Category Archives: ರವಿ ಕೃಷ್ಣಾರೆಡ್ಡಿ

ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ

– ರವಿ ಕೃಷ್ಣಾರೆಡ್ಡಿ

[ಇದೇ ತಿಂಗಳ 9 ರಂದು (09-07-2016) ಧಾರವಾಡದಲ್ಲಿ ನಡೆದ “ಜನಪರ್ಯಾಯ” ಸಮಾವೇಶದಲ್ಲಿ ಮಂಡಿಸಿದ ವಿಷಯದ ಲೇಖನ ರೂಪ.]

ಭಾರತ ದೇಶದಲ್ಲಿ ಕರ್ನಾಟಕ ಭೌಗೋಳಿಕವಾಗಿ ಏಳನೇ ದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ಎಂಟನೆಯದು. ದಕ್ಷಿಣ ಭಾರತದಲ್ಲಿ ಇಂದು ಭೌಗೋಳಿಕವಾಗಿ ಅತಿದೊಡ್ಡ ರಾಜ್ಯ ಮತ್ತು ಜನಸಂಖ್ಯೆಯಲ್ಲಿ ತಮಿಳುನಾಡಿನ ನಂತರದ ಸ್ಥಾನದಲ್ಲಿದೆ. ಅಪಾರ ವೈವಿಧ್ಯತೆ ಮತ್ತು ಸಂಕೀರ್ಣತೆಗಳಿಂದ ಕೂಡಿದ ರಾಜ್ಯ ಇದು.

ಇದೇ ರಾಜ್ಯದಲ್ಲಿಯೆ, ಇಲ್ಲಿಂದ ಅಷ್ಟೇನೂ ದೂರವಿರದ ಬಿಜಾಪುರ ಮತ್ತು ಬೀದರ್ ಜಿಲ್ಲೆಯ ಕಲ್ಯಾಣದಲ್ಲಿ ಸುಮಾರು ಎಂಟು-ಒಂಬತ್ತು ನೂರು ವರ್ಷಗಳ ಹಿಂದೆ ಭಾರತದಲ್ಲಿಯೇ ಅಪರೂಪವಾದ ಸಾಮಾಜಿಕ ಕ್ರಾಂತಿ ನಡೆದಿತ್ತು. rkr-janaparyaya-dharwad-09072016ಆ ಕ್ರಾಂತಿಯ ನೆರಳು ಮತ್ತು ಪ್ರಭಾವ ಇಂದೂ ಸಹ ಕರ್ನಾಟಕದಲ್ಲಿ ಗಾಢವಾಗಿದೆ. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಯಂತಹ ನೂರಾರು ಶರಣರು ಸಾಮೂಹಿಕ ನೆಲೆಗಟ್ಟಿನಲ್ಲಿ ಅಂದಿನ ಅಸಮಾನತೆ, ಜಾತಿವ್ಯವಸ್ಥೆ, ಶೋಷಣೆಯ ವಿರುದ್ಧ ಕಟ್ಟಿದ ಹೋರಾಟ, ಬಂಡಾಯ, ಚಳವಳಿ ಅದು. ಅಂದು ಕಲ್ಯಾಣದಲ್ಲಿ ರಕ್ತಪಾತವಾಗಿ ನೂರಾರು-ಸಾವಿರಾರು ಕಗ್ಗೊಲೆಗಳಾಗಿ, ಬಸವಣ್ಣನೇ ಅಕಾಲಿಕ ಸಾವಿಗೆ ಈಡಾದರೂ, ಇಂದಿಗೂ ಆ ಕ್ರಾಂತಿ ಚಾಲ್ತಿಯಲ್ಲಿರುವುದು ಈ ನಾಡಿನ ಹೆಮ್ಮೆಯೂ ಹೌದು, ದುರಂತವೂ ಹೌದು.

ಅದೇ ರೀತಿ ಈ ನಾಡಿಗೆ ಕಳೆದ ಶತಮಾನದಲ್ಲಿ ವೈಚಾರಿಕ ದೀಕ್ಷೆ ಕೊಟ್ಟವರು ಕುವೆಂಪು. “ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ” ಎಂದು ಹೇಳಿದ ಆ ದಾರ್ಶನಿಕ ಕವಿ “ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜ ಮತಕೆ” ಎಂದು ಆಹ್ವಾನ ಕೊಡುವ ಮೂಲಕ ಸರ್ವೋದಯ, ಸಹಕಾರ, ಸಹಬಾಳ್ವೆ, ಸಮಭಾಗಿತ್ವ, ಸಮತ್ವ, ಸಮಾನತೆಯ ದಾರಿದೀಪ ತೋರಿಸಿದವರು.

ಇಲ್ಲಿಯ ರಾಜಕಾರಣ ಜಾತಿ ಮತ್ತು ಹಣದ ಪ್ರಭಾವಕ್ಕೆ ಸಿಲುಕುತ್ತಿದ್ದಂತಹ ಸಂದರ್ಭದಲ್ಲಿ 50-60 ರ ದಶಕದಲ್ಲಿಯೇ “ಒಂದು ವೋಟು, ಒಂದು ನೋಟು” ಘೋಷಣೆಯ ಮೂಲಕ ಜನಸಾಮಾನ್ಯರ ಸಹಭಾಗಿತ್ವದಲ್ಲಿ, ಜನರ ದುಡ್ಡಿನಲ್ಲಿಯೇ ಬಲಾಢ್ಯರ ಹಣ ಮತ್ತು ಜಾತಿಯ ಪ್ರಭಾವವನ್ನು ಹಿಮ್ಮೆಟ್ಟಿಸಿ ಈ ರಾಜ್ಯದಲ್ಲಿ ಮುಂದಿನ ದಿನಗಳ ಸಾಮಾಜಿಕ ನ್ಯಾಯ ಮತ್ತು ಭೂಸುಧಾರಣೆಯ ಹೋರಾಟಗಳಿಗೆ ಜನಪರ್ಯಾಯ ಮಾರ್ಗ ತೋರಿಸಿದವರು ಶಾಂತವೇರಿ ಗೋಪಾಲ ಗೌಡರು.

ಹೀಗೆ ದೇಶದ ಯಾವುದೇ ಭಾಗದ ಆದರ್ಶ ಮತ್ತು ಕನಸುಗಳಿಗೂ ಕಡಿಮೆಯಿಲ್ಲದ ರೀತಿ ಈ ರಾಜ್ಯ, ಅಂದರೆ ಇಲ್ಲಿಯ ಜನ, ತಮ್ಮ ಜೀವನವನ್ನು ಹಲವಾರು ಸವಾಲುಗಳನ್ನು ಎದುರಿಸುತ್ತಾ ಕಟ್ಟಿಕೊಳ್ಳುತ್ತಾ ಬಂದಿದ್ದಾರೆ,

ಆದರೆ, ಈಗ?

ಇದೇ ಧಾರವಾಡದ ಅವಿಭಜಿತ ಜಿಲ್ಲೆಯಲ್ಲಿ ಮತ್ತು ಪಕ್ಕದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಕುಡಿಯುವ ಮತ್ತು ನೀರಾವರಿ ಸೌಲಭ್ಯಕ್ಕಾಗಿ ರೈತರು ಕಳೆದ ಒಂದು kalasabanduri-mapವರ್ಷದಿಂದ ನಿರಂತರ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ನರಗುಂದ ಮತ್ತು ನವಲಗುಂದದಲ್ಲಿ ರೈತರು ಸ್ವಯಂಪ್ರೇರಣೆಯಿಂದ ಪ್ರತಿದಿನ ಧರಣಿಯ ಸ್ಥಳದಲ್ಲಿ ಹಾಜರಿದ್ದು ಹೋರಾಟವನ್ನು ಜೀವಂತ ಇಟ್ಟಿದ್ದಾರೆ. ಅದೇ ರೀತಿ ಚಿಕ್ಕಬಳ್ಳಾಪುರದಲ್ಲಿಯೂ ನೂರಕ್ಕೂ ಹೆಚ್ಚು ದಿನ ಬಯಲುಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೋರಾಟ ಮಾಡಿತು. ಮಂಡ್ಯ ಜಿಲ್ಲೆ ಒಂದರಲ್ಲಿಯೇ 2015 ರಲ್ಲಿ ನೂರು ರೈತರು ಆತ್ಮಹತ್ಯೆ ಮಾಡಿಕೊಂಡರು; ರಾಜ್ಯದಲ್ಲಿ ಆ ಸಂಖ್ಯೆ ಒಂದೂವರೆ ಸಾವಿರಕ್ಕಿಂತ ಹೆಚ್ಚು. 2015-16 ರಲ್ಲಿ ಸರ್ಕಾರಿ ಅಂಕಿಅಂಶಗಳ ಪ್ರಕಾರ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 817. ರಾಜ್ಯದಲ್ಲಿ ಆರೇಳು ತಿಂಗಳ ಹಿಂದೆ ಸುಮಾರು ನಾಲ್ಕೂವರೆ ಸಾವಿರ FDA/SDA ಹುದ್ದೆಗಳಿಗೆ KPSC ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯೇ ಸೋರಿಕೆ ಆಗಿತ್ತು. ಅದು ಮತ್ತು ಅಂತಹ ಅಕ್ರಮಗಳು ನಮ್ಮ ರಾಜ್ಯದಲ್ಲಿ ಆಗುತ್ತಲೇ ಇರುತ್ತವೆ. ನಮ್ಮ ರಾಜ್ಯಕ್ಕೆ ಅದು ದೊಡ್ದ ವಿಷಯವೇ ಅಲ್ಲ. ಆದರೆ ಅದಕ್ಕಿಂತ ದೊಡ್ಡ ವಿಷಯ ಅಥವ ದುರಂತ ಎಂದರೆ ಆ ನಾಲ್ಕೂವರೆ ಸಾವಿರ ನೌಕರಿಗಳಿಗೆ ಪರೀಕ್ಷೆ ಬರೆದವರು ಮಾತ್ರ ರಾಜ್ಯದ ಕೇವಲ 19 ಲಕ್ಷ ಬಡ ನಿರುದ್ಯೋಗಿ ಯುವಕರು!

ಈಗ ಎಲ್ಲದಕ್ಕಿಂತ ದೊಡ್ಡ ದುರಂತ ಯಾವುದು?

ತೀರಾ ಇತ್ತೀಚೆಗೆ, ಮೂರ್ನಾಲ್ಕು ತಿಂಗಳ ಹಿಂದೆ, ತಾಲ್ಲೂಕು-ಜಿಲ್ಲಾ ಪಂಚಾಯತ್ ಚುನಾವಣೆಗಳಾದವು. ಈ ಮೇಲಿನ ಯಾವುವೂ ಚುನಾವಣೆ ವಿಷಯಗಳಾಗಲಿಲ್ಲ.

ಇದೇ ಬಸವಣ್ಣನ ನಾಡಿನಲ್ಲಿ ಇಂದು ಮರ್ಯಾದಾಹತ್ಯೆಗಳಾಗುತ್ತಿವೆ. ಜಾತಿಯ ಕಾರಣಕ್ಕೆ ತಲೆ ಕಡಿಯುತ್ತಿದ್ದಾರೆ. ಈ ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜಾತಿಜಾತಿಗೇ ಸ್ಮಶಾನ ಮೀಸಲೀಡುತ್ತದೆ. ಸರ್ಕಾರದ ಸಮುದಾಯ ಭವನಗಳು ಅಧಿಕೃತವಾಗಿ ಜಾತಿ ಸಮುದಾಯ ಭವನಗಳಾಗಿವೆ. ಜಾತಿಗಳಿಗಷ್ಟೇ ಮೀಸಲಾದ ರಾಜಕೀಯ ಪಕ್ಷಗಳಿವೆ; ಜಿಲ್ಲೆಗಳಿವೆ.

ಇದೇ ನೆಲದಲ್ಲಿ, garments-workers-2016ಯಾರದೇ ಚಿತಾವಣೆ ಇಲ್ಲದೆ ಲಕ್ಷಾಂತರ ಮಹಿಳಾ ಕಾರ್ಮಿಕರು ಇಡೀ ದೇಶದ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಾರೆ.

ಭ್ರಷ್ಟ ಬಿಜೆಪಿಯನ್ನು ಆಚೆಗಟ್ಟಿ ಅಪಾರ ನಿರೀಕ್ಷೆ ಮತ್ತು ಆಶಾಕಿರಣದೊಂದಿಗೆ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ನೈತಿಕವಾಗಿ ನೆಲಕಚ್ಚಿದೆ. ಅಧಿಕಾರ ಸ್ವೀಕರಿಸುತ್ತಲೇ ಅನ್ನಭಾಗ್ಯ ಹಾಗು ಇತರೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ ಇಂದು ಸಿದ್ಧರಾಮಯ್ಯ ಅವರ ಸರ್ಕಾರ ಸ್ವಜನ ಪಕ್ಷಪಾತ ಹಾಗು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಅಕ್ರಮ ಗಣಿಗಾರಿಕೆಯ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪಾದಯಾತ್ರೆ ಮಾಡಿದ್ದರು. ಆದರೆ ಇಂದು ಅಕ್ರಮ ಗಣಿಗಾರಿಕೆ ಮಾಡಿರುವವರು ಅವರ ಸಚಿವ ಸಂಪುಟದಲ್ಲಿದ್ದಾರೆ ಮತ್ತು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ವಿಸ್ತೃತವಾಗಿ ಬಯಲಿಗೆಳೆದ ಲೋಕಾಯುಕ್ತ ಸಂಸ್ಥೆಯನ್ನೇ ಇಂದು ಮೂಲೆಗುಂಪು ಮಾಡಿ ಸರ್ಕಾರದ ಕೈಗೊಂಬೆಯಂತಿರುವ ಮತ್ತು ಭ್ರಷ್ಟರನ್ನು ರಕ್ಷಿಸುವ ಎಸಿಬಿಯನ್ನು ಆರಂಭಿಸಿದ್ದಾರೆ. ಲೋಕಾಯುಕ್ತದಲ್ಲಿ ಹತ್ತಾರು ಮೊಕದ್ದಮೆಗಳಿರುವ ಮತ್ತು ಸರ್ಕಾರಿ ಅಧಿಕಾರಿಗಳ ಭ್ರಷ್ಟತೆಗೆ ಸಂಕೇತವಾಗಿರುವ ಶ್ಯಾಮ್ ಭಟ್ಟರನ್ನು ರಾಜ್ಯದ ಮುಂದಿನ ಸರ್ಕಾರಿ ಅಧಿಕಾರಿಗಳ ನೇಮಕಾತಿ ನಡೆಸುವ ಕೆಪಿಎಸ್‌ಸಿಗೆ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. lokayukta_karnatakaಸ್ವತಃ ಸಿದ್ಧರಾಮಯ್ಯನವರೇ ಸ್ವಜನ ಪಕ್ಷಪಾತದಲ್ಲಿ ಸಿಲುಕಿಕೊಂಡಿದ್ದಾರೆ. ದುಬಾರಿ ವಾಚ್ ಪ್ರಕರಣದಿಂದ ಹಿಡಿದು ತಮ್ಮ ಮಗನಿಗೆ ಆಸ್ಪತ್ರೆ ಕಾಂಟ್ರಾಕ್ಟ್ ನೀಡುವಿಕೆಯಲ್ಲಿ ಸೇರಿ ಹಲವಾರು ಅಕ್ರಮಗಳಲ್ಲಿ ಸಿಲುಕಿದ್ದಾರೆ. ಯಾವ ವ್ಯಕ್ತಿಯನ್ನು ಕಳಂಕಿತ ಎಂದು ಸಚಿವ ಸಂಪುಟದಿಂದ ಹೊರಗಿಟ್ಟಿದ್ದರೊ, ಯಾವ ವ್ಯಕ್ತಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಡಿನೋಟಿಫಿಕೇಷನ್ ಹಗರಣದ ಫಲಾನುಭವಿಯಾಗಿದ್ದರೋ, ಆ ಡಿ.ಕೆ.ಶಿವಕುಮಾರ್‌ರನ್ನು ಈಗ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಮತ್ತು ಅವರ ಉಸ್ತುವಾರಿಯಲ್ಲಿ ಆ ಪಕ್ಷ ಮುಂದಿನ ಚುನಾವಣೆ ನಡೆಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದ ಇತಿಹಾಸದಲ್ಲೇ ಜೈಲಿಗೆ ಹೋದ ಮುಖ್ಯಮಂತ್ರಿ ಎಂಬ ಅಪಖ್ಯಾತಿ ಪಡೆದ ಬಿ. ಎಸ್. ಯಡಿಯೂರಪ್ಪನವರನ್ನೇ ಇಂದು ಬಿಜೆಪಿಯು ಅಧಿಕಾರ ಹಿಡಿಯುವ ಸಲುವಾಗಿ ಮತ್ತು ಜಾತಿಯ ಬೆಂಬಲಕ್ಕಾಗಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ತಮ್ಮ ಐದೂ ವರ್ಷದ ಆಡಳಿತಾವಧಿಯಲ್ಲಿ ಅಪಾರ ಭ್ರಷ್ಟಾಚಾರ ಮತ್ತು ’ಆಪರೇಷನ್ ಕಮಲ’ದಂತಹ ಅನೈತಿಕ ಚುನಾವಣಾ ರಾಜಕಾರಣ ಮಾಡಿದ್ದು ಬಿಜೆಪಿ. ಕಳ್ಳತನ ಮತ್ತು ಭ್ರಷ್ಟಾಚಾರವನ್ನು ಕದ್ದುಮುಚ್ಚಿ ಮಾಡದೇ ಬಹಿರಂಗವಾಗಿ ಮತ್ತು ಪಾರದರ್ಶಕವಾಗಿ ಮಾಡಿದ ಕೀರ್ತಿ ಅವರದು. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿದ್ದು, ಜಾತೀಯತೆಯನ್ನು ಪೋಷಿಸುವ ಜಾತಿ ಸಂಘಗಳಿಗೆ ಹುಡುಕಿಹುಡುಕಿ ಹಣ ಕೊಟ್ಟಿದ್ದು, ಬೆಳಗ್ಗೆ ಸರ್ಕಾರಿ ಆದೇಶಕ್ಕೆ ಸಹಿ ಮಾಡಿ ಸಂಜೆಗೆ ಚೆಕ್‌ನಲ್ಲಿ ಲಂಚದ ಹಣ ಪಡೆದದ್ದು, ಗೊತ್ತಿದ್ದೂ ಗೊತ್ತಿದ್ದು ಭಾಸ್ಕರ್ ರಾವ್‌ರಂತಹ ಭ್ರಷ್ಟನನ್ನು ಲೋಕಾಯುಕ್ತರನ್ನಾಗಿ ನೇಮಿಸಿದ್ದು, ಶ್ಯಾಮ್ ಭಟ್‌ರನ್ನು ಬಿಡಿಎ ಯಂತಹ ಅಕ್ರಮ ಕೂಪಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದು; ಅಕ್ರಮ ಗಣಿಗಾರಿಕೆಯಲ್ಲಿ ಸಚಿವರೇ ಪಾಲುದಾರರಾಗಿದ್ದದ್ದು, ಅಕ್ರಮ ಡಿನೋಟಿಫಿಕೇಷನ್‌ಗಳನ್ನು ಮಾಡಿ ಮಾಡಿ ಮಂತ್ರಿ-ಮುಖ್ಯಮಂತ್ರಿಗಳಾಗಿದ್ದವರೇ ಪ್ರತಿದಿನ ಕೋರ್ಟ್‍ಗೆ ಅಲೆದಿದ್ದು, ಮೂರು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳಾಗಿದ್ದು, ಒಂದು ಸಂದರ್ಭದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ, ನಾಲ್ವರು ಮಾಜಿ ಮಂತ್ರಿಗಳು, ಒಬ್ಬ ಶಾಸಕ ವಿಚಾರಣಾಧೀನ ಕೈದಿಗಳಾಗಿದ್ದದ್ದು, ಸಚಿವರೇ ಸದನದಲ್ಲಿ ಬ್ಲೂಫಿಲ್ಮ್ ನೋಡುತ್ತ ಕಾಲಕಳೆದದ್ದು; ಒಂದೇ ಎರಡೇ ಆ ಐದು ವರ್ಷಗಳಲ್ಲಿ ಘಟಿಸಿದ್ದು?

ಇನ್ನು, ಜಾತ್ಯತೀತ ಪಕ್ಷ ಎಂದು ತಮ್ಮ ಹೆಸರಿಗೆ ಸೇರಿಸಿಕೊಂಡಿರುವ ಜಾತ್ಯತೀತ ಜನತಾದಳ ತನ್ನ ಜಾತೀವಾದವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ತವರು ಜಿಲ್ಲೆ ಹಾಸನದ ಸಿಗರನಹಳ್ಳಿಯ ಪ್ರಸಂಗ ಜಗಜ್ಜಾಹಿರು ಮಾಡಿದೆ. ಆ ಊರಿನಲ್ಲಿರುವ ಸರ್ಕಾರಿ ಸಮುದಾಯ ಭವನ ಒಂದು ನಿರ್ದಿಷ್ಟ ಜಾತಿಯ ಸಮುದಾಯ ಭವನ ಎಂಬ ಬೋರ್ಡ್ ಹಾಕಿಕೊಂಡಿತ್ತು. ಜನರ ಹೋರಾಟದ ಫಲವಾಗಿ ಮತ್ತು ಮಾಧ್ಯಮಗಳಲ್ಲಿ sigaranahalli-hassanರಾಜ್ಯ-ರಾಷ್ಟ್ರ ಮಟ್ಟದಲ್ಲಿ ವರದಿಯಾದ ಕಾರಣ ಇಂದು ಆ ನಾಮಫಲಕ ಬದಲಾಗಿದೆ. ಅಂದ ಮಾತ್ರಕ್ಕೆ ದಲಿತರಿಗೆ ಪ್ರವೇಶವೇನೂ ಸಿಕ್ಕಿಲ್ಲ. AC/DySP/ತಹಸೀಲ್ದಾರ್ ಹುದ್ದೆಗಳನ್ನು ಕೋಟಿಗಳಿಗೆ ಹರಾಜು ಹಾಕಿದ ಭ್ರಷ್ಟ ವ್ಯಕ್ತಿಯನ್ನು ದೇವೇಗೌಡರು ಇತ್ತೀಚೆಗೆ ಯಾವ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಎನ್ನುವುದು ನಮ್ಮ ಮುಂದೆಯೇ ಇದೆ. ಅನುಕೂಲಸಿಂಧು ರಾಜಕಾರಣಕ್ಕೆ ಉತ್ತಮ ಉದಾಹರಣೆಯಾಗಿರುವ ಈ ಜೆಡಿಎಸ್ ಜೊತೆಗೆ ಸ್ಥಳೀಯವಾಗಿ ನಗರಸಭೆ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಹೊಂದಾಣಿಕೆ ಮಾಡಿಕೊಂಡಿವೆ. ಇದರಲ್ಲಿ ಜೆಡಿಎಸ್‌ದು ಮಾತ್ರ ಅನೈತಿಕ ರಾಜಕಾರಣ ಎಂದರೆ ಅದು ನಮ್ಮ ಅಪ್ರಾಮಾಣಿಕ ಮಾತಾಗುತ್ತದೆ.

ಇತ್ತೀಚೆಗೆ ತಾನೆ ವಿಧಾನಪರಿಷತ್ತು ಮತ್ತು ರಾಜ್ಯಸಭೆಗೆ ಶಾಸಕರಿಂದ ಚುನಾವಣೆ ನಡೆಯಿತು. ದೇಶದ ಪ್ರಮುಖ ಮಾಧ್ಯಮಗಳಲ್ಲಿ ರಾಜ್ಯದ ಹೆಸರು ಹರಾಜಾಯಿತು. ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಂದ ಚುನಾವಣೆ ನಡೆಯಿತು. ಶಿಕ್ಷಕರು ಮತ್ತು ಪದವೀಧರರಿಗೂ ಹಣ ಮತ್ತು ಗಿಫ್ಟ್‌ಗಳನ್ನು ಹಂಚಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಇದರಲ್ಲಿ ಆ ಪಕ್ಷ, ಈ ಪಕ್ಷ ಅಂತಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಮೂರೂ ಒಂದೇ ತರಹದ ಕಾರ್ಯಾಚರಣೆ, ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿವೆ. ಆಯಾಯಾ ಕ್ಷೇತ್ರಕ್ಕೆ ಯಾರ ಹಣ ಹೆಚ್ಚಾಗಿ ಖರ್ಚಾಗುತ್ತಿದೆಯೋ, ಅಥವ ಯಾವ ಜಾತಿ/ಒಳಜಾತಿ ಲೆಕ್ಕಾಚಾರ ಕೆಲಸ ಮಾಡುತ್ತದೆಯೋ ಅದಕ್ಕೆ ಅನುಗುಣವಾಗಿ ಫಲಿತಾಂಶ ಬರುತ್ತಿದೆ.

ಹೀಗೆ ನೈತಿಕವಾಗಿ ದಿವಾಳಿಯಾಗಿರುವ ಪಕ್ಷಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ರಾಜ್ಯದ ನೈಸರ್ಗಿಕ ಸಂಪತ್ತುಗಳಾದ ಮರಳು, ಅರಣ್ಯ, ಗ್ರಾನೈಟ್, ಭೂಮಿ ಯಾವುದೇ ನಿಯಂತ್ರಣವಿಲ್ಲದೆ dharwad-janaparyaya-09072016ಪಟ್ಟಭದ್ರರ ಪಾಲಾಗುತ್ತಿದೆ. ಇದಾವುದೂ ಅವರುಗಳ ಗಮನಕ್ಕೆ ಬರದಂತೆಯೇ ವರ್ತಿಸುತ್ತಿದ್ದಾರೆ. ಈ ಪಟ್ಟಭದ್ರರು ಇಂದಿನ ಮತ್ತು ಹಿಂದಿನ ಸರ್ಕಾದಲ್ಲಿ ಇದ್ದವರೇ ಆಗಿದ್ದಾರೆ. ಇಂತಹವರಿಂದ ಜನ ಸಾಮಾನ್ಯರ ಹಕ್ಕು ಮತ್ತು ಆಸ್ತಿಗಳ ರಕ್ಷಣೆಯನ್ನು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ?

ನೈಸರ್ಗಿಕ ಸಂಪತ್ತುಗಳು ಕೆಲವೇ ಕೆಲವು ಮಂದಿಯ ಸ್ವತ್ತಾಗುವುದರ ಜೊತೆಗೆ, ಸಾಮಾಜಿಕ ನ್ಯಾಯ ಅರ್ಹ ವರ್ಗಗಳಿಗೆ ತಲುಪುತ್ತಿಲ್ಲ.

ಶೋಷಣೆ, ತಾರತಮ್ಯ, ದೇವರು-ದೆವ್ವ-ನಂಬಿಕೆ ಹೆಸರಿನಲ್ಲಿ ಅಮಾನವೀಯ ಆಚರಣೆಗಳು ಮುಂದುವರೆಯುತ್ತಲೇ ಇವೆ.

ಎಂಟು ನೂರು ವರ್ಷಗಳ ಹಿಂದೆ ಬಸವಣ್ಣ ಹೇಳಿದ್ದು ಇಂದಿಗೂ ಪ್ರಸ್ತುತ, ಏಕೆಂದರೆ ಇಂದಿಗೂ ಆವತ್ತಿನ ಸಮಸ್ಯೆಗಳು ಮುಂದುವರೆಯುತ್ತಿವೆ.

ಇದು ಕರ್ನಾಟಕದ ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣ.

ಹೊಲ ಮೇಯ್ದ ಬೇಲಿ ಜಾಗ ಖಾಲಿ ಮಾಡಿತು

ಕೃಷ್ಣಮೂರ್ತಿ. ಕೆ

ಅಲ್ಲಲ್ಲಿ ಗುಸು-ಗುಸು ಮೂಲಕ ಆರಂಭವಾದ ಸುದ್ದಿಯೊಂದು ಮೊನ್ನೆ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಅವರ ರಾಜೀನಾಮೆಯೊಂದಿಗೆ ಒಂದು ಹಂತಕ್ಕೆ ಬಂದಿದೆ. ಎಂ.ಎಸ್ ಬಿಲ್ಡಿಂಗ್ ನ ಕಾರಿಡಾರ್ ಗಳಲ್ಲಿ, ಮೀಡಿಯಾ ಕಚೇರಿಗಳಲ್ಲಿ ಹಾಗೂ ಅಧಿಕಾರಗಳ ಖಾಸಬಾತ್ ನಲ್ಲಿ ಲೋಕಾಯುಕ್ತ ಹಗರಣದ ಸುದ್ದಿ ಹರಿದಾಡುತ್ತಿತ್ತು.

 

ಕೃಷ್ಣಮೂರ್ತಿ ಎಂಬುವವರು Lok-1ದೂರು ಕೊಟ್ಟಿದ್ದಾರೆ ಎಂದಾಗಲೂ, ಅನೇಕರು ವಿಷಯ ಇಷ್ಟೊಂದು ಗಂಭೀರ ಇದೆ ಎಂದು ಪರಿಗಣಿಸಿರಲಿಲ್ಲ. ಆದರೆ, ಕೆಲ ಸುದ್ದಿ ಮಾಧ್ಯಮಗಳ ಆಸಕ್ತಿ ಜೊತೆಗೆ ಈ ವಿಚಾರದ ಕಾವನ್ನು ಹಾಗೇ ಕಾಪಾಡಿಕೊಂಡು ಬಂದವರು ಸಮಾಜ ಪರಿವರ್ತನ ಸಂಸ್ಥೆಯ ಎಸ್.ಆರ್. ಹಿರೇಮಠ ಹಾಗೂ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಾಯಕರು. ಈ ಪಕ್ಷದಲ್ಲಿ ಇದುವರೆಗೆ ಯಾವುದೇ ಚುನಾವಣೆಯಲ್ಲಿ ಗೆದ್ದುಬಂದ ಒಬ್ಬೇ ಒಬ್ಬ ಜನಪ್ರತಿನಿಧಿ ಇಲ್ಲದಿದ್ದರೂ, ವಿಚಾರವನ್ನು ಜನರಿಗೆ ರವಾನಿಸಿ, ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಯುತ್ತಿರುವ ಭಾನಗಡಿಗಳ ಬಗ್ಗೆ ಒಂದು ಅಭಿಪ್ರಾಯ ರೂಪಿಸುವಲ್ಲಿ ಶ್ರಮ ಪಟ್ಟರು. ಹಲವರು ಬಂಧನಕ್ಕೊಳಗಾದರು.
ಇಷ್ಟೆಲ್ಲಾ ಆದ ನಂತರ ಭಾಸ್ಕರ್ ರಾವ್ ರಾಜೀನಾಮೆ ನೀಡಿದರು. ಅದಕ್ಕಿಂತ ಮುಖ್ಯವಾದದ್ದು ಈ ಪ್ರಕರಣದ ತನಿಖೆ ಆರಂಭವಾಗಿ ಕೆಲವರಾದರೂ ಜೈಲುಪಾಲಾಗಿದ್ದು. ನ್ಯಾಯಾಂಗ ಬಂಧನದಲ್ಲಿರುವವರು ಜಾಮೀನಿಗಾಗಿ ಸುಪ್ರಿಂ ಕೋರ್ಟ್ ಗೆ ಮೊರೆ ಇಡುತ್ತಿದ್ದಾರೆ. ಮಾಧ್ಯಮ ಹಾಗೂ ಸಮಾಜದ ಬಗ್ಗೆ ಕಳಕಳಿ ಇರುವ ಕೆಲವರು ನಿಯಮಿತವಾಗಿ ಈ ಬಗ್ಗೆ ದನಿ ಎತ್ತದೇ ಹೋಗಿದ್ದರೆ ವಿಷಯ ಈ ಹಂತ ತಲುಪುತ್ತಿರಲಿಲ್ಲ.

 

 

ರಾಜೀನಾಮೆ ಅಂಗೀಕಾರ ಆದ ತಕ್ಷಣ ಕೆಲವೆಡೆ ರಾಹುಕಾಲ ಮುಗಿಯಿತು, ರಾಜ್ಯಕ್ಕೆ ಅಂಟಿದ್ದ ಭ್ರಷ್ಟ ಕಳಂಕ ತೊಲಗಿತು..ಎಂಬರ್ಥದ ಹೇಳಿಕೆಗಳು ಕೇಳಿಬಂದವು. ಆ ಕ್ಷಣಕ್ಕೆ catchy ಆಗಿರಲೆಂದು ಕೊಟ್ಟ ತಲೆಬರಹಗಳಿರಬಹುದು ಇವು. ಆದರೆ, ಅಂತLok-3ಹ ಮಹತ್ವದ್ದೇನೂ ಆಗಿಲ್ಲ ಎನ್ನುವುದು ಅಷ್ಟೇ ಸತ್ಯ. ಭ್ರಷ್ಟಾಚಾರ ನಿಗ್ರಹಕ್ಕೆಂದು ಇರುವ ಸಂಸ್ಥೆಗೆ ರಾಜಕಾರಣಿಗಳು ದುಡ್ಡು ಪಡೆದು ನೇಮಕ ಮಾಡುತ್ತಾರೆ. ಹಾಗೆ ನೇಮಕ ಆದವರಿಂದ ಆದಷ್ಟು ಲಾಭ ಪಡೆದು, ಅವರನ್ನು ರಕ್ಷಿಸಲು ಕೆಲವರು ಹೊರಡುತ್ತಾರೆ.

 

ಇಡೀ ಸಂಚಿನಲ್ಲಿ ಪಾಲ್ಗೊಂಡ ಪ್ರಮುಖರನ್ನು ಹೊರತು ಪಡಿಸಿ, ಸಣ್ಣ ಪುಟ್ಟವರಷ್ಟೆ ಕೇಸು ಹಾಕಿಸಿಕೊಂಡು ಜೈಲು ಸೇರುತ್ತಾರೆ. ಇಷ್ಟೆಲ್ಲಾ ಗೊತ್ತಾದ ಮೇಲೆ, ಎಂಥ ಮೂಢನಿಗೂ ಅನ್ನಿಸುವ ಸತ್ಯವೆಂದರೆ, ಅಶ್ವಿನ್ ರಾವ್ ಗಿಂತ ಅವರಪ್ಪ ಈ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ಆದರೆ ಅಶ್ವಿನ್ ರಾವ್ ಮಾಡಿದ ತಪ್ಪಿಗೆ ಅವರಪ್ಪ ಸಾಕ್ಷಿಯಂತೆ, ಹಾಗಾಗಿ ಅವರು ರಾಜಿನಾಮೆ ಕೊಟ್ಟರಷ್ಟೆ ಸಾಕು!
ಇಂತಹ ಭ್ರಷ್ಟನನ್ನು ತಂದು ಈ ಸ್ಥಾನಕ್ಕೆ ಕೂರಿಸಿದವರಲ್ಲಿ ಹಲವರ ಪಾತ್ರವಿದೆ. ಹಿಂದಿನ ಸರಕಾರದಲ್ಲಿದ್ದವರು, ಅವರ ಮೇಲೆ ಕೂತಿದ್ದ ಮತ್ತೊಬ್ಬ ತೂಕದ (ಅಲ್ಲಲ್ಲ..’ಭಾರ’ದ) ವ್ಯಕ್ತಿ, ನಂತರ ತಮ್ಮ ಅನುಕಾಲಕ್ಕಾಗಿ ಬಳಸಿಕೊಂಡ ಈಗಿನವರು -ಎಲ್ಲರದೂ ಪಾತ್ರವಿದೆ. ಆದರೆ, ಇವಾರಾರೂ ಜೈಲುಪಾಲಾಗಲಿಲ್ಲ. ಈ ನ್ಯಾಯಮೂರ್ತಿಯವರೂ ಜೈಲುಪಾಲಾಗುತ್ತಾರೇನೋ ಎಂಬ ಬಗ್ಗೆ ಖಾತ್ರಿಯಿಲ್ಲ.
ಇದುವರೆಗೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತಿತ್ತು. ಈ ಪ್ರಕರಣದಿಂದ ನ್ಯಾಯಾಂಗ ಹಾಗೂ ಪತ್ರಿಕೋದ್ಯಮದಲ್ಲಿನ ಭ್ರಷ್ಟತೆ ಬಗ್ಗೆ ಚರ್ಚೆ ಒಂದಿಷ್ಟು ವಿಸ್ತಾರ ಪಡೆದುಕೊಂಡಿತು. ಹೀಗೆ ಹಿಂದೆ ಬಳ್ಳಾರಿ ಗಣಿ ಬಗ್ಗೆ ವರದಿಗಳು ಬಂದಾಗ, ಲೋಕಾಯುಕ್ತ ತನಿಖೆ ಸಂದರ್ಭದಲ್ಲಿ ಗಣಿ ಉದ್ಯಮಿಗಳಿಂದ ಕೆಲ ಮಾಧ್ಯಮದವರಿಗೆ ನಿಯಮಿತವಾಗಿ ಹಣ ರವಾನೆಯಾಗಿದ್ದು ಸುದ್ದಿಯಾಗಿತ್ತು. ಆ ನಂತರ ಅದು ಚರ್ಚೆಯಾಗಲಿಲ್ಲ. ಲೋಕಾಯುಕ್ತ ವ್ಯಾಪ್ತಿಯಲ್ಲಿ ಪತ್ರಿಕೋದ್ಯಮ, ಪತ್ರಕರ್ತರು ಬರುವುದಿಲ್ಲ ಎಂಬ ಕಾರಣಕ್ಕೆ, ಆ ವಿಚಾರ ಅಲ್ಲಿಗೇ ನಿಂತಿತು. ಆ ಬಗ್ಗೆ ಆಗಲೇ ಒಂದು ವಿಚಾರಣೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಬೇಡ, ಕನಿಷ್ಟ ಅಂತಹವರ ಬಗ್ಗೆ ಸಮಾಜದಲ್ಲಿ ಅಸಹ್ಯ ಹುಟ್ಟಿದ್ದರೆ ಸಾಕಿತ್ತು. ಅಂತಹದೊಂದು ಪ್ರಯತ್ನ ಈಗಲಾದರೂ ಆದರೆ ಒಳ್ಳೆಯದು.

 

ಅದರೊಟ್ಟಿಗೆ ನ್ಯಾಯಮೂರ್ತಿ ಎಂಬ ಕಾರಣಕ್ಕೆ ಭಾಸ್ಕರ್ ರಾವ್ ಯಾವುದೋ ನೆಪ ಮಾಡಿಕೊಂಡು ಪ್ರಕರಣದಲ್ಲಿ ಕೇವಲ ಸಾಕ್ಷಿಯಾಗಿ ಉಳಿದರೆ, ನ್ಯಾಯದಾನ ಪ್ರಕ್ರಿಯೆ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತದೆ.

Lok-2
ಜೊತೆಗೆ ಮುಂದೆ ಇಂತಹ ಪ್ರಮುಖ ಸ್ಥಾನಗಳಿಗೆ ಬರುವವರು ಎಂತಹವರಿರುತ್ತಾರೋ ಎಂಬ ಬಗ್ಗೆ ಅನುಮಾನಗಳಿವೆ. ಈಗಿನ “ಘನ” ಸರಕಾರ ಒಂದೇ ಹೆಸರನ್ನು ಪದೇ ಪದೇ ಕಳುಹಿಸಿ ಒತ್ತಾಯ ಹಾಕಿದ್ದು ಗೊತ್ತೇ ಇದೆ. ತಮ್ಮ ರಾಜಕೀಯ ಲಾಭಕ್ಕಾಗಿ ನೇಮಕ ಮಾಡುವುದಾದರೆ, ಅದರಿಂದ ಅನಾಹುತಗಳೇ ಹೆಚ್ಚು. ಆ ಕಾರಣಕ್ಕೆ ನ್ಯಾಯಾಂಗದ ಭ್ರಷ್ಟ ವ್ಯವಸ್ಥೆ ಬಗ್ಗೆಯೂ ಮುಕ್ತವಾಗಿ ಚರ್ಚೆಯಾಗಲಿ. ಯಾರೂ ಪ್ರಶ್ನಾತೀತರಾರಿ ಉಳಿಯಬಾರದು.

ಗಾಂಧಿ ಜಯಂತಿ ಕಥಾಸ್ಪರ್ಧೆ 2015 : ತೀರ್ಪುಗಾರರ ಮಾತು

– ಭಾರತೀದೇವಿ.ಪಿ

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ವರ್ತಮಾನ ನಡೆಸುವ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಬಂದ ಒಟ್ಟು 23 ಕತೆಗಳನ್ನು ಓದುವಾಗ ನನಗೆ ತೀವ್ರವಾಗಿ ಕಾಡಿದ್ದು ಕತೆಗಳ ಕುರಿತಾದ ನಮ್ಮ ಪೂರ್ವಗ್ರಹೀತಗಳು ಯಾವ ಯಾವ ಬಗೆಯಲ್ಲಿ ನಮ್ಮ ಪ್ರಜ್ಞೆಯಲ್ಲಿ ಬೇರೂರಿಬಿಟ್ಟಿವೆ ಮತ್ತು ಆ ಜಾಡಿನಲ್ಲಿ ಕತೆಗಾರ ಹೇಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಎಂಬ ಸಂಗತಿಗಳು. ಕಾರಂತ, ತೇಜಸ್ವಿ, ಕುಂ.ವೀ, ವೈದೇಹಿ ಮೊದಲಾದವರ ಕಥಾಹಂದರಗಳು ಸರಳೀಕರಣಗೊಂಡು ಇಲ್ಲಿನ ಹಲವು ಕತೆಗಳಲ್ಲಿ ಕಾಣಿಸಿಕೊಂಡಿವೆ.

ಅನುಭವಗಳ ದಟ್ಟತೆ ಇದ್ದ ಮಾತ್ರಕ್ಕೆ ಒಂದು ನೆರೇಷನ್ ಕತೆಯಾಗಿಬಿಡುತ್ತದೆಯೇ? ಕತೆಯೆಂದ ಕೂಡಲೇ ವರ್ತಮಾನಕ್ಕೆ ಮುಖಾಮುಖಿಯಾಗುವುದಕ್ಕಿಂತ ಹೆಚ್ಚಾಗಿ ಬಾಲ್ಯದ, ಗ್ರಾಮ್ಯ ಜಗತ್ತಿಗೆ ಉತ್ಸಾಹದಿಂದ ಹೊರಳುವುದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ವಿಶಿಷ್ಟ ಸೊಗಡಿನ ಭಾಷೆಯಿದ್ದ ಮಾತ್ರಕ್ಕೆ ಕತೆ ಶ್ರೀಮಂತವಾಗಿಬಿಡುತ್ತದೆಯೇ? ಪೂರ್ವನಿರ್ಧರಿತ ವಿಷಯಗಳನ್ನು gandhi-katha-spardge-2015ತಿಳಿಯಪಡಿಸುವುದಕ್ಕೆ ಕತೆಯ ಹಂದರವನ್ನು ಹೆಣೆಯುವುದು ಕತೆಯ ಸಾಧ್ಯತೆಯನ್ನೇ ಕುಂಠಿತಗೊಳಿಸುವುದಿಲ್ಲವೇ? ಐಡಿಯಾಲಜಿಯನ್ನು ತಿಳಿಯಪಡಿಸುವುದಕ್ಕೆ ಹೆಣೆಯುವ ಕತೆಯ ಆವರಣ ಸೃಜನಶೀಲ ಬರಹದ ಸೀಮೆಗಳನ್ನು ನಿರ್ಬಂಧಿಸುವುದಿಲ್ಲವೇ?

ಹೀಗೆ ನೋಡಿದಾಗ ಕತೆಯ ಕಸುಬುಗಾರಿಕೆ ಸಿದ್ಧಿಸಿಕೊಂಡು ಪ್ರಜ್ಞಾಪೂರ್ವಕವಾಗಿ ಹೆಣೆದ ಕತೆಗಳಿಗಿಂತ ತುಸು ಒರಟು, ಹಸಿ ಎನಿಸಿದರೂ ಬದುಕಿನ ಅನಂತ ಸಾಧ್ಯತೆಗಳ ಕಿಟಕಿಯನ್ನು ತೆರೆದೇ ಇರಿಸಿಕೊಂಡ ಕತೆಗಳು ಆಪ್ತವಾಗುತ್ತವೆ. ಕತೆಯನ್ನು ಹೇಳುವ ಪ್ರಕ್ರಿಯೆಯಲ್ಲೇ ಕತೆ ಮತ್ತು ಕತೆಗಾರ ಜೊತೆಜೊತೆಗೇ ತಮಗೇ ಅರಿಯದ ಬದುಕಿನ ಅಜ್ಞಾತಗಳನ್ನು ತಟ್ಟುತ್ತಾ ಸಾಗುವ ಕ್ರಿಯೆ ಎಲ್ಲೆಲ್ಲಿ ಕಾಣುತ್ತದೋ ಅಂತಹ ಕತೆಗಳು ಓದುಗನಿಗೂ ಬದುಕಿನ ಸಂಕೀರ್ಣತೆಯ ದರ್ಶನ ಮಾಡಿಸುತ್ತವೆ. ಅವು ಪ್ರಾದೇಶಿಕತೆ, ವ್ಯಕ್ತಿ, ತತ್ವಗಳ ಮೇರೆ ಮೀರಿ ಎಲ್ಲರ ಕತೆಗಳೂ ಆಗಿಬಿಡುತ್ತವೆ. ಈ ದಿಕ್ಕಿನಲ್ಲಿ ಇಲ್ಲಿನ ಕೆಲವು ಕತೆಗಳು ಇವೆ.

ಸ್ಪರ್ಧೆಗೆ ಬಂದಿರುವ ಒಟ್ಟು 23 ಕತೆಗಳಲ್ಲಿ ಪ್ರಥಮ ಬಹುಮಾನ ಗಳಿಸಿದ ಕತೆ ಶಾಂತಿ.ಕೆ.ಎ ಅವರ ‘ಪಯಣ’. ಬದುಕಿನ ಸಂಕೀರ್ಣತೆ ಸಮಾಜದ ಸೀಮಿತ ನೈತಿಕ ಸೀಮೆಗಳನ್ನು ಮೀರಿದ್ದು. ಯಾವ ತೀರ್ಮಾನ, ಪಶ್ಚಾತ್ತಾಪ ಅಥವಾ ಹಲುಬುವಿಕೆಗಳಿಲ್ಲದೆ ಬದುಕಿನ ವರ್ತಮಾನವನ್ನು ತೀವ್ರವಾಗಿ ಅನುಭವಿಸುವ ಬಗೆ ಈ ಕತೆಯಲ್ಲಿ ಮೂಡಿದೆ. ಇದು ಒಂದು ಬಗೆಯ ಎಚ್ಚರದ ಕನಸು. ಇದನ್ನು ಕಥನವಾಗಿಸುವ ಪ್ರಕ್ರಿಯೆಯಲ್ಲಿ ಅವರ ಭಾಷಾ ಬಳಕೆಯ ಸೂಕ್ಷ್ಮತೆ ಮತ್ತು ಎಚ್ಚರ ವಿಶಿಷ್ಟವಾಗಿದೆ.

ಎರಡನೇ ಬಹುಮಾನ ಗಳಿಸಿದ ಹನುಮಂತ ಹಾಲಿಗೇರಿ ಅವರ ‘ಹಾಳು ಸುಡುಗಾಡ ಬದುಕು’ ಕತೆ ವಿವರಗಳ ಮೂಲಕ ಅನುಭವವನ್ನು ತೀವ್ರವಾಗಿ ಕಟ್ಟಿಕೊಡುತ್ತದೆ.  ಬದುಕು ಮತ್ತು ಧರ್ಮಗಳ ಅಸ್ತಿತ್ವದ ಹೊಯ್ದಾಟದಲ್ಲಿ ಹೆಣ ಸುಡುವ ಕಾಯಕ ನಡೆಸುವ ದರಿಯಜ್ಜನಂಥವರ ಬದುಕು ಚಿಂದಿಯಾಗುವುದನ್ನು ಕತೆ ಪರಿಣಾಮಕಾರಿಯಾಗಿ ಹೇಳುತ್ತದೆ. ಹೆಚ್ಚು ಸಂಕೀರ್ಣತೆಗೆ ವಾಲದೇ ದಟ್ಟ ವಿವರಗಳೇ ಈ ಕತೆಯ ಶಕ್ತಿಯಾಗಿದೆ.

ಮೂರನೇ ಬಹುಮಾನ ಗಳಿಸಿದ ಸಂವರ್ಥ ಸಾಹಿಲ್ ಅವರ ಕತೆ ‘ಮನ್ವಂತರ’ ಹಲವು ನೆಲೆಗಳಲ್ಲಿ ಬದುಕಿನ ಚಲನೆಯ ಗತಿಗೆ ಸೂಕ್ಷ್ಮವಾಗಿ ಪ್ರತಿಕ್ರಯಿಸುತ್ತದೆ. ಹಿಂದಿನ ತಲೆಮಾರಿನ ಜೀವ ಬದಲಾದ ಗತಿಗೆ ಸ್ಪಂದಿಸುತ್ತಾ, ಜೊತೆಗಿರುವವರ ಬಗ್ಗೆ ವಿಮರ್ಶಾತ್ಮಕವಾಗಿ ಇರುತ್ತಲೇ ಕೆಲವೊಂದು ವಿಚಾರಗಳಲ್ಲಿ ಹಳೆಯ ಜಾಡನ್ನು ಬಿಡದೆ ಒದ್ದಾಡುವ ಬಗೆಯನ್ನು ಸಂವರ್ಥ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಇವರ ಜೊತೆ ಇವರಂತೆಯೇ ಭಿನ್ನ ಭಿನ್ನ ಗತಿಯಲ್ಲಿ ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುವ ಹಿರಿಯ, ಯುವ ಜೀವಗಳಿವೆ. ಈ ತೊಳಲಾಟಗಳನ್ನು, ಚಲನೆಯನ್ನು ದಾಖಲಿಸುವಲ್ಲಿ ಭಾಷೆಯ ಬಳಕೆ ಇನ್ನಷ್ಟು ಸೂಕ್ಷ್ಮವಾಗಿದ್ದರೆ ಕತೆಗೆ ವಿಸ್ತಾರವಾದ ಆಯಾಮ ದೊರೆಯುತ್ತಿತ್ತು. ಪಾತ್ರಗಳ ಸರಳೀಕರಣವಾಗುವುದು ತಪ್ಪುತ್ತಿತ್ತು.

ಮಹಾಂತೇಶ ನವಲ್‍ಕಲ್ ಅವರ ‘ಪಾಕಿಸ್ತಾನದಿಂದ ಪತ್ರ’ ದೇಶ ಇಬ್ಭಾಗವಾದಾಗ ಮನಸ್ಸುಗಳೂ ಒಡೆಯುತ್ತಾ ಹೇಗೆ ಸಹಜ ಮನುಷ್ಯ ಸಂಬಂಧಗಳ ಬಗೆಗೂ ಸಂವೇದನೆ ಕಳೆದುಕೊಂಡಿವೆ ಎಂಬುದನ್ನು ಹೇಳುತ್ತದೆ. ಮನಮುಟ್ಟುವಂತೆ ಕತೆಯ ನಿರೂಪಣೆ ಇದ್ದರೂ ಅದು ಕಾಣದ ದಾರಿಗಳನ್ನು ತಡಕುವ ಯತ್ನ ಮಾಡುವುದಿಲ್ಲ.

ಸ್ವಾಲಿಹ್ ತೋಡಾರ್ ಅವರ ‘ಉಡುಗೊರೆ’ ಹೊಟ್ಟೆಪಾಡಿಗಾಗಿ ಪರದೇಶದಲ್ಲಿ ಏನೆಲ್ಲ ಪಾಡು ಪಡುವ ಪುಡಿಮೋನು ಅರಬ್ ದೇಶಗಳ ಆಂತರಿಕ ಸಂಘರ್ಷಗಳಿಂದ ಬದುಕುವ ದಾರಿ ಕಳೆದುಕೊಂಡು ಊರಲ್ಲೂ ನೆಲೆ ಕಾಣದೆ ನಲುಗುವ ಕತೆ. ಧರ್ಮ, ಸ್ವಾರ್ಥಗಳ ಮೇಲಾಟದಲ್ಲಿ ಪುಡಿಮೋನುವಿನಂತಹ ಬಡವರ ಬದುಕು ಮೂರಾಬಟ್ಟೆಯಾಗುವುದು, ಪುಡಿಮೋನು ಉಳ್ಳವರನ್ನು ಅನುಕರಿಸ ಹೋಗಿ ಕೈಲಿದ್ದ ಅಲ್ಪಸ್ವಲ್ಪವನ್ನೂ ಕಳೆದುಕೊಳ್ಳುವುದು ಇವೆಲ್ಲವೂ ಓದುವಾಗ ವಿಷಾದ ಮೂಡಿಸುತ್ತದೆ. ಈ ಕತೆ ಓದುವಾಗ ಹಲವು ಕತೆಗಳ ನೆರಳು ಕಾಣುವುದು ಸುಳ್ಳಲ್ಲ.

ಇವು ಒಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಇಲ್ಲಿನ ಕತೆಗಳನ್ನು ಓದಿದಾಗ ನನಗನಿಸಿದ ಸಂಗತಿಗಳು. ಕತೆಗಳ ಬಗ್ಗೆ ಹಿಂದೆಂದಿಗಿಂತ ಹೆಚ್ಚು ತಲೆಕೆಡಿಸಿಕೊಳ್ಳಲು ಕಾರಣವಾದ ಹಾಗೂ ವಿಭಿನ್ನ ಅನುಭವಗಳಿಗೆ ಒಡ್ಡಿಕೊಳ್ಳುವ ಅವಕಾಶವನ್ನು ಕತೆಗಳ ಓದಿನ ಮೂಲಕ ನೀಡಿದ ಎಲ್ಲ ಕತೆಗಾರರಿಗೆ ನಾನು ಆಭಾರಿ.

“ಗಾಂಧಿ ಜಯಂತಿ ಕಥಾ ಸ್ಪರ್ಧೆ – 2015″ರ ಫಲಿತಾಂಶ

ಆತ್ಮೀಯರೇ,

ಎಲ್ಲರಿಗೂ 2015ರ “ಗಾಂಧಿ ಜಯಂತಿ”ಯ ಶುಭಾಶಯಗಳು.

ವರ್ತಮಾನ ಬಳಗ ಆಯೋಜಿಸಿದ್ದ ಈ ವರ್ಷದ “ಗಾಂಧಿ ಜಯಂತಿ ಕಥಾ ಸ್ಪರ್ಧೆ”ಗೆ ಸುಮಾರು 25 ಕತೆಗಳು gandhi-katha-spardge-2015ಬಂದಿದ್ದವು; ಅದರಲ್ಲಿ ಒಂದೆರಡು ಕತೆಗಳು ಇಲ್ಲಿ ಫಲಿತಾಂಶ ಪ್ರಕಟಣೆಗೆ ಮೊದಲೇ ಬೇರೆ ಕಡೆ ಪ್ರಕಟವಾದದ್ದು ನಮ್ಮ ಗಮನಕ್ಕೆ ಬಂದಿದ್ದರಿಂದ ಅವನ್ನು ಪರಿಗಣಿಸಲಾಗಿಲ್ಲ. ಈ ಸಾರಿಯ ತೀರ್ಪುಗಾರರು ಕವಿ, ಲೇಖಕಿ, ಮತ್ತು ಪ್ರಾಧ್ಯಾಪಕಿ ಭಾರತೀದೇವಿ.ಪಿ. ಈ ಜವಾಬ್ದಾರಿಯನ್ನು ನಿಭಾಯಿಸಲು ಒಪ್ಪಿಕೊಂಡ ಅವರಿಗೆ ವರ್ತಮಾನ ಬಳಗ ಕೃತಜ್ಞತೆಗಳನ್ನು ಅರ್ಪಿಸುತ್ತದೆ. ಅವರು ಆಯ್ಕೆ ಮಾಡಿರುವ ಉತ್ತಮ ಕತೆಗಳು ಹೀಗಿವೆ:

  • ಮೊದಲ ಬಹುಮಾನ : “ಪಯಣ” – ಶಾಂತಿ.ಕೆ.ಎ
  • ಎರಡನೆಯ ಬಹುಮಾನ : “ಹಾಳು ಸುಡುಗಡ ಬದುಕು” – ಹನುಮಂತ ಹಾಲಿಗೇರಿ
  • ಮೂರನೆಯ ಬಹುಮಾನ : “ಮನ್ವಂತರ” – ಸಂವರ್ಥ ಸಾಹಿಲ್
  • ಪ್ರೋತ್ಸಾಹಕ ಬಹುಮಾನಗಳು :
    • ಪಾಕಿಸ್ಥಾನದಿಂದ ಪತ್ರ” – ಮಹಾಂತೇಶ್ ನವಲ್ಕಲ್
    • ಉಡುಗೊರೆ” – ಸ್ವಾಲಿಹ್ ತೋಡಾರ್

ಕಥಾ ಸ್ಪರ್ಧೆಗೆ ತಮ್ಮ ಕತೆಗಳನ್ನು ಆಸಕ್ತಿಯಿಂದ ಕಳುಹಿಸಿ, ಈ ಕಥಾಸ್ಪರ್ಧೆಯನ್ನು ಬೆಂಬಲಿಸಿದ ಮತ್ತು ಪ್ರೋತ್ಸಾಹಿಸಿದ ಎಲ್ಲಾ ಕತೆಗಾರರಿಗೂ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಮತ್ತು ವಿಜೇತರಿಗೆ ಅಭಿನಂದನೆಗಳು.

ತೀರ್ಪುಗಾರರ ಅಭಿಪ್ರಾಯದ ಲೇಖನವನ್ನು ಇಷ್ಟರಲ್ಲಿಯೇ ಪ್ರಕಟಿಸಲಾಗುವುದು.

ಬಹುಮಾನಿತ ಕತೆಗಳನ್ನು ಮುಂದಿನ ದಿನಗಳಲ್ಲಿ ವಾರಕ್ಕೊಂದರಂತೆ ಪ್ರಕಟಿಸಲಾಗುವುದು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ
ವರ್ತಮಾನ.ಕಾಮ್

ಹಂಪಿಯಲ್ಲಿ ಇದೇ ಶನಿವಾರ-ಭಾನುವಾರದಂದು “ನಾವು ನಮ್ಮಲ್ಲಿ” ಕಾರ್ಯಕ್ರಮ

ಆತ್ಮೀಯರೇ,

ನಮ್ಮ ವರ್ತಮಾನ.ಕಾಮ್ ಓದುಗರಿಗೆ “ನಾವು ನಮ್ಮಲ್ಲಿ” ಮತ್ತು ಅದರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ವರ್ತಮಾನ.ಕಾಮ್ ಆರಂಭವಾದಾಗಿನಿಂದಲೂ “ನಾವು ನಮ್ಮಲ್ಲಿ”ಯೊಡನೆ ವರ್ತಮಾನ ಬಳಗಕ್ಕೆ ಅವಿನಾಭಾವ ಸಂಬಂಧವಿದೆ. ನಿಮಗೆ ಗೊತ್ತಿರುವಂತೆ ವರ್ತಮಾನ.ಕಾಮ್ ಆರಂಭಿಸಬೇಕೆಂಬ ಯೋಚನೆ ಬಂದಿದ್ದೇ ನಾನು 2011 ರಲ್ಲಿ ಚಿತ್ರದುರ್ಗದಲ್ಲಿ ನಡೆದ “ನಾವು ನಮ್ಮಲ್ಲಿ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂದರ್ಭ ಬಂದಾಗ. ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಹೊಂದಿರುವ ಯುವ ತಲೆಮಾರಿನ ಸಮಾಜಮುಖಿ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜನೆ ಮಾಡುತ್ತಿವೆ. ಮತ್ತು ಸಮಾನಮನಸ್ಕರು ಇದರಲ್ಲಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಕೊಟ್ಟೂರಿನ ’ಬಯಲು ಸಾಹಿತ್ಯ ವೇದಿಕೆ’ ವತಿಯಿಂದ ಆರಂಭವಾದ ಈ ವಾರ್ಷಿಕ ಕಾರ್ಯಕ್ರಮಕ್ಕೆ ಈಗ ಹನ್ನೊಂದನೇ ಪ್ರಾಯ.

ಈ ಬಾರಿಯ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ (ಅಕ್ಟೋಬರ್ 3-4, 2015) ದಂದು ಹಂಪಿಯ naavu-nammalli-2015-1 ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಡಿನ ಅನೇಕ ಚಿಂತಕರು ಮತ್ತು ಹೋರಾಟಗಾರರು “ಸಂವಿಧಾನ ಭಾರತ” ದ ಬಗ್ಗೆ ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಪಾದ್ ಭಟ್, ಶ್ರೀಧರ್ ಪ್ರಭು ಸೇರಿದಂತೆ ವರ್ತಮಾನ ಬಳಗದ  ಹಲವಾರು ಮಿತ್ರರು ಅದರಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ತಮಾನ.ಕಾಮ್‌ನಲ್ಲಿ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದ ವಿಜಯಕುಮಾರ್ ಸಿಗರನಹಳ್ಳಿಯವರ ಆ ಲೇಖನಗಳ ಸಂಗ್ರಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ. ’ನಾವು ನಮ್ಮಲ್ಲಿ’ ಸಹಯೋಗದಲ್ಲಿ ನಮ್ಮ ಬಳಗದ ಇನ್ನೊಬ್ಬರಾದ ಅಕ್ಷತಾ ಹುಂಚದಕಟ್ಟೆಯವರ ’ಅಹರ್ನಿಶಿ’ ಈ ಪುಸ್ತಕ ಪ್ರಕಟಿಸಿದೆ.

ಎಂದಿನಂತೆ ಈ ವಾರ್ಷಿಕ ಕಾರ್ಯಕ್ರಮಕ್ಕೆ ಹೋಗಲು ನಾನೂ ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರನ್ನೂ ಅಲ್ಲಿ ನೋಡುವ ವಿಶ್ವಾಸದಲ್ಲಿ…

ನಮಸ್ಕಾರ,
ರವಿ

naavu-nammalli-2015
naavu-nammalli-2015
naavu-nammalli-book