Category Archives: ಜಗದೀಶ್ ಕೊಪ್ಪ

ತೆಲಂಗಾಣ ನೆಲದ ನೆನಪುಗಳು


– ಡಾ.ಎನ್.ಜಗದೀಶ್ ಕೊಪ್ಪ


ನಕ್ಸಲ್ ಹೋರಾಟದ ಇತಿಹಾಸ ದಾಖಲಿಸುವ ನಿಟ್ಟಿನಲ್ಲಿ ಕಳೆದ ಜನವರಿಯಿಂದ ಹಲವು ರಾಜ್ಯಗಳನ್ನು ಸುತ್ತುತ್ತಿದ್ದೇನೆ. ನಕ್ಸಲ್ ಹೋರಾಟದ ಎರಡನೇ ಹಂತದ ಇತಿಹಾಸದಲ್ಲಿ ಅಂದರೆ, ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ 1980ರ ದಶಕದಲ್ಲಿ ಆರಂಭಗೊಂಡ ಪ್ರಜಾಸಮರಂ ಅಥವಾ ಪೀಪಲ್ಸ್ ವಾರ್ ಗ್ರೂಪ್ ಎಂದು ಕರೆಸಿಕೊಳ್ಳುವ ನಕ್ಸಲಿಯ ಹೋರಾಟಕ್ಕೆ ಅತ್ಯಂತ ಮಹತ್ವವಿದೆ. ಇಂದು ದೇಶಾದ್ಯಂತ ನಡೆಯುತ್ತಿರುವ ನಕ್ಸಲಿಯರ ಹೋರಾಟಕ್ಕೆ ಮೂಲ ತಂತ್ರಗಳನ್ನು ಕಲಿಸಿಕೊಟ್ಟಿದ್ದು ಈ ಆಂಧ್ರದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದ ಪ್ರಜಾಸಮರಂ ತಂಡ.

ಇದರ ಇತಿಹಾಸ ಬರೆಯುವ ಮುನ್ನ ಆಂಧ್ರದ ಒಂದು ನೂರುವರ್ಷದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸವನ್ನು ಕೆದುಕುತ್ತಾ, ತೆಲಂಗಾಣ ಪ್ರಾಂತ್ಯಕ್ಕೆ ಹೋದ ನನಗೆ ಹಲವಾರು ಮಹತ್ವದ ವಿಷಯಗಳು ದೊರೆತವು.

1925ರ ದಶಕದಲ್ಲಿ ಭಾರತಕ್ಕೆ ಬಂದ ಎಡಪಂಥೀಯ ಸಿದ್ಧಾಂತ (ಕಮ್ಯೂನಿಷ್ಟ್) 1926ರಲ್ಲಿ ಆಂಧ್ರದ ತೆಲಂಗಾಣ ಪ್ರಾಂತ್ಯದಲ್ಲಿ ಆಂಧ್ರ ಪತ್ರಿಕೆ ಮತ್ತು ವಿಶಾಲಾಂಧ್ರ ಎಂಬ ಕಮ್ಯೂನಿಷ್ಟ್ ಮುಖವಾಣಿಯಾದ ಪತ್ರಿಕೆಯಿಂದ ಅಲ್ಲಿನ ಜನರಲ್ಲಿ ಬೇರೂರಿದೆ. ಆಂಧ್ರ ಪತ್ರಿಕೆ 1922 ರಿಂದ ಗಾಂಧೀಜಿಯ ಹೋರಾಟಗಳ ಜೊತೆ ಜೊತೆಗೆ ಎಡಪಂಥೀಯ ಚಿಂತನೆಗಳನ್ನು ಜನತೆ ಬಳಿ ಕೊಂಡೊಯ್ದಿದ್ದು ನಿಜಕ್ಕೂ ಗಮನಾರ್ಹ ಸಂಗತಿ. ಗೋದಾವರಿ ಆಚೆಗಿನ ಆ ಪ್ರದೇಶದ ಅಂದಿನ ದಿನಗಳಲ್ಲಿ ಸುಸಂಸ್ಕೃತರು, ವಿದ್ಯಾವಂತರೆಂದರೆ, ಬಹುತೇಕ ಬ್ರಾಹ್ಮಣರು ಮಾತ್ರ. ಅತಿ ಹೆಚ್ಚು ಬುಡಕಟ್ಟು ಜನಾಂಗಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಶೂದ್ರರಿಗೆ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಶಿಕ್ಷಣ ಸಿಕ್ಕಿತು. ಹಾಗಾಗಿ ಸ್ವಾತಂತ್ರ ಪೂರ್ವದ ಹೋರಾಟಗಾರರು, ಕ್ರಾಂತಿವೀರರು ಎಲ್ಲರೂ ಬಹುತೇಖ ಮೇಲ್ಜಾತಿಯಿಂದ ಬಂದವರಾಗಿದ್ದಾರೆ. ನಿಜಕ್ಕೂ ಆಶ್ಚರ್ಯವಾಗುವುದು, ಜಾತೀಯತೆ, ಶ್ರೇಣಿಕೃತ ಸಮಾಜದ ವ್ಯವಸ್ಥೆ ಇದ್ದ ಆದಿನಗಳಲ್ಲಿ ಅಗ್ರಹಾರ ಎನಿಸಿಕೊಂಡಿದ್ದ, ವಿಜಯವಾಡ ಮತ್ತು ರಾಜಮಂಡ್ರಿ ಪಟ್ಟಣದ ಬ್ರಾಹ್ಮಣರ ವಾಸಸ್ಥಳಗಳು ಎಲ್ಲಾ ಜಾತಿಗೆ ತೆರೆದುಕೊಂಡಿದ್ದವು. ಎಡಪಂಥೀಯ ಸಿದ್ಧಾಂತ ಅವರ ಮನಸ್ಸುಗಳನ್ನು ಎಲ್ಲಾ ವಿಧವಾದ ಕಂದಾಚಾರಗಳಿಂದ ಮುಕ್ತಗೊಳಿಸಿದ್ದವು. ಆ ಕಾಲದಲ್ಲಿ ಬಿಜೆವಾಡ ಎಂದು ಕರೆಸಿಕೊಳ್ಳುತಿದ್ದ ವಿಜಯವಾಡದಲ್ಲಿ ಅಪಾರ ಸಂಖ್ಯೆಯಲ್ಲಿ ಗಾಂಧಿ ಅಭಿಮಾನಿಗಳು ಇದ್ದರು. ಹಾಗಾಗಿ 1936ರಲ್ಲಿ ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದರು.

ತೆಲಂಗಾಣ ಪ್ರಾಂತ್ಯದ ಬಹುತೇಕ ಹಳ್ಳಿಗಳು ಸಿದ್ಧ ಮಾದರಿಯಲ್ಲಿ ರೂಪುಗೊಂಡಿವೆ. ಅಂದರೆ, ದಕ್ಷಿಣದ ಆಗ್ನೇಯ ದಿಕ್ಕಿಗೆ ಮಾದಿಗರ (ಹರಿಜನ) ಕೇರಿಗಳು, ನಂತರ ಶೂದ್ರರ ಕೇರಿಗಳು, ಆನಂತರ ಉತ್ತರ ದಿಕ್ಕಿನಲ್ಲಿ ಬ್ರಾಹ್ಮಣರ ಅಗ್ರಹಾರಗಳು. ಇದರ ಇತಿಹಾಸ ಕೆದಕಿದಾಗ ತಿಳಿದು ಬಂದ ಅಂಶವೆಂದರೆ, ವಾಸ್ತು ಪ್ರಕಾರ ಆಗ್ನೇಯ  ಮೂಲೆಯಿಂದ ಯಾವುದೇ ಗಾಳಿ ಬೀಸುವುದಿಲ್ಲ. ಆ ಕಾರಣಕ್ಕಾಗಿ ಇವತ್ತಿಗೂ ಮನೆ ನಿರ್ಮಿಸುವಾಗ ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ ಆಗ್ನೇಯ  ದಿಕ್ಕಿನಲ್ಲಿರುವಂತೆ ಸೂಚಿಸುತ್ತಾರೆ. ಅಡುಗೆ ಒಲೆಗೆ ಬೀಸುವ ಗಾಳಿ ಅಡ್ಡಿಯಾಗಬಾರದೆಂಬುದು ವಾಸ್ತು ಶಾಸ್ತ್ರದ ನಿಯಮ. ಆದರೆ, ಇಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುವ ಮತ್ತು ಸದಾ ಕೊಳಕಾಗಿರುವ ಹರಿಜನರಿಂದ ಯಾವುದೇ ಸೋಂಕು ಹರಡಬಾರದೆಂದು ಈ ರೀತಿ ಹಳ್ಳಿಗಳು ರಚನೆಯಾಗಿವೆಯಂತೆ.  ಇದಕ್ಕಿಂತ ಇನ್ನೊಂದು ಕುತೂಹಲದ ಸಂಗತಿ ನನ್ನ ಗಮನಕ್ಕೆ ಬಂದಿತು. ಸ್ವಾತಂತ್ರ್ಯ ಪೂರ್ವದಲ್ಲಿ ಅಲ್ಲಿನ ಬ್ರಾಹ್ಮಣರು ಮಧ್ಯಾಹ್ನ ಊಟದ ಸಮಯದಲ್ಲಿ ತಣ್ಣೀರು ಸ್ನಾನ ಮಾಡಿ ಪುಟ್ಟಗೋಚಿ ಎಂಬ, ಅಂದರೆ ಗುಪ್ತಾಂಗವನ್ನು ಮುಚ್ಚುವ ಸಣ್ಣ ಬಟ್ಟೆಯ ತುಂಡೊಂದನ್ನು ತಮ್ಮ ಉಡುದಾರಕ್ಕೆ ಸಿಕ್ಕಿಸಿಕೊಂಡು ಕುಳಿತು ಊಟ ಮಾಡುತ್ತಿದ್ದರಂತೆ. ಇದಕ್ಕೆ ಕಾರಣ ಅಲ್ಲಿನ ಬಿರು ಬಿಸಿಲಿನಲ್ಲಿ ಬಟ್ಟೆ ಧರಿಸಿ ನೆಮ್ಮದಿಯಾಗಿ ಊಟ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆ. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ, ಆದರೆ, ಸೊಂಟಕ್ಕೆ ಪಂಚೆ ಧರಿಸಿ ಬರೀ ಮೈಯಲ್ಲಿ ಕುಳಿತು ಊಟ ಮಾಡುತ್ತಾರೆ.

ನನ್ನ ಮಂಡ್ಯ ಜಿಲ್ಲೆಯಲ್ಲಿ ನಾನು ಬಾಲ್ಯದಿಂದಲೂ ಕೇಳಿದ ಒಂದು ಬೈಗುಳಕ್ಕೆ ನನಗೆ ಇಲ್ಲಿ ಆಧಾರ ಸಿಕ್ಕಿತು. ಯಾವುದಾದರು ವ್ಯಕ್ತಿ ತನಗೆ ಸರಿ ಸಮಾನನಲ್ಲ ಎಂದು ಅನಿಸಿದರೆ, ಪುಟಗೋಸಿನನ್ನಮಗ ಎಂಬ ಬೈಗುಳ ಚಾಲ್ತಿಯಲ್ಲಿದೆ. ತೆಲುಗಿನ ಪುಟ್ಟಗೋಚಿ ಕನ್ನಡದಲ್ಲಿ ಪುಟಗೋಸಿಯಾಗಿದೆ.

ಇವೆಲ್ಲಕ್ಕಿಂತ ಹೆಚ್ಚಾಗಿ 1930ರ ದಶಕದಲ್ಲಿ ಮಹಿಳೆಯರ ಶಿಕ್ಷಣ ಕುರಿತಂತೆ ರಾಜಮಂಡ್ರಿಯ ಒಂದು ಕುಟುಂಬದಲ್ಲಿನ ಮಾವ ಮತ್ತು ಸೊಸೆಯ ನಡುವಿನ ಹೋರಾಟ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಆ ಕಾಲದಲ್ಲಿ ರಾಜಮಂಡ್ರಿ ಪಟ್ಟಣದ ಪ್ರಸಿದ್ಧ ವಕೀಲರಾಗಿದ್ದ ರೊಬ್ಬ ಕಮ್ಮೆಶ್ವರ ರಾವ್ ಎಂಬುವರು ತನ್ನ ಮಗನಿಗೆ ಏಳನೇ ತರಗತಿ ಓದಿದ್ದ ಸೀತಾರಾಮಮ್ಮ ಎಂಬ ಹೆಣ್ಣು ಮಗಳನ್ನು ವಿವಾಹ ಮಾಡಿ ಸೊಸೆಯನ್ನಾಗಿ ಮಾಡಿಕೊಳ್ಳುತ್ತಾರೆ. ಆಕೆ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಇಚ್ಚಿಸಿದಾಗ ತಡೆಯೊಡ್ಡುತ್ತಾರೆ. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಆಗಿನ ಬ್ರಿಟಿಷ್ ನ್ಯಾಯಾಧೀಶನೊಬ್ಬನಿಂದ ತೀರ್ಪು ಸೊಸೆಯ ಪರವಾಗಿ ಹೊರಬೀಳುತ್ತದೆ.

ಸೀತಾರಾಮಮ್ಮ ವಿದ್ಯಾಭ್ಯಾಸಕ್ಕಾಗಿ ಪತಿ ಮತ್ತು ಮಾವನನ್ನು ತೊರೆದು, ಆಗಿನ ಮೆಟ್ರಿಕ್‌ವರೆಗೆ ಶಿಕ್ಷಣ ಮುಂದುವರಿಸಿ, ನಂತರ ಶಿಕ್ಷಣ ಇಲಾಖೆಯಲ್ಲಿ ಶಾಲಾ ಇನ್ಸ್‌ಪೆಕ್ಟರ್ ಆಗಿ ನೇಮಕವಾಗುತ್ತಾಳೆ. ತನಗೆ ಬಂದ ಹೋರಾಟದ ದುಃಸ್ಥಿತಿ ಭವಿಷ್ಯದ ಹೆಣ್ಣು ಮಕ್ಕಳಿಗೆ ಬರಬಾರದೆಂದು ತೀರ್ಮಾನಿಸಿ, ತನ್ನ ಆದಾಯವನ್ನೆಲ್ಲಾ ವಿನಿಯೋಗಿಸಿ, ವಿಜಯವಾಡದಲ್ಲಿ ಹೆಣ್ಣು ಮಕ್ಕಳ ಶಾಲೆಯೊಂದನ್ನು ತೆರೆಯುತ್ತಾಳೆ. ಸೀತಾರಾಮಮ್ಮ ತೆರೆದ ಶಾಲೆ ಇಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದು ನಿಂತಿದ್ದು,  ವಿಜಯವಾಡ ನಗರದಲ್ಲಿ ಹೆಣ್ಣು ಮಕ್ಕಳಿಗೆ ಪದವಿಯವರೆಗೂ ಸರ್ಕಾರಿ ಶುಲ್ಕದ ದರದಲ್ಲಿ ಶಿಕ್ಷಣವನ್ನು ಧಾರೆಯೆರೆಯುತ್ತಿದೆ. ಆಂಧ್ರದ ಒಂದು ಶತಮಾನದ ರಾಜಕೀಯ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಇಂತಹ ಅನೇಕ ಅಪರೂಪದ  ಘಟನೆಗಳು ನಮ್ಮ ಗಮನ ಸೆಳೆಯುತ್ತವೆ. ಇವೆಲ್ಲವನ್ನು ನಕ್ಸಲ್ ಹೋರಾಟದ ಇತಿಹಾಸ ಕುರಿತ ಕೃತಿಯಲ್ಲಿ ದಾಖಲಿಸುತ್ತಿದ್ದೇನೆ.

ಮಮತಾ ದೀದಿಯ ದಾದಾಗಿರಿ


– ಡಾ.ಎನ್.ಜಗದೀಶ್ ಕೊಪ್ಪ


ಇತ್ತೀಚೆಗಿನ ಭಾರತದ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ಸದಾ ಸುದ್ದಿಯಲ್ಲಿರುವ ಹೆಸರು. ಈವರೆಗೆ ತನ್ನ ವಿವೇಚಾನಾ ರಹಿತ ನಡುವಳಿಕೆಗಳಿಂದ ಹೆಸರಾಗಿದ್ದ ಮಮತಾ, ಈಗ ನ್ಯಾಯಾಲಯದ ತೀರ್ಪುಗಳನ್ನು ಖರೀದಿಸಬಹುದು ಎಂಬ ವಿವಾದಾಸ್ಪದ ಹೇಳಿಕೆ ನೀಡಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದಾರೆ. ಸುಧೀರ್ಘ 28 ವರ್ಷಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಪಳಗಿದ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ನೀಡಿದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.

1984ರಲ್ಲಿ ದಕ್ಷಿಣ ಕೊಲ್ಕತ್ತ ಲೋಕಸಭಾ ಕ್ಷೇತ್ರದಿಂದ ಕಮ್ಯೂನಿಷ್ಟ್ ಪಕ್ಷದ ಹಿರಿಯ ಮುತ್ಸದ್ಧಿ ಸೋಮನಾಥ ಚಟರ್ಜಿಯನ್ನು ಸೋಲಿಸುವುದರ ಮೂಲಕ ರಾಜೀವ್ ಗಾಂಧಿಯವರ ಕಣ್ಮಣಿಯಾಗಿ ರಾಷ್ಟ್ರ ರಾಜಕಾರಣಕ್ಕೆ ಬಂದ ಮಮತಾ 1989ರಲ್ಲಿ ಒಮ್ಮೆ ಸೋಲನ್ನು ಅನುಭವಿಸಿದ್ದನ್ನು ಬಿಟ್ಟರೆ, ಸತತವಾಗಿ ಆರು ಬಾರಿ ಲೋಕಸಭೆಗೆ ಸಂಸದೆಯಾಗಿ ಆರಿಸಿ ಬಂದು ರಾಜಕಾರಣದ ಒಳ-ಹೊರಗು ಮತ್ತು ಪಟ್ಟುಗಳನ್ನು ಕರಗತಮಾಡಿಕೊಂಡವರು.

1991ರ ಮೇ ತಿಂಗಳಿನಲ್ಲಿ ರಾಜೀವ್ ಹತ್ಯೆಯಾದ ನಂತರ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್  ಪಕ್ಷದ ಪ್ರಧಾನಿ ನರಸಿಂಹರಾವ್‌ರ ಮಂತ್ರಿಮಂಡಲದಲ್ಲಿ (1991) ಯುವಜನ ಖಾತೆಯ ರಾಜ್ಯ ಸಚಿವೆಯಾಗಿ, ನಂತರ ಅಧಿಕಾರಕ್ಕೆ ಬಂದ ಎನ್.ಡಿ.ಎ. ಮೈತ್ರಿಕೂಟದ ಜೊತೆ ಕೈಜೋಡಿಸಿ ವಾಜಪೇಯಿ ನೇತ್ರತ್ವದ ಸಂಪುಟದಲ್ಲಿ (2000) ರೈಲ್ವೆ ಸಚಿವೆಯಾಗಿ ಮತ್ತು 2004ರಲ್ಲಿ ಕಲ್ಲಿದ್ದಲು ಖಾತೆ ಸಚಿವೆಯಾಗಿ, ಅನುಭವಗಳಿಸಿದ ಮಮತಾ, 2009ರಲ್ಲಿ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ತೊರೆದು, ಸೋನಿಯಾ ನೇತೃತ್ವದ ಯು.ಪಿ.ಎ. ಮೈತ್ರಿಕೂಟಕ್ಕೆ ಬಂದು ಮತ್ತೇ ರೈಲ್ವೆ ಸಚಿವೆಯಾಗಿ ಅಧಿಕಾರ ಹಿಡಿದು ರಾಷ್ಟ್ರ ರಾಜಕಾರಣದ ಎಲ್ಲಾ ಮಗ್ಗುಲುಗಳನ್ನು ಅರಿತ ಪ್ರಬುದ್ಧೆ ಎಂಬುದು ಎಲ್ಲರ ಭಾವನೆಯಾಗಿತ್ತು.  ದುರಂತವೆಂದರೆ, 2011ರ ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದ ನಂತರದ ಮಮತಾ ಬ್ಯಾನರ್ಜಿಯವರ ಪ್ರತಿಹೆಜ್ಜೆ ಹಾಗೂ ನಿಲುವುಗಳು ಈಕೆಯ ಒಡಕಲು ವ್ಯಕ್ತಿತ್ವವನ್ನು (Split personality) ಪ್ರತಿಬಿಂಬಿಸುತ್ತಿವೆ.

ಕೊಲ್ಕತ್ತ ನಗರದ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ಮಮತಾ, ತನ್ನ ವಿದ್ಯಾರ್ಥಿ ಜೀವನದ ಬೀದಿ ಹೋರಾಟದಿಂದ ಆರಂಭಿಸಿದ ರಾಜಕೀಯ ಪಯಣದಲ್ಲಿ, ಅವಿವಾಹಿತೆಯಾಗಿ ಉಳಿದು ಸಂಸದೆಯಾಗಿ, ಕೇಂದ್ರ ಸಚಿವೆಯಾಗಿ, ಅತಿ ಚಿಕ್ಕ ವಯಸ್ಸಿನಲ್ಲಿ ಜನಸಾಮಾನ್ಯರ ನೋವಿಗೆ ಸ್ಪಂದಿಸುತ್ತಾ  ಬುದ್ಧಿವಂತರ ನೆಲವಾದ ಪಶ್ಚಿಮ ಬಂಗಾಳದಲ್ಲಿ ತನ್ನದೇ ಛಾಪು ಮೂಡಿಸಿದ ಹಾಗೂ ಅಪರೂಪದ ದಿಟ್ಟ ಹೆಣ್ಣು ಮಗಳು. ತನ್ನ ವ್ಯಕ್ತಿತ್ವದ ನ್ಯೂನತೆಗಳ ನಡುವೆ ಸೂರ್ಯ ಮುಳಗದ ನಾಡು ಎಂದು ಇಂಗ್ಲೆಂಡ್‌ಅನ್ನು ಕರೆವ ಹಾಗೆ ಕೆಂಪುಭಾವುಟವನ್ನು ಕೆಳಕ್ಕೆ ಇಳಿಸಲಾಗದ ರಾಜ್ಯ ಎಂಬ ಖ್ಯಾತಿಗೆ ಒಳಗಾಗಿದ್ದ ಪಶ್ಚಿಮ ಬಂಗಾಳಕ್ಕೆ, ಮತ್ತು ಅಲ್ಲಿನ ಎಡಪಂಥೀಯ ಚಿಂತರಿಗೆ ಈ ಶತಮಾನದ ರಾಜಕೀಯದಲ್ಲಿ ಅತಿ ದೊಡ್ಡ ಶಾಕ್ ಕೊಟ್ಟ ಛಲಗಾತಿ ಕೂಡ ಹೌದು.

ಈಕೆಯ ಹೋರಾಟ ಮತ್ತು ಇತಿಹಾಸ ಬಲ್ಲವರಿಗೆ ಇದು ಅನಿರೀಕ್ಷಿತ ಘಟನೆಯೇನಲ್ಲ. ಮಮತಾ ಬ್ಯಾನರ್ಜಿಯ ಆತ್ಮ ಕಥನ ಮರೆಯಲಾಗದ ನೆನಪುಗಳು (My Unforgettable Memories) ಕೃತಿಯನ್ನು ಓದಿದವರಿಗೆ, ಈಕೆಯ ಬಾಲ್ಯ, ಕಾಲೇಜು ದಿನಗಳ ವಿದ್ಯಾರ್ಥಿ ಸಂಘಟನೆಯ ನಾಯಕಿಯಾಗಿ ಹೋರಾಟದ ವೇಳೆ ಕಮ್ಯೂನಿಷ್ಟ್ ಕಾರ್ಯಕರ್ತರಿಂದ ತಿಂದ ಹೊಡೆತಗಳು, ಅನುಭವಿಸಿದ ಹಿಂಸೆ, ಹಾಗೂ ಜೈಲು ವಾಸ ಇವೆಲ್ಲವೂ ಪರೋಕ್ಷವಾಗಿ ಗಟ್ಟಿಗಿತ್ತಿಯನ್ನಾಗಿ ಮಾಡುವುದರ ಮೂಲಕ ಮಮತಾ ಬ್ಯಾನರ್ಜಿಗೆ ಸ್ಟ್ರೀಟ್ ಪೈಟರ್ ಎಂಬ ಬಿರುದನ್ನು ತಂದುಕೊಟ್ಟವು.

ಕಾಂಗ್ರೆಸ್ ಪಕ್ಷದ ಜೊತೆಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಪಕ್ಷ ತೊರೆದು, ತನ್ನದೇ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದಾಗ ಮಮತಾರವರ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ. ಇದೊಂದು ಅತೃಪ್ತ ರಾಜಕೀಯ ಮಹಿಳೆಯೊಬ್ಬಳ ರಾಜಕೀಯ ವರಸೆ ಇರಬಹುದೆಂದು ಎಂದು ಎಲ್ಲರೂ ವಿಶ್ಲೇಷಿಸಿದ್ದರು. ಹಾಗೆ ನೋಡಿದರೆ, ಮಮತಾ ಬ್ಯಾನರ್ಜಿಯ ರಾಜಕೀಯ ಯಶಸ್ಸಿನ ಹಿಂದೆ ಪರೋಕ್ಷವಾಗಿ ಕಮ್ಯೂನಿಷ್ಟ್ ಪಕ್ಷದ ಪಾತ್ರ ಕೂಡ ಇದೆ.

1974ರಲ್ಲಿ ಸಿದ್ಧಾರ್ಥ ಶಂಕರ್ ರಾಯ್ ನೇತೃತ್ವದ ಕಾಂಗ್ರೆಸ್  ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ, ಗದ್ದುಗೆ ಏರಿದ ಜ್ಯೋತಿ ಬಸು ನೇತೃತ್ವದ ಕಮ್ಯೂನಿಷ್ಟ್ ಸರ್ಕಾರ ಸುಧೀರ್ಘ ಮೂರುವರೆ ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿತು. ವೈಯಕ್ತಿಕ ನೆಲೆಯಲ್ಲಿ, ಹಾಗೂ ಸಾಮಾಜಿಕ ಮತ್ತು ರಾಜಕೀಯವಾಗಿ ಶುದ್ಧ ಚಾರಿತ್ರ್ಯದ ವ್ಯಕ್ತಿತ್ವ ಹೊಂದಿದ್ದ ಜ್ಯೋತಿ ಬಸುರವರು ಪಶ್ಚಿಮ ಬಂಗಾಳ ಮಾತ್ರವಲ್ಲ, ಇಡೀ ಭಾರತದಲ್ಲಿ ಒಬ್ಬ ಶ್ರೇಷ್ಠ ರಾಜಕೀಯ ಮುತ್ಸದಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇದು ಪಕ್ಷದ ನಿರಂತರ ಗೆಲುವಿಗೆ ಸಹಕಾರಿಯಾಯಿತು.

ಕಮ್ಯೂನಿಷ್ಟ್ ಪಕ್ಷದ ವರ್ತಮಾನದ ದುರಂತವೆಂದರೆ, ಕಾಲ ಕಾಲಕ್ಕೆ ಬದಲಾಗುತ್ತಿರುವ ರಾಜಕೀಯ ಚಿಂತನೆಗಳನ್ನ ಪಕ್ಷದ ಆಶಯ ಮತ್ತು ಗುರಿಗಳಿಗೆ ಧಕ್ಕೆಯಾಗದಂತೆ ಅಳವಡಿಸಿಕೊಳ್ಳವಲ್ಲಿ ದಯನೀಯವಾಗಿ ಸೋತಿತು. ಇದು ಕಮ್ಯೂನಿಷ್ಟ್ ಪಕ್ಷದಲ್ಲಿ ಹೊಸ ತಲೆಮಾರಿನ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಭ್ರಮನಿರಸನವನ್ನುಂಟು ಮಾಡಿತು. ಜ್ಯೋತಿ ಬಸು ನೆರಳಲ್ಲಿ ಬೆಳೆದು ಬಂದ ಬುದ್ಧದೇಬ್ ಭಟ್ಟಾಚಾರ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಬರುವುದರೊಳಗೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷ ಒಡೆದ ಮನೆಯಂತಾಗಿತ್ತು.

ಒಂದು ಕಡೆ ಕಾರ್ಮಿಕರು ಹಾಗೂ ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಪರ ಧ್ವನಿ ಎತ್ತುತ್ತಾ, ಮತ್ತೊಂದು ಕಡೆ ಜಾಗತೀಕರಣವನ್ನು ವಿರೋಧಿಸುತ್ತಲೇ, ಬಂದ ಪಶ್ಚಿಮ ಬಂಗಾಳದ ಕಮ್ಯೂನಿಷ್ಟ್ ಸರ್ಕಾರ 2007ರಲ್ಲಿ ನಂದಿ ಗ್ರಾಮದಲ್ಲಿ ಇಂಡೋನೇಷಿಯಾದ ಸಲೀಮ್ ಗ್ರೂಪ್ಸ್ ಕಂಪನಿಗೆ ಫಲವತ್ತಾದ 10 ಸಾವಿರ ಎಕರೆ ಭೂಮಿಯನ್ನ ಕೊಡುಗೆಯಾಗಿ ನೀಡಲು ಮುಂದೆ ಬರುವ ಮೂಲಕ ತನ್ನ ದ್ವಂದ್ವ ನೀತಿಯನ್ನು ಪ್ರದರ್ಶಿಸಿತು. ಇದನ್ನು ಪ್ರತಿಭಟಿಸಿದ ರೈತರ ಮೇಲೆ ತನ್ನ ಪಕ್ಷದ ಕಾರ್ಯಕರ್ತರನ್ನು ಛೂ ಬಿಟ್ಟಿದ್ದಲ್ಲದೆ, ಪೋಲಿಸರ ಗೋಲಿಬಾರ್ ಮೂಲಕ 14 ಮಂದಿ ರೈತರ ಹತ್ಯೆಗೆ ಕಾರಣವಾಯಿತು.

ಇದೊಂದು ಘಟನೆ ಮಮತಾ ಬ್ಯಾನರ್ಜಿಗೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳಲು ಪ್ರೇರಣೆಯಾಯಿತು. ನಂತರ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ 2008ರಲ್ಲಿ ಟಾಟಾ ಕಂಪನಿಯ ನ್ಯಾನೊ ಕಾರು ತಯಾರಿಕೆಗೆ ಸಿಂಗೂರು ಬಳಿ 997 ಎಕರೆ ಪ್ರದೇಶವನ್ನು ರೈತರಿಂದ ಬಲವಂತವಾಗಿ 115 ಕೋಟಿ ರೂ.ಗಳಿಗೆ ಖರೀದಿಸಿ ಕೇವಲ 20 ಕೋಟಿ ರೂಪಾಯಿಗೆ ಟಾಟಾ ಕಂಪನಿಗೆ ನೀಡಿದಾಗಲೇ ಪಶ್ಚಿಮ ಬಂಗಾಳದ ಮತದಾರರು ಕಮ್ಯೂನಿಷ್ಟ್ ಸರ್ಕಾರದ ಮರಣ ಶಾಸನವನ್ನು ಬರೆದಿಟ್ಟರು.

ಈ ಎಲ್ಲಾ ಘಟನೆಗಳನ್ನು ಪರಾಮರ್ಶಿಸಿದಾಗ ಮಮತಾರವರ ತೃಣಮೂಲ ಕಾಂಗ್ರೇಸ್ ಪಕ್ಷದ ಯಶಸ್ಸಿನ ಹಿಂದೆ ಕಮ್ಯೂನಿಷ್ಟ್ ಪಕ್ಷದ ಕೊಡುಗೆಯೂ ಇದೆ ಎಂದು ತೀರ್ಮಾನಿಸಬಹುದು. ಹೀಗೆ ಪಶ್ಚಿಮ ಬಂಗಾಳದಲ್ಲಿ ಅನೀರಿಕ್ಷಿತವಾಗಿ ಮಮತಾ ಬ್ಯಾನರ್ಜಿ ಅಧಿಕಾರದ ಗದ್ದುಗೆಗೆ ಏರಿದಾಗ ಅಲ್ಲಿನ ಜನತೆ ಈಕೆಯ ಬಗ್ಗೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಕೇವಲ 15 ತಿಂಗಳ ಅವಧಿಯಲ್ಲಿ ಅವರ ಕನಸುಗಳು ಛಿದ್ರಗೊಂಡಿವೆ.

ಮುಖ್ಯಮಂತ್ರಿಯಾದ  ಕೇವಲ 40 ದಿನಗಳಲ್ಲಿ ತನ್ನ ಸಹೋದರ ಸಂಬಧಿಯೊಬ್ಬನನ್ನು ಪೋಲಿಸರು ಬಂಧಿಸಿದರು ಎಂಬ ಏಕೈಕ ಕಾರಣಕ್ಕೆ ತಾನು ಒಂದು ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು, ತನ್ನ ಸ್ಥಾನದ ಘನತೆಯನ್ನೂ ಲೆಕ್ಕಿಸದೆ, ಠಾಣೆಗೆ ನುಗ್ಗಿ ಪೊಲೀಸರ ಮೇಲೆ ದಮಕಿ ಹಾಕಿದಾಗಲೇ ಮಮತಾ ಒಬ್ಬ ಅಪ್ರಭುದ್ಧ ಮಹಿಳೆ ಎಂದು ಪಶ್ಚಿಮ ಬಂಗಾಳದ ಜನತೆ ನಿರ್ಧರಿಸಿದ್ದರು. ಸೋಜಿಗದ ಸಂಗತಿಯೆಂದರೆ, ಇಂತಹ ಅವಿವೇಕದ ನಡುವಳಿಕೆಗಳು ಮಮತಾ ಬ್ಯಾನರ್ಜಿಯಿಂದ ಮುಂದುವರಿಯುತ್ತಲೇ ಹೋದವು. ತನ್ನ ವ್ಯಂಗ್ಯ ಚಿತ್ರವನ್ನು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕನೊಬ್ಬ (ಅಖಿಲೇಶ್ ಮಹಾಪಾತ್ರ) ಅಂತರ್ಜಾಲದಲ್ಲಿ ಗೆಳೆಯರೊಂದಿಗೆ ಹಂಚಿಕೊಂಡ ಎಂಬ ಕಾರಣಕ್ಕಾಗಿ ಆತನ್ನು ಜೈಲಿಗೆ ಅಟ್ಟಿದ ಮಮತಾ ಅಷ್ಟಕ್ಕೂ ಸುಮ್ಮನಾಗದೆ, ಬಂಧನದ ವಿರುದ್ಧ ಪ್ರತಿಭಟಿಸಿದವರ ಜೊತೆ ಮತ್ತೊಬ್ಬ ಪ್ರಾಧ್ಯಾಪಕ (ಸುಬ್ರತೊ ಸೇನ್ ಗುಪ್ತಾ) ಪಾಲ್ಗೊಂಡಿದ್ದಕ್ಕೆ ಆತನನ್ನೂ ಜೈಲಿಗೆ ಕಳಿಸಿ ತಾನು ಸರ್ವಾಧಿಕಾರಿಯ ಮುಂದುವರಿದ ಸಂತತಿ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.

ಸಾರ್ವಜನಿಕ ರಂಗದಲ್ಲಿ ತೊಡಗಿಸಿಕೊಂಡ ಒಬ್ಬ ವ್ಯಕ್ತಿಗೆ ಅವಶ್ಯಕವಾಗಿ ಇರಬೇಕಾದ ಮುಖ್ಯ ಅರ್ಹತೆಗಳೆಂದರೆ, ತಾಳ್ಮೆ ಮತ್ತು ವಿವೇಚನೆ. ಇವೆರೆಡು ಅಂಶಗಳು ಮಮತಾ ಎಂಬ ಹೋರಾಟಗಾರ್ತಿಯ ಬದುಕಿನಲ್ಲಿ ಅಪರಿಚಿತ ಶಬ್ಧಗಳಾಗಿವೆ. ತನ್ನನ್ನು ಪ್ರಶ್ನಿಸಿದವರೆಲ್ಲಾ ಕಮ್ಯೂನಿಷ್ಟರು ಎಂಬ ಭ್ರಮೆ ಅವರನ್ನು ಆವರಿಸಿಕೊಂಡಿದೆ. ಇಂಗ್ಲಿಷ್ ಸುದ್ಧಿ ಚಾನಲ್ ಒಂದು ಏರ್ಪಡಿಸಿದ್ದ ಚರ್ಚೆ ಹಾಗೂ ಸಂದರ್ಶನದ ವೇಳೆಯಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳನ್ನು ಕಮ್ಯೂನಿಷ್ಟರು ಎಂದು ಜರಿದು, ನೇರಪ್ರಸಾರದ ಕಾರ್ಯಕ್ರಮದಿಂದ ಎದ್ದು ಹೋದ ಇದೇ ಮಮತಾ ಕಳೆದ ವಾರ ಸಾರ್ವಜನಿಕ ಸಭೆಯಲ್ಲಿ ಪ್ರಶ್ನೆ ಕೇಳಿದ ರೈತನನ್ನೂ ಜೈಲಿಗೆ ದೂಡಿದ್ದಾರೆ.

ಇದು ಸಾಲದಂಬಂತೆ ಈಗ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ದೂರುವುದರ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಮಮತಾ ಬ್ಯಾನರ್ಜಿಯವರ ಈ ಮಾತಿಗೆ ಕಾರಣವಾದದ್ದು ಎರಡು ಪ್ರಮುಖ ಘಟನೆಗಳು. ಒಂದು, ಟಾಟಾ ಕಂಪನಿಯ ಒಡೆತನದಲ್ಲಿರುವ ಸಿಂಗೂರು ಭೂಮಿಯನ್ನು ರೈತರಿಗೆ ವಾಪಸ್ ನೀಡಲು ನಿರ್ಧರಿಸಿ 2011ರಲ್ಲಿ ಪಶ್ಚಿಮ ಬಂಗಾಳ ವಿಧಾನ ಸಭೆಯಲ್ಲಿ ಸಿಂಗೂರು ಮಸೂದೆಯೊದನ್ನು ಜಾರಿಗೆ ತಂದರು. ಇದನ್ನು ಟಾಟಾ ಕಂಪನಿ ಕೊಲ್ಕತ್ತ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕಳೆದ ಜೂನ್ 22ರಂದು ತೀರ್ಪು ನೀಡಿದ ಅಲ್ಲಿನ ಉಚ್ಛ ನ್ಯಾಯಾಲಯ ಸರ್ಕಾರದ ಮಸೂದೆಯನ್ನು ರದ್ದುಗೊಳಿಸಿ, ಟಾಟಾ ಕಂಪನಿ ಪರವಾಗಿ ತೀರ್ಪು ನೀಡಿತು. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ, ಇದೇ ಆಗಸ್ಟ್ 13ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಪ್ರಾಧ್ಯಾಪಕರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಗೊಳಿಸಿ, ಅವರಿಬ್ಬರಿಗೂ ಪರಿಹಾರ ನೀಡುವಂತೆ ಮಮತಾ ಸರ್ಕಾರಕ್ಕೆ ಆದೇಶಿಸಿದೆ. ಈ ಘಟನೆಗಳು ಮಮತಾ ಬ್ಯಾನರ್ಜಿಯನ್ನು  ಅಕ್ಷರಶಃ ಬಂಗಾಳದ ಕಾಳಿಯನ್ನಾಗಿ ಪರಿವರ್ತಿಸಿದೆ.

ತಾನು ಇಟ್ಟ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುವ ತಾಳ್ಮೆಯಾಗಲಿ, ವಿವೇಚನೆಗಳನ್ನು ಮಮತಾ ಬ್ಯಾನರ್ಜಿ ಮೈಗೂಡಿಸಕೊಳ್ಳದಿದ್ದರೆ, ಮುಂದಿನ ಚುನಾವಣೆಯಲ್ಲಿ ಈಕೆ ಇತಿಹಾಸದ ಕಸದ ಬುಟ್ಟಿಗೆ ಸೇರುವುದು ಖಚಿತ.  ಆದರೆ, ಸುಧಾರಣೆಯಾಗುವ ಯಾವ ಲಕ್ಷಣಗಳು ಮಮತಾ ಬ್ಯಾನರ್ಜಿಯ ವರ್ತನೆಯಲ್ಲಿ ಕಂಡು ಬರುತ್ತಿಲ್ಲ. ಅದೇ ಪಶ್ಚಿಮ ಬಂಗಾಳದ ಜನತೆಯ  ದುರಂತ.

ಸ್ವಾತಂತ್ಯದ ಗಣಪತಿ


– ಡಾ.ಎನ್.ಜಗದೀಶ್ ಕೊಪ್ಪ


ಸ್ವಾತಂತ್ರ್ಯ ಚಳವಳಿಗೆ ಈ ನೆಲದಲ್ಲಿ ಅನೇಕ ಇತಿಹಾಸಗಳಿವೆ. ಅದೇ ರೀತಿ ಅನೇಕ ಆಯಾಮಗಳು ಕೂಡ ಇವೆ. 84 ವರ್ಷಗಳ ಹಿಂದೆ ಬೆಂಗಳೂರಿನ ಸುಲ್ತಾನ್ ಪೇಟೆಯ ಶಾಲೆಯ ಮಕ್ಕಳಿಗೆ ಮಣ್ಣಿನಡಿಯಲ್ಲಿ ಸಿಕ್ಕ ಗಣಪತಿಯ ವಿಗ್ರಹವೊಂದು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಚಳವಳಿಗೆ ಪರೋಕ್ಷವಾಗಿ ಪ್ರೇರಣೆಯಾದ ಘಟನೆ ಇದೀಗ ಇತಿಹಾಸದ ಗರ್ಭದಲ್ಲಿ ಲೀನವಾಗಿದೆ. ಆದರೆ, ಇವತ್ತಿಗೂ ಇದೇ ಬೆಂಗಳೂರಿನ ಆರ್ಕಾಟ್ ಶ್ರೀನಿವಾಸ್‌ಚಾರ್ ರಸ್ತೆಯ ಸರ್ಕಾರಿ ಶಾಲೆಯ ಅಂಗಳದಲ್ಲಿರುವ ಈ ಮೂರ್ತಿ ಸ್ಕೂಲ್ ಗಣಪ ಎಂಬ ಹೆಸರಿನಿಂದ ಕರೆಸಿಕೊಂಡು ಪೂಜಿಸಿಕೊಳ್ಳುತ್ತಿದ್ದಾನೆ.

ಅದು 1928ರ ಆಗಸ್ಟ್ ತಿಂಗಳ ಸಮಯ. ಸುಲ್ತಾನ್ ಪೇಟೆಯಲ್ಲಿದ್ದ ಖಾಸಗಿ ಶಾಲೆಯೊಂದು ಆ ವರ್ಷ ಆರ್ಕಾಟ್  ಶ್ರೀನಿವಾಸ್‌ಚಾರ್ ರಸ್ತೆಗೆ ಸ್ಥಳಾಂತರಗೊಂಡು, ಸರ್ಕಾರಿ ಮಾಧ್ಯಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು.

ಶಾಲೆಯ ವಿದ್ಯಾರ್ಥಿಗಳು ಶಾಲೆಯ ಕೈತೋಟ ನಿರ್ಮಿಸುವ ಉದ್ದೇಶದಿಂದ ನೆಲ ಅಗೆಯುತ್ತಿದ್ದಾಗ ಮಣ್ಣಿನಲ್ಲಿ ಹುದುಗಿಹೋಗಿದ್ದ ಗಣಪನ ವಿಗ್ರಹವೊಂದು ವಿದ್ಯಾರ್ಥಿಗಳಿಗೆ ಸಿಕ್ಕಿತು. ಅಚಾನಕ್ಕಾಗಿ ಸಿಕ್ಕ ದೇವರ ಮೂರ್ತಿ ಬಿಸಾಡುವುದು ತರವಲ್ಲ ಎಂದು ತೀರ್ಮಾನಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯ ಅಂಗಳದಲ್ಲಿ ಗಣಪತಿಯ ವಿಗ್ರಹವನ್ನಿಟ್ಟು ಪೂಜಿಸತೊಡಗಿದರು.

ಇದೇ ವೇಳೆಗೆ ಗಣೇಶನ ಹಬ್ಬವೂ ಬಂದಿದ್ದರಿಂದ ಸ್ಥಳೀಯ ಯುವಕರು ಕೈಜೋಡಿಸಿ ನೆಲದಲ್ಲಿ ಸಿಕ್ಕ ಗಣಪನ ನೆಪದಲ್ಲಿ 15 ದಿನಗಳ ಕಾಲ ಗಣೇಶೋತ್ಸವವನ್ನು ಆಚರಿಸಿದರು. ಪ್ರತಿ ದಿನ ಸಂಜೆ ಪೂಜೆ, ಪ್ರವಚನ ಹಾಗೂ ಭಾರತ ಸ್ವಾತಂತ್ರ ಹೋರಾಟ ಕುರಿತಂತೆ, ಹೋರಾಟಗಾರರಿಂದ ಭಾಷಣವನ್ನು ಏರ್ಪಡಿಸಲಾಗುತ್ತಿತ್ತು.

ಈ ಶಾಲೆಯ ಮುಂಭಾಗ ಆ ಕಾಲದಲ್ಲಿ ಮುಸ್ಲಿಂ ಸಮುದಾಯದ ನಾಯಕರೂ ಹಾಗೂ ಪ್ರಜಾ ಪ್ರತಿನಿಧಿಗಳ ಸಭೆಯ ಸದಸ್ಯರಾದ ಮಹಮ್ಮದ್ ಅಬ್ಬಾಸ್ ಖಾನರ ಮನೆಯಿತ್ತು. ವಾಸ್ತವವಾಗಿ ಧರ್ಮಾತೀತರು ಮತ್ತು ಜಾತ್ಯಾತೀತರೂ ಆಗಿದ್ದ ಅಬ್ಬಾಸ್ ಖಾನರು ಪ್ರಜಾಪ್ರತಿನಿಧಿ ಸಭೆಯಲ್ಲಿ ಒಳ್ಳೆಯ ವಾಗ್ಮಿಗಳೆಂದು ಹೆಸರು ಪಡೆದಿದ್ದರು.

ಪ್ರತಿ ದಿನ ನಡೆಯುತ್ತಿದ್ದ ಪೂಜೆ, ಭಾಷಣ ಇವುಗಳಿಂದ ಕೆರಳಿದ ಕೆಲವು ಕಟ್ಟಾ ಮುಸ್ಲಿಂರು ಅಬ್ಬಾಸ್ ಖಾನರ ಕಿವಿ ಕಚ್ಚಿದರು. ಇದರ ಪರಿಣಾಮ ಖಾನರು ಅಂದಿನ ಮೈಸೂರು ರಾಜರ ಆಳ್ವಿಕೆಯಲ್ಲಿದ್ದ ಸರ್ಕಾರದ ಮೇಲೆ ಒತ್ತಡ ಹೇರಿ ಗಣಪನ ವಿಗ್ರಹವನ್ನು ಶಾಲೆಯಿಂದ ಎತ್ತಂಗಡಿ ಮಾಡಿ, ಸರ್ಕಾರದ ಕಚೇರಿಯ ಗೋದಾಮು ಸೇರುವಂತೆ ಮಾಡಿದರು.

ಈ ಘಟನೆ ಸಹಜವಾಗಿ ಹಿಂದೂ ಸಮುದಾಯವನ್ನು ಕೆರಳಿಸಿತು. ಏಕೆಂದರೆ, ಇವರಿಗೆ ನೆರೆಯ ಮಹಾರಾಷ್ಟ್ರದ ಪೂನಾದಲ್ಲಿ ಬಾಲಗಂಗಾಧರ ತಿಲಕ್‌ರವರು ಗಣಪತಿ ಉತ್ಸವದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರನ್ನು ಸಜ್ಜುಗೊಳಿಸುತ್ತಿದ್ದ ರೀತಿ ಪರೋಕ್ಷವಾಗಿ ಪ್ರೇರಣೆಯಾಗಿತ್ತು.

ಹಲವು ದಿನಗಳ ಕಾಲ ನಿರಂತರವಾಗಿ ನಡೆದ ಸ್ವಾತಂತ್ರ್ಯ ಪ್ರೇಮಿಗಳ ಹೋರಾಟ ಮತ್ತು ಪ್ರತಿಭಟನೆ 1929ರ ಜುಲೈ 30 ರಂದು ಬೆಂಗಳೂರಿನಲ್ಲಿ ಹಿಂಸೆಯ ರೂಪ ಪಡೆಯಿತು. ಇದಕ್ಕೆ ಪ್ರಮುಖ ಕಾರಣವೆಂದರೆ, ಮತ್ತೇ ಹತ್ತಿರ ಬರುತ್ತಿದ್ದ ಗಣೇಶನ ಹಬ್ಬ.

ಮತ್ತೇ ಅದೇ ಸ್ಥಳದಲ್ಲಿ ಮೂರ್ತಿ ಪ್ರತಿಷ್ಟಾಪಿಸಬೇಕೆಂಬ ಹಠ ಎಲ್ಲರಲ್ಲಿ ಎದ್ದು ಕಾಣುತ್ತಿತ್ತು. ಆ ದಿನ ಹಿಂದೂ ಯುವಕರು ಮತ್ತು ಮುಸ್ಲಿಂ ಬಾಂಧವರ ನಡುವೆ ಬೀದಿ ಕಾಳಗ ನಡೆಯಿತು. ಹಿಂದೂ ಯುವಕರು ಮುಸ್ಲಿಮರ ಮನೆಗೆ ನುಗ್ಗಿ ಹಲವರನ್ನು ಮನಬಂದವರಂತೆ ಥಳಿಸಿದರು. ಈ ಅನಿರೀಕ್ಷಿತ ಗಲಭೆಯಿಂದ ಬೆಚ್ಚಿ ಬಿದ್ದ ಅಬ್ಬಾಸ್ ಖಾನರು ಪೋಲಿಸ್ ಪಡೆಯನ್ನು ಕರೆಸಿದರು. ಆದರೆ, ಹಿಂದೂ ಯುವಕರು ಮತ್ತು ವಿದ್ಯಾರ್ಥಿಗಳು ಆ ಕಾಲಕ್ಕೆ ಸಿಮೆಂಟ್ ರಸ್ತೆಯಾಗಿದ್ದ ಆರ್ಕಾಟ್ ಶ್ರೀನಿವಾಸ ಚಾರ್ ರಸ್ತೆಯುದ್ದಕ್ಕೂ ವರ್ತಕರ ಪೇಟೆಯಿಂದ ರಾಗಿ ಮೂಟೆಗಳನ್ನು ಹೊತ್ತು ತಂದು ರಾಗಿಯನ್ನು ರಸ್ತೆಯಲ್ಲಿ ಚೆಲ್ಲುವುದರ ಮೂಲಕ ಪೋಲಿಸರು ಸವಾರಿ ಮಾಡಿಕೊಂಡು ಬಂದಿದ್ದ ಕುದುರೆಗಳನ್ನು ಬೀಳುವಂತೆ ಮಾಡಿದರು.

ಇದರಿಂದ ಹೆದರಿದ ಪೊಲೀಸರು ಸೈಕಲ್ ಶಾಪ್ ಒಂದರಲ್ಲಿ ನಿಂತು ಗುಂಡು ಹಾರಿಸಿ ಉದ್ರಿಕ್ತ ಜನರನ್ನು ಚದುರಿಸಿದರು. ಪೊಲೀಸರ ಗುಂಡೇಟಿನಿಂದ ಚಂದ್ರ ರಾಜು ಎಂಬ ವಿದ್ಯಾರ್ಥಿ ತೀವ್ರ ಗಾಯಗೊಂಡನು. ಇದರಿಂದ ಮತ್ತಷ್ಟು ಉದ್ರೇಕಗೊಂಡ ಚಳವಳಿಕಾರರು ಪೋಲಿಸರ ಮೇಲೆ ತಿರುಗಿಬಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಧಾವಿಸಿದ ನಗರದ ನ್ಯಾಯಾಧೀಶರಾಗಿದ್ದ ನಾರಾಯಣಸ್ವಾಮಿನಾಯ್ಡು ಅವರ ಪೇಟವನ್ನು ಕಿತ್ತುಹಾಕಿ ಅವರ ಕೈಯಲ್ಲಿದ್ದ ಬೆತ್ತವನ್ನು ಕಿತ್ತುಕೊಂಡು ಮನಸೋಯಿಚ್ಛೆ ಥಳಿಸಲಾಯಿತು. ಇದನ್ನು ಕಣ್ಣಾರೆ ಕಂಡ ಜಿಲ್ಲಾ ನ್ಯಾಯಾಧೀಶ ತಾಜ್ ಪಿರಾನ್ ಮತ್ತು ಪೋಲೀಸ್ ಇನ್ಸ್‌ಪೆಕ್ಟರ್ ಜನರಲ್ ಹಿರಿಯಣ್ಣಯ್ಯ ಸ್ಥಳದಿಂದ ಓಡಿಹೋದರು.

ಗಲಭೆಯಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಜಮಖಂಡಿ ಶ್ರೀ ಭೀಮರಾವ್, ಶ್ರೀ ರಾಮಲಾಲ್ ತಿವಾರಿ, ಶ್ರೀ ಹೆಚ್.ವಿ.ಸುಬ್ರಮಣ್ಯಮ್ ಇವರನ್ನು ಸರ್ಕಾರ ಬಂಧಿಸಿತು. ಈ ನಾಯಕರನ್ನು ಬಿಡುಗಡೆಗೊಳಿಸಲು ಆಗಿನ ಬೆಂಗಳೂರು ನಗರದ ಪ್ರಸಿದ್ಧ ವಕೀಲರಾಗಿದ್ದ ಬೇಲೂರು ಶ್ರೀನಿವಾಸ ಅಯ್ಯಂಗಾರ್ ಮತ್ತು ಪಾಮಡಿ ಸುಬ್ಬರಾಮಶೆಟ್ಟರು ಸರ್ಕಾರದ ಜೊತೆ ನಡೆಸಿದ ಸಂಧಾನ ವಿಫಲವಾಯಿತು. ಗಣಪತಿಯ ನೆಪದಲ್ಲಿ ಆರಂಭವಾದ ಈ ಗಲಭೆ ಜನಸಾಮಾನ್ಯರ ಸ್ವಾತಂತ್ರ್ಯ ಹೋರಾಟವಾಗಿ ಪರಿವರ್ತನೆಗೊಂಡಿತು.

ಚಳವಳಿ ತೀವ್ರಗೊಳ್ಳುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಹೆಚ್.ಕೆ.ವೀರಣ್ಣಗೌಡ, ಶ್ರೀ ಪಿ.ಆರ್.ರಾಮಯ್ಯ, ಶ್ರೀ ತಿ.ತಾ.ಶರ್ಮ, ಶ್ರೀ ತಗಡೂರು ರಾಮಚಂದ್ರರಾವ್, ಶ್ರೀ ವೀರಕೇಸರಿ ಸೀತಾರಾಮಶಾಸ್ತ್ರಿ ಮತ್ತು ಆನೇಕಲ್ಲಿನ ಶ್ರೀ ಸರ್ವಾಭಟ್ಟರು ಸೇರಿದಂತೆ 92 ಮಂದಿ ನಾಯಕರ ಮೇಲೆ ಸರ್ಕಾರ ಮೊಕದ್ದಮೆ ದಾಖಲಿಸಿತು. ಇದನ್ನು ಪ್ರತಿಭಟಿಸಿದ ಸರ್ಕಾರದ ವಕೀಲರು ಹಾಗೂ ಬ್ರಿಟಿಷರ ಅಧೀನದಲ್ಲಿದ್ದ ಕೋಲಾರ ಚಿನ್ನದ ಗಣಿಯ ವಕೀಲರಾಗಿದ್ದ ಸಂಪಿಗೆ ವೆಂಕಟಪತಯ್ಯ ಇವರನ್ನು ಸರ್ಕಾರ ಸೇವೆಯಿಂದ ವಜಾಗೊಳಿಸಿತು.

ಸರ್ಕಾರದ ಕಠಿಣ ನಿರ್ಧಾರಗಳಿಗೆ ಜಗ್ಗದೆ ಸ್ವಾತಂತ್ರ್ಯ ಚಳವಳಿ ತೀವ್ರವಾಗುತ್ತಿದ್ದಂತೆ ಕೊನೆಗೆ ಜನರ ಒತ್ತಡಕ್ಕೆ ಮಣಿದ ಸರ್ಕಾರ ಅಂತಿಮವಾಗಿ ಸರ್ ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಸರ್ಕಾರಕ್ಕೆ ದೂರಾಲೋಚನೆಯ ಹಾಗೂ ಪ್ರಗತಿಪರವಾದ ವರದಿ ನೀಡಿದ ವಿಶ್ವೇಶ್ವರಯ್ಯನವರು, ಆಡಳಿತದಲ್ಲಿ ಜನಸಾಮಾನ್ಯರಿಗೆ ಅಧಿಕಾರ ನೀಡಿ ಅವರ ರಾಜಕೀಯ ದಾಹವನ್ನು ತೃಪ್ತಿಪಡಿಸಬೇಕು, ಇಲ್ಲದಿದ್ದರೆ ಜನರ ಚಳವಳಿಯನ್ನು ಹತ್ತಿಕ್ಕುವುದು ಅಸಾಧ್ಯ, ಮುಂದಿನ ದಿನಗಳಲ್ಲಿ ಸರ್ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದರು. ಆದರೆ ಸರ್ಕಾರ ವಿಶ್ವೇಶ್ವರಯ್ಯನವರ ವರದಿಯನ್ನು ಪರಿಗಣಿಸದೆ ಗೌಪ್ಯವಾಗಿಟ್ಟುಕೊಂಡಿತು.

ಈ ಘಟನೆ ಗಣಪತಿ ಗಲಾಟೆ ಎಂಬ ಹೆಸರಿನಲ್ಲಿ ಸಾತಂತ್ರ್ಯ ಹೋರಾಟಗಾರರಿಗೆ ಚಳವಳಿಯ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿತು. ಅನೇಕ ಲಾವಣಿಕಾರರು ಗಣಪತಿ ಗಲಾಟೆಯ ಘಟನಾವಳಿಯನ್ನು ಕುರಿತು ಲಾವಣಿ ಕಟ್ಟಿ ಜನ ಸಮೂಹಗಳ ನಡುವೆ ಅನೇಕ ವರ್ಷಗಳ ಕಾಲ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಬಿ.ನೀಲಕಂಠಯ್ಯ ಎಂಬುವವರು ರಚಿಸಿದ ಬೆಂಗಳೂರು ಗಣಪತಿ ಸತ್ಯಾಗ್ರಹದ ಲಾವಣಿ ಎಂಬ ಹೆಸರಿನ ಸ್ವಾತಂತ್ರ್ಯ ಹೋರಾಟದ ಈ ಹಾಡು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

(ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಉದಯ ಟಿ.ವಿ.ಪ್ರಸಾರ ಮಾಡುತ್ತಿರುವ ವಿಶೇಷ ಸಾಕ್ಷ್ಯ ಚಿತ್ರಕ್ಕೆ ಸಿದ್ಧ ಪಡಿಸಿದ ವರದಿ.)

ಕಾಂಗ್ರೇಸ್ ಮತ್ತು ತಿರುಕನ ಕನಸು


– ಡಾ.ಎನ್.ಜಗದೀಶ್ ಕೊಪ್ಪ


 

ನಾಲ್ಕು ವರ್ಷಗಳ ಬಿ.ಜೆ.ಪಿ.ಯ ಭ್ರಷ್ಟ ಆಡಳಿತದಲ್ಲಿ ಕೇವಲ ಹನ್ನೊಂದು ತಿಂಗಳ ಕಾಲ ಪಾರದರ್ಶಕ ಆಡಳಿತ ನೀಡಿ, ತನ್ನದೇ ಪಕ್ಷದ ಕಳಂಕಿತರ ಬ್ಲಾಕ್ ಮೇಲ್ ರಾಜಕೀಯದಿಂದಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಸಂದರ್ಭದಲ್ಲಿ ಡಿ.ವಿ. ಸದಾನಂದಗೌಡ ಇಂಗ್ಲೀಷ್ ನಿಯತಕಾಲಿಕೆಗೆ ಸಂದರ್ಶನ ನೀಡಿದ್ದರು. ಅಲ್ಲದೇ ಕಾಂಗ್ರೇಸ್ ಪಕ್ಷದ ಮರ್ಮಕ್ಕೆ ತಾಗುವಂತೆ ಒಂದು ಮಾತು ಹೇಳಿದ್ದರು.

ಇಷ್ಟೆಲ್ಲಾ ಹಗರಣಗಳ ನಡುವೆ ಬಿ.ಜೆ.ಪಿ. ಪಕ್ಷ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸದ ಗುಟ್ಟೇನು ಎಂಬ ಪ್ರಶ್ನೆಗೆ ಸದಾನಂದಗೌಡ ಉತ್ತರಿಸುತ್ತಾ, ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಕಾಂಗ್ರೇಸ್ ಪಕ್ಷದ ನಿಷ್ಕ್ರಿಯತೆ ನಮ್ಮ ಯಶಸ್ವಿನ ಗುಟ್ಟು ಎನ್ನುತ್ತಾ, ಇದು ಬಿ.ಜೆ.ಪಿ. ಪಕ್ಷದ ಗೆಲುವಿಗೆ ಕಾರಣವಾಯ್ತು ಎಂದಿದ್ದರು. ಕಳೆದ ನಾಲ್ಕು ವರ್ಷದ ರಾಜಕೀಯವನ್ನು ಗಮನಿಸಿದವರಿಗೆ ಸದಾನಂದಗೌಡರ ಮಾತಿನ ಹಿಂದಿನ ಮರ್ಮ ಅಥವಾ ಸತ್ಯ ಅರ್ಥವಾಗುತ್ತದೆ. ಜೊತೆಗೆ ಈ ಮಾತು ಅತಿಶಯೋಕ್ತಿ ಅಲ್ಲ ಎಂದೆನಿಸುತ್ತದೆ. ಆದರೆ, ಕಾಂಗ್ರೇಸಿಗರಿಗೆ ಮಾತ್ರ ಈ ಶತಮಾನದಲ್ಲಿ ಈ ವಾಸ್ತವ ಅರ್ಥವಾಗುವ ಸಾಧ್ಯತೆ ಕಡಿಮೆ.

ಬಿ.ಜೆ.ಪಿ. ಪಕ್ಷ ಮತ್ತು ಸರ್ಕಾರದ ಆಂತರೀಕ ಕಚ್ಚಾಟ ಹಾಗೂ ಮಿತಿ ಮೀರಿದ ಭ್ರಷ್ಟಾಚಾರ, ಜಾತಿಯತೆ ಇವುಗಳಿಂದ ಮುಂದಿನ ಚುನಾವಣೆಯಲ್ಲಿ ಮತ್ತೇ ಅಧಿಕಾರಕ್ಕೆ ಬರುವ ಸಾಧ್ಯತೆ ಕ್ಷೀಣಿಸಿದೆ. ಆದರೆ, ಬಿ.ಜೆ.ಪಿ. ಪಕ್ಷದ ವೈಫಲ್ಯತೆಯನ್ನು ತಮ್ಮ ಪಕ್ಷದ ಸಾಧನೆ ಎಂಬಂತೆ ಕನಸು ಕಾಣುತ್ತಿರುವ ಕಾಂಗ್ರೇಸಿಗರ ಇತ್ತೀಚೆಗಿನ ನಡವಳಿಕೆಗಳು ಪ್ರಜ್ಙಾವಂತರಲ್ಲಿ ಜಿಗುಪ್ಸೆಯ ಭಾವನೆ ಮೂಡಿಸಿವೆ. ಕರ್ನಾಟಕದ ಜನ ಮುಂದಿನ ಚುನಾವಣೆಯಲ್ಲಿ ಅಧಿಕಾರವನ್ನು ಬೆಳ್ಳಿ ತಟ್ಟೆಯಲ್ಲಿ ಇಟ್ಟು ಕೊಡುತ್ತಾರೆಂದು ಕಾಂಗ್ರೇಸಿಗರು ತಿರುಕನ ಕನಸು ಕಾಣುತಿದ್ದಾರೆ.

ಚುನಾವಣೆ ಹತ್ತಿರವಾಗುತಿದ್ದಂತೆ, ನಿದ್ರೆಯಿಂದ ಎದ್ದವರಂತೆ ಕಾಣುವ ಕಾಂಗ್ರೇಸ್ ಪಕ್ಷದ ನಾಯಕರು ಅಧಿಕಾರದ ಚುಕ್ಕಾಣಿ ಹಿಡಿಯುವ ಸಂಭ್ರ್ರಮದಲ್ಲಿ ಜಾತೀಯ ಬಣಗಳನ್ನು ರೂಪಿಸಿಕೊಂಡು ರಾಜಕೀಯ ತಂತ್ರಗಳನ್ನು ಹೆಣೆಯುತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರ ಮುಸ್ಲಿಂ ಬಣ, ಒಕ್ಕಲಿಗರ ಬಣ, ಲಿಂಗಾಯತರ ಬಣ, ಮತ್ತು ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಸೇರಿದ ಬಣಗಳು ಕಾಂಗ್ರೇಸ್ ಪಕ್ಷದಲ್ಲಿ ಸೃಷ್ಟಿಯಾಗಿವೆ. ನಿನ್ನೆ ತಾನೆ (9-8-12) ಬೆಂಗಳೂರಿನ ಹೋಟೆಲ್ ಒಂದರಲ್ಲಿ ಹಿಂದುಳಿದ ವರ್ಗದವರ ಗೌಪ್ಯ ಸಭೆ ನಡೆಯಿತು. ಅಧ್ಯಕ್ಷ ಪಟ್ಟ ಪಡೆಯಲು ಲಿಂಗಾಯುತರು ಶ್ಯಾಮನೂರು ಶಿವಶಂಕರಪ್ಪ ಎನ್ನುವ ಕ್ಯಾಪಿಟೇಷನ್ ಮಾಫಿಯಾದ ದೊರೆಯನ್ನು ಮುಂದಿಟ್ಟುಕೊಂಡು ಚದುರಂಗದ ಆಟಕ್ಕೆ ಈಗಾಗಲೇ ಆಹ್ವಾನ ನೀಡಿದ್ದಾರೆ.

ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೇಸ್ ಪಕ್ಷದ ನಾಯಕರಿಗೆ ಆತ್ಮಸಾಕ್ಷಿ ಇದ್ದರೆ, ತಮ್ಮ ಆತ್ಮಕ್ಕೆ ತಾವೇ ಪ್ರಶ್ನೆ ಹಾಕಿಕೊಂಡು ಉತ್ತರಕಂಡುಕೊಳ್ಳಬೇಕಿದೆ. ವೈಯಕ್ತಿಕ ನೆಲೆಯಲ್ಲಿ ಸಿದ್ಧರಾಮಯ್ಯ ಒಬ್ಬರನ್ನು ಹೊರತು ಪಡಿಸಿದರೆ, ಆಡಳಿತಾರೂಢ ಬಿ.ಜೆ.ಪಿ ಪಕ್ಷದ ವಿರುದ್ದ ಎಷ್ಟು ಮಂದಿ ಧ್ವನಿ ಎತ್ತಿದ್ದಾರೆ? ಬೆಂಗಳೂರು ನಗರದಲ್ಲಿ ಕಳೆದ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಶೋಭ ಕರಂದ್ಲಾಜೆ ವಿರುದ್ಧ ಸೋತ ಎಸ್.ಟಿ. ಸೋಮಶೇಖರ್ ಎಂಬ ಯುವಕ ಹಾಗೂ ಯುವ ಶಾಸಕರಾದ ದಿನೇಶ್‌ ಗುಂಡೂರಾವ್, ಕೃಷ್ಣ ಭೈರೇಗೌಡ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಎಂಬ ಯುವ ನಾಯಕರು ನಿರಂತರವಾಗಿ ಬಿ.ಜೆ.ಪಿ. ಸರ್ಕಾರವನ್ನು ಅಣಕು ಪ್ರದರ್ಶನಗಳ ಮೂಲಕ ವಿರೋಧಿಸುತ್ತಾ ಬಂದಿದ್ದನ್ನು ಬಿಟ್ಟರೆ, ಜಿಲ್ಲಾ ಮಟ್ಟದಲ್ಲಾಗಲಿ, ಪ್ರಾದೇಶಿಕ ವಲಯದ ಮಟ್ಟದಲ್ಲಾಗಲಿ, ಕಾಂಗ್ರೇಸಿಗರಿಂದ ಯಾವುದೇ ಪರಿಣಾಮಕಾರಿ ಪ್ರತಿಭಟನೆ ಸಾಧ್ಯವಾಗಲೇ ಇಲ್ಲ.

ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಅಧಿಕಾರ ಕಳೆದುಕೊಂಡರೆ, ಅದು ಸ್ವಯಂಕೃತ ಅಪರಾಧದಿಂದಲೇ ಹೊರತು, ಕಾಂಗ್ರೇಸ್ ಪಕ್ಷದ ಪರಿಣಾಮಕಾರಿ ವಿರೋಧಿ ನಿಲುವಿನಂದ ಅಲ್ಲ. ಕಾಂಗ್ರೇಸಿಗರ ಇತಿಹಾಸವೇ ಅಂತಹದ್ದು. ಅವರು ಅಧಿಕಾರ ನಡೆಸಬಲ್ಲವರೇ ಹೊರತು, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಆಳುತ್ತಿರುವ ಸರ್ಕಾರದ ವೈಫಲ್ಯತೆಗಳನ್ನು ಹೊರ ತೆಗೆಯುವ ಯೋಗ್ಯತೆ ಇಲ್ಲ. ಕಳೆದ ನಾಲ್ಕು ದಶಕಗಳ ದೇಶದ ರಾಜಕಾರಣ ಮತ್ತು ಹಲವು ರಾಜ್ಯಗಳ ರಾಜಕೀಯ ಇತಿಹಾಸ ಗಮನಿಸಿದರೆ, ಈ ಸತ್ಯ ಅರ್ಥವಾಗಬಲ್ಲದು. ದಕ್ಷಿಣ ಭಾರತದ ತಮಿಳುನಾಡು, ಆಂಧ್ರ, ಕರ್ನಾಟಕದಲ್ಲಿ ಬಲವಾಗಿದ್ದ ಕಾಂಗ್ರೇಸ್ ಪಕ್ಷದಬೇರುಗಳು ಏಕೆ ಸಡಿಲಗೊಂಡವು? ಮತ್ತು ಮಹಾರಾಷ್ಟ್ರ, ರಾಜಸ್ಥಾನ್, ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿ ನೆಲೆ ಕಳೆದುಕೊಳ್ಳಲು ಕಾರಣವೇನು ಎಂಬುದರ ಬಗ್ಗೆ ಹಿರಿಯ ಕಾಂಗ್ರೇಸಿಗರು ಒಮ್ಮೆ ತಣ್ಣಗೆ ಕುಳಿತು ಪರಾಮರ್ಶಿಸಕೊಳ್ಳಬೇಕಾಗಿದೆ. ಇಂದಿರಾ ಗಾಂಧಿ ಕಾಲದ ಗರೀಭಿ ಹಠಾವೋ ಘೋಷಣೆಯಾಗಲಿ, ಅಥವಾ ಸೋನಿಯ ಮತ್ತು ರಾಹುಲ್ ಮುಖವುಳ್ಳ ಭಿತ್ತಿಚಿತ್ರವಾಗಲಿ ಮತಗಳನ್ನು ತರುವ ದಿನಗಳು ಈಗ ಇತಿಹಾಸದ ಗರ್ಭದೊಳಗೆ ಹೂತು ಹೋಗಿವೆ. ಪ್ರತಿ ಚುನಾವಣೆಗೆ ಹೊಸತಲೆಮಾರಿನ ಹೊಸಚಿಂತನೆಯ ಮತದಾರರು ಸೇರ್ಪಡೆಯಾಗುತಿದ್ದಾರೆ. ಮೊದಲು ಕಾಂಗ್ರೇಸಿಗರು ಇದನ್ನು ಮನನ ಮಾಡಿಕೊಳ್ಳುವುದು ಓಳ್ಳೆಯದು.

ಎರಡು ವರ್ಷಗಳ ಹಿಂದೆ ಬಳ್ಳಾರಿ ರೆಡ್ಡಿ ಸಹೋದರರು ವಿಧಾನ ಸಭೆಯಲ್ಲಿ ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇವೆ ಎಂಬ ಸವಾಲನ್ನು ಎಸೆದಾಗ, ಸಿದ್ಧರಾಮಯ್ಯನವರನ್ನು ಹೊರತುಪಡಿಸಿ ಆ ಸವಾಲನ್ನು ಸ್ವೀಕರಿಸುವ ಶಕ್ತಿ ಯಾವ ಒಬ್ಬ ಕಾಂಗ್ರೇಸ್ ನಾಯಕನಿಗೆ ಇರಲಿಲ್ಲ. ವಿಧಾನ ಸಭೆಯ ಹೊರಗೆ ಮತ್ತು ಒಳಗೆ ಏಕಾಂಗಿ ಬಿ.ಜೆ.ಪಿ ಪಕ್ಷದ ವಿರುದ್ಧ ಧ್ವನಿಯೆತ್ತಿದ ಸಿದ್ಧರಾಮಯ್ಯ ಇವತ್ತು ಕಾಂಗ್ರೇಸ್ ಪಕ್ಷದಲ್ಲಿ ಅಕ್ಷರಶಃ ಏಕಾಂಗಿಯಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸುವ ಕುಟಿಲೋಪಾಯಗಳು ಮತ್ತು ತಂತ್ರಗಳು ಈಗಾಗಲೇ ಕಾಂಗ್ರೇಸ್ ಪಕ್ಷದಲ್ಲಿ ಸಿದ್ಧವಾಗಿವೆ. ಈ ಕಾರಣಕ್ಕಾಗಿ ಪಕ್ಷದ ಒಳಗೆ ಜಾತಿಯ ಬಣಗಳು ಬುಸುಗುಟುತ್ತಿವೆ.

ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಭಿ ನಡೆಸುತ್ತಿರುವ ಶ್ಯಾಮನೂರು ಶಿವಶಂಕರಪ್ಪನವರಿಗೆ ಇರುವ ಅರ್ಹತೆಯಾದರೂ ಏನು? ಪಕ್ಷಕ್ಕೆ ದೇಣಿಗೆ ಕೊಟ್ಟಿದ್ದನ್ನು ಬಿಟ್ಟರೆ, ದೊರೆಯಂತೆ, ಒಂದು ಸಂಸ್ಥಾನದ ಮಾಂಡಲೀಕನಂತೆ ಬದುಕಿದ್ದನ್ನು ಹೊರತುಪಡಿಸಿದರೆ, ಅವರು ಜನಸಾಮಾನ್ಯರ ಜೊತೆ ಬೆರತದ್ದಾಗಲಿ, ಕಷ್ಟ ಸುಖ ವಿಚಾರಿಸಿದ್ದನ್ನು ಕಂಡ ಜೀವಗಳು ಕರ್ನಾಟಕದಲ್ಲಿ ಇದ್ದಾವೆಯೆ? ಇವತ್ತು ವೈದ್ಯಕೀಯ ಶಿಕ್ಷಣ ದುಭಾರಿಯಾಗಿ, ಅದೊಂದು ದಂಧೆಯಾಗಿ, ಕ್ಯಾಫಿಟೇಷನ್ ಮಾಫಿಯ ಬೆಳೆಯಲು ಇಬ್ಬರು ಕಾಂಗ್ರೇಸ್ ನಾಯಕರು ಕಾರಣ. ಅವರೆಂದರೆ, ಒಬ್ಬರು, ಆರ್.ಎಲ್. ಜಾಲಪ್ಪ ಮತ್ತೊಬ್ಬರು ಶಿವಶಂಕರಪ್ಪ. ಇಂತಹವರನ್ನು ಮುಂದಿಟ್ಟುಕೊಂಡು ಯಾವ ಮುಖ ಹೊತ್ತುಕೊಂಡು ಕಾಂಗ್ರೇಸಿಗರು ಚುನಾವಣೆ ಎದುರಿಸುತ್ತಾರೆ?

ಚುನಾವಣೆಯಲ್ಲಿ ಸೋತರೂ, ಕಂಗೆಡೆದೆ ಉತ್ತರ ಕರ್ನಾಟಕದ 120ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೇವಲ ಹತ್ತು ಪೈಸೆ ವೆಚ್ಚದಲ್ಲಿ ಒಂದು ಲೀಟರ್ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡುತ್ತಿರುವ ಕಾಂಗ್ರೇಸ್‌ನ ಮಾಜಿ ಸಚಿವ ಗದಗದ ಹುಲಕೋಟಿಯ ಕೆ.ಹೆಚ್. ಪಾಟೀಲ್ ಮತ್ತು ಅವರ ಸಹೋದರ ಡಿ.ಆರ್. ಪಾಟೀಲರಿಂದ ಕಾಂಗ್ರೇಸಿಗರು ಮತ್ತು ಕಾರ್ಯಕರ್ತರು ಕಲಿಯುವುದು ಬಹಳಷ್ಟಿದೆ.

ವಿದ್ಯುತ್ ಉತ್ಪಾದನೆ, ರಸ್ತೆ ದುರಸ್ತಿ, ಬರ ನಿರ್ವಹಣೆ, ಲೋಕಾಯುಕ್ತರ ನೇಮಕ ವಿಳಂಭ ಧೋರಣೆ ಕುರಿತು ಆಡಳಿತಾರೂಢ ಬಿ.ಜೆ.ಪಿ. ಸರ್ಕಾರದ ವಿರುದ್ಧ ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳುವಲ್ಲಿ ಕಾಂಗ್ರೇಸ್‌ ಪಕ್ಷ ಎಲ್ಲಿ ಎಡವಿದೆ ಎಂಬುದರ ಬಗ್ಗೆ ನಾಯಕರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇವತ್ತು ಜಿಲ್ಲಾ ಮಟ್ಟದ ಕಾಂಗ್ರೇಸ್ ಸಭೆಗಳಿರಲಿ, ತಾಲೋಕು ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಭೆಗೆ ನಾಯಕರು ತಲೆಗೆ ಹೆಲ್ಮೆಟ್ ಧರಿಸಿ ಹೋಗಬೇಕಾದ ಸ್ಥಿತಿ ಬಂದೊದಗಿದೆ. ಪ್ರತಿ ಜಿಲ್ಲಾ ಘಟಕದಲ್ಲೂ ಎರಡು ಮೂರು ಬಣ ಸೃಷ್ಟಿಯಾಗಿವೆ. ಇವರುಗಳ ಗರಡಿ ಮನೆ ವರಸೆ ಮತ್ತು ಜಂಗೀ ಕುಸ್ತಿಗಳು ದೃಶ್ಯ ಮಾಧ್ಯಮಗಳಲ್ಲಿ ದಿನ ನಿತ್ಯ ಪ್ರಸಾರವಾಗುತ್ತಿವೆ. ಕರ್ನಾಟಕದ ಜನತೆ ಇವರ ಅಸಹನೀಯ ಚಟುವಟಿಕೆಗಳಿಂದ ಬೇಸತ್ತಿದ್ದಾರೆ. ಇಂತಹ ಅಯೋಮಯ ಸ್ಥಿತಿಯಲ್ಲಿ ಪಕ್ಷದಲ್ಲಿ ಬಣಗಳನ್ನು ಸೃಷ್ಟಿಸಿಕೊಂಡು ಅಧಿಕಾರಕ್ಕಾಗಿ ನಾಯಕರು, ಕಾರ್ಯಕರ್ತರು ಕಚ್ಚಾಡಿದರೆ, ಕರ್ನಾಟಕದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷವನ್ನು ಕಸದ ಬುಟ್ಟಿಗೆ ಎಸೆಯುವುದು ಖಚಿತ.

ಹಸಿವು ಮತ್ತು ಸಾವಿಗೆ ಧರ್ಮದ ಹಂಗಿಲ್ಲ


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದ ಬುದ್ಧಿವಂತರ ನಾಡೆಂದು ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಅಮಾನುಷವಾದ ಘಟನೆಗಳು ನಾಗರೀಕ ಜಗತ್ತು ತಲೆತಗ್ಗಿಸುವಂತೆ ಮಾಡಿವೆ. ಸಮಾಜ ಘಾತುಕ ಶಕ್ತಿಗಳು ಧರ್ಮದ ಮತ್ತು ಕನ್ನಡ ನಾಡು ನುಡಿ ರಕ್ಷಣೆಯ ಹೆಸರಿನಲ್ಲಿ ಮುಖವಾಡ ಧರಿಸಿಕೊಂಡು ವಿಜೃಂಭಿಸುತ್ತಿರುವದನ್ನ ಗಮನಿಸಿದರೆ, ಕರ್ನಾಟಕದಲ್ಲಿ ಮನುಷ್ಯರೆನಿಸಿಕೊಂಡವರು ಸರ್ಕಾರ ನಡೆಸುತ್ತಿಲ್ಲ, ಬದಲಾಗಿ ಇದೊಂದು “ಜಂಗಲ್ ರಾಜ್” ಎಂದು ನಿಸ್ಸಂಕೋಚವಾಗಿ ಹೇಳಬಹುದು.

ಈ ನೆಲದ ಮೇಲಿನ ಒಂದು ಜೀವ ಅದು ಗಂಡಾಗಿರಲಿ, ಹೆಣ್ಣಾಗಿರಲಿ, ಘನತೆಯಿಂದ ಬದುಕುವುದಕ್ಕೆ ಧರ್ಮದ ಅಥವಾ ಜಾತಿಯ ಹಂಗುಗಳು ಬೇಕಾಗಿಲ್ಲ ಎಂಬ ಸುಪ್ತ ಪ್ರಜ್ಞೆಯೊಂದು ಗುಪ್ತಗಾಮಿನಿಯಂತೆ ಈ ನೆಲದ ಸಂಸ್ಕೃತಿಯಲ್ಲಿ ಹರಿದು ಬಂದಿದೆ. ಇಂತಹ ಪ್ರಜ್ಙೆ ಮತ್ತು ನಂಬಿಕೆಗಳನ್ನು ಸೂಫಿ ಸಂತರು ಸೇರಿದಂತೆ, ಅಂಬೇಡ್ಕರ್, ಲೋಹಿಯಾ, ಕುವೆಂಪು ಮುಂತಾವರು ತಮ್ಮ ಬದುಕು ಮತ್ತು ಚಿಂತನೆಗಳ ಮೂಲಕ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ, ಜೊತೆಗೆ ವಿಸ್ತರಿಸಿದ್ದಾರೆ.

ಮಂಗಳೂರು ಘಟನೆಯ ಹಿನ್ನೆಲೆಯಲ್ಲಿ ಏಳು ವರ್ಷ ಹಿಂದೆ ತಮಿಳುನಾಡಿನ ಧಾರ್ಮಿಕ ಶ್ರದ್ಧಾ ಕೇಂದ್ರವಾದ ದರ್ಗಾ ಮತ್ತು ಅಲ್ಲಿನ ಮುಸ್ಲಿಮ್ ಸಮುದಾಯ ಸುನಾಮಿ ಸಂತ್ರಸ್ತರ ಬಗ್ಗೆ ನಡೆದುಕೊಂಡ ಮಾನವೀಯ ನಡುವಳಿಕೆ ಪದೇ ಪದೇ ನೆನಪಾಗುತ್ತಿದೆ.

ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಗೆ ಸೇರಿದ ಕಾರೈಕಲ್ ಜಿಲ್ಲಾ ಕೇಂದ್ರ ಮತ್ತು ತಮಿಳುನಾಡಿನ ಜಿಲ್ಲಾ ಕೇಂದ್ರವಾದ ನಾಗಪಟ್ಟಣಂ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಕಡಲ ತೀರಕ್ಕೆ ಹೊಂದಿಕೊಂಡಂತೆ ನಾಗೂರು ಎಂಬ ಊರಿದೆ. ಇಪ್ಪತ್ತು ಸಾವಿರ ಜನಸಂಖ್ಯೆ ಇರುವ ಈ ಊರಿನಲ್ಲಿ ಶೇಕಡ 90 ಮಂದಿ ಮುಸ್ಲಿಂ ಬಾಂಧವರು ನೆಲೆಸಿದ್ದಾರೆ. ಇವರ ಮಾತೃಭಾಷೆ ತಮಿಳು. ಇದೇ ಊರಿನಲ್ಲಿ ಸಾಹುಲ್ ಹಮೀದ್ (1490-1573) ಎಂಬ ಪ್ರಸಿದ್ಧ ಸೂಫಿ ಸಂತನ ದರ್ಗಾ ಇದ್ದು, ಪ್ರತಿದಿನ ದಕ್ಷಿಣ ಭಾರತದ ರಾಜ್ಯಗಳಿಂದ ಸಾವಿರಾರು ಹಿಂದು ಮತ್ತು ಮುಸ್ಲಿಂ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಕ್ಷೇತ್ರ ಇವತ್ತಿಗೂ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಮುದಾಯದ ಪುಣ್ಯಕ್ಷೇತ್ರಗಳಲ್ಲಿ ಒಂದು. ಈ ದರ್ಗಾಕ್ಕೆ ಒಂದು ಐತಿಹಾಸಿಕ ಮಹತ್ವವಿದೆ.

16ನೇ ಶತಮಾನದಲ್ಲಿ ತಮಿಳುನಾಡನ್ನು ಆಳುತಿದ್ದ ವಿಜಯನಗರ ಸಾಮ್ರಾಜ್ಯದ ಅರಸರಲ್ಲಿ ಒಬ್ಬನಾಗಿದ್ದ ಅಚ್ಯುತಪ್ಪ ನಾಯಕ ಎಂಬ ದೊರೆ ಗುಣವಾಗದ ಕಾಯಿಲೆಯಿಂದ ಬಳಲುತಿದ್ದಾಗ ಈ ಪ್ರದೇಶಕ್ಕೆ ಬಂದ ಸೂಫಿ ಸಂತ ಪಾರಿವಾಳದ ರಕ್ತದ ಮೂಲಕ ಅರಸನ ಕಾಯಿಲೆಯನ್ನು ವಾಸಿಮಾಡಿದನಂತೆ. ಇದರಿಂದ ಸಂತೃಪ್ತನಾದ ದೊರೆ ಆ ಸಂತನಿಗೆ ಇನ್ನೂರು ಎಕರೆ ಭೂಮಿ ಧಾನ ಮಾಡಿದ. ಇದೇ ಭೂಮಿಯಲ್ಲಿ ತನ್ನ ಶಿಷ್ಯರೊಂದಿಗೆ ನೆಲೆ ನಿಂತು, ಜನಸಾಮಾನ್ಯರ ದೈಹಿಕ ಮತ್ತು ಮಾನಸಿಕ ರೋಗಗಳನ್ನು ಗುಣಪಡಿಸುತ್ತಾ ಜೀವಿಸಿದ್ದ ಸಂತ ಸಾಹುಲ್ ಹಮೀದ್ 1573ರಲ್ಲಿ ನಾಗೂರಿನಲ್ಲಿ ಅಸು ನೀಗಿದಾಗ ಅವನ ಶಿಷ್ಯಂದಿರು ಗುರುವಿಗೆ ಸಮಾಧಿ ನಿರ್ಮಾಣ ಮಾಡಿ ಅಂದಿನಿಂದ ಇಂದಿನವರೆಗೂ ಅದನ್ನು ಪೂಜಿಸುತ್ತಾ ಶ್ರದ್ಧೆಯಿಂದ ನಡೆದುಕೊಂಡು ಬಂದಿದ್ದಾರೆ. ತಮಿಳುನಾಡಿನ ಈ ಕರಾವಳಿ ಪ್ರದೇಶಗಳನ್ನು ಆಳಿದ ಟಿಪ್ಪು ಸುಲ್ತಾನ್, ಮರಾಠರು ಮತ್ತು ಬ್ರಿಟೀಷರು ಕೂಡ ಈ ಧಾರ್ಮಿಕ ಶ್ರದ್ಧಾಕೇಂದ್ರಕ್ಕೆ ನೆರವಾದ ಬಗ್ಗೆ ದಾಖಲೆಗಳಿವೆ.

ಸಂತನ ವಂಶಸ್ತರ ಮೇಲ್ವಿಚಾರಣೆಯಲ್ಲಿ ಟ್ರಸ್ಟ್ ಕೂಡ ರಚನೆಯಾಗಿದೆ. ಗುಣವಾಗದ ಕಾಯಿಲೆಗಳಿಗೆ ಈಗಲೂ ಅಲ್ಲಿ ದೇಸಿ ಪದ್ಧತಿಯ ಔಷಧೋಪಚಾರ ನಡೆಯುತ್ತಿದೆ. ವಿಶೇಷವಾಗಿ ಮಾನಸಿಕ ಅಸ್ವಸ್ಥರನ್ನು ಗುಣಪಡಿಸುವ ಧಾರ್ಮಿಕ ಮತ್ತು ಔಷಧೋಪಚಾರ ಕ್ರಿಯೆಗಳು ಸಹ ಅಲ್ಲಿ ಜರಗುತ್ತವೆ.

ಅಧಿಕ ಸಂಖ್ಯೆಯಲ್ಲಿ ಹಿಂದೂ ಭಕ್ತರೂ ಸಹ ಆಗಮಿಸಿ, ದರ್ಗಾ ಹಿಂದಿರುವ ಬೃಹತ್ ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಸಂತನ ಸಮಾಧಿಗೆ ಪೂಜೆ ಸಲ್ಲಿಸುವ ವಾಡಿಕೆ ಚಾಲ್ತಿಯಲ್ಲಿದೆ.

2004ರ ಡಿಸೆಂಬರ್ 26ರಂದು ಇಂಡೋನೆಷ್ಯಾದ ಸಮುದ್ರದ ತಳದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಉಂಟಾದ ಸುನಾಮಿ ಅಲೆಗಳಿಗೆ ಭಾರತದ ಪೂರ್ವ ಭಾಗದ ಕಡಲತೀರದ ಪ್ರದೇಶಗಳು ತುತ್ತಾದದ್ದು ಎಲ್ಲರೂ ಬಲ್ಲ ಸಂಗತಿ. ತಮಿಳುನಾಡಿನ ಕಡಲತೀರಗಳು ಈ ಸಂದರ್ಭದಲ್ಲಿ ಅಪಾರ ಹಾನಿಗೆ ಒಳಗಾದವು. ಐವತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡರು. ಬ್ರಿಟೀಷರಿಗೂ ಮುನ್ನ ಡಚ್ಚರಿಂದ ಮತ್ತು ಪೋರ್ಚುಗೀಸರಿಂದ ಆಳಿಸಿಕೊಂಡಿದ್ದ ನಾಗಪಟ್ಟಣ, 5ನೇ ಶತಮಾನದಿಂದಲೂ ಬಂದರು ಪಟ್ಟಣವಾಗಿ ಪ್ರಸಿದ್ಧಿ ಪಡೆದಿತ್ತು. ಸುನಾಮಿ ಪಕೃತಿ ವಿಕೋಪಕ್ಕೆ ಇಡೀ ನಾಗಪಟ್ಟಣ ಜಿಲ್ಲೆ ತುತ್ತಾಗಿ 35 ಸಾವಿರ ಜನ ಪ್ರಾಣ ತೆತ್ತು, ಲಕ್ಷಾಂತರ ಮಂದಿ ತಮ್ಮ ಆಸ್ತಿಗಳನ್ನು ಕಳೆದುಕೊಂಡು ಅಕ್ಷರಶಃ ಅನಾಥರಾದರು. ಈ ಸಂದರ್ಭದಲ್ಲಿ ಭಾರತ ಸರ್ಕಾರ ವಿದೇಶಗಳ ನೆರವನ್ನು ನಿರಾಕರಿಸಿ, ಸಂತ್ರಸ್ತರ ಪರಿಹಾರಕ್ಕೆ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಕೈಗೆತ್ತಿಗೊಂಡಿತು.

ನಾಗಪಟ್ಟಣಂ ಜಿಲ್ಲೆಯಲ್ಲಿ ರಸ್ತೆ, ದೊರವಾಣಿ ಸಂಪರ್ಕ, ವಿದ್ಯತ್ ಸಂಪರ್ಕ ಎಲ್ಲವೂ ಅಸ್ತವ್ಯಸ್ತಗೊಂಡಿದ್ದವು. ಎಲ್ಲಡೆ ಕೊಳೆತ ಪ್ರಾಣಿಗಳ, ಮನುಷ್ಯರ ಮೃತ ದೇಹಗಳು ಗೋಚರಿಸುತಿದ್ದವು. ಸಾಂಕ್ರಾಮಿಕ ರೋಗ ಹರಡಲು ಪ್ರಾರಂಭಿಸಿತು. ಒಂದೆಡೆ ಮೃತ ದೇಹಗಳಿಗೆ ಮುಕ್ತಿ ಕಲ್ಪಿಸಿಕೊಡಬೇಕಾದ ಸವಾಲು, ಇನ್ನೊಂದೆಡೆ ಬದುಕುಳಿದವರಿಗೆ ಸೂರು, ಅನ್ನ ನೀರು, ಆರೋಗ್ಯ ಸೌಲಭ್ಯ ಒದಗಿಸುವ ಸವಾಲು. ಇವೆಲ್ಲವುಗಳನ್ನು ಆ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ 36 ವರ್ಷ ವಯಸ್ಸಿನ ಐ.ಎ.ಎಸ್. ಅಧಿಕಾರಿ ರಾಧಾಕೃಷ್ಣನ್ ಅತ್ಯಂತ ಸಮರ್ಥವಾಗಿ ನಿಭಾಯಿಸಿದ ರೀತಿ ಆಶ್ಚರ್ಯಪಡುವಂತಹದ್ದು.

ನಾಗಪಟ್ಟಣಂ ಹೊರವಲಯದಲ್ಲಿ 75 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಜಿಲ್ಲಾದಿಕಾರಿಯ ಕಛೇರಿ ಆವರಣದಲ್ಲಿ ತೆಂಗಿನ ಗರಿಗಳಿಂದ ಬೃಹತ್ ಶೆಡ್ಡುಗಳನ್ನು ನಿರ್ಮಾಣ ಮಾಡಿ, ಬದುಕುಳಿದವರಿಗೆ ಆಶ್ರಯ ಕಲ್ಪಿಸಲಾಯಿತು. ಕೇಂದ್ರದಿಂದ ಮತ್ತು ದೇಶದ ವಿವಿಧ ರಾಜ್ಯಗಳಿಂದ ಬಂದ ಪಡೆಗಳನ್ನು ಮತ್ತು ಸ್ವಯಂಸೇವಕರನ್ನು ಮೃತದೇಹಗಳಿಗೆ ಅಂತ್ಯ ಸಂಸ್ಕಾರ ಮಾಡುವ ಕೆಲಸಕ್ಕೆ ನಿಯೋಜಿಸಲಾಯಿತು. ಇಂತಹ ಕೆಲಸ ಕೇವಲ ಸರ್ಕಾರ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಇವುಗಳು ಮಾಡಿದರೆ ಸಾಲದು, ಸ್ಥಳೀಯರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ನಾಗೂರು ದರ್ಗಾ ಮುಸ್ಲಿಂ ಬಾಂಧವರಿಗೆ ಕರೆ ನೀಡಿತು.

ನಾಗೂರು ದರ್ಗಾದ ಈ ಕರೆಗೆ ಓಗೊಟ್ಟ ಕಾರೈಕಲ್, ಕುಂಭಕೋಣಂ, ಮಯಿಲಾಡುತೊರೈ, ತಿರುವರೂರು ಮತ್ತು ತಂಜಾವೂರು ಪ್ರದೇಶಗಳೀಂದ ಬಂದ ಮುಸ್ಲಿಂಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಕೊಳೆಯುತಿದ್ದ ಮೃತ ದೇಹಗಳಿಗೆ ಜಾತಿ, ಧರ್ಮ ನೋಡದೆ, ಅಂತ್ಯಕ್ರಿಯೆ ನಡೆಸಿದರು. ನಾಗೂರು ದರ್ಗಾ ಆವರಣದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಿ, ಬದುಕುಳಿದಿದ್ದ ಎಂಟು ಸಾವಿರ ಮಂದಿಗೆ 40 ದಿನಗಳ ಆಶ್ರಯ ಒದಗಿಸಿದರು. ಬೆಳಿಗ್ಗೆ ಎಂಟು ಗಂಟೆಗೆ ಚಹಾ, 11 ಗಂಟೆಗೆ ಊಟ, ನಾಲ್ಕು ಗಂಟೆಗೆ ಚಹಾ ಬ್ರೆಡ್, ಸಂಜೆ ಏಳುಗಂಟೆಗೆ ಊಟ. ಹೀಗೆ ನಿರಂತರ ನಲವತ್ತು ದಿನಗಳ ಕಾಲ, ಜಾತಿ ಅಥವಾ ಧರ್ಮದ ನೆಲೆ ನೋಡದೇ ಎಂಟು ಸಾವಿರ ಮಂದಿಗೆ ಆಶ್ರಯ ನೀಡಿ ಕಾಪಾಡಿದ ಗೌರವ ಈ ದರ್ಗಾಕ್ಕೆ ಸೇರಿತು. ಈ ಮಹತ್ಕಾರ್ಯಕ್ಕಾಗಿ ಮುಸ್ಲಿಂ ವರ್ತಕರು, ರೈತರು, ಪ್ರತಿದಿನ ಕ್ವಿಂಟಾಲ್‌ಗಟ್ಟಲೆ ಅಕ್ಕಿ, ತರಕಾರಿ, ಎಣ್ಣೆ ಬೇಳೆ, ಸಾಂಬಾರ್ ಪುಡಿ, ಸಕ್ಕರೆ, ಹಾಲು, ಚಹಾ ಪುಡಿಯನ್ನು ದರ್ಗಾದ ಆವರಣಕ್ಕೆ ತಂದು ಸುರಿದು ತಮ್ಮ ಹೆಸರು ಕೂಡ ತಿಳಿಸದೆ ಹೋಗುತಿದ್ದ ರೀತಿಗೆ ಸ್ವತಃ ಸಾಕ್ಷಿಯಾದ ನಾನು ಬೆರಗಾಗಿದ್ದೀನಿ. ಅವರ ನಡುವಳಿಕೆಯಲ್ಲಿ “ನೀಡುವವನಿಗೆ ಅಹಂ, ಪಡೆದವನಿಗೆ ಕೀಳರಿಮೆ ಇರಬಾರದು” ಎಂಬ ಮನುಷ್ಯತ್ವದ ಮಹಾನ್ ಪ್ರಜ್ಞೆಯೊಂದು ಎದ್ದು ಕಾಣುತಿತ್ತು.

ಬದುಕಿದ್ದಾಗ ಜಾತಿಯನ್ನ, ಧರ್ಮವನ್ನು ಅಪ್ಪಿಕೊಂಡು ಬಡಿದಾಡುವ ಈ ನರಜನ್ಮಕ್ಕೆ ಸುನಾಮಿಯ  ಹೊಡೆತಕ್ಕೆ ಸಿಲುಕಿ ಕಡಲತೀರದಲ್ಲಿ ಕೊಳೆಯುತ್ತಿರುವಾಗ, ಯಾವುದೋ ಇನ್ನೊಂದು ಬದುಕುಳಿದ ಜೀವ ಬೃಹತ್ ಕಂದಕ ತೋಡಿ, ಸಾಮೂಹಿಕವಾಗಿ ಹೂಳುವಾಗ, ಅಲ್ಲಿ ಧರ್ಮದ ಅಥವಾ ಜಾತಿಯ ಸೋಂಕು ಕಾಣಲಿಲ್ಲ. ಬದುಕಿದ್ದ ಜೀವಕ್ಕೆ ಮೃತಪಟ್ಟವರೆಲ್ಲರೂ ಮನುಷ್ಯರು ಎಂಬ ಪ್ರಜ್ಞೆ ಮಾತ್ರ ಇತ್ತು. ಹಸಿದ ಜೀವವೊಂದು ಅನ್ನಕ್ಕೆ ಕೈಯೊಡ್ಡಿದಾಗ ಅಲ್ಲಿ ತಾನು ಈವರೆಗೆ ಅಪ್ಪಿಕೊಂಡಿದ್ದ ಜಾತಿ ಅಥವಾ ಧರ್ಮದ ನೆನಪೇ ಆ ಕ್ಷಣದಲ್ಲಿ ಬರಲಿಲ್ಲ. ಏಕೆಂದರೆ, ಪಕೃತಿಯ ವಿಕೋಪದಲ್ಲಿ ಬದುಕುಳಿದ ಜೀವಕ್ಕೆ ಜಾತಿ-ಧರ್ಮಕ್ಕಿಂತ ಹೊಟ್ಟೆ ತುಂಬುವ ಅನ್ನ ಮುಖ್ಯವಾಗಿತ್ತು. ಇಂತಹ ಕಟು ವಾಸ್ತವ ಸತ್ಯಗಳನ್ನು ಧರ್ಮದ ಹೆಸರಿನಲ್ಲಿ ಕತ್ತಿ ಹಿಡಿದು ಬೀದಿಯಲ್ಲಿ ಹಾರಾಡುವ ಹಲಾಲುಕೋರರಿಗೆ ತಲುಪಿಸುವ ಬಗೆ ಹೇಗೆ? ನೀವೇನಾದರೂ ಬಲ್ಲಿರಾ?

[ಕಳೆದ ಶನಿವಾರ (28/7/12) ಈ ದರ್ಗಾಕ್ಕೆ ಭೇಟಿ ನೀಡಿ, ಪೋಟೊ ತೆಗೆದು, ಅಲ್ಲಿನ ಮುಖ್ಯಸ್ಥರೊಂದಿಗೆ ಚಹಾ ಕುಡಿದು, ಮಾತನಾಡುವಾಗ ಹಳೆಯ ಘಟನೆಗಳು ನೆನಪಾದವು.]