Category Archives: ಭಗತ್ ಸಿಂಗ್ ಬರಹಗಳು

ಕಿವುಡರೇ, ಆಲಿಸಿ! – ಭಗತ್ ಸಿಂಗ್ ಬರಹ

ಇಂಗ್ಲಿಷ್ ಮೂಲ: ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಆರ್ಮಿಯ ನೋಟಿಸ್.

[ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್‌ರು 1929ರ ಏಪ್ರಿಲ್ 8 ರಂದು ಕೇಂದ್ರ ಸಂಸದೀಯ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದಾಗ, ಅದರೊಂದಿಗೆ ತಮ್ಮ ಗುರಿ ಮತ್ತು ಉದ್ದೇಶಗಳನ್ನೊಳಗೊಂಡ ಕರಪತ್ರಗಳನ್ನ ತೂರಿದ್ದರು. ತಾವು ನಡೆಸಿದ ಕೃತ್ಯದ ಸಕಲ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಲ್ಲದೆ ಕಿವುಡರು ಆಲಿಸುವಂತೆ ಮಾಡಬೇಕೆಂಬುದು ತಮ್ಮ ಉದ್ದೇಶ ಎಂದು ಘೋಷಿಸಿದರು. ಕೆಳಗಿರುವುದು ಕರಪತ್ರದ ಪೂರ್ಣಪಾಠ. ]

“ಕಿವುಡರು ಅಲಿಸುವಂತೆ ಮಾಡಬೇಕಾದರೆ ದೊಡ್ಡ ದನಿಯನ್ನೇ ತೆಗೆಯಬೇಕು.”

ಫ್ರೆಂಚ್ ಹುತಾತ್ಮ ವೇಲಿಯಂಟ್ ಇಂಥದ್ದೇ ಒಂದು ಸಂದರ್ಭದಲ್ಲಿ ಉಸುರಿದ ಈ ಸಾವಿಲ್ಲದ ಶಬ್ಧಗಳಿಂದ ನಾವು ನಮ್ಮ ಈ ಕೃತ್ಯವನ್ನು ಸಂಪೂರ್ಣವಾಗಿ, ಬಲವಾಗಿ ಸಮರ್ಥಿಸಿಕೊಳ್ಳುತ್ತೇವೆ.

ಸಮಾಜ ನಿರ್ಮಾಣದ ದಾರಿಯಲ್ಲಿ, ಕಳೆದ ಹತ್ತೇ ವರ್ಷಗಳ ಅವಧಿಯಲ್ಲಿ ಸತತವಾಗಿ ನಡೆಯುತ್ತಿರುವ ಅವಮಾನದ ಚರಿತ್ರೆಯ ಹಿನ್ನೆಲೆಯನ್ನು ಪುನಃ ನೆನಪಿಸಿಕೊಳ್ಳದೆಯೂ, ಇಂಡಿಯನ್ ಪಾರ್ಲಿಮೆಂಟ್ ಎಂಬ ಹೆಸರಿನ ಸಂಸ್ಥೆ ದೇಶದ ತಲೆಯ ಮೇಲೆ ಹೊಡೆದಂತೆ ಪದೇ ಪದೇ ನಡೆಸಿದ ನಾಚಿಕೆಗೇಡಿನ ಕೃತ್ಯಗಳ ಪ್ರಸ್ತಾಪಿಸದೆಯೂ, ಪ್ರಸ್ತುತ ಈಗ ನಡೆದಿರುವ ವರ್ತಮಾನದಲ್ಲಿಯೂ ಜನತೆ ಸೈಮನ್ ಕಮಿಶನ್‌ನಿಂದ ಸಮಾಜ ಸುಧಾರಿಸುವ ನಿಟ್ಟಿನಲ್ಲಿ ಕೆಲ ಮುಖ್ಯ ಹೆಜ್ಜೆಗಳನ್ನು ನಿರೀಕ್ಷಿಸುತ್ತಿರುವಾಗಲೂ ಈಗಲೂ ಇವರು ತಾವು ಹಂಚಿಕೊಳ್ಳಬಹುದಾದ ಎಲುಬುಗಳ ಕುರಿತೇ ಯೋಚಿಸುತ್ತಿದ್ದಾರೆ. ಈ ಬ್ರಿಟಿಷ್ ಸರ್ಕಾರ ಸಾರ್ವಜನಿಕ ಸುರಕ್ಷತೆ ಮತ್ತು ವಾಣಿಜ್ಯ ವಿವಾದದ ಮಸೂದೆಯಂಥವುಗಳನ್ನೆ ನಮ್ಮ ಮೇಲೆ ಹೇರಲು ಯತ್ನಿಸುತ್ತಿದೆ. ಅದಕ್ಕೆ ವಿರುದ್ಧವಾಗಿ ಪತ್ರಿಕಾ ಮಸೂದೆಯನ್ನು ಮುಂದಿನ ಅಧಿವೇಶನಕ್ಕೆ ಮೀಸಲಿಟ್ಟಿದ್ದಾರೆ. ಸಾಲದೆಂಬಂತೆ ಕಾರ್ಮಿಕ ಮುಖಂಡರನ್ನು, ಅದೂ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದವರನ್ನು ವಿನಾಕಾರಣ ಬಂಧಿಸಿರುವುದು. ಗಾಳಿ ಎತ್ತಕಡೆ ಬೀಸುತ್ತಿದೆಯೆಂಬುದನ್ನು ಕಣ್ಣೆದುರೇ ತೋರಿಸುತ್ತಿದೆ.

ಇಂಥ ಅತೀವ ಪ್ರಚೋದನಕಾರಿ ಪರಿಸ್ಥಿತಿಗಳನ್ನು ತುಂಬ ಗಂಭೀರವಾಗಿ ಪರಿಗಣಿಸಿರುವ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ತನ್ನ ಜವಾಬ್ದಾರಿಯ ಸಂಪೂರ್ಣ ಅರಿವಿನಿಂದ ಈ ನಿರ್ದಿಷ್ಟ ಕೃತ್ಯವನ್ನು ಕೈಗೊಳ್ಳಲು ನಿರ್ಧರಿಸಿದೆ. ಇದರ ಮುಖ್ಯ ಉದ್ದೇಶ-ನಾಚಿಕೆಗೇಡಿನ ಅವಮಾನಗಳನ್ನು ಸಹಿಸದಿರುವುದು, ಈ ವಿದೇಶೀ ಬ್ಯುರಾಕ್ರಟಿಕ್ ಶೋಷಕರು ಏನೇನು ಮಾಡಬೇಕೆಂದು ಬಯಸುವರೋ ಅದನ್ನೆಲ್ಲ ಸಾರ್ವಜನಿಕವಾಗಿ ಜನಸಾಮಾನ್ಯರ ಕಣ್ಣುಗಳೆದುರಲ್ಲಿ ಬೆತ್ತಲುಗೊಳಿಸುವುದು.

ಜನಪ್ರತಿನಿಧಿಗಳು ತಕ್ಷಣ ತಮ್ಮ ತಮ್ಮ ಕ್ಷೇತ್ರಗಳಿಗೆ ಹಿಂದಿರುಗಿ ಹೊರಡಿ ಮತ್ತು ಜನಸಮುದಾಯವನ್ನು ಮುಂಬರುವ ಕ್ರಾಂತಿಗೆ ಅಣಿ ಮಾಡಿರೆಂಬುದು ನಮ್ಮ ಆಶಯ. ಸರ್ಕಾರ ಹಲವಿಷಯ ಅರಿಯಬೇಕಿದೆ. ಮುಖ್ಯವಾಗಿ,

ಅಸಹಾಯಕ ಬಲಿಪಶುಗಳಂತಾಗಿರುವ ಎಲ್ಲ ಭಾರತೀಯ ಜನಸಮುದಾಯಗಳ ಧ್ವನಿಯಾಗಿ, ಸಾರ್ವಜನಿಕ ಸುರಕ್ಷೆ ಮತ್ತು ವಾಣಿಜ್ಯ ವಿವಾದ ಮಸೂದೆಯನ್ನು ಸಂಪೂರ್ಣ ವಿರೋಧಿಸುತ್ತಾ, ಲಾಲಾ ಲಜಪತರಾಯ್‌ರ ಧಾರುಣ ಹತ್ಯೆಯನ್ನು ಪ್ರತಿಭಟಿಸುತ್ತಾ ನಾವು ಹೇಳುವುದಿಷ್ಟೇ-

ವ್ಯಕ್ತಿಗಳನ್ನು ಕೊಲ್ಲಬಹುದೇ ಹೊರತು ವಿಚಾರಗಳನ್ನಲ್ಲ. ಚರಿತ್ರೆಯ ಈ ಪಾಠ ಎಷ್ಟೊ ಬಾರಿ ಪುನರಾವರ್ತನೆಗೊಂಡಿದೆ. ಈಗಲೂ ನಮ್ಮೆದುರಿಗಿರುವುದು ಅದೇ. ವಿಶಾಲ ಸಾಮ್ರಾಜ್ಯಗಳು ಅನೇಕ ಬಾರಿ ನಾಶಗೊಂಡಿವೆ. ಆದರೆ, ಪ್ರತಿಬಾರಿಯೂ ವಿಚಾರಗಳು ಉಳಿದುಕೊಂಡಿವೆ. ಕ್ರಾಂತಿಯು ಕಹಳೆ ಮೊಳಗಿಸುತ್ತಾ ಯಶಸ್ವಿಯಾಗಿ ಮೆರವಣಿಗೆ ಸಾಗುವಾಗ ಬಾರ್ಬೋನ್‌ಗಳೂ, ಜಾರ್‌ಗಳೂ ನೆಲಕಚ್ಚಿ ಹೋಗಿದ್ದಾರೆ.

ನಾವುಗಳು ಮಾನವ ಬದುಕಿನ ಅಮೂಲ್ಯತೆ ಬಲ್ಲವರು. ಉಜ್ವಲ ಭವಿಷ್ಯದ ಕನಸನ್ನುಳ್ಳವರು. ಜನಸಾಮಾನ್ಯರು  ಪೂರ್ಣಶಾಂತಿಯನ್ನೂ, ಸ್ವಾತಂತ್ರ್ಯವನ್ನೂ ಮನಸಾರೆ ಅನುಭವಿಸುತ್ತಾ ಬದುಕಬೇಕೆಂಬ ಆಸೆಯುಳ್ಳವರು.

ಆದರೆ ನಮ್ಮ ದೌರ್ಭಾಗ್ಯ.

ಮನುಷ್ಯ ರಕ್ತ ಚೆಲ್ಲಾಡಲು ನಮ್ಮನ್ನು ಪ್ರೇರೇಪಿಸಲಾಗುತ್ತಿದೆ. ಆದರೆ ಒಂದಂತೂ ಅನಿವಾರ್ಯ. ವ್ಯಕ್ತಿಗಳು ಮಾಡುತ್ತಿರುವ ತ್ಯಾಗ, ಬಲಿದಾನಗಳು ಕ್ರಾಂತಿಯ ದಾರಿಯಲ್ಲಿ ಸ್ವಾತಂತ್ರ್ಯವನ್ನೇ ತರುತ್ತವೆ. ಮನುಷ್ಯನು ಮನುಷ್ಯನನ್ನು ಶೋಷಿಸುವ ಕ್ರಿಯೆಯನ್ನು ತೊಡೆದು ಹಾಕುವುದು ಅನಿವಾರ್ಯ.

ಕ್ರಾಂತಿ ಚಿರಾಯುವಾಗಲಿ.
ಸರ್ದಾರ್ ಬಲರಾಜ್
ಕಮಾಂಡರ್ ಇನ್ ಚೀಫ್.

*

[“ಬಲರಾಜ್” ಎಂಬುದು ಚಂದ್ರಶೇಖರ್ ಆಜಾದ್‌ರ ಅನೇಕ ಹೆಸರುಗಳಲ್ಲೊಂದು]

ಸರ್ವಾಧಿಕಾರಿಗಳೇ, ಎಚ್ಚರ..! – ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್‌ನ ನೋಟೀಸ್

ಇಂಗ್ಲಿಷ್ ಮೂಲ: ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್‌ನ (Army) ನೋಟೀಸ್:

[1928ರ ಸಮಯ. ಸೈಮನ್ ಕಮಿಷನ್‌ನ ವಿರುದ್ಧ ಏರ್ಪಾಡಾಗಿದ್ದ ಬೃಹತ್ ಮೆರವಣಿಗೆಯ ಮುಂದಾಳತ್ವ ವಹಿಸಿದ್ದ ಲಾಲಾ ಲಜಪತ್‌ರಾಯ್‌‌ರ ಮೇಲೆ ಪೊಲೀಸ್ ಲಾಠಿಚಾರ್ಚ್ ನಡೆಸಲಾಯ್ತು. ಲಜಪತರಾಯ್‌ರು ಮಾರಣಾಂತಿಕವಾಗಿ ಗಾಯಗೊಂಡರು. ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್, ಮತ್ತಿತರ ಹೋರಾಟಗಾರರು ಸೇಡು ತೀರಿಸಿಕೊಳ್ಳುವುದಾಗಿ ಪಣ ತೊಟ್ಟರು. ಈ ಕಾರ್ಯಾಚರಣೆಯಲ್ಲಿ ಭಗತ್‌ಸಿಂಗ್, ರಾಜಗುರು ಮತ್ತು ಆಜಾದ್ ಕಣ್ತಪ್ಪಿನ ಗೊಂದಲದಿಂದಾಗಿ ಸ್ಕಾಟ್‌ನ ಬದಲಾಗಿ ಜೆ.ಪಿ. ಸಾಂಡರ್‍ಸನನ್ನು, ಡಿಸೆಂಬರ್ 17, 1928ರಲ್ಲಿ ಕೊಂದು ಹಾಕಿದರು. ಈ ಘಟನೆಯ ಕುರಿತು ಪೋಸ್ಟರ್ ಒಂದನ್ನು ಪ್ರಕಟಿಸಿದ Army ಅದನ್ನು ವಿವಿಧ ಪ್ರದೇಶಗಳಲ್ಲಿ ಅಂಟಿಸಿತು. ಅದರಲ್ಲಿ ಈ ಚಳವಳಿಕಾರರು ಸಾಂಡರ್‍ಸನನ್ನು ಶೋಷಕರ ಮತ್ತು ಸರ್ವಾಧಿಕಾರಿ ವ್ಯವಸ್ಥೆಯ ಭಾಗವಾಗಿ ಗುರುತಿಸಿದರು.]

ಜೆ.ಪಿ. ಸಾಂಡರ್ಸ್ ಸಾವು: ತೀರಿದ ಲಾಲಾಜೀ ಸೇಡು

ನಿಜಕ್ಕೂ ಒಬ್ಬ ಮಾಮೂಲು ಅಧಿಕಾರಿಯಾದ ಸಾಂಡರ್‍ಸನಂಥ ಕೀಳುಮಟ್ಟದ ಹಿಂಸದಾಯಕ ಕೈಗಳು ಲಾಲಾ ಲಜಪತರಾಯ್‌ರಂಥ ವಯೋವೃದ್ಧರಾದ, 300 ಮಿಲಿಯ ಭಾರತೀಯರು ಪ್ರೀತಿಸಿ ಗೌರವಿಸುವ ವ್ಯಕ್ತಿಯನ್ನು ಅಗೌರವದಿಂದ ಮುಟ್ಟುವುದನ್ನೂ ಅವರ ಸಾವಿಗೆ ಕಾರಣವಾಗುವುದನ್ನೂ ಊಹಿಸಲೂ ಸಾಧ್ಯವಾಗುತ್ತಿಲ್ಲ. ಇಂಡಿಯಾದ ಯುವಜನತೆ ಮತ್ತು ಪುರುಷತ್ವವು ದೇಶದ ರಾಷ್ಟ್ರೀಯತೆಗೆ ತಲೆಯನ್ನೇ ಮೆಟ್ಟಿದಂತಿರುವ ಈ ಹೊಡೆತವನ್ನು ಸವಾಲಾಗಿ ಸ್ವೀಕರಿಸಿದೆ.

ಇಂಡಿಯಾ ಇನ್ನೂ ಜೀವಂತವಾಗಿದೆ ಎಂಬುದನ್ನು ಲೋಕ ತಿಳಿದುಕೊಳ್ಳಲಿ. ಯುವಕರ ಬಿಸಿರಕ್ತವು ಸಂಪೂರ್ಣವಾಗಿ ತಣ್ಣಗಾಗಿಲ್ಲ ಎಂಬುದನ್ನು, ಜೀವ ಒತ್ತೆಯಿಡುವ ಯುವಪಡೆ ದೇಶದ ಘನತೆ ಗೌರವಗಳಿಗೆ ಧಕ್ಕೆ ಉಂಟಾದಾಗ ಬಲಿಯಾಗಲು ಸದಾ ಸಿದ್ಧವಾಗಿರುತ್ತದೆಂದೂ ಅರಿತುಕೊಳ್ಳಲಿ. ಇದಕ್ಕೆ ಸ್ವಜನರೂ ಕೂಡ ಮೆಚ್ಚದ, ಸರ್ವರೂ ಹೀಗಳೆಯುವ ಸಾಂಡರ್‍ಸ್ ಹತನಾಗಿರುವುದೇ ಸಾಕ್ಷಿ.

ಸರ್ವಾಧಿಕಾರಿಗಳೇ, ಎಚ್ಚರ..!

ಶೋಷಣೆಗೆ ಮತ್ತು ತುಳಿತಕ್ಕೆ ಒಳಗಾದ ದೇಶದ ಭಾವನೆಗಳನ್ನು ಎಂದೂ ಗಾಯಗೊಳಿಸಬೇಡಿ. ಇಂಥ ಹೀನ, ದ್ವಂದ್ವ ನೀತಿಯ ಕೆಲಸಕ್ಕೆ ಕೈ ಹಾಕುವ ಮುನ್ನ ಎರಡೆರಡು ಸಲ ಯೋಚಿಸಿ, ಶಸ್ತ್ರಾಸ್ತ್ರ ಕಾಯಿದೆ, ಬಿಗಿ ಕಾವಲುಗಳನ್ನು ಹೊರತುಪಡಿಸಿಯೂ ರಿವಾಲ್ವರ್‌ಗಳು ಒಳಹರಿದು ನಮ್ಮ ಬಳಿಗೆ ಬರುತ್ತಲೇ ಇರುತ್ತವ. ನಿಜ, ಇದು ಸದ್ಯದ ಸಶಸ್ತ್ರ ಕ್ರಾಂತಿಗೆ ಸಾಲದಿರಬಹುದು. ಆದರೆ ದೇಶಕ್ಕಾಗುವ ಅಪಮಾನಗಳನ್ನು ಎದುರಿಸಲು, ಸೇಡು ತೀರಿಸಿಕೊಳ್ಳಲು ಇಷ್ಟು ಆಯುಧಗಳು ಸಾಕು.

ಸ್ವಂತದ ಸಂಗಾತಿಗಳ ಅವನತಿಯನ್ನೂ, ಪತನವನ್ನೂ ನೋಡುತ್ತಿದ್ದರೂ ಎದೆಗುಂದದೆ, ಯಾವ ಹೊಣೆಗಾರಿಕೆಯೂ ಇಲ್ಲದ ಪರದೇಶಿ ಸರ್ಕಾರಕ್ಕೆ, ಉದ್ಧಟತನದ ಅಧಿಕಾರಿಗಳ ಆಡಳಿತಕ್ಕೆ ನಮ್ಮ ಯುವಪಡೆ ಪಾಠ ಕಲಿಸಲು ಸದಾ ಸಿದ್ಧವಾಗಿ, ಜೀವಂತವಾಗಿ ಇರುತ್ತದೆ. ವಿರೋಧದ ಮತ್ತು ತುಳಿತದ ಮಧ್ಯದಲ್ಲೂ ಧೈರ್ಯವಾಗಿ, ಧೀರೋದತ್ತವಾಗಿ ಬಿರುಗಾಳಿಯಂತೆ ಚಲಿಸುತ್ತಾ ನಾವು ಘೋಷಿಸುತ್ತಲೇ ಇರುತ್ತೇವೆ– “ಕ್ರಾಂತಿ ಚಿರಾಯುವಾಗಲಿ” ಎಂದು.

ಈ ಮನುಷ್ಯನ ಸಾವಿಗಾಗಿ ವಿಷಾದಿಸುತ್ತೇವೆ. ಆದರೆ ಪಶ್ಚಾತ್ತಾಪವಿಲ್ಲ. ಸತ್ತ ವ್ಯಕ್ತಿ ಅತಿಕ್ರೂರ ಆಡಳಿತದ, ಕೀಳುಮಟ್ಟದ ಸರ್ಕಾರವೊಂದರ ಪ್ರತಿನಿಧಿ. ಅದು ನಾಶಗೊಳ್ಳಲೇಬೇಕು. ಸತ್ತಿರುವುದು ಇಂಡಿಯಾದಲ್ಲಿರುವ ಬ್ರಿಟಿಷ್ ಸರ್ಕಾರದ ಏಜೆಂಟ್. ಪ್ರಪಂಚದ ಸರ್ಕಾರಗಳಲ್ಲೇ ಅತ್ಯಂತ ನಿರಂಕುಷ ಸರ್ಕಾರದ ಏಜೆಂಟ್.

ಮನುಷ್ಯ ನೆತ್ತರನ್ನು ಚೆಲ್ಲಾಡಿದ್ದಕ್ಕಾಗಿ ವಿಷಾದವಿದೆ. ಆದರೆ ವ್ಯಕ್ತಿಗಳ ತ್ಯಾಗಗಳು ಕೆಲಬಾರಿ ಅನಿವಾರ್ಯ. ಸರ್ವರಿಗೂ ಸ್ವಾತಂತ್ರ್ಯ ತರುವ ಕ್ರಾಂತಿಯು ಮನುಷ್ಯನು ಮನುಷ್ಯನ ಮೇಲೆ ನಡೆಸುವ ಅನ್ಯಾಯ, ತುಳಿತಗಳನ್ನು ತಡೆಯುವುದಕ್ಕಾಗಿಯೇ ಇರುವಂಥದ್ದು. ಇಂಥಹ ಕಾರ್ಯಾಚರಣೆಗಳನ್ನು ಬೇರೆ ದಾರಿಯಿಲ್ಲದೆ ನಡೆಸಬೇಕಾಗಿದೆ.

ಕ್ರಾಂತಿ ಚಿರಾಯುವಾಗಲಿ

ಸರ್ದಾರ್ ಬಲರಾಜ್
ಕಮಾಂಡರ್ ಇನ್‌ಚೀಫ್

*

[ಬಲರಾಜ್ ಎಂಬುದು ಚಂದ್ರಶೇಖರ್ ಆಜಾದ್‌ರ (ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್‌/ಆರ್ಮಿ ಮುಖ್ಯಸ್ಥ) ಅನೇಕ ಹೆಸರುಗಳಲ್ಲೊಂದು]

“ಕ್ರಾಂತಿ ಚಿರಾಯುವಾಗಲಿ” ಘೋಷಣೆಯನ್ನು ಕುರಿತು – ಭಗತ್ ಸಿಂಗ್

ಇಂಗ್ಲಿಷ್‌ ಮೂಲ: ಸರ್ದಾರ್ ಭಗತ್ ಸಿಂಗ್
ಕನ್ನಡಕ್ಕೆ: ಸುಧಾ ಚಿದಾನಂದಗೌಡ

[ಇದು ರಮಾನಂದ ಚಟರ್ಜಿಯವರು ಮಾಡರ್ನ್ ರಿವ್ಯೂ (modern review)  ಪತ್ರಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಘೋಷಣೆಯನ್ನು ಮೂದಲಿಸಿ ಬರೆದ ಸಂಪಾದಕೀಯಕ್ಕೆ ಉತ್ತರವಾಗಿ ಬರೆದ ಲೇಖನ. ಇದರಲ್ಲಿ ಭಗತ್‌ಸಿಂಗ್ ಈ ಘೋಷಣೆಯ ಅರ್ಥ, ಗುರಿಗಳು ಮತ್ತು ಪ್ರಾಮುಖ್ಯತೆಯನ್ನು ಕುರಿತು ವಿವರಿಸಿದ್ದಾರೆ. ಈ ಪತ್ರವು ‘ದಿ ಟೆಲಿಗ್ರಾಫ್’ ಪತ್ರಿಕೆಯ ಡಿಸೆಂಬರ್ 24, 1929ರ ಸಂಚಿಕೆಯಲ್ಲಿ ಪ್ರಕಟವಾಯ್ತು.]

ಇವರಿಗೆ,

ಸಂಪಾದಕರು,
ಮಾಡರ್ನ್ ರಿವ್ಯೂವ್ (modern review)

ನಿಮ್ಮ ಪತ್ರಿಕೆಯ ಡಿಸೆಂಬರ್ (1929)ರ ಸಂಚಿಕೆಯಲ್ಲಿ “ಕ್ರಾಂತಿ ಚಿರಾಯುವಾಗಲಿ” ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಟಿಪ್ಪಣಿ ಬರೆದಿದ್ದೀರಿ. ಅದರಲ್ಲಿ ಈ ಘೋಷಣೆ ಅರ್ಥಹೀನವೆಂದು ತಪ್ಪಾಗಿ ಗುರುತಿಸಿದ್ದೀರಿ. ಆಶ್ಚರ್ಯವಾಗ್ತಿದೆ. ಪ್ರತಿಯೊಬ್ಬ ಭಾರತೀಯನೂ ಮೆಚ್ಚುವ ಹಿರಿಯ, ಅನುಭವಿ, ಪ್ರಬುದ್ಧ ಪತ್ರಕರ್ತರು ನೀವು. ನಿಮ್ಮ ಈ ಬರಹಕ್ಕೆ ಉತ್ತರಿಸಬೇಕಾಗಿರುವುದು ದ್ವಂದ್ವವನ್ನು ಸೃಷ್ಟಿಸುವುದಕ್ಕಲ್ಲ. ಅನಿವಾರ್ಯಕ್ಕೆ.

ಈ ಘೋಷಣೆಯಿಂದ ನಾವು ಬಯಸುವುದೇನು, ನಿರೀಕ್ಷಿಸುವುದೇನು ಎಂಬುದನ್ನು ನಿವೇದಿಸುವುದು ನಮ್ಮ ಕರ್ತವ್ಯವೆಂದು ಭಾವಿಸುತ್ತೇವೆ. ವಿಪ್ಲವದ ಈ ಗಳಿಗೆಯಲ್ಲಿ ಈ ನಮ್ಮ ಕೂಗುಗಳು ನಮಗೆಷ್ಟು ಮುಖ್ಯವೋ ಇದಕ್ಕೊಂದು ಪ್ರಚಾರ ಒದಗಿಸುವುದು ಕೂಡಾ ಅಷ್ಟೇ ಮುಖ್ಯ.

ಈ ಕೂಗು ನಮ್ಮಿಂದ ಹುಟ್ಟಿಲ್ಲ. ಇದೇ “ಕೂಗು” ರಷ್ಯಾ ಕ್ರಾಂತಿಯ ದಿನಗಳಲ್ಲೂ ಬಳಸಲ್ಪಟ್ಟಿತ್ತು. ಎಲ್ಲರೂ ಬಲ್ಲಂತೆ ಸಮಾಜವಾದಿ ಲೇಖಕ ಆಪ್ಟನ್ ಸಿಂಕ್ಲೇರ್ ತಮ್ಮ ಇತ್ತೀಚಿನ ಕಾದಂಬರಿ “ಬೋಸ್ಟನ್ ಮತ್ತು ತೈಲ” (Boston & Oil) ದಲ್ಲಿ ಇದೇ ಘೋಷಣೆಯನ್ನು ಅನೇಕ ಆದರ್ಶವಾದಿ ಕ್ರಾಂತಿಕಾರಿ ಪಾತ್ರಗಳ ಮೂಲಕ ಹೇಳಿಸಿದ್ದಾನೆ. ಈ ವಾಕ್ಯವು ರಕ್ತಸಿಕ್ತ ಘರ್ಷಣೆಯು ಸದಾ ಮುಂದುವರಿದೇ ಇರಬೇಕೆಂದು ಎಲ್ಲೂ ಹೇಳಿಲ್ಲ. ಮತ್ತು ಚಲನಶೀಲವಲ್ಲದ ಯಾವುದೂ ಕೆಲಸಮಯದವರೆಗೆ ಕೂಡ ಅಸ್ತಿತ್ವದಲ್ಲಿರುವುದಿಲ್ಲ. ಈ ಘೋಷಣೆ ಕೂಡ ಇದಕ್ಕೆ ಹೊರತಾದುದಲ್ಲ.

ತುಂಬ ಧೀರ್ಘ ಸಮಯದವರೆಗೆ ಬಳಸಲ್ಪಡುವ ಈ ಘೋಷಣೆ ತುಂಬ ಗುರುತರವಾದುದನ್ನು ಸಾಧಿಸುತ್ತಿದೆ. ಅದು ವ್ಯಾಕರಣಬದ್ಧವಾಗಿ ಅಥವಾ ಶಬ್ಧ ಸಂಪತ್ತಿನ ದೃಷ್ಟಿಕೋನದಿಂದ ಸಮರ್ಥಿಸಿಕೊಳ್ಳುವಂಥದ್ದು ಅಲ್ಲದಿರಬಹುದು. ಆದಾಗ್ಯೂ ವಿಚಾರಗಳ ಗ್ರಹಿಕೆಯ ದೃಷ್ಟಿಯಿಂದ ಇದು ಪ್ರಮುಖವಾದದ್ದು. ಇಂಥ ಎಲ್ಲ ಘೋಷಣೆಗಳೂ ಒಂದು ನಿರ್ದಿಷ್ಟ ಪ್ರಜ್ಞೆಯನ್ನೇ ಒಳಗೊಂಡಿವೆ. ಅದು ಭಾಗಷಃ ಹೊಸದಾಗಿ ಒಳಗು ಮಾಡಿಕೊಂಡಿದ್ದೂ ಹೌದು ಮತ್ತು ಭಾಗಷಃ ಅನುವಂಶೀಯವಾಗಿ ಉಳಿಸಿಕೊಂಡಿದ್ದು ಹೌದು. ಪ್ರಜ್ಞೆ ಮತ್ತು ಆಶಯ ಇಲ್ಲಿ ಮುಖ್ಯ ಉದಾಹರಣೆ.

ನಾವು “ಜತಿನ್ ದಾಸ್ ಚಿರಾಯುವಾಗಲಿ” (Long live jatin das) ಎಂದು ಕೂಗಿದರೆ, ಅದರರ್ಥ ಜತಿನ್ ದಾಸ್ ಭೌತಿಕವಾಗಿ ಸದಾ ಕಾಲ ಜೀವಂತವಾಗಿರಲಿ ಎಂದಲ್ಲ. ಹಾಗಿರುವುದು ಸಾಧ್ಯವೂ ಇಲ್ಲ. ಅದು ಧ್ವನಿಸುವುದೇನೆಂದರೆ ಜತಿನ್ ದಾಸ್ ಎಂಬ ವ್ಯಕ್ತಿಯ ಉನ್ನತ ವಿಚಾರಗಳು ಮುಂದುವರಿಯಲಿ, ಎಂದೂ ಕುಂದದ ಸ್ಫೂರ್ತಿಯಾಗಿರಲಿ ಎಂದರ್ಥ. ಅದು ಅನೇಕ ಹುತಾತ್ಮರಿಗೆ, ಹೇಳಿಕೊಳ್ಳಲಾಗದ ಯಾತನೆಯನ್ನು ಅನುಭವಿಸಿದರೂ ಎದೆಗುಂದದೆ, ನಂಬಿದ ಸಿದ್ಧಾಂತಗಳಿಗೆ ಅರ್ಪಿಸಿಕೊಂಡವರಿಗೆ ಮಾರ್ಗದರ್ಶನವಾಗಲಿ ಎಂಬ ತಾತ್ಪರ್ಯ. ಈ ಘೋಷಣೆಯನ್ನು ಪದೇ ಪದೇ ಹೇಳಿಕೊಳ್ಳುವುದರ ಮೂಲಕ ನಮ್ಮ ಧೈರ್ಯ ಹೆಚ್ಚಿಸಿಕೊಂಡು, ವಿಚಾರಗಳನ್ನು ಉಳಿಸಿಕೊಳ್ಳುವುದು ಸಾಧ್ಯ. ಆ ಸ್ಫೂರ್ತಿಗಾಗಿಯೇ ನಾವೀ ಕೂಗನ್ನು ಇನ್ನೂ ಗಟ್ಟಿಯಾಗಿ ಕೂಗಬೇಕಿದೆ.

ಹಾಗೆಯೇ, ಕ್ರಾಂತಿ ಎಂಬ ಪದವನ್ನು ಅಕ್ಷರಷಃ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ವಿವಿಧ ಅರ್ಥಗಳು ಮತ್ತು ಪ್ರಾಮುಖ್ಯತೆಗಳು ಈ ಶಬ್ಧಕ್ಕೆ ಇವೆ. ಅದು ಉಪಯೋಗಿಸಿಕೊಳ್ಳುವವರು ಅಥವಾ ದುರುಪಯೋಗಪಡಿಸಿಕೊಳ್ಳುವವರ ಆಸಕ್ತಿಗಳ ಮೇಲೆ ಅವಲಂಬಿತ. ಶೋಷಣೆಯನ್ನೇ ಗುರಿಯಾಗಿಸಿಕೊಂಡಿರುವ ಸ್ಥಾಪಿತ ಬ್ಯುರಾಕ್ರಸಿಯ ಏಜೆಂಟರುಗಳ ಪಾಲಿಗೆ ಇದು ರಕ್ತದ ಕಲೆಯ ಭಯಾನಕ ಭಾವನೆಗಳನ್ನೇ ಉದ್ದೀಪಿಸಬಹುದು. ಆದರೆ ಕ್ರಾಂತಿಕಾರಿಗಳಿಗೆ ಅದು ಪವಿತ್ರ ವಾಕ್ಯ.

ಈ ಎಲ್ಲ ವಿಚಾರಗಳನ್ನು ಅಸೆಂಬ್ಲಿ ಬಾಂಬ್ ಕೇಸ್ ಸಂಬಂಧಿತ ಮೊಕದ್ದಮೆಗಳು ನಡೆಯುವಾಗ ವಿಚಾರಣೆಗಳ ನಡುವೆ ದೆಹಲಿಯ ಸೆಷನ್ ಜಡ್ಜ್‌ಗಳ ಎದುರು ಸ್ಪಷ್ಟಪಡಿಸಲು ಯತ್ನಿಸಿ ಹೇಳಿಕೆಯೊಂದನ್ನು ಕೊಟ್ಟಿದ್ದೆವು. ಅದರಲ್ಲಿ “ಕ್ರಾಂತಿ”ಯ ಅರ್ಥವನ್ನು ವಿವರಿಸಿದ್ದೆವು.

ಅಲ್ಲಿ “ಕ್ರಾಂತಿ”ಯು ರಕ್ತಸಿಕ್ತ ಸಂಘರ್ಷವನ್ನು ಒಳಗೊಳ್ಳಲೇಬೆಕಾದ ಅಗತ್ಯವೇನೂ ಇಲ್ಲ ಎಂದು ಹೇಳಿದ್ದೆವು. ಖಂಡಿತವಾಗಿಯೂ “ಕ್ರಾಂತಿ”ಯು ಬಾಂಬ್ ಅಥವಾ ಪಿಸ್ತೂಲ್‌ನ ಸಂಸ್ಕೃತಿಯಲ್ಲ. ಕೆಲಬಾರಿ ಅನಿವಾರ್ಯತೆಗೆ ಕಾರ್ಯಸಾಧನೆಗೆ ಮಾತ್ರ ಆ ದಾರಿ ಹಿಡಿಯಬಹುದು. ಮತ್ತು ಕೆಲವು ಆಂದೋಲನಗಳಲ್ಲಿ ಬಾಂಬ್ ಹಾಗೂ ಪಿಸ್ತೂಲುಗಳು ಪ್ರಮುಖ ಪಾತ್ರ ವಹಿಸುವದರಲ್ಲಿ ಸಂಶಯವೇನೂ ಇಲ್ಲ. ಆದರೆ, ಈ ಕಾರಣಕ್ಕಾಗಿಯೇ ಅದು ಎಲ್ಲ ಸಂದರ್ಭಗಳಲ್ಲಿ ಕಡ್ಡಾಯವೆಂದೂ, ಪ್ರತಿಬಾರಿ ಪ್ರತಿ ಆಂದೋಲನ ರಕ್ತಸಿಕ್ತ ಘರ್ಷಣೆಯೇ ಆಗಬೇಕೆಂದೇನೂ ಇಲ್ಲ. ದಂಗೆಯೇಳುವುದು ಕ್ರಾಂತಿಯಲ್ಲ. ಆದರೆ ದಂಗೆಯೇಳುವುದರ ಮೂಲಕ ಅಂತಿಮವಾಗಿ “ಕ್ರಾಂತಿ”ಯನ್ನು ತಲುಪಬಹುದು ಎನ್ನಬಹುದು. ಈ ಅರಿವಿನಲ್ಲಿ, ಈ ಪ್ರಜ್ಞೆಯಲ್ಲಿ ಕ್ರಾಂತಿ ಎಂದರೆ ಸ್ಫೂರ್ತಿ.

’ಕ್ರಾಂತಿ’ ಎಂದರೆ ಬದಲಾವಣೆ-ಅದು ಈಗಿರುವುದಕ್ಕಿಂತ ಉತ್ತಮವಾದ ದಿಕ್ಕಿನಲ್ಲಿ ನಡೆಯಬೇಕಾದ ಬದಲಾವಣೆ. ಆ ಬದಲಾವಣೆಗಾಗಿ ಹಾತೊರೆಯುವ ಕ್ರಿಯೆಯೇ ಕ್ರಾಂತಿ. ಸಾಮಾನ್ಯವಾಗಿ ಜನಸಮುದಾಯವು ಸ್ಥಾಪಿತಗೊಂಡ ಸ್ಥಿತಿಗಳಿಗೆ ಇದುವರೆಗೂ ಹೀಗೇ ಇತ್ತು ಹೀಗೇ ಇರುತ್ತೆ ಎಂಬ ಭಾವನೆಗೆ ಜೋತುಬಿದ್ದು, ಅದನ್ನೇ ಅಭ್ಯಾಸ ಮಾಡಿಕೊಂಡಿರುವುದು ಸಹಜ. ಮತ್ತು ಬದಲಾವಣೆ ಎಂಬ ಪದವೇ ಅವರು ನಡುಗುವಂತೆ ಮಾಡುತ್ತದೆ. ಆ ವಿಚಾರ ಬಂದೊಡನೆ ಜನ ಕಂಪಿಸುತ್ತಾರೆ. ಇಂಥ ಅಪಾಯಕಾರಿ ಸ್ಥಿತಿಯು ಕ್ರಾಂತಿಯಿಂದ ಸ್ಫೂರ್ತಿ ಹೊಂದಿ ಬದಲಾವಣೆಗೆ ಸ್ಥಳಾಂತರಗೊಳ್ಳುವ ಅವಶ್ಯಕತೆಯಿದೆ. ಇಲ್ಲವಾದಲ್ಲಿ ಅಧಮತನವೇ, ನೀಚ ನಡಾವಳಿಕೆಗಳೇ ಮೇಲುಗೈ ಸಾಧಿಸಿ, ಇಡೀ ಮನುಕುಲವು ಪ್ರತಿಕೂಲ ಬಲಗಳಿಗೆ ಸಿಕ್ಕಿ, ಹಾದಿ ತಪ್ಪಿ ನಡೆಯಲೂಬಹುದು. ಇಂಥ ಸಂದರ್ಭಗಳು ಯಾವ ಸುಧಾರಣೆಯೂ ಇಲ್ಲದ ಸ್ಥಬ್ದತೆಯನ್ನು ತಲುಪುತ್ತದೆ ಮತ್ತು ಮನುಷ್ಯನ ಪ್ರಗತಿಗೆ ಲಕ್ವಾ ಹೊಡೆಯುತ್ತದೆ.

ಕ್ರಾಂತಿಯ ಸ್ಫೂರ್ತಿಯು ಮನುಷ್ಯನ ಆತ್ಮವನ್ನು ಪುನರುಜ್ಜೀವನಗೊಳಿಸಬಲ್ಲುದು. ಆ ಮೂಲಕ ಪ್ರತಿಕೂಲ ಬಲಗಳು ತಮ್ಮ ಶಕ್ತಿಯನ್ನು ಪರಿಚಯಿಸಿಕೊಂಡು ಮತ್ತೆ ಶಾಶ್ವತವಾಗಿ ಮುಂದುವರಿಯಲು ತಡೆಯೊಡ್ಡಬಹುದು. ಪುರಾತನವಾದ ಅಭ್ಯಾಸಗಳು ಬದಲಾಗಬೇಕು. ಸದಾ ಕಾಲ, ನಿರಂತರವಾಗಿ ಬದಲಾವಣೆ ಜರುಗಬೇಕು. ಅದು ಹೊಸದಕ್ಕೆ ದಾರಿ ಮಾಡಿಕೊಡಬೇಕು. ಆಗ ಒಳ್ಳೆಯದು ಎಂಬ ಭ್ರಮೆ ಹುಟ್ಟಿಸುವ ಯಾವ ಅಭ್ಯಾಸವೂ ಲೋಕವನ್ನು ಹಾಳುಗೆಡವಲಾರದು. ಈ ಅರ್ಥದಲ್ಲಿ ನಾವು ಸದಾ ಈ ಘೋಷಣೆಯ ಕೂಗನ್ನು ಎತ್ತುತ್ತೇವೆ.

ಕ್ರಾಂತಿ ಚಿರಾಯುವಾಗಲಿ.