Tag Archives: ಸರ್ಕಾರಿ ಶಾಲೆ

ಶಿಕ್ಷಣ ಖಾಸಗಿಕರಣದ ಕರಾಳ ಮುಖಗಳು

– ರೂಪ ಹಾಸನ

ಸರ್ಕಾರಿ ಶಾಲೆಗಳನ್ನು ಮುಚ್ಚುವ ಆದೇಶವನ್ನು ವಿರೋಧಿಸಿ ರಾಜ್ಯದೆಲ್ಲೆಡೆಯಿಂದ ಪ್ರತಿರೋಧ ಬಂದುದನ್ನು ಗಮನಿಸಿದ ಸರ್ಕಾರ ಈಗ, ಶಾಲೆಗಳನ್ನು ಮುಚ್ಚುತ್ತಿಲ್ಲ, ಆದರೆ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳಿಗೆ ವಿಲೀನಗೊಳಿಸುತ್ತಿದ್ದೇವಷ್ಟೇ ಎಂದು ನಾಜೂಕಾಗಿ ಜಾಣತನದ ಮಾತನಾಡುತ್ತಿದೆ. ಒಂದರೊಳಗೆ ಇನ್ನೊಂದು ಶಾಲೆ ಸೇರಿಕೊಂಡರೆ ಉಳಿದ ಇನ್ನೊಂದು ಶಾಲೆ ತಾನಾಗಿಯೇ ಮುಚ್ಚಿಕೊಳ್ಳುತ್ತದೆ ಎಂಬ ಸರಳ ಸತ್ಯವನ್ನೂ ಅರ್ಥ ಮಾಡಿಕೊಳ್ಳದಷ್ಟು ಜನ ಮೂರ್ಖರಲ್ಲ.

ಶೈಕ್ಷಣಿಕ ನಿಯಮಗಳನ್ನು ಪಾಲಿಸದ, ಅದನ್ನು ಲಾಭದ ವ್ಯಾಪಾರವಾಗಿ ಮಾಡಿಕೊಂಡಿರುವ ಖಾಸಗಿ ಶಾಲೆಗಳಿಗೆ ಎಗ್ಗಿಲ್ಲದೇ  ಪರವಾನಗಿ ನೀಡಿ, ಅನಧಿಕೃತವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸರ್ಕಾರ ಎಲ್ಲ ರೀತಿಯಿಂದಲೂ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿ, ಒಂದೆಡೆ ಖಾಸಗಿಯವರ ತೊಟ್ಟಿಲನ್ನು ತೂಗುತ್ತಾ, ಇನ್ನೊಂದೆಡೆ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲವೆಂದು, ಗ್ರಾಮೀಣ-ಬಡ ಮಕ್ಕಳನ್ನು ಚಿವುಟಿ ಅಳಿಸುವ ಪ್ರಯತ್ನವನ್ನು ಏಕಕಾಲಕ್ಕೆ ಮಾಡುತ್ತಿದೆ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆವಷ್ಟೇ ಅಮಾನವೀಯ.

ಡಿಸ್ಟ್ರಿಕ್ಟ್ ಇನಫಾರ್ಮೇಶನ್ ಸಿಸ್ಟಮ್ ಫಾರ್ ಎಜುಕೇಷನ್ [ಡೈಸ್]ನ ಅಧ್ಯಯನವನ್ನು ಆಧರಿಸಿ ರೂಪುಗೊಳ್ಳುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಅಂತರ್ಜಾಲ ತಾಣವನ್ನು ಕುತೂಹಲಕ್ಕಾಗಿ ಗಮನಿಸಿದರೆ ಸಾಕು ಗಾಬರಿಗೊಳಿಸುವಂತಹ ಹಲವಾರು ಅಂಕಿ-ಅಂಶಗಳು ಕಾಣಸಿಗುತ್ತವೆ. 2009-10ನೇ ಸಾಲಿನ ಅಧ್ಯಯನದಂತೆ 46288 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 54,45,484 ಮಕ್ಕಳು ಓದುತ್ತಿದ್ದರೆ, 11884 ಖಾಸಗಿ ಶಾಲೆಗಳಲ್ಲಿ 24,76,484 ಮಕ್ಕಳು ಓದುತ್ತಿದ್ದಾರೆ! ಇಲ್ಲಿ ಖಾಸಗಿ ಶಾಲೆಯ ಪ್ರಮಾಣ ಕಡಿಮೆ ಎಂದೆನಿಸಿದರೂ ಅಲ್ಲಿ ಓದುತ್ತಿರುವ ಮಕ್ಕಳ ಪ್ರಮಾಣ ಅತ್ಯಧಿಕವಾಗಿದೆ. ಇದಕ್ಕೆ ಕಾರಣ ಒಂದು ಖಾಸಗಿ ಶಾಲೆಗೆ ಅನುಮತಿ ಪಡೆದರೆ ಸಾಕು ಪ್ರತಿಯೊಂದು ತರಗತಿಯ 3-4 ವಿಭಾಗಗಳನ್ನಾದರೂ ಮಾಡಿ ತಮ್ಮ ಶಾಲಾ ಕಟ್ಟಡ ಮೀರುವಷ್ಟು ಮಿತಿಯಲ್ಲಿ ಮಕ್ಕಳನ್ನು ತುಂಬಿಕೊಳ್ಳಬಹುದು! ಜೊತೆಗೆ ವಂತಿಗೆ, ಶುಲ್ಕದ ಹೆಸರಿನಲ್ಲಿ ತಮ್ಮ ಖಜಾನೆಯನ್ನೂ ಭರ್ತಿ ಮಾಡಿಕೊಳ್ಳಬಹುದು. ಶಿಕ್ಷಣ ಸೇವೆಗಾಗಿ ಅಲ್ಲದೇ ಲಾಭಕ್ಕಾಗಿ ಆದಾಗ ಅದು ಭ್ರಷ್ಟತೆಯ ಇನ್ನೊಂದು ಕರಾಳ ಮುಖವಷ್ಟೇ. ಅದೇ ಸರ್ಕಾರಿ ಶಾಲೆಗಳಲ್ಲಾದರೆ ಪ್ರತಿ ತರಗತಿಗೆ ಒಂದು, ಅಪರೂಪಕ್ಕೆ ಎರಡು ವಿಭಾಗ. ಈಗ ಒಂದು ವಿಭಾಗಕ್ಕೇ ಮಕ್ಕಳಿಲ್ಲದೇ ಮುಚ್ಚುವ ಸ್ಥಿತಿ! ಹೀಗೆಂದೇ ಒಂದು ಸರ್ಕಾರಿ ಶಾಲೆಯಲ್ಲಿ ಸರಾಸರಿ 120 ಮಕ್ಕಳು ಓದುತ್ತಿದ್ದರೆ, ಒಂದು ಖಾಸಗಿ ಶಾಲೆಯಲ್ಲಿ ಸರಾಸರಿ 229 ಮಕ್ಕಳು ಓದುತ್ತಿದ್ದಾರೆ!

ಮಾನ್ಯ ಶಿಕ್ಷಣ ಸಚಿವರು ಹಳ್ಳಿಗಳಲ್ಲಿ ಮಕ್ಕಳಿಲ್ಲದಿರುವುದೇ ಸರ್ಕಾರಿ ಶಾಲೆಗಳು ಮುಚ್ಚಲು ಕಾರಣ ಎಂದು ಹೇಳುತ್ತಿದ್ದಾರೆ. ಆದರೆ 2007-08 ರ ಡೈಸ್‌ನ ಅಧ್ಯಯನದಂತೆ, ಗ್ರಾಮೀಣ ಪ್ರದೇಶದಲ್ಲಿರುವ 5724 ಖಾಸಗಿ ಶಾಲೆಗಳು, ಅಲ್ಲಿ ಕಲಿಯುತ್ತಿರುವ 7,37,017 ಮಕ್ಕಳು, ಎಲ್ಲಿಂದ ಬಂದರು? ಮಕ್ಕಳಿದ್ದರೂ ಅವರಿಗೆ ಉಚಿತ ಶಿಕ್ಷಣ ನೀಡುವ ಮನಸ್ಸು ಸರ್ಕಾರಕ್ಕಿಲ್ಲವಷ್ಟೇ.

ಪ್ರಾಥಮಿಕ ಹಂತದ ಗುಣಾತ್ಮಕ ಶಿಕ್ಷಣಕ್ಕೆ ವಿನಿಯೋಗಿಸುವ ಉದ್ದೇಶದಿಂದ 2004 ರಿಂದ ಆದಾಯ ತೆರಿಗೆಯಲ್ಲಿ ಶೇಕಡಾ 2 ರಷ್ಟು ಶಿಕ್ಷಣ ಕರವನ್ನು ವಿಧಿಸುತ್ತಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ 4000-5000 ಕೋಟಿ ಆದಾಯ ಲಭಿಸುತ್ತಿದೆ. ಇದರಿಂದ ಸಾರ್ವಜನಿಕ ಶಿಕ್ಷಣದ ಗುಣಮಟ್ಟ ಸುಧಾರಣೆಯ ಅನೇಕ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ ಕೋಟಿಗಟ್ಟಲೆ ಹಣ ವಿತರಣೆಯಾಗುತ್ತಿದೆ. ಇಷ್ಟೂ ಸಾಲದೇ ಇನ್ಫೋಸಿಸ್, ಇಸ್ಕಾನ್, ಜಿಂದಾಲ್, ಅಜೀಮ್ ಪ್ರೇಮ್ಜಿ ಫೌಂಡೇಶನ್ ಸೇರಿದಂತೆ ಇಪ್ಪತ್ತು ಖಾಸಗಿ ಸಂಸ್ಥೆ-ವ್ಯಕ್ತಿಗಳು ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗಳ ಗುಣಮಟ್ಟ ಸುಧಾರಣೆಗೆ ಆರ್ಥಿಕವಾಗಿ ಕೈ ಜೋಡಿಸಿವೆ! ಈ ರೀತಿಯಲ್ಲಿ ಸರ್ಕಾರ, ಈಗಾಗಲೇ ಸರ್ಕಾರಿ ಶಾಲೆಗಳನ್ನೂ ಸದ್ದಿಲ್ಲದೇ ಖಾಸಗಿಯವರಿಗೆ ದತ್ತು ನೀಡಿ ಆಗಿದೆ!

ಪ್ರಾಥಮಿಕ ಶಿಕ್ಷಣಕ್ಕಾಗಿ 2010-11ನೇ ಸಾಲಿನ ಬಜೆಟ್‌ನಲ್ಲಿ 7700 ಕೋಟಿ, ಅಂದರೆ ಒಟ್ಟು ಬಜೆಟ್‌ನ ಶೇಕಡಾ 15 ರಷ್ಟು ಮೀಸಲಿರಿಸಲಾಗಿದೆ. ಇಷ್ಟೆಲ್ಲಾ ಆರ್ಥಿಕ ಸಬಲತೆ ಇದ್ದರೂ ಗುಣಾತ್ಮಕ ಶಿಕ್ಷಣವನ್ನು ತಾವೇಕೆ ಕೊಡಲಾಗುತ್ತಿಲ್ಲ? ಸರ್ಕಾರಿ ಶಾಲೆಗೆ ಮಕ್ಕಳೇಕೆ ಬರುತ್ತಿಲ್ಲ? ಎಂದು ಸರ್ಕಾರ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಂಡರೆ ತನ್ನ ಖಾಸಗಿ ಹುಳುಕು ತನ್ನ ಮುಖಕ್ಕೇ ರಾಚುವಷ್ಟು ಸ್ಪಷ್ಟವಾದ ಉತ್ತರಗಳು ಹೊಳೆಯುತ್ತವೆ.

ಕಡ್ಡಾಯ ಮತ್ತು ಉಚಿತ ಶಿಕ್ಷಣದ ಉದಾತ್ತ ಆಶಯ ಹೊತ್ತ, ಕೇಂದ್ರ ಸರ್ಕಾರ 2009 ರಲ್ಲೇ ರೂಪಿಸಿದ  ಶಿಕ್ಷಣ ಹಕ್ಕು ಕಾಯ್ದೆ ಯನ್ನು ಜಾರಿಗೊಳಿಸಿದರೆ ರಾಜ್ಯದ 6-14 ವರ್ಷದವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯೇ ಆಗುತ್ತದೆ. ಈಗಾಗಲೇ ಶಿಕ್ಷಣ ಖಾಸಗಿಕರಣಕ್ಕೆ ಅನಧಿಕೃತವಾಗಿ ತನ್ನನ್ನೇ ದತ್ತು ನೀಡಿಕೊಂಡಿರುವ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಅಳವಡಿಸಿಕೊಳ್ಳುವುದಕ್ಕೇ ಮೀನಮೇಷ ಎಣಿಸುತ್ತಿದೆ. ಸಾರ್ವಜನಿಕರ-ತಜ್ಞರ ಚರ್ಚೆಗೆ ವಿಷಯವನ್ನಿಡದೇ ನಿರ್ದಾಕ್ಷಿಣ್ಯವಾಗಿ ನೂರಾರು ಶಾಲೆಗಳನ್ನು ಮುಚ್ಚುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಶಿಕ್ಷಣವನ್ನು ಖಾಸಗಿಯಾಗಿ ಕೊಳ್ಳಲಾಗದ ಗ್ರಾಮೀಣ, ತಳ ಸಮುದಾಯದ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವಂತೆ ಯೋಜನೆ ರೂಪಿಸುತ್ತಿದೆ.

2011ರ ಜನಗಣತಿಯಂತೆ ಈಗಲೂ ಇನ್ನೂ 1,08,542 ಮಕ್ಕಳು ಶಾಲೆಯಿಂದ ಹೊರಗೇ ಇದ್ದಾರೆ. ಅವರಿಗೂ ಕಡ್ಡಾಯ ಶಿಕ್ಷಣ ನೀಡುವಂತಾದರೆ ಇನ್ನೂ ನೂರಾರು ಶಾಲೆಗಳನ್ನು ಸರ್ಕಾರವೇ ಪ್ರಾರಂಭಿಸಬೇಕಿದೆ. ಗ್ರಾಮೀಣ ಪ್ರದೇಶದ ಶಾಲೆಗಳನ್ನು ಇದೇ ರೀತಿ ಮುಚ್ಚುತ್ತಾ ಹೋದರೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣ ಮುಂದಿನ ವರ್ಷಗಳಲ್ಲಿ ಮತ್ತಷ್ಟು ಹೆಚ್ಚುತ್ತದೆ. ಮನೆ ಮುಂದಲ ಶಾಲೆಗಳಿಗೇ ಹೆಣ್ಣುಮಕ್ಕಳನ್ನು ಕಳಿಸಲು ಅನುಮಾನಿಸುವ ಗ್ರಾಮೀಣ ಪೋಷಕರು, ಶಾಲೆಗಳು ದೂರವಾದಷ್ಟೂ ಮಕ್ಕಳನ್ನು ಅದರಿಂದ ಇನ್ನಷ್ಟು ದೂರ ಉಳಿಸುತ್ತಾರೆ.

ಕಡಿಮೆ ಮಕ್ಕಳಿರುವ ಶಾಲೆಯ ಅಭಿವೃದ್ಧಿಯ ಹೊಣೆ ಹೊರುವವರಿಗೆ ಶಾಲೆಯನ್ನು ದತ್ತು ನೀಡಲು ಸರ್ಕಾರ ಸಿದ್ಧವಿದೆ ಎಂದು ಶಿಕ್ಷಣ ಸಚಿವರು ಹೊರಡಿಸಿರುವ ಫರ್ಮಾನು ನಾಚಿಕೆಗೇಡಿನದಾಗಿದೆ. ಸರ್ವಜನರ ಹಿತವನ್ನು ಬಯಸುವ ಮಾತೃಸ್ವರೂಪಿಯಾದ ಯಾವುದೇ ಸರ್ಕಾರ, ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರ, ಉದ್ಯೋಗದ ಜವಾಬ್ದಾರಿಯನ್ನು ತಾನೇ ಹೊರಬೇಕೇ ಹೊರತು ಅದನ್ನು ಖಾಸಗಿಯವರಿಗೆ ದತ್ತು ನೀಡಿ, ತನ್ನ ನೈತಿಕಶಕ್ತಿಯನ್ನು ಮಾರಿಕೊಳ್ಳವುದಿಲ್ಲ!

ಸಾರ್ವಜನಿಕ ಶಿಕ್ಷಣದ ಬೇರುಗಳಿಗೆ ಹಿಡಿದಿರುವ ಖಾಸಗಿ ಗೆದ್ದಲನ್ನು ಕೊಡವಿ, ಬೇರುಗಳು ಗಟ್ಟಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಮತ್ತು ಸಮಾನತೆಯ ಆಧಾರದ ಸಮಾನಶಾಲೆಗಳನ್ನು ಇನ್ನಾದರೂ ಸರ್ಕಾರ ಪುನರ್ ರೂಪಿಸಬೇಕಿದೆ. ಶಿಕ್ಷಣ ವ್ಯಾಪಾರಿಕರಣವಾಗದಂತೆ ಖಾಸಗಿವಲಯವನ್ನು ಹತ್ತಿಕ್ಕಿ, ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದ ಸಮಸ್ಯೆ ಬರಲು ಸಾಧ್ಯವೇ ಇಲ್ಲ.

ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ

-ರೂಪ ಹಾಸನ

ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ಸರ್ಕಾರ ನಾಡಿನ ಜನರಿಗೆ ವಿಶೇಷ ಕೊಡುಗೆಯೊಂದನ್ನು ನೀಡಲು ಸಿದ್ಧತೆ ನಡೆಸಿದೆ. ಅದು ದಿಢೀರನೆ ರೂಪುಗೊಂಡ ಉಡುಗೊರೆಯಲ್ಲ. ವರ್ಷ ವರ್ಷವೂ ಇಷ್ಟಿಷ್ಟೆಂದು ಸದ್ದಿಲ್ಲದೇ ನೀಡುತ್ತ ಬಂದಿರುವ ಉಡುಗೊರೆಯಾಗಿದ್ದು, ಈ ಬಾರಿ ಅದು ಮೇಲ್ನೋಟಕ್ಕೆ ಕಾಣುವಷ್ಟು ದೊಡ್ಡದಾಗಿ ಬೆಳೆದು ನಿಂತಿದೆ. ಈ ಉಡುಗೊರೆಯ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗುವ ಸಾಧ್ಯತೆ ಇದ್ದು, ಅದರ ಪರಿಣಾಮದಿಂದ ಕನ್ನಡಕ್ಕೆ ಶಿಕ್ಷಣದಲ್ಲಿ ಉಳಿಗಾಲವೇ ಇಲ್ಲದಂತೆ ಸರ್ವನಾಶವಾಗುವಂತ ಕಾಲ ಸನ್ನಿಹಿತವಾಗಿದೆ.

ಇದೇ ಅಕ್ಟೋಬರ್ 28 ರೊಳಗೆ, ಐವರಿಗಿಂತಾ ಕಡಿಮೆ ಮಕ್ಕಳಿರುವ 617 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳನ್ನು ಆ ಪ್ರದೇಶದ ಸುತ್ತಮುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಉತ್ತಮ ಸಾರಿಗೆ ಸಂಪರ್ಕ, ಜನವಸತಿ ಹಾಗೂ ಸಂಪನ್ಮೂಲ ಹೊಂದಿರುವ ಶಾಲೆಗಳಿಗೆ ವಿಲೀನಗೊಳಿಸುವಂತೆ  ಆದೇಶ ಹೊರಡಿಸಿರುವ ಸರ್ಕಾರ ಒಂದು ವೇಳೆ ಆ ಪ್ರದೇಶದ ಸುತ್ತಮುತ್ತ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬೇರೆ ಶಾಲೆಗಳು ಖಾಸಗಿ ಶಾಲೆಯಾದರೂ ಸರಿ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಹಾಗೆಯೇ ಮುಂದುವರೆಸಬೇಕು ಎಂದು ರಿಯಾಯಿತಿಯನ್ನೂ ಕೊಟ್ಟಿದೆ! ಶಾಲಾ ವಿಲೀನ ಸಮಿತಿಗಳನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ರಚಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಹಾಗೇ ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿದ ಕೂಡಲೆ ಹತ್ತಕ್ಕಿಂತಾ ಕಡಿಮೆ ಮಕ್ಕಳಿರುವ 2557 ಶಾಲೆಗಳನ್ನು ಕೂಡ ಪಕ್ಕದ ಶಾಲೆಗಳಿಗೆ ವರ್ಗಾಯಿಸಲು ಕ್ರಮ ಕೈಗೊಂಡಿದೆ.

ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲೆ ಇದ್ದರೂ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಈಗ ಇಂತಹ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವವರು ಹೆಚ್ಚಾಗಿ ಬಡ ಹಾಗೂ ಕೆಳ ಸ್ತರದ ಮಕ್ಕಳು ಮಾತ್ರ. ಅದರಲ್ಲೂ ಹೆಚ್ಚಿನವರು ಹೆಣ್ಣುಮಕ್ಕಳೆಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಆ ಶಾಲೆಗಳೂ ಮುಚ್ಚಲ್ಪಟ್ಟರೆ ದೂರದ ಸರ್ಕಾರಿ ಶಾಲೆಗಳಿಗೆ ಅಥವಾ ದುಬಾರಿ ವಂತಿಗೆ ಹಾಗೂ ಫೀಸು ನೀಡಿ, ಖಾಸಗಿ ಶಾಲೆಗೆ ಕಳಿಸಲು ಸಾಧ್ಯವಾಗದೇ ಇಂತಹ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚು. ಉಚಿತ ಹಾಗೂ ಕಡ್ಡಾಯ ಶಿಕ್ಷಣದ ನಿಯಮವಿದ್ದರೂ ಇಂದಿಗೂ ಲಕ್ಷಾಂತರ ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ಹೊರಗೇ ಇದ್ದಾರೆ. ಗ್ರಾಮೀಣ ಭಾಗದಲ್ಲಿ ಮೊದಲಿಗೇ ಶಾಲೆಗಳು ದೂರ ದೂರದಲ್ಲಿದ್ದು, ಇನ್ನೂ ಹೀಗೆ ಶಾಲೆಗಳನ್ನು ಮುಚ್ಚುತ್ತ ಹೋದರೆ ಎಲ್ಲರಿಗೂ ಶಿಕ್ಷಣ ಎಂಬ ಸಾಮಾಜಿಕ ನ್ಯಾಯದ ಮೂಲ ಕಲ್ಪನೆಯೇ ಬುಡ ಮೇಲಾಗುತ್ತದೆ.

ಶಿಕ್ಷಣವನ್ನು ಸಾರ್ವತ್ರಿಕವಾಗಿ, ಉಚಿತವಾಗಿ ಮತ್ತು ಕಡ್ಡಾಯವಾಗಿ ನೀಡಬೇಕೆಂಬ ನಿಯಮ ಸಂವಿಧಾನದಲ್ಲಿಯೇ ಸೂಚಿತವಾಗಿದೆ. ಶಿಕ್ಷಣವನ್ನು ಮೂಲಭೂತ ಹಕ್ಕೆಂದು 1993 ರಲ್ಲಿ ಸರ್ವೋಚ್ಚ ನ್ಯಾಯಾಲಯ ಘೋಷಿಸಿದ ನಂತರ ಈ ತೀರ್ಪಿನ ಆಧಾರವಾಗಿ ಸಂವಿಧಾನದ 86ನೇ ತಿದ್ದುಪಡಿಯಲ್ಲಿ ಈ ನಿಯಮವನ್ನೂ ಸೇರಿಸಿಕೊಂಡು, ಜೀವಿಸುವ ಹಕ್ಕಿನ ಜೊತೆಗೆ ಶಿಕ್ಷಣ ಪಡೆಯುವುದನ್ನೂ ಮೂಲಭೂತ ಹಕ್ಕೆಂದು ಹೇಳುವ ಹೊಸ ಪರಿಚ್ಛೇದ 21-ಎ ಯನ್ನು ಸೇರಿಸಲಾಗಿದೆ. ಈ ನಿಯಮ ಹಾಗೂ ನೂತನವಾಗಿ 2009ರಲ್ಲಿ ರೂಪಿತವಾದ ಶಿಕ್ಷಣ ಹಕ್ಕು ಕಾಯ್ದೆ [ಆರ್.ಟಿ.ಇ./RTE]ಯಡಿಯಲ್ಲಿ ನಮ್ಮ ಸರ್ಕಾರಿ ಶಾಲೆಗಳು ಕಾರ್ಯ ನಿರ್ವಹಿಸಬೇಕು. ಅದರಂತೆ 6-14 ವರ್ಷ ವಯಸ್ಸಿನವರೆಗಿನ ಪ್ರತಿಯೊಂದು ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಹಾಗೂ ಮಗುವಿನ ವಾಸಸ್ಥಳದ ಹತ್ತಿರದಲ್ಲಿಯೇ ಶಿಕ್ಷಣವನ್ನು ಸರ್ಕಾರವೇ ನೀಡಬೇಕು. ಈ ಕಾಯ್ದೆಯ ಮೂಲ ನಿಯಮವನ್ನೇ ನಮ್ಮ ರಾಜ್ಯ ಸರ್ಕಾರ ಗಾಳಿಗೆ ತೂರಿ ನಿರಂತರವಾಗಿ ಶಾಲೆಗಳನ್ನು ಮುಚ್ಚುತ್ತಿರುವುದೇ ಸಂವಿಧಾನಕ್ಕೆ ವಿರುದ್ಧವಾದುದು.

ಈ ಶಾಲೆ ಮುಚ್ಚುವ ಕ್ರಿಯೆಯನ್ನು ಸರ್ಕಾರ ನಾಜೂಕಾದ ಭಾಷೆಯಲ್ಲಿ ಶಾಲೆ ಜೋಡಣೆ ಎಂದು ಕರೆಯುತ್ತಿದೆ. ನಿಜವಾಗಿ ನೋಡಿದರೆ ಇದು ಅಧಿಕೃತವಾಗಿ ಮತ್ತು ಶಾಶ್ವತವಾಗಿ ಸರ್ಕಾರಿ ಶಾಲೆ ಮುಚ್ಚುವ ಪ್ರಕ್ರಿಯೆಯೇ ಆಗಿದೆ. ಇಂತಹ ಶಾಲಾ ವಿಲೀನ ಕೆಲಸವು ನಿರಂತರ ಪ್ರಕ್ರಿಯೆ ಯಾಗಿದ್ದು ಅದನ್ನು ನಿಯತಕಾಲಿಕವಾಗಿ ಮಾಡಲಾಗುತ್ತದೆಂಬ ಎಚ್ಚರಿಕೆಯನ್ನೂ ಸರ್ಕಾರಿ ಆದೇಶದಲ್ಲಿ ಸೇರಿಸಲಾಗಿದೆ. ಹೀಗಾಗಿ ಇದು, ಸರ್ಕಾರಿ ಶಾಲೆಗಳೆಲ್ಲ ಮುಚ್ಚುವವರೆಗೂ ನಿರಂತರವಾಗಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆಯೆಂದು ನಾವು ತಣ್ಣಗೆ ಕುಳಿತಿರಬೇಕು!

ಇದು ದಿಢೀರನೆ ಈ ವರ್ಷ ತೋರಿರುವ ಹೊಸ ಸಮಸ್ಯೆಯಲ್ಲ. ಈಗಾಗಲೇ ಕಳೆದೊಂದು ದಶಕದಿಂದ ಸದ್ದಿಲ್ಲದೇ 10500 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಕಳೆದ 2009-2010ರಲ್ಲಿ 485 ಶಾಲೆಗಳನ್ನು ಮುಚ್ಚಲಾಗಿತ್ತು. ಅದರ ಹಿಂದಿನ ವರ್ಷ 500 ಶಾಲೆಗಳು ಮುಚ್ಚಿವೆ. ಶಾಲೆ ಮುಚ್ಚಲ್ಪಡುವ ಪ್ರಮಾಣ ಇನ್ನು ಮುಂದೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಮುಂದಿನ 10-15 ವರ್ಷಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳೆಲ್ಲ ಮುಚ್ಚಲ್ಪಡುವುದು ನಿರ್ವಿವಾದ. ಬಹುಶಃ ಸರ್ಕಾರಕ್ಕೆ ಬೇಕಾಗಿರುವುದೂ ಇದೇ! ಮಾತೃಭಾಷಾ ಶಿಕ್ಷಣಕ್ಕೆ ಆಧ್ಯತೆ ನೀಡುತ್ತೇವೆ ಎಂದು ಹೇಳುತ್ತಿರುವ ನಮ್ಮ ಸರ್ಕಾರದ ಶಿಕ್ಷಣ ಖಾಸಗಿಕರಣ ಹಾಗೂ ಆಂಗ್ಲಭಾಷಾ ಪ್ರೀತಿಯ ಗೋಪ್ಯ ಪ್ರಣಾಳಿಕೆ ಈಗ ನಿಧಾನಕ್ಕೆ ಬೆಳಕಿಗೆ ಬರುತ್ತಿದೆಯಷ್ಟೇ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ, ಹಳ್ಳಿಗಳಲ್ಲೂ ತಲೆ ಎತ್ತಿರುವ  ಖಾಸಗಿ ಶಾಲೆಗಳಲ್ಲಿ ಈ ಮಕ್ಕಳು ದಾಖಲಾಗುತ್ತಿರುವುದು. ಅವುಗಳೆಲ್ಲ ಆಂಗ್ಲ ಮಾಧ್ಯಮ ಶಾಲೆಗಳೆಂದು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ. 1994 ರಿಂದ ಈಚೆಗೆ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪನೆಗೆ ಅವಕಾಶ ನೀಡಬಾರದೆಂಬ ಸರ್ಕಾರಿ ಆದೇಶವಿದೆ. ಆದರೆ ಅಲ್ಲಿಂದ ಇಲ್ಲಿಯವರೆಗೆ ಕನ್ನಡ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಪಡೆದಿರುವ ಸಾವಿರಾರು ಶಾಲೆಗಳು ಬೋಧಿಸುತ್ತಿರುವುದು ಆಂಗ್ಲ ಮಾಧ್ಯಮದಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ಗುಟ್ಟು. ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಹಾಗೂ ಸರ್ಕಾರದ ವಿವಿಧ ಹಂತದ ಅಧಿಕಾರಶಾಹಿಯ ನಡುವೆ ಅನೂಚಾನವಾಗಿ ನಡೆದು ಬಂದಿರುವ ಕೊಡು-ಕೊಳುವ ಒಳ ಒಪ್ಪಂದದಿಂದ ಹಾಗೂ ಹೆಚ್ಚಿನ ಖಾಸಗಿ ಶಾಲೆಗಳನ್ನು ನಡೆಸುತ್ತಿರುವವರೂ ಮಠಾಧೀಶರು, ರಾಜಕಾರಣಿಗಳು, ಪ್ರತಿಷ್ಠಿತ ಅಧಿಕಾರಿಗಳು ಆಗಿರುವುದರಿಂದ ಬೇಲಿಯೇ ಎದ್ದು ಹೊಲ ಮೇಯುತ್ತಿರುವ ಪರಿಸ್ಥಿತಿ ಇದಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಅನುಮತಿ ಪಡೆದ ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮದಲ್ಲಿ ಬೋಧಿಸದಂತೆ ತಡೆಯುವ ನೈತಿಕಶಕ್ತಿ ಹಾಗೂ ಇಚ್ಛಾಶಕ್ತಿಯನ್ನೇ ಕಳೆದುಕೊಂಡಿರುವ ನಮ್ಮ ಸರ್ಕಾರ, ಈಗ ಸರ್ಕಾರಿ ಶಾಲೆಗಳನ್ನೇ ಮುಚ್ಚುತ್ತಾ ಲಕ್ಷಾಂತರ ಬಡ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯುವ ಮೂಲಕ, ಅವರ ಭವಿಷ್ಯದೊಡನೆ ಚೆಲ್ಲಾಟವಾಡುತ್ತಿದೆ.

ಮಕ್ಕಳ ಸೃಜನಶೀಲ-ಗುಣಾತ್ಮಕ ಶಿಕ್ಷಣದ ಕುರಿತು ಯೋಚಿಸುವ ಯಾವುದೇ ಸರ್ಕಾರ ಪ್ರಾಥಮಿಕ ಹಂತದಲ್ಲಾದರೂ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಜೊತೆಗೆ ಸಾಮಾಜಿಕ ಅಸಮಾನತೆಯ ಮೂಲ ಬೇರುಗಳಿರುವುದು ಅಸಮಾನ ಶಿಕ್ಷಣದ ಹಂಚಿಕೆಯಿಂದಾದ್ದರಿಂದ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಹಾಗೂ ಯಾವುದೇ ಬೇಧವಿಲ್ಲದೇ ಎಲ್ಲರಿಗೂ ಸಮಾನವಾದ ಶಾಲಾ ವ್ಯವಸ್ಥೆಯನ್ನು ರೂಪಿಸಬೇಕು. ಇದನ್ನು ಸಾಧ್ಯವಾಗಿಸಲು ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ತುರ್ತಾಗಿ ಜಾರಿಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಷ್ಟೇ ಈಗ ಉಳಿದಿರುವ ದಾರಿ. ನಮ್ಮ ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಬುದ್ಧಿಜೀವಿಗಳು, ಶಿಕ್ಷಕರು, ಜನರೆಲ್ಲರೂ ಒಂದಾಗಿ ಕನ್ನಡ ಶಾಲೆಗಳನ್ನು ಉಳಿಸಲು, ಪ್ರತಿಯೊಂದು ಮಗುವಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ಸಾರ್ವತ್ರಿಕವಾಗಿ ನೀಡುವಂತೆ ಸರ್ಕಾರದ ಮೇಲೆ ನೈತಿಕ ಒತ್ತಡವನ್ನು ತರಲು ಈಗಲಾದರೂ ಒಂದು ತೀವ್ರ ತೆರನಾದ ಜನಾಂದೋಲನವನ್ನು ರೂಪಿಸದಿದ್ದರೆ, ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಕನ್ನಡ ಮರೆಯಾಗಿ ಆಡು ಭಾಷೆಯಾಗಿ ಮಾತ್ರ ನಮ್ಮೊಂದಿಗಿರುತ್ತದಷ್ಟೇ. ಜೊತೆಗೆ ಲಕ್ಷಾಂತರ ಮಕ್ಕಳು ಮೂಲಭೂತ ಶಿಕ್ಷಣದ ಹಕ್ಕನ್ನು ಕಳೆದುಕೊಂಡು ಬೀದಿಪಾಲಾಗುತ್ತಾರೆ.

(ಚಿತ್ರಕೃಪೆ: ವಿಕಿಪೀಡಿಯ ಮತ್ತು ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ವೆಬ್‌ಸೈಟ್)