Category Archives: ನವೀನ್ ಸೂರಿಂಜೆ

ಮುಸ್ಲೀಮ್ ಯುವ ಸಮಾವೇಶ ಇಂದಿನ ತುರ್ತು ಅಗತ್ಯ

Naveen Soorinje


ನವೀನ್ ಸೂರಿಂಜೆ


 

ಕೋಮುವಾದದಿಂದ ಜರ್ಜರಿತವಾಗಿರುವ ಮಂಗಳೂರಿನಲ್ಲಿ ಡಿವೈಎಫ್ ಐ ಎಡ ಯುವ ಸಂಘಟನೆ ಮುಸ್ಲಿಂ ಯುವ ಸಮಾವೇಶdyfi-1 ಹಮ್ಮಿಕೊಂಡಿದೆ. ಈ ಸಮಾವೇಶದ ಬಗ್ಗೆ ಹಿರಿಯ ಚಿಂತಕರು ಪತ್ರಕರ್ತರು ಸೇರಿದಂತೆ ಹಲವರು ಪ್ರತಿಯಿಸಿದ್ದಾರೆ. ”ಕಮ್ಯೂನಿಷ್ಟರು ಮುಸ್ಲಿಂ ಸಮಾವೇಶ ಮಾಡುವುದು ಕುತೂಹಲಕರ. ಆದರೆ ಮುಂದೆ ಹಿಂದೂ ಸಮಾವೇಶ, ಕ್ರಿಶ್ಚಿಯನ್ ಸಮಾವೇಶಗಳನ್ನೂ ಮಾಡುವರೇ ಎನ್ನುವುದು ಪ್ರಶ್ನೆ. ಹಾಗೆ ಮಾಡುವುದಿದ್ದರೆ, ಅದರ ಬದಲು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ವಿರಾಟ್ ಸಮಾವೇಶ ಮಾಡುವುದು ಒಳ್ಳೆಯದಲ್ಲವೇ ?” ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಪ್ರಗತಿಪರ ಚಿಂತನೆಗಳು ಮತ್ತು ಗುಂಪುಗಳು ತಳ, ಹಿಂದುಳಿದ ಮತ್ತು ಶೋಷಿತ ವರ್ಗಗಳನ್ನು ಸಂಘಟಿಸುವುದು ಆಯಾ ಸಮುದಾಯಗಳ ಸಬಲೀಕರಣ ಮತ್ತು ಅವರನ್ನು ಶೋಷಕ ಶಕ್ತಿಗಳ ಪಿತೂರಿಯಿಂದ ರಕ್ಷಿಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿರುತ್ತದೆ. ಇಲ್ಲಿ ಶೋಷಿತ ಸಮುದಾಯಗಳ ಸಂಘಟನೆಗೆ ಎರಡು ಬಗೆಯ ಆಯಾಮಗಳಿವೆ. ಮೊದಲನೆಯದ್ದು ಅಂತಹ ವರ್ಗಗಳನ್ನು ಅವರು ಜೀವಿಸುತ್ತಿರುವ ಪ್ರತಿಕೂಲ ವಾತವರಣದಲ್ಲಿ ಯಜಮಾನ್ಯ ಮತ್ತು ಶೋಷಕ ಶಕ್ತಿಗಳ ದಾಳಿಯಿಂದ ರಕ್ಷಿಸುವುದು. ಎರಡನೆಯದ್ದು ಆಯಾ ಸಮುದಾಯದೊಳಗೇ ಇರತಕ್ಕಂತಹ ಅನಾಚಾರಗಳನ್ನು, ಅಸಮತೆಗಳನ್ನು ತೊಡೆದು ಹಾಕುವಂತಹ ಸುಧಾರಣಾವಾದಿ ಚಳುವಳಿಯನ್ನು ಮುನ್ನಡೆಸುವುದು.

ನಮ್ಮ ದೇಶ ಬಹುಸಂಖ್ಯಾತ ಪ್ರಭಾವಿ ಸಮಾಜೋ ರಾಜಕೀಯ ಚೌಕಟ್ಟನ್ನು ಹೊಂದಿದೆ. ಇಲ್ಲಿನ ಸಾರ್ವಜನಿಕ ಬದುಕಿನಲ್ಲಿ ಕೂಡಾ ಬಹುಸಂಖ್ಯಾಕ ಹಿಂದೂ ಕಟ್ಟಳೆಗಳು,RSS ಪರಂಪರೆಗಳು ಸಹಜವೆಂಬತೆ ಆಚರಿಸಲ್ಪಡುತ್ತವೆ. ರಾಜ್ಯದ ಪ್ರಾಯೋಜಕತ್ವದಲ್ಲೇ ಹಿಂದೂ ಹಬ್ಬ-ಮೇಳಗಳು ಇಲ್ಲಿಯ ನೆಲದ ಪರಂಪರೆ ಎಂಬ ನೆಪದಲ್ಲಿ ನಡೆಯುತ್ತವೆ. ಇವೆಲ್ಲದರ ಜೊತೆಗೆ ದೇಶದಲ್ಲಿ ಪ್ರತಿಗಾಮಿ ಹಿಂದೂ ಸಾಂಸ್ಕೃತಿಕ ಯಾಜಮಾನ್ಯವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ; ಜೀವನದ ಪ್ರತೀ ಕ್ಷೇತ್ರವನ್ನೂ ವ್ಯಾಪಿಸುತ್ತಿದೆ. ಸಾರ್ವಜನಿಕ ಬದುಕನ್ನು ಪೂರ್ತಿಯಾಗಿ ಹಿಂದೂವನ್ನಾಗಿಸುವ ಪ್ರಯತ್ನದಲ್ಲಿ ಅದು ನಿರತವಾಗಿದೆ. ಆಹಾರದಂತಹ ತೀರಾ ಖಾಸಾಗಿ ವಿಷಯದಲ್ಲೂ ತನ್ನ ನಿಯಂತ್ರಣವನ್ನು ಸಾಧಿಸಲು ಹೊರಟಿದೆ.

ಇಂತಹ ಬಹುಸಂಖ್ಯಾತ ನಿಷ್ಠ ವಾತಾವರಣದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಅಸ್ತಿತ್ವಕ್ಕೆ ಹಲವು ಆತಂಕಗಳು ಎದುರಾಗುತ್ತವೆ. ಭಾರತದ ಪ್ರಧಾನ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲೀಮರು ಅಂತಹ ಹತ್ತು ಹಲವು ಆತಂಕಗಳನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಎದುರಿಸುತ್ತಿದ್ದಾರೆ. ಸದ್ಯದ ಹಿಂದುತ್ವವಾದಿ ಶಕ್ತಿಗಳ ಆಡಳಿತದಲ್ಲಿ ಅವರ ಅಸ್ತಿತ್ವವೇ ಪ್ರಶ್ನೆಯಲ್ಲಿದೆ. ಮುಸ್ಲೀಮ್ ಕ್ರೈಸ್ತ ಮೊದಲಾದ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕನ್ನು ಕಸಿದುಕೊಳ್ಳುವ, ಮೊಟುಕುಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಇಂತಹ ವಿಷಮ ಸನ್ನಿವೇಶದಲ್ಲಿ ಮುಸ್ಲೀಮ್ ಸಮುದಾಯವನ್ನು ಸಂಘಟಿಸುವುದು ಅವರನ್ನು ಹಿಂದುತ್ವವಾದಿ ಶಕ್ತಿಗಳ ದಾಳಿಯಿಂದ ಕಾಪಾಡುವ ಹಾಗೂ ಅವರ ಸಂವಿಧಾನಬದ್ಧ ಹಕ್ಕುಗಳನ್ನು ಪ್ರತಿಷ್ಠಾಪಿಸುವ ದೃಷ್ಟಿಯಿಂದ ಅತ್ಯಗತ್ಯ. ಸಂಘಟನೆಯು ಶೋಷಿತ ಸಮುದಾಯಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅಂತಹ ಸಂಘಟನಾತ್ಮಕ ಹೋರಾಟಗಳು ಪ್ರತಿಕೂಲ ಪರಿಸರದಲ್ಲೂ ಘನತೆಯಿಂದ ಬದುಕುವ ಹಕ್ಕನ್ನು ಅವರಿಗೆ ದಕ್ಕಿಸಿಕೊಡುತ್ತವೆ.

ಇಲ್ಲಿ ಇನ್ನೊಂದು ವಿಚಾರ ಬಹಳ ಮುಖ್ಯ. ಮುಸ್ಲೀಮರ ಪರವಾದ ಹೋರಾಟ ಮತ್ತು ಮುಸ್ಲೀಮರನ್ನು ಒಳಗೊಳ್ಳುವುದು ಎಂದರೆ ಮುಸ್ಲಿಂ ಮೂಲಭೂತವಾದಿmuslims460 ಮತ್ತು ಕೋಮುವಾದಿ ಸಂಘಟನೆಗಳನ್ನು ತಮ್ಮ ಹೋರಾಟದ ಸಹಭಾಗಿಯನ್ನಾಗಿಸುವುದಲ್ಲ. ಅಂತಹ ತಪ್ಪನ್ನು ನಮ್ಮ ಹಲವು ಪ್ರಗತಿಪರ ಸಂಘಟನೆಗಳು ಮಾಡುತ್ತಿವೆ. ಮೂಲಭೂತವಾದೀ ಸಂಘಟನೆಗಳ ಸಾಹಚರ್ಯ ಆಯಾ ಸಮುದಾಯದೊಳಗೇ ಸುಧಾರಣೆಗಳನ್ನು ತರುವ ಪ್ರಯತ್ನಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತವೆ. ಹಿಂದೂಗಳೆಂದರೆ ಭಜರಂಗದಳ, ವಿ.ಎಚ್.ಪಿ, ಆರ್.ಎಸ್.ಎಸ್ ಹೇಗೆ ಅಲ್ಲವೋ, ಮುಸ್ಲೀಮರೆಂದರೆ ಮುಸ್ಲಿಂ ಕೋಮುವಾದಿ ಸಂಘಟನೆಗಳಲ್ಲ ಎಂಬುದು ಇನ್ನೂ ಕೂಡಾ ಕೆಲ ಎಡ ಚಿಂತಕರಿಗೆ ಮನದಟ್ಟಾಗಿಲ್ಲ. ಒಂದೆಡೆ ಹಿಂದೂ ಕೋಮುವಾದದ ಭೀಕರತೆ, ಮತ್ತೊಂದೆಡೆ ಅದಕ್ಕೆ ಪರ್ಯಾಯವಾಗಿ ಬೆಳೆಯುತ್ತಿರುವ ಮುಸ್ಲಿಂ ಕೋಮುವಾದ ತಂದೊಡ್ಡಿರುವ ಆತಂಕಗಳು; ಇವೆರಡರ ಮಧ್ಯೆ ಹಿಂದೂ ಕೋಮುವಾದದ ಅತಿರೇಕವನ್ನು ಮುಸ್ಲಿಂ ಮೂಲಭೂತವಾದಿ-ಕೋಮುವಾದಿಗಳ ವೇದಿಕೆಯಲ್ಲಿ ನಿಂತು ಖಂಡಿಸಿ ಮಾತನಾಡುವ ಎಡಚಿಂತಕರು. ಇಂತಹ ವಿಪರ್ಯಾಸಗಳ ಮಧ್ಯೆ ಮಂಗಳೂರಿನಲ್ಲಿ ಡಿವೈಎಫ್ಐ ”ಮುಸ್ಲಿಂ ಯುವ ಸಮಾವೇಶ” ಹಮ್ಮಿಕೊಂಡಿರುವಂತದ್ದು ಸರಿಯಾದ ನಡೆಯೇ ಆಗಿದೆ.

ಹಿಂದೂ ಸಂಘಟನೆಗಳ ಕೋಮುವಾದದ ಅತಿರೇಕಗಳನ್ನು ಮುಸ್ಲಿಂ ಯುವ ಜನರ ಮುಂದಿಟ್ಟು ಮುಸ್ಲಿಂ ಮತಾಂಧ ಸಂಘಟನೆಗಳನ್ನು ಬೆಳೆಸಲಾಗುತ್ತಿದೆ. ಈ ಮತಾಂಧ ಸಂಘಟನೆಗಳಲ್ಲಿ ಇರುವ ಕೆಲ ಯುವಕರ ಕುಕೃತ್ಯದಿಂದಾಗಿ ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡಲಾಗುತ್ತಿದೆ. ಈ ಅನುಮಾನದ ಭಾಗವಾಗಿಯೇ ಪೊಲೀಸ್ ದೌರ್ಜನ್ಯಗಳು, ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳು ನಡೆಯುತ್ತಿದೆ. ಈ ರೀತಿ ಮುಸ್ಲಿಮರ ಹಕ್ಕುಗಳ ಮೇಲೆ ದಾಳಿಯಾದ ಸಂದರ್ಭದಲ್ಲಿ ಮುಸ್ಲಿಂ ಯುವ ಸಮುದಾಯದ ಹೋರಾಟದ ದಾರಿ ಯಾವುದಿರಬೇಕು ಎಂದು ಚಿಂತಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮಾವೇಶಗಳ ಅಗತ್ಯ ಇದೆ.

ಮುಸ್ಲಿಂ ಸಮಾವೇಶ ಮಾತ್ರವಲ್ಲದೆ ಹಿಂದೂ ಸಮಾವೇಶವನ್ನು ಎಡಪಂಥೀಯರು ಆಯೋಜಿಸುತ್ತಾರೆಯೇ ಎಂದು ಹಿರಿಯ ಪತ್ರಕರ್ತ ಬಿ ಎಂ ಹನೀಫ್ ಪ್ರಶ್ನಿಸುತ್ತಾರೆ. narayana-guruಹಿಂದೂ ಎಂಬುದು ಶೋಷಿತರನ್ನು, ದಲಿತರನ್ನು ಪ್ರತಿನಿಧಿಸುವುದಿಲ್ಲ. ಹಿಂದೂ ಸಾಮಾಜಿಕ ಸಂರಚನೆಯಲ್ಲಿ, ಚಲನೆಯಲ್ಲಿ ಹಿಂದುಳಿದ ವರ್ಗಗಳು ಬಳಕೆಯಾಗುತ್ತಿರುವುದು ಕೇವಲ ಮೇಲ್ವರ್ಗದ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವ ಪಿತೂರಿಯಲ್ಲಿ ಕಾಲಾಳುಗಳಾಗಿಯಷ್ಟೇ. ಕರಾವಳಿಯ ಸಂದರ್ಭದಲ್ಲಿ ಹೇಳುವುದಾದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಕಪಿಮುಷ್ಟಿಯಿಂದ ತಳವರ್ಗಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಜೀವಪರ ಪ್ರಗತಿಪರ ಸಮುದಾಯಗಳು ದಲಿತರು, ಬಿಲ್ಲವರು, ಮೊಗವೀರರು, ಕುಲಾಲರು, ಕೊರಗರು, ಆದಿವಾಸಿಗಳ ಪ್ರತ್ಯೇಕ ಪ್ರತ್ಯೇಕ ಸಮಾವೇಶಗಳನ್ನು ಮಾಡಬೇಕಿದೆ. ನಾರಾಯಣ ಗುರು, ಕೋಡ್ದಬ್ಬು, ತನ್ನಿಮಾನಿಗ, ಸಿರಿಯನ್ನು ಮುಂದಿಟ್ಟುಕೊಂಡು ಹಿಂದುಳಿದ ವರ್ಗಗಳ ಸ್ಥಾನಮಾನ, ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿದೆ. ಹಿಂದುಳಿದ ಸಮುದಾಯಗಳ ಯುವಕರು ಹೇಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಅವರಿಗೆ ತಿಳಿ ಹೇಳಬೇಕಾಗಿದೆ. ಕರಾವಳಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಸಂಘಟಿಸಲು ಹೊರಟ ಎಡಪಂಥೀಯರು, ಅವಿಭಜಿತ ಜಿಲ್ಲೆಯಲ್ಲಿ ಅದರಷ್ಟೇ ಅನಿವಾರ್ಯತೆ ಇರುವ, ಹಿಂದುಳಿದ ಜಾತಿಗಳನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗುತ್ತಾರೆಯೇ ಎಂಬುವುದು ಸದ್ಯದ ಪ್ರಶ್ನೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್.ಎಸ್.ಎಸ್ ಮತ್ತು ಹಿಂದುತ್ವಕ್ಕೆ ನಾರಾಯಣ ಗುರುಗಳ ಸುಧಾರಣಾವಾದಿ ಚಳುವಳಿಗಿಂತ ಬೇರೆ ಉತ್ತರವೇ ಬೇಕಿಲ್ಲ. ನಾರಾಯಣ ಗುರುಗಳ ಐಡಿಯಾಲಜಿಯ ಆಧಾರದಲ್ಲಿ ಬಿಲ್ಲವರು ಮತ್ತು ಇತರೆ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿದಲ್ಲಿ ಕರಾವಳಿಯ ಕೋಮುವಾದಿ ವಾತಾವರಣದಲ್ಲೂ ಹಲವು ಪೂರಕ ಬೆಳವಣಿಗೆಗಳು ಕಂಡುಬರುತ್ತವೆ. ಯಾಕೆಂದರೆ ಆರ್.ಎಸ್.ಎಸ್.ನ ಹಿಂದುತ್ವವಾದಿ ವ್ಯವಸ್ಥೆಯ ಅನುಷ್ಠಾನಕ್ಕೆ ಕಾಲಾಳುಗಳಾಗಿ ಬಳಕೆಯಾಗುತ್ತಿರುವುದು ಇದೇ ಬಿಲ್ಲವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಸೇರಿದ ಬಡ ಯುವಕರು. ಅವರನ್ನು ಸಂಘಟಿಸುವ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಕಾರ್ಯವನ್ನು ಎಡಪಕ್ಷಗಳು ಮಾಡಬೇಕಾಗಿದೆ. ಮತ್ತೊಂದೆಡೆ ಆರ್.ಎಸ್.ಎಸ್ ಗೆ ಆರ್.ಎಸ್.ಎಸ್ ಮಾದರಿಯಲ್ಲೇ ಪ್ರತಿಕ್ರೀಯೆ ನೀಡುತ್ತಿರುವ ಮುಸ್ಲಿಂ ಮತಾಂಧ ಸಂಘಟನೆಗಳಿಗೆ ಅನಕ್ಷರಸ್ಥ ಬಡ ಮುಸ್ಲೀಮರು ಕಾಲಾಳುಗಳಾಗುವುದನ್ನು ತಪ್ಪಿಸಿದಲ್ಲಿ ಮುಸ್ಲಿಂ ಯುವಕರು ಜೈಲು ಸೇರುವುದನ್ನೂ, ಸಾಯುವುದನ್ನೂ ತಪ್ಪಿಸಬಹುದಾಗಿದೆ. ಆರ್.ಎಸ್.ಎಸ್ ಕೋಮುವಾದಕ್ಕೆ ಇಸ್ಲಾಂ ಕೋಮುವಾದದ ಮೂಲಕ ಉತ್ತರ ಕೊಡದೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಕ್ರೀಯೆ ನೀಡುವ ನಿಟ್ಟಿನಲ್ಲಿ ಮುಸ್ಲಿಂ ಯುವ ಸಮಾವೇಶಗಳನ್ನು ಆಯೋಜಿಸಲು ಎಡ ಯುವ ಸಂಘಟನೆಗಳು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

 

 

ನಟ ನಟಿಯರ ವಿವಾದಗಳು ಮತ್ತು ಮಾಧ್ಯಮ

Naveen Soorinje


ನವೀನ್ ಸೂರಿಂಜೆ


 

“ಪತ್ರಕರ್ತರ ಕತೆ ಹೇಗಿದೆ ಅಂದ್ರೆ, ಕಾವೇರಿ ವಿಷಯದಲ್ಲಿ ತುಟಿ ಬಿಚ್ಚದೇ ಇದ್ದ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿದ ತಕ್ಷಣ ಸುಮ್ನೆ ಬಿಟ್ಟು ಕಳ್ಸಿದ್ರಿ. ಅದೇ ಸಂಬಂಧವೇ ಪಡದ ಪ್ರಕಾಶ್ ರೈಗೆ ತರಾಟೆಗೆ ತಗೋತೀರಿ. ರಮ್ಯಾ ಪಾಕ್ ನಲ್ಲೂ ಒಳ್ಳೆಯವರಿದ್ದಾರೆ ಎಂದಿದ್ದಕ್ಕೆ ನೇಣಿಗೆ ಹಾಕಿದ್ರಿ. ನೀವು ಒಂದೋ ಜಾತಿ ಕಾರಣಕ್ಕೆ ಬೆನ್ನು ಬೀಳ್ತೀರಿ. ಅಥವಾ ಹೆಣ್ಣು ಅನ್ನೋ ಕಾರಣಕ್ಕೆ ಅಟ್ಟಾಡಿಸ್ತೀರಿ” ಎಂದು ಫೋನ್ ಮಾಡಿ ಬೈದ್ರು ಪ್ರಕಾಶಕರೂ ಆಗಿರುವ ಕವಿ ಅಕ್ಷತಾ ಹುಂಚದಕಟ್ಟೆ. ಅಕ್ಷತಾ ಅವರು ಹೇಳಿದ ಅಷ್ಟೂ ಮಾತುಗಳು ನಿಜ. ಆದರೆ ಅದಷ್ಟೇ ಸತ್ಯವಲ್ಲ. ಅಂಬರೀಷ್ ರನ್ನು ಬಚಾವ್ ಮಾಡುವ, ರಮ್ಯಾರನ್ನು ಬಲಿಪಶು ಮಾಡುವ, ಪ್ರಕಾಶ್ ರೈ ಕಾಂಟ್ರವರ್ಸಿ ಒಂದೇ ಚಾನೆಲ್ಲಿಗೆ ಸೀಮಿತವಾಗಿರೋ ಕಾರಣದ ಹಿಂದೆ ಆರ್ಥಿಕ ಕಾರಣಗಳೂ ಇವೆ.

ಹೌದು. ಸಿನೇಮಾ, ರಾಜಕೀಯ, ಮಾಧ್ಯಮದಲ್ಲಿರುವಷ್ಟು ಜಾತಿಗಳ ಜೊತೆಗಿನ ಕೊಂಡಿ ಬಹುಷಃ ಬೇರಾವ ಕ್ಷೇತ್ರದಲ್ಲೂ ಇರಲಿಕ್ಕಿಲ್ಲವೇನೋ?

ಅದರಲಿ. ಮಾಧ್ಯಮದಲ್ಲಿ ಸಿನೇಮಾ ಮಂದಿಯನ್ನು ನಿಜಜೀವನದಲ್ಲೂ ಹೀರೋ ಮಾಡುವುದು, ನಿರ್ಲಕ್ಷ್ಯ ಮಾಡುವುದು ಕೇವಲ ಜಾತಿ ಕಾರಣಕ್ಕಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣವೂ ಕೆಲಸ ಮಾಡುತ್ತೆ.

ಈಗ ಅಂಬರೀಷ್ ವಿಚಾರವನ್ನೇ ತಗೊಳ್ಳಿ. ಕಾವೇರಿ ವಿವಾದ ಪ್ರಾರಂಭಕ್ಕೂ ಮುನ್ನವೇ ಅಂಬರೀಷ್ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅಮೇರಿಕಾ ತೆರಳಿದ್ದರು. ಅಲ್ಲಿಂದಲೇ ಚಿಕಿತ್ಸೆ ಪಡೆದು ವಾಪಸ್ ಬರುವಷ್ಟರಲ್ಲಿ ಇಲ್ಲಿ ಕಾವೇರಿ ವಿಷಯ ಕಾವೇರಿತ್ತು. ಸರ್ವಪಕ್ಷ ಸಭೆ, ವಿಶೇಷ ಅಧಿವೇಶನಕ್ಕೆ ಬಂದಿಲ್ಲ. ಕನಿಷ್ಠ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದು ರೈತರು ಪ್ರತಿಭಟಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಬಂದ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿ ಜನರ ಕ್ಷಮೆ ಕೇಳಿದ್ರು. ಮಾಧ್ಯಮಗಳು ಅಷ್ಟಕ್ಕೆ ಸುಮ್ಮನಾದ್ವು.

ಹಾಗಂತ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿ ಕ್ಷಮೆ ಕೇಳಿದ್ದು ಮಾಧ್ಯಮಗಳ ಹೆದರಿಕೆಯಿಂದ ಅಲ್ಲ. ಮಾದ್ಯಮಗಳ ಸಲಹೆಯಿಂದ. ಅಂಬರೀಷ್prakash ಅಭಿನಯದ ‘ದೊಡ್ಮನೆ ಹುಡುಗ’ ಸಿನೇಮಾ ರಿಲೀಸ್ ಆಗೋದಿತ್ತು. ಸಿನೇಮಾ ಪ್ರಮೋಶನ್ ಗಾಗಿ ಮಾಧ್ಯಮಗಳಿಗೆ ಲಕ್ಷಗಟ್ಟಲೆ ಸುರಿಯಲಾಗಿತ್ತು. ಅಷ್ಟರಲ್ಲಿ ಮಂಡ್ಯ ರೈತರು ದೊಡ್ಮನೆ ಹುಡುಗ ಸಿನೇಮಾದ ಬ್ಯಾನರ್ ನಲ್ಲಿ ಹಾಕಲಾಗಿದ್ದ ಅಂಬರೀಷ್ ಚಿತ್ರವನ್ನು ಹರಿಯಲಾರಂಬಿಸಿದ್ರು. ದೊಡ್ಮನೆ ಚಿತ್ರದ ಪ್ರಚಾರಕ್ಕಾಗಿ ಹಣ ಪಡೆದುಕೊಂಡರೂ ರೈತರ ಹೋರಾಟ ಈ ಸಂಧರ್ಭದಲ್ಲಿ ಮುಚ್ಚಿ ಹಾಕುವಂತಿರಲಿಲ್ಲ. ಅದಕ್ಕಾಗಿ ಪತ್ರಕರ್ತರನೇಕರ ಆತ್ಮೀಯ ಸಲಹೆಯಂತೆ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿದ್ರು. ಪತ್ರಕರ್ತರು ಮತ್ತೆಂದೂ ಅವರ ರಾಜೀನಾಮೆ ಕೇಳಲಿಲ್ಲ. ರಾಜೀನಾಮೆಗೆ ಆಗ್ರಹಿಸುವಂತೆ ರೈತರನ್ನು ಪ್ರಚೋದಿಸಲಿಲ್ಲ. ಅಲ್ಲಿ ಜಾತಿ ಕಾರಣದ ಜೊತೆ ಜೊತೆಗೇ ಬಲವಾಗಿ ಹೆಜ್ಜೆ ಹಾಕಿದ್ದು ಆರ್ಥಿಕ ಕಾರಣ.

ರಮ್ಯಾ ವಿಚಾರವೂ ಇದಕ್ಕಿಂತ ಹೊರತಲ್ಲ. ಪಾಕಿಸ್ತಾನದಲ್ಲಿ ನಮ್ಮ ನಿಮ್ಮಂತೆಯೇ ಒಳ್ಳೆಯ ಜನರಿದ್ದಾರೆ. ಸ್ವರ್ಗ ನರಕ ಅಲ್ಲೂ ಇದೆ ಇಲ್ಲೂ ಇದೆ ಎಂದು ಹೇಳಿಕೆ ಕೊಟ್ಟಿದ್ದನ್ನು ಮಾದ್ಯಮಗಳು ಹಿಂದುತ್ವ ಅವಾಹಿಸಿಕೊಂಡು ಸುದ್ದಿ ಮಾಡಿದ್ದವು. ಕೆಲವು ಟಿವಿ ಚಾನೆಲ್ ಗಳಂತೂ ರಮ್ಯಾಗೆ ಪಾಕ್ ನಲ್ಲಿ ಸ್ವರ್ಗ ತೋರಿಸಿದವರು ಯಾರು ? ಎಂದು ಕೀಳಾಗಿ ಪ್ರಶ್ನಿಸಿದ್ರು. ರಮ್ಯಾ ಜಾತಿಯಲ್ಲಿ ಒಕ್ಕಲಿಗರಾದರೂ ಆಕೆ ಮಹಿಳೆ ಎಂಬ ಕಾರಣಕ್ಕೆ ಹೀಗೆ ಬೆನ್ನುಬಿದ್ದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಮಹಿಳೆಯೊಬ್ಬಳು ಇಷ್ಟು ನಿಷ್ಠುರವಾಗಿ ಮಾತಾಡುವುದನ್ನು ಒಂದು ವೇಳೆ ಸಮಾಜ ಸಹಿಸಿದ್ರೂ ಕನ್ನಡ ಮಾಧ್ಯಮಗಳು ಸಹಿಸುವಷ್ಟು ಪ್ರಬುದ್ದತೆಯನ್ನು ಬೆಳೆಸಿಕೊಂಡಿಲ್ಲ.

ಅದಿರಲಿ, ರಮ್ಯಾ ಇದೇ ಹೇಳಿಕೆ ಕೊಡುವಾಗ ರಮ್ಯಾ ಬಳಿ ಹೈ ಬಜೆಟ್ಟಿನ ಸಿನೀಮಾ ಒಂದಿದ್ದರೆ ಮಾದ್ಯಮಗಳ ವರ್ತನೆ ಹೇಗಿರುತ್ತಿತ್ತು? ಆ ಸಿನೇಮಾ ಪ್ರಮೋಶನ್ ಗುತ್ತಿಗೆ ಪಡೆದುಕೊಂಡವನ ಹಣ ದಿಕ್ಕರಿಸಿ ರಾಷ್ಟ್ರಪ್ರೇಮ ಮೆರೆಯುತ್ತಿದ್ದವಾ ? ಖಂಡಿತ ಇಲ್ಲ. ದರ್ಶನ್ ತನ್ನ ಹೆಂಡತಿಗೆ ಹೊಡೆದಾಗ ಎಕ್ಸ್ ಕ್ಲೂಸಿವ್ ನ್ಯೂಸ್ ಹಾಕುತ್ತಿದ್ದ ಚಾನೆಲ್ ಗಳು ನಿರ್ಮಾಪಕ ಕಡೆಯಿಂದ ಫೋನ್ ಬಂದ ತಕ್ಷಣ ಮೌನ ವಹಿಸಿದ ಉದಾಹರಣೆ ನಮ್ಮ ಮುಂದಿದೆ. ಶಾರುಕ್ ಖಾನ್ ಅಸಹಿಷ್ಣುತೆ ವಿವಾದವು ತಾರಕಕ್ಕೇರಲು ಮಾದ್ಯಮಗಳನ್ನು ಜಾಹೀರಾತು ಕಂಪನಿಗಳು, ಸಿನೇಮಾ ಪ್ರಮೋಶನ್ ಕಂಪನಿಗಳು ಬಿಡಲಿಲ್ಲ. ಕೈಯ್ಯಲ್ಲಿ ಜಾಹೀರಾತು ಇಲ್ಲದ, ಸಿನೇಮಾ ಇಲ್ಲದ ಶಾರೂಕ್ ಖಾನ್ ಅಸಹಿಷ್ಣುತೆಯ ಹೇಳಿಕೆ ನೀಡಿದ್ದರೆ ಮಾದ್ಯಮಗಳು ಆತನನ್ನು ಗಡಿಪಾರು ಮಾಡದೆ ಬಿಡುತ್ತಿರಲಿಲ್ಲವೇನೋ?

ಈಗ ಪ್ರಕಾಶ ರೈ ರಾಮಾಯಣದ ಮೂಲ ವಿಚಾರಕ್ಕೆ ಬರೋಣಾ. ಇದೊಳ್ಳೆ ರಾಮಾಯಣ ಎಂಬ ಚಿತ್ರದ ಪ್ರಮೋಶನ್ ಕಂಪನಿ ಆಹ್ವಾನದ ಮೇರೆಗೆ ಹೆಚ್ಚಿನ ಎಲ್ಲಾ ಚಾನೆಲ್ ಗಳು ಪ್ರಕಾಶ್ ರೈ ಸಂದರ್ಶನ ಮಾಡಿದ್ದವು. ಪ್ರಮೋಶನ್ ಕಂಪನಿಯಿಂದ ಚಾನೆಲ್ ಗಳಿಗೆ ಸಲ್ಲಿಕೆಯಾಗಿರೋ ಹಣಕ್ಕನುಗುಣವಾಗಿ ಅರ್ಧ ಗಂಟೆ, ಒಂದು ಗಂಟೆ ವಿಶೇಷ ಕಾರ್ಯಕ್ರಮ, ಸಂದರ್ಶನ ನಡೆಸುತ್ತಿದ್ದವು. ನಿಜ ಹೇಳಬೇಕೆಂದರೆ, ಲೋಗೋ ಬಳಸದೆ ಲ್ಯಾಪಲ್ ಹಾಕಿ ಇಂಟರ್ ವ್ಯೂ ಮಾಡುವುದರಿಂದ ಪ್ರಕಾಶ್ ರೈಗೆ ಯಾವ ಚಾನೆಲ್ ಗೆ ಸಂದರ್ಶನ ಕೊಡುತ್ತಿದ್ದೇನೆ ಎಂಬ ಅರಿವೂ ಇರುವುದಿಲ್ಲ!

ಜನಶ್ರಿ ಚಾನೆಲ್ ಅ್ಯಂಕರ್ ಕೇಳಬಾರದ್ದೇನೂ ಕೇಳಿರಲಿಲ್ಲ. ಇದೊಳ್ಳೆ ರಾಮಾಯಣ ಎಂಬ ಟೈಟಲ್ ನಂತೆಯೇ ಕಾವೇರಿ ಸಮಸ್ಯೆ ಇದೊಳ್ಳೆ ರಾಮಾಯಣ ಆಗಿದೆ.kannada-news-channels ಕಾವೇರಿ ಜಲವಿವಾದ ಕುರಿತು ನಿಮ್ಮ ಅಭಿಪ್ರಾಯ ಏನು? ಎಂದು ಕೇಳಿದ್ರು. ತನ್ನ ಸಿನೇಮಾದ ಬಗೆಗಿನ ಪೇಯ್ಡ್ ಕಾರ್ಯಕ್ರಮದಲ್ಲಿ ಈ ಅಂಶ ಬೇಡ ಎಂದರೆ ಅದನ್ನು ಸಂಸ್ಥೆಗೆ ಮನವಿ ಮಾಡಿದರಾಯ್ತು. ಕಾವೇರಿ ವಿಚಾರವಾಗಿ ಕನ್ನಡದ ನಟ ನಟಿಯರು ಬೀದಿಗಿಳಿದಿದ್ದ ಮಾಹಿತಿ ಹೊಂದಿದ್ದ ಅ್ಯಂಕರ್ ಅಮಾಯಕರಾಗಿ ಈ ಪ್ರಶ್ನೆ ಕೇಳಿದ್ದಿರಬಹುದು. ಪ್ರಶ್ನೆ ಬೇಡ ಎಂದರೆ ಅದನ್ನಷ್ಟೇ ಕಟ್ ಮಾಡಿ ಮುಂದಿನ ಪ್ರಶ್ನೆಗೆ ಹೋಗಬಹುದಿತ್ತು. ಆದರೆ ಪ್ರಕಾಶ್ ರೈ ಹಾಗೆ ಮಾಡಲಿಲ್ಲ. ಲ್ಯಾಪಲ್ ಮೈಕ್ ಕಿತ್ತೆಸೆದು “ಏನ್ರೀ, ನಿಮಗೆ ಕಾಂಟ್ರವರ್ಸಿ ಬೇಕಾ? ನಿಮ್ಮ ಬಗೆಗಿನ ಕಾಂಟ್ರವರ್ಸಿ ಹೇಳಬೇಕಾ” ಎಂದು ಸಿನೇಮಾ ವಾಯ್ಸ್ ತಂದುಕೊಂಡು ಬೊಬ್ಬೆ ಹಾಕಿದ್ರು. ಉದ್ದೇಶಪೂರ್ವಕವಾಗಿ ಕೇಳಿಲ್ಲ ಸರ್ ಎಂದು ಅ್ಯಂಕರ್ ಪದೇ ಪದೇ ಹೇಳಿದ್ರೂ ಕೇಳದಿದ್ದಾಗ ಕೊನೆಗೆ ಜವಾಬ್ದಾರಿಯುತ ವ್ಯಕ್ತಿ ಬಳಿ ಕೇಳಿದ್ದೀನಿ ಅಷ್ಟೆ ಅಂದುಕೊಂಡು ಅ್ಯಂಕರ್ ಹೊರನಡೆದ್ರು.

ಈ ವಿಡಿಯೋ ವೈರಲ್ ಆದ್ರೂ ಜನಶ್ರೀ ಹೊರತುಪಡಿಸಿ ಬೇರಾವ ಮಾಧ್ಯಮಗಳು ಇದನ್ನೆತ್ತಿಕೊಂಡು ಸುದ್ದಿ ಮಾಡಿಲ್ಲ. ಕಾರಣ, ಎಲ್ಲಾ ಮಾಧ್ಯಮಗಳಿಗೆ ಇದೊಳ್ಳೆ ರಾಮಾಯಣ ಚಿತ್ರದ ಪ್ರಮೋಶನ್ ಗೆ ಹಣ ಸಂದಾಯ ಆಗಿರುತ್ತದೆ.

ಹೀಗೆ ಜಾತಿ, ಧರ್ಮದ ಕಾರಣವನ್ನೇ ಟಿ ಆರ್ ಪಿ ಯನ್ನಾಗಿಸಿ ಸಿನೇಮಾ ಮಂದಿಯ ಬೆನ್ನು ಬೀಳುವ ಮಾಧ್ಯಮದ ಮಂದಿ ಹಣದ ವಿಷಯ ಬಂದಾಗ ತಮ್ಮ ಹುಸಿ ರಾಷ್ಟ್ರಪ್ರೇಮ, ನಾಡಪ್ರೇಮಕ್ಕೆ ಬೆನ್ನು ತಿರುಗಿಸುತ್ತಾರೆ. ಜಾತಿ, ಧರ್ಮ, ಲಿಂಗ ತಾರತಮ್ಯದ ತನ್ನದೇ ಮನಸ್ಥಿತಿಯನ್ನು ಹಣ ಸಂಪಾದಿಸುವ ಸರಕನ್ನಾಗಿ ಪರಿವರ್ತಿಸುವ ಕಲೆ ಗೊತ್ತಿರೋದು ಬಹುಷಃ ಪತ್ರಕರ್ತರಿಗೆ ಮಾತ್ರವೆಂದು ಕಾಣುತ್ತದೆ.

“ದೇವಸ್ಥಾನ ತೊರೆದು ಗರಡಿಗೆ ಬರದಿದ್ದರೆ ಬಿಲ್ಲವರಿಗೆ ಉಳಿಗಾಲವಿಲ್ಲ..”

Naveen Soorinje


ನವೀನ್ ಸೂರಿಂಜೆ


 

ಉಡುಪಿಯಲ್ಲಿ ಕಳೆದ ಹದಿನೈದು ದಿನಗಳ ಅಂತರದಲ್ಲಿ ಎರಡು ಕೊಲೆಗಳು ಸುದ್ದಿ ಮಾಡಿದವು. ಒಂದು ಬಹುಕೋಟಿ ಒಡೆಯ ಬಾಸ್ಕರ ಶೆಟ್ಟಿ ಕೊಲೆ. ಎರಡನೆಯದ್ದು ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ. ಭಾಸ್ಕರ ಶೆಟ್ಟಿಯದ್ದು ತೀPoojaryರಾ ವೈಯುಕ್ತಿಕ ಕಾರಣಕ್ಕಾಗಿ ನಡೆದ ಕೊಲೆ. ಪ್ರವೀಣ್ ಪೂಜಾರಿಯದ್ದು ಸಾಮಾಜಿಕ, ರಾಜಕೀಯ ಕಾರಣಕ್ಕಾಗಿ ನಡೆದ ಕೊಲೆ. ಚರ್ಚೆ ಇರುವುದು ಎರಡೂ ಕೊಲೆಗಳನ್ನು ಆಯಾ ಸಮಾಜ ತೆಗೆದುಕೊಂಡ ರೀತಿಯ ಬಗ್ಗೆ. ಭಾಸ್ಕರ ಶೆಟ್ಟಿಯ ವೈಯುಕ್ತಿಕ ಕಾರಣದ ಕೊಲೆಯನ್ನು ಬಂಟರ ಸಂಘಟನೆ ಗಂಭೀರವಾಗಿ ತೆಗೆದುಕೊಂಡು ಸಭೆಗಳ ಮೇಲೆ ಸಭೆ ನಡೆಸ್ತು. ಸ್ಥಳೀಯ ಪೊಲೀಸರು ನಡೆಸುತ್ತಿದ್ದ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸುವಂತೆ ಮಾಡಿತ್ತು. ಆದರೆ ಪ್ರವೀಣ್ ಪೂಜಾರಿ ಕೊಲೆ ? ಪ್ರವೀಣ್ ಪೂಜಾರಿ ಸಾವು ಯಾವುದೋ ವೈಯುಕ್ತಿಕ ಕಾರಣಕ್ಕಾಗಿ ನಡೆದ ಸಾವಲ್ಲ. ಪ್ರವೀಣ್ ಪೂಜಾರಿಯನ್ನು ಕೊಲೆ ಮಾಡಿದ ಆರೋಪಿಗಳ ಮುಖ್ಯಸ್ಥರು ಹಿಂದೆಯೂ ಹಲವು ಬಿಲ್ಲವರ ಆಹುತಿ ತೆಗೆದುಕೊಂಡಿದ್ದರು. ಮುಂದೆಯೂ ತಮ್ಮ ಅಜೆಂಡಾ ಜಾರಿಗಾಗಿ ಹಲವು ಬಿಲ್ಲವರ ರಕ್ತತರ್ಪಣಕ್ಕಾಗಿ ಈ ಕೊಲೆಗಡುಕರ ಮುಖ್ಯಸ್ಥರು ಕಾಯುತ್ತಿದ್ದಾರೆ. ಆದರೂ ಬಿಲ್ಲವ ಸಂಘಟನೆಗಳು ತುಟಿಪಿಟಿಕ್ ಎನ್ನುತ್ತಿಲ್ಲ. ಅಗಾಧ ಸಂಖ್ಯೆಯ ವಿದ್ಯಾವಂತ ಬಿಲ್ಲವ ಯುವಕರ ಸದಸ್ಯತ್ವವನ್ನು ಹೊಂದಿರುವ ಬಿಲ್ಲವ ಯುವ ವಾಹಿನಿಯೂ ಮಾತನಾಡುತ್ತಿಲ್ಲ. ಇದು ನಿಜಕ್ಕೂ ದುರಂತ. ಕರಾವಳಿಯ ಅತಿ ದೊಡ್ಡ ಸಮುದಾಯವಾಗಿರುವ ಬಿಲ್ಲವರು ಇತ್ತಿಚೆಗೆ ಒಂದೋ ಕೋಮುಸಂಬಂಧಿ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾಗುತ್ತಿದ್ದಾರೆ. ಅಥವಾ ಜೈಲು ಸೇರುತ್ತಾರೆ. ಮಂಗಳೂರು ಮತ್ತು ಉಡುಪಿಯ ಜೈಲುಗಳಲ್ಲಿ ಮುಸ್ಲೀಮರನ್ನು ಹೊರತುಪಡಿಸಿದ್ರೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಗಳಾಗಿರುವವರು ಬಿಲ್ಲವರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವರು ಮತ್ತು ಬಂಟರು ಅತ್ಯಂತ ಹೆಚ್ಚು ಪ್ರಾಬಲ್ಯವನ್ನು ಹೊಂದಿರುವ ಸಮುದಾಯ. narayana-guruಇತೀಚ್ಚೆಗೆ ಎಲ್ಲಾ ಕ್ಷೇತ್ರದಲ್ಲೂ ಬಿಲ್ಲವರು ಬಂಟರಿಗೆ ಪೈಪೋಟಿ ಕೊಡುತ್ತಿದ್ದಾರೇನೋ ಎಂದು ಕಂಡು ಬಂದರೂ ಅದು ತೋರಿಕೆಗೆ ಮಾತ್ರ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಂಟರು ತುಂಬಿ ಹೋಗಿದ್ದರೆ ಬಿಲ್ಲವರು ಎಲ್ಲಿದ್ದಾರೆ ಎಂದು ಹುಡುಕಬೇಕಿದೆ. ಸ್ವಾತಂತ್ರ್ಯಾ ನಂತರದ ಕರಾವಳಿಯಲ್ಲಿ ಬ್ಯಾಂಕಿಂಗ್, ಔದ್ಯಮಿಕ, ಹೊಟೇಲ್, ವಲಸೆ ಕ್ಷೇತ್ರದಲ್ಲಿ ಅಭಿವೃದ್ದಿಯಾದ್ರೂ ಇದರ ಭರಪೂರ ಲಾಭ ಪಡೆದಿದ್ದು ಮೇಲ್ವರ್ಗಗಳಾಗಿರುವ ಬಂಟರು ಮತ್ತು ಬ್ರಾಹ್ಮಣರು. ಆದರೆ ಎಲ್ಲಾ ಕ್ಷೇತ್ರಗಳಲ್ಲಿ ಬಿಲ್ಲವರು ಇದ್ದಾರೆ ಅನ್ನುವಂತೆ ಕಂಡು ಬಂದರೂ ಅದು ತೀರಾ ಕೆಳ ದರ್ಜೆಯ ಕೆಲಸಗಳಲ್ಲಿ ಅಥವಾ ತೀರಾ ನಗಣ್ಯ ಸಂಖ್ಯೆಯಲ್ಲಿ.

ಸಿನೇಮಾ ಕ್ಷೇತ್ರದಿಂದ ಹಿಡಿದು ಅಂಡರ್ ವಲ್ಡ್ ವರೆಗೆ ಬಂಟರಿಗೆ ಪೈಪೋಟಿ ಕೊಡುವ ಬಿಲ್ಲವರು ಕಂಡು ಬರುತ್ತಾರೆ. ಆದರೆ ಅಂಡರ್ ವಲ್ಡ್ ಡಾನ್ ಆಗಿರುವ ಬಂಟರೆಲ್ಲರೂ ನಿಧಾನಕ್ಕೆ ಉದ್ಯಮಿಗಳಾದರೆ, ಬಿಲ್ಲವ ಡಾನ್ ಗಳಿಗೆ ವಯಸ್ಸಾದರೂ ಅಂಡರ್ ವಲ್ಡ್ ನಿಂದ ಹೊರಗೆ ಬರಲಾಗದ ಸ್ಥಿತಿ ಇದೆ. ಇದೇ ರೀತಿ ಭಜರಂಗದಳ ಸೇರಿದ ಬಂಟರ ಹುಡುಗರು ತನ್ನಿಂತಾನೇ ಬಿಜೆಪಿ ನಾಯಕರಾಗುತ್ತಾರೆ. ಆದರೆ ಬಿಲ್ಲವ ಹುಡುಗರು ಸಾಯುವಾಗಲೂ ಭಜರಂಗದಳದಲ್ಲೇ ಇದ್ದು ಅದಕ್ಕಾಗಿ ಸಾಯಬೇಕಾಗುತ್ತದೆ.

ಎಲ್ಲಾ ಕೆಳಜಾತಿಗಳಂತೆ ಬಿಲ್ಲವ ಸಮುದಾಯ ಕೂಡಾ ಕಿರುಸಂಸ್ಕೃತಿಯ ಸಮುದಾಯ. ಭೂತಾರಾಧನೆ, ಪೂರ್ವಜರ ಆರಾಧನೆಯೇ ಬಿಲ್ಲವರ ಸಂಸ್ಕೃತಿಯಾಗಿತ್ತು. ಆದರೆ ವೈದಿಕ ಧರ್ಮದ ಪ್ರಭಾವಕ್ಕೊಳಗಾಗಿ ದೇವಸ್ಥಾನ ಆರಾಧನೆಯ ಪ್ರಧಾನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿತು. ಗರ್ಭಗುಡಿಯ ಹೊರಗಡೆ ಅಂಗಿ ಹಾಕದೆ ಕೆಲಸ ಮಾಡುವುದೇ ಬಿಲ್ಲವರ ಅದೃಷ್ಟವಾಯಿತು. ಬಿಲ್ಲವರಂತೆ ಬಂಟರೂ ಕೂಡಾ ಗರ್ಭಗುಡಿಯ ಹೊರಗೇ ಇದ್ದರೂ ಬಿಳಿ ವಸ್ತ್ರಧಾರಿಯಾಗಿ ಇಡೀ ಕಾರ್ಯಕ್ರಮದ ಯಜಮಾನಿಕೆಯನ್ನು ಪಡೆದುಕೊಂಡರು. ಈಗಲೂ ದೇವಸ್ಥಾನಗಳ ಜೀರ್ಣೋದ್ದಾರ, ಬ್ರಹ್ಮಕಲಶೋತ್ಸವ ಸಂಧರ್ಭದಲ್ಲಿ ಕೇಸರಿ ಲುಂಗಿದಾರಿಯಾಗಿ ಸ್ವಯಂ ಸೇವಕರಾಗಿದ್ದರೆ, ಬಂಟರು ಕಾರ್ಯಕ್ರಮದ ಗೌರವಾಧ್ಯಕ್ಷರಾಗಿರುತ್ತಾರೆ.

ದೇವಸ್ಥಾನಗಳ ಬ್ರಹ್ಮಕಲಶ, ಜೀರ್ಣೋದ್ದಾರಗಳಲ್ಲಿ ಕಾಲಕಳೆಯುವ, ಆ ಮೂಲಕ ಕೇಸರಿ ವಸ್ತ್ರಧಾರಿಗಳಾಗಿ, ಗೊತ್ತಿದ್ದೋ ಗೊತ್ತಿಲ್ಲದೆಯೋkoti-chennay ಹಿಂದೂ ಸಂಘಟನೆ ಸೇರುವ ಬಿಲ್ಲವ ಯುವಕರು ಇದೀಗ ಮದುವೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದೇವಸ್ಥಾನದ ಕೆಲಸಗಳಲ್ಲಿ ಬಹುಪಾಲು ಸಮಯವನ್ನು ಸ್ವಯಂಸೇವಕರಾಗಿಯೋ, ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿರುವ ಬಿಲ್ಲವ ಯುವಕರು ತಮ್ಮ ಕುಟುಂಬದ ಆರ್ಥಿಕ ಅಭಿವೃದ್ದಿಯತ್ತಾ ಗಮನ ಕೊಡುವುದಿಲ್ಲ. ಹಿಂದೊಮ್ಮೆ ನೈತಿಕ ಪೊಲೀಸ್ ಗಿರಿ ಮಾಡಿ 40 ಜನ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಜೈಲು ಸೇರಿದಾಗ, ಅವರ ಕುಟುಂಬದ ಹಿನ್ನಲೆ ಅಧ್ಯಯನ ನಡೆಸಿದ್ದೆ. ಅದರಲ್ಲಿ ಬಂಧಿಯಾಗಿದ್ದ ಮೂವರು ಬಿಲ್ಲವ ಯುವಕರ ಮನೆಯಲ್ಲಿ ಈ ದಿನಗಳಲ್ಲೂ ವಿದ್ಯುತ್ ಸಂಪರ್ಕ ಇಲ್ಲ. ಅವರ ಮನೆಯ ದೇವರ ಫೋಟೋಗೆ ದೀಪ ಇಡಲೂ ಎಣ್ಣೆಗೆ ದುಡ್ಡಿಲ್ಲದ ಪರಿಸ್ಥಿತಿ ಇದೆ. ಆದರೆ ಅವರ ಮನೆಯ ಯುವಕ ದೇವಸ್ಥಾನದಲ್ಲಿ ಬ್ರಾಹ್ಮಣರ ಹೊಟ್ಟೆ ತುಂಬಿಸಲು, ಧರ್ಮ ರಕ್ಷಣೆಗಾಗಿ ದುಡಿದು ಜೈಲು ಸೇರುತ್ತಾರೆ ಅಥವಾ ಕೊಲೆಯಾಗುತ್ತಾನೆ.

ಈಗ ಬಿಲ್ಲವ ಸಮುದಾಯ ಯೋಚಿಸಬೇಕಾದ ಸಮಯ. ಉದಯ ಪೂಜಾರಿಯಿಂದ ಪ್ರಾರಂಭವಾಗಿ ಪ್ರವೀಣ್ ಪೂಜಾರಿಯವರೆಗೆ ಕೋಮು ಕಾರಣಕ್ಕಾಗಿ ಸತ್ತ ಬಿಲ್ಲವರೆಷ್ಟು, ಬಂಟರೆಷ್ಟು, ಬ್ರಾಹ್ಮಣರೆಷ್ಟು ಎಂದು ಲೆಕ್ಕ ಹಾಕಬೇಕಿದೆ. ಇದಕ್ಕೆಲ್ಲಾ ಕಾರಣ ಕೇಸರಿ ಲುಂಗಿ ಧರಿಸುವಂತೆ ಮಾಡುವ ದೇವಸ್ಥಾನ ಸಂಸ್ಕೃತಿ. ಬಿಲ್ಲವರು ಮತ್ತೆ ತಮ್ಮ ಕಿರು ಸಂಸ್ಕೃತಿಯಾದ ಗರಡಿಯತ್ತಾ ತೆರಳಬೇಕಿದೆ. ಗರಡಿ ಎನ್ನುವುದೇ ಬಿಲ್ಲವರ ಸ್ವಾಭಿಮಾನದ ಸಂಕೇತ. ದೇವಸ್ಥಾನ ಎನ್ನುವುದು ಬಿಲ್ಲವರನ್ನು ಅಧೀನರಾಗಿಸುವ ಸಂಕೇತ. ದೇವಸ್ಥಾನವೆಂಬ ವೈದಿಕ ಸಂಸ್ಕೃತಿಯಿಂದ ದೂರವಾಗಿ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಗರಡಿಯತ್ತಾ ತೆರಳದಿದ್ದರೆ ಬಿಲ್ಲವ ಸಮುದಾಯಕ್ಕೆ ದುರಂತಮಯ ಭವಿಷ್ಯವನ್ನು ಕಾಣಲಿದೆ.

ಪೋಲೀಸ್ ಪ್ರತಿಭಟನೆ : ಒಂದು ಬದಿಯಲ್ಲಿ ನಪುಂಸಕತ್ವ, ಮತ್ತೊಂದು ಬದಿಯಲ್ಲಿ ಪುರುಷತ್ವ

– ಬಿ.ಶ್ರೀಪಾದ ಭಟ್

ನವೀನ್ ಸೂರಂಜೆಯವರು ’ಪೋಲೀಸ್ ಪ್ರತಿಭಟನೆ’ ಕುರಿತಾಗಿ ಬರೆಯುತ್ತಾ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ ಅವರೇ ಸ್ವತ ತಮ್ಮ ಪ್ರಶ್ನೆಗಳ ಸುಳಿಗೆ ಬಲಿಯಾಗಿದ್ದಾರೆ. ನೋಡಿ ಅವರು ಪದೇ ಪದೇ ಪ್ರಭುತ್ವದ ಪದವನ್ನು ಬಳಸುತ್ತಾರೆ. ಆದರೆ ಈ ಪ್ರಭುತ್ವ ಮತ್ತು ಪ್ರಜೆ ಎನ್ನುವ ಸಂಘರ್ಷದ ಚರ್ಚೆ ತುಂಬಾ ಹಳೆಯದು ನಮ್ಮ ಮಿತಿಯ ಕಾರಣಕ್ಕಾಗಿ ಕ್ರಮೇಣ ಸವಕಲಾಗುತ್ತಿದೆ. ಏಕೆಂದರೆ ಪ್ರಭುತ್ವದ ಎಲ್ಲಾ ದೌರ್ಜನ್ಯಗಳನ್ನು ಮತ್ತು ಕ್ರೌರ್ಯವನ್ನು ಕ್ರಮೇಣ ವ್ಯವಸ್ಥೆಯು ಕೈಗೆತ್ತಿಕೊಳ್ಳುತ್ತದೆ. ಒಮ್ಮೆ ವ್ಯವಸ್ಥೆ ತನ್ನ ಹಾದಿಯಲ್ಲಿದೆ ಎಂದು ಗೊತ್ತಾದೊಡನೆ ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಹೆಣಿಗೆ ಊಹೆಗೂ ನಿಲುಕುವುದಿಲ್ಲ. ಇಲ್ಲಿ ನಾವು ಯುರೋಪಿಯನ್ ರಾಷ್ಟ್ರಗಳಿಂದ ಕಡತಂದ ಪ್ರಭುತ್ವದ ಪದಬಳಕೆಯನ್ನು KSP Recruitment 2015ಅದರ ಮೂಲ ಅರ್ಥದಲ್ಲಿ ಬಳಸಿದರೆ ಅಷ್ಟರಮಟ್ಟಿಗೆ ನಮ್ಮನ್ನು ಕತ್ತಲಲ್ಲಿ ಕೂಡಿ ಹಾಕಿಕೊಳ್ಳುತ್ತೇವೆ ಅಷ್ಟೆ. ಪಶ್ಚಿಮ ರಾಷ್ಟ್ರಗಳಲ್ಲಿ ಪ್ರಭುತ್ವದ ದೌರ್ಜನ್ಯಗಳು ವ್ಯವಸ್ಥೆಯ ಮನಸ್ಥಿತಿಯೊಂದಿಗೆ ಪರಸ್ಪರ ತಾಳೆಯಾಗುವ ರೀತಿಯೇ ಬೇರೆ ಅಥವಾ ಅನೇಕ ಬಾರಿ ಹೊಂದಿಕೊಂಡಿರುವುದಿಲ್ಲ. ಆದರೆ ಏಷ್ಯಾ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಂತಹ ದೇಶದಲ್ಲಿ ಪ್ರಭುತ್ವದ ಕಣ್ಸನ್ನೆಯನ್ನು ವ್ಯವಸ್ಥೆ ಪಾಲಿಸುತ್ತಿರುತ್ತದೆ ಅಥವಾ ವ್ಯವಸ್ಥೆ ಪ್ರಭುತ್ವದ ಬಹುಪಾಲು ಕೆಲಸಗಳನ್ನು ಸ್ವತಃ ತಾನೇ ಕೈಗೆತ್ತಿಕೊಳ್ಳುತ್ತದೆ. ನಾವು ಇಂಡಿಯಾದಲ್ಲಿ ಬದುಕುತ್ತಾ ಕೇವಲ ಪ್ರಭುತ್ವವನ್ನು ಹೊಣೆಗಾರಿಕೆ ಮಾಡುವುದು ಬೇಜವಬ್ದಾರಿತನವಷ್ಟೆ.

ರೋಹಿತ ವೇಮುಲನ ಹತ್ಯೆ ವ್ಯವಸ್ಥೆಯ ಮೂಲಕ ನಡೆದ ಹತ್ಯೆ. ಕೆಲ್ವಿನ್ ಮಣಿ, ಲಕ್ಷ್ಮಣಪುರ ಬಾತೆ, ಕರಂಚೇಡು, ಕಂಬಾಲಪಲ್ಲಿ, ಖೈರ್ಲಾಂಜಿಯಲ್ಲಿ ದಲಿತರ ಕೊಲೆ ಮತ್ತು ಹತ್ಯಾಕಾಂಡವನ್ನು ವ್ಯವಸ್ಥೆ ಮುಂಚೂಣಿಯಲ್ಲಿ ನಿಂತು ನಡೆಸಿತ್ತು. ಪ್ರಭುತ್ವ ತನ್ನ ಮೌನ ಬೆಂಬಲ ನೀಡಿತ್ತು. 1984ರ ಸಿಖ್‌ರ ಹತ್ಯಾಕಾಂಡ ವ್ಯವಸ್ಥೆ ನಡೆಸಿದ ಹತ್ಯಾಕಾಂಡ. ಪ್ರಭುತ್ವ ನೇರ ಬೆಂಬಲ ಸೂಚಿಸಿತ್ತು. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಅಲ್ಲಿನ ವ್ಯವಸ್ಥೆ ಮುಂಚೂಣಿಯಲ್ಲಿದ್ದರೆ ಪ್ರಭುತ್ವವು ಅದರ ಬೆಂಬಲವಾಗಿ ಬೆನ್ನ ಹಿಂದಿತ್ತು. naveen-soorinjeಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಅಷ್ಟೇಕೆ ಸ್ವತಃ ನವೀನ್ ಸೂರಿಂಜೆಯವರನ್ನು ಹೋಮ್ ಸ್ಟೇ ಪ್ರಕರಣದಲ್ಲಿ ಬಂದಿಸಿದ್ದು ಪ್ರಭುತ್ವವಾದರೂ ಅವರನ್ನು ತಪ್ಪಿತಸ್ಥರೆಂದು ಅಪಪ್ರಚಾರ ಮಾಡಿದ್ದು ಅಲ್ಲಿನ ಮತೀಯವಾದಿ ವ್ಯವಸ್ಥೆ. ನಾವು ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಈ ಸಂಕೀರ್ಣ ಆದರೆ ಅಪಾಯಕಾರಿ ಹೊಂದಾಣಿಕೆಯ, ಬದಲಾಗುತ್ತಿರುವ ಹೊಣೆಗಾರಿಕೆಯ ಅರಿವಿಲ್ಲದೆ ಮಾತನಾಡಿದರೆ ಹಾದಿ ತಪ್ಪಿದಂತೆಯೇ.

ಏಕೆಂದರೆ ನವೀನ್ ಅವರು ನೇರವಾಗಿ ಪೋಲೀಸ್ ವ್ಯವಸ್ಥೆಯನ್ನು ಪ್ರಭುತ್ವದ ರೂಪದಲ್ಲಿ ನೋಡುತ್ತಾ ಅಲ್ಲಿನ ಶ್ರೇಣೀಕೃತ ವ್ಯವಸ್ಥೆಯಾದ ಕಮೀಷನರ್, ಇನ್ಸ್‍ಪೆಕ್ಟರ್ ಜನರಲ್, ಡಿಸಿಪಿ, ಎಸಿಪಿ ಜೊತೆಜೊತೆಗೆ ಕಾನ್ಸಟೇಬಲ್ ಮತ್ತು  ಆರ್ಡಲೀಗಳನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ತೂಗಿರುವುದೇ ದೋಷಪೂರಿತವಾದದ್ದು. ಏಕೆಂದರೆ ಜೂನ್ 4ರಂದು ಪ್ರತಿಭಟನೆ ಮಾಡುತ್ತಿರುವವರು ಕೆಳ ಶ್ರೇಣಿಯ ಕಾನ್ಸಟೇಬಲ್ ಮತ್ತು  ಆರ್ಡಲೀಗಳು. ಅವರನ್ನು ಪ್ರಭುತ್ವವೆಂದು ನೋಡುವುದೇ ನಮಗೆ ನಾವು ಮಿತಿಯನ್ನು ಹಾಕಿಕೊಂಡಂತೆ. ಅವರಿಗೆ ಕೆಲಸಕ್ಕೆ ಸೇರುವಾಗ ಪೋಲೀಸ್ ವ್ಯವಸ್ಥೆಯ ನಿಯಮಗಳ ಅರಿವಿರಲಿಲ್ಲವೇ, ಅದು ಅನಿವಾರ್ಯವೆಂದು ಗೊತ್ತಿಲ್ಲವೇ ಎಂದು ನವೀನ್ ಪ್ರಶ್ನಿಸುತ್ತಾರೆಂದರೆ karnataka-policeನನಗೆ ಅಶ್ಚರ್ಯವಾಗುತ್ತದೆ. ಪ್ರೊಲಿಟರೇಯನ್ ಬದುಕು ಹೇಗೆ ಮತ್ತು ಯಾವ ರೀತಿ ರೂಪುಗೊಳ್ಳುತ್ತಾ ಹೋಗುತ್ತದೆ ಎಂದು ಗೊತ್ತಿದ್ದೂ ನವೀನ್ ಈ ಪ್ರಶ್ನೆ ಎತ್ತಿದ್ದು ದರ್ಪದಂತೆ ಕಾಣುತ್ತದೆ. ಏಕೆಂದರೆ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಳ್ಳುವ ಕಾರ್ಮಿಕರಿಗೂ ಅಲ್ಲಿನ ಬಂಡವಾಳಶಾಹಿ ಮಾಲೀಕನ ಎಲ್ಲಾ ದೌರ್ಜನ್ಯಗಳ, ಕ್ರೌರ್ಯದ ಪರಿಚಯವಿರುತ್ತದೆ. ಆದರೆ ಕಾರ್ಮಿಕರಿಗೆ ನಿನಗೆ ಗೊತ್ತಿದ್ದೂ ಹೇಗೆ ಸೇರಿಕೊಂಡೆ, ಅಲ್ಲಿ ಸೇರಿಕೊಂಡು ಮಾಲೀಕನ ವಿರುದ್ಧ ಪ್ರತಿಭಟಿಸುವುದೂ ಅನ್ಯಾಯ ಎನ್ನುವುದೇ ಅಮಾನವೀಯ. ಪ್ರೊಲಿಟೇರಿಯನ್‌ನ ಬದುಕು ಅವದಾಗಿರುವುದಿಲ್ಲ. ಅವನ ಆಯ್ಕೆ ಅವನದಾಗಿರುವುದಿಲ್ಲ. ಆವನ ನಡತೆ ಅವನದಾಗಿರುವುದಿಲ್ಲ. ವ್ಯವಸ್ಥೆ ಅವನಿಗೆ ಕನಿಷ್ಠ ಮಾನವಂತನಾಗಿ ಬದುಕಲು ಬಿಡಲಾರದಷ್ಟು ಕಟುವಾಗಿರುತ್ತದೆ. ನವೀನ್ ಹೇಳುವ ಹತ್ತನೇ ತರಗತಿ ಓದಿನ ಕಾನ್ಸಟೇಬಲ್‌ಗಳು ಮತ್ತು ಆರ್ಡಲೀಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಅನಿವಾರ್ಯ ಆಯ್ಕೆಗೆ ಬಲಿಯಾಗಿ ಪೋಲೀಸ್ ವ್ಯವಸ್ಥೆಗೆ ಸೇರಿಕೊಳ್ಳುತ್ತಾನೆ. ಅದರ ಭಾಗವಾಗುತ್ತಾನೆ. ಕ್ರೌರ್ಯಕ್ಕೆ ಬಲಿಯಾಗುತ್ತಾನೆ. ಕ್ರೌರ್ಯದ ಮುಖವಾಗುತ್ತಾನೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಗೋವಿಂದ ನಿಹಾಲನಿಯವರ “ಅರ್ಧಸತ್ಯ” ಸಿನಿಮಾವನ್ನು ನೋಡಲೇಬೇಕು. ಆ ಸಿನಿಮಾದಲ್ಲಿ ಬಳಸಿಕೊಂಡ ಖ್ಯಾತ ಮರಾಠಿ ಕವಿ ದಿಪೀಪ್ ಚಿತ್ರೆ ಬರೆದ ಕೆಲ ಸಾಲುಗಳು ಹೀಗಿವೆ:

ಚಕ್ರವ್ಯೂಹದ ಒಳಗಿದ್ದರೂ ಸಹಿತ
ಸಾಯುತ್ತೇನೆಯೋ ಅಥವಾ ಸಾಯಿಸುತ್ತೇನೆಯೋ
ಇದರ ಕುರಿತಾಗಿಯೂ ನಿರ್ಧರಿಸಲಾಗಲಿಲ್ಲ

ಒಂದು ಬದಿಯಲ್ಲಿ ನಪುಂಸಕತ್ವವನ್ನು
ಮತ್ತೊಂದು ಬದಿಯಲ್ಲಿ ಪುರುಷತ್ವದೊಂದಿಗೆ ಸಮವಾಗಿ ತೂಗುತ್ತ
ನ್ಯಾಯ ತಕ್ಕಡಿಯ ಈ ಮೊನೆಯು
ನಮಗೆ ಅರ್ಧಸತ್ಯದ ಕಡೆಗೆ ಬೆರಳು ತೋರಿಸುತ್ತದೆ

ಇಡೀ ಪೋಲೀಸ್ ವ್ಯವಸ್ಥೆ ಪ್ರಭುತ್ವದ ಅಡಿಯಲ್ಲಿ “ಒಂದು ಬದಿಯಲ್ಲಿ ನಪುಂಸಕತ್ವ ಮತ್ತೊಂದು ಬದಿಯಲ್ಲಿ ಪುರುಷತ್ವದೊಡನೆ ತೂಗುತ್ತಿರುತ್ತದೆ.” ಇದರ ಮೊದಲ ಮತ್ತು ನಿರಂತರ ಬಲಿಪಶುಗಳು ಪೋಲೀಸ್ ಪೇದೆಗಳು ಮತ್ತು ಕೆಳಹಂತದ ಅಧಿಕಾರಿಗಳು. ಅವರು ಠಾಣೆಯಲ್ಲಿ ನಿರಪರಾಧಿ ಕೈದಿಗಳ ಮೇಲೆ ನಡೆಸುವ ದೌರ್ಜನ್ಯ, ಲಾಕಪ್ ಡೆತ್, ಪ್ರತಿಭಟನೆಕಾರರ ಮೇಲೆ ನಡೆಸುವ ಹಲ್ಲೆಗಳು, ಗೋಲೀಬಾರು, ನಕಲಿ ಎನ್‌ಕೌಂಟರ್‌ಗಳು, Ardh_Satya,_1982_fimಎಲ್ಲವೂ ವ್ಯವಸ್ಥೆಯ ಪ್ರತಿನಿಧಿಯಾಗಿ ನಡೆಸುತ್ತಾರೆ ಹೊರತಾಗಿ ಪ್ರಭುತ್ವದ ಪ್ರತಿನಿಧಿಯಾಗಿ ಅಲ್ಲವೇ ಅಲ್ಲ. ನಂತರ ತಮ್ಮ ಕೃತ್ಯಗಳಿಗೆ ಪ್ರಭುತ್ವನ್ನು ಗುರಾಣಿಯಂತೆ ಬಳಸಿಕೊಳ್ಳುತ್ತಾರೆ. ಇದನ್ನು ನಿಹಾಲನಿ ಅರ್ಧಸತ್ಯ ಸಿನಿಮಾದಲ್ಲಿ ಸಮರ್ಥವಾಗಿ ಕಟ್ಟಿದ್ದಾರೆ. ಇತ್ತೀಚೆಗೆ ಪತ್ರಕರ್ತೆ ರಾಣಾ ಅಯೂಬ್ ಅವರ “ಗುಜರಾತ್ ಫೈಲ್ಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಅದರಲ್ಲಿ ಅವರು 2002 ರ ಮುಸ್ಲಿಂ ಹತ್ಯಾಕಾಂಡ, ಇಶ್ರಾನ್ ಎನ್‌ಕೌಂಟರ್, ಸೊಹ್ರಾಬುದ್ದೀನ್ ಎನ್‌ಕೌಂಟರ್‌ನ ಸಂದರ್ಭಗಳ ಮತ್ತು ಆ ನಂತರದ ದಿನಗಳ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದು ನಿಜಕ್ಕೂ ಮೈ ನಡುಗಿಸುತ್ತದೆ. ಅಲ್ಲಿನ ಬಹುತೇಕ ಪೋಲೀಸ್ ಅಧಿಕಾರಗಳು ತಳ ಸಮುದಾಯದಿಂದ ಬಂದವರು. ವ್ಯವಸ್ಥೆಯ ಭಾಗವಾಗಿಯೇ ಗುಜರಾತ್ ಹತ್ಯಾಕಾಂಡ ಮತ್ತು ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಪ್ರಭುತ್ವದ ದಾಳವಾಗಿ ಬಳಕೆಯಾಗುತ್ತಾರೆ. ಪ್ರಭುತ್ವ ಮತ್ತು ವ್ಯವಸ್ಥೆಯ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಪುಸ್ತಕದಲ್ಲಿ ತಮ್ಮ ಪತ್ರಕರ್ತರ ಅನುಭವದ ಮೂಲಕ ರಾಣಾ ಅಯೂಬ್ ಸಮರ್ಥವಾಗಿ ತೋರಿಸಿದ್ದಾರೆ.

ಹೀಗಾಗಿ ನವೀನ್ ಅವರು ಪೋಲೀಸ್ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ಪ್ರಭುತ್ವದ ಸ್ಥಾನದಲ್ಲಿ ನಿಲ್ಲಿಸಿಕೊಂಡು ವಿಮರ್ಶಿಸತೊಡಗಿದೊಡನೆ ಸ್ವತ ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡುಬಿಡುತ್ತಾರೆ. ಹೀಗಾಗಿಯೇ ಎಡಪಂಥೀಯರು ಪ್ರಭುತ್ವವನ್ನು ಸಂತ್ರಸ್ಥರ ಸ್ಥಾನದಲ್ಲಿ ನಿಲ್ಲಿಸುತ್ತಿದೆ ಎಂದು ತಪ್ಪಾಗಿ ಅರ್ಥೈಸುತ್ತಾರೆ. ಮಸಲ ನಾಳೆ ಯು.ಟಿ.ಖಾದರ್‌ಗೆ ಅನ್ಯಾಯವಾದಾಗ ಅವರ ಪರವಾಗಿ ಸಮರ್ಥನೆಗೆ ನಿಂತಾಗ ನಾವು ಪ್ರಭುತ್ವವನ್ನು ಬೆಂಬಲಿಸಿದಂತಾಗುತ್ತದೆಯೇ? ಅಥವಾ ಮಂಗಳೂರಿನ ಡಿ.ಸಿ.ಇಬ್ರಾಹಿಂ ಅವರಿಗೆ ಆದ ಅನ್ಯಾಯವನ್ನು ಪ್ರತಿಭಟಿಸಿದರೆ ಅದು ಪ್ರಭುತ್ವವನ್ನು ಸಂತ್ರಸ್ಥರನ್ನಾಗಿಸುತ್ತದೆಯೇ?

ಇನ್ನು ಪೋಲೀಸರ ಬೇಡಿಕೆಗಳ ಕುರಿತಾಗಿ ಅವರ ಸಂಬಳದ ಕುರಿತಾಗಿ ಮಾತನಾಡುವುದು ಔಚಿತ್ಯವೇ ಅಲ್ಲ. ಅಲ್ಲರೀ ದಿನವಿಡೀ ಬಿಸಿಲಲ್ಲಿ ದುಡಿಯುವವನಿಗೆ ನಿನಗೆ 18000 ಸಂಬಳ ಸಾಕಲ್ವೇನಯ್ಯ ಎಂದು ನವೀನ್ ಹೇಳುತ್ತಾರೆಂದು ನಾನು ನೆನಸಿರಲಿಲ್ಲ.

ಕಡೆಯದಾಗಿ ಪೋಲೀಸ್ ವ್ಯವಸ್ಥೆಯಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು,ದೌರ್ಜನ್ಯವನ್ನು,ಹತ್ಯಾಕಾಂಡಗಳನ್ನು ಈ ಪೇದೆಗಳು ಮತ್ತು ಆರ್ಡಲೀಗಳು ನಡೆಸುತ್ತಿರುವ ಪ್ರತಿಭಟನೆಗೆ ತಳುಕು ಹಾಕುವುದು ಸಂಪೂರ್ಣವಾಗಿ ಅರ್ಥಹೀನ ಮತ್ತು ಅಮಾನವೀಯ.

ಪ್ರಭುತ್ವ, ಪೋಲಿಸ್ ವ್ಯವಸ್ಥೆ ಮತ್ತು ಪ್ರತಿಭಟನೆ


– ಶ್ರೀಧರ್ ಪ್ರಭು


ಪತ್ರಕರ್ತ ನವೀನ ಸೂರಿಂಜೆ ಅವರು ವರ್ತಮಾನದಲ್ಲಿ ಬರೆದ ಪೋಲಿಸರೇ ಸಂತ್ರಸ್ತರಾಗುವ ಅಪಾಯ: ಎಡಪಂಥೀಯರ ಕೊಡುಗೆ ಲೇಖನದಲ್ಲಿ ಪೋಲಿಸ್ ಪ್ರತಿಭಟನೆಯ ವಿಚಾರವನ್ನು ತುಂಬಾ ಅರ್ಥಪೂರ್ಣವಾಗಿ ವಿಶ್ಲೇಷಿಸಿ ಬರೆದಿದ್ದಾರೆ. ಅವರೆಲ್ಲಾ ವಿಚಾರಗಳಿಗೂ ಸಂಪೂರ್ಣ ಸಹಮತಿ ಸೂಚಿಸುತ್ತಾ, ನನ್ನ ಕೆಲವು ಮಾತುಗಳನ್ನು ಸೇರಿಸುತ್ತಿದ್ದೇನೆ.

೧೯೧೭ ರಲ್ಲಿ ‘ಪ್ರಭುತ್ವ ಮತ್ತು ಕ್ರಾಂತಿ’ ಎಂಬ ತಮ್ಮ ಅಗ್ರ ಲೇಖದಲ್ಲಿ ಲೆನಿನ್ ಹೇಳುತ್ತಾರೆ: “A standing army and police are the chief instruments of state power.” ಪೋಲಿಸ್ ವ್ಯವಸ್ಥೆ ಪ್ರಭುತ್ವದ ಪ್ರಮುಖ ಅಸ್ತ್ರ. ಪೋಲೀಸರ ಪರವಾಗಿ ರಾಜಕೀಯ ಪಕ್ಷ ಮತ್ತು ಸಂಘಟನೆಗಳು ಜೊತೆಗೂಡಿ ಸೇನೆಯ ಅಥವಾ ಪೋಲೀಸರ ‘ಮುಕ್ತಿಗೆ’ ನಿಲ್ಲುವುದು ಅತ್ಯಂತ ದೊಡ್ಡ ಅಭಾಸ. ಪೇದೆಗಳು, ಕೆಳಹಂತ, ಮೇಲು ಹಂತ ಎಂದೆಲ್ಲಾ ಕೂದಲು ಸೀಳಿ ವಿಂಗಡಣೆ ಮಾಡುವುದು ಪ್ರಭುತ್ವದ ಒಂದು ಸಮಷ್ಟಿಪೂರ್ಣ ಸ್ವರೂಪವನ್ನು ಕೈ, ಕಾಲು, ತಲೆ ಎಂದೆಲ್ಲಾ ವಿಂಗಡಣೆ ಮಾಡುವ ರೀತಿ ಅನರ್ಥಪೂರ್ಣವಾದದ್ದು.

ನವೀನ್ ಸೂರಿಂಜೆ ಅವರು ಹೇಳುವ ಹಾಗೆ ಇಂದು ಧರ್ಮ ಮತ್ತು ಜಾತಿಯನ್ನು ಬಳಸಿ ಸಮಾಜದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ‘ಸಾಮಾಜಿಕ ಪೋಲಿಸ’ ರೊಂದಿಗೆ ಪ್ರಭುತ್ವದ ಪೊಲೀಸರು ಒಟ್ಟು ಸೇರಿದ್ದಾರೆ. ಹೀಗಾಗಿ, ಪೋಲೀಸರ ಬಗೆಗಿನ ಸಹಾನುಭೂತಿ ಪ್ರಭುತ್ವದ ಕುರಿತ ಸಹಾನುಭೂತಿಯೇ.

ಸಮಾಜದ ಎಲ್ಲ ವರ್ಗ ವಿಭಾಗಗಳಿಗೂ ಸಂಘಟನೆಯ ಹಕ್ಕಿದೆ. ನಿಜ. Police Forces (Restriction of Rights) Act, 1966 ಎಂಬ ಕಾಯಿದೆಯcaste-riot-police ಪ್ರಕಾರ ಪೊಲೀಸರು ಯಾವುದೇ ರಾಜಕೀಯ ಅಥವಾ ಕಾರ್ಮಿಕ ಸಂಘಟನೆಯ ಸದಸ್ಯರಾಗಲು ಕೇಂದ್ರ ಸರಕಾರದ ಅನುಮತಿ ಅವಶ್ಯಕ. ಕಾನೂನಿನಲ್ಲಿ ಇವರು ಸಂಘಟನೆಗಳನ್ನು ಸ್ಥಾಪಿಸಬಹುದು. ಆದರೆ ಈ ಸಂಘಟನೆಗೆ ಇಲಾಖೆ ಮಾನ್ಯತೆ ಕೊಟ್ಟಿರಬೇಕು. ಇಷ್ಟು ಬಿಟ್ಟರೆ ಪೊಲೀಸರಿಗೆ ಮುಷ್ಕರ, ಪ್ರತಿಭಟನೆ ಇತ್ಯಾದಿ ನಡೆಸುವ ಹಕ್ಕಿಲ್ಲ. ಈ ಕಾಯಿದೆ ಇಂದು ಎಡಪಂಥೀಯ ಆಡಳಿತವಿದ್ದ ರಾಜ್ಯಗಳಲ್ಲೂ ಜಾರಿಯಲ್ಲಿದೆ. ಇದನ್ನು ಬದಲಾಯಿಸಲು ಯಾವ ಸರಕಾರಗಳೂ ಪ್ರಯತ್ನಿಸಿಲ್ಲ. ಎಡ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಪೋಲಿಸ್ ವ್ಯವಸ್ಥೆಯನ್ನು ಮಾನವೀಯವಾಗಿಸಲು ತಮ್ಮ ಸರಕಾರದ ಹಂತದಲ್ಲಿ ಏನೇನು ಕ್ರಮ ಕೈಗೊಂಡಿದ್ದಾರೆ ಮೊದಲು ಸ್ಪಷ್ಟಪಡಿಸಬೇಕು. ಒಂದು ವೇಳೆ ಈ ರೀತಿ ಪೋಲಿಸರ ಪ್ರತಿಭಟನೆ ಎಡ ಪಕ್ಷಗಳು ಆಡಳಿತವಿರುವ ಕೇರಳದಲ್ಲಿ ನಡೆದರೆ ಇವರ ನಿಲುವೇನು ಎನ್ನುವುದನ್ನೂ ಸ್ಪಷ್ಟಪಡಿಸಬೇಕು.

ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಕಾಪಾಡಲು ಪೋಲಿಸ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಪೋಲಿಸ್ ವ್ಯವಸ್ಥೆ ಕೇವಲ ಒಂದು ನಿರ್ಜೀವ ಯಂತ್ರವಲ್ಲ. ಈ ಬಂಡವಾಳಷಾಹಿ, ಕೋಮುವಾದಿ ಮತ್ತು ಮನುವಾದಿ ವ್ಯವಸ್ಥೆಯನ್ನು ಅಂತರಿಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಪೋಲಿಸ್ ವ್ಯವಸ್ಥೆ ಪ್ರಯತ್ನಪೂರ್ವಕವಾಗಿ ಗಟ್ಟಿಗೊಳಿಸುತ್ತಿದೆ. ಇಂತಹ ಪ್ರಭುತ್ವವಾದಿ ಶಕ್ತಿಗಳನ್ನು ಪ್ರತಿನಿಧಿಸುವ ಮತ್ತು ಪೋಷಿಸುವ ಪೋಲೀಸರನ್ನು ಬೆಂಬಲಿಸಲು ಹೊರಟರೆ ಪ್ರಭುತ್ವವಾದಿ ಶಕ್ತಿಗಳಿಗೆ ಬಲಬರುವುದು.

ಪೋಲಿಸ್ ವ್ಯವಸ್ಥೆಯನ್ನು ‘ಮಾನವೀಯಗೊಳಿಸಲು’ ಒಂದು ಪಕ್ಷ ಮತ್ತು ರಾಜಕೀಯ ಪ್ರೇರಿತ ಸಂಘಟನೆಗಳ ರಾಜಕೀಯ ಪ್ರತಿಭಟನೆಗಳು ಹೇಗೆ ಸಹಕಾರಿಯಾದಾವು ಎಂಬ ಬಗೆಗೆ ಗಂಭೀರ ಭಿನ್ನಾಭಿಪ್ರಾಯಗಳಿವೆ. ಪೋಲಿಸ್ ವ್ಯವಸ್ಥೆಯ ನಡುವೆಯೇ ಮನುವಾದಿ ಮತ್ತು ಪ್ರಭುತ್ವದ ಪರ ರಾಜಕೀಯ ಮತ್ತಷ್ಟು ಬೇರೂರಲು ಇದು ಕಾರಣವಾಗುತ್ತದೆ.

ಇಂದು ಕರ್ನಾಟಕದಲ್ಲಿ ಪೋಲಿಸ್ ಮುಷ್ಕರಕ್ಕೆ ನೇತೃತ್ವ ಕೊಡಲು ಹೊರಟಿರುವ ಹಿಂದಿನ ಶಕ್ತಿಗಳ ಬಗೆಗೆ ಅನೇಕ ಅನುಮಾನಗಳಿವೆ. indian-policeಇವರೊಂದಿಗೆ ಎಡ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಕೈಜೋಡಿಸುವ ಔಚಿತ್ಯವನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇಂದು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸುತ್ತಿರುವ ಶಕ್ತಿಗಳ ಜೊತೆಗೆ ಎಡ ಮತ್ತು ಅವರ ಸಾಮೂಹಿಕ ಸಂಘಟನೆಗಳ ರಾಜಕೀಯ ಅಥವಾ ತಾತ್ವಿಕ ಸಹಮತಿಯಿದೆಯೇ? ಇದು ಬಹು ಮುಖ್ಯ ಪ್ರಶ್ನೆ.

ಪೊಲೀಸರು ಮುಷ್ಕರಕ್ಕೆ ಇಳಿದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ದುರ್ಬಲವರ್ಗಗಳ ಮೇಲಿನ ದೌರ್ಜನ್ಯ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ. ದುಡುಕಿ ನಿರ್ಧರಿಸುವ ಮುನ್ನ ಇದಕ್ಕೆ ಪರ್ಯಾಯಗಳನ್ನು ಹುಡುಕದೇ ಇರಕೂಡದು.

ನವೀನ ಸೂರಿಂಜೆ ಅವರು ಅಭಿಪ್ರಾಯ ಪಡುವಂತೆ  “ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂತ್ರಗಳನ್ನು ಅನುಷ್ಠಾನ ಮಾಡುವಂತೆ ಪೋಲಿಸ್ ಇಲಾಖೆ ಹಾಗೂ ಸರಕಾರಗಳನ್ನು ಒತ್ತಾಯಿಸುವ ಕಾರ್ಯವನ್ನು ನಾವು ಮೊದಲು ಮಾಡಬೇಕಾಗಿದೆ. ಮಾನವ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟೀಯ ಮಾನವ ಹಕ್ಕು ಆಯೋಗಗಳು ಸಲ್ಲಿಸಿದ ಶಿಫಾರಸ್ಸುಗಳ ಜಾರಿಗೆ ಒತ್ತಡ ಸೃಷ್ಟಿಸುವುದು ಎಡಪಂಥೀಯ ಹೋರಾಟಗಾರರ ಮೊದಲ ಕಾರ್ಯವಾಗಬೇಕೇ ಹೊರತು ಪೋಲಿಸರ ಆಂತರಿಕ ಪ್ರತಿಭಟನೆಗಳಲ್ಲಿ ಭಾಗಿಯಾಗುವುದಲ್ಲ.”