Monthly Archives: April 2017

ಮುಸ್ಲೀಮ್ ಯುವ ಸಮಾವೇಶ ಇಂದಿನ ತುರ್ತು ಅಗತ್ಯ

Naveen Soorinje


ನವೀನ್ ಸೂರಿಂಜೆ


 

ಕೋಮುವಾದದಿಂದ ಜರ್ಜರಿತವಾಗಿರುವ ಮಂಗಳೂರಿನಲ್ಲಿ ಡಿವೈಎಫ್ ಐ ಎಡ ಯುವ ಸಂಘಟನೆ ಮುಸ್ಲಿಂ ಯುವ ಸಮಾವೇಶdyfi-1 ಹಮ್ಮಿಕೊಂಡಿದೆ. ಈ ಸಮಾವೇಶದ ಬಗ್ಗೆ ಹಿರಿಯ ಚಿಂತಕರು ಪತ್ರಕರ್ತರು ಸೇರಿದಂತೆ ಹಲವರು ಪ್ರತಿಯಿಸಿದ್ದಾರೆ. ”ಕಮ್ಯೂನಿಷ್ಟರು ಮುಸ್ಲಿಂ ಸಮಾವೇಶ ಮಾಡುವುದು ಕುತೂಹಲಕರ. ಆದರೆ ಮುಂದೆ ಹಿಂದೂ ಸಮಾವೇಶ, ಕ್ರಿಶ್ಚಿಯನ್ ಸಮಾವೇಶಗಳನ್ನೂ ಮಾಡುವರೇ ಎನ್ನುವುದು ಪ್ರಶ್ನೆ. ಹಾಗೆ ಮಾಡುವುದಿದ್ದರೆ, ಅದರ ಬದಲು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ವಿರಾಟ್ ಸಮಾವೇಶ ಮಾಡುವುದು ಒಳ್ಳೆಯದಲ್ಲವೇ ?” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಪ್ರಗತಿಪರ ಚಿಂತನೆಗಳು ಮತ್ತು ಗುಂಪುಗಳು ತಳ, ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಸಂಘಟಿಸುವುದು ಆಯಾ ಸಮುದಾಯಗಳ ಸಬಲೀಕರಣ ಮತ್ತು ಅವರನ್ನು ಶೋಷಕ ಶಕ್ತಿಗಳ ಪಿತೂರಿಯಿಂದ ರಕ್ಷಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಇಲ್ಲಿ ಶೋಷಿತ ಸಮುದಾಯಗಳ ಸಂಘಟನೆಗೆ ಎರಡು ಬಗೆಯ ಆಯಾಮಗಳಿವೆ. ಮೊದಲನೆಯದ್ದು ಅಂತಹ ವರ್ಗಗಳನ್ನು ಅವರು ಜೀವಿಸುತ್ತಿರುವ ಪ್ರತಿಕೂಲ ವಾತವರಣದಲ್ಲಿ ಯಜಮಾನ್ಯ ಮತ್ತು ಶೋಷಕ ಶಕ್ತಿಗಳ ದಾಳಿಯಿಂದ ರಕ್ಷಿಸುವುದು. ಎರಡನೆಯದ್ದು ಆಯಾ ಸಮುದಾಯದೊಳಗೇ ಇರತಕ್ಕಂತಹ ಅನಾಚಾರಗಳನ್ನು, ಅಸಮತೆಗಳನ್ನು ತೊಡೆದು ಹಾಕುವಂತಹ ಸುಧಾರಣಾವಾದಿ ಚಳುವಳಿಯನ್ನು ಮುನ್ನಡೆಸುವುದು.

ನಮ್ಮ ದೇಶ ಬಹುಸಂಖ್ಯಾತ ಪ್ರಭಾವಿ ಸಮಾಜೋ ರಾಜಕೀಯ ಚೌಕಟ್ಟನ್ನು ಹೊಂದಿದೆ. ಇಲ್ಲಿನ ಸಾರ್ವಜನಿಕ ಬದುಕಿನಲ್ಲಿ ಕೂಡಾ ಬಹುಸಂಖ್ಯಾಕ ಹಿಂದೂ ಕಟ್ಟಳೆಗಳು,RSS ಪರಂಪರೆಗಳು ಸಹಜವೆಂಬತೆ ಆಚರಿಸಲ್ಪಡುತ್ತವೆ. ರಾಜ್ಯದ ಪ್ರಾಯೋಜಕತ್ವದಲ್ಲೇ ಹಿಂದೂ ಹಬ್ಬ-ಮೇಳಗಳು ಇಲ್ಲಿಯ ನೆಲದ ಪರಂಪರೆ ಎಂಬ ನೆಪದಲ್ಲಿ ನಡೆಯುತ್ತವೆ. ಇವೆಲ್ಲದರ ಜೊತೆಗೆ ದೇಶದಲ್ಲಿ ಪ್ರತಿಗಾಮಿ ಹಿಂದೂ ಸಾಂಸ್ಕೃತಿಕ ಯಾಜಮಾನ್ಯವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ; ಜೀವನದ ಪ್ರತೀ ಕ್ಷೇತ್ರವನ್ನೂ ವ್ಯಾಪಿಸುತ್ತಿದೆ. ಸಾರ್ವಜನಿಕ ಬದುಕನ್ನು ಪೂರ್ತಿಯಾಗಿ ಹಿಂದೂವನ್ನಾಗಿಸುವ ಪ್ರಯತ್ನದಲ್ಲಿ ಅದು ನಿರತವಾಗಿದೆ. ಆಹಾರದಂತಹ ತೀರಾ ಖಾಸಾಗಿ ವಿಷಯದಲ್ಲೂ ತನ್ನ ನಿಯಂತ್ರಣವನ್ನು ಸಾಧಿಸಲು ಹೊರಟಿದೆ.

ಇಂತಹ ಬಹುಸಂಖ್ಯಾತ ನಿಷ್ಠ ವಾತಾವರಣದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವಕ್ಕೆ ಹಲವು ಆತಂಕಗಳು ಎದುರಾಗುತ್ತವೆ. ಭಾರತದ ಪ್ರಧಾನ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲೀಮರು ಅಂತಹ ಹತ್ತು ಹಲವು ಆತಂಕಗಳನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಿದ್ದಾರೆ. ಸದ್ಯದ ಹಿಂದುತ್ವವಾದಿ ಶಕ್ತಿಗಳ ಆಡಳಿತದಲ್ಲಿ ಅವರ ಅಸ್ತಿತ್ವವೇ ಪ್ರಶ್ನೆಯಲ್ಲಿದೆ. ಮುಸ್ಲೀಮ್ ಕ್ರೈಸ್ತ ಮೊದಲಾದ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ, ಮೊಟುಕುಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಇಂತಹ ವಿಷಮ ಸನ್ನಿವೇಶದಲ್ಲಿ ಮುಸ್ಲೀಮ್ ಸಮುದಾಯವನ್ನು ಸಂಘಟಿಸುವುದು ಅವರನ್ನು ಹಿಂದುತ್ವವಾದಿ ಶಕ್ತಿಗಳ ದಾಳಿಯಿಂದ ಕಾಪಾಡುವ ಹಾಗೂ ಅವರ ಸಂವಿಧಾನಬದ್ಧ ಹಕ್ಕುಗಳನ್ನು ಪ್ರತಿಷ್ಠಾಪಿಸುವ ದೃಷ್ಟಿಯಿಂದ ಅತ್ಯಗತ್ಯ. ಸಂಘಟನೆಯು ಶೋಷಿತ ಸಮುದಾಯಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅಂತಹ ಸಂಘಟನಾತ್ಮಕ ಹೋರಾಟಗಳು ಪ್ರತಿಕೂಲ ಪರಿಸರದಲ್ಲೂ ಘನತೆಯಿಂದ ಬದುಕುವ ಹಕ್ಕನ್ನು ಅವರಿಗೆ ದಕ್ಕಿಸಿಕೊಡುತ್ತವೆ.

ಇಲ್ಲಿ ಇನ್ನೊಂದು ವಿಚಾರ ಬಹಳ ಮುಖ್ಯ. ಮುಸ್ಲೀಮರ ಪರವಾದ ಹೋರಾಟ ಮತ್ತು ಮುಸ್ಲೀಮರನ್ನು ಒಳಗೊಳ್ಳುವುದು ಎಂದರೆ ಮುಸ್ಲಿಂ ಮೂಲಭೂತವಾದಿmuslims460 ಮತ್ತು ಕೋಮುವಾದಿ ಸಂಘಟನೆಗಳನ್ನು ತಮ್ಮ ಹೋರಾಟದ ಸಹಭಾಗಿಯನ್ನಾಗಿಸುವುದಲ್ಲ. ಅಂತಹ ತಪ್ಪನ್ನು ನಮ್ಮ ಹಲವು ಪ್ರಗತಿಪರ ಸಂಘಟನೆಗಳು ಮಾಡುತ್ತಿವೆ. ಮೂಲಭೂತವಾದೀ ಸಂಘಟನೆಗಳ ಸಾಹಚರ್ಯ ಆಯಾ ಸಮುದಾಯದೊಳಗೇ ಸುಧಾರಣೆಗಳನ್ನು ತರುವ ಪ್ರಯತ್ನಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಹಿಂದೂಗಳೆಂದರೆ ಭಜರಂಗದಳ, ವಿ.ಎಚ್.ಪಿ, ಆರ್.ಎಸ್.ಎಸ್ ಹೇಗೆ ಅಲ್ಲವೋ, ಮುಸ್ಲೀಮರೆಂದರೆ ಮುಸ್ಲಿಂ ಕೋಮುವಾದಿ ಸಂಘಟನೆಗಳಲ್ಲ ಎಂಬುದು ಇನ್ನೂ ಕೂಡಾ ಕೆಲ ಎಡ ಚಿಂತಕರಿಗೆ ಮನದಟ್ಟಾಗಿಲ್ಲ. ಒಂದೆಡೆ ಹಿಂದೂ ಕೋಮುವಾದದ ಭೀಕರತೆ, ಮತ್ತೊಂದೆಡೆ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಂ ಕೋಮುವಾದ ತಂದೊಡ್ಡಿರುವ ಆತಂಕಗಳು; ಇವೆರಡರ ಮಧ್ಯೆ ಹಿಂದೂ ಕೋಮುವಾದದ ಅತಿರೇಕವನ್ನು ಮುಸ್ಲಿಂ ಮೂಲಭೂತವಾದಿ-ಕೋಮುವಾದಿಗಳ ವೇದಿಕೆಯಲ್ಲಿ ನಿಂತು ಖಂಡಿಸಿ ಮಾತನಾಡುವ ಎಡಚಿಂತಕರು. ಇಂತಹ ವಿಪರ್ಯಾಸಗಳ ಮಧ್ಯೆ ಮಂಗಳೂರಿನಲ್ಲಿ ಡಿವೈಎಫ್ಐ ”ಮುಸ್ಲಿಂ ಯುವ ಸಮಾವೇಶ” ಹಮ್ಮಿಕೊಂಡಿರುವಂತದ್ದು ಸರಿಯಾದ ನಡೆಯೇ ಆಗಿದೆ.

ಹಿಂದೂ ಸಂಘಟನೆಗಳ ಕೋಮುವಾದದ ಅತಿರೇಕಗಳನ್ನು ಮುಸ್ಲಿಂ ಯುವ ಜನರ ಮುಂದಿಟ್ಟು ಮುಸ್ಲಿಂ ಮತಾಂಧ ಸಂಘಟನೆಗಳನ್ನು ಬೆಳೆಸಲಾಗುತ್ತಿದೆ. ಈ ಮತಾಂಧ ಸಂಘಟನೆಗಳಲ್ಲಿ ಇರುವ ಕೆಲ ಯುವಕರ ಕುಕೃತ್ಯದಿಂದಾಗಿ ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡಲಾಗುತ್ತಿದೆ. ಈ ಅನುಮಾನದ ಭಾಗವಾಗಿಯೇ ಪೊಲೀಸ್ ದೌರ್ಜನ್ಯಗಳು, ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿದೆ. ಈ ರೀತಿ ಮುಸ್ಲಿಮರ ಹಕ್ಕುಗಳ ಮೇಲೆ ದಾಳಿಯಾದ ಸಂದರ್ಭದಲ್ಲಿ ಮುಸ್ಲಿಂ ಯುವ ಸಮುದಾಯದ ಹೋರಾಟದ ದಾರಿ ಯಾವುದಿರಬೇಕು ಎಂದು ಚಿಂತಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮಾವೇಶಗಳ ಅಗತ್ಯ ಇದೆ.

ಮುಸ್ಲಿಂ ಸಮಾವೇಶ ಮಾತ್ರವಲ್ಲದೆ ಹಿಂದೂ ಸಮಾವೇಶವನ್ನು ಎಡಪಂಥೀಯರು ಆಯೋಜಿಸುತ್ತಾರೆಯೇ ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಪ್ರಶ್ನಿಸುತ್ತಾರೆ. narayana-guruಹಿಂದೂ ಎಂಬುದು ಶೋಷಿತರನ್ನು, ದಲಿತರನ್ನು ಪ್ರತಿನಿಧಿಸುವುದಿಲ್ಲ. ಹಿಂದೂ ಸಾಮಾಜಿಕ ಸಂರಚನೆಯಲ್ಲಿ, ಚಲನೆಯಲ್ಲಿ ಹಿಂದುಳಿದ ವರ್ಗಗಳು ಬಳಕೆಯಾಗುತ್ತಿರುವುದು ಕೇವಲ ಮೇಲ್ವರ್ಗದ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವ ಪಿತೂರಿಯಲ್ಲಿ ಕಾಲಾಳುಗಳಾಗಿಯಷ್ಟೇ. ಕರಾವಳಿಯ ಸಂದರ್ಭದಲ್ಲಿ ಹೇಳುವುದಾದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಕಪಿಮುಷ್ಟಿಯಿಂದ ತಳವರ್ಗಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಜೀವಪರ ಪ್ರಗತಿಪರ ಸಮುದಾಯಗಳು ದಲಿತರು, ಬಿಲ್ಲವರು, ಮೊಗವೀರರು, ಕುಲಾಲರು, ಕೊರಗರು, ಆದಿವಾಸಿಗಳ ಪ್ರತ್ಯೇಕ ಪ್ರತ್ಯೇಕ ಸಮಾವೇಶಗಳನ್ನು ಮಾಡಬೇಕಿದೆ. ನಾರಾಯಣ ಗುರು, ಕೋಡ್ದಬ್ಬು, ತನ್ನಿಮಾನಿಗ, ಸಿರಿಯನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳ ಸ್ಥಾನಮಾನ, ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದೆ. ಹಿಂದುಳಿದ ಸಮುದಾಯಗಳ ಯುವಕರು ಹೇಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅವರಿಗೆ ತಿಳಿ ಹೇಳಬೇಕಾಗಿದೆ. ಕರಾವಳಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಸಂಘಟಿಸಲು ಹೊರಟ ಎಡಪಂಥೀಯರು, ಅವಿಭಜಿತ ಜಿಲ್ಲೆಯಲ್ಲಿ ಅದರಷ್ಟೇ ಅನಿವಾರ್ಯತೆ ಇರುವ, ಹಿಂದುಳಿದ ಜಾತಿಗಳನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್.ಎಸ್.ಎಸ್ ಮತ್ತು ಹಿಂದುತ್ವಕ್ಕೆ ನಾರಾಯಣ ಗುರುಗಳ ಸುಧಾರಣಾವಾದಿ ಚಳುವಳಿಗಿಂತ ಬೇರೆ ಉತ್ತರವೇ ಬೇಕಿಲ್ಲ. ನಾರಾಯಣ ಗುರುಗಳ ಐಡಿಯಾಲಜಿಯ ಆಧಾರದಲ್ಲಿ ಬಿಲ್ಲವರು ಮತ್ತು ಇತರೆ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿದಲ್ಲಿ ಕರಾವಳಿಯ ಕೋಮುವಾದಿ ವಾತಾವರಣದಲ್ಲೂ ಹಲವು ಪೂರಕ ಬೆಳವಣಿಗೆಗಳು ಕಂಡುಬರುತ್ತವೆ. ಯಾಕೆಂದರೆ ಆರ್.ಎಸ್.ಎಸ್.ನ ಹಿಂದುತ್ವವಾದಿ ವ್ಯವಸ್ಥೆಯ ಅನುಷ್ಠಾನಕ್ಕೆ ಕಾಲಾಳುಗಳಾಗಿ ಬಳಕೆಯಾಗುತ್ತಿರುವುದು ಇದೇ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಬಡ ಯುವಕರು. ಅವರನ್ನು ಸಂಘಟಿಸುವ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವನ್ನು ಎಡಪಕ್ಷಗಳು ಮಾಡಬೇಕಾಗಿದೆ. ಮತ್ತೊಂದೆಡೆ ಆರ್.ಎಸ್.ಎಸ್ ಗೆ ಆರ್.ಎಸ್.ಎಸ್ ಮಾದರಿಯಲ್ಲೇ ಪ್ರತಿಕ್ರೀಯೆ ನೀಡುತ್ತಿರುವ ಮುಸ್ಲಿಂ ಮತಾಂಧ ಸಂಘಟನೆಗಳಿಗೆ ಅನಕ್ಷರಸ್ಥ ಬಡ ಮುಸ್ಲೀಮರು ಕಾಲಾಳುಗಳಾಗುವುದನ್ನು ತಪ್ಪಿಸಿದಲ್ಲಿ ಮುಸ್ಲಿಂ ಯುವಕರು ಜೈಲು ಸೇರುವುದನ್ನೂ, ಸಾಯುವುದನ್ನೂ ತಪ್ಪಿಸಬಹುದಾಗಿದೆ. ಆರ್.ಎಸ್.ಎಸ್ ಕೋಮುವಾದಕ್ಕೆ ಇಸ್ಲಾಂ ಕೋಮುವಾದದ ಮೂಲಕ ಉತ್ತರ ಕೊಡದೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಕ್ರೀಯೆ ನೀಡುವ ನಿಟ್ಟಿನಲ್ಲಿ ಮುಸ್ಲಿಂ ಯುವ ಸಮಾವೇಶಗಳನ್ನು ಆಯೋಜಿಸಲು ಎಡ ಯುವ ಸಂಘಟನೆಗಳು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

 

 

ಕಲ್ಯಾಣ ಕರ್ನಾಟಕದಲ್ಲೊಂದು ಜ್ಞಾನ ದಾಸೋಹ

-ಶ್ರೀಧರ ಪ್ರಭು

ಈಗಿನ ದಿನಮಾನದಲ್ಲಿ ಒಂದೊಳ್ಳೆ ಮೌಲಿಕ ಕಾರ್ಯಕ್ರಮ ಸಂಘಟಿಸುವುದಕ್ಕಿಂತ ಹೆಚ್ಚು ಕಷ್ಟದ ಕೆಲಸ ಇನ್ನೊಂದಿಲ್ಲ. ನೂರು ಜನ ಬರಬಹುದು ಎಂದುಕೊಂಡ ಕಡೆ ಇಪ್ಪತ್ತು ಜನ ಬಂದಿರುತ್ತಾರೆ. ಸರಕಾರದ ಕಾರ್ಯಕ್ರಮವಾಗಿದ್ದರಂತೂ ಹೆಚ್ಚಿನ ಜನ ಬರುವುದು ಪ್ರಯಾಣ ಭತ್ಯೆಗಾಗಿ. ಒಂದು ಬಾರಿ ಹೆಸರು ನೋಂದಾಯಿಸಿ ಹೋದವರು ಗೋಷ್ಠಿಗಳ ಕಡೆಗೆ ತಲೆಯಿಟ್ಟೂ ಮಲಗುವುದಿಲ್ಲ. ಇನ್ನು ಈ ಗೋಷ್ಠಿಗಳು ಬಿಸಿಲು ನಾಡಿನಲ್ಲಿದ್ದರಂತೂ ಯಾವ ನರಪಿಳ್ಳೆಯೂ ಇತ್ತ ಸುಳಿಯುವುದಿಲ್ಲ.

ಇದೆಲ್ಲ ನನಗೆನಿಸಿದ್ದು ಮೊನ್ನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿಯ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ೮ ಮತ್ತು ೯ ನೇ ತಾರೀಕು ಬಾಬಾ ಸಾಹೇಬರ ವಿಚಾರಗಳ ಕುರಿತು ಎರಡು ದಿನಗಳ ವಿಚಾರ ಗೋಷ್ಠಿಗೆ ನನ್ನನ್ನು ಆಹ್ವಾನಿಸಿದಾಗ.

ಹೆಚ್ಚೆಂದರೆ ಹತ್ತಿಪ್ಪತ್ತು ಜನ ಕಾಟಾಚಾರಕ್ಕೆಂದು ಸೇರಿರುತ್ತಾರೆ. ಆದರೂ ಅವರ ಉತ್ಸಾಹಕ್ಕೆ ಭಂಗ ಬರಬಾರದು ಎಂದುಕೊಂಡು ಸ್ವಲ್ಪ ಮಟ್ಟಿನ ಅನಾರೋಗ್ಯವನ್ನೂ ಕಡೆಗಣಿಸಿ ರಣ ಬಿಸಿಲಿನ ಹೆದರಿಕೆಯನ್ನೂ ಮೆಟ್ಟಿನಿಂತು ಜೇವರ್ಗಿಗೆ ಬಂದಿಳಿದಿದ್ದೆ.

ಜೇವರ್ಗಿಯ ಯುವ ಪ್ರಾಧ್ಯಾಪಕರಾದ ಡಾ. ಕರಿಗುಳೇಶ್ವರ ಮತ್ತು ಅಲ್ಲಿನ ಗ್ರಂಥಾಲಯದ ವಿಜ್ಞಾನದ ಮುಖ್ಯಸ್ಥರಾದ ವಿನೋದ್ ಕುಮಾರ್ ಮತ್ತಿತರರ ಯುವಜನರ ತಂಡ ಜೇವರ್ಗಿಯಲ್ಲಿ ವಿಚಾರ ಸಂಕಿರಣವನ್ನು ನಿಜವಾಗಲೂ ರಾಷ್ಟ್ರ ಮಟ್ಟಕ್ಕೇರಿಸಿದ್ದರು. ಪ್ರತಿನಿಧಿಗಳ ಪ್ರಯಾಣ ವ್ಯವಸ್ಥೆ, ಊಟ, ಉಪಚಾರ, ವಸತಿsridhar prabhuಯಿಂದ ಮೊದಲ್ಗೊಂಡು ವಿಷಯ ಮಂಡನೆಯವರೆಗೆ ಯಾವ ವಿಚಾರದಲ್ಲಿ ಪರಿಗಣಿಸಿದರೂ ಇದನ್ನೊಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣವೆಂದು ಖಚಿತವಾಗಿ ಹೇಳಬಹುದಿತ್ತು.

ಎರಡು ದಿನ ಮುಂಚಿತವಾಗಿ ಸ್ವಯಂ ಚಾಲಿತ ಎಸ್ ಎಂ ಎಸ್ ಅಲರ್ಟ್ ವ್ಯವಸ್ಥೆ ಮಾಡಲಾಗಿ ಎಲ್ಲರಿಗೂ ಏಕ ಕಾಲಕ್ಕೆ ಸಂಕಿರಣದ ವೇಳಾಪಟ್ಟಿ ಲಭ್ಯವಿತ್ತು. ಹಾಗೆಯೆ, ಒಂದು ವೆಬ್ಸೈಟಿಗೆ ಸಹ ಚಾಲನೆ ನೀಡಿ ಆನ್ಲೈನ್ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಪ್ರಿಂಟರ್, ಪ್ರೊಜೆಕ್ಟರ್ ಮತ್ತು ಧ್ವನಿಮುದ್ರಕ ವ್ಯವಸ್ಥೆ ಜೊತೆಗೆ ವಾತಾನುಕೂಲ ಪಂಖೆಗಳು ನಮ್ಮ ಸ್ವಾಗತಕ್ಕೆ ಕಾದಿದ್ದವು. ಪ್ರಮುಖವಾಗಿ, ಯಾವ ಗೋಷ್ಠಿಯೂ ಸಮಯವನ್ನು ಮೀರಲಿಲ್ಲ. ಎಲ್ಲಾ ಗೋಷ್ಠಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪಾಲ್ಗೊಂಡು ಪ್ರಬಂಧ ಮಂಡಿಸಿದರು.

ಪ್ರಬಂಧಮಂಡನೆಯಿಂದ ಮೊದಲ್ಗೊಂಡು ಇಡೀ ವಿಚಾರಗೋಷ್ಠಿಯನ್ನು ಆಂಗ್ಲಭಾಷೆಯಲ್ಲೇ ನಡೆಸಿಕೊಡಲಾಗಿತ್ತು. ನನ್ನಂಥವರು ಕೆಲವರು ಕನ್ನಡದಲ್ಲಿ ಮಾತಾಡಿದ್ದು ಬಿಟ್ಟರೆ ಹೈದರಾಬಾದ್ ಕರ್ನಾಟಕ ಹಳ್ಳಿಗಾಡಿನಿಂದ ಬಂದ ಬಹುತೇಕ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸುಲಲಿತ ಇಂಗ್ಲಿಷ್ ಭಾಷೆಯಲ್ಲೇ ಪ್ರಬಂಧ ಮಂಡಿಸಿದರು. ನಾನಿಲ್ಲಿ ಹೇಳಿದ್ದು ಕೇವಲ ೩೦-೪೦% ವಿಚಾರಗಳನ್ನು ಮಾತ್ರ. ಹೆಚ್ಚಿನದನ್ನೂ ನಾನೇ ಕಣ್ಣಾರೆ ನೋಡಿದ್ದೆನಾದರೂ ನಂಬಿಸಿಕೊಳ್ಳಲು ನನಗೇ ಸಾಧ್ಯವಾಗುತ್ತಿಲ್ಲ! ಹೆಚ್ಚು ಹೇಳಲು ಹೋದರೆ ನೀವು ಉತ್ಪ್ರೇಕ್ಷೆಯೆಂದುಕೊಂಡು ಬಿಡುವ ಸಂಭವವಿದೆ!

ಜೇವರ್ಗಿಯ ಜನಸಂಖ್ಯೆ ಹೆಚ್ಚೆಂದರೆ ಇಪ್ಪತ್ತೈದು ಸಾವಿರವಿರಬಹುದು. ಇಲ್ಲಿನ ಈ ಸರಕಾರಿ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಕಾಲೇಜಿನ ಅತ್ಯುನ್ನತ ಗುಣಮಟ್ಟದಿಂದಾಗಿ ಇಲ್ಲಿ ಯಾವುದೇ ಖಾಸಗಿ ಕಾಲೇಜು ಸಹ ನಡೆಯುತ್ತಿಲ್ಲ. ಯಾರೂ ಖಾಸಗಿ ಕಾಲೇಜುಗಳತ್ತ ಮೂಸಿಯೂ ನೋಡುತ್ತಿಲ್ಲ. ಅತ್ಯಂತ ಕಡಿಮೆ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನಿಟ್ಟುಕೊಂಡು ಕಾಲೇಜು ನಡೆಸುತ್ತಿರುವ ಪ್ರಾಚಾರ್ಯರು ಸಿಬ್ಬಂದಿಗೆ ಎಲ್ಲ ರೀತಿಯ ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ. ಸಿಬ್ಬಂದಿಯಲ್ಲಿ ಈರ್ಷೆ ಮತ್ತು ಕೀಳು ಭಾವನೆಗಳಿಲ್ಲ. ಎಲ್ಲರೂ ಒಂದು ತಂಡವಾಗಿ ಕೆಲಸಮಾಡುತ್ತಿದ್ದಾರೆ. ಬಾಬಾ ಸಾಹೇಬರ ಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿ ಮತ್ತು ಧರ್ಮಗಳವರು ಆಸಕ್ತಿಯಿಂದ ಪಾಲ್ಗೊಂಡು ದುಡಿಯುತ್ತಿದ್ದಾರೆ

ಹೈದರಾಬಾದ್ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಮಿಯನ್ ಆದಿತ್ಯ ಬಿಸ್ವಾಸ್ ಸಾಕಷ್ಟು ಆರ್ಥಿಕ ಸಹಕಾರ ನೀಡಿದ್ದಾರೆ ಮತ್ತು ಸ್ಥಳೀಯ ಮುಖಂಡರು ಊಟದ ವ್ಯವಸ್ಥೆಯನ್ನೂ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲವಕ್ಕೂ ಹೆಚ್ಚಾಗಿ ಅಲ್ಲಿನ ವಿದ್ಯಾರ್ಥಿಗಳು ಹಗಲಿರುಳೂ ದುಡಿದು ವಿಚಾರ ಸಂಕಿರಣಕ್ಕೆ ಅದ್ಭುತ ಯಶಸ್ಸು ದೊರಕಿಸಿದ್ದಾರೆ.

ಇದೆಲ್ಲವನ್ನೂ ನೋಡಿದರೆ ಕಲ್ಯಾಣ ಕರ್ನಾಟದ ಕನಸು ಇಲ್ಲಿಂದಲೇ ನಿಜವಾಗುವಂತೆ ಭಾಸವಾಗುತ್ತದೆ!

ಅಂದ ಹಾಗೆ ನಿಮಗೊಂದು ವಿಶೇಷ ಗೊತ್ತಿರಲಿ. ಕಲಬುರಗಿ ಮತ್ತು ಜೇವರ್ಗಿಯ ದಾರಿಯಲ್ಲಿರುವ ಕಿರಣಗಿ ಎಂಬ ಪುಟ್ಟ ಗ್ರಾಮದ ಬಗ್ಗೆ ೧೯೬೨ ರಲ್ಲಿ ನಮ್ಮ ದೇಶದ ಮೇಲೆ ಚೀನಾ ಅಕ್ರಮಣವಾದಾಗ ನಿಜಲಿಂಗಪ್ಪನವರ ಸರಕಾರದಲ್ಲಿದ್ದ ಯುವ ಸಚಿವ ವೀರೇಂದ್ರ ಪಾಟೀಲರು ಈ ಗ್ರಾಮಕ್ಕೆ ಭೇಟಿಯಿತ್ತು ದೇಶಕ್ಕೆ ಸಹಾಯ ಮಾಡುವಂತೆ ಗ್ರಾಮಸ್ಥರನ್ನು ಕೋರಿದಾಗ, ಈ ಗ್ರಾಮದ ಪ್ರತಿಯೊಬ್ಬರೂ ತಮ್ಮ ಬಳಿಯಲ್ಲಿದ್ದ ಚಿನ್ನವೆಲ್ಲವನ್ನೂ ದೇಶಕ್ಕೆ ಧಾರೆಯೆರೆದು ಕೊಟ್ಟಿದ್ದರು!! ಹೀಗೆ ಈ ಒಂದೇ ಗ್ರಾಮದಿಂದ ನೂರು ತೊಲ ಬಂಗಾರವನ್ನು ದೇಶಕ್ಕಾಗಿ ನೀಡಿದ ಕೀರ್ತಿಗಾಗಿ ಕಿರಣಗಿಯನ್ನು ಅಂದಿನಿಂದ ಹೊನ್ನ ಕಿರಣಗಿ ಎಂದು ಕರೆಯಲಾಗುತ್ತದೆ!

ಅಣ್ಣ ಬಸವಣ್ಣನ ಅನುಭವ ಮಂಟಪದ ಖನಿ, ಬಂದೇನವಾಜರ ಕಾರುಣ್ಯದ ಬೀಡು, ವಿಜ್ಞಾನೇಶ್ವರನ ಜ್ಞಾನಸ್ಥಾನ, ಅಮೋಘವರ್ಷರ ವೈಭವದ ನಾಡು ಇನ್ನೆಷ್ಟು ಅದ್ಭುತಗಳನ್ನು ತನ್ನ ಗರ್ಭದಲ್ಲಿಟ್ಟು ಸಲಹುತ್ತಿದೆಯೋ ಬಲ್ಲವರ್ಯಾರು!!

ಬಡ್ತಿ ಮೀಸಲಾತಿಯಿಂದ ಒಬಿಸಿಗಳಿಗೆ ಅನ್ಯಾಯವಾಗಿದೆಯೇ?


-ಶ್ರೀಧರ ಪ್ರಭು


 

ಮೊದಲೇ ವಿಚಾರವೆಂದರೆ, ಒಬಿಸಿಗಳೆಂದರೆ ಯಾರು ಎಂಬುದೇ ಅನೇಕರಿಗೆ, ಅದರಲ್ಲೂ ಒಬಿಸಿಗಳಿಗೆ ಗೊತ್ತಿಲ್ಲ. ಒಬಿಸಿ ಪಟ್ಟಿಯಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಕೋಲಿ ಸಮಾಜ, ಧಾರ್ಮಿಕ ಅಲ್ಪಸಂಖ್ಯಾತರು, ತಿಗಳರು, ನೇಕಾರರು, ಉಪ್ಪಾರರು, ದೇವಾಂಗರು, ಕುಂಬಾರರು, ಪತ್ತಾರರು, ವಿಶ್ವಕರ್ಮ ಹಾಗೂ ಇನ್ನಿತರ ನೂರಾರು ಜಾತಿಗಳು ಸೇರಿವೆ. ಇವರೆಲ್ಲರ ಜನಸಂಖ್ಯೆ ಒಟ್ಟು ಜನಸಂಖ್ಯೆಯ ಸುಮಾರು ೫೫% ರಷ್ಟಿದೆ.

ಇಂದು ಪರಿಶಿಷ್ಟರಿಗೆ ಬಡ್ತಿ ಮೀಸಲಾತಿ ಕಲ್ಪಿಸಿದ್ದನ್ನು ಬಹುಸಂಖ್ಯಾತ ಒಬಿಸಿಗಳಿಗಾದ ಅನ್ಯಾಯವೆಂಬಂತೆ ಬಿಂಬಿಸಲಾಗುತ್ತಿದೆ. ೧೮% ಬಡ್ತಿ ಮೀಸಲಾತಿ ಪಡೆದ ಪರಿಶಿಷ್ಟರು ೮೨ ಜನ ಅಲ್ಪಸಂಖ್ಯಾತ ಮತ್ತು ಒಬಿಸಿಗಳ ವಿರುದ್ಧವಾಗಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗ ಬಂದಿರುವ ತೀರ್ಪಿನಿಂದಾಗಿ ಈ ಅನ್ಯಾಯ ಸರಿಪಡಿಸಿದಂತಾಗಿದೆ ಎಂದು ಅನೇಕರು ಪ್ರಚಾರಮಾಡುತ್ತಿದ್ದಾರೆ.

ನಿಜವಾಗಿ ನೋಡಿದರೆ, ಒಬಿಸಿಗಳಿಗೆ ಅನ್ಯಾಯವಾಗಿದ್ದು ನಿಜ. ಆದರೆ, ಈ ಅನ್ಯಾಯಕ್ಕೆ ಪರಿಶಿಷ್ಟರು ಕಾರಣವಲ್ಲ. ನ್ಯಾಯಾಲಯದ ತೀರ್ಪಿನ ಅಂಶಗಳನ್ನು, ಅದರಲ್ಲೂ ಇಂದ್ರ ಸಹನಿ ತೀರ್ಪಿನ ಅಂಶಗಳನ್ನು ಸರಿಪಡಿಸದೇ ೧೯೯೨ ರಿಂದಲೂ ಈ ದೇಶವನ್ನಾಳಿದ ಸರ್ಕಾರಗಳು ಒಬಿಸಿಗಳಿಗೆ ಮೋಸ ಮಾಡಿವೆ.

೧೬ ನವೆಂಬರ್ ೧೯೯೨ ರಲ್ಲಿ ಬಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಇಂದ್ರಾ ಸಹನಿ ತೀರ್ಪಿನಲ್ಲಿ ಮಂಡಲ್ ವರದಿ ಜಾರಿಗೊಳಿಸಿದ್ದನ್ನು ಎತ್ತಿಹಿಡಿಯಲಾಯಿತಾದರೂ, ಪರಿಶಿಷ್ಟರಿಗೆ ಯಾವುದೇ ಕಾರಣಕ್ಕೂ ಬಡ್ತಿಯಲ್ಲಿ ಮೀಸಲಾತಿ ಕೊಡಬಾರದು ಎಂದು ತೀರ್ಮಾನಿಸಲಾಯಿತು. ಹಾಗೆಯೇ, ಈ ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿಗಳಿಗೆ) ಕೆನೆಪದರನ್ನು ಅನ್ವಯಿಸಬೇಕು ಮತ್ತು ಬಡ್ತಿಯಲ್ಲಿ ಮೀಸಲಾತಿ ಕೊಡಲೇಬಾರದು ಎಂದೂ ತೀರ್ಮಾನಿಸಲಾಯಿತು. ದುರದೃಷ್ಟವಶಾತ್ ಇಂದ್ರಾ ಸಾಹ್ನಿ ತೀರ್ಪನ್ನು ಒಬಿಸಿಗಳು ಸರಿಯಾಗ ಅರ್ಥೈಸಲೇಯಿಲ್ಲ. ಈ ಜಾಗೃತಿ ಮೂಡದಿರುವ ಕಾರಣದಿಂದ ಅಳುವ ಮನುವಾದಿ ಸರ್ಕಾರಗಳಿಗೆ ಹಾಲುಕುಡಿದಷ್ಟು ಸಂತೋಷವಾಯಿತು.

ಈ ತೀರ್ಪಿನಲ್ಲಾದ ಅನ್ಯಾಯವನ್ನು ಪರಿಶಿಷ್ಟರ ಮಟ್ಟಿಗೆ ಸರಿಪಡಿಸಲು ೨೦೧೧ ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ೧೬ (೪) (ಎ) ಪರಿಚ್ಛೇದವನ್ನು ಸೇರಿಸಲಾಯಿತು. ಈ ಪರಿಚ್ಛೇದದ ಪ್ರಕಾರ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಅನುವುಮಾಡಿಕೊಡಲಾಯಿತು. ಆದರೆ, ಹಿಂದುಳಿದ ವರ್ಗಗಳಿಗಾದ ಅನ್ಯಾಯವನ್ನು ಸರಿಪಡಿಸಲಲಿಲ್ಲ. ಕೆನೆಪದರು ನಿಯಮ ಹಾಗೆಯೇ ಉಳಿಯಿತು. ಬಡ್ತಿಯಲ್ಲಿ ಮೀಸಲಾತಿ ಸಹ ಸಿಗಲಿಲ್ಲ. ಈ ಹಂತದಲ್ಲಿ ಎಲ್ಲಾ ಪಕ್ಷಗಳು ಒಬಿಸಿಗಳಿಗೆ ನ್ಯಾಯ ಒದಗಿಸಬೇಕಿತ್ತು. ದುರದೃಷ್ಟವಶಾತ್ ಹೀಗಾಗಲಿಲ್ಲ. ಇನ್ನು ಒಬಿಸಿಗಳಂತೂ ತಮ್ಮದೇ ಪರವಾಗಿದ್ದ ಮಂಡಲ್ ವರದಿಯ ವಿರುದ್ಧ ಬಸ್ಸುಗಳಿಗೆ ಕಲ್ಲು ತೂರುವುದರಲ್ಲಿ, ಮಸೀದಿ ಬೀಳಿಸುವುದರಲ್ಲಿ ಖುಷಿ ಕಂಡುಕೊಂಡಿದ್ದರು. ಈ ಕಲ್ಲುಗಳು ತಮ್ಮ ಭವಿಷ್ಯದ ಸೌಧಕ್ಕೆ ಬೀಳುತ್ತಿವೆ ಎಂದು ಒಬಿಸಿಗಳು ಅಂದಿಗೂ, ಬಹಳಷ್ಟು ಮಟ್ಟಿಗೆ ಇಂದಿಗೂ ಗ್ರಹಿಸಲಾಗಿಲ್ಲ.

ಪರಿಶಿಷ್ಟರು ಎಚ್ಚೆತ್ತುಕೊಂಡ ಕಾರಣದಿಂದ, ಸಂವಿಧಾನಕ್ಕೆ ಮೇಲ್ಕಂಡ ತಿದ್ದುಪಡಿ ತಂದಿದ್ದು ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿ, ೨೦೦೨ ರಲ್ಲಿ ಬಡ್ತಿ ಮೀಸಲಾತಿ ಕಲ್ಪಿಸುವ ಕಾಯಿದೆಗಳನ್ನೂ ಆಯಾ ರಾಜ್ಯಗಳಲ್ಲಿ ಜಾರಿಮಾಡಲಾಯಿತು. ಈಗ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಆಯಾ ರಾಜ್ಯಗಳ ಕಾಯಿದೆಗಳನ್ನು ಅಸಿಂಧುವೆಂದು ಘೋಷಿಸಿದೆ. ಆದರೆ, ಕಾಯಿದೆಯಲ್ಲಿನ ಲೋಪದೋಷಗಳನ್ನು ಪರಿಹರಿಸಿದರೆ, ಹಾಗೆಯೇ. ಪ್ರಮುಖವಾಗಿ ಹಿಂದೆ ರಾಜ್ಯಸಭೆಯಲ್ಲಿ ಪಾಸಾಗಿ ಈಗ ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ೧೧೭ ನೇ ತಿದ್ದುಪಡಿ ವಿಧೇಯಕವನ್ನು ಪಾಸುಮಾಡಿಸಿದರೆ ಪರಿಶಿಷ್ಟರ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ಒಬಿಸಿಗಳ ಸಮಸ್ಯೆ ಹಾಗೆಯೇ ಉಳಿಯುತ್ತದೆ.

ಒಬಿಸಿಗಳಿಗೆ ಎರಡು ರೀತಿಗಳಲ್ಲಿ ಅನ್ಯಾಯವಾಗಿದೆ. ಮೊದಲೇ ಅನ್ಯಾಯವೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯನ್ನು ಮಾತ್ರ ಪರಿಗಣಿಸದೇ ಆರ್ಥಿಕ ಮಾನದಂಡಗಳನ್ನು ಮುಂದೆ ಮಾಡಿ ಕೆನೆಪದರನ್ನು ತಂದದ್ದು. ಎರಡನೇ ಅನ್ಯಾಯ, ಪ್ರಾತಿನಿಧ್ಯವನ್ನು ಬಡ್ತಿಗೆ ವಿಸ್ತರಿಸದೇ ಮೊಟಕುಗೊಳಿಸಿದ್ದು. ಇವೆರಡೂ ಅಂಶಗಳು ಈಗಲೂ ಜಾರಿಯಲ್ಲಿರುವುದಕ್ಕೆ ಕಾರಣವೆಂದರೆ ಮನುವಾದಿ ಸರ್ಕಾರಗಳು ಇಂದ್ರ ಸಹನಿ ತೀರ್ಪನ್ನು ಸರಿಪಡಿಸದೇ ಹೋಗಿದ್ದು. ಒಬಿಸಿಗಳನ್ನು ಸೇರಿಸಿ ಪಡೆಕಟ್ಟಿ ರಾಜಕೀಯಕ್ಕೆ ಬಳಸಿಕೊಂಡ ಸಂಘ ಪರಿವಾರ ಇಂದು ಒಬಿಸಿ ಗಳಿಗಾದ ಈ ಅನ್ಯಾಯವನ್ನು ಏಕೆ ಸರಿಪಡಿಸಬಾರದು? ಕಾಂಗ್ರೆಸ್ ಸರ್ಕಾರ ಒಬಿಸಿಗಳಿಗೆ ಮೋಸ ಮಾಡಿದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿ ಒಬಿಸಿಗಳಿಗೆ ಏನು ಮಾಡಿದೆ? ಮಂಡಲ್ ವರದಿಯನ್ನು ವಿರೋಧಿಸಿದ ಬಿಜೆಪಿ ಒಬಿಸಿಗಳ ಮೊದಲ ಶತ್ರು. ಮಂಡಲ್ ವರದಿ ಜಾರಿ ಮಾಡಿದ ನರಸಿಂಹ ರಾವ್ ಸರ್ಕಾರ ಸಹ ಇಂದ್ರಾ ಸಹನಿ ತೀರ್ಪಿನ ಲೋಪದೋಷಗಳನ್ನು ಸರಿಪಡಿಸಲಿಲ್ಲ. ಹೋಗಲಿ, ವಾಜಪೇಯಿ ಸರ್ಕಾರ ಏನು ಮಾಡಿದೆ? ಇಂದಿನ ಮೋದಿ ಸರ್ಕಾರ ಏಕೆ ಸುಮ್ಮನಿದೆ?

ಈಗ ಒಬಿಸಿಗಳು ಏನು ಮಾಡಬೇಕು?

ಮೊದಲನೇದ್ದಾಗಿ, ಪರಿಶಿಷ್ಟರಿಗೆ ಬಡ್ತಿಯಲ್ಲಿ ಸಿಗುತ್ತಿರುವ ಮೀಸಲಾತಿಯ ಪ್ರಮಾಣ ೧೮% ಮಾತ್ರ. ಒಬಿಸಿಗಳ ಜನಸಂಖ್ಯಾ ಅನುಪಾತದಲ್ಲಿ ಉಳಿದ ಹುದ್ದೆಗಳಿಗೆ ತಮಗೂ ಪ್ರಾತಿನಿಧ್ಯ ಸಿಗಬೇಕೆಂದು ಒಬಿಸಿಗಳು ಆಗ್ರಹಿಸಬೇಕಿದೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ. ೧೧೭ ನೇ ವಿಧೇಯಕದ ಮಾದರಿಯಲ್ಲೇ ಒಬಿಸಿಗಳಿಗೂ ಪ್ರಾತಿನಿಧ್ಯ ಕಲ್ಪಿಸುವ ವಿಧೇಯಕವನ್ನು ಜಾರಿ ಮಾಡಲು ಒಬಿಸಿಗಳು ಒತ್ತಾಯಿಸಬೇಕಿದೆ. ಇದರಲ್ಲಿ ರಾಜ್ಯಸರ್ಕಾರದ್ದೇನೂ ಪಾತ್ರವಿಲ್ಲ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಹೀಗಾಗಿ, ಇಂದ್ರಾ ಸಹನಿ ತೀರ್ಪಿನಲ್ಲಾದ ಅನ್ಯಾಯವನ್ನು ಈಗಲಾದರೂ ಸರಿಪಡಿಸಬೇಕಾದರೆ, ಒಬಿಸಿಗಳು ಸಂವಿಧಾನ ತಿದ್ದುಪಡಿ ಮಾಡಿ ತಮಗೂ ಬಡ್ತಿ ಮೀಸಲಾತಿಯನ್ನು ಕಲ್ಪಿಸಬೇಕೆಂದು ಒತ್ತಾಯಿಸಬೇಕಿದೆ. ಹೀಗೆ ಮಾಡಿದರೆ, ಸಹಜವಾಗಿ ಪರಿಶಿಷ್ಟರ ಬೆಂಬಲವೂ ಒಬಿಸಿಗಳಿಗೆ ದೊರೆಯುತ್ತದೆ. ನಿಜವಾಗಿ ನೋಡಿದರೆ, ಮೇಲ್ದರ್ಜೆಯ ಹುದ್ದೆಗಳಲ್ಲಿ ಒಬಿಸಿಗಳ ಪ್ರಾತಿನಿಧ್ಯ ಅವರ ಜನಸಂಖ್ಯಾ ಪ್ರಮಾಣದಷ್ಟಿಲ್ಲ. ಅದನ್ನು ಆಗ್ರಹಿಸುವುದು ಬಿಟ್ಟು ಸಾಮಾನ್ಯ ವರ್ಗದವರೊಂದಿಗೆ ಸೇರಿಕೊಂಡರೆ, ಒಬಿಸಿಗಳಿಗೆ ಏನೂ ಪ್ರಯೋಜನವಿಲ್ಲ. ಬಹುಜನರ ಒಗ್ಗಟ್ಟು ಮುರಿದುಹೋದರೆ ಎಲ್ಲರ ಪ್ರತಿನಿಧ್ಯವೂ ಒಟ್ಟಿಗೇ ಕೊನೆಗೊಳ್ಳುತ್ತದೆ.

ಈಗ ಬಂದಿರುವ ಬಿ ಕೆ ಪವಿತ್ರ ಪ್ರಕರಣದಲ್ಲಿ ಪರಿಶಿಷ್ಟರು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂಬುದಕ್ಕೆ ಯಾವುದೇ ಪ್ರಮಾಣವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಹಾಗೆಯೇ, ಪ್ರಾತಿನಿಧ್ಯ ಕಲ್ಪಿಸುವುದರಿಂದ ಕಾರ್ಯದಕ್ಷತೆಗೆ ಹಾನಿ ಎನ್ನಲಾಗಿದೆ. ಪ್ರಾತಿನಿಧ್ಯ ಕಲ್ಪಿಸಿದರೆ ಕಾರ್ಯದಕ್ಷತೆಯೇ ಪ್ರಧಾನ ಎಂಬ ಸಂವಿಧಾನದ ೩೩೫ ನೇ ಪರಿಚ್ಛೇದಕ್ಕೆ ಅಪಚಾರವಾಗುತ್ತದೆ ಎನ್ನಲಾಗಿದೆ.

ಈ ಅಂಶವನ್ನು ಸರಿಪಡಿಸಲೆಂದೇ, ೧೧೭ ನೇ ತಿದ್ದುಪಡಿ ವಿಧೇಯಕವನ್ನು ಜಾರಿಗೊಳಿಸಬೇಕಿದೆ. ಈ ವಿಧೇಯಕದಲ್ಲಿ, ಸಂವಿಧಾನದ ಪಟ್ಟಿಯಲ್ಲಿ ಸೇರಿರುವ ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಪರಿಗಣಿಸಲೇಬೇಕು ಮತ್ತು ಇದರಿಂದ ೩೩೫ ನೇ ಪರಿಚ್ಛೇದಕ್ಕೆ ಏನೂ ಹಾನಿಯಿಲ್ಲ ಎಂದು ಹೇಳಲಾಗಿದೆ. ಇದೇ ರೀತಿಯ ಕಾನೂನನ್ನು ಒಬಿಸಿಗಳಿಗೂ ಜಾರಿಮಾಡದಿದ್ದರೆ, ಮುಂದಿನ ದಿನಗಳಲ್ಲಿ ಒಬಿಸಿಗಳಿಗೆ ಯಾವುದೇ ಮೀಸಲಾತಿ ಸಿಗದೇ ಹೋಗಬಹುದು.

ಆದ ಕಾರಣ, ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ಬೆಂಬಲಿಸಬೇಕು; ಹಾಗೆಯೇ, ತಮಗೂ ತಮ್ಮ ಜನಸಂಖ್ಯೆಯಷ್ಟು ಪ್ರಾತಿನಿಧ್ಯ ಸಿಗಲಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.

ಪರಿಶಿಷ್ಟರ ಜನಸಂಖ್ಯೆ ಖಂಡಿತವಾಗಲೂ ೧೮% ಗಿಂತ ಜಾಸ್ತಿಯಿದೆ. ಹಾಗಿದ್ದರೂ, ಪರಿಶಿಷ್ಟರು ೧೮% ಪ್ರಾತಿನಿಧ್ಯಕ್ಕಾಗಿ ಮಾತ್ರ ಹೋರಾಡುತ್ತಿದ್ದಾರೆ. ಇಷ್ಟು ಹಕ್ಕು ಅವರಿಗೆ ಸಂವಿಧಾನಬದ್ಧವಾಗಿಯೇ ಸಿಕ್ಕಿದೆ. ಆದರೆ. ಒಬಿಸಿಗಳಿಗೆ ತಮ್ಮ ಜನಸಂಖ್ಯೆಯಷ್ಟು ಹೋಗಲಿ.. ಏನೊಂದು ಪ್ರತಿನಿಧ್ಯವೂ ಸಿಕ್ಕಿಲ್ಲ. ಇದನ್ನು ಒಬಿಸಿಗಳು ಮನಗಂಡೇಯಿಲ್ಲ.

ಒಬಿಸಿಗಳ ಈ ಹೋರಾಟಕ್ಕೆ ಖಂಡಿತವಾಗಲೂ ಪರಿಶಿಷ್ಠರ ಬೆಂಬಲ ದೊರಕುತ್ತದೆ. ಒಂದು ವೇಳೆ ಒಬಿಸಿಗಳು ಪರಿಶಿಷ್ಟರ ೧೮% ಪ್ರಾತಿನಿಧ್ಯವನ್ನು ವಿರೋಧಿಸಿದರೆ, ಏನೂ ಸಾಧಿಸಿದಂತಾಗುವುದಿಲ್ಲ. ಕೊನೆಗೆ ಒಬಿಸಿ ಗಳಿಗೂ ಸೇರಿದಂತೆ ಯಾರಿಗೂ ಪ್ರಾತಿನಿಧ್ಯ ಸಿಗುವುದಿಲ್ಲ. ಆದ್ದರಿಂದ ಒಬಿಸಿ ಗಳು ೧೮% ಪ್ರಾತಿನಿಧ್ಯ ವಿರೋಧಿ ಹೋರಾಟವನ್ನು ಕೈಬಿಟ್ಟು, ತಮ್ಮ ಜನಸಂಖ್ಯಾ ಪ್ರಮಾಣದಷ್ಟು ಪ್ರಾತಿನಿಧ್ಯಕ್ಕಾಗಿ, ಪರಿಶಿಷ್ಟರೊಡನೆ ಕೈಜೋಡಿಸಿ ಐಕ್ಯ ಹೋರಾಟ ಕಟ್ಟಬೇಕಿದೆ.

ದೇಶದ ೮೫% ರಷ್ಟು ಬಹುಜನರ ಭವಿಷ್ಯ ೮೫% ರಷ್ಟು ಬಹುಜನರ ಒಗ್ಗಟ್ಟಿನಲ್ಲಿದೆ. ಈ ಒಗ್ಗಟ್ಟನ್ನು ಮುರಿದರೆ, ೮೫% ಜನರು ಒಟ್ಟಿಗೇ ಮುಳುಗುತ್ತಾರೆ. ಒಗ್ಗಟ್ಟಿದ್ದರೆ ಎಲ್ಲರೂ ಒಟ್ಟಿಗೇ ದಡಸೇರುತ್ತಾರೆ.

ಬಹುಜನರ ಐಕ್ಯತೆ ಚಿರಾಯುವಾಗಲಿ!