Category Archives: ಜಗದೀಶ್ ಕೊಪ್ಪ

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-9)


– ಡಾ.ಎನ್.ಜಗದೀಶ್ ಕೊಪ್ಪ


 

The greatest of evils and the worst of crimes is poverty. -Bernard Shaw

ಶ್ರೀಕಾಕುಳಂ ಜಿಲ್ಲೆಯನ್ನು ಬೆಂಕಿ ಮತ್ತು ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟ, ಹೇಳಲು ಬಾಯಿಲ್ಲದೆ, ಎದುರಿಸಲು ಆತ್ಮ ಸ್ಥೈರ್ಯವಿಲ್ಲದೆ, ನರಳಿದ್ದ ಬುಡಕಟ್ಟು ಜನಾಂಗದ ಪುರುಷರು ಹಾಗೂ  ಮಹಿಳೆಯರಿಗೆ ಅನಿರೀಕ್ಷಿತವಾಗಿ ಸ್ವಾಭಿಮಾನದ ಬದುಕನ್ನು ಅವರೆದುರು ಅನಾವರಣಗೊಳಿಸಿತ್ತು. ಅದೇ ರೀತಿ ಪಟ್ಟಭದ್ರ ಹಿತಾಶಕ್ತಿಗಳ ಬೇರುಗಳನ್ನು ಬುಡಸಮೇತ ಅಲುಗಾಡಿಸಿತು.
ಜನಸಾಮಾನ್ಯರು ನಡೆಸಿದ ಪಂಚಾಯಿತಿ ಸಭೆಯಲ್ಲಿ ಕೈಕಟ್ಟಿ ನಿಂತು ಅವರು ಒಮ್ಮತದಿಂದ ನೀಡುವ ತೀರ್ಪಿಗೆ ಭೂಮಾಲಿಕರು, ದಲ್ಲಾಳಿಗಳು, ಬಡ್ಡಿ ವ್ಯಾಪಾರದ ಸಾಹುಕಾರರು ಪ್ರತಿರೋಧವಿಲ್ಲದೆ ತಲೆಬಾಗಿದರು.

1969 ರ ಮೆ11 ರಂದು ಪತನಪಟ್ನಂ ತಾಲೂಕಿನ ಎತಮನಗುಡ ಎಂಬ ಹಳ್ಳಿಯ ಜಮೀನ್ದಾರನಾದ ಐವತ್ತು ವರ್ಷದ ಪಿ.ಜಮ್ಮುನಾಯ್ಡು ಎಂಬಾತನನ್ನು 200 ಮಂದಿ ಹೋರಾಟಗಾರರು ಅವನ ಮನೆಯಿಂದ ಅನಾಮತ್ತಾಗಿ ಎತ್ತಿ ಹಾಕಿಕೊಂಡು ಬಂದು, ಪಂಚಾಯಿತಿ ಸಭೆ ಮುಂದೆ ನಿಲ್ಲಿಸಿದರು. ಈತನಿಗೆ ಏಳು ಮಂದಿ ಪತ್ನಿಯರು ಅವರಲ್ಲಿ ಇವನು ಅಪಹರಿಸಿಕೊಂಡು ಹೋಗಿದ್ದ ಬುಡಕಟ್ಟು ಜನಾಂಗದ ನಾಲ್ವರು ಮಹಿಳೆಯರಿದ್ದರು. ಆ ನಾಲ್ವರಲ್ಲಿ ಇಬ್ಬರು, ಇನ್ನೂ ಅಪ್ರಾಪ್ತ ಬಾಲಕಿಯರು. ಈತ ಪೊಲೀಸರ ಬೆಂಬಲದಿಂದ ಆದಿವಾಸಿಗಳ 600 ಎಕರೆಗೂ ಹೆಚ್ಚು ಭೂಮಿಯನ್ನು ಕಬಳಿಸಿದ್ದ. ಸಭೆಯಲ್ಲಿ ಆತನಿಗೆ ಅವನ ಸಹೋದರರು ಮತ್ತು ಪತ್ನಿಯರ ಎದುರೇ, ಸಾವಿನ ಶಿಕ್ಷೆಯನ್ನು ವಿಧಿಸಲಾಯಿತು. ಜಮೀನ್ದಾರನ ರುಂಡ ಮುಂಡವನ್ನು ಎಲ್ಲರೆದುರು ಬೇರ್ಪಡಿಸಿ, ರುಂಡವನ್ನು ಊರಿನ ಮಧ್ಯಭಾಗದಲ್ಲಿ ಕೆಂಪು ಧ್ವಜದೊಂದಿಗೆ ನೇತು ಹಾಕಲಾಯಿತು.

ಮತ್ತೊಂದು ಘಟನೆಯಲ್ಲಿ ಬಡ್ಡಿ ವ್ಯಾಪಾರಿಯೊಬ್ಬನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಈತ ಆದಿವಾಸಿಗಳಿಗೆ ವರ್ಷವೊಂದಕ್ಕೆ ಒಂದು ರೂಪಾಯಿಗೆ ಪ್ರತಿಯಾಗಿ ಐದು ರೂಪಾಯಿ ಬಡ್ಡಿ ಹಣ ಕಲೆ ಹಾಕುತ್ತಿದ್ದ. ನೂರು ರೂಪಾಯಿ ಪಡೆದ ಬಡರೈತ ವರ್ಷ ತುಂಬಿದ ನಂತರ ಈತನಿಗೆ ಆರು ನೂರು ನೀಡಬೇಕಾಗಿತ್ತು. ಈ ಬಡ್ಡಿ ವ್ಯಾಪಾರಿ ಆದಿವಾಸಿ ರೈತರಿಂದ ಹಣದ ಬದಲು ಅವರು ಕಾಡಿನಲ್ಲಿ ಕಲೆ ಹಾಕುತ್ತಿದ್ದ ಹುಣಸೆ ಹಣ್ಣನ್ನು ಪಡೆಯುತ್ತಿದ್ದ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1600 ರೂ. ಇದ್ದರೆ, ಈ ವ್ಯಾಪಾರಿ ಆದಿವಾಸಿ ರೈತರಿಂದ ಕೇವಲ 600 ರೂ. ಗಳಿಗೆ ಪಡೆಯುತ್ತಿದ್ದ. ಸಾಲದ ಸುಳಿಗೆ ಸಿಲುಕಿದ ಆದಿವಾಸಿಗಳು, ಅವನು ಕೇಳಿದ ಬೆಲೆಗೆ ಹುಣಸೆ ಹಣ್ಣನ್ನು ನೀಡಿ ಸಾಲದಿಂದ ವಿಮುಕ್ತಿಯಾಗುತ್ತಿದ್ದರು. ವಿಚಾರಣೆಯಲ್ಲಿ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡು, ಬಡ್ಡಿ ಹಣವನ್ನು ಹಿಂತಿರುಗಿಸಲು ಒಪ್ಪಿ. ಪ್ರಾಣ ಭಿಕ್ಷೆಗೆ ಅಂಗಲಾಚಿದ ಫಲವಾಗಿ, ವ್ಯಾಪಾರಿಗೆ ದಂಡವಿಧಿಸಿ ಬಿಡುಗಡೆಗೊಳಿಸಲಾಯಿತು.

ಇಂತಹ ವಿವೇಚನೆಯ ತೀರ್ಮಾನಗಳ ನಡುವೆಯೂ, ಹೋರಾಟದ ಸಂಭ್ರಮದಲ್ಲಿ ಉದ್ರಿಕ್ತರಾಗಿದ್ದ ಆದಿವಾಸಿಗಳಿಗೆ ಎಲ್ಲಾ ರೀತಿಯ ವಿವೇಚನೆ ಹಾಗೂ ಮಾನವೀಯತೆಯ ಗುಣಗಳು ಮಾಯವಾಗಿದ್ದವು. ಸೇಡಿನ ಜ್ವಾಲೆ ಅವರ ಮುಖದಲ್ಲಿ ಹತ್ತಿ ಉರಿಯುತ್ತಿತ್ತು. ಸೂರ್ಯ ಚಂದ್ರ ಇರುವವರೆಗೂ ಪಟ್ಟಭದ್ರ ಹಿತಾಶಕ್ತಿಗಳು ನಮ್ಮ ತಂಟೆಗೆ ಬರಬಾರದು ಎಂಬ ಪಾಠವನ್ನು ಅವರಿಗೆ ಕಲಿಸುವ ಹಠಮಾರಿತನವಿತ್ತು. ಹಿಂಸೆಗೆ ಹಿಂಸೆಯೇ ಪ್ರತ್ತ್ಯುತ್ತರ ಎಂಬ ಕಟು ನಿರ್ಧಾರ ಸಹ ಅವರಲ್ಲಿ ಬೇರೂರಿತ್ತು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅಗ್ನಿ ಪರ್ವತದ ಜ್ವಾಲೆಯಂತೆ ಭುಗಿಲೆದ್ದ ಆದಿವಾಸಿಗಳ ಪ್ರತಿಭಟನೆಗೆ ನಾಗರಿಕ ಜಗತ್ತು ಬೆಚ್ಚಿಬಿದ್ದಿತು. ಆಂಧ್ರ ಸರ್ಕಾರಕ್ಕೆ ಏನೂ ತೋಚದಂತಾಯಿತು. ಏಕೆಂದರೆ, ಹೋರಾಟಗಾರರು ನಡೆಸುತ್ತಿದ್ದ ನರಹತ್ಯೆಗೆ, ಸ್ವತಃ ಪೊಲೀಸರೇ ನಡುಗಿ ಹೋಗಿದ್ದರು. ಇದರಿಂದಾಗಿ ಹೋರಾಟದ ಜ್ವಾಲೆ ಕಾಡ್ಗಿಚ್ಚಿನಂತೆ ಆಂಧ್ರದ ಇತರೆ ಜಿಲ್ಲೆಗಳಾದ ಕಮ್ಮಮ್, ವಾರಂಗಲ್, ಅದಿಲಾಬಾದ್, ಕರೀಂನಗರದ ಪ್ರದೇಶಗಳಿಗೂ ಹರಡಿತು ಟಿ.ನಾಗಿರೆಡ್ಡಿ ಎಂಬ ನಾಯಕ ಈ ಜಿಲ್ಲೆಗಳಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ. ನಕ್ಸಲ್ ಚಳವಳಿ ಕೇವಲ ಐದು ತಿಂಗಳ ಅವಧಿಯಲ್ಲಿ ತೆಲಂಗಾಣ ಪ್ರಾಂತ್ಯದ 10 ಸಾವಿರ ಚದುರ ಕಿ.ಮಿ. ವ್ಯಾಪ್ತಿಯ ಹಳ್ಳಿಗಳಿಗೆ ಹರಡಿ, ನಾಲ್ಕು ಲಕ್ಷ ಜನ ಹೋರಾಟಕ್ಕೆ ಕೈ ಜೋಡಿಸಿದರು.

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಆಂಧ್ರ ಸರ್ಕಾರ, ಹೋರಾಟಕ್ಕೆ ಸಂಬಂಧಿಸಿದಂತೆ 1969 ರ ಡಿಸಂಬರ್ ತಿಂಗಳಿನಲ್ಲಿ ನಾಗಿರೆಡ್ಡಿ ಸೇರಿದಂತೆ ಏಳು ಜನ ಪ್ರಮುಖ ನಾಯಕರನ್ನು ಬಂಧಿಸಿತು. ನಾಗಿರೆಡ್ಡಿಯ ಬಂಧನದ ನಂತರ ಅವನ ಅನುಪ ಸ್ಥಿತಿಯಲ್ಲಿ ಚಂದ್ರಪುಲ್ಲ ರೆಡ್ಡಿ ಹೋರಾಟವನ್ನು ಮುನ್ನಡೆಸಿದನು. ಹಿಂಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1969 ರ ಆಗಸ್ಟ್ ತಿಂಗಳ 12 ರಂದು. ಆಂಧ್ರ ಸರ್ಕಾರ ವಿಶಾಖಪಟ್ಟಣದಲ್ಲಿ, ನೆರೆಯ ಒರಿಸ್ಸಾ ಮತ್ತು ಮಧ್ಯಪ್ರದೇಶದ ಅಧಿಕಾರಿಗಳ ಜೊತೆ ಗುಪ್ತ ಸಮಾಲೋಚನೆ ನಡೆಸಿತು. ಅಲ್ಲದೇ, ನೇರ ಕಾರ್ಯಾಚರಣೆಗೆ ಮುಂದಾಯಿತು. ಈ ಕಾರ್ಯಾಚರಣೆಯ ಮುಖ್ಯ ಗುರಿ ನಕ್ಸಲ್ ಚಳವಳಿಯ ನಾಯಕರನ್ನು ಎನ್‌ಕೌಂಟರ್ ಹೆಸರಿನಲ್ಲಿ ಮುಗಿಸುವುದಾಗಿತ್ತು.

1969 ರ ಅಂತ್ಯದ ವೇಳೆಗೆ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯಲ್ಲಿ ಪ್ರಮುಖ ನಾಯಕರಾದ ಭಾಸ್ಕರ ರಾವ್, ತಮ್ಮಡ ಗಣಪತಿ, ನಿರ್ಮಲ ಕೃಷ್ಣಮೂರ್ತಿ, ಸುಬ್ಬರಾವ್ ಪ್ರಾಣಿಗ್ರಹಿ, ರಮೇಶ್ಚಂದ್ರ ಸಾಹು ಇವರು ಆಂಧ್ರ ಪೊಲೀಸರ ಬಂಧನಕ್ಕೆ ಒಳಗಾಗಿ, ಪೊಲೀಸರ ಎನ್‌ಕೌಂಟರ್ ಎಂಬ ನರಹತ್ಯೆಗೆ ಪರ್ವತದ ನಿರ್ಜನ ಪ್ರದೇಶದಲ್ಲಿ ಬಲಿಯಾದರು. ಭಾರತದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಇದು ಪ್ರಥಮ ಎನ್‌ಕೌಂಟರ್ ಪ್ರಕರಣ. ಸಂಧಾನದ ಮೂಲಕ ಬಗೆ ಹರಿಯಬಹುದಾಗಿದ್ದ ಆದಿವಾಸಿಗಳ ನ್ಯಾಯಯುತವಾದ ಹೋರಾಟಕ್ಕೆ ಪ್ರತಿಯಾಗಿ ಆಂಧ್ರ ಸರ್ಕಾರ ಮತ್ತು ಅಲ್ಲಿನ ಪೊಲೀಸರು, ಹಿಂಸೆಯ ಹಾದಿ ತುಳಿದರು. ನಕ್ಸಲಿಯರನ್ನು ಶಾಶ್ವತವಾಗಿ ಹಿಂಸೆಯನ್ನು ತುಳಿಯುವಂತೆ ಮಾಡಿದರು.

ವರ್ತಮಾನದ ನಾಗರಿಕ ಸಮಾಜದಲ್ಲಿ ಹಿಂಸೆಯನ್ನು ಪ್ರತಿಪಾದಿಸುವುದು, ಅಥವಾ ಬೆಂಬಲಿಸುವುದು, ಅವಿವೇಕತನ. ಅಷ್ಟೇ ಅಲ್ಲ, ಅದೊಂದು ಅನಾಗರಿಕ ನಡುವಳಿಕೆ ಕೂಡ. ಆದರೆ, ನಕ್ಸಲಿಯರು, ವರ್ತಮಾನದ ಭಾರತದಲ್ಲಿ ದೇಶಾದ್ಯಂತ ಪೊಲೀಸರನ್ನ ಏಕೆ ಇಷ್ಟೊಂದು ನಿರ್ಧಯವಾಗಿ ಕೊಲ್ಲುತ್ತಿದ್ದಾರೆ ಎಂಬ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೊರಟರೆ, ಅದು ನಮ್ಮನ್ನು ಮೇಲ್ಕಂಡ ದುರಂತದ ಕಥನದ ಬಳಿ ಕರೆದು ತಂದು ನಿಲ್ಲಿಸುತ್ತದೆ.

ನಕ್ಸಲಿಯರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಗುಡ್ಡಗಾಡಿನ ರೈತರು, ಕೃಷಿ ಕೂಲಿಕಾರ್ಮಿಕರು, ಆದಿವಾಸಿಗಳು, ಈ  ದೇಶದ ಭದ್ರತೆಗೆ, ಅಥವಾ ಆಂಧ್ರ ಸರ್ಕಾರದ ಪತನಕ್ಕೆ ಎಂದೂ ಒಳಸಂಚು ರೂಪಿಸಿದವರಲ್ಲ, ಮೇಲಾಗಿ ಅವರ್‍ಯಾರು ವಿದೇಶಿ ಆಕ್ರಮಣಕಾರರೂ ಆಗಿರಲಿಲ್ಲ. ಅವರ ಬೇಡಿಕೆಗಳು ಕೂಡ ಅತಿ ಸಾಮಾನ್ಯವಾಗಿದ್ದವು. ಅವರು ಬಯಸಿದ್ದು ಯಾವುದೇ ರೀತಿಯ ಕಿರುಕುಳವಿಲ್ಲದ ನೆಮ್ಮದಿಯ ಬದುಕನ್ನು ಮಾತ್ರ. ಆದರೆ, ಈ ನಮ್ಮ ಸರ್ಕಾರಗಳು, ಆಳುವ ಪ್ರತಿನಿಧಿಗಳು ಇವರುಗಳಿಗೆ ಮಾಡಿದ್ದಾದರೂ ಏನು? ಇವರ ಬದುಕನ್ನು ಶೋಷಿಸುವುದನ್ನೇ ವೃತ್ತಿ ಮಾಡಿಕೊಂಡ ಭೂಮಾಲೀಕರ ಕೈಗೆ ಒಪ್ಪಿಸಿ ಇಡೀ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತ್ತಿತು. ಅಸಮಾನತೆ, ಅತ್ಯಾಚಾರ, ಶೋಷಣೆಗಳೇ ತಾಂಡವಾಡುತ್ತಿದ್ದ ವ್ಯವಸ್ಥೆಯಲ್ಲಿ ಆದಿವಾಸಿಗಳು, ಪ್ರಾಣಿಗಳಂತೆ ಬದುಕಿ ಜಂಗಲ್‌ರಾಜ್ಯದ ಕಾನೂನಿಗೆ ತಮ್ಮಗಳ ಇಡೀ ಜೀವನವನ್ನೇ ಒತ್ತೆಯಿಡಬೇಕಾಯಿತು.

ಹೋರಾಟದ ಆರಂಭದ ದಿನಗಳಲ್ಲಿ ಈ ಆದಿವಾಸಿಗಳ ಬೇಡಿಕೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದರೆ, ನಕ್ಸಲಿಯರ ಹಿಂಸಾಚಾರದ ಇತಿಹಾಸ ಇಲ್ಲಿಯವರೆಗೂ ಮುಂದುವರಿಯುತ್ತಿತ್ತೆ? ಇದು ನಮ್ಮ ನಮ್ಮ ಆತ್ಮಸಾಕ್ಷಿಗೆ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆ. ಅವರುಗಳು ಯಾವ ಸಾಮ್ರಾಜ್ಯದ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿರಲಿಲ್ಲ. ಈ ನೆಲದಲ್ಲಿ ಪ್ರಕೃತಿಯ ಮಕ್ಕಳಾಗಿ ಹುಟ್ಟಿ, ಇಲ್ಲಿನ ಸಮಾಜಕ್ಕೆ ಅಥವಾ ಪರಿಸರಕ್ಕೆ ಯಾವ ಕೇಡನ್ನೂ ಬಗೆದಿರಲಿಲ್ಲ. ಆಳುವ ಸರ್ಕಾರಗಳು ಜೀವ ಭಯದ ಮೂಲಕ ಚಳವಳಿಯ ಹುಟ್ಟಡಗಿಸಲು ಹೋಗಿ, ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದವು. ಇದು ಎಂತಹ ಅವಿವೇಕತನದ ನಡುವಳಿಕೆ ಎಂದರೆ, ಬಾಯಾರಿ ನೀರಿಗಾಗಿ ಬೊಗಸೆಯೊಡ್ಡಿದವನ ಕೈಗೆ ಕುಡಿಯುವ ನೀರು ಸುರಿಯುವ ಬದಲು, ಮೂತ್ರ ವಿಸರ್ಜನೆ ಮಾಡಿದಂತೆ. ಇದನ್ನು ಜಾಣ್ಮೆಯ ನಡೆಎನ್ನಲಾಗದು. ಅಮಾನುಷ ಕ್ರಿಯೆ ಎಂದು ಕರೆಲಾಗುತ್ತದೆ. ನಕ್ಸಲ್ ಹೋರಾಟದ ಇತಿಹಾಸದುದ್ದಕ್ಕೂ ಸರ್ಕಾರಗಳು ಇಂತಹ ಅವಿವೇಕತನಗಳನ್ನು ಮಾಡಿಕೊಂಡು ಬಂದಿವೆ. ಈ ನೆಲದಲ್ಲಿ ಮುಕ್ತವಾದ ಮಾತುಕತೆ ಅಥವಾ ಸಂಧಾನದ ಮೂಲಕ ಬಗೆ ಹರಿಯದ ಸಮಸ್ಯೆಗಳು ಯಾವುವೂ ಇಲ್ಲ ಎಂಬ ಕಟು ಸತ್ಯವನ್ನು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಮೊದಲು ಅರಿಯಬೇಕು.

ನಕ್ಸಲ್ ನಾಯಕರ ಎನ್‌ಕೌಂಟರ್ ಘಟನೆ ನಕ್ಸಲಿಯ ಹೋರಾಟಗಾರರಲ್ಲಿ ಬೆದರಿಕೆಯನ್ನು ಹುಟ್ಟು ಹಾಕುವ ಬದಲು, ಅವರನ್ನು ಮತ್ತಷ್ಟು ಕೆರಳಿಸಿತು. ಈ ಘಟನೆಗೆ ಪ್ರತಿಯಾಗಿ ಅವರು, 1970 ಜನವರಿ 8 ರಂದು ಮತ್ತೊಬ್ಬ ಜಮೀನ್ದಾರನ ಹತ್ಯೆಯನ್ನು ಅತ್ಯಂತ ಭೀಕರವಾಗಿ ನಡೆಸಿದರು. ಸೋಂಪೇಟ ತಾಲೂಕಿನ ಭಾವನಪುರಂ ಎಂಬ ಹಳ್ಳಿಯ ಹೊರವಲಯದ ತೋಟದಲ್ಲಿ ವಾಸವಾಗಿದ್ದ ವೂನ ಸವರಯ್ಯ ಎಂಬ ಜಮೀನ್ದಾರನನ್ನು ಅವನ ಹೆಂಡತಿ, ಮಕ್ಕಳೆದುರು, ಕತ್ತರಿಸಿ ಹಾಕಿ ಅವನ ದೇಹದ ಅಂಗಾಂಗಗಳನ್ನು ಮನೆಯ ಮುಂಭಾಗದಲ್ಲಿ ತೋರಣದಂತೆ ಕೆಂಪು ಬಾವುಟಗಳ ಸಮೇತ ನೇತು ಹಾಕಲಾಯಿತು. ಅಲ್ಲದೆ, ಅವನ ರಕ್ತದಲ್ಲಿ ಗೋಡೆಯ ಮೇಲೆ ಬರಹವೊಂದನ್ನು ಬರೆಯುವುದರ ಮೂಲಕ ತಾಕತ್ತಿದ್ದರೆ, ನಮ್ಮ ಹೋರಾಟವನ್ನು ನಿಗ್ರಹಿಸಿ ಎಂಬ ಸವಾಲನ್ನು ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಹಾಕಲಾಗಿತ್ತು.

ಬಹುತೇಕ ನಾಯಕರು ಎನ್‌ಕೌಂಟರ್‌ಗೆ ಬಲಿಯಾದ ನಂತರ, ಆಂಧ್ರ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೆ, ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ಗಿರಿಜನರನ್ನು ಸಂಘಟಿಸುವ ಸಂಪೂರ್ಣ ಹೊಣೆ ವೆಂಪಟಾಪು ಸತ್ಯನಾರಾಯಣನ ಮೇಲೆ ಬಿತ್ತು. ಇಂತಹ ವೇಳೆಯಲ್ಲಿ ಸತ್ಯನಾರಾಯಣನಿಗೆ ಅದಿಬಟ್ಲ ಕೈಲಾಸಂ ಎಂಬ ಅದ್ಭುತ ಸಂಘಟನಾಕಾರನೊಬ್ಬ ನೆರವಾದ. ನಾಯಕರ ಹತ್ಯೆಯಿಂದ ಆದಿವಾಸಿ ಹೋರಾಟಗಾರರು ಎದೆಗುಂದಿರಲಿಲ್ಲ. ದಿನನಿತ್ಯ ಜಮೀನ್ದಾರರ ಕೈಗೆ ಸಿಕ್ಕಿ ಸಾಯುವ ಬದಲು, ಪೋಲೀಸರನ್ನು ಎದುರಿಸಿ ಒಂದೇ ದಿನ ಸಾಯೋಣ ಎಂಬ ದೃಢ ನಿರ್ಧಾರಕ್ಕೆ ಅವರೆಲ್ಲಾ ಬದ್ಧರಾಗಿದ್ದರು. ಆದರೆ ಅವರನ್ನು ಮುನ್ನಡೆಸುವ ನಾಯಕರು ಇರಲಿಲ್ಲ. ಈ ಕೊರತೆ ಅವರನ್ನು ಕಾಡುತ್ತಿತ್ತು.

ಶ್ರೀಕಾಕುಳಂ ಜಿಲ್ಲೆಯ ಎನ್‌ಕೌಂಟರ್ ಘಟನೆಯಿಂದ ತೀವ್ರ ಹತಾಶನಾದವನಂತೆ ಕಂಡುಬಂದ ಚಾರುಮುಜಂದಾರ್ ದೂರದ ಕೊಲ್ಕತ್ತ ನಗರದಿಂದ ಆಂಧ್ರದ ಕಾಮ್ರೇಡ್‌ಗಳಿಗೆ ಪ್ರತಿದಿನ ಪತ್ರ ಬರೆದು ಅವರುಗಳನ್ನು ಹೋರಾಟಕ್ಕೆ ಹುರಿದುಂಬಿಸುತ್ತಿದ್ದ. 1970 ರ ಜುಲೈ ತಿಂಗಳಿನಲ್ಲಿ ಪತ್ರ ಬರೆದು, ಈಗ ನೂರು ಸದಸ್ಯರಿರುವ ದಳಗಳನ್ನು ವಿಭಜಿಸಿ, ತಲಾ 10 ರಿಂದ 20 ಸದಸ್ಯರಿರುವ ದಳಗಳನ್ನಾಗಿ ಮಾಡಿ ಎಂದು ಸತ್ಯನಾರಾಯಣನಿಗೆ ಸಲಹೆ ನೀಡಿದ. ಪೊಲೀಸರ ಎನ್‌ಕೌಂಟರ್‌ನಿಂದ ಆಗಿರುವ ಹಿನ್ನಡೆಯಿಂದ ನಕ್ಸಲ್ ಹೋರಾಟ ಚೇತರಿಸಿಕೊಳ್ಳುತ್ತದೆ ಎಂಬ ಆಶಾಭಾವನೆ ಚಾರುವಿಗಿತ್ತು. ಆದರೆ, ಜುಲೈ 18 ರಂದು, ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇಬ್ಬರನ್ನು ಸರೆಹಿಡಿದ ಆಂಧ್ರ ಪೊಲೀಸರು. ಅವನ್ನು ಪಾರ್ವತಿಪುರಂ ತಾಲೂಕಿನ ಬೋರಿಬೆಟ್ಟ ಎಂಬಲ್ಲಿಗೆ ಕರೆದೊಯ್ದು, ಬೆಟ್ಟದ ತುದಿಯಲ್ಲಿ ನಿರ್ಧಯವಾಗಿ ಗುಂಡಿಟ್ಟು ಕೊಂದು, ಎನ್‌ಕೌಂಟರ್ ಹೆಸರಿನಲ್ಲಿ ಈ ಹತ್ಯೆಗೆ ತೇಪೆ ಹಚ್ಚಿದರು.

ಈ ಇಬ್ಬರು ನಾಯಕರ ಹತ್ಯೆಯಿಂದಾಗಿ ಶ್ರೀಕಾಕುಳಂ ಪ್ರಾಂತ್ಯದ ಆದಿವಾಸಿ ರೈತರ ಮೊದಲ ಹಂತದ ಹೋರಾಟಕ್ಕೆ ತೆರೆಬಿದ್ದಿತು. ಆದರೆ, ನಕ್ಸಲ್ ಹೋರಾಟವೆಂಬ ಅಗ್ನಿ ಪರ್ವತದ ಲಾವಾರಸ ನೆರೆಯ ರಾಜ್ಯಗಳಿಗೆ ವ್ಯಾಪಿಸಿ, ಹತ್ತು ವರ್ಷಗಳ ನಂತರ ಮತ್ತೇ ತೆಲಂಗಾಣ ಪ್ರಾಂತ್ಯದಲ್ಲಿ, ಪ್ರಜಾಸಮರಂ (ಪೀಪಲ್ಸ್ ವಾರ್) ಎಂಬ  ಹೆಸರಿನಲ್ಲಿ ಉದ್ಭವಗೊಂಡು, ಕೊಂಡಪಲ್ಲಿ ಸೀತಾರಾಮಯ್ಯ ಎಂಬ ನಾಯಕನನ್ನು ಹುಟ್ಟು ಹಾಕಿತು. ಸೋಜಿಗದ ಸಂಗತಿಯೆಂದರೆ, ಸೀತಾರಾಮಯ್ಯ ಕೂಡ, ನಕ್ಸಲ್ ಹೋರಾಟಕ್ಕೆ ದುಮುಕುವ ಮುನ್ನ, ಸತ್ಯನಾರಾಯಣನಂತೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 22)


– ಡಾ.ಎನ್.ಜಗದೀಶ್ ಕೊಪ್ಪ


 

ಚಿರತೆಯ ಆರ್ಭಟ ಮತ್ತು ಗುಂಡಿನ ಸದ್ದು ಕೇಳಿದ ರುದ್ರಪ್ರಯಾಗದ ಜನ ನರಭಕ್ಷಕ ಗುಂಡಿಗೆ ಬಲಿಯಾಗಿದೆ ಎಂದು ಭಾವಿಸಿ, ಲಾಟೀನು, ದೊಣ್ಣೆ ಸಮೇತ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಸ್ಥಳಕ್ಕೆ ಓಡೋಡಿ ಬಂದರು. ಹಳ್ಳಿಯ ಜನರೆಲ್ಲಾ ಬಂದಿದ್ದರಿಂದ ಧೈರ್ಯ ಮಾಡಿದ ಕಾರ್ಬೆಟ್ ಮರದಿಂದ ಕೆಳಗಿಳಿದು ಟಾರ್ಚ್‌ ಬೆಳಕಿನ ಸಹಾಯದಿಂದ ಹಳ್ಳದಲ್ಲಿ ಚಿರತೆಗಾಗಿ ತಡಕಾಡಿದ. ತನ್ನ ಮುಂಗಾಲುಗಳು ಕತ್ತರಿಯಲ್ಲಿ ಸಿಲುಕಿದ್ದ ಕಾರಣ ಚಲಿಸಲಾರದೆ, ಅದರಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆಯನ್ನು ಹಳ್ಳದಲ್ಲಿ ಕಂಡಾಕ್ಷಣ ತಡ ಮಾಡದೆ, ಕಾರ್ಬೆಟ್ ಅದರ ತಲೆಗೆ ಗುಂಡುಹಾರಿಸಿದ. ಅತ್ಯಂತ ಹತ್ತಿರದಿಂದ ಹಾರಿಸಿದ ಗುಂಡಿನ ಹೊಡೆತಕ್ಕೆ ಕ್ಷಣಾರ್ಧದಲ್ಲೇ ಚಿರತೆ ಸಾವನ್ನಪ್ಪಿತು.

ಕಗ್ಗತ್ತಲೆಯಲ್ಲಿ ಸತ್ತು ಮಲಗಿದ ಚಿರತೆಯನ್ನು ನೋಡಿದಾಕ್ಷಣ ಗ್ರಾಮಸ್ಥರ ಸಂತಸ ಎಲ್ಲೇ ಮೀರಿತು. ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರನ್ನು ಹೆಗಲ ಮೇಲೆ ಎತ್ತಿ ಕುಣಿದಾಡಿದರು. ಬಿದರಿನ ಗಳಕ್ಕೆ ಚಿರತೆಯನ್ನು ಕಟ್ಟಿ ಆ ರಾತ್ರಿಯಲ್ಲೇ ಪ್ರಯಾಗದ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಕಾರ್ಬೆಟ್‌ನನ್ನೂ ಸಹ ಬಿಡದೆ, ಊರಿನ ಹೊರವಲಯದಿಂದ ಮೆರವಣಿಗೆಯಲ್ಲಿ ಹೊತ್ತು ತಂದರು. ಎಲ್ಲರೂ ನರಭಕ್ಷಕ ಗುಂಡಿಗೆ ಬಲಿಯಾಯಿತು ಎಂದು ನಂಬಿದ್ದರು. ಆದರೆ, ಕಾರ್ಬೆಟ್ ಅದನ್ನು ಖಚಿತ ಪಡಿಸಿಕೊಳ್ಳವ ತನಕ ನಂಬಲು ಸಿದ್ದನಿರಲಿಲ್ಲ. ಈ ಹಿಂದೆ ಶಿಕಾರಿಯ ಸಂದರ್ಭದಲ್ಲಿ ನೋಡಿದ್ದ ಚಿರತೆಗೂ, ಈಗ ಬಲಿಯಾಗಿರುವ ಚಿರತೆಯ ಮೈಬಣ್ಣದಲ್ಲಿನ ಅಲ್ಪ ವ್ಯತ್ಯಾಸ ಕಾರ್ಬೆಟ್‌ನನ್ನು ಗೊಂದಲದಲ್ಲಿ ದೂಡಿತ್ತು.

ಪ್ರವಾಸಿ ಮಂದಿರದ ಬಳಿಗೆ ಚಿರತೆಯ ಶವ ತಂದ ನಂತರ ಅದರ ಕುತ್ತಿಗೆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದ. ಕೇವಲ ಎಂಟು ಹತ್ತು ದಿನಗಳ ಹಿಂದೆ ಕೂದಲೆಳೆಯ ಹಂತರದಿಂದ ಪಾರಾಗಿದ್ದ ನರಭಕ್ಷಕನಿಗೆ ಗುಂಡು ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿತ್ತು, ಅಲ್ಲದೇ ಆ ಭಾಗದಲ್ಲಿ ಅದರ ಕೂದಲುಗಳು ಉದುರಿಹೋಗಿದ್ದವು. ಆದರೆ, ಈ ಚಿರತೆಯಲ್ಲಿ ಅದರ ಯಾವ ಲಕ್ಷಣಗಳು ಕಾಣಲಿಲ್ಲ. ಹಾಗಾಗಿ ಇದು ನರಭಕ್ಷಕ ಚಿರತೆಯಲ್ಲ, ಬೇರೊಂದು ಗಂಡು ಚಿರತೆ ಎಂದು ಜಿಮ್ ಕಾರ್ಬೆಟ್ ನಿರ್ಧರಿಸಿದ. ಆದರೆ, ಇವನ ತೀರ್ಮಾನವನ್ನು ಇಬ್ಸ್‌ಟನ್ ಆಗಲಿ, ರುದ್ರಪ್ರಯಾಗದ ಜನರಾಗಲಿ ನಂಬಲು ಸಿದ್ಧರಿರಲಿಲ್ಲ. ಸದ್ಯಕ್ಕೆ ಯಾವುದೇ ವಾದವಿವಾದ ಬೇಡ, ಕನಿಷ್ಟ ಒಂದು ವಾರ ಮೊದಲಿನ ಹಾಗೆ ರಾತ್ರಿ ವೇಳೆ ಎಚ್ಚರ ವಹಿಸಿ ಎಂದು ಪ್ರಯಾಗದ ಜನರಿಗೆ ಕಾರ್ಬೆಟ್ ಮನವಿ ಮಾಡಿಕೊಂಡ.

ತಡರಾತ್ರಿ ಪ್ರವಾಸಿ ಮಂದಿರದಲ್ಲಿ, ಇಬ್ಸ್‌ಟನ್ ಅವನ ಪತ್ನಿ ಜೀನ್ ಜೊತೆ ಕುಳಿತು ಊಟ ಮಾಡುವಾಗ, ತಕ್ಣಣ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುವುದು ಬೇಡ ಎಂದು ಕಾರ್ಬೆಟ್ ಇಬ್ಸ್‌ಟನಗೆ ಮನವಿ ಮಾಡಿದ. ಅದಕ್ಕೆ ಅವನು ಸಮ್ಮತಿ ಸೂಚಿಸಿದ. ಮಾರನೇ ದಿನ ಬೆಳಿಗ್ಗೆ ಪೌರಿಯಿಂದ ಬಂದಿದ್ದ ಕೆಲವು ಕಾಗದ ಪತ್ರಗಳನ್ನು ವಿಲೇವಾರಿ ಮಾಡುವುದರಲ್ಲಿ ಇಬ್ಸ್‌ಟನ್ ನಿರತನಾದ. ಕಾರ್ಬೆಟ್ ತನ್ನ ಸಹಾಯಕರಿಗೆ ಚಿರತೆಯ ಚರ್ಮ ಸುಲಿಯಲು ತಿಳಿಸಿ, ಮಂದಾಕಿನಿ ನದಿಯಲ್ಲಿ ಮೀನು ಬೇಟೆಯಾಡಲು ಹೊರಟ. ಕಾರ್ಬೆಟ್ ನರಭಕ್ಷಕನ ಸಾವಿನ ಬಗ್ಗೆ ಖಚಿತಪಡಿಸಿಕೊಳ್ಳಲು ಒಂದು ವಾರ ಸಮಯ ಕೇಳಿದ್ದ ಆದರೆ, ಕೇವಲ ಎರಡು ದಿನಗಳ ಅವಧಿಯಲ್ಲಿ ನರಭಕ್ಷಕ ನದಿಯಾಚೆಗಿನ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿ ಒಬ್ಬ ಹೆಂಗಸನ್ನು ಬಲಿತೆಗೆದುಕೊಂಡ ವಿಷಯವನ್ನು ಹಳ್ಳಿಗರು ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದು ಕಾರ್ಬೆಟ್‌ಗೆ ಮುಟ್ಟಿಸಿದರು.

ಕಾರ್ಬೆಟ್‌ನ ಸಂಶಯ ಕಡೆಗೂ ನಿಜವಾಯಿತು. ಆ ವೇಳೆಗಾಗಲೇ ಇಬ್ಸ್‌ಟನ್ ವಾಪಸ್ ಪೌರಿಗೆ ಮತ್ತು ಕಾರ್ಬೆಟ್ ನೈನಿತಾಲ್‌ಗೆ ಹೋಗಿ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡು ಬರುವುದೆಂದು ನಿರ್ಧಾರವಾಗಿತ್ತು. ಇಬ್ಬರೂ ಎರಡು ದಿನಗಳ ಮಟ್ಟಿಗೆ ತಮ್ಮ ಕಾರ್ಯಕ್ರಮವನ್ನು ಮುಂದೂಡಿ, ಹೆಂಗಸು ಬಲಿಯಾಗಿದ್ದ ಹಳ್ಳಿಗೆ ಕುದುರೆಯೇರಿ ಹೊರಟರು. ಊರ ಹೊರ ವಲಯದಲ್ಲಿ ಹೆಂಗಸಿನ ಶವವಿದ್ದ ಜಾಗದಲ್ಲಿ ಆಕೆಯ ಸಂಬಂಧಿ ಕಾರ್ಬೆಟ್ ಬರುವಿಕೆಗಾಗಿ ಕಾಯುತ್ತಿದ್ದ. ಕಾರ್ಬೆಟ್‌ಗೆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ. ಚಿರತೆಗೆ ಬಲಿಯಾದ ಹೆಂಗಸಿನ ಶವವಿದ್ದ ಜಾಗ ಮತ್ತು ಆಕೆಯ ಮನೆ ಎಲ್ಲವನ್ನು ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಸೂಕ್ಷ್ಮವಾಗಿ ಅವಲೋಕಿಸಿದರು.

ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ನರಭಕ್ಷಕನ ಹೆಜ್ಜೆ ಗುರುತು ಎಲ್ಲೆಡೆ ಸ್ಪಷ್ಟವಾಗಿ ಮೂಡಿದ್ದವು. ಮನೆಯಿಂದ ದೃಡವಾಗಿದ್ದ, ಐವತ್ತು ಕೆ.ಜಿ. ಗೂ ಹೆಚ್ಚು ತೂಕವಿದ್ದ ಹೆಂಗಸಿನ ಶವವನ್ನು ಎಲ್ಲಿಯೂ ಭೂಮಿಗೆ ತಾಗದಂತೆ ಬಾಯಲ್ಲಿ ಕಚ್ಚಿ ಹಿಡಿದು ಸಾಗಿದ್ದ ನರಭಕ್ಷಕ ಚಿರತೆಯ ಸಾಮರ್ಥ್ಯದ ಬಗ್ಗೆ ಕಾರ್ಬೆಟ್ ನಿಜಕ್ಕೂ ಬೆರಗಾದ. ಸಂಜೆ ನಾಲ್ಕು ಗಂಟೆಯ ವೇಳೆಗೆ ಶವವಿದ್ದ ಜಾಗದಿಂದ ಸುಮಾರು 60 ಅಡಿ ದೂರದಲ್ಲಿದ್ದ ಮರವೇರಿ ರಾತ್ರಿ ಹತ್ತು ಗಂಟೆಯವರೆಗೂ ಚಿರತೆಗಾಗಿ ಕಾಯಲು ಇಬ್ಬರೂ ನಿರ್ಧರಿಸಿದರು. ಕಾರ್ಬೆಟ್‌ನ ಸೇವಕರು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳಸಿದ್ದರಿಂದ ಅವರಿನ್ನೂ ಹಳ್ಳಿ ತಲುಪಿರಲಿಲ್ಲ. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಹಳ್ಳಿಯ ಮುಖಂಡನಿಗೆ ತಿಳಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಕೋವಿ, ಟಾರ್ಚ್ ಮತ್ತು ಪೆಟ್ರೋಮ್ಯಾಕ್ಸ್ ಜೊತೆ ಹೊರಟು ಮರವೇರಿ ಕುಳಿತರು.

ಗ್ರಾಮಸ್ಥರು ಚಿರತೆ ಉತ್ತರ ದಿಕ್ಕಿನ ಕಾಡಿನತ್ತ ಹೋಯಿತು ಎಂದು ತಿಳಿಸಿದ್ದರಿಂದ, ಎತ್ತರದ ಕೊಂಬೆಯೇರಿದ ಇಬ್ಸ್‌ಟನ್ ಉತ್ತರ ದಿಕ್ಕಿಗೆ ಮುಖಮಾಡಿ ಕೈಯಲ್ಲಿ ಬಂದೂಕ ಹಿಡಿದು ಕುಳಿತರೆ, ಕಾರ್ಬೆಟ್ ಇನ್ನೊಂದು ದಿಕ್ಕಿಗೆ ಮುಖಮಾಡಿ ಕುಳಿತ. ಪೆಟ್ರೋಮ್ಯಾಕ್ಸ್ ಮೇಲೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮರದ ಬುಡದ ಪೊಟರೆಯಲ್ಲಿ ಇಟ್ಟರು. ಇಬ್ಬರ ಬಳಿ ಟಾರ್ಚ್ ಇತ್ತಾದರೂ ಅವುಗಳ ಬ್ಯಾಟರಿಗಳು ಶಕ್ತಿಗುಂದಿದ್ದವು. ಆದರೂ ನರಭಕ್ಷಕ ಬಂದರೆ, ಗುರಿಯಿಡುವ ಆತ್ಮವಿಶ್ವಾಸ ಇಬ್ಬರಿಗೂ ಇತ್ತು. ಆದರೆ, ಇವರ ನಿರೀಕ್ಷೆ ಮೀರಿ, ಉತ್ತರ-ದಕ್ಷಿಣ ದಿಕ್ಕುಗಳನ್ನು ಬಿಟ್ಟು ಪಶ್ಚಿಮ ದಿಕ್ಕಿನ ಪರ್ವತದಿಂದ ನರಭಕ್ಷಕ ಇಳಿದು ಬರುವುದನ್ನು ಕಾಡು ಕೋಳಿಗಳು ಕೂಗುವುದರ ಮೂಲಕ ಸೂಚನೆ ನೀಡಿದವು. ಇವರು ಕುಳಿತ್ತಿದ್ದ ಮರಕ್ಕೂ ಆ ಪಶ್ಚಿಮ ದಿಕ್ಕಿನ ನಡುವೆ ಕಲ್ಲು ಬಂಡೆ ಅಡ್ಡಿಯಾದ್ದರಿಂದ ಇಬ್ಬರೂ ಸರಸರನೆ ಮರದಿಂದ ಇಳಿದು ಕಲ್ಲು ಬಂಡೆ ಏರಲು ನಿರ್ಧರಿಸಿದರು. ಅದಕ್ಕಾಗಿ ಪೊಟರೆಯಲ್ಲಿ ಇಟ್ಟಿದ್ದ ಪೆಟ್ರೋಮ್ಯಾಕ್ಸ್ ತೆಗೆದು ಹತ್ತಿಸಿದರು. ಆದರೆ, ಇಬ್ಸ್‌ಟನ್ ಅದನ್ನು ಹಿಡಿದು ಬಂಡೆಯತ್ತ ಸಾಗುತ್ತಿರುವಾಗ, ನೆಲದ ಮೇಲಿನ ಕಲ್ಲೊಂದಕ್ಕೆ ತಾಗಿಸಿಬಿಟ್ಟ. ಇದರಿಂದಾಗಿ ಅದರ ಗಾಜು ಮತ್ತು ರೇಷ್ಮೆ ಬತ್ತಿ ಎರಡೂ ಉದುರಿಹೋದವು. ಆದರೂ ಅದರಿಂದ ಸಣ್ಣನೆಯ ನೀಲಿ ಜ್ವಾಲೆ ಹೊರಹೊಮ್ಮುತ್ತಿತ್ತು ಇದರ ಸಾಮರ್ಥ್ಯ ಕೇವಲ ಐದಾರು ನಿಮಿಷ ಎಂದು ಇಬ್ಸ್ ಹೇಳಿದ ಕೂಡಲೇ ಕಾರ್ಬೆಟ್, ಕತ್ತಲೆಯಲ್ಲಿ ಇಲ್ಲಿರುವುದು ಅಪಾಯಕಾರಿ ಎಂದು ನಿರ್ಧರಿಸಿ, ಹಳ್ಳಿಯತ್ತ ಹೆಜ್ಜೆ ಹಾಕಲು ಇಬ್ಸ್‌ಟನ್‌ಗೆ ಸೂಚಿಸಿದ.

ಇಬ್ಸ್ ಉರಿಯುತ್ತಿರುವ ಪೆಟ್ರೋಮ್ಯಾಕ್ಸ್‌ನ ಸಣ್ಣ ಜ್ವಾಲೆಯ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಕಾರ್ಬೆಟ್ ಅವನ ಹಿಂದೆ ಬಂದೂಕ ಹಿಡಿದು ಪ್ರತಿ ಎರಡು ಹೆಜ್ಜೆಗೆ ಒಮ್ಮೆ ಹಿಂತಿರುಗಿ ನೋಡಿ ಹೆಜ್ಜೆ ಹಾಕುತ್ತಿದ್ದ. ಕತ್ತಲೆಯಲ್ಲಿ ನರಭಕ್ಷಕ ಯಾವ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಅಂಜಿಕೆ ಆ ಕ್ಷಣದಲ್ಲಿ ಕಾರ್ಬೆಟ್‌ನನ್ನು ಬಲವಾಗಿ ಕಾಡಿತು ಕೊನೆಗೂ ಪೆಟ್ರೋಮ್ಯಾಕ್ಷ್ ಆರಿ ಹೋಗುವ ಮುನ್ನ ಊರಿನ ಹೊರಭಾಗದಲ್ಲಿದ್ದ ರೈತನ ಮನೆ ಬಾಗಿಲಿಗೆ ಮುಟ್ಟಿದ್ದರು. ಕಾರ್ಬೆಟ್ ಬಾಗಿಲು ಬಡಿದು ವಿನಂತಿಸಿಕೊಂಡ ಮೇಲೆ ರೈತ ಬಾಗಿಲು ತೆರೆದು, ಅವರಿಗೆ ಚಹಾ ಮಾಡಿಕೊಟ್ಟು, ಅವನ ಸೇವಕರು ಉಳಿದುಕೊಂಡಿದ್ದ ಮನೆಯ ಬಗ್ಗೆ ಮಾಹಿತಿ ನೀಡಿದ. ಅವನಿಂದ ಚಿಮಣಿ ಎಣ್ಣಿಯ ಒಂದು ಪುಟ್ಟ ಲಾಂಧ್ರವೊಂದನ್ನು ಪಡೆದು, ಅದರ ಮಂದ ಬೆಳಕಿನಲ್ಲಿ ಆ ಮನೆಯಲ್ಲಿದ್ದ ಕೆಲವು ಗಂಡಸರ ನೆರವಿನಿಂದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರು ಉಳಿದುಕೊಂಡಿದ್ದ ಮನೆ ತಲುಪಿದರು. ಮನೆಯ ಬಾಗಿಲಲ್ಲಿ ಮಲಗಿದ್ದ ಬೀದಿ ನಾಯಿ ಇವರನ್ನು ಕಾಲು ಮೂಸಿ ಸ್ವಾಗತಿಸಿತು. ಮನೆಯೊಳಗೆ ಹೋಗಿ, ಇಬ್ಬರೂ ಮಲಗಲು ಸಿದ್ಧರಾಗುವ ವೇಳೆಗೆ ನಾಯಿ ವಿಚಿತ್ರವಾಗಿ ಬೊಗಳತೊಡಗಿತು. ಅವರು ಉಳಿದು ಕೊಂಡಿದ್ದ ರಸ್ತೆಯಿಂದ ಹತ್ತು ಅಡಿ ಎತ್ತರದ ಪ್ರದೇಶದಲ್ಲಿದ್ದ ಕಾರಣ ಮೆಟ್ಟಲಿನ ಮೇಲೆ ನಿಂತಿದ್ದ ನಾಯಿ ಒಂದೇ ದಿಕ್ಕಿನಿತ್ತ ಮುಖ ಮಾಡಿ ಬೊಗಳುತ್ತಿತ್ತು. ನಾಯಿಯ ಈ ವರ್ತನೆಯಿಂದ ನರಭಕ್ಷಕ ನಮ್ಮನ್ನು ಮನೆಯವರಿಗೂ ಹಿಂಬಾಲಿಸಿಕೊಂಡು ಬಂದಿದೆ ಎಂಬ ಸೂಚನೆ ಕಾರ್ಬೆಟ್‌ಗೆ ಸಿಕ್ಕಿತು. ಮನೆಯ ಕಿಟಕಿ, ಬಾಗಿಲುಗಳನ್ನು ಮತ್ತಷ್ಟು ಭದ್ರಪಡಿಸಿ ಮಲಗಿದ ಜೊತೆಗೆ ನಾಯಿ ಬಾಗಿಲಲ್ಲಿ ಇದ್ದ ಕಾರಣ ಅವನಿಗೆ ಆತಂಕ ಮತ್ತು ಭಯ ಇಲ್ಲವಾಗಿತ್ತು.

ಬೆಳಿಗ್ಗೆ ಎದ್ದು ನೋಡಿದಾಗ, ಕಾರ್ಬೆಟ್‌ಗೆ ಚಿರಪರಿಚಿತವಾದ ಅದೇ ನರಭಕ್ಷಕನ ಹೆಜ್ಜೆಗುರುತುಗಳು ಮನೆಯ ಮುಂಭಾಗದಲ್ಲಿ ಮೂಡಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿದ ಕಾರ್ಬೆಟ್ ಮತ್ತೆ ಹೆಂಗಸಿನ ಶವ ಇದ್ದ ಜಾಗಕ್ಕೆ ಹೋಗಿ ನೋಡಿ ಬಂದ. ಆ ರಾತ್ರಿ ಚಿರತೆ ಶವವನ್ನು ಮುಟ್ಟಿರಲಿಲ್ಲ. ಮಧ್ಯಾದ ವೇಳೆಗೆ ರುದ್ರಪ್ರಯಾಗದಲ್ಲಿದ್ದ ಜಿನ್ ಕತ್ತರಿಯನ್ನು ತರಿಸಿಕೊಂಡ ಕಾರ್ಬೆಟ್, ಸಂಜೆ ಮತ್ತೇ ಹೆಂಗಸಿನ ಶವವಿದ್ದ ಸ್ಥಳಕ್ಕೆ ತೆರಳಿ, agave ಬರುವ ಹಾದಿಯಲ್ಲಿ ಕತ್ತರಿಯನ್ನಿಟ್ಟು, ರುದ್ರಪ್ರಯಾಗದಲ್ಲಿ ಸಂಗ್ರಹಿಸಿದ್ದ ಸೈನೈಡ್ ವಿಷದ ಮಾತ್ರೆಗಳನ್ನು ಶವದ ಅಂಗಾಂಗಳ ನಡುವೆ ಹುದುಗಿಸಿ ಇಟ್ಟ. ಚಾಣಾಕ್ಷ ನರಭಕ್ಷಕ ಇವೆರಡರಲ್ಲಿ ಒಂದಕ್ಕೆ ಬಲಿಯಾಗುವುದು ಖಚಿತ ಎಂದು ಅವನು ನಂಬಿದ್ದ. ಆ ರಾತ್ರಿ ಕೂಡ ಅವನ ನಿರೀಕ್ಷೆ ಹುಸಿಯಾಯಿತು. ಇನ್ನು ಕಾಯುವುದು ಪ್ರಯೋಜವಿಲ್ಲ ಎಂದು ತೀರ್ಮಾನಿಸದ ಕಾರ್ಬೆಟ್, ಹೆಂಗಸಿನ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಿಳಿಸಿ, ನೈನಿತಾಲ್‌ಗೆ ಹೊರಡಲು ಅನುವಾದ.

ಇಬ್ಸ್‌ಟನ್‌ನ ಹದಿನೈದು ದಿನಗಳ ರಜೆ ಮುಗಿದ ಕಾರಣ ಅವನೂ ಕೂಡ ಪೌರಿಗೆ ವಾಪಸ್ ಹಿಂತಿರುಗಬೇಕಿತ್ತು. ತಮ್ಮ ತಮ್ಮ ಸಾಮಾನುಗಳನ್ನು ಪ್ರಯಾಣಕ್ಕೆ ಸಿದ್ಧಪಡಿಸುತ್ತಿದ್ದ ವೇಳೆಗೆ ನಾಲ್ಕು ಮೈಲಿ ದೂರದಲ್ಲಿ ನರಭಕ್ಷಕ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ಧಿ ಕಾರ್ಬೆಟ್‌ಗೆ ಮುಟ್ಟಿತು. ನೈನಿತಾಲ್‌ಗೆ ಹೋಗುವ ದಾರಿಯಲ್ಲಿ ಅದನ್ನು ಗಮನಿಸಿ ಹೋಗೋಣವೆಂದು ತನ್ನ ಸೇವಕರೊಂದಿಗೆ ಕಾರ್ಬೆಟ್ ಹಳ್ಳಿಯತ್ತ ಪ್ರಯಾಣ ಬೆಳಸಿದ. ಇಲ್ಲು ಕೂಡ ನರಭಕ್ಷಕ ಚಿರತೆ ಮನೆಗೆ ನುಗ್ಗಲುಯತ್ನಿಸಿ, ವಿಫಲವಾದ ನಂತರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಕೊಂಡೊಯ್ದಿತ್ತು. ಪ್ರಯಾಣ ಮತ್ತು ನಿರಂತರವಾಗಿ ಅನೇಕ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು ಆಯಾಸಗೊಂಡಿದ್ದ ಕಾರ್ಬೆಟ್ ಹಸುವಿನ ಕಳೇಬರಕ್ಕೆ ವಿಷವನ್ನು ಬೆರಸಿ, ಜಿನ್ ಕತ್ತರಿಯನ್ನು ಸನೀಹದ ದಾರಿಯಲ್ಲಿ ಇರಿಸಿದ. ಕತ್ತಲಾಗುವ ಮುನ್ನವೇ ರಾತ್ರಿಯ ಊಟ ಮುಗಿಸಿ, ದೋರದ ಪೈನ್ ಮರದ ಮೇಲೆ ಕಟ್ಟಲಾಗಿದ್ದ ಮಚ್ಚಾನ್ ಮೇಲೆ ಬಂದು ಮಲಗಿ ನಿದ್ರಿಸಿದ.

ಕತ್ತರಿಗೆ ನರಭಕ್ಷಕ ಸಿಲುಕಿಕೊಂಡರೆ, ಹೋಗಿ ಗುಂಡು ಹಾರಿಸಿ ಕೊಲ್ಲುವುದು ಅವನ ಯೋಜನೆಯಾಗಿತ್ತು. ಆದರೆ, ಚಾಣಾಕ್ಷತನದ ನರಭಕ್ಷಕ ಅಡಕತ್ತರಿಯನ್ನು ದಾಟಿ ಹಸುವಿನ ಕಳೇಬರವನ್ನು ಬೇರೊಂದು ಜಾಗಕ್ಕೆ ಎಳೆದೊಯ್ದು ತಿಂದು ಮುಗಿಸಿತ್ತು. ಬೆಳಿಗ್ಗೆ ಎದ್ದು ನೋಡಿದ ಕಾರ್ಬೆಟ್, ಹಳ್ಳಿಯ ಜನರನ್ನು ಕರೆಸಿ ಸುತ್ತಮುತ್ತಲಿನ ಕಾಡನ್ನು ಜಾಲಾಡಿಸಿದ ಎಲ್ಲಿಯೂ ಚಿರತೆ ಸತ್ತು ಬಿದ್ದಿರುವ ಕುರುಹು ಕಾಣಲಿಲ್ಲ. ಸಾಮಾನ್ಯವಾಗಿ ಬೆಕ್ಕು ಮತ್ತು ಚಿರತೆಗಳು ವಿಷವನ್ನು ತಿಂದ ಸಮಯದಲ್ಲಿ ಗರಿಕೆ ಹುಲ್ಲನ್ನು ತಿಂದು ವಾಂತಿ ಮಾಡುತ್ತವೆ. ಇಲ್ಲಿಯೂ ಸಹ ನರಭಕ್ಷಕ ವಿಷ ತಿಂದರೂ ಸಾವಿನಿಂದ ಪಾರಾಗಿತ್ತು. ಈ ಘಟನೆಯಿಂದ ಒಂದು ರೀತಿಯಲ್ಲಿ ತೀವ್ರ ಹತಾಶನಾದಂತೆ ಕಂಡು ಬಂದ ಕಾರ್ಬೆಟ್ ಹಳ್ಳಿಯ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಿ, ವಿಶ್ರಾಂತಿ ಪಡೆದು ಮತ್ತೆ ಮರಳಿ ಬರತ್ತೇನೆ ಎಂಬ ಭರವಸೆ ನೀಡಿ ನೈನಿತಾಲ್‌ನತ್ತ ಪ್ರಯಾಣ ಬೆಳಸಿದ.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 8)


– ಡಾ.ಎನ್.ಜಗದೀಶ್ ಕೊಪ್ಪ


 

If there is to be revolution, there must be a revolutionary party.  -Mao

ಆಂಧ್ರದ ಗೋದಾವರಿ ನದಿಯಾಚೆಗಿನ ಆ ನೆಲಕ್ಕೆ ಹಿಂಸೆ ಅಥವಾ ಬಲಿದಾನ ಹೊಸದೇನಲ್ಲ. ವಿಶಾಖಪಟ್ಟಣ, ರಾಜಮಂಡ್ರಿ, ಶ್ರೀಕಾಕುಳಂ, ವಾರಂಗಲ್ ಮತ್ತು ಅದಿಲಾಬಾದ್ ಹಾಗೂ ಬೊಬ್ಬಿಲಿ  ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಿಗೆ ಹೋದರೆ, ಅಲ್ಲಿನ ಪೂರ್ವಜರ ಕಣ್ಣೀರಿನ ಇತಿಹಾಸದ ಕಥೆಯೊಂದು ನಮ್ಮೆದುರು ತೆರೆದುಕೊಳ್ಳತ್ತದೆ. 250 ವರ್ಷಗಳ ಹಿಂದಿನ ಬಲಿದಾನದ ಕಥನವೊಂದನ್ನು, ಮೌಖಿಕ ಕಾವ್ಯದ ರೂಪದಲ್ಲಿ ಅಲ್ಲಿನ ಜನ ತಮ್ಮ ಎದೆಯಲ್ಲಿ ಕಾಪಿಟ್ಟುಕೊಂಡು ಹಾಡುತ್ತಾ ಬಂದಿದ್ದಾರೆ. ಆ ಮಹಾ ಕಥನ ಕಾವ್ಯವೇ, “ಬೊಬ್ಬಿಲಿ ಕಥಾ”.

ದುರಂತ ಕಥನದ ಸಂಕ್ಷಿಪ್ತ ಸಾರಾಂಶವಿದು, ಅದು 1750 ರ ಕಾಲಮಾನ. ದಕ್ಷಿಣದಲ್ಲಿ ಮೊಗಲರ ನೆರವಿನಿಂದ ಅವರಿಗೆ ಒಂದಿಷ್ಟು ಕಪ್ಪ ಕಾಣಿಕೆ ಕೊಟ್ಟು ಹೈದರಾಬಾದ್ ಪ್ರಾಂತ್ಯವನ್ನು ನಿಜಾಮ ಆಳುತ್ತಿದ್ದ ಸಮಯ. ಇದೇ ಕಾಲಘಟ್ಟದಲ್ಲಿ ಭಾರತದ ಪೂರ್ವ ಕರಾವಳಿ ತೀರದಲ್ಲಿ, ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ಈ ದೇಶದ ಮೇಲೆ ತಮ್ಮ ಅಸ್ತಿತ್ವ ಸಾಧಿಸಲು ಹೋರಾಟ ನಡೆಸುತ್ತಿದ್ದರು. ಇಂಗ್ಲಿಷರು, ಕೊಲ್ಕತ್ತ ಬಂದರು ನಗರವನ್ನು, ಫ್ರೆಂಚರು, ಪುದುಚೇರಿ,(ಪಾಡಿಚೇರಿ) ಮತ್ತು ಆಂಧ್ರದ ಮಚಲಿಪಟ್ಟಣ ಇವುಗಳನ್ನು ಡಚ್ಚರು ತಮಿಳುನಾಡಿನ ನಾಗಪಟ್ಟಣವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡು, ಸ್ಥಳೀಯ ಸಾಮಂತರಿಗೆ ಸೇನೆಯ ಸಹಾಯ ನೀಡುತ್ತಾ ಅವರಲ್ಲಿ ಕಲಹ ಹುಟ್ಟು ಹಾಕುತ್ತಾ, ಯುದ್ಧದ ನೆಪದಲ್ಲಿ ನಿಧಾನವಾಗಿ ಭಾರತದ ನೆಲದಲ್ಲಿ ಬೇರು ಬಿಡಲು ಹವಣಿಸಿದ್ದರು.

ಆಂಧ್ರಪ್ರದೇಶದ ಉತ್ತರ ಈಶಾನ್ಯ ಭಾಗದ ಬಂದರಾಗಿದ್ದ ಮಚಲಿಪಟ್ಟಣದಲ್ಲಿ ಫ್ರೆಂಚರ 12 ಸಾವಿರ ಯೋಧರಿದ್ದ ಸೇನಾ ಪಡೆಯು ಮಾರ್‌ಕ್ವಿಸ್‌ ದೆ ಬಸ್ಸಿ ಎಂಬ ದಂಡನಾಯಕನ ನೇತೃತ್ವದಲ್ಲಿ ಹೈದರಾಬಾದ್ ನಿಜಾಮನಿಗೆ ಸೇವೆ ಸಲ್ಲಿಸುತ್ತಿತ್ತು. 1756 ರಲ್ಲಿ ವಿಶಾಖಪಟ್ಟಣದ ಸಮೀಪದ ವಿಜಯನಗರಂ ಬಳಿ ಇರುವ ಬೊಬ್ಬಿಲಿ ಎಂಬ ಪುಟ್ಟ ಸಂಸ್ಥಾನದ ಸಾಮಂತ ವಿಜಯರಾಮರಾಜು ಎಂಬಾತ, ನಿಜಾಮ ಕೇಳಿದಷ್ಟು ವಾರ್ಷಿಕ ಕಂದಾಯ ನೀಡಲು ನಿರಾಕರಿಸಿದ. ಬೊಬ್ಬಿಲಿ ಕೋಟೆಯ ಮೇಲೆ ನಿಜಾಮನ ಪರವಾಗಿ, ಅವನ ಆದೇಶದಂತೆ ಫ್ರೆಂಚರ ಸೇನೆ ದಂಡೆತ್ತಿ ಬಂದಿತು. ಆ ಪುಟ್ಟ ಸಂಸ್ಥಾನದಲ್ಲಿ ಸಾಮಂತನ ಪರವಾಗಿ ಇದ್ದವರು ಇದೇ ಪ್ರಾಂತ್ಯದ ಬುಡಕಟ್ಟು ಜನಾಂಗ ಮಾತ್ರ. ಯಾವುದೇ ಅತ್ಯಾಧುನಿಕ ಶಸ್ರಾಸ್ತ್ರಗಳಿಲ್ಲದೆ, ಬಿಲ್ಲು ಬಾಣಗಳ ಮೂಲಕ ಇನ್ನೂರು ಮಂದಿ ಫ್ರೆಂಚ್ ಸೈನಿಕರನ್ನು ಕೊಂದು ಹಾಕಿದ ಈ ಅರಣ್ಯವಾಸಿಗಳ ಸಮುದಾಯ, ನಂತರ ಸೇನೆಯ ಪಿರಂಗಿ ದಾಳಿಗೆ ಕೋಟೆ ತುತ್ತಾದಾಗ ಅನಿವಾರ್ಯವಾಗಿ ಫ್ರೆಂಚರಿಗೆ ಶರಣಾಯಿತು. ಆನಂತರ ನಡೆದದ್ದು ಅಂದಿನ ಜಗತ್ತು ಕಂಡರಿಯದ ಭೀಕರ ನರಮೇಧ. ಕೋಟೆಯ ಒಳಗೆ ಪ್ರವೇಶ ಪಡೆದ ಫ್ರೆಂಚ್ ಸೈನಿಕರು ಎಲ್ಲಾ ಸ್ಥಳೀಯರನ್ನು ಹೊಸಕಿ ಹಾಕಿದರು. ಸುಮಾರು ಮೂರರಿಂದ ನಾಲ್ಕು ಸಾವಿರ ಬುಡಕಟ್ಟು ಜನಾಂಗದ ಯೋಧರು ಈ ಯುದ್ಧದಲ್ಲಿ ಬಲಿಯಾದರು. ಈಗ ಹಲವು ರೂಪಗಳಲ್ಲಿ ಹಾಡುವ ಈ ಕಾವ್ಯಕ್ಕೆ ಹಲವಾರು ಬುಡಕಟ್ಟು ಜನಾಂಗದ ನಾಯಕರಿದ್ದಾರೆ. ಅದೇ ರೀತಿ ನಾಯಕಿಯರೂ ಇದ್ದಾರೆ.

18 ನೇ ಶತಮಾನದ ಅಂತ್ಯದ ವೇಳೆ ಯಾರೋ ಒಬ್ಬ ಅನಾಮಿಕ ಮಹಾನುಭಾವ ಈ ಮೌಖಿಕ ಕಾವ್ಯವನ್ನು ದಾಖಲಿಸಿದ್ದ ಪರಿಣಾಮವಾಗಿ ಇದರ ಮೊದಲ ಹಸ್ತಪ್ರತಿ 1832 ರಲ್ಲಿ ಮದ್ರಾಸ್‌ನ ಒರಿಯಂಟಲ್ ಮ್ಯಾನ್ಯುಸ್ಕ್ರಿಪ್ಟ್ ಲೈಬ್ರರಿಯಲ್ಲಿ ಲಭ್ಯವಾಯಿತು. ಇವತ್ತಿಗೂ ಗೋದಾವರಿ ನದಿಯಾಚೆಗಿನ ನಾಡಿನಲ್ಲಿ ಇದೊಂದು ಅತ್ಯಂತ ಜನಪ್ರಿಯ ಕಥನಕಾವ್ಯ. ಇದನ್ನು ಹಾಡುವ ವೃತ್ತಿ ಗಾಯಕರಿದ್ದಾರೆ. (ಚಿತ್ರ ಗಮನಿಸಿ) ವಿಶೇಷ ವೇಷಭೂಷಣಗಳಿಂದ ಅಂಲಕೃತರಾಗಿ ಇಡೀ ರಾತ್ರಿ ಕಾವ್ಯವನ್ನು ಹಾಡುತ್ತಾರೆ. ಇಂತಹ ಬಲಿದಾನದ ಕಥನಕಾವ್ಯವನ್ನು ಚಿಕ್ಕಂದಿನಿಂದ ಆಲಿಸಿಕೊಂಡು ಬಂದಿದ್ದ, ಶಿಕ್ಷಕ ವೆಂಪಟಾಪು ಸತ್ಯನಾರಾಯಣನಿಗೆ ನಿಜಾಮನ ರೂಪದಲ್ಲಿ ತಲೆಯೆತ್ತಿರುವ ಈ ಜಮೀನ್ದಾರರ ಆರ್ಭಟವನ್ನು ಮಣಿಸದಿದ್ದರೆ, ಈ ನೆಲದ ಮಕ್ಕಳಿಗೆ ಉಳಿಗಾಲವಿಲ್ಲವೆಂದು ತೀರ್ಮಾನಿಸಿದನು. ಇದಕ್ಕಾಗಿ ಶಿಕ್ಷಕ ವೃತ್ತಿಯಲ್ಲಿ ಇದ್ದುಕೊಂಡು ಗಿರಿಜನರನ್ನು ಸಂಘಟಿಸತೊಡಗಿದನು. ಅನಕ್ಷರಸ್ತ, ಬುಡಕಟ್ಟು ಜನಾಂಗಕ್ಕೆ ಆಗಿರುವ ಅನ್ಯಾಯವವನ್ನು, ಅವರಿಗಾಗಿ ಇರುವ ಆಜನ್ಮಸಿದ್ಧ  ಹಕ್ಕುಗಳನ್ನು ವಿವರಿಸಲು, ಸತ್ಯನಾರಾಯಣ ಕೂಡ ಜನಪದ ಹಾಡುಗಳಿಗೆ ಮೊರೆಹೋದನು. ಆದಿವಾಸಿಗಳ ಅನ್ಯಾಯ ಕುರಿತು, ಜಮೀನ್ದಾರರ ಕ್ರೌರ್ಯ ಕುರಿತು ತಾನೇ ಹಾಡು ಬರೆದು, ಗಿರಿಜನರ ಪೋಡುಗಳಿಗೆ (ಹಳ್ಳಿ) ಹೋಗಿ ರಾತ್ರಿಯೆಲ್ಲಾ ಕುಳಿತು ಹಾಡತೊಡಗಿದನು.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಜನಪದರು ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಲಾವಣಿಗಳನ್ನು ರಚಿಸಿ ಸಾಮಾನ್ಯ ಜನರೆದುರು, ದೇಶ ಪ್ರೇಮದ ಪ್ರಚೋದನೆಗಾಗಿ ಹಾಡಿದ್ದು ಬಿಟ್ಟರೆ, ದೇಶದಲ್ಲಿ ಪ್ರಪಥಮವಾಗಿ ತುಳಿತಕ್ಕೆ ಒಳಗಾದವರ, ಬಾಯಿಲ್ಲದವರ ಬಗ್ಗೆ ಕ್ರಾಂತಿಕಾರಿ ಹಾಡುಗಳನ್ನು ಬರೆದು ಹಾಡಿದವನು ವೆಂಪಟಾಪು ಸತ್ಯನಾರಾಯಣ. ಈತ, ಇವತ್ತಿಗೂ ತನ್ನ ಕ್ರಾಂತಿಕಾರಿ ಹಾಡುಗಳಿಂದ ಆಂಧ್ರಪ್ರದೇಶದ ಜನ ಹುಚ್ಚೆದ್ದು ಕುಣಿಯುವಂತೆ ಮಾಡಿರುವ ಗಾಯಕ, ಕವಿ ಗದ್ದಾರ್ಗೂ ಸಹ ಪ್ರೇರಣೆಯಾದವನು. (ಗದ್ದಾರ್ನಿಂದ ನಮ್ಮ ಕರ್ನಾಟಕದ ದಲಿತ ಸಂಘಟನೆಗಳು ಪ್ರೇರಣೆಗೊಂಡು ಹಾಡು ರಚಿಸಿ ಹಾಡತೊಡಗಿದವು.) ಗಿರಿಜನ ಸಂಘಟನೆಯಿಂದ ಮೇಲ್ವರ್ಗದ ಸಮಾಜದ ಮತ್ತು ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಸತ್ಯನಾರಾಯಣ ಅಂತಿಮವಾಗಿ ಶಿಕ್ಷಕ ವೃತ್ತಿಯನ್ನು ತೊರೆದು, ಗಿರಿಜನರ ಪರವಾಗಿ ನಿಂತನು. ಅವರುಗಳ ವಿಶ್ವಾಸಗಳಿಸಿಕೊಳ್ಳುವ ನಿಟ್ಟಿನಲ್ಲಿ, ಜಟಪು ಮತ್ತು ಸವರ ಎಂಬ ಎರಡು ಆದಿವಾಸಿ ಪಂಗಡಗಳಿಂದ ಇಬ್ಬರು ಹೆಣ್ಣು ಮಕ್ಕಳನ್ನು ವಿವಾಹವಾಗಿ ಅವರ ಜೊತೆ ಬದುಕತೊಡಗಿದನು.

ಗಿರಿಜನರ ಸಂಘಟನೆಯಿಂದಾಗಿ ಸಾಹುಕಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಕೃಷಿಕಾರ್ಮಿಕರ ಕೂಲಿ ಒಂದು ರೂಪಾಯಿನಿಂದ ಎರಡು ರೂಪಾಯಿಗೆ ಹೆಚ್ಚಿತು. ಅದೇ ರೀತಿ. ಜಮೀನ್ದಾರ ಭೂಮಿಯಲ್ಲಿ ಗೇಣಿ ಆಧಾರದ ಮೇಲೆ ದುಡಿಯುತ್ತಿದ್ದ ರೈತರಿಗೆ ಈ ಮೊದಲು ಸಿಗುತ್ತಿದ್ದ ಐದು ಬುಟ್ಟಿ ಭತ್ತದ ಫಸಲಿಗೆ ಬದಲಾಗಿ ಇಪ್ಪತ್ತರಿಂದ, ಇಪ್ಪತ್ತೈದು ಬುಟ್ಟಿ ಭತ್ತ ಸಿಗತೊಡಗಿತು. (56 ಸೇರು ಭತ್ತದ ಪ್ರಮಾಣವನ್ನು ಒಂದು ಬುಟ್ಟಿ ಎಂದು ಕರೆಯುವ ವಾಡಿಕೆ ಆ ಪ್ರದೇಶದಲ್ಲಿ ಜಾರಿಯಲ್ಲಿತ್ತು) ಇವುಗಳ ಜೊತೆ ಜೊತೆಯಲ್ಲಿ ಗಿರಿಜನರೆಲ್ಲಾ ಸತ್ಯನಾರಾಯಣ ನೇತೃತ್ವದಲ್ಲಿ ಸಾಮೂಹಿಕವಾಗಿ ಸಂಘಟಿತರಾದ ಪರಿಣಾಮ, ಪೋಲಿಸರ, ಅರಣ್ಯಧಿಕಾರಿಗಳ ಕಿರುಕುಳ ತಪ್ಪಿತು. ಹೆಬ್ಬೆಟ್ಟಿನ ಸಹಿ ಮೂಲಕ ಅಕ್ರಮವಾಗಿ ಭೂಮಾಲಿಕರ ಪಾಲಾಗಿದ್ದ ಎರಡು ಸಾವಿರ ಎಕರೆ ಭೂಮಿಯನ್ನು ಅವರಿಂದ ಬಲವಂತವಾಗಿ ವಾಪಸ್ ಪಡೆಯುವಲ್ಲಿ ಆದಿವಾಸಿಗಳು ಯಶಸ್ವಿಯಾದರು.

ಪಾಳು ಬಿದ್ದಿದ್ದ ನಾಲ್ಕು ಸಾವಿರ ಸರ್ಕಾರಿ ಭೂಮಿಯನ್ನು ಭೂರಹಿತ ಆದಿವಾಸಿ ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಹಂಚಲಾಯಿತು. ಶಿಕ್ಷಕನಾಗಿದ್ದ ಸತ್ಯನಾರಾಯಣ, ಯಾವುದೇ ಕಮ್ಯೂನಿಷ್ಟ್ ವಿಚಾರಧಾರೆಗಳ ಹಂಗಿಲ್ಲದೆ, ಸತತ ಐದು ವರ್ಷಗಳ ಅವಿರತ ಹೋರಾಟದಿಂದ, ಶ್ರೀಕಾಕುಳಂ ಪ್ರಾಂತ್ಯದ ಭೂಮಾಲಿಕರಿಗೆ ಸಿಂಹಸ್ವಪ್ನವಾದನು. ಬಡವರಿಗೆ, ಕೃಷಿಕಾರ್ಮಿಕರಿಗೆ ಗಿರಿಜನರ ಪಾಲಿಗೆ ಆಶಾಕಿರಣವಾದನು. ಇದು ಸಹಜವಾಗಿ ಆಂಧ್ರದ ಕಮ್ಯೂನಿಷ್ಟ್ ನಾಯಕರ ಗಮನ ಸೆಳೆಯಿತು. ತೆಲಂಗಾಣ ರೈತರ ಹೋರಾಟವೆಂದು, ಪ್ರಸಿದ್ಧಿಯಾಗಿದ್ದ ಈ ಹೋರಾಟ ನಂತರ ನಕ್ಸಲ್ ಹೋರಾಟವಾಗಿ ಪರಿವರ್ತನೆ ಹೊಂದಿತು. ಈ ವೇಳೆಗೆ ಪಂಚಡಿ ಕೃಷ್ಣಮೂರ್ತಿ, ಸಿ.ತೇಜೇಶ್ವರರಾವ್, ಎಂಬ ಮುಖಂಡರು, ಸತ್ಯನಾರಾಯಣರಿಗೆ ಕೈ ಜೋಡಿಸಿದರು. ನೆರೆಯ ಒರಿಯಾದ ಪ್ರಸಿದ್ಧ ಕವಿ ಸುಬ್ಬರಾವ್ ಪ್ರಾಣಿಗ್ರಹಿ ಎಂಬುವರು, ಒರಿಸ್ಸಾದಲ್ಲಿ ತಮ್ಮ ಜಮುಕಲಾ ಕಥಾ ಎಂಬ ಹೆಸರಿನಲ್ಲಿ, ಸ್ಥಳೀಯ ಗಿರಿಜನರ ಸಮಸ್ಯೆಗಳನ್ನು ಜನಪದ ಶೈಲಿಯಲ್ಲಿ ಹಾಡು ಕಟ್ಟಿ ಸಂಘಟನೆಗೆ ನೆರವಾಗಿದ್ದರು. ಅದೇ ಪ್ರಯೋಗವನ್ನು ಇಲ್ಲಿ ಮುಂದುವರಿಸಿದರು. ಇವರ ನಡುವೆ ಅಪ್ಪಲಸೂರಿ ಎಂಬ ಮತ್ತೊಬ್ಬ ಮುಖಂಡ ನಗರಗಳಿಗೆ ಹೋಗಿ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮನವೊಲಿಸಿ ನಕ್ಸಲ್ ಸಂಘಟನೆಗೆ ಕರೆತಂದು ಮತ್ತಷ್ಟು ಹುರುಪು ತುಂಬಿದನು.

ಇವೆಲ್ಲವುಗಳ ಪರಿಣಾಮ, ಶ್ರೀಕಾಕುಳಂ ಜಿಲ್ಲೆಯ ಗಿರಿಜನರ ಸಂಘಟನೆ ಬಲಿಷ್ಟವಾಯಿತು. 1967 ರ ಅಕ್ಟೋಬರ್ 31 ರಂದು ಸಂಭವಿಸಿದ ಒಂದು ಘಟನೆ ಸಂಘಟನೆಯ ಹೋರಾಟಕ್ಕೆ ಹೊಸತಿರುವು ನೀಡಿತು. ಕಮ್ಯೂನಿಷ್ಟ್ ಪಕ್ಷದ ಸಭೆಗೆ ಹೋಗುತ್ತಿದ್ದ 800 ಗಿರಿಜನರ ಸದಸ್ಯರಿದ್ದ ಗುಂಪಿನ ಮೇಲೆ ಲೆವೆಡಿ ಎಂಬ ಹಳ್ಳಿಯೊಂದರಲ್ಲಿ ಭೂಮಾಲಿಕರ ಗೂಂಡಾಪಡೆ ಗುಂಡು ಹಾರಿಸಿ, ಇಬ್ಬರನ್ನು ಬಲಿ ತೆಗೆದುಕೊಂಡಿತು. ಆದಿನ ಗಿರಿಜನರ ಗುಂಪು ಗುಂಡೇಟಿನಿಂದ ಸತ್ತವರ ಎದೆಯ ಮೇಲೆ ಕೈಯಿಟ್ಟು ಇದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿತು. ಆ ಕ್ಷಣದಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟದ ಇತಿಹಾಸಕ್ಕೆ ರಕ್ತಸಿಕ್ತದ ಹೊಸ ಅಧ್ಯಾಯವೊಂದು ಸೇರ್ಪಡೆಯಾಯಿತು.

ವೆಂಪಟಾಪು ಸತ್ಯನಾರಾಯಣ, 800 ಗಿರಿಜನರ ಪಡೆಯೊಂದನ್ನು ಕಟ್ಟಿ, ಅದನ್ನು ತಲಾ ನೂರು ಜನರ 8 ದಳಗಳನ್ನು ವಿಭಜಿಸಿದ. ಅವರಿಗೆ ಹೋರಾಟದ ಕೆಚ್ಚನ್ನು ಮತ್ತು ಸ್ಥೈರ್ಯವನ್ನು ತುಂಬಿದ. ಇದರ ಪರಿಣಾಮ, 1968 ರ ಅಕ್ಟೋಬರ್ 23 ರಂದು ಸೊಂಪೇಟ ತಾಲ್ಲೋಕಿನ ಬೊದ್ದಪಡು ಎಂಬ ಗ್ರಾಮಕ್ಕೆ ನುಗ್ಗಿದ ಹೋರಾಟಗಾರರು, ಜಮೀನ್ದಾರರ ಮನೆಯಲ್ಲಿದ್ದ ಭತ್ತ, ಹಣವನ್ನು ಲೂಟಿ ಮಾಡಿದರು. ಮತ್ತೇ ಒಂದು ತಿಂಗಳಿನ ನಂತರ ತೆಕಳಿ ತಾಲೂಕಿನ ಗರುಡಬಾದ್ರ ಎಂಬ ಊರಿನ ಮೇಲೆ ದಾಳಿ ಮಾಡಿ, ಅಲ್ಲಿನ ಸಾಹುಕಾರರು, ಜಮೀನ್ದಾರರು, ಅವರ ಗೂಂಡಾಪಡೆಯನ್ನು ಥಳಿಸಿ, ಧವಸ, ಧಾನ್ಯ, ಹಣ, ಆಭರಣ, ಮತ್ತು ಬಂದೂಕಗಳನ್ನು ದೋಚಿದರು. ಪ್ರತಿಯೊಂದು ದಳಕ್ಕೂ ಸತ್ಯನಾರಾಯಣ, ಪಂಚಡಿ ಕೃಷ್ಣಮೂರ್ತಿ, ತಮ್ಮಡ ಗಣಪತಿ ಅಪ್ಪಾಲ್ ಸೂರಿ, ತೇಜೇಶ್ವರರಾವ್, ನೇತೃತ್ವ ವಹಿಸಿದ್ದು ವಿಶೇಷವಾಗಿತ್ತು. ಒಂದು ವರ್ಷದ ಅವಧಿಯಲ್ಲಿ ನಡೆದ ನೂರಕ್ಕು ಹೆಚ್ಚು ದಾಳಿಗಳಿಂದ, ಭೂಮಾಲಿಕರು, ಹಣದ ಲೇವಾದೇವಿಗಾರರು, ಮತ್ತು ಅವರು ಸಾಕಿಕೊಂಡಿದ್ದ ಗೂಂಡಾ ಸದಸ್ಯರು, ಎಲ್ಲರೂ ತತ್ತರಿಸಿಹೋದರು. ದಾಳಿಯ ಜೊತೆಜೊತೆಯಲ್ಲಿ ಪೊಲೀಸರ ಜೊತೆ ನಡೆದ ಸಂಘರ್ಷದಲ್ಲಿ ಇಬ್ಬರು ಇನ್ಸಪೆಕ್ಟರ್‌ಗಳು ಸೇರಿದಂತೆ 31 ಮಂದಿ ಪೊಲೀಸರು ಹತರಾದರು.

ಶ್ರೀಕಾಕುಳಂ ಹೋರಾಟದ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ, 1969 ರ ಮಾರ್ಚ್ ತಿಂಗಳಿನಲ್ಲಿ ಶ್ರೀಕಾಕುಳಂ ಜಿಲ್ಲೆಗೆ ಭೇಟಿ ನೀಡಿದ ಚಾರು ಮುಜಂದಾರ್, ಹೋರಾಟಗಾರರಿಗೆ ಅಗತ್ಯವಾದ ಶಸ್ರಾಸ್ತ್ರಗಳನ್ನು ನೀಡಿದುದಲ್ಲದೆ, ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿಗೆ ವ್ಯವಸ್ಥೆ ಮಾಡಿದ. ಚಾರು ಮುಜಂದಾರ್ ಭೇಟಿಯಿಂದ ಶ್ರೀಕಾಕುಳಂ ಹೋರಾಟಕ್ಕೆ ಹೊಸ ತಿರುವು ಸಿಕ್ಕಿತು. ಎಣ್ಣೆಯಲ್ಲಿ ಅದ್ದಿದ್ದ ದೊಂದಿಗೆ (ಪಂಜು) ಕಿಡಿ ತಗುಲಿದಂತಾಯಿತು. ಹತ್ತಿ ಉರಿದ ಹೋರಾಟದ ಈ ದೊಂದಿ, ಅವರೆಗೆ ಕಗ್ಗತ್ತಲಲ್ಲಿದ್ದ ಅಮಾಯಕ ಗಿರಿಜನರ ಪಾಲಿಕೆ ಬೆಳಕಾದರೆ, ಶೋಷಣೆ ಮಾಡುತ್ತಿದ್ದ ಭೂಮಾಲಿಕರ ಪಾಲಿಗೆ ಮೈಸುಡುವ ಬೆಂಕಿಯಾಯಿತು. ಅಲ್ಪಾವಧಿಯಲ್ಲಿ ನಕ್ಸಲ್ ಹೋರಾಟ ಆಂಧ್ರದ ತೆಲಂಗಾಣ ಮತ್ತು ಶ್ರೀಕಾಕುಳಂ ಪ್ರಾಂತ್ಯದ ಮುನ್ನೂರು ಹಳ್ಳಿಗಳಿಗೆ ವ್ಯಾಪಿಸಿತು.

1969 ರ ಮಾರ್ಚ್ ತಿಂಗಳಿನಿಂದ ಡಿಸಂಬರ್‌‍ವರೆಗೆ ಭೂಮಾಲಿಕರ ಮನೆಯ ಮೇಲೆ 40 ದಾಳಿಗಳು ಮತ್ತು 29 ಭೂಮಾಲಿಕರ ಹಾಗೂ ಲೇವಾದೇವಿದಾರರ ಹತ್ಯೆಗಳು ಸಂಭವಿಸಿದವು. 1969 ರ ಮೇ 26 ರ ರಾತ್ರಿ ಲಹೋರಿಜೋಲ ಎಂಬ ಹಳ್ಳಿಯ ಮೇಲೆ ದಾಳಿ ಇಟ್ಟ 600 ಮಂದಿ  ಹೋರಾಟಗಾರರು, ಅಂಗಾರು ಇಂದುವದನ ನಾಯ್ಡು ಎಂಬ ಜಮೀನ್ದಾರನ ಮನೆಗೆ ನುಗ್ಗಿ ಆತನ ಪತ್ನಿ ಎದುರು ಕತ್ತು ಕೊಯ್ದು ಹತ್ಯೆ ಮಾಡಿದರು. (ಈತ ತನ್ನ ಗೂಂಡಾ ಪಡೆಯ ಮೂಲಕ ಗಿರಿಜನರ ಮೇಲೆ ಗುಂಡು ಹಾರಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದವನು) ಅಲ್ಲದೆ ಅವನ ನೆತ್ತರಿನಲ್ಲಿ ತಮ್ಮ ಹಸ್ತಗಳನ್ನು ಅದ್ದಿ ಮನೆಯ ಹೊರಭಾಗದ ಗೋಡೆಯ ಮೇಲೆ ಅವುಗಳ ಅಚ್ಚು ಮೂಡಿಸಿದರು. ಅವರ ಸಿಟ್ಟು ಮತ್ತು ಅಮಾನುಷವಾದ ಈ ಕೃತ್ಯದಲ್ಲಿ ಶತಶತಮಾನಗಳಿಂದ ಅವರು ಅನುಭವಿಸಿದ, ಶೋಷಣೆಯ ನೋವುಗಳಿದ್ದವು, ಅವರ ಹೆಂಡತಿಯರು ಮತ್ತು ಅಕ್ಕ ತಂಗಿಯರ ಅತ್ಯಾಚಾರದ ನೆನಪುಗಳಿದ್ದವು. ಮತ್ತೇ ಜೂನ್ ತಿಂಗಳಿನಲ್ಲಿ ಅಕ್ಕುಪಲ್ಲಿ ಎಂಬ ಊರಿನ ಬಡ್ಡಿ ವ್ಯಾಪಾರಿ ಭೂಚಂದ್ರರಾವ್ ಎಂಬಾತನ ಮನೆಗೆ ನುಗ್ಗಿದ ಮಹಿಳಾ ಸದಸ್ಯರನ್ನು ಒಳಗೊಂಡಿದ್ದ ತಂಡ, ಆತನನ್ನೂ ಸಹ ಪತ್ನಿಯ ಎದುರು ಹತ್ಯೆಗೈದು, ಗಿರವಿ ಇಟ್ಟುಕೊಂಡಿದ್ದ ಗಿರಿಜನ ಚಿನ್ನಾಭರಣಗಳನ್ನು ದೋಚಲಾಯಿತು. ಈ ದಾಳಿಯ ನೇತೃತ್ವವನ್ನು ಪಂಚಡಿ ನಿರ್ಮಲ ಎಂಬಾಕೆ ವಹಿಸಿಕೊಂಡಿದ್ದಳು. ಹೀಗೆ ನಿರಂತರ ನಡೆದ ದಾಳಿಯಿಂದ ಬೆಚ್ಚಿ ಬಿದ್ದ ಭೂಮಾಲಿಕರು, ಸಾಹುಕಾರರು, ಅವರಿಗೆ ಬೆಂಗಾವಲಿಗೆ ಇದ್ದ ಗೂಂಡಾಗಳು ತಮ್ಮ ಮನೆ, ಜಮೀನು, ಎಲ್ಲವನ್ನು ಬಿಟ್ಟು ರಾತ್ರೋರಾತ್ರಿ ಊರು ಖಾಲಿ ಮಾಡಿ, ಪಟ್ಟಣ ಮತ್ತು ನಗರಗಳನ್ನು ಸೇರಿಕೊಂಡರು. ಬಹುತೇಕ ಈ ಎಲ್ಲಾ ಘಟನೆಗಳು, ಶ್ರೀಕಾಕುಳಂ ಜಿಲ್ಲೆ ಪಾರ್ವತಿಪುರ, ಸೊಂಪೇಟ, ತಕಾಳಿ ತಾಲೂಕು ವ್ಯಾಪ್ತಿಯ ಹಳ್ಳಿಗಳಲ್ಲಿ ಜರುಗಿದ್ದು ವಿಶೇಷ.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 21)


– ಡಾ.ಎನ್.ಜಗದೀಶ್ ಕೊಪ್ಪ


ಪ್ರವಾಸಿ ಮಂದಿರದಲ್ಲಿ ತಂಗಿದ್ದ ಕಾರ್ಬೆಟ್ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ, ನರಭಕ್ಷಕ ಚಿರತೆ ರಾತ್ರಿ ಹಾರಿಸಿದ್ದ ಗುಂಡೇಟಿಗೆ ಬೆದರಿ ಅಲಕಾನಂದ ನದಿಯ ಸೇತುವೆ ದಾಟಿ ಹೋಗಿರಬಹುದೇ ಎಂದು ಸಂಶಯಿಸಿ, ಸೇತುವೆ ಬಳಿ ಬಂದು ಪರೀಕ್ಷಿಸಿದ. ಸೇತುವೆಯನ್ನು ಅವನ ಅಣತಿಯಂತೆ ಹಳ್ಳಿಗರು ಕಲ್ಲು ಮತ್ತು ಮುಳ್ಳಗಳಿಂದ ಮುಚ್ಚಿದ್ದ ಕಾರಣ ಅದು ಸೇತುವೆ ದಾಟಿ ಹೋಗಲು ಅಸಾಧ್ಯವಾಗಿತ್ತು. ಇನ್ನೊಂದು ಸೇತುವೆ ಸುಮಾರು 14 ಕಿಲೋಮೀಟರ್ ದೂರದ ಚಿಟ್ಪಾವಲ್ ಹಳ್ಳಿಯಲ್ಲಿ ಇದ್ದ ಕಾರಣ ಅಷ್ಟು ದೂರ ಹೋಗಿರಲಾರದು ಎಂದು ಕಾರ್ಬೆಟ್ ಊಹಿಸಿದ. ಸೇತುವೆ ಬಳಿ ಅದರ ಹೆಜ್ಜೆಯ ಗುರುತುಗಳು ಇರಲಿಲ್ಲವಾದರಿಂದ ಚಿರತೆ ಇಲ್ಲೇ ಕಾಡಿನಲ್ಲೆ ಅಡಗಿದೆ ಎಂಬ ತೀರ್ಮಾನಕ್ಕೆ ಬಂದ. ಏನೇ ಆಗಲಿ ಗುಂಡೇಟಿನಿಂದ ಗಾಬರಿಗೊಂಡಿರುವ ಚಿರತೆ ರಾತ್ರಿ ವೇಳೆ ಸೇತುವ ದಾಟುವ ಸಾಧ್ಯತೆ ಇದೆ ಎಂದುಕೊಂಡ ಕಾರ್ಬೆಟ್, ಅಲ್ಲಿ ಹಾಕಲಾಗಿದ್ದ ಕಲ್ಲು, ಮುಳ್ಳುಗಳನ್ನು ತೆಗೆಸಿ ರಾತ್ರಿ ವೇಳೆ ಕಾವಲು ಕಾಯಲು ಕುಳಿತ.

ಸೇತುವೆಯ ಒಂದು ಬದಿಯ ಗೋಪುರದಲ್ಲಿ ಸತತ 20 ದಿನಗಳ ರಾತ್ರಿ ಶೀತಗಾಳಿ, ತುಂತುರು ಮಳೆಯ ನಡುವೆ ಕಾರ್ಬೆಟ್ ಕಾದು ಕುಳಿತರೂ ಏನೂ ಪ್ರಯೋಜನವಾಗಲಿಲ್ಲ. ಒಂದು ದಿನ ಬೆಳಗಿನ ಜಾವ ನರಿಯೊಂದು ಸೇತುವೆಯನ್ನು ದಾಟಿದ್ದನ್ನು ಅವನು ಮೂಕಪ್ರೇಕ್ಷಕನಾಗಿ ನೋಡಬೇಕಾಗಿಬಂತು. ಇದೇ ವೇಳೆಗೆ ಜಿಲ್ಲಾಧಿಕಾರಿ ಇಬ್ಸ್‌ಟನ್ ತನ್ನ ಪತ್ನಿಯೊಂದಿಗೆ ಘರ್‌ವಾಲ್‌ಗೆ ‌ಬಂದ. ನರಭಕ್ಷಕನ ಬೇಟೆಯಲ್ಲಿ ತೊಡಗಿರುವ ಕಾರ್ಬೆಟ್ ಜೊತೆ ಪಾಲ್ಗೊಳ್ಳವ ಉದ್ದೇಶದಿಂದ ಕೆಲಸದ ನಡುವೆಯೂ ವಿರಾಮ ಮಾಡಿಕೊಂಡು ಬಂದಿದ್ದ. ಕಾರ್ಬೆಟ್‌ಗೆ ಕಂಪನಿ ಕೊಟ್ಟು ಅವನ ಏಕಾಂಗಿತನ ಹೋಗಲಾಡಿಸುವ ಉದ್ದೇಶ ಕೂಡ ಇದರಲ್ಲಿ ಅಡಗಿತ್ತು.

ಪ್ರವಾಸಿ ಮಂದಿರದಲ್ಲಿ ಕೇವಲ ಒಂದು ಕೊಠಡಿ ಇದ್ದ ಕಾರಣ ಕಾರ್ಬೆಟ್ ಅದನ್ನು ಇಬ್ಸ್‌ಟನ್ ದಂಪತಿಗಳಿಗೆ ಬಿಟ್ಟುಕೊಟ್ಟು ತನ್ನ ಸೇವಕರೊಡನೆ ಹೊರಗೆ ಟೆಂಟ್ ಹಾಕಿಕೊಂಡು ಮಲಗಲು ನಿರ್ಧರಿಸಿದ. ಅಂದು ಸಂಜೆ ತನ್ನ ಎಂಟು ಮಂದಿ ಸೇವಕರ ನೆರವಿನೊಂದಿಗೆ ಪ್ರವಾಸಿ ಮಂದಿರದ ಮುಂದೆ ಟೆಂಟ್ ಹಾಕಿಸಿ, ಸುತ್ತಲಿನ ಬೇಲಿಯನ್ನು ಭದ್ರಪಡಿಸಿದ. ಬೇಲಿಯ ನಡುವೆ ಒಂದು ಮರವಿದ್ದು ಅದರ ಕೊಂಬೆಗಳು ಒಳಕ್ಕೆ ಚಾಚಿದ್ದವು. ಅವುಗಳನ್ನು ಸಹ ಕಾರ್ಬೆಟ್ ಕಡಿಸಿಹಾಕಿದ. ಹಿಂದೊಂಮ್ಮೆ ನರಭಕ್ಷಕ ಕಾಡಿನಿಂದ ಪ್ರವಾಸಿ ಮಂದಿರದವರೆಗೂ ಕಾರ್ಬೆಟ್‌ನನ್ನು ಹಿಂಬಾಲಿಸಿ ಬಂದಿದ್ದರಿಂದ ಅವನು ಈ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದ.

ಕಡೆಗೂ ಕಾರ್ಬೆಟ್‌ನ ನಿರೀಕ್ಷೆ ನಿಜವಾಯಿತು. ಆದಿನ ತಡ ರಾತ್ರಿ ನರಭಕ್ಷಕ ಮರಹತ್ತಿ ಬೇಲಿ ನೆಗೆಯಲು ಪ್ರಯತ್ನಿಸಿತು. ಮರದ ಸಣ್ಣ ಸಣ್ಣ ರಂಬೆಗಳು ಚಿರತೆಯ ಭಾರ ತಾಳಲಾರದೆ, ಲಟಲಟನೆ ಮುರಿಯತೊಡಗಿದಾಗ, ಟೆಂಟ್‌ನಲ್ಲಿ ಮಲಗಿದ್ದ ಕಾರ್ಬೆಟ್‌ಗೆ ಎಚ್ಚರವಾಯಿತು. ಕೂಡಲೇ ಅವನು ತನ್ನ ಮಗ್ಗುಲಲ್ಲೆ ಇರಿಸಿದ್ದ ಕೋವಿ ತೆಗೆದುಕೊಂಡು ಟಾರ್ಚ್‌ಎತ್ತಿಕೊಂಡು ಹೊರಬಂದ. ಇದಾವುದರ ಪರಿವಿಲ್ಲದೆ ಅವನ ಸೇವಕರು ಮರದಕೆಳಗಿನ ಗುಡಾರದಲ್ಲಿ ಆರಾಮವಾಗಿ ಮಲಗಿದ್ದರು, ಮಾಧೂಸಿಂಗ್ ದೊಡ್ಡಧ್ವನಿಯ ಗೊರಕೆಯಲ್ಲಿ ಮುಳುಗಿಹೋಗಿದ್ದ. ಕಾರ್ಬೆಟ್ ಹೊರಬರುವುದು ಕೆಲವೇ ಕ್ಷಣ ತಡವಾಗಿದ್ದರೆ, ಅದು ಮಾಧೂಸಿಂಗ್ ಮೇಲೆ ನೆಗೆದು ಅವನನ್ನು ಬಲಿತೆಗೆದುಕೊಳ್ಳುತ್ತಿತ್ತು. ಮರದ ತುದಿಯ ಕೊಂಬೆಯೊಂದು ಸೇವಕರಿಗೆ ಎಟುಕದ ಕಾರಣ ಕಡಿಯದೇ ಹಾಗೇ ಬಿಟ್ಟಿದ್ದರು. ಆ ಕೊಂಬೆಯ ಮೇಲಿಂದ ಚಿರತೆ ನರಬಲಿಗೆ ಹೊಂಚು ಹಾಕಿತ್ತು. ಕಾರ್ಬೆಟ್ ಬಿಟ್ಟ ಟಾರ್ಚ್ ಬೆಳಕಿಗೆ ಗಾಬರಿಗೊಂಡ ಅದು ಮರದಿಂದ ಜಿಗಿದು ಓಡಿ ಹೋಗಿ ಪಕ್ಕದ ಕಾಡು ಸೇರಿಕೊಂಡಿತ್ತು.

ಮಾರನೇ ದಿನ ಬೆಳಿಗ್ಗೆ ಕಾರ್ಬೆಟ್ ಎದ್ದವನೇ ಮರದ ಕೊಂಬೆಗಳನ್ನು ಸಂಪೂರ್ಣವಾಗಿ ಕಡಿಸಿ ಹಾಕಿದ. ಬೇಲಿಯನ್ನು ಮತ್ತಷ್ಟು ಭದ್ರಪಡಿಸಿದ ನರಭಕ್ಷಕ ಇಲ್ಲೆ ಆಸು ಪಾಸಿನ ಪ್ರದೇಶದಲ್ಲಿ ಇರುವುದು ರಾತ್ರಿಯ ಘಟನೆಯಿಂದ ಖಚಿತವಾಯಿತು. ಇಬ್ಸ್‌ಟನ್ ಕೂಡ ಬಂದಿದ್ದರಿಂದ ಆದಿನ ಬೆಳಿಗ್ಗೆ ಕಾರ್ಬೆಟ್ ಅವನನ್ನು ಕರೆದುಕೊಂಡು ಹೋಗಿ ಅಲಕನಂದಾ ನದಿಯಲ್ಲಿ ತನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾದ ಮೀನು ಶಿಕಾರಿಯಲ್ಲಿ ತೊಡಗಿದ. ಸಂಜೆವೇಳೆಗೆ ಇಬ್ಬರೂ ಹಿಡಿದಿದ್ದ ಮೀನುಗಳನ್ನು ತಂದು ಸೇವಕರಿಗೆ ಕೊಟ್ಟು, ರಾತ್ರಿ ಪ್ರವಾಸಿ ಮಂದಿರದಲ್ಲಿ ವಿಸ್ಕಿ ಹೀರುತ್ತಾ ನರಭಕ್ಷಕನ ಬೇಟೆಗೆ ಯೋಜನೆ ರೂಪಿಸತೊಡಗಿದರು. ಬೆಳಗಿನ ಜಾವದ ವೇಳೆಗೆ ಪಕ್ಕದ ಹಳ್ಳಿಯಲ್ಲಿ ನರಭಕ್ಷಕ ಪ್ರತ್ಯಕ್ಷವಾಗಿ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ ಸುದ್ಧಿ ಕಾರ್ಬೆಟ್‌ಗೆ ತಲುಪಿತು. ಕೂಡಲೇ ಇಬ್ಸ್‌ಟನ್ ಜೊತೆ ಕಾರ್ಬೆಟ್ ಹಳ್ಳಿಗೆ ಹೊರಟ.

ಹಳ್ಳಿ ರೈತನ ಮನೆಗೆ ನುಗ್ಗಲು ವಿಫಲಯತ್ನ ನಡೆಸಿದ ಚಿರತೆ, ಮನೆಯ ಬಾಗಿಲನ್ನು ತನ್ನ ಉಗುರಿನಿಂದ ಕೆರೆದು ಮುರಿಯಲು ಪ್ರಯತ್ನಿಸಿತ್ತು. ಅದು ಸಾಧ್ಯವಾಗದೇ, ನಂತರ ಮನೆಯ ಹಿಂಭಾಗದ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಬಲಿ ತೆಗೆದುಕೊಂಡಿತ್ತು. ಕೊಂದ ಹಸುವನ್ನು ಕಚ್ಚಿ ಎಳೆದೊಯ್ಯಲು ಅದು ಪ್ರಯತ್ನಿಸಿತ್ತು ಆದರೆ, ಬಾಗಿಲು ಚಿಕ್ಕದಾಗಿದ್ದು, ಹಸುವಿನ ಕಳೇಬರ ಬಾಗಿಲಿಗೆ ಅಡ್ಡಲಾಗಿ ಸಿಕ್ಕಿ ಹಾಕಿಕೊಂಡ ಪರಿಣಾಮ ಅದನ್ನು ಅಲ್ಲೇ ಇರಿಸಿ ಅರ್ಧ ಭಾಗವನ್ನು ತಿಂದು ಹೋಗಿತ್ತು. ಸ್ಥಳವನ್ನು ಅವಲೋಕಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ರಾತ್ರಿ ಕೊಟ್ಟಿಗೆಗೆ ಬಂದು ಕಾವಲು ಕೂರಲು ನಿರ್ಧರಿಸಿದರು. ಮತ್ತೇ ರಾತ್ರಿ ಹಸುವಿನ ಕಳೇಬರವನ್ನು ತಿನ್ನಲು ಚಿರತೆ ಬರುತ್ತದೆ ಎಂಬುದು ಇಬ್ಬರ ನಿರೀಕ್ಷೆಯಾಗಿತ್ತು. ರಾತ್ರಿ ಊಟವಾದ ನಂತರ ಒಂದಿಷ್ಟು ಸ್ಯಾಂಡ್ವಿಚ್ ಮತ್ತು ಚಹಾ ಮತ್ತು ಬಂದೂಕುಗಳೊಂದಿಗೆ ರೈತನ ಮನೆಯ ಕೊಟ್ಟಿಗೆಗೆ ಬಂದು ಕಾವಲು ಕುಳಿತರು. ಆದರೆ, ನರಭಕ್ಷ ಆ ರಾತ್ರಿ ಹಸುವಿನ ಕಳೇಬರದತ್ತ ಸುಳಿಯಲೇ ಇಲ್ಲ. ಇದಾದ ಎರಡು ದಿನಗಳ ನಂತರ ಮತ್ತೊಂದು ಹಳ್ಳಿಯಲ್ಲಿ ನರಭಕ್ಷಕ ಮತ್ತೇ ಕೊಟ್ಟಿಗೆಯಲ್ಲಿ ಇದ್ದ ಹಸುವೊಂದನ್ನು ಬಲಿತೆಗೆದುಕೊಂಡಿತ್ತು.

ಈ ಬಾರಿ ಹಸುವನ್ನು ಬಾಗಿಲಿನ ಹೊರಭಾಗದವರೆಗೆ ಎಳೆದು ತಂದಿತ್ತು ಆದರೆ ಭಾರಿ ಗಾತ್ರದ ಹಸುವಿನ ಶವವನ್ನು ಕೊಂಡೊಯ್ಯಲು ಸಾಧ್ಯವಾಗದೆ, ಅಲ್ಲೆ ಕೆಲವು ಭಾಗಗಳನ್ನು ತಿಂದುಹೋಗಿತ್ತು. ಕೊಟ್ಟಿಗೆಯ ಮುಂಭಾಗದಲ್ಲಿ ಚಪ್ಪರವೊಂದನ್ನು ನಿರ್ಮಿಸಿ ಅದರ ಮೇಲೆ ಜಾನುವಾರುಗಳಿಗೆ ರೈತ ಹುಲ್ಲನ್ನು ಸಂಗ್ರಹಿಸಿ ಇಟ್ಟಿದ್ದ. ಇದನ್ನು ನೋಡಿದ ಕಾರ್ಬೆಟ್ ಹುಲ್ಲನ್ನು ತನ್ನ ಸೇವಕರಿಂದ ತೆಗೆಸಿ , ಚಪ್ಪರದ ಮೇಲೆ ಗೂಡನ್ನು ನಿರ್ಮಿಸಿದ, ಮತ್ತೇ ಕೆಲವು ಬಿದಿರಿನ ಬೊಂಬುಗಳನ್ನು ನೆಡಸಿ, ತನ್ನ ಗೂಡಿನ ಮೇಲೆ ಇನ್ನೊಂದು ಅಂತಸ್ತಿನ ಗೂಡನ್ನ ಇಬ್ಸ್‌ಟನ್‌ಗಾಗಿ ನಿರ್ಮಿಸಿದ. ರಾತ್ರಿ ಇಬ್ಬರೂ ಆರಾಮವಾಗಿ ಕುಳಿತುಕೊಳ್ಳಲು ಮರದ ಹಲಗೆಗಳನ್ನು ಚಪ್ಪರದ ಮೇಲೆ ಹಾಸಿಸಿದ್ದ. ಮತ್ತೆ ಆ ರಾತ್ರಿ ಕೂಡ ಇಬ್ಬರು ಕಾವಲು ಕುಳಿತರು. ಇಬ್ಸ್‌ಟನ್ ಕಾರ್ಬೆಟ್‌ಗಿಂತ ಕುಳ್ಳಗಿದ್ದ ಕಾರಣ ಅವನು ಮೇಲಿನ ಅಂತಸ್ತಿನ ಚಪ್ಪರದಲ್ಲಿ ಕುಳಿತರೆ, ಕಾರ್ಬೆಟ್ ನೆಲದಿಂದ ಹತ್ತು ಅಡಿ ಎತ್ತರವಿದ್ದ ಕೆಳ ಹಂತಸ್ತಿನ ಗೂಡಿನಲ್ಲಿ ಕುಳಿತ. ಇವರ ಸೂಚನೆಯಂತೆ ರಾತ್ರಿ ಎಂಟು ಗಂಟೆ ವೇಳೆಗೆ ಹಳ್ಳಿ ಗ್ರಾಮಸ್ಥರು ಊಟ ಮುಗಿಸಿ ತಮ್ಮ ಮನೆಗಳ ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿ ಮಲಗಿದರು.

ರಾತ್ರಿ ಹನ್ನೋಂದರ ವೇಳೆಗೆ ನರಭಕ್ಷಕ ಪರ್ವತದಿಂದ ಇಳಿದು ಹಳ್ಳಿಯತ್ತ ಬರುತ್ತಿರುವುದನನ್ನು ಕಾಡಿನ ಪ್ರಾಣಿ ಮತ್ತು ಪಕ್ಷಿ ಸಂಕುಲ ಕಾರ್ಬೆಟ್‌ಗೆ ಸೂಚನೆ ನೀಡಿದವು. ಇಬ್ಬರೂ ಮಾತು ನಿಲ್ಲಿಸಿ ತಮ್ಮ ತಮ್ಮ ಬಂದೂಕುಗಳನ್ನು ಕೈಗೆ ತೆಗೆದುಕೊಂಡು ನರಭಕ್ಷಕನಿಗಾಗಿ ಕಾಯತೊಡಗಿದರು. ಈ ಬಾರಿ ಕಾರ್ಬೆಟ್‌ನ ನಿರೀಕ್ಷೆಯನ್ನು ಹುಸಿ ಮಾಡದೇ ನರಭಕ್ಷಕ  ಹಸುವಿನ ಕಳೇಬರವಿದ್ದ ಸ್ಥಳದತ್ತ ಬರತೊಡಗಿತು ಆದರೆ, ಅದಕ್ಕೆ ಹತ್ತಿರ ಬರುತ್ತಿದ್ದಂತೆ ನರಮನುಷ್ಯನ ವಾಸನೆ ಮೂಗಿಗೆ ಬಡಿದ ಕಾರಣ ನೇರವಾಗಿ ಹಸುವಿದ್ದ ಜಾಗಕ್ಕೆ ಹೋಗದೆ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಚಪ್ಪರದಕೆಳೆಕ್ಕೆ ಬಂದು ಸುತ್ತ ಮುತ್ತ ಎಚ್ಚರಿಕೆಯಿಂದ ಗಮನಿಸತೊಡಗಿತು ಅಲ್ಲದೆ ಚಪ್ಪರಕ್ಕೆ ನೆಡಲಾಗಿದ್ದ ಬೊಂಬುಗಳಿಗೆ ತನ್ನ ಮೈಯನ್ನು ಸವರತೊಡಗಿತು. ಉಸಿರು ಬಿಗಿ ಹಿಡಿದು ಕುಳಿತ ಕಾರ್ಬೆಟ್ ನರಭಕ್ಷಕ ಚಪ್ಪರದ ಕೆಳಭಾಗದಿಂದ ಹೊರಬಂದ ಕೂಡಲೇ ಗುಂಡು ಹಾರಿಸಿ ಕೊಲ್ಲಬೇಕೆಂದು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾಯುತ್ತಿದ್ದ ಅಷ್ಟರಲ್ಲಿ ಮೇಲಂತಸ್ತಿನ ಗೂಡಿನ ಮರದ ಹಲಗೆ ಲಟಾರನೆ ಮುರಿಯಿತು ಶಬ್ಧಕ್ಕೆ ಅಂಜಿದ ಚಿರತೆ ಮುಂಭಾಗದಲ್ಲಿ ಓಡಿ ಹೋಗದೆ, ಹಿಂಭಾಗದಿಂದ ಓಡಿಹೋಯಿತು. ಗೂಡಿನ ಸುತ್ತ ಹುಲ್ಲು ಹೊದಿಸಿದ್ದ ಕಾರಣ ಅದಕ್ಕೆ ಗುರಿಯಿಡಲು ಕಾರ್ಬೆಟ್‌ಗೆ ಸಾಧ್ಯವಾಗಲಿಲ್ಲ.

ಒಂದೇ ಸ್ಥಿತಿಯಲ್ಲಿ ಕುಳಿತ್ತಿದ್ದ ಇಬ್ಸ್‌ಟನ್ ಮೇಲಿನ ಗೂಡಿನಲ್ಲಿ ಮಗ್ಗುಲು ಬದಲಿಸುವಾಗ ಹಲಗೆ ಮುರಿದು ಶಬ್ಧಮಾಡುವುದರ ಮೂಲಕ ನರಭಕ್ಷಕನ ಪ್ರಾಣ ಉಳಿಸಿತ್ತು. ಇಬ್ಬರೂ ತಮ್ಮ ದುರಾದೃಷ್ಟವನ್ನು ಅಳಿದುಕೊಳ್ಳುತ್ತಾ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದರು. ಈ ಘಟನೆ ನಡೆದ ಎರಡು ದಿನಗಳ ನಂತರ ನರಭಕ್ಷಕ ರುದ್ರಪ್ರಯಾಗದ ಪಟ್ಟಣದಲ್ಲೇ ಮನೆಯೊಂದರ ಮುಂಭಾಗದ ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ಮಾಡಿ ಅದನ್ನು ಕೊಂದು ಹೊರಭಾಗದ ಬಯಲಲ್ಲಿ ತಿಂದು ಹೋಗಿತ್ತು. ನಿರಂತರ ಘಟನೆಗಳಿಂದ ಹತಾಶರಾಗಿದ್ದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಈ ಸಾರಿ ನರಭಕ್ಷಕನ ಬೇಟೆಗೆ ಹೊಸತಂತ್ರವನ್ನು ರೂಪಿಸಿದ್ದರು. ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಮಾರು ಎಂಬತ್ತು ಕೆ.ಜಿ. ಗಾತ್ರದ ಅಡಕತ್ತರಿಯೊಂದನ್ನು (ಜಿನ್ ಕತ್ತರಿ) ತರಿಸಿದ್ದರು ಇದನ್ನು ಮುರದಾಬಾದ್‌ನಲ್ಲಿ ವಿಶೇಷವಾಗಿ  ತಯಾರಿಸಲಾಗಿತ್ತು. ಅದರ ಎರಡು ಅಲಗುಗಳನ್ನು ಗರಗಸದ ಹಲ್ಲಿನಂತೆ ಮಾಡಲಾಗಿತ್ತು ಅದಕ್ಕೆ ಬಲವಾದ ಸ್ಪ್ರಿಂಗ್ ಜೋಡಿಸಿದ್ದ ಕಾರಣ ಇಬ್ಬರು ಅವುಗಳನ್ನು ಎಳೆದು ಅದರ ಬಾಯಿ ಬಿಡಿಸಬೇಕಾಗಿತ್ತು ಆ ಜಿನ್ ಕತ್ತರಿಯ ನಡುಭಾಗಕ್ಕೆ ಯಾವ ಪ್ರಾಣಿ ಕಾಲಿಟ್ಟ ತಕ್ಷಣ ಕತ್ತರಿಯ ಅಲುಗುಗಳು ಮುಚ್ಚಿಕೊಳ್ಳುತ್ತಿದ್ದವು. ಎಂತಹ ಪ್ರಾಣಿಯೂ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿರಲಿಲ್ಲ.

ಹಸುವಿನ ಕಳೇಬರವಿದ್ದ ನೂರು ಅಡಿ ದೂರದಲ್ಲಿ ಒಂದು ಎತ್ತರದ ಬಲಿಷ್ಟವಾದ ಮರವಿತ್ತು ಅದರ ಮೇಲೆ ಇಬ್ಬರೂ ಕೂರಲು ನಿರ್ಧರಿಸಿದರು. ನರಭಕ್ಷಕ ಯಾವ ದಿಕ್ಕಿನಿಂದ ಕಾಡಿನತ್ತ ತೆರಳಿದೆ ಎಂಬುದನ್ನು ಅದರ ಹೆಜ್ಜೆ ಗುರುತುಗಳ ಮೂಲಕ ಗುರುತಿಸಿ ಆ ಹಾದಿಯಲ್ಲಿ ಅಡಕತ್ತರಿಯನ್ನು ಇರಿಸಿ, ಅದನ್ನು ತರಗೆಲೆಗಳಿಂದ ಮುಚ್ಚಿದರು. ನರಭಕ್ಷಕ ಸಿಕ್ಕಿಕೊಂಡಾಗ ಅದನ್ನು ಎಳೆದೊಯ್ಯಬಾರದು ಎಂದು ಅದಕ್ಕೆ ಸರಪಣಿ ಜೋಡಿಸಿ ಮರಕ್ಕೆ ಬಿಗಿಯಲಾಗಿತ್ತು. ಎಂದಿನಂತೆ ಆ ರಾತ್ರಿ ಕೂಡ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರ ಜೊತೆ ಮರದ ಬಳಿ ಬಂದು ಏಣಿ ಮುಖಾಂತರ ಮೇಲಕ್ಕೆ ಹತ್ತಿ ಕುಳಿತು, ಸೇವಕರನ್ನು ಪ್ರವಾಸಿ ಮಂದಿರಕ್ಕೆ ಕಳಿಸಿದರು. ಈ ಬಾರಿ ಅವರ ಬಳಿ ಸಕಾರ ಕಳಿಸಿದ್ದ ಭಾರೀ ಗಾತ್ರದ ಟಾರ್ಚ್ ಅವರ ಬಳಿ ಇದ್ದುದರಿಂದ ರಾತ್ರಿ ಶಿಕಾರಿಗೆ ಅನುಕೂಲವಾಗಿತ್ತು.

ರಾತ್ರಿ ಕತ್ತಲಾಗುತ್ತಿದ್ದಂತೆ ಒಂಬತ್ತರ ವೇಳೆಗೆ ಚಿರತೆಯ ಆರ್ಭಟ ಕೇಳತೊಗಿತು ಅದರ ಮುಂಗಾಲುಗಳರೆಡು ಅಡಕತ್ತರಿಗೆ ಸಿಲುಕಿಕೊಂಡು ಅದರಿಂದ ಬಿಡಿಸಿಕೊಲ್ಳಲು ಹೋರಾಡುತ್ತಾ ಭೀಕರವಾಗಿ ಸದ್ದುಮಾಡುತ್ತಿತ್ತು. ಕಾರ್ಬೆಟ್ ಟಾರ್ಚ್ ಮುಖಾಂತರ ಅದರತ್ತ ಬೆಳಕು ಹಾಯಿಸಿದಾಗ ಚಿರತೆ ಅಡಕತ್ತರಿಯನ್ನು ಎಳೆಯುತ್ತಾ ರೋಷಾವೇಷದಿಂದ ಘರ್ಜಿಸುತ್ತಿತ್ತು. ಇದೇ ಸುಸಮಯ ಎಂದುಕೊಂಡ ಕಾರ್ಬೆಟ್ ಅದರತ್ತ ಗುಂಡು ಹಾರಿಸಿದ ಆದರೆ, ಗುಂಡು ಚಿರತೆಗೆ ತಾಗುವ ಬದಲು ಸರಪಣಿಗೆ ತಗುಲಿ ಅದು ತುಂಡಾಯಿತು. ಕೂಡಲೇ ಇಬ್ಸ್‌ಟನ್ ಕೂಡ ಗುಂಡು ಹಾರಿಸದ ಆದರೆ, ಕತ್ತಲಿನಲ್ಲಿ ಎಲ್ಲವೂ ಗುರಿತಪ್ಪಿದ್ದವು ಇದರಿಂದಾಗಿ ತಪ್ಪಿಸಿಕೊಂಡ ಚಿರತೆ ಕತ್ತರಿಯನ್ನು ಎಳೆದುಕೊಂಡು ಮರಗಿಡಗಳ ನಡುವೆ ಕೆಳಗಿನ ಹಳ್ಳವೊಂದರಲ್ಲಿ ಮರೆಯಾಯಿತು.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-7)


– ಡಾ.ಎನ್.ಜಗದೀಶ್ ಕೊಪ್ಪ


 

Dignitaries fell Wrapped in their togas of worm-eaten mud, nameless people shouldered spears, tumbled the walls, nailed the tyrant to his golden door.  – Pablo Neruda

“ಶ್ರೀಕಾಕುಳಂ” ಆಂಧ್ರ ಪ್ರದೇಶದ ಉತ್ತರ ಭಾಗದಲ್ಲಿ ಸಮೃದ್ಧ ಹಸಿರು, ಅರಣ್ಯ, ಮತ್ತು ಗುಡ್ಡಗಾಡುಗಳಿಂದ ಆವೃತ್ತವಾಗಿರುವ, ಪೂರ್ವ ಕರಾವಳಿಯ ಒಂದು ಜಿಲ್ಲೆ. ಶೇ. 60ಕ್ಕೂ ಹೆಚ್ಚು ಮಂದಿ ಅರಣ್ಯವಾಸಿಗಳಾದ (ಜಟಪು ಜನಾಂಗ) ಗಿರಿಜನರಿಂದ ಕೂಡಿರುವ ಈ ನೆಲ ಸ್ವಾತಂತ್ರ್ಯ ಪೂರ್ವದಿಂದಲೂ ಎಲ್ಲಾ ವಿಧವಾದ ಅಭಿವೃದ್ಧಿ ಮತ್ತು ಸವಲತ್ತುಗಳಿಂದ ವಂಚಿತವಾಗಿರುವ ನತದೃಷ್ಟರನಾಡು. ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಿಂದ 650 ಕಿಲೋಮೀಟರ್ ದೂರದಲ್ಲಿರುವ ಈ ಜಿಲ್ಲೆ, ತನ್ನ ಉತ್ತರಭಾಗದ ಈಶಾನ್ಯಕ್ಕೆ ಒರಿಸ್ಸಾ, ವಾಯುವ್ಯ ಭಾಗಕ್ಕೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಘಡ, ಪಶ್ಚಿಮಕ್ಕೆ ಮಹರಾಷ್ಟ್ರ, ಪೂರ್ವಕ್ಕೆ ಕರಾವಳಿ ಪ್ರದೇಶವನ್ನು ಹೊಂದಿದ್ದು, ತನ್ನ ಒಡಲೊಳಗೆ ಸಮೃದ್ಧವಾದ ಖನಿಜ ಸಂಪತ್ತು, ಅರಣ್ಯ ಸಂಪತ್ತು, ಹೊಂದಿರುವಂತೆ, ತನ್ನ ಚರಿತ್ರೆಯ ಪುಟಗಳಲ್ಲಿ ರಕ್ತಸಿಕ್ತ ಅಧ್ಯಾಯಗಳನ್ನು ಸಹ ಹೊಂದಿದೆ.

“ಶ್ರೀಕಾಕುಳಂ” ಎಂದರೆ, ಚರಿತ್ರೆಯಲ್ಲಿ ಒಂದು ಅಳಿಸಲಾರದ ಹೆಸರು, ಭಾರತದ ಭವಿಷ್ಯದ ಚರಿತ್ರೆಯ ಸಂಪುಟ, ಕ್ರಾಂತಿಕಾರಿಗಳ ಉಕ್ಕಿನ ಕೋಟೆ ಎಂದೆಲ್ಲಾ ನಕ್ಸಲ್ ಚಳವಳಿಯ ಸಂಸ್ಥಾಪಕ ಚಾರು ಮುಜಂದಾರ್‌ನಿಂದ ಹೊಗಳಿಸಿಕೊಂಡ ಈ ಜಿಲ್ಲೆಯ ನೆಲದ ಇತಿಹಾಸ ತಿಳಿಯದೇ ಹೋದರೆ, ಅಲ್ಲಿನ ಹಿಂಸೆ ಮತ್ತು ಹೋರಾಟದ  ಐತಿಹಾಸಿಕ ಕಥನ ಅರ್ಥವಾಗುವುದು ಕಷ್ಟ. ವಿಶಾಖಪಟ್ಟಣದದಿಂದ 50 ಕಿ.ಮಿ. ದೂರದಲ್ಲಿರುವ ವಿಜಯನಗರಂ ಎಂಬ ರೈಲು ನಿಲ್ದಾಣದಿಂದ ಬೆಳಗಿನ ಜಾವ ರಾಜಮಂಡ್ರಿ ಗೆಳೆಯರಿಗೆ ವಿದಾಯ ಹೇಳಿ, ಶ್ರೀಕಾಕುಳಂ ಜಿಲ್ಲೆಯತ್ತ ನಾನು ಪ್ರಯಾಣ ಹೊರಟಾಗ ನನ್ನ ತಲೆಯಲ್ಲಿ ಕಲ್ಪನೆ ಇದ್ದದ್ದು, ಅದೊಂದು ನಮ್ಮ ರಾಜ್ಯದಲ್ಲಿ ವಂಚಿತವಾಗಿರುವ ಉತ್ತರ ಕರ್ನಾಟಕದ ಕಪ್ಪುಭೂಮಿ ಹಾಗೂ ಜಾಲಿ ಮರಗಳ ಒಣ ಪ್ರದೇಶದ ನೀರಿನಿಂದ ವಂಚಿತವಾಗಿರುವ ಜಿಲ್ಲೆಯಂತೆ ಇರಬಹುದಾದ ಜಿಲ್ಲೆ ಎಂದು ಅಲ್ಲಿಗೆ ಕಾಲಿಟ್ಟ ಕ್ಷಣ ನನಗೆ ಆಶ್ಚರ್ಯವಾಯಿತು. ನನ್ನ ನೆಲವಾದ ಅಲ್ಲಿಂದ ಒಂದೂವರೆ ಸಾವಿರ ಕಿ.ಮಿ. ದೂರದ ಮಂಡ್ಯದ ನೆಲದಲ್ಲೇ ನಾನು ಇದ್ದೀನಿ ಎಂಬ ಭಾವನೆ ಮೂಡತೊಡಗಿತು.

ಎಲ್ಲೆಲ್ಲೂ ಭತ್ತದ ಗದ್ದೆಗಳು, ತುಂಬಿ ಹರಿಯುವ ಕಾಲುವೆಗಳು, ಆಲೆಮನೆ ಮತ್ತು ಸಕ್ಕರೆ ಕಾರ್ಖಾನೆ ಸಾಗುತ್ತಿದ್ದ ಕಬ್ಬು ತುಂಬಿದ ಜೊಡೆತ್ತಿನ ಗಾಡಿಗಳು, ಬತ್ತದ ಗದ್ದೆಯಲ್ಲಿ ನಡುಬಗ್ಗಿಸಿ ಕಳೆ ಕೀಳುತ್ತಿದ್ದ, ನನ್ನಕ್ಕ ತಂಗಿಯರಂತಹ ಬಡ ಹೆಣ್ಣು ಮಕ್ಕಳು, ಅಲ್ಲಲ್ಲಿ ಹಸಿರು ಗುಡ್ಡ, ಚಿಕ್ಕದಾದರೂ, ಚೊಕ್ಕವಾದ ಬಾಳೆ ಮತ್ತು ತೆಂಗಿನ ಗಿಡಗಳಿಂದ ಕೂಡಿದ ತೋಟಗಳು ಇವೆಲ್ಲವೂ ನಾನು ಈ ನೆಲಕ್ಕೆ ಪರಕೀಯ ಎಂಬ ಭಾವನೆಯನ್ನು ಅಳಿಸಿ ಹಾಕಿದವು. ಆದರೆ, ಹಳ್ಳಗಳಿಗೆ ಕಾಲಿಟ್ಟ ತಕ್ಷಣ ಆಂಧ್ರ ಸಂಸ್ಕೃತಿ ಮತ್ತು ಅಲ್ಲಿನ ಗುಡ್ಡಗಾಡು ಜನರ ಜನರ ಸಂಸ್ಕೃತಿ ಎದ್ದು ಕಾಣುತ್ತದೆ. ಪ್ರತಿ ಊರಿನಲ್ಲೂ ನೆಲಬಾವಿಗಳು, ಅವುಗಳ ಸುತ್ತಾ ಕೆತ್ತಿದ ಕಲ್ಲಿನಲ್ಲಿ ಕಟ್ಟಿರುವ ಸುಂದರ ತಡೆಗೋಡೆಗಳು, ಜೊತೆಗೆ ನೆಲಕ್ಕೆ ಹಾಸಿರುವ ಕಲ್ಲು ಚಪ್ಪಡಿಯ ಹಾಸುಗೆಗಳು, ಅಲ್ಲಿಯೇ ಕುಳಿತು. ಬಾವಿಯಲ್ಲಿ ನೀರು ಸೇದಿಕೊಂಡು ಯಾವ ಸಂಕೋಚವಿಲ್ಲದೆ, ಸ್ನಾನ ಮಾಡುವ ಹೆಂಗಸರು, ಪ್ರತಿ ಊರಿನಲ್ಲಿ ಎದುರಾಗುವ ಆಂಜನೇಯನ ಗುಡಿಗಳು, ಅವುಗಳ ಮೇಲೆ ಆಳೆತ್ತರಕ್ಕೆ ಎದೆ ಸೀಳುತ್ತಾ ನಿಂತಿರುವ, ಸೀಮೆಂಟ್‌ನಿಂದ ತಯಾರಾದ ಆಂಜನೇಯನ ಮೂರ್ತಿಗಳು, ಅವುಗಳಿಗೆ ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಬಳಿದಿರುವ ಕಡುಬಣ್ಣ ಇವುಗಳು ಮಾತ್ರ ಪಕ್ಕಾ ಆಂಧ್ರ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಅಂಶಗಳು.

ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶವನ್ನು ಅಲ್ಲಿನ  ಜನ ಹೆಮ್ಮೆಯಿಂದ ವಿಶಾಲಾಂಧ್ರವೆಂದು ಕರೆಯುತ್ತಾರೆ. ಆದರೆ, ವಾಸ್ತವವಾಗಿ ಅಲ್ಲಿ ಅಸ್ತಿತ್ವದಲ್ಲಿರುವುದು ಮೂರು ಆಂಧ್ರಗಳು. ಒಂದು, ಕಡಪ, ಅನಂತಪುರ, ನೆಲ್ಲೂರು, ಚಿತ್ತೂರು ಜಿಲ್ಲೆಗಳನ್ನು ಒಳಗೊಂಡ ರಾಯಲಸೀಮೆ, ಇದು ರೆಡ್ಡಿ ಜನಾಂಗದ ಪ್ರದೇಶ. ಎರಡನೇಯದು ತೆಲಂಗಾಣವೆಂದು ಕರೆಸಿಕೊಳ್ಳುವ ಮಧ್ಯಭಾಗದ ಆಂಧ್ರಪ್ರದೇಶವಾದ ಕಮ್ಮ ಜನಾಂಗ ಪ್ರಭಾವವಿರುವ, ಮೇಡಕ್, ಸಂಗರೆಡ್ಡಿ, ಕಮ್ಮಮಂ, ಕರೀಂನಗರ, ವಾರಂಗಲ್, ನಲ್ಗೊಂಡ, ಮುಂತಾದ ಜಿಲ್ಲೆಗಳು ಈ ಪ್ರಾಂತ್ಯಕ್ಕೆ ಸೇರುತ್ತವೆ. ಕೃಷ್ಣಾ ನದಿ ಮತ್ತು ಗೋದಾವರಿ ನದಿ ತೀರದ ಜಿಲ್ಲೆಗಳಾದ ವಿಜಯವಾಡ, ರಾಜಮಂಡ್ರಿ, ಅದಿಲಾಬಾದ್, ಇವುಗಳು ಕೂಡ ತೆಲಂಗಾಣ ಪ್ರಾಂತ್ಯಕ್ಕೆ ಸೇರುತ್ತವೆ. ಸಾಂಸ್ಕೃತಿಕವಾಗಿ ಮತ್ತು ರಾಜಕೀಯ ಹಾಗೂ ಸಾಮಾಜಿಕವಾಗಿ ಭಿನ್ನತೆ ಇರುವುದು, ಗೋದಾವರಿ ನದಿಯಾಚೆಗಿನ ಜಿಲ್ಲೆಗಳಲ್ಲಿ. ಅಂದರೆ, ವಿಶಾಖಪಟ್ಟಣ, ಪೂರ್ವಗೋದಾವರಿ ಜಿಲ್ಲೆ, ಶ್ರೀಕಾಕುಳಂ ಜಿಲ್ಲೆಗಳಲ್ಲಿ.

ಈ ಪ್ರದೇಶಗಳ ಗುಡ್ಡಗಾಡುಗಳಲ್ಲಿ ಅತ್ಯಧಿಕ ಮಂದಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗ ವಾಸಿಸುತ್ತಿದ್ದು, ಈ ನೆಲದ ಸಂಸ್ಕೃತಿಯನ್ನು ಇವತ್ತಿಗೂ ಜೀವಂತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇವರಲ್ಲಿ ಪ್ರಮುಖ ಜನಾಂಗಗಳೆಂದರೆ, ಗೊಂಡ, ಕೊಂಡರೆಡ್ಡಿ, ಚೆಂಚು, ಮರಿಯ, ಜಟಪು, ಸವರ, ತೋಲಂ, ಕೋಯ ಮುಖ್ಯವಾದವುಗಳು. ಇವರನ್ನು ಗುರುತಿಸಿ ಹೊರಜಗತ್ತಿಗೆ ಪರಿಚಯಿಸಿದ  ಕೀರ್ತಿ ಪ್ರಖ್ಯಾತ ಸಮಾಜಶಾಸ್ತ್ರಜ್ಙ ವೇರಿಯನ್‌ ಎಲ್ವಿನ್‌ಗೆ ಸಲ್ಲಬೇಕು. ಒಂದು ಕಾಲದಲ್ಲಿ ಮಳೆಯನ್ನು ಆಶ್ರಯಿಸಿಕೊಂಡು, ಒಣ ಭೂಮಿಯಾಗಿದ್ದ ಈ ನೆಲಕ್ಕೆ ನೀರುಣಿಸಿ, ಇಲ್ಲಿನ ಭೂಮಿಯನ್ನು ಹಸನುಗೊಳಿಸಿದವನು, ಬ್ರಿಟಿಷ್ ಸರ್ಕಾರದಲ್ಲಿ ಮುಖ್ಯಇಂಜೀಯರ್ ಆಗಿ ಮದ್ರಾಸ್ ಪ್ರಾಂತ್ಯಕ್ಕೆ ನೆರೆಯ ಬರ್ಮಾದಿಂದ 1821 ರಲ್ಲಿ ಬಂದ ಸರ್ ಅರ್ಥರ್‌ ಕಾಟನ್. ಅನಾವಶ್ಯಕವಾಗಿ ಕೃಷ್ಣ ಮತ್ತು ಗೋದಾವರಿ ನದಿಯ ನೀರು ಸಮುದ್ರ ಸೇರುತ್ತಿರುವುದನ್ನು ಗಮನಿಸಿ, ಈ ಎರಡು ನದಿಗಳಿಗೆ ಅಣೆಕಟ್ಟು ನಿರ್ಮಿಸಿದ ಮಹಾನುಭಾವ ಈತ. 1851 ರಿಂದ 1855 ರ ನಡುವೆ ಸ್ವತಃ ಹಲವಾರು ಬಾರಿ ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ರಾಣಿ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಮನವೊಲಿಸಿ, 12 ಸಾವಿರ ಪೌಂಡ್ ಹಣವನ್ನು ತಂದು, ನೀರಾವರಿ ಯೋಜನೆಗಳ ನೀಲನಕ್ಷೆ ತಯಾರಿಸಿ, ತಾನೇ ಸ್ವತಃ ನಿಂತು ಕೃಷ್ಣಾನದಿಗೆ ಮತ್ತು ಗೋದಾವರಿ ನದಿಗೆ ತಲಾ ಒಂದೊಂದು ಅಣೆಕಟ್ಟನ್ನು ನಿರ್ಮಿಸಿದ.

1860 ರಲ್ಲಿ ನಿವೃತ್ತಿಯ ನಂತರ ಕಾಟನ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿ ಹೋದರೂ, ಇಲ್ಲಿ ಜನತೆ ಆತನನ್ನು ಮತ್ತು ಅವನ ಋಣವನ್ನು ಮರೆಯಲಿಲ್ಲ. 1900 ರಲ್ಲಿ ರಾಜಮಂಡ್ರಿ ಪಟ್ಟಣದ ಸಮೀಪ ಹರಿಯುವ ಗೋದಾವರಿ ನದಿಗೆ ನಿರ್ಮಿಸಲಾದ ಒಂದೂವರೆ ಕಿ.ಮಿ.ಉದ್ದದ ರೈಲ್ವೆ ಸೇತುವೆಗೆ ಅರ್ಥರ್‌ ಕಾಟನ್‌ನ ಹೆಸರನ್ನು ನಾಮಕರಣ ಮಾಡಿದರು. ಅದು ಶಿಥಿಲಗೊಂಡ ನಂತರ 1987 ರಲ್ಲಿ ಮತ್ತೊಂದು ಹೊಸ ಸೇತುವೆಯನ್ನು ಸಹ (ಕಮಾನು ಸೇತುವೆ) ನಿರ್ಮಿಸಲಾಗಿದೆ. ಇಲ್ಲಿನ ಜನತೆ ಅರ್ಥರ್‌ ಕಾಟನ್ ದೂರದೃಷ್ಟಿ ಯೋಜನೆಗಳಿಂದ ತಮ್ಮ ಭೂಮಿಗೆ ನೀರನ್ನು ಕಂಡರೂ ಸಹ ಹೈದರಾಬಾದ್‌ನ ನಿಜಾಮ ಮತ್ತು ಸ್ಥಳೀಯ ಪಾಳೇಗಾರರು, ಜಮೀನ್ದಾರರು ಇವರುಗಳ ಕಿರುಕುಳದ ಕಾರಣದಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಲ್ಲಲು ಸಾಧ್ಯವಾಗಲೇ ಇಲ್ಲ.

ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ  ಜಗತ್ತಿನ ಅತೀ ಶ್ರೀಮಂತರುಗಳ ಪೈಕಿ ಒಬ್ಬನಾಗಿದ್ದ ಹೈದರಾಬಾದಿನ ಏಳನೇ ನಿಜಾಮ ವಾರ್ಷಿಕವಾಗಿ 25 ಲಕ್ಷರೂಪಾಯಿಗಳನ್ನು ಪಾಳೇಗಾರರು ಮತ್ತು ಜಮೀನ್ದಾರರಿಂದ ಭೂಮಿಯ ಕಂದಾಯ ರೂಪದಲ್ಲಿ ಆದಾಯ ಪಡೆಯುತ್ತಿದ್ದ. ಬಿಟಿಷ್ ಸರ್ಕಾರ ವೇರಿಯರ್ ಎಲ್ವಿನ್ ನೀಡಿದ್ದ ವರದಿಗೆ ಸ್ಪಂದಿಸಿ, ಆದಿವಾಸಿಗಳಿಗೆ, ಅರಣ್ಯ ಭೂಮಿಯ ಹಕ್ಕನ್ನು ದಯಪಾಲಿಸಿತ್ತು. ಆದರೆ, ಅಕ್ಷರ ಲೋಕದಿಂದ ವಂಚಿತರಾಗಿದ್ದ ಬುಡಕಟ್ಟು ಜನಾಂಗಕ್ಕೆ ಭೂಮಿಯ ದಾಖಲೆ ಅಂದರೆ, ಏನು, ಹಕ್ಕು ಎಂದರೆ ಏನು ಎಂಬುದು ಅರ್ಥವಾಗುವುದರೊಳಗೆ  ಅವೆಲ್ಲವೂ ಪಟ್ಟಭದ್ರ ಹಿತಾಶಕ್ತಿಗಳ ಪಾಲಾಗಿದ್ದವು. ಅತ್ಯಂತ ಸ್ವಾರ್ಥ ಮತ್ತು ಕ್ರೂರಿಯಾಗಿದ್ದ ಈ ನಿಜಾಮ ಎಂದೂ ಸಹ ತನ್ನ ಅರಮನೆಗೆ ಯಾವುದೇ ಅತಿಥಿಗಳನ್ನು ಆಹ್ವಾನಿಸದ ವಿಚಿತ್ರ ವ್ಯಕ್ತಿತ್ವ ಹೊಂದಿದವನಾಗಿದ್ದ. ಅವನ ವೈಭೋಗದ ಬದುಕಿಗೆ ಈಗ ಹೈದರಾಬಾದ್ ನಗರದಲ್ಲಿರುವ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರೆ, ಸಾಕು. ಜಗತ್ತಿನ ಎಲ್ಲಾ ವಿಧವಾದ ಶ್ರೇಷ್ಠ ಕೃತಿಗಳು, ವಸ್ತುಗಳು ಅಲ್ಲಿ ಸಂಗ್ರಹವಾಗಿವೆ. ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಸಂಗ್ರಹವಾಗಿರುವ ಇವುಗಳನ್ನು ವೀಕ್ಷಿಸಲು ಕನಿಷ್ಟ ಒಂದು ದಿನವಾದರೂ ಬೇಕು.

ಇವತ್ತಿಗೂ ಭಾರತದಲ್ಲಿ ನಕ್ಸಲ್ ಚಳವಳಿ ಆರಂಭವಾದದ್ದು ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಹಳ್ಳಿಯ ಮೂಲಕ ಎಂದು ಪ್ರತಿಬಿಂಬಿಸಿಕೊಂಡು ಬರಲಾಗುತ್ತಿದೆ. ಇದು ಅರ್ಧಸತ್ಯ ಮಾತ್ರ. ನಿಜವಾದ ನಕ್ಸಲ್ ಹೋರಾಟದ ಮೂಲ ಬೇರುಗಳು ಇರುವುದು ಆಂಧ್ರದ “ಶ್ರೀಕಾಕುಳಂ” ಜಿಲ್ಲೆಯಲ್ಲಿ. ಅದರಲ್ಲೂ ಪಾರ್ವತಿಪುರ ಎಂಬ ತಾಲೂಕು ಕೇಂದ್ರದಲ್ಲಿ. ಇದು ಪ್ರಪಥಮ ಬಾರಿಗೆ ಹೋರಾಟಕ್ಕೆ ನಾಂದಿ ಹಾಡಿದ ನೆಲ. ಸಿಲಿಗುರಿ ಪ್ರಾಂತ್ಯದ ನಕ್ಸಲ್ ಬಾರಿಯಲ್ಲಿ ಹೋರಾಟ ಆರಂಭಗೊಂಡಿದ್ದು 1967 ರಲ್ಲಿ ಆದರೆ, ಅದಕ್ಕೂ ಮುನ್ನ 1961 ರಲ್ಲಿ ಯಾವುದೇ ಕಮ್ಯೂನಿಷ್ಟ್ ಸಿದ್ಧಾಂತಗಳ ಹಂಗಿಲ್ಲದೆ ಇಲ್ಲಿನ ಗಿರಿಜನ ಜಮೀನ್ದಾರರ ವಿರುದ್ಧ ಹೋರಾಟ ಆರಂಭಿಸಿದ್ದರು. 1967 ರ ನಂತರ ಈ ಪ್ರದೇಶಕ್ಕೆ ಭೇಟಿ ನೀಡಿದ ಚಾರು ಮುಜಂದಾರ್, ಇಲ್ಲಿನ ಹೋರಾಟದ ಅಸ್ತಿಪಂಜರಕ್ಕೆ ಕಮ್ಯೂನಿಷ್ಟ್ ವಿಚಾರಗಳ, ಮಾಂಸ ಮತ್ತು ಮಜ್ಜೆಯನ್ನು ತುಂಬಿದ.

ಶ್ರೀಕಾಕುಳಂ ನೆಲದ ಕಪ್ಪು ಇತಿಹಾಸದಲ್ಲಿ ಹಲವಾರು ನೆತ್ತರಿನ ಅಧ್ಯಾಯಗಳಿವೆ. ಸಾಮ್ರಾಟ ಅಶೋಕ ಕಳಿಂಗ ಯುದ್ಧದಲ್ಲಿ ರಕ್ತದ ಕೋಡಿಯನ್ನು ಹರಿಸಿ, ನಂತರ ಹಿಂಸೆಯನ್ನು ತ್ಯಜಿಸಿ, ಆನಂತರ ಅಹಿಂಸೆಯ ಮಾರ್ಗ ಹಿಡಿದು ಬೌದ್ಧ ಧರ್ಮ ಸ್ವೀಕಾರ ಮಾಡಿದಾಗ ಆ ಘಟನೆಗೆ ಈ ನೆಲ ಸಾಕ್ಷಿಯಾಗಿತ್ತು. ಆಂಧ್ರದ ಗೋದಾವರಿ ನದಿಯಾಚೆಗಿನ ಪ್ರದೇಶ ಅಶೋಕನ ಅಧೀಪತ್ಯಕ್ಕೆ ಒಳಪಟ್ಟಿದ್ದರೆ, ಮಧ್ಯಭಾಗದ ಆಂಧ್ರದ ವಾರಂಗಲ್‌ನ ಕಾಕತೀಯ ಅರಸರ ವಂಶಸ್ಥರ ಆಳ್ವಿಕೆ ಒಳಪಟ್ಟಿತ್ತು. ಹೈದರಾಬಾದ್ ಪ್ರಾಂತ್ಯ ಹಾಗೂ ಸುತ್ತಮುತ್ತಲಿನ ಪ್ರದೇಶ ನೇರವಾಗಿ ಮೊಗಲರಿಂದ ನಿಜಾಮರ ಕೈ ಸೇರಿತ್ತು. ಇನ್ನು ದಕ್ಷಿಣ ಆಂದ್ರದ ಜಿಲ್ಲೆಗಳ ಪ್ರದೇಶ ವಿಜಯನಗರದ ಅರಸರ ಆಳ್ವಿಕೆ ಒಳಪಟ್ಟಿದ್ದ ಕಾರಣ ಈ ಪ್ರದೇಶವನ್ನು ರಾಯಲಸೀಮ (ಕೃಷ್ಣದೇವರಾಯ ಆಳಿದ ನಾಡು) ಎಂದು ಕರೆಯಲಾಗುತ್ತದೆ.

ಶ್ರೀಕಾಕುಳಂ ನಕ್ಸಲ್ ಇತಿಹಾಸ ಈವರೆಗೆ ಬೆಳಕಿಗೆ ಬಾರದೇ ಇತಿಹಾಸದ ಮಣ್ಣಲ್ಲಿ ಹುದುಗಿ ಹೋಗಿದೆ. ಇಲ್ಲಿನ ಬುಡಕಟ್ಟು ಜನಾಂಗ ಅನುಭವಿಸಿದ ಯಾತನೆಗಳು ಶಬ್ಧ ಮತ್ತು ಅಕ್ಷರಕ್ಕೆ ನಿಲುಕಲಾರದವು. ನಿತ್ಯಹರಿಧ್ವರ್ಣದ ಅರಣ್ಯ, ಅಪಾರ ಖನಿಜ ಸಂಪತ್ತಿನ ಒಡೆಯರಾಗಿದ್ದ ಈ ಜನರಿಗೆ, ಇವರ ಸಂಸ್ಕೃತಿಗೆ ಮತ್ತು ಬದುಕಿಗೆ ಭಂಗವನ್ನುಂಟು ಮಾಡಬಾರದೆಂದು ಅರಣ್ಯ ಭೂಮಿಯ ಹಕ್ಕನ್ನು ಬ್ರಿಟಿಷ್ ಸರ್ಕಾರ ದಯಪಾಲಿಸಿತ್ತು ಅಲ್ಲದೆ, ಇವರ ಭೂಮಿಯನ್ನು ಬುಡಕಟ್ಟು ಜನಾಂಗ ಹೊರತುಪಡಿಸಿ ಇತರರು ಕೊಳ್ಳದಂತೆ ಕಾಯ್ದೆಯನ್ನು ರೂಪಿಸಿಲಾಗಿತ್ತು. 1951 ರಲ್ಲಿ ಭಾರತ ಸರ್ಕಾರ ಕೂಡ ಈ ಕಾಯ್ದೆಗೆ ಹಲವು ತಿದ್ದುಪಡಿ ಮಾಡಿ (ಅರಣ್ಯ ಭೂಮಿಯಲ್ಲಿರುವ ಮರ ಮತ್ತು ಖನಿಜ ಸಂಪತ್ತು ಸರ್ಕಾರದ ಸ್ವತ್ತು) ಅನುಷ್ಠಾನಗೊಳಿಸಿತ್ತು. ಆಂಧ್ರದ ಪೂರ್ವ ಕರಾವಳಿಯ ಗುಡ್ಡಗಾಡಿನ ಬಹುತೇಕ ಅರಣ್ಯವಾಸಿಗಳು, ಪೋಡು ಎಂಬ ಪುಟ್ಟ ಗ್ರಾಮಗಳಲ್ಲಿ ವಾಸಿಸುತ್ತಾ, ಹೈನುಗಾರಿಕೆ, ಬೇಸಾಯ, ಅರಣ್ಯದ ಕಿರುಉತ್ಪನ್ನವನ್ನು ನಂಬಿ ಬದುಕಿದ್ದರು.

1950 ದಶಕದಲ್ಲಿ ಇಲ್ಲಿ ಆರಂಭವಾದ ಸರ್ಕಾರಿ ಸ್ವಾಮ್ಯದ ಸಿರ್ಪುರ್ ಪೇಪರ್‌ಮಿಲ್ (ಈಗಿನ ಆಂಧ್ರ ಪೇಪರ್ಸ್ ಮಿಲ್ ಲಿಮಿಟೆಡ್) ಹಾಗೂ ಕೇಂದ್ರ ಸರ್ಕಾರದ ಸಿಂಗರೇಣಿ ಕಲ್ಲಿದ್ದಲು ಗಣಿಗಾರಿಕೆ ಇವರ ನೈಜ ಸಾಂಸ್ಕೃತಿಕ ಬದುಕನ್ನು ಪಲ್ಲಟಗೊಳಿಸಿತು. ಪೇಪರ್ ಮಿಲ್‌ಗೆ ಬಿದಿರಿನ ಬೊಂಬುಗಳನ್ನು ಸರಬರಾಜು ಮಾಡಲು ಬಂದ ದಳ್ಳಾಳಿಗಳು ಕೆ.ಜಿ. ಗೆ 7 ಪೈಸೆಯಂತೆ ಕೊಳ್ಳಲು ಸಿದ್ದರಿದ್ದೇವೆ ಎಂದು ಅರಣ್ಯವಾಸಿಗಳಿಗೆ ಆಮಿಷ ಒಡ್ಡಿದರು. ಅದೇ ರೀತಿ ಅತ್ಯಂತ ಕಷ್ಟವಾದ ಕಲ್ಲಿದ್ದಲು ಗಣಿಗಾರಿಕೆಗೆ ತಿಂಗಳಿಗೆ 120 ರೂಪಾಯಿ ಸಂಬಳದ ಆಧಾರದ ಮೇಲೆ ಗುತ್ತಿಗೆದಾರರು ಇವರನ್ನು ನೇಮಕ ಮಾಡಿಕೊಳ್ಳತೊಡಗಿದರು. ಇವರ ಜೊತೆ ಕೇರಳದ ಮಾಪಿಳ್ಳೆಗಳು ಮರ ಕಡಿಯುವ ಗುತ್ತಿಗೆದಾರರಾಗಿ, ದಕ್ಷಿಣ ಆಂಧ್ರ ಕೊಮಟಿಗರು ಬಟ್ಟೆ ಮತ್ತು ದಿನಸಿ ವ್ಯಾಪಾರಿಗಳಾಗಿ ಈ ಪ್ರದೇಶಕ್ಕೆ ಕಾಲಿಟ್ಟರು. ವ್ಯವಹಾರ ಮತ್ತು ಆರ್ಥಿಕ ಚಟುವಟಿಕೆಯ ಲೋಕವೇ ಗೊತ್ತಿಲ್ಲದ ಮುಗ್ಧ ಜನರಿಗೆ ಸಾಲ ನೀಡಿ ಅದಕ್ಕೆ ಪ್ರತಿಯಾಗಿ ಖಾಲಿ ಬಿಳಿಯ ಕಾಗದದ ಮೇಲೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುವ ಮೂಲಕ ಅರಣ್ಯವಾಸಿಗಳ ಜಮೀನುಗಳನ್ನು ಕಬಳಿಸಿದರು. ಇವರ ಈ ದುಷ್ಕೃತ್ಯಕ್ಕೆ ನೆರವಾದವರು, ಪಕ್ಕದ ಮಹಾರಾಷ್ಟ್ರದಿಂದ ವಲಸೆ ಬಂದ ಪಟ್ವಾರಿಗಳು. ಇವರು ಭೂದಾಖಲೆಗಳನ್ನು ನಿರ್ವಹಿಸುವುದನ್ನೇ ಕುಲ ಕಸುಬು ಮಾಡಿಕೊಂಡವರು. ಇಂತ ವೃತ್ತಿಯಲ್ಲಿದ್ದವರನ್ನು ನಮ್ಮ ಉತ್ತರ ಕರ್ನಾಟಕದಲ್ಲಿ ಕುಲಕರ್ಣಿಗಳೆಂದು, ದಕ್ಷಿಣ ಕರ್ನಾಟಕದಲ್ಲಿ ಶ್ಯಾನುಬೋಗರೆಂದು ಕರೆಯುತ್ತಿದ್ದರು.

ಈ ವಂಚನೆಯ ತಂಡ ಅರಣ್ಯವಾಸಿಗಳ ಭೂಮಿಯನ್ನು ಕಬಳಿಸಿ ನಂತರ ಇವುಗಳನ್ನು ಶ್ರೀಮಂತ ಜಮೀನ್ದಾರರಿಗೆ ಅಧಿಕ ಲಾಭಕ್ಕೆ ವರ್ಗಾವಣೆ ಮಾಡುತ್ತಿದ್ದರು. ತಮಗೆ ಅರಿವಿಲ್ಲದಂತೆ ಇಂತಹ ವಂಚನೆಯ ಜಾಲದಲ್ಲಿ ಸಿಲುಕಿದ ಅಮಾಯಕ ಗಿರಿಜನ, ಜಮೀನ್ದಾರರ ಗೂಂಡಾ ಪಡೆಗಳಿಗೆ ಹೆದರಿ, ತಮ್ಮ ಭೂಮಿಯಲ್ಲಿ ತಾವೇ ಬೆಳೆದ ಫಸಲನ್ನು ಭೂಮಾಲೀಕನಿಗೆ ನೀಡಿ ಇದಕ್ಕೆ ಪ್ರಫಲವಾಗಿ ಅವನು ಭಿಕ್ಷೆಯಂತೆ ಕೊಟ್ಟ ಅಲ್ಪ ಪ್ರಮಾಣದ ಫಸಲನ್ನು ಪಡೆದು ಮನೆಗೆ ಹಿಂತಿರುಗುತ್ತಿದ್ದರು. ನಾಗರೀಕ ಜಗತ್ತಿನ ವ್ಯವಹಾರದ ಅರಿವಿಲ್ಲದ ಈ ಜನ ಸಾಲ ಅಥವಾ ಬಡ್ಡಿ ಎಂದರೆ, ಏನು?, ಭೂ ದಾಖಲೆಗಳು ಎಂದರೆ ಏನು? ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಹಳ ವರ್ಷಗಳೇ ಕಳೆದು ಹೋದವು. ಇವೆಲ್ಲಕ್ಕಿಂತ ಕ್ರೂರವಾದ ಅಮಾನುಷ ಕೃತ್ಯಗಳಿಗೆ ಇವರು ಬಲಿಯಾದರು. ಅರಣ್ಯದಲ್ಲಿ ಕಿರು ಉತ್ಪನ್ನ, ಇಲ್ಲವೆ ಸೌದೆ ಆರಿಸಲು ಹೋದ ಮಹಿಳೆಯರು, ನದಿಯಲ್ಲಿ ಸ್ನಾನಕ್ಕೆ ಹೋದ ಆದಿವಾಸಿ ಮಹಿಳೆಯರು ಈ ಹೃದಯಹೀನ ಜನರ ಅತ್ಯಾಚಾರಕ್ಕೆ ಒಳಗಾದರು. ಅಲ್ಲದೆ, ಕಪ್ಪು ವರ್ಣದ ಸುಂದರ ಮೈಕಟ್ಟಿನ ಆದಿವಾಸಿ ಜನಾಂಗದ ಹೆಂಗಸರು, ಹದಿ ಹರೆಯದ ಹುಡುಗಿಯರು, ತಮ್ಮ ಗಂಡಂದಿರ, ಅಪ್ಪಂದಿರ ಎದುರು ಜಮೀನ್ದಾರರ ಮನೆಗೆ ಅವರ ಕಾಮತೃಷೆ ನೀಗಿಸಲು ಪ್ರಾಣಿಗಳಂತೆ ಸಾಗಿಸಲ್ಪಟ್ಟರು. ಬಾಯಿಲ್ಲದ ಈ ಮೂಕ ಜನರಿಗೆ ನ್ಯಾಯ ದೊರಕಿಸಿಕೊಡಲು, ಅವರ ಹೋರಾಡಲು ಒಬ್ಬ ಅಪ್ಪಟ ಮನುಷ್ಯನಿಗಾಗಿ ಅಸಹಾಯಕ ಮತ್ತು ಅಮಾಯಕ ಗಿರಿಜನರ ಜಗತ್ತು ಎದುರು ನೋಡುತ್ತಿತ್ತು.

ಇಂತಹ ಸಮಯದಲ್ಲಿ ಇವರಿಗೆ ಬೆನ್ನೆಲುಬಾಗಿ ನಿಂತ ಹೃದಯವಂತ ವ್ಯಕ್ತಿ, ವೆಂಪಟಾಪು ಸತ್ಯನಾರಾಯಣ. ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಈತ, ಬುಡಕಟ್ಟು ಜನಾಂಗದ ಮೇಲಿನ ಅನ್ಯಾಯ, ಅತ್ಯಾಚಾರವನ್ನು ಸಹಿಸಲಾಗದೆ, ತನ್ನ ವೃತ್ತಿಗೆ ತಿಲಾಂಜಲಿ ನೀಡಿ, ಗಿರಿಜನರನ್ನು ಸಂಘಟಿಸುವುದರ ಜೊತೆಗೆ ಭೂಮಾಲೀಕರ ಜೊತೆ ಸಂಘರ್ಷಕ್ಕೆ ನಾಂದಿ ಹಾಡಿದ. ಒಂದು ಅರ್ಥದಲ್ಲಿ ನಿಜವಾದ ನಕ್ಸಲ್ ಚಳವಳಿಯ ಪಿತಾಮಾಹನೆಂದರೆ, ಈ ಸತ್ಯನಾರಯಣ. ಆದರೆ, ಭಾರತದ ಎಡಪಂಥಿಯ ವಿಚಾರಧಾರೆಗಳ ಅಬ್ಬರದ ಪ್ರಚಾರದಲ್ಲಿ ಈ ಹುತಾತ್ಮ ಇವತ್ತಿಗೂ ಬೆಳಕಿಗೆ ಬಾರದೇ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದಾನೆ.

 (ಮುಂದುವರಿಯುವುದು)