Category Archives: ಜಗದೀಶ್ ಕೊಪ್ಪ

ಪ್ರಜಾ ಸಮರ – 3 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲರ ಹೋರಾಟದ ಕಥನವೆಂದರೆ, ಒಂದರ್ಥದಲ್ಲಿ ಇದು ಪರೋಕ್ಷವಾಗಿ, ಬಾಯಿಲ್ಲದವರಂತೆ ಅರಣ್ಯ ಮತ್ತು ಅದರ ಅಂಚಿನಲ್ಲಿ ಬದುಕುತ್ತಿರುವ ಬಡಕಟ್ಟು ಜನಾಂಗ ಮತ್ತು ಗಿರಿಜನರ ನೋವಿನ ಕಥನವೇ ಆಗಿದೆ. ಈವರೆಗೆ ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದಂತೆ ಮುಚ್ಚಿ ಹೋಗಿರುವ ಇವರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ, ಗಿರಿಜನರನ್ನು ನಿರಂತರ ಶೋಷಿಸುವ ವ್ಯವಸ್ಥೆಯ ಕ್ರೌರ್ಯಕ್ಕೆ ಮತ್ತು ವಂಚನೆಗೆ ಇಷ್ಟೊಂದು ಕರಾಳ ಮುಖಗಳು ಹಾಗೂ ಕೈಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.

ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ಜಮೀನ್ದಾರರು. ಹಣ ಲೇವಿದಾರರು, ಮರದ ವ್ಯಾಪಾರಿಗಳು, ಇವೆಲ್ಲಕ್ಕಿಂತ ಹೆಚ್ಚಾಗಿ ಬುಡಕಟ್ಟು ಜನಾಂಗ ಮತ್ತು ಅವರ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಲು ತೆರಳಿ, ತಣ್ಣಗೆ ಹೊರಜಗತ್ತಿಗೆ ತಿಳಿಯದ ಹಾಗೆ ಇಲ್ಲಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ವಿದ್ವಾಂಸರು, ಎಲ್ಲರೂ ಇದರಲ್ಲಿ ಪಾಲುದಾರರಾಗಿದ್ದಾರೆ. ಇವರಲ್ಲಿ ಹೊರ ಜಗತ್ತಿಗೆ ಭಾರತದ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಪರಿಚಯಿಸಿ, ಭಾರತದ ಗಿರಿಜನ ಪ್ರಪಂಚದ ಪಿತಾಮಹ ಎಂದು ಕರೆಸಿಕೊಳ್ಳುತ್ತಿರುವ ವೇರಿಯರ್ ಎಲ್ವನ್ ಎಂಬ ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಮುಂಚೂಣಿಯಲ್ಲಿದ್ದಾನೆ ಎಂದರೆ, ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಕಟು ವಾಸ್ತವದ ಸಂಗತಿ. ಗಿರಿಜನರ ಪ್ರಪಂಚವನ್ನು ಜಗತ್ತಿಗೆ ಪರಿಚಯಿಸಿದ ವೇರಿಯರ್ ಎಲ್ವಿನ್ ಎಂಬ ವಿದ್ವಾಂಸನ ವಂಚನೆಯ ಪ್ರಪಂಚವನ್ನು ಇಲ್ಲಿ ನಿಮ್ಮೆದುರು ದಾಖಲೆ ಸಹಿತ ಅನಾವರಣಗೊಳಿಸುತ್ತಿದ್ದೇನೆ.

1902 ರಲ್ಲಿ ಇಂಗ್ಲೆಂಡ್‌ನಲ್ಲಿ ಜನಸಿದ ವೇರಿಯರ್ ಎಲ್ವಿನ್ ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಅಲ್ಲಿಯೇ ಕೆಲ ಕಾಲ ಇಂಗ್ಲೀಷ್ ಉಪನ್ಯಾಸಕನಾಗಿದ್ದ. 1927ರಲ್ಲಿ ಪೂನಾ ಮೂಲದ ಮಿಷನರಿ ಸಂಸ್ಥೆಗೆ ಕ್ರೈಸ್ತ ಮಿಷನರಿಯಾಗಿ (ಪಾದ್ರಿ) ಬಂದ ಇವನಿಗೆ ಧರ್ಮ ಪ್ರಚಾರದ ಜೊತೆಗೆ ಮತಾಂತರ ಮಾಡುವ ಜವಾಬ್ದಾರಿಯನ್ನು ವಹಿಸಲಾಯಿತು. 1930-40 ರ ದಶಕದಲ್ಲಿ ಈಶಾನ್ಯ ಭಾರತ ಮತ್ತು ಮಧ್ಯ ಭಾರತದ ಅರಣ್ಯದ ನಡುವೆ ಇದ್ದ ಆದಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯದ ಸೇವೆ ನೀಡುವುದರ ಮೂಲಕ ಅವರ ಮನ ಪರಿವರ್ತಿಸಿ, ಕ್ರೈಸ್ತ ಸಮುದಾಯಕ್ಕೆ ಪರಿವರ್ತಿಸುವುದು ಅಂದಿನ ಮಿಷನರಿಗಳ ಗುಪ್ತ ಅಜೆಂಡವಾಗಿತ್ತು. ಈಶಾನ್ಯ ಭಾರತದ ಅಸ್ಸಾಂ, ನಾಗಾಲ್ಯಾಂಡ್. ಮಿಜೋರಾಂ, ತ್ರಿಪುರ ಮುಂತಾದ ರಾಜ್ಯಗಳಲ್ಲಿ ಮಿಷನರಿಗಳು ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಮಧ್ಯ ಹಾಗೂ ಪೂರ್ವ ಭಾರತದ, ಅಂದಿನ ಮಧ್ಯಪ್ರದೇಶ, ಒರಿಸ್ಸಾ, ಪಶ್ಚಿಮ ಬಂಗಾಳ, ಆಂಧ್ರ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗವನ್ನು ಪರಿವರ್ತಿಸುವಲ್ಲಿ ಮಿಷನರಿಗಳು ಕಿಂಚಿತ್ತೂ ಯಶಸ್ವಿಯಾಗಲಿಲ್ಲ. ಏಕೆಂದರೆ, ಈ ಪ್ರದೇಶದಲ್ಲಿ ಬದುಕಿದ್ದ ಐನೂರಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳು ತಮ್ಮದೇ ಆದ ನೆಲಮೂಲ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಆಚರಿಸಿಕೊಂಡು ಬಂದಿದ್ದವು. ಈ ಜನಾಂಗಳಲ್ಲಿ ಗೊಡ, ಕೋಯಾ, ಚೆಂಚೂ, ಕೊಂಡರೆಡ್ಡಿ, ಮರಿಯ, ಜನಾಂಗಗಳು ಪ್ರಮುಖವಾದವು.

1930 ರ ಸಮಯದಲ್ಲಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಬಂದ ವೇರಿಯರ್ ಎಲ್ವಿನ್ ಮಿಷನರಿಯ ಪಾದ್ರಿ ವೃತ್ತಿಯನ್ನು ತೊರೆದು, ಭಾರತದ ಬುಡಕಟ್ಟು ಜನಾಂಗಗಳ ಬದುಕು, ಅವರ ನಂಬಿಕೆ, ಆಚಾರ, ವಿಚಾರಗಳ ಬಗ್ಗೆ ಆಸಕ್ತಿ ಬೆಳಸಿಕೊಂಡ. ಜೊತೆಗೆ ಗಾಂಧೀಜಿ ಮತ್ತು ಅವರ ಚಿಂತನೆಗಳಿಂದ ಕೂಡ ಪ್ರಭಾವಿತನಾಗಿದ್ದ. ಈ ಕಾರಣಕ್ಕಾಗಿ ಜಬಲ್‌ಪುರದ ಒಬ್ಬ ಆದಿವಾಸಿಯನ್ನು ಭಾಷಾಂತರಕ್ಕಾಗಿ ಸಹಾಯಕನನ್ನಾಗಿ ಮಾಡಿಕೊಂಡು, ಕ್ಯಾಮರಾ ಮತ್ತು ಟೈಪ್‌ರೈಟರ್ ಜೊತೆ ಆರಣ್ಯಕ್ಕೆ ಬಂದು ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದ. ಒಂದು ದಶಕದ ಕಾಲ ಆದಿವಾಸಿಗಳ ಜೊತೆ ವಾಸಿಸಿ, ಅವರ ಬದುಕನ್ನು ಅಧ್ಯಯನ ಮಾಡತೊಡಗಿದ. ಈ ಕುರಿತಂತೆ ಜಗತ್ತಿನ ಅನೇಕ ಪತ್ರಿಕೆಗಳಿಗೆ ಲೇಖನ ಬರೆಯತೊಡಗಿದ.

ಇದೇ ವೇಳೆ ಬ್ರಹ್ಮಚಾರಿಯಾಗಿದ್ದ ಎಲ್ವಿನ್, ಬುಡಕಟ್ಟು ಜನಾಂಗದ ವಿಶ್ವಾಸಗಳಿಸುವ ನಿಟ್ಟಿನಲ್ಲಿ 1940 ರ ಏಪ್ರಿಲ್ 4 ರಂದು ತನ್ನ 38 ನೇ ವಯಸ್ಸಿನಲ್ಲಿ ತನಗಿಂತ 25 ವರ್ಷ ಚಿಕ್ಕವಳಾದ 13 ವರ್ಷದ ರಾಜಗೊಂಡ ಎಂಬ ಬುಡಕಟ್ಟು ಜನಾಂಗದ ನಾಯಕನೊಬ್ಬನ ಮಗಳಾದ ಕೋಶಿ ಎಂಬಾಕೆಯನ್ನು ಮದುವೆಯಾದ. ಮೊದಲು ಈ ಪ್ರಸ್ತಾಪಕ್ಕೆ ಆಕೆಯ ತಂದೆ ಪ್ರತಿರೋಧ ವ್ಯಕ್ತಪಡಿಸಿದರೂ ನಂತರ ಬಿಳಿಸಾಹೇಬನ ಜೊತೆ ಮಗಳು ಸುಖವಾಗಿರಲಿ ಎಂಬ ಆಸೆಯಿಂದ ಒಪ್ಪಿಗೆ ಸೂಚಿಸಿದ್ದ. ವಿವಾಹದ ನಂತರ ಬಸ್ತರ್ ಅರಣ್ಯ ಪ್ರದೇಶಕ್ಕೆ ಬಂದು ನೆಲೆಸಿದ ಎಲ್ವಿನ್ ಆಕೆಯ ಜೊತೆ ವಾಸಿಸುತ್ತಾ, ಭಾರತದ ಬುಡಕಟ್ಟು ಜನಾಂಗಗಳು ಮತ್ತು ಅವರ ಸಂಸ್ಕೃತಿಯ ಬಗ್ಗೆ 1940 ರಿಂದ 1947ರ ನಡುವಿನ ಅವಧಿಯಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಕೃತಿರಚಿಸಿ ಪ್ರಸಿದ್ಧನಾದ.  ಅಲ್ಲಿಯವರೆಗೂ ಹೊರಜಗತ್ತಿಗೆ ಗೊತ್ತಿರದ ಅನೇಕ ಬುಡಟ್ಟು ಜನಾಂಗಗಳ ಸಂಸ್ಕೃತಿಯನ್ನು, ಅವರ ಆಹಾರ, ಉಡುಪು, ವಿಚಾರ, ನಂಬಿಕೆ, ಆಚರಣೆ ಇವುಗಳನ್ನು ವಿವರವಾಗಿ ಶಿಸ್ತು ಬದ್ಧ ಅಧ್ಯಯನದ ಮೂಲಕ ಪರಿಚಯಿಸಿದ. ಇವನ ಆಸಕ್ತಿ ಅಂದಿನ ನಾಯಕರಾದ ನೆಹರೂರವರ ಗೆಳೆತನವನ್ನು ಸಂಪಾದಿಸಿಕೊಟ್ಟಿತು. ಜೊತೆಗೆ ಮಹಾತ್ಮ ಗಾಂಧಿಯ ಅನುಯಾಯಿಯಾಗಿದ್ದ ಕಾರಣ ಭಾರತದ ಬಹುತೇಕ ನಾಯಕರ ನೇರ ಪರಿಚಯ ಅವನಿಗಿತ್ತು.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ವೇರಿಯರ್ ಎಲ್ವಿನ್ ಭಾರತೀಯ ಪೌರತ್ವ ಸ್ವೀಕರಿಸಿದ. ಈತನ ಭಾರತದ ಪ್ರೀತಿಯನ್ನು ಗಮನಿಸಿದ ಪ್ರಧಾನಿಯಾದ ನೆಹರೂರವರು ವೇರಿಯರ್ ಎಲ್ವಿನ್‌ನನ್ನು ಈಶಾನ್ಯ ಮತ್ತು ಮಧ್ಯ ಹಾಗೂ ಪೂರ್ವ ಭಾರತದ ರಾಜ್ಯಗಳ ಬುಡಕಟ್ಟು ಜನಾಂಗಗಳ ಅಭಿವೃದ್ಧಿ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ಮಾರ್ಗದರ್ಶಿಯನ್ನಾಗಿ ನೇಮಕ ಮಾಡಿದರು.

ಹತ್ತು ವರ್ಷಗಳ ಕಾಲ ’ಗೊಂಡ’ ಜನಾಂಗದ ಹೆಣ್ಣು ಮಗಳು ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿದ ವೇರಿಯರ್ ಎಲ್ವಿನ್, ಅವಳಿಂದ ಇಬ್ಬರು ಗಂಡು ಮಕ್ಕಳನ್ನು ಪಡೆದ. 1951ರಲ್ಲಿ ಪ್ರಧಾನಿ ನೆಹರೂರವರು ಈತನನ್ನು ಆಂಥ್ರಪಾಲಜಿಕಲ್ ಸರ್ವೆ ಆಫ್ ಇಂಡಿಯಾದ ಡೆಪ್ಯೂಟಿ ಡೈರಕ್ಟರ್ ಹುದ್ದೆಗೆ ನೇಮಕ ಮಾಡಿದಾಗ, ವೇರಿಯರ್ ಎಲ್ವಿನ್‌ನ ವಾಸ್ತವ್ಯ ಬಸ್ತರ್ ಅರಣ್ಯ ಪ್ರದೇಶದಿಂದ ಈಶಾನ್ಯ ಭಾಗದ ನಾಗಾಲ್ಯಾಂಡ್‌ಗೆ ಬದಲಾಯಿತು. ಈ ಸಂದರ್ಭದಲ್ಲಿ ಕೋಶಿಯನ್ನು ತೊರೆದು ತನ್ನ ಹಿರಿಯ ಮಗು ಜವಹರ್ ಸಿಂಗ್‌ನನ್ನು ಎತ್ತಿಕೊಂಡು ನಾಗಲ್ಯಾಂಡ್‌ನತ್ತ ಪಯಣ ಬೆಳಸಿದ. ನಂತರದ ದಿನಗಳಲ್ಲಿ ಎಲ್ವಿನ್ ಕೋಶಿಯತ್ತ ಮತ್ತೆ ತಿರುಗಿ ನೋಡಲಿಲ್ಲ. ಆಕೆ ಅವನ ಪಾಲಿಗೆ ಬಳಸಿ ಬಿಸಾಡಿದ ಬಟ್ಟೆಯಾಗಿದ್ದಳು. ಎಲ್ವಿನ್ ಆಕೆಯನ್ನು ತ್ಯೆಜಿಸಿದಾಗ ತುಂಬು ಗರ್ಭಿಣಿಯಾಗಿದ್ದ ಈ ಬುಡಕಟ್ಟು ಹೆಣ್ಣುಮಗಳು, ಅವನ ನಿರ್ಗಮನದ ನಂತರದ ಕೆಲವೇ ದಿನಗಳಲ್ಲಿ ಮತ್ತೊಂದು ಗಂಡುಮಗುವಿಗೆ ಜನ್ಮವಿತ್ತಳು.

ಕೋಶಿಯ ಜೊತೆ ದಾಂಪತ್ಯ ಜೀವನ ನಡೆಸಿ, ದೇಶದ ಪ್ರಮುಖ ನಗರಗಳಲ್ಲಿ ಸುತ್ತಾಡಿ, ನೆಹರೂ ಮುಂತಾದವರಿಗೆ ಆಕೆಯನ್ನು ಪತ್ನಿಯೆಂದು ಪರಿಚಯಿಸಿ, ಅವರ ಜೊತೆ ಔತಣಕೂಟದಲ್ಲಿ ಪಾಲ್ಗೊಂಡು. ನಂತರ ಏಕಾಏಕಿ ಅವಳನ್ನು ಬಿಟ್ಟು ಅನಾಥೆಯನ್ನಾಗಿ ಮಾಡಿ ಹೋದ ವೇರಿಯರ್ ಎಲ್ವಿನ್ ವಿರುದ್ಧ ಆತನಿಗೆ ಬಸ್ತರ್ ಅರಣ್ಯದಲ್ಲಿ ಸಹಾಯಕನಾಗಿ ದುಡಿದಿದ್ದ ಶ್ಯಾಮರಾವ್ ಹಿವಾಳೆ ಎಂಬಾತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ. ಇದರ ಪರಿಣಾಮ ಪ್ರತಿ ತಿಂಗಳು ಕೋಶಿಗೆ 25 ರೂಪಾಯಿ ಮಾಸಿಕ ಜೀವನಾಂಶ ದೊರೆಯುವಂತಾಯಿತು. ಆ ವೇಳೆಗಾಗಲೆ ನಾಗಾಲ್ಯಾಂಡ್‌ನಲ್ಲಿ ನಾಗಾ ಜನಾಂಗದ ಲೀಲಾ ಎಂಬಾಕೆಯನ್ನು ಎಲ್ವನ್ ಎರಡನೇ ವಿವಾಹವಾಗಿದ್ದ.

ಇತ್ತ ಮಧ್ಯಪ್ರದೇಶದ ಜಬಲ್‌ಪುರ್ ಪಟ್ಟಣದಲ್ಲಿ ತನ್ನ ಮಾಜಿ ಪತಿ ಎಲ್ವಿನ್ ನೀಡುತ್ತಿದ್ದ 25 ರೂಪಾಯಿ ಮಾಸಾಶನದಲ್ಲಿ ಬಾಡಿಗೆ ಕೊಂಠಡಿಯಲ್ಲಿ ಕಿರಿಯ ಮಗನ (ವಿಜಯ) ಜೀವನ ದೂಡುತ್ತಿದ್ದ ಕೋಶಿಗೆ 1964ರಲ್ಲಿ ವೇರಿಯರ್ ಎಲ್ವಿನ್ ನಿಧನಾನಂತರ ಮಾಸಾಶನ ನಿಂತು ಹೋಯಿತು. ಇದರಿಂದಾಗಿ ದಿಕ್ಕು ತೋಚದ ಕೋಶಿ ತನ್ನ ಮಗನ ಜೊತೆತನ್ನ ಊರಾದ ಅದೇ ಮಧ್ಯಪ್ರದೇಶದ ದಿಂಡೊರ ಜಿಲ್ಲೆಯ ರೈತ್ವಾರ್ ಎಂಬ ಹಳ್ಳಿಗೆ ಬಂದು ವಾಸಿಸತೊಡಗಿದಳು.

1964ರ ಪೆಬ್ರವರಿ ತಿಂಗಳಿನಲ್ಲಿ ಕಾರ್ಯನಿಮಿತ್ತ ದೆಹಲಿಗೆ ಬಂದಿದ್ದ ವೇರಿಯರ್‌ ಎಲ್ವಿನ್ ತನ್ನ 62ನೇ ವಯಸ್ಸಿನಲ್ಲಿ ಹೃದಯಾಘತದಿಂದ ತೀರಿಕೊಂಡ. ಆವೇಳೆಗೆ ಅವನು ಸಂಪಾದಿಸಿದ್ದ, ಕೊಟ್ಯಾಂತರ ರೂಪಾಯಿ ಬೆಲೆ ಬಾಳುವ ಕೊಲ್ಕತ್ತ ನಗರದ ಮನೆ ಮತ್ತು ನಾಗಾಲ್ಯಾಂಡ್‌ನಲ್ಲಿ ಇದ್ದ 60 ಎಕರೆ ಎಸ್ಟೇಟ್ ಎಲ್ಲವೂ ಎರಡನೇ ಪತ್ನಿ ಲೀಲಾಳ ಪಾಲಾದವು. ಎಲ್ವಿನ್ ಸಾಕಿ ಬೆಳಸಿದ್ದ ಹಿರಿಯ ಮಗ ಜವಹರ್ ಸಿಂಗ್ ಭಾರತೀಯ ಸೇನಾ ವಿಭಾಗದ ಅಸ್ಸಾಂ ರೈಫಲ್‌ನಲ್ಲಿ ಸೇವೆಯಲ್ಲಿದ್ದ, ಆದರೆ, ಮಿತಿ ಮೀರಿದ ಮಧ್ಯಪಾನದಿಂದ ಅತಿ ಚಿಕ್ಕ ವಯಸ್ಸಿಗೆ ಸಾವನ್ನಪ್ಪಿದ. 1964ರಲ್ಲಿ ವೇರಿಯರ್ ಎಲ್ವಿನ್ ಮರಣಾನಂತರ ಅವನ ಮಹತ್ತರ ಕೃತಿ “The tribal world of Verier Elwin” ಪ್ರಕಟವಾಯಿತು. (ಇದನ್ನು ನಮ್ಮ ಕನ್ನಡದ ಜಾನಪದ ತಜ್ಞ ಡಾ.ಹೆಚ್. ಎಲ್.ನಾಗೇಗೌಡ “ವೇರಿಯರ್ ಎಲ್ವಿನ್‌ನ ಗಿರಿಜನ ಪ್ರಪಂಚ” ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.)

ಜಬಲ್‌ಪುರದಿಂದ 375 ಕಿಲೋಮೀಟರ್ ದೂರದ ದಿಂಡೋರ ಜಿಲ್ಲೆಯ ಅರಣ್ಯದ ನಡುವೆ ಇರುವ ರೈತ್ವಾರ್ ಎಂಬ ಹಳ್ಳಿಯಲ್ಲಿ ಮಗನ ಜೊತೆ ಇದ್ದ ಬುಡಕಟ್ಟು ಜನಾಂಗದ ಹೆಣ್ಣುಮಗಳು ಕೋಶಿ ಈಗ ಅಕ್ಷರಶಃ ಏಕಾಂಗಿ. ಚಿತ್ರಗಳಿಗೆ ಚೌಕಟ್ಟು (ಪೊಟೋ ಪ್ರೇಮ್) ಹಾಕುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎರಡನೇ ಮಗ ವಿಜಯ್ ಕೂಡ ತನ್ನ ಪತ್ನಿ ಮತ್ತು ಮೂರು ಮಕ್ಕಳನ್ನು ಬಿಟ್ಟು ಇತ್ತೀಚೆಗೆ ಅನಾರೋಗ್ಯದಿಂದ ತೀರಿಕೊಂಡಿದ್ದಾನೆ. ಸೊಸೆ ಮತ್ತು ಮೂವರು ಮೊಮಕ್ಕಳೊಂದಿಗೆ ಬದುಕುತ್ತಿರುವ ವೃದ್ಧೆ ಕೋಶಿಗೆ ಮಧ್ಯ ಪ್ರದೇಶ ಸರ್ಕಾರ ವಿಶೇಷವಾಗಿ ನೀಡುತ್ತಿರುವ 600 ರೊಪಾಯಿ ಮಾಸಾಶನವೇ ಜೀವನಕ್ಕೆ ಆಧಾರವಾಗಿದೆ. ಸೊಸೆ ಕೃಷಿ ಕೂಲಿ ಕಾರ್ಮಿಕಳಾಗಿ ದುಡಿಯುತ್ತಿದ್ದಾಳೆ.

ವೇರಿಯರ್ ಎಲ್ವಿನ್ ಇಂದು ಜಗತ್ ಪ್ರಸಿದ್ಧ ಲೇಖಕನಾಗಿ, ಸಮಾಜ ಶಾಸ್ತ್ರಜ್ಞನಾಗಿ ಜಗತ್ತಿಗೆ ಪರಿಚಿತನಾಗಿದ್ದಾನೆ. ಅವನ ಎಪ್ಪತ್ತಕ್ಕೂ ಹೆಚ್ಚಿನ ಕೃತಿಗಳು ಈಗಲೂ ಪ್ರತಿಷ್ಟಿತ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಸೇರಿದಂತೆ ಅನೇಕ ಪ್ರಕಾಶನ ಸಂಸ್ಥೆಗಳಿಂದ ಮರು ಮುದ್ರಣಗೊಳ್ಳುತ್ತಿವೆ. ಭಾರತವೂ ಸೇರಿದಂತೆ ಜಗತ್ತಿನ ನೂರಾರು ವಿ.ವಿ.ಗಳಲ್ಲಿ ಅವನ ಕೃತಿಗಳು ಸಮಾಜ ಶಾಸ್ತ್ರದ ಪಠ್ಯಗಳಾಗಿವೆ. ಇದರಿಂದ ಬರುವ ಗೌರವ ಧನ ಎರಡನೇ ಪತ್ನಿ ಲೀಲಾ ಕುಟುಂಬದ ಪಾಲಾಗುತ್ತಿದೆ.ಆದರೆ, ಹತ್ತು ವರ್ಷಗಳ ಕಾಲ ಅವನೊಂದಿಗೆ ಮೈ ಮತ್ತು ಮನಸ್ಸು ಹಂಚಿಕೊಂಡ ಆದಿವಾಸಿ ಹೆಣ್ಣುಮಗಳು, ಕೋಶಿ ಇಂದು ವೃದ್ಧೆಯಾಗಿ ಒಂದು ಹಿಡಿ ಅನ್ನಕ್ಕಾಗಿ ಸರ್ಕಾರ ನೀಡುವ ಹಣಕ್ಕಾಗಿ ಕಾಯುತ್ತಾ ಕೂತ್ತಿದ್ದಾಳೆ. ಅವಳ ಬಳಿ ಇರುವ ಆಸ್ತಿಯೆಂದರೆ, ವೇರಿಯರ್ ಎಲ್ವಿನ್ ನ ಒಂದು ಕಪ್ಪು ಬಿಳುಪಿನ ಭಾವಚಿತ್ರ ಮತ್ತು ಅವನ ಜೊತೆ ಸುತ್ತಾಡಿದ ನೆನಪುಗಳು ಮಾತ್ರ.

ವೇರಿಯರ್ ಎಲ್ವಿನ್ ತನ್ನ ಆತ್ಮ ಕಥನದಲ್ಲಿ ಕೇವಲ ಎರಡು ಸಾಲಿನಲ್ಲಿ, “ನಾನು ಹತ್ತು ವರ್ಷಗಳ ಕಾಲ ಬುಡಕಟ್ಟು ಜನಾಂಗದ ಒಬ್ಬ ಹೆಣ್ಣು ಮಗಳ ಜೊತೆ ಜೀವನ ನಡೆಸಿದ್ದೆ, ಅದು ವಿವರವಾಗಿ ಹೇಳಲಾಗದ ಅವ್ಯಕ್ತ ನೋವಿನ ಕಥೆ,” ಎಂದಷ್ಟೇ ದಾಖಲಿಸಿದ್ದಾನೆ. ಇತಿಹಾಸದ ಕಾಲಗರ್ಭದಲ್ಲಿ ಹೂತುಹೋಗುತ್ತಿದ್ದ ವೇರಿಯರ್ ಎಲ್ವಿನ್‌ನ ಈ ವಂಚನೆಯ ಪ್ರಪಂಚವನ್ನು ಜಗತ್ತಿಗೆ ಮೊದಲ ಬಾರಿಗೆ ತೆರೆದಿಟ್ಟವನು ರಮಣ್ ಕೃಪಾಳ್ ಎಂಬ ಜಬಲ್‌ಪುರ್ ಮೂಲದ ಪತ್ರಕರ್ತ. ಆನಂತರ 2008ರಲ್ಲಿ ಈ ಪತ್ರಕರ್ತನ ಲೇಖನವನ್ನು ಆಧರಿಸಿ, ಕೋಶಿಯನ್ನು ಸಂದರ್ಶನ ಮಾಡಿದ ಲಂಡನ್‌ನಿನ ಬಿ.ಬಿ.ಸಿ. ಚಾನಲ್ “British scholar’s Indian widow in penury” (ಬ್ರಿಟಿಷ್ ವಿದ್ವಾಂಸ ಮತ್ತು ಭಾರತದ ವಿಧವೆಯೊಬ್ಬಳ ಬಡತನ) ಎಂಬ ಹೆಸರಿನಲ್ಲಿ 30 ನಿಮಿಷದ ಸಾಕ್ಷ್ಯ ಚಿತ್ರ ನಿರ್ಮಿಸಿ ಪ್ರಸಾರ ಮಾಡಿತು.

ದುರಂತ ಮತ್ತು ನೋವಿನ ಸಂಗತಿಯೆಂದರೆ, ಅಕ್ಷರ ಸಂಸ್ಕೃತಿಯಿಂದ ವಂಚಿತವಾಗಿದ್ದ ಬುಡಕಟ್ಟು ಜನಾಂಗದಿಂದ ಬಂದಿದ್ದ ಕೋಶಿ ಎಂಬ ಆ ಹೆಣ್ಣುಮಗಳಿಗೆ ಇದ್ದ ಬದ್ಧತೆ ವಿದ್ವಾಂಸ ಮತ್ತು ಜಗತ್ ಪ್ರಸಿದ್ಧ ಸಮಾಜ ಶಾಸ್ತ್ರಜ್ಞ ಎನಿಸಿಕೊಂಡ ವೇರಿಯರ್ ಎಲ್ವಿನ್‌ಗೆ ಇರಲಿಲ್ಲ.

ತನ್ನ ಮೊದಲ ಮಗುವಿನ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಎಲ್ವಿನ್ ಕೋಶಿಯನ್ನು ಮುಂಬೈ ನಗರಕ್ಕೆ ಕರೆದೊಯ್ದಿದ್ದ. ಅಂದು ರಾತ್ರಿ ಆಕೆ ನೆಹರೂ ಜೊತೆ ಔತಣ ಕೂಟದಲ್ಲಿ ಪಾಲ್ಗೊಂಡಿದ್ದಳು. ಗರ್ಭಿಣಿಯಾಗಿದ್ದ ಕೋಶಿಯನ್ನು ನೋಡಿ ಮಾತನಾಡಿಸಿದ ನೆಹರೂರವರು, ‘ಗಂಡು ಮಗುವಾದರೇ, ಏನು ಹೆಸರು ಇಡುತ್ತಿಯಾ?’ ಎಂದು ಕೇಳಿದ್ದರು, ಅದಕ್ಕೆ ಕೋಶಿ, ಗಂಡು ಮಗುವಾದರೆ ನಿಮ್ಮ ಹೆಸರು ಇಡುತ್ತೀನಿ ಎಂದು ಮುಗ್ಧವಾಗಿ ನಕ್ಕು ಹೇಳಿದ್ದಳು. ಅವಳ ಮಾತಿನಿಂದ ಖುಷಿಯಾದ ನೆಹರೂ ಆಕೆಗೆ ಸಾವಿರ ರೂಪಾಯಿಯ ಕೊಡುಗೆ ನೀಡಿದ್ದರು. ಆನಂತರ ಗಂಡು ಮಗುವಾದಾಗ ಕೋಶಿ ನೆಹರೂಗೆ ಕೊಟ್ಟ ಮಾತಿನಂತೆ ತನ್ನ ಮಗುವಿಗೆ ಜವಹರ ಸಿಂಗ್ ಎಂದು ನಾಮಕರಣ ಮಾಡಿದಳು. ಇಂತಹ ಬದ್ಧತೆ ಎಲ್ವಿನ್‌ಗೆ ಇದ್ದಿದ್ದರೆ, ಇಂದು ಕೋಶಿಯ ಬದುಕು ಈ ರೀತಿ ಬೀದಿಗೆ ಬೀಳುತ್ತಿರಲಿಲ್ಲ.

(ಮುಂದುವರಿಯುವುದು)

ಪ್ರಜಾ ಸಮರ-2 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಕಳೆದ ಜೂನ್ 29 ರಂದು ನಕ್ಸಲ್ ಪೀಡಿತ ರಾಜ್ಯವಾದ ಛತ್ತೀಸ್‌ಘಡದಲ್ಲಿ ನಡೆದ ಘಟನೆ ಇದು. ಅಂದು ರಾತ್ರಿ ಸೂಕ್ಮ ಮತ್ತು ಬಿಜಾಪುರ್ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆ ಮತ್ತು ಛತ್ತೀಸ್‌ಘಡದ ನಕ್ಸಲ್ ನಿಗ್ರಹ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ 21 ಮಂದಿ ಮಾವೋವಾದಿ ನಕ್ಸಲರು ಮೃತಪಟ್ಟರೆಂಬ ಸುದ್ಧಿ ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ, ಪತ್ರಿಕೆಗಳಲ್ಲಿ ತಲೆ ಬರಹದ ವರದಿಯಾಗಿ ಪ್ರಕಟವಾಯಿತು. ಆದರೆ, ಛತ್ತೀಸ್‌ಘಡ ಸರ್ಕಾರ ಮಾರನೇ ದಿನ ತನ್ನ ವರಸೆ ಬದಲಿಸಿ ಘಟನೆಯಲ್ಲಿ ಮೃತಪಟ್ಟವರು ಶಂಕಿತ ಮಾವೋವಾದಿಗಳು (ನಕ್ಸಲರು) ಎಂದು ಹೇಳಿತು.

ಇದೇ ವರದಿಯನ್ನು ಕೇಂದ್ರ ಸರ್ಕಾರಕ್ಕೂ ರವಾನಿಸಿತು. ಸ್ಥಳಕ್ಕೆ ಭೇಟಿ ನೀಡಿದ ಪತ್ರಕರ್ತರ ತಂಡಕ್ಕೆ ಮೃತ ಪಟ್ಟ ವ್ಯಕ್ತಿಗಳ ಶವಗಳನ್ನು ಗಮನಿಸಿದಾಗ ಅವರು ಶಂಕಿತ ನಕ್ಸಲರಲ್ಲ ಎಂಬ ಸಂಶಯ ಮೇಲು ನೋಟಕ್ಕೆ ಗೋಚರಿಸುತ್ತಿತ್ತು. ಶವಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮೃತಪಟ್ಟವರು ಸ್ಥಳೀಯ ಕೋಟಗುಡ ಮತ್ತು ಸರ್ಕೆಗುಡ ಎಂಬ ಹಳ್ಳಿಯ ಆದಿವಾಸಿಗಳಾಗಿದ್ದರು.  ಕೊನೆಗೆ ಸಂಶಯದ ಜಾಡು ಹಿಡಿದು ಹೊರಟ ಪತ್ರಕರ್ತರಿಗೆ ಇದು ನಕ್ಸಲ್ ನಿಗ್ರಹ ಪಡೆ ಮತ್ತು ಕೇಂದ್ರ ಪಡೆ ಜಂಟಿಯಾಗಿ ನಡೆಸಿದ ಮುಗ್ದ ಆದಿವಾಸಿಗಳ ಮಾರಣ ಹೋಮದ ಕೃತ್ಯ ಎಂಬುದು ಮನದಟ್ಟಾಯಿತು.

ಘಟನೆಯಲ್ಲಿ ಗಾಯಗೊಂಡು ಬದುಕುಳಿದ ಮೂವರು ಆದಿವಾಸಿಗಳ ಪೈಕಿ ತೀವ್ರವಾಗಿ ಗಾಯಗೊಂಡಿದ್ದ ಓರ್ವ ಬಾಲಕನನ್ನು ಜಗದಾಲ್‌ಪುರದ ಮಹಾರಾಣಿ ಆಸ್ಪತ್ರೆಗೆ ಸಾಗಿಸಿ ಗುಪ್ತವಾಗಿ ಚಿಕಿತ್ಸೆ ಕೊಡಿಸುತ್ತಿರುವುದನ್ನು ಹಿಂದೂ ಇಂಗ್ಲಿಷ್ ದಿನಪತ್ರಿಕೆಯ ವರದಿಗಾರ ಪತ್ತೆ ಹಚ್ಚಿದರೆ, ಛತ್ತೀಸ್‌ಘಡದ ರಾಜಧಾನಿ ರಾಯ್‌ಪುರದ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಕಾಲಿಗೆ ಗಾಯಗೊಂಡಿದ್ದ ಇಬ್ಬರು ಆದಿವಾಸಿಗಳನ್ನು (ಕಕಸೆಂಟಿ ಮತ್ತು ಮರ್ಕಮ್ ಸೋಮ) ಟೈಮ್ಸ್ ಆಫ್ ಇಂಡಿಯಾ ವರದಿಗಾರ ಪೊಲೀಸರ ಕಣ್ಣು ತಪ್ಪಿಸಿ ವಾರ್ಡ್‌ಬಾಯ್ ವೇಷದಲ್ಲಿ ಆಸ್ಪತ್ರೆಯ ಒಳಹೊಕ್ಕು ಪತ್ತೆ ಹಚ್ಚಿದ್ದ, ಅಲ್ಲದೆ ಅವರನ್ನು ಮಾತನಾಡಿಸಿ ಆ ರಾತ್ರಿ ನಡೆದ ಘಟನೆಯನ್ನು ದಾಖಲು ಮಾಡಿಕೊಂಡಿದ್ದ. ಅತ್ತ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಯುದ್ಧ ಗೆದ್ದ ಉತ್ಸಾಹದಲ್ಲಿ 21 ಮಂದಿ ನಕ್ಸಲಿಯರನ್ನು ಸದೆ ಬಡಿದ ಕಥೆಯನ್ನು ಮಾಧ್ಯಮದ ಮುಂದೆ ಹೆಮ್ಮೆಯಿಂದ ಹೇಳುಕೊಳ್ಳುತ್ತಿದ್ದರೆ, ಇತ್ತ ಮಧ್ಯ ಭಾರತದ ಬಹುತೇಕ ರಾಜ್ಯಗಳಲ್ಲಿ ಸತ್ತವರು ಅಮಾಯಕ ಆದಿವಾಸಿಗಳು ಎಂಬ ವರದಿ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಜುಲೈ 3ರಂದು ಪೂನಾದಿಂದ ಹೊರಡುವ ಅಜಾದ್ ಎಕ್ಸ್‌ಪ್ರಸ್ ರೈಲಿನಲ್ಲಿ ಹೊರಟು 4ರಂದು ಮಧ್ಯಾಹ್ನ ಬಿಲಾಸ್‌ಪುರ್ ತಲುಪಿ, ಸಂಜೆ ವೇಳೆಗೆ ರಾಯ್‌ಪುರ್ ತಲುಪಿದ ನನಗೆ ಅಲ್ಲಿ ಸಿಕ್ಕ ಮಾಹಿತಿ ಬೇರೆಯದೇ ಆಗಿತ್ತು. ವಾಸ್ತವವಾಗಿ ಅಲ್ಲಿ ನಡೆದ ಘಟನೆ ಇದು. ಈ ಬಾರಿಯ ಮುಂಗಾರು ಮಳೆ ಆರಂಭವಾಗುವ ಮುನ್ನ ಆದಿವಾಸಿಗಳಿಗೆ ಬೇಸಾಯಕ್ಕೆ ಅರಣ್ಯ ಭೂಮಿಯನ್ನು ಹಂಚುವುದಕ್ಕಾಗಿ ಇಬ್ಬರು ಸ್ಥಳೀಯ ನಕ್ಸಲ್ ನಾಯಕರು ಸಭೆ ಕರೆದಿದ್ದರು. ನಕ್ಸಲ್ ನಾಯಕರಿಗೆ ಬೆಂಗಾವಲಾಗಿ ಮತ್ತಿಬ್ಬರು ನಕ್ಸಲರು ಬಂದೂಕ ಹಿಡಿದು ಸಭೆಗೆ ಬಂದಿದ್ದರು. 150ಕ್ಕೂ ಹೆಚ್ಚು ಮಂದಿ ಸೇರಿದ್ದ ಈ ಗ್ರಾಮ ಸಭೆಯಲ್ಲಿ ನಾಲ್ವರು ನಕ್ಸಲರು ಹೊರತು ಪಡಿಸಿದರೆ, ಉಳಿದವರೆಲ್ಲಾ ಸ್ಥಳೀಯ ಹಳ್ಳಿಗಳ ಆದಿವಾಸಿಗಳಾಗಿದ್ದರು. ಈ ಕುರಿತಂತೆ ಜುಲೈ ಮೊದಲ ವಾರ ಹಿಂದೂ ದಿನಪತ್ರಿಕೆ ಮತ್ತು ಟೈಮ್ಸ್ ಆಫ್ ಇಂಡಿಯ ಪತ್ರಿಕೆಗಳು ಸಮಗ್ರ ತನಿಖಾ ವರದಿಯನ್ನು ಪ್ರಕಟಿಸಿದ ಮೇಲೆ ರಾಜಧಾನಿ ದೆಹಲಿಯಲ್ಲಿ ತೀವ್ರ ಮುಜುಗರಕ್ಕೆ ಒಳಗಾದ ಗೃಹ ಸಚಿವ ಪಿ.ಚಿದಂಬರಂ, ಛತ್ತೀಸ್‌ಘಡ ಸರ್ಕಾರದ ತಪ್ಪು ಮಾಹಿತಿಯಿಂದ ಆ ರೀತಿ ಹೇಳಿಕೆ ನೀಡಬೇಕಾಯಿತೆಂದು ದೇಶದ ಮುಂದೆ ವಿಷಾದ ವ್ಯಕ್ತಪಡಿಸಿದರು. ನಕ್ಸಲರ ಹೋರಾಟವನ್ನು ಕೊನೆಗಾಣಿಸಬೇಕೆಂಬ ಹೊಣೆ ಹೊತ್ತಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಎಷ್ಟೊಂದು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂಬುದಕ್ಕೆ ಸರ್ಕಾರದ ಈ ಕೆಳಗಿನ ಹೇಳಿಕೆ ಮತ್ತು ಅಂಕಿ ಅಂಶಗಳೇ ಸಾಕ್ಷಿಯಾಗಿವೆ.

ಇದೇ ಸೆಪ್ಟಂಬರ್ 9 ರ ಶನಿವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ದೆಹಲಿಯಲ್ಲಿ ಕರೆದಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸಭೆಯಲ್ಲಿ ದೇಶದ ಬುದ್ಧಿಜೀವಿಗಳು ನಕ್ಸಲ್ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿ, ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ನಕ್ಸಲ್ ಚಟುವಟಿಕೆ ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ ಎಂದಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯ ತನ್ನ 2011-12ರ ವಾರ್ಷಿಕ ವರದಿಯಲ್ಲಿ ದೇಶದ ಒಂಬತ್ತು ರಾಜ್ಯಗಳ 106 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಪ್ರಕಟಿಸಿದೆ. ಇದೇ ಆಗಸ್ಟ್ 29ರಂದು ರಾಜ್ಯ ಸಭೆಯಲ್ಲಿ ಹೇಳಿಕೆ ನೀಡಿರುವ ಗೃಹ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್, 12 ರಾಜ್ಯಗಳ 84 ಜಿಲ್ಲೆಗಳು ನಕ್ಸಲ್ ಪೀಡಿತ ಜಿಲ್ಲೆಗಳು ಎಂದು ಹೇಳಿದ್ದಾರೆ. ಪ್ರಧಾನಿಯಿಂದ ಹಿಡಿದು ಗೃಹ ಸಚಿವ ಹಾಗೂ ಅವರ ಸಹಾಯಕ ಸಚಿವ ಮತ್ತು ಗೃಹ ಇಲಾಖೆಯವರೆಗೂ ನಕ್ಸಲ್ ಚಟುವಟಿಕೆ ಕುರಿತ ಮಾಹಿತಿಯಲ್ಲಿ ಸಾಮ್ಯತೆ ಇಲ್ಲವೆಂದ ಮೇಲೆ ಇವರ ಹೇಳಿಕೆಗಳಿಗೆ ಯಾವ ಮಹತ್ವವಿದೆ ಯೋಚಿಸಿ?

ನಕಲಿ ಎನ್‌ಕೌಂಟರ್‌‌ನಲ್ಲಿ ಸತ್ತ ಅಮಾಯಕ ಆದಿವಾಸಿಗಳ ಕುಟುಂಬಳಿಗೆ ಈವರೆಗೆ ಕೇಂದ್ರ ಸರ್ಕಾರದಿಂದಾಗಲಿ, ಛತ್ತೀಸ್‌ಘಡ ಸರ್ಕಾರದಿಂದಾಗಲಿ ಯಾವುದೇ ಪರಿಹಾರ ದೊರಕಿಲ್ಲ. ಅರಣ್ಯ ರೋಧನ ಎಂಬ ಮಾತಿಗೆ ಅಥವಾ ಶಬ್ಧಕ್ಕೆ ನಾವು ಶಬ್ಧಕೋಶ ನೋಡಿ ಅರ್ಥ ತಿಳಿಯಬೇಕಾಗಿಲ್ಲ. ಮಧ್ಯ ಮತ್ತು ಪೂರ್ವ ಭಾರತದ ಅರಣ್ಯದ ಒಳ ಹೊಕ್ಕು ಅಲ್ಲಿನ ನಿವಾಸಿಗಳ ನೋವು ಮತ್ತು ಆಕ್ರಂಧನ ಇವುಗಳಿಗೆ ಕಣ್ಣು ಮತ್ತು ಕಿವಿಯಾದರೆ ಸಾಕು ಅದರ ನಿಜವಾದ ಅರ್ಥ ನಮಗೆ ಮನದಟ್ಟಾಗಬಲ್ಲದು.

ಇದು ಕಳೆದ ವರ್ಷ 2011 ರ ಪೆಬ್ರವರಿಯಲ್ಲಿ ನಡೆದ ಘಟನೆ. (ಈ ಅಮಾನವೀಯ ವರದಿ ಹಿಂದೂ ಪತ್ರಿಕೆಯಲ್ಲಿ ಕೂಡ ವರದಿಯಾಗಿತ್ತು.) ಕಳೆದ ವರ್ಷ ನಡೆದ ಐ.ಪಿ.ಎಲ್. ಕ್ರಿಕೆಟ್ ಟೂರ್ನಿಗೆ ಹಿಂದಿ ಸಿನಿಮಾ ನಟ ಶಾರುಖ್‌ಖಾನ್ ಮಾಲಿಕತ್ವದ ಕೊಲ್ಕತ್ತ ನೈಟ್ ರೈಡರ್ಸ್ ತಂಡ ದೆಹಲಿಯ ಗೌತಮ್ ಗಂಭೀರ್ ಎಂಬ ಆಟಗಾರರನ್ನು 13 ಕೋಟಿ ರೂಪಾಯಿಯ ದಾಖಲೆ ಹರಾಜಿನಲ್ಲಿ ಖರೀದಿಸಿತ್ತು. ಮುಂಬೈನ ಪಂಚತಾರಾ ಹೋಟೆಲ್‌‍ನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ದೂರದ ಛತ್ತೀಸ್‌ಘಡದ ದಂಡಕಾರಣ್ಯದ ನಡುವೆ ಇದ್ದ ಕುಗ್ರಾಮದ ಹಳ್ಳಿಯೊಂದರ ಆದಿವಾಸಿಯೊಬ್ಬನ  ಒಂಬತ್ತು ವರ್ಷದ ಮಗಳೊಬ್ಬಳು ಅಸಹಜ ಸಾವನ್ನಪ್ಪಿದ್ದಳು. ಆದಿನ ಸಾಯಂಕಾಲ ಆದಿವಾಸಿ ದಂಪತಿಗಳು ಮಗಳ ಅಂತ್ಯ ಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿರುವಾಗಲೇ ಅಡ್ಡಿ ಮಾಡಿದ ಪೊಲೀಸರು ಮರಣೋತ್ತರ ಶವ ಪರೀಕ್ಷೆ ಮಾಡಿಸಿ, ನಂತರ ಅಂತ್ಯಕ್ರಿಯೆ ನೆರವೇರಿಸಬೇಕೆಂದು ಆದೇಶವಿತ್ತರು. ಪೊಲೀಸರಿಗೆ ಲಂಚ ಕೊಡಲು ಅಸಮರ್ಥನಾದ ಆ ಮಗ್ಧ ಆದಿವಾಸಿ ಇಡೀ ರಾತ್ರಿ ಶವವನ್ನು ತನ್ನ ಮನೆಯ ವರಾಂಡದಲ್ಲಿ ಇಟ್ಟುಕೊಂಡು, ಬೆಳಗಿನ ಜಾವ ಐದು ಗಂಟೆಗೆ ಎದ್ದು 40 ಕಿಲೋಮೀಟರ್ ದೂರದ ಜಗದಾಲ್‌ಪುರ್ ಆಸ್ಪತ್ರೆಗೆ ತನ್ನ ಸೈಕಲ್‌ನ ಹಿಂಭಾಗಕ್ಕೆ ಕಟ್ಟಿಗೆ ಹೊರೆ ಕಟ್ಟಿದಂತೆ ಕಟ್ಟಿಕೊಂಡು ಸೈಕಲ್ ತುಳಿದ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಮರೋಣತ್ತರ ಪರೀಕ್ಷೆಗೆ ಶವ ತೆಗೆದುಕೊಂಡ ಆಸ್ಪತ್ರೆ ಸಿಬ್ಬಂದಿ ಸಂಜೆ ಸಂಜೆ ಆರು ಗಂಟೆಗೆ ಆತನಿಗೆ ಶವ ಒಪ್ಪಿಸಿದರು. ಶವ ಪರೀಕ್ಷೆಗಾಗಿ ಕುತ್ತಿಗೆಯಿಂದ ಕಿಬ್ಬೊಟ್ಟೆಯವರೆಗೆ ಆ ಹೆಣ್ಣು ಮಗಳ ಶವವನ್ನು ಸೀಳಿ, ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ ಆ ಬಡ ಆದಿವಾಸಿ ರೈತನ ಬಳಿ ಇದ್ದ ನಲವತ್ತು ರೂಪಾಯಿಯನ್ನು ಆಸ್ಪತ್ರೆ ಸಿಬ್ಬಂದಿ ಕಸಿದುಕೊಂಡಿದ್ದರು. ಆನಂತರ ಸರಿಯಾಗಿ ಹೊಲಿಗೆ ಹಾಕದೆ, ಈಚಲ ಛಾಪೆಯಲ್ಲಿ ಸುತ್ತಿದ ಮಗಳ ಶವವನ್ನು ಅವನಿಗೆ ನೀಡಲಾಯಿತು. ರಕ್ತ ಸೋರುತ್ತಿದ್ದ ತನ್ನ ಕರುಳ ಕುಡಿಯ ಶವವನ್ನು ಮತ್ತೇ ಸೈಕಲ್ಲಿಗೆ ಕಟ್ಟಿಕೊಂಡು ಕತ್ತಲ ರಾತ್ರಿಯಲ್ಲಿ ಜಿಲ್ಲಾ ಕೇಂದ್ರದಿಂದ ತನ್ನ ಹಳ್ಳಿಗೆ ಆ ಮುಗ್ಧ ಅಮಾಯಕ ಸೈಕಲ್ ತುಳಿಯತೊಡಗಿದ. ಮಗಳ ಸಾವಿನ ನೋವಿನಿಂದ ಹೊರಬರಲಾರದ ಸ್ಥಿತಿಯಲ್ಲಿ ಆತ ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಏನನ್ನೂ ತಿನ್ನದೆ, 80 ಕಿಲೋಮೀಟರ್ ದೂರ ಸೈಕಲ್ ತುಳಿದು ರಾತ್ರಿ ತನ್ನ ಹಳ್ಳಿಗೆ ಬಂದು ಶವದ ಅಂತ್ಯ ಕ್ರಿಯೆ ಮುಗಿಸಿದಾಗ ನಡುರಾತ್ರಿ ಮೀರಿತ್ತು. ಮತ್ತೇ ಮಾರನೇ ದಿನ ಬೆಳಿಗ್ಗೆ ಆತ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಮರಣೋತ್ತರ ಪರೀಕ್ಷೆಯ ವರದಿ ತಲುಪಿಸಬೇಕಾಗಿತ್ತು.

ಪ್ರಿಯ ಓದುಗರೆ, ಒಂದು ಕ್ಷಣ ನಿಮ್ಮ ಅಸ್ತಿತ್ವವನ್ನು ಮರೆತು ಆ ಬಡ ಹೆಣ್ಣು ಮಗಳ ತಂದೆಯಾಗಿ ನಿಮ್ಮನ್ನು ಊಹಿಸಿಕೊಂಡು ಚಿಂತಿಸಿ? ಅನಕ್ಷರಸ್ಥ ಮುಗ್ಧ ಆದಿವಾಸಿಯೊಬ್ಬ ಅನುಭವಿಸಿದ ನೋವಿಗೆ ಶಬ್ಧಗಳಾಗಲಿ, ಅಕ್ಷರವಾಗಲಿ, ಭಾವನೆಗಳಾಗಲಿ ಮೂಡಿ ಬರಲು ಸಾಧ್ಯವೆ? ಇದು ವ್ಯವಸ್ಥೆಯ ಕ್ರೌರ್ಯ ಎಂದು ಅನಿಸುವುದಿಲ್ಲವೆ? ನಮಗೆ ಗೋಚರಿಸದ, ಸಮಾಜದ ಮುಖ್ಯವಾಹಿನಿಯ ಗಮನಕ್ಕೆ ಬಾರದ ಇಂತಹ ಸಾವಿರಾರು ನೋವಿನ ಕಥೆಗಳು ಅರಣ್ಯದಲ್ಲಿ ನೊಂದವರ ನಡುವೆ ಪ್ರತಿಧ್ವನಿಸುತ್ತಿವೆ. ಅಕ್ಷರ ಲೋಕದಿಂದ ವಂಚಿತರಾದವರ ನೋವು ಒಂದು ಬಗೆಯಾದರೆ, ಅಕ್ಷರ ಕಲಿತು ತಮ್ಮ ಹಕ್ಕುಗಳಿಗೆ ಪ್ರತಿಪಾದಿಸಿ ಕತ್ತಲ ಲೋಕದಲ್ಲಿ ಕೊಳೆಯುತ್ತಿರುವ ಆದಿವಾಸಿ ಜನಗಳ ನೋವು ಇನ್ನೊಂದು ಬಗೆಯದು.

2011 ರ ಆಗಸ್ಟ್ ತಿಂಗಳಿನಲ್ಲಿ ಛತ್ತೀಸ್‌ಘಡದ ರಾಯ್‌ಪುರನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಆದಿವಾಸಿಗಳ ಪರವಾಗಿ ಕಪ್ಪು ಬಾವುಟ ಪ್ರದರ್ಶಿಸಲು ನಿರಾಕರಿಸಿದ ಸೋನಿ ಸೂರಿ ಎಂಬ 35 ವರ್ಷದ ಆದಿವಾಸಿ ಜನಾಂಗದ ಶಿಕ್ಷಕಿ ಹಾಗೂ ಅವಳ ಚಿಕ್ಕಪ್ಪನ ಮಗ ಲಿಂಗರಾಮ್ ಬಸ್ತರ್ ವಲಯದಲ್ಲಿ ನಕ್ಸಲರ ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಆದರೂ ಚತ್ತೀಸ್‌ಘಡ ಪೊಲೀಸರಿಗೆ ಇವರ ಮೇಲೆ ನಕ್ಸಲಿಯರ ಬೆಂಬಲಿಗರೆಂಬ ಗುಮಾನಿ. ಈ ಕಾರಣಕ್ಕಾಗಿ ಈ ಇಬ್ಬರೂ ಬಸ್ತರ್ ವಲಯದ ಜಿಲ್ಲಾಧಿಕಾರಿ ಶ್ರೀನಿವಾಸಲು ಎಂಬ ಆಂಧ್ರ ಮೂಲದ ಐ.ಎ.ಎಸ್. ಅಧಿಕಾರಿಯನ್ನು ಭೇಟಿಯಾಗಿ ತಮಗೆ ಮತ್ತು ತಮ್ಮ ಜನಾಂಗಕ್ಕೆ ನಕ್ಸಲ್ ಮಾವೋವಾದಿಗಳು ಮತ್ತು ಪೊಲೀಸರಿಂದ ರಕ್ಷಣೆ ನೀಡಬೇಕೆಂದು ಕೇಳಿಕೊಳ್ಳುತ್ತಾರೆ. ಇದನ್ನು ಸ್ವತಃ ಜಿಲ್ಲಾಧಿಕಾರಿ ಧೃಡಪಡಿಸಿದ್ದಾನೆ. ಮೆಟ್ರಿಕ್‌ವರೆಗೆ ಓದಿ, ವಾಹನ ಚಾಲಕನ ಪರವಾನಿಗೆ ಪಡೆದಿದ್ದ ಲಿಂಗರಾಮ್‌ಗೆ ಪೊಲೀಸರು ತಮ್ಮ ಇಲಾಖೆಯ ಜೀಪ್ ಚಾಲಕನಾಗಿ, ನಕ್ಸಲಿಯರ ಅಡಗುತಾಣಗಳನ್ನು ತೋರಿಸಬೇಕೆಂದು ಒತ್ತಾಯಿಸಿದಾಗ ಆತ ನಕ್ಸಲರ ಭಯದಿಂದ ಕೆಲಸ ನಿರಾಕರಿಸುವುದರ ಜೊತೆಗೆ ದೆಹಲಿಗೆ ಹೋಗಿ ಮಾನವ ಹಕ್ಕುಗಳ ಸ್ವಯಂ ಸೇವಾ ಸಂಘಟನೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಳ್ಳತ್ತಾನೆ. ಇವುಗಳ ನಡುವೆ ಛತ್ತೀಸ್‌ಘಡ ಸೇರಿದಂತೆ ದಂಡಕಾರಣ್ಯದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆ ಆದಿವಾಸಿ ಜನಾಂಗದ ಮೇಲೆ ನಡೆಸಿದ ಅತಿಕ್ರಮಣ, ಅತ್ಯಾಚಾರ, ಶೋಷಣೆ ಇವೆಲ್ಲವೂ ಮಾನವ ಹಕ್ಕುಗಳ ಸಂಘಟನೆ ಮೂಲಕ ಹೊರ ಜಗತ್ತಿಗೆ ಬಹಿರಂಗವಾಗುತ್ತಿರುವುದು ನುಂಗಲಾರದ ತುತ್ತಾಗಿತ್ತು. ಇದಕ್ಕೆ ಶಿಕ್ಷಕಿ ಮತ್ತು ಅವಳ ಸಹೋದರರು ಕಾರಣ ಎಂಬ ಗುಮಾನಿ ಛತ್ತೀಸ್‌ಘಡ ಪೊಲೀಸರಿಗೆ ಇತ್ತು. ಇದರಿಂದಾಗಿ ಅಲ್ಲಿನ ಪೊಲೀಸರಿಗೆ ಶಿಕ್ಷಕಿ ಸೋನಿ ಸೂರಿ ಕುಟುಂಬದ ಬಗ್ಗೆ ದ್ವೇಷ ಬೆಳೆಯಲು ಕಾರಣವಾಯಿತು. ಇದೇ ವೇಳೆ ಲಂಡನ್‌ ನಗರದಲ್ಲಿ ವಿಕಿಲಿಕ್ಸ್ ಅಂತರ್ಜಾಲ ಪತ್ರಿಕೆ ಬಿಡುಗಡೆ ಮಾಡಿದ್ದ ಭಾರತದ ಅಮೇರಿಕಾ ರಾಯಭಾರಿ ಕಚೇರಿಯ ಸಂದೇಶಗಳ ಪೈಕಿ, ಎಸ್ಸಾರ್ ಸ್ಟೀಲ್ ಕಂಪನಿ ಅಪಾರ ಪ್ರಮಾಣದಲ್ಲಿ ಮಾವೋವಾದಿ ನಕ್ಸಲರಿಗೆ ಹಣವನ್ನು ನೀಡಿ ಛತ್ತೀಸ್‌ಘಡದಲ್ಲಿ ಗಣಿಕಾರಿಕೆ ನಡೆಸುತ್ತಿದೆ ಎಂಬುದನ್ನು ಬಹಿರಂಗಗೊಳಿಸಿತ್ತು. ಇದನ್ನು ಆಧಾರವಾಗಿಕೊಂಡು ದಂತೆವಾಡದ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್‌ಗತ  ಎಂಬಾತ ಪಲ್‌ನಾರ್ ಎಂಬ ಹಳ್ಳಿಯ ಬಳಿ ನಡೆಯುತ್ತಿದ್ದ ವಾರದ ಸಂತೆಯಲ್ಲಿ ಸೋನಿ ಸೂರಿಯನ್ನು ಬಂಧಿಸಿದ.

ಇದಕ್ಕೂ ಎರಡು ತಿಂಗಳ ಮುನ್ನ ಆಕೆಯ ಪತಿಯನ್ನು ನಕ್ಸಲ್ ಬೆಂಬಲಿಗ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಎಸ್ಸಾರ್ ಕಂಪನಿಯಿಂದ ಹಣವನ್ನು ಪಡೆದು ನಕ್ಸಲಿಯರಿಗೆ ಕೊಂಡೊಯ್ಯುತ್ತಿದ್ದಳು ಎಂಬ ಆರೋಪದಡಿ ಈಕೆಯನ್ನು 40 ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟು ಚಿತ್ರ ಹಿಂಸೆ ನೀಡಲಾಯಿತು. ಇಡೀ ಭಾರತದ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ಈಕೆಯ ಬಂಧನದ ಅವಧಿಯಲ್ಲಿ ಜರುಗಿ ಹೋಯಿತು. ನ್ಯಾಯಾಲಯದ ಮುಂದೆ ಹಾಜರು ಪಡಿಸದೆ, ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವೇಳೆ ಈಕೆಯ ಗುಪ್ತಾಂಗಕ್ಕೆ ಕಲ್ಲು ಇಟ್ಟಿಗೆ ಚೂರುಗಳನ್ನು ತುರುಕಿ ಚಿತ್ರ ಹಿಂಸೆ ನೀಡಲಾಯಿತು. ಇದು ಹೊರಜಗತ್ತಿಗೆ ಬಹಿರಂಗವಾಗುವ ವೇಳೆಗೆ ಸೋನು ಸೂರಿಯನ್ನು ಗುಪ್ತವಾಗಿ ಕೊಲ್ಕತ್ತ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿರುವ ಅಮೇರಿಕಾದ ನೋಮ್ ಚಾಮ್‌ಸ್ಕಿ ಸೇರಿದಂತೆ ಭಾರತದ ಅರುಣಾ ರಾಯ್ ಮತ್ತು ಅರುಂಧತಿ ರಾಯ್, ಸಿನಿಮಾ ನಿರ್ದೇಶಕ ಆನಂದ್‌ ಪಟುವರ್ಧನ್ ಹಾಗೂ ಅಶೋಕ್ ಮೆಂಡರ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದ ಪರಿಣಾಮ ಸುಪ್ರೀಂ ಕೋರ್ಟ್ ಈಕೆಯ ಬಂಧನದ ವಿಷಯವನ್ನು ವಿಚಾರಣೆಗೆ ಎತ್ತಿಕೊಂಡಿತು. ಈ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಪೊಲೀಸರು ನೀಡಿದ ಹೇಳಿಕೆ ಕೂಡ ಬದಲಾಗಿತ್ತು. ಎಸ್ಸಾರ್ ಕಂಪನಿಯ ದಲ್ಲಾಳಿಯೊಬ್ಬ ನಕ್ಸಲಿಯರಿಗೆ 15 ಲಕ್ಷ ಹಣ ಸಂದಾಯ ಮಾಡುತ್ತಿದ್ದಾಗ ಜೊತೆಯಲ್ಲಿ ಸೋನು ಸೂರಿ ಇದ್ದಳು ಎಂಬುದು ಪೊಲೀಸರ ಹೇಳಿಕೆ. ಇವರ ಹೇಳಿಕೆ ನಿಜವೇ ಆಗಿದ್ದರೆ, ಆ ದಿನ ಸಂತೆಯಲ್ಲಿದ್ದ ಸಾವಿರಾರು ಮಂದಿ ಕೂಡ ಪೊಲೀಸರ ದೃಷ್ಟಿಯಲ್ಲಿ ಅಪರಾಧಿಗಳಾಗಬೇಕು. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸೋನು ಸೂರಿಯ ವೈದ್ಯಕೀಯ ತಪಾಸಣೆ ನಡೆಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತು. ದೆಹಲಿಯ ವೈದ್ಯರ ವರದಿ ಕೂಡ ಈಕೆಯ ಗುಪ್ತಾಂಗ ಮತ್ತು ಗರ್ಭಕೋಶದ ಬಳಿ ಕಲ್ಲು ಮತ್ತು ಇಟ್ಟಿಗೆ ಚೂರುಗಳು ಇದ್ದುದನ್ನು ಧೃಡಪಡಿಸಿದೆ. ಈಗ ಸೋನು ಸೂರಿ ಕೊಲ್ಕತ್ತ ಆಸ್ಪತ್ರೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದುಕೊಂಡು ಚೇತರಿಸಿಕೊಳ್ಳುತ್ತಿದ್ದಾಳೆ. ಈಕೆಯ ಪತಿ ಜೈಲಿನಲ್ಲಿದ್ದಾನೆ. ಈಕೆಯ ತಂದೆಯನ್ನು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ತಮಗೆ ಬೆಂಬಲಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ನಕ್ಸಲಿಯರು ಗುಂಡಿಟ್ಟು ಕೊಂದಿದ್ದರು. ಇವಳ ಐದು ವರ್ಷದ ಮಗು ದಂತೆವಾಡದ ಅರಣ್ಯ ಪ್ರದೇಶದಲ್ಲಿನ ಹಳ್ಳಿಯೊಂದರಲ್ಲಿ ವೃದ್ಧ ಅಜ್ಜಿಯ ಹಾರೈಕೆಯಲ್ಲಿದೆ. ಶಿಕ್ಷಕಿ ಸೋನು ಸೂರಿಗೆ ಅಮಾನುಷ ಚಿತ್ರ ಹಿಂಸೆ ನೀಡಿದ ದಂತೆವಾಡದ ಪೊಲೀಸ್ ಅಧಿಕಾರಿಗೆ ಈ ವರ್ಷ ಕೇಂದ್ರ ಸರ್ಕಾರ ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಪದಕವನ್ನು ನೀಡಿದೆ.

ಅಮಾಯಕರ ವಿರುದ್ಧ ವ್ಯವಸ್ಥೆಯ ಕ್ರೌರ್ಯಕ್ಕೆ ಕೊನೆಯೇ ಇಲ್ಲದಂತಹ ಸ್ಥಿತಿಯಲ್ಲಿ ಮಧ್ಯ ಭಾರತದ ಅರಣ್ಯವಾಸಿಗಳು ಬದುಕುತ್ತಿದ್ದಾರೆ. ಇದರ ವಿರುದ್ಧ  ಧ್ವನಿ ಎತ್ತಿದ ವಿದ್ಯಾವಂತರು ನಕ್ಸಲಿಯರ ಬೆಂಬಲಿಗರು ಎಂಬ ಆರೋಪದಡಿ ಜೈಲಿಗೆ ನೂಕಲ್ಪಟ್ಟು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಇಲ್ಲಿನ ದಂಪತಿಗಳ ಚಿತ್ರ ಗಮನಿಸಿ, ಇವರು ಉತ್ತರ ಪ್ರದೇಶದ ಅಲಹಾಬಾದಿನ ವಿದ್ಯಾವಂತ ದಂಪತಿಗಳು. ಸೀಮಾ ಅಜಾದ್ ಹೆಸರಿನ ಈಕೆ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ, ಅಲಹಾಬಾದ್ ನಗರದಲ್ಲಿ ತನ್ನ ಪತಿ ವಿಶ್ವವಿಜಯ್ ಜೊತೆಯಲ್ಲಿ ಮಾನವ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತೆ, ಅಲ್ಲದೆ ದಸ್ತಕ್ ಎಂಬ ಪತ್ರಿಕೆಯ ಸಂಪಾದಕಿ. 2010 ರಲ್ಲಿ ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಮತ್ತು ನಲವತ್ತು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡ ಉತ್ತರ ಪ್ರದೇಶದ ಪೊಲೀಸರು ಈ ದಂಪತಿಗಳನ್ನು ಮಾವೋವಾದಿ ನಕ್ಸಲ್ ಸಂಘಟನೆಯ ಬೆಂಬಲಿಗರು ಎಂಬ ಆರೋಪದಡಿ ಬಂಧಿಸಿದ್ದಾರೆ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಅಲಹಾಬಾದ್ ಸ್ಥಳೀಯ ನ್ಯಾಯಾಲಯ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೀಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಈ ದಂಪತಿಗಳು ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಮುಂದುವರೆದಿದೆ. ಈಕೆಯ ಮನೆಯಲ್ಲಿ ನಿಷೇಧಿತ ನಕ್ಸಲ್ ಸಾಹಿತ್ಯ ಇತ್ತು ಎನ್ನುವುದಾದರೆ, ಅದು ಪೊಲೀಸರ ದೃಷ್ಟಿಯಲ್ಲಿ ಅಪರಾಧ ಎನ್ನುವುದಾದರೆ, ಸಾವಿರಾರು ಪುಟಗಳಷ್ಟು ಮಾಹಿತಿ ಇಟ್ಟುಕೊಂಡು ಬರೆಯುತ್ತಿರುವ ನಾನು ಮತ್ತು ಈ ಕ್ಷಣದಲ್ಲಿ ಇದನ್ನು ಓದುತ್ತಿರುವ ನೀವೂ ಕೂಡ ಅಪರಾಧಿಗಳು. ಹಿಂಸೆಯನ್ನು ಹತ್ತಿಕ್ಕಲು ಹಿಂಸೆಯ ಹಾದಿ ಪರ್ಯಾಯವಲ್ಲ. ಆದರೆ, ಪೊಲೀಸರು ಈ ಹಾದಿಯನ್ನೇ ಆಯ್ಕೆ ಮಾಡಿಕೊಂಡಿರುವುದು ವರ್ತಮಾನದ ದುರಂತ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠಲ ಮಲೆಕುಡಿಯನ ಮನೆಯಲ್ಲಿ ಸಿಕ್ಕ ನಕ್ಸಲ್ ಸಾಹಿತ್ಯವೆಂದರೆ, ಭಗತ್ ಸಿಂಗನ ಆತ್ಮಚರಿತ್ರೆ, ಮತ್ತು 200 ಗ್ರಾಂ ಚಹಾಪುಡಿ ಮಾತ್ರ. ಆದರೂ ಆತ ಸೆರೆಮನೆಗೆ ದೂಡಲ್ಪಟ್ಟ.

ಈಗಲೂ ನಕ್ಸಲರು ಹಿಂಸೆಯನ್ನು ಮುಂದುವರೆಸುತ್ತಿರುವುದಕ್ಕೆ (ವಿಶೇಷವಾಗಿ ಗಿರಿಜನರಿರುವ ಪ್ರದೇಶಗಳಲ್ಲಿ) ಮತ್ತು ಅದಕ್ಕೆ ಈ ವ್ಯವಸ್ಥೆ ಮತ್ತು ಪೋಲಿಸರ ಅಮಾನುಷ ದೌರ್ಜನ್ಯವೂ ಒಂದು ಪ್ರಮುಖ ಕಾರಣವಾಗಿ ಹೇಗೆ ಪೂರಕವಾಗಿದೆ ಎಂಬ ಪ್ರಶ್ನೆಗಳಿಗೆ ಈ ಮೇಲಿನ ಘಟನೆಗಳು ನಮಗೆ ಕೆಲವೊಂದು ಉತ್ತರಗಳನ್ನು ಕೊಡಬಲ್ಲವು. ಹಾಗೇಯೇ, ಈ ಸಮಸ್ಯೆಗೆ ಒಂದಷ್ಟು ಪರಿಹಾರದ ದಾರಿಗಳನ್ನೂ.

(ಮುಂದುವರೆಯುವುದು)

ಪ್ರಜಾ ಸಮರ-1 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


[ಪ್ರಿಯ ಓದುಗರೇ, ಪೀಪಲ್ಸ್ ವಾರ್ ಗ್ರೂಪ್ ಹೆಸರಿನಲ್ಲಿ 80ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ನಕ್ಸಲ್ ಹೋರಾಟಕ್ಕೆ ಹಲವಾರು ಆಯಾಮಗಳಿವೆ. ಈ ಹೋರಾಟಕ್ಕೆ ಪ್ರೇರಣೆಯಾದ ಸಂಗತಿಗಳು ಮತ್ತು ನೆರೆಯ ರಾಜ್ಯಕ್ಕೆ ವಿಸ್ತರಿಸಲು ಕಾರಣವಾದ ಮೂರು ಘಟನೆಗಳನ್ನು ಪ್ರಜಾಸಮರದ ಇತಿಹಾಸಕ್ಕೆ ಮೊದಲು ಮೂರು ಅಧ್ಯಾಯಗಳಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ.]

ಅದು 2009 ರ ಸೆಪ್ಟಂಬರ್ ಇಪ್ಪತ್ತರ ದಿನಾಂಕ. ಹೈದರಾಬಾದ್ ನಗರದಿಂದ ಬಂದಿದ್ದ ಆಂಧ್ರ ಪೋಲಿಸರು ಹಾಗೂ ದೆಹಲಿಯ ಗುಪ್ತಚರ ಇಲಾಖೆಯ ಪೋಲಿಸರು ನಡು ಮಧ್ಯಾಹ್ನ ದೆಹಲಿಯ ರಾಯಭಾರಿ ಕಚೇರಿಗಳ ಹತ್ತಿರವಿರುವ ಪ್ರತಿಷ್ಠಿತ ಬಿಕಾಜಿಕಾಮ ಎಂಬ ವಾಣಿಜ್ಯ ಕಟ್ಟಡದ ಮುಂಭಾಗ ಅಂಬಾಸೆಡರ್ ಕಾರಿನಲ್ಲಿ ಕಾದು ಕುಳಿತಿದ್ದರು. ಎರಡು ದಶಕಗಳ ಕಾಲ ನಕ್ಸಲ್ ಚಳವಳಿ, ವಿಶೇಷವಾಗಿ 1980ರ ದಶಕದಲ್ಲಿ ಆಂಧ್ರದಲ್ಲಿ ಆರಂಭವಾದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಗೆ ರೂಪು ರೇಷೆಯ ಜೊತೆಗೆ ವಿಚಾರಧಾರೆಗಳನ್ನು ರೂಪಿಸಿ, ಅದನ್ನು ಸಿದ್ಧಾಂತಗಳ ಆಧಾರದ ಮೇಲೆ ಮುನ್ನಡೆಸಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಒರಿಸ್ಸಾ, ಬಿಹಾರ ರಾಜ್ಯಗಳಲ್ಲಿ ನಕ್ಸಲ್ ಹೋರಾಟದ ಬೀಜ ಬಿತ್ತಿ, ನಂತರ ಬಳಲಿ ಸೋತು ಸುಣ್ಣವಾಗಿದ್ದ ಹಿರಿಯ ಜೀವವೊಂದನ್ನು ಬೇಟೆಯಾಡುವುದು ಅವರ ಗುರಿಯಾಗಿತ್ತು. ಆದರೆ, ಆ ವ್ಯಕ್ತಿಯ ಮುಖ ಪರಿಚಯವಿಲ್ಲದ ಪೊಲೀಸರು 20 ವರ್ಷದ ಹಿಂದೆ ಅರಣ್ಯದಲ್ಲಿ ಈ ನಾಯಕನಿಗೆ ಸಹಾಯಕನಾಗಿ ದುಡಿದು ಬಂಧನದಲ್ಲಿದ್ದ ವ್ಯಕ್ತಿಯೊರ್ವನನ್ನು ಇದಕ್ಕಾಗಿ ವಿಶಾಖಪಟ್ಟಣದಿಂದ ಕರೆತಂದಿದ್ದರು.

ಗಂಟೆಗಳ ಕಾಲ ಕಾದ ಪೋಲಿಸರ ನಿರೀಕ್ಷೆ ಹುಸಿಯಾಗಲಿಲ್ಲ. ವಾಣಿಜ್ಯ ಕಟ್ಟಡದ ಯಾವುದೋ ಒಂದು ಕಛೇರಿಯಿಂದ ಹೊರ ಬಂದ ತೆಳ್ಳನೆಯ ಆದರೆ ಆರು ಅಡಿ ಎತ್ತರವಿದ್ದ, ಖಾದಿ ಜುಬ್ಬ ಮತ್ತು ಪೈಜಾಮ ಧರಿಸಿದ್ದ ಆ ಹಿರಿಯ ಜೀವ ನಿಧಾನವಾಗಿ ಹೆಗಲಿನಲ್ಲಿ ಇದ್ದ ಕೈಚೀಲವನ್ನು ಸರಿ ಪಡಿಸಿಕೊಳ್ಳುತ್ತಾ, ಕಚೇರಿಯ ಸಮೀಪವಿದ್ದ ಹ್ಯಾಬಿಟೇಟ್ ಸೆಂಟರ್ ಬಸ್ ನಿಲ್ದಾಣದ ಬಳಿ ಬಂದು ನಿಂತುಕೊಂಡಿತು. ತಡಮಾಡದೆ ಕಾರಿನಲ್ಲಿದ್ದ ಪೊಲೀಸರು ಕೆಳಗಿಳಿದು ಬಂದು ವ್ಯಕ್ತಿಯನ್ನು ಎತ್ತಿ ಹಾಕಿಕೊಂಡು ಕ್ಷಣಾರ್ಧದಲ್ಲಿ ಮರೆಯಾದರು. ಮಾರನೇ ದಿನ ಹಿರಿಯ ಜೀವವನ್ನು ನ್ಯಾಯಧೀಶರ ಗುಟ್ಟಾಗಿ ಹಾಜರುಪಡಿಸಿ ನಂತರ ತಮ್ಮ ವಶಕ್ಕೆ ತೆಗೆದುಕೊಂಡ ದೆಹಲಿಯ ಪೊಲೀಸರು ಸುದ್ಧಿಗೋಷ್ಠಿಯಲ್ಲಿ ವಿಷಯ ಪ್ರಕಟಿಸಿದರು. ಭಾರತದ ಅತ್ಯಂತ ಪ್ರಮುಖ ನಕ್ಸಲ್ ನಾಯಕ ಹಾಗೂ ಹತ್ತಕ್ಕೂ ಹೆಚ್ಚು ರಾಜ್ಯಗಳ ನಕ್ಸಲಿಯರ ಆರಾಧ್ಯ ದೈವ ಮತ್ತು ಭಾರತದ ಅಖಂಡತೆಗೆ ಮತ್ತು ಸಾರ್ವಭೌಮತ್ವಕ್ಕೆ ಕಂಟಕವಾಗಿದ್ದ ಕೊಬದ್ ಗಾಂಡಿ ಎಂಬ 76 ವರ್ಷದ ನಾಯಕನನ್ನು ಬಂಧಿಸಿರುವುದಾಗಿ  ಬಹಿರಂಗಪಡಿಸಿದರು. ಪೂರ್ವ ಮತ್ತು ಮಧ್ಯ ಭಾರತದ ಆದಿವಾಸಿಗಳ ಬಾಯಲ್ಲಿ ಗಾಂಧಿ ಎಂತಲೂ ನಕ್ಸಲಿಯರ ಬಾಯಲ್ಲಿ ಕೆ.ಜಿ. ಸರ್ ಎಂತಲೂ ಪರಿಚಿತವಾಗಿದ್ದ ಕೋಬದ್ ಗಾಂಡಿಯ ಹೋರಾಟದ ಬದುಕು ಹೀಗೆ ಬಂಧನದೊಂದಿಗೆ ಅಂತ್ಯಗೊಂಡಿತು.

ಈ ಬಂಧನ ಬಿ.ಬಿ.ಸಿ. ಚಾನಲ್ ಸೇರಿದಂತೆ ಅಂತರ್ರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯಿತು. ಏಕೆಂದರೆ, ಬಂಧನಕ್ಕೆ ಎರಡು ವರ್ಷದ ಮುಂಚೆ ಈ ವ್ಯಕ್ತಿಯನ್ನು ಲಂಡನ್‌ನಿನ ಬಿ.ಬಿ.ಸಿ. ಚಾನಲ್ ತಂಡ ಪೊಲೀಸರ ಕಣ್ಣು ತಪ್ಪಿಸಿ ದಂಡಕಾರಣ್ಯದಲ್ಲಿ ಸಂದರ್ಶನ ಮಾಡಿ ಪ್ರಸಾರ ಮಾಡಿತ್ತು. ಏಕೆಂದರೆ, ಕೊಬಡ್ ಗಾಂಡಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ನಕ್ಸಲ್ ಚಳವಳಿಗೆ ಧುಮುಕದಿದ್ದರೆ, ಅಂತರ್ರಾಷ್ಟ್ರೀಯ ಮಟ್ಟದ ದೊಡ್ಡ ಆರ್ಥಿಕ ತಜ್ಞನಾಗುವ ಎಲ್ಲಾ ಅವಕಾಶಗಳು ಇದ್ದವು. 1970 ದಶಕದಲ್ಲಿ ಲಂಡನ್ ನಗರದಲ್ಲಿ  ಚಾರ್ಟಡ್ ಅಕೌಟೆಂಟ್ ಪದವಿಗೆ ಓದುತಿದ್ದಾಗಲೇ, ಬ್ರಿಟಿಷರು ಭಾರತೀಯ ವಿದ್ಯಾರ್ಥಿಗಳ ವಿರುದ್ಧ ತೋರುತ್ತಿದ್ದ ವರ್ಣ ನೀತಿಯನ್ನು ಪ್ರತಿಭಟಿಸಿ, ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ, ಅಲ್ಲಿನ ಮಾಧ್ಯಗಳಲ್ಲಿ ಸುದ್ಧಿಯಾಗಿ ನಂತರ ಭಾರತಕ್ಕೆ ಮರಳಿದ್ದರು.

ಮುಂಬೈ ನಗರದ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದ ಕೊಬದ್ ಗಾಂಡಿಗೆ ದುಡಿಯುವ ಅವಶ್ಯಕತೆ ಇರಲಿಲ್ಲ. ಅವರ ತಂದೆ ಆದಿ ಗಾಂಡಿ ಪ್ರಸಿದ್ಧ ಬಹುರಾಷ್ಟೀಯ ಕಂಪನಿಯಾದ ಗ್ಲಾಸ್ಕೊ ಕಂಪನಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿದ್ದವರು. ಮುಂಬೈ ನಗರದ ಪ್ರತಿಷ್ಠಿತ ಹಾಗೂ ಕಡಲಿಗೆ ಮುಖ ಮಾಡಿರುವ ವರ್ಲಿಯ ಪ್ರದೇಶದಲ್ಲಿ ನಾಲ್ಕು ಸಾವಿರ ಚದುರ ಅಡಿ ವಿಸ್ತಾರವಾದ ಜಾಗದಲ್ಲಿ ಬಂಗಲೆಯನ್ನು ನಿರ್ಮಿಸಿದ್ದರು. ಸಿರಿವಂತ ಕುಟುಂಬದಲ್ಲಿ ಜನಿಸಿದ್ದರೂ ಬಾಲ್ಯದಿಂದಲೂ ಕೊಬದ್ ಗಾಂಡಿಗೆ ಬಡವರೆಂದರೆ ಅಪಾರ ಪ್ರೀತಿ ಮತ್ತು ಕಾಳಜಿ. ಒಮ್ಮೆ ತನ್ನ ತಂದೆಯ ಚಿನ್ನದ ಚೈನ್ ಹೊಂದಿದ್ದ ಕೈಗಡಿಯಾರವನ್ನು ಹೇಳದೆ ಕೇಳದೆ ಮನೆಯ ಸೇವಕನಿಗೆ ಧಾನ ಮಾಡಿದ ವ್ಯಕ್ತಿತ್ವ ಇವರದು. ಇಂತಹ ವ್ಯಕ್ತಿತ್ವವೇ ಅಂತಿಮವಾಗಿ ಕೊಬದ್ ಗಾಂಡಿಯನ್ನು ಅರಣ್ಯದ ಅಂಚಿಗೆ ತಂದು ನಿಲ್ಲಿಸಿತು. ಐಷಾರಾಮಿ ಬದುಕು, ಊಟ ತಿಂಡಿ ತೊರೆದು ದಂಡಕಾರಣ್ಯದ ದಟ್ಟ ಕಾನನದ ನಡುವೆ ಪ್ಲಾಸ್ಟಿಕ್ ಗುಡಾರದ ಕೆಳಗೆ ಅದೇ ಪ್ಲಾಸ್ಟಿಕ್ ಹಾಳೆಯನ್ನು ಹಾಸಿ ಮಲಗುವಂತೆ ಮಾಡಿತು.

ಸತತ ಮೂವತ್ತು ವರ್ಷಗಳ ಕೊಬಡ್ ಗಾಂಡಿಯ ಹೋರಾಟದ ಬದುಕಿಗೆ ಬಾಳ ಸಂಗಾತಿಯಾಗಿ ಹೆಗಲುಕೊಟ್ಟು ಶ್ರಮಿಸಿದ ಜೀವವೇ, ಅನುರಾಧ ಶ್ಯಾನ್‌ಬಾಗ್ ಎಂಬ ಕನ್ನಡದ ಹೆಣ್ಣು ಮಗಳು. 1980ರ ದಶಕದಿಂದ ಆರಂಭವಾದ ಪ್ರಜಾಸಮರಂ ಎಂಬ ನಕ್ಸಲ್ ಚಳವಳಿಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನಷ್ಟೇ ಗೌರವವನ್ನು ಹೊಂದಿದ ಅಪೂರ್ವ ಜೋಡಿ ಇವರದು. ಇವರ ಕಥನ ಸಮಾಜದ ಮುಖ್ಯವಾಹಿನಿಗೆ ಬಾರದೇ ಕೇವಲ ಅರಣ್ಯದ ನಡುವೆ ನಕ್ಸಲಿಯರ ಬಾಯಲ್ಲಿ ನಕ್ಸಲಿಯರ ಗಾಂಧಿ ದಂಪತಿಗಳು ಎಂಬ ದಂತಕಥೆಯಾಗಿ ಇಂದಿಗೂ ಅನುರಣನಗೊಳ್ಳುತ್ತಿದೆ.

ದೆಹಲಿಯಲ್ಲಿ ಬಂಧನವಾಗಿ ವಿಚಾರಣೆಯ ನಂತರ ಮತ್ತೆ ನ್ಯಾಯಾಲಯಕ್ಕೆ ಕೊಬಡ್ ಗಾಂಡಿಯನ್ನು ಹಾಜರು ಪಡಿಸಿದಾಗ, ಕಿಕ್ಕಿರಿದು ತುಂಬಿದ್ದ ಮಾಧ್ಯಮ ಮಂದಿಯ ನಡುವೆ ನ್ಯಾಯಾಲಯದಲ್ಲಿ ಈ ವೃದ್ಧ ಜೀವ ಯಾವುದೇ ಅಳುಕಿಲ್ಲದೆ, ಭಗತ್‌ಸಿಂಗ್ ಜಿಂದಾಬಾದ್’, ಅನುರಾಧ ಗಾಂಡಿ ಅಮರ್ ಹೈ ಎಂಬ ಘೋಷಣೆ ಕೂಗಿತು.

ಕೇವಲ ಆರು ತಿಂಗಳ ಹಿಂದೆ ವೃದ್ಧಾಪ್ಯದ ಕಾರಣ ಹಲವು ಕಾಯಿಲೆಯಿಂದ ಬಳಲುತ್ತಿದ್ದ ಕೊಬದ್ ಗಾಂಡಿ ನಕ್ಸಲಿಯರ ಸಹಾಯದಿಂದ ದೆಹಲಿಗೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕಾಗಿ ಇವರದೇ ಭಾವಚಿತ್ರವುಳ್ಳ ದಿಲಿಪ್ ಪಟೇಲ್ ಎಂಬ ಹೆಸರಿನಲ್ಲಿ ನಕಲಿ ಮತದಾರರ ಚೀಟಿಯನ್ನು ಸಿದ್ಧಪಡಿಸಲಾಗಿತ್ತು. ಕೂಲಿಕಾರ್ಮಿಕರು ಮತ್ತು ಬಿಕ್ಷುಕರು, ಹಾಗೂ ಸೈಕಲ್ ರಿಕ್ಷಾವಾಲಾಗಳು ವಾಸಿಸುತ್ತಿದ್ದ ಮೊಲರ್‌ಬಂದ್ ಎಂಬ ಕಾಲೋನಿಯ ತಗಡಿನ ಶೀಟಿನ ಮನೆಯೊಂದರಲ್ಲಿ ವಾಸಿಸುತ್ತಾ ಬದುಕು ದೂಡುತ್ತಿದ್ದ ಈ ನಾಯಕನಿಗೆ ನಕ್ಸಲಿಯರೇ ಒಬ್ಬ ನಿಷ್ಠಾವಂತ ಸೇವಕನನ್ನು ನೇಮಕ ಮಾಡಿದ್ದರು. ಗೌಪ್ಯತೆಯ ದೃಷ್ಟಿಯಿಂದ ಮೊಬೈಲ್ ಬಳಸುತ್ತಿರಲಿಲ್ಲ. ಎಲ್ಲಾ ಸಂದೇಶಗಳು ಮಾರು ವೇಷದ ನಕ್ಸಲಿಯರ ಮೂಲಕ ಅವರಿಗೆ ರವಾನೆಯಾಗುತಿದ್ದವು. ಅದೇ ರೀತಿ ಹಣಕಾಸು ಸಹಾಯದ ಜೊತೆಗೆ ಚಟುವಟಿಕೆಯ ವಿಷಯಗಳು ಇವರಿಗೆ ತಲುಪುತಿದ್ದವು. (ಇವತ್ತಿಗೂ ದಂಡಕಾರಣ್ಯದ ಮಧ್ಯೆ ಸುರಕ್ಷಿತ ಪ್ರದೇಶದಲ್ಲಿ 70 ವರ್ಷದ ದಾಟಿದ, 17 ಕ್ಕೂ ಹೆಚ್ಚು ಮಂದಿ ಇರುವ ಹಿರಿಯ ನಕ್ಸಲ್ ಹೋರಾಟಗಾರರನ್ನು ಅತ್ಯಂತ ಜತನದಿಂದ ಕಾಪಾಡಿಕೊಂಡು ಬರಲಾಗಿದೆ. ಅವರ ಸಲಹೆ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿದೆ.)

ಬಾಲ್ಯದಲ್ಲಿ ಡೆಹರಾಡೂನ್‌ನ ಕಾನ್ವೆಂಟ್ ವಸತಿಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಅಂದಿನ ಬಾಂಬೆಯ ಪ್ರತಿಷ್ಠಿತ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ, ಇಂಗ್ಲೆಂಡ್‌ನಲ್ಲಿ ಚಾರ್ಟಡ್ ಅಕೌಟೆಂಟ್ ಪದವಿಯ ಪಡೆದು ಮರಳಿ ಭಾರತಕ್ಕೆ ಬಂದ ಕೊಬದ್ ಗಾಂಡಿಯನ್ನು ವೃತ್ತಿಯ ಸೆಳೆತಕ್ಕೆ ಬದಲಾಗಿ ಎಡಪಂಥೀಯ ಚಿಂತನೆಗಳು ಆಕರ್ಷಿಸಿದವು. ಹೀಗೆ ಕೊಬದ್ ಶ್ರಮಿಕರ ಬಗ್ಗೆ ಬಡವರ ಬಗ್ಗೆ ಕಾಳಜಿ ತೋರುತ್ತಾ ನಕ್ಸಲ್ ಚಳವಳಿಯತ್ತ ಒಲವು ಬೆಳೆಸಿಕೊಂಡರು. ಇದಕ್ಕೆ ಅಂದು ಬಾಂಬೆಯಲ್ಲಿ ಅಸ್ತಿತ್ವದಲ್ಲಿದ್ದ ಪ್ರಗತಿಪರ ವಿದ್ಯಾರ್ಥಿ ಸಂಘಟನೆ ಕೂಡ ಪರೋಕ್ಷವಾಗಿ ಕಾರಣವಾಯ್ತು. ಅವರ ಅಂದಿನ ಹೋರಾಟಗಳ ದಿನಗಳಲ್ಲಿ ಪ್ರಗತಿಪರ ಮುಸ್ಲಿಂ ಚಿಂತಕ ಅಸ್ಗರ್ ಆಲಿ ಇಂಜಿನಿಯರ್ ಇವರ ಒಡನಾಡಿಯಾಗಿದ್ದರು. ಇಂತಹ ಕ್ರಾಂತಿಯ ದಿನಗಳಲ್ಲಿ ಕೊಬದ್ ಒಂದು ದಿನ ಅನುರಾಧ ಶಾನ್‌ಬಾಗ್‌ರನ್ನು ಭೇಟಿಯಾದರು.   ಅನುರಾಧರವರ ತಂದೆ ಗಣೇಶ್ ಶಾನ್‌ಬಾಗ್ ಮೂಲತಃ ಕರ್ನಾಟಕದವರು. ವಕೀಲರಾಗಿದ್ದ ಇವರು ತಮ್ಮ ಯೌವನದಲ್ಲಿ ಸುಭಾಷ್‌ಚಂದ್ರ ಭೋಸರರಿಂದ ಪ್ರಭಾವಿತರಾಗಿ ಮನೆ ಬಿಟ್ಟು ಕೊಲ್ಕತ್ತ ನಗರಕ್ಕೆ ತೆರಳಿದವರು, ಅಲ್ಲಿದ್ದ ದಿನಗಳಲ್ಲಿ ನಕ್ಸಲ್ ಪ್ರಭಾವಕ್ಕೆ ಒಳಗಾಗಿ, ನಂತರ ಮುಂಬೈ ನಗರಕ್ಕೆ ಬಂದು ನೆಲೆ ನಿಂತರೂ ಕೂಡ ತಮ್ಮ ವಕೀಲ ವೃತ್ತಿಯಲ್ಲಿ ಸರ್ಕಾರದಿಂದ ಬಂಧಿತರಾಗುತ್ತಿದ್ದ ನಕ್ಸಲಿಯರ ಬಿಡುಗಡೆಗಾಗಿ ತಮ್ಮ ಬಹುಭಾಗದ ಸಮಯವನ್ನು ವ್ಯಯಮಾಡುತ್ತಿದ್ದರು. ಇವರ ಪತ್ನಿ ಕುಮುದಾ ಸಹ ಪ್ರಗತಿಪರ ಮನೋಭಾವವುಳ್ಳ ಗೃಹಿಣಿಯಾಗಿದ್ದರು. ಇಂತಹ ದಂಪತಿಗಳ ಪುತ್ರಿಯಾಗಿ ಜನಸಿದ್ದ ಅನೂರಾಧ ಬಾಲ್ಯದಿಂದ ತಂದೆಯ ಕ್ರಾಂತಿಕಾರಿಕ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ತಮ್ಮ ಶಾಲಾ ದಿನಗಳಲ್ಲಿ ಸುಂದರ ಕೈಬರವಣಿಗೆ ಇದ್ದ ಅನುರಾಧ ಶ್ರಮಿಕರ ಪರವಾಗಿ ಭಿತ್ತಿ ಪತ್ರಗಳನ್ನು ಬರೆದು ರಸ್ತೆಯ ವಿದ್ಯುತ್ ಕಂಬಗಳಿಗೆ ಅಂಟಿಸುತ್ತಿದ್ದರು. ಪ್ರತಿಷ್ಠಿತ ಎಲ್ಪಿಸ್ಟೋನ್ ಕಾಲೇಜಿನಲ್ಲಿ ಪದವಿ, ಹಾಗೂ ಮುಂಬೈ ವಿ.ವಿ.ಯಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಎಂ.ಫಿಲ್ ಪಧವೀಧರೆಯಾದ ಅನುರಾಧ, ಶಿಕ್ಷಣದ ನಂತರ ಮುಂಬೈನ ಕೊಳಗೇರಿಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು. 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ದಲಿತ ಪ್ಯಾಂಥರ್ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಂದಿನ ದಿನಗಳಲ್ಲಿ ಮಹಾರಾಷ್ಟ್ರದ ದಲಿತರ ದೌರ್ಜನ್ಯ ಕುರಿತು ಈಕೆ ಬರೆದ ನೂರಾರು ಲೇಖನಗಳು ಅನೇಕ ಯುವ ದಲಿತ ಲೇಖಕ, ಲೇಖಕಿಯರ ಹುಟ್ಟಿಗೆ ಕಾರಣವಾದವು.

ಕೊಬದ್ ಮತ್ತು ಅನೂರಾಧ ಒಂದೇ ಬಗೆಯ ನಿಲುವುಗಳನ್ನು ಹೊಂದಿ ಮುಂಬೈ ಕೊಳಚೇಗೇರಿಗಳಲ್ಲಿ ಹರಿಜನರ ಬಸ್ತಿಗಳಲ್ಲಿ (ಕೇರಿ) ಒಟ್ಟಿಗೆ ದುಡಿಯುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಆಕರ್ಷಿತರಾಗಿ, ತಮ್ಮ ಪೋಷಕರ ಒಪ್ಪಿಗೆ ಪಡೆದು 1977ರ ನವಂಬರ್ 5 ರಂದು ವಿವಾಹವಾದರು. ಆ ವೇಳೆಗೆ ಕೊಬದ್ ಗಾಂಡಿಯವರ ತಂದೆ ಗ್ಲಾಸ್ಕೊ ಕಂಪನಿಯ ಸೇವೆಯಿಂದ ನಿವೃತ್ತರಾಗಿ ಪೂನಾ ಸಮೀಪದ ಮಹಾಬಲೇಶ್ವರ್ ಎಂಬ ಗಿರಿಧಾಮದಲ್ಲಿ ಎಸ್ಟೇಟ್ ಖರೀದಿಸಿ ವಾಸವಾಗಿದ್ದರು.  ಒಂದು ವಾರ ಮಹಾಬಲೇಶ್ವರದ ತಂದೆಯ ಎಸ್ಟೇಟ್‌ನಲ್ಲಿ ಕಾಲ ಕಳೆದ ನವ ದಂಪತಿಗಳು ಮುಂಬೈನಗರಕ್ಕೆ ವಾಪಸ್ ಬಂದು ಸುಮಾರು ನಾಲ್ಕು ವರ್ಷಗಳ ಕಾಲ ಕಾರ್ಮಿಕ ಸಂಘಟನೆಯ ಪರವಾಗಿ ಮತ್ತು ದಲಿತರ ಪರವಾಗಿ ಹೋರಾಟದಲ್ಲಿ ಪಾಲ್ಗೊಂಡರು. ತಮ್ಮ ಭವಿಷ್ಯದ ಬದುಕಿನ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ ಒಂದು ಅಂತಿಮ ನಿರ್ಧಾರಕ್ಕೆ ಬಂದರು. ಅದನ್ನು ತಮ್ಮ ಬಂಧು ಮಿತ್ರರ ಎದುರು ತಮ್ಮ ಭವಿಷ್ಯದ ಕಾರ್ಯ ಕ್ಷೇತ್ರದ ವಿವರವನ್ನು ಬಹಿರಂಗ ಪಡಿಸಿದರು. 1956ರ ರಲ್ಲಿ ಡಾ. ಅಂಬೇಡ್ಕರ್ ತಾವು ನಿಧನರಾಗುವ ಕೆಲವು ದಿನಗಳ ಮುನ್ನ ಬೌದ್ಧ ಧರ್ಮ ಸ್ವೀಕರಿಸಿದ್ದ ನಾಗಪುರವನ್ನು ತಮ್ಮ ಕರ್ಮ ಭೂಮಿಯನ್ನಾಗಿ ಆರಿಸಿಕೊಂಡಿದ್ದರು. ದಲಿತರು ಮತ್ತು ಕೂಲಿ ಕಾರ್ಮಿಕರ ಪರ ದುಡಿಯಲು ಕೊಬದ್ ಮತ್ತು ಅನುರಾಧ ನಿರ್ದರಿಸಿದರು. ಅದರಂತೆ ಇಬ್ಬರೂ ನಾಗಪುರಕ್ಕೆ ಬಂದು ಹರಿಜನ ಕೇರಿಯಲ್ಲಿ ಒಂದು ಹೆಂಚಿನ ಮನೆ ಪಡೆದು ವಾಸ ಮಾಡತೊಡಗಿದರು.

ನಾಗಪುರದ ವಿ.ವಿಯಲ್ಲಿ ಅನುರಾಧಗೆ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿದ್ದರಿಂದ ತನ್ನ ವೃತ್ತಿಯ ನಡುವೆ ನಾಗಪುರ ನಗರದಿಂದ 20 ಕಿಲೋಮೀಟರ್ ದೂರವಿರುವ ಕಾಂಪ್ಟಿ ಎಂಬ ಕಾಲೋನಿಯಲ್ಲಿ ನೇಕಾರಿಕೆಯಲ್ಲಿ ತೊಡಗಿದ್ದ ಬಡ ಮುಸ್ಲಿಂ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಾ, ರಾತ್ರಿ ವೇಳೆಯಲ್ಲಿ ಮಧ್ಯರಾತ್ರಿ 12 ರವರೆಗೆ ತಾವು ವಾಸವಾಗಿದ್ದ ಹರಿಜನ ಕೇರಿಯ ಜನರ ಸಂಕಷ್ಟಗಳಿಗೆ ಕಣ್ಣು ಮತ್ತು ಕಿವಿಯಾಗುತ್ತಿದ್ದರು.

ಕೊಬದ್ ಗಾಂಡಿ ಆ ವೇಳೆಗಾಗಲೇ ಮಹರಾಷ್ಟ್ರದ ಗಡಿಜಿಲ್ಲೆಗಳಾದ ಗೊಂಡಿಯ, ಬಂಡಾರ ಚಂದ್ರಾಪುರ್ ಮತ್ತು ಗಡ್ ಚಿರೋಲಿ ಜಿಲ್ಲೆಯ ಪ್ರದೇಶಗಳಿಗೆ ನೆರೆಯ ಆಂಧ್ರದ ಪ್ರಜಾ ಸಮರಂ ತಂಡದ ನಕ್ಸಲರು ಪ್ರವೇಶ ಪಡೆದಿದ್ದರಿಂದ ಸ್ಥಳಿಯ ಗೊಂಡಾ ಆದಿವಾಸಿಗಳು ಮತ್ತು ನಕ್ಸಲರ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮುಂಬೈ ನಗರದಲ್ಲಿ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯಲ್ಲಿ ಇದ್ದಾಗಲೇ 1981ರಲ್ಲಿ ಆಂಧ್ರದ ವಿಜಯವಾಡ ಸಮೀಪದ ಗುಂಟೂರಿನಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಸಂಪರ್ಕ ಬಂದ ಕೊಬದ್ ಗಾಂಡಿ ಮುಂದಿನ ದಿನಗಳಲ್ಲಿ ಪ್ರಜಾ ಸಮರಂ (ಪೀಪಲ್ಸ್ ವಾರ್ ಗ್ರೂಪ್) ನಕ್ಸಲ್ ಸಂಘಟನೆಗೆ ಒಂದು ಸಂವಿಧಾನ ರಚನೆ ಮಾಡಿದರು. (ಇದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ.) ವ್ಯಯಕ್ತಿಕ ನೆಲೆಯಲ್ಲಿ ಹಿಂಸೆಯನ್ನು ವಿರೋಧಿಸುತ್ತಿದ್ದ ಕೊಬದ್ ಗಾಂಡಿ ತಮ್ಮ ಎರಡು ದಶಕಗಳ ನಕ್ಸಲಿಯರ ಒಡನಾಟದಲ್ಲಿ ಎಂದೂ ಬಂದೂಕನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ, ಅರಣ್ಯದ ನಡುವೆ ಮೂಕ ಪ್ರಾಣಿಗಳಂತೆ ಬದುಕಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾಗುತ್ತಿದ್ದ ಅರಣ್ಯವಾಸಿ ಆದಿವಾಸಿಗಳಿಗೆ ನಕ್ಸಲ್ ಹೋರಾಟದಿಂದ ಮಾತ್ರ ಮುಕ್ತಿ ಎಂದು ಅವರು ನಂಬಿದ್ದರು. ಕೋಬದ್‌ಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮತ್ತು ಗಾಂಧೀಜಿಯ ಗ್ರಾಮ ಸ್ವರಾಜ್ಯದ ಬಗ್ಗೆ ಅಪಾರ ನಂಬಿಕೆಯಿದ್ದರೂ ಕೂಡ, ಭಾರತಕ್ಕೆ ಅಂಟಿಕೊಂಡಿದ್ದ ಪ್ಯೂಡಲ್ ವ್ಯವಸ್ಥೆ ಮತ್ತು ತಲೆ ಎತ್ತುತ್ತಿದ್ದ ಬಂಡವಾಳ ವ್ಯವಸ್ಥೆಯ ಕುರಿತು ಆಕ್ರೋಶವಿತ್ತು. ಅಮಾಯಕರ ಮುಕ್ತಿಗೆ ನಕ್ಸಲ್ ಹೋರಾಟ ಹಿಂಸೆಯ ಹಾದಿ ತುಳಿದರೂ ನಾನು ಅದನ್ನು ಬೆಂಬಲಿಸ ಬೇಕಾದ್ದು ನನಗೆ ಅನಿವಾರ್ಯ ಎಂದು ಬಿ.ಬಿ.ಸಿ. ಚಾನಲ್‌ಗೆ 2008 ರ ಸೆಪ್ಟಂಬರ್ ತಿಂಗಳಿನಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಡಿದ್ದರು. ನಕ್ಸಲ್ ಚಳವಳಿಯನ್ನು ನಿಗ್ರಹಿಸಲು ಎನ್‌ಕೌಂಟರ್ ಒಂದೇ ಗುರಿ ಎಂದು ಸರ್ಕಾರ ನಂಬಿಕೊಂಡಿರುವಾಗ, ಈ ನೆಲದ ದಲಿತರು, ಆದಿವಾಸಿಗಳ ರಕ್ಷಣೆಗೆ ಹಿಂಸೆಯೊಂದೇ ಹಾದಿ ಎಂದು ನಕ್ಸಲರು ನಂಬಿಕೊಂಡಿದ್ದಾರೆ. ಎರಡೂ ತಪ್ಪು ಹಾದಿಗಳು ನಿಜ, ಆದರೆ, ತಪ್ಪು ಸರಿಪಡಿಸುವ ನೈತಿಕ ಜವಬ್ದಾರಿ ಸರ್ಕಾರದ ಮೇಲಿದೆ ಎಂದು ನಕ್ಸಲ್ ಹೋರಾಟ ಕುರಿತ ತಮ್ಮ ಅನಿಸಿಕೆಯನ್ನು ಹೊರ ಜಗತ್ತಿನ ಜೊತೆ ಹಂಚಿಕೊಂಡಿದ್ದರು.

1990 ರಿಂದ ಈ ದಂಪತಿಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದ ಮಹಾರಾಷ್ಟ್ರದ ಪೊಲೀಸರು ಇವರನ್ನು ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾನ್ನಾಗಿಸಲು ಪ್ರಯತ್ನಿಸಿದ್ದರು. 92ರಲ್ಲಿ ನಾಗಪುರ ನಗರದಲ್ಲಿ ಸರ್ಕಾರದ ನಿಷೇಧಾಜ್ಞೆ ನಡುವೆ ಇವರು ಏರ್ಪಡಿಸಿದ್ದ ತೆಲುಗಿನ ಕ್ರಾಂತಿಕಾರಿ ಕವಿ ಗದ್ದಾರ್‌ನ ಹಾಡು ಮತ್ತು ನೃತ್ಯದ ಕಾರ್ಯಕ್ರಮಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ದಲಿತ ಮತ್ತು ಆದಿವಾಸಿಗಳು ಸೇರಿದ್ದರು. ಪೊಲೀಸರ ಪ್ರತಿಭಟನೆ ನಡುವೆ ವೇದಿಕೆ ಏರಿದ ಗಾಯಕ ಗದ್ದಾರ್ ಹಾಡಲು ಶುರು ಮಾಡುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದರು. ಪ್ರತಿಭಟಿಸಿದ ಜನರಿಗೆ ಲಾಠಿ ಏಟಿನ ರುಚಿ ತೋರಿಸಿದರು. ಇದೊಂದು ಕಾರ್ಯಕ್ರಮವನ್ನು ನೆಪವಾಗಿರಿಸಿಕೊಂಡು ಮಹರಾಷ್ಟ್ರ ಸರ್ಕಾರ ಕೊಬದ್ ಮತ್ತು ಅನುರಾಧ ಮೇಲೆ ಸಮಾಜದ ಶಾಂತಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂಬ ಮೊಕದ್ದೊಮ್ಮೆಯೊಂದನ್ನು ದಾಖಲಿಸಿದರು. ನಿರಂತರ ಪೊಲೀಸರ ಕಿರುಕುಳದಿಂದ ಬೇಸತ್ತು ಹೋಗಿದ್ದ ಈ ದಂಪತಿಗಳು ಅಂತಿಮವಾಗಿ ನಾಡನ್ನು ತೊರೆದು ಬಸ್ತಾರ್ ವಲಯದ ಕಾಡನ್ನು ಸೇರಿಕೊಂಡರು.

ನಕ್ಸಲರ ಸಹಾಯ ಮತ್ತು ಬೆಂಬಲದಿಂದ ಅಂದಿನ ಅವಿಭಜಿತ ಮಧ್ಯಪ್ರದೇಶದ (ಛತ್ತೀಸ್ ಗಡ ಸೇರಿದಂತೆ) ಅರಣ್ಯವಾಸಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಕೊಬಡ್ ಗಾಂಡಿ ಮತ್ತು ಅನುರಾಧ ತಮ್ಮನ್ನು ಸಮರ್ಪಿಸಿಕೊಂಡರು. ಲಿಪಿಯಿಲ್ಲದ ಗೊಂಡಿ ಭಾಷೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಈ ಕಾರಣಕ್ಕಾಗಿ ಇಬ್ಬರೂ ಅರಣ್ಯದ ನಡುವೆ ನಕ್ಸಲರ ಗುಡಾರದಲ್ಲಿ ವಾಸವಾಗಿದ್ದುಕೊಂಡು ಚಿತ್ರಗಳ ಮೂಲಕ ಶಿಕ್ಷಣ ನೀಡಬಹುದಾದ ಪಠ್ಯ ಮತ್ತು ಚಿತ್ರಗಳನ್ನು ತಯಾರಿಸಿದರು. ಬಸ್ತರ್ ಅರಣ್ಯ ಪ್ರದೇಶದಲ್ಲಿ ನೂರಾರು ಟೆಂಟ್ ಶಾಲೆಗಳನ್ನು ಆರಂಭಿಸಿ, ಮಕ್ಕಳಿಗೆ ಅಕ್ಷರ ಕಲಿಸಿಕೊಡುವುದರ ಜೊತೆಗೆ ಗೊಂಡ ಮತ್ತು ಮುರಿಯ ಜನಾಂಗದ ಹೆಣ್ಣು ಮಕ್ಕಳಿಗೆ ಆರೋಗ್ಯ ಮತ್ತು ಶುಚಿತ್ವದ ಪಾಠ ಹೇಳಿಕೊಟ್ಟರು. ಪ್ರಾಥಮಿಕ ಆರೋಗ್ಯ ಚಿಕಿತ್ಸೆಯ ಬಗ್ಗೆ ವಿವರ ನೀಡಿ ಔಷಧಗಳನ್ನು ಉಚಿತವಾಗಿ ಹಂಚಿದರು. ಇವತ್ತಿಗೂ ಮಧ್ಯಭಾರತದ ಅರಣ್ಯ ವಾಸಿಗಳ ಸರಾಸರಿ ವಯಸ್ಸು ಕೇವಲ 55 ವರ್ಷ ಮಾತ್ರ. ತಾವು ಯಾವ ಕಾಯಿಲೆಗೆ ಬಲಿಯಾಗಿದ್ದೇವೆ ಎಂದು ತಿಳಿಯಲಾರದೇ ಸಾವನ್ನಪ್ಪುತ್ತಿದ್ದಾರೆ. ಕೊಬಡ್ ಗಾಂಡಿ ಶಿಕ್ಷಣಕ್ಕೆ ಒತ್ತು ಕೊಟ್ಟು ದುಡಿಯುತ್ತಿದ್ದ ಸಂದರ್ಭದಲ್ಲಿ ಅನುರಾಧ ಮಹಿಳೆಯರ ಅರೋಗ್ಯ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಿದರು. ಇವರ ಎಲ್ಲಾ ಚಟುವಟಿಕೆಗಳಿಗೆ ನಕ್ಸಲರು ಆರ್ಥಿಕ ನೆರವನ್ನು ಒದಗಿಸುತ್ತಿದ್ದರು.

1998ರಲ್ಲಿ ನಕ್ಸಲರ ನೆರವಿನಿಂದ ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದ ಹಾಡಿಯ ಬಳಿ ಕೆರೆಗಳನ್ನು ನಿರ್ಮಿಸಲು ನಿರ್ಧರಿಸಿದ ಅನುರಾಧ ಶ್ರಮಧಾನದ ಮೂಲಕ 158 ಕೆರೆಗಳನ್ನು ನಿರ್ಮಿಸಿದರು. ಪ್ರತಿ ದಿನದ ಕೂಲಿಯಾಗಿ ಒಬ್ಬೊಬ್ಬರಿಗೆ ಒಂದು ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿತ್ತು. ಇದರಿಂದ ಮುಜುಗರಕ್ಕೆ ಒಳಗಾದ ಮಧ್ಯಪ್ರದೇಶ ಸರ್ಕಾರ ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಗೆ 20 ಲಕ್ಷ ರೂಪಾಯಿ ನೀಡಲು ಮುಂದೆ ಬಂದಾಗ ನಿರ್ದಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಿದರು.

ನಗರದ ವಾತಾವರಣದಲ್ಲಿ ಬೆಳೆದಿದ್ದ ಈ ಎರಡು ಜೀವಗಳು ತಾವು ನಂಬಿದ್ದ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಲು ಅರಣ್ಯ ಜೀವನವನ್ನು ಆರಿಸಿಕೊಂಡ ಫಲವಾಗಿ 15 ವರ್ಷಗಳ ಆರಣ್ಯದ ಬದುಕಿನಲ್ಲಿ ಗುರುತು ಸಿಗಲಾರದಷ್ಟು ಬದಲಾಗಿ ಹೋಗಿದ್ದರು. ಅಕಾಲ ವೃದ್ಧಾಪ್ಯ ಅವರನ್ನು ಆವರಿಸಿಕೊಂಡಿತ್ತು. ಊಟ ನಿದ್ರೆ, ಆರೋಗ್ಯದ ಬಗೆಗಿನ ಕಾಳಜಿ ಎಲ್ಲವೂ ಏರು ಪೇರಾಗಿತ್ತು. ಸದಾ ಪೊಲೀಸರ ಗುಂಡಿನ ದಾಳಿಯ ತೂಗುಕತ್ತಿಯ ಕೆಳೆಗೆ ಬದುಕು ದೂಡಬೇಕಾಗಿ ಬಂದ ಕಾರಣ ಕೆಲವು ಸಂದರ್ಭದಲ್ಲಿ ಅರಣ್ಯದಲ್ಲಿ ದಿನವೊಂದಕ್ಕೆ 20 ಕಿಲೋಮೀಟರ್ ನಡೆಯಬೇಕಾದ್ದು ಅನಿವಾರ್ಯವಾಯಿತು. 2007ರ ವೇಳೆಗೆ ಮಲೇರಿಯಾ ಕಾಯಿಲೆಗೆ ತುತ್ತಾದ ಅನುರಾಧ ನಂತರದ ದಿನಗಳಲ್ಲಿ ಅಂಗಾಂಗ ವೈಫಲ್ಯದ ಕಾಯಿಲೆ ಬಲಿಯಾಗ ಬೇಕಾಯಿತು. ಎರಡು ಬಾರಿ ಗುಪ್ತವಾಗಿ ಮುಂಬೈ ನಗರಕ್ಕೆ ಬಂದು ತನ್ನ ಅಣ್ಣ ಪ್ರಸಿದ್ಧ ರಂಗಕರ್ಮಿ ಸುನಿಲ್ ಶಾನ್‌ಬೋಗ್ ನೆರವಿನಿಂದ ಚಿಕಿತ್ಸೆ ಪಡೆದರು ಕೂಡ ಆ ವೇಳೆಗಾಗಲೇ ಕಾಲ ಮೀರಿ ಹೋಗಿತ್ತು. 2008 ಏಪ್ರಿಲ್ 8 ರಂದು ಬಸ್ತಾರ್  ಅರಣ್ಯ ನಿವಾಸಿಗಳ ಎದುರಲ್ಲಿ ಕೊನೆಯವರೆಗೂ ಅವರ ಸೇವೆ ಮಾಡಿದ ಸಂತೃಪ್ತಿಯಲ್ಲಿ ಅನುರಾಧ ಪ್ರಾಣಬಿಟ್ಟರು. ತನ್ನ ಬಾಳಸಂಗಾತಿಯ ಸಾವು ಕೊಬದ್ ಗಾಂಡಿಯ ಬದುಕಿನಲ್ಲಿ ದುಖಃಕ್ಕಿಂತ ಇನ್ನಷ್ಟು ಬದ್ಧತೆಯನ್ನು ಹೆಚ್ಚಿಸಿತು. ಆಕೆಯ ಛಲ, ಬಾಯಿಲ್ಲದವರ ಪರವಾಗಿ ಅನುರಾಧ ಎತ್ತಿದ ಪ್ರತಿಭಟನೆಯ ಧ್ವನಿ ಇವೆಲ್ಲವೂ ಕೊಬದ್ ಗಾಂಡಿಯ ಮನಸ್ಸನ್ನು ಇನ್ನಷ್ಟು ಗಟ್ಟಿಗೊಳಿಸಿದ್ದವು. ಆದರೆ, ಆ ವೇಳೇಗಾಗಲೇ ಅವರ ಮನಸ್ಸು ದೇಹ ಎರಡೂ ದಣಿದಿದ್ದವು. ಮರು ವರ್ಷ ಅಂದರೆ, 2009ರಲ್ಲಿ ಅವರ ಅನಾರೋಗ್ಯವೂ ಹದಗೆಟ್ಟಿತು. ಚಿಕಿತ್ಸೆಗಾಗಿ ದೆಹಲಿಗೆ ಬಂದು ಪೊಲೀಸರ ಬಂಧಿಯಾಗಿ ತಿಹಾರ್ ಸೆರೆಮನೆಯಲ್ಲಿ ಅತ್ಯಂತ ಸುರಕ್ಷಿವಾದ ಜಾಗದಲ್ಲಿ ವಿಚಾರಣಾ ಕೈದಿಯಾಗಿ ಈಗ ದಿನ ನೂಕುತ್ತಿದ್ದಾರೆ. ಅವರ ಚಿಂತನೆಯಾಗಲಿ, ಪ್ರಖರ ವೈಚಾರಿಕತೆಯಾಗಲಿ, ಭವಿಷ್ಯ ಭಾರತದ ಬಗೆಗಿನ ಕನಸಾಗಲಿ, ಇವುಗಳು ಸೆರೆಮನೆಯ ವಾಸದಿಂದ ಒಂದಿಷ್ಟು ಮುಕ್ಕಾಗಿಲ್ಲ. ಮತ್ತಷ್ಟು ಬಲಿಷ್ಟವಾಗಿವೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ದೆಹಲಿ ಮೂಲದ ಪತ್ರಕರ್ತ ರಾಹುಲ್ ಪಂಡಿತ್ ಎಂಬುವರ ಕೃತಿಗೆ ಇವರು ಬರೆದಿರುವ ಒಂದು ಪತ್ರ ಅಭಿವೃದ್ಧಿಯ ಅಂಧಯುಗದಲ್ಲಿ ಹಾದಿ ತಪ್ಪಿರುವ ಭಾರತಕ್ಕೆ ಬೆಳಕಾಗಬಲ್ಲದು.

ಇತ್ತ ನಾಗಪುರ ನಗರದಲ್ಲಿ ಇವರ ವಾಸವಾಗಿದ್ದ ಅಂಚೆ ಕಚೇರಿಯ ದಲಿತ ನೌಕರನೊಬ್ಬನ ಬಾಡಿಗೆ ಮನೆ ಈಗಲೂ ಖಾಲಿ ಉಳಿದಿದೆ. ದೀದಿ (ಅನುರಾಧ) ಸಾವಿನ ಸುದ್ಧಿ ತಿಳಿದ ಮನೆಯ ಮಾಲಿಕ ಗಾಂಧಿ ಸಾಹೇಬ್ ಬಂದರೆ (ಕೊಬದ್ ಗಾಂಡಿ), ಅವರಿಗಾಗಿ ಮನೆ ಇರಲಿ ಎಂದು ಕಾಯ್ದಿರಿಸಿದ್ದಾನೆ. ಆ ಮನೆಯ ಬಾಗಿಲಿಗೆ ಅಂಟಿಸಿದ್ದ ಭಗತ್ ಸಿಂಗ್ ಚಿತ್ರ ಕೂಡ ಹಾಗೇ ಉಳಿದಿದೆ. ಇವತ್ತು ಬಂಡಾರ, ಗಡ್ ಚಿರೋಲಿ, ಚಂದ್ರಾಪುರ್ ಗೊಂಡಿಯಾ, ಬಾಳ್ಘಾಟ್ ಬಸ್ತಾರ್ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಅಲ್ಲಿನ ಬುಡಕಟ್ಟು ಜನಾಂಗ ಅನುರಾಧ ದೀದಿಯ ನೆನಪಲ್ಲಿ ಕಾಂತಿಕಾರಿ ಹಾಡೊಂದನ್ನು ಕಟ್ಟಿ ಗೊಂಡಿ ಭಾಷೆಯಲ್ಲಿ ಹಾಡುತ್ತಾರೆ. ಆ ಹಾಡಿನ ಅರ್ಥ ಹೀಗಿದೆ:

ನಾನು ಹಾಡುವ ಹಾಡಿಗೆ ಸಾವಿರ ವರ್ಷಗಳ ಇತಿಹಾಸವಿದೆ.
ದುಃಖ ದುಮ್ಮಾನದ ನಡುವೆ ಅದಕೆ ಅಷ್ಟೇ ಸಿಟ್ಟಿದೆ.
ನಾನು ಹಾಡುವ ಕಹಿ ರುಚಿಯ ಹಾಡಿನ ಅರ್ಥ ಹಳೆಯದು,
ಆದರೆ ಹಾಡುವ ರಾಗ ಮಾತ್ರ ಹೊಸದು. ಅದು ನನ್ನದು.
ಇದರಿಂದ ನಿಮಗೆ ಭಯವಾದರೆ ಕಾರಣ ನಾನಲ್ಲ,
ಈ ಕ್ರೂರ ವ್ಯವಸ್ಥೆಯದು, ಅದರ ಭಾಗವಾದ ನಿಮ್ಮದು.

ನಕ್ಸಲ್ ಹೋರಾಟದ ಕಥನದಲ್ಲಿ ಇಂತಹ ನೂರಾರು ಮನಕರಗುವ ಘಟನೆಗಳಿವೆ. ನಮ್ಮ ಕನ್ನಡಿಗ ಸಾಕೇತ್‌ ರಾಜನ್ ಮತ್ತು ಅವರ ಪತ್ನಿ ರಾಜೇಶ್ವರಿ ಎಂಬ ಹೆಣ್ಣು ಮಗಳ ಹೋರಾಟದ ಬದುಕು ಕೂಡ ಕೊಬದ್ ಗಾಂಡಿ ದಂಪತಿಗಳ ಬದುಕಿಗಿಂತ ಭಿನ್ನವಾಗಿಲ್ಲ. ಆದರೆ ಪ್ರಶ್ನೆಯಿರುವುದೇ ಇಲ್ಲಿ. ಯಾಕೆ ವಿದ್ಯಾವಂತರು, ಬುದ್ಧಿಜೀವಿಗಳು ನಕ್ಸಲರ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ ಎಂಬ ಪ್ರಶ್ನೆಯಿಟ್ಟುಕೊಂಟು ಭಾರತದ ಆದಿವಾಸಿಗಳ ನೋವಿನ ಹಾಗೂ ಧಾರುಣವಾದ ಬದುಕನ್ನು ಗಮನಿಸಿದರೆ, ಯಾರಿಗೂ ಇವರ ನೋವಿನ ಕಥೆ ಬರೆಯಲು ಲೇಖನಿ ಕೈಗೆತ್ತಿಕೊಳ್ಳಬೇಕು ಎನಿಸುವುದಿಲ್ಲ. ಮುಂದಿನ ಅಧ್ಯಾಯದಲ್ಲಿ ತೆರೆದಿಡುವ ಆದಿವಾಸಿಗಳ ನೋವಿನ ಕಥನ ಅವರು ಅಂತಹ ಕೆಟ್ಟ ವ್ಯವಸ್ಥೆಯ ವಿರುದ್ಧ ಬಂದೂಕು ಕೈಗೆತ್ತಿಕೊಳ್ಳಲು ಇದ್ದಿರಬಹುದಾದ ಕಾರಣಗಳನ್ನು ಬಿಚ್ಚಿಡುತ್ತದೆ.

(ಮುಂದುವರಿಯುವುದು)

ಗುಜರಾತ್ ಹತ್ಯಾಕಾಂಡ (ಮೋದಿ ಮತ್ತು ಮುಖವಾಡ)


– ಡಾ.ಎನ್.ಜಗದೀಶ್ ಕೊಪ್ಪ


                                         
ಗುಜರಾತ್‌ನಲ್ಲಿ 2002 ರಲ್ಲಿ ಗೋದ್ರಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಕರಸೇವಕರ ಹತ್ಯೆಗೆ ಪ್ರತಿಯಾಗಿ ಇಡೀ ರಾಜ್ಯಾದಂತ್ಯ ಹಿಂದೂ ಸಂಘಟನೆಗಳು ನಡೆಸಿದ ಹಿಂಸಾಚಾರ, ಕೊಲೆ, ಸುಲಿಗೆ, ನರಮೇಧ ಇಡೀ ಭಾರತ ಮಾತ್ರವಲ್ಲ, ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಆಗ ನರೇಂದ್ರಮೋದಿ ಎಂಬ ಗೋವಿನ ಮುಖವಾಡದ ವ್ಯಾಘ್ರ ಮುಖ್ಯಮಂತ್ರಿಯಾಗಿದ್ದುಕೊಂಡು ಇಂತಹ ಅಮಾನವೀಯ ನರಹತ್ಯೆಯನ್ನು ಬಹಿರಂಗವಾಗಿ ಪ್ರಾಯೋಜಿಸಿದ್ದು ರಹಸ್ಯದ ಸಂಗತಿಯಾಗಿ ಉಳಿದಿರಲಿಲ್ಲ.

ಜಗತ್ತಿನ ಶ್ರೇಷ್ಟ ಸುದ್ಧಿ ಮಾಧ್ಯಮ ಸಂಸ್ಥೆಗಳಾದ ರಾಯಿಟರ್ ಮತ್ತು ಅಸೋಷಿಯೇಟೆಡ್ ಪ್ರೆಸ್‌ನ ವರದಿಗಾರರು ಮತ್ತು ಛಾಯಾಚಿತ್ರ ಗ್ರಾಹಕರು ಅಹಮದಾಬಾದ್ ಸೇರಿದಂತೆ ಗುಜರಾತ್‌ನ ವಿವಿಧ ನಗರಗಳಲ್ಲಿ ವಿ.ಹೆಚ್.ಪಿ. ಮತ್ತು ಭಜರಂಗದಳ ಕಾರ್ಯಕರ್ತರು ನಡೆಸಿದ ಹತ್ಯಾಕಾಂಡವನ್ನು ಪರಿಣಾಮಕಾರಿಯಾಗಿ ದಾಖಲಿಸಿ ಜಗತ್ತಿನ ಮುಂದೆ ಇಟ್ಟರು.  ಭಾರತದ ಇತಿಹಾಸದಲ್ಲಿ ಕಂಡರಿಯದ ಸರಣಿ ಮಾನವ ಹತ್ಯೆಯ ಮನಕಲಕುವ ಇಂತಹ ಅಮಾನವೀಯ ಕೃತ್ಯಕ್ಕೆ ಗುಜರಾತ್‌ನ ಪೊಲೀಸರು ಮತ್ತು ಅಲ್ಲಿನ ರಾಜಕಾರಣಿಗಳು ಕೈ ಜೋಡಿಸಿದ್ದು ಕೂಡ ರಹಸ್ಯವಾಗಿ ಉಳಿದಿರಲಿಲ್ಲ. ಇದೆಲ್ಲವನ್ನೂ ಭಾರತದ ಮಾಧ್ಯಮ ಸೇರಿದಂತೆ ಜಗತ್ತಿನ ಮಾಧ್ಯಗಳು ಸಹ ಪ್ರತಿಬಿಂಬಿಸಿದ್ದವು.

ಅಧಿಕಾರದ ಗದ್ದುಗೆಗಾಗಿ ಧರ್ಮವನ್ನು ಆಯುಧವಾಗಿ ಬಳಸಿಕೊಳ್ಳುವ ಕೆಟ್ಟ ಇತಿಹಾಸವಿರುವ ಬಿ.ಜೆ.ಪಿ. ಪಕ್ಷವು ಈ ಸಂದರ್ಭದಲ್ಲಿ ರಣಹದ್ದಿನಂತೆ ಅಲ್ಪ ಸಂಖ್ಯಾತರ ಮೇಲೆ ಎರಗಿ ಬಿದ್ದಿತು. ಒಂದು ರಾಜ್ಯದ ಮುಖ್ಯ ಮಂತ್ರಿಯಾಗಿ ಎಲ್ಲಾ ಕೋಮುಗಳ ಜೀವ ರಕ್ಷಿಸಬೇಕಾಗಿದ್ದ ನರೇಂದ್ರ ಮೋದಿ, ರಕ್ಕಸ ಪಡೆಯ ನಾಯಕನಂತೆ ಹಿಂಸಾಚಾರದ ಹಿಂದೆ ನಿಂತಿದ್ದು ರಾಜಕೀಯ ಇತಿಹಾಸದ ಕಪ್ಪುಚುಕ್ಕೆಗಳಲ್ಲಿ ಒಂದು. ಇದು ಇವತ್ತಿಗೂ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನಿಗೆ ಕಾಡುವ ನೋವು.

ಈ ಘಟನೆಯ ನಂತರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮೋದಿ ನಡೆಸಿದ ತಂತ್ರ, ಹಾಕಿದ ವೇಷ, ತೊಟ್ಟ ಮುಖವಾಡಗಳು ಲೆಕ್ಕಕ್ಕಿಲ್ಲ. ಆದರೆ, ಮೋದಿಯ ಎಲ್ಲಾ ತಂತ್ರಗಾರಿಕೆಯ ವಿರುದ್ಧ ನಿರಂತರವಾಗಿ ಸಂತ್ರಸ್ತರ ಪರ ಹೋರಾಟ ನಡೆಸಿದ ಒಬ್ಬ ಮಹಿಳೆ (ತೀಸ್ತಾ ಸೆತಲ್ವಾಡ್) ಮತ್ತು ಪ್ರಸಿದ್ಧ ಪತ್ರಕರ್ತ ತೇಜ್ ಪಾಲ್ ನೇತೃತ್ವದ ತೆಹಲ್ಕಾ ಎಂಬ ಇಂಗ್ಲಿಷ್ ನಿಯತಕಾಲಿಕೆಯ ಹೋರಾಟದ ಫಲವಾಗಿ ಗುಜರಾತ್ ನರಮೇಧದ ಸಂತ್ರಸ್ತರಿಗೆ ಅಂತಿಮವಾಗಿ ನ್ಯಾಯ ದೊರೆತಿದೆ. ಗುಜರಾತ್ ಮುಖ್ಯಮಂತ್ರಿ ನರೆಂದ್ರ ಮೋದಿಯ ಮುಖವಾಡ ಕಳಚಿಬಿದ್ದಿದೆ.

ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗೋಧ್ರಾ ಘಟನೆಯ ನಂತರ ನಡೆದ ಹಿಂಸೆ ಮತ್ತು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸ್ಥಾಪಿತವಾಗಿದ್ದ ವಿಶೇಷ ನ್ಯಾಯಾಲಯ 2002ರಲ್ಲಿ ನರೋಡ ಪಟಿಯಾ ಎಂಬ ಸ್ಥಳದಲ್ಲಿ ನಡೆದ 97 ಮಂದಿಯ ಹತ್ಯೆಗೆ ಸಂಬಂಧಿಸಿದಂತೆ 31 ಮಂದಿಗೆ ವಿವಿಧ ರೂಪದ ಶಿಕ್ಷೆಯನ್ನು ಪ್ರಕಟಿಸಿದೆ. ಘಟನೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮೋದಿಯ ಆಪ್ತರಲ್ಲಿ ಒಬ್ಬಳಾಗಿದ್ದ, ಮಾಜಿ ಸಚಿವೆ ಹಾಗೂ ಹಾಲಿ ನರೋಡ ಪಟಿಯಾ ಶಾಸಕಿಯಾದ ಮಾಯಾಬೆನ್ ಎಂಬಾಕೆಗೆ 28 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹತ್ಯೆಯ ನಾಯಕತ್ವ ವಹಿಸಿದ್ದ ಭಜರಂಗ ದಳದ ಮುಖಂಡ ಬಾಬು ಬಜರಂಗಿ ಎಂಬಾತನಿಗೆ ಜೀವನ ಪೂರ್ತಿ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಉಳಿದ 29 ಮಂದಿ ನರ ಹಂತಕರಿಗೆ 14 ರಿಂದ 21 ವರ್ಷದವರೆಗೆ  ಶಿಕ್ಷೆ ನೀಡಲಾಗಿದೆ.

ಭಾರತದ ನ್ಯಾಯಾಲಯದ ಇತಿಹಾಸದಲ್ಲಿ ಇದೊಂದು ಮಹತ್ವದ ತೀರ್ಪು ಎಂದರೆ, ಅತಿಶಯೋಕ್ತಿ ಅಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜದಲ್ಲಿ ಕಾನೂನು ಕೈಗೆತ್ತಿಕೊಳ್ಳುವ ರಾಜಕಾರಣಿಗಳಿಗೆ ಇದು ಎಚ್ಚರಿಕೆಯ ಗಂಟೆಯಂತಿದೆ.

ಗುಜರಾತ್‌ನ ಹಿಂಸೆಯ ರೂವಾರಿಯೆಂದು ಕರೆಯಲ್ಪಡುವ ನರೇಂದ್ರ ಮೋದಿ ಇಷ್ಟೆಲ್ಲಾ ಕಪ್ಪು ಚುಕ್ಕೆಯ ನಡುವೆ ಮತ್ತೇ ಬಿ.ಜೆ.ಪಿ. ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ತಾನೇ ಮುಖ್ಯ ಮಂತ್ರಿ ಪದವಿಗೆ ಏರಿದ್ದು ಇವೆಲ್ಲಾ ಈಗ ಇತಿಹಾಸ. ಭಾರತದ ರಾಜಕಾರಣವನ್ನು ಮತ್ತು ಇಲ್ಲಿನ ಬಡತನ, ಅನಕ್ಷರತೆ, ಜಾತೀಯತೆ, ಹಾಗೂ ಧರ್ಮದ ಪ್ರಭಾವ ಕುರಿತು ಒಳನೋಟವುಳ್ಳವರಿಗೆ ಇದು ಅಚ್ಚರಿಯ ಸಂಗತಿಯೇನಲ್ಲ.

ತನಗೆ ಅಂಟಿದ ಹತ್ಯಾಕಾಂಡದ ಕಳಂಕವನ್ನು ತೊಳೆದು ಕೊಳ್ಳುವ ನಿಟ್ಟಿನಲ್ಲಿ ಮೋದಿ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಗುಜರಾತ್ ರಾಜ್ಯದ ಅಭಿವೃದ್ಧಿಗೆ ಶ್ರಮ ಪಟ್ಟಿರುವುದು ನಿಜ. ವ್ಯಯಕ್ತಿಕ ನೆಲೆಯಲ್ಲಿ ಒಂದಿಷ್ಟೂ ಭ್ರಷ್ಟಾಚಾರದ ಕಳಂಕವನ್ನು ಹೊಂದಿರದ ನರೇಂದ್ರ ಮೋದಿ ಬ್ರಹ್ಮಚಾರಿಯಾಗಿದ್ದು ಕೊಂಡು ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಅಲ್ಲಿನ ರಸ್ತೆಗಳು, ರೈತರಿಗೆ ಸಿಗುತ್ತಿರುವ ನಿರಂತರ 24 ಗಂಟೆಗಳ ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೇವೆ, ಕೃಷಿ ಮತ್ತು ಶಿಕ್ಷಣಕ್ಕೆ ನೀಡಿರುವ ಆದ್ಯತೆ, ಕೈಗಾರಿಕೆಗಳ ಬೆಳವಣಿಗೆ ಇವೆಲ್ಲವೂ ಭಾರತದಲ್ಲಿ ಗುಜರಾತ್ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತಿಸಿವೆ. ಆದರೆ, ಈ ಶ್ರಮ ಮೋದಿಯ ಕಳಂಕವನ್ನು ತೊಡೆದುಹಾಕಲಾರವು. ಮೋದಿಯ ಇಂದಿನ ಸ್ಥಿತಿ ಮೈಯೆಲ್ಲಾ ಬಂಗಾರ ಅಂಡು ಮಾತ್ರ ಹಿತ್ತಾಳೆ ಎಂಬಂತಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಬಿ.ಜೆ.ಪಿ. ಪಕ್ಷದಲ್ಲಿ ರಾಷ್ಟೀಯ ನಾಯಕನಾಗಿ ಗುರುತಿಸಿಕೊಂಡು ಮುಂದಿನ ಪ್ರದಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದ ಮೋದಿಗೆ ನ್ಯಾಯಾಲಯದ ತೀರ್ಪು ಅಡ್ಡಗಾಲು ಹಾಕಿದೆ. ಮೋದಿಯ ಅಭಿವೃದ್ಧಿಯ ಸಾಧನೆಗೆ ಹೋಲಿಸಿದರೆ, ಬಿ.ಜೆ.ಪಿ. ಪಕ್ಷದ ಜೊತೆ ಮೈತ್ರಿ ಹೊಂದಿರುವ ಬಿಹಾರದ ಜೆ.ಡಿ.ಯು. ಪಕ್ಷದ ನಿತೀಶ್ ಕುಮಾರ್ ಅಲ್ಲಿನ ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಒಂದು ಅನನ್ಯ ಸಾಧನೆ ಎಂದು ಬಣ್ಣಿಸಬಹುದು.

ಸ್ವಾತಂತ್ರ್ಯಾನಂತರದ ದಿನಗಳಿಂದಲೂ ಅನಕ್ಷರಸ್ತರ, ದೀನ ದಲಿತರ, ನಾಡಾಗಿ ಉಳ್ಳವರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದ, ಜಂಗಲ್ ರಾಜ್ ಎಂದು ಅಡ್ಡ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದ ಬಿಹಾರ್ ರಾಜ್ಯವನ್ನು ನಿತೀಶ್ ಕುಮಾರ್ ತಮ್ಮು ಶುದ್ದ ಚಾರಿತ್ಯ ಮತ್ತು ಬದ್ಧತೆಯಿಂದ ಇಡೀ ಭಾರತವೇ ಬೆರಗಾಗುವಂತೆ ಪುನರ್ ರೂಪಿಸಿದ್ದಾರೆ. ಬಿ.ಜೆ.ಪಿ. ಯಂತಹ ಕೋಮುವಾದಿಯ ಪಕ್ಷದ ಮೈತ್ರಿಯನ್ನು ಉಳಿಸಿಕೊಂಡು, ತಮ್ಮ ಜಾತ್ಯಾತೀತ ಮತ್ತು ಧರ್ಮಾತೀತ ನಿಲುವುಗಳನ್ನು ಎತ್ತಿ ಹಿಡಿದಿದ್ದಾರೆ. ಹಾಗಾಗಿ ಇವತ್ತು ಆರ. ಎಸ್.ಎಸ್. ನ ಮುಖಂಡ ಬಾಗವತ್ ನಿತೀಶ್‌ರವನ್ನು ಹೊಗಳಿ ಮುಂದಿನ ಎನ್.ಡಿ.ಎ. ಮೈತ್ರಿಕೂಟದ ಭಾವಿ ಪ್ರಧಾನಿ ಎಂಬ ಸಂದೇಶವನ್ನು ಹೊರ ಹಾಕಿದ್ದಾರೆ.

ಮುಂದುವರಿದ ರಾಜ್ಯವಾಗಿದ್ದ ಗುಜರಾತ್ ಅನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿಯವರ ಸಾಧನೆಗಳು ಈಗ ನಿತೀಶ್ ಕುಮಾರ್ ಸಾಧನೆಗಳ ಮುಂದೆ ನಗಣ್ಯವಾಗಿವೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದ್ದ ನರೇಂದ್ರ ಮೋದಿ ಸದ್ಭಾವನಾ ಹೆಸರಿನಲ್ಲಿ ಪಶ್ಚಾತಾಪದ ಉಪವಾಸ ಮಾಡಿ ಮುಸ್ಲಿಂ ಸಮುದಾಯವನ್ನು ಓಲೈಸಿಕೊಳ್ಳಲು ಮುಂದಾಗಿದ್ದರು. ಆದರೆ, ನರಮೇಧ ಕುರಿತಂತೆ ಒಂದೊಂದಾಗಿ ಹೊರ ಬೀಳುತ್ತಿರುವ ನ್ಯಾಯಾಲಯದ ತೀರ್ಪುಗಳು ಮೋದಿ ತೊಟ್ಟಿದ್ದ ಮುಖವಾಡಗಳನ್ನು ಕಳಚಿ ಹಾಕುತ್ತಿವೆ.

ನರೇಂದ್ರ ಮೋದಿ ಮಾತ್ರವಲ್ಲ ಇವರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ, ತಲೆಯ ಮೇಲೆ ಹೊತ್ತು ಮೆರೆಯುತ್ತಿರುವ ಜನ (ಇವರಲ್ಲಿ ಕರ್ನಾಟಕದ ಪತ್ರಕರ್ತರ ಪಡೆಯೂ ಇದೆ.) ಇವರೆಲ್ಲಾ ಅರಿಯ ಬೇಕಾದ ಸತ್ಯ ಒಂದಿದೆ. ಅದೇನೆಂದರೆ, ಮೋದಿ ತಮ್ಮ ಮುಖ ಮತ್ತು ಮೈಗೆ ಅಂಟಿದ ಮಸಿಯನ್ನು ಮಾತ್ರ ತೊಳೆದುಕೊಳ್ಳ ಬಲ್ಲರು, ಆದರೆ, ಅವರ ಆತ್ಮಕ್ಕೆ, ಮತ್ತು ವ್ಯಕ್ತಿ ಚಾರಿತ್ಯಕ್ಕೆ ಅಂಟಿದ ಮಸಿಯನ್ನು ಶತ ಶತಮಾನ ಕಳೆದರೂ ತೊಳೆದುಕೊಳ್ಳಲು. ಸಾಧ್ಯವಿಲ್ಲ. ಈ ಕಟು ವಾಸ್ತವ ಸತ್ಯವನ್ನು ಮೋದಿಯ ಹೊಗಳು ಭಟ್ಟರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು.

 

ಸಾಮಾಜಿಕ ಚಳವಳಿ ಮತ್ತು ವರ್ತಮಾನದ ಸವಾಲುಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದ ಸಾಮಾಜಿಕ ಮತ್ತು ರಾಜಕೀಯ ರಂಗದಲ್ಲಿ ಕ್ಷಿಪ್ರ ಗತಿಯಲ್ಲಿ ಸಂಭವಿಸಿದ ಘಟನೆಗಳು ಮತ್ತು ಉಂಟಾದ ಪಲ್ಲಟಗಳು ಪ್ರಜ್ಞಾವಂತರ ಎದೆಯಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ದೇಶದ ಅವಿಭಾಜ್ಯ ಅಂಗದಂತಿರುವ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜಾರೆ ಎತ್ತಿದ ನೈತಿಕ ಪ್ರಶ್ನೆಗಳು ಹಾಗೂ ಹುಟ್ಟುಹಾಕಿದ ಚಳವಳಿ ಹೊಸ ತಲೆಮಾರಿಗೆ ಭರವಸೆಯನ್ನು ಹುಟ್ಟುಹಾಕಿದ್ದು ನಿಜ. ಆದರೆ, ಅಣ್ಣಾ ಚಳವಳಿ ಒಂದು ಚಂಡಮಾರುತದಂತೆ ಅಪ್ಪಳಿಸಿ ಮರೆಯಾದದ್ದು ಏಕೆ? ಎಂಬ ಪ್ರಶ್ನೆಗೆ ನಾವೀಗ ಉತ್ತರ ಕಂಡುಕೊಳ್ಳಬೇಕಾಗಿದೆ. ಅದೇ ರೀತಿ ಈಗ ಕಪ್ಪು ಹಣದ ಬಗ್ಗೆ ಧ್ವನಿ ಎತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ಇವರ ಚಳವಳಿ ಕೂಡ ಮೂಲೆ ಗುಂಪು ಸೇರಲು ಬಹಳ ದಿನ ಬೇಕಾಗಿಲ್ಲ, ಎನಿಸುತ್ತಿದೆ.

ಭಾರತದ ಹೋರಾಟದ ಇತಿಹಾಸ ಬಲ್ಲವರು ಅಣ್ಣಾ ಮತ್ತು ರಾಮ್ ದೇವ್ ಹುಟ್ಟು ಹಾಕಿದ ಚಳವಳಿಗಳ ಬಗ್ಗೆ ಈ ಮೊದಲೇ ಸಂಶಯ ವ್ಯಕ್ತ ಪಡಿಸಿದ್ದರು. ಯಾವುದೇ ಒಂದು ಹೋರಾಟ ತಳ ಮಟ್ಟದಿಂದ ರೂಪುಗೊಳ್ಳಬೇಕೆ ಹೊರತು, ಮೇಲಿನಿಂದ ಅಲ್ಲ.

ಭ್ರಷ್ಟಾಚಾರದ ವಿರುದ್ಧದ ಹೋರಾಟಗಳು ಭಾರತದಲ್ಲಿ ಏಕೆ ವಿಫಲವಾಗುತ್ತಿವೆ ಎಂಬುದಕ್ಕೆ ನಾವು ಇತಿಹಾಸದತ್ತ ಗಮನ ಹರಿಸಲೇಬೇಕು. ಏಕೆಂದರೆ, ಇತಿಹಾಸವೆಂದರೆ ಕೇವಲ ಭೂತಕಾಲದ ದಾಖಲೆ ಅಷ್ಟೇ ಅಲ್ಲ, ಅದು ಮನುಷ್ಯನ ತಪ್ಪುಗಳ ಸರಮಾಲೆಯ ಗ್ರಂಥವೂ ಹೌದು. ಎಚ್ಚರಿಕೆಯ ಗಂಟೆಯೂ ಹೌದು.

ಅಣ್ಣಾ ಹಜಾರೆಯ ಹೋರಾಟಕ್ಕೆ ಸಿಕ್ಕ ಮಾಧ್ಯಮಗಳ ಬೆಂಬಲ ಮತ್ತು ಅಸಂಖ್ಯಾತ ಯುವ ಜನತೆಯ ಸ್ಪೂರ್ತಿ ಕಾಲಕ್ರಮೇಣ ಏಕೆ ಕರಗಿಹೋಯಿತು? ಭಾರತದಲ್ಲಿ ಕ್ರಾಂತಿ ಜರುಗಿ ಹೋಯಿತು ಎಂದು ಹಗಲು, ರಾತ್ರಿ ಗಂಟಲು ಹರಿದುಕೊಂಡ ನಮ್ಮ ದೃಶ್ಯ ಮಾಧ್ಯಮಗಳು, ಅದೇ ಅಣ್ಣಾ ತಂಡದ ಸದಸ್ಯರ ಜಾತಕವನ್ನು ಜಾಲಾಡಿ, ಅವರ ನೈತಿಕತೆಯನ್ನು ಏಕೆ ಕುಗ್ಗಿಸಿದವು ಎಂಬುದನ್ನು ಅರ್ಥಮಾಡಿಕೊಂಡರೆ, ನಮ್ಮ ಸಾಮಾಜಿಕ ಚಳವಳಿಯ ರೂಪು ರೇಷೆ ಹೇಗಿರಬೇಕೆಂಬ ಆಲೋಚನೆಗಳು ಹೊಳೆಯುತ್ತವೆ.

1920-30 ರ ದಶಕದಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಸಮರ ಸಾರಿದ ಗಾಂಧೀಜಿಗೆ ಅಂದಿನ 30 ಕೋಟಿ ಜನತೆಯ ಬೆಂಬಲ ಹೇಗೆ ದೊರೆಯಿತು ಎಂಬುದು ಅರ್ಥವಾದರೆ, ನಮ್ಮ ಮುಂದಿನ ಚಳವಳಿಯ ಸ್ವರೂಪ ಕೂಡ ಸ್ವಷ್ಟವಾಗ ಬಲ್ಲದು.

ಅನಕ್ಷರಸ್ಥರ ನಾಡಾದ ಭಾರತದಲ್ಲಿ , ಯಾವ ಪ್ರಭಾವಿ ಮಾಧ್ಯಮಗಳ ಬೆಂಬಲವಿಲ್ಲದೆ ಗಾಂಧೀಜಿಯ ಸಂದೇಶಗಳು ನಾಡಿನ ಮೂಲೆ ಮೂಲೆಗೆ ತಲುಪುತಿದ್ದವು. ಗಾಂಧೀಜಿಯ ಕರೆಗೆ ಓಗೊಟ್ಟು ತಮ್ಮ ಮನೆ ಮಠಗಳನ್ನು ತೊರೆದು ಜನ ಬೀದಿಗೆ ಬರುತಿದ್ದರು. ಏಕೆ? ಗಾಂಧೀಜಿ ಒಬ್ಬ ಸಂತನಾಗಿರಲಿಲ್ಲ, ಅಥವಾ ಪ್ರವಾದಿಯಾಗಿರಲಿಲ್ಲ. ಕೇವಲ ನಮ್ಮ ನಿಮ್ಮಂತೆ ಎಲ್ಲಾ ದೌರ್ಬಲ್ಯಗಳನ್ನು ಉಳ್ಳ ನಾಯಕರಾಗಿದ್ದರು. ಆದರೆ, ಅವರ ಪಾರದರ್ಶಕತೆಯ ಬದುಕು, ಅವರನ್ನು ಮಹಾತ್ಮನನ್ನಾಗಿಸಿತು. ಯಾವುದೇ ಒಂದು ಜನನಾಯಕನಿಗೆ ಒಂದು ಸಮುದಾಯದ ಇಲ್ಲವೇ ಒಂದು ನಾಡಿನ ನೋವನ್ನು ತನ್ನದೆಂದು ಪರಿಭಾವಿಸುವ ಮಾತೃ ಹೃದಯವಿರಬೇಕು. ಅಂತಹ ಹೃದಯ ಭಾರತದ ನೆಲದಲ್ಲಿ ಗಾಂಧೀಜಿಗಿತ್ತು, ಅಂಬೇಡ್ಕರ್ ಗಿತ್ತು. ಇಂತಹ ವ್ಯಕ್ತಿಗಳ ಮಾದರಿಯನ್ನು ವರ್ತಮಾನದ ಭಾರತದಲ್ಲಿ ನಾವು ಯಾರಲ್ಲಿ ಕಾಣೋಣ?

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಷ್ಟೋ ಬಾರಿ ಗಾಂಧೀಜಿ ಹಾದಿ ತಪ್ಪಿದ್ದುಂಟು. ಇಂತಹ ವೇಳೆಯಲ್ಲಿ ಅವರನ್ನು ಕಟು ಮಾತುಗಳಲ್ಲಿ ಟೀಕೆ ಮಾಡಿ ಸರಿ ದಾರಿಗೆ ತರಲು ಅಂಬೇಡ್ಕರ್ ಇದ್ದರು, ಲೋಹಿಯಾ ಇದ್ದರು, ಈಗ ಯಾರಿದ್ದಾರೆ? ಅಂತಹ ನೈತಿಕತೆ ಭಾರತದ ರಾಜಕೀಯದಲ್ಲಿ ಯಾರು ಉಳಿಸಿಕೊಂಡಿದ್ದಾರೆ?

ಅಣ್ಣಾ ಹಜಾರೆ ಶುದ್ಧ ಚಾರಿತ್ರ್ಯವುಳ್ಳ ವ್ಯಕ್ತಿ ನಿಜ. ಇದೊಂದೇ ಅರ್ಹತೆ ಬಹು ಸಂಸ್ಕೃತಿ, ಬಹು ಧರ್ಮಗಳ ನಾಡಾದ ಭಾರತಕ್ಕೆ ಸಾಲದು. ನಮ್ಮನ್ನು ಆಳುವ ಸರ್ಕಾರಗಳು ಯಾವುವೇ ಇರಲಿ, ತಮ್ಮ ಹಾದಿಗೆ ಮುಳ್ಳಾಗುವ ಯಾವುದೇ ಹೋರಾಟವನ್ನು ಬಗ್ಗು ಬಡಿಯುವ ಕೌಶಲ್ಯಗಳನ್ನು ಅವು ಕರಗತ ಮಾಡಿಕೊಂಡಿವೆ. ಸರ್ಕಾರಗಳ ಜೊತೆ ಭ್ರಷ್ಟಾಚಾರಕ್ಕೆ ಕೈ ಜೋಡಿಸಿರುವ, ಈಸ್ಟ್ ಇಂಡಿಯಾ ಕಂಪನಿಯ ಮುಂದುವರಿದ ಸಂತತಿಯಂತಿರುವ ಆಧುನಿಕ ಕಾರ್ಪೋರೇಟ್ ಜಗತ್ತು ತೆರೆ ಮೆರೆಯಲ್ಲಿ ಕ್ರಿಯಾಶೀಲವಾಗಿದೆ. ಇಂತಹ ಅಗೋಚರ ಶಕ್ತಿಗಳನ್ನು ಮಣಿಸುವುದು ವರ್ತಮಾನದ ಚಳವಳಿಗಳಿಂದ ಸಾಧ್ಯವಿಲ್ಲ. ಅರೆಬೆಂದ ಮನಸ್ಥಿತಿಯ ಮಧ್ಯಮ ವರ್ಗದ ಜನತೆ ಮತ್ತು ಈ ನಾಡಿನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಯಾವುದೇ ತಿಳುವಳಿಯಿಲ್ಲದೆ, ಒಂದು ಮೂಗುತಿಗೆ, ಒಂದು ಬಾಟಲ್  ಅಗ್ಗದ ಸಾರಾಯಿಗೆ, ಐನೂರು ರೂಪಾಯಿ ನೋಟಿಗೆ ಪ್ರಾಮಾಣಿಕತೆಯಿಂದ ಮತವನ್ನು ದಾನ ಮಾಡುವ ಗ್ರಾಮಾಂತರ ಜನತೆಯನ್ನು ನಾವು ಪರಿರ್ತಿಸದೆ, ಹೋರಾಟ ಮಾಡಲು ಸಾಧ್ಯವೆ?

ಅಧಿಕಾರ ವಿಕೇಂದ್ರೀಕರಣದ ಪ್ರತಿಪಲವಾಗಿರುವ ನಮ್ಮ ಗ್ರಾಮ ಪಂಚಾಯಿತಿಗಳ ಭ್ರಷ್ಟಾಚಾರ ನಿಗ್ರಹಕ್ಕೆ ಸಾಮರ್ಥ್ಯವಿಲ್ಲದ ವ್ಯವಸ್ಥೆಯಲ್ಲಿ ಯಾವ ಚಳವಳಿಗಳ ಬಗ್ಗೆ ತಾನೆ ನಂಬಿಕೆ ಇಡಲು ಸಾಧ್ಯ? ಕಳೆದ ಮೂರು ವರ್ಷಗಳ ಹಿಂದೆ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಾಗಿ ನೇಮಕಗೊಂಡ 1800 ಯುವ ಪ್ರಾಮಾಣಿಕ ಪದವೀಧರರು ಏಕೆ ಹುದ್ದೆ ತೊರೆದು ಹೋಗುತಿದ್ದಾರೆ, ಅಥವಾ ಆತ್ಮಹತ್ಯೆಗೆ ಏಕೆ ಶರಣಾಗುತಿದ್ದಾರೆ? ಇವುಗಳ ಬಗ್ಗೆ ನಾವು ಎಂದಾದರೂ ಆತ್ಮಕ್ಕೆ ಪ್ರಶ್ನೆ ಹಾಕಿಕೊಂಡುದ್ದು ಉಂಟಾ?

ಕಪ್ಪು ಹಣದ ಬಗ್ಗೆ ಮಾತನಾಡುವ ಬಾಬಾ ರಾಮ್‌ದೇವ್‌ಗೆ ಕಳೆದ 2004ರ ಲೋಕಸಭೆಯಲ್ಲಿ ಇದ್ದ ಸದಸ್ಯರಲ್ಲಿ ಕೇವಲ 19 ಮಂದಿ ಕೋಟ್ಯಾಧಿಪತಿಗಳು ಇದ್ದರು, ಈಗಿನ ಲೋಕ ಸಭೆಯಲ್ಲಿ ಇವರ ಸಂಖ್ಯೆ 328 ಕ್ಕೆ ಹೇಗೆ ಏರಿದೆ ಎಂಬುದು ಮೊದಲು ತಿಳಿಯಬೇಕಿದೆ. ಬಿ.ಜೆ.ಪಿ. ಸದಸ್ಯರಿಗೆ ವೇದಿಕೆ ಮೇಲೆ ಹಾರ ಹಾಕಿ ಬರಮಾಡಿಕೊಳ್ಳುವ ಯೋಗ ಗುರು ವಿದೇಶದಲ್ಲಿ ಇರುವ ಕಪ್ಪು ಹಣ ತರುವ ಮೊದಲು ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.

ಕರ್ನಾಟಕದಲ್ಲಿ ನಾಯಕರ ಸ್ವಾರ್ಥ ಮನೋಭಾವದಿಂದ ನೆಲಕಚ್ಚಿರುವ, ಅಥವಾ ರೋಲ್ ಕಾಲ್ ಸಂಘಟನೆಗಳಾಗಿ ಪರಿವರ್ತನೆಗೊಂಡಿರುವ ರೈತಸಂಘ, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳನ್ನು ನೋಡಿದರೆ, ಯಾವ ಚಳವಳಿಯ ಬಗ್ಗೆ ಜನ ನಂಬಿಕೆ ಇಡಬೇಕು? ನೀವೆ ನಿರ್ಧರಿಸಿ.