Category Archives: ಹನುಮಂತ ಹಾಲಿಗೇರಿ

ಹಾಳು ಸುಡಗಾಡ ಬದುಕು : ಗಾಂಧಿ ಜಯಂತಿ ಕಥಾಸ್ಪರ್ಧೆ 2015 – ಬಹುಮಾನಿತ ಕಥೆ

– ಹನುಮಂತ ಹಾಲಿಗೇರಿ

ಈಗ ದನೇ ಅನ್ನದ ಕೂಡ ಬದನಿಕಾಯಿ ಚಟ್ನಿ ನಂಚ್ಕೊಂಡು ಊಟದ ಶಾಸ್ತ್ರ ಮುಗಿಸಿ ಕೋಲಿ ಮುಂದಿನ ಅಂಗಳದೊಳಗ ಪ್ಲ್ಯಾಸ್ಟಿಕ್ ತಟ್ ಹಾಸ್ಕೊಂಡು ಕಾಲುಚಾಚ್ಕೊಂಡು ಮಾತೆವ್ವ ಕುಂತಿದ್ಲು. ಆಕಿ ಸುಮ್ಮನ ಕುಂತಂಗ ಕಂಡ್ರೂ ಆಕಿ ದವಡೆಗಳು ಒಂದು ಸಂವನ ಮೆಲಕ್ಕ ಹಾಕುತಿದ್ವು. ಆಕಿ ಗಂಡ ದರಿಯ ಅಆಅಬ್ ಅಂತ ಡೆರಿಕಿ ಹೊಡಕೋತ ಮುಗಿಲ ಮ್ಯಾಲಿನ ಚಿಕ್ಕಿ ನೊಡಕೋತ ಅಂಗಾತ ಬಿದ್ದಕೊಂಡಿದ್ದ.

ಆಗಷ್ಟೆ ಕಂಬಳಿಯಂಥ ಕರಿ ಮುಗಿಲ ತುಂಬ ಚಿತ್ತಾರ ಮೂಡಿಸಿದ್ದ ಚಿಕ್ಕಿಗೊಳು ಮಿಣುಕುಮಿಣುಕಾಗಿ ಒಂದೊಂದೆ ಮಾಯವಾಗತೊಡಗಿದ್ದವು. ಚಂದಪ್ಪ ಇವನೌನ ಮಳಿ ಬರುವಂಗಾತು ಅನ್ಕೊಂಡು ಗೂಡು ಸೇರಿದ್ದ. ಗುಡುಲ್ ದಡುಲ್ ಎಂಬ ಗುಡುಗು, ಅದರ ಹಿಂದೆಯೇ ಒಮ್ಮೆಲೆ ನೂರು ಸಾವಿರ ಬಲ್ಬು ಬೆಳಗಿದಂಗಳ ಕೋಲ್ಮಿಂಚು…

‘ಆ..ಉ… ಉಉಂ, ಅಯ್ಯಯ್ಯ. ಎವ್ವಾ ಬೇ ಯಾಕೋ ಬೆನ್ನಿನ ನರಾ ಜಗ್ಗಾಕ ಹತ್ಯಾವು..’ ಮಗಳು ಸ್ಟೇಲ್ಲಾಳ ನರಳುವ ದ್ವನಿ ಆ ಮಳೆ ಗಾಳಿಯಲ್ಲಿ ಅಸ್ಪಷ್ಟವಾಗಿ ತೇಲಿ ಹೋಯ್ದಂತಾಯಿತು.

‘ಮಗಳ ಬ್ಯಾನಿ ತಿನ್ನಾಕ ಹತ್ತಿದಂಗ ಕಾಣತೈತಿ. ಏ ಯೇಸು ತಂದೆ, ಇನ್ನು ಸ್ವಲ್ಪ ಹೊತ್ತು ಮಳಿಗಾಳಿ ಶುರು ಮಾಡಬ್ಯಾಡೋ ಎಪ್ಪ’ ಮಾತೆವ್ವ ಮನದೊಳಗ ಬೇಡ್ಕೊಂಡ್ಲು. ‘ಹೋಗು, ಯಾವುದಾದ್ರೂ ಆಟೋ ಕರಕೊಂಡು ಬರೊಗು ದವಾಖಾನಿಗೆ ಹೋಗೂನು’  kt_shivaprasad-art-familyಮಾತೆವ್ವ ಒದರುತ್ತಲೇ ಮಗಳತ್ತ ದಾವಿಸಿದಳು.

ಆಟೋ ಇಲ್ಲವೆಂದು ವಾಪಸ್ ಬಂದ ಗಂಡನಿಗೆ ಶಪಿಸುತ್ತಾ ಗೇಟ್‍ವರೆಗೆ ಮಗಳನ್ನು ನಡೆಸಿಕೊಂಡು ಬಂದ ಮಾತೆವ್ವ ಸಿಕ್ಕ ಬೇಂದ್ರೆ ಬಸ್ ಹತ್ತಿಸಿಕೊಂಡು ಕೆಎಂಸಿ ಆಸ್ಪತ್ರೆಗೆ ಬಂದಿದ್ದಳು. ಮಗಳು ಹೆರಿಗೆ ವಾರ್ಡೊಳಗೆ ಹೋದ ಮೇಲೂ ಎಷ್ಟೋ ಹೊತ್ತಿನ ಮಟಾ ದರಿಯ ಕಾಯ್ದುಕೊಂಡು ಅಲ್ಲೆ ನಿಂತಿದ್ದ. ‘ಯಜ್ಜ ನಿಂದೆನು ಕೆಲಸ ಇಲ್ಲ. ನೀ ಹೊರಗ ಹೋಗು ಎಲ್ಲ ಸರಿ ಆಕೈತಿ’ ಅಂತ ಒಬ್ಬಾಕಿ ನರ್ಸ್ ಹೇಳಿದ್ದರಿಂದ ಮುದುಕಗ ಇರಿಸು ಮುರುಸಾತು. ನಿಧಾನಕ್ಕ ಕಾಲು ಎಳಕೊಂಡು ಆಸ್ಪತ್ರೆ ಗೇಟ್‍ಮಟಾ ಬಂದ. ಅಲ್ಲೊಂದು ಪಟ್ಟಿ ಅಂಗಡಿ ಮುಂದ ಲೈಟ್ ಉರಿತಿತ್ತು. ಅಲ್ಲಿ ಹೊಗಿ ಒಂದು ಬೀಡಿ ತುಗೊಂಡು ಅಲೆಅಲೆಯಗಿ ಹೊಗೆಬಿಟ್ಟ. ಮನಸ್ಸು ದೇಹ ಸ್ವಲ್ಪ ಹಗೂರ ಆದಂಗಾದ್ವು. ಮತ್ತೆ  ದವಾಖಾನಿ ಕಡೆಗೆ ಬರತೊಡಗಿದ. ಅಲ್ಲೊಂದು ಮುಚ್ಚಿದ ಬಾಗಿಲು ಬಿಲ್ಡಿಂಗ್ ಕಾಣಿಸಿತು. ಮಗಳು ಹೆರಿಗೆ ಇನ್ನು ಮೂರ್ನಾಲ್ಕು ತಾಸಾಗಬಹುದು ಅಂದುಕೊಂಡು ಮುಚ್ಚಿದ ಬಾಗಿಲ ಮುಂದೆ ಅಡ್ಡಾದ.

***

ಸರು ಬಿಟ್ಟು ಸರು ಹಣಿಯುವ ಮಳೆಯ ಜಿಟಿ ಜಿಟಿ. ಆಗಾಗ ಮುತ್ತಿಕ್ಕುವ ಸೊಳ್ಳೆಗಳಿಂದಾಗಿ ದರಿಯನಿಗೆ ನಿದ್ದಿ ಸುಳಿಯೊಲ್ಲದು. ಮೇಲಾಗಿ ನೆನಪುಗಳು ಸ್ಪರ್ಧೆಗೆ ಬಿದ್ದವವರಗತೆ ನಾ ಮುಂದು ತಾಮುಂದು ಎಂದು ಮುಕುರಿ ಪಟ ಬಿದ್ದಿದ್ದವು.

ಹಂಗ ನೋಡಿದ್ರ ಅವನ ಜನ್ಮನಾಮ ದೊರೆರಾಜ್. ಅಂವ ಮಾಡುತ್ತಿದ್ದ ವೃತ್ತಿಯ ಕಾರಣದಿಂದಲೋ, ಅವನ ಪೂರ್ತಿ ಹೆಸರನ್ನು ಕರೆಯುವುದು ತಮಗೆ ಅವಮಾನ ಎಂದುಕೊಂಡೋ ಮರ್ಯಾದಸ್ತ ಜನರು ಅವನ ಹೆಸರನ್ನು ತಮ್ಮ ಹುಬ್ಬಳಿಗೆ ಸುತ್ತಲಿನ ಆಡುಭಾಷೆಗೆ ಹೊಂದಿಸಿಕೊಂಡು ದರ್ಯಾ ಎಂದು, ಇನ್ನಷ್ಟು ಮುಂದೆ ಹೋಗಿ ದರಿದ್ರ ದರ್ಯಾ ಎಂದು ಕರೆತಿದ್ರು. ದರಿಯನ ಮೂರ್ನಾಲ್ಕು ತಲೆಮಾರುಗಳ ಹಿಂದಿನ ಪೂರ್ವಿಕರು ಆಂದ್ರ ಪ್ರದೇಶದ ಸುಡುಗಾಡು ಕಾಯುವ ಕಾಪಾಲಿಕ ಎಂಬ ಅದ್ಯಾವದೋ ಹೀನ ಬುಡಕಟ್ಟಿನವರು. ಅಲ್ಲಿ ಅದ್ಯಾವ ಕಾರಣಕ್ಕೋ ನೆಲೆ ಕಳೆದುಕೊಂಡು ಹುಬ್ಬಳ್ಳಿಗೆ ಬಂದು ಇಲ್ಲಿನ ಸುಡುಗಾಡುಗಟ್ಟೆಗಳಲ್ಲಿ ನೆಲೆ ನಿಂತಿದ್ದರು.

ಯಾರಾದ್ರೈ ಸತ್ತರೇ ಮಾತ್ರ ಇವರಿಗೆ ಹೊಟೆ ತುಂಬ ಊಟ. ಒಂದು ಕಡೆ ಹೆಣ ಬೇಯಿಸ್ತಾ ಇದ್ದರೆ ಇನ್ನೊಂದು ಕಡೆ ಹೆಣದ ಮೇಲಿನ ಅಕ್ಕಿಯನ್ನು ತಾಯಿ ಬೇಯಿಸೋದನ್ನೆ ನೋಡಿಕೊಂಡೆ ದರಿಯ ದೊಡ್ಡವನಾಗಿದ್ದ. ಒಮ್ಮೊಮ್ಮೆ ಜಾಸ್ತಿ ಚಿಲ್ಲರೆ ಕಾಸು ಸಿಕ್ಕರೆ ಅವತ್ತು ಅಪ್ಪ ಒಂದೆರಡು ಪಾಕೀಟು ಸೆರೆ ಮತ್ತು ಚಿಕ್ಕನ್ ಪೀಸು ತರ್ತಿದ್ದ.

ಒಂದೊಂದು ಸಲ ಬಾಳ ಇಚಿತ್ರ ಹೆಣ ಬರತಿದ್ವು. ಕಾಲ ಇದ್ದರ ಕೈ ಇರಲ್ಲ. ಎರಡು ಇದ್ದರ ತಲೆ ಇರ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲವೂ ಇದ್ರು ಹೆಣ ಪೂರ್ತಿ ಕೊಳತು ಮುಟ್ಟಿದರ ಹರ್ಕೊಂಡು ಬರುವಂಗ ಇರ್ತಿತ್ತು. ಒಂದೊಂದು ಹೆಣ ಅಂತ್ರೂ ಕಿಂವು ರಕ್ತದಿಂದ ತುಂಬ್ಕೊಂಡು ಅಕರಾಳ ವಿಕರಾಳ ಆಗಿರುತಿದ್ವು. ಒಮ್ಮೊಮ್ಮೆ ಕೆಎಂಸಿಯಿಂದ ಪೊಲೀಸರಿಂದ ಫೋನ್ ಬರೋದು, ಅಲ್ಲಿಂದ ಕೊಯ್ದ ಪಂಚನಾಮೆ ಮಾಡಿದ ಹೆಣ ಸುಡಾಕ ಅಷ್ಟೋ ಇಷ್ಟು ದುಡ್ಡು ಕೊಡ್ತಿದ್ರು. ಎಷ್ಟೋ ಹೆಣಗಳಿಗೆ ವಾರಸುದಾರರೆ ಇರ್ತಿರಲಿಲ್ಲ. ಒಮ್ಮೊಮ್ಮೆ ತಿಂಗಳಾನುಗಟ್ಲೆ ಯಾರೂ ಸಾಯದೆ ಉಪವಾಸ ಇದ್ರ, ಒಮ್ಮೊಮ್ಮೆ ಎಕ್ಸಿಡೆಂಟ್ ಆದೋರು, ವಿಷ ಕುಡ್ದೋರು, ಉರ್ಲು ಹಾಕೊಂಡೋರ ಹತ್ತಾರು ಹೆಣ ಬರ್ತಿದ್ವು. abstract-art-sheepಆಗೆಲ್ಲ ಎಲ್ಲರಿಗೂ ಕೈ ತುಂಬ ಹೆಣ ಸುಡೋ ಕೆಲಸ. ಸುಗ್ಗಿಯೋ ಸುಗ್ಗಿ. ಪಾಪ ಎಷ್ಟೆಷ್ಟು ಸಣ್ಣ ಸಣ್ಣ ಮಕ್ಕಳೆಲ್ಲ ವಿಷ ಕುಡ್ದು ಉರ್ಲು ಹಾಕ್ಕೊಂಡು ಹೆಣ ಆಗಿ ಬಂದ್ರ ಅವುನ್ನ ಸುಡೋದು ಬಾಳ ಕಷ್ಟ ಆಕ್ತಿತ್ತು. ಗೆರೆ ಕೊರ್ದು ಚಿತ್ರ ಬಿಡಿಸಿ ಬಣ್ಣ ತುಂಬಿದ ಗೊಂಬಿಯಂಥೋರ ಮೈಗೆ ಬೆಂಕಿ ಹಾಕೋದಂದ್ರ ಹ್ಯಾಂಗ ಮನಸ್ಸು ಬರ್ತದ. ಆ ಮಕ್ಕಳನ್ನು ಆಡಿಸಿ ಬೆಳಿಸಿ ದೊಡ್ಡವರನ್ನಾಗಿ ಮಾಡಿದ ಹೆತ್ತೊಡಲುಗಳು ಅಳ್ಳೋದು ಕೇಳಿಸಿದ್ರಂತೂ ಕಳ್ಳ ಚುರಕ್ ಅಂತಿತ್ತು.

ಹೆಣ ಸುಡ್ತಾ ಸುಡ್ತಾನೆ ದೊರೆರಾಜ್‍ನ ರಟ್ಟೆ ಬಲ್ತಿದ್ವು. ಅವಂಗ ಹೆಣ್ಣು ನೋಡುವ ಜವಾಬ್ದಾರಿಯನ್ನ ಅಪ್ಪ ಶುರುವಿಟ್ಟುಕೊಂಡಿದ್ದ. ಹೆಣ ಸುಡೋನಿಗೆ ಮತ್ಯಾರು ಹೆಣ್ಣು ಕೊಡಬೇಕು, ಹೆಣ ಸುಡೋರ ಮಕ್ಕಳೆ ಆಗಬೇಕಲ್ವೆ? ಆಗಾಗ ತನ್ನ ಹಳೆಯ ಸಂಬಂಧಿಕರ ಮನೆಗೆ ಹೋದಾಗ ಬೇಕಂತ್ಲೆ ಮಾತಿನ ಮುಂದೆ ಮಗ ವಯಸ್ಸಿಗ ಬಂದ ವಿಷಯವನ್ನು ತರುತ್ತಿದ್ದ. ಅವನಂಗೆ ಹೆಣ ಸುಡೋರು ಹುಬ್ಬಳಿ ದಾರವಾಡ ಸೀಮಿ ಸುಡುಗಾಡದೊಳಗ ಸಿಗೂದಿಲ್ಲ ಅಂತ ಮೀಸಿ ತಿರುತ್ತಿದ್ದ. ಅಪ್ಪನ ಮಾತು ನಂಬಿ ಸುತ್ತಲಿನ ಸಣ್ಣ ಸಣ್ಣ ಪಟ್ಟಣಗಳ ಸುಡುಗಾಡುಗಳಲ್ಲಿ ಬೀಡು ಬಿಟ್ಟಿದ್ದ ಹೆಣ್ಣು ಹೆತ್ತವರು ಬಂದು ಹೋಗಿ ಮಾಡುವುದನ್ನು ಶುರುವಿಟ್ಟುಕೊಂಡಿದ್ದರು.

ರೈತರಿಗೆ ಜಮೀನು ಜಾನುವಾರು ಆಸ್ತಿ ಆದ್ರ, ಇವರಿಗೆ ಸುಡಗಾಡೇ ಆಸ್ತಿ ಇದ್ದಂಗ. ಹೆಣ್ಣು ಕೊಡಲಿಕ್ಕೆ ಬಂದವರೆಲ್ಲ ಸುಡುಗಾಡನ್ನು ಅಡ್ಡಾಡಿ ನೋಡತಿದ್ರು. ಸುಡುಗಾಡಿನ ವಿಸ್ತಾರ, ಸುಡುಗಾಡು ಸುತ್ತಲಿನ ವಾರ್ಡುಗಳ ಜನಸಂಖ್ಯೆ, ಅವರ ಶ್ರೀಮಂತಿಕೆ, ಅವರ ಚಟಾದಿಗಳು, ರೋಗ ರುಜಿನಗಳನ್ನು ಮನದಲ್ಲೆ ಲೆಕ್ಕ ಹಾಕಿಕೊಂಡು ತಮ್ಮ ಮಗಳನ್ನು ಇಲ್ಲಿಗೆ ಸೊಸೆಯಾಗಿ ಕಳಿಸಿದರೆ ಮಗಳು ಸುಖವಾಗಿ ಇರಬಹುದೆ ಎಂಬುದನ್ನು ಅಂದಾಜಿಸಿಕೊಂಡು ಮಾತುಕತೆಗೆ ಮುಂದಾಗುತ್ತಿದ್ದರು. ಐದಾರು ಮಾತುಕತೆಗಳು ಮುಂದುವರೆಯಲಿಲ್ಲವಾದರೂ ನಂತರದ ಸಂಬಂಧ ನಿಕ್ಕಿಯಾಗಿ ದೊರೆರಾಜನಿಗೆ ಮಾತೆವ್ವ ಜೊತೆಯಾಗಿ ಬಂದಿದ್ದಳು. ದೊರೆರಾಜ ದರ್ಯಾ ಆದ ಹಾಗೆ ಮೇರಿಮಾತಾ ಹೋಗಿ ಆ ನೆಲದ ನುಡಿಗನುಗುಣವಾಗಿ ಮಾತೆವ್ವ ಆಗಿದ್ದಳು. ವರ್ಷದಲ್ಲಿ ಮಗಳು ಸ್ಟೆಲ್ಲಾ ತೊಡೆ ಏರಿದ್ದಳು.

ಮಗಳು ವಯಸ್ಸಿಗೆ ಬಂದು ಆಕೆಯ ಮದುವೆ ಹ್ಯಾಂಗ ಮಾಡೋದು ಅಂತ ಮಾತೆವ್ವ ಚಿಂತಿಗೆ ಬಿದ್ದು ದರ್ಯಾನ ಜೀವ ತಿನ್ನುವ ಸಮಯದಲ್ಲೆ ಮುನ್ಸಿಪಾಲ್ಟಿಯ ಪೌರ ಕಾರ್ಮಿಕನೊಬ್ಬ ಸುಡುಗಾಡಿನ ಗೇಟಿನ ಮುಂದಿನ ರಸ್ತೆಯಲ್ಲಿ ದಿನಾಲೂ ಕಸ ಹೊಡೆಯಲು ಬಂದು ಇವಳನ್ನು ಬುಟ್ಟಿಗೆ ಹಾಕಿಕೊಂಡಿದ್ದರಿಂದ ಮಗಳ ಮದುವೆಯ ಚಿಂತೆ ದೂರಾಗಿತ್ತು.

***

ಯಾರೋ ಕೋಲಿಂದ ತಿವಿದಂಗಾಗಿ ದರೆಯಪ್ಪ ಗಾಬರಿಯಾಗಿ ಹೊದ್ದ ಲುಂಗಿಯಿಂದ ಮುಖ ಹೊರಗ್ಹಾಕಿ ನೋಡಿದರೆ ಪೊಲೀಸ್. ಸಡನ್ನಾಗಿ ಎದ್ದು ಕುಳಿತ.

‘ಹೆಣದ ಮನಿ ಮುಂದ ಮಲಕ್ಕೊಂಡಿಯಲ್ಲೋ ಹುಚ್ಚಗಿಚ್ಚ ಹಿಡದದನ ನಿನಗ. ವಾಚಮನ್ ಏನಾದ್ರೂ ನಿದ್ದೆಗಣ್ಣಾಗ ಬಂದು ಹೆಣ ಇಲ್ಯಾಕ ಬಾಗಲದಾಗ ಬಿದೈತಿ ಅಂತ ತಗ್ದು ಒಳಗ ಒಗ್ದ ಅಂದ್ರ ಏನು ಮಾಡ್ತಿ, ನಡಿ ನಡಿ ಅಕ್ಕಾಡಿ’ ಅಂದ. ದರ್ಯಾಮುಖ ಕಿವುಚುತ್ತಲೇ ಲುಂಗಿ ಸುಟಗೊಂಡು ಹೆರಿಗೆ ವಾರ್ಡ್ ಮುಂದ ಹೋಗಿ ಅಲ್ಲಿನ ಬೆಂಚ್ ಮೇಲೆ ಕುಂಡಿ ಊರಿದ.

ಮತ್ತೆ ಸುಡಿಗಾಡಿನದೆ ನೆನಪುಗಳು, ಇವನೌನ ಇವತ್ತೊಂದಿನ ಸುಡುಗಾಡು ಬಿಟ್ಟು ಬಂದಿನಿ, ಆದ್ರ ಅದು ನನ್ನ ಬಿಡೊಲ್ಲದು ಅಂತ ನಗಿ ಬಂತು. ಸುಡುಗಾಡಿಗೆ ಹೆಣ ತರುವವರೆಲ್ಲ ತಮ್ಮ ಮೃತ ಬಂಧುವನ್ನು ಯಾರನ್ನಾದರೂ ಹುಗಿದಲ್ಲಿ ಹುಗಿಬಾರದು, ಹೊಸ ಜಾಗಾನೇ ಬೇಕು ಎಂದು ಹಟ ಹಿಡಿಯುವವರನ್ನು ಕಂಡು ಅವನಿಗೆ ಸಿಕ್ಕಾಪಟ್ಟಿ ನಗುಬರತಿತ್ತು. ಪರಪಂಚದ ತುಂಬಾ ಜನಾನ ತುಂಬ್ಯಾರ, ಅವರಿಗೆಲ್ಲ ಹೊಸ ಜಾಗ ಹುಡುಕ್ಕೋತ ಹೊಂಟರ ಇಡಿ ಪರಪಂಚನೆ ಗೋರಿಗಳಿಂದ ತುಂಬಿಕೋತೈತಿ. ಇಂಥ ಸಣ್ಣ ವಿಚಾರ ಈ ಜನಕ್ಕ ಹೊಳಿದುಲ್ಲಲಾ ಅಂತ ಅನಕೋತ ’ಈ ಜಾಗ ಪ್ರೆಸ್ ಐತ್ರಿ ಸಾಹೆಬರ,’ ಅಂತ ಸುಳಸುಳ್ಳೆ ಹೇಳಿ ಕೆಲಸ ಶುರು ಮಾಡ್ತಿದ್ದ. ಆದ್ರ ಮಜಕೂರ ಅಂದ್ರ ಅಲ್ಲಿ ಇನ್ನು ಕೊಳಿಲಾರದ ಕೈ ಕಾಲಿನ ಎಲುಬುಗೊಳು ಸಿಕ್ಕು ದರಿಯನನ್ನು ಅಡಕತ್ತರ್ಯಾಗ ಸಿಲುಕಿಸುತ್ತಿದ್ದವು. ಕೆಲವರಂತೂ ತಾವು ಸಾಯುದಕಿಂತ ಮೊದಲ ಪಾಲಿಕೆಗೆ artಒಂದಿಷ್ಟು ದುಡ್ಡು ಕೊಟ್ಟು ನನ್ನ ಇಲ್ಲೆ ಹುಗಿಬೇಕು, ಹುಗಿದ ಮ್ಯಾಲ ಗೋರಿ ಕಟ್ಟಿ ಅದರ ಮೇಲೆ ತಮಗೆ ಬೇಕಾದ ದೇವರ ಚಿತ್ರವನ್ನು ಕೆತ್ತಬೇಕು ಅಂತ ಕಂಡಿಶನ್ ಹಾಕಿದ ಮ್ಯಾಲ ಸಾಯತಿದ್ರು. ಈ ಜಲಮು ಶಾಶ್ವತ ಅಲ್ಲ ಅಂತ ಗೊತ್ತಿದ್ದು ಇರೂಮಟ ಅದು ನಂದು ಇದು ನಂದು ಅಂತ ಬಡಿದಾಡೂ ಜನ, ತಾವು ಸತ್ತ ಮ್ಯಾಲೂ ತಮ್ಮ ಗೋರಿಗಾಗಿ ಬಡಿದಾಡತಾರಂದ್ರ….

ಎಲ್ಲ ಸುಡುಗಾಡದಾಗೂ ಗೋರಿ ಕಟ್ಟಿಸಿಗೋತ ಹೊಂಟಿದ್ದರಿಂದ ಪರಪಂಚದ ಸುಡುಗಾಡಗೊಳೆಲ್ಲ ಗೋರಿಗೊಳಿಂದ ತುಂಬಿ ಬಿಟ್ಟಾವು. ಅದಕ್ಕಂತ ಇತ್ತಿತ್ತಲಾಗ ಹೆಣ ಸುಡಾಕೂ ಒಂದು ಮಷಿನು ಕಂಡು ಹಿಡಿದಾರ.

ಮಷಿನ್ ಅಂದಕೂಡ್ಲೆ ದರ್ಯಾನ ತಲ್ಯಾಗ ಸೊಟ್ರಾಮ ಮತ್ತು ಅವನ ಸುಡುಗಾಡು ನೆನಪಾತು. ಇತ್ತೀಚೆಗಷ್ಟೆ ದರ್ಯಾ ಸೊಟ್ರಾಮನ ಸುಡುಗಾಡು ಹೊಕ್ಕು ಬಂದಿದ್ದ. ಹೋದ ಕೂಡ್ಲೆ ದಂಗಾಗಿ ಬಿಟ್ಟಿದ್ದ. ನಳದ ಮುಂದ ಕೊಡಪಾನ ಪಾಳೆಕ ಇಟ್ಟಂಗ ಐದಾರು ಹೆಣ ದಾರ್ಯಾಗ ಇಟ್ಟಿದ್ದರು. ಅದರಾಗ ಬಾಳಷ್ಟ ಹೆಣ ಮುದುಕುರವೆ ಆಗಿದ್ದರಿಂದ್ಲೋ ಏನೋ, ಆ ಹೆಣಗಳ ಸಂಬಂಧಿಕರು ಅಷ್ಟೆನೂ ದುಖಃ ಪಡದೆ ನಿರಾಳರಾದವರಂತೆ ಅಲ್ಲೆ ಬೆಂಚಿಕಲ್ಲಿಗೆ ಒರಗಿಕೊಂಡು ಅನು ತನು ಮಾತಾಡಕೋತ ಕುಂತಿದ್ರು. ಹೆಣದ ಬಾಯಲ್ಲಿ ನೊಣ ಹೋಗಿ ಬಂದರೂ ಅವರ್ಯಾರಿಗೂ ಖಬರಿರಲಿಲ್ಲ. ಮಧ್ಯಾಹ್ನದ ಮಟಾ ಮಾತ್ರ ರಜೆ ಹಾಕಿ ಸಂಸ್ಕಾರಕ್ಕೆಂದು ಬಂದಿದ್ದ ಹೆಣಗಳ ಕೆಲ ಸಂಬಂಧಿಕರ ಬೇಗ ಮುಗಿದುಬಿಟ್ಟರೆ ಸಾಕು. ಇಲ್ಲಂದ್ರ ರಜೆ ಮುಂದುವರೆಸಬೇಕಾಕೈತೋ ಅಂತ ದಿಗಿಲಿಗೆ ಬಿದ್ದಿದ್ದರು.

ಅಲ್ಲೆ ಇದ್ದ ಸೊಟ್ರಾಮ ಗುಟಕಾ ಜಗಿತಾ ಎತ್ತಲೋ ನೋಡಕೋತ ಕುಂತಿದ್ದ. ‘ಯಾಕೋ ರಾಮ್ಯಾ ಆರಾಮಿಲ್ಲೇನು, ಮುಖ ಒಂಥರಾ ಆಗೈತೆಲ್ಲ. ಯಾಕ ಕೆಲಸ ಶುರು ಹಚ್ಚಗೋಬೇಕಿಲ್ಲ. ಸುಡಗಾಡಕ್ಕ ಇಷ್ಟೊಂದು ಹೆಣ ಬಂದಾವು. ಏಳು ನಾನು ಕೈ ಜೋಡಿಸ್ತಿನಿ’ ಅಂತ ದರ್ಯಾ ಅವನ ಹತ್ತಿರಕ್ಕೆ ಸರಿದ.

ಇಷ್ಟ ಸಾಕಿತ್ತು, ಸೊಟ್ರಾಮನ ಕಣ್ಣು ತೇವಗೊಂಡವು. ‘ಆ ಹೆಣಗಳನ್ನು ದಫನ್ ಮಾಡೋದು ನನ್ನ ಕೆಲಸ ಅಲ್ಲೋ ಕಾಕಾ. ಅಲ್ಲೊಂದು ದೆವ್ವದಂತ ಮಷೀನ್ ಐತಿ, ಅದು ನನ್ನ ಕೆಲಸ ಕಸಕೊಂಡು ಕುಂತೈತಿ. ಹೊಟ್ಟಿ ತುಂಬ ಊಟ ಮಾಡಿ, ಎರಡ್ಮೂರು ತಿಂಗಳಾತೋ ಕಾಕಾ, ಮಷಿನ್ ಯಾವತ್ತೋ ಬಂದೈತೋ ಅವತ್ತಿಂದ ಮೈ ತುಂಬಾ ಕೆಲಸಾನು ಇಲ್ಲ, ಹೊಟ್ಟಿ ತುಂಬ ಊಟಾನೂ ಇಲ್ಲ. ಇಲ್ಲಿಂದ ಎಲ್ಯಾರ ದೂರ ಹೋಗಬೇಕು ಅಂತ ಅನಿಸತೈತಿ. ಆದ್ರ ಎಲ್ಲಿ ಹೋಗಬೇಕು, ಏನು ಮಾಡಬೇಕು ಅನ್ನೊದು ತಿಳಿವಲ್ಲದಂಗ ಆಗೇತಿ’ ಅಂತ ನೆಲಕ್ಕ ದೃಷ್ಟಿ ಚೆಲ್ಲಿದ.

ದರ್ಯಾಗ ಅವತ್ತು ದೊಡ್ಡ ವಿಚಿತ್ರ ನೋಡಿದಂಗಾತು. ‘ಕಲಿಕಾಲ ಬರತೈತಿ, ಹಡಿಯಾಕ ಮಷೀನು, ದಪನ್ ಮಾಡಾಕ ಮಷೀನು ಬರತಾವು. ತೂಗಿ ತಿಂದು ತಿಣುಕಿ ಹೇಲೋ ಕಾಲ ದೂರಿಲ್ಲ’ ಅಂತ ಬುಡಬುಡಿಕ್ಯಾ ಹೋದ ವರ್ಷ ಹೇಳಿದ್ದನ್ನೆ ದೇನಿಸಿಕೊತ ಕುಂತ.

ಅಷ್ಟರೊಳಗ ಕರೆಂಟ್ ಬಂದುವಂಥ ಯಾರೊ ಒಬ್ಬ ಒದರಿದ್ರು. ಹೆಣ ಮಷೀನ್ ಬಾಯಾಗ ಕೋಡೋದನ್ನ ನೋಡಾಕಂತ ದರ್ಯಾ ಎದ್ದು ಬಂದ. ಎಲ್ಲ ಪೂಜಾವಿಧಿ ಮೂಗಿದ ಮ್ಯಾಲ ಅಂಗಡಿ ಬಾಗಿಲದಂಥ ಷಟರ್ ಮ್ಯಾಲ ಎಳದು ಅದರೊಳಗ ಹೆಣ ತುರುಕತಿದ್ರು. ಮತ್ತ ಬಾಗಲು ಹಾಕಿ ಒಂದೈದು ನಿಮಿಷ ಬಿಟ್ಟು ಷೆಟರ್ ತೆಗದು ನೋಡಿದರ ಅಲ್ಲಿ ಹೆಣ ಮಂಗ ಮಾಯ. ಈಗಷ್ಟೆ ಹೆಣ ತಿಂದರೂ ಹಸಿವು ನೀಗದಂತಿದ್ದ ಅಲ್ಲಿನ ನಿಗಿ ನಿಗಿ ಕೆಂಡ ಬಾಯ್ದೆರೆದು ತನ್ನನ್ನೆ ಕರೆದಂತಾಗಿ ದರೆಪ್ಪ ಅಲ್ಲಿಂದ ಕಣ್ ಕಿತ್ತಿದ್ದ.

ಆ ಮಷೀನ್ ಪಕ್ಕವೇ ಪ್ಯಾಂಟು ಶರಟು ಹಾಕಿದ್ದ ಒಬ್ಬ ಹುಡುಗ ಆಪೀಸರ್ ದಿಮಾಕಿನಲ್ಲಿ ಬಟನ್ ಒತ್ತುವುದು ಆರ್ಸೂದು ಮಾಡ್ತಿದ್ದ. ಅಂವನನ್ನು ತೋರಿಸಿದ ಸೊಟ್ರಾಮ ‘ಮಷಿನು ನಡಿಸಾಕಂತ ಅವಂಗ ಸರಕಾರ ಪಂದ್ರ ಸಾವಿರ ಪಗಾರ ಕೊಡೋ ನೌಕರಿ ಕೊಟ್ಟೈತಿ. ಬಟನ್ ಚಾಲೂ ಮಾಡೂದು ಬಂದ್ ಮಾಡೂದು ಅಷ್ಟ ಅಂವನ ಕೆಲಸ. ಇವನೌನ ನಾವಿಲ್ಲಿ ಮೈ ನೂಸುವಂಗ ತೆಗ್ಗ ತೊಡೋದು, ಹೆಣ ಸುಡೊದು ಮಾಡಿದ್ರೂ ನಯ್ಯಾಪೈಸೆ ಕೊಡೂದಿಲ್ಲ.’ ಸೊಟ್ರಾಮ ಸುಡುವ ಬಿಸಲಲ್ಲಿ ಬೆವರಿಳಿಸಿಕೊಂಡು ಕೊತಕೊತ ಕುದಿಯುವ ತನ್ನ ನೋವು ತೋಡಿಕೊಂಡ. ಅವನಿಗೆ ಏನು ಹೇಳಬೇಕಂಬೂದು ಗೊತ್ತಾಗದ ದರ್ಯಾ ಸ್ವಲ್ಪ ಹೊತ್ತಿನ ಮ್ಯಾಲ ತನ್ನ ಸುಡುಗಾಡಿನ ದಾರಿ ಹಿಡಿದಿದ್ದ. ಈ  ಮಾಯಾವಿ ಮಷೀನು ತಮ್ಮ ಮಂದಿಯ ಬದುಕನ್ನೆ ನುಂಗುವುದಾದರೆ ಯಾಕಿದನ್ನು ಕಂಡು ಹಿಡಿದರೋ, ನಾವೇನು ಅನ್ಯಾಯ ಮಾಡಿದ್ದೇವೆಯೋ, ಎಂಥ ಕಾಲ ಬಂತು. ಮುಂದ ತುತ್ತಿಡಾಕೂ ಮಷೀನು, ಹಿಂದ ಕುಂಡಿ ತೊಳಿಯಾಕೂ ಮಷೀನು ಬಂದು ನಮ್ಮಂಥ ಬಡವರು ಬದುಕಾಕ ದಾರಿನೇ ಇಲ್ಲದಂಗಾತೋ ಅಂತ ಸೊಟ್ರಾಮನ ಬಡಬಡಿಕೆ ದರೆಪ್ಪನನ್ನು ಬೆನ್ನು ಬೀಡದೆ ಹಿಂಬಾಲಿಸಿ ಗೋಳು ಹೊಯ್ಕೊಳುತ್ತಿತ್ತು.

ಹಿಂಗ ನೆನಪುಗಳ ಜಾತ್ರೆ ನೆರೆದು ದಗ್ಗುದುಳಿಯುತ್ತಿರುವಾಗಲೇ ದರೆಪ್ಪ ಸುಸ್ತಾಗಿ ನಿದ್ದಿ ಉಡಿಯಾಗ ಬಿದ್ದಿದ್ದ.

***

ಬೆಳಗಿನ ಜಾವ ಯಾವಾಗಲೋ ದರ್ಯಾನನ್ನು ಎಬ್ಬಿಸಿಕೊಂಡು ಸಿಕ್ಕ ಆಟೋ ಹಿಡಿದುಕೊಂಡು ಸುಡುಗಾಡಿಗೆ ಕರೆದುಕೊಂಡು ಬಂದಿದ್ದಳು ಮಾತೆವ್ವ. ಮಳೆ ತಣ್ಣಗೆ ಹಣಿಯುತ್ತಲೆ ಇತ್ತು. ನಾಲ್ಕು ಗೋಡೆಯ ಮೇಲೆ ತಗಡಿನ ಶೀಟು ಹೊದಿಸಿರುವ ಒಂದು ಗೂಡಿನಲ್ಲಿಯೇ ಇವರ ವಂಶದ ಬಳ್ಳಿ ಚಿಗಿತು ಹಬ್ಬತೊಡಗಿ ಈ ಹಂತಕ್ಕೆ ಬಂದಿತ್ತು. ಆ ಗೂಡಿನಲ್ಲೆ ಈಗ ಸ್ಟೇಲ್ಲಾಳ ಬಾಣಂತನವಾಗಬೇಕು.

ಆ ಬೆಳಗ್ಗೆ ಮನೆಗೆ ಬಂದರೆ ಮನೆ ತುಂಬ ತಟ ತಟ, ಯಾವತ್ತೋ ಹೊದೆಸಿದ ತಗಡುಗಳು ಅಲ್ಲಲ್ಲಿ ತೂತು ಬಿದ್ದ ಸೋರುತ್ತಿದ್ದವು. ಬಾಗಿಲುಗಳಿಲ್ಲದ ಕಿಡಕಿಯಿಂದ ರಾಜೋರೋಷವಾಗಿ ಪ್ರವೇಶ ಮಾಡುತ್ತಿದ್ದ ಮಳೆಗಾಳಿಗೆ ಮಾತೆವ್ವ ಉಡಿಯಲ್ಲಿನ ಮಗು ಅವಚಿಕೊಂಡು ದಿಗಿಲಿಗೆ ಬಿದ್ದು ದರ್ಯಾನತ್ತ ನೋಡಿದಳು. ನಿದ್ದೆಯ ಮಂಪರಿನಲ್ಲಿದ್ದ ದರ್ಯಾ ಸಿಕ್ಕ ಹಾಸಿಗೆ ತುಗೊಂಡು ರುದ್ರಮಂಟಪದ ಕಡೆ ಹೊಂಟಬಿಟ್ಟಿದ್ದ.

‘ಎ ಮೂಳಾ, ಹಂಗ ಹೊಂಟೆಲ್ಲ, ಅಟು ಖಬರೈತಿಲ್ಲ ನಿಂಗ, ಮಗಳ ಹಸಿ ಮೈಯ್ಯಾಕಿ ಆದಾಳ ಅನ್ನೂದರ ಗೊತ್ತೈತಿಲ್ಲೋ. ಮನಿ ನೋಡಿದರ ಒಂದ ಸಂವನ ಸೋರತೈತಿ. ಹೋಗು. ಎನ್ ಮಾಡ್ತಿಯೋ ಗೊತ್ತಿಲ್ಲ, ಎಲ್ಲ ಕಿಡಕಿ ಬಂದ್ ಮಾಡಿ ಬಾ.’ ಅಂತ ಆದೇಶಿಸಿಬಿಟ್ಟಳು.

ಸುರಿಯುವ ಮಳೆಯೊಳಗ ರೇಗಾಡುತ್ತಲೇ ಹೊರಗೆ ಹೋದ ದರಿಯ ಕಿಡಕಿ ಹ್ಯಾಂಗ ಮುಚ್ಚೋದು ಅಂತ ಸ್ವಲ್ಪ ಹೊತ್ತು ವಿಚಾರ ಮಾಡ್ದ. ಏನೇನೋ ದೇನಕಿ ಹಾಕ್ಕೊಂಡು ಹುಡುಕಾಡಿದ. ಏನೂ ಸಿಗಲಿಲ್ಲ. ಅದೆ ಹೊತ್ತಲ್ಲಿ ಬಿದ್ದ ಕೋಲ್ಮಿಂಚಿನ ಬೆಳಕಲ್ಲಿ ಗೋರಿಗಳ ಮೇಲೆ ಹುಗಿಯಲಾಗಿದ್ದ ನಾಮಫಲಕಗಳು ಇವನನ್ನು ಕರದಂಗಾತು. ಜೀವವಿರುವ ಮನುಷ್ಯರಿಗಿಂತ ಸತ್ತ ಮನುಷ್ಯರೆ ಒಳ್ಳೆಯವರು ಎನ್ನುವ ಅವನು ನಂಬಿದ ಏಕೈಕ ತತ್ವ ಈ ಸಮಯದಲ್ಲಿ ಮತ್ತೆ ನೆನಪಿಗೆ ಬಂದು ಮನಸ್ಸು ಅರಳಿತು. ನೂರಾರು ವರ್ಷದ ಹಿಂದ ಗೊರಿಗಳೊಳಗ ಮಲ ಮುಂತಾದ ಸಜ್ಜನರು ‘ಬಾ ದರ್ಯಾ’ ಅಂತ ಕರೆದಂಗಾತು. ಈ ಹಿರಿಕರ ಶತಮಾನದ ಗೋರಿಗಳು ತಮ್ಮ ಮೈಮೇಲಿನ ಗಚ್ಚು ಸಿಮೆಂಟ್ ಉದುರಿ ಹೋಗಿ ಕೇವಲ ಮೂಲೆಗಲ್ಲು, ನಾಮಪಲಕಗಳ ಅಸ್ತಿಪಂಜರವನ್ನು ಮಾತ್ರ ಹೊದ್ದು ನಿಂತಿದ್ದವು. ಕೆಲವು ಗೋರಿಗಳ ನಾಮಪಲಕವೂ ಕಳಚಿ ಬಿದ್ದು, ಯಾವುದೂ ಶಾಶ್ವತವಲ್ಲ ಎಂಬ ಲೋಕ ನೀತಿಗೆ ಸಾಕ್ಷಿಯಾಗಿದ್ದವು.  ದರ್ಯಾ ತನಗೆ ಬೇಕಾದ ಆಕಾರದ ಐದಾರು ನಾಮಫಲಕಗಳನ್ನು ತಂದು ಗಾಳಿ ಮಳೆ ಪ್ರವೇಶಿಸದಂತೆ ಕೋಲಿಯ ಕಿಡಕಿಗಳಿಗೆ ಮುಚ್ಚಿದ.

ಒಳಗೆ ಮಗು ಕಿಲ ಕಿಲ ಅಂತ ನಗುತ್ತಿತ್ತು. ಹೆರಿಗೆ ಸುಸ್ತಿನಲ್ಲಿದ್ದ ಮಗಳು ನಿದ್ದೆ ಹೋಗಿದ್ದಳು. ಮಾತೆವ್ವ ಮಗಳು ಮೊಮ್ಮಗಳಿಗೆ ಮಳೆ ನೀರು ಸಿಡಿಯದಂತೆ ಹಗ್ಗದ ಮಂಚದ ಮೇಲೆ ಪ್ಲ್ಯಾಸ್ಟಿಕ್ ಹಾಳೆಯೊಂದನ್ನು ಕಟ್ಟುತ್ತಿದ್ದಳು. ಒಂದೆರಡು ಗೋಣಿ ಚೀಲಗಳನ್ನು ತೆಗೆದುಕೊಂಡ ದರ್ಯಾ ಮಲಗಲು ರುದ್ರಮಂಟಪದತ್ತ ಹೆಜ್ಜೆ ಹಾಕಿದ. ನಿದ್ರೆ ಕಣ್ತುಂಬುವವರೆಗೆ ನೆನಪುಗಳು ಅವನಿಗೆ ಮತ್ತೆ ಜೊತೆಯಾದವು.

ಮರುದಿನ ಬೆಳಗ್ಗೆ ಮಾತೆವ್ವ ಹಾಸಿಗೆ ಜಗ್ಗಿ ಎಬ್ಬಿಸಿದಾಗಲೇ ಅವನಿಗೆ ಎಚ್ಚರವಾದುದು. ‘ಒಂದು ಬದುಕು ಬರೂದೈತಿ. ಒಂದು ಕುಣಿ ರೆಡಿ ಮಾಡಬೇಕು, ಎದ್ದೇಳು.’ ಅಂತ ಹಾಸಿಗೆ ಜಗ್ಗತೊಡಗಿದಳು. ತಮ್ಮೊಡಲಿಗೆ ಅನ್ನ ಹಾಕುವ ಹೆಣಗಳನ್ನೆ ಬದುಕು ಎಂದು ಕರೆಯುವ ಕಾಯಕ ಜೋಡಿಯದು.

‘ಇನ್ನೊಂದು ತಾಸಿನ್ಯಾಗ ತರ್ತಾರಂತ ಜಲ್ದಿ ಎಳು’ ಅನಕೋತ ಅಂವ ಹೊಳ್ಳಿ ಮಕ್ಕೊಂಡು ಗಿಕ್ಕೊಂಡಾನು ಅಂತ ಅಂವನ ಕೌದಿಯನ್ನು ಬಗಲಲ್ಲಿ ಇಟ್ಟುಕೊಂಡೆ ಮಾತೆವ್ವ ಕೋಲಿ ಕಡೆ ನಡೆದಳು. ಅವಳ ಹಿಂದಿಂದ ಆಕಳಿಸಿಕೊತ ಹೊದ ದರಿಯ ಬಿಸಿ ಬಿಸಿ ಚಾ ಕುಡ್ದು ಮೊಮ್ಮಗಳಿಗೆ ಮುಖ ನೋಡಿ ನಿನ್ನ ದರ್ಶನದಿಂದ ಇವತ್ತು ಚಲೋತಂಗ ಚಿಲ್ಲರೆ ಬರಲೆವ್ವ ನಿಮ್ಮವ್ವಗ ಕೋಳಿ ಸಾರು ಮಾಡಿ ಹಾಕ್ತೆನಿ ಅನಕೋತ ಸಲಕಿ ಕೆಬ್ಬಣ ಪುಟ್ಟಿ ತುಗೊಂಡು ಹೊರ ನಡೆದ.

ಒಂದು ಮೂಲೇಲಿ ಜಾಗ ಗುರುತಿಸಿ ಹಡ್ಡಬೇಕಂದವನಿಗೆ ಏನೋ ನೆನಪಾಗಿ ಸುಡುಗಾಡಿನ ಗೇಟ್‍ಕಡೆ ನಡೆದ. ಸುಡುಗಾಡಿನ ತಿರುವಿನಲ್ಲಿದ್ದ ಸರೆ ಅಂಗಡಿಗೆ ಹೋಗಿ ಉದ್ರಿ ಹೇಳಿ ಒಂದು ಬಾಟಲಿ ಹೊಟ್ಟಿಗಿಳಿಸಿ ಬಂದು ಕುಣಿ ತೋಡತೊಡಗಿದ. ಸ್ವಲ್ಪ ಹೊತ್ತಿಗೆ ತನ್ನ ಸೆರಗನ್ನೆ ಸಿಂಬಿಯನ್ನಾಗಿ ಮಾಡಕೋತ ಮನಾತೆವ್ವನೂ ಬಂದೂ ಜೋಡಾದ್ಲು. ಇಂವ ಕ್ಷಣ ಕ್ಷಣಕ್ಕೂ ಕುಣಿಯೊಳಗ ಇಳಿಯುತ್ತಾ ಹೋದಂತೆ ಮಾತೆವ್ವಳೂ ಕುಣಿಯೊಳಗ ಇಳಿದ್ಲು. ಇಂವ ಸಲಕಿಗೆ ತುಂಬೋದು, ಮಾತೆವ್ವ ಬುಟ್ಟಿ ಹೊರಗ ಚೆಲ್ಲೋದು ಸೂರ್ಯ ಹೆಗಲ ಮೇಲೆ ಬರೂವರೆಗೂ….

***

ಕುಣ್ಯಾಗ ಹೆಣ ಇಟ್ಟ ಮಂದಿ ನಿರುಮ್ಮಳಾಗಿ ಮನೆ ಕಡೆ ಹೊರಡುವಾಗಲೇ ಅವರಿಗೆ ಆ ನಾಮಪಲಕಗಳು ಕಣ್ಣಿಗೆ ಬಿದ್ದು ಮುಂದಿನ ವೀಪರೀತಕ್ಕೆ ಕಾರಣವಾಗಿದ್ದವು. ಆ ಗುಂಪಿನಲ್ಲಿದ ಕಹಿರಸ (ಕರ್ನಾಟಕ ಹಿಂದೂ ರಕ್ಷಣಾ ಸಮಿತಿ) ಮುಖಂಡನೊಬ್ಬನ ಚುರುಕುಗಣ್ಣುಗಳಲ್ಲಿ ಕಿಡಕಿಗೆ ಆಸರಾಗಿ ಇಟ್ಟಿದ್ದ ಆ ನಾಮಫಲಕಗಳು ಪ್ರತಿಫಲಿಸಿ ಅವು ಕೆಂಪಾಗಲು ಕಾರಣವಾಗಿದ್ದವು. ‘ಅಯ್ಯೋ ನಮ್ಮ ಹಿರಿಕರು ಉಲ್ಟಾ ಪಲ್ಟಾ ಕುಂತಾರ, ಕರಿರಿ ಆ ಕಿರಿಸ್ತಾನ್ ಬೊಳಿ ಮಗನ್ನ’ ಅಂತ ಚೀರಾಡತೋಡಗಿದ್ದನ್ನು ನೋಡಿದ ಮಾತೆವ್ವ ಭಯದಿಂದ ಥರಗುಟ್ಟಿ ಒಳಗೆ ದನಿವಾರಿಸಿಕೊಳ್ಳುತ್ತಿದ್ದ ಗಂಡನನ್ನು ಕರೆದಳು. ದರ್ಯಾ ತೇಲಗಣ್ಣು ಮೇಲುಗಣ್ಣು ಹಾಕೋತ ಬಂದ ನಿಂತ.

‘ಮಗನ ಇಂವನ್ಯಾಕ ಇಲ್ಲಿ ಇಟಗೊಂಡಿದ್ದಿ, ಸೊಕ್ಕ ಮೈ ಏರಿತೇನ’
‘ಎಪ್ಪ ರಾತ್ರಿ ಮಳಿ ಬರತಿತ್ತ ಅದಕ್ಕ..’
‘ಅದಕ್ಕ ನಮ್ಮ ಹಿರಿಯಾರ ಬೇಕೇನೋ ಮಗನ ನಿನಗ.. ಯಾರನ್ನ ಕೇಳಿ ತೊಗೊಂಡಿ.’
‘ಎಪ್ಪ ಯಾರನ್ನೇನು ಕೇಳೋದು. ಹುಟ್ಟಿದಾಗಿಂದ ಇಲ್ಲಿ ಬದುಕೇನಿ, ಈ ಸುಡಗಾಡ ನನ್ನ ಮನಿ, ಇಲ್ಲಿ ಮಕ್ಕೊಂಡರಲ್ಲಾ, ಈ ಗೋರಿಗಳೊಳಗ, ಅವರು ನಮ್ಮ ದೇವರು.. ನನ್ನ ಮೊಮ್ಮಗಳ ಕಷ್ಟ ನೋಡಲಾರದ ಅವರ ನನಗ ಈ ಪಾಠಿಗಲ್ಲು ತೊಗೊಂಡು ಹೋಗು ಅಂದ್ರು, ಅಂದಕ್ಕ ತಂದ ಇಟಗೊನ್ನಿ.’

ಒಂದಿಷ್ಟು ಜನ ಕೊಳ್ಳೆಂದು ನಕ್ಕರು. ಆದ್ರ ಒಬ್ಬ ‘ಮಗನ್ನ ಸುಳ್ಳು ಹೇಳತಿ’ ಅಂತ ಗುಂಪಿನಲ್ಲಿದ್ದವನೊಬ್ಬ ಜಾಡಿಸಿ ಒದ್ದೆಬಿಟ್ಟ! ಇನ್ನೊಂದಿಷ್ಟು ಜನ ಬಿದ್ದವನ ತುಳಿಯಲು ಮುಂದೆ ಸರಿದರು.
ಗುಂಪಿನಲ್ಲಿದ್ದ ಹಿರಿಯನೊಬ್ಬ ಇದನ್ನೆಲ್ಲ ನೋಡಲಾರದೆ ‘ಏ ಒದಿಬ್ಯಾಡ್ರೋ ಅಟ್ರಾಸಿಟಿ ಕೇಸ್ ಹಾಕಿದ್ರ ಜಡಾ ಆಕೈತಿ’ ಅಂತ ಅವರನ್ನೆಲ್ಲ ಹಿಂದೆ ಸರಿಸಿದ.

ಕಹಿರಸ ಮುಖಂಡ ಇನ್ನು ಬುಸುಗುಡುತ್ತಲೇ ಇದ್ದ. ‘ಕಿರಿಸ್ತಾನ ಮಗನ್ನ ನಮ್ಮ ಸುಡುಗಾಡಿಂದ ಒದ್ದೋಡಿಸುವರೆಗೂ ನಮ್ಮ ಹಿರಿಕರ ಈ ಗೋಳು ತಪ್ಪುವಂಗಿಲ್ಲ. ಮೊದಲು ಇಂವನ ಮ್ಯಾಲೆ ಒಂದು ಕೇಸು ಜಡಿಯೋನು ಬರ್ಯೋ’ ಅಂತ ಒಂದಿಷ್ಟು ಗುಂಪು ಹೊಂಡಿಸಿಗೊಂಡು ಹೊರಟೇ ಬಿಟ್ಟ. ಹೋಗುವ ಮುನ್ನ ಸಾಕ್ಷಿಗಿರಲೆಂದು ತನ್ನ ಮೊಬೈಲ್‍ನಿಂದ ಉಲ್ಟಾ ಪಲ್ಟಾ ಇಟ್ಟಿದ್ದ ನಾಮಫಲಕಗಳ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ.

ಅವನಿಗೆ ಕ್ರಿಶ್ಚಿಯನ್ ಅನುಯಾಯಿಗಳ ಮೇಲೆ, ಅದರಲ್ಲೂ ಯಾರ ಯಾರದೋ ಮಾತು ಕೇಳಿ ತಮ್ಮ ಧರ್ಮವನ್ನೆ ಮಾರಿಕೊಂಡವರ ಮೇಲೆ ಬಹಳ ಸಿಟ್ಟಿತ್ತು. ಭಾರತ ಹಿಂದೂಗಳ ದೇಶವೆಂದು ಆತ ಬಲವಾಗಿ ನಂಬಿದ್ದ. ಹೇಗಾದರೂ ಮಾಡಿ ಅನ್ಯ ಧರ್ಮದ ಕುನ್ನಿಗಳನ್ನ ಓಡಿಸೋಣ ಎಂದು ಆಗಾಗ ಸಭೆಗಳಲ್ಲಿ ಭಾಷಣ ಮಾಡುತ್ತಿದ್ದ. ಆತ ಬಹಳ ದಿನಗಳ ನಂತರ ಮಾತನ್ನು ಕೃತಿಗಿಳಿಸಲು ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಬಾರದೆಂಬ ಹುಮ್ಮಸ್ಸಿನಲ್ಲಿದ್ದ.

ಮುಸಲರ ಹುಡಗನೊಬ್ಬ ಹಿಂದೂ ಹುಡುಗಿಗೆ ಕಿಚಾಯಿಸಿದ್ದರ ಪ್ರಕರಣವೊಂದರ ಬಗ್ಗೆ ತಲೆಬಿಸಿ ಮಾಡಿಕೊಂಡ ಕುಂತಿದ್ದ ಪಿಎಸ್‍ಐ ಸೂರ್ಯರೆಡ್ಡಿ ಅವರು ಕಹಿರಸ ಸಂಘಟನೆಯವರು ತಂದ ದೂರನ್ನು ಆಲಿಸಿ ಮತ್ತಷ್ಟು ಗರಂ ಆಗಿದ್ದರು. ‘ಕೇವಲ ನಾಮಫಲಕಗಳ ಕಳುವು ಅಂಥ ಕೇಸು ಜಡಿದರೆ ಅದು ಸ್ಟ್ರಾಂಗ್ ಆಗೂದಿಲ್ಲ. ಸುಡಾಗಾಡಿನ್ಯಾಗ ಅಸ್ತಿಪಂಜರ, ಎಲುಬು, ಆಗಷ್ಟೆ ಹುಗಿದ ಹೆಣ ಮಾರ್ತಾನ ಅಂತ ಕೇಸ್ ಜಡಿರಿ. ಒಂದಷ್ಟು ವರ್ಷ ಕಂಬಿ ಎಣಿಸಲಿ ಮಗಾ’ ಅಂತ ತಮಗೆ ತಿಳಿದ ಕೆಲವು ಸೆಕ್ಷೆನ್‍ಗಳ ನಂಬರ್ ಹೇಳಿ ತಮ್ಮ ತಲೆಬಿಸಿಯನ್ನು ಸ್ವಲ್ಪಮಟ್ಟಿಗೆ ತಣ್ಣಗೆ ಮಾಡಿಕೊಂಡರು. ಜೊತೆಗೆ ಕಹಿರಸ ಸಂಘಟನೆ ಮುಖ್ಯಸ್ಥರಿಂದ ಶಹಬ್ಬಾಷಗಿರಿ ಸಿಕ್ಕು ಮತ್ತಷ್ಟು ಖುಷಿಗೊಂಡರು.

ಇಲ್ಲಿ ಕೇಸು ಜಡಿಯಲಾಗುತ್ತಿದ್ದರೆ ಅಲ್ಲಿ ರುದ್ರಮಂಟಪದೊಳಗೆ ನೆಮ್ಮದಿಯ ನಿದ್ದೆಯಲ್ಲಿದ್ದವನನ್ನು ಪೋಲೀಸ್ ಪೆದೆಗಳು ಎಳೆದು ತಂದರು. ಅಷ್ಟೊತ್ತಿಗಾಗಲೇ ಕಹಿರಸ ವೇದಿಕೆಯ ಸಮಾಜಸೇವಕರು ತಮಗೆ ಗೊತ್ತಿದ್ದ ಟಿವಿ ರೀಪೋರ್ಟ್‍ರ್‍ಗಳಿಗೆ ಪೋನಾಯಿಸಿ ಕರೆಸಿಕೊಂಡು ತಮ್ಮ ಸೇವೆಯನ್ನು ಸಾಧ್ಯಂತವಾಗಿ ವಿವರಿಸುವಲ್ಲಿ ತಲ್ಲೀನರಾಗಿದ್ದರು. ಅಲ್ಲಿಗೆ ಯಾವದೋ ಲೋಕದ ಪ್ರಾಣಿಯಂತೆ ಹಿಡಿದು ತರಲಾದ ದರ್ಯಾನನ್ನು ನೋಡಿದ ಟಿವಿ ವರದಿಗಾರರು ತಮ್ಮ ಕ್ಯಾಮರಾವನ್ನು ದರಿಯನತ್ತ ತಿರುಗಿಸಿದರು. ಕೇಸಿನ ತಳಬುಡವನ್ನು ಅರಿಯದ ದರಿಯ ಎಂದಿನಂತೆ ಹಲ್ಕಿರಿದು ಪೋಜು ಕೊಟ್ಟ. ಅವನನ್ನು ಸ್ಟೇಷನ್ನಿನಲ್ಲೆ ಇದ್ದ ಕಂಬಿಯೊಳಗೆ ನೂಕಿ ಕೀಲಿ ಜಡಿಯಲಾಯಿತು. ಇದ್ಯಾವುದರ ತಳಬುಡವೂ ಅರ್ಥವಾಗದ, ಅರ್ಥೈಸಿಕೊಳ್ಳಲು ಪ್ರಯತ್ನಿಸದ ದರಿಯ ಅಲ್ಲಿಯೆ ಟಾವೆಲ್ಲು ಚೆಲ್ಲಿ ಅಡ್ಡಾಗಿಬಿಟ್ಟ. ಬಹುಶಃ ಕುಡಿದದ್ದು ಇನ್ನು ಇಳಿಯದಿದ್ದುದರಿಂದ ಮತ್ತೆ ನೆನಪುಗಳ ಲೋಕದಲ್ಲಿ ವಿಹರಿಸಿ ನಿದ್ರೆಯ ಪಾತಳಿಗೆ ಬಿದ್ದು ನಿರಮ್ಮಳನಾದ.

ಇತ್ತ ಮಾದ್ಯಮಗಳಲ್ಲಿ ನೋಡಿ ಈ ಪ್ರಕರಣವನ್ನು ಗಂಭೀರವಾಗಿ ಕೆಲವು ದೇಶಭಕ್ತರು ದೇಶದ ರಕ್ಷಣೆಗಾಗಿ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿ ಒಟ್ಟಾದರು. ತುರ್ತು ಸಭೆಗಳನ್ನು ನಡೆಸಿದರು. ಇದರ ಫಲವಾಗಿ ಮಾರನೆ ದಿನವೇ ಸುಡುಗಾಡಿನ ಮುಂದೆ ಬೃಹತ್ ಪ್ರತಿಭಟನಾ ಧರಣಿ ನಡೆಯಿತು. ಹೆಣ, ಅಸ್ತಿಪಂಜರ ಮಾರಾಟ ಮಾಡುವ, ಹಿಂದೂ ಗೋರಿಗಳನ್ನು ದ್ವಂಸಗೊಳಿಸಿ ಸಮಾಜದ ಕೋಮು ಸೌಹಾರ್ದವನ್ನು ಕೆಡಿಸುತ್ತಿರುವ ಕ್ರಿಶ್ಚಿಯನ್ ದೊರೆರಾಜ್‍ನ ಕುಟುಂಬವನ್ನು ಕೂಡಲೆ ಸ್ಮಶಾನದಿಂದ ಎತ್ತಂಗಡಿ ಮಾಡುವವರೆಗೂ ನಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದರು. ಇದೆ ವೇಳೆ ಪ್ರತಿಭಟನಾಕಾರರಿಂದ ಮಾತೆವ್ವನ ಮನೆ ಮೇಲೆ ಕಲ್ಲುಗಳು ಬಿದ್ದವು. ಸುದ್ದಿ ತಿಳಿದ ಅಳಿಯ ಮುನ್ಸಿಪಾಲ್ಟಿ ನೌಕರ ಗಂಗರಾಜು ಎಲ್ಲಿದ್ದವನೋ ಓಡೋಡಿ ಬಂದು ತಾಬಡತೋಬಡ ತನ್ನ ಬಾಣಂತಿ ಹೆಂಡತಿ ಮತ್ತು ಅತ್ತೆ ಮಾತೆವ್ವನನ್ನು ತನ್ನ ತಗಡಿನ ಮನೆಗೆ ಸಾಗಿಸಿದ.

ಹೆಣಗಳ್ಳತನ ಘೋರವಾದ ಅಪರಾಧವೇ ಆದ್ದರಿಂದ ಮಾನ್ಯ ಗೌರವಾನ್ವಿತ ನ್ಯಾಯಮೂರ್ತಿಗಳು ದರಿಯನಿಗೆ 5 ವರ್ಷ ಸಜೆಯನ್ನು ವಿಧಿಸಿದರು.

***

5 ವರ್ಷಗಳಲ್ಲಿ ಏನೇನೆಲ್ಲ ಬದಲಾಗಿತ್ತು. ಅಳಿಯ ಗಂಗರಾಜು ತನ್ನ ಹೆಂಡತಿ ಮತ್ತು ಮಾತೆವ್ವನನ್ನು ತನ್ನ ಮನೆಯಲ್ಲೆ ಇಟ್ಟುಕೊಂಡು ಬಿಟ್ಟಿದ್ದ. ಸಂಸಾರ ಪೂರ್ತಿ ದರಿಯನೊಂದಿಗೆ ಸಣ್ಣಪುಟ್ಟದಕ್ಕೆಲ್ಲ ಜಗಳಾಡಿಕೊಂಡೆ ಕಳಿದಿದ್ದ ಮಾತೆವ್ವ ಅಳಿಯನ ಮನೆ ಸೇರಿದ ಮೇಲೆ ಯಾರೊಂದಿಗೂ ಮಾತನಾಡುವುದನ್ನು ಬಿಟ್ಟು ಗಂಡನ ನೆನಪಲ್ಲಿ ದಿನವೂ ಕುಸಿಯುತ್ತಾ ಹೋಗಿ ಒಂದಿನ ಮಣ್ಣಲ್ಲಿ ಸೇರಿಹೋದಳು.

ಐದು ವರ್ಷದ ನಂತರ ಬಿಡುಗಡೆಗೊಂಡ ದರಿಯಜ್ಜ ಸುಡುಗಾಡಿಗೆ ಬಂದರೆ ಅಲ್ಲೇನಿದೆ ಮಣ್ಣು? ದರಿಯನ ಕುಟುಂಬದ ಅರಮನೆಯಂತಿದ್ದ ಮುರುಕಲು ಮನೆಯನ್ನು ಯಾವತ್ತೋ ಬಿಳಿಸಲಾಗಿದೆ. ಒಂದಲ್ಲಾ ಎರಡು ವಿದ್ಯುತ್ ಶವಾಗಾರಗಳನ್ನು ಜೋಡಿಸಲಾಗಿದೆ. ಅವುಗಳನ್ನು ನಡೆಸಲು ಪ್ಯಾಂಟು ಶರಟಿನ ನೌಕರರು ಪಾಳಿಯಲ್ಲಿದ್ದ ಹೆಣಗಳನ್ನು ಕಬ್ಬು ನುರಿಸುವಂತೆ ನುರಿಸುತ್ತಿದ್ದಾರೆ.

ಗೇಟ್ ಒಳಗೆ ನುಸುಳಿದ ಈ ಅಜ್ಜನನ್ನು ಕಂಡು ರಾಂಗಾದ ಕಾವಲುಗಾರ ‘ಏಯ್ ಯಜ್ಜಾ ಯಾಕ ಒಳಗ ಬರ್ತಿ? ಇಲ್ಲಿ ಜೀವ ಇರಾಕಿಲೆ ಒಳಗ ಬರಾಕ ಆಗೂದಿಲ್ಲ ಹೋಗ್ಹೋಗ’ ಅಂದ.

‘ಹಂಗಲ್ಲೊ ತಮ್ಮ ನನ್ನ ಹೆಂಡತಿ ಮಕ್ಕಳು ಇಲ್ಲೆ ಅದಾರ. ನನ್ನ ಮನಿ ಇಲ್ಲೇ ಐತೋ’ ಅಂತ ದರಿಯಜ್ಜ ಏನೇನೊ ಬಡಬಡಿಸತೊಡಗಿದ. ಕಾವಲುಗಾರನಿಗೆ ನಗು ಬಂತು. ಹೀಗೆಂದುಕೊಂಡೆ ಬರುವ ಹುಚ್ಚರನ್ನು ಆತ ಈ ಹಿಂದೆಯೂ ನೋಡಿದ್ದ. ಬಹುಶಃ ಅಜ್ಜನ ಹೆಂಡತಿ ಮಕ್ಕಳು ಯಾವದೋ ದುರಂತದಾಗ ಸತ್ತ ಮ್ಯಾಲ ಅವರನ್ನ ಇಲ್ಲೆ ಮಣ್ಣು ಮಾಡಿರಬೇಕು. ಅವರ ಸಾವು ಅಜ್ಜಗ ಹುಚ್ಚ ಹಿಡಿಸೈತಿ, ಪಾಪ. ಅನ್ಕೊಂಡ ಕಾವಲುಗಾರನಿಗೆ ಆ ಕ್ಷಣದಲ್ಲಿ ಹಳ್ಳಿಯಲ್ಲಿರುವ ತನ್ನ ತಂದೆಯ ನೆನಪಾದ. ಆದರೂ ಆತ ಅಸಹಾಯಕ. ಅತ್ಲಾಗ ಹೋಗ ಯಜ್ಜಾ, ರಾತ್ರಿ ಬಾಳ ಆಗೇತಿ ಅಂತ ಗೇಟ್ ಹಾಕತೋಡಗಿದ. drought-kelly-stewart-sieckತನ್ನ ಶಕ್ತಿ ಮೀರಿ ಗೇಟ್‍ಒಳಗೆ ನುಸಳಲು ಪ್ರಯತ್ನಿಸಿದ ದರಿಯಜ್ಜ ಕೊನೆಗೂ ಅದು ಸಾಧ್ಯವಾಗದೆ ಗೇಟ್ ಹೊರಗೆ ಉಳಿದು ಮುಸಗುಡತೊಡಗಿದ.

ಇದಾದ 8 ದಿನಗಳವರೆಗೂ ಅಜ್ಜ ಗೇಟ್ ಪಕ್ಕದ ಗಿಡದ ನೆರಳಲ್ಲಿ ತಳ ಊರಿದ್ದ. ಗೇಟ್ ಸಪ್ಪಳವಾದಾಗೊಮ್ಮೆ ಗೇಟ್ ಹತ್ತಿರ ಕಾಲೆಳೆದುಕೊಂಡು ಬರುತ್ತಿದ್ದ. ಒಳಗೆ ನುಸಳಲು ಸಾಧ್ಯವಾಗದೆ ಸೋತು ಗಿಡದ ಬಡ್ಡಿಗೆ ಹಿಂತಿರುಗುತ್ತಿದ್ದ. ಬರಬರುತ್ತ ಗೇಟಿನ ಕಡೆ ಕೇವಲ ಮಲಗಿದಲ್ಲಿಂದಲೇ ದೃಷ್ಟಿ ಹಾಯಿಸುತ್ತಿದ್ದ. 9ನೆ ದಿನ ಅಪರಾಹ್ನ ನೊಣಗಳು ಅವನ ದೇಹದೊಳಗೆ ಹೋಗಿಬರುವುದನ್ನು ಮಾಡುವ ಮೂಲಕ ಅವನ ಜೀವ ಹೋಗಿದ್ದನ್ನು ಜಗತ್ತಿಗೆ ಸಾರಲು ಯತ್ನಿಸುತ್ತಿದ್ದವು. ಆದರೆ, ತನ್ನದೆಯಾದ ಜಂಜಡದೊಳಗೆ ಮುಳುಗಿದ್ದ ಈ ಜಗತ್ತು ಇದ್ಯಾವುದರ ಪರಿವೆಯಿಲ್ಲದೆ ಬೈಕು, ಕಾರುಗಳಲ್ಲಿ ಕುಳಿತು ಓಡುತ್ತಲೇ ಇತ್ತು. ಎಲ್ಲಿಗೆ ಮುಟ್ಟುತ್ತೋ?

***

ಹೀಗೊಂದು ಕನಸು: ಮಡೆಸ್ನಾನ ಎಂಬ ಅಸಹ್ಯವನ್ನು ಮೇಲ್ಜಾತಿಯವರೆ ಪ್ರತಿಭಟಿಸುವಂತಿದ್ದರೆ…

-ಹನುಮಂತ ಹಾಲಿಗೇರಿ

“ಹಾಡ ಹಾಡೋ ಅಂದ್ರ ಹಾಡಿದ್ದ ಹಾಡತಾನ ಕಿಸಬಾಯಿದಾಸ” ಅಂತ ಬೇಸರ ಮಾಡ್ಕೋಬೇಡಿ. ನಾನು ಏನು ಆಗಬಾರದು ಅಂತ ಆಶಿಸಿ ಮಡೆಸ್ನಾನದ ಬಗ್ಗೆ ಲೇಖನ ಬರೆದಿದ್ದೇನೋ ನನ್ನ ಲೇಖನಕ್ಕೂ ಅದೆ ಗತಿಯಾಗಿದೆ. ಲೇಖನಕ್ಕೆ ಪರ-ವಿರೋಧಗಳ ಪ್ರತಿಕ್ರಿಯೆಗಳು ಬಂದಿವೆಯಾದರೂ ಅದರಲ್ಲಿ ಬಹುತೇಕ ಮೇಲ್ವರ್ಗದವರು ಮಡೆಸ್ನಾನದ ಪರವಾಗಿಯೂ ಕೆಳವರ್ಗದವರು ವಿರೋಧವಾಗಿಯೂ ಬರೆದಿದ್ದಾರೆ. ಇದು ಸ್ವಲ್ಪ ಬದಲಾಗಿ ಪ್ರತಿಯೊಬ್ಬ ಮೇಲ್ವರ್ಗದವರೂ ವಿರೋಧವಾಗಿದ್ದಿದ್ದರೆ ಎಷ್ಟೊಂದು ಚಂದವಿರುತ್ತಿತ್ತಲ್ಲವೇ?

ಲೇಖನ ಪ್ರಕಟವಾದ ದಿನ ಫೇಸ್‌ಬುಕ್‌ನಲ್ಲಿ ಕೆಲವರಂತೂ ನಿನಗೆ ಒಂದೆರಡು ಪ್ರಶಸ್ತಿಗಳು ಬಂದಿದ್ದು, ಅವು ನಿನ್ನನ್ನು ಹೀಗೆ ಬರೆಸುತ್ತವೆ. ದೇವರ ಸಮಾನವಾದ ಗೋವು ಕಡಿದು ಗೋಮಾಂಸ ತಿನ್ನುವ ಅಸಹ್ಯ ಎನಿಸದ ನಿಮ್ಮಂಥ ವಿಕೃತ ಮನಸ್ಸಿನವರಿಗೆ ಮಡೆಸ್ನಾನದಂತಹ ಆಚರಣೆಗಳು ಮಾತ್ರ ಅಸಹ್ಯ ಎನಿಸುತ್ತವೆ ಎಂದು ನನ್ನ ವೈಯಕ್ತಿಕ ನಿಂದನೆಗೆ ಇಳಿದುಬಿಟ್ಟರು.

ನಮ್ಮ ಮನೆಯಲ್ಲಿ ಕೂಡ ಆಕಳು, ಎಮ್ಮೆ, ಕುರಿ, ಕೋಳಿ, ಮೇಕೆ, ನಾಯಿ, ಬೆಕ್ಕುಗಳಿವೆ. ಈಗಲೂ ಕೂಡ ನಾನು ಊರಿಗೆ ಹೋದಾಗ ಎಮ್ಮೆ-ಆಕಳಗಳ ಮೈದಡವಿ ಮೈತೊಳೆದು, ಸಗಣಿ ಬಾಚಿ, ಮೇವು ಹಾಕುವ ಕೆಲಸವನ್ನು ಖುಷಿಯಿಂದ ಮಾಡುತ್ತೇನೆ. ಆದರೆ ಅವೆಲ್ಲ ನಮಗೆ ದೇವರು ಎನ್ನುವುದಕ್ಕಿಂತಲೂ ನಮ್ಮ ತೋಟ ಎಂಬ ಮಿನಿ ವಿಶ್ವದ ಜೀವ ಸದಸ್ಯರು. ಒಮ್ಮೊಮ್ಮೆ ನಾಯಿ ಮೇಕೆ ಮರಿಯನ್ನು, ಬೆಕ್ಕು ಕೋಳಿಮರಿಯನ್ನು ಬೇಟೆಯಾಡುವುದು ಇರುತ್ತದೆ. ಹಾಗಂತ ನಮ್ಮ ತೋಟದ ಮಾಲಿಕ ನಮ್ಮಪ್ಪ ಬೆಕ್ಕು ಅಥವಾ ನಾಯಿಯ ಜೀವ ತೆಗೆಯುವಂಥ ಕ್ರಮ ತೆಗೆದುಕೊಂಡಿದ್ದಿಲ್ಲ. ಹಣದ ಅಗತ್ಯಕ್ಕೆ ಅನುಗುಣವಾಗಿ ಈ ಜೀವ ಸದಸ್ಯರನ್ನು ಮಾರಾಟ ಮಾಡೊದು ಅಥವಾ ಮುದಿಯಾದ ಆಕಳು, ಎತ್ತು ಅಥವಾ ಎಮ್ಮೆಗಳನ್ನು ಕಟುಕರಿಗೆ ಮಾರುವುದು ಇದೆ. ಕೆಲವೊಮ್ಮೆ ಮನೆಗೆ ನೆಂಟರು ಬಂದ ಖುಷಿಯಲ್ಲಿ ಘಮಘಮಿಸುವ ಕೋಳಿ ಸಾರು ಸಿದ್ದವಾಗುತ್ತದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿ ಬಂತೆಂದರೆ ಮಾಂಸಾಹಾರ ನಿಸರ್ಗದ ನಿಯಮದಲ್ಲಿಯೆ ಮಿಳಿತವಾಗಿರುವಾಗ ಅದನ್ನು ಅಸಹ್ಯ ಎಂದರೆ ಏನು ಹೇಳುವುದು. ಒಂದು ಜೀವಿಯಲ್ಲಿಯೆ ಇನ್ನೊಂದು ಜೀವಿಯ ಆಹಾರವಿದೆ. ಹಾಲು ಕೊಡುವ ಆಕಳು, ಕರು, ಹೊಲ ಉಳುಮೆ ಮಾಡಲು ಅರ್ಹವಿರುವ ಎತ್ತನ್ನು ಹತ್ಯೆ ಮಾಡಬಾರದು, ಇನ್ನುಳಿದಂತೆ ಮುದಿಯಾದ ಗೋವನ್ನು ಮಾಂಸಕ್ಕೆ ಬಳಸಬಹುದು ಎಂದು ದೇಶದ ಕಾನೂನೆ ಹೇಳುತ್ತೆ. ಅಷ್ಟಕ್ಕೂ ಗೋವು ಒಂದನ್ನೆ ಮಾತ್ರ ಹತ್ಯೆ ಮಾಡಬಾರದು ಎಂದು ಪಟ್ಟು ಹಿಡಿಯುವ ಇಬ್ಬಂದಿತನದ ಹಿಂದಿನ ಹುನ್ನಾರವೇನು? ಒಂದು ವೇಳೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಮಂಸಾಹಾರವನ್ನು ಅವಲಂಭಿಸಿರುವ ಜನರ ಪರ್ಯಾಯ ವ್ಯವಸ್ಥೆ ಏನು? ಹಾಗೆ ನೋಡಿದರೆ ನಮ್ಮೂರ ಉತ್ತರ ಕರ್ನಾಟಕದ ಕಡೆ ಹೈನುಗಾರಿಕೆಗೆ ಸೂಕ್ತವಾದ ಪ್ರಾಣಿ ಎಮ್ಮೆ. ನಮ್ಮೂರಿನ ಹುಡುಗರು ಈಗಲೂ ಕೂಡ ಎಮ್ಮೆ ಹಾಲು, ಮೊಸರು, ಬೆಣ್ಣೆ ತಿಂದುಕೊಂಡೆ ಗರಡಿ ಮನೆ ಸಾಥ್ ಮಾಡುವುದು. ಔಷಧಿಗೆ ಹೆಚ್ಚು ಬಳಕೆಯಾಗುವುದು ಮೇಕೆ ಹಾಲು. ಆದರೆ ಗೋಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಂತೆ ಎಮ್ಮೆ-ಮೇಕೆಗಳ ಹತ್ಯೆ ವಿರೋಧಿಸಿ ಪ್ರತಿಭಟನೆಗಳು ನಡೆದದ್ದನ್ನು ನಾನು ಎಲ್ಲಿಯೂ ಕೇಳಿಲ್ಲ.

ಅಷ್ಟಕ್ಕೂ ಪ್ರಾಣಿಬಲಿಯನ್ನು ಸಾರ್ವಜನಿಕವಾಗಿ ಹಬ್ಬದಂತೆ (ಮಡೆಸ್ನಾನದಂತೆ) ಆಚರಿಸುವುದನ್ನು ನಾನು ವಿರೋಧಿಸುತ್ತೇನೆ. ಸರಕಾರವೇ ಪ್ರಾಣಿಬಲಿಯನ್ನು ನಿಷೇಧಿಸಿದೆಯಲ್ಲ? ಆದರೂ ಕೆಲವು ದಲಿತ ಸಮುದಾಯಗಳು ಕದ್ದುಮುಚ್ಚಿ ತಮ್ಮ ದೇವರುಗಳಿಗೆ ಪ್ರಾಣಿಬಲಿ ಕೊಡುವುದು ಮತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗುವುದು ಆಗಾಗ ನಡೆಯುತ್ತಲೆ ಇರುತ್ತದೆ.

ಆದರೆ ಈ ಮಡೆಸ್ನಾನ ಎಂಬ ಘನ ಆಚರಣೆಗೆ ಸರಕಾರ ಮತ್ತು ಕೆಲವು ಮಠಾಧಿಪತಿಗಳೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ವಿ.ಎಸ್.ಆಚಾರ್ಯ ಎಂಬ ಮಾನ್ಯ ಸಚಿವರಂತೂ `ಜನರ ನಂಬಿಕೆಗಳನ್ನು ನಾವು ಮುಟ್ಟುವುದಿಲ್ಲ. ಈ ಮಡೆಸ್ನಾನದಿಂದ  ಅವರ ಚರ್ಮವ್ಯಾದಿಗಳು ಕಡಿಮೆಯಾಗುವುದಿದ್ದರೆ ಅದಕ್ಕೆ ನಾವೇಕೆ ಅಡ್ಡಬರುವುದು,” ಎಂದು ತಿಪ್ಪೆ ಸಾರಿದ್ದಾರೆ. ಅವರು ಈ ಹಿಂದೆ ಡಾಕ್ಟರಿಕೆಯನ್ನು ಓದಿ ವೈದ್ಯರು ಆಗಿದ್ದುದರಿಂದ ಅವರ ಹೇಳಿಕೆ ವಿಶೇಷ ಕಳೆಯಿಂದ ಕೂಡಿದೆ.

ಪ್ರಾಣಿಬಲಿಯಂಥ ಆಚರಣೆಗಳನ್ನು ದಲಿತರು ಆಚರಿಸಿದರೆ ಅವರನ್ನು ಒದ್ದು ಜೈಲಿಗೆ ಹಾಕುವ ಸರಕಾರ, ಇನ್ನೊಂದೆಡೆ ಮೇಲ್ವರ್ಗದವರು ದಲಿತರ ಮೇಲೆ ವಿಜಯೋತ್ಸವದಂತೆ ಆಚರಿಸುವ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಬೆಂಬಲ ಘೋಷಿಸುತ್ತದೆ. ಕೆಲವರು ಎಂಜಲೆಲೆಯ ಮೇಲೆ  ಕೇವಲ ದಲಿತರಷ್ಟೆ, ಎಲ್ಲ ವರ್ಗದವರು ಉರುಳುತ್ತಾರೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಉಂಡು ಎಂಜಲು ಮಾಡುವವರು ಬ್ರಾಹ್ಮಣರು ಮಾತ್ರವಲ್ಲವೆ? ಇಷ್ಟಕ್ಕೂ ಯಾರೆ ಉರುಳಾಡಲಿ. ದೇವರ ಹೆಸರಿನಲ್ಲಿ ಹೀಗೆ ಎಂಜಲಿನ ಮೇಲೆ ಉರುಳಾಡುವುದು ಸರಿಯೆ?. ದೇವರು ದೈರ್ಯ ವಹಿಸಿ ಪ್ರತ್ಯಕ್ಷವಾಗುವಂತಿದ್ದರೆ ಈ ಅಸಹ್ಯವನ್ನು ಸಹಿಸಿಕೊಳ್ಳುತ್ತಿದ್ದನೆ?

ಮಡೆಸ್ನಾನ ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದರ ಬಗ್ಗೆ ನನಗೆ ಅತೀವ ಬೇಸರವಾಗಿದೆ. ಹೀಗೆ ಸಮರ್ಥಿಸಿಕೊಳ್ಳವವರಲ್ಲಿ ಬಹುತೇಕ ಮೇಲ್ವರ್ಗದವರೆ ಅಗಿರುವುದು ಕಾಕತಾಳಿಯವೆಂದೆನೂ ಅನಿಸುವುದಿಲ್ಲ. ಅಥವಾ ಅವರಿಗೆ ಮಡೆಸ್ನಾನ ತಪ್ಪು ಎಂದು ಎನಿಸುತ್ತಿಲ್ಲವೆಂದರೆ ಅದು ನಮ್ಮ ದೇಶದ ಮಹಾನ್ ಸಂಸ್ಕೃತಿಯ ದೌರ್ಭಾಗ್ಯ.

ಅಸ್ಪಶ್ಯತೆಯಂತಹ ನೆನಪಿಸಿಕೊಳ್ಳಲಿಕ್ಕೂ ಅಸಹ್ಯವೆನಿಸುವಂಥ ದೌರ್ಜನ್ಯಗಳನ್ನು  ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ಮಾಡಿಕೊಂಡು ಬಂದಿರುವ ಮೇಲ್ಜಾತಿಯವರು ಈಗಲೂ ಏಕೆ ತಮ್ಮ ಹಠವನ್ನೆ ಸಾಧಿಸಲೆತ್ನಿಸುತ್ತಾರೆಯೋ ತಿಳಿಯದು. ಈಗಷ್ಟೆ ಗತ ಅವಮಾನಗಳಿಂದ ಚೇತರಿಸಿಕೊಳ್ಳುತ್ತಿರುವ ದಲಿತರ ಮೇಲೆ ಮಡೆಸ್ನಾನದಂತಹ ಆಯುಧಗಳನ್ನು ಸೃಷ್ಟಿಸಿ ಪ್ರಯೋಗಿಸುವುದು ಸರಿಯೆ? ದಲಿತರೆ ಆಯುಧ, ದಲಿತರೆ ವೈರಿ.

ಮೇಲ್ಜಾತಿಯವರೆ ನೇತೃತ್ವ ವವಹಿಸಿಕೊಂಡು ಮಡೆಸ್ನಾನವನ್ನು ವಿರೋಧಿಸುತ್ತಿದ್ದರೆ ಎಷ್ಟೊಂದು ಚಂದವಾಗಿರುತ್ತಿತ್ತು? ಶಿವರಾಮು ಅವರ ಸಂಘಟನೆಯ ಬದಲಿಗೆ ಬ್ರಾಹ್ಮಣರ ಸಂಘಟನೆಯೊಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪ್ರತಿಭಟಿಸಿದ್ದರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು? ದಲಿತ ಸಂತ ದೇವನೂರು ಮಹಾದೇವ ಅವರು ಬಯಸುವಂತೆ ಈ ದೇಶದಲ್ಲಿನ ಎಲ್ಲ ಮನುಷ್ಯರು ಪರಸ್ಪರ ಭಾವ-ಮೈದುನರಾಗುವ, ನೆಂಟಸ್ಥರಾಗಿ ತೊಡೆಗೆ ತೊಡೆ ತಾಗಿಸಿಕೊಂಡು ಕುಳಿತು ಸಹಪಂಕ್ತಿ ಭೋಜನ ಮಾಡುವಂತಾಗಿದ್ದರೆ ಎಷ್ಟೊಂದು ಚಂದ ಅನಿಸುತ್ತಿತ್ತಲ್ಲವೇ? ಆ ದಿನ ನಮ್ಮ ತಲೆಮಾರಿನವರ ಆಯುಷ್ಯದಲ್ಲಿಯೆ ಬರಲಿ ಎಂದು ಆಶಿಸುತ್ತೇನೆ. ಕಾಯುತ್ತೇನೆ ಕೂಡ!

ಮಡೆಸ್ನಾನ ಬೆಂಬಲಿಸುವ ವಿತಂಡವಾದಿಗಳಿಗೆ ಯಾವಾಗ ಬುದ್ಧಿ ಬರುವುದು?

– ಹನುಮಂತ ಹಾಲಿಗೇರಿ

ಸಾಮಾಜಿಕ ಜಾಲತಾಣ ಪೆಸ್‌ಬುಕ್‌ನಲ್ಲಿ ಮಡೆಸ್ನಾನದ ಬಗ್ಗೆ ಬಹಳಷ್ಟು ಬಿಸಿ ಬಿಸಿಚರ್ಚೆಯಾಗುತ್ತಿದೆ. ಈ ಚರ್ಚೆಯಲ್ಲಿ ಸಧ್ಯ ಮೂರು ವಾದಗಳು ಚಾಲ್ತಿಯಲ್ಲಿವೆ. ಮೊದಲನೆಯದಾಗಿ `ಎಂಜೆಲೆಲೆಯ ಮೇಲೆ ಉರುಳೋದು ಬಿಡೋದು ಉರುಳುವವರ ನಂಬಿಕೆಗೆ ಸಂಬಂಧಪಟ್ಟದ್ದು. ಅದನ್ನು ಬೇಡ ಎನ್ನಲು ನಾವು ಯಾರು’ ಎಂದು ಪ್ರತ್ಯಕ್ಷವಾಗಿಯೆ ಮಡೆಸ್ನಾನವನ್ನು ಬೆಂಬಲಿಸುವ ವಿತಂಡವಾದಿಗಳು. ಎರಡನೆಯದಾಗಿ ‘ಮಡೆಸ್ನಾನ ಅನಾದಿ ಕಾಲದಿಂದ ನಡೆದುಕೊಂಡ ಆಚರಣೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು. ದಿಡೀರ್ ಎಂದು ನಿಷೇಧಿಸಲಿಕ್ಕೆ ಆಗುವುದಿಲ್ಲ. ಕಾಲ ಉರುಳುವಿಕೆಯಲ್ಲಿ ಅದೆ ನಿಲ್ಲುತ್ತದೆ’ ಎಂದು ಅಪರೋಕ್ಷವಾಗಿ  ಬೆಂಬಲಿಸುವವರು. ಇನ್ನು ಕೊನೆಯದಾಗಿ ಮಡೆಸ್ನಾನದಂತಹ ಅಸಹ್ಯ ಆಚರಣೆಯನ್ನು ತಕ್ಷಣವೇ ನಿಲ್ಲಿಸಲೇಬೇಕು ಎಂದು ಕಟುವಾಗಿ ವಿರೋಧಿಸುವವರು.

ಕೇವಲ ಇದು ಕೇವಲ ನಂಬಿಕೆಯ ವಿಷಯವಾಗಿದ್ದರೆ ಬೇರೆ ಮಾತು. ಆದರೆ  ಇದು ಮೂಡ ನಂಬಿಕೆ. ಮೌಡ್ಯತೆಯ ಪರಮಾವಧಿ. ಮೇಲುವರ್ಗದವರು ಉಂಡ ಎಂಜೆಲೆಲೆಯ ಮೇಲೆ ಕೆಳವರ್ಗದವರು ಉರುಳಾಡಿದರೆ ಅವರ ಚರ್ಮವ್ಯಾದಿಗಳೆಲ್ಲವೂ ಕಡಿಮೆಯಾಗುತ್ತವೆ ಎಂದರೆ ಮೂಢನಂಬಿಕೆಯಲ್ಲದೆ ಮತ್ತೇನೂ? ಒಬ್ಬರು ಕುಡಿದ ಲೋಟದಿಂದ ಮತ್ತೊಬ್ಬರು ಕುಡಿಯುವುದು ಅಸಹ್ಯ ಎನಿಸುವ, ಅಚಾನಕ್ಕಾಗಿ ಎಂಜಲು ತಾಕಿದರೆ ಸೋಪು ಹಚ್ಚಿ ತೊಳೆದುಕೊಳ್ಳುವವರು ಹೆಚ್ಚಾಗಿರುವ ಈ ಕಾಲದಲ್ಲಿ ಉಂಡ ಎಂಜಲದ ಮೇಲೆ ಉರುಳಾಡುವ ಮನಸ್ಥಿತಿಯನ್ನು ದಲಿತರಲ್ಲಿ ಬಿತ್ತಿದವರು ಯಾರು ಎಂಬುದು ಮುಖ್ಯ ಪ್ರಶ್ನೆ. ಎಂಜಲೆಲೆಯಲ್ಲಿ ಔಷಧೀಯ ಗುಣಗಳಿದ್ದರೆ ಇಷ್ಟೊಂದು ಆಸ್ಪತ್ರೆಗಳೇಕೆ ಹುಟ್ಟಿಕೊಳ್ಳುತ್ತಿದ್ದವು. ಒಂದು ವೇಳೆ ಇದು ನಿಜವೇ ಆಗಿದ್ದರೇ ಉಣ್ಣುವವರು ಬ್ರಾಹ್ಮಣರೇ ಏಕೆಯಾಗಬೇಕು? ಒಂದೊಂದು ವರ್ಷ ಆಚರಣೆ ತಿರುಗುಮುರುಗಾಗಲಿ. ದಲಿತರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಒಂದೊಂದು ವರ್ಷ ಉರುಳಾಡಲಿ!

ಇರಲಿ, ಇದೆಲ್ಲ ವಿತಂಡವಾದವನ್ನು ಪಕ್ಕಕ್ಕೆ ಇಟ್ಟು ಮೇಲಿನ ಎರಡು ವಾದಗಳ ಬಗ್ಗೆ ಚರ್ಚೆ ಮಾಡೋಣ. `ಮಡೆಸ್ನಾನ ನಂಬಿಕೆಗೆ ಸಂಬಂಧಪಟ್ಟದ್ದು ಉರುಳುವವರಿಗೆ ತಮ್ಮ ಖಾಯಿಲೆಗಳು ಕಡಿಮೆಯಾಗುತ್ತವೆ ಎಂಬ ಸಮಾಧಾನವಾಗುವಂತಿದ್ದರೆ ಉರುಳಲಿ ಬಿಡಿ’ ಎಂದು ವಾದಿಸುವವರು ಬಹಳಷ್ಟು ಜನರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೆ ಆಗಿದ್ದಾರೆ. ಇದನ್ನು ನಾನು ಪರ್ವಾಗ್ರಹ ಪೀಡಿತನಾಗಿ ಹೇಳುತ್ತಿಲ್ಲ. ಪೇಸ್‌ಬುಕ್ ತೆಗೆದುನೋಡಿದರೆ ನಿಮಗೆ ಗೊತ್ತಾಗುತ್ತದೆ. ಮಡೆಸ್ನಾನದ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಠಾಧಿಪತಿಗಳು ಪೇಜಾವರ ಶ್ರೀಗಳು ಕೂಡ ಇದೆ ಮಾತನ್ನು ಹೇಳಿದ್ದಾರೆ. ಚೋರ್ ಗುರು ಚಂಡಾಲ ಶಿಷ್ಯಂದಿರು!

ಮೊದಲು ಸರಕಾರ ಇದನ್ನು ನಿಷೇಧಿಸಿ ಆದೇಶ ಹೊರಡಿಸಿತು. ಸರಕಾರ ಒಮ್ಮೆಲೆ ನಿಷೇದಿಸಿದ್ದಕ್ಕೆ ನಮ್ಮಂಥವರ ಮನಸ್ಸುಗಳು ನಿರಾಳಗೊಂಡಿದ್ದವು. ನಂತರ ಯಾವದೋ ಹುನ್ನಾರದಿಂದ, ಯಾರದೋ ಒತ್ತಡಕ್ಕೆ ಮಣಿದಂತೆ ನಾಟಕವಾಡಿದ ಸರಕಾರ ನಿಷೇಧವನ್ನು ಮತ್ತೆ ಹಿಂದಕ್ಕೆ ತೆಗೆದುಕೊಂಡಿದ್ದು ನಾಚಿಕೆಗೇಡು. “ಮಲೆಕುಡಿಯರು ನಿಷೇಧ ವಿರೋಧಿಸಿ ಪ್ರತಿಭಟನೆ ಮಾಡಿದ್ದರಿಂದ ಏಕಾಏಕಿ ಮಡೆಸ್ನಾನ ಆಚರಣೆ ನಿಲ್ಲಿಸುವುದು ಬೇಡ. ಈ ಬಗ್ಗೆ ಮುಂದೆ ಮಠದಲ್ಲಿ ಪ್ರಶ್ನೆ’ ಕಾರ್ಯಕ್ರಮದಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು,” ಎಂದು ಸಚಿವ ವಿ.ಎಸ್.ಆಚಾರ್ಯ ಹೇಳಿಕೆ ನೀಡಿ ಜಾರಿಕೊಂಡರು. ಮಲೆಕುಡಿಯರ ಪ್ರತಿಭಟನೆಯಲ್ಲಿ ಮೇಲುವರ್ಗದವರ ಕೈವಾಡವಿರಲೇಬೇಕಲ್ಲವೇ.  ಏಕೆಂದರೆ ಈ ಆಚರಣೆ ಆರಂಭದಲ್ಲಿ ಪ್ರಾರಂಭವಾಗಲಿಕ್ಕೆ ಪುರೋಹಿತಶಾಹಿಗಳ ಹುನ್ನಾರವೇ ಕಾರಣವಲ್ಲವೇ?

ಅದುದರಿಂದ ಹೀಗೆ ಅಮಾನುಷವಾದ, ಕೆಲವರಲ್ಲಿ ಅಸಹ್ಯ ಮೂಡಿಸುವ ಈ ಆಚರಣೆಯನ್ನು ಬೆಂಬಲಿಸುವ ಮೊದಲವಾದಿಗಳು ದಯವಿಟ್ಟು ತಮ್ಮ ವಾದವನ್ನು ಮತ್ತೊಮ್ಮೆ ಪರಾಮರ್ಶಿಸಬೇಕು. ನಮ್ಮ ಎಂಜಲದ ಮೇಲೆ ಮತ್ತೊಬ್ಬ ಮನುಷ್ಯ ಉರುಳಾಡುವುದು ಬೇಡ ಎಂಬ ಕನಿಷ್ಠ ಮಾನವೀಯತೆ ನಿಮಗಿದ್ದರೆ ದಯವಿಟ್ಟು ಸುಮ್ಮನಿದ್ದು ಬಿಡಿ. ಮೇಲುವರ್ಗದ ಪ್ರಜ್ಞಾವಂತರೆ ಮುಂದೆ ನಿಂತು ಈ ಆಚರಣೆಯನ್ನು ನಿಷೇಧಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಇದು ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಜಾರಿಕೊಂಡರೆ ಈ ಹಿಂದೆ ಆಚರಣೆಯಲ್ಲಿದ್ದ ಸತಿಸಹಗಮನ, ಬೆತ್ತಲೆ ಸೇವೆ, ದೇವದಾಸಿ ಪದ್ದತಿ ಮುಂತಾದವುಗಳೆಲ್ಲವೂ ಸಹ ನಂಬಿಕೆಗೆ ಸಂಬಂಧಪಟ್ಟದ್ದು ಎಂದು ಮತ್ತೆ ಆಚರಣೆಗೆ ತರಲು ಸಾಧ್ಯವೆ?

ಇನ್ನೂ ಎರಡನೆ ವಾದದವರು `ಕಾಲ ಪಕ್ವವಾಗಿಲ್ಲ’ ಎಂಬ ನೆಪದಿಂದ ಆಚರಣೆಯ ಪರವಾಗಿಯೆ ನಿಲ್ಲುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಂಥ ಆಚರಣೆ ನಿಲ್ಲಿಸಲು ಕಾಲ ಪಕ್ವವಾಗಿಲ್ಲ ಎಂದು ಜಾರಿಕೊಳ್ಳುವುದು ಹೇಡಿತನ. ಎಂಜಲೆಲೆಯ ಮೇಲೆ ಉರುಳಾಡುವ ಮಲೆಕುಡಿಯರಿಗೆ ನಿಜವಾಗಲೂ ಇದು ಅಸಹ್ಯ ಎನಿಸದಿರಬಹುದು. ಆದರೆ ಇದು ಇಡಿ ಮನುಕುಲಕ್ಕೆ ಅನಾಗರಿಕತೆ, ಅಸಹ್ಯ ಮತ್ತು ಅವಮಾನ. ಮಲೆಕುಡಿಯರಂಥ ದಲಿತರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾದರೆ, ಅವರಲ್ಲಿ ಸ್ವಾಭಿಮಾನ ಮೂಡಿಸಿದರೆ ಖಂಡಿತ ಈ ಆಚರಣೆ ಮುಂದಿನ ವರ್ಷದಿಂದಲಾದರೂ ನಿಲ್ಲುತ್ತದೆ.

ಇದು ಬಿಟ್ಟು ಈ ಆಚರಣೆ ಧಾರ್ಮಿಕ ನಂಬಿಕೆ ಸಂಬಂಧಪಟ್ಟದ್ದು ಈ ಅನಾಗರೀಕ ಆಚರಣೆಗೆ ಅವಕಾಶ ಕಲ್ಪಿಸಿರುವ ಸರಕಾರ ತನ್ನ ಮನೋಇಂಗಿತವನ್ನು ಅನಾವರಣಗೊಳಿಸಿದೆ. ತಪ್ಪು ಎಂದು ಗೊತ್ತಾದ ಮೇಲೂ  ನಿಷೇಧಿಸಬೇಕೋ ಬೇಡವೋ ಎಂದು ಅಷ್ಟಮಂಗಲ ಪ್ರಶ್ನೆ ಕೇಳುತ್ತೇವೆ ಎನ್ನುವುದು ಯಾವ ಸೀಮೆ ನ್ಯಾಯ? ಸಾಕ್ಷರರ ಜಿಲ್ಲೆ ಎನಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೆ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಮಣೆ ಹಾಕುತ್ತಿರುವುದು ಪ್ರಜ್ಞಾವಂತ ಸಾಕ್ಷರರಿಗೆ ಒಪ್ಪುವ ಮಾತಲ್ಲ.

ಸುದ್ದಿಮನೆಯ ದೋಸೆಯೂ ತೂತೆ

-ಹನುಮಂತ ಹಾಲಿಗೇರಿ

ಮೊನ್ನೆಯಷ್ಟೆ ಮಾಧ್ಯಮ ಕಚೇರಿಗಳ ಸುದ್ದಿ ಸಂಪಾದನೆ ವಿಭಾಗಗಳಲ್ಲಿ ಒಂದು ಸುದ್ದಿ ಬಿಸಿ ಬಿಸಿ ಚರ್ಚೆಗೀಡಾಗಿ ಅಷ್ಟೆ ವೇಗದಲ್ಲಿ ಬಿಸಿ ಕಳೆದುಕೊಂಡಿತು. ಉದಯವಾಣಿ ಪತ್ರಿಕೆಯ ವರದಿಗಾರ ಸುರೇಶ್ ಪುದವೆಟ್ಟು ಅವರು ಸಚಿವ ಮುರುಗೇಶ್ ನಿರಾಣಿಯವರ ಭ್ರಷ್ಟಾಚಾರದ ಬಗ್ಗೆ ಒಂದು ಲೇಖನ ಬರೆದಿದ್ದರು. ಇದು ನಿರಾಣಿಯವರ ಕಣ್ಣು ಕೆಂಪಗಾಗಲು ಕಾರಣವಾಗಿರಬೇಕು. ಸುರೇಶ್ ಅವರ ಹೆಂಡತಿ ಮಾನಸ ಪುದುವೆಟ್ಟ ನಿರಾಣಿ ಮಾಲಿಕತ್ವದ ಸಮಯ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಾರಣವಿಲ್ಲದೆ ದೂರದ ಗುಲ್ಬರ್ಗಕ್ಕೆ ವರ್ಗ ಮಾಡಲಾಯಿತು. ಅವರು ಗುಲ್ಬರ್ಗಕ್ಕೆ ಹೋಗಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದರು. ಎಂಥ ವಿಚಿತ್ರ ನೋಡಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಈ ಘಟನೆಯನ್ನು ಸಕ್ರಿಯ ಪತ್ರಕರ್ತರೆಲ್ಲರೂ ತಮ್ಮ ಆತ್ಮೀಯ ವಲಯಗಳಲ್ಲಿ ಗುಸು ಗುಸು ಮಾತಾಡಿದರು. ಒಂದು ಕ್ಷಣ, ಛೆ, ಹೀಗಾಗಬಾರದಿತ್ತು ಎಂದು ನಿಟ್ಟುಸಿರು ಬಿಟ್ಟರು.  ಮುಂದಿನ ಕ್ಷಣ ಕ್ಯಾಮರಾ, ಪೆನ್ನು ಪ್ಯಾಡು ಸೇರಿದಂತೆ ಸಾಮಾನು ಸರಂಜಾಮುಗಳನ್ನು ಹೆಗಲೇರಿಸಿಕೊಂಡು ಸುದ್ದಿಗಳ ಬೇಟೆಗೆ ನಡೆದುಬಿಟ್ಟರು. ಅಲ್ಲಿಗೆ ಭರಿ ಗದ್ದಲವೆಬ್ಬಿಸಬೇಕಾದ ಸುದ್ದಿಮನೆಯದೆ ಸುದ್ದಿಯೊಂದು ಹಳತಾಗಿ ಸತ್ತು ಹೋಯಿತು. ರವಿ ಕೃಷ್ಣಾರೆಡ್ಡಿಯವರು ತಮ್ಮ ವರ್ತಮಾನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದನ್ನು ಬಿಟ್ಟರೆ ಈ ಸುದ್ದಿ ಎಲ್ಲಿಯೂ ಸುದ್ದಿ ಮಾಡಲೆ ಇಲ್ಲ.

ಇಂಥ ಘಟನೆ ಯಾವುದೊ ಒಂದು ಕಾರ್ಖಾನೆಯ ಕಾರ್ಮಿಕನ ಮೇಲೆ ನಡೆದಿದ್ದರೆ ಅದರ ಸುದ್ದಿಯೇ ಬೇರೆಯಾಗಿರುತ್ತಿತ್ತು. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದು ಮಾಲಿಕರು ಕ್ಷಮೆ ಕೋರಿ ಮತ್ತೆ ತಮ್ಮ ಆದೇಶವನ್ನು ಹಿಂಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಿತ್ತು. ಆದರೆ ದಿನನಿತ್ಯ ಅಂತಹ ಹತ್ತಾರು ತರಹದ ಪ್ರತಿಭಟನೆಗಳಿಗೆ ಹಾಜರಾಗಿ ವರದಿ ಮಾಡುವ ನಮ್ಮ ಸುದ್ದಿ ಸಂಸ್ಥೆಗಳಿಗೆ ಏನಾಗಿದೆ? ದಿನನಿತ್ಯ ಇಂತಹ ದೌಜನ್ಯಗಳನ್ನು ಸಹಿಸಿ ಮನಸ್ಸು ಜಡಗೊಂಡಿದೆಯೆ? ಇಂಥ ಘಟನೆ ದೌರ್ಜನ್ಯವೆಂದು ಅನಿಸಲೆ ಇಲ್ಲವೆ?

ಕಡೆಪಕ್ಷ ಮಾಧ್ಯಮಗಳ ಮುಖ್ಯಸ್ಥರಾದರೂ ಈ ಬಗ್ಗೆ ದ್ವನಿ ಎತ್ತಬೇಕಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಮೇಯುತ್ತ ಕುಳಿತಿರುವ ಅವರ್ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಾರು. ಯಾರೇನೇ ಹೇಳಲಿ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೋಣದ ಬಗ್ಗೆ ತಲೆಕೆಡಿಸಿಕೊಳ್ಳುವವರ ತಟ್ಟೆಯಲ್ಲಿಯೆ ಕತ್ತೆ ಸತ್ತು ಬಿದ್ದಿದೆ. ಸುದ್ದಿ ಮನೆಯ ದೋಸೆಯೂ ತೂತೆ! ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ಸದಾ ಎಚ್ಚರದ ಸ್ಥಿತಿಯಲ್ಲಿರುವುದನ್ನು ನೋಡಿಕೊಳ್ಳಬೇಕಾದ ಮಾಧ್ಯಮರಂಗವೇ ಕುಲಗೆಟ್ಟುಹೋಗಿದೆ. ಪರಿಶುದ್ಧಗೊಳಿಸಬೇಕಾದ ಗಂಗಾಜಲವೇ ಹೊಲಸುಗಬ್ಬೆದ್ದು ನಾರುತ್ತಿದೆ.

ಪತ್ರಿಕೆ ಎಂದೊಡನೆ ಬಹಳಷ್ಟು ಜನರಿಗೆ `ವಸ್ತುನಿಷ್ಟ’ಎಂಬ ಶಬ್ದ ತಟ್ಟನೆ ತಮ್ಮ ಸ್ಮತಿ ಪಟದಲ್ಲಿ ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಪತ್ರಿಕೋದ್ಯಮ ಇನ್ನು ಬೆಳೆಯುವ ಹಂತದಲ್ಲಿಯೆ ಇರುವಾಗಲೆ ಡಿವಿಜಿಯವರು ಬರೆದಿರುವ `ವೃತ್ತಪತ್ರಿಕೆ’ ಎಂಬ ಪುಸ್ತಕವನ್ನು ಓದಿದರೆ ಪತ್ರಿಕೋದ್ಯಮಕ್ಕೂ ಶಬ್ದಕ್ಕೂ ಇರುವ ನಂಟಿನ ಅರಿವಾಗುತ್ತದೆ. ಪತ್ರಿಕೆಗಳಲ್ಲಿನ ಸುದ್ದಿ ವಸ್ತುನಿಷ್ಟ ಎನ್ನುವ ಕಾರಣಕ್ಕಾಗಿಯೆ ಬಹಳಷ್ಟು ಜನರು ನೂರಕ್ಕೆ ನೂರರಷ್ಟು ನಂಬಿ ಬಿಡುತ್ತಾರೆ. ಆದರೆ ನಂಬುತ್ತಾರೆ ಎಂದು ಗೊತ್ತಿದ್ದೂ ಸುದ್ದಿಕರ್ತರು ಸುಳ್ಳು ಸುದ್ದಿ ಸೃಷ್ಟಿಸುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ.

ಪತ್ರಿಕೋಧ್ಯಮದ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ವಿಜೃಂಭಿಸುವ `ವಸ್ತುನಿಷ್ಟತೆ’ಎನ್ನುವ ಶಬ್ದ, ವಿದ್ಯಾರ್ಥಿ ಮಾದ್ಯಮರಂಗಕ್ಕೆ ಪ್ರಾಯೋಗಿಕವಾಗಿ ಇಳಿದ ನಂತರ ನಿಧಾನಕ್ಕೆ ತನ್ನ ಮರೆಯಾಗುತ್ತಾ ಹೋಗುತ್ತದೆ. ಈ ಮರೆಯಾಗಿಸುವ ಕ್ರಿಯೆಯನ್ನು ಮರಿ ಪತ್ರಕರ್ತ ತನ್ನ ಹಿರಿ ಪತ್ರಕರ್ತರಿಂದಲೆ ಕಲಿಯುತ್ತಾ ಹೋಗುತ್ತಾನೆ. ವಾಸ್ತವ ಪತ್ರಿಕೋದ್ಯಮವೇ ಬೇರೆ, ವಾಸ್ತವವೇ ಬೇರೆ ಎಂದು ಮರಿ ಪತ್ರಕರ್ತನಿಗೆ ಅನಿಸತೊಡಗುತ್ತದೆ. ವೈದ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆಯ ಬಗ್ಗೆ ಪ್ರಮಾಣ ಬೋಧಿಸುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಆ ಸಂಪ್ರದಾಯ ಪತ್ರಿಕೋದ್ಯಮ ಕಾಲೇಜುಗಳಿಗೂ ವಿಸ್ತರಣೆಯಾದಾರೆ ಒಳಿತು ಎನಿಸುತ್ತದೆ.

ಇರುವ ಸುದ್ದಿಗೂ ಮಾಧ್ಯಮಗಳಲ್ಲಿ ಬರುವ ಸುದ್ದಿಗೂ ಬಹುತೇಕ ಸಂದರ್ಭಗಳಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ವರದಿಗಾರನ ಮನೋಸ್ಥಿತಿ, ಹಿನ್ನೆಲೆ, ಪೂರ್ವಾಗ್ರಹಗಳು ಸ್ವಲ್ಪಮಟ್ಟಿಗಾದರೂ ಸುದ್ದಿ ಸಂಪಾದನೆಯಲ್ಲಿ ತಮ್ಮ ಮೂಗನ್ನು ತೂರಿಸಿಯೇ ಬಿಟ್ಟಿರುತ್ತವೆ. ಕೆಲವು ಸಂದರ್ಭದಲ್ಲಿ ವಸ್ತುನಿಷ್ಟತೆ ಸಂಪೂರ್ಣವಾಗಿ ತಿರುಚಲ್ಪಟ್ಟರೂ ಅಡ್ಡಿಯಿಲ್ಲ.

ವರದಿಗಾರ, ಹಿರಿಯ ವರದಿಗಾರ, ಸುದ್ದಿ ಸಂಪಾದಕ-ಸಂಪಾದಕನ ಮೂಲಕ ಹಾದು ಹೋಗುವ ಸುದ್ದಿಗಳು ಪ್ರತಿ ಹಂತದಲ್ಲಿಯೂ ಬದಲಾಗುತ್ತಾ ಹೋಗುತ್ತವೆ. ಕೆಲವೊಮ್ಮೆ ಆಯಾ ಸುದ್ದಿಗಳ ಮೇಲೆ, ಪತ್ರಿಕೆಯ ದೇಯೋದ್ದೇಶ, ಪತ್ರಿಕೆಯ ಮಾಲಿಕನ ಮರ್ಜಿ, ಪ್ರಸರಣ ವಿಭಗ, ಜಾಹಿರಾತು ವಿಭಾಗಗಳು ಪ್ರಭಾವ ಬೀರುತ್ತವೆ. ಈ ಎಲ್ಲ ಹಾದಿಗಳಲ್ಲಿ ಹಾದು ಬಂದ ಮೇಲೆ ಅಳಿದುಳಿದ ಸುದ್ದಿ ಕೆಲವೊಮ್ಮೆ ಸಣ್ಣದಾಗಿ ನಕಾರಾತ್ಮಕಾವಾಗಿಯೂ, ಹಲವೊಮ್ಮೆ ದೊಡ್ಡದಾಗಿ ಸಕಾರಾತ್ಮಕವಾಗಿಯೂ ಪ್ರಕಟನೆಯ ಹಂತಕ್ಕೆ ಬರುತ್ತದೆ. ಅದನ್ನು ಓದುಗ ಓದುತ್ತಾನೆ ಮತ್ತು ನಂಬುತ್ತಾನೆ.

ತಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ವಾಸ್ತವಾಂಶಗಳನ್ನು ಮುಚ್ಚಿಟ್ಟು ಸುದ್ದಿಗಳನ್ನು ಮಾಲಿಕರ, ಜಾಹಿರಾತುದಾರರ, ಸಂಪಾದಕರ ಮರ್ಜಿಗಳಂತೆ (ಓದುಗರ ಮರ್ಜಿಯನ್ನು ಹೊರತು ಪಡಿಸಿ) ತಿರುಚಿ ಬರೆಯುವ ಕೆಲವಾದರೂ ಪ್ರಾಮಾಣಿಕ ಪತ್ರಕರ್ತರಿಗೆ ಒಳಗೊಳಗೆ ಬೇಸರವಿದೆ. ಈ ಬಗ್ಗೆ ಮರುಕವಿದೆ. ಇಂಥವರು ಸುದ್ದಿ ಮನೆಯಿಂದ ಸುದ್ದಿಮನೆಗೆ ಅಲೆದಾಡುತ್ತಲೆ ಇರುತ್ತಾರೆ. ಆದರೆ ಎಲ್ಲ ಸುದ್ದಿ ಮನೆಗಳ ದೊಸೆಯೂ ತೂತೆ ಎಂದು ಅರಿವಾಗುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಆದಾಗ್ಯೂ ತಮ್ಮ ಮಿತಿಯಲ್ಲಿ ಏನಾದರೂ ಮಾಡಬೇಕು ಎಂಬ ತುಡಿತಕ್ಕೆ ಮಿಡಿಯುತ್ತಲೆ ಇರುತ್ತಾರೆ. ಇಂಥ ಪ್ರಾಮಾಣಿಕ ಪತ್ರಕರ್ತರಿಗೆ ಜಾಲತಾಣಗಳು, ಬ್ಲಾಗ್‌ಗಳು ಮರುಭೂಮಿಯಲ್ಲಿ ಕಂಡ ಒಯಸಿಸ್‌ಗಳಾಗಿ ಒದಗುತ್ತಿವೆ. ಸುದ್ದಿ ಮನೆಗಳಲ್ಲಿ ಸುಳ್ಳು-ಪಳ್ಳು ಬರೆದು ಪಾಪ ಮಾಡುವ ಪತ್ರಕರ್ತರು ಜಾಲತಾಣಗಳಲ್ಲಿ ಅನಾಮಧೇಯರ ಹೆಸರಿನನಲ್ಲಿ ಸತ್ಯ ಬರೆದು ಪಾಪ ಪರಿಹಾರ ಮಾಡಿಕೊಳ್ಳುತ್ತಿದ್ದಾರೆ. ಸಂಪಾದಕೀಯ, ಕಾಲಂ 9, ವರ್ತಮಾನದಂತಹ ಕೆಲವು (ನನಗೆ ಗೊತ್ತಿರುವ) ಜಾಲತಾಣಗಳು ಮಾಧ್ಯಮರಂಗದ ಹುಳುಕುಗಳನ್ನು ಹೊರಗೆ ಹಾಕಲಿಕ್ಕೆ ಹುಟ್ಟಿಕೊಂಡಂತೆ ಕೆಲಸ ಮಾಡುತ್ತಿವೆ. ಇನ್ನು ಪತ್ರಿಕಗಳಲ್ಲಿ ತಮ್ಮ ಅಭಿರುಚಿ, ಆಸಕ್ತಿಗಳನ್ನು ತಣಿಸಿಕೊಳ್ಳಲಾಗದ ಹಲವು ಸೃಜನಶೀಲ ಪತ್ರಕರ್ತರು ತಮ್ಮದೊಂದು ಬ್ಲಾಗ್ ಸೃಷ್ಟಿಸಿ ಅವುಗಳಲ್ಲಿ ಕತೆ-ಕವಿತೆಗಳ ಶಿಲ್ಪ ಕೆತ್ತುವುದಕ್ಕೆ ಶುರು ಹಚ್ಚಿಕೊಂಡಿದ್ದಾರೆ.

ಸುದ್ದಿಮನೆ ದೊಸೆಯ ತೂತುಗಳನ್ನು ನೋಡಿ ನೋಡಿ ಬೇಸರಗೊಂಡ ಕೆಲವು ಪತ್ರಕರ್ತರು ಇಂಥದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮೂಗು ತೂರಿಸಲು ಹೋಗದೆ ಸುಮ್ಮನೆ ತಮಗೆ ವಹಿಸಿದ ಅಸೈನ್‌ಮೆಂಟ್‌ಗಳನ್ನು (ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯಂಥವು. ಪೊಲಿಟಿಕಲ್ ರಿಪೋರ್ಟರ್ಸ್ ಭಾಷೆಯಲ್ಲಿ ಹೇಳುವುದಾದರೆ ಚಿಲ್ರೆ ಪಲ್ರೆ ಅಸೈನ್‌ಮೆಂಟ್‌ಗಳು) ಮುಗಿಸಿ ರಂಗಭೂಮಿ, ಸಾಹಿತ್ಯದಂತಹ ಹವ್ಯಾಸಗಳಲ್ಲಿ ಕಳೆದುಹೋಗುತ್ತಾರೆ. ಇಂಥವರಿಗೆ ಹೊಟ್ಟೆ ಹೊರೆಯಲು ಇದೊಂದು ಉದ್ಯೋಗವಷ್ಟೆ. ಬಹುತೇಕ ನಾನು ಇಂಥವರ ಸಾಲಿಗೆ ಸೇರುತ್ತೇನೆ ಎಂದರೆ ಅಡ್ಡಿಯಿಲ್ಲ.

ಮಲ ಸುರಿದುಕೊಂಡವರಿಗೆ ಇನ್ನೂ ನೆಲೆ ಇಲ್ಲ: ಮಲ ಹೊರುವುದು ನಿಂತಿಲ್ಲ

-ಹನುಮಂತ ಹಾಲಿಗೇರಿ

ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದ ಸವಣೂರು ಪುರಸಭೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ತಲೆ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದ ಸವಣೂರಿನ ಭಂಗಿ ಸಮುದಾಯಕ್ಕೆ ಇನ್ನೂ ನೆಲೆ ಸಿಕ್ಕಿಲ್ಲ! ಮಲ ಹೊರುವ ಅನಿಷ್ಟ ಪದ್ದತಿಯೂ ನಿಂತಿಲ್ಲ.

ಮಲ ಸುರಿದುಕೊಂಡು ಒಂದು ವರ್ಷದ ಮೇಲೆ ಎರಡು ತಿಂಗಳು ಕಳೆದಿದ್ದು,  ಇಷ್ಟೊಂದು ದಿನಗಳಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ವಾರ್ತಾಭಾರತಿಯು ಭಂಗಿ ಸಮುದಾಯದ ಮಂಜುನಾಥ್ ಭಂಗಿಯವರಿಂದ ಮಾಹಿತಿ ಸಂಗ್ರಹಿಸಿತು. ಒಂದು ರೀತಿಯ ಉದಾಸೀನತೆಯಿಂದಲೆ ಮಾತಿಗಿಳಿದ ಮಂಜುನಾಥ್ ಅವರು ಪತ್ರಿಕೆಯೊಂದಿಗೆ ಮಾತಿಗಿಳಿದರು.

ಮಲ ಸುರಿದುಕೊಂಡ ವಿಷಯವು ದೇಶದಾದ್ಯಂತ ಬಿಸಿಬಿಸಿಯಾಗಿ ಸುದ್ದಿಯಾಗುತ್ತಿರುವಾಗ ಸವಣೂರು ಪುರಸಭೆಯು ನಗರದ ಹೊರಗೆ ಮನೆ ಕಟ್ಟಿಸಿ ಕೊಡುವುದಾಗಿ ಹೇಳಿತ್ತು. ಅದರಂತೆ ಜನತಾ ಮನೆಗಳನ್ನು ಕಟ್ಟಿಸಿದ್ದರೂ ಕೂಡ ಅವುಗಳ ಗೊಡೆಗಳು ಕಟ್ಟಿದ ತಿಂಗಳುಗಳಲ್ಲಿಯೆ ಬಿರುಕುಬಿಟ್ಟು ಬೀಳತೊಡಗಿದ್ದರಿಂದ ನಮ್ಮವರ್ಯಾರು ಈ ಬಿರುಕುಬಿಟ್ಟ ಮನೆಗೆ ಹೋಗಿಲ್ಲ. ಆ ಜನತಾ ಮನೆಗಳಿಗೆ ವಿದ್ಯುತ್ ದೀಪದ ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ ನಾವು ಇನ್ನು ಕೂಡ ಅದೆ ಮುರುಕಲು ಗುಡಿಸಲುಗಳಲ್ಲಿ ಕಾಲ ತಳ್ಳುತ್ತಿದ್ದೇವೆ ಎಂದು ಅವರು ಅಲವತ್ತುಕೊಂಡರು.

ಕೈ ಎತ್ತಿದ ಮುರಘಾ ಶರಣರು: `ನೀವು ಮತ್ತೆ ಮಲ ಸುರಿದುಕೊಳ್ಳುವ ಪ್ರಯತ್ನ ಮಾಡಬೇಡಿ. ನಿಮಗೆ ಮಠದ ಖರ್ಚಿನಲ್ಲಿಯೆ ಮನೆ ಕಟ್ಟಿಸಿಕೊಡಲಾಗುವುದು’ ಎಂದು ಮಾಧ್ಯಮಗಳ ಮುಂದೆ ಚಿತ್ರದುರ್ಗದ ಮುರುಘಾ ಶರಣರು ಘೋಷಿಸಿದ್ದರು. ಆದರೆ ಘೋಷಿಸಿ ವರ್ಷ ಕಳೆದಿದ್ದರೂ ಶ್ರೀಗಳು ಸವಣೂರಿನತ್ತ ತಲೆ ಹಾಕಲಿಲ್ಲ. “ಈ ಬಗ್ಗೆ ಶರಣರನ್ನೆ ಕೇಳಲು ನಾವೆಲ್ಲರೂ ಒಂದು ದಿನ ಶ್ರೀಗಳ ಮಠಕ್ಕೆ ಪಾದ ಬೆಳೆಸಿದೆವು. ಶ್ರೀಗಳನ್ನು ಕಂಡು ಅವರು ನೀಡಿದ್ದ ವಚನವನ್ನು ನೆನಪಿಸಿದೆವು. ಆದರೆ ಶ್ರೀಗಳು `ನಾನು ಕಟ್ಟಿಸಿಕೊಡುತ್ತೇನೆ ಎಂದು ಹೇಳಿರಲಿಲ್ಲ. ಸರಕಾರದಿಂದ ಕಟ್ಟಿಸಿಕೊಡುತ್ತೇನೆ’ಎಂದು ಹೇಳಿದ್ದೆ ಎಂದು ಜಾರಿಕೊಂಡರು,” ಎಂದು ಮಂಜುನಾಥ್ ಹೇಳಿದರು.

ಮಲ ಹೊರುವುದು ಇನ್ನು ನಿಂತಿಲ್ಲ: ಪುರಸಭೆ ಮಲ ಹೊರುವ ಪದ್ದತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ ಕೂಡ ಈ ಅನಿಷ್ಟ ಪದ್ದತಿ ಇನ್ನೂ ನಿಂತಿಲ್ಲ. ನಗರದ ಜನರು ತಮ್ಮ ಮನೆಗಳಲ್ಲಿನ ಶೌಚಾಲಯಗಳು ತುಂಬಿ ಬಾಯಿ ಕಟ್ಟಿದರೆ ನಮ್ಮ ಮನೆಗಳ ಹತ್ತಿರ ಬಂದು, ಹೆಚ್ಚು ಹಣದ ಆಸೆ ತೋರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಕಹಿಸತ್ಯವನ್ನು ಅವರು ಒಪ್ಪಿಕೊಂಡರು.

ಮನೆ ಕೇಳಿದರೆ ದನ ಕೊಡಿಸಿದರು: ನಾವು ಮನೆ ಕೇಳಿದರೆ ಪುರಸಭೆಯವರು ಸಾಲದ ಮೇಲೆ ನಮಗೆ ದನ, ಕುರಿ, ಮೇಕೆಗಳನ್ನು ಕೊಡಿಸಿದರು. ನಮಗೆ ಮನೆ ಇಲ್ಲದ್ದರಿಂದ ಅವುಗಳನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ನಮಗೆ ಅವುಗಳನ್ನು ಸಾಕುವ ವಿಧಾನ ಗೊತ್ತಿರಲಿಲ್ಲ. ಅವುಗಳಿಗೆ ಮೇವು ಕೂಡ ಇಲ್ಲದ್ದರಿಂದ ಅವುಗಳಲ್ಲಿ ಕೆಲವು ಸತ್ತವು. ಉಳಿದವುಗಳನ್ನು ನಾವೆ ಮಾರಿದೆವು. ಈಗ ಅವುಗಳ ಮೇಲಿನ ಸಾಲ ತೀರಿಸಿ ಎಂದು ಪುರಸಭೆ ಪೀಡಿಸುತ್ತಿದೆ ಎಂದು ಅವರು ದೂರಿದರು.

ಖಾಯಂ ಕೆಲಸ ಕೊಟ್ಟಿಲ್ಲ: ಖಾಯಂ ಕೆಲಸ ಕೊಡುತ್ತೇವೆ ಎಂದು ಸರಕಾರದ ಮಂತ್ರಿಗಳು ಹೇಳಿದ್ದರು. ಆದರೆ ಇಂದು ಗುತ್ತಿಗೆ ಆಧಾರದ ಮೇಲೆ ಕಡಿಮೆ ಸಂಬಳ ನೀಡಿ ಪೌರ ಕಾಮರ್ಿಕರಾಗಿ ದುಡಿಸಿಕೊಳ್ಳುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಈ ಬಗ್ಗೆ ಈಗ ಸರಕಾರದವರು ಮಾತನಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಸರಕಾರದ ಕಣ್ಣು ತೆರೆಯಲಿ
ಕಳೆದ ರವಿವಾರ ನಾಡಿನ ಹಿರಿಯ ಕವಿ ಎಸ್.ಜಿ.ಸಿದ್ದರಾಮಯ್ಯ ಅವರು ತಮ್ಮ ಇತ್ತೀಚಿಗಿನ `ಅರಿವು ನಾಚಿತ್ತು’ ಆಧುನಿಕ ವಚನಗಳ ಕೃತಿಯನ್ನು ಇದೆ ಸವಣೂರಿನ ಭಂಗಿ ಸಮುದಾಯದ ಮಂಜುನಾಥ್ ಅವರಿಂದ ಮಲ ಸುರಿದಕೊಂಡ  ಸ್ಥಳದಲ್ಲಿಯೆ ಬಿಡುಗಡೆ ಮಾಡಿಸಿದ್ದರು.

ಅವರು ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿ, “ಭಂಗಿ ಸಮುದಾಯದವರ ಬೇಡಿಕೆಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವರ ಬೇಡಿಕೆಗಳು ಮತ್ತೊಮ್ಮೆ ನಾಡಿನಾದ್ಯಂತ ಚರ್ಚೆಯಾಗಬೇಕು. ಆ ಮೂಲಕ ರಾಜ್ಯ ಸರಕಾರದ ಕಣ್ಣು ತೆರೆಸಬೇಕು ಎಂಬ ಉದ್ದೇಶದಿಂದ ಬೆಂಗಳೂರಿನಿಂದ ದೂರವಿರುವ ಸವಣೂರಿಗೆ ಹೋಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,” ಎಂದು ತಿಳಿಸಿದರು.

ಮೀನುಗಳ ದುರ್ವಾಸನೆಯಲ್ಲಿ ದಿನದ ಬದುಕು: ನಾವು ವಾಸಿಸುವ ಬಡಾವಣೆಯ ಮುಂದೆಯೆ ಕೆಲವರು ಹಸಿ ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಅದರ ದುರ್ವಾಸನೆಯಿಂದಾಗಿ ಹಲವಾರು ರೋಗಗಳು ನಮ್ಮ ಮನೆಯ ಹೆಣ್ಣ್ಣುಮಕ್ಕಳನ್ನು ಸದಾ ಹಾಸಿಗೆಯಲ್ಲಿಯೆ ಇರುವಂತೆಯೆ ಮಾಡುತ್ತಿದ್ದವು. ಇದು ಕೂಡ ಮಲ ಸುರಿದುಕೊಳ್ಳಲು ಕಾರಣವಾಗಿತ್ತು. ಆದರೆ ಪ್ರತಿಭಟನೆಯ ನಂತರ ಮೀನು ವ್ಯಾಪಾರವನ್ನು ಬಂದ್ ಮಾಡಿದ್ದರು. ಈಗ ಮತ್ತೆ ಮೀನು ವ್ಯಾಪಾರ ನಮ್ಮ ಗುಡಿಸಲುಗಳ ಮುಂದೆಯೆ ಪ್ರಾರಂಭವಾಗಿದೆ. ಇದರ ಬಗ್ಗೆ ಪುರಸಭೆ ಯಾವ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

ಮಲ ಸುರಿದಕೊಂಡ ಸಂದರ್ಭದಲ್ಲಿ ಇಡಿ ಆಡಳಿತ ಯಂತ್ರವೇ ಸವಣೂರಿಗೆ ಪಾದ ಬೆಳೆಸಿ ಹಲವಾರು ಭರವಸೆಗಳನ್ನು ನೀಡಿತ್ತು. ಆದರೆ ನಿಧಾನಕ್ಕೆ ಮಲ ಸುರಿದಕೊಂಡ ಸುದ್ದಿ ರದ್ದಿ ಸೇರಿದ ಮೇಲೆ ಸರಕಾರ ತಾನು ನೀಡಿದ್ದ ಭರವಸೆಯನ್ನು ಮರೆತು ನಿದ್ರೆಗೆ ಜಾರಿರುವುದು ದುರದೃಷ್ಟಕರ. ಸವಣೂರಿನ ಭಂಗಿಗಳು ರೋಸಿ ಹೋಗಿ ಮತ್ತೊಮ್ಮೆ ಮಲ ಸುರಿದುಕೊಳ್ಳುವ ಮುನ್ನವೆ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.

ಮಾನವೀಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿ
ಈ ಹಿಂದೆ ಗ್ರಾಮೀಣ ಕೃಪಾಂಕ ಯೋಜನೆಯಡಿ ನೇಮಕ ಮಾಡಿಕೊಂಡಿದ್ದ ನೌಕರರನ್ನು ಕಾನೂನು ತೊಡಕಿನಿಂದ ಮತ್ತೆ ರದ್ದುಪಡಿಸಿ ಮನೆಗೆ ಕಳುಹಿಸಲಾಗಿತ್ತು. ಆಗ ಬಹಳಷ್ಟು ನೌಕರರು ಸರಕಾರದ ನಿರ್ಧಾರದಿಂದ ರೋಸಿಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರ ಕೂಡಲೆ ಕಾರ್ಯೋನ್ಮುಖವಾಗಿ ಅಳಿದುಳಿದ ನೌಕರರನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ಮಾನವೀಯ ಆಧಾರದ ಮೇಲೆ `ಒಂದು ಸಲ ವಿಶೇಷ ನೇಮಕಾತಿ’ ಯೋಜನೆ ಅಡಿಯಲ್ಲಿ  ನೇಮಕ ಮಾಡಿಕೊಂಡಿತ್ತು. ಅದೆ ರೀತಿಯಲ್ಲಿ ಈ ಸವಣೂರಿನ ಬಂಗಿ ಸಮುದಾಯದ ಯುವಕರನ್ನು ನೇಮಕ ಮಾಡಿಕೊಳ್ಳಬೇಕಿದೆ
-ಬಿ.ಶ್ರೀನಿವಾಸ್, ಜಿಲ್ಲೆಯ ಕಥೆಗಾರರು