Category Archives: ರೂಪ ಹಾಸನ

ಅಂತಃಕರಣದ ಮಾದರಿಗಳಿಗೆ ಪುಟ್ಟ ವಂದನೆ


– ರೂಪ ಹಾಸನ


ಮುದ್ದು ಮುಖದ ಆ ಹುಡುಗಿಯ ಮುಖದಲ್ಲಿ ನೋವು ಹರಡಿ ನಿಂತಿದ್ದರೂ ಆತ್ಮವಿಶ್ವಾಸವಿತ್ತು. ತನ್ನ ಪ್ರತಿಯೊಂದು ಹೆಜ್ಜೆಯನ್ನೂ ಕಷ್ಟಪಟ್ಟು ಎತ್ತಿಡುತ್ತಿದ್ದಳು. ಪೋಲಿಯೋ ಪೀಡಿತ ಎರಡೂ ಕಾಲಿಗೆ ಭಾರವಾದ ಕ್ಯಾಲಿಪರ್ಸ್ ತೊಟ್ಟು ಊರುಗೋಲಿನ ಸಹಾಯದಿಂದ ಹೆಜ್ಜೆ ಊರಬೇಕಿತ್ತು. ಓದು, ಕೌಶಲ್ಯಗಳಿಕೆ, ಆಮೇಲಿನ ಉದ್ಯೋಗಾನ್ವೇಷಣೆ ಯಾವುದೂ ಸುಲಭವಾಗಿರಲಿಲ್ಲ. ದಿನದಿನದ ಒಳ-ಹೊರಗಿನ ಯುದ್ಧದಲ್ಲಿ ಸೋಲನುಭವಿಸಿದರೂ ಮತ್ತೆ ನಾಳಿನ ಹೆಣಗಾಟಕ್ಕೆ ಸಿದ್ಧತೆ ನಡೆಸಬೇಕಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಲು ಹೊರಟ ಅವಳ ಅವಿರತ ಪ್ರಯತ್ನದಲ್ಲಿ ಹೆತ್ತವರು, ಬಂಧುಬಳಗ, ಜಾತಿಬಾಂಧವರು, ಸರ್ಕಾರ ಯಾರೂ ಇರಲಿಲ್ಲ. ಆದರೆ ಜೊತೆಗೆ ನಿಂತದ್ದು ಒಂದು ಪೋಲಿಯೋ ಪುನರ್ವಸತಿ ಕೇಂದ್ರ.

ಅಂಗವೈಕಲ್ಯತೆ ಒಂದು ಶಾಪವೆಂದೇ ಭಾವಿಸಿರುವ ನಮ್ಮ ಸಮಾಜದಲ್ಲಿ, ಹೆಚ್ಚಿನ ಬಡ ಪೋಷಕರು ಅಂಗವಿಕಲ ಮಕ್ಕಳನ್ನು ಹೊರೆ ಎಂದೇ ಭಾವಿಸುತ್ತಾರೆ. ಇಂತಹ ಮಕ್ಕಳ ಹೆಸರಿನಲ್ಲಿ ಸರ್ಕಾರದಿಂದ ದೊರಕುವ ವಿಶೇಷ ಅಲ್ಪಭತ್ಯೆಯನ್ನೂ ಮಕ್ಕಳಿಗಾಗಿ ಖರ್ಚು ಮಾಡದೇ ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳುವವರೂ ಹಲವರಿದ್ದಾರೆ. ಬಡ ಅಂಗವಿಕಲ ಮಕ್ಕಳನ್ನು ಕುಟುಂಬದವರೇ ನಿಕೃಷ್ಟವಾಗಿ ಕಂಡು ನಿರ್ಲಕ್ಷಿಸುವುದು ಮಾಮೂಲು. ಅವರಿಗೆ ಅವಶ್ಯಕ ಶಿಕ್ಷಣ ನೀಡಿ, ಸ್ವಾವಲಂಬಿಗಳಾಗಿಸುವ ಪ್ರಯತ್ನಗಳು ನಡೆಯುವುದೂ ಕಡಿಮೆ. ಅಂತಹ ಮಕ್ಕಳಿಗೆ ಆಶಾಕಿರಣವಾದ ಈ ಪೋಲಿಯೋ ಪುನರ್ವಸತಿ ಕೇಂದ್ರ ಕಳೆದ 25 ವರ್ಷಗಳಿಂದ ನೂರಾರು ಮಕ್ಕಳಿಗೆ ಆಸರೆಯಾಗಿದೆ.

6-7 ವರ್ಷದವರಿದ್ದಾಗಲೇ ಅಂಗವಿಕಲ ಮಕ್ಕಳು ಇಲ್ಲಿಗೆ ಸೇರಿದರೆಂದರೆ ಮುಂದೆ ಅವರಿಗೆ ಬೇಕಾಗುವ ವಿಶೇಷ ಶಸ್ತ್ರಚಿಕಿತ್ಸೆ, ಆನಂತರದ ಕೃತಕ ಲಿಂಬ್- ಕ್ಯಾಲಿಪರ್ಸರ್ ಗಳ ಅಳವಡಿಕೆ, govt-school-kidsದಿನನಿತ್ಯದ ಫಿಸಿಯೋಥೆರಪಿ ಚಿಕಿತ್ಸೆ, ಊರುಗೋಲುಗಳೊಂದಿಗೇ ಊಟ-ವಸತಿ-ವಿದ್ಯಾಭ್ಯಾಸ, ಮಕ್ಕಳ ಆಸಕ್ತಿ, ಪ್ರತಿಭೆ, ಸಾಮಥ್ರ್ಯಕ್ಕನುಗುಣವಾಗಿ ವೃತ್ತಿತರಬೇತಿಗಳನ್ನು ಉಚಿತವಾಗಿ ನೀಡಿ ಕೆಲಸದಲ್ಲೂ ತೊಡಗಿಸಿ ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗದಂತೆ ಸ್ವಾವಲಂಬಿಯಾಗಿಸುವ ಸ್ವಯಂ ಹೊಣೆಗಾರಿಕೆವಹಿಸಿಕೊಂಡಿದೆ ಈ ಕೇಂದ್ರ. ಕನಿಷ್ಠ 12-15 ವರ್ಷಗಳ ನಿರಂತರ ಪಾಲನೆ, ಪ್ರತಿಯೊಂದು ಮಗುವಿನ ಬಗೆಗೆ ವಿಶೇಷ ಗಮನಿಸುವಿಕೆ, ವ್ಯಕ್ತಿತ್ವ ನಿರ್ಮಾಣದ ಜವಾಬ್ದಾರಿ ಖಂಡಿತಾ ಸಾಮಾನ್ಯವಾದ ಕೆಲಸವಂತೂ ಅಲ್ಲ. ಸ್ವತಹ ಅಥೋರೇ ಸ್ಪಿಂಟ್ ಯೂನಿಟ್ ಹೊಂದಿ ಕ್ಯಾಲಿಪರ್ಸರ್ ಗಳನ್ನು ತಾನೇ ತಯಾರಿಸುತ್ತಿರುವುದರೊಂದಿಗೆ, ಮಕ್ಕಳು ಬೆಳೆದಂತೆಲ್ಲಾ ದೇಹದ ಆಕಾರಕ್ಕೆ ತಕ್ಕಂತೆ ಉಪಕರಣವನ್ನು ಮಾರ್ಪಾಟುಗೊಳಿಸಲು ಎಲ್ಲ ಅನುಕೂಲಗಳೂ ಇಲ್ಲಿವೆ.

ಶಿಸ್ತುಬದ್ಧ, ವ್ಯವಸ್ಥಿತ ಅನುಕೂಲತೆಗಳನ್ನು ಹೊಂದಿರುವ ಇಂತಹ ಕೇಂದ್ರ ಇನ್ನೊಂದೆರಡು ವರ್ಷಗಳಲ್ಲಿ ಮುಚ್ಚಿಹೋಗಲಿದೆ! ಏಕೆಂದರೆ ಪೋಲಿಯೋ ಕರ್ನಾಟಕದಿಂದ ನಿರ್ಮೂಲನೆಗೊಂಡಿದೆ. ಕಳೆದ 5-6 ವರ್ಷಗಳಿಂದ ಹೊಸದಾಗಿ ಮಕ್ಕಳು ಇಲ್ಲಿಗೆ ಸೇರ್ಪಡೆಗೊಂಡಿಲ್ಲ. ಇದು ಸಂತಸದ ಸಂಗತಿಯೂ ಹೌದು. ಈ ಕೇಂದ್ರವನ್ನು ಮತ್ತಿನ್ನೊಂದು ಅಸಹಾಯಕ ಮಕ್ಕಳ ಸೇವಾ ಘಟಕವಾಗಿ ಪರಿವರ್ತಿಸುವ ಬಗೆಗೆ ಯೋಜಿಸಲಾಗುತ್ತಿದೆ. ಈಗಿಲ್ಲಿ ಉಳಿದ ಕೆಲವೇ ಕೆಲವು ಮಕ್ಕಳ ಬದುಕು ನೇರ್ಪುಗೊಳಿಸುವ ಶ್ರದ್ಧೆಯಿಂದ, ಅಲ್ಲಿನ ಮೇಲ್ವಿಚಾರಕಿ, ಅವರ ಸ್ವಾವಲಂಬನೆಗಾಗಿ ಕಂಡಕಂಡವರ ಬಳಿ ಅಂಗಲಾಚುವಾಗ, ಗೌರವಧನದ ರೂಪದಲ್ಲಿ ದೊರಕುವ ಅತ್ಯಲ್ಪ ಹಣಕ್ಕಾಗಿ, ತಾಳ್ಮೆಯಿಂದ ಒಂದೊಂದು ಮಗುವಿನ ವ್ಯಕ್ತಿತ್ವ ರೂಪಿಸುವ ಈ ಮಹಿಳೆಗೆ ಆ ಸಂಬಂಧವಿಲ್ಲದ ಮಕ್ಕಳು ಸ್ವಾವಲಂಬಿಗಳಾದರೆ ಏನು ಸಿಕ್ಕುತ್ತದೆ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಉದ್ದೇಶಿತ ಗುರಿಯೊಂದರ ಸಾಧನೆಯ ಜೊತೆಗೆ ಇಷ್ಟು ವರ್ಷ ತಾವಿದ್ದ ಹೆಮ್ಮೆ, ಇಲ್ಲಿಗೆ ಬಂದ ಪ್ರತಿಯೊಂದು ಅಂಗವಿಕಲ ಮಗುವೂ ದೃಢ ವ್ಯಕ್ತಿತ್ವವಾಗಿ ಸಮಾಜಕ್ಕೆ ಹಿಂದಿರುಗಿದ ಬಗೆಗೆ ಅಪರಿಮಿತ ಸಂತಸ, ಅಲ್ಲಿನ ಕೆಲಸಗಾರರೆಲ್ಲರಿಗೆ! ಈ ಭಾವಗಳು ಖಂಡಿತಾ ಬೆಲೆ ಕಟ್ಟಲಾಗದಂತಹವು.

ಅಲ್ಲಿನ ಮಕ್ಕಳು, ಆಗು-ಹೋಗುಗಳೊಂದಿಗೆ ಹಲವು ವರ್ಷಗಳ ಒಡನಾಟವಿರುವುದರಿಂದ, ಅಂಗವೈಕಲ್ಯತೆಯ ಕೀಳರಿಮೆಯಿಂದ ಕುಗ್ಗುತ್ತಾ ಈ ಕೇಂದ್ರಕ್ಕೆ ಬಂದು ಸೇರುವ ಮಕ್ಕಳು,Polio ತಮ್ಮ ನೋವು ಮೀರಿ ಗಟ್ಟಿ ವ್ಯಕ್ತಿತ್ವಗಳಾಗಿ ಹೊರಬೀಳುವುದನ್ನು ಹತ್ತಿರದಿಂದ ಕಂಡ ಅನುಭವವಿದೆ. ಆ ಪ್ರಕ್ರಿಯೆ ಎಂಥಹ ಶ್ರಮ, ಶ್ರದ್ಧೆ, ಸಹನೆಯನ್ನು ಬೇಡುವಂತಹುದೆಂಬುದು ಅನುಭವಿಸಿದವರಿಗೇ, ಹತ್ತಿರದವರಿಗೇ ಗೊತ್ತಿರುವಂತದ್ದು. ಇಲ್ಲಿ ಬಂದು ಸ್ವಾವಲಂಬಿಗಳಾಗಿರುವ ಹೆಚ್ಚಿನ ಮಕ್ಕಳು ಮುಸ್ಲಿಂ, ಕ್ರೈಸ್ತ ಹಾಗೂ ಹಿಂದೂ, ಮತ್ತದರ ಎಲ್ಲಾ ಒಳ ಜಾತಿಗೆ ಸೇರಿದವರು. ಇಲ್ಲಿಂದ ಸಂಪೂರ್ಣ ಉಚಿತ ಸಹಾಯ, ಸಹಕಾರ ಪಡೆದು ತಮ್ಮ ನೆಲೆಗಳನ್ನು ಕಂಡು ಕೊಂಡಿರುವ ಎಲ್ಲ ಜಾತಿ, ಮತಗಳ ಯುವಕ-ಯುವತಿಯರು ತಮ್ಮ ಹೊಸ ಸಂಸಾರದೊಂದಿಗೆ ಈ ಕೇಂದ್ರಕ್ಕೆ ಭೇಟಿ ನೀಡಲು ಬರುವಾಗ ಮಕ್ಕಳಿಗಾಗಿ ಸಿಹಿಯೊಂದಿಗೇ ಪ್ರೀತಿಯನ್ನೂ ಹೊತ್ತು ತರುತ್ತಾರೆ. ತಾವು ಇಂದು ಮುಖ್ಯವಾಹಿನಿಯಲ್ಲಿ ತಲೆಎತ್ತಿ ಬದುಕಲು ಆಸರೆಯಾದ ಈ ಕೇಂದ್ರದ ಬಗೆಗೆ ಅಪಾರ ಗೌರವ, ಹೆಮ್ಮೆಯೂ ಜೊತೆಗಿರುತ್ತದೆ! ‘ನೀವು, ನಿಮ್ಮವರನ್ನೆಲ್ಲಾ ಬಿಟ್ಟು ಇಂತಹ ಕೇಂದ್ರವೊಂದರ ಆಶ್ರಯದಲ್ಲಿ ಇಷ್ಟು ವರ್ಷಗಳು ಇದ್ದುದಕ್ಕೆ ಬೇಸರವಿದೆಯೇ?’ ಎಂದು ಪ್ರಶ್ನಿಸಿದರೆ ಆ ಯುವಜನರು ಸಿಡಿದು ಬೀಳುತ್ತಾರೆ. ‘ನಮ್ಮ ಕುಟುಂಬ, ಜಾತಿ, ಸರ್ಕಾರ ಯಾರಿಗೂ ನಾವು ಬೇಡವಾಗಿದ್ದ ಕಾಲದಲ್ಲಿ ಈ ಕೇಂದ್ರ ನಮಗೆ ಆಶ್ರಯ, ವಿದ್ಯೆ, ಕೆಲಸ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದೆ. ಅಂಗವಿಕಲತೆಗೆ, ನೋವಿಗೆ ಯಾವ ಜಾತಿ, ಮತ? ಮಾನವೀಯತೆಯೇ ನಿಜವಾದ ಧರ್ಮ.’ ಎನ್ನುವಾಗ ಮತಾಂಧತೆ, ಕೋಮುವಾದಗಳಿಗೆ ಉತ್ತರ ಸಿಕ್ಕಿಬಿಡುತ್ತದೆ!

ಮತಾಂತರ, ಕೋಮುಗಲಭೆಗಳನ್ನು ಕಂಡಾಗ ನನ್ನಂತಹ ಸಾಮಾನ್ಯರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳೇಳುತ್ತವೆ. ಇಂದಿನ ಸಾಮಾನ್ಯ ಜನರಿಗೆ ನಿಜವಾಗಿ ಏನು ಬೇಕು? ಅವರಿಗೆ ಯಾವುದು ಅತ್ಯಂತ ಮುಖ್ಯವಾದುದು? ವಿರೂಪಗೊಳ್ಳುತ್ತಿರುವ ಇಂದಿನ ಜಾತಿ, ಧರ್ಮ, ಮತಗಳು ಅವರಿಗೆ ಏನನ್ನು ನೀಡುತ್ತಿವೆ? ಸಹಜ ಹಾಗೂ ಸರಳ ಮನುಷ್ಯ ಧರ್ಮವನ್ನೂ ಮೀರಿದ ಮತ-ಧರ್ಮಗಳು ಎಲ್ಲಿವೆ? ಕೊನೆಯದಾಗಿ, ಇವು ಜನರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಎಷ್ಟು ಅನಿವಾರ್ಯವಾಗಿವೆ? ಎಂಬ ಪ್ರಶ್ನೆ.

ತೀವ್ರ- ಬಡತನ, ಅಸಹಾಯಕತೆ, ಅಸಮಾನತೆ, ನೋವು, ಅವಮಾನಕ್ಕೊಳಗಾದ ಜೀವಗಳಿಗೆ ಅಂತಃಕರಣದ ಸಣ್ಣ ಸಹಾಯಹಸ್ತವೂ ದೊಡ್ಡದಾಗಿಯೇ ಕಾಣುತ್ತದೆ.polio_2 ಮತ್ತು ಅವುಗಳನ್ನು ಅನುಭವಿಸುತ್ತಿರುವ ಜೀವಗಳಿಗೆ ಮುಖ್ಯವೆನಿಸುವ ಅಂಶಗಳೇ ಬೇರೆ! ‘ಸ್ವಾಭಿಮಾನದ ಬದುಕಿ’ಗೆ ಬೇರೆಲ್ಲಕ್ಕಿಂತಾ ಮೊದಲಿನ ಸ್ಥಾನ! ಇದು ಅತ್ಯಂತ ಸಹಜವೆಂಬುದು ಮನಃಶಾಸ್ತ್ರದ ಕನಿಷ್ಠ ತಿಳುವಳಿಕೆ ಹೊಂದಿರುವ ಎಲ್ಲರಿಗೂ ಗೊತ್ತಿರುವಂತದೆ. ಆದರೆ ನಾವೇಕೆ ಪುಟ್ಟ- ಪುಟ್ಟ ಜೀವಕಾರುಣ್ಯದ ‘ಎಲ್ಲಾ’ ಮಾದರಿಗಳನ್ನೂ ಸಲ್ಲದ ಅನುಮಾನ, ಅಹಂಕಾರಗಳಿಂದ ನೋಡುತ್ತಿದ್ದೇವೆ? ಇದಕ್ಕೆ ಪ್ರತಿಯಾಗಿ, ನಾವು ಸದಾ ಹೇಳುತ್ತ ಬಂದಿರುವ ಸರ್ವ-ಶ್ರೇಷ್ಠವಾದ, ಮಾನ್ಯವಾದ, ಅರ್ಹವಾದ ಮಾದರಿಗಳನ್ನು ನಿರ್ಮಿಸಲು ನಮಗೇಕೆ ಸಾಧ್ಯವಾಗಿಲ್ಲ? ಅಥವಾ ಅವುಗಳೆಲ್ಲಾ ಏಕೆ ಚಿಂತನೆ, ಆದರ್ಶ, ಸಿದ್ಧಾಂತಗಳ ಹಂತದಲ್ಲೇ ನಿಂತುಬಿಡುತ್ತವೆ?

ಜಾತಿ, ಮತ, ಧರ್ಮಗಳು ನಮ್ಮ ಅತ್ಯಂತ ಖಾಸಗಿ, ಹಾಗೂ ಸಾಮಾಜಿಕವಾಗಿ ಅಮುಖ್ಯ ವಿಷಯಗಳಾಗಬೇಕಿತ್ತು. ಆದರೆ ಅವೇ ಇಂದು ನಮ್ಮನ್ನು ಆಳುವ, ಒಡೆಯುವ, ಛಿದ್ರಗೊಳಿಸುವ ಹಂತ ತಲುಪಿ ಬಿಟ್ಟಿವೆ. ಅವುಗಳ ರಾಜಕಾರಣವೇ ಎಲ್ಲಕ್ಕಿಂತ ಮುಖ್ಯವಾಗುತ್ತಿದೆ. ಬಡತನ, ಅಸಮಾನತೆ, ಅಸಹಾಯಕತೆ, ಅಂಗವೈಕಲ್ಯ, ಶೋಷಣೆಗಳಿಂದ ನೋವನುಭವಿಸುವ ಜೀವಿಗಳ ಸಂಕಟ, ಅದಕ್ಕೆ ಬೆಂಬಲವಾಗಿ ನಿಲ್ಲುವ ಅಂತಃಕರಣದ ಮಾದರಿಗಳು ನಮಗಿಂದು ಮುಖ್ಯವಾಗುತ್ತಿಲ್ಲ.

ಹೊರಗೆ ಜಾತಿ, ಮತಗಳ ಹೆಸರಿನಲ್ಲಿ ನಿತ್ಯ ಗಲಭೆಗಳು ನಡೆಯುತ್ತಿದ್ದರೂ, ಅವುಗಳನ್ನು ಮೀರಿ ಅಸಹಾಯಕ ಜೀವದ ನೋವಿಗೆ ಪ್ರೀತಿಯಿಂದ ಸ್ಪಂದಿಸುತ್ತಾ, ಆ ಜೀವ ಒಂದಿಷ್ಟಾದರೂ ನೆಮ್ಮದಿಯಿಂದ ಬದುಕುವ ನೆಲೆಗಳನ್ನು ಸದ್ದಿಲ್ಲದೇ ನಿತ್ಯ ನಿರ್ಮಾಣ ಮಾಡುತ್ತಿದ್ದರೂ, ಸಾಮಾನ್ಯರಂತೆ ಬದುಕುವ, ಬದುಕಲು ಬಿಡುವ, ಬದುಕಲು ಪ್ರೇರೇಪಿಸುವ ಮಾದರಿಗಳನ್ನು ನಾವೇಕೆ ಗೇಲಿಮಾಡಿ ನಗುತ್ತಿದ್ದೇವೆ? ಅಥವ ನಿರ್ಲಕ್ಷಿಸುತ್ತಿದ್ದೇವೆ? ಇಂತಹ ನೂರಾರು ಮಾನವೀಯ ಮಾದರಿಗಳು ಇಂದಿಗೂ ನಮ್ಮ ಮುಂದಿರುವುದು ಹೆಮ್ಮೆಯ ಸಂಗತಿಯೇ. ಆದರೆ ಅವುಗಳಿಗಿಂತ ನಮಗೆ ‘ರೋಚಕತೆ’ ನೀಡುವ ಋಣಾತ್ಮಕ ಸುದ್ದಿಗಳೇ ದೊಡ್ಡವೆನಿಸಿಬಿಡುತ್ತವಲ್ಲಾ? ನಮ್ಮ ಅಭಿರುಚಿಯಲ್ಲಿಯೇ ಈ ದೋಷವಿದೆಯೇ? ಅಥವಾ ನಮ್ಮ ಮಾಧ್ಯಮಗಳು ನಮ್ಮ ಅಭಿರುಚಿಯ ದಿಕ್ಕನ್ನೇ ರೋಚಕತೆಯ ಹೆಸರಿನಲ್ಲಿ ಕೆಡಿಸಿಬಿಟ್ಟಿವೆಯೇ?

ಇಲ್ಲಿ ಪ್ರತಿಯೊಂದು ಜೀವಿಯ ನೋವೂ ಮುಖ್ಯವಾದುದೇ. ಅದಕ್ಕೆ ಬೇಕಿರುವುದು ಒಣ ಅನುಕಂಪ, ತರ್ಕವಲ್ಲ. ಆ ಜೀವದೊಂದಿಗೆ ಒಂದಾಗಿ ಅದನ್ನೆದುರಿಸುವ ಛಲವನ್ನು ಮೂಡಿಸುವ ವಾಸ್ತವದ ಸಾಮಾನ್ಯ ನಡೆ, ಶ್ರಮ, ಕೆಲಸಗಳು ಹಾಗೂ ಆ ದಿಕ್ಕಿನೆಡೆಗಿನ ಸಣ್ಣ ಪ್ರಯತ್ನಗಳೂ ನಮಗಿಂದು ಮುಖ್ಯವಾಗಬೇಕಿದೆ. ಅವುಗಳನ್ನು ಮತ್ತೆ ಮತ್ತೆ ‘ಎತ್ತಿ’ಹಿಡಿಯಬೇಕಿದೆ. ಈ ಹಿನ್ನೆಲೆಯಲ್ಲಿಯೇ ನಮಗಿಂದು, ಸದ್ದಿಲ್ಲದೇ ಸಾಮಾನ್ಯ ಜನರಲ್ಲಿ ಬೆರೆತು ಈ ನೆಲಕ್ಕೆ ಆಪ್ತವಾಗುವಂತಾ ತಮ್ಮ ಸಾಮಾನ್ಯ ನಡೆಗಳಿಂದ ಜಾತಿ, ಮತಗಳನ್ನು ಮೀರಿ ಸಾಮಾಜಿಕ ಹಿತಾಸಕ್ತಿಯಿಂದ, ಜೀವಗಳ ಒಳಿತಿಗೆ ಕೈ ನೀಡುವಂತಾ ಕೆಲಸಗಳಲ್ಲಿ ತೊಡಗಿದ ಮದರ್ ಥೆರೆಸಾ, ಬಾಬಾ ಆಮ್ಟೆ, ಅಣ್ಣಾ ಹಜಾರೆ, ಸಾಲುಮರದ ತಿಮ್ಮಕ್ಕ, ಸುಂದರ್ಲಾಲ್ ಬಹುಗುಣ, ರಾಜೇಂದ್ರ ಸಿಂಗ್, ಪಿ. ಸಾಯಿನಾಥ್……. ರಂತಹ ಧೀಮಂತ ವ್ಯಕ್ತಿಗಳ ಬದುಕು ವಿಶಿಷ್ಟವೂ, ಮಾದರಿಯೂ ಎನಿಸುತ್ತದೆ.

ಬದುಕಿನ ಅಂತಿಮಗುರಿ, ಮಾಹಿತಿ ಎಂಬ ಜ್ಞಾನವೇ ಎಂಬ ಭ್ರಮೆಗೆ ಬಿದ್ದು, ಅಂತಃಕರಣದ ಅರಳುವಿಕೆಯನ್ನು ನಾವಿಂದು ನಿರ್ಲಕ್ಷಿಸುತ್ತಿದ್ದೇವೆ. ಸಾಮಾನ್ಯ ಮನುಷ್ಯನ ಶ್ರಮವನ್ನೂ, ಹೃದಯ ವೈಶಾಲ್ಯತೆಯನ್ನೂ, ಬೆವರಿನ ಫಲವನ್ನೂ ನಾವು ನಿರಂತರ ಅವಮಾನಿಸುತ್ತಲೇ ಬಂದಿದ್ದೇವೆ. ಅದರಿಂದಾಗಿಯೇ ವ್ಯಕ್ತಿ-ವ್ಯಕ್ತಿಗಳ ನಡುವೆ ಇಂದು ಅಗಾಧ ಕಂದಕ ಏರ್ಪಟ್ಟಿದೆ. ಇಂದು ಮಾನವೀಯತೆ, ನಿಷ್ಕಾರಣ ಕಾಳಜಿ, ಶ್ರದ್ಧೆ, ಪ್ರೀತಿಯ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಾಮಾನ್ಯ ಜೀವಗಳನ್ನೂ, ಅಂತಹ ಸಣ್ಣ-ಪುಟ್ಟ ಕ್ರಿಯೆಗಳನ್ನು ಗೌರವದಿಂದ ಕಂಡಾಗ ಮಾತ್ರ ಕಂದಕಗಳು ಮುಚ್ಚಿಕೊಳ್ಳಬಹುದಷ್ಟೇ. ಅದು ಎಲ್ಲಕ್ಕಿಂತ ಮುಖ್ಯವಾದುದು. ಹಾಗೂ ಅದೇ ಎಲ್ಲಾ ಜಾತಿ, ಮತಗಳನ್ನೂ ಮೀರಿದ ಜೀವಕಾರುಣ್ಯಕ್ಕೆ ನಾವು ನೀಡುವ ಬೆಲೆಯೂ ಹೌದು.

ನಮ್ಮನ್ನು ಕಾಡದಿರುವ ಅಸಹಾಯಕ ಮಹಿಳೆಯರ ಸಮಸ್ಯೆ


– ರೂಪ ಹಾಸನ


ಇತ್ತೀಚೆಗೆ ಮಾಧ್ಯಮಗಳಲ್ಲಿ ಚರ್ಚಿತವಾಗುತ್ತಿರುವ ಮಹಿಳೆಗೆ ಸಂಬಂಧಿಸಿದ ಮುಖ್ಯವಾದ ಎರಡು ವಿಷಯಗಳೆಂದರೆ, ವಿವಾಹ ಪೂರ್ವ ಲೈಂಗಿಕ ಸಂಬಂಧ ಮತ್ತು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವಿಕೆ ಕುರಿತಾದದ್ದು. ಇವು ಸರಿಯೋ ತಪ್ಪೋ ಎಂದು ಚರ್ಚಿಸುವುದು ಈ ಲೇಖನದ ಉದ್ದೇಶವಲ್ಲ, ಮತ್ತು ವಾಸ್ತವ ಸ್ಥಿತಿಯ ಬೇರೆ ಬೇರೆ ಮುಖಗಳನ್ನು ಬಿಚ್ಚಿಡುವುದಷ್ಟೇ ಈ ಲೇಖನದ ಪ್ರಮುಖ ಉದ್ದೇಶ ಎಂಬುದನ್ನು hallaki_woman_uttarakannadaಮೊದಲಿಗೇ ಸ್ಪಷ್ಟಪಡಿಸುತ್ತೇನೆ. ಈ ಎರಡೂ ವಿಷಯಗಳೂ ನೇರವಾಗಿ ಮತ್ತು ಮುಖ್ಯವಾಗಿ ಹೆಣ್ಣಿಗೆ ಸಂಬಂಧಿಸಿದವಾದರೂ, ಎಂದಿನಂತೆ ಹೆಣ್ಣು ಮಕ್ಕಳಿಗಿಂತಾ ಪುರುಷರೇ ಹೆಚ್ಚು ಉತ್ಸಾಹದಿಂದ ಪೂರ್ವ-ಪರ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ. ಒಂದು ಮನಸ್ಸು ಹೆಣ್ಣು ಹೀಗೆಯೇ ಇರಬೇಕು ಎಂದು ಯೋಚಿಸುವ ಸಂಪ್ರದಾಯಬದ್ಧ ಪೂರ್ವಾಗ್ರಹಪೀಡಿತ ಮನಸ್ಥಿತಿಯದಾದರೆ, ಇನ್ನೊಂದು ಮುಕ್ತಕಾಮದ ಅನುಕೂಲಗಳ ಬಗ್ಗೆ ಯೋಚಿಸುವ ಲಂಪಟ ಮನಸ್ಸು. ಇವುಗಳನ್ನು ಮೀರಿ ಹೆಣ್ಣುಮಕ್ಕಳ ಮನಸ್ಸನ್ನು, ಅವರಿರುವಂಥಾ ಸ್ಥಿತಿಯನ್ನು ವಿವೇಚಿಸಿ ನಿಜವಾಗಿ ಹೆಣ್ಣಿಗೆ ಏನು ಬೇಕು? ಎಂದು ಯೋಚಿಸುವ ಮನಸ್ಸುಗಳು ಕಡಿಮೆ.

ನಮ್ಮ ಬಹಳಷ್ಟು ವಿಚಾರಗಳು, ಕಾನೂನುಗಳೂ ಹೆಚ್ಚಾಗಿ ನಗರಕೇಂದ್ರಿತ-ಉಚ್ಚವರ್ಗ-ಸುಶಿಕ್ಷಿತ-ಬೌದ್ಧಿಕ ಸಮಾಜವನ್ನು ಉದ್ದೇಶಿಸಿ ರೂಪುಗೊಳ್ಳುವಂತವು. ಹಾಗೇ ನಮ್ಮ ಮಾಧ್ಯಮಗಳೂ ಹೆಚ್ಚಾಗಿ ಇವುಗಳ ಪರ. ಗ್ರಾಮೀಣ ಪ್ರದೇಶದ-ಬಡ-ಅಶಿಕ್ಷಿತ, ಅದರಲ್ಲೂ ಮುಖ್ಯವಾಗಿ ಮುಗ್ಧ, ಅಸಹಾಯಕ ಹೆಣ್ಣುಮಕ್ಕಳ ಬದುಕಿನ ಮೇಲೆ ಇವು ಯಾವ ರೀತಿಯ ಪರಿಣಾಮವನ್ನು ಬೀರಬಲ್ಲುವೆಂಬುದನ್ನು ಚರ್ಚಿಸುವ ಸಂದರ್ಭಗಳು ಬಹಳ ಕಡಿಮೆ. ಇಲ್ಲಿ ಅಳುವ ಮಗುವಿಗಷ್ಟೇ ಹಾಲು. ದನಿಯಿದ್ದವರಿಗಷ್ಟೇ ನ್ಯಾಯ. ಈ ಎರಡು ರೀತಿಯ ಬದುಕನ್ನು ಬದುಕುತ್ತಿರುವ ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯದಲ್ಲಿ woman-unchainedಅಗಾಧ ವ್ಯತ್ಯಾಸಗಳಿರುವುದನ್ನು ನಾವು ಗುರುತಿಸಬೇಕಿದೆ.

ಇತ್ತೀಚೆಗೆ ನಮ್ಮ ಹೆಣ್ಣುಮಕ್ಕಳು ವಿಭಿನ್ನ ಕಾರಣಗಳಿಂದಾಗಿ 10-11 ನೆಯ ವಯಸ್ಸಿಗೇ ಋತುಮತಿಯರಾಗುತ್ತಿದ್ದಾರೆ. ಅವರ ದೇಹ ಪ್ರಬುದ್ಧವಾಗುವಷ್ಟು ವೇಗದಲ್ಲಿ ಮನಸ್ಸು ಹಾಗೂ ಬುದ್ಧಿ ಪ್ರಬುದ್ಧವಾಗಲಾರದೆಂಬುದು ನಿರ್ವಿವಾದ. ವಯೋಸಹಜ ಆಕರ್ಷಣೆ, ಅಸಹಾಯಕತೆ, ಮುಗ್ಧ ಪ್ರೇಮದ ಹೆಸರಿನಲ್ಲಿ ಲೈಂಗಿಕ ಶೋಷಣೆಗೆ ಗುರಿಯಾಗಿ ಕುಟುಂಬದ ಆಶ್ರಯವಿಲ್ಲದೇ, ಅಡ್ಡದಾರಿ ಹಿಡಿದಿದ್ದ ಸಾವಿರಾರು ಹೆಣ್ಣುಮಕ್ಕಳು ಇಂದು ರಾಜ್ಯಾದ್ಯಂತ ರಿಮ್ಯಾಂಡ್ ಹೊಮ್‍ಗಳಲ್ಲಿ, ಬಾಲಮಂದಿರಗಳಲ್ಲಿ, ಸರ್ಟಿಫೈಡ್‍ಶಾಲೆಗಳಲ್ಲಿದ್ದಾರೆ. ಅಲ್ಲಿನ ಬಹಳಷ್ಟು ಹೆಣ್ಣುಮಕ್ಕಳ ಕಥೆ, ಅರಿವಿಲ್ಲದ ವಿವಾಹ ಪೂರ್ವ ಲೈಂಗಿಕ ಸಂಬಂಧದಿಂದ ದುರಂತದಲ್ಲಿ ಕೊನೆಗೊಂಡಿರುವಂತದ್ದು. ಬಹಳಷ್ಟು ಸಂದರ್ಭಗಳಲ್ಲಿ ಹೀಗೆ ಹೆಣ್ಣು ಮಕ್ಕಳನ್ನು ನಂಬಿಸಿ ಮೋಸ ಮಾಡುವವರು ಹತ್ತಿರದ ಸಂಬಂಧಿಗಳು ಹಾಗೂ ಆತ್ಮೀಯರೇ ಆಗಿರುತ್ತಾರೆ. ಮರ್ಯಾದೆಗೆ ಅಂಜಿ ಇಂತಹ ವಿಷಯಗಳು ಬಹಿರಂಗಗೊಳ್ಳದೇ, ಅಪರಾಧಿ ರಾಜಾರೋಷವಾಗಿ ತಿರುಗಾಡುತ್ತಿರುತ್ತಾನೆ. ಆದರೆ ಹೆಣ್ಣುಮಕ್ಕಳು ಮಾತ್ರ ಜೀವನ ಪರ್ಯಂತ ಅದರ ದುಷ್ಪರಿಣಾಮವೆದುರಿಸಬೇಕಾಗುತ್ತದೆ. ತಮ್ಮ ಬದುಕಿನ ಅಮೂಲ್ಯ ಗಳಿಗೆಗಳನ್ನು ತಮ್ಮವರೆನ್ನುವವರಿಲ್ಲದೇ, ಸುರಕ್ಷಿತ ಭವಿಷ್ಯವಿಲ್ಲದೇ ಕಳೆಯಬೇಕಾಗುತ್ತದೆ.

ಹಾಸನದಂತಾ ಚಿಕ್ಕ ಜಿಲ್ಲಾ ಕೇಂದ್ರವೊಂದರಲ್ಲೇ 1500ಕ್ಕೂ ಹೆಚ್ಚು ಲೈಂಗಿಕ ಕಾರ್ಯಕರ್ತೆಯರು ವಿವಿಧ ಸೌಲಭ್ಯಗಳಿಗಾಗಿ, woman-abstractಮುಖ್ಯವಾಗಿ ಏಡ್ಸ್ ಮತ್ತಿತರ ಲೈಂಗಿಕ ರೋಗಗಳು ಹರಡದಂತೆ ಸುರಕ್ಷಿತ ಲೈಂಗಿಕತೆಯ ಅರಿವು ಮೂಡಿಸಿಕೊಳ್ಳಲು ತಮ್ಮದೇ ಒಂದು ಸಂಘಟನೆಯನ್ನೂ ಮಾಡಿಕೊಂಡಿದ್ದಾರೆ. ಇವರೆಲ್ಲ ಬಡ ಮಹಿಳೆಯರು ಎಂದು ಬೇರೆ ಹೇಳಬೇಕಿಲ್ಲ. ಮತ್ತು ಇವರ್ಯಾರೂ ಸ್ವಇಚ್ಛೆಯಿಂದ ಈ ವೃತ್ತಿಯನ್ನು ಆಯ್ದುಕೊಂಡವರಲ್ಲ. ಅನಿವಾರ್ಯತೆಗೆ ಸಿಕ್ಕು, ಅಸಹಾಯಕತೆಯಿಂದ ಬಲಿಪಶುಗಳಾದವರು. ಇಲ್ಲಿ ನಾನು ಮುಖ್ಯವಾಗಿ ಹೇಳಹೊರಟ ಅಂಶವೆಂದರೆ ವೇಶ್ಯಾವಾಟಿಕೆಯನ್ನು ಕಾನೂನು ಬದ್ಧಗೊಳಿಸಿಲ್ಲವಾದರೂ ಅದನ್ನು ಸಾಮಾಜಿಕವಾಗಿ ಒಪ್ಪಿಕೊಂಡಿದ್ದೇವೆ. ಹೀಗೆಂದೇ ಅವರಿಗೆ ಸುರಕ್ಷಿತ ಲೈಂಗಿಕತೆಯ ಪಾಠವನ್ನು ಆರೋಗ್ಯ ಇಲಾಖೆಯೂ ಸೇರಿದಂತೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ನೀಡುತ್ತಿವೆ. ವೇಶ್ಯಾವಾಟಿಕೆಯನ್ನು ಯಾವುದೇ ದೇಶ ಕಾನುನುಬದ್ಧಗೊಳಿಸಲೀ ಬಿಡಲೀ ವಿಶ್ವದ ಮೂರನೇ ಹೆಚ್ಚು ಆದಾಯಗಳಿಕೆಯ ಉದ್ಯಮವಾಗಿ ಸೆಕ್ಸೋದ್ಯಮ ಸ್ಥಾನ ಪಡೆದಿರುವುದು, ನಾವೆಲ್ಲರೂ ಒಪ್ಪಲೇ ಬೇಕಾದ ಸತ್ಯ.

ಕಳೆದ 7-8ವರ್ಷದಲ್ಲಿ 150ಕ್ಕೂ ಹೆಚ್ಚು ಬೀದಿಗೆ ಬಿಸಾಡಲ್ಪಟ್ಟ ನವಜಾತ ಶಿಶುಗಳನ್ನು ಹಾಸನದಲ್ಲಿ ಸಂರಕ್ಷಿಸಿ ದತ್ತು ನೀಡಲಾಗಿದೆ ಹಾಗೂ ಇನ್ನೂ ಹಲವು ಬಿಸಾಡಲ್ಪಟ್ಟ ಶಿಶುಗಳು ನಾಯಿ-ಹಂದಿಗಳ ಪಾಲಾಗಿ ಜೀವ ಕಳೆದುಕೊಂಡಿವೆ. ಈ ಮಕ್ಕಳ ತಾಯಂದಿರಲ್ಲಿ ಹೆಚ್ಚಿನವರು ವಿವಾಹ ಪೂರ್ವ ಲೈಂಗಿಕ ಸಂಬಂಧಗಳಿಂದ ಮೋಸ ಹೋದವರು, ಅತ್ಯಾಚಾರಕ್ಕೊಳಗಾದವರೇ ಆಗಿದ್ದಾರೆ ಎಂಬುದು ಗಮನಿಸ ಬೇಕಾದ ವಿಷಯ. ಪ್ರತಿ ಜಿಲ್ಲೆಯಿಂದ ವರ್ಷಕ್ಕೆ 200-300ರಷ್ಟು ಹದಿಹರೆಯದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದಾಗಿ ಕಾಣೆಯಾಗುತ್ತಿದ್ದಾರೆ. ಅವರ ಪತ್ತೆಯೇ ಆಗುತ್ತಿಲ್ಲ. ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಇಲ್ಲಿ ಉಲ್ಲೇಖಿತರಾದ ಹೆಚ್ಚಿನವರು ಲೈಂಗಿಕ ಸಂಬಂಧಗಳಿಂದ ಮೋಸ ಹೋದ ಅಶಿಕ್ಷಿತ, ಅಲ್ಪ ವಿದ್ಯಾಭ್ಯಾಸ ಪಡೆದ, ಬಡ ಹೆಣ್ಣು ಮಕ್ಕಳೆಂಬುದನ್ನು ವಿವಿಧ ಇಲಾಖೆಯ ದಾಖಲೆಗಳು ಸ್ಪಷ್ಟೀಕರಿಸುತ್ತವೆ.

ಇದು ಒಂದು ಜಿಲ್ಲೆಯ ಉದಾಹರಣೆಯಷ್ಟೇ. ಸೃಷ್ಟಿ ಸಹಜವಾದ ಲೈಂಗಿಕತೆಯೇ ಹೆಣ್ಣಿಗೆ ಶಾಪವಾಗುವ ಅಸಂಖ್ಯ ಕಥೆಗಳು ಜಗತ್ತಿನಾದ್ಯಂತ ಇವೆ. woman-insightಅರಿವಿಲ್ಲದೇ ಇದರ ಸುಳಿಗೆ ಸಿಲುಕುವ ಇಂಥಹಾ ಹೆಣ್ಣುಮಕ್ಕಳಿಗೆ ನ್ಯಾಯ ನೀಡುವವರ್ಯಾರು? ನಿಜವಾದ ಅಪರಾಧಿಗೆ ಶಿಕ್ಷೆ ನೀಡುವವರ್ಯಾರು? ನಮ್ಮ ಕಾನೂನಿಗೆ ಇವನ್ನೆಲ್ಲಾ ನೋಡುವ ಕಣ್ಣು-ಮನಸ್ಸು ಇದೆಯೇ? ಅತ್ಯಾಚಾರಕ್ಕೊಳಗಾಗುವ ಹೆಣ್ಣುಮಕ್ಕಳದು ಇನ್ನೂ ದೊಡ್ಡ ದುರಂತದ ಕಥೆಯಾದ್ದರಿಂದ ಅದನ್ನು ಪ್ರತ್ಯೇಕವಾಗಿಯೇ ಚರ್ಚಿಸುವ ಅವಶ್ಯಕತೆಯಿದೆ.

4-5 ವರ್ಷಗಳ ಹಿಂದಿನ ಒಂದು ಉದಾಹರಣೆಯನ್ನು ನೋಡುವುದಾದರೆ, ಹೆಣ್ಣುಮಕ್ಕಳನ್ನು ಮೋಸಗೊಳಿಸಿದ ಪ್ರಕರಣಗಳ ಅಪರಾಧಿ ಮೋಹನಕುಮಾರನೆಂಬ ವಿಕೃತಕಾಮಿಯ ಸಕ್ಕರೆ ಮಾತಿಗೆ ಮರುಳಾಗಿ ವಿವಾಹ ಪೂರ್ವ ಲೈಂಗಿಕತೆಗೆ ಒಪ್ಪಿ ಬದುಕು ಕಳೆದುಕೊಂಡ ಇಪ್ಪತ್ತಕ್ಕೂ ಹೆಚ್ಚು ಹೆಣ್ಣು ಮಕ್ಕಳು ಬಡ ಕುಟುಂಬಗಳ, ಅಲ್ಪ ವಿದ್ಯೆ ಪಡೆದ, ಉತ್ತಮ ಬದುಕು ಕಟ್ಟಿಕೊಳ್ಳುವ ಆಕಾಂಕ್ಷಿಗಳಾಗಿದ್ದರೆಂಬುದನ್ನು ಗಮನಿಸಬಹುದು.

ಶಾಸ್ತ್ರೋಕ್ತ ಹಾಗೂ ಪ್ರೇಮ ವಿವಾಹಗಳೆರಡರಲ್ಲೂ ಇಂದು ಬದ್ಧತೆ, ಪ್ರಾಮಾಣಿಕತೆ ಹಾಗೂ ಹೊಣೆಗಾರಿಕೆ ಕಡಿಮೆಯಾಗುತ್ತಿರುವುದನ್ನು, ವಿಚ್ಛೇದನಗಳು, ವಿವಾಹೇತರ ಸಂಬಂಧಗಳು ಹೆಚ್ಚುತ್ತಿರುವುದನ್ನೂ ನಾವಿಂದು ಕಾಣುತ್ತಿದ್ದೇವೆ. ಹಾಗಿರುವಾಗ ವಿವಾಹ ಪೂರ್ವ ಲೈಂಗಿಕ ಸಂಬಂಧ ಅಥವಾ ಲಿವಿಂಗ್ ಟುಗೆದರ್‍ಗಳಲ್ಲಿ ಇವುಗಳನ್ನು ನಿರೀಕ್ಷಿಸುವುದು ಇನ್ನೂ ಕಷ್ಟ. ಯಾವುದೇ ಅನಿಶ್ಚಿತ-ಅನಪೇಕ್ಷಿತ ಸಂಬಂಧದಿಂದ ಹುಟ್ಟುವ ಮಕ್ಕಳ ಮನಸ್ಥಿತಿ childmarriageಅದೆಷ್ಟು ಅಭದ್ರತೆಯಿಂದ ಕೂಡಿರಬಹುದೆಂಬ ಊಹೆ ಮಾಡಿದರೂ ಆ ಮಕ್ಕಳ ಸ್ಥಿತಿಯ ಕುರಿತು ವ್ಯಥೆಯಾಗುತ್ತದೆ. ಪ್ರಬುದ್ಧ ಗಂಡು-ಹೆಣ್ಣಿನ ನಡುವಿನ ಸಂಬಂಧ ಪರಸ್ಪರ ಬದ್ಧತೆ, ಜವಾಬ್ದಾರಿ, ನಂಬಿಕೆಗಳಿಂದ ಕೂಡಿದ್ದಾಗ ಅದು ಪ್ರಶ್ನಾತೀತವಾದದ್ದು. ಯಾವುದೇ ವಿಷಯಕ್ಕೆ ಕಾನೂನಿನ ಮಾನ್ಯತೆ ದೊರಕಿದರೂ ಅದಕ್ಕೆ ಸಾಮಾಜಿಕ ಒಪ್ಪಿಗೆ ಸಿಗುವವರೆಗೂ ಜನಮಾನ್ಯತೆ ಹಾಗೂ ಗೌರವಗಳಿಲ್ಲ ಎಂಬುದು ನಾವು ಕಾಣುತ್ತಾ ಬಂದಿರುವ ಸತ್ಯ.

ವಿವಾಹ ಪೂರ್ವ ಲೈಂಗಿಕತೆಯಲ್ಲಿ ಪಾಲ್ಗೊಳ್ಳುವಿಕೆ ಅಥವಾ ಲೈಂಗಿಕ ಕಾರ್ಯಕರ್ತೆಯಾಗುವ ಇಚ್ಛೆ ಹೆಣ್ಣಿಗೆ ಸ್ವಯಂ ಆಯ್ಕೆಯ ವಿಷಯವಾಗುವಷ್ಟು ಅವಳು ದೈಹಿಕ-ಮಾನಸಿಕ-ಬೌದ್ಧಿಕವಾಗಿ ಪ್ರಬುದ್ಧಳಾಗಿದ್ದರೆ ಅದು ಅವಳ ಆಯ್ಕೆಗೆ ಬಿಟ್ಟ ವಿಷಯ. ಆದರೆ ಬಹಳಷ್ಟು ಬಾರಿ ವಯೋಸಹಜ ಆಕರ್ಷಣೆ, ಒತ್ತಡ, ಅಸಹಾಯಕತೆ, ಮಹತ್ವಾಕಾಂಕ್ಷೆ , ಮುಗ್ಧತೆಯ ಹೆಸರಿನಲ್ಲಿ ಒಮ್ಮೆ ಲೈಂಗಿಕ ಸಂಬಂಧದ ಸುಳಿಯಲ್ಲಿ ಸಿಲುಕುವ ಹೆಣ್ಣುಮಕ್ಕಳು ಜೀವನ ಪರ್ಯಂತ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾದಂತಾ ಪರಿಸ್ಥಿತಿಗೆ ಸಿಕ್ಕಿಬೀಳುವುದು ದುರಂತ.

ಆದ್ದರಿಂದ ಮೊದಲು ಮಾನಸಿಕ- ಬೌದ್ಧಿಕ ಪ್ರಬುದ್ಧತೆಯನ್ನು ಪಡೆಯುವಂತಾ ಶಿಕ್ಷಣ-ಅರಿವು, ಜೊತೆಗೆ ಆರ್ಥಿಕ ಸಬಲತೆಯನ್ನು ನಮ್ಮ ಹೆಣ್ಣುಮಕ್ಕಳಿಗೆ ನೀಡಿ, ಅವರ ಬದುಕಿನ ಪ್ರತಿಯೊಂದು ಘಟ್ಟದ ಆಯ್ಕೆಯನ್ನೂ ಸ್ವಯಂ ಇಚ್ಛೆಯಿಂದ, ಯಾವುದೇ ಬಾಹ್ಯ ಒತ್ತಡವೂ ಇಲ್ಲದಂತೆ ಅವರೇ ಮಾಡಿಕೊಳ್ಳುವಂತಾ ಸ್ವಾತಂತ್ರ್ಯವನ್ನು ಅವರು ಪಡೆಯಬೇಕಿದೆ. ಅಲ್ಲಿಯವರೆಗೆ ಯಾವುದೇ ಕಾರಣದಿಂದ ಹೆಣ್ಣು ವಿವೇಕವಿಲ್ಲದ ಮುಕ್ತ ಮನೋಭಾವದವಳೂ, ಸ್ವೇಚ್ಛಾಚಾರಿಯೂ, ಕಾಮುಕರ ಸೆಳೆತಕ್ಕೆ ಸಿಕ್ಕುವವಳೂ ಆದಷ್ಟೂ ಅದರಿಂದ ಹೆಚ್ಚಿನ ಲಾಭ ಲಂಪಟ, ಬೇಜಾವಬ್ಧಾರಿಯುತ ಪುರುಷರಿಗೆ. ಜೊತೆಗೆ ವ್ಯಕ್ತಿಗೆ ಸಿಗಬೇಕಿರುವ ಘನತೆ, ಗೌರವಗಳೊಂದನ್ನೂ ಪಡೆಯದೇ ಬರಿಯ ಭೋಗದ ವಸ್ತು ಮಾತ್ರವಾಗಿ ಇನ್ನಷ್ಟು ಹೆಚ್ಚು ಸಂಕಷ್ಟಕ್ಕೆ, ನೋವಿಗೆ ಗುರಿಯಾಗುವವಳು ಮಹಿಳೆಯೇ ಆಗುತ್ತಾಳೆ.

ಹೆಣ್ಣಿನ ಘನತೆಯ-ನೆಮ್ಮದಿಯ ಬದುಕಿನ ಕುರಿತ ಕಾಳಜಿ ಇರುವ ಪ್ರಜ್ಞಾವಂತರೆಲ್ಲರೂ ಈ ಮುಖಗಳನ್ನು ಕುರಿತೂ ಅಗತ್ಯವಾಗಿ ಚರ್ಚಿಸಬೇಕಿದೆ.

ಮಕ್ಕಳನ್ನು ದುಡಿಸುವುದು ದೇಶಕ್ಕೆ ಹೆಮ್ಮೆಯೋ? ನಾಚಿಕೆಗೇಡೋ?


– ರೂಪ ಹಾಸನ


ಈ ದೇಶದ ಮಕ್ಕಳು ಅತ್ಯಂತ ದುರದೃಷ್ಟವಂತರೆಂದು ಅನಿಸತೊಡಗಿದೆ. ಮಕ್ಕಳು ಅಸಹಾಯಕರು, ಮುಗ್ಧರು ಆಗಿರುವುದರಿಂದ, ಅವರು ತಮ್ಮ ಭವಿಷ್ಯವನ್ನು ತಾವೇ ಸ್ವತಃ ರೂಪಿಸಿಕೊಳ್ಳಲು ಸಾಧ್ಯವಿಲ್ಲದ್ದರಿಂದ ಸರ್ಕಾರ, ಸಮಾಜಗಳು ಮಕ್ಕಳ ಒಳಿತು-ಕೆಡುಕುಗಳ ಕುರಿತು ಅತ್ಯಂತ ಎಚ್ಚರಿಕೆಯಿಂದ ಕಾನೂನು-ನೀತಿಗಳನ್ನು ರೂಪಿಸಬೇಕು. ಆದರೆ…. ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ಬಾಲ ಕಾರ್ಮಿಕ [ನಿಷೇಧ ಹಾಗೂ ನಿಯಂತ್ರಣ] ತಿದ್ದುಪಡಿ ಮಸೂದೆ ೨೦೧೨ಕ್ಕೆ ಮತ್ತಷ್ಟು ತಿದ್ದುಪಡಿ ತರುವ ಮೂಲಕ ಮಕ್ಕಳನ್ನು ಶೋಷಿಸಲು ಕೆಂಪುಹಾಸು ಹಾಸಿಕೊಟ್ಟಂತಾಗಿದೆ. ಪ್ರತಿ ಜೂನ್ ೧೨ರಂದು “ಬಾಲ ಕಾರ್ಮಿಕ ಪದ್ಧತಿ ವಿರೋಧಿ” ದಿನಾಚರಣೆ ಆಚರಿಸುತ್ತಾ ಬರಲಾಗಿದೆ. ಮಸೂದೆಯ ತಿದ್ದುಪಡಿ ಈ ದಿನಾಚರಣೆಗಾಗಿ ಸರ್ಕಾರ ಮುಂಗಡವಾಗಿ ಕೊಟ್ಟ ಉಡುಗೊರೆಯೇchild-labour ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ.

ಈಗಾಗಲೇ ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಬಾಲಕಾರ್ಮಿಕರನ್ನು ಹೊಂದಿರುವ ದೇಶವೆಂಬ ಕುಖ್ಯಾತಿಗೊಳಗಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಪ್ರಕಾರ ದೇಶದಲ್ಲಿ sಸದ್ಯ ಒಟ್ಟು ೮.೨೨ ದಶಲಕ್ಷ ಬಾಲಕಾರ್ಮಿಕರಿದ್ದಾರೆ. ಇದರಿಂದ ಹೊರಬರಲು ಬಾಲಕಾರ್ಮಿಕ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು ಮತ್ತು ಅನುಷ್ಠಾನದ ಕ್ರಮಗಳನ್ನು ತೀವ್ರಗೊಳಿಸಬೇಕಲ್ಲವೇ? ಅದು ಬಿಟ್ಟು ೧೪ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟ ನಂತರ ಮತ್ತು ರಜೆಯಲ್ಲಿ ಶ್ರಮದಾಯಕವಲ್ಲದ, ಕಠಿಣವಲ್ಲದ ‘ಕೆಲವು’ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು ಎಂಬ ತಿದ್ದುಪಡಿಯೇ ಮಕ್ಕಳ ಆರೋಗ್ಯಕರ ಬದುಕಿನ ಹಿತದೃಷ್ಟಿಯಿಂದ ಅಮಾನವೀಯವಾದುದಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ೧೯೮೯ರಲ್ಲಿ ಅಂಗೀಕಾರವಾಯ್ತು. ಅದಕ್ಕೀಗ ೨೫ ವರ್ಷ! ಅದರಂತೆ ಪ್ರತಿ ಮಗುವಿಗೆ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕತೆ, ಆರೋಗ್ಯ, ಉತ್ತಮ ಜೀವನ ಶೈಲಿ, ಶಿಕ್ಷಣ, ಆರೈಕೆ ಒದಗಿಸುವುದು, ಎಲ್ಲಾ ರೀತಿಯ ಶೋಷಣೆ, ದುರ್ಬಳಕೆ, ಅಪಮಾನಕಾರಿಯಾಗಿ ನಡೆಸಿಕೊಳ್ಳುವುದರಿಂದ ಮತ್ತು ಲೈಂಗಿಕ ದೌರ್ಜನ್ಯದಿಂದ ರಕ್ಷಣೆಗಳ ಹಕ್ಕು ನೀಡುವುದು ಪ್ರತಿ ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ. ಇದರೊಂದಿಗೆ ಮಕ್ಕಳಿಗೆ ಅವಶ್ಯಕ ವಿಶ್ರಾಂತಿ, ಬಿಡುವು, ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಹಕ್ಕೂ ಇರಬೇಕೆಂದು ಅಂಗೀಕಾರವಾಗಿದೆ. ಹೀಗಿರುವಾಗ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ದುಡಿಯುವಂತೆ ಮಾಡುವುದು ಮಕ್ಕಳ ಹಕ್ಕಿನ ಉಲ್ಲಂಘನೆಯಲ್ಲವೇ? ಮಕ್ಕಳಿಗೆ ಅವರ ಹಕ್ಕನ್ನೂ ಸಮರ್ಪಕವಾಗಿ ನೀಡದೇ ಈಗ ಮಸೂದೆಗೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡ ಮಕ್ಕಳ ಬದುಕನ್ನು ಇನ್ನಷ್ಟು ಶೋಚನೀಯಗೊಳಿಸುತ್ತಿರುವುದು ದುರಂತ.

ಕೆಲಸ ಮಾಡಲು ಭಾರತದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದಾಗ್ಯೂ ಮಕ್ಕಳನ್ನೇ ದುಡಿಮೆಗೆ ಬಳಸಿಕೊಳ್ಳುತ್ತಿರುವುದರ ಹಿಂದೆ ಅನೇಕ ಹುನ್ನಾರಗಳು ಕೆಲಸ ಮಾಡುತ್ತವೆ. ಮಕ್ಕಳಿಂದ ಅತ್ಯಂತ ಕಡಿಮೆ ಕೂಲಿಗೆ ಹೆಚ್ಚು ಕೆಲಸ ಪಡೆಯಬಹುದು. ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಮಕ್ಕಳು ಅಸಹಾಯಕರು ಮತ್ತು ಮುಗ್ಧರು ಆಗಿರುವುದರಿಂದ ಪ್ರಶ್ನಿಸುವುದಿಲ್ಲ, ಸಂಘಟಿತರಾಗುವುದಿಲ್ಲ, ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸುವುದಿಲ್ಲ, ಮುಷ್ಕರ ಹೂಡುವುದಿಲ್ಲ, ತಕರಾರು, ಚೌಕಾಶಿ ಮಾಡುವುದಿಲ್ಲ ಹೀಗಾಗಿ ಮಕ್ಕಳಿಂದ ದುಡಿಸಿಕೊಳ್ಳುವುದು ಉದ್ದಿಮೆದಾರರಿಗೆ ಎಲ್ಲ ರೀತಿಯಲ್ಲೂ ಲಾಭದಾಯಕ. ಎಲ್ಲಕ್ಕಿಂಥಾ ಕ್ರೌರ್ಯವೆಂದರೆ ಮಕ್ಕಳನ್ನು ವೇಶ್ಯಾವಾಟಿಕೆಗಾಗಿ ದುಡಿಸಿಕೊಳ್ಳುವುದು. ಮಕ್ಕಳು ಮಾರಕ ಲೈಂಗಿಕ ರೋಗರಹಿತರು ಮತ್ತು ಸುಲಭವಾಗಿ ಈ ದಂಧೆಗೆ ಪಳಗಿಸಬಹುದೆಂಬ ಕಾರಣಕ್ಕೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಮತ್ತು ಸಮಾಜಘಾತುಕ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿರುವುದುchildlabours ಮಕ್ಕಳ ಪಾಲಿನ ದುರದೃಷ್ಟವಲ್ಲದೇ ಬೇರಿನ್ನೇನು?

ಮಾರುಕಟ್ಟೆ ಕೇಂದ್ರಿತ ಜಾಗತೀಕರಣ ಇಂದು ಹೆಚ್ಚು ಕೆಲಸಗಳನ್ನು ಸೃಷ್ಟಿಸುತ್ತಿದೆ. ಅದಕ್ಕೆ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡುವ ಮಕ್ಕಳು ವರದಾನವಾಗಿ ಕಾಣುತ್ತಿದ್ದಾರೆ. ಮಾಲ್‌ಗಳಲ್ಲಿ, ಡಾಬಾ-ಹೋಟೆಲ್‌ಗಳಲ್ಲಿ, ಸಿದ್ಧ ಆಹಾರ ಪ್ಯಾಕಿಂಗ್ ಕೆಲಸಗಳಲ್ಲಿ, ಅಂಗಡಿಗಳಲ್ಲಿ ಇವರಿಗೆ ಬೇಡಿಕೆ ಹೆಚ್ಚುತ್ತಿದೆ. ಮನರಂಜನಾ ಕ್ಷೇತ್ರ ದೇಶದ ಪ್ರಮುಖ ಆದಾಯ ಸೃಷ್ಟಿಸುವ ಘಟಕವಾಗಿರುವುದರಿಂದ ಅಲ್ಲಿಯೂ ಸರಕಾಗಿ ಮಕ್ಕಳನ್ನು ಬಳಸಿಕೊಳ್ಳುವ ಉದ್ದೇಶವೂ ಈ ತಿದ್ದುಪಡಿಗಿದೆ. ಚೈನಾ ದೇಶದ ಮಾದರಿಯೂ ಕೇಂದ್ರ ಸರ್ಕಾರಕ್ಕೆ ಪ್ರಭಾವ ಬೀರಿರಬಹುದು. ಅಲ್ಲಿ “ಎಜುಕೇಷನಲ್ ಲೇಬರ್” ಎಂಬ ನೀತಿ ಜಾರಿಯಲ್ಲಿದೆ. ಶಾಲೆಯಲ್ಲಿ ಪಾರಂಪರಿಕ ವೃತ್ತಿ ಮತ್ತು ಕೃಷಿ ಚಟುವಟಿಕೆಯ ಶಾಲಾ ಅವಧಿಗಳಿರುತ್ತವೆ. ಆದರೆ ಈ ಮೂಲಕ ಅಲ್ಲಿ ಶಾಲೆಗಳು ಮಕ್ಕಳನ್ನು ಹೆಚ್ಚಿನ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು, ಮಕ್ಕಳನ್ನು ಮಾಲ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿರುವುದು ಮತ್ತು ಕ್ರೀಡೆಯ ಹೆಸರಿನಲ್ಲಿ ಅಲ್ಲಿ ಮಕ್ಕಳಿಗೆ ವಿಪರೀತದ ಒತ್ತಡಗಳನ್ನು ಹೇರುತ್ತಿರುವುದೂ ದಾಖಲಾಗಿದೆ. ಕಡಿಮೆ ಆದಾಯದ ಬಡ ಕುಟುಂಬಗಳು ಮಾತ್ರ ಮಕ್ಕಳನ್ನು ದುಡಿಯಲು ಕಳಿಸುತ್ತವೆ ಎಂಬುದು ನಮಗೆ ನೆನಪಿರಬೇಕು. ಈ ರಿಯಾಯಿತಿಯನ್ನು ನೀಡುವ ಮೂಲಕ ಬಡ ಕುಟುಂಬಗಳಿಗೆ ಹೆಚ್ಚಿನ ದುಡಿಮೆಗೆ ಅವಕಾಶ ಕಲ್ಪಿಸುವ ನೆವದಲ್ಲಿ ಆ ಕುಟುಂಬಗಳ ಮಕ್ಕಳನ್ನು ಶಾಶ್ವತವಾಗಿ ಶ್ರಮದ ಕೆಲಸ ಮಾಡುವ ಜೀತದಾಳುಗಳಾಗಿ ಪರಿವರ್ತಿಸುವ ಹುನ್ನಾರವಷ್ಟೇ ಕಾಣುತ್ತಿದೆ. ಅದಕ್ಕೆಂದೇ ದಿಢೀರನೆ ಮಸೂದೆಯಲ್ಲಿ ತಿದ್ದುಪಡಿಗೆ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಮಕ್ಕಳ ಕೆಲಸಕ್ಕೂ, ಶಾಲೆಯಿಂದ ಮಕ್ಕಳು ಹೊರಗುಳಿಯುವ ಪ್ರಮಾಣದ ಹೆಚ್ಚಳಕ್ಕೂ ಅವಿನಾಭಾವ ಸಂಬಂಧವಿದೆ. ಶಿಕ್ಷಣ ಹಕ್ಕು ಕಾಯ್ದೆ ೨೦೦೯ರನ್ವಯ ೬-೧೪ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಆದರೆ ರಾಷ್ಟ್ರೀಯ ಮಾದರಿ ಸಮೀಕ್ಷೆ ೨೦೧೪ರ ವರದಿಯಂತೆ children-of-Indiaರಾಜ್ಯದ ಗ್ರಾಮೀಣ ಭಾಗದಲ್ಲಿ ೫-೧೪ವರ್ಷದೊಳಗಿನ ಪ್ರತಿ ೧೦೦೦ ಮಕ್ಕಳಿಗೆ ೩೦ ಮಕ್ಕಳು ಹಾಗೂ ನಗರಪ್ರದೇಶದಲ್ಲಿ ೧೦೦೦ಕ್ಕೆ ೬ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಸಂಗತಿಯೋ? ನಾಚಿಕೆಗೇಡಿನದೋ? ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ. ಮಕ್ಕಳ ದೇಹ ಭರಿಸುವುದಕ್ಕಿಂತಾ ಹೆಚ್ಚಿನ ಶ್ರಮ, ದುಡಿಮೆಯನ್ನು ಅವರ ಮೇಲೆ ಹೇರುವ ಮೂಲಕ ಅವರ ದೇಹ ಮತ್ತು ಬುದ್ಧಿಯ ಮೇಲೆ ಒತ್ತಡ ಹೇರಿದಂತಾಗಿ ಶಾಶ್ವತ ಮಾನಸಿಕ ಕ್ಷೆಭೆಗೆ ಅವರು ಒಳಗಾಗುತ್ತಾರೆ. ದುಡಿಯುವ ಮಕ್ಕಳು ತಮ್ಮ ಅಮೂಲ್ಯ ಬಾಲ್ಯ ಕಳೆದುಕೊಳ್ಳುವುದರೊಂದಿಗೆ, ಅನಾರೋಗ್ಯಕ್ಕೆ ಒಳಗಾಗುವುದು, ಪಠ್ಯದ ಕಡೆಗೆ ಗಮನಹರಿಸಲಾಗದಿರುವುದು, ಕ್ರಮೇಣ ಕೆಲಸದ ಸಮಯ ಮತ್ತು ಒತ್ತಡ ಹೆಚ್ಚಾಗಿ ಶಾಲೆ ಬಿಡುವ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಬಾಲ್ಯಾವಸ್ಥೆಯ ಪ್ರತಿಯೊಂದು ಕೊರತೆ ಮಕ್ಕಳ ವ್ಯಕ್ತಿತ್ವವನ್ನು ಮುಕ್ಕಾಗಿಸುತ್ತದೆ ಎನ್ನುತ್ತಾರೆ ಮನೋವೈದ್ಯರು. ಬಡ ಪೋಷಕರೇ ಮಕ್ಕಳು ಶಾಲೆ ಬಿಟ್ಟು ದುಡಿಯುವುದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರಿಗೆ ಯಾವ ಶಿಕ್ಷೆಯ ಭಯವೂ ಇಲ್ಲವೆಂದಾದರೆ ಈ ದೇಶದಲ್ಲಿ ಮಕ್ಕಳನ್ನು ಇನ್ನು ದೇವರೇ ಕಾಪಾಡಬೇಕು!

ಭಾರತದಂತಹಾ ಸಂಕೀರ್ಣ ಆರ್ಥಿಕ -ಸಾಮಾಜಿಕ ಪರಿಸ್ಥಿತಿ ಇರುವ ದೇಶದಲ್ಲಿ ಕೃಷಿ, ಸೂಕ್ಷ್ಮ ಗುಡಿಕೈಗಾರಿಕೆ ಇತ್ಯಾದಿ ಕೆಲಸಗಳನ್ನು ಬಾಲ್ಯದಿಂದಲೇ ಕಲಿಯುವುದು ಅನಿವಾರ್ಯವೆಂಬ ಸಬೂಬನ್ನು ಸರ್ಕಾರ ಹೇಳುತ್ತಿದೆ. ಆದರೆ ಇಂತಹಾ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಕೆಳವರ್ಗಗಳ ಮಕ್ಕಳೇ ಎಂಬುದು ಗಮನಾರ್ಹವಾದುದು. ಈ ನೆವದಲ್ಲಿ ಶಿಕ್ಷಣದ ಕಡೆಗೆ ಅವರಿಗೆ ಸರಿಯಾಗಿ ಗಮನಹರಿಸಲಾಗದೇ ಪರಂಪರಾಗತ ವೃತ್ತಿಯಲ್ಲೇ ತಮ್ಮ government_schoolಬದುಕು ಕಂಡು ಕೊಳ್ಳಲು ಹೆಣಗುತ್ತಾರೆ. ಇಂತಹಾ ಮತ್ತು ಬಿಳಿಕಾಲರಿನ ವೃತ್ತಿಯ ಮಧ್ಯೆ ಇರುವ ಆದಾಯದ ಅಗಾಧ ಕಂದರದಿಂದಾಗಿ ಬಡವರು ಬಡವರಾಗಿಯೇ ಉಳಿಯಬೇಕಾದ ಪರಿಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ವೃತ್ತಿ ನೈಪುಣ್ಯತೆ ಕಲಿಸುವ ನೆವದಲ್ಲಿ ಬಾಲ ದುಡಿಮೆಯನ್ನು ಪ್ರೋತ್ಸಾಹಿಸುವ ಸರ್ಕಾರದ ಈ ನೀತಿ, ಸನಾತನ ಸಂಸ್ಕೃತಿಯ ಪರವಾದ ಸರ್ಕಾರದ ಕುಸಂಸ್ಕೃತಿಯ ದ್ಯೋತಕವಷ್ಟೇ ಆಗಿದೆ.

ಅನಕ್ಷರತೆ, ಬಡತನ, ದುಶ್ಚಟಗಳು, ಜಾತಿ-ವರ್ಗ ತಾರತಮ್ಯ, ಗ್ರಾಮಗಳಲ್ಲಿ ಕೆಲಸವಿಲ್ಲದೇ ಪೋಷಕರ ವಲಸೆ ಬಾಲಕಾರ್ಮಿಕತೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ರೋಗ ಲಕ್ಷಣಕ್ಕೆ ಮದ್ದು ನೀಡುವುದಕ್ಕಿಂತಾ ಈ ಮೂಲ ರೋಗಕ್ಕೆ ಮದ್ದು ನೀಡಬೇಕು. ಈ ಸಮಸ್ಯೆಗಳಿಂದ ಬಡ ಜನರನ್ನು ಬಿಡಿಸಲು ಆಡಳಿತ ಯಂತ್ರ ಒಗ್ಗೂಡಿ ಶ್ರಮಿಸಬೇಕು. ಜೊತೆಗೆ ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮೊದಲಿಗೆ ಮಗು ಕೇಂದ್ರಿತ ಚಿಂತನೆಯಿಂದ ದೇಶದ ಅಭಿವೃದ್ಧಿ ಮಾನದಂಡಗಳನ್ನೂ ಕಾನೂನನ್ನೂ ನೀತಿಗಳನ್ನೂ ನಮ್ಮ ಸರ್ಕಾರಗಳು ಪುನರ್ ರೂಪಿಸಿಕೊಳ್ಳಬೇಕು. ಸಮಾಜ ತನ್ನ ಅವಶ್ಯಕತೆಗೆ ಬಾಲ ದುಡಿಮೆಯನ್ನು ಮುಂದುವರೆಸದಂತೆ ಜಾಗೃತಿ ಮತ್ತು ಕಟ್ಟುನಿಟ್ಟಿನ ಕಾನೂನು ಅನುಷ್ಠಾನವಾಗಬೇಕಿದೆ. ಕನಿಷ್ಠ ೧೪ ವರ್ಷದವರೆಗಾದರೂ ಮಕ್ಕಳು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸಲು ಬಿಡದಂತಹಾ ಯಾವುದೇ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆ ಅಮಾನವೀಯವಾದಂತದ್ದು.

ಲಿಂಗಾನುಪಾತ ಮತ್ತು ಹೆಚ್ಚುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ


– ರೂಪ ಹಾಸನ


ಇಂದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಿತರಾಗುತ್ತಿದ್ದಾರೆ, ಔದ್ಯೋಗಿಕ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ, ಆರ್ಥಿಕವಾಗಿ ಒಂದಿಷ್ಟು ಸಬಲರಾಗುತ್ತಿದ್ದಾರೆ ಎಂಬುದು ತಕ್ಷಣಕ್ಕೆ ಕಣ್ಣಿಗೆ ಕಾಣಿಸುವ ಸತ್ಯಗಳಾದರೂ ಇದರ ಒಳ ಹೊಕ್ಕು ವಿಶ್ಲೇಷಿಸುತ್ತಾ ಹೋದರೆ ನಿಗೂಢ ಕರಾಳತೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅದರ ಒಟ್ಟು ಚಿತ್ರಣವನ್ನು ನೋಡಿದಾಗ ನಮಗೆ ಮನದಟ್ಟಾಗುವುದು ಇಷ್ಟೆಲ್ಲಾ ೩-೪ ದಶಕಗಳ ಹೋರಾಟ, ಜಾಗೃತಿ, ಪ್ರತಿಭಟನೆಗಳ ನಂತರವೂ ಹೆಣ್ಣಿನ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ, ಬದಲಿಗೆ ಹೆಚ್ಚಾಗುತ್ತಾ ಅವುಗಳ ಸ್ವರೂಪದಲ್ಲಿ ಮಾತ್ರ ಬದಲಾಗುತ್ತಿದೆ ಎಂಬುದು.

ಹೆಣ್ಣು ಜೀವ ಹಿಂದೆಂದಿಗಿಂತಲೂ ಇಂದು ಅತ್ಯಂತ ಆತಂಕದ ಸ್ಥಿತಿಯಲ್ಲಿದೆ. ನಮ್ಮ ಭಾರತದ ಪುರೋಹಿತಶಾಹಿ ಪುರುಷ ಕೇಂದ್ರಿತ ವ್ಯವಸ್ಥೆಯ ಕಬಂಧಬಾಹುಗಳ ಹಿಡಿತಕ್ಕೆ ಸಿಕ್ಕು ತಲೆತಲಾಂತರದಿಂದ ತಾರತಮ್ಯ, ಅಸಮಾನತೆ, ಶೋಷಣೆಯನ್ನು ಅನುಭವಿಸುತ್ತಲೇ ಬಂದಿರುವ woman-unchainedಹೆಣ್ಣು ೯೦ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಜಾಗತೀಕರಣ, ಉದಾರಿಕರಣ, ಖಾಸಗೀಕರಣದ ಮುಕ್ತ ಆರ್ಥಿಕ ನೀತಿಗಳಿಂದಾಗಿ, ಆಧುನಿಕತೆ ಮತ್ತು ತಂತ್ರಜ್ಞಾನದ ಹೆಸರಿನಲ್ಲಿ ನಾವು ಊಹಿಸಲೇ ಸಾಧ್ಯವಿಲ್ಲದಂತಹ ರೀತಿಗಳಲ್ಲಿ, ರೂಪಗಳಲ್ಲಿ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ನಮ್ಮ ಕಳವಳವನ್ನು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ನಮಗೆ ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಅವರ ಮಾತು ಮುಖ್ಯವೆನಿಸುತ್ತದೆ. ’ಬದುಕಿನ ಎಲ್ಲಾ ಮುಖಗಳಲ್ಲೂ ಮಹಿಳೆಯರು ಒಂದೋ ಕಾಣೆಯಾಗಿದ್ದಾರೆ, ಕಳೆದು ಹೋಗುತ್ತಿದ್ದಾರೆ, ಇಲ್ಲವಾಗುತ್ತಿದ್ದಾರೆ ಇಲ್ಲವೇ ದೈನೇಸಿ ಬದುಕು ಸಾಗಿಸುತ್ತಿದ್ದಾರೆ. ಹೆಣ್ಣು ಭ್ರೂಣವಾಗಿ ತಾಯಿಯ ಗರ್ಭ ಸೇರಿದಾಗಿನಿಂದ ಅಂತಿಮವಾಗಿ ಭೂಮಿಯ ಗರ್ಭ ಸೇರುವವರೆಗೆ ತಾರತಮ್ಯ, ಪಕ್ಷಪಾತ, ದೌರ್ಜನ್ಯ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾಳೆ. ಪುರುಷಶಾಹಿಯು ವಿಜೃಂಭಿಸುವ ಈ ಸಮಾಜದಲ್ಲಿ ಅಭಿವೃದ್ಧಿಯು ಕೇವಲ ಏಕಲಿಂಗಿ ಪ್ರಕ್ರಿಯೆಯಾಗಿ ಚಿತ್ರಿಸಲ್ಪಡುತ್ತಿದೆ.ಇದನ್ನು ವಿವರಿಸಿಕೊಳ್ಳುವ ವಿವೇಕ ಸಮಾಜಕ್ಕೆ ಬರದಿದ್ದರೆ ಹೆಣ್ಣಿನ ಸ್ಥಿತಿ ಮತ್ತಷ್ಟು ಶೋಚನೀಯವಾಗುತ್ತದೆ.’ ಈ ಮಾತುಗಳನ್ನು ಕೇಂದ್ರದಲ್ಲಿರಿಸಿಕೊಂಡೇ ಮಹಿಳೆಯ ಸಮಸ್ಯೆಗಳನ್ನು ವಿವರಿಸಿಕೊಂಡಾಗ ಮಾತ್ರ ನಮಗೆ ಸತ್ಯ ಗೋಚರಿಸಬಹುದೆನಿಸುತ್ತದೆ.

ಕಣ್ಣಿಗೆ ಕಾಣುವ ದೌರ್ಜನ್ಯವನ್ನು ಪ್ರತಿಭಟಿಸಬಹುದು, ಪ್ರಶ್ನಿಸಬಹುದು, ನ್ಯಾಯ ಕೇಳಬಹುದು. ಆದರೆ ಕಣ್ಣಿಗೇ ಕಾಣದಂತೆ, ಸದ್ದೇ ಆಗದ ರೀತಿಯಲ್ಲಿ ನಡೆಯುವ ದೌರ್ಜನ್ಯಗಳನ್ನು ಗುರುತಿಸುವುದು, ಇಂತಹ ದೌರ್ಜನ್ಯಗಳನ್ನು ಎಸಗುತ್ತಿರುವ ನಿಜವಾದ ಶತ್ರು ಯಾರೆಂದು woman-insightಕಂಡು ಹಿಡಿಯುವುದೇ ದುಸ್ತರವಾದರೆ ಯಾರ ವಿರುದ್ಧ ಹೋರಾಡುವುದು? ಈ ಹಿನ್ನೆಲೆಯಲ್ಲಿ ನಾವಿಂದು ಅತ್ಯಂತ ತುರ್ತಾಗಿ ಜಾಗೃತರಾಗಬೇಕಿರುವುದು, ಬೆಚ್ಚಿಬೀಳಿಸುವ ರೀತಿಯಲ್ಲಿ ಕುಸಿಯುತ್ತಿರುವ ಲಿಂಗಾನುಪಾತ ಮತ್ತು ಗರ್ಭದಲ್ಲೇ ಹೆಣ್ಣುಜೀವ ನಾಶವಾಗುತ್ತಿರುವ ವೇಗದ ಜೊತೆಗೆ ಈ ಕಾರಣದಿಂದಲೇ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಕುರಿತು.

ಹೆಣ್ಣಿನ ಕುರಿತ ನಮ್ಮ ಒಟ್ಟು ಸಮಾಜ ಮತ್ತು ವಿಶ್ವದ ನಿಲುವೇ ಇತಿಹಾಸದ ಕಾಲಾನುಕ್ರಮಣಿಕೆಯಲ್ಲಿ ನಿಕೃಷ್ಟವಾಗುತ್ತಾ ಬಂದಿರುವುದಕ್ಕೆ ಅನೇಕ ದಾಖಲೆಗಳನ್ನು ನಾವು ಕಾಣುತ್ತಾ ಹೋಗಬಹುದು. ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ. ಹೆಣ್ಣೆಂದರೆ ಕೀಳು ಎಂಬ ಭಾವನೆ ಬೇರೆ ಬೇರೆ ಕಾರಣಗಳಿಗಾಗಿ ಆಳವಾಗಿ ಬೇರೂರುತ್ತಾ ಬಂದಿರುವುದರ ಪರಿಣಾಮವಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲೂ ಹೆಣ್ಣಿನ ಪರಿಸ್ಥಿತಿ ಪುರುಷನಿಗೆ ಹೋಲಿಸಿದರೆ ಹೀನಾಯವಾಗುತ್ತಾ ಹೋದುದಕ್ಕೆ ನಿದರ್ಶನಗಳಿವೆ. ಈ ಕಾರಣಕ್ಕೇ ಹೆಣ್ಣುಮಗು ಹುಟ್ಟಿದೊಡನೆ ಅದಕ್ಕೆ ವಿಷವುಣ್ಣಿಸಿ, ಬಾಯಿಗೆ ಭತ್ತ, ಜೊಂಡುಹುಲ್ಲು ತುಂಬಿ ಬೇರೆ ಬೇರೆ ಕ್ರೂರ ವಿಧಾನಗಳಿಂದ ಕೊಲ್ಲುತ್ತಿದ್ದುದು ಚರಿತ್ರೆಯಲ್ಲಿ ದಾಖಲಾಗಿದೆ. ಗರ್ಭದಲ್ಲಿರುವ ಶಿಶು ಹೆಣ್ಣೋ-ಗಂಡೋ ಎಂದು ಗುರುತಿಸಲು ಅನೇಕ ಅನಾಗರಿಕ ವಿಧಾನಗಳನ್ನು ಆ ಕಾಲಕ್ಕೇ ಪ್ರಯತ್ನಿಸಲಾಗಿದ್ದಕ್ಕೆ ನಿದರ್ಶನಗಳಿವೆ. ಆದರೆ ಇಂದು ಯಾವ ಕಷ್ಟವೂ ಇಲ್ಲದಂತೆ, ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳಾದ ಅಲ್ಟ್ರಾ ಸೋನೋಗ್ರಫಿ, ಸ್ಕ್ಯಾನಿಂಗ್ ಯಂತ್ರಗಳಿಂದ ಹೆಣ್ಣುಭ್ರೂಣ ಪತ್ತೆ ಮತ್ತು ಅದರಿಂದಾಗಿ ಹತ್ಯೆಯ ವಿಧಾನಗಳು ಸುಲಭವಾಗಿ ಅತ್ಯಂತ ಸೂಕ್ಷ್ಮವಾಗಿ, ಕಣ್ಣಿಗೆ ಕಾಣದ ರೀತಿಯಲ್ಲಿ ಹೆಣ್ಣನ್ನು ನಾಶ ಮಾಡಲು ಪಣ ತೊಟ್ಟಂತೆ ನಿಂತಿರುವಾಗ ಯಾವ ಆಯುಧದಿಂದ ಈ ಶತ್ರುವನ್ನು ನಿವಾರಿಸಿಕೊಳ್ಳುವುದು?

ಹೆಣ್ಣಿನ ಸಂತತಿಯೇ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಈ ಹಿನ್ನೆಲೆಯಲಿ ಜಗತ್ತಿನಲ್ಲೇ ಚೀನಾ ಮೊದಲ ಸ್ಥಾನದಲ್ಲಿದ್ದರೆ, ನಂತರದಲ್ಲಿ ಭಾರತ, ಮುಂದಿನ ಸ್ಥಾನಗಳಲ್ಲಿ ಶ್ರೀಲಂಕಾ, ನೇಪಾಳ, ಕೊರಿಯಾ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ ಮುಂತಾದ ರಾಷ್ಟ್ರಗಳಲ್ಲಿ woman-abstractಹೆಣ್ಣಿನ ಸಂಖ್ಯೆಯಲ್ಲಿ ಅಗಾಧ ಪ್ರಮಾಣದ ಕುಸಿತವುಂಟಾಗುತ್ತಿರುವುದು ಗೋಚರಿಸುತ್ತಿದೆ. ಈ ಪ್ರಮಾಣದ ಲಿಂಗಾನುಪಾತವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆ ಪ್ರತಿ ವರ್ಷ ಸೆಪ್ಟೆಂಬರ್ ೨೪ನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ ಎಂದು ಘೋಷಿಸಿ ಜನರಲ್ಲಿ ಹೆಣ್ಣು ಭ್ರೂಣಹತ್ಯೆಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ.

ನಮ್ಮ ದೇಶದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತಿದೆ. ಆರು ದಶಕಗಳ ಜನಗಣತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಹೆಣ್ಣುಮಕ್ಕಳ ಸಂಖ್ಯೆ ದೇಶದಲ್ಲಿ ಕುಸಿಯುತ್ತಿರುವ ಪ್ರಮಾಣವನ್ನು ಗುರುತಿಸಬಹುದು. ಪ್ರತಿ ೧೦೦೦ ಪುರುಷರಿಗೆ ಉಳಿದಿರುವ ಹೆಣ್ಣುಮಕ್ಕಳು ೧೯೬೧ರಲ್ಲಿ ೯೭೬, ೧೯೭೧ರಲ್ಲಿ ೯೬೪, ೧೯೮೧ರಲ್ಲಿ ೯೬೨, ೧೯೯೧ರಲ್ಲಿ ೯೪೫, ೨೦೦೧ರಲ್ಲಿ ೯೨೭ ಮತ್ತು ೨೦೧೧ರಲ್ಲಿ ೯೧೪. ಇದೇ ಜನಗಣತಿಯಲ್ಲಿ ೩೦ ವರ್ಷದೊಳಗಿನ ಪುರುಷ-ಮಹಿಳೆ ಅನುಪಾತವು ೧೦೦೦ಕ್ಕೆ ೮೯೭ ಆಗಿದೆ.೩೧-೫೦ ವರ್ಷದೊಳಗಿನವರ ಲೆಕ್ಕಾಚಾರದಲ್ಲಿ ೯೫೫ ಇದ್ದರೆ, ೫೦ ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ೯೯೬ರಷ್ಟಿದೆ. ಆರು ವರ್ಷದೊಳಗಿನ ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದ್ದು ಕಳೆದ ಮೂರು ದಶಕಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಹೆಣ್ಣುಮಕ್ಕಳ ಬದುಕನ್ನು ಹುಟ್ಟುವ ಮೊದಲೇ ಕಿತ್ತುಕೊಳ್ಳಲಾಗಿದೆ. ಕಾಕತಾಳೀಯವೆಂಬಂತೆ ಲಿಂಗಪತ್ತೆ ಹಚ್ಚುವ ಸ್ಕ್ಯಾನಿಂಗ್ ಯಂತ್ರ ದೇಶವನ್ನು ಪ್ರವೇಶಿಸಿಯೂ ಮೂರು ದಶಕವಾಯ್ತು! ಈ ಯಂತ್ರ ಮತ್ತು ಅದರಿಂದ ಭ್ರೂಣದ ಲಿಂಗ ಪತ್ತೆ ಮಾಡಿ ಕೊಲ್ಲುತ್ತಿರುವ ವೈದ್ಯರು ಹೆಣ್ಣು ಸಂತತಿಯ ಪಾಲಿಗೆ ಯಮದೂತರಾಗಿದ್ದಾರೆ.

ಕರ್ನಾಟಕದ ವಿಷಯಕ್ಕೆ ಬಂದರೆ ೧೯೯೧ರಲ್ಲಿ ೯೬೦ಇದ್ದ ಅನುಪಾತವು ೨೦೦೧ರಲ್ಲಿ ೯೪೫ಕ್ಕಿಳಿದಿತ್ತು, ಈ ೨೦೧೧ರ ಜನಗಣತಿಯಲ್ಲಿ ಅದು ೯೪೩ಕ್ಕೆ ಕುಸಿದಿರುವುದು ದಾಖಲಾಗಿದೆ. ಈ ಅಂಕಿಅಂಶಗಳು ದಶಕದಿಂದ ದಶಕಕ್ಕೆ ಹೆಣ್ಣಿನ ಪ್ರಮಾಣ ಯಾವ ಪ್ರಮಾಣದಲ್ಲಿ ಕುಸಿಯುತ್ತಿದೆ ಎಂಬುದರ ದ್ಯೋತಕವಾಗಿದೆ. ಹಾಗೇ ರಾಜ್ಯದ ಐದು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರುಗಳಲ್ಲಿ ಪ್ರತಿ ೧೦೦೦ ಪುರುಷರಿಗೆ ಕ್ರಮವಾಗಿ ೧೦೯೪, ೧೦೨೦, ೧೦೧೯, ೧೦೧೦ ಮತ್ತು ೧೦೦೮ರಷ್ಟು ಮಹಿಳೆಯರು ಕಳೆದ ೨೦೧೧ರ ಜನಗಣತಿಯಲ್ಲಿ ದಾಖಲಾಗಿದೆ. ಆದರೆ ೨೦೦೧ ಮತ್ತು ೨೦೧೧ರ ಜನಗಣತಿಯಲ್ಲಿ ೦-೬ವರ್ಷದ ಮಕ್ಕಳ ಅನುಪಾತವನ್ನು ಗಮನಿಸಿದರೆ ಹೆಣ್ಣುಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಈ ಜಿಲ್ಲೆಗಳಲ್ಲಿ ಕೂಡ ಹೆಣ್ಣುಮಕ್ಕಳ ಸಂಖ್ಯೆ ಸರಾಸರಿ ೯೬೦-೯೭೦ಕ್ಕೆ ಇಳಿದಿರುವುದು ಗಾಬರಿ ಹುಟ್ಟಿಸುವಂತಿದೆ. ಹಾಗಿದ್ದರೆ ಉಳಿದ ಹೆಚ್ಚು ಕಡಿಮೆ ೪೦ಕ್ಕೂ ಅಧಿಕ ಹೆಣ್ಣುಕಂದಮ್ಮಗಳು ಏನಾದವು? ಕಳೆದ ೧೦-೧೫ ವರ್ಷಗಳಲ್ಲಿ ಈ ಪ್ರಮಾಣದ ಏರುಪೇರಿಗೆ ಕಾರಣವೇನು? ಇದು ಈ ಜಿಲ್ಲೆಗಳಲ್ಲೂ ಹೆಣ್ಣುಭ್ರೂಣಹತ್ಯೆ ನಿರಾತಂಕವಾಗಿ ನಡೆಯುತ್ತಿರುವ ಸೂಚನೆಯಲ್ಲದೇ ಬೇರಿನ್ನೇನು? ಹಾಸನದಂತಾ ಕೇವಲ ೧೭ಲಕ್ಷ ಚಿಲ್ಲರೆ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ೫೩ ಸ್ಕ್ಯಾನಿಂಗ್ ಸೆಂಟರ್‌ಗಳು ತಲೆ ಎತ್ತಿ ನಿಂತಿವೆ. ಇಲ್ಲಿ ಹೇಗೂ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಾಗಿಯೇ ಇದೆ ಎಂಬ ನಿರಾಳತೆಯಲ್ಲಿರುವ child-rapeಜಿಲ್ಲಾಡಳಿತ ಈ ಕೇಂದ್ರಗಳ ಬಗೆಗೆ ಯಾವ ವಿಶೇಷ ಎಚ್ಚರಿಕೆಯನ್ನಾಗಲೀ, ಗಮನವನ್ನಾಗಲೀ ಹರಿಸಿಲ್ಲ. ಹೀಗಾಗಿ ಜಿಲ್ಲೆಯ ಗರ್ಭಿಣಿಯರ ಜೊತೆಗೆ ಅಕ್ಕಪಕ್ಕದ ಜಿಲ್ಲೆಯ ಗರ್ಭಿಣಿಯರೂ ಇಲ್ಲಿಗೆ ಬಂದು ನಿರಾತಂಕವಾಗಿ ಭ್ರೂಣ ಪತ್ತೆ ಮಾಡಿಸಿಕೊಂಡು ಹೋಗುತ್ತಿರುವ ಸುದ್ದಿ ಅಕ್ಕಪಕ್ಕದ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರಿಂದ ಸಿಕ್ಕುತ್ತಲೇ ಇದೆ. ನಾವು ಪ್ರಶ್ನಿಸುತ್ತಲೇ ಇದ್ದೇವೆ. ಆದರೆ ಅಧಿಕಾರಿಗಳು ಕಿವುಡಾಗಿ ಕುಳಿತಿದ್ದಾರೆ.

ಸಾಮಾಜಿಕವಾಗಿ ನೋಡಿದಾಗ ಹೆಣ್ಣು ಮತ್ತು ಗಂಡುಗಳಿಬ್ಬರೂ ಸಮಾನವಾಗಿರಬೇಕು ಮತ್ತು ಸಂತತಿಗಳೆರಡೂ ಸಮಸಂಖ್ಯೆಯಲ್ಲಿರಬೇಕೆಂಬುದು ನಮ್ಮ ನಿರೀಕ್ಷೆ. ಆದರೆ ಜೈವಿಕ ಹಾಗೂ ಪ್ರಾಕೃತಿಕವಾಗಿ ನೋಡಿದಾಗ ಪ್ರಾಣಿ, ಪಕ್ಷಿ, ಕೀಟಗಳ ಬದುಕನ್ನು ಅಧ್ಯಯನ ಮಾಡಿರುವ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಹೆಣ್ಣು ಸಂತತಿ ಪುರುಷ ಸಂತತಿಗಿಂತಾ ಹೆಚ್ಚಾಗಿಯೇ ಇರುತ್ತದೆ. ಸಂತಾನಾಭಿವೃದ್ಧಿಯ ಜವಾಬ್ದಾರಿ ಹೆಣ್ಣಿನ ಮೇಲೆಯೇ ಹೆಚ್ಚಾಗಿರುವುದರಿಂದ ಸಹಜವಾಗಿ ಹೆಣ್ಣು ಸಂತತಿ ಹೆಚ್ಚಿನ ಪ್ರಮಾಣದಲ್ಲಿರಬೇಕೆಂಬ ಲೆಕ್ಕಾಚಾರ ಪ್ರಕೃತಿಗಿರಬಹುದು. ಯಾವುದೇ ರೀತಿಯ ಪೂರ್ವಗ್ರಹಗಳಿಲ್ಲದೇ, ಎಲ್ಲಾ ರೀತಿಯಲ್ಲೂ ಸಮಾನವಾದ ಅವಕಾಶಗಳಿದ್ದಾಗ ಪ್ರಕೃತಿಯಲ್ಲಿ ೧೦೦೦ ಗಂಡಿಗೆ ಪ್ರತಿಯಾಗಿ ಅಂದಾಜು ೧೦೩೩ ಹೆಣ್ಣುಮಕ್ಕಳು ಹುಟ್ಟಬೇಕೆಂದು ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಗರ್ಭಧರಿಸಿದ ನಂತರ ಆರೋಗ್ಯದಲ್ಲಿ ನೈಸರ್ಗಿಕ ಏರುಪೇರಾಗುವ ಸಂದರ್ಭದಲ್ಲಿ ಕೂಡ ಗಂಡು ಭ್ರೂಣಕ್ಕೇ ಬದುಕುವ ಸಾಧ್ಯತೆ ಹೆಣ್ಣಿಗಿಂತಾ ಕಡಿಮೆ. ನೈಸರ್ಗಿಕ ಗರ್ಭಪಾತ, ಶಿಶು ಮರಣಗಳಲ್ಲಿ ಗಂಡಿನ ಪ್ರಮಾಣವೇ ಹೆಚ್ಚು. ಹೆಣ್ಣಿನ ದೈಹಿಕ ಸಬಲತೆ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ ಜನಿಸಲು ಪೂರಕವಾಗಿದೆ. ಹೀಗಿರುವಾಗ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯಲ್ಲೇ ಈ ಪ್ರಮಾಣದ ಕುಸಿತಕ್ಕೆ ಕಾರಣವೇನೆಂದು ಹುಡುಕಬೇಕಲ್ಲವೇ? ಹೆಣ್ಣಿನ ಪರವಾದ ಪ್ರಕೃತಿಯ ನಿಯಮವನ್ನು ಮುರಿದು ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಅತ್ಯಂತ ಕ್ರೂರವಾದ, ಅಮಾನವೀಯವಾದ ರೀತಿಯಲ್ಲಿ ಹೆಣ್ಣನ್ನು ಗರ್ಭದಲ್ಲಿಯೇ ಕೊಲ್ಲುತ್ತಿರುವುದು ಮತ್ತು ಅಸಮಾನತೆಯನ್ನು ಬಿತ್ತುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳೇನು ಎಂದು ನಾವೀಗ ತುರ್ತಾಗಿ ಯೋಚಿಸಿ ಕಾರ್ಯಪ್ರವರ್ತರಾಗದಿದ್ದರೆ ಮುಂದೆ ಹೆಣ್ಣು ಸಂತತಿಗೆ ಭೂಮಿ ಮೇಲೆ ಉಳಿಗಾಲವೇ ಇಲ್ಲವೆನಿಸುತ್ತದೆ. ಹೆಣ್ಣು ನಾಶದೊಂದಿಗೇ ಮನುಷ್ಯ ಸಂತತಿಯೇ ಅವನತಿಯೆಡೆಗೆ ಸಾಗಲಿದೆಯೆಂಬ ವಾಸ್ತವದೆಡೆಗೆ ಇನ್ನಾದರೂ ಸಮಾಜ ಕಣ್ಣು ತೆರೆಯುವಂತಾಗಬೇಕು.

ಮನುಷ್ಯ ಶಿಕ್ಷಿತನೂ ನಾಗರಿಕನೂ ವಿಚಾರವಂತನೂ ಆಗುತ್ತಾ ಹೋದಷ್ಟೂ ತನ್ನ ಸಹಜೀವಿಯೊಂದಿಗೆ ಸಹೃದಯತೆ ಹೆಚ್ಚಾಗಬೇಕು……ಹಾಗೆಂದು ನಮ್ಮ ನಿರೀಕ್ಷೆ. ಪ್ರಕೃತಿಯ ಹೆಣ್ಣಿನ ಪರವಾದ ಆಶಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ ಆಗುತ್ತಿರುವುದೇನು? ’ಹೆಣ್ಣು ಸಂಗಾತಿಯಾಗಿ ಬೇಕು ಆದರೆ ಮಗಳಾಗಿ ಬೇಡ’ ಎಂಬ ಮನೋಭಾವ ಸಮಾಜದಲ್ಲಿ ಹೆಚ್ಚುತ್ತಾ ಸಾಗಿದಂತೆ ಹೆಣ್ಣಾಗಿ ಈ ಭೂಮಿ ಮೇಲೆ ಹುಟ್ಟಿದ ನಂತರ ಇದ್ದ ಅಸಮಾನತೆ ದೌರ್ಜನ್ಯದ ಕತ್ತಿ ಗರ್ಭಕ್ಕೇ ಚಾಚಿ ಕೊಂಡು ಭ್ರೂಣವನ್ನೇ ತುಂಡರಿಸಿ ಬಿಸುಟುವ ಹಂತವನ್ನು ಇಂದು ತಲುಪಿದೆ. ಹೀಗಾಗೇ ಪ್ರತಿ ವರ್ಷ ೬ ಲಕ್ಷಕ್ಕೂ ಅಧಿಕ ಹೆಣ್ಣು ಭ್ರೂಣಗಳು ಜೀವ ತಳೆಯದೇ ಮಣ್ಣಾಗಿ ಹೋಗುತ್ತಿವೆ.

ಈ ಅಗಾಧ ಪ್ರಮಾಣದ ಗಂಡು-ಹೆಣ್ಣಿನ ನಡುವಿನ ವ್ಯತ್ಯಾಸದಿಂದ ಸಂಗಾತಿಯಾಗಿ ಹೆಣ್ಣು ದೊರಕದೇ ಈಗಾಗಲೇ ರಾಜಾಸ್ಥಾನ, ಹರಿಯಾಣ, ಪಂಜಾಬ್ ಮುಂತಾದ ರಾಜ್ಯಗಳು ಹೆಣ್ಣುವಧುಗಳನ್ನು ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಇನ್ನೊಂದು ಕ್ರೂರ ಪದ್ಧತಿ ’ವಧು ಮಾರಾಟ’! ’ಗುಜ್ಜರ್ ಮದುವೆ’ ಹೆಸರಿನ ಈ ಹಣದ ಒಪ್ಪಂದದ ಮದುವೆ ಕಳೆದ ೧೦-೧೨ ವರ್ಷಗಳಿಂದ ಧಾರವಾಡ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಲ್ಲಿ ವ್ಯಾಪಿಸಿದ್ದು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ರೋಗದಂತೆ ಹರಡುತ್ತಿದೆ. ಬಡ ಹೆಣ್ಣು ಇಲ್ಲಿ ಕೇವಲ ಮಾರಾಟದ ಸರಕು. rape-illustrationವಿವಾಹದ ಸೋಗಿನಲ್ಲಿ ಇಂತಹ ಅಮಾನವೀಯ ಕೃತ್ಯಗಳು ಹೆಣ್ಣಿನ ಪೋಷಕರು, ಮದುವೆ ದಲ್ಲಾಳಿಗಳು, ವಧು ಮಾರಾಟದ ಏಜೆಂಟರ ಸಂಘಟಿತ ಪ್ರಯತ್ನದಿಂದ ನಡೆಯುತ್ತಿದೆ. ಹೀಗೆ ಮದುವೆ ಮಾಡಿ ಕೊಂಡು ಹೋದ ಒಂದೇ ಹೆಣ್ಣು ಆ ಕುಟುಂಬದ ಹಲವು ಪುರುಷರ ಕಾಮನೆಗಳನ್ನು ತಣಿಸುವ ’ವಸ್ತು’ವಾಗಿ ಬಳಸುವಂತಾ ಸ್ಥಿತಿ ಅಲ್ಲಿದೆ. ಅಲ್ಲಿ ಹಗಲು ಹೊಲಗಳಲ್ಲಿ ದುಡಿತ, ರಾತ್ರಿ ಲೈಂಗಿಕ ಜೀತದಾಳಾಗಿ ಬಳಕೆ. ಇದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಮತ್ತೆ ಮಾರಾಟ. ಇಲ್ಲಿ ತಮ್ಮ ಅಸ್ತಿತ್ವದ ಅರಿವಿಲ್ಲದ, ಹೆಸರೇ ಇಲ್ಲದ ಹೆಣ್ಣುಗಳ ಕೊಂಡುಕೊಳ್ಳುವಿಕೆ, ಮಾರಾಟ, ಮರು ಮಾರಾಟವನ್ನು ಯಾವುದೇ ಎಗ್ಗಿಲ್ಲದೇ, ತರಕಾರಿ ವ್ಯಾಪಾರದಂತೆ ನಡೆಸಲಾಗುತ್ತಿದೆ ಎಂದರೆ, ನಾವು ನಾಗರೀಕ ಜಗತ್ತಿನಲ್ಲಿ ಬದುಕುತ್ತಿದ್ದೇವೆಯೇ?-ಕರುಳು ಚೀರಿ ಕೇಳುತ್ತದೆ.

ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣವೆಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಿದ್ದಾರೆ. ಹೆಣ್ಣಿನ ಹೊರ ದೇಹದ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಈಗ ಗರ್ಭಕ್ಕೇ ಇಳಿದು, ಅನೈಸರ್ಗಿಕವಾಗಿ ಅವಳ ಸಂತತಿಯನ್ನು ಹೊಸಕಿ ಸಾಯಿಸುತ್ತಿದೆ. ಜೊತೆಗೆ ಬಹುಸಂಖ್ಯಾತ ಪುರುಷರಿಗೆ ಸಂಗಾತಿಯಾಗಿ ಹೆಣ್ಣು ದೊರಕದಿದ್ದಾಗ ವ್ಯಗ್ರಗೊಳುವ ಕೆಲ ಪುರುಷರು ಕಾನೂನುಬಾಹಿರ ಹಿಂಸೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ ಎಂದೂ ಮನೊವಿಜ್ಞಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ಒತ್ತು ನೀಡುವಂತೆ ಇತ್ತಿಚೆಗಿನ ಕೆಲವರ್ಷಗಳಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಮಾಣ ಆತಂಕ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚಾಗಿದೆ. ಪ್ರಾಪ್ತ ಹೆಣ್ಣುಗಳ ಮೇಲೆ ಎಲ್ಲೋ ಒಮ್ಮೊಮ್ಮೆ ಮಾತ್ರ ಘಟಿಸುತ್ತಿದ್ದ ಅತ್ಯಾಚಾರ ಪ್ರಕರಣಗಳು ಈಗ ಪ್ರತೀ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ ೫೦-೬೦ ಮಹಿಳೆಯರ ಮೇಲೆ ಅದರಲ್ಲೂ ಅರ್ಧದಷ್ಟು ಅಪ್ರಾಪ್ತ ಹೆಣ್ಣುಮಕ್ಕಳ ಮೇಲಾಗುತ್ತಿದೆ ಎಂದರೆ ಮುಂದಿನ ದಿನಗಳನ್ನು ನೆನೆದು ಎದೆ ನಡುಗುತ್ತದೆ. ಇದು ದಾಖಲಾಗುತ್ತಿರುವ ಪ್ರಮಾಣ ಮಾತ್ರ. ಮರ್ಯಾದೆಗಂಜಿ ದಾಖಲಾಗದೇ ಉಳಿಯುವ ಪ್ರಮಾಣ ಅದಿನ್ನೆಷ್ಟಿದೆಯೋ. ಹೆಣ್ಣು ಮಕ್ಕಳು ಇನ್ನೆಂತಹ ಭೀಕರ ಸಂಕಷ್ಟಕ್ಕೀಡಾಗುತ್ತಾ ಮುರುಟಿಹೋಗುತ್ತಿದ್ದಾರೋ?

ವಧುಗಳ ಕೊರತೆ ಉಂಟಾದರೆ ಸಹಜವಾಗಿ ವರದಕ್ಷಿಣೆ ಪಿಡುಗು ಕಡಿಮೆಯಾಗಿ, ವಧುದಕ್ಷಿಣೆಯ ಕಾಲ ಬರುತ್ತದೆ. ಹೆಣ್ಣಿಗೆ ಡಿಮ್ಯಾಂಡ್ ಹೆಚ್ಚಾಗುತ್ತದೆಂಬುದು ಸಾಮಾನ್ಯ ಜನರ ಅನಿಸಿಕೆ. ಆದರೆ ವರದಕ್ಷಿಣೆಯ ಪಿಡುಗು ಬೇರೆ ಬೇರೆ ರೂಪಗಳಲ್ಲಿ ಮೈತೆರೆದುಕೊಂಡು ನಮಗೆ ಎದುರಾಗುತ್ತಿದೆ. ಭಾವನಾತ್ಮಕವಾಗಿ ಹೆಣ್ಣನ್ನು ಬ್ಲ್ಯಾಕ್‌ಮೇಲ್ ಮಾಡಿ ಆಸ್ತಿಯ ಹಕ್ಕನ್ನು ಕೇಳದಂತೆ ತಡೆಯುವ ಹುನ್ನಾರ ಒಂದು ವಿಧಾನವಾದರೆ, ಉನ್ನತ ಶಿಕ್ಷಣಕ್ಕಾಗಿ ಮಾಡಿದ ಖರ್ಚಿನ ಹೆಸರಿನಲಿ, ಅಷ್ಟೋ ಇಷ್ಟೋ ಹಣದ ರೂಪದ ನೀಡಿಕೆಯಲ್ಲಿ, ಅದ್ಧೂರಿ ಮದುವೆಯ ನೆಪದಲ್ಲಿ, ವರದಕ್ಷಿಣೆ ಕೊಟ್ಟಂತೆ ಮಾಡಿ ಅವಳನ್ನು ಸ್ಥಿರ ಆಸ್ತಿಯಿಂದ ದೂರವಿರಿಸಿ ಗಂಡುಮಕ್ಕಳೇ ಹಂಚಿಕೊಳ್ಳುವುದು ಬಹಳಷ್ಟು ಸಂದರ್ಭದಲ್ಲಿ ಕಾಣಬರುತ್ತಿದೆ. ಆಸ್ತಿ ತಮ್ಮ ಕುಟುಂಬಕ್ಕೇ ಉಳಿಸಿಕೊಳ್ಳುವ ಧೂರ್ತತನದಿಂದಾಗಿ ಹೆಣ್ಣೇ ಬೇಡವೆಂದು ನಿರ್ಧರಿಸುವ, ತಮ್ಮ ವ್ಯಾಪಾರ, ವಹಿವಾಟುಗಳನ್ನು ನೋಡಿಕೊಳ್ಳಲು ಗಂಡೇ ಸಮರ್ಥ, ಹೆಣ್ಣಾದರೆ ಅವಳೊಂದಿಗೆ ಆಸ್ತಿಯೂ ಬೇರೆ ಕುಟುಂಬಕ್ಕೆ ಸೇರಿ ಬಿಡುತ್ತದೆಂಬ ಪೂರ್ವಗ್ರಹದಿಂದ ಹೆಣ್ಣು ಬೇಡವೆಂದು ನಿರ್ಧರಿಸುವ ಪೋಷಕರು ಹೆಚ್ಚಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯವಾದ ಕಾರಣ ಅಸಮಾನತೆಯ ಆಧಾರದಲ್ಲಿ ನಿಂತಿರುವ ನಮ್ಮ ಕೌಟುಂಬಿಕ ವ್ಯವಸ್ಥೆಯೇ ಆಗಿದೆ ಎಂಬುದು ನಿರ್ವಿವಾದವಾಗಿದೆ.

ಹೆಣ್ಣಿನ ಗುರುತಿಸುವಿಕೆಯ ಮಾನದಂಡಗಳೇ ಮುಕ್ಕಾಗಿರುವ ಭಾರತೀಯ ಸಂದರ್ಭದಲ್ಲಿ ನಾವು ಹೆಣ್ಣಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹೇಗೆಂದು ಚಿಂತಿಸಬೇಕಾಗಿದೆ. ಏಕೆಂದರೆ ಹೆಣ್ಣು ಮಕ್ಕಳು ಕಡಿಮೆಯಾಗುತ್ತಿರುವುದರಿಂದ ಎಲ್ಲ ಧರ್ಮಗಳಲ್ಲೂ ಈಗ ವಧುವಿಗೆ ಬೇಡಿಕೆ ಹೆಚ್ಚಾಗಿದೆ! ೨೦೦೧ರ ಜನಗಣತಿಯಂತೆ ಧರ್ಮಾಧಾರಿತವಾಗಿ ಪ್ರತಿ ೧೦೦೦ ಗಂಡುಮಕ್ಕಳಿಗೆ ಉಳಿದಿರುವ ಹೆಣ್ಣುಮಕ್ಕಳ ಸಂಖ್ಯೆ ಹೀಗಿದೆ….. ಸಿಖ್-೭೮೬, ಜೈನ-೮೭೦, ಹಿಂದೂ-೯೨೫, ಬೌದ್ಧ-೯೪೨, ಮುಸ್ಲಿಂ-೯೫೦, ಕ್ರೈಸ್ತ-೯೬೪. ಈ ಕಾರಣಕ್ಕೇ ಉತ್ತರಭಾರತದ ಧಾರ್ಮಿಕ ಸಂಘಟನೆಯೊಂದು ಭೇಟಿ ಬಚಾವೋ, ಬಹೂ ಲಾವೋ ಆಂದೋಲನವನ್ನು ಪ್ರಾರಂಭಿಸಿದೆಯಂತೆ! ಅಂದರೆ ತಮ್ಮ ಧರ್ಮದಲ್ಲಿ ಹುಟ್ಟಿರುವ ಹೆಣ್ಣುಮಗಳನ್ನು ತಮ್ಮ ಧರ್ಮದಲ್ಲೇ Indian Women Paintingsಉಳಿಸಿ ಬೇರೆ ಧರ್ಮದ ಹೆಣ್ಣನ್ನು ಮದುವೆಯಾಗಿ ತಮ್ಮ ಧರ್ಮಕ್ಕೆ ಕರೆತನ್ನಿ ಎಂಬ ಕ್ರೂರ ಸಂದೇಶವನ್ನು ನೀಡಲಾಗುತ್ತಿದೆ! ಈಗಾಗಲೇ ಇಲ್ಲಿ ಹೆಣ್ಣನ್ನು ಮದುವೆ ಮಾರುಕಟ್ಟೆಯಲ್ಲಿ ಮಾರಾಟವಾಗುವ ತರಕಾರಿಯಂತೆ ಭಾವಿಸಲಾಗುತ್ತಿದೆ. ಈ ರೀತಿಯ ಅಸಮಾನ ಲಿಂಗಾನುಪಾತ ಮುಂದೆ ಹೆಣ್ಣಿಗಾಗಿ ಜಾತಿ-ಧರ್ಮಗಳ ನಡುವೆ ಭೀಕರ ಕಾಳಗವನ್ನೇ ಸೃಷ್ಟಿಸುವ ಮುನ್ಸೂಚನೆಯಂತೆ ಇದು ತೋರುತ್ತಿದೆ. ಹೆಣ್ಣಿನ ಆಯ್ಕೆಯ ಹಕ್ಕನ್ನು ಎಲ್ಲ ರೀತಿಯಿಂದಲೂ ದಮನಿಸುವ ಕ್ರೌರ್ಯ ಸಮಾಜದಲ್ಲಿ ಹೆಚ್ಚಳವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈಗಾಗಲೇ ಇದು ಮರ್ಯಾದಾ ಹತ್ಯೆಯ ಹೆಸರಿನಲ್ಲಿ ದೌರ್ಜನ್ಯದ ಕರಾಳ ರೂಪವನ್ನು ಪಡೆದು ಕೊಂಡಿದೆ.

ತಲೆತಲಾಂತರದಿಂದ ನಡೆದುಕೊಂಡು ಬಂದ ವೇಶ್ಯಾವಾಟಿಕೆಯೆಂಬ ಹೆಣ್ಣಿನ ಮೈಮಾರಾಟದ ದಂಧೆ ಇಂದು ಕರಾಳ ರೂಪವನ್ನು ಪಡೆದು ಬೃಹತ್ ಮಾಫಿಯಾ ಆಗಿ ಬೆಳೆದು ನಿಂತಿದೆ. ಹೆಣ್ಣುಮಕ್ಕಳ ನಾಪತ್ತೆಯೆಂಬ ಜಾಣಕುರುಡಿನ ಹುಡುಕಾಟದ ನಾಟಕ, ಮಹಿಳೆಯರ ಕಳ್ಳಸಾಗಾಣಿಕೆ ಮತ್ತು ಅಕ್ರಮ ಮಾರಾಟ ದಂಧೆ ಇದಕ್ಕೆ ಪೂರಕಾಗಿ ಹುಟ್ಟಿಕೊಂಡಿದ್ದು ಪ್ರತಿನಿತ್ಯ ಈ ವಿಷ ಜಾಲಕ್ಕೆ ನೂರಾರು ಹೆಣ್ಣುಮಕ್ಕಳು ಬಡತನದ ಅನಿವಾರ್ಯತೆ, ಅಜ್ಞಾನ, ಅನಕ್ಷರತೆ, ಪ್ರೀತಿ-ಕೆಲಸಗಳ ಆಮಿಷ, ಮೋಸ-ವಂಚನೆಗಳಿಂದಾಗಿ ನೂಕಲ್ಪಡುತ್ತಿದ್ದಾರೆ. [ಇಷ್ಟಪಟ್ಟು ಮೈಮಾರಿಕೊಳ್ಳುವ ಒಂದು ಸಮೂಹವೂ ನಮ್ಮ ಮಧ್ಯೆ ಇದ್ದು, ಅವರ ಕುರಿತು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ] ಜಾಗತಿಕವಾಗಿ ಮಹಿಳೆಯರ ಮತ್ತು ಮಕ್ಕಳ ಮಾರಾಟದಲ್ಲಿ ಭಾರತವು ಪ್ರಮುಖ ತಾಣವಾಗಿದೆಯೆಂದು ವಿಶ್ವಸಂಸ್ಥೆಯ ವರದಿ ಹೇಳುತ್ತದೆ. ಹ್ಯೂಮನ್ ರೈಟ್ಸ್ ವಾಚ್‌ನ ವರದಿಯಂತೆ ಇದುವರೆಗೆ ಅಂದಾಜು ೧೫೦ ಲಕ್ಷ ಭಾರತದ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕಲಾಗಿದೆ. ಹೆಣ್ಣುಮಕ್ಕಳ ಅಕ್ರಮ ಮಾರಾಟವೆಂಬುದು ಈಗ ಸೀಮಿತ ಚೌಕಟ್ಟುಗಳನ್ನು ದಾಟಿ, ರಾಜ್ಯ-ಅಂತರ್‌ರಾಜ್ಯ ಮಿತಿಗಳನ್ನು ಮೀರಿ ರಾಷ್ಟ್ರ ಹಾಗೂ ಜಾಗತಿಕ ವಿದ್ಯಮಾನವಾಗಿ ಸದ್ದಿಲ್ಲದೇ ಬೆಳೆದು ನಿಂತಿದೆ.

ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆಯ ಅಧ್ಯಯನ ತಂಡ ೨೦೧೨ರಲ್ಲಿ ಮಾಡಿರುವ ಸಮೀಕ್ಷೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ ಸರಾಸರಿ ೨೦೦-೩೦೦ ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದಾರೆ. ಇದರಲ್ಲಿ ಶೇಕಡಾ ೭೦ರಷ್ಟು ಬಾಲ್ಯವನ್ನು ದಾಟದವರು ಎಂಬುದು ಅತ್ಯಂತ ಆತಂಕಕಾರಿಯಾಗಿದೆ. ನಾಪತ್ತೆಯಾಗುವ ಹೆಣ್ಣುಮಕ್ಕಳು ವೇಶ್ಯಾವಾಟಿಕೆಯ ಅಡ್ಡಗಳಲ್ಲಿ ಸಿಕ್ಕಿದರೂ ಇದರ ಹಿಂದಿರುವ ವ್ಯವಸ್ಥಿತವಾದ ಅಕ್ರಮ ಹೆಣ್ಣುಮಕ್ಕಳ ಸಾಗಾಣಿಕಾ ಜಾಲವನ್ನು ಬೇಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲದಲ್ಲಿ ಬೀಳಿಸುವ, ಅವರನ್ನು ಹುಡುಕುವ, ರಕ್ಷಿಸುವ, ಮತ್ತೆ ಅವರನ್ನು ಯಥಾಸ್ಥಿತಿಯಲ್ಲಿ ಉಳಿಸುವ ಕಣ್ಣಾಮುಚ್ಚೆ ನಾಟಕವನ್ನು ವ್ಯವಸ್ಥೆ ಉದ್ದೇಶಪೂರ್ವಕವಾಗಿಯೇ ಆಡುತ್ತಿರುವುದು ನಿರ್ವಿವಾದ. ಹೆಣ್ಣಿನ ದೇಹವನ್ನು ವಸ್ತುವಾಗಿ ಬಳಸಿಕೊಂಡು ವ್ಯಾಪಾರದ ಆಟ ಆಡುತ್ತಿರುವ ವ್ಯವಸ್ಥೆಗೆ ವೇಶ್ಯಾವಾಟಿಕೆ ಲಾಭದಾಯಕ ಉದ್ದಿಮೆಯಾಗಿದೆ. ಅಸಮತೋಲನದ ಲಿಂಗಾನುಪಾತದಿಂದ ವೇಶ್ಯಾವಾಟಿಕೆಯ ದಂಧೆ ಈಗಾಗಲೇ ವ್ಯಾಪಕವಾಗಿದ್ದು, ಇನ್ನಷ್ಟು ತೀವ್ರವಾಗಿ ಹಬ್ಬುವ, ಎಳೆಯ ಹೆಣ್ಣುಮಕ್ಕಳು ಇದರ ಕರಾಳ ಬಾಹುಗಳಲ್ಲಿ ಬಂಧಿಯಾಗುವ ಸಾಧ್ಯತೆಗಳು ಅತೀ ಹೆಚ್ಚಾಗುತ್ತಿದೆ. ಹೀಗೆಂದೇ ಇದರ ನಿಯಂತ್ರಣಕ್ಕೆ ಮತ್ತು ಅನಿವಾರ್ಯವಾಗಿ ಈ ಕೂಪದಲ್ಲಿ ಬಿದ್ದ ಹೆಣ್ಣುಜೀವಗಳ ಪುನರ್‌ವಸತಿ ಹಾಗೂ ಪುನರ್‌ಜೀವನಕ್ಕೆ ತುರ್ತಾಗಿ ಗಮನ ನೀಡಬೇಕಾಗಿದೆ.

ಇದರ ಜೊತೆಗೇ ಈಗ ವ್ಯಾಪಕವಾಗಿ ಹಬ್ಬುತ್ತಿರುವ ಹೆಚ್‌ಐವಿ, ಏಡ್ಸ್‌ನಂತಾ ಮಾರಕ ರೋಗಗಳು ವಾಣಿಜ್ಯೀಕೃತ ವೇಶ್ಯಾವಾಟಿಕೆಯ ಬಹು ದೊಡ್ಡ ಬಳುವಳಿ ಎಂಬುದನ್ನು ನಾವು ಮರೆಯುವಂತಿಲ್ಲ. ಹೆಣ್ಣುಮಕ್ಕಳ ಕೊರತೆಯಿಂದಾಗಿಯೋ, ನೈಸರ್ಗಿಕ ಅಪೇಕ್ಷೆಯಿಂದಲೋ ವೇಶ್ಯಾವಾಟಿಕೆಯಲ್ಲಿ ತೊಡಗುವ ಪುರುಷ ಸಲಿಂಗಕಾಮಿಗಳೂ ಹೆಚ್ಚಾಗುತ್ತಿದ್ದಾರೆ. ಕರ್ನಾಟಕದಲ್ಲಿ ಸದ್ಯ ೨.೫೦ಲಕ್ಷಕ್ಕೂ ಅಧಿಕ ಹೆಚ್‌ಐವಿ ಪೀಡಿತರಿದ್ದಾರೆ. ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ೨೦೧೨ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ತೀವ್ರ ಅಪಾಯದ ಗುಂಪಿನಲ್ಲಿ ನೋಂದಣಿಯಾದ ವೇಶ್ಯೆಯರು ೭೯,೧೬೯ ಇದ್ದರೆ, ವೇಶ್ಯಾವಾಟಿಕೆಯಲ್ಲಿ ತೊಡಗಿರುವ ತೀವ್ರ ಅಪಾಯದ ಹಂತದಲ್ಲಿರುವ ಸಲಿಂಗಕಾಮಿ ಪುರುಷರು ೨೫೨೪೪. ಇದಲ್ಲದೇ ಲಕ್ಷಾಂತರ ಮಂದಿ ರೋಗವಾಹಕರೂ ಇದ್ದು ಪ್ರತೀ ಕ್ಷಣ ಈ ರೋಗ ಹಬ್ಬುತ್ತಿರುವುದು ದಾಖಲಾಗುತ್ತಿದೆ. ರೋಗ ನಿಯಂತ್ರಣಕ್ಕೆಂದೇ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಜೊತೆಗೆ, ರೋಗ ನಿಯಂತ್ರಣದ ಹೆಸರಿನಲ್ಲಿ ಪ್ರತಿ ಜಿಲ್ಲೆ-ತಾಲ್ಲೂಕುಗಳಲ್ಲೂ ಹಬ್ಬಿರುವ ೧೪೩ ಎನ್‌ಜಿಓಗಳು ತನ್ನ ವಿಸ್ತ್ರತಜಾಲದ ಮೂಲಕ ಸಮುದಾಯ ಆಧಾರಿತ ಸಂಘಟನೆ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರ ಸಹಭಾಗಿತ್ವದಲ್ಲಿ ಯಥಾಸ್ಥಿತಿಯನ್ನು ಕಾಯ್ದಿರಿಸುತಾ, ಬೇಡಿಕೆ ಮತ್ತು ಪೂರೈಕೆಯನ್ನು ಸದ್ದಿಲ್ಲದೇ ನಿರ್ವಹಿಸುತ್ತಾ ಈ ದಂಧೆಯ ವ್ಯಾಪಕತೆಗೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಾಣದಿದ್ದರೂ ಆಳಕ್ಕಿಳಿದು ಅಧ್ಯಯನ ಮಾಡುತ್ತಾ ಹೋದರೆ ಕರಾಳತೆ ಗೋಚರಿಸುತ್ತಾ ದಿಗ್ಭ್ರಾಂತಗೊಳಿಸುತ್ತದೆ. ಎಲ್ಲಕ್ಕಿಂಥಾ ಆತಂಕಕಾರಿಯೆಂದರೆ ಈ ಎರಡೂ ರೀತಿಯ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ಗಂಡು ಮತ್ತು ಹೆಣ್ಣು ಮಕ್ಕಳು ಗಾಬರಿ ಹುಟ್ಟಿಸುವಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದು. ಮತ್ತು ಲಕ್ಷಕ್ಕೂ ಅಧಿಕ ಜನರು ಈ ರೋಗದಿಂದ ಸಾವನ್ನಪ್ಪಿರುವುದು. ಪ್ರತಿ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ನೋಂದಣಿಯಾಗಿ ದಾಖಲಾಗಿರುವ ಈ ಕುರಿತ ಮಾಹಿತಿಯನ್ನು ಅಧ್ಯಯನ ಮಾಡಿದರೆ ಸಾಕು ಅಸಹಾಯಕ ಅಪ್ರಾಪ್ತರು ಯಾವ ಪ್ರಮಾಣದಲ್ಲಿ ಈ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂಬುದು ಅರಿವಾಗುತ್ತದೆ. ವ್ಯವಸ್ಥೆ ಜಾಣ ಕುರುಡನ್ನು ನಟಿಸುತ್ತಾ ಮೌನವಾಗಿದೆ.

ಹೆಣ್ಣಿನ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಿಂದಾಗಿ ಹೆಣ್ಣೆಂದರೆ ಸಮಸ್ಯೆ, ಹೆಣ್ಣು ಹುಟ್ಟಿದರೆ ’ಸುರಕ್ಷತೆ’ಯೇkarnataka_women ದೊಡ್ಡ ತಲೆಬಿಸಿ ಎಂದು ಭಾವಿಸುತ್ತಿರುವ ಪೋಷಕರು ಇತ್ತೀಚೆಗೆ ಹೆಣ್ಣು ಮಗು ಹುಟ್ಟುವುದೇ ಬೇಡವೆಂದು ನಿರ್ಧರಿಸುತ್ತಿದ್ದಾರೆ. ಇದು ನಗರ-ಗ್ರಾಮೀಣ, ಅಕ್ಷರಸ್ಥ-ಅನಕ್ಷರಸ್ಥ ಎಂಬ ಬೇಧವಿಲ್ಲದೆ ಹೆಣ್ಣನ್ನು ಭ್ರೂಣದಲ್ಲೇ ಕಾಣದಂತೆ ಕೊಲ್ಲುವ ಆಲೋಚನೆಗೆ ದಾರಿ ಮಾಡಿ ಕೊಟ್ಟಿದೆ. ಲಿಂಗಪತ್ತೆಯ ಸ್ಕ್ಯಾನಿಂಗ್ ಯಂತ್ರ ಬರುವ ಮೊದಲು ಹೆಣ್ಣಿನ ಬಗೆಗೆ ವಿಭಿನ್ನ ಕಾರಣಗಳಿಂದಾಗಿ ಅಸಡ್ಡೆ ಇದ್ದರೂ ಅದನ್ನು ಕೊಂದು ಬಿಸುಟುವ ನಿರ್ಧಾರಕ್ಕೆ ಈಗಿನಂತೆ ಬಹುಸಂಖ್ಯಾತರು ಬರುತ್ತಿರಲಿಲ್ಲ. ಈಗ ಅದು ಇಂತಹ ಯಂತ್ರಗಳಿಂದ ಮತ್ತು ವೈದ್ಯರ ಸಹಕಾರದಿಂದ ಸುಲಭವಾಗುವ ಜೊತೆಗೆ ಕ್ರೌರ್ಯವನ್ನೂ ನಾಜೂಕಾಗಿ ನಡೆಸಬಹುದಾದ ನಾಗರೀಕ[!] ವಿಧಾನಗಳಿಗೆ ಕೆಂಪು ಹಾಸು ಹಾಸಿದೆ.

ಭಾರತದಲ್ಲಿ ಅತಿ ದೊಡ್ಡ ಪಿಡುಗಾಗಿ ವ್ಯಾಪಿಸಿದ್ದ ಬಾಲ್ಯವಿವಾಹ ಈಗ ಹೆಣ್ಣುಮಕ್ಕಳ ರಕ್ಷಣೆಯ ಜವಾಬ್ದಾರಿಯನ್ನು ಬೇಗನೆ ಕಳೆದುಕೊಳ್ಳುವ ನೆವದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಬಾಲ್ಯವಿವಾಹದಿಂದ ಅಪ್ರಾಪ್ತ ಹೆಣ್ಣು ತನ್ನ ಎಲ್ಲಾ ರೀತಿಯ ಹಕ್ಕುಗಳಿಂದ ವಂಚಿತಳಾಗುವ ಜೊತೆಗೆ ಅನಪೇಕ್ಷಿತ ಬದುಕು, ಆಯ್ಕೆಯಲ್ಲದ ಸಂಗಾತಿಯ ಜೊತೆಗೆ ಹೊಂದಿಕೊಳ್ಳುತ್ತಾ ಅಕ್ಷರಶಃ ಲೈಂಗಿಕಜೀತದಾಳಾಗಿ ಮತ್ತು ದುಡಿಯುವ ಯಂತ್ರದಂತೆ ಬದುಕಬೇಕಿರುತ್ತದೆ. ಇದು ದೌರ್ಜನ್ಯದ ಪರಮಾವಧಿಯೇ ಸೈ.

ಇಂತಹ ಮಗುವೇ ಬೇಕು ಎಂಬ ಕಾರಣಕ್ಕೆ ಅಧಿಕ ಪ್ರಮಾಣದಲ್ಲಿ ನಡೆಯುವ ಗರ್ಭಪಾತಗಳು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ತೆರನಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿರುವುದನ್ನೂ ವೈದ್ಯರು ಖಚಿತಪಡಿಸುತ್ತಾರೆ. ಮನಸ್ಸಿನ ಏರುಪೇರುಗಳಿಂದಾಗಿ ಮಹಿಳೆಯರಲ್ಲಿ ಖಿನ್ನತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯ ಹೆಚ್ಚಳಕ್ಕೂ ಇದು ಕಾರಣವಾಗಿದೆ. ಮುಕ್ತ ಲೈಂಗಿಕ ಚಟುವಟಿಕೆಗಳ ಹೆಚ್ಚಳ ಮತ್ತು ವಿಪರೀತದ ಹೆಣ್ಣಿನ ಸೌಂದರ್ಯದ ಕುರಿತಾದ ಕಲ್ಪನೆಗಳಿಂದಾಗಿ ಅವಳ ಬಣ್ಣ, ರೂಪ, ಎತ್ತರಗಳನ್ನು ಮಾರುಕಟ್ಟೆ ಕೇಂದ್ರಿತ ಹಿತಾಸಕ್ತಿಗಳು ನಿರ್ಧರಿಸುವ, ನಿರ್ವಹಿಸುವ ವಿಧಾನಗಳಿಂದಾಗಿ ತನಗೇ ಅರಿವಿಲ್ಲದೇ ಹೆಣ್ಣು ದೌರ್ಜನ್ಯಗಳಿಗೆ ಒಳಗಾಗುತ್ತಾಳೆ. ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಂದಾಗಿ ಇತ್ತೀಚೆಗಿನ ವರ್ಷಗಳಲ್ಲಿ ಹೆಣ್ಣುಮಕ್ಕಳ ಮೇಲೆ ಒತ್ತಡಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಭದ್ರತೆಯ ಕೊರತೆ ಹೆಚ್ಚಾಗಿದ್ದು ’ಇಲ್ಲಿಗೆ ಹೋಗಬೇಡ, ಇಲ್ಲಿಗೆ ಬರಬೇಡ, ಇಷ್ಟೊತ್ತಿನ ಒಳಗೆ ಮನೆ ಸೇರು, ಹೀಗೇ ಇರು, ಹೀಗೇ ಮಾಡು….’ ಎಂಬ ನಿರ್ದೇಶನಗಳು ಅವಳ ಬದುಕು ವ್ಯಕ್ತಿತ್ವಗಳನ್ನೇ ಕುಬ್ಜಗೊಳಿಸುತ್ತಿದೆ. ’ಹೊಸ್ತಿಲಿನೊಳಗೇ ಹೆಣ್ಣು ಇರಬೇಕು’ ’ಸೀಮಿತ ಚೌಕಟ್ಟುಗಳೊಳಗೇ ಬದುಕಬೇಕು’ ಎಂಬ ಹಿಂದಿನ ಸಂಪ್ರದಾಯ ಕಟ್ಟುಕಟ್ಟಲೆಗೇ ಮತ್ತೆ ನಮ್ಮ ಸಮಾಜ ಹಿಂದಿರುಗುತ್ತಿದೆಯೇ ಎನ್ನುವ ಅನುಮಾನ ಹುಟ್ಟುತ್ತಿದೆ. ನಮ್ಮ ಹೆಣ್ಣುಮಕ್ಕಳು ದಶಕಗಳಿಂದ ಹೋರಾಡಿ ಪಡೆದ ತಮ್ಮ ಕೆಲವಷ್ಟಾದರೂ ಹಕ್ಕು, ಸ್ವಾತಂತ್ರ್ಯಗಳನ್ನು ಅಮಾನವೀಯವಾದ ರೀತಿಗಳಲ್ಲಿ ಕಳೆದುಕೊಂಡು ಮೂಗುಬ್ಬಸ ಪಡುವ ಸ್ಥಿತಿಯನ್ನು ತಲುಪುತ್ತಿದ್ದಾರೆ.

ಬದಲಾಗುತ್ತಿರುವ ಸಂಸ್ಕೃತಿಯ ಪರಿಕಲ್ಪನೆಗಳು, ಸುಲಭವಾಗಿ ಕೈಗೆಟುಕುತ್ತಿರುವ ತಂತ್ರಜ್ಞಾನ, ಆಧುನಿಕತೆ ತಂದೊಡ್ಡುತ್ತಿರುವ ಸವಾಲುಗಳಿಂದಾಗಿ ಅಸಮಾನ ಲಿಂಗಾನುಪಾತವು ನಾವು ಊಹಿಸಲೇ ಸಾಧ್ಯವಿಲ್ಲದಂತಾ ಸಮಸ್ಯೆಗಳನ್ನು ಮಹಿಳೆಗೆ ಮತ್ತು ಸಮಾಜಕ್ಕೆ ತಂದೊಡ್ಡಬಹುದೆಂದು ಸಮಾಜವಿಜ್ಞಾನಿಗಳು ಆತಂಕಿಸುತ್ತಿದ್ದಾರೆ. ಸ್ತ್ರೀಯರಿಗೆ ಸಾಮಾಜಿಕ ಭದ್ರತೆಯ ಕುಸಿತದಿಂದ, ಸಮಾಜದ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳ ಹೆಚ್ಚಳ ಮಾತ್ರವಲ್ಲ, ಇದು ಜೀವವಿರೋಧಿಯಾದ ವೈಜ್ಞಾನಿಕ ಬೆಳವಣಿಗೆಗೂ ಕಾರಣವಾಗುತ್ತಿದೆ. ಹೆಣ್ಣನ್ನು ಭ್ರೂಣದಲ್ಲೇ ಕೊಂದು ಬಿಸುಟುವುದು ಮಹಿಳೆಯ ಬದುಕಿನ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪರಮೋಚ್ಚ ಘಟ್ಟ ಎಂದು ವ್ಯವಸ್ಥೆಗೆ ತಿಳಿಹೇಳುವವರಾದರೂ ಯಾರು? ಹೆಣ್ಣು ಹುಟ್ಟುವ ಹಕ್ಕನ್ನೇ ಕಿತ್ತುಕೊಳ್ಳುತ್ತಿರುವುದಕ್ಕೆ ತಾಂತ್ರಿಕತೆಯ ಪರವಾದ ಲಾಭ-ಲೋಭ ಸಂಸ್ಕೃತಿಯ ಪ್ರತೀಕವಾದ ಧನದಾಹಿ ಬಂಡವಾಳಶಾಹಿಯ ಧೋರಣೆಯೇ ಕಾರಣವೆಂದು ಸಮಾಜಕ್ಕೆ ಮನದಟ್ಟು ಮಾಡುವುದಾದರೂ ಹೇಗೆ? ಇದು ನಮ್ಮ ಮುಂದಿರುವ ಮುಖ್ಯ ಸವಾಲು.

ನಮ್ಮ ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳು ಮತ್ತೆ ಮತ್ತೆ ಕಟುವಾಗಿ ಹೆಣ್ಣುಭ್ರೂಣಹತ್ಯೆಯ ಹೆಚ್ಚಳ ಮತ್ತು ಅಸಮಾನ ಲಿಂಗಾನುಪಾತದ ಕುರಿತು ಎಚ್ಚರಿಸುತ್ತಲೇ ಇವೆ. ’ಹೆಣ್ಣು ಭ್ರೂಣಹತ್ಯೆ ಮಾನವ ಜನಾಂಗದ ಅತಿ ಕೆಟ್ಟ ಪದ್ಧತಿ’ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ. ಕಾನೂನು ರಚನೆಯಾಗಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನವೇಕಾಗಿಲ್ಲ ಎಂದು ಪ್ರಶ್ನಿಸುತ್ತಿವೆ. ’ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಭ್ರೂಣಹತ್ಯೆ ನಿಷೇಧ ಕಾನೂನು’ ೧೯೯೪ರಲ್ಲಿಯೇ ಜಾರಿಯಾಯ್ತು. ಆದರೆ ಲಿಂಗಪತ್ತೆ ಮತ್ತು ಹೆಣ್ಣುಭ್ರೂಣಹತ್ಯೆ ಕಾರ್ಯ ಮಾತ್ರ ಅವ್ಯಾಹತವಾಗಿ ನಡೆಯುತ್ತಲೇ ಇದೆ. ದೇಶದಲ್ಲೇ ಈ ಕಾಯ್ದೆಯಡಿ ೧೮೦೦ ಕೇಸುಗಳು ದಾಖಲಾಗಿದ್ದರೂ ೧೪೩ ಜನರಿಗೆ ಮಾತ್ರ ಶಿಕ್ಷೆಯ ತೀರ್ಪು ಬಂದಿದೆ. ಅವರಲ್ಲಿ ಹೆಚ್ಚಿನವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ ಮತ್ತು ಕೇಸುಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

ನ್ಯಾಯಾಲಯದ ಆದೇಶದಂತೆ ಬಹುತೇಕ ರಾಜ್ಯಗಳಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಹೆಣ್ಣುಭ್ರೂಣಹತ್ಯೆ ತಡೆ ಸಮಿತಿಗಳು ಜಾರಿಯಲ್ಲಿವೆ. ಆದರೆ ಬಹಳಷ್ಟು ಕಡೆ ಅವು ನಿಷ್ಕ್ರಿಯವಾಗಿವೆ. ಅನೇಕ ಸಂದರ್ಭದಲ್ಲಿ ಸಮಿತಿಯಲ್ಲಿರುವವರಿಗೇ ತಾವು ಸದಸ್ಯರೆಂದು ತಿಳಿದಿರುವುದಿಲ್ಲ. ಸದಸ್ಯರಲ್ಲೂ ಹೆಚ್ಚಿನವರು ವೈದ್ಯರೇ ಇರುತ್ತಾರೆ. ಇನ್ನುಳಿದ ಬಹುತೇಕರನ್ನು ನಿಷ್ಕ್ರಿಯರಾಗಿರುವವರನ್ನೇ ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿರುತ್ತದೆ. ಸಮಿತಿಗೆ ಪ್ರಶ್ನೆ ಮಾಡುವವರು, ವಿವರಗಳಿಗೆ ಹೋಗುವವರು ಬೇಕಿರುವುದಿಲ್ಲ. ಕಾಟಾಚಾರಕ್ಕೆ ಸಮಿತಿಗಳಿರುತ್ತವಷ್ಟೇ. ಈ ಸಮಿತಿಗಳಲ್ಲೂ ಮುಖ್ಯವಾಗಿ ಲಿಂಗಪತ್ತೆ ತಡೆಯನ್ನು ಮುಖ್ಯ ಕಾರ್ಯ ಮಾಡಿಕೊಳ್ಳಬೇಕಿತ್ತು. ಆದರೆ ಅಲ್ಲಿ ಸ್ಕ್ಯಾನಿಂಗ್ ಮಿಶಿನ್ ನೋಂದಣಿ ಆಗಿವೆಯೆ ಎಂಬುದನ್ನು ಮಾತ್ರ ಮುಖ್ಯ ಪ್ರಶ್ನೆಯಾಗಿಸಿಕೊಂಡು ಕೆಲಸ ಮಾಡಲಾಗುತ್ತದೆ. ನಮ್ಮ ರಾಜ್ಯಾದ್ಯಂತ ಸುಮಾರು ೫೦೦೦ ಸ್ಕ್ಯಾನಿಂಗ್ ಮಿಷಿನ್‌ಗಳು ಸದ್ಯ ಕೆಲಸ ಮಾಡುತ್ತಿವೆ. ಬೆಂಗಳೂರು ನಗರದಲ್ಲೇ ೧೫೦೦ ಮಿಷಿನ್‌ಗಳಿವೆ. ಈಗ ಹಳ್ಳಿಗಳಲ್ಲಿಯೂ ಹೆಣ್ಣು ಭ್ರೂಣ ಪತ್ತೆ ಮಾಡುವ ಮೊಬೈಲ್ ಮಿಷಿನ್‌ಗಳು ಸಂಚರಿಸಲಾರಂಭಿಸಿವೆ. ಒಂದು ಸ್ಕ್ಯಾನಿಂಗ್ ಮಿಷಿನ್ ನೋಂದಣಿ ಮಾಡಿಸಲಿಕ್ಕೆ ಮೊದಲು ೪೦೦೦ ಶುಲ್ಕವಿತ್ತು. ಈಗ ಅದು ೩೫೦೦೦ ಆಗಿದೆ. ಐದು ವರ್ಷಕ್ಕೆ ನವೀಕರಣಕ್ಕೆ ೩೦೦೦ ಇದ್ದಿದ್ದು ಈಗ ೨೫೦೦೦ ಆಗಿದೆ. ನವೀಕರಣ ಮಾಡದಿದ್ದರೆ ದಂಡ ೨೦೦೦೦. ಹೀಗೆ ಜಿಲ್ಲಾ ಸಮಿತಿಗೆ ಪ್ರತಿ ಮಿಷಿನಿನಿಂದಲೂ ಆದಾಯ ಇದೆ! ಹೀಗಾಗಿ ಇದರೆಡೆಗೇ ಗಮನ ಕೇಂದ್ರೀಕರಿಸಿ ಮುಖ್ಯವಾದ ಉದ್ದೇಶವೇ ಪಕ್ಕಕ್ಕೆ ಸರಿದಿದೆ. ಎಲ್ಲಕ್ಕಿಂಥಾ ಮುಖ್ಯವಾಗಿ ಇದರ ವಿರುದ್ಧ ದೂರು ಕೊಡುವವರಾರು? ಕುಟುಂಬವೇ ಸ್ವ ಇಚ್ಛೆಯಿಂದ ಭ್ರೂಣಪತ್ತೆ ಮತ್ತು ಹತ್ಯೆಗೆ ಮುಂದಾಗಿರುತ್ತದೆ. ಸೋನೋಗ್ರಾಫಿಸ್ಟ್ ಮತ್ತು ವೈದ್ಯ ತಪ್ಪೆಂದು ಗೊತ್ತಿದ್ದೇ ಇದರಲ್ಲಿ ಭಾಗಿಗಳಾಗಿರುತ್ತಾರೆ. ಈ ನಿರ್ಧಾರಗಳು ಮತ್ತು ಕೆಲಸಗಳು ಅತ್ಯಂತ ಖಾಸಗಿಯಾಗಿ ಮತ್ತು ಗೌಪ್ಯವಾಗಿ ಜರುಗುವುದರಿಂದ ಸಾಕ್ಷಿಗಳನ್ನು ಯಾರು ಹೇಳುತ್ತಾರೆ? ದೂರು ಕೊಡಬೇಕಿರುವ, ಸಾಕ್ಷಿ ಹೇಳಬೇಕಿರುವ ಹೆಣ್ಣು ಕಂದಮ್ಮ ಅಸಹಾಯಕ ಸ್ಥಿತಿಯಲ್ಲಿ ಸಾವಿಗೆ ಕೊರಳೊಡ್ಡಲು ಗರ್ಭದೊಳಗೇ ರೋದಿಸುತ್ತಿರುತ್ತದೆ……ಹೀಗೆಂದೇ ಇದರ ಪರವಾಗಿ ದನಿಯೆತ್ತಬೇಕಾದವರು ಹೆಣ್ಣಿನ ಪರವಾದ ಕಾಳಜಿ ಇರುವ ಪ್ರಜ್ಞಾವಂತರು ಮಾತ್ರ.

ಹೆಣ್ಣುಭ್ರೂಣಹತ್ಯೆ ತಡೆ ವಿರುದ್ಧವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆರೋಗ್ಯ ಇಲಾಖೆಯಿಂದ ಮುಖ್ಯವಾಗಿ ಮತ್ತು ನಿರಂತರವಾಗಿ ಆಗಬೇಕಿತ್ತು. ಆದರೆ ಅಂತಹವು ನಡೆಯುತ್ತಲೇ ಇಲ್ಲ. ಆಗಿದ್ದರೂ ಅವು ಕಾಟಾಚಾರಕ್ಕೆ ಮಾತ್ರ. ಅನುಮಾನಾಸ್ಪದ ಮತ್ತು ದೂರು ಬಂದ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿಗಳನ್ನು ನಡೆಸಬೇಕಿರುವುದು ಸಮಿತಿಯ ಮುಖ್ಯ ಕೆಲಸ. ಆದರೆ ಅಂಥಹ ಒಂದಾದರೂ ಪ್ರಕರಣ ನಡೆದ ಸುದ್ದಿಯಿಲ್ಲ. ಇಷ್ಟಕ್ಕೂ ದಾಳಿಗಳನ್ನು ಯಾರು ನಡೆಸಬೇಕು? ಜಿಲ್ಲಾ ಆರೋಗ್ಯಾಧಿಕಾರಿಯೇ ಈ ಸಮಿತಿಗೆ ಅಧ್ಯಕ್ಷ. ಅವನು ತನ್ನ ಸಹೋದ್ಯೋಗಿಗಳ ಮೇಲೆ ಹೇಗೆ ಕ್ರಮ ಕೈಗೊಂಡಾನು? ಹೀಗಾಗಿ ಇದಕ್ಕೆ ಸಾರ್ವಜನಿಕ ಸಹಭಾಗಿತ್ವವೇ ಹೆಚ್ಚಾಗಿರುವ ಸದಸ್ಯರನ್ನೊಳಗೊಂಡ ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಬೇಕಿರುವುದು ಮುಖ್ಯವಾಗಿ ಆಗಬೇಕಿದೆ. ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗಿಕೊಂಡಿರುವವರು ಸಮಾಜದ ಅತ್ಯಂತ ಸುಶಿಕ್ಷಿತ, ಪ್ರತಿಷ್ಠಿತ ವೈದ್ಯವರ್ಗ. ತಪ್ಪು ಮಾಡುತ್ತಿರುವವರನ್ನು ಹುಡುಕಿ ಕೇಸು ಹಾಕಿ, ದಾಳಿ ಮಾಡಬೇಕಾದವರೂ ವೈದ್ಯರು, ಕೇಸಿನಿಂದ ಬಿಡಿಸಿಕೊಳ್ಳಲು ಇರುವುದು ಇನ್ನೊಂದು ಪ್ರತಿಷ್ಠಿತ ವಕೀಲ ವರ್ಗ, ಸ್ಕ್ಯಾನಿಂಗ್ ಮಿಷಿನುಗಳನ್ನು ಉತ್ಪಾದಿಸಿ ಮಾರುತ್ತಿರುವುದು ಬಂಡವಾಳಶಾಹಿ ಉದ್ಯಮವರ್ಗ. ಇವರನ್ನೆಲ್ಲಾ ಎದುರು ಹಾಕಿಕೊಳ್ಳಲು ಇಚ್ಛಿಸದ ಸರ್ಕಾರ ಜಾಣಕುರುಡಾಗಿ ತೆಪ್ಪಗಿದ್ದುಬಿಟ್ಟಿದೆ. ಹೀಗಾಗಿಯೇ ರಾಷ್ಟ್ರ ಮತ್ತು ರಾಜ್ಯದಲ್ಲಿ ಕಳೆದ ೨-೩ ದಶಕದಿಂದ ಅವ್ಯಾಹತವಾಗಿ ಸಾಗಿರುವ ಈ ಭ್ರೂಣಹತ್ಯೆಯ ‘ಸಾಂಸ್ಕೃತಿಕ ಅತ್ಯಾಚಾರ’ ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೆಲ್ಲಾ ವಿಫಲವಾಗಿವೆ.

ಎಲ್ಲಿಯವರೆಗೆ ನಮ್ಮ ಪುರುಷ ಪ್ರಧಾನ ಸಮಾಜಕೆ, ಸ್ವಸ್ಥ ಸಮಾಜ ನಿರ್ಮಾಣಕ್ಕೆ, ಹೆಣ್ಣೂ ಪುರುಷನಷ್ಟೇ ಮುಖ್ಯವೆಂಬುದು ಮನವರಿಕೆಯಾಗುವುದಿಲ್ಲವೋ ಅಲ್ಲಿಯವರೆಗೆ ಹೆಣ್ಣು ಸಂತತಿಗೆ ಉಳಿಗಾಲವಿಲ್ಲವೆನಿಸುತ್ತಿದೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಗರ್ಭದಲ್ಲೇ ಹಲ್ಲೆಗೊಳಗಾಗುತ್ತಿರುವ ಕಂದಮ್ಮಗಳ ಆರ್ತನಾದ ನಮ್ಮ ಕರುಳನ್ನೇಕೆ ಕಲಕುತ್ತಿಲ್ಲ? ತಾಯಿಯೇ ನಿರ್ದಯವಾಗಿ ತನ್ನದೇ ಹೆಣ್ಣುಕುಲವನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಬಿಸುಟುವಷ್ಟು ಅವಳ ಬ್ರೈನ್‌ವಾಷ್ ಮಾಡುತ್ತಿರುವ ನೀಚತನಕ್ಕೆ ಯಾರಿಗೆ ಶಿಕ್ಷೆ ಕೊಡೋಣ? ಪರಿಣಾಮಗಳ ಕುರಿತು ಅರಿತೋ ಅರಿಯದೆಯೋ ಇಂತಹ ಅಮಾನುಷ ಕ್ರೌರ್ಯದಲ್ಲಿ ಭಾಗಿಯಾಗುತ್ತಿರುವ ಕುಟುಂಬಕ್ಕೇ? ಒತ್ತಡ ಹೇರುತ್ತಿರುವ ಕುಬ್ಜ ಮನಸುಗಳಿಗೇ? ಇಂತಹದೊಂದು ಅಮಾನುಷ ಮನಸ್ಥಿತಿಯನ್ನು ನಿರ್ಮಾಣ ಮಾಡಿರುವ ಸಮಾಜಕ್ಕೇ? ಹೆಣ್ಣುಭ್ರೂಣವನ್ನು ಪತ್ತೆ ಮಾಡಿ, ಜನರ ಬುದ್ಧಿಗೋ, ಅರಿವಿಗೋ ಕುರುಡಿದ್ದರೂ, ಯಾವುದೇ ಪೂರ್ವಗ್ರಹವಿದ್ದರೂ ಅದನ್ನು ತೊಡೆದು ಹಾಕಿ ಹೆಣ್ಣಿನ ಕುರಿತು ಅವರಿಗೆ ಜಾಗೃತಿ ಮೂಡಿಸದೇ, ವರ್ಷಕ್ಕೆ ಅಂದಾಜು ೬ ಲಕ್ಷದಷ್ಟು ಹೆಣ್ಣುಭ್ರೂಣಗಳನ್ನು ಅಂತಃಕರಣವಿಲ್ಲದೇ ಹೊಸಕಿ ಹಾಕುತ್ತಿರುವ, ನಾವು ದೈವಸ್ವರೂಪಿಗಳೆಂದು ನಂಬುವ ವೈದ್ಯರಿಗೇ? ಇಂತಹ ಅಗಾಧ ಪ್ರಮಾಣದ ಕ್ರೌರ್ಯ ಹೆಣ್ಣು ಕಂದಮ್ಮಗಳ ಮೇಲೆ ಹುಟ್ಟುವ ಮೊದಲೇ ಮತ್ತು ಹೆಣ್ಣಿನ ಕೊರತೆಯ ಕಾರಣಕ್ಕೆ ಆನಂತರದಲ್ಲಿ ದೌರ್ಜನ್ಯವನ್ನು ಎದುರಿಸಬೇಕಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೇ, ಎಚ್ಚೆತ್ತುಕೊಂಡಿಲ್ಲದ ಸರ್ಕಾರಕ್ಕೇ? ಯಾರಿಗೆ ಶಿಕ್ಷೆ ಕೊಡುವುದು? ಶಿಕ್ಷೆ ಕೊಡುವವರಾರು?

ಈಗ ಉಳಿದಿರುವ ದಾರಿಯೊಂದೇ- ಅದು ಜನಜಾಗೃತಿ. ಇದು ಮಹಿಳಾ ಸಂಘಟನೆಗಳ ಕೆಲಸ ಮಾತ್ರವಲ್ಲ. ಎಲ್ಲಾ ಪ್ರಗತಿಪರ, ಲಿಂಗಸೂಕ್ಷ್ಮತೆಯುಳ್ಳ, ಸ್ತ್ರೀಪರ ಕಾಳಜಿಯುಳ್ಳ ಸಂಘಟನೆಗಳು ತುರ್ತಾಗಿ ಈ ವಿಷಯದ ಕಡೆಗೆ ಗಮನಹರಿಸಿ ಕಾರ್ಯಪ್ರವರ್ತವಾಗಬೇಕಿದೆ. ಮಾಧ್ಯಮಗಳ ಮೂಲಕ, ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳ ಮೂಲಕ, ಜಾಹಿರಾತುಗಳ ಮೂಲಕ ಲಿಂಗಸೂಕ್ಷ್ಮತೆಯ ಅರಿವು, ಹೆಣ್ಣುಭ್ರೂಣ ಪತ್ತೆ ಮತ್ತು ಹತ್ಯೆಯ ವಿರುದ್ಧದ ಜಾಗೃತಿ ಮೂಡಿಸಬೇಕಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಮಿತಿಗಳು ರಚನೆಯಾಗುವಂತೆ, ಅದರಲ್ಲಿ ಜಾಗೃತ ನಾಗರೀಕರೂ, ಪ್ರಜ್ಞಾವಂತ ಸಾಮಾಜಿಕ ಕಾರ್ಯಕರ್ತರೂ ಇರುವಂತೆ ನೋಡಿಕೊಳ್ಳಬೇಕಿದೆ. ಹೆಣ್ಣುಭ್ರೂಣಪತ್ತೆ ಕಾರ್ಯವನ್ನು ಅನಿವಾರ್ಯವಾದ ಅನಾರೋಗ್ಯದ ಕಾರಣಕ್ಕಲ್ಲದೇ ಬೇರಾವ ಕಾರಣಕ್ಕೂ ಮಾಡದಂತೆ, ಅದರ ವಿವರಗಳನ್ನು ಗ್ರಾಹಕರಿಗೆ ತಿಳಿಸದಂತೆ ಹೆಚ್ಚಿನಂಶ ಜನರ ತೆರಿಗೆ ದುಡ್ಡಿನಲ್ಲಿ ಓದಿ ವೈದ್ಯರಾದವರ ಮನವೊಲಿಸಬೇಕಿದೆ. ಹೆಣ್ಣೆಂಬ ಕಾರಣಕ್ಕೇ ಗರ್ಭಪಾತ ಮಾಡದಂತೆ ವೈದ್ಯರಿಗೆ ತಿಳಿವು, ಕಾನೂನಿನ ಬಿಗಿ ಮತ್ತು ಎಚ್ಚರಿಕೆಗಳನ್ನೂ ನೀಡಬೇಕಿದೆ.

ಇದೆಲ್ಲದರ ಜೊತೆಗೆ, ಬಹುಶಃ ಎಲ್ಲಕ್ಕೂ ಮುಖ್ಯವಾಗಿ ಹೆಣ್ಣುಮಕ್ಕಳೇ ಎಚ್ಚೆತ್ತು ತಮ್ಮ ಸಂತತಿಯನ್ನು ಉಳಿಸಿಕೊಳ್ಳಲು ದೃಢ ಸಂಕಲ್ಪ ಮಾಡದಿದ್ದರೆ, ’ಅವಳ’ನ್ನು ಉಳಿಸಲು ಯಾವ ದೇವರಿಗೂ ಸಾಧ್ಯವಿಲ್ಲವೇನೋ? ಎಂದೆನಿಸುತ್ತಿದೆ.

ಮಕ್ಕಳನ್ನು ಬೆಳೆಸುವುದು ಹೇಗೆ?


– ರೂಪ ಹಾಸನ


ನಾನೊಂದು ಮಗು
ನಾನೊಂದು ಮಗು
ನನ್ನ ಬರವಿಗೆ ಇಡೀ ಜಗತ್ತು ಕಾಯುತ್ತದೆ
ನಾನು ಏನಾಗುತ್ತೇನೆ ಎಂದು
ಇಡೀ ಭೂಮಿ ಕುತೂಹಲದಿಂದ ನೋಡುತ್ತದೆ.
ನಾನು ಏನಾಗಿದ್ದೇನೆ ಏನಾಗುತ್ತೇನೆ
ಎಂಬುದರ ಮೇಲೆ ನಾಗರಿಕತೆಯ ತಕ್ಕಡಿ ನಿಂತಿದೆ

ನಾನೊಂದು ಮಗು
ನನ್ನ ಭವಿಷ್ಯ ನಿಮ್ಮ ಕೈಯಲ್ಲಿದೆ.
ನನ್ನ ಸೋಲು-ಗೆಲುವು
ನಿಮ್ಮಿಂದಲೇ ನಿರ್ಧಾರವಾಗುತ್ತದೆ.

ಎಂದೇ
ನೆಮ್ಮದಿ ನೀಡುವಂಥದನ್ನು ಕೊಡಿ
ಇದು ನನ್ನ ಪ್ರಾರ್ಥನೆ.
ದಯವಿಟ್ಟು ಕಲಿಸಿಕೊಡಿ
ಈ ಜಗತ್ತಿಗೆ ನಾನೊಂದು ವರವಾಗುವಂತೆ.
ಮ್ಯಾಮಿ ಜೆನಿಕೋಲ್

ಬಹುಶಃ ಈ ಪದ್ಯ ನಾವು ಹಿರಿಯರೆಲ್ಲರೂ ಒಮ್ಮೆ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುವಂತಿದೆ.child-dreaming ಯಾವುದೇ ದೇಶದ ಅಭಿವೃದ್ಧಿ ಎನ್ನುವಂತದ್ದು ಆ ದೇಶದ ಮಕ್ಕಳನ್ನು ಕೇಂದ್ರೀಕರಿಸಿ ಆಗಬೇಕು ಎನ್ನುವುದು ಒಂದು ಆರೋಗ್ಯಕರ ಸಿದ್ದಾಂತ. ಮಕ್ಕಳು ಪ್ರತಿಕ್ಷಣ ಬೆಳೆಯುವ ಚೈತನ್ಯಶಾಲಿಗಳಾಗಿರುವುದರಿಂದ ಅವರ ಸಮಗ್ರ ಸರ್ವತೋಮುಖ ಅಭಿವೃದ್ಧಿಯಾದರೆ ಇಡೀ ದೇಶವೇ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಮಗುವನ್ನು ಕೇಂದ್ರದಲ್ಲಿಟ್ಟುಕೊಂಡು ವಿವರಿಸಿಕೊಳ್ಳುತ್ತಾ ಹೋದಾಗ ಮಗುವಿಗೆ ನಿಜವಾಗಿ ಏನು ಬೇಕು? ಅದಕ್ಕೆ ನಾವೇನು ಮಾಡಬೇಕು? ಮಗುವಿನ ಆರೋಗ್ಯಕರ ಬೆಳವಣಿಗೆಗೆ ನಾವೇನು ಮಾಡಬೇಕೆಂಬುದು ಅರಿವಿಗೆ ಬರುತ್ತಾ ಹೋಗುತ್ತದೆ. ಮಗುವೊಂದು ಪ್ರತಿ ಕ್ಷಣ ಹೊಸತಿಗೆ ಅಪ್ಡೇಟ್ ಆಗುತ್ತಿರುತ್ತದೆ. ನಾವು ಅದಕ್ಕೆ ಸ್ಪಂದಿಸದಿದ್ದರೆ ಪ್ರತಿ ಕ್ಷಣ ಔಟ್ಡೇಟೆಡ್ ಆಗುತ್ತಿರುತ್ತೇವೆ. ಇದೇ ನಾವು ಮಗುವನ್ನು ಅರ್ಥಮಾಡಿಕೊಳ್ಳಲು, ಬೆಳೆಸಲು ಇರುವ ನಿಜವಾದ ತಡೆಗೋಡೆ. ಮಗುವನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾ ಹೋದರೆ ಈ ಸಮಸ್ಯೆ ತಾನಾಗಿಯೇ ಪರಿಹಾರವಾಗುತ್ತದೆ.

‘ಮಗುವಿಗೆ ಏನು ತಿಳಿಯುತ್ತದೆ? ಅದು ನಾವು ಹೇಳಿಕೊಟ್ಟ ಹಾಗೆ ಕಲೀತಾ ಹೋಗುತ್ತೆ. ಅದಕ್ಕೆ ತನ್ನದೇ ಆದ ವ್ಯಕ್ತಿತ್ವ ಇರುವುದಿಲ್ಲ’ ಎನ್ನುವುದು ನಮ್ಮ ಸಾಮಾನ್ಯ ಅಭಿಪ್ರಾಯ. ಆದರೆ ಬಹಳ ಸೂಕ್ಷ್ಮವಾಗಿ ಮಗುವೊಂದನ್ನು ಗಮನಿಸುತ್ತಿದ್ದರೆ ಈ ನಮ್ಮ ಅಭಿಪ್ರಾಯ ತಪ್ಪು ಎಂದು ಸಾಬೀತಾಗುತ್ತದೆ. ಮಕ್ಕಳ ಮನಸ್ಸು ಒಂದು ಕಪ್ಪು ಹಲಗೆ ಇದ್ದ ಹಾಗೆ, ಅಲ್ಲಿ ನಾವು ಏನನ್ನ ಬೇಕಾದರೂ ಬರೀಬಹುದು ಎಂದು ನಂಬಿದರೆ ಅದಕ್ಕಿಂತಾ ಪೆದ್ದುತನ ಇನ್ನೊಂದಿಲ್ಲ. ವೈದ್ಯಕೀಯ ಸಂಶೋಧನೆಗಳ ಪ್ರಕಾರ ಪ್ರತಿಯೊಂದು ಮಗುವೂ ಒಂದು ವ್ಯಕ್ತಿ. ಪ್ರತಿಯೊಂದು ಮಗುವಿನಲ್ಲೂ ಇರುವ ಮನಸ್ಸನ್ನು ಗೌರವಿಸಿ ವ್ಯಕ್ತಿ ಎಂದು ನಂಬಲಾಗುತ್ತದೆ.

ಹಸಿವಾದಾಗ ಅಳುವುದನ್ನು, ಹೊಸ ಆಟಿಕೆ ಕೈಗೆ ಸಿಕ್ಕಾಗ ಸಂತಸದಿಂದ ನಗುವುದನ್ನು, ತನ್ನ ತಾಯಿಯನ್ನ ಕಂಡ ತಕ್ಷಣ ಬೇರೆಯವರ ಕೈಯಿಂದ ಜಿಗಿದು ತಾಯಿಯನ್ನು ಅಪ್ಪಿಕೊಳ್ಳುವುದನ್ನು, ತನಗೆ ಬೇಕಾದ ವಸ್ತು ಸಿಗದಿದ್ದಾಗ ಸಿಟ್ಟುಗೊಳ್ಳುವುದನ್ನು, ಮೆರ್ರಿಗೋ ರೌಂಡ್ ತಿರುಗುವುದನ್ನು ನೋಡಿ ಕೈ ಕಾಲು ಬಡಿದು ಆಡುವುದನ್ನು ಮಗುವಿಗೆ ಹುಟ್ಟಿದ ತಕ್ಷಣ ಯಾರು ಕಲಿಸುತ್ತಾರೆ? ಮಗು ದೊಡ್ಡದಾಗುತ್ತಾ ಹೋದ ಹಾಗೆ, ನಾವು ಏನನ್ನೇ ಹೊರಗಿನಿಂದ ಕಲಿಸಿದರೂ, ಅದನ್ನ ಗ್ರಹಿಸುವ ಶಕ್ತಿ, ತಿಳಿದುಕೊಳ್ಳುವ, ಅರ್ಥೈಸಿಕೊಳ್ಳುವ ಮನಸ್ಸು, ಸಾಮರ್ಥ್ಯ ಮಗುವಿನಲ್ಲಿ ಹುಟ್ಟಿನಿಂದಲೇ ಇರುತ್ತದೆ. ತಾನು ಬೆಳೀತಾ ತನ್ನ ಸುತ್ತಲಿನ ಪರಿಸರವನ್ನ ಮಗು ತನ್ನ ದೃಷ್ಟಿಕೋನದಂತೆಯೇ ಅರ್ಥೈಸುತ್ತಾ ಹೋಗುತ್ತದೆ. ಪುಟ್ಟ ಮಗುವಿಗೆ ಸಹ ತನ್ನದೇ ಇಷ್ಟಾನಿಷ್ಟಗಳು, ನಿಲುವುಗಳು, ಸ್ವಭಾವ ಇರುವುದನ್ನು ಗಮನಿಸಬಹುದು. ಕೆಲವು ಮಕ್ಕಳಿಗೆ ಸಿಹಿ ಇಷ್ಟ ಅಂದ್ರೆ ಕೆಲವಕ್ಕೆ ಉಪ್ಪಿನ ಪದಾರ್ಥ ಇಷ್ಟ. ಕೆಲವು ರಾಗಿ ಮಡ್ಡಿಯನ್ನ ಖುಷಿಯಿಂದ ತಿಂದ್ರೆ, ಇನ್ನು ಕೆಲವು ಮುಖ ಸಿಂಡರಿಸುತ್ತವೆ. ಕೆಲವು ಕಂದಮ್ಮಗಳಿಗೆ ಬಿಸಿಬಿಸಿ ನೀರಲ್ಲಿ ಗಂಟೆಗಟ್ಟಲೆ ಸ್ನಾನ ಮಾಡಿಸಿದರೂ ಕಮಕ್- ಕಿಮಕ್ ಎನ್ನುವುದಿಲ್ಲ. ಇನ್ನು ಕೆಲವು ಮಕ್ಕಳು ಸ್ವಲ್ಪ ಬಿಸಿನೀರು ಮೈಮೇಲೆ ಬಿದ್ದಿದ್ದೇ ತಡ, ಏನೋ ಅನಾಹುತವೇ ಆಯ್ತು ಎಂಬಂತೆ ಕಿರಿಚಾಡುತ್ತವೆ. ಹೀಗೆ ಪ್ರತಿಯೊಂದು ಮಗುವೂ ತನ್ನದೇ ಆದ ವಿಶಿಷ್ಟತೆಯಿಂದ ಪ್ರತ್ಯೇಕ ವ್ಯಕ್ತಿನೇ ಆಗಿರುತ್ತದೆ. ಅದನ್ನು ಗುರುತಿಸುವಂತಾ ಗೌರವಿಸುವಂತಾ ಮನೋಭಾವ ನಮ್ಮಲ್ಲಿ ಮೂಡಬೇಕಷ್ಟೇ.

ಪ್ರತಿಯೊಂದು ಮಗುವಿಗೂ ಹಿರಿಯರಂತೆಯೇ, ಅಥವಾ ಅದಕ್ಕಿಂತಾ ಸೂಕ್ಷ್ಮವೂ ಸಂವೇದನಾಶೀಲವು ಆದ ಎಲ್ಲ ಸನ್ನಿವೇಶಗಳಿಗೂSchool_children_line_Cochin_Kerala_India ಸ್ಪಂದಿಸಿ ಮೂಡುವ ಸಂವೇದನೆಗಳಿವೆ. ಅದನ್ನು ನಿರ್ಲಕ್ಷಿಸಿ ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನೆಲ್ಲಾ ಮಗುವಿನ ಮೇಲೆ ಬಲವಂತವಾಗಿ ಹೇರುವುದರಿಂದ ಮಗುವಿನ ಸೂಕ್ಷ್ಮ ಸಂವೇದನೆಗಳು ಘಾಸಿಗೊಂಡು, ದೊಡ್ಡದಾದಂತೆಲ್ಲಾ ಸ್ವತಂತ್ರ ವ್ಯಕ್ತಿತ್ವ ಇಲ್ಲದೇ ಕೀಳರಿಮೆಯಿಂದ, ಮನೋವೇದನೆಯಿಂದ ನರಳುತ್ತವೆ ಎನ್ನುತ್ತಾರೆ ಮಕ್ಕಳ ಮಾನಸಿಕ ತಜ್ಞರು. ಇಂದಿನ ನಮ್ಮ ಮಕ್ಕಳು ಹಿಂದಿನ ಪೀಳಿಗೆಗೆ ಹೋಲಿಸಿದರೆ ಹೆಚ್ಚು ಬುದ್ಧಿವಂತರು, ಪ್ರತಿಭಾವಂತರು. ಆದರೆ ಇಂದಿನ ಶಿಕ್ಷಣದ ಹೆಸರಿನಲ್ಲಿ ಅವರನ್ನು ಹೆಚ್ಚು ನೆನಪಿಟ್ಟುಕೊಳ್ಳುವ, ಮಾಹಿತಿ ಸಂಗ್ರಹಿಸುವ, ತುಂಬಿಟ್ಟಿದ್ದನ್ನು ಹೊರಚೆಲ್ಲುವ ‘ಮಿನಿ ಕಂಪ್ಯೂಟರ್’ ಗಳಾಗಿ ಮಾತ್ರ ತಯಾರಿಸಲಾಗ್ತಾ ಇದೆ. ಅವರಲ್ಲಿರುವ ಸಂಗೀತ, ನೃತ್ಯ, ಕಲೆ, ಕ್ರೀಡೆಯಂತಾ ಪ್ರತಿಭೆಗಳಿಗೆ ಒಂದಿಷ್ಟು ಪ್ರೋತ್ಸಾಹ ದೊರಕಿದರೂ ಅವರ ಜಾಣತನ, ಸೃಜನಶೀಲತೆ, ವೈಚಾರಿಕತೆಗೆ ಮತ್ತಷ್ಟು ಮೆರುಗು ನೀಡುವ ಪ್ರಯತ್ನಗಳು ನಡೆಯುವುದು ಕಡಿಮೆ. ಅವರೊಳಗಿನ ಕುತೂಹಲದ ಪ್ರಶ್ನೆಗಳು ಹೆಚ್ಚಿನ ಬಾರಿ ಹೊರಬರದಂತೆ ನಾವೇ ತಡೆಯೊಡ್ಡುತ್ತೇವೆ. ಚಿಕ್ಕಮಕ್ಕಳಾಗಿದ್ದಾಗಿನ ಅವರ ಕುತೂಹಲವನ್ನು, ಅಪರಿಮಿತ ಪ್ರಶ್ನೆಗಳನ್ನು ಮೆಲ್ಲಗೆ ನಾವೇ ಮುರುಟಿ ಬಿಟ್ಟಿರ್ತೀವಿ. ಮಕ್ಕಳ ದೇಹಕ್ಕೆ ‘ಯೂನಿಫಾರಂ’ ತೊಡಿಸಿ ಏಕರೀತಿ ಕಾಣೋ ಹಾಗೆ ಮಾಡಿದಂತೇನೇ ಅವರ ಮನಸ್ಸು-ಬುದ್ಧಿಯನ್ನೂ ಯೂನಿಫಾರಂ ತೊಡಿಸಿ ಏಕರೀತಿ ಮಾಡುವುದಕ್ಕೆ  ಹೊರಟುಬಿಟ್ಟಿದ್ದೇವೆ ನಾವು.

ಆದರೆ ಪ್ರತಿಯೊಂದು ಮಗುವಿಗೂ ಅದರದ್ದೇ ಮನಸ್ಸಿದೆ, ಭಾವನೆಗಳಿವೆ, ನೋವು-ನಲಿವುಗಳಿವೆ. ಮಗು ತನ್ನ ಸುತ್ತ ಮುತ್ತಲ ಘಟನೆ, ಅನುಭವಗಳನ್ನು ನಮಗಿಂತಲೂ ತೀವ್ರವಾಗಿ ಗಮನಿಸುತ್ತಿರುತ್ತದೆ. ಜೊತೆಗೆ ಅದಕ್ಕೆ ತನ್ನದೇ ಆದ ಅಭಿಪ್ರಾಯವೂ ಇದೆ! ತನ್ನ ಮೇಲಾಗುವ ಒತ್ತಡ, ನೋವು, ಅವಮಾನ, ನಾವು ತೋರುವ ನಿರ್ಲಕ್ಷ್ಯದಿಂದ ಮಗುವಿನ ಮನಸ್ಸು ಮುದುಡಿ ಹೋಗುತ್ತದೆ. ಮತ್ತೆ ಅದನ್ನು ಅರಳಿಸುವುದು ಕಷ್ಟದ ಕೆಲಸ. ಮಗುವಿನ ಬಗ್ಗೆ ಒಂದು ಸಣ್ಣ ಗಮನಿಸುವಿಕೆ ಕೂಡ ಅದಕ್ಕೆ ಖುಷಿ ಕೊಡುತ್ತದೆ. ತನ್ಮೂಲಕ ಅದು ತನ್ನನ್ನೇ ಗೌರವಿಸಿಕೊಳ್ಳುತ್ತದೆ. ಆತ್ಮವಿಶ್ವಾಸ ಬೆಳಸಿಕೊಳ್ಳುತ್ತದೆ. ಹೀಗಾಗೇ ಮಗುವಿನ ಜೊತೆ ತೊಡಗಿಕೊಳ್ಳುವಾಗ ನಮ್ಮ ಮಾತು, ನಡವಳಿಕೆ ಎಲ್ಲವೂ ಗಾಜಿನ ಜೊತೆಗೆ ವ್ಯವಹರಿಸುವಷ್ಟೇ ಸೂಕ್ಷ್ಮವಾಗಿರಬೇಕು. ಗಾಜಿನ ಮೇಲೆ ನಾವಿಡೋ ಕೈಬೆರಳು ಕೂಡ ಗುರುತಾಗಿ ಉಳಿದುಬಿಡುತ್ತೆ ಅಲ್ಲವೇ?

ಹಿರಿಯರಾದ ನಾವು ಪ್ರತಿಯೊಂದು ಮಗುವೂ ತನ್ನ ಭಾವನೆಗಳಿಂದ ತನ್ನಂತೆ ತಾನೇ ವಿಕಸಿಸಿ, ಅರಳುವುದಕ್ಕೆ, ಪರಿಮಳ ಸೂಸೋದಿಕ್ಕೆ ಬಿಡಬೇಕು. ಅದಕ್ಕೆ ತಕ್ಕ ಪೂರಕ ಪರಿಸರವನ್ನಷ್ಟೇ ನಾವು ಒದಗಿಸಿ ಕೊಡಬೇಕು. ಮಗುವಿನ ಮನಸ್ಸು ವಿಶಾಲ ನದಿಯಂತೆ. ಅದು ತನಗೆ ಬೇಕೆಂದಂತೆ, ಬೇಕಾದ ಕಡೆಗೆ ಹರಿದು ಬೇಕೆನಿಸಿದ್ದನ್ನು ಪಡೆಯಬಲ್ಲದು. ಯಾವುದು ಸರಿಯಾದದ್ದು? ಯಾವುದು ತಪ್ಪು ಅಂತ ಹೇಳಿಕೊಡುವುದಷ್ಟೇ ನಮ್ಮ ಕರ್ತವ್ಯ. ಅದನ್ನು ಪಡೆಯುವ ದಾರಿಗಳನ್ನ ಮಗು ತಾನೇ ತಿಳೀತಾ ಹೋಗುತ್ತೆ. ಹಾಗೇ ಮಗುವನ್ನ ನಮ್ಮ ಮಿತಿಯಲ್ಲಿಯಷ್ಟೇ ಅರ್ಥೈಸಿಕೊಂಡು ಅದಕ್ಕೆ ಸಂಕೋಲೆ ತೊಡಿಸುವ ‘ರಿಂಗ್ ಮಾಸ್ಟರ್’ ಗಳು ನಾವಾಗದಿರಬೇಕಷ್ಟೇ. ಅದನ್ನು ಅದು ಇರುವಂತೆ ಅರಿತುಕೊಳ್ಳುವ ಕಲೆಯೇ ನಾವು ಮಗುವಿನ ಘನತೆಗೆ ಕೊಡುವ ಬೆಲೆ ಎಂದು ನಾನು ಭಾವಿಸುತ್ತೇನೆ.

ಮಕ್ಕಳು ಎಂದರೆ ಅರಳಲು ಕಾದಿರುವ ಮೊಗ್ಗುಗಳು. ಒಂದು ಮೊಗ್ಗು ಪರಿಪೂರ್ಣವಾಗಿ child_colourಅರಳಬೇಕೆಂದರೆ ನಾವು ಆ ಗಿಡಕ್ಕೆ ಸರಿಯಾದ ಗಾಳಿ, ಬೆಳಕು, ನೀರು, ಮಣ್ಣು,  ಪೋಷಕಾಂಶವನ್ನು ಸಮರ್ಪಕವಾಗಿ ಸಮ ಪ್ರಮಾಣದಲ್ಲಿ ಕೊಟ್ಟಿರಬೇಕು. ಒಂದೇ ಒಂದು ಅಂಶ ಕಡಿಮೆಯಾದರೂ ಮಗುವಿನ ವ್ಯಕ್ತಿತ್ವ ಮುಕ್ಕಾಗುತ್ತದೆ. ಹೀಗಾಗೇ ಮಗುವಿಗೆ ನಾವು ರೂಪಿಸಿ ಕೊಡುವ ವಾತಾವರಣ ತುಂಬಾ ಮುಖ್ಯವಾದುದು. ಒಂದು ಗಿಡದಿಂದ ಒಂದು ಮೊಗ್ಗು ಕುಡಿಯೊಡೆದು ಬಂತೆಂದರೆ ಅದು ಸರಿಯಾಗಿ ವಿಕಸಿಸುವವರೆಗೆ ನಮ್ಮ ಜವಾಬ್ದಾರಿಯಿರುತ್ತದೆ. ಹೀಗಾಗೇ ಮಗುವೆಂದರೆ ‘ಟೇಕನ್ ಫಾರ್ ಗ್ರಾಂಟೆಡ್’ ಆಗಬಾರದು. ಅದು ಒಂದು ಬಹು ದೊಡ್ಡ ಜವಾಬ್ದಾರಿಯಾಗಬೇಕು.

‘ನೀವು ನಿಮ್ಮ ಮಕ್ಕಳನ್ನ ಪ್ರೀತಿಸ್ತೀರಾ?’ ಎಂದು ಕೇಳಿದರೆ ಎಲ್ಲ ಪಾಲಕರೂ ಒಕ್ಕೊರಲಿನಿಂದ ಹೌದೆನ್ನುತ್ತಾರೆ. ಹಾಗಾದರೆ ಪ್ರೀತಿ ಎಂದರೇನು? ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ಮಕ್ಕಳಿಗೆ ಪ್ರೀತಿ ಕೊಡೋದು ಅಂದ್ರೆ ಅವರು ಕೇಳಿದ್ದು ಕೊಡಿಸೋದು, ಒಳ್ಳೆ ಶಾಲೆಗೆ ಕಳಿಸೋದು, ಒಳ್ಳೆ ಬಟ್ಟೆ ಕೊಡಿಸೋದು, ಒಳ್ಳೆ ತಿಂಡಿ ಕೊಡಿಸೋದು ಎಂಬಷ್ಟಕ್ಕೆ ಮಾತ್ರ ಇಂದು ನಮ್ಮ ಪ್ರೀತಿ ಸೀಮಿತವಾಗಿದೆ. ಆದರೆ ನಿಜವಾದ ಪ್ರೀತಿ, ಮಕ್ಕಳು ನಮ್ಮಿಂದ ನಿರೀಕ್ಷಿಸುವುದೇನೆಂದರೆ ನಾವು ಅವರಿಗೆ ಕೊಡುವಗಮನ, ಕಾಳಜಿ ಮತ್ತು ಗುಣಾತ್ಮಕ ಸಮಯ.

ಮಹಾಭಾರತದಲ್ಲೊಬ್ಬ ಶಿಶುಪಾಲನೆಂಬ ಉಗ್ರ ಬರುತ್ತಾನೆ. ಅವನ ಕಥೆ ನಮಗೆ ಗೊತ್ತೇ ಇದೆ. ಆದರೆ ಈಗ, ಆಧುನಿಕ ಯುಗದಲ್ಲಿ ನಮ್ಮ ಮಕ್ಕಳ ಪಾಲಿಗೆ ಪಾಲಕರೇ ಉಗ್ರಗಾಮಿಗಳು! ಇದು ನಾನು ಹೇಳುತ್ತಿರುವುದಲ್ಲ ನಮ್ಮ ಮನಃಶಾಸ್ತ್ರಜ್ಞರು ಹೇಳುತ್ತಿರುವುದು. ಮಕ್ಕಳ ಶೇಕಡಾ 90ಕ್ಕೂ ಹೆಚ್ಚಿನ ಸಮಸ್ಯೆಗಳಿಗೆ ಪಾಲಕರೇ ಕಾರಣವೆಂದು ಅವರು ಹೇಳುತ್ತಾರೆ. ಹಾಗೆಂದು ಎಲ್ಲರ ಕುರಿತೂ ಸಾರಾಸಗಟಾಗಿ ಈ ಮಾತನ್ನು ಹೇಳುತ್ತಿಲ್ಲ. ಈ ನಮ್ಮ ಶಿಶುಪಾಲಕರಲ್ಲಿ ಕೆಲವರು ತಮಗೇ ಅರಿವಿಲ್ಲದೇ, ತಮ್ಮ ಮಕ್ಕಳ ಮೇಲೆ ಹೇರುವ ಅತೀ ಒತ್ತಡದಿಂದಾಗಿ ಅವರನ್ನು ಖಿನ್ನತೆಗೆ ನೂಕುವ ಮನೋವ್ಯಾಕುಲಕ್ಕೀಡು ಮಾಡುವ, ಅನಿವಾರ್ಯವಾಗಿ ಮಕ್ಕಳು ಆತ್ಮಹತ್ಯೆಯಂಥಾ ಋಣಾತ್ಮಕ ನಿರ್ಧಾರವನ್ನೂ ಕೈಗೊಳ್ಳುವಂತೆ ಮಾಡುವ ದುಷ್ಟರಾಗಿಬಿಡುತ್ತಾರೆಂಬುದನ್ನು ವಿಷಾದದಿಂದ ಹೇಳಲೇ ಬೇಕಿದೆ.

ತಮ್ಮ ಮಗುವಿನ ಬುದ್ಧಿಮತ್ತೆ, ಸಾಮರ್ಥ್ಯ, ತಿಳಿವಿನ ಮಿತಿಯೊಂದನ್ನೂ ಅರಿಯದೇ ‘ನೀನು ಮೊದಲ ರ‍್ಯಾಂಕ್ ಬರಬೇಕು’ ‘ಇಷ್ಟೇ ಅಂಕ ತೆಗೆದುಕೊಳ್ಳಬೇಕು’ ‘ಇಂತಹದ್ದೇ ಕೋರ್ಸ್ ಓದಬೇಕು’…….ಇತ್ಯಾದಿ ಹೇರುತ್ತಾ ಹೋದಾಗ ಮಕ್ಕಳು ಪಾಲಕರ ಬಯಕೆ ಪೂರೈಸಲು ಹೆಣಗುತ್ತಾ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ. ಹೀಗೆಂದೇ ಇಂದು ಮಕ್ಕಳು ತಮ್ಮ ವಯಸ್ಸು ಹಾಗೂ ಮನಸ್ಸಿನ ಸಹಜತೆ ಕಳೆದುಕೊಂಡು ಕೃತಕವಾಗಿ ಬದುಕುತ್ತಿದ್ದಾರೆ. ಅವರ ಜೀವಂತಿಕೆ ಮತ್ತು ಸೃಜನಶೀಲತೆಗೆ ಒತ್ತು ನೀಡದೇ ನಾವೀಗ ಅವರನ್ನು ಮಾರುಕಟ್ಟೆಯ ಸರಕುಗಳಾಗಿ ಮಾತ್ರ ತಯಾರಿಸುತ್ತಿರುವುದರಿಂದ ಖಿನ್ನತೆಯನ್ನು ಅನುಭವಿಸುತ್ತಾ ತಾವಾಗಲಾರದ್ದನ್ನು ಆಗಲು ಪ್ರಯತ್ನಿಸಿ ಅದು ಸಾಧ್ಯವಿಲ್ಲವೆಂದು ಅರಿವಾದಾಗ ಕೀಳರಿಮೆಯಿಂದ ನೇತ್ಯಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತ ತಲುಪುತ್ತಿದ್ದಾರೆ.

ಇರುವ ಒಂದೋ ಎರಡೋ ಮಕ್ಕಳನ್ನು ಅತೀ ಮುದ್ದಿನಿಂದ ನಾಜೂಕುIndian-Child-Dressed-As-Doctor ಗೊಂಬೆಗಳಾಗಿಸಿ ಬದುಕಿನ ಸಣ್ಣ ಕಷ್ಟವೂ ಅವರಿಗೆ ತಾಕದಂತೆ ಬೆಳೆಸಿ, ಸಮಸ್ಯೆಗಳೆದುರಾದಾಗ ಅದನ್ನು ಎದುರಿಸುವ ಛಲ, ಆತ್ಮವಿಶ್ವಾಸಗಳನ್ನು ಕಲಿಸದ ಪಾಲಕರು ತಾವು ಕಲಿಯಲಾರದ್ದನ್ನೆಲ್ಲಾ ತಮ್ಮ ಮಕ್ಕಳು ಕಲಿಯಬೇಕು, ತಾವು ಸಾಧಿಸಲಾಗದ್ದನ್ನು ತಮ್ಮ ಮಕ್ಕಳು ಸಾಧಿಸಬೇಕೆನ್ನುವ ಮಹದಾಸೆಯಲ್ಲಿ, ತಮ್ಮ ಮಗು ‘ಸೂಪರ್ ಚೈಲ್ಡ್’ ಆಗಿಬಿಡಬೇಕೆಂಬ ಕನಸಿನಲ್ಲಿ ತಮಗರಿವಿಲ್ಲದೇ ಅವರ ಪಾಲಿನ ಉಗ್ರಗಾಮಿಗಳಾಗಿಬಿಡುತ್ತಾರೆ! ಒಮ್ಮೆ ಯೋಚಿಸಿ ನಮ್ಮ ಮಕ್ಕಳನ್ನು ಅವರ ಗುಣ ಸ್ವಭಾವ ಸಾಮರ್ಥ್ಯಕ್ಕನುಗುಣವಾಗಿ ಅವರಿರುವಂತೆ ನಾವು ಬೆಳೆಸುತ್ತಿದ್ದೇವೆಯೇ? ಅದಕ್ಕೆ ಬೇಕಾದಂತಾ ಪೂರಕ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದೇವೆಯೇ?

ಸಮಾಜದ ಅವಶ್ಯಕತೆಗಳು ಬದಲಾದಂತೆ ಅರ್ಥ ಸಂಸ್ಕೃತಿ-ಪ್ರದರ್ಶನ ಸಂಸ್ಕೃತಿಗಳೆಡೆಗಿನ ಸೆಳೆತಗಳು ಹೆಚ್ಚಾದಂತೆ ಅದರ ಒತ್ತಡ ನಮ್ಮ ಮಕ್ಕಳ ಮೇಲೆ ತೀವ್ರವಾಗಿ ಬೀಳುತ್ತಿದೆ. ಅದನ್ನು ಪೂರೈಸಲಾಗದೇ ಮಕ್ಕಳು ಖಿನ್ನತೆಗೊಳಗಾಗುವುದೂ ಸ್ವಾಭಾವಿಕ. ಹೀಗೆಂದೇ ಇಂದು ‘ಉತ್ತಮ ಪಾಲಕತ್ವ’ ಕೂಡ ಯೋಚಿಸಬೇಕಾದ ಮುಖ್ಯ ವಿಷಯಗಳಲ್ಲೊಂದು. ತಮ್ಮದೇ ನೂರೆಂಟು ಸಮಸ್ಯೆಗಳು, ಒತ್ತಡಗಳಲ್ಲಿ ತಮ್ಮ ಪ್ರಪಂಚದ ‘ಬೇಕು’ಗಳ ಪೂರೈಕೆಯಲ್ಲಿ ಮುಳುಗಿ ಹೋಗಿರುವ ಹೆಚ್ಚಿನ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಗುಣಾತ್ಮಕ ಸಮಯವನ್ನು ಕಳೆಯಲು, ಅವರನ್ನು ಅರ್ಥೈಸಿಕೊಳ್ಳಲು, ಅವರ ಬೇಕು-ಬೇಡ ಗಮನಿಸಲು ಸಮಯವಿಲ್ಲ. ಆದರೆ ಸಮಯ ಸಿಕ್ಕಾಗೆಲ್ಲಾ ಅವರ ಮೇಲೆ ಬಲವಂತವಾಗಿ ತಮ್ಮ ಅಭಿಲಾಷೆಗಳನ್ನು ಮಾತ್ರ ನಿರಂತರವಾಗಿ ಹೇರುತ್ತಲೇ ಇರುತ್ತಾರೆ! ಅಲ್ಲವೇ?

ಹೀಗೆಂದೇ ಆಧುನಿಕ ಶಿಶುಪಾಲಕರಿಗೆ ನನ್ನದೊಂದು ಮನವಿ. ಮಕ್ಕಳನ್ನು ಅವರ ಇಚ್ಛೆ ಸಾಮರ್ಥ್ಯಕ್ಕನುಗುಣವಾಗಿ ಸಹಜವಾಗಿ, ಮುಕ್ತವಾಗಿ ಬೆಳೆಸಿ. ಬಂದುದೆಲ್ಲವನ್ನೂ ಆತ್ಮಸ್ಥೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಕಲಿಸಿ. ಅವರ ಇಷ್ಟಾನಿಷ್ಟ, ಗುಣ, ಸ್ವಭಾವ, ಅಭಿರುಚಿಗಳನ್ನು ನಿರಂತರವಾಗಿ ಅಭ್ಯಸಿಸಿ. ವ್ಯಕ್ತಿತ್ವ ದೋಷಗಳನ್ನು ಚಿಕ್ಕಂದಿನಲ್ಲೇ ಪ್ರೀತಿಯಿಂದ ಮುರುಟಿ ಹಾಕಿ. ಎಲ್ಲಕ್ಕಿಂಥಾ ಮುಖ್ಯವಾಗಿ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಅವರಿಗೆ ನಿಮ್ಮ ಹಣಕ್ಕಿಂಥಾ ಅದರ ಮೂಲಕ ನೀವು ಅವರಿಗೆ ಒದಗಿಸುವ ಸುಖದ ಸಾಧನಗಳಿಗಿಂಥಾ ನಿಮ್ಮ  ಪ್ರೀತಿ, ವಾತ್ಸಲ್ಯದ ನಿರೀಕ್ಷೆ ಹೆಚ್ಚಿಗಿರುತ್ತದೆ ಎಂಬುದನ್ನು ಮರೆಯಬೇಡಿ. ಅವರ ಇಚ್ಛೆಗೆ ವಿರುದ್ಧವಾಗಿ ಅವರಿಗೆ ಒತ್ತಡ ಹೇರದೇ, ಅವರ ಅಭಿರುಚಿ-ಆಸೆಗೆ ತಕ್ಕಂತೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಪ್ರೇರಣೆ, ಸಹಕಾರ ನೀಡಿ.

ಮಕ್ಕಳೊಂದಿಗಿನ ಸಂವಾದದ ನನ್ನ ಅನುಭವದಿಂದ ಕಂಡುಕೊಂಡಿರುವುದೆಂದರೆ ಇಂದಿನ ನಮ್ಮ ಮಕ್ಕಳ ಮುಗ್ಧತೆಯನ್ನು ನಮ್ಮ ದೃಶ್ಯ ಮಾಧ್ಯಮಗಳು ಭ್ರಷ್ಟಗೊಳಿಸುತ್ತಾ ಇವೆ. ಅದರಲ್ಲಿ ಬರುವ ಮಾತು, ಕೃತಿ, ಹಾವಭಾವಗಳನ್ನು ಅನುಕರಿಸಲು ಮಕ್ಕಳು ಪ್ರಯತ್ನಿಸ್ತಾ ಇದ್ದಾರೆ. ಕುತೂಹಲದಿಂದ ಪ್ರಯೋಗಿಸಲು ನೋಡುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಸಾಧ್ಯವಿದ್ದಷ್ಟೂ ಟಿವಿಯಿಂದ ದೂರವಿಡುವ ಪ್ರಯತ್ನ ಮಾಡಬೇಕು. ಆ ಸಮಯದಲ್ಲಿ ಅವರನ್ನು ಹಾಡು, ಆಟ, ಗಿಡ ನೆಡುವುದು, ಚಿತ್ರಕಲೆ ಬಿಡಿಸುವುದರಲ್ಲಿ, ಸಣ್ಣಪುಟ್ಟ ಮನೆಗೆಲಸದಲ್ಲಿ ತೊಡಗಿಸಬೇಕು. ನಾವೂ ಅವರೊಂದಿಗೆ ಈ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬಿಡುವು ಮಾಡಿಕೊಳ್ಳಬೇಕು. ನಾವು ಮಾತ್ರ ಟಿ.ವಿ ನೋಡ್ತಾ ಮಕ್ಕಳಿಗೆ ಬೇರೇನೋ ಕೆಲಸ ಹೇಳಿದರೆ ಖಂಡಿತಾ ಅವರದನ್ನ ಮಾಡುವುದಿಲ್ಲ. ಒಂದು ಮಾತು ನಾವೆಲ್ಲರೂ ನೆನಪಿಡಬೇಕಾದ್ದು ಮಕ್ಕಳು ನಾವು ಹೇಳಿದ್ದನ್ನ ಕೇಳಿ ಏನನ್ನೂ ಕಲಿಯುವುದಿಲ್ಲ. ಅವರು ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ! ನಮ್ಮ ನಡವಳಿಕೆ, ಸ್ವಭಾವ, ಮಾತು, ಹಾವಭಾವಗಳು ಅವರ ಮೇಲೆ ತೀವ್ರ ಪ್ರಭಾವ ಬೀರುತ್ತಿರುತ್ತವೆ. ಆದ್ದರಿಂದ ನಾವು ಪ್ರತಿಕ್ಷಣ ಎಚ್ಚರಿಕೆಯಿಂದ ಇರಬೇಕು! ನಮ್ಮನ್ನು ನೋಡಿ ಅವರು ಕಲಿಯುತ್ತಿರುತ್ತಾರೆ!

ಪ್ರತಿದಿನ ಮಗು ಮನೆ ಬಿಟ್ಟಾಗಿನಿಂದ, ಶಾಲೆಯಿಂದ ಮನೆಗೆ ಬರುವವರೆಗೆ ಏನೇನಾಯ್ತೆಂದು ಸ್ನೇಹದಿಂದ ವಿಶ್ವಾಸಕ್ಕೆ ತೆಗೆದುಕೊಂಡು ಗೆಳೆಯರಂತೆ ವಿಚಾರಿಸಬೇಕು. ವಿಷಯ ಸಂಗ್ರಹಿಸಬೇಕು. ವಿನಾಕಾರಣ ಪ್ರತಿ ಮಾತಿಗೂ ಬೈಯ್ಯುವುದು, ಗದರುವುದು ಹೊಡೆಯುವುದು ಮಾಡದೇ ಎದುರಿಗೆ ಮಗುವನ್ನು ಕುಳ್ಳಿರಿಸಿಕೊಂಡು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದರಿಂದ ಮಗುವಿಗೆ ಸ್ನೇಹ ನಂಬಿಕೆ ಬರುತ್ತದೆ. ಆಗವರು ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಮಕ್ಕಳಿಗೆ ಯಾರಿಂದಲಾದರೂ ಏನಾದರೂ ತೊಂದರೆಗಳಾಗುತ್ತಿರುವ ಸುಳಿವು ಸಿಕ್ಕರೆ ತಕ್ಷಣ ಎಚ್ಚೆತ್ತು ಅದರೆಡೆಗೆ ಗಮನ ಹರಿಸಬೇಕು.

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಕರೂ ತೆಗೆದುಕೊಳ್ಳಬೇಕು ಮತ್ತು ಮಕ್ಕಳಿಗೂ ನೀಡಬೇಕು. ಮುಖ್ಯವಾಗಿ ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವ ಆಟೋ, ವ್ಯಾನ್ ಇತ್ಯಾದಿ ವಾಹನ ಚಾಲಕರ/ಮಾಲೀಕರ ಸಂಪೂರ್ಣ ವಿವರಗಳನ್ನು ತಿಳಿದುಕೊಂಡಿರಬೇಕು ಮತ್ತು ಅವರ ದೂರವಾಣಿ ಸಂಖ್ಯೆಗಳನ್ನು ಪಡೆದಿರಬೇಕು. ಅವರ ನಡವಳಿಕೆಯು ಮಗುವಿನ ಜೊತೆಗೆ ಹೇಗಿದೆ ಎನ್ನುವುದನ್ನು ಕುರಿತು ಆಗಾಗ್ಗೆ ವಿಚಾರಿಸುತ್ತಿರಬೇಕು.

ಅಪರಿಚಿತ ವ್ಯಕ್ತಿಗಳಿಂದ ಮಕ್ಕಳು ಆದಷ್ಟೂ ದೂರವಿರುವಂತೆ ಹಾಗೂchild-abuse ಅವರಿಂದ ಯಾವುದೇ ವಸ್ತುಗಳನ್ನು ಸ್ವೀಕರಿಸದಂತೆ ತಿಳಿವಳಿಕೆ ನೀಡಬೇಕು. ಪರಿಚಿತ ವ್ಯಕ್ತಿಗಳೊಂದಿಗೆ ಕೂಡ ಆತ್ಮೀಯತೆಯಿಂದ ಇರುತ್ತಲೇ ಒಂದು ದೂರವನ್ನು ನಿರ್ವಹಿಸುವ ಕಲೆಯನ್ನು ಮಕ್ಕಳಿಗೆ ತಿಳಿಸಿ, ಕಲಿಸಿ ಕೊಡಬೇಕು. ಮಕ್ಕಳಿಗೆ ವೈಯಕ್ತಿಕ ಸುರಕ್ಷತೆ ಮತ್ತು ದೌರ್ಜನ್ಯಗಳ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾದುದು. ಕತ್ತಲೆಯಾಗುವ ಮೊದಲೇ ಆದಷ್ಟೂ ಮಕ್ಕಳು ಮನೆ ಸೇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಯಾವುದೇ ಕಾರಣಕ್ಕಾದರೂ ಅಸಹಜತೆಯಿಂದ ವರ್ತಿಸುತ್ತಿದ್ದರೆ ತಕ್ಷಣ ಅವರೊಂದಿಗೆ ಸಮಾಲೋಚಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಮಕ್ಕಳು, ಮೊಬೈಲ್, ಫೋನ್, ಇಂಟರ್ನೆಟ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಅನಾವಶ್ಯಕವಾಗಿ ಮತ್ತು ಹಿರಿಯರ ಅನುಪಸ್ಥಿತಿಯಲ್ಲಿ ಬಳಸುವುದನ್ನು ತಡೆಯಬೇಕು.

ಲೈಂಗಿಕ ದುರ್ಬಳಕೆ ಅಥವಾ ಶೋಷಣೆಯ ಕುರಿತು ಹೆಚ್ಚಿನಂಶ ಹೆತ್ತವರು ತಮ್ಮ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಲೈಂಗಿಕ ವರ್ತನೆಗಳ ಬಗ್ಗೆ ತಮ್ಮ ಮಕ್ಕಳು ಕೇಳಬಹುದಾದ ಪ್ರಶ್ನೆಗಳಿಗೆ ಏನುತ್ತರಿಸಬೇಕೆಂದು ತಿಳಿಯದೇ ಮುಜುಗರ ಪಡುತ್ತಾರೆ. ಆದರೆ ಇಂದು ಮಕ್ಕಳೊಂದಿಗೆ ಲೈಂಗಿಕ ದುರ್ಬಳಕೆಯ ಬಗ್ಗೆ ಅವಶ್ಯಕವಾಗಿ ಮಾತಾಡಲೇ ಬೇಕಿದೆ. ಇಲ್ಲಿ ಸೆಕ್ಸ್ ಎಂಬುದಕ್ಕೆ ಒತ್ತು ಕೊಡದೇ ಸುರಕ್ಷತೆಯನ್ನು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಬೇರೆಲ್ಲಾ ಸುರಕ್ಷಿತತೆಯ ಬಗ್ಗೆ ಹೇಳುವಂತೆಯೇ ಸಹಜವಾಗಿ ಅಸಭ್ಯ ಮತ್ತು ಅಸುರಕ್ಷಿತ ಸ್ಪರ್ಶದ ಕುರಿತೂ ಮಕ್ಕಳಿಗೆ ಹೇಳಿಕೊಡುವುದು ಅನಿವಾರ್ಯವಾಗಿದೆ. ಶೇಕಡಾ 50ರಷ್ಟು ಮಕ್ಕಳು ತಾವು ಒಂದಲ್ಲಾ ಒಂದು ಬಗೆಯ ಲೈಂಗಿಕ ಕಿರುಕುಳ ಅನುಭವಿಸಿಯೇ ಇರುತ್ತಾರೆ. ಇದರಲ್ಲಿ ಗಂಡು-ಹೆಣ್ಣು ಯಾವ ಬೇಧವೂ ಇಲ್ಲ. ಎರಡೂ ಲಿಂಗದ ಮಕ್ಕಳೂ ಸಮಪ್ರಮಾಣದಲ್ಲಿ ಶೋಷಣೆ ಅನುಭವಿಸುತ್ತಾರೆ. ಹೀಗಾಗಿ ಇಬ್ಬರಿಗೂ ತಿಳಿವಳಿಕೆ ನೀಡಬೇಕು.

ನಾವೆಷ್ಟೇ ಆಧುನಿಕರು, ವಿದ್ಯಾವಂತರು ಎಂದುಕೊಂಡರೂ ಇಂದಿಗೂ ಗಂಡು-ಹೆಣ್ಣುಮಕ್ಕಳನ್ನು ತಾರತಮ್ಯದಿಂದ ನೋಡುವುದು, ನಮಗೇ ಅರಿವಿಲ್ಲದೇ ಅವರಲ್ಲಿ ಗಂಡು ಮಕ್ಕಳಲ್ಲಿ ಶ್ರೇಷ್ಠತೆಯನ್ನ, ಹೆಣ್ಣುಮಕ್ಕಳು ಅವರಿಗಿಂತ ಕಡಿಮೆ ಎನ್ನುವಂತೆಯೇ ಬೆಳೆಸಲಾಗುತ್ತಿದೆ. ನಾವು ಮಕ್ಕಳಿಗೆ ಚಿಕ್ಕಂದಿನಲ್ಲೇ ಈ ಭಾವನೆ ಬರದಂತೆ ಅವರಿಬ್ಬರೂ ಸಮಾನರು, ಸಮಾನವಾಗಿ ಕೆಲಸಗಳನ್ನೂ, ಜವಾಬ್ದಾರಿಗಳನ್ನೂ ಹಂಚಿಕೊಂಡು ಮಾಡಬೇಕೆನ್ನುವುದನ್ನು ಕಲಿಸಬೇಕಾಗುತ್ತದೆ. ಆಗ ಮಾತ್ರ ದೊಡ್ಡವರಾದ ನಂತರ ಈ ಒತ್ತಡದ, ಗಂಡೂ-ಹೆಣ್ಣೂ ಇಬ್ಬರೂ ಹೊರಗೆ ಹೋಗಿ ದುಡಿಯಬೇಕಾಗಿರುವ ಈ ದಿನಗಳಲ್ಲಿ ಸಮಾನತೆಯಿಂದ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ.

 ಮಗು ಹುಟ್ಟುತ್ತಲೇ ವಿಶ್ವಮಾನವನಾಗಿರುತ್ತದೆ. ಅದಕ್ಕೆ ಯಾವುದೇ ಕೊಳಕಿನ ಸೊಂಕಿರುವುದಿಲ್ಲ. ಆದರೆ ಬೆಳೆಯುತ್ತಾ ಹೋದಂತೆ ಮಕ್ಕಳಲ್ಲಿ ಜಾತಿ-ಧರ್ಮ, ಗಂಡು-ಹೆಣ್ಣು ತಾರತಮ್ಯ, ಮೇಲು ಕೀಳಿನ ವ್ಯತ್ಯಾಸ, ಸಣ್ಣತನ, ಕೆಟ್ಟ ಭಾವನೆಗಳನ್ನು ನಾವೇ ಬಿತ್ತುತ್ತಾ ಹೋಗುತ್ತೇವೆ. ಆದರೆ ಮಗುವನ್ನು ಅದರ ಎಲ್ಲಾ ಮುಗ್ಧತೆಗಳೊಂದಿಗೆ ಯಾವುದೇ ಕಲ್ಮಷಗಳು ಸೋಕದಂತೆ ಆದರೂ ದುಷ್ಟರಿಂದ ಎಚ್ಚರಿಕೆಯಿಂದಿರುವಂತೆ ಕಲಿಸಬೇಕಿರುವುದೇ ನಿಜವಾದ ಪಾಲಕರ ಕರ್ತವ್ಯ. ಮಕ್ಕಳಿಗೆ ತಾವು ಒಳಗೊಳ್ಳುವ ಅನುಭವ, ಕಷ್ಟಸಹಿಷ್ಣುತೆ, ಕೌಟುಂಬಿಕ ಜವಾಬ್ದಾರಿ, ಸಮಸ್ಯೆಗಳನ್ನು ಎದುರಿಸುವ ಛಲದಿಂದ ದೃಢತೆ ಉಂಟಾಗುತ್ತದೆ. ದಿಟ್ಟತೆ, ಸಹಜತೆ ಮತ್ತು ಮುಕ್ತತೆಗಳು ಅವರ ವ್ಯಕ್ತಿತ್ವದ ಭಾಗವಾಗಿಬಿಡುತ್ತವೆ. ಪ್ರಪಂಚ ಎಷ್ಟೊಂದು ವಿಶಾಲವಾಗಿದೆ, ಬದುಕಿಗೆಷ್ಟೊಂದು ಮಾರ್ಗಗಳಿವೆ, ಎಲ್ಲರೂ ಎಂಥಹುದೇ ನಿಕೃಷ್ಟ ಸಂದರ್ಭದಲ್ಲಿಯೂ ಸ್ವಾಭಿಮಾನದಿಂದ ಬದುಕಲು ನೂರಾರು ದಾರಿಗಳಿವೆ. ಒಂದು ದಾರಿ ಮುಚ್ಚಿತೆಂದರೂ ಕಷ್ಟಪಡಲು ಸಿದ್ಧವಿರುವ ಚೈತನ್ಯಗಳಿಗೆ ಹಲವಾರು ಪರ್ಯಾಯಗಳಿವೆ ಎಂಬುದನ್ನು ಮಕ್ಕಳಿಗೆ ಸುತ್ತಲ ಸಮಾಜದ ಉದಾಹರಣೆಗಳಿಂದ ತೋರಿಸಿಕೊಡುತ್ತಿರಬೇಕು. ಪ್ರತಿ ಮಗುವೂ ಒಂದು ವ್ಯಕ್ತಿ ಅದನ್ನು ನಾವು ಗೌರವಿಸುವ ಮೂಲಕ ಆ ಮಗುವಿನಲ್ಲೂ ಇರುವ ವಿಶೇಷತೆಯನ್ನು ಗುರುತಿಸುವ ಕೆಲಸವನ್ನು ಮಾಡಿದರೆ ಖಂಡಿತಾ ನಮ್ಮ ಮಕ್ಕಳು ಋಣಾತ್ಮಕ ಆಲೋಚನೆಯಿಂದ ಸಮಸ್ಯೆಗಳಾಗದೇ, ಸಮಾಜದ ಧೀಮಂತ ವ್ಯಕ್ತಿಗಳಾಗುತ್ತಾರೆ. ಬನ್ನಿ ನಮ್ಮ ಮಕ್ಕಳನ್ನು ಪ್ರೀತಿಯಿಂದ ಸಹನೆಯಿಂದ ಅವರಿಚ್ಛೆಯಂತೆ ರೂಪಿಸೋಣ.