Category Archives: ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷ – ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯ ನಿರ್ಮಾಣದ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ

– ಆನಂದ ಪ್ರಸಾದ್

ಭಾರತದ ಪ್ರಧಾನ ಪರಂಪರಾಗತ ಪಕ್ಷಗಳು ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರ ಸರಿದು ಒಂದೋ ಬಂಡವಾಳಗಾರರ ಹಿಡಿತದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಅಥವಾ ವಂಶಪಾರಂಪರ್ಯ ಹಿಡಿತದಿಂದಾಗಿ ಬಳಲುತ್ತಿವೆ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ರೂಪಿಸುವ ವ್ಯವಸ್ಥೆಯಾಗಿರಬೇಕು. ಆದರೆ ಇಂದಿನ ಭಾರತದ ಪ್ರಧಾನ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಇಂಥ ಆದರ್ಶದಿಂದ ದೂರ ಸರಿದು ಬಂಡವಾಳಗಾರರ ಕೈಗೊಂಬೆಗಳಂತೆ ಕಾರ್ಯ ನಿರ್ವಹಿಸುತ್ತಿವೆ ಹಾಗೂ ಅನೈತಿಕ ರಾಜಕೀಯದ ಪರಾಕಾಷ್ಠೆಯನ್ನು ತಲುಪಿವೆ. ಇಂಥ ದುರ್ಬರ ಸನ್ನಿವೇಶದಲ್ಲಿ ದೇಶಕ್ಕೆ ಪರ್ಯಾಯ ರಾಜಕೀಯವೊಂದರ ಅಗತ್ಯ ಎದ್ದು ಕಾಣುತ್ತಿದೆ. aap-donation-19022014ಆಮ್ ಆದ್ಮಿ ಪಕ್ಷವು ಈ ಕೊರತೆಯನ್ನು ತುಂಬಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಜನರಿಂದಲೇ ಪಕ್ಷ ಕಟ್ಟಲು ಹಾಗೂ ಚುನಾವಣಾ ಪ್ರಚಾರ ನಡೆಸಲು ಆಮ್ ಆದ್ಮಿ ಪಕ್ಷವು ದೇಣಿಗೆ ಸ್ವೀಕರಿಸುವ ಮತ್ತು ಅದನ್ನು ಪಾರದರ್ಶಕವಾಗಿ ತನ್ನ ಪಕ್ಷದ ವೆಬ್ ಸೈಟಿನಲ್ಲಿ ಎಲ್ಲರ ಅವಗಾಹನೆಗೆ ತೆರೆದಿಡುವ ಮೂಲಕ ಉಳಿದೆಲ್ಲ ಪಕ್ಷಗಳಿಗಿಂತ ಹೆಚ್ಚು ನೈಜ ಪ್ರಜಾಪ್ರಭುತ್ವ ಆದರ್ಶವನ್ನು ತೋರಿಸಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು, ಆದರ್ಶಗಳನ್ನು ಹಾಳುಗೆಡಹುವುದರಲ್ಲಿ ಅನೈತಿಕ ಮೂಲದಿಂದ ರಾಜಕೀಯ ಪಕ್ಷಗಳು ಪಡೆಯುವ ಕಪ್ಪು ಹಣ, ಬಂಡವಾಳಗಾರರು ಗುಪ್ತ ಶರತ್ತನ್ನು ವಿಧಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ಪಕ್ಷ ಅಧಿಕಾರಕ್ಕೆ ಬಂದ ನಂತರ ತಮಗೆ ಬೇಕಾದ ರಿಯಾಯತಿಗಳನ್ನು ನಿಯಮಬಾಹಿರವಾಗಿ ಹಾಗೂ ಸಂವಿಧಾನಬಾಹಿರವಾಗಿ ಸರ್ಕಾರದಿಂದ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗಲು ಒಂದು ಮುಖ್ಯ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಹೋಗಿ ಮೋದಿ ನೇತೃತ್ವದ ಸಂಘ ಪರಿವಾರದ ಸರ್ಕಾರ ಬಂದರೂ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ ಆಗಲಾರದು. ಮೋದಿಯು ಕಳೆದ ಎಂಟು ಹತ್ತು ತಿಂಗಳುಗಳಿಂದ ದೇಶಾದ್ಯಂತ ಅತ್ಯಂತ ವೈಭವೋಪೇತವಾದ ರ್ಯಾಲಿಗಳನ್ನು ನಡೆಸಲು ಹಣವನ್ನು ನೀರಿನಂತೆ ಚೆಲ್ಲುವುದನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ದುರ್ಬಲವಾಗುವುದು ಖಚಿತ. ಗುರಿ ಮಾತ್ರವಲ್ಲ ಗುರಿಯೆಡೆಗೆ ಸಾಗುವ ದಾರಿಯೂ ಪರಿಶುದ್ಧವಾಗಿರಬೇಕು ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದಾರೆ. ಮೋದಿ ಹಾಗೂ ಸಂಘ ಪರಿವಾರದ ನಡೆ ನೋಡಿದರೆ ಗುರಿ ಮಾತ್ರ ಮುಖ್ಯ, ಗುರಿಯೆಡೆಗೆ ಸಾಗುವ ದಾರಿ ಅನೈತಿಕವಾದರೂ ಪರವಾಗಿಲ್ಲ ಎಂಬುದು ಎದ್ದು ಕಾಣುತ್ತದೆ. ನಿಜವಾಗಿ ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ಈ ರೀತಿಯ ಅನೈತಿಕ ಮೂಲದಿಂದ ಹಣ ಪಡೆದು ಅದನ್ನು ನೀರಿನಂತೆ ರ್ಯಾಲಿಗಳಿಗೆ ಚೆಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕ ಮಾಡುತ್ತಿರಲಿಲ್ಲ. ಮೋದಿಯ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಬಂದರೆ ದೇಶವು ಸಾಮಾಜಿಕವಾಗಿ ಇನ್ನಷ್ಟು ಕರ್ಮಠವಾಗಿ ಬದಲಾಗಲಿದೆ. ಕಂದಾಚಾರ ಹಾಗೂ ಅರ್ಥಹೀನ ಸಂಪ್ರದಾಯಗಳಿಗೆ ಹಾಗೂ ಜ್ಯೋತಿಷ್ಯ, ವಾಸ್ತುವಿನಂಥ ಮೂಢನಂಬಿಕೆಗಳಿಗೆ ಹಾಗೂ ಪುರೋಹಿತಶಾಹಿ ಕರ್ಮಕಾಂಡಗಳಿಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚಿನ ಉತ್ತೇಜನ ದೊರೆಯುವುದು ಖಚಿತ. ಹೆಸರಿಗೆ ಮೋದಿ ಪ್ರಧಾನಮಂತ್ರಿಯಾದರೂ ಸಂಘ ಪರಿವಾರ ಸೂಪರ್ ಪ್ರಧಾನಮಂತ್ರಿಯ ಪಾತ್ರವನ್ನು ನಿರ್ವಹಿಸಲಿದೆ. ಈಗ ದೇಶಾದ್ಯಂತ ನಡೆಯುತ್ತಿರುವ ಮೋದಿಯ ಅತ್ಯಂತ ದುಬಾರಿ ವೆಚ್ಚದ ಮಹಾರ್ಯಾಲಿಗಳಿಗೆ ಜನರನ್ನು ಕರೆತರುತ್ತಿರುವುದು ದೇಶಾದ್ಯಂತ ಇರುವ ಸಂಘ ಪರಿವಾರವೇ ಆಗಿದೆ. ಹೀಗಾಗಿ ಮೋದಿ ಪ್ರಧಾನಿಯಾದರೆ ಅದರಲ್ಲಿ ತನ್ನ ಪಾತ್ರವೇ ಹೆಚ್ಚು ಇದೆ ಎಂದು ಮೋದಿಯನ್ನು ಬದಿಗೆ ತಳ್ಳಿ ಸಂಘ ಪರಿವಾರ ದೇಶದ ಆಡಳಿತದಲ್ಲಿ ಮೂಗು ತೋರಿಸುವುದು ಹಾಗೂ ಆಜ್ಞೆಗಳನ್ನು ವಿಧಿಸುವುದು ಖಚಿತ. ಇದನ್ನು ಮೋದಿ ಪಾಲಿಸಲೇಬೇಕಾದೀತು ಏಕೆಂದರೆ ಮೋದಿಯನ್ನು ಪ್ರಧಾನ ಮಂತ್ರಿಯ ಸ್ಥಾನಕ್ಕೆ ತರುವಲ್ಲಿ ಸಂಘದ ಪಾತ್ರವೇ ಪ್ರಧಾನ. ಮೋದಿಯ ಮಹಾರ್ಯಾಲಿಗಳಿಗೆ ದೇಶಾದ್ಯಂತ ಜನಬೆಂಬಲ ಇದೆ ಎಂಬ ರೀತಿಯಲ್ಲಿ ಕಂಡುಬಂದರೂ ಇವುಗಳಿಗೆ ಬರುವವರು ಹೆಚ್ಚಾಗಿ ಸಂಘದ ಹಾಗೂ ಬಿಜೆಪಿ ಕಾರ್ಯಕರ್ತರೇ ಹೊರತು ಜನಸಾಮಾನ್ಯರಲ್ಲ. ಕೇವಲ ಬಿಜೆಪಿಯ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಮತಗಳಿಂದಲೇ ರ್ಯಾಲಿ ನಡೆದ ಜಾಗಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಏಕೆಂದರೆ ರ್ಯಾಲಿಗಳಿಗೆ modi-bjp-rallyಮೂರ್ನಾಲ್ಕು ಲಕ್ಷ ಜನ ಸೇರಿದರೂ ಮತದಾರರ ಸಂಖ್ಯೆ ಅದಕ್ಕಿಂತಲೂ ಹತ್ತಿಪ್ಪತ್ತು ಪಟ್ಟು ಅಧಿಕ ಇರುತ್ತದೆ. ಹೀಗಾಗಿ ಮೋದಿ ರ್ಯಾಲಿ ನಡೆಸಿದ ಸ್ಥಳಗಳಲ್ಲಿ ಸಂಘ ಪರಿವಾರದ ಜನ ಭಾರೀ ಸಂಖ್ಯೆಯಲ್ಲಿ ಸೇರಿದರೂ ಅಲ್ಲೆಲ್ಲ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮೋದಿಯನ್ನು ಅಧಿಕಾರಕ್ಕೆ ತರುವುದೆಂದರೆ ಗೋಡ್ಸೆ ಸಿದ್ಧಾಂತಗಳನ್ನು ಬೆಂಬಲಿಸುವವರನ್ನು ಅಧಿಕಾರಕ್ಕೆ ತಂದಂತೆ. ಮೋದಿಯ ಬೆಂಬಲಕ್ಕೆ ನಿಂತಿರುವವರು ಗೋಡ್ಸೆಯ ಹಿಂಸೆಯ, ಕರ್ಮಠ ಸಿದ್ಧಾಂತಗಳ ಸನಾತನವಾದಿಗಳು. ಇದಕ್ಕೆದುರಾಗಿ ದೇಶವ್ಯಾಪಿ ಗಾಂಧೀಜಿಯವರ ಸಹನೆ, ಸಹೋದರತ್ವ, ಸಹಬಾಳ್ವೆಯ ಸಿದ್ಧಾಂತವನ್ನು ಹೊಂದಿರುವ ಆಮ್ ಆದ್ಮಿ ಪಕ್ಷವನ್ನು ಬೆಳೆಸಬೇಕಾಗಿದೆ. ಮುಂದಿನ ಮಹಾಚುನಾವಣೆ ಗಾಂಧಿ ಸಿದ್ಧಾಂತ ವರ್ಸಸ್ ಗೋಡ್ಸೆ ಸಿದ್ಧಾಂತದ ನಡುವಿನ ಹೋರಾಟದ ರೂಪ ಪಡೆಯುವಂತೆ ಮಾಡಬೇಕಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಇನ್ನೊಂದು ಪ್ರಧಾನ ಅಂಶವೆಂದರೆ ಧರ್ಮದ ಹೆಸರಿನಲ್ಲಿ ನಡೆಸುವ ಕೋಮುವಾದ. ಕೆಲವು ಪಕ್ಷಗಳು ಅಲ್ಪಸಂಖ್ಯಾತರ ಕೋಮುವಾದಕ್ಕೆ ಉತ್ತೇಜನ ನೀಡಿದರೆ ಬಿಜೆಪಿ ಹಾಗೂ ಸಂಘ ಪರಿವಾರ ಬಹುಸಂಖ್ಯಾತರ ಕೋಮುವಾದಕ್ಕೆ ಮೊದಲಿನಿಂದಲೂ ಉತ್ತೇಜನ ನೀಡುತ್ತಲೇ ಬಂದಿವೆ. ಧರ್ಮದ ಹೆಸರಿನಲ್ಲಿ ಕುರುಡಾಗಿ ಮತ ಚಲಾಯಿಸುವುದರಿಂದ ಪ್ರಜೆಗಳ ಮೂಲಭೂತ ಸಮಸ್ಯೆಗಳು ಗೌಣವಾಗಿ ಕಲ್ಪಿತ ಭೀತಿಯೇ ಮೇಲುಗೈ ಪಡೆದು ಪಟ್ಟಭದ್ರ ಹಿತಾಸಕ್ತಿಗಳು ಸುಲಭವಾಗಿ ಅಧಿಕಾರಕ್ಕೆ ಬಂದು ತಮ್ಮ ಅಜೆಂಡಾವನ್ನು ಜಾರಿಗೆ ತರಲು ಸಲೀಸಾಗುತ್ತದೆ. ಇದು ಬಹುಸಂಖ್ಯಾತ ದಮನಿತ, ಹಿಂದುಳಿದ, ಶೋಷಿತ ವರ್ಗಕ್ಕೆ ತಿಳಿಯುವುದೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಂಶಗಳಲ್ಲಿ ಜಾತಿ ರಾಜಕೀಯದ ಪಾತ್ರವೂ ಬಹಳಷ್ಟಿದೆ. ಜಾತಿ ರಾಜಕೀಯವನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಜಾತಿ ನೋಡಿ ಅಭ್ಯರ್ಥಿಗಳನ್ನು ನಿಲ್ಲಿಸುವ ಇಂಥ ಹೀನ ಪರಂಪರೆಯಿಂದ ಜನರ ನಿಜವಾದ ಸಮಸ್ಯೆಗಳು ಮರೆಯಾಗಿ ಜಾತಿಯೇ ಪ್ರಧಾನವಾಗಿ ಗೆದ್ದವರೇ ಮತ್ತೆ ಮತ್ತೆ ಗೆಲ್ಲುವುದರಿಂದ ಪ್ರಜಾಪ್ರಭುತ್ವ ಎಂಬುದು ಅರ್ಥಹೀನವಾಗಿಬಿಡುತ್ತದೆ. anna-kejriwalಜಾತಿ ರಾಜಕೀಯದ ಜೊತೆ ಅಲ್ಪಸಂಖ್ಯಾತರ ಮತಬ್ಯಾಂಕ್ ಕಾಂಗ್ರೆಸ್ಸಿನ ಜೊತೆ ಇದ್ದುದರಿಂದ ಕಾಂಗ್ರೆಸ್ ಮೊದಮೊದಲು ನಿರಾಯಾಸವಾಗಿ ಗೆಲ್ಲುತ್ತಿತ್ತು. ಪ್ರಾದೇಶಿಕ ಪಕ್ಷಗಳು ಬಲಗೊಂಡ ನಂತರ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ರಾಜಕೀಯ ಪಾಠವನ್ನು ಅವುಗಳು ಕಲಿತುಕೊಂಡು ಕಾಂಗ್ರೆಸ್ಸನ್ನು ಹಿಮ್ಮೆಟ್ಟಿಸಿದವು. ಪ್ರಾದೇಶಿಕ ಪಕ್ಷಗಳು ಬಂದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಧನಾತ್ಮಕ ಬದಲಾವಣೆಗಳು ಬರಲಿಲ್ಲ. ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದು ಯಾವುದೇ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಆಮ್ ಆದ್ಮಿ ಪಕ್ಷವು ತನ್ನ ಗುರಿಗಳಲ್ಲಿ ವ್ಯವಸ್ಥೆ ಬದಲಾವಣೆಯನ್ನು ಪ್ರಧಾನವಾಗಿ ಇರಿಸಿಕೊಂಡಿದೆ. ಇದರ ಅಂಗವಾಗಿ ಬಲಿಷ್ಠ ಲೋಕಪಾಲ್ ಮಸೂದೆ ತಂದು ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ ದೇಶದಲ್ಲಿ ಬದಲಾವಣೆ ಬರಲಿದೆ. ಬೇಲಿಯೇ ಇಲ್ಲದಿದ್ದರೆ ಹೊಲಕ್ಕೆ ನುಗ್ಗಿ ಬೇಕಾದಷ್ಟು ಮೇಯಲು ದನಕರುಗಳಿಗೆ ಸುಲಭವಾಗುತ್ತದೆ. ಲೋಕಾಯುಕ್ತ ಎಂಬುದು ಒಂದು ಬೇಲಿಯಂತೆ ಕೆಲಸ ಮಾಡಲಿದೆ. ಬಲಿಷ್ಠ ಲೋಕಪಾಲ ವ್ಯವಸ್ಥೆ ಬಂದರೆ ಆ ಬೇಲಿಯನ್ನು ಹಾರಿ ಬಂದು ಸಿಕ್ಕಿಬೀಳದೆ ಮೇಯುವುದು ಸಾಧ್ಯವಾಗುವುದಿಲ್ಲ. ವ್ಯವಸ್ಥೆ ಬದಲಾವಣೆಯ ಅಂಗವಾಗಿ ಚುನಾವಣಾ ಸುಧಾರಣೆ ತರುವುದು, ಕೆಲಸ ಮಾಡದ ಬೇಜವಾಬ್ದಾರಿಯುತ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವುದು, ಕಣದಲ್ಲಿ ಯೋಗ್ಯ ಅಭ್ಯರ್ಥಿ ಇಲ್ಲದಿದ್ದರೆ ಚುನಾವಣೆಗಳಲ್ಲಿ ‘ಯಾರಿಗೂ ಇಲ್ಲ’ ಎಂಬ ಮತ ನೀಡುವ ಅವಕಾಶ ಹಾಗೂ ಈ ರೀತಿ ‘ಯಾರಿಗೂ ಇಲ್ಲ’ ಎಂಬ ಮತಗಳು ಒಂದು ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಯು ಪಡೆದ ಮತಗಳಿಗಿಂತ ಹೆಚ್ಚಾಗಿದ್ದಲ್ಲಿ ಮರುಮತದಾನ ನಡೆಸುವ ಕುರಿತು ಹಾಗೂ ಮೊದಲು ನಿಂತ ಅಭ್ಯರ್ಥಿಗಳು ಮತ್ತೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರುವ ಕಾನೂನು ಸುಧಾರಣೆ ತರುವುದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಶೀಘ್ರ ನ್ಯಾಯ ದೊರಕುವ ವ್ಯವಸ್ಥೆಗೆ ಬೇಕಾದ ಕಾನೂನು ಬದಲಾವಣೆಗಳನ್ನು ತರುವುದು, ಜನತೆಯ ಅಪೇಕ್ಷೆಗೆ ಅನುಗುಣವಾಗಿ ಕಾಲಕಾಲಕ್ಕೆ ಕಾನೂನುಗಳಲ್ಲಿ ಸೂಕ್ತ ಬದಲಾವಣೆಗಳನ್ನು ತರುವುದು ಇವೇ ಮೊದಲಾದ ವ್ಯವಸ್ಥೆ ಬದಲಾವಣೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವ ಅಜೆಂಡಾವನ್ನು ಆಮ್ ಆದ್ಮಿ ಪಕ್ಷವು ಹೊಂದಿದೆ. ಹೀಗಾಗಿ ಇದು ಇಂದು ಭಾರತದಲ್ಲಿ ಇರುವ ಪಕ್ಷಗಳಲ್ಲಿಯೇ ಅತ್ಯಂತ ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಉತ್ತಮ ಪಕ್ಷ ಎಂಬುದರಲ್ಲಿ ಸಂದೇಹವಿಲ್ಲ. ಆಮ್ ಆದ್ಮಿ ಪಕ್ಷವು ಚುನಾವಣೆಗಳಲ್ಲಿ ಬಲಿಷ್ಠ ಲೋಕಪಾಲ್ ಮಸೂದೆಯ ಜೊತೆ ಜೊತೆಗೆ ಮೇಲ್ಕಾಣಿಸಿದ ವ್ಯವಸ್ಥೆಯ ಬದಲಾವಣೆಯ ವಿಚಾರಗಳನ್ನು ಪ್ರಮುಖವಾಗಿ ಜನರ ಮುಂದೆ ಇಡಬೇಕಾಗಿದೆ. ಇದರಿಂದ ಪಕ್ಷವು ದೇಶಾದ್ಯಂತ ಬೆಳೆಯಲು ಅನುಕೂಲವಾಗಲಿದೆ.

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಆಡಳಿತದಲ್ಲಿದ್ದಾಗ ಕೆಲವು ಸಣ್ಣ ತಪ್ಪುಗಳನ್ನು ಮಾಡಿದೆ. ಉದಾಹರಣೆಗೆ ಕಾನೂನು ಸಚಿವರಾಗಿದ್ದ ಸೋಮನಾಥ ಭಾರತಿ ನಡುರಾತ್ರಿ ಕಾನೂನು ಕೈಗೆ ತೆಗೆದುಕೊಂಡು ವಿದೇಶಿ ಮಹಿಳೆಯರ ಜೊತೆ ತನ್ನ ಬೆಂಬಲಿಗರೊಡಗೂಡಿ ಅನುಚಿತವಾಗಿ ನಡೆದುಕೊಂಡದ್ದು, ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ದೆಹಲಿ ಪೊಲೀಸ್ ವ್ಯವಸ್ಥೆಯನ್ನು ದೆಹಲಿ ಸರ್ಕಾರದ ಅಧೀನಕ್ಕೆ ಕೊಡಬೇಕೆಂದು ತನ್ನ ಸಚಿವರೊಡಗೂಡಿ ನಿಷೇಧಾಜ್ಞೆ ಇರುವ ಜಾಗದಲ್ಲಿ ಧರಣಿ ನಡೆಸಿದ್ದು ಇವೆಲ್ಲ ಬಹಳ ದೊಡ್ಡ ತಪ್ಪುಗಳೇನೂ ಅಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ಸಿಗರು ರಾಜಕೀಯ ಲಾಭ ಪಡೆಯಲು ನಡೆಸಿದ ಕೋಮು ಗಲಭೆಗಳಂತೆ ಆಮ್ ಆದ್ಮಿ ಪಕ್ಷದವರು ನೂರಾರು ಜನರ ಪ್ರಾಣ ತೆಗೆಯುವ ಹಿಂಸಾಚಾರಗಳಿಗೆ ಕುಮ್ಮಕ್ಕು ಕೊಟ್ಟಿಲ್ಲ. ಆಮ್ ಆದ್ಮಿ ಪಕ್ಷದ ಅರಾಜಕತೆಯ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡದಾಗಿ ಬೊಬ್ಬೆ ಹಾಕುವವರು ಕಾಂಗ್ರೆಸ್ ಹಾಗೂ ಬಿಜೆಪಿಗಳು ರಾಜಕೀಯ ಕಾರಣಗಳಿಗಾಗಿ ನಡೆಸಿದ ಹಿಂಸಾಚಾರಗಳ ಬಗ್ಗೆ ಚಕಾರ ಎತ್ತುವುದಿಲ್ಲ. ಆಮ್ ಆದ್ಮಿ ಪಕ್ಷ ನಡೆಸಿದ ಧರಣಿಯಲ್ಲಿ ಯಾರ ಪ್ರಾಣ ಹೋಗದಿದ್ದರೂ ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತೆ ಅರಾಜಕತೆ ಅರಾಜಕತೆ ಎಂದು ಬೊಬ್ಬೆ ಹೊಡೆಯುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕಂತೂ ಮೊದಮೊದಲು 50-60ರ ದಶಕದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಸುಧಾರಣೆಗಳನ್ನು ತರಲು ಬೇಕಾದ ಮೂರನೇ ಎರಡು ಬಹುಮತ ಇತ್ತು. ಹೀಗಿದ್ದರೂ ಆ ಪಕ್ಷ ಸೂಕ್ತ ಕಾನೂನುಗಳನ್ನು ರೂಪಿಸುವ ಇಚ್ಛಾಶಕ್ತಿಯನ್ನು ತೋರಿಸಲಿಲ್ಲ. ಇದು ಕಾಂಗ್ರೆಸ್ ಪಕ್ಷದ ನಾಯಕತ್ವದ ದೂರದೃಷ್ಟಿಯ ಕೊರತೆ, ಒಳ್ಳೆಯತನದ ಕೊರತೆಯನ್ನು ತೋರಿಸುತ್ತದೆ. ಕಾಂಗ್ರೆಸ್ ಪಕ್ಷವು ನೆಹರೂ ಕುಟುಂಬದ ಒಡೆತನಕ್ಕೆ ಸಿಕ್ಕಿದ ನಂತರವಂತೂ ದೇಶದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಇಂದಿರಾ ಗಾಂಧಿಯವರು ಭ್ರಷ್ಟಾಚಾರ ಜಾಗತಿಕ ವಿದ್ಯಮಾನ ಎಂದು ಹೇಳಿ ಅದರ ಬಗ್ಗೆ ಹಗುರ ಭಾವನೆ ಹೊಂದಿದ್ದರು. ಇಂಥ ಹಗುರ ಭಾವನೆ ನಾಯಕರಾದವರಿಗೆ ಯೋಗ್ಯವಾದದ್ದಲ್ಲ. ಇಂದಿರಾ ಗಾಂಧಿಯ ನಂತರ ಬಂದ ರಾಜೀವ ಗಾಂಧಿಗೂ ಚಿಂತನೆಯ ಕೊರತೆ ಇತ್ತು. rahul_priyanka_soniaರಾಜೀವ ಗಾಂಧಿಯವರಿಗೂ ದೇಶದಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕಾನೂನು ರೂಪಿಸಲು ಮೂರನೇ ಎರಡು ಬಹುಮತ ಇತ್ತು ಆದರೂ ಅವರಲ್ಲಿ ದಿಟ್ಟ ನಾಯಕತ್ವ ಹಾಗೂ ಚಿಂತನೆಯ ಕೊರತೆಯಿಂದ ಅಂಥ ಅವಕಾಶವೊಂದು ವ್ಯರ್ಥವಾಯಿತು. ವರ ನಂತರ ಕಾಂಗ್ರೆಸ್ಸನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರಿಗೂ ದಿಟ್ಟ ರಾಜಕೀಯ ಚಿಂತನೆ ಇಲ್ಲ. ವಾಸ್ತವವಾಗಿ ನೆಹರೂ ವಂಶದ ಹೆಸರಿನಲ್ಲಿ ಭ್ರಷ್ಟರು ಕಾಂಗ್ರೆಸ್ಸನ್ನು ನಿಯಂತ್ರಿಸುತ್ತಿದ್ದಾರೆ. ಇದು ಇಂದು ಕಾಂಗ್ರೆಸ್ ನೇತೃತ್ವ ವಹಿಸಿಕೊಳ್ಳಲು ಸಿದ್ಧವಾಗಿರುವ ರಾಹುಲ್ ಗಾಂಧಿಗೂ ಅನ್ವಯಿಸುತ್ತದೆ. ಅಧಿಕಾರ ಹೋದರೆ ಹೋಗಲಿ, ಅಧಿಕಾರ ಮುಖ್ಯವಲ್ಲ, ವ್ಯವಸ್ಥೆಯಲ್ಲಿ ಧನಾತ್ಮಕ ಹಾಗೂ ಜನಪರ ಬದಲಾವಣೆ ತರುವುದು ಮುಖ್ಯ ಎಂಬ ದಿಟ್ಟ ಚಿಂತನೆ ರಾಹುಲ್ ಗಾಂಧಿಯಲ್ಲಿಯೂ ಇಲ್ಲ. ಹೀಗಾಗಿ ಭ್ರಷ್ಟಾಚಾರ ಹಾಗೂ ಭ್ರಷ್ಟಾಚಾರಿಗಳೊಂದಿಗೆ ಕಾಂಗ್ರೆಸ್ ಪದೇ ಪದೇ ರಾಜಿ ಮಾಡಿಕೊಳ್ಳುತ್ತಲೇ ಇಂದಿನ ಈ ದುರವಸ್ಥೆಯನ್ನು ತಲುಪಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಜೀವ ಗಾಂಧಿ, ಇಂದಿರಾ ಗಾಂಧಿ ಇವರಿಗೆ ಪಕ್ಷವನ್ನು ತಳಮಟ್ಟದಿಂದ ಹೊಸದಾಗಿ ಕಟ್ಟಿ ಬೆಳೆಸುವ ಅತ್ಯಂತ ಕಠಿಣ ಸವಾಲು ಇರಲೇ ಇಲ್ಲ. ಅನುವಂಶೀಯವಾಗಿ ರಾಜರು ಅದಾಗಲೇ ಇಡೀ ದೇಶದಲ್ಲಿ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಪಕ್ಷದ ಚುಕ್ಕಾಣಿ ಹಿಡಿದರೂ ಭ್ರಷ್ಟಾಚಾರದ ವಿಷಯದಲ್ಲಿ ಇವರ್ಯಾರೂ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ. ಇವರಿಗೆ ಹೋಲಿಸಿದರೆ ಅರವಿಂದ ಕೇಜ್ರಿವಾಲ್ ದಿಟ್ಟ ಚಿಂತನೆ ಉಳ್ಳ, ದೃಢವಾದ ನಿಲುವು ಉಳ್ಳ ನಾಯಕ ಎನ್ನಲು ಅಡ್ಡಿ ಇಲ್ಲ. ಇವರು ಪಕ್ಷವನ್ನು ಸೊನ್ನೆಯಿಂದ ಆರಂಭಿಸಿ ಕಟ್ಟಿ ಅದನ್ನು ದೇಶವ್ಯಾಪಿ ಬೆಳೆಸುವ ಅತ್ಯಂತ ಕಠಿಣ ಸವಾಲು ಹೊಂದಿದ್ದಾರೆ. ಈಗಾಗಲೇ ಇರುವ ಎರಡು ಬಲಿಷ್ಠ ರಾಷ್ಟ್ರೀಯ ಪಕ್ಷಗಳು ಹಾಗೂ ಅಲ್ಲಲ್ಲಿ ಇರುವ ಪಾಳೇಗಾರಿಕೆಯ ಪ್ರತಿರೂಪದಂತಿರುವ ಪ್ರಾದೇಶಿಕ ಪಕ್ಷಗಳ ಜೊತೆ ಸೆಣಸಿ ಅವರು ಪಕ್ಷವನ್ನು ಬೆಳೆಸಬೇಕಾಗಿದೆ. ಅದೇ ರೀತಿ ಪಕ್ಷಕ್ಕೆ ಬರುತ್ತಿರುವ ಜನಸಾಮಾನ್ಯರ ದೇಣಿಗೆಯಲ್ಲಿಯೂ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ದಿಢೀರ್ ಹೆಚ್ಚಳ ಕಂಡುಬಂದಿದೆ. ಪಕ್ಷಕ್ಕೆ ಬರುತ್ತಿದ್ದ ಜನತೆಯ ದೇಣಿಗೆಯಲ್ಲಿಯೂ ಸೋಮನಾಥ ಭಾರತಿ ಪ್ರಕರಣ ಹಾಗೂ ಕೇಜ್ರಿವಾಲ್ ಧರಣಿ ಪ್ರಕರಣದ ನಂತರ ತೀವ್ರ ಕುಸಿತ ಕಂಡುಬಂದಿತ್ತು.

ಆಮ್ ಆದ್ಮಿ ಪಕ್ಷವು ತನ್ನನ್ನು ತಾನು ತಪ್ಪು ಮಾಡದಂತೆ ರಕ್ಷಿಸಿಕೊಳ್ಳಲು ಗಟ್ಟಿಯಾದ ಆಂತರಿಕ ಲೋಕಪಾಲ್ ವ್ಯವಸ್ಥೆಯನ್ನು ಹೊಂದಬೇಕಾಗಿದೆ. ಈ ಕುರಿತು ಪಕ್ಷದಲ್ಲಿ ವ್ಯವಸ್ಥೆ ಇದ್ದರೂ ಇದು ಸೋಮನಾಥ ಭಾರತಿ ವಿಷಯದಲ್ಲಿ ನಿಷ್ಕ್ರಿಯವಾಗಿದ್ದಂತೆ ಕಂಡುಬರುತ್ತದೆ. ಪಕ್ಷಕ್ಕೆ ಸೇರಿರದ ಸಮಾಜ ಸುಧಾರಕರು, ಸಮಾಜ ಸೇವಕರು, ವಿಜ್ಞಾನಿಗಳ ವಲಯದ ಕನಿಷ್ಠ ಮೂರು ಮಂದಿ ಸಾಧಕರನ್ನು ಪಕ್ಷದ ಆಂತರಿಕ ಲೋಕಪಾಲ ವ್ಯವಸ್ಥೆಯೊಳಗೆ ಸೇರಿಸಿಕೊಳ್ಳುವುದು ಉತ್ತಮ. ಇವರು ಪಕ್ಷವು ತಪ್ಪು ಮಾಡದಂತೆ ಹದ್ದಿನ ಕಣ್ಣು ಇಟ್ಟು ಕಾಯುತ್ತಿರಬೇಕು ಮತ್ತು ಪಕ್ಷವು ತಪ್ಪು ಮಾಡಿದಾಗ ನಿರ್ದಾಕ್ಷಿಣ್ಯವಾಗಿ ಪಕ್ಷವನ್ನು ಎಚ್ಚರಿಸಬೇಕು. ಹೀಗೆ ಮಾಡಿದರೆ ಪಕ್ಷವು ತಪ್ಪು ಮಾಡುವುದನ್ನು ತಡೆಯಬಹುದು ಅಥವಾ ಕಡಿಮೆ ಮಾಡಬಹುದು. ಉದಾಹರಣೆಗೆ ಕರ್ನಾಟಕದ ಸಮಾಜ ಪರಿವರ್ತನ ಸಮುದಾಯದ hiremath-doreswamyಎಸ್. ಆರ್. ಹಿರೇಮಠರ ತರದ ನ್ಯಾಯಪರ ಹಾಗೂ ನಿಷ್ಪಕ್ಷಪಾತ ಜನರನ್ನು ಆಮ್ ಆದ್ಮಿ ಪಕ್ಷದ ಆಂತರಿಕ ಲೋಕಪಾಲ್ ವ್ಯವಸ್ಥೆ ಹೊಂದಬೇಕಾಗಿದೆ. ಇದರಿಂದ ಆಮ್ ಆದ್ಮಿ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಬಹುದು. ಅಧಿಕಾರ ಎಂಬುದು ಮಾಯಾವಿ ಇದ್ದಂತೆ. ಇದರ ಸಂಪರ್ಕಕ್ಕೆ ಬಂದಂತೆ ಅಹಂಕಾರ, ದರ್ಪ, ಮಾತು ತಪ್ಪುವುದು, ಅಧಿಕಾರ ಉಳಿಸಿಕೊಳ್ಳುವ ಲಾಲಸೆ ಮೊದಲಾದ ಅವಗುಣಗಳು ಬೆಳೆಯಲಾರಂಭಿಸುತ್ತವೆ. ಇದನ್ನು ಮೀರಿ ನಿಲ್ಲಲು ಬಹಳ ದೃಢವಾದ ಮನೋಸ್ಥೈರ್ಯ ಬೇಕಾಗುತ್ತದೆ. ಹೀಗಾಗಿ ಆಮ್ ಆದ್ಮಿ ಪಕ್ಷ ಸಶಕ್ತ ಹಾಗೂ ದಿಟ್ಟ ನಿಲುವಿನ ಆಂತರಿಕ ಲೋಕಪಾಲ ವ್ಯವಸ್ಥೆಯನ್ನು ಬೇರೆ ಪಕ್ಷಗಳಿಗಿಂಥ ಭಿನ್ನ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಹೊಂದುವುದು ಅತೀ ಅಗತ್ಯ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸೂಕ್ತ ಬಹುಮತ ದೊರಕದ ಕಾರಣ ಅಧಿಕಾರ ವಹಿಸಿಕೊಳ್ಳುವ ಇಚ್ಛೆ ಹೊಂದಿರಲಿಲ್ಲ. ಕಾಂಗ್ರೆಸ್ ಪಕ್ಷ ಕೇಳದೆ ತಾನಾಗಿಯೇ ಬೆಂಬಲ ಕೊಡಲು ಮುಂದೆ ಬಂದು ಆಮ್ ಆದ್ಮಿ ಪಕ್ಷವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಮುಂದಾದ ಕಾರಣ ಅದು ಅಧಿಕಾರ ವಹಿಸಿಕೊಳ್ಳಬೇಕಾಯಿತು. ಭ್ರಷ್ಟ ಕಾಂಗ್ರೆಸ್ಸಿನ ವಿರುದ್ಧ ಹೋರಾಡಿ ಅದರ ಬೆಂಬಲ ಪಡೆದು ಅಧಿಕಾರಕ್ಕೇರುವುದು ಆಮ್ ಆದ್ಮಿ ಪಕ್ಷಕ್ಕೆ ಮುಜುಗರದ ವಿಷಯವೇ ಆಗಿತ್ತು. ಕೊನೆಗೂ ಅದು ಲೋಕಪಾಲ್ ಮಸೂದೆಯ ನೆಪ ಹೇಳಿ ಕಾಂಗ್ರೆಸ್ ಬೆಂಬಲದ ಸರ್ಕಾರದಿಂದ ಹೊರಬಂದು ಸರಿಯಾದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದೆ. ಭ್ರಷ್ಟ ಕಾಂಗ್ರೆಸ್ ಬೆಂಬಲದ ಸರ್ಕಾರ ನಡೆಸುತ್ತ ಲೋಕಸಭಾ ಚುನಾವಣೆಯಲ್ಲಿ ದೇಶವ್ಯಾಪಿ ಪಕ್ಷಕ್ಕೆ ಜನಬೆಂಬಲ ಗಳಿಸಿಕೊಳ್ಳುವುದು ಸಾಧ್ಯವಿರಲಿಲ್ಲ ಏಕೆಂದರೆ ಈಗ ದೇಶದಲ್ಲಿ ಭ್ರಷ್ಟ ಕಾಂಗ್ರೆಸ್ ವಿರುದ್ಧ ಬಹಳ ಬಲವಾದ ಕಾಂಗ್ರೆಸ್ ವಿರೋಧಿ ಅಲೆ ಇದೆ. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೂಡಿದ ಪಕ್ಷಗಳಿಗೂ ಇದರ ಬಿಸಿ ತಟ್ಟುವುದರಲ್ಲಿ ಸಂದೇಹವೇ ಇಲ್ಲ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ಕುಶಾಗ್ರಮತಿ ಕೇಜ್ರಿವಾಲ್ ಭ್ರಷ್ಟ ಕಾಂಗ್ರೆಸ್ ಬೆಂಬಲದ ಸರಕಾರದಿಂದ ಉಪಾಯವಾಗಿ ಲೋಕಪಾಲ್ ಮಸೂದೆ ಮಂಡನೆಯ ವಿಷಯ ಇಟ್ಟುಕೊಂಡು ಪಾರಾಗಿದ್ದಾರೆ. ಕಾಂಗ್ರೆಸ್ ಬೆಂಬಲ ಪಡೆದು ದೆಹಲಿಯಲ್ಲಿ ಸರ್ಕಾರ ರಚಿಸಿದ ನಂತರ ಸಾಕಷ್ಟು ಜನ ಆಮ್ ಆದ್ಮಿ ಪಕ್ಷದ ಬಗ್ಗೆ ಸಿಟ್ಟಾಗಿ ದೂರ ಹೋಗಿದ್ದರು. ಕಾಂಗ್ರೆಸ್ ಬೆಂಬಲದಿಂದ ಹೊರಬಂದು ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಸಾಬೀತುಪಡಿಸಿದ ಕಾರಣ ಈ ರೀತಿ ಆಮ್ ಆದ್ಮಿ ಪಕ್ಷದಿಂದ ದೂರಾದವರು ಮತ್ತೆ ಪಕ್ಷದ ಕಡೆಗೆ ತಮ್ಮ ಬೆಂಬಲ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಗಳಲ್ಲಿ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬುದು ಮುಖ್ಯವಲ್ಲ. ನೈತಿಕ ರಾಜಕೀಯದ ಹಾದಿಯ ಮೂಲಕ ಅದು ಎಷ್ಟೇ ಸ್ಥಾನಗಳನ್ನು ಗೆದ್ದರೂ ಅದು ವ್ಯವಸ್ಥೆಯ ಬದಲಾವಣೆಯ ಹಾದಿಯಲ್ಲಿ ಪ್ರಭಾವ ಬೀರುತ್ತದೆ. ದೇಶದಲ್ಲಿಯೇ ಅತ್ಯಂತ ಬಲಿಷ್ಠ ಹಾಗೂ ದೈತ್ಯ ಉದ್ಯಮಿ ಎನಿಸಿಕೊಂಡಿರುವ ಅಂಬಾನಿ ಮೇಲೆ ನೈಸರ್ಗಿಕ ಅನಿಲ ಬೆಲೆ ಹೆಚ್ಚಳದ ವಿಚಾರದಲ್ಲಿ ಹಾಗೂ ಒಪ್ಪಂದಗಳಿಗೆ ವಿರುದ್ಧವಾಗಿ ಉತ್ಪಾದನೆ ಕಡಿತಗೊಳಿಸಿ ಒತ್ತಡ ತಂತ್ರ ಅನುಸರಿಸಿದ್ದಕ್ಕಾಗಿ ಎಫ್ಐಆರ್ ಹಾಕುವ ಧೈರ್ಯ ತೋರಿಸುವ ಮೂಲಕ ಬಂಡವಾಳಶಾಹಿ-ರಾಜಕೀಯ ಪಕ್ಷಗಳ ನಡುವಿನ ಅನೈತಿಕ ಹೊಂದಾಣಿಕೆಯ ವಿರುದ್ಧ ಕೇಜ್ರಿವಾಲ್ ದಿಟ್ಟ ಕ್ರಮ ಕೈಗೊಂಡಿರುವುದು ದೇಶಕ್ಕೆ ಹೊಸ ಸಂದೇಶ ನೀಡಲಿದೆ. ಅನೈತಿಕ ಮಾರ್ಗಗಳ ಮೂಲಕ ಬಂಡವಾಳಶಾಹಿಗಳು ಆಡುವ ಆಟಗಳನ್ನು ತಾನು ತಡೆಯಬಲ್ಲೆ ಎಂಬ ದಿಟ್ಟ ಸಂದೇಶ ಇದರಿಂದ ಇಡೀ ದೇಶಕ್ಕೆ ಹೋಗಲಿದೆ. modi_ambani_tata_kamathಇಂಥ ಸಂದೇಶ ನೀಡುವವರು ದೇಶಕ್ಕೆ ಇಂದಿನ ಸಂದರ್ಭದಲ್ಲಿ ಅಗತ್ಯ ಇದೆ. ಇಂಥ ದಿಟ್ಟ ಸಂದೇಶ ನೀಡಿದ ರಾಜಕೀಯ ನಾಯಕರು ಸ್ವಾತಂತ್ರ್ಯಾನಂತರ ಇದುವರೆಗೆ ಯಾರೂ ಕಂಡುಬಂದಿರಲಿಲ್ಲ. ಭ್ರಷ್ಟಾಚಾರದ ಬಗ್ಗೆ ಬೊಬ್ಬಿರಿದು ಅಬ್ಬರಿಸುವ ಮೋದಿ ಕೂಡ ಇಂಥ ದಿಟ್ಟತನವನ್ನು ತೋರಿಲ್ಲ. ಹೀಗಾಗಿಯೇ ಕೇಜ್ರಿವಾಲ್ ಜನಸಾಮಾನ್ಯರಿಗೆ ಆಶಾಕಿರಣವಾಗಿ ಗೋಚರಿಸುತ್ತಾರೆ. ಇಂಥ ದಿಟ್ಟ ಕ್ರಮ ಕೈಗೊಳ್ಳುವ ಧೈರ್ಯ ನೀಡಿದ್ದು ಜನತೆಯ ನ್ಯಾಯಯುತ ದುಡಿಮೆಯ ದೇಣಿಗೆ ಪಡೆದು ಪಕ್ಷ ಕಟ್ಟುವ ನೈತಿಕ ನಿಲುವಿನಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ಬಂಡವಾಳಶಾಹಿಗಳ ಕಪ್ಪು ಹಾಗೂ ಅನೈತಿಕ ಹಣವನ್ನು ಪಡೆದು ಪಕ್ಷ ಕಟ್ಟುವ, ಚುನಾವಣೆ ಎದುರಿಸುವ ಯಾವ ರಾಜಕೀಯ ಪಕ್ಷಗಳೂ ಇಂಥ ಧೈರ್ಯ ತೋರಲು ಸಾಧ್ಯವಿಲ್ಲ. ಎಡ ಪಕ್ಷಗಳು ದೇಶದಲ್ಲಿ ಭ್ರಷ್ಟಾಚಾರಕ್ಕೆ ತೊಡಗದೆ ತಕ್ಕಮಟ್ಟಿಗೆ ನೈತಿಕತೆಯನ್ನು ಕಾಯ್ದುಕೊಂಡಿವೆ ಮತ್ತು ಅವುಗಳ ನಾಯಕರು ಸರಳ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಆದರೂ ಅವುಗಳನ್ನು ಜನ ಏಕೆ ಬೆಂಬಲಿಸುತ್ತಿಲ್ಲ ಎಂದರೆ ಅವುಗಳ ಅರ್ಥಿಕ ನೀತಿ ಅವುಗಳನ್ನು ಬೆಳೆಯದಂತೆ ತಡೆಯುತ್ತಿದೆ. ವಿಪರೀತ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಜನರ ಜೀವನ ಉತ್ತಮವಾಗಬೇಕಾದರೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಬೇಕು. ಎಡಪಕ್ಷಗಳ ಆರ್ಥಿಕ ನೀತಿ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಪೂರಕವಾಗಿಲ್ಲ ಮತ್ತು ಉದ್ಯಮ, ವ್ಯಾಪಾರ ವಹಿವಾಟಿನ ಬೆಳವಣಿಗೆಗೆ ಪೂರಕವಾಗಿಲ್ಲ. ಎಡಪಕ್ಷಗಳು ಬಯಸುವ ಸಾಮಾಜಿಕ ಬದಲಾವಣೆಗೆ ನಮ್ಮ ದೇಶ ತಯಾರಾಗಿಲ್ಲ ಮಾತ್ರವಲ್ಲ ತಯಾರಾಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ ಏಕೆಂದರೆ ಸಾಮಾಜಿಕ ಬದಲಾವಣೆ ಜರುಗಬೇಕಾದರೆ ಜನ ವೈಚಾರಿಕವಾಗಿ ಬೆಳೆಯಬೇಕು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾತಂತ್ರ್ಯ ದೊರೆತು 65 ವರ್ಷಗಳು ಕಳೆದರೂ ಜನರಲ್ಲಿ ವೈಚಾರಿಕತೆ ಬೆಳೆದಿಲ್ಲ. ಮೂಢನಂಬಿಕೆಗಳು ಹಾಗೂ ಪುರೋಹಿತಶಾಹಿ ಇಂದಿಗೂ ದೇಶವನ್ನು ಆಳುತ್ತಿವೆ. ಬಲವಾಗಿರುವ ಪುರೋಹಿತಶಾಹಿ ವ್ಯವಸ್ಥೆಯೇ ನಮ್ಮ ದೇಶಕ್ಕೆ ದೊಡ್ಡ ಶಾಪ. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ವ್ಯವಸ್ಥೆಯ ಮೂಲೋತ್ಪಾಟನೆ ಮಾಡಬೇಕು ಎಂದು ಕರೆಕೊಟ್ಟಿದ್ದರೂ ನಮ್ಮ ದೇಶದಲ್ಲಿ ಇದನ್ನು ಪಾಲಿಸುವವರು ಈ ಕುರಿತು ಜನರನ್ನು ಎಚ್ಚರಿಸುವವರು ಇಲ್ಲ. ಹೀಗಾಗಿ ದೇಶದಲ್ಲಿ ಎಡಪಕ್ಷಗಳು ಬೆಳವಣಿಗೆ ಕಾಣುತ್ತಿಲ್ಲ. ಆಲಸ್ಯ, ಜವಾಬ್ದಾರಿಯ ಕೊರತೆ, ಭ್ರಷ್ಟ ವ್ಯವಸ್ಥೆಯಿಂದಾಗಿ ಸಾರ್ವಜನಿಕ ರಂಗದ ಉದ್ಯಮಗಳು ನಮ್ಮ ದೇಶದಲ್ಲಿ ಲಾಭಕರವಾಗಿ ನಡೆಯುತ್ತಿಲ್ಲ. ಹೀಗಾಗಿ ಎಡ ಪಕ್ಷಗಳು ಬಯಸುವ ಆರ್ಥಿಕ ನೀತಿಗಳು ಜನತೆಯನ್ನು ಆಕರ್ಷಿಸುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೇಜ್ರಿವಾಲರು ಆರಿಸಿಕೊಂಡಿರುವ ಮಧ್ಯಮ ಮಾರ್ಗವೇ ಸೂಕ್ತವಾಗಿದೆ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟ ಪಕ್ಷವನ್ನು ದೇಶವ್ಯಾಪಿ ಬೆಳೆಸಲು ವೇದಿಕೆ ಒದಗಿಸುತ್ತದೆ ಏಕೆಂದರೆ ಭ್ರಷ್ಟಾಚಾರ ದೇಶವ್ಯಾಪಿ ದುಷ್ಪರಿಣಾಮ ಬೀರುತ್ತದೆ ಹಾಗೂ ಜನತೆಯ ಬವಣೆಗೆ ಕಾರಣವಾಗಿದೆ. ಹೀಗಾಗಿ ಇದರ ವಿರುದ್ಧ ದೇಶವ್ಯಾಪಿ ಜನರನ್ನು ಒಗ್ಗೂಡಿಸಬಹುದು. ಅಧಿಕಾರಕ್ಕಾಗಿ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ದೃಢ ನಿಲುವನ್ನು ತಳೆಯುವುದರಿಂದ ಆಮ್ ಆದ್ಮಿ ಪಕ್ಷ ನಿಧಾನವಾಗಿ ಒಂದು ರಾಷ್ಟ್ರೀಯ ಪರ್ಯಾಯವಾಗಿ ಬೆಳೆಯಬಲ್ಲದು.

ಆಮ್ ಆದ್ಮಿ ಪಕ್ಷ ಭಿನ್ನಾಭಿಪ್ರಾಯ ಹತ್ತಿಕ್ಕದಿರಲಿ

– ಆನಂದ ಪ್ರಸಾದ್

ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳ. ಭಿನ್ನ ಅಭಿಪ್ರಾಯಗಳನ್ನು ದಮನಿಸುವುದು ಸರ್ವಾಧಿಕಾರಿ ಧೋರಣೆಯನ್ನು ಉತ್ತೇಜಿಸಿದಂತೆ ಆಗುತ್ತದೆ. ಹೀಗಾಗಿ ದೇಶದಲ್ಲಿ ಬಹಳಷ್ಟು ಕುತೂಹಲ ಉಂಟುಮಾಡಿರುವ ಆಮ್ ಆದ್ಮಿ ಪಕ್ಷದ ನಡವಳಿಕೆಯ ಬಗ್ಗೆ ದೇಶಾದ್ಯಂತ ಜನ ಗಮನಿಸುತ್ತಿದ್ದಾರೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮಧು ಭಾದುರಿ ಪಕ್ಷದ ಬಗ್ಗೆ ಭ್ರಮನಿರಸನ ಹೊಂದಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರ ಬಗ್ಗೆ ಆಮ್ ಆದ್ಮಿ ಪಕ್ಷದ ನಾಯಕರು ಮರುಚಿಂತನೆ ನಡೆಸಬೇಕಾದುದು ಅಗತ್ಯ. ಮಧು ಭಾದುರಿ ಅವರು ಯಾವುದೇ ಅಧಿಕಾರ ಸ್ಥಾನಕ್ಕಾಗಿ ಆಗ್ರಹಿಸಿ ಅದು ದೊರಕದೆ ಹತಾಶರಾಗಿ ಪಕ್ಷದಿಂದ ಹೊರನಡೆದದ್ದು ಅಲ್ಲ. ಹೀಗಾಗಿ ಇದರ ಬಗ್ಗೆ ಪಕ್ಷದ ನಾಯಕರು ಅವರಿಗೆ AAP-Madhu-Bhaduriನಿಜವಾಗಿಯೂ ಪ್ರಜಾಪ್ರಭುತ್ವ ಹಾಗೂ ಮೌಲ್ಯಗಳ ಬಗ್ಗೆ ಕಾಳಜಿ ಇರುವುದು ನಿಜವಾದರೆ ಪುನಃ ಯೋಚಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದು. ಇಲ್ಲದೆ ಹೋದರೆ ದೇಶಾದ್ಯಂತ ಪಕ್ಷದ ಬಗ್ಗೆ ತಪ್ಪು ಕಲ್ಪನೆಗಳು ಹಾಗೂ ಅಭಿಪ್ರಾಯಗಳು ಬೆಳೆಯಲು ಕಾರಣವಾದೀತು. ಮಧು ಭಾದುರಿ ಇತ್ತೀಚೆಗೆ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಂದು ನಿರ್ಣಯ ಮಂಡಿಸುವ ಕುರಿತು ಮೊದಲೇ ಪಕ್ಷಕ್ಕೆ ಸೂಚನೆ ಸಲ್ಲಿಸಿದ್ದರು ಎಂದೂ ಆದರೆ ಪಕ್ಷದ ಕಾರ್ಯಕಾರಿಣಿಯಲ್ಲಿ ಅದಕ್ಕೆ ಅವಕಾಶ ನೀಡದೆ ತಮ್ಮನ್ನು ಹತ್ತಿಕ್ಕಲಾಯಿತೆಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅವರು ಸಭೆಯಲ್ಲಿ ಮಂಡಿಸಲು ಬಯಸಿದ ಗೊತ್ತುವಳಿ ಇತ್ತೀಚೆಗೆ ದೆಹಲಿ ಸರ್ಕಾರದ ಕಾನೂನು ಸಚಿವ ಸೋಮನಾಥ್ ಭಾರತಿ ವಿದೇಶಿ ಮಹಿಳೆಯರ ಮೇಲೆ ತನ್ನ ಬೆಂಬಲಿಗರೊಡಗೂಡಿ ಕಾನೂನನ್ನು ಕೈಗೆತ್ತಿಕೊಂಡು ಕಾನೂನುಬಾಹಿರವಾಗಿ ನಡೆದುಕೊಂಡ ಬಗ್ಗೆ ಖಂಡಿಸಿ ಹಾಗೂ ಇದರ ಬಗ್ಗೆ ಪಕ್ಷವು ಜನತೆಯ ಕ್ಷಮೆ ಯಾಚಿಸಬೇಕೆಂಬ ಬೇಡಿಕೆ ಹೊಂದಿತ್ತು. ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ನಡೆದುಕೊಂಡಿದ್ದರೆ ಅದು ತಪ್ಪು ನಡವಳಿಕೆಯಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಪಾರದರ್ಶಕತೆಗೆ ಒತ್ತು ಕೊಡುವ ಹಾಗೂ ಇತರ ಪಕ್ಷಗಳಿಗಿಂಥ ಭಿನ್ನ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷ ಇದನ್ನು ಹತ್ತಿಕ್ಕಬೇಕಾಗಿರಲಿಲ್ಲ. ಪಕ್ಷದ ವತಿಯಿಂದ ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳುವುದರಿಂದ ಹಾಗೂ ವಿನೀತವಾಗಿ ಕ್ಷಮೆ ಯಾಚಿಸುವುದರಿಂದ ಪಕ್ಷದ ವರ್ಚಸ್ಸು ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗಲಾರದು.

ಮಧು ಭಾದುರಿ ಅವರು ಮಹಿಳೆಯರ ವಿಷಯದಲ್ಲಿ ಆಮ್ ಆದ್ಮಿ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಭ್ರಮನಿರಸನಗೊಂಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದು ಕೂಡ ಆಮ್ ಆದ್ಮಿ ಪಕ್ಷ ಚಿಂತಿಸಬೇಕಾದ ಗಂಭೀರ ವಿಚಾರವೇ ಆಗಿದೆ. AAP-Somnath-Bhartiಮಹಿಳೆಯರ ಬಗ್ಗೆ ಸಮಾಜದಲ್ಲಿ ಇರುವ ರೂಢಿಗತ ವಿಚಾರಗಳ ಪರವಾಗಿ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಅದರ ಪ್ರಯೋಜನ ಪಡೆಯುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ಉದಾಹರಣೆಗೆ ಹರ್ಯಾಣದಲ್ಲಿ ಖಾಪ್ ಪಂಚಾಯತಿಗಳ ಬೆಂಬಲವನ್ನು ಆಮ್ ಆದ್ಮಿ ಪಕ್ಷ ಕೇಳಿದೆ. ಮಹಿಳೆಯರು ಮೊಬೈಲ್ ಹೊಂದುವುದನ್ನು ನಿಷೇಧಿಸುವ ಹಾಗೂ ಅಂತರ್ಜಾತಿ ಪ್ರೇಮ ವಿವಾಹಗಳಲ್ಲಿ ಪ್ರೇಮಿಗಳಿಗೆ ಮರಣದಂಡನೆ ವಿಧಿಸುವ ಖಾಪ್ ಪಂಚಾಯತಿಗಳ ಬೆಂಬಲ ಪಡೆಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದು ಅವರ ಪ್ರಶ್ನೆಯಾಗಿದೆ. ಅವರು ಪಕ್ಷದ ಬಗ್ಗೆ ಭ್ರಮನಿರಸನಗೊಳ್ಳಲು ಕಾರಣವಾದ ಇನ್ನೊಂದು ಅಂಶ ದೆಹಲಿಯಲ್ಲಿ ನಿರಾಶ್ರಿತರಿಗೆ ಚಳಿಯಿಂದ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿ ನೂರಕ್ಕೂ ಅಧಿಕ ಜನ ಸತ್ತದ್ದು ಮತ್ತು ಇದರ ಬಗ್ಗೆ ಸರ್ಕಾರ ಅವರು ನೀಡಿದ ಸಲಹೆಯನ್ನು ಪರಿಗಣಿಸಲಿಲ್ಲ ಎಂಬುದು. ಅವರು ನಿರಾಶ್ರಿತರಿಗೆ ಚಳಿಯಿಂದ ರಕ್ಷಣೆ ನೀಡಲು ಸೂಕ್ತ ಆಶ್ರಯ ತಾಣ ನಿರ್ಮಿಸುವವರೆಗೆ ಅವರಿಗೆ ರಾತ್ರಿಯ ವೇಳೆ ಶಾಲೆಗಳಲ್ಲಿ ಆಶ್ರಯ ನೀಡುವ ಸಲಹೆಯನ್ನು ಅವರು ಪಕ್ಷಕ್ಕೆ ನೀಡಿದ್ದರು, ಅದನ್ನು ಪಕ್ಷ ಪರಿಗಣಿಸಲಿಲ್ಲ ಎಂದೂ ಇದರ ಪರಿಣಾಮವಾಗಿ ನೂರಕ್ಕೂ ಅಧಿಕ ನಿರಾಶ್ರಿತರು ಸತ್ತರು ಎಂಬುದು ಅವರ ಬೇಸರಕ್ಕೆ ಕಾರಣ. ಒಬ್ಬ ಒಳ್ಳೆಯ ನಾಯಕ ಎಲ್ಲರಿಂದಲೂ ಸಲಹೆಗಳನ್ನು ತೆಗೆದುಕೊಳ್ಳುತ್ತಾನೆ ಮತ್ತು ತೆಗೆದುಕೊಳ್ಳಬೇಕು ಕೂಡ. ಹೀಗಾಗಿ ಮಧು ಭಾದುರಿಯಂಥ ಹಿರಿಯರು ಸಲಹೆ ನೀಡಿದರೆ ಅದನ್ನು ಕಡೆಗಣಿಸುವುದು ಸೂಕ್ತ ಎನಿಸುವುದಿಲ್ಲ. ಪಕ್ಷ ಈ ಬಗ್ಗೆ ಚಿಂತನೆ ನಡೆಸಲಿ. ಮಹಾತ್ಮಾ ಗಾಂಧಿಯವರು ಎಲ್ಲರಿಂದಲೂ ಅದರಲ್ಲೂ ಮುಖ್ಯವಾಗಿ ಜನಸಾಮಾನ್ಯರಲ್ಲಿ ಸಾಮಾನ್ಯರಿಂದಲೂ ಸಲಹೆಗಳನ್ನು ಪಡೆಯುತ್ತಿದ್ದರು ಮತ್ತು ಅದರ ಬಗ್ಗೆ ಚಿಂತನೆ ನಡೆಸುತ್ತಿದ್ದರು. ಹೀಗಾಗಿಯೇ ಅವರು ಇಡೀ ದೇಶ ಮೆಚ್ಚುವ (ಕೆಲವು ಪ್ರತಿಗಾಮಿ ಕರ್ಮಠ ಜನರನ್ನು ಹೊರತುಪಡಿಸಿ) ಹಾಗೂ ಬಹಳ ದೊಡ್ಡ ಜನಸಮುದಾಯವನ್ನು ಪ್ರಭಾವಿಸುವ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು. ಮಾಧ್ಯಮಗಳಲ್ಲಿ ಪಕ್ಷದ ನಾಯಕರ ಬಗ್ಗೆ ಹಾಗೂ ಪಕ್ಷದ ನಿಲುವುಗಳ ಬಗ್ಗೆ ಬರುವ ಟೀಕೆ ಟಿಪ್ಪಣಿಗಳನ್ನು ಗಂಭೀರವಾಗಿ ಅವಲೋಕಿಸುತ್ತಾ ತಾವು ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಆಮ್ ಆದ್ಮಿ ಪಕ್ಷ ಮನಗಾಣಬೇಕು ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಿರಬೇಕು. ಜನರ ಬೆಂಬಲ ಪಡೆಯಬೇಕಾದರೆ ಆಮ್ ಆದ್ಮಿ ಪಕ್ಷವು ಇತರ ಸಾಂಪ್ರದಾಯಿಕ ಪಕ್ಷಗಳಿಗಿಂಥ ಭಿನ್ನವಾಗಿ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳುವುದು ಅತ್ಯಗತ್ಯ. ಅರವಿಂದ ಕೇಜ್ರಿವಾಲ್ ಹಾಗೂ ಸಂಗಡಿಗರು ತಮ್ಮ ಉನ್ನತ ಹುದ್ಧೆಗಳನ್ನು ಬಿಟ್ಟು ವ್ಯವಸ್ಥೆ ಪರಿವರ್ತನೆ ಮಾಡಲು ರಾಜಕೀಯಕ್ಕೆ ಬಂದದ್ದು, ಅಧಿಕಾರಕ್ಕಾಗಿ ಅಲ್ಲ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಹಾಗೂ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಚಿಂತನೆಗಳನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು. ಇದು ಅಧಿಕಾರದ ಅಮಲಿನಿಂದ ದಾರಿ ತಪ್ಪುವುದನ್ನು ತಡೆಯಬಲ್ಲದು.

ಇತ್ತೀಚೆಗಿನ ಆಮ್ ಆದ್ಮಿ ಪಕ್ಷದ ನಡವಳಿಕೆಗಳು ಪಕ್ಷವು ಸರಿಯಾದ ದಾರಿಯಲ್ಲಿ ಸಾಗುತ್ತಾ ಇಲ್ಲ ಎಂಬ ಭಾವನೆಯನ್ನು ದೇಶದಲ್ಲಿ ಉಂಟು ಮಾಡಿವೆ. ಪಕ್ಷದ ಉನ್ನತ ನಾಯಕತ್ವ ಈ ಬಗ್ಗೆ ಗಮನ ಹರಿಸಿ ತಿದ್ದಿಕೊಳ್ಳದೆ ಹೋದರೆ ಪಕ್ಷದ ಬೆಳವಣಿಗೆಯ ಮೇಲೆ ಗಂಭೀರ ಋಣಾತ್ಮಕ ಪರಿಣಾಮಗಳು ಆಗಬಹುದು. ಸೋಮನಾಥ್ ಭಾರತಿ ಅವರ ವಿಷಯದಲ್ಲಿ ಪಕ್ಷವು ನಡೆದುಕೊಂಡ ಅಸಮರ್ಪಕ ನೀತಿಯ ನಂತರ ಹಾಗೂ ದೆಹಲಿಯಲ್ಲಿ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಯೇ ಕಾನೂನು ಉಲ್ಲಂಘಿಸಿ ಧರಣಿ ಕುಳಿತ ನಂತರ ಪಕ್ಷಕ್ಕೆ ಬರುತ್ತಿದ್ದ ಜನತೆಯ ದೇಣಿಗೆಯ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಮಾಧ್ಯಮಗಳಲ್ಲಿ ಬರುತ್ತಿರುವ ಹೆಚ್ಚಿನ ಜನತೆಯ ಪ್ರತಿಕ್ರಿಯೆಗಳು ಕೂಡ ಪಕ್ಷದ ನಡವಳಿಕೆಯನ್ನು ಟೀಕಿಸಿಯೇ ಬರುತ್ತಿವೆ. ಇದು ಪಕ್ಷವು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎಂಬುದರ ಸೂಚನೆಯೇ ಆಗಿದೆ. ವಿವೇಕದಿಂದ ಯೋಚಿಸಿದರೆ ಇದು ಪಕ್ಷದ ನಾಯಕರಿಗೆ ಅರ್ಥವಾದೀತು. ಆಮ್ ಆದ್ಮಿ ಪಕ್ಷವು ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಬೇಕಾಗಿದೆ. ಇಲ್ಲದೆ ಹೋದರೆ ಉಳಿದ ಪಕ್ಷಗಳಿಗೂ ಅದಕ್ಕೂ ಏನು ವ್ಯತ್ಯಾಸ ಎಂದು ಜನ ಕೇಳುವಂತಾಗುತ್ತದೆ. ಪಕ್ಷದೊಳಗೆ ಬಹುಮತದ ಆಧಾರದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣ. ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ ನಾಯಕರನ್ನು ಕಡೆಗಣಿಸುವುದು, ಮೂಲೆಗುಂಪು ಮಾಡುವುದು ಸಲ್ಲದು. ಇಂಥ ನಡವಳಿಕೆಗಳು ಸರ್ವಾಧಿಕಾರಿ ಪ್ರಭುತ್ವ, ರಾಜಪ್ರಭುತ್ವ, ಕುಟುಂಬ ರಾಜಕಾರಣದ ಪ್ರಭುತ್ವಗಳಲ್ಲಿ ಸಾಮಾನ್ಯ. ಇತರರಿಗಿಂತ ಭಿನ್ನ ಎಂದು ಹೇಳಿಕೊಳ್ಳುವ ಪಕ್ಷಗಳಲ್ಲಿ ಇಂಥ ನಡವಳಿಕೆಗಳು ಕಂಡುಬಂದರೆ ಪಕ್ಷದ ಬೆಳವಣಿಗೆಗೆ ತೊಂದರೆಯಾಗಲಿರುವುದು ಖಚಿತ.

ಆಮ್ ಆದ್ಮಿ ಪಕ್ಷ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದಿರಬೇಕು

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಸದಸ್ಯತ್ವ 1 ಕೋಟಿ 5 ಲಕ್ಷ ತಲುಪಿದೆ. ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು. ಅದೇ ವೇಳೆ ಆಮ್ ಆದ್ಮಿ ಪಕ್ಷ ತಾನು ಇತರ ಪಕ್ಷಗಳಿಗಿಂಥ ಭಿನ್ನ ಹಾಗೂ ಸಂವೇದನಾಶೀಲ ಎಂದು ತೋರಿಸಬೇಕಾಗಿದೆ. ಇಲ್ಲದೆ ಹೋದರೆ ಪಕ್ಷದ ಬೆಳವಣಿಗೆಯ ಮೇಲೆ ತೀವ್ರ ದುಷ್ಪರಿಣಾಮ ಬೀರಬಹುದು. ದೆಹಲಿ ಸರ್ಕಾರದ ಕಾನೂನು ಮಂತ್ರಿ ಸೋಮನಾಥ್ ಭಾರತಿ ಮೇಲೆ ನಡುರಾತ್ರಿ ಮಾದಕ ದ್ರವ್ಯ ಹಾಗೂ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ಆರೋಪದ ಮೇಲೆ ವಿದೇಶಿ ಮಹಿಳೆಯರ ಮೇಲೆ ಕಾನೂನನ್ನು ಕೈಗೆ ತೆಗೆದುಕೊಂಡು ತನ್ನ ಬೆಂಬಲಿಗರ ಜೊತೆ ಹಲ್ಲೆ ನಡೆಸಿದ ಆಪಾದನೆ ಬಹಳ ಬಲವಾಗಿ ಕೇಳಿಬಂದಿದೆ. ಈ ವಿಚಾರದಲ್ಲಿ ಆಮ್ ಆದ್ಮಿ ಪಕ್ಷವು ನೈತಿಕತೆಯನ್ನು ಎತ್ತಿ ಹಿಡಿಯುವ ಕ್ರಮವಾಗಿ ಸೋಮನಾಥ್ ಭಾರತಿಯ ರಾಜೀನಾಮೆಯನ್ನು ಪಡೆಯುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾಗಿತ್ತು. ಈ ವಿಚಾರವಾಗಿ ನ್ಯಾಯಾಂಗ ವಿಚಾರಣೆ ಜಾರಿಯಲ್ಲಿದೆ. aamadmipartyಹೀಗಾಗಿ ವಿಚಾರಣೆ ಮುಗಿದು ಸೋಮನಾಥ್ ಭಾರತಿ ತಪ್ಪಿತಸ್ಥ ಹೌದು ಅಥವಾ ಅಲ್ಲ ಎಂದು ನಿರ್ಧಾರ ಆಗುವವರೆಗೂ ತನ್ನ ಪದವಿಯಿಂದ ದೂರ ನಿಲ್ಲುವುದು ಪಕ್ಷದ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅತೀ ಅಗತ್ಯವಾಗಿತ್ತು. ಅವರು ಒಂದು ವೇಳೆ ತಪ್ಪಿತಸ್ಥರೆಂದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೂ ಪಕ್ಷವು ಹಿಂಜರಿಯಬಾರದು. ಯಾವುದೇ ಕೆಲಸ ಮಾಡುವುದಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೇ ಹೊರತು ಸಂಘ ಪರಿವಾರದ ಅನುಯಾಯಿಗಳ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಯೊಗ್ಯವಾದದ್ದಲ್ಲ. ಇದರಿಂದ ಆಮ್ ಆದ್ಮಿ ಪಕ್ಷ ಇತರ ಪಕ್ಷಗಳಿಗಿಂತ ಭಿನ್ನ ಎಂಬ ಇಮೇಜಿಗೆ ಧಕ್ಕೆ ಆಗುತ್ತದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ಮಾತಿನ ಮೇಲೆ ಹಿಡಿತ ಇರಿಸಿಕೊಳ್ಳಬೇಕಾಗಿದೆ ಹಾಗೂ ಮಾತಿನಲ್ಲಿ ವಿನಯವಂತಿಕೆಯನ್ನು ತೋರಿಸಬೇಕು. ಇಲ್ಲದಿದ್ದರೆ ಅವರಿಗೂ ಉಳಿದ ರಾಜಕೀಯ ಪಕ್ಷಗಳಿಗೂ ವ್ಯತ್ಯಾಸ ಇರುವುದಿಲ್ಲ.  ಮಾನವನಿಗೆ ಶ್ರೀಮಂತಿಕೆ, ಅಧಿಕಾರ, ಪದವಿ ಬಂದಾಗ ಅಹಂಕಾರ ಬರುವುದು ಸಹಜ. ಪ್ರಜ್ಞಾವಂತರು ಇದನ್ನು ಮೆಟ್ಟಿ ನಿಲ್ಲುತ್ತಾರೆ. manishsisodia-yogendrayadav-arvindkejriwal-prashantbhushanಆಮ್ ಆದ್ಮಿ ಪಕ್ಷದವರು ಇಂಥ ಪ್ರಜ್ಞಾವಂತಿಕೆಯನ್ನು ತೋರಿಸಬೇಕಾಗಿದೆ. ಇಲ್ಲದೆ ಹೋದರೆ ಅವಸಾನ ಖಚಿತ. ಹೊಸ ವಿಧಾನಸಭಾ ಸದಸ್ಯರಿಗೂ ಹಾಗೂ ಮಂತ್ರಿಗಳಿಗೂ, ಪಕ್ಷದ ಕಾರ್ಯಕರ್ತರುಗಳಿಗೂ ವಿನಯದಿಂದ ನಡೆದುಕೊಳ್ಳುವ ತರಬೇತಿ ನೀಡಬೇಕಾಗಿದೆ. ಬಿಸಿರಕ್ತದ ಯುವಕ ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೋಗಬಾರದು. ಬೇರೆ ಪಕ್ಷಗಳವರು ಪ್ರಚೋದನಾಕಾರಿ ಹೇಳಿಕೆ ನೀಡಿದರೂ ಸಂಯಮದಿಂದ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಇಲ್ಲದಿದ್ದರೆ ನರೇಂದ್ರ ಮೋದಿಯ ಬೆಂಬಲಿಗರಿಗೂ ಆಮ್ ಆದ್ಮಿ ಪಕ್ಷದ ಬೆಂಬಲಿಗರಿಗೂ ವ್ಯತ್ಯಾಸ ಇರಲಾರದು. ಹೀಗಾಗಿ ಆಮ್ ಆದ್ಮಿ ಪಕ್ಷದ ಥಿಂಕ್ ಟ್ಯಾಂಕ್ ಎಂದೆನಿಸಿಕೊಂಡಿರುವ ಯೋಗೇಂದ್ರ ಯಾದವ್ ಅವರಂಥ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ನಡೆದುಕೊಳ್ಳಬೇಕಾದ ವಿಧಾನದ ಬಗ್ಗೆ ಒಂದು ನೀತಿ ಸಂಹಿತೆಯನ್ನು ರೂಪಿಸಲು ಮುಂದಾಗುವುದು ಉತ್ತಮ.

ಆಮ್ ಆದ್ಮಿ ಪಕ್ಷವು ಮೊದಲು ದೆಹಲಿಯಲ್ಲಿ ಆಡಳಿತ ನಡೆಸಿ ಅನುಭವ ಪಡೆದು ನಂತರ ದೇಶವ್ಯಾಪಿ ಪಕ್ಷವನ್ನು ಬೆಳೆಸಬೇಕು ಹಾಗೂ ಚುನಾವಣೆಗೆ ಸ್ಪರ್ಧಿಸಬೇಕು ಎಂದು ವಿರೋಧಿ ಪಕ್ಷಗಳವರು ಅದರಲ್ಲೂ ಮುಖ್ಯವಾಗಿ ಸಂಘ ಪರಿವಾರದ ಕಡೆಯವರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಎಲ್ಲಿ ಬಿಜೆಪಿಗೆ ಬೀಳಬಹುದಾದ ಮತಗಳು ನಗರ ಪ್ರದೇಶಗಳಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಹಂಚಿಹೋಗಿ ನರೇಂದ್ರ ಮೋದಿಯ ವರ್ಚಸ್ಸು ಕುಂದಿಹೊಗುತ್ತದೋ ಎಂಬ ಆತಂಕ ಎಂಬುದು ಕಂಡುಬರುತ್ತದೆ. ದೇಶದಲ್ಲಿ ಈಗ ಇರುವ ಭ್ರಷ್ಟಾಚಾರ ವಿರೋಧಿ ಅಲೆಯ ಪ್ರಯೋಜನ ಪಡೆದು ದೇಶವ್ಯಾಪಿ ಪಕ್ಷವನ್ನು ಬೆಳೆಸಲು ಆಮ್ ಆದ್ಮಿ Arvind_Kejriwal_party_launchಪಕ್ಷಕ್ಕೆ ಇದುವೇ ಸಕಾಲ. ಇಲ್ಲದಿದ್ದರೆ ಬಿಎಸ್ಪಿ, ಎಸ್ಪಿ, ಅಥವಾ ಎಡ ಪಕ್ಷಗಳಂತೆ ಕೆಲವೇ ರಾಜ್ಯಕ್ಕೆ ಆಮ್ ಆದ್ಮಿ ಪಕ್ಷ ಸೀಮಿತವಾಗಬೇಕಾದೀತು. ಪಕ್ಷವನ್ನು ದೇಶವ್ಯಾಪಿ ಬೆಳೆಸಲು ಯಾವುದಾದರೂ ಒಂದು ಅಲೆಯ ಸಹಾಯ ಬೇಕಾಗುತ್ತದೆ. ಇಲ್ಲದಿದ್ದರೆ ದೇಶವ್ಯಾಪಿ ಹೊಸ ಪಕ್ಷವನ್ನು ಬೆಳೆಸುವುದು ಬಹಳ ಕಷ್ಟ ಅಥವಾ ತುಂಬಾ ವರ್ಷಗಳನ್ನೇ ತೆಗೆದುಕೊಳ್ಳಬಹುದು ಅಥವಾ ಅದು ಅಸಾಧ್ಯವೂ ಆಗಬಹುದು. ಈಗ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದೊರಕಿದ ಪ್ರತಿಕ್ರಿಯೆ ನೋಡಿದರೆ ದೇಶವು ಪರ್ಯಾಯ ರಾಜಕೀಯ ಪಕ್ಷವೊಂದರ ಹುಡುಕಾಟದಲ್ಲಿದೆ ಹಾಗೂ ದೇಶದಲ್ಲಿ ಒಂದು ಭ್ರಷ್ಟಾಚಾರ ವಿರೋಧಿ ಅಲೆ ಇದೆ. ಇಲ್ಲದೆ ಹೋದರೆ ಈ ರೀತಿಯ ಸ್ಪಂದನೆ ಆಮ್ ಆದ್ಮಿ ಪಕ್ಷಕ್ಕೆ ಸಿಗುತ್ತಿರಲಿಲ್ಲ. ಜನ ಬಿಜೆಪಿಗೂ ಒಂದು ಅವಕಾಶ ಕೊಟ್ಟು ನೋಡಿದ್ದಾರೆ ಹಾಗೂ ಅದರ ಅವಧಿಯ ಭ್ರಷ್ಟಾಚಾರಗಳನ್ನೂ ಕಂಡಿದ್ದಾರೆ. ಹೀಗಾಗಿ ಜನ ಹೊಸ ಪರ್ಯಾಯ ಇದೆಯೋ ಎಂದು ನೋಡುತ್ತಿದ್ದಾರೆ. ಇದನ್ನು ಆಮ್ ಆದ್ಮಿ ಪಕ್ಷವು ಬಳಸಿಕೊಂಡು ದೇಶವ್ಯಾಪಿ ಬೆಂಬಲಿಗರ ಜಾಲ ಬೆಳೆಸಿಕೊಳ್ಳುವುದು ಸೂಕ್ತವೇ ಆಗಿದೆ.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಧರಣಿ ಮಾಡಬಾರದು ಎಂದು ಸಂವಿಧಾನದಲ್ಲಿ ಹೇಳಿಲ್ಲ ಎಂದು ಕೇಜ್ರಿವಾಲ್ ತಮ್ಮ ಧರಣಿ ಸತ್ಯಾಗ್ರಹವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ನಿಜ. ಆದರೆ ನಿಷೇಧಾಜ್ಞೆ ಜಾರಿ ಇರುವ ಕಡೆ ಧರಣಿ ನಡೆಸಿದ್ದರಿಂದಾಗಿ ಕಾನೂನನ್ನು ಉಲ್ಲಂಘಿಸಿದ ಅಪವಾದ ಅವರaravind-kejriwal ಮೇಲೆ ಬಂದಿದೆ ಹಾಗೂ ಇದರಿಂದಾಗಿ ದೇಶದಾದ್ಯಂತ ಪಕ್ಷದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಆಗಿದೆ. ಧರಣಿ ಕೈಗೊಳ್ಳುವುದಿದ್ದರೂ ನಿಷೇಧಾಜ್ಞೆ ಇಲ್ಲದ ಕಡೆ ಕೈಗೊಂಡಿದ್ದರೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿರಲಿಲ್ಲ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರು ಧರಣಿ ಕೈಗೊಳ್ಳುವ ಬದಲು ಪಕ್ಷದ ಕಾರ್ಯಕರ್ತರು ಧರಣಿ ಕೈಗೊಂಡಿದ್ದರೂ ಆಗುತ್ತಿತ್ತು ಮತ್ತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲ. ಹೀಗಾಗಿ ಇಂಥ ನಡೆಗಳನ್ನು ಪಕ್ಷವು ಮುಂದುವರಿಸಬಾರದು ಹಾಗೂ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ಪಕ್ಷದಲ್ಲಿ ಚಿಂತಕರ ಜೊತೆ ಸಮಾಲೋಚನೆ ನಡೆಸಿ ಬಹುಮತದ ಆಧಾರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಸೂಕ್ತವಾದೀತು. ನಡೆಯುವವರು ಎಡವುವುದು ಸಹಜ. ಹಾಗೆಯೇ ಹೊಸದಾಗಿ ಆಡಳಿತ ವಹಿಸಿಕೊಂಡಾಗ ಕೆಲವು ತಪ್ಪುಗಳು ಆಗಬಹುದು. ಇಂಥ ತಪ್ಪುಗಳನ್ನು ಸಮರ್ಥಿಸಲು ಹೋಗಿ ಇನ್ನಷ್ಟು ತಪ್ಪುಗಳನ್ನು ಮಾಡಬಾರದು. ತಪ್ಪುಗಳನ್ನು ವಿನೀತತೆಯಿಂದ ಒಪ್ಪಿಕೊಂಡರೆ ಪಕ್ಷದ ವಿಶ್ವಾಸಾರ್ಹತೆ ಹೆಚ್ಚಬಹುದು.

ಆಮ್ ಆದ್ಮಿ ಪಕ್ಷದ ನಡೆಗಳ ಬಗ್ಗೆ ಮಾಧ್ಯಮಗಳು ಹಾಗೂ ಬೇರೆ ರಾಜಕೀಯ ಪಕ್ಷಗಳು ತೀವ್ರ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಇದನ್ನು ನೋಡುವಾಗ ಮಾಧ್ಯಮಗಳಿಗೆ ದೇಶದಲ್ಲಿ ಪರ್ಯಾಯ ಶಕ್ತಿಗಳು ರೂಪುಗೊಂಡು ಪ್ರಜಾಪ್ರಭುತ್ವ ಬಲಗೊಳ್ಳಬೇಕೆಂಬ ಸದಾಶಯ ಇಲ್ಲವೆಂಬ ಗುಮಾನಿ ಬರುತ್ತದೆ. ಮಾಧ್ಯಮಗಳು ಒಂದು ವರ್ಷ ಪ್ರಾಯದ ಕೂಸಾದ ಆಮ್ ಆದ್ಮಿ ಪಕ್ಷವನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ಹೊಂದಿವೆ. ಹೀಗಾಗಿ ಆ ಪಕ್ಷದ ಸಣ್ಣ ತಪ್ಪುಗಳನ್ನು ಬಹಳ ದೊಡ್ಡ ತಪ್ಪುಗಳಂತೆ ಬಿಂಬಿಸಿ ದೇಶದಲ್ಲಿ ಭ್ರಮನಿರಸನ ಉಂಟುಮಾಡಲು ಆರಂಭದಲ್ಲೇ ಯತ್ನಿಸುವುದು ಸೂಕ್ತವಲ್ಲ.  ಅದಕ್ಕೆ ಸಾಕಷ್ಟು ಸಮಯ ಕೊಡಬೇಕಾದ ಅಗತ್ಯ ಇದೆ. ತಪ್ಪಾದಾಗ ಸೌಮ್ಯವಾಗಿ ಬುದ್ಧಿ ಹೇಳಬೇಕು ಮತ್ತು ದೇಶದ ಪ್ರಖ್ಯಾತ ಚಿಂತಕರು, ಲೇಖಕರು, ಸಾಹಿತಿಗಳು, ವಿಜ್ಞಾನಿಗಳಿಂದ ಪಕ್ಷಕ್ಕೆ ಸೂಕ್ತ ಮಾರ್ಗದರ್ಶನ ಮಾಡಿಸಬೇಕು. ಹಾಗಾದರೆ ಪಕ್ಷವು ಸರಿ ದಾರಿಯಲ್ಲಿ ಮುನ್ನಡೆಯಬಲ್ಲದು. ದೇಶದ ರಾಜಕೀಯವು ನಿಂತ ನೀರಾಗಿ ಕೊಳಚೆ ಗುಂಡಿಯಂತೆ ಆಗಿದೆ. ಆ ಕೊಳಚೆ ಗುಂಡಿಗೆ ಹೊಸ ನೀರು ಬರಬೇಕಾಗಿದೆ ಹಾಗೂ ಪ್ರವಾಹವಾಗಿ ಹರಿದು ಕೊಳಚೆ ನೀರು ಹೊರಹೋಗಿ ಶುದ್ಧ ನೀರು ತುಂಬಬೇಕಾಗಿದೆ. ಹೀಗಾಗಬೇಕಾದರೆ ಕಾಲಕಾಲಕ್ಕೆ ರಾಜಕೀಯ ರಂಗದಲ್ಲಿ ಹೊಸ ಚಿಂತನೆಗಳು, ಪ್ರಯತ್ನಗಳು ನಡೆಯುತ್ತಿರಬೇಕಾಗುತ್ತದೆ. ಹೊಸ ಪ್ರಯತ್ನಗಳು ನಡೆದಾಗಲೆಲ್ಲ ಸಿನಿಕರಾಗಿ ಹಿಂದೆ ನಡೆದ ರಾಜಕೀಯ ಸ್ವಚ್ಛತೆಯ ಪ್ರಯತ್ನಗಳು ವಿಫಲವಾಗಿವೆ ಎಂದೂ, ಇನ್ನು ಮುಂದೆಯೂ ಹೀಗೆಯೇ ಆಗುತ್ತದೆ ಎಂದು ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುವುದನ್ನು ನಿಲ್ಲಿಸುವುದು ಸೂಕ್ತ. ಹೊಸ ಪ್ರಯತ್ನ ನಡೆದಾಗ ಅದನ್ನು ಮಾಧ್ಯಮಗಳು ಬೆಂಬಲಿಸಬೇಕು. ಅದು ವಿಫಲವಾದರೂ ಚಿಂತೆ ಇಲ್ಲ. ಇಂಥ ಪ್ರಯತ್ನಗಳು ಅಲ್ಪ ಸ್ವಲ್ಪವಾದರೂ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುತ್ತವೆ ಮತ್ತು ಹೀಗೆಯೇ ಪ್ರಯತ್ನಗಳು ಮುಂದುವರಿಯುತ್ತಾ ಇರಬೇಕು. ಹರಿಯುವ ನೀರು ನಿಂತ ಕೂಡಲೇ ಅದು ಪಾಚಿಗಟ್ಟಿ ಕೊಳಕಾಗುತ್ತದೆ. Kejriwal-janata-durbarಅದೇ ರೀತಿ ರಾಜಕೀಯ ರಂಗದಲ್ಲಿಯೂ ಹೊಸ ಪ್ರಯೋಗಗಳು ನಡೆಯುತ್ತಲೇ ಇರಬೇಕು, ಇದರಿಂದ ರಾಜಕೀಯ ನಿಂತ ನೀರಾಗಿ ಕೊಳಚೆಯಾಗುವುದು ಸ್ವಲ್ಪ ಮಟ್ಟಿಗಾದರೂ ತಪ್ಪುತ್ತದೆ.

ಆಮ್ ಆದ್ಮಿ ಪಕ್ಷವು ಮಾಧ್ಯಮಗಳ ಅಪಪ್ರಚಾರದ ಹೊರತಾಗಿಯೂ ಬೆಳೆದು ಅಧಿಕಾರದ ಹತ್ತಿರ ಬಂದಿದೆ. ಅವಕಾಶ ಸಿಕ್ಕಾಗಲೆಲ್ಲ ಅದರ ವಿರುದ್ಧ ಅಪಪ್ರಚಾರ ನಡೆಸಲು ದೇಶದ ಪ್ರಧಾನ ಪಕ್ಷಗಳು ಟೊಂಕ ಕಟ್ಟಿ ನಿಂತಿವೆ. ಇದಕ್ಕೆ ಮಾಧ್ಯಮಗಳು ತಾಳ ಹಾಕುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷವು ಪ್ರತಿಯೊಂದು ನಡೆಯನ್ನೂ ಬಹಳ ಎಚ್ಚರಿಕೆಯಿಂದ ಇರಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷವು ಒಂದು ಸಣ್ಣ ತಪ್ಪು ಮಾಡಿದರೂ ಮಾಧ್ಯಮಗಳಿಗೆ ಹಾಗೂ ಪಟ್ಟಭದ್ರ ರಾಜಕೀಯ ಪಕ್ಷಗಳಿಗೆ ಅದು ಭೂತಾಕಾರವಾಗಿ ಕಾಣುತ್ತದೆ. ಹೀಗಾಗಿ ಮಾಧ್ಯಮಗಳ ಅಪಪ್ರಚಾರವನ್ನು ಮೆಟ್ಟಿ ನಿಲ್ಲಲು ಆಮ್ ಆದ್ಮಿ ಪಕ್ಷವು ಜನಸಾಮಾನ್ಯರನ್ನೇ ತನ್ನ ಸಂದೇಶಗಳನ್ನು ಜನತೆಗೆ ಬಿತ್ತರಿಸಲು ಹಾಗೂ ಹರಡಲು ಬಳಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೆಚ್ಚಿನ ಮಾಧ್ಯಮಗಳು ಇಲ್ಲದ ಕಾಲದಲ್ಲಿಯೂ ಮಹಾತ್ಮಾ ಗಾಂಧಿಯವರ ಸಂದೇಶಗಳು ದೇಶದ ಮೂಲೆಮೂಲೆಗೂ ಜನರ ಬಾಯಿಯಿಂದ ಬಾಯಿಗೆ ಹರಡುತ್ತಿದ್ದವು. ಇದೇ ರೀತಿ ದೇಶದಲ್ಲಿ ತನ್ನ ಸಂದೇಶಗಳನ್ನು ಹರಡಲು ಆಮ್ ಆದ್ಮಿ ಪಕ್ಷವು ತನ್ನ ಪರ ಸಹಾನುಭೂತಿ ಉಳ್ಳ ಜನಸಾಮಾನ್ಯರ ವ್ಯೂಹವೊಂದನ್ನು ರಚಿಸಿಕೊಳ್ಳಬೇಕಾಗಿದೆ. ಜನಸಾಮಾನ್ಯರು ಪಕ್ಷದ ಪರವಾಗಿ ನಿಲ್ಲಬೇಕಾದರೆ ನಡೆ ಹಾಗೂ ನುಡಿಗಳಲ್ಲಿ ಅಂತರವಿಲ್ಲದ ರೀತಿಯಲ್ಲಿ ಆಮ್ ಆದ್ಮಿ ಪಕ್ಷವು ನಡೆದುಕೊಳ್ಳುವುದು ಬಹಳ ಮುಖ್ಯ. ಇದನ್ನು ಪಕ್ಷದ ಮುಖಂಡರು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಮೋದಿ ವರ್ಸಸ್ ಕೇಜ್ರಿವಾಲ್ : ಯಾರು ಉತ್ತಮ?

– ಆನಂದ ಪ್ರಸಾದ್

ಬಿಜೆಪಿ ಹಾಗೂ ನರೇಂದ್ರ ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಹತ್ತು ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟದ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ದೇಶಾದ್ಯಂತ ಎದ್ದಿರುವ ಆಡಳಿತವಿರೋಧಿ ಅಲೆಯ ಪ್ರಯೋಜನ ಪಡೆದು ಅಧಿಕಾರಕ್ಕೆ ಏರುವ ಹವಣಿಕೆಯಲ್ಲಿರುವಾಗ ಕೊನೆಯ ಕ್ಷಣದಲ್ಲಿ ಅದಕ್ಕೆ ಬಲವಾದ ಪ್ರತಿರೋಧದ ಶಕ್ತಿಯೊಂದು ಆಮ್ ಆದ್ಮಿ ಪಕ್ಷದ ರೂಪದಲ್ಲಿ ಎದುರಾಗಿರುವುದು ಪ್ರಜಾಪ್ರಭುತ್ವದ ಉಳಿವಿನ AAP Launchದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆಯಾಗಿದೆ. ಆಮ್ ಆದ್ಮಿ ಪಕ್ಷ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ತಡೆಯಲು ಸಮರ್ಥವಾಗಿಲ್ಲದ ಹಾಗೂ ಎಡಪಕ್ಷಗಳೂ ಸದ್ಯದ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿಯ ನಾಯಕತ್ವದಲ್ಲಿ ಫ್ಯಾಸಿಸಂ ದೇಶದಲ್ಲಿ ಬೆಳೆಯುತ್ತಿರುವುದನ್ನು ತಡೆಯುವಲ್ಲಿ ಅಸಮರ್ಥವಾಗಿರುವ ಹೊತ್ತಿನಲ್ಲಿ ಆಮ್ ಆದ್ಮಿ ಪಕ್ಷವು ಅಂಥ ಫ್ಯಾಸಿಸಂ ದೇಶದಲ್ಲಿ ಬೆಳೆಯುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಲಕ್ಷಣಗಳೂ ದಟ್ಟವಾಗುತ್ತಿವೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಬೆಳವಣಿಗೆ ದೇಶದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಹಾಗೂ ಉಳಿವಿಗೆ ಮುಖ್ಯವಾಗಿ ಕಂಡುಬರುತ್ತದೆ.

ಬಿಜೆಪಿಯು ದೇಶಾದ್ಯಂತ ಕ್ಷಿಪ್ರವಾಗಿ ಬೆಳೆಯಲು ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಾದಿಯನ್ನು ಅಳವಡಿಸಿಕೊಂಡಿತು. ಇದರ ಅಂಗವಾಗಿ ಅಡ್ವಾಣಿಯ ರಥಯಾತ್ರೆ ದೇಶಾದ್ಯಂತ ಧಾರ್ಮಿಕ ನೆಲೆಯಲ್ಲಿ ಜನರನ್ನು ವಿಭಜಿಸಲು ಕಾರಣವಾಯಿತು. ಮುಂದೆ ರಾಮ ಮಂದಿರದ ನೆಪದಲ್ಲಿ ಜನರನ್ನು ದೇಶಾದ್ಯಂತ ಅಯೋಧ್ಯೆಗೆ ಕರಸೇವೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ ಬಾಬ್ರಿ ಮಸೀದಿಯನ್ನು ಜನರೇ ಕಾನೂನನ್ನು ಕೈಗೆತ್ತಿಕೊಂಡು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಇದರಿಂದಾಗಿ ದೇಶದಲ್ಲಿ ಉಂಟಾದ ಕೋಮುಗಲಭೆಗಳಲ್ಲಿ Advani-Rath-Yatraಸುಮಾರು 20,000 ಕೋಟಿ ರೂಪಾಯಿಗಳಷ್ಟು ಹಾನಿಯಾಯಿತು ಎಂದು ಅಂದಾಜಿಸಲಾಗಿದೆ ಮಾತ್ರವಲ್ಲ ಹಿಂದೂ, ಮುಸ್ಲಿಂ ಎರಡೂ ಧರ್ಮಗಳ ನೂರಾರು ಅಮಾಯಕ ಜನರು ಗಲಭೆಗಳಲ್ಲಿ ಪ್ರಾಣ ಕಳೆದುಕೊಂಡರು. ರಾಜಕೀಯಕ್ಕಾಗಿ ಇದನ್ನೆಲ್ಲಾ ಮಾಡುವಾಗ ಬಿಜೆಪಿಯ ಯಾರಿಗೂ ಇದು ಕಾನೂನನ್ನು ಕೈಗೆತ್ತಿಕೊಳ್ಳುವ ಕೃತ್ಯ ಎನಿಸಲಿಲ್ಲ. ಇದಕ್ಕೆ ಹೋಲಿಸಿದರೆ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದಂಥ ಜನರ ಸಮಸ್ಯೆಗಳನ್ನು ಎತ್ತಿಕೊಂಡು ಶಾಂತಿಯುತ ಹೋರಾಟಗಳ ಮೂಲಕವೇ ಬೆಳೆಯುತ್ತಿದೆ. ಆಮ್ ಆದ್ಮಿ ಪಕ್ಷವು ತನ್ನ ಬೆಳವಣಿಗೆಯ ಹಾದಿಯಲ್ಲಿ ಜನರನ್ನು ಬಿಜೆಪಿಯಂತೆ ತನ್ನ ದೇಶವ್ಯಾಪಿ ಬೆಳವಣಿಗೆಗಾಗಿ ಬಲಿ ಕೊಟ್ಟಿಲ್ಲ. ಹೀಗಾಗಿ ಆಮ್ ಆದ್ಮಿ ಪಕ್ಷವು ಬಿಜೆಪಿಗಿಂಥ ಎಷ್ಟೋ ಪಟ್ಟು ಉತ್ತಮ ಎಂದು ಕಂಡುಬರುತ್ತದೆ. ದೆಹಲಿಯಲ್ಲಿ ಇದೀಗ ಆಮ್ ಆದ್ಮಿ ಪಕ್ಷದ ಮುಖ್ಯ ಮಂತ್ರಿ ದೆಹಲಿ ಪೋಲೀಸರ ನಿಷ್ಕ್ರಿಯತೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇರಿಸಿ ಧರಣಿ ಕೈಗೊಂಡು ಅರಾಜಕತೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದುವರೆಗೆ ಯಾವ ಮುಖ್ಯಮಂತ್ರಿಯೂ ತೋರಿಸದೆ ಇರುವ ಧೈರ್ಯವನ್ನು ಕೇಂದ್ರ ಸರಕಾರದ ವಿರುದ್ಧ ಕೇಜ್ರಿವಾಲ್ ತೋರಿಸುತ್ತಿದ್ದು ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ಕೈಗೊಳ್ಳುತ್ತಿರುವ ಬಹಳ ಉತ್ತಮ ಹೋರಾಟವಾಗಿದೆ. ದೆಹಲಿಯಲ್ಲಿ ಉಂಟಾಗುವ ಅತ್ಯಾಚಾರ, ಅನಾಚಾರಗಳಿಗೆ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ದೂರುವುದರಲ್ಲಿ ಹುರುಳಿಲ್ಲ ಏಕೆಂದರೆ ಅಲ್ಲಿನ ಪೊಲೀಸರು ದೆಹಲಿ ರಾಜ್ಯ ಸರ್ಕಾರದ ಕೈಕೆಳಗೆ ಬರುತ್ತಿಲ್ಲ ಮಾತ್ರವಲ್ಲ ಅವರು ದೆಹಲಿ ಸರ್ಕಾರದ ಮಾತನ್ನು ಕೇಳುತ್ತಿಲ್ಲ. ಅವರ ನಿಯಂತ್ರಣ ಕೇಂದ್ರ ಸರ್ಕಾರವು ತನ್ನ ಬಳಿಯೇ ಇರಿಸಿಕೊಂಡಿರುವ ಕಾರಣ ದೆಹಲಿಯಲ್ಲಿ ನಡೆಯುತ್ತಿರುವ ಅತ್ಯಾಚಾರಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗುತ್ತದೆ. ಆದರೆ ಅದನ್ನು ಅರಿಯದೆ ಜನ ಇದುವರೆಗೆ ಆಮ್ ಆದ್ಮಿ ಪಕ್ಷದ ನೂತನ ಸರ್ಕಾರವನ್ನು ದೂರುವ ಪ್ರವೃತ್ತಿ ಕಂಡುಬರುತ್ತಿತ್ತು. ಇದೀಗ ಕೇಜ್ರಿವಾಲ್ ಕೈಗೊಂಡಿರುವ ಧರಣಿಯಿಂದ ಇದು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆದು ಇದರ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲೆ ಬೀಳುವಂತೆ ಆಗಿದ್ದು ಇದು ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಗೆ ಸಹಾಯಕವಾಗಲಿದೆ. ಒಬ್ಬ ನಾಯಕನಲ್ಲಿ ಇರಬೇಕಾದ ಈ ರೀತಿಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ದೃಢತೆ ಆಮ್ ಆದ್ಮಿ ಪಕ್ಷವನ್ನು ಇತರ ಪಕ್ಷಗಳಿಗಿಂತ ಭಿನ್ನವಾಗಿ ಮಾಡುತ್ತದೆ. ಈವರೆಗೆ ಯಾವ ಮುಖ್ಯಮಂತ್ರಿಯೂ ಈ ರೀತಿ ಬೀದಿಯಲ್ಲಿ ಜನರ ಹಕ್ಕಿಗಾಗಿ, ಸುರಕ್ಷತೆಗಾಗಿ ಆಗ್ರಹಿಸಿ ರಾತ್ರಿ ಕಳೆದ ಉದಾಹರಣೆ ಇಲ್ಲ. ಹೀಗಾಗಿ ಕೇಜ್ರಿವಾಲ್ ವ್ಯವಸ್ಥೆ ಪರಿವರ್ತನೆಗಾಗಿ ಈ ರೀತಿ ಕೈಗೊಳ್ಳುವ ಹೋರಾಟ ಅರಾಜಕತೆ ಎನಿಸಿದರೂ ದೂರಗಾಮಿ ಪರಿಣಾಮ ಬೀರಲಿದೆ ಮಾತ್ರವಲ್ಲ ಇದರಿಂದ ಪಕ್ಷವು ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ.

ಮೋದಿ ಭ್ರಷ್ಟಾಚಾರದ ಬಗ್ಗೆ ಬಹಳ ಮಾತಾಡಿದರೂ ಯಡಿಯೂರಪ್ಪನವರಂಥ ಭ್ರಷ್ಟಾಚಾರದ ಆಪಾದನೆ ಹೊತ್ತಿರುವ ವ್ಯಕ್ತಿಗಳನ್ನು yeddy-reddyಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಯಡಿಯೂರಪ್ಪ ಆಪರೇಶನ್ ಕಮಲ ಎಂಬ ಅನೈತಿಕ ರಾಜಕಾರಣ ಮಾಡಿದ ಇತಿಹಾಸ ಹಾಗೂ ರೆಡ್ಡಿ ಸಹೋದರರ ಅಕ್ರಮ ಗಣಿಗಾರಿಕೆಯನ್ನು ತಡೆಯಲು ಯಾವ ಕ್ರಮವನ್ನೂ ಕೈಗೊಳ್ಳದ ಚರಿತ್ರೆ ಹೊಂದಿದ್ದಾರೆ. ಜನಾರ್ಧನ ರೆಡ್ಡಿಯನ್ನು ಗಣಿ ಅಕ್ರಮಗಳಿಗಾಗಿ ಜೈಲಿಗೆ ಕಳುಹಿಸಲು ಕಾರಣವಾದದ್ದು ಎಸ್. ಆರ್. ಹಿರೇಮಠ ಅವರ ನ್ಯಾಯಾಂಗ ಹೋರಾಟವೇ ವಿನಃ ಯಡಿಯೂರಪ್ಪನವರು ಗಣಿ ಅಕ್ರಮದ ವಿರುದ್ಧ ಕ್ರಮ ಕೈಗೊಂಡು ಅವರು ಜೈಲಿಗೆ ಹೋದದ್ದು ಅಲ್ಲ. ಯಡಿಯೂರಪ್ಪ ಮಾಧ್ಯಮಗಳನ್ನು ಕೂಡ ತನ್ನ ಪರವಾಗಿ ಭ್ರಷ್ಟಗೊಳಿಸಿದ ಆಪಾನೆಗಳಿವೆ. ಹೀಗಿದ್ದರೂ ಇಂಥವರನ್ನು ಮೋದಿ ಸಮರ್ಥಿಸಿಕೊಳ್ಳುವುದು ಹಾಗೂ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವುದು ದೇಶಕ್ಕೆ ಕೊಡುವ ಸಂದೇಶ ಏನು? ಮೋದಿ ವೈಯಕ್ತಿಕವಾಗಿ ಭ್ರಷ್ಟನಲ್ಲದಿರಬಹುದು ಆದರೆ ಅವರ ಗುಜರಾತಿನ ಕೆಲವು ಮಂತ್ರಿಗಳ ಮೇಲೇ ಭ್ರಷ್ಟಾಚಾರದ ಆರೋಪಗಳು ಇವೆ. ರಾಜ್ಯದಲ್ಲಿ ಸಶಕ್ತ ಲೋಕಾಯುಕ್ತ ವ್ಯವಸ್ಥೆ ಇಲ್ಲದಿರುವ ಕಾರಣ ಇವೆಲ್ಲ ಬೆಳಕಿಗೆ ಬಂದಿಲ್ಲ. ಇರುವ ಲೋಕಾಯುಕ್ತ ವ್ಯವಸ್ಥೆಯನ್ನೂ ಮೋದಿ ಮತ್ತಷ್ಟು ದುರ್ಬಲಗೊಳಿಸಿ ಅದನ್ನು ಸರ್ಕಾರದ ಕೈಗೊಂಬೆಯನ್ನಾಗಿ ಪರಿವರ್ತಿಸಿದ್ದಾರೆ. ಇಂಥವರಿಂದ ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದು ಹೇಗೆ ಸಾಧ್ಯ? ಮೋದಿ ಒಬ್ಬ ಪ್ರಾಮಾಣಿಕವಾಗಿದ್ದರೆ ಸಾಕೇ? ಹಾಗೆ ನೋಡಿದರೆ ಮನಮೋಹನ್ ಸಿಂಗ್ ವೈಯಕ್ತಿಕವಾಗಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರು ಪ್ರಾಮಾಣಿಕರಾಗಿದ್ದರೂ ಅವರ ಸಂಪುಟದ ಸಚಿವರು ಭ್ರಷ್ಟಾಚಾರ ಮಾಡುವುದನ್ನು ನೋಡಿಯೂ ಅದನ್ನು ತಡೆಯದೆ ಇರುವ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮೋದಿ ಪ್ರಧಾನಿಯಾದರೂ ಮುಂದುವರಿಯಲಿದೆ ಎಂಬುದರ ಮುನ್ಸೂಚನೆಯಾಗಿ ಮೋದಿ ಯಡಿಯೂರಪ್ಪನವರನ್ನು ವಾಪಸ್ ಪಕ್ಷಕ್ಕೆ ಕರೆದುಕೊಂಡಿದ್ದರಲ್ಲಿಯೇ ಕಂಡುಬರುತ್ತದೆ. ಅದೇ ರೀತಿ ಭ್ರಷ್ಟಾಚಾರದ ಆಪಾದನೆ ಹೊಂದಿರುವ ನಿತಿನ್ ಗಡ್ಕರಿ, ಅನಂತ್ ಕುಮಾರ್, ಗಣಿಕಳ್ಳ ರೆಡ್ಡಿಗಳಿಂದ ಹಣ ಪಡೆದ ಆಪಾದನೆ ಹೊಂದಿರುವ ಸುಷ್ಮಾ ಸ್ವರಾಜ್ ಮೊದಲಾದವರು ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಇದ್ದಾರೆ. ಇಂಥ ವ್ಯಕ್ತಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ ಎಂದರೆ ಅದನ್ನು ನಂಬಲು ಸಾಧ್ಯವೇ? ಭ್ರಷ್ಟಾಚಾರದ ಬಗ್ಗೆ ಬಹಳ ದೊಡ್ಡ ಬೊಬ್ಬೆ ಹಾಕುತ್ತಿರುವ ಬಿಜೆಪಿ ತನ್ನ ವೆಬ್‌ಸೈಟಿನಲ್ಲಿ ಪಕ್ಷಕ್ಕೆ ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಎಲ್ಲರಿಗೂ ಗೊತ್ತಾಗುವಂತೆ ಹಾಕುವ ಧೈರ್ಯವನ್ನು ತೋರಿಸುತ್ತಿಲ್ಲ. ಹೀಗಾಗಿ ಅದರ ಭ್ರಷ್ಟಾಚಾರದ ವಿರುದ್ಧ ಹೋರಾಟವೆಂಬುದು ಕೇವಲ ಬಾಯ್ಮಾತಿಗೆ ಸೀಮಿತವಾಗಿರುವಂತೆ ಕಂಡುಬರುತ್ತದೆ. ಆದರೆ ಆಮ್ ಆದ್ಮಿ ಪಕ್ಷವಾದರೋ ತನಗೆ ದೇಣಿಗೆ ನೀಡಿದವರ ಪಟ್ಟಿಯನ್ನು ಆ ಕ್ಷಣವೇ ತನ್ನ ವೆಬ್‌ಸೈಟಿನಲ್ಲಿ ತೋರಿಸುವ ವ್ಯವಸ್ಥೆ ಮಾಡಿ ಸಂಪೂರ್ಣ ಪಾರದರ್ಶಕತೆಯನ್ನು ಮೆರೆದಿದೆ. ಹೀಗಾಗಿ ಬಿಜೆಪಿಗಿಂತ ಆಮ್ ಆದ್ಮಿ ಪಕ್ಷವು ಎಷ್ಟೋ ಉತ್ತಮ ಎಂದು ಹೇಳಬಹುದಾಗಿದೆ. ಬಿಜೆಪಿ ಪಕ್ಷದ ಅತ್ಯಂತ ದುಬಾರಿಯಾದ ಸಾರ್ವಜನಿಕ ರ್ಯಾಲಿಗಳಿಗೆ ನೀರಿನಂತೆ ಹಣ ಚೆಲ್ಲಲು ಯಾರು ದೇಣಿಗೆ ಯಾಕಾಗಿ ಕೊಡುತ್ತಿದ್ದಾರೆ ಎಂಬುದು ಜನಸಾಮಾನ್ಯರಿಗೆ ತಿಳಿಯುತ್ತಿಲ್ಲ. ಈ ಹಣದ ಮೂಲ ತಿಳಿದರೆ ಬಿಜೆಪಿಯ ಪಾರದರ್ಶಕ ಆಡಳಿತದ ನೀಡುವ ಭರವಸೆ ಎಷ್ಟು ಪೊಳ್ಳು ಎಂಬುದು ಜನರಿಗೆ ಗೊತ್ತಾಗಲಿದೆ.

ಬಿಜೆಪಿಯ ನೇತೃತ್ವದ ಆಡಳಿತ ಬಂದರೆ ಶಿಕ್ಷಣ ಕ್ಷೇತ್ರದಲ್ಲಿ ವಿಪರೀತ ಕೇಸರೀಕರಣ ಜಾರಿಗೆ ಬರುತ್ತದೆ. ಸಂಘ ಪರಿವಾರದ ಎಲ್ಲ ಸಂಘಟನೆಗಳೂ ಪರ್ಯಾಯ ಆಡಳಿತ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಾರಂಭಿಸುತ್ತವೆ. ಕಾಂಗ್ರೆಸ್ಸಿಗೆ ನೆಹರೂ ಕುಟುಂಬದ narender_modi_rssಯಜಮಾನಿಕೆಯಾದರೆ ಬಿಜೆಪಿಗೆ ಸಂಘ ಪರಿವಾರದ ಯಜಮಾನಿಕೆ ಕಂಡುಬರುತ್ತದೆ. ಸಂಘ ಪರಿವಾರವು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸದೆಯೇ ಪರೋಕ್ಷ ಆಡಳಿತ ಚಲಾಯಿಸಲು ಆರಂಭಿಸುತ್ತದೆ. ಹೀಗಾಗಿ ಬಿಜೆಪಿಯ ಆಡಳಿತ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ, ಪುರೋಹಿತಶಾಹಿ ವ್ಯವಸ್ಥೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಬಿಜೆಪಿಗೆ ಕುರುಡಾಗಿ ಮತ ಚಲಾಯಿಸುವ ಮುನ್ನ ಇದನ್ನು ನಾವು ಯೋಚಿಸಬೇಕಾಗುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ಈ ರೀತಿ ಹೈಕಮಾಂಡ್ ಆಡಳಿತ ವ್ಯವಸ್ಥೆ ಇಲ್ಲ. ಹೀಗಾಗಿಯೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ಕೈಗೊಂಡರೂ ಅದನ್ನು ಅರಾಜಕತೆ ಹಬ್ಬಿಸುತ್ತಾರೆ ಎಂದು ಹೇಳುವುದು ಸಮಂಜಸವಾಗಿ ಕಾಣುವುದಿಲ್ಲ. ನಕ್ಸಲರಂತೆ ಕೇಜ್ರಿವಾಲ್ ಬಂದೂಕು ಹಿಡಿದಿದ್ದಾರೆಯೇ ಅಥವಾ ಜನರನ್ನು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರಕ್ಕೆ ಇಳಿಯಲು ಕರೆ ನೀಡಿದ್ದಾರೆಯೇ ಎಂದರೆ ಅಂಥ ಯಾವುದೇ ಕೃತ್ಯ ಅವರು ಮಾಡಿಲ್ಲ. ಹೀಗಿದ್ದರೂ ಅವರು ದೇಶದಲ್ಲಿ ಅರಾಜಕತೆ ಹಬ್ಬಿಸುತ್ತಿದ್ದಾರೆ ಎಂದು ಮುಖ್ಯ ವಾಹಿನಿಯ ಮಾಧ್ಯಮಗಳು ಹೇಳುತ್ತಿರುವುದು ಸೂಕ್ತವಾದದ್ದಲ್ಲ. ಜಡ್ಡುಗಟ್ಟಿದ ವ್ಯವಸ್ಥೆಯ ಸುಧಾರಣೆಗೆ ಇಂಥ ಹೋರಾಟಗಳೂ ಅಗತ್ಯ. ಇದು ಜಡ್ಡು ಗಟ್ಟಿರುವ ವ್ಯವಸ್ಥೆಯಲ್ಲಿ ಸಂಚಲನ ತರಲು ಸಹಾಯವಾಗಲಿದೆ. ಹೀಗಾಗಿ ಆಮ್ ಆದ್ಮಿ ಪಕ್ಷದ ಈ ವಿಭಿನ್ನ ಹೋರಾಟ ಸ್ವಾಗತಾರ್ಹ ಬೆಳವಣಿಗೆ ಎಂದೇ ಹೇಳಬೇಕಾಗುತ್ತದೆ.

ಆಮ್ ಆದ್ಮಿ ಪಕ್ಷ ಜನತೆಯ ಆಶೋತ್ತರ ಕಡೆಗಣಿಸದಿರಲಿ

– ಆನಂದ ಪ್ರಸಾದ್

ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೇರಿದ ನಂತರ ಅದರ ಕಾರ್ಯವೈಖರಿಯನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ. ಹೀಗಾಗಿ ಆಮ್ ಆದ್ಮಿ ಪಕ್ಷದ ದಿನ ದಿನದ ಚಟುವಟಿಕೆಗಳೂ ಸುದ್ದಿ ವಾಹಿನಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಹಿಂದಿ ಸುದ್ದಿ ವಾಹಿನಿಗಳಲ್ಲಿ ವಿಮರ್ಶೆಗೆ, ಚರ್ಚೆಗೆ ಒಳಗಾಗುತ್ತಿವೆ. ಆಮ್ ಆದ್ಮಿ ಪಕ್ಷದ ಪ್ರತಿಯೊಂದು ನಡೆಯನ್ನೂ ಭೂತಗನ್ನಡಿ ಹಿಡಿದು ಟಿವಿ ಮಾಧ್ಯಮಗಳು ಪ್ರತಿ ದಿನದ ಆಧಾರದಲ್ಲಿ ವಿಮರ್ಶೆಗೆ ಒಳಪಡಿಸುತ್ತಿರುವುದರಿಂದ ಈ ಪಕ್ಷವು ದೇಶದಲ್ಲಿ ಅಪಾರ ಭರವಸೆಯನ್ನು ಹುಟ್ಟು ಹಾಕಿದೆ ಎಂಬುದು ಕಂಡುಬರುತ್ತದೆ. ಈ ಹಿಂದಿನ ಯಾವ ಸರ್ಕಾರದ ನಡೆಯನ್ನೂ ಈ ರೀತಿ ಭೂತಗನ್ನಡಿ ಹಿಡಿದು ದೈನಂದಿನ ಆಧಾರದಲ್ಲಿ ವಿಮರ್ಶಿಸುವ ಕೆಲಸ ನಡೆದಿರಲಿಲ್ಲ. ಭಾರೀ ಸಾಧನೆಗೈದ ಸರ್ಕಾರ ಎಂದು ಹೇಳಲ್ಪಡುವ ಮೋದಿಯ ಗುಜರಾತ್ ಸರ್ಕಾರದ ನಡೆಯನ್ನು ಕೂಡ ಮಾಧ್ಯಮಗಳು ದೈನಂದಿನ ಆಧಾರದಲ್ಲಿ ವಿಮರ್ಶಿಸುವ ಕೆಲಸ ಮಾಡಿರಲಿಲ್ಲ. ಇದರ ಅರ್ಥವಿಷ್ಟೇ. ದೇಶದಲ್ಲಿ ಬದಲಾವಣೆಯ ತುಡಿತ ಇದೆ. kejriwal_aap_pti_rallyದೇಶವು ಪರ್ಯಾಯಕ್ಕಾಗಿ, ಜವಾಬ್ದಾರಿಯುತ ಹಾಗೂ ದಕ್ಷ ಆಡಳಿತ ನೀಡಬಲ್ಲ ಜನರಿಗಾಗಿ ಕಾಯುತ್ತಿದೆ. ಹೀಗಾಗಿ ಈ ಪಕ್ಷವು ಬಹಳ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕಾಗಿರುವುದು ಅಗತ್ಯವಾಗಿದೆ. ದೆಹಲಿಯಲ್ಲಿ ಮುಖ್ಯ ವಿರೋಧ ಪಕ್ಷವಾದ ಬಿಜೆಪಿ ಆಮ್ ಆದ್ಮಿ ಪಕ್ಷದ ಸರಕಾರದ ಕಾರ್ಯವೈಖರಿಯನ್ನು ವಿಮರ್ಶೆ ಮಾಡಲು ಹಾಗೂ ಟೀಕಿಸಲು ತುದಿಗಾಲಿನಲ್ಲಿ ನಿಂತಿದ್ದು ಅತ್ಯಾತುರ ತೋರಿಸುತ್ತಿದೆ. ಯಾವುದೇ ಸರ್ಕಾರವಾದರೂ ಅದರ ಕಾರ್ಯವೈಖರಿಯನ್ನು ಅಳೆಯಲು, ಅಂದಾಜು ಮಾಡಲು ಕನಿಷ್ಠ ಆರು ತಿಂಗಳನ್ನಾದರೂ ನೀಡಬೇಕು. ಬೀಜವು ಬಿತ್ತಿದ ಕೂಡಲೇ ಗಿಡವಾಗಿ ಫಲ ನೀಡುವುದಿಲ್ಲ. ಬೀಜವು ಹುಟ್ಟಿದ ಕೂಡಲೇ ಫಲ ನೀಡಬೇಕೆಂದು ಆಗ್ರಹಿಸುವುದು ಸೂಕ್ತವಲ್ಲ. ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಕೆಲವೇ ದಿನಗಳಷ್ಟೇ ಆಗಿವೆ. ಆಡಳಿತ ಯಂತ್ರವನ್ನು ಹಿಡಿತಕ್ಕೆ ತರಲು ಆರಂಭದಲ್ಲಿ ಕೆಲವು ದಿನಗಳು ಹಿಡಿಯುತ್ತವೆ ಏಕೆಂದರೆ ಹದಿನೈದು ವರ್ಷಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರವಿದ್ದ ಕಾರಣ ಎಲ್ಲ ಆಯಕಟ್ಟಿನ ಸ್ಥಾನಗಳಲ್ಲಿ ಆ ಪಕ್ಷಕ್ಕೆ ನಿಷ್ಠರಾದ ಅಧಿಕಾರಿ ವರ್ಗ ಗಟ್ಟಿಯಾಗಿ ಬೇರೂರಿರುತ್ತದೆ. ಆಮ್ ಆದ್ಮಿ ಪಕ್ಷವು ಎಷ್ಟೇ ಪ್ರಾಮಾಣಿಕವಾಗಿ ನಡೆದುಕೊಂಡರೂ ದೈನಂದಿನ ಆಡಳಿತ ಕಾರ್ಯವು ಕಾರ್ಯಾಂಗದ ಮೂಲಕ ಅಂದರೆ ಅಧಿಕಾರಿವರ್ಗದ ಮೂಲಕವೇ ನಡೆಯಬೇಕು. ಈ ಅಧಿಕಾರಿವರ್ಗದ ಮನಸ್ಥಿತಿಯನ್ನು ರಾತ್ರಿ ಬೆಳಗಾಗುವುದರಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ಸಮಯವೇ ಹಿಡಿಯಬಹುದು. ಸರ್ಕಾರೀ ನೌಕರ ವರ್ಗಕ್ಕೆ ಭಾರತದಲ್ಲಿ ಅತಿಯಾದ ನೌಕರಿಯ ಭದ್ರತೆ ಇರುವ ಕಾರಣ ಅವರನ್ನು ಬೇಕಾದಂತೆ ಪಳಗಿಸುವುದು ಅಷ್ಟು ಸುಲಭವಲ್ಲ. ಕೆಲಸ ಮಾಡದ ಸೋಮಾರಿ ಹಾಗೂ ಭ್ರಷ್ಟ ಸರ್ಕಾರೀ ನೌಕರರನ್ನು ಖಾಸಗಿ ಸಂಸ್ಥೆಗಳು ತೆಗೆದು ಬಿಸಾಡಿದಂತೆ ಬಿಸಾಡಲು ಯಾವುದೇ ಸರ್ಕಾರಕ್ಕೂ ಆಗುವುದಿಲ್ಲ. ಹೀಗಾಗಿ ಸರ್ಕಾರೀ ನೌಕರರ ಸೋಮಾರಿತನ, ಭ್ರಷ್ಟತೆಯನ್ನು ರಾತ್ರಿ ಹಗಲಾಗುವುದರೊಳಗೆ ಬದಲಾಯಿಸಲು ಸಾಧ್ಯವಿಲ್ಲ. ಇರುವ ಸರ್ಕಾರಿ ಅಧಿಕಾರಿಗಳಲ್ಲಿಯೇ ದಕ್ಷ ಹಾಗೂ ಪ್ರಾಮಾಣಿಕರನ್ನು ಹುಡುಕಿ ಪ್ರಮುಖ ಹುದ್ದೆಗಳಿಗೆ ನೇಮಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕಾಗುತ್ತದೆ. ಹೊಸ ಸರ್ಕಾರ ಬಯಸಿದರೂ ಹಿಂದಿದ್ದ ಭ್ರಷ್ಟ ಸರ್ಕಾರಕ್ಕೆ ಬದ್ಧರಾಗಿದ್ದ ಅಧಿಕಾರಿಗಳು ಹೊಸ ಸರ್ಕಾರದ ಜೊತೆ ಸಹಕರಿಸುವುದಿಲ್ಲ. ಹೀಗಾಗಿ ಹೊಸ ಸರ್ಕಾರಕ್ಕೆ ಸಮಯ ಕೊಡಬೇಕಾಗಿರುವುದು ಅಗತ್ಯ.

ಬಿಜೆಪಿ ಪಕ್ಷದ ನಾಯಕರು ಹಿಂದಿನ ಸರ್ಕಾರದ ಭ್ರಷ್ಟತೆಯ ಬಗ್ಗೆ ತನಿಖೆ ಮಾಡಲು ಆಮ್ ಆದ್ಮಿ ಪಕ್ಷದ ನಾಯಕರು ಮುಂದಾಗುತ್ತಿಲ್ಲ ಎಂದು ದೂರುತ್ತಿದ್ದಾರೆ. aap-kejriwal-yogendra-yadavಬಹುಶ: ಇದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಇದನ್ನು ನಡೆಸಲು ದೆಹಲಿಯಲ್ಲಿ ಸೂಕ್ತ ತನಿಖಾ ಸಂಸ್ಥೆಯನ್ನು ಅಥವಾ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ. ಹಾಗೆ ಮಾಡದೆ ಹಿಂದಿನ ಸರ್ಕಾರದ ಭ್ರಷ್ಟತೆಯ ಬಗ್ಗೆ ಹಿಂದಿನ ಸರ್ಕಾರದ ಭ್ರಷ್ಟ ಅಧಿಕಾರಿಗಳ ಮೂಲಕವೇ ತನಿಖೆ ನಡೆಸಿದರೆ ಹಿಂದಿನ ಸರ್ಕಾರದ ಎಲ್ಲ ಭ್ರಷ್ಟಾಚಾರಗಳನ್ನೂ ಮುಚ್ಚಿ ಹಾಕುವ ಸಾಧ್ಯತೆ ಇದೆ. ದೆಹಲಿಗೆ ಹೊಸ ಜನಲೋಕಪಾಲ್ ಅಥವಾ ಲೋಕಾಯುಕ್ತ ವ್ಯವಸ್ಥೆಯನ್ನು ಆಮ್ ಆದ್ಮಿ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಹದಿನೈದು ದಿನಗಳಲ್ಲಿ ತರುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಇಂಥವುಗಳನ್ನು ರೂಪಿಸಲು ಕಾನೂನಿನ ಪ್ರಕ್ರಿಯೆ ಸಾಂವಿಧಾನಿಕವಾಗಿ ನಡೆಯಬೇಕಾಗಿರುವ ಕಾರಣ ಇದು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಹೀಗಾಗಿ ಹೊಸ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರಮಣಕಾರಿಯಾಗಿ ಅದರ ಮೇಲೆ ಮುಗಿಬೀಳುವ ಧೋರಣೆ ಸಮಂಜಸವಲ್ಲ. ಹೊಸ ಸರ್ಕಾರದ ಇದುವರೆಗಿನ ಕೆಲಸ ನೋಡಿದರೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕಂಡುಬರುತ್ತಾ ಇದೆ. ಹೀಗಿದ್ದರೂ ಅದೇ ಪಕ್ಷದ ವಿನೋದ್ ಕುಮಾರ್ ಬಿನ್ನಿ ಎಂಬ ಮಾಜಿ ಕಾಂಗ್ರೆಸ್ಸಿಗ ಪಕ್ಷದ ವಿರುದ್ಧ ಭುಗಿಲೆದ್ದಿರುವುದು ಅಧಿಕಾರದಾಹದಿಂದ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಂಥ ಬೇರೆ ಪಕ್ಷಗಳ ಅಧಿಕಾರದಾಹಿಗಳನ್ನು ಆಮ್ ಆದ್ಮಿ ಪಕ್ಷವು ತೆಗೆದುಕೊಂಡು ತಪ್ಪು ಮಾಡಿದೆ. ಈಗ ಅಧಿಕಾರ ಸಿಕ್ಕದೆ ಇದ್ದಾಗ ಅಂಥವರು ಭುಗಿಲೇಳುತ್ತಿದ್ದಾರೆ. ಇನ್ನು ಮುಂದಾದರೂ ಬೇರೆ ಪಕ್ಷಗಳ ಅಧಿಕಾರದಾಹಿಗಳನ್ನು ಆಮ್ ಆದ್ಮಿ ಪಕ್ಷವು ತೆಗೆದುಕೊಳ್ಳದೆ ರಾಜಕೀಯ ಕ್ಷೇತ್ರಕ್ಕೆ ಹೊಸಬರಾದ ಅಧಿಕಾರದ ಬಗ್ಗೆ ತೆವಲು ಇಲ್ಲದ ಜನರನ್ನು ತೆಗೆದುಕೊಳ್ಳುವುದು ಅದರ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅಗತ್ಯ. ಇಲ್ಲದೆ ಹೋದರೆ ಪಕ್ಷದ ವಿಶ್ವಾಸಾರ್ಹತೆಯ ಮೇಲೆ ಜನರ ಅಪನಂಬಿಕೆ ಬೆಳೆಯಲು ಆರಂಭವಾಗಿ ಪಕ್ಷದ ರಾಷ್ಟ್ರವ್ಯಾಪಿ ಬೆಳವಣಿಗೆಗೆ ಧಕ್ಕೆಯಾದೀತು.

ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷವು ದೃಢ ನಿಲುವನ್ನು ತೆಗೆದುಕೊಂಡು ಹಿಂದಿನ ಸರ್ಕಾರದ ಭ್ರಷ್ಟತೆಯ ವಿರುದ್ಧ ಸೂಕ್ತ ಕ್ರಮ Kejriwal-janata-durbarಕೈಗೊಳ್ಳದೆ ಹೋದರೆ ಅದು ಭ್ರಷ್ಟತೆಯ ವಿರುದ್ಧ ರಾಜಿ ಮಾಡಿಕೊಂಡು ಅಧಿಕಾರಕ್ಕೆ ಅಂಟಿಕೊಳ್ಳುತ್ತಿದೆ ಹಾಗೂ ಉಳಿದ ಪಕ್ಷಗಳಿಗಿಂತ ಭಿನ್ನ ಅಲ್ಲ ಎಂಬ ಸಂದೇಶ ದೇಶಕ್ಕೆ ಹೋಗುವುದು ಖಚಿತ. ಇಂಥ ಸಂದೇಶ ದೇಶಕ್ಕೆ ಹೋದರೆ ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಗೆ ತೀವ್ರ ಪೆಟ್ಟು ಬೀಳಬಹುದು. ಇಂಥ ಒಂದು ಸನ್ನಿವೇಶ ನಿರ್ಮಾಣ ಆಗಲಿ ಎಂದು ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿತರ ಪಕ್ಷಗಳು ಕಾಯುತ್ತಿವೆ ಹಾಗೂ ಆ ಕುರಿತು ಪ್ರಚಾರ ಮಾಡಲು ಹಾತೊರೆಯುತ್ತಿವೆ. ಹೀಗಾಗಿ ದೆಹಲಿಯ ಸರ್ಕಾರ ಬಿದ್ದು ಹೋದರೂ ಭ್ರಷ್ಟತೆಯ ವಿರುದ್ಧ ತಮ್ಮ ದೃಢ ಸಮರ ಮುಂದುವರಿಯಲಿದೆ ಎಂಬ ಸಂದೇಶ ದೇಶಕ್ಕೆ ನೀಡುವುದು ಆಮ್ ಆದ್ಮಿ ಪಕ್ಷದ ದೇಶವ್ಯಾಪಿ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾಗಿದೆ. ಆಮ್ ಆದ್ಮಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಗೆ ಸೀಮಿತ ಸಂಖ್ಯೆಯ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ. ಅದು ಲೋಕಸಭಾ ಚುನಾವಣೆಗಳಲ್ಲಿ ಕಾರ್ಯ ಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡುವ ತಪ್ಪು ಮಾಡಬಾರದು. ಈಗಾಗಲೇ ಅದು ದೇಶದ ಗಮನ ಸೆಳೆದಿರುವ ಕಾರಣ ಇನ್ನು ದೇಶದ ಗಮನ ಸೆಳೆಯಲು ಯಾವುದೇ ಗಿಮಿಕ್ ಮಾಡಬೇಕಾದ ಅಗತ್ಯ ಇಲ್ಲ. ದಕ್ಷ, ಪ್ರಾಮಾಣಿಕ ಹಾಗೂ ಸ್ಪಂದನಶೀಲ ಆಡಳಿತದ ಭರವಸೆ ನೀಡಿದರೂ ಸಾಕು. ದೇಶದಲ್ಲಿ ಇಂದು ಕಾಂಗ್ರೆಸ್ ವಿರೋಧಿ ಅಲೆ ಇದೆ, ಆದರೆ ಹಾಗೆಂದು ಬಿಜೆಪಿ ಪರ ಅಲೆಯೇನೂ ಇಲ್ಲ. ಕಾಂಗ್ರೆಸ್ಸಿನ ವಿರುದ್ಧ ದೇಶಾದ್ಯಂತ ಸಿಟ್ಟಿಗೆದ್ದಿರುವ ಮತದಾರರು ಬೇರೆ ಪರ್ಯಾಯ ಇಲ್ಲದೆ ಬಿಜೆಪಿಯ ಕಡೆ ಹಾಗೂ ಮೋದಿಯ ಕಡೆ ಮುಖ ಮಾಡಿದ್ದಾರೆ. ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ಸಿನ ಜೊತೆ ಪರಿಸ್ಥಿತಿಯ ಅನಿವಾರ್ಯತೆಗೆ ಸಿಲುಕಿ ಕಾಂಗ್ರೆಸ್ಸಿನ ಬಾಹ್ಯ ಬೆಂಬಲದಿಂದ ದೆಹಲಿಯಲ್ಲಿ ಇಷ್ಟವಿಲ್ಲದಿದ್ದರೂ ಸರ್ಕಾರ ಮಾಡಿರುವ ಆಮ್ ಆದ್ಮಿ ಪಕ್ಷದ ನಿಲುವನ್ನು ಜನ, ಬಿಜೆಪಿಯ ಬೆಂಬಲಿಗರನ್ನು ಹೊರತುಪಡಿಸಿ, ಒಪ್ಪಿಕೊಳ್ಳಬಲ್ಲರು ಆದರೆ ಅಧಿಕಾರದ ಮಾಯೆಗೆ ಬಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆಯ ಬಗ್ಗೆ ಮೃದು ಧೋರಣೆ ತಳೆದರೆ ಒಪ್ಪಿಕೊಳ್ಳಲಾರರು. ಅಂಥ ಮೃದು ಧೋರಣೆಯನ್ನು ಆಮ್ ಆದ್ಮಿ ಪಕ್ಷ ತಳೆದರೆ ದೇಶದಾದ್ಯಂತ ಕವಿದಿರುವ ಕಾಂಗ್ರೆಸ್ ವಿರೋಧಿ ಅಲೆಯ ದುಷ್ಪರಿಣಾಮ ಆಮ್ ಆದ್ಮಿ ಪಕ್ಷದ ಲೋಕಸಭಾ ಅಭ್ಯರ್ಥಿಗಳ ಚುನಾವಣಾ ಸಾಧನೆಯ ಮೇಲೆಯೂ ಬೀಳಬಹುದು. ಅಂಥ ದುಷ್ಪರಿಣಾಮ ಬೀಳದಂತೆ ವಿವೇಕದ ನಡೆಯನ್ನು ಆಮ್ ಆದ್ಮಿ ಪಕ್ಷ ಅಳವಡಿಸಿಕೊಳ್ಳಬೇಕಾಗಿದೆ.

ದೆಹಲಿಯಂಥ ಸಣ್ಣ ರಾಜ್ಯದಲ್ಲಿ ಪಕ್ಷವನ್ನು ಬೆಳೆಸುವಾಗ ಸಾಮಾಜಿಕ, ಆರ್ಥಿಕ, ವಿದೇಶಾಂಗ ಮೊದಲಾದ ವಿಷಯಗಳ ಬಗ್ಗೆ ಸ್ಪಷ್ಟ ಧೋರಣೆ ಅಗತ್ಯ ಇಲ್ಲದೆ ಇರಬಹುದು, ಆದರೆ ದೇಶವ್ಯಾಪಿ ಪಕ್ಷವನ್ನು ಬೆಳೆಸುವಾಗ ಸ್ಪಷ್ಟ ಧೋರಣೆಗಳನ್ನು ಇಂಥ ವಿಷಯಗಳಲ್ಲಿ ತೆಗೆದುಕೊಳ್ಳುವುದು ಉತ್ತಮ. ಇಲ್ಲದೆ ಹೋದರೆ ಪಕ್ಷದೊಳಗೆ ವಿವಿಧ ಸದಸ್ಯರ ನಡುವೆ ಮುಂದೆ ಭಿನ್ನಮತ ಹಾಗೂ ಗೊಂದಲ ತಲೆದೋರಬಹುದು. ಇಂಥ ಬೆಳವಣಿಗೆಗಳನ್ನು ತಪ್ಪಿಸಲು ಸೂಕ್ತ ಸಾಮಾಜಿಕ, ಆರ್ಥಿಕ, ವಿದೇಶಾಂಗ ಮೊದಲಾದ ನೀತಿಗಳನ್ನು ಆಮ್ ಆದ್ಮಿ ಪಕ್ಷ ಅಳವಡಿಸಿಕೊಳ್ಳುವುದು ಸೂಕ್ತವಾಗಿದೆ. ಇಂಥವುಗಳನ್ನು ಈಗಲೇ ಅಳವಡಿಸಿದರೆ ಅದಕ್ಕೆ ಹೊಂದಿಕೊಂಡವರು ಪಕ್ಷದೊಳಗೆ ಬರುತ್ತಾರೆ, ಅದಕ್ಕೆ ಹೊಂದಿಕೊಳ್ಳದವರು ಹೊರಗೆ ನಿಲ್ಲುತ್ತಾರೆ. ಇದು ಮುಂದೆ ಉಂಟಾಗಬಹುದಾದ ಗೊಂದಲಗಳನ್ನು ತಡೆಯಲು ಅಗತ್ಯ.

ಕೈಗಾರಿಕೆ, ವಾಣಿಜ್ಯ, ಉದ್ಯಮ ಸ್ನೇಹಿ ನೀತಿಗಳನ್ನು ಯಾವುದೇ ಸರ್ಕಾರವಾದರೂ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ಇದೆ. ಹೀಗಾಗಿ ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳನ್ನು ಯಾವ ಸರ್ಕಾರ ಬಂದರೂ ತಡೆಯಲಾಗದ ಅನಿವಾರ್ಯತೆ ಇದೆ. Tilling_Rice_Fieldsಇದು ದೇಶದ ಜನರ ಜೀವನ ಶೈಲಿಯನ್ನು ಅವಲಂಬಿಸಿದೆ. ಜನ ಇಂದು ಸರಳ ಜೀವನದಲ್ಲಿ ತೃಪ್ತಿ ಪಡುವ ಪ್ರವೃತ್ತಿ ಹೊಂದಿಲ್ಲ. ಹೀಗಿರುವ ಪರಿಸ್ಥಿತಿಯಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ತೆರೆದುಕೊಳ್ಳದೆ ವಿಧಿ ಇಲ್ಲ. ಹೀಗೆ ಮಾಡುವಾಗ ಕೃಷಿಕರು, ಕಾರ್ಮಿಕರು, ತಳಸಮುದಾಯದ ಜನವರ್ಗದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರದ ರೀತಿಯಲ್ಲಿ ಸರ್ಕಾರ ನೋಡಿಕೊಳ್ಳಬೇಕಾಗುತ್ತದೆ. ದೇಶದ ಅಗತ್ಯಕ್ಕೆ ಅನುಗುಣವಾಗಿ ಗಣಿಗಾರಿಕೆ ಮಾಡಲೇಬೇಕಾಗುತ್ತದೆ. ಗಣಿ ಸಂಪತ್ತಿನ ಲಾಭ ದೇಶದ ಬೊಕ್ಕಸಕ್ಕೆ ಆಗುವ ರೀತಿಯಲ್ಲಿ ನೀತಿಗಳನ್ನು ರೂಪಿಸಬೇಕಾದ ಅಗತ್ಯ ಇದೆ. ಇಂದು ಇರುವ ನೀತಿಗಳು ದೇಶದ ಗಣಿ ಹಾಗೂ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು ಖಾಸಗಿ ಖಜಾನೆ ತುಂಬಿಸಿಕೊಳ್ಳುವವರಿಗೆ ಅನುಕೂಲಕರವಾಗಿವೆ. ಇದನ್ನು ದೇಶದ ಬೊಕ್ಕಸ ತುಂಬಿಸುವ ರೀತಿ ಬದಲಾಯಿಸಬೇಕಾಗಿದೆ ಹಾಗೂ ಹಾಗೆ ಪಡೆದ ಹಣದಿಂದ ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷವು ಸೂಕ್ತ ನೀತಿಗಳನ್ನು ತರುವ ಕುರಿತು ಚಿಂತನೆ ನಡೆಸಬೇಕಾಗಿದೆ. ದೇಶದಲ್ಲಿ ಕೃಷಿ ಕ್ಷೇತ್ರವು ಅತೀ ಹೆಚ್ಚು ಜನರಿಗೆ ಜೀವನಾಧಾರವಾಗಿ ಇಂದಿಗೂ ಉಳಿದುಕೊಂಡಿದೆ. ಹೀಗಾಗಿ ಕೃಷಿ ಕ್ಷೇತ್ರದ ಸುಧಾರಣೆಗೆ ಯಾವ ಹಾಗೂ ಕೃಷಿ ಲಾಭದಾಯಕವಾಗಿ ರೂಪುಗೊಳ್ಳಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಚಿಂತಕರ, ಪ್ರತಿಭಾವಂತರ ಸಲಹೆಗಳನ್ನು ಆಮ್ ಆದ್ಮಿ ಪಕ್ಷವು ಆಹ್ವಾನಿಸಿ ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಹೀಗೆ ಮಾಡುವಾಗ ಕೂಡ ಯಾವುದೇ ಕಾರ್ಯಸಾಧ್ಯವಲ್ಲದ ಆಶ್ವಾಸನೆಗಳನ್ನು ನೀಡಲೇಬಾರದು. ನೀಡಿದರೆ ಮುಂದೆ ಅದನ್ನು ಪೂರೈಸುವುದು ಕಷ್ಟವಾದರೆ ಜನ ಭ್ರಮನಿರಸನಕ್ಕೆ ಒಳಗಾಗುತ್ತಾರೆ ಎಂಬ ಎಚ್ಚರ ಇದ್ದರೆ ಒಳ್ಳೆಯದು. ವಿದ್ಯಾವಂತರು ಹಾಗೂ ಪ್ರತಿಭಾವಂತರು ಇಂದು ಕೃಷಿ ಕ್ಷೇತ್ರದಿಂದ ದೂರವಾಗುತ್ತಿದ್ದಾರೆ. ಅವರನ್ನು ಮತ್ತೆ ಕೃಷಿ ಕ್ಷೇತ್ರಕ್ಕೆ ಬರುವಂತೆ ಮಾಡುವ ನೀತಿ ರೂಪಿಸಿದರೆ ದೇಶದ ಕೃಷಿ ಕ್ಷೇತ್ರ ಬಹಳಷ್ಟು ಜನರಿಗೆ ಉದ್ಯೋಗ ನೀಡಬಲ್ಲುದು. ಈ ಕುರಿತು ಆಮ್ ಆದ್ಮಿ ಪಕ್ಷದ ಪ್ರತಿಭಾವಂತರು ಯೋಚಿಸಬೇಕಾದ ಅಗತ್ಯ ಇದೆ.