಗಳ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಉದಾ: ವಡೋದರ ಬಳಿ ಸ್ಥಾಪಿಸಲಾಗಿರುವ ರಾಸಾಯನಿಕ ಕೈಗಾರಿಕೆಗಳು ಶ್ರಮವೇ ಇಲ್ಲದೆ ನರ್ಮದಾ ನಾಲೆಯ ನೀರನ್ನು ಬಳಸಿಕೊಂಡು ನಗರದ ಸಂಸ್ಕರಿತ ಕೊಳಚೆ ನೀರನ್ನು ಒಯ್ಯುವ ನಾಲೆಗೆ ತಮ್ಮ ಸಂಸ್ಕರಿಸದ ತ್ಯಾಜ್ಯ ನೀರನ್ನು ಸುರಿಯುತ್ತದೆ. ಇದು ಮಾಹಿ ನದಿಯನ್ನು ಸೇರುತ್ತದೆ. ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿಯ ಯಾವ ಕಾನೂನೂ ಇವರನ್ನು ಅಲುಗಿಸಲಾರದು. ದೇಶದ ಅತಿ ಹೆಚ್ಚು ಮಲಿನಗೊಂಡ ೮೮ ಪ್ರದೇಶಗಳ ಪೈಕಿ 8 ಗುಜರಾತಿಗೆ ಸೇರಿರುವುದು ಸಹಜವೇ ಆಗಿದೆ. ಗುಜರಾತಿನ ವಾಪಿ ಮತ್ತು ಅಂಕಲೇಶ್ವರ ನಗರಗಳು ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿವೆ.

ಸರ್ಕಾರಿ ಉದ್ದಿಮೆಗಳ ಅವನತಿ ಮತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ

ಮೋದಿ ಮತ್ತವರ ಪ್ರಚಾರಕರು ಗುಜರಾತಿನಲ್ಲಿ ಸರ್ಕಾರಿ ಉದ್ದಿಮೆಗಳಿಗೆ ವೃತ್ತಿಪರತೆ ತಂದಿರುವುದಾಗಿ ಸಾರುತ್ತಿದ್ದರೂ ಸಿಎಜಿಯ ಇತ್ತೀಚಿನ ಮೂರು ವರದಿಗಳು ಬೇರೆಯದೇ ಕಥೆ ಹೇಳುತ್ತವೆ. ಇದರ ಪ್ರಕಾರ ಗುಜರಾತಿನ ಸರ್ಕಾರಿ ಉದ್ದಿಮೆಗಳು ಅನುಭವಿಸಿದ ರೂ.4052.37 ಕೋಟಿ ನಷ್ಟವನ್ನು ಉತ್ತಮ ಆಡಳಿತ ನಿರ್ವಹಣೆ ಮತ್ತು ನಿಯಂತ್ರಿಸಬಹುದಾದ ನಷ್ಟಗಳನ್ನು ತಡೆಯುವುದರಿಂದ ತಪ್ಪಿಸಬಹುದಾಗಿತ್ತು. ಇಂತಹ ನಷ್ಟಗಳು ವರ್ಷದಿಂದ ವರ್ಷಕ್ಕೆ ಏರುತ್ತಿರುವುದನ್ನು ಈ ವರದಿಗಳು ತೋರುತ್ತವೆ. 2006-11 ರವರೆಗಿನ ಗುಜರಾತ್ ಸ್ಟೇಟ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., (GSPCL) ಒಟ್ಟಾರೆ ಆದಾಯ 19245.39 ಕೋಟಿ. ಅದರಲ್ಲಿ ತನ್ನ ಸ್ವಂತ ಉತ್ಪಾದನೆಯ ಮಾರಾಟದಿಂದ ಬಂದ ಆದಾಯ ಕೇವಲ ರೂ.1563.63 ಕೋಟಿ (ಶೇ.8) ಮಾತ್ರ. ಉಳಿದ ಆದಾಯ ಇತರ ಖಾಸಗಿ ಉತ್ಪಾದಕರ ಉತ್ಪನ್ನಗಳ ಮಾರಾಟದಿಂದ ಬಂದದ್ದು.

ಮೋದಿ ತಾನು ಉದ್ಯಮಸ್ನೇಹಿ ಪರಿಸರ ನಿರ್ಮಿಸಿ ಗುಜರಾತನ್ನು ಅಭಿವೃದ್ಧಿ ಪರವಾಗಿಸಿರುವುದಾಗಿ ಹೇಳಿಕೊಳ್ಳುತ್ತಿದ್ದರೂ ಸಿಎಜಿ ವರದಿಗಳು ambani-modiಮೋದಿ ಸಾರ್ವಜನಿಕರ ಹಾಗೂ ಸರ್ಕಾರ ಉದ್ದಿಮೆಗಳ ಬೆಲೆ ತೆತ್ತು ಖಾಸಗಿ ಉದ್ದಿಮೆದಾರರ ಪರಿಚಾರಿಕೆ ಮಾಡುತ್ತಿರುವುದನ್ನು ನಿಚ್ಚಳವಾಗಿ ತೋರಿಸುತ್ತದೆ. GSPCL ಹಾಗೂ ರಿಲೆಯನ್ಸ್ ಇಂಡಸ್ಟ್ರೀಸ್ ಲಿ., ನಡುವಣ ಒಪ್ಪಂದದ ಪ್ರಕಾರ (2007) ರೂ.52.27 ಕೋಟಿ ಸಾಗಾಣಿಕಾ ವೆಚ್ಚವನ್ನು ಸಂಗ್ರಹಿಸಬೇಕಿತ್ತು. ಮತ್ತೊಂದೆಡೆ ಹಲವು ಖಾಸಗಿ ಸಂಸ್ಥೆಗಳು ಒಪ್ಪಿಕೊಂಡ ಸರಕನ್ನು ಕೊಳ್ಳದ ಕಾರಣಕ್ಕೆ ರೂ.502.19 ಕೋಟಿಯನ್ನು ಸಂಗ್ರಹಿಸಬೇಕಿತ್ತು. ಆದರೆ ಅದರ ಮೇಲಿನ ದಂಡವನ್ನೂ ಸೇರಿಸಿ ಇದನ್ನು ಮಾಫಿ ಮಾಡಲಾಗಿದೆ. (ಮುಖ್ಯ ಫಲಾನುಭವಿಗಳು ಎಸ್ಸಾರ್ ಪವರ್ ಲಿ., ಮತ್ತು ಗುಜರಾತ್ ಪಗುನಾನ್ ಎನರ್ಜಿ ಕಾರ್ಪೊರೇಷನ್ ಲಿ.,) ಇದೆಲ್ಲವನ್ನೂ ಬಿಟ್ಟುಕೊಟ್ಟು ನಷ್ಟಮಾಡಿಕೊಂಡಿದ್ದೇಕೆ ಎಂಬ ಸಿಎಜಿ ಪ್ರಶ್ನೆಗೆ ಸಮರ್ಪಕ ಉತ್ತರವೇ ಇಲ್ಲ. ಅನಿಲ ವಹಿವಾಟಿನಲ್ಲಿ (2006-09) ಕೊಂಡ ಬೆಲೆಗಿಂತ ಕಡಿಮೆ ಬೆಲೆಗೆ ಅದಾನಿ ಎನರ್ಜಿಸ್‌ಗೆ ಅನಿಲ ಮಾರಿ ರೂ.20.54 ಕೋಟಿ ನಷ್ಟ ಅನುಭವಿಸಿದ್ದು ದಾಖಲಾಗಿದೆ. ಒಪ್ಪಂದ ನಿರ್ವಹಣೆಯಲ್ಲಿನ ತಪ್ಪಿನಿಂದ ಎಸ್ಸಾರ್ ಆಯಿಲ್ ಲಿ.,ಗೆ ಆದ ಲಾಭ ಅಥವಾ GSPCL ಗೆ ಆದ ನಷ್ಟ 106.71 ಕೋಟಿ. ಈ ರೀತಿ ಸರ್ಕಾರಿ ಉದ್ದಿಮೆಗಳ ಉತ್ಪಾದನಾ ಚಟುವಟಿಕೆಗಳನ್ನು ಕುಗ್ಗಿಸುವುದು ಹೀಗೆ ಕಣ್ಣು ಮುಚ್ಚಿಕೊಂಡು ನಷ್ಟ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮುಂದೊಂದು ದಿನ ನಿರಂತರ ನಷ್ಟದ ನೆಪ ಒಡ್ಡಿ ಇಂತಹ ಉದ್ದಿಮೆಗಳನ್ನು ಖಾಸಗೀಕರಣಕ್ಕೆ ತೆರೆದಿಡುವುದು ಇವೆಲ್ಲ ಕಣ್ಣಮುಂದಿನ ತೆರೆದ ರಹಸ್ಯಗಳು.

ಮೋದಿ ಸರ್ಕಾರದ ಇಷ್ಟೆಲ್ಲ ಹಗರಣಗಳನ್ನು ಮಾಧ್ಯಮಗಳು ಜಾಣಕುರುಡಿನಿಂದ ನಿರ್ಲಕ್ಷಿಸುತ್ತ ಮೋದಿ ಕುರಿತಾದ ಕ್ಷುಲ್ಲಕ ವಿಷಯಗಳನ್ನು ದೊಡ್ಡ ವಿಷಯವೆಂಬಂತೆ ಬಿಂಬಿಸುತ್ತ ಆತ ನಿರಂತರ ಪ್ರಚಾರದಲ್ಲಿರುವಂತೆ ನೋಡಿಕೊಳ್ಳುತ್ತಿವೆ. ಈ ರೀತಿ ಮಾಧ್ಯಮಗಳ ನೈತಿಕ ಪ್ರಜ್ಞೆಯನ್ನು ಮಂಕಾಗಿಸಿರುವುದು ಮೋದಿ ಸರ್ಕಾರದ ಕಾರ್ಪೋರೇಟ್ ಫಲಾನುಭವಿಗಳ ಹಣ ಮತ್ತು ಸನಾತನಿಗಳ ಮನಸ್ಸು.

“ಸಿಎಜಿ ವರದಿಯಲ್ಲಿನ ಉಲ್ಲೇಖಗಳು ಭ್ರಷ್ಟಾಚಾರವಲ್ಲ ಕೇವಲ ಆಡಳಿತಾತ್ಮಕ ತಪ್ಪುಗಳು. ಅವನ್ನು ಸರಿಪಡಿಸಿಕೊಳ್ಳಲಾಗುವುದು,” ಎಂಬುದು ಮೋದಿ ಸರ್ಕಾರದ ಪ್ರತಿಕ್ರಿಯೆ. ಸಿಎಜಿ ವರದಿಯನ್ನೇ ಆಧರಿಸಿದ 2ಜಿ ಹಗರಣ, ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳಲ್ಲಿನ ಕಾಂಗ್ರೆಸ್ಸಿನ ಭ್ರಷ್ಟಾಚಾರವನ್ನು ಚುನಾವಣಾ ವಿಷಯವನ್ನಾಗಿಸಿಕೊಂಡ ಭಾಜಪ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇದೇ ಮೋದಿಯನ್ನು ಅನುಮೋದಿಸಬೇಕೆನ್ನುತ್ತದೆ!

ಭ್ರಷ್ಟಾಚಾರ ವಿರೋಧಿ ಮುಖವಾಡ

ಸಿಎಜಿ ವರದಿಯಲ್ಲಿ ಬಯಲಾದ ಭ್ರಷ್ಟಾಚಾರಗಳು ಒತ್ತೊಟ್ಟಿಗಿರಲಿ, ಮೋದಿಯ ಭ್ರಷ್ಟಾಚಾರ ವಿರೋಧಿ ಮುಖವಾಡವನ್ನು ಕಿತ್ತೊಗೆಯಲು ಭ್ರಷ್ಟಾಚಾರ ನಿಯಂತ್ರಣಕ್ಕಾಗಿಯೇ ಇರುವ ಸ್ವಾಯತ್ತ ಸಂಸ್ಥೆ ಲೋಕಾಯುಕ್ತವನ್ನು ಈತ ನಿಯಂತ್ರಿಸಲು ಹೊರಟಿರುವ ರೀತಿಯೇ ಸಾಕು. 2004 ರಿಂದಲೂ ಗುಜರಾತಿನಲ್ಲಿ ಲೋಕಾಯುಕ್ತರ ಹುದ್ದೆ ಖಾಲಿ ಇದೆ. ಲೋಕಾಯುಕ್ತರ ನೇಮಕಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ವಿರೋಧಿಸಿ ರಾಜ್ಯಪಾಲೆ ಕಮಲಾ ಬಿನಿವಾಲ್ ಸಂಪುಟ Narendra_Modiಮತ್ತು ಮುಖ್ಯಮಂತ್ರಿ ಮೋದಿಯನ್ನು ಕಡೆಗಣಿಸಿ 2011ರಲ್ಲಿ ನಿವೃತ್ತ ನ್ಯಾ.ವಿ.ಆರ್.ಮೆಹ್ತಾರನ್ನು ಈ ಹುದ್ದೆಗೆ ನೇಮಕಮಾಡಿದರು. ಇದನ್ನು ವಿರೋಧಿಸಿ ಮೋದಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತು. ಹೈಕೋರ್ಟ್‌ನಲ್ಲಿ ನಂತರ ಸುಪ್ರೀಂ ಕೋರ್ಟ್‌ನಲ್ಲಿಯೂ ಲೋಕಾಯುಕ್ತರ ನೇಮಕಾತಿ ಊರ್ಜಿತವಾಯಿತು (ಖಟ್ಲೆ ಖರ್ಚಿಗಾಗಿ ಮೋದಿ ಸರ್ಕಾರ ವ್ಯಯಿಸಿದ ಸಾರ್ವಜನಿಕರ ಹಣ ರೂ.45 ಕೋಟಿ). ಆದರೆ ನ್ಯಾ.ವಿ.ಆರ್.ಮೆಹ್ತಾ ಆ ಹುದ್ದೆಯ ಘನತೆಯನ್ನು ಕಾಪಾಡಲಾಗದ ಸರ್ಕಾರದಲ್ಲಿ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಲು ನಿರಾಕರಿಸಿದರು.

ಇಷ್ಟೆಲ್ಲ ಆದಮೇಲೂ ಮೋದಿ ಮಾಡಿದ್ದು ಬಲಿಷ್ಠ ಲೋಕಾಯುಕ್ತವನ್ನು ಸಹಿಸಲಾಗದ ಭ್ರಷ್ಟ ಸರ್ಕಾರ ಅಥವಾ ಅಹಂ ಪೆಟ್ಟಾದ್ದನ್ನು ಸಹಿಸಲಾಗದ ಸರ್ವಾಧಿಕಾರಿ ಮಾಡುವಂತದ್ದನ್ನೇ. 1986 ರ ಲೋಕಾಯುಕ್ತ ಕಾಯ್ದೆಗೆ ಬದಲಾವಣೆ ತಂದು ಲೋಕಾಯುಕ್ತರ ನೇಮಕಾತಿಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರ ಪಾತ್ರವನ್ನು ಗೌಣವಾಗಿಸಿ ಅದನ್ನು ಮುಖ್ಯಮಂತ್ರಿಯ ಕೆಳಗೆ ತರಲಾಗಿದೆ. ಅಷ್ಟೇ ಅಲ್ಲದೆ ಹೊಸ ಕಾಯ್ದೆಯ ಪ್ರಕಾರ ಸರ್ಕಾರ ಬಯಸಿದಲ್ಲಿ ಯಾವುದೇ ಸರ್ಕಾರಿ ಯಂತ್ರವನ್ನು ಲೋಕಾಯುಕ್ತ ವ್ಯಾಪ್ತಿಯಿಂದ ಹೊರಗಿಡಬಹುದಾಗಿದೆ. ಈ ಕಾಯ್ದೆಗೆ ಸದನದ ಅನುಮೋದನೆ ದೊರೆತರೂ ರಾಜ್ಯಪಾಲರ ಸಹಿಗಾಗಿ ಇನ್ನೂ ಕಾಯುತ್ತಿದೆ. (ಇದೇ ಮೋದಿ ಕೇಂದ್ರದಲ್ಲಿ ತಾನು ಅಣ್ಣಾ ಹಜಾರೆಯ ಲೋಕಪಾಲ ಕಾಯ್ದೆಯನ್ನು ಬೆಂಬಲಿಸುವುದಾಗಿ ಹೇಳುತ್ತಾರೆ.)

ಹಳಿತಪ್ಪಿದ ಆಡಳಿತ

ಭಾಜಪ ಮೋದಿಯನ್ನು ಅತ್ಯುತ್ತಮ ಆಡಳಿತಗಾರ ಎಂದು ಹಾಡಿ ಹೊಗಳುತ್ತಿದೆ. ಆದರೆ 2008-11 ರ ನಡುವೆ ರಾಜ್ಯದ ಹೂಡಿಕೆಗಳ ಮೇಲಣ ಗಳಿಕೆ (ROI) ಕೇವಲ 0.25%. ಸರ್ಕಾರ ಈ ಅವಧಿಯಲ್ಲಿ ಪಾವತಿಸಿದ ಸಾಲದ ಮೇಲಣ ಬಡ್ಡಿ ಸರಾಸರಿ 7.67%ರಷ್ಟು. ಇದು ರಾಜ್ಯದ ಮಧ್ಯಮ ಮತ್ತು ದೀರ್ಘಕಾಲೀನ ಆರ್ಥಿಕತೆಯ ಮೇಲೆ ಋಣಾತ್ಮಕ ಪ್ರಭಾವ ಬೀರುವುದು ನಿಶ್ಚಿತ. ಸರ್ದಾರ್ ಸರೋವರ್ ಯೋಜನೆಯನ್ನು ಒಳಗೊಂಡಂತೆ ಬಹುತೇಕ ಸರ್ಕಾರಿ ಯೋಜನೆಗಳಲ್ಲಿನ ಅತಿಹೆಚ್ಚಿನ ಖರ್ಚು (55%) ಸಾಲದ ಮೇಲಣ ಬಡ್ಡಿಯೇ ಆಗಿರುವುದು ಅತ್ಯಂತ ಆತಂಕಕಾರಿ ವಿಚಾರ. ಒಂದು ಕಡೆ ಶಿಕ್ಷಣ ಆರೋಗ್ಯದಂತಹ ಮೂಲಭೂತ ಸೌಕರ್ಯಗಳಿಗೆ ಸರ್ಕಾರದ ವೆಚ್ಚ ಕಡಿಮೆಯಾಗುತ್ತಿರುವುದು, ಉತ್ಪಾದನಾ ಸಾಮರ್ಥ್ಯ ಕುಗ್ಗುತ್ತಿರುವುದು ಮತ್ತೊಂದೆಡೆ ರಾಜ್ಯದ ಮೇಲಿನ ಸಾಲ, ಬಡ್ಡಿಗಳ ಹೊರೆ ಹೆಚ್ಚಾಗುತ್ತಿರುವುದು ಗುಜರಾತಿನ ಆರ್ಥಿಕತೆ ಅವನತಿಯತ್ತ ಸಾಗುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ದಲಿತವಿರೋಧಿ ಧೋರಣೆ

“ನನಗೆ ಇವರು (ದಲಿತರು) ತಮ್ಮ ಕೆಲಸವನ್ನು ಕೇವಲ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ ಅನ್ನಿಸುವುದಿಲ್ಲ. ಹಾಗಿದ್ದಲ್ಲಿ ಇವರು ತಲತಲಾಂತರದಿಂದ ಇದೇ ಕೆಲಸಗಳನ್ನು ಮಾಡಿಕೊಂಡಿರುತ್ತಿರಲಿಲ್ಲ… ಯಾವುದೋ ಒಂದು ಗಳಿಗೆಯಲ್ಲಿ ಅವರಿಗೆ ‘ಸಮಾಜದ ಹಾಗೂ ದೇವರ ಸಂತೋಷಕ್ಕಾಗಿ ದುಡಿಯುವುದು ತಮ್ಮ ಕೆಲಸ, ದೇವರು ತಮಗೆ ಕೊಟ್ಟಿರುವ ಕೆಲಸವನ್ನು ಮಾಡುವುದು ತಮ್ಮ ಕರ್ತವ್ಯ. ಶುಚಿಗೊಳಿಸುವ ಈ ಕೆಲಸ ತಮ್ಮೊಳಗಣ ಆಧ್ಯಾತ್ಮಿಕ ಕಸುವು’ ಎಂದು ಜ್ಞಾನೋದಯವಾಗಿದ್ದಿರಬೇಕು.” ಇವು ತನ್ನ ಕರ್ಮಯೋಗ ಪುಸ್ತಕದಲ್ಲಿ (2007) ಮೋದಿ ಹೇಳಿರುವ ಮಾತುಗಳು. ಇವು ಸ್ಪಷ್ಟವಾಗಿ ಮೋದಿಯ ಫ್ಯಾಸಿಸ್ಟ್, ದಲಿತವಿರೋಧಿ, ಸನಾತನವಾದಿ modi-advaniಮನಸ್ಥಿತಿಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಆತನ ಎಲ್ಲ “ಅಭಿವೃದ್ಧಿ” ಯೋಜನೆಗಳೂ ಬಲ್ಲಿದರ ಪರವಾಗಿಯೂ ಶೋಷಿತರ, ದಲಿತರ ವಿರುದ್ಧವಾಗಿಯೂ ಇರುತ್ತವೆ.

2011 ರ ಸಿಎಜಿ ವರದಿ ಪ್ರಕಾರ ಗುಜರಾತ್ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ವಶಪಡಿಸಿಕೊಂಡ ಭೂಮಿಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ಭೂರಹಿತರಿಗೆ ಹಂಚಬೇಕಿದ್ದ 15,587 ಹೆಕ್ಟೇರ್ ಹೆಚ್ಚುವರಿ ಭೂಮಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಕ್ಕೆ ಸರಿಯಾದ ಕಾರಣ ಕೊಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. 2008-11 ರ ನಡುವೆ ನಡೆದ ಭೂಹಂಚಿಕೆಯಲ್ಲಿ ಕೇವಲ 52% ಫಲಾನುಭವಿಗಳಿಗೆ (1003 ರಲ್ಲಿ 520 ಜನರಿಗೆ) ಮಾತ್ರ ಹೆಕ್ಟೇರಿಗೆ ರೂ.5,000 ಸಹಾಯಧನ ನೀಡಲಾಗಿದೆ. ಉಳಿದವರಿಗೆ ಈ ಸೌಲಭ್ಯ ವಿಸ್ತರಿಸದಿರುವುದಕ್ಕೆ ಯಾವುದೇ ಸೂಕ್ತ ವಿವರಣೆ ಇಲ್ಲ. ಇಂತಹ ಮೋದಿಯ ಪರಿವಾರಕ್ಕೆ ಅಧಿಕಾರ ಸಿಕ್ಕರೆ ಭಾರತದ ಹಿಮ್ಮುಖ ಚಲನೆ ಬಹುವೇಗವಾಗಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅಲ್ಪಸಂಖ್ಯಾತರು ಎರಡನೇ ದರ್ಜೆ ಪ್ರಜೆಗಳು

ಭಾರತ ಭಾರತೀಯರೆಲ್ಲರ ರಾಷ್ಟ್ರವೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ‘ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಮುಸ್ಲಿಮರಾದಿಯಾಗಿ ಇತರ ಎಲ್ಲ ಧರ್ಮೀಯರು ಇವರ ಪಾರಮ್ಯವನ್ನು ಒಪ್ಪಿ ಇವರಿಗೆ ಬಗ್ಗಿ ಭಯದ ನೆರಳಲ್ಲೇ ಬದುಕಬೇಕು’ ಎನ್ನುವ ಆರ್‌ಎಸ್‌ಎಸ್, ಭಾಜಪಾದ ಜೀವವಿರೋಧಿ ಸಿದ್ಧಾಂತ ಅಕ್ಷರಶಃ ಅನುಷ್ಟಾನಗೊಂಡಿರುವುದು ಮೋದಿ ಆಳ್ವಿಕೆಯ ಗುಜರಾತಿನಲ್ಲಿ.

ಇತ್ತೀಚಿನ ಸಾಕಷ್ಟು ಅಧ್ಯಯನಗಳು ಗುಜರಾತಿನ ಮುಸ್ಲಿಮರು ದೇಶದ ಕಡುಬಡವರ ಗುಂಪಿಗೆ ಸೇರಿರುವುದಲ್ಲದೆ ಧರ್ಮದ ಹೆಸರಿನಲ್ಲಿ ಅತ್ಯಂತ ಹೆಚ್ಚು ಪಕ್ಷಪಾತಕ್ಕೆ ಒಳಗಾದವರು ಎಂಬುದನ್ನು ಸಾಬೀತು ಪಡಿಸಿದೆ.

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಯಾಗದಂತೆ ನೋಡಿಕೊಳ್ಳುವುದರಲ್ಲಿ ಮೋದಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಅಲ್ಪಸಂಖ್ಯಾತರ ಮೆಟ್ರಿಕ್ಯುಲೇಷನ್‌ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ಕೇಂದ್ರಸರ್ಕಾರ 55,000 ಮಂದಿಗೆ ವಿದ್ಯಾರ್ಥಿವೇತನವನ್ನು (ಅದರಲ್ಲಿ 53,000 ಅರ್ಹ ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ) ಗುಜರಾತಿಗೆ ಮಂಜೂರು ಮಾಡಿತ್ತು. ’ಇತರ ಧರ್ಮದ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತ’ ಎಂಬ ಕಾರಣ ನೀಡಿ ಮೋದಿ ಸರ್ಕಾರ ಅದನ್ನು ತಡೆಹಿಡಿದಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ ಯೋಜನೆಯ ಪರವಾಗಿ ತೀರ್ಪು ಬಂದಿದೆ. ಕೇವಲ 26% ರಷ್ಟು ಗುಜರಾತಿ ಮುಸ್ಲಿಮರು ಮೆಟ್ರಿಕ್ಯುಲೇಷನ್ ಹಂತ ತಲುಪುತ್ತಾರೆ. ಶಾಲೆ ಬಿಡುವ ಮಕ್ಕಳ ಶೇಕಡವಾರು ಲೆಕ್ಕದಲ್ಲಿ ಮುಸ್ಲಿಮರದು ಅತಿದೊಡ್ಡಪಾಲು.

ರಾಷ್ಟ್ರೀಯ ಆನ್ವಯಿಕ ಅರ್ಥಶಾಸ್ತ್ರ ಮಂಡಳಿ (NCAER) ಯ 2011 ರ ವರದಿ ರಾಜ್ಯಸರ್ಕಾರದ ಮುಸ್ಲಿಂ ವಿರೋಧಿ Gujarat_muslimಧೋರಣೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇದರನ್ವಯ ಮೇಲ್ಜಾತಿ ಹಿಂದೂಗಳ ಹೋಲಿಕೆಯಲ್ಲಿ ನಗರವಾಸಿ ಮುಸ್ಲಿಮರ ಬಡತನ 8 ಪಟ್ಟು (800%) ಮತ್ತು ಹಿಂದೂ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹೋಲಿಕೆಯಲ್ಲಿ 50% ರಷ್ಟು ಹೆಚ್ಚು ಇದೆ. ಗ್ರಾಮವಾಸಿ ಮುಸ್ಲಿಮರ ಬಡತನ ಮೇಲ್ಜಾತಿಯಲ್ಲಿ ಹಿಂದೂಗಳ ಹೋಲಿಕೆಯಲ್ಲಿ 200% ಹೆಚ್ಚಾಗಿದೆ. ಗುಜರಾತಿನ 60% ರಷ್ಟು ಮುಸ್ಲಿಮರು ನಗರವಾಸಿಗಳಾಗಿದ್ದು ಇವರು ರಾಜ್ಯದ ಅತ್ಯಂತ ನಿರ್ಲಕ್ಷಿತ ಗುಂಪಿಗೆ ಸೇರಿದ್ದಾರೆ.

ಸರ್ದಾರ್‌ಪುರ ಮತೀಯ ಗಲಭೆಯ 22 ಸಂತ್ರಸ್ತ ಕುಟುಂಬಗಳಿಗಾಗಿ ಹಿಮ್ಮತ್‌ನಗರದಲ್ಲಿ ದಲಿತ ಕಾಲೋನಿಗೆ ಹೊಂದಿಕೊಂಡಂತೆ ನಿರ್ಮಿಸಿರುವ ‘ಸುರಕ್ಷಿತ ಕಾಲೋನಿ’ ಎಲ್ಲ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸಾಮಾಜಿಕ ಬಹಿಷ್ಕಾರದ ವಿಸ್ತರಿಸಿದ ರೂಪವಾಗಿ ಕಾಣುತ್ತದೆ.

ಸಂವಿಧಾನ ದತ್ತ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೇ ಅಣಕ ಮಾಡುವಂತೆ ‘ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ’ (2003)ಯ ಪ್ರಕಾರ ರಾಜ್ಯದಲ್ಲಿ ಮತ್ತೊಂದು ಧರ್ಮಕ್ಕೆ ಮತಾಂತರ ಹೊಂದಲು ಬಯಸುವವರು ಸರ್ಕಾರದ ಅನುಮತಿ ಪಡೆಯಬೇಕಿದೆ. ‘ಸ್ಥಳಾಂತರದ ವಿರುದ್ಧ ಗಲಭೆ ಪೀಡಿತ ಪ್ರದೇಶದ ನಿವಾಸಿಗಳ ರಕ್ಷಣೆ ಮತ್ತು ಸ್ಥಿರಾಸ್ತಿ ಹಸ್ತಾಂತರ ನಿಯಂತ್ರಣ ಕಾಯ್ದೆ-1991 ಕ್ಕೆ 2009ರಲ್ಲಿ ಬದಲಾವಣೆ ತಂದು ಅದನ್ನು ಅಲ್ಪಸಂಖ್ಯಾತರ ವಿರುದ್ಧ ಅಸ್ತ್ರವಾಗಿ ಬಳಸಲಾಗುತ್ತಿದೆ.

ಮೋದಿಯ ಜೀವವಿರೋಧಿ, ಪ್ರತಿಗಾಮಿ ಸಾಧನೆಗಳ ಪಟ್ಟಿ ಇನ್ನೂ ಬಹುದೊಡ್ಡದಿದೆ. ಆದರೆ ಯಾವುದೇ ಪ್ರಜ್ಞಾವಂತ ಮನಸ್ಸಿಗೆ ಮೋದಿ ನಮಗೆ ಯಾಕೆ ಬೇಡ ಎಂದು ಅರಿವಾಗಲು ಇವೇ ಬಹಳಷ್ಟಾಯಿತು ಅನ್ನಿಸುತ್ತದೆ. ಕಾಂಗ್ರೆಸ್/ಯುಪಿಎ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ), ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ), ಆಹಾರ ಭದ್ರತಾ ಕಾಯ್ದೆಯಂತಹ ಹಲವು ಜನಪರ (ಅವು ತಮ್ಮಷ್ಟಕ್ಕೆ ಪರಿಪೂರ್ಣವಲ್ಲದಿದ್ದರೂ) ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಆರಂಭದಲ್ಲಿ ಹೇಳಿದಂತೆ ಇವರ ಭ್ರಷ್ಟಾಚಾರದ ಪ್ರಕರಣಗಳು, ಅವೈಜ್ಞಾನಿಕ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಯೋಜನೆಗಳು ದೇಶದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ತಲ್ಲಣಗಳಿಗೆ ಕಾರಣವಾಗಿದೆ. ಹಾಗಾಗಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದರೂ ಜನಶಕ್ತಿಯು ನಿರಂತರ ವಿರೋಧ ಪಕ್ಷವಾಗಿ ಜನ/ಜೀವ ಪರವಾಗಿ ದನಿಯೆತ್ತುತ್ತಲೇ ಇರಬೇಕಾಗುತ್ತದೆ. ಅದಕ್ಕಾಗಿಯಾದರೂ ಮತಾಂಧತೆಯ ಅಫೀಮು ದ್ವೇಷದ ದಳ್ಳುರಿ ಹಬ್ಬಿಸದೆ ಸಾಮರಸ್ಯ ಉಳಿಯಬೇಕಿದೆ. ಬಡವರು ‘ದೈನೇಸಿ’ ಸ್ಥಿತಿ ತಲುಪದೆ ದನಿಯೆತ್ತುವಷ್ಟಾದರೂ ಸಾಮರ್ಥ್ಯ ಉಳಿಸಿಕೊಂಡಿರಬೇಕಿದೆ.

“ಮೋದಿಯೆಂಬ ಭಯವನ್ನು ಬಿತ್ತಿ ನಮ್ಮ ಮತ ಕೇಳುವುದು ಬಿಟ್ಟು ನಿಮ್ಮ ಯೋಜಿತ ಕಾರ್ಯಕ್ರಮಗಳ ಮೂಲಕ ನಮ್ಮ ಮತ ಗೆಲ್ಲಿ” ಎಂಬ ಮುಸ್ಲಿಮರ ಮಾತುಗಳು ಕಾಂಗ್ರೆಸ್ಸಿಗೆ ಸರಿದಾರಿ ತೋರಲೆಂದು ಆಶಿಸೋಣ.

ಭ್ರಷ್ಟಾಚಾರ ವಿರೋಧೀ ಹೋರಾಟ – ಉತ್ತರಿಸದೇ ಉಳಿದ ಪ್ರಶ್ನೆಗಳು

-ಸಂಜ್ಯೋತಿ ವಿ.ಕೆ.

ಅಣ್ಣಾ ಹಜಾರೆ, ಅವರ ಉಪವಾಸ ಸತ್ಯಾಗ್ರಹ, ಅವರ ತಂಡದ ಸದಸ್ಯರುಗಳ ತರಹೇವರಿ ಹೇಳಿಕೆಗಳು, ಕೇಂದ್ರ ಸರ್ಕಾರದ ಪ್ರತಿನಿಧಿಗಳ ಅಸಂಬದ್ಧ ಪ್ರತಿಕ್ರಿಯೆಗಳು ಇವೆಲ್ಲ “ಸ್ಫೋಟಕ  ಸುದ್ದಿ”ಗಳಾಗಿ ಎಲ್ಲಾ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಹರಿದಾಡಿದ ನೆನಪುಗಳು ಕರಗುತ್ತಿರುವ ಈ ಗಳಿಗೆಯಲ್ಲಿ ಒಂದು ಪುನರಾವಲೋಕನ…

ಹಾಲಿ ಇರುವ ಕಾನೂನುಗಳನ್ನು ಪ್ರಾಮಾಣಿಕವಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವುದರ ಹೊರತಾಗಿಯೂ ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲ ಒಂದು ಪ್ರಬಲ ಮಸೂದೆಯ ಅಗತ್ಯವಂತೂ ಖಂಡಿತವಾಗಿಯೂ ಇದೆ. ಈ  ನಿಟ್ಟಿನಲ್ಲಿ ಜವಹರಲಾಲ ನೆಹರುರವರ ಕಾಲದಲ್ಲಿಯೇ ರಚಿತವಾಗಿ ಹಲವು ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಲೋಕಪಾಲ ಮಸೂದೆ, ವಿವಿಧ ಕೇಂದ್ರ ಸರ್ಕಾರಗಳ ಕಾಲದಲ್ಲಿ ಇಣುಕಿ, ಹಣಕಿ ಮತ್ತೆ ಧೂಳು ತಿನ್ನುತ್ತಾ ಕುಳಿತಿತ್ತು. ಕಾಂಗ್ರೆಸ್ ನೇತ್ರತ್ವದ ಯು.ಪಿ.ಎ. ಸರ್ಕಾರ ತನ್ನ “ಕನಿಷ್ಟ ಸಾಮಾನ್ಯ ಕಾರ್ಯಸೂಚಿ”ಯಲ್ಲಿ (ಕಾಮನ್ ಮಿನಿಮಮ್ ಪ್ರೋಗ್ರಾಮ್) ಇದರ ಪ್ರಸ್ತಾಪ ಮಾಡಿತ್ತಾದರೂ, ಕಾಂಗ್ರೆಸ್ ಪಕ್ಷವೂ ಸೇರಿದಂತೆ ಯು.ಪಿ.ಎ.ನ ಯಾವುದೇ ಅಂಗ ಪಕ್ಷಗಳಿಗಾಗಲಿ, ಯು.ಪಿ.ಎ. ಸರ್ಕಾರದ ಭ್ರಷ್ಟಾಚಾರಗಳ ಬಗ್ಗೆ ದೊಡ್ಡ ದನಿಯಲ್ಲಿ ಗುಲ್ಲೆಬ್ಬಿಸುತ್ತಿರುವ ಆದರೆ ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಕುರುಡು, ಕಿವುಡು, ಮೂಕಾಗಿರುವ ಬಿ.ಜೆ.ಪಿ.ಗಾಗಲೀ ಒಂದು ಪ್ರಬಲವಾದ ಮಸೂದೆಯನ್ನು ಮಂಡಿಸುವ ಮನಸ್ಸಿಲ್ಲ ಎಂಬುದು ಸುಸ್ಪಷ್ಟ.

ಭ್ರಷ್ಟಾಚಾರವೆಂಬ ಆಕ್ಟೋಪಸ್ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳನೆಲ್ಲಾ ವ್ಯಾಪಿಸುತ್ತಾ ತನ್ನ ಬಾಹುಗಳನ್ನು ದಶದಿಕ್ಕುಗಳಲ್ಲೂ ಚಾಚಿ ಮೇರೆ ಮೀರಿ ಬೆಳೆಯುತ್ತಿರುವಾಗ ಅಣ್ಣಾ ಹಜಾರೆ ಎಂಬ ಪ್ರಾಮಾಣಿಕ ಮನುಷ್ಯನೊಬ್ಬ ಜನಲೋಕಪಾಲ ಮಸೂದೆಗಾಗಿ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಉಪವಾಸ ಕೂತಾಗ, ಬೇಸತ್ತಿದ್ದ ಜನರಿಗೆ ಇದೊಂದು ಆಶಾಕಿರಣವಾಗಿ ಕಂಡಿತ್ತು. ದೊಡ್ಡ ಸಂಖ್ಯೆಯಲ್ಲಿ ಜನ ಬಹಿರಂಗವಾಗಿ ಸೇರಲಿಲ್ಲವಾದರೂ ಒಂದು ಅವ್ಯಕ್ತ ಸಹಮತ ಬಹುಪಾಲು ಜನರಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಕೇಂದ್ರ ಸರ್ಕಾರದ ಗ್ರಹಿಕೆ ಏನಿದ್ದಿತೋ, ಮಸೂದೆಯ ರೂಪುರೇಷೆಗಳನ್ನು ಚರ್ಚಿಸಲು ನಾಗರಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡಂತೆ ಒಂದು ಜಂಟಿ ಸಮಿತಿಯನ್ನು ರಚಿಸುವ ಇಂಗಿತ ವ್ಯಕ್ತಪಡಿಸಿತು. ಅದಕ್ಕೆ ಒಪ್ಪಿದ ಅಣ್ಣಾ ಸಹಾ “ಸಮಿತಿಯ ವತಿಯಿಂದ ಉತ್ತಮ ಮಸೂದೆಯನ್ನು ಪ್ರಸ್ತುತ ಪಡಿಸುತ್ತೇವೆ. ಅದನ್ನು ಚರ್ಚಿಸಿ ಅಂಗೀಕಾರ ಮಾಡುವ ಅಧಿಕಾರ ಸಂಸತ್ತಿನದ್ದು” ಎಂದು ಮಾಧ್ಯಮಗಳ ಮುಂದೆ ಹೇಳಿದರು. ಅಲ್ಲಿಯವರಗೆ ಎಲ್ಲವೂ ಸುಸೂತ್ರವಾಗಿತ್ತು. ಆದರೆ ಅದರ ಮುಂದಿನ ಘಟ ನಾವಳಿಗಳು ನಾಡಿನ ಬಗ್ಗೆ ನಿಜವಾದ ಕಾಳಜಿ ಹೊಂದಿರುವವರಿಗೆ, ಸಂವಿಧಾನದ ಬಗ್ಗೆ ನಂಬಿಕೆಯಿಟ್ಟ ಪ್ರತಿಯೊಬ್ಬ ಪ್ರಜ್ಞಾವಂತನಿಗೆ ಗಾಬರಿ ಹುಟ್ಟಿಸುವಂತವು.

ಈ ಹಿನ್ನೆಲೆಯಲ್ಲಿ ಅಣ್ಣಾ ಪರ ಅಥವಾ ವಿರುದ್ಧ ಎಂಬ ಪೂರ್ವಾಗ್ರಹಗಳಿಗೆ ಸಿಲುಕದೆಯೇ ಇಡೀ ಪ್ರಕರಣವನ್ನು ವಿಶ್ಲೇಷಿಸುವಾಗ ಕೆಲವು ಪ್ರಶ್ನೆಗಳನ್ನು ಎತ್ತಲೇಬೇಕಿದೆ.

ಮೊದಲಿಗೆ – ‘ನಾಗರಿಕ ಸಮಾಜದ ಪ್ರತಿನಿಧಿಗಳು’ ಎಂಬ ಅಣ್ಣಾ ತಂಡದ ಆಯ್ಕೆಯ ಮಾನದಂಡಗಳೇನು? ದೇಶದ ವಿವಿಧ ಭಾಗಗಳ, ವರ್ಗಗಳ ಪ್ರಾತಿನಿಧ್ಯವಿಲ್ಲದೆ ಇದು ಕೇವಲ ‘ಅಣ್ಣಾ ತಂಡ’ವಾಯಿತೇ ಹೊರತು ನಿಜವಾದ ಸಮಾಜದ ಪ್ರತಿನಿಧಿಗಳ ತಂಡವಾಗಲಿಲ್ಲ. ‘ಇದು ಕೇವಲ ಆಕಸ್ಮಿಕ ಅಥವಾ ಇಂತಹ ಚರ್ಚೆಗಳಲ್ಲಿ ಹೋರಾಟದ ಮೂಲ ಉದ್ದೇಶವನ್ನು ಮುಕ್ಕಾಗಿಸುವುದು ಬೇಡ’ ಎನ್ನುವ ವಾದವನ್ನು ವಾದಕ್ಕಾಗಿಯಾದರೂ ಒಪ್ಪಿಬಿಡಬಹುದಿತ್ತು- ಸಾಮಾಜಿಕ ನ್ಯಾಯದ ಬಗೆಗಿನ ಅಣ್ಣಾರ ನಿಲುವು ಸಮರ್ಪಕವಾಗಿದ್ದಿದ್ದರೆ.

Sansad_Bhavan

Sansad_Bhavan

ಪತ್ರಕರ್ತ ಮುಕುಲ್ ಶರ್ಮ ಅವರು ರಾಳೇಗಾಂವ್ ಸಿದ್ಧಿಯಲ್ಲಿನ ಅಣ್ಣಾರ ಸುಧಾರಣಾ ಕ್ರಮಗಳಿಂದ ಪ್ರಭಾವಿತರಾಗಿದ್ದರೂ, ಅವರ ‘ಬ್ರಾಹ್ಮಣಿಕೆ’ಯ ಧೋರಣೆಯನ್ನೂ ಗುರುತಿಸುತ್ತಾರೆ.  ಅಣ್ಣಾ ತಂದಿರುವ ಜಲ ಸಂರಕ್ಷಣೆ ಮತ್ತು ಸಮರ್ಪಕ ಜಲ ನಿರ್ವಹಣೆ, ಅದರಿಂದ ಹೆಚ್ಚಿದ ಬೇಸಾಯಗಾರರ ಇಳುವರಿ ಮತ್ತು ಆದಾಯ, ಪಾನ ನಿಷೇಧ ಇವೆಲ್ಲಾ ನಿಜಕ್ಕೂ ಅನುಕರಣ ಯೋಗ್ಯ. ಆದರೆ ಜೊತೆಗೇ ದಲಿತರ ಆಹಾರ ಕ್ರಮಗಳ ಬಗೆಗಿನ ಅವರ ಋಣಾತ್ಮಕ ಧೋರಣೆ ಪ್ರಶ್ನಾರ್ಹ. ಅಂತೆಯೇ “ಪ್ರತೀ ಹಳ್ಳಿಯಲ್ಲಿ ಒಬ್ಬ ಚಮ್ಮಾರ, ಕಂಬಾರ, ಝಾಡಮಾಲಿ ಇರಲೇಬೇಕು ಮತ್ತು ಅವರೆಲ್ಲಾ ತಮ್ಮ ಪಾತ್ರ, ಕಸುಬಿನಂತೆ ದುಡಿಯಬೇಕು. ಇದೇ ರಾಳೇಗಾಂವ್ ಸಿದ್ಧಿಯ ಮಾದರಿ” ಎನ್ನುವ ಅಣ್ಣಾರ ಮನಸ್ಸತ್ವ ಇಂತಹ ವಾದವನ್ನು ಒಪ್ಪುವುದನ್ನು ಅಸಾಧ್ಯವಾಗಿಸುತ್ತದೆ. ಮೀಸಲಾತಿಯನ್ನು ವಿರೋಧಿಸುವವರು ಅಣ್ಣಾರ ಹೋರಾಟದೊಡನೆ ತಮ್ಮನ್ನು ಗುರುತಿಸಿಕೊಳ್ಳುವುದು ಕಾಕತಾಳೀಯವಲ್ಲ.

ಎರಡನೆಯದು – ಸರ್ಕಾರ ಪ್ರಸ್ತಾಪಿಸಿದ ಲೋಕಪಾಲ ಮಸೂದೆ ಕೇವಲ ಕಾಗದದ ಮೇಲೂ ಘರ್ಜಿಸಲಾರದಷ್ಟು ದುರ್ಬಲವೆಂಬುದು ನಿಜ. ಆದರೆ ಅಣ್ಣಾ ತಂಡ ರಚಿಸಿದ ಜನಲೋಕಪಾಲ ಮಸೂದೆ ಅದಕ್ಕೆ ಪರ್ಯಾಯವಾಗಬಲ್ಲುದೇ?

  1.  ‘ಜನಲೋಕಪಾಲವನ್ನು ಯಥಾವತ್ತಾಗಿ ಅಂಗೀಕರಿಸಿದರೂ ಭ್ರಷ್ಟಾಚಾರವನ್ನು ಸಂಪೂರ್ಣ ತೊಲಗಿಸಿಬಿಡಲು ಸಾಧ್ಯವಿಲ್ಲ’ ಎಂಬುದನ್ನು ಅದರ ಪರವಾಗಿರುವ ಪರಿಣಿತರೇ ಒಪ್ಪುತ್ತಾರೆ.
  2. ಸಂವಿಧಾನಬದ್ಧವಾಗಿ ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಗಳೆಲ್ಲರ ಮೇಲೆ (ನ್ಯಾಯಾಂಗವನ್ನೂ ಒಳಗೊಂಡಂತೆ!) ಒಂದು ಸರ್ವತಂತ್ರ ಸ್ವತಂತ್ರವಾದ ಸರ್ವಾಧಿಕಾರಿಯನ್ನು ಸ್ಥಾಪಿಸುವುದು ಪ್ರಜಾಪ್ರಭುತ್ವದ ಮೂಲತತ್ವಕ್ಕೇ ಅಪಾಯಕಾರಿಯಾದದ್ದಲ್ಲವೇ?
  3. ಭ್ರಷ್ಟಾಚಾರವೆಂಬುದು ಮನುಕುಲದ ಇತಿಹಾಸದಷ್ಟೇ ಹಳೆಯ ವಿಷಯವಾದರೂ ಅದರ ವ್ಯಾಪ್ತಿ ಮತ್ತು ಪ್ರಮಾಣ ಇಂದು ಹಿಂದೆಂದಿಗಿಂತಲೂ ಸಹಸ್ರಾರು ಪಟ್ಟು ಹೆಚ್ಚಿದ್ದು, ಜನಸಾಮಾನ್ಯರ  ಕಲ್ಪನೆಗೂ ಮೀರಿದ್ದಾಗಿದೆ. ಇದೇ ಭ್ರಷ್ಟ ಹಣ ಚುನಾವಣೆಗಳನ್ನು ಮತದ ಮಾರುಕಟ್ಟೆಯಾಗಿ ಪರಿವರ್ತಿಸುತ್ತಿದೆ; ನ್ಯಾಯಾಂಗವನ್ನೂ ಭ್ರಷ್ಟಗೊಳಿಸುತ್ತಾ ನ್ಯಾಯವನ್ನು ಬಿಕರಿಯ ವಸ್ತುವನ್ನಾಗಿಸುವ ಧಾಷ್ಟ್ರ್ಯ  ತೋರುತ್ತಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಭಷ್ಟಾಚಾರಗಳೆಲ್ಲ ಇಂದು ಒಂದೇ ಸರಪಣಿಯ ಕೊಂಡಿಗಳಾಗಿದ್ದು, ಅದರ ಮೂಲವಿರುವುದು ಕಾರ್ಪೊರೇಟ್ ಲಾಬಿ, ಕಾರ್ಪೊರೇಟ್ ಭಷ್ಟಾಚಾರದಲ್ಲಿ. ಹೀಗಿರುವಾಗ ಜನಲೋಕಪಾಲ ಮಸೂದೆ ಕಾರ್ಪೊರೇಟ್ ವಲಯವನ್ನು ತನ್ನ ಪರಿಧಿಯಿಂದ ಸಂಪೂರ್ಣ ಹೊರಗಿಟ್ಟಿರುವುದು, ಕೇವಲ ರೋಗದ ಲಕ್ಷಣಗಳನಷ್ಟೇ ಉಪಚರಿಸುತ್ತಾ ಅದರ ಮೂಲವನ್ನು ಕಡೆಗಣಿಸುವ ಕಸರತ್ತಾಗಿದೆ. ಈ ಹಿನ್ನೆಲೆಯಲ್ಲಿಯೇ ಅನಿವಾರ್ಯವಾಗಿ ಅಣ್ಣಾ ತಂಡಕ್ಕೆ ಕಾರ್ಪೊರೇಟ್ ವಲಯದ ಮತ್ತು ಮೇಲ್ಮಧ್ಯಮ ವರ್ಗದ ಕಾರ್ಪೊರೇಟ್ ನೌಕರರ ಬೆಂಬಲವನ್ನು ಅನುಮಾನಿಸಬೇಕಿದೆ. ತನ್ನ ನೌಕರರಿಗೆ ತಮ್ಮದೇ ಸಂಘಟನೆ ರೂಪಿಸಿಕೊಳ್ಳುವ, ತನ್ನ ಹಕ್ಕುಗಳಿಗಾಗಿ ಪ್ರತಿಭಟಿಸುವ ಕನಿಷ್ಟ ಹಕ್ಕನ್ನೂ ಪ್ರತ್ಯಕ್ಷ/ಪರೋಕ್ಷವಾಗಿ ನಿರಾಕರಿಸುವ ಕಾರ್ಪೊರೇಟ್ ಕಂಪನಿಗಳು ಅಣ್ಣಾ ತಂಡದ ಹೋರಾಟವನ್ನು ಬೆಂಬಲಿಸುವ ಸಲುವಾಗಿ ತನ್ನ ನೌಕರರಿಗೆ ಬಿಡುವು ಮಾಡಿಕೊಟ್ಟು ಫ್ರೀಡಂ ಪಾರ್ಕ್‌ಗೆಗೆ ಕಳಿಸುವುದು ಅರಿಯಲಾಗದ ದೊಡ್ಡ ರಹಸ್ಯವೇನಲ್ಲ. ‘ಭ್ರಷ್ಟಾಚಾರ ವಿರುದ್ಧ ಭಾರತ’ ಹೋರಾಟಕ್ಕೆ ಲಕ್ಷಾಂತರ ರೂಪಾಯಿಗಳ ದೇಣಿಗೆ ನೀಡುತ್ತಿರುವುದು ಇಂತಹ ಹಲವಾರು ಕಾರ್ಪೊರೇಟ್ ಕಂಪನಿಗಳೇ.
  4. ಈ ಜನಲೋಕಪಾಲ ಮಸೂದೆ ಸರ್ಕಾರೇತರ ಸಂಸ್ಥೆ(ಎನ್.ಜಿ.ಓ.)ಗಳನ್ನೂ ತನ್ನ ವ್ಯಾಪ್ತಿಯಿಂದ ಹೊರಗಿಡಲು ಬಯಸುತ್ತದೆ. ಎಲ್ಲೋ ಕೆಲವು ಎನ್.ಜಿ.ಓ.ಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆಯಾದರೂ ಇಂದಿನ ಮುಕ್ಕಾಲುವಾಸಿ ಎನ್.ಜಿ.ಓ.ಗಳು ದುಡ್ಡು ಮಾಡುವ ಸಲುವಾಗಿಯೇ ಹುಟ್ಟಿಕೊಳ್ಳುತ್ತವೆಂಬ ವಿಷಯ ಎಲ್ಲರಿಗೂ ತಿಳಿದಿರುವ ಒಂದು ತೆರೆದ ರಹಸ್ಯವಷ್ಟೆ. ಲಕ್ಷಾಂತರ, ಕೋಟ್ಯಾಂತರ ರೂಗಳನ್ನು ನಾನಾ ಮೂಲಗಳಿಂದ (ವಿದೇಶಿ ದೇಣಿಗೆಯೂ ಸೇರಿದಂತೆ) ಸಾರ್ವಜನಿಕ ಉದ್ದೇಶಗಳಿಗಾಗಿ ದೇಣಿಗೆಯಾಗಿ ಪಡೆವ ಈ ಸಂಸ್ಥೆಗಳಿಗೆ ಉತ್ತರದಾಯಿತ್ವವಿರಬೇಕಲ್ಲವೇ? ಎನ್.ಜಿ.ಓ.ಗಳ ಬಹುತೇಕ ದೇಣಿಗೆ ಕಾರ್ಪೊರೇಟ್ ಮೂಲಗಳಿಂದ ಬರುವುದು ಸಹಾ ಈ ಅಪವಿತ್ರ ವರ್ತುಲವನ್ನು ಹಿರಿದಾಗಿಸುತ್ತದೆ. ಅಣ್ಣಾ ತಂಡದ ಅರವಿಂದ ಕೇಜ್ರಿವಾಲ, ಕಿರಣ್ ಬೇಡಿ ತಮ್ಮದೇ ಎನ್.ಜಿ.ಓ.ಗಳನ್ನು ಹೊಂದಿರುವುದು ಮತ್ತು ಈ ತಂಡ ಎನ್.ಜಿ.ಓ.ಗಳನ್ನು ಜನಲೋಕಪಾಲದ ವ್ಯಾಪ್ತಿಗೆ ತರುವುದನ್ನು ವಿರೋಧಿಸುವುದು ಸಹಜವಾಗಿಯೇ ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ.
  5. ಕೋಟಗಟ್ಟಲೆ ಸಾರ್ವಜನಿಕ ಹಣವನ್ನು ಕೂಡಿಟ್ಟಿರುವ ಮತ್ತು ಅನೇಕ ರಾಜಕಾರಣಿಗಳ ಕಪ್ಪು ಹಣಕ್ಕೆ ದೇಸೀ ಸ್ವಿಸ್ ಬ್ಯಾಂಕ್‌ಗಳಾಗಿರುವ ಮಠಗಳು, ಧಾರ್ಮಿಕ ಕೇಂದ್ರಗಳ ಭ್ರಷ್ಟಾಚಾರದ  ಜನಲೋಕಪಾಲದ ಕಣ್ಣಿಗೇ ಕಾಣದಿರುವುದು ಹೇಗೆ?

ಮೂರನೆಯದಾಗಿ – ಒಂದು ಗಳಿಗೆಯ ಮಟ್ಟಿಗೆ ಈ ಎಲ್ಲಾ ದೂರುಗಳನ್ನೂ, ಅನುಮಾನಗಳನ್ನೂ ಪಕ್ಕಕ್ಕಿಟ್ಟು, ಈ ಇಡೀ ಹೋರಾಟ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧವೆಂದೂ, ಇದರಿಂದ ಭ್ರಷ್ಟಾಚಾರವನ್ನು ಸಾಕಷ್ಟು ಮಟ್ಟಿಗೆ ನಿಗ್ರಹಿಸಬಹುದೆಂದೂ ನಂಬೋಣ. ಹಾಗಿದ್ದಾಗ್ಯೂ ಈ ಹೋರಾಟದ ರೀತಿ ನಮ್ಮದೇ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಲೇವಡಿ ಮಾಡುವಂತಿದ್ದುದನ್ನು ಒಪ್ಪಬಹುದೇ?

ಜಂಟಿ ಸಮಿತಿಯ ಮೂಲಕ ಜನದನಿಯನ್ನು ನೇರವಾಗಿ ಸಂಸತ್ತಿಗೆ ತಲುಪಿಸಬಹುದಾದ ಒಂದು ಅಪರೂಪದ ಅವಕಾಶ ಅಣ್ಣಾ ಹಜಾರೆಗೆ ದೊರೆತರೂ, ತಮ್ಮ ದೂರದೃಷ್ಟಿಯ ಕೊರತೆಯಿಂದ ಅವರು ಇದನ್ನು ತುಂಬಾ ಅಪ್ರಬುದ್ಧವಾಗಿ ನಿರ್ವಹಿಸಿದಂತೆ ಕಾಣುತ್ತದೆ.

ಸಮಿತಿಯಲ್ಲಿ ಸರ್ಕಾರ ಮತ್ತು ಅಣ್ಣಾ ತಂಡದ ನಡುವೆ ಸಮನ್ವಯ ಸಾಧ್ಯವಾಗದೇ ಹೋದಾಗ ತಾನೇ ಒಂದು ಕರಡು   ಮಸೂದೆ ರಚಿಸಲು ಮುಂದಾದ ಅಣ್ಣಾ ತಂಡ, ಅದನ್ನು ನಿಜವಾದ ಅರ್ಥದಲ್ಲಿ ಜನರ ಲೋಕಪಾಲ ಮಸೂದೆಯಾಗಿ ರೂಪಿಸುವಲ್ಲಿ ಸೋತಿತೆಂದೇ ಹೇಳಬೇಕು. ಇಡೀ ದೇಶಕ್ಕೆ ಸಂಬಂಧಿಸಿದ, ಅದರಲ್ಲೂ ಭ್ರಷ್ಟಾಚಾರದಂತಾ ಆಳ ಬೇರುಗಳುಳ್ಳ ವಿಷಯದಲ್ಲಿ ಮಸೂದೆ ರಚಿಸುವಾಗ ದೇಶದ ವಿವಿಧ ಭಾಗಗಳ ಜನರ, ಪರಿಣಿತರ ಜೊತೆಗೆ ಚರ್ಚಿಸಿ ಅದನ್ನು ರೂಪಿಸಬೇಕಿತ್ತು. ಅದನ್ನು ಜನರ ನಡುವೆ ಒಯ್ದು ಸಾರ್ವಜನಿಕ ಅರಿವು ಮೂಡಿಸುವ ಬಹಿರಂಗ ಚರ್ಚೆಗೆ ಒಡ್ಡಿ, ಒಂದು ಉತ್ತಮ ಮಸೂದೆಯನ್ನಾಗಿ ಬೆಳೆಸಬೇಕಿತ್ತು. ಅಂತಹ ಒಂದು ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಚರ್ಚೆಗೆ ಇಟ್ಟಾಗ ಅದಕ್ಕೊಂದು ಸಮಗ್ರತೆ ಬರುತ್ತಿತ್ತು. ಅದು ದೇಶದ ಒಟ್ಟೂ ಜನರ ಅಭಿಪ್ರಾಯ ಮಂಡನೆಯಾಗಿರುತ್ತದಾದ್ದರಿಂದ ಸಹಜವಾಗಿಯೇ ಸರ್ಕಾರಕ್ಕೆ ಅದನ್ನು ಅನುಮೋದಿಸುವ ಒತ್ತಡವೇರ್ಪಡುತಿತ್ತು. ಇಷ್ಟಾಗಿಯೂ ಒಂದು ಪ್ರಬಲ ಮಸೂದೆ ಅಂಗೀಕಾರವಾಗದೇ ಇದ್ದಿದ್ದರೆ ತಿದ್ದುಪಡಿಗಳ ಮೂಲಕ ಅದನ್ನು ಬಲಪಡಿಸಲು ತಂತಮ್ಮ ಕ್ಷೇತ್ರದ ಜನ ಪ್ರತಿನಿಧಿಗಳ ಮೇಲೆ ಜನರೇ ಒತ್ತಡ ಹೇರುವಂತಾ ಪ್ರಜಾಸತ್ತಾತ್ಮಕ ಮಾರ್ಗದ ಬಗ್ಗೆ ಯೋಚಿಸಬಹುದಿತ್ತು. ಆದರೆ ಅಣ್ಣಾ ತಂಡಕ್ಕೆ ಇದಾವುದಕ್ಕೂ ವ್ಯವಧಾನವೇ ಇದ್ದಂತೆ ತೋರಲಿಲ್ಲ.

ಆದರೆ ಇಂತಹ ಒಂದು ಮಹತ್ವದ ವಿಷಯ ಮತ್ತು ಹೋರಾಟವನ್ನು ಹೀಗೆ ಹಾದಿ ತಪ್ಪಿಸುವಲ್ಲಿ ಪ್ರಸ್ತುತ ಕೇಂದ್ರ ಸರ್ಕಾರದ ಧೋರಣೆಗಳು ಮತ್ತು ತಿಳಿಗೇಡಿತನ, ಎಲ್ಲ ರಾಜಕೀಯ ಪಕ್ಷಗಳ ಅನುಕೂಲಸಿಂಧು ರಾಜಕಾರಣ ಮತ್ತು ಅವಕಾಶವಾದಿ, ಬೇಜವಾಬ್ದಾರಿ ಮಾಧ್ಯಮಗಳ ಪಾತ್ರವೂ ಅಷ್ಟೇ ಇದೆ.

ಒಂದು ಪ್ರಬಲ ಭ್ರಷ್ಟಾಚಾರಿ ವಿರೋಧೀ ಮಸೂದೆ ತರುವ ವಿಷಯದಲ್ಲಿ ಅಪ್ರಾಮಾಣಿಕವಾದ ಕೇಂದ್ರ ಸರ್ಕಾರ, ತನ್ನ ನ್ನು ಶಾಂತಿಯುತವಾಗಿ ಆಗ್ರಹಿಸುವುದನ್ನೂ ಸಹಿಸದೆ ಉಪವಾಸ ಕೂರುವ ಮೊದಲೇ ಅಣ್ಣಾರನ್ನು ಬಂಧಿಸಿ ತನ್ನ ದಮನಕಾರಿ ಮನೋಭಾವ ಪ್ರದರ್ಶಿಸಿತು. ಶಾಂತಿಯುತವಾಗಿ ಬೇರೆ ಬೇರೆ ಹೋರಾಟಗಳಲ್ಲಿ ತೊಢಗಿಕೊಂಡಿದ್ದವರಿಗೂ ತಮ್ಮ ಯಾವ ಹೋರಾಟಗಳಿಗೂ ಯಾವುದೇ ಸರ್ಕಾರ ಸ್ಪಂದಿಸದೇ ಇರುವುದು ಒಂದು ರೀತಿಯ ಹತಾಶೆ ಮೂಡಲು ಕಾರಣವಾಗಿತ್ತು. ಅಂತಹ ಸಂದರ್ಭದಲ್ಲಿಯೇ ನಡೆದ ಈ ಘಟನೆ ಜನರನ್ನು ‘ನಾವು ಹೀಗಲ್ಲದೆ ಮತ್ತೇನು ಮಾಡಿ ರಾಜಕಾರಣಿಗಳಿಗೆ ಚುರುಕು ಮುಟ್ಟಿಸಲು ಸಾಧ್ಯ’ ಎಂಬ ಒಂದು ತಪ್ಪಾದ ಚಿಂತನಾ ಕ್ರಮಕ್ಕೆ ದೂಡಿತು. ಕಾಂಗ್ರೆಸ್ಸಿನ ಕಪಿಲ್ ಸಿಬಾಲ್, ಮನೀಶ್ ತಿವಾರಿಯಂತಹವರು ಬಾಲಿಶ ಹೇಳಿಕೆಗಳನ್ನು ನೀಡುವುದು, ಮತ್ತದನ್ನು ಹಿಂಪಡೆಯುವುದು ಇಂತಹ ಅಪ್ರಬುದ್ಧ ನಡವಳಿಕೆಗಳು ಜನರಲ್ಲಿ ಗೊಂದಲ ಹೆಚ್ಚಿಸಿತು.

Anna_Hazare

Anna_Hazare

ಕಾಂಗ್ರೆಸ್ ಜನಲೋಕಪಾಲದ ವಿರೋಧಿ ಎಂದು ಅಣ್ಣಾ ತಂಡ ಟೀಕಿಸುತ್ತಿದ್ದಾಗ ಕಾಂಗ್ರೆಸ್‌ನ ದಮನಕಾರಿ ನಿಲುವನ್ನು ಟೀಕಿಸುವ ನೆಪದಲ್ಲಿ ರಂಗಕ್ಕಿಳಿದ ಬಿ.ಜೆ.ಪಿ. ಜನರ ಭ್ರಷ್ಟಾಚಾರೀ ವಿರೋಧವನ್ನು ಕಾಂಗ್ರೆಸ್ ವಿರೋಧವನ್ನಾಗಿಸಿ ರಾಜಕೀಯ ಲಾಭ ಗಳಿಸುವ ಹುನ್ನಾರದಲ್ಲಿ ತೊಡಗಿತು. ಅಷ್ಟಕ್ಕೂ ಯು.ಪಿ.ಎ.ಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ಬಹುಮತವಿದೆ. ಆದರೆ ಜನಲೋಕಪಾಲದ ಬಗ್ಗೆ  ವಿರೋಧ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸುವ ಕೆಲಸವನ್ನು ಅಣ್ಣಾ ತಂಡ ಮಾಡಲಿಲ್ಲ. ಕೊನೆಗೆ ಟಿ. ವಿ. ವಾಹಿನಿಯೊಂದು ಜನಲೋಕಪಾಲದ ಬಗ್ಗೆ ನಿಮ್ಮ ನಿಲುವೇನೆಂದು ಬಿ.ಜೆ.ಪಿ.ಯನ್ನು ಜಗ್ಗಿಸಿ ಕೇಳಿದಾಗ “ನಮಗೂ ಜನಲೋಕಪಾಲದ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಒಪ್ಪಿಗೆಯಿಲ್ಲ” ಎಂದು ಹೇಳಿಯೂ ಹೇಳದ ಹಾಗೆ ನುಣಿಚಿಕೊಂಡಿದ್ದನ್ನ ಗಮನಿಸಬೇಕಿದೆ.

ಎಲ್ಲೋ ಕೆಲವು ಅಪವಾದಗಳನ್ನು ಹೊರತುಪಡಿಸಿ ಮಾಧ್ಯಮಗಳು ಈ ಇಡೀ ಪ್ರಸಂಗವನ್ನು ಕಾಂಗ್ರೆಸ್ ವರ್ಸಸ್ ಅಣ್ಣಾ ಎಂಬಂತೆ ಬಾಲಿಶವಾಗಿ ( ಅಥವಾ ಪ್ರಜ್ಙಾಪೂರ್ವಕವಾಗಿ) ಚಿತ್ರಿಸಿದವು. ತಮ್ಮ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಅಥವಾ ತಮ್ಮ ಕಾರ್ಪೊರೇಟ್ ದೊರೆಗಳ ಹಿತಕಾಯುವುದನ್ನೇ ಪರಮ ಕರ್ತವ್ಯವಾಗಿಸಿಕೊಂಡಿರುವ ಮಾಧ್ಯಮಗಳು ಈ ವಿಷಯದ ಬಗ್ಗೆ ಜನರನ್ನು ಆಳವಾದ ಚಿಂತನೆಗೆ ಹಚ್ಚುವ ಬದಲಿಗೆ, ದೇಶಭಕ್ತಿ ಎಂದರೆ ಭ್ರಷ್ಟಾಚಾರವನ್ನು ವಿರೋಧಿಸುವುದು; ಭ್ರಷ್ಟಾಚಾರವನ್ನು ವಿರೋಧಿಸುವುದೆಂದರೆ ಅಣ್ಣಾ ಟೊಪ್ಪಿ ತೊಟ್ಟು, ಮೇಣದ ಬತ್ತಿ ಹಿಡಿದು ಸಾಗುವುದು, ಎಂಬಂತ ತೆಳು ಚಿಂತನೆಗಳನ್ನೇ ಹಬ್ಬಿಸಿದವು.

ಇನ್ನು ಅಣ್ಣಾ ತಂಡ ಗಾಂಧೀಜಿಯವರ ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರವನ್ನು ಅದರ ಪಾವಿತ್ರ್ಯತೆ, ಘನತೆಗಳ ಅರಿವೇ ಇಲ್ಲದೆ ಒಂದು ಬೆದರಿಕೆಯ ತಂತ್ರವಾಗಿ ಬಳಸುವುದು, ಚರ್ಚೆ, ಸಂವಾದಗಳ ಪ್ರಸ್ತುತತೆಯನ್ನೇ ಕಡೆಗಣಿಸಿ, ತಾನು ಪ್ರಸ್ತಾಪಿಸಿದ ಮಸೂದೆಯನ್ನೇ ಸಂಸತ್ತು ಅಂಗೀಕರಿಸಬೇಕಂದು ಆಗ್ರಹಿಸುವುದು, ಅದಕ್ಕೊಂದು ಗಡುವು ವಿಧಿಸಿ ಇಡೀ ಸಂಸತ್ತು ತನ್ನ ಅಣತಿಯಂತೆ ನಡೆಯಬೇಕೆಂದು ಸರ್ವಾಧಿಕಾರಿ ಧೋರಣೆ ತೋರುವುದು; ಇದೆಲ್ಲದರ ಒಟ್ಟಾರೆ ಪರಿಣಾಮ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ತತ್ವಗಳ ನಂಬಿಕೆಯ ತಳಪಾಯವನ್ನೇ ಅಲುಗಿಸುವ ಪ್ರಯತ್ನ. ಇದನ್ನು ಒಪ್ಪಿದರೆ ‘ಹೋರಾಟದ ಕಾರಣ ಒಳ್ಳೆಯದಿದ್ದರೆ ಆಯಿತು, ಮಾರ್ಗದ ಬಗ್ಗೆ ಚಿಂತಿಸಬೇಕಿಲ್ಲ’ ಎನ್ನುವಂತ ತಪ್ಪು ಸಂದೇಶ ರವಾನಿಸಿದಂತಲ್ಲವೇ?

ಹಾಗಾದರೆ ಭ್ರಷ್ಟಾಚಾರವನ್ನು ತೊಲಗಿಸುವುದಾದರೂ ಹೇಗೆ? ಇದು ಅಹೋರಾತ್ರಿ ಆಗಿಬಿಡುವ ಕೆಲಸವಲ್ಲ ಮತ್ತು ಸಿನಿಕರಾಗುವ ಅವಶ್ಯಕತೆಯೂ ಇಲ್ಲ. ಭ್ರಷ್ಟಾಚಾರದ ನಿರ್ಮೂಲನೆಗೆ ಒಂದು ಪ್ರಬಲ ಕಾನೂನು ರಚಿಸುವ ಜೊತೆಗೇ ಚುನಾವಣಾ ಸುಧಾರಣೆಯೂ ಆಗಬೇಕಾದ್ದು ಅವಶ್ಯ. ಅಲ್ಲದೆ ಜನ ಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ “ಭ್ರಷ್ಟಾಚಾರ ಸಹಾ ಒಂದು ಮಿತಿಯಲ್ಲಿದ್ದರೆ ಒಂದು ಒಪ್ಪಿತ ಮೌಲ್ಯ” ಎಂಬ ಮನೋಭಾವ ಬದಲಾಗಬೇಕಾದುದು ಬಹು ಮುಖ್ಯ.

(ಚಿತ್ರಕೃಪೆ: ವಿಕಿಪೀಡಿಯ)