Category Archives: ಅರುಣ್ ಜೋಳದಕೂಡ್ಲಿಗಿ

ಅಲೆಮಾರಿ ಬುಡಕಟ್ಟು ಮಹಿಳೆಯರ ವರ್ತಮಾನ

– ಡಾ. ಅರುಣ್ ಜೋಳದಕೂಡ್ಲಿಗಿ

ಬಾಲ್ಯದ ನೆನಪುಗಳಲ್ಲಿ ಅಲೆಮಾರಿ ಸಮುದಾಯಗಳ ದಿಟ್ಟ ಮಹಿಳೆಯರ ಚಿತ್ರಗಳು ಗಾಢವಾಗಿವೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ನಮ್ಮ ಮನೆ ಊರ ಹೊರಗಿನ ಅಂಗನವಾಡಿಯ ಸರಕಾರಿ ಕಟ್ಟಡವಾಗಿತ್ತು. ಆ ಕಾರಣ ಅಲೆಮಾರಿ ಸಮುದಾಯಗಳು ನಮ್ಮ ಮನೆಯ ಸುತ್ತಲೂ ಡೇರಿ ಹಾಕಿ ವಾಸಮಾಡುತ್ತಿದ್ದವು. ಹೀಗೆ ವಾಸ ಮಾಡುವ ಅಲೆಮಾರಿ ಸಮುದಾಯಗಳು ನಮ್ಮ ಮನೆ ಜತೆ ಒಳ್ಳೆಯ ಪರಿಚಯ ಕೂಡ ಆಗುತ್ತಿದ್ದರು. ಇದರಲ್ಲಿ ಹಗಲು ವೇಷಗಾರರು ಪ್ರಮುಖವಾಗಿದ್ದರು. ಹಗಲು ವೇಷಗಾರ ಅಂಜಿನಪ್ಪ ತಾನು ವೇಷ ಹಾಕುವಾಗ ಆ ಗುಂಪಿನಲ್ಲಿ ಆತನ ಮಗಳು ಚಿಕ್ಕ ಹುಡುಗಿ ಡಾನ್ಸ್ ಮಾಡುತ್ತಿದ್ದಳು. ಅಂತೆಯೇ ಅಂಜಿನಪ್ಪನ ಹೆಂಡತಿ ಗಂಗೆ ಗೌರಿ ಮೂರ್ತಿ ಹಿಡಿದು, ಮಗು ಚಿಕ್ಕದಿರುವ ಕಾರಣ ಒಂದು ಜೋಳಿಗೆಯಲ್ಲಿ ಮಗುವನ್ನು ಹಾಕಿಕೊಂಡು ವೇಷದ ಗುಂಪಿಗೆ ಬದಲಾಗಿ ‘ಗಂಗೆ ಗೌರಿ ಜೂಜನಾಡ್ಯಾರೆ ಎಂಬ ಪದ ಹೇಳಿಕೊಂಡು ಒಂಟಿಯಾಗಿ ಊರಾಡಿ ಬರುತ್ತಿದ್ದಳು. Work of Temporary tent for stay.ಮದ್ಹಾನ ಹನ್ನೆರಡಕ್ಕೆ ವೇಷ ಮುಗಿದು ಊಟಮಾಡಿ ಗಂಡಸರು ಬೇಟೆಗೆ ಹೋದರೆ, ಹೆಂಗಸರು ಬಟ್ಟೆ ತೊಳೆಯುವುದು, ಹತ್ತಿರದಲ್ಲೆ ಅಡುಗೆ ಮಾಡಲು ಕಟ್ಟಿಗೆ ಜೋಡಿಸುವುದು, ಗುಡಾರದ ಸುತ್ತಮುತ್ತಣ ಸ್ವಚ್ಚಗೊಳಿಸುವುದು, ಬೇಟೆಗೆ ಬೇಕಾಗುವ ಮಸಾಲೆ ತಯಾರಿಸುವುದು ಮಾಡುತ್ತಿದ್ದರು. ಅಂತೆಯೇ ಬಿಡುವಿನ ವೇಳೆಯಲ್ಲಿ ಕೌದಿ ಎಣೆಯುವುದು, ಊರಲ್ಲಿ ಯಾರಾದರೂ ಪ್ಲಾಸ್ಟಿಕ್ ಚೀಲಗಳನ್ನು ಕೊಟ್ಟರೆ ಪ್ಲಾಸ್ಟಿಕ್ ಪಾಟನ್ನು ಹೆಣೆದುಕೊಡುವುದು ಮಾಡುತ್ತಿದ್ದರು. ನಾನು ಹಗಲುವೇಷದ ಮಕ್ಕಳ ಜತೆ ಆಟವಾಡುತ್ತಿದ್ದೆನು.

ಮತ್ತೊಂದು ಸಮುದಾಯ ಅಲೆಮಾರಿ ಕುರುಬರದು. ಬೆಳಗಾಂ ಕುರೇರು ಎಂದು ಕರೆಯುವ ಈ ಸಮುದಾಯ ಸಾಮೂಹಿಕವಾಗಿ ಅಲೆಮಾರಿತನ ಕೈಗೊಂಡು ಕುರಿಗಳ ಜತೆ ಬಳ್ಳಾರಿ ಜಿಲ್ಲೆಯ ಪ್ರದೇಶಗಳಿಗೆ ಬರುತ್ತಾರೆ. ಇವರುಗಳು ಊರಿಗೆ ಸ್ವಲ್ಪ ದೂರದಲ್ಲಿ ಹೊಲಗಳಲ್ಲಿ ನೆಲೆ ನಿಲ್ಲುತ್ತಾರೆ. ಕಟ್ಟುಮಸ್ತಾದ ಎತ್ತರದ ಈ ಮಹಿಳೆಯರು ಕಚ್ಚೆ ಹಾಕಿಕೊಂಡು ಗಂಡುಗಿತ್ತಿಯರಂತೆ ಕಾಣುತ್ತಿದ್ದರು. ಇವರಲ್ಲಿ ಕೆಲವು ಮಹಿಳೆಯರು ಮಗುವನ್ನು ಜೋಳಿಗೆಯಲ್ಲಿ ಇಳಿಬಿಟ್ಟುಕೊಂಡೆ ಕುರಿ ಕಾಯುತ್ತಾರೆ. ಇನ್ನು ಕೆಲವು ಮಹಿಳೆಯರು ಮಕ್ಕಳನ್ನು, ಕುರಿಮರಿಗಳನ್ನು ನೋಡಿಕೊಂಡು ಗುಡಾರಗಳಲ್ಲಿ ಉಳಿದು ಊಟೋಪಚಾರ ನೋಡಿಕೊಂಡಿರುತ್ತಿದ್ದರು. ಬೈಲು ಪತ್ತಾರ ಅಲೆಮಾರಿ ಸಮುದಾಯವು ಊರ ಮುಂದೆ ಗುಡಾರ ಹಾಕುತ್ತಿದ್ದರು. ಪತ್ತಾರರ ಗಂಡಸರು ಗುದ್ದಲಿ, ಕೊಡಲಿ ಮುಂತಾದವುಗಳನ್ನು ಕುಲುಮೆಯಲ್ಲಿ ಕಾಯಿಸುತ್ತಾರೆ. ಹೀಗೆ ಕಾದ ಕಬ್ಬಿಣವನ್ನು ಬೈಲುಕಮ್ಮಾರರ ಮಹಿಳೆwoman-stonecutter ಕಚ್ಚೆಕಟ್ಟಿ ಸುತ್ತಿಗೆ ಹಿಡಿದು ಎತ್ತಿ ಎತ್ತಿ ಹೊಡೆಯುತ್ತಿದ್ದರೆ ಊರ ಗಂಡಸರು ಅಚ್ಚರಿಯಿಂದ ಈ ಹೆಣ್ಣುಮಗಳನ್ನು ನೋಡುತ್ತಿದ್ದರು.

ಇದನ್ನು ನೋಡಿದರೆ ಅಲೆಮಾರಿ ಸಮುದಾಯಗಳಲ್ಲಿ ಅಲೆಮಾರಿತನದ ಚಾಲಕ ಶಕ್ತಿಯೇ ಮಹಿಳೆಯಂತೆ ಕಾಣುತ್ತದೆ. ಇಂತಹ ಚಾಲಕ ಶಕ್ತಿ ಮಹಿಳೆ ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಹೇಗಿದ್ದಾಳೆ, ಸಾಂಸ್ಕೃತಿಕವಾಗಿ ಅವಳ ಸ್ಥಾನಮಾನಗಳೇನು? ವರ್ತಮಾನದಲ್ಲಿ ಈ ಮಹಿಳೆಯರ ಬದುಕು ಹೇಗಿದೆ? ಕರ್ನಾಟಕದ ಅಲೆಮಾರಿ ಬುಡಕಟ್ಟುಗಳನ್ನು ಅರ್ಥಮಾಡಿಕೊಳ್ಳಲು ಆಯಾ ಸಮುದಾಯಗಳ ಮಹಿಳೆಯರನ್ನು ಹೇಗೆ ಗ್ರಹಿಸಬೇಕು ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದ ಭಾಗವೆ ಈ ಲೇಖನ.

ಪ್ರಸ್ತುತ ಭಾರತದಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆ 10 ಕೋಟಿಯಷ್ಟಿರುವ ಅಂದಾಜಿದೆ. ಅಂದರೆ ಭಾರತದ ಜನಸಂಖ್ಯೆಯಲ್ಲಿ ಶೇಕಡ 10 ರಷ್ಟು ಬುಡಕಟ್ಟು ಜನರಿದ್ದಾರೆ. ಆದರೆ ಈ ಸಮುದಾಯದ ಜನಸಂಖ್ಯೆಗೂ ಇವರ ಅಭಿವೃದ್ಧಿಗಾಗಿ ಜಾರಿಯಾಗುತ್ತಿರುವ ಸೌಲಭ್ಯಗಳ ಪ್ರಮಾಣಕ್ಕೂ ತುಂಬಾ ಅಂತರವಿದೆ. ಅಷ್ಟಕ್ಕೂ ಈ ಸಮುದಾಯಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ಹಣ ಕೂಡ ಸಮರ್ಪಕ ಬಳಕೆಯಾದಂತಿಲ್ಲ. ಕರ್ನಾಟಕದಲ್ಲಿ ಒಟ್ಟು 56 ಬುಡಕಟ್ಟು ಸಮುದಾಯಗಳನ್ನು ಗುರುತಿಸಿ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಅದರಲ್ಲಿ 24 ವಿಮುಕ್ತ ಬುಡಕಟ್ಟುಗಳಿದ್ದರೆ, 32 ಅಲೆಮಾರಿ ಬುಡಕಟ್ಟುಗಳಿವೆ. ಈ 32 ಬುಡಕಟ್ಟುಗಳಲ್ಲಿಯೂ ಅರೆ ಅಲೆಮಾರಿತನವೂ ಇದೆ. ಒಂದೆ ಸಮುದಾಯದ ಕೆಲವರು ನೆಲೆನಿಂತರೆ ಮತ್ತೆ ಕೆಲವರು ಅಲೆಮಾರಿತನವನ್ನು ಇನ್ನೂ ಅವಲಂಭಿಸಿದ್ದಾರೆ.

ಕರ್ನಾಟಕದ ಸಂದರ್ಭದಲ್ಲಿ ಅಲೆಮಾರಿ ಬುಡಕಟ್ಟುಗಳ ಅಧ್ಯಯನಕ್ಕೆ ಒಂದು ಚರಿತ್ರೆಯೆ ಇದೆ. ಎಡ್ಗರ್ ಥರಸ್ಟನ್ ಮತ್ತು ಕೆ.ರಂಗಾಚಾರಿ ಅವರು ಸಂಪಾದಿಸಿದ ‘ಕಾಸ್ಟ್ ಅಂಡ್ ಟ್ರೈಬ್ಸ್ ಇನ್ ಸದರ್ನ ಇಂಡಿಯಾ ದ ಏಳು ಸಂಪುಟಗಳು, ಅನಂತ ಕೃಷ್ಣ ಅಯ್ಯರ್ ಅವರು ಸಂಪಾದಿಸಿದ‘ ದಿ ಮೈಸೂರು ಟ್ರೈಬ್ಸ್ ಅಂಡ್ ಕಾಸ್ಟ್ ನ (1930)ನಾಲ್ಕು ಸಂಪುಟಗಳನ್ನು ಒಳಗೊಂಡಂತೆ ಈ ತನಕವೂ ವಿಭಿನ್ನ ನೆಲೆಯ ಅಧ್ಯಯನಗಳು ನಡೆಯುತ್ತಿವೆ. 1993 ರಲ್ಲಿ ಬರಗೂರು ರಾಮಚಂದ್ರ ಅವರು ಅಧ್ಯಕ್ಷರಾಗಿದ್ದಾಗ ಪ್ರಕಟವಾದ ಉಪಸಂಸ್ಕೃತಿ ಮಾಲೆಯು ಈ ನೆಲೆಯಲ್ಲಿ ಒಂದು ಚಾರಿತ್ರಿಕ ಮಹತ್ವದ ಕೆಲಸ. ನಂತರ ಹೀಗೆ ಯೋಜನೆಯ ಭಾಗವಾಗಿ 2007-08 ರಲ್ಲಿ ಕನ್ನಡ ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಾಗಿದ್ದ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರ ಪ್ರಧಾನ ಸಂಪಾದಕತ್ವದಲ್ಲಿ ಕೆ.ಎಂ.ಮೇತ್ರಿ ಅವರ ಸಂಪಾದಕತ್ವದಲ್ಲಿ ಕರ್ನಾಟಕದ 22 ಅಲೆಮಾರಿ ಸಮುದಾಯಗಳ ಅಧ್ಯಯನ ಕೃತಿಗಳು ಪ್ರಕಟವಾಗಿವೆ. ಇದು ಕೂಡ ಕರ್ನಾಟಕದ ಬುಡಕಟ್ಟು ಅಧ್ಯಯನ ಮಾಲೆಯಲ್ಲಿ ಗಮನಾರ್ಹ ಕೆಲಸ. ಈ ಮಾಲೆಯ ಕೆಲವು ಆಯ್ದ ಬುಡಕಟ್ಟುಗಳ ಮಹಿಳೆಯರ ಬಗ್ಗೆ ವಿಶ್ಲೇಷಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಈ ಅಧ್ಯಯನದ ಸಮೀಕ್ಷೆಯನ್ನು ಆಧರಿಸಿದ ಅಂಕಿಸಂಖ್ಯೆಗಳನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.

ಸೃಷ್ಟಿಕಥನಗಳಲ್ಲಿ ‘ಮಹಿಳೆ

ಯಾವುದೇ ಬುಡಕಟ್ಟು ಸಮುದಾಯದ ಹುಟ್ಟಿನ ಮೂಲಕವೆ ಈ ಜಗತ್ತು ಸೃಷ್ಟಿಯಾಯಿತು, ನಾವು ಆದಿ ಮನುಜರು ಎಂದುಕೊಳ್ಳುತ್ತಾರೆ. ಹಾಗಾಗಿ ಕರ್ನಾಟಕದ ಎಲ್ಲಾ ಬುಡಕಟ್ಟು ಅಲೆಮಾರಿ ಸಮುದಾಯಗಳು ತಮ್ಮದೇ ಆದ ಲೋಕದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿವೆ. ಈ ಕಥೆಗಳು ಜಗತ್ತು ಸೃಷ್ಟಿಯಾದ ಬಗ್ಗೆ ಡಾರ್ವಿನ್ ವಿಕಾಸವಾದಕ್ಕಿಂತ ಬೇರೆಯ ತೆರನಾದವು. ಅಥವಾ ಈ ಸಮುದಾಯಗಳು ಕಟ್ಟಿಕೊಂಡ ಲೋಕದ ಕಲ್ಪನೆ ಡಾರ್ವಿನ್ ವಿಕಾಸವಾದಕ್ಕಿಂತ ಮುಂಚೆಯೆ ಕಟ್ಟಲ್ಪಟ್ಟವುಗಳು. ಇಂತಹ ಸೃಷ್ಟಿ ಕಥೆಗಳು ಬುಡಕಟ್ಟು ಸಮುದಾಯಗಳ ಮೌಖಿಕ ಸಾಹಿತ್ಯದಲ್ಲಿ ಸಿಗುತ್ತದೆ. ಇದರ ಆಶಯಗಳು ಅವರ ಆಚರಣೆ, ಹಬ್ಬ ಮುಂತಾದ ಸಂದರ್ಭಗಳಲ್ಲಿಯೂ ವ್ಯಕ್ತವಾಗುತ್ತವೆ.

ದೊಂಬಿ ದಾಸರ ಕಥನವೊಂದು ಹೀಗಿದೆ: ಭೂಮಿ, ಆಕಾಶ, ಗಾಳಿ, ಬೆಳಕುಗಳಿಲ್ಲದ ಓಂಕಾರದೊಂದಿಗೆ ಒಂದು ಶಂಖ ಹುಟ್ಟಿತು. 336_BigBang2ಈ ಶಂಖುವಿನಿಂದ ತಾತ ಆದಿ ಜಾಂಬು ಲಿಂಗಯ್ಯ ಹುಟ್ಟಿದನು. ಇವರು ತಾವರೆ ಎಲೆಯ ಮೇಲೆ ಕೂತು ತಪಸ್ಸನ್ನು ಆಚರಿಸಿದ ಆರು ಗಳಿಗೆಯಲ್ಲಿಯೇ ಅದೇ ಶಂಕದಿಂದ ಆದಿಶಕ್ತಿ ಹುಟ್ಟಿದಳು. ಆಕೆ ತಾತನ ಬಳಿ ಬಂದು ತನ್ನ ಕಾಮವನ್ನು ತೀರಿಸೆಂದು ಕೇಳಿದಳು. ಆಗ ತಾತ ಈ ರೂಪದಲ್ಲಿ ಸಾಧ್ಯವಿಲ್ಲವೆಂದು ನವಿಲುಗಳಾಗಿ ರೂಪಾಂತರ ಹೊಂದಿ ಕೂಡಿದರು.

ಆಗ ಹೆಣ್ಣು ನವಿಲು ನಾಲ್ಕು ಮೊಟ್ಟೆಗಳನ್ನು ಇಟ್ಟಿತು. ಎಷ್ಟು ಕಾವು ಕೊಟ್ಟರೂ ಮೊಟ್ಟೆಯಲ್ಲಿ ಮರಿಯೊಡೆಯಲಿಲ್ಲ. ಆಗ ತಾತ ಒಂದು ಮೊಟ್ಟೆಯನ್ನು ಹೊಡೆದು ಅದರ ಮೇಲಿನ ಭಾಗವನ್ನು ಆಕಾಶ ಮಾಡಿದ, ಕೆಳಗಿನ ಭಾಗವನ್ನು ಭೂಮಿ ಮಾಡಿದ. ಇನ್ನೊಂದು ಮೊಟ್ಟೆಯನ್ನು ಹೊಡೆದು ಒಂದು ಭಾಗ ಸೂರ್ಯ, ಮತ್ತೊಂದನ್ನು ಚಂದ್ರನನ್ನಾಗಿಯೂ, ಮೂರನೆ ಮೊಟ್ಟೆಯಿಂದ ನಕ್ಷತ್ರ ಲೋಕವನ್ನು ಸೃಷ್ಟಿಸುತ್ತಾನೆ. ನಾಲ್ಕನೆ ಮೊಟ್ಟೆಯಿಂದ ಬ್ರಹ್ಮ, ವಿಷ್ಣು, ಈಶ್ವರರನ್ನು ಹುಟ್ಟಿಸುತ್ತಾನೆ. ಇವರು ಬೆಳೆದು ದೊಡ್ಡವರಾದ ಮೇಲೆ ಆದಿಶಕ್ತಿಗೆ ಇವರ ಮೇಲೆ ಕಾಮಾಸಕ್ತಿಯಾಗುತ್ತದೆ. ಮದುವೆಯಾಗಲು ಒತ್ತಾಯಿಸುತ್ತಾಳೆ. ಬ್ರಹ್ಮ,ವಿಷ್ಣು, ಈಶ್ವರರು ಮದುವೆ ನಿರಾಕರಿಸುತ್ತಾರೆ. ಶಿವ ಉಪಾಯದಿಂದ ಆದಿಶಕ್ತಿಯ ಹಣೆಯ ಉರಿಗಣ್ಣು, ಕೈಯಲ್ಲಿನ ಉರಿ ಅಸ್ತ್ರವನ್ನು ಪಡೆದು ಅವಳನ್ನು ದಿಟ್ಟಿಸಿ ನೋಡಿ ಬೂದಿ ಮಾಡುತ್ತಾನೆ. ಈ ಬೂದಿಯಿಂದ ಲಕ್ಷ್ಮಿ, ಸರಸ್ವತಿ, ಮತ್ತು ಪಾರ್ವತಿಯರನ್ನು ಮಾಡಿ ಬ್ರಹ್ಮ, ವಿಷ್ಣು, ಈಶ್ವರರು ಮದುವೆಯಾಗಿ ಜಗತ್ತಿನ ಸೃಷ್ಟಿಗೆ ಕಾರಣರಾಗುತ್ತಾರೆ.

ಇಂತಹ ಭಿನ್ನ ಪಾಠಾಂತರದ ಕಥನಗಳು ಅಲೆಮಾರಿ ಸಮುದಾಯಗಳಲ್ಲಿ ಸಿಗುತ್ತವೆ. ಸಮುದಾಯವು ಆರಂಭದಲ್ಲಿ ಜಲಾವೃತವಾದ ಭೂಮಿಯ ಕಲ್ಪನೆ ಕೊಡುತ್ತಾರೆ. ಇಲ್ಲಿ ಮೊದಲಿಗೆ ಹುಟ್ಟುವ ಹೆಣ್ಣು ಗಂಡು ಅಣ್ಣ ತಂಗಿಯಾಗಿರುವುದು, ತಾತ ಮೊಮ್ಮಗಳಾಗಿರುವುದು, ತಾಯಿ ಮಗ ಆಗಿರುವುದು ಮತ್ತವರು ಕೂಡುವ ಸೃಷ್ಟಿ ಕಥೆಗಳಿವೆ. ನಾವು ಬದುಕುತ್ತಿರುವ ಕಾಲದಲ್ಲಿ ಕಟ್ಟಿಕೊಂಡ ಸಂಬಂಧಗಳ ಕಣ್ಣಿಂದ ಈ ಕಥೆಗಳನ್ನು ನೋಡಿದರೆ ಇವು ಅಶ್ಲೀಲವಾಗಿ ಕಾಣುತ್ತವೆ. ಆದರೆ ಇಂತಹ ಸಂಬಂಧಗಳ ಗೋಜಿಲ್ಲದ ಕೇವಲ ಗಂಡು ಹೆಣ್ಣು ಎನ್ನುವ ದೃಷ್ಟಿಕೋನದಲ್ಲಿ ಈ ಕಥೆಗಳು ಹುಟ್ಟಿದಂತಿದೆ. ಇದನ್ನು ನೋಡಿದರೆ ಸಿಗ್ಮಂಡ್ ಪ್ರಾಯ್ಡ್‌ನ ಸಂಬಂಧಗಳ ಆಚೆಯೂ ವಿರುದ್ಧ ಲಿಂಗಗಳ ಮಧ್ಯೆ ಇರುವ ಆಕರ್ಷಣೆಯ ಥಿಯರಿಯನ್ನು ಈ ಬುಡಕಟ್ಟುಗಳು ತುಂಬಾ ಹಿಂದೆಯೇ ತಮ್ಮ ಕಥೆ ಹಾಡುಗಳಲ್ಲಿ ಕಟ್ಟಿಕೊಂಡಿದ್ದನ್ನು ಗಮನಿಸಬಹುದು.

ಇಂತಹ ಕಥನಗಳಲ್ಲಿ ಹೆಣ್ಣು ಫಲವಂತಿಕೆಯ ಸಂಕೇತವಾಗಿ ಬರುತ್ತಾಳೆ. ಅಥವಾ ಈ ಜಗತ್ತಿನ ಸೃಷ್ಟಿಗೆ ಹೆಣ್ಣೆ ಕಾರಣ ಎನ್ನುವ ನಿರೂಪಣೆಗಳೂ ಇವೆ. ವರ್ತಮಾನದ ಬುಡಕಟ್ಟುಗಳಲ್ಲಿ ಇರುವ ಶಾಕ್ತಪಂಥದ ಆರಾಧನೆಗೂ, ಮಾತೃಪ್ರಧಾನತೆಯ ಲಕ್ಷಣಗಳಿಗೂ ಇಂತಹ ಕಥನಗಳಿಗೂ ಒಂದಕ್ಕೊಂದು ಸಂಬಂಧವಿದ್ದಂತೆ ಕಾಣುತ್ತದೆ. ಇದರ ನೆಲೆಯಲ್ಲಿಯೇ ಅಲೆಮಾರಿ ಬುಡಕಟ್ಟುಗಳ ಮಹಿಳೆಯ ವರ್ತಮಾನದ ಕಥನವೂ ತಳಕು ಹಾಕಿಕೊಂಡಿದೆ.

ಶಾಕ್ತಪಂಥ ಮತ್ತು ಮಹಿಳೆ

ಕರ್ನಾಟಕದ ಅಲೆಮಾರಿ ಬುಡಕಟ್ಟುಗಳನ್ನು ಅವಲೋಕಿಸಿದರೆ ಹೆಣ್ಣು ದೇವರ ಆರಾಧನೆ ದೊಡ್ಡಮಟ್ಟದಲ್ಲಿ ಕಂಡು ಬರುತ್ತದೆ. ಈ ಆರಾಧನೆಯಲ್ಲಿ ಶಾಕ್ತಪಂಥದ ಲಕ್ಷಣಗಳಿರುವುದೂ ಇದೆ. ಬೈಲು ಪತ್ತಾರರು ಅಂಬಾಭವಾನಿ, ಕಾಳಮ್ಮ, ಎಲ್ಲಮ್ಮ, ದುರ್‍ಗಮ್ಮ, ಕರಿಲಕ್ಷ್ಮಿ, ಮಸೆಮ್ಮನನ್ನೂ, ಬುಡಗ ಜಂಗಮರಲ್ಲಿ ಸುಂಕಲಮ್ಮ, ಜಂಬಲಮ್ಮ, ಜಮ್ಮಕ್ಕ, ಗಾಳೆಮ್ಮ, ಉಲಗಮ್ಮನನ್ನೂ, ದೊಂಬಿದಾಸರು ಭದ್ರಕಾಳಮ್ಮ, ಉಲ್ಲೂರಮ್ಮ, ಗದ್ದೆ ಕೆಂಪಮ್ಮ,ಮಳೆಯಮ್ಮ, ಕಬ್ಬಾಳಮ್ಮನನ್ನೂ, ಸಿಂಧೊಳ್ಳು ಸಮುದಾಯ ಈರನಾಗಮ್ಮ, ದುರುಗಮ್ಮ, ಮರಗಮ್ಮ, hallaki_woman_uttarakannadaಸವಾರಮ್ಮ, ಅಂಕ್ಲಮ್ಮನನ್ನೂ, ಗೊಂಧಳಿ ಸಮುದಾಯ ಸವದತ್ತಿ ಯಲ್ಲಮ್ಮ, ಅಂಬಾಭವಾನಿ, ತುಳುಜಾ ಭವಾನಿ, ಕೊಲ್ಲಾಪುರದ ಮಹಾಲಕ್ಷ್ಮಿ. ಗುಗ್ಗುಳ ಮಾರಮ್ಮ, ಕಕ್ಕೇರಿ ಭಿಷ್ಟಮ್ಮನನ್ನೂ ಹೀಗೆ ಅಲೆಮಾರಿ ಸಮುದಾಯಗಳು ಪ್ರಧಾನವಾಗಿ ಹೆಣ್ಣು ದೈವಗಳನ್ನು ಆರಾಧನೆ ಮಾಡುತ್ತವೆ.

ಹೀಗೆ ಹೆಣ್ಣು ದೈವಗಳ ಆರಾಧನೆಗೂ ಆಯಾ ಸಮುದಾಯದ ಹೆಣ್ಣುಮಕ್ಕಳಿಗೆ ನಾಗರಿಕ ಜಗತ್ತಿಗಿಂತ ಒಂದಷ್ಟು ಮುಕ್ತವಾದ ವಾತಾವರಣ ಇರುವುದಕ್ಕೂ ಸಂಬಂಧವಿದೆ. ಈ ನೆಲೆಯಲ್ಲಿ ಕರ್ನಾಟಕದ ಅಲೆಮಾರಿ ಬುಡಕಟ್ಟುಗಳ ಆರಾಧನಾ ಪರಂಪರೆಯನ್ನು ಭಿನ್ನವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಥವಾ ಈ ಆರಾಧನೆಗಳಲ್ಲಿ ಕರ್ನಾಟಕದ ಮೂಲ ದೈವೀ ಪಂಥವಾದ ಶಾಕ್ತ ಪಂಥದ ಅಧ್ಯಯನಕ್ಕೆ ಹೊಸ ನೆಲೆಯೊಂದನ್ನು ಒದಗಿಸುವ ಸಾಧ್ಯತೆಗಳೂ ಇದೆ. ಈ ಬಗೆಯ ಅಧ್ಯಯನದಿಂದಾಗಿ ಒಟ್ಟಾರೆ ಮಹಿಳೆಯ ಸಾಂಸ್ಕೃತಿಕ ಚರಿತ್ರೆ ಕಟ್ಟುವ ಭಿನ್ನ ನೆಲೆಯೊಂದು ಒದಗಬಹುದು.

ಮಹಿಳೆಯರ ಸಂಖ್ಯೆ ಮತ್ತು ಲಿಂಗಾನುಪಾತ

ನಾಗರಿಕ ಸಮುದಾಯಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಲಿಂಗಾನುಪಾತದಲ್ಲೂ ಮಹಿಳೆಯರ ಪ್ರಮಾಣ ಇಳಿಯುತ್ತಿದೆ. ಇದು ಆಧುನಿಕ ಕಾಲವೂ ಕೂಡ ಮಹಿಳೆಯನ್ನು ಕಡೆಗಣಿಸುತ್ತಿರುವುದಕ್ಕೆ ಪೂರಕವಾಗಿದೆ. ಆದರೆ ಅಲೆಮಾರಿ ಬುಡಕಟ್ಟುಗಳ ಸಂಖ್ಯೆಯನ್ನು ನೋಡಿದರೆ ಇದಕ್ಕೆ ವಿರುದ್ಧ ಆಯಾಮವಿದೆ. ಅಂದರೆ ಇಲ್ಲಿ ಹೆಣ್ಣಿನ ಸಂಖ್ಯೆ ತೀರಾ ಕಡಿಮೆಯೇನಿಲ್ಲ. ಬದಲಾಗಿ ಗಂಡಿಗೆ ಸಮನಾಗಿಯೋ, ಅಥವಾ ಗಂಡಿನ ಸಂಖ್ಯೆಯ ಹತ್ತಿರವೋ ಇದೆ. ಉದಾಹರಣೆಗೆ ಕೆಲವು ಸಮುದಾಯಗಳ ಅಂಕಿಅಂಶಗಳನ್ನು ನೋಡಬಹುದು.

ಬೈಲು ಪತ್ತಾರ ಸಮುದಾಯ 18 ಜಿಲ್ಲೆಗಳಲ್ಲಿ ನೆಲೆಸಿದೆ. 4609 ರಷ್ಟು ಜನಸಂಖ್ಯೆಯಲ್ಲಿ 2216 ರಷ್ಟು ಮಹಿಳೆಯರಿದ್ದಾರೆ. orissa-tribeಲಿಂಗಾನುಪಾತ 926 ರಷ್ಟಿದೆ. ಬುಡಗ ಜಂಗಮ ಸಮುದಾಯದಲ್ಲಿ ಒಟ್ಟು ಜನಸಂಖ್ಯೆ 24132 ರಷ್ಟಿದೆ. ಅದರಲ್ಲಿ ಹೆಂಗಸರ ಸಂಖ್ಯೆ 11925 ರಷ್ಟಿದೆ. ದೊಂಬಿದಾಸರ ಸಮುದಾಯದಲ್ಲಿ ಒಟ್ಟು 7923 ರಷ್ಟಿದ್ದಾರೆ. ಅದರಲ್ಲಿ ಹೆಣ್ಣುಮಕ್ಕಳ ಸಂಖ್ಯೆ 3780 ರಷ್ಟಿದೆ. ಲಿಂಗಾನುಪಾತ 912. ಸಿಂದೊಳ್ಳು ಸಮುದಾಯದ ಒಟ್ಟು 1424 ಕುಟುಂಬಗಳ 5726 ಜನರಿದ್ದಾರೆ. ಅದರಲ್ಲಿ ಹೆಂಗಸರು 2587 ರಷ್ಟಿದ್ದಾರೆ. ಗೋಂಧಳಿ ಸಮುದಾಯ 15 ಜಿಲ್ಲೆಗಳ ಸಮೀಕ್ಷೆಯಲ್ಲಿ ಒಟ್ಟು 5407 ರಷ್ಟು ಜನಸಂಖ್ಯೆ ಇದೆ. ಅದರಲ್ಲಿ ಸ್ತ್ರೀಯರು 2620 ರಷ್ಟಿದ್ದಾರೆ. ಲಿಂಗಾನುಪಾತ 940 ರಷ್ಟಿದೆ. ಗೋಸಂಗಿ ಸಮುದಾಯದಲ್ಲಿ 1770 ಜನರಿದ್ದಾರೆ. ಹೆಂಗಸರು 879 ರಷ್ಟಿದ್ದಾರೆ. ಲಿಂಗಾನುಪಾತ 986 ರಷ್ಟಿದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಒಟ್ಟು ಜನಸಂಖ್ಯೆ 2074 ರಲ್ಲಿ ಮಹಿಳೆಯರ ಪ್ರಮಾಣ 49.51 ರಷ್ಟಿದೆ. ಕಂಜರ ಭಾಟ ಸಮುದಾಯದಲ್ಲಿ 2001 ರಷ್ಟು ಜನಸಂಖ್ಯೆ ಇದೆ. ಹೆಂಗಸರು 1000 ದಷ್ಟಿದ್ದಾರೆ. ಲಿಂಗಾನುಪಾತ 999 ರಷ್ಟಿದೆ. ಅಲೆಮಾರಿ ಕುರುಬರಲ್ಲಿ ಒಟ್ಟು ಜನಸಂಖ್ಯೆ 2310 ರಷ್ಟಿದ್ದರೆ, ಹೆಂಗಸರು 1098 ರಷ್ಟಿದ್ದಾರೆ. ಲಿಂಗಾನುಪಾತ 905 ರಷ್ಟಿದೆ.

ಈ ಅಂಕೆಸಂಖ್ಯೆಗಳನ್ನು ಗಮನಿಸಿದರೆ ಬೆರಳೆಣಿಕೆಯ ಸಮುದಾಯಗಳಲ್ಲಿ ಲಿಂಗಾನುಪಾತ ಭಯ ಹುಟ್ಟಿಸುವಂತಿದ್ದರೆ, ಬಹುಪಾಲು ಸಮುದಾಯಗಳಲ್ಲಿ ಹೆಚ್ಚು ಅಂತರವಿಲ್ಲ. ಇದನ್ನು ನೋಡಿದರೆ ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ಹೆಣ್ಣು ಸಂತಾನವನ್ನು ಕೇಡೆಂದು ಬಯಸುವುದು, ಅಥವಾ ಗಂಡು ಸಂತಾನವನ್ನು ಶ್ರೇಷ್ಠವೆಂದು ಭಾವಿಸುವ ಸನಾತನ ನಂಬಿಕೆ ಅಷ್ಟಾಗಿ ಕಾಡಿಲ್ಲವೆಂದು ಹೇಳಬಹುದು. ಅಂತೆಯೇ ಅಲೆಮಾರಿತನಕ್ಕೆ ಹೆಣ್ಣಿನ ಅಗತ್ಯವಿರುವುದರಿಂದ ಹೀಗೆ ಹೆಣ್ಣು ಅಲೆಮಾರಿತನದ ಬದುಕಿನ ಅನಿವಾರ್ಯ ಸಂಗಾತಿಯಾಗಿ ಪ್ರಾಮುಖ್ಯತೆಯನ್ನು ಪಡೆದಿದ್ದಾಳೆ. ಹಾಗಾಗಿ ಅಲೆಮಾರಿ ಬುಡಕಟ್ಟುಗಳಲ್ಲಿ ಮಹಿಳೆ ಒಂದು ಚೈತನ್ಯದ ಸಂಗತಿಯಾಗಿಯೂ ಕಾಣುತ್ತಾಳೆ.

ನಗರದಂಚಿನ ವಾಸದ ನೆಲೆ ಮತ್ತು ಮಹಿಳೆ

ಇಂದು ಬಹುಪಾಲು ಅಲೆಮಾರಿ ಬುಡಕಟ್ಟುಗಳ ವಾಸದ ನೆಲೆ ನಗರದ ಅಂಚಿಗೆ ಸುತ್ತುವರಿದಿದೆ. ಅಥವಾ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಕೈಬಿಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಒಂದಷ್ಟು ಉದಾಹರಣೆಗಳನ್ನು ನೋಡೋಣ. ಗೋಸಂಗಿ ಸಮುದಾಯದಲ್ಲಿ ನಗರ ಪ್ರದೇಶದ ವಾಸದ ನೆಲೆ ಶೇ 70 ರಷ್ಟಿದ್ದರೆ, ಗ್ರಾಮೀಣ ಪ್ರದೇಶದ ವಾಸದ ನೆಲೆ ಶೇ 30 ರಷ್ಟಿದೆ. ಘಿಸಾಡಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 22 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಶೇ78 ರಷ್ಟಿದೆ. ಗೋಂಧಳಿ ಸಮುದಾಯದ ವಾಸದ ನೆಲೆ ಗ್ರಾಮೀಣ ಭಾಗದಲ್ಲಿ ಶೇ 19.47 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಸರಾಸರಿ ಶೇ.80.53 ರಷ್ಟಿದೆ. ಬೈಲ ಪತ್ತಾರ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ 49.31 ರಷ್ಟಿದೆ. tribe-minesದೊಂಬಿದಾಸ ಸಮುದಾಯ ನಗರ ಭಾಗದಲ್ಲಿ ಶೇ 51.36 ಇದ್ದರೆ ಗ್ರಾಮೀಣ ಭಾಗದಲ್ಲಿ 49.31 ರಷ್ಟಿದೆ. ಕಂಜರ ಭಾಟ ಸಮುದಾಯ ಗ್ರಾಮೀಣ ಭಾಗದಲ್ಲಿ 163 ಜನರು ನೆಲೆಸಿದ್ದರೆ, ನಗರ ಭಾಗದಲ್ಲಿ ಒಟ್ಟು 1834 ರಷ್ಟಿದ್ದಾರೆ.

ಈ ಅಂಕೆಸಂಖ್ಯೆಗಳು ಅಲೆಮಾರಿ ಸಮುದಾಯಗಳ ನಗರ ಕೇಂದ್ರಿತ ವಲಸೆಯನ್ನು ತೋರಿಸುತ್ತಿದೆ. ಹೀಗೆ ಅಲೆಮಾರಿ ಸಮುದಾಯಗಳು ಗ್ರಾಮೀಣ ಭಾಗದ ವಲಸೆಯನ್ನು ಯಾಕೆ ಕೈಬಿಡುತ್ತಿದ್ದಾರೆ, ನಗರಕ್ಕೆ ಅಂಟಿಕೊಂಡಂತೆ ಯಾಕೆ ಬದುಕುತ್ತಾರೆ ಮುಂತಾಗಿ ನೋಡಬಹುದು. ಮುಖ್ಯವಾಗಿ ಗ್ರಾಮಗಳು ಕೃಷಿಯಾಧಾರಿತ ಬದುಕನ್ನು ಆಧರಿಸಿ ಸ್ವತಃ ಹಳ್ಳಿಗಳೆ ಸಂಕಷ್ಟದಲ್ಲಿವೆ. ಇಂತಹ ಸಂಕಷ್ಟದ ಬಹುಪಾಲು ಹಳ್ಳಿಗಳು ಅಲೆಮಾರಿ ಸಮುದಾಯಗಳಿಗೆ ಅನ್ನ ನೀಡುವಲ್ಲಿ ಬದುಕನ್ನು ಕಲ್ಪಿಸುವಲ್ಲಿ ಸೋಲುತ್ತಿರುವಂತೆ ಕಾಣುತ್ತಿವೆ. ಮೊದಲು ಕೃಷಿಯೇತರ ಭೂಮಿಯು ಹೆಚ್ಚಾಗಿತ್ತು. ಈ ಕೃಷಿಯೇತರ ಭೂಮಿಯ ಕಾರಣಕ್ಕೆ ಪಶು ಕುರಿಗಳನ್ನು ಸಾಕುತ್ತಿದ್ದ ಅಲೆಮಾರಿ ಸಮುದಾಯಕ್ಕೂ ಅನುಕೂಲಕರ ವಾತಾವರಣವಿತ್ತು. ಈ ಚಿತ್ರ ಈಚಿನ ಹತ್ತು ವರ್ಷಗಳಲ್ಲಿ ಬದಲಾಗಿದೆ. ಈ ಕಾರಣಕ್ಕೆ ಸಹಜವಾಗಿ ಅಲೆಮಾರಿ ಸಮುದಾಯಗಳು ನಗರಕ್ಕೆ ಹೊಂದಿಕೊಂಡಂತೆ ನೆಲೆಸುತ್ತಿವೆ. ಹೀಗೆ ನಗರದಂಚಿನ ವಲಸೆಯಿಂದಾಗಿ ಅಲೆಮಾರಿ ಸಮುದಾಯಗಳು ನಗರ ಕೇಂದ್ರಿತ ಹೊಸ ಕಸುಬುಗಳಿಗೆ ಒಗ್ಗಿಕೊಳ್ಳುತ್ತಿವೆ. ಇದರಲ್ಲಿ ಮಹಿಳೆಯರ ಕಸುಬುಗಳೂ ಬದಲಾಗುತ್ತಿವೆ. ಅಂತೆಯೇ ನಗರ ಸಂಪರ್ಕದಿಂದಾಗಿ ಅಲೆಮಾರಿ ಮಹಿಳೆಯರಲ್ಲಿ ಕೆಲವು ಮುಖ್ಯ ಬದಲಾವಣೆಗಳು ಘಟಿಸಿವೆ.

ಅಲೆಮಾರಿ ಸಮುದಾಯದ ಮಹಿಳೆಯ ಶಿಕ್ಷಣ

ಅಲೆಮಾರಿತನಕ್ಕೂ, ಶಿಕ್ಷಣಕ್ಕೂ ವಿರುದ್ಧ ಸಂಬಂಧವಿದೆ. ಅಂದರೆ ನಿರಂತರವಾಗಿ ಅಲೆದಾಡಿಕೊಂಡಿರುವ ಕಾರಣ ಒಂದೆಡೆ ನಿಂತು ಶಿಕ್ಷಣ ಪಡೆಯುವುದು ಈ ಸಮುದಾಯಗಳಿಗೆ ಸಾಧ್ಯವಾಗದು. ಸಹಜವಾಗಿ ಅಲೆಮಾರಿ ಸಮುದಾಯಗಳಿಗೆ ಶಿಕ್ಷಣ ಈಗಲೂ ನಿಲುಕದ ನಕ್ಷತ್ರವೆ. ಅಲೆಮಾರಿ ಸಮುದಾಯಗಳು ಈಗ ಕೆಲವೆಡೆ ನೆಲೆ ನಿಲ್ಲುತ್ತಿರುವುದು ಕಂಡು ಬರುತ್ತಿದೆ. ಅಥವಾ ಅರೆ ಅಲೆಮಾರಿತನವಿದೆ. ಮುಖ್ಯವಾಗಿ ನೆಲೆನಿಲ್ಲುವಿಕೆ ಮತ್ತು ಅರೆ ಅಲೆಮಾರಿತನದಿಂದ ಈ ಸಮುದಾಯದ ಮಕ್ಕಳೂ ಶಾಲೆ ಕಲಿಯುತ್ತಿದ್ದಾರೆ. ಅದರಲ್ಲೂ ಅಲೆಮಾರಿ ಸಮುದಾಯಗಳಿಗೆ ಸ್ಥಾಪನೆಯಾಗ ವಸತಿ ಶಾಲೆಗಳೂ ಸ್ವಲ್ಪಮಟ್ಟಿಗೆ ಕಲಿಯಲು ಸಹಕಾರಿಯಾಗಿವೆ. ಇಲ್ಲಿಯೂ ಗಂಡಸರ ಶಿಕ್ಷಣದ ಪ್ರಮಾಣಕ್ಕಿಂತ ಹೆಣ್ಣುಮಕ್ಕಳ ಶಿಕ್ಷಣದ ಪ್ರಮಾಣ ಇನ್ನೂ ಕಡಿಮೆಯೇ ಇದೆ. ಕೆಲವು ಸಮುದಾಯಗಳ ಅಂಕೆ ಸಂಖ್ಯೆಯನ್ನು ನೋಡೋಣ.

ಅಲೆಮಾರಿ ಕುರುಬರಲ್ಲಿ 2001 ರ ಜನಗಣತಿಯ ಪ್ರಕಾರ ಸಾಕ್ಷರತೆ 25.03 ರಷ್ಟಿದೆ. ಪುರುಷರಲ್ಲಿ ಶೇ 18.44 ರಷ್ಟಿದ್ದರೆ, ಮಹಿಳೆಯರು ಶೇ 6.59 ರಷ್ಟಿದೆ. 2007 ರ ಸಮೀಕ್ಷೆ ಪ್ರಕಾರ ಅಲೆಮಾರಿ ಕುರುಬರ ಮಹಿಳೆಯರ ಶಿಕ್ಷಣ ಶೇ 6.59 ರಷ್ಟಿದೆ. ಹಕ್ಕಿಪಿಕ್ಕಿ ಸಮುದಾಯದಲ್ಲಿ ಸರಾಸರಿ ಶೈಕ್ಷಣಿಕ ಪ್ರಮಾಣ ಪುರುಷರು 19.23 ರಷ್ಟಿದ್ದರೆ, ಮಹಿಳೆಯರು 10.31 ರಷ್ಟಿದ್ದಾರೆ. ಒಟ್ಟು 14.74 ರಷ್ಟು ಸಾಕ್ಷರರಿದ್ದಾರೆ. ಗೋಸಂಗಿ ಸಮುದಾಯದಲ್ಲಿ ಶೇ 39.59 ರಷ್ಟು ಗಂಡಸರ ಶಿಕ್ಷಣವಿದ್ದರೆ, 36.08 ರಷ್ಟು ಮಹಿಳೆಯರ ಶಿಕ್ಷಣವಿದೆ.

ಬಹುಪಾಲು ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಅಂಕೆಸಂಖ್ಯೆಗಳು ಮೇಲಿನಂತೆಯೇ ಇರುತ್ತದೆ. ಇಲ್ಲಿ ಒಟ್ಟಾರೆ ಅಲೆಮಾರಿ ಸಮುದಾಯದ ಶೈಕ್ಷಣಿಕ ಮಟ್ಟ ತುಂಬಾ ಕೆಳಮಟ್ಟದ್ದಾಗಿದೆ. ಅದರಲ್ಲೂ ನಾಗರಿಕ ಸಮುದಾಯಗಳಿಗೆ ಹೋಲಿಸಿದರೆ, ಶಿಕ್ಷಣದ ಮಟ್ಟ ಶೋಚನೀಯವಾಗಿದೆ. ಮಹಿಳೆಯರ ಶೈಕ್ಷಣಿಕ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದು ಕಾಣುತ್ತದೆ. ಇಲ್ಲಿ ಮಹಿಳೆಯರಿಗೆ ಶಿಕ್ಷಣ ಕಡಿಮೆ ಇರುವುದಕ್ಕೂ ಈ ಸಮುದಾಯಗಳಲ್ಲಿ ಹೆಣ್ಣನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುವುದಕ್ಕೂ ಸಂಬಂಧವಿದೆ. ಅಂತೆಯೇ ಮಹಿಳೆಯರಲ್ಲಿ ಮೂಡನಂಬಿಕೆಗಳು ಗಾಢವಾಗಿರುವುದಕ್ಕೂ ನಂಟಿದೆ.

ತೆರ, ಬಾಲ್ಯವಿವಾಹ ಮತ್ತು ಕೂಡಿಕೆ/ಸೀರುಡಿಕೆ ಪದ್ದತಿ

ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಮಹಿಳೆ ಕುರಿತಂತೆ ಮಾನವೀಯ ಮತ್ತು ಅಮಾನವೀಯ ಸಂಗತಿಗಳು ಜೊತೆ ಜೊತೆಗೇ ಇವೆ. ಅದರಲ್ಲಿ ತೆರಕೊಟ್ಟು ಮದುವೆಯಾಗುವ ಪದ್ದತಿ ಮಾನವೀಯವಾದುದು. ಈಗಲೂ ಕೆಲವು ಸಮುದಾಯಗಳಲ್ಲಿ ತೆರ ಕೊಟ್ಟು ಮದುವೆಯಾಗುವುದು ಜೀವಂತವಾಗಿದೆ. ಈ ಪದ್ದತಿ ನಾಗರೀಕ ಸಮಾಜದ ವರದಕ್ಷಣೆ ಪದ್ದತಿಗೆ ವಿರುದ್ಧವಾದುದು. ಬೈಲಪತ್ತಾರ ಸಮುದಾಯದಲ್ಲಿ ಇದಕ್ಕೆ ಓಲಿ ಎಂದು ಕರೆಯುತ್ತಾರೆ. ತೆರಕೊಟ್ಟು ಮದುವೆಯಾಗುವುದಕ್ಕೆ ಆಯಾ ಸಮುದಾಯದ ನಿಯಮಗಳು ಭಿನ್ನವಾಗಿವೆ. ಅಂತೆಯೇ ಹೆಣ್ಣು ಹೆತ್ತ ತಂದೆ ತಾಯಿಗಳಿಗೆ ಗೌರವವೂ ಹೆಚ್ಚು. tribal-womanಹೀಗೆ ತೆರ ಪದ್ಧತಿ ಇರುವುದರಿಂದ ಹೆಣ್ಣನ್ನು ಹೆರುವುದು ತಂದೆ ತಾಯಿಯರಿಗೆ ಹೊರೆಯಾಗಿ ಕಾಣುವುದಿಲ್ಲ. ನೆಲೆ ನಿಂತ ಅಲೆಮಾರಿ ಸಮುದಾಯಗಳಲ್ಲಿ ನಿಧಾನಕ್ಕೆ ವರದಕ್ಷಿಣೆ ಪದ್ದತಿಯೂ ಚಾಲ್ತಿಗೆ ಬರುತ್ತಿದೆ. ಇದು ನೆಲಸಿಗರ ಪ್ರಭಾವದಿಂದ ಬಂದದ್ದಾಗಿದೆ.

ಅಲೆಮಾರಿಗಳಲ್ಲಿ ಸಾಮಾನ್ಯವಾಗಿ ಬಾಲ್ಯವಿವಾಹ ಪದ್ದತಿ ಇದೆ. ಬಾಲ್ಯವಿವಾಹ ಪದ್ದತಿಯ ಕಾರಣಕ್ಕೆ ಹೆಣ್ಣುಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವುದು, ಅಕಾಲ ಮರಣಕ್ಕೆ ಬಲಿಯಾಗುವುದೂ ಇದೆ. ಚಿಕ್ಕವಯಸ್ಸಿಗೆ ಮಕ್ಕಳನ್ನು ಪಡೆವುದು, ತಾಯಿ ಮಗು ಅನಾರೋಗ್ಯಕ್ಕೆ ತುತ್ತಾಗುವುದೂ ಇದೆ. ಬಾಲ್ಯ ವಿವಾಹದ ಕಾರಣಕ್ಕೆ ಅಕಾಲಿಕ ಮರಣ ಹೊಂದಿದರೆ, ಚಿಕ್ಕ ವಯಸ್ಸಿಗೆ ವಿಧವೆ, ವಿಧುರರಾಗುತ್ತಾರೆ. ಈ ಕಾರಣಕ್ಕೆ ಇರಬೇಕು ಅಲೆಮಾರಿಗಳಲ್ಲಿ ಪುನರ್ವಿವಾಹವು ತೊಡಕಲ್ಲ. ಹೆಣ್ಣು ಗಂಡು ಮರು ಮದುವೆಯಾಗಲು ಈ ಸಮುದಾಯಗಳಲ್ಲಿ ಅವಕಾಶವಿದೆ. ಗಂಡ ಬಿಟ್ಟರೂ ಬೇರೊಬ್ಬರನ್ನು ಕೂಡಿಕೆಯಲ್ಲಿ ಮದುವೆಯಾಗಬಹುದು. ಗಂಡ ಸತ್ತರೆ ಮೈದುನನ್ನು ಸೀರುಡಿಕೆಯಲ್ಲಿ ವರಿಸಬಹುದು.

ಗೊಂಧಳಿ ಸಮುದಾಯದಲ್ಲಿ ಸ್ತ್ರೀಯು ಮೂರನೆ ಬಾರಿಗೆ ಲಗ್ನವಾಗುವಂತಿಲ್ಲ. ಅಂತೆಯೇ ಪುರುಷರು ನಾಲ್ಕನೆ ಬಾರಿಗೆ ಲಗ್ನವಾಗುವಂತಿಲ್ಲ ಎಂಬ ನಿಯಮವಿದೆ. ದೊಂಬಿದಾಸರ ಸಮುದಾಯದಲ್ಲಿ ಹಿಂದೆ ಮರುವಿವಾಹದಲ್ಲಿ ಗಂಡು ಹೆಣ್ಣಿಗೆ ತಾಳಿಕಟ್ಟುವಂತಿರಲಿಲ್ಲ, ವಿಧವೆಯೊಬ್ಬಳು ಹೆಣ್ಣಿಗೆ ತಾಳಿ ಕಟ್ಟಬೇಕಿತ್ತು. ಘಿಸಾಡಿಗಳ ಹೆಣ್ಣುಮಗಳು ಬೇರೆ ಸಮುದಾಯದ ಪುರುಷನೊಂದಿಗೆ ಓಡಿ ಹೋದರೆ ಈ ಸಮುದಾಯದಿಂದ ಹೊರ ಹಾಕಲಾಗುತ್ತದೆ. ಇದಕ್ಕಾಗಿ ಆ ಹುಡುಗಿಯ ತಂದೆ ತಾಯಿಗಳು ಸಮುದಾಯದ ಪಂಚಾಯ್ತಿಗೆ ಇಂತಿಷ್ಟು ದಂಡ ಕಟ್ಟಬೇಕಾಗುತ್ತದೆ. ಹೀಗೆ ಆಯಾ ಸಮುದಾಯಗಳಲ್ಲಿ ಪ್ರತ್ಯೇಕ ನಿಯಮಗಳಿವೆ.

ಪಂಚಾಯ್ತಿಗಳಲ್ಲಿ ಮಹಿಳೆ ನಗಣ್ಯ

ಬಹುಪಾಲು ಅಲೆಮಾರಿ ಸಮುದಾಯಗಳಲ್ಲಿ ಈಗಲೂ ವ್ಯಾಜ್ಯಗಳು ಆಯಾ ಸಮುದಾಯಗಳ ಪಂಚಾಯ್ತಿಯಲ್ಲಿ ಬಗೆ ಹರಿಯುತ್ತವೆ. ಆಯಾ ಸಮುದಾಯದ ಯಜಮಾನರು ಪಂಚಾಯ್ತಿಯ ಮುಖ್ಯಸ್ಥರಾಗಿರುತ್ತಾರೆ. ಈ ಬಗೆಯ ಮುಖ್ಯಸ್ಥಿಕೆ ಕೆಲವು ಸಮುದಾಯಗಳಲ್ಲಿ ವಂಶಪಾರಂಪರ್ಯವೂ ಆಗಿರುವುದಿದೆ. ಇಂತಹ ನ್ಯಾಯ ಪಂಚಾಯ್ತಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ತೀರಾ ವಿರಳವಾಗಿದೆ. ಯಾವುದೇ ನ್ಯಾಯ ತೀರ್ಮಾನ ಪುರುಷ ಮುಖ್ಯಸ್ಥರಿಂದಲೇ ನಿರ್ಧಾರವಾಗುತ್ತವೆ. ಈ ನಿರ್ಧಾರಗಳೂ ಕೂಡ ಬಹುಪಾಲು ಪುರುಷಪರವಾಗಿರುವ ಸಾಧ್ಯತೆಯೂ ಇದೆ. ಇದರಿಂದಾಗಿ ನ್ಯಾಯ ಪಂಚಾಯ್ತಿಗಳಲ್ಲಿ ಮಹಿಳೆಯರ ಸ್ವಾತಂತ್ರ್ಯ ದಮನಗೊಳ್ಳುವುದಿದೆ.

ಕಲಾಪ್ರಕಾರಗಳು ಮತ್ತು ಮಹಿಳೆ

ಅಲೆಮಾರಿ ಸಮುದಾಯಗಳಲ್ಲಿ ಕಲೆಯನ್ನು ಆಧರಿಸಿದ ಸಮುದಾಯಗಳು ಹೆಚ್ಚಿವೆ. ಅಂತಹ ಸಮುದಾಯಗಳಲ್ಲಿ ಮಹಿಳೆಯು ಕಲಾಪರಂಪರೆಯ ಜತೆ ತನ್ನದೇ ಆದ ಅನುಸಂಧಾನವನ್ನು ಮಾಡುತ್ತಿರುತ್ತಾಳೆ. ಹಲವು ಪ್ರದರ್ಶನಾತ್ಮಕ ಕಲೆಗಳಲ್ಲಿ ಮಹಿಳೆ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತಿ ಪಡೆದಿರುತ್ತಾಳೆ. ಸಿಂಧೊಳ್ಳು ಸಮುದಾಯದಲ್ಲಿ ಉರುಮೆ ಬಾರಿಸುವ ಮಹಿಳೆ, ಏಕಕಾಲದಲ್ಲಿ ಗಂಡಿನ ನಿರೂಪಣೆಗೆ ತನ್ನದೇ ಆದ ವಿವರಣೆಗಳನ್ನು ಸೇರಿಸುತ್ತಾ ಕಥನವನ್ನು ಪೂರ್ಣಗೊಳಿಸುತ್ತಾಳೆ.

ದೊಂಬಿದಾಸರ ಸಮುದಾಯದಲ್ಲಿ ರಾತ್ರಿ ಬಯಲಾಟದಂತೆ ದಾಸರಾಟವನ್ನು ಆಡುತ್ತಾರೆ. ಇದೊಂದು ರಂಗಪ್ರಕಾರ. ಇದರಲ್ಲಿ ಹಾಸ್ಯಪ್ರಧಾನತೆ ಹೆಚ್ಚಿರುತ್ತದೆ. ಇಂತಹ ಆಟಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಸಂಗೀತ ಪರಿಕರಗಳನ್ನು ಬಾರಿಸುತ್ತಾರೆ, ಹೆಚ್ಚಾಗಿ ಈ ಸಮುದಾಯದ ಗಂಡಸರು ಹೆಣ್ಣು ವೇಷ ಹಾಕಿಯೆ ದಾಸರಾಟವಾಡುತ್ತಾರೆ. ಜಗಲೂರು ತಾಲೂಕು ಬಂಗಾರಕ್ಕನ ಗುಡ್ಡದ ಬಂಗಾರಮ್ಮ ಈ ಸಮುದಾಯದ ದೊಡ್ಡ ಕಲಾವಿದೆ. ತತ್ವಪದ, ಲಾಲಿಪದ ಹೇಳುವುದರಲ್ಲಿ ಪರಿಣಿತಿ ಇದೆ. ಜಾನಪದ ಅಕಾಡೆಮಿಯ ರಾಜ್ಯಪ್ರಶಸ್ತಿಯೂ ಬಂದಿದೆ.

ಬುಡಗ ಜಂಗಮ ಸಮುದಾಯದಲ್ಲಿ ಬುರ್ರಕಥಾ ಹಾಡುಗಾರಿಕೆ ಪ್ರಮುಖ ಕಲೆಯಾಗಿದೆ. ಬುರ್ರಕಥಾ ಈರಮ್ಮ ಈ ಸಮುದಾಯದ ದೊಡ್ಡ ಕಲಾವಿದೆ. ರಾಜ್ಯಪ್ರಶಸ್ತಿ, ನಾಡೋಜ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಈರಮ್ಮನ ಬಗ್ಗೆಯೇ ಒಂದು ಪಿಹೆಚ್.ಡಿ ಸಂಶೋಧನೆಯೂ ಆಗಿದೆ. ಬಾಲನಾಗಮ್ಮ, ಅಕ್ಕ ನಾಗಮ್ಮ, ನ್ಯಾಸಿ ಚಿನ್ನಮ್ಮ, ಕುಮಾರ ರಾಮ, ಮಾರ್‍ವಾಡಿ ಸೇಟ್ ಮುಂತಾದ ಮಹಾಕಾವ್ಯಗಳಲ್ಲಿ ಹೆಣ್ಣುಮಕ್ಕಳ ದಾರುಣ ಜೀವನವನ್ನು ಕಟ್ಟಿಕೊಡಲಾಗಿದೆ. ಈ ಮಹಾಕಾವ್ಯಗಳನ್ನು ಈರಮ್ಮ ಹಾಡಿದ್ದಾಳೆ.

ಮಹಿಳೆಯರ ಕಲೆಯನ್ನೇ ಆದರಿಸಿದ ಅಲೆಮಾರಿ ಸಮುದಾಯವೆಂದರೆ ಡೊಂಬರ ಸಮುದಾಯ. ಲಾಗ ಹಾಕುವುದು, ತಂತಿ ಅಥವಾ karnataka-tribe-danceಹಗ್ಗದ ಮೇಲೆ ನಡೆಯುವುದು, ತಲೆ ಮೇಲೆ ತಂಬಿಗೆ ಇಟ್ಟು ನಡೆಯುವುದು, ಮಂಡಿಗಾಲ ನಡಿಗೆ, ಕಬ್ಬಿಣ ಬಗ್ಗಿಸುವುದು ಮುಂತಾದ ಆಟಗಳನ್ನು ಡೊಂಬರ ಸಣ್ಣ ಸಣ್ಣ ಹುಡುಗಿಯರು ಮಾಡಿ ನೋಡುಗರನ್ನು ಬೆರಗುಗೊಳಿಸುತ್ತಾರೆ. ಇದು ಕಲೆಯಂತೆಯೇ ಅಪಾಯಕಾರಿ ಸಾಹಸ ಕೂಡ. ಈ ಸಮುದಾಯದ ಕೌಜಲಿಗಿ ನಿಂಗಮ್ಮ ರಂಗಭೂಮಿಯಲ್ಲಿ ದೊಡ್ಡ ಕಲಾವಿದೆ. ಒಂದು ನಾಟಕದ ಕಂಪಮಿಯ ಯಜಮಾನಿಯಾಗಿಯೂ ರಂಗಭೂಮಿಯನ್ನು ಬೆಳೆಸಿದ್ದಾರೆ. ಅಂತೆಯೇ ಸಣ್ಣ ತಿಪ್ಪಮ್ಮ, ನಾಟಕದ ಗಂಗಮ್ಮ, ಎಮ್.ಎನ್.ಲಕ್ಷ್ಮಿದೇವಿ, ಗೌರಮ್ಮ ಕೂಡ ಡೊಂಬರ ಸಮುದಾಯದ ರಂಗಭೂಮಿ ಕಲಾವಿದರಾಗಿದ್ದಾರೆ.

ಹಲವು ಅಲೆಮಾರಿ ಬುಡಕಟ್ಟುಗಳಲ್ಲಿ ಹಚ್ಚೆ ಕಲೆ ಈಗಲೂ ಜೀವಂತವಾಗಿದೆ. ಈ ಹಚ್ಚೆ ಕಲೆಯು ಆಯಾ ಸಮುದಾಯದ ಕಲೆ ಪರಂಪರೆಯನ್ನು ಪ್ರತಿನಿಧಿಸುತ್ತಿರುತ್ತದೆ. ಬಹುಪಾಲು ಅಲೆಮಾರಿ ಸಮುದಾಯಗಳ ಹೆಣ್ಣುಮಕ್ಕಳು ಕೌದಿ ಹೊಲೆಯುವುದನ್ನು ಮುಖ್ಯ ಕಸುಬನ್ನಾಗಿಸಿಕೊಂಡಿದ್ದಾರೆ. ಹೀಗೆ ಕೌದಿ ಹೊಲೆಯುವುದೂ ಕೂಡ ತುಂಬಾ ಕಲಾತ್ಮಕವಾಗಿರುತ್ತದೆ. ಕೌದಿ ಹೊಲೆದಂತೆಯೇ ಈಗ ರೈತರಿಗೆ ಪ್ಲಾಷ್ಟಿಕ್ ಪಾಟುಗಳನ್ನು ಹೊಲೆದುಕೊಡುವುದು ಚಾಲ್ತಿಗೆ ಬಂದಿದೆ. ಹೆಳವರು, ಗೊಂದಲಿಗರು, ಮುಂತಾದ ಸಮುದಾಯಗಳಲ್ಲಿ ಕೌದಿ ಹೊಲೆಯುವುದು ಕಲೆಯೂ ಆಗಿದೆ.

ಆಧುನಿಕ ಉಪಕಸಬುಗಳು ಮತ್ತು ಮಹಿಳೆ

ಅಲೆಮಾರಿ ಸಮುದಾಯಗಳು ನಗರಕ್ಕೆ ಅಂಟಿಕೊಂಡಂತಿರುವುದು ಅವುಗಳ ನಂಬಿದ ಕುಲಕಸಬುಗಳನ್ನು ಬದಲಿಸಿದೆ. ಮುಖ್ಯವಾಗಿ ಅಲೆಮಾರಿಗಳ ವಾಸದ ನೆಲೆ ಪಟ್ಟಣವೇ ಆಗಿದ್ದರೂ, ಪಟ್ಟಣದ ಕೆಲವು ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಮಾರಾಟ ಮಾಡಲು ಮತ್ತೆ ಹಳ್ಳಿಗಳಿಗೆ ಮರಳುವುದಿದೆ. ಅದರಲ್ಲಿ ಆಧುನಿಕ ಬದುಕಿಗೆ ಹೊಂದಿಕೊಂಡಂತಹ ಉಪವಸ್ತುಗಳ ಸಂಖ್ಯೆ ದೊಡ್ಡದಿದೆ. ಪ್ಲಾಸ್ಟಿಕ್ ಮತ್ತು ಫೈಬರಿನ ಕೊಡ, ಚೆಂಬು, ಬುಟ್ಟಿ, ಮುಂತಾದವುಗಳನ್ನು ಮಾರುತ್ತಾರೆ. ಮಹಿಳೆಯರು ಆಧುನಿಕ ಅಲಂಕಾರಿಕ ಸಾಮಗ್ರಿಗಳಾದ ಹೇರಪಿನ್, ಸೂಜಿ, ದಾರ, ಸ್ನೋ ಪೌಡರ್, ರಿಬ್ಬನ್, ಹಣಿಗೆ, ಕನ್ನಡಿ, ಕುಂಕುಮ, ಕರಡಿಗೆ ಬಟ್ಟಲು ಇತ್ಯಾದಿಗಳನ್ನು ಮಾರಾಟ ಮಾಡಿ ಅಲ್ಪ ಆದಾಯ ಪಡೆಯುತ್ತಾರೆ. ಇಂತಹ ಸಾಮಾನುಗಳನ್ನು ಮಾರಾಟ ಮಾಡಲು ಅಲೆಮಾರಿ ಸಮುದಾಯದ ಮಹಿಳೆಯರು ಹಳ್ಳಿಗಳಿಗೆ ತೆರಳುತ್ತಾರೆ.

ಅಲ್ಯುಮೀನಿಯಂ ಪಾತ್ರೆ ಪರಿಕರಗಳು, ಕೂಡಿಟ್ಟ ಕೂದಲನ್ನು ಪಡೆದು ಅದರ ಬದಲಿಗೆ ಸಣ್ಣಪುಟ್ಟ ಸಾಮಾನುಗಳನ್ನು ಕೊಡುವುದು, ಹರಿದ ಬ್ಯಾಗುಗಳನ್ನು ಹೊಲೆಯುವುದು, ಜಿಪ್ಪುಗಳನ್ನು ಜೋಡಿಸುವುದು, ಮುಂತಾದ ಆಧುನಿಕ ಪರಿಕರಗಳನ್ನು ಮಾರಾಟ ಮಾಡುವ ಸಣ್ಣಪುಟ್ಟ ವ್ಯಾಪಾರಗಳಲ್ಲಿ ಮಹಿಳೆಯರು ತೊಡಗಿದ್ದಾರೆ. ಇನ್ನು ಕೆಲವು ಮಹಿಳೆಯರು ನಗರದಲ್ಲಿಯೇ ಚುರಮುರಿ, ಪೇಡಾ, ಶರಬತ್, ಭರಣಿ, ಕಾಟನ್‌ವೇಸ್ಟ್ ಕಾಜಿನ ಕಪ್ಪು, ಸಾಸರ, ಬಳೆ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೀಗೆ ಆಧುನಿಕ ಕಾಲದ ಸಂಗತಿಗಳು ವಸ್ತು ಸಂಸ್ಕೃತಿ ಅಲೆಮಾರಿ ಬುಡಕಟ್ಟುಗಳ ಬದುಕಿನ ಕ್ರಮದಲ್ಲಿ ಒಂದಷ್ಟು ಬದಲಾವಣೆಯನ್ನು ತಂದಿವೆ. ಈ ಬದಲಾವಣೆ ಅವರ ಜೀವನವನ್ನು ಉತ್ತಮಗೊಳಿಸುವ ಬದಲು ಒಂದಷ್ಟು ಉಸಿರಾಡುವಂತೆ ಮಾಡಿದೆಯಷ್ಟೆ.
ಮುಗಿಸುವ ಮುನ್ನ ಹುಟ್ಟುವ ಪ್ರಶ್ನೆಗಳು

ನಾವು ಮಹಿಳೆ ಸಮಸ್ಯೆ ಕುರಿತಾಗಿ ದುಂಡಾಗಿ ಗ್ರಹಿಸುತ್ತೇವೆ. ಇದರಲ್ಲಿರುವ ಹತ್ತಾರು ಒಳಪದರುಗಳನ್ನು ಮುಚ್ಚಿ ಹಾಕುತ್ತೇವೆ. ಹೀಗೆ ದುಂಡಾದ ಗ್ರಹಿಕೆಯ ಹಿನ್ನೆಲೆಯನ್ನು ಆಧರಿಸಿದ ಹೋರಾಟ ಅಥವಾ ಯೋಜನೆಯ ಫಲಿತವೂ ಕೂಡ ಹಲವು ಪದರಗಳಲ್ಲಿ ಮುಚ್ಚಿ ಹೋಗಿರುವ ಮಹಿಳೆಯರ ಸಮಸ್ಯೆಗಳನ್ನು ಪ್ರತಿನಿಧಿಸುತ್ತಿರುವುದಿಲ್ಲ. ಉದಾಹರಣೆಗೆ ಅರಣ್ಯವಾಸಿ ಬುಡಕಟ್ಟುಗಳ ಮಹಿಳೆಗೂ, ಅಲೆಮಾರಿ ಬುಡಕಟ್ಟುಗಳ ಮಹಿಳೆಗೂ ಫರಕುಗಳಿವೆ. ಅಥವಾ ಒಂದಷ್ಟು ಸಾಮ್ಯಗಳಿದ್ದಾಗ್ಯೂ ಕೆಲವು ವಿಶಿಷ್ಟ ಲಕ್ಷಣಗಳೂ ಪ್ರತ್ಯೇಕ ಸಮಸ್ಯೆಗಳೂ ಇವೆ. ಹಾಗಾಗಿ ಮಹಿಳೆ ಎಂದು ಅಧ್ಯಯನ ಮಾಡುವಾಗ ಇಂತಹ ಮಹಿಳೆಯ ಒಳಗೇ ಇರಬಹುದಾದ ನೂರಾರು ಒಳಪದರುಗಳ ಅರಿವಿರಬೇಕಾಗುತ್ತದೆ. ಇಂತಹ ಎಚ್ಚರಗಳನ್ನು ಇಟ್ಟುಕೊಂಡೇ ಬರಹ ಮತ್ತು ಮಾತುಗಳನ್ನು ಆಡಬೇಕಾಗುತ್ತದೆ.

ಈ ಲೇಖನದಲ್ಲಿ ಕರ್ನಾಟಕದ ಅಲೆಮಾರಿ ಬುಡಕಟ್ಟುಗಳ ಮಹಿಳೆಯ ಒಂದು ಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಇಲ್ಲಿ ಸಾಂಸ್ಕೃತಿಕವಾಗಿ ಕೆಲವು ವಿಶಿಷ್ಟ ಚಹರೆಗಳಿದ್ದಾಗ್ಯೂ ಅಲೆಮಾರಿ ಬುಡಕಟ್ಟಿನ ಮಹಿಳೆಯ ಸಾಮಾಜಿಕ ಚಹರೆಯೆ ಇಂದು ಮುಖ್ಯವಾಗಿ ಚರ್ಚೆಯಾಗಬೇಕಿದೆ. ಅಲೆಮಾರಿ ಬುಡಕಟ್ಟುಗಳು ನಿಧಾನಕ್ಕೆ ಒಂದೆಡೆ ನೆಲೆ ನಿಲ್ಲುವ ಪ್ರಕ್ರಿಯೆಗಳು ಇವೆಯಾದರೂ, ಇನ್ನೂ ಪೂರ್ಣ ಪ್ರಮಾಣದಲ್ಲಿ ಅಲೆಮಾರಿತನ ನಿಂತಿಲ್ಲ. ಅಂತೆಯೇ ಒಂದೆಡೆ ವಾಸಕ್ಕೆ ಸ್ಥಿರ ನೆಲೆಯನ್ನು ಹೊಂದಿಯೂ ವರ್ಷದ ಕೆಲವು ತಿಂಗಳುಗಳು ಕುಟುಂಬದ ಕೆಲವು ಸದಸ್ಯರು ಅರೆ ಅಲೆಮಾರಿತನವನ್ನು ಅವಲಂಬಿಸಿದ್ದಾರೆ. ಹಾಗಾಗಿ ಇಂದು ಅಲೆಮಾರಿತನವೂ ಹೊಸ ಆಯಾಮಗಳನ್ನು ಪಡೆದುಕೊಂಡಿದೆ. ಇಲ್ಲಿ ಅಲೆಮಾರಿತನಕ್ಕೂ ಆಯಾ ಅಲೆಮಾರಿ ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗಳಿಗೂ ಮತ್ತು ಸಾಮಾಜಿಕ ವೃತ್ತಿಗಳಿಗೂ ನಂಟಿದೆ. ಈ ನಂಟು ಸಡಿಲವಾಗುವ ತನಕ ಅಥವಾ ದುರ್ಭಲವಾಗುವ ತನಕ ಈ ಬಗೆಯ ಅಲೆಮಾರಿತನ ನಿಲ್ಲುವುದಿಲ್ಲ.

ಅಲೆಮಾರಿತನದ ಕಾರಣಕ್ಕೆ ಈ ಸಮುದಾಯಗಳ ಹೆಣ್ಣುಮಕ್ಕಳು ತೆರುವ ಬೆಲೆ ದೊಡ್ಡದಾಗಿದೆ. ಬಾಣಂತಿ ಮಹಿಳೆಯರು, ಗರ್ಭಿಣಿ ಮಹಿಳೆಯರೂ ಅಲೆಮಾರಿತನದಲ್ಲಿ ಬಹುಕಷ್ಟಕ್ಕೆ ಸಿಲುಕುತ್ತಾರೆ. ಅಂತೆಯೇ ತೀರಾ ಚಿಕ್ಕಮಕ್ಕಳ ಲಾಲನೆ ಪಾಲನೆ ಕೂಡ ಅಲೆಮಾರಿ ಜೀವನದಲ್ಲಿ ಕಷ್ಟತೆರನಾದದ್ದು. ಮುಖ್ಯವಾಗಿ ಅಲೆಮಾರಿ ಸಮುದಾಯದ ಪುರುಷರು ಡೇರಿಗಳಲ್ಲಿ ಒಬ್ಬೊಬ್ಬ ಮಹಿಳೆಯರನ್ನೇ ಬಿಟ್ಟು ಹೋಗುವುದಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ಕಷ್ಟಕ್ಕೆ ಸಿಲುಕುವ ಸಂಗತಿಗಳೂ ಎದುರಾಗುತ್ತವೆ. ಇಂತಹದ್ದೇ ಹಲವಾರು ಸೂಕ್ಷ್ಮ ಸಂಗತಿಗಳ ಮೂಲಕ ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ಆ ಸಮಸ್ಯೆಗಳನ್ನು ಆಧರಿಸಿ ಪರಿಹಾರದಂತಹ ಕಾರ್ಯಗಳನ್ನು ಸರಕಾರ ಕೈಗೊಳ್ಳಬೇಕಿದೆ. ಇದೊಂದು ಸಂಕೀರ್ಣವಾದ ನಡಿಗೆ. ಸೂಕ್ಷ್ಮಾತಿಸೂಕ್ಷ್ಮ ಅಧ್ಯಯನಗಳು ದಾಖಲೀಕರಣ ಮತ್ತು ಅಲೆಮಾರಿ ಸಮುದಾಯಗಳನ್ನು ತಾಯ್ತನದ ಮಮತೆಯಿಂದ ನೋಡಬಲ್ಲ ಗುಣ ಸರಕಾರಕ್ಕೆ ಮತ್ತು ಜನಸಮುದಾಯಗಳಿಗೆ ಬರಬೇಕಾಗಿದೆ.

ಆಕರ ಗ್ರಂಥಗಳು:

  1. ಬೈಲ ಪತ್ತಾರ, ವಿಶ್ವನಾಥ ಎಲ್. ಜಗನ್ನಾಥ ಎಂ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  2. ಕಂಜರ ಭಾಟ, ಜೆ.ವ್ಹಿ. ಬಾಗಡೆ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  3. ಹಕ್ಕಿಪಿಕ್ಕಿ, ಕುಮುದಾ.ಬಿ.ಸುಶೀಲಪ್ಪ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  4. ಗೋಸಂಗಿ, ಅಪ್ಪಾಜಿ ಎಸ್. ಸಿಂಧೆ, ಕೆ.ಚಾವಡೆ ಲೋಕೇಶ್, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  5. ಘಿಸಾಡಿ, ಡಾ.ಬಸವರಾಜ ಎಸ್.ಹಿರೇಮಠ, ಅಂಜಲಿ ಸಾಳುಂಕಿ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  6. ಗೋಂಧಳಿ, ಶಿವಾನಂದ ಲ ಪಾಚಂಗಿ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  7. ಸಿಂಧೊಳ್ಳು, ದೊಡ್ಡಮನಿ ಲೋಕರಾಜ, ಶ್ರೀನಿವಾಸ ರಾವುಲೊಳ್, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  8. ಬುಡಗ ಜಂಗಮ, ಬಾಲ ಗುರುಮೂರ್ತಿ, ಪ್ರತಾಪ ಬಹುರೂಪಿ, ಗುಡ್ಗಜಂಗಮ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  9. ಬೈಲ ಪತ್ತಾರ, ವಿಶ್ವನಾಥ ಎಲ್. ಜಗನ್ನಾಥ ಎಂ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  10. ದೊಂಬಿದಾಸರು, ಕುಪ್ಪೆ ನಾಗರಾಜ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  11. ಅಲೆಮಾರಿ ಕುರುಬರು, ಡಿ.ಯರ್ರಪ್ಪ, 2008, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.
  12. ಡೊಂಬರ ಸಮುದಾಯದ ಸಮಕಾಲೀನ ಅಧ್ಯಯನ, ಡಿ.ಬಿ.ಜ್ಯೋತಿ, 2008, (ಅಪ್ರಕಟಿತ ಸಂಶೋಧನಾ ಪ್ರಬಂಧ) ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಏರುತಿದೆ ಜನಸಂಖ್ಯೆ, ಹೆಚ್ಚುತಿದೆ ಅಸಮಾನತೆ

– ಡಾ. ಅರುಣ್ ಜೋಳದಕೂಡ್ಲಿಗಿ

ನಾವಿಂದು ಸಾಂಪ್ರದಾಯಿಕವಾಗಿ ಜನಸಂಖ್ಯಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಇದು ಕೇವಲ ಆಚರಣೆಯಾಗುವುದರಿಂದ ಉಪಯೋಗವಿಲ್ಲ. ಈ ಸಂದರ್ಭದಲ್ಲಿ ಜನಸಂಖ್ಯೆಯ ಹೆಚ್ಚಳ ಮತ್ತದರ ದುಷ್ಪರಿಣಾಮಗಳ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು. ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಅಂತೆಯೇ ಆಯಾ ದೇಶವು ಜನಸಂಖ್ಯೆಯ ನಿಯಂತ್ರಣದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸದ್ಯಕ್ಕಿರುವ ಜಗತ್ತಿನ ಜನಸಂಖ್ಯೆಯ ಜಾಡು ಹಿಡಿದು ಸುತ್ತಾಡಿದರೆ ಭಯ ಆವರಿಸುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಆತಂಕ ಉಂಟಾಗುತ್ತದೆ.

ಜಗತ್ತಿನ ಜನಸಂಖ್ಯಾ ಬೆಳವಣಿಗೆ ವಾರ್ಷಿಕ ಶೇ 1.14 ರಷ್ಟಿದೆ. ಸರಿಸುಮಾರು 8 ಕೋಟಿ ಜನಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿದೆ. world-populationಕ್ರಿ.ಶ 1800 ರಲ್ಲಿ ಜಾಗತಿಕ ಜನಸಂಖ್ಯೆ 100 ಕೋಟಿ (ಒಂದು ಬಿಲಿಯನ್) ಇದ್ದದ್ದು 1987 ರ ಹೊತ್ತಿಗೆ 500 ಕೋಟಿ ತಲುಪಿತ್ತು. ಆಗ ಏರುತ್ತಿರುವ ಜನಸಂಖ್ಯೆಯನ್ನು ತಗ್ಗಿಸುವ ಜಾಗೃತಿ ಮೂಡಿಸುವ ಸಲುವಾಗಿ ಅಂದಿನಿಂದ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೀಗ ಜಾಗತಿಕ ಜನಸಂಖ್ಯೆ 700 ಕೋಟಿಯನ್ನು ಮುಟ್ಟಿದೆ. ಯುನೈಟೆಡ್ ಸ್ಟೇಟ್ಸ್ ಸೆನ್ಸಸ್ ಬ್ಯೂರೋ ಪ್ರಕಾರ ಪ್ರತಿ 8 ಸೆಕೆಂಡಿಗೆ ಒಂದು ಮಗುವಿನ ಜನನವಾಗುತ್ತದೆ. ಪ್ರತಿ 12 ಸೆಕೆಂಡಿಗೆ ಒಬ್ಬರ ಸಾವಾಗುತ್ತದೆ. ಒಟ್ಟಾರೆ ಪ್ರತಿ 14 ಸೆಕೆಂಡಿಗೆ ಒಂದು ಮಗು ಭೂಮಿಗೆ ಪ್ರವೇಶ ಪಡೆಯುತ್ತದೆ.

ನೈಸರ್ಗಿಕ ಸಮತೋಲನಕ್ಕೆ ಪೂರಕವಾದ ತಾಳಿಕೆ ಮಟ್ಟಕ್ಕಿಂತ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ನೈಸರ್ಗಿಕ ವೈಪರೀತ್ಯಕ್ಕೂ ಇದು ಕಾರಣವೆಂದು ಎಕಾಲಜಿಸ್ಟ್‌ಗಳು ಅಭಿಪ್ರಾಯಪಡುತ್ತಾರೆ. ಬಡ ರಾಷ್ಟ್ರಗಳಲ್ಲಿ ಬಡತನಕ್ಕೂ ಜನಸಂಖ್ಯಾ ಹೆಚ್ಚಳಕ್ಕೂ ಸಂಬಂಧವಿದೆ. ಇದನ್ನು ಸಾಬೀತುಪಡಿಸುವ ಸಿದ್ಧಾಂತಗಳೆ ಹುಟ್ಟಿಕೊಂಡಿವೆ. ಅಭಿವೃದ್ಧಿ ಹೊಂದದ ದೇಶಗಳಲ್ಲಿ 1.2 ಬಿಲಿಯನ್ ಜನರು ಬಡತನದ ರೇಖೆಯಲ್ಲಿ ಜೀವಿಸುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾದಂತೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಆಯಾ ದೇಶಗಳು ಹಿಂದುಳಿಯುತ್ತವೆ. ಈ ಬಗೆಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಜನರು ಇನ್ನಷ್ಟು ಬಡತನಕ್ಕೆ ನೂಕಲ್ಪಡುತ್ತಾರೆ. ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಅಂತೆಯೇ ಬಡವ ಶ್ರೀಮಂತರ ಅಂತರವೂ global-populationಹೆಚ್ಚಾಗುತ್ತಿದೆ. ಶ್ರೀಮಂತ ವರ್ಗಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯೆ ಬಂಡವಾಳವಾಗಿಯೂ, ಗಿರಾಕಿಗಳಾಗಿಯೂ ಪರಿವರ್ತಿತವಾಗುತ್ತಿರುವುದು ವಿಪರ್ಯಾಸವಾಗಿದೆ.

ಭೂಗೋಳ ತಜ್ಞರು ಅಭಿಪ್ರಾಯ ಪಡುವಂತೆ ಭೂಮಿಯ ಮೇಲೆ ಒಟ್ಟು 110 ಬಿಲಿಯನ್ ಜನಸಂಖ್ಯೆ ಬದುಕಬಹುದು. ಅಂದರೆ ಅಷ್ಟು ಜನ ಜೀವಿಸಲು ಕನಿಷ್ಠ ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಭೂಮಿಗೆ ಸಾಮರ್ಥ್ಯವಿದೆ. ಆದರೆ ಈಗಿರುವ ಜನಸಂಖ್ಯೆ ಭೂಮಿಯ ಶೇ 6 ರಷ್ಟರಲ್ಲಿ ಜೀವಿಸುತ್ತಿದ್ದಾರೆ. ಈ ಶೇ 6 ರಷ್ಟು ಜನಸಂಖ್ಯೆಯ ಮಿತಿಮೀರಿದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಿಂದಾಗಿ ನೈಸರ್ಗಿಕ ಸಮತೋಲನ ಏರುಪೇರಾಗುತ್ತಿದೆ. ಇದನ್ನು ನೋಡಿದರೆ ಈಗಿರುವ ಜನಸಂಖ್ಯೆ ತಮ್ಮ ಅಗತ್ಯಕ್ಕಿಂತ ನೂರುಪಟ್ಟು ನೈಸರ್ಗಿಕ ಸಂಪನ್ಮೂಲಗಳನ್ನು ವ್ಯಯಮಾಡುತ್ತಿದೆ. ಈ ಬಗೆಯ ಏರುಪೇರಿನ ಪರಿಣಾಮ ಜಾಗತಿಕ ತಾಪಮಾನ ಹೆಚ್ಚಳ, ಭೂಕಂಪ, ಸುನಾಮಿ ಮತ್ತಿತರ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ.

ಈಗಿರುವ ಜನಸಂಖ್ಯೆಯಲ್ಲಿ ಧಾರ್ಮಿಕ ಸಮುದಾಯಗಳ ಬಲಾಬಲವೂ ಹೆಚ್ಚುತ್ತಿದೆ. ಜಾಗತಿಕವಾಗಿ ಶೇ 33 ರಷ್ಟು ಕ್ರಿಶ್ಚಿಯನ್ನರು, ಶೇ 23 ರಷ್ಟು ಮುಸ್ಲೀಮರು, ಶೇ 15 ರಷ್ಟು ಹಿಂದುಗಳು, ಶೇ 7 ರಷ್ಟು ಬೌದ್ಧರು, ಶೇ 6 ರಷ್ಟು ಜನಪದ ಅಥವಾ ಬುಡಕಟ್ಟು ಧರ್ಮವನ್ನು ಅನುಸರಿಸುವವರು, ಶೇ 1 ರಷ್ಟು ಜೈನ ಸಿಕ್ ಮೊದಲಾದ ಧರ್ಮಗಳಿವೆ. ಈ ಬಗೆಯ ಧಾರ್ಮಿಕ ಸಮುದಾಯಗಳ ಏರುಪೇರಿಗೂ ಆಯಾ ಧರ್ಮಿಯರು ಅನುಸರಿಸುವ ವೃತ್ತಿಪಲ್ಲಟಗಳಿಗೂ ಸಂಬಂಧವಿದೆ. ಅಂತೆಯೇ ಯಾವುದೇ ನಿರ್ದಿಷ್ಟ ಧರ್ಮದ ಚೌಕಟ್ಟಿನಲ್ಲಿ ಗುರುತಿಸಿಕೊಳ್ಳದ ಜನರು ಜಾಗತಿಕವಾಗಿ ಶೇ 16 ರಷ್ಟಿದ್ದಾರೆ. ಇದು ಧರ್ಮಾತೀತವಾದ ಬಂಡವಾಳಶಾಹಿ ನೆಲೆಯಲ್ಲಿ ಉತ್ಪತ್ತಿಯಾದ ಹೊಸ ಬಗೆಯ ಜನಸಮುದಾಯವೆನ್ನಬಹುದು. ಇವರಿಗೆ ಆರ್ಥಿಕತೆಯೆ ಧರ್ಮ.

ಮುಖ್ಯವಾಗಿ ಜನಸಂಖ್ಯೆಯು ಹೆಚ್ಚಿದಂತೆ ಜಾಗತಿಕವಾಗಿಯೂ ಮನುಷ್ಯರ ಜೀವನಮಟ್ಟವೂ ಕುಸಿಯುತ್ತಿದೆ. crowd_india_trainಹೆಚ್ಚಿನ ಜನಸಂಖ್ಯೆಯಿಂದಾಗಿ ಆಯಾ ದೇಶಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದೆ ಬೀಳುತ್ತಿವೆ. ಜಾಗತಿಕ ಸಮಸ್ಯೆಗಳು ಆಂತರಿಕವಾಗಿ ಜನಸಂಖ್ಯೆಯ ಹೆಚ್ಚಳದೊಂದಿಗೆ ತಳಕುಹಾಕಿಕೊಂಡಿವೆ. ಜನವಸತಿ ಪ್ರದೇಶ ಹೆಚ್ಚುತ್ತಿರುವುದರಿಂದ ಕಾಡು ಮರಗಿಡಗಳ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೃಷಿ ಆಧಾರಿತ ಆರ್ಥಿಕತೆ ಕೈಗಾರಿಕಾ ವಲಯ ಆಧಾರಿತ ಆರ್ಥಿಕತೆಯಾಗಿ ಬದಲಾಗಿದೆ. ಇದರಿಂದಾಗಿ ಜಾಗತಿಕ ತಾಪಮಾನ ಹೆಚ್ಚಳಕ್ಕೂ, ಜನಸಂಖ್ಯಾ ಹೆಚ್ಚಳಕ್ಕೂ ಸಂಬಂಧವಿದೆ. ಹೀಗೆ ಪ್ರತಿಯೊಂದು ಜಾಗತಿಕ ಸಮಸ್ಯೆಗಳ ಹಿಂದೆಯೂ ಹೆಚ್ಚುತ್ತಿರುವ ಜನಸಂಖ್ಯೆಯ ನೆರಳು ಕಾಣುತ್ತಿದೆ.

ಭಾರತದ ಸಂದರ್ಭದಲ್ಲಿ ಜನಸಂಖ್ಯೆಯ ವಿವರಗಳನ್ನು ನೋಡಿದರೆ, ಕೆಲವು ಸಂಗತಿಗಳು ಜಾಗತಿಕ ವಿದ್ಯಮಾನಗಳ ಜತೆ ನಂಟು ಪಡೆದಿವೆ. ಅಂತೆಯೇ ಭಾರತಕ್ಕೆ ವಿಶಿಷ್ಟವಾದ ಅಂಶಗಳೂ ಇವೆ. 2011 ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆ 121 ಕೋಟಿ ಅಥವಾ ವಿಶ್ವದ ಜನಸಂಖ್ಯೆಯ ಶೇ. 17 ರಷ್ಟಿದೆ. ದೇಶದ ಜನಸಂಖ್ಯೆ 2001 ಕ್ಕೆ ಹೋಲಿಸಿದರೆ ಶೇ. 17.6 ರಷ್ಟು ಅಧಿಕಗೊಂಡಿದೆಯಾದರೂ ಬೆಳವಣಿಗೆಯ ಸರಾಸರಿ ಇಳಿಮುಖವಾಗಿದೆ. ದೇಶದ ಒಟ್ಟು 121 ಕೋಟಿ ಜನಸಂಖ್ಯೆಯಲ್ಲಿ 62.37 ಕೋಟಿ ಪುರುಷರು ಮತ್ತು 58.65 ಕೋಟಿ ಮಹಿಳೆಯರಿದ್ದಾರೆ.

ದೇಶದ ಹಾಲಿ ಜನಸಂಖ್ಯೆ ಅಮೆರಿಕ, ಇಂಡೋನೇಷ್ಯ, ಬ್ರೆಝಿಲ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿದೆ. 19,98,12,341 ಜನಸಂಖ್ಯೆ ಇರುವ ಉತ್ತರಪ್ರದೇಶ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಲಕ್ಷದ್ವೀಪದಲ್ಲಿ ಕೇವಲ 64,473 ಜನರಿದ್ದು ಕಡಿಮೆ ಜನಸಂಖ್ಯೆ ಹೊಂದಿದೆ. ಭಾರತದ ಜನಸಂಖ್ಯೆ ಇದೇ ರೀತಿಯಲ್ಲಿ ಹೆಚ್ಚುತ್ತಿದ್ದರೆ 2030 ರ ಹೊತ್ತಿಗೆ ಚೀನಾವನ್ನೂ ಹಿಂದಿಕ್ಕಿ ಪ್ರಪಂಚದ ಮೊದಲನೆಯ ದೇಶವಾಗುತ್ತದೆ. 2011 ರಲ್ಲಿ ಪ್ರತಿ 1000 ಗಂಡುಮಕ್ಕಳಿಗೆ 914 ಹೆಣ್ಣುಮಕ್ಕಳ ಅನುಪಾತವಿದ್ದು, ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಅನುಪಾತ ಪ್ರಮಾಣ ಇಳಿಮುಖವಾಗಿದೆ. ಈಶಾನ್ಯ ನವದೆಹಲಿ ಜಿಲ್ಲೆಯು ಅತಿ ಹೆಚ್ಚು ಜನಸಾಂದ್ರತೆ (ಪ್ರತಿ ಚದರ ಕಿ.ಮೀ.ಗೆ 37,346) ಹೊಂದಿದ್ದರೆ, ಅರುಣಾಚಲಪ್ರದೇಶದ ದಿಲ್‌ಬಂಗ್ ಕಣಿವೆ (ಪ್ರತಿ ಚದರ ಕಿ.ಮೀ. ಒಬ್ಬರು) ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ.

ಭಾರತದ ಜನಸಂಖ್ಯೆ ಸುಮಾರು 1.24 ಬಿಲಿಯನ್ (1,244,940,000, June 4, 2014, Population Clock ಅಂದಾಜು). population-explosionಪ್ರಪಂಚದ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಈ ದೇಶದಲ್ಲಿದ್ದಾರೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ 17.4 ರಷ್ಟು ಪಾಲು ಭಾರತದ್ದು. ಸುಮಾರು ಎರಡು ಸಾವಿರ ಬುಡಕಟ್ಟುಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ ಧರ್ಮಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ ಭಾಷಾ ಕುಟುಂಬಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು ಇಂಡೋ-ಯುರೋಪಿಯನ್ ಭಾಷೆಗಳು, ದ್ರಾವಿಡ ಭಾಷೆಗಳು, ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು ಮತ್ತು ಟಿಬೆಟೊ-ಬರ್ಮನ್ ಭಾಷೆಗಳು. ಆಫ್ರಿಕಾ ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು ವಂಶವಾಹಿಗಳ ವೈವಿಧ್ಯತೆ ಇದೆ.

ಭಾರತದ ಈಗಿನ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನರು 25 ವರ್ಷದ ಕೆಳಗಿನ ಯುವ ಸಮುದಾಯ. ಈ ವಿಷಯ ಪ್ರಪಂಚದ ಎಲ್ಲಾ ವಾಣಿಜ್ಯೋದ್ಯಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ. ಕಾರಣ ಈ ಬಗೆಯ ಯಂಗ್ ಇಂಡಿಯಾ ಆಧುನಿಕ ಮಾರುಕಟ್ಟೆಗೆ ಜೋತುಬಿದ್ದಿದೆ. ಅಂತೆಯೇ ಕಡಿಮೆ ವೇತನಕ್ಕೆ ಹೆಚ್ಚು ಶ್ರಮವಹಿಸಿ ದುಡಿದು ಬಂಡವಾಳಶಾಹಿಗಳಿಗೆ ವರವಾಗಿದ್ದಾರೆ. ಹಾಗಾಗಿಯೇ ಜಾಗತಿಕ ಬಂಡವಾಳಶಾಹಿಗಳು ಭಾರತದಲ್ಲಿ ಉದ್ದಿಮೆ ಸ್ಥಾಪಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸರಕಾರವು ಇವರುಗಳಿಗೆ ರತ್ನಗಂಬಳಿ ಹಾಸಿ ಆಹ್ವಾನಿಸುತ್ತಿದೆ. ಈ ಬಗೆಯ ಯುವ ಸಮುದಾಯವನ್ನು ಭಾರತ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡರೂ ಭಾರತ ಜಾಗತಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ತಲೆಎತ್ತಿ ನಿಲ್ಲಬಹುದಾಗಿದೆ. ಇನ್ನೊಂದು ಸಂಗತಿಯೆಂದರೆ ಜಾಗತಿಕವಾಗಿ ನಮ್ಮ ಕಾರ್ಮಿಕ ವರ್ಗದ ಸರಾಸರಿ ಸಂಖ್ಯೆಯೂ ಜಾಸ್ತಿಯಿದ್ದು, ಇವರು ಏಶಿಯಾದಲ್ಲೇ ಅತ್ಯಂತ ಕಡಿಮೆ ವೇತನ ಪಡೆದುಕೊಳ್ಳುವವರಾಗಿದ್ದಾರೆ.

ಕರ್ನಾಟಕದ ಸಂದರ್ಭದಲ್ಲಿ ಜನಸಂಖ್ಯೆಯ ಚಿತ್ರಣವೂ ಭಿನ್ನವಾಗಿದೆ. ಕನ್ನಡದ ಹಳೆಯ ಸಿನೆಮಾ ಹಾಡುಗಳಲ್ಲಿ ಮುಕ್ಕೋಟಿ ಕನ್ನಡಿಗರು, ಪಂಚಕೋಟಿ ಕನ್ನಡಿಗರು, ಚತುಷ್ಕೋಟಿ ಕನ್ನಡಿಗರು ಎಂಬ ಅಭಿಮಾನದ ನುಡಿಗಟ್ಟುಗಳಿದ್ದವು. ಇದನ್ನು ಕನ್ನಡದ ಶಕ್ತಿ ಎಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಈ ಹೆಚ್ಚಳ ಕರ್ನಾಟಕವನ್ನು ಎತ್ತ ಒಯ್ಯುತ್ತಿದೆ ಎನ್ನುವ ಬಗ್ಗೆ ಈ ಹಾಡುಗಳಾಗಲಿ, ಸಿನೆಮಾದ ಕಥನಗಳಾಗಲಿ ಮುಂಚಲಿಸುವುದಿಲ್ಲ. ಇದನ್ನು ಕೆಲಮಟ್ಟಿಗೆ ಅಕಾಡೆಮಿಕ್ ಅಧ್ಯಯನಗಳಲ್ಲಿಯೂ, ಮಾಧ್ಯಮಗಳ ವರದಿಗಳಲ್ಲಿಯೂ ಕಾಣಬಹುದಾಗಿದೆ.

ಕರ್ನಾಟಕದ ಜನಸಂಖ್ಯೆಯ ಸ್ಥೂಲ ನೋಟವನ್ನು ನೋಡೋಣ. 2011 ರ ಜನಗಣತಿಯ ಪ್ರಕಾರ ಕರ್ನಾಟಕದ ಈಗಿನ ಒಟ್ಟು ಜನಸಂಖ್ಯೆ 6,10,95,297. ಅಂತೆಯೇ ದೇಶದ ಜನಸಂಖ್ಯೆಯಲ್ಲಿ 9ನೇ ಸ್ಥಾನ (ಶೇ.5.05) ಪಡೆದಿದೆ. ರಾಜ್ಯದಲ್ಲಿ 3,09,55,657 ಪುರುಷರು ಹಾಗೂ 3,01,28,640 ಮಹಿಳೆಯರಿದ್ದಾರೆ. ಜನಸಂಖ್ಯೆ ವೃದ್ಧಿ ದರ ಶೇ. 15.60 (2001 ರಲ್ಲಿ ಶೇ. 17.51) ಇದ್ದು, ಶೇ. 1.90 ರಷ್ಟು ಕಡಿಮೆಯಾಗಿದ್ದು, ಜನಸಂಖ್ಯೆ ನಿಯಂತ್ರಣದ ಪರಿಣಾಮವನ್ನು ಗಮನಿಸಬಹುದು. 2011 ರ ಜನ ಗಣತಿಯಂತೆ ರಾಜ್ಯದ ಸಾಕ್ಷರತೆ, ಲಿಂಗ ಅನುಪಾತ, ನಗರ ಪ್ರದೇಶ, ಪರಿಶಿಷ್ಟರ ವಿಭಾಗದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ರಾಜ್ಯ ಜನಗಣತಿ ನಿರ್ದೇಶಕ ಟಿ.ಕೆ.ಅನಿಲ್‌ಕುಮಾರ್ ಹೇಳುತ್ತಾರೆ.

2001 ರಲ್ಲಿ ಶೇ. 66.64 ಸಾಕ್ಷರತೆ ಪ್ರಮಾಣ ಇದ್ದದ್ದು, 2011 ರಲ್ಲಿ ಶೇ. 75.36 ಕ್ಕೆ ಹೆಚ್ಚಿದೆ. ಪುರುಷರಲ್ಲಿ ಶೇ. 82.47, ಮಹಿಳೆಯರಲ್ಲಿ ಶೇ. 68.08 ರಷ್ಟಿದ್ದು, ಹಿಂದಿನ ಗಣತಿಗಿಂತ ಸರಾಸರಿ ಶೇ. 8.72 ರಷ್ಟು ಹೆಚ್ಚಿದೆ. ಜತೆಗೆ, ದೇಶದ ಸರಾಸರಿ (ಶೇ. 72.99) ಯನ್ನು ಮೀರಿಸಿದೆ. ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಕ್ಷರತೆ ಶೇ. 80 ರ ಗಡಿ ದಾಟಿದೆ. ಯಾದಗಿರಿ, ರಾಯಚೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅತಿ ಕಡಿಮೆ ಸಾಕ್ಷರರಿದ್ದಾರೆ.

ರಾಜ್ಯದ ಪ್ರತಿ ಕಿ.ಮೀ ವಿಸ್ತೀರ್ಣದಲ್ಲಿ 319 ಮಂದಿ (2001 ರಲ್ಲಿ 276) ವಾಸವಿದ್ದಾರೆ. ಲಿಂಗ ಅನುಪಾತ ಪ್ರತಿ ಸಾವಿರ ಪುರುಷರಿಗೆ ಸರಾಸರಿ 973 ಮಹಿಳೆಯರಿದ್ದಾರೆ (2001ರಲ್ಲಿ 965). ನಗರ, ಗ್ರಾಮೀಣದಲ್ಲಿ ಕ್ರಮವಾಗಿ 963 ಹಾಗೂ 979 ಇದೆ. ಉಡುಪಿ (1,094), ದಕ್ಷಿಣ ಕನ್ನಡ (1,020), ಕೊಡಗು (1,019), ಹಾಸ (1,010), ಚಿಕ್ಕಮಗಳೂರು (1,008) ಮಹಿಳೆಯರ ಸಂಖ್ಯೆ ಹೆಚ್ಚು ಇದೆ. ಬೆಂಗಳೂರು ನಗರ (916), ಬೆಂಗಳೂರು ಗ್ರಾಮಾಂತರ (946) ಹಾಗೂ ಹಾವೇರಿ (950) ಅತಿ ಕಡಿಮೆ ಸಂಖ್ಯೆಯ ಮಹಿಳೆಯರಿದ್ದಾರೆ. 0-6 ವರ್ಷದೊಳಗಿನ ಮಕ್ಕಳ ಸಂಖ್ಯೆ 71,61,033. ಹಿಂದಿನ ಗಣತಿಗೆ ಹೋಲಿಸಿದರೆ ಶೇ.1.87ರಷ್ಟು ಇಳಿಕೆ ಕಂಡು ಬಂದಿದೆ. ಯಾದಗಿರಿ, ರಾಯಚೂರು, ವಿಜಾಪುರ ಜಿಲ್ಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ.

ಪರಿಶಿಷ್ಟ ಜಾತಿಯವರು 1,04,74,992ರಷ್ಟಿದ್ದಾರೆ. ಏರಿಕೆ ಶೇ. 22.32. ಕೋಲಾರ, ಚಾಮರಾಜನಗರ, Karnataka mapಗುಲ್ಬರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಪಂಗಡದವರು 42,48,987 ಮಂದಿ ಇದ್ದು, ಶೇ. 22.66 ವೃದ್ಧಿಯಾಗಿದೆ. ಈ ವರ್ಗದ ಜನರು ರಾಯಚೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದು, ಮಂಡ್ಯ, ವಿಜಾಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಕಡಿಮೆ ಇದ್ದಾರೆ.

ಹಾಗೆ ನೋಡಿದರೆ ಕರ್ನಾಟಕದ ನಗರ ಪಾಲಿಕೆಗಳಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇದು ಗ್ರಾಮೀಣ ವಲಸೆಯಿಂದ ನಗರ ವಲಸೆಗೆ ಬದಲಾಗುತ್ತಿರುವುದರ ಚಿತ್ರಣವಿದು. ಬಿಬಿಎಂಪಿ ವ್ಯಾಪ್ತಿಯಲ್ಲಿ 84,43,675, ಹುಬ್ಬಳ್ಳಿ-ಧಾರವಾಡ (9.43 ಲಕ್ಷ), ಮೈಸೂರು (8.93 ಲಕ್ಷ), ಗುಲ್ಬರ್ಗ (5.33 ಲಕ್ಷ), ಮಂಗಳೂರು (4.88 ಲಕ್ಷ), ಬೆಳಗಾವಿ (4.88 ಲಕ್ಷ), ದಾವಣಗೆರೆ (4.34 ಲಕ್ಷ), ಬಳ್ಳಾರಿಯಲ್ಲಿ ಜನಸಂಖ್ಯೆ 4.10 ಲಕ್ಷ ಇದೆ. 0-6 ವರ್ಷದೊಳಗಿನ ಮಕ್ಕಳು ಹಾಗೂ ಪರಿಶಿಷ್ಟರ ವಿಭಾಗದಲ್ಲಿ ಬಳ್ಳಾರಿ ಪಾಲಿಕೆ ಮುಂದಿದೆ. ಸಾಕ್ಷರತೆ ವಿಭಾಗದಲ್ಲಿ ಮಂಗಳೂರು ಪಾಲಿಕೆ ಮೊದಲು. ಬಿಬಿಎಂಪಿ ಮೂರನೇ ಸ್ಥಾನದಲ್ಲಿದೆ.

2011ರಲ್ಲಿ ನಡೆದ ಜನಗಣತಿಯ ಅಂತಿಮ ಅಂಕಿ-ಸಂಖ್ಯೆಗಳು ಹಲವಾರು ಸಂಗತಿಗಳನ್ನು ಬೆಳಕಿಗೆ ತಂದಿವೆ. ಕಳೆದ ಒಂದು ದಶಕದ ಅವಧಿಯಲ್ಲಿ ನಗರೀಕರಣದ ಪ್ರಕ್ರಿಯೆ ತೀವ್ರಗೊಂಡಿದೆ. ಜನಸಂಖ್ಯೆಯ ಸಾಂದ್ರತೆ ಮತ್ತಿತರ ವಿಷಯದಲ್ಲಿ ಬೆಂಗಳೂರು ಉಳಿದ ಜಿಲ್ಲೆಗಳಿಗಿಂತ ಮುಂದಿದೆ. ಈ ಮಹಾನಗರದ ಜನಸಂಖ್ಯೆ ಒಂದು ಕೋಟಿ ಸಮೀಪಿಸುತ್ತಿದೆ. ಈ ಜನಗಣತಿಯ ಅತ್ಯಂತ ಆತಂಕಕಾರಿ ಅಂಶವೆಂದರೆ ಮಹಿಳೆಯರ ಪ್ರಮಾಣದಲ್ಲಿ ಕೊಂಚ ಹೆಚ್ಚಳವಾಗಿದ್ದರೂ ಲಿಂಗಾನುಪಾತ ಒಂದು ಸಾವಿರ ಪುರುಷರಿಗೆ 973 ಮಹಿಳೆಯರಿದ್ದಾರೆ.

ಈ ಅನುಪಾತದ ಅಂತರ ತಗ್ಗಿಸಲು ಹಾಕಿಕೊಂಡ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳು ಹೆಚ್ಚಿನ ಪ್ರಯೋಜನವಾಗಿಲ್ಲ. ಒಂದೆಡೆ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ, ಅದೇ ಹೊತ್ತಿಗೆ ಹೆಣ್ಣು ಭ್ರೂಣ ಹತ್ಯೆ ಪ್ರಮಾಣವೂ ಹೆಚ್ಚಿದೆ. ಇದೊಂದು ಆತಂಕಕಾರಿ ಸಂಗತಿ. ಲಿಂಗಾನುಪಾತದಲ್ಲಿ ದಕ್ಷಿಣಕನ್ನಡ ಜಿಲ್ಲೆ ಮುಂದಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತೀ 1000 ಪುರುಷರಿಗೆ 1094 ಮಹಿಳೆಯರಿದ್ದಾರೆ. ಲಿಂಗಾನುಪಾತದಲ್ಲಿ ಬೆಂಗಳೂರು ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಈ ಪ್ರಮಾಣ ಸಾವಿರ ಪುರುಷರಿಗೆ 914 ಇದೆ. 2001ರಲ್ಲಿ ಈ ಪ್ರಮಾಣ 908 ಆಗಿತ್ತು. ಈ ಬಗ್ಗೆ ಸರಕಾರ ಎಚ್ಚರಗೊಳ್ಳಬೇಕಿದೆ.

ಈ ಜನಗಣತಿಯ ಇನ್ನೊಂದು ಕಳವಳಕಾರಿ ಸಂಗತಿಯೆಂದರೆ, ಗ್ರಾಮೀಣ ಪ್ರದೇಶದಲ್ಲಿ ಕೃಷಿಯನ್ನು ಅವಲಂಬಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹಳ್ಳಿಗಾಡಿನಿಂದ ನಗರ ಪ್ರದೇಶಕ್ಕೆ ವಲಸೆ ಹೆಚ್ಚಾಗುತ್ತಿದೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದ ನಕಾರಾತ್ಮಕ ಬೆಳವಣಿಗೆ. ನಮ್ಮ ದೇಶದ ಆರ್ಥಿಕತೆಗೆ ಕೃಷಿಯೆ ಬೆನ್ನೆಲುಬು. ಅಂತಹ ಕೃಷಿವಲಯವೇ ಸೊರಗುತ್ತಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ದುಡಿಯುವ ಜನರಲ್ಲಿ ಶೇ.23.6 ರಷ್ಟು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2001ರ ಜನಗಣತಿಯ ಅಂಕಿಅಂಶಗಳಿಗೆ ಹೋಲಿಸಿದರೆ ಈ ಸಂಖ್ಯೆ droughtಶೇ.5.6ಕ್ಕೆ ಕುಸಿದಿದೆ. ಈ ರೀತಿಯ ಕುಸಿತದ ಹಿನ್ನೆಲೆ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ. ಕೃಷಿವಲಯ ಈಗ ಲಾಭದಾಯಕವಾಗಿ ಉಳಿದಿಲ್ಲ. ಕೃಷಿಯಲ್ಲಿ ತೊಡಗಿಸುವ ಬಂಡವಾಳಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಇದರ ಫಲವಾಗಿ ರೈತ ಸಾಲಗಾರನಾಗುತ್ತಿದ್ದಾನೆ. ರೈತರ ಆತ್ಮಹತ್ಯೆ ಪ್ರಕರಣಗಳು ಈ ಧಾರುಣ ಸಂಗತಿಗೆ ಕನ್ನಡಿ ಹಿಡಿಯುತ್ತಿವೆ.

ವಿಶ್ವ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಂತರ ವರ್ಷದಿಂದ ವರ್ಷಕ್ಕೆ ಕೃಷಿ ಕ್ಷೇತ್ರ ಕ್ಷೀಣಿಸುತ್ತಲೇ ಇದೆ. ಕೃಷಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಜಾಗತೀಕರಣದ ಆರ್ಥಿಕ ನೀತಿಗಳಿಗೆ ವಿಮುಖವಾಗಬೇಕಿದೆ. ಸದ್ಯಕ್ಕಿದು ಸಾಧ್ಯವಿಲ್ಲದ ಸಂಗತಿಯಂತೆ ಕಾಣುತ್ತಿದೆ. ಭಾರತವನ್ನು ಮಾರುಕಟ್ಟೆಯನ್ನಾಗಿಕೊಂಡ ಬಹುರಾಷ್ಟ್ರೀಯ ಕಂಪೆನಿಗಳನ್ನು ತಡೆಯುವುದು ನಮ್ಮನ್ನಾಳುವ ಸರಕಾರಗಳಿಂದ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಇಂದು ನಿರುದ್ಯೋಗಿಗಳ ಸಂಖ್ಯೆ 3.32 ಕೋಟಿಯಿದೆ. ಇದು ಜನಸಂಖ್ಯೆ ಹೆಚ್ಚಳದಿಂದಾಗಿ ಕರ್ನಾಟಕ ಎದುರಿಸುತ್ತಿರುವ ತೀವ್ರತೆರನಾದ ಬಿಕ್ಕಟ್ಟುಗಳಲ್ಲಿ ಒಂದಾಗಿದೆ.

ಹೀಗೆ ಜಾಗತಿಕ, ಭಾರತ, ಕರ್ನಾಟಕದ ಜನಸಂಖ್ಯೆಯ ಅಂಕಿಅಂಶ ಮತ್ತು ಅದಕ್ಕೆ ಪೂರಕವಾದ ಕೆಲವು ಸೂಕ್ಷ್ಮಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಜನಸಂಖ್ಯೆಯ ಹೆಚ್ಚಳದಿಂದಾಗಿ ಜಾಗತಿಕವಾಗಿಯೂ, ಒಂದು ಪುಟ್ಟ ರಾಜ್ಯದ ನೆಲೆಯಲ್ಲಿಯೂ ಕೆಲವು ಸಮಾನಾಂಶಗಳು, ಸಮಾನ ಸಮಸ್ಯೆಗಳು ಇವೆ. ಅಂತೆಯೇ ಒಂದು ಹಳ್ಳಿಯ ಹಂತದಿಂದಲೂ ಜನಸಂಖ್ಯೆಯ ನಿಯಂತ್ರಣವನ್ನು ಮಾಡಬೇಕಾದ ಅಗತ್ಯವಿದೆ. ಜನಸಂಖ್ಯೆಯ rural-karnataka-2ಹೆಚ್ಚಳದಿಂದಾಗುವ ಅಪಾಯಗಳನ್ನು ಹೊಸ ತಲೆಮಾರಿನ ಪೀಳಿಗೆಯಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವ ಯೋಜನೆಗಳು ರೂಪುಗೊಳ್ಳಬೇಕು.

ಒಂದು ಕುಟುಂಬಕ್ಕೆ ಒಂದೇ ಮಗು ಎನ್ನುವ ಚೀನಾ ದೇಶದ ಕಟ್ಟುನಿಟ್ಟಿನ ಕ್ರಮ ಜಾಗತಿಕವಾಗಿಯೂ ವಿಸ್ತರಿಸಬೇಕು ಎನ್ನುವ ಚಿಂತನೆ ವಿಶ್ವಸಂಸ್ಥೆಯ ಮುಂದಿದೆ. ಜನಸಂಖ್ಯೆ ಏರಿದಂತೆ ಜಾಗತಿಕ ಅಸಮಾನತೆಯೂ ಹೆಚ್ಚುತ್ತದೆ. ಜೈವಿಕ ಅಸಮಾನತೆಯಂತೆ, ಮನುಷ್ಯನಿರ್ಮಿತ ಅಸಮಾನತೆಗಳ ಕಂದರವೂ ದೊಡ್ಡದಾಗುತ್ತಿದೆ. ಹಾಗಾಗಿ ಬಡವರು, ನಿರ್ಗತಿಕರು, ಅಸಹಾಯಕರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ಜನಸಂಖ್ಯೆ ಹೆಚ್ಚಳದಿಂದಾಗಿ ಬಹುಪಾಲು ಆರ್ಥಿಕವಾಗಿ ಬಲಿಷ್ಠರು, ತಾಂತ್ರಿಕ ಕೌಶಲವುಳ್ಳವರೂ, ಮೇಲುವರ್ಗ ಮತ್ತು ಮೇಲುಜಾತಿಗಳವರೂ ಅವಕಾಶಗಳನ್ನು ಪಡೆಯುತ್ತಾ ಮುನ್ನುಗ್ಗುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಆರ್ಥಿಕವಾಗಿ ದುರ್ಭಲರೂ, ಗ್ರಾಮೀಣರೂ, ಅನಕ್ಷರಸ್ತರೂ, ತಾಂತ್ರಿಕ ಕೌಶಲವಿಲ್ಲದವರೂ, ಮಹಿಳೆಯರೂ, ಕೆಳಜಾತಿಗಳೂ ಹಿಂದುಳಿಯುತ್ತಿದ್ದಾರೆ. ಈ ಬಗೆಯ ಮನುಷ್ಯನಿರ್ಮಿತ ಅಸಮಾನತೆಯನ್ನು ತೊಡೆಯಲೂ ಸಹ ಜನಸಂಖ್ಯಾ ನಿಯಂತ್ರಣ ಒಂದು ಅಸ್ತ್ರವಾಗುವುದರಲ್ಲಿ ಎರಡು ಮಾತಿಲ್ಲ.

ಚುನಾವಣಾ ಬಹಿಷ್ಕಾರದ ಭಾರತ


– ಅರುಣ್ ಜೋಳದಕೂಡ್ಲಿಗಿ


 

ಚುನಾವಣೆ ಘೋಷಣೆಯಾಗುತ್ತಲೇ ಅದರ ಜತೆ ಚುನಾವಣಾ ಬಹಿಷ್ಕಾರದ ಸುದ್ದಿಗಳೂ ಬೆನ್ನತ್ತುತ್ತವೆ. ಇದು ಯಾವುದೊಂದು ಪಕ್ಷದ 1ಪರವಿರೋಧವೂ ಆಗಿರದೆ ಇಡೀ ವ್ಯವಸ್ಥೆಯ ಬಗೆಗಿನ ಸಿಟ್ಟಿನ ಭಾಗವಾಗಿರುತ್ತವೆ. ಈತನಕ ಈಡೇರದ ಬೇಡಿಕೆಯೊಂದನ್ನು ಮುಂದಿಟ್ಟು, ತತಕ್ಷಣಕ್ಕೆ ಈಡೇರಿಸುವ ಒತ್ತಡ ತಂದು ಚುನಾವಣೆಯನ್ನು ಬಹಿಷ್ಕರಿಸುವುದಿದೆ. ಈ ಸಲದ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ದೇಶದಾದ್ಯಂತ ಅಲ್ಲಲ್ಲಿ ಮತ ಬಹಿಷ್ಕಾರದ ವರದಿಗಳಾಗಿವೆ. ಈ ಬಹಿಷ್ಕಾರಕ್ಕಿರುವ ಕಾರಣಗಳನ್ನು ನೋಡಿದರೆ ಇಡೀ ದೇಶ ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟುಗಳನ್ನು ಇವು ಬೆರಳು ಮಾಡಿ ತೋರುತ್ತವೆ. ಜನಸಾಮಾನ್ಯರು ಕನಿಷ್ಠ ಸೌಲಭ್ಯಗಳಿಗಾಗಿ ಪರದಾಡುತ್ತಿರುವ ಚಿತ್ರಗಳು ಸಾಲುಗಟ್ಟಿ ನಿಲ್ಲುತ್ತವೆ. ಈ ಚಿತ್ರಗಳ ಮಾತಿಗೆ ಕಿವಿಯಾದರೆ ಚುನಾವಣೆ ಬಹಿಷ್ಕಾರದ ಭಾರತದ ಬಹುರೂಪಗಳು ತೆರೆದುಕೊಳ್ಳುತ್ತವೆ.

ಸಾಮಾನ್ಯವಾಗಿ ಪ್ರಜಾಪ್ರಭುತ್ವ ಸರಕಾರದ ಚುನಾವಣಾ ಪದ್ದತಿಯನ್ನುPoll-Boycot ತಾತ್ವಿಕವಾಗಿ ವಿರೋಧಿಸುತ್ತಾ ಬಂದಿರುವ ನಕ್ಸಲರು ಪ್ರತಿ ಚುನಾವಣೆಗೂ ಮುನ್ನ ಮತ ಬಹಿಷ್ಕಾರದ ಕರೆ ಕೊಡುವುದಿದೆ. ನಕ್ಸಲ್ ನೆಲೆಯ ಕೆಲವು ಪ್ರದೇಶಗಳಲ್ಲಿಯೂ ಇದರ ವರದಿಯಾಗಿದೆ. ಮಾರ್ಚ್ 10 ರಂದು ಛತ್ತೀಸ್ ಘಡ್ ರಾಜ್ಯದ ಸೆಕ್ಯುರಿಟಿ ಫೋರ್ಸ್ ನ 16 ಜನರು ನಕ್ಸಲೈಟರ ಗುಂಡಿಗೆ ಬಲಿಯಾದರು. ಈ ಮೂಲಕ ಸಾಂಕೇತಿಕವಾಗಿ ನಕ್ಸಲ್ ನೆಲೆಯ ಎಂಟು ರಾಜ್ಯಗಳಲ್ಲಿ ಚುನಾವಣೆ ಬಹಿಷ್ಕರಿಸುವ ಸಂದೇಶವನ್ನು ಜನತೆಗೆ ರವಾನೆ ಮಾಡಿದಂತಾಗಿದೆ.

ಮಣಿಪುರದ ಮಾವೋಯಿಸ್ಟ್ ಕಮುನಿಷ್ಟ್ ಪಾರ್ಟಿ ಚುನಾವಣೆಯನ್ನು ಬಹಿಷ್ಕರಿಸುವ ತಿರ್ಮಾನವನ್ನು ಪ್ರಕಟಿಸಿದೆ. ಸದ್ಯಕ್ಕಿರುವ ಚುನಾವಣಾ ಮಾದರಿ ಜನತೆಯಲ್ಲಿ ಸಶಕ್ತ ಬದಲಾವಣೆ ತರುವಂತಿಲ್ಲ. ಭಾರತ ಕಂಡ ನೂರಾರು ಚುನಾವಣೆಗಳು ಆರಿಸಿದ ಜನಪ್ರತಿನಿಧಿಗಳ ಆಡಳಿತ ವೈಖರಿ ಬಡವ ಶ್ರೀಮಂತರ ಅಂತರವನ್ನು ಹೆಚ್ಚಿಸಿದೆಯೇ ವಿನಃ ಕಡಿಮೆ ಮಾಡಿಲ್ಲ ಎಂದು ಅದು ಬಹಿಷ್ಕಾರವನ್ನು ಸಮರ್ಥಿಸಿಕೊಂಡಿದೆ.

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯು, ನಿರೀಕ್ಷೆಯಂತೆ ಸ್ವತಂತ್ರ್ಯ ರಾಜ್ಯದ ಕನಸಿನ ಪ್ರದೇಶಗಳಲ್ಲಿ ಮತ ಬಹಿಷ್ಕಾರಗಳಿಗೆ ಕಾರಣವಾಗಿದೆ. ಮಹರಾಷ್ಟ್ರದ ಗದ್ಚಿರೋಲಿ ಜಿಲ್ಲೆಯ ಎಟಪಲ್ಲಿ ತಾಲೂಕಿನ 47 ಹಳ್ಳಿಗಳು ವಿದರ್ಭ ಪ್ರತ್ಯೇಕ ರಾಜ್ಯ ರಚನೆಯ ಕಾರಣಕ್ಕೆ ಮತಬಹಿಷ್ಕಾರ ಮಾಡಿವೆ. ರಾಷ್ಟ್ರೀಯ ಜನಹಿತವಾದಿ ಯುವ ಸಮಿತಿಯು ಇದರ Poll-Boycot-Newsನಾಯಕತ್ವ ವಹಿಸಿದೆ. ’ಪ್ರತ್ಯೇಕ ರಾಜ್ಯ ರಚನೆಯ ಬೇಡಿಕೆಯೊಂದಿಗೆ, ಇಲ್ಲಿನ ಆಡಳಿತ ನಮ್ಮ ಭಾಗಕ್ಕೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸೋತಿದೆ, ಎಟಪಲ್ಲಿ ಭಾಗದ ಬುಡಕಟ್ಟುಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಲಾಗಿಲ್ಲ” ಎಂದು ಆರೋಪಿಸಿ, ಪ್ರತ್ಯೇಕ ಅಹೇರಿ ಜಿಲ್ಲೆ ರಚನೆಗೂ ಒತ್ತಾಯಿಸಿದ್ದಾರೆ.

ಮುಂಬೈನ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪುನರ್ವಸತಿ ಯೋಜನೆಯನ್ನು ವಿರೋಧಿಸಿ ಆ ಭಾಗದ ಆರು ಹಳ್ಳಿಗಳು ಚುನಾವಣೆಯನ್ನು ಬಹಿಷ್ಕರಿಸಿವೆ. ಈ ಜನರು ರಾಜಕಾರಣಿಗಳಲ್ಲಿ ಯಾವುದೆ ಭರವಸೆಯನ್ನಿಟ್ಟಿಲ್ಲ ಎಂದಿದ್ದಾರೆ. ಪುನರ್ವಸತಿ ಯೋಜನೆ ಮತ್ತು ಪರಿಹಾರದ ಕ್ರಮ ಅವೈಜ್ಞಾನಿಕವಾಗಿದ್ದು, 2009 ರಿಂದಲೂ ಈ ಜನರು ವಸತಿರಹಿತ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಪುಣೆ ಭಾಗದ ಘೋರಪಡಿ ಮತ್ತು ಮುಂಧ್ವಾ ಭಾಗದ ಜನರು ಅತಿಯಾದ ಟ್ರಾಫಿಕ್ ಸಮಸ್ಯೆಗೆ ಬೇಸತ್ತು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಕಾರಣ ಎರಡು ರೈಲ್ವೆ ಬ್ರಿಡ್ಜ್ ನಿರ್ಮಾಣವಾದರೆ ಈ ಭಾಗದ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಆದರೆ ಐದಾರು ವರ್ಷಗಳಿಂದ ಈ ಸಮಸ್ಯೆಯಿದ್ದರೂ, ಬ್ರಿಡ್ಜ್ ಗಾಗಿ ಒತ್ತಾಯ ಪ್ರತಿಭಟನೆಗಳು ನಡೆದರೂ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತಿಲ್ಲ. ಹಾಗಾಗಿ ನಾವು ಮತಚಲಾಯಿಸದೆ ವಿರೋಧಿಸುತ್ತೇವೆ ಎಂದು ಈ ಸಮಸ್ಯೆಯ ಹೋರಾಟಗಾರರು ಹೇಳುತ್ತಾರೆ.

ಮೇಘಾಲಯ ರಾಜ್ಯದ ಮಾವೈತ್ ಭಾಗದ ನೂರು ಹಳ್ಳಿಗಳು ಚುನಾವಣ ಬಹಿಷ್ಕರವನ್ನು ಘೋಷಿಸಿವೆ. “1965 ರಲ್ಲಿ ನಿರ್ಮಿಸಿದ ರಸ್ತೆಯನ್ನು ಈತನಕವೂ ಮರು ನಿರ್ಮಾಣ ಮಾಡಿಲ್ಲ. ಹಾಗಾಗಿ 50 ವರ್ಷಗಳಿಂದಲೂ ಹೊಸ ರಸ್ತೆಗಳನ್ನು ನಾವು ಕಂಡಿಲ್ಲ. ಹಳೆ ರಸ್ತೆಗಳ ರಿಪೇರಿಯನ್ನೂ ನೋಡಿಲ್ಲ.” ಎನ್ನುವುದು ಇಲ್ಲಿಯ ಜನರ ಅಳಲು. ಹಾಗಾಗಿ ಕನಿಷ್ಠ ಸೌಲಬ್ಯಗಳಿಗಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟಿರುವ ಗುತ್ತಿಗೆ ಆಧಾರದ ಶಿಕ್ಷಕರು (ಶಿಕ್ಷಾ ಮಿತ್ರಾಸ್) ಚುನಾವಣೆ ಬಹಿಷ್ಕರಿಸಿದ್ದಾರೆ. 3,500 ರಷ್ಟು ಕನಿಷ್ಠ ವೇತನ ಪಡೆಯುತ್ತಿರುವ ಈ ಶಿಕ್ಷಕರು ಉತ್ತರ್ಖಾಂಡ್ ರಾಜ್ಯದಲ್ಲಿರುವ 13,000 ರೂ ವೇತನ ಮಾದರಿಯನ್ನು ಜಾರಿಗೊಳಿಸುವಂತೆ ಕೋರಿದ್ದಾರೆ. ಕಳೆದ ನವಂಬರ್ ನಿಂದ ವೇತನವಿಲ್ಲದ ಈ ಶಿಕ್ಷಕರನ್ನು ಚುನಾವಣೆಯ ಕೆಲಸಕ್ಕೂ ನಿಯೋಜಿಸಲಾಗಿದೆ. “ಸರಕಾರಿ ಲೆಕ್ಕದಲ್ಲಿ ನೌಕರರೇ ಅಲ್ಲದ ನಮ್ಮನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸುವುದಾದರೂ ಯಾಕೆ?” ಎನ್ನುವುದು ಈ ಶಿಕ್ಷಕರ ಅಳಲು. ಅರುಣಾಚಲ ಪ್ರದೇಶದ ಸರ್ವ ಶಿಕ್ಷ ಅಭಿಯಾನದ ಶಿಕ್ಷಕರು ಕಳೆದ ಆರು ತಿಂಗಳಿಂದ ಸರಕಾರ ಸಂಬಳ ಕೊಡದಿರುವ ಕಾರಣ ಮುಂದುಮಾಡಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಅಂತೆಯೇ ಮತಗಟ್ಟೆಯ ಕೆಲಸಕ್ಕೆ ಹಾಜರಾಗದಿರುವ ಬಗ್ಗೆ ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಈ ಬಾರಿಯ ಮತ ಬಹಿಷ್ಕಾರದಲ್ಲಿ ಬುಡಕಟ್ಟು ಸಮುದಾಯಗಳು ಎಚ್ಚೆತ್ತಿರುವುದು ಗಮನಿಸಬೇಕಾದ ಸಂಗತಿ. ಅಸ್ಸಾಂನ ಗರೊ ಸಮುದಾಯಕ್ಕೆ ಪ್ರತ್ಯೇಕ ಅಕಾಡೆಮಿ ರಚಿಸುವುದಾಗಿ ಮಾತು ಕೊಟ್ಟ ಅಲ್ಲಿನ ಮುಖ್ಯಮಂತ್ರಿ ಭರವಸೆಯನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಗರೊ ಸಮುದಾಯ ಚುನಾವಣೆಯನ್ನು ವಿರೋಧಿಸಿದೆ. ಕಾಮರೂಪ ಮತ್ತು ಗೋಲ್ಪಾರ ಜಿಲ್ಲೆಯ 390 ಹಳ್ಳಿಗಳಲ್ಲಿ 3 ಲಕ್ಷದಷ್ಟಿರುವ ಈ ಸಮುದಾಯ ತಮ್ಮನ್ನು ಅಸ್ಸಾಂ ಸರಕಾರ ನಿರ್ಲಕ್ಷಿಸಿರುವ ಬಗ್ಗೆ ಕಿಡಿಕಾರಿದೆ. 

ಒಡಿಶಾ ರಾಜ್ಯದ ಕೊರಪುಟ್ ಜಿಲ್ಲೆಯ ಎರಡು ಲಕ್ಷದಷ್ಟು ಮತದಾರರಿರುವ ಐದು ಪ್ರಮುಖ ಬುಡಕಟ್ಟುಗಳು ಚುನಾವಣಾ ಬಹಿಷ್ಕಾರದ ನಿರ್ಧಾರ ಪ್ರಕಟಿಸಿವೆ. “ಈವರೆಗೂ ಬುಡಕಟ್ಟುಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಒಡಿಶಾ ಸರಕಾರವು ಬುಡಕಟ್ಟು ಸಮುದಾಯಗಳನ್ನು ಕಡೆಗಣಿಸಿದೆ. ಇದಕ್ಕೆ ಪ್ರತಿಯಾಗಿ ನಾವು ಮತ ಚಲಾವಣೆಯನ್ನು ಮಾಡುವುದಿದಿಲ್ಲ.” ಎಂದು ಕೊರಪುಟ್ ಜಿಲ್ಲಾ ವನವಾಸಿ ಮಹಾಸಂಘದ ಅಧ್ಯಕ್ಷ ಗೋಕುಲ್ ಚಂದ್ರ ಕೋಡ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುತ್ತಮುತ್ತಣ ನೆಲೆಸಿದ ಲಿಂಬೂ ಸಮುದಾಯ ಚುನಾವಣೆಯನ್ನು ವಿರೋಧಿಸಿದೆ. 1.6 ಲಕ್ಷದಷ್ಟಿರುವ ಲಿಂಬೂ ಸಮುದಾಯದ ಬೇಡಿಕೆಗಳಿಗೆ ಪಶ್ಚಿಮ ಬಂಗಾಳ ಸರಕಾರ ಸ್ಪಂದಿಸುತ್ತಿಲ್ಲ ಎನ್ನುವುದು ಇವರ ಸಿಟ್ಟಿಗೆ ಕಾರಣ. ಲಿಂಬೂ ಸಮುದಾಯದ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವಂತೆಯೂ, ತಮ್ಮ ಲಿಂಬೂಗಳ ಆಡುಭಾಷೆಯನ್ನೇ ನಮ್ಮ ಮಕ್ಕಳು ಕಲಿಯುವ ಪಠ್ಯದಲ್ಲಿ ಅಳವಡಿಸಬೇಕೆಂದು ಈ ಸಮುದಾಯ ಬೇಡಿಕೆ ಸಲ್ಲಿಸುತ್ತಲೇ ಇದೆ.

ಉತ್ತರ ಪ್ರದೇಶದ ಬರೇಲಿಯ ಗಣೇಶನಗರದ ಮೂರು ಸಾವಿರದಷ್ಟು ಮತದಾರರು ನಾಗರಿಕ ಸೌಲಭ್ಯಗಳ ದುಸ್ಥಿತಿಯ ಕಾರಣಕ್ಕೆ ಮತ ಬಹಿಷ್ಕರಿಸಿದ್ದಾರೆ. ‘ನೀವು ಮತ ಯಾಚಿಸಿದರೆ, ನಾವು ಹೆಬ್ಬೆರಳನ್ನು ಕೆಳಗೆ ಮಾಡಿ ನಿಮ್ಮ ಸೋಲನ್ನು ಸೂಚಿಸುತ್ತೇವೆ’ ‘ನೀವು ಎಂಪಿ ಆಗುವ ಮೊದಲು, ಬನ್ನಿ ನಮ್ಮ ನಿಕೃಷ್ಟ ಬದುಕನ್ನೊಮ್ಮೆ ನೋಡಿ’, ‘ಓ ಅಥಿತಿಯೇ, ನಮ್ಮ ಮನೆಗೆ ಬರದಿರು, ನಮ್ಮ ಪ್ರದೇಶದಲ್ಲಿ ನೀರು ಬತ್ತಿ ಹೋಗಿದೆ’ ಮುಂತಾದ ಪೋಸ್ಟರುಗಳನ್ನು ಅಂಟಿಸಿ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. “ಹತ್ತು ವರ್ಷಗಳಿಂದ ಚರಂಡಿಯ ಕಾಮಗಾರಿಯೇ ನಡೆದಿಲ್ಲ, ಇಡೀ ಏರಿಯಾ ಹಂದಿಗಳ ವಾಸಸ್ಥಾನವಾಗಿದೆ, ಪ್ರತಿ ಮನೆಯಲ್ಲಿಯೂ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಒಬ್ಬೊಬ್ಬ ರೋಗಿಗಳಿದ್ದಾರೆ. ಬಾಡಿಗೆದಾರರು ಮನೆಗಳನ್ನು ಖಾಲಿಮಾಡುತ್ತಿದ್ದಾರೆ. ಸ್ವಂತ ಮನೆಯವರಿಗೆ ಮನೆ ಮಾರುವುದೊಂದೇ ದಾರಿ.” ಎಂದು ಈ ಭಾಗದ ಸುನಿತಾ ಸಿಂಗ್ ಹೇಳುತ್ತಾರೆ.

ತಮಿಳುನಾಡಿನ ಪುಡುಕೊಟ್ಟಾಯ್ ಮುನಿಸಿಪಲ್ ವ್ಯಾಪ್ತಿಯ ಕಾಮರಾಜಪುರಂ ನಿವಾಸಿಗಳು ನಗರದಾದ್ಯಾಂತ ಚುನಾವಣೆ ಬಹಿಷ್ಕಾರದ ಪೋಸ್ಟರುಗಳನ್ನು ಅಂಟಿಸಿದ್ದಾರೆ. ಇವರ ಮುಖ್ಯ ಬೇಡಿಕೆ ಕಾಮರಾಜಪುರಂ ಭಾಗದಲ್ಲಿ ಸುಮಾರು ವರ್ಷಗಳಿಂದಲೂ ವಾಸಿಸುವ ನಿವಾಸಿಗಳ ಮನೆ ಜಾಗದ ಪಟ್ಟವನ್ನು ಕೊಡದಿರುವುದು. ಅಂತೆಯೇ ಮೂಲಭೂತ ಸೌಕರ್ಯಕ್ಕಾಗಿ ನಿರಂತರ ಬೇಡಿಕೆಗೆ ಸರಕಾರ ಸ್ಪಂದಿಸದಿರುವುದೇ ಕಾರಣ ಎನ್ನಲಾಗಿದೆ. ಈ ಭಾಗದ ಕಾಮರಾಜಪುರಂ ಯುವ ಸಂಘಟನೆಯು ಇದರ ಮುಂದಾಳತ್ವವನ್ನು ವಹಿಸಿದೆ. ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಲ್ಲವಪುರಂ ಮುನಿಸಿಪಾಲಿಟಿ ವ್ಯಾಪ್ತಿಯ ನಿವಾಸಿಗಳು ಕೂಡ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣಕ್ಕೆ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಕಳೆದ ಸಪ್ಟಂಬರ್ ನಲ್ಲಿ ದೇಶದಾದ್ಯಂತ ಆತಂಕ ಹುಟ್ಟಿಸಿದ ಮತೀಯ ಗಲಬೆಗೆ ತುತ್ತಾದ ಉತ್ತರ ಪ್ರದೇಶದ ಮುಜಾಫರ್ ನಗರದ ಜನರು ಚುನಾವಣೆಯ ಬಗ್ಗೆ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಗಲಬೆ ಪ್ರದೇಶದಿಂದ ಸ್ಥಳಾಂತರಿಸಿದ 66 ಕುಟುಂಬಗಳು ಮತ ಬಹಿಷ್ಕರಿಸುವುದಾಗಿ ಹೇಳಿವೆ. “ನಾವು ನೊಂದಿದ್ದೇವೆ, ನಮಗೆ ಯಾವ ಸರಕಾರದ ಬಗೆಗೂ, ರಾಜಕಾರಣಿಗಳ ಬಗೆಗೂ ಭರವಸೆ ಉಳಿದಿಲ್ಲ.” ಎಂದಿದ್ದಾರೆ. ಗಲಭೆ ಕಾರಣಕ್ಕೆ ಸ್ಥಳಾಂತರಿಸಿದ ಕುಟುಂಬಗಳು ಶೆಡ್ಡುಗಳಲ್ಲಿ ಜೀವಿಸುತ್ತಿವೆ. ಅಲ್ಲಿ ಅವರ ಮತಪಟ್ಟಿಯೂ ಇಲ್ಲ. ಬದಲಾಗಿ ತಮ್ಮ ಊರುಗಳಿಗೆ ಹೋಗಿ ಮತ ಚಲಾಯಿಸುವ ಉತ್ಸಾಹವೂ ಅವರಲ್ಲಿಲ್ಲ.

ಕರ್ನಾಟಕದ ಮತ ಬಹಿಷ್ಕಾರದ ಸುದ್ದಿಗಳು ವಿಶಿಷ್ಟವಾಗಿವೆ. ತೆಲಂಗಾಣ ಪ್ರತ್ಯೇಕ ರಾಜ್ಯದ ಬಿಸಿ ಕರ್ನಾಟಕಕ್ಕೂ ಹಬ್ಬಿದೆ. ಕರ್ನಾಟಕದ ಮಡಿಕೇರಿPoll-Boycot-Karnataka ಜಿಲ್ಲೆಯಲ್ಲಿ ಪ್ರತ್ಯೇಕ ಕೊಡಗು ರಾಜ್ಯದ ಬೇಡಿಕೆ ಬಲ ಪಡೆದುಕೊಂಡಿದೆ. ಕೊಡವ ರಾಷ್ಟ್ರೀಯ ಮಂಡಳಿ (ಸಿ.ಎನ್.ಸಿ)ಈ ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಒಡ್ಡಿದೆ. ಅಂತೆಯೇ ತುಳುನಾಡು ಹೋರಾಟ ಸಮಿತಿಯೂ ಕಾರ್ಯ ಪ್ರವೃತ್ತವಾಗಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸುವುದಾಗಿ ತುಳುನಾಡು ಪ್ರತ್ಯೇಕತಾವಾದಿಗಳು ಹೇಳಿದ್ದಾರೆ. ಈ ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ..

ಮಾಜಿ ಯೋಧರು, ಹುತ್ಮಾತ್ಮರ ಕುಟುಂಬದವರಿಗೆ ಕನಿಷ್ಟ ನಿವೇಶನ ಕೊಡದ, ಅರ್ಜಿ ನೀಡಿದ್ದಕ್ಕೆ ಸ್ಪಂದನೆ ನೀಡದ ಸರಕಾರಕ್ಕೆ ಪಾಠ ಕಲಿಸಲು ಚುನಾವಣೆ ಬಹಿಷ್ಕಾರ ಹಾಕುವ ಎಚ್ಚರಿಕೆ ಮಾಜಿ ಸೈನಿಕರಿಂದ ಬಂದಿದೆ. ಮಳೆಗೆ ಹಾನಿಯಾದ ಬೆಳೆಗೆ ತಕ್ಷಣ ಪರಿಹಾರ ನೀಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಆಳಂದ ತಾಲೂಕಿನ ಬೆಳಮಗಿ ಗ್ರಾಮಸ್ಥರು ಹೇಳಿದ್ದಾರೆ.

ಪೌಲ್ಟ್ರಿ ಫಾರಂಗಳ ಅಸಮರ್ಪಕ ನಿರ್ವಹಣೆಯ ಕಾರಣಕ್ಕೆ ಹೆಚ್ಚುತ್ತಿರುವ ನೊಣಗಳ ಕಾಟದಿಂದ ಬೇಸತ್ತ ದಾವಣಗೆರೆ ಭಾಗದ ಬೆಳವನೂರು, ಹನುಮಂತಪುರ ಗ್ರಾಮಸ್ಥರು ಮತ ಬಹಿಷ್ಕರಿಸಿದ್ದಾರೆ. ಹಬ್ಬಕ್ಕೆ ಸಿಹಿ ಮಾಡಿದರೆ ನೊಣಗಳ ಸಮೂಹವೇ ದಾಳಿ ಇಡುತ್ತವೆ. ನೊಣಗಳಿಗೆ ಹೆದರಿ ಹಬ್ಬ ಮಾಡದಂತಾಗಿದ್ದೇವೆ. ಗ್ರಾಮದ ವ್ಯಾಪ್ತಿಯಲ್ಲಿ ಮೂರು ಸರ್ಕಾರಿ ಶಾಲೆಗಳಿದ್ದು, ಸೊಳ್ಳೆ ಪರದೆಯೊಳಗೆ ಮಕ್ಕಳ ಆಟ, ಊಟ, ಪಾಠ ನಡೆಯುವಂತಾಗಿದೆ. ಹಾಗಾಗಿ ಪೌಲ್ಟ್ರಿ ಫಾರಂಗಳನ್ನು ತೆರವುಗೊಳಿಸುವುದಕ್ಕೆ ಚುನಾವಣೆಗೆ ಬಹಿಷ್ಕಾರ ಹಾಕುವುದರ ಮೂಲಕ ಒತ್ತಡ ತರುವ ಪ್ರಯತ್ನ ಮಾಡುತಿದ್ದಾರೆ..

ಹಳೇಬೀಡು ಭಾಗದಲ್ಲಿ ಯಗಚಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರಿಸಿ, ಚುನಾವಣ ಪ್ರಚಾರ ಮತ್ತು ಸಭೆ ಸಮಾರಂಭಗಳಿಗೆ ಅವಕಾಶ ಕೊಡದಿರುವ ಬಗ್ಗೆ ರೈತ ಸಂಘ ಎಚ್ಚರಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸುತ್ತಮುತ್ತಲ ಇನಾಂ ಭೂಮಿಯ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಕೃಷಿಕರಿಗೆ ನೋಟೀಸ್ ನೀಡಿದೆ. ಹಾಗಾಗಿ ಇನಾಂ ಭೂಮಿಯ ಸಂತ್ರಸ್ಥರು ಹೋರಾಟಕ್ಕೆ ಸಜ್ಜಾಗಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ.

ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಕೇಂದ್ರದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಈ ಭಾಗದ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿ ಸಮೀಪದ ಅಮಜೂರು ಕ್ಯಾಂಪ್, 10ನೇ ಕಾಲುವೆ ಕ್ಯಾಂಪ್, ಜನತಾ ಕಾಲೊನಿಗಳಲ್ಲಿ ಸತ್ತರೆ ಹೂಳಲು ಸ್ಮಶಾನವೆ ಇಲ್ಲ. 60 ವರ್ಷಗಳಿಂದ ಸ್ಮಶಾನದ ಜಾಗಕ್ಕಾಗಿ ಈ ಜನರು ಪರದಾಡುತ್ತಿದ್ದಾರೆ. ಹಾಗಾಗಿ ಈ ಬಾರಿ ಸ್ಮಶಾನಕ್ಕಾಗಿ ಮತ ಬಹಿಷ್ಕರಿಸುತ್ತಿದ್ದಾರೆ.

ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಒಳಪಡುವ ಅಂಚೆತಿಟ್ಟು ಗಿರಿಜನ ಹಾಡಿಯಲ್ಲಿ ಜೇನುಕುರುಬ, ಸೋಲಿಗ, ಪಂಜಿಎರವ ಜನಾಂಗದವರು ವಾಸಿಸುತ್ತಿದ್ದು, ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಡಿತರ ಧಾನ್ಯಕ್ಕೆ ಕಾಡಿನಿಂದ ಮಾಲ್ದಾರೆಗೆ 3 ಕಿ.ಮೀ. ನಡೆಯಬೇಕು. ಸೀಮೆಎಣ್ಣೆ ಸಿಗದೆ ಬದುಕು ಕತ್ತಲಾಗಿದೆ. ಚುನಾವಣೆ ವೇಳೆ ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂಬುದು ವನವಾಸಿಗಳ ಆರೋಪ. ಹಾಗಾಗಿ 30ಕ್ಕೂ ಹೆಚ್ಚು ಕುಟುಂಬಗಳು ಮೂಲಸೌಲಭ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ.

ಈ ವಿರೋಧದ ಬಹುರೂಪಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜ ಮುಖಗಳನ್ನು ಕಾಣಿಸುತ್ತಿವೆ. ಇಲ್ಲಿನ ಬಹುಪಾಲು ಪ್ರತಿರೋಧ ದಾಖಲಾಗಿರುವುದು ರಸ್ತೆ, ನೀರು ಒಳಗೊಂಡಂತೆ ಕನಿಷ್ಠ ಸೌಲಭ್ಯಗಳಿಗಾಗಿ ಎನ್ನುವುದನ್ನು ನೆನಪಿಡಬೇಕು. ಅಂತೆಯೇ ಈ ಬೇಡಿಕೆಗಳು ದಿಢೀರನೆ ಹುಟ್ಟಿದವುಗಳಲ್ಲ, ಬದಲಾಗಿ ಶಾಶ್ವತವಾಗಿ ಕುರುಡು/ಕಿವುಡಾದ ಸರಕಾರವನ್ನು ಎಚ್ಚರಿಸುವ ಭಾಗವಾಗಿ ಹುಟ್ಟಿದವು. ಈ ಬಹಿಷ್ಕಾರಗಳ ಹಿಂದೆ, ಚುನಾಯಿತ ಅಭ್ಯರ್ಥಿಯು ಮತ್ತೆ ಸಿಗುವುದಿಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ ಎನ್ನುವ ಆತಂಕವಿದೆ. ಇದು ಚುನಾವಣಾ ವ್ಯವಸ್ಥೆಯ ಬಗೆಗೆ, ಪ್ರಜಾಪ್ರಭುತ್ವ ಸರಕಾರಗಳ ಬಗೆಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗುತ್ತಿರುವುದನ್ನು ತೋರಿಸುತ್ತಿದೆ.

ಘೋಷಿತ ಮತ ಬಹಿಷ್ಕಾರದಂತೆ, ಅಘೋಷಿತವಾಗಿ ಮತ ಚಲಾಯಿಸದೆ ನುಣುಚಿಕೊಳ್ಳುವ ಜನರ ಸಂಖ್ಯೆಯೂ ದೊಡ್ಡದಿದೆ. ಹಾಗಾಗಿಯೇ ಶೇ 30 ಯಾ 20 ರಷ್ಟು ಮತ ಚಲಾಯಿಸದ ಪ್ರಜೆಗಳು ತಮ್ಮೊಳಗೆ ಮತ ಬಹಿಷ್ಕಾರದ ಸಾತ್ವಿಕ ಸಿಟ್ಟನ್ನು ಪ್ರಕಟಿಸುತ್ತಿರಬಹುದು. ಈ ಬಗೆಯ ಪ್ರತಿರೋಧಗಳು ಚುನಾಯಿತ ಸದಸ್ಯರಿಗೆ ಪ್ರಾಥಮಿಕ ಪಾಠಗಳಾಗಬೇಕಿದೆ. ಈ ಪಾಠಗಳಿಂದ ಅವರು ಕಲಿಯುವುದು ಸಾಕಷ್ಟಿದೆ. ಈಗಿರುವ ಸ್ಥಿತಿಯನ್ನು ನೋಡಿದರೆ ‘ಕಲಿಯುತ್ತಾರೆ’ ಎಂದು ಭಾವಿಸುವುದು ಕೂಡ ಹಾಸ್ಯಾಸ್ಪದ ಸಂಗತಿಯಂತೆ ಕಾಣುತ್ತಿದೆ.

ಆಗಷ್ಟ ಹದಿನೈದರ ಚಿತ್ರಗಳು

– ಅರುಣ್ ಜೋಳದಕೂಡ್ಲಿಗಿ

ಚಿತ್ರ: 1

ಬಹಳ ದಿನದ ನಂತರ ಮೊನ್ನೆ ನನ್ನ ಬಾಲ್ಯದ ಮಿತ್ರ ಕೊಟ್ರೇಶ್ ಸಿಕ್ಕಿದ್ದ. ಹೀಗೇ ಲೋಕಾಭಿರಾಮವಾಗಿ ಮಾತಿಗೆ ಕೂತೆವು. ಮಾತಿನ ನಡುವೆ ಆಗಷ್ಟ ಹದಿನೈದರ ಚಿತ್ರಗಳು ಕಣ್ಣಮುಂದೆ ಬಂದವು. ಕೊಟ್ರೇಶ್ ಆಗಷ್ಟ ಹದಿನೈದರ ಹೊತ್ತಿಗೆ ಸರಿಯಾಗಿ ತಲೆ ಕೂದಲು ಬೋಳಿಸಿ, ತಲೆಗೆ ಸಿಲ್ವರ್ ಬಣ್ಣ ಹಚ್ಚಿಕೊಂಡು, ಗೋಲಿಯಾಕಾರದ ಕನ್ನಡಕ ಹಾಕಿ, ಕಚ್ಚೆ ಉಟ್ಟು, ಉದ್ದನೆ ಕೋಲು ಹಿಡಿದು ಥೇಟ್ ಗಾಂಧಿಯೇ ಆಗಿ ಪ್ಲಾಗ್ ಹಾಯಿಸ್ಟಿಂಗ್ ಹೊತ್ತಿಗೆ ಶಾಲೆಯ ಆವರಣಕ್ಕೆ ಹಾಜರಾಗುತ್ತಿದ್ದ. ನಮಗೆಲ್ಲಾ ಖುಷಿಯೋ ಖುಷಿ. ನಾವೆಲ್ಲಾ ಗಾಂಧಿ ಬಂದ, ಗಾಂಧಿ ಬಂದ ಎಂದು ಕೇಕೆ ಹೊಡೆಯುತ್ತಿದ್ದೆವು. ಅಷ್ಟರ ಮಟ್ಟಿಗೆ ಗಾಂಧಿ ನಮ್ಮ ಸ್ನೇಹಿತನೇ ಆಗಿರುತ್ತಿದ್ದ.

ಫೋಟೋದ ಗಾಂಧಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವುದು, ವೇಷದಾರಿ ಗಾಂಧಿಯ ಚಿವುಟಿ ಕಿಚಾಯಿಸುವುದು ಎರಡೂ ನಡೆಯುತ್ತಿತ್ತು. boy-as-gandhiಕೊಟ್ರ ಮಹಾನ್ ಕಿಲಾಡಿ, ಅವ ಗಾಂಧಿ ಉಡುಪು ತೊಟ್ಟಾಗಲೂ ತನ್ನ ಕಿಡಗೇಡಿ ತನವ ಮರೆಯುತ್ತಿರಲಿಲ್ಲ. ಸಾಲಲ್ಲಿ ಕಿತ್ತೂರ ರಾಣಿ ಚೆನ್ನಮ್ಮನ ವೇಷದಾರಿ ಸವಿತಾಳ ಜಡೆ ಜಗ್ಗಿ ಗೊತ್ತಾಗದಂತೆ ನಿಂತು ಒಳಗೊಳಗೇ ನಗುತ್ತಿದ್ದ. ಅವ ಊರಲ್ಲಿ ಪ್ರಭಾತ್ ಪೇರಿ ಹೊರಟಾಗ ಕೆಲವು ಮನೆಯವು ಗಾಂಧಿ ಕಾಲಿಗೆ ನೀರು ಹಾಕಿ ಪೂಜಿಸಿ ದಕ್ಷಿಣಿಯನ್ನು ಕೈಲಿಡುತ್ತಿದ್ದರು. ಇದೂ ಸಹ ಅವ ಗಾಂಧಿ ವೇಷ ಹಾಕಲು ಪ್ರೇರಣೆಯಾಗುತ್ತಿತ್ತು. ಊರಲ್ಲಿ ಇವನನ್ನು ಗಾಂಧಿಕೊಟ್ರ ಎಂದೇ ಕರೆಯುತ್ತಿದ್ದೆವು. ಈ ವೇಷವನ್ನು ಶಾಲೆಯ ಮಾಸ್ತರರು ಹೇಳಿ ಹಾಕಿಸುತ್ತಿರಲಿಲ್ಲ. ಕೊಟ್ರೇಶಿಯ ಅಜ್ಜ ಬೋರಯ್ಯ ಗಾಂಧಿ ಮೇಲಿನ ಭಯ ಭಕ್ತಿ ಪ್ರೀತಿಯನ್ನು ಹೀಗೆ ಕೊಟ್ರನಿಗೆ ವೇಷ ಧರಿಸುವ ಮೂಲಕ ತೋರುತ್ತಿದ್ದನು.

ಕೊಟ್ರ ಒಮ್ಮೆ ಗಾಂಧಿ ವೇಷ ತೊಟ್ಟು ಶಾಲೆಯ ಆವರಣಕ್ಕೆ ಬಂದಿದ್ದ, ಇನ್ನೇನು ಧ್ವಜ ಹಾರಿಸಬೇಕೆಂದಾಗ ಗಾಂಧಿ ಮಾಯವಾಗಿದ್ದ. ವಿಚಾರಿಸಿ ನೋಡಲಾಗಿ ಶಾಲೆಯ ಹಿಂದಿರುವ ಜೋಳದ ಹೊಲದಲ್ಲಿ ಗಾಂಧಿ ನಂಬರ್ ಎರಡಕ್ಕೆ ಹೋಗಿದ್ದಾನೆಂದು ತಿಳಿಯಿತು. ಇದ ತಿಳಿದ ಮೇಷ್ಟ್ರು ಅವನನ್ನು ಕರೆತರಲು ಹುಡುಗರನ್ನು ಕಳಿಸಿದರು. ಜೋಳದ ಹೊಲದಲ್ಲಿ ಉಚ್ಚಿದ ಕಚ್ಚಿಯನ್ನು ಮತ್ತೆ ಕಟ್ಟಿಕೊಳ್ಳಲು ಆಗದೆ ಕೊಟ್ರ ಪಂಚೆಯನ್ನು ಕೈಲಿಡುದು ಶಾಲೆಯ ಆವರಣಕ್ಕೆ ಬಂದ. ಆಗ ಎಲ್ಲಾ ಹುಡುಗ OLYMPUS DIGITAL CAMERAಹುಡುಗಿಯರು ಗಾಂಧಿ ನೋಡ್ರೋ ಚಡ್ಡೀಲೆ ಬಂದವ್ನೇ ಎಂದು ಕೂಗತೊಡಗಿದರು. ಪಿ.ಟಿ ಮೇಷ್ಟ್ರ ಕರಿಯಪ್ಪ ಒಮ್ಮೆ ಸಿಟ್ಟಿನಿಂದ ಗುರಾಯಿಸುತ್ತಲೂ ಮಕ್ಕಳು ಗಪ್ ಚುಪ್ ಆಗಿ ಮೊದಲಿನಂತೆಯೇ ನಿಂತರು. ಕೊಟ್ರೇಶ ಸಪ್ಪೆ ಮೋರೆ ಹಾಕಿ ಮೌನವಾದ. ಈ ಸಮಾರಂಭಕ್ಕೆ ಬಂದ ಭರಮನ ಗೌಡರು ಹುಡುಗರ ಮುಂದೆಯೇ ಕಚ್ಚಿ ತೊಡಿಸಿ ಗಾಂಧಿಯನ್ನು ತಯಾರು ಮಾಡಿದ್ದರು. ಆ ದಿನ ಕೊಟ್ರ ತುಂಬಾ ಡಲ್ಲಾಗಿಯೇ ಊರಲ್ಲಿ ಸುತ್ತಿದ್ದನು. ಇದಾದ ನಂತರವೂ ಹುಡುಗರು ಇವನನ್ನು ಗಾಂಧಿ ಕಚ್ಚಿ ಉಚ್ಚಿತ್ರೋ ಎಂದು ಗೇಲಿ ಮಾಡುತ್ತಿದ್ದರು.

ಇದನ್ನು ನೆನಪಿಸಿಕೊಂಡ ಕೊಟ್ರೇಶ್ ಬಿದ್ದು ಬಿದ್ದು ನಕ್ಕರು. ಮತ್ತೆ ಒಂದಷ್ಟು ಮಾತಾಡಿ ನಂತರ ಟೀ ಕುಡಿದೆವು. ಕೊಟ್ರೇಶ್ ಕೃಷಿ ಮಾಡುತ್ತಾ ಸ್ವಲ್ಪ ಹೈರಾಣಾದಂತೆ ಕಾಣುತ್ತಿದ್ದರು. ‘ಗಾಂಧಿ ಈಗ ಬಂದ್ರ ಇದು ನಮ್ಮ ದೇಶ ಅಲ್ಲ ಅಂತ ವಾಪಾಸ ವಕ್ಕಾನ ನೋಡ ಅರುಣ್’ ಅಂದರು.. ನಾನು ‘ಇಲ್ಲ ಇಲ್ಲ ಈ ದೇಶ ನೋಡಿ ವಾಪಸ್ ಹೋಗೋ ತ್ರಾಣನೂ ಕಳಕೊಂಡಿರ್‍ತಾನ..ಇನ್ನು ವಾಪಸ್ ಹೋಗೋ ಮಾತೆಲ್ಲಿ’ ಅಂದೆ ಆಗ ಕೊಟ್ರೇಶ್ ನಕ್ಕರು. ಹೀಗೆ ಗಾಂಧಿ ನಮ್ಮೊಳಗೂ, ನಮ್ಮೊಳಗೆ ಗಾಂಧಿಯೂ ಕಳೆದು ಹೋಗುವ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.

ಚಿತ್ರ: 2

ಒಮ್ಮೆ ನಮ್ಮ ಶಾಲೆಗೆ ಹೊಸದಾಗಿ ಬಂದ ಟೀಚರ್ ಸಿದ್ದಮ್ಮ ಈ ವರ್ಷ ಆಗಷ್ಟ ಹದಿನೈದಕ್ಕೆ ಏನಾದರು ಹೊಸದನ್ನು ಮಾಡಬೇಕೆಂದು ತಯಾರಿ ನೆಡೆಸಿದರು. ಅದೇನಂದರೆ ಇನ್ನು ಹದಿನೈದನೇ ತಾರೀಕಿಗೆ ಹತ್ತು ದಿನ ಮೊದಲೇ ಭಾರತದ ನಕ್ಷೆಯ ಆಕಾರದಲ್ಲಿ ರಾಗಿ ಬೆಳೆಸಿ ಭಾರತವನ್ನು ಹಸಿರಾಗಿಸಬೇಕೆಂಬುದು. ಈ ಕನಸು ಕಾರ್ಯರೂಪಕ್ಕೂ ಬಂತು. ಭಾರತವನ್ನು ಹೋಲುವ ಒಂದು ರೇಖಾ ಚಿತ್ರವನ್ನು ಬಿಡಿಸಲಾಯಿತು. ಅದು ದಷ್ಟಪುಷ್ಟ ಭಾರತದಂತಿರದೆ ಬಡಕಲು ಭಾರತದಂತ್ತಿತ್ತು. ಆ ರೇಖಾ ಚಿತ್ರದ ಒಳಗೇ ಗುದ್ದಲಿಯಿಂದ ಅಗೆದು ಮಣ್ಣನ್ನು ಅದಲುಬದಲು ಮಾಡಿದೆವು. ಶಾಲೆಗೆ ಹೊಂದಿಕೊಂಡಂತಿದ್ದ ಜಗ್ಗೋ ಬೋರಿನಿಂದ(ಕೈ ಪಂಪು) ನೀರುತಂದು ಭಾರತವನ್ನು ನೆನೆಸಿದೆವು. ನಂತರ ದುರುಗಜ್ಜಿ ಮನೆಯಲ್ಲಿ ಎರಡು ಹಿಡಿ ರಾಗಿ ಕಾಳನ್ನು ತಂದು ಭಾರತದ ತುಂಬೆಲ್ಲಾ ಚೆಲ್ಲಿದೆವು. ಒಂದೆರಡು ಕಳ್ಳಿ ಜಾಲಿ ಮುಳ್ಳುಗಳನ್ನು ಕಡಿದುಕೊಂಡು ಬಂದು ಭಾರತದ ಮೇಲೆಲ್ಲಾ ಹರಡಿ ದೇಶಕ್ಕೆ ಮುಳ್ಳು ಬಡಿದೆವು. ಆಗ ಟೀಚರ್ ಭಾರತವನ್ನು ದನಗಳು ತುಳಿಯದಂತೆ, ಸಣ್ಣ ಮಕ್ಕಳು ಕೆಡಿಸದಂತೆ ಕಾಯಲು ಒಬ್ಬರು ತಪ್ಪುತ್ತಲು ಒಬ್ಬರಂತೆ ಹತ್ತು ಹುಡುಗ ಹುಡುಗಿಯರನ್ನು ನೇಮಿಸಿದರು. ಈಪಾಳೆಯದಲ್ಲಿ ನನ್ನದೂ ಸರತಿ ಇತ್ತು. ನಾವು ಭಾರತದ ಗಡಿಯನ್ನು ಕಾಯುವ ಯೋಧರಂತೆ ಈ ನೆಲದಲ್ಲಿನ ಭಾರತವನ್ನು ಕಾಯುತ್ತಿದ್ದೆವು.

ನನ್ನದು ಬೆಳಗ್ಗೆ ಆರಕ್ಕೆ ಕಾಯುವ ಸರದಿಯಿತ್ತು. ನಾನು ಬೆಳಗ್ಗೆ ಎದ್ದವನೇ ಎದ್ದೆನೋ ಬಿದ್ದೆನೋ ಎಂಬಂತೆ ಶಾಲೆಯ ಮುಂದೆ ಓಡಿ ಭಾರತ ಸುರಕ್ಷಿತವಾಗಿರುವ ಬಗ್ಗೆ ಖಾತರಿ ಮಾಡಿಕೊಂಡು ನಿರಾಳವಾಗುತ್ತಿದ್ದೆ. ಒಮ್ಮೆ ದನಗಳ ಹಿಂಡೊಂದು ತುಳಿದು ಹೋಗಿತ್ತು. ನಾನು ಭಾರತಾಂಬೆಗೆ ನೋವಾದಂತೆ ಮಮ್ಮಲ ಮರುಗಿದೆನು. ಹೊಡೆಯೋಣವೆಂದರೆ ಯಾವ ದನ ತುಳಿದಿರಬಹುದು ಎನ್ನುವುದು ಗೊತ್ತಾಗಲಿಲ್ಲ. ಆಗ ಇಡೀ ಊರಿನ ಎಮ್ಮೆಗಳೆಲ್ಲಾ ನನ್ನ ಅಸಹಾಯಕತೆ ನೋಡಿ ನಕ್ಕಂತಾಯಿತು.

ಒಮ್ಮೆ ಹಸಿ ಆರದಿರಲಿ ಎಂದು ಮುಳ್ಳು ತೆಗೆದು ಗೋಣಿ ಚೀಲವನ್ನು ಹಾಸಿದ್ದೆವು. grass-map-indiaಮರುದಿನ ಬೆಳಗ್ಗೆ ಆ ಗೋಣಿಯ ಮೇಲೆ ನಾಯಿಯೊಂದು ಮಲಗಿ ಸಂಪು ನಿದ್ದೆ ಮಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನಖಶಿಖಾಂತ ಸಿಟ್ಟು ಬಂದು ನಾಯಿಯನ್ನು ಕಯ್ಯಯ್ಯೋ.. ಕಯ್ಯಯ್ಯೋ ಎಂದು ಕಿರುಚುತ್ತಾ ಓಡುವಂತೆ ಹೊಡೆದೆವು. ಪಾಪ ಭಾರತಾಂಬೆಯ ಮೇಲೆ ನೀಧಾನಕ್ಕೆ ಮೊಳಕೆ ಹೊಡೆದ ರಾಗಿಯ ಕಾಳುಗಳು ನಡ ಮುರಿದ ಮುದುಕಿಯಂತೆ ಬಾಗಿ ಮುದುಡಿಕೊಂಡಿದ್ದವು. ಆ ನಂತರ ಮತ್ತೆ ನೀರು ಹಾಕಿ ಮುದುಡಿಕೊಂಡ ಜೀವಗಳಿಗೆ ಮರುಜೀವ ತರಲು ನಾವೆಲ್ಲಾ ತುಂಬಾ ಶ್ರಮಿಸಿದ್ದೆವು.

ಭಾರತವನ್ನು ದನಗಳಿಂದಲೂ, ನಾಯಿಗಳಿಂದಲೂ, ಕಿಡಗೇಡಿ ಮಕ್ಕಳಿಂದಲೂ ಕಾಯುವುದು ತುಂಬಾ ಕಷ್ಟವೇ ಆಗಿತ್ತು. ಮೊಳಕೆಯೊಡೆದ ರಾಗಿಯ ಸಸಿಗಳು ನಿಧಾನಕ್ಕೆ ದಿನಕ್ಕೊಂದು ಚೆಂದದಂತೆ ಬೆಳೆಯುತ್ತಿದ್ದರೆ, ಭಾರತಾಂಬೆ ಹಸಿರಾಗುವ ಬಗ್ಗೆ ನಾವುಗಳೆಲ್ಲಾ ಖುಷಿಗೊಳ್ಳುತ್ತಿದ್ದೆವು. ಇದನ್ನು ನೋಡಿದ ಟೀಚರ್ ಮುಖದಲ್ಲಿ ಸಂತಸದ ಗೆರೆಗಳು ಕಾಣುತ್ತಿದ್ದವು. ಎಲ್ಲಾ ಬಗೆಯ ಅಡೆತಡೆಗಳ ಮಧ್ಯೆಯೂ ಮೊದಲು ಬಡಕಲು ಕಾಣುತ್ತಿದ್ದ ಭಾರತ ಮಾತೆ ಹಸಿರಿನಿಂದ ಮೈದುಂಬಿಕೊಳ್ಳತೊಡಗಿದ್ದಳು. ಆಗಷ್ಟ ಹದಿನೈದರ ದಿನ ನಮಗೆಲ್ಲಾ ಖುಷಿಯೋ ಖುಷಿ. ಕಾರಣ ಭಾರತ ಮಾತೆಯನ್ನು ಸಾಕಿ ಸಲಹಿದವರು ನಾವೆ ಎಂಬ ಉತ್ಸಾಹ ನಮ್ಮಲ್ಲಿ ಚಿಮ್ಮುತ್ತಿತ್ತು.

ಹೀಗೆ ರಾಗಿಯ ಹಸಿರು ಮೊಳಕೆಯ ಭಾರತವನ್ನು ನೋಡಿದ ಊರವರು ಟೀಚರಮ್ಮನನ್ನು ಬಾಯಿತುಂಬಿ ಹೊಗಳಿದರು. ಆ ವರ್ಷ ಆಗಷ್ಟ ಹದಿನೈದರ ದೊಡ್ಡ ಆಕರ್ಷಣೆ ಈ ಹಸಿರು ಭಾರತ ಮಾತೆಯೇ ಆಗಿದ್ದಳು. ಈಗ ನೆನಪಿಸಿಕೊಂಡರೆ ಈ ದೇಶದ ಬಹುಪಾಲು ಕೆಳಸಮುದಾಯಗಳು ಉಣ್ಣುವ ಜೀವಧಾತು ರಾಗಿ ಭಾರತದ ನಕ್ಷೆಯಲ್ಲಿ ಬೆಳೆದದ್ದು ಒಂದು ರೂಪಕವೇ ಆದಂತಿತ್ತು. ಕನಕದಾಸರ ರಾಮಧ್ಯಾನ ಚರಿತೆ ಕಾವ್ಯವೂ ನೆನಪಾಗಿ ಭತ್ತದ ಮುಂದೆ ಗೆದ್ದ ರಾಗಿಯು ಕಣ್ಣಮುಂದೆ ನಿಂತಿತು.

ಚಿತ್ರ: 3

ಈಚೆಗೆ ಮೂರು ವರ್ಷದ ಹಿಂದೆ ಆಗಷ್ಟ ಹದಿನೈದಕ್ಕೆ ಸರಿಯಾಗಿ ನಮ್ಮೂರು ಜೋಳದ ಕೂಡ್ಲಿಗಿಗೆ ಬಂದಿದ್ದೆ. ಈ ವಿಷಯ ಹೇಗೋ ನಮ್ಮೂರಿನ ಶಾಲಾ ಮಾಸ್ತರಿಗೆ ತಿಳಿದಿತ್ತು. ನನ್ನ ಹೆಸರ ಜತೆ ಊರ ಹೆಸರು ಸೇರಿಸಿ ಬರೆಯುತ್ತಿದ್ದರಿಂದ, ಅದು ಯಾವಾಗಲಾದರೊಮ್ಮೆ ಪತ್ರಿಕೆಯಲ್ಲಿ ಕಾಣುತ್ತಿದ್ದರಿಂದ, ಮಾಸ್ತರರಿಗೆ ನನ್ನನ್ನು ಆಗಷ್ಟ ಹದಿನೈದರ ಅಥಿತಿಯಾಗಿ ಮಾಡಬೇಕೆಂದೆನ್ನಿಸಿ ಕರೆದರು. ನಾನು ಮೊದಲು ಇಲ್ಲ ಎಂದೆನಾದರೂ ಪೂರ್ತಿ ನಿರಾಕರಿಸಲಾಗದೆ ಒಪ್ಪಿಕೊಂಡು ಶಾಲೆಯ ಆವರಣಕ್ಕೆ ಹೋದೆ. ಆಗಷ್ಟ ಹದಿನೈದರ ಅಥಿತಿಯಾಗಿ ವೇದಿಕೆಯ ಮೇಲೆ ಕೂತದ್ದು ಇದು ಮೊದಲ ಅನುಭವ.

ಶಾಲೆಯ ಮುಂದೆ ದೊಡ್ಡದಾದ ಅಂಗಳಕ್ಕೆ ಸೆಗಣಿ ಸಾರಿಸಿ, ತರಾವರಿ ರಂಗೋಲಿ ಬಿಟ್ಟಿದ್ದರು. ಆ ರಂಗೋಲಿಗಳಲ್ಲಿ ಮಕ್ಕಳ ಮುಗ್ಧತೆ ಇತ್ತು. independence-day-at-schoolಭಾರತದ ನಕ್ಷೆ, ಸ್ವಂತಂತ್ರ್ಯ ದಿನಾಚರಣೆಯ ಶುಭಾಷಯಗಳು, ಜೈ ಭಾರತ ಮಾತಾಕಿ ಜೈ ಮುಂತಾದ ಬರಹಗಳು ರಂಗೋಲಿಯಲ್ಲಿ ಎದ್ದು ಕಾಣುತ್ತಿದ್ದವು. ಮಕ್ಕಳು ಸಮವಸ್ತ್ರ ಧರಿಸಿ ಹಬ್ಬದ ಸಂಭ್ರಮದಲ್ಲಿ ಕೂತಿದ್ದರು. ಕೆಲವರು ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಲು ತಯಾರಿ ಮಾಡಿಕೊಳ್ಳುತ್ತಿದ್ದರು. ನಮ್ಮ ಓಣಿಯ ಮಕ್ಕಳು ನನ್ನನ್ನು ನೋಡಿ ಕಣ್ಣ ಸನ್ನೆಯಲ್ಲೇ ಹುಬ್ಬುಹಾರಿಸಿ ಖುಷಿಪಟ್ಟರು. ಮಾಸ್ತರುಗಳು ಮಾಸ್ತರಮ್ಮಂದಿರು ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಲವಲವಿಕೆಯಿಂದ ಓಡಾಡಿಕೊಂಡಿದ್ದ ಹೊಸ ಹುರುಪಿನ ಇನ್ನೂ ಮದುವೆಯಾಗಿರದ ಚೆಂದದ ಟೀಚರಮ್ಮನನ್ನು ಬಂದ ಅಥಿತಿಗಳು ಕದ್ದು ನೋಡುತ್ತಾ ನೋಡದಂತೆ ನಟಿಸುತ್ತಿದ್ದರು. ಇದು ನನ್ನ ಅನುಭವಕ್ಕೂ ಬಂತು. ಎಸ್.ಡಿ.ಎಂ.ಸಿ ಸದಸ್ಯರು, ಊರಿನ ಕೆಲವು ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಹೀಗೆ ಕಾರ್ಯಕ್ರಮ ಆರಂಭವಾಯಿತು. ಸ್ವಾಗತ, ಧ್ವಜಾರೋಹಣ, ರಾಷ್ಟ್ರಗೀತೆ ಒಂದರ ಹಿಂದೆ ಒಂದರಂತೆ ಅಚ್ಚುಕಟ್ಟಾಗಿ ನಡೆಯಿತು.

ಬಾಯಿಪಾಠ ಮಾಡಿದ ಭಾಷಣವನ್ನು ಕೆಲಮಕ್ಕಳು ಹೆದರುತ್ತಾ, ಕೆಲವರು ತಪ್ಪು ತಪ್ಪು ಓದಿ ತಡವರಿಸುತ್ತಾ, ಮತ್ತೆ ಕೆಲವರು ಗಟ್ಟಿಯಾಗಿ ದೈರ್ಯವಾಗಿ ಓದಿ ಶಬ್ಬಾಷ್‌ಗಿರಿ ಪಡೆಯುತ್ತಾ ಗಾಂಧಿ ಮುಂತಾದ ಸ್ವಾತಂತ್ರ ಹೋರಾಟಗಾರರನ್ನು ನೆನಪಿಸಿಕೊಂಡರು. ಈಗ ಮುಖ್ಯ ಅಥಿತಿಯಾಗಿ ಮಾತನಾಡುವ ಸರದಿ ನನಗೆ ಬಂತು. ಏನು ಮಾತನಾಡುವುದು ಎನ್ನುವ ಗೊಂದಲದಲ್ಲೇ ನಮ್ಮೂರಿನ ಸಂಗತಿಗಳನ್ನು ಬಳಸಿಕೊಂಡೇ ಸ್ವಾತಂತ್ರವನ್ನು ಬೇರೆಯದೇ ರೀತಿಯಲ್ಲಿ ಹೇಳಬೇಕೆನಿಸಿ ಒಂದಷ್ಟು ಮಾತನಾಡಿದೆ.

ಅದರ ಸಾರಾಂಶ ಹೀಗಿತ್ತು: ಸ್ವಾತಂತ್ರ್ಯ ಎಂದರೆ ಬ್ರಿಟೀಷರು ಬಿಟ್ಟುಕೊಟ್ಟದ್ದು ಎಂದೇ ಇನ್ನೆಷ್ಟು ದಿನ ಮಾತಾಡೋದು? ಮೊದಲು ನಮ್ಮ ನಮ್ಮ ಹಳ್ಳಿಗಳಲ್ಲಿ ಸ್ವಾತಂತ್ರ್ಯ ಹೇಗಿದೆ ಎಂದು ನೋಡೋಣ. ನಮ್ಮ ಊರಿನ ಕೇರಿಯ ಹರಿಜನರನ್ನು ಎಷ್ಟು ಜನ ನಮ್ಮ ಮನೆಯ ಒಳಗೆ ಕರ್‍ಕೊಂಡು ಊಟ ಹಾಕ್ತೀವಿ? ಅಥವಾ ಮೇಲ್ಜಾತಿಯವ್ರು ಹರಿಜನರ ಕೇರಿಗೆ ಹೋಗಿ ಅವರ ಮನೆಯಾಗ ಕೂತ್ಕೊಂಡು ಎಷ್ಟು ಜನ ಊಟ ಮಾಡ್ತಾರೆ? ಅವರನ್ನು ಒಳ್ಳೆಯ ಮನಸ್ಸಿನಿಂದ ಗುಡಿ ಒಳಗ ಬಿಟ್ಕಳ್ಳಾಕ ಎಷ್ಟ ಜನ ತಯಾರಿದಿವಿ? ಹಾಗಾದರೆ ಈ ಊರಿನ ಹರಿಜನರಿಗೆ ನಮ್ಮೂರಿನವರಿಂದ ಸ್ವಾತಂತ್ರ್ಯ ಸಿಕ್ಕಿದೆಯೇ?

ನಾವು ನಮ್ಮೂರಿನ ಹೆಣ್ಣುಮಕ್ಕಳಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಕೊಟ್ಟೀವಿ? ಗಂಡುಹುಡುಗರ್‍ನ ಓದ್ಸಾಕ ಇಷ್ಟಪಡೋ ನಾವು ಹೆಣ್ಣು ಹುಡುಗಿಯರನ್ನ independence-dayಹೆಚ್ಚು ಓದಿಸ್ದೆ ಅವರನ್ನು ಬಂಧನದಲ್ಲಿಟ್ಟಿಲ್ಲವಾ? ಮಕ್ಕಳನ್ನು ಓದಿಸದೆ ನಮ್ಮ ಮನೆ ಕೆಲಸಗಳಿಗೆ ಹಚ್ಚಿಕೊಂಡು ಮಕ್ಕಳನ್ನು ಅಜ್ಞಾನದ ಕೂಪಕ್ಕೆ ದೂಡೋದು ಸಹಾ ಅವರನ್ನು ಸ್ವಾಂತಂತ್ರ್ಯವಾಗಿ ಬೆಳೆಯುವ ಅವಕಾಶವನ್ನು ಕಸಿದುಕೊಂಡಂತಲ್ಲವೆ?

ಸರಕಾರದ ಇಲಾಖೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಇಲಾಖೆಗಳಲ್ಲಿ ಜಗಳ ತೆಗೆದರೆ, ಅಥವಾ ಹಲವರು ಸೇರಿ ಮುತ್ತಿಗೆ ಹಾಕಿದರೆ ಪೋಲಿಸ್ ಬಂಧನವಾಗಿ ಬೆದರಿಕೆ ಹಾಕ್ತಾರೆ? ಹಾಗಾದರೆ ನಮ್ಮ ಹಕ್ಕುಗಳ ಚಲಾವಣೆ ಮಾಡೋದಾದ್ರೂ ಹೇಗೆ? ನಮ್ಮ ಭೂಮಿಯನ್ನು ಸರಕಾರ ಕೊಡು ಎಂದಾಕ್ಷಣ ಕೊಡಲು ನಾವು ತಯಾರಾಗ್ತೀವಿ, ಅದನ್ನು ವಿರೋಧಿಸುವ ಸ್ವಾತಂತ್ರ್ಯ ನಮಗಿಲ್ಲವೇ?

ಇಂತದೇ ಕೆಲವು ಮಾತುಗಳನ್ನು ಹೇಳಿದೆ. ಈ ಮಾತುಗಳನ್ನು ಮಕ್ಕಳನ್ನು ಒಳಗೊಂಡಂತೆ ಹೆಚ್ಚಾಗಿ ದೊಡ್ಡವರನ್ನು ಕೇಂದ್ರೀಕರಿಸಿ ಮಾತನಾಡಿದ್ದೆ. ಈ ಮಾತುಗಳಿಗೆ ಕೆಲವು ಮಿತಿಗಳು ಇವೆಯಾದರೂ ಗಮನಸೆಳೆಯಲೆಂದು ಉದ್ದೇಶಪೂರ್ವಕವಾಗಿಯೇ ಮಾತನಾಡಿದ್ದೆ. ಕೆಲವು ಮಾತುಗಳಿಗೆ ಚಪ್ಪಾಳೆ ಬಿದ್ದವಾದರೂ ಊರಿನ ಹಿರಿಯರಿಗೆ ನನ್ನ ಮಾತುಗಳು ಅಷ್ಟಾಗಿ ಇಷ್ಟವಾದಂತಾಗಲಿಲ್ಲ. ಕೆಲವರು ಗಾಂಧಿ, ಲಜಪತ್ ರಾಯರ ಹೆಸರೇ ಹೇಳಲಿಲ್ಲ ಎಂದರು. ಕೆಲವರು ‘ಇವು ಹೇಳಕ ಚೆಂದ ಊರಾಗ ಅನುಸರಿಸಾಕಲ್ಲ ಎಂದರು. ಹೀಗೆ ತರಾವರಿ ಅಭಿಪ್ರಾಯಗಳು ಬಂದವು.

ಸಮುದಾಯ ಕಾಲೇಜುಗಳಲ್ಲಿ ಗ್ರಾಮೀಣ ಕಸಬುಗಳಿಗೆ ಜೀವ ಬರಲಿ

– ಅರುಣ್ ಜೋಳದಕೂಡ್ಲಿಗಿ

ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗೆ ವಿದಾಯ ಹೇಳಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ (ಎಂ.ಎಚ್.ಆರ್.ಡಿ) ಮುಂದಾಗಿರುವುದು ಸ್ವಾಗತಾರ್ಹ. ಇನ್ನು ಕರ್ನಾಟಕದ ಕೆಲವು ಕಾಲೇಜುಗಳಲ್ಲಿ ಹೇರ್‌ಕಟಿಂಗ್ ಮುಂತಾದ ಕೋರ್ಸುಗಳು ಶುರುವಾಗುವುದಾಗಿಯೂ ವರದಿಯಾಗಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಅಳವಡಿಸುವ ಬಗ್ಗೆ ಪೂರ್ವಭಾವಿಯಾಗಿ ಕೆಲವು ಚರ್ಚೆಗಳು ನಡೆಯಬೇಕಾಗಿದೆ. ಇದನ್ನು ರಾಜ್ಯದ ಆಯಾ ಪ್ರಾದೇಶಿಕ ನೆಲೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ.

ಸಮುದಾಯ ಕಾಲೇಜುಗಳಲ್ಲಿ ಜನಪದ ಕಸಬುಗಳಿಗೆ ಮರುಜೀವ ನೀಡುವಂತಾಗಬೇಕು. ಹಾಗೆಯೇ ಒಂದು naaru-udyamaಕಸಬು ಪಾರಂಪರಿಕವಾಗಿ ಮುಂದುವರೆಸಿಕೊಂಡು ಬಂದ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದಿರುವಲ್ಲಿಯೂ ಎಚ್ಚರ ವಹಿಸಬೇಕಿದೆ. ಇಲ್ಲವೆಂದರೆ ಆಯಾ ಕಸುಬುಗಳ ನೆಲೆಯಲ್ಲಿ ಜಾತಿ ಪ್ರಜ್ಞೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗುತ್ತದೆ. ಇದು ಸರಕಾರವೇ ಜಾತಿ ತರತಮವನ್ನು ಬಲಪಡಿಸಲು ಮುಂದಾದಂತಾಗುತ್ತದೆ. ಅಥವಾ ಆಯಾ ಸಮುದಾಯವನ್ನು ಒಂದೇ ಕಸುಬಿಗೆ ಕಟ್ಟಿಹಾಕಿದಂತೆಯೂ ಆಗುತ್ತದೆ. ಹಾಗಾಗಿ ಸಮುದಾಯ ಕಾಲೇಜುಗಳನ್ನು ರಾಜ್ಯ ಸರಕಾರ ತುಂಬಾ ಎಚ್ಚರದಿಂದ ಕರ್ನಾಟಕದ ಸಂದರ್ಭಕ್ಕೆ ಅಗತ್ಯ ಬದಲಾವಣೆಯೊಂದಿಗೆ ಮರು ರೂಪಿಸಬೇಕಾಗಿದೆ.

ಮುಖ್ಯವಾಗಿ ಸಮುದಾಯ ಕಾಲೇಜುಗಳನ್ನು ಪ್ರಾದೇಶಿಕ ವೈಶಿಷ್ಟ್ಯ ಮತ್ತು ಅಗತ್ಯಗಳನ್ನು ಆಧರಿಸಿ ಅಭಿವೃದ್ಧಿಪಡಿಸಬೇಕಿದೆ. ಕಾರಣ ಪ್ರಾದೇಶಿಕವಾಗಿ ಆಯಾ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ವಿಫುಲ ಅವಕಾಶಗಳಿವೆ. ಕಿನ್ನಾಳ ಮತ್ತು ಚನ್ನಪಟ್ಟಣದ ಗೊಂಬೆಗಳಿಗೆ ಜಾಗತಿಕ ಮಾರುಕಟ್ಟೆ ಸೃಷ್ಟಿಯಾಗಿದೆ, ಹಾಗಾಗಿ ಕೊಪ್ಪಳ ಮತ್ತು ಚನ್ನಪಟ್ಟಣಗಳಲ್ಲಿ ಈ ಕಲೆಯನ್ನು ಆಧರಿಸಿಯೇ ಸಮುದಾಯ ಕಾಲೇಜನ್ನು ಸ್ಥಾಪಿಸಬಹುದು. channapatna-toysಚಳ್ಳಕೆರೆ, ಬಳ್ಳಾರಿ, ಹಿರಿಯೂರು ಮುಂತಾದ ಕಡೆ ಕಂಬಳಿ ನೇಯುವಿಕೆ ಇದೆ. ಉತ್ತರ ಭಾರತದಿಂದ ಕಂಬಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಚಳ್ಳಕೆರೆಯಲ್ಲಿ ನಡೆಯುವ ಕಂಬಳಿ ಸಂತೆಯಲ್ಲಿ ಪ್ರತಿವಾರವೂ ಲಕ್ಷಾಂತರ ರೂಗಳ ವಹಿವಾಟು ಇದೆ. ಹೀಗಾಗಿ ಈ ಭಾಗದಲ್ಲಿ ಕಂಬಳಿ ನೇಯ್ಗೆಯ ತರಬೇತಿಯನ್ನು ಕೊಡುವ ಸಮುದಾಯ ಕಾಲೇಜುಗಳನ್ನು ನಿರ್ಮಿಸಬಹುದಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕತ್ತಾಳೆಯನ್ನು ಬಳಸಿ ನಾರು ಮಾಡುವಲ್ಲಿ ಲಂಬಾಣಿ ತಾಂಡಗಳು ಕ್ರಿಯಾಶೀಲವಾಗಿದೆ. ಈ ಉದ್ದಿಮೆಯನ್ನು ಆಧರಿಸಿ ಈ ಭಾಗದ ಹೊಲದ ಬದುವುಗಳಲ್ಲಿ ದೊಡ್ಡಮಟ್ಟದಲ್ಲಿ ಕತ್ತಾಳೆ ಬೆಳೆಯುತ್ತಾರೆ. ಇಂತಹ ಕಡೆ ಕತ್ತಾಳೆ ನಾರನ್ನು ಮಾಡುವ ಕಲೆಯನ್ನು ಆಧರಿಸಿ ಕೋರ್ಸುಗಳನ್ನು ತೆರೆಯುವ ಅಗತ್ಯವಿದೆ. ಅಂತೆಯೇ ತುಮಕೂರು, ತಿಪಟೂರು ಮುಂತಾದ ಕಡೆ ತೆಂಗು ಬೆಳೆ ಹೆಚ್ಚಾಗಿದೆ. ಇಂತಹ ಕಡೆಗಳಲ್ಲಿ ತೆಂಗನ್ನು ಆಧರಿಸಿದ ಉಪ ಉತ್ಪನ್ನಗಳನ್ನು ತಯಾರಿಸುವ ತರಬೇತಿ ಕೋರ್ಸನ್ನು ಈ ಭಾಗದ ಸಮುದಾಯ ಕಾಲೇಜುಗಳಲ್ಲಿ ಅಭಿವೃದ್ಧಿ ಪಡಿಸಬಹುದಾಗಿದೆ. ಹೀಗೆ ಕರ್ನಾಟಕದ ಆಯಾ ಪ್ರಾದೇಶಿಕ ಉತ್ಪನ್ನಗಳನ್ನು ಆಧರಿಸಿ ಕೋರ್ಸಗಳನ್ನು ಆರಂಭಿಸುವುದು ಸೂಕ್ತವಾಗಿದೆ.

ಇನ್ನು ಸಿವಿಲ್ ಎಂಜಿನೀಯರಿಂಗ್ ಪದವೀಧರರನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಲಕ್ಷಾಂತರ ಜನ ಮನೆಕಟ್ಟುವ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅನಕ್ಷರಸ್ತರ ಸಂಖ್ಯೆಯೇ ಹೆಚ್ಚಿದೆ. ಇದನ್ನು ಆಧರಿಸಿ ಕಟ್ಟಡ ನಿರ್ಮಾಣದ ಕೋರ್ಸನ್ನು ತೆರೆಯುವ ಅಗತ್ಯವಿದೆ. ಅಂತೆಯೇ ಪ್ರಾದೇಶಿಕವಾಗಿ ಕೃಷಿಯ ಭಿನ್ನ ಪ್ರಯೋಗಗಳು ಆಯಾ ಭಾಗದಲ್ಲಿವೆ. ಈ ವೈಶಿಷ್ಟಗಳೂ ಕೂಡ ಕೋರ್ಸಗಳನ್ನು ರೂಪಿಸುವಂತಾಗಬೇಕು. ಇಂದು ಸಾಂಪ್ರಾದಾಯಿಕ ಕೃಷಿಯ ಜತೆ ಆಧುನಿಕ ಕೃಷಿಯ ಪ್ರಯೋಗಗಳು ನಡೆಯುತ್ತಿವೆ. ಹಾಗಾಗಿ ಇಂತಹ ಆಧುನಿಕ ಕೃಷಿಗೆ ಸಂಬಂಧಿಸಿದಂತೆ ಗ್ರಾಮೀಣ ಯುವಕರಿಗೆ ಅನುಕೂಲವಾಗುವ ಕೋರ್ಸುಗಳನ್ನು ಆರಂಭಿಸಬೇಕಿದೆ. ಅದರಲ್ಲಿ ಮುಖ್ಯವಾಗಿ ಕೋಳಿ, ಕುರಿ, ಹಂದಿ, ಜಾನುವಾರು ಸಾಕಣೆಯನ್ನು ಆಧರಿಸಿದ ತರಬೇತಿಗಳನ್ನು ಆರಂಭಿಸಬಹುದು.

ಕೃಷಿಯ ಬೆಳೆಗಳನ್ನು ಬಳಸಿಕೊಂಡು ಉಪ ಉತ್ಪನ್ನಗಳನ್ನು ಮಾಡುವ ನೆಲೆಯಲ್ಲಿ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ತರಬೇತಿ ನೀಡುವಂತಹ ಕೋರ್ಸಗಳನ್ನು ಮಾಡಬಹುದಾಗಿದೆ. ಉದಾ: ಉತ್ತರ ಕರ್ನಾಟಕ ಮತ್ತು ಹೈದರಬಾದ್ ಕರ್ನಾಟಕದಲ್ಲಿ ಮುಸುಕಿನ ಜೋಳದ ಬೆಳೆ ಪ್ರಮಾಣ ಹೆಚ್ಚಾಗಿದೆ. ಈ ಮುಸುಕಿನ ಜೋಳವನ್ನು ಬಳಸಿಕೊಂಡಿ ಹಳ್ಳಿಗಳಲ್ಲಿಯೇ ಉಪ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಆರಂಭಿಸುವ ಅಗತ್ಯವಿದೆ. ಹತ್ತಿ, ಸೂರ್ಯಕಾಂತಿ, ಶೇಂಗ ಮುಂತಾದ ಬೆಳೆಗಳ ಉಪ ಉತ್ಪನ್ನಗಳನ್ನು ತಯಾರಿಸುವ ಕೋರ್ಸುಗಳನ್ನು ಆರಂಭಿಸಬಹುದು. ಇದರಿಂದಾಗಿ ಗ್ರಾಮೀಣ ಯುವ ಜನತೆಗೆ ದೊಡ್ಡಮಟ್ಟದಲ್ಲಿ ಉದ್ಯೋಗ ನಿರ್ಮಿಸಿದಂತಾಗುತ್ತದೆ.

ಹಳ್ಳಿಗಳು ಇಂದು ವೃದ್ಧರ ತಾಣಗಳಾಗಿವೆ. ಅದೇ ಹೊತ್ತಿಗೆ ನಗರಗಳು ಯುವಕ ಯುವತಿಯರ ಆಕರ್ಷಕ ಕೇಂದ್ರಗಳಾಗಿವೆ. construction-workersಇದಕ್ಕೆ ಕಾರಣ ಯುವ ಜನಾಂಗ ಹಳ್ಳಿಗಳಲ್ಲಿ ತಮ್ಮನ್ನು ತಾವು ತೆರೆದುಕೊಳ್ಳಲು ಬೇಕಾದ ಉದ್ಯೋಗಗಳ ಕೊರತೆ ಇರುವುದು. ಸಮುದಾಯ ಕಾಲೇಜುಗಳ ಮೂಲಕ ಹಳ್ಳಿಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸಾದ್ಯವಾದರೆ ಗ್ರಾಮೀಣ ಭಾಗದಲ್ಲಿ ಯುವ ಸಮುದಾಯವನ್ನು ಉಳಿಸಿಕೊಳ್ಳುವ ಆಕರ್ಷಣೆಯನ್ನು ಹೆಚ್ಚಿಸಬಹುದಾಗಿದೆ. ಈ ಕೋರ್ಸುಗಳಿಗೆ ವಿದ್ಯಾರ್ಹತೆಯ ವಿಷಯದಲ್ಲಿ ಕೆಲವು ವಿನಾಯಿತಿಗಳು ಬೇಕಾಗುತ್ತದೆ. ಅರೆ ವಿದ್ಯಾವ0ತ ಮತ್ತು ಅನಕ್ಷರಸ್ತ ಯುವ ಸಮುದಾಯವನ್ನು ಒಳಗೊಳ್ಳುವ ಹಾಗೆ ವಿದ್ಯಾರ್ಹತೆಗಳಲ್ಲಿ ಸಡಿಲ ನಿಲುವಿರಬೇಕು. ಕೌಶಲ್ಯವನ್ನು ಆಧರಿಸಿಯೂ ವಿದ್ಯಾರ್ಹತೆಯನ್ನು ನಿಗದಿಪಡಿಸುವಂತಾಗಬೇಕು. ಇನ್ನು ಇಂತಹ ಎಲ್ಲಾ ಕೋರ್ಸುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಬೇಕು. ಅಂತೆಯೇ ಲೈಂಗಿಕ ಅಲ್ಪಸಂಖ್ಯಾತರನ್ನೂ, ದೇವದಾಸಿಯರನ್ನೂ ಒಳಗೊಂಡಂತೆ ಧ್ವನಿ ಇಲ್ಲದ ಅಂಚಿನ ಸಮುದಾಯಗಳಿಗೆ ಆಧ್ಯತೆ ಕೊಡಬೇಕಿದೆ.

ಮುಖ್ಯವಾಗಿ ಈ ಕೋರ್ಸಗಳನ್ನು ಮುಗಿಸಿಕೊಂಡು ಹೊರ ಹೋದಾಗ ಸ್ವತಃ ಉದ್ಯೋಗ ಸೃಷ್ಟಿಸಿಕೊಳ್ಳಲು ಸಮರ್ಪಕವಾದ ಯೋಜನೆಗಳನ್ನು ರೂಪಿಸಬೇಕಿದೆ. ಇಂತಹ ಸಮರ್ಪಕ ಯೋಜನೆಗಳಿರದೆ ಈ ಕೋರ್ಸುಗಳಿಗೆ ಯುವ ಸಮುದಾಯವನ್ನು ಸೆಳೆಯುವುದು ಸರಿಯಾಗಲಾರದು. ಕಾರಣ ಹೊಸ ನಿರುದ್ಯೋಗಿಗಳನ್ನು ಸೃಷ್ಟಿಸಿದಂತಾಗುತ್ತದೆ. ಈ ನೆಲೆಯಲ್ಲಿ ಸಮುದಾಯ ಕಾಲೇಜುಗಳಲ್ಲಿ ಆರಂಭಿಸುವ ಯಾವುದೇ ಕೋರ್ಸುಗಳಲ್ಲಿ ತರಬೇತಿ ಪಡೆದವರು ಮುಂದೆ ಜೀವನ ನಿರ್ವಹಣೆಗೆ ಇದು ಹೇಗೆ ನೆರವಾಗಬಹುದು ಎನ್ನುವ ಬಗ್ಗೆ ಖಚಿತತೆ ಮತ್ತು ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಿದೆ.