Category Archives: ಮುನೀರ್ ಕಾಟಿಪಳ್ಳ

ನೆಲ್ಸನ್ ಮಂಡೇಲ ಮತ್ತು ಇಂದಿನ ದಕ್ಷಿಣ ಆಫ್ರಿಕ


– ಮುನೀರ್ ಕಾಟಿಪಳ್ಳ


 

ದಕ್ಷಿಣ ಆಫ್ರಿಕಾ ದೇಶದ ಕರಿಯರಿಗೆ ರಾಜಕೀಯ ಅಧಿಕಾರ ಕೊಡಿಸಿದ, ವರ್ಣಭೇದ ನೀತಿಯನ್ನು ಅಧಿಕೃತವಾಗಿ ಕೊನೆಗೊಳಿಸಿದ ಜಗತ್ತು ಕಂಡ ಮಹಾನ್ ನಾಯಕ, ಅಪ್ರತಿಮ ಹೋರಾಟಗಾರ ನೆಲ್ಸನ್ ಮಂಡೇಲಾ ತನ್ನ ಸಾರ್ಥಕ ಬದುಕನ್ನು ಕೊನೆಗೊಳಿಸಿ ಜಗತ್ತಿಗೆ ವಿದಾಯ ಹೇಳಿದ್ದಾರೆ. Nelson_Mandelaಆತನಿಗೊಂದು ಗೌರವಪೂರ್ವಕ ಸಲಾಂ.

ನೆಲ್ಸನ್ ಮಂಡೇಲಾನ ನಾಡು ದಕ್ಷಿಣ ಆಫ್ರಿಕಾ ದೇಶದಲ್ಲಿ ಮೂರು ವರ್ಷದ ಹಿಂದೆ ನಡೆದ ಸಾಮ್ರಾಜ್ಯಶಾಹಿ ವಿರೋಧಿ “ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ“ದಲ್ಲಿ ನಾನು ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ನೆಲ್ಸನ್ ಮಂಡೇಲಾ ಸಮಾವೇಶವನ್ನು ಪರೋಕ್ಷವಾಗಿ ಉದ್ಘಾಟಿಸಿದ್ದರು. ಆ ಸಂದರ್ಭದಲ್ಲಿ ನಾನು ಕಂಡ ದಕ್ಷಿಣ ಆಫ್ರಿಕಾ, ಅಲ್ಲಿನ ಕರಿಯರನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದೆರಡು ಮಾತುಗಳು.

“ವಿಶ್ವ ವಿದ್ಯಾರ್ಥಿ ಯುವಜನ ಉತ್ಸವ” ಜೋಹಾನ್ಸ್‌ಬರ್ಗ್ ಸಮೀಪದ ಪ್ರಿಟೋರಿಯಾದಲ್ಲಿ ಆಯೋಜಿಸಲಾಗಿತ್ತು. ಅನಾರೋಗ್ಯದ ನಿಮಿತ್ತ ಮಂಡೇಲಾ ಅವರ ಧ್ವನಿ ಮುದ್ರಿತ ಭಾಷಣದ ಮೂಲಕ ಅವರ ಅನುಪಸ್ಥಿತಿಯಲ್ಲಿ ಸಮಾವೇಶವನ್ನು ಉದ್ಘಾಟಿಸಲಾಯಿತು. World-Festival-of-Youth-and-Students((Johannesburg_2010)ಮುದ್ರಿತ ಸಂದೇಶದಲ್ಲಿ ಮಂಡೇಲಾ ಸಂದೇಶದ ಧ್ವನಿ ಕೇಳಿದಾಗ ಜಗತ್ತಿನಾದ್ಯಂತದಿಂದ ಬಂದ ಯುವ ಪ್ರತಿನಿಧಿಗಳಲ್ಲಿ ರೋಮಾಂಚನ, ಅದರಲ್ಲೂ ಆಫ್ರಿಕಾ ಖಂಡದ ಕಪ್ಪು ಯುವಜನತೆಯ ಉತ್ಸಾಹವಂತೂ ಮೇರೆ ಮೀರುತ್ತಿತ್ತು. ಅಂತಹಾ ಅಗಾಧ ಪ್ರಭಾವವನ್ನು ಮಂಡೇಲಾ ಕರಿಯ ಜನತೆಯಲ್ಲಿ ಮೂಡಿಸಿದ್ದಾರೆ.

ನಾನು ದಕ್ಷಿಣ ಆಫ್ರಿಕಾದಲ್ಲಿ ಕಳೆದ ಹನ್ನೆರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಇಂದಿನ ಪರಿಸ್ಥಿತಿ ವರ್ಣಭೇದ ನೀತಿ ಕೊನೆಗೊಂಡ ನಂತರದ ಅಲ್ಲಿನ ಕರಿಯರ ಸ್ಥಿತಿಗತಿಯನ್ನು ಅರಿಯಲು ಒಂದಿಷ್ಟು ಪ್ರಯತ್ನಿಸಿದೆ. ಸದಾ ಹಾಡು ಹೇಳುತ್ತಾ, ಸಣ್ಣ ಮ್ಯೂಸಿಕ್ ಕೇಳಿದರೂ ಸಾಕು ನಿಂತಲ್ಲೇ ಕುಣಿಯಲು ತೊಡಗುವ ಕರಿಯ ಯುವಜನರು ಅಗಾಧ ಜೀವನ ಪ್ರೀತಿ ಉಳ್ಳ ಸ್ನೇಹಜೀವಿಗಳು. ಅಲ್ಲಿನ ಮಹಿಳೆಯರಿಗೆ ಸಾಮಾಜಿಕವಾಗಿ ಸಮಾನ ಸ್ಥಾನಮಾನವಿದೆ. ಹೆಣ್ಣು ಗಂಡು ಎಂಬ ಭೇದಭಾವ ಅಲ್ಲಿ ಕಾಣಿಸುವುದಿಲ್ಲ. ಕರಿಯರಿಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಕರಿಯರೇ ಪ್ರಧಾನಿ, ಅಧ್ಯಕ್ಷರಾಗಿ ದೇಶವನ್ನು ಆಳುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ರಸ್ತೆಗಳು ಅತ್ಯುತ್ತಮವಾಗಿದೆ. ಕಟ್ಟಡಗಳು, ಮಾಲ್‌ಗಳು ಯಾವುದೇ ಫಿಲಂ ಸಿಟಿಯನ್ನು ನಾಚಿಸುವಷ್ಟು ಅದ್ಭುತವಾಗಿದೆ. ಜಗತ್ತಿನ ಎಲ್ಲಾ ಬ್ರಾಂಡ್‌ನ ಐಷಾರಾಮಿ ಕಾರುಗಳು ಅಲ್ಲಿನ ರಸ್ತೆಯಲ್ಲಿ ಓಡಾಡುತ್ತದೆ. ಆದರೆ ಅಂತಹ ಮಾಲ್‌ಗಳಲ್ಲಿ, ಕಾರ್‌ಗಳಲ್ಲಿ ಕರಿಯರು ಕಾಣಸಿಗುವುದು ಅಪರೂಪ. ಜಗತ್ತಿನ ವೈಭವೋಪೋತ ನಗರಗಳಲ್ಲಿ ಒಂದಾಗಿರುವ ಜೋಹಾನ್ಸ್‌ಬರ್ಗ್ ಸಂಜೆ ಐದು ಗಂಟೆಯಾದರೆ ಸಾಕು ಬಾಗಿಲೆಳೆಯತೊಡಗುತ್ತದೆ. Johannesburgಆರು ಗಂಟೆಗೆ ರಸ್ತೆಗಳು ಸಂಪೂರ್ಣ ನಿರ್ಜನ. ನಿರ್ಗತಿಕರಿಗೆ, ನಿರುದ್ಯೋಗಿಗಳಿಗೆ ಪ್ರಿಟೋರಿಯಾ, ಜೋಹಾನ್ಸ್‌ಬರ್ಗ್‌ನಲ್ಲಿ ಗಂಜಿ ಕೇಂದ್ರಗಳಿವೆ. ಅಲ್ಲಿನ ಮಾರುದ್ಧದ ಸರತಿ ಸಾಲಿನಲ್ಲಿ ಬಿಳಿಯರು ಒಬ್ಬರೂ ಕಾಣಸಿಗುವುದಿಲ್ಲ. ಅಲ್ಲಿನ ಆಧುನಿಕ ಡಿಸ್ಕೋತೆಕ್, ಡಿ.ಜೆ. ಡ್ಯಾನ್ಸ್‌ಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರಾಗಿರುವ ಕರಿಯ ಕುಟುಂಬಗಳ ಕೆಲ ಯುವಜನತೆ ಕಂಡು ಬರುತ್ತಾರೆ. ಅದೇ ಸಂದರ್ಭದಲ್ಲಿ ಕಾಲೇಜು ಓದುವ, ಡಿಗ್ರಿ ಪಡೆದು ನಿರುದ್ಯೋಗಿಗಳಾಗಿರುವ ಕರಿಯ ಯುವತಿಯರು ಚಿಲ್ಲರೆ ದುಡ್ಡಿಗೆ ಯಾವುದೇ ಸಂಕೋಚ ಇಲ್ಲದೆ ಮೈಮಾರುತ್ತಾರೆ. ಯುವಕರು ಲೂಟಿಗಿಳಿದು ಕ್ರಿಮಿನಲ್‌ಗಳಾಗುತ್ತಾರೆ. ಮಾರುಕಟ್ಟೆ ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿಗೆ ತನ್ನತನ, ಪರಂಪರೆಯನ್ನು ಮರೆತು ಬಲಿ ಬಿದ್ದಿದ್ದಾರೆ. ರಾಜಕೀಯ ಅಧಿಕಾರ ದಕ್ಕಿದ್ದರೂ ಉದ್ಯೋಗಗಳು ಕರಿಯರಿಗೆ ದಕ್ಕುತ್ತಿಲ್ಲ. ನಿರುದ್ಯೋಗ ಕರಿಯ ಯುವಜನತೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಖಾಸಗೀಕರಣದ ಕಾರುಬಾರಿನಲ್ಲಿ ಸರಕಾರಿ ಉದ್ಯೋಗ ತೀರಾ ಕಡಿಮೆ. ಖಾಸಗಿ ಉದ್ಯೋಗ ದೊರಕುವುದಿಲ್ಲ.

“ಇದೆಲ್ಲಾ ಯಾಕೆ ಹೀಗೆ, ನಿಮ್ಮವರೇ ಅಧಿಕಾರದಲ್ಲಿದ್ದಾರಲ್ಲ? ಇಷ್ಟು ಶ್ರೀಮಂತಿಕೆ ಇದ್ದರೂ ನಿಮಗ್ಯಾಕೆ ಇಂತಹ ಬಡತನ,” south-africa_povertyಅಂತ ಇಂಜಿನಿಯರಿಂಗ್ ಓದಿರುವ ನಮ್ಮ ಕರಿಯ ಟ್ಯಾಕ್ಸಿ ಡ್ರೈವರ್‌ನಲ್ಲಿ ಪ್ರಶ್ನಿಸಿದರೆ ಆತನ ಉತ್ತರ ಹೀಗಿತ್ತು. “ಹೌದು ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮವರೇ ದೇಶ ಆಳುತ್ತಿದ್ದಾರೆ. ಆದರೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಎಲ್ಲವೂ ಖಾಸಗಿ ಒಡೆತನದಲ್ಲಿದೆ. ಜಾಗತೀಕರಣಕ್ಕೆ ನಾವು ಬಹು ಹಿಂದೆಯೇ ತೆರೆದುಕೊಂಡಿದ್ದೇವೆ. ಹೆಚ್ಚಿನ ದೇಶೀಯ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಆಡಳಿತ ಬಿಳಿಯರ ಕೈಯ್ಯಲ್ಲಿದೆ. ವರ್ಣಭೇದ ನೀತಿ ಅಧಿಕೃತವಾಗಿ ಇಲ್ಲದಿದ್ದರೂ ಅವರು ನಮ್ಮನ್ನು ಒಳ್ಳೆಯ ಉದ್ಯೋಗಕ್ಕೆ ಸೇರಿಸಿಕೊಳ್ಳುವುದಿಲ್ಲ. ಅದು ಬಿಳಿಯರಿಗೆ ಮೀಸಲು. ಇನ್ನು ಉದ್ಯಮಗಳನ್ನು, ವ್ಯಾಪಾರಗಳನ್ನು ನಡೆಸುವಷ್ಟು ಆರ್ಥಿಕವಾಗಿ ನಾವು ಬಲಿಷ್ಠರಲ್ಲ. ಇಲ್ಲಿ ಹೊಟೇಲ್‌ಗಳೆಂದರೆ ’ಕೆಎಫ್‌ಸಿ’ , ’ಮೆಕ್ ಡೋನಾಲ್ಡ್’ ಮಾರುಕಟ್ಟೆಗಳೆಂದರೆ ವಾಲ್ ಮಾರ್ಟ್, ಜೆಸ್ಕೋ ಮುಂತಾದವು. ಇಲ್ಲಿ ಅಪಾರ ಗಣಿ ಸಂಪತ್ತಿದ್ದರೂ ಅದೆಲ್ಲವೂ ಬಹುರಾಷ್ಟ್ರೀಯ ಕಂಪೆನಿಗಳ, ಬಿಳಿಯರ ಕೈಯಲ್ಲಿದೆ. ಅಲ್ಲಿ ಯಾವುದೇ ಕಾರ್ಮಿಕ ಕಾನೂನುಗಳಿಗೆ ಬೆಲೆ ಇಲ್ಲ. ಅಲ್ಲಿ ಗುಲಾಮರ ರೀತಿ ನಮ್ಮ ಕಪ್ಪು ಕಾರ್ಮಿಕರು ದುಡಿಯುತ್ತಾರೆ. ಇದರಿಂದಾಗಿ ನಮ್ಮ ಯುವಜನತೆ ಹತಾಶರಾಗಿದ್ದಾರೆ. ಹಸಿವು ಅವರನ್ನು ಕಿತ್ತು ತಿನ್ನುತ್ತಿದೆ. ಆಧುನಿಕ ಮಾಲ್‌ಗಳು, ಡಿಸ್ಕೋತೆಕ್‌ಗಳು ಅವರನ್ನು ಆಕರ್ಷಿಸುತ್ತಿದೆ. ಅಣಕಿಸುತ್ತಿದೆ. ಇದರಿಂದಾಗಿ ಇಲ್ಲಿ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಶ್ರೀಮಂತ ಜೀವನಕ್ಕಾಗಿ ಮಾತ್ರ ಅಲ್ಲ ಒಂದು ತುಂಡು ಬ್ರೆಡ್‌ಗಾಗಿಯೂ ಇಲ್ಲಿ ಕೊಲೆಗಳಾಗುತ್ತವೆ, ಹಾಡುಹಗಲೇ ಅಪಹರಣಗಳಾಗುತ್ತವೆ. ಇದನ್ನು ನಿಭಾಯಿಸಲಾಗದ ಸರಕಾರ ಐದು ಗಂಟೆಗೆ ಮಾರುಕಟ್ಟೆ, ಅಂಗಡಿ, ಮಾಲ್‌ಗಳನ್ನು ಬಂದ್ ಮಾಡಿಸುತ್ತದೆ. ಆರು ಗಂಟೆಯ ನಂತರ ಯಾರೂ ಬೀದಿಗೆ ಬರುವುದಿಲ್ಲ,” ಎಂದು ನಿಟ್ಟುಸಿರು ಬಿಟ್ಟ. ಇದು ಇಂದಿನ ನೆಲ್ಸನ್ ಮಂಡೇಲಾ ನಾಡಿನ ಸ್ಥಿತಿ.

ದಕ್ಷಿಣ ಆಫ್ರಿಕಾದ ಯುವ ತಲೆಮಾರಿನ ಕಾರ್ಯಕರ್ತರಲ್ಲಿ ಈ ಕುರಿತು ಚರ್ಚಿಸಿದಾಗ ಹಲವು ಗಂಭೀರ ವಾದಮಾತುಗಳನ್ನು ತೆರೆದಿಟ್ಟರು. Poverty_and_Policy_in_Post_Apartheid_South_Africaನೆಲ್ಸನ್ ಮಂಡೇಲಾ ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯಕ್ಕಾಗಿ ಅಪ್ರತಿಮ ಹೋರಾಟ ನಡೆಸಿದರು. ಆದರೆ ಆರ್ಥಿಕ ಸ್ವಾತಂತ್ರ್ಯದ ಪ್ರಶ್ನೆಯನ್ನು ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ. ಇಂದು ಕರಿಯರ ಸರಕಾರ ಅಧಿಕಾರದಲ್ಲಿ ಇದ್ದರೂ ಆರ್ಥಿಕ ನೀತಿಗಳನ್ನು ರೂಪಿಸುವುದು ವಿಶ್ವಬ್ಯಾಂಕ್, ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ ಅಮೇರಿಕಾ ಮುಂತಾದ ಮುಂದುವರಿದ ದೇಶಗಳು. ಇಂದು ಚಿಲ್ಲರೆ ಮಾರುಕಟ್ಟೆ, ಹೊಟೇಲ್‌ಗಳು ಸೇರಿದಂತೆ ಇಲ್ಲಿನ ಗಣಿಗಾರಿಕೆಯನ್ನು, ಆರ್ಥಿಕ ಕ್ಷೇತ್ರವನ್ನು ವಿದೇಶಿಯರು ಆಳುತ್ತಿದ್ದಾರೆ. ಅಲ್ಲಿ ಬಿಳಿಯರದ್ದೇ ಕಾರುಬಾರು. ಆರ್ಥಿಕ ಆಯಾಮವನ್ನು ನೆಲ್ಸನ್ ಮಂಡೇಲಾ ನೇತೃತ್ವದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಕಡೆಗಣಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ವರ್ಣಭೇದ ನೀತಿ ಕೊನೆಗೊಂಡ ನಂತರವೂ ಎರಡು ದಶಕಗಳ ಆಳ್ವಿಕೆಯಲ್ಲೂ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅಮೇರಿಕನ್ ಪ್ರಣೀತಿ ಬಂಡವಾಳ ಶಾಹಿ ನೀತಿಯನ್ನೇ ಮುಂದುವರಿಸುತ್ತಿದೆ. ಈ ನೀತಿಗಳ ಬದಲಾವಣೆಗೆ ಅವರು ಮುಂದಾಗುತ್ತಿಲ್ಲ ಎಂದು ಆರೋಪಿಸುತ್ತಾರೆ. ಅಷ್ಟೇ ಅಲ್ಲ ಗಣಿಗಳಲ್ಲಿ ಉತ್ತಮ ವೇತನಕ್ಕಾಗಿ, ನಗರಗಳಲ್ಲಿ ಉದ್ಯೋಗಕ್ಕಾಗಿ ಹೋರಾಟಗಳು ನಡೆಯದಂತೆ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ತಡೆಯುತ್ತಿದೆ. ಯುವಜನತೆಗೆ ಉದ್ಯೋಗ ಸೃಷ್ಟಿಸಲು, ಜೀವನ ಭದ್ರತೆಗೆ ಸರಕಾರ ಮುಂದಾಗುತ್ತಿಲ್ಲ. ಮಂಡೇಲಾ ಕೂಡಾ ಈ ಕುರಿತು ಏನೂ ಮಾಡುತ್ತಿಲ್ಲ ಎಂಬುದು ಇವರ ಆರೋಪ.

ಹೌದು ಮಂಡೇಲಾ ಒಂದು ಮಹಾನ್ ಹೋರಾಟವನ್ನು ನಡೆಸಿದ್ದಾರೆ. ಅದರಲ್ಲಿ ಮಿತಿಗಳೂ ಇರಬಹುದು. ಆ ಹೋರಾಟದಲ್ಲಿ ಅವರು ಗೆಲ್ಲುವಾಗ ಮುಂದೆ ನಡೆಯಬೇಕಾದ ಹೋರಾಟಗಳನ್ನು ನಡೆಸುವಷ್ಟು ಪ್ರಾಯ, ದೈಹಿಕ ಶಕ್ತಿ ಅವರಲ್ಲಿ ಉಳಿದಿರಲಿಲ್ಲ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು, ಅದರಲ್ಲಿ ಗೆಲ್ಲುವುದು ಈಗಿನ ಕಾಲಘಟ್ಟದಲ್ಲಿ ಅಷ್ಟು ಸುಲಭ ಅಲ್ಲ. ಅಲ್ಲಿನ ಸರಕಾರ ನೆಲ್ಸನ್ ಮಂಡೇಲಾ ಮನೆಯ ಸಂದರ್ಶನಕ್ಕೂ ಸಹ ದುಬಾರಿ ಶುಲ್ಕ ಇಟ್ಟು ಅದರಲ್ಲೂ mandela-house-ticketಲಾಭ ನಷ್ಟದ ಲೆಕ್ಕಾಚಾರ ನೋಡುತ್ತಿರುವ ಈ ಸಂದರ್ಭದಲ್ಲಿ, ಮಂಡೇಲ ಶಾಂತಿ ಮಂತ್ರವನ್ನು ಪಠಿಸುತ್ತಾ ಕರಿಯರ ಹೋರಾಟದ ಕೆಚ್ಚನ್ನು ಕುಂಠಿತಗೊಳಿಸಿದ್ದಾರೆ ಎಂಬ ಆರೋಪದ ನಡುವೆಯೂ ಮಂಡೇಲಾ ಹೋರಾಟದಿಂದ ಸ್ಫೂರ್ತಿ ಪಡೆದು ಅಲ್ಲಿನ ಕರಿಯ ಯುವಜನತೆ ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಹೋರಾಟವನ್ನು ಕಟ್ಟಬೇಕಾಗಿದೆ. ಅದು ಅಪ್ರತಿಮ ನಾಯಕ ನೆಲ್ಸನ್ ಮಂಡೇಲರಿಗೆ ಕೊಡುವ ನಿಜವಾದ ಶ್ರದ್ಧಾಂಜಲಿ.

ಯಾರಿಗೆ ಬೇಕಿರಲಿ, ಬೇಡದಿರಲಿ, ಮುಂದೆ ನಡೆಯುವ ಎಲ್ಲಾ ರೀತಿಯ ವಿಮೋಚನಾ ಹೋರಾಟಗಳಲ್ಲಿಯೂ ಮಂಡೇಲಾ ಇದ್ದೇ ಇರುತ್ತಾನೆ. ನಿನಗೊಂದು ಸಲಾಂ, ಸಂಗಾತಿ ನೆಲ್ಸನ್ ಮಂಡೇಲಾ.

ಅಮೀನ್ ಮಟ್ಟುರವರ ಲೇಖನಕ್ಕೆ ಒಂದು ಮಾರುತ್ತರ

ದಿನೇಶ್ ಅಮೀನ್ ಮಟ್ಟುರವರಿಗೆ ನಮಸ್ಕಾರಗಳು,

ಕನ್ನಡ ಮಾಧ್ಯಮ ಲೋಕದ ಜನಪ್ರಿಯ ಅಂಕಣ “ಅನಾವರಣ”ದ 04/02/2013 ಲೇಖನದಲ್ಲಿ ತಾವು ಆಶಿಶ್ ನಂದಿಯವರ ವಿವಾದಾತ್ಮಕ ಮಾತುಗಳ ಬಗ್ಗೆ ಬರೆದಿದ್ದೀರಿ. ಕನ್ನಡದ ಸಹಸ್ರಾರು ಓದುಗರಂತೆ ನಾನೂ ಕೂಡಾ ತಮ್ಮ ಅನಾವರಣ ಅಂಕಣದ ಓದುಗ. ಅದರಲ್ಲಿ ತಾವು ಕೊಡುವ ವಿಚಾರ, ಮಾಹಿತಿ, ವಿಶ್ಲೇಷಣೆ, ಒಳನೋಟ ನನ್ನಂತಹ ಹಲವು ರಾಜಕೀಯ, ಸಾಮಾಜಿಕ ಕಾರ್ಯಕರ್ತರಿಗೆ ದಾರಿದೀಪ. ಆದರೆ ಆಶಿಶ್ ನಂದಿಯವರ ವಿವಾದಾತ್ಮಕ ಹೇಳಿಕೆಯನ್ನು aminmattu-prajavaniಆಧರಿಸಿ ತಾವು ಕಳೆದ ಸೋಮವಾರ ಬರೆದ ಬರಹವನ್ನು ಓದಿದ ನಂತರ ನನ್ನಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗಿವೆ. ನೀವು ಆಶಿಶ್ ನಂದಿಯವರನ್ನು ನಿಮ್ಮಂತಹ ಲಕ್ಷಾಂತರ ಏಕಲವ್ಯರು ವೈಚಾರಿಕ ಸ್ಪಷ್ಟತೆಯನ್ನು ರೂಪಿಸಿಕೊಳ್ಳಲು ನೆರವಾದ ಗುರು ಎಂದು ಸಂಬೋಧಿಸಿದ್ದೀರಿ. ಗುರುಭಕ್ತಿಯ ಕಾರಣಕ್ಕಾಗಿ ಅವರಾಡಿದ ಮಾತುಗಳನ್ನು ವಿಮರ್ಶೆ ಇಲ್ಲದೆ ಬಾಯಿ ಮುಚ್ಚಿಕೊಂಡು ಅನುಮೋದಿಸುವುದನ್ನು ಆಶಿಶ್ ನಂದಿ ಒಪ್ಪಿಕೊಳ್ಳಲಾರರು ಎಂದು ಕೂಡಾ ಬರೆದಿದ್ದೀರಿ. ಹಾಗೆಯೇ ನಿಮ್ಮ ಬರಹಗಳಿಂದ ಪ್ರೇರಿತರಾದ ಏಕಲವ್ಯರು ಕನ್ನಡ ನಾಡಿನಲ್ಲಿ ತುಂಬಾ ಮಂದಿಯಿದ್ದಾರೆ. ಅವರಲ್ಲಿ ನಾನೂ ಕೂಡ ಒಬ್ಬ ಗುರುಭಕ್ತಿಯ ಕಾರಣಕ್ಕಾಗಿ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳುವುದನ್ನು ತಾವು ಕೂಡ ಒಪ್ಪಿಕೊಳ್ಳಲಾರಿರಿ ಎಂದು ಭಾವಿಸುತ್ತಾ ತಮ್ಮ ಬರಹದ ಬಗ್ಗೆ ಒಂದೆರೆಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

ಆಶಿಶ್ ನಂದಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಿಪಿಐ(ಎಮ್)‌ನಂತಹ ಒಂದು ರಾಜಕೀಯ ಪಕ್ಷದ ಒಬ್ಬ ಸದಸ್ಯನಾಗಿ ನಾನು ಒಪ್ಪಿಕೊಳ್ಳುವುದಿಲ್ಲ. ಅದೇ ಸಂದರ್ಭದಲ್ಲಿ ಆಶಿಶ್ ನಂದಿಯವರನ್ನು ಬಂಧಿಸಬೇಕು, ಜೈಲಿಗೆ ತಳ್ಳಬೇಕು ಎಂಬಿತ್ಯಾದಿ ಅತಿರೇಕದ ಅಭಿಪ್ರಾಯಗಳೂ ನನ್ನಲ್ಲಿಲ್ಲ. ಇದು ನನ್ನ ಹಾಗೂ ನಾನು ಕೆಲಸ ಮಾಡುವ ಪಕ್ಷದ ನಿಲುವು.

ಆಶಿಶ್ ನಂದಿಯವರ ಹೇಳಿಕೆಯ ಕೊನೆಯ ಭಾಗವನ್ನು ಇಟ್ಟುಕೊಂಡು ಆಧರಿಸಿ ಬರೆದ ನಿಮ್ಮ ಅಂಕಣದ ಕೊನೆಯ ಭಾಗದಲ್ಲಿ ಸಿಪಿಐ(ಎಮ್) ಪಕ್ಷದ ಪ್ರಾಮಾಣಿಕತೆಯನ್ನು ವಿಮರ್ಶೆಗೆ ಒಡ್ಡಿದ್ದೀರಿ. ಪಶ್ಚಿಮ ಬಂಗಾಳ ಭ್ರಷ್ಟಾಚಾರ ಮುಕ್ತ ಸ್ವಚ್ಛ ರಾಜ್ಯವಾಗಿರಲು ಅಲ್ಲಿ ಒಬಿಸಿ, ಎಸ್ಸಿ, ಎಸ್ಟಿಗಳು ಅಧಿಕಾರಕ್ಕೆ ಬರದೇ ಇರುವುದು ಕಾರಣ ಎಂಬ ಆಶಿಶ್ ನಂದಿಯವರು ಮಾತು ಖಂಡಿತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿನ ವ್ಯವಸ್ಥೆ ಭ್ರಷ್ಟಾಚಾರದಿಂದ ಮುಕ್ತವಾಗಿದ್ದರೆ ಅದಕ್ಕೆ ಅಲ್ಲಿನ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಚಳವಳಿ ಮತ್ತು ಮೂರುವರೆ ದಶಕಗಳ ನಿರಂತರ ಆಡಳಿತ ಕಾರಣ ಅನ್ನುವುದು ನಿಷ್ಪಕ್ಷಪಾತಿಗಳು ಒಪ್ಪಲೇಬೇಕಾದ ಸತ್ಯ. ತಾವೂ ಕೂಡಾ “ಅಲ್ಲಿನ ಶೇಕಡಾ 90ರಷ್ಟು ಎಡಪಕ್ಷಗಳ ಜನಪ್ರತಿನಿಧಿಗಳು ಪ್ರಾಮಾಣಿಕರೆನ್ನುವುದು ನಿರ್ವಿವಾದ” ಎಂದು ಅಭಿಪ್ರಾಯ ಪಟ್ಟಿದ್ದೀರಿ.. ಆದರೆ ಮುಂದುವರಿದು, “ಅಲ್ಲಿನ ಸಿಪಿಎಂನ ಪದಾಧಿಕಾರಿಗಳು, ಪಕ್ಷದ ಲೋಕಲ್ ಕಮಿಟಿ ಸೆಕ್ರೆಟರಿಗಳು ಭ್ರಷ್ಟರು. ಅವರ ಆದಾಯ ವೃದ್ಧಿಯ ಬಗ್ಗೆ ಯಾರಾದರೂ ತನಿಖೆ ನಡೆಸಿದರೆ ಸ್ವಚ್ಛ ರಾಜ್ಯದ ಬಣ್ಣ ಬಯಲಾಗಬಹುದು” ಎಂದು ಬರೆದಿದ್ದೀರಿ. (ತಾವು ಬಹಳ ಸಲ ಕಮ್ಯುನಿಸ್ಟ್ ಆಡಳಿತ ಕಾಲದಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದೀರಿ, ಚುನಾವಣಾ ಸಮೀಕ್ಷೆಗಾಗಿ ಬಂಗಾಳದ ಹಳ್ಳಿ, ಹಳ್ಳಿ ತಿರುಗಿದ್ದೀರಿ, ತುಂಬಾ ಸಲ ಬಂಗಾಳದ ಬಗ್ಗೆ ಬರೆದಿದ್ದೀರಿ, ಆದರೆ ಯಾವತ್ತೂ ಸಿಪಿಐ(ಎಮ್) ಪಕ್ಷದ ಪದಾಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದು ಬರೆದದ್ದು ನೆನಪಿಲ್ಲ.)

ಸಿಪಿಐ(ಎಮ್) ಪಕ್ಷದಲ್ಲಿ ಜನಪ್ರತಿನಿಧಿಗಳು ಸ್ವಯಂಭೂಗಳಲ್ಲ, ಬದಲಿಗೆ ಅದೇ ಪಕ್ಷದ ಪದಾಧಿಕಾರಿಗಳು ಹಾಗೂ ಲೋಕಲ್ ಕಮಿಟಿ ಸೆಕ್ರೆಟರಿಗಳ ಮಧ್ಯದಿಂದಲೇ ಆಯ್ಕೆಯಾಗಿ ಬಂದಿರುತ್ತಾರೆ. ಹೀಗಿರುವಾಗ ಜನಪ್ರತಿನಿಧಿಗಳು ಪ್ರಾಮಾಣಿಕರಾಗಿರುವುದು, ಪದಾಧಿಕಾರಿಗಳು ಮಾತ್ರ ಭ್ರಷ್ಟರಾಗುವುದು ಹೇಗೆ ಸಾಧ್ಯ? ನಮ್ಮ ಬಂಡವಾಳಶಾಹಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟರಾಗಲು ಅತೀ ಹೆಚ್ಚು ಸಾಧ್ಯತೆ, ಅವಕಾಶ, ಆಮಿಶಗಳು ಇರುವುದು ಜನಪ್ರತಿನಿಧಿಗಳಿಗೇ ಆಗಿದೆ. ಆದಾಗ್ಯೂ ಸಿಪಿಐ(ಎಮ್) ಜನಪ್ರತಿನಿಧಿಗಳು ಪ್ರಾಮಾಣಿಕರಾಗಿ ಉಳಿದಿದ್ದಾರೆ ಎಂದಾದಲ್ಲಿ ಅದೇ ಪಕ್ಷದ ಪದಾಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದರೆ ಅರ್ಥ ಏನು?

ಇನ್ನು ಪಶ್ಚಿಮ ಬಂಗಾಳದ ಮೇಲ್ಜಾತಿಯ ಜಮೀನ್ದಾರರು ಸಾವಿರಾರು ಎಕರೆ ಜಮೀನನ್ನು ಸ್ವ-ಇಚ್ಛೆಯಿಂದ ಗೇಣಿದಾರರಿಗೆ ಬಿಟ್ಟುಕೊಟ್ಟಿದ್ದಾರೆ ಎಂಬ ಮಾತಿನ್ನು ಪಶ್ಚಿಮ ಬಂಗಾಳದ ಇತಿಹಾಸವನ್ನು ಬಲ್ಲವರಾರೂ ಒಪ್ಪಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಜಮೀನ್ದಾರ ಪದ್ಧತಿ ಅಳಿದು, ಭೂಹೀನರಿಗೆ ಭೂಮಿಯ ಒಡೆತನ ಸಿಕ್ಕಿದ್ದು ಸಿಪಿಐ(ಎಮ್) ನೇತೃತ್ವದ ಐತಿಹಾಸಿಕ ಸಮರಶೀಲ ಹೋರಾಟ ಮತ್ತು ಜ್ಯೋತಿ ಬಸು ನಾಯಕತ್ವದ ಎಡಪಕ್ಷಗಳ ಸರಕಾರ ಜಾರಿಗೆ ತಂದ ಪ್ರಬಲ ಭೂಮಸೂದೆ ಕಾಯ್ದೆಯಿಂದಾಗಿಯೇ ಹೊರತು ಭೂಮಾಲೀಕರ ಸ್ವಇಚ್ಛೆಯಿಂದಲ್ಲ ಎಂಬುದು ಕಮ್ಯುನಿಸ್ಟ್ ಪಕ್ಷಗಳ ಪ್ರಬಲ ವಿರೋಧಿಗಳು ಸಹ ಒಪ್ಪುವ ಮಾತು. (ಕಮ್ಯುನಿಸ್ಟ್ ವಿಚಾರಧಾರೆಯಿಂದ ಪ್ರಭಾವಿತರಾಗಿ, ಕಮ್ಯುನಿಸ್ಟ್ ಪಕ್ಷದ ಚಳುವಳಿಯ ಭಾಗವಾದ ಕೆಲವು ಭೂಮಾಲಕರು ತಾವು ಒಪ್ಪಿಕೊಂಡ ಆದರ್ಶದ ಭಾಗವಾಗಿ ಸ್ವಇಚ್ಛೆಯಿಂದ ಭೂಮಿಯನ್ನು ಗೇಣಿದಾರರಿಗೆ ಹಂಚಿದ ಪ್ರಕರಣಗಳನ್ನು ಬಿಟ್ಟು.)

ಹಾಗೆಯೇ ಜಮೀನು ಬಿಟ್ಟುಕೊಟ್ಟ ಮೇಲ್ಜಾತಿಗಳಿಗೆ ಅಧಿಕಾರ ಸಿಕ್ಕಿದೆ, ಅದಿನ್ನೂ ಅವರ ಕೈಯಲ್ಲಿ ಭದ್ರವಾಗಿ ಉಳಿದಿದೆ ಎಂಬ ಅಭಿಪ್ರಾಯವನ್ನು ಕೂಡಾ ಒಪ್ಪುವುದು ಸಾಧ್ಯವಿಲ್ಲ. jyothi-basuಜ್ಯೋತಿ ಬಸುವಿನಂತಹ ನಾಯಕ 23 ವರ್ಷ ಅರ್ಹವಾಗಿಯೇ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ್ದನ್ನು ಅವರ ಜಾತಿಯ ಕಾರಣಕ್ಕಾಗಿ ಮೇಲ್ಜಾತಿಗಳ ಆಡಳಿತ ಎಂಬ ಅಭಿಪ್ರಾಯಕ್ಕೆ ಬರಲು ಹೇಗೆ ಸಾಧ್ಯ? ಪಶ್ಚಿಮ ಬಂಗಾಳ ಸೇರಿ ಕಮ್ಯುನಿಸ್ಟ್ ಚಳುವಳಿ ಬೆಳೆದು ಬಂದದ್ದೇ ಮೇಲ್ಜಾತಿಗಳ ಕಪಿಮುಷ್ಟಿಯಲ್ಲಿದ್ದ ಆಳುವ ವರ್ಗಗಳ ವಿರುದ್ಧದ ಹೋರಾಟಗಳ ಮೂಲಕವೇ ಎಂಬುದು ತಮಗೆ ತಿಳಿದಿಲ್ಲಾ ಎಂದು ಭಾವಿಸುವುದು ಹೇಗೆ? ಪಶ್ಚಿಮ ಬಂಗಾಳದಲ್ಲಿ ಮೂರುವರೆ ದಶಕಗಳ ಕಾಲ ರಾಜಕೀಯ ಅಧಿಕಾರ ಇದ್ದದ್ದು ಮೇಲ್ಜಾತಿಗಳ ಕೈಯಲ್ಲಿ ಅಲ್ಲ. ಕಾರ್ಖಾನೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಭೂಹೀನರು, ಗೇಣಿದಾರರು, ಕೃಷಿ ಕೂಲಿ ಕಾರ್ಮಿಕರು, ಹೀಗೆ ಬಹುತೇಕ ಕೆಳಜಾತಿಗಳೇ ಇರುವ ಶೋಷಿತ ಜನ ವಿಭಾಗವನ್ನು ಪ್ರತಿನಿಧಿಸುವ ಸಿಪಿಐ(ಎಮ್) ಪಕ್ಷದ ಕೈಯಲ್ಲಿ. ಜ್ಯೋತಿ ಬಸು ಸೇರಿ ಅಧಿಕಾರ ಸ್ಥಾನದಲ್ಲಿದ್ದ ಮೇಲ್ಜಾತಿಗೆ ಸೇರಿದ ಕಾಮ್ರೇಡುಗಳು ತಮ್ಮ ಸ್ವಜಾತಿಯಲ್ಲಿದ್ದ ಜಾತಿವಾದ, ಶೋಷಣೆಯ ವಿರುದ್ಧ ಸಿಡಿದೆದ್ದು ಶೋಷಿತ ಜಾತಿಯ ಜನತೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಪಕ್ಷದ ಆಡಳಿತದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೇಲ್ಜಾತಿಯಿಂದ ಬಂದವರಾಗಿದ್ದರೂ ಮಂತ್ರಿಮಂಡಲ, ಜನಪ್ರತಿನಿಧಿಗಳಲ್ಲಿ ಕೆಳಜಾತಿಗಳು, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಚ್ಚಿನ ಪ್ರಭಾವಶಾಲಿ ಪ್ರತಿನಿಧಿಗಳು ಇದ್ದರು ಮತ್ತು ಪಕ್ಷದ ಒಳಗಡೆ ಅವರು ಪ್ರಭಾವಶಾಲಿಗಳಾಗಿದ್ದರು (ಲೋಕಲ್ ಕಮಿಟಿ ಸೆಕ್ರೆಟರಿಗಳಲ್ಲಿ ಕೆಳಜಾತಿಗೆ ಸೇರಿದವರೇ ಅಧಿಕ) ಎಂಬುದನ್ನು ನೀವು ಕಡೆಗಣಿಸಿದ್ದೀರಿ.

ಇದಕ್ಕಿಂತಲೂ ಮುಖ್ಯ ವಿಚಾರವನ್ನು ನೀವು ಚರ್ಚೆಗೆ ಒಳಪಡಿಸಿಲ್ಲ. ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಮ್) ಪಕ್ಷ ಸಾಮಾನ್ಯ ಕ್ಷೇತ್ರದಲ್ಲಿಯೂ ಸಹ ಪರಿಶಿಷ್ಟ ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿದೆ. ಇದು ಬೇರೆ ಪಕ್ಷಗಳಲ್ಲಿ, ಬೇರೆ ರಾಜ್ಯಗಳಲ್ಲಿ ಸಾಧ್ಯವಿದೆಯೇ? ನಮ್ಮದೇ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯಂತಹ ಪ್ರಭಾವಿ ನಾಯಕ ಸತತ ಏಳೆಂಟು ಬಾರಿ ಗೆದ್ದ ಮೀಸಲು ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಾಗ ಇನ್ನೊಂದು ಮೀಸಲು ಕ್ಷೇತ್ರಕ್ಕೆ ವಲಸೆ ಹೋದದ್ದನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ. ದಲಿತರು ಮಾತ್ರವಲ್ಲ ಇತರೆ ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲಾ ವರ್ಗಗಳ ದಮನಿತರಿಗೆ ಭೂಮಿ, ರಾಜಕೀಯ ಅಧಿಕಾರವನ್ನು ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಮ್) ಪಕ್ಷ ನೀಡಿದೆ. ಹೀಗಿರುವಾಗ ಪಕ್ಷದ ಆಡಳಿತವನ್ನು ಜಾತಿವಾದಿ ಎನ್ನಲು ಸಾಧ್ಯವೇ? ಅಂತೆಯೇ, ಇಷ್ಟೆಲ್ಲಾ ವಾಸ್ತವಾಂಶಗಳು ಇರುವಾಗ ತಮ್ಮ ಅಂಕಣ ಬರಹದಲ್ಲಿ ಆಶಿಶ್ ನಂದಿಯವರ ಹೇಳಿಕೆಯನ್ನು ಮುಂದಿಟ್ಟು ಪಶ್ಚಿಮ ಬಂಗಾಳದ ಸಿಪಿಐ(ಎಮ್) ಪಕ್ಷದ ಬಗ್ಗೆ ತಾವು ಬರೆದ ಬರಹದ ಹಿನ್ನಲೆಯಲ್ಲಿ ಆಶಿಶ್ ನಂದಿಯವರೇ ಪ್ರತಿಪಾದಿಸುತ್ತಾ ಬಂದ ಆಧುನಿಕೋತ್ತರವಾದ ಮತ್ತು ಅದರ ಉಪವಾದ ಅನನ್ಯತೆಯ ವಾದ ಪ್ರಭಾವವೂ ಒಂದು ಕಾರಣ ಆಗಿರಬಹುದು ಎಂಬುದು ನನ್ನ ಅಭಿಪ್ರಾಯ.

ಇತೀ ತಮ್ಮ ಪ್ರೀತಿಯ,
ಮುನೀರ್ ಕಾಟಿಪಳ್ಳ