Tag Archives: ನಕ್ಸಲ್ ಕಥನ

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ಹತ್ತಿ ಉರಿದು ತಣ್ಣಗಾದ ನಕ್ಸಲ್ ಹಿಂಸಾಚಾರದ ಹೋರಾಟ, ಪಶ್ಚಿಮ ಬಂಗಾಳದಲ್ಲಿ ಫಿನಿಕ್ಸ್ ಹಕ್ಕಿಯಂತೆ ಜನ್ಮ ತಾಳಿತು. ಈ ಬಾರಿಯ ಹೋರಾಟಕ್ಕೆ ಆವೇಶ, ಕೆಚ್ಚು, ಇವುಗಳ ಜೊತೆಗೆ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಮನೋಭಾವ ಎದ್ದು ಕಾಣುತ್ತಿತ್ತು. ಶ್ರೀಕಾಕುಳಂ ಜಿಲ್ಲೆಯ ನಾಯಕರ ಹತ್ಯೆ ಎಲ್ಲರನ್ನು ಕೆರಳಿಸಿತ್ತು ಹಾಗಾಗಿ ಸೈದ್ಧಾಂತಿಕ ವಿಚಾರಗಳನ್ನು ಬದಿಗಿರಿಸಿದ ಇಲ್ಲಿನ ನಾಯಕರು ಸರ್ಕಾರದ ಜೊತೆ ಹಿಂಸಾತ್ಮಕ ಮಾರ್ಗದಲ್ಲಿ ಹೋರಾಟಕ್ಕೆ ಮುಂದಾದರು. ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಮಿಡ್ನಾಪುರ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡ, ಪಶ್ಚಿಮ ಬಂಗಾಳದ ನಾಯಕರು, ತಮ್ಮ ಹೋರಾಟವನ್ನು ದೆಬ್ರಾ ಮತ್ತು ಗೋಪಿಬಲ್ಲಬಪುರ್ ಜಿಲ್ಲೆಗಳಿಗೆ ವಿಸ್ತರಿಸಿದರು. ಈ ಜಿಲ್ಲೆಗಳಲ್ಲಿ ಸಂತಾಲ್, ಲೊದಸ್ ಮತ್ತು ಒರಯನ್ ಎಂಬ ಬುಡಕಟ್ಟು ಜನಾಂಗ ಅತಿ ಹೆಚ್ಚು ಪ್ರಮಾಣದಲ್ಲಿ ವಾಸವಾಗಿದ್ದುದು ಕಾರಣವಾಗಿತ್ತು. ಇವರೆಲ್ಲರೂ ಕೃಷಿ ಕೂಲಿಕಾರ್ಮಿಕರಾಗಿದ್ದರು ಜೊತೆಗೆ ಒಂದಿಷ್ಟು ಮಂದಿ ಜಮೀನ್ದಾರರ ಭೂಮಿಯನ್ನು ಗೇಣಿಗೆ ಪಡೆದು ರೈತರಾಗಿ ದುಡಿಯುತ್ತಿದ್ದರು.

ನಕ್ಸಲ್‌ಬಾರಿ ಹೋರಾಟದ ನಂತರ ಪಶ್ಚಿಮ ಬಂಗಾಳದಲ್ಲಿ ಈ ಮೂರು ಜಿಲ್ಲೆಗಳನ್ನು ತಮ್ಮ ಹೋರಾಟಕ್ಕೆ ಆಯ್ದುಕೊಳ್ಳಲು ಹಲವು ಕಾರಣಗಳಿದ್ದವು. ಗೋಪಿಬಲ್ಲಬಪುರ್ ಎಂಬ ಜಿಲ್ಲೆ ಅರಣ್ಯದಿಂದ ಆವೃತ್ತವಾಗಿ, ತನ್ನ ಗಡಿಭಾಗದಲ್ಲಿ ಬಿಹಾರ್ ಮತ್ತು ಒರಿಸ್ಸಾ ರಾಜ್ಯವನ್ನು ಹೊಂದಿತ್ತು. ಪೊಲೀಸರ ದಾಳಿಯ ಸಂದರ್ಭದಲ್ಲಿ ನೆರೆಯ ರಾಜ್ಯಗಳಿಗೆ ನಾಯಕರು ನುಸುಳಿ ಹೋಗಲು ಪ್ರಶಸ್ತವಾಗಿತ್ತು. ಪಕ್ಕದ ಮಿಡ್ನಾಪುರ ಜಿಲ್ಲೆಯಿಂದ ಈ ಜಿಲ್ಲೆಗೆ ಸುವರ್ಣರೇಖ ಎಂಬ ನದಿಗೆ ಕಟ್ಟಲಾಗಿದ್ದ ಸೇತುವೆ ಮಾತ್ರ ಸಂಪರ್ಕದ ಮಾರ್ಗವಾಗಿತ್ತು. ಹಾಗಾಗಿ ಸೇತುವೆ ಬಳಿ ಕಾವಲು ಕೂತರೆ, ಗೋಪಿಬಲ್ಲಬಪುರ್ ಜಿಲ್ಲೆಗೆ ಯಾರು ಬಂದರೂ ನಕ್ಸಲ್ ಚಳವಳಿಗಾರರಿಗೆ ತಿಳಿಯುತ್ತಿತ್ತು. ದೆಬ್ರಾ ಜಿಲ್ಲೆಯು ಕೊಲ್ಕತ್ತಾ-ಮುಂಬೈ ನಗರಗಳ ನಡುವಿನ ಹೆದ್ದಾರಿಯಲ್ಲಿತ್ತು. ಕೊಲ್ಕತ್ತಾ ನಗರದಿಂದ ನಾಯಕರು ಬಂದು ಹೋಗಲು ಈ ಜಿಲ್ಲೆ ಅವರ ಪಾಲಿಗೆ ಪ್ರಶಸ್ತ ಸ್ಥಳವಾಗಿತ್ತು. ಆದರೆ, ಈ ಪ್ರದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆ ಇದ್ದುದರಿಂದ ಗೆರಿಲ್ಲಾ ಯುದ್ಧ ತಂತ್ರಕ್ಕೆ ಇಲ್ಲಿ ಸಾಧ್ಯವಿರಲಿಲ್ಲ.

1967 ರಲ್ಲಿ ಸಿಲಿಗುರಿ ಪ್ರಾಂತ್ಯದ ನಕ್ಸಲ್‌ಬಾರಿ ಹೋರಾಟದ ನಂತರ ಕಮ್ಯೂನಿಷ್ಟ್ ಪಕ್ಷ ವಿಭಜನೆಯಾದ ನಂತರ ಮಾವೋವಾದಿ ಕಮ್ಯೂನಿಷ್ಟ್ ಪಕ್ಷಕ್ಕೆ ಬಂದ ಬಹುತೇಕ ನಾಯಕರು ಈ ಮೂರು ಜಿಲ್ಲೆಗಳಿಂದ ಬಂದವರಾಗಿದ್ದು, ಅವರೆಲ್ಲರೂ ಚಾರುಮುಜಂದಾರ್‌ಗೆ ನಿಷ್ಠೆ ತೋರಿಸಿದ್ದರು. ಇವರಲ್ಲಿ ದೆಬ್ರಾ ಜಿಲ್ಲೆಯ ಬಾಬುದೇಬ್ ಮಂಡಲ್ ಎಂಬಾತ ವೃತ್ತಿಯಲ್ಲಿ ವಕೀಲನಾಗಿದ್ದು, 1967 ರ ಅಸೆಂಬ್ಲಿ ಚುನಾವಣೆಯಲ್ಲಿ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವನಾಗಿದ್ದ. ಗೋಪಿಬಲ್ಲಬಪುರ್ ಜಿಲ್ಲೆಯ ಗುಣಧರ್‌ಮುರ್ಮು ಎಂಬಾತ ಸ್ಥಳೀಯ ಬುಡಕಟ್ಟು ಜನಾಂಗದ ನಾಯಕನಾಗಿದ್ದ. ಇವರೆಲ್ಲರಿಗೆ ಸ್ಪೂರ್ತಿಯಾಗಿದ್ದವರು, ಸಂತೋಷ್ ರಾಣಾ ಮತ್ತು ಅಸಿಮ್ ಚಟರ್ಜಿ ಎಂಬ ಯುವ ನಾಯಕರು. ಇವರಲ್ಲಿ ಸಂತೋಷ್ ರಾಣಾ ಕೊಲ್ಕತ್ತಾ ವಿ.ವಿ.ಯಿಂದ ಎಮ್.ಎಸ್ಸಿ ಮತ್ತು ಎಂ.ಟೆಕ್. ಪದವೀಧರನಾದರೆ, ಅಸಿಮ್ ಚಟರ್ಜಿ ಪ್ರಸಿಡೆನ್ಸಿ ಕಾಲೇಜಿನಿಂದ ಬಿ.ಎಸ್ಸಿ. ಪಡೆದು ಹೊರಬಂದಿದ್ದ. (ಅಸಿಮ್ ಚಟರ್ಜಿ ಅವರ ಇತ್ತಿಚೆಗಿನ ಚಿತ್ರ ಗಮನಿಸಿ: ಪಾರ್ಶ್ವವಾಯುಪೀಡಿತರಾಗಿದ್ದಾರೆ.)

ಸಂತೋಷ್ ರಾಣ ಗೋಪಿಬಲ್ಲಬಪುರ ಜಿಲ್ಲೆಯ ನಯಬಸಾನ್ ಎಂಬ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಕೈಗೊಂಡು, ಅಲ್ಲಿನ ಸಂತಾಲ್ ಬುಡಕಟ್ಟು ಜನಾಂಗದ ರೈತರನ್ನು ಮತ್ತು ಕೃಷಿಕೂಲಿ ಕಾರ್ಮಿಕರನ್ನು ಸಂಘಟಿಸತೊಡಗಿದ. ಅಸಿಮ್ ಚಟರ್ಜಿ ಕೊಲ್ಕತ್ತ ನಗರದ ಯುವ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಪ್ರೆರೇಪಿಸತೊಡಗಿದ. ಈ ಇಬ್ಬರೂ ನಾಯಕರು, ಅಲ್ಲಿ ಜಮೀನ್ದಾರರ ಬಗ್ಗೆ, ಹಾಗೂ ಅಸಮಾನತೆಯಿಂದ ಕೂಡಿದ್ದ ಅವರ ಗೇಣಿ ಪದ್ಧತಿ ಮತ್ತು ಕೂಲಿದರದ ಬಗ್ಗೆ ಅಲ್ಲಿನ ಬುಡಕಟ್ಟು ಜನಕ್ಕೆ ವಿವರಿಸಿ, ಸರ್ಕಾರದ ಪಾಳು ಬಿದ್ದಿರುವ ಜಮೀನನ್ನು ಉಳುಮೆ ಮಾಡಲು ಪ್ರೊತ್ಸಾಹಿಸಿದರು. ಅಸಿಮ್ ಚಟರ್ಜಿಯ ಮಾತುಗಳಿಂದ ಪ್ರೇರಿತರಾದ ಹಲವಾರು ಪದವೀಧರರು ನಗರದ ಬದುಕನ್ನು ತ್ಯೆಜಿಸಿ ಬಂದು, ಹಳ್ಳಿಗಳಲ್ಲಿ ಸಂತಾಲ್ ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದರು. ಇವರಲ್ಲಿ ಅನೇಕ ಮಂದಿ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಪದವೀಧರರು ಇದ್ದದು ವಿಶೇಷ. ಇವರುಗಳು. ಸಂತಾಲ್ ಬುಡಕಟ್ಟು ಜನಾಂಗದ ಸಾಮಾನ್ಯ ಕಾಯಿಲೆಗಳಿಗೆ ಉಪಚರಿಸುತ್ತಾ, ಅವರುಗಳ ಔಷಧದ ಖರ್ಚನ್ನು ತಾವೇ ಭರಿಸುತ್ತಾ, ಆದಿವಾಸಿಗಳು ವಾಸಿಸುತ್ತಿದ್ದ ಗುಡಿಸಲು, ರಸ್ತೆಗಳನ್ನು ಸುಧಾರಿಸಿ, ಅವರ ವಿಶ್ವಾಸಕ್ಕೆ ಪಾತ್ರರಾದರು.

ದೆಬ್ರಾ ಜಿಲ್ಲೆಯಲ್ಲಿ ಭೂರಹಿತ ಕೃಷಿ ಕೂಲಿಕಾರ್ಮಿಕರ ವೇತನ ಹೋರಾಟಕ್ಕೆ ನಾಂದಿಯಾಡಿತು. ಈ ಮುನ್ನ ಕಮ್ಯೂನಿಷ್ಟ್ ಪಕ್ಷದಲ್ಲಿದ್ದ ಅಲ್ಲಿನ ನಾಯಕರಾದ, ಗುಣಧರ್ ಮುರ್ಮು ಮತ್ತು ಬಾಬುದೇಬ್ ಮಂಡಲ್ ಇಬ್ಬರನ್ನೂ ಪಕ್ಷ ಉಚ್ಛಾಟಿಸಿದ್ದ ಕಾರಣ ಇವರಿಬ್ಬರೂ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಸೇರಿ ಆದಿವಾಸಿಗಳನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು. ಇವೆಲ್ಲವುಗಳ ಪರಿಣಾಮವಾಗಿ. 1969ರ ಆಗಸ್ಟ್ ತಿಂಗಳಿನಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ನಕ್ಸಲ್ ಹೋರಾಟಗಾರರ ಬಹು ಮುಖ್ಯವಾದ ಕಾರ್ಯಾಚರಣೆ 1969 ರ ಸೆಪ್ಟಂಬರ್ 27 ರಂದು ಆರಂಭಗೊಂಡಿತು. ಗೋಪಿಬಲ್ಲಬಪುರ ಜಿಲ್ಲೆಯಲ್ಲಿ ಸಂತೋಷ್ ರಾಣ ನೇತೃತ್ವದಲ್ಲಿ ಹೋರಾಟಗಾರರು, ನಗೆನ್ ಸೇನಾಪತಿ ಎಂಬ ಜಮೀನ್ದಾರನ ಮನೆ ಮೇಲೆ ದಾಳಿ ಮಾಡಿ, ಅವನ್ನು ಮತ್ತು ಅವನ ಸಹೋದರನನ್ನು ತೀವ್ರವಾಗಿ ಗಾಯಗೊಳಿಸಿ, ಬಂದೂಕು ಮತ್ತು ಭತ್ತದ ಫಸಲನ್ನು ದೋಚಿದರು.

ಅಕ್ಟೋಬರ್ 16 ರಂದು ಸಂತೋಷ್ ರಾಣನ ತಮ್ಮ ಮಿಹಿರ್ ರಾಣನ ನೇತೃತ್ವದ ತಂಡ, ಚೌ ಬಝಾರ್ ಎಂಬ ಹಳ್ಳಿಗೆ ನುಗ್ಗಿ ಅಲ್ಲಿನ ಜಮೀನ್ದಾರನೊಬ್ಬನನ್ನು ಕೊಂದುಹಾಕಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಹನ್ನೆರೆಡು ಜಮೀನ್ದಾರರು ನಕ್ಸಲ್ ಹೋರಾಟಕ್ಕೆ ಬಲಿಯಾದರು. ಇತ್ತ ದೆಬ್ರಾ ಜಿಲ್ಲೆಯಲ್ಲಿ ಗುಣಧರ್ ಮುರ್ಮು ನೇತೃತ್ವದ ಆದಿವಾಸಿ ಹೋರಾಟಗಾರರು, ಏಳು ಮಂದಿ ಜಮೀನ್ದಾರರನ್ನು ಬಲಿತೆಗೆದುಕೊಂಡರು. ಇವರಲ್ಲಿ ಕೆಲವರು, ಹೋರಾಟವನ್ನು ಬಗ್ಗು ಬಡಿಯಲು ಆಗಮಿಸಿದ್ದ ಪೊಲೀಸರಿಗೆ ಆಶ್ರಯ ನೀಡಿದ್ದರು. ಈ ಹಿಂಸಾತ್ಮಕ ಘಟನೆಗಳಿಂದ ಬೆದರಿದ ಜಮೀನ್ದಾರರು ತಮ್ಮ ಮನೆಗಳನ್ನು ತೊರೆದು ಬಂದು, ಮಿಡ್ನಾಪುರ್ ಜಿಲ್ಲಾ ಕೇಂದ್ರದಲ್ಲಿ ಆಶ್ರಯ ಪಡೆಯತೊಡಗಿದರು. ಇದರಿಂದ ಎಚ್ಚೆತ್ತುಕೊಂಡ ಪಶ್ಚಿಮ ಬಂಗಾಳ ಸರ್ಕಾರ ಮಿಡ್ನಾಪುರ್, ದೇಬ್ರಾ, ಮತ್ತು ಗೋಪಿಬಲ್ಲಬಪುರ ಜಿಲ್ಲೆಗಳಿಗೆ ಪೊಲೀಸ್ ತುಕಡಿಗಳನ್ನು ಕಳುಹಿಸಿ, ಕಂಡಲ್ಲಿ ಗುಂಡಿಕ್ಕುವಂತೆ ಆದೇಶ ನೀಡಿತು. ಇದು ನಕ್ಸಲ್ ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿತು. ಅಲ್ಲಿಯವರೆಗೆ ಜಮೀನ್ದಾರರನ್ನೆ ಗುರಿಯಾಗಿಸಿಕೊಂಡಿದ್ದ ನಕ್ಸಲ್ ಹೋರಾಟ ಪ್ರಪಥಮವಾಗಿ ಸರ್ಕಾರದತ್ತ ತಿರುಗಿತು. ಹೋರಾಟಗಾರರು, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ಧ್ವಂಸ ಮಾಡತೊಡಗಿದರು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಸತ್ಯನಾರಾಯಣ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ನಿರ್ಧಯವಾಗಿ ಎನ್ ಕೌಂಟರ್ ಹೆಸರಿನಲ್ಲಿ ಕೊಂದುಹಾಕಿದ್ದರಿಂದ, ಈ ಘಟನೆಯಿಂದ ಕ್ಷುದ್ರಗೊಂಡಿದ್ದ ನೇತಾರ ಚಾರು ಮುಜಂದಾರ್ ಒಂದು ರೀತಿಯಲ್ಲಿ ಸರ್ಕಾರದ ವಿರುದ್ಧ ಯುದ್ಧವನ್ನೇ ಘೋಷಣೆ ಮಾಡಿದ್ದ. 1975 ರ ಒಳಗೆ ನಕ್ಸಲ್ ಹೋರಾಟದ ಮೂಲಕ ಭಾರತದ ಆಡಳಿತ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಳ್ಳಬೇಕೆಂದು ಆವನ ಗುರಿಯಾಗಿತ್ತು. ಚಾರುವಿನ ಪ್ರೇರಣೆಯಿಂದ ನಕ್ಸಲ್ ಹೋರಾಟ ತೀವ್ರಗೊಂಡ ಕಾರಣ ಮತ್ತಷ್ಟು ಶೋಷಿತ ಜಮೀನ್ದಾರರ ತಲೆಗಳು ಉರುಳಿದವು. ತನ್ನ ಕಾಮುಕತನದಿಂದಾಗಿ ಆದಿವಾಸಿಗಳಿಂದ ರಣಹದ್ದು ಎಂದು ಕರೆಸಿಕೊಳ್ಳುತ್ತಿದ್ದ ಗೋಪಿಬಲ್ಲಬಪುರ ಜಿಲ್ಲೆಯ ಅಶು ಮಹಾಪಾತ್ರ ಎಂಬ ಜಮೀನ್ದಾರನನ್ನು 1970 ಮಾರ್ಚ್ 5 ರಂದು ಅವನ ಮನೆಯೆದುರು ಹತ್ಯೆಗೆಯ್ಯಲಾಯಿತು.

ಇದಾದ ಎರಡುದಿನಗಳಲ್ಲೇ ಇದೇ ಹೋರಾಟಗಾರರು, ಕೇದಾರ್‌ಘೋಶ್ ಎಂಬಾತನನ್ನು ಮತ್ತು ಅವನ ಮಗನನ್ನು ಕೊಂದು ಹಾಕಿದರು.  ಮಾರ್ಚ್ 21 ರಂದು ನಕ್ಸಲ್ ಹೋರಾಟಕ್ಕೆ ಪ್ರತಿಯಾಗಿ ಗೂಂಡಾಪಡೆಯನ್ನು ಕಟ್ಟಿಕೊಂಡು ರಕ್ಷಣೆಪಡೆದಿದ್ದ ನಾರಾಯನ್‌ಪತಿ ಎಂಬ ಜಮೀನ್ದಾರ ಮತ್ತು ಅವನ ಗೂಂಡಾಗಳನ್ನು ಗುಣಧರ್ ಮುರ್ಮು ನೇತೃತ್ವದಲ್ಲಿ ಆದಿವಾಸಿಗಳು, ಮೈ ಮೇಲಿನ ಇರುವೆ ಹೊಸಕಿ ಹಾಕಿದಂತೆ ಹೊಸಕಿ ಹಾಕಿದರು. ಹಿಂದೊಮ್ಮೆ ಹೋರಾಟಗಾರರಿಂದ ತಪ್ಪಿಸಿಕೊಂಡಿದ್ದ, ಕನೈ ಕ್ವಿಟಿ ಎಂಬ ಜಮೀನ್ದಾರ ಕೊನೆಗೂ ದೆಬ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಕ್ಸಲಿಯರ ಸಿಟ್ಟಿಗೆ  ಬಲಿಯಾದ. ಮಾರ್ಚ್ 22 ರಂದು ಹೈಫುದ್ದೀನ್ ಮಲ್ಲಿಕ್ ಎಂಬ ಮುಸ್ಲಿಂ ಜಮೀನ್ದಾರನನ್ನು, ಮಾರುಕಟ್ಟೆಯಿಂದ ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ತಡೆದು ನಿಲ್ಲಿಸಿದ ಆದಿವಾಸಿ ಹೋರಾಟಗಾರರು, ಮುಖ್ಯ ರಸ್ತೆಯಲ್ಲಿ ಅವನ ರುಂಡ ಮುಂಡ ಬೇರ್ಪಡುವಂತೆ ಕೊಚ್ಚಿ ಹಾಕಿದರು.

ಪೃಥ್ವಿಯ ಒಡಲೊಳಗೆ ಅಡಿಗಿದ್ದ ಅಗ್ನಿ ಜ್ವಾಲೆಯೊಂದು ಅನಿರೀಕ್ಷಿತವಾಗಿ ಸ್ಪೋಟಗೊಳ್ಳುವಂತೆ ಬುಗಿಲೆದ್ದ ನಕ್ಸಲಿಯರ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸತ್ತಿದ್ದ ಕಾಂಗ್ರೆಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಸಂಯುಕ್ತ ಸರ್ಕಾರ ದಿಕ್ಕು ಕಾಣದಂತೆ ತತ್ತರಿಸಿ ಹೋಯಿತು. ಆ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿದ್ದವರು ಜ್ಯೋತಿಬಸು. ಅವರು ಧರ್ಮ ಸಂಕಟಕ್ಕೆ ಸಿಲುಕಿ ಹೋದರು. ಹೋರಾಟಗಾರರೆಲ್ಲಾ ಅವರದೇ ಪಕ್ಷದಿಂದ ಸಿಡಿದು ಹೋದವರು. ಅವರ ಮೇಲೆ ಹಿಂಸೆಯ ರೂಪದಲ್ಲಿ ಪ್ರತಿಕಾರದ ಸೇಡು ತೀರಿಸಿಕೊಳ್ಳಲು ವ್ಯಯಕ್ತಿವಾಗಿ ಜ್ಯೋತಿಬಸುರವರಿಗೆ ಮನಸ್ಸಿರಲಿಲ್ಲ. ಮಾತುಕತೆಯ ಮೂಲಕ ಹೋರಾಟಕ್ಕೆ ಅಂತ್ಯ ಹಾಕಬೇಕೆನ್ನುವುದು ಅವರ ಗುರಿಯಾಗಿತ್ತು. ಆದರೆ, ಅಂತಿಮವಾಗಿ ಅವರು ಸರ್ಕಾರದ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯಬೇಕಾಯಿತು.

ನಕ್ಸಲ್ ಪೀಡಿತ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಪೊಲೀಸ್ ತುಕುಡಿಗಳನ್ನು ರವಾನಿಸಿದರೂ ಕೂಡ, ಪೊಲೀಸರಿಂದ ಸರ್ಕಾರಿ ಕಟ್ಟಡಗಳನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಸ್ಥಳೀಯ ಜನರ ಜೊತೆ ನಕ್ಸಲ್ ಹೋರಾಟಗಾರರು ಹೊಂದಿದ್ದ ಸುಮಧುರ ಬಾಂಧವ್ಯದಿಂದಾಗಿ, ಪೊಲೀಸರಿಗೆ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ.  ಜೊತೆಗೆ ನಕ್ಸಲಿಯರ ಹೋರಾಟ ಬೀರ್ ಭೂಮಿ ಜಿಲ್ಲೆಗೆ ವಿಸ್ತರಿಸಿತು. ಈ ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದ ಬಡತನ ಮತ್ತು ವಿದ್ಯಾವಂತ ಯುವಕರ ನಿರುದ್ಯೋಗ ಚಳವಳಿಗೆ ಪರೋಕ್ಷವಾಗಿ ಕಾರಣವಾಯಿತು. ಸುದೇವ್ ಬಿಶ್ವಾಸ್ ಎಂಬ ಇಂಜಿನೀರಿಂಗ್ ಪದವೀಧರ, ಕ್ಷಿತೀಶ್ ಚಟರ್ಜಿ ಎಂಬ ಎಂ.ಎಸ್ಸಿ, ಪದವೀಧರ, ಹಾಗೂ ಬಿರೇನ್ ಘೋಷ್ ಎಂಬ ವಿಜ್ಙಾನ ಪದವೀಧರ ಈ ಮೂವರು ಸೇರಿ ಬೀರ್ ಭೂಮಿ ಜಿಲ್ಲೆಯನ್ನು ನಕ್ಸಲ್ ರಣರಂಗವಾಗಿ ಪರಿವರ್ತಿಸಿದರು. ಪಶ್ಚಿಮ ಬಂಗಾಳದಲ್ಲಿ 1970 ರ ಜುಲೈ ತಿಂಗಳಿನಿಂದ 1971 ರ ಜೂನ್‌ವರೆಗೆ ಸಾವಿರಾರು ಹಿಂಸಾತ್ಮಕ ಘಟನೆಗಳು ಜರುಗಿದವು.70 ರ ಡಿಸಂಬರ್‌ವರೆಗೆ ಪ್ರತಿಭಟನೆಯಿಂದ ಕೂಡಿದ್ದ ಚಳವಳಿ 1971ರ ಜನವರಿ ತಿಂಗಳಿನಲ್ಲಿ ಹಿಂಸೆಯ ರೂಪಕ್ಕೆ ತಿರುಗತೊಡಗಿತು. ಜನವರಿಯಲ್ಲಿ 44, ಪೆಬ್ರವರಿಯಲ್ಲಿ 90, ಮಾರ್ಚ್ ತಿಂಗಳಿನಲ್ಲಿ 116, ಏಪ್ರಿಲ್‌ನಲ್ಲಿ 119, ಮೇ ತಿಂಗಳಲ್ಲಿ 76 ಮತ್ತು ಜೂನ್‌ನಲ್ಲಿ 100 ಘಟನೆಗಳು ನಡೆದವು.

ನಕ್ಸಲ್ ಚಟುವಟಿಕೆ ತೀವ್ರಗತಿಯಲ್ಲಿ ಹರಡುತ್ತಿರುವುದನ್ನ ಮನಗಂಡ ಸರ್ಕಾರ, ಪೊಲೀಸ್ ತುಕಡಿಗಳ ಜೊತೆಗೆ ಅರೆಸೈನಿಕ ಪಡೆ ಸೇರಿದಂತೆ ವಿವಿಧ ಪಡೆಗಳನ್ನು ಕಾರ್ಯಾಚರಣೆಗೆ ಬಳಸಿತು. ರಜಪೂತ್ ಇನ್‌ಪೆಂಟ್ರೆಯ ಐದು ತುಕಡಿಗಳನ್ನು ಸರ್ಕಾರಿ ಕಟ್ಟಡಗಳ ರಕ್ಷಣೆಗೆ ರವಾನಿಸಲಾಯಿತು. ಬೀರ್ ಭೂಮಿ ಜಿಲ್ಲೆಯಲ್ಲಿರುವ ಬೊಲಾಪುರ್ ಸಮೀಪದ ರವೀಂದ್ರನಾಥ ಟ್ಯಾಗರ್‌ರವರ ಶಾಂತಿನಿಕೇತನ ಆಶ್ರಮ ಮತ್ತು ವಿಶ್ವಭಾರತಿ ವಿ.ವಿ.ಯ ಕಟ್ಟಡಗಳಿಗೆ ವಿಶೇಷ ರಕ್ಷಣೆ ಒದಗಿಸಲಾಯಿತು. ಉಳಿದ ತುಕಡಿಗಳು ನಕ್ಸಲಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದವು. ಸರ್ಕಾರದ ನಿಯಂತ್ರಣದ ನಡುವೆಯೂ, ನಕ್ಸಲ್ ಹೋರಾಟ. ಕೊಲ್ಕತ್ತ ನಗರಕ್ಕೆ ಹೊಂದಿಕೊಂಡಂತೆ ಇರುವ 24 ಪರಗಣ ಜಿಲ್ಲೆ ಮತ್ತು ಹೌರ, ಬುರ್ದ್ವಾನ್, ಮಾಲ್ಡ, ಹೂಗ್ಲಿ, ನಾಡಿಯ ಜಿಲ್ಲೆಗಳಿಗೆ ವ್ಯಾಪಿಸಿತು ಅಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳು ಚಾರು ಮುಜಂದಾರನ ಹೋರಾಟಕ್ಕೆ ಕೈಜೋಡಿಸಿದವು.

ಕಾಡ್ಗಿಚ್ಚಿನಂತೆ ಇಡೀ ಪಶ್ಚಿಮ ಬಂಗಾಳವನ್ನು ನಕ್ಸಲ್ ಚಳವಳಿ ಆವರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಸರ್ಕಾರದ ಅವಧಿ ಮುಗಿದು 1972 ರಲ್ಲಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತು. ಇಂತಹ ಒಂದು ಸಮಯಕ್ಕಾಗಿ ಕಾದು ಕುಳಿತ್ತಿದ್ದ ಪಶ್ಚಿಮ ಬಂಗಾಳ ಪೊಲೀಸರು, ನಕ್ಸಲಿಯರ ಹುಟ್ಟಡಗಿಸಲು, ಆಂಧ್ರ ಪೊಲೀಸರ ಮಾದರಿಯನ್ನು ಅನುಸರಿಸಲು ಮುಂದಾದರು. ಇದರ ಪ್ರಥಮ ಪ್ರಯತ್ನವಾಗಿ ಕೊಲ್ಕತ್ತ ನಗರದಲ್ಲಿ ಭೂಗತನಾಗಿದ್ದ ನಾಯಕ ಚಾರುಮುಜಂದಾರ್‌‍ನನ್ನು ಮುಗಿಸಲು ಸಂಚು ರೂಪಿಸಿದರು. 1972ರ ಜುಲೈ 16 ರಂದು. ಕೊಲ್ಕತ್ತ ನಗರದ ರಹಸ್ಯ ಸ್ಥಳವೊಂದರಲ್ಲಿ ಚಾರುವನ್ನು ಬಂಧಿಸಿ ಲಾಲ್‌ಬಜಾರ್ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ವಿಚಾರಣೆಯ ನೆಪದಲ್ಲಿ ನಿರಂತರ 11 ದಿನಗಳ ಕಾಲ ಚಿತ್ರಹಿಂಸೆ ನೀಡಿ ಜುಲೈ 28ರ ಮಧ್ಯರಾತ್ರಿ ಒಂದುಗಂಟೆಗೆ ಕೊಂದು ಹಾಕಿದರು. ಪೊಲೀಸ್ ಕಸ್ಟಡಿಯಲ್ಲಿದ್ದ 12 ದಿನಗಳ ಕಾಲ ವಕೀಲರಿಗೆ, ಚಾರುವಿನ ಗೆಳೆಯರಿಗೆ, ಮತ್ತು ಅವನ ಬಂಧುಗಳಿಗೆ ಪೊಲೀಸರು ಭೇಟಿಗೆ ಅವಕಾಶ ನೀಡಲಿಲ್ಲ. ಜುಲೈ 28ರ ರಾತ್ರಿ ಚಾರುಮುಜಂದಾರ್ ಅಸುನೀಗಿದಾಗ, ಮರಣೋತ್ತರ ಶವ ಪರೀಕ್ಷೆಯನ್ನು ಸಹ ಮಾಡಿಸದೆ, ಅವನ ಬಂಧುಗಳನ್ನು ಠಾಣೆಗೆ ಕರೆಸಿ, 29ರ ಬೆಳಗಿನ ಜಾವ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಿಬಿಟ್ಟರು.

ಆಗರ್ಭ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಹುಟ್ಟಿ, ಭೂರಹಿತ ಬಡವರಿಗಾಗಿ ಹೋರಾಟ ಮಾಡುತ್ತಾ, ಬಡವನಂತೆ ಬದುಕಿದ ಚಾರುಮುಜಂದಾರ್ ತನ್ನ ಕೊನೆಯ ದಿನಗಳಲ್ಲಿ ಅನಾಮಿಕನಂತೆ ಪೊಲೀಸರ ನಡುವೆ ನಡು ರಾತ್ರಿಯಲ್ಲಿ ಪ್ರಾಣ ಬಿಟ್ಟಿದು ಹೋರಾಟದ ವಿಪರ್ಯಾಸಗಳಲ್ಲಿ ಒಂದು. ವರ್ತಮಾನದಲ್ಲಿ ನಕ್ಸಲಿಯರು ಪೊಲೀಸರ ಮೇಲೆ ಮುಗಿಬಿದ್ದು ಅವರನ್ನು ನಿರ್ಧಯವಾಗಿ ಏಕೆ ಕೊಲ್ಲುತಿದ್ದಾರೆ ಎಂದು ಪ್ರಶ್ನೆ ಕೇಳುವವರಿಗೆ, ಚಾರುವಿನ ಅಮಾನುಷವಾದ ಸಾವಿನಲ್ಲಿ ಉತ್ತರ ಅಡಗಿದೆ. ನಾಯಕರ ಹತ್ಯೆಯ ಮೂಲಕ ಚಳವಳಿಯ ಬೇರು ಕಿತ್ತೊಗೆಯಬಹುದೆಂದು ನಿರೀಕ್ಷಿಸಿದ್ದ ಪೊಲೀಸರಿಗೆ ಮತ್ತು ಸರ್ಕಾರಗಳಿಗೆ ಭವಿಷ್ಯದಲ್ಲಿ ಗಂಡಾಂತರ ಕಾದಿತ್ತು. ಏಕೆಂದರೆ, ಪಶ್ಚಿಮ ಬಂಗಾಳದಲ್ಲಿ ಹೋರಾಟದ ಜ್ವಾಲೆ ಆ ಕ್ಷಣಕ್ಕೆ ನಂದಿ ಹೋದರೂ ಕೂಡ, ಅದು ಆರಿ ಹೋಗುವ ಮುನ್ನ ಪಕ್ಕದ ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಿಗೆ ಅಗ್ನಿ ಸ್ಪರ್ಶ ನೀಡಿ, ಕಾಡ್ಗಿಚ್ಚಿನಂತೆ ಹರಡಲು ಸಹಾಯಕವಾಗಿತ್ತು.

(ಮುಂದುವರೆಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-9)


– ಡಾ.ಎನ್.ಜಗದೀಶ್ ಕೊಪ್ಪ


 

The greatest of evils and the worst of crimes is poverty. -Bernard Shaw

ಶ್ರೀಕಾಕುಳಂ ಜಿಲ್ಲೆಯನ್ನು ಬೆಂಕಿ ಮತ್ತು ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟ, ಹೇಳಲು ಬಾಯಿಲ್ಲದೆ, ಎದುರಿಸಲು ಆತ್ಮ ಸ್ಥೈರ್ಯವಿಲ್ಲದೆ, ನರಳಿದ್ದ ಬುಡಕಟ್ಟು ಜನಾಂಗದ ಪುರುಷರು ಹಾಗೂ  ಮಹಿಳೆಯರಿಗೆ ಅನಿರೀಕ್ಷಿತವಾಗಿ ಸ್ವಾಭಿಮಾನದ ಬದುಕನ್ನು ಅವರೆದುರು ಅನಾವರಣಗೊಳಿಸಿತ್ತು. ಅದೇ ರೀತಿ ಪಟ್ಟಭದ್ರ ಹಿತಾಶಕ್ತಿಗಳ ಬೇರುಗಳನ್ನು ಬುಡಸಮೇತ ಅಲುಗಾಡಿಸಿತು.
ಜನಸಾಮಾನ್ಯರು ನಡೆಸಿದ ಪಂಚಾಯಿತಿ ಸಭೆಯಲ್ಲಿ ಕೈಕಟ್ಟಿ ನಿಂತು ಅವರು ಒಮ್ಮತದಿಂದ ನೀಡುವ ತೀರ್ಪಿಗೆ ಭೂಮಾಲಿಕರು, ದಲ್ಲಾಳಿಗಳು, ಬಡ್ಡಿ ವ್ಯಾಪಾರದ ಸಾಹುಕಾರರು ಪ್ರತಿರೋಧವಿಲ್ಲದೆ ತಲೆಬಾಗಿದರು.

1969 ರ ಮೆ11 ರಂದು ಪತನಪಟ್ನಂ ತಾಲೂಕಿನ ಎತಮನಗುಡ ಎಂಬ ಹಳ್ಳಿಯ ಜಮೀನ್ದಾರನಾದ ಐವತ್ತು ವರ್ಷದ ಪಿ.ಜಮ್ಮುನಾಯ್ಡು ಎಂಬಾತನನ್ನು 200 ಮಂದಿ ಹೋರಾಟಗಾರರು ಅವನ ಮನೆಯಿಂದ ಅನಾಮತ್ತಾಗಿ ಎತ್ತಿ ಹಾಕಿಕೊಂಡು ಬಂದು, ಪಂಚಾಯಿತಿ ಸಭೆ ಮುಂದೆ ನಿಲ್ಲಿಸಿದರು. ಈತನಿಗೆ ಏಳು ಮಂದಿ ಪತ್ನಿಯರು ಅವರಲ್ಲಿ ಇವನು ಅಪಹರಿಸಿಕೊಂಡು ಹೋಗಿದ್ದ ಬುಡಕಟ್ಟು ಜನಾಂಗದ ನಾಲ್ವರು ಮಹಿಳೆಯರಿದ್ದರು. ಆ ನಾಲ್ವರಲ್ಲಿ ಇಬ್ಬರು, ಇನ್ನೂ ಅಪ್ರಾಪ್ತ ಬಾಲಕಿಯರು. ಈತ ಪೊಲೀಸರ ಬೆಂಬಲದಿಂದ ಆದಿವಾಸಿಗಳ 600 ಎಕರೆಗೂ ಹೆಚ್ಚು ಭೂಮಿಯನ್ನು ಕಬಳಿಸಿದ್ದ. ಸಭೆಯಲ್ಲಿ ಆತನಿಗೆ ಅವನ ಸಹೋದರರು ಮತ್ತು ಪತ್ನಿಯರ ಎದುರೇ, ಸಾವಿನ ಶಿಕ್ಷೆಯನ್ನು ವಿಧಿಸಲಾಯಿತು. ಜಮೀನ್ದಾರನ ರುಂಡ ಮುಂಡವನ್ನು ಎಲ್ಲರೆದುರು ಬೇರ್ಪಡಿಸಿ, ರುಂಡವನ್ನು ಊರಿನ ಮಧ್ಯಭಾಗದಲ್ಲಿ ಕೆಂಪು ಧ್ವಜದೊಂದಿಗೆ ನೇತು ಹಾಕಲಾಯಿತು.

ಮತ್ತೊಂದು ಘಟನೆಯಲ್ಲಿ ಬಡ್ಡಿ ವ್ಯಾಪಾರಿಯೊಬ್ಬನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಈತ ಆದಿವಾಸಿಗಳಿಗೆ ವರ್ಷವೊಂದಕ್ಕೆ ಒಂದು ರೂಪಾಯಿಗೆ ಪ್ರತಿಯಾಗಿ ಐದು ರೂಪಾಯಿ ಬಡ್ಡಿ ಹಣ ಕಲೆ ಹಾಕುತ್ತಿದ್ದ. ನೂರು ರೂಪಾಯಿ ಪಡೆದ ಬಡರೈತ ವರ್ಷ ತುಂಬಿದ ನಂತರ ಈತನಿಗೆ ಆರು ನೂರು ನೀಡಬೇಕಾಗಿತ್ತು. ಈ ಬಡ್ಡಿ ವ್ಯಾಪಾರಿ ಆದಿವಾಸಿ ರೈತರಿಂದ ಹಣದ ಬದಲು ಅವರು ಕಾಡಿನಲ್ಲಿ ಕಲೆ ಹಾಕುತ್ತಿದ್ದ ಹುಣಸೆ ಹಣ್ಣನ್ನು ಪಡೆಯುತ್ತಿದ್ದ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1600 ರೂ. ಇದ್ದರೆ, ಈ ವ್ಯಾಪಾರಿ ಆದಿವಾಸಿ ರೈತರಿಂದ ಕೇವಲ 600 ರೂ. ಗಳಿಗೆ ಪಡೆಯುತ್ತಿದ್ದ. ಸಾಲದ ಸುಳಿಗೆ ಸಿಲುಕಿದ ಆದಿವಾಸಿಗಳು, ಅವನು ಕೇಳಿದ ಬೆಲೆಗೆ ಹುಣಸೆ ಹಣ್ಣನ್ನು ನೀಡಿ ಸಾಲದಿಂದ ವಿಮುಕ್ತಿಯಾಗುತ್ತಿದ್ದರು. ವಿಚಾರಣೆಯಲ್ಲಿ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡು, ಬಡ್ಡಿ ಹಣವನ್ನು ಹಿಂತಿರುಗಿಸಲು ಒಪ್ಪಿ. ಪ್ರಾಣ ಭಿಕ್ಷೆಗೆ ಅಂಗಲಾಚಿದ ಫಲವಾಗಿ, ವ್ಯಾಪಾರಿಗೆ ದಂಡವಿಧಿಸಿ ಬಿಡುಗಡೆಗೊಳಿಸಲಾಯಿತು.

ಇಂತಹ ವಿವೇಚನೆಯ ತೀರ್ಮಾನಗಳ ನಡುವೆಯೂ, ಹೋರಾಟದ ಸಂಭ್ರಮದಲ್ಲಿ ಉದ್ರಿಕ್ತರಾಗಿದ್ದ ಆದಿವಾಸಿಗಳಿಗೆ ಎಲ್ಲಾ ರೀತಿಯ ವಿವೇಚನೆ ಹಾಗೂ ಮಾನವೀಯತೆಯ ಗುಣಗಳು ಮಾಯವಾಗಿದ್ದವು. ಸೇಡಿನ ಜ್ವಾಲೆ ಅವರ ಮುಖದಲ್ಲಿ ಹತ್ತಿ ಉರಿಯುತ್ತಿತ್ತು. ಸೂರ್ಯ ಚಂದ್ರ ಇರುವವರೆಗೂ ಪಟ್ಟಭದ್ರ ಹಿತಾಶಕ್ತಿಗಳು ನಮ್ಮ ತಂಟೆಗೆ ಬರಬಾರದು ಎಂಬ ಪಾಠವನ್ನು ಅವರಿಗೆ ಕಲಿಸುವ ಹಠಮಾರಿತನವಿತ್ತು. ಹಿಂಸೆಗೆ ಹಿಂಸೆಯೇ ಪ್ರತ್ತ್ಯುತ್ತರ ಎಂಬ ಕಟು ನಿರ್ಧಾರ ಸಹ ಅವರಲ್ಲಿ ಬೇರೂರಿತ್ತು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅಗ್ನಿ ಪರ್ವತದ ಜ್ವಾಲೆಯಂತೆ ಭುಗಿಲೆದ್ದ ಆದಿವಾಸಿಗಳ ಪ್ರತಿಭಟನೆಗೆ ನಾಗರಿಕ ಜಗತ್ತು ಬೆಚ್ಚಿಬಿದ್ದಿತು. ಆಂಧ್ರ ಸರ್ಕಾರಕ್ಕೆ ಏನೂ ತೋಚದಂತಾಯಿತು. ಏಕೆಂದರೆ, ಹೋರಾಟಗಾರರು ನಡೆಸುತ್ತಿದ್ದ ನರಹತ್ಯೆಗೆ, ಸ್ವತಃ ಪೊಲೀಸರೇ ನಡುಗಿ ಹೋಗಿದ್ದರು. ಇದರಿಂದಾಗಿ ಹೋರಾಟದ ಜ್ವಾಲೆ ಕಾಡ್ಗಿಚ್ಚಿನಂತೆ ಆಂಧ್ರದ ಇತರೆ ಜಿಲ್ಲೆಗಳಾದ ಕಮ್ಮಮ್, ವಾರಂಗಲ್, ಅದಿಲಾಬಾದ್, ಕರೀಂನಗರದ ಪ್ರದೇಶಗಳಿಗೂ ಹರಡಿತು ಟಿ.ನಾಗಿರೆಡ್ಡಿ ಎಂಬ ನಾಯಕ ಈ ಜಿಲ್ಲೆಗಳಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ. ನಕ್ಸಲ್ ಚಳವಳಿ ಕೇವಲ ಐದು ತಿಂಗಳ ಅವಧಿಯಲ್ಲಿ ತೆಲಂಗಾಣ ಪ್ರಾಂತ್ಯದ 10 ಸಾವಿರ ಚದುರ ಕಿ.ಮಿ. ವ್ಯಾಪ್ತಿಯ ಹಳ್ಳಿಗಳಿಗೆ ಹರಡಿ, ನಾಲ್ಕು ಲಕ್ಷ ಜನ ಹೋರಾಟಕ್ಕೆ ಕೈ ಜೋಡಿಸಿದರು.

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಆಂಧ್ರ ಸರ್ಕಾರ, ಹೋರಾಟಕ್ಕೆ ಸಂಬಂಧಿಸಿದಂತೆ 1969 ರ ಡಿಸಂಬರ್ ತಿಂಗಳಿನಲ್ಲಿ ನಾಗಿರೆಡ್ಡಿ ಸೇರಿದಂತೆ ಏಳು ಜನ ಪ್ರಮುಖ ನಾಯಕರನ್ನು ಬಂಧಿಸಿತು. ನಾಗಿರೆಡ್ಡಿಯ ಬಂಧನದ ನಂತರ ಅವನ ಅನುಪ ಸ್ಥಿತಿಯಲ್ಲಿ ಚಂದ್ರಪುಲ್ಲ ರೆಡ್ಡಿ ಹೋರಾಟವನ್ನು ಮುನ್ನಡೆಸಿದನು. ಹಿಂಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1969 ರ ಆಗಸ್ಟ್ ತಿಂಗಳ 12 ರಂದು. ಆಂಧ್ರ ಸರ್ಕಾರ ವಿಶಾಖಪಟ್ಟಣದಲ್ಲಿ, ನೆರೆಯ ಒರಿಸ್ಸಾ ಮತ್ತು ಮಧ್ಯಪ್ರದೇಶದ ಅಧಿಕಾರಿಗಳ ಜೊತೆ ಗುಪ್ತ ಸಮಾಲೋಚನೆ ನಡೆಸಿತು. ಅಲ್ಲದೇ, ನೇರ ಕಾರ್ಯಾಚರಣೆಗೆ ಮುಂದಾಯಿತು. ಈ ಕಾರ್ಯಾಚರಣೆಯ ಮುಖ್ಯ ಗುರಿ ನಕ್ಸಲ್ ಚಳವಳಿಯ ನಾಯಕರನ್ನು ಎನ್‌ಕೌಂಟರ್ ಹೆಸರಿನಲ್ಲಿ ಮುಗಿಸುವುದಾಗಿತ್ತು.

1969 ರ ಅಂತ್ಯದ ವೇಳೆಗೆ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯಲ್ಲಿ ಪ್ರಮುಖ ನಾಯಕರಾದ ಭಾಸ್ಕರ ರಾವ್, ತಮ್ಮಡ ಗಣಪತಿ, ನಿರ್ಮಲ ಕೃಷ್ಣಮೂರ್ತಿ, ಸುಬ್ಬರಾವ್ ಪ್ರಾಣಿಗ್ರಹಿ, ರಮೇಶ್ಚಂದ್ರ ಸಾಹು ಇವರು ಆಂಧ್ರ ಪೊಲೀಸರ ಬಂಧನಕ್ಕೆ ಒಳಗಾಗಿ, ಪೊಲೀಸರ ಎನ್‌ಕೌಂಟರ್ ಎಂಬ ನರಹತ್ಯೆಗೆ ಪರ್ವತದ ನಿರ್ಜನ ಪ್ರದೇಶದಲ್ಲಿ ಬಲಿಯಾದರು. ಭಾರತದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಇದು ಪ್ರಥಮ ಎನ್‌ಕೌಂಟರ್ ಪ್ರಕರಣ. ಸಂಧಾನದ ಮೂಲಕ ಬಗೆ ಹರಿಯಬಹುದಾಗಿದ್ದ ಆದಿವಾಸಿಗಳ ನ್ಯಾಯಯುತವಾದ ಹೋರಾಟಕ್ಕೆ ಪ್ರತಿಯಾಗಿ ಆಂಧ್ರ ಸರ್ಕಾರ ಮತ್ತು ಅಲ್ಲಿನ ಪೊಲೀಸರು, ಹಿಂಸೆಯ ಹಾದಿ ತುಳಿದರು. ನಕ್ಸಲಿಯರನ್ನು ಶಾಶ್ವತವಾಗಿ ಹಿಂಸೆಯನ್ನು ತುಳಿಯುವಂತೆ ಮಾಡಿದರು.

ವರ್ತಮಾನದ ನಾಗರಿಕ ಸಮಾಜದಲ್ಲಿ ಹಿಂಸೆಯನ್ನು ಪ್ರತಿಪಾದಿಸುವುದು, ಅಥವಾ ಬೆಂಬಲಿಸುವುದು, ಅವಿವೇಕತನ. ಅಷ್ಟೇ ಅಲ್ಲ, ಅದೊಂದು ಅನಾಗರಿಕ ನಡುವಳಿಕೆ ಕೂಡ. ಆದರೆ, ನಕ್ಸಲಿಯರು, ವರ್ತಮಾನದ ಭಾರತದಲ್ಲಿ ದೇಶಾದ್ಯಂತ ಪೊಲೀಸರನ್ನ ಏಕೆ ಇಷ್ಟೊಂದು ನಿರ್ಧಯವಾಗಿ ಕೊಲ್ಲುತ್ತಿದ್ದಾರೆ ಎಂಬ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೊರಟರೆ, ಅದು ನಮ್ಮನ್ನು ಮೇಲ್ಕಂಡ ದುರಂತದ ಕಥನದ ಬಳಿ ಕರೆದು ತಂದು ನಿಲ್ಲಿಸುತ್ತದೆ.

ನಕ್ಸಲಿಯರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಗುಡ್ಡಗಾಡಿನ ರೈತರು, ಕೃಷಿ ಕೂಲಿಕಾರ್ಮಿಕರು, ಆದಿವಾಸಿಗಳು, ಈ  ದೇಶದ ಭದ್ರತೆಗೆ, ಅಥವಾ ಆಂಧ್ರ ಸರ್ಕಾರದ ಪತನಕ್ಕೆ ಎಂದೂ ಒಳಸಂಚು ರೂಪಿಸಿದವರಲ್ಲ, ಮೇಲಾಗಿ ಅವರ್‍ಯಾರು ವಿದೇಶಿ ಆಕ್ರಮಣಕಾರರೂ ಆಗಿರಲಿಲ್ಲ. ಅವರ ಬೇಡಿಕೆಗಳು ಕೂಡ ಅತಿ ಸಾಮಾನ್ಯವಾಗಿದ್ದವು. ಅವರು ಬಯಸಿದ್ದು ಯಾವುದೇ ರೀತಿಯ ಕಿರುಕುಳವಿಲ್ಲದ ನೆಮ್ಮದಿಯ ಬದುಕನ್ನು ಮಾತ್ರ. ಆದರೆ, ಈ ನಮ್ಮ ಸರ್ಕಾರಗಳು, ಆಳುವ ಪ್ರತಿನಿಧಿಗಳು ಇವರುಗಳಿಗೆ ಮಾಡಿದ್ದಾದರೂ ಏನು? ಇವರ ಬದುಕನ್ನು ಶೋಷಿಸುವುದನ್ನೇ ವೃತ್ತಿ ಮಾಡಿಕೊಂಡ ಭೂಮಾಲೀಕರ ಕೈಗೆ ಒಪ್ಪಿಸಿ ಇಡೀ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತ್ತಿತು. ಅಸಮಾನತೆ, ಅತ್ಯಾಚಾರ, ಶೋಷಣೆಗಳೇ ತಾಂಡವಾಡುತ್ತಿದ್ದ ವ್ಯವಸ್ಥೆಯಲ್ಲಿ ಆದಿವಾಸಿಗಳು, ಪ್ರಾಣಿಗಳಂತೆ ಬದುಕಿ ಜಂಗಲ್‌ರಾಜ್ಯದ ಕಾನೂನಿಗೆ ತಮ್ಮಗಳ ಇಡೀ ಜೀವನವನ್ನೇ ಒತ್ತೆಯಿಡಬೇಕಾಯಿತು.

ಹೋರಾಟದ ಆರಂಭದ ದಿನಗಳಲ್ಲಿ ಈ ಆದಿವಾಸಿಗಳ ಬೇಡಿಕೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದರೆ, ನಕ್ಸಲಿಯರ ಹಿಂಸಾಚಾರದ ಇತಿಹಾಸ ಇಲ್ಲಿಯವರೆಗೂ ಮುಂದುವರಿಯುತ್ತಿತ್ತೆ? ಇದು ನಮ್ಮ ನಮ್ಮ ಆತ್ಮಸಾಕ್ಷಿಗೆ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆ. ಅವರುಗಳು ಯಾವ ಸಾಮ್ರಾಜ್ಯದ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿರಲಿಲ್ಲ. ಈ ನೆಲದಲ್ಲಿ ಪ್ರಕೃತಿಯ ಮಕ್ಕಳಾಗಿ ಹುಟ್ಟಿ, ಇಲ್ಲಿನ ಸಮಾಜಕ್ಕೆ ಅಥವಾ ಪರಿಸರಕ್ಕೆ ಯಾವ ಕೇಡನ್ನೂ ಬಗೆದಿರಲಿಲ್ಲ. ಆಳುವ ಸರ್ಕಾರಗಳು ಜೀವ ಭಯದ ಮೂಲಕ ಚಳವಳಿಯ ಹುಟ್ಟಡಗಿಸಲು ಹೋಗಿ, ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದವು. ಇದು ಎಂತಹ ಅವಿವೇಕತನದ ನಡುವಳಿಕೆ ಎಂದರೆ, ಬಾಯಾರಿ ನೀರಿಗಾಗಿ ಬೊಗಸೆಯೊಡ್ಡಿದವನ ಕೈಗೆ ಕುಡಿಯುವ ನೀರು ಸುರಿಯುವ ಬದಲು, ಮೂತ್ರ ವಿಸರ್ಜನೆ ಮಾಡಿದಂತೆ. ಇದನ್ನು ಜಾಣ್ಮೆಯ ನಡೆಎನ್ನಲಾಗದು. ಅಮಾನುಷ ಕ್ರಿಯೆ ಎಂದು ಕರೆಲಾಗುತ್ತದೆ. ನಕ್ಸಲ್ ಹೋರಾಟದ ಇತಿಹಾಸದುದ್ದಕ್ಕೂ ಸರ್ಕಾರಗಳು ಇಂತಹ ಅವಿವೇಕತನಗಳನ್ನು ಮಾಡಿಕೊಂಡು ಬಂದಿವೆ. ಈ ನೆಲದಲ್ಲಿ ಮುಕ್ತವಾದ ಮಾತುಕತೆ ಅಥವಾ ಸಂಧಾನದ ಮೂಲಕ ಬಗೆ ಹರಿಯದ ಸಮಸ್ಯೆಗಳು ಯಾವುವೂ ಇಲ್ಲ ಎಂಬ ಕಟು ಸತ್ಯವನ್ನು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಮೊದಲು ಅರಿಯಬೇಕು.

ನಕ್ಸಲ್ ನಾಯಕರ ಎನ್‌ಕೌಂಟರ್ ಘಟನೆ ನಕ್ಸಲಿಯ ಹೋರಾಟಗಾರರಲ್ಲಿ ಬೆದರಿಕೆಯನ್ನು ಹುಟ್ಟು ಹಾಕುವ ಬದಲು, ಅವರನ್ನು ಮತ್ತಷ್ಟು ಕೆರಳಿಸಿತು. ಈ ಘಟನೆಗೆ ಪ್ರತಿಯಾಗಿ ಅವರು, 1970 ಜನವರಿ 8 ರಂದು ಮತ್ತೊಬ್ಬ ಜಮೀನ್ದಾರನ ಹತ್ಯೆಯನ್ನು ಅತ್ಯಂತ ಭೀಕರವಾಗಿ ನಡೆಸಿದರು. ಸೋಂಪೇಟ ತಾಲೂಕಿನ ಭಾವನಪುರಂ ಎಂಬ ಹಳ್ಳಿಯ ಹೊರವಲಯದ ತೋಟದಲ್ಲಿ ವಾಸವಾಗಿದ್ದ ವೂನ ಸವರಯ್ಯ ಎಂಬ ಜಮೀನ್ದಾರನನ್ನು ಅವನ ಹೆಂಡತಿ, ಮಕ್ಕಳೆದುರು, ಕತ್ತರಿಸಿ ಹಾಕಿ ಅವನ ದೇಹದ ಅಂಗಾಂಗಗಳನ್ನು ಮನೆಯ ಮುಂಭಾಗದಲ್ಲಿ ತೋರಣದಂತೆ ಕೆಂಪು ಬಾವುಟಗಳ ಸಮೇತ ನೇತು ಹಾಕಲಾಯಿತು. ಅಲ್ಲದೆ, ಅವನ ರಕ್ತದಲ್ಲಿ ಗೋಡೆಯ ಮೇಲೆ ಬರಹವೊಂದನ್ನು ಬರೆಯುವುದರ ಮೂಲಕ ತಾಕತ್ತಿದ್ದರೆ, ನಮ್ಮ ಹೋರಾಟವನ್ನು ನಿಗ್ರಹಿಸಿ ಎಂಬ ಸವಾಲನ್ನು ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಹಾಕಲಾಗಿತ್ತು.

ಬಹುತೇಕ ನಾಯಕರು ಎನ್‌ಕೌಂಟರ್‌ಗೆ ಬಲಿಯಾದ ನಂತರ, ಆಂಧ್ರ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೆ, ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ಗಿರಿಜನರನ್ನು ಸಂಘಟಿಸುವ ಸಂಪೂರ್ಣ ಹೊಣೆ ವೆಂಪಟಾಪು ಸತ್ಯನಾರಾಯಣನ ಮೇಲೆ ಬಿತ್ತು. ಇಂತಹ ವೇಳೆಯಲ್ಲಿ ಸತ್ಯನಾರಾಯಣನಿಗೆ ಅದಿಬಟ್ಲ ಕೈಲಾಸಂ ಎಂಬ ಅದ್ಭುತ ಸಂಘಟನಾಕಾರನೊಬ್ಬ ನೆರವಾದ. ನಾಯಕರ ಹತ್ಯೆಯಿಂದ ಆದಿವಾಸಿ ಹೋರಾಟಗಾರರು ಎದೆಗುಂದಿರಲಿಲ್ಲ. ದಿನನಿತ್ಯ ಜಮೀನ್ದಾರರ ಕೈಗೆ ಸಿಕ್ಕಿ ಸಾಯುವ ಬದಲು, ಪೋಲೀಸರನ್ನು ಎದುರಿಸಿ ಒಂದೇ ದಿನ ಸಾಯೋಣ ಎಂಬ ದೃಢ ನಿರ್ಧಾರಕ್ಕೆ ಅವರೆಲ್ಲಾ ಬದ್ಧರಾಗಿದ್ದರು. ಆದರೆ ಅವರನ್ನು ಮುನ್ನಡೆಸುವ ನಾಯಕರು ಇರಲಿಲ್ಲ. ಈ ಕೊರತೆ ಅವರನ್ನು ಕಾಡುತ್ತಿತ್ತು.

ಶ್ರೀಕಾಕುಳಂ ಜಿಲ್ಲೆಯ ಎನ್‌ಕೌಂಟರ್ ಘಟನೆಯಿಂದ ತೀವ್ರ ಹತಾಶನಾದವನಂತೆ ಕಂಡುಬಂದ ಚಾರುಮುಜಂದಾರ್ ದೂರದ ಕೊಲ್ಕತ್ತ ನಗರದಿಂದ ಆಂಧ್ರದ ಕಾಮ್ರೇಡ್‌ಗಳಿಗೆ ಪ್ರತಿದಿನ ಪತ್ರ ಬರೆದು ಅವರುಗಳನ್ನು ಹೋರಾಟಕ್ಕೆ ಹುರಿದುಂಬಿಸುತ್ತಿದ್ದ. 1970 ರ ಜುಲೈ ತಿಂಗಳಿನಲ್ಲಿ ಪತ್ರ ಬರೆದು, ಈಗ ನೂರು ಸದಸ್ಯರಿರುವ ದಳಗಳನ್ನು ವಿಭಜಿಸಿ, ತಲಾ 10 ರಿಂದ 20 ಸದಸ್ಯರಿರುವ ದಳಗಳನ್ನಾಗಿ ಮಾಡಿ ಎಂದು ಸತ್ಯನಾರಾಯಣನಿಗೆ ಸಲಹೆ ನೀಡಿದ. ಪೊಲೀಸರ ಎನ್‌ಕೌಂಟರ್‌ನಿಂದ ಆಗಿರುವ ಹಿನ್ನಡೆಯಿಂದ ನಕ್ಸಲ್ ಹೋರಾಟ ಚೇತರಿಸಿಕೊಳ್ಳುತ್ತದೆ ಎಂಬ ಆಶಾಭಾವನೆ ಚಾರುವಿಗಿತ್ತು. ಆದರೆ, ಜುಲೈ 18 ರಂದು, ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇಬ್ಬರನ್ನು ಸರೆಹಿಡಿದ ಆಂಧ್ರ ಪೊಲೀಸರು. ಅವನ್ನು ಪಾರ್ವತಿಪುರಂ ತಾಲೂಕಿನ ಬೋರಿಬೆಟ್ಟ ಎಂಬಲ್ಲಿಗೆ ಕರೆದೊಯ್ದು, ಬೆಟ್ಟದ ತುದಿಯಲ್ಲಿ ನಿರ್ಧಯವಾಗಿ ಗುಂಡಿಟ್ಟು ಕೊಂದು, ಎನ್‌ಕೌಂಟರ್ ಹೆಸರಿನಲ್ಲಿ ಈ ಹತ್ಯೆಗೆ ತೇಪೆ ಹಚ್ಚಿದರು.

ಈ ಇಬ್ಬರು ನಾಯಕರ ಹತ್ಯೆಯಿಂದಾಗಿ ಶ್ರೀಕಾಕುಳಂ ಪ್ರಾಂತ್ಯದ ಆದಿವಾಸಿ ರೈತರ ಮೊದಲ ಹಂತದ ಹೋರಾಟಕ್ಕೆ ತೆರೆಬಿದ್ದಿತು. ಆದರೆ, ನಕ್ಸಲ್ ಹೋರಾಟವೆಂಬ ಅಗ್ನಿ ಪರ್ವತದ ಲಾವಾರಸ ನೆರೆಯ ರಾಜ್ಯಗಳಿಗೆ ವ್ಯಾಪಿಸಿ, ಹತ್ತು ವರ್ಷಗಳ ನಂತರ ಮತ್ತೇ ತೆಲಂಗಾಣ ಪ್ರಾಂತ್ಯದಲ್ಲಿ, ಪ್ರಜಾಸಮರಂ (ಪೀಪಲ್ಸ್ ವಾರ್) ಎಂಬ  ಹೆಸರಿನಲ್ಲಿ ಉದ್ಭವಗೊಂಡು, ಕೊಂಡಪಲ್ಲಿ ಸೀತಾರಾಮಯ್ಯ ಎಂಬ ನಾಯಕನನ್ನು ಹುಟ್ಟು ಹಾಕಿತು. ಸೋಜಿಗದ ಸಂಗತಿಯೆಂದರೆ, ಸೀತಾರಾಮಯ್ಯ ಕೂಡ, ನಕ್ಸಲ್ ಹೋರಾಟಕ್ಕೆ ದುಮುಕುವ ಮುನ್ನ, ಸತ್ಯನಾರಾಯಣನಂತೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದ.

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 8)


– ಡಾ.ಎನ್.ಜಗದೀಶ್ ಕೊಪ್ಪ


 

If there is to be revolution, there must be a revolutionary party.  -Mao

ಆಂಧ್ರದ ಗೋದಾವರಿ ನದಿಯಾಚೆಗಿನ ಆ ನೆಲಕ್ಕೆ ಹಿಂಸೆ ಅಥವಾ ಬಲಿದಾನ ಹೊಸದೇನಲ್ಲ. ವಿಶಾಖಪಟ್ಟಣ, ರಾಜಮಂಡ್ರಿ, ಶ್ರೀಕಾಕುಳಂ, ವಾರಂಗಲ್ ಮತ್ತು ಅದಿಲಾಬಾದ್ ಹಾಗೂ ಬೊಬ್ಬಿಲಿ  ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಿಗೆ ಹೋದರೆ, ಅಲ್ಲಿನ ಪೂರ್ವಜರ ಕಣ್ಣೀರಿನ ಇತಿಹಾಸದ ಕಥೆಯೊಂದು ನಮ್ಮೆದುರು ತೆರೆದುಕೊಳ್ಳತ್ತದೆ. 250 ವರ್ಷಗಳ ಹಿಂದಿನ ಬಲಿದಾನದ ಕಥನವೊಂದನ್ನು, ಮೌಖಿಕ ಕಾವ್ಯದ ರೂಪದಲ್ಲಿ ಅಲ್ಲಿನ ಜನ ತಮ್ಮ ಎದೆಯಲ್ಲಿ ಕಾಪಿಟ್ಟುಕೊಂಡು ಹಾಡುತ್ತಾ ಬಂದಿದ್ದಾರೆ. ಆ ಮಹಾ ಕಥನ ಕಾವ್ಯವೇ, “ಬೊಬ್ಬಿಲಿ ಕಥಾ”.

ದುರಂತ ಕಥನದ ಸಂಕ್ಷಿಪ್ತ ಸಾರಾಂಶವಿದು, ಅದು 1750 ರ ಕಾಲಮಾನ. ದಕ್ಷಿಣದಲ್ಲಿ ಮೊಗಲರ ನೆರವಿನಿಂದ ಅವರಿಗೆ ಒಂದಿಷ್ಟು ಕಪ್ಪ ಕಾಣಿಕೆ ಕೊಟ್ಟು ಹೈದರಾಬಾದ್ ಪ್ರಾಂತ್ಯವನ್ನು ನಿಜಾಮ ಆಳುತ್ತಿದ್ದ ಸಮಯ. ಇದೇ ಕಾಲಘಟ್ಟದಲ್ಲಿ ಭಾರತದ ಪೂರ್ವ ಕರಾವಳಿ ತೀರದಲ್ಲಿ, ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಈ ದೇಶದ ಮೇಲೆ ತಮ್ಮ ಅಸ್ತಿತ್ವ ಸಾಧಿಸಲು ಹೋರಾಟ ನಡೆಸುತ್ತಿದ್ದರು. ಇಂಗ್ಲಿಷರು, ಕೊಲ್ಕತ್ತ ಬಂದರು ನಗರವನ್ನು, ಫ್ರೆಂಚರು, ಪುದುಚೇರಿ,(ಪಾಡಿಚೇರಿ) ಮತ್ತು ಆಂಧ್ರದ ಮಚಲಿಪಟ್ಟಣ ಇವುಗಳನ್ನು ಡಚ್ಚರು ತಮಿಳುನಾಡಿನ ನಾಗಪಟ್ಟಣವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡು, ಸ್ಥಳೀಯ ಸಾಮಂತರಿಗೆ ಸೇನೆಯ ಸಹಾಯ ನೀಡುತ್ತಾ ಅವರಲ್ಲಿ ಕಲಹ ಹುಟ್ಟು ಹಾಕುತ್ತಾ, ಯುದ್ಧದ ನೆಪದಲ್ಲಿ ನಿಧಾನವಾಗಿ ಭಾರತದ ನೆಲದಲ್ಲಿ ಬೇರು ಬಿಡಲು ಹವಣಿಸಿದ್ದರು.

ಆಂಧ್ರಪ್ರದೇಶದ ಉತ್ತರ ಈಶಾನ್ಯ ಭಾಗದ ಬಂದರಾಗಿದ್ದ ಮಚಲಿಪಟ್ಟಣದಲ್ಲಿ ಫ್ರೆಂಚರ 12 ಸಾವಿರ ಯೋಧರಿದ್ದ ಸೇನಾ ಪಡೆಯು ಮಾರ್‌ಕ್ವಿಸ್‌ ದೆ ಬಸ್ಸಿ ಎಂಬ ದಂಡನಾಯಕನ ನೇತೃತ್ವದಲ್ಲಿ ಹೈದರಾಬಾದ್ ನಿಜಾಮನಿಗೆ ಸೇವೆ ಸಲ್ಲಿಸುತ್ತಿತ್ತು. 1756 ರಲ್ಲಿ ವಿಶಾಖಪಟ್ಟಣದ ಸಮೀಪದ ವಿಜಯನಗರಂ ಬಳಿ ಇರುವ ಬೊಬ್ಬಿಲಿ ಎಂಬ ಪುಟ್ಟ ಸಂಸ್ಥಾನದ ಸಾಮಂತ ವಿಜಯರಾಮರಾಜು ಎಂಬಾತ, ನಿಜಾಮ ಕೇಳಿದಷ್ಟು ವಾರ್ಷಿಕ ಕಂದಾಯ ನೀಡಲು ನಿರಾಕರಿಸಿದ. ಬೊಬ್ಬಿಲಿ ಕೋಟೆಯ ಮೇಲೆ ನಿಜಾಮನ ಪರವಾಗಿ, ಅವನ ಆದೇಶದಂತೆ ಫ್ರೆಂಚರ ಸೇನೆ ದಂಡೆತ್ತಿ ಬಂದಿತು. ಆ ಪುಟ್ಟ ಸಂಸ್ಥಾನದಲ್ಲಿ ಸಾಮಂತನ ಪರವಾಗಿ ಇದ್ದವರು ಇದೇ ಪ್ರಾಂತ್ಯದ ಬುಡಕಟ್ಟು ಜನಾಂಗ ಮಾತ್ರ. ಯಾವುದೇ ಅತ್ಯಾಧುನಿಕ ಶಸ್ರಾಸ್ತ್ರಗಳಿಲ್ಲದೆ, ಬಿಲ್ಲು ಬಾಣಗಳ ಮೂಲಕ ಇನ್ನೂರು ಮಂದಿ ಫ್ರೆಂಚ್ ಸೈನಿಕರನ್ನು ಕೊಂದು ಹಾಕಿದ ಈ ಅರಣ್ಯವಾಸಿಗಳ ಸಮುದಾಯ, ನಂತರ ಸೇನೆಯ ಪಿರಂಗಿ ದಾಳಿಗೆ ಕೋಟೆ ತುತ್ತಾದಾಗ ಅನಿವಾರ್ಯವಾಗಿ ಫ್ರೆಂಚರಿಗೆ ಶರಣಾಯಿತು. ಆನಂತರ ನಡೆದದ್ದು ಅಂದಿನ ಜಗತ್ತು ಕಂಡರಿಯದ ಭೀಕರ ನರಮೇಧ. ಕೋಟೆಯ ಒಳಗೆ ಪ್ರವೇಶ ಪಡೆದ ಫ್ರೆಂಚ್ ಸೈನಿಕರು ಎಲ್ಲಾ ಸ್ಥಳೀಯರನ್ನು ಹೊಸಕಿ ಹಾಕಿದರು. ಸುಮಾರು ಮೂರರಿಂದ ನಾಲ್ಕು ಸಾವಿರ ಬುಡಕಟ್ಟು ಜನಾಂಗದ ಯೋಧರು ಈ ಯುದ್ಧದಲ್ಲಿ ಬಲಿಯಾದರು. ಈಗ ಹಲವು ರೂಪಗಳಲ್ಲಿ ಹಾಡುವ ಈ ಕಾವ್ಯಕ್ಕೆ ಹಲವಾರು ಬುಡಕಟ್ಟು ಜನಾಂಗದ ನಾಯಕರಿದ್ದಾರೆ. ಅದೇ ರೀತಿ ನಾಯಕಿಯರೂ ಇದ್ದಾರೆ.

18 ನೇ ಶತಮಾನದ ಅಂತ್ಯದ ವೇಳೆ ಯಾರೋ ಒಬ್ಬ ಅನಾಮಿಕ ಮಹಾನುಭಾವ ಈ ಮೌಖಿಕ ಕಾವ್ಯವನ್ನು ದಾಖಲಿಸಿದ್ದ ಪರಿಣಾಮವಾಗಿ ಇದರ ಮೊದಲ ಹಸ್ತಪ್ರತಿ 1832 ರಲ್ಲಿ ಮದ್ರಾಸ್‌ನ ಒರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ್ ಲೈಬ್ರರಿಯಲ್ಲಿ ಲಭ್ಯವಾಯಿತು. ಇವತ್ತಿಗೂ ಗೋದಾವರಿ ನದಿಯಾಚೆಗಿನ ನಾಡಿನಲ್ಲಿ ಇದೊಂದು ಅತ್ಯಂತ ಜನಪ್ರಿಯ ಕಥನಕಾವ್ಯ. ಇದನ್ನು ಹಾಡುವ ವೃತ್ತಿ ಗಾಯಕರಿದ್ದಾರೆ. (ಚಿತ್ರ ಗಮನಿಸಿ) ವಿಶೇಷ ವೇಷಭೂಷಣಗಳಿಂದ ಅಂಲಕೃತರಾಗಿ ಇಡೀ ರಾತ್ರಿ ಕಾವ್ಯವನ್ನು ಹಾಡುತ್ತಾರೆ. ಇಂತಹ ಬಲಿದಾನದ ಕಥನಕಾವ್ಯವನ್ನು ಚಿಕ್ಕಂದಿನಿಂದ ಆಲಿಸಿಕೊಂಡು ಬಂದಿದ್ದ, ಶಿಕ್ಷಕ ವೆಂಪಟಾಪು ಸತ್ಯನಾರಾಯಣನಿಗೆ ನಿಜಾಮನ ರೂಪದಲ್ಲಿ ತಲೆಯೆತ್ತಿರುವ ಈ ಜಮೀನ್ದಾರರ ಆರ್ಭಟವನ್ನು ಮಣಿಸದಿದ್ದರೆ, ಈ ನೆಲದ ಮಕ್ಕಳಿಗೆ ಉಳಿಗಾಲವಿಲ್ಲವೆಂದು ತೀರ್ಮಾನಿಸಿದನು. ಇದಕ್ಕಾಗಿ ಶಿಕ್ಷಕ ವೃತ್ತಿಯಲ್ಲಿ ಇದ್ದುಕೊಂಡು ಗಿರಿಜನರನ್ನು ಸಂಘಟಿಸತೊಡಗಿದನು. ಅನಕ್ಷರಸ್ತ, ಬುಡಕಟ್ಟು ಜನಾಂಗಕ್ಕೆ ಆಗಿರುವ ಅನ್ಯಾಯವವನ್ನು, ಅವರಿಗಾಗಿ ಇರುವ ಆಜನ್ಮಸಿದ್ಧ  ಹಕ್ಕುಗಳನ್ನು ವಿವರಿಸಲು, ಸತ್ಯನಾರಾಯಣ ಕೂಡ ಜನಪದ ಹಾಡುಗಳಿಗೆ ಮೊರೆಹೋದನು. ಆದಿವಾಸಿಗಳ ಅನ್ಯಾಯ ಕುರಿತು, ಜಮೀನ್ದಾರರ ಕ್ರೌರ್ಯ ಕುರಿತು ತಾನೇ ಹಾಡು ಬರೆದು, ಗಿರಿಜನರ ಪೋಡುಗಳಿಗೆ (ಹಳ್ಳಿ) ಹೋಗಿ ರಾತ್ರಿಯೆಲ್ಲಾ ಕುಳಿತು ಹಾಡತೊಡಗಿದನು.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಜನಪದರು ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಲಾವಣಿಗಳನ್ನು ರಚಿಸಿ ಸಾಮಾನ್ಯ ಜನರೆದುರು, ದೇಶ ಪ್ರೇಮದ ಪ್ರಚೋದನೆಗಾಗಿ ಹಾಡಿದ್ದು ಬಿಟ್ಟರೆ, ದೇಶದಲ್ಲಿ ಪ್ರಪಥಮವಾಗಿ ತುಳಿತಕ್ಕೆ ಒಳಗಾದವರ, ಬಾಯಿಲ್ಲದವರ ಬಗ್ಗೆ ಕ್ರಾಂತಿಕಾರಿ ಹಾಡುಗಳನ್ನು ಬರೆದು ಹಾಡಿದವನು ವೆಂಪಟಾಪು ಸತ್ಯನಾರಾಯಣ. ಈತ, ಇವತ್ತಿಗೂ ತನ್ನ ಕ್ರಾಂತಿಕಾರಿ ಹಾಡುಗಳಿಂದ ಆಂಧ್ರಪ್ರದೇಶದ ಜನ ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಗಾಯಕ, ಕವಿ ಗದ್ದಾರ್ಗೂ ಸಹ ಪ್ರೇರಣೆಯಾದವನು. (ಗದ್ದಾರ್ನಿಂದ ನಮ್ಮ ಕರ್ನಾಟಕದ ದಲಿತ ಸಂಘಟನೆಗಳು ಪ್ರೇರಣೆಗೊಂಡು ಹಾಡು ರಚಿಸಿ ಹಾಡತೊಡಗಿದವು.) ಗಿರಿಜನ ಸಂಘಟನೆಯಿಂದ ಮೇಲ್ವರ್ಗದ ಸಮಾಜದ ಮತ್ತು ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಸತ್ಯನಾರಾಯಣ ಅಂತಿಮವಾಗಿ ಶಿಕ್ಷಕ ವೃತ್ತಿಯನ್ನು ತೊರೆದು, ಗಿರಿಜನರ ಪರವಾಗಿ ನಿಂತನು. ಅವರುಗಳ ವಿಶ್ವಾಸಗಳಿಸಿಕೊಳ್ಳುವ ನಿಟ್ಟಿನಲ್ಲಿ, ಜಟಪು ಮತ್ತು ಸವರ ಎಂಬ ಎರಡು ಆದಿವಾಸಿ ಪಂಗಡಗಳಿಂದ ಇಬ್ಬರು ಹೆಣ್ಣು ಮಕ್ಕಳನ್ನು ವಿವಾಹವಾಗಿ ಅವರ ಜೊತೆ ಬದುಕತೊಡಗಿದನು.

ಗಿರಿಜನರ ಸಂಘಟನೆಯಿಂದಾಗಿ ಸಾಹುಕಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಕೃಷಿಕಾರ್ಮಿಕರ ಕೂಲಿ ಒಂದು ರೂಪಾಯಿನಿಂದ ಎರಡು ರೂಪಾಯಿಗೆ ಹೆಚ್ಚಿತು. ಅದೇ ರೀತಿ. ಜಮೀನ್ದಾರ ಭೂಮಿಯಲ್ಲಿ ಗೇಣಿ ಆಧಾರದ ಮೇಲೆ ದುಡಿಯುತ್ತಿದ್ದ ರೈತರಿಗೆ ಈ ಮೊದಲು ಸಿಗುತ್ತಿದ್ದ ಐದು ಬುಟ್ಟಿ ಭತ್ತದ ಫಸಲಿಗೆ ಬದಲಾಗಿ ಇಪ್ಪತ್ತರಿಂದ, ಇಪ್ಪತ್ತೈದು ಬುಟ್ಟಿ ಭತ್ತ ಸಿಗತೊಡಗಿತು. (56 ಸೇರು ಭತ್ತದ ಪ್ರಮಾಣವನ್ನು ಒಂದು ಬುಟ್ಟಿ ಎಂದು ಕರೆಯುವ ವಾಡಿಕೆ ಆ ಪ್ರದೇಶದಲ್ಲಿ ಜಾರಿಯಲ್ಲಿತ್ತು) ಇವುಗಳ ಜೊತೆ ಜೊತೆಯಲ್ಲಿ ಗಿರಿಜನರೆಲ್ಲಾ ಸತ್ಯನಾರಾಯಣ ನೇತೃತ್ವದಲ್ಲಿ ಸಾಮೂಹಿಕವಾಗಿ ಸಂಘಟಿತರಾದ ಪರಿಣಾಮ, ಪೋಲಿಸರ, ಅರಣ್ಯಧಿಕಾರಿಗಳ ಕಿರುಕುಳ ತಪ್ಪಿತು. ಹೆಬ್ಬೆಟ್ಟಿನ ಸಹಿ ಮೂಲಕ ಅಕ್ರಮವಾಗಿ ಭೂಮಾಲಿಕರ ಪಾಲಾಗಿದ್ದ ಎರಡು ಸಾವಿರ ಎಕರೆ ಭೂಮಿಯನ್ನು ಅವರಿಂದ ಬಲವಂತವಾಗಿ ವಾಪಸ್ ಪಡೆಯುವಲ್ಲಿ ಆದಿವಾಸಿಗಳು ಯಶಸ್ವಿಯಾದರು.

ಪಾಳು ಬಿದ್ದಿದ್ದ ನಾಲ್ಕು ಸಾವಿರ ಸರ್ಕಾರಿ ಭೂಮಿಯನ್ನು ಭೂರಹಿತ ಆದಿವಾಸಿ ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಹಂಚಲಾಯಿತು. ಶಿಕ್ಷಕನಾಗಿದ್ದ ಸತ್ಯನಾರಾಯಣ, ಯಾವುದೇ ಕಮ್ಯೂನಿಷ್ಟ್ ವಿಚಾರಧಾರೆಗಳ ಹಂಗಿಲ್ಲದೆ, ಸತತ ಐದು ವರ್ಷಗಳ ಅವಿರತ ಹೋರಾಟದಿಂದ, ಶ್ರೀಕಾಕುಳಂ ಪ್ರಾಂತ್ಯದ ಭೂಮಾಲಿಕರಿಗೆ ಸಿಂಹಸ್ವಪ್ನವಾದನು. ಬಡವರಿಗೆ, ಕೃಷಿಕಾರ್ಮಿಕರಿಗೆ ಗಿರಿಜನರ ಪಾಲಿಗೆ ಆಶಾಕಿರಣವಾದನು. ಇದು ಸಹಜವಾಗಿ ಆಂಧ್ರದ ಕಮ್ಯೂನಿಷ್ಟ್ ನಾಯಕರ ಗಮನ ಸೆಳೆಯಿತು. ತೆಲಂಗಾಣ ರೈತರ ಹೋರಾಟವೆಂದು, ಪ್ರಸಿದ್ಧಿಯಾಗಿದ್ದ ಈ ಹೋರಾಟ ನಂತರ ನಕ್ಸಲ್ ಹೋರಾಟವಾಗಿ ಪರಿವರ್ತನೆ ಹೊಂದಿತು. ಈ ವೇಳೆಗೆ ಪಂಚಡಿ ಕೃಷ್ಣಮೂರ್ತಿ, ಸಿ.ತೇಜೇಶ್ವರರಾವ್, ಎಂಬ ಮುಖಂಡರು, ಸತ್ಯನಾರಾಯಣರಿಗೆ ಕೈ ಜೋಡಿಸಿದರು. ನೆರೆಯ ಒರಿಯಾದ ಪ್ರಸಿದ್ಧ ಕವಿ ಸುಬ್ಬರಾವ್ ಪ್ರಾಣಿಗ್ರಹಿ ಎಂಬುವರು, ಒರಿಸ್ಸಾದಲ್ಲಿ ತಮ್ಮ ಜಮುಕಲಾ ಕಥಾ ಎಂಬ ಹೆಸರಿನಲ್ಲಿ, ಸ್ಥಳೀಯ ಗಿರಿಜನರ ಸಮಸ್ಯೆಗಳನ್ನು ಜನಪದ ಶೈಲಿಯಲ್ಲಿ ಹಾಡು ಕಟ್ಟಿ ಸಂಘಟನೆಗೆ ನೆರವಾಗಿದ್ದರು. ಅದೇ ಪ್ರಯೋಗವನ್ನು ಇಲ್ಲಿ ಮುಂದುವರಿಸಿದರು. ಇವರ ನಡುವೆ ಅಪ್ಪಲಸೂರಿ ಎಂಬ ಮತ್ತೊಬ್ಬ ಮುಖಂಡ ನಗರಗಳಿಗೆ ಹೋಗಿ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮನವೊಲಿಸಿ ನಕ್ಸಲ್ ಸಂಘಟನೆಗೆ ಕರೆತಂದು ಮತ್ತಷ್ಟು ಹುರುಪು ತುಂಬಿದನು.

ಇವೆಲ್ಲವುಗಳ ಪರಿಣಾಮ, ಶ್ರೀಕಾಕುಳಂ ಜಿಲ್ಲೆಯ ಗಿರಿಜನರ ಸಂಘಟನೆ ಬಲಿಷ್ಟವಾಯಿತು. 1967 ರ ಅಕ್ಟೋಬರ್ 31 ರಂದು ಸಂಭವಿಸಿದ ಒಂದು ಘಟನೆ ಸಂಘಟನೆಯ ಹೋರಾಟಕ್ಕೆ ಹೊಸತಿರುವು ನೀಡಿತು. ಕಮ್ಯೂನಿಷ್ಟ್ ಪಕ್ಷದ ಸಭೆಗೆ ಹೋಗುತ್ತಿದ್ದ 800 ಗಿರಿಜನರ ಸದಸ್ಯರಿದ್ದ ಗುಂಪಿನ ಮೇಲೆ ಲೆವೆಡಿ ಎಂಬ ಹಳ್ಳಿಯೊಂದರಲ್ಲಿ ಭೂಮಾಲಿಕರ ಗೂಂಡಾಪಡೆ ಗುಂಡು ಹಾರಿಸಿ, ಇಬ್ಬರನ್ನು ಬಲಿ ತೆಗೆದುಕೊಂಡಿತು. ಆದಿನ ಗಿರಿಜನರ ಗುಂಪು ಗುಂಡೇಟಿನಿಂದ ಸತ್ತವರ ಎದೆಯ ಮೇಲೆ ಕೈಯಿಟ್ಟು ಇದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿತು. ಆ ಕ್ಷಣದಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟದ ಇತಿಹಾಸಕ್ಕೆ ರಕ್ತಸಿಕ್ತದ ಹೊಸ ಅಧ್ಯಾಯವೊಂದು ಸೇರ್ಪಡೆಯಾಯಿತು.

ವೆಂಪಟಾಪು ಸತ್ಯನಾರಾಯಣ, 800 ಗಿರಿಜನರ ಪಡೆಯೊಂದನ್ನು ಕಟ್ಟಿ, ಅದನ್ನು ತಲಾ ನೂರು ಜನರ 8 ದಳಗಳನ್ನು ವಿಭಜಿಸಿದ. ಅವರಿಗೆ ಹೋರಾಟದ ಕೆಚ್ಚನ್ನು ಮತ್ತು ಸ್ಥೈರ್ಯವನ್ನು ತುಂಬಿದ. ಇದರ ಪರಿಣಾಮ, 1968 ರ ಅಕ್ಟೋಬರ್ 23 ರಂದು ಸೊಂಪೇಟ ತಾಲ್ಲೋಕಿನ ಬೊದ್ದಪಡು ಎಂಬ ಗ್ರಾಮಕ್ಕೆ ನುಗ್ಗಿದ ಹೋರಾಟಗಾರರು, ಜಮೀನ್ದಾರರ ಮನೆಯಲ್ಲಿದ್ದ ಭತ್ತ, ಹಣವನ್ನು ಲೂಟಿ ಮಾಡಿದರು. ಮತ್ತೇ ಒಂದು ತಿಂಗಳಿನ ನಂತರ ತೆಕಳಿ ತಾಲೂಕಿನ ಗರುಡಬಾದ್ರ ಎಂಬ ಊರಿನ ಮೇಲೆ ದಾಳಿ ಮಾಡಿ, ಅಲ್ಲಿನ ಸಾಹುಕಾರರು, ಜಮೀನ್ದಾರರು, ಅವರ ಗೂಂಡಾಪಡೆಯನ್ನು ಥಳಿಸಿ, ಧವಸ, ಧಾನ್ಯ, ಹಣ, ಆಭರಣ, ಮತ್ತು ಬಂದೂಕಗಳನ್ನು ದೋಚಿದರು. ಪ್ರತಿಯೊಂದು ದಳಕ್ಕೂ ಸತ್ಯನಾರಾಯಣ, ಪಂಚಡಿ ಕೃಷ್ಣಮೂರ್ತಿ, ತಮ್ಮಡ ಗಣಪತಿ ಅಪ್ಪಾಲ್ ಸೂರಿ, ತೇಜೇಶ್ವರರಾವ್, ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು. ಒಂದು ವರ್ಷದ ಅವಧಿಯಲ್ಲಿ ನಡೆದ ನೂರಕ್ಕು ಹೆಚ್ಚು ದಾಳಿಗಳಿಂದ, ಭೂಮಾಲಿಕರು, ಹಣದ ಲೇವಾದೇವಿಗಾರರು, ಮತ್ತು ಅವರು ಸಾಕಿಕೊಂಡಿದ್ದ ಗೂಂಡಾ ಸದಸ್ಯರು, ಎಲ್ಲರೂ ತತ್ತರಿಸಿಹೋದರು. ದಾಳಿಯ ಜೊತೆಜೊತೆಯಲ್ಲಿ ಪೊಲೀಸರ ಜೊತೆ ನಡೆದ ಸಂಘರ್ಷದಲ್ಲಿ ಇಬ್ಬರು ಇನ್ಸಪೆಕ್ಟರ್‌ಗಳು ಸೇರಿದಂತೆ 31 ಮಂದಿ ಪೊಲೀಸರು ಹತರಾದರು.

ಶ್ರೀಕಾಕುಳಂ ಹೋರಾಟದ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ, 1969 ರ ಮಾರ್ಚ್ ತಿಂಗಳಿನಲ್ಲಿ ಶ್ರೀಕಾಕುಳಂ ಜಿಲ್ಲೆಗೆ ಭೇಟಿ ನೀಡಿದ ಚಾರು ಮುಜಂದಾರ್, ಹೋರಾಟಗಾರರಿಗೆ ಅಗತ್ಯವಾದ ಶಸ್ರಾಸ್ತ್ರಗಳನ್ನು ನೀಡಿದುದಲ್ಲದೆ, ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿಗೆ ವ್ಯವಸ್ಥೆ ಮಾಡಿದ. ಚಾರು ಮುಜಂದಾರ್ ಭೇಟಿಯಿಂದ ಶ್ರೀಕಾಕುಳಂ ಹೋರಾಟಕ್ಕೆ ಹೊಸ ತಿರುವು ಸಿಕ್ಕಿತು. ಎಣ್ಣೆಯಲ್ಲಿ ಅದ್ದಿದ್ದ ದೊಂದಿಗೆ (ಪಂಜು) ಕಿಡಿ ತಗುಲಿದಂತಾಯಿತು. ಹತ್ತಿ ಉರಿದ ಹೋರಾಟದ ಈ ದೊಂದಿ, ಅವರೆಗೆ ಕಗ್ಗತ್ತಲಲ್ಲಿದ್ದ ಅಮಾಯಕ ಗಿರಿಜನರ ಪಾಲಿಕೆ ಬೆಳಕಾದರೆ, ಶೋಷಣೆ ಮಾಡುತ್ತಿದ್ದ ಭೂಮಾಲಿಕರ ಪಾಲಿಗೆ ಮೈಸುಡುವ ಬೆಂಕಿಯಾಯಿತು. ಅಲ್ಪಾವಧಿಯಲ್ಲಿ ನಕ್ಸಲ್ ಹೋರಾಟ ಆಂಧ್ರದ ತೆಲಂಗಾಣ ಮತ್ತು ಶ್ರೀಕಾಕುಳಂ ಪ್ರಾಂತ್ಯದ ಮುನ್ನೂರು ಹಳ್ಳಿಗಳಿಗೆ ವ್ಯಾಪಿಸಿತು.

1969 ರ ಮಾರ್ಚ್ ತಿಂಗಳಿನಿಂದ ಡಿಸಂಬರ್‌‍ವರೆಗೆ ಭೂಮಾಲಿಕರ ಮನೆಯ ಮೇಲೆ 40 ದಾಳಿಗಳು ಮತ್ತು 29 ಭೂಮಾಲಿಕರ ಹಾಗೂ ಲೇವಾದೇವಿದಾರರ ಹತ್ಯೆಗಳು ಸಂಭವಿಸಿದವು. 1969 ರ ಮೇ 26 ರ ರಾತ್ರಿ ಲಹೋರಿಜೋಲ ಎಂಬ ಹಳ್ಳಿಯ ಮೇಲೆ ದಾಳಿ ಇಟ್ಟ 600 ಮಂದಿ  ಹೋರಾಟಗಾರರು, ಅಂಗಾರು ಇಂದುವದನ ನಾಯ್ಡು ಎಂಬ ಜಮೀನ್ದಾರನ ಮನೆಗೆ ನುಗ್ಗಿ ಆತನ ಪತ್ನಿ ಎದುರು ಕತ್ತು ಕೊಯ್ದು ಹತ್ಯೆ ಮಾಡಿದರು. (ಈತ ತನ್ನ ಗೂಂಡಾ ಪಡೆಯ ಮೂಲಕ ಗಿರಿಜನರ ಮೇಲೆ ಗುಂಡು ಹಾರಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದವನು) ಅಲ್ಲದೆ ಅವನ ನೆತ್ತರಿನಲ್ಲಿ ತಮ್ಮ ಹಸ್ತಗಳನ್ನು ಅದ್ದಿ ಮನೆಯ ಹೊರಭಾಗದ ಗೋಡೆಯ ಮೇಲೆ ಅವುಗಳ ಅಚ್ಚು ಮೂಡಿಸಿದರು. ಅವರ ಸಿಟ್ಟು ಮತ್ತು ಅಮಾನುಷವಾದ ಈ ಕೃತ್ಯದಲ್ಲಿ ಶತಶತಮಾನಗಳಿಂದ ಅವರು ಅನುಭವಿಸಿದ, ಶೋಷಣೆಯ ನೋವುಗಳಿದ್ದವು, ಅವರ ಹೆಂಡತಿಯರು ಮತ್ತು ಅಕ್ಕ ತಂಗಿಯರ ಅತ್ಯಾಚಾರದ ನೆನಪುಗಳಿದ್ದವು. ಮತ್ತೇ ಜೂನ್ ತಿಂಗಳಿನಲ್ಲಿ ಅಕ್ಕುಪಲ್ಲಿ ಎಂಬ ಊರಿನ ಬಡ್ಡಿ ವ್ಯಾಪಾರಿ ಭೂಚಂದ್ರರಾವ್ ಎಂಬಾತನ ಮನೆಗೆ ನುಗ್ಗಿದ ಮಹಿಳಾ ಸದಸ್ಯರನ್ನು ಒಳಗೊಂಡಿದ್ದ ತಂಡ, ಆತನನ್ನೂ ಸಹ ಪತ್ನಿಯ ಎದುರು ಹತ್ಯೆಗೈದು, ಗಿರವಿ ಇಟ್ಟುಕೊಂಡಿದ್ದ ಗಿರಿಜನ ಚಿನ್ನಾಭರಣಗಳನ್ನು ದೋಚಲಾಯಿತು. ಈ ದಾಳಿಯ ನೇತೃತ್ವವನ್ನು ಪಂಚಡಿ ನಿರ್ಮಲ ಎಂಬಾಕೆ ವಹಿಸಿಕೊಂಡಿದ್ದಳು. ಹೀಗೆ ನಿರಂತರ ನಡೆದ ದಾಳಿಯಿಂದ ಬೆಚ್ಚಿ ಬಿದ್ದ ಭೂಮಾಲಿಕರು, ಸಾಹುಕಾರರು, ಅವರಿಗೆ ಬೆಂಗಾವಲಿಗೆ ಇದ್ದ ಗೂಂಡಾಗಳು ತಮ್ಮ ಮನೆ, ಜಮೀನು, ಎಲ್ಲವನ್ನು ಬಿಟ್ಟು ರಾತ್ರೋರಾತ್ರಿ ಊರು ಖಾಲಿ ಮಾಡಿ, ಪಟ್ಟಣ ಮತ್ತು ನಗರಗಳನ್ನು ಸೇರಿಕೊಂಡರು. ಬಹುತೇಕ ಈ ಎಲ್ಲಾ ಘಟನೆಗಳು, ಶ್ರೀಕಾಕುಳಂ ಜಿಲ್ಲೆ ಪಾರ್ವತಿಪುರ, ಸೊಂಪೇಟ, ತಕಾಳಿ ತಾಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ಜರುಗಿದ್ದು ವಿಶೇಷ.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-7)


– ಡಾ.ಎನ್.ಜಗದೀಶ್ ಕೊಪ್ಪ


 

Dignitaries fell Wrapped in their togas of worm-eaten mud, nameless people shouldered spears, tumbled the walls, nailed the tyrant to his golden door.  – Pablo Neruda

“ಶ್ರೀಕಾಕುಳಂ” ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿ ಸಮೃದ್ಧ ಹಸಿರು, ಅರಣ್ಯ, ಮತ್ತು ಗುಡ್ಡಗಾಡುಗಳಿಂದ ಆವೃತ್ತವಾಗಿರುವ, ಪೂರ್ವ ಕರಾವಳಿಯ ಒಂದು ಜಿಲ್ಲೆ. ಶೇ. 60ಕ್ಕೂ ಹೆಚ್ಚು ಮಂದಿ ಅರಣ್ಯವಾಸಿಗಳಾದ (ಜಟಪು ಜನಾಂಗ) ಗಿರಿಜನರಿಂದ ಕೂಡಿರುವ ಈ ನೆಲ ಸ್ವಾತಂತ್ರ್ಯ ಪೂರ್ವದಿಂದಲೂ ಎಲ್ಲಾ ವಿಧವಾದ ಅಭಿವೃದ್ಧಿ ಮತ್ತು ಸವಲತ್ತುಗಳಿಂದ ವಂಚಿತವಾಗಿರುವ ನತದೃಷ್ಟರನಾಡು. ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಿಂದ 650 ಕಿಲೋಮೀಟರ್ ದೂರದಲ್ಲಿರುವ ಈ ಜಿಲ್ಲೆ, ತನ್ನ ಉತ್ತರಭಾಗದ ಈಶಾನ್ಯಕ್ಕೆ ಒರಿಸ್ಸಾ, ವಾಯುವ್ಯ ಭಾಗಕ್ಕೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡ, ಪಶ್ಚಿಮಕ್ಕೆ ಮಹರಾಷ್ಟ್ರ, ಪೂರ್ವಕ್ಕೆ ಕರಾವಳಿ ಪ್ರದೇಶವನ್ನು ಹೊಂದಿದ್ದು, ತನ್ನ ಒಡಲೊಳಗೆ ಸಮೃದ್ಧವಾದ ಖನಿಜ ಸಂಪತ್ತು, ಅರಣ್ಯ ಸಂಪತ್ತು, ಹೊಂದಿರುವಂತೆ, ತನ್ನ ಚರಿತ್ರೆಯ ಪುಟಗಳಲ್ಲಿ ರಕ್ತಸಿಕ್ತ ಅಧ್ಯಾಯಗಳನ್ನು ಸಹ ಹೊಂದಿದೆ.

“ಶ್ರೀಕಾಕುಳಂ” ಎಂದರೆ, ಚರಿತ್ರೆಯಲ್ಲಿ ಒಂದು ಅಳಿಸಲಾರದ ಹೆಸರು, ಭಾರತದ ಭವಿಷ್ಯದ ಚರಿತ್ರೆಯ ಸಂಪುಟ, ಕ್ರಾಂತಿಕಾರಿಗಳ ಉಕ್ಕಿನ ಕೋಟೆ ಎಂದೆಲ್ಲಾ ನಕ್ಸಲ್ ಚಳವಳಿಯ ಸಂಸ್ಥಾಪಕ ಚಾರು ಮುಜಂದಾರ್‌ನಿಂದ ಹೊಗಳಿಸಿಕೊಂಡ ಈ ಜಿಲ್ಲೆಯ ನೆಲದ ಇತಿಹಾಸ ತಿಳಿಯದೇ ಹೋದರೆ, ಅಲ್ಲಿನ ಹಿಂಸೆ ಮತ್ತು ಹೋರಾಟದ  ಐತಿಹಾಸಿಕ ಕಥನ ಅರ್ಥವಾಗುವುದು ಕಷ್ಟ. ವಿಶಾಖಪಟ್ಟಣದದಿಂದ 50 ಕಿ.ಮಿ. ದೂರದಲ್ಲಿರುವ ವಿಜಯನಗರಂ ಎಂಬ ರೈಲು ನಿಲ್ದಾಣದಿಂದ ಬೆಳಗಿನ ಜಾವ ರಾಜಮಂಡ್ರಿ ಗೆಳೆಯರಿಗೆ ವಿದಾಯ ಹೇಳಿ, ಶ್ರೀಕಾಕುಳಂ ಜಿಲ್ಲೆಯತ್ತ ನಾನು ಪ್ರಯಾಣ ಹೊರಟಾಗ ನನ್ನ ತಲೆಯಲ್ಲಿ ಕಲ್ಪನೆ ಇದ್ದದ್ದು, ಅದೊಂದು ನಮ್ಮ ರಾಜ್ಯದಲ್ಲಿ ವಂಚಿತವಾಗಿರುವ ಉತ್ತರ ಕರ್ನಾಟಕದ ಕಪ್ಪುಭೂಮಿ ಹಾಗೂ ಜಾಲಿ ಮರಗಳ ಒಣ ಪ್ರದೇಶದ ನೀರಿನಿಂದ ವಂಚಿತವಾಗಿರುವ ಜಿಲ್ಲೆಯಂತೆ ಇರಬಹುದಾದ ಜಿಲ್ಲೆ ಎಂದು ಅಲ್ಲಿಗೆ ಕಾಲಿಟ್ಟ ಕ್ಷಣ ನನಗೆ ಆಶ್ಚರ್ಯವಾಯಿತು. ನನ್ನ ನೆಲವಾದ ಅಲ್ಲಿಂದ ಒಂದೂವರೆ ಸಾವಿರ ಕಿ.ಮಿ. ದೂರದ ಮಂಡ್ಯದ ನೆಲದಲ್ಲೇ ನಾನು ಇದ್ದೀನಿ ಎಂಬ ಭಾವನೆ ಮೂಡತೊಡಗಿತು.

ಎಲ್ಲೆಲ್ಲೂ ಭತ್ತದ ಗದ್ದೆಗಳು, ತುಂಬಿ ಹರಿಯುವ ಕಾಲುವೆಗಳು, ಆಲೆಮನೆ ಮತ್ತು ಸಕ್ಕರೆ ಕಾರ್ಖಾನೆ ಸಾಗುತ್ತಿದ್ದ ಕಬ್ಬು ತುಂಬಿದ ಜೊಡೆತ್ತಿನ ಗಾಡಿಗಳು, ಬತ್ತದ ಗದ್ದೆಯಲ್ಲಿ ನಡುಬಗ್ಗಿಸಿ ಕಳೆ ಕೀಳುತ್ತಿದ್ದ, ನನ್ನಕ್ಕ ತಂಗಿಯರಂತಹ ಬಡ ಹೆಣ್ಣು ಮಕ್ಕಳು, ಅಲ್ಲಲ್ಲಿ ಹಸಿರು ಗುಡ್ಡ, ಚಿಕ್ಕದಾದರೂ, ಚೊಕ್ಕವಾದ ಬಾಳೆ ಮತ್ತು ತೆಂಗಿನ ಗಿಡಗಳಿಂದ ಕೂಡಿದ ತೋಟಗಳು ಇವೆಲ್ಲವೂ ನಾನು ಈ ನೆಲಕ್ಕೆ ಪರಕೀಯ ಎಂಬ ಭಾವನೆಯನ್ನು ಅಳಿಸಿ ಹಾಕಿದವು. ಆದರೆ, ಹಳ್ಳಗಳಿಗೆ ಕಾಲಿಟ್ಟ ತಕ್ಷಣ ಆಂಧ್ರ ಸಂಸ್ಕೃತಿ ಮತ್ತು ಅಲ್ಲಿನ ಗುಡ್ಡಗಾಡು ಜನರ ಜನರ ಸಂಸ್ಕೃತಿ ಎದ್ದು ಕಾಣುತ್ತದೆ. ಪ್ರತಿ ಊರಿನಲ್ಲೂ ನೆಲಬಾವಿಗಳು, ಅವುಗಳ ಸುತ್ತಾ ಕೆತ್ತಿದ ಕಲ್ಲಿನಲ್ಲಿ ಕಟ್ಟಿರುವ ಸುಂದರ ತಡೆಗೋಡೆಗಳು, ಜೊತೆಗೆ ನೆಲಕ್ಕೆ ಹಾಸಿರುವ ಕಲ್ಲು ಚಪ್ಪಡಿಯ ಹಾಸುಗೆಗಳು, ಅಲ್ಲಿಯೇ ಕುಳಿತು. ಬಾವಿಯಲ್ಲಿ ನೀರು ಸೇದಿಕೊಂಡು ಯಾವ ಸಂಕೋಚವಿಲ್ಲದೆ, ಸ್ನಾನ ಮಾಡುವ ಹೆಂಗಸರು, ಪ್ರತಿ ಊರಿನಲ್ಲಿ ಎದುರಾಗುವ ಆಂಜನೇಯನ ಗುಡಿಗಳು, ಅವುಗಳ ಮೇಲೆ ಆಳೆತ್ತರಕ್ಕೆ ಎದೆ ಸೀಳುತ್ತಾ ನಿಂತಿರುವ, ಸೀಮೆಂಟ್‌ನಿಂದ ತಯಾರಾದ ಆಂಜನೇಯನ ಮೂರ್ತಿಗಳು, ಅವುಗಳಿಗೆ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಬಳಿದಿರುವ ಕಡುಬಣ್ಣ ಇವುಗಳು ಮಾತ್ರ ಪಕ್ಕಾ ಆಂಧ್ರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಅಂಶಗಳು.

ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶವನ್ನು ಅಲ್ಲಿನ  ಜನ ಹೆಮ್ಮೆಯಿಂದ ವಿಶಾಲಾಂಧ್ರವೆಂದು ಕರೆಯುತ್ತಾರೆ. ಆದರೆ, ವಾಸ್ತವವಾಗಿ ಅಲ್ಲಿ ಅಸ್ತಿತ್ವದಲ್ಲಿರುವುದು ಮೂರು ಆಂಧ್ರಗಳು. ಒಂದು, ಕಡಪ, ಅನಂತಪುರ, ನೆಲ್ಲೂರು, ಚಿತ್ತೂರು ಜಿಲ್ಲೆಗಳನ್ನು ಒಳಗೊಂಡ ರಾಯಲಸೀಮೆ, ಇದು ರೆಡ್ಡಿ ಜನಾಂಗದ ಪ್ರದೇಶ. ಎರಡನೇಯದು ತೆಲಂಗಾಣವೆಂದು ಕರೆಸಿಕೊಳ್ಳುವ ಮಧ್ಯಭಾಗದ ಆಂಧ್ರಪ್ರದೇಶವಾದ ಕಮ್ಮ ಜನಾಂಗ ಪ್ರಭಾವವಿರುವ, ಮೇಡಕ್, ಸಂಗರೆಡ್ಡಿ, ಕಮ್ಮಮಂ, ಕರೀಂನಗರ, ವಾರಂಗಲ್, ನಲ್ಗೊಂಡ, ಮುಂತಾದ ಜಿಲ್ಲೆಗಳು ಈ ಪ್ರಾಂತ್ಯಕ್ಕೆ ಸೇರುತ್ತವೆ. ಕೃಷ್ಣಾ ನದಿ ಮತ್ತು ಗೋದಾವರಿ ನದಿ ತೀರದ ಜಿಲ್ಲೆಗಳಾದ ವಿಜಯವಾಡ, ರಾಜಮಂಡ್ರಿ, ಅದಿಲಾಬಾದ್, ಇವುಗಳು ಕೂಡ ತೆಲಂಗಾಣ ಪ್ರಾಂತ್ಯಕ್ಕೆ ಸೇರುತ್ತವೆ. ಸಾಂಸ್ಕೃತಿಕವಾಗಿ ಮತ್ತು ರಾಜಕೀಯ ಹಾಗೂ ಸಾಮಾಜಿಕವಾಗಿ ಭಿನ್ನತೆ ಇರುವುದು, ಗೋದಾವರಿ ನದಿಯಾಚೆಗಿನ ಜಿಲ್ಲೆಗಳಲ್ಲಿ. ಅಂದರೆ, ವಿಶಾಖಪಟ್ಟಣ, ಪೂರ್ವಗೋದಾವರಿ ಜಿಲ್ಲೆ, ಶ್ರೀಕಾಕುಳಂ ಜಿಲ್ಲೆಗಳಲ್ಲಿ.

ಈ ಪ್ರದೇಶಗಳ ಗುಡ್ಡಗಾಡುಗಳಲ್ಲಿ ಅತ್ಯಧಿಕ ಮಂದಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗ ವಾಸಿಸುತ್ತಿದ್ದು, ಈ ನೆಲದ ಸಂಸ್ಕೃತಿಯನ್ನು ಇವತ್ತಿಗೂ ಜೀವಂತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇವರಲ್ಲಿ ಪ್ರಮುಖ ಜನಾಂಗಗಳೆಂದರೆ, ಗೊಂಡ, ಕೊಂಡರೆಡ್ಡಿ, ಚೆಂಚು, ಮರಿಯ, ಜಟಪು, ಸವರ, ತೋಲಂ, ಕೋಯ ಮುಖ್ಯವಾದವುಗಳು. ಇವರನ್ನು ಗುರುತಿಸಿ ಹೊರಜಗತ್ತಿಗೆ ಪರಿಚಯಿಸಿದ  ಕೀರ್ತಿ ಪ್ರಖ್ಯಾತ ಸಮಾಜಶಾಸ್ತ್ರಜ್ಙ ವೇರಿಯನ್‌ ಎಲ್ವಿನ್‌ಗೆ ಸಲ್ಲಬೇಕು. ಒಂದು ಕಾಲದಲ್ಲಿ ಮಳೆಯನ್ನು ಆಶ್ರಯಿಸಿಕೊಂಡು, ಒಣ ಭೂಮಿಯಾಗಿದ್ದ ಈ ನೆಲಕ್ಕೆ ನೀರುಣಿಸಿ, ಇಲ್ಲಿನ ಭೂಮಿಯನ್ನು ಹಸನುಗೊಳಿಸಿದವನು, ಬ್ರಿಟಿಷ್ ಸರ್ಕಾರದಲ್ಲಿ ಮುಖ್ಯಇಂಜೀಯರ್ ಆಗಿ ಮದ್ರಾಸ್ ಪ್ರಾಂತ್ಯಕ್ಕೆ ನೆರೆಯ ಬರ್ಮಾದಿಂದ 1821 ರಲ್ಲಿ ಬಂದ ಸರ್ ಅರ್ಥರ್‌ ಕಾಟನ್. ಅನಾವಶ್ಯಕವಾಗಿ ಕೃಷ್ಣ ಮತ್ತು ಗೋದಾವರಿ ನದಿಯ ನೀರು ಸಮುದ್ರ ಸೇರುತ್ತಿರುವುದನ್ನು ಗಮನಿಸಿ, ಈ ಎರಡು ನದಿಗಳಿಗೆ ಅಣೆಕಟ್ಟು ನಿರ್ಮಿಸಿದ ಮಹಾನುಭಾವ ಈತ. 1851 ರಿಂದ 1855 ರ ನಡುವೆ ಸ್ವತಃ ಹಲವಾರು ಬಾರಿ ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ರಾಣಿ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮನವೊಲಿಸಿ, 12 ಸಾವಿರ ಪೌಂಡ್ ಹಣವನ್ನು ತಂದು, ನೀರಾವರಿ ಯೋಜನೆಗಳ ನೀಲನಕ್ಷೆ ತಯಾರಿಸಿ, ತಾನೇ ಸ್ವತಃ ನಿಂತು ಕೃಷ್ಣಾನದಿಗೆ ಮತ್ತು ಗೋದಾವರಿ ನದಿಗೆ ತಲಾ ಒಂದೊಂದು ಅಣೆಕಟ್ಟನ್ನು ನಿರ್ಮಿಸಿದ.

1860 ರಲ್ಲಿ ನಿವೃತ್ತಿಯ ನಂತರ ಕಾಟನ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿ ಹೋದರೂ, ಇಲ್ಲಿ ಜನತೆ ಆತನನ್ನು ಮತ್ತು ಅವನ ಋಣವನ್ನು ಮರೆಯಲಿಲ್ಲ. 1900 ರಲ್ಲಿ ರಾಜಮಂಡ್ರಿ ಪಟ್ಟಣದ ಸಮೀಪ ಹರಿಯುವ ಗೋದಾವರಿ ನದಿಗೆ ನಿರ್ಮಿಸಲಾದ ಒಂದೂವರೆ ಕಿ.ಮಿ.ಉದ್ದದ ರೈಲ್ವೆ ಸೇತುವೆಗೆ ಅರ್ಥರ್‌ ಕಾಟನ್‌ನ ಹೆಸರನ್ನು ನಾಮಕರಣ ಮಾಡಿದರು. ಅದು ಶಿಥಿಲಗೊಂಡ ನಂತರ 1987 ರಲ್ಲಿ ಮತ್ತೊಂದು ಹೊಸ ಸೇತುವೆಯನ್ನು ಸಹ (ಕಮಾನು ಸೇತುವೆ) ನಿರ್ಮಿಸಲಾಗಿದೆ. ಇಲ್ಲಿನ ಜನತೆ ಅರ್ಥರ್‌ ಕಾಟನ್ ದೂರದೃಷ್ಟಿ ಯೋಜನೆಗಳಿಂದ ತಮ್ಮ ಭೂಮಿಗೆ ನೀರನ್ನು ಕಂಡರೂ ಸಹ ಹೈದರಾಬಾದ್‌ನ ನಿಜಾಮ ಮತ್ತು ಸ್ಥಳೀಯ ಪಾಳೇಗಾರರು, ಜಮೀನ್ದಾರರು ಇವರುಗಳ ಕಿರುಕುಳದ ಕಾರಣದಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಲ್ಲಲು ಸಾಧ್ಯವಾಗಲೇ ಇಲ್ಲ.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ  ಜಗತ್ತಿನ ಅತೀ ಶ್ರೀಮಂತರುಗಳ ಪೈಕಿ ಒಬ್ಬನಾಗಿದ್ದ ಹೈದರಾಬಾದಿನ ಏಳನೇ ನಿಜಾಮ ವಾರ್ಷಿಕವಾಗಿ 25 ಲಕ್ಷರೂಪಾಯಿಗಳನ್ನು ಪಾಳೇಗಾರರು ಮತ್ತು ಜಮೀನ್ದಾರರಿಂದ ಭೂಮಿಯ ಕಂದಾಯ ರೂಪದಲ್ಲಿ ಆದಾಯ ಪಡೆಯುತ್ತಿದ್ದ. ಬಿಟಿಷ್ ಸರ್ಕಾರ ವೇರಿಯರ್ ಎಲ್ವಿನ್ ನೀಡಿದ್ದ ವರದಿಗೆ ಸ್ಪಂದಿಸಿ, ಆದಿವಾಸಿಗಳಿಗೆ, ಅರಣ್ಯ ಭೂಮಿಯ ಹಕ್ಕನ್ನು ದಯಪಾಲಿಸಿತ್ತು. ಆದರೆ, ಅಕ್ಷರ ಲೋಕದಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗಕ್ಕೆ ಭೂಮಿಯ ದಾಖಲೆ ಅಂದರೆ, ಏನು, ಹಕ್ಕು ಎಂದರೆ ಏನು ಎಂಬುದು ಅರ್ಥವಾಗುವುದರೊಳಗೆ  ಅವೆಲ್ಲವೂ ಪಟ್ಟಭದ್ರ ಹಿತಾಶಕ್ತಿಗಳ ಪಾಲಾಗಿದ್ದವು. ಅತ್ಯಂತ ಸ್ವಾರ್ಥ ಮತ್ತು ಕ್ರೂರಿಯಾಗಿದ್ದ ಈ ನಿಜಾಮ ಎಂದೂ ಸಹ ತನ್ನ ಅರಮನೆಗೆ ಯಾವುದೇ ಅತಿಥಿಗಳನ್ನು ಆಹ್ವಾನಿಸದ ವಿಚಿತ್ರ ವ್ಯಕ್ತಿತ್ವ ಹೊಂದಿದವನಾಗಿದ್ದ. ಅವನ ವೈಭೋಗದ ಬದುಕಿಗೆ ಈಗ ಹೈದರಾಬಾದ್ ನಗರದಲ್ಲಿರುವ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರೆ, ಸಾಕು. ಜಗತ್ತಿನ ಎಲ್ಲಾ ವಿಧವಾದ ಶ್ರೇಷ್ಠ ಕೃತಿಗಳು, ವಸ್ತುಗಳು ಅಲ್ಲಿ ಸಂಗ್ರಹವಾಗಿವೆ. ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸಂಗ್ರಹವಾಗಿರುವ ಇವುಗಳನ್ನು ವೀಕ್ಷಿಸಲು ಕನಿಷ್ಟ ಒಂದು ದಿನವಾದರೂ ಬೇಕು.

ಇವತ್ತಿಗೂ ಭಾರತದಲ್ಲಿ ನಕ್ಸಲ್ ಚಳವಳಿ ಆರಂಭವಾದದ್ದು ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಹಳ್ಳಿಯ ಮೂಲಕ ಎಂದು ಪ್ರತಿಬಿಂಬಿಸಿಕೊಂಡು ಬರಲಾಗುತ್ತಿದೆ. ಇದು ಅರ್ಧಸತ್ಯ ಮಾತ್ರ. ನಿಜವಾದ ನಕ್ಸಲ್ ಹೋರಾಟದ ಮೂಲ ಬೇರುಗಳು ಇರುವುದು ಆಂಧ್ರದ “ಶ್ರೀಕಾಕುಳಂ” ಜಿಲ್ಲೆಯಲ್ಲಿ. ಅದರಲ್ಲೂ ಪಾರ್ವತಿಪುರ ಎಂಬ ತಾಲೂಕು ಕೇಂದ್ರದಲ್ಲಿ. ಇದು ಪ್ರಪಥಮ ಬಾರಿಗೆ ಹೋರಾಟಕ್ಕೆ ನಾಂದಿ ಹಾಡಿದ ನೆಲ. ಸಿಲಿಗುರಿ ಪ್ರಾಂತ್ಯದ ನಕ್ಸಲ್ ಬಾರಿಯಲ್ಲಿ ಹೋರಾಟ ಆರಂಭಗೊಂಡಿದ್ದು 1967 ರಲ್ಲಿ ಆದರೆ, ಅದಕ್ಕೂ ಮುನ್ನ 1961 ರಲ್ಲಿ ಯಾವುದೇ ಕಮ್ಯೂನಿಷ್ಟ್ ಸಿದ್ಧಾಂತಗಳ ಹಂಗಿಲ್ಲದೆ ಇಲ್ಲಿನ ಗಿರಿಜನ ಜಮೀನ್ದಾರರ ವಿರುದ್ಧ ಹೋರಾಟ ಆರಂಭಿಸಿದ್ದರು. 1967 ರ ನಂತರ ಈ ಪ್ರದೇಶಕ್ಕೆ ಭೇಟಿ ನೀಡಿದ ಚಾರು ಮುಜಂದಾರ್, ಇಲ್ಲಿನ ಹೋರಾಟದ ಅಸ್ತಿಪಂಜರಕ್ಕೆ ಕಮ್ಯೂನಿಷ್ಟ್ ವಿಚಾರಗಳ, ಮಾಂಸ ಮತ್ತು ಮಜ್ಜೆಯನ್ನು ತುಂಬಿದ.

ಶ್ರೀಕಾಕುಳಂ ನೆಲದ ಕಪ್ಪು ಇತಿಹಾಸದಲ್ಲಿ ಹಲವಾರು ನೆತ್ತರಿನ ಅಧ್ಯಾಯಗಳಿವೆ. ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ರಕ್ತದ ಕೋಡಿಯನ್ನು ಹರಿಸಿ, ನಂತರ ಹಿಂಸೆಯನ್ನು ತ್ಯಜಿಸಿ, ಆನಂತರ ಅಹಿಂಸೆಯ ಮಾರ್ಗ ಹಿಡಿದು ಬೌದ್ಧ ಧರ್ಮ ಸ್ವೀಕಾರ ಮಾಡಿದಾಗ ಆ ಘಟನೆಗೆ ಈ ನೆಲ ಸಾಕ್ಷಿಯಾಗಿತ್ತು. ಆಂಧ್ರದ ಗೋದಾವರಿ ನದಿಯಾಚೆಗಿನ ಪ್ರದೇಶ ಅಶೋಕನ ಅಧೀಪತ್ಯಕ್ಕೆ ಒಳಪಟ್ಟಿದ್ದರೆ, ಮಧ್ಯಭಾಗದ ಆಂಧ್ರದ ವಾರಂಗಲ್‌ನ ಕಾಕತೀಯ ಅರಸರ ವಂಶಸ್ಥರ ಆಳ್ವಿಕೆ ಒಳಪಟ್ಟಿತ್ತು. ಹೈದರಾಬಾದ್ ಪ್ರಾಂತ್ಯ ಹಾಗೂ ಸುತ್ತಮುತ್ತಲಿನ ಪ್ರದೇಶ ನೇರವಾಗಿ ಮೊಗಲರಿಂದ ನಿಜಾಮರ ಕೈ ಸೇರಿತ್ತು. ಇನ್ನು ದಕ್ಷಿಣ ಆಂದ್ರದ ಜಿಲ್ಲೆಗಳ ಪ್ರದೇಶ ವಿಜಯನಗರದ ಅರಸರ ಆಳ್ವಿಕೆ ಒಳಪಟ್ಟಿದ್ದ ಕಾರಣ ಈ ಪ್ರದೇಶವನ್ನು ರಾಯಲಸೀಮ (ಕೃಷ್ಣದೇವರಾಯ ಆಳಿದ ನಾಡು) ಎಂದು ಕರೆಯಲಾಗುತ್ತದೆ.

ಶ್ರೀಕಾಕುಳಂ ನಕ್ಸಲ್ ಇತಿಹಾಸ ಈವರೆಗೆ ಬೆಳಕಿಗೆ ಬಾರದೇ ಇತಿಹಾಸದ ಮಣ್ಣಲ್ಲಿ ಹುದುಗಿ ಹೋಗಿದೆ. ಇಲ್ಲಿನ ಬುಡಕಟ್ಟು ಜನಾಂಗ ಅನುಭವಿಸಿದ ಯಾತನೆಗಳು ಶಬ್ಧ ಮತ್ತು ಅಕ್ಷರಕ್ಕೆ ನಿಲುಕಲಾರದವು. ನಿತ್ಯಹರಿಧ್ವರ್ಣದ ಅರಣ್ಯ, ಅಪಾರ ಖನಿಜ ಸಂಪತ್ತಿನ ಒಡೆಯರಾಗಿದ್ದ ಈ ಜನರಿಗೆ, ಇವರ ಸಂಸ್ಕೃತಿಗೆ ಮತ್ತು ಬದುಕಿಗೆ ಭಂಗವನ್ನುಂಟು ಮಾಡಬಾರದೆಂದು ಅರಣ್ಯ ಭೂಮಿಯ ಹಕ್ಕನ್ನು ಬ್ರಿಟಿಷ್ ಸರ್ಕಾರ ದಯಪಾಲಿಸಿತ್ತು ಅಲ್ಲದೆ, ಇವರ ಭೂಮಿಯನ್ನು ಬುಡಕಟ್ಟು ಜನಾಂಗ ಹೊರತುಪಡಿಸಿ ಇತರರು ಕೊಳ್ಳದಂತೆ ಕಾಯ್ದೆಯನ್ನು ರೂಪಿಸಿಲಾಗಿತ್ತು. 1951 ರಲ್ಲಿ ಭಾರತ ಸರ್ಕಾರ ಕೂಡ ಈ ಕಾಯ್ದೆಗೆ ಹಲವು ತಿದ್ದುಪಡಿ ಮಾಡಿ (ಅರಣ್ಯ ಭೂಮಿಯಲ್ಲಿರುವ ಮರ ಮತ್ತು ಖನಿಜ ಸಂಪತ್ತು ಸರ್ಕಾರದ ಸ್ವತ್ತು) ಅನುಷ್ಠಾನಗೊಳಿಸಿತ್ತು. ಆಂಧ್ರದ ಪೂರ್ವ ಕರಾವಳಿಯ ಗುಡ್ಡಗಾಡಿನ ಬಹುತೇಕ ಅರಣ್ಯವಾಸಿಗಳು, ಪೋಡು ಎಂಬ ಪುಟ್ಟ ಗ್ರಾಮಗಳಲ್ಲಿ ವಾಸಿಸುತ್ತಾ, ಹೈನುಗಾರಿಕೆ, ಬೇಸಾಯ, ಅರಣ್ಯದ ಕಿರುಉತ್ಪನ್ನವನ್ನು ನಂಬಿ ಬದುಕಿದ್ದರು.

1950 ದಶಕದಲ್ಲಿ ಇಲ್ಲಿ ಆರಂಭವಾದ ಸರ್ಕಾರಿ ಸ್ವಾಮ್ಯದ ಸಿರ್ಪುರ್ ಪೇಪರ್‌ಮಿಲ್ (ಈಗಿನ ಆಂಧ್ರ ಪೇಪರ್ಸ್ ಮಿಲ್ ಲಿಮಿಟೆಡ್) ಹಾಗೂ ಕೇಂದ್ರ ಸರ್ಕಾರದ ಸಿಂಗರೇಣಿ ಕಲ್ಲಿದ್ದಲು ಗಣಿಗಾರಿಕೆ ಇವರ ನೈಜ ಸಾಂಸ್ಕೃತಿಕ ಬದುಕನ್ನು ಪಲ್ಲಟಗೊಳಿಸಿತು. ಪೇಪರ್ ಮಿಲ್‌ಗೆ ಬಿದಿರಿನ ಬೊಂಬುಗಳನ್ನು ಸರಬರಾಜು ಮಾಡಲು ಬಂದ ದಳ್ಳಾಳಿಗಳು ಕೆ.ಜಿ. ಗೆ 7 ಪೈಸೆಯಂತೆ ಕೊಳ್ಳಲು ಸಿದ್ದರಿದ್ದೇವೆ ಎಂದು ಅರಣ್ಯವಾಸಿಗಳಿಗೆ ಆಮಿಷ ಒಡ್ಡಿದರು. ಅದೇ ರೀತಿ ಅತ್ಯಂತ ಕಷ್ಟವಾದ ಕಲ್ಲಿದ್ದಲು ಗಣಿಗಾರಿಕೆಗೆ ತಿಂಗಳಿಗೆ 120 ರೂಪಾಯಿ ಸಂಬಳದ ಆಧಾರದ ಮೇಲೆ ಗುತ್ತಿಗೆದಾರರು ಇವರನ್ನು ನೇಮಕ ಮಾಡಿಕೊಳ್ಳತೊಡಗಿದರು. ಇವರ ಜೊತೆ ಕೇರಳದ ಮಾಪಿಳ್ಳೆಗಳು ಮರ ಕಡಿಯುವ ಗುತ್ತಿಗೆದಾರರಾಗಿ, ದಕ್ಷಿಣ ಆಂಧ್ರ ಕೊಮಟಿಗರು ಬಟ್ಟೆ ಮತ್ತು ದಿನಸಿ ವ್ಯಾಪಾರಿಗಳಾಗಿ ಈ ಪ್ರದೇಶಕ್ಕೆ ಕಾಲಿಟ್ಟರು. ವ್ಯವಹಾರ ಮತ್ತು ಆರ್ಥಿಕ ಚಟುವಟಿಕೆಯ ಲೋಕವೇ ಗೊತ್ತಿಲ್ಲದ ಮುಗ್ಧ ಜನರಿಗೆ ಸಾಲ ನೀಡಿ ಅದಕ್ಕೆ ಪ್ರತಿಯಾಗಿ ಖಾಲಿ ಬಿಳಿಯ ಕಾಗದದ ಮೇಲೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುವ ಮೂಲಕ ಅರಣ್ಯವಾಸಿಗಳ ಜಮೀನುಗಳನ್ನು ಕಬಳಿಸಿದರು. ಇವರ ಈ ದುಷ್ಕೃತ್ಯಕ್ಕೆ ನೆರವಾದವರು, ಪಕ್ಕದ ಮಹಾರಾಷ್ಟ್ರದಿಂದ ವಲಸೆ ಬಂದ ಪಟ್ವಾರಿಗಳು. ಇವರು ಭೂದಾಖಲೆಗಳನ್ನು ನಿರ್ವಹಿಸುವುದನ್ನೇ ಕುಲ ಕಸುಬು ಮಾಡಿಕೊಂಡವರು. ಇಂತ ವೃತ್ತಿಯಲ್ಲಿದ್ದವರನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಗಳೆಂದು, ದಕ್ಷಿಣ ಕರ್ನಾಟಕದಲ್ಲಿ ಶ್ಯಾನುಬೋಗರೆಂದು ಕರೆಯುತ್ತಿದ್ದರು.

ಈ ವಂಚನೆಯ ತಂಡ ಅರಣ್ಯವಾಸಿಗಳ ಭೂಮಿಯನ್ನು ಕಬಳಿಸಿ ನಂತರ ಇವುಗಳನ್ನು ಶ್ರೀಮಂತ ಜಮೀನ್ದಾರರಿಗೆ ಅಧಿಕ ಲಾಭಕ್ಕೆ ವರ್ಗಾವಣೆ ಮಾಡುತ್ತಿದ್ದರು. ತಮಗೆ ಅರಿವಿಲ್ಲದಂತೆ ಇಂತಹ ವಂಚನೆಯ ಜಾಲದಲ್ಲಿ ಸಿಲುಕಿದ ಅಮಾಯಕ ಗಿರಿಜನ, ಜಮೀನ್ದಾರರ ಗೂಂಡಾ ಪಡೆಗಳಿಗೆ ಹೆದರಿ, ತಮ್ಮ ಭೂಮಿಯಲ್ಲಿ ತಾವೇ ಬೆಳೆದ ಫಸಲನ್ನು ಭೂಮಾಲೀಕನಿಗೆ ನೀಡಿ ಇದಕ್ಕೆ ಪ್ರಫಲವಾಗಿ ಅವನು ಭಿಕ್ಷೆಯಂತೆ ಕೊಟ್ಟ ಅಲ್ಪ ಪ್ರಮಾಣದ ಫಸಲನ್ನು ಪಡೆದು ಮನೆಗೆ ಹಿಂತಿರುಗುತ್ತಿದ್ದರು. ನಾಗರೀಕ ಜಗತ್ತಿನ ವ್ಯವಹಾರದ ಅರಿವಿಲ್ಲದ ಈ ಜನ ಸಾಲ ಅಥವಾ ಬಡ್ಡಿ ಎಂದರೆ, ಏನು?, ಭೂ ದಾಖಲೆಗಳು ಎಂದರೆ ಏನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಹಳ ವರ್ಷಗಳೇ ಕಳೆದು ಹೋದವು. ಇವೆಲ್ಲಕ್ಕಿಂತ ಕ್ರೂರವಾದ ಅಮಾನುಷ ಕೃತ್ಯಗಳಿಗೆ ಇವರು ಬಲಿಯಾದರು. ಅರಣ್ಯದಲ್ಲಿ ಕಿರು ಉತ್ಪನ್ನ, ಇಲ್ಲವೆ ಸೌದೆ ಆರಿಸಲು ಹೋದ ಮಹಿಳೆಯರು, ನದಿಯಲ್ಲಿ ಸ್ನಾನಕ್ಕೆ ಹೋದ ಆದಿವಾಸಿ ಮಹಿಳೆಯರು ಈ ಹೃದಯಹೀನ ಜನರ ಅತ್ಯಾಚಾರಕ್ಕೆ ಒಳಗಾದರು. ಅಲ್ಲದೆ, ಕಪ್ಪು ವರ್ಣದ ಸುಂದರ ಮೈಕಟ್ಟಿನ ಆದಿವಾಸಿ ಜನಾಂಗದ ಹೆಂಗಸರು, ಹದಿ ಹರೆಯದ ಹುಡುಗಿಯರು, ತಮ್ಮ ಗಂಡಂದಿರ, ಅಪ್ಪಂದಿರ ಎದುರು ಜಮೀನ್ದಾರರ ಮನೆಗೆ ಅವರ ಕಾಮತೃಷೆ ನೀಗಿಸಲು ಪ್ರಾಣಿಗಳಂತೆ ಸಾಗಿಸಲ್ಪಟ್ಟರು. ಬಾಯಿಲ್ಲದ ಈ ಮೂಕ ಜನರಿಗೆ ನ್ಯಾಯ ದೊರಕಿಸಿಕೊಡಲು, ಅವರ ಹೋರಾಡಲು ಒಬ್ಬ ಅಪ್ಪಟ ಮನುಷ್ಯನಿಗಾಗಿ ಅಸಹಾಯಕ ಮತ್ತು ಅಮಾಯಕ ಗಿರಿಜನರ ಜಗತ್ತು ಎದುರು ನೋಡುತ್ತಿತ್ತು.

ಇಂತಹ ಸಮಯದಲ್ಲಿ ಇವರಿಗೆ ಬೆನ್ನೆಲುಬಾಗಿ ನಿಂತ ಹೃದಯವಂತ ವ್ಯಕ್ತಿ, ವೆಂಪಟಾಪು ಸತ್ಯನಾರಾಯಣ. ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಈತ, ಬುಡಕಟ್ಟು ಜನಾಂಗದ ಮೇಲಿನ ಅನ್ಯಾಯ, ಅತ್ಯಾಚಾರವನ್ನು ಸಹಿಸಲಾಗದೆ, ತನ್ನ ವೃತ್ತಿಗೆ ತಿಲಾಂಜಲಿ ನೀಡಿ, ಗಿರಿಜನರನ್ನು ಸಂಘಟಿಸುವುದರ ಜೊತೆಗೆ ಭೂಮಾಲೀಕರ ಜೊತೆ ಸಂಘರ್ಷಕ್ಕೆ ನಾಂದಿ ಹಾಡಿದ. ಒಂದು ಅರ್ಥದಲ್ಲಿ ನಿಜವಾದ ನಕ್ಸಲ್ ಚಳವಳಿಯ ಪಿತಾಮಾಹನೆಂದರೆ, ಈ ಸತ್ಯನಾರಯಣ. ಆದರೆ, ಭಾರತದ ಎಡಪಂಥಿಯ ವಿಚಾರಧಾರೆಗಳ ಅಬ್ಬರದ ಪ್ರಚಾರದಲ್ಲಿ ಈ ಹುತಾತ್ಮ ಇವತ್ತಿಗೂ ಬೆಳಕಿಗೆ ಬಾರದೇ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದಾನೆ.

 (ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-6)


– ಡಾ.ಎನ್. ಜಗದೀಶ್ ಕೊಪ್ಪ  


 

ಪ್ರಯೋಗ ಮತ್ತು ಸಿದ್ಧಾಂತ ಹಾಗೂ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆ ಜೊತೆ ಜೊತೆಗೆ ಸ್ವಯಂ ವಿಮರ್ಶೆಯನ್ನು ಗುರಿಯಾಗಿಟ್ಟುಕೊಂಡು ರಚಿತವಾದ ನೂತನ ಪಕ್ಷವನ್ನು ಪಕ್ಷದ ಫೈರ್ ಬ್ರಾಂಡ್ ನಾಯಕನೆಂದೇ ಹೆಸರಾಗಿದ್ದ ಕನುಸನ್ಯಾಲ್ ನೇತೃತ್ವದಲ್ಲಿ ಘೋಷಿಸಲಾಯಿತು. ಪಕ್ಷದ ಕಾರ್ಯಕರ್ತರ ಮೊದಲ ರ್‍ಯಾಲಿಯನ್ನು 1969 ರ ಮೇ ಒಂದನೇ ತಾರೀಖು ಕೊಲ್ಕತ್ತ ನಗರದಲ್ಲಿ ಆಯೋಜಿಸಲಾಗಿತ್ತು. ಮಾವೋತ್ಸೆ ತುಂಗನ ವಿಚಾರಧಾರೆಗಳಿಂದ ಪ್ರಣೀತವಾಗಿದ್ದ ನೂತನ ಕಮ್ಯೂನಿಷ್ಟ್ ಪಕ್ಷ, ಇನ್ನು ಮುಂದೆ ಭಾರತದಲ್ಲಿ ಹೊಸ ಸೂರ್ಯ ಮತ್ತು ಚಂದ್ರ ಉದಯಿಸಲಿದ್ದಾರೆ ಎಂದು ಹೆಮ್ಮೆಯಿಂದ ಘೋಷಿಸಿಕೊಂಡಿತ್ತು. ದುರಂತವೆಂದರೆ, ಪಕ್ಷದ ಮೊದಲ ರ್‍ಯಾಲಿ ಗಲಭೆಯಲ್ಲಿ ಆರಂಭಗೊಂಡು, ಹಿಂಸಾಚಾರದ ನಡುವೆ ಮುಕ್ತಾಯಗೊಂಡಿತು. ಪಕ್ಷದ ಕಾರ್ಯಕರ್ತರು ಮತ್ತು ಆಡಳಿತಾರೂಢ ಪಕ್ಷಗಳಾದ ಕಾಂಗ್ರೇಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಕಾರ್ಯಕರ್ತರು ರ್‍ಯಾಲಿಯ ಮೇಲೆ ಕಲ್ಲು ಇಟ್ಟಿಗೆ ಮತ್ತು ಪೆಟ್ರೊಲ್ ಬಾಂಬ್ ತೂರುವುದರ ಮೂಲಕ ಹೊಸ ಪಕ್ಷದ ರ್‍ಯಾಲಿಯನ್ನು ವಿಘ್ನಗೊಳಿಸಿದರು. ಗಲಭೆಯಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇವರಲ್ಲಿ ಐವತ್ತಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾದವು.

ಹೀಗೆ ಹಿಂಸೆಯಲ್ಲಿ ಆರಂಭಗೊಂಡ ನೂತನ ಕಮ್ಯೂನಿಷ್ಟ್ ಪಕ್ಷದ ನಾಯಕರ ನಡುವೆಯೂ ಹಲವು ಬಗೆಯ ಭಿನ್ನಾಭಿಪ್ರಾಯಗಳು ಆರಂಭದಿಂದಲೂ ಇದ್ದವು. ಇವೆಲ್ಲವೂ ಈ ಸಂದರ್ಭದಲ್ಲಿ ಸ್ಪೋಟಗೊಂಡವು. ಹಲವು ಟ್ರೇಡ್ ಯೂನಿಯನ್ ಸಂಘಟನೆಗಳ ನಾಯಕನಾಗಿದ್ದ ಪರಿಮಳ್‌ದಾಸ್ ಗುಪ್ತಾರವರನ್ನು ಯಾವೊಂದು ಸಂದರ್ಭದಲ್ಲೂ ಪಕ್ಷ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಗೆರಿಲ್ಲಾ ಯುದ್ದ ತಂತ್ರಕ್ಕೆ ದಾಸ್ ಗುಪ್ತಾ ಆಕ್ಷೇಪ ವ್ಯಕ್ತಪಡಿಸಿದರು. ಚೆಗೇವಾರನ ಈ ಗೆರಿಲ್ಲಾ ಯುದ್ಧ ತಂತ್ರ ಎಲ್ಲಾ ರಾಷ್ಡ್ರಗಳಿಗೆ ಅನ್ವಯವಾಗುವುದಿಲ್ಲ ಎಂಬುದು ಗುಪ್ತಾರವರ ನಿಲುವಾಗಿತ್ತು.  ಭಾರತದಂತಹ ಸಂದರ್ಭದಲ್ಲಿ ಗುಡ್ಡಗಾಡು ಇರುವ ಪ್ರದೇಶಗಳನ್ನು ಹೊರತು ಪಡಿಸಿದರೆ, ಬೇರೆಲ್ಲೂ ಇದು ಯಶಸ್ವಿಯಾಗುವುದಿಲ್ಲ ಎಂಬುದು ಹಲವು ನಾಯಕರ ನಂಬಿಕೆಯಾಗಿತ್ತು.

ಕೊಲ್ಕತ್ತ ನಗರದಲ್ಲಿ ನಡೆದ ರ್‍ಯಾಲಿಯ ಅಧ್ಯಕ್ಷತೆವಹಿಸಿದ್ದ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಅಸಿತ್‌ಸೇನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿ, ಪಕ್ಷ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ನನ್ನನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇಟ್ಟಿತು ಎಂದು ಆರೋಪಿಸಿದರು. ಹೀಗೆ ಹಲವು ಭಿನ್ನಾಭಿಪ್ರಾಯಗಳ ನಡುವೆ ತೀವ್ರಗಾಮಿ ಧೋರಣೆಗಳನ್ನು ಹೊಂದಿದ ನೂತನ ಪಕ್ಷ ಕೊನೆಗೂ ಅಸ್ತಿತ್ವ ತಾಳಿತು.

ಚಾರುಮುಜಂದಾರ್‌ನ ಬೆಂಕಿಯುಂಡೆಯಂತಹ ಮಾತುಗಳು ಪಕ್ಷಕ್ಕೆ ಹಲವಾರು ಬಿಸಿರಕ್ತದ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. 1971 ರ ವೇಳೆಗೆ ಈಶಾನ್ಯ ಭಾರತದ ರಾಜ್ಯಗಳು, ಗೋವಾ, ಪಾಂಡಿಚೇರಿ, ಅಂಡಮಾನ್ ನಿಕೋಬಾರ್, ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ. ದೇಶದ ಬಹುತೇಕ ರಾಜ್ಯಗಳಲ್ಲಿ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ನೆಲೆಯೂರಿತು. ವರ್ಗ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿರುವ ಧನಧಾಹಿ ಶ್ರೀಮಂತರು ಮತ್ತು ಜಮೀನ್ದಾರರ ಬಿಸಿ ನೆತ್ತರಿನಲ್ಲಿ ಕೈ ಅದ್ದದೆ ಇರುವ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತನಾಗಿ ಇರಲು ಅನರ್ಹ ಎಂಬ ಚಾರು ಮುಜಂದಾರನ ವಿವಾದಾತ್ಮಕ ಹೇಳಿಕೆ ಹಲವು ಆಕ್ಷಪೇಣೆಗಳ ನಡುವೆಯೂ ಕಾರ್ಯಕರ್ತರಿಗೆ ಸ್ಪೂರ್ತಿಯ ಮಾತಾಗಿ ಪರಿಣಮಿಸಿತು.

ಆಂಧ್ರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ  ಕೃಷಿಕರನ್ನು ಮತ್ತು ಕೂಲಿಗಾರರನ್ನು ಶೋಷಿಸಿಕೊಂಡು ಬಂದಿದ್ದ ಜಮೀನ್ದಾರರು, ಮಾವೋವಾದಿ ಕಮ್ಯೂನಿಷ್ಟರ ಹಿಂಸೆ ಮತ್ತು ಭಯಕ್ಕೆ ಹೆದರಿ ಇರುವ ಆಸ್ತಿಯನ್ನು ಬಿಟ್ಟು ನಗರಗಳಿಗೆ ಪಲಾಯನಗೈದರು. ಅವರ ಗೂಂಡಾಪಡೆ ಹೇಳಹೆಸರಿಲ್ಲದಂತೆ ನಾಶವಾಯಿತು. ಮಾವೋವಾದಿಗಳು ಶಾಖೆ ತೆರದ ಪ್ರದೇಶಗಳಲ್ಲಿ ಜಾತಿ ವ್ಯವಸ್ಥೆ, ವರ್ಗವ್ಯವಸ್ಥೆ, ಇದ್ದಕ್ಕಿದ್ದಂತೆ ಕರಗತೊಡಗಿತು. ಶತಮಾನಗಳ ಕಾಲ ವ್ಯವಸ್ಥೆಯ ಕಪಿಮುಷ್ಟಿಯ ಕೈಯಲ್ಲಿ ನಲುಗಿ ಹೋಗಿದ್ದ ಬಡವರು, ಶ್ರಮಿಕರು, ನೆಮ್ಮದಿಯ ಬದುಕು ಕಟ್ಟಿಕೊಂಡು ಬದುಕಲು ಸಾಧ್ಯವಾಯಿತು. ಇಂತಹ ವಾತಾವರಣ ಪರೋಕ್ಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಮಾವೋವಾದಿಗಳ ಬಗ್ಗೆ  ರೈತರು, ಕೂಲಿಕಾರ್ಮಿಕರು, ಆದಿವಾಸಿಗಳು, ಅನುಕಂಪ. ಪ್ರೀತಿ ಹುಟ್ಟಲು ಕಾರಣವಾಯಿತು.

ಹಳ್ಳಿಗಳಲ್ಲಿ ಅಧಿಕ ಬಡ್ಡಿಗೆ ಹಣ ನೀಡಿ, ಬಡವರನ್ನು ಶೋಷಿಸುತ್ತಿದ್ದ ಲೇವಾದೇವಿಗಾರರು, ಪೊಲೀಸ್ ಮಾಹಿತಿದಾರರನ್ನು  ಹಿಡಿದು ಗಲ್ಲಿಗೇರಿಸುವ ಮೂಲಕ ಒಂದು ರೀತಿಯಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಮಾವೋವಾದಿಗಳು ನಿರ್ಮಿಸಿದರು. ಘೋಷಿತ ಯದ್ಧದಲ್ಲಿ ಶಾಸ್ತಸ್ತ್ರಗಳು ಅತ್ಯಗತ್ಯ ಎಂಬ ಮಾವೋನ ಮಾತುಗಳನ್ನು ಅಕ್ಷರಶಃ ಪ್ರಯೋಗಕ್ಕೆ ಇಳಿಸಿದರು. ಅಲ್ಲದೆ, ಬಿಲ್ಲು, ಬಾಣ, ಭರ್ಜಿ ಮುಂತಾದ ಸಾಂಪ್ರದಾಯಿಕ ಆಯುಧಗಳನ್ನು ತೈಜಿಸಿ, ಬಂದೂಕುಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಭಾರತ ಸರ್ಕಾರವೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳಿಗೆ ಇವರು ಹೊಸ ಸವಾಲೊಂದನ್ನು ಒಡ್ಡಿದರು.

ಚಾರು ಮುಜಂದಾರ್ ನೇತೃತ್ವದ ಹೋರಾಟವನ್ನು ಚೀನಾದ ಕಮ್ಯುನಿಷ್ಟ್ ಪಕ್ಷದ ಮುಖವಾಣಿ ಪತ್ರಿಕೆಯಾದ “ದ ಲಿಬರೇಷನ್” ಪತ್ರಿಕೆ ಮುಕ್ತ ಕಂಠದಿಂದ ಹೊಗಳುವುವುದರ ಮತ್ತಷ್ಟು ಹುರಿದುಂಬಿಸಿತು. ಚಾರು ಮುಜಂದಾರ್ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಗೆರಿಲ್ಲಾ ಯುದ್ಧತಂತ್ರಕ್ಕೆ ಕಾರ್ಯಕರ್ತರನ್ನು ಸಜ್ಜುಗೊಳಿಸಿದನು. ಭೂರಹಿತ ಬಡ ಗೇಣಿದಾರರು, ಕೃಷಿಕೂಲಿ ಕಾರ್ಮಿಕರನ್ನು ಗುರಿಯಾಗಿರಿಸಿಕೊಂಡು ಸಂಘಟನೆಗೆ ಚಾರು ಮತ್ತು ಅವನ ಸಂಗಡಿಗರು ಮುಂದಾದರು.

ಭೂಮಾಲೀಕರ ದಬ್ಬಾಳಿಕೆ ಅತಿಯಾಗಿದ್ದ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಗೆ ನಿರೀಕ್ಷೆ ಮೀರಿ ಒಲವು ವ್ಯಕ್ತವಾಯಿತು. ಇದಕ್ಕಾಗಿ ನಾಲ್ಕು ಅಂಶದ ಕಾರ್ಯಕ್ರಮವನ್ನು ರೂಪಿಸಲಾಯಿತು. ಅವುಗಳೆಂದರೆ.

  1. ಭೂಮಾಲೀಕರ ಒಡೆತನ ಮತ್ತು ದಬ್ಬಾಳಿಕೆ ಇರುವ ಪ್ರದೇಶಗಳನ್ನು ಮುಕ್ತಗೊಳಿಸಿ, ಅವುಗಳನ್ನು ಸಣ್ಣ ಹಿಡುವಳಿದಾರರ ಸುಪರ್ದಿಗೆವಹಿಸುವುದು.
  2. ಕೆಂಪು ಭಯೋತ್ಪಾದನೆ ಮೂಲಕ (ಹಿಂಸೆ) ಜಮೀನ್ದಾರರನ್ನು ಮಣಿಸಿ, ನೆಮ್ಮದಿಯ ವಾತಾವರಣ ಸೃಷ್ಟಿ ಮಾಡುವುದು.
  3. ಗ್ರಾಮಾಂತರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಚಳವಳಿಯ ನಾಯಕತ್ವವನ್ನು ಮಾವೋವಾದಿ ಕಮ್ಯುನಿಷ್ಟ್ ಪಕ್ಷದ ನಾಯಕರಿಂದ ಸ್ಥಳೀಯ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವರ್ಗಾಯಿಸುವುದು.
  4. ಜನಸಾಮಾನ್ಯನನ್ನು, ಜಮೀನ್ದಾರರು, ಬಡ್ಡಿ ವ್ಯಾಪಾರದ ಲೇವಾದೇವಿದಾರರು ಇವರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಭಯದಿಂದ ಮುಕ್ತರಾಗಿ ಬದುಕುವಂತೆ ಪ್ರೇರೇಪಿಸುವುದು.

ಚಾರು ಮತ್ತು ಸಂಗಡಿಗರ ಈ ಕಾರ್ಯಚರಣೆ ಕೆಲವು ವರ್ಗಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತಾದರೂ, ಅದೊಂದು ಸಾಮಾಜಿಕ ಚಳವಳಿಯಾಗಿ ಎಲ್ಲ ವರ್ಗವನ್ನು ಒಳಗೊಳ್ಳುವಲ್ಲಿ ವಿಫಲವಾಯಿತು. ಒಂದು ವರ್ಷದ ನಂತರ ಸ್ವತಃ ಚಾರು ಮುಜಂದಾರ್ ಇದನ್ನು ಒಪ್ಪಿಕೊಂಡನು. ಮಾವೋತ್ಸೆ ತುಂಗನ ವಿಚಾರಗಳನ್ನು ಅನಕ್ಷರಸ್ತ ಕೂಲಿಕಾರ್ಮಿಕರಿಗೆ ಆದಿವಾಸಿಗಳಿಗೆ ತಲುಪಿಸುವಲ್ಲಿ ಪಕ್ಷ ಸೋತಿದೆ ಎಂದು ಸ್ವಷ್ಟೀಕರಣ ನೀಡಿದನು. 1970 ರ ಮೇ ತಿಂಗಳಿನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾರತ ಸರ್ಕಾರದ ನೀತಿ ಹಾಗೂ ಧೋರಣೆಗಳನ್ನು ಖಂಡಿಸಿ, ಭಾರತವು ಗಳಿಸಿರುವುದು ನಾಚಿಕೆಗೇಡಿನ ಸ್ವಾತಂತ್ರ್ಯಎಂದು ಬಣ್ಣಿಸಿ. ಹೊಸ ಸ್ವಾತಂತ್ರ್ಯವನ್ನು ಗಳಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಹೊಸದಾಗಿ ಕೆಲವು ರಾಜಕೀಯ ಗುರಿಗಳನ್ನು ಸೇರಿಸಲಾಯಿತು. ಇದಕ್ಕಾಗಿ ಪ್ರಜಾಸಮರ (peoples War) ಯುದ್ಧ ಘೋಷಿಸಲಾಯಿತು. ಪಕ್ಷದ ಈ ತೀರ್ಮಾನ ಹಲವು ನಾಯಕರಿಗೆ ಒಪ್ಪಿಗೆಯಾಗಲಿಲ್ಲ. ಇವರುಗಳನ್ನು ಹಲವು ಗೊಡ್ಡು ವಿಚಾರಗಳಿಗೆ ಜೋತುಬಿದ್ದ ಕೇಂದ್ರೀಕೃತ ವ್ಯಕ್ತಿಗಳು ಎಂದು ಟೀಕಿಸಿದ ಚಾರು ಮುಜಂದಾರ್, ಸಮಾಜದಲ್ಲಿ ತಾಂಡವವಾಡುತ್ತಿರುವ ವರ್ಗವ್ಯವಸ್ಥೆಯ ವಿರುದ್ಧ ಹೋರಾಟವನ್ನು ಎಲ್ಲಾ ನೆಲೆಗಳಿಗೆ ವಿಸ್ತರಿಸಬೇಕೆಂದು ಕಾರ್ಯಕರ್ತರಿಗೆ ಕರೆನೀಡಿದ. ಅವನ ಸಂದೇಶ, ಮುಂದಿನ ದಿನಗಳಲ್ಲಿ  ಆಂಧ್ರ, ಶ್ರೀಕಾಕುಳಂ, ಪಶ್ಚಿಮ ಬಂಗಾಳದ, ದೇಬ್ರ ಮತ್ತು ಗೋಪಿಬಲ್ಲಬಪುರ ಜಿಲ್ಲೆ, ಬಿಹಾರದ ಮುರ್ಶರಾಯ್ ಜಿಲ್ಲೆ, ಉತ್ತರಪ್ರದೇಶದ ಲಕ್ಷ್ಮೀಪುರ ಜಿಲ್ಲೆಯ ಪುಲಿಯ ಎಂಬಲ್ಲಿ ಅಗ್ನಿಪರ್ವತದಂತೆ ಸ್ಪೋಟಗೊಂಡಿತು.

(ಮುಂದುವರೆಯುವುದು)