Category Archives: ಜಿ.ಮಹಂತೇಶ್.

ಸಿರಿಗೆರೆ ಮಠ : ಕಣ್ಣೀರ ಸಾಗರದೊಳಗೆ ಕಂಡ ಒಂದಷ್ಟು ‘ಭಿನ್ನ’ಕಲ್ಲುಗಳು

– ಜಿ.ಮಹಂತೇಶ್

ಸೆಪ್ಟೆಂಬರ್ 24, 2012. ಈ ದಿನ, ಕರ್ನಾಟಕದ “ಧಾರ್ಮಿಕ” ಲೋಕದಲ್ಲಿ ನಿಜಕ್ಕೂ ಅಚ್ಚಳಿಯದೆ ಉಳಿಯುವ ದಿನ. ‘ಸಿರಿಗೆರೆ’ಯಲ್ಲಿ ನಿರ್ಮಾಣವಾಗಿರುವ ಧಾರ್ಮಿಕ ಸಾಮ್ರಾಜ್ಯದಲ್ಲಿ (ಬೇಕಾದರೇ ಸಾಧು ಲಿಂಗಾಯತ ಸಾಮ್ರಾಜ್ಯ ಎಂದು ಓದಿಕೊಳ್ಳಬಹುದು) ಅನಭಿಷಿಕ್ತ ದೊರೆ ತರಹ ವಿಜೃಂಭಿಸುತ್ತಿರುವ ಸಾಧು ಸದ್ಧರ್ಮ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಇದ್ದಕ್ಕಿದ್ದಂತೆ ಪೀಠದಿಂದ ಕೆಳಗಿಳಿಯಲು ಕೈಗೊಂಡ ನಿರ್ಧಾರವನ್ನು ತುಂಬಿದ ಸಭೆಯಲ್ಲಿ ಹೇಳುತ್ತಿದ್ದಂತೆ ಸಿರಿಗೆರೆ ಭಕ್ತ ಸಾಗರ, ಕಣ್ಣೀರಿನಲ್ಲಿ ಕೈ ತೊಳೆದು ಬಿಟ್ಟಿತು. ಭಕ್ತ ಸಾಗರಕ್ಕೆ ಹರಿದು ಬಂದ ಕಣ್ಣೀರಿನ ನದಿಗೆ ಡಾ.ಯಡ್ಡಿಯೂರಪ್ಪನವರ ಕಣ್ಣಾಲಿಗಳಿಂದಲೂ ಕಣ್ಣೀರು ಹರಿದಿದ್ದು ಇಲ್ಲಿ ವಿಶೇಷ.

ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ರವಿಶಂಕರ್ ಗುರೂಜಿ ಅವರ ರೀತಿ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸ್ವಾಮೀಜಿ. ವಿದೇಶಗಳಲ್ಲೂ ಸಿರಿಗೆರೆ ಮಠಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಇತರೆ ಕೋಮಿನ ಸ್ವಾಮೀಜಿಗಳಿಗಿಂತ ತುಂಬಾ ಭಿನ್ನ.

ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಗೆ ಧಾರ್ಮಿಕ ಕ್ಷೇತ್ರದಲ್ಲಿ ಇದ್ದ ಆಸಕ್ತಿಗಿಂತ, ಹೆಚ್ಚು ಆಸಕ್ತಿ ಇದ್ದಿದ್ದು ರಾಜಕೀಯದಲ್ಲೇ. ಅವರ ಕಾರ್ಯ ವೈಖರಿಯನ್ನ ನೋಡಿದರೆ ಇದು ಅರ್ಥ ಆಗಬಹುದೇನೋ. ಚಿತ್ರದುರ್ಗ, ದಾವಣಗೆರೆ, ಹಾವೇರಿ, ರಾಣೆಬೆನ್ನೂರು ಸೇರಿ ರಾಜ್ಯದ ವಿವಿಧೆಡೆ ನೆಲೆಗೊಂಡಿರುವ ಸಾಧು ಲಿಂಗಾಯತ ಕೋಮಿಗೆ ಸೇರಿರುವ ರಾಜಕಾರಣಿಗಳು, ಶ್ರೀಗಳು ಹಾಕುವ ಗೆರೆಯನ್ನ ದಾಟಲು ಹಿಂದೇಟು ಹಾಕುತ್ತಾರೆ.

ಕಾಂಗ್ರೆಸ್, ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಸಾಧು ಲಿಂಗಾಯತ ಕೋಮಿಗೆ ಸೇರಿರುವ ರಾಜಕಾರಣಿಗಳ ಪಾಲಿಗೆ ಸಿರಿಗೆರೆ ಮಠ ಎಂಬುದು ಒಂದು ರೀತಿಯ ಹೈಕಮಾಂಡ್ ಇದ್ದ ಹಾಗೆ. ಅಂದ ಹಾಗೇ, ಇದೇನು ಗುಟ್ಟಿನ ವಿಚಾರವೂ ಅಲ್ಲ. ಪ್ರಮುಖ ರಾಜಕೀಯ ಪಕ್ಷಗಳ ಟಿಕೆಟ್ ಸಿಗಬೇಕೆಂದರೇ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಕೃಪೆ ಇರಲೇಬೇಕು.

ಸಾಧು ಲಿಂಗಾಯತ ಕೋಮಿಗೆ ಸೇರಿರುವ ಚುನಾಯಿತ ಪ್ರತಿನಿಧಿಗಳಿಗೆ ಸೂಕ್ತ ಸ್ಥಾನಮಾನ ಮತ್ತು ರಾಜಕೀಯದಲ್ಲಿ ಪ್ರಾತಿನಿಧ್ಯ ಕೊಡಬೇಕು ಎಂದು ಕಣ್ಣಲ್ಲೇ ಇಶಾರೆ ತೋರುವಷ್ಟರ ಮಟ್ಟಿಗೆ ಪ್ರಭಾವ, ವರ್ಚಸ್ಸನ್ನು ಇವತ್ತಿಗೂ ಉಳಿಸಿಕೊಂಡಿರುವುದು ಇವರ ವಿಶೇಷ.

ಒಮ್ಮೆ ಹೀಗಾಯಿತು, ಬಹುಶಃ ತರಳಬಾಳು ಹುಣ್ಣಿಮೆ ಮಹೋತ್ಸವ ಇರಬೇಕು ಎಂದೆನಿಸುತ್ತದೆ. ವೇದಿಕೆ ಮೇಲೆ ಯಡಿಯೂರಪ್ಪ ಆಸೀನರಾಗಿದ್ದರು.( ಅಂದು ಅವರು ಮುಖ್ಯಮಂತ್ರಿ) ಅದೇ ಸಾಲಿನಲ್ಲಿ ‘ಘನತೆ’ವೆತ್ತ ರೇಣುಕಾಚಾರ್ಯರೂ ಇದ್ದರು. ತಮ್ಮನ್ನ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಪದೇ ಪದೇ ಬೆಂಬಲಿಗರ ಮೂಲಕ ಒತ್ತಡ ತರುವ ಮೂಲಕ ಖುದ್ದು ಯಡಿಯೂರಪ್ಪನವರನ್ನೇ ಮುಜುಗರಕ್ಕೆ ಸಿಲುಕಿಸಿದ್ದರು.ಸಿ.ಎಂ. ಕುರ್ಚಿಯಲ್ಲೇ ಶಾಶ್ವತವಾಗಿ ಕೂರಬೇಕು ಎಂದು ಸ್ವಯಂ ನಿರ್ಧಾರ ಮಾಡಿಕೊಂಡಿದ್ದ ಯಡಿಯೂರಪ್ಪನವರಿಗೆಆಗುತ್ತಿದ್ದ ಭಿನ್ನಮತದ ಮುಜುಗರ ತಪ್ಪಿಸಬೇಕು ಎಂದು ಸಿರಿಗೆರೆ ಶ್ರೀಗಳಿಗೆ ಅನಿಸಿತೋ ಏನೋ… ಸಾವಿರಾರು ಭಕ್ತರು ನೆರೆದಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲೇ ರೇಣುಕಾಚಾರ್ಯರಿಗೆ ತೋರು ಬೆರಳಿನ ಮೂಲಕ ಗದರಿಸಿ, ಸುಮ್ಮನಾಗಿಸಿದ್ದರು. ಅಷ್ಟೇ ಅಲ್ಲ, ಮರು ಮಾತಾಡಡೆ ಯಡಿಯೂರಪ್ಪನವರ ವಿರುದ್ಧ ದನಿ ಎತ್ತದೇ ಸಹಕರಿಸಿಕೊಂಡು ಹೋಗಬೇಕು ಎಂದು ಹೇಳಿದ್ದರೆನ್ನಲಾದ ಮಾತುಗಳು ಸೂಚನೆ ತರಹ ಕೇಳಿಸಿದ್ದು ಮಾತ್ರ ಸುಳ್ಳಲ್ಲ. ಆ ಸೂಚನೆ ಜೊತೆಗೆ ಮತ್ತಿನ್ನೇನು ಸೂಚನೆಗಳು ಬಂದವೋ, ರೇಣುಕಾಚಾರ್ಯ ಮಠಾಧೀಶರ ಪಕ್ಕದಲ್ಲಿದ್ದ ಯಡಿಯೂರಪ್ಪನವರ ಕಾಲಿಗೂ ನಮಸ್ಕರಿಸಿದ್ದರು. ಶ್ರೀಗಳ ಈ ವರ್ತನೆ ಏನನ್ನ ತೋರಿಸುತ್ತದೆ ಅಂದರೇ, ಆಡಳಿತರೂಢ ಸರ್ಕಾರದ ಮೇಲೆ ಅವರಿಗಿರುವ ಪ್ರಭಾವ, ಪರೋಕ್ಷ ಹಿಡಿತ.

ಇನ್ನೂ ಒಂದು ನಿದರ್ಶನ ಇದೆ. ಕೃಷಿ, ತೋಟಗಾರಿಕೆ, ಸಕ್ಕರೆ ಖಾತೆ ಹೊಂದಿದ್ದ ಎಸ್.ಎ.ರವೀಂದ್ರನಾಥ್ (ಇವರ ಮೇಲೆ ಕಟು ಜಾತಿವಾದಿ ಎನ್ನುವ ಆರೋಪವೂ ಇದೆ) ಅವರು ಇಲಾಖೆಯಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೇನೂ ಕೆಲಸ ಮಾಡದಿದ್ದರೂ ಅವರನ್ನೇ ಸಂಪುಟದಲ್ಲಿ ಇವತ್ತಿಗೂ ಮುಂದುವರಿದಿದ್ದರೇ ಅದರ ಹಿಂದೆ ಇರುವುದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಅಭಯ ಹಸ್ತವೇ ಕಾರಣ. ಈ ನಗ್ನ ಸತ್ಯ ಇಡೀ ದಾವಣಗೆರೆ ಜಿಲ್ಲೆಗೇ ಗೊತ್ತಿದೆ.

ಸಿರಿಗೆರೆ ಮಠದ ನಿಷ್ಠಾವಂತ ಭಕ್ತರಾಗಿರುವ ಎಸ್.ಎ. ರವೀಂದ್ರನಾಥ್ರ ಬಗ್ಗೆ ಯಡಿಯೂರಪ್ಪನವರು ಎಲ್ಲಿಯೂ ತುಟಿ ಬಿಚ್ಚಿಲ್ಲ. ಭಿನ್ನಮತ ಸ್ಫೋಟಗೊಂಡ ಸಂದರ್ಭದಲ್ಲಿ ಯಡಿಯೂರಪ್ಪನವರ ಪರ ರವೀಂದ್ರನಾಥರು ನಿಲ್ಲದೇ ಯಡಿಯೂರಪ್ಪನವರ ವಿರೋಧಿ ಗುಂಪಿನೊಂದಿಗೆ ಕಾಣಿಸಿಕೊಂಡಿದ್ದರೂ ಸಿರಿಗೆರೆ ಶ್ರೀಗಳ ಕೋಪಕ್ಕೆ ಗುರಿಯಾಗಬಾರದೆಂದು ಅವರ ಕುರ್ಚಿ ಅಲುಗಾಡಿಸಲಿಲ್ಲ ಎನ್ನುವುದು ಇಲ್ಲಿ ವಿಶೇಷ.

ಇನ್ನು, ಸಿರಿಗೆರೆ ಶ್ರೀಗಳ ಹಿಡಿತ ಕೇವಲ ಯಡಿಯೂರಪ್ಪನವರ ಮೇಲಷ್ಟೇ ಅಲ್ಲ. ಈ ಹಿಂದೆ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಮೇಲೂ ಇತ್ತು. ಆ ಸಂದರ್ಭದಲ್ಲಿ ಪ್ರದರ್ಶನವಾಗಿದ್ದು ಸಿರಿಗೆರೆ ಶ್ರೀಗಳ ದಾರ್ಷ್ಟ್ಯ. ಸರ್ಕಾರದಿಂದ ಅನುದಾನ ತೆಗೆದುಕೊಳ್ಳುತ್ತಿದ್ದ ಎಲ್ಲಾ ಶಾಲೆಗಳು, ಸರ್ಕಾರಕ್ಕೆ ಲೆಕ್ಕ ಕೊಡಬೇಕು ಎಂದು ಅಂದಿನ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಅವರು ಹೇಳುವ ಮೂಲಕ ಮಠಗಳ ವಲಯದಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದ್ದರು. ಇದು, ಸಿರಿಗೆರೆ ಮಠ ಸೇರಿದಂತೆ ಎಲ್ಲಾ ಮಠ ಮಾನ್ಯಗಳ ಅಡಿಯಲ್ಲಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಿತ್ತು.

ಎಚ್.ವಿಶ್ವನಾಥ್ ಅವರು ಆಡಿದ್ದ ಈ ಮಾತಿನ ಹಿಂದಿನ ಅರ್ಥವನ್ನ ಸಿರಿಗೆರೆ ಶ್ರೀಗಳು ಸರಿಯಾಗಿ ಗ್ರಹಿಸಲಿಲ್ಲ ಎಂದೆನಿಸುತ್ತದೆ. ಮಠದ ಲೆಕ್ಕ ಕೇಳುವಷ್ಟು ದಾರ್ಷ್ಟ್ಯ ಕಾಂಗ್ರೆಸ್ ಸರ್ಕಾರಕ್ಕಿದೆ ಎಂದು ಭಾವಿಸಿಯೇ ಕೆಂಡಾಮಂಡಲವಾಗಿಬಿಟ್ಟರು. ಆಗ, ಎಸ್.ಎಂ.ಕೃಷ್ಣ ಅವರು ಶಿಕ್ಷಣ ಖಾತೆಯಿಂದಲೇ ವಿಶ್ವನಾಥ್‌ಗೆ ಕೊಕ್ ಕೊಟ್ಟು ಸಹಕಾರ ಖಾತೆ ಕೊಟ್ಟಿದ್ದನ್ನ ಬಹುಶಃ ಯಾರೂ ಮರೆತಿರಲಾರರು. ಇದೆಲ್ಲ ಏನನ್ನು ತೋರಿಸುತ್ತದೆಂದರೆ, ಮಠಗಳನ್ನು ಯಾವ ಪ್ರಭುತ್ವವೂ ಪ್ರಶ್ನಿಸಬಾರದು ಎಂದು. ಜತೆಗೇ, ವಿಶ್ವನಾಥ್ ಅವರು ಹಿಂದುಳಿದ ಕೋಮಿಗೆ ಸೇರಿದವರು ಎನ್ನುವ ಕಾರಣಕ್ಕೂ ಇರಬೇಕೇನೋ….?

ಯಾಕೆಂದರೆ, ಯಡಿಯೂರಪ್ಪನವರು ಬ್ರಹ್ಮಾಂಡ ಭ್ರಷ್ಟಾಚಾರ ಆರೋಪಗಳ ಮಸಿ ಮೆತ್ತಿಕೊಂಡಿದ್ದರೂ ಎಂದಿಗೂ ಆ ಬಗ್ಗೆ ಸಿಟ್ಟಿನಿಂದ ಮಾತನಾಡಿದ್ದಾಗಲಿ, ಕೆಂಡಾಮಂಡಲವಾಗಿದ್ದಾಗಲಿ ಇಲ್ಲಿಯವರೆಗೂ ಕಾಣಿಸಿಲ್ಲ.  ಇದೇ ಸಂದರ್ಭದಲ್ಲಿ ಇನ್ನೂ ಒಂದು ಮಾತಿದೆ.ಇದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಇದೆ ಎಂಬುದು ಗೊತ್ತಿಲ್ಲ. ಆದರೆ ಈ ಮಾತು ದಾವಣಗೆರೆ ಜಿಲ್ಲೆಯಲ್ಲಿ ಇವತ್ತಿಗೂ ಜನಜನಿತ. ಅದೇನೆಂದರೆ, ಯಡಿಯೂರಪ್ಪನವರು ಗಳಿಸಿರುವ ಅಪಾರ ಪ್ರಮಾಣದ ದುಡ್ಡನ್ನ ಸಿರಿಗೆರೆ ಮಠದಲ್ಲಿ ಇಟ್ಟಿದ್ದಾರಂತೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ದೇವೇಗೌಡರು ಹೇಗೆ ಆದಿಚುಂಚನಗಿರಿ ಮಠದಲ್ಲಿ ದುಡ್ಡು ಇಟ್ಟಿದ್ದರು ಎಂಬ ಮಾತು ಕೇಳಿ ಬರುತ್ತಿತ್ತೋ ಅದೇ ರೀತಿ, ಯಡಿಯೂರಪ್ಪನವರು ಮತ್ತು ಸಿರಿಗೆರೆ ಮಠದ ಸಂದರ್ಭದಲ್ಲೂ ಕೇಳಿ ಬಂದಿದೆ. ಮೊದಲೇ ಹೇಳಿದಂತೆ ಇದು ಸತ್ಯವೊ ಸುಳ್ಳೊ ಗೊತ್ತಿಲ್ಲ. ಜನರಾಡಿಕೊಳ್ಳುವ ಮಾತು.

ಹಾಗೇಯೇ, ದಾವಣಗೆರೆ ಮಟ್ಟಿಗೆ ಒಂದು ರೀತಿಯ ಚೈನಾ ಗೋಡೆ ಥರ ಇರುವ ಡಾ.ಶಾಮನೂರು ಶಿವಶಂಕರಪ್ಪನವರ ಮೇಲೂ ಸಿರಿಗೆರೆ ಶ್ರೀಗಳಿಗೆ ಎಲ್ಲಿಲ್ಲದ ಪ್ರೀತಿ. ದಾವಣಗೆರೆ ಜಿಲ್ಲೆಯಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ನೆಲೆ ನಿಲ್ಲಲು ಅವಕಾಶ ಕೊಡದೇ, ಶಿವಶಂಕರಪ್ಪನವರು ಬಾಪೂಜಿ ಶಿಕ್ಷಣ ಸಂಸ್ಥೆ ಎಂಬ ಬಹುದೊಡ್ಡ ಆಲದ ಮರವನ್ನ ಎದ್ದು ನಿಲ್ಲಿಸಿದ್ದಾರೆಂದರೇ ಅದರ ಹಿಂದೆ ಸಿರಿಗೆರೆ ಶ್ರೀಗಳ ದೊಡ್ಡ ಮಟ್ಟದ ಆಶೀರ್ವಾದ ಇಲ್ಲ ಎಂದು ಹೇಳಲಾಗದು. ಹೀಗೆ ಪ್ರಭಾವಿ, ಹಣಕಾಸಿನ ಸಾಮರ್ಥ್ಯ ಹೊಂದಿರುವ ರಾಜಕಾರಣಿಗಳನ್ನ ಪೋಷಣೆ ಮಾಡುತ್ತಿದ್ದಾರೆ ಎಂದರೆ ಅದು ಅತಿಶಯೋಕ್ತಿ ಆಗಲಾರದು.

ಇಡೀ ನಾಡಿಗೆ ಗೊತ್ತಿದೆ, ಜಾತಿ ಪದ್ಧತಿ ವಿರುದ್ಧ ಪ್ರಬಲವಾಗಿ ಸಿಡಿದೆದ್ದವನು ಬಸವಣ್ಣ ಎಂದು. ಆದರೆ, ಬಸವಣ್ಣನ ವಚನಗಳ ಕಟ್ಟು ಕಟ್ಟುಗಳನ್ನೇ ಹೊಂದಿರುವ ಸಿರಿಗೆರೆ ಮಠ, ಜಾತಿ ಪದ್ಧತಿ ವಿರುದ್ಧ ಪರಿಣಾಮಕಾರಿಯಾಗಿ ಪ್ರತಿಭಟಿಸಲಿಲ್ಲ. ಬದಲಿಗೆ ಸ್ವಜಾತಿ, ಅಂದರೆ ಸಾಧು ಲಿಂಗಾಯತ ಪ್ರಜ್ಞೆಯನ್ನ ಸದ್ದಿಲ್ಲದೇ ಜಾಗೃತಗೊಳಿಸುತ್ತ ಹೋದದ್ದು. ಇದನ್ನು ಕಣ್ಣಾರೆ ಕಾಣಬೇಕೇಂದರೆ ಮತ್ತೆ ನೀವು ದಾವಣಗೆರೆಗೆ ಹೋಗಬೇಕು. ಸಾಧು ಲಿಂಗಾಯತ ಕೋಮಿಗೆ ಸೇರಿರುವ ಪ್ರತಿಯೊಬ್ಬರ ಮನೆ, ಬಹುತೇಕ ವಾಣಿಜ್ಯ ಮಳಿಗೆ ಹಾಗೂ ವಾಹನಗಳ ಮೇಲೆ ಕಂಗೊಳಿಸುವುದು ‘ಶಿವ’ ಎನ್ನುವ ದೊಡ್ಡ ಅಕ್ಷರಗಳು. ಇಲ್ಲಿ ಶಿವ ಎಂದರೇ ಯಾರು ಎಂದು ಮತ್ತೆ ಬಿಡಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂದೆನಿಸುತ್ತದೆ.

ಯಾವಾಗ ‘ಶಿವ’ ಎನ್ನುವ ಅಕ್ಷರಗಳು ಕಂಗೊಳಿಸಿದವೋ ಆಗ ಅದಕ್ಕೆದುರಾಗಿ ಒಂದು ರೀತಿಯಲ್ಲಿ ಸೆಡ್ಡು ಹೊಡೆದಿದ್ದು ‘ಕನಕ’ ಎನ್ನುವ (ಕನಕದಾಸ) ಅಕ್ಷರಗಳು. ಸಮಾಜದಲ್ಲಿ ಜಾತಿ ಪ್ರಜ್ಞೆಯನ್ನ ಹೋಗಲಾಡಿಸಬೇಕಿದ್ದ ಮಠಗಳೇ ಜಾತಿ ಪ್ರಜ್ಞೆಯನ್ನ ಜಾಗೃತಗೊಳಿಸಿದ್ದು ನಿಜಕ್ಕೂ ದುರಂತ ಅಲ್ಲದೇ ಮತ್ತೇನು? ಅಣ್ಣ ಬಸವಣ್ಣನವರ ಆಶಯಗಳಿಗೆ ಪೂರಕವಾಗಿ ಮಠ ನಡೆದಿದ್ದೇ ಆಗಿದ್ದಿದ್ದರೇ ನಿಜಕ್ಕೂ ಇವತ್ತು ಕ್ರಾಂತಿ ಆಗುತ್ತಿತ್ತೇನೋ? ಆದರೆ…

ಸಾಧು ಲಿಂಗಾಯತ ಕೋಮಿನ ಜಾತಿ ಪ್ರಜ್ಞೆ ಹೇಗೆ ಗಟ್ಟಿಯಾಗಿತ್ತು ಎಂದರೆ, ಪ್ರವರ್ಗ 2ಎ ಮೀಸಲಾತಿ ಸೌಲಭ್ಯವನ್ನ ಸಾಧು ಲಿಂಗಾಯತ ಕೋಮಿಗೆ ಕೊಡಬೇಕು ಎಂಬ ಬೇಡಿಕೆ ಮಂಡಿಸುವಷ್ಟರ ಮಟ್ಟಿಗೆ. ಈ ಬೇಡಿಕೆ ವಿರುದ್ಧ ಪ್ರವರ್ಗ 2ಎ ಯಲ್ಲಿ ಸಿಂಹಪಾಲು ಪಡೆಯುತ್ತಿರುವ ಕುರುಬ ಸಮುದಾಯ ಪ್ರತಿಭಟಿಸಿತು. ಈ ಪ್ರತಿಭಟನೆ ಎಂಬುದು ಎರಡು ಸಮುದಾಯಗಳ ಮಧ್ಯೆ ಜಾತಿ ವೈಷಮ್ಯದ ಬೆಂಕಿ ಕುಲುಮೆಗೆ ಮತ್ತಷ್ಟು ತುಪ್ಪ ಸುರಿದಿತ್ತು. ಈ ಬಗ್ಗೆ ಎಲ್ಲಿಯೂ ಸರ್ಕಾರ ಅಧಿಕೃತವಾಗಿ ಘೋಷಿಸದಿದ್ದರೂ ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ಸಾಧು ಲಿಂಗಾಯತ ಕೋಮಿಗೆ ಸೇರಿರುವ ಕೆಲವರಿಗೆ ಪ್ರ ವರ್ಗ 2 ಎ ಪ್ರಮಾಣ ಪತ್ರವನ್ನ ಸ್ಥಳೀಯ ತಹಶೀಲ್ದಾರ್ ನೀಡಿ ಮತ್ತಷ್ಟು ವಿವಾದ ಸೃಷ್ಟಿಸಿದ್ದರು. ಇದೆಲ್ಲದರ ಹಿಂದೆ ಅಗೋಚರವಾಗಿ ಕೆಲಸ ಮಾಡಿದ್ದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳೇ.

ಇದೆಲ್ಲದರ ಜೊತೆಗೆ ಇನ್ನೊಂದು ಸಿರಿಗೆರೆಯ “ಜನತಾ ನ್ಯಾಯಾಲಯ”. ಪ್ರಜಾಪ್ರಭುತ್ವದಲ್ಲಿ ಪರ್ಯಾಯ ನ್ಯಾಯಾಲಯಗಳಿಗೆ, ಖಾಜಿ ಪಂಚಾಯಿತಿಗಳಿಗೆ, ಸ್ವಘೋಷಿತ (self-appointed) ನ್ಯಾಯಾಧೀಶರಿಗೆ ಸ್ಥಳವಿರಬಾರದು.  ಆದರೆ, ಸಿರಿಗೆರೆಯ ಮಠಾದೀಶರು ತಮ್ಮ ಕೋರ್ಟ್‌ಗೆ ಬರುವ ವ್ಯಾಜ್ಯಗಳನ್ನು ವಿಚಾರಣೆ ಮಾಡಿ “ನ್ಯಾಯತೀರ್ಮಾನ”ವನ್ನೂ ಕೊಡುತ್ತಾರೆ. ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ಧಿಕ್ಕರಿಸುವ ಪಕ್ಕಾ ಫ್ಯೂಡಲ್ ವ್ಯವಸ್ಥೆ.

ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ನಿವೃತ್ತಿ ನಿರ್ಧಾರ ಪ್ರಕಟಿಸಿದ ಸಂದರ್ಭದಲ್ಲಿ ಇವೆಲ್ಲ ನೆನಪಾಯಿತು. ಬಸವಣ್ಣನ ಆಶಯಗಳ ಬೆಳಕಿನಲ್ಲಿ ಸಿರಿಗೆರೆ ಮಠವನ್ನು ಮತ್ತು ಅದರ ಮುಖ್ಯಸ್ಥರನ್ನು ನೋಡಲು ಬಯಸಿದ್ದೇ ಈ ಲೇಖನಕ್ಕೆ ಕಾರಣ.

ಹಕ್ಕುಚ್ಯುತಿ, ವಸ್ತುನಿಷ್ಠ ಪತ್ರಿಕೋದ್ಯಮ, ಮಾಧ್ಯಮ ಕಾರ್ಯವೈಖರಿ…

– ಜಿ. ಮಹಂತೇಶ್

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಕೆಲ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಪ್ರಕಟಿಸುತ್ತಿರುವುದರಿಂದ ಜನಪ್ರತಿನಿಧಿಗಳು, ಅದರಲ್ಲೂ ಚುನಾಯಿತ ಜನಪ್ರತಿನಿಧಿಗಳ ವಲಯದಲ್ಲಿ ಕೆಲ ಮಾಧ್ಯಮಗಳ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವರದಿ ಕಂಡು ಕಂಗಾಲಾಗುತ್ತಿದ್ದಾರೆ.

ಹಾಗೇ ನೋಡಿದರೆ, ಮಾಧ್ಯಮಗಳು ಮತ್ತು ಮಾಧ್ಯಮ ಪ್ರತಿನಿಧಿಗಳು (ವರದಿಗಾರರು, ಸಂಪಾದಕರು ಸೇರಿ) ಶಾಸಕ, ಮಂತ್ರಿಮಹೋದಯರ ಪರವಾಗಿಯೋ ಇಲ್ಲವೇ ಸ್ಟೆನೋಗ್ರಾಫರ್‌ಗಳ ರೀತಿಯೋ ಕಾರ್ಯನಿರ್ವಹಿಸಿದ್ದೇ ಹೆಚ್ಚು. ಕೆಲ ಮಾಧ್ಯಮ ಪ್ರತಿನಿಧಿಗಳಂತೂ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ, ಉಪ್ಪಿಟ್ಟು-ಕೇಸರಿಬಾತ್ ಸವಿದಿದ್ದೇ ಹೆಚ್ಚು. ಇದಕ್ಕೆ ಜೊತೆಯಾಗಿ ಒಂದಷ್ಟು ಕವರ್‌ಗಳನ್ನು ಪ್ರತಿಫಲವಾಗಿ ಸ್ವೀಕರಿಸಿರುವ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಪ್ರತಿಯಾಗಿ, ಮಂತ್ರಿ, ಶಾಸಕರಿಗೆ ಒಂದಷ್ಟು ಸಲಹೆ ನೀಡಿ ಕೃತಾರ್ಥರಾಗಿರುವವರಿಗೇನೂ ಕೊರತೆ ಇಲ್ಲ. ಇದು, ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೂ ಅನ್ವಯಿಸುವುದಿಲ್ಲ ಎಂಬುದನ್ನೂ ಇಲ್ಲಿ ಗಮನಿಸತಕ್ಕದ್ದು.

ಬಹುತೇಕ ಮಾಧ್ಯಮ ಪ್ರತಿನಿಧಿಗಳು, ತಮ್ಮ ತಮ್ಮ ಕುಲಬಾಂಧವ ರಾಜಕಾರಣಿಗಳ ಪರವಾಗಿ ವರದಿ ಮಾಡುತ್ತಿದ್ದಾರೆ. ವಿಧಾನಸೌಧದ ಕಾರಿಡಾರ್ನಲ್ಲಿ ಇದರ ಸಾಕ್ಷಾತ್ ದರ್ಶನ ಮಾಡಿಕೊಳ್ಳಬಹುದು. ಜಾತಿಗಳ ವರ್ಗೀಕರಣದಂತೆಯೇ ಮಾಧ್ಯಮ ಪ್ರತಿನಿಧಿಗಳೂ ವರ್ಗೀಕರಣ ಆಗಿರುವುದೂ ಸುಳ್ಳಲ್ಲ. ಒಕ್ಕಲಿಗ ಪತ್ರಕರ್ತರು, ಲಿಂಗಾಯತ ಪತ್ರಕರ್ತರು, ಕುರುಬ ಪತ್ರಕರ್ತರು, ಬ್ರಾಹ್ಮಣ ಪತ್ರಕರ್ತರು (ಇವರು ಬಹಿರಂಗವಾಗಿ ಹೀಗೆಂದು ಗುರುತಿಸಿಕೊಳ್ಳುವುದಿಲ್ಲ), ಪರಿಶಿಷ್ಟ ಜಾತಿ, ಪ.ಪಂಗಡ ಪತ್ರಕರ್ತರು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರೋ ಪತ್ರಕರ್ತರು,.. ಹೀಗೆ ವಿವಿಧ ರೀತಿಯಲ್ಲಿ ವರ್ಗೀಕರಣ ಮಾಡಿಕೊಂಡಿರುವುದೇನೋ ಗುಟ್ಟಾಗಿ ಉಳಿದಿಲ್ಲ. ಇದರ ಮಧ್ಯೆಯೇ ಜಾತಿ, ಮತಗಳ ಚೌಕಟ್ಟಿನಾಚೆ ಸಿದ್ಧಾಂತಗಳ ಆಧರಿಸಿ ಒಂದಷ್ಟು ಪತ್ರಕರ್ತರ ಗುಂಪುಗಳಿರುವುದೂ ನಿಜ (ಎಡಪಂಥೀಯ, ಬಲಪಂಥೀಯ, ಇತರೆ).

ಇಂತಹ ಹೊತ್ತಿನಲ್ಲೇ ಮಾಧ್ಯಮಗಳು ಯಾರ ಕಾಳಜಿ ವಹಿಸಬೇಕು, ಯಾರ ಪರ ನಿಲ್ಲಬೇಕು, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಆಗಬಹುದೇನೋ. ಮಾಧ್ಯಮಗಳು ನಿಷ್ಪಕ್ಷಪಾತವಾಗಿರಬೇಕು ಎಂಬ ಅಭಿಪ್ರಾಯದ ಬಗ್ಗೆಯೇ ಸಾಕಷ್ಟು ಆಕ್ಷೇಪಗಳಿವೆ. ಇಂದಿಗೂ ವಸ್ತುನಿಷ್ಠರಾಗಿಯೇ ಉಳಿದುಕೊಂಡಿರುವ ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಅವರು ಹೇಳಿದ್ದ ಮಾತೊಂದು ಇಲ್ಲಿ ಹೇಳಬೇಕಿನಿಸಿದೆ: ‘ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬಾರದು, ಬದಲಿಗೆ ಪಕ್ಷಪಾತಿಯಾಗಿರಬೇಕು. ಇಲ್ಲಿ ಪಕ್ಷಪಾತಿ ಎಂದರೆ, ಯಾವುದೇ ನಿರ್ದಿಷ್ಟ ಜಾತಿ, ಕೋಮು ನೆಲೆಗಟ್ಟಿನಲ್ಲಿ ಅಲ್ಲ. ಬದಲಿಗೆ, ದುರ್ಬಲರು, ಅಸಹಾಯಕರು, ದನಿ ಕಳೆದುಕೊಂಡವರ ಪರವಾಗಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು.’

ಹಾಗೆಯೇ, ಶೋಷಿತ ಸಮುದಾಯದಿಂದ ಮೇಲೆದ್ದು ಬಂದ ರಾಜಕಾರಣಿಗಳು, ನಂತರದ ದಿನಗಳಲ್ಲಿ ಭ್ರಷ್ಟಾಚಾರ ಕಳಂಕ ಹೊತ್ತುಕೊಂಡ ಸಂದರ್ಭದಲ್ಲಿಯೂ ಆತನನ್ನು ತುಳಿತಕ್ಕೆ ಒಳಗಾದ ಸಮುದಾಯದವ ಎಂದು ಕನಿಕರ ತೋರಿ, ಅವನನ್ನ ರಕ್ಷಣೆ ಮಾಡುವುದು ಸರಿಯಲ್ಲ. ಭ್ರಷ್ಟಾಚಾರ ಯಾರು ಮಾಡಿದರೇನು, ಯಾವ ಸಮುದಾಯದವನಾದರೇನು, ಅವರನ್ನೆಲ್ಲ ಭ್ರಷ್ಟಾಚಾರಿ ಎಂದೇ ಪರಿಗಣಿಸಬೇಕು. ಅಂಥವರ ವಿರುದ್ಧ ಯಾವ ಮುಲಾಜೂ ಇಲ್ಲದೇ ವರದಿ ಪ್ರಕಟಿಸಬೇಕು ಎಂದು ಟಿ.ಕೆ. ತ್ಯಾಗರಾಜ್ ಹೇಳುತ್ತಾರೆ.

ಆದರೆ, ಇವತ್ತು ಆಗುತ್ತಿರುವುದೇನು? ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕರ ಕುರ್ಚಿಯಲ್ಲಿ ಕುಳಿತಿರುವವರಲ್ಲಿ ಜಾತಿ, ಕೋಮು ನೆಲೆಗಟ್ಟಿನಲ್ಲಿ ಯೋಚಿಸುವ ಸಂಪಾದಕರು ದಲಿತ ರಾಜಕಾರಣಿಗಳ ಭ್ರಷ್ಟಾಚಾರವನ್ನು ಮಾತ್ರ ಬಯಲು ಮಾಡುತ್ತ ಮುಂದುವರೆದ ಜಾತಿಗಳ ರಾಜಕಾರಣಿಗಳ ಭ್ರಷ್ಟಾಚಾರವನ್ನು ಉಪೇಕ್ಷಿಸುತ್ತಿರುವುದನ್ನೂ ಕಾಣಬಹುದಾಗಿದೆ. ಕನ್ನಡ ಮಾಧ್ಯಮ ವಲಯದಲ್ಲಿ ಇಂಥ ಸಂಪಾದಕರು ಈಗಲೂ ನಮ್ಮ ಕಣ್ಮುಂದೆ ಇದ್ದಾರೆ. ಇದು ಕೂಡ ಪಕ್ಷಪಾತವೇ. ಸ್ವಜನಪಕ್ಷಪಾತ.

ಉದಾಹರಣೆಗೆ, ಬಿಜೆಪಿ ರಾಷ್ಟ್ರೀಯ ಘಟಕದಲ್ಲಿ ಇವತ್ತಿಗೂ ತಮ್ಮ ಪ್ರಭಾವ, ವರ್ಚಸ್ಸು ಉಳಿಸಿಕೊಂಡಿರುವ ಅನಂತ್ ಕುಮಾರ್ ಅವರ ಬಗ್ಗೆ ಕೆಲ ಮಾಧ್ಯಮಗಳು ಚಕಾರ ಎತ್ತುವುದಿಲ್ಲ. ಹುಡ್ಕೋ ಹಗರಣ, ಅದಮ್ಯ ಚೇತನ ಟ್ರಸ್ಟ್. ಒಂದು ಕಾಲದಲ್ಲಿ ಟಿಪಿಕಲ್ ಮಧ್ಯಮವರ್ಗದ ಜೀವನ ನಡೆಸುತ್ತಿದ್ದ ಅನಂತಕುಮಾರ್ ಅವರ ಇತ್ತೀಚಿನ ಗಳಿಕೆ ಬಗ್ಗೆ ಮಾಧ್ಯಮಗಳು ಕನಿಷ್ಠ ಮಟ್ಟದಲ್ಲೂ ಪ್ರಶ್ನಿಸುವುದಿಲ್ಲ.

ಇದರರ್ಥ: ಅನಂತ್ ಕುಮಾರ್‌ರಂತಹ ರಾಜಕಾರಣಿಗಳಿಗೆ ಮಾಧ್ಯಮವನ್ನು ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡುವುದು ಗೊತ್ತಿದೆ ಎಂದು. ಹೀಗಾಗಿಯೇ ಮಾಧ್ಯಮಗಳನ್ನು ಯಾರು, ಹೇಗೆ ಬೇಕಾದರೂ ಮ್ಯಾನೇಜ್ ಮಾಡಬಹುದು ಎನ್ನುವಂತಾಗಿದೆ. ಮೀಡಿಯಾ ಮ್ಯಾನೇಜ್ ಮಾಡಲಿಕ್ಕಾಗಿಯೇ ರಾಜಕಾರಣಿಗಳಿಗೆ ಒಂದು ಕೋರ್ಸ್ ಮಾಡಬಹುದೇನೋ?

ಇದೆಲ್ಲದರ ಮಧ್ಯೆಯೇ ಮಾಧ್ಯಮ ವಲಯದಲ್ಲಿ ಇನ್ನೂ ಒಂದಷ್ಟು ಭರವಸೆಗಳು ಉಳಿದುಕೊಂಡಿವೆ. ಆದರೆ ಇಂಥ ಭರವಸೆಗಳು ಬಹು ಕಾಲ ಉಳಿಯವುದಿಲ್ಲ ಎಂದೆನಿಸುತ್ತದೆ. ಯಾಕೆಂದರೇ, ವಸ್ತುನಿಷ್ಠ ವರದಿ ಮಾಡಲು ತೆರಳುವ ಮಾಧ್ಯಮ ಪ್ರತಿನಿಧಿಗಳಿಗೆ, ಭ್ರಷ್ಟ ಚುನಾಯಿತ ಪ್ರತಿನಿಧಿಗಳು ಅಡೆ ತಡೆ ಒಡ್ಡುತ್ತಿದ್ದಾರೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿ (ಬಿ.ಜೆ.ಪಿ.) ಅವರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಪ್ರಭಾವ ಬೀರಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದನ್ನು ವರದಿ ಮಾಡಿದ್ದ ಮಾಧ್ಯಮಗಳ ವಿರುದ್ಧ ಕಿಡಿ ಕಾರಿರುವುದು. ಇವರ ಕಿಡಿಗೆ ಮುಖ್ಯ ಕಾರಣ ಎಂದರೇ, ಕೆರೆ ಅಚ್ಚುಕಟ್ಟು ಪ್ರದೇಶ ಸುತ್ತಮುತ್ತ ಇದ್ದ 8 ಎಕರೆಯನ್ನು ತಮ್ಮ ಹಿಂಬಾಲಕರ ಮೂಲಕ ನೋಂದಣಿ ಮಾಡಿಸಿಕೊಂಡಿದ್ದನ್ನು, ಮತ್ತು ತಮ್ಮ ಪತ್ನಿ ಒಡೆತನದಲ್ಲಿರುವ ಜಮೀನಿನಲ್ಲೇ (3 ಎಕರೆ 8 ಗುಂಟೆ) ರೆಸಾರ್ಟ್ ನಿರ್ಮಾಣಕ್ಕೆ ಗುರುತು ಮಾಡಿಕೊಂಡಿದ್ದನ್ನು ಬಯಲಿಗೆಳೆದಿದ್ದಕ್ಕೆ.

ಇಂತಹ ವರದಿ ಸುದ್ದಿ ವಾಹಿನಿಯಲ್ಲಿ  ಬಿತ್ತರವಾಗಿದ್ದೇ ತಡ, “ಸುದ್ದಿ ವಾಹಿನಿ ತಮ್ಮನ್ನ ತೇಜೋವಧೆ ಮಾಡುತ್ತಿದೆ, ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಕೆಲಸ ಮಾಡಲಿಕ್ಕೆ ಆಗುತ್ತಿಲ್ಲ. ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ,” ಎಂದು ತುಂಬಿದ ಸದನದಲ್ಲೇ ಅಲವತ್ತುಕೊಂಡು, ಆ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದರು.

ಅಸಲಿಗೆ, ಈ ಸುದ್ದಿಯನ್ನು ಬಿತ್ತರಿಸಿದ ಸುದ್ದಿ ವಾಹಿನಿಗೆ ಯಾರೊಬ್ಬರ ತೇಜೋವಧೆಗಿಂತ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ಸ್ಥಳೀಯ ಶಾಸಕ ಹಾಗೂ ಪ್ರಾಧಿಕಾರದ ಸದಸ್ಯ ಸಿ.ಟಿ.ರವಿ ಅವರು ಹೇಗೆ ಪ್ರಭಾವ ಬೀರಿದ್ದಾರೆ ಎಂಬಷ್ಟೇ ವಿಷಯದ ಬಗ್ಗೆ ದಾಖಲೆಗಳ ಸಮೇತ ಜನರ ಮುಂದೆ ಇಟ್ಟಿತ್ತು. ಇದು ಹೇಗೆ ಹಕ್ಕುಚ್ಯುತಿ ಆಗುತ್ತದೆ?

ಹಾಗೆ ನೋಡಿದರೆ, ಇತ್ತೀಚಿನ ವರ್ಷಗಳಲ್ಲಿ ಸುದ್ದಿವಾಹಿನಿ ವಿರುದ್ಧ ಹಕ್ಕುಚ್ಯುತಿ ಮಂಡನೆಯಾಗಿದ್ದು ಇದೇ ಪ್ರಥಮ ಬಾರಿ. ಹಿಂದೆ ಲಂಕೇಶ್ ಪತ್ರಿಕೆ ವಿರುದ್ಧವೂ ಒಮ್ಮೆ ಹಕ್ಕುಚ್ಯುತಿ ಮಂಡನೆಯಾಗಿತ್ತು. ಲಂಕೇಶ್ ಮತ್ತು ವರದಿಗಾರ ಟಿ.ಕೆ.ತ್ಯಾಗರಾಜ್ ಅವರನ್ನು ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕು ಎಂದು ವಿಧಾನಸಭೆ ಸದಸ್ಯರು ಪಟ್ಟು ಹಿಡಿದಿದ್ದರು. ಇದಕ್ಕೆ ಕಾರಣವಾಗಿದ್ದು ಲಂಕೇಶ್ ಪತ್ರಿಕೆಯಲ್ಲಿ “ಶಾಸಕಿಯರ ಕಾಲ ಹರಣ” ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ವರದಿ.

ಶಾಸಕಿಯರು ಸದನದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕಿತ್ತು, ಹೇಗೆ ಕಾರ್ಯ ನಿರ್ವಹಿಸಿದ್ದಾರೆ ಎಂಬ ಬಗ್ಗೆ ಪ್ರಕಟವಾಗಿದ್ದ ಆ ವರದಿಯನ್ನು ವಿವಿಧ ಪಕ್ಷಗಳನ್ನು ಪ್ರತಿನಿಧಿಸಿದ್ದ ಶಾಸಕಿಯರು ಅರಗಿಸಿಕೊಳ್ಳಲಿಲ್ಲ. ಈ ವರದಿಯಿಂದ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಬೊಬ್ಬೆ ಹಾಕಿದ್ದರು. ಶಾಸಕಿಯರ ಕಾಲ ಹರಣ ಶೀರ್ಷಿಕೆಯ ವರದಿ ಏಕಮುಖವಾಗಿರಲಿಲ್ಲ. ಬಹುಮುಖಿಯಾಗಿದ್ದ ಈ ವರದಿಯನ್ನ ಶಾಸಕಿಯರು ಓದಿ, ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿತ್ತು. ಆದರೆ ಅಂಥ ಕೆಲಸ ಕಡೆಗೂ ಆಗಲೇ ಇಲ್ಲ.

ಲಂಕೇಶ್ ಪತ್ರಿಕೆ ವಿರುದ್ಧ ಹಕ್ಕುಚ್ಯುತಿ ಮಂಡನೆಯಾದಾಗ ಅದನ್ನು ಬಲವಾಗಿ ವಿರೋಧಿಸಿದವರು ಶಾಸಕರಾಗಿದ್ದ ವಾಟಾಳ್ ನಾಗರಾಜ್. ಹಾಗೆ ನೋಡಿದರೆ, ವಾಟಾಳ್ ನಾಗರಾಜರ ಕಾರ್ಯ ವೈಖರಿ ಬಗ್ಗೆಯೂ ಲಂಕೇಶ್ ಪತ್ರಿಕೆ ಕುಟುಕಿತ್ತು (ವಟಗುಟ್ಟುವ ವಾಟಾಳ್, ಕನ್ನಡ ಓರಾಟಗಾರ ವಾಟಾಳ್, ಇತ್ಯಾದಿ ವರದಿಗಳು). ಇಷ್ಟೆಲ್ಲಾ ಆದರೂ ವಾಟಾಳ್ ನಾಗರಾಜರು ’ಲಂಕೇಶ್ ಪತ್ರಿಕೆ’ ಪರವಾಗಿ ಮಾತನಾಡಿ, ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಬೆಂಬಲವಾಗಿ ನಿಂತುಕೊಂಡರು. ಆಗಲೇ ಅನ್ನಿಸುವುದು ಸದನದಲ್ಲಿ ವಾಟಾಳ್ ನಾಗರಾಜ್ ಥರದವರು ಇರಬೇಕು ಎಂದು. ಹೀಗೆಂದ ಮಾತ್ರಕ್ಕೆ ಅದು ವಾಟಾಳ್ ನಾಗರಾಜರ ಓಲೈಕೆಯಲ್ಲ. ಅವರನ್ನು ಪ್ರಶ್ನಿಸುವುದು ಬೇಡ, ಕನ್ನಡ ಚಳವಳಿಯಿಂದ ಸ್ವಂತ ಕಲ್ಯಾಣ ಮಾಡಿಕೊಂಡಿರುವುದನ್ನೂ ಪ್ರಶ್ನಿಸುವುದು ಬೇಡ ಎಂದಲ್ಲ.

ಈಗ ಗೌರಿ ಲಂಕೇಶ್ ಪತ್ರಿಕೆ ವಿರುದ್ಧವೂ ಖುದ್ದು ಸಭಾಪತಿ ಬೋಪಯ್ಯ ಅವರೇ ಹಕ್ಕುಚ್ಯುತಿ ಮಂಡಿಸಿದ್ದಾರೆ. (ವಿಧಾನಸೌಧ, ವಿಧಾನಸಭೆಯಲ್ಲಿ ಕೆಲ ವಿಭಾಗಗಳಿಗೆ ನಡೆದಿರುವ ನೇಮಕಾತಿಗೆ ಸಂಬಂಧಿಸಿದಂತೆ.)

ಆದರೆ, ಸಿ.ಟಿ.ರವಿ ಅವರು ಸುದ್ದಿವಾಹಿನಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಅವರೊಬ್ಬರನ್ನು ಹೊರತುಪಡಿಸಿ ಉಳಿದ ಶಾಸಕರು, ಇದಕ್ಕೂ ತಮಗೂ ಸಂಬಂಧ ಇಲ್ಲವೇ ಇಲ್ಲ ಎಂಬಂತೆ ಕುಳಿತಿದ್ದರು. ಕನಿಷ್ಠ ಶಾಸಕರ ಹಕ್ಕುಗಳೇನು? ಬಾಧ್ಯತೆಗಳೇನು? ಎಂಬ ಬಗ್ಗೆ ಸದನದಲ್ಲಿ ಕನಿಷ್ಠ ಚರ್ಚೆ ಆಗಬೇಕಿತ್ತು. ಅಂಥ ಚರ್ಚೆ ಆಗಲೇ ಇಲ್ಲ.

ಜುಲೈ 1ರಂದು ಆಚರಿಸುವ ಪತ್ರಿಕಾ ದಿನಾಚರಣೆಗಳಲ್ಲಂತೂ ಮುಖ್ಯಮಂತ್ರಿಯಾದಿಯಾಗಿ ಮಂತ್ರಿ ಮಹೋದಯರು, ಶಾಸಕರು, ’ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕು, ವಸ್ತುನಿಷ್ಠ ವರದಿಗಳನ್ನ ಪ್ರಕಟಿಸಬೇಕು, ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಿಕ್ಕೆ ಪೂರಕವಾದ ವಾತಾವರಣ ಇರಬೇಕು…’ ಹೀಗೆ ಬಣ್ಣ ಬಣ್ಣದ ಮಾತುಗಳನ್ನಾಡುತ್ತಲೇ ಇದ್ದಾರೆ. ಇದು ವಿಪರ್ಯಾಸವಲ್ಲದೆ ಮತ್ತೇನು? ವಸ್ತುನಿಷ್ಠತೆಯ ಬಗ್ಗೆ ಯಾರು ಮಾತನಾಡಿದ್ದಾರೋ ಅವರ ಬಗ್ಗೆಯೇ ವಸ್ತುನಿಷ್ಠ ವರದಿ ಪ್ರಕಟವಾದಾಗ ಅದನ್ನ ಅರಗಿಸಿಕೊಳ್ಳುವುದಿಲ್ಲ.

ಈಗ ನೀವೇ ಹೇಳಿ: ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು? ಯಾರ ಪರವಾಗಿರಬೇಕು? ಶಾಸಕರ ಹಕ್ಕು ಬಾಧ್ಯತೆಗಳೇನು? ನಿಜಕ್ಕೂ ಹಕ್ಕುಚ್ಯುತಿ ಆಗುವುದು ಯಾರಿಗೆ? ಯಾವ ಸಂದರ್ಭದಲ್ಲಿ? ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಪ್ರಭಾವ ಬೀರುವುದು, ಇಂಥವುಗಳ ಬಗ್ಗೆ ವರದಿ ಬಿತ್ತರಿಸಿದರೇ ಹಕ್ಕು ಚ್ಯುತಿ ಹೇಗಾಗುತ್ತದೆ? ಇಷ್ಟೆಲ್ಲಾ ಅಡೆ ತಡೆಗಳ ಮಧ್ಯೆ ಮಾಧ್ಯಮಗಳು ಹೇಗೆ ಕಾರ್ಯ ನಿರ್ವಹಿಸಬೇಕು?