Category Archives: ಚಿದಂಬರ ಬೈಕಂಪಾಡಿ

ಆಮ್ ಆದ್ಮಿ ಪಾರ್ಟಿ ಮತ್ತು ರಾಜಕೀಯ


– ಚಿದಂಬರ ಬೈಕಂಪಾಡಿ


 

ಐದು ರಾಜ್ಯಗಳ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಹೊಸ ಸಂದೇಶವನ್ನು ದೆಹಲಿ ಮೂಲಕ ಆಮ್ ಆದ್ಮಿ ಪಾರ್ಟಿ ರವಾನಿಸಿದೆ. ಇಂಥ ಫಲಿತಾಂಶವನ್ನು ಸ್ವತ: ಆಮ್ ಆದ್ಮಿ ಕೂಡಾ ನಿರೀಕ್ಷೆ ಮಾಡಿರಲಿಕ್ಕಿಲ್ಲ. ಅಂಥ ಫಲಿತಾಂಶವನ್ನು ದಾಖಲಿಸುವ ಮೂಲಕ ಅರವಿಂದ್ ಕೇಜ್ರಿವಾಲ್ ಇದು ಸಾಧ್ಯವಾದದ್ದು ಹೇಗೆ ಎನ್ನುವ ಪ್ರಶ್ನೆ ಕೇಳಲು ಕಾರಣರಾಗಿದ್ದಾರೆ.

ಸಧ್ಯ ದೆಹಲಿಯಲ್ಲಿ ಯಾರು ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಅಸ್ಪಷ್ಟವಾದರೂ ಕೂಲದೆಳೆ ಅಂತರದಲ್ಲಿ ಆಮ್ ಆದ್ಮಿ ಅಧಿಕಾರ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ.

ಆಮ್ ಆದ್ಮಿ ಜನಸಾಮಾನ್ಯರ ಶಕ್ತಿ ಕೇಂದ್ರವೆಂದು ಈಗ ಇಡೀ ದೇಶದ ಗಮನ ಸೆಳೆದಿದೆ. aam-admi-partyರಾಜಕೀಯ ಪಕ್ಷವಾಗಿ ಆಮ್ ಆದ್ಮಿ ಗುರುತಿಸಿಕೊಳ್ಳುವುದು ಸಾಧ್ಯವಾಗಿರುವುದಕ್ಕೆ ದೆಹಲಿಯಲ್ಲಿ ಮೂರು ಅವಧಿಗೆ ಆಡಳಿತ ಮಾಡಿದ ಕಾಂಗ್ರೆಸ್ ಮತದಾರರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವ ಮನೋಭಾವ ಬೆಳೆಸಿಕೊಂಡದ್ದು. ಬಿಜೆಪಿಯನ್ನು ವಿರೋಧಿಸಿ ಎನ್ನುವ ಸಂದೇಶ ನೀಡುತ್ತಲೇ ಕಾಲ ಕಳೆದ ಕಾಂಗ್ರೆಸ್ ತನ್ನನ್ನು ಯಾಕೆ ಆಯ್ಕೆ ಮಾಡಬೇಕು ಎಂದು ಹೇಳುವುದನ್ನು ಮರೆತೇ ಬಿಟ್ಟಿತು.

ನಿರಂಕುಶ ಆಡಳಿತವನ್ನು ಸಹಿಸಿಕೊಳ್ಳುವುದಕ್ಕೂ ಮಿತಿ ಇರುತ್ತದೆ ಎನ್ನುವುದನ್ನು ಕಾಂಗ್ರೆಸ್ ಮರೆತು ತಪ್ಪೆಸಗಿತು. ಆ ತಪ್ಪನ್ನು ತನ್ನ ಅಸ್ತ್ರವಾಗಿಸಿಕೊಂಡದ್ದು ಆಮ್ ಆದ್ಮಿ. ಮತದಾರ ತನ್ನ ತೆಕ್ಕೆಯಲ್ಲೇ ಇರುತ್ತಾನೆ, ಅವನಿಗೆ ಬೇರೆ ಪಕ್ಷಗಳಿಲ್ಲ ಎನ್ನುವ ವೈಯಕ್ತಿಕ ತೀರ್ಮಾನಕ್ಕೆ ಬಂದು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ಅತ್ತ ಬಿಜೆಪಿ ಕೂಡಾ ಆಂತರಿಕ ಭಿನ್ನಮತದಿಂದ ನಲುಗಿ ಸುಧಾರಿಸಿಕೊಳ್ಳುವಷ್ಟರಲ್ಲಿ ಚುನಾವಣೆ ಕಾಲಿಟ್ಟಿತು. ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿ ಮಾಡುವ ಸಿಂಗಲ್ ಪಾಯಿಂಟ್ ಘೋಷಣೆಯೊಂದಿಗೆ ಬಿಜೆಪಿ ಕಾಲಹರಣ ಮಾಡಿತು. ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಲು ಹೇಳಿದ ಬಿಜೆಪಿ ಆಮ್ ಆದ್ಮಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ.

ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್ ಮತ್ತು ಆನಂತರದ ಬೆಳವಣಿಗೆಗಳಲ್ಲಿ ಆಮ್ ಆದ್ಮಿಯ ಕೇಜ್ರಿವಾಲ್ ತಂಡ ಸಕ್ರಿಯವಾಗಿ ಗುರುತಿಸಿಕೊಂಡಿತು. ದೆಹಲಿ ಸುರಕ್ಷಿತ ನಗರವಲ್ಲ ಎನ್ನುವ ಭಾವನೆ ಯುವಕರಲ್ಲಿ ಮತ್ತು ಯುವತಿಯರಲ್ಲಿ ಅದರಲ್ಲೂ ಹೆಂಗಸರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಗ್ಯಾಂಗ್ ರೇಪ್ ನಂತರವೂ ದೆಹಲಿಯಲ್ಲಿ ಶೀಲಾ ದೀಕ್ಷಿತ್ ಓರ್ವ ಹೆಣ್ಣಾಗಿ ಅಂತಹ ಭಯದ ವಾತಾವರಣವನ್ನು ನಿಗ್ರಹಿಸುವಂಥ ಕಾಳಜಿ ತೋರಲಿಲ್ಲ ಎನ್ನುವ ಅಪವಾದವನ್ನು ಹೊತ್ತುಕೊಳ್ಳಬೇಕಾಯಿತು. ಇದು ಕೇವಲ ಅಪವಾದವಾಗಿರದೇ ವಾಸ್ತವವಾಗಿತ್ತು.

ಜನಸಾಮಾನ್ಯರ ಸಮಸ್ಯೆಗಳನ್ನು ಕಾಂಗ್ರೆಸ್ ಕಡೆಗಣಿಸಿತ್ತು, ಅದನ್ನು ಗುರುತಿಸಿ ತಮ್ಮ ಪಕ್ಷದ ಘೋಷಣೆಯನ್ನಾಗಿ arvind-kejriwal-campaigningಮಾಡಿಕೊಂಡವರು ಕೇಜ್ರಿವಾಲ್. ಮಧ್ಯಮ ಮತ್ತು ಕೆಳಸ್ಥರದ ಜನರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ಕೇಜ್ರಿವಾಲ್ ಅವರ ಸಮಸ್ಯೆಗಳಿಗೆ ಧ್ವನಿಯಾದರು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಯಾವುದು ಮುಖ್ಯವೆನಿಸಲಿಲ್ಲವೋ ಆ ಸಂಗತಿಗಳೇ ಆಮ್ ಆದ್ಮಿಗೆ ಮುಖ್ಯವೆನಿಸಿದವು. ಐಟಿ, ಬಿಟಿ ಯುವಕ, ಯುವತಿಯರು ಆಮ್ ಆದ್ಮಿಯತ್ತ ಮುಖಮಾಡಲು ಕೇಜ್ರಿವಾಲ್ ಅವರ ಶ್ರಮವೂ ಕಾರಣ. ಹೈಫೈ ರಾಜಕಾರಣಕ್ಕಿಳಿಯದೇ ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸುವ ಸರಳ ಗುಣಕ್ಕೆ ದಿಲ್ಲಿಯ ಜನ ಮತ ಹಾಕಿದರು. ಕೈಯಲ್ಲಿದ್ದ ಅಧಿಕಾರವನ್ನು ಪೊರಕೆಗೆ ಕೊಡಬೇಕೆನ್ನುವ ತೀರ್ಮಾನವನ್ನೇನೂ ಅವರು ಮಾಡಿರಲಿಲ್ಲ, ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವ ನಂಬಿಕೆಯಲ್ಲೇ ಮತ ಹಾಕಿದರು. ಅದು ಈ ಹಂತಕ್ಕೆ ಬಂದು ನಿಲ್ಲುತ್ತದೆ ಎನ್ನುವ ಕಲ್ಪನೆ ಆಮ್ ಆದ್ಮಿ ಪಕ್ಷಕ್ಕೂ ಪೂರ್ಣವಾಗಿ ಹೊಳೆದಿರಲಿಲ್ಲ.

ಒಂದು ವೇಳೆ ಅಣ್ಣಾ ಹಜಾರೆ ಆಮ್ ಆದ್ಮಿಯಲ್ಲಿ ಸಕ್ರಿಯರಾಗಿದಿದ್ದರೆ ದಿಲ್ಲಿ ಗದ್ದುಗೆ ಅನಾಯಾಸವಾಗಿ ಆಮ್ ಆದ್ಮಿ ವಶಕ್ಕೆ ಬರುತ್ತಿತ್ತು ಅನ್ನಿಸುತ್ತಿದೆ ಈಗ. ಸ್ವತಃ ಅಣ್ಣಾ ಹಜಾರೆಗೂ ಅನ್ನಿಸಿರಬಹುದು. ಹಾಗೆಂದು ಇಂಥ ಬೆಳವಣಿಗೆ ಎಲ್ಲ ಕಾಲದಲ್ಲೂ ಘಟಿಸುವುದಿಲ್ಲ.

ಅಸ್ಸಾಂ ವಿದ್ಯಾರ್ಥಿಗಳು ಹುಟ್ಟು ಹಾಕಿದ್ದ ಅಸ್ಸಾಂ ಗಣಸಂಗ್ರಾಮ ಪರಿಷತ್ ಪ್ರಫುಲ್ಲ ಕುಮಾರ್ ಮೊಹಂತ ಅವರ ಸಾರಥ್ಯದಲ್ಲಿ ಆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಇಂಥ ಸಾಧನೆ ಮಾಡಿದೆ.

ರಾಜಕೀಯದಲ್ಲಿ ಅಂತಿಮವಾಗಿ ಗೆಲ್ಲುವುದು ಅಧಿಕಾರವೇ. ಅಂಥ ಅಧಿಕಾರದ ಹಗ್ಗ ಹಿಡಿಯುವ ಸನಿಹಕ್ಕೆ ಬಂದಿರುವ ಆಮ್ ಆದ್ಮಿ ಇದೇ ಟ್ರೆಂಡ್ ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡುವುದು ಈ ಕ್ಷಣಕ್ಕೆ ಸಾಧ್ಯವಿಲ್ಲ. ಒಂದು ಸಂಘಟನೆಗೆ ಸಂಘಟನೆಯ ಗುಣಗಳಿರುತ್ತವೆಯೇ ಹೊರತು ರಾಜಕೀಯ ಪಕ್ಷದ ಉಸಿರಿರುವುದಿಲ್ಲ. ಆಮ್ ಆದ್ಮಿಯೊಳಗೂ ರಾಜಕೀಯದ ಉಸಿರಿಲ್ಲ, ಕವಚ ಮಾತ್ರ ಇದೆ.

ಮಡೆ (ಎಂಜಲು) ಸ್ನಾನ ಆಚರಣೆ ಇರಲಿ ಎನ್ನುವುದಾದರೆ ಬೆತ್ತಲೆ ಸೇವೆಯೂ ಇರಲಿ ಬಿಡಿ


– ಚಿದಂಬರ ಬೈಕಂಪಾಡಿ


 

ಆಧುನಿಕತೆಯನ್ನು ಅಪ್ಪಿಕೊಳ್ಳುವ ಮನಸ್ಸುಗಳು ಕುಕ್ಕೆಯಲ್ಲಿ ಮಡೆ ಮಡೆ ಸ್ನಾನಕ್ಕೆ ಅಂಟಿಕೊಂಡಿರುವುದು ವಿಷಾದನೀಯ. ಬದಲಾವಣೆಯನ್ನು ಬಯಸುತ್ತಲೇ ಒಂದು ಕಾಲದಲ್ಲಿ ಮಾಡಿದ ಕಟ್ಟುಪಾಡುಗಳನ್ನು ಮರು ಮೌಲ್ಯಮಾಪನ ಮಾಡದೆ ಸಂದ್ರದಾಯ ಮತ್ತು ಪಾವಿತ್ರ್ಯ ಎನ್ನುವ ಕಾರಣಕ್ಕೆ ಅನುಸರಿಸಲು ಮುಂದಾಗಿರುವುದು ಮೌಢ್ಯತೆಯ ಪರಾಕಾಷ್ಠೆ.

ಮಡೆ ಮಡೆ ಸ್ನಾನಕ್ಕೆ ದೇವಸ್ಥಾನ ಮಂಡಳಿ ಅಥವಾ ಭಕ್ತರು ಕೊಡುತ್ತಿರುವ ಕಾರಣಗಳನ್ನು ಸರ್ಕಾರವೂ ಕಣ್ಣುಮುಚ್ಚಿ ಒಪ್ಪಿಕೊಂಡಿರುವುದು ದುರಂತ ಮಾತ್ರವಲ್ಲ ತನಗಿರುವ ಅಧಿಕಾರವನ್ನು ಚಲಾಯಿಸಲಾಗದ ಅಪವಾದಕ್ಕೆ ಗುರಿಯಾಗಿದೆ.

ಮೌಢ್ಯಗಳನ್ನು ನಿವಾರಿಸಲು ಸುಧಾರಣೆ ಬಯಸುವ ಸರ್ಕಾರ ಅನಾದಿ ಕಾಲದಿಂದ ಕೆಳ ವರ್ಗ ಅನುಸರಿಸಿಕೊಂಡು ಬರುತ್ತಿರುವ ಅಥವಾ ಅನುಸರಿಸಿಕೊಂಡು ಬರಬೇಕೆಂದು ಒತ್ತಡ ಹಾಕಿರುವ ಮನಸ್ಸುಗಳಿಗೆ ಕಡಿವಾಣ ಹಾಕಲಾಗದೆ ಮಕಾಡೆ ಮಲಗಿತು ಎನ್ನಬೇಕೇ?

ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಕೂಡಾ ದೇವರಿಗೆ ಹರಕೆ ಎನ್ನುವ ವ್ಯಾಖ್ಯೆ ಕೊಡಲಾಗುತ್ತಿತ್ತು. yellamma-neem-leaves-devadasiಬೆತ್ತಲೆ ಸೇವೆ ಅಮಾನವೀಯ ಎನ್ನುವುದನ್ನು ಒಪ್ಪಿಕೊಳ್ಳುವುದಾದರೆ ಎಂಜಲು ಎಲೆಯ ಮೇಲೆ ಹೊರಳಾಡಿ ಹರಕೆ ತೀರಿಸಲು ಅವಕಾಶ ಮಾಡಿಕೊಡುವುದು ಎಷ್ಟರ ಮಟ್ಟಿಗೆ ಸರಿ?

ಮಡೆ ಮಡೆ ಸ್ನಾನ ಮಾಡುತ್ತಿರುವವರು ಕೆಳವರ್ಗದ ಜನರು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ನಾಗಾರಾಧನೆ, ಭೂತಾರಾಧನೆಯನ್ನು ಅನಾದಿ ಕಾಲದಿಂದ ಅನುಸರಿಸಿಕೊಂಡು ಬರುತ್ತಿರುವ ಈ ಭಾಗದ ಜನರು ಬದಲಾವಣೆಯನ್ನು ನಿರಾಕರಿಸಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಂಥ ಹರಕೆಯನ್ನು ದೇವರಿಗೆ ಅರ್ಪಿಸಬೇಕು ಎಂದು ಹೇಳಿರುವವರು ಯಾರು, ಯಾವ ಗ್ರಂಥದಲ್ಲಿ ಇಂಥ ಹರಕೆಯನ್ನು ಅನೂಚಾನವಾಗಿ ಅನುಸರಣೆ ಮಾಡಿಕೊಂಡು ಬರಬೇಕೆಂದು ಹೇಳಲಾಗಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗಿದೆ.

ಚರ್ಮ ರೋಗ ವಾಸಿಯಾಗುತ್ತದೆ, ಸಂತಾನ ಭಾಗ್ಯ ಬರುತ್ತದೆ ಎನ್ನುವ ವಾದಗಳನ್ನು ಒಪ್ಪಿಕೊಳ್ಳಲೇ ಬೇಕೆಂಬ ಕಟ್ಟುಪಾಡುಗಳಿಲ್ಲ. ಆದರೆ ಕೆಳವರ್ಗದ ಮನಸ್ಸುಗಳಿಗೆ ಇಂಥ ವಾದಸರಣಿಯನ್ನು ಅರೆದು ಕುಡಿಸಿಬಿಟ್ಟಿದ್ದಾರೆ. ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುವವರು ಸಾಮೂಹಿಕ ಸಹಭೋಜನ ಆಯೋಜಿಸಿ ಎಲ್ಲರೂ ಊಟ ಮಾಡಿ ಉಳಿದ ಎಂಜಲು ಎಲೆಯ ಮೇಲೆ ದಿನಪೂರ್ತಿ ಉರುಳುಸೇವೆ ಮಾಡಲು ಅವಕಾಶ ಮಾಡಿಕೊಡುವರೇ?

ಇಂಥ ಆಚರಣೆಗಳು ಶತಮಾನಗಳ ಹಿಂದೆ ಇದ್ದ ತಲೆ ಮೇಲೆ ಮಲಹೊರುವಂಥ ಮತ್ತು ಮಲತಿನ್ನಿಸುವಂಥ made-snanaಘಟನೆಯಷ್ಟೇ ಅಪಾಯಕಾರಿ.

ಈ ಆಚರಣೆಗಳು ನಿಲ್ಲಬಾರದು ಎನ್ನುವ ಮನಸ್ಸುಗಳು ಕೆಳವರ್ಗದವರ ಬಾಯಿಂದ ಇಂಥ ಮಾತುಗಳನ್ನು ಆಡಿಸುತ್ತಿವೆಯೇ ಹೊರತು ಆ ಜನ ತಮ್ಮ ಹೃದಯಾಂತರಾಳದಿಂದ ಹೇಳುತ್ತಿರುವ ಮಾತುಗಳಲ್ಲ. ಮಡೆಸ್ನಾನದ ಹರಕೆ ಹೇಳಿಕೊಳ್ಳುವ ಜನರು ಯಾವ ವರ್ಗದವರು ಎನ್ನುವುದನ್ನು ಅವಲೋಕಿಸಿದರೆ ಭಯಾನಕ ಸತ್ಯ ಬೆಳಕಿಗೆ ಬರುತ್ತದೆ.

ಇಂಥ ಆಚರಣೆಗಳು ಸರ್ಕಾರದ ಅಧೀನದ ದೇವಸ್ಥಾನದಲ್ಲೇ ನಡೆಯಲು ಅವಕಾಶವಾಗಿರುವುದು ವಿಪರ್ಯಾಸ. ಪುರೋಗಾಮಿ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಡೆಸ್ನಾನ ನಿಷೇಧಿಸುವ ಎದೆಗಾರಿಕೆ ತೋರಬೇಕಾಗಿದೆ. ಇಲ್ಲವಾದರೆ ನೂರಾರು ವರ್ಷಗಳ ಹಿಂದೆ ಚಲಾವಣೆಯಲ್ಲಿದ್ದ ಆಚರಣೆಗಳನ್ನು ಮತ್ತೆ ಜಾರಿಗೆ ತಂದು ದೇವರ `ಕೃಪೆ’ಗೆ ಪಾತ್ರರಾಗಲಿ.

ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರು ಅರ್ಚಕಿಯರಾಗುತ್ತಿರುವುದು…


– ಚಿದಂಬರ ಬೈಕಂಪಾಡಿ


 

ಮಂಗಳೂರು ದಸರಾ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮೂಲಕ ಈಗ ಮನೆ ಮಾತಾಗಿದೆ. ಸಾಮಾಜಿಕ ಸುಧಾರಕ ನಾರಾಯಣಗುರುಗಳ ಮೂಲಕ kudroli-temple-wodows-facilitated-poojaryಸ್ಥಾಪನೆಯಾದ ಈ ಕ್ಷೇತ್ರದಲ್ಲಿ ಈಗ ಬದಲಾವಣೆಯ ಬೆಳಕು ಕಾಣಿಸುತ್ತಿದೆ. ಇತಿಹಾಸ ಪ್ರಸಿದ್ಧಿ ಪಡೆದ ಈ ಕ್ಷೇತ್ರ ಈಗ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾಗಿದೆ. ವಿಧವೆಯರು ಸಾಮಾಜಿಕವಾಗಿ ಯಾವುದೇ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಸಮಾಜ ಸಮ್ಮತವಲ್ಲ. ಇದು ಮನುಷ್ಯರೇ ಹಾಕಿರುವ ಬಂಧನ. ಆದರೆ ಈ ಬಂಧವನನ್ನು ಕಳಚಿಕೊಂಡು ವಿಧವೆಯರು ಕೂಡಾ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು ಎನ್ನುವುದಷ್ಟೆ ಅಲ್ಲ, ದೇವರ ಪೂಜೆ ಮಾಡುವ ಅರ್ಚಕರ ಸ್ಥಾನಕ್ಕೂ ಅರ್ಹರು ಎನ್ನುವುದನ್ನು ಈ ಬಾರಿಯ ದಸರಾದಲ್ಲಿ ಜಾರಿಗೆ ತರಲಾಗುತ್ತಿದೆ.

ಇಬ್ಬರು ವಿಧವೆಯರು ಇನ್ನು ಮುಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾಶ್ವತ ಅರ್ಚಕರಾಗಿ ದೇವರ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಿದ್ದಾರೆ. ಈ ಮೊದಲು ವಿಧವೆಯರು ಗೋಕರ್ಣನಾಥ ಕ್ಷೇತ್ರದಲ್ಲಿ ರಥ ಎಳೆದಾಗ ಸಂಪ್ರದಾಯವಾದಿಗಳು ಹೌಹಾರಿದ್ದರು. ಮತ್ತೊಮ್ಮೆ ಈ ಕ್ಷೇತ್ರದಲ್ಲಿ ವಿಧವೆಯರೇ ಚಂಡಿಕಾಯಗದಲ್ಲಿ ಪಾಲ್ಗೊಳ್ಳುವ ಮೂಲಕ ವಿಧವೆಯರು ಅಮಂಗಳೆಯರಲ್ಲ ಎನ್ನುವ ಸಂದೇಶ ಸಾರಿದ್ದರು. ಈಗ ವಿಧವೆಯರು ಅರ್ಚಕರಾಗಿ ನಿತ್ಯವೂ ಇಲ್ಲಿ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ ಇಬ್ಬರು ವಿಧವೆಯರನ್ನು ಆಯ್ಕೆ ಮಾಡಿ ಕಳೆದ ಆರು ತಿಂಗಳಿನಿಂದ ಅರ್ಚಕರ ತರಬೇತಿ ಪಡೆಯುತ್ತಿದ್ದಾರೆ.

ಇದೆಲ್ಲವೂ ಸಾಧ್ಯವಾಗಿರುವುದು ಮಾಜಿ ಕೇಂದ್ರ ಸಚಿವ ಹಾಗೂ ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ.ಜನಾರ್ಧನ ಪೂಜಾರಿ ಅವರ ಛಲ ಮತ್ತು ಸ್ವತಂತ್ರ ನಿಲುವಿನಿಂದ.

ಶತಮಾನಗಳ ಇತಿಹಾಸವಿರುವ ಕುದ್ರೋಳಿ ಕ್ಷೇತ್ರವನ್ನು ನವೀಕರಿಸಲು ಜನಾರ್ಧನ ಪೂಜಾರಿ ಅವರು ಅದಕ್ಕಾಗಿ ನಾಡಿನಾದ್ಯಂತ ಸಂಚರಿಸಿ ಜನರಿಂದ kudroli-templeದೇಣಿಗೆ ಸಂಗ್ರಹಿಸಿದರು. ತಾವೇ ನವೀಕರಣದ ಸಂದರ್ಭದಲ್ಲಿ ಕಲ್ಲು, ಮಣ್ಣು ಹೊರುವ ಮೂಲಕ ಕರಸೇವೆಯಲ್ಲಿ ಜನಸಾಗರವೇ ಪಾಲ್ಗೊಳ್ಳುವಂತೆ ಮಾಡಿದರು. ಇದೆಲ್ಲವನ್ನೂ ಒಂದು ವರ್ಗ ಪೂಜಾರಿಯವರ ಇಮೇಜ್ ವೃದ್ಧಿಗೆಂದು ಗೇಲಿ ಮಾಡಿತ್ತು. ನಂತರ ಮಂಗಳೂರು ದಸರಾ ಮೆರವಣಿಗೆಗೆ ಹೊಸ ರೂಪಕೊಟ್ಟು ಪ್ರತೀ ವರ್ಷ ಅದ್ದೂರಿ ದಸರಾಕ್ಕೆ ಸ್ಫೂರ್ತಿಯಾಗಿದ್ದಾರೆ. ಇವಿಷ್ಟೇ ಆಗಿದ್ದರೆ ಮಾಮೂಲಿ ಅಂದುಕೊಳ್ಳಬಹುದಿತ್ತು.

ಶೂದ್ರರಿಗೆ ದೇವಸ್ಥಾನ ಮೆಟ್ಟಿಲು ಹತ್ತುವ ಅವಕಶಾವಿಲ್ಲ ಎನ್ನುವ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ಹಿಂದುಳಿದವರು ಅಸ್ಪೃಶ್ಯರಿಗೂ ದೇವಸ್ಥಾನಕ್ಕೆ ಹೋಗುವ ಹಕ್ಕಿದೆ, ದೇವರನ್ನು ಪೂಜಿಸುವುದಕ್ಕೆ ಅವಕಾಶವಿದೆ ಎನ್ನುವ ಮೂಲಕ ಈ ಕ್ಷೇತ್ರ ಸ್ಥಾಪನೆ ಮಾಡಿದರು ನಾರಾಯಣಗುರುಗಳು. ಮಾನವತಾವಾದದ ಪ್ರತಿಪಾದಕರಾಗಿ, ಮೇಲು-ಕೀಳು ಎನ್ನುವ ಮನುಷ್ಯ ನಿರ್ಮಿತ ಗೋಡೆಗಳನ್ನು ಕೆಡವಿ ಕೆಳವರ್ಗದವರಲ್ಲೂ ಸ್ವಾಭಿಮಾನದ ಬೀಜ ಬಿತ್ತಿದರು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೇವಲ ಆರಾಧನಾ ಸ್ಥಳವಾಗಲಿಲ್ಲ, ಸ್ವಾಭಿಮಾನದ ಪ್ರತೀಕವಾಗಿ ಬೆಳೆಯಿತು. ಈಗ ಅಂಥ ಸ್ವಾಭಿಮಾನವನ್ನು ಬೆಳೆಸುವ ಭಾಗವಾಗಿ hindu-widowವಿಧವೆಯರಿಗೂ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶವಿದೆ ಎನ್ನುವುದನ್ನು ಪ್ರತಿಪಾದಿಸಿದ ಜನಾರ್ಧನ ಪೂಜಾರಿ ವಿಧವೆಯರಿಂದಲೇ ರಥ ಎಳೆಯಿಸಿ ಕ್ರಾಂತಿಕಾರಿ ಹೆಜ್ಜೆಗೆ ನಾಂದಿಯಾದರು. ಚಂಡಿಕಾ ಯಾಗದಲ್ಲಿ ವಿಧವೆಯರೇ ಪಾಲ್ಗೊಳ್ಳುವಂತೆ ಮಾಡಿ ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ಮುಖದಲ್ಲಿ ಮುಗುಳು ನಗು ಅರಳಲು ಕಾರಣರಾದರು. ಹೆತ್ತ ತಾಯಿ ವಿಧವೆಯಾದರು ಮಕ್ಕಳಿಗೆ ಆಕೆ ಪೂಜ್ಯಳು ಎಂದು ಪ್ರತಿಪಾದಿಸುತ್ತೇವೆ. ಆದರೆ ಆಕೆಯನ್ನು ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸುತ್ತೇವೆ. ಮಾನಸಿಕವಾಗಿ ವಿಧವೆಯರನ್ನು ಕುಬ್ಜರಾಗಿಸುವ ನಮ್ಮ ನಂಬಿಕೆ, ಆಚರಣೆಗಳು ಅಮಾನವೀಯ ಎನ್ನುವ ಪರಿವೆಯೇ ಇಲ್ಲದವರಂತೆ ವರ್ತಿಸುತ್ತೇವೆ.

ಕನ್ನಡದ ಮೊಟ್ಟಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯ’ ಓರ್ವ ವಿಧವೆಯ ಬದುಕನ್ನು ಮನಮಿಡಿಯುವಂತೆ ಹೇಳುತ್ತದೆ. ಆಕೆಗೆ ಮರುಮದುವೆ ಮಾಡಿಸುವ ಮೂಲಕ ನಿಜವಾದ ಧರ್ಮದ ವಿಜಯ ಎನ್ನುವ ಸಂದೇಶ ಸಾರುತ್ತಾರೆ. ಶತಮಾನಗಳ ಹಿಂದೆಯೇ ಇಂಥ ಕ್ರಾಂತಿಕಾರಿ ನಿಲುವು ತಳೆಯುವ ಎದೆಗಾರಿಕೆ ಓರ್ವ ಲೇಖಕರು ತೋರಿಸಿದ್ದಾರೆ. ಸಂಪ್ರದಾಯ, ಆಚರಣೆಗಳೇ ಅತೀಮುಖ್ಯ ಎನ್ನುವ ಕಾಲಘಟ್ಟದಲ್ಲಿ ಗುಲ್ವಾಡಿ ಅವರು ಸಂಪ್ರದಾಯದ ಗೋಡೆ ಕೆಡವುವ ಸಾಹಸ ಮಾಡಿದ್ದರು.

ಜನಾರ್ಧನ ಪೂಜಾರಿ ಓರ್ವ ರಾಜಕಾರಣಿಯಾಗಿ ಕೇಂದ್ರದಲ್ಲಿ ಹಣಕಾಸು ಖಾತೆ ಮಂತ್ರಿಯಾಗಿ ಸಾಲಮೇಳ ನಡೆಸುವ ಮೂಲಕ ಸುದ್ದಿಯಾದರು ಎನ್ನುವುದು ಕ್ಲೀಷೆಯ ಮಾತಾಗುತ್ತದೆ. ಬಡವರು, ಮಹಿಳೆಯರು ಸ್ವಾವಲಂಬಿಯಾಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕವಾಗಿ ಸಾಲಮೇಳ ನಡೆಸುವ poojaryಮೂಲಕ ಬ್ಯಾಂಕಿನ ಬಾಗಿಲುಗಳು ಬಡವರಿಗೆ ಮುಕ್ತವಾಗುವಂತೆ ಮಾಡಿದವರು ಎನ್ನುವುದನ್ನು ನಿರಾಕರಿಸಲಾಗದು. ಈ ಸಾಲಮೇಳದ ಕಾನ್ಸೆಪ್ಟ್ ಪರಿಷ್ಕರಣೆಗೆ ಒಳಪಡಬೇಕಿತ್ತು ಎನ್ನುವುದು ಚರ್ಚೆಯ ಭಾಗವಾಗಿದ್ದರೂ ದೇಶದಲ್ಲಿ ಕ್ರಾಂತಿಕಾರಿ ಹೆಜ್ಜೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ಅಂತೆಯೇ ಮಂಗಳೂರು ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವೆಯರಿಗೆ ಪೂಜಾರಿ ಅವರು ಕಲ್ಪಿಸಿಕೊಟ್ಟಿರುವ ಹೊಸ ಅವಕಾಶಗಳು ಮತ್ತು ತೆಗೆದುಕೊಂಡಿರುವ ನಿಲುವುಗಳು ನಾರಾಯಣಗುರುಗಳ ತತ್ವ, ಆದರ್ಶ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳಿಗೆ ಪೂರಕ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಮನುಷ್ಯರೇ ಮಾಡಿದ ಕಟ್ಟುಪಾಡುಗಳಿಗೆ ದೇವರು ಪರಿಹಾರ ಕೊಡಲು ಸಾಧ್ಯವಿಲ್ಲ, ಮನುಷ್ಯರೇ ಪರಿಹಾರ ಕೊಡಬೇಕಾಗಿದೆ. ಮಂಗಳ ಕಾರ್ಯಗಳಿಂದ ದೂರ ಇಟ್ಟು ಸಂಪ್ರದಾಯದ ಹೆಸರಲ್ಲಿ ಪ್ರತ್ಯೇಕಿಸಿ, ಸಾಮಾಜಿಕ ಅಸಮಾನತೆಯಲ್ಲಿ, ಕಂದಾಚಾರಗಳ ಬೆಂಕಿಯಲ್ಲಿ ಬೇಯುವ ವಿಧವೆಯರ ವಿಚಾರದಲ್ಲಿ ಜನಾರ್ಧನ ಪೂಜಾರಿ ಅವರು ತಳೆದಿರುವ ನಿಲುವುಗಳು ಮನುಷ್ಯತ್ವ, ಮಾನವೀಯತೆಯನ್ನು ಪ್ರತಿಪಾದಿಸುವವರು ಮೆಚ್ಚಿದರೆ ಅತಿಶಯೋಕ್ತಿಯಲ್ಲ ಮತ್ತು ಅಪರಾಧವೂ ಅಲ್ಲ.

ಕಳಂಕಿತರಿಗೆ ಆಕಸ್ಮಿಕ ಹಿನ್ನಡೆ


– ಚಿದಂಬರ ಬೈಕಂಪಾಡಿ


 

ಕಳಂಕಿತರನ್ನು ರಕ್ಷಿಸುವ ಪ್ರಯತ್ನದಲ್ಲಿ ಕೇಂದ್ರ ಯುಪಿಎ ಸರ್ಕಾರ ಎಡವಟ್ಟು ಮಾಡಿಕೊಂಡಿತು. ತಾನೇ ಅವಸರವಾಗಿ ಜಾರಿಗೆ ತರಲುದ್ದೇಶಿಸಿದ್ದ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯುವ ಮೂಲಕ ಸೋಲೊಪ್ಪಿಕೊಂಡಿದೆ.

ನಿಜಕ್ಕೂ ಕಳಂಕಿತರಿಗೆ ಯುಪಿಎ ಸರ್ಕಾರದ ಈ ನಡೆ ಹಿನ್ನಡೆಯಾಗಿದೆ. ಹೇಗಾದರೂ ಸರಿ ತಾವು ಅಧಿಕಾರದಲ್ಲೇ ಉಳಿಯಬೇಕೆಂಬ ಧಾವಂತದ ಜೊತೆಗೆ ತಾವು ಏನೇ ಮಾಡಿದರೂ ಪ್ರಶ್ನಿಸುವಂತಿಲ್ಲ ಎನ್ನುವಂಥ ಮನಸ್ಥಿತಿಗೆ ಕಡಿವಾಣ ಬಿದ್ದಿದೆ.

ಪ್ರಧಾನಿ ಡಾ.ಮನಮೋಹನ್ ಸಿಂಗ್ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರಿರುವ ಅರ್ಥಶಾಸ್ತ್ರಪಂಡಿತರು ಹೊರತು ರಾಜಕೀಯ ಪಂಡಿತರಲ್ಲ obama-manamohansinghಎನ್ನುವುದು ಕೂಡಾ ಜಾಗತಿಕವಾಗಿ ಗೊತ್ತಿರುವ ಸಂಗತಿ. ಸೋನಿಯಾ ಗಾಂಧಿ ಅವರ ಇಶಾರೆಯಂತೇ ಕೆಲಸ ಮಾಡುವ ನಿಷ್ಠಾವಂಥರಲ್ಲಿ ಡಾ.ಮನಮೋಹನ್ ಮುಂಚೂಣಿಯಲ್ಲಿದ್ದಾರೆ. ಪ್ರಧಾನಿ ಪಟ್ಟವನ್ನು ಮನಮೋಹನ್ ಸಿಂಗ್ ಅವರ ಬದಲು ಅವರದ್ದೇ ಪಕ್ಷದ ಬೇರೆ ಯಾರಿಗಾದರೂ ಕಟ್ಟುತ್ತಿದ್ದರೆ ಇಷ್ಟುಹೊತ್ತಿಗೆ ಸ್ವತ: ಸೋನಿಯಾ ಅವರನ್ನು ಜೈಲಿಗೆ ಕಳುಹಿಸುತ್ತಿದ್ದರೇನೋ ಎನ್ನುವುದು ಅತಿಶಯೋಕ್ತಿಯಲ್ಲ. ಪ್ರಧಾನಿಯಂಥ ಒಂದೇ ಒಂದು ಅವಕಾಶ ಸಿಕ್ಕಿದರೆ ಅಮರಿಕೊಳ್ಳುತ್ತಿದ್ದರು. ನೆಲ, ಜಲವನ್ನು ಕೊಳ್ಳೆಹೊಡೆಯುವ ಈಗಿನ ಕಾಲದಲ್ಲಿ ಚಿನ್ನದಂಥ ಅವಕಾಶ ಸಿಕ್ಕಿದ್ದರೆ ಇನ್ನಷ್ಟು ಹಗರಣಗಳಿಗೇನೂ ಕೊರತೆಯಾಗುತ್ತಿರಲಿಲ್ಲ. ಆ ಮಟ್ಟಿಗೆ ಸೋನಿಯಾ ಕುಟುಂಬ ಬಚಾವ್ ಮನಮೋಹನ್ ಸಿಂಗ್ ಅವರಿಂದಾಗಿ.

ಕೇಂದ್ರ ಸರ್ಕಾರ ಅಧ್ಯಾದೇಶವನ್ನು ಹಿಂದಕ್ಕೆ ಪಡೆದಿರುವುದು ಒತ್ತಡದ ಕಾರಣಕ್ಕೆ, ಅದರಲ್ಲೂ ಕಾಂಗ್ರೆಸ್ ಯುವರಾಜನ ಕಾರಣಕ್ಕೆ ಎನ್ನುವುದು ಸ್ಪಷ್ಟ. ಈ ನಡೆಯಿಂದ ಯಾರು ಗೆದ್ದರು, ಯಾರು ಬಿದ್ದರು ಎನ್ನುವುದು ಬಹಳ ಮುಖ್ಯವೆನಿಸುತ್ತಿಲ್ಲ. ದೇಶದ ಜನರ ಮುಂದೆ ಕಳಂಕಿತರ ಮುಖಗಳು ಕೊನೆಗೂ ಅನಾವರಣವಾಗಲು ಸಾಧ್ಯವಾಯಿತು.

ಒಂದು ವೇಳೆ ಅಧ್ಯಾದೇಶವನ್ನು ಹಿಂದಕ್ಕೆ ಪಡೆಯದೇ ಇದ್ದಿದ್ದರೆ ಎರಡು ಅನಾಹುತಗಳು ಸಂಭವಿಸುತ್ತಿದ್ದವು. Rahul_Gandhi_Ajay_Makenಕಳಂಕಿತರನ್ನು ಮಟ್ಟ ಹಾಕುವುದು ಅಸಾಧ್ಯವಾಗುತ್ತಿತ್ತು. ಕಳಂಕಿತರನ್ನು ರಕ್ಷಣೆ ಮಾಡಿದ ಅಪಕೀರ್ತಿಗೆ ಯುಪಿಎ ಸರ್ಕಾರ ಭಾಗಿಯಾಗುತ್ತಿತ್ತು. ಕಳಂಕಿತರನ್ನು ಚುನಾವಣೆಯಿಂದ ದೂರ ಇಡಬೇಕೆಂದು ಚಿಂತನೆ ಮಾಡಿದ ರಾಜಕಾರಣಿಗಳು ಬಹುಬೇಗ ನೇಪಥ್ಯ ಸೇರಿಕೊಂಡಿದ್ದಾರೆ. ಕಳಂಕಿತರು ತಮ್ಮನ್ನು ದೂರ ಇಡುವ ಮನಸ್ಥಿತಿಯವರನ್ನು ಎಂದೆಂದಿಗೂ ಸಹಿಸುವುದಿಲ್ಲ. ಇದಕ್ಕೆ ಯಾರೂ ಹೊರತಲ್ಲ.

ಯಾವ ರಾಜ್ಯದ ಯಾವ ಪಕ್ಷದ ರಾಜಕಾರಣಿಯ ಚರಿತ್ರೆಯನ್ನು ಅವಲೋಕಿಸಿದರೂ ಒಂದಷ್ಟು ಕಪ್ಪು ಚುಕ್ಕೆಗಳು ಗೋಚರಿಸುತ್ತವೆ. ಖಾದಿಯಷ್ಟೇ ಶುಭ್ರ ಅವರ ಚಾರಿತ್ರ್ಯ ಅಂದುಕೊಳ್ಳುವುದು ಸುಲಭ ಸಾಧ್ಯವಿಲ್ಲ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಗಳು ರಾಜಕೀಯದಲ್ಲಿ ಚಲಾವಣೆಯಲ್ಲಿರಬೇಕಾದರೆ ಅನಿವಾರ್ಯ ಎನ್ನುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಹಸಿವೆಯನ್ನು ಸಹಿಸಿಕೊಂಡು ಸುಮ್ಮನಿದ್ದರೂ ಎಂಜಲು ಕೈಯನ್ನು ಮೂತಿಗೆ ಒರೆಸಿ ಹೊಟ್ಟೆತುಂಬಾ ಉಂಡಿರಬೇಕು ಎನ್ನುವಂತೆ ಮಾಡಿಬಿಡುತ್ತಾರೆ ಸ್ವಲ್ಪ ಯಾಮಾರಿದರೂ, ಇದಕ್ಕೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಮೇಲಿನ ಆಪಾದನೆಗಳೇ ಸಾಕ್ಷಿ. ಹಾಗೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ, ಅದು ಈ ಬರಹದ ಉದ್ದೇಶವೂ ಅಲ್ಲ. ಜಿ ಕೆಟಗರಿ ಸೈಟಿನಿಂದ ಹಿಡಿದು ಅರಣ್ಯ, ಕೆರೆ, ಗೋಮಾಳ ಒತ್ತುವರಿ ತನಕ ತಮ್ಮವರ ಹೆಸರಲ್ಲಿ ಕಬ್ಜ ಮಾಡಿಕೊಂಡಿರುವ ರಾಜಕಾರಣಿಗಳನ್ನು ಮತ್ತೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟರೆ ಮುಂದೊಂದು ದಿನ ಈ ದೇಶದ ಪ್ರತಿಯೊಂದು ಇಂಚು ಭೂಮಿಯೂ ರಾಜಕಾರಣಿಗಳ ಕುಟುಂಬದವರ ಪಾಲಾಗಿರುತ್ತದೆ. ಭೂಮಿತಿ ಕಾಯಿದೆಯನ್ನು ಜಾರಿಗೆ ತಂದಿದ್ದರೆ ರಾಜಕಾರಣಿಗಳ ಬಣ್ಣ ಬಯಲಾಗುತ್ತಿತ್ತು, ಆದ ಕಾರಣವೇ ಅಂಥ ಕಾಯಿದೆ ಯಾರ ತಲೆಯೊಳಗೆ ಸುಳಿಯದಂತೆ ಮಾಡಿದ್ದಾರೆ. ಸಮಾಜದ ಕಟ್ಟ ಕಡೆಯ ದಟ್ಟ ದರಿದ್ರರ ಭೂಮಿಯನ್ನು ಕಬ್ಜ ಮಾಡಿಕೊಂಡವರು ಮಾಧ್ಯಮಗಳ ಬೆಳಕಲ್ಲಿ ಹೊಳೆಯುತ್ತಾರೆ, ಅವರೂ ಸಾಮಾಜಿಕ ನ್ಯಾಯದ ಬಗ್ಗೆ ನೀತಿ ಪಾಠ ಹೇಳುತ್ತಾರೆ. ಇಂಥವರನ್ನು ಅಧ್ಯಾದೇಶ ಜಾರಿಗೆ ತಂದು ರಕ್ಷಣೆ ಮಾಡಿದರೆ ದೇವರು ಮುನಿಸಿಕೊಳ್ಳುತ್ತಿದ್ದ ಖಂಡಿತಕ್ಕೂ. ಯಾಕೆಂದರೆ ದೇವಸ್ಥಾನವನ್ನೇ ಕಬ್ಜ ಮಾಡಿಕೊಂಡ ಉದಾಹರಣೆಗಳು ಕಣ್ಣಮುಂದಿವೆಯಲ್ಲವೇ?

ಪಕ್ಷದ ಅಂಗಿತೊಟ್ಟುಕೊಂಡಿರುವವರು ಅದನ್ನು ಕಳಚಿ ಯೋಚಿಸಿದರೆ ಕಾಂಗ್ರೆಸ್, ಬಿಜೆಪಿ ಅಥವಾ ಮತ್ತೊಂದು ಪಕ್ಷದ ನಡುವೆ shettar-yed-sada-eshwar-ananthಭ್ರಷ್ಟಾಚಾರ, ಸ್ವಜನಪಕ್ಷಪಾತ, ಕ್ರಿಮಿನಲ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿಕೆ ಇಂಥ ವಿಚಾರಗಳಲ್ಲಿ ಅಷ್ಟೇನೂ ವ್ಯತ್ಯಾಸ ಗುರುತಿಸಲಾಗದು. ಯಾಕೆಂದರೆ ಎಲ್ಲರ ಗುರಿ ಒಂದೇ. ವೇಗದಲ್ಲಿ ವ್ಯತ್ಯಾಸವಿರಬಹುದೇ ಹೊರತು ಸಾಗುವ ದಿಕ್ಕು ಎಲ್ಲರದ್ದೂ ಒಂದೇ ಆಗಿರುತ್ತದೆ. ಸಾಮಾಜಿಕ ನ್ಯಾಯ, ಸರ್ವರಿಗೂ ಸಮಪಾಲು, ಸಮಬಾಳು. ಹಂಚಿ ತಿಂದರೆ ಸ್ವರ್ಗ ಸುಖ ಎನ್ನುವುದನ್ನು ಎಲ್ಲರೂ ಅರಿತಿದ್ದಾರೆ. ಆದ್ದರಿಂದಲೇ ದಿಲ್ಲಿಯಿಂದ ಹಿಡಿದು ಬೆಂಗಳೂರು ತನಕ ಅದೆಷ್ಟು ಜನ ರಾಜಕಾರಣಿಗಳು ಜೈಲಲ್ಲಿ ರಾತ್ರಿ ಕಳೆದು ಬರುತ್ತಿದ್ದಾರೆ, ಕೋರ್ಟ್ ಮೆಟ್ಟಿಲು ಹತ್ತಿ-ಇಳಿಯುತ್ತಿದ್ದಾರೆ. ಇಂಥವರನ್ನು ಪ್ರಶ್ನೆ ಮಾಡಬಾರದು, ಪ್ರಶ್ನೆ ಮಾಡುವುದು ತಪ್ಪು ಎನ್ನುವ ಮನಸ್ಥಿತಿಯರನ್ನು ಏನೆಂದು ಕರೆಯಬೇಕು?

ಈ ಅಧ್ಯಾದೇಶ ರದ್ಧಾದ ಕ್ರೆಡಿಟ್ ಯಾರು ತೆಗೆದುಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಕಳಂಕಿತರನ್ನು ರಕ್ಷಿಸಬೇಕಿತ್ತು ಎನ್ನುವ ಜನರನ್ನು ತುಂಬಾ ಜಾಗರೂಕರಾಗಿ ನೋಡಿ. ಇವರು ಕಳಂಕಿತರಿಗಿಂತಲೂ ಅಪಾಯಕಾರಿಗಳು.

ರಾಹುಲ್ ಮತ್ತು ಅಧ್ಯಾದೇಶ : ಯಾರ ಮೌನಕ್ಕೆ ಯಾವ ಅರ್ಥ?


– ಚಿದಂಬರ ಬೈಕಂಪಾಡಿ


 

ದೇಶದ ಜನ ಅದೆಷ್ಟು ರೋಸಿ ಹೋಗಿದ್ದಾರೆ ಎನ್ನುವುದಕ್ಕೆ ಕಳಂಕಿತರನ್ನು ರಕ್ಷಿಸುವ ಉದ್ದೇಶದಿಂದ ಯುಪಿಎ ಸರ್ಕಾರ ಅಧ್ಯಾದೇಶ ಜಾರಿಗೆ ತಂದಾಗ ವ್ಯಕ್ತವಾದ ಪ್ರತಿಕ್ರಿಯೆಗಳೇ ಸಾಕ್ಷಿ. ಸದಾ ಮಗುಮ್ಮಾಗಿರುವ ದೇಶದ ಪ್ರಧಾನಿ ಕೂಡಾ ಒಂದು ಕ್ಷಣಕ್ಕೆ ಸೆಟೆದಂತೆ ಕಂಡು ಬಂದರು. ಅದಕ್ಕೆ rahul-gandhi-ordinanceರಾಹುಲ್ ಹರಿಹಾಯ್ದದ್ದೇ ಕಾರಣ. ಬೇರೆ ಯಾರಾದರೂ ಅದ್ಯಾದೇಶವನ್ನು ಹರಿದು ಹಾಕಲು ಲಾಯಕ್ಕು ಎಂದಿದರೆ ಪ್ರಧಾನಿ ಗಡ್ಡದ ಮರೆಯಲ್ಲಿ ನಕ್ಕು ಹಗುರಾಗುತ್ತಿದ್ದರೇನೋ?

ರಾಹುಲ್ ಸರ್ಕಾರದ ಅಧ್ಯಾದೇಶ ಹೊರಬೀಳುವ ತನಕವೂ ಸುಮ್ಮನಿದ್ದು ಕಾಂಗ್ರೆಸ್ ಪಕ್ಷದ ನಾಯಕನಾಗಿ ಚೀರಾಡಿರುವುದನ್ನು ಬುದ್ಧುವಂತಿಕೆ ಅನ್ನಿ, ದಡ್ಡತನ ಅಂತಾದರೂ ಕರೆಯಿರಿ, ಆದರೆ ಕಳಂಕಿತರನ್ನು ರಕ್ಷಿಸುವ ಪ್ರಕ್ರಿಯೆಗೆ ತಡೆಬಿತ್ತು ಎನ್ನಲು ಅಡಿಯಿಲ್ಲ. ಯಾಕೆಂದರೆ ರಾಹುಲ್ ಅವರನ್ನು ಹೀರೋ ಎಂದಾಕ್ಷಣ ಕೆಲವರು ಮೈಮೇಲೆ ದೆವ್ವ ಬಂದಂತೆ ಪ್ರತಿಕ್ರಿಯಿಸಿ ತಮ್ಮ ಒಂದು ಸಾಲಿನ ಅನಿಸಿಕೆ ಮೂಲಕ ಘನಂಧಾರಿ ಚಿಂತಕರೆನಿಸಿಕೊಳ್ಳುತ್ತಾರೆ. ಆದರೆ ತಮ್ಮ ಪ್ರತಿಕ್ರಿಯೆ ವಿದೂಷಕ ಹಾಸ್ಯಕ್ಕಿಂತಲೂ ಕನಿಷ್ಠದ್ದು ಎನ್ನುವ ಅರಿವಿಯೇ ಇಲ್ಲ ಎನ್ನುವುದು ಮಾತ್ರ ವಾಸ್ತವ.

ರಾಹುಲ್ ಯಾಕೆ ಸರ್ಕಾರದ ವಿರುದ್ಧ ಹರಿಹಾಯ್ದರು ಎನ್ನುವುದನ್ನು ತಮ್ಮ ವಿವೇಚನೆ ಮೂಲಕ ಮತ್ತಷ್ಟು ಒಳನೋಟ ಕೊಡುವ ಬುದ್ಧಿವಂತಿಕೆ ತೋರಿಸಿದರೆ ಸಾಮಾಜಿಕ ತಾಣಗಳಲ್ಲಿ ಬರುವ ಬರಹಗಳಿಗೂ ಹೆಚ್ಚು ಅರ್ಥಬರುತ್ತದೆ.

ಒಂದು ವೇಳೆ ರಾಹುಲ್ ಗಾಂಧಿ ಮೌನವಾಗಿರುತ್ತಿದ್ದರೆ ಇಷ್ಟುಹೊತ್ತಿಗೆ ಅಧ್ಯಾದೇಶದ ಪ್ರಯೋಜನವನ್ನು ಕಳಂಕಿತರು ಪಡೆದುಕೊಳ್ಳುತ್ತಿರಲಿಲ್ಲವೇ ಎನ್ನುವುದು ಮುಖ್ಯವೇ ಹೊರತು ಅವರ ನಡೆಯಲ್ಲಿ ಬುದ್ಧಿವಂತಿಕೆಯೋ, ಕುಟಿಲ ತಂತ್ರವೋ ಎನ್ನುವುದು ಚರ್ಚೆಗೆ ಸೂಕ್ತವಾದ ವಿಚಾರ. ಕಳಂಕಿತರು ಎನ್ನುವ ಪದಕ್ಕೇ ಸರಿಯಾದ ವಿವರಣೆ ಇನ್ನೂ ಸಿಕ್ಕಿಲ್ಲ. lalu_prasad_yadavಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ ಅಂಶಳನ್ನು ಮಾತ್ರ ಪ್ರಸ್ತಾಪಿಸಿ ಹೇಳುವುದಾದರೆ ಸಧ್ಯಕ್ಕೆ ಸಮಾಧಾನಪಟ್ಟುಕೊಳ್ಳಬಹುದು.

ಸಂಸತ್ ಸದಸ್ಯರಾಗಿ, ಶಾಸಕರಾಗಿ ಒಂದು ಅವಧಿ ಮುಗಿಸುವಷ್ಟರಲ್ಲಿ ಅವರ ಆದಾಯದ ಮೂಲಗಳಲ್ಲಿ ಹಲವು ಟಿಸಿಲುಗಳು ಕಾಣಿಸಿಕೊಂಡು ಬಿಡುತ್ತವೆ. ಚುನಾವಣೆ ಕಾಲದಲ್ಲಿ ಘೋಷಣೆ ಮಾಡಿದ್ದ ಒಟ್ಟು ಸಂಪತ್ತಿನ ಗಾತ್ರ ಮೂರು ಪಟ್ಟಾಗಿರುತ್ತದೆ. ಇದು ಹೇಗೆ ಸಾಧ್ಯವಾಗುತ್ತದೆ ಎನ್ನುವ ಮೂಲವನ್ನು ಶೋಧಿಸಿದರೆ ಭ್ರಷ್ಟಾಚಾರದ ವಾಸನೆ ಮೂಗಿಗೆ ಬಡಿಯದೆ ಇರಲಾರದು. ಕ್ರಿಮಿನಲ್ ಎನ್ನುವುದೂ ಕೂಡಾ ಈಗಿನ ರಾಜಕಾರಣದಲ್ಲಿ ತೀರಾ ಸಹಜ ಎನ್ನುವಂತಾಗಿದೆ. ಈಗಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಹಣ ಹೊಂದಿಸಿಕೊಳ್ಳುವುದು ಕಷ್ಟದ ಕೆಲಸ ಎನ್ನುವ ಅಭಿಪ್ರಾಯ ಕೊಡುವ ರಾಜಕಾರಣಿಗಳೂ ಇದ್ದಾರೆ. ಅವರ ಮನಸ್ಥಿತಿಯನ್ನು ತಳ್ಳಿಹಾಕುವಂತಿಲ್ಲ. ಚುನಾವಣಾ ಆಯೋಗ ಕೈಗೊಳ್ಳುವ ಕಠಿಣ ಕಣ್ಗಾವಲಿನ ಹೊರತಾಗಿಯೂ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುವುದು ಕಣದಲ್ಲಿದ್ದವರಿಗೆ ಅನಿವಾರ್ಯ ಹಾಗೂ ಅವರು ಅಂಥ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಾರೆ. ಹಣ ಖರ್ಚು ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ಪಕ್ಷ ಹಿಂದೆ ಬೀಳುವುದು ಈಗಿನ ಚುನಾವಣೆ ವ್ಯವಸ್ಥೆಯಲ್ಲಿ ಅಸಾಧ್ಯ ಎನ್ನುವುದನ್ನು ನಿರಾಕರಿಸುವಿರಾ?

ರಾಜಕೀಯ ಸಮಾಜ ಸೇವೆಗೆ ಎನ್ನುವ ಕಾಲ ಇದಲ್ಲ. ಬಹುತೇಕ ಮಂದಿಗೆ ರಾಜಕೀಯ ಒಂದು ವೃತ್ತಿ, ಅದುವೇ ಅವರ ಉದ್ಯೋಗವಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕಲು ಮುಂದಾದ ಅಣ್ಣಾ ಹಜಾರೆ ಕೂಡಾ ಕೆಲವೇ ತಿಂಗಳುಗಳಲ್ಲಿ ಹತಾಶರಾದರು ಯಾಕೆ? ಅಣ್ಣಾ ಅವರ ಯೋಚನೆ, ಚಿಂತನೆ, ಸೈದ್ಧಾಂತಿಕ ನಿಲುವು ಛಿದ್ರವಾಗುವುದಕ್ಕೆ ಕಾರಣಗಳು ಹಲವು. ಬಾಬಾ ರಾಮ್‌ದೇವ್ ಅಣ್ಣಾ ಅವರ ಜೊತೆ ಕೈಜೋಡಿಸಲು ಮುಂದಾದಾಗ ಏನಾಯಿತು? ಪರಸ್ಪರ ಅಪನಂಬಿಕೆ, ಗುಮಾನಿಯಿಂದ ನೋಡುವ ಸನ್ನಿವೇಶ ನಿರ್ಮಾಣವಾಯಿತು.

ಭ್ರಷ್ಟಾಚಾರವನ್ನು ತೊಡೆದು ಹಾಕುವುದು, ಕ್ರಿಮಿನಲ್‌ಗಳನ್ನು ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರತ್ಯೇಕಿಸುವುದು rasheed-masood-first-lawmaker-to-be-disqualified-from-parliamentಸುಲಭದ ಕೆಲಸವಲ್ಲ ಎನ್ನುವುದು ನನ್ನ ಅನಿಸಿಕೆ. ಇದಕ್ಕೆ ನನಗಿರುವ ಮಿತಿಯೂ ಕಾರಣವಿರಬಹುದು ಅಥವಾ ಬೌದ್ಧಿಕವಾಗಿ ಆಸ್ಥಾನ ಪಂಡಿತರಿಗೆ ಇರುವ ಚಾಣಾಕ್ಷತೆಯ ಕೊರತೆಯೂ ಇರಬಹುದು. ಆದರೆ ಅನಿಸಿಕೆ ಹೇಳಿಕೊಳ್ಳಲು ಸರ್ವ ಸ್ವತಂತ್ರ ಎನ್ನುವುದನ್ನು ಬೇರೆಯವರು ಹೇಳಬೇಕಾಗಿಲ್ಲ.

ಈ ಮಾತು ರಾಹುಲ್ ಗಾಂಧಿ ಅವರ ನಡೆಯ ಬಗ್ಗೆ ನಾನು ಹೇಳುವ ಮಾತಿಗೂ ಅನ್ವಯಿಸುತ್ತದೆ. ರಾಹುಲ್ ಗಾಂಧಿ ಈ ದೇಶದ ಮಹಾನ್ ನಾಯಕರ ವ್ಯಕ್ತಿತ್ವಕ್ಕೆ ಸರಿಸಮಾನ ಎನ್ನುವಷ್ಟು ಮೂರ್ಖತನವನ್ನು ಯಾರೂ ಪ್ರದರ್ಶಿಸಬಾರದು. ಆದರೆ ರಾಜಕೀಯವಾಗಿ ಅವರ ಇಂಥ ನಡೆಗಳನ್ನು ಒಪ್ಪಿಕೊಳ್ಳಲೇಬೇಕು ಎನ್ನುವುದಾಗಲೀ, ಅದನ್ನು ಚರ್ಚೆಗೆ ಒಳಪಡಿಸಬಾರದು ಎನ್ನುವುದಾಗಲೀ ಸರಿಯಲ್ಲ. ಅಧ್ಯಾದೇಶವನ್ನು ತಿರಸ್ಕರಿಸಲಾಗದೇ, ಒಪ್ಪಿಕೊಳ್ಳುವುದಕ್ಕೂ ಆಗದೆ ಸಂಕಟಪಟ್ಟುಕೊಳ್ಳುತ್ತಿದ್ದ ರಾಜಕೀಯ ನಾಯಕರನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?

ಅಧ್ಯಾದೇಶ ಸರ್ಕಾರದ ನಿಲುವು, ರಾಹುಲ್ ಗಾಂಧಿ ಅವರ ಅನಿಸಿಕೆ ಪಕ್ಷದ್ದು ಎನ್ನುವ ಮೂಲಕ ಎರಡನ್ನೂ ಪ್ರತೇಕಿಸುವ ಈಗಿನ ಪ್ರಯತ್ನವನ್ನು ಬುದ್ಧಿವಂತರು ಚರ್ಚಿಸಬೇಕಾಗಿದೆ.

ರಾಹುಲ್ ಹೊರತಾಗಿ ಬೇರೆ ಯಾರೇ ಆದರೂ ಅಧ್ಯಾದೇಶದ ವಿರುದ್ಧ ಧ್ವನಿಎತ್ತಿದ್ದರೆ ಇಷ್ಟು ಹೊತ್ತಿಗೆ ಅವರ ಸ್ಥಿತಿ ಏನಾಗುತ್ತಿತ್ತು ಕಾಂಗ್ರೆಸ್ ಪಕ್ಷದಲ್ಲಿ? ಅಥವಾ ಯುಪಿಎ ಸರ್ಕಾರದಲ್ಲಿ? ಪಕ್ಷ ಮತ್ತು ಸರ್ಕಾರ ಎರಡರಲ್ಲೂ ರಾಹುಲ್ ಗಾಂಧಿಗೆ ಹಿಡಿತವಿದೆ ಎನ್ನುವುದು ಅಪರಾಧವಲ್ಲ. ಪ್ರತಿಪಕ್ಷಗಳು ಧ್ವನಿ ಎತ್ತಿದ್ದರೂ ಯುಪಿಎ ಸರ್ಕಾರ ತನ್ನ ನಿಲುವು ಸಡಿಲಿಸುತ್ತಿತ್ತು ಎನ್ನಲಾಗದು. ಅಂಥ ಧ್ವನಿ ದುರಾದೃಷ್ಟಕ್ಕೆ ಪ್ರತಿಪಕ್ಷಗಳಿಂದ ಕೇಳಿಬರಲಿಲ್ಲ. ಹಾಗಾದರೆ ಈ ಮೌನದ ಅರ್ಥವೇನು?

ಕಳಂಕಿತರನ್ನು ರಕ್ಷಿಸುವಂಥ ಅಧ್ಯಾದೇಶವನ್ನು ಕಸದ ಬುಟ್ಟಿಗೆ ಹಾಕಿಸುವುದಕ್ಕೆ ಯಾರ ಪಾತ್ರ ಎಷ್ಟು ಎನ್ನುವುದನ್ನು ಚರ್ಚಿಸಲು ಇದು ಸಕಾಲವಲ್ಲವೇ?