Category Archives: ಶ್ರೀಮತಿ ದೇವಿ

‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡಲು ನಿರಾಕರಿಸುತ್ತಿರುವ ಸಂಗೀತಪ್ರೇಮಿ ಹಾಡುಗಾರನ ಅಳಲು

ನಾನೇಕೆ ‘ಮ್ಯೂಸಿಕ್ ಸೀಸನ್‌’ನಲ್ಲಿ ಹಾಡುತ್ತಿಲ್ಲ…

 – ಟಿ.ಎಂ.ಕೃಷ್ಣ
ಕನ್ನಡಕ್ಕೆ: ಶ್ರೀಮತೀ ದೇವಿ.ಪಿ

ಮದರಾಸಿನ ಸಂಗೀತ ಸೀಸನ್

ಇದು ಮದರಾಸಿನಲ್ಲಿ ಪ್ರತಿವರ್ಷ ಡಿಸೆಂಬರ್-ಜನವರಿ ತಿಂಗಳುಗಳಲ್ಲಿ ನಡೆಯುವ ಸಂಗೀತ ಹಬ್ಬ. ಸುಮಾರು ಆರು ವಾರಗಳ ಕಾಲ ನಡೆಯುವ ಇದರಲ್ಲಿ ಹಾಡುವುದು, ನುಡಿಸುವುದು ಸಂಗೀತಗಾರರಿಗೆ ಪ್ರತಿಷ್ಠೆಯ ವಿಷಯ. ದೇಶವಿದೇಶಗಳ ಸಂಗೀತ ಪ್ರೇಮಿಗಳು ತಮ್ಮ ನೆಚ್ಚಿನ ಸಂಗೀತಗಾರರ ಸಂಗೀತ ಕೇಳಲು ಮುಗಿಬಿದ್ದರೆ ಈಗ ತಾನೇ ತಲೆಯೆತ್ತುತ್ತಿರುವ ಕಲಾವಿದರು ಹಾಡುವ ಅವಕಾಶಕ್ಕಾಗಿ ಹಾತೊರೆಯುತ್ತಿರುತ್ತಾರೆ. ಚೆನ್ನೈನ ವಿವಿಧ ಸಭಾಗಳು ಪೈಪೋಟಿಯ ಮೇಲೆ ಸ್ಟಾರ್ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅವಕಾಶಕ್ಕಾಗಿ ಲಾಬಿ, ಸ್ಟಾರ್ ಸಂಗೀತಗಾರರ ಮೇಲಾಟ, ಜನಪ್ರಿಯತೆಯೇ ಮುನ್ನೆಲೆಗೆ ಬರುತ್ತಿರುವುದು, ಭಿನ್ನ ಸಮುದಾಯಗಳನ್ನು ಒಳಗೊಳ್ಳದಿರುವುದು ಹೀಗೆ ಈ ಸಂಗೀತ ಹಬ್ಬ ಸಂಗೀತೇತರ ಕಾರಣಗಳಿಗೂ ಚರ್ಚೆಗೆ ಒಳಗಾಗುತ್ತಿರುವುದು chennai-music-seasonಅಲ್ಲಲ್ಲಿ ನಡೆದೇ ಇದ್ದರೂ ಈ ಬಗ್ಗೆ ದೊಡ್ಡದನಿ ಎತ್ತುವ ಕೆಲಸ ನಡೆದಿರಲಿಲ್ಲ. ಟಿ.ಎಂ.ಕೃಷ್ಣ ತಾವು ಇನ್ನು ಮುಂದೆ ಸೀಸನ್ನಲ್ಲಿ ಹಾಡುವುದಿಲ್ಲ ಎನ್ನುವುದರ ಮೂಲಕ ಕಲಾವಿದರು ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳನ್ನು ಎತ್ತುತ್ತಾ ವಾಗ್ವಾದಕ್ಕೆ ಮುನ್ನುಡಿ ಬರೆದಿದ್ದಾರೆ.

ಚೆನ್ನೈಯ ಮ್ಯೂಸಿಕ್ ಸೀಸನ್ (ಡಿಸೆಂಬರ್) ನಲ್ಲಿ ಇನ್ನು ಮುಂದೆ ನಾನು ಹಾಡುವುದಿಲ್ಲ ಎಂಬ ನನ್ನ ತೀರ್ಮಾನ, ಏಕಾಏಕಿಯಾದದ್ದಲ್ಲ ಹಾಗೂ ಯಾವುದೇ ಒಂದು ನಿರ್ದಿಷ್ಟ ಘಟನೆಯಿಂದ ಹುಟ್ಟಿದ್ದಲ್ಲ. ಕಳೆದ ೪-೫ ವರ್ಷಗಳಿಂದ ನಾನು ಈ ಬಗ್ಗೆ ತುಂಬಾ ಆಲೋಚಿಸಿದ್ದೇನೆ. ಮ್ಯೂಸಿಕ್ ಸೀಸನ್‌ನೊಂದಿಗಿನ ನನ್ನ ಸಂಬಂಧವೇನು, ಇದರ ಮೂಲಕ ಸಂಗೀತಕ್ಕೆ ನಾವೇನನ್ನು ಕೊಡಲು ಹೊರಟಿದ್ದೇವೆ, ಹಾಗೂ ಈಗ ಈ ಸೀಸನ್ ಎಂಬುದು ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಗಳನ್ನು ನನಗೆ ನಾನೇ ಹಲವಾರು ಬಾರಿ ಕೇಳಿಕೊಂಡಿದ್ದೇನೆ.

ಚಿಕ್ಕಂದಿನಿಂದಲೂ ನಾನು, ಈ ಮ್ಯೂಸಿಕ್ ಸೀಸನ್ನಿನ ಕಛೇರಿಗಳನ್ನು ಕೇಳುತ್ತಾ ಬೆಳೆದಿದ್ದೇನೆ ಹಾಗೂ ಇವುಗಳಿಂದ ತುಂಬಾ ಕಲಿತಿದ್ದೇನೆ. ಸಂಗೀತ ಕ್ಷೇತ್ರದಲ್ಲಿನ ನನ್ನ ಪ್ರಗತಿಯೂ ಈ ’ಸಂಗೀತ ಹಬ್ಬ’ದೊಂದಿಗೇ ನಡೆದಿದೆ. ಆದ್ದರಿಂದ ಕಲಾತ್ಮಕವಾಗಿಯೂ, ವ್ಯವಸಾಯದಲ್ಲೂ ನನ್ನ ಬೆಳವಣಿಗೆಗೆ ಕಾರಣವಾದ ಸಂಗೀತ ಸೀಸನ್‌ಗೆ ಕೃತಜ್ನತೆ ಸಲ್ಲಿಸಲು ಮರೆತರೆ ಅದು ದೊಡ್ಡ ತಪ್ಪಾಗುತ್ತದೆ. ಆದರೆ, ಇತ್ತೀಚಿಗಿನ ಸಂಗೀತ ಸೀಸನ್, ಸಂಗೀತದಿಂದಲೇ ದೂರ ಹೋಗುತ್ತಿರುವಂತೆ ನನಗೆ ಕಾಣುತ್ತಿದೆ. ಇಲ್ಲಿ ಸಂಗೀತದ ಒಳಗಿನ ಹಾಗೂ ಸಂಗೀತದ ಆಚೆಗಿನ ಗಲಾಟೆ(ಶಬ್ದ) ನೋಡಿದರೆ, ಸಂಗೀತವೇ ಇಲ್ಲಿಂದ ಓಡಿ ಹೋಗುತ್ತಿದೆಯೆಂದು ಹೇಳುವುದೇ ಸೂಕ್ತವೇನೋ…

ಕಳೆದ ಎರಡು ದಶಕಗಳಿಂದ, ಚೆನ್ನೈನಲ್ಲಿ ಅದರಲ್ಲೂ ಮುಖ್ಯವಾಗಿ ಸಂಗೀತ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಸ್ಪರ್ಧಾತ್ಮಕವಾದ ಸಂಗೀತ ಆಯೋಜಕರು ಇರುವುದನ್ನು ನೋಡುತ್ತಿದ್ದೇವೆ. ಇಲ್ಲಿನ ಕಛೇರಿಗಳಲ್ಲೂ ವೈರುಧ್ಯವಿದೆ. ಇವುಗಳು ಎರಡು ವಿರುದ್ಧ ಧ್ರುವಕ್ಕೆ ಸೇರಿದಂಥವು. ಒಂದು ಕಡೆ ಇಲ್ಲಿ ಕೇವಲ ಬೆರೆಳೆಣಿಕೆಯಷ್ಟು ಜನ ಮಾತ್ರ ಸಂಗೀತ ಕೇಳಲು ಸೇರಿದ್ದರೆ, ಇನ್ನೊಂದೆಡೆ ’ಸೂಪರ್ ಸ್ಟಾರ್’ಗ:ಅ ಕಛೇರಿಗೆ ತಡೆಯಲಾಗದಷ್ಟು ಜನ ಸಂದಣಿ. tm-krishna-singerಇದು ಇವತ್ತು ಬಹುದೊಡ್ಡ ಸಮಸ್ಯೆ ಎನಿಸುವವರೆಗೆ ಸಾಗಿದೆ. ಜನರು ’ಸ್ಟಾರ್’ ಸಂಗೀತಗಾರರ ಸಂಗೀತ ಕೇಳಲು ಮುಗಿಬೀಳುವುದರಲ್ಲಿ ಯಾವುದೇ ಆಶ್ಚರ್ಯಪಡುವ ಸಂಗತಿ ಇಲ್ಲ ಎಂಬುದು ನನಗೆ ತಿಳಿದಿದ್ದರೂ, ಎಲ್ಲೋ ಒಂದು ಕಡೆ ಇಡೀ ಜನಸಮೂಹವೇ ಈ ’ಜನಪ್ರಿಯತೆ’ಯ ಕಡೆ ವಾಲುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಇದು ನಮ್ಮಲ್ಲಿನ ಒಂದು ’ಕಲಾತ್ಮಕತೆಯ ಸಮಸ್ಯೆ’ಯೇ ಎಂದು ನನಗನಿಸುತ್ತದೆ. ಹಾಗೂ ಇದೇ ಸಮಸ್ಯೆಯನ್ನು ನಾವು ಮ್ಯೂಸಿಕ್ ಸೀಸನ್ ನಲ್ಲಿ ಕಾಣುತ್ತಿರುವುದು. ಈ ಭ್ರಮೆಯಿಂದಾಗಿ ನಮ್ಮಲ್ಲಿನ ಎಷ್ಟೋ ಅದ್ಭುತವಾದ ಸಂಗೀತಗಾರರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ.

ಯಾವುದೇ ಕಲಾಪ್ರಕಾರ ತನ್ನೊಳಗಿರುವ ಕಲೆಯ ವೈವಿಧ್ಯತೆಯನ್ನು ಅರಿತುಕೊಂಡು, ಪ್ರಸಿದ್ಧರಾದ ಕೆಲವು ಗಾಯಕರು ಈ ವೈವಿಧ್ಯತೆಯೆ ’ಮುಖ’ ಹಾಗೂ ಉಳಿದೆಲ್ಲಾ ಕಲಾವಿದರು ಈ ಕಲೆಯ ಶ್ರೀಮಂತಿಕೆಗೆ ಕಾರಣರಾದ ದಾನಿಗಳು, ಪೋಷಕರು ಎಂದು ಗುರುತಿಸಲ್ಪಡುವ ವ್ಯವಸ್ಥೆ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತಿರುತ್ತದೆ. ಆದರೆ, ಇವತ್ತು ನಮ್ಮಲ್ಲಿ ಈ ಉಳಿದ ಸಂಗೀತಗಾರರು ಗಣನೆಗೇ ಇಲ್ಲದವರಾಗಿದ್ದಾರೆ. ಈ ಪರಿಸ್ಥಿಗೆ ನಾನೂ ಒಬ್ಬ ಕಾರಣಕರ್ತನಾಗಿರುವುದರಿಂದ ಈ ವಿಚಾರ ನನ್ನನ್ನು ತುಂಬಾ ಕಾಡುತ್ತದೆ.

ಕನಸುಗಳನ್ನು ಹೊತ್ತ ಯುವ ಸಂಗೀತಗಾರರಿಗಂತೂ ನಿರಾಶಾದಾಯಕವಾದ ಸನ್ನಿವೇಶವೇ ಇಲ್ಲಿದೆ. ಒಂದು ಕಡೆ ಕಛೇರಿ ಪಡೆಯಲು ’ಹಣ’ ಡೊನೇಷನ್ ಹೆಸರಿನಲ್ಲಿ ಓಡಾಡುತ್ತಿದ್ದರೆ ಇನ್ನೊಂದೆಡೆ ಮಧ್ಯವರ್ತಿಗಳ ಕಸರತ್ತು. ’ಡಾಲರ್’ನ ಮಹಾತ್ಮೆಯಂತೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವೆಲ್ಲದರ ನಡುವೆಯೂ ಕೇವಲ ತಮ್ಮ ಪ್ರತಿಭೆಯಿಂದ ಗುರುತಿಸಲ್ಪಟ್ಟ ಯುವಮಿತ್ರರ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತದೆ. ಆದರೆ, ಈ ಎಲ್ಲಾ ’ಆಟ’ ಗಳನ್ನು ಮಾಡಲಾಗದೇ ಇರುವ, ಅವಕಾಶ ವಂಚಿತರಾಗಿ ಹಿಂದೆ ಉಳಿದ ಅನೇಕ ಸಂಗೀತಗಾರರು ಇನ್ನೂ ನಮ್ಮಲ್ಲಿದ್ದಾರೆ. ೯೦ರ ದಶಕದ ಆರಂಭದಲ್ಲಿ ಪರಿಸ್ಥಿತಿ ಇಷ್ಟು ಕೆಟ್ಟದಾಗಿತ್ತೆಂದು ನನಗನಿಸುವುದಿಲ್ಲ.

ಚೆನ್ನೈನ ಮ್ಯೂಸಿಕ್ ಸೀಸನ್ ಎಂಬುದು ಹೆಚ್ಚು ಕಡಿಮೆ ’NRI ಕೃಪಾಪೋಷಿತ’ ಸೀಸನ್ ಆಗಿಬಿಟ್ಟಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅನೇಕ ಸಂಗೀತ ವಿದ್ಯಾರ್ಥಿಗಳು ಡೆಸೆಂಬರ್‌ನಲ್ಲಿ ಅಲ್ಲಿಂದ ಇಲ್ಲಿ ಬಂದು ಕಛೇರಿ ಮಾಡುವುದು ಸಾಮಾನ್ಯವೆನಿಸಿಬಿಟ್ಟಿದೆ. ಸ್ವಲ್ಪ ಸಮಯದ ಹಿಂದೆ ಇದು ಸೀಸನ್ನಿನ ಒಂದು ಭಾಗ ಮಾತ್ರವಾಗಿದ್ದರೆ ಇವತ್ತು ಹೆಚ್ಚಿನ ಎಲ್ಲಾ ಜೂನಿಯರ್ ಸ್ಲಾಟ್‌ಗಳು NRI ಯುವಕರ ಪಾಲಾಗುತ್ತಿದೆ. ಅಲ್ಲೂ-ಇಲ್ಲೂ ಹೆಸರಾದ ದೊಡ್ಡ ಕಲಾವಿದರುಗಳೇ ತಮ್ಮ NRI ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಮಾಡಿಸಿ ಕೊಡುವ ಹೊಣೆ ಹೊತ್ತವರಂತೆ ವರ್ತಿಸುತ್ತಿದ್ದಾರೆ. ‘ಹಣ’ದ ಕೆಲಸ ಇಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಪತ್ರಿಕೆಗಳಲ್ಲಿ ಇವರ ಬಗ್ಗೆ ಲೇಖನಗಳನ್ನು ಬರೆಯಿಸಲಾಗುತ್ತದೆ. ಸಂಗೀತಗಾರರನ್ನು ‘ತಯಾರು’ ಮಾಡಲಾಗುತ್ತದೆ. ಇವೆಲ್ಲವೂ ಮುಚ್ಚಿದ ಬಾಗಿಲಿನ ಹಿಂದೆ ನಡೆಯುವ ಕೆಲಸವಾದದ್ದರಿಂದ ಯಾವ ಸಾಕ್ಷಿಯೂ ದೊರೆಯುವುದಿಲ್ಲ. ಇದರಿಂದಾಗಿ ನಮ್ಮಲ್ಲಿನ ಕಲಾವಿದರಿಗೆ ಮೋಸವಾಗುತ್ತಿರುವುದು ಮಾತ್ರವಲ್ಲದೇ, ನಿಜವಾಗಿ ಸತ್ವವುಳ್ಳ NRI ಕಲಾವಿದನಿಗೆ ತಾನು ಅಂಥವನಲ್ಲ ಎಂಬುದನ್ನು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಕರ್ನಾಟಕ ಸಂಗೀತವೆಂಬ ಪುಟ್ಟ ಪ್ರಪಂಚಕ್ಕೆ ಸೇರಿದ ಹಾಗೂ ಸಂಗೀತ ಸೀಸನ್ನಿನ ಭಾಗಿಗಳಾದ ನಾವು ಈ ಸಣ್ಣ ಪ್ರಪಂಚದಿಂದ tm-krishna-singer2ಆಚೆಗೆ ಸಂಗೀತಕ್ಕೆ ಸಂಬಂಧಿಸಿದ ಕೆಲಸವನ್ನೇನಾದರೂ ಮಾಡಿದ್ದೇವೆಯೇ? ಸೀಸನ್‌ನಲ್ಲಿ ಪಾಲ್ಗೊಳ್ಳಲು, ಸಂಗೀತ ಕೇಳಲು ಸಮಾಜದಲ್ಲಿನ ಬೇರೆ ಕೇಳುಗರನ್ನೇನಾದರೂ ಬರುವಂತೆ ಮಾಡಿದ್ದೇವೆಯೇ? ಆ ಬಗ್ಗೆ ಎನಾದರೂ ಪ್ರಯತ್ನ ಮಾಡಿದ್ದೇವೆಯೇ ಅಥವಾ ನಮ್ಮ ಸಂಗೀತವನ್ನು ಒಯ್ದು ಸಮಾಜದ ಉಳಿದ ಸ್ಥರಗಳಿಗೆ ಪರಿಚಯಿಸುವ ಬಗ್ಗೆ ಚಿಂತಿಸಿದ್ದೇವೆಯೇ? ಎಲ್ಲೋ ಒಂದಿಬ್ಬರ ವೈಯಕ್ತಿಕ ಪ್ರಯತ್ನಗಳನ್ನು ಕಾಣಬಹುದಷ್ಟೇ. ಉಳಿದಂತೆ ನಮಗೆ ಸಮಾಜದ ಇತರರ ಬಗ್ಗೆ ಗಮನವೇ ಇಲ್ಲ. ಹಾಗೂ ಬಹು ಮುಖವಾಗಿ ನಮಗೆ ನಮ್ಮ ಸಂಗೀತವನ್ನು ಡೆಮೊಕ್ರಟೈಸ್ (ಎಲ್ಲರಿಗೂ ದೊರಕುವಂತೆ) ಮಾಡಬೇಕೆಂಬ ಯಾವ ಇಚ್ಛೆಯೂ ಇಲ್ಲ.

ಈ ರೀತಿಯಾಗಿ ಪ್ರತ್ಯೇಕ ವರ್ಗವನ್ನು ನಿರ್ಮಿಸಿಕೊಂಡು ಒಂದು ದ್ವೀಪದಂತೆ ಇರುವ ಕರ್ನಾಟಕಿ ಸಂಗೀತ, ತನ್ನ ನಾಳೆಯನ್ನು ತಾನೇ ಹಾಳುಮಾಡಿಕೊಳ್ಳುತ್ತಿದೆ ಎಂಬುದು ನನ್ನ ಬಲವಾದ ಅಭಿಪ್ರಾಯ. ಸಂಕುಚಿತತೆ, ಮಡಿವಂತಿಕೆಗಳನ್ನು ಬಿಟ್ಟು ’ಮುಕ್ತ’ವಾಗುವ ಅವಶ್ಯಕತೆ ಇಂದು ಕರ್ನಾಟಕಿ ಸಂಗೀತಕ್ಕಿದೆ.

ನನ್ನಂಥಹ ’ಪವರ್‌ಫುಲ್’ ಸಂಗೀತಗಾರರು ತಮ್ಮ-ತಮ್ಮ ವೈಯಕ್ತಿಕ ಲಾಭವನ್ನು ಬಿಟ್ಟು ಈ ಕಾರ್ಯಕ್ಕಾಗಿ ಜೊತೆಗೆ ಕೈ ಜೋಡಿಸಲು ಮುಂದೆ ಬರುತ್ತಿಲ್ಲ. ನಮ್ಮ ಜೊತೆಗೇ ವೇದಿಕೆಯೇರುವ ಮೃದಂಗ, ವಯೋಲಿನ್, ಘಟ ವಾದಕರಿಗೆ ಕೊಡಲಾಗುವ ಸಂಭಾವನೆಯ ಬಗ್ಗೆ ಮಾತನಾಡಲೂ ನಾವು ಅಸಮರ್ಥರಾಗಿದ್ದೇವೆ.

ಈಗ ಈ ’ಸಂಗೀತ ಸೀಸನ್ನಿನ ಹುಚ್ಚುತನ’ ಎಂಬುದು ತಂತ್ರಜ್ಞಾನದ ಮಾಯಾಲೋಕದೊಂದಿಗೆ ಸೇರಿಬಿಟ್ಟಿದೆ. ಇಂಥಹ ಪರಿಸ್ಥಿತಿಯಲ್ಲಿ ಶಾಂತವಾಗಿರಲು ಹಾಗೂ ಹಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದು ನನ್ನದೇ ಅಸಮರ್ಥತತೆಯೇನೋ….

ಈ ಎಲ್ಲಾ ಕಾರಣಗಳಿಂದ ಹಾಡದೇ ಇರುವುದೇ ಉತ್ತಮ ಎಂದು ನನಗನಿಸಿದೆ. ಕಳೆದ ೫ ವರ್ಷಗಳಲ್ಲಿ ಈ ಸೀಸನ್ನಿನ ಒಳಗಿದ್ದುಕೊಂಡೇ ಈ ಬಗ್ಗೆ ಏನಾದರೂ ಮಾಡಬೇಕೆಂದು ಟಿಕೆಟ್ ಇಲ್ಲದೆ ಕಛೇರಿ ಮಾಡುವುದು ಮುಂತಾದ ಹಲವು ರೀತಿಗಳಲ್ಲಿ ಪ್ರಯತ್ನಿಸಿದ್ದೇನೆ. ಆದರೆ ಇಡೀ ವಾತಾವರಣವೇ ಎಷ್ಟು ವ್ಯವಹಾರಾತ್ಮಕವಾಗಿದೆಯೆಂದರೆ, ಸಂಗೀತವನ್ನು ಕೇಳುವುದು ಎಂಬುದೇ ಇಲ್ಲವಾದಂತಾಗಿದೆ.

ಚೆನ್ನೈನ ಕರ್ನಾಟಕಿ ಸಂಗೀತವೆಂಬುದು ’ಸಂಗೀತ’ಕ್ಕಿಂತ ಹೆಚ್ಚಾಗಿ ’ಸೀಸನ್’ ಮಾತ್ರವೇ ಆಗಿಬಿಟ್ಟಿದೆ. ಇದು ಕಲೆಗೆ ಮಾರಕವಾದದ್ದು. ಇಲ್ಲಿ ನಾವು ಕಲೆ, ಅದರ ಸ್ವರೂಪ, ಕಲೆಯ ದೊರಕುವಿಕೆ ಹಾಗೂ ಅದರ ಒಟ್ಟಂದದ ಕಡೆಗಿನ ಆತ್ಮಾವಲೋಕನದ ಕೊರತೆಯನ್ನು ಕಾಣುತ್ತಿದ್ದೇವೆ. ಆದರೆ ಇವೆಲ್ಲದರ ನಡುವೆಯೂ ತಮ್ಮ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತಿರುವ ಕೆಲವು ವ್ಯಕ್ತಿಗಳು, ಕೆಲವು ಆಯೋಜಕರು, ಸಂಗೀತಗಾರರು ಹಾಗೂ ಬೆರಳೆಣಿಕೆಯಷ್ಟು ಶೋತೃಗಳು ಇರುವುದನ್ನು ನಾವು ಮರೆಯುವಂತಿಲ್ಲ.

ಹಳೆಯದೆಲ್ಲವೂ ಚೆನ್ನಾಗಿತ್ತು ಎಂದೇನು ನಾನು ಹೇಳ ಹೊರಟಿಲ್ಲ. ಆದರೆ, ಇಂದಿನ ಚೆನ್ನೈನ ಸಂಗೀತ ಸೀಸನ್ ಮಾತ್ರ ’ರಸಹೀನವಾದ ಬಹು ದೊಡ್ಡ ಬದಲಾವಣೆಗೆ ಈಡಾದ ಘಟ್ಟ’ವೊಂದನ್ನು ತಲುಪಿದೆ ಎಂದು ನನಗೆ ಖೇದವಾಗುತ್ತದೆ. ಅಥವಾ ಇದು ಮೊದಲಿನಿಂದಲೂ ಹೀಗೆಯೇ ಇದ್ದು, ನನಗೆ ಕಾಣಿಸಿದ್ದು ಮಾತ್ರ ಈಗವೇ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಈಗ ಎಲ್ಲಾ ತಿಳಿದ ಮೇಲೂ ಇದರ ’ಕೇವಲ ಪಾಲುದಾರ’ನಾಗಲು ನನಗೆ ಸಾಧ್ಯವಾಗುತ್ತಿಲ್ಲ.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಹೊಸ ಕವಲುಗಳು


-ಶ್ರೀಮತಿ ದೇವಿ


ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದ ಸುದೀರ್ಘ ಪರಂಪರೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರು ಬೆಳಗಿ ಮರೆಯಾಗಿದ್ದಾರೆ. ಸಂಗೀತ, ನೃತ್ಯಗಳಿಗೆ ಸಮಾಜದಲ್ಲಿ ಯಾವುದೇ ರೀತಿಯ ಪ್ರೋತ್ಸಾಹ, ಗೌರವಯುತವಾದ ಸ್ಥಾನ ಇಲ್ಲದ ಕಾಲದಲ್ಲಿ ಈ ಕಲಾವಿದರು ತಮ್ಮ ಜೀವನದುದ್ದಕ್ಕೂ ಉತ್ತಮ ಸಂಗೀತಕ್ಕಾಗಿ, ಅದನ್ನು ಕೇಳಬಲ್ಲ ಸಹೃದಯಿ ಶ್ರೋತೃಗಳ ಒಂದು ಪುಟ್ಟ ಗುಂಪಿಗಾಗಿ, ಸಮಾಜದಲ್ಲಿ ಶಾಸ್ತ್ರೀಯ ಸಂಗೀತಕ್ಕೊಂದು ಅಸ್ತಿತ್ವ ಕಲ್ಪಿಸಿ ಕೊಡುವುದಕ್ಕಾಗಿ ಹಂಬಲಿಸಿ, ದುಡಿದು ಇಂದು ನಾವು ನಿಂತಿರುವ ದೃಢವಾದ ನೆಲೆಗಟ್ಟನ್ನು ನಿರ್ಮಿಸಿಕೊಟ್ಟಿದ್ದಾರೆ.

ಯಾವುದೇ ಒಂದು ವಿಚಾರವನ್ನು ಪ್ರತಿಕೂಲಗಳಿಗೆ ಎದುರಾಗಿ ನಿಂತು ಹೆಣಗಾಡಿ, ಹೋರಾಡಿ ಸ್ಥಾಪಿಸುವುದು ತುಂಬಾ ಕಠಿಣವಾದ ಕೆಲಸ. ಆದರೆ ಅಷ್ಟೇ ಸವಾಲಿನಿಂದ ಕೂಡಿದ್ದು, ಹಾಗೆ ಸ್ಥಾಪಿಸಿದ ವಿಚಾರವನ್ನು ಅದರ ಮೂಲ ಸತ್ವಕ್ಕೆ ಧಕ್ಕೆ ಬಾರದಂತೆ ಬಹಳಕಾಲ ಜನಮಾನಸದಲ್ಲಿ ಉಳಿಸಿಕೊಂಡು ಮುನ್ನಡೆಸುವುದು. ಹಾಗೆಯೇ ಏಕತಾನತೆ ಎಂದೂ ಅನಿಸದಂತೆ ಕಾಲಕ್ಕನುಗುಣವಾಗಿ ವಿಚಾರದಲ್ಲಿ ಅಗತ್ಯ ಮಾರ್ಪಾಟುಗಳನ್ನು ಮಾಡುವುದೂ ಅಷ್ಟೇ ಮುಖ್ಯವಾಗುತ್ತದೆ. ಒಂದು ದೇಶದ ಸಾಂಸ್ಕೃತಿಕ ಚರಿತ್ರೆಯ ಯಾವುದೇ ಒಬ್ಬ ವಿದ್ಯಾರ್ಥಿಗೆ ಇದರ ಅಧ್ಯಯನ ಬಹಳ ಮಹತ್ವಪೂರ್ಣವಾದದ್ದು ಎಂದೆನಿಸುತ್ತದೆ.

ಭಾರತೀಯ ಶಾಸ್ತ್ರೀಯ ಸಂಗೀತ, ಭರತನಾಟ್ಯ ಮುಂತಾದ ನೃತ್ಯ ಪ್ರಕಾರಗಳು, ಶಿಲ್ಪಕಲೆ ಇವುಗಳೆಲ್ಲಾ ಬಹಳ ಪುರಾತನ, ಪಾರಂಪರಿಕ ಹಾಗೂ ದೈವಿಕ ಕಲೆಗಳು ಎಂದು ನಂಬಲ್ಪಟ್ಟವು. ಕಲಿಯ ಬಯಸುವವನ ಸಂಪೂರ್ಣ ಸಮರ್ಪಣೆಯನ್ನು ಬೇಡುವಂಥವು.

ಹಿಂದುಸ್ಥಾನೀ ಸಂಗೀತವು ನಾದಪ್ರಧಾನವಾಗಿದ್ದು ‘ಶಬ್ದಕ್ಕೆ ಮೀರಿದ’ ಸಂಗೀತವೆಂದು ಗುರುತಿಸಲ್ಪಟ್ಟಿದೆ. ಹಿಂದಿನ ಗುರುಶಿಷ್ಯ ಪರಂಪರೆಯಲ್ಲಿ ಲೇಖನಿ ಪುಸ್ತಕಗಳು ಇಲ್ಲದ ಕಾಲದಲ್ಲಿ ಗುರುವಿನಿಂದ ಶಿಷ್ಯನಿಗೆ ಬಾಯ್ದೆರೆಯಾಗಿ ಬಂದಿಷ್‍ಗಳ ಪಾಠಾಂತರವಾಗುತ್ತಿತ್ತು. ಸಾವಿರಾರು ಬಂದಿಷ್ ಗಳನ್ನು ನೆನಪಿಟ್ಟುಕೊಂಡು ಹಾಡುವ ಉಸ್ತಾದ್‍ಗಳು, ಗವಾಯಿಗಳು ಇದ್ದರು.

ಹೀಗೆ ಮೌಖಿಕ ಪರಂಪರೆಯನ್ನು ಹೊಂದಿ, ಶಬ್ದಕ್ಕೆ ಮೀರಿದ ‘ಅಮೂರ್ತ’ವಾದ ನಮ್ಮ ಸಂಗೀತ, ವೀಡಿಯೋ, ಮೈಕ್ರೋಫೋನ್, ರೆಕಾರ್ಡರ್‌ಗಳಿಂದ ಕೂಡಿದ ಸಂಪೂರ್ಣವಾಗಿ ದಾಖಲೆಗೊಳಗಾಗಿರುವ (documentation) ಇಂದಿನ ಯುಗದವರೆಗೆ ಸಾಗಿ ಬಂದ ಪಯಣದಲ್ಲಿ ತನ್ನ ‘ಶಬ್ದದಾಚೆಗಿನ ತುಡಿತ’ವನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕವೂ ಒಮ್ಮೊಮ್ಮೆ ನಮ್ಮನ್ನು ಕಾಡುತ್ತದೆ.

ಜಾನಪದ ಸಂಗೀತದ ತಳಹದಿಯಿಂದ ಮೈದಳೆದ ಈ ಸಂಗೀತ ಇವತ್ತು ಅತ್ಯಂತ ಕ್ರಮಬದ್ಧವಾಗಿ, ಪರಿಷ್ಕೃತವಾಗಿ, ‘ಶಾಸ್ತ್ರೀಯ’ ಎಂಬ ಹೆಸರಿನೊಂದಿಗೆ ವೇದಿಕೆ ಏರಿ ಕುಳಿತ ಪರಿ ಅಚ್ಚರಿ ಮೂಡಿಸುತ್ತದೆ. ಆದರೆ ಅದರೊಂದಿಗೇ ಒಬ್ಬ ಮಹಿಳೆ ತಾನು ಗೌರವಯುತವಾಗಿ ಸಂಸಾರದ ಚೌಕಟ್ಟಿನೊಳಗೆ ಇದ್ದುಕೊಂಡು ಉತ್ತಮವಾದ ಸಾಮಾಜಿಕ ಜೀವನವನ್ನೂ ಕಾಪಾಡಿಕೊಂಡು ಸಂಗೀತ ಕಲಿಯ ಬಹುದಾದ ಹಾಗೂ ವೇದಿಕೆ ಏರಬಹುದಾದ ವಾತಾವರಣ ಇಂದು ನಿರ್ಮಾಣಗೊಂಡಿದೆ. ಹಾಗೇಯೇ ಸಮಾಜದ ಮುಖ್ಯವಾಹಿನಿಯಲ್ಲಿ ವೈದ್ಯರು, ಶಿಕ್ಷಕರು, ಇಂಜಿನಿಯರುಗಳು ಮೊದಲಾದವರೊಂದಿಗೆ ಸಮಾನವಾಗಿ ಸಂಗೀತಗಾರರೂ ಗುರುತಿಸಿಕೊಳ್ಳುವಂತಾದದ್ದು ಸಮಾಧಾನವನ್ನು ನೀಡುತ್ತದೆ.

ಸಂಗೀತ ಕ್ಷೇತ್ರದ ಈ ಎಲ್ಲಾ ಬದಲಾದ ಸಂದರ್ಭದಲ್ಲಿ ನಿಂತು, ಇತ್ತೀಚೆಗೆ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿರುವ ಪ್ರತಿಭಾವಂತ ಯುವ ಗಾಯಕರುಗಳನ್ನು ಗುರುತಿಸಲು ಹೊರಟಾಗ ಮನಸ್ಸಿಗೆ ಸಂತೋಷವಾಗುವುದರೊಂದಿಗೆ, ಶಾಸ್ತ್ರೀಯ ಸಂಗೀತದ ಮುಖ್ಯ ಪ್ರವಾಹಕ್ಕೆ ಬಂದು ಸೇರುತ್ತಲೇ ಇರುವ ಚಿಕ್ಕ ಚಿಕ್ಕ ಧಾರೆ, ಒಳ ಹರಿವುಗಳ ಅನುಭವವೂ ಆಯಿತು. ಈ ಧಾರೆ, ಹರಿವುಗಳನ್ನು ‘ಮಾಡರ್ನ್ ಟ್ರೆಂಡ್ಸ್’ ಅಥವಾ ‘ವೈಯಕ್ತಿಕ ಕೊಡುಗೆ’ ಎಂಬ ಹೆಸರಿನಡಿಯೂ ಗುರುತಿಸಬಹುದೇನೋ… ಆದರೆ ನಾನು, ನನ್ನ ಕೇಳ್ಮೆ ಹಾಗೂ ಅರ್ಥೈಸಿಕೊಳ್ಳುವ ಮಿತಿಯೊಳಗೆ ಕೇವಲ ಗಾಯನ ಪ್ರಕಾರದಲ್ಲಿ ಉಂಟಾಗುತ್ತಿರುವ ಕೆಲವು ಗುರುತಿಸಲೇಬೇಕಾದ ಬದಲಾವಣೆಗಳನ್ನು, ಹೊಸದಾರಿಯಲ್ಲಿ ಸಾಗಿ ಬರುತ್ತಿರುವ ಕೆಲವು ಚಿಂತನೆಗಳನ್ನು, ನನ್ನ ಮನಮುಟ್ಟಿದ ಕೆಲವು ಅಪರೂಪದ ಪ್ರತಿಭೆಗಳನ್ನು ಈ ಬರಹದಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡಹೊರಟಿದ್ದೇನೆ.

ಹಿಂದೂಸ್ಥಾನಿ ಸಂಗೀತದ ಇತಿಹಾಸವನ್ನು ಸಂಪೂರ್ಣವಾಗಿ ಗಮನಿಸಿದಾಗ, ಇದು ಹೆಚ್ಚಾಗಿ ಪುಣೆ, ಮುಂಬೈ, ಕಲ್ಕತ್ತಾ, ಬನಾರಸ್, ಲಖ್ನೊ, ಗ್ವಾಲಿಯರ್, ಧಾರವಾಡ, ಗೋವಾ ಮುಂತಾದ ಪಟ್ಟಣಗಳಲ್ಲೇ ಬೆಳೆದು ಬಂದಿರುವುದು ಕಂಡು ಬರುತ್ತದೆ. ಈ ಪಟ್ಟಣಗಳು ಸಂಗೀತವನ್ನು ಬಯಸಿ ಬರುವ ಗ್ರಾಮೀಣ ಪ್ರದೇಶದ, ಏನೂ ಸಂಗೀತದ ಹಿನ್ನಲೆಯಿಲ್ಲದಿರುವ ವಿದ್ಯಾರ್ಥಿಗಳಿಗೂ ನೂರಾರು ವರ್ಷಗಳಿಂದ ಅನ್ನ, ವಿದ್ಯೆ ನೀಡಿ ಪೊರೆದಿವೆ, ಪೊರೆಯುತ್ತಿವೆ. ಸಂಗೀತದ ತೀರ್ಥಸ್ಥಾನಗಳು ಎನಿಸಿದ ಫುಣೆ, ಕಲ್ಕತ್ತಾ, ಮುಂಬಯಿ, ಗ್ವಾಲಿಯರ್ ಇತ್ಯಾದಿ ನಗರಗಳ ಇಂದಿನ ಸಂಗೀತದ ವಾತಾವರಣವನ್ನು ನೋಡಿದಾಗ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರು ಯಾವತ್ತೂ ಹೇಳುತ್ತಿದ್ದ ‘ಸಂಗೀತವೆಂದರೆ ತೊಟ್ಟಿಲು ಇದ್ದ ಹಾಗೆ. ನಾವು ತೂಗುವುದು ನಿಲ್ಲಿಸಿದರೆ, ನಮ್ಮ ಹಿಂದೆ ಬಂದವರು ತೊಟ್ಟಿಲಿಗೆ ಕೈ ಹಚ್ಚುತ್ತಾರೆ’ ಎಂಬ ಮಾತು ನಿಜವೆನಿಸುತ್ತದೆ. ಈಗಿರುವ ಹಿರಿಯ ತಲೆಮಾರಿನ ಸಂಗೀತಗಾರರಾದ ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ ದೇಶಪಾಂಡೆ, ವೀಣಾ ಸಹಸ್ರಬುಧ್ಧೆ, ಉಲ್ಲಾಸ್ ಕಶಾಲ್ಕರ್, ಮಾಲಿನಿ ರಾಜುರ್ಕರ್, ರಶೀದ್ ಖಾನ್, ಅಜಯ್ ಚಕ್ರವರ್ತಿ, ಜಸ್‍ರಾಜ್, ಪದ್ಮಾ ತಲ್ವಾಲ್ಕರ್, ಸಂಜೀವ್ ಅಭ್ಯಂಕರ್ ಇವರೆಲ್ಲರ ನಂತರದ ತಲೆಮಾರಿನ ಗಾಯಕರಲ್ಲಿ ಹಲವರು ಭರವಸೆಯನ್ನು ಮೂಡಿಸುತ್ತಾರೆ.

ಈ ನಿಟ್ಟಿನಲ್ಲಿ ಗುರುತಿಸಲೇಬೇಕಾದ ಕೆಲವು ಹೆಸರುಗಳನ್ನು ಕೆಳಗೆ ಚರ್ಚಿಸಿದ್ದೇನೆ.

ಕೌಶಿಕಿ ಚಕ್ರವರ್ತಿ: ಪಂ.ಅಜಯ್ ಚಕ್ರವರ್ತಿ ಅವರ ಮಗಳೂ ಹಾಗೂ ಶಿಷ್ಯೆಯೂ ಆದ ಕೌಶಿಕಿಯ ಹೆಸರು ಕೇಳದ ಸಂಗೀತ ಪ್ರಿಯರಿಲ್ಲ. ಎಳೆವೆಯಿಂದಲೇ ಸಂಗೀತದ ಗಂಭೀರ ಅಭ್ಯಾಸ ನಡೆಸಿ, ಕಲ್ಕತ್ತಾದಲ್ಲಿರುವ ಪ್ರಸಿದ್ಧ ಸಂಗೀತ ಸಂಸ್ಥೆಯಾದ ಐಟಿಸಿಯ ಸಂಗೀತ ರಿಸರ್ಚ್ ಅಕಾಡೆಮಿಯಲ್ಲಿ ಹೆಚ್ಚಿನ ಅಭ್ಯಾಸ ಮಾಡಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶದ ಪ್ರತಿಷ್ಠಿತ ಸಂಗೀತ ಸಭೆಗಳಲ್ಲೆಲ್ಲಾ ಹಾಡಿ, ಅನೇಕ ಬಾರಿ ವಿದೇಶ ಪ್ರಯಾಣವನ್ನೂ ಮಾಡಿದವರು ಕೌಶಿಕಿ. ಶಾಸ್ತ್ರೀಯ ಸಂಗೀತದಷ್ಟೇ ಸಮರ್ಥವಾಗಿ ಠುಮ್ರಿ, ದಾದ್ರಾಗಳನ್ನೂ ಹಾಡಬಲ್ಲವರು. ಲಯದ ಮೇಲಿನ ಪ್ರಭುತ್ವ, ತಮ್ಮ ಕಂಠಸಿರಿಯನ್ನು ದುಡಿಸಿಕೊಂಡ ರೀತಿ ಶ್ಲಾಘನೀಯವದುದು. ಇವರು ಪಟಿಯಾಲ ಘರಾಣೆಯ ಹಾಡುಗಾರ್ತಿ.

ಅರ್ಶದ್ ಅಲಿ ಖಾನ್: ಅರ್ಶದ್ ಐ.ಟಿ.ಸಿ ಯಿಂದ ಹೊರಬಂದ ಮತ್ತೋರ್ವ ಪ್ರತಿಭೆ. ಸಾರಂಗಿ ಮಾಂತ್ರಿಕ ಎನಿಸಿದ್ದ ಉ.ಶಕೂರ್ ಖಾನರ ಮೊಮ್ಮಗ, ಇವರು.  4 ವರ್ಷದ ಬಾಲಕನಾಗಿದ್ದಾಗಲೇ 40ರಾಗಗಳ ಪರಿಚಯ ಹೊಂದಿದ್ದರು.  8 ವರ್ಷದವನಾದಾಗ ಕಲ್ಕತ್ತಾದ ಐಟಿಸಿ ಸಂಸ್ಥೆ ಸೇರಿ, ಅಲ್ಲಿ ಉ.ಮಶ್ಕುರ್ ಅಲಿ ಖಾನ್ ಹಾಗೂ ಉ.ಮುಬಾರಕ್ ಅಲಿ ಖಾನ್ ಅವರ ಬಳಿ ಕಿರಾಣಾ ಸಂಪ್ರದಾಯದಲ್ಲಿ ಸಂಗೀತಾಭ್ಯಾಸ ಮಾಡಿದರು. ತಮ್ಮ ಘರಾಣೆಯ ವೈಶಿಷ್ಟ್ಯಗಳನ್ನು ಗಾಯನದಲ್ಲಿ ಯಶಸ್ವಿಯಾಗಿ ಪಡಿಮೂಡಿಸುತ್ತಾರೆ.

ಪುಶ್ಕರ್ ಲೇಲೆ: ಗುರುಮುಖೇನ ಪಡೆದ ವಿದ್ಯೆಯನ್ನು ತಮ್ಮ ಪ್ರತಿಭೆಯ ಮೂಸೆಯಲ್ಲಿ ತಿದ್ದಿ, ಸಂಗೀತವಾಗಿ ಹೊರತಂದವರು, ಪುಶ್ಕರ್. ಆರಂಭದಲ್ಲಿ ಶ್ರೀ ಗಂಗಾಧರ ಬುವಾ ಪಿಂಪಳ್ಕರ್  ಇವರ ಬಳಿ ಗ್ವಾಲಿಯರ್ ಶೈಲಿಯಲ್ಲಿ ಅಭ್ಯಾಸ ಆರಂಭಿಸಿ, ಮುಂದೆ ಶ್ರೀ ವಿಜಯ್ ಕೊಪರ್ಕರ್ ಹಾಗೂ ಹಲವಾರು ವರ್ಷ ಶ್ರೀ ವಿಜಯ್ ಸರದೇಶ್‍ಮುಖ್ ಅವರ ಬಳಿ ಅಭ್ಯಾಸ ಮಾಡಿದ್ದಾರೆ. ಸರದೇಶ್‍ಮುಖ್  ಅವರು ಸಂಗೀತದ ಆಧುನಿಕ ಯುಗದ ನೇತಾರರಾದ ಪಂ.ಕುಮಾರ ಗಂಧರ್ವರ ಪ್ರಮುಖ ಶಿಷ್ಯರಾಗಿದ್ದಾರೆ. ಇಂದಿನ ದಿನಮಾನದಲ್ಲಿ ಇರುವ ಕೆಲವೇ ಟಪ್ಪಾ ಗಾಯಕರಲ್ಲಿ ಪುಶ್ಕರ್ ಕೂಡಾ ಒಬ್ಬರು. ಸಂಗೀತಕ್ಕೆ ಸಂಬಂಧಿಸಿದ ಅನೇಕ ಉತ್ತಮ ವಿಚಾರಗಳನ್ನು ಹೊಂದಿರುವ ಇವರು, ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಅಪೂರ್ವ ಗೋಖಲೆ: ಅಪೂರ್ವ, ಗ್ವಾಲಿಯರ್ ಘರಾಣೆಯ ಹಿರಿಯ ಗಾಯಕ-ವಯೋಲಿನ್ ವಾದಕ-ಶ್ರೇಷ್ಠ ಗುರುವೂ ಆಗಿದ್ದ ಪಂ.ಗಜಾನನ ಬುವಾ ಜೋಶಿ ಅವರ ಮೊಮ್ಮಗಳು. ತಮ್ಮ ಅಜ್ಜನ ಬಳಿಯೇ ಅಭ್ಯಾಸ ಆರಂಭಿಸಿ, ನಂತರ ಮಾವ ಮಧುಕರ್ ಜೋಶಿ ಅವರ ಬಳಿ ಮುಂದುವರಿಸಿದರು. ಉನ್ನತ ಅಭ್ಯಾಸವನ್ನು ಪಂ.ಉಲ್ಲಾಸ್ ಕಶಾಲ್ಕರ್ ಅವರ ಬಳಿ ಮಾಡಿ, ಸದ್ಯ ಅಶ್ವಿನಿ ಭಿಡೆ ಅವರ ಮಾರ್ಗದರ್ಶನದೊಂದಿಗೆ ಮುಂದೆ ಸಾಗುತ್ತಿದ್ದಾರೆ. ತಮ್ಮ ಸಹೋದರಿ ಪಲ್ಲವಿ ಜೋಶಿ ಜೊತೆಗೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಸಹೋದರಿಯರಿಬ್ಬರೂ ಪ್ರತಿಭಾವಂತರಾಗಿದ್ದು ಪಾರಂಪರಿಕ ಝುಮ್ರಾ, ತಿಲವಾಡ ತಾಳಗಳಲ್ಲಿ ರಾಗಗಳನ್ನು ಸುಂದರವಾಗಿ ಹಿಡಿದಿಡುತ್ತಾರೆ.

ಮಂಜೂಷಾ ಕುಲಕರ್ಣಿ ಪಾಟೀಲ್: ಆಗ್ರಾ-ಗ್ವಾಲಿಯರ್ ಘರಾಣೆಯ ಗಾಯಕಿ, ಮಂಜೂಷಾ. ಚಿಂಟುಬುವಾ ಮೈಸ್ಕರ್ ಹಾಗೂ ಡಿ.ವಿ. ಖಾನೆಬುವಾ ಅವರ ಬಳಿ, ಗುರು-ಶಿಷ್ಯ ಪರಂಪರೆಯಲ್ಲಿ ಹಲವಾರು ವರ್ಷ ಅಭ್ಯಾಸ ಮಾಡಿ, ಪ್ರಸ್ತುತ ಶ್ರೀ ವಿಕಾಸ ಕಶಾಲ್ಕರ್ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರ ಗಾಯನ, ಶಕ್ತಿಯುತವಾದ ಗಾಯನವೆಂದೇ ಗುರುತಿಸಲ್ಪಡುತ್ತದೆ. ಇವರ ಗಾಯನದಲ್ಲಿ ಲಯದ ಬಗೆಗಿನ ಆತ್ಮ ವಿಶ್ವಾಸ, ರಾಗಶುದ್ಧತೆ, ತಾನ್‍ಗಳ  ಸಂಕೀರ್ಣತೆ ಎದ್ದು ಕಾಣುತ್ತದೆ. ಉತ್ತಮವಾಗಿ ಮರಾಠಿ ನಾತ್ಯ ಗೀತೆಗಳನ್ನು, ಅಭಂಗಗಳನ್ನು ಹಾಡುತ್ತಾರೆ.

ಶಾಶ್ವತಿ ಮಂಡಲ್-ಪಾಲ್: ಮಧ್ಯ ಪ್ರದೇಶದ ಗ್ವಾಲಿಯರ್, ಸಂಗೀತದ ಪ್ರಮುಖ ಘರಾಣೆಗಳಲ್ಲಿ ಒಂದಾದ ಗ್ವಾಲಿಯರ್ ಘರಾಣೆಯ ಜನ್ಮ ಭೂಮಿ. ಇಂಥಹ ಗ್ವಾಲಿಯರ್ ಹಾಗೂ ಅದರ ನೆರೆಯ ಭೋಪಾಲ್ ಶಾಶ್ವತಿಯ ಕರ್ಮಭೂಮಿ. ಶಾಶ್ವತಿ, ಆರಂಭದ ಶಿಕ್ಷಣವನ್ನು ತಮ್ಮ ತಾಯಿ ಕಮಲಾ ಮಂಡಲ್ ಬಳಿ ಪಡೆದರು. ನಂತರ, ಘರಾಣೆಯ ಹಿರಿಯ ಗಾಯಕರಾದ ಬಾಳಾ ಸಾಹೇಬ ಪೂಛ್‍ವಾಲೆ ಅವರ ಬಳಿ ಖ್ಯಾಲ್  ಹಾಗೂ ಟಪ್ಪಾ ಗಾಯಕಿಯ ಅಭ್ಯಾಸ ಮಾಡಿದರು. ಕೆಲವು ಕಾಲ ಗುಂಡೇಚಾ ಸಹೋದರರಿಂದಲೂ ಮಾರ್ಗದರ್ಶನ ಪಡೆದಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಕಲಾವಿದೆಯಾದ ಇವರು, ಟಪ್ಪಾ ಗಾಯನದಲ್ಲಿ ಪರಿಣತಿಯನ್ನು ಸಾಧಿಸಿದ್ದಾರೆ.

ಸಾವನಿ ಶೆಂಡೆ: ಪ್ರಸ್ತುತ ವೀಣಾ ಸಹಸ್ರಬುದ್ಧೆ ಅವರಿಂದ ಉನ್ನತ ಮಾರ್ಗದರ್ಶನ ಪಡೆಯುತ್ತಿರುವ ಸಾವನಿ ಜನಿಸಿದ್ದು ಸಂಗೀತಗಾರರ ಮನೆಯಲ್ಲೇ. ಇವರ ಅಜ್ಜಿ ಹಿರಿಯ ಖ್ಯಾಲ್ ಹಾಗೂ ಠುಮ್ರಿ ದಾದ್ರಾಗಳ ಗಾಯಕಿ, ಕುಸುಮ್ ಶೆಂಡೆ. ಸಾವನಿಯ ತಂದೆ ವೃತ್ತಿಯಲ್ಲಿ ವೈದ್ಯರಾಗಿದ್ದರೂ, ಅತ್ಯುತ್ತಮ ಗಾಯಕರು. ಹೀಗೆ ಎಳವೆಯಿಂದಲೇ ಆರಂಭಗೊಂಡ ಸಂಗೀತಾಭ್ಯಾಸ ಇಂದು ಆಕೆಯನ್ನು ಉತ್ತಮ ಕಲಾವಿದೆಯನ್ನಾಗಿ ಮಾಡಿದೆ. ಸಾವನಿ, ಹಲವಾರು ಮರಾಠಿ ಸಿನಿಮಾಗಳಿಗೆ ಕಂಠ ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದುವು, ಸಾವಲೀ, ಕೈರೀ ಇತ್ಯಾದಿ. ಜಸರಾಜ್ ಗೌರವ ಪುರಸ್ಕಾರ, ಮಾಣಿಕ್ ಭಿಡೆ ಪ್ರಶಸ್ತಿ, ಸುರಮಣಿ ಮುಂತಾದ ಹಲವು ಪುರಸ್ಕಾರ ಪಡೆದಿದ್ದಾರೆ.

ಮಂಜಿರಿ ಅಸಾನಾರೆ ಕೇಳ್ಕರ್: ಮರಾಠಿ ಭಾಷೆಯ ಹೆಸರಾಂತ ಲೇಖಕರಾದ ಪು.ಲಾ.ದೇಶಪಾಂಡೆ ಅವರು ಮಂಜಿರಿಯನ್ನು ‘ಭವಿಷ್ಯದ ಕೇಸರಿಬಾಯಿ’ ಎಂದು ಗುರುತಿಸಿದ್ದಾರೆ. ಇವರ ತಂದೆ ಆನಂದ ಕೇಳ್ಕರ್, ತಬಲಾ ವಾದಕರು. ಮಂಜಿರಿ ತಮ್ಮ ಸಂಗೀತದ ಆರಂಭವನ್ನು, ಜೈಪುರ್ ಅತ್ರೌಲಿ ಘರಾಣೆಯ ಬುರ್ಜಿ ಖಾನರ ಶಿಷ್ಯರಾದ ಪಂ.ಖಾನೆಟಕರ್ ಬುವಾ ಅವರ ಬಳಿ ಆರಂಭಿಸಿದರು. ಮುಂದೆ ಸಿ ಟಿ ಮೈಸ್ಕರ್ ಅವರ ಬಳಿ ಮುಂದುವರಿಸಿದರು. ಇಂದು ತಮ್ಮ ಯಾವುದೇ ರೀತಿಯ ಚಮತ್ಕಾರಗಳಿಲ್ಲದ, ಶುದ್ಧ ಸಂಗೀತದಿಂದ ಹೆಸರಾಗಿರುವ ಮಂಜಿರಿ, ಮೂಲತಃ ಉತ್ತಮ ಕಥಕ್ ನೃತ್ಯಗಾರ್ತಿ. ತಮ್ಮ ಗಾಯನದ ಮುಂದುವರಿಕೆಗಾಗಿ, ಜೈಪುರ್ ಘರಾಣೆಯ ಮೇರು ಕಲಾವಿದೆ, ಸ್ವರಶ್ರೀ ಕೇಸರಬಾಯಿ ಕೇರ್ಕರ್ ವಿದ್ಯಾರ್ಥಿ ವೇತನವನ್ನೂ ಪಡೆದಿದ್ದಾರೆ.

ಶೌನಕ್ ಅಭಿಶೇಕಿ: ಶೌನಕ್,  ಪಂ.ಜಿತೇಂದ್ರ ಅಭಿಶೇಕಿ ಅವರ ಮಗ ಹಾಗೂ ಶಿಷ್ಯ. ಆಗ್ರಾ-ಜೈಪುರ್ ಘರಾಣೆಯ ಗಾಯಕ. ತಮ್ಮ ತಂದೆಯ ರಚನೆಗಳನ್ನು ಆಧರಿಸಿದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಿ ಪ್ರಸ್ತುತಪಡಿಸಿದ್ದಾರೆ. ಸರಸ್ವತಿ ರಾಣೆ ಪುರಸ್ಕಾರ್, ಪುಣೆ ಕಿ ಆಶಾ ಇತ್ಯಾದಿ ಹಲವು ಗೌರವಕ್ಕೆ ಪಾತ್ರರಾಗಿದ್ದಾರೆ.

ಅನುರಾಧಾ ಕುಬೇರ್: ಇಂದು ಹೆಚ್ಚು ಪ್ರಸಿದ್ಧಿಯಲ್ಲಿ ಇಲ್ಲದ ‘ಬೆಂಡಿ ಬಜಾರ್ ಘರಾಣೆ’ಯ ಗಾಯಕಿ, ಅನುರಾಧಾ. ಶಾಂತವಾದ ರಾಗ ವಿಸ್ತಾರ, ಸ್ವರದೆಡೆಗಿನ ಪ್ರೀತಿಯಿಂದ ಕೇಳುಗರ  ಮನಸ್ಸನ್ನು ಗೆದ್ದಿದ್ದಾರೆ. ಸುಮಾರು 15 ವರ್ಷಗಳ ಕಾಲ, ಘರಾಣೆಯ ಪಂ. ಟಿ ಡಿ ಜನೋರಿಕರ್ ಬುವಾ ಬಳಿ ಉತ್ತಮವಾದ ತಾಲೀಮನ್ನು ಪಡೆದಿದ್ದಾರೆ. ಪ್ರಸ್ತುತ ಶ್ರೀ ಅರವಿಂದ ಥಟ್ಟೆ ಯವರ ಬಳಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಆಕಾಶವಾಣಿಯ ಎ ಗ್ರೇಡ್ ಗಾಯಕಿ. ತಮ್ಮ ಘರಾಣೆಯ ಖಾಸ್ ಬಂದಿಷ್‍ಗಳನ್ನು ಸಮರ್ಥವಾಗಿ ಹಾಡಬಲ್ಲವರು, ಅನುರಾಧಾ.

ಜಯತೀರ್ಥ ಮೇವುಂಡಿ: ಕರ್ನಾಟಕದ ಹೆಸರನ್ನು ದೇಶಾದ್ಯಂತ ಮೆರೆಸುತ್ತಿರುವ  ಅಪರೂಪದ ಕಲಾವಿದ, ಮೇವುಂಡಿ. ಕಿರಾಣಾ ಸಂಪ್ರದಾಯದ ತಾಲೀಮು ಹಾಗೂ ತಮ್ಮ ಪ್ರತಿಭೆ ಎರಡರ ಅದ್ಭುತವಾದ ಪಾಕವನ್ನು ಪ್ರತೀ ಕಾರ್ಯಕ್ರಮದಲ್ಲೂ ಉಣಬಡಿಸುತ್ತಿದ್ದಾರೆ.  ಆರಂಭಿಕ ಶಿಕ್ಷಣವನ್ನು, ಗಾನಭಾನು ಎಂದೇ ಹೆಸರಾಗಿದ್ದ, ಕಿರಾಣಾ ಘರಾಣೆಯ ಪಂ. ಅರ್ಜುನ್‍ಸಾ ನಾಕೋಡ್ ಅವರ ಬಳಿ ಪಡೆದು, ಮುಂದೆ ಭೀಮಸೇನ್ ಜೋಶಿ ಅವರ ಶಿಷ್ಯರಾದ ಶ್ರೀಪತಿ ಪಾಡಿಗಾರ್ ಅವರ ಶಿಷ್ಯತ್ವ ಮಾಡಿದರು. ಗಂಭೀರವಾದ ಅಲಾಪ್, ತಾನ್‍ಗ‍ಳ ಕುಸುರಿ ಕೆಲಸ, ಮಧುರವಾದ ಅಭಂಗ್‍ಗಳಿಂದ ಸಭೆ ಗೆಲ್ಲಬಲ್ಲವರು, ಮೇವುಂಡಿ. ಜಸರಾಜ್ ಪ್ರಶಸ್ತಿ, ಐ ಟಿ ಸಿ ನೀಡುವ ಗೌರವ, ಹೀಗೆ ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ಗೌರಿ ಪಠಾರೆ: ಮುಂಬೈ ನಿವಾಸಿಯಾಗಿರುವ ಗೌರಿ, ಆರಂಭಿಕ ಅಭ್ಯಾಸವನ್ನು ಪಂ. ಗಂಗಾಧರ ಪಿಂಪಳ್ಕರ್ ಅವರ ಬಳಿ ಮಾಡಿದ್ದಾರೆ. ಮುಂದೆ ಆರು ವರ್ಷಗಳ ಕಾಲ ಜಿತೇಂದ್ರ ಅಭಿಶೇಕಿ ಅವರಲ್ಲಿ ಅಭ್ಯಾಸ ಮಾಡಿ, ಪ್ರಸ್ತುತ 10-15 ವರ್ಷಗಳಿಂದ ಪುಣೆಯ ಪದ್ಮಾ ತಲವಾಲ್ಕರ್ ಅವರ ಬಳಿ ವಿದ್ಯಾಭ್ಯಾಸ ನಡೆಸಿದ್ದಾರೆ. ಇವರ ಗಾಯನದ ಗತ್ತುಗಾರಿಕೆ, ಗಾಯನದಿಂದ ಸಭೆಯನ್ನು ತುಂಬುವ ರೀತಿ ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ರಾಮಕೃಷ್ಣ ಬುವಾ  ವಝೆ ಪ್ರಶಸ್ತಿಯೇ ಮೊದಲಾದ ಹಲವು ಗೌರವಗಳನ್ನು ಗೌರಿ ಪಡೆದಿದ್ದಾರೆ.

ಚೇತನಾ ಬನಾವತ್: ಕಿರಾಣಾ ಘರಾಣೆಯ ಹಿರಿಯ ಗಾಯಕಿ ಡಾ.ಪ್ರಭಾ ಅತ್ರೆಯವರ ಶಿಷ್ಯೆಯಾಗಿರುವ ಚೇತನಾ ಜನಿಸಿದ್ದು, ಉದಯಪುರದಲ್ಲಿ. ಆರಂಭಿಕ ಶಿಕ್ಷಣವನ್ನು ತಮ್ಮ ತಾಯಿ ಮದನಾ ಬನಾವತ್ರಿಂದ ಪಡೆದು, ನಂತರದಲ್ಲಿ ಪ್ರಭಾ ತಾಯಿಯ ಶಿಷ್ಯೆಯಾಗಿ ಇಂದು ದೇಶದೆಲ್ಲೆಡೆ ಹೆಸರಾಗಿದ್ದಾರೆ. ಪ್ರಭಾ ಅತ್ರೆಯವರು ರಚಿಸಿದ ಬಂದಿಷ್‍ಗಳು ಇರುವ ಸಿ.ಡಿಯಾದ ‘ಸ್ವರಾಂಗಿನಿ’ ಹಾಗೂ ‘ಸ್ವರಾಂಜಿನಿ’ ಗಳಲ್ಲಿ ಪ್ರಭಾ ತಾಯಿಯವರು, ಚೇತನಾ ಅವರಿಂದಲೇ ಹಾಡಿಸಿರುವುದು, ಅವರ ಪ್ರತಿಭೆಗೆ ನಿದರ್ಶನ. ಚೇತನಾ ಸಂಗೀತ ನಾಟಕ ಅಕಾಡೆಮಿಯ ಯುವ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ.

ಸಾನಿಯಾ ಪಾಠನ್ಕರ್: ಜೈಪುರ್-ಅತ್ರೌಲಿ ಘರಾಣೆಯ ಮೇರು ಕಲಾವಿದೆಯಾದ ಅಶ್ವಿನಿ ಭಿಡೆ ದೇಶ್‍ಪಾ0ಡೆ ಅವರ ಶಿಷ್ಯೆಯಾದ ಸಾನಿಯಾ, ಸಿ.ಎಸ್ ಮುಗಿಸಿದ್ದಾರೆ. ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಸಾನಿಯಾ, ಭವಿಷ್ಯದಲ್ಲಿ ಹೆಸರಾಂತ ಉತ್ತಮ ಗಾಯಕಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಾನಿಯಾ, ವಿಷ್ಣು ದಿಗಂಬರ ಪ್ರಶಸ್ತಿ, ಜಸರಾಜ್ ಪ್ರಶಸ್ತಿ, ರಾಮಕೃಷ್ಣ ಬುವಾವಝೆ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅನೇಕ ರಿಯಾಲಿಟಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಠುಮ್ರಿ ದಾದ್ರಾಗಳನ್ನೂ ಸಮರ್ಥವಾಗಿ ಹಾಡ ಬಲ್ಲವರು.

ಶಶಾಂಕ್ ಮಕ್ತೇದಾರ್:  ಪ್ರಸ್ತುತ ಗೋವಾದ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶಶಾಂಕ್, ವಿದ್ವಜ್ಜನರ ಹಾಗೂ ಸಹೃದಯಿ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾದ ಕಲಾವಿದರು. ತಂದೆ ಶಾಮರಾವ್ ಮಕ್ತೇದಾರ್ ರಿಂದ ಆರಂಭಿಕ ಶಿಕ್ಷಣ ಪಡೆದು, 1991ರಲ್ಲಿ ಐ ಟಿ ಸಿ ಸೇರಿ, ಉಲ್ಲಾಸ್ ಕಶಾಲ್ಕರ್ ಅವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದರು.  ತಮ್ಮ ಗುರುಗಳ ಗುರುಗಳಾದ ‘ಪಂ.ಗಜಾನನ ಬುವಾ ಜೋಶಿ ಅವರ ಸಾಂಗೀತಿಕ ಕೊಡುಗೆ’ ಎಂಬುದು ಅವರ  ಪಿಹೆಚ್‍ಡಿ ಅಧ್ಯಯನದ ವಿಷಯ.

ಕುಮಾರ್ ಮರಡೂರ್: ಪ್ರಸ್ತುತ ಕಲ್ಕತ್ತಾದ ಐ ಟಿ ಸಿ ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರ್, ಧಾರವಾಡದ ಮಣ್ಣಿನ ಮಗ. ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯಿಂದ ಸಂಗೀತಾಸಕ್ತರ ಗಮನ ಸೆಳೆದವರು. ಕುಮಾರ್ ತಮ್ಮ ತಂದೆ ಪಂ.ಸೋಮನಾಥ ಮರಡೂರ ಅವರ ಬಳಿ ಸಂಗೀತಾಭ್ಯಾಸ ಮಾಡಿದ್ದಾರೆ. ಸವಾಯ್ ಗಂಧರ್ವ ಉತ್ಸವವೇ ಮೊದಲಾದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕುಮಾರ್ ತಬಲಾ ವಾದನವನ್ನೂ ಚೆನ್ನಾಗಿ ಬಲ್ಲವರು. ಇವರ ಕಂಠವು ಕಂಚಿನ ಗಟ್ಟಿತನ, ಗಂಭೀರತೆ ಗಳ ಜೊತೆಗೆ ಹೂವಿನ ಮೃದುತ್ವವನ್ನೂ ಹೊಂದಿದೆ.

ಆರತಿ ಠಾಕೂರ್ ಕುಂಡಲ್ಕರ್:  ಪುಣೆ ನಿವಾಸಿಯಾದ ಆರತಿ, ಭರವಸೆ ಮೂಡಿಸುತ್ತಿರುವ ಗಾಯಕಿ. ಡಾ.ಪ್ರಭಾ ಅತ್ರೆ ಅವರ ಶಿಷ್ಯೆ. ಕಿರಾಣಾ ಘರಾಣೆಯ ಪದ್ಧತಿಯಲ್ಲಿ ಕಲಿತ ಇವರು ಖ್ಯಾಲ್ ಜೊತೆಗೆ ಠುಮ್ರಿ, ದಾದ್ರಾಗಳನ್ನೂ ಹಾಡುತ್ತಾರೆ. ಇವರ ಪತಿ ಸುಯೋಗ್ ಕುಂಡಲ್ಕರ್, ಪ್ರತಿಭಾವಂತ ಯುವ ಹಾರ್ಮೋನಿಯಂ ವಾದಕ.

ಇವರಷ್ಟೇ ಅಲ್ಲದೇ ತುಶಾರ್ ದತ್ತ್, ಶಿವಾನಿ ಮಾರುಲ್ಕರ್, ರುಚಿರಾ ಕೇದಾರ್, ಗಾಯತ್ರಿ ವೈರಾಗ್ಯಕರ್, ಯಶಸ್ವಿ ಸಾಠೆ, ರಂಜನಿ ರಾಮಚಂದ್ರನ್, ಶೌನಕ್ ಚಟರ್ಜಿ ಮುಂತಾದವರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ.  ಇಲ್ಲಿ, ಯಾವುದೇ ಸಂಗೀತವು ‘ಆಧುನಿಕ’ ಎಂದು ಕರೆಯಲ್ಪಡುವುದು ಕೇವಲ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಅಲ್ಲ. ಯಾರೇ ಒಬ್ಬ ಸಂಗೀತಗಾರ ಪರಂಪರೆ ಹೇಳುವ ಶಿಸ್ತು, ನಿಯಮಗಳನ್ನು ಉಳಿಸಿಕೊಂಡೂ ಹೆಚ್ಚು ಸಂವೇದನಾ ಶೀಲವಾದ, ಹಾಗೆಯೇ ಹೆಚ್ಚು ಪ್ರಸ್ತುತವೆನಿಸುವ ಹೊಸತೊಂದನ್ನು ಕಂಡುಕೊಂಡಾಗ ಆತ ಮತ್ತೆ ಪ್ರಸ್ತುತನಾಗುತ್ತಾ ಹೋಗುತ್ತಾನೆ. ಹೀಗಾಗಿ ಆಧುನಿಕತೆ ಎನ್ನುವುದು ಮನೋಧರ್ಮಕ್ಕೆ ಸಂಬಂಧಿಸಿದ್ದು. ಹೀಗೆ ತನ್ನ ಬೇರನ್ನು ಭದ್ರವಾಗಿಟ್ಟುಕೊಂಡೇ, ಆಧುನಿಕತೆಯೆಡೆಗೆ ಸಾಗುತ್ತಿರುವ ಇವತ್ತಿನ ಸಂಗೀತದಲ್ಲಿ ಉಂಟಾಗಿರುವ ಕೆಲವು ಉತ್ತಮವಾದ, ನನಗೆ ಧನಾತ್ಮಕ ಎನಿಸಿದ ಮಾರ್ಪಾಟುಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇನೆ.

ನನಗನಿಸುವಂತೆ ಇಂದಿನ ಹಲವು ಗಾಯಕರಿಗೆ ‘ಬಂದಿಶ್’ ಬಗ್ಗೆ ಒಲವು ಹೆಚ್ಚುತ್ತಿದೆ. ಹಲವಾರು ಸಂದರ್ಭಗಳಲ್ಲಿ ಅಶ್ಲೀಲ, ಅಸಹ್ಯ ವೆನಿಸುವ ಅರ್ಥವನ್ನು ಕೊಡುವ ಹಳೆಯ ಬಂದಿಷ್‍ಗಳ ಬದಲಿಗೆ ಒಳ್ಳೆಯ ಅರ್ಥದ ಹೊಸ ಬಂದಿಷಗಳ ಹುಡುಕಾಟ ನಡೆಯುತ್ತಿದೆ. ಇದರಿಂದಾಗಿ ಪಾರಂಪರಿಕ ಬಂದಿಷ್‍ಗಳ ಜೊತೆ ಸೇರಿ ಹೋದ ಕುಮಾರಜಿ, ನಾತು ಬುವಾ, ರಾತಾಂಜನಕರ್, ರತ್ನಕಾಂತ್ ರಾಮನಾಥಕರ್ ಮುಂತಾದವರ ಬಂದಿಷ್‍ಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಿವೆ. ಇವುಗಳೊಂದಿಗೆ ಶಂಕರ ಅಭ್ಯಂಕರ್, ಕಿಶೋರಿ ಅಮೋನ್ಕರ್, ಅಶ್ವಿನಿ ಭಿಡೆ, ಪ್ರಭಾ ಅತ್ರೆ ಮೊದಲಾದವರ ಅನೇಕ ವಿಶಿಷ್ಟ ರಚನೆಗಳೂ ಪ್ರಸಿದ್ಧಿ ಪಡೆಯುತ್ತಿವೆ. ಹೊಸದಾದ ‘ಭಾವ ಸೌಂದರ್ಯವಾದ’ವನ್ನು ಪ್ರತಿಪಾದಿಸುವ ನಾರಾಯಣ ಪಂಡಿತರಂಥವರ ಬಂದಿಷ್‍ಗಳು ಸಂಗೀತದ ‘ಆಧುನಿಕತೆ’ಗೆ ಸಂದ ದೊಡ್ಡ ಕೊಡುಗೆ. ಯುವಪೀಳಿಗೆಯಲ್ಲಿ ಇಂಥಹ ಕಾರ್ಯ ಮುಂದುವರಿಸಿ, ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವವರು ಪುಣೆಯ ಯುವ ಹಾರ್ಮೋನಿಯಂ ವಾದಕ-ವಾಗ್ಗೇಯ ಕಾರರಾದ ಶ್ರೀ ಚೈತನ್ಯ ಕುಂಟೆ. ಇವರು ಹಲವಾರು ಬಂದಿಷ್‍ಗಳ ರಚನೆ ಮಾಡುವುದರೊಂದಿಗೆ, ಹಲವಾರು ವಿಚಾರಾಧಾರಿತ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗಾಗಿ; ಮೆಘ್-ರಂಗ್, ಬಸಂತ್-ರಂಗ್, ನಾಯಿಕಾ ಭಾವ-ತರಂಗ್, ಭೈರವಿ ದರ್ಶನ್, ಸಾಜ್ ಠುಮರೀಚಾ ಇತ್ಯಾದಿ. ಕಥಕ್ ಹಾಗೂ ಭರತನಾಟ್ಯ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿರುವ ಇವರು, ಟಪ್ಪಾ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದಾರೆ.

ಇಂದಿನ ಹೆಚ್ಚಿನ ಯುವ ಗಾಯಕರು ಸಂಗೀತದ ಕ್ಷೇತ್ರಕ್ಕೆ ಸಂಪೂರ್ಣ ಸಮರ್ಪಣೆ ಮಾಡಿಕೊಂಡಿದ್ದರೂ, ಉನ್ನತ ಮಟ್ಟದ ಔಪಚಾರಿಕ ಶಿಕ್ಷಣವನ್ನೂ ಪಡೆದವರಾಗಿದ್ದಾರೆ. ಸಾಹಿತ್ಯ, ಗಣಿತ, ವಿಜ್ಞಾನ ಹೀಗೆ ವಿಭಿನ್ನ ವಿಭಾಗದಲ್ಲಿ ಹೆಚ್ಚಿನ ತಿಳುವಳಿಕೆ ಹೊಂದಿದ್ದು, ಈ ತಿಳುವಳಿಕೆಯಿಂದ ಅವರು ಸಂಗೀತವನ್ನು ನೋಡುವ ದೃಷ್ಟಿಯೂ ಬದಲಾಗುತ್ತಿರುವುದನ್ನು ಗುರುತಿಸಬಹುದಾಗಿದೆ. ತಮ್ಮ ಈ ಔಪಚಾರಿಕ ಶಿಕ್ಷಣದಿಂದ ಉತ್ತಮವಾದ ವಿಶ್ಲೇಷಣಾ ಶಕ್ತಿ ಹಾಗೂ ಘನತೆಯಿಂದ ಹಾಡುವುದು, ಬದುಕುವುದು ಇವುಗಳನ್ನು ಪಡೆದುಕೊಂಡಿದ್ದಾರೆ.

ಧ್ವನಿ ವರ್ಧಕ ಇಲ್ಲದ ಕಾಲದಲ್ಲಿ ರೂಪುಗೊಂಡ ‘ಜೋರ್‌ದಾರ್’ ಗಾಯನ ಅದರ ಕುರುಡು ಅನುಕರಣೆಯಿಂದ ಮುಂದಿನ ಪೀಳಿಗೆಗೂ ಸಾಗಿ ಬಂದದ್ದನ್ನು ಕಾಣುತ್ತೇವೆ. ಈ ಅಂಶ ಇಂದಿನ ಕಾಲದಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಮೈಕ್ ಅನ್ನು ಬಳಸಿ ಸಂಗೀತದಲ್ಲಿ ಮಾಡಬಹುದಾದ ಬದಲಾವಣೆ, ಅದರಿಂದಾಗುವ ಉಪಯೋಗ ಇವೆಲ್ಲವನ್ನೂ ಅಭ್ಯಾಸ ಮಾಡಿ ಸ್ವರಸಂಸ್ಕಾರ (voice culture) ಕ್ಷೇತ್ರದಲ್ಲಿ ಮಹತ್ವಪೂರ್ಣವಾದ ಬದಲಾವಣೆಯನ್ನು ಮಾಡಲಾಗಿದೆ.

ಪುರುಷರು ಗುರುಗಳಾಗಿದ್ದಾಗ, ಅವರಿಂದ ಕಲಿಯುತ್ತಿದ್ದ ಸ್ತ್ರೀಯರ ಶಾರೀರ ತನ್ನ ಮೂಲ ಸ್ವರೂಪಕ್ಕೆ ಹೊರತಾದ, ಹೆಣ್ಣು ಕಂಠಕ್ಕೆ ಶೋಭಿಸದ ಗಮಕಗಳು, ತಾನ್‍ಗಳು ಇತ್ಯಾದಿಗಳನ್ನು ಅನುಕರಿಸುತ್ತದೆ. ಇವುಗಳನ್ನೆಲ್ಲಾ ಗುರುತಿಸಿ, ಪರಿಷ್ಕರಿಸಿ ‘ femininity’’ ಎಂಬ ಹೆಸರಿನಡಿ ಇಂದು ಗುರುತಿಸಲಾಗಿದೆ. ಹೆಚ್ಚಿನ ಗಮಕಗಳಿಂದ ಸ್ತ್ರೀಕಂಠದ ಮೇಲೆ ಬೀಳುವ ಅನವಶ್ಯಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿಯೇ ಸ್ವರವನ್ನು ಕಳೆದುಕೊಳ್ಳುವುದು ತಪ್ಪುತ್ತದೆ ಎಂದೂ ಗುರುತಿಸಲಾಗಿದೆ.

ಇಂದಿನ ಮಲ್ಟಿಮೀಡಿಯ ಯುಗದಲ್ಲಿ ಹಿಂದಿನ ಉಸ್ತಾದ್, ಗವಾಯಿಗಳು ಮಾಡುತ್ತಿದ್ದ ಹಾವಾಭಿನಯಗಳ ಅಬ್ಬರ ಕಡಿಮೆಯಾಗಿ ಸೂಕ್ಷ್ಮತೆ ಜಾಗ ಪಡೆಯುತ್ತಿದೆ. ಶಾರೀರದ ಅದೇ ಬಾಗು ಬಳುಕುಗಳನ್ನು ಆಂಗಿಕ ಅಭಿನಯ, ಅಬ್ಬರಗಳಿಲ್ಲದೆ ನಯವಾಗಿ ಸಾಧಿಸುವ ಬಗೆ ಇಂದಿನ ಸಂಗೀತಗಾರರಲ್ಲಿ ಕಾಣುತ್ತದೆ. ಪಾರಂಪರಿಕ ಧೀಮಾ, ಏಕ್ತಾಲ್, ತ್ರಿತಾಲ್‍ಗಳೊಂದಿಗೆ ಇಂದಿನ ವೇಗದ ಯುಗದಲ್ಲಿ ಮಧ್ಯ ಲಯದ ಝಪ್ತಾಲ್, ರೂಪಕ್‍ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಮಧ್ಯಲಯದ ತಾಳಗಳಿಂದ ರಾಗನಿರೂಪಣೆಯಲ್ಲಿ ಚುಟುಕು ಹಾಗೂ ಚುರುಕುತನಗಳು ಬರುವುದರೊಂದಿಗೆ ರಾಗದ ಸಾರವನ್ನು ಸಂಗ್ರಹಿಸಿ ಸುಂದರವಾಗಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ಹಳೆ ಬೇರಿನಿಂದ ಚಿಗುರೊಡೆದ ಹೊಸ ಕವಲುಗಳು ಕೆಳಗೆ ಭದ್ರವಾಗಿ ಬೇರೂರಿಕೊಂಡೇ ಗಗನಗಾಮಿಯಾಗಿ ಬೆಳೆಯುತ್ತಿರುವುದು ಆಶಾದಾಯಕವಾಗಿ ಕಂಡುಬರುತ್ತದೆ. ಎಲ್ಲ ಸಂಗತಿಗಳ ಜೊತೆಗೆ ಕಲೆಯೂ ಒಂದು ‘ಮಾರಾಟದ ಸರಕಾಗಿ’ ಬಿಡುವ ಎಚ್ಚರದಲ್ಲೇ ಇವರು ಕಲೆಯ ಮೂಲಕ ತಮ್ಮತನದ ಹುಡುಕಾಟದ ಇಕ್ಕಟ್ಟಿನಲ್ಲಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತದೆ. ಇವುಗಳ ನಡುವೆಯೇ ಪರಂಪರೆಯ ನೆಲಗಟ್ಟಿನೊಂದಿಗೆ ಬಹುಮಾಧ್ಯಮಗಳ ಸಾಧ್ಯತೆಗಳನ್ನು ದುಡಿಸಿಕೊಂಡು ಕಲೆಯನ್ನು ಹಲವು ಆಯಾಮಗಳಲ್ಲಿ ಯುವ ಗಾಯಕರು, ವಾದಕರು ಬೆಳೆಸುತ್ತಿದ್ದಾರೆ; ಕಾಲದ ಗತಿಯಲ್ಲಿ ದನಿಗೂಡಿಸುತ್ತಾ ನಡೆಯುತ್ತಿದ್ದಾರೆ.

ಬದಲಾಗುತ್ತಿರುವ ಕಾಲಮಾನದಲ್ಲಿ ಶಾಸ್ತ್ರೀಯ ಸಂಗೀತ

 -ಶ್ರೀಮತಿ ದೇವಿ

“ಸಂಗೀತ ಎನ್ನುವುದು ಮನುಷ್ಯನ ಪ್ರಜ್ನೆಯನ್ನು ವಿಕಾಸಗೊಳಿಸುವ ಕಲೆಗಳಲ್ಲಿ ಒಂದಾಗಿರುವುದು ಮಾತ್ರವಲ್ಲ, ಅದು ಆ ಕಲಾಕಾರನ ಸೃಜನಶೀಲತೆಯ ಅಭಿವ್ಯಕ್ತಿಗಾಗಿ ಇರುವ ಮಾಧ್ಯಮವೂ ಆಗಿರುತ್ತದೆ. ಇದರಿಂದಾಗಿದೆಯೇ ಕಾಲ ಬದಲಾಗುತ್ತಾ ಮುಂದೆ ಸಾಗಿದಂತೆ, ಹೇಗೆ ಪರಿವರ್ತಿತವಾಗುವ ಸಮಾಜದೊಂದಿಗೆ ಬದುಕುತ್ತಿರುವ ವ್ಯಕ್ತಿಗಳ ಜೀವನವೂ, ಆಲೋಚನಾ ವಿಧಾನವೂ, ವ್ಯಕ್ತಿತ್ವವೂ, ಸಮಾಜದ ಬದಲಾವಣೆಗೆ ಸ್ಪಂದಿಸುವ ರೀತಿಯೂ ಬದಲಾಗುತ್ತದೋ ಹಾಗೆಯೇ ಅದರೊಂದಿಗೆ ಸಮಾನಾಂತರವಾಗಿ ಸಂಗೀತಾದಿ ಕಲೆಗಳು ಬದಲಾಗುತ್ತವೆ, ಹೊಸ ಹೊಸ ರೂಪಗಳನ್ನು ಪಡೆದುಕೊಳ್ಳುತ್ತವೆ.” ಎಂಬ ಈ ಆಸಕ್ತಿದಾಯಕವಾದ ವಿಚಾರದೆಡೆಗೆ ಇತ್ತೀಚೆಗೆ ನನ್ನ ಗಮನವನ್ನು ಸೆಳೆದು ಆಲೋಚನೆಗೆ ಹಚ್ಚಿದವರು, ಬಹುದೊಡ್ಡ ಸಂಗೀತಗಾರರೂ ನನ್ನ ಗುರುಗಳೂ ಆದ ಪಂ. ನಾರಾಯಣ ಪಂಡಿತರು.

ಪಂಡಿತರು, ದ್ರುಪದ್ ಗಾಯನದ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲದ ವರೆಗಿನ ಸಂಗೀತದ ಪ್ರವಾಸವನ್ನು ಸುಂದರವಾಗಿ “ಸ್ಥೂಲತೆಯಿಂದ ಸೂಕ್ಷ್ಮತೆಯೆಡೆಗಿನ ಪ್ರವಾಸ” ಎಂದು ಕರೆಯುತ್ತಾರೆ.

ದ್ರುಪದ್ ಎಂಬುದು ಇಂದಿನ ಖ್ಯಾಲ್ ಗಾಯನಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಗಾಯನಪ್ರಕಾರ. ಬಹಳ ಧೀಮಂತವಾಗಿ, ಗಂಭೀರವಾಗಿ ಸಾಗುವ ಈ ಪಧ್ಧತಿಯಲ್ಲಿ ರಾಜ ಗಾಂಭೀರ್ಯವಿದೆ. ಹಾಗೆಯೇ ಇದು ಎಲ್ಲೂ ಗಮಕ್, ಖಟ್ಗಾ, ಮುರ್ಕಿಗಳು ಎಂಬಂತಹ ಉಪರಸ್ತೆಗಳ ಕಡೆ ತಿರುಗಿಯೂ ನೋಡದೇ ರಾಜಮಾರ್ಗದಲ್ಲಿ ಸಾಗುತ್ತದೆ.

ದೇವರ ವರ್ಣನೆ, ಆಶ್ರಯದಾತನಾದ ರಾಜನ ಹಿರಿಮೆಯನ್ನು ಹೊಗಳುವ ವಿಚಾರಗಳನ್ನುಳ್ಳ ದ್ರುಪದ್ ರಚನೆಯಲ್ಲಿ ಸಾಮಾನ್ಯ ಮಾನವನ ದೈನಂದಿನ ಜೀವನ, ತುಮುಲ, ಆತನ ಭಾವನೆಗಳು ಇವನ್ನೆಲ್ಲಾ ಕಾಣಲು ಸಾಧ್ಯವಿಲ್ಲ. ಇದಕ್ಕೆ ಸಾಥಿಗಾಗಿ ಬಳಸಲಾಗುತ್ತಿದ್ದ ಪಖವಾಜನ್ನು ಗಮನಿಸಿದಾಗಲು ಈ ಅಂಶಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಪಖವಾಜ್ ನೋಡಲು ಮೃದಂಗದಂತಹ ತಾಳವಾದ್ಯವಾಗಿದ್ದು, ಇದರಲ್ಲಿ ಖುಲ್ಲಾಬಾಜ್ ನ ಬೋಲ್ ಗಳನ್ನು ಬಾರಿಸಲಾಗುತ್ತದೆ. ’ಧಾ, ಧಿಂ, ತಿಟತಕ’ ಮೊದಲಾದ ಪದಗಳನ್ನು ದೊಡ್ಡ ಸ್ವರದೊಂದಿಗೆ ಗಂಭೀರವಾಗಿ ಬಾರಿಸಲಾಗುತ್ತದೆ.

ಕಾಲ ಸರಿದಂತೆ, ದ್ರುಪದ್ ಗಾಯನದಿಂದ ಖ್ಯಾಲ್ ಗಾಯನದೆಡೆಗೆ ಜನರ ಒಲವು ಬೆಳೆದಂತೆ ಸಂಗೀತದಲ್ಲಿ ಬದಲಾವಣೆಯ ಗಾಳಿ ಸಣ್ಣದಾಗಿ ಬೀಸಲು ಆರಂಭವಾಯಿತು. ಇದನ್ನು ಪಂಡಿತರು, “objectivity ಇಂದ subjectivity ಯ ಕಡೆಗೆ” ಎಂದು ಗುರುತಿಸುತ್ತಾರೆ. ಖ್ಯಾಲ್ ರಚನಾಕಾರನು ಇಲ್ಲಿ “ತನಗೇನು ಅನಿಸುತ್ತಿದೆ, ಹೇಗೆ ಕಾಣುತ್ತಿದೆ” ಎಂಬುದನ್ನು ಹೇಳಲೇಬೇಕಾದ ಒತ್ತಡವನ್ನು ಕಂಡುಕೊಂಡ. ಇದರಿಂದಾಗಿಯೇ ಸ್ವಲ್ಪಮಟ್ಟಿಗೆ ಜಾಸ್ತಿಯೇ ಎನ್ನಬಹುವಾದ ಶೃಂಗಾರ, ವಿರಹಮಯವಾದ ರಚನೆಗಳು ಬರಲು ಕಾರಣವಾಯಿತು. ಆದರೆ ಇವುಗಳೊಂದಿಗೆ ಗೆಳೆತನ, ಮಾತೃವಾತ್ಸಲ್ಯ, ಮಗುವಿನ ತುಂಟಾಟ, ಈ ಎಲ್ಲಾ ಭಾವನೆಗಳ ಅಭಿವ್ಯಕ್ತಿಗೂ ಆಸ್ಪದದೊರಕುವಂತಾಯಿತು.

ಖ್ಯಾಲ್ ಗಾಯನದಲ್ಲಿ, ದ್ರುಪದ್ ಗಾಯನದಲ್ಲಿ ಇರುವುದಕ್ಕಿಂತ ಹೆಚ್ಚು ಹಾಡುಗಾರನಿಗೆ ಸ್ವಾತಂತ್ರ್ಯವಿರುವುದರಿಂದ ಆತನೂ ಈ ರಚನೆ ” ನನ್ನ ಕಣ್ಣಿಗೆ ಹೇಗೆ ಕಾಣುತ್ತಿದೆ” ಎಂದು ತಿಳಿದು ಹಾಡಲು ಆರಂಭಿಸಿದ. ಪಂಡಿತರು ಹೇಳುವಂತೆ ಈ ರೀತಿಯಾಗಿ ಸಂಗೀತದಲ್ಲಿ “humanizing process” ಆರಂಭವಾಯಿತು. ಪಖವಾಜ್ ಗಿಂತ ಬೇರೆಯಾದ ತಬಲ ಸಾಥ್, ಸೂಕ್ಷ್ಮವಾದ ಬೋಲ್ ಗಳೊಂದಿಗೆ ಸಂಗೀತಕ್ಕೆ ಮತ್ತಷ್ಟು ತರಲತೆಯನ್ನು ನೀಡತೊಡಗಿತು. ಅಭಿವೃದ್ಧಿಯೆಡೆಗೆ ಧಾಪುಗಾಲು ಇಟ್ಟು ಸಾಗುತ್ತಿದ್ದ ಸಮಾಜದಲ್ಲಿ ಮೈಕ್ರೋಫೋನ್ ಇತ್ಯಾದಿಗಳ ಆವಿಷ್ಕಾರದಿಂದ, ಹಾಡಲು ಹಿಂದೆ ಬೇಕಾಗಿದ್ದ ಶಾರೀರಿಕ ಶ್ರಮ ಕಡಿಮೆಯಾಗಿ ಮನಸ್ಸಿನ ಪಿಸುಮಾತುಗಳನ್ನು ಹೇಳಲು ಸಾಧ್ಯವಾಯಿತು. ಇದನ್ನೇ ಪಂಡಿತರು “expressionism in music”ಎನ್ನುತ್ತಾರೆ.

ಗಾಯಕರ ಕೇಳುಗರ ಕಿವಿಗಳು ಸೂಕ್ಷ್ಮವಾಗುತ್ತಾ ಸಾಗಿದಂತೆ, ಒಂದುಕಾಲದಲ್ಲಿ “ಕೋಟೆ ಸಂಗೀತ” ಎಂದು ಮಡಿವಂತರಿಂದ ದೂರ ಇರಿಸಲ್ಪಟ್ಟಿದ್ದ ಠುಮ್ರಿ ಮೊದಲಾದ ಪ್ರಕಾರಗಳು ವೇದಿಕೆಯ ಮೇಲೆ ಸ್ಥಾನ ಪಡೆದುಕೊಳ್ಳತೊಡಗಿದವು. ರಚನೆಯ ಸಾಹಿತ್ಯಕ್ಕೂ ಗಮನ ನೀಡಲಾಯಿತು. ಹಲವು ರೀತಿಯ ಭಾವನೆಗಳಿಗೆ ಅಭಿವ್ಯಕ್ತಿ ನೀಡಲು ರಚನೆಯ ಶಬ್ದಗಳ ನೆರವು ಪಡೆಯಲಾಯಿತು. ಶಾಸ್ತ್ರೀಯ ಸಂಗೀತ ತಿಳಿಯದ ಸಾಮಾನ್ಯರ ಮನಸ್ಸನ್ನು ತಲುಪುವಂತಹ ಈ ರಚನೆಗಳು ಬಹುಬೇಗ ಜನಪ್ರಿಯತೆ ಗಳಿಸಿದವು. ಅಂತೆಯೇ, ಹಿಂದೊಮ್ಮೆ ದ್ರುಪದ್ ಪ್ರಭಾವದ ಖ್ಯಾಲ್ ಸಂಗೀತವನ್ನು ನೋಡಿದಂತೆ ಇಂದು ಠುಮ್ರಿ ಸಂಗೀತದ ಪ್ರಭಾವದಲ್ಲಿರುವ ಖ್ಯಾಲ್ ಗಾಯನವನ್ನು ನೋಡಬಹುದಾಗಿದೆ. ಠುಮ್ರಿಯಲ್ಲಿ ಹೇಳುವ ಭಾವನೆಗಳನ್ನೇ ಮತ್ತಷ್ಟು ಧ್ರುತ್ ಆಗಿ ಟಪ್ಪಾ ದಲ್ಲಿ ಹೇಳಲಾಗುತ್ತದೆ.

ಒಂದು ರಾಗದ ಚೌಕಟ್ಟಿನ ಒಳಗೇ, ಸ್ವರಗಳ ಚಲನೆ ಹಾಗೂ ಸ್ಪಂದನೆಗಳನ್ನು ನೋಡಬಹುದಾದ ಸೂಕ್ಷ್ಮತೆಯ ಎಡೆಗೆ ಇಂದು ನಾವು ಸಾಗುತ್ತಿದ್ದೇವೆ. ಶಾಸ್ತ್ರದ ಬಿಗಿ ಕಟ್ಟುಪಾಡು ಇಲ್ಲದೆ ಬಹಳ aggressive ಆಗಿ ಮನಸ್ಸಿನ ಭಾವನೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಹೊರಹಾಕಲು ಇಲ್ಲಿ ಸಾಧ್ಯವಿದೆ ಹಾಗೂ ಅದು ಕೇಳುಗರನ್ನೂ ತಟ್ಟುತ್ತದೆ ಎಂಬ ಕಾರಣವೂ ಇಂದು ಉಪಶಾಸ್ತ್ರೀಯ ಸಂಗೀತ, fusion ಇತ್ಯಾದಿಗಳ ಜನಪ್ರಿಯತೆಯ ಹಿಂದಿದೆ ಎಂದು ಅನಿಸುತ್ತದೆ.

ನಾರಾಯಣ ಪಂಡಿತರು ಪರಿಭಾವಿಸುವಂತೆ ಸಿನಿಮಾದ ಅಥವಾ ಯಾವುದೇ ಬಹುಜನಪ್ರಿಯವಾದ ಹಾಡಿನ ಧಾಟಿಯನ್ನು ಗಮನಿಸಿದಾಗ ಅದು ಹೆಚ್ಚಾಗಿ ನಮ್ಮ ಮಣ್ಣಿನ folk tune ಇಂದ ಬಂದಿರುತ್ತದೆ. ಶಾಸ್ತ್ರೀಯ ಸಂಗೀತಗಾರರು ತಮ್ಮ ಸಂಗೀತವನ್ನು ಬಹು ಶಿಷ್ಟವಾದದ್ದು ಎಂದು ಪರಿಗಣಿಸುವುದರಿಂದ ಇಂತಹ tune ಕಡೆಗೆ ನಿರ್ಲಕ್ಷ್ಯವನ್ನು ತಾಳಿರುತ್ತಾರೆ. ಈ ಅಂಶವನ್ನು ಗಮನಿಸಿದಾಗ ನಮಗೆ ಅನಾಯಾಸವಾಗಿ ನೆನೆಪಾಗುವುದು ಪಂ. ಕುಮಾರ ಗಂಧರ್ವರು ಮಾಡಿದ ಮಹತ್ಕಾರ್ಯ. ಅವರು ಮಧ್ಯಪ್ರದೇಶದ ಜನಪದ ಗೀತೆಗಳನ್ನು ಅಭ್ಯಸಿಸಿ, ಅವುಗಳಿಂದ ಸುಂದರವಾದ tune ಗಳನ್ನು ಎತ್ತಿಕೊಂಡು ಅವುಗಳನ್ನು ರಾಗಗಳನ್ನಾಗಿ ಮಾಡಿದರು. ಆಧುನಿಕ ಕಾಲದ ಸಂಗೀತದ ಹರಿಕಾರರಾದ ಕುಮಾರ್ ಜೀಯವರು ಸಂಗೀತದ ಸೂಕ್ಷ್ಮತೆಯೆಡೆಗಿನ ಪ್ರವಾಸದ ಬಹುದೊಡ್ಡ ನೇತಾರರು.

ರಾಗವೆಂದರೆ, ಕೆಲವು ನಿರ್ದಿಷ್ಟ ಸ್ವರಗಳನ್ನೊಳಗೊಂಡ ಆರೋಹ ಅವರೋಹದಿಂದ ಕೂಡಿದ ಅಸ್ಥಿಪಂಜರವಲ್ಲ; ಇದು ರಾಗದ ಚೌಕಟ್ಟಿನ ಒಳಗೆ ಇದ್ದುಕೊಂಡೇ, ಹಲವು ಮಧುರವಾದ ಸಂಚಾರಗಳಿಂದ ಆದ ಭಾವಭಿವ್ಯಕ್ತಿಗಾಗಿ ಇರುವ ಮಾಧ್ಯಮ. ಅಂತೆಯೇ ರಾಗದ ಗುರುತಿಸುವಿಕೆ, ಸ್ವರಗಳ ಆಧಾರದ ಮೇಲಲ್ಲ, ಭಾವದ ಆಧಾರದಲ್ಲಿ ಎಂಬುದು ಪಂಡಿತರ ನಿಲುವು.

ಹಾಗೆಯೇ ಇಂದು ಠುಮ್ರಿ, ಟಪ್ಪಾ, ದಾದ್ರಾ ಗಾಯನಗಳಲ್ಲಿ ರಾಗದ ಒಳಗಿನ ಸ್ವರಗಳ ವಿವಿಧ ರೀತಿಯ ಸಂಯೋಜನೆಯ ಜೊತೆಗೆ ಹಲವು ಅನ್ಯಸ್ವರಗಳ ಬಳಕೆಯೂ ಆಗುತ್ತದೆ. ಉದಾ., ಕಾಫಿ ರಾಗದಲ್ಲಿ ಕೋಮಲ ದೈವತ ಹಾಗೂ ಶುದ್ಧ ನಿಶಾದದ ಬಳಕೆ ಇತ್ಯಾದಿ.

ಪಂಡಿತರು ಗಮನಿಸುವ ಇನ್ನೊಂದು ಪ್ರಮುಖ ಅಂಶವೆಂದರೆ, ಯಾವುದೇ ಒಂದು ರಾಗದಲ್ಲಿ ಬರುವ ರಚನೆ – ಅದರ ಸಾಹಿತ್ಯ – ತಾಳದ ರೂಪ ಬದಲಾದಂತೆ ಆ ರಾಗದ ರೂಪವೂ ಬದಲಾಗುತ್ತದೆ ಎನ್ನುವುದು. ಆ ನಿರ್ದಿಷ್ಟ ರಚನೆಗೆ ನ್ಯಾಯನೀಡಲು ಬೇಕಾದ ರೀತಿಯಲ್ಲಿ ರಾಗವು ತನ್ನ ರೂಪವನ್ನು ಬದಲಾಯಿಸಿಕೊಳ್ಳುತ್ತದೆ. ಆ ನಿರ್ದಿಷ್ಟ ರಚನೆಯಲ್ಲಿ ಬರುವ ಸಾಹಿತ್ಯಕ್ಕೆ ನ್ಯಾಯ ನೀಡಲು ಬೇಕಾದ ರಸವನ್ನು ನೀಡಲು ರಾಗ ಸಮರ್ಥವಾಗುತ್ತದೆ. ಅಂತೆಯೇ ಯಾವ ರಾಗಗಳಿಗೂ ನಿರ್ದಿಷ್ಟ ರಸಗಳು ಎನ್ನುವುದು ಇಲ್ಲ. ಎಲ್ಲಾ ರಾಗಗಳ ಹಿಂದೆ ಸ್ಥಾಯೀ ಆಗಿರುವುದು ಒಂದೇ ರಸ, ಅದೆಂದರೆ ಶಾಂತ ರಸ. ಇದಕ್ಕೆ ಉದಾಹರಣೆಯಾಗಿ ಅವರು ಸಂಗೀತ ಕ್ಷೇತ್ರದಲ್ಲಿ ಅತಿ ಗಂಭೀರರಾಗವೆಂದು ಪರಿಗಣಿತವಾದ ದರ್ಬಾರಿ ಕಾನಡದ ’ಅನೋಖಾ ಲಾಡಲಾ ಮಾಯಿ’ ಎಂಬ ಪಾರಂಪರಿಕ ರಚನೆಯನ್ನು ನೀಡುತ್ತಾರೆ. ಇದು ಸಣ್ಣ ಮಕ್ಕಳ ಆಟದ ವರ್ಣನೆ ಇರುವ ರಚನೆಯಾಗಿದೆ.

ಬಹಳ ಹಿಂದಿನ ಸಮಯದಿಂದ ಆರೋಪಿತವಾಗಿರುವ ಇಂತಹ ಕೆಲವು sterotype ವಿಚಾರಗಳನ್ನು ಇಟ್ಟುಕೊಳ್ಳದೆ, ಸಂಗೀತಕ್ಕೆ ಯಾವುದೇ ಚ್ಯುತಿಬಾರದಂತೆ ವಿಚಾರಗಳನ್ನು ಚಿಂತನೆಯ ಒರೆಗೆ ಹಚ್ಚಿ ’ಇದು ನನಗೆ ಹೇಗೆ ಕಾಣುತ್ತಿದೆ’ ಎಂಬುದಕ್ಕೆ ಗಮನಕೊಡುವುದು ಇಂದಿಗೆ ಅಗತ್ಯವಾಗಿದೆ.

ಇವತ್ತು ಹೊಸ ಹೊಸ ಆವಿಷ್ಕಾರಗಳ ಮೂಲಕ ತಂತ್ರಜ್ನಾನ ಕ್ಷೇತ್ರದಲ್ಲೂ ದಿನದಿಂದ ದಿನಕ್ಕೆ ಸೂಕ್ಷ್ಮತೆಯೆಡೆಗೆ ಸಾಗುತ್ತಿದ್ದೇವೆ. ನ್ಯಾನೊ ಟೆಕ್ನಾಲಜಿ, ಪಾಮ್ ಟಾಪ್, ಇತ್ಯಾದಿಗಳು ಇನ್ನೂ ಸೂಕ್ಷ್ಮತೆಯತ್ತ ಚಲಿಸುತ್ತಲೇ ಇವೆ. ಆದರೆ ಈ ಸೂಕ್ಷ್ಮತೆ ನಮ್ಮ ಪ್ರಜ್ಞೆಯ ಭಾಗವಾಗಿ ಆಗಬೇಕಾಗಿದೆ. ಕೇವಲ ಬೌದ್ಧಿಕ ಮಟ್ಟದಲ್ಲಿ ಎಲ್ಲವನ್ನು ಸೀಳಿ ಪರೀಕ್ಷಿಸಿ ಒಳಹೊಕ್ಕು ನೋಡಬೇಕು ಎಂಬ ಬರಿಯ ಅಹಂಕಾರದ ಬುಧ್ಧಿವಂತಿಕೆ ಬಿಟ್ಟು ಭಾವನಾತ್ಮಕವಾಗಿ ಅಧ್ಯಾತ್ಮಿಕವಾಗಿ ಸೂಕ್ಷ್ಮತೆಯೆಡೆಗೆ ಸಾಗಿದಾಗ ಮಾತ್ರ ಈ ಬೆಳವಣಿಗೆಗೆ ನಿಜವಾದ ಅರ್ಥ ಬಂದೀತು.