Category Archives: ಜಗದೀಶ್ ಕೊಪ್ಪ

ಪಂಪ ಪ್ರಶಸ್ತಿಯ ಪಾಡು

– ಡಾ. ಎನ್. ಜಗದೀಶ್ ಕೊಪ್ಪ

ಇದು ಈ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಬಡಿದ ಗರವೋ, ಆವರಿಸಿಕೊಂಡ ವಿಸ್ಮೃತಿಯೋ ಯಾವುದನ್ನೂ ನಿರ್ದಿಷ್ಟವಾಗಿ ವಿವರಿಸಿ ಹೇಳಲಾಗದ ಅಸಹಾಯತೆ ನನ್ನದು.

ಕಳೆದ ಜನವರಿ ಕೊನೆಯ ವಾರ ಧಾರವಾಡದಲ್ಲಿ ಸಾಹಿತ್ಯ ಸಂಭ್ರಮವನ್ನು ಸವಿದವರು ಇನ್ನೂ ಅದರ ನೆನಪಿನಲ್ಲಿ ಮುಳುಗೇಳುತ್ತಿದ್ದಾರೆ. ಇದರ ಜೊತೆಗೆ ಪಂಚನದಿಗಳ ನಾಡೆಂದು ಹೆಸರಿಗಷ್ಟೇ ಪ್ರಸಿದ್ಧಿಯಾಗಿರುವ ಬಿಜಾಪುರದಲ್ಲಿ ಇದೇ ಪೆಬ್ರವರಿ 8. 9 ಮತ್ತು 10 ರಂದು ಮೂರು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೆಳನವೆಂಬ ಜಾತ್ರೆಗೆ ಎಲ್ಲರೂ ಸಡಗರದಿಂದ ತಯಾರಾಗುತ್ತಿದ್ದಾರೆ. ಇಂತಹ ಹುಸಿ ಎನಿಸಬಹುದಾದ ಸಂಭ್ರಮಗಳ ನಡುವೆ ನಮ್ಮ ಸರ್ಕಾರದ ಅವಿವೇಕತನ ಮತ್ತು ಮೂರ್ಖತನಗಳ ಬಗ್ಗೆ ಈವರೆಗೆ ಯಾವೊಬ್ಬ ಸಾಹಿತಿಯೂ, ಅಥವಾ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪರಸ್ಪರ ಬೆನ್ನು ಕೆರದುಕೊಂಡು, ಕೆರೆತವನ್ನು ಇನ್ನಿಲ್ಲದಂತೆ ನೀಗಿಸಿಕೊಂಡ ಉತ್ತೋಮೋತ್ತಮರು ಚಿಂತಿಸಲಿಲ್ಲ. ಸರ್ಕಾರ ಪಂಪ ಪ್ರಶಸ್ತಿ ಪ್ರದಾನ ಮಾಡುವ ಕುರಿತು ತಾಳಿರುವ ನಿರ್ಲಕ್ಷ್ಯ ಧೋರಣೆಯನ್ನು ಯಾರೂ ಚರ್ಚಿಸಲಿಲ್ಲ.

ಕರ್ನಾಟಕ ಸರ್ಕಾರವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಕಾಳಜಿ ಮೇಲಿನ ಕಾರಣದಿಂದ ಹುಟ್ಟು ಹಾಕಿದ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ಎಂಬ ಸಂಸ್ಥೆ ತಾನು ಮೂಲಭೂತವಾಗಿ ಮಾಡಬೇಕಾದ ಕರ್ತವ್ಯವನ್ನು ಹೊರತು ಪಡಿಸಿ ಉಳಿದೆಲ್ಲವನ್ನೂ ರಾಜರೋಷವಾಗಿ ಮಾಡುತ್ತಿದೆ. G.H.nayakaಕನ್ನಡದ ಹಿರಿಯ ವಿಮರ್ಶಕ ಹಾಗೂ ನೇರನುಡಿ ಮತ್ತು ಸಜ್ಜನಿಕೆಗೆ ಹೆಸರಾದ ಪ್ರೊ. ಜಿ.ಹೆಚ್. ನಾಯಕರಿಗೆ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ “ಪಂಪ ಪ್ರಶಸ್ತಿ”ಯನ್ನು ಆರು ತಿಂಗಳ ಹಿಂದೆಯೆ ಸರ್ಕಾರ ಘೋಷಿಸಿತು. ಆದರೆ ಈವರೆಗೆ ಪ್ರಶಸ್ತಿಯನ್ನು ವಿತರಿಸದೆ, ಆದಿಕವಿ ಪಂಪ ಮತ್ತು ನಾಡಿನ ಹಿರಿಯ ವಿಮರ್ಶಕರಿಗಿಬ್ಬರಿಗೂ ಒಟ್ಟಿಗೆ ಅಪಮಾನ ಮಾಡಲಾಗಿದೆ ಎಂಬ ತಾತ್ವಿಕ ಸಿಟ್ಟು ಯಾರೊಬ್ಬರಲ್ಲಿಯೂ ಈವರೆಗೆ ಗೋಚರಿಸದಿರುವುದು ಆಶ್ಚರ್ಯವಾಗಿದೆ. ಯಾವನೋ ಒಬ್ಬ ಸಿನಿಮಾ ನಟನ ದಾಂಪತ್ಯದ ಬಿರುಕನ್ನು ಕರ್ನಾಟಕದ ಅಳಿವು ಉಳಿವಿನ ಸಮಸ್ಯೆ ಎಂಬಂತೆ ಚರ್ಚೆಯ ನೆಪದಲ್ಲಿ ಚಚ್ಚಿ ಬಿಸಾಡುತ್ತಿರುವ ದೃಶ್ಯ ಮಾಧ್ಯಮಗಳು, ಸಾಹಿತ್ಯ ಸಮ್ಮೇಳನ ಎಂದರೆ ಅಲ್ಲಿ ಬಡಿಸಲಾಗುವ ಊಟದ ವಿವರ ಎಂದು ಭಾವಿಸಿರುವ ಮುದ್ರಣ ಮಾಧ್ಯಗಳಿಗೂ ಪಂಪ ಪ್ರಶಸ್ತಿಯ ಕುರಿತಂತೆ ಯಾವುದೇ ಅರಿವಿಲ್ಲ.

ಕಳೆದ ಮೂರು ತಿಂಗಳ ಹಿಂದೆಯೆ ಜಿ.ಹೆಚ್. ನಾಯಕರು ಪ್ರಶಸ್ತಿ ಪ್ರದಾನ ಮಾಡಲು ಸರ್ಕಾರ ಅನುಸರಿಸುತ್ತಿರುವ ವಿಳಂಬ ಧೋರಣೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರೊ. ಬರಗೂರು ರಾಮಚಂದ್ರಪ್ಪ ಸಹ ಸರ್ಕಾರದ ನಿಧಾನ ಗತಿಯ ಧೋರಣೆ ಬಗ್ಗೆ ಪತ್ರಿಕೆಗಳಲ್ಲಿ ಪ್ರತಿಕ್ರಿಯಿಸಿದ್ದರು. pampaಆದರೆ ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳುವ ಗುರಿ ಒಂದನ್ನು ಹೊರತು ಪಡಿಸಿ ಜಗತ್ತಿನ ಯಾವ ಗೊಡವೆಗಳು ನಮಗೆ ಬೇಡ ಎಂಬಂತಿರುವ ನಮ್ಮ ಜನಪ್ರತಿನಿಧಿಗಳಿಗೆ ಇಂತಹ ಮಾರ್ಮಿಕವಾದ ಮಾತುಗಳು ಹೇಗೆ ತಾನೆ ತಲುಪಲು ಸಾಧ್ಯ?

ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೆಶಕ ಸ್ಥಾನದಲ್ಲಿ ಕುಳಿತಿರುವ ಮನು ಬಳಿಗಾರ್ ಓರ್ವ ಅಧಿಕಾರಿಯಷ್ಟೇ ಅಲ್ಲ, ಜೊತೆಗೆ ಸ್ವತಃ ಒಬ್ಬ ಲೇಖಕ. ಅವರಿಗಾದರೂ ಸಾಹಿತ್ಯ ಲೋಕದ ಈ ಸೂಕ್ಷ್ಮತೆಯ ವ್ಯವಹಾರಗಳು ಅರ್ಥವಾಗಬಾರದೆ? ಇಲಾಖೆಯ ವತಿಯಿಂದ ಆರ್ಥಿಕ ನೆರವು ಪಡೆದ ಸಂಘಟನೆಗಳು ಏರ್ಪಡಿಸುವ ಸನ್ಮಾನ ಕಾರ್ಯಕ್ರಮದಲ್ಲಿ ಹಾರ ತುರಾಯಿಗಳಿಗೆ ನಡುಬಗ್ಗಿಸಿ ಕೊರಳು ಒಡ್ಡುವುದೆ ಕಾಯಕ ಎಂದು ಈ ನಿರ್ದೆಶಕರು ಭಾವಿಸಿದಂತಿದೆ. ಅಧಿಕಾರಿಗಳು ಸಾಹಿತಿಯಾಗಿ, ಸಾಹಿತಿಗಳು ರಾಜಕಾರಣಿಗಳಾಗಿ ಪರಿವರ್ತನೆಯಾಗುತ್ತಿರುವ ಈ ಪರ್ವ ಕಾಲದಲ್ಲಿ ಕನ್ನಡ ಸಾಂಸ್ಕೃತಿಕ ಲೋಕದ ದುರಂತಗಳ ಬಗ್ಗೆ ಯಾರಲ್ಲಿ ಪ್ರಶ್ನಿಸುವುದು?

ಸರ್ಕಾರಕ್ಕೆ ಮತ್ತು ಸಂಸ್ಕೃತಿ ಇಲಾಖೆಗೆ ನನ್ನ ಪ್ರಶ್ನೆ ಇಷ್ಟೇ: “ನಿಮಗೆ ನಿಗದಿ ಪಡಿಸಿದ ದಿನಾಂಕದಂದು ಪ್ರಶಸ್ತಿ ವಿತರಣೆ ಮಾಡುವ ಯೋಗ್ಯತೆ ಮತ್ತು ಸಾಮರ್ಥ್ಯವಿಲ್ಲವೆಂದ ಮೇಲೆ ಪ್ರಶಸ್ತಿಯನ್ನು ಏಕೆ ಘೋಷಣೆ ಮಾಡುತ್ತೀರಿ?”

“ಪಂಪ ಪ್ರಶಸ್ತಿ” ಎನ್ನುವುದು ಆರು ತಿಂಗಳಿಗೆ ಅಥವಾ ಮೂರು ತಿಂಗಳಿಗೆ ನೀಡುವ ವೃದ್ಧಾಪ್ಯ ವೇತನ ಅಥವಾ ವಿಧವಾ ವೇತನದಂತಹ ಮಾಸಾಶನಗಳಲ್ಲ. ಪಂಪ ಪ್ರಶಸ್ತಿಗೆ ಅದರದೇ ಘನತೆ, ಗೌರವ ಇದೆ. ನಿಮಗೆ ಘನತೆ, ಗೌರವಗಳು ಇಲ್ಲದಿದ್ದರೆ ಚಿಂತೆ ಇಲ್ಲ. (ಅವುಗಳು ಇವೆ ಎಂದು ನನಗನಿಸಿಲ್ಲ.) ಆದರೆ ಪ್ರಶಸ್ತಿಯನ್ನು ಅಪಮೌಲ್ಯಗೊಳಿಸಬೇಡಿ.

ರತನ್ ಟಾಟಾ ಎಂಬ ಅಪ್ಪಟ ಮನುಷ್ಯನ ಕುರಿತು


– ಡಾ.ಎನ್.ಜಗದೀಶ್ ಕೊಪ್ಪ


 

ಕಳೆದ ಇಪ್ಪತ್ತೈದು ವರ್ಷಗಳಿಂದ ಓರ್ವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ಭಾರತದ ವಾಣಿಜ್ಯ ಮತ್ತು ಕೃಷಿ ಮತ್ತು ಕೈಗಾರಿಕೆಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವನು ನಾನು. ಕೈಗಾರಿಕೋದ್ಯಮಿಗಳ ನಡೆ, ನುಡಿಗಳು ನನ್ನ ಆಸಕ್ತಿಯ ಅಂಶಗಳಲ್ಲಿ ಒಂದು. ಭಾರತದ ಅತಿ ದೊಡ್ಡ ಉದ್ಯಮವಾದ ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷನಾಗಿ ಇಪ್ಪೊತ್ತೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ; ಮೊನ್ನೆ ಮೊನ್ನೆ ನಿವೃತ್ತರಾದ ರತನ್ ಟಾಟಾ ಬಗ್ಗೆ ಮೊದಲಿನಿಂದಲೂ ನನಗೆ ಕುತೂಹಲವಿತ್ತು. ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದು ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ನಿವೃತ್ತರಾದ ರತನ್ ಟಾಟಾ ಮೊನ್ನೆ ಮುಂಬೈ ನಗರದಿಂದ ತಮ್ಮ ಖಾಸಗಿ ವಿಮಾನವನ್ನು ತಾವೇ ಹಾರಿಸಿಕೊಂಡು ಹುಬ್ಬಳ್ಳಿ ನಗರಕ್ಕೆ ಬಂದಿದ್ದರು. ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಭಿಕರೊಂದಿಗೆ ಮುಕ್ತವಾಗಿ ತಮ್ಮ ಬದುಕಿನ ಕೆಲವು ವಿಚಾರ ಮತ್ತು ವಿಷಾದಗಳನ್ನು ಹಂಚಿಕೊಂಡರು. ಅವರ ಮಾತುಗಳನ್ನು ಕೇಳಿದಾಗ ಈ ದೇಶದಲ್ಲಿ ನಂಬಿಕೆಗೆ ಅರ್ಹರಾದ ವ್ಯಕ್ತಿಗಳಲ್ಲಿ ರತನ್‌ಟಾಟಾ ಕೂಡ ಒಬ್ಬರು ಎಂದು ನನಗೆ ಕೂಡಲೇ ಅನಿಸಿತು.

ಬಂಡವಾಳಶಾಹಿ ಜಗತ್ತು ಮತ್ತು ಅದರ ವಾರಸುದಾರರ ಮಾತುಗಳನ್ನು ಅಷ್ಟು ಸುಲಭವಾಗಿ ಒಪ್ಪಬಾರದೆಂಬುದು ನನ್ನ ನಿಲುವು. ಆದರೆ ರತನ್ ಟಾಟಾ ಅವರ ಮಾತುಗಳಲ್ಲಿ ಕಪಟತನವಿರಲಿಲ್ಲ. ಅವರು ಆಡಿದ ಪ್ರತಿಮಾತುಗಳು ಹೃದಯದಿಂದ ಬಂದ ನುರಿತ ಅನುಭವಿ ದಾರ್ಶನಿಕನೊಬ್ಬನ ಮಾತುಗಳಂತಿದ್ದವು.

ಹುಬ್ಬಳ್ಳಿ ನಗರದಲ್ಲಿ ದೇಶಪಾಂಡೆ ಪೌಂಡೆಶನ್ ಆಯೋಜಿಸಿದ್ದ “ಅಭಿವೃದ್ಧಿಯ ಸಂವಾದಗಳು” ಕಾರ್ಯಕ್ರಮದಲ್ಲಿ ರತನ್ ಟಾಟಾ ಪಾಲ್ಗೊಂಡಿದ್ದರು. RatanTataತಮ್ಮ ಬಾಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಅತ್ಯಂತ ನೋವು ಮತ್ತು ವಿಷಾದದಿಂದ ಉತ್ತರಿಸಿದ ಟಾಟಾ, ನನಗೆ ಬಾಲ್ಯವೆಂಬುದೇ ಇರಲಿಲ್ಲ, ಎಲ್ಲಾ ಮಕ್ಕಳಂತೆ ಬಾಲ್ಯದ ಸುಖ ಅನುಭವಿಸುವ ಸ್ವಾತಂತ್ರ್ಯ ನನಗಿರಲಿಲ್ಲ ಎಂದು ಹೇಳಿದರು. ಚಿಕ್ಕ ವಯಸ್ಸಿನಲ್ಲೇ ದೂರದ ಅಮೇರಿಕಾಕ್ಕೆ ಹೋಗಿ ಶಿಕ್ಷಣ ಕಲಿತಿದ್ದು, ಅಲ್ಲಿ ವಿಧ್ಯಾಭ್ಯಾಸ ಮುಗಿಸಿ ಇಪ್ಪತ್ತೊಂದನೇ ವಯಸ್ಸಿಗೆ ಭಾರತಕ್ಕೆ ಬಂದು ಟಾಟಾ ಕಂಪನಿಯಲ್ಲಿ ತೊಡಗಿಸಿಕೊಂಡು ತಮ್ಮ ಬಾಲ್ಯ, ಯೌವನ ಕಳೆದು ಹೋದದ್ದನ್ನು ಹೇಳಿ, ಬಾಲ್ಯ ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಿಮಗಿದ್ದ ಬಾಲ್ಯ ಎಂದೂ ನನಗೆ ದಕ್ಕಲಿಲ್ಲ ಎಂದರು.

ನಿವೃತ್ತಿ ನಂತರದ ದಿನಗಳನ್ನು ಅತ್ಯಂತ ಖುಷಿಯಿಂದ ಹೇಳಿಕೊಂಡ ರತನ್, ನಿವೃತ್ತಿಯಾದ ಮೇಲೆ ನನಗಿಂತ ನನ್ನ ಮುದ್ದಿನ ಎರಡು ನಾಯಿಗಳು ಹೆಚ್ಚು ಖುಷಿಯಾಗಿವೆ ಎಂದು ಹೇಳುತ್ತಾ ನಕ್ಕರು. ಮುಂಬೈ ನಗರದ ತನ್ನ ಬಂಗಲೆಯಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾ, ಸಮಾಜ ಸೇವೆಯಲ್ಲಿ ತೊಡಗಿರುವ ಬಗ್ಗೆ ತಿಳಿಸಿದರು.

ಒಬ್ಬ ದಕ್ಷ ಆಡಳಿತಗಾರನಾಗಿ, ಟಾಟಾ ಕಂಪನಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದ ರತನ್ ಟಾಟಾಗೆ ಭಾರತದ ಹಳ್ಳಿಗಳ ಕುರಿತು ಇರುವ ಕಾಳಜಿ ಮತ್ತು ಈವರೆಗೆ ಸದುಪಯೋಗವಾಗದೆ ಉಳಿದಿರುವ ಗ್ರಾಮೀಣ ಜಗತ್ತಿನ ಮಾನವ ಸಂಪನ್ಮೂಲಗಳ ಕುರಿತಂತೆ ತುಂಬಾ ಒಳ್ಳೆಯ ಒಳನೋಟಗಳಿವೆ.

ಸಧೃಡ ಭಾರತ ನಿರ್ಮಾಣವಾಗಬೇಕಾದರೆ ನಾವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಇಂಜಿನಿಯರ್‌ಗಳು ಮತ್ತು ತಂತ್ರಜ್ಙರನ್ನು ರೂಪಿಸಬೇಕು, ಇದಕ್ಕಾಗಿ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಹಳ್ಳಿಗಳ ಯುವಕರಿಗೆ ಉನ್ನತ ಶಿಕ್ಷಣ ನೀಡುವಾಗ ಮಾನವೀಯ ಮುಖಗಳನ್ನು ಹೊಂದಿರಬೇಕು ಎಂದು ರತನ್ ಟಾಟಾ ಪ್ರತಿಪಾದಿಸುತ್ತಿದ್ದಾಗ, ನನಗೆ ಅವರ ಅಜ್ಜ ನೆನಪಾದರು. ರತನ್ ಕೂಡ ಟಾಟಾ ಕುಟುಂಬದ ಕುಡಿಯಲ್ಲವೆ? ಎಂದು ಮನಸ್ಸಿಗೆ ಅನಿಸತೊಡಗಿತು. ಇಂತಹದ್ದೇ ದೃಷ್ಟಿಕೋನ ಇವರ ತಾತ ಜೇಮ್ಸ್ ಶೇಟ್‌ಜಿ ಟಾಟಾರಿಗೆ ಇದ್ದ ಕಾರಣ ಜಗತ್ತಿನ ಅತಿಶ್ರೇಷ್ಠ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ತಲೆ ಎತ್ತಲು ಸಾಧ್ಯವಾಯಿತು. 1907 ರಲ್ಲಿ ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಉಚಿತವಾಗಿ ಸ್ಥಳ ನೀಡಿದ ಫಲವಾಗಿ ನಾನೂರು ಎಕರೆ ಪ್ರದೇಶದಲ್ಲಿ 1909 ರ ಮೇ 27 ರಂದು ಟಾಟಾ ಇನ್ಸಿಟ್ಯೂಟ್ ಎಂಬ ಹೆಸರಿನಲ್ಲಿ ಈ ಸಂಸ್ಥೆ ತಲೆ ಎತ್ತಿತು. IIScಭಾರತದ ನೆಲದಲ್ಲಿ ದೇಶೀಯ ಪ್ರತಿಭೆಗಳನ್ನು ತಯಾರು ಮಾಡಬೇಕೆಂಬ ಟಾಟಾ ಅವರ ಕನಸು ಈಗ ನೆನಸಾಗಿದೆ. ಹಲವು ಶಾಖೆಗಳಾಗಿ ಬೆಳೆದಿರುವ ಈ ಸಂಸ್ಥೆಯ ಆವರಣದಲ್ಲಿ ಗಿಡ ಮರಗಳ ಹಸಿರಿನ ನಡುವೆ ಓಡಾಡುವುದು ಮನಸ್ಸಿಗೆ ಮುದ ನೀಡುತ್ತದೆ.

ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಸೇವೆ ಕುರಿತಂತೆ ಖಚಿತ ನಿಲುವು ಹೊಂದಿರುವ ರತನ್ ಟಾಟಾ, ಸಿರಿವಂತರು, ಅಥವಾ ಉದ್ಯಮ ಸಂಸ್ಥೆಗಳು ಕೇವಲ ಹಣವನ್ನು ಧಾನ ಮಾಡಿದರೆ ಸಮಾಜ ಸೇವೆಯಾಗುವುದಿಲ್ಲ, ನೀಡಿದ ಹಣ ಸದ್ಭಳಕೆಯಾಗುವ ಹಾಗೆ ನಿಗಾ ವಹಿಸಬೇಕು ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾಗಿರುವುದು ಸಮಾಜ ಸೇವೆಯ ಕರ್ತವ್ಯಗಳಲ್ಲಿ ಒಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೊನೆಯಲ್ಲಿ ತಮ್ಮ ಕನಸಿನ ಕೂಸಾದ ನ್ಯಾನೊ ಕಾರು ಮಾರುಕಟ್ಟೆಯಲ್ಲಿ ವಿಫಲವಾದುದಕ್ಕೆ ಮತ್ತು ಮಧ್ಯಮ ವರ್ಗದ ಮನ ಗೆಲ್ಲಲಾಗದ ನೋವಿನ ಕಥನವನ್ನು ವಿವರಿಸಿದರು. ನ್ಯಾನೊ ಕಾರು ರತನ್ ಟಾಟಾ ಅವರ ಕನಸು. ಮಳೆಗಾಲದ ಒಂದು ರಾತ್ರಿ ಕಂಪನಿಯ ಕೆಲಸ ಮುಗಿಸಿ ತಮ್ಮ ಐಷಾರಾಮಿ ಕಾರಿನಲ್ಲಿ ರತನ್ ಟಾಟಾ ಮನೆಗೆ ವಾಪಾಸ್ಸಾಗುತ್ತಿದ್ದರು. ಆದಿನ ಮುಂಬೈ ನಗರದಲ್ಲಿ ಜೋರು ಮಳೆ. ಮಧ್ಯಮ ವರ್ಗದ ದಂಪತಿಗಳಿಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾದ ತಮ್ಮ ಮಗುವನ್ನು ಸುರಿಯುತ್ತಿರುವ ಮಳೆಯಲ್ಲೇ ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವುದನ್ನು ನೋಡಿದರು. ಆ ಕ್ಷಣವೆ ಮಧ್ಯಮ ವರ್ಗಕ್ಕೆ ಕೈಗೆಟುಕುವ ಬೆಲೆಯಲ್ಲಿ ಕಾರು ತಯಾರಿಸಬೇಕೆಂಬ ಕನಸು ಅವರೆದೆಯಲ್ಲಿ ಚಿಗುರೊಡೆಯಿತು. ಕನಸನ್ನು ನೆನಸಾಗಿಸಲು ಅವರು ಅನೇಕ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಿದರು. ಇವುಗಳಲ್ಲಿ ಕಾರು ತಯಾರಿಕಾ ಘಟಕಕ್ಕೆ ಸಂಬಂಧಿಸದಂತೆ ಸರ್ಕಾರ ಭೂಮಿ ನೀಡಿದ ವಿಚಾರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹೋರಾಟ ಒಂದು ದೊಡ್ಡ ಅಧ್ಯಾಯ.

ಎಲ್ಲಾ ಅಡೆ ತಡೆಗಳನ್ನು ದಾಟಿ ಗುಜರಾತಿನ ಘಟಕದ ಮೂಲಕ ಅಂತಿಮವಾಗಿ ಕಾರು ಮಾರುಕಟ್ಟೆಗೆ ಬಂದಾಗ ಟಾಟಾ ಅವರ Tata-with-Nanoನಿರೀಕ್ಷೆ ಸುಳ್ಳಾಯಿತು. ಬಟ್ಟೆ ಬದಲಿಸುವಂತೆ ಕಾರು, ಟಿವಿ, ರೆಪ್ರಿಜೇಟರ್, ಮೊಬೈಲ್ ಹೀಗೆ ಎಲ್ಲವನ್ನು ಬದಲಿಸುವ ಹುಚ್ಚಿಗೆ ಬಲಿ ಬಿದ್ದಿರುವ ಮಧ್ಯಮ ವರ್ಗದ ಜನಕ್ಕೆ ನ್ಯಾನೊ ಇಷ್ಟವಾಗಲಿಲ್ಲ. ಇದರಿಂದ ವಿಚಲಿತಗೊಂಡ ರತನ್‌ ಟಾಟಾ ಈ ಕುರಿತು ಸಮೀಕ್ಷೆ ನಡೆಸಿದಾಗ, “ನ್ಯಾನೊ ಕಾರು ಕೊಂಡರೆ ಸಮಾಜದಲ್ಲಿ ನಮ್ಮನ್ನು ಕೀಳಾಗಿ ನೋಡುತ್ತಾರೆ. ಈ ಕಾರಣಕ್ಕಾಗಿ ಸಾಲಮಾಡಿ ಒಳ್ಳೆಯ ಕಾರು ಖರೀದಿಸಲು ಇಷ್ಟ ಪಡುತ್ತೇವೆ,” ಎಂಬ ಮಧ್ಯಮ ವರ್ಗದ ಜನರ ಭ್ರಮೆ ನೋಡಿ ಅವರಿಗೆ ತೀವ್ರ ವಿಷಾದವಾಯಿತು.

ಇಂತಹ ಒಂದು ಸೋಲನ್ನು ಯಾವುದೇ ಮುಚ್ಚು ಮರೆಯಿಲ್ಲದೆ ರತನ್ ಟಾಟಾ ಹೇಳಿಕೊಂಡಾಗ ನನಗೆ ಅವರ ಬಗ್ಗೆ ಇದ್ದ ಗೌರವ ಇಮ್ಮಡಿಸಿತು. ಜೊತೆ ಜೊತೆಗೆ ಸದಾ “ನಾನೇ ಸೃಷ್ಟಿ ಬ್ರಹ್ಮ” ಎಂಬಂತೆ ಮಾತನಾಡುವ ನಮ್ಮ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ನೆನಪಾದರು.

ಪ್ರಜಾ ಸಮರ – 19 (ನಕ್ಸಲ್ ಕಥನದ ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

ಅಧಿಕೃತವಾಗಿ 45 ವರ್ಷಗಳನ್ನು, ಅನಧಿಕೃತವಾಗಿ 50 ವರ್ಷಗಳನ್ನು ಪೂರೈಸಿರುವ ಭಾರತದ ನಕ್ಸಲ್ ಹೋರಾಟವನ್ನು 2013 ರ ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದರೆ, ಸಂಭ್ರಮ ಪಡುವ ವಿಷಯಕ್ಕಿಂತ ಸಂಕಟ ಪಡುವ ಸಂಗತಿಗಳೆ ಹೆಚ್ಚಾಗಿವೆ.

2010 ರಲ್ಲಿ ಅಜಾದ್ ಅಲಿಯಾಸ್ ಚುರುಮುರಿ ರಾಜ್ ಕುಮಾರ್, 2011 ನವಂಬರ್ ತಿಂಗಳಿನಲ್ಲಿ ಕಿಶನ್ ಜಿ ಇವರ ಹತ್ಯೆಯಿಂದಾಗಿ ತೀವ್ರ ಹಿನ್ನಡೆ ಅನುಭವಿಸಬೇಕಾದ ನಕ್ಸಲ್ ಹೋರಾಟಕ್ಕೆ 2012 ರಲ್ಲಿ ಆರ್.ಕೆ. ಎಂದು ಜನಪ್ರಿಯವಾಗಿದ್ದ ರಾಮಕೃಷ್ಣ ಅವರ ಬಂಧನದಿಂದ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿತು. ಮಾವೋವಾದಿ ನಕ್ಸಲ್ ಚಳುವಳಿಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣರಾಗಿದ್ದramakrishna-naxal-india ರಾಮಕೃಷ್ಣರನ್ನು ಕೊಲ್ಕತ್ತ ಪೊಲೀಸರು, ಆಂಧ್ರ ಪೊಲೀಸರ ನೆರವಿನಿಂದ ಕೊಲ್ಕತ್ತ ನಗರದಲ್ಲಿ ರಾಕೆಟ್ ಲಾಂಚರ್‌ಗಳಿಗೆ ಬೇಕಾದ ಬಿಡಿಭಾಗಗಳನ್ನು ವರ್ಕ್‌ಶಾಪ್ ಒಂದರಲ್ಲಿ ತಯಾರಿಸುತ್ತಿದ್ದ ವೇಳೆ ಬಂಧಿಸುವಲ್ಲಿ ಯಶಸ್ವಿಯಾದರು.

ಆಂಧ್ರದ ಕರೀಂನಗರ ಜಿಲ್ಲೆಯ ಹಳ್ಳಿಯಿಂದ ಬಂದಿದ್ದ ರಾಮಕೃಷ್ಣರು 1976 ರಲ್ಲಿ ವಾರಂಗಲ್‌ನ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಸಂಸ್ಥೆಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಪದವಿ ಪಡೆದು 1978 ರಲ್ಲಿ ಭೂಗತರಾಗುವ ಮೂಲಕ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು, ಕೊಲ್ಕತ್ತ. ಚೆನ್ನೈ ನಗರಗಳಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ಸಣ್ಣ ಕೈಗಾರಿಕೆಗಳಿಗೆ ಆದೇಶ ನೀಡಿ ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳುತ್ತಿದ್ದರು. ಹೀಗೆ ಬಿಡಿಭಾಗ ಸಂಗ್ರಹಿಸಲು ಕೊಲ್ಕತ್ತ ನಗರಕ್ಕೆ ತೆರಳಿದಾಗ, ಪೊಲೀಸರಿಂದ ಬಂಧಿತರಾದರು. ಈಗ ಗಣಪತಿಯವರನ್ನು ಹೊರತು ಪಡಿಸಿದರೆ ಸೈದ್ಧಾಂತಿಕ ಹಿನ್ನೆಲೆಯುಳ್ಳ ಒಬ್ಬ ಹಿರಿಯ ನಾಯಕನನ್ನು ನಕ್ಸಲ್ ಹೋರಾಟದಲ್ಲಿ ಹುಡುಕುವುದು ಕಷ್ಟವಾಗಿದೆ.

ಕಳೆದ ಒಂದು ದಶಕದಿಂದ ನಗರಗಳಿಂದ ಹೋರಾಟಗಳತ್ತ ಆಕರ್ಷಿತರಾಗಿ ಬರುತ್ತಿದ್ದ ವಿದ್ಯಾವಂತರ ಸಂಖ್ಯೆ ಸಂಪೂರ್ಣ ಸ್ಥಗಿತಗೊಡಿದೆ. ವ್ಯವಸ್ಥೆಯಯ ವಿರುದ್ದದ ಹೋರಾಟಕ್ಕೆ ಅರಣ್ಯಕ್ಕೆ ಹೋಗಿ ಬಂದೂಕ ಹಿಡಿಯಬೇಕೆಂಬುದು ಈಗಿನ ಯುವಜನತೆಗೆ ಸವಕಲು ಮಾದರಿಯಾಗಿದೆ. ಇದೆ ವೇಳೆಗೆ 2010 ರ ಮಾರ್ಚ್ 23 ರಂದು ನಕ್ಸಲ್ ಚಳುವಳಿಯ ಸಂಸ್ಥಾಪಕ ಹಾಗೂ ಚಾರು ಮುಜುಂದಾರ್ ಸಂಗಾತಿ ಕನು ಸನ್ಯಾಲ್ ತಮ್ಮ ವೃದ್ಧಾಪ್ಯದಲ್ಲಿ ತೀವ್ರ ಬಡತನ ಮತ್ತು ಹದಗೆಟ್ಟ ಆರೋಗ್ಯಕ್ಕೆ ಔಷಧಕೊಳ್ಳಲು ಹಣವಿಲ್ಲದ ಸ್ಥಿತಿಯಲ್ಲಿ ತಮ್ಮ ಮಗಳ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಗಿನ ತಲೆಮಾರಿಗೆ ಹೋರಾಟ ಕುರಿತು ಮರುಚಿಂತನೆಗೆ ಪ್ರೇರೇಪಿಸಿದೆ. 1980 ಮತ್ತು 1990 ರ ದಶಕದಲ್ಲಿ ನಕ್ಸಲ್ ಹೋರಾಟಕ್ಕೆ ಸೇರ್ಪಡೆಯಾದ ಅನಕ್ಷರಸ್ತ ಆದಿವಾಸಿ ಯುವಕರು ಈಗ ಚಳುವಳಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಮಾವೋವಾಗಲಿ, ಲೆನಿನ್ ಆಗಲಿ ಅಥವಾ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತಗಳ ಗಂಧ ಗಾಳಿ ತಿಳಿದಿಲ್ಲ. ಇಂತಹ ಕಾರಣಗಳಿಂದಾಗಿಯೆ ಸತ್ತು ಹೋಗಿರುವ ಯೋಧನ ಹೊಟ್ಟೆಯೊಳಗೆ ಸಿಡಿಮದ್ದನ್ನು ತುಂಬಿಸಿ ಇಡುವ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ.

ಒಂದು ನೆಮ್ಮದಿಯ ಸಂಗತಿಯೆಂದರೆ, ಇಡೀ ರಾಷ್ಟ್ರಾದ್ಯಂತ ನಕ್ಸಲರು ಮತ್ತು ಸರ್ಕಾರಗಳ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಹಿಂಸೆಯ ಪ್ರಮಾಣ ಇಳಿಮುಖವಾಗುತ್ತಿದೆ. ಜಾರ್ಖಂಡ್ ಮತ್ತು ಛತ್ತೀಸ್‌ ಗಡ್ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಆಶಾಭಾವನೆ ಮೂಡುವಂತಿದೆ. pwg-naxalನಕ್ಸಲ್ ಚಳುವಳಿಯನ್ನು ಹುಟ್ಟುಹಾಕಿದ ಆಂಧ್ರಪ್ರದೇಶದಲ್ಲಿ ಕೇವಲ 13 ಸಾವುಗಳು ಸಂಭವಿಸಿವೆ. ಜಾರ್ಖಂಡ್ ನಲ್ಲಿ 160 ಸಾವು (2011 ರಲ್ಲಿ 182 ) ಛತ್ತೀಸ್‌ಗಡದಲ್ಲಿ 107 (2011 ರಲ್ಲಿ 204) ಬಿಹಾರದಲ್ಲಿ 43 ಸಾವು (2011 ರಲ್ಲಿ 63) ಪಶ್ಚಿಮ ಬಂಗಾಳದಲ್ಲಿ 6 ಸಾವು (2011 ರಲ್ಲಿ 45), ಹೀಗೆ ಭಾರತದಲ್ಲಿ 2011 ರಲ್ಲಿ 1760 ಪ್ರಕರಣಗಳು ನಡೆದು, 611 ನಾಗರೀಕರು ಮತ್ತು 99 ನಕ್ಸಲಿಯರು ಮೃತಪಟ್ಟಿದ್ದರೆ, 2012 ರ ವೇಳೆಗೆ 1365 ಪ್ರಕರಣಗಳು ದಾಖಲಾಗಿ 409 ನಾಗರೀಕರು ಮತ್ತು 74 ನಕ್ಸಲಿಯರು ಮೃತಪಟ್ಟಿದ್ದಾರೆ. ಒಟ್ಟಾರೆ ಸಕಾರ ಮತ್ತು ನಕ್ಸಲ್ ಸಂಘಟನೆಗಳಿಗೆ ಸಂಘರ್ಷ ಮತ್ತು ಹಿಂಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಮೂಡತೊಡಗಿದೆ.

ಭಾರತದ ನಕ್ಸಲ್ ಇತಿಹಾಸದಲ್ಲಿ ಪೊಲೀಸರತ್ತ, ಅಥವಾ ಸರ್ಕಾರಗಳತ್ತ, ಇಲ್ಲವೆ ನಕ್ಸಲ್ ಸಂಘಟನೆಗಳತ್ತ ಬೆರಳು ತೋರಿಸಿ ಆರೋಪ ಹೊರಿಸುವ ಮುನ್ನ ಉಭಯ ಬಣಗಳು ಎಲ್ಲಿ ಎಡವಿದವು ಎಂಬುದರತ್ತ ಗಮನಹರಿಸಿ ಹಿಂಸೆ ಮತ್ತು ಹೋರಾಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಮುಕ್ತ ಮನಸ್ಸಿನಿಂದ ಕೈ ಜೋಡಿಸಬೇಕಿದೆ. ಇತಿಹಾಸದ ಘಟನೆಗಳನ್ನು ಕೆದುಕುತ್ತಾ ಪರಸ್ಪರ ಆರೋಪ ಮಾಡಿ ಕಾಲ ಕಳೆಯುವ ಬದಲು, ಹಿಂಸೆ ಮುಕ್ತ ಜಗತ್ತಿನತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಸೃಷ್ಟಿಸ ಬೇಕಾದ ಸಮಾಜದಲ್ಲಿ ಹಿಂಸೆ, ಬಡತನ, ಅಪಮಾನ, ಶೋಷಣೆ, ದಲಿತರು, ಆದಿವಾಸಿಗಳು, ಮತ್ತು ಅಲ್ಪಸಂಖ್ಯಾತರು ಇವರೆಲ್ಲಾ ಭಯಮುಕ್ತರಾಗಿ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ನೈತಿಕ ಹೊಣೆ ಅಕ್ಷರ ಮತ್ತು ವಿದ್ಯೆಯನ್ನು ಬಲ್ಲ ನಮ್ಮೆಲ್ಲರ ಮೇಲಿದೆ. ವೈದ್ಯನೊಬ್ಬ ಖಾಯಿಲೆಯ ಮೂಲಕ್ಕೆ ಕೈ ಹಾಕುವಂತೆ ನಾವುಗಳು ಕೂಡ ಸಮಸ್ಯೆಗಳ ಬುಡಕ್ಕೆ ಕೈ ಹಾಕಬೇಕಿದೆ.

ಭಾರತದ ನಕ್ಸಲ್ ಹೋರಾಟದ ಇತಿಹಾಸವಾಗಲಿ ಅಥವಾ ಅದು ಹಿಡಿದ ಹಿಂಸೆಯ ಮಾರ್ಗ ಕುರಿತಂತೆ ನಮ್ಮಗಳ ಅಸಮಾಧಾನ ಏನೇ ಇರಲಿ, ಅವರುಗಳ ಹೋರಾಟದಲ್ಲಿ ಎಲ್ಲಿಯೂ ಸ್ವಾರ್ಥವೆಂಬುದು ಇರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇವೊತ್ತಿಗೂ ಮೂಕ ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿಗಳು, ಹಿಂದುಳಿದ ಬುಡಕಟ್ಟು ಜನಾಂಗಗಳ ನೆಮ್ಮದಿಯ ಬದುಕಿಗಾಗಿ ನಕ್ಸಲಿಸಂ ಹೆಸರಿನಲ್ಲಿ ಸಾವಿರಾರು ವಿದ್ಯಾವಂತ ಯುವಕರು ಪ್ರಾಣತೆತ್ತಿದ್ದಾರೆ. ಇವರ ಹೋರಾಟದ ಹಿಂದಿನ ಕಾಳಜಿಯನ್ನು ನಮ್ಮನ್ನಾಳುವ ಸರ್ಕಾರಗಳು ಅರಿಯುವ ಮನಸ್ಸು ಮಾಡಿದ್ದರೆ, ನಕ್ಸಲ್ ಸಂಘಟನೆಗಳು ಮತ್ತು ಸರ್ಕಾರಗಳ ನಡುವಿನ ಸಂಘರ್ಷಕ್ಕೆ ರಕ್ತದ ಕಲೆಗಳು ಅಂಟಿಕೊಳ್ಳುತ್ತಿರಲಿಲ್ಲ. ಸಂಘರ್ಷಕ್ಕೆ ಮೂಲ ಕಾರಣರಾದ ಭಾರತದ ಅರಣ್ಯವಾಸಿ ಆದಿವಾಸಿಗಳ ಬದುಕು ಹಸನಾಗಿದೆಯಾ? ಅದೂ ಇಲ್ಲ.

ನಮ್ಮ ನಡುವಿನ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರ ಗುಹಾ 2011 ರ ಲ್ಲಿ ಆಗಸ್ಟ್ ಹದಿನೈದರೆಂದು ದೆಹಲಿಯ ಹಿಂದೂಸ್ತಾನ್ naxalite24fo4ಟೈಮ್ಸ್ ಪತ್ರಿಕೆಗೆ “ಟ್ರೈಬಲ್ ಟ್ರ್ಯಾಜಿಡಿಸ್” ( ಆದಿವಾಸಿಗಳ ದುರಂತ) ಎಂಬ ವಿಶೇಷ ಲೇಖನ ಬರೆದಿದ್ದರು. ಭಾರತದ ಆದಿವಾಸಿಗಳ ಸಮಸ್ಯೆಯನ್ನು ನಿಖರವಾಗಿ ಗುರುತಿಸಿರುವ ಗುಹಾ ಅವರು, ರಾಜಕಾರಣಿಗಳ ಕಪಟ ನಾಟಕವನ್ನೂ ಸಹ ಅನಾವರಣಗೊಳಿಸಿದ್ದಾರೆ. 2010 ರ ಆಗಸ್ಟ್ ತಿಂಗಳಿನಲ್ಲಿ ಒರಿಸ್ಸಾದಲ್ಲಿ ಆದಿವಾಸಿಗಳನ್ನು ಭೇಟಿ ಅವರ ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ, ಇನ್ನುಮುಂದೆ ದೆಹಲಿಯಲ್ಲಿ ನಿಮ್ಮ ಪರವಾಗಿ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಮರೆತು ಹೋದ ಪ್ರಸಂಗವನ್ನು ಪ್ರಸ್ತಾಪಿಸುತ್ತಾ, ಭಾರತದ ಬುಡಕಟ್ಟು ಅಥವಾ ಆದಿವಾಸಿಗಳ ಸಮಸ್ಯೆಯನ್ನು ಏಳು ಬಗೆಯಲ್ಲಿ ರಾಮಚಂದ್ರ ಗುಹಾ ಗುರುತಿಸಿದ್ದಾರೆ:

  1. ದಟ್ಟವಾದ ಅರಣ್ಯದಲ್ಲಿ ತಮ್ಮದೇ ಆದ ಸಂಸ್ಕೃತಿಯ ನೆರಳಿನಲ್ಲಿ ಮತ್ತು ಸಮೃದ್ಧಿಯಾದ ಖನಿಜ ಸಂಪತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಬದುಕಿರುವ ಆದಿವಾಸಿಗಳು ಇಂದು ಅಭಿವೃದ್ಧಿಯ ನೆಪದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯದಲ್ಲಿ ನಿರಂತವಾಗಿ ನಡೆದಿರುವ ಮರಗಳ ಮಾರಣಹೋಮ ಇವೆಲ್ಲವೂ ಅವರನ್ನು ಆಧುನಿಕ ಅಭಿವೃದ್ಧಿ ಯೋಜನೆಗಳು ಅತಂತ್ರರನ್ನಾಗಿ ಮಾಡಿವೆ.
  2. ಭಾರತದಲ್ಲಿ ದಲಿತರಿಗೆ ದಿಕ್ಕುದೆಸೆಯಾಗಿ ಅಂಬೇಡ್ಕರ್ ಜನ್ಮತಾಳಿದ ಹಾಗೆ ಆದಿವಾಸಿಗಳಿಗೆ ಒಬ್ಬ ಅಂಬೇಡ್ಕರ್ ದೊರೆಯದಿರುವುದು ಅವರ ಈ ಶೋಚನೀಯ ಬದುಕಿಗೆ ಕಾರಣವಾಗಿದೆ.
  3. ಭಾರತದಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಹರಿದು ಹಂಚಿಹೋಗಿರುವ ಆದಿವಾಸಿಗಳು ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷಗಳಿಗೆ ದಲಿತರು ಅಥವಾ ಅಲ್ಪಸಂಖ್ಯಾತರ ಹಾಗೆ ಮತಬ್ಯಾಂಕ್‌ಗಳಾಗಿ ಕಾಣಲಿಲ್ಲ.
  4. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನಾಂಗಕ್ಕಾಗಿ ಮೀಸಲಿಟ್ಟ ಉದ್ಯೋಗಗಳು ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾವಂತರ ಪಾಲಾದವು.
  5. ಆದಿವಾಸಿಗಳ ಪ್ರತಿನಿಧಿಯಂತೆ ಉನ್ನತ ಹುದ್ದೆಯಲ್ಲಿ ಮೇಲ್ಮಟ್ಟದ ಅದಿಕಾರಿಯಾಗಲಿ, ಅಥವಾ ಒಬ್ಬ ಜನಪ್ರತಿನಿಧಿಯಾಗಲಿ ಇಲ್ಲದಿರುವುದು, ಆದಿವಾಸಿಗಳ ಸಮಸ್ಯೆಗಳು ಈವರೆಗೆ ಸರ್ಕಾರಗಳ ಕಣ್ಣಿಗೆ ಗೋಚರವಾಗಿಲ್ಲ.
  6. ಆದಿವಾಸಿಗಳ ಬದುಕು ಪರಿಸರಕ್ಕೆ ಮಾರಕವಾಗದಂತೆ, ದೇಶಿ ಜ್ಞಾನಪರಂಪರೆಯಿಂದ ಕೂಡಿದ್ದು ಅವರುಗಳು ಕಾಪಾಡಿಕೊಂಡು ಬಂದಿರುವ ಜ್ಞಾನಶಿಸ್ತುಗಳನ್ನು ಸುಲಭವಾಗಿ ಆಧುನಿಕ ಬದುಕಿಗಾಗಲಿ, ತಂತ್ರಜ್ಞಾನಕ್ಕಾಗಲಿ ಅಳವಡಿಸಲು ಸಾಧ್ಯವಾಗಿಲ್ಲ.
  7. ಪಶ್ಚಿಮ ಬಂಗಾಳದ ಸಂತಾಲ್ ಭಾಷೆಯೊಂದನ್ನು ಹೊರತು ಪಡಿಸಿದರೆ ಆದಿವಾಸಿಗಳ ಮಾತೃಭಾಷೆಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಈ ಕಾರಣದಿಂದಾಗಿ ಆದಿವಾಸಿ ಮಕ್ಕಳು ಮಾತೃ ಭಾಷೆಯ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಲಭಿಸಿ 66 ವರ್ಷಗಳಾದರೂ ಯಾವ ಪಕ್ಷಗಳಾಗಲಿ, ಸರ್ಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಇಲ್ಲವೆ ಯೋಜನೆಗಳನ್ನು ರೂಪಿಸಿದ್ದನ್ನು ನಾವುಗಳು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಿದ್ದರೆ ಈ ನತದೃಷ್ಟರು ಸಮಾಜದ ಮುಖ್ಯವಾಹಿನಿ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರು. ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾದಂತಿದೆ. ಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.

2003 ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ ನಕ್ಸಲರ ಹಾವಳಿಯನ್ನು tribal-schools-educationತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲಿನ್ಲ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆ ಇವುಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸರ್ಕಾರ ಗ್ರಹಿಸಿತು. ಇದರಿಂದಾಗಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007 ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012 ರ ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ ಮುಂದುವರಿಸಲು ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶರ್ಮ ಮಧ್ಯಸ್ಥಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರ್ಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವುದಿಲ್ಲ. ನಕ್ಸಲ್ ಚಳುವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದನ್ನು ತಡೆಯಬೇಕು. ಇದಕ್ಕಿರುವ ಏಕೈಕ ಪರಿಹಾರ ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದ “ಜಲ್, ಜಂಗಲ್, ಜಮೀನ್” ಎಂಬ ಬೇಡಿಕೆಗಳು.

ಅರಣ್ಯದಲ್ಲಿ ಅತಂತ್ರರಾಗಿರುವ ಆದಿವಾಸಿಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರ್ಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಹಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಈ ಕುರಿತು ಸೃಷ್ಟನಿದರ್ಶನ ನೀಡಿದೆ.) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸ ಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಆ ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನು ತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಈ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಿಗಳಲ್ಲಿ ಕುಡಿಯುವ ಶುದ್ದ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೊದಲು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.

ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾತ್ರ ಸರ್ಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಚಿವುಟಿ ಹಾಕಲು ಸಾಧ್ಯ. ನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಪಾತ್ರವಿದೆ. communist-photoಈ ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುದ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್ ಸಿಂಗ್, ಸುಂದರಯ್ಯ, ಜ್ಯೋತಿ ಬಸು ಇಂತಹ ನಾಯಕರು ಬೇಕಾಗಿದ್ದಾರೆ. ಕಮ್ಯುನಿಸ್ಟ್ ಪಕ್ಷದ ವೈಪಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ದದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರ ಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯುನಿಸ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸಿತಾರಾಮ್ ಯಚೂರಿ, ಬೃಂದಾ ಕಾರಟ್ ಮುಂತಾದ ಬದ್ಧತೆಯುಳ್ಳ ನಾಯಕರಿದ್ದರೂ ಸಹ ಕಮ್ಯುನಿಸ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕೃತಿಯ ಜನರಂತೆ ಚಿಂತಿಸುತ್ತಿದ್ದಾರೆ. ಉಳ್ಳವರ ಈ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಅವರು ಮನಗಾಣಬೇಕಿದೆ.

ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ದಗೊಂಡಿರುವ ಮನಸ್ಸುಗಳು ಬೇಕು. ಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖ್ಯಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡು ಕಡೆಯಿಂದ ಸಿದ್ಧವಾಗಿರುವ ಮುಕ್ತ ಮನಸ್ಸುಗಳು ಮಾತ್ರ. ಇಂತಹ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೇ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ದವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಅಂತಹ ನೋವಿನ ಗಳಿಗೆಯಲ್ಲಿ ನಾವುಗಳು ಮೌನವಾಗಿ ಸಾಕ್ಷಿಗಳಾಗಬೇಕಾಗುತ್ತದೆ. ಅಂತಿಮವಾಗಿ ಇದು ಮಾನವೀಯತೆಗಾಗಿ ತುಡಿಯುವ ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯ ಜಗತ್ತು.


[ಕೊನೆಯ ಮಾತು :- ಪ್ರಿಯ ಓದುಗರೆ, ವರ್ತಮಾನ ಅಂತರ್ಜಾಲ ಪತ್ರಿಕೆಯಲ್ಲಿ ನಕ್ಸಲ್ ಕಥನದ ಸರಣಿ ಬರೆಯಲು ಅವಕಾಶ ಮಾಡಿಕೊಟ್ಟ ಪ್ರ್ರಿಯ ಮಿತ್ರ ರವಿ ಕೃಷ್ಣಾರೆಡ್ಡಿಯವರಿಗೆ ನನ್ನ ಧನ್ಯವಾದಗಳು. ಈ ಕಥನಕ್ಕೆ ಓದುಗ ಮಿತ್ರರು ತೋರಿದ ಪ್ರೀತಿ, ಪ್ರತಿಕ್ರಿಯೆ ಮತ್ತು ಆಸಕ್ತಿಯಿಂದಾಗಿ ನಾನು ಗಂಭೀರವಾಗಿ ಇಂತಹ ಅಧ್ಯಯನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ನಾನು ಕಳೆದ ಮುವ್ವತ್ತು ವರ್ಷಗಳಿಂದ ಹಲವು ಪ್ರಗತಿಪರ ಸಂಟನೆಗಳ ಜೊತೆ ಗುರುತಿಸಿಕೊಂಡಿದ್ದರೂ, ನಕ್ಸಲ್ ಚಳುವಳಿಯಿಂದ ಬಂದವನಲ್ಲ. ಕೆಲವು ರಾಜ್ಯಗಳಲ್ಲಿ ಪ್ರವಾಸ ಮಾಡಿ ಒರ್ವ ಪತ್ರಕರ್ತನಾಗಿ, ಸಂಶೋಧಕನಾಗಿ ನಡೆಸಿದ ಕ್ಷೇತ್ರ ಕಾರ್ಯ ಮತ್ತು ಮಾಜಿ ಹೋರಾಟಗಾರರ ಜೊತೆ ನಡೆಸಿದ ಚರ್ಚೆ ಮತ್ತು ಮಾತುಕತೆ, ಹಾಗೂ ಅವರು ನೀಡಿದ ಮಾಹಿತಿ ಮತ್ತು ಇತಿಹಾಸದ ದಾಖಲೆಗಳಿಂದ ಇಂತಹದ್ದೊಂದು ಸರಣಿ ಸಾಧ್ಯವಾಯಿತು. ನನ್ನ ಈ ಸರಣಿ ಕಥನದಲ್ಲಿ ಏನಾದರೂ ಕೊರತೆಯಿದ್ದರೆ, ಅಥವಾ ತಪ್ಪು ಮಾಹಿತಿಗಳಿದ್ದರೆ ನನ್ನ ಗಮನಕ್ಕೆ ತರಬೇಕಾಗಿ ವಿನಂತಿಸಿಕೊಳ್ಳತ್ತೇನೆ. ನನ್ನ ಇ-ಮೈಲ್ ವಿಳಾಸ : jagadishkoppa@gmail.com.

ಮುಂದಿ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನ ಪ್ರಸಿದ್ದ ಪ್ರಕಾಶನ ಸಂಸ್ಥೆಯಿಂದ “ಎಂದೂ ಮುಗಿಯದ ಯುದ್ದ” (ಭಾರತದ ನಕ್ಸಲ್ ಇತಿಹಾಸದ ಕಥನ) ಎಂಬ ಹೆಸರಿನಲ್ಲಿ ಪ್ರಕಟವಾಗುವ ಈ ಲೇಖನಗಳ ಸರಣಿಯ ಕೃತಿಯಲ್ಲಿ 1967 ರಿಂದ 1980 ರ ವರೆಗೆ ಜರುಗಿದ ಹೋರಾಟದ ಕಥನ ಮೊದಲ ಭಾಗದಲ್ಲಿ, ನಂತರ 1980 ರಿಂದ 2012 ರವರೆಗೆ ನಡೆದ ಹೋರಾಟ ಎರಡನೆ ಭಾಗದಲ್ಲಿ ಅಡಕವಾಗಿರುತ್ತದೆ. ಕೃತಿಯ ಕೊನೆಯ ಪುಟಗಳ ಅನುಬಂಧದ ವಿಭಾಗದಲ್ಲಿ ಈವರೆಗೆ ನಕ್ಸಲ್ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ನಕ್ಸಲ್ ಹುತಾತ್ಮ ನಾಯಕರ ವಿವರ ಮತ್ತು 1967 ರಿಂದ 2012 ರವರೆಗೆ ನಡೆದ ಪ್ರಮುಖ ಹಿಂಸಾಚಾರ ಘಟನೆಗಳು ಹಾಗೂ ನಕ್ಸಲ್ ಹೋರಾಟಕ್ಕಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ಹುಟ್ಟಿಕೊಂಡ ಸಂಘಟನೆಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆಸಕ್ತರು ಗಮನಿಸ ಬಹುದು. ಎಲ್ಲರಿಗೂ ನಮಸ್ಕಾರ. – ಡಾ. ಎನ್. ಜಗದೀಶ್ ಕೊಪ್ಪ]

(ಮುಗಿಯಿತು)

ಟಿಪ್ಪು ವಿ.ವಿ. ವಿವಾದ – ತಲೆ ಮಾಸಿದವರ ತಳಮಳಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಕೇಂದ್ರ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಉನ್ನತ ಶಿಕ್ಷಣಕ್ಕಾಗಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ ನಂತರ ಕರ್ನಾಟಕದ ಹಿಂದೂ ಮತೀಯವಾದಿಗಳು ಕುಂಡೆಗೆ ಬೆಂಕಿ ಬಿದ್ದವರಂತೆ ಕಿರುಚುತ್ತಾ ರಾಜ್ಯದ ಉದ್ದಗಲಕ್ಕು ಓಡಾಡುತ್ತಿದ್ದಾರೆ. ಇವರಿಗೆ ಮಠಾಧೀಶರೆಂಬ ಮತಿಹೀನರು ಮತ್ತು ಲೇಖಕ ಮತ್ತು ಸಂಶೋಧಕರೆಂಬ ತಲೆಮಾಸಿದ ಗಿರಾಕಿಗಳು ಹಾಗೂ ಇವರ ಪಾಲಿಗೆ ಬೊಗಳುವ ನಾಯಿಯಂತಿರುವ ಹಲವು ಮಾಧ್ಯಮಗಳ ಅಂಕಣಕಾರರು ಬೆಂಬಲವಾಗಿ ನಿಂತಿದ್ದಾರೆ.

ಈ ದೇಶದಲ್ಲಿ ಎಡಪಂಥೀಯ ಚಿಂತನೆಯ ಶಾಲೆಗಳಿಂದ ಬಂದ ಇತಿಹಾಸಕಾರರು ಬರೆದ ಚರಿತ್ರೆಗಳು ನಕಲಿ; ನಾವು ಬರೆದದ್ದು ಮಾತ್ರ ಅಪ್ಪಟ ಇತಿಹಾಸ ಎಂದು ನಂಬಿರುವ, ಹಾಗೂ ಜನರನ್ನು ನಂಬಿಸಲು ಹೊರಟಿರುವ ಈ ಮೂರ್ಖರು ತಾವು ಹೇಳುತ್ತಿರುವ ಸಂಗತಿಗಳನ್ನು ನನ್ನ ನೆಲವಾದ ಮಂಡ್ಯ ಜಿಲ್ಲೆಯ ಯಾವುದಾದರೂ ಹಳ್ಳಿಗೆ ಹೋಗಿ ದನ ಆಥವಾ ಕುರಿ ಕಾಯುವ ಒಬ್ಬ ವೃದ್ಧ ಅನಕ್ಷರಸ್ತನ ಬಳಿ ಹೋಗಿ ಹೇಳಬೇಕು, ಆತ ನಗಬಾರದ ಜಾಗದಲ್ಲಿ ಗೊಳ್ ಎಂದು ನಕ್ಕು ಬಿಡುತ್ತಾನೆ. ಏಕೆಂದರೆ ನನ್ನ ಜನ ಅಕ್ಷರ ಲೋಕದಿಂದ ದೂರ ಉಳಿದಿದ್ದರೂ, Tippuಕಳೆದ ನಾಲ್ಕು ಶತಮಾನಗಳಿಂದ ನನ್ನ ನೆಲದ ನೆಲದ ಜನ ಟಿಪ್ಪು ಸುಲ್ತಾನ್ ಮತ್ತು ಆತನ ಶೌರ್ಯ ಮತ್ತು ಪರಧರ್ಮ ಸಹಿಷ್ಣುತೆ ಕುರಿತಂತೆ ಬಾಯಿಂದ ಬಾಯಿಗೆ ಹರಿದು ಬಂದಿರುವ ಮೌಖಿಕ ಕಾವ್ಯ ಪ್ರಕಾರಗಳಲ್ಲಿ ಒಂದಾಗಿರುವ ಲಾವಣಿಯಿಂದ ಟಿಪ್ಪು ಸುಲ್ತಾನ್ ಬಗ್ಗೆ ಅಪಾರ ಜ್ಞಾನ ಮತ್ತು ತಿಳುವಳಿಕೆ ಸಂಪಾದಿಸಿದ್ದಾರೆ. ಚರಿತ್ರೆ ಸುಳ್ಳಾದರೂ ವಾಸ್ತವಿಕ ಘಟನೆಗಳ ಆಧಾರದ ಮೇಲೆ ಸೃಷ್ಟಿಯಾಗಿರುವ ಗಾದೆಗಳು ಮತ್ತು ಲಾವಣಿಗಳು ಭೂತಕಾಲದ ಬಗ್ಗೆ ಸುಳ್ಳು ಹೇಳುವುದಿಲ್ಲ. ಇವೊತ್ತಿಗೂ ಮಂಡ್ಯ ಜಿಲ್ಲೆಯಲ್ಲಿ ಒಂದು ಜನಪ್ರಿಯವಾದ ಬೈಗುಳವಿದೆ. ಏನೂ ಕೈಲಾಗದ ಸೋಮಾರಿ ಗಂಡಸನ್ನು “ಗಂಜಾಮ್‌ಗೆ ಹೆಣ ಹೊರೋಕೆ ಹೋಗು” ಎಂದು ಬೈಯ್ಯುವ ವಾಡಿಕೆಯಿದೆ. ತನ್ನ ಜೀವಮಾನದ ಬಹುತೇಕ ಸಮಯವನ್ನು ಬ್ರಿಟಿಷರೊಂದಿಗೆ ಯುದ್ಧ ಮಾಡುವುದರಲ್ಲಿ ಕಳೆದ ಟಿಪ್ಪುವಿನ ಹೋರಾಟ ಮತ್ತು ಜೀವ ಕಳೆದುಕೊಂಡ ಸಾವಿರಾರು ಸೈನಿಕ ಕಥನನವನ್ನು ಪರೋಕ್ಷವಾಗಿ ಬಿಂಬಿಸುವ ಬೈಗುಳವಿದು. (ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಸಮೀಪ ಇರುವ ಪ್ರದೇಶದಲ್ಲಿ ಗಂಜಾಂ ಎಂಬ ಗ್ರಾಮವಿದೆ.)

ಟಿಪ್ಪು ಸುಲ್ತಾನ್ ಒಬ್ಬ ಕೋಮುವಾದಿಯಾಗಿದ್ದ ಎಂದು ಬಿಂಬಿಸುವ ಈ ಮಹಾಶಯರು ಒಮ್ಮೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ ಮತ್ತು ಮೇಲುಕೋಟೆಯ ಯೋಗನರಸಿಂಹ ದೇವಾಲಯಕ್ಕೆ ಹೋಗಿ ಟಿಪ್ಪು ಕೊಟ್ಟಿರುವ ಒಡವೆಗಳು ಯಾವುವು ಹಾಗೂ ಶೃಂಗೇರಿಯ ಶಾರದಾ ದೇವಿಗೆ ನೀಡಿರುವ ಕಾಣಿಕೆಗಳು ಏನು, ಈ ದಾನ ಪತ್ರಗಳು ಯಾವ ಭಾಷೆಯಲ್ಲಿವೆ ಎಂಬುದನ್ನು ನೋಡಿ ಬರಲಿ. ಇಷ್ಟೆಲ್ಲಾ ಸುಳ್ಳು ಹೇಳುವ ಇವರು ಟಿಪ್ಪು ಸುಲ್ತಾನ್ ಆಸ್ಥಾನದಲ್ಲಿ ಸಲಹೆಗಾರರಾಗಿದ್ದವರು ದಿವಾನ್ ಪೂರ್ಣಯ್ಯ, ದೆಹಲಿಯ ಮೊಗಲ್ ಸುಲ್ತಾನ ಆಲಂ ಶಾ ಆಸ್ಥಾನಕ್ಕೆ ಟಿಪ್ಪು ಸುಲ್ತಾನ್ ರಾಯಭಾರಿ ಆಗಿ ನೇಮಕವಾದದ್ದು ಮಾಧವರಾವ್, ವಕೀಲರಾಗಿ ಸೇವೆ ಸಲ್ಲಿಸಿದ್ದು ಸಜ್ಜನರಾವ್, ಇವೆರೆಲ್ಲಾ ಹಿಂದೂ ಜನಾಂಗದ ಬ್ರಾಹಣರಾಗಿದ್ದರು ಎಂದು ತಿಳಿಯದಷ್ಟು ಅಜ್ಞಾನಿಗಳೆ? ಈ ಸತ್ಯ ಕರ್ನಾಟಕದಲ್ಲಿ ಯಾವುದೇ ಮುಸ್ಲಿಂ ಗೋರಿ ಕಂಡೊಡನೆ ಕಿಟಾರನೆ ಕಿರಿಚಿಕೊಳ್ಳುವ ಚಿದಾನಂದಮೂರ್ತಿಗೆ, ಭಾರತದ ಇತಿಹಾಸವನ್ನೆಲ್ಲಾ ಅರೆದು ಕುಡಿದು ಅದನ್ನು ಆಧಾರವಾಗಿ ಇಟ್ಟುಕೊಂಡು ಕಾದಂಬರಿ ಹೊಸೆಯುವ ಎಸ್ .ಎಲ್. ಬೈರಪ್ಪನವರಿಗೆ ಮತ್ತು ಈ ಇಬ್ಬರೂ ಪುರುಷೋತ್ತಮರಿಗೆ ಉತ್ತರ ಕೊಡಿ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಿರುವ, ನಮ್ಮ ಪೇಜಾವರ ಸ್ವಾಮಿಗೆ ಏಕೆ ಅರ್ಥವಾಗುವುದಿಲ್ಲ?

ಪ್ರಿಯ ಓದುಗರೆ, ನಿಮ್ಮಲ್ಲಿ ಕೆಲವರಿಗಾದರೂ ಶ್ರೀರಂಗಪಟ್ಟಣದ ಪರಿಚಯವಿದೆ ಎಂದು ಭಾವಿಸಿದ್ದೇನೆ. ಮುಂದೆ ನೀವು ಬೇಟಿ ನೀಡಿದಾಗ ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಾವೇರಿ ನದಿ ಶ್ರೀರಂಗಪಟ್ಟಣಕ್ಕೆ ಮೊದಲು ಎರಡು ಭಾಗವಾಗಿ ಹರಿದು ನಂತರ ಗಂಜಾಂ ಎಂಬ ಊರಿನ ಬಳಿ ಮತ್ತೇ ಸೇರುತ್ತದೆ. aerial_view_srirangapattanaಈ ಪ್ರದೇಶವನ್ನು ಸಂಗಮ ಎಂದು ಕರೆಯಲಾಗುತ್ತದೆ. ಒಂದು ರೀತಿಯಲ್ಲಿ ದ್ವೀಪದಂತಿರುವ ಶ್ರೀರಂಗಪಟ್ಟಣದ ಕೋಟೆಯ ಮುಖ್ಯಬಾಗಿಲು ಪೂರ್ವದಿಕ್ಕಿಗಿದೆ (ಈಗಿನ ಬಸ್ ನಿಲ್ದಾಣದ ಸಮೀಪ.) ಇನ್ನೊಂದು ಬಾಗಿಲು ದಕ್ಷಿಣ ಭಾಗಕ್ಕಿದ್ದು ಇದನ್ನು ಆನೆ ಬಾಗಿಲು ಎಂದು ಕರೆಯುತ್ತಾರೆ. ಸದಾ ಯುದ್ಧದಲ್ಲಿ ತೊಡಗಿರುತ್ತಿದ್ದ ಟಿಪ್ಪು, ಬ್ರಿಟೀಷರ ಅಂಜಿಕೆಯಿಂದ ಬಲಿಷ್ಟವಾದ ಕೋಟೆಯನ್ನು ಕಟ್ಟಿದ್ದ. ಈ ಎರಡು ಬಾಗಿಲು ಬಿಟ್ಟರೆ ಪಟ್ಟಣ ಪ್ರವೇಶಕ್ಕೆ ಬೇರೆ ಯಾವುದೇ ಅವಕಾಶವಿರಲಿಲ್ಲ. ಆದರೆ ಪ್ರತಿ ದಿನ ಶ್ರೀರಂಗನಾಥನ ದೇವಾಲಯಕ್ಕೆ ಮತ್ತು ದೇವಾಲಯದ ಕೂಗಳತೆಯಲ್ಲಿ ಉತ್ತರ ಭಾಗದ ಕೋಟೆಗೆ ಅಂಟಿಕೊಂಡಂತೆ ಇರುವ ಶ್ರೀರಾಮ ದೇವಸ್ಥಾನದ (ಟಿಪ್ಪು ಶವ ಸಿಕ್ಕ ಜಾಗದ ಬಳಿ ಇರುವ ದೇವಸ್ಥಾನ) ಪೂಜೆ ಪುನಸ್ಕಾರ ಮುಂತಾದ ಕಾರ್ಯಕ್ರಮಗಳಿಗೆ ಉತ್ತರ ಭಾಗದಲ್ಲಿ ಹರಿಯುವ ಕಾವೇರಿಯಿಂದ ನೀರು ತರಲು ಕೋಟೆಯಲ್ಲಿ ಎರಡು ವಿಶೇಷ ಬಾಗಿಲುಗಳನ್ನು ನಿರ್ಮಿಸಿದ್ದ. ಅವುಗಳು ಈಗಲೂ ಅಸ್ತಿತ್ವದಲ್ಲಿವೆ. ಅವನು ಹಿಂದೂ ವಿರೋಧಿಯಾಗಿದ್ದರೆ ಅತಿಕ್ರಮಣದ ಭಯದ ನಡುವೆಯೂ ಬಾಗಿಲು ತೆರೆಯಲು ಸಾಧ್ಯವಿತ್ತೆ? ಶತ್ರುಗಳು ನದಿಯನ್ನು ಈಜಿ ಕೋಟೆ ಪ್ರವೇಶಿಸುವ ಸಾಧ್ಯತೆಗಳಿರಲಿಲ್ಲವೆ? ಟಿಪ್ಪು ಸುಲ್ತಾನನ ಮೂಲ ಅರಮನೆ (ಕುಸಿದ ಹೋಗಿರುವ ಅವಶೇಷಗಳು) ಶ್ರೀರಂಗನಾಥನ ದೇವಸ್ಥಾನಕ್ಕೆ ಅಭಿಮುಖವಾಗಿದೆ. ಅವನು ಪಕ್ಕಾ ಮುಸ್ಲಿಂ ದೊರೆಯಾಗಿದ್ದರೇ ತನ್ನ ಅರಮನೆಯ ಮುಂದೆ ಶ್ರೀರಂಗನಾಥನ ಹಿಂದೂ ದೇಗುಲವಿರಲು ಸಾಧ್ಯವಿತ್ತೆ? ಇಂತಹ ಇತಿಹಾಸದ ಸತ್ಯಗಳನ್ನು ಏಕೆ ಮರೆ ಮಾಚುತ್ತಿದ್ದಾರೆ?

ಕನ್ನಡದ ದಿನಪತ್ರಿಕೆಯಲ್ಲಿ ಯಾವನೋ ಒಬ್ಬ ಆಸಾಮಿ ತನ್ನ ಹೆಸರಿನ ಮುಂದೆ “ಬ್ಲಾಗಿಗ, ಸಾಪ್ಟ್‌ವೇರ್ ತಜ್ಞ” ಎಂದು ವಿಶೇಷಣಗಳನ್ನು ಸೇರಿಸಿಕೊಂಡು ಅಂಕಣ ಬರೆಯುತ್ತಿದ್ದಾನೆ. ಅವನ ಇತಿಹಾಸ ಪ್ರಜ್ಞೆ ಮತ್ತು ಅವನು ಬರೆಯುತ್ತಿರುವ ವಿಷಯ ವೈಖರಿಗಳನ್ನು ಗಮನಿಸಿದರೆ, ಈತ ತನ್ನ ಹೆಸರಿನ ಮುಂದೆ “ಅರಬೆಂದ ಮಡಕೆ” ಎಂಬ ಅರ್ಹತೆಯನ್ನು ಸಹ ಸೇರಿಸಿಕೊಳ್ಳುವುದು ಒಳಿತು.

ಯಾಕೆಂದರೆ, ಟಿಪ್ಪು ಸುಲ್ತಾನ್ ಮತ್ತು ಅವನ ತಂದೆ ಹೈದರ್‌ ಆಲಿ ಬೆಂಗಳೂರು ಸಮೀಪದ ದೇವನಳ್ಳಿಯಲ್ಲಿ ಜನಿಸಿದ ಕನ್ನಡಿಗ ಮುಸ್ಲಿಂರು ಎಂಬ ಜ್ಞಾನವಿಲ್ಲದ ಈ ಅವಿವೇಕಿ, ಟಿಪ್ಪು ಆಳ್ವಿಕೆಯಲ್ಲಿ ಕರ್ನಾಟಕದಲ್ಲಿ ಪರ್ಷಿಯನ್ ಭಾಷೆ ಜಾರಿಗೆ ಬಂತು ಎಂದು ಬರೆಯುತ್ತಾನೆ. ನನ್ನೂರಾದ ಕೊಪ್ಪ ಗ್ರಾಮದಲ್ಲಿ “ಮದ್ದನಹಟ್ಟಿ ನಂಜೇಗೌಡರ ಕುಟುಂಬ” ಎಂಬ ನಮ್ಮ ಮನೆತನದಲ್ಲಿ ನನ್ನ ತಾತ, ಮುತ್ತಾತ ಎಲ್ಲರೂ ಆಗಿನ ಕಾಲದ ಮಠಗಳಲ್ಲಿ ಮರಳಿನ ಮೇಲೆ ಕನ್ನಡ ಅಕ್ಷರ ಕಲಿತು ಕುಮಾರವ್ಯಾಸನ ಮಹಾಭಾರತ ಮತ್ತು ರಾಮಾಯಣ ಕಾವ್ಯಗಳನ್ನು ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳ ಸಮಯದಲ್ಲಿ ವಾಚನ ಮಾಡುತ್ತಿದ್ದರು. 1966 ರಲ್ಲಿ ಹತ್ತು ವರ್ಷದವನಿರುವಾಗ ನನ್ನ ಚಿಕ್ಕತಾತ ಪುಟ್ಟೀರೆಗೌಡ ನನಗೆ ಅವುಗಳನ್ನು ಕಂಠ ಪಾಠ ಮಾಡಿಸುತ್ತಿದ್ದ. ಟಿಪ್ಪು ಪರ್ಷಿಯನ್ ಭಾಷೆ ಜಾರಿಗೆ ತಂದಿದ್ದರೆ ನನ್ನ ತಾತ ಮತ್ತು ಅವನ ಅಪ್ಪ, ಅಜ್ಜ ಇವರೆಲ್ಲಾ ಪರ್ಷಿಯನ್ ಭಾಷೆ ಕಲಿಯಬೇಕಿತ್ತಲ್ಲವೆ? ಕನ್ನಡವನ್ನು ಏಕೆ ಕಲಿತರು? ಕರ್ನಾಟಕದಲ್ಲಿ ಅತ್ಯಧಿಕ ಕನ್ನಡ ಭಾಷೆಯನ್ನಾಡುವ ಜಿಲ್ಲೆ ಮಂಡ್ಯ ಜಿಲ್ಲೆ ( ಶೇಕಡ 97 ರಷ್ಟು.) ಮಂಡ್ಯ ಟಿಪ್ಪು ಆಳಿದ ನೆಲ. ಇವೊತ್ತಿಗೂ ಕಂದಾಯ ಇಲಾಖೆಯಲ್ಲಿರುವ ಅಮಲ್ದಾರ್, ಶಿರಸ್ತೆದಾರ್, ತಹಶಿಲ್ದಾರ್, ಖಾತೆ, ಪಹಣಿ, ತಲಾಟಿ, ಕಛೇರಿ, ಇಂತಹ ಶಬ್ಧಗಳು ಮೊಗಲರ ಆಳ್ವಿಕೆಯಿಂದಾಗಿ ಮತ್ತು ಹಿಂದಿ, ಉರ್ದು, ಮರಾಠಿ ಭಾಷೆಗಳ ಕೊಡುಕೊಳ್ಳುವಿಕೆಗಳಿಂದಾಗಿ ಜಾರಿಗೆ ಬಂದ ಶಬ್ದಗಳು. ಡಾ. ಹಂಪ ನಾಗರಾಜಯ್ಯನವರು ನಲವತ್ತೈದು ವರ್ಷಗಳ ಹಿಂದೆ ಪಿ.ಹೆಚ್.ಡಿ. ಸಂಶೋಧನೆಗಾಗಿ ಆರಿಸಿಕೊಂಡ ವಿಷಯ, “ದ್ರಾವಿಡ ಭಾಷಾ ವಿಜ್ಞಾನ”. ಈ ಸಂಶೋಧನಾ ಕೃತಿಯಲ್ಲಿ ಕನ್ನಡ ಭಾಷೆಗೆ ಭಾರತೀಯ ಇತರೆ ಭಾಷೆಗಳ ಜೊತೆ ಇರಬಹುದಾದ ಸಂಬಂಧ ಅದ್ಭುತವಾಗಿ ವಿವರಿಸಿದ್ದಾರೆ. ಈ ಅಂಕಣಕೋರನಿಗೆ ಭಾರತೀಯ ಭಾಷೆಗಳ ಬಗ್ಗೆ ಜ್ಞಾನವಿದ್ದರೆ ಟಿಪ್ಪುವಿನಿಂದಾಗಿ ಮುಸ್ಲಿಮರು ಉರ್ದು ಭಾಷೆಯನ್ನಾಡುತ್ತಿದ್ದಾರೆ ಎಂದು ಬರೆಯುತ್ತಿರಲಿಲ್ಲ. ಕರ್ನಾಟಕಕ್ಕೆ 16 ನೇ ಶತಮಾನದಲ್ಲಿ ಆದಿಲ್ ಶಾಹಿ ಆಡಳಿತದಲ್ಲಿ ದಖಃನಿ ಎಂದು ಕರೆಸಿಕೊಳ್ಳುತ್ತಿದ್ದ ಉರ್ದು ನೆರೆಯ ಆಂಧ್ರದ ಮೂಲಕ ಕನ್ನಡದ ನೆಲಕ್ಕೆ ಕಾಲಿಟ್ಟಿತ್ತು.

ಹಾಗೆಯೇ, ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನ ಹೈದರ್ ಆಲಿ ಮತ್ತು ಟಿಪ್ಪು ಇವರ ಕೊಡುಗೆ ಎಂಬುದನ್ನು ಹಿಂದೂ ಧರ್ಮದ ಗುತ್ತಿಗೆ ಹಿಡಿದ ಇವರೆಲ್ಲಾ ಏಕೆ ಮುಚ್ಚಿಡುತ್ತಿದ್ದಾರೆ?

ಭಾರತದ ಪ್ರಖ್ಯಾತ ಇತಿಹಾಸ ತಜ್ಞರಲ್ಲಿ ಕೆ.ಎನ್. ಪಣಿಕ್ಕರ್ ಮುಖ್ಯರು. ಇವರು ಜಗತ್ತಿನ 56 ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸಮಾಡಿದವರು. ಇವರು ಭಾರತದ ಇತಿಹಾಸ ಕುರಿತ ಬರೆದ ಲೇಖನಗಳು “ದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಪತ್ರಿಕೆಯಲ್ಲಿ ಪ್ರಕಟವಾಗಿವೆ. panikkar-bookನಾಲ್ಕೈದು ವರ್ಷಗಳ ಹಿಂದೆ  ಆಕ್ಷ್‌ಪರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆ ಈ ಲೇಖನಗಳ ಸಂಕಲನವನ್ನು “Colonialism, Culture, and Resistance” ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಈ ಕೃತಿಯಲ್ಲಿ ಟಿಪ್ಪು ಸುಲ್ತಾನ್ ಕುರಿತು ಅಯ್ಯಪ್ಪ ಪಣಿಕ್ಕರ್ ಹೀಗೆ ಬರೆದಿದ್ದಾರೆ:

“The Mysoreans, the Marathas, and the Sikhs, who had fairly large army at their command, fought against the British independently and were worsted. The others Like rulers of Rajputana, the Nizam, Nawab of Carnatic, and others preferred to function as subordinate allies of the British.
“The Indians had larger infantry and superior on the side, as demonstrated by Mysoreans and the Marathas, but were unable to match the Europeans in artillery which proved to be decisive. By the time the Indian rulers realized this, it was too late to acquire the necessary resources and skills, as in the case of Tipu Sultan, who initiated rather desperate attempts to modernize the state institutaion, including the army, by acquiring scientific knowledge and technological skills from the French.”

ಟಿಪ್ಪು ಸುಲ್ತಾನ್ ಆಧುನಿಕ ತಂತ್ರಜ್ಞಾನಕ್ಕೆ ಎಷ್ಟೊಂದು ಕಾಳಜಿ ವಹಿಸಿದ್ದ ಮತ್ತು ಭಾರತದಲ್ಲಿ ಬ್ರಿಟೀಷರ ವಿರುದ್ದ ಎಷ್ಟು ಕಠಿಣವಾಗಿದ್ದ ಎಂಬುದಕ್ಕೆ ಈ ಮೇಲಿನ ವಾಖ್ಯೆಗಳು ಸಾಕ್ಷಿಯಾಗಿವೆ.

ಭಾರತದ ಇತಿಹಾಸದಲ್ಲಿ ಫಿರಂಗಿಗಳನ್ನು ಆಧುನಿಕ ಪ್ರೆಂಚ್ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿದ ಮೊದಲ ದೊರೆ ಅವನು. ಚೀನಾದಿಂದ ರೇಷ್ಮೆ ಬೆಳೆಯನ್ನು ತಂದು ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಅವನದು. (ಈಗಲೂ ಚನ್ನಪಟ್ಟಣದಲ್ಲಿ ರೇಷ್ಮೆ ಇಲಾಖೆಯ ಆರು ಎಕರೆ ತೋಟಕ್ಕೆ ಟಿಪ್ಪುವಿನ ಹೆಸರಿಡಲಾಗಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತೋಟದ ಪಕ್ಕ ರೈಲ್ವೆ ಹಳಿ ಹಾದು ಹೋಗಿದೆ. ಆಸಕ್ತರು ಗಮನಿಸಬಹುದು.) ಸಕ್ಕರೆ ತಂತ್ರಜ್ಞಾನದ ಬಗ್ಗೆ ಅವನಿಗೆ ಆಸಕ್ತಿ ಇತ್ತು ಎಂಬುದಕ್ಕೆ ಮೈಸೂರಿನಿಂದ ಕೆ.ಆರ್.ಎಸ್. ಜಲಾಶಯಕ್ಕೆ ಹೋಗುವ ಮಾರ್ಗದಲ್ಲಿ ಪಾಲಹಳ್ಳಿ ಎಂಬ ಒಂದು ಊರಿದೆ. ಆ ಊರಿನ ಬತ್ತದ ಗದ್ದೆಗಳಲ್ಲಿ ಟಿಪ್ಪು ಸ್ಥಾಪಿಸಿದ್ದ ಸಕ್ಕರೆ ಕಾರ್ಖಾನೆಯ ಕಟ್ಟಡಗಳ ಅವಶೇಷಗಳಿವೆ.

ನಮ್ಮ ಕಣ್ಣೆದುರಿಗೆ ಇಷ್ಟೆಲ್ಲಾ ಸಾಕ್ಷಾಧಾರಗಳಿರುವಾಗ ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರ ದ್ರೋಹಿ, ಒಬ್ಬ ಮತಾಂಧ ಎಂದು ಬೊಬ್ಬೆ ಹಾಕುವವರನ್ನು ನಾವು ಏನೆಂದು ಕರೆಯಬೇಕು?

1799 ರ ಮೇ 4 ರಂದು ನಾಲ್ಕನೇ ಮೈಸೂರು ಯುದ್ದದಲ್ಲಿ ಟಿಪ್ಪು ಮಡಿದಾಗ ಅವನ ಅರಮನೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡ ಬ್ರಿಟೀಷರು ಅವುಗಳನ್ನು ಈಸ್ಟ್ ಇಂಡಿಯಾ ಕಂಪನಿಯ ಕಚೇರಿಯಿದ್ದ ಕೊಲ್ಕತ್ತ ನಗರಕ್ಕೆ ಕೊಡೊಯ್ದರು. ಟಿಪ್ಪು ಯುದ್ದದಲ್ಲಿ ಮಡಿದಾಗ ಓರ್ವ ಬ್ರಿಟಿಷ್ ಅಧಿಕಾರಿ ಇನ್ನು ಮುಂದೆ ಭಾರತ ನಮ್ಮದಾಯಿತು ಎಂದು ಘೋಷಿಸಿದ ಅಧಿಕೃತ ದಾಖಲೆಗಳಿವೆ. ಬ್ರಿಟೀಷರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಎಷ್ಟೊಂದು ಭಯವಿತ್ತು ಎಂಬುದಕ್ಕೆ ಈಗ ಕೊಲ್ಕತ್ತ ನಗರದಲ್ಲಿರುವ ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಸಾಕ್ಷಾಧಾರವಿದೆ. kolkata-victoria-memorial1799 ರಲ್ಲಿ ಟಿಪ್ಪು ಮಡಿದನಂತರ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಟೀಷರು 1802 ರಲ್ಲಿ ಸಿದ್ದಪಡಿಸಿರುವ 10 ಅಡಿ ಅಗಲ ಮತ್ತು 15 ಅಡಿ ಉದ್ದ ಮೇಜಿನ ಮೇಲೆ ಶ್ರೀರಂಗಪಟ್ಟಣದ ಪ್ರತಿಕೃತಿಯನ್ನು ನಾವು ಇಂದಿಗೂ ನೋಡಬಹುದು. ಇಷ್ಟೆಲ್ಲಾ ಸಾಹಸ ಮೆರೆದ ವ್ಯಕ್ತಿಯನ್ನು ಅನುಮಾನದಿಂದ ನೊಡುವ ಮನಸ್ಸುಗಳಿಗೆ, ಅಪಮಾನಿಸುತ್ತಿರುವ ವಿದ್ವಾಂಸರೆಂಬ ಆರೋಪ ಹೊತ್ತಿರುವವರಿಗೆ ನಾವೀಗ ಕೇಳಲೇ ಬೇಕಿದೆ, “ನೀವು ಹೊಟ್ಟೆಗೆ ಏನು ತಿನ್ನುತ್ತೀರಿ?” ಎಂದು.

ಪ್ರಜಾ ಸಮರ – 18 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕಕ್ಕೆ ನಕ್ಸಲ್ ಚಳುವಳಿ ಕಾಲಿಟ್ಟು ಒಂದು ದಶಕ ಕಳೆಯಿತು. ಹಲವು ಕನಸು ಮತ್ತು ಆದರ್ಶಗಳನ್ನು ನಕ್ಸಲ್ ಚಳುವಳಿಯ ಜೊತೆ ಹೊತ್ತು ತಂದ ಸಾಕೇತ್ ರಾಜನ್ ಈಗ ನಮ್ಮ ನಡುವೆ ಇಲ್ಲ. ಸಾಕೇತ್ ನಂತರ ತಂಡವನ್ನು ಮುನ್ನೆಡೆಸುತ್ತಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೂಡ ಈಗ ಹೋರಾಟವನ್ನು ತೊರೆದು ಹೊರ ಬಂದಿದ್ದಾರೆ, ಅಲ್ಲದೇ ತಮ್ಮ 25 ವರ್ಷಗಳ ನಕ್ಸಲ್ ಹೋರಾಟದ ಹಿನ್ನೆಲೆಯಲ್ಲಿ “ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ” ಎಂಬ ಕೃತಿಯನ್ನು ಹೊರತಂದಿದ್ದು, ಈ ಕೃತಿಯಲ್ಲಿ ಭಾರತದ ನಕ್ಸಲ್ ಹೋರಾಟವನ್ನು ವಿಮರ್ಶೆಗೆ ಒಡ್ಡಿದ್ದಾರೆ. ಆನಂತರ ನಾಯಕತ್ವ ವಹಿಸಿದ್ದ ಕೃಷ್ಣಮೂರ್ತಿ ಅನಾರೋಗ್ಯಕ್ಕೆ ತುತ್ತಾದರೆ, ನಂತರ ವ್ಯಕ್ತಿ ವಿಕ್ರಮ್ ಗೌಡ ಪೊಲೀಸರಿಗೆ ಬಲಿಯಾಗಿದ್ದಾನೆ.

ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಪೊಲೀಸರು ಮತ್ತು ನಕ್ಸಲರ ನಡುವಿನ ಸಂಘರ್ಷದಲ್ಲಿ 25 ಕ್ಕೂ ಹೆಚ್ಚು ಮಂದಿಯಷ್ಟು ಹತ್ಯೆಯಾಗಿದ್ದಾರೆ. ಇವರಲ್ಲಿ ಇಬ್ಬರು ಪೊಲೀಸ್ ಮಾಹಿತಿದಾರರು (ಶೇಷಯ್ಯ ಮತ್ತು ಸುಧಾಕರಗೌಡ ?) ಹಾಗೂ ಕಾಂಗ್ರೆಸ್ ಮುಖಂಡ ವೆಂಕಟೇಶ್ ನಕ್ಸಲರಿಂದ ಹತ್ಯೆಯಾಗಿದ್ದಾರೆ. ಇಬ್ಬರು ಗಿರಿಜನ ದಂಪತಿಗಳು (ರಾಮೇಗೌಡ ಮತ್ತು ಕಾವೇರಮ್ಮ) ಪೊಲೀಸರು ಮತ್ತು ನಕ್ಸಲರ ನಡುವಿನ ಗುಂಡಿನ ದಾಳಿಯಲ್ಲಿ ಬಲಿಯಾದ ಅಮಾಯಕರು. ಸಾಕೇತ್ ರಾಜನ್, ಶಿವಲಿಂಗು, ಸುಂದರೇಶ್, ವಿಕ್ರಮ್ ಗೌಡ, ವಸಂತ್ ಗೌಡ, ನಾರವಿ ದಿವಾಕರ್, ಅಜಿತ್ ಕುಸುಬಿ, ಉಮೇಶ್, ಹಾಜಿಮಾ, ಪಾರ್ವತಿ, ಗೌತಮ್ ಪರಮೇಶ್ವರ್, ಎಲ್ಲಪ್ಪ, ಸೇರಿದಂತೆ ಒಟ್ಟು ಹದಿನೈದು ಮಂದಿ ಶಂಕಿತ ನಕ್ಸಲರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ನಕ್ಸಲರ ಗುಂಡಿಗೆ ಅಸಿಸ್ಟೆಂಟ್ ಪೊಲೀಸ್‌ ಇನ್ಸ್‌ಪ್ಪೆಕ್ಟರ್ ವೆಂಕಟೇಶ್ ಮತ್ತು ಪೇದೆ ಗುರುಪ್ರಸಾದ್ ಹಾಗೂ ಗುಂಡಿನ ಚಕಮಕಿ ವೇಳೆ ಪೊಲೀಸರ ಗುಂಡು ತಗುಲಿದ ಮಹಾದೇವ ಮಾನೆ ಎಂಬ ಪೇದೆಯೂ ಸೇರಿದಂತೆ (ಪಶ್ಚಿಮಘಟ್ಟದ ಅರಣ್ಯದಲ್ಲಿ) ಒಂಬತ್ತು ಮಂದಿ ಪೊಲೀಸರು ಹತರಾಗಿದ್ದಾರೆ. ಇವರಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಆರು ಪೊಲೀಸರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಮನಹಳ್ಳಿಯಲ್ಲಿ ಹತರಾದರು. ಇವರ ಜೊತೆ ಓರ್ವ ಬಸ್ ಕ್ಲೀನರ್ ಕೂಡ ನಕ್ಸಲರ ಗುಂಡಿಗೆ ಬಲಿಯಾದ.

ಹತ್ತು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಅರಣ್ಯ ರಕ್ಷಣೆ ಮತ್ತು ಕುದುರೆ ಮುಖ ಅಭಯಾರಣ್ಯ ಯೋಜನೆಯಿಂದ ನೆಲೆ ಕಳೆದುಕೊಳ್ಳುತ್ತಿರುವ ಸ್ಥಳೀಯ ಬುಡಕಟ್ಟು western ghatsಜನರಿಗೆ ನ್ಯಾಯ ಕೊಡಿಸಲು ಪಶ್ಚಿಮ ಘಟ್ಟದ ಅರಣ್ಯಕ್ಕೆ ನಕ್ಸಲರು ಕಾಲಿಟ್ಟ ನಂತರ ಅಭಿವೃದ್ಧಿಗಿಂತ ಅನಾಹುತಕ್ಕೆ ದಾರಿಯಾಯಿತೆಂದು ಹೇಳಬಹುದು. ಹೆಚ್ಚು ಮಾವೋವಾದಿಗಳು ಪಶ್ಚಿಮಘಟ್ಟಕ್ಕೆ ಕಾಲಿಡುವ ಮುನ್ನವೇ ಅನೇಕ ಜನಪರ ಸಂಘಟನೆಗಳು ಮತ್ತು ಪರಿಸರವಾದಿಗಳು ಈ ಸಮಸ್ಯೆಯನ್ನು ಕೈಗೆತ್ತಿಕೊಂಡು ಹೋರಾಡುತ್ತಿದ್ದರು. ಇವರಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮುಖ್ಯರಾದವರು. ನಕ್ಸಲರು ಈ ಪ್ರದೇಶಕ್ಕೆ ಬಂದ ನಂತರ ಎಲ್ಲರನ್ನೂ ನಕ್ಸಲರಂತೆ ಭಾವಿಸುವ, ಕಾಣುವ ಮನೋಭಾವವನ್ನು ಕರ್ನಾಟಕ ಪೊಲೀಸರು ಬೆಳಸಿಕೊಂಡರು. ಇದರಿಂದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಹೋರಾಟ ನಡೆಸುತ್ತಿದ್ದ ಹೋರಾಟಗಾರರಿಗೆ ತೀವ್ರ ಹಿನ್ನಡೆಯಾಯಿತು.

ಅರಣ್ಯದ ಆದಿವಾಸಿಗಳ ಹಿತ ಕಾಪಾಡಲು ಬಂದ ನಕ್ಸಲರು ಇಂದು ಅರಣ್ಯವಾಸಿಗಳ ಹಿತ ಕಾಪಾಡುವುದಿರಲಿ, ತಮ್ಮ ಹಿತ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಇವರು ನಿರೀಕ್ಷೆ ಮಾಡಿದಷ್ಟು ಪ್ರೋತ್ಸಾಹ ಸ್ಥಳಿಯರಿಂದ ಸಿಗಲು ಸಾಧ್ಯವಾಗದೇ ಅಕ್ಷರಶಃ ಅತಂತ್ರರಾಗಿದ್ದಾರೆ. ಇದರ ಜೊತೆಯಲ್ಲೇ ಪಶ್ಚಿಮ ಘಟ್ಟದ ಚಿಕ್ಕಮಗಳೂರು, ಮಂಗಳೂರು, ಉಡುಪಿ, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅರಣ್ಯದಂಚಿನಲ್ಲಿ ಬದುಕುತ್ತಿರುವ ಬಡಜನತೆಯನ್ನು ಆತಂಕದ ಮಡುವಿಗೆ ನೂಕಿದ್ದಾರೆ. ಈ ಪ್ರದೇಶಗಳಲ್ಲಿ ಒಬ್ಬ ಸಾಮಾನ್ಯ ಬಡವ ಸ್ಥಳಿಯ ದಿನಸಿ ಅಂಗಡಿಗೆ ಹೋಗಿ ಐದು ಕೆ.ಜಿ. ಅಕ್ಕಿ ಅಥವಾ ಒಂದು ಕೆ.ಜಿ. ಸಕ್ಕರೆ ಕೊಂಡರೆ, ಇಲ್ಲವೇ ಅರ್ಧ ಕೆ.ಜಿ. ಚಹಾ ಪುಡಿ ಖರೀದಿ ಮಾಡಿದರೆ, ತನ್ನ ಮನೆಗೆ ಹಿಂತಿರುಗುವ ದಾರಿಯಲ್ಲಿ ಅಥವಾ ಬಸ್‌ನಲ್ಲಿ ಎದುರಾಗುವ ಗುಪ್ತ ದಳದ ಪೊಲೀಸರಿಂದ ನೂರಾರು ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಸಮರ್ಪಕ ಉತ್ತರ ನೀಡದಿದ್ದರೆ ನಕ್ಸಲರ ಬೆಂಬಲಿಗ ಎಂಬ ಆರೋಪದಡಿ ಪೊಲೀಸರ ಕಿರುಕುಳ ಅನುಭವಿಸಬೇಕಾಗಿದೆ.‍

ಕರ್ನಾಟಕದ ಅರಣ್ಯದಲ್ಲಿ ಹೋರಾಡುತ್ತಿರುವ ಅಥವಾ ಇರಬಹುದಾದ ಇಪ್ಪತ್ತು ಮಂದಿ ನಕ್ಸಲರಲ್ಲಿ ವಿಚಾರಧಾರೆ ಹಿನ್ನೆಲೆ ಇರುವ ವ್ಯಕ್ತಿಗಳು ತೀರಾ ಕಡಿಮೆ. ಸಾಕೇತ್ ರಾಜನ್ ದಾಳಿಯ ಸಂದರ್ಭದಲ್ಲಿ ಕಾಲಿಗೆ ಗುಂಡು ತಗುಲಿ ಅಪಾಯದಿಂದ ಪಾರಾಗಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೆಲವು ಸದಸ್ಯರ ಜೊತೆ ಹೋರಾಟ ತೊರೆದು ಹೊರಬಂದ ನಂತರ ಈಗನ ಹೋರಾಟಗಾರರಲ್ಲಿ ಸೈದ್ಧಾಂತಿಕ ನಿಲುವುಗಳು ಇದ್ದಂತಿಲ್ಲ. ಸಾಕೇತ್ ನಿಧನದ ನಂತರ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಚುರುಕುರಿ ರಾಜ್‌ಕುಮಾರ್ ನೇತೃತ್ವದಲ್ಲಿ 2007 ರಲ್ಲಿ ನಡೆದ ಗುಪ್ತ ಸಭೆಯಲ್ಲಿ ಹೋರಾಟ ಮುನ್ನೆಡೆಸುವ ಕಾರ್ಯ ವಿಧಾನದ ಬಗ್ಗೆ ತೀವ್ರ ಚರ್ಚೆಯಾಯಿತು. ಕರ್ನಾಟಕದಲ್ಲಿ ಮೂರು ತಂಡಗಳಾಗಿ (ನೇತ್ರಾವತಿ, ಶರಾವತಿ ಮತ್ತು ತುಂಗಭದಾ) ಕ್ರಿಯಾಶೀಲವಾಗಿದ್ದ ಕೆಲವರು ಸಮಾಜದ ಅನುಕಂಪವಿಲ್ಲದೆ ಯಾವುದೇ ಹೋರಾಟ ವ್ಯರ್ಥ ಎಂಬ ವಾದವನ್ನು ಮುಂದಿಟ್ಟು ನಗರ ಪ್ರದೇಶಗಳಲ್ಲಿದ್ದು ಯುವ ವಿದ್ಯಾವಂತ ಯುವಕರನ್ನು ಚಳುವಳಿಗೆ ಸೆಳೆಯಬೇಕು ಎಂಬ ತಮ್ಮ ಯೋಜನೆಯನ್ನು ಮುಂದಿಟ್ಟರು. ಆದರೆ ಕೆಲವರು ಇದನ್ನು ವಿರೋಧಿಸಿ ಗೆರಿಲ್ಲಾ ತಂತ್ರದ ಯುದ್ದ ಮಾದರಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹಠ ಹಿಡಿದಾಗ ಅನಿವಾರ್ಯವಾಗಿ ಕೆಲವು ಸುಧಾರಣಾವಾದಿಗಳು 2007 ರಲ್ಲಿ ಹೋರಾಟ ತೊರೆದು ಹೊರಬಂದರು. 1980 ರಿಂದಲೂ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಅಜಾದ್ ಅಲಿಯಾಸ್ ಚುರುಕುರಿ ರಾಜ್‌ಕುಮಾರ್ 2010 ರವರೆಗೆ ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ಗುಪ್ತವಾಗಿ ಬೇಟಿ ನೀಡಿ ನಕ್ಸಲರಿಗೆ ಮಾರ್ಗದರ್ಶನದ ಜೊತೆಗೆ ಆರ್ಥಿಕ ನೆರವು ನೀಡಿ ಹೋಗುತ್ತಿದ್ದರು.

ಅಜಾದ್ ಅಲಿಯಾಸ್ ಚುರುಕುರಿ ರಾಜಕುಮಾರ್ 1952 ರಲ್ಲಿ ಹುಟ್ಟಿದ್ದು, ಆಂಧ್ರದ ಕೃಷ್ಣ ಜಿಲ್ಲೆಯಿಂದ ಬಂದವರು. ಭಾರತದ ಮಾವೋವಾದಿ ನಕ್ಸಲ್ ಚಳುವಳಿಯಲ್ಲಿ ಮುಖ್ಯನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡು, ಕೇಂದ್ರ ಪಾಲಿಟ್‌ಬ್ಯೂರೊ ಸದಸ್ಯರಾಗಿ ಮತ್ತು ಸಂಘಟನೆಯ ವಕ್ತಾರರಾಗಿ ನಿರ್ವಹಿಸುತ್ತಿದ್ದರು. ಆಂದ್ರದ ಜಿಲ್ಲಾ ಕೇಂದ್ರವಾದ ವಾರಂಗಲ್ ಪಟ್ಟಣದ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಎಂಬ ಪ್ರತಿಷ್ಟಿತ ಕಾಲೇಜಿನಿಂದ ಇಂಜಿನಿಯರಿಂಗ್‌ನಲ್ಲಿ ಎಂ.ಟೆಕ್. ಪದವಿ ಪಡೆದು ಪೀಪಲ್ಸ್ ವಾರ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು. 1975 ಮತ್ತು 1978 ರಲ್ಲಿ ಆಂಧ್ರ ಪೊಲೀಸರಿಂದ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಹೊರಬಂದು ತಲೆತಪ್ಪಿಸಿಕೊಂಡಿದ್ದರು. ಆಂಧ್ರ ಸರ್ಕಾರ ಅಜಾದ್ ಸುಳಿವೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಕರ್ನಾಟಕದ ಸಾಕೇತ್ ರಾಜನ್ ಮತ್ತು ಸಿರಿಮನೆ ನಾಗರಾಜ್ ಹಾಗೂ ರಾಯಚೂರು ಜಿಲ್ಲೆ ಕಾರ್ಯಕತರು ನಕ್ಸಲ್ ಸಂಘಟನೆಗೆ ಸೇರುವಲ್ಲಿ ಅಜಾದ್ ಪ್ರಭಾವವಿತ್ತು. ಅಂತಿಮವಾಗಿ 2010 ರ ಜೂನ್ ಒಂದರಂದು ನೆರೆಯ ಮಹಾರಾಷ್ಟ್ರದಲ್ಲಿ ಅಜಾದ್ ಮತ್ತು ಜೊತೆಗಿದ್ದ ಹೇಮಚಂದ್ರ ಪಾಂಡೆ ಎಂಬ ಯುವ ಪತ್ರಕರ್ತನನ್ನು ಬಂಧಿಸಿದ ಆಂಧ್ರ ಪೊಲೀಸರು ಮಾರನೇ ದಿನ ನಸುಕಿನ ಜಾವ ಅಂದ್ರದ ಗಡಿ ಜಿಲ್ಲೆಯಾದ ಅದಿಲಾಬಾದ್ ಅರಣ್ಯಕ್ಕೆ ಕರೆತಂದು ಇಬ್ಬರನ್ನು ಗುಂಡಿಟ್ಟು ಕೊಂದರು. (ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ಆಂಧ್ರ ಪೊಲೀಸರ ವಿರುದ್ದ ದೂರು ದಾಖಲಾಗಿದೆ.) ಅಜಾದ್ ನಿಧನಾ ನಂತರ ಕರ್ನಾಟಕದ ನಕ್ಸಲ್ ಚಳುವಳಿ ದಿಕ್ಕು ದಿಸೆಯಿಲ್ಲದೆ, ಸೈದ್ಧಾಂತಿಕ ತಳಹದಿಯಿಲ್ಲದೆ ಸಾಗುತ್ತಿದೆ.

ಕರ್ನಾಟಕ ಪೊಲೀಸರು ತಮ್ಮ ಗುಪ್ತದಳ ಇಲಾಖೆಯಿಂದ ಸಕ್ರಿಯವಾಗಿರುವ ನಕ್ಸಲರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅವರಲ್ಲಿ ಉಡುಪಿಯ ಹೆಬ್ರಿ ಸಮೀಪದ ವಿಕ್ರಂ ಗೌಡ (2006 ರ ಡಿಸಂಬರ್ 26 ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ), ಬೆಳ್ತಂಗಡಿಯ ಸುಂದರಿ, ಶೃಂಗೇರಿಯ ಬಿ.ಜಿ ಕೃಷ್ಣಮೂರ್ತಿ, ತೀರ್ಥಹಳ್ಳಿ ಸಮೀಪದ ಹೊಸಗದ್ದೆಯ ಪ್ರಭಾ, ಕೊಪ್ಪ ತಾಲ್ಲೂಕಿನ ನಿಲುಗುಳಿ ಪದ್ಮನಾಭ, ಶೃಂಗೇರಿ ಸಮೀಪದ ಮುಂಡಗಾರು ಲತಾ, ಮೂಡಿಗೆರೆಯ ಕನ್ಯಾಕುಮಾರಿ ಮತ್ತು ಎ.ಎಸ್. ಸುರೇಶ, ಬೆಂಗಳೂರಿನ ರಮೇಶ್ ಅಲಿಯಾಸ್ ಶ್ರೀನಿವಾಸ್ ಮತ್ತು ಈಶ್ವರ್, ಕಳಸದ ಸಾವಿತ್ರಿ, ವನಜಾ ಅಲಿಯಾಸ್ ಜಲಜಾಕ್ಷಿ, ಭಾರತಿ, ಮನೋಜ್, ರಾಯಚೂರು ಜಿಲ್ಲೆಯ ಕಲ್ಪನಾ, ಜಾನ್ ಅಲಿಯಾಸ್ ಜಯಮ್ಮ, ಚಿಕ್ಕಮಗಳೂರು ಜಿಲ್ಲೆಯ ಕಿಗ್ಗದ ರವೀಂದ್ರ, ಚಿತ್ರದುರ್ಗ ಮೂಲದ ಇಂಜಿನಿಯರಿಂಗ್ ಪದವಿ ತೊರೆದು ಬಂದ ನೂರ್ ಜುಲ್ಫಿಕರ್, ತಮಿಳುನಾಡಿನ ಮಧುರೈನ ವೀರಮಣಿ ಅಲಿಯಾಸ್ ಮುರುಗನ್ (ಈತ ಗಂಗಾಧರ್ ಹೆಸರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುತ್ತಾನೆ), ಕೇರಳದ ನಂದಕುಮಾರ್, ಆತನ ಸಂಗಾತಿ ಶಿವಮೊಗ್ಗ ಮೂಲದ ಸಿಖ್ ಜನಾಂಗದ ಆಶಾ, ತಮಿಳುನಾಡಿನ ಧರ್ಮಪುರಿಯ ಕುಪ್ಪಸ್ವಾಮಿ, ಮುಖ್ಯರಾದವರು. (ಇವರಲ್ಲಿ ಈದು ಎನ್‌ಕೌಂಟರ್ ನಲ್ಲಿ ಗಾಯಗೊಂಡಿದ್ದ ಸೊರಬದ ವಿಷ್ಣು ಅಲಿಯಾಸ್ ದೇವೆಂದ್ರಪ್ಪ ಜೀವಂತ ವಿರುವ ಬಗ್ಗೆ ಗೊಂದಲವಿದೆ.)

ಇವರುಗಳಲ್ಲಿ ಕರ್ನಾಟಕ ಪೊಲೀಸರು ವಿಕ್ರಮ್ ಗೌಡ, ಬಿ.ಜಿ,ಕೃಷ್ನಮೂರ್ತಿ, ಹೊಸಗದ್ದೆ ಪ್ರಭಾ, ನಿಲುಗುಳಿ ಪದ್ಮನಾಭ, ಮುಂಡಗಾರು ಲತಾ, ಕನ್ಯಾಕುಮಾರಿ ಮತ್ತು ಸುರೇಶ ಇವರುಗಳ ಸುಳಿವಿಗೆ 5 ಲಕ್ಸ ರೂಪಾಯಿ ಬಹುಮಾನ ಮತ್ತು ಬೆಂಗಳೂರಿನ ರಮೇಶ್, ಈಶ್ವರ್ ಇವರಿಗೆ 3 ಲಕ್ಷ ರೂ, ಸಿರಿಮನೆ ನಾಗರಾಜು, ನೂರ್ ಜುಲ್ಫಿಕರ್, ಸುಂದರಿ, ಸಾವಿತ್ರಿ, ವನಜ, ಭಾರತಿ, ಮನೋಜ್ ಕಲ್ಪನಾ, ರವೀಂದ್ರ ಇವರುಗಳ ಸುಳಿವಿಗಾಗಿ ಒಂದು ಲಕ್ಷ ರೂ ಬಹುಮಾನ ಘೋಷಿಸಿದ್ದರು.

ಇತ್ತೀಚೆಗಿನ ದಿನಗಳ ಕರ್ನಾಟಕ ನಕ್ಸಲಿಯರ ನಡೆಯನ್ನು ಆತ್ಮಾಹುತಿಯ ಮಾರ್ಗದತ್ತ ಮುನ್ನೆಡೆಯುತ್ತಿರುವ ಮೂರ್ಖರ ಪಡೆಯೆಂದು ಘಂಟಾಘೋಷವಾಗಿ ಹೇಳಬಹುದು.

ಇಡೀ ಭಾರತದ ನಕ್ಸಲ್ ಚಳುವಳಿಯನ್ನು ಅವಲೋಕಿಸದಾಗ ನಕ್ಸಲಿಯರ ಬಗ್ಗೆ ಸಂಯಮ ಮತ್ತು ಮಾನವೀಯ ಅನುಕಂಪದ ನೆಲೆಯಲ್ಲಿ Western_Ghat_forestನಡೆದುಕೊಂಡ ಪೊಲೀಸರೆಂದರೇ, ಅವರು ಕರ್ನಾಟಕದ ಪೊಲೀಸರು ಮಾತ್ರ ಎಂದು ನಿಸ್ಸಂಕೋಚವಾಗಿ ಹೇಳಬಹುದು. ನಕ್ಸಲ್ ಚರಿತ್ರೆಯಲ್ಲಿ ಆಂಧ್ರ ಪೊಲೀಸರ ಬರ್ಭರತೆ ಮತ್ತು ರಾಕ್ಷಸಿ ಗುಣ ಹಾಗೂ ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಡದ ಪೊಲೀಸರ ಅನಾಗರೀಕ ವರ್ತನೆಯನ್ನು ಭಾರತದ ಇತಿಹಾಸದಲ್ಲಿ ಯಾವೊಬ್ಬ ನಾಗರೀಕ ಕ್ಷಮಿಸಲಾರ. ದೇಶದಲ್ಲಿ ಪ್ರಪಥಮ ಬಾರಿಗೆ ನಕ್ಸಲರ ಶರಣಗಾತಿಗೆ ಅವಕಾಶ ಕಲ್ಪಿಸಿಕೊಟ್ಟ ಮತ್ತು ಶರಣಾದ ನಕ್ಸಲಿಗರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ವಿಶೇಷ ಪ್ಯಾಕೇಜ್ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ ಸರ್ಕಾರ, ಈ ಅವಕಾಶವನ್ನು 2008 ಮತ್ತು 2009 ರಲ್ಲಿ ಸಮರ್ಥವಾಗಿ ಬಳಸಿಕೊಂಡ ಹಾಗಲಗಂಚಿ ವೆಂಕಟೇಶ, ಹೊರಳೆ ಜಯ, ಮಲ್ಲಿಕಾ ಮತ್ತು ಕೋಮಲಾ ಈದಿನ ನಮ್ಮಗಳ ನಡುವೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಇಂತಹ ಮಾನವೀಯ ನೆಲೆಯ ನಿರ್ಧಾರದ ಹಿಂದೆ, ಕರ್ನಾಟಕ ಕಂಡ ಅಪರೂಪದ ದಕ್ಷ ಹಾಗೂ ಮಾತೃ ಹೃದಯದ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರ ಶ್ರಮವಿದೆ. ತಾವು ಸೇವೆಯಿಂದ ನಿವೃತ್ತರಾಗುವ ಕೆಲವೇ ದಿನಗಳ ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ನಮ್ಮ ಯುವಕರು ಮಾವೋವಾದಿ ನಕ್ಸಲರಾಗಿ ಪೊಲೀಸರ ಗುಂಡಿಗೆ ಬಲಿಯಾಗುವುದು ವೈಯಕ್ತಿವಾಗಿ ನನಗೆ ನೋವು ತರುವ ವಿಚಾರ ಎಂದು ಹೇಳಿಕೊಂಡಿದ್ದರು. ಹೋರಾಟ, ಕ್ರಾಂತಿ ನೆಪದಲ್ಲಿ ದಾರಿ ತಪ್ಪಿರುವ ಯುವಕರನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕನಸು ಬಿದರಿಯವರಿಗೆ ಇತ್ತು. ನಿವೃತ್ತಿಯ ನಂತರವೂ ಅವರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ.

ಕಳೆದ ನವಂಬರ್‌ನಲ್ಲಿ ಹಾಸನ ಜಿಲ್ಲೆಯ ಸಕಲೇಶ್ವರ ಬಳಿಯ ಬಿಸಿಲೆ ಘಾಟ್ ಬಳಿ ಪೊಲೀಸರು ಸೃಷ್ಟಿಸಿದ ಚಕ್ರವ್ಯೂಹಕ್ಕೆ ಸಿಲುಕಿ ಸಾಯುವ ಸಂದರ್ಭದಲ್ಲಿ ಶರಣಾಗತಿಯ ನಾಟಕವಾಡಿ ತಪ್ಪಿಸಿಕೊಂಡ ನಕ್ಸಲರ ಬಗ್ಗೆ ಯಾವೊಬ್ಬ ಪ್ರಜ್ಙಾವಂತ ನಾಗರೀಕ ಅನುಕಂಪ ಅಥವಾ ಗೌರವ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಒಂದು ವಾರ ಕಾಲ ನಕ್ಸಲರ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವುದಕ್ಕೆ ಶಂಕರ್ ಬಿದರಿಯವರ ಕಳಕಳಿಯ ಮನವಿ ಕಾರಣವಾಗಿತ್ತು. ಕರ್ತವ್ಯ ಮತ್ತು ಕಾನೂನು ವಿಷಯದಲ್ಲಿ ಅತ್ಯಂತ ಕಠಿಣವಾಗಿ ನಡೆದುಕೊಳ್ಳುತ್ತಿದ್ದ ಶಂಕರ್ ಬಿದರಿಯವರು ಸಹಾಯ ಅಥವಾ ಮಾನವೀಯತೆಯ ವಿಷಯದಲ್ಲಿ ಒಬ್ಬ ಅಪ್ಪಟ ಹೃದಯವಂತ ತಂದೆಯಂತೆ ವರ್ತಿಸುತ್ತಿದ್ದರು. ಕನ್ನಡದ ಹಿರಿಯ ಅನುಭಾವ ಕವಿ ಮತ್ತು ಬೇಂದ್ರೆಯವರ ಆತ್ಮ ಸಂಗಾತಿಯಂತಿದ್ದ ಮಧುರ ಚೆನ್ನ ಇವರ ಪುತ್ರಿಯನ್ನು ವಿವಾಹವಾಗಿರುವ ಶಂಕರ್ ಬಿದರಿ ವೀರಪ್ಪನ್ ಕಾರ್ಯಾಚರಣೆಯ ಸಂದರ್ಭದಲ್ಲಿ ತಮಗೆ ಬಹುಮಾನವಾಗಿ ಬಂದ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳಲ್ಲಿ ಕೇವಲ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಉಳಿದ ಹಣವನ್ನು ಪೊಲೀಸರ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದ ಅಪರೂಪದ ವ್ಯಕ್ತಿ. (ತಾವು ಇಟ್ಟುಕೊಂಡಿದ್ದ ಹಣವನ್ನು ಸಹ ತಮ್ಮ ಮಡದಿಗೆ ಕೊಡುಗೆಯಾಗಿ ನೀಡಿದ್ದಾರೆ.) ಇಂತಹ ಮಾನವೀಯ ಮುಖವುಳ್ಳ ಅಧಿಕಾರಿಯ ಮಾರ್ಗದರ್ಶನದಲ್ಲಿ ಶರಣಾಗುವ ಅವಕಾಶವನ್ನು ತೊರೆದು ಬಂದೂಕಿನ ಜೊತೆಯಲ್ಲಿ ಗುರಿ ತಲುಪುತ್ತೇವೆ ಎಂದು ನಂಬಿ ಹೊರಟವರನ್ನು ಸಮಾಜ ನಂಬಲಾರದು. ಈ ಬಗ್ಗೆ ಮಾವೋವಾದಿ ನಕ್ಸಲರು ಮತ್ತು ಇವರಿಗೆ ಬೆಂಬಲವಾಗಿ ನಿಂತವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.

ಭಾರತದಲ್ಲಿ ಪಶ್ಚಿಮ ಬಂಗಾಳಕ್ಕೆ ಮುನ್ನವೇ ನಕ್ಸಲ್ ಚಳುವಳಿಯನ್ನು ಹುಟ್ಟಿಹಾಕಿದ ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ಈ ಹೋರಾಟNaxal-india ವಿಜೃಂಭಿಸಿದ ರೀತಿಯಲ್ಲಿ ನೆರೆಯ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಏಕೆ ಯಶಸ್ವಿಯಾಗಲಿಲ್ಲ ಎಂಬುದನ್ನು ಅರಿಯಲು ನಾವು ಒಮ್ಮೆ ಇತಿಹಾಸದತ್ತ ತಿರುಗಿನೋಡಬೇಕಿದೆ. ಆಂಧ್ರದಲ್ಲಿ ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಜಮೀನ್ದಾರಿ ಪದ್ದತಿಯಾಗಲಿ, ಹೆಚ್ಚಿನ ಸಂಖ್ಯೆಯ ಆದಿವಾಸಿ ಜನಾಂಗವಾಗಲಿ ದಕ್ಷಿಣದ ಇತರೆ ರಾಜ್ಯಗಳಲ್ಲಿ ಇರಲಿಲ್ಲ. ತಮಿಳುನಾಡಿನಲ್ಲಿ ನಕ್ಸಲ್ ಚಳುವಳಿ ಹುಟ್ಟುವ ಮುನ್ನವೇ ಪೆರಿಯಾರ್ ರಾಮಸ್ವಾಮಿಯಂತಹವರು ಮತ್ತು ಕೇರಳದಲ್ಲಿ ನಾರಾಯಣ ಗುರು ಅಂತಹ ಮಹಾನುಭಾವರು ಸಮಾಜದ ಅಸಮಾನತೆಯ ವಿರುದ್ದ ಸಮರ ಸಾರಿ ಸಾಮಾಜಿಕ ಸುಧಾರಣೆಯಲ್ಲಿ ಯಶಸ್ವಿಯಾಗಿದ್ದರು. 1980 ರ ದಶಕದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಹುಟ್ಟು ಹಾಕುವ ಪ್ರಯತ್ನ ನಡೆಯಿತಾದರೂ ಪ್ರಯೋಜನವಾಗಲಿಲ್ಲ. ಅಲ್ಲಿರುವ ಬಹುತೇಕ ರಾಜಕೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿರುವುದರಿಂದ ನಕ್ಸಲ್ ಹೋರಾಟಗಾರರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಜನರ ಸಮಸ್ಯೆಗಳ ಬಗ್ಗೆ ಹೋರಾಡುವ ಗುಣಗಳನ್ನು ಮೈಗೂಡಿಸಿಕೊಂಡಿವೆ. ಇನ್ನು ಕೇರಳ ರಾಜ್ಯದಲ್ಲಿ 1968 ರಲ್ಲೇ ಇಂತಹ ಪ್ರಯತ್ನ ನಡೆಯಿತಾದರೂ ಯಶಸ್ವಿಯಾಗಲಿಲ್ಲ. ಇ.ಎಂ.ಎಸ್. ನಂಬೂದರಿಪಾಡ್‌ರಂತಹ ಕಮ್ಯುನಿಸ್ಟ್ ನಾಯಕರ ನೇತೃತ್ವದಲ್ಲಿ ಎಡಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಕೇರಳದಲ್ಲಿ ಪ್ರಮುಖ ಸಮಸ್ಯೆಯಾಗಿದ್ದ ಗೇಣಿದಾರರ ಸಮಸ್ಯೆಯನ್ನು ಕಮ್ಯೂನಿಷ್ಟ್ ಸರ್ಕಾರ ಬಗೆಹರಿಸಿತು. ಚಾರು ಮುಜಂದಾರ್‌ರ ಅನುಯಾಯಿಗಳು ಹಾಗೂ ಹಿರಿಯ ಮಾವೋವಾದಿ ನಾಯಕರಾದ ವೇಣು ಮತ್ತು ಕೆ. ಅಜಿತಾ ಎಂಬುವರು ( ಅಜಿತಾ 9 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ ಹಿರಿಯ ನಾಯಕಿ) ಕೇರಳದಲ್ಲಿ ನಕ್ಸಲ್ ಚಳುವಳಿ ವಿಫಲವಾದುದರ ಕುರಿತು ಬಣ್ಣಿಸುವುದು ಹೀಗೆ: “ಕೇರಳದ ಉತ್ತರದ ಜಿಲ್ಲೆಗಳಲಿ ಆದಿವಾಸಿಗಳ ಮತ್ತು ಗೇಣಿದಾರರ ಸಮಸ್ಯೆ ಇತ್ತು ನಿಜ. ಆದರೆ ಅಧಿಕಾರದಲ್ಲಿ ಎಡಪಕ್ಷವಿದ್ದುದರಿಂದ ನಂತರದ ದಿನಗಳಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗೆ ಮತ್ತು ಹೋರಾಟಕ್ಕೆ ಬಹಿರಂಗವಾಗಿ ಅವಕಾಶವಿದ್ದ ಸಂದರ್ಭದಲ್ಲಿ ಬಂದೂಕು ಹಿಡಿದು ಅರಣ್ಯದಲ್ಲಿ ಮರೆಯಾಗಿ ಹಿಂಸಾತ್ಮಕ ಹೋರಾಟ ನಡೆಸುವ ಅವಶ್ಯಕತೆ ನಮಗೆ ಕಾಣಲಿಲ್ಲ.”

ಇಂತಹ ಸತ್ಯದ ಅನುಭವದ ಮಾತುಗಳನ್ನು ಕರ್ನಾಟಕದಲ್ಲಿ ಹೋರಾಡುತ್ತಿರುವ ಮಾವೋವಾದಿಗಳು ಮನಗಾಣಬೇಕಿದೆ. ಕರ್ನಾಟಕ ರಾಜ್ಯಕ್ಕೆ ನಕ್ಸಲ್ ಹೊರಾಟ ಕಾಲಿಡುವ ಮುನ್ನವೆ ಈ ನೆಲದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಇದ್ದವು. ಪರಿಸರದ ಉಳಿವಿಗಾಗಿ, ದಲಿತರು ಹಕ್ಕು ಮತ್ತು ರಕ್ಷಣೆಗಾಗಿ, ಕೃಷಿ ಕೂಲಿಕಾರ್ಮಿಕರ ಸೂಕ್ತ ವೇತನಕ್ಕಾಗಿ, ಮತ್ತು ತಾನು ಬೆಳೆದ ಫಸಲಿಗೆ ಸೂಕ್ತ ಬೆಲೆಯಿಲ್ಲದೆ ಪರದಾಡುತ್ತಿದ್ದ ರೈತರು, ಗೇಣಿದಾರರ ಸಮಸ್ಯೆ, ಆರಣ್ಯದಿಂದ ಒಕ್ಕಲೆಬ್ಬಿಸಲಾದ ಅರಣ್ಯವಾಸಿಗಳ ಸಮಸ್ಯೆ, ಎಲ್ಲವೂ ಇದ್ದವು. ಅವುಗಳಿಗೆ ಯಾರೂ ಬಂದೂಕಿನಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಲಿಲ್ಲ. ಅವುಗಳಿಗೆ ಪ್ರಜಾಪ್ರಭುತ್ವ ನೀಡಿರುವ ಸಂವಿಧಾನ ಬದ್ದ ಹಕ್ಕುಗಳ ಅಡಿಯಲ್ಲಿ ಸೂಕ್ತವಾದ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅನೇಕ ಹೋರಾಟದ ವೇದಿಕೆಗಳು ಅಸ್ತಿತ್ವದಲ್ಲಿ ಇದ್ದವು. ಈಗಲೂ ಇವೆ ಎಂಬ ಸತ್ಯವನ್ನು ಕನಾಟಕದ ಮಾವೋವಾದಿಗಳು ಅರಿಯಬೇಕಿದೆ.

ಸುಮಾರು ಮುವತ್ತು ವರ್ಷಗಳಿಂದ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸೋಲಿಗರ ಉನ್ನತಿಗಾಗಿ ಶ್ರಮಿಸುತ್ತಿರುವ ಡಾ.ಸುದರ್ಶನ್ ಮತ್ತು ಹೆಗ್ಗಡದೇವನಕೋಟೆ ಸುತ್ತಮುತ್ತಲಿನ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗಾಗಿ ಗೆಳಯರ ತಂಡ ಕಟ್ಟಿಕೊಂಡು ಸ್ವಯಂ ಸೇವಾ ಸಂಸ್ಥೆ ಮೂಲಕ ದುಡಿಯುತ್ತಿರುವ ಡಾ.ಬಾಲಸುಬ್ರಮಣ್ಯಂ ಇವರುಗಳ ಬದುಕು, ತ್ಯಾಗ ಮನೋಭಾವ ಇವೆಲ್ಲವನ್ನು ಮಾವೋವಾದಿಗಳು ತಮ್ಮ ಚಿಂತನಾ ಧಾರೆಯಲ್ಲಿ ಅಳವಡಿಸಿಕೊಳ್ಳುವುದು ಒಳಿತು. ಚಾಮರಾಜನಗರದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವ ಪ್ರೊ.ಜಯದೇವ ಇವರು ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಬುಡಕಟ್ಟು ಜನಾಂಗಗಳ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಕನ್ನಡದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಯದೇವರವರು, ಈ ಮಕ್ಕಳಿಗಾಗಿ ವಿವಾಹವಾಗದೆ ಅವಿವಾಹಿತರಾಗಿ ಉಳಿದು ಚಾಮರಾಜನಗರದಲ್ಲಿ ಎಲೆಮರೆ ಕಾಯಿಯಂತೆ ವಾಸಿಸುತ್ತಾ ಐವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದಾರೆ. ಈ ಮೂವರು ಮಹನೀಯರು ಗಿರಿಜನ ಅಭಿವೃದ್ಧಿಗಾಗಿ ಮೂರು ದಶಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಸಹ ಎಂದೂ ವ್ಯವಸ್ಥೆಯ ವಿರುದ್ಧ ಕೈಗೆ ಬಂದೂಕ ತೆಗೆದುಕೊಳ್ಳಲಿಲ್ಲ. ಏಕೆಂದರೇ, ಉರಿಯುವ ಬೆಂಕಿಯಂತೆ ತಣ್ಣನೆಯ ಮಂಜುಗೆಡ್ಡೆ ಕೂಡ ಶಕ್ತಿಶಾಲಿ ಎಂಬುದನ್ನು ಬಲ್ಲ ಪ್ರಜ್ಞಾವಂತರಿವರು.

ಹೋರಾಟಗಳ ಬಗ್ಗೆ ಪ್ರವಾದಿಯೊಬ್ಬನ ಪ್ರವಚನದ ಹಾಗೆ ಅಥವಾ ನಮ್ಮ ಧಾರವಾಡದ ಎಮ್ಮೆಗಳು ಒಂದೂವರೆ ಕಿಲೋಮೀಟರ್ ಉದ್ದ ಸಗಣಿ ಹಾಕುವ ರೀತಿ ಮಾತನಾಡುವುದು ಅತಿಸುಲಭ. ಕ್ರಾಂತಿಯ ಕುರಿತು ಇಂತಹ ಮಾತುಗಳನ್ನಾಡುವ ಮುನ್ನ ಈವರೆಗೆ ಕರ್ನಾಟಕದಲ್ಲಿ naxals-indiaನಕ್ಸಲರ ಗುಂಡಿಗೆ ಬಲಿಯಾದ ರಾಯಚೂರು ಜಿಲ್ಲೆ ಮತ್ತು ಮಂಗಳೂರು, ಉಡುಪಿ ಜಿಲ್ಲೆಗಳ ಯುವಕರ ಕುಟುಂಬಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಯಾರಾದರೂ ಹೋಗಿ ನೋಡಿದ ಉದಾಹರಣೆಗಳು ಇವೆಯಾ? ಗುಂಡಿಗೆ ಬಲಿಯಾದ ಯುವಕರ ಅಮಾಯಕ ಕುಟುಂಬಗಳು ಪೊಲೀಸರಿಗೆ ಹೆದರಿ ತಮ್ಮ ಮಕ್ಕಳ ಶವಗಳನ್ನು ತಮ್ಮ ಸುಪರ್ದಿಗೆ ಪಡೆಯಲು ಹಿಂಜರಿದ ಬಗ್ಗೆ ಎಲ್ಲಿಯೂ ವರದಿಯಾಗಲಿಲ್ಲ. ಕಳೆದ ನವಂಬರ್‌ನಲ್ಲಿ ಉಡುಪಿ ಜಿಲ್ಲೆಯ ಸುಬ್ರಮಣ್ಯದ ಬಳಿ ಗುಂಡಿಗೆ ಬಲಿಯಾದ ರಾಯಚೂರಿನ ಯುವಕ ಎಲ್ಲಪ್ಪನ ಶವವನ್ನು ತನ್ನೂರಿಗೆ ಕೊಂಡೊಯ್ಯಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ಅವನ ಸಹೋದರ ತಾಯಪ್ಪ ಎಂಬಾತ ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಾ ನಿಂತಿದ್ದಾಗ, ನಕ್ಸಲ್ ಚಳುವಳಿ ಕುರಿತ ಅಥವಾ ಕ್ರಾಂತಿ ಕುರಿತಾದ ಯಾವ ಭಾಷಣಗಳು, ಹೇಳಿಕೆಗಳು ಆತನ ನೆರವಿಗೆ ಬರಲಿಲ್ಲ. ಕೆಲವರ ತೆವಲಿಗೆ ಮತ್ತು ಅಪ್ರಬುದ್ಧ ಪ್ರಯೋಗಗಳಿಗೆ ಬಡವರ ಕುಟುಂಬಗಳ ಮುಗ್ಧ ಹುಡುಗರು ಬಲಿ ಕೊಡುತ್ತಿರುವ ಇಂತಹ ಹೋರಾಟ ಮತ್ತು ಚಳುವಳಿಗಳಿಗೆ ಯಾವ ಅರ್ಥವಿದೆ? ಇದರಿಂದ ಭವಿಷ್ಯದಲ್ಲಿ ಪ್ರಯೋಜನವಿದೆಯಾ? ಯಾವುದೋ ಒಂದು ಕಾಲಘಟ್ಟದಲ್ಲಿ ಪ್ರಸ್ತುತವಾಗಿದ್ದ ಹೋರಾಟ ಮತ್ತು ಚಿಂತನೆಗಳನ್ನು ಆಯಾ ಕಾಲಕ್ಕೆ ಅನುಗುಣವಾಗಿ ಪರಿಷ್ಕರಿಸದೆ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋದರೆ, ಅಲ್ಲಿ ಸಫಲತೆಗಿಂತ ವಿಫಲತೆಯನ್ನು ನಾವು ಕಾಣಬೇಕಾಗುತ್ತದೆ. ಪ್ರತಿಯೊಂದು ದಶಕದಲ್ಲಿ ಈ ನೆಲಕ್ಕೆ ಹೊಸ ತಲೆಮಾರು ಸಮಾಜಕ್ಕೆ ಸೇರ್ಪಡೆಯಾಗುತ್ತಿದ್ದು ಅದರ ಚಿಂತನಾಕ್ರಮ ನಮ್ಮ ಹಳೆಯ ಆಲೋಚನಾ ಕ್ರಮಗಳಿಗಿಂತ ಭಿನ್ನವಾಗಿದೆ. ಈಗಿನ ಯುವ ಶಕ್ತಿಗೆ ಸರ್ಕಾರವನ್ನು ಅಥವಾ ಸಮಾಜವನ್ನು ಮಣಿಸಲು ಯಾವುದೇ ಆಯುಧ ಬೇಕಾಗಿಲ್ಲ ಎಂಬ ಸತ್ಯವನ್ನು ನಾವು ಅರಿಯದಿದ್ದರೇ ವರ್ತಮಾನದ ನಾಗರೀಕ ಸಮಾಜದಲ್ಲಿ ಬದುಕಲು ನಾವು ಅಯೋಗ್ಯರು ಎಂದರ್ಥ.

ದಶಕಗಳಿಂದ ಮಹಿಳಾ ಮೀಸಲಾತಿ ಕುರಿತ ಮಸೂದೆಯೊಂದು ಎಲ್ಲಾ ರಾಜಕೀಯ ಪಕ್ಷಗಳ ಅಗೋಚರ ಅಪವಿತ್ರ ಮೈತ್ರಿಯಿಂದಾಗಿ ಸಂಸತ್ತಿನಲ್ಲಿ ಕೊಳೆಯುತ್ತಾ ಬಿದ್ದಿದೆ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರದಿಂದ ಸಿಡಿದೆದ್ದ ದೇಶದ ಯುವಜನತೆ, ಕೇವಲ ಸರ್ಕಾರಗಳನ್ನು ಮಾತ್ರವಲ್ಲ, ನ್ಯಾಯಲಯಗಳು, ಸಮಾಜ ಎಲ್ಲವೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಇಡೀ ದೇಶಾದ್ಯಂತ ಬೀದಿಗಿಳಿದು ಹೋರಾಡಿದ ಯುವಕ ಮತ್ತು ಯುವತಿಯರ ಕೈಗಳಲ್ಲಿ ಆಯುಧ ಅಥವಾ ಬಂದೂಕಗಳಿರಲಿಲ್ಲ, ಬದಲಾಗಿ ಭಿತ್ತಿ ಪತ್ರ ಮತ್ತು ಉರಿಯುವ ಮೇಣದ ಬತ್ತಿಗಳಿದ್ದವು. ಇದೆಲ್ಲಕ್ಕಿಂತ ಹೆಚ್ಚಾಗಿ ವ್ಯವಸ್ಥೆಯನ್ನು ಮಣಿಸಬೇಕೆಂಬ ಸಾತ್ವಿಕ ಸಿಟ್ಟಿತ್ತು. ಕಣ್ಣೆದುರುಗಿನ ಇಂತಹ ವಾಸ್ತವ ಸತ್ಯಗಳನ್ನು ಗ್ರಹಿಸದೆ ಕ್ರಾಂತಿಯ ಬಗ್ಗೆ, ಹೋರಾಟಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದು, ಇಲ್ಲವೇ ಬರೆಯುವುದೆಂದರೆ, ಅದು ಗಾಳಿಯಲ್ಲಿ ಕತ್ತಿ ತಿರುಗಿಸುವ ಕೆಲಸವಾಗಬಲ್ಲದು ಅಷ್ಟೇ.

(ಮುಂದಿನ ವಾರ ಅಂತಿಮ ಅಧ್ಯಾಯ)