Category Archives: ನವೀನ್ ಸೂರಿಂಜೆ

ನಾರಾಯಣ ಗುರು ವಿಚಾರ ಕಮ್ಮಟ: ‘ವಿಚಾರ ಕ್ರಾಂತಿಗೆ ಆಹ್ವಾನ’

Naveen Soorinje


ನವೀನ್ ಸೂರಿಂಜೆ


 

ಕೊನೆಗೂ ಮಂಗಳೂರು ವಿಚಾರ ಕ್ರಾಂತಿಗೆ ಸಿದ್ಧವಾಗಿದೆ. ಕೋಮುವಾದದ ದಳ್ಳುರಿಯಲ್ಲಿ ಬೇಯುತ್ತಿದ್ದ ಮಂಗಳೂರಿನ ಬಿಲ್ಲವರು ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ) ಎಂಬ ವೇದಿಕೆಯಡಿಯಲ್ಲಿ ವಿಚಾರ ಮಂಥನಕ್ಕೆ ಮುಂದಾಗಿದ್ದಾರೆ. ಜನಪರ ಹೋರಾಟಗಳಲ್ಲಿ ರಾಜಿರಹಿತವಾಗಿ ತೊಡಗಿಸಿಕೊಂಡಿರುವ ಸುನೀಲ್ ಕುಮಾರ್ ಬಜಾಲ್, ಹಿರಿಯ ವಕೀಲರಾದ ಯಶವಂತ ಮರೋಳಿ ಈ ಪ್ರಯತ್ನದ ನೇತೃತ್ವ ವಹಿಸಿದ್ದಾರೆ. ಈ ಹೊಸ ಚಳುವಳಿಯ ಹಿಂದೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರ ಆಲೋಚನೆಗಳಿವೆ. ಬಿಲ್ಲವ ಸಮುದಾಯ ಈ ರೀತಿ ಹೊಸ ಚಳುವಳಿಗೆ ತೆರೆದುಕೊಂಡಿರುವುದು ವೈದಿಕಶಾಹಿಗಳಿಗೆ, ಕೋಮುವಾದಿಗಳಿಗೆ ಮತ್ತು ಬಳಸಿ ಎಸೆಯುವ ಕ್ಷುದ್ರ ಶಕ್ತಿಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ.

ಕರಾವಳಿಯ ಸಮಕಾಲೀನ ಸಂಧರ್ಭದಲ್ಲಿ ಅತ್ಯಂತ ಸಂದಿಗ್ಧ ಮತ್ತು ಇಕ್ಕಟ್ಟಿನ ಸ್ಥಿತಿಯಲ್ಲಿರುವ ಸಮುದಾಯವೆಂದರೆ ಬಿಲ್ಲವರು. ಶ್ರಮಜೀವಿಗಳೂ ಸಾಂಸ್ಕೃತಿಕವಾಗಿ ಹಿರೀಕರೂ ಆಗಿರುವ ಬಿಲ್ಲವರು ಇಂದು ವೈದಿಕ ಶಕ್ತಿಗಳ ಪಿತೂರಿಗೆ ಸಿಲುಕಿ ಏಳಿಗೆಯ ದಿಕ್ಕನ್ನು ಕಳೆದುಕೊಂಡಿದ್ದಾರೆ. ಫ್ಯೂಡಲ್ ಶಕ್ತಿಗಳ ಆಟಕ್ಕೆ ದಾಳವಾಗಿ ಬಳಕೆಯಾಗುತ್ತಾ ಸ್ವತಂತ್ರ ಭಾರತದ ರಾಜಕೀಯ, ಆರ್ಥಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ. ಕೋಮು ಹಾಗೂ ಧಾರ್ಮಿಕ ಮೂಲಭೂತವಾದ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡು ಗುತ್ತಿನ ಗೌಜಿಗೆ ‘ಎಳನೀರು ಕೆತ್ತಿ ಕೊಡುವ’ ಕೆಲಸಕ್ಕೆ ಸೀಮಿತರಾಗುತ್ತಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಬಿಲ್ಲವರನ್ನು ದಳ್ಳುರಿಯಿಂದ ಪಾರುಮಾಡಬಲ್ಲ ವಿಚಾರಗಳೆಂದರೆ ನಾರಾಯಣ ಗುರುಗಳು ಚಿಂತನೆಗಳು ಮತ್ತು ಕೋಟಿಚೆನ್ನಯರ ಪ್ರತಿರೋಧದ ಚರಿತ್ರೆಯ ಪುಟಗಳ ಮರು ಓದು. ನಾರಾಯಣ ಗುರುಗಳು ಬಿಲ್ಲವರಿಗೆ ಆಧುನಿಕ ಜಗತ್ತಿನಲ್ಲಿ ಒಂದು ಆಸ್ಮಿತೆಯನ್ನು ಒದಗಿಸಿಕೊಟ್ಟವರು. ಶತಮಾನಗಳ ಶೋಷಣೆಗೆ ಒಳಗಾಗಿ ದೈನ್ಯರಾಗಿದ್ದ ಬಿಲ್ಲವರಿಗೆ ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಮಾನತೆ ಮತ್ತು ಆಧುನಿಕತೆಯ ಹೋರಾಟದಲ್ಲಿ ನೆಲೆ ಹುಡುಕಿಕೊಟ್ಟವರು. ಬಿಲ್ಲವರು ಕಟ್ಟಿಕೊಂಡಿದ್ದ ದೈವ-ದೇವರ, ಸಿರಿ ಪಾಡ್ದನಗಳ ಜಗತ್ತಿನೊಳಗಡೆಯೇ ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದವರು.

ನಾರಾಯಣ ಗುರುಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಿಗಲಿದ್ದ ಸಮಾನತೆಯ ಮತ್ತು ಅಗಾಧ ಅವಕಾಶಗಳ ಬದುಕಿಗೆ ಬಿಲ್ಲವರನ್ನು ಸಿದ್ಧಗೊಳಿಸಿದ್ದರು. ಹೊಸಕಾಲದಲ್ಲಿ ತನ್ನ ನ್ಯಾಯದ ಬದುಕಿಗೆ ಹಕ್ಕೊತ್ತಾಯಿಸಲು ಅವರನ್ನು ಬಲಗೊಳಿಸಿದ್ದರು. ಆದರೆ ಹೊಸದಾಗಿ ಹುಟ್ಟಿಕೊಂಡ ರಾಜಕೀಯ ಹಾಗೂ ಆರ್ಥಿಕ ಸನ್ನಿವೇಶದಲ್ಲಿ ಬಿಲ್ಲವರು ಯಾವ ಮಟ್ಟಿನ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾರೆ ಎಂಬುವುದನ್ನು ಅವಲೋಕಿಸಿದ್ದಲ್ಲಿ ಬಿಲ್ಲವರು ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಎಷ್ಟರಮಟ್ಟಿಗೆ ಮುನ್ನಡೆದಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಭೂಸುಧಾರಣೆ ಕಾಯ್ದೆ ಜಾರಿ ಪೂರ್ವದಲ್ಲಿ ಬಿಲ್ಲವರನ್ನು ಜಮೀನ್ದಾರಿ ಬಂಟರು, ಬ್ರಾಹ್ಮಣರು ಹಾಗೂ ಜೈನರು ಯಾವ ರೀತಿ ನಡೆಸಿಕೊಂಡಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಭೂಸುದಾರಣೆ ಕಾಯ್ದೆ ಜಾರಿ ಬಳಿಕ ಶ್ರಮಿಕ ಬಿಲ್ಲವರು ಕರಾವಳಿಯ ಸಾಂಸ್ಕೃತಿಕ ಬದುಕಿನಲ್ಲಿ ಸಮಾನತೆಯ ಅವಕಾಶಗಳಿಗೆ ಹಕ್ಕೊತ್ತಾಯಿಸಬಹುದು ಹಾಗೂ ಜಮೀನ್ದಾರಿ ಯಜಮಾನಿಕೆಯನ್ನು ಮೆಟ್ಟಿ ನಿಲ್ಲಬಹುದು ಎಂಬುವುದನ್ನು ಅರಿತ ಫ್ಯೂಡಲ್ ವ್ಯವಸ್ಥೆ ಹಿಂದುತ್ವವಾದಿ ಸಂಘಟನೆಗಳ ರೂಪದಲ್ಲಿ ಕಾರ್ಯಾಚರಣೆ ನಡೆಸಲು ಪ್ರಾರಂಭಿಸಿತು. ನಾರಾಯಣ ಗುರುಗಳ ಸಮಾನತೆ ಹಾಗೂ ಸಾಮರಸ್ಯದ ಚಿಂತನೆಗಳ ಜಾಗದಲ್ಲಿ ಮತಭ್ರಾಂತಿಯನ್ನು ಬಿಲ್ಲವರಲ್ಲಿ ಪ್ರಸರಿಸಿತು. ಮುಂದೆ ಬರಲಿರುವ ಅನಾಹುತಗಳ ಅರಿವೇ ಇಲ್ಲದೆ ಬಿಲ್ಲವರು ಗುತ್ತುಗಳ ಖೆಡ್ಡಾಕ್ಕೆ ಬಿದ್ದರು.

ಹಿಂದುತ್ವವಾದಿ ಸಂಘಟನೆಗಳ ಪ್ರಧಾನ ಕಾರ್ಯಸೂಚಿ ಹಿಂದೂ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಯಲ್ಲಿಡುವುದೇ ಆಗಿದೆ. ಈ ವರೆಗಿನ ಹಿಂದುತ್ವವಾದಿ ಸಂಘಟನೆಗಳ ಕಾರ್ಯವಿಧಾನ ಮತ್ತು ಪರಿಣಾಮವನ್ನು ಅವಲೋಕಿಸಿದಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಭೂಮಿ ಕಳೆದುಕೊಂಡ ಬಂಟರು, ಬ್ರಾಹ್ಮಣರು ಮತ್ತು ಜೈನರು ವ್ಯಾಪಾರ, ಉದ್ಯೋಗದ ಮೂಲಕ ಮತ್ತಷ್ಟೂ ಬಲಿಷ್ಠರಾದರೆ, ಭೂಮಿ ಪಡೆದುಕೊಂಡು ಶ್ರೇಣಿಕೃತ ವ್ಯವಸ್ಥೆಯನ್ನು ದಾಟಿ ಬರಬೇಕಿದ್ದ ಬಿಲ್ಲವರು ಫ್ಯೂಡಲ್ ವ್ಯವಸ್ಥೆ ಅವರನ್ನು ಹದ್ದುಬಸ್ತಿನಲ್ಲಿಡಲು ಕೊಟ್ಟ ವೈದಿಕ ಧರ್ಮ ಸಂರಕ್ಷಣೆಯ ಕೈಂಕರ್ಯವನ್ನು ಪಡೆದು ಕಾಲದ ಓಟದಲ್ಲಿ ಹಿಂದಕ್ಕೆ ತಳ್ಳಲ್ಪಟ್ಟರು. ತತ್ಪರಿಣಾಮವಾಗಿ ಭೂಮಿ ಇಲ್ಲದೆ ಕೃಷಿ ಕಾರ್ಮಿಕರಾಗಿದ್ದ ಕಾಲಘಟ್ಟದ ಪಾಡಿಗಿಂತಲೂ ಭೀಕರವಾದ ಸಾಮಾಜಿಕ ರಾಜಕೀಯ ಬಿಕ್ಕಟ್ಟನ್ನು ಈಗ ಬಿಲ್ಲವ ಸಮುದಾಯ ಅನುಭವಿಸುತ್ತಿದೆ. ಧರ್ಮ ರಕ್ಷಣೆಗಾಗಿ ಬಿಲ್ಲವರು ಕೊಲೆಗೀಡಾಗುತ್ತಿದ್ದಾರೆ ಮತ್ತು ಕೊಲೆಗಾರರಾಗುತ್ತಿದ್ದಾರೆ. ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ನಿಧಾನವಾಗಿ ಹಿನ್ನಲೆಗೆ ಸರಿಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಾರಾಯಣ ಗುರು ವಿಚಾರ ಕಮ್ಮಟ ಕತ್ತಲ್ಲೆಯಲ್ಲಿ ಬೆಳಕಿನ ಕಿಂಡಿಯಂತೆ ಕಂಡುಬರುತ್ತಿದೆ.

ದಿನೇಶ್ ಅಮೀನ್ ಮಟ್ಟುರವರು ಹೇಳುವಂತೆ ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ)ದ ಯೋಜನೆ ತರ್ಕ ನಡೆಸಲೂ ಅಲ್ಲ, ಗೆಲ್ಲುವುದಕ್ಕೂ ಅಲ್ಲ, ಪರಸ್ಪರ ತಿಳಿದುಕೊಳ್ಳಲು ಮತ್ತು ತಿಳಿಸಿಕೊಡಲು ಎಂಬ ನಾರಾಯಣ ಗುರುಗಳ ಆಶಯದಂತೆ ನಡೆಯುತ್ತದೆ. ಬಿಲ್ಲವರ ಕಿರು ಸಂಸ್ಕೃತಿ ವೈದಿಕ ಸಂಸ್ಕೃತಿಗಿಂತ ಉದಾತ್ತ ಚಿಂತನೆಯದ್ದು ಮತ್ತು ವಿಶಾಲ ಒಳಗೊಳ್ಳುವಿಕೆ ಇರುವಂತದ್ದು; ಸಾಮರಸ್ಯದ ಮತ್ತು ಅನ್ಯಾಯದ ವಿರುದ್ಧ ಸಿಡಿದೇಳುವ ಪರಂಪರೆಯನ್ನು ಹೊಂದಿರುವಂತದ್ದು. ಅದನ್ನು ಇಂದು ಮತ್ತೆ ಬಿಲ್ಲವರಿಗೆ ನೆನಪಿಸಿಕೊಡಬೇಕಾಗಿದೆ. ಸತ್ಯದ ಹಾದಿಯಲ್ಲಿ, ನ್ಯಾಯದ ಬದುಕಿಗೆ ಜೀವದ ಕೊನೆ ಉಸಿರಿನ ತನಕವೂ ಹೋರಾಡಿದ ಕೋಟಿ ಚೆನ್ನಯರ ಹಕ್ಕೊತ್ತಾಯದ ಕಥನವನ್ನು ಬಿಲ್ಲವರು ಮತ್ತೆ ಮತ್ತೆ ಓದಿಕೊಳ್ಳಬೇಕಾಗಿದೆ. ವೈದಿಕರ ಗುಡಿಗಳನ್ನು ಸ್ವಚ್ಚಗೊಳಿಸುವುದನ್ನು ಬಿಟ್ಟು ತಮ್ಮ ಅವರ ಸ್ವಾಭಿಮಾನಿ ಬದುಕಿನ ಸ್ಮಾರಕಗಳಂತಿರುವ ಗರಡಿಗಳಿಗೆ ಹಿಂದಿರುಗಬೇಕಿದೆ. ಅಂತಹ ಪ್ರಯತ್ನ ಇಂದು ಬಿಲ್ಲವ ಸಮುದಾಯಕ್ಕೆ ಸೇರಿದ ಸುನೀಲ್ ಕುಮಾರ್ ಬಜಾಲ್ ಎಂಬ ಪ್ರಾಮಾಣಿಕ ಚಳುವಳಿಗಾರನ ನೇತೃತ್ವದಲ್ಲಿ ಸಾಕಾರಗೊಳ್ಳುತ್ತಿದೆ.

ಈಗಲೂ ಮಂಗಳೂರಿನಲ್ಲಿ ಕೋಮುವಾದದ ಪ್ರಸರಣಕ್ಕೆ ತಡೆಹಾಕಿ ಸಮಾನತೆಯತ್ತ, ಸಬಲೀಕರಣದತ್ತ ಸಮಾಜವನ್ನು ಕೊಂಡೊಯ್ಯುವ ಶಕ್ತಿ ಇರುವುದು ಬಿಲ್ಲವರಿಗೆ ಮಾತ್ರ. ಇಂದಿಗೂ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಾರಾಯಣ ಗುರು ಸೇವಾ ಸಂಘಗಳಿವೆ. ಎಲ್ಲಾ ತಾಲೂಕುಗಳಲ್ಲಿ ಬಿಲ್ಲವ ಯುವ ವಾಹಿನಿ ಇದೆ. ನಾರಾಯಣ ಗುರುಗಳನ್ನು ಆರಾಧಿಸುವ ಈ ದೊಡ್ಡ ಬಳಗವನ್ನು ಅವರ ಸಿದ್ದಾಂತದ ಕಾರ್ಯಪಡೆಯನ್ನಾಗಿಸಬೇಕಾಗಿದೆ.

ಸುಮಾರು ಮೂವತ್ತು ವರ್ಷಗಳ ಹಿಂದೆ ಬಿಲ್ಲವರ ಸಾಂಸ್ಕೃತಿಕ ಆಂದೋಲನ ಯುವ ವಾಹಿನಿ ಪ್ರಾರಂಭಿಸಿದವರಲ್ಲಿ ದಿನೇಶ್ ಅಮೀನ್ ಮಟ್ಟು ಕೂಡಾ ಒಬ್ಬರು. ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಆಶಯದಡಿಯಲ್ಲಿ ಪ್ರಾರಂಭವಾದ ಬಿಲ್ಲವ ಯುವವಾಹಿನಿ ಇಂದು ಆಟಿಡೊಂಜಿ ದಿನ, ಕೆಸರುಗದ್ದೆ ಕಾರ್ಯಕ್ರಮಗಳನ್ನು ಮಾಡುತ್ತಾ ಮೂಲ ಅಶಯವನ್ನು ಮರೆತಿದೆ. ಈ ನಿಟ್ಟಿನಲ್ಲಿ ಬಿಲ್ಲವ ಯುವ ವಾಹಿನಿ, ನಾರಾಯಣ ಗುರು ಸೇವಾ ಸಂಘಗಳನ್ನು ನಾರಾಯಣ ಗುರು ವಿಚಾರ ಕಮ್ಮಟ ಒಳಗೊಂಡರೆ ವಿಚಾರ ಕ್ರಾಂತಿಯ ದಿನಗಳು ದೂರವಿಲ್ಲ.

ಉತ್ತಮ ನಾಳೆಗಳಿಗಾಗಿ, ಆ ನಾಳೆಗಳಲ್ಲಿ ನಾವು ಇರಲಿಕ್ಕಾಗಿ, ಆ ನಾಳೆಗಳು ನಮ್ಮದೇ ಆಗಲಿಕ್ಕಾಗಿ, ನಾರಾಯಣ ಗುರುಗಳ ತತ್ವಾದಾರ್ಶಗಳನ್ನು ಪಾಲಿಸೋಣಾ, ಸುಂದರ ಸಮಾಜದ ನಿರ್ಮಾಣಕ್ಕೆ ಪಣತೊಡೋಣ ಎಂಬ ಆಶಯದಲ್ಲಿ ಪ್ರಾರಂಭವಾದ ನಾರಾಯಣ ಗುರು ವಿಚಾರ ಕಮ್ಮಟ (ನಾವಿಕ) ಯಶಸ್ವಿಯಾದರೆ ಬಿಲ್ಲವರ ನಾಳೆಗಳು ಮತ್ತು ದಕ್ಷಿಣ ಕನ್ನಡದ ನಾಳೆಗಳು ಸುಂದರವಾಗಲಿದೆ.

 

ದಲಿತ-ಮುಸ್ಲಿಂ ಯುವತಿಯರ ಪ್ರೇಮ ವಿವಾಹಗಳು ಮತ್ತು ಬಿಜೆಪಿ ಕಾಂಗ್ರೆಸ್ ರಾಜಕಾರಣ

Naveen Soorinje


ನವೀನ್ ಸೂರಿಂಜೆ


 

ದಲಿತ ಹುಡುಗಿಯನ್ನು ಮದುವೆಯಾಗುವ ಪಂಥಾಹ್ವಾನಗಳು ಕಾಂಗ್ರೆಸ್ ಬಿಜೆಪಿ ಮದ್ಯೆ ನಡೆಯುತ್ತಿವೆ. ಇಷ್ಟಕ್ಕೂ ದಲಿತ ಹುಡುಗಿಯನ್ನು ಮನೆಗೆ ತಂದುಕೊಳ್ಳೋದು(!?) ದೊಡ್ಡ ಸಂಗತಿಯಾಗಿ ಏನೂ ಉಳಿದುಕೊಂಡಿಲ್ಲ. ಮೇಲ್ಜಾತಿಯ ಹುಡುಗಿಯನ್ನು ದಲಿತ ಹುಡುಗ ಮದುವೆಯಾಗುವ ಸವಾಲಿಗಿಂತ ಇದು ಕಠಿಣವಾದುದಲ್ಲ.

ರಾಹುಲ್ ಗಾಂಧಿಗೆ ದಲಿತ ಹೆಣ್ಣು ಮಗಳನ್ನು ಮದುವೆ ಮಾಡಿಸಲು ಮುಂದೆ ಬಂದಿರೋ ಬಿಜೆಪಿ ಮಾಜಿ ಸಚಿವ ಗೋವಿಂದ ಕಾರಜೋಳ್, ಬಿಎಸ್ ಯಡಿಯೂರಪ್ಪನವರ ಪರಮಾಪ್ತರು. ದಲಿತರಾಗಿರುವ ಗೋವಿಂದ ಕಾರಜೋಳ್ ಗೆ ಯಡಿಯೂರಪ್ಪರ ಕುಟುಂಬದ ಹುಡುಗನಿಗೆ ದಲಿತ ಹುಡುಗಿಯನ್ನು ಮದುವೆ ಮಾಡಿಸೋದು ದೊಡ್ಡ ಸಮಸ್ಯೆಯಾಗಲಿಕ್ಕಿಲ್ಲ. ಆದರೆ ಯಡಿಯೂರಪ್ಪರ ಕಡೆಯ  ಹುಡುಗಿಯನ್ನು ದಲಿತ ಹುಡುಗನೊಬ್ಬನ ಜೊತೆಗಿನ ವಿವಾಹವನ್ನು ಕಾರಜೋಳರು ಒಮ್ಮೆ ಕಲ್ಪಿಸಿಕೊಳ್ಳಲಿ. ಕನಸಲ್ಲೂ ನಡುಗಬೇಕಾಗುತ್ತದೆ.

ದಲಿತ ಯುವತಿಯನ್ನು ಮದುವೆಯಾಗಲಿ ಎಂದು ಬಿಜೆಪಿಗರಿಗೆ ಸಿಎಂ ಸಿದ್ದರಾಮಯ್ಯ ಹಾಕಿದ ಸವಾಲೇ ಸರಿಯಿಲ್ಲ. ಯಾವುದೇ ಮೇಲ್ವರ್ಗದ ಕುಟುಂಬದ ಯುವಕ ಕೆಳವರ್ಗದ ಯುವತಿಯನ್ನು ಮದುವೆಯಾಗುವುದಕ್ಕೆ ಯಾವುದೇ ಸಮಾಜವು ವಾದ ವಿವಾದದ ಬಳಿಕ ಕೊನೆಗಾದರೂ ಒಪ್ಪಿಕೊಳ್ಳುತ್ತದೆ. ಕಾರಣ, ಯುವತಿಯನ್ನು ಗಂಡನ ಮನೆಯ ಆಚಾರ ವಿಚಾರ, ಸಂಪ್ರದಾಯಕ್ಕೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು ಮತ್ತು ಅಗತ್ಯ ಬಿದ್ದರೆ ಮತಾಂತರ ಮಾಡಬಹುದು ಎಂಬ ಕಾರಣಕ್ಕೆ. ಜಾತಿ ಎನ್ನೋದು ತಂದೆಯ ಜಾತಿಯ ಮೂಲಕ ಮುಂದುವರೆಯೋದ್ರಿಂದ ಯುವತಿ ಯಾವ ಜಾತಿಯಾದರೂ ಹುಟ್ಟೋ ಮಗು ತಂದೆಯ ಜಾತಿಯಾಗೋದ್ರಿಂದ ಭವಿಷ್ಯದಲ್ಲಿ ಜಾತಿ ಮರ್ಯಾದೆಗೆ ದಕ್ಕೆಯಾಗುವುದಿಲ್ಲ ಎಂಬ ಕಾರಣಕ್ಕೆ ಯುವತಿ ಕೆಳ ವರ್ಗಕ್ಕೆ ಸೇರಿದರೂ ದುರಂತಗಳು ಶೇಕಡಾವಾರು ಕಡಿಮೆ. ಅದೇ ಯುವತಿ ಬ್ರಾಹ್ಮಣ ಸಮುದಾಯಕ್ಕೋ, ಒಕ್ಕಲಿಗ, ಬಂಟ, ರೆಡ್ಡಿ ಸಮುದಾಯಕ್ಕೋ ಸೇರಿದವಳಗಾಗಿದ್ದು ಯುವಕ ದಲಿತನಾಗಿದ್ದರೆ ಅದರ ಕತೆ ಕೇಳೋದೆ ಬೇಡ!

2017 ಎಪ್ರಿಲ್ ನಲ್ಲಿ ಬೆಳಗಾವಿ ಗಡಿ ಭಾಗದಲ್ಲಿ ತಂದೆಯೇ ಮಗಳನ್ನು ಕೊಡಲಿಯಿಂದ ಕಡಿದು ಕೊಲೆ ಮಾಡುತ್ತಾನೆ. ಬಾಬು ಶಿವಾರೆ ಎಂಬಾತ ತನ್ನ ಮಗಳಾಗಿರುವ ಮಣೀಷಾಳನ್ನು ಈ ರೀತಿ ಕೊಲ್ಲುವ ನಿರ್ಧಾರಕ್ಕೆ ಬರಲು ಕಾರಣವಾಗಿದ್ದು ಮಗಳ ಪ್ರೇಮ. ಮೇಲ್ವರ್ಗಕ್ಕೆ ಸೇರಿರೋ ನನ್ನ ಮಗಳು ದಲಿತರ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಕೊಡಲಿಯಿಂದ ಕಡಿದು ಕೊಲೆ ಮಾಡುತ್ತಾನೆ. ದಲಿತ ಹುಡುಗ ಮತ್ತಾತನ ಕುಟುಂಬಕ್ಕೆ ಇನ್ನಿಲ್ಲದ ಹಿಂಸೆ ನೀಡಲಾಗುತ್ತದೆ.

ಇದೇ ಗೋವಿಂದ ಕಾರಜೋಳ ಪ್ರತಿನಿಧಿಸುವ ಬಿಜೆಪಿ ಪ್ರಭಾವಿ ಸಂಸದನೊಬ್ಬನ ಮಗಳು ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದಾಗ ದಲಿತ ಹುಡುಗನಿಗೆ ಚಿತ್ರ ಹಿಂಸೆ ನೀಡುತ್ತಾರೆ. ಆ ಪ್ರಭಾವಿ ಬಿಜೆಪಿ ಸಂಸದರ ಹೆಸರಿನ ಸಹಿತ ಸ್ಥಳೀಯ ಪತ್ರಿಕೆಯಲ್ಲಿ/ವೆಬ್ ಗಳಲ್ಲಿ ಸುದ್ದಿ ಪ್ರಕಟವಾಗುತ್ತದೆ. ಕೊನೆಗೂ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಸಂಸದರು ತನ್ನ ಮಗಳನ್ನು ಪ್ರೇಮಿಸುತ್ತಿದ್ದ ದಲಿತ ಯುವಕನನ್ನು ದೂರ ಮಾಡುತ್ತಾರೆ.

ಮೇಲ್ವರ್ಗಗಳು ತನ್ನ ಮನೆ ಹುಡುಗಿ ಕೆಳವರ್ಗದ ಯುವಕರ ಜೊತೆ ಸಂಬಂಧ ಬೆಳೆಸುವುದನ್ನು ಸಹಿಸೋದೆ ಇಲ್ಲ. ಇತಿಚ್ಚೆಗೆ ಹಳ್ಳಿಯಲ್ಲಿ ಪೌರೋಹಿತ್ಯ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಹುಡುಗರು, ತಮಗೆ ಬ್ರಾಹ್ಮಣ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಕಾಶ್ಮೀರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕೆಳಜಾತಿಯ ಬಡ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ. ಅದಕ್ಕಾಗಿ ವಧುವರರ ಕೂಟಗಳನ್ನೇ ನಡೆಸುತ್ತಿದ್ದಾರೆ. ಅಂದರೆ ಆಕೆ ಕೆಳವರ್ಗಕ್ಕೆ ಸೇರಿದವಳಾದರೂ ಆಕೆಯನ್ನು ಮತಾಂತರ ಮಾಡಬಹುದು ಮತ್ತು ತಮ್ಮ ಸಂಪ್ರದಾಯಕ್ಕೆ ಹೊಂದಿಸಿಕೊಳ್ಳಬಹುದು ಎಂಬ ಭರವಸೆಯಿಂದ ಮದುವೆಯಾಗುತ್ತಿದ್ದಾರೆ. ಅದೇ ಬ್ರಾಹ್ಮಣ ಹುಡುಗಿಯೊಬ್ಬಳು ಹಳ್ಳಿಯ ದಲಿತ ಅಥವಾ ಹಿಂದುಳಿದ ಹುಡುಗನನ್ನು ಮದುವೆಯಾಗುವುದು ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಹಾಗೇನಾದರೂ ಆದರೆ ಆ ಬ್ರಾಹ್ಮಣ ಯುವತಿಯ ಮನೆಯವರು ಯುವತಿಯ ಶ್ರಾಧ್ದವನ್ನೂ ಮಾಡಿ ಮುಗಿಸಿ ಸಂಬಂಧ ಕಳೆದುಕೊಂಡ ಉದಾಹರಣೆಯೂ ಹಲವಿದೆ.

ಅಂತರ್ಜಾತಿ ವಿವಾಹಗಳು ಹೆಚ್ಚಬೇಕು ಎಂದು ಸಿಎಂ ಸಿದ್ದರಾಮಯ್ಯ ಸರಕಾರ ಯೋಜನೆಯೊಂದನ್ನು ರೂಪಿಸಿದೆ.  ದಲಿತ ಯುವತಿಯನ್ನು ದಲಿತೇತರ ಯುವಕ ವಿವಾಹವಾದರೆ 3 ಲಕ್ಷ ರೂಪಾಯಿ ಹಾಗೂ ದಲಿತ ಪುರುಷ ಇತರೆ ಜಾತಿಯ ಮಹಿಳೆಯನ್ನು ವಿವಾಹವಾದರೆ 2 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಸರಕಾರದ ಈ ಯೋಜನೆ ಅತ್ಯುತ್ತಮವಾಗಿದ್ದರೂ ಸಣ್ಣ ತಪ್ಪಿದೆ. ಯುವಕ ಕುಟುಂಬದ ಆರ್ಥಿಕ ಆಧಾರ ಸ್ಥಂಭ ಆಗಿರೋದ್ರಿಂದಲೋ, ತಂದೆಯ ಜಾತಿಯೇ ಕುಟುಂಬದ ಜಾತಿಯಾಗುತ್ತದೆ ಎಂಬ ಕಾರಣಕ್ಕೋ ಮೇಲ್ವರ್ಗದ ಯುವಕ ದಲಿತ ಯುವತಿಯನ್ನು ಮದುವೆಯಾದರೆ ಅಂತಹ ದುರಂತಗಳು ಸಂಭವಿಸೋದಿಲ್ಲ. ನಮ್ಮ ಜಾತಿಯ ಯುವತಿ ಮೇಲ್ವರ್ಗದ ಯುವಕನನ್ನು ಮದುವೆಯಾದಳೆಂದು ದ್ವೇಷದಿಂದ ದಲಿತರು ಮೇಲ್ವರ್ಗದ ಯುವಕನ ಮನೆ ಮಠ ಸುಟ್ಟ ಉದಾಹರಣೆ ಇಲ್ಲ. ದಲಿತರು ಮೇಲ್ವರ್ಗದ ಯುವಕನನ್ನು ಊರು ಬಿಟ್ಟು ಓಡಿಸಿದ ಉದಾಹರಣೆಯೂ ಇಲ್ಲ. ಮೇಲ್ವರ್ಗದ ಯುವಕನ ಜೊತೆ ಮದುವೆಯಾದಳೆಂದು ದಲಿತರು ಯುವತಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಉದಾಹರಣೆಯೂ ಇಲ್ಲ.  ಆದರೆ ದಲಿತ ಯುವಕನೊಬ್ಬ ಇತರೆ ಜಾತಿಯ ಯುವತಿಯನ್ನು ಪ್ರೀತಿಸಿದಾಗ ಇಬ್ಬರೂ ಊರು ಬಿಟ್ಟು ಓಡಿ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಇಬ್ಬರಿಗೂ ಸಾಮಾಜಿಕ ಬಹಿಷ್ಕಾರಗಳು ಹಾಕಲ್ಪಡುತ್ತದೆ.  ಊರು ಬಿಟ್ಟು ಬಂದು ಹೊಸ ಸಮಾಜದಲ್ಲಿ ಹೊಸದಾಗಿ ಆರ್ಥಿಕ, ಸಾಮಾಜಿಕ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಆದ್ದರಿಂದ ದಲಿತ ಯುವಕನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದರೆ ರಾಜ್ಯ ಸರಕಾರವು ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಬೇಕು.

ಇದರ ಹೊರತುಪಡಿಸಿ, ಹಿಂದೂ ಮುಸ್ಲಿಂ ಮದುವೆಗಳನ್ನೇ ನೋಡಿ. ಯುವತಿ ಹಿಂದೂವಾಗಿದ್ದುಕೊಂಡು ಯುವಕ ಮುಸ್ಲೀಮನಾಗಿದ್ದರೆ ಕೋಮುಗಲಭೆಯೇ ನಡೆದುಹೋಗುತ್ತದೆ. ಇಷ್ಟೊಂದು ಭೀಕರವಾಗಿ ಮುಸ್ಲೀಮರನ್ನು ವಿರೋಧಿಸುವ ಕೋಮು/ಜಾತಿವಾದಿಗಳು ಹುಡುಗಿ ಮುಸ್ಲೀಮಳಾಗಿದ್ದು ಹುಡುಗ ಹಿಂದುವಾಗಿದ್ದರೆ ಮದುವೆ ಮಾಡಿಕೊಡ್ತಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಗೋವಿಂದ ಕಾರಜೋಳರ ದಲಿತ ವಿವಾಹದ ಸವಾಲುಗಳು ನಿಜಕ್ಕೂ ಪರಿವರ್ತನೆಗಾಗಿ ಪ್ರಾಮಾಣಿಕ ಸವಾಲುಗಳಾಗಿದ್ದರೆ, ನಿಮ್ಮ ಸವಾಲನ್ನು ಹೀಗೆ ಬದಲಿಸಿ : “ನಿಮಗೆ ನಿಜವಾಗಿಯೂ ಸಮಾನತೆಯನ್ನು ಸಾಧಿಸಬೇಕಿದ್ದರೆ ದಲಿತ ಯುವಕರ ಜೊತೆ ಮೇಲ್ವರ್ಗದ ಯುವತಿ ಮದುವೆಯಾಗುವುದನ್ನು ಪ್ರೋತ್ಸಾಹಿಸಿ. ಅವರ ಪ್ರೀತಿಯನ್ನು ಬೆಂಬಲಿಸಿ”

ಇದೇ ರೀತಿಯ ಸವಾಲನ್ನು ಮುಸ್ಲೀಮರ ವಿಷಯದಲ್ಲೂ ಹಾಕಿಕೊಂಡರೆ ಅದೊಂದು ಒಳ್ಳೆ ರಾಜಕಾರಣವಾಗುತ್ತದೆ.

 

ಸಂಘಪರಿವಾರದಲ್ಲಿ ಬ್ರಾಹ್ಮಣ ಮತ್ತು ಶೂದ್ರ ನಾಯಕತ್ವ

Naveen Soorinje


ನವೀನ್ ಸೂರಿಂಜೆ


 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಆರ್.ಎಸ್.ಎಸ್ ಮುಖಂಡರ ಮೇಲೆ ಕೇಸು ದಾಖಲಿಸಿದ್ದಾರೆ. ಶವ ಮೆರವಣಿಗೆ ನಡೆಯುತ್ತಿದ್ದಾಗ ಕಲ್ಲು ತೂರಾಟ ನಡೆಸಲು ಪ್ರೇರೇಪಿಸಿದ್ದರು ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯದ ಮಾಜಿ ಸಂಚಾಲಕ ಸತ್ಯಜಿತ್ ಸುರತ್ಕಲ್ ಹಾಗೂ ಭಜರಂಗದಳದ ಅಧ್ಯಕ್ಷ ಶರಣ್ ಪಂಪ್ ವೆಲ್ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಇವರೀರ್ವರ ಮನೆ ಶೋಧ ನಡೆಸಿರುವ ಪೊಲೀಸರು ಅವರಿಬ್ಬರೂ ಪರಾರಿಯಾಗಿದ್ದಾರೆ ಎಂದು ವರದಿ ನೀಡಿದ್ದಾರೆ. ಸದಾ ಪೊಲೀಸ್ ಗನ್ ಮ್ಯಾನ್ ಹೊಂದಿರುವ ಸತ್ಯಜಿತ್ ಸುರತ್ಕಲ್ ಅಥವಾ ಶರಣ್ ಪಂಪ್‍ವೆಲ್‌ ಒಮ್ಮಿಂದೊಮ್ಮೆಲೆ ಪರಾರಿಯಾಗುವುದಾದರೂ ಹೇಗೆ ಎಂಬ ಪ್ರಶ್ನೆ ಇಲ್ಲಿ ಸಹಜವಾಗಿಯೇ ಉದ್ಬವಿಸುತ್ತದೆ. ಇದರ ಜೊತೆಗೆಯೇ ಕೋಮುಗಲಭೆ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಪೋಲೀಸರು ಸತ್ಯಜಿತ್ ಸುರತ್ಕಲ್ ಹಾಗೂ ಶರಣ್ ಪಂಪ್‍ವೆಲ್‌- ಇವರಿಬ್ಬರನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದು ಯಾಕೆ; ಕೋಮುಗಲಭೆ ಪ್ರಚೋದನೆಗೆ ಅವರಿಬ್ಬರಷ್ಟೇ ಕಾರಣರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅಥವಾ ಎಂ.ಬಿ. ಪುರಾಣಿಕ್ ಅವರನ್ನು ಯಾಕೆ ಪೋಲಿಸರು ತನಿಖೆಯ ಕೇಂದ್ರ ಬಿಂದುವನ್ನಾಗಿ ಪರಿಗಣಿಸಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಕರಾವಳಿಯಲ್ಲಿ ಸಂಘಪರಿವಾರದ ಪ್ರಚೋದನೆಯ ಹಿನ್ನಲೆಯಲ್ಲಿ ನಡೆದ ಕೋಮುಗಲಭೆಗಳು, ಮತೀಯ ದ್ವೇಷದ ಪ್ರಕರಣಗಳು ಮತ್ತು ನೈತಿಕ ಪೋಲಿಸುಗಿರಿಯಂತಹ ಪ್ರಕರಣಗಳು ಮತ್ತು ಅವುಗಳ ತನಿಖೆಗಳ ಜಾತಿ ಸಮೀಕರಣದ ಹಿನ್ನಲೆಯನ್ನು ನೋಡಿದಾಗ ಈ ಪ್ರಶ್ನೆ ಇನ್ನೂ ಸ್ಪಷ್ಟವಾಗುತ್ತದೆ.    

ಸೆಪ್ಟೆಂಬರ್ 14, 2008 ರಂದು ಭಜರಂಗದಳದ ಕಾರ್ಯಕರ್ತರು ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿ ನಡೆಸಿದರು. ಈ ಕುಕೃತ್ಯದ ಬಗ್ಗೆ ಸೆಪ್ಟೆಂಬರ್ 15 ರಂದು ಭಜರಂಗದಳದ ಅಂದಿನ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪತ್ರಿಕಾಗೋಷ್ಠಿ ಕರೆದಿದ್ದರು. ಅಲ್ಲಿ ಅವರಿಬ್ಬರೂ ‘’ಚರ್ಚ್ ದಾಳಿಯನ್ನು ಮಾಡಲು ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದು ನಾವೇ. ಚರ್ಚ್ ಗಳಲ್ಲಿ ಮತಾಂತರ ನಡೆಯುತ್ತಿದ್ದರಿಂದ ದಾಳಿ ಮಾಡಬೇಕಾಯಿತು’’ ಎಂದಿದ್ದರು. ಮರುದಿನ ಪೊಲೀಸರು ಭಜರಂಗದಳದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದರು. ಆದರೆ ಪತ್ರಿಕಾಗೋಷ್ಟಿಯಲ್ಲಿ ಮಹೇಂದ್ರ ಕುಮಾರ್ ಅವರ ಪಕ್ಕದಲ್ಲೇ ಇದ್ದ, ಭಜರಂಗದಳದ ಮಾತೃ ಸಂಘಟನೆಯಾಗಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಎಂ.ಬಿ. ಪುರಾಣಿಕ್ ವಿರುದ್ಧ ಕೇಸೂ ದಾಖಲಾಗಲಿಲ್ಲಬಂಧನವೂ ಆಗಲಿಲ್ಲ. ಇಬ್ಬರೂ ಒಂದೇ ವೇದಿಕೆಯಲ್ಲಿ, ಒಂದೇ ಕೃತ್ಯಕ್ಕೆ ಸಂಬಂಧಿಸಿ ಒಂದೇ ರೀತಿಯ ಹೇಳಿಕೆ ನೀಡಿದ್ದರು. ದಾಳಿಯಲ್ಲಿ ಇಬ್ಬರ ಪಾತ್ರವೂ ಒಂದೇ ಆಗಿತ್ತು. ಆದರೆ ಪ್ರಕರಣದಲ್ಲಿ ಬಂಧನವಾಗಿದ್ದು, ಫಿಕ್ಸ್ ಆಗಿದ್ದು ಹಿಂದುಳಿದ ವರ್ಗಕ್ಕೆ ಸೇರಿದ ಮಹೇಂದ್ರ ಕುಮಾರ್ ಮಾತ್ರ. ಎಂ.ಬಿ. ಪುರಾಣಿಕ್ ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಆರ್.ಎಸ್.ಎಸ್ ಮುಖಂಡನ ಮೇಲೆ ಕೇಸು ದಾಖಲಾಗಲೇ ಇಲ್ಲ.

ಕೋಮುಗಲಭೆ ಹಾಗೂ ನೈತಿಕ ಪೋಲೀಸುಗಿರಿಯಂತ ಪ್ರಕರಣಗಳಲ್ಲಿ ಮತ್ತು ಅವುಗಳ ವಿಚಾರಣೆಗಳಲ್ಲಿ ಗೋಚರಿಸುವ ಜಾತಿ ಸಮೀಕರಣದ ನೆರಳು ಪಬ್ ದಾಳಿ (2009) ಮತ್ತು ಹೋಂ ಸ್ಟೇ ದಾಳಿ (2012) ಪ್ರಕರಣಗಳಲ್ಲಿ ಇನ್ನಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ. ಜನವರಿ 24, 2009 ರಂದು ಮಂಗಳೂರಿನಲ್ಲಿ ಪಬ್ ದಾಳಿ ನಡೆಯಿತು. ಅಂಬೇಡ್ಕರ್ ಸರ್ಕಲ್ ನಿಂದ ಹಂಪನಕಟ್ಟೆಗೆ ಹೋಗುವ ರಸ್ತೆಯಲ್ಲಿರುವ ಅಮ್ನೇಶಿಯಾ ಪಬ್ ನಲ್ಲಿ ಹುಡುಗ ಹುಡುಗಿಯರು ಕುಣಿತ-ಕುಡಿತದಲ್ಲಿ ತೊಡಗಿಕೊಂಡು ಭಾರತೀಯ ಸಂಸ್ಕೃತಿಗೆ ಅಪಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ದಾಳಿ ನಡೆಸಿತು. ಅಂದು ಪಬ್ ಒಳಗೆ ನುಗ್ಗಿ ದಾಳಿ ನಡೆಸಿದ್ದು ಶ್ರೀರಾಮ ಸೇನೆಯ ಕಾರ್ಯಕರ್ತರು. ಆದರೆ ಘಟನೆಯ ನಂತರದಲ್ಲಿ ಪೋಲೀಸರು ದಾಳಿ ನಡೆಸಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಮಾತ್ರವಲ್ಲದೇ ದಾಳಿಯಲ್ಲಿ ನೇರವಾಗಿ ಭಾಗಿಯಾಗದೆ, ಆದರೆ ದಾಳಿ ನಡೆಸುವಂತೆ ಸೂಚಿಸಿದ್ದ, ಪ್ರಚೋದಿಸಿದ್ದ ಶ್ರೀರಾಮ ಸೇನೆಯ ಅಂದಿನ ಅಧ್ಯಕ್ಷನಾಗಿದ್ದ, ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರನನ್ನು ಕೂಡಾ ಬಂಧಿಸಿದ್ದರು.

ಇದಾದ ನಂತರ ಜುಲೈ 28, 2012 ರಂದು ಪಬ್ ಅಟ್ಯಾಕ್ ಮಾಧರಿಯಲ್ಲೇ ಹಿಂದೂ ಜಾಗರಣಾ ವೇದಿಕೆಯು ಹೋಂ ಸ್ಟೇ ದಾಳಿ ನಡೆಸಿತು. ಮಾರ್ನಿಂಗ್ ಮಿಸ್ಟ್ ಎಂಬ ಹೋಂ ಸ್ಟೇಯಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಅಮಾನವೀಯ ದಾಳಿ ಅದಾಗಿತ್ತು. ಪಬ್ ಅಟ್ಯಾಕ್ ಮಾಡಿದಾಗ ಶ್ರೀರಾಮ ಸೇನೆಯಲ್ಲಿದ್ದ ಕಾರ್ಯಕರ್ತರೇ ಅಲ್ಲಿಂದ ಸಿಡಿದು ಬಂದು ಹಿಂದೂ ಜಾಗರಣಾ ವೇದಿಕೆ ಸೇರಿದ್ದರು. ಬಹುಪಾಲು ಪಬ್ ಅಟ್ಯಾಕ್ ಆರೋಪಿಗಳೇ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿಯಲ್ಲೂ ಭಾಗಿಯಾಗಿದ್ದರು. ದಾಳಿ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಮಾಧ್ಯಮಗಳ ದೃಶ್ಯಾವಳಿಯನ್ನು ಆಧರಿಸಿ ದಾಳಿಕೋರ ಹಿಂದೂ ಜಾಗರಣಾ ವೇದಿಕೆಯ ಸದಸ್ಯರನ್ನು ಬಂಧಿಸಿದರು. ಈ ಸಂಧರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ರಾಜ್ಯಾಧ್ಯಕ್ಷ ಜಗದೀಶ ಕಾರಂತ ಪತ್ರಿಕಾಗೋಷ್ಠಿಯನ್ನು ಮಾಡಿ, ದಾಳಿಯನ್ನು ಸಮರ್ಥಿಸಿದ್ದಲ್ಲದೇ ಹಿಂದೂ ಜಾಗರಣಾ ವೇದಿಕೆಯೇ ದಾಳಿಯನ್ನು ಸಂಘಟಿಸಿತ್ತು ಎಂದು ಹೇಳಿಕೆ ನೀಡಿದ್ದರು. ಆದರೆ ಪಬ್ ದಾಳಿ ಸಂದರ್ಭದಲ್ಲಿ ಆ ದಾಳಿಗೆ ಪ್ರಚೋದನೆ ನೀಡಿದ್ದ ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಪ್ರಸಾದ್ ಅತ್ತಾವರ ಬಂಧಿಸಲ್ಪಟ್ಟಂತೆ ಹೋಂ ಸ್ಟೇ ದಾಳಿಯ ಹಿನ್ನಲೆಯಲ್ಲಿದ್ದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜಗದೀಶ ಕಾರಂತ್ ಪೋಲೀಸ್ ಬಂಧನಕ್ಕೆ ಒಳಗಾಗಲೇ ಇಲ್ಲ; ಅವರ ಮೇಲೆ ಕನಿಷ್ಠ ಕೇಸು ಕೂಡಾ ದಾಖಲಾಗಿಲ್ಲ.  

ಮೊನ್ನೆ ನಡೆದ ಶರತ್ ಮಡಿವಾಳ ಶವ ಮೆರವಣಿಗೆಯ ಅಹಿತಕರ ಘಟನೆಯಲ್ಲೂ ಇದು ಪುನರಾವರ್ತನೆ ಆಗಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೋಲೀಸ ತನಿಖೆಯ ಕೇಂದ್ರವಾಗಿರುವ, ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಸಂಚಾಲಕರಾಗಿ ಕೆಲಸ ಮಾಡಿದವರು. ಹಾಗೆಯೇ ಕೊಟ್ಟಾರಿ ಎಂಬ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ಶರಣ್ ಪಂಪ್‍ವೆಲ್‌ ಭಜರಂಗದಳದ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವವರು. ಇವರಿಬ್ಬರೂ ಶವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಮಾಡಲು ಪ್ರಚೋದಿಸಿದ್ದರು ಎಂದು ಕೇಸು ದಾಖಲಾಗಿದೆ. ಅವರ ಶೋಧ ಕಾರ್ಯವೂ ನಡೆಯುತ್ತಿದೆ. ಇದೇ ಪ್ರಕರಣದಡಿಯಲ್ಲಿ ಶವಮೆರವಣಿಗೆ ಆಯೋಜಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಯಾವ ಪ್ರಕರಣವೂ ದಾಖಲಾಗಿಲ್ಲ. ಇಡೀ ಕೋಮುಗಲಭೆಗೆ ಕಲ್ಲಡ್ಕ ಪ್ರಭಾಕರ್ ಭಟ್, ಶರಣ್ ಪಂಪ್‍ವೆಲ್‌ ಹಾಗೂ ಸತ್ಯಜಿತ್ ಸುರತ್ಕಲ್- ಮೂವರೂ ಸಮಾನ ಜವಾಬ್ದಾರರಾಗಿದ್ದಾರೆ. ಮೂವರೂ ಒಂದೇ ರೀತಿಯ ಕೃತ್ಯಗಳನ್ನು ನಡೆಸಿದ್ದಾರೆ. ಆದರೆ ಪ್ರಕರಣ ದಾಖಲಾಗಿರುವುದು ಹಿಂದುಳಿದ ಸಮುದಾಯದಿಂದ ಬಂದ ಆರ್.ಎಸ್.ಎಸ್ ಮುಖಂಡರ ಮೇಲೆ ಮಾತ್ರವೇ.

ಕೋಮು ಗಲಭೆಯಲ್ಲಿ ಭಾಗಿಯಾಗಿ ಜೈಲು ಸೇರುತ್ತಿರುವುದು ಮಾತ್ರವಲ್ಲದೆ ಕೋಮು ಗಲಭೆಯಲ್ಲಿ ಕೊಲೆಯಾದವರೂ ಕೂಡಾ ಬಹುತೇಕರು ಬಿಲ್ಲವ/ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ… ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.  ಇದಲ್ಲದೆ ಹರೀಶ್ ಭಂಡಾರಿ, ಸುಖಾನಂದ ಶೆಟ್ಟಿ, ಕೋಡಿಕೆರೆ ಶಿವರಾಜ್, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್ ಹೀಗೆ ಸಾವಿಗೀಡಾದ ಬ್ರಾಹ್ಮಣೇತರ ವರ್ಗಗಳ ಯುವಕರ ಪಟ್ಟಿ ಸಿಗುತ್ತದೆ. ಮೊನ್ನೆ ಮೃತನಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂಧರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಪೊಲೀಸರು ನಿತಿನ್ ಪೂಜಾರಿ (21 ವರ್ಷ), ಪ್ರಾಣೇಶ್ ಪೂಜಾರಿ (20 ವರ್ಷ) ಹಾಗೂ ಕಿಶನ್ ಪೂಜಾರಿ (21 ವರ್ಷ) ಮೊದಲಾದವರನ್ನು ಬಂಧಿಸಿದ್ದಾರೆ. ಈ ಮೂವರು ಯುವಕರೂ ಕೂಡಾ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.

ಇಡೀ ದಕ್ಷಿಣ ಕನ್ನಡದ ಮತೀಯವಾದಿ ರಕ್ತ ಚರಿತೆಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರ್ಯಕರ್ತನಾಗಲೀ, ನಾಯಕನಾಗಲೀ ಜೈಲು ಸೇರಿಲ್ಲ ಅಥವಾ ಹಿಂದುತ್ವಕ್ಕಾಗಿ ಜೀವ ನೀಡಿಲ್ಲ (?) ಎಂಬುದು ಗಮನಾರ್ಹ. ಅತ್ತ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‍ವೆಲ್‌ ರಂತಹ ಹಿಂದುತ್ವವಾದಿ ಮುಖಂಡರು ಮೈಮೆಲೆಲ್ಲಾ ಪೋಲಿಸ್ ಕೇಸು ಜಡಿಸಿಕೊಡು ಜೀವ ಭಯದಿಂದ ಹೆಣಗಾಡುತ್ತಿದ್ದರೆ ಇತ್ತ ಪ್ರಭಾಕರ ಭಟ್ಟರು ಮಾತ್ರ ಕಲ್ಲಡ್ಕದ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸುತ್ತಿದ್ದಾರೆ; ಅಧಿಕಾರ ಗ್ರಹಣದ ಚರ್ಚೆ ನಡೆಸುತ್ತಿದ್ದಾರೆ. ಅದೇ ಹೊತ್ತಿಗೆ ಹಿಂದುಳಿದ ವರ್ಗದಿಂದ ಬಂದ ಆರ್.ಎಸ್.ಎಸ್ ಮುಖಂಡರು ಕ್ರಿಮಿನಲ್ ಗಳಂತೆ ಪೋಲೀಸ್ ಕೇಸುಗಳ, ಬಂಧನದ ಭೀತಿಯಿಂದ ಭೂಗತರಾಗುತ್ತಿದ್ದಾರೆ.

 

ಏಸುಕ್ರಿಸ್ತ ಮಹಾತ್ಮೆ ಮತ್ತು ಕರಾವಳಿ ಯಕ್ಷಗಾನ ವಿರಚಿತ ಕೋಮುವಾದ

Naveen Soorinje


ನವೀನ್ ಸೂರಿಂಜೆ


 

ಮಂಗಳೂರಿನಲ್ಲಿ ನಡೆಯಲಿರುವ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ತಾಳಮದ್ದಳೆಗೆ ಹಿಂದುತ್ವವಾದಿಗಳಿಂದ ವಿರೋಧpic 3 ವ್ಯಕ್ತವಾಗುತ್ತಿದೆ. ಯಕ್ಷಗಾನ ಎಂಬ ವೈದಿಕರ ಕ್ಷೇತ್ರಕ್ಕೆ ಏಸು ಕ್ರಿಸ್ತ ಮಹಾತ್ಮೆ ಬಂದಿರೋದು ಮತಾಂತರದ ಉದ್ದೇಶದಿಂದ ಎಂಬ ಆರೋಪ ಹಿಂದುತ್ವವಾದಿಗಳದ್ದು. ಯಕ್ಷಗಾನ ಎಂಬುದು ಕೇವಲ ಕಲೆ, ಸಂಸ್ಕೃತಿಯಲ್ಲ. ಇದರ ಹಿಂದೆ ವೈಧಿಕ ಧರ್ಮದ ಪ್ರಸಾರದ ತಂತ್ರವಿತ್ತು. ವೈದಿಕರು ಮತಾಂತರಕ್ಕಾಗಿಯೇ ಯಕ್ಷಗಾನವನ್ನು ಬಳಸಿ ತನ್ನ ಕಾರ್ಯ ಪೂರ್ಣಗೊಳಿಸಿದ ಬಳಿಕ ಈಗ ಅದನ್ನೇ ಕೋಮುವಾದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಕರಾವಳಿಯ ಜನರ ತಲೆಯೊಳಗೆ ಈ ಪರಿಯ ಕೋಮುವಾದವನ್ನು ತುಂಬಿಸಿದವರು ಯಾರು ಎಂದು ಅಧ್ಯಯನ ಮಾಡಿದಾಗ ಅದರ ಮೊದಲ ಆರೋಪಿಯಾಗಿ ಕಾಣುವುದೇ ಈ ಯಕ್ಷಗಾನ. ಕರಾವಳಿಯ ಗಂಡುಕಲೆ, ಸಾಂಸ್ಕೃತಿಕ ಹಿರಿಮೆ ಎಂದು ಹೇಳುವ ಯಕ್ಷಗಾನ ಶೂದ್ರ ಪರಂಪರೆಯನ್ನು ನಿಧಾನವಾಗಿ ಕೊಲ್ಲುತ್ತಲೇ ಬಂತು.

ಯಕ್ಷಗಾನ ಎಂಬುದು ಪ್ರಾರಂಭವಾಗಿದ್ದು ಮಹಾಭಾರತ, ರಾಮಾಯಣ, ಕೃಷ್ಣ, ವಿಷ್ಣು, ದೇವಿಯ ಪ್ರಚಾರಕ್ಕೆ. ಯಕ್ಷಗಾನವನ್ನು ಆಟ, ಬಯಲಾಟ ಎಂದು ಕರೆಯುತ್ತಾರೆ. 1614ರಲ್ಲಿ ತಂಜಾವರದ ಅರಸು ರಘುನಾಥ ನಾಯಕನು ಬರೆದ ರುಕ್ಮಿಣಿ ಕೃಷ್ಣ ವಿವಾಹ ಎಂಬ ಯಕ್ಷಗಾನ ಪ್ರಬಂಧವೇ ಮೊದಲ ಕೃತಿ ಎನ್ನಲಾಗುತ್ತದೆ. ಇದರ ಬಗ್ಗೆ ತಕರಾರು ಚರ್ಚೆಗಳೂ ಇವೆ. ‘‘ಪುರಂದರದಾಸರು ಅನಸೂಯ ಕಥೆ ಎಂಬ ಯಕ್ಷಗಾನ ಪ್ರಬಂಧವನ್ನು ರಚಿಸಿದ್ದರೆಂದು ಹೇಳಲಾಗುತ್ತಿದೆ. ಅವರ ಮಗ ಮಧ್ವಪತಿದಾಸರು ಆಭಿಮನ್ಯು ಕಾಳಗ, ಇಂದ್ರಜಿತು ಕಾಳಗ, ಉದ್ದಾಳೀಕನ ಕಥೆ, ಐರಾವತ, ಕಂಸವಧೆ ಎಂಬ ಯಕ್ಷಗಾನ ಪ್ರಬಂಧಗಳನ್ನು ರಚಿಸಿದ್ದನೆಂಬ ಊಹೆಗಳೂ ಇವೆ’’ ಎಂದು ಸಂಶೋಧಕಿ ಡಾ ಸುನೀತಾ ಶೆಟ್ಟಿಯವರು ತಮ್ಮ ಬರಹದಲ್ಲಿ ಹೇಳುತ್ತಾರೆ. ಹೀಗೆ ಪುರಾಣದ ಕತೆಯ ಮೇಲೆ ಪ್ರಾರಂಭವಾದ ಯಕ್ಷಗಾನವು ಪುರಾಣಗಳನ್ನು ಜನರ ತಲೆಗೆ ತುಂಬುವಲ್ಲಿ ಯಶಸ್ವಿಯಾಗುತ್ತದೆ.

ಕರಾವಳಿ ಭಾಗದಲ್ಲಿ ವೈದಿಕ ಧರ್ಮ ಹರಡುವುದು ಸುಲಭ ಸಾಧ್ಯವಾಗಿರಲಿಲ್ಲ. ನಮ್ಮ ಹಿರಿಯರನ್ನೇ ದೈವಗಳು ಎಂದುಕೊಳ್ಳುವ ಭೂತಾರಾಧನೆ ಗಟ್ಟಿಯಾಗಿದ್ದ ದಿನಗಳವು. ಕೃಷ್ಣ, ರಾಮ, ದೇವಿ ಕರಾವಳಿಗರ ದೇವರಾಗಿರಲಿಲ್ಲ. ಮದ್ವಾಚಾರ್ಯರು ಸ್ಥಾಪಿಸಿದ ಮಠಗಳು, ದೇವಸ್ಥಾನಗಳಿಗೆ ಮಾರ್ಕೆಟಿಂಗ್ ಮಾಡಬೇಕಾದರೆ ಈ ಯಕ್ಷಗಾನ ಪ್ರಸಂಗಗಳನ್ನು ಬರೆಯುವುದು ಅನಿವಾರ್ಯವಾಯ್ತು. ಸೇವೆಯಾಟ, ಹರಕೆಯಾಟ, ಬಯಲಾಟ ಎಂಬ ವಿಧದ ಯಕ್ಷಗಾನದ ಮೂಲಕ ಈ ಪುರಾಣಗಳನ್ನು ಜನರ ಮನೆಮನಗಳಿಗೆ ತಲುಪಿಸಲಾಯ್ತು.

ಆಗಿನ ಪ್ರಭುತ್ವ ಮತ್ತು ವೈದಿಕರು ಅಂದು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದರು. ಆಚಾರ್ಯ ವಿದ್ಯಾರಣ್ಯರು ಕುಲಗುರುವಾಗಿ ಹರಿಹರ ಮತ್ತು ಬುಕ್ಕರಾಯರ ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು. ಆಗ ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದರು. ವಿದ್ಯಾರಣ್ಯರ ಕಾಲದಲ್ಲೇ ಭಾಗವತಿಕೆಯ ಸಾಹಿತ್ಯವನ್ನು ರಚಿಸಲಾಯ್ತು ಎಂದು ಸಂಶೋಧಕರನೇಕರು ಕಂಡುಕೊಂಡಿದ್ದಾರೆ.

ಇದಾದ ನಂತರ ಕರ್ನಾಟಕದಲ್ಲಿ ಕೆಳದಿಯ ಅರಸರು ಮತ್ತು ಮೈಸೂರು ಅರಸರು ಯಕ್ಷಗಾನ ಕಲೆಯನ್ನು ಪೋಷಿಸಿದರು. ಕೆಳದಿ ಸಂಸ್ಥಾನದ ಅರಸರುpic 1 ಈಗಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಅವಿಭಜಿತ ದಕ್ಷಿಣ ಕನ್ನಡ, ದಾರವಾಡ, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಭುತ್ವವನ್ನು ಸಾಧಿಸಿದ್ದರು. ಹಾಗಿದ್ದರೆ ದಾರವಾಡ, ಚಿತ್ರದುರ್ಗ, ಉತ್ತರ ಕರ್ನಾಟಕದ ಭಾಗಗಳಲ್ಲಿ ಯಕ್ಷಗಾನ ಯಾಕೆ ವೈದಿಕ ಧರ್ಮವನ್ನು ಹರಡಲಿಲ್ಲ ಎಂಬ ಪ್ರಶ್ನೆ ಉದ್ಬವವಾಗುತ್ತದೆ. 1336 ರಿಂದ 1646 ರವರೆಗೆ ವಿಜಯನಗರ ಸಾಮ್ರಾಜ್ಯವೂ 1500 ನೇ ಇಸವಿಯಿಂದ ಕೆಳದಿ ಸಂಸ್ಥಾನದ ಪ್ರಭುತ್ವ ಪ್ರಾರಂಭವಾದರೆ, ಅದಕ್ಕಿಂತಲೂ ಮೊದಲೇ ಅಂದರೆ 1317 ರಿಂದ ಮದ್ವಾಚಾರ್ಯರು ವೈದಿಕ ಧರ್ಮದ ಪ್ರಚಾರವನ್ನು ಕರಾವಳಿಯನ್ನು ಗುರಿಯಿಟ್ಟು ಮಾಡಲಾರಂಭಿಸಿದ್ದರು. ಮದ್ವಾಚಾರ್ಯ, ವಿದ್ಯಾರಣ್ಯರ ಪ್ರಭಾವವು ಆ ನಂತರ ಕರಾವಳಿಯನ್ನು ಆಳಿದ ಅರಸರ ಮೇಲೆ ಗಾಢವಾಗಿ ಬೀರಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 1308 ರಲ್ಲಿ ಮದ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸುವುದರ ಜೊತೆಗೆ ಮಲೆಕುಡಿಯರ ನಾಗಾರಾಧನೆಯ ಸ್ಥಳವಾದ ಸುಬ್ರಹ್ಮಣ್ಯಕ್ಕೂ ಪೀಠಾಧಿಪತಿಯನ್ನು ನೇಮಿಸಿದ್ರು. ಈ ಮಠಗಳು ಅಂದಿನ ಅರಸರ ಸಂಪೂರ್ಣ ಸಹಕಾರದಲ್ಲಿ ವೈದಿಕ ಧರ್ಮವನ್ನು ಹರಡಲು ಪ್ರಾರಂಭಿಸಿದರು. ಅದಕ್ಕೆ ಅವರು ಪ್ರಮುಖವಾಗಿ ಆಯ್ಕೆ ಮಾಡಿಕೊಂಡಿದ್ದು ಯಕ್ಷಗಾನವನ್ನು.

ಉತ್ತರ ಕರ್ನಾಟಕದ ದೊಡ್ಡಾಟ, ಕೇರಳದ ಕಥಕ್ಕಳಿ, ಕೃಷ್ಣ ನಾಟ್ಯಂ, ರಾಮನಾಟ್ಯಂ ನಂತೆ ಯಕ್ಷಗಾನವನ್ನು ವೈದಿಕರು ಕೇವಲ ಕಲೆಯನ್ನಾಗಿ ಉಳಿಸಲಿಲ್ಲ. ಅದಕ್ಕೊಂದು ಧಾರ್ಮಿಕ ರೂಪ ನೀಡಲಾಯ್ತು. ಯಕ್ಷಗಾನವನ್ನು ಆಡುವ ಮೊದಲು ಅದಕ್ಕೊಂದು ಚೌಕಿ ಪೂಜೆಯನ್ನು ನಡೆಸಲಾಯ್ತು. ಅಂದರೆ ಒಂದು ಯಕ್ಷಗಾನ ಮೇಳ ತನ್ನದೇ ಆದ ದೇವರನ್ನು ಪ್ರತಿನಿಧಿಸುತ್ತದೆ. ಯಕ್ಷಗಾನದ ಪ್ರಾರಂಭದಲ್ಲಿ ಗಣಪತಿಯನ್ನು ಭಜಿಸಲಾಗುತ್ತದೆ. ನಂತರ ಪುರಾಣದ ಕತೆಯನ್ನು ನಾಟ್ಯ ಮತ್ತು ವಾಚ್ಯದ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಜನರಿಗೆ ಅರ್ಥವಾಗುವ ಕರಾವಳಿ ಕನ್ನಡದಲ್ಲಿ ನಡೆಯುವ ಯಕ್ಷಗಾನದ ಪುರಾಣವು ಅನಕ್ಷರಸ್ಥರಿಗೂ ಅರ್ಥವಾಗುವಂತಿರುತ್ತದೆ. ಕೋಡ್ದಬ್ಬು, ತನ್ನಿಮಾನಿಗ, ಪಂಜುರ್ಲಿಯಂತಹ ದೈವಗಳನ್ನಷ್ಠೆ ನಂಬುತ್ತಿದ್ದ ಕರಾವಳಿಯ ಶೂದ್ರರು ನಿಧಾನಕ್ಕೆ ರಾಮ ಕೃಷ್ಣರನ್ನು ದೇವರೆಂದುಕೊಳ್ಳಲು ಪ್ರಾರಂಬಿಸಿದ್ರು. ಅಯೋದ್ಯೆಯ ಬಾಬರಿ ಮಸೀದಿ, ರಾಮಜನ್ಮ ಭೂಮಿ ವಿವಾದ ಸಂಧರ್ಭದಲ್ಲೇ ದೂರದರ್ಶನದಲ್ಲಿ ರಾಮಾಯಣ ದಾರವಾಹಿಯ ಮೂಲಕ ರಾಮ ಹೇಗೆ ಇಡೀ ದೇಶಕ್ಕೆ ದೇವರಾದನೋ ಹಾಗೇ. ಆದರೆ ಎಷ್ಟೇ ಕಸರತ್ತು ಮಾಡಿದರೂ ಕರಾವಳಿಯ ಶೂದ್ರರು, ದಲಿತರು ದೈವ/ಭೂತಗಳನ್ನು ಬಿಡುವುದಿಲ್ಲ ಎಂದು ಗೊತ್ತಾದಾಗ ಕೊಡ್ದಬ್ಬು, ಪಂಜುರ್ಲಿ ಮುಂತಾದ ದೈವಗಳು ಶಿವನ ಗಣಗಳು ಎಂದು ಸಾರುವ ಯಕ್ಷಗಾನ ಪ್ರಸಂಗ ಬರೆದರು! ಆ ಮೂಲಕ ಭೂತಾರಾಧನೆಯ ದೈವಸಾನಗಳಿಗೆ ವೈದಿಕರ ಪ್ರವೇಶವಾಯ್ತು.

ಈ ರೀತಿ ಮೂರ್ನಾಲ್ಕು ವಿಧವಾಗಿ ಯಕ್ಷಗಾನ ಕರಾವಳಿಯಲ್ಲಿ ಖ್ಯಾತಿ ಪಡೆಯಲಾರಂಭಿಸಿತು. ಉಳ್ಳವರು ಹರಕೆಯಾಟ ಮಾಡಿದ್ರೆ, ಬಡವರು ಬಯಲಾಟ ನೋಡಿದ್ರು. ಯಕ್ಷಗಾನ ನೋಡುವುದು ಮತ್ತು ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದನ್ನೂ ತೇಲಿಬಿಡಲಾರಂಬಿಸಿದರು. ಈ ಕಾರಣಕ್ಕಾಗಿ ಇದೀಗ ದಕ್ಷಿಣ ಕನ್ನಡದ ದೇವಸ್ಥಾನವೊಂದರಲ್ಲಿ ಆರು ಯಕ್ಷಗಾನ ತಂಡಗಳು ಕಾರ್ಯನಿರ್ವಹಿಸುತ್ತಿದೆ. ಯಾರಾದರೂ ಇವತ್ತು ಯಕ್ಷಗಾನವನ್ನು ಬುಕ್ ಮಾಡಿದರೆ ಅವರ ಸರದಿ ಬರುವುದು ಎರಡು ವರ್ಷದ ನಂತರ ! ಅಂದರೆ ಅಷ್ಟೊಂದು ಪ್ರಮಾಣದಲ್ಲಿ ಈ ದೇವಸ್ಥಾನವೊಂದರ ಯಕ್ಷಗಾನ ಕರಾವಳಿಯಲ್ಲಿ ಕಾರ್ಯತತ್ಪರವಾಗಿದೆ. ಹರಕೆಯ ಆಟ ಆಡಿಸಬೇಕೆಂದಿದ್ದರೆ ಈ ದೇವಸ್ಥಾನಗಳ ಯಕ್ಷಗಾನ ಮೇಳವನ್ನೇ ಆಶ್ರಯಿಸಬೇಕಾಗುತ್ತದೆ. ದೇವಸ್ಥಾನಗಳ ಮೇಳಗಳ ಜೊತೆ ದೇವಸ್ಥಾನದಿಂದಲೇ ದೇವರು ಬರುವ ಪ್ರಕ್ರೀಯೆ ಇದೆ. ಅಂದರೆ ಸರ್ವಾಭರಣ ಭೂಷಿತರಾಗಿರುವ ದೇವರ ಮೂರ್ತಿಯನ್ನು ಪುರೋಹಿತರು ಯಕ್ಷಗಾನ ನಡೆಯುವ ಸ್ಥಳಕ್ಕೆ ತೆಗೆದುಕೊಂಡು ಬಂದು ಮಹಾಪೂಜೆ ಮಾಡುತ್ತಾರೆ. ಹರಕೆಯಾಟ ಮಾಡಿದಾಗ ಬರುವ ದೇವರು ಬ್ರಾಹ್ಮಣೇತರರ ಮನೆಯೊಳಗೆ ಈಗಲೂ ಬರುವುದಿಲ್ಲ. ಉದಾಹರಣೆಗೆ ಬಂಟ ಬಿಲ್ಲವ ಜಾತಿಯವನೊಬ್ಬ ದೇವಸ್ಥಾನದ ಮೇಳವನ್ನು ಸಾವಿರಾರು ರೂಪಾಯಿ ಕೊಟ್ಟು ಬುಕ್ ಮಾಡಿ, ಲಕ್ಷಾಂತರ ರೂಪಾಯಿ ವ್ಯಹಿಸಿ ಅದ್ದೂರಿ ಯಕ್ಷಗಾನ ಮಾಡಿದರೂ ದೇವರನ್ನಿಡಲು ಬ್ರಾಹ್ಮಣರ ಮನೆ ಹುಡುಕಬೇಕು ಅಥವಾ ಊರ ದೇವಸ್ಥಾನವನ್ನು ಆಶ್ರಯಿಸಬೇಕು. ಈ ರೀತಿ ಯಕ್ಷಗಾನ ಈಗಲೂ ಮಡಿಮೈಲಿಗೆಯನ್ನು ಸಂಪ್ರದಾಯಬದ್ದವಾಗಿ ನಡೆಸುತ್ತಿದೆ.

ಕೆಲ ವರ್ಷಗಳ ಹಿಂದೆ ಯಕ್ಷಗಾನದಲ್ಲಿ ಜಾತಿಪದ್ದತಿ ವಿವಾದಗಳನ್ನು ಹುಟ್ಟು ಹಾಕಿತ್ತು.‌ ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಕಲಾವಿದ ಐರೋಡಿpic 2 ಗೋವಿಂದಪ್ಪಗೆ ಪಾತ್ರ ನಿರಾಕರಿಸಲಾಯ್ತು. ಒಂದು ಕಾಲದಲ್ಲಿ ದೇವಸ್ಥಾನಗಳಿಗೆ ಅಸ್ಪೃಶ್ಯರೇ ಆಗಿದ್ದ ಬಿಲ್ಲವ ಸಮುದಾಯಕ್ಕೆ ಸೇರಿದ ಐರೋಡಿ ಗೋವಿಂದಪ್ಪ ಯಕ್ಷಗಾನದ ಗೆಜ್ಜೆ ಕಟ್ಟಿದರೆ ದುರ್ಗಾಪರಮೇಶ್ವರಿ ಮುನಿಸಿಕೊಳ್ಳುತ್ತಾರೆ ಎಂಬುದು ವಾದವಾಗಿತ್ತು. ಕೊನೆಗೆ ಭಾರೀ ಪ್ರತಿಭಟನೆಯ ನಂತರ ಐರೋಡಿ ಗೋವಿಂದಪ್ಪ ಯಕ್ಷಗಾನದ ಗೆಜ್ಜೆ ಕಟ್ಟಿದ್ರು. ದೇವಸ್ಥಾನದ ಅಧೀನದಲ್ಲಿರುವ ಮೇಳಗಳ ಉಸ್ತುವಾರಿ ಅಥವಾ ಮಾಲೀಕರು ಹೆಚ್ಚಾಗಿ ಬಂಟರೇ ಆಗಿರುತ್ತಾರೆ. ಒಂದು ಕಾಲದ ಗುತ್ತಿನ ಅರಸರಾಗಿದ್ದ ಬಂಟರು ಪುರೋಹಿತಶಾಹಿಗಳ ಸೂಚನೆಗಳನ್ನು ಚಾಚೂತಪ್ಪದೆ ಜಾರಿಗೆ ತರುತ್ತಾರೆ. ಭರತನಾಟ್ಯ ಸೇರಿದಂತೆ ಹಲವು ಪ್ರಕಾರಗಳು ಬ್ರಾಹ್ಮಣರ ಹಿಡಿತದಲ್ಲಿದ್ದರೂ ಕ್ರಮೇಣ ಅವು ಸಾಮಾಜಿಕ ಆಶಯಗಳನ್ನು ಮೈಗೂಡಿಸಿಕೊಂಡವು. ಭರತನಾಟ್ಯವನ್ನು ಎಲ್ಲಾ ಸಮುದಾಯದವರೂ ಪ್ರಸ್ತುತಪಡಿಸಬಹುದು ಮತ್ತು ಧಾರ್ಮಿಕವಲ್ಲದ ಸಂಗೀತಕ್ಕೂ ಅಳವಡಿಸಿಕೊಳ್ಳಬಹುದು ಎಂಬಲ್ಲಿಯವರೆಗೆ ಬದಲಾವಣೆ ಕಂಡಿತು. ಆದರೆ ಯಕ್ಷಗಾನ ಮಾತ್ರ ಇನ್ನೂ ಕೂಡಾ ಸಾಮಾಜಿಕ ಬದಲಾವಣೆಗೆ ತೆರೆದುಕೊಳ್ಳಲೇ ಇಲ್ಲ. ಪೆರ್ಡೂರು ಮೊದಲಾದ ಮೇಳಗಳು ಲೌಕಿಕ ಥೀಮ್ ಇರತಕ್ಕಂತಹ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದವು. ಧಾರ್ಮಿಕವಲ್ಲದ ಕಥಾ ಪ್ರಸಂಗವನ್ನು ಇಟ್ಟುಕೊಂಡು ಯಕ್ಷಗಾನ ಆಡಿದರು. ಆದರೆ ಅವ್ಯಾವುದೂ ಹೆಚ್ಚಿನ ಕಾಲ ಬಾಳಿಕೆ ಬರಲಿಲ್ಲ. ಅದಕ್ಕೆ ಕಾರಣವಾಗಿರುವುದು ಯಕ್ಷಗಾನಕ್ಕೆ ಬ್ರಾಹ್ಮಣರು ಹಾಕಿರುವ ಭದ್ರ ಬುನಾಧಿ. ಯಕ್ಷಗಾನವನ್ನು ಪ್ರಗತಿಪರವಾಗಿ ಬದಲಾವಣೆ ಮಾಡಲು ಸಾಧ್ಯವೇ ಆಗದ ರೀತಿಯಲ್ಲಿ ದೇವಸ್ಥಾನ, ದೇವರು, ಧರ್ಮ, ಹರಕೆ, ಪೂಜೆಗೆ ವ್ಯವಸ್ಥಿತವಾಗಿ ಲಿಂಕ್ ಮಾಡಲಾಗಿದೆ.

ಇವತ್ತಿಗೂ ಯಕ್ಷಗಾನದ ದೇವಿ ಮಹಾತ್ಮೆ ಪ್ರಸಂಗದಲ್ಲಿ ದೇವಿ ಪಾತ್ರವನ್ನು ಬ್ರಾಹ್ಮಣರೇ ಮಾಡಬೇಕು ಎಂಬ ಅಲಿಖಿತ ನಿಯಮವಿದೆ. ಯಕ್ಷಗಾನ ಕೇವಲ ಕಲೆಯಾಗಿದ್ದರೆ ಅದಕ್ಕೆ ದೈವತ್ವವನ್ನು ನೀಡುವ, ಮಡಿ ಮೈಲಿಗೆಯನ್ನು ಹೇರುವ ಅಗತ್ಯ ಇರಲಿಲ್ಲ. ದೇವಿ ಪಾತ್ರ ಮಾಡುವವನು ಮಡಿಯಲ್ಲಿ ಇರಬೇಕು, ವೃತಗಳನ್ನು ಅನುಸರಿಸಬೇಕು ಎಂಬ ನಿಯಮವನ್ನು ಜಾರಿಗೆ ತಂದು ಅದನ್ನು ಬ್ರಾಹ್ಮಣರಿಗೆ ಮಾತ್ರ ಸೀಮಿತಗೊಳಿಸಲಾಯ್ತು. ಪಾತ್ರಗಳನ್ನು ಕೆಳವರ್ಗಗಳಿಗೆ ನೀಡಿದರೂ, ಅಲ್ಲಿ ಪಾತ್ರವನ್ನು ಶ್ರೇಣಿಕೃತವಾಗಿ ವಿಂಘಡಿಸಲಾಗುತ್ತದೆ. ಈಗೀಗ ಕೆಳವರ್ಗಗಳು ಯಕ್ಷಗಾನದಲ್ಲಿ ಹೆಸರು ಮಾಡಿದರೂ ಯಕ್ಷಗಾನದ ಮೂಲ ವೈದಿಕರ ಆಶಯವನ್ನು ಬದಲು ಮಾಡಲು ಸಾಧ್ಯವಾಗಿಲ್ಲ‌.

ತೆಂಕುತಿಟ್ಟು, ಬಡಗುತಿಟ್ಟು ಎಂದು ಇಪ್ಪತ್ತಕ್ಕೂ ಹೆಚ್ಚು ಮೇಳಗಳು ಕರಾವಳಿಯಲ್ಲಿ ವೈದಿಕ ಧರ್ಮ ಹರಡುವಲ್ಲಿ ಕಾರ್ಯತತ್ಪರವಾಗಿದೆ. ಬೀದಿ ಬೀದಿಯಲ್ಲಿ, ಮನೆ ಮನೆಗಳಲ್ಲಿ ಯಕ್ಷಗಾನ ನಡೆಯಲಾರಂಭಿಸಿತು. ನಡೆಯುತ್ತಿದೆ. ಇತ್ತಿಚೆಗೆ ತುಳು ಯಕ್ಷಗಾನಗಳು ಪ್ರಾರಂಭವಾದಾಗ ಶೋಷಣೆ ಮುಕ್ತ ಸಮಾಜಕ್ಕಾಗಿ ಹೋರಾಡಿ ದೈವಗಳಾದ ಕೋಟಿ ಚೆನ್ನಯ್ಯ, ಕೊಡ್ದಬ್ಬು, ತನ್ನಿಮಾನಿ ಮತ್ತಿತರ ಶೂದ್ರ ದೈವಗಳ ಕತೆಗಳು ಯಕ್ಷಗಾನ ಪ್ರಸಂಗವಾದುದು ಹೊಸ ನಿರೀಕ್ಷೆ ಮೂಡಿಸಿತ್ತು. ಆದರೆ ಈ ಪ್ರಸಂಗಗಳೂ ವೈದಿಕರ ಯೋಜನೆಯಂತೆಯೇ ನಡೆದವು. ವೈದಿಕರ ದೇವರಿಲ್ಲದ ಯಕ್ಷಗಾನವನ್ನು ಒಪ್ಪಿಕೊಳ್ಳಲಾಗದ ಸ್ಥಿತಿಗೆ ಕರಾವಳಿಗರು ತಲುಪಿ ಆಗಿತ್ತು.

ಈಗ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ವಿವಾದ ಎಬ್ಬಿಸಿದೆ. 40 ವರ್ಷಗಳ ಹಿಂದೆ ಕೇಶವ ಮುಳಿಯರು ಬರೆದ ಯಕ್ಷಗಾನ ಪ್ರಸಂಗವನ್ನು ಪರಿಷ್ಕರಿಸಿ ತಾಳಮದ್ದಲೆಯಾಗಿ ಪ್ರಸ್ತುತಪಡಿಸಲಿದ್ದಾರೆ. ಯಕ್ಷಗಾನ ಎಂಬುದು ಈಗ ಕೇವಲ ಧಾರ್ಮಿಕ ಕಲೆಯಾಗಿಲ್ಲ. ಯಕ್ಷಗಾನ ಎಂಬುದು ಸಾಂಸ್ಕೃತಿಕ ಕಲೆಯಾಗಿ ಹಲವು ಲಾಭಗಳನ್ನು ತನ್ನದಾಗಿಸಿಕೊಂಡಿದೆ. ಸರಕಾರದಿಂದಲೂ ಅಧಿಕೃತವಾಗಿ ಕರಾವಳಿಯ ಸಾಂಸ್ಕೃತಿಕ ಕಲೆಯಾಗಿ ಗುರುತಿಸಿಕೊಂಡಿದೆ. ಸರಕಾರದ ಅಧೀನದಲ್ಲಿ ಯಕ್ಷಗಾನ ಅಕಾಡೆಮಿಯನ್ನು ಸ್ಥಾಪಿಸಿ, ಕೋಟ್ಯಾಂತರ ರೂಪಾಯಿ ಅನುದಾನವನ್ನೂ ನೀಡುತ್ತಿದೆ. ಆದುದರಿಂದ ಏಸುಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನಕ್ಕೆ ಹಿಂದುತ್ವವಾದಿಗಳು ತಡೆಯೊಡ್ಡುವುದು ಸಮಂಜಸವಲ್ಲ.

ಯಕ್ಷಗಾನದಲ್ಲಿ ಹಿಂದೂಗಳ ಕೆಳವರ್ಗಗಳ ದೈವಗಳ ಕತೆಯನ್ನು ಅಳವಡಿಸಿಕೊಂಡಾಗಲೇ ಜನ ಅಂತ ಯಕ್ಷಗಾನವನ್ನು ಒಪ್ಪದ ಸ್ಥಿತಿಯನ್ನು ವೈದಿಕಶಾಹಿಗಳು ನಿರ್ಮಾಣ ಮಾಡಿದ್ದಾರೆ. ಕೋಟಿಚೆನ್ನಯ್ಯ ಬಿಲ್ಲವರ ಆರಾಧ್ಯ ದೈವ. ಆದರೆ ದೇವಿ ಮಹಾತ್ಮೆಗೆ ಸಿಗುವ ಪ್ರಾಮುಖ್ಯತೆಯಲ್ಲಿ ಒಂದಂಶವೂ ಕೋಟಿಚೆನ್ನಯ ಪ್ರಸಂಗಕ್ಕೆ ಬಿಲ್ಲವರೇ ನೀಡುವುದಿಲ್ಲ . ಇನ್ನು ಏಸುಕ್ರಿಸ್ತ ಮಹಾತ್ಮೆಯ ವೀಕ್ಷಕರು ಯಾರು ? ಹಿಂದೂ ದೇವಿ, ದೇವರು ಇಲ್ಲದ ಯಕ್ಷಗಾನವನ್ನು ಕರಾವಳಿ ಜನ ಕಲ್ಪಿಸಲೂ ಸಾಧ್ಯವಿಲ್ಲದ ಸ್ಥಿತಿಗೆ ಕೊಂಡೊಯ್ಯುವಲ್ಲಿ ವೈದಿಕ ಧರ್ಮ ಪ್ರಸಾರಕರು ಯಶಸ್ವಿಯಾಗಿದ್ದಾರೆ. ಯಕ್ಷಗಾನದ ಭಾಗವಾಗಿಯೇ ಕರಾವಳಿಯಲ್ಲಿ ಕೋಮುವಾದವೂ ಬಲಿಷ್ಠವಾಗಿದೆ. ಅದೇ ಯಕ್ಷಗಾನ ಹುಟ್ಟುಹಾಕಿದ ಕೋಮುವಾದ ಇದೀಗ ಏಸುಕ್ರಿಸ್ತ ಯಕ್ಷಗಾನಕ್ಕೆ ತಡೆಯೊಡ್ಡಲು ಯತ್ನಿಸುತ್ತಿದೆ.

ಜೈಲು ತುಂಬುತ್ತಿರುವ ಅನುಮಾನಾಸ್ಪದ ಮುಸ್ಲೀಮರು ಮತ್ತು ಅವಮಾನಿತ ಸಮುದಾಯದ ಪ್ರಜ್ಞಾವಂತ ಯುವ ಜನತೆಯ ಸಮಾವೇಶ

Naveen Soorinje


ನವೀನ್ ಸೂರಿಂಜೆ


 

ಮಂಗಳೂರಿನಲ್ಲಿ ಮೇ 14 ಮತ್ತು 15 ರಂದು ಅನುಮಾನಿತರು ಮತ್ತುpic-logo ಅವಮಾನಿತರ ಸಮುದಾಯದ ಯುವ ಸಮಾವೇಶ ನಡೆಯುತ್ತಿದೆ. ಇದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ನಾನು ಸಂಘಪರಿವಾರದ  ನೈತಿಕ ಪೊಲೀಸ್ ಗಿರಿ ವಿರುದ್ಧ ಸುದ್ದಿ ಮಾಡಿದ್ದ ಕಾರಣಕ್ಕಾಗಿ ಬಿಜೆಪಿ ಸರಕಾರದ ಅವಧಿಯಲ್ಲಿ ನಾಲ್ಕುವರೆ ತಿಂಗಳು ಜೈಲಿನಲ್ಲಿ ಇರಬೇಕಾದ ಸಂಧರ್ಭದಲ್ಲಿ ನೂರಾರು ಅನುಮಾನಿತ ಮತ್ತು ಅವಮಾನಿತರ ಜೊತೆ ಸಮಯ ಕಳೆಯುವ ಅವಕಾಶ ದೊರಕಿತ್ತು. ಮಂಗಳೂರು ಜೈಲಿನಲ್ಲಿ ಎರಡು ವಿಭಾಗಗಳಿವೆ. ಎ ವಿಭಾಗ ಮತ್ತು ಬಿ ವಿಭಾಗ. ಮುಸ್ಲಿಂ ವಿಚಾರಣಾಧೀನ ಕೈದಿಗಳನ್ನು ಎ ವಿಭಾಗದಲ್ಲೂ, ಹಿಂದೂ ವಿಚಾರಣಾಧೀನ ಕೈದಿಗಳನ್ನು ಬಿ ವಿಭಾಗದಲ್ಲೂ ಹಾಕುತ್ತಾರೆ. ನನ್ನ ಹೆಸರು ಹಿಂದೂ ಹೆಸರಾಗಿದ್ದರೂ ಜೈಲು ಅಧಿಕಾರಿಗಳು ಮತ್ತು ಪೊಲೀಸರು ಸಮಾಲೋಚನೆ ನಡೆಸಿ, ಭದ್ರತೆಯ ದೃಷ್ಟಿಯಿಂದ ಮುಸ್ಲಿಂ ಕೈದಿಗಳಿರುವ ಎ ವಿಭಾಗದಲ್ಲಿ ನನ್ನನ್ನು ಇಡಲಾಗಿತ್ತು. ಬೇರೆ ಬೇರೆ ಕಾರಣಕ್ಕಾಗಿ ಕೈದಿಗಳಾಗಿದ್ದ ನಾಲ್ಕು ನೂರಕ್ಕೂ ಅಧಿಕ ಕೈದಿಗಳ ಜೊತೆ ಈ ಸಂಧರ್ಭದಲ್ಲಿ ಚರ್ಚೆ ನಡೆಸಿದ್ದೆ. ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಕಾರಣಗಳಿಗೆ ಜೈಲು ಸೇರುವ ಒಂದೊಂದು ಮುಸ್ಲೀಮನ ಕತೆಯೂ ಧಂಗು ಬಡಿಸುವಂತಿದೆ.

ಅವರು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ರೆಹಮಾನ್. 85 ವರ್ಷದ ಈ ಅಜ್ಜ ಉರೂಸ್ ಗಳಿಗೆ ತೆರಳಿ ಅಲ್ಲಿ ಹಾಡು ಹಾಡಿ ಸಂಪಾದನೆ ಮಾಡುವ ಹವ್ಯಾಸ ಇಟ್ಟುಕೊಂಡವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಲವಾರು ಬಾರಿ ಓಡಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು, ಮಡಿಕೇರಿಗಳಲ್ಲಿ ಉರೂಸು ಬಹಳಾನೇ ನಡೆಯುತ್ತಿರುವುದರಿಂದ ಈ ಪ್ರದೇಶಗಳು ರೆಹಮಾನ್ ಗೆ ಅಚ್ಚುಮೆಚ್ಚು ಮಾತ್ರವಲ್ಲ ಸಲೀಸು ಕೂಡಾ. ಅಂದೂ ಕೂಡಾ ಕಾಸರಗೋಡಿನಲ್ಲಿ ನಡೆಯುತ್ತಿದ್ದ ಉರೂಸಿಗಾಗಿ ರೆಹಮಾನ್ ರತ್ನಗಿರಿಯಿಂದ ಬಂದಿದ್ದರು. 85 ವರ್ಷ ಪ್ರಾಯದ ಅವರಿಗೆ ವಯೋ ಸಹಜ ಖಾಯಿಲೆಗಳೂ ಇದ್ದಿದ್ದರಿಂದ ಯಾರದ್ದೋ ಸಲಹೆಯ ಮೇರೆಗೆ ಯನಪೊಯ ಆಸ್ಪತ್ರೆಯ ಉಚಿತ ಚಿಕಿತ್ಸೆಯ ”ಆಫರ್ ” ಲಾಭ ಪಡೆದುಕೊಳ್ಳಲು ಮಂಗಳೂರಿಗೆ ಬಂದಿದ್ದರು. ಮಂಗಳೂರು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಇಳಿದ ರೆಹಮಾನ್ ಹಳೆ ಬಂದರಿನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುತ್ತಿದ್ದರು. ಅಷ್ಟರಲ್ಲಿ ಮುಬ್ಬು ಕತ್ತಲೆಯಾಗಿತ್ತು. ಹಳೆ ಬಂದರಿನ ಪೊಲೀಸ್ ಠಾಣೆಯ ಎದುರು ನಡೆದುಕೊಂಡು ಬರುತ್ತಿದ್ದಾಗ ಪೊಲೀಸನೊಬ್ಬ ರೆಹಮಾನ್ ರನ್ನು ಠಾಣೆಯ ಕಂಪೌಂಡ್ ಒಳಗೆ ಕರೆದ. ಕರೆದಿರುವುದು ಪೊಲೀಸ್ ಮತ್ತು ಅದು ಪೊಲೀಸ್ ಠಾಣೆ ಎಂದು ಅರಿವಾದ ರೆಹಮಾನ್ ಕಾಳೆದುಕೊಳ್ಳುತ್ತಾ ಪೊಲೀಸ್ ಠಾಣೆ ಹೊಕ್ಕಿದರು. ಪೊಲೀಸ್ ಸಿಬ್ಬಂದಿ “ನಿನ್ನ ಹೆಸರೇನು ?” ಎಂದು ಪ್ರಶ್ನಿಸಿದ. “ರೆಹಮಾನ್” ಎಂದು ಹಿಂದಿಯಲ್ಲಿ ಮರಳಿ ಉತ್ತರ ಬಂದಿತ್ತು. “ತುಮ್ ಕಂಹಾ ಸೇ ಆಯೀ ಹೋ  ?” ಮರಳಿ ಪ್ರಶ್ನೆ ಪೊಲೀಸನಿಂದ. “ಮಹಾರಾಷ್ಟ್ರಕೆ ರತ್ನಗಿರಿ ಸೆ” ಎಂದರು ರೆಹಮಾನ್. ಅಷ್ಟೆ. ನಂತರ ಈ 85 ವರ್ಷದ ಅಜ್ಜ ರೆಹಮಾನ್ ರನ್ನು ಥೇಟ್ ಭಯೋತ್ಪಾದಕರನ್ನು ವಿಚಾರಣೆಗೊಳಪಡಿಸುವ ರೀತಿಯಲ್ಲಿ ವಿಚಾರಣೆ ನಡೆಸಲಾಯಿತು.

ರೆಹಮಾನ್ ಗೆ ಪೊಲೀಸರ ಪ್ರಶ್ನೆಗಳು ಸರಳವಾಗಿದ್ದವು. “ಮಹಾರಾಷ್ಟ್ರದ ಮುಸ್ಲೀಮನಿಗೆ ಮಂಗಳೂರಿನಲ್ಲಿ ಏನು ಕೆಲಸ ? ಮಹಾರಾಷ್ಟ್ರದಲ್ಲಿpic- rehman ಮಸೀದಿ ಇಲ್ಲವೇ ? ಅಲ್ಲಿ ಉರೂಸು ನಡೆಯುವುದಿಲ್ಲವೇ? ನೀನು ರತ್ನಗಿರಿಯ ಮಸೀದಿ ಎದುರುಗಡೆ ನಿಂತು ಹಾಡಿದರೆ ಅಲ್ಲಿನ ಮುಸ್ಲೀಮರಿಗೆ ಕಿವಿ ಕೇಳುವುದಿಲ್ಲವೇ ? ನಿನಗೆ ಭಟ್ಕಳದಲ್ಲಿ ಯಾರ್ಯಾರು ಗೊತ್ತು ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂ ರೆಹಮಾನ್ ಉತ್ತರ ನೀಡಿದ್ದಾರೆ. ಮಧ್ಯೆ ಮಧ್ಯೆ ಅತ್ತಿದ್ದಾರೆ. ಇಷ್ಟಾದರೂ ಪೊಲೀಸರಿಗೆ ಅನುಮಾನಗಳು ಮುಗಿದಿಲ್ಲ. ರೆಹಮಾನ್ ಮೊಬೈಲನ್ನು ವಶಪಡಿಸಿಕೊಂಡ ಪೊಲೀಸರು ಮೊಬೈಲ್ ಸಿಮ್ ಕಾರ್ಡ್ ಅನ್ನು ಸಂಪೂರ್ಣ ಪರಿಶೀಲಿಸಿದರು. ರೆಹಮಾನ್ ವಿಳಾಸದ ದಾಖಲೆಗಳನ್ನು ಸಂಪೂರ್ಣ ದೃಡೀಕರಿಸಿದರು. 85 ವರ್ಷದ ಮುದುಕನೊಬ್ಬನನ್ನು ಈ ರೀತಿ ವಿಚಾರಣೆಗೆ ಒಳಪಡಿಸುವುದು ಅಮಾನವೀಯ ಎಂದೆಣಿಸಿದ್ದರೂ ಖಾಕಿ ತೊಟ್ಟುಕೊಂಡ ನಂತರ ಅವರಿಗಿದೆಲ್ಲಾ ಅನ್ವಯಿಸೋದಿಲ್ಲ ಎಂದುಕೊಳ್ಳೋಣಾ. ತನಿಖೆ ಎಲ್ಲಾ ಮುಗಿದ ನಂತರ ಬಿಟ್ಟು ಬಿಡುತ್ತಾರೆ ಎಂದು ರೆಹಮಾನ್ ಅಂದುಕೊಂಡಿದ್ದರಂತೆ. ಪೊಲೀಸ್ ಇನ್ಸ್ ಸ್ಪೆಕ್ಟರ್ ಬಂದ ನಂತರ ಬಿಡುಗಡೆ ಮಾಡಲಾಗುವುದು ಎಂದು ರೆಹಮಾನ್ ಗೆ ಪೊಲೀಸ್ ಸಿಬ್ಬಂದಿಯೊಬ್ಬ ಹೇಳಿದ್ದ. ಗಂಟೆ ರಾತ್ರಿ 11 ಆದರೂ ಪೊಲೀಸ್ ಇನ್ ಸ್ಪೆಕ್ಟರ್ ಠಾಣೆಗೆ ಬರಲೇ ಇಲ್ಲ. ಅಷ್ಟರಲ್ಲಿ ಬಂದ ಸಿಬ್ಬಂದಿಯೊಬ್ಬ ರೆಹಮಾನ್ ರನ್ನು ಲಾಕಪ್ಪಿನಲ್ಲಿ ಕೂರಲು ಹೇಳಿದ. ಸ್ನಾನವೂ ಇಲ್ಲ. ನಮಾಜೂ ಇಲ್ಲ. ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಅಲ್ಲಿದ್ದ ಅಷ್ಟೂ ಪೊಲೀಸ್ ಸಿಬ್ಬಂದಿಗಳ ಅಪ್ಪನ ಪ್ರಾಯದವರಾಗಿದ್ದ ರೆಹಮಾನ್ ರನ್ನು ಅಂಗಿ, ಪ್ಯಾಂಟು ಕಳಚಿ ಒಳ ಉಡುಪನ್ನು ಮಾತ್ರ ಧರಿಸಿ ಮಲಗುವಂತೆ ಹೇಳಲಾಗಿತ್ತು. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ದಿನ ! ನಾಲ್ಕನೇ ದಿನ ರೆಹಮಾನ್ ಮೇಲೆ “ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ” ಎಂಬ ಆರೋಪ ಹೊರಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ನ್ಯಾಯಾಧೀಶರು ರೆಹಮನ್ ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದರು. ರೆಹಮಾನ್ ರನ್ನು ಮಂಗಳೂರು ಸಬ್ ಜೈಲಿಗೆ ಹಾಕಲಾಯಿತು.

ಪೊಲೀಸರು ರೆಹಮಾನ್ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ ವ್ಯಕ್ತಿ” ಎಂದು ಕೇಸು ದಾಖಲಿಸಿದ್ದರು. ಈ ರೀತಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆತನ ಪರವಾಗಿ ವಾದಿಸಲು ವಕೀಲರಿದ್ದರೆ ಅಥವಾ ಜಾಮೀನು ನೀಡಲು ವ್ಯಕ್ತಿಗಳು ಸಿದ್ದರಿದ್ದರೆ ತಕ್ಷಣ ಜಾಮೀನು ದೊರೆಯುತ್ತದೆ. ಅಥವಾ ದಂಡ ಕಟ್ಟಿಯೂ ಬಿಡುಗಡೆ ಹೊಂದಬಹುದು. ಆದರೆ ಇವೆರಡೂ ರೆಹಮಾನ್ ಬಳಿ ತಕ್ಷಣಕ್ಕೆ ಲಭ್ಯ ಇರಲಿಲ್ಲ. ಜೈಲಿನಲ್ಲಿ ಕರಾವಳಿಯ ಊಟ ಸೇರದೆ, ಮತ್ತೊಂದೆಡೆ ವಯೋ ಸಹಜ ಕಾಯಿಲೆಗಳಿಂದ ನಿತ್ಯ ನರಳಾಡುತ್ತಿದ್ದ ರೆಹಮಾನ್ ಕತೆಯನ್ನು ನನ್ನನ್ನು ನಿತ್ಯ ಭೇಟಿಯಾಗುತ್ತಿದ್ದ ಡಿವೈಎಫ್ ಐ ಅಂದಿನ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಹೇಳಿದಾಗ, ಆತ ತಕ್ಷಣ ಕಾರ್ಯಪ್ರವೃತ್ತನಾಗಿ ರೆಹಮಾನ್ ಬಿಡುಗಡೆಗೆ ಪಯತ್ನ ನಡೆಸಿ ಯಶಸ್ವಿಯಾದ್ರು. 2013 ಫೆಬ್ರವರಿ 23 ರಂದು ಅಮಾಯಕ ರೆಹಮಾನ್ ಮಂಗಳೂರು ಜೈಲಿನಿಂದ ಬಿಡುಗಡೆಯಾದ್ರು.

ಇದಾಗಿ ಕೆಲವು ದಿನ ಕಳೆದಿರಬಹುದು. ಒಂದು ದಿನ ಬೆಳಿಗ್ಗೆದ್ದು ನೋಡುವಾಗ ಚಿಕ್ಕ ಹುಡುಗನೊಬ್ಬ ಜೈಲಿನಲ್ಲಿ ಬಟ್ಟೆ ಒಗೆಯುತ್ತಿದ್ದಾನೆ. ಇದ್ಯಾರ ಬಟ್ಟೆ ಎಂದು ಕೇಳಿದ್ರೆ, ಅವರದ್ದು ಎಂದು ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಕಡೆ ಕೈ ತೋರಿಸಿದ್ದ. ನಾನಿದ್ದ ಬ್ಲಾಕ್ ನಲ್ಲೇ ಭೂಗತ ಪಾತಕಿ ಎಂಬ ಆರೋಪ ಹೊತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿ ಇದ್ದರು. ನನ್ನನ್ನು ಬಹಳವಾಗಿ ಗೌರವಿಸುತ್ತಿದ್ದ ಮಾಡೂರ್ ಯೂಸೂಫ್ ಮತ್ತು ರಶೀದ್ ಮಲಬಾರಿಯ ಕೆಲಸದಿಂದ ಈ ಹುಡುಗನನ್ನು ಬೇರ್ಪಡಿಸುವುದು ನನಗೆ ಕಷ್ಟವಾಗಲಿಲ್ಲ. ಈ ಚಿಕ್ಕ ಹುಡುಗ ಇಬ್ರಾಹಿಂ ಜೈಲಿಗೆ ಯಾಕೆ ಬಂದಿದ್ದಾನೆ ಎಂಬುದು ಆತನಿಗೇ ಗೊತ್ತಿಲ್ಲ.

ಆತನ ಹೆಸರು ಇಬ್ರಾಹಿಂ. ನೋಡಲು ಹತ್ತು ವರ್ಷದವನಂತೆ ಕಾಣುವpic-mangalore jail ಆತನ ವಯಸ್ಸು 15.  ಬೆಳ್ತಂಗಡಿ ನಿವಾಸಿಯಾದ ಇಬ್ರಾಹಿಂನ ತಂದೆ ಖಾಯಿಲೆ ಬಿದ್ದು ಕಳೆದ ಎರಡು ವರ್ಷದಿಂದ ಹಾಸಿಗೆ ಪಾಲಾಗಿದ್ದಾರೆ. ತಾಯಿ ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಇಬ್ರಾಹಿಂಗೊಬ್ಬಳು ಸಣ್ಣ ತಂಗಿ ಇದ್ದಾಳೆ. ತಂಗಿ ಮತ್ತು ತಂದೆಯ ಜೊತೆಗೆ ನನ್ನನ್ನೂ ತಾಯಿ ಸಾಕಬೇಕು ಎಂಬುದು ಕಷ್ಟಕರ ಸಂಗತಿ ಎಂದು ತಿಳಿದುಕೊಂಡ ಇಬ್ರಾಹಿಂ ಶಾಲೆ ಬಿಟ್ಟು ಮಂಗಳೂರಿನ ಮೂಡುಶೆಡ್ಡೆ ಬಳಿ ಇರುವ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ. ಅಂದೂ ಶನಿವಾರ ಸಂಜೆ ಮನೆಗೆ ಬಂದು ರವಿವಾರ ರಾತ್ರಿ ಮನೆಯಿಂದ ವಾಪಸ್ಸು ಹೊರಟಿದ್ದ. ರಾತ್ರಿ 11 ಗಂಟೆಯಾಗಿದೆ. ನಾಳೆ ಬೆಳಿಗ್ಗೆ ಬೇಗನೆ ಫ್ಯಾಕ್ಟರಿಯಲ್ಲಿರಬೇಕಾದ್ದರಿಂದ ತಡ ರಾತ್ರಿ ಬರುವ ಸರಕಾರಿ ಬಸ್ಸೋ, ಟ್ಯಾಂಕರೋ ಹತ್ತಿ ಮಂಗಳೂರು ತಲುಪಬೇಕು ಎಂಬ ನಿರೀಕ್ಷೆಯಲ್ಲಿದ್ದ ಇಬ್ರಾಹಿಂ. ಅಷ್ಟರಲ್ಲಿ ಒರ್ವ ಪೊಲೀಸ್ ಬಂದು ಇಬ್ರಾಹಿಂ ನಲ್ಲಿ ಮಾತನಾಡಿದ್ದಾನೆ. ಹೆಸರು, ವಿಳಾಸ, ಬಸ್ ನಿಲ್ದಾಣದಲ್ಲಿ ನಿಂತಿರೋದಕ್ಕೆ ಕಾರಣ ಕೇಳಿದ್ದಾನೆ. ಎಲ್ಲದಕ್ಕೂ ಇಬ್ರಾಹಿಂ ಉತ್ತರಿಸಿದ್ದರೂ ಇಬ್ರಾಹಿಂನನ್ನು ಪೊಲೀಸ್ ಪೇದೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದೊಯ್ದ.

ಬೆಳ್ತಂಗಡಿ ಠಾಣೆಯಲ್ಲಿ ರಾತ್ರಿ ಪೂರ್ತಿ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ತನ್ನ ಮನೆಯ ಎಲ್ಲಾ ಪರಿಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದರೂ, ನಾಳೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯ ಬಗ್ಗೆ ಹೇಳಿಕೊಂಡರೂ ಇಬ್ರಾಹಿಂ ನನ್ನು ಪೊಲೀಸರು ಬಿಡುಗಡೆ ಮಾಡಲಿಲ್ಲ. ಅಂಗಿ ಕಳಚಿ ಲಾಕಪ್ಪಿನಲ್ಲಿ ಕೂರುವಂತೆ ಹೇಳಲಾಯಿತು. ರಾತ್ರಿ ಒಬ್ಬೊಬ್ಬರಾಗಿ ಬರೋ ಪೊಲೀಸ್ ಪೇದೆಗಳು ಪ್ರತ್ಯೇಕವಾಗಿ ಹೊಡೆದು ವಿಚಾರಣೆ ಮಾಡುತ್ತಿದ್ದರು. ರಾತ್ರಿ ಮೂರು ಗಂಟೆಯ ನಂತರ ಪೊಲೀಸರು ಇಬ್ರಾಹಿಂಗೆ ಮಲಗಲು ಹೇಳಿದ್ರು.  ಸೊಳ್ಳೆ ಕಚ್ಚಿಸಿಕೊಂಡು ಬೆಳಗ್ಗಿನವರೆಗೆ ನಿದ್ದೆ ಮಾಡದೆ ಕುಳಿತುಕೊಂಡೇ ಇದ್ದ ಇಬ್ರಾಹಿಂನನ್ನು ಮದ್ಯಾಹ್ನದ ವೇಳೆಗೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಇಬ್ರಾಹಿಂ ಮೇಲೆ ಕರ್ನಾಟಕ ಪೊಲೀಸ್ ಆ್ಯಕ್ಟ್ 96 ಪ್ರಕಾರ “ಅನುಮಾನಾಸ್ಪದ” ಕೇಸು ದಾಖಲಿಸಿದ್ದರು. ನ್ಯಾಯಾಧೀಶರು ಕನಿಷ್ಠ ಈತನ ಮುಖ ನೋಡಿ ವಯಸ್ಸನ್ನೂ ಕೇಳದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. 18 ವರ್ಷ ತುಂಬದ ಮಕ್ಕಳನ್ನು ಹಿಂದೆ ರಿಮಾಂಡ್ ಹೋಂ ಎಂದು ಕರೆಯಲ್ಪಡುತ್ತಿದ್ದ “ಮಕ್ಕಳ ಪರಿವೀಕ್ಷಣಾಲಯ”ದಲ್ಲಿ ಇರಿಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವೂ ನ್ಯಾಯಾಧೀಶರಿಗೆ ಇರಲಿಲ್ಲವೇ ಎಂಬುದು ಆಶ್ಚರ್ಯಕರ ವಿಷಯ.

ಅಂತೂ ಪೊಲೀಸರಿಗೆ 15 ರ ಹುಡುಗ, ಮುಸ್ಲಿಂ ಎಂಬ ಕಾರಣಕ್ಕೆ ಅನುಮಾನಾಸ್ಪದವಾಗಿ ಕಂಡು ಜೈಲು ಸೇರಿದ. ಪೊಲೀಸರಿಗೆ ಕ್ಲೀಯರ್ ಮಾಡಿಕೊಳ್ಳಲಾಗದ ಅನುಮಾನ ಈ ಹುಡುಗನಲ್ಲಿ ಏನು ಬಂತೋ ಗೊತ್ತಿಲ್ಲ. ನಾಲ್ಕೋ, ಐದೋ ಮರ್ಡರ್ ಮಾಡಿದ ವೃತ್ತಿಪರ ರೌಡಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರಿಗೆ ಡೌಟ್ ಬಂದು ವಿಚಾರಣೆ ನಡೆಸಿದಾಗಲೂ ಆತ ಬಾಯ್ಬಿಡದ ರೌಡಿಯಾಗಿದ್ದರೆ, “ಕೆಪಿ ಆ್ಯಕ್ಟ್ 96 ಪ್ರಕಾರ ಅನುಮಾನಾಸ್ಪದ ಕೇಸು” ದಾಖಲಿಸಿ ಜೈಲಿಗಟ್ಟುವುದು ಸರಿಯಾದ ಕ್ರಮ. ಈ ಬಾಲಕನ ಮೇಲೆ ಈ ಮೊದಲು ಯಾವ ಪ್ರಕರಣಗಳೂ ಇಲ್ಲ. ಈತನಿಗೆ ಪೊಲೀಸ್ ಠಾಣೆ, ಜೈಲು ಎಲ್ಲವೂ ಹೊಸತು. ವಕೀಲ ಯಾರು, ಜಡ್ಜ್ ಯಾರು ಎಂದೂ ತಿಳಿಯದೆ ಕರಿ ಕೋಟು ಹಾಕಿದ್ದವರನ್ನೆಲ್ಲಾ ಜಡ್ಜುಗಳು ಎಂದು ತಿಳಿದಿದ್ದ. ಅಂತದ್ದರಲ್ಲಿ ಈ ಹುಡುಗನ ಮೇಲೆ ಅನುಮಾನಗಳೇನಾದರೂ ಬಂದಿದ್ದರೆ ಆತನ ತಂದೆ ತಾಯಿಯನ್ನು ಕರೆಸಿ ವಿಚಾರಣೆ ಮಾಡಬಹುದಿತ್ತು. ಹುಡುಗನನ್ನು ಆತನ ಮನೆಗೆ ಕರೆದೊಯ್ದು ವಿಚಾರಣೆಯನ್ನು ಮಾಡಬಹುದಿತ್ತು. ಇಷ್ಟಕ್ಕೂ ತೃಪ್ತಿಯಾಗದಿದ್ದರೆ ಆತ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ವಿಚಾರಣೆ ನಡೆಸಿ ಪೊಲೀಸರ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಬಹುದಿತ್ತು. ಎಂತೆಂಥ ಭಯೋತ್ಪಾಧಕರನ್ನು ಲಾಠಿಯಿಂದ ಬಾಯಿ ಬಿಡಿಸುವ ಪೊಲೀಸರಿಗೆ ಯಕಶ್ಚಿತ್ ಹುಡುಗನೊಬ್ಬನಿಗೆ ರಾತ್ರಿ ಪೂರ್ತಿ ಹೊಡೆದರೂ ಬಾಯಿ ಬಿಡಿಸಲಾಗಲಿಲ್ಲ ಮತ್ತು ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಳ್ಳಲಾಗಿಲ್ಲ ಎಂದರೆ ಅರ್ಥ ಏನು ? ಮತ್ತೆ ಡಿವೈಎಫ್ ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳಗೆ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ದಂಡ ಕಟ್ಟಿ ಜೈಲಿನಿಂದ ಬಿಡುಗಡೆಯಾಗುವಂತೆ ಮಾಡಲಾಯ್ಮಾತು.  ನಂತರ ಇವರೆಡೂ ಪ್ರಕರಣಗಳನ್ನು ಇಟ್ಟುಕೊಂಡು ಅನುಮಾನಸ್ಪದ ಪ್ರಕರಣದ ಅಡಿಯಲ್ಲಿ ಅಮಾಯಕ ಮುಸ್ಲೀಮರನ್ನು ಬಂಧನ ಮಾಡುವ ಪೊಲೀಸರ ಬಗ್ಗೆ ಡಿವೈಎಫ್ ಐ ಪ್ರತಿಭಟನೆ ನಡೆಸಿತು. ಪೊಲೀಸ್ ಆಯುಕ್ತರ ಬಳಿ ನಿಯೋಗ ಕೊಂಡೊಯ್ದು ಎಚ್ಚರಿಕೆಯನ್ನು ನೀಡಿದ ಬಳಿಕ ಸ್ವಲ್ಪ ಸಮಯ ಕೆಪಿ ಅ್ಯಕ್ಟ್ 96 ಅಡಿಯಲ್ಲಿ ಅಮಾಯಕ ಮುಸ್ಲೀಮರು ಮಂಗಳೂರು ಜೈಲು ಸೇರುವುದು ಕಡಿಮೆಯಾಗಿತ್ತು.

ಭಯೋತ್ಪಾಧಕರಿಗೆ ಹವಾಲ ಹಣ ಹಂಚಿಕೆ ಮಾಡುತ್ತಿದ್ದಾಳೆ ಎಂದು ಮಹಿಳೆ ಮತ್ತು ಪುಟ್ಟ ಮಗುವನ್ನು ಪೊಲೀಸರು ಬಂಧಿಸಿದ್ದರು. ಕೇವಲ ಹಣಕಾಸಿನ ಅಪರಾಧವನ್ನು ಮುಸ್ಲಿಂ ಹೆಸರಿನ ಮಹಿಳೆ ಎಂಬ ಕಾರಣಕ್ಕಾಗಿ ಭಯೋತ್ಪಾಧನೆಯನ್ನು ತಳಕು ಹಾಕಲಾಗಿತ್ತು. ಆಕೆ ಭಯೋತ್ಪಾಧಕಿ ಅಲ್ಲ ಎಂದು ಮಂಗಳೂರಿನಂತಹ ಪ್ರದೇಶದಲ್ಲಿ ಸಾರುವಷ್ಟರ ಹೊತ್ತಿಗೆ ಡಿವೈಎಫ್ ಐ ಹೈರಾಣಾಗಿತ್ತು. ಇಂತಹ ನೂರಾರು ಪ್ರಕರಣಗಳು ನಮ್ಮ ಕಣ್ಣ ಮುಂದಿದೆ. ನೂರಾರು ಅಮಾಯಕ ಕೈದಿಗಳು ಜೈಲು ಸೇರಿದ್ದಾರೆ, ಇನ್ನೂ ಸೇರಲಿದ್ದಾರೆ.

ಪ್ರಶ್ನೆಯಿರುವುದು ಮಂಗಳೂರು ಪೊಲೀಸರು ಯಾಕೆ ಮುಸ್ಲೀಮರ ವಿಷಯದಲ್ಲಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ ಎಂಬುದರ ಬಗ್ಗೆ. ಯಾವ ಪ್ರಕರಣಗಳೂ ದಾಖಲಾಗದ ವೃದ್ದ ಮುಸ್ಲೀಮರನ್ನೋ, ಮುಸ್ಲೀಮ್ ಬಾಲಕರನ್ನೋ ಯಾಕೆ ಎತ್ತಾಕಿಕೊಂಡು ಬರುತ್ತಾರೆ ? ಮುಸ್ಲೀಮರನ್ನು ಕಂಡಾಗ ಪೊಲೀಸರಿಗೆ ಯಾಕೆ ಅನುಮಾನಗಳು ಬರುತ್ತದೆ ಎಂಬ ಹಿನ್ನಲೆಯನ್ನು ಇಟ್ಟುಕೊಂಡು, ಅಧ್ಯಯನ ನಡೆಸಿ, ಕೆಪಿ ಆ್ಯಕ್ಟ್ 96 ಬಳಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸರಕಾರವನ್ನು ಆಗ್ರಹಿಸಬೇಕಾಗಿದೆ. ದೇಶ ಕಟ್ಟಿದ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಜೈಲು ಸೇರುತ್ತಿದ್ದಾರೆ. ಈ ಪರಿಸ್ಥಿತಿಗೆ ಕಾರಣಗಳೇನು ಎಂಬುದರ ಬಗ್ಗೆ ಅನುಮಾನಿತ ಮತ್ತು ಅವಮಾನಿತ ಸಮುದಾಯಗಳ ವಿದ್ಯಾವಂತ, ಪ್ರಜ್ಞಾವಂತ ಪ್ರತಿನಿಧಿಗಳು ಮುಸ್ಲಿಂ ಯುವ ಸಮಾವೇಶದಲ್ಲಿ ಭಾಗಿಯಾಗಿ ಚರ್ಚಿಸಲಿದ್ದಾರೆ ಎಂಬ ನಿರೀಕ್ಷೆ ಎಲ್ಲರದ್ದೂ.