Author Archives: Aniketana

ಅಂತಃಕರಣದ ಮಾದರಿಗಳಿಗೆ ಪುಟ್ಟ ವಂದನೆ


– ರೂಪ ಹಾಸನ


ಮುದ್ದು ಮುಖದ ಆ ಹುಡುಗಿಯ ಮುಖದಲ್ಲಿ ನೋವು ಹರಡಿ ನಿಂತಿದ್ದರೂ ಆತ್ಮವಿಶ್ವಾಸವಿತ್ತು. ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಕಷ್ಟಪಟ್ಟು ಎತ್ತಿಡುತ್ತಿದ್ದಳು. ಪೋಲಿಯೋ ಪೀಡಿತ ಎರಡೂ ಕಾಲಿಗೆ ಭಾರವಾದ ಕ್ಯಾಲಿಪರ್ಸ್ ತೊಟ್ಟು ಊರುಗೋಲಿನ ಸಹಾಯದಿಂದ ಹೆಜ್ಜೆ ಊರಬೇಕಿತ್ತು. ಓದು, ಕೌಶಲ್ಯಗಳಿಕೆ, ಆಮೇಲಿನ ಉದ್ಯೋಗಾನ್ವೇಷಣೆ ಯಾವುದೂ ಸುಲಭವಾಗಿರಲಿಲ್ಲ. ದಿನದಿನದ ಒಳ-ಹೊರಗಿನ ಯುದ್ಧದಲ್ಲಿ ಸೋಲನುಭವಿಸಿದರೂ ಮತ್ತೆ ನಾಳಿನ ಹೆಣಗಾಟಕ್ಕೆ ಸಿದ್ಧತೆ ನಡೆಸಬೇಕಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಲು ಹೊರಟ ಅವಳ ಅವಿರತ ಪ್ರಯತ್ನದಲ್ಲಿ ಹೆತ್ತವರು, ಬಂಧುಬಳಗ, ಜಾತಿಬಾಂಧವರು, ಸರ್ಕಾರ ಯಾರೂ ಇರಲಿಲ್ಲ. ಆದರೆ ಜೊತೆಗೆ ನಿಂತದ್ದು ಒಂದು ಪೋಲಿಯೋ ಪುನರ್ವಸತಿ ಕೇಂದ್ರ.

ಅಂಗವೈಕಲ್ಯತೆ ಒಂದು ಶಾಪವೆಂದೇ ಭಾವಿಸಿರುವ ನಮ್ಮ ಸಮಾಜದಲ್ಲಿ, ಹೆಚ್ಚಿನ ಬಡ ಪೋಷಕರು ಅಂಗವಿಕಲ ಮಕ್ಕಳನ್ನು ಹೊರೆ ಎಂದೇ ಭಾವಿಸುತ್ತಾರೆ. ಇಂತಹ ಮಕ್ಕಳ ಹೆಸರಿನಲ್ಲಿ ಸರ್ಕಾರದಿಂದ ದೊರಕುವ ವಿಶೇಷ ಅಲ್ಪಭತ್ಯೆಯನ್ನೂ ಮಕ್ಕಳಿಗಾಗಿ ಖರ್ಚು ಮಾಡದೇ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುವವರೂ ಹಲವರಿದ್ದಾರೆ. ಬಡ ಅಂಗವಿಕಲ ಮಕ್ಕಳನ್ನು ಕುಟುಂಬದವರೇ ನಿಕೃಷ್ಟವಾಗಿ ಕಂಡು ನಿರ್ಲಕ್ಷಿಸುವುದು ಮಾಮೂಲು. ಅವರಿಗೆ ಅವಶ್ಯಕ ಶಿಕ್ಷಣ ನೀಡಿ, ಸ್ವಾವಲಂಬಿಗಳಾಗಿಸುವ ಪ್ರಯತ್ನಗಳು ನಡೆಯುವುದೂ ಕಡಿಮೆ. ಅಂತಹ ಮಕ್ಕಳಿಗೆ ಆಶಾಕಿರಣವಾದ ಈ ಪೋಲಿಯೋ ಪುನರ್ವಸತಿ ಕೇಂದ್ರ ಕಳೆದ 25 ವರ್ಷಗಳಿಂದ ನೂರಾರು ಮಕ್ಕಳಿಗೆ ಆಸರೆಯಾಗಿದೆ.

6-7 ವರ್ಷದವರಿದ್ದಾಗಲೇ ಅಂಗವಿಕಲ ಮಕ್ಕಳು ಇಲ್ಲಿಗೆ ಸೇರಿದರೆಂದರೆ ಮುಂದೆ ಅವರಿಗೆ ಬೇಕಾಗುವ ವಿಶೇಷ ಶಸ್ತ್ರಚಿಕಿತ್ಸೆ, ಆನಂತರದ ಕೃತಕ ಲಿಂಬ್- ಕ್ಯಾಲಿಪರ್ಸರ್ ಗಳ ಅಳವಡಿಕೆ, govt-school-kidsದಿನನಿತ್ಯದ ಫಿಸಿಯೋಥೆರಪಿ ಚಿಕಿತ್ಸೆ, ಊರುಗೋಲುಗಳೊಂದಿಗೇ ಊಟ-ವಸತಿ-ವಿದ್ಯಾಭ್ಯಾಸ, ಮಕ್ಕಳ ಆಸಕ್ತಿ, ಪ್ರತಿಭೆ, ಸಾಮಥ್ರ್ಯಕ್ಕನುಗುಣವಾಗಿ ವೃತ್ತಿತರಬೇತಿಗಳನ್ನು ಉಚಿತವಾಗಿ ನೀಡಿ ಕೆಲಸದಲ್ಲೂ ತೊಡಗಿಸಿ ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗದಂತೆ ಸ್ವಾವಲಂಬಿಯಾಗಿಸುವ ಸ್ವಯಂ ಹೊಣೆಗಾರಿಕೆವಹಿಸಿಕೊಂಡಿದೆ ಈ ಕೇಂದ್ರ. ಕನಿಷ್ಠ 12-15 ವರ್ಷಗಳ ನಿರಂತರ ಪಾಲನೆ, ಪ್ರತಿಯೊಂದು ಮಗುವಿನ ಬಗೆಗೆ ವಿಶೇಷ ಗಮನಿಸುವಿಕೆ, ವ್ಯಕ್ತಿತ್ವ ನಿರ್ಮಾಣದ ಜವಾಬ್ದಾರಿ ಖಂಡಿತಾ ಸಾಮಾನ್ಯವಾದ ಕೆಲಸವಂತೂ ಅಲ್ಲ. ಸ್ವತಹ ಅಥೋರೇ ಸ್ಪಿಂಟ್ ಯೂನಿಟ್ ಹೊಂದಿ ಕ್ಯಾಲಿಪರ್ಸರ್ ಗಳನ್ನು ತಾನೇ ತಯಾರಿಸುತ್ತಿರುವುದರೊಂದಿಗೆ, ಮಕ್ಕಳು ಬೆಳೆದಂತೆಲ್ಲಾ ದೇಹದ ಆಕಾರಕ್ಕೆ ತಕ್ಕಂತೆ ಉಪಕರಣವನ್ನು ಮಾರ್ಪಾಟುಗೊಳಿಸಲು ಎಲ್ಲ ಅನುಕೂಲಗಳೂ ಇಲ್ಲಿವೆ.

ಶಿಸ್ತುಬದ್ಧ, ವ್ಯವಸ್ಥಿತ ಅನುಕೂಲತೆಗಳನ್ನು ಹೊಂದಿರುವ ಇಂತಹ ಕೇಂದ್ರ ಇನ್ನೊಂದೆರಡು ವರ್ಷಗಳಲ್ಲಿ ಮುಚ್ಚಿಹೋಗಲಿದೆ! ಏಕೆಂದರೆ ಪೋಲಿಯೋ ಕರ್ನಾಟಕದಿಂದ ನಿರ್ಮೂಲನೆಗೊಂಡಿದೆ. ಕಳೆದ 5-6 ವರ್ಷಗಳಿಂದ ಹೊಸದಾಗಿ ಮಕ್ಕಳು ಇಲ್ಲಿಗೆ ಸೇರ್ಪಡೆಗೊಂಡಿಲ್ಲ. ಇದು ಸಂತಸದ ಸಂಗತಿಯೂ ಹೌದು. ಈ ಕೇಂದ್ರವನ್ನು ಮತ್ತಿನ್ನೊಂದು ಅಸಹಾಯಕ ಮಕ್ಕಳ ಸೇವಾ ಘಟಕವಾಗಿ ಪರಿವರ್ತಿಸುವ ಬಗೆಗೆ ಯೋಜಿಸಲಾಗುತ್ತಿದೆ. ಈಗಿಲ್ಲಿ ಉಳಿದ ಕೆಲವೇ ಕೆಲವು ಮಕ್ಕಳ ಬದುಕು ನೇರ್ಪುಗೊಳಿಸುವ ಶ್ರದ್ಧೆಯಿಂದ, ಅಲ್ಲಿನ ಮೇಲ್ವಿಚಾರಕಿ, ಅವರ ಸ್ವಾವಲಂಬನೆಗಾಗಿ ಕಂಡಕಂಡವರ ಬಳಿ ಅಂಗಲಾಚುವಾಗ, ಗೌರವಧನದ ರೂಪದಲ್ಲಿ ದೊರಕುವ ಅತ್ಯಲ್ಪ ಹಣಕ್ಕಾಗಿ, ತಾಳ್ಮೆಯಿಂದ ಒಂದೊಂದು ಮಗುವಿನ ವ್ಯಕ್ತಿತ್ವ ರೂಪಿಸುವ ಈ ಮಹಿಳೆಗೆ ಆ ಸಂಬಂಧವಿಲ್ಲದ ಮಕ್ಕಳು ಸ್ವಾವಲಂಬಿಗಳಾದರೆ ಏನು ಸಿಕ್ಕುತ್ತದೆ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಉದ್ದೇಶಿತ ಗುರಿಯೊಂದರ ಸಾಧನೆಯ ಜೊತೆಗೆ ಇಷ್ಟು ವರ್ಷ ತಾವಿದ್ದ ಹೆಮ್ಮೆ, ಇಲ್ಲಿಗೆ ಬಂದ ಪ್ರತಿಯೊಂದು ಅಂಗವಿಕಲ ಮಗುವೂ ದೃಢ ವ್ಯಕ್ತಿತ್ವವಾಗಿ ಸಮಾಜಕ್ಕೆ ಹಿಂದಿರುಗಿದ ಬಗೆಗೆ ಅಪರಿಮಿತ ಸಂತಸ, ಅಲ್ಲಿನ ಕೆಲಸಗಾರರೆಲ್ಲರಿಗೆ! ಈ ಭಾವಗಳು ಖಂಡಿತಾ ಬೆಲೆ ಕಟ್ಟಲಾಗದಂತಹವು.

ಅಲ್ಲಿನ ಮಕ್ಕಳು, ಆಗು-ಹೋಗುಗಳೊಂದಿಗೆ ಹಲವು ವರ್ಷಗಳ ಒಡನಾಟವಿರುವುದರಿಂದ, ಅಂಗವೈಕಲ್ಯತೆಯ ಕೀಳರಿಮೆಯಿಂದ ಕುಗ್ಗುತ್ತಾ ಈ ಕೇಂದ್ರಕ್ಕೆ ಬಂದು ಸೇರುವ ಮಕ್ಕಳು,Polio ತಮ್ಮ ನೋವು ಮೀರಿ ಗಟ್ಟಿ ವ್ಯಕ್ತಿತ್ವಗಳಾಗಿ ಹೊರಬೀಳುವುದನ್ನು ಹತ್ತಿರದಿಂದ ಕಂಡ ಅನುಭವವಿದೆ. ಆ ಪ್ರಕ್ರಿಯೆ ಎಂಥಹ ಶ್ರಮ, ಶ್ರದ್ಧೆ, ಸಹನೆಯನ್ನು ಬೇಡುವಂತಹುದೆಂಬುದು ಅನುಭವಿಸಿದವರಿಗೇ, ಹತ್ತಿರದವರಿಗೇ ಗೊತ್ತಿರುವಂತದ್ದು. ಇಲ್ಲಿ ಬಂದು ಸ್ವಾವಲಂಬಿಗಳಾಗಿರುವ ಹೆಚ್ಚಿನ ಮಕ್ಕಳು ಮುಸ್ಲಿಂ, ಕ್ರೈಸ್ತ ಹಾಗೂ ಹಿಂದೂ, ಮತ್ತದರ ಎಲ್ಲಾ ಒಳ ಜಾತಿಗೆ ಸೇರಿದವರು. ಇಲ್ಲಿಂದ ಸಂಪೂರ್ಣ ಉಚಿತ ಸಹಾಯ, ಸಹಕಾರ ಪಡೆದು ತಮ್ಮ ನೆಲೆಗಳನ್ನು ಕಂಡು ಕೊಂಡಿರುವ ಎಲ್ಲ ಜಾತಿ, ಮತಗಳ ಯುವಕ-ಯುವತಿಯರು ತಮ್ಮ ಹೊಸ ಸಂಸಾರದೊಂದಿಗೆ ಈ ಕೇಂದ್ರಕ್ಕೆ ಭೇಟಿ ನೀಡಲು ಬರುವಾಗ ಮಕ್ಕಳಿಗಾಗಿ ಸಿಹಿಯೊಂದಿಗೇ ಪ್ರೀತಿಯನ್ನೂ ಹೊತ್ತು ತರುತ್ತಾರೆ. ತಾವು ಇಂದು ಮುಖ್ಯವಾಹಿನಿಯಲ್ಲಿ ತಲೆಎತ್ತಿ ಬದುಕಲು ಆಸರೆಯಾದ ಈ ಕೇಂದ್ರದ ಬಗೆಗೆ ಅಪಾರ ಗೌರವ, ಹೆಮ್ಮೆಯೂ ಜೊತೆಗಿರುತ್ತದೆ! ‘ನೀವು, ನಿಮ್ಮವರನ್ನೆಲ್ಲಾ ಬಿಟ್ಟು ಇಂತಹ ಕೇಂದ್ರವೊಂದರ ಆಶ್ರಯದಲ್ಲಿ ಇಷ್ಟು ವರ್ಷಗಳು ಇದ್ದುದಕ್ಕೆ ಬೇಸರವಿದೆಯೇ?’ ಎಂದು ಪ್ರಶ್ನಿಸಿದರೆ ಆ ಯುವಜನರು ಸಿಡಿದು ಬೀಳುತ್ತಾರೆ. ‘ನಮ್ಮ ಕುಟುಂಬ, ಜಾತಿ, ಸರ್ಕಾರ ಯಾರಿಗೂ ನಾವು ಬೇಡವಾಗಿದ್ದ ಕಾಲದಲ್ಲಿ ಈ ಕೇಂದ್ರ ನಮಗೆ ಆಶ್ರಯ, ವಿದ್ಯೆ, ಕೆಲಸ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದೆ. ಅಂಗವಿಕಲತೆಗೆ, ನೋವಿಗೆ ಯಾವ ಜಾತಿ, ಮತ? ಮಾನವೀಯತೆಯೇ ನಿಜವಾದ ಧರ್ಮ.’ ಎನ್ನುವಾಗ ಮತಾಂಧತೆ, ಕೋಮುವಾದಗಳಿಗೆ ಉತ್ತರ ಸಿಕ್ಕಿಬಿಡುತ್ತದೆ!

ಮತಾಂತರ, ಕೋಮುಗಲಭೆಗಳನ್ನು ಕಂಡಾಗ ನನ್ನಂತಹ ಸಾಮಾನ್ಯರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳೇಳುತ್ತವೆ. ಇಂದಿನ ಸಾಮಾನ್ಯ ಜನರಿಗೆ ನಿಜವಾಗಿ ಏನು ಬೇಕು? ಅವರಿಗೆ ಯಾವುದು ಅತ್ಯಂತ ಮುಖ್ಯವಾದುದು? ವಿರೂಪಗೊಳ್ಳುತ್ತಿರುವ ಇಂದಿನ ಜಾತಿ, ಧರ್ಮ, ಮತಗಳು ಅವರಿಗೆ ಏನನ್ನು ನೀಡುತ್ತಿವೆ? ಸಹಜ ಹಾಗೂ ಸರಳ ಮನುಷ್ಯ ಧರ್ಮವನ್ನೂ ಮೀರಿದ ಮತ-ಧರ್ಮಗಳು ಎಲ್ಲಿವೆ? ಕೊನೆಯದಾಗಿ, ಇವು ಜನರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಎಷ್ಟು ಅನಿವಾರ್ಯವಾಗಿವೆ? ಎಂಬ ಪ್ರಶ್ನೆ.

ತೀವ್ರ- ಬಡತನ, ಅಸಹಾಯಕತೆ, ಅಸಮಾನತೆ, ನೋವು, ಅವಮಾನಕ್ಕೊಳಗಾದ ಜೀವಗಳಿಗೆ ಅಂತಃಕರಣದ ಸಣ್ಣ ಸಹಾಯಹಸ್ತವೂ ದೊಡ್ಡದಾಗಿಯೇ ಕಾಣುತ್ತದೆ.polio_2 ಮತ್ತು ಅವುಗಳನ್ನು ಅನುಭವಿಸುತ್ತಿರುವ ಜೀವಗಳಿಗೆ ಮುಖ್ಯವೆನಿಸುವ ಅಂಶಗಳೇ ಬೇರೆ! ‘ಸ್ವಾಭಿಮಾನದ ಬದುಕಿ’ಗೆ ಬೇರೆಲ್ಲಕ್ಕಿಂತಾ ಮೊದಲಿನ ಸ್ಥಾನ! ಇದು ಅತ್ಯಂತ ಸಹಜವೆಂಬುದು ಮನಃಶಾಸ್ತ್ರದ ಕನಿಷ್ಠ ತಿಳುವಳಿಕೆ ಹೊಂದಿರುವ ಎಲ್ಲರಿಗೂ ಗೊತ್ತಿರುವಂತದೆ. ಆದರೆ ನಾವೇಕೆ ಪುಟ್ಟ- ಪುಟ್ಟ ಜೀವಕಾರುಣ್ಯದ ‘ಎಲ್ಲಾ’ ಮಾದರಿಗಳನ್ನೂ ಸಲ್ಲದ ಅನುಮಾನ, ಅಹಂಕಾರಗಳಿಂದ ನೋಡುತ್ತಿದ್ದೇವೆ? ಇದಕ್ಕೆ ಪ್ರತಿಯಾಗಿ, ನಾವು ಸದಾ ಹೇಳುತ್ತ ಬಂದಿರುವ ಸರ್ವ-ಶ್ರೇಷ್ಠವಾದ, ಮಾನ್ಯವಾದ, ಅರ್ಹವಾದ ಮಾದರಿಗಳನ್ನು ನಿರ್ಮಿಸಲು ನಮಗೇಕೆ ಸಾಧ್ಯವಾಗಿಲ್ಲ? ಅಥವಾ ಅವುಗಳೆಲ್ಲಾ ಏಕೆ ಚಿಂತನೆ, ಆದರ್ಶ, ಸಿದ್ಧಾಂತಗಳ ಹಂತದಲ್ಲೇ ನಿಂತುಬಿಡುತ್ತವೆ?

ಜಾತಿ, ಮತ, ಧರ್ಮಗಳು ನಮ್ಮ ಅತ್ಯಂತ ಖಾಸಗಿ, ಹಾಗೂ ಸಾಮಾಜಿಕವಾಗಿ ಅಮುಖ್ಯ ವಿಷಯಗಳಾಗಬೇಕಿತ್ತು. ಆದರೆ ಅವೇ ಇಂದು ನಮ್ಮನ್ನು ಆಳುವ, ಒಡೆಯುವ, ಛಿದ್ರಗೊಳಿಸುವ ಹಂತ ತಲುಪಿ ಬಿಟ್ಟಿವೆ. ಅವುಗಳ ರಾಜಕಾರಣವೇ ಎಲ್ಲಕ್ಕಿಂತ ಮುಖ್ಯವಾಗುತ್ತಿದೆ. ಬಡತನ, ಅಸಮಾನತೆ, ಅಸಹಾಯಕತೆ, ಅಂಗವೈಕಲ್ಯ, ಶೋಷಣೆಗಳಿಂದ ನೋವನುಭವಿಸುವ ಜೀವಿಗಳ ಸಂಕಟ, ಅದಕ್ಕೆ ಬೆಂಬಲವಾಗಿ ನಿಲ್ಲುವ ಅಂತಃಕರಣದ ಮಾದರಿಗಳು ನಮಗಿಂದು ಮುಖ್ಯವಾಗುತ್ತಿಲ್ಲ.

ಹೊರಗೆ ಜಾತಿ, ಮತಗಳ ಹೆಸರಿನಲ್ಲಿ ನಿತ್ಯ ಗಲಭೆಗಳು ನಡೆಯುತ್ತಿದ್ದರೂ, ಅವುಗಳನ್ನು ಮೀರಿ ಅಸಹಾಯಕ ಜೀವದ ನೋವಿಗೆ ಪ್ರೀತಿಯಿಂದ ಸ್ಪಂದಿಸುತ್ತಾ, ಆ ಜೀವ ಒಂದಿಷ್ಟಾದರೂ ನೆಮ್ಮದಿಯಿಂದ ಬದುಕುವ ನೆಲೆಗಳನ್ನು ಸದ್ದಿಲ್ಲದೇ ನಿತ್ಯ ನಿರ್ಮಾಣ ಮಾಡುತ್ತಿದ್ದರೂ, ಸಾಮಾನ್ಯರಂತೆ ಬದುಕುವ, ಬದುಕಲು ಬಿಡುವ, ಬದುಕಲು ಪ್ರೇರೇಪಿಸುವ ಮಾದರಿಗಳನ್ನು ನಾವೇಕೆ ಗೇಲಿಮಾಡಿ ನಗುತ್ತಿದ್ದೇವೆ? ಅಥವ ನಿರ್ಲಕ್ಷಿಸುತ್ತಿದ್ದೇವೆ? ಇಂತಹ ನೂರಾರು ಮಾನವೀಯ ಮಾದರಿಗಳು ಇಂದಿಗೂ ನಮ್ಮ ಮುಂದಿರುವುದು ಹೆಮ್ಮೆಯ ಸಂಗತಿಯೇ. ಆದರೆ ಅವುಗಳಿಗಿಂತ ನಮಗೆ ‘ರೋಚಕತೆ’ ನೀಡುವ ಋಣಾತ್ಮಕ ಸುದ್ದಿಗಳೇ ದೊಡ್ಡವೆನಿಸಿಬಿಡುತ್ತವಲ್ಲಾ? ನಮ್ಮ ಅಭಿರುಚಿಯಲ್ಲಿಯೇ ಈ ದೋಷವಿದೆಯೇ? ಅಥವಾ ನಮ್ಮ ಮಾಧ್ಯಮಗಳು ನಮ್ಮ ಅಭಿರುಚಿಯ ದಿಕ್ಕನ್ನೇ ರೋಚಕತೆಯ ಹೆಸರಿನಲ್ಲಿ ಕೆಡಿಸಿಬಿಟ್ಟಿವೆಯೇ?

ಇಲ್ಲಿ ಪ್ರತಿಯೊಂದು ಜೀವಿಯ ನೋವೂ ಮುಖ್ಯವಾದುದೇ. ಅದಕ್ಕೆ ಬೇಕಿರುವುದು ಒಣ ಅನುಕಂಪ, ತರ್ಕವಲ್ಲ. ಆ ಜೀವದೊಂದಿಗೆ ಒಂದಾಗಿ ಅದನ್ನೆದುರಿಸುವ ಛಲವನ್ನು ಮೂಡಿಸುವ ವಾಸ್ತವದ ಸಾಮಾನ್ಯ ನಡೆ, ಶ್ರಮ, ಕೆಲಸಗಳು ಹಾಗೂ ಆ ದಿಕ್ಕಿನೆಡೆಗಿನ ಸಣ್ಣ ಪ್ರಯತ್ನಗಳೂ ನಮಗಿಂದು ಮುಖ್ಯವಾಗಬೇಕಿದೆ. ಅವುಗಳನ್ನು ಮತ್ತೆ ಮತ್ತೆ ‘ಎತ್ತಿ’ಹಿಡಿಯಬೇಕಿದೆ. ಈ ಹಿನ್ನೆಲೆಯಲ್ಲಿಯೇ ನಮಗಿಂದು, ಸದ್ದಿಲ್ಲದೇ ಸಾಮಾನ್ಯ ಜನರಲ್ಲಿ ಬೆರೆತು ಈ ನೆಲಕ್ಕೆ ಆಪ್ತವಾಗುವಂತಾ ತಮ್ಮ ಸಾಮಾನ್ಯ ನಡೆಗಳಿಂದ ಜಾತಿ, ಮತಗಳನ್ನು ಮೀರಿ ಸಾಮಾಜಿಕ ಹಿತಾಸಕ್ತಿಯಿಂದ, ಜೀವಗಳ ಒಳಿತಿಗೆ ಕೈ ನೀಡುವಂತಾ ಕೆಲಸಗಳಲ್ಲಿ ತೊಡಗಿದ ಮದರ್ ಥೆರೆಸಾ, ಬಾಬಾ ಆಮ್ಟೆ, ಅಣ್ಣಾ ಹಜಾರೆ, ಸಾಲುಮರದ ತಿಮ್ಮಕ್ಕ, ಸುಂದರ್ಲಾಲ್ ಬಹುಗುಣ, ರಾಜೇಂದ್ರ ಸಿಂಗ್, ಪಿ. ಸಾಯಿನಾಥ್……. ರಂತಹ ಧೀಮಂತ ವ್ಯಕ್ತಿಗಳ ಬದುಕು ವಿಶಿಷ್ಟವೂ, ಮಾದರಿಯೂ ಎನಿಸುತ್ತದೆ.

ಬದುಕಿನ ಅಂತಿಮಗುರಿ, ಮಾಹಿತಿ ಎಂಬ ಜ್ಞಾನವೇ ಎಂಬ ಭ್ರಮೆಗೆ ಬಿದ್ದು, ಅಂತಃಕರಣದ ಅರಳುವಿಕೆಯನ್ನು ನಾವಿಂದು ನಿರ್ಲಕ್ಷಿಸುತ್ತಿದ್ದೇವೆ. ಸಾಮಾನ್ಯ ಮನುಷ್ಯನ ಶ್ರಮವನ್ನೂ, ಹೃದಯ ವೈಶಾಲ್ಯತೆಯನ್ನೂ, ಬೆವರಿನ ಫಲವನ್ನೂ ನಾವು ನಿರಂತರ ಅವಮಾನಿಸುತ್ತಲೇ ಬಂದಿದ್ದೇವೆ. ಅದರಿಂದಾಗಿಯೇ ವ್ಯಕ್ತಿ-ವ್ಯಕ್ತಿಗಳ ನಡುವೆ ಇಂದು ಅಗಾಧ ಕಂದಕ ಏರ್ಪಟ್ಟಿದೆ. ಇಂದು ಮಾನವೀಯತೆ, ನಿಷ್ಕಾರಣ ಕಾಳಜಿ, ಶ್ರದ್ಧೆ, ಪ್ರೀತಿಯ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಾಮಾನ್ಯ ಜೀವಗಳನ್ನೂ, ಅಂತಹ ಸಣ್ಣ-ಪುಟ್ಟ ಕ್ರಿಯೆಗಳನ್ನು ಗೌರವದಿಂದ ಕಂಡಾಗ ಮಾತ್ರ ಕಂದಕಗಳು ಮುಚ್ಚಿಕೊಳ್ಳಬಹುದಷ್ಟೇ. ಅದು ಎಲ್ಲಕ್ಕಿಂತ ಮುಖ್ಯವಾದುದು. ಹಾಗೂ ಅದೇ ಎಲ್ಲಾ ಜಾತಿ, ಮತಗಳನ್ನೂ ಮೀರಿದ ಜೀವಕಾರುಣ್ಯಕ್ಕೆ ನಾವು ನೀಡುವ ಬೆಲೆಯೂ ಹೌದು.

ಏಕೆ ಹೀಗಾಡಿದೆಯೇ ಗೆಳತಿ…… !?


-ಸುಧಾ ಚಿದಾನಂದಗೌಡ


“You won’t get marks for this…”

“I don’t want marks sir…”

ಒಂದು ಕ್ಷಣ ಡಿಯೋ ಲೋಬೋ, ಫಿಸಿಕ್ಸ್ ಲೆಕ್ಚರರ್ ನನ್ನ ಪೇಪರನ್ನು ನೋಡುವುದನ್ನು ನಿಲ್ಲಿಸಿ ತಲೆ ಮೇಲೆತ್ತಿ ನನ್ನನ್ನೇ ನೋಡಿದರು. ನಾನೋ…. ಹಲ್ಲು ಕಚ್ಚಿ, ಗಂಟಲುಬ್ಬಿಬಂದ ದುಃಖವನ್ನು ಹೊರಚೆಲ್ಲಕೂಡದೆಂಬ ನಿರ್ಧಾರದಿಂದ ಕಂಬನಿಯನ್ನು ರೆಪ್ಪೆಗಳಡಿಯಲ್ಲಿ ತಡೆ ಹಿಡಿದಿದ್ದೆ. ಮತ್ತೇನು ಮಾಡಲಿ..? ಅವರು ಹೇಳುವುದಕ್ಕೆ ಮುಂಚೆಯೇ ನನಗೇ ಗೊತ್ತಿತ್ತು- ಈ ಟೆಸ್ಟ್ ನಲ್ಲಿ ಮಾರ್ಕ್ಸ್ ಬರುವುದಿಲ್ಲ ಎಂದು. ಓದಿದ್ದರೆ ತಾನೇ..? ಓದಲು ಜತನದಿಂದ, ಏಕಾಗ್ರತೆಯಿಂದ ಮಾಡಿಟ್ಟುಕೊಂಡಿದ್ದ ನೋಟ್ಸ್ ಇದ್ದರೆ ತಾನೇ..? ಕಳುವಾಗಿ ಹೋಗಿತ್ತಲ್ಲ ನಾಲ್ಕುದಿನಗಳ ಹಿಂದೆಯೇ..! ಆದರೆ ನೋವಾಗಿದ್ದು ಕಳೆದುಕೊಂಡೆ ಎಂಬುದಕ್ಕಾಗಿ ಅಲ್ಲ. ಯಾರು, ಯಾಕಾಗಿ ಕದ್ದರು ಎಂಬುದು ತಿಳಿದುಬಂದಿದ್ದರಿಂದ..! ನೋಟ್ಸ್ ಇಲ್ಲ ಎಂದಲ್ಲ. ಓದಬಾರದು ಎಂಬ ಸಿಟ್ಟಿನಿಂದಾಗಿಯೇ ಓದಿರಲಿಲ್ಲ.

ಅಂಜನಾ ಹೀಗೆ ಮಾಡಬಹುದಿತ್ತೇ..? ರೂಂಮೇಟ್ ಗಳನ್ನೂ ನಂಬಬಾರದು ಎಂದಾದರೆfriendship-art ಇನ್ನು ಯಾರನ್ನಾದರೂ ಹೇಗೆ ನಂಬುವುದು ಆ ಹಾಸ್ಟೆಲ್ ಎಂಬ ನಮಗೆ ನಾವೇ ರಾಣಿಯರೆನ್ನಬಹುದಾದ ಹೊಸಪ್ರಪಂಚದಲ್ಲಿ..? ಇಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನಿತ್ತು..? ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಸೈನ್ಸ್ ಓದುತ್ತಿದ್ದ ನಾನೂ ಅಂಜನಾಳೂ ಚೆನ್ನಾಗೇ ಇದ್ದೆವು ಒಂದೇ ರೂಮನ್ನು ಹಂಚಿಕೊಂಡು. “Come, let’s play a game..” ಎಂದು ಆ ಸಂಜೆ ಆಹ್ವಾನಿಸಿದ್ದು ಅವಳೇ. ನಾನು ಲ್ಯಾಬ್ ಮ್ಯಾನ್ಯುಯಲ್ ಹಿಡಿದು ಕೂತಿದ್ದೆ ರೆಕಾರ್ಡ ಬರೆಯಲು. ಬಿಡದೆ ಜಗ್ಗಿ ಸೇರಿಸಿಕೊಂಡಿದ್ದರು ಐದಾರು ಜನ ಗೆಳತಿಯರು ನಮ್ಮ ರೂಮಿನಲ್ಲೇ. ಆಟವೇನೆಂದರೆ- ವ್ಯಕ್ತಿಗಳ ಹೆಸರುಗಳನ್ನು ಹೇಳುತ್ತಾ ಹೋಗಬೇಕು. ಯಾವುದೇ ಧರ್ಮದ್ದು, ಹೆಂಗಸರು, ಗಂಡಸರು ಒಟ್ಟಿನಲ್ಲಿ ನಾಮಧೇಯಗಳು. ಆದರೆ ರಿಪೀಟ್ ಆಗಬಾರದು, ತೊದಲಬಾರದು, ಯೋಚಿಸಲು ನಿಲ್ಲಿಸಬಾರದು. ಓತಪ್ರೋತ ಯಾರು ಎಷ್ಟು ಹೆಚ್ಚು ಹೆಸರು ಹೇಳುತ್ತಾರೋ ಅವರು ಗೆದ್ದಂತೆ. ನನ್ನ ಸರದಿ ಬಂತು. ಅದೇನ್ಮಹಾ…. ಲಲಿತಾ ಸಹಸ್ರನಾಮ, ಗೌರೀ ಅಷ್ಟೋತ್ತರ ಶತನಾಮಾವಳಿ, ಶಿವ ಸಹಸ್ರನಾಮ, ಗಣಪತೀ ಅಷ್ಟೋತ್ತರಗಳೆಲ್ಲ ಮನೇಲೂ, ರಾಷ್ಟ್ರೋತ್ಥಾನ ಸ್ಕೂಲಲ್ಲೂ ಹೇಳಿ ಹೇಳಿ ಕಂಠಪಾಠ ಆಗೋಗಿದ್ದವು. (ಈಗಲೂ..!)  ಸರಿ, ಮೊದಲಿನ ಓಂ ಅನ್ನೂ, ಕೊನೆಯ ನಮಃವನ್ನೂ ತೆಗೆದುಹಾಕಿ ಮಧ್ಯಭಾಗದಲ್ಲಿ ಬರುವ ಹೆಸರುಗಳನ್ನೆಲ್ಲ ನಿರರ್ಗಳ ಹೇಳುತ್ತಾ ಹೋದೆ, ಅನಾಯಾಸ ಗೆದ್ದೂಬಿಟ್ಟೆ….. ಎನಫ್, ಎನಫ್.. ಎಂದು ಒಂದಿಬ್ಬರು ಹೇಳಿ ನಿಲ್ಲಿಸಿದ್ದರು ನನ್ನನ್ನು….. ಅಂಜನಾಗೆ ಶಾಕ್ ಆದಂತಿತ್ತು. ಅದುವರೆಗೂ ಈ ನಾಮಸ್ಫರ್ಧೆಯಲ್ಲಿ ಅವಳೇ ಗೆಲ್ಲುತ್ತಿದ್ದಳಂತೆ. ನಂಗೇನ್ಗೊತ್ತು…. ಇಷ್ಟಕ್ಕೂ ನಾನ್ಯಾಕೆ ಗೆಲ್ಲಬಾರದು..? ಅವಳು ಕುವೇತ್ ನಿಂದ ಬಂದಿದ್ಲು. ಸೋ, ವಾಟ್? ನಂ ಹಗರಿಬೊಮ್ನಳ್ಳಿ ಏನ್ ಕಮ್ಮೀನಾ? ಎಂಬ ಧಿಮಾಕು ನನ್ನಲ್ಲೂ ಇತ್ತು. ನಿರ್ಲಕ್ಷಿಸಿದೆ.

ಆದರೆ….. ಮಾರನೆಯ ದಿನ ನನ್ನ ಮಾರ್ಕರ್ ಕಾಣೆಯಾಯಿತು ಇದ್ದಕ್ಕಿದ್ದಂತೆ. ಅನಂತರ ಪೆನ್ಸಿಲ್ ಬಾಕ್ಸ್ ಕೂಡಾ. ನಾನೇ ಎಲ್ಲೋ ಬಿಟ್ಟುಬಂದಿದ್ದೇನೆ ಎಂದುಕೊಂಡು ಸುಮ್ಮನಾದೆ. ಆದರೆ ಅಂದು ಬಯಾಲಜಿ ಲ್ಯಾಬ್ ನಲ್ಲಿ ಇನ್ಸ್ಟ್ರುಮೆಂಟ್ ಬಾಕ್ಸ್ ತೆಗೀತೇನೆ….. ನೈಫ್ ಕಾಣಿಸ್ತಿಲ್ಲ.. ಹೇಗೆ ಎಕ್ಸ್ಪೆರಿಮೆಂಟ್ ಮಾಡಲಿ..? ಸಂಜೆಯಷ್ಟೊತ್ತಿಗೆ  “S” ಅಕ್ಷರದ ಕಸೂತಿ ಹಾಕಿದ್ದ ಮೊಲದಷ್ಟು ಬಿಳುಪೂ, ಮೃದುವೂ ಆಗಿದ್ದ ನನ್ನ ಫೇವರೇಟ್ ಕರ್ಚೀಫೂ ಕಾಣೆಯಾಗಿಹೋಯ್ತು..! ಆಗ ಅನಿಸಿತು..  “Something is wrong..” ಅಂತ.

ಮಾರನೆಯ ದಿನ…. ಅತಿಕ್ರೂರ ಭಾನುವಾರ…. ನನ್ನ ಪಾಲಿಗೆ ಬ್ಲ್ಯಾಕ್ ಸಂಡೇ

ಬೆಳಿಗ್ಗೆ ಬ್ರೇಕ್ ಫಾಸ್ಟ್ ಮುಗಿಸಿಬರುವಷ್ಟರಲ್ಲಿ ಫಿಸಿಕ್ಸ್ ನೋಟ್ಸೇ ಇಲ್ಲವಾಗಿಹೋಗಿತ್ತು. ಚೆನ್ನಾಗಿ ನೆನಪಿತ್ತು, ಬೆಳಿಗ್ಗೆ ಒಂದಷ್ಟು ಓದಿ. ತಿಂಡಿ ತಿನ್ಕೊಂಡು ಬಂದು ಮತ್ತೆ ಓದೋಣವೆಂದು ಟೇಬಲ್ ಮೇಲೇನೇ ಇಟ್ಟಿದ್ದು ಚೆನ್ನಾಗಿ ನೆನಪಿದೆ. ಅರ್ಧಘಂಟೆಯಲ್ಲಿ ಕಾಣಿಸ್ತಿಲ್ಲ ಎಂದರೆ…. ಸಿಟ್ಟು, ದುಃಖ, ಹತಾಶೆ, ಸೋತ ಭಾವ, ಮತ್ತು ನಾಲ್ಕುದಿನಗಳಲ್ಲಿ ಟೆಸ್ಟ್ ಇದೆಯೆಂಬ ಟೆನ್ಷನ್.. ಎಲ್ಲ ಸೇರಿ ವಾರ್ಡನ್ ಸಿಸ್ಟರ್ ಜ್ವನಿತಾ ಬಳಿ ಕಂಪ್ಲೇಂಟ್ ಮಾಡಿಬಿಡಲು ಸಿದ್ಧಳಾದೆ….. ಆಗ ಹೇಳಿದ್ದು ಕುಮುದಾ…..

“May be she…. You defeated her so badly on that day…I am not sure….but…”

ಉಳಿದ ಗೆಳತಿಯರ ಮುಖಗಳೂ ಅದನ್ನೇ ಹೇಳುತ್ತಿದ್ದವು..

ಆ ದಿನ ಉಂಟಾದ ದಿಗ್ಭ್ರಮೆ ಬಹುಕಾಲ ನನ್ನ ಮಿದುಳು, ಮನಸುಗಳನ್ನು ರಾಕ್ಷಸನಂತೆ ಆಳಿತು. “Lost everything..everyone..everywhere..”ಎಂಬಂತೆ ಕುಸಿದುಹೋದೆ. ಸಾಲದ್ದಕ್ಕೆ ಡಿಯೋ ಲೋಬೋ ಕ್ಲಾಸಿನಲ್ಲಿ

ಯಾಕೆ ರೂಮಲ್ಲಿ ನೀನು ಬರೀ ಹರಟೆ ಹೊಡ್ಕೊಂಡು ಎಲ್ರಿಗೂ ಡಿಸ್ಟರ್ಬ ಮಾಡ್ತಿರ್ತಿಯಂತೆ..?

ಎನ್ನಬೇಕೇ? ಇದೂ ಅವಳದೇ ಕೆಲಸವೆಂದು ಸ್ಪಷ್ಟವಾಗಿಹೋಯ್ತು. ನನ್ನ ಮುಖ ನೋಡಿ ಅವರಿಗೇನನಿಸಿತೋ “do well next time” ಎಂದಷ್ಟೇ ಹೇಳಿ ಒಳ್ಳೆ ಅಂಕಗಳನ್ನೇ ನೀಡಿದ್ದರು. ಆದರೆ ನಂಗೆ ಬೇಡವೆನಿಸಿಬಿಟ್ಟಿತ್ತು.

ಇಪ್ಪತ್ತೆಂಟು ವರ್ಷಗಳಾಗಿಹೋಗಿವೆ ಅದೆಲ್ಲ ಆಗಿಹೋಗಿ..

ಏಕೆ ಹೀಗಾಡಿದೆ ಗೆಳತೀ.. ನೋಡು ಈಗಲೂ ನಂಗೆ ಮರೆಯಲಾಗುತ್ತಿಲ್ಲ.. ಒಂದು ಸೋಲು ಅಥವಾ ಒಂದು ಗೆಲುವು.. ಅದೂ ಚಿಕ್ಕದೊಂದು ಸ್ಫರ್ಧೆಯಲ್ಲಿ….. ಇಷ್ಟು ಮುಖ್ಯವಾ? ಅಷ್ಟೊಂದು ಅವಮಾನಕಾರಿಯಾ..?ಇವೊತ್ತಿಗೂ ನಾನು ಗೆಲುವನ್ನು ಸಂಪೂರ್ಣ ಆಸ್ವಾದಿಸಲಾರೆ.. ಸೋತಾಗ ಅಂಥ ದುಃಖವೂ ಆಗೋದಿಲ್ಲ. ಮನಸು ಮತ್ತೆ ಮತ್ತೆ ಕೇಳುವುದು ಅದೇ ಪ್ರಶ್ನೆ.. ಅಂದು ಹಾಗೇಕಾಡಿದೆ ಗೆಳತೀ.. ಅದರ ಅವಶ್ಯಕತೆಯಿತ್ತೇ? ಎಂದು.

ಸಂಘಪರಿವಾರದ ರಕ್ತಸಿಕ್ತ ಅಧ್ಯಾಯದಲ್ಲಿ ಬಿಲ್ಲವರ ಸರತಿಯಲ್ಲಿ ಬಂಟರು

Naveen Soorinje


– ನವೀನ್ ಸೂರಿಂಜೆ


 

 

ಜತೆಗೆ ಆಟವಾಡಿ ಬಂದ ಸಮೀಯುಲ್ಲಾನನ್ನು ಹಿಂದೂ ಕೋಮುವಾದಿಗಳಿಂದ ರಕ್ಷಿಸಲು ಹೊರಟ ಹರೀಶ್ ಪೂಜಾರಿ ಬಲಿಯಾಗಿದ್ದಾನೆ. ಹಿಂದುತ್ವ ಸಂಘಟನೆಯ ಪದಾಧಿಕಾರಿಯಾಗಿರೋ ಭುವಿತ್ ಶೆಟ್ಟಿ ಮತ್ತು ಅಚ್ಯುತ ಮುಂತಾದ ಏಳು ಮಂದಿಯ ತಂಡ ಹರೀಶ್ ಪೂಜಾರಿ ಕೊಲೆಯನ್ನೂ ಸಮೀಯುಲ್ಲಾನ ಕೊಲೆಯತ್ನವನ್ನೂ ಮಾಡಿದೆ ಎಂದು ಪೊಲೀಸರು ಕೇಸು ದಾಖಲಿಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಕೋಮುವಾದಿಗಳ ರಕ್ಕಸ ನಗೆಯ ಮಧ್ಯೆಯೂ ಹರೀಶ್ ಸಮೀಯುಲ್ಲಾನಂತಹ ಮಲಿನಗೊಳ್ಳದ ಮನಸ್ಸುಗಳು ಜಿಲ್ಲೆಯಲ್ಲಿದೆ ಎಂಬುದೇ ಸಮಾದಾನವಾಗಿದ್ದರೆ, ಆರ್.ಎಸ್.ಎಸ್ ಜಾತಿ ಲೆಕ್ಕಾಚಾರದಲ್ಲಿ ಕೋಮು ಕ್ರಿಮಿನಲ್ ಗಳನ್ನು ಸೃಷ್ಠಿಸುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಹಿಂದುಳಿದ ಜಾತಿಗಳಾದ ಬಿಲ್ಲವರನ್ನು ಕೊಲೆಗಳಿಗೆ ಬಳಸುತ್ತಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನೂ ಸಹ ಬಳಸಲು ಶುರು ಮಾಡಿದೆ. ಇದರ ಹಿಂದೆ ಆರ್.ಎಸ್.ಎಸ್ ನ ವ್ಯವಸ್ಥಿತ ಅಜೆಂಡಾ ಕೆಲಸ ಮಾಡಿದೆ. ಇದನ್ನು ತಡೆಯದೇ ಇದ್ದಲ್ಲಿ ಬಂಟರ ಸಮಾಜ ಮತ್ತು ಜಿಲ್ಲೆ ಮುಂಬರುವ ದಿನಗಳಲ್ಲಿ ಭಾರೀ ದಂಡ ತೆರಬೇಕಾಗುತ್ತದೆ.

ನಿನ್ನೆ ಮೊನ್ನೆಯವರೆಗೆ ಆರ್.ಎಸ್.ಎಸ್ ಬಿಲ್ಲವರನ್ನಷ್ಟೇ ಕೋಮುಗಲಭೆಗಳಿಗೆ ಬಳಕೆ ಮಾಡಿ ಜೈಲಿಗೆ ಕಳುಹಿಸುತ್ತಿತ್ತು.bhajarangadal  ಅಮ್ನೇಶಿಯಾ ಪಬ್ ನಲ್ಲಿ ಯುವತಿಯ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿತು. ಬಂಧಿತ 25 ಆರೋಪಿಗಳಲ್ಲಿ ಎಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರು. ಬಹುತೇಕ ಬಿಲ್ಲವರು. ನಂತರ ಹಲವಾರು ಕೋಮುಗಲಭೆಗಳು, ನೈತಿಕ ಪೊಲೀಸ್ ಗಿರಿಗಳು ನಡೆದವು. ದನ ಸಾಗಾಟಗಾರರ ಮೇಲೆ ಹಲ್ಲೆಗಳು ನಡೆದವು. ಆ ಹಲ್ಲೆಗಳಲ್ಲಿ ಕೋಮುಗಲಭೆಗಳಲ್ಲಿ ಒಂದೇ ಒಂದು ಜನಿವಾರಧಾರಿ ಆರೋಪಿ ಇರಲಿಲ್ಲ. ನಂತರ ಇಡೀ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಹೋಂ ಸ್ಟೇ ದಾಳಿಯಲ್ಲಿ ಹಿಂದೂ ಸಂಘಟನೆಯ 41 ಕಾರ್ಯಕರ್ತರನ್ನು ಬಂಧಿತರಾಗಿದ್ದರು. ಅದರಲ್ಲೂ ಸಹ ಬಹತೇಕ ಬಿಲ್ಲವರು ಮತ್ತು ಸಣ್ಣಪುಟ್ಟ ಜಾತಿಗಳವರು. ಈಗಲೂ ಮಂಗಳೂರು ಜೈಲಿನ ಬಿ ಬ್ಲಾಕ್ ನಲ್ಲಿ ಇರುವ ಕೋಮುಗಲಭೆಯ ಆರೋಪಿಗಳನ್ನು ಮಾತನಾಡಿಸಿದ್ರೆ ಅದರಲ್ಲಿ ಒಬ್ಬನೇ ಒಬ್ಬ ಜನಿವಾರಧಾರಿ ಇಲ್ಲ. ಎಲ್ಲರೂ ಹಿಂದುಳಿದ ವರ್ಗಗಳಿಗೇ ಸೇರಿದವರು. ಇನ್ನು ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್. ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. (ವಿಚಿತ್ರ ಎಂದರೆ ಕೋಮುವಾದಿಗಳ ವಿರುದ್ಧ ನಿಂತು ಸಾವನ್ನಪ್ಪಿದವರೂ ಕೂಡಾ ಬಿಲ್ಲವರೇ. ಹರೀಶ್ ಪೂಜಾರಿ, ಶ್ರೀನಿವಾಸ್ ಬಜಾಲ್, ಭಾಸ್ಕರ ಕುಂಬ್ಳೆ ಈ ರೀತಿ ಬಿಲ್ಲವರೇ ಕೋಮುವಾದಿಗಳಿಗೆ ಎದೆಯೊಡ್ಡಿ ಹುತಾತ್ಮರಾದವರು.) ಹೀಗೆ ಕೊಲೆ-ಕೊಲ್ಲು-ಕೊಲ್ಲಿಸು ಈ ಮೂರಕ್ಕೂ ಸಾಮಾಜಿಕವಾಗಿ ಹಿಂದುಳಿದ ಬಿಲ್ಲವರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಆರ್.ಎಸ್.ಎಸ್ ಇದೀಗ ಬಲಿಷ್ಠ ಮತ್ತು ಬಲಿತ ಹಿಂದುಳಿದ ವರ್ಗವಾಗಿರುವ ಬಂಟರನ್ನು ಬಳಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದೆ. ಅದರ ಭಾಗವಾಗಿಯೇ ಹರೀಶ್ ಪೂಜಾರಿಯನ್ನು ಕೊಲೆ ಮಾಡಿ ಭುವಿತ್ ಶೆಟ್ಟಿ ಎಂಬ ಬಂಟರ ಹುಡುಗ ಜೈಲುಪಾಲಾಗಿದ್ದಾನೆ.

ಮಂಗಳೂರು ಕೋಮುವಾದದ ಜಗತ್ತಿನಲ್ಲಿ ಈಗ ಬಂಟರು ಫೀಲ್ಡಿಗಿಳಿದಿದ್ದಾರೆ. ಬಿಲ್ಲವರ ರಾಜಕೀಯ ಮುಗ್ದತೆಯನ್ನು ಬಳಸಿಕೊಂಡು ಮೇಲ್ವರ್ಗಗಳು ಬಲಿ ಪಡೆಯುತ್ತಿದ್ದವು. ಆರ್.ಎಸ್.ಎಸ್ ಮತ್ತು ಬಿಜೆಪಿಯಲ್ಲಿ ಬಿಲ್ಲವರಿಗೆ ನಾಯಕತ್ವ ಬೇಕಾಗಿಯೂ ಇರಲಿಲ್ಲ ಮತ್ತು ಅದನ್ನು ಕೊಡಲೂ ಇಲ್ಲ. ಕೇವಲ ಕಾಲಾಳುಗಳಾಗಿ ಸತ್ತರು ಮತ್ತು ಸಾಯಿಸಿ ಜೈಲು ಪಾಲಾದ್ರು. ಆದರೆ ಬಂಟರು ಹಾಗಲ್ಲ. ಸಾಮಾಜಿಕ ಸ್ಥಾನಮಾನಗಳ ಜೊತೆಗೇ ಕೋಮುವಾದಿಗಳ ಜೊತೆ ಸೇರುತ್ತಿದ್ದಾರೆ. ಮುಂಬೈ ಅಂಡರ್ ವಲ್ಡ್ ಪ್ರಾರಂಭವಾಗಿದ್ದೇ ಕರಾವಳಿಯ ಬಂಟರಿಂದ. ಹಾಗಂತ ಅದೇನೂ ಅವರಿಗೆ ಮುಜುಗರ ತರುವಂತಹ ವಿಚಾರವಲ್ಲ. ಬದಲಾಗಿ ಪ್ರತಿಷ್ಠೆಯ ವಿಷಯವಾಗಿತ್ತು. ದೇವಸ್ಥಾನ ಪುನರುಜ್ಜೀವನ, ಬ್ರಹ್ಮಕಲಶ, ನಾಗಮಂಡಲ, ಕೋಲ ನೇಮಗಳಲ್ಲಿ ಈ ಭೂಗತ ಜಗತ್ತಿನ ಶೆಟ್ರುಗಳಿಗೆ ವಿಶೇಷ ಗೌರವವಿದೆ.

 ***

ತೊಂಭತ್ತರ ದಶಕದ ಆರ್ಥಿಕ ಸುಧಾರಣೆಗಳ ಫಲವಾಗಿ ಕರಾವಳಿಯ ಜಾತೀಯ ಸಮೀಕರಣದಲ್ಲಿ ಹಲವು ಬಗೆಯ20090124pub4 ಚಲನೆಗಳು ಕಂಡುಬಂದವು. ಜ್ಞಾನ ಹಾಗೂ ಉದ್ಯೋಗ ಆಧಾರಿತ ಹೊಸ ಸಮಾಜೋ ಆರ್ಥಿಕ  ಸನ್ನಿವೇಶದಲ್ಲಿ ಸೃಷ್ಟಿಯಾದ ನೂತನ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಮೂಲತಃ ವ್ಯವಸಾಯದ ಜೊತೆಗೆ  ಪೂರಕವಾಗಿ ಮುಂಬಯಿ ಉದ್ಯೋಗದ ಸಂಪರ್ಕದ ಹಣವನ್ನು ಅವಲಂಬಿಸಿದ್ದ ಇಲ್ಲಿಯ ಬಂಟ ಮತ್ತು ಬಿಲ್ಲವ ಜಾತಿಗಳು ಸಾಕಷ್ಟು ಯಶಸ್ಸನ್ನು ಕಂಡವು. ಅಲ್ಲದೆ ಆ ಕಾಲಕ್ಕಾಗಲೇ ಭೂಸುಧಾರಣೆಗಳ ಫಲವಾಗಿ ಭೂಮಿಯನ್ನು ಆಧರಿಸಿದ್ದ ಆರ್ಥಿಕ ಸಂಬಂಧಗಳು ಕೂಡಾ ಬಹತೇಕ ಸಡಿಲವಾಗಿದ್ದವು.

ಅಂತೆಯೇ ಒಂದು ಕಡೆ ಆರ್ಥಿಕ ಸಂಬಂಧಗಳಲ್ಲಿ ಉಂಟಾದ ಬದಲಾವಣೆ ಇನ್ನೊಂದೆಡೆ ಮಧ್ಯಮ ವರ್ಗೀಯ ಉದ್ಯೋಗಗಳ ಪ್ರಸರಣ- ಇವೆರಡೂ ಸಹಜವಾಗಿಯೇ ಸಾಮಾಜಿಕ ಸ್ತರೀಕರಣದಲ್ಲಿ ಮತ್ತು ಸಂಬಂಧಗಳಲ್ಲಿ ಮಾರ್ಪಾಡುಗಳಿಗೆ ಬೇಡಿಕೆಯಿಟ್ಟವು. ಅಂದರೆ ಹೊಸದಾಗಿ ದೊರೆತ ಆರ್ಥಿಕ ಸ್ಥಿತಿವಂತಿಕೆಯ ದೆಸೆಯಿಂದ ಇಲ್ಲಿಯ ಹಿಂದುಳಿದ ಜಾತಿಗಳು ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲ್ಮುಖ ಚಲನೆಯನ್ನು ಅಪೇಕ್ಷಿಸಿದವು. ಯಕ್ಷಗಾನ ಮೇಳಗಳಲ್ಲಿ ಭಾಗವಹಿಸುವ ಹಕ್ಕಿಗೆ ಬಿಲ್ಲವರು ಬೇಡಿಕೆಯಿಟ್ಟದ್ದು ಅಥವಾ ಕಟೀಲು ಮೊದಲಾದೆಡೆ ದೇವಾಲಯಗಳ ಮ್ಯಾನೇಜ್ ಮೆಂಟ್ ಗೆ ಸಂಬಂಧಪಟ್ಟಂತೆ ಕಂಡುಬಂದ ಸಂಘರ್ಷಗಳು ಮತ್ತು ಇತರೆ ಕೆಲವು ಬೆಳವಣಿಗೆಗಳು ಅಂತಹ ಪ್ರವೃತ್ತಿಗಳನ್ನು ಸಂಕೇತಿಸಿದ್ದವು.

ಆರ್ಥಿಕ ನೆಲೆಯಲ್ಲಿ ಬಲಗೊಳ್ಳುತ್ತಿದ್ದ ಕೆಳವರ್ಗಗಳ ಮಹತ್ವಾಕಾಂಕ್ಷೆಗಳು ಮತ್ತು ಹಕ್ಕೊತ್ತಾಯ ಸಾಮಾಜಿಕ ಶ್ರೇಣೀಕರಣದ ಪೀಠಭಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಜನಿವಾರಿಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿದವು. ಆರಂಭದಲ್ಲಿ ಜೀರ್ಣೋದ್ಧಾರ, ನಾಗಮಂಡಲ ಅಥವಾ ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳ ನಾಯಕತ್ವವನ್ನ ಹೊಸ ಆರ್ಥಿಕ ವರ್ಗಗಳಾಗಿರೋ ಬಂಟರು ಮತ್ತು ಬಿಲ್ಲವರಿಗೆ ನೀಡುವ ಮೂಲಕ ಹೊಸ ಯುಗದ ಸವಾಲುಗಳನ್ನ ಎದುರಿಸುವ ಪ್ರಯತ್ನಗಳನ್ನ ಬ್ರಾಹ್ಮ,ಣರು ನಡೆಸಿದ್ದನ್ನ ನಾವು ನೋಡಿದ್ದೇವೆ.

ಹಾಗೇಯೇ ಆರ್ಥಿಕ ಸುಧಾರಣೆಯ ಫಲ ಮತ್ತು ಅದರ ಜೊತೆಯೇ ಸೃಷ್ಟಿಯಾದ ಅತೃಪ್ತಿ ರಾಜಕೀಯ ನೆಲೆಯಲ್ಲೂ ಸಂಚಲನವನ್ನ ಕಾಣಿಸಿದವು. ಚುನಾವಣಾ ರಾಜಕಾರಣದಲ್ಲಿ ಅವಶ್ಯವಿದ್ದ ಸಂಖ್ಯಾಬಲ ಮತ್ತು ಸಂಪನ್ಮೂಲ- ಇವೆರಡೂ ಕ್ರಮವಾಗಿ ಕರಾವಳಿಯ ಹಿಂದುಳಿದ ವರ್ಗವಾಗಿರೋ ಬಿಲ್ಲವ ಮತ್ತು ಬಂಟರಲ್ಲಿ ಇದ್ದವು. ಹೀಗಾಗಿ, ಅಂತಹ ವರ್ಗಗಳ ಒಳಗೊಳ್ಳುವಿಕೆ ಆರ್.ಎಸ್.ಎಸ್ ಗೆ ಅನಿವಾರ್ಯವಾಗಿತ್ತು. ಅದರ ಭಾಗವಾಗಿಯೇ ಯಕ್ಷಗಾನ, ನಾಗಮಂಡಲ, ಭ್ರಹ್ಮಕಲಶ, ಜಾತ್ರೆ, ನೇಮಗಳಲ್ಲಿ ಬಂಟ- ಬಿಲ್ಲವರಿಗೆ ಪುರೋಹಿತಶಾಹಿಗಳು ನಾಯಕತ್ವ ನೀಡಿದವು. ಇಂದೊಂದು ಜನಿವಾರಧಾರಿಗಳ ಮಲ್ಟಿ ಪ್ಲ್ಯಾನ್ ಆಗಿದೆ. ಇಂತಹ ಒಂದು ವಿಶಿಷ್ಟ ಸನ್ನಿವೇಶದಲ್ಲಿಯೇ ನಾವು ಹಿಂದೂಪರ ಸಂಘಟನೆಗಳ ಪ್ರಸರಣವನ್ನು ಕಾಣುವುದು. ಇದು ಒಂದು ನೆಲೆಯಲ್ಲಿ ಹೊಸಕಾಲದ ಹೊಸ ಒತ್ತಡಗಳಿಗೆ ಪುರೋಹಿತಶಾಹಿ ಪ್ರತಿಕೃಯಿಸಿದ ರೀತಿಯಾಗಿದ್ದರೆ ಇನ್ನೊಂದೆಡೆ ಜೀರ್ಣೋದ್ಧಾರಗಳಂತಹ ಮೊದಲ ಸುತ್ತಿನ ಕಾರ್ಯತಂತ್ರಗಳ ಮುಂದುವರಿಕೆಯೂ ಆಗಿದೆ.

ಹಿಂದುತ್ವ ಸಂಘಟನೆಯ ಕಾಲಾಳುಗಳ ಸಂಘಟನೆಯ ನಾಯಕತ್ವ ದೊರಕಿದ್ದು ಹೊಸಕಾಲದಲ್ಲಿ ಹೊಸ ಕಸವು ಪಡೆದುಕೊಂಡ ವರ್ಗಗಳಿಗೇ.Accused_Homestay_Attack ಪುರೋಹಿತಶಾಹಿಯ ಇಂತಹ ಕಾರ್ಯತಂತ್ರಗಳ ಇನ್ನೊಂದು ಅಂಶ ಹಿಂದುಳಿದ ಜಾತಿಗಳಿಗೆ ಸಮಾನ ಶತ್ರುವೊಂದನ್ನು ಸ್ಷಷ್ಟಪಡಿಸಿಕೊಟ್ಟದ್ದು. ಅದು ಮುಸ್ಲೀಮರು. ಹೀಗಾಗಿ ಕರಾವಳಿಯ ಕೆಳವರ್ಗಗಳಲ್ಲಿ ಹೊಸದಾಗಿ ಸೃಷ್ಟಿಯಾದ ಎನರ್ಜಿಗೆ, ಕ್ರೀಯಾಶೀಲಿತೆಗೆ ಒಂದು ವೇದಿಕೆ ನಿರ್ಮಿಸಿಕೊಡುವ ಮೂಲಕ ಪುರೋಹಿತಶಾಹಿ ಅವುಗಳ ಹಕ್ಕೊತ್ತಾಯದ ಬೇಡಿಕೆಗಳು ತನ್ನತ್ತವೇ ತಿರುಗಿ ತಾನು ಅನುಭವುಸುತಿದ್ದ ಪಂಕ್ತಿಭೇದಗಳಂತಹ ವಿಶೇಷ ಸಾಮಾಜಿಕ ಸ್ಥಾನಮಾನ, ಸೌಲಭ್ಯಗಳು ಸಾರ್ವತ್ರಿಕವಾಗಿ ಪ್ರಶ್ನೆಯಾಗುವುದರಿಂದ ಸ್ವಯಂ ರಕ್ಷಿಸಿಕೊಂಡಿದೆ. ಪಂಕ್ತಿಬೇದವನ್ನು, ದೇವಸ್ಥಾನದ ಸ್ಥಾನ ಮಾನವನ್ನು ಪ್ರಶ್ನೆ ಮಾಡಬೇಕಾಗಿದ್ದವರನ್ನೇ ಪುರೋಹಿತಶಾಹಿಗಳು ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿದ್ದಾರೆ.

ಉತ್ತರದಲ್ಲಿ ಹಿಂದುಳಿದ ವರ್ಗಗಳನ್ನ ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಕ್ರಿಯೆಯನ್ನ ನಾವು ಕಾಣುತ್ತೇವೆ. ಆದರೆ ಅಲ್ಲಿ ಅಂತಹ ಹೊಸ ಆರ್ಥಿಕತೆಯ ಸುಳಿವುಗಳು ಇಲ್ಲದಿರುವಂತದ್ದು ಮತ್ತು ಅಲ್ಲಿ ಚಲನೆ ಮುಖ್ಯವಾಗಿ ಮೀಸಲಾತಿ ಆಧರಿಸಿದ್ದು. ಹೀಗಾಗಿ ಅಲ್ಲಿನ ಹಿಂದುಳಿದ ಜಾತಿಗಳು ಮುಸ್ಲಿಮರನ್ನು ಮೀಸಲಾತಿಗೆ ಸಹಸ್ಪರ್ಧಿಗಳು ಮತ್ತು ಆ ಮೂಲಕ ಅವರು ತಮ್ಮ ಸೌಲಭ್ಯಗಳಿಗೆ ಸಂಚಕಾರ ಎನ್ನುವಂತೆ ಪರಿಗಣಿಸುವಲ್ಲಿ ಹಿಂದುತ್ವ ಪ್ರಾಜೆಕ್ಟ್ ಕಾರ್ಯನಿರ್ವಹಿಸಿದೆ. ಇತ್ತೀಚೆಗೆ ನಡೆದ ಬಿಹಾರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಲಾಲು ಹಾಗೂ ನಿತೀಶ್ ಅವರನ್ನ ಕುರಿತಂತೆ “ಅವರು ದಲಿತ, ಮಹಾದಲಿತ ಹಾಗೂ ಹಿಂದುಳಿದ ವರ್ಗಗಳಿಂದ ಶೇಕಡಾ ಐದರಷ್ಟು ಮೀಸಲು ಕೋಟಾವನ್ನು ಕಿತ್ತುಕೊಂಡು ಇನ್ನೊಂದು ಸಮುದಾಯಕ್ಕೆ ಕೊಡಲು ಪಿತೂರಿ ಮಾಡುತ್ತಿದ್ದಾರೆ” ಎಂದು ನುಡಿದದ್ದು ಇದೇ ತಂತ್ರದ ಭಾಗವಾಗಿಯೇ.

ಕರಾವಳಿಯಲ್ಲಿ ಹಿಂದುತ್ವ ಸಂಘಟನೆಗಳ ಮೂಲಕ ಅಂತಹ ಒಂದು ಗೋಲ್ ಪೋಸ್ಟ್ ಅನ್ನು ಕೆಳವರ್ಗಗಳಿಗೆ ಬ್ರಾಹ್ಮಣಶಾಹಿ ಸಂಘಪರಿವಾರ ಒದಗಿಸಿಕೊಟ್ಟಿದೆ. ಪರಿವಾರದ ಕಾಲಾಳು ಸಂಘಟನೆಗಳಲ್ಲಿ ಹಿಂದುಳಿದ ಜಾತಿಗಳಿಗೆ ನಾಯಕತ್ವವನ್ನ ಕೊಡುವುದು ಮತ್ತು ಅದೇ ವೇಳೆಗೆ ಅವುಗಳ ದೃಷ್ಟಿ ತನ್ನ ವಿರುದ್ಧ ಬೀಳದಂತೆ ನೋಡಿಕೊಳ್ಳುವುದು- ಇವೆರಡೂ ಸ್ಪಷ್ಟವಾಗಿ ವ್ಯಾಖ್ಯಾನಿಸಲ್ಪಟ್ಟ ಹಾಗೂ ಸಂಕೀರ್ಣ ಸ್ವರೂಪದ ನಿಯಂತ್ರಣ ವ್ಯವಸ್ಥೆಯನ್ನ ಅಪೇಕ್ಷಿಸಿದವು. ಇವತ್ತು ಕಲ್ಲಡ್ಕ ಅನ್ನೋದು ಇಡೀ ಕರಾವಳಿಯ ಹೈಕಮಾಂಡ್ ಅನ್ನೋ ರೀತಿಯಲ್ಲಿ ಉದಯಿಸಿದ್ದು ಸಂಘಪರಿವಾರದ ಅಂತಹ ಪ್ರಯತ್ನಗಳು ಯಶಸ್ವಿಯಾಗಿರುವುದನ್ನ ಸಂಕೇತಿಸುತ್ತವೆ.

***

ಬಿಲ್ಲವರ ಸಮುದಾಯದಲ್ಲಿ ಆರ್.ಎಸ್.ಎಸ್ ನ ಯೂಸ್ ಅ್ಯಂಡ್ ತ್ರೋ ಗೆ ಬಲಿಯಾದುದರ ಬಗ್ಗೆ ಗಂಭಿರ ಚರ್ಚೆಗಳು ನಡೆಯುತ್ತಿದೆ. ಹಿಂದುತ್ವವಾದದಿಂದ ಬೀದಿಪಾಲಾದ ಬಿಲ್ಲವ ಕುಟುಂಬಗಳ ಉದಾಹರಣೆಯನ್ನು ಮುಂದಿಟ್ಟುಕೊಂಡು ಸಮುದಾಯದೊಳಗೇ ಜಾಗೃತಿ ಕಾರ್ಯ ಸ್ವಲ್ಪ ಮಟ್ಟಿಗೆ ಪ್ರಾರಂಭವೇನೋ ಆಗಿದೆ. ಅದರ ಅರಿವಿದ್ದೇ ಇದೀಗ ಆರ್ ಎಸ್ ಎಸ್ ಕಣ್ಣು ಬಂಟ ಸಮುದಾಯದತ್ತಾ ಬಿದ್ದಿದೆ. ಅಂಡರ್ ವಲ್ಡ್ ಅನ್ನು ಹತ್ತಿರದಿಂದ ನೋಡಿದ ಸಮುದಾಯವಾಗಿರೋ ಬಂಟ ಸಮುದಾಯದಲ್ಲಿ ರೌಡೀಸಂ ಎನ್ನುವುದೂ ಕೂಡಾ ಪ್ರತಿಷ್ಠೆಯ ವಿಚಾರವಾಗಿದೆ. ದೇವಸ್ಥಾನಗಳಲ್ಲಿ ಯಜಮಾನಿಕೆಯನ್ನು ಕೊಟ್ಟು ತಮ್ಮ ನೈವೇದ್ಯ ಬೇಯಿಸಿಕೊಂಡವರು ಇದೀಗ ತಮ್ಮ ದ್ವೇಷದ ರಾಜಕಾರಣಕ್ಕೂ ಬಂಟರನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಸದೃಡವಾಗಿರುವ ಇಂತಹ ಸಮುದಾಯ ಕೋಮುವಾದಿಗಳಿಗೆ ಅಸ್ತ್ರವಾಗುತ್ತಿರೋದು ಬಂಟ ಸಮುದಾಯ ಮತ್ತು ಸಮಾಜಕ್ಕೆ ಅತ್ಯಂತ ಆತಂಕಕಾರಿ.

ಸಾಮಾಜಿಕ ಜಾಲತಾಣ ಹಾಗೂ ಮುಸ್ಲಿಮ್ ಮಹಿಳೆಯರ ಪ್ರಾತಿನಿಧ್ಯ


-ಇರ್ಷಾದ್ ಉಪ್ಪಿನಂಗಡಿ


ಅಲ್ಲಾರಿ, ನಿಮ್ಮ ಮುಸ್ಲಿಮ್ ಯುವಕರು ಸಾಮಾಜಿಕ ಜಾಲ ತಾಣಗಳಲ್ಲಿ ತುಂಬಾ ಆಕ್ಟ್ವೀವ್ ಆಗಿ ಗುರುತಿಸಿಕೊಳ್ತಾರೆ, ಆದ್ರೆ ಮುಸ್ಲಿಮ್ ಮಹಿಳೆಯರು ಇಲ್ಲಿ ಯಾಕೆ ಕಾಣಿಸಿಕೊಳ್ತಿಲ್ಲ?  ನನ್ನ ಜೊತೆ ಮಾತನಾಡುವ ಅನೇಕ ಸ್ನೇಹಿತರು ನನ್ನಲ್ಲಿ ಕೇಳುವ ಸಹಜ ಪ್ರೆಶ್ನೆ. ಹೌದಲ್ವಾ, ಅಂತinidan-muslim-woman ಕುತೂಹಲಕ್ಕಾಗಿ ನಾನು ನನ್ನ ಫೇಸ್ ಬುಕ್ ಖಾತೆಯಲ್ಲಿ ಎಷ್ಟು ಮುಸ್ಲಿಮ್ ಮಹಿಳೆಯರು ಸ್ನೇಹಿತರಾಗಿದ್ದಾರೆ ಎಂದು ಚೆಕ್ ಮಾಡಿದೆ. ನನ್ನ ಸುಮಾರು ಮೂರು ಸಾವಿರ ಸ್ನೇಹಿತರ ಪೈಕಿ ಮುಸ್ಲಿಮ್ ಮಹಿಳೆಯರ ಸಂಖ್ಯೆ ಕೇವಲ ಆರು! ಈ ಪೈಕಿ ಎಷ್ಟು ಖಾತೆಗಳು ಅಸಲಿ ಅಥವಾ ಎಷ್ಟು ಖಾತೆಗಳು ನಕಲಿ ಎಂಬುವುದನ್ನು ನನಗೆ ಇದುವರೆಗೂ ಕಂಡುಹಿಡಿಯೋದಕ್ಕೆ ಸಾಧ್ಯವಾಗಿಲ್ಲ. ಕಾರಣ, ಖಾತೆ ಹೊಂದಿದವರ ಪ್ರೊಫೈಲ್ ಫೋಟೋವಾಗಲಿ ಇತರ ಮಾಹಿತಿಗಳಾಗಲಿ ಅಲ್ಲಿಲ್ಲ. ಆದ್ರೆ ನನ್ನ ಫೇಸ್ ಬುಕ್ ಖಾತೆಯ ಸ್ನೇಹಿತರಲ್ಲಿ ಇತರ ಧರ್ಮೀಯ ಮಹಿಳೆಯರ ಸಂಖ್ಯೆ ಬರೋಬ್ಬರಿ 400 ಕ್ಕೂ ಅಧಿಕ!

ಹಿಂಗ್ಯಾಕೆ ಅಂತ ನೀವು ತಲೆಕೆಡೆಸಿಕೊಂಡಿರಬಹುದು. ಆದ್ರೆ ನನಗೆ ಇದ್ರಲ್ಲಿ ಆಶ್ವರ್ಯ ಏನೂ ಅನ್ನಿಸೋದಿಲ್ಲ. ಬದಲಾಗಿ ಖೇಧ ಅನ್ನಿಸುತ್ತದೆ. ಕೆಲವು ತಿಂಗಳ ಹಿಂದೆ ಒಬ್ಬರು ಮುಸ್ಲಿಮ್ ಮಹಿಳೆ ನನ್ನ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಲುಹಿಸಿದ್ದರು. ಅವರ ಹೆಸರು ಉಮ್ಮು ರವೂಫ್ ರಹೀನಾ. ಅವರ ಮುಖಪುಟವನ್ನು ಗಮನಿಸಿದಾಗ ನನಗೆ ತುಂಬಾನೆ ಆಶ್ವರ್ಯವಾಯಿತು. ನನ್ನ ಫೇಸ್ ಬುಕ್ 6 ಮುಸ್ಲಿಮ್ ಗೆಳತಿಯರ ಪೈಕಿ ಇವರೊಬ್ಬರೇ ತಮ್ಮ ಪ್ರೊಫೈಲ್ ಫೋಟೋವನ್ನು ಹಾಕಿದ್ದರು. ಅವರ ಎಫ್.ಬಿ ವಾಲ್ ನೋಡ್ತಾ ಹೋದಂತೆ ಸಾಕಷ್ಟು ಪ್ರಗತಿಪರ ಬರಹಗಳು ಅಲ್ಲಿ ಕಂಡುಬಂದವು. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಮೂಲಭೂತವಾದ, ಕೋಮುವಾದ, ಮಹಿಳಾ ಶೋಷಣೆಯ ವಿರುದ್ಧ ಧೈರ್ಯವಾಗಿ, ಲಾಜಿಕ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ರಹೀನಾ. ಕುತೂಹಲಕಾರಿ ವಿಚಾರವೆಂದರೆ ಇವರ ಸ್ಟೇಟಸ್ಗೆ ಬರುತ್ತಿರುವ ಕಾಮೆಂಟ್ಗಳು ಮಾತ್ರ ಅಸಹನೀಯ.

ಅಲ್ಲಿರುವ ಮುಸ್ಲಿಮ್ ಯುವಕರ ಬಹುತೇಕ ಕಾಮೆಂಟ್ಗಳು ರಹೀನಾ ತಮ್ಮ ಪ್ರೊಫೈಲ್ನಲ್ಲಿ ಫೋಟೋ ಹಾಕಿದಕ್ಕಾಗಿ. ಜೊತೆಗೆ ಅವರ ಪ್ರಗತಿಪರ ಲಾಜಿಕ್ ಅಭಿಪ್ರಾಯಗಳಿಗೆ ಉತ್ತರ ನೀಡಲು ಸಾಧ್ಯವಾಗದಾಗ ಕೋಪದಿಂದ ಅವರ ಮೇಲೆ ಮುಗಿಬೀಳುತ್ತಿದ್ದರು. ಬಹುತೇಕ ಕಾಮೆಂಟ್ಗಳ ಒತ್ತಾಯ ಒಂದೇ ಮುಸ್ಲಿಮ್ ಮಹಿಳೆಯಾಗಿ ಫೇಸ್ ಬುಕ್ ಪ್ರೊಫೈಲ್ನಲ್ಲಿ ನಿನ್ನ ಫೋಟೋ ಹಾಕಿರೋದು ಧರ್ಮ ಬಾಹಿರ  ಎಂದು. ಫೋಟೋ ಹಾಕಿರೋದು ಅಲ್ಲದೆ ಧರ್ಮದ ಬಗ್ಗೆ ಮೂಲಭೂತವಾದದ ಕುರಿತಾಗಿ ಪ್ರಶ್ನಿಸಿದರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂಬ ಬೆದರಿಕೆಗಳು. ಹೀಗೆ ರಹೀನಾ ಮೇಲೆ ಮುಗಿಬಿದ್ದ ಯುವಕರ ಪ್ರೋಫೈಲ್ಗಳನ್ನು ನಾನು ಕುತೂಹಲಕ್ಕಾಗಿ  ಗಮನಿಸುತ್ತಿದ್ದೆ. ಅಬ್ಬಬ್ಬಾ,  ಅದೆಷ್ಟು ಅಂದ ಚೆಂದದ ಫೋಟೋಗಳು, ನಿಂತು ಕುಂತು, ಬೈಕ್ ಮೇಲೆ ಕೂತು, ಕಾರ್ ಮುಂದೆ ನಿಂತು ಬೇರೆ, ಹೀಗೆ ಭಿನ್ನ ವಿಭಿನ್ನ ಪೋಸುಗಳಿಂದ ಕೂಡಿದ ಪೋಟೋಗಳು ಅಲ್ಲಿ ರಾರಾಜಿಸುತ್ತಿದ್ದವು. ಇದಕ್ಕೆಲ್ಲಾ ನಿನ್ನ ಧರ್ಮ ಅನುಮತಿ ಕೊಡುತ್ತಾ ಎಂದು ಪ್ರಶ್ನಿಸಿದರೆ ಅವರಲ್ಲಿ ಉತ್ತರವೇ ಇಲ್ಲ. ಮುಸ್ಲಿಮ್ ಮಹಿಳೆಯೊಬ್ಬಳು ಹೀಗೆ ಬಹಿರಂಗವಾಗಿ ಪ್ರೆಶ್ನೆ ಮಾಡ್ತಿದ್ದಾರಲ್ಲಾ ಅಂತ ನಾನು ಖುಷಿ ಪಟ್ರೆ, ಕೊನೆಗೊಂದು ದಿನ ರಹೀನಾ ಫೇಸ್ ಬುಕ್ ಎಕೌಂಟ್ ಇದ್ದಕ್ಕಿದಂತೆ ನಾಪತ್ತೆಯಾಗೋದಾ!

ಮುಸ್ಲಿಮ್ ಮಹಿಳೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೀವು ಮಿಂಚಿದಾಗ ಆದಂತಹಾ ಅನುಭವಗಳೇನು ಎಂದು ರಹೀನರಲ್ಲಿ ಮಾತನಾಡಿದಾಗ  ನನ್ನ ಇನ್ ಬಾಕ್ಸ್ ಗೆ ಕೆಟ್ಟ ಕೆಟ್ಟ ಬೆದರಿಕೆಯ ಮೆಸೇಜ್ಗಳು ಬರುತ್ತಿದ್ದವು. ಫೋಟೋ ಯಾಕೆ ಹಾಕ್ತಿಯಾ ಅಂತ ಮುಗಿಬೀಳುತ್ತಿದ್ದರು. ಹೀಗೆ ಫೋಟೋ ಹಾಕೋದು, ಧರ್ಮದ ಬಗ್ಗೆ ಪ್ರಶ್ನಿಸೋದನ್ನು ಮುಂದುವರಿಸಿದ್ರೆ ಪರಿಣಾಮ ನೆಟ್ಟಗಿರೋದಿಲ್ಲ, ಮಹಿಳೆ ಹೇಗಿರಬೇಕು ಹಾಗೆಯೇ ಇರಬೇಕೆಂಬ ಬೆದರಿಕೆ ಕರೆಗಳೂ ಸಾಮಾನ್ಯವಾಗಿದ್ದವು. ಅನಿವಾರ್ಯವಾಗಿ ಖಾತೆಯ ಪ್ರೊಫೈಲ್ನಿಂದ ನನ್ನ ಪೋಟೋವನ್ನು ಡಿಲಿಟ್ ಮಾಡಬೇಕಾಗಿ ಬಂತು.  ಕೊನೆಗೊಂದು ದಿನ ನನ್ನ ಫೇಸ್ ಬುಕ್ ಖಾತೆ ಇದ್ದಕಿದ್ದಂತೆ ಬ್ಲಾಕ್ ಆಗೋಯ್ತು.

ರಹೀನಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ  ಸನ್ಮಾರ್ಗ ವಾರ ಪತ್ರಿಕೆಗೆ ಲೇಖನಗಳನ್ನುsocial_media ಬರೆದು ಕಳುಹಿಸುತ್ತಿದ್ದರು. ಜಮಾತೇ ಇಸ್ಲಾಮಿ ಹಿಂದ್ ಎಂಬ ಮುಸ್ಲಿಂ ಸಂಘಟನೆಯ ಅಧೀನದಲ್ಲಿರುವ ವಾರ ಪತ್ರಿಕೆಯಿದು. ಆರಂಭದಲ್ಲಿ ಇವರು ಬರೆದ ಲೇಖನಗಳು ಸನ್ಮಾರ್ಗದಲ್ಲಿ ಪ್ರಕಟವಾಗುತಿತ್ತು. ಆದರೆ ಯಾವಾಗ ರಹೀನಾ ಧರ್ಮದ ಹುಳುಕುಗಳನ್ನು ಬಹಿರಂಗವಾಗಿ ಪ್ರಶ್ನಿಸಲು ಶುರುಮಾಡಿದ್ರೋ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ವಿರೋಧ ವ್ಯಕ್ತವಾಗತೊಡಗಿದ್ವೋ, ಪ್ರಗತಿಪರ ಎಂದು ಬಿಂಬಿಸಿಕೊಳ್ಳೋ ಪ್ರಯತ್ನ ಮಾಡುತ್ತಿರುವ ಜಮಾತೇ ಇಸ್ಲಾಮೀಯ ವಾರ ಪತ್ರಿಕೆ ಸನ್ಮಾರ್ಗದಲ್ಲಿ ರಹೀನಾ ಲೇಖನ ಪ್ರಕಟನೆಗೆ ಅವಕಾಶ ನಿರಾಕರಿಸಲಾಯಿತು. ಇನ್ನು ದಲಿತ ಪರ, ಅಲ್ಪಸಂಖ್ಯಾತರ ಪರ, ಅಭಿವ್ಯಕ್ತಿಯ ಪರ ಹಾಗೂ ಮಹಿಳಾ ಪರ ಧ್ವನಿ ಎಂದು ಬಿಂಬಿಸಿಕೊಳ್ಳುವ ಕನ್ನಡ ದಿನಪತ್ರಿಕೆಯೊಂದರಲ್ಲೂ ರಹೀನಾ ಕೆಲಸ ಕಳೆದುಕೊಳ್ಳಬೇಕಾಯಿತು.

ಜೋಹಾ ಕಬೀರ್. ಎಂಜಿನಿಯರ್ ಪಧವೀಧರೆ ಮುಸ್ಲಿಮ್ ಯುವತಿ. ಈಕೆಯ ಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಖಾತೆಹೊಂದಲು, ತನ್ನ ಪ್ರೋಫೈಲ್ನಲ್ಲಿ  ಭಾವಚಿತ್ರ ಹಾಕಿಕೊಳ್ಳಲು ಹಾಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇವರಿಗೆ ಪೋಷಕರ-ಪತಿಯ ವಿರೋಧವೇನಿಲ್ಲ. ಆದರೆ  ಸಾಮಾಜಿಕ ಜಾಲತಾಣಗಳಲ್ಲಿರುವ ಮುಸ್ಲಿಮ್ ಯುವಕರಿಗೆ ಸಮುದಾಯದ ಹೆಣ್ಣುಮಕ್ಕಳ ಮೇಲೆ ಎಲ್ಲಿಲ್ಲದ ಕಾಳಜಿ! ಪ್ರೋಫೈಲ್ ಫೋಟೋ ಹಾಕಿದಕ್ಕಾಗಿಯೇ ಇವರಿಗೂ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ. ಒತ್ತಡ ಹೆಚ್ಚಾಗಿ ಇವರೂ ತಮ್ಮ ಪ್ರೋಫೈಲ್ ಪೋಟೋವನ್ನು ಕಿತ್ತುಹಾಕಬೇಕಾಗಿ ಬಂತು. ಇನ್ನು ತನ್ನ ಪತಿಯ ಜೊತೆ ಮದುವೆ ದಿನದ ಪೋಟೋವನ್ನು ಫೇಸ್ ಬುಕ್ ಖಾತೆಯಲ್ಲಿ ಹಾಕಿದಾಗ ಅದಕ್ಕೂ ವಿರೋಧ. ತನ್ನ ಪತಿಯ ಜೊತೆ ನಿಂತ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಸ್ವಾತಂತ್ಯ್ರವೂ ನನಗಿಲ್ಲ. ನನ್ನಂತೆಯೇ ಅನೇಕ ಗೆಳತಿಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಾರೆ, ಆದರೆ ಅದಕ್ಕೆ ಎದುರಾಗುತ್ತಿರುವ ವಿರೋಧ ನಮ್ಮೆನ್ನೆಲ್ಲಾ ಸೋಷಿಯಲ್ ಮಿಡಿಯಾಗಳಿಂದ ದೂರ ಉಳಿದುಕೊಳ್ಳುವಂತೆ ಮಾಡಿದೆ ಅಂತಿದ್ದಾರೆ ಜೋಹಾ ಕಬೀರ್. ಜೋಹಾರದ್ದೇ ಕಥೆ ಆಕೆಯ ಇತರ ಮುಸ್ಲಿಮ್ ಗೆಳತಿಯರದ್ದು.

ನಾಲ್ಕು ವರ್ಷಗಳ ಹಿಂದೆ ಮುಬೀನಾ (ಹೆಸರು ಬದಲಾಯಿಸಲಾಗಿದೆ) ಎಂಬ  ವೈದ್ಯಕೀಯ ಶಿಕ್ಷಣ ಓದುತ್ತಿದ್ದUpload-Facebook-photo ಮುಸ್ಲಿಮ್ ಯುವತಿ ಫೇಸ್ ಬುಕ್ ನಲ್ಲಿ ತುಂಬಾ ಆಕ್ವೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪ್ರೊಫೈಲ್ ನಲ್ಲಿ ತಮ್ಮ ಪೋಟೋವನ್ನು ಹಾಕಿಕೊಂಡಿದ್ದರು. ಮುಕ್ತವಾಗಿ ಮೂಲಭೂತವಾದ, ನೈತಿಕ ಪೊಲೀಸ್ ಗಿರಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದರು. ಆದ್ರೆ ಕೆಲವೇ ದಿನಗಳಲ್ಲಿ ಮೂಲಭೂತವಾದಿಗಳ ಕೆಂಗಣ್ಣಿಗೆ ಅವರು  ಗುರಿಯಾಗಬೇಕಾಯಿತು. ಇಷ್ಟಾದರೂ, ಸಾಮಾಜಿಕ ಜಾಲತಾಣಗಳ ಬೆದರಿಕೆಗೆ ಜಗ್ಗದ ಮುಬೀನಾ ಮನೆಗೆ ಮೂಲಭೂತವಾದಿ ಪುಂಡರ ಗುಂಪು ಹೋಗಿ ಎಚ್ಚರಿಕೆ ನೀಡಿ ಫೇಸ್ ಬುಕ್ ಖಾತೆಯನ್ನೇ ಸ್ಥಗಿತಗೊಳಿಸಿಬಿಟ್ಟರು ಅಂತಾರೆ ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ. ಮುನೀರ್ ಕಾಟಿಪಳ್ಳ ಸಾಮಾಜಿಕ ಜಾಲ ತಾಣಗಳಲ್ಲೂ ತುಂಬಾನೇ ಆಕ್ಟೀವ್ ಆಗಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿ. ವರ್ಷದ ಹಿಂದೆ ಅವರು ಪತ್ನಿ ಶಬಾನಾ ಜೊತೆಗಿದ್ದ ಪೋಟೋವನ್ನು ಫೇಸ್ ಬುಕ್ ನಲ್ಲಿ  ಹಾಕೊಂಡಿದ್ದರು. ತಮಾಷೆಯಂದ್ರೆ ಮುಸ್ಲಿಮ್ ಮೂಲಭೂತವಾದಿ ಹುಡುಗರು ಅದಕ್ಕೂ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನು ಮೀರಿ ಮುಸ್ಲಿಮ್ ಹೆಣ್ಣುಮಕ್ಕಳು ಸೋಷಿಯಲ್ ಮೀಡಿಯಾಗಳಲ್ಲಿ ಮುಂದುವರಿದರೆ, ಅವರ ಹೆಸರಲ್ಲಿ ಫೇಕ್ ಖಾತೆಗಳನ್ನು ತೆರೆದು ಅಶ್ಲೀಲ ವಿಡಿಯೋಗಳನ್ನು ಟ್ಯಾಗ್ ಮಾಡಲಾಗುತ್ತದೆ. ಅಥವಾ ಕೆಟ್ಟ ಮೆಸೇಜ್ಗಳನ್ನು ಹರಿಯಬಿಡಲಾಗುತ್ತದೆ. ಇಂಥಹಾ ಅನೇಕ ಕೀಳುಮಟ್ಟದ ಕಿರುಕುಳದ ಅನುಭವಗಳು ಈ ಮೇಲಿನ ಎಲ್ಲಾ ಮಹಿಳೆಯರಿಗಾಗಿದೆ. ಈ ಮೂಲಕ ಸಾಮಾಜಿಕ ಜಾಲ ತಾಣಗಳಿಂದ ಅವರನ್ನು ಹೊರದಬ್ಬುವ ಪ್ರಯತ್ನವನ್ನು ಮೂಲಭೂತವಾದಿಗಳು ಮಾಡ್ತಿದ್ದಾರೆ. ಇನ್ನೊಂದೆಡೆ ಹಿಂದೂ ಪರ ಸಂಘಟನೆಗಳು ಲವ್ ಜಿಹಾದ್ ಭಯಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿರುವ ಹಿಂದೂ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿರುವುದು ಕೂಡಾ ಗಮನಿಸಬೇಕಾದ ವಿಚಾರ.

ಈ ಹಿಂದೆ ಮುಸ್ಲಿಮ್ ಹೆಣ್ಣುಮಕ್ಕಳಿಗೆ ವಿದ್ಯಾಬ್ಯಾಸ ಪಡೆಯಲೂ ಅವಕಾಶವಿರಲಿಲ್ಲ. ಸಾರಾ ಅಬೂಬಕ್ಕರ್ ಅಂತಹಾ ಅನೇಕ ದಿಟ್ಟ ಮಹಿಳೆಯರ ಹೋರಾಟದ ಫಲವೆಂಬುವಂತೆ ಇಂದು ಮುಸ್ಲಿಮ್ ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದರೆ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಏನೂ ಸಾಧನೆ ಮಾಡಬೇಕಾದ್ರೂ ಅದು ಬುರ್ಖಾದೊಳಗಡೆಗೆ ಮಾತ್ರ ಸೀಮಿತ ಎಂಬ ವಾದದಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಇದನ್ನು ಮೀರಿ ಕೆಲವೊಂದು ಮುಸ್ಲಿಮ್ ಮಹಿಳೆಯರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಅಭಿವ್ಯಕ್ತಿಯ ಹಕ್ಕನ್ನು ಪಡೆದುಕೊಳ್ಳುವ ಪ್ರಯತ್ನ ಅಲ್ಲೊಂದು ಇಲ್ಲೊಂದರಂತೆ ನಡೆಯುತ್ತಿದೆ. ಧರ್ಮದ ಹೆಸರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುವುದನ್ನು ಮುಸ್ಲಿಮ್ ಸಮಾಜದ ಪ್ರಜ್ಞಾವಂತರು ಗಮನಿಸಬೇಕಿದೆ.

ಬಂಜಗೆರೆ ಮತ್ತು ಕುಂವೀಯವರಿಗೊಂದು ಬಹಿರಂಗ ಪತ್ರ

ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಡಾ ಬಂಜಗೆರೆ ಜಯಪ್ರಕಾಶ್ ಮತ್ತು ಕುಂ ವೀರಭದ್ರಪ್ಪನವರಿಗೆ,

ಆಳ್ವಾಸ್ ನುಡಿಸಿರಿಯ ಆಹ್ವಾನ ಪತ್ರಿಕೆ ನೋಡಿದ ಬಳಿಕ ತಮಗೆ ಪತ್ರ ಬರೆಯುತ್ತಿದ್ದೇವೆ. ತಾವು ಈ ನೆಲದಲ್ಲಿ ಎಷ್ಟೋ ಕಾಲದಿಂದ ಜಾತ್ಯಾತೀತತೆ ಕೋಮುಸೌಹರ್ದತೆ, ಸಾಮಾಜಿಕ ಸಮಾನತೆ ಮತ್ತು ಸಮಾನ ಅವಕಾಶದ ಸ್ವಾಭಿಮಾನಿ ಬದುಕಿಗಾಗಿ ತಮ್ಮ ಮಾತು-ಕೃತಿಗಳ ಮೂಲಕ ಹೋರಾಟ ಮಾಡುತ್ತಾ ಬಂದವರು. ಈ ಮೂಲಕ ಯುವಪೀಳಿಗೆಗೆ ಆದರ್ಶಪ್ರಾಯರಾಗಿರುವವರು.

ನೀವು  ಹೀಗೆ ಎಡವಬಹುದೇ? ಅದೂ ಈ ಕಾಲದಲ್ಲಿ.  ಇದೀಗ ದೇಶಾದ್ಯಂತ ಸಾಹಿತ್ಯ ವಲಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಚಳುವಳಿಯಲ್ಲಿ ತೊಡಗಿದೆ. ಹೆಚ್ಚುತ್ತಿರುವ ಅಸೈರಣೆಯ ವಾತಾವರಣದ ವಿರುದ್ಧ ಸಿಡಿದೆದ್ದಿದೆ. ದೇಶದಲ್ಲೆಡೆ ಭುಗಿಲೆದ್ದಿರುವ ಅಸಹಿಷ್ಣುತೆಯ ವಾತಾವರಣದ Alvas-Nudisiri-2010ವಿರುದ್ದ ಸಾಹಿತಿಗಳು, ನಟ-ನಟಿಯರು, ವಿಜ್ಞಾನಿಗಳು ಹೋರಾಟಕ್ಕಿಳಿದಿದ್ದಾರೆ. ದೇಶದಾದ್ಯಂತ ಪ್ರಶಸ್ತಿ ವಾಪ್ಸಿ ಚಳುವಳಿ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ವಾಪಸು ಮಾಡುವ ಮೂಲಕ ಕುಂ.ವೀರಭದ್ರಪ್ಪ ಅವರೇ ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಿದ್ದಾರೆ. ನುಡಿಸಿರಿಯಲ್ಲಿ ಪಾಲ್ಗೊಳ್ಳುವ ನಿಮ್ಮ ನಿರ್ಧಾರವನ್ನು ಈ ಹಿನ್ನೆಲೆಯಲ್ಲಿ ಪುನರ್ ಪರಿಶೀಲಿಸುವುದು ಸೂಕ್ರವಲ್ಲವೇ?

ದಕ್ಷಿಣ ಕನ್ನಡ ಜಿಲ್ಲೆ ಎನ್ನುವುದು ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವದ ಪ್ರಯೋಗಶಾಲೆಯಾಗಿ ರಾಷ್ಟ್ರಮಟ್ಟದಲ್ಲಿ ಕುಖ್ಯಾತಿ ಗಳಿಸಿರುವುದು ನಿಮಗೆ ತಿಳಿದಿದೆ. ಆದರೆ ಇಂತಹ ಬೆಳವಣಿಗೆಗೆ ಕಾರಣಗಳೇನು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆದಿಲ್ಲ. ಮೇಲ್ನೋಟಕ್ಕೆ ಬಜರಂಗಿಗಳು ಸೇರಿದಂತೆ ಒಂದಿಷ್ಟು ಕೇಸರಿಪಡೆಯ ಸದಸ್ಯರು ಈ ಗಲಭೆಗಳ ರೂವಾರಿಗಳಂತೆ ಕಾಣುತ್ತಾರೆ. ಆದರೊ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿರುವ ಅಮಾಯಕ ಯುವಕರನ್ನು ದಾಳಗಳಂತೆ ಬಳಸಿಕೊಂಡು ರಾಜಕೀಯದ ಆಟವನ್ನು ಆಡುತ್ತಿರುವ ಸೂತ್ರಧಾರಿಗಳು ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಇಂತಹ ಸೂತ್ರಧಾರರನ್ನು ಗುರುತಿಸುವ ವೈಚಾರಿಕ ಸ್ಪಷ್ಟತೆಯನ್ನು ನಿಮ್ಮಂತಹವರ ಬರವಣಿಗೆಗಳಿಂದಲೇ ನಾವು ಗಳಿಸಿಕೊಂಡದ್ದು. ಅದಕ್ಕಾಗಿ ನಿಮಗೆ ಋಣಿಯಾಗಿದ್ದೇವೆ.

ವಿಶ್ವ ಹಿಂದೂ ಪರಿಷತ್ 50 ವರ್ಷಗಳನ್ನು ಈ ನೆಲದಲ್ಲಿ ಪೂರೈಸುತ್ತಿರುವುದಕ್ಕೂ ಈ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ  ಅಸಹಿಷ್ಣುತೆಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ನೀವು ಗಮನಿಸದೆ ಇರಬಹುದಾದ ಕೆಲವು ಸಂಗತಿಗಳ ಕಡೆ ಗಮನ ಸೆಳೆಯುವ ಪ್ರಯತ್ನ ನಮ್ಮದು. ವಿಶ್ವಹಿಂದೂ ಪರಿಷತ್ತಿನ ಸುವರ್ಣ ಮಹೋತ್ಸವ ಸಮಿತಿಯ ರಾಜ್ಯ ಅಧ್ಯಕ್ಷರಾಗಿರುವವರು ನುಡಿಸಿರಿಯ ರೂವಾರಿಯಾಗಿರುವ  ಡಾ ಎಂ ಮೋಹನ ಆಳ್ವರು. ಆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವವರು ಡಾ ಡಿ ವೀರೇಂದ್ರ ಹೆಗ್ಗಡೆಯವರು.  ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವದ ಹೆಸರಿನಲ್ಲಿ ಮೂರು ತಿಂಗಳು ದೇಶದಾದ್ಯಂತ ಸಮಾವೇಶಗಳನ್ನು ವಿಶ್ವ ಹಿಂದೂ ಪರಿಷತ್ ನಡೆಸಿತ್ತು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಮಾಜೋತ್ಸವಗಳನ್ನು ಆಯೋಜಿಸಲಾಗಿತ್ತು.

ಕರ್ನಾಟಕದಲ್ಲಿ ನಡೆದ ಎಲ್ಲಾ ಸಮಾವೇಶಗಳ ಯಜಮಾನಿಕೆ ಡಾ ಎಂ ಮೋಹನ ಆಳ್ವರದ್ದಾದರೆ, ರಾಷ್ಟ್ರಮಟ್ಟದkumvee ಸಮಾವೇಶಗಳ ಯಜಮಾನಿಕೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದು. ಇದರ ನಂತರ ಕರ್ನ್ಟಕವೂ ಸೇರಿದಂತೆ ದೇಶಾದ್ಯಂತ ಕೋಮುದ್ವೇಷದ ವಿಷಮಯ ವಾತಾವರಣ ನಿರ್ಮಾಣವಾಗಿರುವುದನ್ನು ತಾವು ಅಲ್ಲಗಳೆಯಲಾರಿರಿ ಎಂದು ನಂಬಿದ್ದೇವೆ. ದೇಶದಾದ್ಯಂತ ನಡೆಯುತ್ತಿರುವ ಕೋಮುಗಲಭೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಘಟನೆಗಳಿಗೂ ಈ ಸಮಾವೇಶಗಳಿಗೂ ಸಂಬಂಧವಿದೆ ಎಂದು ನಿಮಗೆ ಅನಿಸುವುದಿಲ್ಲವೇ? ಹೆಸರೇ ಸೂಚಿಸುವಂತೆ ಆಳ್ವಾಸ್ ನುಡಿಸಿರಿಯ ಯಜಮಾನಿಕೆ ಡಾ ಎಂ ಮೋಹನ ಆಳ್ವ  ಅವರದ್ದು. ಈ ವ್ಯಕ್ತಿ ಕೇಂದ್ರಿತ ಸಾಹಿತ್ಯದ ಜಾತ್ರೆಗೆ ಡಾ ಡಿ ವೀರೇಂದ್ರ ಹೆಗ್ಗಡೆಯವರದ್ದೇ ಆಶೀರ್ವಚನ. ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಫೋಟೋ ಕೂಡಾ ಅಚ್ಚು ಹಾಕಲಾಗಿದೆ.

ಸತ್ಯ ಇಷ್ಟೊಂದು ಸ್ಪಷ್ಟವಾಗಿ ನಮ್ಮ ಕಣ್ಣೆದುರು ಇರುವಾಗ ಕೋಮುವಾದದ ಸೂತ್ರಧಾರರ ಯಜಮಾನಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯಲ್ಲಿ ನೀವು ಹೇಗೆ ಭಾಗವಹಿಸಲು ಸಾಧ್ಯ? ಇದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಆಮಂತ್ರಣ ಪತ್ರಿಕೆಯಲ್ಲಿ ಡಾ ಬಂಜಗೆರೆ ಜಯಪ್ರಕಾಶ ಸರ್ “ಸಾಮಾಜಿಕ ನ್ಯಾಯ-ಹೊಸತನದ ಹುಡುಕಾಟ” ಎಂಬ ವಿಚಾರದ ಬಗ್ಗೆ ವಿಶೇಷೋಪನ್ಯಾಸ ನೀಡಿಲಿದ್ದಾರೆ ಎಂದಿದೆ.  ಊಳಿಗಮಾನ್ಯ ಪದ್ದತಿ, ವ್ಯಕ್ತಿಪೂಜೆ ಮತ್ತು ಧರ್ಮದ ಹೆಸರಲ್ಲಿ ನಡೆಯುತ್ತಿರುವ ಶೋಷಣೆಯನ್ನು ವಿರೋಧಿಸಿಕೊಂಡು ಬಂದ ಈ ಆಹ್ಹಾನವನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?

ಕಳೆದ ಎರಡು ವರ್ಷ ಆಳ್ವಾಸ್ ನುಡಿಸಿರಿಯಲ್ಲಿ ದಲಿತರ ಅವಹೇಳನ ಮಾಡಲಾಗಿತ್ತು. ಈ ಬಗ್ಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದಿರುವಂತಿಲ್ಲ. ತಾವು ಈಗಲೂ ಗೂಗಲ್ ಮೂಲಕ ಹುಡುಕಿದರೆೆ ಈ ಬಗ್ಗೆ ಮಾಹಿತಿ ದೊರೆಯುತ್ತದೆ. ಪಕ್ಕಾ ಶಿಕ್ಷಣದ ವ್ಯಾಪಾರಿಯಾಗಿರಾಗಿರುವ  ಡಾ ಎಂ ಮೋಹನ ಆಳ್ವರು ಇದೀಗ ಬಿಲ್ಡರ್ ಆಗಿಯೂ ಬೆಳೆದಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ರೆಸಾರ್ಟ್ ಸ್ಥಾಪಿಸಲು ಹೊರಟಿರುವ ಆಳ್ವರ ವಿರುದ್ಧ ಈಗಾಗಲೇ ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದೆ. ಜಮೀನ್ದಾರಿ ಪಳಿಯುಳಿಕೆಯಾಗಿರೋ ಡಾ ಎಂ ಮೋಹನ ಅಳ್ವರು ತಮ್ಮ ಶಿಕ್ಷಣ ವ್ಯಾಪಾರಕ್ಕಾಗಿ ಇಂತಹ ಸುಂದರವಾದ ವರ್ಣರಂಜಿತ ವಿಷಯಗಳನ್ನು ಇಟ್ಟುಕೊಂಡು ನುಡಿಸಿರಿ ಜಾತ್ರೆ ನಡೆಸುತ್ತಿದ್ದಾರೆ.

ಈ ಬಾರಿಯ ನುಡಿಸಿರಿಯಲ್ಲಿ ಸಾಮರಸ್ಯ- ಹೊಸತನದ ಹುಡುಕಾಟ ಎಂಬ ವಿಷಯದ ಬಗ್ಗೆ ನಮ್ಮ ನೆಚ್ಚಿನ ಮೇಷ್ಟ್ರಾಗಿರುವ ಕುಂ ವೀರಭದ್ರಪ್ಪನವರು ಮಾತನಾಡಲಿದ್ದಾರೆ ಎಂದು ತಿಳಿದು ಆಘಾತವಾಯಿತು. ಈ ಬಾರಿ 12 ನೇ ನುಡಿಸಿರಿ ನಡೆಯುತ್ತಿದೆ. ಕಳೆದ 11 ವರ್ಷಗಳಿಂದಲೂ ನುಡಿಸಿರಿಯಲ್ಲಿ ಇಂತಹ ಪ್ರಗತಿಪರ ವಿಷಯಗಳ ಮೇಲೆ ಆಳ್ವರು ಭಾಷಣ ಮಾಡಿಸಿದ್ದಾರೆ. ಆದರೆ ಇದರಿಂದ ಸಾಮಾಜಿಕ ಸಾಮರಸ್ಯ ಇನ್ನಷ್ಟು ಹಾಳಾಗುತ್ತಾ ಹೋಯಿತೇ ಹೊರತು ಸುಧಾರಣೆಯಾಗಲಿಲ್ಲ. ನಿಮ್ಮಂತಹ ಗೌರವಾನ್ವಿತ ಸಾಹಿತಿಗಳು ನುಡಿಸಿರಿ ವೇದಿಕೆ ಹತ್ತಿ ಭಾಷಣ ಮಾಡುವುದರಿಂದ ಆಳ್ವರಿಗೆ ವಿಶ್ವಾಸಾರ್ಹತೆ ತಂದುಕೊಂಡುತ್ತಿದ್ದಾರೆ. ಈ ರೀತಿ ಗಳಿಸಿಕೊಂಡ ವಿಶ್ವಾಸಾರ್ಹ ನಾಯಕತ್ವದ ಲಾಭವನ್ನು ಅವರು ಹಿಂದೂ ಸಂಘಟನೆಗಳಿಗೆ ಧಾರೆ ಎರೆಯುತ್ತಿದ್ದಾರೆ.  ಸರ್, ದಯವಿಟ್ಟು ಯೋಚನೆ ಮಾಡಿ.

ದಕ್ಷಿಣ ಕನ್ನಡದ ಇತಿಹಾಸದಲ್ಲೇ ಕೋಮುಗಲಭೆ ನಡೆಯದ ಏಕೈಕ ವಿಧಾನಸಭಾ ಕ್ಷೇತ್ರವೆಂದರೆ ಅದು ಮೂಡಬಿದ್ರೆ.Banjagere-Jayaprakash ಜೊತೆಗೆ ಕರಾವಳಿಯ ಇತಿಹಾಸದಲ್ಲೇ ಒಂದೇ ಒಂದು ಬಾರಿಯೂ ಬಿಜೆಪಿ ಗೆಲ್ಲಲಾಗದ ಕ್ಷೇತ್ರವಿದ್ದರೆ ಅದೂ ಮೂಡಬಿದ್ರೆಯೇ. ಇಂತಹ ಮೂಡಬಿದ್ರೆಯಲ್ಲಿ ಇತ್ತೀಚೆಗೆ ಕೋಮುಗಲಭೆಗಳು ನಡೆದುಹೋಯಿತು. ದನ ಸಾಗಾಟದ ಹೆಸರಿನಲ್ಲಿ ಹಲ್ಲೆಗಳಾಯಿತು. ಕೊಲೆ ನಡೆಯಿತು. ಇದನ್ನೇ ಬಳಸಿಕೊಂಡು ಮುಸ್ಲಿಮರ ಅಂಗಡಿ ಮನೆಗಳ ದ್ವಂಸ ಮಾಡಲಾಯಿತು. ಈ ಎಲ್ಲಾ ಸಾಮರಸ್ಯ ಕದಡುವ ಘಟನೆಗಳಿಗೂ ಹಿಂದೂ ಸಮಾಜೋತ್ಸವಗಳಿಗೂ, ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವಕ್ಕೂ, ಅದರ ಸಂಘಟಕರ ತೆರೆಯಮರೆಯ ನೆರವು-ಬೆಂಬಲಕ್ಕೂ ಸಂಬಂಧವಿಲ್ಲ ಎನ್ನುವಿರಾ ಸರ್ ?

”ನಮ್ಮ ಪ್ರಗತಿಪರ ವಿಚಾರಧಾರೆಗಳನ್ನು ಅವರ ವೇದಿಕೆಯಲ್ಲೇ ಹೋಗಿ ಹೇಳ್ತೀವಿ” ಎಂದು ಕಳೆದ ಹತ್ತು ವರ್ಷಗಳಲ್ಲಿ ಅಲ್ಲಿ ಹೋಗಿ ಭಾಷಣ ಮಾಡಿದವರು ಹೇಳುತ್ತಲೇ ಇದ್ದಾರೆ. ಇದರಿಂದ ಛದ್ಮವೇಷಧಾರಿಗಳಾದ ಬಲಪಂಥೀಯರು ಲಾಭ ಮಾಡಿಕೊಂಡರೇ ಹೊರತು ಪ್ರಗತಿಪರ ಹೋರಾಟಗಳಿಗೆ ಯಾವ ಲಾಭಗಳೂ ಆಗಿಲ್ಲ. ಶಿಕ್ಷಣದ ವ್ಯಾಪಾರಿಗಳಿಗೆ, ಧರ್ಮಾಧಿಕಾರಿಗಳಿಗೆ, ರಿಯಲ್ ಎಸ್ಟೇಟ್ ಮಾಫೀಯಾಕ್ಕೆ ಇದರಿಂದ ಸಮಾಜದಲ್ಲಿ ಗೌರವ ದೊರೆಯುತ್ತಿದೆಯೇ ಹೊರತು ಬೇರಾವ ಸಾಧನೆಯೂ ಆಗಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

ನಮ್ಮೆಲ್ಲರ ಗುರುಗಳಂತಿದ್ದ ಯು.ಆರ್. ಅನಂತಮೂರ್ತಿಯವರು ತೀರಿಕೊಂಡ ದಿನವನ್ನು ನಾವು ಮರೆಯುವಂತಿಲ್ಲ. ಇಡೀ ರಾಜ್ಯದ ಶಾಲಾ ಕಾಲೇಜುಗಳಿಗೆ ಮರುದಿನ ರಜೆ ಘೋಷಿಸಲಾಗಿತ್ತು.  ರಾಜ್ಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಇತ್ತು. ಆದರೆ ಕರಾವಳಿ ಮತ್ತ್ತು ಮಲೆನಾಡು ಭಾಗದಲ್ಲಿ ಕೋಮುವಾದಿಗಳು ಪಟಾಕಿ ಸಿಡಿಸಿದರು. ಈ ಪಟಾಕಿ ಸಿಡಿಸಿದ ಕೋಮುವಾದಿಗಳ ಪೋಷಕರು ಯಾರೆಂದು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಇರಲಿ. ರಾಜ್ಯಾಧ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದರೂ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿರಲಿಲ್ಲ. ರಜೆ ಕೊಟ್ಟೇ ಸಂತಾಪ ಸೂಚಿಸಬೇಕು ಎಂದೇನಿಲ್ಲ ಎನ್ನುವುದು ನಿಜ, ಆದರೆ ಅಂತಹದ್ದೊಂದು ರಜೆ ಕೋಮುವಾದಿಗಳ ಆರ್ಭಟಕ್ಕೆ ಒಂದು ಸಣ್ಣ ಪ್ರತಿರೋಧ ವ್ಯಕ್ತಪಡಿಸಿದಂತಾಗುತ್ತಿತ್ತು. ಸಾಹಿತಿಗಳನ್ನು ಪಲ್ಲಕ್ಕಿ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಆಳ್ವಾರ ಮನಸ್ಸನ್ನು ಒಬ್ಬ ಹಿರಿಯ ಸಾಹಿತಿಯ ಸಾವು ಮತ್ತು ಅದನ್ನು ಸಂಭ್ರಮಿಸಿದ ದುಷ್ಟರ ಅಟ್ಟಹಾಸ ಕಲಕಲಿಲ್ಲ ಎನ್ನುವುದು ಎಷ್ಟೊಂದು ವಿಚಿತ್ರ ಅಲ್ಲವೇ?

ಇದೆಲ್ಲದರ ಹೊರತಾಗಿಯೂ ಡಾ ಎಂ ಮೋಹನ ಆಳ್ವರು ತಾವು ಸಾಹಿತ್ಯದ ಪೋಷಕರು ಹೇಳಿಕೊಳ್ಳುತ್ತಾರೆ. ಅನಂತ ಮೂರ್ತಿಯವರ ಸಾವಿನ ನಂತರ ನಮ್ಮನ್ನೆಲ್ಲ ಆಘಾಥಕ್ಕೀಡುಮಾಡಿರುವುದು ಡಾ ಎಂ ಎಂ ಕಲ್ಬುರ್ಗಿ ಕೊಲೆ.  ಆದರೆ ಸಾಹಿತ್ಯ ಪ್ರೇಮಿಗಳು, ಪೋಷಕರೂ ಆಗಿರುವ ಡಾ.ಆಳ್ವರು ಕನಿಷ್ಠ ನೂರು ಜನರನ್ನು ಸೇರಿಸಿ ಕಲ್ಪುರ್ಗಿಯವರ ಹತ್ಯೆಯನ್ನು ಖಂಡಿಸಲು ಮುಂದಾಗದಿರುವುದು ಏನನ್ನೂ ಸೂಚಿಸುತ್ತದೆ. ಹಾಗೆ ಮಾಡಿದರೆ ವಿಶ್ವಹಿಂದು ಪರಿಷತ್ ನಾಯಕರನ್ನು ಎದುರುಹಾಕಿಕೊಂಡಂತಾಗುತ್ತದೆ ಎಂದು ಅವರು ಭಯಪಟ್ಟಿರಬಹುದೇ?

ಈ ಬಾರಿಯ ಆಳ್ವಾಸ್ ನುಡಿಸಿರಿಯನ್ನು ಉದ್ಘಾಟನೆ ಮಾಡಬೇಕು ಎಂದು ಹಿರಿಯ ರೈತ ಚಳುವಳಿಗಾರ ಕಡಿದಾಳು ಶ್ಯಾಮಣ್ಣರನ್ನು ಮೋಹನ ಆಳ್ವರು ಆಮಂತ್ರಿಸಿದ್ದರಂತೆ. ಶ್ಯಾಮಣ್ಣ ಅದನ್ನು ನಿರಾಕರಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಹೊಸತನದ ಹುಡುಕಾಟದ ಬಗ್ಗೆ ಮಾತನಾಡಲು ಡಾ ಸಿ ಎಸ್ ದ್ವಾರಕನಾಥ್ ಅವರನ್ನು ಕೇಳಿದ್ದರು. ಅವರೂ ಕೂಡಾ ಆಳ್ವರ ವಿಹಿಂಪ, ಆರ್ ಎಸ್ ಎಸ್ ನಂಟಿನ ಕಾರಣ ನೀಡಿ ಆಹ್ವಾನವನ್ನು ನೇರವಾಗಿಯೇ ನಿರಾಕರಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನುಡಿಸಿರಿಯ ಬಣ್ಣ ಬಯಲಾಗುತ್ತಿರುವುದರಿಂದ ಎಚ್ಚೆತ್ತಿರುವ ನಮ್ಮ ಬಹುತೇಕ ಸಾಹಿತಿಗಳು, ಚಿಂತಕರು ಡಾ.ಆಳ್ವ ಅವರ ಆಹ್ಹಾನವನ್ನು ತಿರಸ್ಕರಿಸಿ ದೂರ ಉಳಿದಿದ್ದಾರೆ.  ಇದರಿಂದಾಗಿ ಬಲಪಂಥೀಯ ಗುಂಪು  ಬೌದ್ದಿಕ ಅಪೌಷ್ಠಿಕತೆಯಿಂದ ನರಳುವಂತಾಗಿದೆ. ಈ ಎಲ್ಲ ಸಂಗತಿಗಳು ನಿಮ್ಮ ಗಮನಕ್ಕೆ ಬಾರದೆಯೂ ಇರಬಹುದು. ಇದಕ್ಕಾಗಿ ಈ ಪತ್ರ ಬರೆಯುತ್ತಿದ್ದೇವೆ.  ಕೊನೆಗೂ ನಿರ್ಧಾರ ನಿಮ್ಮದು. ನಿಮ್ಮನ್ನು ಅಪಾರ ಗೌರವದಿಂದ ಕಾಣುತ್ತಿರುವ ನಮ್ಮ ಮನಸ್ಸಿಗೆ ನೀವು ನೋವುಂಟುಮಾಡುವ ನಿರ್ಧಾರ ಕೈಗೊಳ್ಳಲಾರಿರಿ ಎಂದು ನಂಬಿದ್ದೇವೆ.

ವಿಶ್ವಾಸದಿಂದ,

ಅಕ್ಷತಾ ಹುಂಚದಕಟ್ಟೆ, ಡಾ ಅರುಣ್ ಜೋಳದಕೂಡ್ಲಿಗಿ, ಬಿ ಶ್ರೀಪಾದ ಭಟ್, ಟಿ ಕೆ ದಯಾನಂದ, ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಅನಂತ್ ನಾಯಕ್, ಮುದ್ದು ತೀರ್ಥಹಳ್ಳಿ, ಇರ್ಷಾದ್ ಉಪ್ಪಿನಂಗಡಿ, ಲಿಂಗರಾಜ್ ಪ್ರಜಾಸಮರ, ಪೀರ್ ಬಾಷಾ, ಕಾವ್ಯಾ ಅಚ್ಯುತ್, ಜೀವನ್ ರಾಜ್ ಕುತ್ತಾರ್, ಟಿ ಎಸ್ ಗೊರವರ, ಜಯಶಂಕರ್ ಅಲಗೂರು, ಅಬ್ಬಾಸ್ ಕಿಗ್ಗ, ಕೈದಾಳ ಕೃಷ್ಣಮೂರ್ತಿ, ಸೈಫ್ ಜಾನ್ಸೆ ಕೊಟ್ಟೂರು, ಬಿ ಶ್ರೀನಿವಾಸ, ಪಂಪರೆಡ್ಡಿ ಅರಳಹಳ್ಳಿ, ಅಭಿನಂದನ್ ಬಳ್ಳಾರಿ ಮತ್ತು ಬಸವರಾಜ್ ಪೂಜಾರ್