Category Archives: ಆನಂದ ಪ್ರಸಾದ್

ಮೋದಿ ಸರ್ಕಾರ ಬಂದು ಒಂದು ವರ್ಷ, ಬದಲಾವಣೆ ನಾಸ್ತಿ


-ಆನಂದ ಪ್ರಸಾದ್


ಅಬ್ಬರದ ಕಾರ್ಪೋರೇಟ್ ಬೆಂಬಲದ ಚುನಾವಣಾ ಪ್ರಚಾರದ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದೆ. ಮೋದಿ ಬಂದು ಏನಾದರೂ ಬದಲಾವಣೆ ಆಗಿದೆಯಾ ಎಂದು ನೋಡಿದರೆ ಗಮನಾರ್ಹ ಬದಲಾವಣೆ ಕಂಡುಬರುವುದಿಲ್ಲ. ಪರಿಸ್ಥಿತಿ ಹಿಂದಿನ ಸರ್ಕಾರದ ಅವಧಿಗೂ ಇಂದಿನ ಸರ್ಕಾರದ ವ್ಯತ್ಯಾಸವೇನೂ ಇಲ್ಲ. ಲಂಚ ಕೊಡದೆ ಕೆಲಸ ಮೊದಲೂ ಆಗುತ್ತಿರಲಿಲ್ಲ, Modi-selfieಈಗಲೂ ಆಗುವುದಿಲ್ಲ ಎಂಬುದು ಶ್ರೀಸಾಮಾನ್ಯನ ಅನುಭವ. ಅತ್ಯಾಚಾರಗಳು ಹಿಂದೆ ನಡೆಯುತ್ತಿದ್ದಂತೆ ಈಗಲೂ ನಡೆಯುತ್ತಿವೆ. ಬಿಜೆಪಿ ಸರ್ಕಾರ ಬಂದರೆ ಅತ್ಯಾಚಾರ ನಡೆಯದೆ ದೇಶ ರಾಮರಾಜ್ಯವಾಗುತ್ತದೆ ಎಂದು ಪ್ರಚಾರ ಮಾಡಿದರೂ ಇಂದು ಕೂಡ ಹಿಂದಿನಂತೆಯೇ ಅತ್ಯಾಚಾರಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರ ಬಂದರೆ ಕಪ್ಪು ಹಣ ವಿದೇಶಗಳಿಂದ ತಂದು ದೇಶದಲ್ಲಿ ಸುಭಿಕ್ಷ ಉಂಟುಮಾಡುತ್ತೇವೆ ಎಂದು ಹೇಳಿದವರು ಈಗ ಆ ಬಗ್ಗೆ ಚಕಾರ ಕೂಡ ಎತ್ತುವುದಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ತಪ್ಪು ಅರ್ಥಿಕ ನೀತಿಗಳಿಂದ ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚಳ ಆಗಿ ದೇಶ ಸಂಕಷ್ಟ ಎದುರಿಸಿದೆ ಎಂದು ಪ್ರಚಾರ ಮಾಡಿದವರು ಈಗ ಆ ಬಗ್ಗೆ ಮಾತನ್ನೇ ಆಡುವುದಿಲ್ಲ. ಈಗಲೂ ರೂಪಾಯಿ ವಿರುದ್ಧ ಡಾಲರ್ ವಿನಿಮಯ ದರ ಹಿಂದಿದ್ದ ಮಟ್ಟಕ್ಕಿಂತ ಈ ಒಂದು ವರ್ಷದ ಅವಧಿಯಲ್ಲಿ ಕಡಿಮೆಯೇನೂ ಆಗಲಿಲ್ಲ. ಹಾಗಾದರೆ ಸರ್ಕಾರ ಬದಲಿ ಜನಸಾಮಾನ್ಯನಿಗೆ ಏನು ಪ್ರಯೋಜನ ಆಗಿದೆ ಎಂದರೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದೇ ಉತ್ತರ.

ಹಿಂದಿನ ಸರ್ಕಾರಗಳು ಗ್ರಾಮೀಣ ಪ್ರದೇಶಗಳನ್ನು ತೀರ ನಿರ್ಲಕ್ಷಿಸಿರಲಿಲ್ಲ. ಈಗಿನ ಬಿಜೆಪಿ ಸರ್ಕಾರ ಗ್ರಾಮೀಣ ಮೂಲಭೂತ ಸೌಕರ್ಯ ಹೆಚ್ಚಿಸುವತ್ತ ಯಾವುದೇ ಗಮನ ಹರಿಸಿಲ್ಲ. ಅದು ಕೇವಲ ಭಾರತ ಎಂದರೆ ನಗರದಲ್ಲಿ ಮಾತ್ರ ಇದೆ ಎಂದು ಭಾವಿಸಿದೆ. ಸ್ಮಾರ್ಟ್ ಸಿಟಿಗಳನ್ನು ಕಟ್ಟುವ ಮಾತನ್ನು ಆಡುತ್ತಿದೆಯೇ ಹೊರತು ಗ್ರಾಮೀಣ ಭಾರತದ ಮೂಲಭೂತ ಸೌಕರ್ಯಗಳ ವೃದ್ಧಿಗೆ ಯಾವುದೇ ಗಮನ ನೀಡುತ್ತಿಲ್ಲ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂಥ ಗ್ರಾಮೀಣ ಅಂತರ್ಜಾಲ ಲಭ್ಯತೆಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಭಾರತದ ಹಳ್ಳಿಗಳಲ್ಲಿ 3ಜಿ ಮೊಬೈಲ್ ಅಂತರ್ಜಾಲ ಇಂದಿಗೂ ಲಭ್ಯವಿಲ್ಲ. 2010ರಲ್ಲಿಯೇ 3ಜಿ ತರಂಗಾಂತರ ಹರಾಜು ನಡೆದು ನಾಲ್ಕೈದು ವರ್ಷಗಳಾದರೂ ಭಾರತದ ಹಳ್ಳಿಗಳಿಗೆ 3ಜಿ ಮೊಬೈಲ್ ಅಂತರ್ಜಾಲ ತಲುಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದು ಎಂಥ ನಾಚಿಕೆಗೇಡು. ಅಂತರ್ಜಾಲ ಎಂಬುದು ಇಂದು ಮಾಹಿತಿ ಹಾಗೂ ಪ್ರಗತಿಯ ವಾಹಕವಾಗಿದೆ. ಹೀಗಾಗಿ ಅಂತರ್ಜಾಲ ಲಭ್ಯವಿಲ್ಲದ ಹಳ್ಳಿಗಳು ಪ್ರಗತಿಯಲ್ಲಿ ಹಿಂದೆ ಬೀಳುತ್ತಿವೆ. ಹಲವು ದೇಶಗಳು ಉಪಗ್ರಹ ಆಧಾರಿತ ಬ್ರಾಡ್ ಬ್ಯಾಂಡ್ ಅಂತರ್ಜಾಲವನ್ನು ಡಿಟಿಎಚ್ ಮಾದರಿಯಲ್ಲಿಯೇ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯನ್ನು ಮಾಡಿವೆ. ಆದರೆ ನಮ್ಮ ದೇಶವು ಮಂಗಳನ ಅಂಗಳಕ್ಕೆ ಉಪಗ್ರಹಗಳನ್ನು ಹಾರಿಬಿಡುತ್ತಿದೆ. ಅದೇ ವೇಳೆಗೆ ಶೇಕಡಾ 50ಕ್ಕಿಂತಲೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಬ್ರಾಡ್ ಬ್ಯಾಂಡ್ ಅಂತರ್ಜಾಲ ವ್ಯವಸ್ಥೆ ಲಭ್ಯವಾಗಿಸುವಲ್ಲಿ ಸೋತಿದೆ. ನಮ್ಮ ನೀತಿ ನಿರೂಪಕರಿಗೆ, ವಿಜ್ಞಾನಿಗಳಿಗೆ, ಆಡಳಿತಗಾರರಿಗೆ ಹಾಗೂ ಪ್ರಧಾನ ವಾಹಿನಿಯ ಮಾಧ್ಯಮಗಳಿಗೆ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಮೂಲಭೂತ ಜ್ಞಾನವೂ ಇಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಇದು ನಾಚಿಕೆಗೇಡು. ಡಿಜಿಟಲ್ ಇಂಡಿಯಾ ಎಂದು ಮಾತಿನಲ್ಲಿ ಅರಮನೆ ಕಟ್ಟುವ ಮೋದಿ ನೇತೃತ್ವದ ಸರ್ಕಾರ ಬಂದರೂ ಈ ದಿಶೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆದ ಪ್ರಗತಿ ಒಂದು ದೊಡ್ಡ ಶೂನ್ಯ ಬಿಟ್ಟರೆ ಮತ್ತೇನೂ ಇಲ್ಲ.

ಮೋದಿ ಅಧಿಕಾರಕ್ಕೆ ಬರುವ ಮುನ್ನ ಪಾಕಿಸ್ತಾನದ ಜೊತೆಗೆ ಸಂಘರ್ಷದ ಮಾತನ್ನು ಆಡುತ್ತಿದ್ದರು ಹಾಗೂ ಸಂಘ ಪರಿವಾರದವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪಾಕಿಸ್ತಾನದ ಜೊತೆ ಮಾತುಕತೆ ಆಡುವುದನ್ನು ವಿರೋಧಿಸುತ್ತಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಇವರೆಲ್ಲರ ಬಾಯಿ ಬಂದಾಗಿದೆ.SwachhBharath_Modi ಈಗ ಪಾಕಿಸ್ತಾನ ಏನೇ ತಂಟೆ ಮಾಡಿದರೂ ಯುದ್ಧದ ಮಾತನ್ನು ಆಡುತ್ತಿಲ್ಲ. ಇದು ಇವರಲ್ಲಿ ಸಮಚಿತ್ತದ ಮನೋಭಾವ ಇಲ್ಲ ಎಂಬುದನ್ನು ತೋರಿಸುತ್ತದೆ. ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವಿದೇಶಗಳಲ್ಲಿ ಮೋದಿಭಜನೆ ಅವ್ಯಾಹತವಾಗಿ ಸಾಗಿದೆ. ಮೋದಿಯವರ ಸ್ವಚ್ಛಭಾರತ ಅಭಿಯಾನ ನಡೆಯುತ್ತಿದ್ದರೂ ದೇಶವು ಹಿಂದಿದ್ದಕ್ಕಿಂಥ ಇಂದು ಹೆಚ್ಚು ಸ್ವಚ್ಛವಾಗಿರುವುದು ಕಂಡುಬರುವುದಿಲ್ಲ. ಸ್ವಚ್ಛಭಾರತದ ತಿಳುವಳಿಕೆ ಮೂಡಿಸುವಲ್ಲಿ ಸರ್ಕಾರ ಭಾರೀ ಪ್ರಚಾರ ನಡೆಸುತ್ತಿದ್ದರೂ ಅದರ ಪ್ರಯೋಜನ ಮಾತ್ರ ಕಾಣುತ್ತಿಲ್ಲ. ಏಕೆಂದರೆ ಸ್ವಚ್ಛ ಭಾರತಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸುವಲ್ಲಿ ಸರ್ಕಾರ ಗಮನ ಹರಿಸಿಲ್ಲ. ಉದಾಹರಣೆಗೆ ಇಂದು ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಹೀಗಾಗಿ ಪ್ಲಾಸ್ಟಿಕ್ ಕಸದ ಉತ್ಪತ್ತಿ ಹಳ್ಳಿ, ಪಟ್ಟಣ, ನಗರ ಎನ್ನದೆ ಎಲ್ಲೆಡೆ ನಡೆಯುತ್ತಿದೆ. ಇಂಥ ಪ್ಲಾಸ್ಟಿಕ್ ಅನ್ನು ಬಳಸಿ ಇದನ್ನೇ ಇಂಧನವನ್ನಾಗಿ ರೂಪಿಸುವ ತಂತ್ರಜ್ಞಾನ ಕೈಗೆಟಕುವ ದರದಲ್ಲಿ ದೇಶೀಯವಾಗಿ ಅಭಿವೃದ್ಧಿಗೊಳಿಸುವಲ್ಲಿ ಸರ್ಕಾರವಾಗಲಿ, ಮಾಧ್ಯಮಗಳಾಗಲಿ, ಇಂಜಿನಿಯರಿಂಗ್ ಕಾಲೇಜುಗಳಾಗಲಿ ಗಮನ ಹರಿಸಿಲ್ಲ. ಕೆಲವು ಇಂಜಿನಿಯರಿಂಗ್ ಕಾಲೇಜುಗಳು ಇಂಥ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೂ ಸರ್ಕಾರ ಅದನ್ನು ಜನಪ್ರಿಯಗೊಳಿಸುವಲ್ಲಿ ಗಮನವನ್ನೇ ಹರಿಸಿಲ್ಲ ಹಾಗೂ ಅದು ಜನರಿಗೆ ತಲುಪುವಂತೆ ನೋಡಿಕೊಂಡಿಲ್ಲ. ಪ್ರತಿ ಗ್ರಾಮಪಂಚಾಯತುಗಳಲ್ಲಿ ಪ್ಲಾಸ್ಟಿಕ್ ಕಸವನ್ನು ಬಳಸಿ ಇಂಧನ ತಯಾರಿಸುವ ಯಂತ್ರಗಳನ್ನು ಸ್ಥಾಪಿಸಿದರೆ ದೇಶದ ಬಹುತೇಕ ಪ್ಲಾಸ್ಟಿಕ್ ಕಸದ ನಿರ್ಮೂಲನೆ ಸಾಧ್ಯ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೇ. ಅದು ಕೇಂದ್ರದ ಅಬ್ಬರದ ಪ್ರಚಾರದ ಮೋದಿ ಸರ್ಕಾರದಲ್ಲೂ ಕಾಣಿಸುತ್ತಿಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿಯೂ ಕಾಣಿಸುತ್ತಿಲ್ಲ. ಕಸವನ್ನು ಎಲ್ಲೆಂದರಲ್ಲಿ ಹಾಕುವುದು ಭಾರತೀಯರ ಮೂಲಭೂತ ಗುಣವೂ ಆಗಿದೆ. ಇದು ಭಾರತೀಯರ ರಕ್ತದಲ್ಲೇ ಬಂದ ಮೂಢನಂಬಿಕೆಗಳಂತೆ ಒಂದು ನಿವಾರಿಸಲಾರದ ರೋಗವಾಗಿರುವಂತೆ ಕಂಡುಬರುತ್ತದೆ. ಇಂದು ಕೊಳ್ಳುಬಾಕ ಸಂಸ್ಕೃತಿಯನ್ನು ಕೈಗಾರೀಕರಣ ಹಾಗೂ ನಗರೀಕರಣ, ಮಾಧ್ಯಮಗಳ ಅಬ್ಬರದ ಜಾಹೀರಾತುಗಳು ಹೆಚ್ಚಿಸುತ್ತಿರುವ ಕಾರಣ ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ಆವರಿಸಿದೆ. ಪ್ಲಾಸ್ಟಿಕ್ ನಿಷೇಧಿಸುವುದು ಇದಕ್ಕೆ ಪರಿಹಾರ ಅಲ್ಲವೇ ಅಲ್ಲ.

ಮೋದಿ ಸರ್ಕಾರ ಬಂದ ನಂತರ ಕಾಕತಾಳೀಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಇಂಧನ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂತು. ಹೀಗಾಗಿ ಹಣದುಬ್ಬರ ಸ್ವಲ್ಪ ನಿಯಂತ್ರಣಕ್ಕೆ ಬಂದದ್ದೇ ಹೊರತು ಇದರಲ್ಲಿ ಮೋದಿ ಸರ್ಕಾರದ ಸಾಧನೆ ಏನೂ ಇಲ್ಲ. ಒಂದು ವೇಳೆ ಪೆಟ್ರೋಲಿಯಂ ಇಂಧನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗದೇ ಇದ್ದಿದ್ದರೆ ದೇಶದಲ್ಲಿ ನಾಗರಕ ಅತೃಪ್ತಿ ಹೆಚ್ಚುತ್ತಿತ್ತು ಹಾಗೂ ಹಣದುಬ್ಬರವೂ ನಿಯಂತ್ರಣಕ್ಕೆ ಸಿಗದೇ ಜನರ ಬದುಕು ಇನ್ನಷ್ಟು ದುಸ್ತರವಾಗುತ್ತಿತ್ತು. ಮೋದಿ ಸರ್ಕಾರ ಗ್ರಾಮೀಣ ಭಾರತದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನೂ ರೂಪಿಸಿಲ್ಲ. ಅದರ ಗಮನ ನಗರ ಭಾರತದ ಅಭಿವೃದ್ಧಿ ಮಾತ್ರ.  ಇದೊಂದು ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯೇ ಹೊರತು ಮತ್ತೇನೂ ಅಲ್ಲ.  ಹಿಂದೆ ನೆಹರೂರವರನ್ನು ಪಾಶ್ಚಾತ್ಯ ನಾಗರಿಕತೆಯ ಆರಾಧಕ ಹಾಗೂ ಪಾಶ್ಚಾತ್ಯ ಕೈಗಾರಿಕೀಕರಣದ ಅಂಧಾನುಯಾಯಿ ಎಂದು ಹಂಗಿಸುತ್ತಿದ್ದ ಸಂಘ ಪರಿವಾರವು ಈಗ ಮೋದಿ ಅದೇ ಪಾಶ್ಚಾತ್ಯ ಕೈಗಾರಿಕೀಕರಣ, ನಗರೀಕರಣವನ್ನು ಸರ್ವಶ್ರೇಷ್ಠ ಮಾದರಿ ಎಂದು ಅಂಧಾನುಕರಣೆ ಮಾಡುತ್ತಿರುವಾಗ ಬಾಯಿ ಮುಚ್ಚಿ ಕುಳಿತಿರುವುದು ವಿಪರ್ಯಾಸ. ಹಳ್ಳಿಗಳಿಂದ ನಗರದತ್ತ ಜನರ ವಲಸೆ ತಡೆಯಲು ಮೋದಿ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಜನ ಹಳ್ಳಿಗಳಲ್ಲಿ ಆರೋಗ್ಯಕರ ಪರಿಸರದಲ್ಲಿ ಬದುಕುವ ಸಾಧ್ಯತೆ ಇರುವಾಗಲೂ ನಗರಗಳೆಡೆಗೆ ವಲಸೆ ಬರುತ್ತಿದ್ದಾರೆ. ಉದ್ಯೋಗ ಇಲ್ಲದೆ ಮಾತ್ರ ಜನ ವಲಸೆ ಬರುತ್ತಿರುವುದು ಅಲ್ಲ. ಇಂದು ಗ್ರಾಮೀಣ ಭಾಗದಲ್ಲಿ ಬೇಕಾದಷ್ಟು ಜಮೀನು ಇರುವವರೂ ನಗರ ಜೀವನದ ಮೋಹಕ್ಕೆ ಒಳಗಾಗಿ ವಲಸೆ ಹೋಗುತ್ತಿದ್ದಾರೆ. ಜನರ ಮಾನಸಿಕತೆ ಇದಕ್ಕೆ ಕಾರಣ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಸ್ವದೇಶೀ ಸಂಸ್ಕೃತಿಯ ಬಗ್ಗೆ ಬೊಬ್ಬೆ ಹೊಡೆಯುವ ಸಂಘ ಪರಿವಾರದ ಗರಡಿಯಲ್ಲಿ ಬೆಳೆದಿರುವ ಮೋದಿ ಯಾವುದೇ ಕ್ರಮಗಳನ್ನೂ ಕೈಗೊಳ್ಳದೆ ಇರುವುದು ಶೋಚನೀಯವಲ್ಲದೆ ಮತ್ತೇನು?

ಭ್ರಷ್ಟಾಚಾರದ ಬಗ್ಗೆ ಲೋಕಸಭಾ ಚುನಾವಣೆಗೂ ಮೊದಲು ಭಾರೀ ಬೊಬ್ಬೆ ಹಾಕುತ್ತಿದ್ದ ಮೋದಿ ಈಗ ಅಧಿಕಾರಕ್ಕೆ ಬಂಡ ನಂತರ ಸಿಬಿಐ ಎಂಬ ತನಿಖಾ ಸಂಸ್ಥೆಯನ್ನು ರಾಜಕೀಯಮುಕ್ತ ಗೊಳಿಸಿ ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಲು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಚಿತ್ರವಾಗಿದೆ. ಸಿಬಿಐ modi-kejriwalಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಗರು ಈಗ ಅವರದೇ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವಾಗ ಏಕೆ ಅದನ್ನು ರಾಜಕೀಯಮುಕ್ತಗೊಳಿಸಿ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವುದಿಲ್ಲ?  ಚುನಾವಣೆಗೂ ಮೊದಲು ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಮೋದಿ ಈಗ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ್ ವ್ಯವಸ್ಥೆಯನ್ನು ಏಕೆ ಶೀಘ್ರವಾಗಿ ತರುತ್ತಿಲ್ಲ? ಭಾರತದಲ್ಲಿ ಏಕೆ ಎಲ್ಲ ಪಕ್ಷಗಳೂ ಅಧಿಕಾರಕ್ಕೆ ಬಂದ ನಂತರ ಮೊದಲು ತಾವೇ ಬೊಬ್ಬೆ ಹೊಡೆಯುತ್ತಿದ್ದ ವಿಷಯದ ಬಗ್ಗೆ ಮೌನವಾಗುತ್ತಿವೆ? ದೆಹಲಿಯಲ್ಲಿ ಭಾರೀ ಭ್ರಷ್ಟಾಚಾರ ವಿರೋಧಿ ಹೋರಾಟದ ಫೋಸು ನೀಡಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವೂ ಈಗ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆ ತರುವ ಬಗ್ಗೆ ಮಾತೇ ಆಡುತ್ತಿಲ್ಲ. ಹಾಗಾದರೆ ಇವರ ಹೋರಾಟ ಎಲ್ಲ ಅಧಿಕಾರದ ಗದ್ದುಗೆ ಏರಲು ಮಾತ್ರ ಎಂದಾಯಿತೇ? ಪ್ರತಿಭಾವಂತರಿಂದ ಹಾಗೂ ಸಾಂಪ್ರದಾಯಿಕ ರಾಜಕೀಯಕ್ಕೆ ಹೊರತಾದ ಹಿನ್ನೆಲೆಯಿಂದ ಬಂದ ಕೇಜ್ರಿವಾಲ್ ಹಾಗೂ ಸಂಗಡಿಗರೂ ಉಳಿದ ರಾಜಕಾರಣಿಗಳಂತೆ ಆದರೆ ಜನ ಯಾರನ್ನು ನಂಬಬೇಕು? ಪ್ರತಿಭಾವಂತರೂ, ಯೋಚಿಸಬಲ್ಲ ಸಾಮರ್ಥ್ಯ ಉಳ್ಳವರೂ ಹೀಗೆ ಮಾಡಿದರೆ ಬದಲಾವಣೆ ತರುವುದು ಹೇಗೆ ಸಾಧ್ಯ? ಭಾರತದಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂಬುದು ಯೋಚಿಸಬೇಕಾದ ವಿಚಾರ.
ಭಾರತದಲ್ಲಿ ಇಂದು ಪ್ರತಿಭಾವಂತರು ಹಣ ಮಾಡಿ ಐಶಾರಾಮದ ಜೀವನ ಕಳೆಯುವುದರಲ್ಲಿಯೇ ಜೀವನದ ಸಾರ್ಥಕ್ಯ ಕಾಣುತ್ತಿದ್ದಾರೆ. ಒಟ್ಟೂ ಸಮಾಜವೂ ಇದೇ ದಿಕ್ಕಿನಲ್ಲಿಯೇ ಯೋಚಿಸುತ್ತಿದೆ. ನಾಯಕತ್ವದ ಗುಣ ಉಳ್ಳವರು ಇನ್ನಷ್ಟು ಮತ್ತಷ್ಟು ಹಣ ಮಾಡುವುದರಲ್ಲಿ, ಭೌತಿಕ ಸಂಪತ್ತು ಕೂಡಿಹಾಕುವುದರಲ್ಲಿ ಮೈಮರೆತಿದ್ದಾರೆ. ದೇಶದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಸಂಸ್ಥೆಗಳನ್ನು ಕಟ್ಟಿದಂತೆ ರಾಜಕೀಯ ನಾಯಕತ್ವ ರೂಪಿಸುವ ಸಂಸ್ಥೆಗಳನ್ನು ಕಟ್ಟಬೇಕಾದ ಅಗತ್ಯ ಇದೆ. ನಮ್ಮ ದೇಶದಲ್ಲಿ ಇಂಥ ಸಂಸ್ಥೆಗಳೇ ಇಲ್ಲ. ಇದರ ಪರಿಣಾಮವೇ ನಮ್ಮಲ್ಲಿ ಪ್ರತಿಭಾವಂತ ಹಾಗೂ ಸಮತೂಕದ, ಸಮಚಿತ್ತದ, ಮುಂದಾಲೋಚನೆ ಇರುವ ನಾಯಕರ ಕೊರತೆ ಇಂದು ಕಂಡುಬರುತ್ತಿರುವುದು. ದೇಶದ ಪ್ರತಿಭಾವಂತರು, ಮಾಧ್ಯಮಗಳು ಇಂದು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ.

ಭಗ್ನಗೊಂಡ ಮೌಲ್ಯಾಧಾರಿತ ರಾಜಕೀಯದ ಕನಸು

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷದಲ್ಲಿ ತಾರಕಕ್ಕೇರಿದ ಭಿನ್ನಮತ ಹಾಗೂ ಸ್ಥಾಪಕ ಹಿರಿಯ ಸದಸ್ಯರೀರ್ವರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪ್ರಮುಖ ಸ್ಥಾನಗಳಿಂದ ಹೊರದಬ್ಬುವ ಮೂಲಕ ದೇಶದ ಪ್ರಜ್ಞಾವಂತ ಜನತೆಯಲ್ಲಿ ಮೂಡಿದ್ದ ಮೌಲ್ಯಾಧಾರಿತ ರಾಜಕೀಯದ ಕನಸಿನ ನಿರೀಕ್ಷೆ ಭಗ್ನಗೊಂಡಿದೆ. ಪಕ್ಷವು ತನ್ನ ಮೂಲಭೂತ ಆಶಯಗಳಿಂದ ಹೊರಗೆ ಸರಿದು ಅಧಿಕಾರದ ರಾಜಕೀಯಕ್ಕಾಗಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡಿರುವುದು ಇದಕ್ಕೆ ಮೂಲಭೂತ ಕಾರಣವಾಗಿದೆ. ವೃತ್ತಿಪರ ರಾಜಕಾರಣಿಯಲ್ಲದ ಪ್ರತಿಭಾವಂತ ವ್ಯಕ್ತಿಯಾದ ಕೇಜ್ರಿವಾಲ್ ಅಧಿಕಾರ ಸಿಕ್ಕಿದ ಕೂಡಲೇ ತಾನು ಏರಲು ಬಳಸಿದ ಎಣಿಯನ್ನೇ ಒದೆದು ದೂರ ತಳ್ಳುವ ಅವಿವೇಕ ತೋರುತ್ತಿರುವುದು ನಿಜಕ್ಕೂಅನಪೇಕ್ಷಿತ. ರಾಜಕೀಯದಲ್ಲಿ ಬದಲಾವಣೆ ತರಲು ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದ ಕೇಜ್ರಿವಾಲ್ ಹಾಗೂ ಸಂಗಡಿಗರು ರಾಜಕೀಯದಲ್ಲಿ ಬದಲಾವಣೆ ತರುವುದರ ಬದಲು ಅಧಿಕಾರ ಸಿಕ್ಕಿದ kejriwal-aap-launch-delhiಕೂಡಲೇ ತಾವೇ ಬದಲಾಗಿಹೋಗಿರುವುದು ಹಾಗೂ ಅಹಂಕಾರವನ್ನು ಮೆಟ್ಟಿನಿಲ್ಲಲಾರದೆ ಹೋಗಿರುವುದು ನಂಬಲಸಾಧ್ಯವಾದರೂ ಸತ್ಯ. ಕಾಂಗ್ರೆಸ್ ಪಕ್ಷವನ್ನು ವಂಶಪಾರಂಪರ್ಯ ಹಾಗೂ ಏಕವ್ಯಕ್ತಿಕೇಂದ್ರಿತ ಪಕ್ಷ ಎಂದು ಟೀಕಿಸುತ್ತಿದ್ದ ಕೇಜ್ರಿವಾಲ್ ಹಾಗೂ ಸಂಗಡಿಗರು ಈಗ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಏಕವ್ಯಕ್ತಿಕೇಂದ್ರಿತ ರಾಜಕೀಯಕ್ಕಿಂಥ ಭಿನ್ನವೇನೂ ಅಲ್ಲ. ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಎರಡು ಹುದ್ದೆ ಹೊಂದಿರುವುದು ಸೂಕ್ತವಲ್ಲ. ನಿಜವಾದ ಬದಲಾವಣೆಯನ್ನು ತರುವ ಇಚ್ಛಾಶಕ್ತಿ ಇದ್ದಿದ್ದರೆ ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆ ವಹಿಸಿದ ಕೂಡಲೇ ಆಮ್ ಆದ್ಮಿ ಪಕ್ಷದ ಸಂಚಾಲಕ ಹುದ್ದೆಯನ್ನು ತೊರೆಯಬೇಕಾಗಿತ್ತು ಮತ್ತು ಯಾವುದೇ ಕಾರಣಕ್ಕೂ ಎರಡು ಹುದ್ದೆಗಳಲ್ಲಿ ಮುಂದುವರಿಯುದನ್ನು ಒಪ್ಪಬಾರದಾಗಿತ್ತು. ಹೀಗೆ ಮಾಡುವುದು ನೈತಿಕ ರಾಜಕೀಯ. ಪಕ್ಷದ ಹೆಚ್ಚಿನ ಸಂಖ್ಯೆಯ ಹಿಂಬಾಲಕರು ಒಪ್ಪಿದ್ದಾರೆ ಎಂದು ಎರಡು ಹುದ್ದೆಗಳಲ್ಲಿ ಮುಂದುವರಿಯುವುದು ಅನೈತಿಕ ಹಾಗೂ ಮೌಲ್ಯಾಧಾರಿತ ರಾಜಕೀಯಕ್ಕೆ ವಿರೋಧವಾದ ನಡವಳಿಕೆ ಎಂಬುದು ಸ್ಪಷ್ಟ. ಈಗ ಕಾಂಗ್ರೆಸ್ ಪಕ್ಷದ ಏಕಕೇಂದ್ರಿತ ರಾಜಕೀಯವನ್ನು ಟೀಕಿಸುವ ನೈತಿಕ ಧೈರ್ಯವನ್ನು ಆಮ್ ಆದ್ಮಿ ಪಕ್ಷವು ಕಳೆದುಕೊಂಡಿದೆ.

ಈಗ ಆಮ್ ಆದ್ಮಿ ಪಕ್ಷದಲ್ಲಿ ಉಂಟಾಗಿರುವ ಬಿರುಕಿಗೆ ಮೂಲಕಾರಣ ಏನು ಎಂದು ನೋಡಿದರೆ ಅದು ಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವ ಹಾಗೂ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡು ಅಧಿಕಾರಕ್ಕೇರುವ ಹಪಾಹಪಿ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಮೌಲ್ಯಾಧಾರಿತ ರಾಜಕೀಯಕ್ಕೆ ವಿರುದ್ಧವಾಗಿ ಹಾಗೂ ಪಕ್ಷದ ಮೂಲಭೂತ ನಿಯಮಗಳಿಗೆ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಕೇಜ್ರಿವಾಲ್ ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದರೆಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ. ಇಲ್ಲಿಯೇ ಪಕ್ಷದ ಮೂಲಭೂತ aap-kejriwal-yogendra-yadavಮೌಲ್ಯಾಧಾರಿತ ನಿಯಮಗಳಿಗೆ ಎಳ್ಳುನೀರು ಬಿಡಲಾಗಿದೆ ಎಂಬುದು ತಿಳಿಯುತ್ತದೆ ಹಾಗೂ ಕೇಜ್ರಿವಾಲ್ ಅವರ ಅಧಿಕಾರದ ಮಹತ್ವಾಕಾಂಕ್ಷೆ ಇದಕ್ಕೆ ಕಾರಣ ಎಂಬುದು ಕಂಡುಬರುತ್ತದೆ. ಭ್ರಷ್ಟಾಚಾರದ ವಿರುದ್ಧದ ಅಣ್ಣಾ ಹಜಾರೆ ಹೋರಾಟದಲ್ಲಿ ಪ್ರಮುಖ ಅಡಿಗಲ್ಲಾಗಿದ್ದ ಕೇಜ್ರಿವಾಲ್ ಆ ಹೋರಾಟವನ್ನು ಮುನ್ನಡೆಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದು ನಿಜವಾದರೂ ರಾಜಕೀಯದಲ್ಲಿ ಮೌಲ್ಯಗಳನ್ನು ಪಾಲಿಸದೆ ಅವುಗಳೊಂದಿಗೆ ರಾಜಿ ಮಾಡಿಕೊಂಡಿರುವುದು ಮೌಲ್ಯಾಧಾರಿತ ರಾಜಕೀಯದ ಬೆಳವಣಿಗೆಗೆ ಬಹಳ ದೊಡ್ಡ ಹಿನ್ನಡೆ ಎಂದೇ ಹೇಳಬೇಕು. ಭಾರತದಲ್ಲಿ ಭ್ರಷ್ಟಾಚಾರದ ವಿರುದ್ಧ ಹಾಗೂ ಮೌಲ್ಯಗಳ ಪರ ಹೋರಾಟ ಬಹಳ ವ್ಯವಸ್ಥಿತವಾಗಿ ನಡೆಯುವುದು ಬಹಳ ಕಡಿಮೆ ಅಥವಾ ಇಲ್ಲವೇ ಇಲ್ಲವೆಂದರೂ ನಡೆದೀತು. ಯಾವಾಗಲೋ ಒಮ್ಮೆ ಜನಸಮೂಹ ಸಮೂಹಸನ್ನಿ ಹಿಡಿದವರಂತೆ ಸ್ಪಷ್ಟ ವಿವೇಚನೆ, ಯೋಜನೆ ಇಲ್ಲದೆ ಉದ್ರೇಕಗೊಳ್ಳುವುದು ನಡೆಯುತ್ತದೆ. ಇಂಥ ಸಂದರ್ಭದಲ್ಲಿ ಒಮ್ಮೆ ರಾಜಕೀಯ ಬದಲಾವಣೆಗೆ ಅವಕಾಶವಾಗುತ್ತದೆ. ಇಂಥ ಒಂದು ಅಮೂಲ್ಯ ಅವಕಾಶ ಕೇಜ್ರಿವಾಲ್ ಅವರು ಮೌಲ್ಯಗಳೊಂದಿಗೆ ರಾಜಿಮಾಡಿಕೊಂಡು ತನ್ನ ಸಂಗಡಿಗರನ್ನೇ ಹೊರದಬ್ಬುವ ವಿಪರೀತಕ್ಕೆ ಹೋದದ್ದು ದೇಶಕ್ಕೆ ಆದ ನಷ್ಟ. ಇನ್ನು ಇಂಥ ಒಂದು ಜನಸಮೂಹದ ಎಚ್ಚರಗೊಳ್ಳುವಿಕೆ ರೂಪುಗೊಳ್ಳಲು ಎಷ್ಟು ಸಮಯ ಬೇಕಾದೀತು ಎಂದು ಹೇಳಲಾಗದು. ಕೇಜ್ರಿವಾಲ್ ರಾಜಕೀಯದಲ್ಲಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ಜೊತೆಗೂಡಿ ಮುನ್ನಡೆಸುವ ವಿವೇಕ ತೋರಿದ್ದರೆ ಹಾಗೂ ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದರೆ ನಿಧಾನವಾಗಿ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಎಲ್ಲ ಅವಕಾಶಗಳೂ ಇದ್ದವು. ಇದೀಗ ಪಕ್ಷದ ಒಡಕಿನಿಂದ ಹಾಗೂ ಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವದಿಂದ ಅಂಥ ಅಪೂರ್ವ ಅವಕಾಶ ತಪ್ಪಿಹೋಗುತ್ತಿದೆ.

ರಾಜಕೀಯ ಪಕ್ಷಗಳಲ್ಲಿ ಒಡಕು ಉಂಟಾದಾಗಲೆಲ್ಲ ಅವುಗಳನ್ನು ಜನರು ತಿರಸ್ಕರಿಸುತ್ತಾರೆ ಹಾಗೂ ಮತ್ತೆ ಹಳೆಯ ಗಂಡನ ಪಾದವೇ ಗತಿ ಎಂದು ಮೊದಲಿನ ರಾಜಕೀಯ ಪಕ್ಷಗಳಿಗೆ ಮಣೆ ಹಾಕುತ್ತಾರೆ. ಅಂತರ್ಜಾಲದಲ್ಲಿ ಈಗ ವ್ಯಕ್ತವಾಗುತ್ತಿರುವ ಬಹುತೇಕ ಪ್ರತಿಕ್ರಿಯೆಗಳು aam-admi-party-aapಕೇಜ್ರಿವಾಲ್ ಅವರ ಸರ್ವಾಧಿಕಾರಿ ಮನೋಭಾವ ಹಾಗೂ ತಿಕ್ಕಲು ಸ್ವಭಾವದ ವಿರುದ್ಧ ಕಂಡುಬರುತ್ತಿವೆ. ಇವುಗಳ ಕಡೆಗೆ ಗಮನಹರಿಸಿದ್ದಿದ್ದರೆ ಪಕ್ಷದ ಒಡಕಿಗೆ ಯಾರು ಕಾರಣ ಹಾಗೂ ಇದನ್ನು ಹೇಗೆ ತಿದ್ದಿಕೊಳ್ಳಬಹುದು ಎಂಬುದು ಕೇಜ್ರಿವಾಲ್ ಅವರಿಗೆ ಅರಿವಿಗೆ ಬರುತ್ತಿತ್ತು. ಕೇಜ್ರಿವಾಲ್ ಟೀಕೆಗಳಿಗೆ ಉಳಿದ ರಾಜಕಾರಣಿಗಳಂತೆ ದಪ್ಪ ಚರ್ಮವನ್ನು ಬೆಳೆಸಿಕೊಂಡಿರುವ ಕಾರಣ ಜನತೆಯ ಅಭಿಪ್ರಾಯವನ್ನು ಕಡೆಗಣಿಸುತ್ತಿದ್ದಾರೆ. ಇದು ದೇಶದಲ್ಲಿ ಪಕ್ಷವನ್ನು ಬೆಳೆಸುವಲ್ಲಿ ಹಿನ್ನಡೆಯಾಗಲಿದೆ ಹಾಗೂ ಕಾರ್ಯಕರ್ತರು ತಲೆತಗ್ಗಿಸುವಂತೆ ಮಾಡಲಿದೆ ಹಾಗೂ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಬಹುತೇಕ ಕುಂದಿಸಲಿದೆ.

ಹೊಸ ರಾಜಕೀಯ ಪಕ್ಷವೊಂದು ಈಗಾಗಲೇ ಇರುವ ಬಲಿಷ್ಠ ರಾಜಕೀಯ ಪಕ್ಷಗಳ ನಡುವೆ ಸ್ಪರ್ಧಿಸಿ ಚುನಾವಣೆ ಗೆಲ್ಲುವುದು ಕಷ್ಟ ಹಾಗೂ ಬಹುತೇಕ ಸಂದರ್ಭಗಳಲ್ಲಿ ಅಸಂಭವಾಗಿರುತ್ತದೆ. ಹೀಗೆ ಒಂದು ಪಕ್ಷ ಗೆಲ್ಲಬೇಕಾದರೆ ಅದು ಒಂದು ವ್ಯಾಪಕ ಚಳುವಳಿಯ ಹಿನ್ನೆಲೆಯಲ್ಲಿ ರೂಪುಗೊಂಡಿದ್ದರೆ ಮಾತ್ರ ಸಾಧ್ಯ. ಲೋಕಸತ್ತಾ ಪಕ್ಷವು ಮೌಲ್ಯಾಧಾರಿತ ರಾಜಕೀಯವನ್ನು ಬೆಳೆಸುವ ಕನಸಿನೊಂದಿಗೆ ರೂಪುಗೊಂಡರೂ ಅದಕ್ಕೆ ಯಾವುದೇ ಚಳುವಳಿಯ ಹಿನ್ನೆಲೆ ಇಲ್ಲದ ಕಾರಣ ಅದು ಎಷ್ಟೇ ಮೌಲ್ಯಯುತ ರಾಜಕೀಯದ ಗುಣಗಳನ್ನು ಹೊಂದಿದ್ದರೂ ಬೆಳವಣಿಗೆ ಹೊಂದುವಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಒಂದು ಜನಸಮೂಹದ ಚಳುವಳಿಯ ಹಿನ್ನೆಲೆಯಲ್ಲಿ ಅದು ರೂಪುಗೊಂಡಾಗ ಅದು ಹೊಸಪಕ್ಷದ ಬೆಳವಣಿಗೆಗೆ ವೇಗವರ್ಧಕವಾಗಿ ಕೆಲಸಮಾಡುತ್ತದೆ. ಹೊಸ ರಾಜಕೀಯ ಪಕ್ಷದ ಬೆಳವಣಿಗೆಯೂ ಮಾರ್ಕೆಟಿಂಗ್ ತಂತ್ರದ ರೀತಿಯಲ್ಲಿಯೇ ಇರುತ್ತದೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ವಿವಿಧ ಕಂಪನಿಗಳು ಉತ್ಪಾದಿಸುವ ಒಂದು ವಸ್ತುವನ್ನೇ ಅದೇ ರೀತಿ ಉತ್ಪಾದಿಸಿ ಮಾರಾಟ ಮಾಡಲು ಹೊರಟರೆ ಅದು ಯಶಸ್ವಿಯಾಗುವುದಿಲ್ಲ. ಅದರ ಬದಲು ಬೇರೆ ಕಂಪನಿಗಳ ಉತ್ಪನ್ನದಲ್ಲಿ ಇರದ ಕೆಲವು ವಿಶೇಷ ಗುಣಗಳನ್ನು ಸೇರಿಸಿ ಅದನ್ನು ವ್ಯಾಪಕ ಪ್ರಚಾರ ಮಾಡಿದರೆ ಆ ಉತ್ಪನ್ನ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತದೆ ಹಾಗೂ ಜನರ ಮನಗೆಲ್ಲುವಲ್ಲಿ ಮುಂಚೂಣಿಗೆ ಬರುತ್ತದೆ. ಇದೇ ರೀತಿ ರಾಜಕೀಯದಲ್ಲಿಯೂ AAP-manifesto-PTIಇತರ ರಾಜಕೀಯ ಪಕ್ಷಗಳಲ್ಲಿ ಇರದ ಮೌಲ್ಯಾಧಾರಿತ ರಾಜಕೀಯದ ಹಾಗೂ ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಕನಸನ್ನು ಹೊತ್ತು ರೂಪುಗೊಂಡ ಆಮ್ ಆದ್ಮಿ ಪಕ್ಷ ಜನರ ಕುತೂಹಲದ ಕೇಂದ್ರಬಿಂದು ಆಗುವಲ್ಲಿ ಯಶಸ್ವಿಯಾಯಿತು. ಇದೇ ಮೌಲ್ಯಾಧಾರಿತ ರಾಜಕೀಯವನ್ನು ಕಾಯ್ದುಕೊಂಡು ಬಂದಿದ್ದರೆ ಇದು ದೇಶದಾದ್ಯಂತ ಬೆಳವಣಿಗೆ ಆಗುವ ಎಲ್ಲ ಲಕ್ಷಣಗಳೂ ಇದ್ದವು. ಕೇಜ್ರಿವಾಲ್ ಅಧಿಕಾರ ಗಳಿಸುವ ಹಪಾಹಪಿಯಲ್ಲಿ ಯಾವಾಗ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡರೋ ಆಗಲೇ ಇದರ ಬಗ್ಗೆ ಜನರಿಗೆ ಇದ್ದ ಕುತೂಹಲ ಹಾಗೂ ಕನಸು ಭಗ್ನವಾಗಿದೆ. ಯಾವಾಗ ಉಳಿದ ಏಕವ್ಯಕ್ತಿಕೇಂದ್ರಿತ ಹಾಗೂ ವಂಶಪಾರಂಪರ್ಯ ರಾಜಕೀಯ ಪಕ್ಷಗಳಂತೆ ಆಮ್ ಆದ್ಮಿ ಪಕ್ಷ ಕೇಜ್ರಿವಾಲ್ ಕೇಂದ್ರಿತ ಪಕ್ಷ ಆಯಿತೋ ಆಗಲೇ ಇದರ ವಿಶಿಷ್ಟ ಗುಣಗಳು ಲಯವಾಗಿ ಉಳಿದ ಪಕ್ಷಗಳಂತೆ ಇದೂ ಒಂದು ಪಕ್ಷ ಎಂಬ ಭಾವನೆ ಜನತೆಯಲ್ಲಿ ಬೇರೂರುತ್ತಿದೆ. ಹೀಗಾಗಿ ಇನ್ನು ಆಮ್ ಆದ್ಮಿ ಪಕ್ಷವನ್ನು ದೇಶದಲ್ಲಿ ಬೆಳೆಸುವುದು ಬಹಳ ಕಠಿಣ ಹಾಗೂ ಬಹುತೇಕ ಅಸಂಭವವಾಗುವ ಸಾಧ್ಯತೆ ಕಂಡುಬರುತ್ತಿದೆ. ಬೇರೆ ರಾಜಕೀಯ ಪರ್ಯಾಯ ಇಲ್ಲದೆ ಇರುವ ನಿರ್ವಾತ ಪರಿಸ್ಥಿತಿಯಲ್ಲಿ ಮಾತ್ರ ಕೇಜ್ರಿವಾಲ್ ಕೇಂದ್ರಿತ ಆಮ್ ಆದ್ಮಿ ಪಕ್ಷ ಬೆಳೆದರೂ ಬೆಳೆಯಬಹುದು ಆದರೆ ಅದು ಉಳಿದ ಪಕ್ಷಗಳಿಗಿಂಥ ಭಿನ್ನ ಎಂಬ ವಿಶೇಷಣ ಮಾತ್ರ ಅದಕ್ಕೆ ದಕ್ಕಲಾರದು.

ಮೌಲ್ಯಾಧಾರಿತ ರಾಜಕೀಯದಲ್ಲಿ ಈಡೇರಿಸಲಾಗದ ಆಶ್ವಾಸನೆಗಳನ್ನು ನೀಡುವುದು ಸೂಕ್ತವಲ್ಲ. ಆಮ್ ಆದ್ಮಿ ಪಕ್ಷವು ಈಡೇರಿಸಲು ಅಸಂಭವವಾದ ಹಲವು ಆಶ್ವಾಸನೆಗಳನ್ನು ನೀಡಲು ಹೊರಟದ್ದು ಕೂಡ ಮುಂದೆ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟುಮಾಡುವ ಸಂಭವ ಇದೆ. kejriwal_aap_pti_rallyಜನರಿಗೆ ಬೇಕಾಗಿರುವುದು ಸ್ವಚ್ಛ, ದಕ್ಷ, ಪಾರದರ್ಶಕ ಆಡಳಿತ ಹಾಗೂ ನುಡಿದಂತೆ ನಡೆಯುವ ನಾಯಕರು. ತನ್ನ ನುಡಿಗೆ ವಿರುದ್ಧವಾಗಿ ನಡೆಯಲು ಹೊರಡುತ್ತಿರುವ ಆಮ್ ಆದ್ಮಿ ಪಕ್ಷದ ಬಗ್ಗೆ ಈಗಾಗಲೇ ಜನರಿಗೆ ಭ್ರಮನಿರಸನದ ಅನುಭವ ಆಗುತ್ತಿರುವುದು ಅಂತರ್ಜಾಲದಲ್ಲಿ ಆ ಪಕ್ಷದ ಬಗ್ಗೆ ಹಾಗೂ ಕೇಜ್ರಿವಾಲ್ ಬಗ್ಗೆ ವ್ಯಕ್ತವಾಗುತ್ತಿರುವ ಜನತೆಯ ಅನಿಸಿಕೆಗಳಿಂದ ಕಂಡುಬರುತ್ತಿದೆ. ಅಂತಿಮವಾಗಿ ಇದರ ಪ್ರಯೋಜನ ಕಾಂಗ್ರೆಸ್ ಪಕ್ಷದ ಪುನಶ್ಚೇತನದ ರೂಪದಲ್ಲಿ ಕಂಡುಬರುವ ಸಂಭವ ಇದೆ. ಜನತಾ ಪರಿವಾರದ ಒಳಜಗಳದ ಪರಿಣಾಮ ಮುಂದೆ ನಡೆದ ಚುನಾವಣೆಯಲ್ಲಿ ದೇಶಾದ್ಯಂತ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷ ಪುನಶ್ಚೇತನ ಹೊಂದಿದ್ದು ಗಮನಾರ್ಹ. ಇದು ಆಮ್ ಆದ್ಮಿ ಪಕ್ಷಕ್ಕೆ ಏನಾದರೂ ಸಂದೇಶವನ್ನು, ಎಚ್ಚರಿಕೆಯನ್ನು, ವಿವೇಕವನ್ನು ಮೂಡಿಸೀತೇ? ಕೇಜ್ರಿವಾಲ್ ಅವರ ಹಠಮಾರಿ ಧೋರಣೆಯನ್ನು ನೋಡಿದರೆ ಆಮ್ ಆದ್ಮಿ ಪಕ್ಷ ಸುಧಾರಣೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಗೆಲುವಿನ ಅಹಂಕಾರದಲ್ಲಿ ಇನ್ನು ವಿವೇಕ ಮೂಡಬೇಕಾದರೆ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಭಾರೀ ಹಿನ್ನಡೆ ಕಾಣಬೇಕೆನೋ?

ಆಮ್ ಆದ್ಮಿ ಪಕ್ಷ ಹಾದಿ ತಪ್ಪುತ್ತಿದೆಯೇ?

– ಆನಂದ ಪ್ರಸಾದ್

ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನ್ಮ ತಳೆದ ಆಮ್ ಆದ್ಮಿ ಪಕ್ಷ ರಾಜಕೀಯವನ್ನು ಬದಲಿಸುವ ಹಾಗೂ ಶುದ್ಧೀಕರಿಸುವ ಮುಖ್ಯ ಗುರಿಯೊಂದಿಗೆ ಜನ್ಮ ತಳೆದು ಚುನಾವಣಾ ಹೋರಾಟಕ್ಕೆ ಇಳಿದು ದೆಹಲಿಯಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ನಂತರ ಆಂತರಿಕ ಸಂಘರ್ಷದ ಕಾರಣ ಸುದ್ದಿಯಲ್ಲಿದೆ.  ಮಾಮೂಲಿ ರಾಜಕಾರಣಿಗಳಂತಲ್ಲದೆ ವಿವಿಧ ಕ್ಷೇತ್ರಗಳ ಅತ್ಯಂತ ಪ್ರತಿಭಾವಂತರಿಂದ ಕಟ್ಟಲ್ಪಟ್ಟ ಆಮ್ ಆದಿ ಪಕ್ಷ ಭಿನ್ನ ಹಾದಿಯಲ್ಲಿ ನಡೆದು ದೇಶದ ರಾಜಕೀಯವನ್ನು ಶುದ್ಧೀಕರಿಸುವ ಪ್ರಧಾನ ಗುರಿಯನ್ನು ಯಾವತ್ತೂ ಮರೆಯಬಾರದು. kejriwal-aap-launch-delhiಇದನ್ನು ಮರೆತರೆ ಪಕ್ಷದ ಬೆಳವಣಿಗೆಗೆ ತೊಂದರೆ ಖಂಡಿತ ಮಾತ್ರವಲ್ಲ ಪಕ್ಷವು ಜನತೆಯಿಂದ ನಗೆಪಾಟಲಿಗೆ ತುತ್ತಾಗುವುದರಲ್ಲಿ ಸಂಶಯವಿಲ್ಲ. ಪಕ್ಷವು ಚುನಾವಣೆಗಳಲ್ಲಿ ಗೆಲ್ಲುವ ಆತುರದಲ್ಲಿ ಅಥವಾ ಅಧಿಕಾರ ಹಿಡಿಯುವ ಹಂಬಲದಲ್ಲಿ ನೈತಿಕತೆಯನ್ನು ಬಿಟ್ಟರೆ ಉಳಿದ ಪಕ್ಷಗಳಿಗಿಂಥ ತಾನು ಭಿನ್ನ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಶ್ನೆ ಈಗ ಏಕೆ ಎದ್ದಿದೆ ಅರವಿಂದ ಕೇಜ್ರಿವಾಲ್ ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಲೋಕಸಭಾ ಸ್ಥಾನಗಳಲ್ಲಿಯೂ ಸೋತ ನಂತರ ದೆಹಲಿಯಲ್ಲಿ ಕಾಂಗ್ರೆಸ್ಸಿನ ಶಾಸಕರ ಬೆಂಬಲದಿಂದ ಸರ್ಕಾರ ರಚಿಸುವ ಸಂಬಂಧ ನಡೆಸಿದ ದೂರವಾಣಿ ಸಂಭಾಷಣೆ ಬೆಳಕಿಗೆ ಬಂದ ಕಾರಣದಿಂದ. ಅಧಿಕಾರಕ್ಕೋಸ್ಕರ ಈ ರೀತಿ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಎಂದಿಗೂ ಒಳ್ಳೆಯದಲ್ಲ. ಹಾಗೆ ಮಾಡಿದರೆ ಉಳಿದ ಪಕ್ಷಗಳಿಗೂ ಆಮ್ ಆದ್ಮಿ ಪಕ್ಷಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಗುರಿ ಮಾತ್ರ ಮುಖ್ಯವಲ್ಲ ಗುರಿಯನ್ನು ತಲುಪುವ ರೀತಿಯೂ ಮುಖ್ಯ ಹಾಗೂ ನೈತಿಕತೆಯಿಂದ ಕೂಡಿರಬೇಕು ಎಂದು ಗಾಂಧೀಜಿಯವರು ಹೇಳಿದ್ದಾರೆ. ಪ್ರತಿಭಾವಂತರಾದ ಆಮ್ ಆದ್ಮಿ ಪಕ್ಷದ ನಾಯಕರು ಇದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕೆಂಬುದು ಜನತೆಯ ಅಪೇಕ್ಷೆಯಾಗಿದೆ.

ಈಗ ಆಮ್ ಆದ್ಮಿ ಪಕ್ಷದಲ್ಲಿ ಕಂಡುಬರುತ್ತಿರುವ ಆಂತರಿಕ ಸಂಘರ್ಷದ ಮೂಲ ಯಾವುದು ಎಂದು ನೋಡಿದಾಗ ಅದು ಹೋಗಿ ನಿಲ್ಲುವುದು ಕೇಜ್ರಿವಾಲ್ ಅವರ ಸ್ವಭಾವದ ಮೇಲೆಯೇ. ಪ್ರಜಾಪ್ರಭುತ್ವದ ನೈಜ ಮೌಲ್ಯಗಳ ಅನುಸಾರ ಪಕ್ಷವನ್ನು ಬೆಳೆಸುವಲ್ಲಿ ಕೇಜ್ರಿವಾಲ್ ಎಡವುತ್ತಿದ್ದಾರೆ.  ಇದನ್ನು ಅವರು ಈಗಲೇ ತಿದ್ದಿಕೊಳ್ಳದಿದ್ದರೆ ಪಕ್ಷದ ಬೆಳವಣಿಗೆ ಸಾಧ್ಯವಿಲ್ಲ. ಮೌಲ್ಯಗಳೊಂದಿಗೆ ರಾಜಿಮಾಡಿಕೊಳ್ಳುವ ಕೇಜ್ರಿವಾಲ್ ಅವರ ಧೋರಣೆಯೇ ಪಕ್ಷದಲ್ಲಿ ಬಿರುಕು ಉಂಟಾಗಲು ಕಾರಣವಾಗುತ್ತಿದೆ ಎಂಬುದು ಸದ್ಯಕ್ಕೆ ಕಂಡುಬರುತ್ತಿರುವ ವಿಷಯವಾಗಿದೆ. ಪಕ್ಷವು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಮರ್ಪಕವಾಗಿ ನಡೆದುಕೊಂಡಿಲ್ಲ ಎಂದು ಪ್ರಶಾಂತ್ ಭೂಷಣ್ ಎತ್ತಿರುವ ವಿಚಾರ ಕಡೆಗಣಿಸುವಂಥದ್ದಲ್ಲ.  ಇದು ಸುಗಮ ಆಡಳಿತ ನಡೆಸಲು ಇರುವ ಪ್ರಧಾನ ಅಡಿಗಲ್ಲಿಗೆ ಸಂಬಂಧಿಸಿರುವ ವಿಚಾರವಾಗಿದೆ. ನೈತಿಕವಾಗಿ ದೃಢವಾದ ನಿಲುವು ಇರುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವುದರಿಂದ ಮುಂದೆ ಗೆದ್ದರೆ ಉತ್ತಮ ಆಡಳಿತ ನಡೆಸಲು ಅನುಕೂಲವಾಗುತ್ತದೆ.  aap-kejriwal-yogendra-yadavಅದರ ಬದಲು ಹಣವಂತರಿಗೆ ಪಕ್ಷದ ಟಿಕೆಟ್ ನೀಡಿದರೆ ಮುಂದೆ ಇಂಥವರೇ ಉತ್ತಮ ಆಡಳಿತ ನೀಡುವಲ್ಲಿ ಅಡ್ಡಗಾಲಾಗುತ್ತಾರೆ. ತಮಗೆ ಸೂಕ್ತ ಸ್ಥಾನ ಸರ್ಕಾರದಲ್ಲಿ ಸಿಗದಿದ್ದರೆ ಇಂಥವರೇ ಭಿನ್ನಮತೀಯರಾಗಿ ಸರ್ಕಾರ ನಡೆಸುವಲ್ಲಿ ದೊಡ್ಡ ಅಡ್ಡಿಯಾಗುತ್ತಾರೆ. ಹೀಗಾಗಿ ಪಕ್ಷದಿಂದ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ಆರಿಸುವಾಗ ನೈತಿಕತೆಗೆ ಒತ್ತು ಕೊಡುವುದು ಬಹಳ ಮುಖ್ಯ. ಇಂಥ ಪ್ರಮುಖ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ತರವಲ್ಲ ಎಂಬುದು ಪ್ರಶಾಂತ್ ಭೂಷಣ್ ಅವರ ನಿಲುವು ಹಾಗೂ ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಅವರು ಹೆಚ್ಚಿನ ಉತ್ಸಾಹ ತೋರಿಸದೆ ಇರಲೂ ಇದು ಕಾರಣವಾಗಿ ಕಂಡುಬರುತ್ತದೆ. ಪಕ್ಷದ ಮೂಲ ನೈತಿಕ ಹಾಗೂ ಪ್ರಜಾಸತ್ತಾತ್ಮಕ ನಿಲುವುಗಳನ್ನು ಕಾಯ್ದುಕೊಳ್ಳಲು ಒತ್ತಾಯಿಸಿದ ಹಿರಿಯ ಸ್ಥಾಪಕ ಸದಸ್ಯರನ್ನು ಪ್ರಮುಖ ಸ್ಥಾನಗಳಿಂದ ಹೊರಹಾಕಲು ಪ್ರಯತ್ನಿಸುವ ಕೇಜ್ರಿವಾಲ್ ಬೆಂಬಲಿಗರ ಕ್ರಮ ಪಕ್ಷ ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಕೇಜ್ರಿವಾಲ್ ಇದನ್ನು ತಿದ್ದಿಕೊಳ್ಳದೆ ಇದ್ದರೆ ಪಕ್ಷ ಅಡ್ಡಹಾದಿಗೆ ಇಳಿಯುವುದು ಖಚಿತ.  ಕೇಜ್ರಿವಾಲ್ ಬೆಂಬಲಿಗರು ಪಕ್ಷವು ಸರಿಯಾದ ಹಾದಿಯಲ್ಲಿ ನಡೆಯುತ್ತಿಲ್ಲ ಎಂದು ಪ್ರತಿರೋಧ ತೋರಿದವರನ್ನೇ ಪಕ್ಷದಿಂದ ಹೊರಹಾಕಲು ನೋಡುತ್ತಿರುವುದು ಪಕ್ಷಕ್ಕೆ ಶೋಭೆಯಲ್ಲ. ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ಪಕ್ಷದಲ್ಲಿ ಅಧಿಕಾರದ ಸ್ಥಾನಕ್ಕಾಗಿ ಭಿನ್ನಮತ ತಳೆದಿದ್ದರೆ ಅವರನ್ನು ಹೊರಹಾಕುವುದು ನ್ಯಾಯೋಚಿತ ಆಗಿರುತ್ತಿತ್ತು ಆದರೆ ಪಕ್ಷದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರು ಅಧಿಕಾರದ ಸ್ಥಾನಗಳಿಗಾಗಿ ಭಿನ್ನಮತ ಹಾಗೂ ಗುಂಪುಗಾರಿಕೆ ಮಾಡಿರುವುದು ಕಂಡುಬರುವುದಿಲ್ಲ.  ಹೀಗಾಗಿ ಕೇಜ್ರಿವಾಲ್ ಬೆಂಬಲಿಗರು ತಮ್ಮ ತಪ್ಪನ್ನು ತಿದ್ದಿಕೊಂಡು ಪಕ್ಷವನ್ನು ಒಂದಾಗಿ ಮುನ್ನಡೆಸಿಕೊಂಡು ಹೋಗುವುದು ಕಾಲದ ಅಗತ್ಯವಾಗಿದೆ.

ಆಮ್ ಆದ್ಮಿ ಪಕ್ಷ ದೆಹಲಿಗೆ ಮಾತ್ರ ಸೀಮಿತ ಆಗಿರಬೇಕೋ ಅಥವಾ ಇನ್ನೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಹಾಗೂ ಮಹಾನಗರಸಭೆ ಚುನಾವಣೆಗೆ ಸ್ಪರ್ಧಿಸಬೇಕೋ ಎಂಬ ಬಗ್ಗೆ ಪಕ್ಷದಲ್ಲಿ ಗೊಂದಲಗಳಿವೆ. ಇದರಲ್ಲಿ ಗೊಂದಲ ಮಾಡಿಕೊಳ್ಳಬೇಕಾದ ಅಗತ್ಯ ಇಲ್ಲ.  aam-admi-party-aapಈ ವಿಷಯವನ್ನು ಆಯಾ ರಾಜ್ಯ ಘಟಕಗಳ ತೀರ್ಮಾನಕ್ಕೆ ಬಿಡುವುದು ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಲಕ್ಷಣವಾಗಿದೆ ಎಂಬುದು ಗೊಂದಲಕ್ಕೆ ಎಡೆಯಿಲ್ಲದೆ ಸ್ಪಷ್ಟವಾಗುವ ವಿಚಾರ.  ಚುನಾವಣೆಗೆ ಸ್ಪರ್ಧಿಸಲು ಬೇಕಾದ ಸಂಪನ್ಮೂಲವನ್ನು ಆಯಾ ರಾಜ್ಯ ಘಟಕಗಳು ಸ್ವಚ್ಛ ಮೂಲಗಳಿಂದ ಸಂಗ್ರಹಿಸಲು ಸಮರ್ಥವಾಗಿದ್ದರೆ ಅವರು ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಣಯ ಕೈಗೊಳ್ಳಬಹುದು.  ಇದಕ್ಕೆ ಕೇಂದ್ರದ ಹೈಕಮಾಂಡಿನ ಒಪ್ಪಿಗೆ ಅಗತ್ಯವಿಲ್ಲ. ಇಂಥ ಹೈಕಮಾಂಡ್ ಸಂಸ್ಕೃತಿ ತಮ್ಮಲ್ಲಿ ಇಲ್ಲವೆಂದು ಆಮ್ ಆದ್ಮಿ ಪಕ್ಷ ಹೇಳಿಕೊಳ್ಳುತ್ತಿರುವುದರಿಂದ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು ಅದರಂತೆ ನಡೆದುಕೊಳ್ಳಬೇಕು. ಇಲ್ಲದೆ ಹೋದರೆ ಉಳಿದ ಪಕ್ಷಗಳಿಗೂ ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಸೇರಿ ಕಟ್ಟಿದ ಆಮ್ ಆದ್ಮಿ ಪಕ್ಷಕ್ಕೂ ವ್ಯತ್ಯಾಸವೇ ಇರುವುದಿಲ್ಲ.

ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಆಡಳಿತಕ್ಕೆ ಬಂದು ಒಂದು ತಿಂಗಳು ಕಳೆದರೂ ಭ್ರಷ್ಟಾಚಾರದ ವಿರುದ್ಧ ಬಲಿಷ್ಠ ಲೋಕಪಾಲ್ ಅಥವಾ ಲೋಕಾಯುಕ್ತ ವ್ಯವಸ್ಥೆ ರೂಪಿಸುವ ಕುರಿತು ದೆಹಲಿಯ ನೂತನ ಸರಕಾರ ಶೀಘ್ರ ಕ್ರಮ ಕೈಗೊಳ್ಳದೆ ಇರುವುದು ಸೂಕ್ತವಲ್ಲ. ಇದು ಪ್ರಧಾನವಾಗಿ ಹಾಗೂ ಶೀಘ್ರವಾಗಿ ಆಗಲೇಬೇಕಾದ ಕೆಲಸ. ಈ ಬಗ್ಗೆ ಉದಾಸೀನ ಸಲ್ಲದು.  ಅದೂ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಜನ್ಮ ತಳೆದ ಆಮ್ ಆದ್ಮಿ ಪಕ್ಷಕ್ಕೆ ಇದು ಪ್ರಧಾನ ಆದ್ಯತೆಯಾಗಬೇಕಾಗಿದೆ.  ಭಾರತದ ಪ್ರಧಾನ ಸಮಸ್ಯೆ ಭ್ರಷ್ಟಾಚಾರವೇ ಆಗಿದೆ.  ರಾಜಕಾರಣಿಗಳನ್ನು ಹಾಗೂ ಅಧಿಕಾರಿ ವರ್ಗವನ್ನು ಅವ್ಯವಹಾರ ಮಾಡದಂತೆ ತಡೆಯಲು ಮತ್ತು ಹೆದರಿಕೆ ಹುಟ್ಟಿಸಲು ಇದು ಅತೀ ಅಗತ್ಯವಾಗಿದೆ. ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ಗುಮ್ಮನನ್ನು ತೋರಿಸಿ ಕೇವಲ ಪಕ್ಷ ಬೆಳೆಸುವ ಹಾಗೂ ಅಧಿಕಾರಕ್ಕೆ ಏರುವ ಸಾಧನವಾಗಿ ಅದನ್ನು ಬಳಸಿಕೊಂಡರೆ ಉಳಿದ ಪಕ್ಷಗಳಿಗೂ ಅದಕ್ಕೂ ವ್ಯತ್ಯಾಸ ಇರುವುದಿಲ್ಲ.  ಬಿಜೆಪಿ ಪಕ್ಷವು ರಾಮ ಮಂದಿರ ವಿಷಯವನ್ನು ಪಕ್ಷ ಬೆಳೆಸಲು ಬೆಳೆಸಿಕೊಂಡಂತೆ ಮತ್ತು ನಂತರ ಅದನ್ನು ಮೂಲೆಗೆ ತಳ್ಳಿದಂತೆ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ವಿಷಯದಲ್ಲಿ ಮಾಡಬಾರದು.

ದೇಶದಲ್ಲಿ ರಾಜಕೀಯ ಶುದ್ಧೀಕರಣದ ಹಾಗೂ ರಾಜಕೀಯ ಮೌಲ್ಯಗಳ, ನೈತಿಕತೆಯ ಪುನರುತ್ಥಾನ ಇಂದಿನ ಅಗತ್ಯವಾಗಿದೆ. ಇದಕ್ಕಾಗಿ ಜನ ಎದುರು ನೋಡುತ್ತಿದ್ದಾರೆ ಹಾಗೂ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎಂಬುದು ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿ ತೋರಿಸಿದೆ.  ಕಾಂಗ್ರೆಸ್ ಪಕ್ಷವು ದೃಢವಾದ ಹಾಗೂ ಮೌಲ್ಯಯುತ ರಾಜಕೀಯದ ಪರ ಹೋರಾಡುವ ನಾಯಕತ್ವ ಹೊಂದದೆ ಇರುವುದರಿಂದಾಗಿ ಅವಸಾನದತ್ತ ಸಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ಸಿನ ಸ್ಥಾನವನ್ನು ತುಂಬುವ ಪಕ್ಷವಾಗಿ ಆಮ್ ಆದ್ಮಿ ಪಕ್ಷಕ್ಕೆ ಅವಕಾಶಗಳು ಇವೆ.  kejriwal_aap_pti_rallyಇದಕ್ಕೆ ಪಕ್ಷವು ಸ್ಪಷ್ಟವಾದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ದೃಢತೆ ತೋರಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ನಾಯಕತ್ವದ ಗುಣಗಳುಳ್ಳ ಹಲವು ವ್ಯಕ್ತಿಗಳು, ವಿವಿಧ ಕ್ಷೇತ್ರಗಳ ಪ್ರತಿಭಾವಂತರು ಇದ್ದಾರೆ.  ಇವರೆಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಅಗತ್ಯ ಇದೆ. ಯಾವುದೇ ರೀತಿಯ ಬಣ ರಾಜಕೀಯಕ್ಕೆ ಆಮ್ ಆದ್ಮಿ ಪಕ್ಷ ಅವಕಾಶ ನೀಡಬಾರದು. ಈಗ ಕೇಜ್ರಿವಾಲ್ ಜೊತೆಗೆ ನಿಂತಿರುವ ವ್ಯಕ್ತಿಗಳು ಬಣ ರಾಜಕೀಯಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದ್ದು ಇದನ್ನು ನಿವಾರಿಸುವ ಕುರಿತು ಸ್ವತಃ ಕೇಜ್ರಿವಾಲ್ ಗಮನ ಹರಿಸಬೇಕು.

ಆಮ್ ಆದ್ಮಿ ಪಕ್ಷವು ಕೇವಲ ಕೇಜ್ರಿವಾಲ್ ಕಟ್ಟಿದ ಪಕ್ಷವಲ್ಲ. ಇದು ರಾಜಕೀಯದಲ್ಲಿ ಬದಲಾವಣೆ ಹಾಗೂ ಶುದ್ಧೀಕರಣವನ್ನು ಬಯಸುವ ಸಾವಿರಾರು ಜನರ ಬೆಂಬಲ ಹಾಗೂ ಅರ್ಥಿಕ ನೆರವಿನಿಂದ ರೂಪುಗೊಂಡ ಪಕ್ಷ ಆಗಿರುವ ಕಾರಣ ಈ ಪಕ್ಷವು ಸರಿಯಾದ ದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ರಾಜಕೀಯದಲ್ಲಿ ಬದಲಾವಣೆ ಹಾಗೂ ಒಳಿತನ್ನು ಬಯಸುವ ಎಲ್ಲರ ಮೇಲೆಯೂ ಇದೆ. ಹೀಗಾಗಿ ವಿಶ್ವದಾದ್ಯಂತ ಇರುವ ಆಮ್ ಆದ್ಮಿ ಪಕ್ಷದ ಹಿತೈಷಿಗಳು ಹಾಗೂ ಬದಲಾವಣೆ ಬಯಸುವ ಜನ ಪಕ್ಷದ ಉನ್ನತ ನಾಯಕತ್ವವು ಹಾದಿ ತಪ್ಪಿದಾಗ ಅವರನ್ನು ಎಚ್ಚರಿಸುವ ಕೆಲಸವನ್ನು ಇಂದಿನ ಲಭ್ಯ ಅಂತರ್ಜಾಲ ಮೂಲಕ ಮಾಡುತ್ತಿರಬೇಕು. ನಾಯಕರಿಗೆ ಆಗಾಗ ಚಾಟಿ ಏಟು ನೀಡಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಸುವ ಜವಾಬ್ದಾರಿ ಎಲ್ಲರ ಮೇಲೆಯೂ ಇದೆ.

ನೋವು, ನರಳಾಟವಿಲ್ಲದ ಸಾವು ಕಾನೂನುಬದ್ಧಗೊಳ್ಳಬೇಕು

– ಆನಂದ ಪ್ರಸಾದ್

ಪ್ರತಿಯೊಬ್ಬ ಮಾನವನೂ ನೋವು, ನರಳಾಟವಿಲ್ಲದ ಸಾವು ಬರಲಿ ಎಂದು ಬಯಸುತ್ತಾನೆ. ಆದರೆ ವೃದ್ಧಾಪ್ಯದಲ್ಲಿ ಬಹುತೇಕ ಸಂದರ್ಭಗಳಲ್ಲಿ ನೋವು, ನರಳಾಟಗಳಿಂದ ಬಳಲಿ ಬಳಲಿ ಸಾಯುವಂಥ ವ್ಯವಸ್ಥೆ ನಮ್ಮ ಸಮಾಜದಲ್ಲಿರುವುದು ವಿಷಾದನೀಯ. ಪ್ರಜ್ಞಾಹೀನ ಸ್ಥಿತಿಗೆ ಹೋಗುವುದು (ಕೋಮಾ),ಹೃದಯ ಸ್ತಂಭನ, ಮೆದುಳಿನಲ್ಲಿ ತೀವ್ರ ರಕ್ತಸ್ರಾವಗಳಂಥ ಸಂದರ್ಭಗಳನ್ನು ಹೊರತುಪಡಿಸಿ ನರಳಾಟವಿಲ್ಲದ ಸಾವು ಬರುವುದಿಲ್ಲ. ಕೆಲವರಂತೂ ವೃದ್ಧಾಪ್ಯದಲ್ಲಿ ತಿಂಗಳುಗಟ್ಟಲೆ, ವರ್ಷಗಟ್ಟಲೆ ತಮ್ಮ ಮಲ, ಮೂತ್ರಗಳಲ್ಲಿ ಹೊರಳಾಡುತ್ತಾ, TIME-righttodieಹಾಸಿಗೆ ಹುಣ್ಣುಗಳಿಂದ ನರಳಾಡುತ್ತಾ ಬದುಕುವ ಜೀವಂತ ನರಕದ ಸ್ಥಿತಿಯಲ್ಲಿರುತ್ತಾರೆ. ಇಂಥವರು ವಿಷ ಕೊಟ್ಟೋ ಅಥವಾ ಇನ್ನಿತರ ವಿಧಾನಗಳ ಮೂಲಕ ತಮ್ಮನ್ನು ಕೊಲ್ಲಿ ಎಂದು ತಮ್ಮ ಮಕ್ಕಳಲ್ಲಿ ಹೇಳುತ್ತಿರುತ್ತಾರೆ. ಆದರೆ ಆ ರೀತಿ ಜೀವ ಕೊನೆಗೊಳಿಸುವುದು ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸಮ್ಮತವಲ್ಲದ್ದರಿಂದ ಅವರು ಕೂಡ ತಮ್ಮ ಹೆತ್ತವರ ನರಳಾಟವನ್ನು ನೋಡುತ್ತಾ ಅಸಹಾಯಕರಾಗಬೇಕಾಗುತ್ತದೆ. ಇಂಥ ಪರಿಸ್ಥಿತಿಯನ್ನು ಕೊನೆಗಾಣಿಸಿ ನೋವಿಲ್ಲದ ಸಾವನ್ನು ಪಡೆಯುವುದನ್ನು ಕಾನೂನುಬದ್ಧಗೊಳಿಸಿ ಯಾರು ನೋವು, ನರಳಾಟಗಳ ಜೀವಂತ ನರಕದಿಂದ ಮುಕ್ತಿ ಪಡೆಯಲು ಬಯಸುತ್ತಾರೋ ಅಂಥವರ ನೋವಿಗೆ ಸ್ಪಂದಿಸುವ ಸಾಮಾಜಿಕ ಹಾಗೂ ಕಾನೂನುಬದ್ಧ ಪರಿಸ್ಥಿತಿ ರೂಪುಗೊಳಿಸುವ ಅಗತ್ಯವಿದೆ.

ದಯಾಮರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಅಭಿಪ್ರಾಯ ಕೇಳಿರುವುದರಿಂದ ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯುತ್ತಿದ್ದರೂ ಒಂದು ವೈಜ್ಞಾನಿಕ ಹಾಗೂ ಮಾನವೀಯ ತೀರ್ಮಾನಕ್ಕೆ ನಮ್ಮ ಸಮಾಜವು ಇನ್ನೂ ಬರಲಾಗಿಲ್ಲ. ಇದು ನಮ್ಮ ಸಮಾಜದಲ್ಲಿರುವ ಜಡತ್ವವನ್ನು ತೋರಿಸುತ್ತದೆ. ಕೆಲವರು ದಯಮರಣದ ಅವಕಾಶ ಕೊಟ್ಟರೆ ಹೆತ್ತವರ ಅಥವಾ ಬಂಧುಗಳ ಆಸ್ತಿಪಾಸ್ತಿ ಲಪಟಾಯಿಸಲು ಅದರ ದುರುಪಯೋಗ ಆಗಬಹುದು ಅಥವಾ ತಮ್ಮ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳಲು ದಾರಿಯಾಗಬಹುದು ಎಂದೂ, ಮಕ್ಕಳ ಮಲ, ಮೂತ್ರ ತೆಗೆದು ಶುಚಿಗೊಳಿಸಿ ಯಾವ ರೀತಿ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ಹೆತ್ತವರನ್ನೂ ನೋಡಿಕೊಳ್ಳಬೇಕೆಂದು, ಅವರು ನರಳಿ ನರಳಿ ಸಾಯುವುದೇ ಸರಿ ಎಂಬ ವಾದವನ್ನು ಪ್ರತಿಪಾದಿಸುತ್ತಾರೆ. mercy_killing-bangaloreಆದರೆ ಮಕ್ಕಳನ್ನು ಅವರ ಎಳೆಯ ವಯಸ್ಸಿನಲ್ಲಿ ನೋಡಿಕೊಳ್ಳುವುದಕ್ಕೂ, ಸಾವಿನಂಚಿಗೆ ಬಂದು ಗುಣವಾಗದ ರೋಗಗಳಿಂದ ಅಥವಾ ಸಹಜ ವೃದ್ಧಾಪ್ಯದ ಶಕ್ತಿಹೀನತೆಯಿಂದ ಮಲಗಿದಲ್ಲಿಯೇ ಮಲಗಿ ಅಲ್ಲಿಯೇ ಮಲಮೂತ್ರ ಮಾಡುವ ಹಿರಿಯರ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ಎಳೆಯ ವಯಸ್ಸಿನ ಮಕ್ಕಳನ್ನು ಎತ್ತಿ ಅವರನ್ನು ಮಲಮೂತ್ರವನ್ನು ಶುಚಿಗೊಳಿಸುವುದು ಕಷ್ಟದ ಕೆಲಸವಲ್ಲ ಆದರೆ ವೃದ್ಧರನ್ನು ಆ ರೀತಿ ಎತ್ತಿ ಶುಚಿಗೊಳಿಸಲಾಗುವುದಿಲ್ಲ. ಅವರು ಮಲಗಿದ ಅಡಿಗೆ ಹಾಕಿದ ಬಟ್ಟೆಯನ್ನು ಆಗಾಗ ಬದಲಿಸುವುದಾಗಲೀ ಅಥವಾ ಅವರನ್ನು ಮಕ್ಕಳನ್ನು ಎತ್ತಿ ತೊಳೆದು ಶುಚಿಗೊಳಿಸುವಂತೆ ಎತ್ತಿ ಶುಚಿಗೊಳಿಸುವುದಾಗಲೀ, ಸ್ನಾನ ಮಾಡಿಸುವುದಾಗಲೀ ಸಾಧ್ಯವಾಗುವುದಿಲ್ಲ. ಹೀಗಾಗಿ ಮಲಗಿದಲ್ಲಿಯೇ ಮಲ, ಮೂತ್ರಾದಿಗಳನ್ನು ಮಾಡುವ ವೃದ್ಧರನ್ನು ಸಮರ್ಪಕವಾಗಿ ಶುಚಿಗೊಳಿಸಲಾಗದೆ ಅವರು ಅದೇ ಮಲ, ಮೂತ್ರಗಳಲ್ಲಿ ಹೊರಳಾಡುತ್ತಾ ಜೀವಂತ ನರಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ವೃದ್ಧಾಪ್ಯದಲ್ಲಿ ಉಂಟಾಗುವ ಎಲುಬಿನ ಸಂಧಿ ನೋವು ಮೊದಲಾದ ಕಾಯಿಲೆ ಇದ್ದವರನ್ನಂತೂ ಆಚೀಚೆ ಎತ್ತಿ ಮಲಗಿಸುವುದಾಗಲೀ, ಅವರ ಬಟ್ಟೆ ಬದಲಿಸುದಾಗಲೀ ಸಾಧ್ಯವಾಗುವುದಿಲ್ಲ, ಏಕೆಂದರೆ ಅವರನ್ನು ಎತ್ತಿದರೆ ಎಲುಬಿನ ಕೀಲುಗಳ ಅಸಾಧ್ಯ ನೋವು ಉಂಟಾಗಿ ಬೊಬ್ಬೆ ಹಾಕುತ್ತಾರೆ. ಎಳೆಯ ಮಕ್ಕಳಾದರೆ ಇಂಥ ನರಳಾಟವೇನೂ Euthanasia-Mercy-Killings-oಇರುವುದಿಲ್ಲ ಮತ್ತು ಅವರು ಭವಿಷ್ಯದಲ್ಲಿ ಬೆಳೆದು ದೊಡ್ದವರಾಗುವವರು. ಹೀಗಾಗಿ ಅವರ ಚಾಕರಿ ಮಾಡುವುದು ಯಾರಿಗೂ ಬೇಸರವೆನಿಸುವುದಿಲ್ಲ. ವೃದ್ಧರಲ್ಲಿಯಾದರೆ ಇಂಥ ಪರಿಸ್ಥಿತಿ ಇರುವುದಿಲ್ಲ. ಅವರು ದೈಹಿಕವಾಗಿ ಇನ್ನಷ್ಟು ದುರ್ಬಲಾರಾಗುತ್ತಾ ಹೋಗುವವರು, ತಮ್ಮ ಅಸಹಾಯಕ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲದವರು. ಹೀಗಾಗಿ ಅವರನ್ನು ನೋಡಿಕೊಳ್ಳುವ ಮಕ್ಕಳಿಗೂ ಕೂಡ ಇಂಥ ಪರಿಸ್ಥಿತಿ ಉಂಟಾದರೆ ಹೊರೆಯಾಗುವುದು ಸಹಜ. ಹೀಗಾಗಿ ಮಾನವ ಸಹಜವಾಗಿಯೇ ಇಂಥ ಸಂದರ್ಭಗಳಲ್ಲಿ ಮಕ್ಕಳು ಕೂಡ ಗೊಣಗುತ್ತಾ ಅನಿವಾರ್ಯತೆಯಿಂದ ಅವರ ಸೇವೆ ಮಾಡುತ್ತಾರೆಯೇ ವಿನಃ ಮನಃಪೂರ್ವಕವಾಗಿ ಮಾಡುವವರು ವಿರಳಾತಿವಿರಳವೆಂದೇ ಹೇಳಬಹುದು.

ಮಾನವನು ವೃದ್ಧಾಪ್ಯದಿಂದ ದೈಹಿಕವಾಗಿ ಅಥವಾ ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿದ್ದು ತನ್ನ ಮಲ, ಮೂತ್ರಾದಿ ವಿಸರ್ಜನೆಗೆ ಹೋಗಲು ಅಶಕ್ತನಾದ ಸಂದರ್ಭದಲ್ಲಿ ಆತನು ಬಯಸಿದಲ್ಲಿ ನೋವಿಲ್ಲದ ಸಾವನ್ನು ಬರಿಸುವ ವೈಜ್ಞಾನಿಕ ವ್ಯವಸ್ಥೆಯೊಂದನ್ನು deathರೂಪಿಸುವುದು ಹೆಚ್ಚು ಮಾನವೀಯವಾದುದು. ಪ್ರಜ್ಞೆ ತಪ್ಪಿಸುವ ಔಷಧಿಯನ್ನು ಮೊದಲು ನೀಡಿ ಪ್ರಜ್ಞೆ ತಪ್ಪಿದ ನಂತರ ಶೀಘ್ರ ಸಾವು ಸಂಭವಿಸುವ ಸಯನೈಡ್ನಂಥ ವಿಷದ ಇಂಜೆಕ್ಷನ್ ನೀಡುವುದರಿಂದ ಇಂಥ ವ್ಯವಸ್ಥೆಯೊಂದನ್ನು ಕಾನೂನುಬದ್ಧವಾಗಿ ರೂಪಿಸುವುದು ಸಾಧ್ಯವಾಗಬೇಕು. ಇದರಿಂದ ಮನುಷ್ಯನು ವೃದ್ಧಾಪ್ಯದಲ್ಲಿ ನರಳಿ ನರಳಿ, ಮಲಮೂತ್ರಾದಿಗಳಲ್ಲಿ ಹೊರಳಾಡುತ್ತಾ, ಮಲಗಿದಲ್ಲಿಯೇ ಮಲಗಿ ಹಾಸಿಗೆ ಹುಣ್ಣು, ಹುಳುಗಳಾಗಿ ನರಕ ಯಾತನೆ ಪಡುವುದನ್ನು ತಪ್ಪಿಸುವುದು ಸಾಧ್ಯ. ಇದರಿಂದ ಸಾವಿನ ಯಾತನೆ, ಭೀತಿ ಇಲ್ಲದೆ ಅಸಹನೀಯ ಜೀವನವನ್ನು ಕೊನೆಗಾಣಿಸುವುದು ವೈಜ್ಞಾನಿಕವಾಗಿ ಸಾಧ್ಯವಾಗುತ್ತದೆ ಮತ್ತು ನರಳಿ ನರಳಿ ಸಾಯುವುದಕ್ಕಿಂತ ಹೆಚ್ಚು ಉತ್ತಮವಾದದ್ದು. ಮನುಷ್ಯನು ಹೇಗಿದ್ದರೂ ಒಂದು ದಿನ ಸಾಯಲೇಬೇಕಾಗಿರುವುದು ಪ್ರಕೃತಿ ನಿಯಮ. ಹೀಗಾಗಿ ವೃದ್ಧಾಪ್ಯದಲ್ಲಿ ನರಳಿ ನರಳಿ ಕೆಲವು ದಿನಗಳೋ, ತಿಂಗಳುಗಳೋ ಅಥವಾ ವರ್ಷಗಳೋ ಹೆಚ್ಚು ಬದುಕಿ ಸಾಧಿಸುವುದೇನೂ ಇಲ್ಲದಿರುವುದರಿಂದ ತನ್ನ ಜೀವನದ ಕೊನೆಯನ್ನು ನೋವುರಹಿತವಾಗಿ ಪಡೆಯುವುದು ಮೂಲಭೂತ ಹಕ್ಕಾಗಬೇಕು. ಅಂಥ ಮಾನವೀಯ ಕಾಳಜಿ ನಮ್ಮ ಸಮಾಜ ಹಾಗೂ ಕಾನೂನುಗಳಲ್ಲಿ ಬೆಳೆಸಬೇಕಾದ ಅಗತ್ಯ ಇದೆ.

ಮಾನವನ ನೋವುರಹಿತ ಸಾವು ಸಾಧ್ಯವಾಗಿಸುವುದನ್ನು ತಡೆಯುವ ಕೆಲವು ಸಾಮಾಜಿಕ ನಂಬಿಕೆಗಳು mercy-killing-hospitalನಮ್ಮಲ್ಲಿ ಕೆಲಸಮಾಡುತ್ತಿವೆ. ಅವುಗಳಲ್ಲಿ ಪ್ರಧಾನವಾದುದು ಪುನರ್ಜನ್ಮ ಹಾಗೂ ಮುಕ್ತಿ ಎಂಬ ನಂಬಿಕೆಗಳಾಗಿವೆ. ಮಾನವನು ವೃದ್ಧಾಪ್ಯದಲ್ಲಿ ನರಳಿ ನರಳಿ ಸಾಯುವುದು ಅನಿವಾರ್ಯ, ಮಾನವನು ವೃದ್ಧಾಪ್ಯದಲ್ಲಿ ನರಳಿ ನರಳಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಆ ವ್ಯಕ್ತಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪವೇ ಕಾರಣ ಎಂಬ ನಂಬಿಕೆ ಸಮಾಜದಲ್ಲಿ ಇದೆ. ಹೀಗಾಗಿ ನೋವುರಹಿತ ಸಾವನ್ನು ಪಡೆದರೆ ಅದರಿಂದ ಆ ವ್ಯಕ್ತಿಗೆ ಮುಕ್ತಿ ಸಿಗುವುದಿಲ್ಲ ಏಕೆಂದರೆ ಆ ವ್ಯಕ್ತಿಯ ಸಂಚಿತ ಪಾಪಕರ್ಮಗಳ ಹೊರೆ ಹಾಗೇ ಇರುತ್ತದೆ ಎಂಬ ನಂಬಿಕೆಗಳು ದಯಾಮರಣದ ವಿರುದ್ಧವಾಗಿ ಕೆಲಸ ಮಾಡುತ್ತವೆ. ಬಹುಶಃ ಇಂಥ ತಲೆಬುಡವಿಲ್ಲದ ನಂಬಿಕೆಗಳು ನೋವುರಹಿತ ಸಾವಿನ ಮಾನವೀಯ ವಿಧಾನ ನಮ್ಮ ಸಮಾಜದಲ್ಲಿ ಬೆಳೆಯದಂತೆ ತಡೆಯುತ್ತಿವೆ. ಹೀಗಾಗಿ ಈ ಬಗ್ಗೆ ವೈಜ್ಞಾನಿಕ ತಿಳುವಳಿಕೆ ರೂಪಿಸಬೇಕಾದ ಅಗತ್ಯವಿದೆ.

ಯಾವುದೇ ಕಾನೂನು ರೂಪಿಸಿದರೂ ಅದು ದುರುಪಯೋಗ ಆಗುವ ಪರಿಸ್ಥಿತಿ ಇರುತ್ತದೆ. ಹಾಗೆಂದು ಕಾನೂನನ್ನೇ ರೂಪಿಸದೆ ಇರುವುದು ಸಮಂಜಸವಲ್ಲ. ಹೀಗಾಗಿ ದಯಮರಣದ ಬಗ್ಗೆ ಮಾನವೀಯವಾದ, ಸಾಧ್ಯವಾದಷ್ಟು ದುರುಪಯೋಗ ತಡೆಗಟ್ಟುವ ವಿಧಾನಗಳನ್ನು ರೂಪಿಸಿ ಕಾನೂನುಬದ್ಧ ದಯಾಮರಣ ಇಚ್ಛಿಸಿದವರಿಗೆ ಅವರ ಪರಿಸ್ಥಿತಿಯನ್ನು ನೋಡಿಕೊಂಡು ಅದನ್ನು ನೀಡುವ ಒಂದು ಮಾನವೀಯ ವ್ಯವಸ್ಥೆಯ ಅಗತ್ಯ ಇದೆ. ವೃದ್ಧಾಪ್ಯದಲ್ಲಿ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿ ತಲುಪಿದಲ್ಲಿ ತನ್ನನ್ನು ದಯಾಮರಣಕ್ಕೆ ಒಳಪಡಿಸುವ ಕುರಿತು ಮೊದಲೇ ವಿಲ್ ಬರೆದಿಡುವ ಅವಕಾಶ mercy-killing_legalಕಾನೂನಿನಲ್ಲಿ ನೀಡಬೇಕು. ನರಳಾಟ, ಯಾತನೆಯ ಅನುಭವ ಇಲ್ಲದೆ ವೃದ್ಧಾಪ್ಯದಲ್ಲಿ ಘನತೆಯಿಂದ ಸಾಯುವುದು ಮಾನವನ ಮೂಲಭೂತ ಹಕ್ಕಾಗಬೇಕಾಗಿದೆ ಹಾಗೂ ಯಾರು ನೋವು, ನರಳಾಟ ಇಲ್ಲದ ಸಾವನ್ನು ಬಯಸುತ್ತಾರೋ ಅವರಿಗೆ ಅದನ್ನು ವೈಜ್ಞಾನಿಕ ರೀತಿಯಲ್ಲಿ ನೀಡುವ ವ್ಯವಸ್ಥೆ ಸಮಾಜದಲ್ಲಿ ಬೆಳೆಯಬೇಕಾಗಿದೆ.

ಬಂಡವಾಳಶಾಹಿ ಮಾದರಿಯ ಅಭಿವೃದ್ಧಿ ಮತ್ತು ಪರಿಸರ ಅಸಮತೋಲನ

– ಆನಂದ ಪ್ರಸಾದ್

ಕಮ್ಯುನಿಷ್ಟ್ ಸೋವಿಯತ್ ಒಕ್ಕೂಟದ ಪತನದ ನಂತರ ಪ್ರಪಂಚದಾದ್ಯಂತ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗೆ ಹೆಚ್ಚಿನ ಬಲ ಬಂದು ಎಲ್ಲೆಡೆ ಅಭಿವೃದ್ಧಿಯ ಹುಚ್ಚು ಓಟ ಆರಂಭವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮನುಷ್ಯನ ಬೇಕು ಬೇಡಗಳಿಗೆ ಮಿತಿಯೇ ಇಲ್ಲವಾಗಿ ಮನುಷ್ಯನ ಸುಗಮ ಜೀವನಕ್ಕೆ ಅವಶ್ಯಕ ಅಲ್ಲದಿದ್ದರೂ ಐಶಾರಾಮಿ ಭೋಗಸಾಮಗ್ರಿಗಳನ್ನು ಹೊಂದುವ ಅವಿವೇಕಿ ಪ್ರವೃತ್ತಿ ಇಂದು ಎಲ್ಲೆಡೆ ಕಂಡುಬರುತ್ತಿದೆ.  ಉದಾಹರಣೆಗೆ ಮನುಷ್ಯನಿಗೆ ವಾಸಕ್ಕೆಮನೆ ಬೇಕು.  ಐದಾರು ಸದಸ್ಯರು ಇರುವ ಒಂದು ಸಂಸಾರದ ಸುಗಮ ಜೀವನಕ್ಕೆ ಹೆಚ್ಚೆಂದರೆ ಏಳೆಂಟು ಕೊಠಡಿಗಳಿರುವ ಮನೆ ಧಾರಾಳ ಸಾಕು.  ಆದರೆ ಹಣದ ಮದ ತಲೆಗೇರಿದ ಧನಿಕರು ಇಂದು ಹಲವಾರು ಅಂತಸ್ತುಗಳುಳ್ಳ ಹಲವು ಕೊಠಡಿಗಳನ್ನು ಹೊಂದಿರುವ ಮನೆಗಳನ್ನು ಕಟ್ಟಿಸುತ್ತಿದ್ದಾರೆ.  ಹಣ ಉಳ್ಳವರು ತಮಗೆ ಬೇಕಾದಷ್ಟು ದೊಡ್ಡ ಮನೆ ಕಟ್ಟಿಸುತ್ತಾರೆ ಇದರಿಂದ ಏನು ತೊಂದರೆ, ನಿಮಗೇಕೆ ಹೊಟ್ಟೆಕಿಚ್ಚು ಎಂದು ಬಂಡವಾಳಶಾಹಿ ವ್ಯವಸ್ಥೆಯ ಸಮರ್ಥಕರು ಕೇಳುತ್ತಾರೆ.  ವಾಸ್ತವವಾಗಿ ಇದರಿಂದ ಪರಿಸರ ಸಮತೋಲನಕ್ಕೆ ನಿಶ್ಚಿತವಾಗಿಯೂ ತೊಂದರೆ ಇದೆ ಹೇಗೆಂದರೆ ದೊಡ್ಡ ದೊಡ್ಡ ಬಂಗಲೆ ಕಟ್ಟಿಸಿದಷ್ಟೂ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ, ಪರಿಸರ ಮಾಲಿನ್ಯ ಹೆಚ್ಚುತ್ತದೆ.  ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಲು ಅಪಾರ ಪ್ರಮಾಣದಲ್ಲಿ ಕಬ್ಬಿಣ, ಸಿಮೆಂಟು, ಮರಳು, ಜಲ್ಲಿ ಇತ್ಯಾದಿಗಳು ಬೇಕಾಗುತ್ತವೆ.  ambani-houseಇದರಿಂದಾಗಿ ಹೆಚ್ಚು ಹೆಚ್ಚು ಗಣಿಗಾರಿಕೆ ಮಾಡಬೇಕಾಗುತ್ತದೆ.  ಕಬ್ಬಿಣ ಅದಿರು ಅಗೆಯಲು, ಅದನ್ನು ಸಾಗಿಸಲು, ಅದಿರನ್ನು ಕರಗಿಸಿ ಕಬ್ಬಿಣವಾಗಿ ಮಾಡಲು ಅಪಾರ ಪ್ರಮಾಣದಲ್ಲಿ ಪಳೆಯುಳಿಕೆ ಇಂಧನ ಬಳಕೆಯಾಗುತ್ತದೆ.  ಇದರಿಂದ ಇಂಗಾಲನಿಲ ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗಿ ಹಸಿರು ಮನೆ ಪರಿಣಾಮ ಉಂಟಾಗುತ್ತದೆ.  ವಾತಾವರದಲ್ಲಿ ಇಂಗಾಲನಿಲಗಳು ಸೂರ್ಯನ ಶಾಖವನ್ನು ಹಿಡಿದು ಇಡುವುದನ್ನು ಹಸಿರು ಮನೆ ಪರಿಣಾಮ ಎನ್ನಲಾಗುತ್ತದೆ.  ಇದರಿಂದಾಗಿ ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುತ್ತಿದೆ.  ಭೂಮಿಯ ಉಷ್ಣಾಂಶದಲ್ಲಿ ಹೆಚ್ಚಳ ಆಗುವುದರ ಪರಿಣಾಮ ಎಲ್ಲರ ಮೇಲೆಯೂ ಆಗುತ್ತದೆ.  ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳನ್ನು ಕಟ್ಟಿ ಪರಿಸರ ಸಮತೋಲನ ಕೆಡಿಸುವ ಶ್ರೀಮಂತರ ದೊಡ್ಡಸ್ಥಿಕೆಯ ಪ್ರದರ್ಶನದಿಂದ ಎಲ್ಲರ ಮೇಲೆಯೂ ದುಷ್ಪರಿಣಾಮ ಆಗುತ್ತದೆ.  ಹೀಗಾಗಿ ಇದನ್ನು ಬಡವರ ಹೊಟ್ಟೆಕಿಚ್ಚು ಎಂದು ತಳ್ಳಿಹಾಕುವಂತಿಲ್ಲ.  ರಿಲಯನ್ಸ್ ಕಂಪನಿಯ ಒಡೆಯ ಮುಖೇಶ್ ಅಂಬಾನಿ ಮುಂಬಯಿಯಲ್ಲಿ 27 ಅಂತಸ್ತುಗಳುಳ್ಳ 4,00,000  ಚದರ ಮೀಟರ್ ವಿಸ್ತೀರ್ಣದ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದ ಭಾರೀ ಬಂಗಲೆಯನ್ನು ಈ ದೃಷ್ಟಿಯಿಂದ ನೋಡಬೇಕು.  ಕೆಲವರು ಇದನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುತ್ತಾರೆ.  ಇದರಿಂದಾಗಿ ಉದ್ಯೋಗಾವಕಾಶ ಹೆಚ್ಚುತ್ತದೆ, ಹೆಚ್ಚು ಹೆಚ್ಚು ನಿರ್ಮಾಣ ಚಟುವಟಿಕೆ ನಡೆದಷ್ಟೂ ಆರ್ಥಿಕತೆಗೆ ಹೆಚ್ಚಿನ ಬಲ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.  ಇದು ನಿಜವಾಗಿಯೂ ಒಂದು ಅತ್ಯಂತ ಬೇಜವಾಬ್ದಾರಿಯ ಮೂರ್ಖ ಚಿಂತನೆಯಾಗಿದೆ.  ಈ ರೀತಿಯ ಚಿಂತನೆ ಆತ್ಮಹತ್ಯಾಕಾರಕ ಎಂದೇ ಹೇಳಬೇಕಾಗುತ್ತದೆ.  ಇದು ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳ, ಎಲ್ಲ ಮಾನವರ ಹಿತಚಿಂತನೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡುವ ಚಿಂತನೆ ಆಗಿರುವುದಿಲ್ಲ.

ಹೆಚ್ಚು ಹೆಚ್ಚು ಐಶಾರಾಮಿ ವಾಹನಗಳ ತಯಾರಿಕೆ ಹಾಗೂ ಬಳಕೆ ಕೂಡ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ.  ಉದಾಹರಣೆಗೆ ಮನುಷ್ಯನ ಅನುಕೂಲಕ್ಕೆ ಒಂದು ಕುಟುಂಬಕ್ಕೆ ಒಂದು ಸಾಮಾನ್ಯ ಕಾರು ಧಾರಾಳ ಸಾಕು ಅದೂ ಹೆಚ್ಚೆಂದರೆ ಏಳೆಂಟು ಲಕ್ಷ ಬೆಲೆಯ ಕಾರು ಸಾಕು.  ಆದರೆ ಇಂದು ಶ್ರೀಮಂತರು 20 ಲಕ್ಷ, 50 ಲಕ್ಷ ಬೆಲೆಯ ಬೃಹದಾಕಾರದ ಕಾರುಗಳನ್ನು ಕೊಂಡು ಆ ಕಾರುಗಳಲ್ಲಿ ಒಬ್ಬನೇ ಓಡಾಡುತ್ತಾ ಪರಿಸರಕ್ಕೆ ಅಪಾರ ಹಾನಿ ಮಾಡುತ್ತಿದ್ದಾರೆ.  ಇಂಥ ಹಾನಿಯನ್ನು ಮನುಷ್ಯನು ವಿವೇಕವನ್ನು ಬಳಸಿದರೆ ತಡೆಯಲು ಸಾಧ್ಯ ಆದರೆ ಪ್ರಪಂಚದಲ್ಲಿ ಇರುವ ಶ್ರೀಮಂತರಿಗೆ ಇಂದು ವಿವೇಕದ ಅಭಾವ ಇದೆ.  ದೊಡ್ಡ ದೊಡ್ಡ ಐಶಾರಮಿ ಕಾರುಗಳು ಮಾನವನಿಗೆ ಅಗತ್ಯವೇ ಇಲ್ಲ.  ದೊಡ್ಡ ದೊಡ್ಡ ಕಾರುಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಾದಷ್ಟೂ ಪರಿಸರಕ್ಕೆ ಹಾನಿ ತಪ್ಪಿದ್ದಲ್ಲ.  ಹೇಗೆಂದರೆ ದೊಡ್ಡ ದೊಡ್ಡ ಐಶಾರಾಮಿ ಕಾರುಗಳನ್ನು ತಯಾರಿಸಲು ಕಬ್ಬಿಣ, ಫೈಬರ್, ಪ್ಲಾಸ್ಟಿಕ್ ಇನ್ನಿತರ ಘಟಕಗಳು ಹೆಚ್ಚು ಹೆಚ್ಚು ಬೇಕಾಗುತ್ತದೆ.  ಇವುಗಳನ್ನು ಹೆಚ್ಚು ಹೆಚ್ಚು ಬಳಸಿದಷ್ಟೂ ಅದರ ದುಷ್ಪರಿಣಾಮ ಪರಿಸರದ ಮೇಲೆ ಆಗುತ್ತದೆ ಎಂಬ ಚಿಂತನೆ ಬಂಡವಾಳಶಾಹಿ ಆರ್ಥಿಕ ಚಿಂತಕರಿಗೆ ಇಲ್ಲ.  ಅವರ ದೃಷ್ಟಿ ಇರುವುದು ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉದ್ಯೋಗಾವಕಾಶ, ಜನರು ಹೆಚ್ಚು ಹೆಚ್ಚು ಶ್ರೀಮಂತರಾಗುವುದು ಮಾತ್ರ.  ಹೀಗಾದರೆ ಮಾತ್ರ ಅದು ಅಭಿವೃದ್ಧಿ ಎಂಬುದು ಬಂಡವಾಳಶಾಹಿ ಆರ್ಥಿಕ ಚಿಂತಕರ ದೂರದೃಷ್ಟಿಯಿಲ್ಲದ ಚಿಂತನೆಯಾಗಿದೆ.  ಯೋಚನಾಶಕ್ತಿಯಿರುವ ಏಕೈಕ ಪ್ರಾಣಿಯಾದ ಮಾನವನಿಗೆ ಭಾರೀ ಐಶಾರಾಮಿ ಬಂಗಲೆ, ಐಶಾರಾಮಿ ಕಾರುಗಳು ಇಲ್ಲದೆಯೂ ಆರಾಮವಾಗಿ ಬದುಕಬಹುದು ಎಂಬ ಚಿಂತನೆ ಇಲ್ಲದೆ ಇರುವುದು ಶೋಚನೀಯ.

ಮನುಷ್ಯನ ವಿವೇಕ ಮರೆಯಾಗಿ ಪ್ರದರ್ಶನದ ಹುಚ್ಚು ಹೆಚ್ಚಾಗಲು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಕಾರಣವಾಗುತ್ತಿದ್ದು ಮೇರೆಯಿಲ್ಲದ ಭೋಗ ಜೀವನ ಜಗತ್ತಿನಾದ್ಯಂತ ಹೆಚ್ಚುತ್ತಿದೆ.  ಈ ರೀತಿಯ ಅಭಿವೃದ್ಧಿಯ ಹುಚ್ಚು ಕಡಿವಾಣವಿಲ್ಲದ ಕುದುರೆಯಂತೆ ಓಡುತ್ತಿದೆ.  ಬಹಳಷ್ಟು ಶ್ರೀಮಂತರಿಗೆ ವಿವೇಕ ಪ್ರಜ್ಞೆ ಇಲ್ಲದೆ ಇರುವುದರಿಂದಾಗಿ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ತೊಂದರೆಯಾಗುವ ಸಂಭವ ಕಂಡುಬರುತ್ತಿದೆ.  ಭೂಮಿಯ ಉಷ್ಣಾಂಶ ಏರುತ್ತಿರುವುದರಿಂದಾಗಿ ಹಲವು ಪ್ರಾಣಿ, ಸಸ್ಯ ಪ್ರಭೇದಗಳು ಕಣ್ಮರೆಯಾಗುತ್ತಿವೆ.  ಎಲ್ಲರ ಹಿತಚಿಂತನೆ ಮಾಡದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯೇ ಇದಕ್ಕೆ ಕಾರಣ.   ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಶ್ರೀಮಂತರಿಗೆ ಮಾತ್ರ ಗೌರವ ಇರುವುದರಿಂದಾಗಿ ಎಲ್ಲರೂ ಶ್ರೀಮಂತರಾಗುವ ಹುಚ್ಚು ಓಟದಲ್ಲಿ ಸ್ಪರ್ಧಿಸುತ್ತಿದ್ದಾರೆ.  ಈ ಹುಚ್ಚು ಸ್ಪರ್ಧೆಯ ಪರಿಣಾಮವಾಗಿ ಅವಶ್ಯಕತೆ ಇಲ್ಲದಿದ್ದರೂ ಭಾರೀ ಬಂಗಲೆಗಳು, ಐಶಾರಾಮಿ ವಾಹನಗಳನ್ನು ಹೊಂದುವ ಚಟ ಮನುಷ್ಯನಲ್ಲಿ ಬೆಳೆಯುತ್ತಿದೆ.  ಇದು ಅವಶ್ಯಕತೆ ಇದ್ದು ನಡೆಯುವ ಓಟವಲ್ಲ ತಾನು ಇತರರಿಗಿಂತ ಮೇಲು ಎಂದು ತೋರಿಸುವ ಸಲುವಾಗಿ ನಡೆಯುತ್ತಿರುವ ಮಾನವನ ಅವಿವೇಕವಾಗಿದೆ.  ಬಂಡವಾಳಶಾಹಿ ವ್ಯವಸ್ಥೆಯ ಚಿಂತಕರು ಲಂಗುಲಗಾಮಿಲ್ಲದ ಅಭಿವೃದ್ಧಿಯ ಹುಚ್ಚನ್ನು ನಿಯಂತ್ರಿಸದೆ ಇದ್ದರೆ ಭವಿಷ್ಯ ಅದರಲ್ಲೂ ಮುಂದಿನ ಪೀಳಿಗೆಯ ಭವಿಷ್ಯ ಕರಾಳವಾಗಬಹುದು.

ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಉತ್ಪಾದನೆ, ಹೆಚ್ಚು ಹೆಚ್ಚು ಉತ್ಪನ್ನಗಳನ್ನು ಬಳಸಿ ಬಿಸಾಡುವುದು ಅಭಿವೃದ್ಧಿಯ ಮಾನದಂಡವಾಗಿದೆ.  ಇದರಿಂದ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ, ಬೆಳವಣಿಗೆಯ ದರ ಹೆಚ್ಚುತ್ತದೆ ಎಂಬುದು ಈ ತರಹದ ಅಭಿವೃದ್ಧಿಯ ಸಮರ್ಥಕರ ದೂರದೃಷ್ಟಿಯಿಲ್ಲದ ವಾದವಾಗಿದೆ.   Hindustan_petroleumಹೀಗಾಗಿ ಮಾನವನ ಸುಗಮ ಜೀವನಕ್ಕೆ ಅನಿವಾರ್ಯವಲ್ಲದ ಹಲವು ವಸ್ತುಗಳು ಇಂದು ಮಾರುಕಟ್ಟೆಯಲ್ಲಿದ್ದು ಅವುಗಳ ಮಾರಾಟಕ್ಕಾಗಿ ಬಂಡವಾಳಶಾಹಿಗಳಿಂದ ನಿಯಂತ್ರಿಸಲ್ಪಡುವ ಟಿವಿ ಮಾಧ್ಯಮ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.  ಜಾಹೀರಾತುಗಳೇ ಟಿವಿ ಮಾಧ್ಯಮದ ಜೀವಾಳವಾಗಿರುವ ಕಾರಣ ನೈತಿಕತೆ ಎಂಬುದು ಟಿವಿ ಮಾಧ್ಯಮದಿಂದ ಬಹುತೇಕ ಕಣ್ಮರೆಯಾಗಿದೆ.  ಹೀಗಾಗಿ ಅವಶ್ಯಕವಲ್ಲದ ಹಲವು ಸಾಮಗ್ರಿಗಳ ಜಾಹೀರಾತುಗಳು ಟಿವಿ ಹಾಗೂ ಇತರ ಮಾಧ್ಯಮಗಳಲ್ಲಿ ಕಾಣಿಸುತ್ತಿದ್ದು ಜನರ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಿ ಪರಿಸರದ ಮೇಲೆ ಹಾನಿ ಮಾಡಲು ಪರೋಕ್ಷ ಕಾರಣವಾಗಿದೆ.  ನಗರಗಳಲ್ಲಿ ಹೆಚ್ಚು ಹೆಚ್ಚು ವಿದ್ಯುತ್ ಬಳಕೆ ಮಾಡಿದಷ್ಟೂ ಅದು ಅಭಿವೃದ್ಧಿ ಎಂದು ಬಿಂಬಿಸಲಾಗುತ್ತಿದೆ.  ಅವಶ್ಯಕತೆ ಇಲ್ಲದಿದ್ದರೂ ನಗರಗಳಲ್ಲಿ ವಿದ್ಯುತ್ ದೀಪಗಳು ಹಗಲು ರಾತ್ರಿ ಎಂಬ ಪರಿವೆ ಇಲ್ಲದೆ ಉರಿಯುತ್ತಿರುತ್ತವೆ.  ಚಳಿಗಾಲ, ಮಳೆಗಾಲದಲ್ಲಿಯೂ ಸೆಕೆ ಇಲ್ಲದಿದ್ದರೂ ಹವಾನಿಯಂತ್ರಣ ಸಾಧನ ಬಳಕೆ, ಫ್ಯಾನುಗಳ ಬಳಕೆ ನಿರಂತರವಾಗಿ ನಡೆಯುತ್ತಿರುತ್ತದೆ ಮತ್ತು ಈ ರೀತಿಯ ಜೀವನವೇ ಶ್ರೇಷ್ಠ ಎಂಬ ಚಿಂತನೆಯನ್ನು ಬಂಡವಾಳಶಾಹಿ ವ್ಯವಸ್ಥೆ ಜನರಲ್ಲಿ ಬಿತ್ತಿ ಬೆಳೆಸಿದೆ.  ಹೀಗಾಗಿ ಎಷ್ಟು ವಿದ್ಯುತ್ ಉತ್ಪಾದನೆ ಆದರೂ ಸಾಕಾಗುವುದಿಲ್ಲ.  ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಅಗ್ಗದ ವಿದ್ಯುತ್ ಉತ್ಪಾದಿಸಲು ಉಷ್ಣ ವಿದ್ಯುತ್ ಒಂದೇ ಮಾರ್ಗವಾಗಿರುವುದರಿಂದ ವಾತಾವರಣದಲ್ಲಿ ಹಸಿರು ಮನೆ ಅನಿಲ ಪರಿಣಾಮ ಉಂಟು ಮಾಡುವ ಇಂಗಾಲದ ಅನಿಲಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ.  ಯಾವುದು ಜೀವನಕ್ಕೆ ಅವಶ್ಯಕ, ಯಾವುದಕ್ಕೆಜೀವನದಲ್ಲಿ ಮಹತ್ವ ನೀಡಬೇಕು ಎಂಬುದು ಅತ್ಯ್ನಂತ ಹೆಚ್ಚು ವಿದ್ಯಾವಂತ ಹಾಗೂ ಉನ್ನತ ಹುದ್ದೆಗಳಲ್ಲಿ ಇರುವ ಜನತೆಗೂ ತಿಳಿಯದೆ ಹೆಚ್ಚು ಹೆಚ್ಚು ಹಣ ಮಾಡುವುದು, ಹೆಚ್ಚು ಹೆಚ್ಚು ಆಸ್ತಿಪಾಸ್ತಿ ಮಾಡಿಡುವುದು, ಹೆಚ್ಚು ಹೆಚ್ಚು ಭೋಗಸಾಧನಗಳನ್ನು ಕೊಂಡು ಪೇರಿಸುವುದು ಶ್ರೇಷ್ಠ ಜೀವನ ವಿಧಾನ ಎಂಬ ಸಮೂಹ ಸನ್ನಿಯನ್ನು ಆಧುನಿಕ ಬಂಡವಾಳಶಾಹಿ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಹುಟ್ಟು ಹಾಕಿದೆ.  ಹೀಗಾಗಿ ಬಂಡವಾಳಶಾಹಿ ವ್ಯವಸ್ಥೆ ಹಾಗೂ ಮುಕ್ತ ಮಾರುಕಟ್ಟೆಯು ಹುಟ್ಟು ಹಾಕಿರುವ ಎಂದೆಂದೂ ತೀರದ ದಾಹದ ಬಗ್ಗೆ ಮರುಚಿಂತನೆ ಮಾಡದೆ ಇದ್ದರೆ ಪ್ರಾಕೃತಿಕ ವಿಕೋಪಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸಿ ಜನರ ಜೀವನ ದುರ್ಬರವಾಗಲಿದೆ.  ಇದರ ಮುನ್ಸೂಚನೆ ಈಗಾಗಲೇ ಹೆಚ್ಚುತ್ತಿರುವ ಬರಗಾಲ, ಚಂಡಮಾರುತ, ಸುಂಟರಗಾಳಿ, ಅತಿವೃಷ್ಟಿ, ವಿಪರೀತ ಸೆಕೆ, ಹೆಚ್ಚುತ್ತಿರುವ ಕಾಡ್ಗಿಚ್ಚು ಮೊದಲಾದವುಗಳ ರೂಪದಲ್ಲಿ ಆರಂಭವಾಗಿದೆ.  ಆದರೂ ಅಭಿವೃದ್ಧಿಯ ಹುಚ್ಚಿಗೆ ಬಲಿಯಾಗಿರುವ ನಮಗೆ ಈ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ.  ಇದನ್ನೆಲ್ಲಾ ಜನತೆಯ ಮುಂದೆ ಚರ್ಚಿಸಿ ಜಾಗೃತಿ ಮೂಡಿಸಬೇಕಾಗಿರುವ ಮಾಧ್ಯಮಗಳೇ ಬಂಡವಾಳಶಾಹಿ ಹಾಗೂ ಜಾಹೀರಾತುಗಳ ಕೃಪೆಯಲ್ಲಿ ಬದುಕಿರುವುದರಿಂದ ಜನರನ್ನು ಎಚ್ಚರಿಸುವವರೇ ಇಂದು ಇಲ್ಲವಾಗಿದ್ದಾರೆ.  ಈ ಬಗ್ಗೆ ಪರ್ಯಾಯ ಮಾಧ್ಯಮಗಳು ಇಂದು ಚಿಂತಿಸುವುದು ಅಗತ್ಯವಿದೆ.