Category Archives: ಅನಂತ ನಾಯಕ್

ವರ್ತಮಾನ ಬಳಗದ ಪುಟ್ಟ ಸಮಾಗಮ, ಎಸ್.ಆರ್.ಹಿರೇಮಠ್ ಮತ್ತು ಕಥಾಸ್ಪರ್ಧೆಯ ವಿಜೇತರೊಂದಿಗೆ…

ಆತ್ಮೀಯರೇ,

ಮೊನ್ನೆ ನಮ್ಮ ವರ್ತಮಾನ ಬಳಗವರು ಮತ್ತು ಕೆಲವು ಸ್ನೇಹಿತರು ಈ ಬಾರಿಯ (೨೦೧೪) ಗಾಂಧಿ ಜಯಂತಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕತೆಗಳನ್ನು ಬರೆದಿರುವ ಕೆಲವು ಕತೆಗಾರರೊಂದಿಗೆ ಊಟಕ್ಕೆಂದು ಸೇರಿದ್ದೆವು. ಕಥಾಸ್ಪರ್ಧೆಯ ಮೊದಲ ಮೂರು ಬಹುಮಾನಿತ ಕತೆಗಳನ್ನು ಬರೆದಿರುವ ಕತೆಗಾರರು ಮತ್ತು ಈ ಬಾರಿಯ ತೀರ್ಪುಗಾರರು ಅಂದು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣಕ್ಕೆ ಈ ಪುಟ್ಟ ಸಮಾಗಮ. ಹಾಗೆಯೇ, ನಮ್ಮ ರಾಜ್ಯದ ವರ್ಷದ ವ್ಯಕ್ತಿಯಾಗಿ ನಮ್ಮ ವರ್ತಮಾನ ಬಳಗ ಆಯ್ಕೆ ಮಾಡಿದ್ದ ಎಸ್.ಆರ್.ಹಿರೇಮಠರೂ ನೆನ್ನೆ ಬೆಂಗಳೂರಿನಲ್ಲಿ ಇದ್ದರು. ಸಾಧ್ಯವಾದರೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನಮ್ಮ ಕತೆಗಾರರಿಗೆ ಅವರಿಂದಲೇ ಬಹುಮಾನ ವಿತರಣೆ ಮಾಡಿಸಬೇಕೆಂದು ಅಂದುಕೊಂಡಿದ್ದೆವು.

ಬೆಂಗಳೂರಿನ ಗಾಂಧಿನಗರದಲ್ಲಿರುವ ಬಸಂತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಸಿಗುತ್ತದೆ. ಅಲ್ಲಿ ಸೇರಿದ್ದೆವು. katha-sprade-2014-223x300ನಮ್ಮ ವರ್ತಮಾನ.ಕಾಮ್‌ನೊಂದಿಗೆ ಮೊದಲಿನಿಂದಲೂ ಬೆನ್ನೆಲುಬಾಗಿ ನಿಂತಿರುವ ನಾಲ್ಕೈದು ಜನ ಬೆಂಗಳೂರಿನ ಹೊರಗೆಯೇ ಇರುವುದರಿಂದ ಅವರು ಪಾಲ್ಗೊಳ್ಳಲಾಗಲಿಲ್ಲ ಮತ್ತು ನಗರದಲ್ಲಿಯೇ ಇರುವ ಇನ್ನೂ ಕೆಲವರು ಕಾರ್ಯಬಾಹುಳ್ಯದಿಂದಾಗಿ ಬರಲಾಗಲಿಲ್ಲ. ಬರಬೇಕಾಗಿದ್ದ ಈ ಬಾರಿಯ ತೀರ್ಪುಗಾರರಾಗಿದ್ದ ಎಸ್.ಗಂಗಾಧರಯ್ಯನವರೂ ಬರಲಾಗಿರಲಿಲ್ಲ. ಅವರನ್ನು ಬಿಟ್ಟರೆ ಒಟ್ಟಾರೆಯಾಗಿ ನಮ್ಮ ಬಳಗದ ಬಹುತೇಕರು ಹಾಜರಿದ್ದರು.

ಊಟದ ನಂತರ ಎಸ್.ಆರ್.ಹಿರೇಮಠರು ಹಾಜರಿದ್ದ ಕರೆಗಾರರಾದ ಟಿ.ಎಸ್.ವಿವೇಕಾನಂದ, ಟಿ.ಕೆ.ದಯಾನಂದ್, ಮತ್ತು ಎಚ್.ಎಸ್.ಅನುಪಮರಿಗೆ ಬಹುಮಾನಗಳನ್ನು ಕೊಟ್ಟರು. ಕಳೆದ ಬಾರಿಯ ತೀರ್ಪುಗಾರರಾಗಿದ್ದ ರಾಮಲಿಂಗಪ್ಪ ಟಿ.ಬೇಗೂರುರವರು ಈ ಸಂದರ್ಭದಲ್ಲಿ ಹಾಜರಿದ್ದು, ಬಹಳ ಆಪ್ತ ವಾತಾವರಣದಲ್ಲಿ, ಒಂದು ರೀತಿಯಲ್ಲಿ ಖಾಸಗಿಯಾಗಿ ಇದು ಮುಗಿಯಿತು.

ಈ ಪುಟ್ಟ ಸಮಾಗಮಕ್ಕೆ ಆಗಮಿಸಿದ್ದ ಎಸ್.ಆರ್.ಹಿರೇಮಠ್, ಡಾ.ರಾಮಲಿಂಗಪ್ಪ ಟಿ.ಬೇಗೂರು, ಟಿ.ಎಸ್.ವಿವೇಕಾನಂದ ಮತ್ತು ಕುಟುಂಬದವರು, ಟಿ.ಕೆ.ದಯಾನಂದ್, ಡಾ.ಎಚ್.ಎಸ್.ಅನುಪಮ, ಬಿ.ಶ್ರೀಪಾದ ಭಟ್, ಜಯಶಂಕರ ಹಲಗೂರು, ಆನಂದ ಯಾದವಾಡ ಮತ್ತು ಕುಟುಂಬದವರು, ರವಿ ಮತ್ತು ಕುಟುಂಬದವರು, ಈಶ್ವರ್ ಮತ್ತು ಕುಟುಂಬದವರು, ಫ್ರಭಾ ಎನ್. ಬೆಳವಂಗಲ, ನವೀನ್ ಸೂರಿಂಜೆ, ತೇಜ ಸಚಿನ್ ಪೂಜಾರಿ, ಡಾ. ಅಶೋಕ್ ಕೆ,ಆರ್., ಅನಂತ ನಾಯ್ಕ, ಶಾಂತಲಾ ದಾಮ್ಲೆ, ಪ್ರಶಾಂತ್ ಹುಲ್ಕೋಡು, ಚಂದ್ರಶೇಖರ ಬೆಳಗೆರೆ, ಬಸವರಾಜು, ಶ್ರೀಧರ್ ಪ್ರಭು, ನಿತಿನ್, ಬಸೂ ಸೂಳಿಬಾವಿ ಮತ್ತವರ ಸ್ನೇಹಿತರು- ಎಲ್ಲರಿಗೂ ವರ್ತಮಾನ ಬಳಗದಿಂದ ಧನ್ಯವಾದ ಮತ್ತು ಕೃತಜ್ಞತೆಗಳು.

ಮತ್ತೊಮ್ಮೆ ಬಂದ ಎಲ್ಲಾ ಸ್ನೇಹಿತರಿಗೂ ಬಳಗದ ಪರವಾಗಿ ಧನ್ಯವಾದಗಳು.

ನಮಸ್ಕಾರ,
ರವಿ
ವರ್ತಮಾನ ಬಳಗದ ಪರವಾಗಿ.

vartamana_spardhe_1

 

vartamana_spardhe_2

ಬಿಸಿಯೂಟ ನಿರ್ವಹಣೆ ಖಾಸಗಿಯವರ ಪಾಲಾಗದಿರಲಿ


– ಅನಂತನಾಯ್ಕ ಎನ್.


 

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಒಪ್ಪಂದದ ಘೋಷಣೆ ಯಾವುದೇ ಮಗುವು ಆಹಾರದಿಂದ ವಂಚಿತರಾಗಬಾರದು. ಹಸಿವು, ಬಡತನ, ಅಪೌಷ್ಟಿಕತೆ ಹಾಗೂ ತಾರತಮ್ಯಗಳು ಬದುಕುವ ಹಕ್ಕಿನಿಂದ ವಂಚಿಸಬಾರದು ಎಂದು ಹೇಳಿದೆ. ಹಸಿವು, ಬಡತನ ಹಾಗೂ ಅಪೌಷ್ಟಿಕತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿರುವುದನ್ನು ಗಮನಿಸಿ ಶಾಲೆಗಳಲ್ಲಿಯೇ ಬಿಸಿಯೂಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟಗಳ ಫಲವಾಗಿ ಬಿಸಿಯೂಟದ ಯೋಜನೆ ಜಾರಿಯಾಗಿದ್ದು ಜನ ಚಳವಳಿಗಳಿಗೆ ದೊರೆತ ಜಯ.

ಕಾರ್ಪೋರೇಟ್ ಕಂಪೆನಿಗಳ ಪರ ಸರ್ಕಾರದ ವಕಾಲತ್ತು:
ಜುಲೈ 23 ರಂದು ವಿಧಾನಪರಿಷತ್ತಿನ ಅಧಿವೇಶನದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು, “ಬಿಸಿಯೂಟದ ನಿರ್ವಹಣೆಯನ್ನು ಕಾರ್ಪೋರೇಟ್ ಕಂಪೆನಿಗಳಿಗೆ ವಹಿಸಲಾಗುವುದು. ನಾನೇ ಖುದ್ದಾಗಿ ಕಂಪೆನಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸುತ್ತೇನೆ” ಎಂದು ಹೇಳಿದ್ದಾರೆ. mid-day_mealsಈ ಹೇಳಿಕೆ ಸರ್ಕಾರದ ಹಿತಾಸಕ್ತಿ ಯಾರ ಪರ ಎಂಬುದನ್ನು ಸೂಚಿಸುತ್ತದೆ. ಇವರು ಜನತೆಯ ಪ್ರತಿನಿಧಿಗಳೋ ಅಥವಾ ಖಾಸಗೀ ಕಂಪೆನಿಗಳ ಏಜೆಂಟರೋ? ಎಂಬ ಪ್ರಶ್ನೆ ಏಳುತ್ತದೆ. ಸಾರ್ವಜನಿಕ ವ್ಯವಸ್ಥೆಯನ್ನು ನಾಶಗೊಳಿಸಿ ಖಾಸಗಿ ಅಧಿಪತ್ಯ ಸ್ಥಾಪಿಸಲು ಹೊರಟಿರುವ ಈ ಹೇಳಿಕೆಯ ಹಿಂದೆ ಶಿಕ್ಷಣದ ಹಕ್ಕು, ಆಹಾರದ ಹಕ್ಕನ್ನು ನಿರಾಕರಿಸುವುದಲ್ಲದೇ ಲಕ್ಷಾಂತರ ದಮನಿತ ಮಹಿಳೆಯರ ಉದ್ಯೋಗವನ್ನೂ ಕಸಿದುಕೊಳ್ಳುವುದಾಗಿದೆ. ಬಿಸಿಯೂಟ ಯೋಜನೆಯ ಸಮಸ್ಯೆಯ ಮೂಲವಿರುವುದು ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಪೂರೈಕೆ, ಅಸಮರ್ಪಕ ನಿರ್ವಹಣೆ ಮತ್ತು ಅಗತ್ಯ ಸೌಲಭ್ಯಗಳನ್ನು ನೀಡದೇ ಇರುವುದರಲ್ಲಿ. ಇದನ್ನು ಸರಿಪಡಿಸಲು ಹಣಕಾಸು ಖರ್ಚು, ಅಗತ್ಯ ಸೌಲಭ್ಯ ನೀಡುವ ಬದಲು ಯೋಜನೆಯನ್ನೇ ಖಾಸಗೀಕರಿಸಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಲಾಭವೇ ತಮ್ಮ ಏಕಮಾತ್ರ ಉದ್ದೇಶವೆಂದು ನಂಬಿರುವ ಕಾರ್ಪೋರೇಟ್ ಕಂಪನಿ, ಎನ್‌ಜಿಓಗಳಿಗೆ ಈ ರೀತಿ ಯೋಜನೆ ಹಸ್ತಾಂತರಿಸುವುದಾದರೆ ಜನರು ಆಯ್ಕೆ ಮಾಡಿದ ಸರ್ಕಾರದ ಕೆಲಸವೇನು? ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಯೋಜನೆಯ ಉದ್ದೇಶ:
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ 2002-03ರಲ್ಲಿ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಈಶಾನ್ಯ ವಲಯದ 7 ಜಿಲ್ಲೆಗಳ ಸರ್ಕಾರಿ ಶಾಲೆಗಳ 1ರಿಂದ 5ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಪ್ರಾರಂಭವಾಗಿ, ಇಂದು ರಾಜ್ಯವ್ಯಾಪಿ 1 ರಿಂದ 10 ನೇ ತರಗತಿವರೆಗೆ ವಿಸ್ತರಣೆಯಾಗಿದೆ. ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸುವುದು, ಶಾಲೆ ತೊರೆಯುವುದನ್ನು ತಡೆಯುವುದು, ಪೌಷ್ಟಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯ ಹೆಚ್ಚಿಸಿ ಶಕ್ತಿವಂತರು, ದೃಢಕಾಯರಾಗಿ ಮಕ್ಕಳನ್ನು ಬೆಳೆಸುವುದು. ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದು ‘ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿಗೊಳಿಸಿ ತನ್ಮೂಲಕ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯ ಮೂಡಿಸುವುದು’ ಅಕ್ಷರ ದಾಸೋಹ ಕಾರ್ಯಕ್ರಮದ ಉದ್ದೇಶ.

ಈ ಯೋಜನೆಯು ಜಾರಿಯಾದಾಗಿನಿಂದ ಮಕ್ಕಳ ಹಾಜರಾತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. mid-day-meal-2ಅಪೌಷ್ಟಿಕತೆ ಸಣ್ಣ ಪ್ರಮಾಣದಲ್ಲಿ ದೂರ ಸರಿಯಲು ಸಹಕಾರಿಯಾಗಿದೆ. ವಿವಿಧ ಸಮುದಾಯದ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಊಟ ಮಾಡುವುದು ‘ಸಮಾನತೆಯೆಡೆಗೆ ಉತ್ತಮ ಪ್ರಯತ್ನವಾಗಿದೆ’. ಶಾಲಾ ಆವರಣದಲ್ಲಿಯೇ ಬಿಸಿಯೂಟ ತಯಾರು ಮಾಡಿ ನೀಡುತ್ತಿರುವುದರಿಂದ ಮಕ್ಕಳಿಗೆ ಮನೆ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಲೆ ಎಂದರೆ ಭಯಪಡುವ ಕೆಲ ಮಕ್ಕಳಿಗೆ ತಾಯಿ ಮಮತೆ-ಪ್ರೀತಿ ನೀಡಿ ಸಂತೈಸುವಲ್ಲಿ ಅಡುಗೆ ತಯಾರಕರ ಕಾರ್ಯ ಶ್ಲಾಘನೀಯ. ಕನಿಷ್ಠ ರೂ.1100, 1000 ವೇತನ ಪಡೆಯುತ್ತಿದ್ದರೂ ಕೂಡ ಮಕ್ಕಳ ಪಾಲನೆಯಲ್ಲಿ ತೊಡಗುವ ಅಡುಗೆ ತಯಾರಕ ಮತ್ತು ಮಕ್ಕಳ ನಡುವಿನ ಒಡನಾಟ ಕಲಿಕೆಯ ಪ್ರಗತಿಗೆ ಸಹಕಾರಿಯಾಗುತ್ತಿದೆ. ಶೋಷಿತ, ಸಂಕಷ್ಟದಲ್ಲಿರುವ ಲಕ್ಷಾಂತರ ಮಹಿಳೆಯರಿಗೆ ಉದ್ಯೋಗ ನೀಡಿ ಸಬಲೀಕರಣಗೊಳಿಸುವುದು ಈ ಯೋಜನೆಯ ಇನ್ನೊಂದು ಪ್ರಮುಖ ಅಂಶ ಹಾಗೂ ಗಮನಾರ್ಹ ಸಂಗತಿಯೂ ಹೌದು.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 55,113 ಶಾಲೆಗಳಲ್ಲಿ (ಸರಕಾರಿ (48,773), ಅನುದಾನಿತ (6,340)), 61.40 ಲಕ್ಷ ವಿದ್ಯಾರ್ಥಿಗಳು ಬಿಸಿಯೂಟದ ಪ್ರಯೋಜನ ಪಡೆಯಲಿದ್ದಾರೆ. ಪ್ರತಿದಿನ ಊಟದ ವೆಚ್ಚವಾಗಿ ಕಿರಿಯ ಪಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ.3.11, ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರೂ.4.65, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೂ.6.16 ಖರ್ಚು ಮಾಡುತ್ತಿದೆ. ಈ ಕನಿಷ್ಠ ಹಣದಲ್ಲಿ ಪೌಷ್ಟಿಕ ಆಹಾರ ನೀಡಲು ಸಾಧ್ಯವೇ?

ಸರ್ಕಾರಿ ಸೂಚಿತ ಆಹಾರ ಪಟ್ಟಿಯಲ್ಲಿ ಅನ್ನ ಸಾಂಬಾರು, ಬಿಸಿ ಬೇಳೆಬಾತ್, ಉಪ್ಪಿಟ್ಟು, ಸಿಹಿ ಪೊಂಗಲ್ ನೀಡಲು ಆದೇಶಿಸಲಾಗಿದೆ. ಇದು ಪೌಷ್ಟಿಕ ಆಹಾರವೇ? ರೊಟ್ಟಿ, ಮುದ್ದೆ, ಮೊಟ್ಟೆ, ಮೀನು, ಮಾಂಸಾಹಾರ ಮತ್ತು ಸ್ಥಳೀಯವಾಗಿ ಸಿಗುವ ಧಾನ್ಯ ತರಕಾರಿ, ಹಣ್ಣುಗಳು ಪೌಷ್ಟಿಕವಲ್ಲವೇ? ಎಂಬುದು ಚರ್ಚೆಯಾಗಬೇಕಿದೆ. ಅಗತ್ಯ ಪೌಷ್ಟಿಕ ಆಹಾರ ನೀಡುವ ಬದಲು ಮಾತ್ರೆಗಳ ಮೂಲಕವೇ ಪೌಷ್ಟಿಕತೆ ಹೆಚ್ಚಿಸಲು ಹೊರಟ ಸರಕಾರದ ಕ್ರಮ ಎಷ್ಟು ಸರಿ? ಪಕ್ಕದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬಿಸಿಯೂಟದ ಜತೆ ಮೊಟ್ಟೆ, ಬಾಳೆಹಣ್ಣು ಹಾಗೂ ಅಗತ್ಯ ಕಾಳುಗಳನ್ನು ನೀಡಲಾಗುತ್ತಿದೆ.

ರಾಜ್ಯವ್ಯಾಪಿ ಪ್ರಸ್ತುತ 1,04,357 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ರೂ.1,100. ಸಹಾಯಕರಿಗೆ ರೂ.1,000 ಗಳನ್ನು ನೀಡಲಾಗುತ್ತಿದೆ. ಪಕ್ಕದ ಕೇರಳ ರಾಜ್ಯದಲ್ಲಿ ಮುಖ್ಯ ಅಡುಗೆಯವರಿಗೆ ರೂ 4,000, ಸಹಾಯಕ ಅಡುಗೆಯವರಿಗೆ ರೂ 3,000 ವೇತನ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಸೇವಾ ಭದ್ರತೆ, ಕನಿಷ್ಠ ವೇತನ, ಅಗತ್ಯ ತರಬೇತಿ, ಸೂಕ್ತ ತರಬೇತಿಯಿಂದ ಅಡುಗೆ ತಯಾರಕರು ವಂಚಿತರಾಗಿದ್ದಾರೆ. ದೌರ್ಜನ್ಯ, ಅವಮಾನಿಸುವುದು ಹಾಗೂ ಕೆಲಸದಿಂದ ತೆಗೆದುಹಾಕುವುದು ಕೆಲವೆಡೆ ನಡೆಯುತ್ತಲೇ ಇದೆ.

ಬಿಸಿಯೂಟ ತಯಾರಿಸಲು ಅಗತ್ಯ ಸೌಲಭ್ಯಗಳ ಕೊರತೆ:
ಎಲ್ಲಾ ಶಾಲೆಗಳಿಗೂ ಸುಸಜ್ಜಿತ ಅಡುಗೆಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಬಯಲಲ್ಲಿ, ಚಪ್ಪರದಲ್ಲಿ, ತರಗತಿ ಕೋಣೆಗಳಲ್ಲಿಯೇ MID-DAY-MEALಅಡುಗೆ ತಯಾರಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಇಂದಿಗೂ ಹಳ್ಳ, ಇನ್ನಿತರ ಕಡೆಯ ಅಶುದ್ಧ ನೀರನ್ನೇ ಬಳಸಲಾಗುತ್ತಿದೆ. ಅವಶ್ಯವಿರುವ ಪಾತ್ರೆ, ಸ್ಟೌ, ತಟ್ಟೆ ಇನ್ನಿತರ ಪರಿಕರಗಳನ್ನು ಸಮರ್ಪಕವಾಗಿ ಪೂರೈಸಲಾಗಿಲ್ಲ. ನಿರಂತರವಾಗಿ ಶಾಲಾ ಆವರಣ, ಶಾಲಾ ಕೊಠಡಿಗಳನ್ನು ಶುಚಿಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಸಿಯೂಟ ಅಡುಗೆಯಲ್ಲಿ ಹಲ್ಲಿ, ಇಲಿ, ಇನ್ನಿತರ ಕೀಟಗಳು ಬೀಳುತ್ತಿರುವ ವರದಿಗಳು ಕೆಲವೆಡೆ ಆಗಿವೆ. ಬಿಸಿಯೂಟ ಯೋಜನೆಯನ್ನು ವಿಫಲಗೊಳಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೂಡ ಇಂತಹ ಹೀನಕೃತ್ಯ ಮಾಡುತ್ತಿರುವ ಶಂಕೆ ಇದೆ!

ಕಳಪೆ ಪದಾರ್ಥಗಳ ವಿತರಣೆ:
ಸರಕಾರದಿಂದ ಶಾಲಾ ವಿದ್ಯಾರ್ಥಿಗೆ ಅಕ್ಕಿ, ಬೇಳೆಯನ್ನು ವಿತರಿಸಲಾಗುತ್ತಿದೆ. ಈ ಅಕ್ಕಿ ಬೇಳೆ ಕಳಪೆ ಗುಣಮಟ್ಟದ್ದು ಅಲ್ಲದೇ ವಿತರಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಲದೇ ಪ್ರತಿದಿನ ವಿದ್ಯಾರ್ಥಿಗಳಿಗೆ ಊಟಕ್ಕಾಗಿ ಖರ್ಚು ಮಾಡುತ್ತಿರುವ ಹಣ ಇವತ್ತಿನ ಬೆಲೆ ಏರಿಕೆಗೆ ತುಲನೆ ಮಾಡಿದರೆ ತರಕಾರಿ, ಕಾಳು, ಮಸಾಲೆ ಪದಾರ್ಥ ಕೊಳ್ಳಲು ಕಷ್ಟಸಾಧ್ಯ.

ಸೇವೆಯ ಹೆಸರಿನಲ್ಲಿ ಎನ್.ಜಿ.ಓ (ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ) ಗಳಿಂದ ಲೂಟಿ:
ಈಗಾಗಲೇ ರಾಜ್ಯದಲ್ಲಿ ಅಕ್ಷಯಪಾತ್ರೆ ಫೌಂಡೇಶನ್ (ಇಸ್ಕಾನ್), ಅದಮ್ಯ ಚೇತನ, ಸೇರಿದಂತೆ 93 ಸ್ವಯಂಸೇವಾ ಸಂಸ್ಥೆಗಳು 5,790 ಶಾಲೆಗಳಲ್ಲಿ ಸರಕಾರದಿಂದ ಹಣ ಪಡೆದು 10.68 ಲಕ್ಷದಷ್ಟು ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುತ್ತಿವೆ. ಅಲ್ಲದೆ ಕರ್ನಾಟಕದ ಬಡ ಮಕ್ಕಳ ಚಿತ್ರಗಳನ್ನು ತೋರಿಸಿ ದೇಶ ವಿದೇಶಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿವೆ. ಇಸ್ಕಾನ್ ನೀಡುವ ಊಟದಲ್ಲಿ ಇಲಿ ಇದ್ದುದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಾರಗಟ್ಟಲೇ ಹಳಸಿದ ಊಟ ನೀಡಿದ ಎನ್.ಜಿ.ಓ ವಿರುದ್ಧ ಈ ಹಿಂದೆ ಪ್ರತಿಭಟನೆಗಳು ನಡೆದಿವೆ. ಊಟವೆಂದರೆ, ಕೇವಲ ಸಸ್ಯಾಹಾರ ಮಾತ್ರ, ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೇಕಿಲ್ಲಾ ಎನ್ನುತ್ತಲೇ ಈ ಎನ್.ಜಿ.ಓ ಗಳು ಅಹಾರದ ಹಕ್ಕಿನ ಮೇಲೆ ದಾಳಿ ಮಾಡಲು ಹೊರಟಿವೆ. ಪ್ರಾದೇಶಿಕ ಅಹಾರವನ್ನು ತಿರಸ್ಕರಿಸಲಾಗುತ್ತಿದೆ. ನೂರಾರು ಶಾಲೆಗಳಿಗೆ ಒಂದೇ ರೀತಿಯ ಊಟವನ್ನು ಸಾಗಿಸಲಾಗುತ್ತಿದೆ. ಬಿಸಿಯೂಟ ಕಲ್ಪನೆಗೆ ವಿರುದ್ಧವಾಗಿ ತಂಗಳು, ಹಳಸಿದ, ತಣ್ಣಗಾದ ಊಟವನ್ನು ನೀಡಲಾಗುತ್ತಿದೆ.

ಬಿಸಿಯೂಟ ಯೋಜನೆ ಸಮರ್ಪಕ ಜಾರಿಗೆ ಸಲಹೆಗಳು:

  • ಶಾಲಾ ಆವರಣದಲ್ಲಿಯೇ ಮಕ್ಕಳಿಗೆ ಬಿಸಿ ತಾಜಾ ಊಟವನ್ನು ತಯಾರು ಮಾಡಿಕೊಡಬೇಕು.
  • ಅಡುಗೆಮನೆ, ಶುದ್ಧ ಕುಡಿಯುವ ನೀರು, ಗ್ಯಾಸ್ ಸ್ಟೌ, ಪಾತ್ರೆ, ತಟ್ಟೆ ಇನ್ನಿತರ ಅಗತ್ಯ ಪರಿಕರಗಳನ್ನು ಪೂರೈಸಬೇಕು. ಆಹಾರ ಪದಾರ್ಥ, ತರಕಾರಿ ಹಾಳಾಗದಂತೆ ಕಾಪಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
  • ರಾಜ್ಯವ್ಯಾಪಿ 61 ಲಕ್ಷದಷ್ಟು ವಿದ್ಯಾರ್ಥಿಗಳು ಈ ಯೋಜನೆ ವ್ಯಾಪ್ತಿಯಲ್ಲಿ ಬರುವುದರಿಂದ ಶಿಕ್ಷಣ ಇಲಾಖೆಯಡಿ ಬಿಸಿಯೂಟ ಯೋಜನೆ ಪ್ರಾಧಿಕಾರ/ನಿಗಮ ಅಥವಾ ನಿರ್ದೇಶನಾಲಯ ಸ್ಥಾಪಿಸಿ ನಿರ್ವಹಿಸಬೇಕು.
  • ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು (ತರಕಾರಿ, ಹಣ್ಣುಗಳು, ಮೊಟ್ಟೆ, ಮೀನು, ಮಾಂಸಾಹಾರ ಇತ್ಯಾದಿ) ಉಪಯೋಗಿಸಿ ಅಡುಗೆ ತಯಾರಿಸಲು ಮುಂದಾಗಬೇಕು. ವಾರಕ್ಕೊಮ್ಮೆಯಾದರೂ ಆಹಾರ ತಜ್ಞರು ಶಾಲೆಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಬೇಕು.
  • ಶಿಕ್ಷಕರನ್ನು ಈ ಯೋಜನೆಯ ಕೆಲಸಕ್ಕೆ ತೊಡಗಿಸಬಾರದು. ಯೋಜನೆಯ ಜಾರಿಗೆ ಶಾಲೆ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಅವಶ್ಯಕವಿರುವ ಹುದ್ದೆಗಳನ್ನು ಮಾರ್ಪಾಡು ಮಾಡಿ ನೇಮಕ ಮಾಡಿಕೊಳ್ಳಬೇಕು. ಶಾಲಾ ಮುಖ್ಯೋಪಾಧ್ಯಾಯರು ತಿಂಗಳ ಆಹಾರ ಪದಾರ್ಥಗಳ ಬೇಡಿಕೆ ಪಟ್ಟಿಯನ್ನು ತಯಾರಿಸಿ ನೀಡಬೇಕು.
  • ಪೋಷಕರ ಪ್ರಾತಿನಿಧ್ಯವಿರುವ ಎಸ್.ಡಿ.ಎಂ.ಸಿ ಯಲ್ಲಿ ಪಾರದರ್ಶಕವಾಗಿ ಈ ಯೋಜನೇಯ ಜಾರಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಎಸ್.ಡಿ.ಎಂ.ಸಿ ಯ ಕೆಲವರು ಅನಗತ್ಯವಾಗಿ ಕಿರುಕುಳ ನೀಡದಂತೆ ಎಚ್ಚರವಹಿಸಬೇಕು.
  • ಈ ಯೋಜನೆಯಲ್ಲಿ ದುಡಿಯುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಡ, ದಲಿತ, ಹಿಂದುಳಿದ ವರ್ಗಗಳ ದುರ್ಬಲರಾಗಿದ್ದು ಇವರ ಸೇವೆಯನ್ನು ಖಾಯಂಗೊಳಿಸಬೇಕು, ಕನಿಷ್ಠ ವೇತನ ನಿಗದಿಗೊಳಿಸಬೇಕು. (ಕೇರಳ ರಾಜ್ಯದಲ್ಲಿ ಮುಖ್ಯ ಅಡುಗೆಯವರಿಗೆ 4 ಸಾವಿರ ರೂಪಾಯಿ, ಸಹಾಯಕ ಅಡುಗೆಯವರಿಗೆ 3 ಸಾವಿರ ವೇತನ ನೀಡಲಾಗುತ್ತಿದೆ). ಮಕ್ಕಳ ಕಲಿಕೆಯ ಪ್ರೇರೇಪಣೆಗೆ ಅನುಕೂಲವಾಗುವಂತೆ ಅಡುಗೆಯವರಿಗೆ ಸೂಕ್ತ ತರಬೇತಿ ನೀಡಬೇಕು.
  •  ಅಡುಗೆಯವರಿಗೆ ಕಾಲಕಾಲಕ್ಕೆ ಅಗತ್ಯ ತರಬೇತಿಗಳನ್ನು ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಸಿಗುವಂತಾಗಲು ಪ್ರತಿದಿನ ಒಬ್ಬ ವಿದ್ಯಾರ್ಥಿಗೆ ಕನಿಷ್ಠ ರೂ.20 ಗಳನ್ನು ಆಹಾರ ವೆಚ್ಚ ನೀಡಬೇಕು. ಅಡುಗೆಮನೆಯ ತಪಾಸಣೆ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಪ್ರತಿವಾರ ನಡೆಸಬೇಕು. ಪ್ರಾದೇಶಿಕ ಭಿನ್ನತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ವಿತರಿಸಬೇಕು.

ಇತ್ತೀಚೆಗೆ ಒಂದು ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ “ಶೇಕಡಾ 98%ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿಯೇ ತಯಾರಿಸಿದ ಊಟ ಬೇಕು” ಎಂಬ ಅಂಶವನ್ನು ಹೇಳಿದ್ದಾರೆ. ಹಾಗಾಗಿ, ಸಾರ್ವಜನಿಕ ಹಾಗೂ ಸರ್ಕಾರಿ ವ್ಯವಸ್ಥೆಯ ಮೂಲಕವೇ ನಮ್ಮ ಮಕ್ಕಳಿಗೆ ಬಿಸಿಯೂಟ ಪೂರೈಕೆಯಾಗಬೇಕೇ ವಿನಾಃ ಖಾಸಗೀ ಕಾರ್ಪೋರೇಟ್ ಕಂಪೆನಿಗಳ ಇಲ್ಲವೇ ಎನ್‌ಜಿಒಗಳ ಮೂಲಕ ಪೂರೈಕೆಯಾಗುವ ‘ತಂಗಳನ್ನ’ ಅಲ್ಲ.

RTE: ಖಾಸಗಿಯವರಿಗೆ ಸರ್ಕಾರ ಶರಣು

-ಅನಂತ ನಾಯಕ್

ದೇಶದ ಸಂವಿಧಾನ ರಚಿತವಾಗಿ 10 ವರ್ಷದೊಳಗೆ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪೂರೈಕೆ ಮುಗಿದಿರಬೇಕೆಂದು ಉದ್ದೇಶಿಸಲಾಗಿತ್ತು. ಈ ಗುರಿಯನ್ನು ತಲುಪಲು ಆಳುವ ಪ್ರಭುತ್ವಗಳಿಂದ ಸಾಧ್ಯವಾಗಲೇ ಇಲ್ಲ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಶಿಕ್ಷಣ ಸಾರ್ವತ್ರೀಕರಣವಾಗಬೇಕೆನ್ನುವ ಚಳವಳಿಯ ಫಲವಾಗಿ ರೂಪಿತವಾದ ಕಾಯ್ದೆಗಳಲ್ಲಿ “ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009” ಕೂಡ ಪ್ರಮುಖವಾದದ್ದು. 2009 ರಿಂದಲೇ ಬಹುತೇಕ ರಾಜ್ಯ ಸರ್ಕಾರಗಳು ಈ ಕಾಯ್ದೆ ಜಾರಿಗೆ ಮುಂದಾದವು, ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ನಿರ್ಲಕ್ಷ್ಯ ತಾಳಿತು. ಸುಪ್ರೀಂಕೋರ್ಟ್ ಮತ್ತು ಜನ ಚಳವಳಿಯ ಒತ್ತಡದಿಂದ ಪ್ರಸಕ್ತ ವರ್ಷ ರಾಜ್ಯದಲ್ಲಿ ಜಾರಿಗೆ ಮುಂದಾಗಿರುವಂತೆ ಕಾಣಿಸುತ್ತಿದ್ದರೂ ಖಾಸಗಿ ಶಾಲೆಯವರ ತಾಳಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಕುಣಿಯುತ್ತಿರುವುದು ಸ್ಪಷ್ಟಗೊಂಡಿದೆ.

ಚಳವಳಿಯ ಫಲವಾಗಿ ಶಿಕ್ಷಣ ಹಕ್ಕು:
ಜನ ಚಳವಳಿಯ ಒತ್ತಡದಿಂದ 2002ರಲ್ಲಿ ಸಂವಿಧಾನದ 86ನೇ ತಿದ್ದುಪಡಿಯ ಮೂಲಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿ ಕಲಂ 21(ಎ)ನಲ್ಲಿ ಮಕ್ಕಳ ಶಿಕ್ಷಣದ ಹಕ್ಕನ್ನು ಖಾತ್ರಿ ಗೊಳಿಸಲಾಯಿತು. 2002 ರಲ್ಲಿ ಶಿಕ್ಷಣ ಕೇಂದ್ರಿಯ ಸಲಹಾ ಮಂಡಳಿ (Central Advisory Board for Education)ಯನ್ನು ರಚಿಸಲಾಗಿ ಇದರ ಶಿಫಾರಸ್ಸಿನಂತೆ 2009 ಆಗಸ್ಟ್ 12 ರಂದು ಲೋಕಸಭೆ ‘ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ-2009’ನ್ನು ಅಂಗಿಕರಿಸಿತು. ಈ ಕಾಯ್ದೆಯಲ್ಲಿ ಮಕ್ಕಳ ಕಡ್ಡಾಯ ದಾಖಲೆ, ನಿರಂತರ ಹಾಜರಾತಿ, ಗುಣಮಟ್ಟದ ಭಾವೈಕ್ಯತಾ ಶಿಕ್ಷಣ, ವಿಕಲಚೇತನರಿಗೆ ಆದ್ಯತೆ, ದೈಹಿಕ-ಮಾನಸಿಕ ದಂಡನೆ ನಿಷೇಧ, ಸರ್ಕಾರ-ಪಂಚಾಯ್ತಿಗಳ, ಪಾಲಕರ ಕರ್ತವ್ಯ, ಜಾತಿ-ಧರ್ಮದ ಹೆಸರಿನಲ್ಲಿ ಪ್ರವೇಶ ನಿರಾಕರಣೆ-ಅವಮಾನಕ್ಕೆ ವಿರೋಧ, ಪ್ರವೇಶ ಪರೀಕ್ಷೆ, ಟ್ಯೂಷನ್ ನಿಷೇಧ, ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಶೇ 25 ರಷ್ಟು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಉಚಿತ ಪ್ರವೇಶ ನೀಡಬೇಕೆನ್ನುವುದು ಕಾಯ್ದೆ ಪ್ರಮುಖಾಂಶ. (ಈ ವಿದ್ಯಾರ್ಥಿಗಳ ಶುಲ್ಕಗಳನ್ನು ಸರ್ಕಾರವೇ ಖಾಸಗಿ ಶಾಲೆಗಳಿಗೆ ಭರಿಸಬೇಕು).

ಇದು ಒಂದು ಕ್ರಾಂತಿಕಾರಿ ಕಾಯ್ದೆ ಅಲ್ಲದಿದ್ದರೂ ಮಕ್ಕಳ ಶಿಕ್ಷಣ ಹಕ್ಕಿನ ಖಾತ್ರಿ ಮೂಡಿಸುತ್ತಿರುವುದು ಸಂತೋಷಕರ. ಯಥಾವತ್ತಾಗಿ ಈ ಕಾಯ್ದೆಯ ಜಾರಿ ಸಾದ್ಯವಿಲ್ಲವೆಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸುಪ್ರಿಂ ಕೋರ್ಟ್ ಮೊರೆ ಹೋಗಿ ಛೀಮಾರಿ ಹಾಕಿಸಿಕೊಂಡು ಬಂದಿವೆ. “ಶೇ 25 ಬಡ-ಹಿಂದುಳಿದ-ದಲಿತ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ, ಏಕೆಂದರೆ ಅವರು ನಮ್ಮಲ್ಲಿರುವ ಶ್ರೀಮಂತ ಮಕ್ಕಳ ಜೊತೆ ಬೆರೆಯಲು ಸಾಧ್ಯವಿಲ್ಲ”ವೆಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂವಿಧಾನ ವಿರೋಧಿವಾದವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿ “ಶಾಲೆಗಳು ತಾರತಮ್ಯ ಕೇಂದ್ರಗಳಾಗಬಾರದು. ಮಕ್ಕಳಲ್ಲಿ ಭೇದಭಾವ ತೋರಬಾರದು,” ಎಂದು ಹೇಳಿ 25% ಬಡ ವಿದ್ಯಾರ್ಥಿಗಳಿಗೆ ಕಡ್ಡಾಯ ಪ್ರವೇಶ ನೀಡಬೇಕು ಎಂದು ತೀರ್ಪು ನೀಡಿತು. ಇದನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗುವ ಬದಲು ಬಡ ವಿದ್ಯಾರ್ಥಿಗಳನ್ನು ಗುರುತಿಸುವ ಮಾನದಂಡವಾಗಿ 3.5ಲಕ್ಷ ರೂ.ಗಳ ಆದಾಯ ಮಿತಿಯನ್ನು ನಿಗದಿಗೊಳಿಸುವ ಮೂಲಕ ಖಾಸಗಿಯವರಿಗೆ ಮತ್ತು ಶ್ರೀಮಂತರಿಗೆ ಲಾಭವಾಗುವಂತೆ ನಡೆದುಕೊಂಡಿದೆ. ಸರ್ಕಾರಿ ನಿಯಮದಂತೆ ಬಿಪಿಎಲ್-ಎಪಿಎಲ್ ಪಟ್ಟಿಯ ಆದಾಯ ಪ್ರಮಾಣ 20 ಸಾವಿರದೊಳಗಿರುವುದು ಈ ಸರ್ಕಾರಕ್ಕೆ ಅರಿವಾಗಲಿಲ್ಲ. ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಭಿಗೆ ರಾಜ್ಯ ಸರ್ಕಾರ ಮಣಿದಿದೆ. ಇತರೆ ರಾಜ್ಯಗಳು ಬಡತನ ರೇಖೆಗಿಂತ ಕಡಿಮೆ ಇರುವ (ಬಿಪಿಎಲ್) ಕುಟುಂಬಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿಯಮ ರೂಪಿಸಿಕೊಂಡಿವೆ. ಸರ್ಕಾರಿ ನಿಯಮದಂತೆ ಹಣ ಮಾಡುವುದಕ್ಕಾಗಿ ಶ್ರೀಮಂತರನ್ನು ಸೆಳೆಯುವ ಖಾಸಗಿಯವರ ಲಾಬಿಗೆ ರಾಜ್ಯ ಸರ್ಕಾರ ಮಣಿದು ಕಾಯ್ದೆಯ ವಿರುದ್ಧವಾಗಿ ನಡೆದುಕೊಂಡಿದೆ.

ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಒಂದಿಲ್ಲೊಂದು ರೀತಿಯಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿವೆ. ಭೂಮಿ ಖರೀದಿಯಲ್ಲಿ ರಿಯಾಯಿತಿ, ನೀರಿನ ತೆರಿಗೆ ವಿನಾಯತಿ, ವಿದ್ಯುತ್ ತೆರಿಗೆ ವಿನಾಯತಿ, ಸೇವಾ ತೆರಿಗೆ ವಿನಾಯತಿ, ಸೇರಿದಂತೆ ಸರ್ಕಾರದ ವಿವಿಧ ಯೋಜನೆಯ ಲಾಭವನ್ನು ಪಡೆಯುತ್ತಿವೆ. ಹೀಗಾಗಿ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಬೇಕಾಗಿದೆ. ಹೀಗಿರುವಾಗ ಮತ್ತೆ ಜನತೆಯ ತೆರಿಗೆಯ ಹಣವನ್ನು 25% ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರಿಸಬೇಕು ಎನ್ನುವುದನ್ನು ನೆಪ ಮಾಡಿಕೊಂಡು ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳನ್ನು ಖಾಸಗಿಯವರಿಗೆ ನೀಡಲು ರಾಜ್ಯ ಸರ್ಕಾರ ಹೊರಟಿದೆ. ಪಶ್ಚಿಮ ಬಂಗಾಲ – 3,282, ಮಧ್ಯಪ್ರದೇಶ – 4,423, ಬಿಹಾರ – 4,705, ಗುಜರಾತ್ – 3,949 ಮತ್ತು ಕರ್ನಾಟಕ 11,848 ರೂ. ರಾಜ್ಯದಲ್ಲಿಯೇ ಅತಿಹೆಚ್ಚು ನೀಡುತ್ತಿರುವುದನ್ನು ಗಮನಿಸಿದಾಗ ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಖಜಾನೆ ತುಂಬಲು ಮುಂದಾಗಿರುವುದು ಸ್ಪಷ್ಠವಾಗುತ್ತದೆ. ಶಿಕ್ಷಣ ವ್ಯಾಪಾರೀಕರಣದ ಪ್ರಕ್ರಿಯೆಗೆ ಸರ್ಕಾರದ ಅಧಿಕೃತವಾಗಿ ಸಹಕರಿಸುತ್ತಿದೆ. ಕಾಯ್ದೆಯ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರಿ ನಿಯಮದಂತೆ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮೀಸಲು ನಿಯಮದಂತೆ 1,12,474 ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡಬೇಕಾಗಿತ್ತು. ಆದರೆ ಕೇವಲ 41,663 (ಅಂದರೆ 37%) ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದ್ದು. ಸುಮಾರು 70,811 ವಿದ್ಯಾರ್ಥಿಗಳನ್ನು ಪ್ರವೇಶದಿಂದ ವಂಚಿಸಲಾಗಿದೆ. ಕಾಯ್ದೆ ಜಾರಿಯಲ್ಲಿ ವಿಫಲವಾಗುವ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು ಮಾಡಬೇಕು; 1 ಲಕ್ಷ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು ಎನ್ನುವ ಸುಪ್ರೀಂ ಕೋರ್ಟ್‌ನ ತೀರ್ಪಿದ್ದರೂ ಕೂಡ ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ ನೋಟಿಸ್ ನೀಡುವಂತಹ ಕನಿಷ್ಠ ಕೆಲಸವನ್ನು ಮಾಡಿಲ್ಲ. ಅತಿ ಹೆಚ್ಚು ಖಾಸಗಿ ಶಾಲೆಗಳಿರುವ ಬೆಂಗಳೂರು ಉತ್ತರದಲ್ಲಿ ಕೇವಲ 11.304(16%) ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ. ಈ ಕಾಯ್ದೆಯನ್ನು ವಿಫಲಗೊಳಿಸುವಲ್ಲಿ ವ್ಯವಸ್ಥಿತ ಷಡ್ಯಂತರ ನಡೆಯುತ್ತಿದೆ ಎಂಬುದು ಸಾಬೀತಾಗುತ್ತದೆ.

ಖಾಸಗಿ ಶಾಲೆಗಳ ಕರಾಳ ಮುಖ:
ಈ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ನಿರ್ಲಕ್ಷ್ಯ ಧೋರಣೆ ಹೊಂದಿದ್ದರ ಜೊತೆಗೆ ವಿಫಲಗೊಳಿಸುವಲ್ಲಿ ಕುತಂತ್ರಗಳನ್ನು ನಡೆಸುತ್ತಿವೆ. ನಿಯಮ ಬದ್ಧವಾಗಿ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದರ ಬದಲಾಗಿ ಕಿರುಕುಳ ನೀಡಿ ತಮ್ಮ ಕರಾಳಮುಖದ ಪ್ರದರ್ಶನ ಮಾಡಿವೆ. ರಾಜ್ಯವ್ಯಾಪಿ ಕೇವಲ 37% ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದನ್ನು ಗಮನಿಸಿದರೆ ಖಾಸಗಿ ಶಾಲೆಗಗಳಲ್ಲಿ ರಾಜರೋಷವಾಗಿ ಹಣ ಮಾಡುವ ದಂಧೆ ನಡೆಯುತ್ತಿರುವುದು ಬಹಿರಂಗ ಸತ್ಯ. ಬೆಂಗಳೂರಿನ ನಂದಿನಿ ಲೇಔಟ್ನ ‘ಆಕ್ಸಫರ್ಡ್ ಸ್ಕೂಲ್’ನಲ್ಲಿ ಕಾಯ್ದೆಯ 25% ಬಡ ವಿದ್ಯಾರ್ಥಿಗಳ ಕೋಟಾದ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಲು ಕೂದಲು ಕತ್ತರಿಸಿ ಅವಮಾನಿಸಲಾಗಿದೆ. ಇನ್ನೊಂದೆಡೆ ವಿದ್ಯಾರ್ಥಿಗಳ ಊಟದ ಡಬ್ಬಿಗಳನ್ನು ಪರೀಕ್ಷಿಸಿ ಮೊಟ್ಟೆ, ಮೀನು, ಮಾಂಸದ ಪದಾರ್ಥದ ಊಟವಾಗಿದ್ದರೆ ಅಂತಹ ವಿದ್ಯಾರ್ಥಿಗಳನ್ನು ವಾಪಸ್ಸು ಕಳಿಸಲಾಗುತ್ತಿದೆ. ವಿವಿಧ ರೀತಿಯ ಅಸ್ಪೃಶ್ಯತಾ ಆಚರಣೆಗೆ ದಲಿತ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಬಡ ವಿದ್ಯಾರ್ಥಿಗಳನ್ನು ಶ್ರೀಮಂತ ವಿದ್ಯಾರ್ಥಿಗಳ ಜೊತೆ ಬೆರೆಯಲು ಮುಕ್ತ ಅವಕಾಶ ಕಲ್ಪಿಸದೇ ಪ್ರತ್ಯೇಕತೆಯನ್ನು ಅನುಸರಿಸಲಾಗುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳದೆ “ಮೌನಂ ಸಮ್ಮತಿ ಲಕ್ಷಣ” ಎಂಬಂತೆ ವರ್ತಿಸಿದೆ.

‘ಕುಸ್ಮಾ’ ಪರಿವಾರದ ಪ್ರತಿಷ್ಠೆ:
ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ರಾಜ್ಯ ಸರಕಾರವನ್ನು ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಒಂದು ವಾರಗಳ ಕಾಲ `ಶಾಲೆ ಬಂದ್’ ಮಾಡಲು ಮುಂದಾದರೂ ಅವರ ಮೇಲೆ ಕ್ರಮಕೈಗೊಳ್ಳುವ ಬದಲಾಗಿ ಐಷಾರಾಮಿ ಸಭೆಗಳ ಮೂಲಕ ರಾಜಿ ಸಂಧಾನಕ್ಕೆ ಮುಂದಾಗುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಕುಸ್ಮಾದ ಅಧ್ಯಕ್ಷರಾಗಿದ್ದ ಜೆ.ಎಸ್.ಶರ್ಮ ‘ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳು ಕೊಳಚೆ ನೀರು ಇದ್ದಂತೆ, ಕೊಳಚೆ ನೀರು ಸಮುದ್ರಕ್ಕೆ ಸೇರಿದರೆ ಸಮುದ್ರ ನೀರು ಮತ್ತು ಸಂಸ್ಕೃತಿ ಹಾಳಾಗುತ್ತದೆ,’ ಎನ್ನುವ ಈ ಹೇಳಿಕೆ ಮನುವಾದಿಯ ಮಲೀನ ಮನಸ್ಸನ್ನು ಅನಾವರಣಗೊಳಿಸಿದೆ. ಅಸ್ಪೃಶ್ಯತೆಯ ಆಚರಣೆಯ ಪ್ರತೀಕವಾಗಿರುವ ಈ ಮಾತನ್ನು ಆಡಿದ ಶರ್ಮರನ್ನು ಬಂಧಿಸಿ ಜೈಲಿನಲ್ಲಿರಿಸಬೇಕಿದ್ದ ಸರಕಾರ ತುಟಿಪಿಟಕ್ಕೆನ್ನದೆ ಮೌನವಾಗಿ ಇರುವುದನ್ನು ನೋಡಿದರೆ ಭಾರತದ ಸಂವಿಧಾನಕ್ಕಿಂತ ಸಂಘ ಪರಿವಾರದ ಅಜೆಂಡಾದ ರಕ್ಷಣೆಯ ಕೆಲಸದಲ್ಲಿ ಸರ್ಕಾರ ತೊಡಗಿರುವುದು ಬಹಿರಂಗಗೊಂಡಿದೆ.

ಕುಸ್ಮಾ ಕರೆ ನೀಡಿದ “ಶಾಲೆ ಬಂದ್” ನಲ್ಲಿ ಆರ್‌.ಎಸ್.ಎಸ್.ನ ರಾಷ್ಟ್ರೋತ್ಥಾನ ಶಾಲೆಗಳ ಸರಸ್ವತಿ ವಿದ್ಯಾ ಮಂದಿರಗಳು, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ಒಡೆತನದ ಶಿವಮೊಗ್ಗದ ಶಾಲೆ ಸೇರಿದಂತೆ ಬಿ.ಜೆ.ಪಿ. ಮುಖಂಡರ ಸಂಸ್ಥೆಗಳು ಮುಂಚೂಣಿಯಲ್ಲಿ ಬಂದ್ ಆಗಿರುವುದನ್ನು ನೋಡಿದರೆ ಅದು ಸರ್ಕಾರಿ ಪ್ರಾಯೋಜಿತ ಹೋರಾಟವೆಂಬುದರಲ್ಲಿ ಸಂಶಯವಿಲ್ಲ. ಖಾಸಗಿ ಶಾಲಾ ಅಡಳಿತ ಮಂಡಳಿಯವರು ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆ, ನ್ಯಾಯಾಂಗ ನಿಂಧನೆಯಲ್ಲಿ ತೊಡಗಿದ್ದರೂ ಶಿಕ್ಷಣ ಸಚಿವ ಕಾಗೇರಿ ಮಾತ್ರ ಪ್ರತಿಕ್ರಿಯಿಸದೆ ಮೌನವಾಗಿರುವುದು ಕಾಯ್ದೆ ವಿಫಲಗೊಳಿಸಲು ಖಾಸಗಿಯವರ ಜೊತೆ ಸರ್ಕಾರ ಶಾಮೀಲಾಗಿರುವುದನ್ನು ಮತ್ತು ಖಾಸಗಿ ಶಾಲೆಗಳ ಏಜೆಂಟರಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಖಾಸಗಿ ಶಾಲೆಗಳ ನಿಯಂತ್ರಿಸಲು ಸೂಕ್ತ ಶಾಸನವನ್ನು ರೂಪಿಸಲಿ:
ಈ ಕಾಯ್ದೆಯ ಜಾರಿಯಲ್ಲಿ ಹಿಂದೇಟು ಹಾಕುತ್ತಿರುವ ಶಾಲೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾನ್ಯತೆ ರದ್ದು ಮಾಡಲು ಸರ್ಕಾರ ಸೂಕ್ತ ಶಾಸನ ರಚನೆಗೆ ಮುಂದಾಗಬೇಕು. ಆರ್.ಟಿ.ಇ. ಜಾರಿಗಾಗಿ ಕಾವಲು ಸಮಿತಿ, ಶಾಲಾ ಮಟ್ಟದಲ್ಲಿ ಪಾಲಕರ ಸಮಿತಿಗಳನ್ನು ರಚಿಸಲು ಸರ್ಕಾರ ಮುಂದಾಗಬೇಕಿದೆ. ಬಡ ಮಕ್ಕಳಿಗೆ ಅವಮಾನಿಸುತ್ತಿರುವ ಖಾಸಗಿ ಶಾಲೆಗಳ ಉದ್ಧಟತನವನ್ನು ನಿಲ್ಲಿಸುವಂತಾಗಲು ಹೋರಾಟಗಳು ಬಲಗೊಳ್ಳಬೇಕಿದೆ. ಅಕ್ರಮ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಿ ಸರ್ಕಾರಿ ಶಾಲೆಗಳ ವ್ಯವಸ್ಥೆ ಬಲಗೊಳ್ಳಬೇಕಿದೆ.

ಸಂವಿಧಾನ ಬದ್ಧ ಕಾಯ್ದೆ ಜಾರಿಗೊಳಿಸುವಲ್ಲಿ ಸರ್ಕಾರಗಳು ಮುಂದಾಗುವ ಬದಲು ಸರ್ಕಾರಿ ಹಣವನ್ನು ಖಾಸಗಿಯವರತ್ತ ಹರಿಸಲು ಮುಂದಾಗಿರುವುದನ್ನು ನಿಲ್ಲಿಸಬೇಕಾಗಿದೆ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಅವಮಾನಿಸುವ, ವಂಚಿಸುವ ಕಾಯಕದಲ್ಲಿ ತೊಡಗಿವೆ. ಈಗ ಇರುವ ಅಂತರಾಷ್ಟ್ರೀಯ, ರಾಷ್ಟ್ರೀಯ, ಕೇಂದ್ರೀಯ, ನವೋದಯ, ರಾಜ್ಯ, ಇನ್ನಿತರ ಹೆಸರಿನ ಪ್ರತ್ಯೇಕ ಪಠ್ಯಕ್ರಮದ ಶಿಕ್ಷಣ ಪದ್ಧತಿಯು ಅಸಮಾನತೆಯ ಮುಂದುವರಿಕೆಯಾಗಿದೆ. ಇದನ್ನು ಸಮಾನ ಶಾಲಾ ಶಿಕ್ಷಣ ಪದ್ಧತಿಗಾಗಿ ಜನ ಚಳವಳಿ ಬಲಗೊಳ್ಳದ ಹೊರತು ಶಿಕ್ಷಣ ಮೂಲಭೂತ ಹಕ್ಕಿಗೆ ಅರ್ಥವಿರದು.

ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ 25% ವಿದ್ಯಾರ್ಥಿಗಳ ಪ್ರವೇಶ ವಿವರ:

ಶೈಕ್ಷಣಿಕ ಜಿಲ್ಲೆ              ಮೀಸಲು ಸೀಟು  ದಾಖಲಾದವರು  ಶೇಕಡವಾರು

  • ಬೆಂಗಳೂರು ಉತ್ತರ              11304           1868              16.52
  • ಬೆಂಗಳೂರು ದಕ್ಷಿಣ                16656           2408              14.45
  • ಬೆಂಗಳೂರು ಗ್ರಾ                   1779             948                  53.28
  • ರಾಮನಗರ                          1281              866                  67.60
  • ತುಮಕೂರು                          3868             1436                37.12
  • ಮಧುಗಿರಿ                              827               463                   55.98
  • ಕೋಲಾರ                             2421             1735                 71.66
  • ಚಿಕ್ಕಬಳ್ಳಾಪುರ                       1882            1411                  74.97
  • ಚಿತ್ರದುರ್ಗ                             5783           943                    16.30
  • ದಾವಣಗೆರೆ                            3234           1560                 48.23
  • ಶಿವಮೊಗ್ಗ                               1650           420                   25.45
  • ಮೈಸೂರು                              5005           80                     16.14
  • ಚಾಮರಾಜನಗರ                    1362            564                   41.40
  • ಮಂಡ್ಯ                                   3507          2456                 70.03
  • ಹಾಸನ                                   1901           1030                 54.18
  • ಚಿಕ್ಕಮಗಳೂರು                       970             639                    65.87
  • ಕೊಡಗು                                  549              220                   40.07
  • ದಕ್ಷಿಣ ಕನ್ನಡ                            1645            763                   46.38
  • ಉಡುಪಿ                                  1098             430                   39.16
  • ಬೆಳಗಾವಿ                                2665              530                  19.88
  • ಬಿಜಾಪುರ                               5800              3883                66.94
  • ಬಾಗಲಕೋಟೆ                         2161               1394                64.50
  • ಧಾರವಾಡ                              2976               796                  26.75
  • ಗದಗ                                     5822                1442                24.76
  • ಹಾವೇರಿ                                1838                 892                   48.53
  • ಕಾರವಾರ                              828                    579                  69.92
  • ಚಿಕ್ಕೋಡಿ                              4354                  2513                 57.71
  • ಶಿರಸಿ                                    305                    195                    63.93
  • ಯಾದಗಿರಿ                             1194                   437                   36.59
  • ಬೀದರ್                                 8100                  1899                 23.44
  • ರಾಯಚೂರು                         2799                   1544                 55.16
  • ಬಳ್ಳಾರಿ                                 4241                   2801                 66.04
  • ಕೊಪ್ಪಳ                                2670                  1790                  67.04
  • ಗುಲ್ಬರ್ಗಾ –  ಮಾಹಿತಿ ಸಿಕ್ಕಿಲ್ಲ
  • ಒಟ್ಟು                                  112474               41663                 37.04