Category Archives: ರಾಜಕೀಯ

ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು ಮತ್ತು ವಿಡಿಯೋಗಳು…

ಅಚ್ಚೇದಿನ್: ಎಚ್ಚರ, ನಿಮ್ಮ ಖಾತೆಗಳೇ ಕ್ಯಾಶಲೆಸ್!

ಅಚ್ಚೇದಿನಗಳ ಕನಸು ಕಂಡು ನೋಟು ರದ್ದತಿ ಬೆಂಬಲಿಸಿದವರಲ್ಲಿ ವಿಷಾದದ ಮೌನ

– ಪ್ರದೀಪ್ ಮಾಲ್ಗುಡಿ

ಬ್ಯಾಂಕ್ಗಳಲ್ಲಿನ ಹಣಕಾಸು ವಹಿವಾಟು ಇದ್ದಕ್ಕಿದ್ದಂತೆ ದೊಡ್ಡ ಸುದ್ದಿಯಾಗಿದೆ. ನಮ್ಮ ದುಡ್ಡನ್ನು ಖಾತೆಗೆ ಜಮಾ ಮಾಡಲು, ಹಣ ಹಿಂತೆಗೆದುಕೊಳ್ಳಲು ಕೂಡ ದುಬಾರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಡಲಾಗದ ಗ್ರಾಹಕರ ಮೇಲೆ ಕೂಡ ಎಸ್ಬಿಐ ಕೆಂಗಣ್ಣು ಬೀರಿದೆ.

 

patna-atmಹಣಕಾಸಿನ ವಹಿವಾಟಿಗೆ ದೊಡ್ಡ ಮೊತ್ತದ ಶುಲ್ಕವನ್ನು ವಿಧಿಸೋಕೆ ಬ್ಯಾಂಕ್ಗಳು ಮುಂದಾಗಿವೆ. ಇದಕ್ಕೆ ಮುನ್ನುಡಿ ಬರೆದದ್ದು ಎಚ್ಡಿಎಫ್ಸಿ. ಅನಂತರ ಎಸ್ಬಿಐ ಕೂಡ ಅನೇಕ ಹಂತಗಳಲ್ಲಿ ಶುಲ್ಕ ವಿಧಿಸೋಕೆ ಮುಂದಾಗಿದೆ. ಕೆಲವೇ ದಿನಗಳಲ್ಲಿ ಇದೇ ದಾರಿಯನ್ನು ದೇಶದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಕೂಡ ಹಿಡಿಯಬಹುದು.
ಎಸ್ಬಿಐ ಇತ್ತೀಚೆಗೆ ಮಾಡಿರುವ ಹೊಸ ನಿಯಮಗಳು ಗ್ರಾಹಕರು ಇನ್ನು ಮುಂದೆ ಬ್ಯಾಂಕ್ ಸುತ್ತ ಕೂಡ ಸುಳಿಯದೇ ಇರುವಂತೆ ಎಚ್ಚರಿಕೆ ನೀಡಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಲೇಬೇಕು, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ರೆ ಭಾರಿ ದಂಡ ವಿಧಿಸುವುದು, ಉಳಿತಾಯ ಖಾತೆಯಲ್ಲಿ ದುಡ್ಡಿಲ್ಲದಿದ್ರೂ ಭಾರಿ ದಂಡ, ಪಿನ್ ನಂಬರ್ ಚೇಂಚ್, ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಶುಲ್ಕ ತೆರಬೇಕು. ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5000 ರೂಪಾಯಿ, ನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 3000 ರೂಪಾಯಿ, ಉಪನಗರ ಪ್ರದೇಶದ ಗ್ರಾಹಕರ ಖಾತೆಯಲ್ಲಿ 2000 ರೂಪಾಯಿ, ಗ್ರಾಮೀಣ ಪ್ರದೇಶದ ಗ್ರಾಹಕರ ಖಾತೆಯಲ್ಲಿ 1000 ರೂಪಾಯಿ ಇರಲೇಬೇಕು. ಇಲ್ಲದಿದ್ದಲ್ಲಿ ದಂಡ ಕಟ್ಟಿ ಅಂತ ಎಸ್ಬಿಐ ಹೇಳಿದೆ. ಏಪ್ರಿಲ್ 1ರಿಂದಲೇ ಎಸ್ಬಿಐನಿಂದ ಈ ಹೊಸ ನಿಮಯ ಜಾರಿಯಾಗುತ್ತೆ.

 
ಗ್ರಾಹಕರ ಖಾತೆಗಳನ್ನೇ ಕ್ಯಾಶ್ಲೆಸ್ ಮಾಡೋ ಇನ್ನೊಂದು ನಿಯಮವನ್ನು ಕೂಡ ಎಸ್ಬಿಐ ರೂಪಿಸಿದೆ. ಅದರ ಪ್ರಕಾರ, ಮೆಟ್ರೋ ಸಿಟಿ ಗ್ರಾಹಕರ ಖಾತೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದ್ರೆ 50 ರೂ., ಶೇ. 50ರಿಂದ 70ರಷ್ಟು ಕಡಿಮೆಯಾದ್ರೆ 75 ರೂ., ಶೇ. 75ಕ್ಕಿಂತ ಕಡಿಮೆಯಾದ್ರೆ 100 ರೂ. ದಂಡ ವಿಧಿಸಲಾಗುತ್ತೆ. ಇನ್ನು ಗ್ರಾಮೀಣ ಗ್ರಾಹಕರ ಖಾತೆಯಲ್ಲಿ ಶೇ. 50ಕ್ಕಿಂತ ಕಡಿಮೆಯಾದ್ರೆ 20 ರೂಪಾಯಿ, ಶೇ. 50ರಿಂದ 75ರಷ್ಟು ಕಡಿಮೆಯಾದ್ರೆ 30 ರೂ., ಶೇ. 75ರ ಮೇಲೆ ಕಡಿಮೆಯಾದ್ರೆ 50 ರೂ. ದಂಡ ಕಟ್ಟಬೇಕಾಗುತ್ತದೆ. ಇದಲ್ಲದೇ ದಂಡದ ಜೊತೆಗೆ ಸೇವಾ ತೆರಿಗೆ ಕೂಡ ಕಟ್ಟಬೇಕಾಗುತ್ತದೆ.
ಮೊದಲು ಹಣಕಾಸು ವಹಿವಾಟಿನ ಮೇಲೆ ಶೇ. 0.50ರಷ್ಟು ದರ ವಿಧಿಸೋದಾಗಿ ಹೇಳಲಾಗಿತ್ತು. ಕಡೆಗೆ ಪ್ರತಿ ತಿಂಗಳಲ್ಲಿ 4 ವಹಿವಾಟಿನ ನಂತರ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು ಎಂದು ಎಚ್ಡಿಎಫ್ಸಿ ಹೇಳಿದೆ. ಐಸಿಐಸಿಐ ಕೂಡ ಇದೇ ರೀತಿಯಲ್ಲಿ ಶೇ. 0.58 ಶುಲ್ಕವನ್ನು ವಿಧಿಸ್ತಿದೆ. ಕೆಲವು ವೇಳೆ ವಹಿವಾಟಿಗೆ ಉಚಿತ ಆಫರ್ ಕೂಡ ನೀಡುತ್ತಿದೆ.

 

demonetisationಇನ್ನು ಕೇಂದ್ರ ಸರ್ಕಾರದ ಕ್ಯಾಶ್ಲೆಸ್ ಎಕಾನಮಿ ಕರೆಗೆ ಓಗೊಟ್ಟಿರೋದಾಗಿ ಹೇಳಿದ್ದ ಕೆಲವು ಬ್ಯಾಂಕ್ಗಳು ಉಚಿತ ವಹಿವಾಟು ನೀಡೋದಾಗಿ ಘೋಷಿಸಿದ್ದವು. ಆದರೆ, ಎಚ್ಡಿಎಫ್ಸಿ, ಎಸ್ಬಿಐ ಬ್ಯಾಂಕ್ಗಳು ಮಾತ್ರ ಕ್ಯಾಶ್ಲೆಸ್ ಕರೆಯನ್ನು ಬಡ, ಕೂಲಿ, ಕಾರ್ಮಿಕ ವರ್ಗದವರ ಖಾತೆಯನ್ನೇ ಕ್ಯಾಶ್ಲೆಸ್ ಮಾಡೋ ಹುನ್ನಾರ ನಡೆಸಿವೆ.

 
ಎಚ್ಡಿಎಫ್ಸಿ ಪ್ರತಿ ವಹಿವಾಟಿಗೆ 150 ಶುಲ್ಕ ವಿಧಿಸುತ್ತೆ. ಕೆಲವು ಬ್ಯಾಂಕ್ಗಳು 50, ಇನ್ನು ಕೆಲವು 1000ಕ್ಕೆ 5 ರೂ. ಶುಲ್ಕ ವಸೂಲಿ ಮಾಡ್ತಿವೆ. ಒಂದೊಂದು ಬ್ಯಾಂಕ್ಗಳು ಒಂದೇ ವಹಿವಾಟಿಗೆ ತಮ್ಮ ಮನಸಿಗೆ ತೋರಿದಷ್ಟು ಶುಲ್ಕವನ್ನು ವಿಧಿಸೋದು ಯಾವ ಸೀಮೆಯ ನ್ಯಾಯ? ಹೀಗೆ ಮನಸೋ ಇಚ್ಚೆ ಗ್ರಾಹರಕರನ್ನು ಬ್ಯಾಂಕ್ಗಳು ಲೂಟಿ ಮಾಡ್ತಿವೆ. ಆದರೆ, ಆರ್ಬಿಐ ಮಾತ್ರ ಏನೊಂದನ್ನೂ ನೋಡದೆ, ಕೇಳದೆ ಸುಮ್ಮನೆ ಕುಳಿತಿದೆ.

 
ಆಕ್ಸಿಸ್ ಬ್ಯಾಂಕ್ ಬೇರೆ ಶಾಖೆಯ ಖಾತೆಗಳ ವಹಿವಾಟಿಗೆ ಶುಲ್ಕ ವಿಧಿಸುತ್ತೆ. ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಆದರೆ, ಬ್ಯಾಂಕ್ಗಳು ಮಾತ್ರ ಡಿಜಿಟಲ್ ನೆಟ್ವರ್ಕ್ ಇದ್ದರೂ, ಕಳ್ಳದಾರಿಯಲ್ಲಿ ಗ್ರಾಹಕರಿಂದ ಹಣ ಸುಲಿಯುತ್ತಿವೆ.

 
ಇವೆಲ್ಲಕ್ಕಿಂತ ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪಾರದರ್ಶಕ ವಹಿವಾಟಿಗಾಗಿ ಎಲ್ಲೆಡೆ ಬಿಲ್ ನೀಡುವುದನ್ನು ಕಡ್ಡಾಯಗೊಳಿಸಿ ಕಾನೂನನ್ನೂ ರೂಪಿಸಲಾಗಿದೆ. ಆದರೆ, ದೇಶದ ಹಣಕಾಸಿನ ವಹಿವಾಟು ನಡೆಸುವ ಬ್ಯಾಂಕ್ಗಳೇ ಇದುವರೆಗೆ ಬಿಲ್ ನೀಡಿ, ಹಣ ಪಡೆಯುವ ಕ್ರಮವನ್ನು ಪಾಲಿಸಿಲ್ಲ. ಎಸ್ಬಿಐ ರೂಪಿಸಿರುವ ಹೊಸ ನಿಮಯಗಳು ಜಾರಿಯಾದರೆ, ನಿಮ್ಮ ಖಾತೆಯನ್ನು ರಾಜಾರೋಷವಾಗಿ ದೋಚುವ ಕೆಲಸ ಇನ್ನಷ್ಟು ಜೋರಾಗಿಯೇ ನಡೆಯುತ್ತೆ. ಶೇಕಡಾವಾರು ಆಧಾರದಲ್ಲಿ ಶುಲ್ಕ, ಹೆಚ್ಚುವರಿ ವಹಿವಾಟಿಗೆ ಶುಲ್ಕ, ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ವಿಧಿಸಿದರೆ, ಬಡವರ, ಮಧ್ಯಮವರ್ಗದವರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ದುಡ್ಡಿಗೆ ಕತ್ತರಿ ಬೀಳೋದಂತೂ ನಿಶ್ಚಿತವಾದಂತಾಗಿದೆ.

 
ಗ್ರಾಹಕರಿಗೆ ನಿಮ್ಮ ಖಾತೆಯಿಂದ ಹಣವನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಕನಿಷ್ಠ ವಿಷಯವನ್ನೂ ತಿಳಿಸದೇ ಬ್ಯಾಂಕ್ಗಳು ಗ್ರಾಹಕರನ್ನು ಸುಲಿಯುತ್ತಿವೆ. ಈ ಸುಲಿಗೆಯ ಯಾಗಕ್ಕೆ ಮುಂಬರುವ ಮೂರ್ಖರ ದಿನಕ್ಕಾಗಿ ಮುಹೂರ್ತವನ್ನು ಕೂಡ ನಿಗದಿಗೊಳಿಸಲಾಗಿದೆ. ಇಷ್ಟೆಲ್ಲ ಆದರೂ ಆರ್ಬಿಐ ಮೌನವಾಗಿದೆ. ಈ ಮೂಲಕ ಅದರ ಅಸ್ತಿತ್ವದ ಮೇಲೆ ಅನುಮಾನ ಕೂಡ ಮೂಡಿದೆ. ಏನಾದರೂ ಆಗಲಿ ಅಚ್ಚೇದಿನ್ ಬಂದವೇ ಎಂದು ಮಾತ್ರ ಯಾರೂ ಕೇಳಬಾರದು. ಕೇಳಿದರೆ ಪಾಕಿಸ್ತಾನಕ್ಕೆ ಒನ್ ವೇ ಟಿಕೆಟ್ ಕಳುಹಿಸಲಾಗುತ್ತೆ.

ಚಿತ್ರಕೃಪೆ;  Indian Express, Business Standard

ಒಡೆದ ಚೂರುಗಳನ್ನು ಆಯ್ದು ಕಟ್ಟುವ ಪ್ರಯತ್ನ

(ಇರ್ಷಾದ್  ಉಪ್ಪಿನಂಗಡಿಯವರ ಅನೇಕ ಲೇಖನಗಳು ಮೊದಲು ಪ್ರಕಟಗೊಂಡಿದ್ದು ವರ್ತಮಾನದಲ್ಲಿಯೇ. ಈಗ ಅಹರ್ನಿಶಿ ಪ್ರಕಾಶನ ಈ ಯುವ ಪತ್ರಕರ್ತನ ಬರಹಗಳನ್ನು ಒಟ್ಟು ಮಾಡಿ ಪ್ರಕಟಿಸಿದೆ. ಹಿರಿಯ ಪತ್ರಕರ್ತರು ಹಾಗೂ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಈ ಲೇಖನಗಳ ಗುಚ್ಚಕ್ಕೆ ಅರ್ಥಪೂರ್ಣ ಮುನ್ನುಡಿಯ ಮಾತುಳನ್ನಾಡಿದ್ದಾರೆ. ಅವರ ಮುನ್ನುಡಿ ಇಲ್ಲಿದೆ.)

 

ಬರೆಯುವುದೇ ಅಪರಾಧವೆಂಬಂತೆ ಬರಹಗಾರರನ್ನು, ನಿಂದಿಸಿ, ಹಂಗಿಸಿ, ಗೇಲಿಮಾಡಿ ಮಾನಸಿಕವಾಗಿ ಕುಗ್ಗಿಹೋಗುವಂತೆ ಮಾಡುವ ಹುನ್ನಾರಗಳ ಈ ದಿನಗಳಲ್ಲಿ ಬರವಣಿಗೆ ಕಷ್ಟದ ಕೆಲಸ. ಅದರಲ್ಲೂ ಒಬ್ಬ ಮುಸ್ಲಿಮ್ ಲೇಖಕ ಬರೆಯುವುದು ಹೆಚ್ಚು ಕಷ್ಟದ ಕೆಲಸ. ಇತ್ತೀಚಿನ ದಿನಗಳಲ್ಲಿ ‘ಕೋಮುವಾದಿಗಳ ಪ್ರಯೋಗ ಶಾಲೆ’ ಎಂಬ ಕುಖ್ಯಾತಿಗೆ ಒಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಕ್ಕಳಾಗಿ ಬರೆಯುವುದು ಇನ್ನೂ ಕಷ್ಟದ ಕೆಲಸ.
ಗೆಳೆಯ ಇರ್ಷಾದ್ ಉಪ್ಪಿನಂಗಡಿಯವರಂತಹ ಲೇಖಕರ ಕಷ್ಟಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಇವರೊಬ್ಬ ಟಿವಿ ಮಾಧ್ಯಮದ ಪತ್ರಕರ್ತ. ಮಾತನ್ನೇ ಬಂಡವಾಳ ಮಾSwargadahadi-3ಡಿಕೊಳ್ಳಬೇಕಾದ ಅನಿವಾರ್ಯತೆಯ ಟಿವಿ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಅಕ್ಷರರೂಪದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುವುದು ಒಂದು ಸವಾಲು. ಇಷ್ಟು ಮಾತ್ರವಲ್ಲ ಸೃಜನಶೀಲ ಬರವಣಿಗೆಗಳೆಂದು ಹೇಳುವ ಕತೆ-ಕವನ-ಕಾದಂಬರಿಗಳನ್ನು ಬರೆಯುವವರಿಗೆ ಇರುವ ಸೂಕ್ಷ್ಮ ವಿಷಯಗಳನ್ನು ರೂಪಕ-ಪ್ರತಿಮೆಗಳ ಮೂಲಕ ಹೇಳುವ ಸುರಕ್ಷತೆಯ ಕವಚ ಕೂಡಾ ಒಬ್ಬ ಪತ್ರಕರ್ತನಿಗೆ ಇಲ್ಲವೇ ಸೃಜನೇತರ ಲೇಖಕನಿಗೆ ಇರುವುದಿಲ್ಲ. ಈತ ಹೇಳುವುದನ್ನುನೇರವಾಗಿ, ಸ್ಪಷ್ಟವಾಗಿ ಹೇಳಬೇಕಾಗುತ್ತದೆ.

 

ಇರ್ಷಾದ್ ಉಪ್ಪಿನಂಗಡಿಯವರ ಲೇಖನಗಳು ಈ ಕಷ್ಟಗಳ ಸರಮಾಲೆಯ ವಿರುದ್ದದ ಹೋರಾಟದಂತೆ ಕಾಣಿಸುತ್ತದೆ. ಲೇಖನಗಳನ್ನು ಓದುತ್ತಾ ಹೋದಂತೆ ಇರ್ಷಾದ್ ಮೈಗೂಡಿಸಿಕೊಂಡಿರುವ ಸತ್ಯ ಹೇಳಲೇಬೇಕೆಂಬ ಛಲ, ನ್ಯಾಯದ ಪರವಾಗಿ ಇರಬೇಕೆಂಬ ಬದ್ಧತೆ ಮತ್ತು ಸಾಮಾಜಿಕವಾದ ಕಳಕಳಿ ನಮ್ಮನ್ನು ತಟ್ಟುತ್ತದೆ. ಮುಜುಗರ ಸ್ವಭಾವದ, ನೋಡಲು ಚಾಕಲೇಟ್ ಹೀರೋನಂತಿರುವ, ಇನ್ನೂ ಕಿರಿ ವಯಸ್ಸಿನ ಇರ್ಷಾದ್ ಗೆ ಇಂತಹ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆ ಈ ಲೇಖನಗಳನ್ನು ಓದುವವರನ್ನು ಕಾಡದೆ ಇರದು.

 

ಮನುಷ್ಯನನ್ನು ಇಂತಹ ಧೈರ್ಯದ ಕೆಲಸ ಮಾಡಿಸುವುದು ಅವನೊಳಗಿರುವ ಆತ್ಮಬಲ. ಅದು ತಾನು ಬಡಿದುಕೊಳ್ಳುವ 56 ಇಂಚಿನ ಎದೆಯಿಂದ ಬರುವುದಿಲ್ಲ. ಅದು ಆತನ ಸತ್ಯಸಂಧತೆ, ಬದ್ದತೆ, ಪ್ರಾಮಾಣಿಕತೆ ಮತ್ತು ತನ್ನವರಿಗಾಗಿ ಮಿಡಿಯುವ ಕಳಕಳಿಗಳಿಂದ ಹರಿದುಬರುವಂತಹದ್ದು. ಇದನ್ನು ಇರ್ಷಾದ್ ನಂತಹ ಲೇಖಕರು ಮತ್ತು ನಿಜವಾದ ಮನುಷ್ಯರು ಸಾಬೀತು ಪಡಿಸುತ್ತಲೇ ಬಂದಿದ್ದಾರೆ..

 

ಈ ಪುಸ್ತಕದಲ್ಲಿ ಹತ್ತು ಲೇಖನಗಳಿದ್ದು ಅದರಲ್ಲಿ ಎಂಆರ್ ಪಿಎಲ್ ನ ಸಂತ್ರಸ್ತರ ಸಮಸ್ಯೆಯ ಲೇಖನವೊಂದನ್ನು ಹೊರತುಪಡಿಸಿ ಉಳಿದೆಲ್ಲವು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿದ್ದಾಗಿದೆ. ಈ ರೀತಿ ಬರೆಯುವವರನ್ನು ಸಹಜವಾಗಿಯೇ ನಾವು ಮುಸ್ಲಿಮ್ ಲೇಖಕರೆಂಬ ಆವರಣದೊಳಗೆ ಸೇರಿಸಿಬಿಡುತ್ತೇವೆ. ಹೆಸರುಗಳ ಉಲ್ಲೇಖ ಇಲ್ಲಿ ಅಪ್ರಸ್ತುತ, ಆದರೆ ಹಿಂದೂ ಸಮುದಾಯದ ಬಗ್ಗೆ ಬರೆಯುವವರನ್ನು ಮಾತ್ರ ಹಿಂದೂ ಲೇಖಕರು ಎಂದು ಯಾರೂ ಬ್ರಾಂಡ್ ಮಾಡುವುದಿಲ್ಲ. ಬರಹಗಾರರು, ಸಾಹಿತಿಗಳು, ಕಲಾವಿದರನ್ನು ಅವರ ಕೃತಿಗಳ ಮೂಲಕ ನೋಡಬೇಕೇ ಹೊರತು ಅವರು ಹುಟ್ಟಿದ ಜಾತಿ- ಧರ್ಮದ ಮೂಲಕ ಅಲ್ಲ ಎನ್ನುವುದನ್ನು ಹೇಳುತ್ತಲೇ ಇಂತಹ ಆತ್ಮವಂಚನೆಗಳನ್ನು ಮಾಡುತ್ತಿರುತ್ತೇವೆ.

 

ಮುಸ್ಲಿಮ್ ಲೇಖಕನೊಬ್ಬ ಹಿಂದೂ ಧರ್ಮದ ಹುಳುಕುಗಳ ಬಗ್ಗೆ ಬರೆದರೆ; ಬೇರೆ ಧರ್ಮಗಳ ಉಸಾಬರಿ ಯಾಕೆ? ನಿಮ್ಮ ಧರ್ಮದ ಬಗ್ಗೆಯೇ ಬರೆಯಿರಿ ಎಂದು ಅಪ್ಪಣೆ ಕೊಡಿಸುವುದೂ ಉಂಟು. ಇದನ್ನು ಹಿಂದೂ ಧರ್ಮದಲ್ಲಿ ಹುಟ್ಟಿರುವ ಲೇಖಕರ ಬಗ್ಗೆ ಮುಸ್ಲಿಮರೂ ಹೇಳುವುದನ್ನು ನಮ್ಮಂತಹವರು ಕೇಳಿದ್ದೇವೆ. ನಾನೊಮ್ಮೆ ಬುರ್ಖಾದ  ಬಗ್ಗೆ ಮಾತನಾಡಿ ವಿವಾದ ಹುಟ್ಟಿಕೊಂಡಾಗ, ನಾನು ಬಹಳ ಮೆಚ್ಚಿಕೊಂಡ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಯುವಪತ್ರಕರ್ತರೊಬ್ಬರು ನಮ್ಮ ಹೆಂಗಸರ ಬಟ್ಟೆಗೆ ಯಾಕೆ ಕೈ ಹಾಕುತ್ತೀರಿ? ಎಂದು ಕೇಳಿದಾಗ ಒಂದು ಕ್ಷಣ ಬೆಚ್ಚಿಬಿದ್ದಿದ್ದೆ. ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಧರ್ಮಗಳ ವಾಸ್ತವದ ಬಗ್ಗೆ ಕುರುಡಾಗಿ ವ್ಯಕ್ತಿ-ವಿಷಯಗಳನ್ನು ಚರ್ಚಿಸುವುದು ಅಸಾಧ್ಯವೆನಿಸುವಂತಹ ವಾತಾವರಣವನ್ನು ನಾವೇ ನಿರ್ಮಿಸಿಬಿಟ್ಟಿದ್ದೇವೆ.

 

ಪತ್ರಕರ್ತನಾಗಿ, ಲೇಖಕನಾಗಿ ಇರ್ಷಾದ್ ಎದುರಿಸಬೇಕಾಗಿ ಬಂದಿರುವ ಬಹಿರಂಗ ವಿರೋಧ ಮತ್ತು ಆಂತರಿಕ ಒತ್ತಡದ ಅರಿವಾಗಬೇಕಾದರೆ ಅವರು ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಕಣ್ಣುಹಾಯಿಸಬೇಕು. ಬಹುಸಂಸ್ಕೃತಿಯ ತೊಟ್ಟಿಲಾಗಿದ್ದ, ಕೋಮುಸೌಹಾರ್ದdineshತೆಯನ್ನೇ ಜೀವನಕ್ರಮವಾಗಿ ಪಾಲಿಸುತ್ತಾ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಕೋಮುಕಾಳಗದ ರಣರಂಗವಾಗಿದೆ. ಹಿಂದಿನ ತಲೆಮಾರು ಕೂಡಿ ಕಟ್ಟಿದ್ದನ್ನು ಇಂದಿನ ತಲೆಮಾರಿನ ಒಂದು ಗುಂಪು ಒಡೆದು ಮುರಿದುಹಾಕಿದ್ದಾರೆ. ಜಗವೆಲ್ಲ ಹೆಮ್ಮೆ ಪಡುತ್ತಿದ್ದ, (ಸ್ವಲ್ಪ ಅಸೂಯೆಯಿಂದಲೂ ನೋಡುತ್ತಿದ್ದ) ದಕ್ಷಿಣ ಕನ್ನಡ ಜಿಲ್ಲೆಯ ಅಂತರಂಗಕ್ಕೆ ಈಗ ಇಣುಕಿನೋಡಿದರೆ ಒಡಕಲು ಬಿಂಬಗಳು ಕಾಣಿಸತೊಡಗಿವೆ. ಈ ರೀತಿ ಒಡೆದು ಹಾಕಿರುವವರನ್ನು ಗುರುತಿಸುವುದಷ್ಟೇ ಅಲ್ಲ, ಒಡೆದ ಚೂರುಗಳನ್ನು ಆಯ್ದು, ಜೋಡಿಸಿ ಮತ್ತೆ ಕಟ್ಟುವ ಪ್ರಯತ್ನ ಇರ್ಷಾದ್ ಅವರ ಲೇಖನಗಳಲ್ಲಿ ಕಾಣಬಹುದು.

 

ಹಿಂದೂ-ಮುಸ್ಲಿಮ್ ಎರಡೂ ಧರ್ಮಗಳಿಗೆ ಸೇರಿದ ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೊಳಗಾಗಿರುವ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿರುವ ಪ್ರಗತಿಪರ ಲೇಖಕರ ಪರಂಪರೆ ಬೆಳೆದುಬಂದಿರುವುದನ್ನು ಈಗ ನೆನಪುಮಾಡಿಕೊಂಡರೆ ಇತಿಹಾಸದ ವ್ಯಂಗ್ಯದಂತೆ ಕಾಣಬಹುದು. ಈ ಲೇಖಕರೆಲ್ಲ ಧರ್ಮ ಸೂಕ್ಷ್ಮಗಳನ್ನು ಬಿಡಿಸಿಹೇಳುತ್ತಲೇ ಒಳಗಿರುವ ಪುರೋಹಿತಶಾಹಿಯ ಆತ್ಮವಂಚನೆ, ಸ್ವಾರ್ಥ ಮತ್ತು ಅಜ್ಞಾನಗಳನ್ನು ಬಯಲುಗೊಳಿಸಿದವರು. ಇದರಿಂದಾಗಿ ನಾನಾ ಬಗೆಯ ಕಷ್ಟನಷ್ಟಗಳನ್ನು ವೈಯಕ್ತಿಕ ಜೀವನದಲ್ಲಿಯೂ ಎದುರಿಸಿದವರು. ಇವರಲ್ಲಿ ಕೆಲವರು ಮೌನವಾಗಿ ಹೋಗಿದ್ದಾರೆ, ಇನ್ನು ಕೆಲವರು ಸಮನ್ವಯತೆಯ ಹರಿಕಾರರಾಗಿದ್ದಾರೆ.
ಈ ಲೇಖಕರ ಮೌನವನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಅವಧಿಯಲ್ಲಿ ನಡೆದ ಗದ್ದಲವನ್ನು ಕೂಡಾ ತಿಳಿದುಕೊಳ್ಳಬೇಕಾಗುತ್ತದೆ. ಕಾರಣಗಳೂ ನಮ್ಮ ವರ್ತಮಾನದ ರಾಜಕೀಯ ಬೆಳವಣಿಗೆಗಳಲ್ಲಿದೆ ಎನ್ನುವುದನ್ನು ಕೂಡಾ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಬಾಬರಿಮಸೀದಿಯ ನಂತರ ಬದಲಾಗಿರುವುದು ದೇಶದ ರಾಜಕೀಯ ಕ್ಷೇತ್ರ ಮಾತ್ರವಲ್ಲ, ಅದರ ಅಡ್ಡಪರಿಣಾಮಗಳಿಂದಾಗಿ ನಮ್ಮ ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಒಟ್ಟು ಸಾಂಸ್ಕೃತಿಕ ಲೋಕ ಕೂಡಾ ಕೋಮುಬಣ್ಣ ಬಳಿದುಕೊಂಡದ್ದನ್ನು ಕಾಣಬಹುದು. ಈ ಬದಲಾವಣೆಗೆ ಕನ್ನಡ ಸಾಹಿತ್ಯ ಕ್ಷೇತ್ರ ಹೊರತಾಗಿರಲಿಲ್ಲ. ತುರ್ತು   ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಮುಸ್ಲಿಮ್ ಸಮುದಾಯದ ಲೇಖಕರ ಬೆನ್ನು ತಟ್ಟಿದವರು, ಅದೇ ಲೇಖಕರು ಕೋಮುವಾದದ ವಿರುದ್ಧ ಬರೆದಾಗ ಧರ್ಮದ ಕನ್ನಡಕ ಹಾಕಿಕೊಂಡು ತೀರ್ಪು ನೀಡಲು ಶುರುಮಾಡಿದರು.

 

ಇದರಿಂದಾಗಿ ಎಂಬತ್ತರ ದಶಕದಲ್ಲಿ ಮುಸ್ಲಿಮ್ ಮೂಲಭೂತವಾದದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದ ಬರೆಯುತ್ತಿದ್ದ ಮುಸ್ಲಿಮ್ ಸಮುದಾಯದ ಲೇಖಕ-ಲೇಖಕಿಯರ ದನಿ ಕ್ಷೀಣವಾಗುತ್ತಾ ಹೋಯಿತು. ಹಿಂದುಕೋಮುವಾದದ ಅಬ್ಬರ ಮತ್ತು ಅದನ್ನು ಎದುರಿಸಲು ಮುಸ್ಲಿಮ್ ಮೂಲಭೂತವಾದ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣದ ನಡುವೆ ಸಿಕ್ಕ ಪ್ರಗತಿಪರ ಲೇಖಕರು ಈ ಗೊಂದಲದಲ್ಲಿಯೇ ತುಸು ಅಂಚಿಗೆ ಸರಿದು ನಿಲ್ಲುವಂತಾಯಿತು. ಇಸ್ಲಾಂ ಧರ್ಮದೊಳಗಿನ ಸಂಪ್ರದಾಯವಾದದ ಬಗ್ಗೆ ಪ್ರಗತಿಪರ ಮುಸ್ಲಿಮರು ಎತ್ತಿದ ಪ್ರಶ್ನೆಗಳನ್ನು ಹಿಂದೂ ಮೂಲಭೂತವಾದಿಗಳು ಮುಸ್ಲಿಮರ ವಿರುದ್ದ ಜನಾಭಿಪ್ರಾಯ ರೂಪಿಸಲು ಮತ್ತು ಹಿಂದೂಗಳನ್ನು ಎತ್ತಿಕಟ್ಟುವ ಹುನ್ನಾರಕ್ಕೆ ದುರ್ಬಳಕೆ ಮಾಡುವಂತಹ ಪ್ರಸಂಗಗಳು ಕೂಡಾ ನಡೆಯುತ್ತಿವೆ.

 

ನಾವಿಂದು ಉತ್ತರ ಹುಡುಕಬೇಕಾಗಿರುವುದು ಹಿಂದೆ ಬರೆಯುತ್ತಿದ್ದವರು ಈಗಲೂ ಹಿಂದಿನಂತೆಯೇ ಯಾಕೆ ಬರೆಯುವುದಿಲ್ಲ ಎನ್ನುವ ಪ್ರಶ್ನೆಗೆ ಅಲ್ಲ. ಈ ರೀತಿಯ ದಣಿವು, ವಿಶ್ರಾಂತಿ, ಆರೋಪಿತ ಹೊಂದಾಣಿಕೆಯ ಬಗ್ಗೆಯೂ ಅಲ್ಲ. ಇಂತಹ ಬೆಳವಣಿಗೆ ಕೇವಲ ಮುಸ್ಲಿಮ್ ಸಮುದಾಯದಿಂದ ಬಂದಿರುವ ಲೇಖಕರಿಗೆ ಮಾತ್ರ ಸೀಮಿತವಾಗಿಲ್ಲ, ಎಂಬತ್ತರ ದಶಕದಲ್ಲಿ ಪ್ರಜ್ವಲಿಸಿದ ದಲಿತ, ರೈತ ಮತ್ತು ಭಾಷಾ ಚಳುವಳಿಯನ್ನು ಮುನ್ನಡೆಸಿದ್ದ ಎಲ್ಲ ಗುಂಪುಗಳಲ್ಲಿಯೂ ನಾಯಕತ್ವದ ಇಂತಹ ಬಿಕ್ಕಟ್ಟುಗಳನ್ನು ಕಾಣಬಹುದು. ನಾವಿಂದು ಉತ್ತರ ಹುಡುಕಬೇಕಾಗಿರುವುದು ಮುಸ್ಲಿಮ್ ಸಮುದಾಯಕ್ಕೆ ಸೇರಿದ ಪ್ರಗತಿಪರ ಲೇಖಕರ ಪರಂಪರೆಯ ವಾರಸುದಾರರು ಯಾಕೆ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆಗೆ.
ಪ್ರಗತಿಪರ ಮುಸ್ಲಿಮ್ ಲೇಖಕರ ಪರಂಪರೆಯ ಸರಪಳಿ ಇದ್ದಕ್ಕಿದ್ದ ಹಾಗೆ ಮುರಿದುಬಿತ್ತೇ ಎಂಬ ಆತಂಕದ ಪ್ರಶ್ನೆ ಈಗಲೂ ನಮ್ಮ ಮುಂದಿದ್ದರೂ ಹೊಸ ತಲೆಮಾರಿನ ಅನೇಕ ಮುಸ್ಲಿಮ್ ಯುವಕ-ಯುವತಿಯರು. ಧರ್ಮದ ಬಗೆಗಿನ ಕುರುಡುತನವನ್ನು ಮೀರಿ ಒಂದಿಷ್ಟು ಅಧ್ಯಯನ, ಆತ್ಮಾವಲೋಕನದ ಮೂಲಕ ದಿಟ್ಟತನದಿಂದ ಬರೆಯುತ್ತಿದ್ದಾರೆ, ಹೋರಾಟ ನಡೆಸುತ್ತಿದ್ದಾರೆ. ಇಷರ್ಾದ್ ಉಪ್ಪಿನಂಗಡಿ ಈ ಸಾಲಿನಲ್ಲಿರುವ ಯುವ ಬರಹಗಾರ.

 

ಈ ಸಂಕಲನದಲ್ಲಿರುವ ಲೇಖನಗಳು ಆಯಾ ಸಂದರ್ಭದ ವಿದ್ಯಮಾನಗಳಿಗೆ ಥಟ್ಟನೆ ಪ್ರತಿಕ್ರಿಯೆ ರೂಪದಲ್ಲಿ ಬರೆದಿರುವಂತಹದ್ದು. ಈ ದೃಷ್ಟಿಯಿಂದ ಇದನ್ನು ಪತ್ರಿಕಾ ಲೇಖನಗಳೆಂದು ಹೇಳಬಹುದಾದರೂ ಇರ್ಷಾದ್ ಅಧ್ಯಯನ-ಸಂಶೋಧನೆಯ ಮೂಲಕ ಲೇಖನಗಳನ್ನು ಅವಸರದ ಬರವಣಿಗೆಯ ಆಚೆಗೆ ವಿಸ್ತರಿಸುವ ಪ್ರಯತ್ನ ಮಾಡಿದ್ದಾರೆ. ಇಷರ್ಾದ್ ಭಿನ್ನಾಭಿಪ್ರಾಯವನ್ನು ದಾಖಲಿಸಿ ಓಡಿಹೋಗುವುದಿಲ್ಲ, ತಾನು ಹೇಳುವುದನ್ನು ದಾಖಲೆಗಳ ಸಮೇತ ಮಂಡಿಸುತ್ತಾರೆ. ತಲಾಖ್, ಬುರ್ಖಾ, ಸಹಶಿಕ್ಷಣಕ್ಕೆ ಸಂಬಂಧಿಸಿದಂತೆ ಧರ್ಮಗ್ರಂಥ ಕುರಾನ್ ಏIrshadನು ಹೇಳಿದೆ ಎನ್ನುವುದನ್ನು ಎದುರಾಳಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ತಾಳ್ಮೆಯಿಂದ ಮಾಡುತ್ತಾರೆ.

 

ಇರ್ಷಾದ್ ಅವರನ್ನು ಮತ್ತೆಮತ್ತೆ ಕಾಡುವುದು ಧರ್ಮದೊಳಗೆ ಹೆಚ್ಚು ಶೋಷಣೆಗೊಳಗಾಗಿರುವ ಮುಸ್ಲಿಮ್ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಎನ್ನುವುದು ಗಮನ ಸೆಳೆಯುತ್ತದೆ. ಹೀಗಾಗಿಯೇ ಈ ಪುಸ್ತಕದ ಹತ್ತರಲ್ಲಿ ಐದು ಲೇಖನಗಳು ತಲಾಖ್, ಬುರ್ಖಾ, ಹುಡುಗಿಯರ ಪ್ರತಿಭೆಯ ದಮನ ಮೊದಲಾದ ವಿಷಯಗಳ ಬಗ್ಗೆ ಇದೆ. ಹಿಂದೊಮ್ಮೆ ನನ್ನ ಮಾತುಗಳಿಂದಾಗಿ ಹುಟ್ಟಿಕೊಂಡ ವಿವಾದಕ್ಕೆ ಪ್ರತಿಕ್ರಿಯಿಸಿ ಬರೆದಿರುವ ಬುರ್ಖಾದೊಳಗೆ ಆಕೆಯ ಮೌನಕ್ಕೆ ದನಿಯಾದಾಗ ಎನ್ನುವ ಲೇಖನವನ್ನು ಮುಸ್ಲಿಮ್ ಸೋದರಿಯ ಪರಕಾಯ ಪ್ರವೇಶ ಮಾಡಿಬರೆದಿರುವುದು ಮನಮಿಡಿಯುವಂತಿದೆ.
ಇರ್ಷಾದ್ ಅವರು ಬಹುತೇಕ ಬರವಣಿಗೆಗಳಿಗೆ ಆಯ್ದುಕೊಂಡಿರುವುದು ಧರ್ಮ ಎನ್ನುವ ಸೂಕ್ಷ್ಮವಾದ ಮತ್ತು ಬಹುಬೇಗ ಭಾವನೆಗಳನ್ನು ಕೆರಳಿಸಬಲ್ಲ ವಿಷಯವನ್ನು. ಈ ಬಗ್ಗೆ ಬರೆಯುವವರು ಸಹಜವಾಗಿಯೇ ಭಾವುಕರಾಗಿಬಿಡುತ್ತಾರೆ, ತಮಗರಿವಿಲ್ಲದೆಯೇ ಆವೇಶ, ಆಕ್ರೋಶಗಳು ಹೊರಹೊಮ್ಮುತ್ತವೆ. ಆದರೆ ಇರ್ಷಾದ್ ಬರೆದಿರುವ ಲೇಖನಗಳನ್ನು ಓದುವಾಗ ಮನೆ ಹಿರಿಯನೊಬ್ಬನ ಕೈಹಿಡಿದು ಜಗ್ಗುತ್ತಿರುವ ಪುಟ್ಟಬಾಲಕ ಹೀಗ್ಯಾಕೆ ಮಾಡುತ್ತಿದ್ದೀರಿ? ಇದು ತಪ್ಪಲ್ಲವೇ? ಎಂದು ಮುಗ್ಧತೆಯಿಂದ ಕೇಳುತ್ತಿರುವಂತಿದೆ. ಇದು ಪ್ರೀತಿಸುವವರನ್ನು ಉದ್ದೇಶಿಸಿ ಪ್ರೀತಿಯಿಂದ ಬರೆದ ಲೇಖನಗಳು. ಹೀಗೆಯೇ ಎಲ್ಲರೂ ಓದಿಕೊಂಡರೆ ಲೇಖಕರ ಆಶಯ ಸಾರ್ಥಕ.

 

ಗಂಭೀರ ವಿಷಯಗಳಿಗೆ ಒಗ್ಗದ ಟಿವಿ ಮಾಧ್ಯಮದ ವರದಿಗಾರರಾಗಿ ತನ್ನೊಳಗಿನ ಲೇಖಕನನ್ನು ಕಳೆದುಕೊಳ್ಳುತ್ತಾರೋ ಏನೋ ಎನ್ನುವುದಷ್ಟೇ ಇರ್ಷಾದ್ ಬಗ್ಗೆ ಇರುವ ನನ್ನ ಏಕೈಕ ದೂರು. ನಾನು ಮುದ್ರಣ ಮಾಧ್ಯಮದ ಪಕ್ಷಪಾತಿ ಎನ್ನುವದಷ್ಟೇ ಇದಕ್ಕೆ ಕಾರಣ ಅಲ್ಲ, ಇಷರ್ಾದ್ ಅವರ ಗ್ರಹಿಕೆಯ ಸಾಮರ್ಥ್ಯ, ಬರವಣಿಗೆಯ ಶಕ್ತಿಯನ್ನು ನೋಡಿದರೆ ಅವರು ಕನ್ನಡದ ಒಬ್ಬ ಉತ್ತಮ ಪತ್ರಕರ್ತ-ಲೇಖಕರಾಗಬಹುದೆಂಬ ಭರವಸೆ ಮೂಡುತ್ತದೆ. ಇದು ನಿಜವಾಗಲಿ ಎಂದು ಹಾರೈಸುತ್ತೇನೆ.
ಅಲ್ಲೆಲ್ಲೋ ಇರುವ ಉಪ್ಪಿನಂಗಡಿಯ ಇಷರ್ಾದ್ ಅವರನ್ನು ಗುರುತಿಸಿ, ಕಳೆದುಹೋಗಬಹುದಾದ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿರುವ ಮತ್ತು ಭಾಷಣಗಳಲ್ಲಿ ಕಳೆದುಹೋಗುತ್ತಿರುವ ನನ್ನ ಮೇಲೆ ಒತ್ತಡ ಹೇರಿ ನಾಲ್ಕು ಸಾಲು ಬರೆಯುವಂತೆ ಮಾಡಿದ ಅಹರ್ನಿಶಿಯ ಕೆ.ಅಕ್ಷತಾ ಅವರಿಗೂ ಥ್ಯಾಂಕ್ಸ್.

– ದಿನೇಶ್ ಅಮೀನ್ ಮಟ್ಟು

ಲೇಖನಗಳ ಸಂಗ್ರಹ: ಸ್ವರ್ಗದ ಹಾದಿಯಲ್ಲಿ…

ಲೇಖಕ:  ಇರ್ಷಾದ್ ಉಪ್ಪಿನಂಗಡಿ

ಪ್ರಕಾಶನ: ಅಹರ್ನಿಶಿ

ಬೆಲೆ: 70/-

ಪ್ರತಿಗಳಿಗಾಗಿ: 94491-74662

 

ಪಿನರಾಯಿ ವಿಜಯನ್ ಮತ್ತು ಸಂಘಪರಿವಾರದ ಬಿಲ್ಲವ ವಿರೋಧಿ ಅಜೆಂಡಾ


-ಎನ್.ಎಸ್


 

ಫೆಬ್ರವರಿ 25 ರಂದು ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಲು ಬರುತ್ತಿರುವ ಪಿನರಾಯಿ ವಿಜಯನ್ ಗೆPinarayi-Vijayan-cpim ಸಂಘಪರಿವಾರ ವಿರೋಧ ವ್ಯಕ್ತಪಡಿಸಿದೆ. ಪಿನರಾಯಿ ವಿಜಯನ್ ಮಂಗಳೂರಿಗೆ ಆಗಮಿಸಲಿರುವ ದಿನವಾದ ಫೆಬ್ರವರಿ 25 ರಂದು ಸಂಘಪರಿವಾರ ಜಿಲ್ಲಾ ಬಂದ್ ಗೆ ಕರೆ ನೀಡಿದೆ. ಸ್ಪರ್ಧಾತ್ಮಕ ರಾಜಕೀಯದ ಹಿನ್ನಲೆಯಲ್ಲಿ ಇಂತಹ ವಿರೋಧವನ್ನು ಸಹಜ ರಾಜಕೀಯ ನಡೆಯೆಂದು ಪರಿಗಣಿಸಬಹುದಿತ್ತೇನೋ. ಆದರೆ ಸದ್ಯದ ಸಂದರ್ಭದಲ್ಲಿ ಪ್ರಸ್ತುತ ಕಾರ್ಯಕ್ರಮಕ್ಕೆ ಸಂಘಪರಿವಾರ ಜಿದ್ದಿನ ವಿರೋಧವನ್ನು ಒಡ್ಡುವಲ್ಲಿ ಕರಾವಳಿಯ ಬಹುಸಂಖ್ಯಾತ ಹಿಂದುಳಿದ ಸಮುದಾಯ ಬಿಲ್ಲವರನ್ನು ರಾಜಕೀಯ ಕ್ಷೇತ್ರದಲ್ಲಿ ಅಪ್ರಮುಖರನ್ನಾಗಿಸುವ, ದಮನಿಸುವ ಕಾರ್ಯಸೂಚಿ ಅಡಗಿದೆ.

ಹಾಗೆ ನೋಡಿದಲ್ಲಿ ಪಿನರಾಯಿ ವಿಜಯನ್ ಭಾಗವಹಿಸುವ ಫೆಬ್ರವರಿ 25 ರ ಐಕ್ಯತಾ ಸಮಾವೇಶ ಹಿಂದುಳಿದ ವರ್ಗಗಳ, ಅದರಲ್ಲೂ ವಿಶೇಷವಾಗಿ ಬಿಲ್ಲವರ ಸ್ವಾಭಿಮಾನದ ಸಮಾವೇಶವಾಗಿದೆ. ದಕ್ಷಿಣ ಕನ್ನಡದ ಬಿಲ್ಲವರು ಮತ್ತು ಕೆಳವರ್ಗಗಳಿಗೆ ಸ್ವಾಭಿಮಾನದ ಬದುಕು ರೂಪಿಸಿದ ನಾರಾಯಣ ಗುರುಗಳ ಈಳವ ಸಮುದಾಯಕ್ಕೆ ಸೇರಿದ ಪಿನರಾಯಿ ವಿಜಯನ್ ಈ ಸಂದರ್ಭದಲ್ಲಿ ಕರಾವಳಿ ಜೊತೆ ಸಂವಾದ ನಡೆಸುವುದು ಹೆಚ್ಚು ಅರ್ಥಪೂರ್ಣ. ಚಳುವಳಿಗಳ ಹಿನ್ನಲೆಯಿಂದ ರಾಜಕೀಯ ನೆಲೆ ಕಂಡುಕೊಂಡು ಮುಖ್ಯಮಂತ್ರಿ ಗಾದಿಗೇರಿರುವ ಹಿಂದುಳಿದ ಈಳವ ಸಮುದಾಯಕ್ಕೆ ಸೇರಿದ ಪಿನರಾಯಿ ಕರಾವಳಿಯ ಅಧಿಕಾರ ಕೇಂದ್ರದಲ್ಲಿ ನ್ಯಾಯಯುತ ಪ್ರಾತಿನಿಧ್ಯ ಪಡೆಯುವಲ್ಲಿ ಬಹುತೇಕವಾಗಿ ವಿಫಲವಾಗಿರುವ ಬಿಲ್ಲವ ಮೊದಲಾದ ಹಿಂದುಳಿದ ಸಮುದಾಯಗಳ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ದನಿಯಾಗಬಲ್ಲರು. ರಾಜಕೀಯ ಆಟ ಮೇಲಾಟ, ಸಂಘರ್ಷ ಮತ್ತು ಕೋಮು ವೈಷಮ್ಯಗಳಲ್ಲಿ ಮಾತ್ರವೇ ಕಾಲಾಳುಗಳಾಗಿ ಬಳಕೆಯಾಗುತ್ತಿರುವ ಬಿಲ್ಲವ ಸಮುದಾಯಕ್ಕೆ ಪಿನರಾಯಿ ಭೇಟಿ ಅದರ ಅಗಾಧ ರಾಜಕೀಯ ಸಾಧ್ಯತೆಗಳ ದೃಷ್ಟಿಯಿಂದ ಬಹಳ ಮಹತ್ವದ್ದಾದದ್ದು. ಇದೇ ಕಾರಣಕ್ಕಾಗಿ ಸಂಘಪರಿವಾರ ಪಿನರಾಯಿ ವಿಜಯನ್ ಗೆ ಪ್ರತಿಭಟನೆಯ ಮೂಲಕ ಸ್ವಾಗತಕೋರಲು ಸಿದ್ಧತೆ ನಡೆಸಿದೆ.

ನಾರಾಯಣ ಗುರುಗಳು ಮುನ್ನಡೆಸಿದ್ದ ಸಮಾಜ ಸುಧಾರಣಾ ಚಳುವಳಿ ಕರಾವಳಿಯ ಸಾಮಾಜಿಕ ಸಂರಚನೆಯಲ್ಲಿ ಹಲವು ಕ್ರಾಂತಿಕಾರಿ ಪಲ್ಲಟಗಳಿಗೆnarayana-guru ಕಾರಣವಾಗಿತ್ತು. ಬಿಲ್ಲವರೂ ಸೇರಿದಂತೆ ಹಿಂದುಳಿದ ವರ್ಗಗಳಿಗೆ ವೈದಿಕರು ಅರ್ಚಕರಾಗಿರುವ ಮೇಲ್ವರ್ಗದ ಆಡಳಿತದ ದೇವಸ್ಥಾನಗಳಿಗೆ ಪ್ರವೇಶ ನಿಷಿದ್ಧವಾಗಿದ್ದ ಸಂಧರ್ಭದಲ್ಲಿ ಬಿಲ್ಲವರ ಸ್ವಾಭಿಮಾನದ ದ್ಯೋತಕವಾಗಿ ನಾರಾಯಣ ಗುರುಗಳು ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ ನಿರ್ಮಿಸಿದ್ದರು. ಸಾಮಾಜಿಕ ಸಬಲೀಕರಣದ ಮುಂದುವರಿದ ಭಾಗವಾಗಿ ಬಿಲ್ಲವರ ಸಂಘಗಳು, ಬಿಲ್ಲವ ಯುವ ವಾಹಿನಿ, ಬಿಲ್ಲವರ ಬ್ಯಾಂಕುಗಳು ಸ್ಥಾಪನೆಯಾದವು. ಬಿಲ್ಲವರ ಸಮಾಜೋ ಸಾಂಸ್ಕೃತಿಕ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ದಾಖಲಾದದ್ದು ಭೂಸುಧಾರಣಾ ಕಾನೂನು ಬಂದ ತರುವಾಯದಲ್ಲಿ. ಅರಸು ಜಾರಿಗೆ ತಂದ ಕ್ರಾಂತಿಕಾರಿ ಭೂಸುದಾರಣೆ ಕಾಯಿದೆಯು ಬಿಲ್ಲವರಿಗೆ ಭೂಮಿಯ ಒಡೆತನವನ್ನು ನೀಡಿತು. ಇನ್ನೂ ಕೈಗಾರೀಕರಣಕ್ಕೆ ಒಳಗಾಗಿರದ ಸಮಾಜದಲ್ಲಿ ಭೂಒಡೆತನ ಎಂಬುವುದು ಸಮುದಾಯಗಳ ಸಾಮಾಜಿಕ ಆಸ್ಮಿತೆಯ ಬಹಳ ಪ್ರಮುಖ ಅಂಶವಾಗಿರುತ್ತದೆ. ಆದ್ದರಿಂದಲೇ ಭೂಸುಧಾರಣಾ ಕಾನೂನು ಕರಾವಳಿಯ ಸಮಾಜೋ ಸಾಂಸ್ಕೃತಿಕ ಬದುಕಿನಲ್ಲಿ ಬಿಲ್ಲವರು ಬೆಳೆಯಲು ಪೂರಕ ವಾತಾವರಣ ನಿರ್ಮಿಸಿತು. ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ ದೇಶದಾದ್ಯಂತ ಭೂಸುಧಾರಣೆಯು ಇನ್ನೂ ವ್ಯಾಪಕವಾಗಿ ಅನುಷ್ಠಾನವಾಗಿರದ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ಅದರ ಯಶಸ್ಸಿಗೆ ಶ್ರಮಿಸಿದ್ದು ಇಲ್ಲಿಯ ಕಮ್ಯುನಿಷ್ಟರು. ಬಿಲ್ಲವರಿಗೆ ಭೂಮಿಯನ್ನು ಕೊಡಿಸುವಲ್ಲಿ ಕರಾವಳಿ ಭಾಗದ ಕಮ್ಯುನಿಷ್ಟರ ಪಾತ್ರ ದೊಡ್ಡದು. ಪಕ್ಷದ ಮಟ್ಟದಲ್ಲಿ ಸೈದ್ಧಾಂತಿಕವಾಗಿ ಜಾತಿಯ ಸಮೀಕರಣವನ್ನು ಒಪ್ಪಿರದಿದ್ದರೂ ಅಂದು ಕರಾವಳಿ ಭಾಗದ ಕಮ್ಯುನಿಷ್ಟ್ ಪಕ್ಷಗಳಲ್ಲಿದ್ದ ಹಿಂದುಳಿದ ವರ್ಗಗಳ ನಾಯಕತ್ವ ಅಂತಹ ಸಾಧನೆಗೆ ಕಾರಣವಾಗಿತ್ತು. ಈಗ ಸಾಂಸ್ಕೃತಿಕವಾಗಿ ಕರಾವಳಿಯ ಅವಳಿಯಂತಿರುವ ಕೇರಳದ ಕಮ್ಯುನಿಸ್ಟ್ ಪಕ್ಷಗಳ ನಾಯಕತ್ವ ಬಹುಮಟ್ಟಿಗೆ ಹಿಂದುಳಿದ ವರ್ಗಗಳ ಕೈಯಲ್ಲಿದೆ. ಇಂತಹ ಸನ್ನಿವೇಶದಲ್ಲಿ, ಕೇರಳ ಕಮ್ಯುನಿಷ್ಟ್ ಪಕ್ಷದ ಈಳವ ನಾಯಕತ್ವ ಕರಾವಳಿಯಲ್ಲಿ ಬಿಲ್ಲವರ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗಬಹುದೆನ್ನುವ ಆತಂಕದಲ್ಲಿ ಸಂಘಪರಿವಾರ ಪಿನರಾಯಿ ವಿಜಯನ್ ಅವರ ಭೇಟಿಗೆ ಇನ್ನಿಲ್ಲದ ವಿರೋಧವನ್ನು ಒಡ್ಡುತ್ತಿದೆ. ಯಾಕೆಂದರೆ ಅಂತಹ ಸಾಧ್ಯತೆಗಳು ಬಿಲ್ಲವರನ್ನು ದಾಳವನ್ನಾಗಿ ಬಳಸುವ ಸಂಘಪರಿವಾರದ ಕೋಮು ರಾಜಕೀಯಕ್ಕೆ ಪ್ರತಿಯಾಗಿ ನಿಲ್ಲುತ್ತವೆ.

ಸಂಘಪರಿವಾರದ ಕೋಮು ರಾಜಕಾರಣದ ಫಲವಾಗಿ ಇಂದು ಅಸಂಖ್ಯ ಬಿಲ್ಲವರು ಜೈಲುಗಳಲ್ಲಿ ಕೊಳೆಯುವಂತಾಗಿದೆ. ಕೋಮುಗಲಭೆಯಲ್ಲಿ ಸಾವನ್ನಪ್ಪಿದ ಹಿಂದತ್ವವಾದಿಗಳಲ್ಲೂ ಬಹುತೇಕ ಬಿಲ್ಲವರೇ ಆಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್ ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೀಗ ಅದೇ ಬಿಲ್ಲವ ಸಮುದಾಯಯದ ರಾಜಕೀಯ ಸಾಧ್ಯತೆಗಳಿಗೆ ಪ್ರತಿನಿಧಿಯಂತಿರುವ ಪಿನರಾಯಿ ವಿಜಯನ್ ಎಂಬ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ಷೇತ್ರವಾಗಿದ್ದ ಈಳವ ಸಮುದಾಯದ ನಾಯಕನ ಆಗಮನಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.

ಪಿನರಾಯಿ ವಿಜಯನ್ ಮಂಗಳೂರು ಭೇಟಿ ಬಿಲ್ಲವರ ಸ್ವಾಭಿಮಾನದ ವಿಷಯವಾಗಿದೆ. ಪಿನರಾಯಿ ಕೇರಳ ಮತ್ತು ತುಳುವನಾಡಿನಲ್ಲಿkoti-chennay ಸಾಮಾಜಿಕ ಸ್ಥಾನಮಾನಕ್ಕಾಗಿ, ಸ್ವಾಭಿಮಾನಕ್ಕಾಗಿ ನಾರಾಯಣ ಗುರುಗಳು ನಡೆಸಿದ್ದ ಅವಿರತ ಹೋರಾಟದ ಫಲಶ್ರುತಿಯ ಪ್ರತೀಕವಾಗಿದ್ದಾರೆ. ಕೇರಳ ರಾಜ್ಯ ಕಮ್ಯೂನಿಷ್ಟ್ ರಾಜ್ಯವಾಗುವುದಕ್ಕೂ, ಸಾಕ್ಷರ ನಾಡಾಗುವುದಕ್ಕೂ ಅದರ ಫಲವಾಗಿ ವಿ ಎಸ್ ಅಚ್ಯುತಾನಂದನ್, ಪಿನರಾಯಿ ವಿಜಯನ್ ರಂತಹ ಹಿಂದುಳಿದ ವರ್ಗದ ನಾಯಕರು ಮುಖ್ಯಮಂತ್ರಿಗಳಾಗುವುದಕ್ಕೂ ಒಂದಕ್ಕೊಂದು ಸಂಬಂಧವಿದೆ. ನಾರಾಯಣ ಗುರುಗಳ ಸಮಾಜ ಸುಧಾರಣಾ ಚಳುವಳಿಯ ಫಲವಾಗಿಯೇ ಕೇರಳದಲ್ಲಿ ಇಂತಹ ಕ್ರಾಂತಿ ಆಗುವುದಕ್ಕೆ ಸಾಧ್ಯವಾಗಿದೆ. ಆದರೆ ಅಂತಹ ಮಹತ್ತರವಾದ ರಾಜಕೀಯ ಸಾಧನೆಗಳು ಕರಾವಳಿಯಲ್ಲಿ ಕಂಡುಬಂದಿಲ್ಲ ಎನ್ನಬಹುದೇನೋ. ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಜನಾರ್ಧನ ಪೂಜಾರಿ ಕೇಂದ್ರದ ಮಂತ್ರಿಯಾಗಿದ್ದು ಬಿಟ್ಟರೆ ಬಿಲ್ಲವರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿದ್ದು ಕಡಿಮೆಯೇ. ಸಂಘಪರಿವಾರದ ರಾಜಕೀಯ ಘಟಕವಾದ ಬಿಜೆಪಿಯಲ್ಲಂತೂ ಬಿಲ್ಲವರು ಕಾಲಾಳುಗಳಾಗಿದ್ದಾರೆಯೇ ವಿನಹ ಪೂರ್ಣಾವಧಿ ಮಂತ್ರಿಯಾಗಲೂ ಸಾಧ್ಯವಾಗಲಿಲ್ಲ. ಅಂದಿನಿಂದ ಇಂದಿನವರೆಗೆ ಬಿಲ್ಲವರ ರಾಜಕೀಯ ಪ್ರಾತಿನಿಧ್ಯವನ್ನು ತಡೆದ ಪ್ರತಿಗಾಮಿ ಶಕ್ತಿಗಳೇ ಇಂದು ಬಿಲ್ಲವರ /ಈಳವರ ನಾಯಕನ ಆಗಮನಕ್ಕೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ.

ಕರಾವಳಿ ಐಕ್ಯತಾ ಸಮಾವೇಶ ಎಂಬುದು ಯಾವುದೇ ನೆಲೆಯಲ್ಲಿ ಹಿಂದೂ ಧರ್ಮ ವಿರೋಧಿ ಸಮಾವೇಶವಲ್ಲ. ಜಾತಿ ಶ್ರೇಣೀಕರಣದ, ಜಾತಿ ದೌರ್ಜನ್ಯದ ಚರ್ಚೆಯನ್ನು ಇನ್ನೂ ಮುನ್ನಲೆಗೆ ತಂದಲ್ಲಿ ಇದು ಹಿಂದುಳಿದ ವರ್ಗಗಳ, ಬಿಲ್ಲವರ, ದಲಿತರ, ಮಹಿಳೆಯರ ಸ್ವಾಭಿಮಾನದ ಸಮಾವೇಶವಾಗಲ್ಲದು. ಇಂತಹ ಅಪರೂಪದ ಸನ್ನಿವೇಶದಲ್ಲಿ ಕೇರಳ ಅಥವಾ ಕರ್ನಾಟಕದಲ್ಲಿ ನಡೆದ ರಾಜಕೀಯ ಹತ್ಯೆಗಳ ಪಟ್ಟಿ ನೀಡುವ ಅಸಹ್ಯಕರ ಪೈಪೋಟಿ ನಮ್ಮ ಆದ್ಯತೆಯಾಗಬಾರದು. ಕರ್ನಾಟಕದಲ್ಲಿ, ಕೇರಳದಲ್ಲಿ ಅಥವಾRSS ದೇಶದ ಯಾವುದೇ ಭಾಗದಲ್ಲಿ ಕೋಮು ವಿಛ್ಛಿದ್ರಕಾರಿ ಶಕ್ತಿಗಳಿಗೆ, ರಾಜಕೀಯ ಸಂಘರ್ಷಗಳಿಗೆ ಹಿಂದುಳಿದ ವರ್ಗಗಳ ಹುಡುಗರು ಬಲಿಯಾಗುವುದನ್ನು ತಡೆಯುವುದು ಹೇಗೆ ಮತ್ತು ರಾಜಕೀಯ ಅಧಿಕಾರದಲ್ಲಿ ಅವರಿಗೆ ನ್ಯಾಯಯುತವಾದ ಪಾಲು ಸಿಗುವುದು ಹೇಗೆ ಎಂಬ ಚರ್ಚೆ ಇಲ್ಲಿ ಮುಖ್ಯವಾಗಬೇಕು. ಇಲ್ಲಿ ಅಂತಹ ಚರ್ಚೆಯ ನಾಯಕತ್ವವನ್ನು ಪಿನರಾಯಿ ವಿಜಯನ್ ರಂತಹ ಹಿಂದುಳಿದ ವರ್ಗಗಳ ನಾಯಕರೇ ವಹಿಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಪಿನರಾಯಿ ವಿಜಯನ್ ಮಾತುಗಳು ಕಡಲ ತಡಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅವರು ಮಂಗಳೂರಿಗೆ ಬರುವ ದಿನದಂದು ಸಂಘಪರಿವಾರ ಕರೆ ಕೊಟ್ಟಿರುವ ಬಂದ್ ಅನ್ನು ಧಿಕ್ಕರಿಸಿ ಬಿಲ್ಲವರೂ ಸೇರಿದಂತೆ ಹಿಂದುಳಿದ ವರ್ಗಗಳು ರಾಜಕೀಯ ಅಧಿಕಾರವನ್ನು ಪಡೆಯುವ ಕಡೆಗೆ ಕಟಿಬದ್ಧರಾಗಬೇಕು. ಈ ಕಾರಣಕ್ಕಾಗಿ ಸಂಘಪರಿವಾರದ ವಿರೋಧಕ್ಕೆ ಕಾರಣವಾಗಿರುವ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಕರಾವಳಿ ಭೇಟಿಯನ್ನು ಬಿಲ್ಲವರು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಳ್ಳುವುದು ಅವರ ರಾಜಕೀಯ ಏಳಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿದೆ.

ಕಂಬಳ ಮತ್ತು ಫ್ಯೂಡಲ್ ವ್ಯವಸ್ಥೆಯ ಹುನ್ನಾರ


-ಎನ್.ಎಸ್


 

ಜಲ್ಲಿಕಟ್ಟು ಎಂಬ ಹಿಂಸಾವಿನೋದಿ ಕ್ರೀಡೆಯ ಬಗ್ಗೆ ಜನರ ಸಮೂಹ ಸನ್ನಿಗೆ ಕೇಂದ್ರ ಸರಕಾರ ಮಣಿದಿರುವ ಬೆನ್ನಿಗೇ ತುಳುವನಾಡಿನkambala-mangalore ಕಂಬಳದ ಪರವಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟಗಳು ಪ್ರಾರಂಭವಾಗಿವೆ. ಕಂಬಳ ಎನ್ನುವುದು ತುಳುವರ ಜನಪದ ಕ್ರೀಡೆ, ತುಳುವರ ಸಾಂಸ್ಕೃತಿಕ ಆಸ್ಮಿತೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಫ್ಯೂಡಲ್ ವ್ಯವಸ್ಥೆಯ ಪಳೆಯುಳಿಕೆಯಂತಿರುವ ಕಂಬಳದ ಪರ ಹೋರಾಟಗಳಲ್ಲಿ ಜಾತಿ ಆಧಾರಿತ ಅಸಮಾನತೆ ಮತ್ತು ಸಾಂಸ್ಕೃತಿಕ ಯಜಮಾನ್ಯದ ಪಾರಂಪರಿಕ ಆಚರಣೆಗಳನ್ನು ಇನ್ನೂ ಜಾರಿಯಲ್ಲಿಡುವ ವ್ಯವಸ್ಥಿತ ಹುನ್ನಾರವಿದೆ. ಒಂದು ನಿರ್ದಿಷ್ಟ ಜಾತಿಯ ಮೆರೆದಾಟಕ್ಕೆ ಮತ್ತು ಕೆಳಜಾತಿ, ಕೆಳವರ್ಗಗಳ ದಬ್ಬಾಳಿಕೆಗೆ ಮಾಧ್ಯಮವಾಗಿದ್ದ ಕಂಬಳವನ್ನು ಇಡೀ ತುಳುನಾಡಿನ ಸಾಂಸ್ಕೃತಿಕ ಐಡೆಂಟಿಟಿಯ ರೂಪದಲ್ಲಿ ಬಿಂಬಿಸಲು ಹೊರಟಿರುವ ಪ್ರಯತ್ನಗಳು ಆಘಾತಕಾರಿಯಾಗಿವೆ.

ರೈತರು ತಮ್ಮ ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ, ಕಂಬಳದ ಗದ್ದೆಯಲ್ಲಿ ಕೋಣಗಳನ್ನು ಓಡಿಸುವುದರ ಮೂಲಕ ಮನರಂಜನೆಯನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ಕಂಬಳದ ಸಮರ್ಥನೆ ಮಾಡಲಾಗುತ್ತಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಂಬಳದಲ್ಲಿ ಕಂಡುಬರುವ ‘ಸ್ಪರ್ಧೆ’ ಅಥವಾ ‘ಕ್ರೀಡೆ’ ಅನ್ನುವುದು ಕುಂಟಾಬಿಲ್ಲೆ ಅಥವಾ ಕಬ್ಬಡ್ಡಿಯಂತಹ ಸಹಜ ಮನೋರಂಜಕ ಪಂದ್ಯಾಟವಲ್ಲ. ಬದಲಿಗೆ ಅದು ಉಳ್ಳವರ ಆಟ- ಮೇಲಾಟದ, ಪೌರುಷದ ಮತ್ತು ಯಜಮಾನಿಕೆಯ ಅಭಿವ್ಯಕ್ತಿಯಾಗಿದೆ. ಮೂಲದಲ್ಲಿ ಕಂಬಳ ಬಂಟರ ಗುತ್ತಿನ ಅಧಿಕಾರವನ್ನು ಪ್ರತಿಷ್ಠಾಪಿಸಲು ಮತ್ತು ಅದಕ್ಕೆ ಸಾಂಸ್ಕೃತಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಸಲುವಾಗಿ ಸೃಷ್ಠಿಯಾದ ಒಂದು ಆಚರಣೆಯಾಗಿದೆ. ಅಂದರೆ ಕಂಬಳ ಪ್ರಾರಂಭವಾಗಿದ್ದೇ ಒಕ್ಕಲು ರೈತರನ್ನು ಸುಲಿಯಲು ಮತ್ತು ಕೆಳ ಸಮುದಾಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ. ತುಳುನಾಡಿನಲ್ಲಿ ಜಾತಿ ಶ್ರೇಣೀಕರಣದ ಉಳಿವು ಮತ್ತು ಮುಂದುವರಿಕೆಯಲ್ಲಿ ಕಂಬಳದ ಪಾತ್ರ ಅಧ್ಯಯನಾರ್ಹ ವಿಚಾರವಾಗಿದೆ.  

ಮೂಲದಲ್ಲಿ ಕಂಬಳದ ಕೋಣಗಳು ಬಂಟರ ಗುತ್ತಿನ ಮನೆಗಳಲ್ಲಿ ಮಾತ್ರ ಇರುತ್ತಿದ್ದವು. ಉಳುಮೆ ಮಾಡದ ಕೋಣಗಳನ್ನುkambala-2 ಕಂಬಳಕ್ಕಾಗಿಯೇ ಸಾಕುವುದು ಗುತ್ತಿನ ಮನೆಯ ಫ್ಯಾಶನ್ ಆಗಿತ್ತು. ದಷ್ಟಪುಷ್ಟವಾಗಿ ಕೊಬ್ಬಿರುತ್ತಿದ್ದ ಕಂಬಳದ ಕೋಣಗಳು ಗುತ್ತಿನ ಮನೆಗಳ ಗತ್ತಿಗೆ, ಪೌರುಷಕ್ಕೆ ಸಾಕ್ಷಿಯಾಗಿರುತ್ತಿದ್ದವು. ಅಂತಹ ಕೋಣಗಳನ್ನು ಸಾಕಿ ಸಲಹುವ ತಾಕತ್ತಿಲ್ಲದ ಬಡ ಹಾಗೂ  ಸಣ್ಣ ರೈತರ, ಒಕ್ಕಲುದಾರರ ಮತ್ತು ಕೆಳಜಾತಿಗಳ ನಡುವೆ ಕಂಬಳ ಬಂಟರ ಗುತ್ತಿನ ಮನೆಗಳಿಗೆ ಕಲಿತನದ ಹಿರಿಮೆಯನ್ನೂ, ಫ್ಯೂಡಲ್ ಅಧಿಕಾರದ ಛತ್ರವನ್ನೂ ನೀಡುತಿತ್ತು; ಮತ್ತು ಇದೇ ಫ್ಯೂಡಲ್ ಅಧಿಕಾರದ ಬಲದಲ್ಲಿ ಗುತ್ತಿನ ಮನೆಗಳು ಸಮುದಾಯಗಳ ಸಂಪನ್ಮೂಲ ಹಾಗೂ ಉತ್ಪಾದನೆಯ ಮೇಲೂ ನಿಯಂತ್ರಣ ಸಾಧಿಸುತ್ತಿದ್ದವು. ಕಂಬಳದ ಕೋಣಗಳನ್ನು ಕೊಬ್ಬಿಸಲು, ಅವುಗಳಿಗೆ ಅಕ್ಕಿಯಲ್ಲಿ ಗಂಜಿ ಮಾಡಿ ತಿನ್ನಿಸಲು ದ್ರವ್ಯಗಳನ್ನು ಒಕ್ಕಲಿನ ರೈತರಿಂದ ಸಂಗ್ರಹಿಸಿಲಾಗುತ್ತಿತ್ತು. ಕೋಣಗಳಿಗೆ ತೆಂಗಿನ ಎಣ್ಣೆ ಹಚ್ಚಿ ರೈಕೆ ಮಾಡಲೆಂದೇ ಬಿಲ್ಲವರು, ದಲಿತರು ಮತ್ತಿತರ ಕೆಳವರ್ಗಗಳ ಹತ್ತಾರು ಸಂಖ್ಯೆಯ ಆಳುಗಳನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಒಕ್ಕಲುದಾರ ಬಡ ರೈತ ಹಾಗೂ ಕೆಳಜಾತಿಗಳ ಶ್ರಮ ಹಾಗೂ ಸಂಪನ್ಮೂಲಗಳ ಮೇಲೆ ಹತೋಟಿ ಸಾಧಿಸಲು ಕಂಬಳ ಒಂದು ಮಾಧ್ಯಮದಂತೆ ಬಳಕೆಯಾಗುತಿತ್ತು. ಹೀಗಾಗಿಯೇ ಆ ಕಾಲದಲ್ಲಿ ರೈತ ಹಸಿವಿನಿಂದ ಸಾಯುತ್ತಿದ್ದರೂ ಊರ ಗುತ್ತಿನ ಕಂಬಳದ ಕೋಣಗಳಿಗೆ ಅಕ್ಕಿ ಗಂಜಿ, ಹುರುಳಿ ಕಾಳಿನ ಗಂಜಿಗೆ ಕೊರತೆಯಾಗುತ್ತಿರಲಿಲ್ಲ.

ಹೀಗೆ ಕಂಬಳ ಜಾತಿ ಶ್ರೇಣೀಕರಣದ ಅಸಮಾನ ಮತ್ತು ಶೋಷಕ ಸ್ವರೂಪದೊಂದಿಗೆ ಅವಿಭಾಜ್ಯ kambala-5 ಸಂಬಂಧವನ್ನು ಹೊಂದಿದೆ. ಹಲವು ಅಮಾನವವೀಯ ಅಸ್ಪೃಶ್ಯತಾ ಆಚರಣೆಗಳು ಮತ್ತು ಅಜಲು ಪದ್ದತಿ ಈ ಕಂಬಳ ಕ್ರೀಡೆಯ ಮೂಲಕ ತೀರಾ ಇತ್ತಿಚ್ಚಿನವರೆಗೂ ನಡೆಯುತ್ತಿದ್ದವು. ಕಂಬಳ ಅನ್ನೋದು ಹಲವು ಊರಿನ ಗುತ್ತು ಮನೆತನಗಳ ನಡುವೆ ನಡೆಯುತ್ತಿದ್ದ ಪ್ರತಿಷ್ಟಿತ ಸ್ಪರ್ಧೆಯಾಗಿದ್ದರಿಂದ ಪ್ರತಿಸ್ಪರ್ಧಿ ಗುತ್ತಿನ ಜನರು ಬಂದು ಕಂಬಳದ ಗದ್ದೆಯನ್ನು ಹಾಳು ಮಾಡಬಹುದು ಎಂಬ ಕಾರಣಕ್ಕಾಗಿ ಕೊರಗ ಎಂಬ ಅತಿ ಶೋಷಿತ ಸಮುದಾಯ ‘ಪನಿ ಕುಲ್ಲುನು’ ಎಂಬ ಸಂಪ್ರದಾಯವನ್ನು ಆಚರಿಸಬೇಕಿತ್ತು. ‘ಪನಿ ಕುಲ್ಲುನು’ ಅಂದರೆ ಕೊರಗರು ತಮ್ಮ ಹೆಂಡತಿ ಮಕ್ಕಳ ಜೊತೆ ಇಡೀ ರಾತ್ರಿ ಕಂಬಳ ಗದ್ದೆಯನ್ನು ಕಾಯಬೇಕು. ಇದಕ್ಕಿಂತಲೂ ಅಮಾನುಷವೆಂದರೆ, ಕಂಬಳ ನಡೆಯುವ ಒಂದೆರಡು ಗಂಟೆಗಳ ಮೊದಲು ಕಂಬಳ ಗದ್ದೆಯಲ್ಲಿ ಕೊರಗರು ಓಡಬೇಕು. ಕಂಬಳ ಗದ್ದೆಯಲ್ಲಿ ಗುತ್ತಿನ ಮನೆಯ ವೈರಿಗಳು ಗಾಜು, ಕಲ್ಲುಗಳನ್ನು ಹಾಕಿರುವ ಸಾಧ್ಯತೆ ಹಿನ್ನಲೆಯಲ್ಲಿ ಕೊರಗರು ಓಡಿ ಪರಿಶೀಲನೆಯನ್ನು ಮಾಡಬೇಕು. ಗುತ್ತಿನ ಕೊಣಗಳಿಗೆ ಗಾಜು ಚುಚ್ಚುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಜಮೀನ್ದಾರಿ ಕುಟುಂಬಗಳ ಮಧ್ಯೆ ನಡೆಯುವ ಪಕ್ಕಾ ಫ್ಯೂಡಲ್ ಕ್ರೀಡೆಯಾಗಿರುವ ಕಂಬಳ ಈಗ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಡುಗಳನ್ನು ಹೊಂದಿದೆಯಾದರೂ ಆಳದಲ್ಲಿ ಫ್ಯೂಡಲ್ ವ್ಯವಸ್ಥೆಯನ್ನು ಜಾರಿಯಲ್ಲಿಡುವ ತಂತ್ರವೇ ಆಗಿದೆ.

ಸದ್ಯ ಕರಾವಳಿಯ ಹಲವೆಡೆ ನಡೆಯುತ್ತಿರುವ ಕಂಬಳದ ಸಂಚಾಲಕ ಸಮಿತಿಗಳನ್ನು ನೋಡಿದಲ್ಲಿ ಅದರ ವರ್ಗೀಯ ಮತ್ತು ಜಮೀನ್ದಾರಿkambala-1 ಸ್ವರೂಪ ಮನದಟ್ಟಾಗುತ್ತದೆ. ಕರಾವಳಿಯ ಬಾರಾಡಿ ಬೀಡು (ಕಾರ್ಕಳದ ಸಮೀಪ), ಈದು (ಕಾರ್ಕಳ), ಮಿಯಾರು (ಕಾರ್ಕಳದ ಸಮೀಪ), ಐಕಳ ಬಾವ (ಮೂಡುಬಿದಿರೆ-ಮುಲ್ಕಿ ಮಧ್ಯೆ), ಬಂಗಾಡಿ (ಬೆಳ್ತಂಗಡಿ), ಹೊಕ್ಯಾಡಿಗೋಳಿ (ಬಂಟ್ವಾಳ), ಪಜೀರು (ಬಂಟ್ವಾಳ), ಪಿಲಿಕುಳ ನಿಸರ್ಗಧಾಮ (ಮಂಗಳೂರ ಸಮೀಪ), ಜಪ್ಪಿನಮೊಗರು (ಮಂಗಳೂರ ಸಮೀಪ), ತಲಪಾಡಿ ಪಂಜಾಳ (ಮಂಗಳೂರ ಸಮೀಪ), ಅಲ್ತಾರು (ಉಡುಪಿ), ಕಟಪಾಡಿ (ಉಡುಪಿ), ಅಡ್ವೆ, ನಂದಿಕೂರು, ಮೂಡುಬಿದಿರೆ, ಮುಲ್ಕಿ, ವೇಣೂರು, ಉಪ್ಪಿನಂಗಡಿ, ಪುತ್ತೂರು, ತೋನ್ಸೆಯಲ್ಲಿ ಕಂಬಳಗಳು ನಡೆಯುತ್ತಿದೆ. ಎಲ್ಲಾ ಕಂಬಳಗಳಲ್ಲಿ ಒಂದೋ ಬಂಟರು ಮುಖ್ಯಸ್ಥರಾಗಿರುತ್ತಾರೆ ಅಥವಾ ಜೈನರು ಸಂಚಾಲಕರಾಗಿರುತ್ತಾರೆ. ಕೋಣ ಓಡಿಸುವವರು, ಕೋಣದ ಚಾಕರಿ ಮಾಡುವವರು, ಕಂಬಳದ ಸ್ವಯಂಸೇವಕರೆಲ್ಲರೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಮುಲ್ಕಿ ಪಯ್ಯೊಟ್ಟು ಸದಾಶಿ ಸಾಲಾನ್ ಹೊರತುಪಡಿಸಿದಲ್ಲಿ ಬಹುತೇಕ ಕೋಣಗಳ ಮಾಲೀಕರು ಮಾತ್ರ ಈಗಲೂ ಗುತ್ತಿನ ಬಂಟರೇ ಆಗಿದ್ದಾರೆ ಎಂಬುದು ಗಮನಾರ್ಹ.

ಕಂಬಳ ಎಂಬುದು ಕೇವಲ ಕ್ರೀಡೆಯಾಗಿ ಪ್ರಾರಂಭವೂ ಆಗಿಲ್ಲ.‌ ಮುಂದುವರಿಕೆಯೂ ಅಲ್ಲ. ಕಂಬಳ ಎಂಬುದು ಜಮೀನ್ದಾರಿಗಳ ಐಶಾರಾಮಿ ಬದುಕಿನ ಪಳಿಯುಳಿಕೆಯಾಗಿ ಮುಂದುವರೆಯುತ್ತಿದೆ. ಕಂಬಳ ಎಂಬುದು ಬಹುಜನರ ಸಂಸ್ಕೃತಿಯೂ ಅಲ್ಲ. ಜನಪದ ಕ್ರೀಡೆಯೂ ಅಲ್ಲ. ಕಂಬಳ ಎಂಬುದು ಪಕ್ಕಾ ಬಹುಜನ ವಿರೋಧಿ ಫ್ಯೂಡಲ್ ವರ್ಗದ ಮೋಜಿನ ಆಟವಷ್ಟೆ.

 

ನಟ ನಟಿಯರ ವಿವಾದಗಳು ಮತ್ತು ಮಾಧ್ಯಮ

Naveen Soorinje


ನವೀನ್ ಸೂರಿಂಜೆ


 

“ಪತ್ರಕರ್ತರ ಕತೆ ಹೇಗಿದೆ ಅಂದ್ರೆ, ಕಾವೇರಿ ವಿಷಯದಲ್ಲಿ ತುಟಿ ಬಿಚ್ಚದೇ ಇದ್ದ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿದ ತಕ್ಷಣ ಸುಮ್ನೆ ಬಿಟ್ಟು ಕಳ್ಸಿದ್ರಿ. ಅದೇ ಸಂಬಂಧವೇ ಪಡದ ಪ್ರಕಾಶ್ ರೈಗೆ ತರಾಟೆಗೆ ತಗೋತೀರಿ. ರಮ್ಯಾ ಪಾಕ್ ನಲ್ಲೂ ಒಳ್ಳೆಯವರಿದ್ದಾರೆ ಎಂದಿದ್ದಕ್ಕೆ ನೇಣಿಗೆ ಹಾಕಿದ್ರಿ. ನೀವು ಒಂದೋ ಜಾತಿ ಕಾರಣಕ್ಕೆ ಬೆನ್ನು ಬೀಳ್ತೀರಿ. ಅಥವಾ ಹೆಣ್ಣು ಅನ್ನೋ ಕಾರಣಕ್ಕೆ ಅಟ್ಟಾಡಿಸ್ತೀರಿ” ಎಂದು ಫೋನ್ ಮಾಡಿ ಬೈದ್ರು ಪ್ರಕಾಶಕರೂ ಆಗಿರುವ ಕವಿ ಅಕ್ಷತಾ ಹುಂಚದಕಟ್ಟೆ. ಅಕ್ಷತಾ ಅವರು ಹೇಳಿದ ಅಷ್ಟೂ ಮಾತುಗಳು ನಿಜ. ಆದರೆ ಅದಷ್ಟೇ ಸತ್ಯವಲ್ಲ. ಅಂಬರೀಷ್ ರನ್ನು ಬಚಾವ್ ಮಾಡುವ, ರಮ್ಯಾರನ್ನು ಬಲಿಪಶು ಮಾಡುವ, ಪ್ರಕಾಶ್ ರೈ ಕಾಂಟ್ರವರ್ಸಿ ಒಂದೇ ಚಾನೆಲ್ಲಿಗೆ ಸೀಮಿತವಾಗಿರೋ ಕಾರಣದ ಹಿಂದೆ ಆರ್ಥಿಕ ಕಾರಣಗಳೂ ಇವೆ.

ಹೌದು. ಸಿನೇಮಾ, ರಾಜಕೀಯ, ಮಾಧ್ಯಮದಲ್ಲಿರುವಷ್ಟು ಜಾತಿಗಳ ಜೊತೆಗಿನ ಕೊಂಡಿ ಬಹುಷಃ ಬೇರಾವ ಕ್ಷೇತ್ರದಲ್ಲೂ ಇರಲಿಕ್ಕಿಲ್ಲವೇನೋ?

ಅದರಲಿ. ಮಾಧ್ಯಮದಲ್ಲಿ ಸಿನೇಮಾ ಮಂದಿಯನ್ನು ನಿಜಜೀವನದಲ್ಲೂ ಹೀರೋ ಮಾಡುವುದು, ನಿರ್ಲಕ್ಷ್ಯ ಮಾಡುವುದು ಕೇವಲ ಜಾತಿ ಕಾರಣಕ್ಕಾಗಿ ಅಲ್ಲ. ಅದರ ಹಿಂದೆ ಆರ್ಥಿಕ ಕಾರಣವೂ ಕೆಲಸ ಮಾಡುತ್ತೆ.

ಈಗ ಅಂಬರೀಷ್ ವಿಚಾರವನ್ನೇ ತಗೊಳ್ಳಿ. ಕಾವೇರಿ ವಿವಾದ ಪ್ರಾರಂಭಕ್ಕೂ ಮುನ್ನವೇ ಅಂಬರೀಷ್ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಅಮೇರಿಕಾ ತೆರಳಿದ್ದರು. ಅಲ್ಲಿಂದಲೇ ಚಿಕಿತ್ಸೆ ಪಡೆದು ವಾಪಸ್ ಬರುವಷ್ಟರಲ್ಲಿ ಇಲ್ಲಿ ಕಾವೇರಿ ವಿಷಯ ಕಾವೇರಿತ್ತು. ಸರ್ವಪಕ್ಷ ಸಭೆ, ವಿಶೇಷ ಅಧಿವೇಶನಕ್ಕೆ ಬಂದಿಲ್ಲ. ಕನಿಷ್ಠ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದು ರೈತರು ಪ್ರತಿಭಟಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಬಂದ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿ ಜನರ ಕ್ಷಮೆ ಕೇಳಿದ್ರು. ಮಾಧ್ಯಮಗಳು ಅಷ್ಟಕ್ಕೆ ಸುಮ್ಮನಾದ್ವು.

ಹಾಗಂತ ಅಂಬರೀಷ್ ಪತ್ರಿಕಾಗೋಷ್ಠಿ ಮಾಡಿ ಕ್ಷಮೆ ಕೇಳಿದ್ದು ಮಾಧ್ಯಮಗಳ ಹೆದರಿಕೆಯಿಂದ ಅಲ್ಲ. ಮಾದ್ಯಮಗಳ ಸಲಹೆಯಿಂದ. ಅಂಬರೀಷ್prakash ಅಭಿನಯದ ‘ದೊಡ್ಮನೆ ಹುಡುಗ’ ಸಿನೇಮಾ ರಿಲೀಸ್ ಆಗೋದಿತ್ತು. ಸಿನೇಮಾ ಪ್ರಮೋಶನ್ ಗಾಗಿ ಮಾಧ್ಯಮಗಳಿಗೆ ಲಕ್ಷಗಟ್ಟಲೆ ಸುರಿಯಲಾಗಿತ್ತು. ಅಷ್ಟರಲ್ಲಿ ಮಂಡ್ಯ ರೈತರು ದೊಡ್ಮನೆ ಹುಡುಗ ಸಿನೇಮಾದ ಬ್ಯಾನರ್ ನಲ್ಲಿ ಹಾಕಲಾಗಿದ್ದ ಅಂಬರೀಷ್ ಚಿತ್ರವನ್ನು ಹರಿಯಲಾರಂಬಿಸಿದ್ರು. ದೊಡ್ಮನೆ ಚಿತ್ರದ ಪ್ರಚಾರಕ್ಕಾಗಿ ಹಣ ಪಡೆದುಕೊಂಡರೂ ರೈತರ ಹೋರಾಟ ಈ ಸಂಧರ್ಭದಲ್ಲಿ ಮುಚ್ಚಿ ಹಾಕುವಂತಿರಲಿಲ್ಲ. ಅದಕ್ಕಾಗಿ ಪತ್ರಕರ್ತರನೇಕರ ಆತ್ಮೀಯ ಸಲಹೆಯಂತೆ ಅಂಬರೀಷ್ ಪತ್ರಿಕಾಗೋಷ್ಠಿ ನಡೆಸಿದ್ರು. ಪತ್ರಕರ್ತರು ಮತ್ತೆಂದೂ ಅವರ ರಾಜೀನಾಮೆ ಕೇಳಲಿಲ್ಲ. ರಾಜೀನಾಮೆಗೆ ಆಗ್ರಹಿಸುವಂತೆ ರೈತರನ್ನು ಪ್ರಚೋದಿಸಲಿಲ್ಲ. ಅಲ್ಲಿ ಜಾತಿ ಕಾರಣದ ಜೊತೆ ಜೊತೆಗೇ ಬಲವಾಗಿ ಹೆಜ್ಜೆ ಹಾಕಿದ್ದು ಆರ್ಥಿಕ ಕಾರಣ.

ರಮ್ಯಾ ವಿಚಾರವೂ ಇದಕ್ಕಿಂತ ಹೊರತಲ್ಲ. ಪಾಕಿಸ್ತಾನದಲ್ಲಿ ನಮ್ಮ ನಿಮ್ಮಂತೆಯೇ ಒಳ್ಳೆಯ ಜನರಿದ್ದಾರೆ. ಸ್ವರ್ಗ ನರಕ ಅಲ್ಲೂ ಇದೆ ಇಲ್ಲೂ ಇದೆ ಎಂದು ಹೇಳಿಕೆ ಕೊಟ್ಟಿದ್ದನ್ನು ಮಾದ್ಯಮಗಳು ಹಿಂದುತ್ವ ಅವಾಹಿಸಿಕೊಂಡು ಸುದ್ದಿ ಮಾಡಿದ್ದವು. ಕೆಲವು ಟಿವಿ ಚಾನೆಲ್ ಗಳಂತೂ ರಮ್ಯಾಗೆ ಪಾಕ್ ನಲ್ಲಿ ಸ್ವರ್ಗ ತೋರಿಸಿದವರು ಯಾರು ? ಎಂದು ಕೀಳಾಗಿ ಪ್ರಶ್ನಿಸಿದ್ರು. ರಮ್ಯಾ ಜಾತಿಯಲ್ಲಿ ಒಕ್ಕಲಿಗರಾದರೂ ಆಕೆ ಮಹಿಳೆ ಎಂಬ ಕಾರಣಕ್ಕೆ ಹೀಗೆ ಬೆನ್ನುಬಿದ್ದಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಮಹಿಳೆಯೊಬ್ಬಳು ಇಷ್ಟು ನಿಷ್ಠುರವಾಗಿ ಮಾತಾಡುವುದನ್ನು ಒಂದು ವೇಳೆ ಸಮಾಜ ಸಹಿಸಿದ್ರೂ ಕನ್ನಡ ಮಾಧ್ಯಮಗಳು ಸಹಿಸುವಷ್ಟು ಪ್ರಬುದ್ದತೆಯನ್ನು ಬೆಳೆಸಿಕೊಂಡಿಲ್ಲ.

ಅದಿರಲಿ, ರಮ್ಯಾ ಇದೇ ಹೇಳಿಕೆ ಕೊಡುವಾಗ ರಮ್ಯಾ ಬಳಿ ಹೈ ಬಜೆಟ್ಟಿನ ಸಿನೀಮಾ ಒಂದಿದ್ದರೆ ಮಾದ್ಯಮಗಳ ವರ್ತನೆ ಹೇಗಿರುತ್ತಿತ್ತು? ಆ ಸಿನೇಮಾ ಪ್ರಮೋಶನ್ ಗುತ್ತಿಗೆ ಪಡೆದುಕೊಂಡವನ ಹಣ ದಿಕ್ಕರಿಸಿ ರಾಷ್ಟ್ರಪ್ರೇಮ ಮೆರೆಯುತ್ತಿದ್ದವಾ ? ಖಂಡಿತ ಇಲ್ಲ. ದರ್ಶನ್ ತನ್ನ ಹೆಂಡತಿಗೆ ಹೊಡೆದಾಗ ಎಕ್ಸ್ ಕ್ಲೂಸಿವ್ ನ್ಯೂಸ್ ಹಾಕುತ್ತಿದ್ದ ಚಾನೆಲ್ ಗಳು ನಿರ್ಮಾಪಕ ಕಡೆಯಿಂದ ಫೋನ್ ಬಂದ ತಕ್ಷಣ ಮೌನ ವಹಿಸಿದ ಉದಾಹರಣೆ ನಮ್ಮ ಮುಂದಿದೆ. ಶಾರುಕ್ ಖಾನ್ ಅಸಹಿಷ್ಣುತೆ ವಿವಾದವು ತಾರಕಕ್ಕೇರಲು ಮಾದ್ಯಮಗಳನ್ನು ಜಾಹೀರಾತು ಕಂಪನಿಗಳು, ಸಿನೇಮಾ ಪ್ರಮೋಶನ್ ಕಂಪನಿಗಳು ಬಿಡಲಿಲ್ಲ. ಕೈಯ್ಯಲ್ಲಿ ಜಾಹೀರಾತು ಇಲ್ಲದ, ಸಿನೇಮಾ ಇಲ್ಲದ ಶಾರೂಕ್ ಖಾನ್ ಅಸಹಿಷ್ಣುತೆಯ ಹೇಳಿಕೆ ನೀಡಿದ್ದರೆ ಮಾದ್ಯಮಗಳು ಆತನನ್ನು ಗಡಿಪಾರು ಮಾಡದೆ ಬಿಡುತ್ತಿರಲಿಲ್ಲವೇನೋ?

ಈಗ ಪ್ರಕಾಶ ರೈ ರಾಮಾಯಣದ ಮೂಲ ವಿಚಾರಕ್ಕೆ ಬರೋಣಾ. ಇದೊಳ್ಳೆ ರಾಮಾಯಣ ಎಂಬ ಚಿತ್ರದ ಪ್ರಮೋಶನ್ ಕಂಪನಿ ಆಹ್ವಾನದ ಮೇರೆಗೆ ಹೆಚ್ಚಿನ ಎಲ್ಲಾ ಚಾನೆಲ್ ಗಳು ಪ್ರಕಾಶ್ ರೈ ಸಂದರ್ಶನ ಮಾಡಿದ್ದವು. ಪ್ರಮೋಶನ್ ಕಂಪನಿಯಿಂದ ಚಾನೆಲ್ ಗಳಿಗೆ ಸಲ್ಲಿಕೆಯಾಗಿರೋ ಹಣಕ್ಕನುಗುಣವಾಗಿ ಅರ್ಧ ಗಂಟೆ, ಒಂದು ಗಂಟೆ ವಿಶೇಷ ಕಾರ್ಯಕ್ರಮ, ಸಂದರ್ಶನ ನಡೆಸುತ್ತಿದ್ದವು. ನಿಜ ಹೇಳಬೇಕೆಂದರೆ, ಲೋಗೋ ಬಳಸದೆ ಲ್ಯಾಪಲ್ ಹಾಕಿ ಇಂಟರ್ ವ್ಯೂ ಮಾಡುವುದರಿಂದ ಪ್ರಕಾಶ್ ರೈಗೆ ಯಾವ ಚಾನೆಲ್ ಗೆ ಸಂದರ್ಶನ ಕೊಡುತ್ತಿದ್ದೇನೆ ಎಂಬ ಅರಿವೂ ಇರುವುದಿಲ್ಲ!

ಜನಶ್ರಿ ಚಾನೆಲ್ ಅ್ಯಂಕರ್ ಕೇಳಬಾರದ್ದೇನೂ ಕೇಳಿರಲಿಲ್ಲ. ಇದೊಳ್ಳೆ ರಾಮಾಯಣ ಎಂಬ ಟೈಟಲ್ ನಂತೆಯೇ ಕಾವೇರಿ ಸಮಸ್ಯೆ ಇದೊಳ್ಳೆ ರಾಮಾಯಣ ಆಗಿದೆ.kannada-news-channels ಕಾವೇರಿ ಜಲವಿವಾದ ಕುರಿತು ನಿಮ್ಮ ಅಭಿಪ್ರಾಯ ಏನು? ಎಂದು ಕೇಳಿದ್ರು. ತನ್ನ ಸಿನೇಮಾದ ಬಗೆಗಿನ ಪೇಯ್ಡ್ ಕಾರ್ಯಕ್ರಮದಲ್ಲಿ ಈ ಅಂಶ ಬೇಡ ಎಂದರೆ ಅದನ್ನು ಸಂಸ್ಥೆಗೆ ಮನವಿ ಮಾಡಿದರಾಯ್ತು. ಕಾವೇರಿ ವಿಚಾರವಾಗಿ ಕನ್ನಡದ ನಟ ನಟಿಯರು ಬೀದಿಗಿಳಿದಿದ್ದ ಮಾಹಿತಿ ಹೊಂದಿದ್ದ ಅ್ಯಂಕರ್ ಅಮಾಯಕರಾಗಿ ಈ ಪ್ರಶ್ನೆ ಕೇಳಿದ್ದಿರಬಹುದು. ಪ್ರಶ್ನೆ ಬೇಡ ಎಂದರೆ ಅದನ್ನಷ್ಟೇ ಕಟ್ ಮಾಡಿ ಮುಂದಿನ ಪ್ರಶ್ನೆಗೆ ಹೋಗಬಹುದಿತ್ತು. ಆದರೆ ಪ್ರಕಾಶ್ ರೈ ಹಾಗೆ ಮಾಡಲಿಲ್ಲ. ಲ್ಯಾಪಲ್ ಮೈಕ್ ಕಿತ್ತೆಸೆದು “ಏನ್ರೀ, ನಿಮಗೆ ಕಾಂಟ್ರವರ್ಸಿ ಬೇಕಾ? ನಿಮ್ಮ ಬಗೆಗಿನ ಕಾಂಟ್ರವರ್ಸಿ ಹೇಳಬೇಕಾ” ಎಂದು ಸಿನೇಮಾ ವಾಯ್ಸ್ ತಂದುಕೊಂಡು ಬೊಬ್ಬೆ ಹಾಕಿದ್ರು. ಉದ್ದೇಶಪೂರ್ವಕವಾಗಿ ಕೇಳಿಲ್ಲ ಸರ್ ಎಂದು ಅ್ಯಂಕರ್ ಪದೇ ಪದೇ ಹೇಳಿದ್ರೂ ಕೇಳದಿದ್ದಾಗ ಕೊನೆಗೆ ಜವಾಬ್ದಾರಿಯುತ ವ್ಯಕ್ತಿ ಬಳಿ ಕೇಳಿದ್ದೀನಿ ಅಷ್ಟೆ ಅಂದುಕೊಂಡು ಅ್ಯಂಕರ್ ಹೊರನಡೆದ್ರು.

ಈ ವಿಡಿಯೋ ವೈರಲ್ ಆದ್ರೂ ಜನಶ್ರೀ ಹೊರತುಪಡಿಸಿ ಬೇರಾವ ಮಾಧ್ಯಮಗಳು ಇದನ್ನೆತ್ತಿಕೊಂಡು ಸುದ್ದಿ ಮಾಡಿಲ್ಲ. ಕಾರಣ, ಎಲ್ಲಾ ಮಾಧ್ಯಮಗಳಿಗೆ ಇದೊಳ್ಳೆ ರಾಮಾಯಣ ಚಿತ್ರದ ಪ್ರಮೋಶನ್ ಗೆ ಹಣ ಸಂದಾಯ ಆಗಿರುತ್ತದೆ.

ಹೀಗೆ ಜಾತಿ, ಧರ್ಮದ ಕಾರಣವನ್ನೇ ಟಿ ಆರ್ ಪಿ ಯನ್ನಾಗಿಸಿ ಸಿನೇಮಾ ಮಂದಿಯ ಬೆನ್ನು ಬೀಳುವ ಮಾಧ್ಯಮದ ಮಂದಿ ಹಣದ ವಿಷಯ ಬಂದಾಗ ತಮ್ಮ ಹುಸಿ ರಾಷ್ಟ್ರಪ್ರೇಮ, ನಾಡಪ್ರೇಮಕ್ಕೆ ಬೆನ್ನು ತಿರುಗಿಸುತ್ತಾರೆ. ಜಾತಿ, ಧರ್ಮ, ಲಿಂಗ ತಾರತಮ್ಯದ ತನ್ನದೇ ಮನಸ್ಥಿತಿಯನ್ನು ಹಣ ಸಂಪಾದಿಸುವ ಸರಕನ್ನಾಗಿ ಪರಿವರ್ತಿಸುವ ಕಲೆ ಗೊತ್ತಿರೋದು ಬಹುಷಃ ಪತ್ರಕರ್ತರಿಗೆ ಮಾತ್ರವೆಂದು ಕಾಣುತ್ತದೆ.