– ಬಿ.ಜಿ.ಗೋಪಾಲಕೃಷ್ಣ ಹಾಸನ
ಮಾನವನ ನಾಗರಿಕತೆಯ ಪ್ರಾರಂಭದ ಹಂತವನ್ನು ಆದಿಸಮತಾ ಸಮಾಜ ಎಂದು ಕರೆಯಬಹುದು. ಆ ಒಂದು ಕಾಲಘಟ್ಟದಲ್ಲಿ ಯಾವುದೇ ಆಧಿಕಾರ, ಅಂತಸ್ತು, ಜಾತಿ ಮತ್ತು ಲಿಂಗ ಭೇದಗಳ ತಾರತಮ್ಯ ಇಲ್ಲದೆ ಮಾನವರೆಲ್ಲರೂ ಸಮಾನ ಮನಸ್ಕ, ದ್ವೇಷ ಅಸೂಯೆ ರಹಿತ ನಿಷ್ಕಳಂಕ ಪರಿಪೂರ್ಣ ವ್ಯಕ್ತಿತ್ವದವರಾಗಿದ್ದರು. ಅಂದು ಮುಂದಿನ ದಿನಗಳಿಗೆ ಕೂಡಿಡುವ ಕ್ರಮವಾಗಲಿ, ಕೊಳ್ಳುಬಾಕ ಸಂಸ್ಕೃತಿಗಳ ಪರಿಕಲ್ಪನೆಗಳಾಗಲಿ ಇರಲಿಲ್ಲ.
ತದನಂತರದ ಕಾಲಘಟ್ಟದ ಬೆಳವಣಿಗೆಯೇ ಪಾಳೇಗಾರಿಕೆ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಇಡೀ ಸಮಾಜವೇ ದುಡಿಯುವವರ ವರ್ಗ ಮತ್ತು ದುಡಿಸಿಕೋಳ್ಳುವವರ ವರ್ಗ ಎಂದು ಎರಡು ಭಾಗಗಳಾಗಿ ವಿಂಗಡಣೆಯಾದ ಕಾಲವದು. ದುಡಿಯುವ ವರ್ಗ ಸಂಖ್ಯೆಯಲ್ಲಿ ಬಹುಸಂಖ್ಯೆಯಲ್ಲಿದ್ದು, ಭೌತಿಕವಾಗಿ ಸಶಕ್ತರಾಗಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಾದರು. ಆದರೆ ದುಡಿಸಿಕೋಳ್ಳುವ ವರ್ಗ ಇದಕ್ಕೆ ತದ್ವಿರುದ್ದ. ಸಂಖ್ಯೆಯಲ್ಲಿ ಕಡಿಮೆ ಇದ್ದು ಭೌತಿಕವಾಗಿ ಅಶಕ್ತರಾಗಿರದಿದ್ದರೂ ಭೌದ್ಧಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಸಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರೆದವರಾದರು.
ಇದೇ ಪರಿಸ್ಥಿತಿಯನ್ನು ಮುಂದುವರೆಸುವುದು ದುಡಿಸಿಕೊಳ್ಳುವ ವರ್ಗಕ್ಕೆ ಅನಿವಾರ್ಯವಾಗಿತ್ತು. ಪ್ರಕೃತಿಯನ್ನೇ ದೇವರೆಂದು ಪೂಜಿಸುತಿದ್ದ ಆ ಸಂದರ್ಭದ ಜನಮಾನಸದಲ್ಲಿ ಭೇದಭಾವಗಳ ವಿಷಬೀಜ ಬಿತ್ತಲು ಜಾತಿ, ಧರ್ಮ ಮತ್ತು ದೇವರುಗಳನ್ನು ಸೃಷ್ಟಿಸಿ ಅಸ್ತ್ರಗಳನ್ನಾಗಿ ಬಳಸಿ ತಮ್ಮ ತಮ್ಮುಗಳಲ್ಲೇ ಭೇದಭಾವಗಳ ಜೊತೆ ಜೊತೆಯಲ್ಲಿ ದ್ವೇಶ, ತಾರತಮ್ಯ ಅಸ್ಪೃಶ್ಯತೆ ಬೆಳೆಸಿದುದರಿಂದ, ಮೇಲ್ವರ್ಗದವರೆಂದು ಬಿಂಬಿತರಾದ ದುಡಿಸಿಕೊಳ್ಳುವ ವರ್ಗದ ಹಾದಿ ಸುಗಮವಾಯಿತು.
ಆದರೆ ಕಾಲಾನಂತರ ದುಡಿಯುವ ವರ್ಗದಲ್ಲೂ ಹಂತಹಂತವಾಗಿ ಪ್ರಜ್ಞೆಮೂಡಲು, ಆ ಪ್ರಜ್ಞೆಯನ್ನು ನಿರ್ಲಿಪ್ತಗೂಳಿಸಲು ಪೂರ್ವಜನ್ಮ, ಪುನರ್ಜನ್ಮ , ಕರ್ಮಸಿದ್ದಾಂತಗಳಂತಹ ಹೊಸ ಹೊಸ ಸಿದ್ಧಾಂತಗಳನ್ನು ಪ್ರಕಟಿಸಲೇಬೇಕಾಯಿತು. ಆ ಸಿದ್ಧಾಂತಗಳನ್ನು ಸಾಕ್ಷಾತ್ ಸೃಷ್ಟಿಕರ್ತನ ಸಂದೇಶಗಳೆಂದು, ಅವನ ಬಾಯಿಂದಲೇ ಹೇಳುತ್ತಿರುವಂತೆ ಪ್ರಚುರ ಪಡಿಸಿದರು. ಈ ಕರ್ಮಸಿದ್ಧಾಂತಗಳಿಕೆ ಪೂರಕವಾಗಿ ಮೂಡಿಬಂದವುಗಳೇ ಮೂಢನಂಬಿಕೆಗಳು. ನಂಬಿದವರ ಕತ್ತುಕುಯ್ಯಲು ಸಹಜವಾಗೇ ಮೂಢನಂಬಿಕೆಗಳಂತಹ ನಯವಂಚಕ ಅಸ್ತ್ರಗಳಿಗಿಂತ ಮತ್ತಾವುದು ಪ್ರಬಲ ಅಸ್ತ್ರವಾಗಲಾರದು.
ಹಿಂದುಳಿದವರಲ್ಲೂ ಪ್ರಜ್ಞೆಮೂಡಿ ಆರ್ಥಿಕವಾಗಿ ಸಬಲನಾದರೆ ನಮ್ಮ ಮನೆಯ ಕಕ್ಕಸ್ಸನ್ನು ನೂರು ರೂಪಾಯಿ ಕೂಲಿಗೆ ಸ್ವಚ್ಚಗೊಳಿಸಿಯಾನೇ? ಆಥವಾ ಶಿಕ್ಷಣ ಕಲಿತ ಆರ್ಥಿಕವಾಗಿ ಸಬಲನಾದ ಪ್ರಜ್ಞಾವಂತರು ಹತ್ತರಷ್ಟು ಕೂಲಿ ಕೊಟ್ಟರೂ ಕಕ್ಕಸ್ಸು ಸ್ವಚ್ಚಗೊಳಿಸುವ ಕೆಲಸ ಮಾಡಿಯಾರೇನು? ಆ ಸಂದರ್ಭಗಳಲ್ಲಿ ತಾವುಗಳೇ ಕಾರ್ಯಪ್ರವೃತ್ತರಾಗ ಬೇಕಾಗುತ್ತದೆ ಎಂಬ ಸರಳ ಸಮೀಕರಣ ತಿಳಿಯದೇ ಅವರುಗಳಿಗೇ. ಸಮಾಜದಲ್ಲಿ ಮೌಢ್ಯತೆ, ಆಂಧಾನುಕರಣೆ, ಅಂಧಶ್ರದ್ಧೆ, ಮೂಢನಂಬಿಕೆಗಳಿರುವವರೆಗೆ ತಮ್ಮುಗಳ ಶ್ರಮರಹಿತ ಬದುಕಿಗೇನು ಅಡ್ಡಿಯಿಲ್ಲ ಎಂಬ ಸರಳ ವಸ್ತು ಸ್ಥಿತಿಯನ್ನು ತಳಿಯದಷ್ಟು ಮುಟ್ಠಾಳರೇ ಈ ಮೌಢ್ಯದ ಫಲಾನುಭವಿಗಳುಸ.
ಪ್ರಸ್ತುತ ಅಂಧಶ್ರದ್ದೆಗಳು ಮನುಷ್ಯನ ಹುಟ್ಟಿನಿಂದ ಪ್ರಾರಂಭಗೊಂಡು, ಜೀವಿತ ಅವಧಿಯಲ್ಲಿ ಜೊತೆ ಜೊತೆಯಲ್ಲೇ ಪರಾವಲಂಬಿಗಳಂತೆ ರಕ್ತವನ್ನು ಹೀರಿ ಬದುಕುತ್ತಾ, ನಮ್ಮ ಸಾವಿಗೆ ಮೊದಲೇ ಇತರರಿಗೂ ರಕ್ತ ಬೀಜಾಸುರನಂತೆ ದ್ವಿಗುಣಗೊಳ್ಳುತ್ತಾ ಇತರ ಮನುಜ ದೇಹಗಳನ್ನು ಮಾತ್ರ (ಇತರೆ ಪ್ರಾಣಿಗಳನ್ನು ದೇಹಗಳನ್ನು ಪ್ರವೇಶಿಸದೆ) ಪ್ರವೇಶಿಸಿ ವಾಸಮಾಡಲು ಪ್ರಾರಂಭಿಸುತ್ತವೆ, ಮೇಲ್ವರ್ಗದವರು ನೀರು ಗೊಬ್ಬರ ಹಾಕಿ ಪೋಷಿಸಲು ಮುಂದಾಗುತ್ತಾರೆ.
ಈ ಭೂಮಿಯ ಮೇಲೆ ವಾಸಿಸುವು ಪ್ರತಿಯೂಂದು ಜೀವಿಯೂ ಸಮಾನ ಎನ್ನುವುದಾದರೆ. ಬುದ್ದಿವಂತ ಜೀವಿಯಾಗಿರುವ ಮನುಷ್ಯನೇಕೆ ಮೌಢ್ಯತೆಯ ಅಂಧಕಾರದಲ್ಲಿ ತನ್ನನ್ನೇ ತಾನು ಬಂಧಿಸಿಕೊಂಡು ತೋಳಲಾಡುತ್ತಾನೆ ಅಥವ ಬೇರೆಯವರ ತೋಳಲಾಟದಲ್ಲಿ ತನ್ನ ಹೋಟ್ಟೆ ತುಂಬಿಸಿ ಕೊಳ್ಳುತ್ತಾನೆ.
ಮೂಢನಂಭಿಕೆಗಳ ಪ್ರಕಾರ ಮತ್ತು ಆಯಾಮಗಳನ್ನು ತಿಳಿಯುವುದೇ ಕಷ್ಟ ಸಾಧ್ಯವಾಗಿದೆ. ಮನುಜನ ಜೀವಿತ ಅವಧಿಯ ಪ್ರತಿ ಹಂತದಲ್ಲೂ ಹಾಸುಹೊಕ್ಕಾಗಿವೆ. ಅಂಧಶ್ರದ್ದೆಗೆ ಹೆಚ್ಚು ಬಲಿಯಾಗುವರು ಈ ಸಮಾಜದ ಅರ್ಧ ಭಾಗವೇ ಆಗಿರುವ ಮಹಿಳೆಯರು. ಅವಳು ಶಿಕ್ಷಣ ಪಡೆಯುವುದೆ ಒಂದು ಅಪವಾದ. ಅವಳು ಮನೆಯಿಂದ ಹೊರ ಹೋಗಕೂಡುದು. ಅವಳು ಮುಟ್ಟಾದಾಗ ಮತ್ತು ಬಾಣಂತನವಾದಾಗ ಊರ ಹೊರಗೆ ಪಶುಗಳಂತೆ ಇರಿಸುವುದು, ಬಾಲ್ಯ ವಿವಾಹದಂತಹ ಶಿಕ್ಷೆ ಇವಳೆಗೇ ಹೆಚ್ಚು. ಊರಿಗೆ ಕಷ್ಟ ಬಂದರೆ ಇವಳದೇ ಬಲಿ ಬೇಕು. ಸತಿ ಪದ್ಧತಿ, ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ. ವರದಕ್ಷಣೆ ನೆಪದಲ್ಲಿ ಜೀವಂತ ಸುಡುವುದು, ಹೆಣ್ಣು ಮಗುವಿನ ಹುಟ್ಟಿಗೆ ತಾಯಿಯೇ ಕಾರಣ ಎಂಬ ಅಪವಾದ, ತಾನು ಅನುಭವಿಸಿದ ಕಷ್ಟಗಳನ್ನು ನನ್ನ ಹೆಣ್ಣು ಮಗು ಅನುಭವಿಸಬಾರದೆಂದು ತನ್ನ ಕರುಳಕುಡಿಯು ಭ್ರ್ರೂಣ ಹಂತದಲ್ಲಿರುವಾಗಲೇ ಹತ್ಯೆಗೆ ಸಹಕರಿಸಬೇಕಾದ ಅನಿವಾರ್ಯತೆ. ದೇವಸ್ಥಾನಗಳಿಗೆ ಪ್ರವೇಶದ ನಿರಾಕರಣೆ. ಒಂದೇ ಎರಡೇ ಇದು ಹೆಣ್ಣಾಗಿ ಹುಟ್ಟಿದ್ದಕ್ಕೆ ಈ ಸಮಾಜದ ಕೊಡಿಗೆ.
ಅಂಧಶ್ರದ್ಧೆಗಳಿಂದ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುವ ದಲಿತರ ಸ್ಥಿತಿ ಹೇಳತೀರದು. ಅಸ್ಪೃಶತೆ, ಅವರುಗಳಿಗೇ ಒಂದು ಕೇರಿ, ದೇಸ್ಥಾನಗಳಿಗೆ ಪ್ರವೇಶವಿಲ್ಲ, ಜಮೀನಿನ ಒಡತನವಿಲ್ಲ, ಮೇಲ್ವರ್ಗದವರು ಹೇಳಿದಾಗ ಪ್ರತಿಫಲ ಅಪೇಕ್ಷಿಸದೆ ಅವರುಗಳ ಮನೆಯಲ್ಲಿ ಬಂದು ದುಡಿಯಬೇಕು ಕೊಟ್ಟಷ್ಟು ಕೂಲಿ ಪಡೆದು ತೊಲಗಬೇಕು. ಒಟ್ಟಿನಲ್ಲಿ ಸ್ವತಂತ್ರದ ಬದುಕೆ ಇಲ್ಲದೆ ಬದುಕು ಅವರದು.
ಮಡೆಸ್ನಾನದ ಮುಂದುವರೆದ ಭಾಗವಾಗಿ ಎಡೆಸ್ನಾನ, ಗುಪ್ತವಾಗಿ ಬೆತ್ತಲೆ ಸೇವೆಯ ಮುಂದುವರೆದ ಭಾಗವಾಗಿ ಮೈಗೆ ಸೊಪ್ಪು ಕಟ್ಟಿಕೊಳ್ಳುವುದು. ದೇವದಾಸಿ ಪದ್ದತಿ, ಪಾದಪೂಜೆಗಳು, ಪಾಪ ಪರಿಹಾರಕ್ಕೆ ಅಥವಾ ಶಾಂತಿಗಾಗಿ ಪೂಜೆಗಳು, ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳಲು ನರಬಲಿ, ಪ್ರಾಣಿಬಲಿ, ಮನೆಗಳಲ್ಲಿ ಶೌಚಾಲಯಗಳನ್ನು ಹೊಂದದೇ ಇರುವುದು. ತೆರೆಮರೆಯಲ್ಲಿ ಹುಣ್ಣಿಮೆಯ ದಿನ ಸವದತ್ತಿಯಲ್ಲಿ ಮುತ್ತು ಕಟ್ಟುವುದು. ಶಾಂತಿ ಹೋಮ ಹವನಗಳನ್ನು ಮಾಡಿಸುವುದು. ಪಂಕ್ತಿ ಭೇದ, ಅಜಲು ಪದ್ದತಿ. ಉಳ್ಳವರು ತಮ್ಮ ಆನಾಚಾರಗಳ ವಿರುದ್ದ ಧ್ವನಿ ಎತ್ತಿದವರನ್ನು ಭಾನಾಮತಿ ಮಾಡುತ್ತಿದ್ದಾರೆಂದು ಆಪಾದಿಸಿ ಜೀವಂತ ಸುಡುವುದು. ನಿಧಿ ತೆಗೆಯಲು ಮಕ್ಕಳನ್ನು ಬಲಿ ಕೂಡುವುದು. ಶ್ರೀಮಂತ ಪುರುಷರು ಚಿಕ್ಕವರೊಂದಿಗೆ ಸಂಭೋಗ ಮಾಡಿದರೆ ಹರೆಯ ಹೆಚ್ಚುತ್ತದೆಯಂದು ಮತ್ತು ಗುಪ್ತರೋಗಗಳು ವಾಸಿಯಾಗುತ್ತವೆಯಂದು, ಹೀಗೆ ಹೇಳುತ್ತಾ ಹೊದರೆ ಮಾಹಾನ್ ಗ್ರಂಥಗಳನ್ನೇ ರಚಿಸಬಹುದು.
ಮೂಲಭೂತವಾದಿಗಳು, ಪುರೋಹಿತಶಾಹಿಗಳು, ಅವಕಾಶವಾದಿ ಪಾಳೇಗಾರಿಕೆ ವ್ಯವಸ್ಥೆಯ ನಾಯಕರುಗಳು, ಬಂಡವಾಳಶಾಹಿಗಳು, ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ರಾಜಕೀಯ ನಡೆಸುವವರು, ಜನರ ನಂಬಿಕೆಯ ಹೆಸರಿನಲ್ಲಿ ಪ್ರಜ್ಞಾಪೂರ್ವಕವಾಗಿಯೇ ಮೌಢ್ಯತೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅವರುಗಳ ಅಸ್ತಿತ್ವದ ಪ್ರಶ್ನೆ. ಸೈದ್ದಾಂತಿಕ ಸಿದ್ಧಾಂತ, ನೈತಿಕತೆ , ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಇಲ್ಲದವರುಗಳಿಗೆ ಅಂಧಶ್ರದ್ದೆಗಳೆ ಮೂಲಾಧಾರ. ಇವರುಗಳ ಅಭಿವೃದ್ದಿ ಅಂಧಶ್ರದ್ಧೆಯ ಅಭಿವೃದ್ದಿಯ ಮೇಲೆ ಅವಲಂಬಿತವಾಗಿರುತ್ತವೆ. ಅವರುಗಳಿಗೆ ಮೂಢನಂಬಿಕೆ ಪ್ರತಿಬಂಧಕ ಮಸೂದೆ ಅಘಾತಕಾರಿ ಮತ್ತು ಅತಂಕದ ಮಸೂದೆಯಾಗಿದೆ.