Category Archives: ನವೀನ್ ಸೂರಿಂಜೆ

ಆರ್.ಎಸ್.ಎಸ್. ಹಿಂದುತ್ವದಲ್ಲಿ ದಲಿತರ ಜೊತೆಗಿನ ವೈವಾಹಿಕ ಸಂಬಂಧಗಳು


-ನವೀನ್ ಸೂರಿಂಜೆ


[ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗರು ಮದುವೆಯಾದರೆ ಅದು ಲವ್ ಜೆಹಾದ್ ಎಂದು ಸಂಘಪರಿವಾರಿಗಳು ಬೊಬ್ಬೆ ಹೊಡೆಯುತ್ತಾರೆ. ಹಿಂದೂ ಮೇಲ್ಜಾತಿಯ ಹುಡುಗಿಯರನ್ನು ದಲಿತರು ಮತ್ತು ಕೆಳ ಜಾತಿಯ ಹುಡುಗರು ಮದುವೆಯಾದರೆ ಸಂಘ ಪರಿವಾರಿಗಳ ನಿಲುವೇನು? ಜಾತಿಗಳನ್ನು ಮರೆತು ಹಿಂದೂಗಳಾದ ನಾವೆಲ್ಲಾ ಒಂದಾಗೋಣ ಎಂದು ಹಿಂದೂ ಸಮಾವೇಶದಲ್ಲಿ ಕರೆ ಕೊಡುವ ಸಂಘಪರಿವಾರ ಜಾತಿ ವ್ಯವಸ್ಥೆಯನ್ನು ಮರೆತು ಅವರಿಗೆ ಬೇಕಾದಾಗ ನೆನಪಿಸಿಕೊಳ್ಳುತ್ತದೆಯೇ ವಿನಹ ಅಂಬೇಡ್ಕರ್ ಹೇಳಿದಂತೆ ಜಾತಿ ವಿನಾಶಕ್ಕೆ ಯತ್ನ ನಡೆಸುವುದಿಲ್ಲ. ಅದಿರಲಿ. ಬೇರೆ ಬೇರೆ ಜಾತಿ, ಧರ್ಮದ ಪ್ರೇಮಿಗಳು ಮನೆ ಮಂದಿ ಅಥವಾ ಸಮಾಜ, ಸಂಘಟನೆಗೆ ಹೆದರಿ ನಮ್ಮಲ್ಲಿಗೆ ಬಂದಾಗ ನಾವು ಗೆಳೆಯರು ಒಟ್ಟಾಗಿ, ಇಲಾಖೆಗಳ ಸಹಕಾರದೊಂದಿಗೆ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇವೆ. ಇಂತಹ ಒಂಬತ್ತು ಮದುವೆ ಮಾಡಿದ ಖುಷಿ ನಮ್ಮಲ್ಲಿದೆ. ಅದರ ಒಂದು ಕಥೆ ಇಲ್ಲಿದೆ. (ಯುವಕ, ಯುವತಿ ಮತ್ತು ಅವರ ತಂದೆ ತಾಯಿಯ ಹೆಸರು ಬದಲಿಸಲಾಗಿದೆ.)]

ಅವಳು ಪೂರ್ತಿ ಥರಗುಟ್ಟುತ್ತಿದ್ದಳು. “ಸಾರ್ ಹೇಗಾದರೂ ಬದುಕಿಸಿ ಸರ್. ಅವರು ತುಂಬಾ ಜನ ಇದ್ದಾರೆ ಸರ್. ಭಜರಂಗದಳದವರು ಸರ್. ಅವರು ನನ್ನನ್ನು ಸುಮ್ಮನೆ ಬಿಡುವುದಿಲ್ಲ. ಅವರ ಬಗ್ಗೆ ನಿಮಗೆ ಗೊತ್ತಿಲ್ಲ ಸರ್” ಎಂದು ಅವಳು ಒಂದೇ ಉಸಿರಿಗೆ ಬಡಬಡಾಯಿಸುತ್ತಿದ್ದಳು. ಅವಳ ಆವೇಶದಷ್ಟೇ ಶಾಂತನಾಗಿದ್ದ ನಾನು “ನನಗೆ ಬಜರಂಗದಳದವರು ಚೆನ್ನಾಗಿ ಗೊತ್ತು. ಅವರ ಯಾವ ಲೀಡರ್ ಅಥ್ವಾ ಕಾರ್ಯಕರ್ತ ಬರುವುದಾದರೆ ಬಂದು ನನ್ ಹತ್ರ ಮಾತನಾಡಲಿ. ನೀನು ತಲೆಬಿಸಿ ಮಾಡಬೇಡ. ನಿನ್ನಂತ ಹುಡುಗಿಯರನ್ನು ಹೆದರಿಸುವುದಕ್ಕಷ್ಟೇ ಅವರ ಪರಾಕ್ರಮ. ಆರಾಮ ಇರು,” ಎಂದು ಅವಳನ್ನು ಸಂತೈಸುತ್ತಿದ್ದೆ.

ಈ ಭಜರಂಗಿಗಳಿಂದ ಬೆದರಿಕೆಗೊಳಗಾದವರ ಮನಸ್ಥಿತಿಯೇ ಅಂತದ್ದು. ಒಂದೋ ಬಜರಂಗಿಗಳ ಜೊತೆ ರಾಜಿ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಬೇರೆ ದಾರಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ. ಒಂದು ಕಾಲದಲ್ಲಿ ಕೋಮುವಾದ, ಜಾತಿ ವ್ಯವಸ್ಥೆಯ ವಿರುದ್ದ ಉಗ್ರವಾಗಿ ಭಾಷಣ ಮಾಡುತ್ತಿದ್ದ ಮಂಗಳೂರು ಯೂನಿವರ್ಸಿಟಿ ಫ್ರೋಫೆಸರ್‌ಗಳು ಈಗ ಬಾಯಿ ಮುಚ್ಚಿ ಕುಳಿತಿರುವುದು ಇದೇ ಕಾರಣಕ್ಕೆ. ಭಾಷಣ ಬಿಡಿ. ರಾಜ್ಯದ ಸೃಜನಶೀಲ ಲೇಖಕಿ ನಾಗವೇಣಿ ಬರೆದಿರುವ “ಗಾಂಧಿ ಬಂದ” ಪುಸ್ತಕ ಮಂಗಳೂರು ಯೂನಿವರ್ಸಿಟಿಯ ಪಾಠ ಪುಸ್ತಕವಾಗಿದ್ದು, ಅದನ್ನು ಪಾಠ ಮಾಡಲು ಪ್ರಾಧ್ಯಾಪಕರು ಸಿದ್ದರಿಲ್ಲ. ಕೆಲವು ಪ್ರಾಧ್ಯಾಪಕರು ವೈಯುಕ್ತಿಕವಾಗಿ ಪ್ರಗತಿಪರರಾಗಿದ್ದರೂ ಗಾಂಧಿ ಬಂದ ಪುಸ್ತಕದಲ್ಲಿನ ಜಾತಿಯ ವ್ಯವಸ್ಥೆಯ ಬಗ್ಗೆ ತರಗತಿಯಲ್ಲಿ ಪಾಠ ಮಾಡಿದರೆ ಎಬಿವಿಪಿ ವಿದ್ಯಾರ್ಥಿಗಳ ಮೂಲಕ ಸಂಘಪರಿವಾರ ತನ್ನ ವಿರುದ್ಧ ಎಲ್ಲಿ ಮುಗಿ ಬೀಳುತ್ತೋ ಎಂಬ ಆತಂಕ ಅವರದ್ದು. ಅದಕ್ಕೆ ಗಾಂಧಿ ಬಂದ ಪುಸ್ತಕದ ಉಸಾಬರಿನೇ ಬೇಡ ಎಂದು ಪುಸ್ತಕವನ್ನೆ ಕೆಲವರು ವಿರೋಧಿಸುತ್ತಿದ್ದಾರೆ. ವಿರೋಧ ಮಾಡಲು ಮನಸ್ಸು ಒಪ್ಪದವರು ನಾಗವೇಣಿಯ ಬೆಂಬಲಕ್ಕಂತೂ ನಿಲ್ಲುವುದಿಲ್ಲ. ಅದೆಲ್ಲಾ ಇರಲಿ. ಸಮಾಜದ ಬಲಿಷ್ಠ ವರ್ಗದ ಸ್ಥಿತಿನೇ ಹೀಗಿರಬೇಕಾದರೆ ಬಿ.ಎ. ಓದಿ ಸಿಟಿ ಸೆಂಟರ್ ಮಾಲ್‌ನ ಅಂಗಡಿಯೊಂದರಲ್ಲಿ ಬಿಲ್ಲು ಬರೆಯೋ ಹುಡುಗಿ ಜೀವ ಇನ್ನೆಷ್ಟು ಥರಗುಟ್ಟಿರಬಹುದು ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಲೇ ಅವಳಿಗೆ ಸಮಾಧಾನ ಹೇಳುತ್ತಿದ್ದೆ.

ಅವಳು ಮಂಗಳೂರಿನ ನಂತೂರು ನಿವಾಸಿ ಚಂದ್ರಶೇಖರ ಮತ್ತು ಶಾಂಭವಿಯವರ ಎರಡನೇ ಪುತ್ರಿ. ಹೆಸರು ಚೈತನ್ಯ. ಜಾತಿ ಕೊಟ್ಟಾರಿ. ಕೊಟ್ಟಾರಿ ಸಮುದಾಯ ಎನ್ನುವಂತದ್ದು ತೀರಾ ಅನ್ನುವಷ್ಟಲ್ಲದಿದ್ದರೂ ಹಿಂದುಳಿದಿರುವ ಸಮುದಾಯ. ಹೆಚ್ಚು ಜನಸಂಖ್ಯೆಯನ್ನು ಹೊಂದಿರದ ಒಂದು ಸೂಕ್ಷ್ಮ ಸಂವೇದನೆ ಉಳ್ಳ ಜಾತಿ. ಇವರನ್ನು ಕಂಚಿಗಾರರು ಎಂದೂ ಕರೆಯುತ್ತಾರೆ. ಕಂಚಿನ ಪಾತ್ರೆ, ಮೂರ್ತಿ ಇನ್ನಿತರ ವಸ್ತುಗಳನ್ನು ತಯಾರಿಸುವುದರಿಂದ ವ್ಯವಹಾರಿಕ ಕಲಾಚತುರತೆಯನ್ನು ಹೊಂದಿರುವವರು. ಈ ಸಮುದಾಯಕ್ಕೆ ಅದೇನು ವ್ಯವಹಾರಗಳು ಗೊತ್ತಿದ್ದರೂ ಕೂಡಾ ಇವರೊಂದು ಅಸಂಘಟಿತ ಹಿಂದುಳಿದ ಜಾತಿ ಎನ್ನುವುದರಲ್ಲಿ ಅನುಮಾನ ಇಲ್ಲ. ಈ ಅಸಂಘಟಿತರಾಗಿರುವ ಹಿಂದುಳಿದ ಜಾತಿಗಳನ್ನು ಮೇಲ್ವರ್ಗಗಳು ಬಳಕೆ ಮಾಡಿಕೊಳ್ಳುವುದಕ್ಕೆ ಸುಲಭವಾಗುತ್ತದೆ. ಸಮುದಾಯದ ಇಂತಹ ದೌರ್ಬಲ್ಯಗಳನ್ನು ಬಳಸಿಕೊಂಡೇ ಕೊಟ್ಟಾರಿಗಳನ್ನು ಬ್ರಾಹ್ಮಣರು ದೇವಸ್ಥಾನದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಕರಾವಳಿಯ ದೇವಸ್ಥಾನಗಳಲ್ಲಿ ಹಿಂದೆಲ್ಲಾ ಕಂಚಿನ ಮೂರ್ತಿಯನ್ನು ಪ್ರತಿಷ್ಟಾಪಿಸುವುದೆಂದರೆ ಅದೊಂದು ಪ್ರತಿಷ್ಠೆಯ ವಿಷಯ. ಬ್ರಾಹ್ಮಣರಲ್ಲಿ ಮತ್ತು ಮೇಲ್ವರ್ಗಗಳಲ್ಲಿ ಅಂತಹ ಪ್ರತಿಷ್ಠೆ ಮೇಳೈಸಿದಾಗೆಲ್ಲಾ ಕಂಚಿಗಾರರು ಬಳಸಲ್ಪಡುತ್ತಿದ್ದರು. ಈಗೆಲ್ಲಾ ದೇವಸ್ಥಾನದಲ್ಲಿ ಚಿನ್ನ ಬೆಳ್ಳಿಯದ್ದೇ ಮೂರ್ತಿಗಳಾಗಿದ್ದರಿಂದ ಕೊಟ್ಟಾರಿಗಳು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಹಿಂದುಳಿದ ಸಮುದಾಯವಾದ ಕೊಟ್ಟಾರಿಗಳನ್ನು ಬಳಸಿಕೊಳ್ಳುವ ಕೆಲಸವನ್ನು ಸಂಘಪರಿವಾರ ಮುಂದುವರಿಸುತ್ತಿದೆ. ಈ ಕಾರಣಕ್ಕಾಗಿಯೇ ಕೊಟ್ಠಾರಿ ಸಮುದಾಯದ ಹೆಚ್ಚಿನ ಯುವಕರು ಭಜರಂಗದಳ, ವಿಶ್ವಹಿಂದೂ  ಪರಿಷತ್‌ನಂತಹ ಆರ್.ಎಸ್.ಎಸ್.ನ ಘಟಕಗಳಲ್ಲಿ ಕಾರ್ಯಕರ್ತರಾಗಿ ಇದ್ದಾರೆ. ಅಲ್ಲೊಬ್ಬರು ಇಲ್ಲೊಬ್ಬರು ನಾಯಕರಾಗಿಯೂ ಬೆಳೆದಿದ್ದಾರೆ. ಆದರೆ ಇವರೆಲ್ಲರನ್ನೂ ನಿಯಂತ್ರಿಸುವುದು ಆರ್.ಎಸ್.ಎಸ್‌ನ ಭಟ್ಟರು. ಎಂತಹ ಕೆಳವರ್ಗದ ಮಂದಿ ನಾಯಕರಾದರೂ ಭಟ್ಟರ ಪಾಲಿಗೆ ಅವರೆಲ್ಲಾ ಕಾರ್ಯಕರ್ತರೇ !

ಈ ರಾಜಕೀಯಗಳೆಲ್ಲಾ ಕೊಟ್ಟಾರಿ ಸಮುದಾಯದ ನಾಯಕರಿಗೇ ಅರ್ಥ ಆಗುವುದಿಲ್ಲ. ಇನ್ನು ಚೈತನ್ಯಳಿಗೆಲ್ಲಿ ಅರ್ಥ ಆಗಬೇಕು. ಅವಳಿಗೆ ಹೆಚ್ಚೆಂದರೆ 23 ವರ್ಷ ವಯಸ್ಸು. ಬಲ್ಮಠದ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಆಕೆ ಕೆಲಸಕ್ಕೆ ಸೇರಿದ್ದು ನಗರದ ಸಿಟಿ ಸೆಂಟರ್ ಮಾಲ್‌ನಲ್ಲಿರುವ ವಸ್ತ್ರದ ಅಂಗಡಿಯಲ್ಲಿ. ಸಿಟಿ ಸೆಂಟರ್ ಮಾಲ್‌ನ ಆಕರ್ಷಣೆಯೇ ಅಂತದ್ದು. ಆ ಮಾಲ್ ಕಟ್ಟುತ್ತಾ ಇರಬೇಕಾದರೆ ಸಿನೇಮಾದಲ್ಲಿ ಬರುವ ಭೂತ ಬಂಗಲೆಯಂತೆ ಮಾಲ್ ಗೋಚರಿಸುತ್ತಿತ್ತು. ಪೂರ್ಣ ಸಿದ್ದಗೊಂಡ ನಂತರ ಅದೊಂದು ಹೊಸ ಲೋಕ ತೆರೆದುಕೊಂಡಂತೆ ಬಾಸವಾಗೋ ರೀತಿ ಎದ್ದು ನಿಂತಿತು. ಅಲ್ಲಿ ಹೋದವರೆಲ್ಲಾ ಹೊಸತೊಂದು ಭ್ರಮಾಲೋಕದಲ್ಲಿ ವಿಹರಿಸುತ್ತಾರೆ. ಇದೇ ಕಾರಣಕ್ಕೋ ಏನೋ ಈ ಸಿಟಿ ಸೆಂಟರ್ ಮಾಲ್‌ನ ಯಾವ ಅಂಗಡಿಗೆ ಅಧಿಕಾರಿಗಳು ರೈಡ್ ಮಾಡಿದರೂ ಅಂಗಡಿ ಮುಚ್ಚುವುದಿಲ್ಲ. ಅಷ್ಟೊಂದು “ವ್ಯವಹಾರಗಳು” ಈ ಮಾ‍ಲ್‌ನಲ್ಲಿ ನಡೆಯುತ್ತದೆ. ಈ ಮಾಲ್‌ಗೆ ಆಕ್ಯೂಪೆನ್ಸಿ ಸರ್ಟಿಫಿಕೇಟ್ ಆಗ್ಲೀ, ಫೈರ್ ಎನ್ಒಸಿ ಆಗ್ಲಿ ಇಲ್ಲದೇ ಇದ್ದರೂ ಈ ಕಟ್ಟಡವನ್ನು ಯಾವ ಇಲಾಖೆಯ ಜೆಸಿಬಿಗಳೂ ಮುಟ್ಟುವುದಿಲ್ಲ. ಅರ್ಧ ರಸ್ತೆಯನ್ನು ಆಕ್ರಮಿಸಿ ನಿಯಮ ಮೀರಿ ಹೆಚ್ಚುವರಿ ಫ್ಲೋರ್‌ಗಳನ್ನು ಹೊಂದಿರುವ ಕಟ್ಟಡವನ್ನು ಯಾವ ಜಿಲ್ಲಾಧಿಕಾರಿಯೂ ಕನಿಷ್ಠ ಪ್ರಶ್ನೆ ಮಾಡುವುದಿಲ್ಲ. ಇಂತಿಪ್ಪ ಪ್ರಭಾವಿ ಮಾಲ್‌ನಲ್ಲಿ ದಿನವಿಡೀ ರಂಗು ರಂಗಿನ ಕಳೆ ಏರಿಸೋದು ಇಲ್ಲಿಗೆ ಬರೋ ಜೋಡಿಗಳು. ಅದೆಂಥಾ ಜೋಡಿಗಳು ಅಂತೀರಾ? ಕಾರವಾರದ ಓಂ ಬೀಚ್‌ಗೆ ಪೈಪೋಟಿ ಕೊಡೋ ರೀತಿಯ ಡ್ರೆಸ್ ತೊಟ್ಟುಕೊಂಡ ಜೋಡಿಗಳು ಇಲ್ಲಿಗೆ ಬರುತ್ತದೆ. ಆಶ್ಲೀಲವಾಗಿ ಡ್ರೆಸ್ ತೊಟ್ಟುಕೊಂಡು ಕುಡಿಯುತ್ತಿದ್ದರು ಎಂದು ಆರೋಪಿಸಿ ಪಬ್‌ಗೆ ದಾಳಿ ಮಾಡಿದ್ದ ಹಿಂದೂ ಸಂಘಟನೆಗಳು ಸಿಟಿ ಸೆಂಟರ್ ಮಾಲ್ ವಿಷಯದಲ್ಲಿ ಮಾತ್ರ ತೆಪ್ಪಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಸಿಟಿ ಸೆಂಟರ್ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಇರುವುದೇ ಭಜರಂಗದಳದ ಮುಖಂಡನಿಗೆ. ಮಾಲ್‌ನಲ್ಲಿ ಸಣ್ಣ ಗಲಾಟೆ ಆದರೂ ಸೆಕ್ಯೂರಿಟಿ ಕಾಂಟ್ರಾಕ್ಟ್ ಕ್ಯಾನ್ಸಲ್ ಆಗುತ್ತದೆ. ಹಾಗಾಗಿ ಮಾಲ್‌ನಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕ ಆರಾಮಾವಾಗಿ ವಿಹರಿಸಬಹುದು. ಈ ಭಜರಂಗಿ ಸರ್ಪಗಾವಲಿನಲ್ಲಿರೋ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚೈತನ್ಯಳಿಗೆ ಪ್ರದೀಪ್ ಎಂಬ ಯುವಕ ಪರಿಚಿತನಾಗಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ, ನಂತರ ಅದು ಪ್ರೇಮಕ್ಕೆ ಪರಿವರ್ತನೆಯಾಗಿತ್ತು. ಸಮಸ್ಯೆ ಸೃಷ್ಠಿಯಾಗಿರುವುದೇ ಇಲ್ಲಿ. ಪ್ರದೀಪ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದು, ದೈವಕ್ಕೆ ಕೋಲ ಕಟ್ಟುವ ಪರವ ಜಾತಿಯವನು.

ತೆಳು ಕಪ್ಪಗಿದ್ದರೂ ಸ್ಪುರದ್ರೂಪಿಯಾಗಿದ್ದ ಪ್ರದೀಪ ತನ್ನ ಮನೆ ಹಿರಿಯರಂತೆ ಕೋಲ ಕಟ್ಟುವ ವೃತ್ತಿಗೆ ಹೋಗಿರಲಿಲ್ಲ. ಕಾಲೇಜು ಶಿಕ್ಷಣ ಮುಗಿಸಿದ ನಂತರ ಸಂಗೀತದತ್ತ ಒಲವು ತೋರಿಸಿದ್ದ. ಸಂಗೀತವನ್ನು ಅರಗಿಸಿಕೊಂಡ ಈತ ಉದಯೋನ್ಮುಖ ಕಲಾವಿದನಾಗಿ ಬೆಳೆದ. 28 ವಯಸ್ಸಿಗೆಲ್ಲಾ ಸಂಗೀತವನ್ನೇ ವೃತ್ತಿಯನ್ನಾಗಿಸೋ ಮಟ್ಟಕ್ಕೆ ಬೆಳೆದ. ಮದುವೆ ಸಮಾರಂಭ, ಮನೊರಂಜನಾ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ. ಇವನ ಪ್ರತಿಭೆ, ಅಂದ, ಚೆಂದ, ಮೈಕಟ್ಟು, ಬುದ್ಧಿಮತ್ತೆಗೆ ಕ್ಲೀನ್ ಬೌಲ್ಡ್ ಆಗಿದ್ದ ಚೈತನ್ಯ ಪ್ರದೀಪನ ಜೊತೆ ಕರಗಿ ಹೋಗಿದ್ದಳು. ಪ್ರೀತಿ ಸಮಸ್ಯೆಯಾಗಿ ಕಂಡಿದ್ದೇ ಅವಳಿಗೆ ಮನೆಯವರು ಗಂಡು ಹುಡುಕಲು ಪ್ರಾರಂಭ ಮಾಡಿದಾಗ. ಬಂದ ಎಲ್ಲಾ ಪ್ರಪೋಸಲ್‌ಗಳನ್ನು ನಿರಾಕರಿಸಿದ ಚೈತನ್ಯಳಿಗೆ ತಾನು ಪ್ರೇಮಿಸುತ್ತಿರುವ ವಿಚಾರ ಹೇಳಲು ಅಳಕು. ಹಾಗಂತ ತಂದೆ ತಾಯಿ ನೋಡಿದ ಸಂಬಂಧ ಒಪ್ಪುವಂತೆಯೂ ಇಲ್ಲ. ಕೊನೆಗೊಂದು ದಿವಸ ಹೇಳಿ ಬಿಟ್ಟಳು. ತಾನು ಪ್ರದೀಪನನ್ನು ಪ್ರೀತಿಸುವುದಾಗಿಯೂ ಆತ ಪರವ ಜಾತಿಗೆ ಸೇರಿದವನಾಗಿಯೂ ತಂದೆ ತಾಯಿಗೆ ಹೇಳಿದಳು. ಮನೆಯಲ್ಲೊಂದು ದೊಡ್ಡ ರಂಪಾಟವೇ ನಡೆಯಿತು. ಪ್ರದೀಪನ ಜೊತೆ ಪ್ರೀತಿ ಮುಂದುವರಿಸಿದ್ದೇ ಆದಲ್ಲಿ ಒಂದೋ ನೀನು ಬದುಕಬೇಕು. ಇಲ್ಲವಾದಲ್ಲಿ ನಾವು ಬದುಕಬೇಕು ಎಂಬಲ್ಲಿಯವರೆಗೆ ತಂದೆ ಮಾತನಾಡಿ ಬಿಟ್ಟಿದ್ದರು. ಇದೆಲ್ಲಾ ನಡೆದ ಮರುದಿನ ಚೈತನ್ಯ ಸಿಟಿ ಸೆಂಟರ್‌ನ ಅಂಗಡಿಗೆ ಕೆಲಸಕ್ಕೆ ಹೋದವಳು ಮನೆಗೆ ಹೋಗಲಿಲ್ಲ. ನೇರವಾಗಿ ತನ್ನ ಗೆಳತಿ ಇರೋ ಪಿಜಿಯಲ್ಲಿ ಉಳಿದುಕೊಂಡಳು.

ಮನೆಗೆ ಬಾರದ ಚೈತನ್ಯಳನ್ನು ಆ ದಿನ ಸಂಜೆಯಿಂದಲೇ ಹುಡುಕಲು ಶುರುವಿಟ್ಟುಕೊಂಡರು. ಪೊಲೀಸರಿಗೆ ದೂರು ನೀಡುವಂತಿಲ್ಲ. ಮನೆಯ ಮರ್ಯಾದೆಯ ಪ್ರಶ್ನೆ. ಪೊಲೀಸರು ಹುಡುಕಿ ತಂದು ಕೊಟ್ಟರೂ ಮತ್ತೆ ಯಾರೂ ಆಕೆಯನ್ನು ನಮ್ಮ ಜಾತಿಯಲ್ಲಿ ಮದುವೆಯಾಗಲು ಮುಂದೆ ಬರುವುದಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ದೂರು ನೀಡಿದ ತಕ್ಷಣ ಮರುದಿನ ಯಾವುದಾದರೊಂದು ಪತ್ರಿಕೆಯ ಅಪರಾಧ ಪೇಜ್‌ನಲ್ಲಿ ಸುದ್ಧಿ ಪ್ರಕಟವಾಗಿರುತ್ತದೆ. ಅದರ ಉಸಾಬರಿಯೇ ಬೇಡವೆಂದು ಮನೆ ಮಂದಿಯೇ ಚೈತನ್ಯಳನ್ನು ಹುಡುಕಲು ಶುರು ಮಾಡಿದ್ದರು. ಮನೆ ಮಂದಿ ಮಾತ್ರ ಅಲ್ಲ ಒಂದಿಡೀ ಭಜರಂಗಿ ಸೇನೆಯೇ ಈಕೆಯ ಬೆನ್ನು ಬಿದ್ದಿತ್ತು. ಭಜರಂಗದಳದ ಮುಖಂಡನೆ  ಹೆಂಡತಿಯ ಕಡೆಯಿಂದ ಚೈತನ್ಯ ಸಂಬಂಧಿಯಾಗಬೇಕು. ಆ ನಿಟ್ಟಿನಲ್ಲಿ ಹುಡುಕಾಟ ಪ್ರಾರಂಭವಾಗಿತ್ತು. ಚೈತನ್ಯ ಮತ್ತು ಪ್ರದೀಪ ನೇರವಾಗಿ ಮಹಿಳಾ ವಕೀಲರೊಬ್ಬರಲ್ಲಿಗೆ ಬಂದು ಅಹವಾಲು ಹೇಳಿಕೊಂಡು ಮದುವೆಗೆ ಸಹಕರಿಸುವಂತೆ ಕೇಳಿದ್ದಾಳೆ. ಮದುವೆಯಾಗಬೇಕಾದರೆ ಕನಿಷ್ಠ ವಿಳಾಸದ ದಾಖಲೆಗಳು ಮತ್ತು ವಯಸ್ಸಿನ ದೃಡೀಕರಣದ ದಾಖಲೆಗಳು ಬೇಕಾಗುತ್ತದೆ. ಚೈತನ್ಯಳ ಎಲ್ಲಾ ದಾಖಲೆಗಳ ಮೂಲ ಪ್ರತಿ ಮನೆಯಲ್ಲಿದೆ. ನಕಲು ಪ್ರತಿ ಸಿಟಿ ಸೆಂಟರ್ ಮಾಲ್‌ನಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿದೆ. ಆ ಅಂಗಡಿಗೆ ಹೋಗಿ ದಾಖಲೆಗಳನ್ನು ತರುವಂತೆ ಇಲ್ಲ. ಯಾಕೆಂದರೆ ಮಾಲ್‌ನ ಸೆಕ್ಯೂರಿಟಿ ಕಾಂಟ್ರಾಕ್ಟ್ ಭಜರಂಗದಳದ್ದಾಗಿತ್ತು. ಕೈಯ್ಯಲ್ಲಿ ವಾಕಿಟಾಕಿ ಹಿಡಿದುಕೊಂಡಿದ್ದ ಸೆಕ್ಯೂರಿಟಿ ಹುಡುಗರಲ್ಲಿ ಈಗ ಚೈತನ್ಯಳ ಫೋಟೋ ಕೂಡಾ ಇದೆ. ಸಾಲದ್ದಕ್ಕೆ ಅಂಗಡಿಯ ಬೇರೆ ಸಿಬ್ಬಂದಿಯಲ್ಲಿ ಚೈತನ್ಯಳ ಬಗ್ಗೆ ಮಾಹಿತಿ ಸಿಕ್ಕರೆ ನೀಡುವಂತೆ ಬೆದರಿಸಲಾಗಿತ್ತು.

ಚೈತನ್ಯ ಭೇಟಿ ಮಾಡಿದ ಮಹಿಳಾ ವಕೀಲರ ಪತಿ ನರೇಂದ್ರ ನಾಯಕ್ ಪ್ರಸಿದ್ಧ ವಿಚಾರವಾದಿ ಸಂಘದ ಮುಖಂಡರು. ವಿಚಾರವಾದಿಯಾಗಿದ್ದರಿಂದ ಕೆಲವೊಂದು ಎಡ ಯುವ ಸಂಘಟನೆಗಳ ಜೊತೆ ಅವರು ಸಂಪರ್ಕ ಇರಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಎಡ ಯುವ ಸಂಘಟನೆಯೊಂದರ ಜಿಲ್ಲಾ ಅಧ್ಯಕ್ಷ ಮುನೀರ್‌ಗೆ ಈ ಪ್ರಕರಣ ವಿವರಿಸಿದ್ದರು. ಮುನೀರ್ ನನಗೆ ಕರೆ ಮಾಡಿ ಈ ಪ್ರಕರಣದ ಬಗ್ಗೆ ಚರ್ಚಿಸಿದ್ದ. ಮುನೀರ್ ಎಡ ಯುವ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದು, ಆತನಿಗೆ ಒಂದಷ್ಟು ಹುಡುಗರನ್ನು ಕರೆದುಕೊಂಡು ಅಂಗಡಿಗೆ ಹೋಗಿ ದಾಖಲೆ ವಶಪಡಿಸಿಕೊಂಡು ಮದುವೆ ಮಾಡ್ಸೋದು ಅಥವಾ ಪೊಲೀಸರಿಗೆ ಅಧಿಕೃತವಾಗಿ ದೂರು ಕೊಟ್ಟೂ ಮದುವೆ ಮಾಡ್ಸೋದು ದೊಡ್ಡ ವಿಚಾರವಲ್ಲ. ಆದರೆ ಈ ರೀತಿ ಮಾಡಿದಾಗ ಎಡವಟ್ಟುಗಳಾಗುವುದೇ ಜಾಸ್ತಿ. ಹುಡುಗಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಸಂಘಟನೆಯ ಯುವಕರನ್ನು ಕಳುಹಿಸಿ ದಾಖಲೆ ವಶಪಡಿಸಿಕೊಂಡರೆ ಜಗಳ ಆಗೋ ಸಾಧ್ಯತೆ ಇರುತ್ತದೆ. ಆಗ ಬಿಟ್ಟಿ ಪ್ರಚಾರ ದೊರೆತು ಸುದ್ಧಿಯಾಗುತ್ತದೆ ಮತ್ತು ದೂರು ದಾಖಲಾಗುತ್ತದೆಯೋ ಹೊರತು ಮದುವೆ ಆಗುವುದಿಲ್ಲ. ಇನ್ನು ಪೊಲೀಸರಿಗೆ ಅಧಿಕೃತ ದೂರು ನೀಡಿ ರಿಜಿಸ್ಟರ್ ಮಾಡ್ಸೋಣ ಅಂದರೆ ಪೊಲೀಸರು ಎರಡೂ ಕಡೆಯ ಮನೆಯವರನ್ನು ಕರೆಸುತ್ತಾರೆ. ಪೊಲೀಸರ ಎದುರು ಮನೆಯವರು ಮದುವೆಗೆ ಒಪ್ಪಿದಂತೆ ನಾಟಕವಾಡಿ “ಒಂದು ಐದು ತಿಂಗಳ ಕಾಲಾವಕಾಶ ಕೊಡಿ. ನಾವು ಮಗಳನ್ನು ಚಿಕ್ಕಂದಿನಿಂದ ಕಷ್ಟಪಟ್ಟು ಬೆಳೆಸಿದ್ದೇವೆ. ನಮ್ಮ ಮನೆಯ ಮರ್ಯಾದೆಯೂ ಮುಖ್ಯ ಅಲ್ವ. ಅವಳು ಪ್ರೀತಿಸಿದ ಹುಡುಗನಿಗೇ ಮದುವೆ ಮಾಡಿಕೊಡುತ್ತೇವೆ. ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡಿ ವ್ಯವಸ್ಥಿತವಾಗಿ ಅರೇಂಜ್ಡ್ ಮ್ಯಾರೇಜ್ ಮಾಡುತ್ತೇವೆ. ಒಂದು ಐದು ತಿಂಗಳು ಕಾಯೋಕೆ ಆಗಲ್ವ. ನಾನು ಆಕೆಯನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಪೊಷಿಸಿದ್ದೇನೆ. ಐದು ತಿಂಗಳು ಟೈಮ್ ಕೊಡಿ ಪ್ಲೀಸ್,” ಎಂದು ಅಳುತ್ತಾರೆ. ಆ ಕ್ಷಣಕ್ಕೆ ಹುಡುಗಿಯ ತಾಯಿ ಹೇಳುವುದು ಸರಿ ಅನ್ನಿಸುತ್ತದೆ. ಮನೆಯವರೇ ಮದುವೆ ಮಾಡಿಕೊಡುತ್ತೇನೆ ಎಂದ ಮೇಲೆ ಯಾರು ಏನೂ ಮಾತಾಡೋಕೆ ಇರುವುದಿಲ್ಲ. ಹುಡುಗಿಯನ್ನು ಅವರ ಜೊತೆಯೇ ಪೊಲೀಸರು ಕಳುಹಿಸುತ್ತಾರೆ. ಮನೆಗೆ ಕಳುಹಿಸಿದ ಹತ್ತೇ ದಿನದಲ್ಲಿ ದೂರದ ಜಿಲ್ಲೆಯ ಹುಡುಗನನ್ನು ಹುಡುಕಿ ಹುಡುಗಿಗೆ ಬಲವಂತದ ಮದುವೆ ಮಾಡುತ್ತಾರೆ. ಇಂತಹ ಹಲವಾರು ಪ್ರಕರಣಗಳು ನಮ್ಮ ಮುಂದೆ ಇದ್ದಿದ್ದರಿಂದ ಮತ್ತೆ ಅಂತಹ ತಪ್ಪುಗಳನ್ನು ಮಾಡಬಾರದು ಎಂದು ಕೊಂಡೆವು. ಅದಕ್ಕಿಂತಲೂ ಮುಖ್ಯವಾಗಿ ಮುನೀರ್ ಒಬ್ಬ ಜಾತಿ, ಧರ್ಮವನ್ನು ಮೀರಿ ಬೆಳೆದ ಪಕ್ಕಾ ಕಮ್ಯೂನಿಷ್ಟ್ ಯುವಕನಾಗಿದ್ದರೂ “ಹಿಂದೂಗಳ ಮದುವೆಯ ಉಸಾಬರಿ ಆ ಬ್ಯಾರಿಗೆ ಯಾಕಂತೆ?” ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನ ಮೂದಲಿಸದೆ ಇರುವಷ್ಟು ಪ್ರಜ್ಞಾವಂತರಲ್ಲ. ಆದುದರಿಂದಲೇ ಆತ ಮದುವೆಯ ಉಸ್ತುವಾರಿಯನ್ನು ನನ್ನ ಹೆಗಲಿಗೆ ಹಾಕಿದ.

ದಲಿತ ಯುವಕ ಮತ್ತು ಕೊಟ್ಟಾರಿ ಯುವತಿಯ ಮದುವೆ ಮಾಡುವುದು ಎಂದರೆ ಅದೊಂದು ಸಣ್ಣ ರೀತಿಯ ಸಾಮಾಜಿಕ ಕ್ರಾಂತಿ ಎಂದೆಣಿಸಿತು. ಬಹುತೇಕ ಕ್ರಾಂತಿ ವಿವಾದಾಸ್ಪದವಾಗಿರುತ್ತದೆ ಎಂಬಂತೆ ಇದೊಂದು ವಿವಾದಾಸ್ಪದ ವಿಷಯ ಕೂಡಾ. ಅದಕ್ಕಾಗಿ ಯಾವುದಕ್ಕೂ ಮೊದಲು ಯುವತಿ ಜೊತೆ ಮಾತನಾಡೋಣ ಎಂದುಕೊಂಡು ನಾನು ವಿಚಾರವಾದಿಗಳ ಸಂಘದ ಮುಖಂಡ ನರೇಂದ್ರ ನಾಯಕ್ರಿಗೆ ಫೋನಾಯಿಸಿದೆ. ಎರಡೇ ರಿಂಗ್‌ನಲ್ಲಿ ಫೋನ್ ರಿಸೀವ್ ಮಾಡಿದ ಅವರು “ಎಂತದ್ದು ಮಾರಾಯ. ಎಲ್ಲಿದ್ದಿ. ಒಂದು ಉಪಕಾರ ಆಗಬೇಕಿತ್ತು. ಒಂದು ಹುಡುಗಿಯ ಸರ್ಟಿಫಿಕೇಟ್ ಅವಳ ಅಂಗಡಿಯಲ್ಲಿ ಇದೆ. ಅದನ್ನು ತೆಗೆಸಿಕೊಡಬೇಕು. ನೀವು ಟೀವಿಯವರಲ್ವಾ. ನೀವು ಹೋದರೆ ತಕ್ಷಣ ಕೊಡ್ತಾರೆ,” ಅಂದರು. “ಸರಿ ಸರ್. ಆ ಹುಡುಗೀನ ಕಳುಹಿಸಿ. ನಾನು ಸಿಟಿ ಸೆಂಟರ್ ಪಕ್ಕ ನಿಂತಿರುತ್ತೇನೆ,” ಎಂದೆ. ಒಂದು ಹತ್ತು ನಿಮಿಷದಲ್ಲಿ ರಿಕ್ಷದಿಂದ ಇಳಿದ ಹುಡುಗಿ ನನ್ನ ಮೊಬೈಲ್‌ಗೆ ಕರೆ ಮಾಡಿದಳು. ನನ್ನೆದುರೇ ಅವಳ ರಿಕ್ಷಾ ನಿಂತಿದ್ದರೂ ನನಗೆ ಅವಳ ಮುಖ ಪರಿಚಯ ಇಲ್ಲದೇ ಇದ್ದುದರಿಂದ ಅವಳ ಮೊಬೈಲ್ ಕರೆ ಅವಳ ಗುರುತು ಹಿಡಿಯಲು ಸಹಕರಿಸಿತ್ತು. ಬಂದವಳೇ “ನಾಯಕರು ನಿಮ್ಮಲ್ಲಿಗೆ ಕಳುಹಿಸಿದ್ದು. ಹೆಸರು ಚೈತನ್ಯ,” ಎಂದು ಪರಿಚಯಿಸಿಕೊಂಡಳು. ನಂತರ ತನ್ನ ಪ್ರೇಮ ಪುರಾಣವನ್ನು ಒಂದೇ ಉಸಿರಲ್ಲಿ ಹೇಳಿ ಮುಗಿಸಿದವಳೇ ಮತ್ತೆ ಅಲ್ಲಿಂದ ಹೊರಡಲು ಅವಸರಿಸಿದಳು. “ನಿಮಗೆ ಗೊತ್ತಿಲ್ಲ. ಅವರು ಬಜರಂಗದಳದವರು. ಅವರಲ್ಲಿ ತುಂಬಾ ಜನ ಇದ್ದಾರೆ. ನನ್ನನ್ನು ರಸ್ತೆ ಬದಿ ನೋಡಿದರೆ ಕಿಡ್ನ್ಯಾಪ್ ಮಾಡುತ್ತಾರೆ. ಪೊಲೀಸರೂ ಅವರ ಪರವೇ ಇದ್ದಾರೆ. ಪ್ಲೀಸ್ ಇಲ್ಲಿಂದ ಬೇರೆ ಕಡೆ ಹೋಗೋಣಾ. ಅಲ್ಲಿ ಮಾತಾಡೋಣಾ ಸರ್,” ಎಂದು ಚಟಪಡಿಸಲು ಶುರುವಿಟ್ಟುಕೊಂಡಳು. “ನೋಡು ನಾನು ಪತ್ರಕರ್ತ. ಎಲ್ಲಾ ಧರ್ಮದ ಸಂಘಟನೆಗಳ ಎಲ್ಲರ ಪರಿಚಯ ನನಗಿದೆ. ಸುಮ್ಮನೆ ನಿಂತುಕೊ. ಮಾಲ್‌ನ ಅಂಗಡಿಯಿಂದ ತರಬೇಕಾದ ಸರ್ಟಿಫಿಕೇಟ್‌ಗಳ ಬಗ್ಗೆ ಏನು ಮಾಡಬೇಕು ಎಂದು ಯೋಚಿಸುವ,” ಎಂದೆ. ನನಗೆ ಸರ್ಟಿಫಿಕೇಟ್ ತರಲು ಏನು ಮಾಡಬೇಕು ಎಂದು ಒಂದು ಕ್ಷಣ ಹೊಳೆಯಲೇ ಇಲ್ಲ. ನಾನು ಪತ್ರಕರ್ತ, ನನಗೆ ಯಾರೂ ಏನೂ ಮಾಡುವುದಿಲ್ಲ ಎಂದು ಅವಳಲ್ಲಿ ಜಂಭ ಕೊಚ್ಚಿಕೊಂಡಿದ್ದರೂ ಒಬ್ಬನೇ ಅಂಗಡಿಗೆ ಹೋಗಿ ಮಾತನಾಡುವುದು ಪ್ರ್ಯಾಕ್ಟಿಕಲ್ ಆಗಿ ಕಷ್ಟಸಾಧ್ಯ ಅನ್ನಿಸಿತು ಆ ಸಂಧರ್ಭ. ಬೇರೆ ಟಿವಿ ಚಾನಲ್‌ನ ವರದಿಗಾರರನ್ನು ಕರೆಯೋಣ ಎಂದರೆ ಅವರು ಈ ಪ್ರಕರಣವನ್ನು ಸುದ್ದಿಯಾಗಿ ನೋಡಿ ಟಿ.ಆರ್.ಪಿ ಕುತಂತ್ರ ಹಾಕಿದರೆ ಹುಡುಗಿಯ ಬದುಕಿನ ಗತಿಯೇನು ಎಂಬ ಹೆದರಿಕೆ. ಕೊನೆಗೆ ಸರಿಯಾಗಿ ಪರಿಚಯ ಇಲ್ಲದ ಹುಡುಗಿ ಜೊತೆ ನಾನೊಬ್ನೆ ಇರುವುದು ಬೇಡ ಎಂದು ಇಂಗ್ಲೀಷ್ ಪತ್ರಿಕೆಯ ವರದಿಗಾರ್ತಿಯಾಗಿದ್ದ ಅನಿಷಾ ಶೇಟ್‌ಗೆ ಕಥೆ ಹೇಳಿ ಅವಳನ್ನು ಕರೆಸಿಕೊಂಡೆ. ಅವಳು ಅವಳಪ್ಪನ ಕಾರಿನಲ್ಲಿ ನೇರವಾಗಿ ನಾವಿದ್ದ ಕೆ ಎಸ್ ರಾವ್ ರೋಡ್‌ಗೆ ಬಂದಳು. “ಅಬ್ಬಾ” ಅನ್ನಿಸಿತು. ಅವಳ ಕಾರಿನಲ್ಲೇ ಇಬ್ಬರೂ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು. ಅನಿಷಾಳಿಗೆ ಕತೆ ಅರ್ಥ ಆಗುವುದು ಸ್ವಲ್ಪ ತಡ. ಅದಕ್ಕಾಗಿ ಅನಿಷಾ ಕತೆಯನ್ನು ಮತ್ತೆ ಮತ್ತೆ ಕೇಳುತ್ತಿದ್ದಳು. ಮಧ್ಯೆ ಮಧ್ಯೆ ಪ್ರಶ್ನೆ ಕೇಳುತ್ತಿದ್ದಳು. “ಅಯ್ಯೋ… ಇವಳಿಗೆ ಅರ್ಥನೇ ಆಗ್ತಿಲ್ವಲ್ಲಪ್ಪೋ… ಎಷ್ಟು ಪ್ರಶ್ನೆ ಕೇಳ್ತಾಳೆ” ಅಂತ ನನಗೆ ತಲೆಬಿಸಿಯಾದರೂ ಅವಳ ಪ್ರಶ್ನೆಗಳಿಂದಾಗಿ ನನಗೆ ಇನ್ನಷ್ಟೂ ತಿಳಿಯಲು ಅವಕಾಶ ಆಗುತ್ತಿತ್ತು ಎಂಬುದು ಬೇರೆ ವಿಚಾರ. ಅಂದ ಹಾಗೆ ಅನಿಷಾ “ದ ಹಿಂದೂ” ಪತ್ರಿಕೆಯಲ್ಲಿ ವರದಿಗಾರಳಾಗಿದ್ದಳು. ಜನಪರ, ಜೀವಪರ, ಪರಿಸರ ಪರ, ಮಾನವ ಹಕ್ಕುಗಳ ಪರವಾದ ಎಂತಹ ರಿಸ್ಕ್‌ ವಿಷಯವಿದ್ದರೂ ಆಕೆ ಸವಾಲು ಎದುರಿಸಲು ಸಿದ್ದವಿರುತ್ತಿದ್ದಳು. ಅದಕ್ಕೆ ನನಗೆ ಆಕೆ ಇಷ್ಟವಾಗುತ್ತಿದ್ದುದು. ನನಗೆ ಮಾತ್ರವಲ್ಲ ಎಲ್ಲಾ ಆ್ಯಕ್ಟಿವ್ ಜರ್ನಲಿಸ್ಟ್‌ಗಳಿಗೆ ಅನಿಷಾ ಇಷ್ಟವಾಗುತ್ತಿದ್ದುದು ಇದೇ ಕಾರಣಕ್ಕೆ. ಅದೆಲ್ಲಾ ಇರಲಿ. ಒಟ್ಟು ನಾವು ಕಾರಿನೊಳಗೆ ಕೂತು ಚೈತನ್ಯಳ ಕತೆ ಕೇಳುತ್ತಿದ್ದೆವು.

ಕೆ ಎಸ್ ರಾವ್ ರೋಡ್ ಮಂಗಳೂರಿನ ಜನನಿಭಿಡ ರಸ್ತೆ. ಡಿವೈಡರ್ ಹಾಕಿದ ಡಬ್ಬಲ್ ರೋಡ್ ಇದ್ದರೂ ಸಿಟಿ ಸೆಂಟರ್ ಮಾಲ್ ಸೇರಿ ಹಲವು ಕಟ್ಟಡಗಳು ಈ ರಸ್ತೆಯ ಬಹುಭಾಗವನ್ನು ನುಂಗಿ ಕಿಷ್ಕಿಂದೆ ಮಾಡಿ ಬಿಟ್ಟಿದೆ. ಕಿಷ್ಕಿಂದೆಯನ್ನು ಇನ್ನಷ್ಟೂ ಹಾಳು ಮಾಡಲು ಅನಿಷಾ ಕಾರನ್ನು ರಸ್ತೆ ಬದಿಯೇ ನಿಲ್ಲಿಸಿದ್ದಳು. ಡ್ರೈವರ್ ಸೀಟಲ್ಲಿ ಅನಿಷಾ ಇದ್ದರೆ, ಅವಳ ಪಕ್ಕದ ಮುಂದಿನ ಸೀಟಿನಲ್ಲಿ ನಾನಿದ್ದೆ. ಹಿಂದಿನ ಸೀಟಿನಲ್ಲಿ ಕುಳಿತು ಚೈತನ್ಯ ಅವಳ ಆತಂಕದ ಕತೆಯನ್ನು ಕಣ್ಣಾಲಿಗಳನ್ನು ತುಂಬಿಕೊಂಡು ಹೇಳುತ್ತಿದ್ದಳು. ನಾವು ಹಿಂದೆ ತಿರುಗಿ ಕೇಳುತ್ತಿದ್ದೆವು. ಒಂದು ಕ್ಷಣ ಕಾರಿನ ಗಾಜುಗಳ ಮೂಲಕ ಹೊರ ನೋಡುತ್ತೇನೆ, ಹತ್ತಾರು ಮಂದಿ ಕಾರಿನೊಳಗೆ ಇಣುಕುತ್ತಿದ್ದಾರೆ. ಅವರೆಲ್ಲರೂ ಚೈತನ್ಯಳನ್ನು ಹುಡುಕುತ್ತಿದ್ದ ಭಜರಂಗಿಗಳು. ಒಳಗಿರುವುದು ಚೈತನ್ಯ ಹೌದೋ ಅಲ್ಲವೋ ಎಂದು ಅವರಿಗಿನ್ನೂ ಖಾತ್ರಿಯಾದಂತಿಲ್ಲ. ಖಾತ್ರಿ ಆಗುವುದಕ್ಕೂ ಮುಂಚೆ ನಾವು ಜಾಗ ಖಾಲಿ ಮಾಡಿಕೊಳ್ಳಬೇಕು ಎಂದು ಯೋಚಿಸಿದ ನಾನು ಕಾರನ್ನು ನೇರ ಪೊಲೀಸ್ ಕಮಿಷನರ್ ಆಫೀಸಿಗೆ ಕೊಂಡೊಯ್ಯವಂತೆ ಹೇಳಿದೆ. ಕಾರ್ ಸ್ಟಾರ್ಟ್ ಮಾಡಿ ಹೊರಡಿದ ರೀತಿಯಿಂದಲೇ ಅದರೊಳಗಿರುವುದು ಚೈತನ್ಯ ಎಂದು ಅರಿತುಕೊಂಡ ಭಜರಂಗಿಗಳು ಬೈಕೇರಿ ಕಾರನ್ನು ಹಿಂಬಾಲಿಸತೊಡಗಿದರು. ಒಂದು ಮೂರು ನಿಮಿಷವಷ್ಟೆ. ಕಾರು ಪೊಲೀಸ್ ಆಯುಕ್ತರ ಕಚೇರಿಯ ಎದುರಿತ್ತು.

ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ರ ಕಚೇರಿಯೊಳಗೆ ಹೋಗುತ್ತಿದ್ದಂತೆ ಕಚೇರಿಯಲ್ಲಿ ಆಯುಕ್ತರಿಲ್ಲ. ಊಟಕ್ಕೆ ಮನೆಗೆ ಹೋಗಿದ್ದಾರೆ ಎಂದು ತಿಳಿಯಿತು. ಸೀಮಂತ್ ಕುಮಾರ್ ಸಿಂಗ್‌ಗೆ ಫೋನಾಯಿಸಿ ಎಲ್ಲಾ ಕತೆಗಳನ್ನು ಶುರುವಿಂದ ಹೇಳಿದೆ. ಸಾಲದಕ್ಕೆ “ಈ ಪ್ರಕರಣವನ್ನು ಸುಮ್ಮನೆ ಬಿಟ್ಟರೆ ಮರ್ಯಾದಾ ಹತ್ಯೆಯಂತಹ ಘಟನೆಗಳು ಮಂಗಳೂರಿನಲ್ಲಿ ಆಗಬಹುದು. ಅದಕ್ಕೆ ಆಸ್ಪದ ಕೊಟ್ಟರೆ ಕಷ್ಟ ಆಗುತ್ತೆ.” ಎಂದು ಸಲಹೆ ಕೊಟ್ಟೆ. ತಕ್ಷಣ ಸೀಮಂತ್ ಕುಮಾರ್ ಸಿಂಗ್ ಉತ್ತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣರನ್ನು ಕಮಿಷನರ್ ಆಫೀಸ್‌ಗೆ ತೆರಳಿ ಯುವತಿ ಕೈಯಿಂದ ದೂರು ಸ್ವೀಕರಿಸಿ ಮದುವೆಯವರೆಗೂ ರಕ್ಷಣೆ ಕೊಡುವಂತೆ ಆದೇಶಿಸಿದರು. ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಬಂದವರೇ ನನ್ನ ಜೊತೆ ಮಾತನಾಡಿ ಎಲ್ಲಾ ವಿವರ ಕಲೆ ಹಾಕಿದರು. ಅಷ್ಟರಲ್ಲಾಗಲೇ ಚೈತನ್ಯಳ ಮನೆಯವರಿಗೆ ಸುದ್ದಿ ತಿಳಿದು ಕಮಿಷನರ್ ಕಚೇರಿ ಮುಂದೆ ಜಮಾಯಿಸಿದ್ದರು. ಭಜರಂಗದಳದ ಒಂದಷ್ಟು ಕಾರ್ಯಕರ್ತರೂ ಬಂದರು. ಅದರಲ್ಲೊಬ್ಬ ಕಾರ್ಯಕರ್ತ ನನ್ನ ಬಳಿ ಬಂದವನೆ “ನೀವು ಎಂತ ಮಾರಾಯ್ರೆ. ಚೈತನ್ಯಳಿಗೆ ಮಂಡೆ ಸಮ ಇಲ್ಲ. ಅವನು ದಲಿತ. ಕೋಲ ಕಟ್ಟುವ ಜಾತಿಯವ. ಹೇಗೆ ಮದುವೆ ಮಾಡಿ ಕೊಡುವುದು. ಅವಳಿಗೆ ಮಂಡೆ ಸರಿ ಇಲ್ಲ ಅಂತ ನಿಮಗೂ ಮಂಡೆ ಸರಿ ಇಲ್ವ ಮಾರಾಯ?” ಎಂದ. ಅವನ್ನಲ್ಲೇನು ಮಾತು ಎಂದು ನಾನೂ ಸುಮ್ಮನಿದ್ದೆ. ಕೊನೆಗೆ ಸಬ್ಇನ್ಸ್‌ಪೆಕ್ಟರ್ ರಾಮಕೃಷ್ಣ ಹುಡುಗಿ ಕಡೆಯ ಪ್ರಮುಖರನ್ನು, ಭಜರಂಗದಳದ ಪ್ರಮುಖರನ್ನು ಕರೆಸಿಕೊಂಡರು. ಚೈತನ್ಯಳಿಗೆ ಮನೆಯವರು ಸಾಕು ಬೇಕಾಗುವಷ್ಟು ಬುದ್ದಿ ಹೇಳಿದರು. ಚೈತನ್ಯಳದ್ದು ಒಂದೇ ಹಠ. ಮದುವೆಯಾಗುವುದಾದರೆ ಪ್ರದೀಪ್ನನ್ನು ಮಾತ್ರ. “ನೀನು ಕೋಲ ಕಟ್ಟುವವನ್ನು ಮದುವೆಯಾಗುದಾದರೆ ನೀನು ಸತ್ತಿದ್ದಿ ಎಂದು ಭಾವಿಸುತ್ತೇವೆ. ನಮಗೂ ನಿಮಗೂ ಯಾವುದೇ ಸಂಬಂಧ ಇಲ್ಲ” ಎಂದು ಚೈತನ್ಯಳ ಸಂಬಂಧಿ ಭಜರಂಗದಳದ ಮುಖಂಡ ಗುಡುಗಿದ. ಅಲ್ಲಿಯವರೆಗೂ ಸುಮ್ಮನಿದ್ದ ನನಗೆ ಆಗ ಸುಮ್ಮನಿರಲಾಗಲಿಲ್ಲ. “ಅಲ್ರಿ, ದಲಿತರೂ ಹಿಂದೂಗಳು. ಅವರ್ಯಾರೂ ಕ್ರಿಶ್ಚಿಯನ್ ಅಥವಾ ಬೌಧ್ಧ ಧರ್ಮಕ್ಕೆ ಮತಾಂತರ ಆಗಬಾರದು ಎಂದು ಹೇಳುವ ಸಂಘಟನೆ ನಿಮ್ಮದೆ ಅಲ್ವ. ಮತ್ತೆ ನಿಮ್ಮ ಜಾತಿಯ ಹುಡುಗಿ ದಲಿತನನ್ನು ಮದುವೆಯಾದರೆ ಏನು ಕಷ್ಟ?” ಎಂದು ಕೇಳಿದೆ. ಇಂತಹ ಪ್ರಶ್ನೆಗಳು ಅರ್.ಎಸ್.ಎಸ್‌.ಗರಿಗೆ ಹಲವಾರು ಬಾರಿ ಬಂದಿರಬಹುದು. ಆದರೆ ಅವರದ್ದೇ ಮನೆಯ ಹುಡುಗಿಯ ಜೀವಂತ ಉದಾಹರಣೆ  ಮುಂದಿಟ್ಟುಕೊಂಡು ಮಾತನಾಡುವಾಗ ಕಪಾಳಕ್ಕೆ ಚಪ್ಪಲಿಯಲ್ಲಿ ಬಡಿದಂತಾಗಿತ್ತು. ಆದರೂ ಸಾವರಿಸಿಕೊಂಡ ಭಜರಂಗದಳದ ಮುಖಂಡ “ಇಲ್ಲ ನಮ್ಮದೇನೂ ಅಭ್ಯಂತರ ಇಲ್ಲ. ಏನು ಬೇಕಾದರೂ ಮಾಡಿಕೊಂಡು ಸಾಯ್ಲಿ ಅವಳು,” ಎಂದು ನನ್ನ ಕಡೆ ಕೆಕ್ಕರಿಸಿ ನೋಡಲು ಧೈರ್ಯವಿಲ್ಲದೆ ಅವಳತ್ತಾ ಕೆಕ್ಕರಿಸಿ ನೋಡಿ ಅವಳ ತಂದೆ ತಾಯಿಯನ್ನೂ ಚೇರಿನಿಂದ ಎಬ್ಬಿಸಿ ಕರೆದೊಯ್ದ.

“ಸಂಜೆ ಮದುವೆ ಇದೆ. ಹಿಂದೂ ಸಂಪ್ರದಾಯದ ಪ್ರಕಾರವೇ ಮದುವೆ. ದಯವಿಟ್ಟು ಬನ್ನಿ.” ಎಂದು ಹುಡುಗಿಯ ಬಾಯಿಯಿಂದಲೇ ಅವಳ ತಂದೆ ತಾಯಿ ಮತ್ತು ಭಜರಂಗಿಗಳಿಗೆ ಆಯುಕ್ತರ ಕಚೇರಿಯಲ್ಲೇ ಮದುವೆಯ ಆಹ್ವಾನ ನೀಡಲಾಯಿತು. ಉಂ ಅಥವಾ ಊಂ ಊಂ ಎಂಬ ಉತ್ತರವೂ ಬರಲಿಲ್ಲ. ಕನಿಷ್ಠ ತಲೆಯೂ ಅಲ್ಲಾಡಲಿಲ್ಲ. ಸಂಜೆ ಐದು ಗಂಟೆಗೆ ಡೊಂಗರಕೇರಿಯಲ್ಲಿರುವ ಕಾಶೀ ಸಧನದಲ್ಲಿ ಮದುವೆ ಮಾಡುವುದು ಎಂದು ನಿರ್ಧರಿಸಿ ಅಲ್ಲಿನ ಅರ್ಚಕರನ್ನು ಬುಕ್ ಮಾಡಿದೆವು. ಅದರ ಎಲ್ಲಾ ಜವಾಬ್ದಾರಿಯನ್ನು ವಿಚಾರವಾದಿ ಸಂಘದ ಮುಖಂಡ ನರೇಂದ್ರ ನಾಯಕರು ವಹಿಸಿದ್ದರು. ನಂತರ ಪೊಲೀಸರ ಸಹಾಯ ಪಡೆದು ಚೈತನ್ಯಳ ಜೊತೆ ಸಿಟಿ ಸೆಂಟರ್ ಮಾಲ್‌ನ ಅಂಗಡಿಗೆ ಹೋಗಿ ಅವಳ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಬಂದೆವು. ಸಂಜೆ ಐದು ಗಂಟೆಗೆ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಯಿತು. ಮರುದಿನ ರಿಜಿಸ್ಟ್ರಾರ್ ಆಫೀಸಿಗೆ ತೆರಳಿ ಮದುವೆಯನ್ನು ಕಾನೂನು ಬದ್ಧವಾಗಿ ನೊಂದಣಿ ಮಾಡಿಸಿದೆವು.

ಇದಾದ ಕೆಲವೇ ವಾರಗಳ ನಂತರ ಉಪ್ಪಿನಂಗಡಿಯಲ್ಲಿ ಹಿಂದೂ ಸಮಾವೇಶ ನಡೆಯಿತು.. ನಾನು ವರದಿ ಮಾಡಲು ಅಲ್ಲಿಗೆ ತೆರಳಿದ್ದೆ. ಆರ್.ಎಸ್.ಎಸ್. ಮುಖಂಡ ಭಟ್ಟರು ಭಾಷಣ ಮಾಡುತ್ತಿದ್ದರು: “ದಲಿತರನ್ನು ಮತ್ತು ಹಿಂದೂ ಧರ್ಮದ ಇತರ ಜಾತಿಗಳನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಕ್ರಿಶ್ಚಿಯನ್ನರು ಇದರ ಲಾಭ ಪಡೆದುಕೊಂಡು ದಲಿತರನ್ನು ಮತಾಂತರ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಯಾವುದೇ ಅಸ್ಪ್ರಶ್ಯತೆ ಇಲ್ಲ. ದಲಿತರು ಮತಾಂತರ ಆಗಕೂಡದು. ಹಿಂದೂ ನಾವೆಲ್ಲ ಒಂದು….”

ಮಂಗಳೂರು ಘಟನೆಯಲ್ಲಿ ಪತ್ರಕರ್ತನಾಗಿ ನಾನು ಸರಿಯಾಗಿದ್ದೀನಾ?


-ನವೀನ್ ಸೂರಿಂಜೆ   


 

ಜುಲೈ 28 ಸಂಜೆ 6.45 ರ ವೇಳೆ. ನನ್ನ ಸುದ್ದಿ ಮೂಲ ಯುವಕನೊಬ್ಬ ನನಗೆ ಕರೆ ಮಾಡಿದ್ದ. ಆತ ಪಡೀಲ್ ನಿವಾಸಿ. ಆತ ನನಗೆ ತಿಳಿಸಿದ್ದಿಷ್ಟು. “ನವೀನಣ್ಣ, ನಮ್ಮ ಪಡೀಲ್ ಜಂಕ್ಷನ್ನಲ್ಲಿ ಒಂದು ಟಿಂಬರ್ ಯಾಡರ್್ ಇದೆಯಲ್ವ. ಅಲ್ಲಿ ಒಂದು ಸುಮಾರು 30 ಮಂದಿ ಯುವಕರು ನಿಂತುಕೊಂಡು ಮಾತನಾಡುತ್ತಿದ್ದರು. ಇನ್ಯಾರನ್ನೋ ಕರೆಯಲು ಇನ್ಯಾರಿಗೋ ಒತ್ತಾಯಿಸುತ್ತಿದ್ದರು. ಬೈಕುಗಳನ್ನು ರೆಡಿ ಇಟ್ಟುಕೊಳ್ಳಿ ಎನ್ನುತ್ತಿದ್ದರು. ಬಹುಷಃ ಅವರು ನಮ್ಮ ಮೇಲಿನ ಗುಡ್ಡೆಯಲ್ಲಿರುವ ಗೆಸ್ಟ್ ಹೌಸ್ಗೆ ದಾಳಿ ಮಾಡಲು ಯೋಚಿಸುತ್ತಿದ್ದಾರೆ ಎನಿಸುತ್ತದೆ. ಬ್ಯಾರಿ ಹುಡುಗರು, ಹಿಂದೂ ಹುಡುಗಿಯರು ಎಂದೆಲ್ಲಾ ಮಾತನಾಡುತ್ತಿದ್ದರು” ಎಂದ. ಅವರು ಯಾವ ಸಂಘಟನೆಯವರು ಅಂತಿ ತಿಳ್ಕೋ ಮಾರಾಯ ಎಂದೆ ನಾನು. ಅವರು ಹಿಂದೂ ಸಂಘಟನೆಗಳು ಎಂಬುದಷ್ಟೇ ಅವನಿಗೆ ಖಚಿತವಾಯ್ತೆ ವಿನಹ ನಿಖರವಾಗಿ ಯಾವ ಸಂಘಟನೆ ಎಂಬುದು ತಿಳಿಯಲಿಲ್ಲ.

ತಕ್ಷಣ ನನ್ನ ಮನಸ್ಸಿಗೆ ಬಂದ ಪ್ರಶ್ನೆ “ಈ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕೇ ಬೇಡವೇ”‘ ಎಂಬುದು. ದಾಳಿ ಯಾರು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಯಾಕಾಗಿ, ಯಾರ ಮೇಲೆ, ಯಾವ ಸಂಘಟನೆ, ಎಲ್ಲಿಗೆ ದಾಳಿ ಮಾಡುತ್ತಿದೆ ಎಂಬುದೂ ಗೊತ್ತಿಲ್ಲ. ಒಂದು ತೀರಾ ಪ್ರಾಥಮಿಕ ಮಾಹಿತಿಯಷ್ಠೆ ತಿಳಿದಿದೆ. ಸಂಘಟನೆಯ ಕಾರ್ಯಕರ್ತರೇ ಫೋನಾಯಿಸಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ನನ್ನ ಸುದ್ದಿಮೂಲ ಮಾಹಿತಿ ನೀಡಿದ್ದರಿಂದ ಆ ಸುದ್ದಿಯನ್ನು ಖಚಿತಪಡಿಸಿಕೊಂಡೇ ಪೊಲೀಸರಿಗೆ ಮಾಹಿತಿ ನೀಡೋಣ ಎಂದುಕೊಂಡು ನಾನು ಮತ್ತು ನನ್ನ ಕ್ಯಾಮರಮೆನ್ ಪಡೀಲ್ ಗುಡ್ಡೆಯ ಮೇಲಿರುವ ಗೆಸ್ಟ್ ಹೌಸ್ ಕಡೆ ಬೈಕಿನಲ್ಲಿ ತೆರಳಿದೆ.

ಒಂದೈದು ನಿಮಿಷದಲ್ಲಿ ಪಡೀಲ್ ಗುಡ್ಡೆಯಲ್ಲಿರುವ ಮಾನರ್ಿಂಗ್ ಮಿಸ್ಬಾ ಎನ್ನುವ ಹೋಂ ಸ್ಟೇ ಅಥವಾ ಗೆಸ್ಟ್ ಹೌಸ್ ಹೊರಭಾಗದಲ್ಲಿ ನಾನು ಮತ್ತು ನನ್ನ ಕ್ಯಾಮರಮೆನ್ ಇದ್ದೆವು. ಆಗ ಅಲ್ಲಿ ಯಾವ ದಾಳಿಕೋರರೂ ಇರಲಿಲ್ಲ. ಐದು ನಿಮಿಷ ಅಲ್ಲೇ ಕಾದು ನಿಂತೆವು. ಯಾರು ಯಾಕಾಗಿ ಈ ಹೋಂ ಸ್ಟೇಗೆ ದಾಳಿ ಮಾಡಲು ಸಿದ್ದತೆ ಮಾಡುತ್ತಾರೆ ಎಂಬುದು ಗೊತ್ತೇ ಆಗಲಿಲ್ಲ. ಪಡೀಲ್ ಹೆದ್ದಾರಿಯಿಂದ ಅಂದಾಜು ಅರ್ಧ ಕಿಮಿ ರಸ್ತೆ ದಾರಿಯಲ್ಲಿ ಈ ಹೋಂ ಸ್ಟೇ ಇದೆ. ಇದರ ಸುತ್ತಲೂ ದೊಡ್ಡದಾದ ಕಂಪೌಂಡ್ ಇದೆ. ಒಂದೇ ಒಂದು ಗೇಟ್ ಇದೆ. ಗೇಟ್ನಿಂದ 60 ಮೀಟರ್ ದೂರದಲ್ಲಿ ಹೋಂ ಸ್ಟೇ ಬಂಗಲೆ ಇದೆ. ನಾನು ಗೇಟ್ ಹತ್ತಿರ ನಿಂತು ಒಮ್ಮೆ ಇಡೀ ಬಂಗಲೆಯತ್ತಾ ಕಣ್ಣಾಡಿಸಿದೆ. ಅಲ್ಲಿ ದಾಳಿ ಮಾಡಲು ಕಾರಣವಾಗುವಂತಹ ಯಾವುದೇ ಆ್ಯಕ್ಟಿವಿಟೀಸ್ ನನಗೆ ಗೋಚರಿಸಲಿಲ್ಲ. ಒಬ್ಬಳು ಹುಡುಗಿ ಹೊರಗೆ ಚೇರ್ನಲ್ಲಿ ಕುಳಿತಿದ್ದಳು. ಇನ್ನಿಬ್ಬರು ಹುಡುಗರು ಬಂಗಲೆಯ ಮತ್ತೊಂದು ಮೂಲೆಯಲ್ಲಿ ನಿಂತುಕೊಂಡು ಮೊಬೈಲ್ನಲ್ಲಿ ಆಟವಾಡುತ್ತಿದ್ದರು. ಅವರು ಯಾವುದೇ ರೀತಿಯಲ್ಲೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರಲಿಲ್ಲ. ಆದುದರಿಂದ ದಾಳಿಕೋರರು ಬಯಸುವ ಸನ್ನಿವೇಶ ಅಲ್ಲಿರಲಿಲ್ಲ. ಆದುದರಿಂದ ಆಗಲೂ ನನಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಅನ್ನಿಸಲಿಲ್ಲ. ನನ್ನ ಮಾಹಿತಿ ತಪ್ಪಾದರೆ ಒಂದಿಡೀ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದಂತಾಗುತ್ತದೆ. ಮತ್ತು ಹೋಂ ಸ್ಟೇಯಲ್ಲಿದ್ದವರಿಗೆ ವಿನಾಕಾರಣ ಪೊಲೀಸ್ ಕಿರುಕುಳ ನೀಡಲು ಕಾರಣನಾಗುವಂತಾಗುತ್ತೇನೆ ಎಂಬ ಆತಂಕದಿಂದಲೇ ಮಾಹಿತಿ ನೀಡಲಿಲ್ಲ. ನಾನು ಈ ರೀತಿ ಯೋಚಿಸುತ್ತಿರುವಾಗಲೇ ಸುಮಾರು ಮೂವತ್ತೂ ಅಧಿಕ ಇದ್ದ ತಂಡವೊಂದು ಹೋಂ ಸ್ಟೇಯ ಗೇಟಿನತ್ತಾ ಬರುತ್ತಿತ್ತು. ನಾನು ತಕ್ಷಣ ಕುತೂಹಲದಿಂದಲೇ ಕೇಳಿದೆ. “ಏನು ವಿಷಯ? ಏನಾಗ್ತಾ ಇದೆ ಇಲ್ಲಿ ?” ಎಂದು ತುಳುವಿನಲ್ಲಿ ಪ್ರಶ್ನಿಸಿದೆ. ತಕ್ಷಣ ಯುವಕನೊಬ್ಬ “ಬ್ಯಾರಿಗಳು ನಮ್ಮ ಹಿಂದೂ ಹುಡುಗಿಯರನ್ನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಅವರನ್ನು ಬಿಡಬಾರದು”‘ ಎಂದ. ಅಷ್ಟರಲ್ಲಿ ಗುಂಪಿನಲ್ಲಿದ್ದ ಇನ್ನಿತರ ಯುವಕರು ಹೊರಗೆ ಕುಳಿತಿದ್ದ ಹುಡುಗಿಯತ್ತಾ ಕೈ ತೋರಿಸಿ, :ಅಲ್ಲಿ ಅಲ್ಲಿ ಇದ್ದಾಳೆ ಹುಡುಗಿ, ಅಗೋ ಹುಡುಗರು ಅಲ್ಲಿದ್ದಾರೆ ” ಎಂದು ಯುವಕ ಯುವತಿಯರತ್ತಾ ಓಡಿಕೊಂಡು ದಾಳಿಗೆ ಸಿದ್ದರಾದರು. ತಕ್ಷಣ ದಾಳಿ ಅರಿವಾದ ಯುವತಿ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಬಂಗಲೆಯ ಒಳ ಹೋದಳು. ಮತ್ತು ಬಾಗಿಲು ಹಾಕಲು ಯತ್ನಿಸಿದಳು. ಆಗ ಸುಮಾರು 30 ರಷ್ಟಿದ್ದ ದಾಳಿಕೋರರು ಬಾಗಿಲನ್ನು ಬಲವಾಗಿ ದೂಡಿ ಬಾಗಿಲು ತೆರೆಯುವಲ್ಲಿ ಸಫಲರಾದರು.

ಈಗ ನನ್ನ ಪ್ರಜ್ಞೆ ನಿಜವಾಗಿಯೂ ಜಾಗೃತವಾಗಿತ್ತು. ತಕ್ಷಣ ನನ್ನ ಕಚೇರಿ ಮೊಬೈಲ್ 9972570044 ನಿಂದ ಮಂಗಳೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ಗೆ 9480805330 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದೆ. ಆಗ ಸುಮಾರು 7.15 ರ ಸಂಜೆ ಸಮಯ. ರವೀಶ್ ನಾಯಕ್ ನನ್ನ ಕರೆ ಸ್ವೀಕರಿಸಲೇ ಇಲ್ಲ. ಒಂದು ಕಡೆಯಿಂದ ದಾಳಿ ಪ್ರಾರಂಭವಾಗಿದೆಯಷ್ಟೆ. ಇನ್ನೇನು ಆಗುತ್ತೋ ಎಂಬ ಆತಂಕದ ನಡುವೆಯೇ ಕಕ್ಕಾಬಿಕ್ಕಿಯಾದ ಹುಡುಗಿಯರು ಎಲ್ಲೆಲ್ಲೋ ಓಡಲು ಶುರುವಿಟ್ಟುಕೊಂಡಿದ್ದರು. ಪೊಲೀಸರಿಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿರಲಿಲ್ಲ. ಬೇರೆ ದಾರಿ ಕಾಣದೆ ಟಿವಿ 9 ವರದಿಗಾರನಾಗಿರುವ ನನ್ನ ಗೆಳೆಯ ರಾಜೇಶ್ ರಾವ್ ಬಳಿ ಪೊಲೀಸರಿಗೆ ಫೋನ್ ಮಾಡುವಂತೆ ಹೇಳಿದೆ. ರಾಜೇಶ್ ರಾವ್ ಅವರ ಮೊಬೈಲ್ನಿಂದ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್ಗೆ ಕರೆ ಮಾಡಿದರು. ಆಗಲೂ ರವೀಶ್ ನಾಯಕ್ ಕರೆ ಸ್ವೀಕರಿಸಲೇ ಇಲ್ಲ.

ನಾವು ಇನ್ಸ್ಸ್ಪೆಕ್ಟರ್ಗೆ ಫೋನ್ ಕರೆ ಮಾಡುತ್ತಿದ್ದಂತೆ ನಮ್ಮ ಕ್ಯಾಮರಾಮೆನ್ ದಾಳಿಕೋರರ ಹಿಂದೆಯೇ ಹೋಗಿ ಕರ್ತವ್ಯ ನಿರ್ವಹಿಸುತ್ತಿದ್ದ. ನಾನು ಮತ್ತು ನನ್ನ ಕ್ಯಾಮರಮೆನ್ ಮಾತ್ರ ಅಲ್ಲಿದ್ದೆವು. ಅಷ್ಟರಲ್ಲಿ ಸ್ಥಳೀಯ ಸಹಾಯ ಎಂಬ ಕೇಬಲ್ ಚಾನೆಲ್ ಕ್ಯಾಮರಮೆನ್ ಶರಣ್ ಮತ್ತು ಫೋಟೋಗ್ರಾಫರ್ ವಿನಯ ಕೃಷ್ಣ ಅಲ್ಲಿಗೆ ಬಂದಿದ್ದರು. ನಾನು ಎಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದೇನೆ. ನನಗೇನೂ ಮಾಡಲಾರದ ಅಪರಾಧಿ ಮನೋಭಾವ ನನ್ನಲ್ಲಿ ಮೂಡಿತ್ತು. ದಾಳಿಕೋರರಲ್ಲಿ ಶೇಕಡಾ 50ಕ್ಕೂ ಅಧಿಕ ಮಂದಿ ಮಧ್ಯಪಾನ ಮಾಡಿದ್ದರು. ನಾನು ಹೇಳಿದರೂ ಕೇಳೋ ಸ್ಥಿತಿಯಲ್ಲಿ ಇರಲಿಲ್ಲ. ಈ ಜಗತ್ತಿನಲ್ಲಿ ಏನೇನೋ ಹಿಂಸೆಗಳು ನಡೆದಿರಬಹುದು. ಆದರೆ ನನ್ನ ಜೀವಮಾನದಲ್ಲಿ ಇಂತಹ ಹಿಂಸೆಯನ್ನು ನೋಡಿರಲಿಲ್ಲ. ನನ್ನ ಕ್ಯಾಮರಾಮೆನ್ ಎಲ್ಲೆಲ್ಲಿ ಹೊಡೆಯುತ್ತಾರೋ ಅಲ್ಲಲ್ಲಿ ಓಡುತ್ತಿದ್ದ. ನಾನು ನೋಡುತ್ತಿದ್ದೆ ಮತ್ತು ಸಾಧ್ಯವಾದಷ್ಟೂ ಕಿರಿಚುತ್ತಿದ್ದೆ. “ಏ ಹುಡುಗಿರಿಗೆ ಹೊಡಿಬೇಡ್ರಿ” ಎಂತ ಬೊಬ್ಬೆ ಹೊಡೆಯುತ್ತಿದ್ದೆ. ನನ್ನ ಬೊಬ್ಬೆ ನನ್ನ ಕ್ಯಾಮರಾದಲ್ಲಿ ದಾಖಲಾಗಿದೆಯೇ ವಿನಹ ದಾಳಿಕೋರರ ಹೃದಯಕ್ಕೆ ತಟ್ಟಲೇ ಇಲ್ಲ. ಹಲ್ಲೆಗೆ ಒಳಗಾದ ಯುವಕರು ಗೋಗೆರೆಯುತ್ತಿದ್ದರು. “ಪ್ಲೀಸ್ ಬಿಟ್ಟುಬಿಡಿ. ನಾವು ಬತರ್್ ಡೇ ಪಾಟರ್ಿ ನಡೆಸುತ್ತಿದ್ದೇವೆ, ಪ್ಲೀಸ್” ಎಂದು ಕಾಲಿಗೆ ಬೀಳುತ್ತಾನೆ. ಆದರೂ ಕ್ರೂರಿ ದಾಳಿಕೋರರ ಮನಸ್ಸು ಕರಗುವುದಿಲ್ಲ. ಇಷ್ಟೇ ಆಗಿದ್ದರೆ ನಾನು ಮರೆತುಬಿಡುತ್ತಿದ್ದೆ. ಆದರೆ ಮುಂದೆ ನನ್ನ ಕಣ್ಣ ಮುಂದೆ ಬಂದಿದ್ದು ಭೀಭತ್ಸ ದೃಶ್ಯಗಳು.

ನಾಲ್ವರು ಹುಡುಗರಿಗೆ ದಾಳಿಕೋರರು ಬಡಿಯುತ್ತಿರುವ ದೃಶ್ಯ ನೋಡಿ ಶಾಕ್ಗೆ ಒಳಗಾದ ಯುವತಿಯರು ದಿಕ್ಕಾಪಾಲಾಗಿ ಓಡಲು ಶುರುವಿಟ್ಟುಕೊಂಡರು. ಬಂಗಲೆಯ ತುಂಬಾ ಓಡುತ್ತಿರುವ ಯುವತಿಯರ ಹಿಂದೆ ಒಂದಷ್ಟು ದಾಳಿಕೋರರ ಓಟ ನಡೆಯುತ್ತಿತ್ತು. ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಒಬ್ಬಳು ಹುಡುಗಿ ಒಂದನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಅವಳನ್ನು ಹಿಡಿದುಕೊಂಡ ಇಪ್ಪತ್ತೂ ಅಧಿಕ ದಾಳಿಕೋರ ಕಾರ್ಯಕರ್ತರು ಆಕೆಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆಕೆಯ ಕೆನ್ನೆಗೆ ಬಿಗಿದು, ಗೋಡೆಗೆ ನೂಕಿದ್ದಾರೆ. ಅಷ್ಟರಲ್ಲಿ ಪಿಂಕ್ ಡ್ರೆಸ್ ತೊಟ್ಟುಕೊಂಡಿದ್ದ ಹುಡುಗಿಯೊಬ್ಬಳು ಓಡಲು ಶುರುವಿಟ್ಟುಕೊಂಡಳು. ಆಕೆಯನ್ನು ಹಿಡಿದ ಗೂಂಡಾ ದಾಳಿಕೋರರು ಅಕ್ಷರಶ ಆಕೆಯನ್ನು ಬೆತ್ತಲು ಮಾಡಿದ್ದಾರೆ. ಒಂದು ತುಂಡು ವಸ್ತ್ರ ಹೊರತುಪಡಿಸಿ ವಿವಸ್ತ್ರ ಮಾಡಿದ ನಂತರ ಆಕೆಯ ಅಂಗಾಂಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ. ಇದು ನನ್ನನ್ನು ಅಕ್ಷರಶ ಅಧೀರನನ್ನಾಗಿಸಿದ ಧೃಶ್ಯ. ಈ ರೀತಿಯ ದೃಶ್ಯವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ಕೇಳಿದ್ದೆ. ಇವೆಲ್ಲವೂ ವಿಶುವಲ್ ಆಗದೇ ಇರುವಂತದ್ದು. ಶೂಟಿಂಗ್ ಆಗಿದ್ದು ಸ್ವಲ್ಪವೇ ಸ್ವಲ್ಪ ಭಾಗ. ಆನಂತರ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹುಡುಗ ಹುಡುಗಿಯರನ್ನು ಒಂದೇ ಕೋಣೆಯಲ್ಲಿ ಹಾಕಿ ಚಿಲಕ ಹಾಕಿದರು. ಇವೆಲ್ಲವೂ ನಡೆದಿದ್ದು ಮಿಂಚಿನ ವೇಗದಲ್ಲಿ. ಹೆಚ್ಚೆಂದರೆ 15 ನಿಮಿಷದಲ್ಲಿ ಇವೆಲ್ಲವೂ ಮುಗಿದು ಹೋಗಿತ್ತು.

ದಾಳಿಕೋರರ ಕಾರ್ಯಾಚರಣೆ ಒಂದು ಹಂತಕ್ಕೆ ಮುಗಿದ ನಂತರ ಪೊಲೀಸ್ ಇನ್ಸ್ಸ್ಪೆಕ್ಟರ್ ರವೀಶ್ ನಾಯಕ್, ಪೊಲೀಸ್ ಎಸೈ ಮುನಿಕಂಠ ನೀಲಸ್ವಾಮಿ ಮತ್ತು ಪೋಲೀಸ್ ಪೇದೆಗಳು ಬಂದಿದ್ದಾರೆ. ವಿಶೇಷ ಎಂದರೆ ಪೊಲೀಸರಿಗೆ ದಾಳಿಕೋರರ ಜೊತೆ ಮೊದಲೇ ಸಂಪರ್ಕ ಇರೋ ರೀತಿಯಲ್ಲಿ ಪೊಲೀಸರು ವತರ್ಿಸಿದ್ದಾರೆ. ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಪೊಲೀಸರು ದಾಳಿಕೋರರ ಜೊತೆ ಮಾತಕತೆಯಲ್ಲಿ ತಲ್ಲೀನರಾಗಿದ್ದರು. ದಾಳಿಕೋರರ ಬಂಧಿಸುವ ಬದಲು ಅವರ ಜೊತೆ ಹರಟೆ ಹೊಡೆಯುತ್ತಿರುವುದು ನನಗೆ ಆಶ್ಚರ್ಯ ಉಂಟು ಮಾಡಿತ್ತು. ಇವೆಲ್ಲಾ ನಡೆಯುತ್ತಿರಬೇಕಾದರೆ ಪಾಟರ್ಿಯಲ್ಲಿ ಪಾಲ್ಗೊಂಡಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದ. ತಕ್ಷಣ ಪೊಲೀಸರು ಆ ಯುವಕನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ವಶದಲ್ಲಿದ್ದ ಯುವಕನಿಗೆ ದಾಳಿಕೋರರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು.

ಅಷ್ಟರಲ್ಲಿ ನಮ್ಮ ಇನ್ನಷ್ಟೂ ಕ್ಯಾಮರಮೆನ್ಗಳು ಬಂದಿದ್ದರು. ನಾನು ನನ್ನ ಕ್ಯಾಮರಮೆನ್ ಜೊತೆ ಕಚೇರಿಗೆ ಬಂದು ಎಲ್ಲಾ ವಿಝುವಲ್ಸ್ ಬೆಂಗಳೂರು ಕಚೇರಿಗೆ ಅಪ್ಲಿಂಕ್ ಮಾಡಿದೆ. 7.45 ಕ್ಕೇ ವರದಿ ಪ್ರಕಟವಾಯಿತು. ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ನಮ್ಮ ಚಾನೆಲ್ನಲ್ಲಿ ಬರುತ್ತಿದ್ದ ವರದಿ ಮತ್ತು ದೃಶ್ಯಗಳನ್ನು ರಾಷ್ಟ್ರೀಯ ವಾಹಿನಿಗಳು ಬಳಕೆ ಮಾಡಿಕೊಂಡು ಸುದ್ಧಿ ಪ್ರಕಟಿಸಿದವು. ತಕ್ಷಣ ಇದೊಂದು ರಾಷ್ಟ್ರೀಯ ಸುದ್ಧಿಯಾಗಿ ಮಾರ್ಪಡಾಗಿತ್ತು. ಇದರಿಂದ ತೀವ್ರ ಕೋಪಗೊಂಡಿದ್ದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನನ್ನ ಗೆಳೆಯ, ಟಿವಿ 9 ವರದಿಗಾರ ರಾಜೇಶ್ ರಾವ್ಗೆ ದೂರವಾಣಿ ಕರೆ ಮಾಡಿದ್ದಾರೆ. ರಾಜೇಶ್ಗೆ ಸೀಮಂತ್ ಕುಮಾರ್ ಸಿಂಗ್ ಕರೆ ಮಾಡಿದಾಗ ನಾನೂ ಕೂಡಾ ರಾಜೇಶ್ ಜೊತೆಗಿದ್ದೆ. ಸೀಮಂತ್ ಮಾತುಗಳನ್ನು ರಾಜೇಶ್ ಲೌಡ್ ಸ್ಪೀಕರ್ ಇಟ್ಟು ನನಗೆ ಕೇಳಿಸುತ್ತಿದ್ದ. “ನವೀನ ನ್ಯೂಸ್ ಯಾಕೆ ಮಾಡಬೇಕಿತ್ತು. ಅವನಿಗೆ ಅಕ್ಕ ತಂಗಿ ಇಲ್ಲವಾ ? ಅವರಿಗೆ ಹೊಡೆಯಲ್ವ ? ಅದನ್ನು ಟಿವಿಯಲ್ಲಿ ತೋರಿಸ್ತಾರಾ ? ನೋಡ್ಕೋತೀನಿ ನಾನು ಅವನನ್ನು. ಅವನು ಮಂಗಳೂರಿನಲ್ಲಿ ತಾಲೀಬಾನ್ ಸಂಸ್ಕೃತಿ ಇದೆ ಎಂದು ಹೇಳಿದ. ಅಸ್ಸಾಂನ ಘಟನೆಗೆ ಈ ಘಟನೆಯನ್ನು ಹೋಲಿಸಿ ಲೈವ್ ಕೊಟ್ಟ. ಈ ಬಾರಿ ಅವನನ್ನು ಬಿಡುವುದಿಲ್ಲ. ಈ ಕೇಸ್ನಲ್ಲಿ ಅವನನ್ನು ಫಿಕ್ಸ್ ಮಾಡುತ್ತೇನೆ. ಅವನಿಗೆ ಎಷ್ಟು ಬೇಕಾದರೂ ಇಂಪ್ಲ್ಯೂಯನ್ಸ್ ಇರಲಿ. ಫಿಕ್ಸ್ ಮಾಡುವುದು ಮಾಡೋದೆ” ಎಂದು ಸೀಮಂತ್ ಹೇಳುತ್ತಿದ್ದರು. “ಹುಡುಗಿಯರಿಗೆ ಮತ್ತು ಹುಡುಗರಿಗೆ ಹೊಡೆದಿದ್ದು ದೊಡ್ಡ ವಿಷಯ ಅಲ್ಲ. ಅದನ್ನು ಚಿತ್ರೀಕರಿಸಿದ್ದು ಮಹಾ ಅಪರಾಧ,” ಎಂಬುದಷ್ಟೇ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತಿನ ಅರ್ಥ ಎಂಬುದಂತೂ ಸ್ಪಷ್ಟ.

ಇಂದು ಬೆಳಿಗ್ಗೆ ನನಗೆ ಇನ್ನೊಂದು ಶಾಕ್ ಕಾದಿತ್ತು. ನಾನು ಯಾರ ಪರವಾಗಿ ಸುದ್ದಿ ಮಾಡಿದ್ದೇನೋ ಅವರೇ ನನ್ನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನನಗೆ ಸ್ಪಷ್ಟವಾಗಿ ಗೊತ್ತಿತ್ತು. ಹಲ್ಲೆಗೊಳಗಾದ ಯಾವುದೇ ಹುಡುಗ ಹುಡುಗಿ ಸ್ವ ಇಚ್ಚೆಯಿಂದ ನನ್ನ ವಿರುದ್ಧ ದೂರು ನೀಡಲು ಸಾದ್ಯವಿಲ್ಲ. ಪ್ಲೀಸ್ ಹೊಡಿಯಬೇಡಿ ಎಂದು ನಾನು ಸಾಧ್ಯವಾದಷ್ಟು ಬೊಬ್ಬೆ ಹಾಕುತ್ತಿದ್ದದ್ದು ಹಲ್ಲೆಗೊಳಗಾದ ಯುವತಿಯರಿಗೆ ಗೊತ್ತಿತ್ತು ಅಂದುಕೊಳ್ಳುತ್ತೇನೆ. ಸಂಜೆಯಾಗುವಾಗ ನನ್ನ ಡೌಟ್ ಕ್ಲೀಯರ್ ಆಗಿತ್ತು. ಮಾಧ್ಯಮದ ಜೊತೆ ಮಾತನಾಡಿದ ಹಲ್ಲೆಗೊಳಗಾದ ಯುವಕರು “ನಾವು ಮಾಧ್ಯಮ ಮಂದಿ ವಿರುದ್ಧ ದೂರು ನೀಡಿಲ್ಲ. ನಮಗೆ ಮಾಧ್ಯಮದವರು ಸಪೋಟರ್್ ಮಾಡಿದ್ದಾರೆ” ಎಂದರು.

ಅದೇನೇ ಇರಲಿ. ಮಂಗಳೂರು ಗ್ರಾಮಾಂತರ ಪೊಲೀಸರು ನನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಾವು ಚಿತ್ರೀಕರಿಸಿದ ವಿಝುವಲ್ಸ್ ಆಧಾರದಲ್ಲೇ ಈವರೆಗೆ 8 ಮಂದಿ ದಾಳಿಕೋರರನ್ನು ಬಂಧಿಸಿದ್ದಾರೆ. ನಾವು ಒಂದು ಆಕ್ಷೇಪಾರ್ಹ ಘಟನೆಯನ್ನು ಚಿತ್ರೀಕರಿಸಿ ಸುದ್ದಿ ಪ್ರಸಾರ ಮಾಡಿದ್ದೇವೆಯೇ ಹೊರತು ಆಕ್ಷೇಪಾರ್ಹ ದೃಶ್ಯವನ್ನಲ್ಲ ಎಂಬುದು ನನಗೆ ಸ್ಪಷ್ಟತೆ ಇದೆ. ಮಂಗಳೂರಿನಲ್ಲಿ ಜುಲೈ 28 ರಾತ್ರಿ ನಡೆದ ದಾಳಿ ಹೊಸದೇನೂ ಅಲ್ಲ. ಪ್ರತೀ ವಾರಕ್ಕೊಂದು ಇಂತಹ ಘಟನೆ ನಡೆಯುತ್ತದೆ. ಮುಸ್ಲಿಂ ಹುಡುಗ ಹಿಂದೂ ಹುಡುಗಿ ಒಟ್ಟಿಗಿದ್ದರೆ ಹಿಂದೂ ಮತೀಯವಾದಿಗಳು ಅವರಿಗೆ ಹಲ್ಲೆ ಮಾಡಿ ಮತೀಯವಾದಿಗಳೇ ಅವರನ್ನು ಠಾಣೆಗೆ ಕೊಂಡೊಯ್ದು ಪೊಲೀಸರ ವಶಕ್ಕೆ ನೀಡುತ್ತಾರೆ. ಪೊಲೀಸರು ಪ್ರೇಮಿ(ಗೆಳೆಯರು)ಗಳ ತಂದೆ ತಾಯಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ನಾವು ಶೂಟಿಂಗ್ ಮಾಡದೇ ಇದ್ದರೆ ಇಲ್ಲೂ ಅಷ್ಟೇ ನಡೆಯುತ್ತಿತ್ತು. ನಮ್ಮ ಶೂಟಿಂಗ್ನಿಂದ ಕೋಮುವಾದಿಗಳ ಒಂದು ಕ್ರೂರ ಮುಖ ಬಯಲಾಗಿದೆ ಮತ್ತು ಎಂಟು ಮಂದಿ ಬಂಧಿತರಾಗುವಂತೆ ಮಾಡಿದೆ. ಯಾರು ಏನೇ ಅನ್ನಲ್ಲಿ. ಯಾವ ಕೇಸೇ ಬೀಳಲಿ. ನಾನು ಪತ್ರಕರ್ತನಾಗಿ ಸಮಾಜಕ್ಕೆ ಏನೋ ನ್ಯಾಯ ನೀಡಿದ್ದೇನೆ ಅನ್ನಿಸುತ್ತಿದೆ. ಅಳುತ್ತಿರುವ ನನ್ನ ಮನಸ್ಸಿಗೆ ಸಧ್ಯ ಅಂತಹ ಸಮಾಧಾನ ಸಾಕು.

ನನ್ನ ಮೇಲೆ ದೂರು ನೀಡಿರುವುದು ಮತ್ತು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿರುವುದು ದೊಡ್ಡ ವಿಷಯವೇ ಅಲ್ಲ. ನನ್ನ ಮೇಲಿನ ಎಫ್ಐಆರ್ನಿಂದ ದಾಳಿಕೋರ ಕ್ರೂರಿ ಮೃಗಗಳಿಗೆ ಶಿಕ್ಷೆಯಾಗುವುದಾದರೆ ನನ್ನ ಮೇಲಿನ ಎಫ್ಐಆರನ್ನು ನಾನು ಖುಷಿ ಪಡುತ್ತೇನೆ. ಯಾವುದಾದರೂ ಒತ್ತಡಕ್ಕೆ ಮಣಿದು ಆರೋಪದಿಂದ ನನ್ನನ್ನು ಬಿಡುಗಡೆ ಮಾಡುವಾಗ ಅಂತಹ ಬಿಡುಗಡೆಯಿಂದ ಆರೋಪಿ ದಾಳಿಕೋರರಿಗೆ ಲಾಭವಾಗುವುದಾದರೆ ಆಂತಹ ಬಿಡುಗಡೆ ನನಗೆ ಬೇಕಾಗಿಲ್ಲ. ನನ್ನ ಸಮ್ಮುಖದಲ್ಲೇ ನನ್ನ ಸಹೋದರಿಯರ ಮೇಲೆ ದಾಳಿ ನಡೆಸಿದ ದಾಳಿಕೋರರಿಗೆ ನ್ಯಾಯಾಲಯ ಅದೆಂತಹ ಶಿಕ್ಷೆ ನೀಡಿದರೂ ನ್ಯಾಯ ನೀಡಿದಂತಾಗುವುದಿಲ್ಲ. ಆದರೂ ಅವರಿಗೆ ಶಿಕ್ಷೆಯಾಗಬೇಕು.

ಸ್ಕಾರ್ಫ್ ನಿಷೇಧ – ಕೋಮುವಾದಿ ಕಾಲೇಜುಗಳ ಸಮಾನತೆಯ ನಿಯಮ

– ನವೀನ್ ಸೂರಿಂಜೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸ್ಕಾರ್ಫ್ ವಿವಾದ ಬುಗಿಲೆದ್ದಿದೆ. ಪುತ್ತೂರಿನ ರಾಮಕುಂಜೇಶ್ವರ ಕಾಲೇಜಿನಲ್ಲಿ ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರ ಹಾಕಿದ್ದು 45 ವಿದ್ಯಾರ್ಥಿಗಳು ಕಳೆದೊಂದು ವಾರದಿಂದ ತರಗತಿಗೆ ಗೈರು ಹಾಜರಾಗಿದ್ದಾರೆ. ಹಿಂದುತ್ವ ಪ್ರಚೋದಿಸುವ ಕೋಮುವಾದಿಗಳು ಶಾಲಾ ಕಾಲೇಜುಗಳಲ್ಲಿ ಸಮಾನತೆಯ ನೆಪದಲ್ಲಿ ಮುಸ್ಲಿಂ ವಿರೋಧಿಯಾಗಿ ಸ್ಕಾರ್ಫ್ ನಿಷೇಧಕ್ಕೆ ಬೆಂಬಲ ಸೂಚಿಸಿದರೆ, ಕಮ್ಯೂನಿಸ್ಟರು ಮತ್ತು ಪ್ರಗತಿಪರರು “ಸ್ಕಾರ್ಫ್ ತೊಡಲೇ ಬೇಕು ಎನ್ನುವುದು ಮೂಲಭೂತವಾದಿಗಳ ಹುನ್ನಾರವಾಗಿರುವುದರಿಂದ ವಿದ್ಯಾರ್ಥಿನಿಯರು ಸ್ಕಾರ್ಫ್ ತೊರೆಯಬೇಕು” ಎನ್ನುತ್ತಾರೆ. ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಜಮಾ ಅತೆ ಇಸ್ಲಾಮೀ ಹಿಂದ್ ನಂತಹ ಮುಸ್ಲಿಂ ಸಂಘಟನೆಗಳು ಕಾಲೇಜಿಗೆ ತೆರಳೋ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಕಡ್ಡಾಯ ಎಂಬ ನಿಲುವಿಗೆ ಬದ್ಧವಾಗಿದೆ. ಒಟ್ಟಾರೆ ಇಷ್ಟೊಂದು ವಿಷಯಗಳ ಜಂಜಾಟದ ಮಧ್ಯೆ ಅಡಕತ್ತರಿಯಲ್ಲಿ ಸಿಲುಕಿರುವವರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು. ಪ್ರಗತಿಪರವಾದ ವೈಚಾರಿಕವಾದ ಶಿಕ್ಷಣ ವ್ಯವಸ್ಥೆಯನ್ನು ಪ್ರಾಥಮಿಕ ಶಿಕ್ಷಣದ ಹಂತದಲ್ಲೇ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಧರ್ಮಾತೀತ ಮತ್ತು ಜಾತ್ಯಾತೀತ ಮನೋಭಾವನೆ ಬೆಳೆಯುವ ರೀತಿಯಲ್ಲಿ ಶಿಕ್ಷಣ ನೀಡದೆ ಏಕಾಏಕಿ ಸ್ಕಾರ್ಫ್ ನಿಷೇಧಿಸುವುದು ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದಂತಾಗುತ್ತದೆ.

“ಶಿಕ್ಷಣದಲ್ಲಿ ಧರ್ಮ ಬೆರೆಸಲು ಸಾಧ್ಯವಿಲ್ಲ. ಸ್ಕಾರ್ಫ್ ಹಾಕಿರೋ ವಿದ್ಯಾರ್ಥಿನಿಯರು ಪ್ರತ್ಯೇಕರಾಗಿ ಕಾಣುವುದರಿಂದ ವಿದ್ಯಾರ್ಥಿಗಳಲ್ಲಿ ಅಸಮಾನ ಭಾವನೆ ಬರುತ್ತದೆ. ಸ್ಕಾರ್ಫ್ ಬೇಕು ಎನ್ನುವ ವಿದ್ಯಾರ್ಥಿನಿಯರಿಗೆ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಬೆಂಬಲವಿದೆ” ಎಂದು ಮಾಮೂಲಾಗಿ ಹೇಳಿಕೆ ನೀಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಕಾರ್ಫ್ ನಿಷೇಧ ಮಾಡಲಾಗಿದೆ. ಸ್ಕಾರ್ಫ್ ನಿಷೇಧ ಮಾಡಿರೋ ಕಾಲೇಜುಗಳು ಯಾವುದು ಮತ್ತು ಅಲ್ಲಿರುವ ಶಿಕ್ಷಣ ವ್ಯವಸ್ಥೆ ಯಾವ ತರಹದ್ದು ಎಂಬುದನ್ನು ಅವಲೋಕಿಸಿದರೆ ಸ್ಕಾರ್ಫ್‌ನ್ನು ಏಕಾಏಕಿ ನಿಷೇಧಿಸುವುದು ಸರಿಯೇ ಎಂಬುದರ ಬಗ್ಗೆ ಸರಳವಾಗಿ ನಿರ್ಣಯಕ್ಕೆ ಬರಬಹುದು.

ತರಗತಿಯಲ್ಲಿ ಮೊದಲ ಬಾರಿಗೆ ಸ್ಕಾರ್ಫ್ ನಿಷೇಧ ಮಾಡಿದ್ದು ಬಂಟ್ವಾಳದ ಎಸ್ವಿಎಸ್ ಕಾಲೇಜು. ಅಂದರೆ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು. ಹೆಸರೇ ಹೇಳುವಂತೆ ಇದೊಂದು ಸಮುದಾಯ ಮತ್ತು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿನ ಎಲ್ಲಾ ತರಗತಿ ಕೊಠಡಿಗಳಲ್ಲಿ ಹಿಂದೂ ದೇವರ ಫೋಟೋ ಇದೆ. ಸಾಲದ್ದಕ್ಕೆ ಅಖಂಡ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸು ಕಂಡವರ ಫೋಟೋಗಳೂ ಇವೆ. ಅದಕ್ಕಿಂತಲೂ ಮುಖ್ಯವಾಗಿ ಆರೆಸ್ಸೆಸ್ ಮತ್ತು ಹಿಂದೂ ಸಂಘಟನೆಗಳಲ್ಲಿ ಮುಖ್ಯಸ್ಥರಾಗಿರುವವರೇ ಇಲ್ಲಿನ ಆಡಳಿತ ಮಂಡಳಿ ಸದಸ್ಯರು. ಇವರ್ಯಾಕೆ ಸ್ಕಾರ್ಫನ್ನು ಏಕಾಏಕಿ ನಿಷೇಧ ಮಾಡಿದರು ಎಂಬುದನ್ನು ಊಹಿಸಲು ಕಷ್ಟಸಾಧ್ಯವೇನಲ್ಲ. ಅದಕ್ಕಿಂತಲೂ ಮುಖ್ಯವಾಗಿ ಎಸ್ವಿಎಸ್ ಕಾಲೇಜಿನ ಪ್ರತೀ ತರಗತಿಯಲ್ಲಿ ಹಿಂದೂ ದೇವರ ಫೋಟೋ ಇಟ್ಟು, ವೈಚಾರಿಕ, ಸಂವಿಧಾನಿಕ ಬದ್ಧತೆಯ ಪಾಠ ನಿರೀಕ್ಷೆಯೇ ಸಾಧ್ಯವಿಲ್ಲ.

ಎಸ್ವಿಎಸ್ ನಂತರ ಸುದ್ಧಿಯಾಗಿದ್ದು ಮೂಡಬಿದ್ರೆಯ ಜೈನ್ ಕಾಲೇಜು. ಇದೂ ಕೂಡಾ ಖಾಸಾಗಿ ಕಾಲೇಜಾಗಿದ್ದು ಒಂದು ಧರ್ಮಕ್ಕೆ ಸೇರಿದ ಕಾಲೇಜು. ಇಲ್ಲಿ ಜೈನ ಸಂಪ್ರದಾಯಗಳನ್ನು ನಾಜೂಕಾಗಿ ವಿದ್ಯಾರ್ಥಿಗಳ ಮೇಲೆ ಹೇರುವ ಎಲ್ಲಾ ಯತ್ನಗಳನ್ನು ಕಾಲೇಜು ಮಾಡುತ್ತದೆ. ಇಲ್ಲಿನ ಪ್ರಾರ್ಥನೆಯಿಂದ ಹಿಡಿದು ಕಾಲೇಜಿನ ಕಾರ್ಯಕ್ರಮಗಳ ಮೂಲಕ ಜೈನ ಜೀವನ ಪದ್ಧತಿಯನ್ನು ಅನುಷ್ಠಾನ ಮಾಡುವ ಯತ್ನ ನಡೆಸಲಾಗುತ್ತದೆ. ಇಲ್ಲಿನ ತರಗತಿಯ ಕೊಠಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ಫೋಟೋ ಇದೆ.

ನಂತರ ಸ್ಕಾರ್ಫ್ ವಿವಾದ ತಲೆದೋರಿದ್ದು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ. ಇದೊಂದು ಕ್ರಿಶ್ಚಿಯನ್ ಧರ್ಮಪ್ರಾಂತ್ಯದ ಅಡಿಯಲ್ಲಿ ಬರೋ ಶಿಕ್ಷಣ ಸಂಸ್ಥೆ. ಇಲ್ಲಿನ ಪ್ರತೀ ಕೊಠಡಿ ಮಾತ್ರವಲ್ಲ ಒಂದು ಸೆಂಟಿ ಮೀಟರ್ ಜಾಗ ಇದ್ದರೂ ಅಲ್ಲೆಲ್ಲಾ ಶಿಲುಬೆಗಳನ್ನು ನೇತಾಡಿಸಿದ್ದಾರೆ. ಎಲ್ಲೆಲ್ಲಿ ಗೋಡೆ ಖಾಲಿ ಇದೆಯೋ ಅಲ್ಲಲ್ಲಿ “ಏ ಪರಲೋಕದಲ್ಲಿರುವ ಪ್ರಭುವೇ……” ಎಂಬ ಉದ್ಘಾರಗಳನ್ನು ಹಾಕಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬಾರದು ಎಂದು ಹೇಳುವ ಇಲ್ಲಿನ ಪ್ರಾಂಶುಪಾಲರು ಒರ್ವ ಪಾದ್ರಿ. ಅವರು ಪಾದ್ರಿಗಳು ತೊಡುವ ಬಿಳಿ ನಿಲುವಂಗಿ ತೊಟ್ಟೇ ಬರುತ್ತಾರೆ. ಇಲ್ಲಿನ ಶಿಕ್ಷಕಿಯರಲ್ಲಿ ಅನೇಕರು ನನ್‌ಗಳಾಗಿದ್ದು ಅವರ ಧಾರ್ಮಿಕ ತೊಡುಗೆ ಹಾಕಿಕೊಂಡೇ ಪಾಠ ಮಾಡುತ್ತಾರೆ.

ಇದೀಗ ಸ್ಕಾರ್ಫ್ ವಿವಾದ ಏರ್ಪಟ್ಟಿದ್ದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ಮಾರ್ಗದರ್ಶಕರಾಗಿರೋ ಪುತ್ತೂರು ರಾಮಕುಂಜೇಶ್ವರ ಕಾಲೇಜಿನಲ್ಲಿ. ಹೇಳಿಕೇಳಿ ಇಲ್ಲಿನ ಹೋರ್ಡಿಂಗ್‌ನಿಂದ ಹಿಡಿದು ಎಲ್ಲಾ ತರಗತಿ ಕೊಠಡಿಗಳಲ್ಲಿ ಪೇಜಾವರ ಶ್ರೀಗಳ ಫೋಟೋ ಅಳವಡಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕರ ಕೈಯ್ಯಲ್ಲಿ ಕೇಸರಿ ದಾರ ಇದೆ. ಇಲ್ಲಿನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಿಂದೂ ಸಂಘಟನೆಗಳಿಗೆ ಸೇರಿದವರು. ಈ ಎಲ್ಲಾ ಕಾಲೇಜು ಆಡಳಿತ ಮಂಡಳಿಯವರು ಯಾವ ರೀತಿ ಸಮಾನತೆಯ ಹರಿಕಾರರು ಎಂಬುದನ್ನು ಊಹಿಸಬಹುದು.

ಮೇಲೆ ಹೇಳಿರುವ ಕಾಲೇಜುಗಳನ್ನು ಹೊರತು ಪಡಿಸಿ ಬೇರಾವುದೇ ಕಾಲೇಜುಗಳಲ್ಲಿ ಸ್ಕಾರ್ಫ್ ಅಥವಾ ಶಿರವಸ್ತ್ರ ನಿಷೇಧ ಮಾಡಿಲ್ಲ. ಈ ಕಾಲೇಜುಗಳು ಸ್ಕಾರ್ಫ್ ನಿಷೇಧಿಸುವ ಯಾವುದೇ ನೈತಿಕತೆಯನ್ನು ಹೊಂದಿಲ್ಲ. ಕಾಲೇಜನ್ನು ಒಂದು ಕೋಮು ಅಥವಾ ಧರ್ಮದ ಪ್ರಚಾರಕ ಸಂಸ್ಥೆಯಂತೆ ಬಳಸುವುದೇ ಅಲ್ಲದೆ ಮತ್ತೊಂದು ಧರ್ಮದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದು ಅಸಂವಿಧಾನಿಕವಾಗುತ್ತದೆ.

ತರಗತಿಯಲ್ಲಿ ಸ್ಕಾರ್ಫ್ ಏಕಾಏಕಿ ನಿಷೇದಿಸಿದರೆ ಮೂಲಭೂತವಾದಿಗಳಿಗೆ ಪೆಟ್ಟು ನೀಡಿದಂತಾಗುತ್ತದೆ ಎಂದು ಭಾವಿಸಿದರೆ ಅದು ಮೂರ್ಖತನದ ಪರಮಾವಧಿಯಾಗುತ್ತದೆ. ಸ್ಕಾರ್ಫ್ ನಿಷೇಧ ಮೂಲಭೂತವಾದಿಗಳಿಗೆ ಲಾಭವೇ ಹೊರತು ನಷ್ಠವಲ್ಲ. ಹರೆಯಕ್ಕೆ ಬಂದ ಮುಸ್ಲಿಂ ಹುಡುಗಿ ಮನೆ ಹೊಸ್ತಿಲು ದಾಟುವುದೇ ಮೂಲಭೂತವಾದಿಗಳ ಕಣ್ಣು ಕೆಂಪಾಗಿಸೋ ವಿಷಯ. ಅಂತದ್ದರಲ್ಲಿ ಸ್ಕಾರ್ಫ್ ಹಾಕದೆ ದೂರದ ಕಾಲೇಜಿಗೆ ಹುಡುಗಿ ಬೆಳಿಗ್ಗೆ ಹೋಗಿ ಸಂಜೆ ಬರುತ್ತಾಳೆ ಎಂದರೆ ಒಪ್ಪಲು ಸಾದ್ಯವೇ ಇಲ್ಲ. ಪರಿಣಾಮ ಮುಸ್ಲಿಂ ಹುಡುಗಿಯರ ಕಾಲೇಜು ಶಿಕ್ಷಣ ಕಟ್. ಮೂಲಭೂತವಾದಿಗಳ ಅಜೆಂಡಾ ಪೂರೈಸಿದಂತಾಗುತ್ತದೆ. ಇನ್ನು ಸ್ಕಾರ್ಫ್ ನಿಷೇಧಕ್ಕೊಳಗಾಗಿರುವ ಕಾಲೇಜು ಹೊರತು ಪಡಿಸಿ ಬೇರೆ ಆಯ್ಕೆ ಇರುವುದು ಮುಸ್ಲಿಂ ಕಾಲೇಜುಗಳು. ತೊಕ್ಕೊಟ್ಟಿನ ಹಿರಾ ದಂತಹ ಮುಸ್ಲಿಂ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರನ್ನು ಹೊರತುಪಡಿಸಿ ಬೇರೆ ಸಮುದಾಯದ ವಿದ್ಯಾರ್ಥಿನಿಯರಿಗೆ ಪ್ರವೇಶ ಇಲ್ಲ. ಇಂತಹ ಕಾಲೇಜಿನಲ್ಲಿ ಬುರ್ಕಾ ಕಡ್ಡಾಯ. ಇಲ್ಲಿ ಯುವಕರಿಗೆ ಪ್ರವೇಶ ಇಲ್ಲ. ಇಲ್ಲಿ ಕಲಿತ ವಿದ್ಯಾರ್ಥಿನಿಯರು ಅದೆಷ್ಟು ಸಂಕುಚಿತವಾಗಿ ಶಿಕ್ಷಣ ಪಡೆಯಬೇಕಾಗುತ್ತದೆ ಎಂಬುದೇ ದುರಂತ. ಇದು ಸಮಾಜದಲ್ಲಿ ಇನ್ನಷ್ಟು ಅಸಮಾನತೆಯನ್ನು ಮತ್ತು ಅಂತರವನ್ನು ಹೆಚ್ಚಿಸುತ್ತದೆಯೇ ಹೊರತು ಇನ್ನೇನಲ್ಲ. ಹಲವಾರು ಜಾತಿ, ಧರ್ಮ, ಸಮುದಾಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಟ್ಟಾಗಿ ವಿದ್ಯಾಬ್ಯಾಸ ಮಾಡುವುದೇ ಪರಸ್ಪರರನ್ನು ಅರಿತು ಸಮಾನತೆ ಸಾಧಿಸಲು ಇರುವ ಅತೀ ದೊಡ್ಡ ಮಾರ್ಗ.

ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಅಥವಾ ಸ್ಕಾರ್ಫ್ ಬೇಕೇ ಬೇಡವೇ ಎಂಬ ಒಂದೇ ಪ್ರಶ್ನೆ ಕೇಳುವುದಾದರೆ ವಿದ್ಯಾರ್ಥಿನಿಯರಿಗೆ ಮಾತ್ರ ಅಲ್ಲ ಯಾವುದೇ ವ್ಯಕ್ತಿಯ ಬಟ್ಟೆಯನ್ನು ಯಾವುದೋ ಒಂದು ಧರ್ಮ ಅಥವಾ ವ್ಯಕ್ತಿ ನಿರ್ಧಾರ ಮಾಡುವುದೇ ಅಸಂವಿಧಾನಿಕ. ವಿದ್ಯಾರ್ಥಿನಿಯರಲ್ಲಿ ಸ್ಕಾರ್ಫ್ ಹಾಕಲೇ ಬೇಕು ಎಂಬ ಹಠದ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಕೈವಾಡ ಇದೆ ಎಂಬ ವಾದ ಸತ್ಯವಾದರೂ ಅಂತಹ ಮೂಲಭೂತವಾದಿತನವನ್ನು ಹೋಗಲಾಡಿಸುವ ಬಗ್ಗೆ ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು. ಸಮಾನತೆ ಎಂದರೆ ಯೂನಿಫಾರಂ ಹಾಕುವುದಲ್ಲ. ಒಟ್ಟಿಗೆ ಕುಳಿತು ಊಟ ಮಾಡುವುದೂ ಅಲ್ಲ. ಅದೊಂದು ಮನಸ್ಥಿತಿ. ವಿದ್ಯಾರ್ಥಿಗಳಲ್ಲಿ ಅಂತಹ ಸಮಾನತೆಯ ಮನಸ್ಥಿತಿಯನ್ನು ಬೆಳೆಸಲು ಸ್ಕಾರ್ಫ್ ನಿಷೇಧಿಸಿರುವ ಈ ಕಾಲೇಜುಗಳು ಏನು ಕೆಲಸ ಮಾಡಿವೆ?

ಕಾಲೇಜುಗಳಿಗೆ ವಿದ್ಯಾರ್ಥಿಗಳಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಪ್ರಾಮಾಣಿಕ ಇಚ್ಚಾಶಕ್ತಿ ಇದ್ದರೆ ಕಾಲೇಜು ತರಗತಿ ಕೊಠಡಿಯಲ್ಲಿರುವ ಸ್ವಾಮೀಜಿಗಳ, ಧರ್ಮಾಧಿಕಾರಿಗಳ ಫೋಟೋ, ಶಿಲುಬೆಗಳನ್ನು ಕಿತ್ತು ತೆಗೆಯಲಿ. ಶಿಕ್ಷಕರು ಶಿಕ್ಷಕರಂತೆಯೇ ತರಗತಿಗೆ ಬಂದು ಪಾಠ ಮಾಡಲಿ. ವೈಚಾರಿಕವಾದ, ಸಂವಿಧಾನದ ಆಶಯಗಳನ್ನು ಸಾರುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗೆ ನಾಜೂಕಾಗಿ ತುಂಬುವಂತಹ ಬೋಧನೆಗಳನ್ನು ಮಾಡಲಿ. ಇಂತಹ ಪ್ರಗತಿಪರ ಮನಸ್ಸುಗಳುಳ್ಳ ವಿದ್ಯಾರ್ಥಿಗಳನ್ನು ಬೆಳೆಸಿದ ನಂತರ ಸ್ಕಾರ್ಫ್ ಹಾಕಿಕೊಂಡು ತರಗತಿಗೆ ಬರಬೇಡಿ ಎಂದು ಹೇಳುವುದರ ಹಿಂದೆ ಒಂದು ಅರ್ಥ ಇದೆ ಎನ್ನಬಹುದು.

ಪೇಜಾವರ ಸ್ವಾಮಿ ಉಪವಾಸ ನಾಟಕದಲ್ಲಿ ಉಪವಾಸ ಬಿದ್ದ ಕುಡುಬಿಗಳು

-ನವೀನ್ ಸೂರಿಂಜೆ

ಮಂಗಳೂರು ವಿಶೇಷ ಆರ್ಥಿಕ ವಲಯದ ಎರಡನೇ ಹಂತದ ಯೋಜನೆಗಾಗಿ ಸರ್ಕಾರ ಭೂಸ್ವಾಧೀನಗೊಳಿಸಲು ಮಾಡಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿ ಜುಲೈ 13 ಕ್ಕೆ ಬರೋಬ್ಬರಿ ಒಂದು ವರ್ಷ ಸಂದುತ್ತದೆ. ಎರಡನೇ ಹಂತದ ಭೂಸ್ವಾಧೀನಕ್ಕಾಗಿ ಅಧಿಸೂಚನೆಗೊಳಿಸಿದ 2035 ಎಕರೆ ಪ್ರದೇಶವನ್ನು ಕೈಬಿಡಬೇಕು ಎಂದು ರೈತ ಹೋರಾಟದ ಭಾಗವಾಗಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಬೆಂಗಳೂರಿನಲ್ಲಿ 2011 ಜುಲೈ 12 ರಂದು ಪತ್ರಿಕಾಗೋಷ್ಠಿ ನಡೆಸಿ ಉಪವಾಸ ಘೋಷಣೆ ಮಾಡಿದ್ದರು. ಮರುದಿವಸವೇ ಸರ್ಕಾರ ಎರಡನೇ ಹಂತಕ್ಕಾಗಿನ ಭೂಸ್ವಾಧೀನವನ್ನು ಕೈಬಿಟ್ಟಿತ್ತು. ಪಕ್ಕಾ ರೈತರ ಹೋರಾಟವಾಗಿದ್ದ ಈ ಸೆಝ್ ವಿರುದ್ಧದ ಹೋರಾಟಕ್ಕೆ ಪೇಜಾವರ ಎಂಟ್ರಿ ನೀಡಿದ್ದು ಕುಡುಬಿಪದವಿನ ಭೂಸ್ವಾಧೀನ ಹಿನ್ನಲೆಯಲ್ಲಿ. ಬಡವರೂ ಅನಕ್ಷರಸ್ಥರೂ ಆಗಿರುವ ಮತ್ತು  ಪರಿಶಿಷ್ಠ ಪಂಗಡಕ್ಕೆ ಸೇರಬೇಕಿದ್ದ 9 ಕುಡುಬಿ ಕುಟುಂಬಗಳ ಬಲವಂತದ ಭೂಸ್ವಾಧೀನದ ವಿರುದ್ಧ ಇದ್ದ ಅಲೆಯನ್ನು ಬಳಕೆ ಮಾಡಿಕೊಂಡ ಪೇಜಾವರ ಸ್ವಾಮಿ, ಸೆಝ್ ವಿರುದ್ಧದ ಹೋರಾಟಕ್ಕೆ ದುಮುಕಿದರು. ಇದೀಗ ಪೇಜಾವರ ಉಪವಾಸ ಘೋಷಣೆ ಮತ್ತು ಅಧಿಸೂಚನೆ ರದ್ದಿಗೆ ಒಂದು ವರ್ಷ ಸಂದುತ್ತಾ ಬಂದರೂ ಕುಡುಬಿಗಳ ಭೂಮಿ ಮರಳಲೇ ಇಲ್ಲ. ಕುಡುಬಿಗಳ ಉಪವಾಸ ನಿಲ್ಲಲೇ ಇಲ್ಲ.

ಪೇಜಾವರರ ಉಪವಾಸ ನಾಟಕ

ಮಂಗಳೂರು ವಿಶೇಷ ಆರ್ಥಿಕ ವಲಯದ ಎರಡನೇ ಹಂತಕ್ಕಾಗಿ ಅಧಿಸೂಚನೆಗೊಳಿಸಿದ 2035 ಎಕರೆ ಪ್ರದೇಶವನ್ನು ಡಿನೋಟಿಫೈಗೊಳಿಸಬೇಕು ಮತ್ತು ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರದ ಸಾಧಕ ಬಾಧಕ ಅಧ್ಯಯನದ ತಂಡದಲ್ಲಿ ನಾಗರಿಕರ ಪರವಾಗಿ ಇಬ್ಬರನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು 2011 ಜುಲೈ 13 ರಂದು ಉಪವಾಸ ಕುಳಿತುಕೊಳ್ಳುವುದಾಗಿ ಜುಲೈ 12 ರಂದು ಅಂತಿಮ ನಿರ್ಧಾರ ಪ್ರಕಟಿಸಿದ್ದರು. ಪೇಜಾವರ ತನ್ನ ನಿಲುವನ್ನು ಪ್ರಕಟಿಸಿದ ಒಂದೆರಡು ತಾಸುಗಳಲ್ಲೇ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾಧ್ಯಮ ಹೇಳಿಕೆಯನ್ನು ನೀಡಿ “ಪೇಜಾವರ ಶ್ರೀಗಳ ಬೇಡಿಕೆಗೆ ಸರ್ಕಾರ ಒಪ್ಪಿದೆ. 2035.31 ಎಕರೆಯಲ್ಲಿ 1998.03 ಎಕರೆ ಪ್ರದೇಶವನ್ನು ಡಿನೋಟಿಫೈ ಮಾಡಲಾಗುವುದು. ಉಳಿದ 37.27 ಎಕರೆ ಪ್ರದೇಶ ರಸ್ತೆ ಮತ್ತಿತರರ ಮೂಲಭೂತ ಸೌಕರ್ಯಗಳಿಗೆ ಬೇಕಾಗಿದೆ” ಎಂದಿದ್ದರು. ಆಶ್ಚರ್ಯವಾದರೂ ಸತ್ಯ ಏನೆಂದರೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಈ ಉತ್ತರವನ್ನು ಜೂನ್ 26 ರಂದೇ ಸಿದ್ಧಪಡಿಸಿದ್ದರು!

2011 ಜೂನ್ 26 ರಂದು ರವಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಖಾಸಗಿ ನಿವಾಸದಲ್ಲಿ ಸಭೆಯೊಂದನ್ನು ನಿಗಧಿಗೊಳಿಸಲಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯದ ವಿವಾದದ ಕುರಿತಾಗಿಯೇ ಈ ಸಭೆಯನ್ನು ಕರೆಯಲಾಗಿತ್ತು. ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಅಂದಿನ ಪರಿಸರ ಸಚಿವ ಕೃಷ್ಣ ಜೆ.ಪಾಲೇಮಾರ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಸಹಿತ ಮಂಗಳೂರು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್, ಆರ್‌ಎಸ್‌ಎಸ್‌ನ ಕಲ್ಲಡ್ಕ ಪ್ರಭಾಕರ ಭಟ್, ಜಯದೇವ್ ಭಾಗವಹಿಸಿದ್ದರು. ಸುಮಾರು 8 ಗಂಟೆಗೆ ಆರಂಭವಾದ ಸಭೆ 9.30ಕ್ಕೆ ಕೊನೆಗೊಂಡಿತ್ತು. ಮುಖ್ಯಮಂತ್ರಿ ನಿವಾಸದಲ್ಲಿ ಅಧಿಕೃತವಾಗಿಯೇ ನಡೆದ ಸಭೆಯಲ್ಲಿ 1998.03 ಎಕರೆ ಜಮೀನನ್ನು ಡಿನೋಟಿಪೈ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು. ಎಸ್ಇಝಡ್ ವಿರುದ್ಧ ದಲಿತರಿಂದ ಆರಂಭವಾದ ರೈತ ಹೋರಾಟವನ್ನು ಪೇಜಾವರರ ಕೈಗೆ ಒಪ್ಪಿಸಿದವರಲ್ಲಿ ಒಬ್ಬರಾಗಿರುವ ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಈ ಸಭೆಯಲ್ಲಿದ್ದರು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಮಧುಕರ ಅಮೀನ್ ಈ ಸಭೆಯ ನಿರ್ಣಯಗಳನ್ನು ಪೇಜಾವರ ಸ್ವಾಮಿಯ ಗಮನಕ್ಕೆ ತಂದಿಲ್ಲದಿರುವ ಸಾಧ್ಯತೆಗಳೇ ಇಲ್ಲ. ಇನ್ನೊಂದೆಡೆ ಆರ್‌ಎಸ್‌ಎಸ್‌ನ ಪ್ರಮುಖರಿದ್ದ ಸಭೆಯ ನಿರ್ಣಯಗಳು ಪೇಜಾವರ ಶ್ರೀಗಳಿಗೆ ತಿಳಿದಿರಲೇಬೇಕು. ಹಾಗಿದ್ದರೆ ಜೂನ್ 26 ರಂದು ಸರ್ಕಾರ 1998.03 ಎಕರೆಯನ್ನು ಡಿನೋಟಿಪೈಗೊಳಿಸಲು ನಿರ್ಧಾರ ಮಾಡಿತ್ತಾದರೂ ಜುಲೈ 12 ರಂದು ಪೇಜಾವರ ಪತ್ರಿಕಾಗೋಷ್ಠಿ ನಡೆಸಿ ನಿರಶನ ಕೈಗೊಳ್ಳುವ ಬಗ್ಗೆ ಪ್ರಕಟ ಮಾಡಿದ್ದೇಕೆ? ಜೂನ್ 26 ರಂದು ಮಾಡಿದ ನಿರ್ಣಯವನ್ನು ಪೇಜಾವರ ಉಪವಾಸ ಘೋಷಣೆಯ ನಂತರ ಸರ್ಕಾರ ಬಹಿರಂಗಗೊಳಿಸಿದ್ದೇಕೆ ಎಂಬ ಪ್ರಶ್ನೆಗಳಲ್ಲೇ ಉತ್ತರವಿದೆ.

2011 ಜೂನ್ 26 ರಂದು ಮುಖ್ಯಮಂತ್ರಿ ನಿವಾಸದಲ್ಲಿ ಸೆಝ್ ಕುರಿತಾದ ಸಭೆ ನಡೆದಿರುವ ಬಗ್ಗೆ ಯಾರೂ ಅಲ್ಲಗಳೆಯುವಂತಿಲ್ಲ. ರಾಜ್ಯದ ಪ್ರಮುಖ ದಿನಪತ್ರಿಕೆಗಳ ಬೆಂಗಳೂರು ಆವೃತ್ತಿಯಲ್ಲಿ ಈ ಬಗ್ಗೆ ವರದಿಯಾಗಿತ್ತು. ಜೂನ್ 27 ರಂದು ಧರ್ಮಸ್ಥಳಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದನ್ನು ಸ್ಪಷ್ಟಪಡಿಸಿದ್ದರೂ ಕೂಡಾ. ಆದರೆ ಮಾಧ್ಯಮಗಳಿಗೆ ಆ ಸುದ್ಧಿ ಬೇಕಾಗಿರಲಿಲ್ಲ. ಪತ್ರಕರ್ತರಿಗೆ (ನನಗೂ ಸೇರಿ) ಬೇಕಾಗಿದ್ದಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ನಡೆಯಬೇಕಿದ್ದ ಆಣೆ ಪ್ರಮಾಣದ ವಿಚಾರ ಮಾತ್ರ! ಮಾತ್ರವಲ್ಲದೆ ಜೂನ್ 26 ರಂದು ನಡೆದ ಈ ಸಭೆಯಲ್ಲಿ ಕೃಷಿಕರ ಪರವಾಗಿ ಕೃಷಿಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಭಾಗವಹಿಸಿದ್ದು ಎಲ್ಲಾ ರೈತರಿಗೂ ಗೊತ್ತಿರುವ ಸಂಗತಿಯೇ. ಹಾಗಿದ್ದರೂ ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ವ್ಯವಸ್ಥೆಯ ವಿರುದ್ಧದ ರೈತ ಬಂಡಾಯದ ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ. ಸಾಧು ಸಂತರ ಕಡೆಯಿಂದ ಹೋರಾಟ ನಡೆದರೆ ತಕ್ಷಣ ನ್ಯಾಯ ಸಿಗುತ್ತದೆ ಎಂಬ ಬಗ್ಗೆ ಜನರಲ್ಲಿ ನಂಬಿಕೆಯನ್ನು ಹುಟ್ಟಿಸಿ ಜನರಲ್ಲಿನ ಹೋರಾಟದ ಕಿಚ್ಚನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದಲೇ ಪೇಜಾವರ ವಿಶ್ವೇಶತೀರ್ಥರಿಂದ ಉಪವಾಸ ಘೋಷಣೆ ಮಾಡಿಸಿ ಸರ್ಕಾರ ತಕ್ಷಣ ಸ್ಪಂದನೆ ನೀಡೋ ನಾಟಕವಾಡಿದೆ.

ಸೆಝ್ ವಿರುದ್ಧ ಹೋರಾಟ ಆರಂಭಿಸಿದ್ದು ದಲಿತರು

ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧ ನೇರವಾಗಿ ಹೋರಾಟ ಆರಂಭಿಸಿದ್ದು ದಲಿತರು ಎಂಬುದನ್ನು ಪೇಜಾವರರ ಮುಖ ಪ್ರಭಾವ ಅಳಿಸಿ ಹಾಕಿದ್ದರಿಂದ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಮುದೆ, ಕಳವಾರು ಗ್ರಾಮದಲ್ಲಿ ಎಂಎಸ್ಇಝೆಡ್‌ನ ಪ್ರಥಮ ಹಂತಕ್ಕಾಗಿ ಫಲವತ್ತಾದ 1800 ಎಕರೆ ಕೃಷಿ ಭೂಮಿ ಸ್ವಾಧೀನಗೊಂಡ ಬಳಿಕ 2007 ಮೇ 05 ರಲ್ಲಿ ದ್ವಿತೀಯ ಹಂತದ ಎಂಎಸ್ಇಝೆಡ್‌ಗಾಗಿ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ 2035 ಎಕರೆ ಭೂಮಿ ಅಧಿಸೂಚನೆಗೊಳಡಿಸಲಾಗಿತ್ತು. 1800 ಎಕರೆ ಭೂಮಿಯಲ್ಲಿನ ರೈತರು ಸೆಝ್ ವಿರುದ್ಧ ಹೋರಾಟ ನಡೆಸದ ಹಿನ್ನಲೆಯಲ್ಲಿ ಅವರ ಭೂಮಿಯನ್ನು ಸ್ವಾಧೀನಗೊಳಿಸುವುದು ಕಷ್ಟಕರವಾಗಿರಲಿಲ್ಲ. ಪೆರ್ಮುದೆ ಕಳವಾರು ಗ್ರಾಮದ ರೈತರಲ್ಲಿ ಕಾಂಚಣ ಕುಣಿದಾಡೋ ಸಂಧರ್ಭದಲ್ಲಿ ಪಕ್ಕದ ಎಕ್ಕಾರಿನ ಗ್ರಾಮಸ್ಥರಲ್ಲಿ ಸೆಝ್ ವಿರುದ್ಧ ಜನಜಾಗೃತಿ ಮೂಡಿಸುವುದು ಸುಲಭವಾಗಿರಲಿಲ್ಲ. ಈ ಸಂಧರ್ಭದಲ್ಲಿ ಸೆಝ್ ಭಾದಕಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದ್ದ ಪರಿಸರವಾದಿಗಳಾದ ನಟೇಶ್ ಉಳ್ಳಾಲ್ ಮತ್ತು ವಿದ್ಯಾದಿನಕರ್‌ಗೆ ಸಿಕ್ಕಿದ್ದು ಎಕ್ಕಾರು ಗ್ರಾಮಸ್ಥರೇ ಆಗಿರುವ . “ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ” ಯ ಜಿಲ್ಲಾ ಪದಾಧಿಕಾರಿಗಳಾದ ಕೃಷ್ಣಪ್ಪ, ರಘು, ಕೃಷ್ಣ ಮತ್ತೊಂದಿಷ್ಟು ದಲಿತ ಮಹಿಳೆಯರು.

ಜನಪ್ರತಿನಿಧಿಗಳೂ ಸೇರಿದಂತೆ ಇಡೀ ಊರಿಗೆ ಊರೇ ಎಸ್ಇಝಡ್‌ನ ಪರಿಹಾರದ ದುಡ್ಡಿಗಾಗಿ ಹಲುಬುತ್ತಿದ್ದ ಸಂಧರ್ಭ ದಲಿತ ಸಂಘರ್ಷ ಸಮಿತಿ ಸದಸ್ಯರಾಗಿರೋ ಕೃಷ್ಣಪ್ಪ, ರಘು, ಕೃಷ್ಣ ಒಂದಷ್ಟು ಜನರನ್ನು ಕಟ್ಟಿಕೊಂಡು ಸೆಝ್ ವಿರುದ್ಧ ಸಂಘರ್ಷಕ್ಕಿಳಿದಿದ್ದರು. ಸಂಘರ್ಷವೆಂದರೆ ಕೇವಲ ಭಾಷಣದ ಸಂಘರ್ಷವಲ್ಲ. ದೈಹಿಕವಾಗಿಯೂ ಸೆಝ್ ಅಧಿಕಾರಿಗಳು, ಕೆಐಎಡಿಬಿ ಸಿಬ್ಬಂಧಿಗಳು, ಸೆಝ್ ಪರ ದಳ್ಳಾಲಿಗಳು, ಗೂಂಡಾಗಳ ವಿರುದ್ಧ ಹೋರಾಡಲಾಗಿತ್ತು. ಆಗ ಪ್ರತೀ ಪತ್ರಿಕೆಗಳಿಗೂ ಪುಟಗಟ್ಟಲೆ ಜಾಹೀರಾತು ಇದ್ದಿದ್ದರಿಂದ ಕೃಷ್ಣಪ್ಪನ ಗಲಾಟೆ ದೊಡ್ಡ ಸುದ್ಧಿಯಾಗಿರಲಿಲ್ಲ. ಕೃಷ್ಣಪ್ಪ, ರಘು, ಕೃಷ್ಣ, ಲಾರೆನ್ಸ್, ವಿಲಿಯಂ, ನಟೇಶ್ ಉಳ್ಳಾಲ್, ವಿದ್ಯಾ ದಿನಕರ್ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ 9 ದೂರುಗಳು ದಾಖಲಾಗಿರುವುದೇ ಅಂದಿನ ಸಂಘರ್ಷಕ್ಕೆ ಸಾಕ್ಷಿ. ಇಷ್ಟೆಲ್ಲಾ ಸಂಘರ್ಷದ ನಂತರ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ ಕೃಷಿಕರಲ್ಲಿ ಜಾಗೃತಿ ಮೂಡಿದ್ದು. ಇವರ ಹೋರಾಟದ ಮಧ್ಯೆಯೂ ಅಲ್ಲೊಬ್ಬರು ಇಲ್ಲೊಬ್ಬರು ಭೂಮಿ ನೀಡಲು ಮುಂದೆ ಬಂದು ಕೆಐಎಡಿಬಿಗೆ ಒಪ್ಪಿಗೆ ಪತ್ರ ನೀಡಿದ್ದರು. ಕೃಷಿಕರಿಂದ ಒಪ್ಪಿಗೆ ಪತ್ರ ಪಡೆದುಕೊಂಡ ಕೆಐಎಡಿಬಿ ಅಧಿಕಾರಿಗಳು ಜಾರ್ಜ್ ಎಂಬವರ ಮನೆಗೆ ಸರ್ವೆ ಮಾಡಲು ಬಂದಾಗ ಕೃಷ್ಣಪ್ಪ, ರಘು, ಲಾರೆನ್ಸ್ ಬಂದರು ಎಂಬ ಒಂದೇ ಕಾರಣಕ್ಕೆ ದಾಖಲೆಗಳನ್ನು ಬಿಟ್ಟು ಅಧಿಕಾರಿಗಳು ಪರಾರಿಯಾಗಿದ್ದರು. ನಂತರ ಬಜಪೆ ಠಾಣೆಗೆ ಬಂದು ಹೋರಾಟಗಾರರ ವಿರುದ್ಧ ಸುಳ್ಳು ನೀಡಿದ್ದರು ಎಂಬುದು ಬೇರೆ ಮಾತು. ಇಂತಹ ಹೋರಾಟದಿಂದಾಗಿಯೇ ಕೃಷಿ ಭೂಮಿ ಸಂರಕ್ಷಣಾ ಸಮಿತಿ ಬಲಗೊಂಡಿತ್ತೇ ಹೊರತು ಸಮಿತಿಯ ಪದಾಧಿಕಾರಿಗಳ ಪ್ರಭಾವದಿಂದಲ್ಲ.

ಜಮಾಅತೆ ಇಸ್ಲಾಮೀ ಹಿಂದ್ ಮತ್ತು ಪೇಜಾವರ

2007 ರಲ್ಲಿ ಎಕ್ಕಾರು, ಪೆರ್ಮುದೆ, ದೇಲಂತಬೆಟ್ಟಿನ ರೈತರು ಹೋರಾಟ ನಡೆಸುತ್ತಿದ್ದ ಸಂಧರ್ಭ ಯಾವೊಬ್ಬರೂ ಜನಪ್ರತಿನಿಧಿಗಳಾಗಲೀ, ಸಂಘಸಂಸ್ಥೆಗಳಾಗಲೀ ರೈತರಿಗೆ ಹೋರಾಟ ನೀಡುತ್ತಿರಲಿಲ್ಲ. ಒಂದೆರಡು ಪತ್ರಕರ್ತರು ಸಣ್ಣ ಡಿಜಿಟಲ್ ಕ್ಯಾಮರ ಹಿಡಿದುಕೊಂಡು ಸುತ್ತಾಡುವುದು ಬಿಟ್ಟರೆ ಪತ್ರಕರ್ತರೂ ಹೋರಾಟವನ್ನು ಕ್ಯಾರೇ ಮಾಡದ ದಿನಗಳವು. ಸೆಝ್‌ನ ದುಡ್ಡಿನ ಪ್ರಭಾವವೇ ಅಂತದ್ದು! ಇಂತಹ ಸಂದರ್ಭದಲ್ಲಿ ಪ್ರಚಾರ ಸಿಗುವುದಿಲ್ಲವೆಂದು ಗೊತ್ತಿದ್ದರೂ ಹೋರಾಟಕ್ಕೆ ಬಂದವರು ಜಮಾ ಅತೆ ಇಸ್ಲಾಮೀ ಹಿಂದ್‌ನ ಮಹಮ್ಮದ್ ಕುಂಜ್ಞ ಮತ್ತು ಒಂದಷ್ಟು ಹುಡುಗರು. ನಿರಂತರವಾಗಿ ನಡೆದ ಹೋರಾಟವನ್ನು ಧರ್ಮಾತೀತ ಮಾಡಬೇಕು ಎಂಬ ಒಂದೇ ಉದ್ದೇಶದಿಂದ ಮಹಮ್ಮದ್ ಕುಂಜ್ಞರವರು ಕೇಮಾರು ಸಾಂಧೀಪಿನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮಿಯವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಂಡರು. ಅದು ಫಸ್ಟ್ ಟೈಮ್ ಒಬ್ಬ ಕೇಸರಿ ವಸ್ತ್ರಧಾರಿ ವ್ಯಕ್ತಿ ಸೆಝ್ ವಿರುದ್ಧ ಕುಡುಬಿಗಳ ಗದ್ದೆಯ ಬದುಗಳಲ್ಲಿ ನಡೆದಾಡಿದ್ದು. ನಂತರ ನಡೆದಿದ್ದೆಲ್ಲವೂ ಕರಾಳ ಇತಿಹಾಸ. ಧರ್ಮಾತೀತವಾಗಿರಲಿ ಎಂಬ ಉದ್ದೇಶದಿಂದ ಕೇಮಾರು ಸ್ವಾಮಿಯೊಬ್ಬರನ್ನು ಕರೆದರೆ ಕೇಮಾರು ಸ್ವಾಮಿ ಇಡೀ ಹೋರಾಟವನ್ನು ಹೈಜಾಕ್ ಮಾಡಿ ಬಿಟ್ಟಿದ್ದರು. ಮತ್ತೊಂದು ವಾರ ಬಿಟ್ಟು ನಡೆದ ಸಭೆಯಲ್ಲಿ ಗುರುಪುರ ವಜ್ರದೇಹಿ ಸ್ವಾಮಿ, ಕೊಲ್ಯ ರಮಾನಂದ ಸ್ವಾಮಿ, ಒಡಿಯೂರು ಗುರುದೇವಾನಂದ ಸ್ವಾಮಿಗಳಿದ್ದರು. ಸಾಲದೆಂಬಂತೆ ಪೇಜಾವರ ವಿಶ್ವೇಶತೀರ್ಥ ಶ್ರೀಗಳ ದಿವ್ಯ ಸಾನಿಧ್ಯವಿತ್ತು. ಯಾವಾಗ ಪೇಜಾವರ ಸ್ವಾಮಿ ಎಂಟ್ರಿಯಾದರೋ ಇಡೀ ಸಂಘಪರಿವಾರ ಕುಡುಬಿಗಳ ಗದ್ದೆಯಲ್ಲಿ ನಡೆದಾಡಿತು. ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಮಾಯವಾಗಿದ್ದು ಯಾರಿಗೂ ಗೊತ್ತಾದಂತೆ ಅನ್ನಿಸಲೇ ಇಲ್ಲ. 2007 ರಲ್ಲೇ ಉಪವಾಸದ ಅಸ್ತ್ರವನ್ನು ಪ್ರಯೋಗಿಸಿದ್ದ ಪೇಜಾವರ ಸ್ವಾಮಿಗಳು ಇಡೀ ಹೋರಾಟವನ್ನು ತನ್ನ ಕೈಗೆ ತೆಗೆದುಕೊಂಡರು. ಜನ ಕ್ರಾಂತಿಕಾರಿ ಹೋರಾಟವನ್ನು ಕೈಬಿಟ್ಟು ಬ್ಲ್ಯಾಕ್‌ಮೇಲ್ ಹೋರಾಟವನ್ನು ಆಯ್ಕೆ ಮಾಡಿಕೊಂಡರು. ಪೇಜಾವರರ ಸುತ್ತ ಇದ್ದ ಈ ಕೇಸರಿ ರೈತ ಹೋರಾಟಗಾರರ ರಶ್ ಮಧ್ಯೆ ಜಮಾ ಅತೆ ಇಸ್ಲಾಮೀ ಹಿಂದ್ ಪೆರ್ಮುದೆಯಿಂದ ಹಿಂದಕ್ಕೆ ನೂಕಲ್ಪಟ್ಟಿತ್ತು.

ಆಗಿನ್ನೂ ಕುಡುಬಿಗಳ 16.04 ಎಕರೆ ಭೂಮಿಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿರಲಿಲ್ಲ. ಕುಡುಬಿಗಳಿಗೆ ನೋಟೀಸ್ ಮಾತ್ರ ಜಾರಿಗೊಳಿಸಲಾಗಿತ್ತು. ಈ ಸಂಧರ್ಭವೇ ಕುಡುಬಿಪದವಿಗೆ ಬಂದ ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಕುಡುಬಿಗಳಿಗಿಂತ ಹತ್ತಡಿ ದೂರದಲ್ಲಿ ನಿಂತು ಭೂಮಿ ಉಳಿಸಿಕೊಡುವ ಭರವಸೆ ನೀಡಿದ್ದರು. ಭೂಸ್ವಾಧೀನಕ್ಕೆ ಬರೋ ಅಧಿಕಾರಿಗಳನ್ನು ಒದ್ದೋಡಿಸೋ ನಿರ್ಧಾರ ಮಾಡಿದ್ದ ಕೃಷಿಕರು ಪೇಜಾವರ ಸ್ವಾಮಿಗಳ ಭರವಸೆಯನ್ನು ನಂಬಿ ಕೈಕಟ್ಟಿ ಕುಳಿತುಬಿಟ್ಟರು. ಪೇಜಾವರ ಶ್ರೀಗಳು ಬಿಜೆಪಿಯಲ್ಲಿ ಪ್ರಭಾವಶಾಲಿಗಳು. ಅವರೇನಾದರೂ ನಮ್ಮ ಪರವಾಗಿ ಉಪವಾಸ ಕುಳಿತರೆ ಭೂಮಿ ಮುಟ್ಟೋ ಸಾಹಸವನ್ನು ಸರ್ಕಾರ ಮಾಡುವುದಿಲ್ಲ ಎಂದು ರೈತರು ನಂಬಿದ್ದರು. ಆದರೆ ನಡೆದದ್ದೇ ಬೇರೆ.  2007 ನವೆಂಬರ್ 16 ರಂದು ಪೇಜಾವರ ವಿಶ್ವೇಶತೀರ್ಥ ಸ್ವಾಮಿಗಳು ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಒಂದು ದಿನದ ಉಪವಾಸ ವ್ರತ ಕೈಗೊಂಡರು. ಬೆಳಿಗ್ಗೆ 8 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಹಾಲು ಬಿಟ್ಟು ಬೇರೇನೂ ಸೇವಿಸದೆ ಕೈಗೊಂಡ ಉಪವಾಸ ಸರ್ಕಾರದ ಮೇಲೆ ಪ್ರಭಾವ ಬೀರಲೇ ಇಲ್ಲ. ಸರ್ಕಾದ ವಿರುದ್ಧ ತೀವ್ರತರಹದ ಹೋರಾಟಗಳು ನಡೆಯಬಾರದು ಎನ್ನೋ ಕಾರಣಕ್ಕಾಗಿಯೇ ಆರ್‌ಎಸ್‌ಎಸ್‌ನ ಕುತಂತ್ರದ ಫಲವಾಗಿಯೇ ಪೇಜಾವರ ಸ್ವಾಮೀಜಿ ಎಸ್ಇಝಡ್ ವಿರುದ್ಧದ ಹೋರಾಟಕ್ಕೆ ದುಮುಕ್ಕಿದ್ದರು ಎಂಬುದು ಅಂದಿನ ದಿನಗಳಲ್ಲೇ ಸಂದೇಹಗಳು ವ್ಯಕ್ತವಾಗಿತ್ತು. 2011 ರ ಜುಲೈ 12 ರದ್ದೂ ಸೇರಿ ಒಟ್ಟು ಐದು ಬಾರಿ ಉಪವಾಸದ ಘೋಷಣೆಯನ್ನು ಪೇಜಾವರ ಸ್ವಾಮಿಗಳು ಮಾಡಿದ್ದಾರೆ. ಪೇಜಾವರ ಸ್ವಾಮಿಗಳು ಮನಸ್ಸು ಮಾಡಿದ್ದರೆ ಅಥವಾ ಮನಸ್ಸು ಮಾಡದೇ ಇದ್ದಿದ್ದರೆ ಅಂದೇ ಕುಡುಬಿಗಳ ಭೂಮಿಯನ್ನು ಉಳಿಸಬಹುದಿತ್ತು. ಪೇಜಾವರ ಸ್ವಾಮಿಗಳು ಹೋರಾಟದ ಮನಸ್ಸು ಮಾಡದೇ ಇದ್ದಿದ್ದರೆ ಕುಡುಬಿಗಳು ಖಂಡಿತವಾಗಿಯೂ ಸಂಘರ್ಷದ ಹಾದಿಯನ್ನು ಹಿಡಿಯುತ್ತಿದ್ದರು. ಆದರೆ ಪೇಜಾವರರನ್ನು ನಂಬಿದ ಮುಗ್ದ, ಅನಕ್ಷರಸ್ಥ ಕುಡುಬಿಗಳನ್ನು ಸರ್ಕಾರ ತನಗೆ ಬೇಕಾದಂತೆ ಬಳಸಿಕೊಂಡು ಕಾರ್ಯಸಾಧನೆ ಮಾಡಿದೆ. ಪೇಜಾವರರ ಬೇಡಿಕೆಯ 2035 ಎಕರೆಯಲ್ಲಿ 37 ಎಕರೆಯನ್ನು ಹೊರತುಪಡಿಸಿ 1998 ಎಕರೆಯನ್ನು ಡಿನೋಟಿಫೈಗೊಳಿಸಿದೆ. ಡಿನೋಟಿಫೈಗೊಳಿಸದ 37.28 ಎಕರೆಯಲ್ಲಿ ಬಹುತೇಕ ಭೂಮಿ ಕುಡುಬಿಗಳಿಗೆ ಸಂಬಂಧಪಟ್ಟಿದ್ದು. ಯಾವ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಪೇಜಾವರ ಸೆಝ್ ವಿರುದ್ಧದ ಹೋರಾಟ ನಡೆಸಿದರೋ ಆ ಮಂದಿಗೆ ನ್ಯಾಯ ಕೊನೆಗೂ ಮರಿಚೀಕೆಯಾಯಿತು.

ಗಡಿಪಾರು ಆಗಬೇಕಿರುವುದು ನಿತ್ಯಾನಂದನಲ್ಲ, ಧ್ಯಾನ ಎಂಬ ಸಮೂಹ ಸನ್ನಿ.

– ನವೀನ್ ಸೂರಿಂಜೆ

ಧ್ಯಾನ ಗುರು ನಿತ್ಯಾನಂದ ಸ್ವಾಮಿಯನ್ನೇನೋ ಸರಕಾರ ರಾಮನಗರ ಜಿಲ್ಲೆಯಿಂದ ಗಡಿಪಾರು ಮಾಡಿದೆ. ಸರಕಾರ ಅಥವ ವ್ಯವಸ್ಥೆ ಗಡಿಪಾರು ಮಾಡಬೇಕಿರುವುದು ಒರ್ವ ಸ್ವಾಮಿಯನ್ನೋ ಅಥವಾ ಗುರೂಜಿಯನ್ನೋ ಅಲ್ಲ. ಜನರನ್ನು ಸಮೂಹ ಸನ್ನಿಗೆ ಒಳಪಡಿಸೋ ಇಂತಹ ಗುರೂಜಿಗಳ ಚಿಂತನೆಯನ್ನು ಸರಕಾರ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಸನಾತನ ಕಾಲದಲ್ಲಿ ಋಷಿ ಮುನಿಗಳು ಧ್ಯಾನ ಮಾಡುತ್ತಿದ್ದರು ಎನ್ನವ ಕತೆಯನ್ನೇ ಇತಿಹಾಸವನ್ನಾಗಿಸಿ ಧ್ಯಾನವನ್ನು ವ್ಯಾಪಾರವನ್ನಾಗಿಸಲಾಗುತ್ತಿದೆ. ಒಬ್ಬ ನಿತ್ಯಾನಂದ ಮತ್ತೊಬ್ಬ ಗುರೂಜಿ ಅನಭಿಷಿಕ್ತ ನಾಯಕರಾಗಿರುವ ಧ್ಯಾನ ಲೋಕದಲ್ಲಿ ಸಮಾಜ ಮೂರಾಬಟ್ಟೆಯಾಗುತ್ತಿದೆ. ಇಷ್ಟಕ್ಕೂ ಧ್ಯಾನ ಎನ್ನುವುದು ವ್ಯಕ್ತಿಯೊಬ್ಬನನ್ನು ಸಮಾಜದಿಂದ ಬೇರ್ಪಡಿಸೋ ನಿಧಾನಗತಿಯ ಕಾರ್ಯಕ್ರಮ. ಪ್ರಾರಂಭದಲ್ಲಿ ಧ್ಯಾನ ತನ್ನ ಮನಸ್ಸಿನ ಆಯಾಸ ಕಳೆಯುತ್ತದೆ ಎನ್ನುವಂತೆ ಭಾಸವಾದರೂ ಧ್ಯಾನದ ಅಂತಿಮ ಘಟ್ಟ ತಲುಪಿದಾಗ ತನ್ನ ಕುಟುಂಬ ಮತ್ತು ಸಮಾಜಕ್ಕೂ ನನಗೂ ಸಂಬಂಧವೇ ಇಲ್ಲದಂತೆ ಧ್ಯಾನ ಮಾಡುವವರು ವರ್ತಿಸಲಾರಂಭಿಸುತ್ತಾರೆ. ಇದರ ಫಲವೇ ತನ್ನ ಆಸ್ತಿಯನ್ನೆಲ್ಲಾ ಸ್ವಾಮಿಗಳಿಗೋ, ಗುರೂಜಿಗಳಿಗೋ ಸಮರ್ಪಿಸಿ ತಾನಾಯಿತು ತನ್ನ ಪಾಡಾಯಿತು ಎಂದು ಧ್ಯಾನದಲ್ಲಿ ಮಗ್ನರಾಗುತ್ತಾರೆ.

ಒಬ್ಬ ಮೂವತ್ತೈದರ ಆಸುಪಾಸಿನ ಯುವಕ ನಿತ್ಯಾನಂದ ಕೇವಲ ಧ್ಯಾನವೊಂದರಿಂದ ಸಾವಿರಾರು ಕೋಟಿ ಸಂಪಾದಿಸಬಹುದು. ಮತ್ತೊಬ್ಬ ಕೀರಲು ದ್ವನಿಯ ಧ್ಯಾನದ ಗುರೂಜಿಯೊಬ್ಬ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಸಂಪಾದಿಸಬಹುದು ಎಂದಿದ್ದರೆ ಧ್ಯಾನ ಅಷ್ಟೊಂದು ಫವರ್‌ಫುಲ್ ಇದೆಯಾ ಎಂಬ ಪ್ರಶ್ನೆ ಸಾಮಾನ್ಯ ಜನರಲ್ಲಿ ಸಹಜವಾಗಿ ಮೂಡುತ್ತದೆ. ನಿತ್ಯ ಜೀವನದ ಒತ್ತಡಗಳು, ಆಯಾಸಗಳು, ನೋವುಗಳು, ಸವೆತಗಳು ಧ್ಯಾನದಿಂದ ದೂರವಾಗುವವು ಎಂಬ ಪ್ರಚಾರದ ಹಿನ್ನೆಲೆಯಲ್ಲಿ ಧ್ಯಾನ ಅಸ್ತಿತ್ವಕ್ಕೆ ಬಂದಿದೆ. ಜಗತ್ತಿನಲ್ಲಿ ಯಾವುದೇ ಜೀವಿಯ ಬದುಕಿನಲ್ಲಿ ಒತ್ತಡಗಳು, ಆಯಾಸಗಳು, ನೋವುಗಳು, ಸವೆತಗಳು ಇಲ್ಲದೇ ಇರುವ ಬದುಕೇ ಇರಲು ಸಾಧ್ಯವಿಲ್ಲ. ಉಳ್ಳವರ ಜೀವನದ ಒತ್ತಡ, ಆಯಾಸ, ನೋವು, ಸವೆತಗಳೇ ಈ ಧ್ಯಾನದ ಬಂಡವಾಳ.

ಧ್ಯಾನದ ವ್ಯಾಪಾರಿಗಳ ಪ್ರಕಾರ ಧ್ಯಾನ ಎಂದರೇನು?

“ಧ್ಯಾನ ಎಂದರೆ ಯೋಗ ನಿದ್ರೆ. ಧ್ಯಾನ ಸಾಧಕನು ಧ್ಯಾನವನ್ನು ಮಾಡುತ್ತಿರುವಾಗ ಮನಸ್ಸು ಧ್ಯಾನ ಮಾಡುತ್ತಾ ಎಚ್ಚರವಾಗಿದ್ದರೂ ಶರೀರಕ್ಕೆ ವಿಪರೀತವಾದ ವಿಶ್ರಾಂತಿ ಉಂಟು ಮಾಡುವುದು. ಇದನ್ನೇ ಯೋಗ ನಿದ್ರೆ ಎನ್ನುತ್ತಾರೆ. ಈ ಯೋಗ ನಿದ್ರೆಯಿಂದ ಶರೀರವು ತನಗಾಗಿರೋ ಆಯಾಸ, ಸವೆತ, ನೋವು ಇತ್ಯಾದಿಗಳನ್ನು ಹೊರಹಾಕಿ ತನ್ನನ್ನು ತಾನು ಸಾಕಷ್ಟು ಮಟ್ಟಿಗೆ ಸರಿಪಡಿಸಿಕೊಳ್ಳುವುದು. ಹೀಗೆ ಧ್ಯಾನದಿಂದ ಕೆಲವಾರು ಸಣ್ಣ ಪ್ರಮಾಣದ ಖಾಯಿಲೆಗಳು ಮಾಯವಾಗುವುದಲ್ಲದೆ ದೊಡ್ಡ ಪ್ರಮಾಣದ ಖಾಯಿಲೆಗಳಿದ್ದರೆ ಹೆಚ್ಚಾಗದಂತೆ ತಡೆಯುವುದು, ಮತ್ತು ಔಷಧಿಗಳ ಗುಣಕಾರಿ ಫಲವನ್ನು ಹೆಚ್ಚಿಸುವುದು. ಶರೀರದ ಆರೋಗ್ಯವು ಉತ್ತಮಗೊಂಡಾಗ ಧ್ಯಾನ ಸಾಧಕನಲ್ಲಿ ಮಾನಸಿಕ ಲವಲವಿಕೆ ಮತ್ತು ಉಲ್ಲಾಸ ಉಂಟಾಗುವುದು,” ಎನ್ನುತ್ತದೆ ಧ್ಯಾನ ಲೋಕ. ಧ್ಯಾನದಲ್ಲಿ ಮೂರ್ನಾಲ್ಕು ಹಂತಗಳಿವೆ. ಧ್ಯಾನ ಪ್ರಾರಂಭಿಸುವಾಗಲೇ ಎಲ್ಲರಿಗೂ ಕೆಲವೊಂದು ಸೂಚನೆಗಳನ್ನು ನೀಡಲಾಗುತ್ತದೆ. “ಧ್ಯಾನದಲ್ಲಿ ಅಥವಾ ಧ್ಯಾನ ನಂತರ ತಲೆ ಭಾರವಾಗಬಹುದು. ಅಥವಾ ಸ್ವಲ್ಪ ತಲೆ ನೋವಾಗಬಹುದು. ಇದು ಕೇವಲ ಧ್ಯಾನದಲ್ಲಿ ಸುರುಳಿ ಬಿಚ್ಚಿಕೊಂಡ ಕರ್ಮಗಳು ಹೊರ ಹೋಗಲು ಸ್ವಲ್ಪ ತಡವಾಗುವುದರಿಂದ ಈ ರೀತಿಯಾಗುತ್ತದೆ. ಆಗ ಕಣ್ಣುಗಳನ್ನು ಮುಚ್ಚಿ ಮನಸ್ಸನ್ನು ಸ್ವೇಚ್ಚೆಯಾಗಿ ಹರಿಯಲು ಬಿಟ್ಟು ಮೌನವಾಗಿ 10 – 15 ನಿಮಿಷ ಕುಳಿತುಕೊಳ್ಳಿ” ಎನ್ನುತ್ತಾರೆ. ಧ್ಯಾನದ ಫ್ರಾಥಮಿಕ ಹಂತದಲ್ಲೇ ಧ್ಯಾನ ಎಂದರೆ ಒಂದೋ ನಮ್ಮನ್ನು ಸಮಾಜದಿಂದ ಬೇರ್ಪಡಿಸೋ ಕ್ರೀಯೆ ಅಥವಾ ಸಮೂಹ ಸನ್ನಿಗೆ ಒಳಪಡಿಸಿ ನಮ್ಮನ್ನ ಅವರ ಸುಪರ್ದಿಯಲ್ಲಿರಿಸುವ ಯತ್ನ ಎಂಬುದನ್ನು ಮನಗಾಣಬೇಕು.

ಶರೀರಕ್ಕೆ ಜೀವನದ ಒತ್ತಡದಿಂದ ವಿಶ್ರಾಂತಿ ನೀಡುವ ಕ್ರೀಯೆಯಾಗಿ ಯೋಗ ನಿದ್ರೆ ಮಾಡುವುದು ಎಂದರೆ ನೀವು ಒತ್ತಡವನ್ನು ನಿವಾರಿಸಲು ಮಾಡುವ ಯೋಚನೆಯನ್ನು ಚಿವುಟುವುದು ಎಂದರ್ಥ. ನಿಮ್ಮ ಮಾನಸಿಕ ಕ್ಷೊಭೆಯನ್ನು ನಿಮ್ಮೊಳಗೆ ಇಂಗಿಸಿಕೊಂಡು ನಿಮ್ಮ ಮನಸ್ಸಿಗೆ ತಾತ್ಕಲಿಕ ರಿಲ್ಯಾಕ್ಸ್ ಕೊಡಿಸುವ ಮೂಲಕ ಶಾಶ್ವತ ಪರಿಹಾರದಿಂದ ವಿಮುಖರನ್ನಾಗಿಸುವುದೇ ಧ್ಯಾನ. ಸರಳವಾಗಿ ಹೇಳುವುದಾದರೆ ಯಾವುದೇ ಮಾನಸಿಕ ಕ್ಷೊಭೆಗೆ ಅಥವ ಜೀವನದ ಒತ್ತಡ ನಿವಾರಣೆಗೆ ಮಾತು ಮುಖ್ಯವೇ ಹೊರತು ಮೌನವಲ್ಲ. ಮನಸ್ಸಿನಲ್ಲಿ ಯಾವುದೋ ನೋವು ತುಂಬಿಕೊಂಡು ಅಥವಾ ಒತ್ತಡಗಳನ್ನು ಹೇರಿಕೊಂಡು ಕ್ಷೊಭೆಗೆ ಒಳಗಾಗಿದ್ದರೆ ಆತನನ್ನು ಮಾನಸಿಕ ರೋಗಿ ಎನ್ನಬಹುದು. ಒರ್ವ ಮಾನಸಿಕ ರೋಗಿ ಮೌನಿಯಾದಷ್ಟು ಆತನ ರೋಗ ಉಲ್ಬಣಗೊಳ್ಳುತ್ತದೆ. ಆತ ವೈದ್ಯರ ಬಳಿಯೋ, ಆಪ್ತ ಸಮಾಲೋಚಕರ ಬಳಿಯೋ ಎಲ್ಲವನ್ನು ಮುಕ್ತವಾಗಿ ಹೇಳಿಕೊಳ್ಳಬೇಕು. ಮುಕ್ತವಾಗಿ ಮಾತನಾಡುವುದೇ ಮಾನಸಿಕ ರೋಗಕ್ಕೆ ಪ್ರಾಥಮಿಕ ಚಿಕಿತ್ಸೆ. ಆದರೆ ಧ್ಯಾನದ ಚಿಕಿತ್ಸೆಯಲ್ಲಿ ಯೋಗ ನಿದ್ರೆ ಮಾಡಲಾಗುತ್ತದೆ. ಇದು ತಾತ್ಕಾಲಿಕವಾಗಿ ಪರಿಹಾರ ಎನಿಸಬಹುದಾದರೂ ಇದೊಂದು ವಂಚನೆಯಷ್ಟೆ. ಇನ್ನು ಧ್ಯಾನವು ಹಲವು ರೋಗಗಳನ್ನು ಗುಣ ಮಾಡುತ್ತದೆ ಮತ್ತು ನಾವು ಸೇವಿಸಿದ ಔಷಧದ ಗುಣಫಲವನ್ನು ಹೆಚ್ಚಿಸುತ್ತದೆ ಎಂಬುದು ಮೂರ್ಖತನದ ಪರಮಾವಧಿ. ಇಷ್ಟಕ್ಕೂ ಕಣ್ಣುಗಳನ್ನು ಮುಚ್ಚಿ ಮೌನವಾಗಿ ಮನಸ್ಸನ್ನು ಸ್ವೇಚ್ಚೆಯಾಗಿ ಹರಿಯ ಬಿಡಿ ಎನ್ನುವುದು ಧ್ಯಾನದ ಅಂತಿಮ ಘಟ್ಟದ ಪೂರ್ವ ಸಿದ್ಧತೆ ಎನ್ನಬಹುದು. ನಿತ್ಯಾನಂದನಂತಹ ಗುರೂಜಿಗಳು ಇಂತಹ ಮೌನ ಸ್ವೇಚ್ಚೆಯನ್ನೇ ಧ್ಯಾನದ ಅಂತಿಮ ಘಟ್ಟದಲ್ಲಿ ಬಳಸಿಕೊಳ್ಳುತ್ತಾರೆ.

ಧ್ಯಾನವನ್ನು ಸಾಮೂಹಿಕವಾಗಿಯೇ ಯಾಕೆ ಮಾಡುತ್ತಾರೆ?

ಧ್ಯಾನ ವ್ಯಕ್ತಿಯೊಬ್ಬನಿಗೆ ವೈಯುಕ್ತಿಕ ಜೀವನದ ಒತ್ತಡದಿಂದ ತಾತ್ಕಾಲಿಕ ಪರಿಹಾರ ನೀಡಬಹುದು. ಈ ಧ್ಯಾನವನ್ನು ಎಲ್ಲರೂ ಸಾಮೂಹಿಕ ಧ್ಯಾನವನ್ನಾಗಿ ಮಾಡಿಸಲು ಮಾತ್ರ ಉತ್ಸುಕರಾಗಿದ್ದಾರೆ. ಸಾಮೂಹಿಕ ಧ್ಯಾನ ಮಾಡುವುದರಿಂದ ಇನ್ನಷ್ಟು ಜನರನ್ನು ಸಮೂಹ ಸನ್ನಿಗೆ ಒಳಪಡಿಸಬಹುದು ಎಂಬ ತಂತ್ರ ಇದರಲ್ಲಿ ಅಡಗಿದೆ. ದೇವರ ನಾಮ ಅಥವಾ ಗುಣವನ್ನು ಮನನ ಮಾಡುವುದೇ ಧ್ಯಾನ ಎಂದು ವೇದಗಳು ಹೇಳುತ್ತವೆ. “ಯಜ್ಞಾನಾಂ ಜಪಯಜ್ಞೋಸ್ಮಿ” – ಆಧ್ಯಾತ್ಮಿಕ ಸಾಧನೆಗಳಲೆಲ್ಲಾ ಶ್ರೇಷ್ಠವಾದ ಧ್ಯಾನವು ನಾನೇ ಆಗಿರುವೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಧ್ಯಾನದಲ್ಲಿ ಮೂರು ಬಗೆಯ ಧ್ಯಾನಗಳಿವೆ. 1. ವೈಖರಿ ಧ್ಯಾನ, 2. ಉಪಾಂಶು ಧ್ಯಾನ, 3. ಮಾನಸಿಕ ಧ್ಯಾನ. ನಾಲಿಗೆಯ ತುಟಿಗಳನ್ನು ಅಲುಗಾಡಿಸುತ್ತಾ ಇತರರಿಗೆ ಕೇಳಿಸುವಂತೆ ಮನನ ಮಾಡುವುದೇ ವೈಖರಿ ಧ್ಯಾನ. ಕಣ್ಣುಗಳನ್ನು ಮುಚ್ಚಿ ನಾಲಿಗೆ ತುಟಿಗಳನ್ನು ಅಲುಗಾಡಿಸುತ್ತಾ ಕೇವಲ ಮನಸ್ಸಿನಲ್ಲೇ ಮನನ ಮಾಡುವುದೇ ಉಪಾಂಶು ಧ್ಯಾನ. ಯಜ್ಞ ಯಾಗಾಧಿಗಳಿಂಧ ಸಾವಿರ ಪಟ್ಟು ಹೆಚ್ಚು ಫಲ ಸಿಗುವ ಮಾನಸಿಕ ಧ್ಯಾನಕ್ಕೆ ಕಣ್ಣುಗಳನ್ನು ಮುಚ್ಚಿ ತುಟಿಯನ್ನು ಅಲ್ಲಾಡಿಸದೇ ಮನಸ್ಸಿನಲ್ಲಿ ಮನನ ಮಾಡಿಕೊಳ್ಳಬೇಕು. ಇಂತಹ ಎಲ್ಲಾ ಧ್ಯಾನವನ್ನು ಪ್ರತಿಯೊಬ್ಬರು ಮನೆಯಲ್ಲಿ ತೀರಾ ವೈಯುಕ್ತಿಕವಾಗಿ ಮಾಡಬಹುದು. ಅಗತ್ಯವೆನಿಸಿದ್ದಲ್ಲಿ ಧ್ಯಾನದ ಬಗ್ಗೆ ಒಂದು ವಾರದ ಕಾರ್ಯಗಾರವನ್ನು ಮಾಡಿ ಧ್ಯಾನ ಮಾಡುವುದನ್ನು ಕಲಿಸಿಕೊಟ್ಟು ಮನೆಯಲ್ಲೇ ಧ್ಯಾನ ಮಾಡಿಸಬಹುದು. ಆದರೆ ಮನೆಯಲ್ಲೇ ಧ್ಯಾನ ಮಾಡಿ ಎಂದು ಯಾವ ಗುರೂಜಿಯೂ ಸಲಹೆ ಕೊಡುವುದಿಲ್ಲ. ನಿತ್ಯ ನಾವಿರುವಲ್ಲೇ ಒಂದು ಧ್ಯಾನ ಮಾಡಿ ಅನ್ನುತ್ತಾರೆ. ಧ್ಯಾನಿಗರ ಮಾನಸಿಕ ಸ್ಥಿತಿಯನ್ನು ಸಂಪೂರ್ಣವಾಗಿ ಕ್ಯಾಪ್ಚರ್ ಮಾಡಿಕೊಂಡ ನಂತರ ಆಶ್ರಮದಲ್ಲೇ ಇರಿ ಎನ್ನುತ್ತಾರೆ. ಕೊನೆಗೆ ಧ್ಯಾನ ಮರೆತ ಜನ ಒಂದೋ ಗುರೂಜಿಗಳ ಆಶ್ರಮದಲ್ಲಿ ಇರುತ್ತಾರೆ ಇಲ್ಲವೋ ಗುರೂಜಿಗಳ ಫೋಟೋವನ್ನು ಮನೆ ಅಥವಾ ಉದ್ಯೋಗದ ಸ್ಥಳದಲ್ಲಿಟ್ಟು ಪೂಜೆ ಮಾಡುತ್ತಾರೆ.

ನಿತ್ಯಾನಂದ ತರಾತುರಿ ಬಂಧನದ ಹಿಂದಿನ ಹುನ್ನಾರ

ನಿತ್ಯಾನಂದ ಆಶ್ರಮದಲ್ಲಿ ನಡೆದ ಗಲಾಟೆ, ನಂತರ ನಡೆದ ಬಂಧನ ಪ್ರಕ್ರಿಯೆಗಳ ಹಿಂದೆ ಹಲವಾರು ಹುನ್ನಾರಗಳಿರುವ ಬಗ್ಗೆ ಆರೋಪಗಳಿವೆ. ಅದೇನೇ ಇರಲಿ, ನಿತ್ಯಾನಂದ ಮಾಡಿರುವುದೆಲ್ಲ ಕಾನೂನು ಬಾಹಿರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈತನ ತರಾತುರಿ ಬಂಧನದ ಹಿಂದೆ ಧ್ಯಾನದ ಪಾವಿತ್ರ್ಯತೆಯನ್ನು ಉಳಿಸುವ ಕುತಂತ್ರ ಅಡಗಿದೆ. ನಿತ್ಯಾನಂದ ಬಂಧನ ಮಾಡಿ ಗಡಿಪಾರು ಆದೇಶ ನೀಡಿದ ನಂತರ ನಿತ್ಯಾನಂದನ ಧ್ಯಾನ ಮಾಡಿರೋ ಅವಾಂತರಗಳೆಲ್ಲವೂ ಅಡಗಿ ಹೋಯಿತು. ಈ ಧ್ಯಾನದಿಂದ ಸಂತ್ರಸ್ತರಾದ ಆರತಿ, ಬಾರದ್ವಜ್, ಸಂತೋಷ್ ಏನಾದರು ಎಂಬುದು ಗೊತ್ತೇ ಆಗಲಿಲ್ಲ. ಇಂತಹ ಎಷ್ಟು ಧ್ಯಾನ ಸಂತ್ರಸ್ತರಿದ್ದಾರೆ ಎಂಬುದೂ ಗೊತ್ತಾಗಿಲ್ಲ. ಧ್ಯಾನದ ಅಂತಿಮ ಘಟ್ಟದಲ್ಲಿ ಗುರೂಜಿಗಳು ಧ್ಯಾನಿಗರ ಧ್ಯಾನವನ್ನು ಹೇಗೆಲ್ಲಾ ಬಳಸುತ್ತಾರೆ ಎಂಬಿತ್ಯಾಧಿಗಳು ನಿತ್ಯಾನಂದ ಬಂಧನದಲ್ಲೇ ಮುಚ್ಚಿ ಹೋಗಿದೆ. ನಿಜವಾಗಿಯೂ ಧ್ಯಾನ ಗುರೂಜಿ ನಿತ್ಯಾನಂದನನ್ನು ಕಾನೂನಿನ ಬಾಹುಗಳಲ್ಲಿ ಬಂಧಿಸಬೇಕು ಎಂಬ ಇರಾದೆ ಸರಕಾರಕ್ಕೆ ಇದ್ದಿದ್ದರೆ ಗಡಿಪಾರು ಆದೇಶ ಮಾಡುತ್ತಿರಲಿಲ್ಲ. ಇಂತಹ ಸಮೂಹ ಸನ್ನಿಗೆ ಒಳ ಪಟ್ಟ ಸಾವಿರಾರು ಮಂದಿ ಇರುವ ಸಾಧ್ಯತೆಗಳು ಇರುತ್ತದೆ. ಈ ನಿಟ್ಟಿನಲ್ಲಿ ಸರಕಾರಗಳು ಮಾಮೂಲಿಯಾಗಿ ಒಂದು ತನಿಖಾ ನೀತಿಯನ್ನು ಹೊಂದಿರುತ್ತದೆ. ಸರಕಾರ ಒಂದೋ ನಿತ್ಯಾನಂದ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿ ವಿಶೇಷ ತಂಡವನ್ನು ರಚಿಸಬೇಕಿತ್ತು. ಆ ತಂಡದ ಮೂಲಕ ಜಿಲ್ಲಾ ಕೇಂದ್ರದಲ್ಲಿ ದೂರು ವಿಭಾಗವನ್ನು ಸ್ಥಾಪಿಸಿ ಸಂತ್ರಸ್ತರಿಂದ ದೂರುಗಳನ್ನು ಆಹ್ವಾನಿಸಬೇಕಿತ್ತು. ಅಥವಾ ಸರಕಾರ ನ್ಯಾಯಾಂಗ ತನಿಖೆಯನ್ನು ಮಾಡಬೇಕಿತ್ತು. ನಿವೃತ್ತ ನ್ಯಾಯಾಧೀಶರನ್ನು ಆಯೋಗದ ಅಧ್ಯಕ್ಷರನ್ನಾಗಿಸಿ, ಸೂಕ್ತ ಸಿಬ್ಬಂಧಿಯನ್ನು ನೀಡಿ, ಜಿಲ್ಲಾ/ತಾಲ್ಲೂಕು ಕೇಂದ್ರಗಳಲ್ಲಿ ಸಂತ್ರಸ್ತರಿಂದ ದೂರು ಸ್ವೀಕರಿಸಿ ತನಿಖೆ ಮಾಡಬೇಕಿತ್ತು. ದೂರುದಾದರು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೇ ಜಾಸ್ತಿ ಇರುವುದರಿಂದ ಮತ್ತು ಧ್ಯಾನದ ಆಶ್ರಮಗಳಿಗೆ ಆಸ್ತಿ ನೀಡಿ ಮೂರ್ಖರಾದವರು ದೂರು ನೀಡಿ ಮತ್ತೆ ಮಾನ ಕಳೆದುಕೊಳ್ಳಲು ಹಿಂಜರಿಯುವುದರಿಂದ ದೂರುದಾರರ ವಿವರಗಳನ್ನು ಗೌಪ್ಯವಾಗಿಡೋ ಕ್ರಮಗಳನ್ನು ಕೈಗೊಂಡು ತನಿಖೆ ಮಾಡಬಹುದು. ಇದೆಲ್ಲಾ ಮಾಡಿದರೆ ನಿತ್ಯಾನಂದನಂತಹ ಗುರೂಜಿಗಳಿಗಿಂತಲೂ ಧ್ಯಾನ ಎಷ್ಟು ಭೋಗಸ್ ಎಂದು ತಿಳಿಯುತ್ತಿತ್ತು. ಒಬ್ಬ ನಿತ್ಯಾನಂದನ ಬಂಧನದ ಜೊತೆಗೆ ಜನರನ್ನು ಸಮೂಹ ಸನ್ನಿಗೆ ಒಳಗಾಗಿಸೋ ಹಲವಾರು ಸ್ವಾಮಿಗಳು, ಗುರೂಜಿಗಳು, ಕಲ್ಕಿಗಳು ಜನರ ಮುಂದೆ ಬೆತ್ತಲಾಗುತ್ತಿದ್ದರು.