ನವೀನ್ ಸೂರಿಂಜೆ
ಉಡುಪಿಯಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಧರ್ಮ ಸಂಸತ್ತು ನಡೆಯುತ್ತಿದೆ. ನವೆಂಬರ್ 24, 25, 26 ರಂದು ಮೂರು ದಿನಗಳ ಕಾಲ ಹಿಂದೂ ಧರ್ಮದ ಕುರಿತು ಕಾಲಕ್ಷೇಪ ನಡೆಯಲಿದೆ. ಈ ಧರ್ಮಸಂಸತ್ತಿನಲ್ಲಿ ರಾಮ ಮಂದಿರದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ವಿಹಿಂಪ ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಾಯ್ ತೊಗಾಡಿಯಾ ಈಗಾಗಲೇ ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ರಾಮ ಮಂದಿರದ ಗೋಷ್ಠಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ಉಡುಪಿಗೂ ಸಂಬಂಧವೇ ಇಲ್ಲ. ಬಾಬರಿ ಮಸೀದಿ ಕೆಡವುದರ ಭಾಗವಾಗುವುದರ ಮೂಲಕ ರಾಮಮಂದಿರ ಪ್ರಕರಣದಲ್ಲಿ ಸಂಬಂಧ ಬೆಳೆಸಿದ್ದಾರಷ್ಟೆ. ಅದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರಿಗೂ ರಾಮ ಮಂದಿರಕ್ಕೂ ನೇರ ಸಂಬಂಧವಿದೆ. ಬಿಲ್ಲವರಿಗೆ ಮಾತ್ರವಲ್ಲ ಕರ್ನಾಟಕದ ಅಷ್ಟೂ ಬಿಲ್ಲವ ಜಾತಿಗಳು, ಉಪಜಾತಿಗಳಿಗೂ ರಾಮ ಮಂದಿರ ಮತ್ತು ಧರ್ಮ ಸಂಸತ್ತಿನ ಸಂಬಂಧವಿದೆ.
ರಾಮ ಮಂದಿರಕ್ಕಾಗಿನ ಧರ್ಮ ಸಂಸತ್ತನನ್ನು ವಿರೋಧಿಸುವುದರ ಮೂಲಕ ಬಿಲ್ಲವರು, ಈಡಿಗರು ತಮ್ಮ ಸ್ವಾಭಿಮಾನದ ರಾಮ ಮಂದಿರವನ್ನು ಮುನ್ನಲೆಗೆ ತರಬೇಕಿದೆ. ಹೊಸ ತಲೆಮಾರಿನ ಬಿಲ್ಲವ ಯುವಕರಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ.
ಈ ಧರ್ಮ ಸಂಸತ್ತಿನ ರೂವಾರಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳಾಗಿದ್ದರೆ ಆಕ್ಷೇಪವಿರಲಿಲ್ಲ. ಅವರು ಅದನ್ನು ಮಾಡಿಕೊಂಡೇ ಬಂದಿದ್ದಾರೆ. ಪೇಜಾವರ ಸ್ವಾಮೀಜಿ ಜೊತೆಗೆ ಮುಂಡಾಸುದಾರಿ ಧಾರ್ಮಿಕ ವ್ಯಕ್ತಿ ಕೂಡಾ ಧರ್ಮ ಸಂಸತ್ತಿನ ರುವಾರಿಯಾಗಿದ್ದಾರೆ. ಇದು ಬಿಲ್ಲವರ ಆತ್ಮಾಭಿಮಾನವನ್ನು ಜಾಗೃತಗೊಳಿಸಬೇಕಿದೆ.
ಅದು 1989 ನೇ ಇಸವಿ. ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಆತ್ಮಾನಂದ ಸರಸ್ವತಿ ಸ್ವಾಮೀಜಿ ಚಿಕ್ಕದಾದ ನಿತ್ಯಾನಂದ ಮಂದಿರವೊಂದನ್ನು ಪ್ರಾರಂಭಿಸುತ್ತಾರೆ. ನಾರಾಯಣ ಗುರುಗಳ ಪರಮ ಭಕ್ತರಾಗಿರುವ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ಕೇರಳದ ಶಿವಗಿರಿಯಲ್ಲಿ ಆಧ್ಯಾತ್ಮಿಕ ಪಾಂಡಿತ್ಯವನ್ನು ಪಡೆದಿದ್ದರು. ಆಗಷ್ಟೇ ಭೂಸುಧಾರಣೆಯ ಲಾಭವನ್ನು ಪಡೆಯುತ್ತಿದ್ದ ಬಿಲ್ಲವರಲ್ಲಿ ಶಿಕ್ಷಣ, ಉದ್ಯೋಗ, ಸಂಘಟನೆಯ ಜಾಗೃತಿಯನ್ನು ತನ್ನ ಪುಟ್ಟ ಆಶ್ರಮದ ಮೂಲಕ ಮಾಡುತ್ತಿದ್ದರು.
ಬಿಲ್ಲವರು ಬ್ರಾಹ್ಮಣರ ದೇವಸ್ಥಾನಗಳಿಗೆ ನಡೆದುಕೊಳ್ಳುವುದನ್ನು ಗಮನಿಸಿದ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು 2003 ರಲ್ಲಿ ಕನ್ಯಾಡಿಯಲ್ಲಿ ಬೃಹತ್ ರಾಮ ಮಂದಿರ ಕಟ್ಟಲು ಯೋಜನೆ ಸಿದ್ದಪಡಿಸುತ್ತಾರೆ. ಈ ರಾಮ ಮಂದಿರ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಿಂದ ಕೇವಲ ನಾಲ್ಕು ಕಿಮಿ ದೂರದಲ್ಲಿರುತ್ತದೆ.
ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಗಳು ವೈಭವಪೋತ ರಾಮಮಂದಿರವನ್ನು ನಿರ್ಮಿಸಲು ಯೋಜನೆ ಸಿದ್ದಪಡಿಸಿದ್ದಾರೆ ಎಂದು ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿಗೆ ತಿಳಿಯುತ್ತದೋ ಅಲ್ಲಿಂದ ಇನ್ನಿಲ್ಲದ ಅಡ್ಡಿಗಳು ಪ್ರಾರಂಭವಾಗುತ್ತವೆ. ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಬಿಲ್ಲವರ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ತಿಳಿದ ಬಿಲ್ಲವ ಸಮಾಜದ ಪ್ರಮುಖರು, ಜನಾರ್ಧನ ಪೂಜಾರಿ, ವಸಂತ ಬಂಗೇರರಂತಹ ರಾಜಕಾರಣಿಗಳು ಸ್ವಾಮೀಜಿ ಜೊತೆ ನಿಲ್ಲುತ್ತಾರೆ.
ಯಾವಾಗ ಆತ್ಮಾನಂದ ಸರಸ್ವತಿ ಸ್ವಾಮೀಜಿಯ ರಾಮ ಮಂದಿರದ ಜೊತೆ ಜನಾರ್ಧನ ಪೂಜಾರಿಯಂತಹ ರಾಜಕಾರಣಿಗಳು ನಿಂತರೋ ಆಗ ಈ ಮುಂಡಾಸುಧಾರಿಗೆ ಆತ್ಮನಂದ ಸ್ವಾಮಿಯನ್ನು ದೈಹಿಕವಾಗಿ ಅಶಕ್ತನನ್ನಾಗಿಸುವುದು ಒಂದೇ ದಾರಿಯಾಗಿ ಉಳಿದಿತ್ತು. ಇಲ್ಲದೇ ಇದ್ದರೆ ತನ್ನ ಪ್ರತಿಷ್ಠಿತ, ಪ್ರಖ್ಯಾತ ದೇವಸ್ಥಾನದ ಆದಾಯಕ್ಕೆ ಬಿಲ್ಲವರ ರಾಮ ಮಂದಿರ ಅಡ್ಡಿಯಾಗುತ್ತಿತ್ತು. ಈ ಕಾರಣಕ್ಕಾಗಿ ಮುಂಡಾಸುಧಾರಿ ಧಾರ್ಮಿಕ ವ್ಯಕ್ತಿ ಅಕ್ಷರಶ ಆತ್ಮಾನಂದ ಸರಸ್ವತಿ ಮೇಲೆ ದಾಳಿ ಮಾಡಿಸಿದರು. ಎಲ್ಲಾ ದಾಳಿಗಳ ಹೊರತಾಗಿಯೂ ಆತ್ಮಾನಂದ ಸರಸ್ವತಿ ಸ್ವಾಮೀಜಿ ದೃತಿಗೆಡಲಿಲ್ಲ. 2003 ರಲ್ಲಿ ಭವ್ಯವಾದ ಕನ್ಯಾಡಿ ರಾಮ ಮಂದಿರ ನಿರ್ಮಾಣವಾಯ್ತು. ಈಗಲೂ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲಕ್ಕೆ ಹೋಗುವ ದಾರಿಯಲ್ಲಿ ಸುಂದರವಾದ ಬಿಲ್ಲವರ ರಾಮ ಮಂದಿರ ಸಿಗುತ್ತದೆ.
ಇಂತಹ ಸಾಧಕ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬಿಲ್ಲವರು, ಈಡಿಗರ 24 ಉಪಜಾತಿಗಳು ಕುಲಗುರುವಾಗಿ ಒಪ್ಪಿಕೊಳ್ಳುತ್ತದೆ. ಕನ್ನಡ ಕುಲಕೋಟಿ ಗೌರವಿಸುವ, ಕನ್ನಡದ ಮತ್ತೊಂದು ಹೆಸರು ಎಂದು ಬಣ್ಣಿಸಲಾಗುವ ವರನಟ ಡಾ ರಾಜ್ ಕುಮಾರ್ ಕೂಡಾ ಆತ್ಮಾನಂದ ಸರಸ್ವತಿ ಸ್ವಾಮೀಜಿ ಶಿಷ್ಯರಾಗಿದ್ದರು. ಡಾ ರಾಜ್ ಕುಮಾರ್ ಈ ರಾಮಮಂದಿರಕ್ಕೆ ಅಪಾರವಾದ ಕೊಡುಗೆಗಳನ್ನೂ ಕೊಟ್ಟಿದ್ದಾರೆ.
ಬಿಲ್ಲವರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ಯಾಡಿ ರಾಮ ಮಂದಿರ ಸ್ಥಾಪನೆಗೆ ಅಡ್ಡಿಯಾಗಿದ್ದ, ಬಿಲ್ಲವರ ಗುರುವೊತ್ತಮ ಆತ್ಮಾನಂದ ಸರಸ್ವತಿ ಸ್ವಾಮೀಜಿಯನ್ನು ಬದುಕಿನುದ್ದಕ್ಕೂ ಇನ್ನಿಲ್ಲದಂತೆ ಕಾಡಿದ ವ್ಯಕ್ತಿಯ ನೇತೃತ್ವದಲ್ಲಿ ಉತ್ತರ ಪ್ರದೇಶದ ರಾಮಮಂದಿರಕ್ಕಾಗಿ ಉಡುಪಿಯಲ್ಲಿ ಧರ್ಮ ಸಂಸತ್ತು ನಡೆಯುತ್ತಿದೆ. ಉಡುಪಿ ಮಂಗಳೂರು ಬಿಲ್ಲವರು ಬಹುಸಂಖ್ಯಾತರಾಗಿರೋ ನಾಡು. ಧರ್ಮಸಂಸತ್ತಿನ ಬಹುತೇಕ ಸ್ವಯಂ ಸೇವಕರೂ ಬಿಲ್ಲವರೇ. 2003 ರಿಂದ 2017 ಬಹಳ ದೀರ್ಘ ಸಮಯವಲ್ಲ. ಶೋಷಿತ ಬಿಲ್ಲವ ಸಮುದಾಯವೊಂದು ಅಷ್ಟು ಬೇಗ ಇತಿಹಾಸವನ್ನು ಮರೆಯುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ.