Category Archives: ನಕ್ಸಲ್ ಕಥನ

ಪ್ರಜಾ ಸಮರ – 3 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲರ ಹೋರಾಟದ ಕಥನವೆಂದರೆ, ಒಂದರ್ಥದಲ್ಲಿ ಇದು ಪರೋಕ್ಷವಾಗಿ, ಬಾಯಿಲ್ಲದವರಂತೆ ಅರಣ್ಯ ಮತ್ತು ಅದರ ಅಂಚಿನಲ್ಲಿ ಬದುಕುತ್ತಿರುವ ಬಡಕಟ್ಟು ಜನಾಂಗ ಮತ್ತು ಗಿರಿಜನರ ನೋವಿನ ಕಥನವೇ ಆಗಿದೆ. ಈವರೆಗೆ ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಮುಚ್ಚಿ ಹೋಗಿರುವ ಇವರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಗಿರಿಜನರನ್ನು ನಿರಂತರ ಶೋಷಿಸುವ ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತು ವಂಚನೆಗೆ ಇಷ್ಟೊಂದು ಕರಾಳ ಮುಖಗಳು ಹಾಗೂ ಕೈಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.

ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ಜಮೀನ್ದಾರರು. ಹಣ ಲೇವಿದಾರರು, ಮರದ ವ್ಯಾಪಾರಿಗಳು, ಇವೆಲ್ಲಕ್ಕಿಂತ ಹೆಚ್ಚಾಗಿ ಬುಡಕಟ್ಟು ಜನಾಂಗ ಮತ್ತು ಅವರ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಲು ತೆರಳಿ, ತಣ್ಣಗೆ ಹೊರಜಗತ್ತಿಗೆ ತಿಳಿಯದ ಹಾಗೆ ಇಲ್ಲಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ವಿದ್ವಾಂಸರು, ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದಾರೆ. ಇವರಲ್ಲಿ ಹೊರ ಜಗತ್ತಿಗೆ ಭಾರತದ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಪರಿಚಯಿಸಿ, ಭಾರತದ ಗಿರಿಜನ ಪ್ರಪಂಚದ ಪಿತಾಮಹ ಎಂದು ಕರೆಸಿಕೊಳ್ಳುತ್ತಿರುವ ವೇರಿಯರ್ ಎಲ್ವನ್ ಎಂಬ ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಮುಂಚೂಣಿಯಲ್ಲಿದ್ದಾನೆ ಎಂದರೆ, ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಕಟು ವಾಸ್ತವದ ಸಂಗತಿ. ಗಿರಿಜನರ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸಿದ ವೇರಿಯರ್ ಎಲ್ವಿನ್ ಎಂಬ ವಿದ್ವಾಂಸನ ವಂಚನೆಯ ಪ್ರಪಂಚವನ್ನು ಇಲ್ಲಿ ನಿಮ್ಮೆದುರು ದಾಖಲೆ ಸಹಿತ ಅನಾವರಣಗೊಳಿಸುತ್ತಿದ್ದೇನೆ.

1902 ರಲ್ಲಿ ಇಂಗ್ಲೆಂಡ್‌ನಲ್ಲಿ ಜನಸಿದ ವೇರಿಯರ್ ಎಲ್ವಿನ್ ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಅಲ್ಲಿಯೇ ಕೆಲ ಕಾಲ ಇಂಗ್ಲೀಷ್ ಉಪನ್ಯಾಸಕನಾಗಿದ್ದ. 1927ರಲ್ಲಿ ಪೂನಾ ಮೂಲದ ಮಿಷನರಿ ಸಂಸ್ಥೆಗೆ ಕ್ರೈಸ್ತ ಮಿಷನರಿಯಾಗಿ (ಪಾದ್ರಿ) ಬಂದ ಇವನಿಗೆ ಧರ್ಮ ಪ್ರಚಾರದ ಜೊತೆಗೆ ಮತಾಂತರ ಮಾಡುವ ಜವಾಬ್ದಾರಿಯನ್ನು ವಹಿಸಲಾಯಿತು. 1930-40 ರ ದಶಕದಲ್ಲಿ ಈಶಾನ್ಯ ಭಾರತ ಮತ್ತು ಮಧ್ಯ ಭಾರತದ ಅರಣ್ಯದ ನಡುವೆ ಇದ್ದ ಆದಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯದ ಸೇವೆ ನೀಡುವುದರ ಮೂಲಕ ಅವರ ಮನ ಪರಿವರ್ತಿಸಿ, ಕ್ರೈಸ್ತ ಸಮುದಾಯಕ್ಕೆ ಪರಿವರ್ತಿಸುವುದು ಅಂದಿನ ಮಿಷನರಿಗಳ ಗುಪ್ತ ಅಜೆಂಡವಾಗಿತ್ತು. ಈಶಾನ್ಯ ಭಾರತದ ಅಸ್ಸಾಂ, ನಾಗಾಲ್ಯಾಂಡ್. ಮಿಜೋರಾಂ, ತ್ರಿಪುರ ಮುಂತಾದ ರಾಜ್ಯಗಳಲ್ಲಿ ಮಿಷನರಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಮಧ್ಯ ಹಾಗೂ ಪೂರ್ವ ಭಾರತದ, ಅಂದಿನ ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವನ್ನು ಪರಿವರ್ತಿಸುವಲ್ಲಿ ಮಿಷನರಿಗಳು ಕಿಂಚಿತ್ತೂ ಯಶಸ್ವಿಯಾಗಲಿಲ್ಲ. ಏಕೆಂದರೆ, ಈ ಪ್ರದೇಶದಲ್ಲಿ ಬದುಕಿದ್ದ ಐನೂರಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳು ತಮ್ಮದೇ ಆದ ನೆಲಮೂಲ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆಚರಿಸಿಕೊಂಡು ಬಂದಿದ್ದವು. ಈ ಜನಾಂಗಳಲ್ಲಿ ಗೊಡ, ಕೋಯಾ, ಚೆಂಚೂ, ಕೊಂಡರೆಡ್ಡಿ, ಮರಿಯ, ಜನಾಂಗಗಳು ಪ್ರಮುಖವಾದವು.

1930 ರ ಸಮಯದಲ್ಲಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಬಂದ ವೇರಿಯರ್ ಎಲ್ವಿನ್ ಮಿಷನರಿಯ ಪಾದ್ರಿ ವೃತ್ತಿಯನ್ನು ತೊರೆದು, ಭಾರತದ ಬುಡಕಟ್ಟು ಜನಾಂಗಗಳ ಬದುಕು, ಅವರ ನಂಬಿಕೆ, ಆಚಾರ, ವಿಚಾರಗಳ ಬಗ್ಗೆ ಆಸಕ್ತಿ ಬೆಳಸಿಕೊಂಡ. ಜೊತೆಗೆ ಗಾಂಧೀಜಿ ಮತ್ತು ಅವರ ಚಿಂತನೆಗಳಿಂದ ಕೂಡ ಪ್ರಭಾವಿತನಾಗಿದ್ದ. ಈ ಕಾರಣಕ್ಕಾಗಿ ಜಬಲ್‌ಪುರದ ಒಬ್ಬ ಆದಿವಾಸಿಯನ್ನು ಭಾಷಾಂತರಕ್ಕಾಗಿ ಸಹಾಯಕನನ್ನಾಗಿ ಮಾಡಿಕೊಂಡು, ಕ್ಯಾಮರಾ ಮತ್ತು ಟೈಪ್‌ರೈಟರ್ ಜೊತೆ ಆರಣ್ಯಕ್ಕೆ ಬಂದು ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದ. ಒಂದು ದಶಕದ ಕಾಲ ಆದಿವಾಸಿಗಳ ಜೊತೆ ವಾಸಿಸಿ, ಅವರ ಬದುಕನ್ನು ಅಧ್ಯಯನ ಮಾಡತೊಡಗಿದ. ಈ ಕುರಿತಂತೆ ಜಗತ್ತಿನ ಅನೇಕ ಪತ್ರಿಕೆಗಳಿಗೆ ಲೇಖನ ಬರೆಯತೊಡಗಿದ.

ಇದೇ ವೇಳೆ ಬ್ರಹ್ಮಚಾರಿಯಾಗಿದ್ದ ಎಲ್ವಿನ್, ಬುಡಕಟ್ಟು ಜನಾಂಗದ ವಿಶ್ವಾಸಗಳಿಸುವ ನಿಟ್ಟಿನಲ್ಲಿ 1940 ರ ಏಪ್ರಿಲ್ 4 ರಂದು ತನ್ನ 38 ನೇ ವಯಸ್ಸಿನಲ್ಲಿ ತನಗಿಂತ 25 ವರ್ಷ ಚಿಕ್ಕವಳಾದ 13 ವರ್ಷದ ರಾಜಗೊಂಡ ಎಂಬ ಬುಡಕಟ್ಟು ಜನಾಂಗದ ನಾಯಕನೊಬ್ಬನ ಮಗಳಾದ ಕೋಶಿ ಎಂಬಾಕೆಯನ್ನು ಮದುವೆಯಾದ. ಮೊದಲು ಈ ಪ್ರಸ್ತಾಪಕ್ಕೆ ಆಕೆಯ ತಂದೆ ಪ್ರತಿರೋಧ ವ್ಯಕ್ತಪಡಿಸಿದರೂ ನಂತರ ಬಿಳಿಸಾಹೇಬನ ಜೊತೆ ಮಗಳು ಸುಖವಾಗಿರಲಿ ಎಂಬ ಆಸೆಯಿಂದ ಒಪ್ಪಿಗೆ ಸೂಚಿಸಿದ್ದ. ವಿವಾಹದ ನಂತರ ಬಸ್ತರ್ ಅರಣ್ಯ ಪ್ರದೇಶಕ್ಕೆ ಬಂದು ನೆಲೆಸಿದ ಎಲ್ವಿನ್ ಆಕೆಯ ಜೊತೆ ವಾಸಿಸುತ್ತಾ, ಭಾರತದ ಬುಡಕಟ್ಟು ಜನಾಂಗಗಳು ಮತ್ತು ಅವರ ಸಂಸ್ಕೃತಿಯ ಬಗ್ಗೆ 1940 ರಿಂದ 1947ರ ನಡುವಿನ ಅವಧಿಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿರಚಿಸಿ ಪ್ರಸಿದ್ಧನಾದ.  ಅಲ್ಲಿಯವರೆಗೂ ಹೊರಜಗತ್ತಿಗೆ ಗೊತ್ತಿರದ ಅನೇಕ ಬುಡಟ್ಟು ಜನಾಂಗಗಳ ಸಂಸ್ಕೃತಿಯನ್ನು, ಅವರ ಆಹಾರ, ಉಡುಪು, ವಿಚಾರ, ನಂಬಿಕೆ, ಆಚರಣೆ ಇವುಗಳನ್ನು ವಿವರವಾಗಿ ಶಿಸ್ತು ಬದ್ಧ ಅಧ್ಯಯನದ ಮೂಲಕ ಪರಿಚಯಿಸಿದ. ಇವನ ಆಸಕ್ತಿ ಅಂದಿನ ನಾಯಕರಾದ ನೆಹರೂರವರ ಗೆಳೆತನವನ್ನು ಸಂಪಾದಿಸಿಕೊಟ್ಟಿತು. ಜೊತೆಗೆ ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಕಾರಣ ಭಾರತದ ಬಹುತೇಕ ನಾಯಕರ ನೇರ ಪರಿಚಯ ಅವನಿಗಿತ್ತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ವೇರಿಯರ್ ಎಲ್ವಿನ್ ಭಾರತೀಯ ಪೌರತ್ವ ಸ್ವೀಕರಿಸಿದ. ಈತನ ಭಾರತದ ಪ್ರೀತಿಯನ್ನು ಗಮನಿಸಿದ ಪ್ರಧಾನಿಯಾದ ನೆಹರೂರವರು ವೇರಿಯರ್ ಎಲ್ವಿನ್‌ನನ್ನು ಈಶಾನ್ಯ ಮತ್ತು ಮಧ್ಯ ಹಾಗೂ ಪೂರ್ವ ಭಾರತದ ರಾಜ್ಯಗಳ ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ಮಾರ್ಗದರ್ಶಿಯನ್ನಾಗಿ ನೇಮಕ ಮಾಡಿದರು.

ಹತ್ತು ವರ್ಷಗಳ ಕಾಲ ’ಗೊಂಡ’ ಜನಾಂಗದ ಹೆಣ್ಣು ಮಗಳು ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿದ ವೇರಿಯರ್ ಎಲ್ವಿನ್, ಅವಳಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದ. 1951ರಲ್ಲಿ ಪ್ರಧಾನಿ ನೆಹರೂರವರು ಈತನನ್ನು ಆಂಥ್ರಪಾಲಜಿಕಲ್ ಸರ್ವೆ ಆಫ್ ಇಂಡಿಯಾದ ಡೆಪ್ಯೂಟಿ ಡೈರಕ್ಟರ್ ಹುದ್ದೆಗೆ ನೇಮಕ ಮಾಡಿದಾಗ, ವೇರಿಯರ್ ಎಲ್ವಿನ್‌ನ ವಾಸ್ತವ್ಯ ಬಸ್ತರ್ ಅರಣ್ಯ ಪ್ರದೇಶದಿಂದ ಈಶಾನ್ಯ ಭಾಗದ ನಾಗಾಲ್ಯಾಂಡ್‌ಗೆ ಬದಲಾಯಿತು. ಈ ಸಂದರ್ಭದಲ್ಲಿ ಕೋಶಿಯನ್ನು ತೊರೆದು ತನ್ನ ಹಿರಿಯ ಮಗು ಜವಹರ್ ಸಿಂಗ್‌ನನ್ನು ಎತ್ತಿಕೊಂಡು ನಾಗಲ್ಯಾಂಡ್‌ನತ್ತ ಪಯಣ ಬೆಳಸಿದ. ನಂತರದ ದಿನಗಳಲ್ಲಿ ಎಲ್ವಿನ್ ಕೋಶಿಯತ್ತ ಮತ್ತೆ ತಿರುಗಿ ನೋಡಲಿಲ್ಲ. ಆಕೆ ಅವನ ಪಾಲಿಗೆ ಬಳಸಿ ಬಿಸಾಡಿದ ಬಟ್ಟೆಯಾಗಿದ್ದಳು. ಎಲ್ವಿನ್ ಆಕೆಯನ್ನು ತ್ಯೆಜಿಸಿದಾಗ ತುಂಬು ಗರ್ಭಿಣಿಯಾಗಿದ್ದ ಈ ಬುಡಕಟ್ಟು ಹೆಣ್ಣುಮಗಳು, ಅವನ ನಿರ್ಗಮನದ ನಂತರದ ಕೆಲವೇ ದಿನಗಳಲ್ಲಿ ಮತ್ತೊಂದು ಗಂಡುಮಗುವಿಗೆ ಜನ್ಮವಿತ್ತಳು.

ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿ, ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ, ನೆಹರೂ ಮುಂತಾದವರಿಗೆ ಆಕೆಯನ್ನು ಪತ್ನಿಯೆಂದು ಪರಿಚಯಿಸಿ, ಅವರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡು. ನಂತರ ಏಕಾಏಕಿ ಅವಳನ್ನು ಬಿಟ್ಟು ಅನಾಥೆಯನ್ನಾಗಿ ಮಾಡಿ ಹೋದ ವೇರಿಯರ್ ಎಲ್ವಿನ್ ವಿರುದ್ಧ ಆತನಿಗೆ ಬಸ್ತರ್ ಅರಣ್ಯದಲ್ಲಿ ಸಹಾಯಕನಾಗಿ ದುಡಿದಿದ್ದ ಶ್ಯಾಮರಾವ್ ಹಿವಾಳೆ ಎಂಬಾತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ. ಇದರ ಪರಿಣಾಮ ಪ್ರತಿ ತಿಂಗಳು ಕೋಶಿಗೆ 25 ರೂಪಾಯಿ ಮಾಸಿಕ ಜೀವನಾಂಶ ದೊರೆಯುವಂತಾಯಿತು. ಆ ವೇಳೆಗಾಗಲೆ ನಾಗಾಲ್ಯಾಂಡ್‌ನಲ್ಲಿ ನಾಗಾ ಜನಾಂಗದ ಲೀಲಾ ಎಂಬಾಕೆಯನ್ನು ಎಲ್ವನ್ ಎರಡನೇ ವಿವಾಹವಾಗಿದ್ದ.

ಇತ್ತ ಮಧ್ಯಪ್ರದೇಶದ ಜಬಲ್‌ಪುರ್ ಪಟ್ಟಣದಲ್ಲಿ ತನ್ನ ಮಾಜಿ ಪತಿ ಎಲ್ವಿನ್ ನೀಡುತ್ತಿದ್ದ 25 ರೂಪಾಯಿ ಮಾಸಾಶನದಲ್ಲಿ ಬಾಡಿಗೆ ಕೊಂಠಡಿಯಲ್ಲಿ ಕಿರಿಯ ಮಗನ (ವಿಜಯ) ಜೀವನ ದೂಡುತ್ತಿದ್ದ ಕೋಶಿಗೆ 1964ರಲ್ಲಿ ವೇರಿಯರ್ ಎಲ್ವಿನ್ ನಿಧನಾನಂತರ ಮಾಸಾಶನ ನಿಂತು ಹೋಯಿತು. ಇದರಿಂದಾಗಿ ದಿಕ್ಕು ತೋಚದ ಕೋಶಿ ತನ್ನ ಮಗನ ಜೊತೆತನ್ನ ಊರಾದ ಅದೇ ಮಧ್ಯಪ್ರದೇಶದ ದಿಂಡೊರ ಜಿಲ್ಲೆಯ ರೈತ್ವಾರ್ ಎಂಬ ಹಳ್ಳಿಗೆ ಬಂದು ವಾಸಿಸತೊಡಗಿದಳು.

1964ರ ಪೆಬ್ರವರಿ ತಿಂಗಳಿನಲ್ಲಿ ಕಾರ್ಯನಿಮಿತ್ತ ದೆಹಲಿಗೆ ಬಂದಿದ್ದ ವೇರಿಯರ್‌ ಎಲ್ವಿನ್ ತನ್ನ 62ನೇ ವಯಸ್ಸಿನಲ್ಲಿ ಹೃದಯಾಘತದಿಂದ ತೀರಿಕೊಂಡ. ಆವೇಳೆಗೆ ಅವನು ಸಂಪಾದಿಸಿದ್ದ, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಕೊಲ್ಕತ್ತ ನಗರದ ಮನೆ ಮತ್ತು ನಾಗಾಲ್ಯಾಂಡ್‌ನಲ್ಲಿ ಇದ್ದ 60 ಎಕರೆ ಎಸ್ಟೇಟ್ ಎಲ್ಲವೂ ಎರಡನೇ ಪತ್ನಿ ಲೀಲಾಳ ಪಾಲಾದವು. ಎಲ್ವಿನ್ ಸಾಕಿ ಬೆಳಸಿದ್ದ ಹಿರಿಯ ಮಗ ಜವಹರ್ ಸಿಂಗ್ ಭಾರತೀಯ ಸೇನಾ ವಿಭಾಗದ ಅಸ್ಸಾಂ ರೈಫಲ್‌ನಲ್ಲಿ ಸೇವೆಯಲ್ಲಿದ್ದ, ಆದರೆ, ಮಿತಿ ಮೀರಿದ ಮಧ್ಯಪಾನದಿಂದ ಅತಿ ಚಿಕ್ಕ ವಯಸ್ಸಿಗೆ ಸಾವನ್ನಪ್ಪಿದ. 1964ರಲ್ಲಿ ವೇರಿಯರ್ ಎಲ್ವಿನ್ ಮರಣಾನಂತರ ಅವನ ಮಹತ್ತರ ಕೃತಿ “The tribal world of Verier Elwin” ಪ್ರಕಟವಾಯಿತು. (ಇದನ್ನು ನಮ್ಮ ಕನ್ನಡದ ಜಾನಪದ ತಜ್ಞ ಡಾ.ಹೆಚ್. ಎಲ್.ನಾಗೇಗೌಡ “ವೇರಿಯರ್ ಎಲ್ವಿನ್‌ನ ಗಿರಿಜನ ಪ್ರಪಂಚ” ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.)

ಜಬಲ್‌ಪುರದಿಂದ 375 ಕಿಲೋಮೀಟರ್ ದೂರದ ದಿಂಡೋರ ಜಿಲ್ಲೆಯ ಅರಣ್ಯದ ನಡುವೆ ಇರುವ ರೈತ್ವಾರ್ ಎಂಬ ಹಳ್ಳಿಯಲ್ಲಿ ಮಗನ ಜೊತೆ ಇದ್ದ ಬುಡಕಟ್ಟು ಜನಾಂಗದ ಹೆಣ್ಣುಮಗಳು ಕೋಶಿ ಈಗ ಅಕ್ಷರಶಃ ಏಕಾಂಗಿ. ಚಿತ್ರಗಳಿಗೆ ಚೌಕಟ್ಟು (ಪೊಟೋ ಪ್ರೇಮ್) ಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎರಡನೇ ಮಗ ವಿಜಯ್ ಕೂಡ ತನ್ನ ಪತ್ನಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಇತ್ತೀಚೆಗೆ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ. ಸೊಸೆ ಮತ್ತು ಮೂವರು ಮೊಮಕ್ಕಳೊಂದಿಗೆ ಬದುಕುತ್ತಿರುವ ವೃದ್ಧೆ ಕೋಶಿಗೆ ಮಧ್ಯ ಪ್ರದೇಶ ಸರ್ಕಾರ ವಿಶೇಷವಾಗಿ ನೀಡುತ್ತಿರುವ 600 ರೊಪಾಯಿ ಮಾಸಾಶನವೇ ಜೀವನಕ್ಕೆ ಆಧಾರವಾಗಿದೆ. ಸೊಸೆ ಕೃಷಿ ಕೂಲಿ ಕಾರ್ಮಿಕಳಾಗಿ ದುಡಿಯುತ್ತಿದ್ದಾಳೆ.

ವೇರಿಯರ್ ಎಲ್ವಿನ್ ಇಂದು ಜಗತ್ ಪ್ರಸಿದ್ಧ ಲೇಖಕನಾಗಿ, ಸಮಾಜ ಶಾಸ್ತ್ರಜ್ಞನಾಗಿ ಜಗತ್ತಿಗೆ ಪರಿಚಿತನಾಗಿದ್ದಾನೆ. ಅವನ ಎಪ್ಪತ್ತಕ್ಕೂ ಹೆಚ್ಚಿನ ಕೃತಿಗಳು ಈಗಲೂ ಪ್ರತಿಷ್ಟಿತ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಸೇರಿದಂತೆ ಅನೇಕ ಪ್ರಕಾಶನ ಸಂಸ್ಥೆಗಳಿಂದ ಮರು ಮುದ್ರಣಗೊಳ್ಳುತ್ತಿವೆ. ಭಾರತವೂ ಸೇರಿದಂತೆ ಜಗತ್ತಿನ ನೂರಾರು ವಿ.ವಿ.ಗಳಲ್ಲಿ ಅವನ ಕೃತಿಗಳು ಸಮಾಜ ಶಾಸ್ತ್ರದ ಪಠ್ಯಗಳಾಗಿವೆ. ಇದರಿಂದ ಬರುವ ಗೌರವ ಧನ ಎರಡನೇ ಪತ್ನಿ ಲೀಲಾ ಕುಟುಂಬದ ಪಾಲಾಗುತ್ತಿದೆ.ಆದರೆ, ಹತ್ತು ವರ್ಷಗಳ ಕಾಲ ಅವನೊಂದಿಗೆ ಮೈ ಮತ್ತು ಮನಸ್ಸು ಹಂಚಿಕೊಂಡ ಆದಿವಾಸಿ ಹೆಣ್ಣುಮಗಳು, ಕೋಶಿ ಇಂದು ವೃದ್ಧೆಯಾಗಿ ಒಂದು ಹಿಡಿ ಅನ್ನಕ್ಕಾಗಿ ಸರ್ಕಾರ ನೀಡುವ ಹಣಕ್ಕಾಗಿ ಕಾಯುತ್ತಾ ಕೂತ್ತಿದ್ದಾಳೆ. ಅವಳ ಬಳಿ ಇರುವ ಆಸ್ತಿಯೆಂದರೆ, ವೇರಿಯರ್ ಎಲ್ವಿನ್ ನ ಒಂದು ಕಪ್ಪು ಬಿಳುಪಿನ ಭಾವಚಿತ್ರ ಮತ್ತು ಅವನ ಜೊತೆ ಸುತ್ತಾಡಿದ ನೆನಪುಗಳು ಮಾತ್ರ.

ವೇರಿಯರ್ ಎಲ್ವಿನ್ ತನ್ನ ಆತ್ಮ ಕಥನದಲ್ಲಿ ಕೇವಲ ಎರಡು ಸಾಲಿನಲ್ಲಿ, “ನಾನು ಹತ್ತು ವರ್ಷಗಳ ಕಾಲ ಬುಡಕಟ್ಟು ಜನಾಂಗದ ಒಬ್ಬ ಹೆಣ್ಣು ಮಗಳ ಜೊತೆ ಜೀವನ ನಡೆಸಿದ್ದೆ, ಅದು ವಿವರವಾಗಿ ಹೇಳಲಾಗದ ಅವ್ಯಕ್ತ ನೋವಿನ ಕಥೆ,” ಎಂದಷ್ಟೇ ದಾಖಲಿಸಿದ್ದಾನೆ. ಇತಿಹಾಸದ ಕಾಲಗರ್ಭದಲ್ಲಿ ಹೂತುಹೋಗುತ್ತಿದ್ದ ವೇರಿಯರ್ ಎಲ್ವಿನ್‌ನ ಈ ವಂಚನೆಯ ಪ್ರಪಂಚವನ್ನು ಜಗತ್ತಿಗೆ ಮೊದಲ ಬಾರಿಗೆ ತೆರೆದಿಟ್ಟವನು ರಮಣ್ ಕೃಪಾಳ್ ಎಂಬ ಜಬಲ್‌ಪುರ್ ಮೂಲದ ಪತ್ರಕರ್ತ. ಆನಂತರ 2008ರಲ್ಲಿ ಈ ಪತ್ರಕರ್ತನ ಲೇಖನವನ್ನು ಆಧರಿಸಿ, ಕೋಶಿಯನ್ನು ಸಂದರ್ಶನ ಮಾಡಿದ ಲಂಡನ್‌ನಿನ ಬಿ.ಬಿ.ಸಿ. ಚಾನಲ್ “British scholar’s Indian widow in penury” (ಬ್ರಿಟಿಷ್ ವಿದ್ವಾಂಸ ಮತ್ತು ಭಾರತದ ವಿಧವೆಯೊಬ್ಬಳ ಬಡತನ) ಎಂಬ ಹೆಸರಿನಲ್ಲಿ 30 ನಿಮಿಷದ ಸಾಕ್ಷ್ಯ ಚಿತ್ರ ನಿರ್ಮಿಸಿ ಪ್ರಸಾರ ಮಾಡಿತು.

ದುರಂತ ಮತ್ತು ನೋವಿನ ಸಂಗತಿಯೆಂದರೆ, ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದ್ದ ಬುಡಕಟ್ಟು ಜನಾಂಗದಿಂದ ಬಂದಿದ್ದ ಕೋಶಿ ಎಂಬ ಆ ಹೆಣ್ಣುಮಗಳಿಗೆ ಇದ್ದ ಬದ್ಧತೆ ವಿದ್ವಾಂಸ ಮತ್ತು ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಎನಿಸಿಕೊಂಡ ವೇರಿಯರ್ ಎಲ್ವಿನ್‌ಗೆ ಇರಲಿಲ್ಲ.

ತನ್ನ ಮೊದಲ ಮಗುವಿನ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎಲ್ವಿನ್ ಕೋಶಿಯನ್ನು ಮುಂಬೈ ನಗರಕ್ಕೆ ಕರೆದೊಯ್ದಿದ್ದ. ಅಂದು ರಾತ್ರಿ ಆಕೆ ನೆಹರೂ ಜೊತೆ ಔತಣ ಕೂಟದಲ್ಲಿ ಪಾಲ್ಗೊಂಡಿದ್ದಳು. ಗರ್ಭಿಣಿಯಾಗಿದ್ದ ಕೋಶಿಯನ್ನು ನೋಡಿ ಮಾತನಾಡಿಸಿದ ನೆಹರೂರವರು, ‘ಗಂಡು ಮಗುವಾದರೇ, ಏನು ಹೆಸರು ಇಡುತ್ತಿಯಾ?’ ಎಂದು ಕೇಳಿದ್ದರು, ಅದಕ್ಕೆ ಕೋಶಿ, ಗಂಡು ಮಗುವಾದರೆ ನಿಮ್ಮ ಹೆಸರು ಇಡುತ್ತೀನಿ ಎಂದು ಮುಗ್ಧವಾಗಿ ನಕ್ಕು ಹೇಳಿದ್ದಳು. ಅವಳ ಮಾತಿನಿಂದ ಖುಷಿಯಾದ ನೆಹರೂ ಆಕೆಗೆ ಸಾವಿರ ರೂಪಾಯಿಯ ಕೊಡುಗೆ ನೀಡಿದ್ದರು. ಆನಂತರ ಗಂಡು ಮಗುವಾದಾಗ ಕೋಶಿ ನೆಹರೂಗೆ ಕೊಟ್ಟ ಮಾತಿನಂತೆ ತನ್ನ ಮಗುವಿಗೆ ಜವಹರ ಸಿಂಗ್ ಎಂದು ನಾಮಕರಣ ಮಾಡಿದಳು. ಇಂತಹ ಬದ್ಧತೆ ಎಲ್ವಿನ್‌ಗೆ ಇದ್ದಿದ್ದರೆ, ಇಂದು ಕೋಶಿಯ ಬದುಕು ಈ ರೀತಿ ಬೀದಿಗೆ ಬೀಳುತ್ತಿರಲಿಲ್ಲ.

(ಮುಂದುವರಿಯುವುದು)

ಪ್ರಜಾ ಸಮರ-2 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕಳೆದ ಜೂನ್ 29 ರಂದು ನಕ್ಸಲ್ ಪೀಡಿತ ರಾಜ್ಯವಾದ ಛತ್ತೀಸ್‌ಘಡದಲ್ಲಿ ನಡೆದ ಘಟನೆ ಇದು. ಅಂದು ರಾತ್ರಿ ಸೂಕ್ಮ ಮತ್ತು ಬಿಜಾಪುರ್ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆ ಮತ್ತು ಛತ್ತೀಸ್‌ಘಡದ ನಕ್ಸಲ್ ನಿಗ್ರಹ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ 21 ಮಂದಿ ಮಾವೋವಾದಿ ನಕ್ಸಲರು ಮೃತಪಟ್ಟರೆಂಬ ಸುದ್ಧಿ ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ, ಪತ್ರಿಕೆಗಳಲ್ಲಿ ತಲೆ ಬರಹದ ವರದಿಯಾಗಿ ಪ್ರಕಟವಾಯಿತು. ಆದರೆ, ಛತ್ತೀಸ್‌ಘಡ ಸರ್ಕಾರ ಮಾರನೇ ದಿನ ತನ್ನ ವರಸೆ ಬದಲಿಸಿ ಘಟನೆಯಲ್ಲಿ ಮೃತಪಟ್ಟವರು ಶಂಕಿತ ಮಾವೋವಾದಿಗಳು (ನಕ್ಸಲರು) ಎಂದು ಹೇಳಿತು.

ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೂ ರವಾನಿಸಿತು. ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಮೃತ ಪಟ್ಟ ವ್ಯಕ್ತಿಗಳ ಶವಗಳನ್ನು ಗಮನಿಸಿದಾಗ ಅವರು ಶಂಕಿತ ನಕ್ಸಲರಲ್ಲ ಎಂಬ ಸಂಶಯ ಮೇಲು ನೋಟಕ್ಕೆ ಗೋಚರಿಸುತ್ತಿತ್ತು. ಶವಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೃತಪಟ್ಟವರು ಸ್ಥಳೀಯ ಕೋಟಗುಡ ಮತ್ತು ಸರ್ಕೆಗುಡ ಎಂಬ ಹಳ್ಳಿಯ ಆದಿವಾಸಿಗಳಾಗಿದ್ದರು.  ಕೊನೆಗೆ ಸಂಶಯದ ಜಾಡು ಹಿಡಿದು ಹೊರಟ ಪತ್ರಕರ್ತರಿಗೆ ಇದು ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಪಡೆ ಜಂಟಿಯಾಗಿ ನಡೆಸಿದ ಮುಗ್ದ ಆದಿವಾಸಿಗಳ ಮಾರಣ ಹೋಮದ ಕೃತ್ಯ ಎಂಬುದು ಮನದಟ್ಟಾಯಿತು.

ಘಟನೆಯಲ್ಲಿ ಗಾಯಗೊಂಡು ಬದುಕುಳಿದ ಮೂವರು ಆದಿವಾಸಿಗಳ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಬಾಲಕನನ್ನು ಜಗದಾಲ್‌ಪುರದ ಮಹಾರಾಣಿ ಆಸ್ಪತ್ರೆಗೆ ಸಾಗಿಸಿ ಗುಪ್ತವಾಗಿ ಚಿಕಿತ್ಸೆ ಕೊಡಿಸುತ್ತಿರುವುದನ್ನು ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ವರದಿಗಾರ ಪತ್ತೆ ಹಚ್ಚಿದರೆ, ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕಾಲಿಗೆ ಗಾಯಗೊಂಡಿದ್ದ ಇಬ್ಬರು ಆದಿವಾಸಿಗಳನ್ನು (ಕಕಸೆಂಟಿ ಮತ್ತು ಮರ್ಕಮ್ ಸೋಮ) ಟೈಮ್ಸ್ ಆಫ್ ಇಂಡಿಯಾ ವರದಿಗಾರ ಪೊಲೀಸರ ಕಣ್ಣು ತಪ್ಪಿಸಿ ವಾರ್ಡ್‌ಬಾಯ್ ವೇಷದಲ್ಲಿ ಆಸ್ಪತ್ರೆಯ ಒಳಹೊಕ್ಕು ಪತ್ತೆ ಹಚ್ಚಿದ್ದ, ಅಲ್ಲದೆ ಅವರನ್ನು ಮಾತನಾಡಿಸಿ ಆ ರಾತ್ರಿ ನಡೆದ ಘಟನೆಯನ್ನು ದಾಖಲು ಮಾಡಿಕೊಂಡಿದ್ದ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಯುದ್ಧ ಗೆದ್ದ ಉತ್ಸಾಹದಲ್ಲಿ 21 ಮಂದಿ ನಕ್ಸಲಿಯರನ್ನು ಸದೆ ಬಡಿದ ಕಥೆಯನ್ನು ಮಾಧ್ಯಮದ ಮುಂದೆ ಹೆಮ್ಮೆಯಿಂದ ಹೇಳುಕೊಳ್ಳುತ್ತಿದ್ದರೆ, ಇತ್ತ ಮಧ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಸತ್ತವರು ಅಮಾಯಕ ಆದಿವಾಸಿಗಳು ಎಂಬ ವರದಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಜುಲೈ 3ರಂದು ಪೂನಾದಿಂದ ಹೊರಡುವ ಅಜಾದ್ ಎಕ್ಸ್‌ಪ್ರಸ್ ರೈಲಿನಲ್ಲಿ ಹೊರಟು 4ರಂದು ಮಧ್ಯಾಹ್ನ ಬಿಲಾಸ್‌ಪುರ್ ತಲುಪಿ, ಸಂಜೆ ವೇಳೆಗೆ ರಾಯ್‌ಪುರ್ ತಲುಪಿದ ನನಗೆ ಅಲ್ಲಿ ಸಿಕ್ಕ ಮಾಹಿತಿ ಬೇರೆಯದೇ ಆಗಿತ್ತು. ವಾಸ್ತವವಾಗಿ ಅಲ್ಲಿ ನಡೆದ ಘಟನೆ ಇದು. ಈ ಬಾರಿಯ ಮುಂಗಾರು ಮಳೆ ಆರಂಭವಾಗುವ ಮುನ್ನ ಆದಿವಾಸಿಗಳಿಗೆ ಬೇಸಾಯಕ್ಕೆ ಅರಣ್ಯ ಭೂಮಿಯನ್ನು ಹಂಚುವುದಕ್ಕಾಗಿ ಇಬ್ಬರು ಸ್ಥಳೀಯ ನಕ್ಸಲ್ ನಾಯಕರು ಸಭೆ ಕರೆದಿದ್ದರು. ನಕ್ಸಲ್ ನಾಯಕರಿಗೆ ಬೆಂಗಾವಲಾಗಿ ಮತ್ತಿಬ್ಬರು ನಕ್ಸಲರು ಬಂದೂಕ ಹಿಡಿದು ಸಭೆಗೆ ಬಂದಿದ್ದರು. 150ಕ್ಕೂ ಹೆಚ್ಚು ಮಂದಿ ಸೇರಿದ್ದ ಈ ಗ್ರಾಮ ಸಭೆಯಲ್ಲಿ ನಾಲ್ವರು ನಕ್ಸಲರು ಹೊರತು ಪಡಿಸಿದರೆ, ಉಳಿದವರೆಲ್ಲಾ ಸ್ಥಳೀಯ ಹಳ್ಳಿಗಳ ಆದಿವಾಸಿಗಳಾಗಿದ್ದರು. ಈ ಕುರಿತಂತೆ ಜುಲೈ ಮೊದಲ ವಾರ ಹಿಂದೂ ದಿನಪತ್ರಿಕೆ ಮತ್ತು ಟೈಮ್ಸ್ ಆಫ್ ಇಂಡಿಯ ಪತ್ರಿಕೆಗಳು ಸಮಗ್ರ ತನಿಖಾ ವರದಿಯನ್ನು ಪ್ರಕಟಿಸಿದ ಮೇಲೆ ರಾಜಧಾನಿ ದೆಹಲಿಯಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಗೃಹ ಸಚಿವ ಪಿ.ಚಿದಂಬರಂ, ಛತ್ತೀಸ್‌ಘಡ ಸರ್ಕಾರದ ತಪ್ಪು ಮಾಹಿತಿಯಿಂದ ಆ ರೀತಿ ಹೇಳಿಕೆ ನೀಡಬೇಕಾಯಿತೆಂದು ದೇಶದ ಮುಂದೆ ವಿಷಾದ ವ್ಯಕ್ತಪಡಿಸಿದರು. ನಕ್ಸಲರ ಹೋರಾಟವನ್ನು ಕೊನೆಗಾಣಿಸಬೇಕೆಂಬ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಎಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂಬುದಕ್ಕೆ ಸರ್ಕಾರದ ಈ ಕೆಳಗಿನ ಹೇಳಿಕೆ ಮತ್ತು ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಇದೇ ಸೆಪ್ಟಂಬರ್ 9 ರ ಶನಿವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೆಹಲಿಯಲ್ಲಿ ಕರೆದಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸಭೆಯಲ್ಲಿ ದೇಶದ ಬುದ್ಧಿಜೀವಿಗಳು ನಕ್ಸಲ್ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿ, ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ನಕ್ಸಲ್ ಚಟುವಟಿಕೆ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ ಎಂದಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯ ತನ್ನ 2011-12ರ ವಾರ್ಷಿಕ ವರದಿಯಲ್ಲಿ ದೇಶದ ಒಂಬತ್ತು ರಾಜ್ಯಗಳ 106 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಪ್ರಕಟಿಸಿದೆ. ಇದೇ ಆಗಸ್ಟ್ 29ರಂದು ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿರುವ ಗೃಹ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, 12 ರಾಜ್ಯಗಳ 84 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಹೇಳಿದ್ದಾರೆ. ಪ್ರಧಾನಿಯಿಂದ ಹಿಡಿದು ಗೃಹ ಸಚಿವ ಹಾಗೂ ಅವರ ಸಹಾಯಕ ಸಚಿವ ಮತ್ತು ಗೃಹ ಇಲಾಖೆಯವರೆಗೂ ನಕ್ಸಲ್ ಚಟುವಟಿಕೆ ಕುರಿತ ಮಾಹಿತಿಯಲ್ಲಿ ಸಾಮ್ಯತೆ ಇಲ್ಲವೆಂದ ಮೇಲೆ ಇವರ ಹೇಳಿಕೆಗಳಿಗೆ ಯಾವ ಮಹತ್ವವಿದೆ ಯೋಚಿಸಿ?

ನಕಲಿ ಎನ್‌ಕೌಂಟರ್‌‌ನಲ್ಲಿ ಸತ್ತ ಅಮಾಯಕ ಆದಿವಾಸಿಗಳ ಕುಟುಂಬಳಿಗೆ ಈವರೆಗೆ ಕೇಂದ್ರ ಸರ್ಕಾರದಿಂದಾಗಲಿ, ಛತ್ತೀಸ್‌ಘಡ ಸರ್ಕಾರದಿಂದಾಗಲಿ ಯಾವುದೇ ಪರಿಹಾರ ದೊರಕಿಲ್ಲ. ಅರಣ್ಯ ರೋಧನ ಎಂಬ ಮಾತಿಗೆ ಅಥವಾ ಶಬ್ಧಕ್ಕೆ ನಾವು ಶಬ್ಧಕೋಶ ನೋಡಿ ಅರ್ಥ ತಿಳಿಯಬೇಕಾಗಿಲ್ಲ. ಮಧ್ಯ ಮತ್ತು ಪೂರ್ವ ಭಾರತದ ಅರಣ್ಯದ ಒಳ ಹೊಕ್ಕು ಅಲ್ಲಿನ ನಿವಾಸಿಗಳ ನೋವು ಮತ್ತು ಆಕ್ರಂಧನ ಇವುಗಳಿಗೆ ಕಣ್ಣು ಮತ್ತು ಕಿವಿಯಾದರೆ ಸಾಕು ಅದರ ನಿಜವಾದ ಅರ್ಥ ನಮಗೆ ಮನದಟ್ಟಾಗಬಲ್ಲದು.

ಇದು ಕಳೆದ ವರ್ಷ 2011 ರ ಪೆಬ್ರವರಿಯಲ್ಲಿ ನಡೆದ ಘಟನೆ. (ಈ ಅಮಾನವೀಯ ವರದಿ ಹಿಂದೂ ಪತ್ರಿಕೆಯಲ್ಲಿ ಕೂಡ ವರದಿಯಾಗಿತ್ತು.) ಕಳೆದ ವರ್ಷ ನಡೆದ ಐ.ಪಿ.ಎಲ್. ಕ್ರಿಕೆಟ್ ಟೂರ್ನಿಗೆ ಹಿಂದಿ ಸಿನಿಮಾ ನಟ ಶಾರುಖ್‌ಖಾನ್ ಮಾಲಿಕತ್ವದ ಕೊಲ್ಕತ್ತ ನೈಟ್ ರೈಡರ್ಸ್ ತಂಡ ದೆಹಲಿಯ ಗೌತಮ್ ಗಂಭೀರ್ ಎಂಬ ಆಟಗಾರರನ್ನು 13 ಕೋಟಿ ರೂಪಾಯಿಯ ದಾಖಲೆ ಹರಾಜಿನಲ್ಲಿ ಖರೀದಿಸಿತ್ತು. ಮುಂಬೈನ ಪಂಚತಾರಾ ಹೋಟೆಲ್‌‍ನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ದೂರದ ಛತ್ತೀಸ್‌ಘಡದ ದಂಡಕಾರಣ್ಯದ ನಡುವೆ ಇದ್ದ ಕುಗ್ರಾಮದ ಹಳ್ಳಿಯೊಂದರ ಆದಿವಾಸಿಯೊಬ್ಬನ  ಒಂಬತ್ತು ವರ್ಷದ ಮಗಳೊಬ್ಬಳು ಅಸಹಜ ಸಾವನ್ನಪ್ಪಿದ್ದಳು. ಆದಿನ ಸಾಯಂಕಾಲ ಆದಿವಾಸಿ ದಂಪತಿಗಳು ಮಗಳ ಅಂತ್ಯ ಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿರುವಾಗಲೇ ಅಡ್ಡಿ ಮಾಡಿದ ಪೊಲೀಸರು ಮರಣೋತ್ತರ ಶವ ಪರೀಕ್ಷೆ ಮಾಡಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಬೇಕೆಂದು ಆದೇಶವಿತ್ತರು. ಪೊಲೀಸರಿಗೆ ಲಂಚ ಕೊಡಲು ಅಸಮರ್ಥನಾದ ಆ ಮಗ್ಧ ಆದಿವಾಸಿ ಇಡೀ ರಾತ್ರಿ ಶವವನ್ನು ತನ್ನ ಮನೆಯ ವರಾಂಡದಲ್ಲಿ ಇಟ್ಟುಕೊಂಡು, ಬೆಳಗಿನ ಜಾವ ಐದು ಗಂಟೆಗೆ ಎದ್ದು 40 ಕಿಲೋಮೀಟರ್ ದೂರದ ಜಗದಾಲ್‌ಪುರ್ ಆಸ್ಪತ್ರೆಗೆ ತನ್ನ ಸೈಕಲ್‌ನ ಹಿಂಭಾಗಕ್ಕೆ ಕಟ್ಟಿಗೆ ಹೊರೆ ಕಟ್ಟಿದಂತೆ ಕಟ್ಟಿಕೊಂಡು ಸೈಕಲ್ ತುಳಿದ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಮರೋಣತ್ತರ ಪರೀಕ್ಷೆಗೆ ಶವ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿ ಸಂಜೆ ಸಂಜೆ ಆರು ಗಂಟೆಗೆ ಆತನಿಗೆ ಶವ ಒಪ್ಪಿಸಿದರು. ಶವ ಪರೀಕ್ಷೆಗಾಗಿ ಕುತ್ತಿಗೆಯಿಂದ ಕಿಬ್ಬೊಟ್ಟೆಯವರೆಗೆ ಆ ಹೆಣ್ಣು ಮಗಳ ಶವವನ್ನು ಸೀಳಿ, ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಆ ಬಡ ಆದಿವಾಸಿ ರೈತನ ಬಳಿ ಇದ್ದ ನಲವತ್ತು ರೂಪಾಯಿಯನ್ನು ಆಸ್ಪತ್ರೆ ಸಿಬ್ಬಂದಿ ಕಸಿದುಕೊಂಡಿದ್ದರು. ಆನಂತರ ಸರಿಯಾಗಿ ಹೊಲಿಗೆ ಹಾಕದೆ, ಈಚಲ ಛಾಪೆಯಲ್ಲಿ ಸುತ್ತಿದ ಮಗಳ ಶವವನ್ನು ಅವನಿಗೆ ನೀಡಲಾಯಿತು. ರಕ್ತ ಸೋರುತ್ತಿದ್ದ ತನ್ನ ಕರುಳ ಕುಡಿಯ ಶವವನ್ನು ಮತ್ತೇ ಸೈಕಲ್ಲಿಗೆ ಕಟ್ಟಿಕೊಂಡು ಕತ್ತಲ ರಾತ್ರಿಯಲ್ಲಿ ಜಿಲ್ಲಾ ಕೇಂದ್ರದಿಂದ ತನ್ನ ಹಳ್ಳಿಗೆ ಆ ಮುಗ್ಧ ಅಮಾಯಕ ಸೈಕಲ್ ತುಳಿಯತೊಡಗಿದ. ಮಗಳ ಸಾವಿನ ನೋವಿನಿಂದ ಹೊರಬರಲಾರದ ಸ್ಥಿತಿಯಲ್ಲಿ ಆತ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಏನನ್ನೂ ತಿನ್ನದೆ, 80 ಕಿಲೋಮೀಟರ್ ದೂರ ಸೈಕಲ್ ತುಳಿದು ರಾತ್ರಿ ತನ್ನ ಹಳ್ಳಿಗೆ ಬಂದು ಶವದ ಅಂತ್ಯ ಕ್ರಿಯೆ ಮುಗಿಸಿದಾಗ ನಡುರಾತ್ರಿ ಮೀರಿತ್ತು. ಮತ್ತೇ ಮಾರನೇ ದಿನ ಬೆಳಿಗ್ಗೆ ಆತ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮರಣೋತ್ತರ ಪರೀಕ್ಷೆಯ ವರದಿ ತಲುಪಿಸಬೇಕಾಗಿತ್ತು.

ಪ್ರಿಯ ಓದುಗರೆ, ಒಂದು ಕ್ಷಣ ನಿಮ್ಮ ಅಸ್ತಿತ್ವವನ್ನು ಮರೆತು ಆ ಬಡ ಹೆಣ್ಣು ಮಗಳ ತಂದೆಯಾಗಿ ನಿಮ್ಮನ್ನು ಊಹಿಸಿಕೊಂಡು ಚಿಂತಿಸಿ? ಅನಕ್ಷರಸ್ಥ ಮುಗ್ಧ ಆದಿವಾಸಿಯೊಬ್ಬ ಅನುಭವಿಸಿದ ನೋವಿಗೆ ಶಬ್ಧಗಳಾಗಲಿ, ಅಕ್ಷರವಾಗಲಿ, ಭಾವನೆಗಳಾಗಲಿ ಮೂಡಿ ಬರಲು ಸಾಧ್ಯವೆ? ಇದು ವ್ಯವಸ್ಥೆಯ ಕ್ರೌರ್ಯ ಎಂದು ಅನಿಸುವುದಿಲ್ಲವೆ? ನಮಗೆ ಗೋಚರಿಸದ, ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದ ಇಂತಹ ಸಾವಿರಾರು ನೋವಿನ ಕಥೆಗಳು ಅರಣ್ಯದಲ್ಲಿ ನೊಂದವರ ನಡುವೆ ಪ್ರತಿಧ್ವನಿಸುತ್ತಿವೆ. ಅಕ್ಷರ ಲೋಕದಿಂದ ವಂಚಿತರಾದವರ ನೋವು ಒಂದು ಬಗೆಯಾದರೆ, ಅಕ್ಷರ ಕಲಿತು ತಮ್ಮ ಹಕ್ಕುಗಳಿಗೆ ಪ್ರತಿಪಾದಿಸಿ ಕತ್ತಲ ಲೋಕದಲ್ಲಿ ಕೊಳೆಯುತ್ತಿರುವ ಆದಿವಾಸಿ ಜನಗಳ ನೋವು ಇನ್ನೊಂದು ಬಗೆಯದು.

2011 ರ ಆಗಸ್ಟ್ ತಿಂಗಳಿನಲ್ಲಿ ಛತ್ತೀಸ್‌ಘಡದ ರಾಯ್‌ಪುರನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆದಿವಾಸಿಗಳ ಪರವಾಗಿ ಕಪ್ಪು ಬಾವುಟ ಪ್ರದರ್ಶಿಸಲು ನಿರಾಕರಿಸಿದ ಸೋನಿ ಸೂರಿ ಎಂಬ 35 ವರ್ಷದ ಆದಿವಾಸಿ ಜನಾಂಗದ ಶಿಕ್ಷಕಿ ಹಾಗೂ ಅವಳ ಚಿಕ್ಕಪ್ಪನ ಮಗ ಲಿಂಗರಾಮ್ ಬಸ್ತರ್ ವಲಯದಲ್ಲಿ ನಕ್ಸಲರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಆದರೂ ಚತ್ತೀಸ್‌ಘಡ ಪೊಲೀಸರಿಗೆ ಇವರ ಮೇಲೆ ನಕ್ಸಲಿಯರ ಬೆಂಬಲಿಗರೆಂಬ ಗುಮಾನಿ. ಈ ಕಾರಣಕ್ಕಾಗಿ ಈ ಇಬ್ಬರೂ ಬಸ್ತರ್ ವಲಯದ ಜಿಲ್ಲಾಧಿಕಾರಿ ಶ್ರೀನಿವಾಸಲು ಎಂಬ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿಯನ್ನು ಭೇಟಿಯಾಗಿ ತಮಗೆ ಮತ್ತು ತಮ್ಮ ಜನಾಂಗಕ್ಕೆ ನಕ್ಸಲ್ ಮಾವೋವಾದಿಗಳು ಮತ್ತು ಪೊಲೀಸರಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಳ್ಳುತ್ತಾರೆ. ಇದನ್ನು ಸ್ವತಃ ಜಿಲ್ಲಾಧಿಕಾರಿ ಧೃಡಪಡಿಸಿದ್ದಾನೆ. ಮೆಟ್ರಿಕ್‌ವರೆಗೆ ಓದಿ, ವಾಹನ ಚಾಲಕನ ಪರವಾನಿಗೆ ಪಡೆದಿದ್ದ ಲಿಂಗರಾಮ್‌ಗೆ ಪೊಲೀಸರು ತಮ್ಮ ಇಲಾಖೆಯ ಜೀಪ್ ಚಾಲಕನಾಗಿ, ನಕ್ಸಲಿಯರ ಅಡಗುತಾಣಗಳನ್ನು ತೋರಿಸಬೇಕೆಂದು ಒತ್ತಾಯಿಸಿದಾಗ ಆತ ನಕ್ಸಲರ ಭಯದಿಂದ ಕೆಲಸ ನಿರಾಕರಿಸುವುದರ ಜೊತೆಗೆ ದೆಹಲಿಗೆ ಹೋಗಿ ಮಾನವ ಹಕ್ಕುಗಳ ಸ್ವಯಂ ಸೇವಾ ಸಂಘಟನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಳ್ಳತ್ತಾನೆ. ಇವುಗಳ ನಡುವೆ ಛತ್ತೀಸ್‌ಘಡ ಸೇರಿದಂತೆ ದಂಡಕಾರಣ್ಯದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಆದಿವಾಸಿ ಜನಾಂಗದ ಮೇಲೆ ನಡೆಸಿದ ಅತಿಕ್ರಮಣ, ಅತ್ಯಾಚಾರ, ಶೋಷಣೆ ಇವೆಲ್ಲವೂ ಮಾನವ ಹಕ್ಕುಗಳ ಸಂಘಟನೆ ಮೂಲಕ ಹೊರ ಜಗತ್ತಿಗೆ ಬಹಿರಂಗವಾಗುತ್ತಿರುವುದು ನುಂಗಲಾರದ ತುತ್ತಾಗಿತ್ತು. ಇದಕ್ಕೆ ಶಿಕ್ಷಕಿ ಮತ್ತು ಅವಳ ಸಹೋದರರು ಕಾರಣ ಎಂಬ ಗುಮಾನಿ ಛತ್ತೀಸ್‌ಘಡ ಪೊಲೀಸರಿಗೆ ಇತ್ತು. ಇದರಿಂದಾಗಿ ಅಲ್ಲಿನ ಪೊಲೀಸರಿಗೆ ಶಿಕ್ಷಕಿ ಸೋನಿ ಸೂರಿ ಕುಟುಂಬದ ಬಗ್ಗೆ ದ್ವೇಷ ಬೆಳೆಯಲು ಕಾರಣವಾಯಿತು. ಇದೇ ವೇಳೆ ಲಂಡನ್‌ ನಗರದಲ್ಲಿ ವಿಕಿಲಿಕ್ಸ್ ಅಂತರ್ಜಾಲ ಪತ್ರಿಕೆ ಬಿಡುಗಡೆ ಮಾಡಿದ್ದ ಭಾರತದ ಅಮೇರಿಕಾ ರಾಯಭಾರಿ ಕಚೇರಿಯ ಸಂದೇಶಗಳ ಪೈಕಿ, ಎಸ್ಸಾರ್ ಸ್ಟೀಲ್ ಕಂಪನಿ ಅಪಾರ ಪ್ರಮಾಣದಲ್ಲಿ ಮಾವೋವಾದಿ ನಕ್ಸಲರಿಗೆ ಹಣವನ್ನು ನೀಡಿ ಛತ್ತೀಸ್‌ಘಡದಲ್ಲಿ ಗಣಿಕಾರಿಕೆ ನಡೆಸುತ್ತಿದೆ ಎಂಬುದನ್ನು ಬಹಿರಂಗಗೊಳಿಸಿತ್ತು. ಇದನ್ನು ಆಧಾರವಾಗಿಕೊಂಡು ದಂತೆವಾಡದ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್‌ಗತ  ಎಂಬಾತ ಪಲ್‌ನಾರ್ ಎಂಬ ಹಳ್ಳಿಯ ಬಳಿ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸೋನಿ ಸೂರಿಯನ್ನು ಬಂಧಿಸಿದ.

ಇದಕ್ಕೂ ಎರಡು ತಿಂಗಳ ಮುನ್ನ ಆಕೆಯ ಪತಿಯನ್ನು ನಕ್ಸಲ್ ಬೆಂಬಲಿಗ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಎಸ್ಸಾರ್ ಕಂಪನಿಯಿಂದ ಹಣವನ್ನು ಪಡೆದು ನಕ್ಸಲಿಯರಿಗೆ ಕೊಂಡೊಯ್ಯುತ್ತಿದ್ದಳು ಎಂಬ ಆರೋಪದಡಿ ಈಕೆಯನ್ನು 40 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಲಾಯಿತು. ಇಡೀ ಭಾರತದ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಈಕೆಯ ಬಂಧನದ ಅವಧಿಯಲ್ಲಿ ಜರುಗಿ ಹೋಯಿತು. ನ್ಯಾಯಾಲಯದ ಮುಂದೆ ಹಾಜರು ಪಡಿಸದೆ, ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವೇಳೆ ಈಕೆಯ ಗುಪ್ತಾಂಗಕ್ಕೆ ಕಲ್ಲು ಇಟ್ಟಿಗೆ ಚೂರುಗಳನ್ನು ತುರುಕಿ ಚಿತ್ರ ಹಿಂಸೆ ನೀಡಲಾಯಿತು. ಇದು ಹೊರಜಗತ್ತಿಗೆ ಬಹಿರಂಗವಾಗುವ ವೇಳೆಗೆ ಸೋನು ಸೂರಿಯನ್ನು ಗುಪ್ತವಾಗಿ ಕೊಲ್ಕತ್ತ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿರುವ ಅಮೇರಿಕಾದ ನೋಮ್ ಚಾಮ್‌ಸ್ಕಿ ಸೇರಿದಂತೆ ಭಾರತದ ಅರುಣಾ ರಾಯ್ ಮತ್ತು ಅರುಂಧತಿ ರಾಯ್, ಸಿನಿಮಾ ನಿರ್ದೇಶಕ ಆನಂದ್‌ ಪಟುವರ್ಧನ್ ಹಾಗೂ ಅಶೋಕ್ ಮೆಂಡರ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ ಪರಿಣಾಮ ಸುಪ್ರೀಂ ಕೋರ್ಟ್ ಈಕೆಯ ಬಂಧನದ ವಿಷಯವನ್ನು ವಿಚಾರಣೆಗೆ ಎತ್ತಿಕೊಂಡಿತು. ಈ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಪೊಲೀಸರು ನೀಡಿದ ಹೇಳಿಕೆ ಕೂಡ ಬದಲಾಗಿತ್ತು. ಎಸ್ಸಾರ್ ಕಂಪನಿಯ ದಲ್ಲಾಳಿಯೊಬ್ಬ ನಕ್ಸಲಿಯರಿಗೆ 15 ಲಕ್ಷ ಹಣ ಸಂದಾಯ ಮಾಡುತ್ತಿದ್ದಾಗ ಜೊತೆಯಲ್ಲಿ ಸೋನು ಸೂರಿ ಇದ್ದಳು ಎಂಬುದು ಪೊಲೀಸರ ಹೇಳಿಕೆ. ಇವರ ಹೇಳಿಕೆ ನಿಜವೇ ಆಗಿದ್ದರೆ, ಆ ದಿನ ಸಂತೆಯಲ್ಲಿದ್ದ ಸಾವಿರಾರು ಮಂದಿ ಕೂಡ ಪೊಲೀಸರ ದೃಷ್ಟಿಯಲ್ಲಿ ಅಪರಾಧಿಗಳಾಗಬೇಕು. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸೋನು ಸೂರಿಯ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ದೆಹಲಿಯ ವೈದ್ಯರ ವರದಿ ಕೂಡ ಈಕೆಯ ಗುಪ್ತಾಂಗ ಮತ್ತು ಗರ್ಭಕೋಶದ ಬಳಿ ಕಲ್ಲು ಮತ್ತು ಇಟ್ಟಿಗೆ ಚೂರುಗಳು ಇದ್ದುದನ್ನು ಧೃಡಪಡಿಸಿದೆ. ಈಗ ಸೋನು ಸೂರಿ ಕೊಲ್ಕತ್ತ ಆಸ್ಪತ್ರೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಚೇತರಿಸಿಕೊಳ್ಳುತ್ತಿದ್ದಾಳೆ. ಈಕೆಯ ಪತಿ ಜೈಲಿನಲ್ಲಿದ್ದಾನೆ. ಈಕೆಯ ತಂದೆಯನ್ನು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮಗೆ ಬೆಂಬಲಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ನಕ್ಸಲಿಯರು ಗುಂಡಿಟ್ಟು ಕೊಂದಿದ್ದರು. ಇವಳ ಐದು ವರ್ಷದ ಮಗು ದಂತೆವಾಡದ ಅರಣ್ಯ ಪ್ರದೇಶದಲ್ಲಿನ ಹಳ್ಳಿಯೊಂದರಲ್ಲಿ ವೃದ್ಧ ಅಜ್ಜಿಯ ಹಾರೈಕೆಯಲ್ಲಿದೆ. ಶಿಕ್ಷಕಿ ಸೋನು ಸೂರಿಗೆ ಅಮಾನುಷ ಚಿತ್ರ ಹಿಂಸೆ ನೀಡಿದ ದಂತೆವಾಡದ ಪೊಲೀಸ್ ಅಧಿಕಾರಿಗೆ ಈ ವರ್ಷ ಕೇಂದ್ರ ಸರ್ಕಾರ ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕವನ್ನು ನೀಡಿದೆ.

ಅಮಾಯಕರ ವಿರುದ್ಧ ವ್ಯವಸ್ಥೆಯ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಹ ಸ್ಥಿತಿಯಲ್ಲಿ ಮಧ್ಯ ಭಾರತದ ಅರಣ್ಯವಾಸಿಗಳು ಬದುಕುತ್ತಿದ್ದಾರೆ. ಇದರ ವಿರುದ್ಧ  ಧ್ವನಿ ಎತ್ತಿದ ವಿದ್ಯಾವಂತರು ನಕ್ಸಲಿಯರ ಬೆಂಬಲಿಗರು ಎಂಬ ಆರೋಪದಡಿ ಜೈಲಿಗೆ ನೂಕಲ್ಪಟ್ಟು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಇಲ್ಲಿನ ದಂಪತಿಗಳ ಚಿತ್ರ ಗಮನಿಸಿ, ಇವರು ಉತ್ತರ ಪ್ರದೇಶದ ಅಲಹಾಬಾದಿನ ವಿದ್ಯಾವಂತ ದಂಪತಿಗಳು. ಸೀಮಾ ಅಜಾದ್ ಹೆಸರಿನ ಈಕೆ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ, ಅಲಹಾಬಾದ್ ನಗರದಲ್ಲಿ ತನ್ನ ಪತಿ ವಿಶ್ವವಿಜಯ್ ಜೊತೆಯಲ್ಲಿ ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತೆ, ಅಲ್ಲದೆ ದಸ್ತಕ್ ಎಂಬ ಪತ್ರಿಕೆಯ ಸಂಪಾದಕಿ. 2010 ರಲ್ಲಿ ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಮತ್ತು ನಲವತ್ತು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡ ಉತ್ತರ ಪ್ರದೇಶದ ಪೊಲೀಸರು ಈ ದಂಪತಿಗಳನ್ನು ಮಾವೋವಾದಿ ನಕ್ಸಲ್ ಸಂಘಟನೆಯ ಬೆಂಬಲಿಗರು ಎಂಬ ಆರೋಪದಡಿ ಬಂಧಿಸಿದ್ದಾರೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅಲಹಾಬಾದ್ ಸ್ಥಳೀಯ ನ್ಯಾಯಾಲಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೀಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ದಂಪತಿಗಳು ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಮುಂದುವರೆದಿದೆ. ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಇತ್ತು ಎನ್ನುವುದಾದರೆ, ಅದು ಪೊಲೀಸರ ದೃಷ್ಟಿಯಲ್ಲಿ ಅಪರಾಧ ಎನ್ನುವುದಾದರೆ, ಸಾವಿರಾರು ಪುಟಗಳಷ್ಟು ಮಾಹಿತಿ ಇಟ್ಟುಕೊಂಡು ಬರೆಯುತ್ತಿರುವ ನಾನು ಮತ್ತು ಈ ಕ್ಷಣದಲ್ಲಿ ಇದನ್ನು ಓದುತ್ತಿರುವ ನೀವೂ ಕೂಡ ಅಪರಾಧಿಗಳು. ಹಿಂಸೆಯನ್ನು ಹತ್ತಿಕ್ಕಲು ಹಿಂಸೆಯ ಹಾದಿ ಪರ್ಯಾಯವಲ್ಲ. ಆದರೆ, ಪೊಲೀಸರು ಈ ಹಾದಿಯನ್ನೇ ಆಯ್ಕೆ ಮಾಡಿಕೊಂಡಿರುವುದು ವರ್ತಮಾನದ ದುರಂತ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನ ಮನೆಯಲ್ಲಿ ಸಿಕ್ಕ ನಕ್ಸಲ್ ಸಾಹಿತ್ಯವೆಂದರೆ, ಭಗತ್ ಸಿಂಗನ ಆತ್ಮಚರಿತ್ರೆ, ಮತ್ತು 200 ಗ್ರಾಂ ಚಹಾಪುಡಿ ಮಾತ್ರ. ಆದರೂ ಆತ ಸೆರೆಮನೆಗೆ ದೂಡಲ್ಪಟ್ಟ.

ಈಗಲೂ ನಕ್ಸಲರು ಹಿಂಸೆಯನ್ನು ಮುಂದುವರೆಸುತ್ತಿರುವುದಕ್ಕೆ (ವಿಶೇಷವಾಗಿ ಗಿರಿಜನರಿರುವ ಪ್ರದೇಶಗಳಲ್ಲಿ) ಮತ್ತು ಅದಕ್ಕೆ ಈ ವ್ಯವಸ್ಥೆ ಮತ್ತು ಪೋಲಿಸರ ಅಮಾನುಷ ದೌರ್ಜನ್ಯವೂ ಒಂದು ಪ್ರಮುಖ ಕಾರಣವಾಗಿ ಹೇಗೆ ಪೂರಕವಾಗಿದೆ ಎಂಬ ಪ್ರಶ್ನೆಗಳಿಗೆ ಈ ಮೇಲಿನ ಘಟನೆಗಳು ನಮಗೆ ಕೆಲವೊಂದು ಉತ್ತರಗಳನ್ನು ಕೊಡಬಲ್ಲವು. ಹಾಗೇಯೇ, ಈ ಸಮಸ್ಯೆಗೆ ಒಂದಷ್ಟು ಪರಿಹಾರದ ದಾರಿಗಳನ್ನೂ.

(ಮುಂದುವರೆಯುವುದು)

ಪ್ರಜಾ ಸಮರ-1 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


[ಪ್ರಿಯ ಓದುಗರೇ, ಪೀಪಲ್ಸ್ ವಾರ್ ಗ್ರೂಪ್ ಹೆಸರಿನಲ್ಲಿ 80ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ನಕ್ಸಲ್ ಹೋರಾಟಕ್ಕೆ ಹಲವಾರು ಆಯಾಮಗಳಿವೆ. ಈ ಹೋರಾಟಕ್ಕೆ ಪ್ರೇರಣೆಯಾದ ಸಂಗತಿಗಳು ಮತ್ತು ನೆರೆಯ ರಾಜ್ಯಕ್ಕೆ ವಿಸ್ತರಿಸಲು ಕಾರಣವಾದ ಮೂರು ಘಟನೆಗಳನ್ನು ಪ್ರಜಾಸಮರದ ಇತಿಹಾಸಕ್ಕೆ ಮೊದಲು ಮೂರು ಅಧ್ಯಾಯಗಳಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.]

ಅದು 2009 ರ ಸೆಪ್ಟಂಬರ್ ಇಪ್ಪತ್ತರ ದಿನಾಂಕ. ಹೈದರಾಬಾದ್ ನಗರದಿಂದ ಬಂದಿದ್ದ ಆಂಧ್ರ ಪೋಲಿಸರು ಹಾಗೂ ದೆಹಲಿಯ ಗುಪ್ತಚರ ಇಲಾಖೆಯ ಪೋಲಿಸರು ನಡು ಮಧ್ಯಾಹ್ನ ದೆಹಲಿಯ ರಾಯಭಾರಿ ಕಚೇರಿಗಳ ಹತ್ತಿರವಿರುವ ಪ್ರತಿಷ್ಠಿತ ಬಿಕಾಜಿಕಾಮ ಎಂಬ ವಾಣಿಜ್ಯ ಕಟ್ಟಡದ ಮುಂಭಾಗ ಅಂಬಾಸೆಡರ್ ಕಾರಿನಲ್ಲಿ ಕಾದು ಕುಳಿತಿದ್ದರು. ಎರಡು ದಶಕಗಳ ಕಾಲ ನಕ್ಸಲ್ ಚಳವಳಿ, ವಿಶೇಷವಾಗಿ 1980ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಗೆ ರೂಪು ರೇಷೆಯ ಜೊತೆಗೆ ವಿಚಾರಧಾರೆಗಳನ್ನು ರೂಪಿಸಿ, ಅದನ್ನು ಸಿದ್ಧಾಂತಗಳ ಆಧಾರದ ಮೇಲೆ ಮುನ್ನಡೆಸಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಬಿಹಾರ ರಾಜ್ಯಗಳಲ್ಲಿ ನಕ್ಸಲ್ ಹೋರಾಟದ ಬೀಜ ಬಿತ್ತಿ, ನಂತರ ಬಳಲಿ ಸೋತು ಸುಣ್ಣವಾಗಿದ್ದ ಹಿರಿಯ ಜೀವವೊಂದನ್ನು ಬೇಟೆಯಾಡುವುದು ಅವರ ಗುರಿಯಾಗಿತ್ತು. ಆದರೆ, ಆ ವ್ಯಕ್ತಿಯ ಮುಖ ಪರಿಚಯವಿಲ್ಲದ ಪೊಲೀಸರು 20 ವರ್ಷದ ಹಿಂದೆ ಅರಣ್ಯದಲ್ಲಿ ಈ ನಾಯಕನಿಗೆ ಸಹಾಯಕನಾಗಿ ದುಡಿದು ಬಂಧನದಲ್ಲಿದ್ದ ವ್ಯಕ್ತಿಯೊರ್ವನನ್ನು ಇದಕ್ಕಾಗಿ ವಿಶಾಖಪಟ್ಟಣದಿಂದ ಕರೆತಂದಿದ್ದರು.

ಗಂಟೆಗಳ ಕಾಲ ಕಾದ ಪೋಲಿಸರ ನಿರೀಕ್ಷೆ ಹುಸಿಯಾಗಲಿಲ್ಲ. ವಾಣಿಜ್ಯ ಕಟ್ಟಡದ ಯಾವುದೋ ಒಂದು ಕಛೇರಿಯಿಂದ ಹೊರ ಬಂದ ತೆಳ್ಳನೆಯ ಆದರೆ ಆರು ಅಡಿ ಎತ್ತರವಿದ್ದ, ಖಾದಿ ಜುಬ್ಬ ಮತ್ತು ಪೈಜಾಮ ಧರಿಸಿದ್ದ ಆ ಹಿರಿಯ ಜೀವ ನಿಧಾನವಾಗಿ ಹೆಗಲಿನಲ್ಲಿ ಇದ್ದ ಕೈಚೀಲವನ್ನು ಸರಿ ಪಡಿಸಿಕೊಳ್ಳುತ್ತಾ, ಕಚೇರಿಯ ಸಮೀಪವಿದ್ದ ಹ್ಯಾಬಿಟೇಟ್ ಸೆಂಟರ್ ಬಸ್ ನಿಲ್ದಾಣದ ಬಳಿ ಬಂದು ನಿಂತುಕೊಂಡಿತು. ತಡಮಾಡದೆ ಕಾರಿನಲ್ಲಿದ್ದ ಪೊಲೀಸರು ಕೆಳಗಿಳಿದು ಬಂದು ವ್ಯಕ್ತಿಯನ್ನು ಎತ್ತಿ ಹಾಕಿಕೊಂಡು ಕ್ಷಣಾರ್ಧದಲ್ಲಿ ಮರೆಯಾದರು. ಮಾರನೇ ದಿನ ಹಿರಿಯ ಜೀವವನ್ನು ನ್ಯಾಯಧೀಶರ ಗುಟ್ಟಾಗಿ ಹಾಜರುಪಡಿಸಿ ನಂತರ ತಮ್ಮ ವಶಕ್ಕೆ ತೆಗೆದುಕೊಂಡ ದೆಹಲಿಯ ಪೊಲೀಸರು ಸುದ್ಧಿಗೋಷ್ಠಿಯಲ್ಲಿ ವಿಷಯ ಪ್ರಕಟಿಸಿದರು. ಭಾರತದ ಅತ್ಯಂತ ಪ್ರಮುಖ ನಕ್ಸಲ್ ನಾಯಕ ಹಾಗೂ ಹತ್ತಕ್ಕೂ ಹೆಚ್ಚು ರಾಜ್ಯಗಳ ನಕ್ಸಲಿಯರ ಆರಾಧ್ಯ ದೈವ ಮತ್ತು ಭಾರತದ ಅಖಂಡತೆಗೆ ಮತ್ತು ಸಾರ್ವಭೌಮತ್ವಕ್ಕೆ ಕಂಟಕವಾಗಿದ್ದ ಕೊಬದ್ ಗಾಂಡಿ ಎಂಬ 76 ವರ್ಷದ ನಾಯಕನನ್ನು ಬಂಧಿಸಿರುವುದಾಗಿ  ಬಹಿರಂಗಪಡಿಸಿದರು. ಪೂರ್ವ ಮತ್ತು ಮಧ್ಯ ಭಾರತದ ಆದಿವಾಸಿಗಳ ಬಾಯಲ್ಲಿ ಗಾಂಧಿ ಎಂತಲೂ ನಕ್ಸಲಿಯರ ಬಾಯಲ್ಲಿ ಕೆ.ಜಿ. ಸರ್ ಎಂತಲೂ ಪರಿಚಿತವಾಗಿದ್ದ ಕೋಬದ್ ಗಾಂಡಿಯ ಹೋರಾಟದ ಬದುಕು ಹೀಗೆ ಬಂಧನದೊಂದಿಗೆ ಅಂತ್ಯಗೊಂಡಿತು.

ಈ ಬಂಧನ ಬಿ.ಬಿ.ಸಿ. ಚಾನಲ್ ಸೇರಿದಂತೆ ಅಂತರ್ರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಏಕೆಂದರೆ, ಬಂಧನಕ್ಕೆ ಎರಡು ವರ್ಷದ ಮುಂಚೆ ಈ ವ್ಯಕ್ತಿಯನ್ನು ಲಂಡನ್‌ನಿನ ಬಿ.ಬಿ.ಸಿ. ಚಾನಲ್ ತಂಡ ಪೊಲೀಸರ ಕಣ್ಣು ತಪ್ಪಿಸಿ ದಂಡಕಾರಣ್ಯದಲ್ಲಿ ಸಂದರ್ಶನ ಮಾಡಿ ಪ್ರಸಾರ ಮಾಡಿತ್ತು. ಏಕೆಂದರೆ, ಕೊಬಡ್ ಗಾಂಡಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ನಕ್ಸಲ್ ಚಳವಳಿಗೆ ಧುಮುಕದಿದ್ದರೆ, ಅಂತರ್ರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞನಾಗುವ ಎಲ್ಲಾ ಅವಕಾಶಗಳು ಇದ್ದವು. 1970 ದಶಕದಲ್ಲಿ ಲಂಡನ್ ನಗರದಲ್ಲಿ  ಚಾರ್ಟಡ್ ಅಕೌಟೆಂಟ್ ಪದವಿಗೆ ಓದುತಿದ್ದಾಗಲೇ, ಬ್ರಿಟಿಷರು ಭಾರತೀಯ ವಿದ್ಯಾರ್ಥಿಗಳ ವಿರುದ್ಧ ತೋರುತ್ತಿದ್ದ ವರ್ಣ ನೀತಿಯನ್ನು ಪ್ರತಿಭಟಿಸಿ, ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ, ಅಲ್ಲಿನ ಮಾಧ್ಯಗಳಲ್ಲಿ ಸುದ್ಧಿಯಾಗಿ ನಂತರ ಭಾರತಕ್ಕೆ ಮರಳಿದ್ದರು.

ಮುಂಬೈ ನಗರದ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದ ಕೊಬದ್ ಗಾಂಡಿಗೆ ದುಡಿಯುವ ಅವಶ್ಯಕತೆ ಇರಲಿಲ್ಲ. ಅವರ ತಂದೆ ಆದಿ ಗಾಂಡಿ ಪ್ರಸಿದ್ಧ ಬಹುರಾಷ್ಟೀಯ ಕಂಪನಿಯಾದ ಗ್ಲಾಸ್ಕೊ ಕಂಪನಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದವರು. ಮುಂಬೈ ನಗರದ ಪ್ರತಿಷ್ಠಿತ ಹಾಗೂ ಕಡಲಿಗೆ ಮುಖ ಮಾಡಿರುವ ವರ್ಲಿಯ ಪ್ರದೇಶದಲ್ಲಿ ನಾಲ್ಕು ಸಾವಿರ ಚದುರ ಅಡಿ ವಿಸ್ತಾರವಾದ ಜಾಗದಲ್ಲಿ ಬಂಗಲೆಯನ್ನು ನಿರ್ಮಿಸಿದ್ದರು. ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಬಾಲ್ಯದಿಂದಲೂ ಕೊಬದ್ ಗಾಂಡಿಗೆ ಬಡವರೆಂದರೆ ಅಪಾರ ಪ್ರೀತಿ ಮತ್ತು ಕಾಳಜಿ. ಒಮ್ಮೆ ತನ್ನ ತಂದೆಯ ಚಿನ್ನದ ಚೈನ್ ಹೊಂದಿದ್ದ ಕೈಗಡಿಯಾರವನ್ನು ಹೇಳದೆ ಕೇಳದೆ ಮನೆಯ ಸೇವಕನಿಗೆ ಧಾನ ಮಾಡಿದ ವ್ಯಕ್ತಿತ್ವ ಇವರದು. ಇಂತಹ ವ್ಯಕ್ತಿತ್ವವೇ ಅಂತಿಮವಾಗಿ ಕೊಬದ್ ಗಾಂಡಿಯನ್ನು ಅರಣ್ಯದ ಅಂಚಿಗೆ ತಂದು ನಿಲ್ಲಿಸಿತು. ಐಷಾರಾಮಿ ಬದುಕು, ಊಟ ತಿಂಡಿ ತೊರೆದು ದಂಡಕಾರಣ್ಯದ ದಟ್ಟ ಕಾನನದ ನಡುವೆ ಪ್ಲಾಸ್ಟಿಕ್ ಗುಡಾರದ ಕೆಳಗೆ ಅದೇ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಮಲಗುವಂತೆ ಮಾಡಿತು.

ಸತತ ಮೂವತ್ತು ವರ್ಷಗಳ ಕೊಬಡ್ ಗಾಂಡಿಯ ಹೋರಾಟದ ಬದುಕಿಗೆ ಬಾಳ ಸಂಗಾತಿಯಾಗಿ ಹೆಗಲುಕೊಟ್ಟು ಶ್ರಮಿಸಿದ ಜೀವವೇ, ಅನುರಾಧ ಶ್ಯಾನ್‌ಬಾಗ್ ಎಂಬ ಕನ್ನಡದ ಹೆಣ್ಣು ಮಗಳು. 1980ರ ದಶಕದಿಂದ ಆರಂಭವಾದ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನಷ್ಟೇ ಗೌರವವನ್ನು ಹೊಂದಿದ ಅಪೂರ್ವ ಜೋಡಿ ಇವರದು. ಇವರ ಕಥನ ಸಮಾಜದ ಮುಖ್ಯವಾಹಿನಿಗೆ ಬಾರದೇ ಕೇವಲ ಅರಣ್ಯದ ನಡುವೆ ನಕ್ಸಲಿಯರ ಬಾಯಲ್ಲಿ ನಕ್ಸಲಿಯರ ಗಾಂಧಿ ದಂಪತಿಗಳು ಎಂಬ ದಂತಕಥೆಯಾಗಿ ಇಂದಿಗೂ ಅನುರಣನಗೊಳ್ಳುತ್ತಿದೆ.

ದೆಹಲಿಯಲ್ಲಿ ಬಂಧನವಾಗಿ ವಿಚಾರಣೆಯ ನಂತರ ಮತ್ತೆ ನ್ಯಾಯಾಲಯಕ್ಕೆ ಕೊಬಡ್ ಗಾಂಡಿಯನ್ನು ಹಾಜರು ಪಡಿಸಿದಾಗ, ಕಿಕ್ಕಿರಿದು ತುಂಬಿದ್ದ ಮಾಧ್ಯಮ ಮಂದಿಯ ನಡುವೆ ನ್ಯಾಯಾಲಯದಲ್ಲಿ ಈ ವೃದ್ಧ ಜೀವ ಯಾವುದೇ ಅಳುಕಿಲ್ಲದೆ, ಭಗತ್‌ಸಿಂಗ್ ಜಿಂದಾಬಾದ್’, ಅನುರಾಧ ಗಾಂಡಿ ಅಮರ್ ಹೈ ಎಂಬ ಘೋಷಣೆ ಕೂಗಿತು.

ಕೇವಲ ಆರು ತಿಂಗಳ ಹಿಂದೆ ವೃದ್ಧಾಪ್ಯದ ಕಾರಣ ಹಲವು ಕಾಯಿಲೆಯಿಂದ ಬಳಲುತ್ತಿದ್ದ ಕೊಬದ್ ಗಾಂಡಿ ನಕ್ಸಲಿಯರ ಸಹಾಯದಿಂದ ದೆಹಲಿಗೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕಾಗಿ ಇವರದೇ ಭಾವಚಿತ್ರವುಳ್ಳ ದಿಲಿಪ್ ಪಟೇಲ್ ಎಂಬ ಹೆಸರಿನಲ್ಲಿ ನಕಲಿ ಮತದಾರರ ಚೀಟಿಯನ್ನು ಸಿದ್ಧಪಡಿಸಲಾಗಿತ್ತು. ಕೂಲಿಕಾರ್ಮಿಕರು ಮತ್ತು ಬಿಕ್ಷುಕರು, ಹಾಗೂ ಸೈಕಲ್ ರಿಕ್ಷಾವಾಲಾಗಳು ವಾಸಿಸುತ್ತಿದ್ದ ಮೊಲರ್‌ಬಂದ್ ಎಂಬ ಕಾಲೋನಿಯ ತಗಡಿನ ಶೀಟಿನ ಮನೆಯೊಂದರಲ್ಲಿ ವಾಸಿಸುತ್ತಾ ಬದುಕು ದೂಡುತ್ತಿದ್ದ ಈ ನಾಯಕನಿಗೆ ನಕ್ಸಲಿಯರೇ ಒಬ್ಬ ನಿಷ್ಠಾವಂತ ಸೇವಕನನ್ನು ನೇಮಕ ಮಾಡಿದ್ದರು. ಗೌಪ್ಯತೆಯ ದೃಷ್ಟಿಯಿಂದ ಮೊಬೈಲ್ ಬಳಸುತ್ತಿರಲಿಲ್ಲ. ಎಲ್ಲಾ ಸಂದೇಶಗಳು ಮಾರು ವೇಷದ ನಕ್ಸಲಿಯರ ಮೂಲಕ ಅವರಿಗೆ ರವಾನೆಯಾಗುತಿದ್ದವು. ಅದೇ ರೀತಿ ಹಣಕಾಸು ಸಹಾಯದ ಜೊತೆಗೆ ಚಟುವಟಿಕೆಯ ವಿಷಯಗಳು ಇವರಿಗೆ ತಲುಪುತಿದ್ದವು. (ಇವತ್ತಿಗೂ ದಂಡಕಾರಣ್ಯದ ಮಧ್ಯೆ ಸುರಕ್ಷಿತ ಪ್ರದೇಶದಲ್ಲಿ 70 ವರ್ಷದ ದಾಟಿದ, 17 ಕ್ಕೂ ಹೆಚ್ಚು ಮಂದಿ ಇರುವ ಹಿರಿಯ ನಕ್ಸಲ್ ಹೋರಾಟಗಾರರನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಅವರ ಸಲಹೆ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ.)

ಬಾಲ್ಯದಲ್ಲಿ ಡೆಹರಾಡೂನ್‌ನ ಕಾನ್ವೆಂಟ್ ವಸತಿಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಅಂದಿನ ಬಾಂಬೆಯ ಪ್ರತಿಷ್ಠಿತ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಇಂಗ್ಲೆಂಡ್‌ನಲ್ಲಿ ಚಾರ್ಟಡ್ ಅಕೌಟೆಂಟ್ ಪದವಿಯ ಪಡೆದು ಮರಳಿ ಭಾರತಕ್ಕೆ ಬಂದ ಕೊಬದ್ ಗಾಂಡಿಯನ್ನು ವೃತ್ತಿಯ ಸೆಳೆತಕ್ಕೆ ಬದಲಾಗಿ ಎಡಪಂಥೀಯ ಚಿಂತನೆಗಳು ಆಕರ್ಷಿಸಿದವು. ಹೀಗೆ ಕೊಬದ್ ಶ್ರಮಿಕರ ಬಗ್ಗೆ ಬಡವರ ಬಗ್ಗೆ ಕಾಳಜಿ ತೋರುತ್ತಾ ನಕ್ಸಲ್ ಚಳವಳಿಯತ್ತ ಒಲವು ಬೆಳೆಸಿಕೊಂಡರು. ಇದಕ್ಕೆ ಅಂದು ಬಾಂಬೆಯಲ್ಲಿ ಅಸ್ತಿತ್ವದಲ್ಲಿದ್ದ ಪ್ರಗತಿಪರ ವಿದ್ಯಾರ್ಥಿ ಸಂಘಟನೆ ಕೂಡ ಪರೋಕ್ಷವಾಗಿ ಕಾರಣವಾಯ್ತು. ಅವರ ಅಂದಿನ ಹೋರಾಟಗಳ ದಿನಗಳಲ್ಲಿ ಪ್ರಗತಿಪರ ಮುಸ್ಲಿಂ ಚಿಂತಕ ಅಸ್ಗರ್ ಆಲಿ ಇಂಜಿನಿಯರ್ ಇವರ ಒಡನಾಡಿಯಾಗಿದ್ದರು. ಇಂತಹ ಕ್ರಾಂತಿಯ ದಿನಗಳಲ್ಲಿ ಕೊಬದ್ ಒಂದು ದಿನ ಅನುರಾಧ ಶಾನ್‌ಬಾಗ್‌ರನ್ನು ಭೇಟಿಯಾದರು.   ಅನುರಾಧರವರ ತಂದೆ ಗಣೇಶ್ ಶಾನ್‌ಬಾಗ್ ಮೂಲತಃ ಕರ್ನಾಟಕದವರು. ವಕೀಲರಾಗಿದ್ದ ಇವರು ತಮ್ಮ ಯೌವನದಲ್ಲಿ ಸುಭಾಷ್‌ಚಂದ್ರ ಭೋಸರರಿಂದ ಪ್ರಭಾವಿತರಾಗಿ ಮನೆ ಬಿಟ್ಟು ಕೊಲ್ಕತ್ತ ನಗರಕ್ಕೆ ತೆರಳಿದವರು, ಅಲ್ಲಿದ್ದ ದಿನಗಳಲ್ಲಿ ನಕ್ಸಲ್ ಪ್ರಭಾವಕ್ಕೆ ಒಳಗಾಗಿ, ನಂತರ ಮುಂಬೈ ನಗರಕ್ಕೆ ಬಂದು ನೆಲೆ ನಿಂತರೂ ಕೂಡ ತಮ್ಮ ವಕೀಲ ವೃತ್ತಿಯಲ್ಲಿ ಸರ್ಕಾರದಿಂದ ಬಂಧಿತರಾಗುತ್ತಿದ್ದ ನಕ್ಸಲಿಯರ ಬಿಡುಗಡೆಗಾಗಿ ತಮ್ಮ ಬಹುಭಾಗದ ಸಮಯವನ್ನು ವ್ಯಯಮಾಡುತ್ತಿದ್ದರು. ಇವರ ಪತ್ನಿ ಕುಮುದಾ ಸಹ ಪ್ರಗತಿಪರ ಮನೋಭಾವವುಳ್ಳ ಗೃಹಿಣಿಯಾಗಿದ್ದರು. ಇಂತಹ ದಂಪತಿಗಳ ಪುತ್ರಿಯಾಗಿ ಜನಸಿದ್ದ ಅನೂರಾಧ ಬಾಲ್ಯದಿಂದ ತಂದೆಯ ಕ್ರಾಂತಿಕಾರಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಶಾಲಾ ದಿನಗಳಲ್ಲಿ ಸುಂದರ ಕೈಬರವಣಿಗೆ ಇದ್ದ ಅನುರಾಧ ಶ್ರಮಿಕರ ಪರವಾಗಿ ಭಿತ್ತಿ ಪತ್ರಗಳನ್ನು ಬರೆದು ರಸ್ತೆಯ ವಿದ್ಯುತ್ ಕಂಬಗಳಿಗೆ ಅಂಟಿಸುತ್ತಿದ್ದರು. ಪ್ರತಿಷ್ಠಿತ ಎಲ್ಪಿಸ್ಟೋನ್ ಕಾಲೇಜಿನಲ್ಲಿ ಪದವಿ, ಹಾಗೂ ಮುಂಬೈ ವಿ.ವಿ.ಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಎಂ.ಫಿಲ್ ಪಧವೀಧರೆಯಾದ ಅನುರಾಧ, ಶಿಕ್ಷಣದ ನಂತರ ಮುಂಬೈನ ಕೊಳಗೇರಿಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು. 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ದಲಿತ ಪ್ಯಾಂಥರ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಂದಿನ ದಿನಗಳಲ್ಲಿ ಮಹಾರಾಷ್ಟ್ರದ ದಲಿತರ ದೌರ್ಜನ್ಯ ಕುರಿತು ಈಕೆ ಬರೆದ ನೂರಾರು ಲೇಖನಗಳು ಅನೇಕ ಯುವ ದಲಿತ ಲೇಖಕ, ಲೇಖಕಿಯರ ಹುಟ್ಟಿಗೆ ಕಾರಣವಾದವು.

ಕೊಬದ್ ಮತ್ತು ಅನೂರಾಧ ಒಂದೇ ಬಗೆಯ ನಿಲುವುಗಳನ್ನು ಹೊಂದಿ ಮುಂಬೈ ಕೊಳಚೇಗೇರಿಗಳಲ್ಲಿ ಹರಿಜನರ ಬಸ್ತಿಗಳಲ್ಲಿ (ಕೇರಿ) ಒಟ್ಟಿಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಆಕರ್ಷಿತರಾಗಿ, ತಮ್ಮ ಪೋಷಕರ ಒಪ್ಪಿಗೆ ಪಡೆದು 1977ರ ನವಂಬರ್ 5 ರಂದು ವಿವಾಹವಾದರು. ಆ ವೇಳೆಗೆ ಕೊಬದ್ ಗಾಂಡಿಯವರ ತಂದೆ ಗ್ಲಾಸ್ಕೊ ಕಂಪನಿಯ ಸೇವೆಯಿಂದ ನಿವೃತ್ತರಾಗಿ ಪೂನಾ ಸಮೀಪದ ಮಹಾಬಲೇಶ್ವರ್ ಎಂಬ ಗಿರಿಧಾಮದಲ್ಲಿ ಎಸ್ಟೇಟ್ ಖರೀದಿಸಿ ವಾಸವಾಗಿದ್ದರು.  ಒಂದು ವಾರ ಮಹಾಬಲೇಶ್ವರದ ತಂದೆಯ ಎಸ್ಟೇಟ್‌ನಲ್ಲಿ ಕಾಲ ಕಳೆದ ನವ ದಂಪತಿಗಳು ಮುಂಬೈನಗರಕ್ಕೆ ವಾಪಸ್ ಬಂದು ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಮಿಕ ಸಂಘಟನೆಯ ಪರವಾಗಿ ಮತ್ತು ದಲಿತರ ಪರವಾಗಿ ಹೋರಾಟದಲ್ಲಿ ಪಾಲ್ಗೊಂಡರು. ತಮ್ಮ ಭವಿಷ್ಯದ ಬದುಕಿನ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಒಂದು ಅಂತಿಮ ನಿರ್ಧಾರಕ್ಕೆ ಬಂದರು. ಅದನ್ನು ತಮ್ಮ ಬಂಧು ಮಿತ್ರರ ಎದುರು ತಮ್ಮ ಭವಿಷ್ಯದ ಕಾರ್ಯ ಕ್ಷೇತ್ರದ ವಿವರವನ್ನು ಬಹಿರಂಗ ಪಡಿಸಿದರು. 1956ರ ರಲ್ಲಿ ಡಾ. ಅಂಬೇಡ್ಕರ್ ತಾವು ನಿಧನರಾಗುವ ಕೆಲವು ದಿನಗಳ ಮುನ್ನ ಬೌದ್ಧ ಧರ್ಮ ಸ್ವೀಕರಿಸಿದ್ದ ನಾಗಪುರವನ್ನು ತಮ್ಮ ಕರ್ಮ ಭೂಮಿಯನ್ನಾಗಿ ಆರಿಸಿಕೊಂಡಿದ್ದರು. ದಲಿತರು ಮತ್ತು ಕೂಲಿ ಕಾರ್ಮಿಕರ ಪರ ದುಡಿಯಲು ಕೊಬದ್ ಮತ್ತು ಅನುರಾಧ ನಿರ್ದರಿಸಿದರು. ಅದರಂತೆ ಇಬ್ಬರೂ ನಾಗಪುರಕ್ಕೆ ಬಂದು ಹರಿಜನ ಕೇರಿಯಲ್ಲಿ ಒಂದು ಹೆಂಚಿನ ಮನೆ ಪಡೆದು ವಾಸ ಮಾಡತೊಡಗಿದರು.

ನಾಗಪುರದ ವಿ.ವಿಯಲ್ಲಿ ಅನುರಾಧಗೆ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿದ್ದರಿಂದ ತನ್ನ ವೃತ್ತಿಯ ನಡುವೆ ನಾಗಪುರ ನಗರದಿಂದ 20 ಕಿಲೋಮೀಟರ್ ದೂರವಿರುವ ಕಾಂಪ್ಟಿ ಎಂಬ ಕಾಲೋನಿಯಲ್ಲಿ ನೇಕಾರಿಕೆಯಲ್ಲಿ ತೊಡಗಿದ್ದ ಬಡ ಮುಸ್ಲಿಂ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಾ, ರಾತ್ರಿ ವೇಳೆಯಲ್ಲಿ ಮಧ್ಯರಾತ್ರಿ 12 ರವರೆಗೆ ತಾವು ವಾಸವಾಗಿದ್ದ ಹರಿಜನ ಕೇರಿಯ ಜನರ ಸಂಕಷ್ಟಗಳಿಗೆ ಕಣ್ಣು ಮತ್ತು ಕಿವಿಯಾಗುತ್ತಿದ್ದರು.

ಕೊಬದ್ ಗಾಂಡಿ ಆ ವೇಳೆಗಾಗಲೇ ಮಹರಾಷ್ಟ್ರದ ಗಡಿಜಿಲ್ಲೆಗಳಾದ ಗೊಂಡಿಯ, ಬಂಡಾರ ಚಂದ್ರಾಪುರ್ ಮತ್ತು ಗಡ್ ಚಿರೋಲಿ ಜಿಲ್ಲೆಯ ಪ್ರದೇಶಗಳಿಗೆ ನೆರೆಯ ಆಂಧ್ರದ ಪ್ರಜಾ ಸಮರಂ ತಂಡದ ನಕ್ಸಲರು ಪ್ರವೇಶ ಪಡೆದಿದ್ದರಿಂದ ಸ್ಥಳಿಯ ಗೊಂಡಾ ಆದಿವಾಸಿಗಳು ಮತ್ತು ನಕ್ಸಲರ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮುಂಬೈ ನಗರದಲ್ಲಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯಲ್ಲಿ ಇದ್ದಾಗಲೇ 1981ರಲ್ಲಿ ಆಂಧ್ರದ ವಿಜಯವಾಡ ಸಮೀಪದ ಗುಂಟೂರಿನಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಪರ್ಕ ಬಂದ ಕೊಬದ್ ಗಾಂಡಿ ಮುಂದಿನ ದಿನಗಳಲ್ಲಿ ಪ್ರಜಾ ಸಮರಂ (ಪೀಪಲ್ಸ್ ವಾರ್ ಗ್ರೂಪ್) ನಕ್ಸಲ್ ಸಂಘಟನೆಗೆ ಒಂದು ಸಂವಿಧಾನ ರಚನೆ ಮಾಡಿದರು. (ಇದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ.) ವ್ಯಯಕ್ತಿಕ ನೆಲೆಯಲ್ಲಿ ಹಿಂಸೆಯನ್ನು ವಿರೋಧಿಸುತ್ತಿದ್ದ ಕೊಬದ್ ಗಾಂಡಿ ತಮ್ಮ ಎರಡು ದಶಕಗಳ ನಕ್ಸಲಿಯರ ಒಡನಾಟದಲ್ಲಿ ಎಂದೂ ಬಂದೂಕನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ, ಅರಣ್ಯದ ನಡುವೆ ಮೂಕ ಪ್ರಾಣಿಗಳಂತೆ ಬದುಕಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುತ್ತಿದ್ದ ಅರಣ್ಯವಾಸಿ ಆದಿವಾಸಿಗಳಿಗೆ ನಕ್ಸಲ್ ಹೋರಾಟದಿಂದ ಮಾತ್ರ ಮುಕ್ತಿ ಎಂದು ಅವರು ನಂಬಿದ್ದರು. ಕೋಬದ್‌ಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮತ್ತು ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬಗ್ಗೆ ಅಪಾರ ನಂಬಿಕೆಯಿದ್ದರೂ ಕೂಡ, ಭಾರತಕ್ಕೆ ಅಂಟಿಕೊಂಡಿದ್ದ ಪ್ಯೂಡಲ್ ವ್ಯವಸ್ಥೆ ಮತ್ತು ತಲೆ ಎತ್ತುತ್ತಿದ್ದ ಬಂಡವಾಳ ವ್ಯವಸ್ಥೆಯ ಕುರಿತು ಆಕ್ರೋಶವಿತ್ತು. ಅಮಾಯಕರ ಮುಕ್ತಿಗೆ ನಕ್ಸಲ್ ಹೋರಾಟ ಹಿಂಸೆಯ ಹಾದಿ ತುಳಿದರೂ ನಾನು ಅದನ್ನು ಬೆಂಬಲಿಸ ಬೇಕಾದ್ದು ನನಗೆ ಅನಿವಾರ್ಯ ಎಂದು ಬಿ.ಬಿ.ಸಿ. ಚಾನಲ್‌ಗೆ 2008 ರ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಡಿದ್ದರು. ನಕ್ಸಲ್ ಚಳವಳಿಯನ್ನು ನಿಗ್ರಹಿಸಲು ಎನ್‌ಕೌಂಟರ್ ಒಂದೇ ಗುರಿ ಎಂದು ಸರ್ಕಾರ ನಂಬಿಕೊಂಡಿರುವಾಗ, ಈ ನೆಲದ ದಲಿತರು, ಆದಿವಾಸಿಗಳ ರಕ್ಷಣೆಗೆ ಹಿಂಸೆಯೊಂದೇ ಹಾದಿ ಎಂದು ನಕ್ಸಲರು ನಂಬಿಕೊಂಡಿದ್ದಾರೆ. ಎರಡೂ ತಪ್ಪು ಹಾದಿಗಳು ನಿಜ, ಆದರೆ, ತಪ್ಪು ಸರಿಪಡಿಸುವ ನೈತಿಕ ಜವಬ್ದಾರಿ ಸರ್ಕಾರದ ಮೇಲಿದೆ ಎಂದು ನಕ್ಸಲ್ ಹೋರಾಟ ಕುರಿತ ತಮ್ಮ ಅನಿಸಿಕೆಯನ್ನು ಹೊರ ಜಗತ್ತಿನ ಜೊತೆ ಹಂಚಿಕೊಂಡಿದ್ದರು.

1990 ರಿಂದ ಈ ದಂಪತಿಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದ ಮಹಾರಾಷ್ಟ್ರದ ಪೊಲೀಸರು ಇವರನ್ನು ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾನ್ನಾಗಿಸಲು ಪ್ರಯತ್ನಿಸಿದ್ದರು. 92ರಲ್ಲಿ ನಾಗಪುರ ನಗರದಲ್ಲಿ ಸರ್ಕಾರದ ನಿಷೇಧಾಜ್ಞೆ ನಡುವೆ ಇವರು ಏರ್ಪಡಿಸಿದ್ದ ತೆಲುಗಿನ ಕ್ರಾಂತಿಕಾರಿ ಕವಿ ಗದ್ದಾರ್‌ನ ಹಾಡು ಮತ್ತು ನೃತ್ಯದ ಕಾರ್ಯಕ್ರಮಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ದಲಿತ ಮತ್ತು ಆದಿವಾಸಿಗಳು ಸೇರಿದ್ದರು. ಪೊಲೀಸರ ಪ್ರತಿಭಟನೆ ನಡುವೆ ವೇದಿಕೆ ಏರಿದ ಗಾಯಕ ಗದ್ದಾರ್ ಹಾಡಲು ಶುರು ಮಾಡುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದರು. ಪ್ರತಿಭಟಿಸಿದ ಜನರಿಗೆ ಲಾಠಿ ಏಟಿನ ರುಚಿ ತೋರಿಸಿದರು. ಇದೊಂದು ಕಾರ್ಯಕ್ರಮವನ್ನು ನೆಪವಾಗಿರಿಸಿಕೊಂಡು ಮಹರಾಷ್ಟ್ರ ಸರ್ಕಾರ ಕೊಬದ್ ಮತ್ತು ಅನುರಾಧ ಮೇಲೆ ಸಮಾಜದ ಶಾಂತಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂಬ ಮೊಕದ್ದೊಮ್ಮೆಯೊಂದನ್ನು ದಾಖಲಿಸಿದರು. ನಿರಂತರ ಪೊಲೀಸರ ಕಿರುಕುಳದಿಂದ ಬೇಸತ್ತು ಹೋಗಿದ್ದ ಈ ದಂಪತಿಗಳು ಅಂತಿಮವಾಗಿ ನಾಡನ್ನು ತೊರೆದು ಬಸ್ತಾರ್ ವಲಯದ ಕಾಡನ್ನು ಸೇರಿಕೊಂಡರು.

ನಕ್ಸಲರ ಸಹಾಯ ಮತ್ತು ಬೆಂಬಲದಿಂದ ಅಂದಿನ ಅವಿಭಜಿತ ಮಧ್ಯಪ್ರದೇಶದ (ಛತ್ತೀಸ್ ಗಡ ಸೇರಿದಂತೆ) ಅರಣ್ಯವಾಸಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಕೊಬಡ್ ಗಾಂಡಿ ಮತ್ತು ಅನುರಾಧ ತಮ್ಮನ್ನು ಸಮರ್ಪಿಸಿಕೊಂಡರು. ಲಿಪಿಯಿಲ್ಲದ ಗೊಂಡಿ ಭಾಷೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಇಬ್ಬರೂ ಅರಣ್ಯದ ನಡುವೆ ನಕ್ಸಲರ ಗುಡಾರದಲ್ಲಿ ವಾಸವಾಗಿದ್ದುಕೊಂಡು ಚಿತ್ರಗಳ ಮೂಲಕ ಶಿಕ್ಷಣ ನೀಡಬಹುದಾದ ಪಠ್ಯ ಮತ್ತು ಚಿತ್ರಗಳನ್ನು ತಯಾರಿಸಿದರು. ಬಸ್ತರ್ ಅರಣ್ಯ ಪ್ರದೇಶದಲ್ಲಿ ನೂರಾರು ಟೆಂಟ್ ಶಾಲೆಗಳನ್ನು ಆರಂಭಿಸಿ, ಮಕ್ಕಳಿಗೆ ಅಕ್ಷರ ಕಲಿಸಿಕೊಡುವುದರ ಜೊತೆಗೆ ಗೊಂಡ ಮತ್ತು ಮುರಿಯ ಜನಾಂಗದ ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಪಾಠ ಹೇಳಿಕೊಟ್ಟರು. ಪ್ರಾಥಮಿಕ ಆರೋಗ್ಯ ಚಿಕಿತ್ಸೆಯ ಬಗ್ಗೆ ವಿವರ ನೀಡಿ ಔಷಧಗಳನ್ನು ಉಚಿತವಾಗಿ ಹಂಚಿದರು. ಇವತ್ತಿಗೂ ಮಧ್ಯಭಾರತದ ಅರಣ್ಯ ವಾಸಿಗಳ ಸರಾಸರಿ ವಯಸ್ಸು ಕೇವಲ 55 ವರ್ಷ ಮಾತ್ರ. ತಾವು ಯಾವ ಕಾಯಿಲೆಗೆ ಬಲಿಯಾಗಿದ್ದೇವೆ ಎಂದು ತಿಳಿಯಲಾರದೇ ಸಾವನ್ನಪ್ಪುತ್ತಿದ್ದಾರೆ. ಕೊಬಡ್ ಗಾಂಡಿ ಶಿಕ್ಷಣಕ್ಕೆ ಒತ್ತು ಕೊಟ್ಟು ದುಡಿಯುತ್ತಿದ್ದ ಸಂದರ್ಭದಲ್ಲಿ ಅನುರಾಧ ಮಹಿಳೆಯರ ಅರೋಗ್ಯ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಿದರು. ಇವರ ಎಲ್ಲಾ ಚಟುವಟಿಕೆಗಳಿಗೆ ನಕ್ಸಲರು ಆರ್ಥಿಕ ನೆರವನ್ನು ಒದಗಿಸುತ್ತಿದ್ದರು.

1998ರಲ್ಲಿ ನಕ್ಸಲರ ನೆರವಿನಿಂದ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದ ಹಾಡಿಯ ಬಳಿ ಕೆರೆಗಳನ್ನು ನಿರ್ಮಿಸಲು ನಿರ್ಧರಿಸಿದ ಅನುರಾಧ ಶ್ರಮಧಾನದ ಮೂಲಕ 158 ಕೆರೆಗಳನ್ನು ನಿರ್ಮಿಸಿದರು. ಪ್ರತಿ ದಿನದ ಕೂಲಿಯಾಗಿ ಒಬ್ಬೊಬ್ಬರಿಗೆ ಒಂದು ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಮಧ್ಯಪ್ರದೇಶ ಸರ್ಕಾರ ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ 20 ಲಕ್ಷ ರೂಪಾಯಿ ನೀಡಲು ಮುಂದೆ ಬಂದಾಗ ನಿರ್ದಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಿದರು.

ನಗರದ ವಾತಾವರಣದಲ್ಲಿ ಬೆಳೆದಿದ್ದ ಈ ಎರಡು ಜೀವಗಳು ತಾವು ನಂಬಿದ್ದ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಲು ಅರಣ್ಯ ಜೀವನವನ್ನು ಆರಿಸಿಕೊಂಡ ಫಲವಾಗಿ 15 ವರ್ಷಗಳ ಆರಣ್ಯದ ಬದುಕಿನಲ್ಲಿ ಗುರುತು ಸಿಗಲಾರದಷ್ಟು ಬದಲಾಗಿ ಹೋಗಿದ್ದರು. ಅಕಾಲ ವೃದ್ಧಾಪ್ಯ ಅವರನ್ನು ಆವರಿಸಿಕೊಂಡಿತ್ತು. ಊಟ ನಿದ್ರೆ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಏರು ಪೇರಾಗಿತ್ತು. ಸದಾ ಪೊಲೀಸರ ಗುಂಡಿನ ದಾಳಿಯ ತೂಗುಕತ್ತಿಯ ಕೆಳೆಗೆ ಬದುಕು ದೂಡಬೇಕಾಗಿ ಬಂದ ಕಾರಣ ಕೆಲವು ಸಂದರ್ಭದಲ್ಲಿ ಅರಣ್ಯದಲ್ಲಿ ದಿನವೊಂದಕ್ಕೆ 20 ಕಿಲೋಮೀಟರ್ ನಡೆಯಬೇಕಾದ್ದು ಅನಿವಾರ್ಯವಾಯಿತು. 2007ರ ವೇಳೆಗೆ ಮಲೇರಿಯಾ ಕಾಯಿಲೆಗೆ ತುತ್ತಾದ ಅನುರಾಧ ನಂತರದ ದಿನಗಳಲ್ಲಿ ಅಂಗಾಂಗ ವೈಫಲ್ಯದ ಕಾಯಿಲೆ ಬಲಿಯಾಗ ಬೇಕಾಯಿತು. ಎರಡು ಬಾರಿ ಗುಪ್ತವಾಗಿ ಮುಂಬೈ ನಗರಕ್ಕೆ ಬಂದು ತನ್ನ ಅಣ್ಣ ಪ್ರಸಿದ್ಧ ರಂಗಕರ್ಮಿ ಸುನಿಲ್ ಶಾನ್‌ಬೋಗ್ ನೆರವಿನಿಂದ ಚಿಕಿತ್ಸೆ ಪಡೆದರು ಕೂಡ ಆ ವೇಳೆಗಾಗಲೇ ಕಾಲ ಮೀರಿ ಹೋಗಿತ್ತು. 2008 ಏಪ್ರಿಲ್ 8 ರಂದು ಬಸ್ತಾರ್  ಅರಣ್ಯ ನಿವಾಸಿಗಳ ಎದುರಲ್ಲಿ ಕೊನೆಯವರೆಗೂ ಅವರ ಸೇವೆ ಮಾಡಿದ ಸಂತೃಪ್ತಿಯಲ್ಲಿ ಅನುರಾಧ ಪ್ರಾಣಬಿಟ್ಟರು. ತನ್ನ ಬಾಳಸಂಗಾತಿಯ ಸಾವು ಕೊಬದ್ ಗಾಂಡಿಯ ಬದುಕಿನಲ್ಲಿ ದುಖಃಕ್ಕಿಂತ ಇನ್ನಷ್ಟು ಬದ್ಧತೆಯನ್ನು ಹೆಚ್ಚಿಸಿತು. ಆಕೆಯ ಛಲ, ಬಾಯಿಲ್ಲದವರ ಪರವಾಗಿ ಅನುರಾಧ ಎತ್ತಿದ ಪ್ರತಿಭಟನೆಯ ಧ್ವನಿ ಇವೆಲ್ಲವೂ ಕೊಬದ್ ಗಾಂಡಿಯ ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು. ಆದರೆ, ಆ ವೇಳೇಗಾಗಲೇ ಅವರ ಮನಸ್ಸು ದೇಹ ಎರಡೂ ದಣಿದಿದ್ದವು. ಮರು ವರ್ಷ ಅಂದರೆ, 2009ರಲ್ಲಿ ಅವರ ಅನಾರೋಗ್ಯವೂ ಹದಗೆಟ್ಟಿತು. ಚಿಕಿತ್ಸೆಗಾಗಿ ದೆಹಲಿಗೆ ಬಂದು ಪೊಲೀಸರ ಬಂಧಿಯಾಗಿ ತಿಹಾರ್ ಸೆರೆಮನೆಯಲ್ಲಿ ಅತ್ಯಂತ ಸುರಕ್ಷಿವಾದ ಜಾಗದಲ್ಲಿ ವಿಚಾರಣಾ ಕೈದಿಯಾಗಿ ಈಗ ದಿನ ನೂಕುತ್ತಿದ್ದಾರೆ. ಅವರ ಚಿಂತನೆಯಾಗಲಿ, ಪ್ರಖರ ವೈಚಾರಿಕತೆಯಾಗಲಿ, ಭವಿಷ್ಯ ಭಾರತದ ಬಗೆಗಿನ ಕನಸಾಗಲಿ, ಇವುಗಳು ಸೆರೆಮನೆಯ ವಾಸದಿಂದ ಒಂದಿಷ್ಟು ಮುಕ್ಕಾಗಿಲ್ಲ. ಮತ್ತಷ್ಟು ಬಲಿಷ್ಟವಾಗಿವೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ದೆಹಲಿ ಮೂಲದ ಪತ್ರಕರ್ತ ರಾಹುಲ್ ಪಂಡಿತ್ ಎಂಬುವರ ಕೃತಿಗೆ ಇವರು ಬರೆದಿರುವ ಒಂದು ಪತ್ರ ಅಭಿವೃದ್ಧಿಯ ಅಂಧಯುಗದಲ್ಲಿ ಹಾದಿ ತಪ್ಪಿರುವ ಭಾರತಕ್ಕೆ ಬೆಳಕಾಗಬಲ್ಲದು.

ಇತ್ತ ನಾಗಪುರ ನಗರದಲ್ಲಿ ಇವರ ವಾಸವಾಗಿದ್ದ ಅಂಚೆ ಕಚೇರಿಯ ದಲಿತ ನೌಕರನೊಬ್ಬನ ಬಾಡಿಗೆ ಮನೆ ಈಗಲೂ ಖಾಲಿ ಉಳಿದಿದೆ. ದೀದಿ (ಅನುರಾಧ) ಸಾವಿನ ಸುದ್ಧಿ ತಿಳಿದ ಮನೆಯ ಮಾಲಿಕ ಗಾಂಧಿ ಸಾಹೇಬ್ ಬಂದರೆ (ಕೊಬದ್ ಗಾಂಡಿ), ಅವರಿಗಾಗಿ ಮನೆ ಇರಲಿ ಎಂದು ಕಾಯ್ದಿರಿಸಿದ್ದಾನೆ. ಆ ಮನೆಯ ಬಾಗಿಲಿಗೆ ಅಂಟಿಸಿದ್ದ ಭಗತ್ ಸಿಂಗ್ ಚಿತ್ರ ಕೂಡ ಹಾಗೇ ಉಳಿದಿದೆ. ಇವತ್ತು ಬಂಡಾರ, ಗಡ್ ಚಿರೋಲಿ, ಚಂದ್ರಾಪುರ್ ಗೊಂಡಿಯಾ, ಬಾಳ್ಘಾಟ್ ಬಸ್ತಾರ್ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಅಲ್ಲಿನ ಬುಡಕಟ್ಟು ಜನಾಂಗ ಅನುರಾಧ ದೀದಿಯ ನೆನಪಲ್ಲಿ ಕಾಂತಿಕಾರಿ ಹಾಡೊಂದನ್ನು ಕಟ್ಟಿ ಗೊಂಡಿ ಭಾಷೆಯಲ್ಲಿ ಹಾಡುತ್ತಾರೆ. ಆ ಹಾಡಿನ ಅರ್ಥ ಹೀಗಿದೆ:

ನಾನು ಹಾಡುವ ಹಾಡಿಗೆ ಸಾವಿರ ವರ್ಷಗಳ ಇತಿಹಾಸವಿದೆ.
ದುಃಖ ದುಮ್ಮಾನದ ನಡುವೆ ಅದಕೆ ಅಷ್ಟೇ ಸಿಟ್ಟಿದೆ.
ನಾನು ಹಾಡುವ ಕಹಿ ರುಚಿಯ ಹಾಡಿನ ಅರ್ಥ ಹಳೆಯದು,
ಆದರೆ ಹಾಡುವ ರಾಗ ಮಾತ್ರ ಹೊಸದು. ಅದು ನನ್ನದು.
ಇದರಿಂದ ನಿಮಗೆ ಭಯವಾದರೆ ಕಾರಣ ನಾನಲ್ಲ,
ಈ ಕ್ರೂರ ವ್ಯವಸ್ಥೆಯದು, ಅದರ ಭಾಗವಾದ ನಿಮ್ಮದು.

ನಕ್ಸಲ್ ಹೋರಾಟದ ಕಥನದಲ್ಲಿ ಇಂತಹ ನೂರಾರು ಮನಕರಗುವ ಘಟನೆಗಳಿವೆ. ನಮ್ಮ ಕನ್ನಡಿಗ ಸಾಕೇತ್‌ ರಾಜನ್ ಮತ್ತು ಅವರ ಪತ್ನಿ ರಾಜೇಶ್ವರಿ ಎಂಬ ಹೆಣ್ಣು ಮಗಳ ಹೋರಾಟದ ಬದುಕು ಕೂಡ ಕೊಬದ್ ಗಾಂಡಿ ದಂಪತಿಗಳ ಬದುಕಿಗಿಂತ ಭಿನ್ನವಾಗಿಲ್ಲ. ಆದರೆ ಪ್ರಶ್ನೆಯಿರುವುದೇ ಇಲ್ಲಿ. ಯಾಕೆ ವಿದ್ಯಾವಂತರು, ಬುದ್ಧಿಜೀವಿಗಳು ನಕ್ಸಲರ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ ಎಂಬ ಪ್ರಶ್ನೆಯಿಟ್ಟುಕೊಂಟು ಭಾರತದ ಆದಿವಾಸಿಗಳ ನೋವಿನ ಹಾಗೂ ಧಾರುಣವಾದ ಬದುಕನ್ನು ಗಮನಿಸಿದರೆ, ಯಾರಿಗೂ ಇವರ ನೋವಿನ ಕಥೆ ಬರೆಯಲು ಲೇಖನಿ ಕೈಗೆತ್ತಿಕೊಳ್ಳಬೇಕು ಎನಿಸುವುದಿಲ್ಲ. ಮುಂದಿನ ಅಧ್ಯಾಯದಲ್ಲಿ ತೆರೆದಿಡುವ ಆದಿವಾಸಿಗಳ ನೋವಿನ ಕಥನ ಅವರು ಅಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಬಂದೂಕು ಕೈಗೆತ್ತಿಕೊಳ್ಳಲು ಇದ್ದಿರಬಹುದಾದ ಕಾರಣಗಳನ್ನು ಬಿಚ್ಚಿಡುತ್ತದೆ.

(ಮುಂದುವರಿಯುವುದು)

ತೆಲಂಗಾಣ ನೆಲದ ನೆನಪುಗಳು


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲ್ ಹೋರಾಟದ ಇತಿಹಾಸ ದಾಖಲಿಸುವ ನಿಟ್ಟಿನಲ್ಲಿ ಕಳೆದ ಜನವರಿಯಿಂದ ಹಲವು ರಾಜ್ಯಗಳನ್ನು ಸುತ್ತುತ್ತಿದ್ದೇನೆ. ನಕ್ಸಲ್ ಹೋರಾಟದ ಎರಡನೇ ಹಂತದ ಇತಿಹಾಸದಲ್ಲಿ ಅಂದರೆ, ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ 1980ರ ದಶಕದಲ್ಲಿ ಆರಂಭಗೊಂಡ ಪ್ರಜಾಸಮರಂ ಅಥವಾ ಪೀಪಲ್ಸ್ ವಾರ್ ಗ್ರೂಪ್ ಎಂದು ಕರೆಸಿಕೊಳ್ಳುವ ನಕ್ಸಲಿಯ ಹೋರಾಟಕ್ಕೆ ಅತ್ಯಂತ ಮಹತ್ವವಿದೆ. ಇಂದು ದೇಶಾದ್ಯಂತ ನಡೆಯುತ್ತಿರುವ ನಕ್ಸಲಿಯರ ಹೋರಾಟಕ್ಕೆ ಮೂಲ ತಂತ್ರಗಳನ್ನು ಕಲಿಸಿಕೊಟ್ಟಿದ್ದು ಈ ಆಂಧ್ರದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದ ಪ್ರಜಾಸಮರಂ ತಂಡ.

ಇದರ ಇತಿಹಾಸ ಬರೆಯುವ ಮುನ್ನ ಆಂಧ್ರದ ಒಂದು ನೂರುವರ್ಷದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಕೆದುಕುತ್ತಾ, ತೆಲಂಗಾಣ ಪ್ರಾಂತ್ಯಕ್ಕೆ ಹೋದ ನನಗೆ ಹಲವಾರು ಮಹತ್ವದ ವಿಷಯಗಳು ದೊರೆತವು.

1925ರ ದಶಕದಲ್ಲಿ ಭಾರತಕ್ಕೆ ಬಂದ ಎಡಪಂಥೀಯ ಸಿದ್ಧಾಂತ (ಕಮ್ಯೂನಿಷ್ಟ್) 1926ರಲ್ಲಿ ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ ಆಂಧ್ರ ಪತ್ರಿಕೆ ಮತ್ತು ವಿಶಾಲಾಂಧ್ರ ಎಂಬ ಕಮ್ಯೂನಿಷ್ಟ್ ಮುಖವಾಣಿಯಾದ ಪತ್ರಿಕೆಯಿಂದ ಅಲ್ಲಿನ ಜನರಲ್ಲಿ ಬೇರೂರಿದೆ. ಆಂಧ್ರ ಪತ್ರಿಕೆ 1922 ರಿಂದ ಗಾಂಧೀಜಿಯ ಹೋರಾಟಗಳ ಜೊತೆ ಜೊತೆಗೆ ಎಡಪಂಥೀಯ ಚಿಂತನೆಗಳನ್ನು ಜನತೆ ಬಳಿ ಕೊಂಡೊಯ್ದಿದ್ದು ನಿಜಕ್ಕೂ ಗಮನಾರ್ಹ ಸಂಗತಿ. ಗೋದಾವರಿ ಆಚೆಗಿನ ಆ ಪ್ರದೇಶದ ಅಂದಿನ ದಿನಗಳಲ್ಲಿ ಸುಸಂಸ್ಕೃತರು, ವಿದ್ಯಾವಂತರೆಂದರೆ, ಬಹುತೇಕ ಬ್ರಾಹ್ಮಣರು ಮಾತ್ರ. ಅತಿ ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಶೂದ್ರರಿಗೆ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಶಿಕ್ಷಣ ಸಿಕ್ಕಿತು. ಹಾಗಾಗಿ ಸ್ವಾತಂತ್ರ ಪೂರ್ವದ ಹೋರಾಟಗಾರರು, ಕ್ರಾಂತಿವೀರರು ಎಲ್ಲರೂ ಬಹುತೇಖ ಮೇಲ್ಜಾತಿಯಿಂದ ಬಂದವರಾಗಿದ್ದಾರೆ. ನಿಜಕ್ಕೂ ಆಶ್ಚರ್ಯವಾಗುವುದು, ಜಾತೀಯತೆ, ಶ್ರೇಣಿಕೃತ ಸಮಾಜದ ವ್ಯವಸ್ಥೆ ಇದ್ದ ಆದಿನಗಳಲ್ಲಿ ಅಗ್ರಹಾರ ಎನಿಸಿಕೊಂಡಿದ್ದ, ವಿಜಯವಾಡ ಮತ್ತು ರಾಜಮಂಡ್ರಿ ಪಟ್ಟಣದ ಬ್ರಾಹ್ಮಣರ ವಾಸಸ್ಥಳಗಳು ಎಲ್ಲಾ ಜಾತಿಗೆ ತೆರೆದುಕೊಂಡಿದ್ದವು. ಎಡಪಂಥೀಯ ಸಿದ್ಧಾಂತ ಅವರ ಮನಸ್ಸುಗಳನ್ನು ಎಲ್ಲಾ ವಿಧವಾದ ಕಂದಾಚಾರಗಳಿಂದ ಮುಕ್ತಗೊಳಿಸಿದ್ದವು. ಆ ಕಾಲದಲ್ಲಿ ಬಿಜೆವಾಡ ಎಂದು ಕರೆಸಿಕೊಳ್ಳುತಿದ್ದ ವಿಜಯವಾಡದಲ್ಲಿ ಅಪಾರ ಸಂಖ್ಯೆಯಲ್ಲಿ ಗಾಂಧಿ ಅಭಿಮಾನಿಗಳು ಇದ್ದರು. ಹಾಗಾಗಿ 1936ರಲ್ಲಿ ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದರು.

ತೆಲಂಗಾಣ ಪ್ರಾಂತ್ಯದ ಬಹುತೇಕ ಹಳ್ಳಿಗಳು ಸಿದ್ಧ ಮಾದರಿಯಲ್ಲಿ ರೂಪುಗೊಂಡಿವೆ. ಅಂದರೆ, ದಕ್ಷಿಣದ ಆಗ್ನೇಯ ದಿಕ್ಕಿಗೆ ಮಾದಿಗರ (ಹರಿಜನ) ಕೇರಿಗಳು, ನಂತರ ಶೂದ್ರರ ಕೇರಿಗಳು, ಆನಂತರ ಉತ್ತರ ದಿಕ್ಕಿನಲ್ಲಿ ಬ್ರಾಹ್ಮಣರ ಅಗ್ರಹಾರಗಳು. ಇದರ ಇತಿಹಾಸ ಕೆದಕಿದಾಗ ತಿಳಿದು ಬಂದ ಅಂಶವೆಂದರೆ, ವಾಸ್ತು ಪ್ರಕಾರ ಆಗ್ನೇಯ  ಮೂಲೆಯಿಂದ ಯಾವುದೇ ಗಾಳಿ ಬೀಸುವುದಿಲ್ಲ. ಆ ಕಾರಣಕ್ಕಾಗಿ ಇವತ್ತಿಗೂ ಮನೆ ನಿರ್ಮಿಸುವಾಗ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ ಆಗ್ನೇಯ  ದಿಕ್ಕಿನಲ್ಲಿರುವಂತೆ ಸೂಚಿಸುತ್ತಾರೆ. ಅಡುಗೆ ಒಲೆಗೆ ಬೀಸುವ ಗಾಳಿ ಅಡ್ಡಿಯಾಗಬಾರದೆಂಬುದು ವಾಸ್ತು ಶಾಸ್ತ್ರದ ನಿಯಮ. ಆದರೆ, ಇಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುವ ಮತ್ತು ಸದಾ ಕೊಳಕಾಗಿರುವ ಹರಿಜನರಿಂದ ಯಾವುದೇ ಸೋಂಕು ಹರಡಬಾರದೆಂದು ಈ ರೀತಿ ಹಳ್ಳಿಗಳು ರಚನೆಯಾಗಿವೆಯಂತೆ.  ಇದಕ್ಕಿಂತ ಇನ್ನೊಂದು ಕುತೂಹಲದ ಸಂಗತಿ ನನ್ನ ಗಮನಕ್ಕೆ ಬಂದಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅಲ್ಲಿನ ಬ್ರಾಹ್ಮಣರು ಮಧ್ಯಾಹ್ನ ಊಟದ ಸಮಯದಲ್ಲಿ ತಣ್ಣೀರು ಸ್ನಾನ ಮಾಡಿ ಪುಟ್ಟಗೋಚಿ ಎಂಬ, ಅಂದರೆ ಗುಪ್ತಾಂಗವನ್ನು ಮುಚ್ಚುವ ಸಣ್ಣ ಬಟ್ಟೆಯ ತುಂಡೊಂದನ್ನು ತಮ್ಮ ಉಡುದಾರಕ್ಕೆ ಸಿಕ್ಕಿಸಿಕೊಂಡು ಕುಳಿತು ಊಟ ಮಾಡುತ್ತಿದ್ದರಂತೆ. ಇದಕ್ಕೆ ಕಾರಣ ಅಲ್ಲಿನ ಬಿರು ಬಿಸಿಲಿನಲ್ಲಿ ಬಟ್ಟೆ ಧರಿಸಿ ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ, ಆದರೆ, ಸೊಂಟಕ್ಕೆ ಪಂಚೆ ಧರಿಸಿ ಬರೀ ಮೈಯಲ್ಲಿ ಕುಳಿತು ಊಟ ಮಾಡುತ್ತಾರೆ.

ನನ್ನ ಮಂಡ್ಯ ಜಿಲ್ಲೆಯಲ್ಲಿ ನಾನು ಬಾಲ್ಯದಿಂದಲೂ ಕೇಳಿದ ಒಂದು ಬೈಗುಳಕ್ಕೆ ನನಗೆ ಇಲ್ಲಿ ಆಧಾರ ಸಿಕ್ಕಿತು. ಯಾವುದಾದರು ವ್ಯಕ್ತಿ ತನಗೆ ಸರಿ ಸಮಾನನಲ್ಲ ಎಂದು ಅನಿಸಿದರೆ, ಪುಟಗೋಸಿನನ್ನಮಗ ಎಂಬ ಬೈಗುಳ ಚಾಲ್ತಿಯಲ್ಲಿದೆ. ತೆಲುಗಿನ ಪುಟ್ಟಗೋಚಿ ಕನ್ನಡದಲ್ಲಿ ಪುಟಗೋಸಿಯಾಗಿದೆ.

ಇವೆಲ್ಲಕ್ಕಿಂತ ಹೆಚ್ಚಾಗಿ 1930ರ ದಶಕದಲ್ಲಿ ಮಹಿಳೆಯರ ಶಿಕ್ಷಣ ಕುರಿತಂತೆ ರಾಜಮಂಡ್ರಿಯ ಒಂದು ಕುಟುಂಬದಲ್ಲಿನ ಮಾವ ಮತ್ತು ಸೊಸೆಯ ನಡುವಿನ ಹೋರಾಟ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಆ ಕಾಲದಲ್ಲಿ ರಾಜಮಂಡ್ರಿ ಪಟ್ಟಣದ ಪ್ರಸಿದ್ಧ ವಕೀಲರಾಗಿದ್ದ ರೊಬ್ಬ ಕಮ್ಮೆಶ್ವರ ರಾವ್ ಎಂಬುವರು ತನ್ನ ಮಗನಿಗೆ ಏಳನೇ ತರಗತಿ ಓದಿದ್ದ ಸೀತಾರಾಮಮ್ಮ ಎಂಬ ಹೆಣ್ಣು ಮಗಳನ್ನು ವಿವಾಹ ಮಾಡಿ ಸೊಸೆಯನ್ನಾಗಿ ಮಾಡಿಕೊಳ್ಳುತ್ತಾರೆ. ಆಕೆ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿದಾಗ ತಡೆಯೊಡ್ಡುತ್ತಾರೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಆಗಿನ ಬ್ರಿಟಿಷ್ ನ್ಯಾಯಾಧೀಶನೊಬ್ಬನಿಂದ ತೀರ್ಪು ಸೊಸೆಯ ಪರವಾಗಿ ಹೊರಬೀಳುತ್ತದೆ.

ಸೀತಾರಾಮಮ್ಮ ವಿದ್ಯಾಭ್ಯಾಸಕ್ಕಾಗಿ ಪತಿ ಮತ್ತು ಮಾವನನ್ನು ತೊರೆದು, ಆಗಿನ ಮೆಟ್ರಿಕ್‌ವರೆಗೆ ಶಿಕ್ಷಣ ಮುಂದುವರಿಸಿ, ನಂತರ ಶಿಕ್ಷಣ ಇಲಾಖೆಯಲ್ಲಿ ಶಾಲಾ ಇನ್ಸ್‌ಪೆಕ್ಟರ್ ಆಗಿ ನೇಮಕವಾಗುತ್ತಾಳೆ. ತನಗೆ ಬಂದ ಹೋರಾಟದ ದುಃಸ್ಥಿತಿ ಭವಿಷ್ಯದ ಹೆಣ್ಣು ಮಕ್ಕಳಿಗೆ ಬರಬಾರದೆಂದು ತೀರ್ಮಾನಿಸಿ, ತನ್ನ ಆದಾಯವನ್ನೆಲ್ಲಾ ವಿನಿಯೋಗಿಸಿ, ವಿಜಯವಾಡದಲ್ಲಿ ಹೆಣ್ಣು ಮಕ್ಕಳ ಶಾಲೆಯೊಂದನ್ನು ತೆರೆಯುತ್ತಾಳೆ. ಸೀತಾರಾಮಮ್ಮ ತೆರೆದ ಶಾಲೆ ಇಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದ್ದು,  ವಿಜಯವಾಡ ನಗರದಲ್ಲಿ ಹೆಣ್ಣು ಮಕ್ಕಳಿಗೆ ಪದವಿಯವರೆಗೂ ಸರ್ಕಾರಿ ಶುಲ್ಕದ ದರದಲ್ಲಿ ಶಿಕ್ಷಣವನ್ನು ಧಾರೆಯೆರೆಯುತ್ತಿದೆ. ಆಂಧ್ರದ ಒಂದು ಶತಮಾನದ ರಾಜಕೀಯ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಇಂತಹ ಅನೇಕ ಅಪರೂಪದ  ಘಟನೆಗಳು ನಮ್ಮ ಗಮನ ಸೆಳೆಯುತ್ತವೆ. ಇವೆಲ್ಲವನ್ನು ನಕ್ಸಲ್ ಹೋರಾಟದ ಇತಿಹಾಸ ಕುರಿತ ಕೃತಿಯಲ್ಲಿ ದಾಖಲಿಸುತ್ತಿದ್ದೇನೆ.

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-12)


– ಡಾ.ಎನ್.ಜಗದೀಶ್ ಕೊಪ್ಪ


1960ರ ದಶಕದಲ್ಲಿ ಹಿಂಸಾತ್ಮಕ ಘಟನೆಗಳ ಮೂಲಕ ಬೆಂಕಿ, ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟಕ್ಕೆ 70ರ ದಶಕದ ನಂತರ ಚಾರು ಮತ್ತು ಅವನ ಸಂಗಡಿಗರ ಹತ್ಯೆಯಿಂದಾಗಿ ಹಿನ್ನಡೆಯುಂಟಾಯಿತು. ಚಾರು ಮುಜುಂದಾರ್ ಮತ್ತು ವೆಂಪಟಾಪು ಸತ್ಯನಾರಾಯಣ ಇವರಿಬ್ಬರೂ ಕನಸು ಕಂಡಿದ್ದಂತೆ ಕೃಷಿಕೂಲಿ ಕಾರ್ಮಿಕರ ಹಾಗೂ ಆದಿವಾಸಿಗಳ ಬದುಕು ಹಸನಾಗದಿದ್ದರೂ ಅವರುಗಳ ಸಾಮಾಜಿಕ ಬದುಕಿನಲ್ಲಿ ಒಂದು ಮಹತ್ತರ ಬದಲಾವಣೆಯ ಕ್ರಾಂತಿಗೆ ನಕ್ಸಲ್ ಹೋರಾಟ ಕಾರಣವಾಯಿತು.

ನಕ್ಸಲ್ ಹೋರಾಟಕ್ಕೆ ಮುನ್ನ ಪೂರ್ವ ಮತ್ತು ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ದಲಿತರು, ಹಿಂದುಳಿದವರು, ಹಾಗೂ ಬಡ ಆದಿವಾಸಿಗಳು ಜಮೀನ್ದಾರರ ಪಾಳೇಗಾರ ಸಂಸ್ಕೃತಿಯಿಂದ ನಲುಗಿಹೋಗಿದ್ದರು. ಯಾರೊಬ್ಬರು ತಲೆಗೆ ಮುಂಡಾಸು ಕಟ್ಟುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಧರಿಸುವಂತಿರಲಿಲ್ಲ, ತಮ್ಮ ಮನೆಯ ಒಳಗೆ ಅಥವಾ ಹೊರಗೆ ಚಾರ್ ಪಾಯ್ ಮಂಚ ಬಳಸುವಂತಿರಲಿಲ್ಲ. (ತೆಂಗಿನ ಅಥವಾ ಸೆಣಬಿನ ನಾರು ಹಗ್ಗದಲ್ಲಿ ನೇಯ್ದು ಮಾಡಿದ ಮಂಚ. ಈಗಿನ ಹೆದ್ದಾರಿ ಪಕ್ಕದ ಡಾಬಗಳಲ್ಲಿ ಇವುಗಳನ್ನು ಕಾಣಬಹುದು) ಅಷ್ಟೇ ಏಕೆ? ತಮ್ಮ ಸೊಂಟಕ್ಕೆ ಪಂಚೆ ಅಥವಾ ಲುಂಗಿ ಕಟ್ಟುವಂತಿರಲಿಲ್ಲ. ನಕ್ಸಲರ ಆಗಮನದಿಂದಾಗಿ, ಆಂಧ್ರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ಶತ ಶತಮಾನಗಳ ಕಾಲ ಮುಕ್ತ ಪ್ರಾಣಿಗಳಂತೆ ಬದುಕಿದ್ದ ಬಡಜನತೆ ತಲೆ ಎತ್ತಿ ನಡೆಯುವಂತಾಯಿತು. ನಾವು ಸಿಡಿದೆದ್ದರೆ, ಭೂಮಿಯನ್ನು ತಲೆಕೆಳಗಾಗಿ ಮಾಡಬಲ್ಲೆವು ಎಂಬ ಆತ್ಮ ವಿಶ್ವಾಸವನ್ನು ನಕ್ಸಲ್ ಹೋರಾಟ ದೀನದಲಿತರಿಗೆ ತಂದುಕೊಟ್ಟಿತು. ನಕ್ಸಲಿಯರ ಈ ಹೋರಾಟ ಚಾರುವಿನ ಅನಿರೀಕ್ಷಿತ ಸಾವಿನಿಂದಾಗಿ, ಮುಂದಿನ ಒಂದು ದಶಕದ ಅವಧಿಯಲ್ಲಿ ಬಹುತೇಕ ಕವಲು ಹಾದಿಯಲ್ಲಿ ಸಾಗಿತು. ಏಕೆಂದರೆ, ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಞಾಸೆ ಮೂಡಿ, ಭಿನ್ನಭಿಪ್ರಾಯಕ್ಕೆ ಕಾರಣವಾಯಿತು. ಚಾರು ಮುಜುಂದಾರ್ ಕನಸಿದ್ದ ಹೋರಾಟದ ಮಾರ್ಗವನ್ನು (ಗೆರಿಲ್ಲಾ ಯುದ್ಧ ತಂತ್ರ ಮತ್ತು ಹಿಂಸೆ) ತುಳಿಯಲು ಹಲವು ನಾಯಕರಿಗೆ ಇಷ್ಟವಿರಲಿಲ್ಲ. ಚಾರು ರೂಪಿಸಿದ್ದ ಹೋರಾಟದ ಮೂರು ಮುಖ್ಯ ಸೂತ್ರಗಳೆಂದರೆ,

  • ಪ್ರತಿ ಹಂತದಲ್ಲಿ ಸಶಸ್ತ್ರಗಳನ್ನು ಬಳಸಿ, ಕಾರ್ಯಕರ್ತರ ಮನಸ್ಸನ್ನು ಸದಾ ಶತ್ರುಗಳ ವಿರುದ್ದ ಉನ್ಮಾದದ ಸ್ಥಿತಿಯಲ್ಲಿ ಇಡಬೇಕು. ಇದಕ್ಕಾಗಿ ಪ್ರತಿದಿನ ಭೂ ಮಾಲೀಕರ ಪಾಳೆಗಾರ ಸಂಸ್ಕೃತಿಯ ವಿರುದ್ಧ ಯುದ್ಧ ಜರುಗುತ್ತಲೇ ಇರಬೇಕು.
  • ನಕ್ಸಲ್ ಹೋರಾಟಕ್ಕೆ ಎಲ್ಲಾ ವಿದ್ಯಾವಂತ ವರ್ಗ ಧುಮುಕುವಂತೆ ಪ್ರೇರೇಪಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ನಗರಗಳಲ್ಲಿ ಗುಪ್ತ ಸಭೆಗಳನ್ನು ನಡೆಸಬೇಕು. ಅವರುಗಳಿಗೆ ಬಡವರ ಬವಣೆಗಳನ್ನು ಮನಮುಟ್ಟುವಂತೆ ವಿವರಿಸಬೇಕು. ಪ್ರತಿ ನಗರ ಹಾಗೂ ಪಟ್ಟಣಗಳಲ್ಲಿ ನಾಲ್ಕು ಅಥವಾ ಐದು ಜನರ ತಂಡವನ್ನು ತಯಾರಿಸಿ ನಕ್ಸಲ್ ಸಿದ್ಧಾಂತ ಎಲ್ಲೆಡೆ ಹರಡುವಂತೆ ನೋಡಿಕೊಳ್ಳಬೇಕು.
  • ಗ್ರಾಮಗಳಲ್ಲಿ ಕೃಷಿಕರು, ಕೂಲಿಗಾರರು ಇವರುಗಳನ್ನು ಸಂಘಟಿಸಿ, ಸಣ್ಣ ಮಟ್ಟದ ರ್‍ಯಾಲಿಗಳನ್ನು ನಡೆಸುವುದರ ಮೂಲಕ ಅವರುಗಳಿಗೆ ಶ್ರೀಮಂತರ ಸುಲಿಗೆ, ಸರ್ಕಾರದ ಇಬ್ಬಂದಿತನ, ಇವುಗಳನ್ನು ವಿವರಿಸಿ, ಅವರನ್ನು ಶೋಷಣೆಯಿಂದ ಮುಕ್ತರಾಗಲು ಹೋರಾಟವೊಂದೇ ಅಂತಿಮ ಮಾರ್ಗ ಎಂಬ ಮನಸ್ಥಿತಿಗೆ ತಂದು ನಿಲ್ಲಿಸಬೇಕು.

ಆದರೆ, ಇವುಗಳನ್ನು ಅನುಷ್ಠಾನಗೊಳಿಸಲು ಕೆಲವು ನಾಯಕರಿಗೆ ಮನಸ್ಸಿರಲಿಲ್ಲ.

ಚಾರು ಮುಜುಂದಾರ್‌ಗೆ 1975 ರ ಒಳಗೆ ಇಡೀ ಭಾರತವನ್ನು ಮಾವೋವಾದಿ ಕಮ್ಯೂನಿಷ್ಟರ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹೆಬ್ಬಯಕೆ ಇತ್ತು. ಈ ಕಾರಣಕ್ಕಾಗಿ ಅವನು ಯುವಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದ. ವಸಾಹತು ಕಾಲದಲ್ಲಿ ಬ್ರಿಟಿಷರ ಶೋಷಣೆ, ಸ್ವಾತಂತ್ರ್ಯದ ನಂತರದ ಶ್ರೀಮಂತ ಭೂಮಾಲೀಕರು, ಮತ್ತು ಭ್ರಷ್ಟ ಅಧಿಕಾರಿಗಳ ಶೋಷಣೆಯ ಬಗ್ಗೆ ಯುವ ಜನಾಂಗಕ್ಕೆ ಮನಮುಟ್ಟುವಂತೆ ತಲುಪಿಸುವಲ್ಲಿ ಅವನು ಯಶಸ್ವಿಯಾದ. ಜೊತೆಗೆ ರಾಷ್ಟ್ರೀಯ ನಾಯಕರ ಬಗ್ಗೆ ವಿಶೇಷವಾಗಿ, ಗಾಂಧಿ, ನೆಹರೂ, ಪಟೇಲ್, ರವೀಂದ್ರನಾಥ ಟ್ಯಾಗೂರ್, ಈಶ್ವರ ಚಂದ್ರ ವಿದ್ಯಾಸಾಗರ್ ಇವರುಗಳ ಬಗ್ಗೆ ಯುವಜನಾಂಗದಲ್ಲಿ ಇದ್ದ ಗೌರವ ಭಾವನೆಯನ್ನು ಅಳಿಸಿಹಾಕಿದ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದ ಬಡ ರೈತರ ಬಗ್ಗೆ, ಕೃಷಿಕೂಲಿ ಕಾರ್ಮಿಕರ ಬಗ್ಗೆ ಧ್ವನಿ ಎತ್ತದ ಈ ನಾಯಕರುಗಳೆಲ್ಲಾ ಚಾರುವಿನ ದೃಷ್ಟಿಯಲ್ಲಿ ಸೋಗಲಾಡಿತನದ ವ್ಯಕ್ತಿಗಳು ಎಂಬಂತಾಗಿದ್ದರು. ಚಾರುವಿನ ಪ್ರಚೋದನಕಾರಿ ಭಾಷಣ ಪಶ್ಚಿಮ ಬಂಗಾಳದಲ್ಲಿ ಹಲವು ಬಿಸಿ ರಕ್ತದ ತರುಣರನ್ನು ನಕ್ಸಲ್ ಹೋರಾಟಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಪೊಲೀಸ್ ಠಾಣೆಗಳನ್ನು, ಮತ್ತು ಸರ್ಕಾರಿ ಕಚೇರಿ ಕಟ್ಟಡಗಳನ್ನು ಚಾರು ಹಿಂಸಾತ್ಮಕ ದಾಳಿಗೆ ಗುರಿಯಾಗಿರಿಸಿಕೊಂಡಿದ್ದ. ಇದಕ್ಕೆ ಮೂಲ ಕಾರಣ, ಒಂದು ಕಡೆ ಸರ್ಕಾರದ ನೈತಿಕತೆಯನ್ನು ಕುಗ್ಗಿಸುತ್ತಾ, ಇನ್ನೊಂದೆಡೆ, ಸಂಘಟನೆಗೆ ಬೇಕಾದ ಬಂದೂಕಗಳು ಮತ್ತು ಗುಂಡುಗಳನ್ನು ಅಪಹರಿಸುವುದು ಅವನ ಉದ್ದೇಶವಾಗಿತ್ತು.

ಚಾರು ಮುಜುಂದಾರ್ ತಾನು ಪೊಲೀಸರಿಂದ 1971 ರಲ್ಲಿ ಹತ್ಯೆಯಾಗುವ ಮುನ್ನ, ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಕೇವಲ ಒಂದು ವರ್ಷದ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 3200 ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿದ್ದ. ಕೊಲ್ಕತ್ತ ನಗರವೊಂದರಲ್ಲೇ ಕಾರ್ಯಕರ್ತರು ಸೇರಿದಂತೆ ಒಟ್ಟು 139 ಮಂದಿ ಹತ್ಯೆಯಾದರು. ಇವರಲ್ಲಿ 78 ಮಂದಿ ಪೊಲೀಸರು ನಕ್ಸಲ್ ದಾಳಿಗೆ ಬಲಿಯಾದರು. ನಕ್ಸಲರು ಒಂದು ವರ್ಷದಲ್ಲಿ ಪೊಲೀಸ್ ಠಾಣೆಗಳಿಂದ 370 ಬಂದೂಕುಗಳನ್ನು ಅಪಹರಿಸುವಲ್ಲಿ ಯಶಸ್ವಿಯಾದರು. ಪಶ್ಚಿಮ ಬಂಗಾಳದ ಹೋರಾಟ ಪರೋಕ್ಷವಾಗಿ ಬಿಹಾರ್ ಮತ್ತು ಆಂಧ್ರ ರಾಜ್ಯದಲ್ಲಿ ಪರಿಣಾಮ ಬೀರಿ. ಅಲ್ಲಿಯೂ ಕೂಡ ಕ್ರಮವಾಗಿ 220 ಮತ್ತು 70 ಹಿಂಸಾತ್ಮಕ ಘಟನೆಗಳು ಜರುಗಿದವು. ಇದು ಅಂತಿಮವಾಗಿ ಚಾರುವಿನ ಹತ್ಯೆಗೆ ಪಶ್ಚಿಮ ಬಂಗಾಳದ ಪೊಲೀಸರನ್ನು ಪ್ರಚೋದಿಸಿತು.

ಚಾರುವಿನ ಸಾವಿನ ನಂತರ ಮಾವೋವಾದಿ ಸಂಘಟನೆ ಎರಡನೇ ವರ್ಗದ ನಾಯಕರ ಸ್ವಾರ್ಥ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಒಟ್ಟು 30 ಗುಂಪುಗಳಾಗಿ ಸಿಡಿದುಹೋಯಿತು. ಎಲ್ಲರ ಗುರಿ ಒಂದಾದರೂ ಕೂಡ ಬಹುತೇಕ ನಾಯಕರು ಹೋರಾಟದ ಮುಂಚೂಣಿಗೆ ಬರುವ ಆಸೆಯಿಂದ, ನಮ್ಮ ಕರ್ನಾಟಕದ ರೈತಸಂಘ, ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಗಳ ಮಾದರಿಯಲ್ಲಿ  ಒಡೆದು ಚೂರಾಯಿತು. ಇವುಗಳಲ್ಲಿ ಮುಖ್ಯವಾಗಿ ಚಾರುವಿನ ಸಿದ್ಧಾಂತವನ್ನು ಒಪ್ಪಿಕೊಂಡ ಒಂದು ಸಂಘಟನೆ ಹಾಗೂ ವಿರೋಧಿಸುವ ಇನ್ನೊಂದು ಸಂಘಟನೆ ಇವೆರಡು ಮಾತ್ರ ಜೀವಂತವಾಗಿ ನಕ್ಸಲ್ ಚಳವಳಿಯನ್ನು ಮುಂದುವರಿಸಿದವು. ಉಳಿದವುಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ಆಯಾ ಪ್ರಾಂತ್ಯಗಳಿಗೆ ಸೀಮಿತವಾದವು.

ನಕ್ಸಲ್ ಹೋರಾಟವನ್ನು ಮುನ್ನಡೆಸುತ್ತಾ, ಮಾವೋತ್ಸೆ ತುಂಗನ ಪರಮ ಆರಾಧಕನಾಗಿದ್ದ ಚಾರು ಮುಜುಂದಾರ್ ಹೋರಾಟದ ಉನ್ಮಾದದಲ್ಲಿ ಮಾವೋನ ಪ್ರಮುಖ ಸಿದ್ಧಾಂತವನ್ನು ಮರೆತದ್ದು ಪ್ರಥಮ ಹಂತದ ಹೋರಾಟದ ಯಶಸ್ವಿಗೆ ಅಡ್ಡಿಯಾಯಿತು. ಮಾವೋತ್ಸೆ ತುಂಗನ ಪ್ರಕಾರ, ಕಮ್ಯೂನಿಷ್ಟರು ಭವಿಷ್ಯ ನುಡಿಯುವ ಜೋತಿಷಿಗಳಲ್ಲ. ಅವರು ಸಮಾಜ ಮತ್ತು ಜನತೆ ಸಾಗಬೇಕಾದ ದಿಕ್ಕನ್ನು ಮತ್ತು ಮಾರ್ಗವನ್ನು ತೋರುವವರು ಮಾತ್ರ. ಕಮ್ಯೂನಿಷ್ಟರು ಅಭಿವೃದ್ಧಿಗೆ ಮಾರ್ಗದರ್ಶಕರೇ ಹೊರತು, ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ಗುರಿ ತಲುಪಬೇಕೆಂಬ ಹುಚ್ಚು ಆವೇಶವನ್ನು ಇಟ್ಟುಕೊಂಡವರಲ್ಲ. ಚಾರು, ಮಾವೋನ ಇಂತಹ ಮಾತುಗಳನ್ನು ಮರೆತ ಫಲವೋ ಏನೊ, ಪರೋಕ್ಷವಾಗಿ ದುರಂತ ಸಾವನ್ನು ಕಾಣಬೇಕಾಯಿತು.

ಇದೇ ವೇಳೆಗೆ 1970ರ ಆಗಸ್ಟ್ 11 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಜ್ಯಸಭೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ದೇಶಾದ್ಯಂತ ನಕ್ಸಲಿಯ ಚಟುವಟಿಕೆಗಳನ್ನು ಹತ್ತಿಕ್ಕಲು ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಣೆಗೆ ಆದೇಶ ನೀಡಿದರು. ಅರೆಸೇನಾಪಡೆ ಮತ್ತು ಆಯಾ ರಾಜ್ಯಗಳ ವಿಶೇಷ ಪೊಲೀಸ್ ಪಡೆಯೊಂದಿಗೆ “ಆಪರೇಷನ್ ಸ್ಟೀಪಲ್ ಚೇಸ್” ಎಂಬ ಹೆಸರಿನಲ್ಲಿ ಪ್ರಾರಂಭವಾದ ಕಾರ್ಯಾಚರಣೆಯಿಂದಾಗಿ 1971ರ ಜುಲೈನಲ್ಲಿ ಸಂಭವಿಸಿದ ಚಾರುವಿನ ಮರಣಾನಂತರ, ಎಲ್ಲಾ ರಾಜ್ಯಗಳಲ್ಲಿ ನಕ್ಸಲ್ ಚಳವಳಿಯ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಯಿತು. ನಕ್ಸಲ್ ಹೋರಾಟ ಮುಗಿಸಲು ಹೋರಾಡಿ ಎಂದು ಇಂದಿರಾ ನೀಡಿದ ಕರೆಗೆ ಅಭೂತಪೂರ್ವ ಯಸಸ್ಸು ದೊರಕಿತು. ದೇಶದ ಎಲ್ಲಾ ನಕ್ಸಲ್ ನಾಯಕರು ಬಂಧಿತರಾಗಿ ಸರೆಮನೆಗೆ ತಳ್ಳಲ್ಪಟ್ಟರು. ಪ್ರಮುಖ ನಾಯಕರಾದ ಕನುಸನ್ಯಾಲ್, ಜಂಗಲ್ ಸಂತಾಲ್, ನಾಗಭೂಷಣ್ ಪಟ್ನಾಯಕ್, ಕುನ್ನಿಕಲ್ ನಾರಾಯಣನ್, ಅಶೀಮ್ ಚಟರ್ಜಿ, ಹೀಗೆ, ಆಂಧ್ರದಲ್ಲಿ 1400, ಬಿಹಾರದಲ್ಲಿ 2000, ಪಶ್ಚಿಮ ಬಂಗಾಳದಲ್ಲಿ 4000, ಕೇರಳ, ಉತ್ತರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾದಲ್ಲಿ 1000 ಮಂದಿ ನಕ್ಸಲ್ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರುಗಳನ್ನು ಬಂಧಿಸಲಾಯಿತು. ಇದರಿಂದಾಗಿ ಸುಮಾರು ಆರು ವರ್ಷಗಳ ಕಾಲ (1971 ರಿಂದ 1977 ರ ವರೆಗೆ) ನಕ್ಸಲ್ ಹೋರಾಟಕ್ಕೆ ಹಿನ್ನಡೆಯುಂಟಾಯಿತು.

ಈ ನಡುವೆ ಚಾರು ಸಿದ್ಧಾಂತದಿಂದ ದೂರವಾಗಿ ತಮ್ಮದೇ ಬಣಗಳನ್ನು ಕಟ್ಟಿಕೊಂಡಿದ್ದ ಹಲವರು ನಕ್ಸಲ್ ಹೋರಾಟವನ್ನು ಜೀವಂತವಾಗಿ ಇಡುವಲ್ಲಿ ಸಫಲರಾದರು. ಚಾರು ಸಿದ್ಧಾಂತವನ್ನು ಒಪ್ಪಿಕೊಂಡವರು ಲಿನ್ ಬಯೋ ಗುಂಪು ಎಂದೂ, ವಿರೋಧಿ ಬಣವನ್ನು ಲಿನ್ ಬಯೋ ವಿರೋಧಿ ಬಣವೆಂದು ಕರೆಯುವ ವಾಡಿಕೆ ಆದಿನಗಳಲ್ಲಿ ಚಾಲ್ತಿಯಲ್ಲಿತ್ತು. (ಲಿನ್ ಬಯೋ ಎಂಬಾತ ಚೀನಾದಲ್ಲಿ ಮಾವೋ ನಂತರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಮ್ಯೂನಿಷ್ಟ್ ನಾಯಕ.) ಬಿಹಾರದಲ್ಲಿ ಅತ್ಯಂತ ಹಿಂದುಳಿದ ಜಾತಿಗಳಾದ ಅಹಿರ್, ಕುರ್ಮಿಸ್ ಮತ್ತು ಕೊಯಿರಿಸ್ ಜಾತಿಯ ಜನರನ್ನ ಜಗದೀಶ್ ಮಾತೊ ಎಂಬ ಶಿಕ್ಷಕ ಸಂಘಟಿಸಿ ಹೋರಾಟಕ್ಕೆ ಚಾಲನೆ ನೀಡಿದ. ಇವನಿಗೆ ರಾಮೇಶ್ವರ್ ಅಹಿರ್ ಎಂಬಾತ ಜೊತೆಯಾಗಿ ನಿಂತ. ಇವರಿಬ್ಬರ ಮುಖ್ಯ ಗುರಿ, ಕೆಳಜಾತಿಯ ಜನರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದ ಭೂಮಾಲೀಕರುಗಳನ್ನ ನಿರ್ನಾಮ ಮಾಡುವುದೇ ಆಗಿತ್ತು. ದೇಶದ ಪ್ರಮುಖ ನಕ್ಸಲ್ ನಾಯಕರಲ್ಲಾ ಬಂಧಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವಾಗ ಇವರಿಬ್ಬರು ಸಾರಿದ ಸಮರ ಬಿಹಾರ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವನ್ನೂ ನಡುಗಿಸಿತು. 1971 ರಿಂದ 77 ರ ಅವಧಿಯಲ್ಲಿ ಇವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 90 ಮಂದಿ ಭೂಮಾಲೀಕರು ನಿರ್ಧಯವಾಗಿ ಕೊಲ್ಲಲ್ಪಟ್ಟರು. ಕೊನೆಗೆ ಬಿಹಾರ ಪೊಲೀಸರು ‘ಆಪರೇಷನ್ ಥಂಡರ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜಗದೀಶ್ ಮಾತೊ, ಮತ್ತು ರಾಮೇಶ್ವರ್ ಅಹಿರ್ ಇಬ್ಬರನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡುವುದರೊಂದಿಗೆ ನಕ್ಸಲ್ ಹೋರಾಟವನ್ನು ಸದೆಬಡಿದರು.

ಈ ನಡುವೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲೂ ಸಹ ಚಾರು ಸಿದ್ಧಾಂತವನ್ನು ವಿರೋಧಿಸಿ ಹೊರಬಂದಿದ್ದ ನಕ್ಸಲರ ಬಣವೊಂದು ನಾಗಿರೆಡ್ಡಿಯ ನೇತೃತ್ವದಲ್ಲಿ ಸಂಘಟಿತವಾಯಿತು. ಇದೇ ರೀತಿ ಮತ್ತೇ ಬಿಹಾರದಲ್ಲಿ ಸತ್ಯನಾರಾಯಣಸಿಂಗ್ ನೇತೃತ್ವದಲ್ಲಿ ನಕ್ಸಲ್ ಬಣವೊಂದು ತಲೆಎತ್ತಿತು. ನಕ್ಸಲ್ ಚಳವಳಿಯಲ್ಲಿ ಚಾರು ಮುಜುಂದಾರ್ ಉಗ್ರವಾದದ ಹೋರಾಟವನ್ನು ಅಳಿಸಿ ಹಾಕಿ, ಸಮಾಜದ ಎಲ್ಲಾ ವರ್ಗದ ಜನತೆಯ ವಿಶ್ವಾಸಗಳಿಸಿಕೊಂಡು ಹೋರಾಟವನ್ನು ಮುನ್ನೆಡಸಬೇಕೆಂಬುದು, ಸತ್ಯನಾರಾಯಣಸಿಂಗ್‌ನ ಆಶಯವಾಗಿತ್ತು. ಈ ಕಾರಣಕ್ಕಾಗಿ ಅವನು ಮೊದಲು ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದ. 1975ರ ಆ ದಿನಗಳಲ್ಲಿ ನಕ್ಸಲ್ ಹೋರಾಟವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಹೋರಾಟದ ಮೂಲಕ ಕೊಂಡೊಯ್ಯಬೇಕೆಂಬುದು ಅವನ ಕನಸಾಗಿತ್ತು. ಸಾಧ್ಯವಾದರೆ, ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಚುನಾವಣೆಗೆ ನಿಂತು, ದಲಿತರು ಮತ್ತು ಬಡವರ ಶೋಷಣೆಯ ವಿರುದ್ಧ ಜನಪ್ರತಿನಿಧಿಗಳ ಸಭೆಯಲ್ಲಿ ಹೋರಾಡಬೇಕೆಂದು ಸತ್ಯನಾರಾಯಣ ಸಿಂಗ್ ಕರೆಯಿತ್ತ. ಈತನ ಹಲವಾರು ವಿಚಾರಗಳಿಗೆ ನಾಯಕರು ವಿಶೇಷವಾಗಿ ಕನುಸನ್ಯಾಲ್, ಅಶೀಮ್ ಚಟರ್ಜಿ, ನಾಗಭೂಷಣ್ ಪಟ್ನಾಯಕ್ ಮುಂತಾದವರು ಜೈಲಿನಿಂದಲೇ ತಮ್ಮ ವಿರೋಧ ವ್ಯಕ್ತಪಡಿಸಿದರು.

1975 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ, ಭಾರತದ ಎಲ್ಲಾ ರಾಜ್ಯಗಳಲ್ಲಿ ತಲೆ ಎತ್ತಿರುವ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಇದರಿಂದಾಗಿ ಹೊರಗೆ ಉಳಿದಿದ್ದ ಇನ್ನಿತರೆ 650 ಮಂದಿ ನಾಯಕರೂ ಸಹ ಜೈಲು ಸೇರಬೇಕಾಯಿತು. ಯಾವುದೇ ಹಿಂಸೆಯ ಘಟನೆಯಲ್ಲಿ ಪಾಲ್ಗೊಳ್ಳದ ಸತ್ಯನಾರಾಯಣ ಸಿಂಗ್ ಬಿಹಾರ ರಾಜ್ಯದಲ್ಲಿ ಭೂಗತನಾಗುವುದರ ಮೂಲಕ ಬಂಧನದಿಂದ ತಪ್ಪಿಕೊಂಡ.

1977 ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪತನಗೊಂಡು, ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರದ ಗದ್ದುಗೆ ಹಿಡಿಯಿತು. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿ, ಚರಣ್ ಸಿಂಗ್ ಗೃಹ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಮಂತ್ರಿ ಚರಣ್‌ಸಿಂಗ್‌ರವರನ್ನು ಭೇಟಿಯಾದ ಸತ್ಯನಾರಾಯಣಸಿಂಗ್, ಜನತಾ ಪಕ್ಷಕ್ಕೆ ಮಾವೋವಾದಿಗಳ ಕಮ್ಯೂನಿಷ್ಟ ಪಕ್ಷದ ಬೆಂಬಲವಿದೆ ಎಂದು ತಿಳಿಸಿ, ಯಾವ ಕಾರಣಕ್ಕೂ ದೇಶದ ಆಂತರೀಕ ಭದ್ರತೆಗೆ ಧಕ್ಕೆಯುಂಟುಮಾಡುವುದಿಲ್ಲ ಎಂದು ಭರವಸೆ ನೀಡಿದ; ಅಲ್ಲದೆ ಮಿಸಾ ಅಡಿ ಬಂಧನದಲ್ಲಿರುವ ನಕ್ಸಲ್ ನಾಯಕರನ್ನು ಬಿಡುಗಡೆಗೊಳಿಸಲು ಮನವಿ ಮಾಡಿದ.

ಲೋಕಸಭೆಯ ಸದಸ್ಯ ಹಾಗೂ ಆಲ್ ಇಂಡಿಯ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್ ಅಂಡ್ ಡೆಮಾಕ್ರಟಿಕ್ ರೈಟ್ಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೃಷ್ಣಕಾಂತ್ ಇವರ ದೆಹಲಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯನಾರಾಯಣ ಸಿಂಗ್, ಹಿಂಸೆ ನಮ್ಮ ಗುರಿಯಲ್ಲ. ಪ್ರಜಾಪ್ರಭುತ್ವದ ಅಹಿಂಸಾತ್ಮಕ ಹೋರಾಟಕ್ಕೆ ನಕ್ಸಲಿಯರ ಬೆಂಬಲವಿದೆ ಎಂದು ಘೋಷಿಸಿದ. ಆದರೆ, ಜೈಲು ಸೇರಿದ್ದ ಬಹುತೇಕ ನಾಯಕರು, ಸರ್ಕಾರದ ಜೊತೆಗಿನ ಮಾತುಕತೆಗೆ ನಮ್ಮ ಸಹ ಮತವಿಲ್ಲ ಎಂದು ಜಂಟಿಹೇಳಿಕೆ ನೀಡಿದರು. ಈ ಹೇಳಿಕೆಗೆ ಕನುಸನ್ಯಾಲ್, ಜಂಗಲ್ ಸಂತಾಲ್, ಅಶೀಮ್ ಚಟರ್ಜಿ ಹಾಗೂ ಸುರೇನ್ ಬೋಸ್ ಮುಂತಾದವರು ಸಹಿ ಹಾಕಿದ್ದರು.

ಅಂತಿಮವಾಗಿ 1977ರ ಮೇ 3 ರಂದು ಪ್ರಧಾನಿ ಮುರಾರ್ಜಿ ದೇಸಾಯಿ ನಕ್ಸಲ್ ನಾಯಕರ ವಿರುದ್ಧ ಇರುವ ಮೊಕದ್ದಮೆಗಳನ್ನು ಹಿಂಪಡೆದು, ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿದರು. ಈ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಹುದ್ದೆ ಏರಿದ್ದ ಜ್ಯೋತಿಬಸು ತಮ್ಮ ರಾಜ್ಯದಲ್ಲಿ ಬಂಧಿತರಾಗಿದ್ದ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಲ್ಲದೆ, ನೆರೆಯ ಆಂಧ್ರ ಮತ್ತು ಬಿಹಾರ, ಒರಿಸ್ಸಾದಲ್ಲಿ ಬಂಧನದಲ್ಲಿದ್ದವರನ್ನು ಬಿಡುಗಡೆಗೊಳಿಸುವಲ್ಲಿ ಸಫಲರಾದರು.

1977ರ ಅಂತ್ಯದ ವೇಳೆಗೆ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸತ್ಯನಾರಾಯಣ ಸಿಂಗ್ ಬಣದ ಐವರು ಅಭ್ಯರ್ಥಿಗಳು (ಪ.ಬಂಗಾಳದಲ್ಲಿ ಮೂವರು, ಬಿಹಾರ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು) ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅಂತಿಮವಾಗಿ, ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಕ್ಷೇತ್ರದಿಂದ ನಕ್ಸಲ್ ನಾಯಕ ಸಂತೋಷ್ ರಾಣಾ ಇವನ ಪತ್ನಿ ನಾಗರೀಕ ಹಕ್ಕುಗಳ ಹೋರಾಟಗಾರ್ತಿ, ಜಯಶ್ರೀ ರಾಣಾ ಗೆಲ್ಲುವಲ್ಲಿ ಯಶಸ್ವಿಯಾದಳು.

ಹೀಗೆ ಚಾರು ಮುಜುಂದಾರನ ನಿಧನದ ನಂತರ ಹಲವು ಬಣಗಳಾಗಿ ಸಿಡಿದುಹೋದ ನಕ್ಸಲ್ ಹೋರಾಟ, 1971 ರಿಂದ 1980ರ ವರೆಗೆ ನಿರಂತರ ಒಂಬತ್ತು ವರ್ಷಗಳ ಕಾಲ ನಾಯಕರ ತಾತ್ವಿಕ ಸಿದ್ಧಾಂತ ಮತ್ತು ಆಚರಣೆಗೆ ತರಬೇಕಾದ ಪ್ರಯೋಗಗಳ ಕುರಿತ ಭಿನ್ನಾಭಿಪ್ರಾಯದಿಂದ ತನ್ನ ಶಕ್ತಿ ಮತ್ತು ಸಾಮಥ್ಯವನ್ನು ಕುಂದಿಸಿಕೊಂಡಿತು. ಆದರೆ,  1980ರ ದಶಕದಲ್ಲಿ ಮತ್ತೇ ಫಿನಿಕ್ಸ್ ಹಕ್ಕಿಯಂತೆ ಪ್ರಜಾಸಮರ (ಪೀಪಲ್ಸ್ ವಾರ್ ಗ್ರೂಪ್) ಹೆಸರಿನಲ್ಲಿ ತಲೆ ಎತ್ತಿ ನಿಂತಿತು. ಇದನ್ನು ನಕ್ಸಲ್ ಇತಿಹಾಸದಲ್ಲಿ ಎರಡನೇ ಹಂತದ ಹೋರಾಟ ಎಂದು ಗುರುತಿಸಲಾಗುತ್ತಿದೆ. ಇದರ ಪ್ರಮುಖ ನಾಯಕರು, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಕಿಶನ್ ಜಿ, ರಾಜೇಂದ್ರಕುಮಾರ್ ಭಾಸ್ಕರ್, ಸಾಕೇತ್ ರಾಜನ್, ಸುನೀತ್ ಕುಮಾರ್ ಘೋಸ್ ಮುಂತಾದವರು.

 (ಮೊದಲ ಹಂತದ ಅಂತಿಮ ಅಧ್ಯಾಯ)


ಕೊನೆಯ ಮಾತು- ಪ್ರಿಯ ಓದುಗ ಮಿತ್ರರೇ, ಇಲ್ಲಿಗೆ ನಕ್ಸಲ್ ಇತಿಹಾಸದ ಮೊದಲ ಹಂತದ  ಹನ್ನೆರೆಡು ಅಧ್ಯಾಯಗಳ ಜೊತೆ ನನ್ನ ಕಥನವನ್ನು ಮುಗಿಸುತ್ತಿದ್ದೇನೆ. ಎರಡು ಮತ್ತು ಮೂರನೇ ಹಂತದ ನಕ್ಸಲ್ ಇತಿಹಾಸವನ್ನು ನೀವು ನವಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ನನ್ನ ಕೃತಿಯಲ್ಲಿ ಓದಬಹುದು. ಮತ್ತೇ ಒಂದಿಷ್ಟು ಅಧ್ಯಯನಕ್ಕಾಗಿ  ಜುಲೈ ಮೊದಲವಾರ ಮಹಾರಾಷ್ಟ್ರ, ಛತ್ತೀಸ್‌ಘಡ್ ಮತ್ತು ಮಧ್ಯಪ್ರಧೇಶ ರಾಜ್ಯಗಳ ನಡುವೆ ಇರುವ ದಂಡಕಾರಣ್ಯ (ಗಡ್ ಚಿರೋಲಿ, ದಂತೆವಾಡ, ರಾಯ್‌ಪುರ್, ಗೊಂಡಿಯ, ಬಾಳ್‌ಘಾಟ್) ಪ್ರದೇಶಕ್ಕೆ ತೆರಳುತ್ತಿದ್ದೇನೆ. ಜೊತೆಗೆ ಭಾರತದ ನಕ್ಸಲ್ ಪೀಡಿತ ಪ್ರದೇಶಗಳ ಕುರಿತಂತೆ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಪ್ರಬಂಧಗಳು “ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್” ಸಂಸ್ಥೆಯಿಂದ ಪ್ರಕಟವಾಗಿವೆ. ಅಲ್ಲದೇ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ. ಯ ಸಮಾಜ ಶಾಸ್ತ್ರಜ್ಞರು ಅಧ್ಯಯನ ಮಾಡಿರುವ ಪೂರ್ವ ಭಾರತದ ಬುಡಕಟ್ಟು ಜನಾಂಗಗಳ ಸ್ಥಿತಿ ಗತಿಯ ಬಗ್ಗೆ ಮಾಡಿರುವ ಅಧ್ಯಯನ ಕೂಡ ಪ್ರಕಟವಾಗಿದೆ. ಸದ್ಯಕ್ಕೆ ಕಥನಕ್ಕೆ ವಿರಾಮ ಹೇಳಿ ಅಧ್ಯಯನದ ಈ ಕೃತಿಗಳನ್ನು ಅವಲೋಕಿಸುತ್ತಿದ್ದೇನೆ.

ನಮಸ್ಕಾರ.
ಡಾ.ಎನ್. ಜಗದೀಶ್ ಕೊಪ್ಪ