Category Archives: ಜಿ.ಮಹಂತೇಶ್.

‘ತಣ್ಣನೆ ಸಾಮೂಹಿಕ ಬೇಟೆ’ ಹಿಂದಿನ ಕೆಲವು ಕರಾಳ ಸತ್ಯಗಳು

– ಜಿ.ಮಹಂತೇಶ್

ಛತ್ತೀಸ್​ಗಢವಷ್ಟೇ ಅಲ್ಲ, ಭಾರತ ದೇಶವೂ ಅಕ್ಷರಶಃ ಬೆಚ್ಚಿ ಬಿದ್ದಿದೆ. ಮಾವೋವಾದಿಗಳನ್ನ ಹತ್ತಿಕ್ಕಲು M_Id_52179_Salwa_Judumಸೆಲ್ವಾ ಜುಡುಂ ಅನ್ನು ಬಳಸಿಕೊಂಡಿದ್ದ ಛತ್ತೀಸ್​ಗಢ ಪ್ರಭುತ್ವಕ್ಕೆ ಮಾವೋವಾದಿಗಳು ಮರ್ಮಾಘಾತದ ಹೊಡೆತ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತ್ತು ಅಹಿಂಸೆಯಲ್ಲಿ ನಂಬಿಕೆ ಇರುವವರ್ಯಾರು ಮಾವೋವಾದಿಗಳ ಈ ಕೃತ್ಯವನ್ನ ಬೆಂಬಲಿಸಲಾರರು. ಆದರೆ ಅದೇ ಪ್ರಭುತ್ವ, ಸೆಲ್ವಾ ಜುಡುಂ ಹೆಸರಿನಲ್ಲಿ ಅದೆಷ್ಟೋ ಮಂದಿ ಆದಿವಾಸಿಗಳನ್ನ ಸಾವಿನ ಮನೆಗೆ ಅಟ್ಟಿತ್ತು. ಆದಿವಾಸಿಗಳ ವಿರುದ್ಧ ಆದಿವಾಸಿಗಳನ್ನೇ ಎತ್ತಿಕಟ್ಟಿ ಅವರೊಳಗೇ ಒಬ್ಬ ಗೂಢಚಾರನನ್ನ ನೇಮಿಸಿತ್ತು. ಅದೇ ಗೂಢಚಾರರ ನೆರವಿನಿಂದ ಸದ್ದಿಲ್ಲದೇ ಮಾರಣ ಹೋಮ ನಡೆಸಿತ್ತು.

ಛತ್ತೀಸ್​ಢದಲ್ಲಿ ಮೊನ್ನೆ ನಡೆದ ಮಹೇಂದ್ರ ಕರ್ಮ ಮತ್ತು ಪಿಸಿಸಿ ಅಧ್ಯಕ್ಷ ನಂದಕುಮಾರ್ ಹಾಗೂ ಅವರ ಪುತ್ರನ ಹತ್ಯೆ ಆದಾಗ ಎಲ್ಲರೂ ಮರುಗಿದರು. ಖುದ್ದು ಸೋನಿಯಾ, ರಾಹುಲ್, ಮನಮೋಹನ್​ಸಿಂಗ್ ಭೇಟಿ ಕೊಟ್ಟು ಕಂಬನಿಗರೆದರು. ನಿಷ್ಪಾಪಿ ಆದಿವಾಸಿಗಳ ಮಾರಣ ಹೋಮ ನಡೆದಾಗ ಬಹುತೇಕ ಹೃದಯಗಳು ಅದ್ಯಾಕೋ ಏನೋ ಮರುಗಲಿಲ್ಲ; ಗಲ್ಲದ ಮೇಲೆ ಕಣ್ಣೀರು ಹರಿಯಲಿಲ್ಲ. ಅರಣ್ಯ ಸಂಪತ್ತಿನ ಲೂಟಿಗೆ ತೊಡಕಾಗಿದ್ದ ಆದಿವಾಸಿಗಳು ಅಲ್ಲಿರುವುದು ಯಾರಿಗೂ ಬೇಡವಾಗಿತ್ತು. ವಿಶೇಷವಾಗಿ ಗಣಿ ದೊರೆಗಳು ಮತ್ತು ಅವರ ಬೆನ್ನಿಗೆ ನಿಂತ ಪ್ರಭುತ್ವಕ್ಕೆ ಸುತಾರಾಂ ಬೇಡವಾಗಿತ್ತು.

ಆಗಷ್ಟೇ ರಚನೆಯಾಗಿದ್ದ ಛತ್ತೀಸ್​ಗಢ ರಾಜ್ಯದಲ್ಲಿ ಮಾವೋವಾದ ಚಳವಳಿಯೂ salwajudum398_080211084403ಹೆಡೆ ಎತ್ತತೊಡಗಿತ್ತು. ಇದರ ಹೆಡೆಯನ್ನ ಬಡಿದು ಬಾಯಿಗೆ ಹಾಕಿಕೊಳ್ಳಲು ಅಲ್ಲಿನ ಪ್ರಭುತ್ವವೇ ಭಯೋತ್ಪಾದಕ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕಿದ್ದ ಹೆಸರು ಸೆಲ್ವಾ ಜುಡಂ ಎಂದು.

ಆದಿವಾಸಿ ಗೊಂಡಿ ಭಾಷೆಯಲ್ಲಿ ಸೆಲ್ವಾ ಜುಡುಂ ಎಂದರೇ, ತಣ್ಣನೆ ಸಾಮೂಹಿಕ ಬೇಟೆ ಎಂದು. ಛತ್ತೀಸ್​ಗಢ್ ರಾಜ್ಯದಲ್ಲಿ ಬಸ್ತಾರ್ ಎಂಬುದೊಂದು ಸಣ್ಣ ಜಿಲ್ಲೆ ಇದೆ. ಈ ಜಿಲ್ಲೆಯಲ್ಲಿ ಹೇರಳವಾದ ಖನಿಜ ಮತ್ತು ಅರಣ್ಯ ಸಂಪತ್ತನ್ನ ಗರ್ಭೀಕರಿಸಿಕೊಂಡಿದೆ. ಇಲ್ಲಿ ಉತ್ಕ್ರಷ್ಟ ದರ್ಜೆಯ ಕಬ್ಬಿಣದ ಅದಿರು, ಸುಣ್ಣದ ಕಲ್ಲು, ಡೋಲೋಮೈಟ್, ಬಾಕ್ಸೈಟ್, ವಜ್ರ ಸೇರಿದಂತೆ ಮತ್ತಿತರೆ ಖನಿಜ ಸಂಪತ್ತಿದೆ. ಹೀಗಾಗಿಯೇ ಅಲ್ಲಿನ ಸರ್ಕಾರ ಖನಿಜ ಸಂಪತ್ತಿನ ಮೇಲೆ ಕಣ್ಣಿಟ್ಟಿದೆ.

ಛತ್ತೀಸ್​ಗಢ ಸರ್ಕಾರ ಇಲ್ಲಿನ ಖನಿಜ ಸಂಪತ್ತನ್ನ ಬಗೆಯಲು mail_today5_070611101748ಹತ್ತಾರು ಖಾಸಗಿ ಗಣಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆ ಒಪ್ಪಂದ ಮೊತ್ತವೇ 60 ಸಾವಿರ ಕೋಟಿಗಿಂತಲೂ ಅಧಿಕ. ಬಸ್ತಾರ್​ ನೆಲದಲ್ಲಿ ಹುದುಗಿರುವ ಖನಿಜ ಸಂಪತ್ತನ್ನ ಬಗೆಯುವುದು ಅಷ್ಟು ಸುಲಭವಾಗಿರಲಿಲ್ಲ. ಆಗಷ್ಟೇ ಹೆಡೆ ಎತ್ತಿದ್ದ ಮಾವೋವಾದಿಗಳು ಖನಿಜ ಸಂಪತ್ತನ್ನ ಬಗೆಯುವುದಕ್ಕೆ ವಿರೋಧಿಸಿ, ಆದಿವಾಸಿಗಳ ಬೆನ್ನಿಗೆ ನಿಂತಿದ್ದರು.

ಹೀಗಾಗಿಯೇ, ಅಲ್ಲಿನ ಸರ್ಕಾರ ಆದಿವಾಸಿ ಸಂಸ್ಕೃತಿಯನ್ನ ಬುಡ ಸಮೇತ ಕೀಳಲಾರಂಭಿಸಿದೆ. ಇದರ ಒಂದು ಭಾಗವಾಗಿಯೇ ಸೆಲ್ವಾ ಜುಡಂ ರೂಪುಗೊಂಡಿರುವುದು. ಆದಿವಾಸಿಗಳ ವಿರೋಧಿಗಳನ್ನ ಕಲೆ ಹಾಕಿ, ತಿಂಗಳಿಗೆ 1,500 ರೂಪಾಯಿಗಳನ್ನ ನೀಡಿದ್ದ ಸರ್ಕಾರ ಅವರನ್ನೇ ವಿಶೇಷ ಪೊಲೀಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿತ್ತು. ತರಬೇತಿ ಪಡೆದುಕೊಂಡ ವಿಶೇಷ ಪೊಲೀಸ್ ಅಧಿಕಾರಿಗಳು ಆದಿವಾಸಿಗಳ ನರಮೇಧ ನಡೆಸಿದ್ದರು. ಆದಿವಾಸಿಗಳ ತಲೆ ಕತ್ತರಿಸಿ ಹಳ್ಳಿಗಳ ಪ್ರಮುಖ ಸ್ಥಳಗಳಲ್ಲಿ ನೇತು ಹಾಕಲಾಗಿತ್ತು. ಗರ್ಭಿಣಿಯರ ಹೊಟ್ಟೆ ಸೀಳಿ ಭ್ರೂಣವನ್ನ ಕಿತ್ತೆಸೆಯುತ್ತಿದ್ದರು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಳ್ಳಿ ಹಳ್ಳಿಗಳನ್ನೇ ಸುಟ್ಟು ಬೂದಿ ಮಾಡಲಾಗುತ್ತಿತ್ತು. ಆದರೆ, ಹೊರ ಜಗತ್ತಿಗೆ ಇದ್ಯಾವುದು ಬೆಳಕಿಗೆ ಬರಲೇ ಇಲ್ಲ.

selva judumಸೆಲ್ವಾ ಜುಡುಂ ವಿರುದ್ಧ ಕಳೆದ 5 ವರ್ಷಗಳ ಕೆಳಗೆ “ಆದಿವಾಸಿ ಕಲಾ ಮಂಚ್” ತಂಡ, ದೇಶಾದ್ಯಂತ ಸೆಲ್ವಾ ಜುಡಂನ ಭೀಕರತೆಯನ್ನ ಹೇಳಿತ್ತು. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಲ್ಲೂ ಇದೇ ತಂಡ ಸತ್ಯಾಂಶಗಳನ್ನ ಹೊರಗೆಡವಿತ್ತು. ಅದೇ ತಂಡ ಕರ್ನಾಟಕಕ್ಕೂ ಭೇಟಿ ನೀಡಿ ಶಿವಮೊಗ್ಗದಲ್ಲೂ ಸೆಲ್ವಾ ಜುಡುಂನ ಹಿಂದಿರುವ ಅದೆಷ್ಟೋ ಕರಾಳ ಕೃತ್ಯಗಳ ಕಠೋರ ಸತ್ಯಗಳನ್ನ ಬಿಚ್ಚಿಟ್ಟಿತ್ತು. ಆಗ ಆ ತಂಡದ ನೇತೃತ್ವ ವಹಿಸಿದ್ದು ರಾಜ್​ಕುಮಾರ್ ಎನ್ನುವ ಪುಟ್ಟ ಪೋರ. ಶಿವಮೊಗ್ಗಕ್ಕೆ ಆತ ಬಂದಾಗ ಆತನಿಗಿನ್ನೂ 14 ವರ್ಷ. 5ನೇ ತರಗತಿಗೆ ಶರಣು ಹೊಡೆದು, ತನ್ನ ತಾಯ್ನೆಲದ ಮೇಲಿನ ದೌರ್ಜನ್ಯವನ್ನ ಕಂಡಿದ್ದ ಆತನ ಕಣ್ಣುಗಳು ಆಕ್ರೋಶಗೊಂಡಿದ್ದವು. ಈತ ಹೋದಲೆಲ್ಲಾ ಹೇಳುತ್ತಿದ್ದಿದ್ದು `ಹಮ್ ಆದಿವಾಸಿ ಹೈ…ಜಂಗಲ್ ಬಿ ಹಮಾರಾ ಹೈ..ಜಂಗಲ್ ಮೆ ಮಿಲ್ನಾಕಾ ಸಂಪತ್ತಿ ಬಿ ಹಮಾರಾ ಹೈ(ನಾವು ಆದಿವಾಸಿಗಳು….ಇಲ್ಲಿನ ಅರಣ್ಯವೂ ನಮ್ಮದೇ…ಅರಣ್ಯದಲ್ಲಿ ದೊರಕುವ ಸಂಪತ್ತೂ ಕೂಡ ನಮ್ಮದೇ). ಈತನ ಹಾವ ಭಾವಗಳನ್ನ ನೋಡಿದವರಿಗೆ ಈತನನ್ನ ಎಲ್ಲರೂ ಗದ್ದರ್‌ಗೆ ಹೋಲಿಸುತ್ತಿದ್ದರು. ಈತನ ರಟ್ಟೆಯಲ್ಲಿ ಅಂಥಾ ಕಸುವು ಇರಲಿಲ್ಲ….ಮೀಸೆಯೂ ಮೂಡಿರಲಿಲ್ಲ. ಆದರೂ ರಾಜ್ಯ ಪ್ರಭುತ್ವದ ವಿರುದ್ಧ ಸೆಟೆದು ನಿಂತಿದ್ದ. ಸೆಟೆದು ನಿಂತುಕೊಂಡೇ ಹೇಳಿದ್ದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.

‘ಮೈ ಇದರ್ ದಮನ್ ಕಿ ಸಚ್ಚಾಯೇ ಬತಾನೆ ಆಯಾ ಹೂಂ. ಆಜ್ ಬಸ್ತಾರ್ ಮೇ ಜನತಾ ಕೆ ಊಪರ್ Saket_gaddarಥಂಢಾಕೆ ನಾಮ್ ಸೆ ಹತ್ಯಾರ್ ಚಲಾ ರಹೇ ಹೈ. ಔರ್ ಯೇ ಕಾರ್ವಾಯೇ ಶಾಂತಿ ಕೆ ಅಭಿಯಾನ್ ಕರ್ಕೆ ಸರ್ಕಾರ್ ಚಿಲ್ಲಾ ರಹೇ ಹೈ. ವೇಷ್ ಬದಲ್ಕರ್ ಶೈತಾನ್ ಆತೇ ಹೈ ಸಾಥ್ ಮೇ ಮಾಯಾ ಕಾ ಜಾಲ್ ಲಾತೇ ಹೈ'( ನಾನಿಲ್ಲಿ ನಮ್ಮನ್ನ ಹತ್ತಿಕ್ಕುತ್ತಿರುವ ಸತ್ಯಾಂಶಗಳನ್ನ ಹೇಳಲು ಬಂದಿರುವೆ. ಇವತ್ತು ಬಸ್ತಾರ್ ಜನರ ಮೇಲೆ ತಣ್ಣಗೆ ಆಯುಧಗಳನ್ನಿಡಿದು ನಮ್ಮನ್ನ ಹೊಡೆದುರುಳಿಸುತ್ತಿವೆ. ಇದನ್ನ ಶಾಂತಿ ಅಭಿಯಾನ ಎಂದು ಸರ್ಕಾರ ಕೂಗುತ್ತಿದೆ. ವೇಷ ಬದಲಿಸಿಕೊಂಡು ಸೈತಾನ ಬರುತ್ತಾನೆ ಮತ್ತು ಮಾಯೆಯ ಜಾಲ ಬೀಸುತ್ತಾನೆ.)

ಹಣೆಗೆ ಕೆಂಪು ಪಟ್ಟಿ, ಸೊಂಟಕ್ಕೆ ಹಸಿರು ಹೊದಿಕೆ ಸುತ್ತಿಕೊಂಡು ಹಾಡುತ್ತ ಹಾಡುತ್ತ…`ಸಾಥಿಯೋ ಚಲೇ ಚಲೋ…ದೂರ್ ನಹೀ…ಮುಕ್ತಾ ಕಾ ಮಕಾನ್…ಮುಕ್ತಿ ಗೀತ್ ಗಾತೆ ಕಹೋ….ಶಹೀದ್ ಹೋಂ…ಸಬ್ ಕೋ ಲಾಲ್ ಸಲಾಂ’ ಎಂದು ಹೇಳುವಾಗಲಂತೂ ಇಡೀ ಸಭಾಂಗಣ ಕೆಂಪಾಗಿತ್ತು.

ಮೊನ್ನೆ ಮೊನ್ನೆ ಮಾವೋವಾದಿಗಳು ಛತ್ತೀಸ್ಗಢದಲ್ಲಿ ನಡೆಸಿದ ಹತ್ಯೆಗಳೂ, ತಣ್ಣನೆಯ ಸಾಮೂಹಿಕ ಬೇಟೆಗೆ ಸಹಜವಾಗಿಯೇ ಪ್ರತಿಕಾರವಾಗಿತ್ತು. ಮಾವೋವಾದಿಗಳ ಪ್ರತಿಕಾರದ ಬಗೆ ಮತ್ತು ಪ್ರಭುತ್ವದ ಕಾರ್ಯಾಚರಣೆ ಎರಡೂ ಮನುಷ್ಯ ವಿರೋಧಿ. ಅಲ್ಲಿನ ಸರ್ಕಾರ ಆದಿವಾಸಿಗಳ ಏಳ್ಗೆಗೆ ಶಾಶ್ವತ ಯೋಜನೆಗಳನ್ನ ರೂಪಿಸಿ, ಅವರೂ ನಮ್ಮವರೇ ಎಂದು ಒಳಗೆ ಬಿಟ್ಟುಕೊಳ್ಳುವ ವಾತಾವರಣ ನಿರ್ಮಾಣ ಆಗಬೇಕು.

ನಿಜಕ್ಕೂ ಇಂಥ ಆಶಯ ಇನ್ನಾದರೂ ಈಡೇರಲಿ.

ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸಿದ್ದರಾಮಯ್ಯನವರ ಘೋಷಣೆ

– ಜಿ.ಮಹಂತೇಶ್

 “ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ರೂಪಾಯಿ ದರದಲ್ಲಿ 30 ಕೆ.ಜಿ.ಅಕ್ಕಿ.” ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ಗಳಿಗೆಯಲ್ಲಿ ತುಂಬಾ ಧಾವಂತದಿಂದಲೇ ಘೋಷಿಸುತ್ತಿದ್ದಂತೆ ಬಿಪಿಎಲ್ ಕುಟುಂಬಗಳು ಅಕ್ಷರಶಃ ಕೈ ಮುಗಿದವು. ಮುಂಬರುವ ಜೂನ್ ತಿಂಗಳಿನಿಂದಲೇ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆ ಆಗಲಿದೆ ಎಂದು ಹೇಳಿದಾಗಲಂತೂ ಬಿಪಿಎಲ್ ಕಾರ್ಡ್‌ದಾರರು ಧನ್ಯೋಸ್ಮಿ ಎಂದು ಹೇಳಿದ್ದೂ ಉಂಟು.

ಸಿದ್ದರಾಮಯ್ಯ ಅವರ ನೇತೃತ್ವದ ಏಕ ವ್ಯಕ್ತಿ ಸಂಪುಟ ತೆಗೆದುಕೊಂಡಿರುವ ಈ ನಿರ್ಧಾರದಿಂದ 98.17 ಲಕ್ಷ ಜನರಿಗೆ ಅನುಕೂಲವಾಗಲಿದೆ.rice ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 460 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದೂ ಹೇಳಿದರು. (ಇಂದಿನ ಮಾಧ್ಯಮ ವರದಿಗಳು ಅದನ್ನು ವಾರ್ಷಿಕ ರೂ. 2,373 ಕೋಟಿಯಿಂದ ರೂ. 6,650 ಕೋಟಿಯ ತನಕ ಹೊರೆ ಬೀಳಲಿದೆ ಎಂದು ಅಂದಾಜಿಸಿವೆ.)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರ ಅಕ್ಷರಶಃ ಜನಪರವಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಬೋಗಸ್ ಬಿಪಿಎಲ್ ಕಾರ್ಡ್‌ಗಳಿಗೆ ಕಡಿವಾಣ ಹಾಕದ ಹೊರತು 1 ರೂಪಾಯಿಗೆ ಕೊಡುತ್ತಿರುವ 3- ಕೆ.ಜಿ. ಮತ್ತದೇ ಕಾಳಸಂತೆಕೋರರ ಬೊಕ್ಕಸವನ್ನ ಮತ್ತಷ್ಟು ತುಂಬಿಸಿ, ಅದನ್ನ ಇನ್ನಷ್ಟು ಶ್ರೀಮಂತವಾಗಿಸುವ ಸಾಧ್ಯತೆ ಇದೆ.

ಕಸದ ಬುಟ್ಟಿಗೆ ಸೇರಿರುವ ಬಾಲಸುಬ್ರಹ್ಮಣ್ಯಂ ತನಿಖಾ ವರದಿ:

ಬಿಪಿಎಲ್ ಕಾರ್ಡ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಬೋಗಸ್ ಕಾರ್ಡ್‌ಗಳಿಂದ ಸರ್ಕಾರಕ್ಕೆ ಸಂಭವಿಸುತ್ತಿರುವ ಸಾವಿರಾರು ಕೋಟಿ ರೂಪಾಯಿ ನಷ್ಟದ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೇಮಿಸಿದ್ದ ಡಾ.ಬಾಲಸುಬ್ರಹ್ಮಣ್ಯಂ ಸಮಿತಿ ಕೊಟ್ಟಿರುವ ವರದಿ ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಿಸಬೇಕಿತ್ತು.

ನಮ್ಮ ರಾಜ್ಯದಲ್ಲಿ ತುಂಬಾ ವ್ಯವಸ್ಥಿತವಾಗಿ ಬಡತನವನ್ನ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಬಾಲಸುಬ್ರಹ್ಮಣ್ಯ ಅವರು ಕೊಟ್ಟಿರುವ ವರದಿಯ ಪುಟಗಳನ್ನ ತಿರುವಿ ಹಾಕಿದರೆ, ಬಡತನ ಮತ್ತು ಬಿಪಿಎಲ್ ಕಾರ್ಡ್‌ಗಳ ಬಂಡವಾಳ ಬಯಲಾಗುತ್ತದೆ.

ಒಟ್ಟು ಕುಟುಂಬಗಳು 120 ಲಕ್ಷ ಇದ್ದಲ್ಲಿ, ಇದರಲ್ಲಿ ಪಡಿತರ ಚೀಟಿ ಇರುವವರ ಸಂಖ್ಯೆ 159 ಲಕ್ಷ 29 ಸಾವಿರ. ಅಂದರೆ ಇಲ್ಲಿ ಹೆಚ್ಚುವರಿಯಾಗಿ 39 ಲಕ್ಷ 29 ಸಾವಿರ ಸಂಖ್ಯೆಯಲ್ಲಿ ಪಡಿತರ ಚೀಟಿಗಳು ಹಂಚಿಕೆ ಆಗಿವೆ. ಇವೆಲ್ಲವೂ ಬೋಗಸ್ ಎಂದು ಮತ್ತೆ ಮತ್ತೆ ಹೇಳಬೇಕಿಲ್ಲ.

ಅಕ್ರಮ ಪಡಿತರ ಚೀಟಿಗಳಿಂದಾಗಿ ರಾಜ್ಯ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ 1737 ಕೋಟಿ ರೂಪಾಯಿ. ನಮ್ಮ ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ನೆಗೆದು ಬಿದ್ದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವುದು ಸೋರಿಕೆ ಬಿಟ್ಟರೆ ಬೇರಿನ್ನೇನೂ ಪ್ರಗತಿಯಿಲ್ಲ.

ನಿಯಮಗಳ ಪ್ರಕಾರ ಬಡತನ ರೇಖೆಗಿಂತ ಕೆಳಗಿರೋ 5.8 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳು ಸಿಕ್ಕಿಯೇ ಇಲ್ಲ. ಇದರಲ್ಲಿ 4.2 ಲಕ್ಷ ಕುಟುಂಬಗಳಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿ ಎಪಿಎಲ್ ಪಟ್ಟಿಗೆ ಸೇರಿಸಿದಸರೆ. ಇನ್ನು, ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ 1.6 ಲಕ್ಷ ಕುಟುಂಬಗಳು ಬಿಪಿಎಲ್ ಪಟ್ಟಿಗೆ ಸೇರಿಲ್ಲ.

ತೀರಾ ಇತ್ತೀಚೆಗೆ ದಾವಣಗೆರೆ ನಗರದಲ್ಲಿ ಬಿಪಿಎಲ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಒಂದು ದೂರು ದಾಖಲಾಗಿತ್ತು. ಬೋಗಸ್ ಕಾರ್ಡ್‌ಗಳಿಂದ ಕೇವಲ ದಾವಣಗೆರೆ ನಗರವೊಂದರಿಂದಲೇ ಆಗಿರುವ ವಂಚನೆ ಮೊತ್ತ 75 ಕೋಟಿ ರೂಪಾಯಿಗೂ ಅಧಿಕ. ದಾವಣಗೆರೆ ನಗರದಲ್ಲಿ 3 ಲಕ್ಷ 20 ಸಾವಿರ ಕುಟುಂಬಗಳಿದ್ದರೆ, 4 ಲಕ್ಷ 69 ಸಾವಿರ ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಪ್ರತಿಷ್ಠಿತರು ಮತ್ತು ಗಣ್ಯಾತಿಗಣ್ಯರು ವಾಸ ಮಾಡುತ್ತಿರುವ ಕಾಲೋನಿಗಳಲ್ಲೂ ಬಿಪಿಎಲ್ ಕಾರ್ಡ್‌ಗಳು ಹಂಚಿಕೆ ಆಗಿವೆ ಎಂದರೆ, ಪಡಿತರ ವ್ಯವಸ್ಥೆ ಹೇಗಿದೆ ಎಂದು ಯಾರೂ ಬೇಕಾದರೂ ಊಹಿಸಿಕೊಳ್ಳಬಹುದು.

ಸಾರ್ವಜನಿಕ ಪಡಿತರ ವ್ಯವಸ್ಥೆ ಇಷ್ಟರ ಮಟ್ಟಿಗೆ ಹದಗೆಟ್ಟಿದ್ದರೂ ಬಿ.ಜೆ.ಪಿ.ಸರ್ಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಶೋಭಾ ಕರಂದ್ಲಾಜೆ ಮತ್ತು ಡಿ.ಎನ್.ಜೀವರಾಜ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಂತ್ರಿಗಳಾಗಿದ್ದ ಸಂದರ್ಭದಲ್ಲೇ ಬೋಗಸ್ ಕಾರ್ಡ್‌ಗಳ ಭ್ರಷ್ಟಾಚಾರ ಬಯಲಿಗೆ ಬಂದಿತ್ತು. ಆದರೂ ಬಿ.ಜೆ.ಪಿ. ಸರ್ಕಾರ, ಯಥಾ ಪ್ರಕಾರ ಇದನ್ನೂ ಒಂದು ಪ್ರಕರಣ ಎಂದು ಭಾವಿಸಿಕೊಂಡು ಕೈ ತೊಳೆದುಕೊಂಡಿತು. ಎಲ್ಲಾ ತನಿಖಾ ವರದಿಗಳು ಸೇರಿರುವ ಜಾಗಕ್ಕೇ ಈ ವರದಿಯನ್ನು ತಳ್ಳಿತು.

ಈಗ ಕಾಂಗ್ರೆಸ್, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ. siddaramaiah-cmಮುಖ್ಯಮಂತ್ರಿ ಸಿದ್ದರಾಮಯ್ಯ 1 ರೂಪಾಯಿಗೆ 30 ಕೆ.ಜಿ.ಕೊಡುವ ವಿಸ್ತರಿತ ಯೋಜನೆಯನ್ನ ಜಾರಿಗೆ ತರಲು ಹೊರಡುವ ಮೊದಲು, ಲೋಕಾಯುಕ್ತರು ನೇಮಿಸಿದ್ದ ಬಾಲಸುಬ್ರಹ್ಮಣ್ಯಂ ಅವರ ವರದಿಯನ್ನ ಅಮೂಲಾಗ್ರವಾಗಿ ಪರಿಶೀಲಿಸಿ, ಲೋಪಗಳನ್ನ ಸರಿಪಡಿಸಿ, 1 ರೂಪಾಯಿ ದರದ 30 ಕೆ.ಜಿ.ಯನ್ನ ನಿಜವಾದ ಬಡವರಿಗೆ ಕೊಡುವುದು ಒಳಿತು. ಇಲ್ಲದಿದ್ದಲ್ಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಡೆದಿರುವ ಬ್ರಹ್ಮಾಂಡ ಹಗರಣವೂ ಸರ್ಕಾರದ ಕಸದ ಬುಟ್ಟಿಗೆ ಸೇರಲಿದೆ.

ಕುಲಪತಿಗಳಲ್ಲ, ಇವರು ಹಣಪತಿಗಳು…

– ಜಿ.ಮಹಂತೇಶ್, ಭದ್ರಾವತಿ

“ಆ ಕುರ್ಚಿ ಮೇಲೆ ಅವರು ಕುಳಿತಿರುತ್ತಿದ್ದರೆ ದೇವರೆ ಆ ಕುರ್ಚಿ ಮೇಲೆ ಕುಳಿತುಕೊಂಡಿದ್ದರು ಎಂದು ನನಗೆ ಭಾಸವಾಗುತ್ತಿತ್ತು. ಅಂಥಾ ದೇವರು ಕೂತಿದ್ದ ಕುರ್ಚಿ ಮೇಲೆ ಇವತ್ತು ಅರ್ಹತೆ, ಮುನ್ನೋಟ ಇಲ್ಲದವರೆಲ್ಲ ಕುಳಿತು ಕುರ್ಚಿ ಮಹತ್ವಕ್ಕೆ ಧಕ್ಕೆ ತಂದು ಬಿಟ್ಟರು.”

ಇಲ್ಲಿ ಕುರ್ಚಿ ಎಂದು ಹೇಳುತ್ತಿರುವುದು ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿ ಕುರ್ಚಿ ಬಗ್ಗೆ. ಇಲ್ಲಿ ಕೂತಿದ್ದ ದೇವರು ಯಾರೆಂದರೆ, kuvempuಜಗತ್ತಿಗೆ ವಿಶ್ವಮಾನವ ಸಂದೇಶವನ್ನು ಸಾರಿದ ಯುಗದ ಕವಿ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಪ್ರಾಧ್ಯಾಪಕ ಹಾಗೂ ಕಟು ವಿಮರ್ಶಕರೊಬ್ಬರು ವಿಶ್ವವಿದ್ಯಾಲಯ ಆವರಣದಲ್ಲಿ ಹಣದ ವಹಿವಾಟು ಮತ್ತು ಜಾತಿಯ ಗಲೀಜನ್ನು ಕಂಡು, “ಇಂಥಾ ವೈಸ್ ಛಾನ್ಸಲರ್​ಗಳೆಲ್ಲ ವಿಶ್ವವಿದ್ಯಾಲಯವನ್ನು ಹಾಳು ಮಾಡಿಬಿಟ್ಟರು” ಎಂದು ತಣ್ಣಗೆ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ಮೌನವಾದರು.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯದಲ್ಲಿ ಅದೇ ಮೌನ ಈಗ ಹೆಪ್ಪುಗಟ್ಟಿದೆ. ಹೌದು, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆ ಎನ್ನುವುದು ಇವತ್ತು ಹರಾಜಿನಲ್ಲಿ ಕೂಗಿ ಉಳ್ಳವರು ಅದನ್ನು ಖರೀದಿಸುತ್ತಿರುವ ಸರಕಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆಗಳನ್ನು ನೋಡಿದರೆ ಇದು ಅರಿವಿಗೆ ಬರುತ್ತದೆ.

ಕುಲಪತಿಗಳ ನೇಮಕದಲ್ಲಿ ಮೂಗಿಗೆ ಬಡಿಯುತ್ತಿರುವುದು ಜಾತಿಯ ಕಮಟು ವಾಸನೆ. ವಿಶ್ವವಿದ್ಯಾಲಯವನ್ನು ಮುನ್ನಡೆಸಬೇಕಾದ ಕುಲಪತಿಗಳು ಕೋಟಿ ಕೋಟಿ ರೂಪಾಯಿ ಕೊಟ್ಟು ನೇಮಕವಾಗುತ್ತಿರುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲೂ ವ್ಯಾಪಕ ಚರ್ಚೆಗೀಡಾಗಿತ್ತು. ವಿಧಾನ ಮಂಡಲದ ಅಧಿವೇಶನದಲ್ಲಿ ಕುಲಪತಿಗಳ ನೇಮಕದ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ’ಶೈಕ್ಷಣಿಕ ವಲಯದಲ್ಲಿ ಉತ್ತಮ ಅನುಭವ ಹೊಂದಿರುವ ಪ್ರಾಧ್ಯಾಪಕರ ಮನಸ್ಸಿಗೆ ನೋವಾಗಿದೆ. ಇದು ನಿಜಕ್ಕೂ ವಿಷಾದನೀಯ,’ ಎಂದು ಮಂಗಳೂರಿನ ಸಮಾರಂಭದಲ್ಲಿ ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ, ಇದು ವಿಷಾದ ವ್ಯಕ್ತಪಡಿಸಿ, ಸುಮ್ಮನೆ ಕೂರುವ ಸಂಗತಿಯೂ ಅಲ್ಲ. ಸರಳ ಮತ್ತು ಸುಲಭದ ವಿಚಾರವೂ ಅಲ್ಲ. ವಿಶ್ವವಿದ್ಯಾಲಯಗಳು ಈಗ ಬ್ಯುಸಿನೆಸ್ ಸೆಂಟರ್​ಗಳಾಗುತ್ತಿವೆ. ಕೇಂದ್ರ ಧನ ಸಹಾಯ ಆಯೋಗ ಮತ್ತು ರಾಜ್ಯ ಸರ್ಕಾರ ಕೋಟಿ ಕೋಟಿಗಳ ಲೆಕ್ಕದಲ್ಲಿ ಅನುದಾನದ ಹೊಳೆಯನ್ನೇ ಹರಿಸುತ್ತಿರುವುದರಿಂದ ಎಲ್ಲರೂ ತಮ್ಮ ಶೈಕ್ಷಣಿಕ ಜೀವಮಾನದಲ್ಲಿ ಒಮ್ಮೆಯಾದರೂ ಕುಲಪತಿಗಳಾಗಲೇಬೇಕು ಎಂದು ವಿಧಾನಸೌಧದ ಮೂರನೇ ಮಹಡಿಯ ಕಂಬಗಳನ್ನು ಸುತ್ತು ಹಾಕುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯಕ್ಕೆ ಕುಲಪತಿ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ನಡೆದಿರುವ ಎಲ್ಲಾ ಪ್ರಕ್ರಿಯೆಗಳು ಅನುಮಾನಕ್ಕೀಡಾಗಿದೆ. ಶೋಧನಾ ಸಮಿತಿಗೆ ಸದಸ್ಯರೊಬ್ಬರ ನೇಮಕದಿಂದ ಹಿಡಿದು, ಕುಲಪತಿ ಹುದ್ದೆಗೆ ಕೂರುವವರೆಗೂ ಎಲ್ಲಾ ಪ್ರಕ್ರಿಯೆಗಳನ್ನು ತನಿಖೆಗೆ ಅಥವಾ ವಿಚಾರಣೆಗೆ ಒಳಪಡಿಸಿದರೆ, ಬಹಳಷ್ಟು ಸತ್ಯಗಳು ಹೊರಗೆ ಬರುವುದರಲ್ಲಿ ಅನುಮಾನವಿಲ್ಲ. ಕುಲಾಧಿಪತಿಗಳ ಕಚೇರಿಯಿಂದಲೇ ನೇಮಕ ಪತ್ರವನ್ನು ಖುದ್ದು ಪಡೆದುಕೊಂಡು ನೇರವಾಗಿ ವಿಶ್ವವಿದ್ಯಾಲಯಕ್ಕೆ ಹೋಗಿ ಅಧಿಕಾರ ಸ್ವೀಕರಿಸಿರುವುದನ್ನು ನೋಡಿದರೇ ಎಂಥವರಿಗೂ ಅನುಮಾನ ಬರದಿರದು.

ಈ ನೇಮಕ ಪ್ರಕ್ರಿಯೆ ಆದ ನಂತರ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳಿಗೆ ಆಗಿರುವ ನೇಮಕದ ಹಿಂದೆಯೂ ಇಂಥದ್ದೇ ಅನುಮಾನಗಳು ಎದುರಾಗಿವೆ. ಶತಮಾನೋತ್ಸವ ಸಂಭ್ರಮದ ಹೆಜ್ಜೆಗಳನ್ನಿಡುತ್ತಿರುವ ವಿಶ್ವವಿದ್ಯಾಲಯಕ್ಕೆ ನೇಮಕವಾದವರೇ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ನೇಮಕ ಮಾಡಿಸುವ “ಗುತ್ತಿಗೆ” ಪಡೆದುಕೊಂಡಿದ್ದರು, ಹೀಗಾಗಿ ಅವರ ಇಚ್ಛೆಯಂತೆ ಎರಡೂ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಿದ್ದಾರೆ ಎಂಬ ಚರ್ಚೆ ಈಗ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ತಾವು ಬಯಸಿದವರೇ ಕುಲಪತಿಗಳಾಗಬೇಕು ಎಂದು “ಗುತ್ತಿಗೆ” ಪಡೆದುಕೊಂಡ ಪ್ರಭೃತಿಗಳು, ನೇಮಕ ಪತ್ರಕ್ಕೆ ಸಹಿ ಮಾಡಿಸಲು ರಾತ್ರಿ ಇಡೀ ರಾಜಭವನದಲ್ಲಿ ತಂಗಿದ್ದರು ಎಂಬ ಸುದ್ದಿಯೂ ಶೈಕ್ಷಣಿಕ ವಲಯದಲ್ಲಿ ಹರಿದಾಡುತ್ತಿದೆ. ಸತ್ಯಾಂಶಗಳು ಬಯಲಿಗೆ ಬರಬೇಕಾದರೆ, ಕುಲಪತಿಗಳ ನೇಮಕ ದಿನಾಂಕದ ಹಿಂದುಮುಂದಿನ ದಿನಗಳಲ್ಲಿ ಯಾರ್‍ಯಾರು ರಾಜಭವನದಲ್ಲಿ ತಂಗಿದ್ದರು ಎನ್ನುವ ಮಾಹಿತಿ ಹೊರಬೀಳಬೇಕಷ್ಟೆ.

ಇಲ್ಲಿ, ಇನ್ನೂ ಒಂದು ವಿಚಾರವನ್ನು ಹೇಳಬೇಕು. ಅದೇನಂದರೇ ವಿಶ್ವವಿದ್ಯಾಲಯ ಕುಲಪತಿಗಳ ನೇಮಕದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಬಗ್ಗೆ. ಇತ್ತೀಚೆಗೆ vc-rangappaಮೂವರು ಕುಲಪತಿಗಳಾಗಿ ನೇಮಕವಾಗಿರುವ ವಿಶ್ವವಿದ್ಯಾಲಯಗಳ ಮಟ್ಟಿಗೆ ಹೇಳುವುದಾದರೇ ಸಾಮಾಜಿಕ ನ್ಯಾಯ ಕಸದ ಬುಟ್ಟಿಗೆ ಸೇರಿದೆ ಎಂಬುದು ನಿರ್ವಿವಾದ. ಮೂರು ವಿಶ್ವವಿದ್ಯಾಲಯಗಳಿಗೆ ನೇಮಕವಾಗಿರುವ ಮೂರೂ ಮಂದಿ ಒಂದೇ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಗಮನಾರ್ಹ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಕುಲಾಧಿಪತಿಗಳೇ ಅದನ್ನು ಕಸದ ಬುಟ್ಟಿಗೆ ಎಸೆದಿರುವುದು ನಿಜಕ್ಕೂ ದುರಂತ ಎಂದು ಹೇಳದೇ ಬೇರೆ ವಿಧಿ ಇಲ್ಲ.

ಮೊನ್ನೆ ಮೊನ್ನೆ ಪ್ರಧಾನಿ ಮನಮೋಹನ್ ಸಿಂಗ್ ದೇಶದ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆ ಬಗ್ಗೆ ತುಸು ಬೇಸರ ಮತ್ತು ಅಸಮಾಧಾನದಿಂದಲೇ ಮಾತನಾಡಿದ್ದರು. ಜಗತ್ತಿನ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯ ಇಲ್ಲ ಎಂದು ಬೇಸರಿಸಿದ್ದರು. ಕುಲಪತಿಗಳ ನೇಮಕದಲ್ಲಿ ಹಣದ ಪ್ರಭಾವ ಮತ್ತು ಜಾತಿಯ ಗಲೀಜು ಎಲ್ಲಿವರೆಗೆ ಇರುತ್ತದೆಯೋ ಅಲ್ಲಿವರೆಗೆ ಇಂಥ ಅಸಮಾಧಾನದ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಕು ಎಂದು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಕುಲಪತಿಗಳ ನೇಮಕದ ಬಗ್ಗೆ ಇನ್ನಷ್ಟು ಗಂಭೀರವಾಗಿ ಚರ್ಚೆಗಳಾಗಬೇಕಿದೆ. ವಿಶ್ವವಿದ್ಯಾಲಯಕ್ಕೆ ವಿವಿಧ ಮೂಲಗಳಿಂದ ಹರಿದು ಬರುತ್ತಿರುವ ಅನುದಾನದ ಲೆಕ್ಕಾಚಾರವೂ ಪರಿಣಾಮಕಾರಿಯಾಗಿ ಪರಿಶೋಧನೆ ಆಗಬೇಕಿದೆ. ಬ್ಯುಸಿನೆಸ್ ಸೆಂಟರ್‌ಗಳಾಗುತ್ತಿರುವ ವಿಶ್ವವಿದ್ಯಾಲಯಗಳನ್ನು ಶೈಕ್ಷಣಿಕ ಸಂಶೋಧನೆ ವ್ಯಾಪ್ತಿಗೆ ತರುವುದು ಮತ್ತು ಬೋಧನಾ ಅನುಭವ ಹಾಗೂ ಮುನ್ನೋಟ ಇರುವ ಪ್ರಾಧ್ಯಾಪಕರನ್ನು ಕುಲಪತಿಗಳನ್ನಾಗಿ ನೇಮಿಸುವುದೊಂದೇ ಇದಕ್ಕೆ ಪರಿಹಾರ. ಇದು ಇವತ್ತಿನ ಅಗತ್ಯ ಮತ್ತು ಅನಿವಾರ್ಯವೂ ಹೌದು.

ಪೊಲೀಸರೇ, ನಿಮ್ಮ ಎದೆಯಲ್ಲಿ ಮಾನವೀಯತೆ ಇರಲಿ…

– ಜಿ.ಮಹಂತೇಶ್‌ ಭದ್ರಾವತಿ

ಈ ಘಟನೆ ನಡೆದು ಹತ್ತಿರತ್ತಿರ 15 ದಿವಸ ಕಳೆದು ಹೋಗಿದೆ. ತುಮಕೂರಿನ ಗುಬ್ಬಿ ಗೇಟ್ ಬಳಿ ಬೆಳ್ಳಂಬೆಳಗ್ಗೆ ಬೆಂಗಳೂರಿನತ್ತ ಬರುತ್ತಿದ್ದ ಕಾರೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಅರೆ ಮಂಪರಿನಲ್ಲಿ ಕಾರು ಓಡಿಸುತ್ತಿದ್ದ ಚಾಲಕ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ. ಕಾರಿನ ಹಿಂಬದಿ ನಿದ್ರೆಗೆ ಜಾರಿದ್ದ ವಯಸ್ಕರೊಬ್ಬರು, ಅವರ ಪತ್ನಿ ಮತ್ತು ಅವರ ಮಗಳು ಗಂಭೀರವಾಗಿ ಗಾಯಗೊಂಡರು. ಈ ಮೂವರನ್ನು ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಯಸ್ಕರು ಸಾವನ್ನಪ್ಪಿದರು. ಇನ್ನು, ತಲೆಗೆ ಗಂಭೀರವಾಗಿ ಹೊಡೆತ ಬಿದ್ದಿದ್ದ ಮಗಳು ಮತ್ತು ಪ್ರಾಣಾಪಾಯವಿಲ್ಲದಿದ್ದರೂ ತೀವ್ರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆ ತರಲಾಯಿತು. ಮಗಳು, ಒಂದಷ್ಟು ದಿವಸ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಜೀವಭಯವೇನೂ ಇಲ್ಲದಿದ್ದರೂ ಅವರಿಗೆ ನೆನಪಿನ ಶಕ್ತಿ ಎಂದಿನಂತೆ ಬರಲು ಹಾಗೂ ಈ ಹಿಂದಿನ ಜೀವನಕ್ಕೆ ಮರಳಲು ಸಾಕಷ್ಟು ಸಮಯ ಬೇಕಾದೀತು. ಹಾಗೆಯೇ ವಯಸ್ಕರ ಪತ್ನಿ ಅದೃಷ್ಟವಶಾತ್ ಪಾರಾದರು. ಇದಿಷ್ಟು ಘಟನೆ ನಡೆದ ನಂತರ ಆದ ಮನುಷ್ಯ ಜೀವಕ್ಕೆ ಸಂಬಂಧಿಸಿದ ಬೆಳವಣಿಗೆಗಳು.

ಆದರೆ, ದುರ್ಘಟನೆ ನಡೆದ ಸಂದರ್ಭದಲ್ಲಿ ಎಂಥವರೇ ಇದ್ದರೂ ತಕ್ಷಣ ಅವರು ಮಾನವೀಯತೆಯಿಂದ ವರ್ತಿಸಬೇಕು ಮತ್ತು ಪೊಲೀಸರಂತೂ ಜವಾಬ್ದಾರಿಯಿಂದ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಅಪಘಾತ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲೇ ತುಮಕೂರು ಜಿಲ್ಲೆಯ ಸ್ಥಳೀಯ ಪೊಲೀಸರು ಸ್ಥಳಕ್ಕೆ ಹಾಜರಾಗಿದ್ದಾರೆ. ಅವರು ಮೊದಲು ಏನು ಮಾಡಬೇಕಿತ್ತೆಂದರೆ, ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಜತೆಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಗಾಯಗೊಂಡವರ ಬಳಿ ಇದ್ದ ನಗ-ನಾಣ್ಯಗಳನ್ನ ಜೋಪಾನವಾಗಿ ಎತ್ತಿಟ್ಟು, ನಂತರ ಅದನ್ನು ಸಂಬಂಧಿಸಿದವರಿಗೆ ಮರಳಿಸಬೇಕಿತ್ತು.

ಆದರೆ ಅಲ್ಲಿಯ ಪೊಲೀಸರು ಮೊದಲು ಮಾಡಿದ್ದೇನೆಂದರೇ, ನುಜ್ಜುಗುಜ್ಜಾಗಿದ್ದ ಕಾರನ್ನು ತಡಕಾಡಿದ್ದಾರೆ. ಕಾರಿನಲ್ಲಿ ಇದ್ದ ಜೋಳದ ಚೀಲವನ್ನು ಎತ್ತಿ ತಮ್ಮ ಬೈಕ್‌ಗೆ ಹಾಕುವಂತೆ ಸ್ಥಳದಲ್ಲಿದ್ದವರಿಗೆ ಸೂಚಿಸಿ ಅದನ್ನು ಎತ್ತೊಯ್ದಿದಾರೆ. ನಂತರ, ಅದೇ ಕಾರಿನ ಒಳಗಡೆ ಇದ್ದ ಹತ್ತಿರಹತ್ತಿರ ಅರ್ಧ ಕೆ.ಜಿ. ತೂಕದ ಬಂಗಾರದ ಒಡವೆಗಳನ್ನು ಮೆಲ್ಲಗೆ ಎತ್ತಿಟ್ಟುಕೊಂಡು, ಅಲ್ಲೇನೂ ನಗ-ನಾಣ್ಯಗಳು ಇರಲಿಲ್ಲ ಎಂದು ಮಹಜರು ಬರೆದುಕೊಂಡು, ಒಡವೆಗಳನ್ನು ತಮ್ಮ ಕಿಸೆಗಿಳಿಸಿಕೊಂಡು ಹೋಗಿದ್ದಾರೆ. ಗಾಯಗೊಂಡಿದ್ದ ವಯಸ್ಕ ಪುರುಷರು ತುರ್ತು ಅಪಘಾತ ಚಿಕಿತ್ಸಾ ಘಟಕದಲ್ಲಿ ಮರಣ ಹೊಂದಿದ ನಂತರ ಅವರ ಕೊರಳಲಿದ್ದ ಚಿನ್ನದ ಸರವೂ ಮಾಯವಾಗಿದೆ. ನಗ-ನಾಣ್ಯಗಳಿಗೆ ಸಂಬಂಧಿಸಿದಂತೆ ಪೋಲಿಸರು ಅಪಘಾತಕ್ಕೀಡಾದವರ ಸಂಬಂಧಿಕರಿಗೆ ಎರಡು-ಮೂರು ದಿನವಾದರೂ ಏನನ್ನೂ ತಿಳಿಸಿಲ್ಲ.

ಆಸ್ಪತ್ರೆ ಓಡಾಟ ಮತ್ತು ದುಃಖದ ಮಡುವಿನಲ್ಲಿದ್ದ ಗಾಯಾಳುಗಳ ಸಂಬಂಧಿಕರು ಇದರ ಬಗ್ಗೆ ಆ ಕ್ಷಣದಲ್ಲಿ ಯೋಚಿಸಲೂ ಹೋಗಿರಲಿಲ್ಲ ಮತ್ತು ಅವರಿಗೆ ವ್ಯವಧಾನವೂ ಇರಲಿಲ್ಲ. ಅವರೆಲ್ಲರಿಗೂ ಇದ್ದ ಒಂದೇ ಚಿಂತೆ ಸಾವು-ಬದುಕಿನ ನಡುವೆ ಇದ್ದವರನ್ನು ಉಳಿಸಿಕೊಳ್ಳುವುದು ಮತ್ತು ಅವರು ಬೇಗನೆ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳುವುದು. ಹಾಗಾಗಿ ಗಾಯಾಳುಗಳು ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ನಗ-ನಾಣ್ಯಗಳ ಬಗ್ಗೆ ಯೋಚಿಸಿ, ಸಂಬಂಧಿಸಿದ ಠಾಣೆಗೆ ತೆರಳಿ, ಈ ವಿಷಯದ ಬಗ್ಗೆ ಅವರು ಅಲ್ಲಿ ಮಾತನಾಡಿದರು. ಆದರೆ, ಅಲ್ಲಿಯ ಪೊಲೀಸರು ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸದೇ, ಮಹಜರು ಮಾಡಿದ ಸಂದರ್ಭದಲ್ಲಿ ಯಾವ ಆಭರಣಗಳೂ ಇರಲಿಲ್ಲ ಎಂದು ಶುದ್ಧ ಒರಟುತನವನ್ನು ಪ್ರದರ್ಶಿಸಿ ಇವರನ್ನೇ ಗದರಿದರು. ಇದರಿಂದ ಅವಮಾನಿತರಾದ ಮತ್ತು ಬೇಸರಗೊಂಡ ಸಂಬಂಧಿಕರು ಪೊಲೀಸರ ಅಮಾನವೀಯ ವರ್ತನೆಯನ್ನ ಶಪಿಸಿ ಹಿಂದಿರುಗಿದರು. ಆದರೆ, ಅವರು ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಬರುವ ಮಾರ್ಗದಲ್ಲಿ ಅವರಿಗೆ ಬಂದ ಫೋನ್ ಕರೆಯೊಂದು, ಅಲ್ಲಿದ್ದ ಬಂಗಾರದ ಆಭರಣಗಳನ್ನ ಯಾರ್‍ಯಾರು ಕದ್ದೊಯ್ದರು… ಜೋಳದ ಚೀಲ ಯಾರ ಬೈಕೇರಿತು ಎನ್ನುವುದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದರು. ಹೀಗೆ ಹೇಳಿದಾತ ಒಬ್ಬ ಸ್ವೀಪರ್. ಸಿಕ್ಕ ಈ ಸಣ್ಣ ಸುಳಿವನ್ನು ಆಧರಿಸಿ, ಅದರ ಬೆನ್ನತ್ತಿ ಹೋದ ಸಂಬಂಧಿಕರು, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಯಾವಾಗ ಉನ್ನತ ಪೊಲೀಸ್ ಅಧಿಕಾರಿಗಳು ಚಾಟಿ ಬೀಸಿದರೋ, ಬಂಗಾರದ ಆಭರಣಗಳನ್ನು ಕದ್ದೊಯ್ದಿದ್ದ ಪೊಲೀಸರು ಬೆವರಿದರು. ಇದರ ಮಧ್ಯೆಯೇ ಸಾಕ್ಷಿದಾರನನ್ನೇ ಬೆದರಿಸಿ ದೂರು ನಿಲ್ಲದಂತೆ ಮಾಡುವ ಅವರ ಪ್ರಯತ್ನವೂ ವಿಫಲವಾಯಿತು. ಕಡೆಗೆ ಪರೋಕ್ಷವಾಗಿ ತಪ್ಪೊಪ್ಪಿಕೊಂಡ ಪೊಲೀಸರು, ಬಂಗಾರದ ಆಭರಣಗಳನ್ನು ವಾಪಸ್ ಕೊಡುವ ಬದಲಿಗೆ ಒಂದಷ್ಟು ಲಕ್ಷಗಳನ್ನು ಕೊಟ್ಟು ಕೈ ತೊಳೆದುಕೊಳ್ಳಲು ಸಂಬಂಧಿಕರ ಮನೆಗೆ ಧಾವಿಸಿ ಬಂದು, ’ನೀವು ಸಹಕರಿಸದಿದ್ದರೆ ಶಂಕಿತ ಪೊಲೀಸ್ ಕುಟುಂಬಗಳ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರನ್ನು ಅವಲಂಬಿಸಿದವರ ಗತಿಯನ್ನು ಊಹಿಸಲಿಕ್ಕಾಗದು,’ ಎಂದೆಲ್ಲಾ ಮನ ಕರಗುವಂತೆ ಬೇಡಿಕೊಂಡರು.

ಅಂದ ಹಾಗೇ, ಈ ನಾಲ್ಕೈದು ಲಕ್ಷ ಹಣವನ್ನು ಪೊಲೀಸರು ತಮ್ಮ ಸ್ವಂತ ಜೇಬಿನಿಂದಾದರೂ ಏಕೆ ಕೊಡುತ್ತಾರೆ? ಹಾಗಾಗಿ, ನಗದು ಮೊತ್ತವನ್ನು ವಾಪಸ್ ಕೊಡಲು ಮುಂದೆ ಬಂದಿರುವುದು ಕೂಡ ಅವರು ಆಭರಣಗಳನ್ನು ಕದ್ದೊಯ್ದಿದ್ದನ್ನು ಒಪ್ಪಿಕೊಂಡಂತೆ ಅಲ್ಲವೇ?

ಏನಾಗಿದೆ ನಮ್ಮ ಸಮಾಜಕ್ಕೆ ಮತ್ತು ಪೊಲೀಸ್ ವ್ಯವಸ್ಥೆಗೆ? ಪೊಲೀಸರು ಮಾನವೀಯತೆಯನ್ನೇ ಕಳೆದುಕೊಂಡಿದ್ದಾರೆಯೇ? ಎಲ್ಲಾ ಪೊಲೀಸರೂ ಹೀಗೆಯೇ ಅಥವ ಇದರಲ್ಲಿ ಸಂಬಂಧಪಟ್ಟ ಠಾಣೆಯ ಎಲ್ಲರೂ ಭಾಗಿ ಎಂದು ಹೇಳಲಾಗುವುದಿಲ್ಲ. ಆದರೆ, ಅಪಘಾತ ಸಂಭವಿಸಿದ ತಕ್ಷಣ ಸಂಬಂಧಿಸಿದವರಿಗೆ ತುರ್ತು ಚಿಕಿತ್ಸೆ ಕೊಡಿಸಿ, ಸಾಂತ್ವನ ಹೇಳಿ, ಮಾನವೀಯತೆ, ಕಳಕಳಿ ವ್ಯಕ್ತಪಡಿಸಬೇಕಿದ್ದವರೇ ಅಮಾನವೀಯವಾಗಿ ಮತ್ತು ದರೋಡೆಕೋರರಂತೆ ವರ್ತಿಸಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗದಿರುವುದಿಲ್ಲ. ಪೊಲೀಸರ ಮೇಲೆ ಸಾಕಷ್ಟು ಒತ್ತಡಗಳಿವೆ, ಜವಾಬ್ದಾರಿಗಳಿವೆ, ಒಂದು ಜಿಲ್ಲೆಯ, ನಗರದ, ರಾಜ್ಯದ ಭದ್ರತೆಯ ಹೊಣೆಗಾರಿಕೆಯೂ ಅವರ ಮೇಲಿದೆ. ಎಲ್ಲವೂ ಸರಿ. ಆದರೆ, ಈ ಎಲ್ಲ ಹೊಣೆಗಾರಿಕೆಗಳ ಮಧ್ಯೆಯೇ ಮಾನವೀಯತೆ, ಕಳಕಳಿ, ಪ್ರಾಮಾಣಿಕತೆ, ಪಾಪಪ್ರಜ್ಞೆಯೂ ಅವರಲ್ಲಿ ಇರಬೇಕಲ್ಲವೇ?

ಮತ್ತೆ ಮತ್ತೆ ಇಲ್ಲಿ ಏಳುವ ಪ್ರಶ್ನೆ ಏನೆಂದರೇ, ಪೊಲೀಸರೇ ಇಷ್ಟು ಅಮಾನವೀಯವಾಗಿ ನಡೆದುಕೊಂಡು ಮತ್ತು ಕಳ್ಳರಂತೆ ಮತ್ತು ಸಮಾಜಘಾತುಕರಂತೆ ಅಪಘಾತಕ್ಕೀಡಾದ ಜನರ ವಸ್ತುಗಳನ್ನೇ ಕದ್ದೊಯ್ದರೆ, ಜನಸಾಮಾನ್ಯರನ್ನು ಇಂತಹ ವಂಚಕರಿಂದ ಮತ್ತು ಬೆಂಕಿಬಿದ್ದ ಮನೆಯಲ್ಲಿ ಗಳಹಿಡಿಯುವ ಪಾಪಿಗಳಿಂದ ಕಾಯುವವರ್‍ಯಾರು?

ಪೊಲೀಸರ ವರ್ತನೆಗೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಅನಗತ್ಯ ಬಲಪ್ರದರ್ಶನದ ಲಾಠಿ ಚಾರ್ಜ್, ರೈತರ ಮನೆ ಜಫ್ತಿ ಮಾಡುವಾಗ ನಡೆದುಕೊಳ್ಳುವ ರೀತಿ, ಕಳ್ಳತನದ ಮತ್ತು ಕೊಲೆಯ ಪ್ರಕರಣಗಳು ನ್ಯಾಯವಾಗಿ ದಾಖಲಾಗದೇ ಇರುವುದು, ಕಳ್ಳರಲ್ಲದವರನ್ನು ಕಳ್ಳರನ್ನಾಗಿಸಿವುದು, ಅಮಾಯಕರನ್ನು ಕೊಲೆಗಾರನೆಂದು ಬಂಧಿಸುವುದು, ಸಾಕ್ಷಿಗಳನ್ನೇ ಆರೋಪಿಗಳನ್ನಾಗಿಸುವುದು, ಇಂತಹ ಉದಾಹರಣೆಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಪೊಲೀಸ್ ವ್ಯವಸ್ಥೆಯಲ್ಲಿ ಪೊಲೀಸ್ ಪೇದೆಗಳಾದಿಯಾಗಿ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಘನತೆಯುಕ್ತ ಜೀವನ ನಡೆಸಲು ಸಾಕಾಗುವಷ್ಟು ಸಂಬಳ ನೀಡುತ್ತಿದ್ದರೂ ಲಂಚಕ್ಕೆ ಕೈಯೊಡ್ಡುವ ಪರಿಪಾಠವೇನೂ ನಿಂತಿಲ್ಲ. ಹಾಗೆಯೇ, ಅಮಾಯಕರನ್ನು ಲಾಕಪ್‌ಗಳಿಗೆ ತಳ್ಳಿ, ಅಪರಾಧಿಗಳನ್ನ ಹಿಡಿದು ತಂದಿದ್ದೇವೆ ಎಂದು ಕರ್ತವ್ಯ ಪಾಲನೆಯ ಪದಕ ಎದೆಗೆ ನೇತು ಹಾಕಿಕೊಂಡಿರುವ ಪ್ರಕರಣಗಳಿಗೂ ನಮ್ಮಲ್ಲಿ ಕೊರತೆ ಇಲ್ಲ.

ಮೇಲಿನ ಘಟನೆಯಲ್ಲಿ ದುರ್ಮರಣಕ್ಕೀಡಾದ ಸಂಬಂಧಿಕರು ತಿಳಿವಳಿಕೆಯುಳ್ಳವರಾಗಿದ್ದರಿಂದ ಮತ್ತು ಅವರಿಗೂ ಒಂದಷ್ಟು ಪ್ರಭಾವಿಗಳು ಪರಿಚಯವಿದ್ದವರಾಗಿದ್ದರಿಂದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರು ಮತ್ತು ಅವರಿಗೆ ಅರೆನ್ಯಾಯವಾದರೂ ದಕ್ಕಿತು. ಆದರೇ, ಅದೇ ಸ್ಥಳದಲ್ಲಿ ಒಬ್ಬ ಸಾಮಾನ್ಯ ನಾಗರಿಕನಿದ್ದಿದ್ದರೆ, ಆತ ಬೆಂಗಳೂರಿನ ಪೊಲೀಸ್ ಕಚೇರಿ ಇರಲಿ, ಸ್ಥಳೀಯ ಪೊಲೀಸ್ ಠಾಣೆಗೆ ಹೋಗಲೇ ಹಿಂದೇಟು ಹಾಕುತ್ತಿದ್ದ ಎನ್ನುವುದೂ ಕೂಡ ಇವತ್ತಿನ ನಿಷ್ಠುರ ಸತ್ಯ.

ಇನ್ನು, ಪೊಲೀಸರೇ ತಮ್ಮ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ತಪ್ಪೊಪ್ಪಿಕೊಂಡು ಹಣ ಹಿಂದಿರುಗಿಸುತ್ತಿರುವುದು ಬಹುಶಃ ಇದೇ ಮೊದಲಿರಬೇಕು.

ತುಮಕೂರಿನ ಗುಬ್ಬಿ-ಗೇಟ್ ಬಳಿ ಸಂಭವಿಸಿದ ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರ ವರ್ತನೆ ಕುರಿತು ರಾಜ್ಯದ ಗೃಹಮಂತ್ರಿಗಳು ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಯೋಚಿಸುವ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಹಾಗೆಯೇ, ಇಂತಹ ದುರಾಚಾರದ ನಡವಳಿಕೆಗಳಲ್ಲಿ ಮತ್ತು ಸಮಾಜದಲ್ಲಿ ಕುಂದುತ್ತಿರುವ ಮಾನವೀಯ ಮೌಲ್ಯಗಳಲ್ಲಿ ತಮ್ಮ ಪಾತ್ರವೇನಿದೆ ಎಂದು ನಾಗರಿಕರೂ ಗಂಭೀರವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿರುವುದೂ ಇಂದಿನ ತುರ್ತಾಗಿದೆ.

ಸಿರಿಗೆರೆ ಶ್ರೀ ವಿಚಾರ : ಹೇಳದೇ ಉಳಿದುಕೊಂಡ ವಿಷಯಗಳು

-ಜಿ.ಮಹಂತೇಶ್

ನಿವೃತ್ತಿ ಹಿಂತೆಗೆತ ನಿರ್ಧಾರ :

ಸಿರಿಗೆರೆ ಶ್ರೀಗಳು ಪೀಠದಿಂದ ಸ್ವಯಂ ನಿವೃತ್ತಿ ಘೋಷಿಸಿದ ದಿನವೇ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಂಡ ಪ್ರಸಂಗ, ಬಿಟ್ಟ ಬಾಣವನ್ನು ಮತ್ತದೇ ಸಿರಿಗೆರೆ ಬತ್ತಳಿಕೆಯೊಳಗೆ ಮರಳಿದಂತಿದೆ. ತುಂಬಿದ ಸಭೆಯಲ್ಲಿ ಶ್ರೀಗಳು ಒಂದಷ್ಟು ಹೊತ್ತು ಭಾವುಕರಾದ ಹಿನ್ನೆಲೆಯಲ್ಲಿ ಅಲ್ಲಿ ಕಣ್ಣೀರ ಸಾಗರವೇ ಹರಿದಿತ್ತು. ಇನ್ನೇನು ಇಡೀ ಸಾಗರ ಉಕ್ಕಿ ಹರಿಯಲಿದೆ ಎಂದು ಭಾವಿಸುತ್ತಿದ್ದಂತೆ, ಇಡೀ ಸಾಗರವನ್ನೇ ತನ್ನೊಳಗೆ ಇಂಗಿಸಿಕೊಂಡಿರುವುದು ಸಿರಿಗೆರೆ ಮಣ್ಣಿನ ವೈಶಿಷ್ಟ್ಯ.

ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸ್ವಯಂ ನಿವೃತ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಜನಪ್ರಿಯ ಪತ್ರಿಕೆಯೊಂದು, ಇದನ್ನೇ ಮಾದರಿಯಾಗಿಟ್ಟುಕೊಂಡು 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳೇಕೆ ನಿರ್ಧಾರ ಪ್ರಕಟಿಸಬಾರದು ಎಂದು ಜನಮತ ನಡೆಸಿತ್ತು. 60 ವರ್ಷ ವಯೋಮಿತಿ ಮೀರಿದ ರಾಜಕಾರಣಿಗಳ ಪಟ್ಟಿಯಲ್ಲಿ ಸಿರಿಗೆರೆ ಮಠದ ಆದ್ಯ  ಭಕ್ಕರಲ್ಲೊಬ್ಬರಾಗಿರುವ ಡಾ.ಶಾಮನೂರು ಶಿವಶಂಕರಪ್ಪ,  ಯಡಿಯೂರಪ್ಪ ಅವರಂಥ ‘ಧೀಮಂತ’ ರಾಜಕಾರಣಿಗಳ್ಯಾರು ಜನಮತವನ್ನು ಕೇಳಿಸಿಕೊಳ್ಳದಿರುವುದು ನಿಜಕ್ಕೂ ವಿಪರ್ಯಾಸ.

ಸ್ವಯಂ ನಿವೃತ್ತಿ ಘೋಷಣೆ ಮತ್ತು ಭಕ್ತರು ಹಾಕಿದ ಒತ್ತಡದಿಂದ ನಿವೃತ್ತಿಯಿಂದ ಹಿಂದೆ ಸರಿದ (ಉತ್ತರಾಧಿಕಾರಿ ಆಯ್ಕೆ ಆಗುವವರೆಗೆ) ಈ ಪ್ರಸಂಗದ ಮೂಲಕ ಸಿರಿಗೆರೆ ಸಾಮ್ರಾಜ್ಯದಲ್ಲಿ ಮತ್ತೊಮ್ಮೆ ವಿಜೃಂಭಿಸಿದ್ದು ಮತ್ತದೇ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು. ಇದೇ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪರಿಚಿತರೊಬ್ಬರು ಇನ್ನೊಂದು ಸುದ್ದಿಯತ್ತ ಗಮನ ಸೆಳೆದರು.  ’ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಘೋಷಿಸುವ ಮೊದಲೇ,  ಅಂದರೆ ಅದಕ್ಕೆ ಒಂದೆರಡು ದಿನಗಳ ಹಿಂದೆ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು  “ವಿಜಯ ವಾಣಿ” ಪತ್ರಿಕೆಯಲ್ಲಿ  ಹಿಂದಿನ ದೊಡ್ಡ ಗುರುಗಳು 60ನೇ ವಯಸ್ಸಿಗೇ ನಿವೃತ್ತಿಯಾದ ಬಗ್ಗೆ ಪ್ರಸ್ತಾಪಿಸಿ ಬರೆದಿದ್ದರು.  ಬಹುಶಃ ಅವರ ಬರಹದಿಂದ ಕ್ರುದ್ಧರಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ಹೊಂದುವ ಹಂಬಲವನ್ನು ವ್ಯಕ್ತಪಡಿಸಿರಬಹುದು,’ ಎಂದು.

ಚನ್ನಗಿರಿ ತಾಲೂಕಿನ ಸಾಣೆಹಳ್ಳಿಯ ಈ ಮಠ, ಸಿರಿಗೆರೆಯ ಶಾಖಾ ಮಠ. ಪಂಡಿತಾರಾಧ್ಯರು, ಡಾ.ಶಿವಮೂರ್ತಿ ಶಿವಾಚಾರ್ಯರಂತಲ್ಲ. ಒಂದಷ್ಟು ಸ್ವಾಮೀಜಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟವರು. ಮಾಮೂಲಿ ಸಾಣೆಹಳ್ಳಿಯನ್ನು ರಂಗಕರ್ಮಿಗಳ ಹಳ್ಳಿಯನ್ನಾಗಿಸಿದ್ದು ಇವರ ವಿಶೇಷ. ಸಿ.ಜಿ.ಕೃಷ್ಣಸ್ವಾಮಿ ಅವರಂಥ ರಂಗಕರ್ಮಿಯಿಂದ ನಿಜವಾದ ಅರ್ಥದಲ್ಲಿ ಕೆಲಸ ತೆಗೆಸಿದ್ದ ಪಂಡಿತಾರಾಧ್ಯರು, ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಥವಾ ಸಿರಿಗೆರೆ ಪ್ರಧಾನ ಮಠದ ಸಾಂಸ್ಕೃತಿಕ ಮುಖ ಎಂದರೇ ತಪ್ಪೇನಿಲ್ಲ. ಇವರ ಜೊತೆಗಿನ ಒಡನಾಟದಿಂದಾಗಿಯೇ ಹಲವಾರು ಪ್ರಗತಿಪರರು ಸಿರಿಗೆರೆ ಮಠದ ಬಗ್ಗೆ ಮತ್ತು  ಡಾ.ಶಿವಮೂರ್ತಿ ಶಿವಾಚಾರ್ಯರ ಪಾಳೇಗಾರಿಕೆ ಮತ್ತು ಪ್ರತಿಗಾಮಿ ನಿಲುವುಗಳ ಬಗ್ಗೆ, ಅವರು ನಡೆಸುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಭಿನ್ನಾಭಿಪ್ರಾಯ ತೋರಿಸದೆ ಇರುತ್ತಾರೆ.

ಪ್ರಾಣಿ ಬಲಿ ನಿಷೇಧ :

ಅಷ್ಟೇ ಅಲ್ಲ. ಮೌಢ್ಯತೆ, ಪ್ರಾಣಿ ಬಲಿ ವಿರುದ್ಧ ದೊಡ್ಡ ದನಿಯಲ್ಲದಿದ್ದರೂ ಸಣ್ಣ ದನಿಯನ್ನು ಪಂಡಿತಾರಾಧ್ಯರು ಎತ್ತಿದ್ದಾರೆ. ಇದಕ್ಕೆ ಅವರನ್ನ ಅಭಿನಂದಿಸಲೇಬೇಕು. ದಾವಣಗೆರೆಯಲ್ಲಿ ಲಾಗಾಯ್ತಿನಿಂದಲೂ ನಡೆಯುತ್ತಿರುವ ದುರ್ಗಾಂಬಿಕಾ ಜಾತ್ರಾ ಮಹೋತ್ಸವದಲ್ಲಿ ಕೋಣ ಬಲಿ ಕೊಡುವುದರ ವಿರುದ್ಧ ದನಿ ಎತ್ತುವ ಮೂಲಕ ಪ್ರಥಮ ಬಾರಿಗೆ ದನಿ ಎತ್ತಿ, ಕಳಕಳಿ ವ್ಯಕ್ತಪಡಿಸಿದ್ದರು. ಆದರೆ, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯರು ಇವರಿಗೆ ಬೆಂಬಲಿಸಿದ್ದರ ಬಗ್ಗೆ ಎಲ್ಲಿಯೂ ಕೇಳಿ ಬರಲಿಲ್ಲ. ಕನಿಷ್ಠ ಉಸಿರೆತ್ತಲಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಅಂದ ಹಾಗೇ, ದುರ್ಗಾಂಬಿಕೆಗೆ ಕೋಣ ಬಲಿ ಕೊಡುವ ಪದ್ಧತಿ ಇವತ್ತು ನೆನ್ನೆಯದಲ್ಲ. ತಲ ತಲಾಂತರಗಳಿಂದಲೂ ನಡೆದು ಬರುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಕೂಡ ಸಿರಿಗೆರೆಯ ಡಾ.ಶಿವಮೂರ್ತಿ ಶ್ರೀಗಳಾಗಲೀ, ಪಂಡಿತಾರಾಧ್ಯ ಶ್ರೀಗಳಾಗಲೀ ತುಂಬಾ ಮೊದಲೇ ಕೋಣ ಬಲಿಯನ್ನ ನಿಷೇಧಿಸಲು ಅರಿವು ಮೂಡಿಸಬಹುದಿತ್ತು. ಇಷ್ಟು ವರ್ಷಗಳ ಕಾಲ ಸುಮ್ಮನಿದ್ದ ಶ್ರೀಗಳು, 60ರ ಇಳಿ ವಯಸ್ಸಿನಲ್ಲಿ ಅದೂ ದಿಢೀರ್ ಎಂದು ಕೋಣ ಬಲಿ ನಿಷೇಧಿಸುವುದರ ಬಗ್ಗೆ ದನಿ ಎತ್ತಿದ್ದರ ಹಿಂದೆ ಒಂದಷ್ಟು ಪ್ರಶ್ನೆಗಳಿವೆ. ಇಲ್ಲಿ ಪ್ರಶ್ನೆಗಳಿರುವುದು ಕೋಣ ಬಲಿ ವಿರುದ್ಧ ದನಿ ಎತ್ತಿದ್ದಕ್ಕಲ್ಲ. ದನಿ ಎತ್ತಿರುವ ಕಾಲಘಟ್ಟದ ಬಗ್ಗೆ.

ಇದೇ ದುರ್ಗಾಂಬಿಕ ಜಾತ್ರಾ ಮಹೋತ್ಸವ ಸಮಿತಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಸ್ಥಳೀಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೂ ಈ ವಿಚಾರ ಗೊತ್ತಿಲ್ಲವೆಂದೇನಿಲ್ಲ. ಕೋಣ ಬಲಿ ನಿಷೇಧಿಸುವ ಬಗ್ಗೆ ನಿಜಕ್ಕೂ ಶ್ರೀಗಳಲ್ಲಿ ಇಚ್ಛಾಶಕ್ತಿ ಇದ್ದಿದ್ದರೇ ತಮ್ಮ ಮಾತುಗಳನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಿರುವ ಶಾಮನೂರು ಶಿವಶಂಕರಪ್ಪನವರಿಗೆ ಈ ಬಗ್ಗೆ ತಾಕೀತು ಮಾಡಬಹುದಿತ್ತಲ್ಲ?

ಕೋಣ ಬಲಿ ಬಗ್ಗೆ ಪ್ರಸ್ತಾಪವಾಗಿರುವ ಕಾರಣದಿಂದಾಗಿ  ನರ ಬಲಿಯನ್ನೂ ಪ್ರಸ್ತಾಪಿಸುವುದು ಉಚಿತ ಎನ್ನಿಸುತ್ತದೆ. ರಾಣೆಬೆನ್ನೂರು ತಾಲೂಕಿನ ತಿರುಮಲದೇವರಕೊಪ್ಪ ಎನ್ನುವ ಸಣ್ಣ ಊರಿನಲ್ಲಿ ಸಿರಿಗೆರೆ ಮಠಕ್ಕೆ ನಡೆದುಕೊಳ್ಳುವ ಭಕ್ತನಿಂದ ದಲಿತ ಸಮುದಾಯಕ್ಕೆ ಸೇರಿರುವ ಯುವಕನನ್ನು ವಾಸ್ತು ಬದಲಿಸುವ ನೆಪದಲ್ಲಿ ಬಲಿ ತೆಗೆದುಕೊಂಡಿದ್ದರೂ (ಹಾವೇರಿ ಪೊಲೀಸರು ಈ ಪ್ರಕರಣವನ್ನ ನರಬಲಿ ಎಂದು ಕರೆಯದೇ ಅನೈತಿಕ ಸಂಬಂಧ ಎಂದು ಹಣೆಪಟ್ಟಿ ಕಟ್ಟಿ ಸಹಜ ಕೊಲೆ ಪ್ರಕರಣ ಎಂದು ಮುಚ್ಚಿ ಹಾಕಿದೆ) ಪಂಡಿತಾರಾಧ್ಯ ಶ್ರೀಗಳು ಮತ್ತು ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ತಮ್ಮ ಭಕ್ತರಿಗೆ ಇದರ ಬಗ್ಗೆ ನಿಜವಾದ ಅರ್ಥದಲ್ಲಿ ಜಾಗೃತಿ ಮೂಡಿಸಬಹುದಿತ್ತಲ್ಲ?

ಇವರಿಬ್ಬರಷ್ಟೇ ಅಲ್ಲ. ವಿವಿಧ ಕೋಮುಗಳಿಗೆ ಸೇರಿರುವ ಯಾವ ಮಠಾಧೀಶರೂ ನರಬಲಿ ಪ್ರಕರಣವನ್ನು ಇವತ್ತಿಗೂ ಗಂಭಿರವಾಗಿ ತೆಗೆದುಕೊಳ್ಳದಿರುವುದು ನಿಜಕ್ಕೂ ವಿಷಾದ ಎನಿಸದಿರದು. ಇರಲಿ, ಸಿರಿಗೆರೆ ಮಠದಿಂದಲೇ ಯಾಕೆ ಇಂಥ ಕೆಲಸ ಆಗಬೇಕಿದೆ ಎಂದರೇ, ಈ ಮಠಕ್ಕಿರುವ ಭಕ್ತ ವೃಂದ, ಅಪಾರ ಪ್ರಮಾಣದಲ್ಲಿದೆ. ಸಹಜವಾಗಿ ಆಯಾ ಸಮುದಾಯದ ಮಂದಿ, ತಮ್ಮ ಸಮುದಾಯದ ಮಠಾಧೀಶರು ಹೇಳುವ ಮಾತುಗಳನ್ನ ಅಕ್ಷರಶಃ ಪಾಲಿಸುತ್ತಾರೆ ಎನ್ನುವ ನಂಬಿಕೆಯಿಂದ.

ಶಿಕ್ಷಣ ವ್ಯಾಪಾರೀಕರಣ, ಅನುಭವ ಮಂಟಪ :

ಇನ್ನು, ಸಿರಿಗೆರೆ ಶ್ರೀಗಳ ಬಗ್ಗೆ ಅಪಸ್ವರ ಎತ್ತಿದ್ದಕ್ಕೆ ಒಂದಷ್ಟು ಮಂದಿ ತಗಾದೆ ತೆಗೆದರು. ಅವರ ಮುಖ್ಯ ತಗಾದೆಗಳಲ್ಲಿ ಶೈಕ್ಷಣಿಕ ವಲಯದಲ್ಲಿ ಸಿರಿಗೆರೆ ಮಠ ಮಾಡಿರುವ ಕೆಲಸವನ್ನು ನೆನೆಯದಿರುವುದಕ್ಕೆ. ನಿಜಕ್ಕೂ ಹೇಳುವುದಾದರೇ ಶೈಕ್ಷಣಿಕ ವ್ಯವಸ್ಥೆಯನ್ನು ವ್ಯಾಪಾರೀಕರಣ ಮಾಡಿರುವ ಮಠಗಳಲ್ಲಿ ಸಿರಿಗೆರೆ ಮಠವೂ ಒಂದು ಎಂಬುದನ್ನ ತಗಾದೆ ಎತ್ತಿರುವವರು ಗಮನಿಸಬೇಕು.

ನಿಮಗೆ ಅನುಭವ ಮಂಟಪದ ಹೆಸರು ಗೊತ್ತಿರಬೇಕಲ್ಲ. 12ನೇ ಶತಮಾನದಲ್ಲಿ ನಿಜವಾದ ಕ್ರಾಂತಿ ಸಂಭವಿಸಿದ್ದೇ ಈ ಅನುಭವ ಮಂಟಪದ ಮೂಲಕ. ದಾವಣಗೆರೆ ನಗರದಲ್ಲಿ “ಅನುಭವ ಮಂಟಪ”ದ ಹೆಸರಿನಲ್ಲಿ ಶಾಲಾ ಕಾಲೇಜು ನಡೆಸುತ್ತಿರುವ ಸಿರಿಗೆರೆ ಮಠ, ಡೊನೇಷನ್ ಹೆಸರಿನಲ್ಲಿ ಪೋಷಕರನ್ನು ಸುಲಿಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಅಷ್ಟು ಸುಲಭವಾಗಿ ಇಲ್ಲಿ ಪ್ರವೇಶ ದೊರೆಯುವುದಿಲ್ಲ. ಸರ್ಕಾರ ಡೊನೇಷನ್ ನಿಷೇಧಿಸಿದ್ದರೂ “ಅನುಭವ ಮಂಟಪ” ಶಾಲೆ ಮಾತ್ರ ಬೋಧನಾಶುಲ್ಕಕ್ಕೆ ಹೊರತಾದ ಡೊನೇಷನ್ ತೆಗೆದುಕೊಳ್ಳುವುದರಿಂದ ಹಿಂದೆ ಸರಿದ ಹಾಗೆ ಕಾಣುವುದಿಲ್ಲ.

ಅಣ್ಣ ಬಸವಣ್ಣನ ಆಶಯಗಳನ್ನು ಪುಂಖಾನುಪುಂಖವಾಗಿ ಉದ್ಧರಿಸುವ ಮಠಗಳಲ್ಲಿ ಸಿರಿಗೆರೆ ಮಠ ಅಗ್ರಗಣ್ಯ. ಇಂಥ ಮಠ, ಮೇಲಿನ ಮಾತುಗಳೆಲ್ಲ ನಿಜವೇ ಆದರೆ, ಶಿಕ್ಷಣವನ್ನು  ವ್ಯಾಪಾರೀಕರಣ ಮಾಡಿರುವುದು, ಅದರಲ್ಲೂ ಶಾಲೆ, ಕಾಲೇಜಿಗೆ ಅನುಭವ ಮಂಟಪ ಹೆಸರಿಟ್ಟು, ಡೊನೇಷನ್ ಹೆಸರಿನಲ್ಲಿ ವಸೂಲಿಗಿಳಿದಿರುವುದು ನಿಜಕ್ಕೂ ದುರದೃಷ್ಟಕರ. ಶಿಕ್ಷಣವನ್ನು ಅಕ್ಷರಶಃ ವ್ಯಾಪಾರೀಕರಣ ದೂಡಿರುವ ಸಿರಿಗೆರೆ ಮಠ, ಶೈಕ್ಷಣಿಕ ವಲಯಕ್ಕೆ ನೀಡಿರುವ ಕೊಡುಗೆ ಏನು ಎನ್ನುವುದನ್ನು ನಿಜ ಶರಣರು ಅರಿಯಬೇಕಿದೆ. ಎಲ್ಲಿಯ ಬಸವ ಕಲ್ಯಾಣದ ಅನುಭವ ಮಂಟಪ? ಎಲ್ಲಿಯ ಸಿರಿಗೆರೆಯ ಅನುಭವ ಮಂಟಪ?

ಇನ್ನು, ಸಿರಿಗೆರೆ ಮಠದ ಆಶ್ರಯದಲ್ಲಿರುವ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ನೇಮಕಾತಿಯಲ್ಲೂ ಹಣದ ಚೀಲ ತಂದವರಿಗಷ್ಟೇ ಇಲ್ಲಿ ಮನ್ನಣೆ ಎನ್ನುವ ವಾತಾವರಣ ಇದೆ ಎನ್ನುವ ಮಾತಿದೆ. ಯಾರೂ ಇದನ್ನೂ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಮಠ ಕಳಿಸುವ ಪಟ್ಟಿಯನ್ನೇ ಸರ್ಕಾರ ಮಾನ್ಯ ಮಾಡಬೇಕು. ಅಂಥದ್ದೊಂದು ಅಘೋಷಿತ, ಅಲಿಖಿತ ಆಜ್ಞೆ. ಹಾಗೆಯೇ, ಪ್ರೌಢಶಾಲೆ ಸಹ ಶಿಕ್ಷಕ ಹುದ್ದೆಗೆ ಕನಿಷ್ಠ ಆರೇಳು ಲಕ್ಷ ರೂಪಾಯಿ ಕೊಟ್ಟವರಿಗಷ್ಟೇ ಮಠದ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದಂತೆ. ಆಕಸ್ಮಾತ್ ಹಣ ಇಲ್ಲದಿದ್ದರೇ, ಶ್ರೀಗಳು ತೋರಿಸುವ ಕನ್ಯೆಯನ್ನು ವಿವಾಹ ಆಗುವ ಮೂಲಕ ಅದನ್ನು ಸರಿದೂಗಿಸಬೇಕಂತೆ. ಈ ಮಾತುಗಳು ಕಪೋಲ ಕಲ್ಪಿತವಲ್ಲ, ಬದಲಿಗೆ  ಮಠದಲ್ಲಿ ಕೇಳಿ ಬರುವ ಪ್ರಚಲಿತ ಮಾತುಗಳು. ಇವೆಲ್ಲ ಹಿಂದಿನ ಹಿರಿಯ ಸ್ವಾಮಿಗಳನ್ನು ನೋಡಿ ಬೆಳೆದ ಈ ಮಠಕ್ಕೆ ನಡೆದುಕೊಳ್ಳುವ ಹಳೆತಲೆಮಾರಿನ ಪ್ರಾಮಾಣಿಕ ಭಕ್ತರಿಗೆ ಇರಿಸುಮುರಿಸು ಮಾಡಿದೆ ಎನ್ನುವ ಮಾತಿದೆ.

ಇವು, ಸಿರಿಗೆರೆ ಶ್ರೀಗಳು ಮತ್ತು ಶಾಖಾ ಮಠಗಳ ಶ್ರೀಗಳ ಬಗ್ಗೆ ಇರುವ ಆಕ್ಷೇಪಗಳು. ಇಂಥ ಮಠಗಳ ಪಾಲಿಗೆ ಅಣ್ಣ ಬಸವಣ್ಣ ಕೇವಲ ಒಂದು ಸರಕಷ್ಟೇ.

ಈಗ ನೀವೇ ಹೇಳಿ, ಬಸವಣ್ಣನ ಆಶಯಗಳಿಗೂ, ಸಿರಿಗೆರೆ ಮಠದ ಆಶಯಗಳ ಮಧ್ಯೆ ಏನಾದರೂ ಸಾಮ್ಯತೆಗಳಿವೆಯಾ? ಬಸವಣ್ಣನ ಆಶಯಗಳಿಗೆ ಪೂರಕವಾಗಿ ಸಿರಿಗೆರೆ ಮಠ ಯಾವತ್ತೂ ಕಾರ್ಯ ನಿರ್ವಹಿಸಿಲ್ಲ ಎಂಬುದು ಇದರಿಂದ ಸ್ಪಷ್ಟ ಅಗಬಹುದೇನೋ?