Daily Archives: August 14, 2018

ನಾಗರ ಹುತ್ತದಲ್ಲಿ ವೈದಿಕರು !

ನಾಗಾರಾಧನೆ ಎಂಬ ಕಿರುಸಂಸ್ಕೃತಿಯ ತುರ್ತು ರಕ್ಷಣೆ ಮುಂದಾಗಬೇಕಿದೆ ತುಳುವರು!

                                                                                                                            – ನವೀನ್ ಸೂರಿಂಜೆ

ಕರಾವಳಿಯಲ್ಲಿ ನಡೆಯುವ ನಾಗರಪಂಚಮಿಗೂ, ಕರ್ನಾಟಕದ ಇತರ ಭಾಗದಲ್ಲಿ ನಡೆಯುವ ನಾಗರಪಂಚಮಿಗೂ ಅಜಗಜಾಂತರ ವ್ಯತ್ಯಾಸವಿದೆ. ಕರಾವಳಿಯಲ್ಲಿ ನಾಗನ ಕಲ್ಲನ್ನು ಬ್ರಾಹ್ಮಣರು ಹೊರತುಪಡಿಸಿ ಉಳಿದವರು ಮುಟ್ಟುವಂತೆಯೇ ಇಲ್ಲ. ಉಳಿದ ಜಾತಿಗಳವರು ಕೊಡುವ ಪೂಜಾ ಸಾಮಾಗ್ರಿಗಳಿಂದ ಬ್ರಾಹ್ಮಣರಷ್ಟೇ ಪೂಜೆ ಮಾಡಬೇಕು. ಕರಾವಳಿ ಹೊರತುಪಡಿಸಿದ ಕಡೆಯೆಲ್ಲಾ ನೇರವಾಗಿ ಯಾವುದೇ ಜಾತಿಗಳವರು ನಾಗಕಲ್ಲನ್ನು ಮುಟ್ಟಿ ನೇರವಾಗಿ ಪೂಜೆ ಮಾಡಬಹುದು. ವಾಸ್ತವವಾಗಿ ಈ ನಾಗನಿಗೂ ವೈದಿಕರಿಗೂ ಸಂಬಂಧವೇ ಇಲ್ಲ. ಮದ್ವಾಚಾರ್ಯರು, ಶಂಕರಾಚಾರ್ಯರ ಪ್ರಭಾವದಿಂದಾಗಿ ಶೂದ್ರರ ನಾಗರಾಧನೆಯ ಸಂಸ್ಕೃತಿಯನ್ನೇ ದರೋಡೆ ಮಾಡಲಾಯಿತು.

ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ನಾಗ ಅಥವಾ ಸರ್ಪನಿಗೆ ಪಂಚಮಿಯಾಗಲೀ, ನಾಗಮಂಡಲವಾಗಲೀ, ಅಶ್ಲೇಷ ಬಲಿಯಾಗಲೀ ಕೊಡುವ ಕ್ರಮವೇ ಇರಲಿಲ್ಲ. ಕರಾವಳಿಯಲ್ಲಿ ನಾಗಬೆಮ್ಮೆರು ಹಿಂದೂಗಳ ಮೂಲ ದೈವ. ಭೂತಾರಾಧನೆಯ ರೀತಿಯಲ್ಲೇ ನಾಗಾರಾಧನೆಯನ್ನು ದಲಿತರು ಶೂದ್ರರು ಮಾಡುತ್ತಿದ್ದರು. ಭೂತಾರಾಧನೆಯಲ್ಲಿ ವೈದಿಕ ಧರ್ಮ ನುಸುಳಲು ಇನ್ನೂ ಪ್ರಯತ್ನಿಸುತ್ತಿದೆಯಾದರೆ, ನಾಗಾರಾಧನೆಯನ್ನು ಭಾಗಶಃ ಆಕ್ರಮಿಸಿಕೊಂಡಿದೆ. ಅಲ್ಪ ಸ್ವಲ್ಪ ಉಳಿದಿರುವ ನಾಗಾರಾಧನೆಯ ಮೂಲ ಸಂಸ್ಕೃತಿಯನ್ನು ಉಳಿಸುವುದು ಕರಾವಳಿಗರ ಜವಾಬ್ದಾರಿಯಾಗಿದೆ.

ಮಂಜೇಶ್ವರ ಭಾಗದಲ್ಲಿ ಈಗಲೂ ನಾಗಾರಾಧನೆಯೆಂದರೆ ದೈವರಾಧನೆಯ ರೀತಿಯದ್ದೇ ಆದ ಸರ್ಪ ಕೋಲ. ಮಾರ್ಚ್ ತಿಂಗಳ ವೇಳೆಯಲ್ಲಿ ಕರಾವಳಿಯಲ್ಲಿ ಭೂತ ಕೋಲ ನಡೆಯುವಂತೆ ಸರ್ಪಕೋಲ ನಡೆಯುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸರ್ಪಕೋಲ ಸಂಪೂರ್ಣ ನಶಿಸಿ ಹೋಗಿ ವೈದಿಕರ ಪೂಜಾವಿಧಾನಗಳು ಜಾರಿಯಲ್ಲಿದ್ದರೆ ಮಂಜೇಶ್ವರ ಭಾಗದಲ್ಲಿ ಇನ್ನೂ ಸರ್ಪಕೋಲ ಉಳಿದುಕೊಂಡಿದೆ. ಈ ಸರ್ಪಕೋಲವನ್ನು ಅಳಿವಿನಂಚಿನಲ್ಲಿರುವ ಸೂಕ್ಷ್ಮ ಕಿರು ಸಂಸ್ಕೃತಿ ಎಂದು ಘೋಷಿಸಿ ರಕ್ಷಿಸುವ ಕೆಲಸವನ್ನು ಮಾಡಬೇಕಿದೆ.

ಮಂಜೇಶ್ವರದ ಐಸ್ರಾಳ ಗುತ್ತು ನಾಗಬನ ಸೇರಿದಂತೆ ಕೆಲವೆಡೆಯಷ್ಟೇ ಈಗಲೂ ಸರ್ಪಕೋಲ ನಡೆಯುತ್ತಿದೆ. ನಲಿಕೆ ಜನಾಂಗದ ನಾಗನ ಪಾತ್ರಧಾರಿ ಸರ್ಪ ದೈವವನ್ನು ಮೈಮೇಲೆ ಅವಾಹಿಸಿಕೊಳ್ಳುತ್ತಾರೆ. ಸರ್ಪಕೋಲದಲ್ಲಿ ಇಬ್ಬರು ಪಾತ್ರಧಾರಿಗಳು ಇರುತ್ತಾರೆ. ಒಬ್ಬರು ಪಾತ್ರಧಾರಿ ಮತ್ತೊಬ್ಬರು ಮಂತ್ರವಾದಿ ಪಾತ್ರಧಾರಿ. ಸರ್ಪದೈವವನ್ನು ತನ್ನ ಮೈಮೇಲೆ ಆವಾಹಿಸಿಕೊಳ್ಳುವ ಪಾತ್ರಧಾರಿ ಅಡಕೆಯ ಹಾಳೆಯಲ್ಲಿ ರಚಿಸಿದ ಸರ್ಪದಹೆಡೆಯ ಮುಖವಾಡವನ್ನು ಹಲ್ಲಲ್ಲಿ ಕಚ್ಚಿಕೊಂಡು ಧರಿಸಿರುತ್ತಾನೆ. ಹಾವಿನಂತೆ ತೆವಲುತ್ತಾ, ಮಲಗುತ್ತಾ ನಿಧಾನಕ್ಕೆ ಸಂಚರಿಸುವ ಸರ್ಪ ಪಾತ್ರಧಾರಿಗೆ ಎಲೆಗಳನ್ನು ಎರಚುವ ಮೂಲಕ ಮಂತ್ರವಾದಿ ಕೋಪಗೊಳಿಸುತ್ತಾನೆ. ಇದೇ ರೀತಿ ಕೋಲಪೂರ್ತಿ ಸರ್ಪವನ್ನು ಸುಸ್ತುಗೊಳಿಸಿ ಮಂತ್ರಧಾರಿಯವ ವಶಪಡಿಸಿಕೊಳ್ಳುತ್ತಾನೆ. ಅಲ್ಲಿಗೆ ಊರಿಗೆ, ನಾಡಿನ ಜನರಿಗೆ ಅಥವಾ ಸರ್ಪಕೋಲ ನಡೆಸುವ ಕುಟುಂಬಕ್ಕೆ ಅಂಟಿದ ಸರ್ಪ ಕಂಟಕಗಳು ಪರಿಹಾರವಾಯ್ತು ಎಂದರ್ಥ.

ದಲಿತ ಸಮುದಾಯಗಳೇ ಪಾತ್ರಿಗಳಾಗಿ ನಡೆಸುತ್ತಿದ್ದ ಸರ್ಪಕೋಲವು ನಂತರದ ದಿನಗಳಲ್ಲಿ ಶೂದ್ರ, ದಲಿತರ ಉಳಿದ ಕಿರುಸಂಸ್ಕೃತಿಗಳ ರೀತಿಯಲ್ಲೇ ವೈದಿಕೀಕರಣಗೊಂಡಿತು. ಬ್ರಾಹ್ಮಣರ ವೈದ್ಯ ಎನ್ನುವ ಸಮುದಾಯ ಕರಾವಳಿಯಲ್ಲಿ ಈಗ ನಾಗಪಾತ್ರಿಯಾಗಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಡೆಯುವ ನಾಗಮಂಡಲದ ಗುತ್ತಿಗೆಯನ್ನು ಇದೇ ನಾಗಪಾತ್ರಿಗಳು ತೆಗೆದುಕೊಳ್ಳುತ್ತಾರೆ. ಹೂ ಮತ್ತು ಹಣ್ಣುಗಳಿಂದ ಅಲಂಕೃತವಾದ ವೇದಿಕೆಯಲ್ಲಿ ಹತ್ತಾರು ಕ್ವಿಂಟಾಲ್ ಅಡಿಕೆ ಮರದ ಹೂವನ್ನು (ಪಿಂಗಾರ) ಬಳಕೆ ಮಾಡಿಕೊಂಡು ನಾಗನೃತ್ಯ ಮಾಡಲಾಗುತ್ತದೆ. ಇದು ಸರ್ಪಕೋಲದ ನಕಲು. ದಲಿತ ನಲಿಕೆ ಸಮುದಾಯದವರು ಮಾಡುವ ಸರ್ಪಕೋಲ ಬರಿಯ ಗದ್ದೆಯಲ್ಲಿ ಅಡಕೆ ಹಾಳೆಯಲ್ಲಿ ಮುಗಿದರೆ ಬ್ರಾಹ್ಮಣರು ನಡೆಸುವ ನಾಗಮಂಡಲಕ್ಕೆ ಕೋಟಿಕೋಟಿ ಸುರಿಯಲಾಗುತ್ತದೆ. ತುಳುನಾಡಿನ ಬುಡಕಟ್ಟುಗಳಾಗಿರುವ ದಲಿತರು, ಬಂಟರು, ಬಿಲ್ಲವರು ಮತ್ತಿತರ ಶೂದ್ರ ಜಾತಿಗಳು ದೇವರನ್ನು ನಂಬುತ್ತಿರಲಿಲ್ಲ. ಭೂತಗಳನ್ನು ಮಾತ್ರ ಆರಾಧಿಸುತ್ತಿದ್ದರು. ನಾಗ ಬಿರ್ಮೆರು ಇಲ್ಲಿನ ಮೂಲ ದೈವವಾಗಿತ್ತು. ಈಗ ಬಂಟರು ಬಿಲ್ಲವರು ಮುಂಬೈ ಮತ್ತು ವಿದೇಶದಲ್ಲಿ ಸಂಪಾದಿಸಿ ಹಣವನ್ನು ವೈದಿಕರ ನಾಗಮಂಡಲಕ್ಕೆ ವ್ಯಯ ಮಾಡುತ್ತಿದ್ದಾರೆ. ಸರ್ಪಕೋಲವನ್ನು ಮರೆತೇ ಬಿಟ್ಟಿದ್ದಾರೆ.

ನಾಗರ ಪಂಚಮಿಯಂದು ನಾಗನ ಕಲ್ಲಿಗೆ ಹಾಲು ಹುಯ್ಯುವ ಸಂಪ್ರದಾಯ ತುಳುನಾಡಿನ ಬುಡಕಟ್ಟಿನಲ್ಲಿ ಇರಲಿಲ್ಲ. ದೈವಗಳಿಗೆ ಹೇಗೆ ಹೂ ನೀರು ಇಡಲಾಗುತ್ತದೋ ಅದನ್ನೇ ನಾಗ ಬಿರ್ಮೆರೆ ಗುಡಿಗೂ ಮಾಡಲಾಗುತ್ತಿತ್ತು. ಈಗಲೂ ಹಲವು ನಾಗಬಿರ್ಮೆರೆ ಗುಡಿಯಲ್ಲಿ ನಾಗನನ್ನು ದೈವದ ರೀತಿಯಲ್ಲೇ ಆರಾಧನೆ ಮಾಡಲಾಗುತ್ತಿದೆ.

ಬಹುಶಃ ಶಂಕರಾಚಾರ್ಯರು, ಮದ್ವಾಚಾರ್ಯರ ವೈದಿಕ ಧರ್ಮ ಪ್ರಚಾರ ನಾಗನನ್ನು ದೇವರಾಗಿಸಿ, ಪೌರಾಣಿಕ ಕತೆಯ ಭಾಗವಾಗಿಸಿ ಸರ್ಪಕೋಲವನ್ನು ನಾಶ ಮಾಡಿತು. ಕುಕ್ಕೆ ಸುಬ್ರಹ್ಮಣ್ಯವನ್ನು ಕ್ಷೇತ್ರವನ್ನು ನಾಗನದೇವರ ಆದಿ ಕ್ಷೇತ್ರ ಎಂದು ಶಂಕರರು ಕರೆದರು. ಕುಕ್ಕೆ ಸುಬ್ರಹ್ಮಣ್ಯ ಮೂಲತಹ ಬುಡಕಟ್ಟು ಆದಿವಾಸಿಗಳಾದ ಮಲೆಕುಡಿಯರಿಗೆ ಸೇರಿದ್ದು. ಕುಮಾರಾಧಾರ ನದಿಯ ಅಂಚಿನ ಕಾಡಿನಲ್ಲಿ ವಾಸಿಸುತ್ತಿದ್ದ ಮಲೆಕುಡಿಯರು ಬಿದಿರಿನ ಕುಕ್ಕೆಯೊಳಗಡೆ ಕಲ್ಲನ್ನಿರಿಸಿ ನಾಗನ ಆರಾಧನೆ ಮಾಡುತ್ತಿದ್ದರು. ವೈದಿಕ ಧರ್ಮಪ್ರಚಾರಕ್ಕೆ ಬಂದ ಶಂಕರರು ಕುಕ್ಕೆಯ ನಾಗ ಪೂಜೆಯನ್ನು ಸ್ಮಾರ್ತ ಬ್ರಾಹ್ಮಣರಿಗೆ ವಹಿಸಿದರು. ಬ್ರಿಟೀಷರ ಕಾಲದಲ್ಲಿ ಮಾಧ್ವರು ಸ್ಮಾರ್ತರಿಂದ ಕುಕ್ಕೆಯ ಪೂಜೆಯನ್ನು ವಶಪಡಿಸಿಕೊಂಡರು. ಈಗಲೂ ಕುಕ್ಕೆ ಸುಬ್ರಹ್ಮಣ್ಯನ ರಥವನ್ನು ಮಲೆಕುಡಿಯರೇ ಕಾಡಿನಿಂದ ಬಿದಿರನ್ನು ಸಂಗ್ರಹಿಸಿ ಅವರೇ ಸಿದ್ದಗೊಳಿಸಬೇಕು. ಕುಕ್ಕೆಗೂ ಮಲೆಕುಡಿಯರಿಗೂ ಇರುವ ಸಂಬಂಧಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ರಥವೇ ಸಾಕ್ಷಿ.

ನಾಗ ದೈವಕ್ಕೆ ತುಳುನಾಡಿನಲ್ಲಿ ಆದಿ ಯಾವುದು ಅಂತ್ಯ ಯಾವುದು ಎಂಬುದೇ ಇಲ್ಲ. ಶಂಕರರು ಮೊದಲ ಬಾರಿಗೆ ಮೂಲನಿವಾಸಿಗಳಿಂದ ನಾಗನ ಪೂಜೆಯ ಹಕ್ಕನ್ನು ಕಿತ್ತುಕೊಂಡು, ಅದಕ್ಕೊಂದು ಮಡಿಮೈಲಿಗೆಯನ್ನು ನೀಡಿ ವೈದಿಕರಿಗೆ ಹಸ್ತಾಂತರಿಸಿದ ಕ್ಷೇತ್ರ ಕುಕ್ಕೆಯಾದ್ದರಿಂದ ಕುಕ್ಕೆ ಸುಬ್ರಹ್ಮಣ್ಯವನ್ನೇ ನಾಗದೇವರ ಆದಿಕ್ಷೇತ್ರ ಎಂದು ನಂಬಿಸಲಾಯ್ತು. ಕೆಲವು ಪಾಡ್ದನಗಳಲ್ಲಿ ಕಾಸರಗೋಡು, ಮಂಜೇಶ್ವರದ ಹಲವು ನಾಗಬನಗಳನ್ನು ಆದಿ ನಾಗಬನಗಳು ಎನ್ನಲಾಗುತ್ತದೆ. ಅಲ್ಲೆಲ್ಲ ಇನ್ನೂ ಸರ್ಪಕೋಲ ಚಾಲ್ತಿಯಲ್ಲಿದೆ.

ನಾಗರಪಂಚಮಿ, ನಾಗಮಂಡಲ, ಆಶ್ಲೇಷ ಬಲಿ ಪೂಜೆಗಳು ಕರಾವಳಿಯ ಮೂಲ ನಿವಾಸಿ ಶೂದ್ರರುಗಳದ್ದಲ್ಲ. ನಾಗಮಂಡಲದ ಜೊತೆಗೆ ಡಕ್ಕೆ ಬಲಿ ಪೂಜೆಯನ್ನೂ ಈಗ ಬ್ರಾಹ್ಮಣರೇ ಆಗಿರುವ ವೈದ್ಯ ಸಮುದಾಯ ನಡೆಸುತ್ತೆ. ಇದೂ ಕೂಡಾ ಶೂದ್ರರ ಒಂದು ಆಚರಣೆ. ಡಕ್ಕೆ ಬಲಿ ಎನ್ನುವುದು ವೈದಿಕೇತರ ಆಚರಣೆ. ಪಾಣರ ಎಂಬ ಬುಡಕಟ್ಟು ಸಮುದಾಯವು ಈ ಡಕ್ಕೆ ಬಲಿಯನ್ನು ನಿರ್ವಹಿಸಬೇಕು. ದೈವಗಳಿಗೆ ಡಕ್ಕೆ ಬಲಿ ಎಂದರೆ ಪ್ರಾಣಿ ಅಥವಾ ಕೊಳಿ ಬಲಿ ಕೊಡುವುದು ಎಂದು ಮೂಲ ಅರ್ಥ. ಆದರೆ ಅದನ್ನೂ ಬ್ರಹ್ಮಮಂಡಲ ಡಕ್ಕೆ ಬಲಿ ಎಂದು ವೈದಿಕೀಕರಣಗೊಳಿಸಲಾಯ್ತು. ದೈವಗಳನ್ನು ಆರಾಧನೆ ಮಾಡುತ್ತಿದ್ದ ಕರಾವಳಿಗರನ್ನು ವೈದಿಕ ಧರ್ಮದ ವಿಷ್ಣು ಮತ್ತು ಪುರಾಣಗಳತ್ತಾ ಮತಾಂತರ ಮಾಡುವುದು ಆಚಾರ್ಯದ್ವಯರಿಗೆ ಸುಲಭದ್ದಾಗಿರಲಿಲ್ಲ. ಅದಕ್ಕಾಗಿ ಅವರು ಕಂಡುಕೊಂಡಿದ್ದು ಇಲ್ಲಿನ ದೈವ, ನಾಗ ಬೆರ್ಮೆರನ್ನು ಪುರಾಣದ ಕತೆಗಳಿಗೆ ಜೋಡಿಸಿದ್ದು.

ಕಾಸರಗೋಡಿನ ನೆಟ್ಟನಿಗೆಯ ಗುಹೆಯೊಂದರಲ್ಲಿ 12 ವರ್ಷಗಳಿಗೊಮ್ಮೆ ನಾಗನ ಪೂಜೆ ನಡೆಯುತ್ತೆ. ಕಾಡಿನ ನಿವಾಸಿಗಳಾಗಿದ್ದ ದಲಿತ ಕಾಪಾಡರು ಈ ಪೂಜೆಯನ್ನು ಮಾಡಬೇಕು. ಕಾಪಾಡರು, ಬಾಕುಡರು ಈ ನೆಲದ ಮೂಲ ನಿವಾಸಿಗಳು. ಇಲ್ಲೂ ಬ್ರಾಹ್ಮಣರ ಪ್ರವೇಶವಾಗಿವಾಗಿದೆ. ಆದರೆ 12 ವರ್ಷಗಳಿಗೊಮ್ಮೆ ಗುಹೆಗೆ ಹೋಗುವುದರಿಂದ ಬ್ರಾಹ್ಮಣ ಅರ್ಚಕರಿಗೆ ವಿಷದ ನಿಜದ ನಾಗರ ಹಾವಿನ ಹೆದರಿಕೆ ಇರೋದರಿಂದ ಮೊದಲಿಗೆ ಕಾಪಾಡರನ್ನು ಗುಹೆಯೊಳಗೆ ಕಳುಹಿಸುತ್ತಾರೆ. 

ಈ ರೀತಿ ಕಾಪಾಡರನ್ನು ಗುಹೆಯೊಳಗೆ ಕಳುಹಿಸುವಾಗ ಅವರಿಗೆ ಉತ್ತರ ಕ್ರಿಯೆಯನ್ನೂ ಮಾಡಲಾಗುತ್ತದೆ. ಕಾಪಾಡರು ಗುಹೆಯೊಳಗೆ ಹೋಗಿ ವಾಪಸ್ಸು ಬಂದ ನಂತರ ಬ್ರಾಹ್ಮಣರು ಗುಹೆಯೊಳಗೆ ಹೋಗುತ್ತಾರೆ.

ಬಾಕುಡರು, ಕಾಪಾಡರು ಮುಂತಾದ ದಲಿತ ಶೂದ್ರರ ನೆಲದಲ್ಲಿ ನಡೆಯುವ ನಾಗ ಬೆರ್ಮೆರ ಆರಾಧನೆಗೂ ನಾಗರಪಂಚಮಿಯ ದಿನ ಹಾಲೆರೆಯುವ ವೈದಿಕ ಆಚರಣೆಗಳಿಗೂ ಸಂಬಂಧವಿಲ್ಲ. ಕರಾವಳಿ ಹಿಂದೂಗಳ ನಾಗಾರಾಧನೆಯನ್ನು ಉಳಿಸಬೇಕಾದರೆ ಅದನ್ನು ವೈದಿಕರ ಕಪಿಮುಷ್ಠಿಯಿಂದ ಹೊರತಂದು ಮತ್ತೆ ಸರ್ಪಕೋಲಗಳತ್ತಾ ಹೋಗಬೇಕಿದೆ.