Category Archives: ರೂಪ ಹಾಸನ

ವಿವಾಹ ನೋಂದಣಿ ಬಾಲ್ಯವಿವಾಹಕ್ಕೊಂದು ತಡೆಗೋಡೆ


– ರೂಪ ಹಾಸನ


 

ಯೂನಿಸೆಫ್‌ನ “ಸ್ಟೇಟ್ ಆಫ್ ದಿ ವರ್ಲ್ಡ್ ಚಿರ್ಲ್ಡನ್”-2009 ರ ವರದಿ, ‘47% ಭಾರತೀಯ ಹೆಣ್ಣುಮಕ್ಕಳು ಕಾನೂನಿಗೆ ವಿರುದ್ಧವಾಗಿ 18 ವರ್ಷದೊಳಗೇ ವಿವಾಹವಾಗುತ್ತಿದ್ದಾರೆ, ಇದರಲ್ಲಿ 56% ರಷ್ಟು ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಮತ್ತು ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ’ ಎಂದು ಹೇಳುತ್ತದೆ. ಹಾಗೇ ಇದೇ ವರ್ಷದ ಫೆಬ್ರವರಿಯಲ್ಲಿ ದೆಹಲಿಯ “ಪಾಪುಲೇಷನ್ ಕೌನ್ಸಿಲ್” ಹಾಗೂ ಮುಂಬಯಿಯ “ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಪಾಪುಲೇಷನ್ ಸೈನ್ಸ್” ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ 15 ವರ್ಷದೊಳಗೆ ಮದುವೆಯಾಗುವ ಹೆಣ್ಣುಮಕ್ಕಳ ಸಂಖ್ಯೆ ಶೇ.50 ಕ್ಕೂ ಹೆಚ್ಚು ಎಂದು ವರದಿ ಮಾಡಿದೆ.

ಸಾಮೂಹಿಕ ವಿವಾಹದಲ್ಲಿ ನಡೆಯುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ Child_marriage_in_Indiaವಿವಾಹ ಕುರಿತು ಮೊನ್ನೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದನ್ನು ಕಂಡಾಗ ಮತ್ತೆ ಇದೆಲ್ಲಾ ನೆನಪಾಯ್ತು. ಬಾಲ್ಯ ವಿವಾಹ ನಮ್ಮ ದೇಶಕ್ಕೆ ಅಂಟಿದ ದೊಡ್ಡ ಶಾಪ. ಇದಕ್ಕೆ ಮುಖ್ಯ ಕಾರಣ ಬಡತನ, ನಿರಕ್ಷರತೆ, ಅಜ್ಞಾನ ಮತ್ತು ಕೆಲ ಮಟ್ಟಿನ ಮೂಢನಂಬಿಕೆ ಎಂಬುದು ನಿರ್ವಿವಾದ. ಬಾಲ್ಯ ವಿವಾಹ ನಿಷೇಧ ಕಾಯ್ದೆ 1929 ರಲ್ಲೇ ಜಾರಿಯಾಗಿದ್ದರೂ ಅದು ಇನ್ನೂ ಜೀವಂತವಿರುವುದು, ಜ್ವಲಂತ ಸಮಸ್ಯೆಯಾಗಿರುವುದು ಮೇಲಿನ ಅಂಕಿ ಅಂಶಗಳಿಂದ ತಿಳಿಯುತ್ತದೆ. ಜೊತೆಗೆ 2010 ನೇ ವರ್ಷದ “ವಿಶ್ವ ಮಕ್ಕಳ ದಿನಾಚರಣೆ”ಯನ್ನು “ಬಾಲ್ಯ ವಿವಾಹ ತಡೆಗಟ್ಟಿ” ಎಂಬ ಘೋಷಣೆಯೊಂದಿಗೆ ಆಚರಿಸಿದ್ದು ಸಮಸ್ಯೆಯ ಗಂಭೀರತೆಯನ್ನು ಎತ್ತಿ ಹಿಡಿದಿದೆ.

ಬಾಲ್ಯವಿವಾಹದಿಂದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಮೊದಲು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತಾರೆ. ಬಾಲ್ಯದಲ್ಲಿಯೇ ಮದುವೆಯಾಗುವ ಕಾರಣದಿಂದ ಶಿಕ್ಷಣದ ಕೊರತೆಯುಂಟಾಗಿ, ಸಮರ್ಪಕ ಉದ್ಯೋಗ ಸಿಗದೇ ದೀರ್ಘಕಾಲದ ಬಡತನಕ್ಕೆ ತುತ್ತಾಗುತ್ತಾರೆ. ಜೊತೆಗೆ ಅರಿವಿನ ಕೊರತೆ, ಅಜ್ಞಾನ, ಮೂಢನಂಬಿಕೆಗಳು ಅವರಲ್ಲಿ ಮುಂದುವರೆಯುತ್ತದೆ. ತಮ್ಮ ಸ್ಥಾನಮಾನದ ಅರಿವಿರದ, ಸಬಲರಾಗಿಲ್ಲದ ಮತ್ತು ಇನ್ನೂ ಪ್ರೌಢಾವಸ್ಥೆಯನ್ನು ಹೊಂದದ ಚಿಕ್ಕ ಹುಡುಗಿಯರು ಪತಿಯ ಮನೆಯಲ್ಲಿ ದೌರ್ಜನ್ಯ, ಲೈಂಗಿಕ ಶೋಷಣೆ ಮತ್ತು ಸಾಮಾಜಿಕ ಪ್ರತ್ಯೇಕತೆಗೆ ಗುರಿಯಾಗುತ್ತಾರೆ. childmarriageಇದರಿಂದ ನಿಷ್ಕಾರಣವಾದ ಅಸಮಾನತೆ, ಖಾಯಿಲೆ ಹಾಗೂ ನಿಕೃಷ್ಟತೆಗೂ ಒಳಗಾಗುತ್ತಾರೆ. ಎಳೆವಯಸ್ಸಿನಲ್ಲಿಯೇ ಮದುವೆಯಾಗುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಬಲಿಷ್ಠರಾಗಿಲ್ಲದಿರುವುದರಿಂದ ಬಸಿರು, ಹೆರಿಗೆ ಸಮಯದಲ್ಲಿನ ಸಾವಿನ ಪ್ರಮಾಣ ಅಧಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಶಿಶು ಮರಣ ಹಾಗೂ ಅಶಕ್ತ ಮಕ್ಕಳ ಜನನ ಕೂಡ ಅತ್ಯಂತ ಸಾಮಾನ್ಯ ಸಂಗತಿಯಾಗಿರುತ್ತದೆ. ಅಧಿಕ ಪ್ರಮಾಣದ ಬಾಲ್ಯವಿವಾಹದ ಕಾರಣದಿಂದಲೇ ಗರ್ಭಿಣಿ ಸಾವು ಹಾಗು ಶಿಶು ಮರಣ ಪ್ರಮಾಣದಲ್ಲಿ ಕೂಡ ಭಾರತವೇ ಅಗ್ರ ಸ್ಥಾನದಲ್ಲಿರುವುದನ್ನು ಅತ್ಯಂತ ಸಂಕಟದಿಂದ ನೆನಪಿಸಿಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ಅಸಮ ವಯಸ್ಸಿನ ಗಂಡಿಗೆ ವಿವಾಹ ಮಾಡುವುದರಿಂದ ಬಾಲ್ಯವೈಧವ್ಯ ಉಂಟಾಗುತ್ತದೆ. ಕಿರಿಯ ವಯಸ್ಸಿನಲ್ಲೇ ಸಂಸಾರ, ಮಕ್ಕಳ ಜವಾಬ್ದಾರಿಯನ್ನು ಹೊರಬೇಕಾದಾಗ ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿರುವುದರಿಂದ ಇಂತಹ ಹೆಣ್ಣುಮಕ್ಕಳು ಅನೈತಿಕ ಮಾರ್ಗಗಳಿಂದ ಸಂಪಾದಿಸುವುದೂ ಅನಿವಾರ್ಯವಾಗುತ್ತಿದೆ.

ಇನ್ನು ಸಾಮೂಹಿಕ ವಿವಾಹಗಳು ನಮ್ಮ ಸಮಾಜಕ್ಕೆ ಹೊಸದೇನೂ ಅಲ್ಲ. ಕೆಲವು ಜಾತಿ, ಧರ್ಮ, ಜನಾಂಗಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಾ ಬಂದಿವೆ. ಆಧುನಿಕ ಸಮಾಜದಲ್ಲಿ ಮದುವೆಗಳ ಮೂಲಕ ನಡೆಯುವ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು, Mass_Marriage_Couplesಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು, ಮುಖ್ಯವಾಗಿ ಬಡ ಕುಟುಂಬಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಸಾಮಾಜಿಕ ಸುಧಾರಣೆಯ ಒಂದು ಮಾರ್ಗವಾಗಿ ಸಾಮೂಹಿಕ ವಿವಾಹಗಳು ನೆರವಾಗಿವೆ. ವಿಧವೆಯರಿಗೆ, ವಿವಾಹ ವಿಚ್ಛೇದಿತರಿಗೆ, ಅಂಗವಿಕಲರಿಗೆ, ಅನಾಥರಿಗಾಗಿಯೂ ವಿಶೇಷ ಸಾಮೂಹಿಕ ವಿವಾಹಗಳು ಏರ್ಪಟ್ಟು ದಾಖಲೆಗಳನ್ನೇ ನಿರ್ಮಿಸಿದೆ.

ಆದರೆ ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತ ಬಾಲಕಿಯರ ವಿವಾಹ ನಡೆಯುತ್ತಿರುವುದು ಮಾತ್ರ ಕಾಯ್ದೆಯ ಕಣ್ಣಲ್ಲಿ ಅಕ್ಷಮ್ಯ ಅಪರಾಧವಾಗಿದೆ. ಸಾಮೂಹಿಕ ವಿವಾಹಗಳಲ್ಲಿ ಬಾಲಕಿಯರ ವಿವಾಹ ಅತ್ಯಂತ ಸಾಮಾನ್ಯವೆಂಬಂತೆ ನಡೆಯುತ್ತಲೇ ಬಂದಿದೆ. ಇದು ಹೊಸದೇನೂ ಅಲ್ಲ. ಇಂತಹ ಸಾಮೂಹಿಕ ವಿವಾಹಗಳನ್ನು ಸಂಘಟಿಸುವವರು ರಾಜಕಾರಣಿಗಳು ಮಠಾಧೀಶರು, ಕೆಲವು ಪಟ್ಟಭದ್ರಹಿತಾಸಕ್ತಿಗಳು ಎಂಬುದನ್ನು ಮುಖ್ಯವಾಗಿ ಗಮನಿಸಬೇಕಿದೆ. ಇತ್ತೀಚೆಗೆ ಇಂತಹ ವಿವಾಹಗಳ ಹಿಂದೆ ಹಣ, mass-marriage-sriramuluರಾಜಕೀಯ, ಜಾತಿ, ದಾಖಲೆ ಮಾಡುವ ಹುಚ್ಚು…… ಹೀಗೆ ಬೇರೆ ಬೇರೆ ಹಿತಾಸಕ್ತಿಗಳು ಕೆಲಸ ಮಾಡುವುದರಿಂದ ಅದರ ನಿಜವಾದ ಉದ್ದೇಶ ಮರೆಯಾಗಿ, ಪರಸ್ಪರ ಗಂಡು ಹೆಣ್ಣು ಮನ ಒಪ್ಪಿ ಮದುವೆಗೆ ಸಿದ್ಧರಾಗುವುದಕ್ಕಿಂತಾ ಸಂಘಟಕರಿಗೆ ತಮ್ಮ ನಿಗದಿತ ಗುರಿ ಮುಟ್ಟಲು ಪೋಷಕರ ಮನವೊಲಿಸಿ ಮದುವೆ ಮಾಡುವುದನ್ನು ಕಾಣುತ್ತಿದ್ದೇವೆ. ಬಹಳಷ್ಟು ಬಾರಿ ಇಲ್ಲಿ ಹೆಣ್ಣುಮಕ್ಕಳ ಅಭಿಪ್ರಾಯಕ್ಕೆ ಯಾವ ಬೆಲೆಯೂ ಇರುವುದಿಲ್ಲ ಎಂದು ದೆಹಲಿಯ ಪಾಪ್ಯುಲೇಷನ್ ಕೌನ್ಸಿಲ್ ಇಂತಹ ಅಪ್ರಾಪ್ತ ನವವಧುಗಳನ್ನು ಸಮೀಕ್ಷೆ ಮಾಡಿ ದೃಢಪಡಿಸಿದೆ. ಇದನ್ನು ಕಂಡಾಗ 1975-77 ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನುಷವಾಗಿ ಮತ್ತು ಬಲವಂತದಿಂದ ನಡೆಸಲಾದ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆಗಳು ನೆನಪಾಗುತ್ತವೆ. ಇದಕ್ಕೂ ಇಂತಹ ಬಾಲ್ಯವಿವಾಹಗಳಿಗೂ ಯಾವ ವ್ಯತ್ಯಾಸಗಳೂ ಇಲ್ಲವೇನೋ!

ವರದಕ್ಷಿಣೆ ಹಾಗೂ ವಿವಾಹಕ್ಕಾಗಿ ವಿನಿಯೋಗಿಸುವ ವಿಪರೀತದ ಖರ್ಚನ್ನು ಭರಿಸಲಾಗದ ಹೆಚ್ಚಿನ ಬಡ ಕುಟುಂಬಗಳು, ತಮ್ಮ ಹೆಣ್ಣುಮಕ್ಕಳ ಹೊರೆಯನ್ನು ಇಲ್ಲಿ ಸುಲಭವಾಗಿ ಕಳೆದುಕೊಳ್ಳಬಹುದೆಂದು ಸಾಮೂಹಿಕ ವಿವಾಹದ ಮೊರೆ ಹೋಗುತ್ತಾರೆ. ಇದು ತಪ್ಪೇನೂ ಅಲ್ಲ. ಆದರೆ ಸಾಮೂಹಿಕ ವಿವಾಹದ ನೆವದಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆ ಮಾಡುವುದು ಮಾತ್ರ ಕಾನೂನಿನ ರೀತಿಯಲ್ಲಿ ಅಪರಾಧವೇ ಆಗಿದೆ. ಇಂತಹ ವಿವಾಹಗಳು ಕೂಡ ಸಂಘಟಕರಿಗೆ ಲಾಭಕಾರಕ ವ್ಯಾಪಾರವಾಗಿರುವುದನ್ನು ಕಾಣುತ್ತಿದ್ದೇವೆ. ಇದರ ಹಿಂದೆ ಪ್ರತಿಷ್ಠಿತ ಗಣ್ಯವ್ಯಕ್ತಿಗಳು, ಸಂಸ್ಥೆಗಳಿರುವುದರಿಂದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ವಿವಾಹ ನಡೆಯುತ್ತಿದ್ದರೂ ಇದರ ವಿರುದ್ಧ ಯಾರೂ ದನಿಯೆತ್ತದಂತಾ ಸ್ಥಿತಿ ನಿರ್ಮಾಣವಾಗಿದೆ. ನಕಲಿ ವಯೋಮಾನ ದೃಢೀಕರಣ ಪತ್ರಗಳೂ ಇಂದು ಹಣಕ್ಕೆ ಮಾರಾಟವಾಗುವುದರಿಂದ ಬಾಲ್ಯವಿವಾಹವನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೂ, ಸಾಮಾಜಿಕ ಕಾರ್ಯಕರ್ತರೂ ವಿಫಲರಾಗುವ ಜೊತೆಗೆ ಪೇಚಿಗೆ ಸಿಕ್ಕಿಹಾಕಿಕೊಂಡು ತಾವೇ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಬೇಕಾಗಿದೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಪ್ರಾಪ್ತ ಬಾಲಕಿಯರ ಮದುವೆ ಮಾಡಿಸುವ ಪೋಷಕರನ್ನು ಮೊದಲು ಶಿಕ್ಷಿಸಬೇಕೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಪೋಷಕರೂ ಬಹಳಷ್ಟು ವೇಳೆ ಮುಗ್ಧರೂ, ಅಶಿಕ್ಷಿತರು, ಬಡವರು ಆಗಿರುತ್ತಾರೆ. child-marriage-indiaಶಿಕ್ಷಿತರಲ್ಲಿ ಇಂತಹ ನಿರ್ಧಾರಕ್ಕೆ ಬರುವವರು ಕಡಿಮೆ. ಆದ್ದರಿಂದ ಕಾನೂನಿನ ಅರಿವಿದ್ದೂ, ವಿದ್ಯಾವಂತರಾಗಿದ್ದೂ ವಿವೇಚನೆಯಿಲ್ಲದೇ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಮಾಡಲು ಮುಂದಾಗುವ ಸಂಘಟಕರನ್ನು ಮೊದಲು ಶಿಕ್ಷಿಸಬೇಕು. ಪರಿಷ್ಕೃತಗೊಂಡ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ರ ಅನ್ವಯ ಬಾಲ್ಯ ವಿವಾಹ ಸಾಬೀತಾದರೆ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗುವ ಪುರುಷ, ಹುಡುಗಿಯ ಪೋಷಕರು, ಹಾಗೂ ಇಂತಹ ಮದುವೆಯನ್ನು ನೆರವೇರಿಸುವ ಮತ್ತು ಪ್ರೋತ್ಸಾಹಿಸುವ ವ್ಯಕ್ತಿಗಳಿಗೆ ಎರಡು ವರ್ಷ ಸೆರೆವಾಸ ಹಾಗೂ ಒಂದು ಲಕ್ಷದವರೆಗೆ ಜುಲ್ಮಾನೆ ವಿಧಿಸಲಾಗುತ್ತದೆ. ತಪ್ಪಿತಸ್ಥರು ಶಿಕ್ಷೆಗೀಡಾದರೆ ಇಂತಹ ಅಪರಾಧಗಳ ಸಂಖ್ಯೆ ತಗ್ಗುತ್ತದೆ ಎಂಬುದು ನಿಜ ಆದರೆ ಬಲವಂತದಿಂದ, ತಮ್ಮ ದುರುದ್ದೇಶ ಸಾಧನೆಗಾಗಿ ಸಾಮೂಹಿಕ ವಿವಾಹಗಳಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಮಾಡಿಸುವ ಸಂಘಟಕರಿಗೆ ಅತಿ ಹೆಚ್ಚಿನ ಪ್ರಮಾಣದ ಶಿಕ್ಷೆಯಾಗುವಂತೆ ಕಾನೂನು ತಿದ್ದುಪಡಿಯಾಗಬೇಕಿರುವುದು ಇಂದಿನ ತುರ್ತು.

ಬಾಲ್ಯ ವಿವಾಹ ಪದ್ಧತಿಯನ್ನು ನಿಯಂತ್ರಿಸಲು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಹಿಮಾಚಲಪ್ರದೇಶ ರಾಜ್ಯಗಳು ಮದುವೆಯಾಗುವ ಗಂಡು ಹೆಣ್ಣಿನ ವಯಸ್ಸುಗಳನ್ನು ದೃಢಪಡಿಸಲು ಮತ್ತು ನ್ಯಾಯಬದ್ಧಗೊಳಿಸಲು ವಿವಾಹವನ್ನು ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಿವೆ. ಯಾವುದೇ ಧರ್ಮದ ಅಥವಾ ಜಾತಿಯವರಾಗಿರಲಿ ಕಡ್ಡಾಯವಾಗಿ ಸರ್ಕಾರಿ ನೋಂದಣಿ ಕಚೇರಿಯಲ್ಲಿ ಮದುವೆಗಳು ದಾಖಲಾಗಲೇಬೇಕು ಎಂಬ ಕಾನೂನು ದೇಶದಾದ್ಯಂತ ಜಾರಿಗೆ ಬಂದಿದೆ. ಅದನ್ನು ಈಗ ಕಡ್ಡಾಯವಾಗಿ ಜಾರಿಗೊಳಿಸಬೇಕು. ಇದಕ್ಕೂ ಮೊದಲು ಜನನ ಹಾಗೂ ಮರಣದ ದಾಖಲಾತಿ ಕಡ್ಡಾಯ ಎಂಬುದರ ಅರಿವನ್ನು ಜನರಿಗೆ ಮೂಡಿಸಬೇಕು. ಸಾಮೂಹಿಕ ವಿವಾಹಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸುವ, ಮಾಡಿಸದಿದ್ದರೆ ಶಿಕ್ಷೆಗೊಳಪಡಿಸುವ ಕಾನೂನು ಜಾರಿ ಆಗಲೇ ಬೇಕು. ಇದರಿಂದ ಮದುವೆಯಾಗಬಯಸುವ ಗಂಡು ಮತ್ತು ಹೆಣ್ಣುಗಳ ವಯಸ್ಸು ನಿಖರವಾಗಿ ತಿಳಿದು ಬರುತ್ತದೆ. ತನ್ಮೂಲಕ ಬಾಲ್ಯವಿವಾಹ ಹತೋಟಿಗೆ ಬಂದು, ಆ ಕಾರಣದಿಂದ ನಮ್ಮ ಹೆಣ್ಣುಮಕ್ಕಳು ಅನುಭವಿಸುವ ಅನೇಕ ಸಮಸ್ಯೆಗಳು ಕಡಿಮೆಯಾಗಬಹುದು.

ಅವಳ ಬಸಿರು ಸುತ್ತಲ ರಾಜಕಾರಣ


– ರೂಪ ಹಾಸನ


 

ಈಚೆಗೆ ರಾಜ್ಯದ ಹಲವು ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಅತ್ಯಂತ ಆಕರ್ಷಕ ಪದಗಳೊಂದಿಗೆ ತುರ್ತು ಗರ್ಭನಿರೋಧಕ/ಗರ್ಭನಿವಾರಕ ಮಾತ್ರೆಯೊಂದರ ಜಾಹಿರಾತು ಪ್ರಕಟವಾಗುತ್ತಿದೆ. i-pillಅದು ಹಲವು ದಿನಗಳು ಮತ್ತೆ ಮತ್ತೆ ಪ್ರಕಟಗೊಂಡಾಗ ಸಾಮಾನ್ಯ ಓದುಗರ ಗಮನ ಸೆಳೆಯುವುದೂ ನಿಜ.

ಅನಿರೀಕ್ಷಿತ, ಅನಪೇಕ್ಷಿತ ಲೈಂಗಿಕ ಸಂಪರ್ಕ ಉಂಟಾದಾಗ (ಹೆಚ್ಚಾಗಿ ಅತ್ಯಾಚಾರಕ್ಕೊಳಗಾದಾಗ) ಹೆಣ್ಣಿನ ಗರ್ಭಧಾರಣೆಯನ್ನು ತಡೆಯುವ ಹಿನ್ನೆಲೆಯಲ್ಲಿ ಈ ಐ-ಪಿಲ್ ಎಂಬ ಮಾತ್ರೆಯನ್ನು ಮಾರುಕಟ್ಟೆಗೆ ತರಲಾಗಿದೆ. ಆದರೆ ಜಾಹಿರಾತಿನಲ್ಲಿ ಇದನ್ನೊಂದು “ತುರ್ತು ಗರ್ಭನಿರೋಧಕ” ಎಂಬುದನ್ನಷ್ಟೇ ಎತ್ತಿಹಿಡಿದು ಅದಕ್ಕೆ ಸಂಬಂಧಿಸಿದ ಮಿಕ್ಕ ವಿವರಗಳನ್ನು ಚಿಕ್ಕದಾಗಿ, ಅಪ್ರಮುಖವೆಂಬಂತೆ ಬಿಂಬಿಸಿದ್ದು ಈ ಮಾತ್ರೆಯ ಮತ್ತೊಂದು ಕರಾಳ ಮುಖವನ್ನು ಮುಚ್ಚಿಟ್ಟಂತಾಗಿದೆ. ಈ ಮಾತ್ರೆ ಔಷಧಿ ಅಂಗಡಿಗಳಲ್ಲಿ, ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಮುಕ್ತವಾಗಿ ಮಾರಾಟಗೊಳ್ಳಲಾರಂಭಿಸಿದ್ದು ಅದರ ಕ್ರಯವನ್ನು ನಿರೀಕ್ಷಿತ ಪ್ರಮಾಣಕ್ಕಿಂತಾ ಹೆಚ್ಚಿಸಿದ್ದರೂ, ಅದರ ವಿಕ್ರಯ ಭರದಿಂದ ನಡೆಯುತ್ತಿದೆ! ಆತಂಕಕಾರಿಯಾದ ಅಂಶವೆಂದರೆ ಇದನ್ನು ಹೆಚ್ಚಾಗಿ ಬಳಸುತ್ತಿರುವವರು ಶಾಲಾ ಕಾಲೇಜುಗಳ ಹದಿಹರೆಯದ ಯುವತಿಯರು ಎಂಬುದು! ಬೇರೆಲ್ಲಕ್ಕಿಂಥಾ ಔಷಧಿ ಮಾರಾಟದ ಜಾಲ ಶಕ್ತಿಯುತವಾಗಿರುವುದರಿಂದ ನಗರ ಪಟ್ಟಣವೆನ್ನದೇ ಇಂತಹ ಉತ್ಪನ್ನಗಳು ಏಕಕಾಲಕ್ಕೆ ಎಲ್ಲೆಡೆ ಲಭ್ಯವಾಗುತ್ತಿವೆ.

ಈ ಕುರಿತು ಸಮೀಕ್ಷೆ ನಡೆಸಿರುವ ರಾಷ್ಟ್ರಮಟ್ಟದ ಪತ್ರಿಕೆಯೊಂದರ ಪ್ರಕಾರ ದೇಶಾದ್ಯಂತ ಸುಮಾರು ಎರಡು ಲಕ್ಷ ಐ-ಪಿಲ್ ಮಾತ್ರೆಗಳು ಪ್ರತಿ ತಿಂಗಳೂ ಮಾರಾಟವಾಗುತ್ತಿವೆ. ಹಾಸನದ ನನ್ನ ಸ್ತ್ರೀರೋಗ ತಜ್ಞ ಗೆಳತಿಯರ ಪ್ರಕಾರ ಸರಿಯಾದ ಸೇವನಾ ಕ್ರಮದ ಅರಿವಿರದೇ ತಿಂಗಳಿಗೆ 3-4 ಬಾರಿ ಈ ಮಾತ್ರೆ ಸೇವಿಸುವ ಹೆಣ್ಣುಮಕ್ಕಳಿಗೆ ಹೊಟ್ಟೆನೋವು, ವಿಪರೀತ ರಕ್ತಸ್ರಾವ, ಸುಸ್ತು, ವಾಕರಿಕೆಗಳು ಪ್ರಾರಂಭಿಕ ಹಂತದಲ್ಲಿ ಕಂಡು ಬರುತ್ತಿದ್ದರೂ ಇದನ್ನು ವೈದ್ಯರ ಸಲಹೆ ಇಲ್ಲದೇ ವಿವೇಚನಾರಹಿತವಾಗಿ ಮಾಮೂಲಿ ಗರ್ಭನಿರೋಧಕದಂತೆ ಪ್ರತಿಬಾರಿಯೂ ಬಳಸಿದಾಗ ತೀವ್ರ ತೆರನಾದ ಪಾರ್ಶ್ವ ಪರಿಣಾಮಗಳು ಕಾಲಾಂತರದಲ್ಲಿ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ಇದು ಮಾಮೂಲಿ ಗರ್ಭನಿರೋಧಕಗಳ ನಾಲ್ಕುಪಟ್ಟು ಪ್ರಭಾವಶಾಲಿಯಾಗಿರುತ್ತದೆ. ಅದನ್ನು ಮತ್ತೆ ಮತ್ತೆ ತಡೆದುಕೊಳ್ಳುವ ಸಾಮರ್ಥ್ಯ ದೇಹಕ್ಕಿರುವುದಿಲ್ಲ. ಜೀವಮಾನದಲ್ಲಿ 1-2 ಬಾರಿ ಅನಿವಾರ್ಯ ಸಂದರ್ಭದಲ್ಲಿ ಬಳಸಬಹುದಾದ ಈ ಮಾತ್ರೆಯನ್ನು ಗರ್ಭಧಾರಣೆಯ ಸಾಧ್ಯತೆಯನ್ನು ತಡೆಯುತ್ತದೆಂದು ಭ್ರಮಿಸಿ ನಿರಂತರವಾಗಿ ಸೇವಿಸಲಾರಂಭಿಸಿದರೆ ಹೆಣ್ಣು ಮಕ್ಕಳ ಗತಿ ಏನಾಗಬೇಕು? ಸಂಕೋಚ, ಹೆದರಿಕೆಗಳಿಂದ ವೈದ್ಯರ ಬಳಿಗೆ ತಪಾಸಣೆಗೆ ಹೋಗಲೂ ಹಿಂಜರಿವ ಹೆಣ್ಣುಮಕ್ಕಳು ಮುಂದಿನ ದಿನಗಳಲ್ಲಿ ಆರೋಗ್ಯ ಹಾಗೂ ಬಸಿರು ಸಂಬಂಧಿ ಮುಖ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂಬ ಆತಂಕ ವೈದ್ಯರದು.

ಆದರೆ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಮಾಧ್ಯಮಗಳಲ್ಲಿ ಎಲ್ಲೆಂದರಲ್ಲಿ ಪ್ರಕಟಗೊಳ್ಳುತ್ತಿರುವ safe-sex-campaignಯಾವುದೇ ಗರ್ಭನಿರೋಧಕಗಳ ಅಥವಾ ಏಡ್ಸ್ ಕುರಿತ ಎಚ್ಚರಿಕೆಯ ಜಾಹಿರಾತುಗಳಲ್ಲಿ ಸೆಕ್ಸ್‌ನ ಮುಕ್ತತೆ ತಪ್ಪಲ್ಲವೆಂದು ಪ್ರತಿಪಾದಿಸುತ್ತಲೇ ಅದು “ಸುರಕ್ಷಿತವಾಗಿದ್ದರೆ” ಸಾಕು ಎಂದು ಸಮರ್ಥಿಸುತ್ತಿರುವ ಸಂದೇಶದ ಹಿನ್ನೆಲೆಯಲ್ಲಿ ವ್ಯಾಪಾರಿ ಜಗತ್ತಿನ ಕ್ರೂರ ಚಾಣಾಕ್ಷತೆಯೊಂದಿಗೆ, ಹೆಣ್ಣಿನ ದೇಹವನ್ನು ಸರಕೆಂಬಂತೆ ವೈಭವೀಕರಿಸುತ್ತಿರುವ ಪುರುಷ ವಿಕೃತಿಯೂ ಎದ್ದು ತೋರುತ್ತದೆ. ಇವು ಸದ್ದಿಲ್ಲದೇ ಮುಕ್ತಕಾಮವನ್ನು ಪ್ರಚೋದಿಸುವಂತವೂ ಆಗಿವೆ. ಅಥವಾ ಕಾಲಕ್ಕೇ ಇಂತಹ ತುರ್ತು ಬಂದೊದಗಿದೆ ನಾವಿನ್ನೂ ಓಬಿರಾಯನ ಕಾಲದಲ್ಲಿದ್ದೇವೆಯೇ ಎಂದು ಮನಸು ಆತಂಕದಿಂದ ಪ್ರಶ್ನಿಸಿಕೊಳ್ಳುತ್ತಿದೆ.

ಗಂಡು-ಹೆಣ್ಣಿನ ಖಾಸಗಿ, ಕೌಟುಂಬಿಕ ಸುಖದ ಪ್ರತೀಕವಾದ ಬಸಿರು ಇಂದು ಸಾಮಾಜಿಕ ಬದಲಾವಣೆಯ ಸಂಕೇತವಾಗಿ, ಸಾರ್ವಜನಿಕವಾಗಿಬಿಟ್ಟಿರುವುದು ವಿಪರ್ಯಾಸ! ಭಾರತದಲ್ಲಿ ವರ್ಷವೊಂದಕ್ಕೆ 30-40 ಲಕ್ಷ ಭ್ರೂಣಗಳು ಹತ್ಯೆಗೀಡಾಗುತ್ತಿವೆಯೆಂದು ವರದಿಯೊಂದು ತಿಳಿಸುತ್ತದೆ. (ಹೆಣ್ಣು ಭ್ರೂಣಹತ್ಯೆಯದು ಬೇರೆಯದೇ ಲೆಕ್ಕಾಚಾರ.) ಭೋಗ ಸಂಸ್ಕೃತಿಯೆಡೆಗಿನ ವಿಪರೀತದ ಆಕರ್ಷಣೆ, ಸೆಕ್ಸ್‌ನ್ನು ಎಲ್ಲಕ್ಕೂ ಮಿಗಿಲೆಂಬಂತೆ ಎತ್ತಿ ಹಿಡಿಯುತ್ತಿರುವ ದೃಶ್ಯ ಮಾಧ್ಯಮಗಳು, ಬದಲಾದ ಆರ್ಥಿಕ, ಸಾಮಾಜಿಕ ಪರಿಸರ ಹಾಗೂ ಶೈಕ್ಷಣಿಕ-ವೈಜ್ಞಾನಿಕ ಸೌಲಭ್ಯಗಳ ಹಿನ್ನೆಲೆಯಲ್ಲಿ ನೈತಿಕತೆಯ-ಲೈಂಗಿಕತೆಯ ಪರಿಕಲ್ಪನೆಯಲ್ಲಿ ವೇಗದ ಬದಲಾವಣೆಗಳಾಗುತ್ತಿರುವುದು, ಸಮಾಜದ ಹಿತಕ್ಕಿಂಥಾ ವೈಯಕ್ತಿಕತೆಯೇ ಮೇಲುಗೈ ಸಾಧಿಸುತ್ತಿರುವುದು, ಸ್ವಂತ ಸ್ವಾತಂತ್ರ್ಯದ ಪರಿಧಿ ಗಂಡು-ಹೆಣ್ಣುಗಳಿಬ್ಬರಿಗೂ ವಿಸ್ತಾರವಾಗುತ್ತಿರುವುದು, ಇದು ಮಿತಿಯಿರದ ಸ್ವಾತಂತ್ರ್ಯವಾಗಿ ಬದಲಾಗುತ್ತಿರುವುದು, ಇದೇ ಈ ಪ್ರಮಾಣದ ಭ್ರೂಣ ಹತ್ಯೆಗೆ ಕಾರಣ ಎಂದು ಸಮಾಜ ವಿಜ್ಞಾನಿಗಳು ವಿಶ್ಲೇಷಿಸುತ್ತಾರೆ.

ಜೊತೆಗೆ ಭಾವನಾತ್ಮಕ ಅಪಕ್ವತೆ, ಸಂಬಂಧಗಳ ನಿರ್ವಹಣೆಯಲ್ಲಿನ ಬೇಜವಾಬ್ದಾರಿತನ, ಲೈಂಗಿಕತೆ ಕುರಿತು ಅವಸರದ ಕುತೂಹಲ, ಮಾಧ್ಯಮಗಳ ಪ್ರಭಾವ, ಸರಿಯಾದ ಮಾದರಿ-ಮಾರ್ಗದರ್ಶನಗಳ ಕೊರತೆ, ಉಸಿರುಕಟ್ಟಿಸುವ ಸಂಪ್ರದಾಯಗಳು, ಆಧುನಿಕತೆ ಹಾಗೂ ಹಳೆಯ ಸಂಪ್ರದಾಯಗಳ ಸಂಘರ್ಷದಲ್ಲಿ ಮೂರನೆಯ, ಸಮಾಜ ಒಪ್ಪಿತ ದಾರಿ ಇಲ್ಲದಿರುವುದು, ಸಮಾಜದ ವಿರೋಧ ಕಟ್ಟಿಕೊಂಡು, ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯಹೀನತೆ, ಶಿಶುವಿನ ಹೊಣೆಗಾರಿಕೆ ಹೊರಲು ಸಿದ್ಧವಿಲ್ಲದ ಸ್ವತಂತ್ರ ಮನಸ್ಸುಗಳು….. ಇಂಥಹ ಹತ್ತು ಹಲವು ಮನಃಶಾಸ್ತ್ರೀಯ ನೆಲೆಯ ಕಾರಣಗಳು ಬಸಿರನ್ನು ಘಾಸಿಗೊಳಿಸಿ ಹತ್ಯೆಗೊಳಿಸುವ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತವೆ.

ಅತ್ಯಾಚಾರಕ್ಕೆ, ಗೌಪ್ಯ ಲೈಂಗಿಕ ಕಿರುಕುಳಕ್ಕೆ, ತಮ್ಮನ್ನು ತಾವೇ ನಿಭಾಯಿಸಿಕೊಳ್ಳಲಾಗದ ದೌರ್ಬಲ್ಯಕ್ಕೆ, india-foeticideಮದುವೆಯಾಗುವುದಾಗಿ ನಂಬಿಸಿ ಮೋಸ ಹೋದ ತಪ್ಪಿಗೆ ಬಸಿರಾದ ಹೆಣ್ಣು ಮಕ್ಕಳ ಕಥೆಗಳು, ಹೆಣ್ಣು ಮಗು ಬೇಡವೆಂಬ ಕುಟುಂಬದವರ ಒತ್ತಡ ಹೀಗೆ ಹಲವಾರು ಬಸಿರು ಸಂಬಂಧಿ ಸಮಸ್ಯೆಯ ಹಲವು ಮುಖಗಳು ವೈದ್ಯರಲ್ಲಿ “ಆಫ್ ದಿ ರೆಕಾರ್ಡ್” ಆಗಿ ದಾಖಲಾಗಿರುತ್ತವೆ. ನಿತ್ಯ ದಾಖಲಾಗುತ್ತಿವೆ.

ಯಾವುದೇ ಪ್ರಾಣಿಸಂತತಿಯ ಆರೋಗ್ಯವಂತ ಬಸಿರು ಮತ್ತು ಆರೋಗ್ಯಪೂರ್ಣ ಪೀಳಿಗೆಯ ದೃಷ್ಟಿಯಿಂದ ನಿಸರ್ಗವೇ ಅಗೋಚರವಾಗಿ ಹಲವು ಪ್ರಾಕೃತಿಕ ನಿಯಮಗಳನ್ನು ರೂಪಿಸಿದೆ. ಹೆಣ್ಣಿನ ಬಸಿರು ಅದರ ಎಲ್ಲಾ ಧಾರ್ಮಿಕ, ನೈತಿಕ ಚೌಕಟ್ಟುಗಳಿಂದಾಗಿ ಭಾರತೀಯ ಸಂದರ್ಭದಲ್ಲಿ ಪಾವಿತ್ರ್ಯತೆಯ ಹೆಸರಿನಲ್ಲಿಯೇ ಗುಣಾತ್ಮಕತೆಯನ್ನು ಪಡೆದುಕೊಂಡಿತ್ತು. ಆದರೆ ಇತ್ತೀಚೆಗಿನ ಕೆಲ ದಶಕಗಳಿಂದ ಆಧುನಿಕತೆಯ ಪ್ರಭಾವ, ಮಾಧ್ಯಮಗಳ ಅಬ್ಬರ, ಎಗ್ಗಿಲ್ಲದೇ ಕೈಗೆಟುಕುತ್ತಿರುವ ವೈದ್ಯಕೀಯ ಮುನ್ನೆಚ್ಚರಿಕೆಯ ಲೈಂಗಿಕ ಸಾಧನ, ಸೌಲಭ್ಯಗಳಿಂದಾಗಿ ಹಲವಾರು ಹದಿಹರೆಯದ ಯುವಕ-ಯುವತಿಯರು ಸೆಕ್ಸ್‌ನ್ನು ಮೋಜಿಗಾಗಿ ಬಳಸುತ್ತಿರುವುದು, ನಿರಂತರವಾಗಿ ಹೊಸ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ. ಅವು ಅನೈತಿಕ ನೆಲೆಯ, ಉತ್ತರಗಳೇ ಇಲ್ಲದ ಬೃಹತ್ ಸಮಸ್ಯೆಗಳಾಗಿ ಕುಟುಂಬ-ಸಮಾಜದ ಎದುರು ನಿಲ್ಲುತ್ತಿವೆ.

ಹೆಣ್ಣಿನ ಬಸಿರನ್ನು ಪ್ರಧಾನವಾಗಿರಿಸಿಕೊಂಡು ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆಗಾಗಿ ಅನೈತಿಕ ನೆಲೆಗಳಲ್ಲಿ ಭಾರತದ ಬಡ ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಇಂದಿನ ಹಲವು ಸಮೀಕ್ಷೆಗಳು ಬೆಳಕು ತೋರುತ್ತಿವೆ. save-girl-childಹಾಗೇ 2002 ರಲ್ಲಿ “ಬಾಡಿಗೆ ತಾಯಂದಿರ” ಹಕ್ಕನ್ನು ಕಾನೂನುಬದ್ಧಗೊಳಿಸಿದ ನಂತರ ಭಾರತದ ಕೆಲವು ಬಡ ಹೆಣ್ಣುಮಕ್ಕಳು ಹಣಗಳಿಕೆಯ ಮಾರ್ಗವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಇದೂ ಕೂಡ ಶೋಷಣೆಯ ಇನ್ನೊಂದು ಮುಖವೆಂದು ವಾದಿಸುವವರಿದ್ದಾರೆ. ಆದರೆ ಬಡತನ, ಅಸಹಾಯಕತೆಗಳು ನಮ್ಮ ಹೆಣ್ಣು ಮಕ್ಕಳಿಂದ ಏನೆಲ್ಲಾ ಕುಕೃತ್ಯಗಳನ್ನು ಮಾಡಿಸುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಹೆಣ್ಣುಮಕ್ಕಳ ಮಾರಾಟ, ವೇಶ್ಯಾವಾಟಿಕೆ, ಅಕ್ರಮ ಸಂಬಂಧ, ಬಲವಂತದ ವಿವಾಹ….. ಇತ್ಯಾದಿಗಳ ಮೂಲಕ ಬಾಡಿಗೆ ತಾಯಂದಿರಿಗಿಂಥಾ ಕ್ರೂರವಾಗಿ, ಆಘಾತಕಾರಿ ಪ್ರಮಾಣದಲ್ಲಿ ಅವರು ಶೋಷಣೆಗೊಳಗಾಗುತ್ತಿದ್ದಾರೆ.

ಬದಲಾಗುತ್ತಿರುವ ಪರಿಸರದಂತೆ ವೈದ್ಯಕೀಯ ಕ್ಷೇತ್ರದಲ್ಲೂ ಅಗಾಧ ಪ್ರಮಾಣದಲ್ಲಿ ಪ್ರಗತಿಯಾಗಿದೆ. ಹುಟ್ಟಲಿರುವ ಮಗು ಅನಾರೋಗ್ಯ ಹೊಂದಿರುವಂತಹುದು, ಅದರ ಭವಿಷ್ಯದ ದೃಷ್ಟಿಯಿಂದ ಯಾತನಾದಾಯಕವಾದುದೂ ಮತ್ತು ಅಂತಹ ಮಗುವನ್ನು ನೋಡಿಕೊಳ್ಳಲು ವೈದ್ಯಕೀಯ ವೆಚ್ಚಕ್ಕಾಗಿ ಹೆಚ್ಚು ಹಣ ಖರ್ಚುಮಾಡಬೇಕಾದ ಹಾಗೂ ಜೀವನ ಪರ್ಯಂತ ಅಂಥಹಾ ಮಗುವನ್ನು ಸಾಕುವಾಗ ಅನುಭವಿಸಬೇಕಾಗುವ ಮಾನಸಿಕ ಹಿಂಸೆಯಿಂದ ತಪ್ಪಿಸಿಕೊಳ್ಳಲು ಅದನ್ನು ಭ್ರೂಣದ ಹಂತದಲ್ಲಿಯೇ ಗರ್ಭಪಾತ ಮಾಡಿಸಲು ಕಾನೂನಿನಲ್ಲಿ ಅವಕಾಶವಿರುವುದು ಎಲ್ಲ ರೀತಿಯಲ್ಲಿಯೂ ಸಮಂಜಸವಾದುದು. ಆದರೆ ಕಾನೂನುಬಾಹಿರವಾಗಿ ಯಾವ ಎಗ್ಗೂ ಇಲ್ಲದೇ ಇಷ್ಟೊಂದು ಪ್ರಮಾಣದಲ್ಲಿ ನಡೆಯುವ ಭ್ರೂಣಹತ್ಯೆಯಂಥ ಚಟುವಟಿಕೆಗೆ ನಿಯಂತ್ರಣ ತರದಿದ್ದಾಗ ಕಾನೂನಿಗೆ ಯಾವ ಬೆಲೆ ಇರುತ್ತದೆ?

ಇಂದಿನ ಮಹಿಳೆ, ಮತ್ತವಳ ಆರೋಗ್ಯ ಪೂರ್ಣ ಬಸಿರಿನ ಹಿತದೃಷ್ಟಿಯಿಂದ ಯಾವುದೇ ರೀತಿಯ ಗರ್ಭನಿರೋಧಕಗಳನ್ನು ವೈದ್ಯರ ಸಲಹೆ ಇಲ್ಲದೇ ಕೊಂಡುಕೊಳ್ಳುವ ಮತ್ತು ಬಳಸುವ ವಿಧಾನವನ್ನು ಕಾನೂನುಬಾಹಿರವೆಂದು ಪರಿಗಣಿಸಿ, ಮೊದಲಿಗೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಳ್ಳಬೇಕು. ನಿರಂತರವಾದ ಗರ್ಭನಿರೋಧಕದಂಥ ಪ್ರಖರವಾದ ಔಷಧಿ ಸೇವನೆಯಿಂದ ಪಾರ್ಶ್ವ ಪರಿಣಾಮಗಳಾಗಿ ಸರಿಪಡಿಸಲಾಗದ ಭೀಕರ ಆರೋಗ್ಯ ಸಮಸ್ಯೆಗಳು ಹಾಗೂ ಅನಾರೋಗ್ಯಕರ ಪೀಳಿಗೆಯ ಹುಟ್ಟಿಗೆ ಕಾರಣವಾಗಬಹುದೆಂದು ಸ್ತ್ರೀರೋಗ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. moodsಔಷಧಿ ಅಂಗಡಿಗಳ ಕೌಂಟರ್‌ಗಳಲ್ಲಿ ಮುಕ್ತವಾಗಿ ಮಾರಾಟ ಮಾಡುವ ವಿಧಾನದ ಬಗ್ಗೆಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅಂತಹ ಮಾರಾಟಗಾರರಿಗೆ ಕಠಿಣ ಶಿಕ್ಷೆ ವಿಧಿಸುವಂತಹಾ ನಿಯಮ ಜಾರಿಯಾಗಬೇಕು. ಮಾಧ್ಯಮಗಳಲ್ಲಿ ವಿವೇಚನಾರಹಿತವಾಗಿ ಜಾಹಿರಾತು ನೀಡುವ ಮೂಲಕ ಯುವಜನರು ದಾರಿತಪ್ಪುವ ಸಾಧ್ಯತೆಗಳು ಹೆಚ್ಚಿರುವುದರಿಂದ ಜಾಹಿರಾತುಗಳಿಗೆ ಕಡಿವಾಣ ಅಗತ್ಯ. ಮಾಧ್ಯಮಗಳೂ ಹೆಚ್ಚು ಸಾಮಾಜಿಕ ಜವಾಬ್ದಾರಿಯಿಂದ, ವಿವೇಕಯುತವಾಗಿ ನಡೆದುಕೊಳ್ಳಬೇಕಿರುವುದು ಮುಖ್ಯ. ಜಾಹಿರಾತುಗಳು ಎಲ್ಲಿ? ಹೇಗೆ? ಯಾವ ರೀತಿಯಲ್ಲಿ ಎಚ್ಚರಿಕೆಯಿಂದ ಪ್ರಕಟಗೊಳ್ಳಬೇಕೆಂಬ ಚರ್ಚೆಗಳಾಗಬೇಕು. ಇದನ್ನು ವೈದ್ಯಕೀಯ ಸಂಸ್ಥೆಗಳು ಮಾಡಿದರೆ ಉತ್ತಮ.

ಇದೆಲ್ಲಕ್ಕಿಂತಾ ಮುಖ್ಯವಾಗಿ ಹದಿಹರೆಯದ ಪ್ರಾರಂಭದಲ್ಲೇ ಹೆಣ್ಣು ಮಗುವಿಗೆ ಅವಳ ದೇಹ, ಅದರ ಕುರಿತ ಎಚ್ಚರಿಕೆ, ಸೆಕ್ಸ್ ಸಂಬಂಧದಿಂದಾಗುವ ಪರಿಣಾಮ, ಗರ್ಭನಿರೋಧಕ ಮತ್ತದರ ಪ್ರಭಾವವೆಲ್ಲವನ್ನು ಮನೆಯಲ್ಲಿ, ಶಿಕ್ಷಣದ ಭಾಗವಾಗಿ ತಿಳಿಹೇಳುವುದು ಮುಖ್ಯವಾದುದು. ಇದರೊಂದಿಗೆ ಗಂಡು ಮಕ್ಕಳಿಗೂ ಲೈಂಗಿಕ ಬದುಕಿನ ನೈತಿಕ ಜವಾಬ್ದಾರಿ, ಅದರ ಪರಿಣಾಮಗಳ ಕುರಿತು ಎಚ್ಚರಿಕೆ, ಆರೋಗ್ಯಪೂರ್ಣ, ಹೊಣೆಗಾರಿಕೆಯ ಜೀವನದ ಮಹತ್ವದ ಅರಿವು ಮೂಡಿಸುವುದು ಅಷ್ಟೇ ಮುಖ್ಯವಾದುದು.

ಬಡತನ, ಅಸಹಾಯಕತೆ, ಶಿಕ್ಷಣ ಮತ್ತು ಮುಖ್ಯವಾಗಿ ಅರಿವಿನ ಕೊರತೆ, ಇಂತಹ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾದ್ದರಿಂದ ಮೊದಲು ಈ ಮೂಲ ಸಮಸ್ಯೆಗಳಿಂದ ವಿಮುಕ್ತಗೊಳಿಸುವುದು ಸರ್ಕಾರ, ಸಮಾಜ ಮತ್ತು ಮಹಿಳಾ ಸಂಘಟನೆಗಳ ಮುಖ್ಯ ಗುರಿಯಾಗಬೇಕಿದೆ. ಅದಾಗದಿದ್ದಾಗ ಹೆಣ್ಣಿನ ಬಸಿರು ಮತ್ತೆ ಮತ್ತೆ ಹೀಗೇ ಹಲ್ಲೆಗೊಳಗಾಗುತ್ತಲೇ ಇರುತ್ತದೆ. ಹೆಣ್ಣು ಮಕ್ಕಳಿಗೆ ಎಲ್ಲಿಯವರೆಗೂ ತಾವೊಂದು ವಸ್ತುವಲ್ಲ, ತಾವೊಂದು ’ವ್ಯಕ್ತಿ’ ಎನ್ನುವ, ಮತ್ತು ತನ್ನ ವ್ಯಕ್ತಿತ್ವಕ್ಕೆ ಗೌರವ ಪಡೆಯಬೇಕೆಂಬ ವಿವೇಚನೆ ಮೂಡುವುದಿಲ್ಲವೋ ಅಲ್ಲಿಯವರೆಗೂ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇರಬೇಕಾಗುತ್ತದೆ.

ನಾವು ಮಕ್ಕಳನ್ನು ಪ್ರೀತಿಸುತ್ತೇವೆಯೇ?


– ರೂಪ ಹಾಸನ


 

ನಾವು ನಮ್ಮ ಮಕ್ಕಳನ್ನು ಪ್ರೀತಿಸುತ್ತೇವೆಯೇ? ಇದು ನಾವೆಲ್ಲರೂ ನಮ್ಮ ಒಳ ಮನಸುಗಳನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ. ಬಹುಶಃ “ಹೌದು” ಎಂಬುದು ಬಹುತೇಕರ ಉತ್ತರ. ಆದರೆ ನಮ್ಮ ಸಮಾಜದಲ್ಲಿ ಅತಿ ಹೆಚ್ಚಿನ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವವರು ಮಕ್ಕಳು. ಅವರನ್ನೂ ನಾವು ವ್ಯಕ್ತಿಗಳೆಂದು ಗುರುತಿಸಿಯೇ ಇಲ್ಲವಾದ್ದರಿಂದ ಅವರೆಡೆಗೆ ಗಮನ ಕೊಟ್ಟಿದ್ದೂ ಯಾವತ್ತೂ ಕಡಿಮೆಯೇ. ಹಾಗಿದ್ದರೆ ಮಕ್ಕಳೆಡೆಗಿನ ಪ್ರೀತಿ ಎಂದರೇನು? ಎಂಬುದು ಇನ್ನೊಂದು ಪ್ರಶ್ನೆ. ಮಕ್ಕಳು ಕೇಳಿದ್ದನ್ನು ಕೊಡಿಸುತ್ತೇವೆ. ಹೆಚ್ಚಿನ ಡೊನೇಶನ್ ಕೊಟ್ಟು, ಹೆಚ್ಚು ಫೀಸ್ ಕಟ್ಟಿ, ಒಳ್ಳೆಯ ಕಿಂಡರ್‌ಗಾರ್ಟನ್-ಡೇ ಕೇರ್ ಸೆಂಟರ್‌ಗೆ ಸೇರಿಸಿದ್ದೇವೆ. ಉಂಡುಡಲು ಯಾವ ಕೊರತೆಯೂ ಇಲ್ಲ. ಅದಕ್ಕಾಗಿಯೇ ಗಂಡ ಹೆಂಡತಿ ಇಬ್ಬರೂ ಹಗಲಿರುಳೂ ದುಡಿಯುತ್ತೇವೆ……..ಹೀಗೆ ಪೋಷಕರಿಂದ ವಿವರಣೆಗಳು ಮುಂದುವರೆಯುತ್ತದೆ.

ಪ್ರೀತಿಯನ್ನು ನಾವಿಂದು ಹಣದ ಮೌಲ್ಯದಲ್ಲಿ ಅಳೆಯಲು ಪ್ರಾರಂಭಿಸಿಬಿಟ್ಟಿದ್ದೇವೆ! Streetchildrenಮಕ್ಕಳ ಬೇಕು-ಬೇಡ, ಇಷ್ಟಾನಿಷ್ಟಗಳನ್ನು ಗುರುತಿಸಲು, ಅವರಿಗೆ ಅವಶ್ಯಕವಾಗಿ ನೀಡಬೇಕಾದಂತಾ ಗಂಭೀರ ಲಕ್ಷ್ಯ, ಪೋಷಣೆ ಹಾಗೂ ಕಾಳಜಿಗಾಗಿ ಕನಿಷ್ಠ 0-6 ವರ್ಷಗಳ ಮಕ್ಕಳೊಂದಿಗಾದರೂ ನಿಗದಿತ ಗುಣಾತ್ಮಕ ಸಮಯವನ್ನು ಕಳೆಯುವುದು ಮುಖ್ಯ ಎಂಬುದನ್ನೂ ನಾವಿಂದು ಮರೆತೇ ಬಿಟ್ಟಿದ್ದೇವೆ. ಅಥವಾ ಅದಕ್ಕೆಲ್ಲಾ ನಮಗೆ ಸಮಯವೇ ಇಲ್ಲ! ಬದಲಿಗೆ ಅದನ್ನು ವಸ್ತು ಆಧಾರಿತವಾದ ಸುಖಸಾಧನದಿಂದ ಅಳೆದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಆದರೆ ಮಕ್ಕಳಿಗೆ ನಿಜಕ್ಕೂ ನಮ್ಮಿಂದ ಬೇಕಾಗಿರುವುದೇನು? ಇದು ಪೋಷಕರು, ಸಮಾಜ, ಸರ್ಕಾರ ತಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ.

ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗಿ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲವಾಗುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಇಂತಹ ಎಳೆಯ ಕಂದಮ್ಮಗಳಿಂದ ಹಿಡಿದು 5-6 ವರ್ಷಗಳವರೆಗಿನ ಮಕ್ಕಳನ್ನು ನೋಡಿಕೊಳ್ಳಲು ನಗರ ಪ್ರದೇಶಗಳಲ್ಲೆಲ್ಲಾ ಕ್ರಷ್, ಡೇ ಕೇರ್ ಸೆಂಟರ್‌ನಂತಹ ಮಕ್ಕಳ ಪಾಲನಾ ಕೇಂದ್ರಗಳು ಹುಟ್ಟಿಕೊಂಡಿವೆ. ಬಹಳಷ್ಟು ಕೇಂದ್ರಗಳು ಶ್ರದ್ಧೆ, ಕಾಳಜಿಯಿಂದಲೇ ಕಾರ್ಯ ನಿರ್ವಹಿಸುತ್ತವೆ ಕೂಡ. ಆದರೆ ಇಂತಹ ಪಾಲನ ಕೇಂದ್ರಗಳನ್ನು ಸರ್ಕಾರದಿಂದ ದಾಖಲಿಸುವ, ಕನಿಷ್ಟ ಅವಶ್ಯಕ ನಿಯಾಮಾವಳಿಗಳನ್ನು ಅವುಗಳಿಗೆ ರೂಪಿಸುವ ಕೆಲಸ ಸರ್ಕಾರದಿಂದ ಆಗಿಲ್ಲ. ಅತ್ಯಂತ ಚಿಕ್ಕ ಕೊಠಡಿಗಳಲ್ಲಿ, ಮಕ್ಕಳನ್ನು ನೋಡಿಕೊಳ್ಳಲು ಬೇಕಾದ ತಕ್ಕಷ್ಟು ಆಯಾಗಳಾಗಲಿ, ಅವರಿಗೆ ಕನಿಷ್ಠ ನಿಗದಿತ ತರಬೇತಿಯಾಗಲಿ, ಆಟಿಕೆಗಳಾಗಲಿ, ಶೌಚಾಲಯ, ಸ್ವಚ್ಛ ಹಾಸಿಗೆ ಹೊದಿಕೆ, ಶುದ್ಧ ಕುಡಿಯುವ ನೀರು, ಆಟದ ಬಯಲು ಇನ್ನಿತರ ಮೂಲಭೂತ ಸೌಕರ್ಯಗಳೂ ಇಲ್ಲದಂತಹ ಪಾಲನಾ ಸಂಸ್ಥೆಗಳ ಸಂಖ್ಯೆ ಇಂದು ಹೆಚ್ಚುತ್ತಿವೆ. ಸ್ವಚ್ಛಂದವಾಗಿ ಆಡಿ ನಲಿಯ ಬೇಕಾಗಿದ್ದ ಮಕ್ಕಳು ಉಸಿರುಗಟ್ಟಿಸುವ ವಾತಾವರಣದಲ್ಲಿ, ಪರಿಪೂರ್ಣವಾಗಿ ವಿಕಸಿತಗೊಳ್ಳದೆ ನಲುಗಿ ಹೋಗುತ್ತಿರುವಾಗ ಇದಕ್ಕಾಗಿ ಯಾರನ್ನು ದೂರುವುದು? ಮಕ್ಕಳ ಸಹಜ ಬಾಲ್ಯವನ್ನು ಕಸಿಯುತ್ತಿರುವ ಅಪರಾಧಿಗಳು ಯಾರು? ಯಾರನ್ನಿಲ್ಲಿ ಶಿಕ್ಷಿಸುವುದು?

ಮಧ್ಯಮ ವರ್ಗದವರ ಮಕ್ಕಳನ್ನು ನೋಡಿಕೊಳ್ಳಲು ನಗರ ಪ್ರದೇಶದಲ್ಲಿ ಇಂತಹ ವ್ಯವಸ್ಥೆಗಳಾದರೂ ಇವೆ. child-labourಆದರೆ ಗ್ರಾಮೀಣ ಪ್ರದೇಶಗಳ ಕೆಳ ಮಧ್ಯಮ ಹಾಗೂ ಬಡ ಕುಟುಂಬಗಳಲ್ಲಿ ದಂಪತಿಗಳಿಬ್ಬರೂ ಹೊರಗೆ ಹೋಗಿ ದುಡಿಯುತ್ತಿರುವ ಸಂದರ್ಭಗಳಲ್ಲಿ, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದಾಗ ಮಕ್ಕಳು ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದ್ದಾರೆ. ಹೆಚ್ಚಿನ ಕೆಲಸದ ಕೇಂದ್ರಗಳಲ್ಲಿ ಮಕ್ಕಳನ್ನೂ ಪಾಲಕರು ತಮ್ಮೊಂದಿಗೆ ಕರೆತರುವುದನ್ನು ಒಪ್ಪುವುದಿಲ್ಲ. ಅಕ್ಕಪಕ್ಕದ ಮನೆಗಳಲ್ಲಿಯೋ ಸ್ವಲ್ಪ ದೊಡ್ಡವಾಗಿದ್ದರೆ ತಮ್ಮದೇ ಮನೆಗಳಲ್ಲಿಯೋ ಬಿಟ್ಟು ಹೋಗಬೇಕಾದಂತಹ ಪರಿಸ್ಥಿತಿ ಇದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಅನೇಕ ರೀತಿಯ ಅನಾರೋಗ್ಯಕ್ಕೆ, ಅಪಾಯಗಳಿಗೆ, ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗುತ್ತಿರುವುದು ಇಂತಹ ಕುಟುಂಬಗಳಲ್ಲಿಯೇ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು. ಹೆಚ್ಚು ಮಕ್ಕಳ ಕಾರಣಕ್ಕೋ, ಹೆಣ್ಣು ಎಂಬ ಕಾರಣಕ್ಕೋ ಮಕ್ಕಳೆಡೆಗೆ ನಿಷ್ಕಾಳಜಿ ಹಾಗೂ ಗಂಡು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಅತ್ಯಂತ ಸಹಜವಾಗಿ ನಡೆಯುತ್ತಿದೆ. ಇಲ್ಲೆಲ್ಲಾ ಮಕ್ಕಳ ಹಕ್ಕು ಎಂಬ ಪರಿಕಲ್ಪನೆಯೇ ಅಪಹಾಸ್ಯಕ್ಕಿಡಾಗುತ್ತಿರುವುದನ್ನು ಸಂಕಟದಿಂದ ನೋಡಬೇಕಾಗಿದೆಯಷ್ಟೇ.

“ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ದೇಶ ಭಾರತ. ಭಾರತದ ಸಂವಿಧಾನವು ದೇಶದ ಎಲ್ಲಾ ಮಕ್ಕಳಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿದೆ ಮತ್ತು ಸರ್ಕಾರವು ವಿಶೇಷ ಯೋಜನೆಗಳನ್ನು ರೂಪಿಸುವುದನ್ನು ಉತ್ತೇಜಿಸುತ್ತದೆ. Street_Child,_Srimangal_Railway_Stationಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳು ವಿಶೇಷವಾಗಿ ಮಕ್ಕಳ ಬಾಲ್ಯತನವನ್ನು ದುರುಪಯೋಗದಿಂದ ರಕ್ಷಿಸಲು ಮತ್ತು ಮಕ್ಕಳು ಸ್ವತಂತ್ರವಾಗಿ ಮತ್ತು ಗೌರವಯುತವಾದ ಆರೋಗ್ಯಕರವಾದ ವಾತಾವರಣದಲ್ಲಿ ಅಭಿವೃದ್ಧಿ ಹೊಂದಲು ಅವರಿಗೆ ಅವಕಾಶಗಳನ್ನು ಮತ್ತು ಸೌಲಭ್ಯಗಳನ್ನು ಖಾತ್ರಿಪಡಿಸುವುದನ್ನು ಸೂಚಿಸುತ್ತದೆ. ಮಕ್ಕಳ ಬಾಲ್ಯ ಶೋಷಣೆಗೆ ಗುರಿಯಾಗದಂತೆ ಮತ್ತು ಅವರು ನೈತಿಕವಾಗಿ ಮತ್ತು ಐಹಿಕವಾಗಿ/ಪ್ರಾಪಂಚಿಕವಾಗಿ ಪಡೆಯಲೇ ಬೇಕಾದ ಸೌಲಭ್ಯಗಳಿಂದ ವಂಚಿತರಾಗದಂತೆ ರಕ್ಷಿಸಬೇಕು………

“ಮಕ್ಕಳು ದೇಶದ ‘ಅತ್ಯಂತ ಪ್ರಮುಖ ಆಸ್ತಿ’ ಎಂದು ರಾಷ್ಟ್ರೀಯ ಮಕ್ಕಳ ನೀತಿ 1974 ರಲ್ಲಿ ಘೋಷಿಸಿರುವ ಭಾರತ ಸರ್ಕಾರವು ತನ್ನ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಅಂತಾರಾಷ್ಟ್ರೀಯ ಒಡಂಬಡಿಕೆಗಳು ಮತ್ತು ಒಪ್ಪಂದಗಳಿಗೆ ಒಪ್ಪುವ ಮೂಲಕ ಪುನರುಚ್ಚರಿಸಿದೆ. ಇವುಗಳಲ್ಲಿ ಮಕ್ಕಳ ಹಕ್ಕುಗಳ ಘೋಷಣೆ, ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳು ಸೇರಿವೆ. ಬಹಳ ಪ್ರಮುಖವಾಗಿ ಈ ಸಮಾಜವು ಕೊಡಮಾಡುವ ಎಲ್ಲ ರೀತಿಯ ಕೌಶಲ್ಯಗಳು, ಪ್ರೋತ್ಸಾಹ ಮತ್ತು ಪ್ರಚೋದನೆಯನ್ನು ಬಳಸಿಕೊಂಡು ಮಕ್ಕಳೆಲ್ಲರೂ ದೈಹಿಕವಾಗಿ ಮಾನಸಿಕವಾಗಿ ಚುರುಕಾಗಿರಬೇಕು, ನೈತಿಕವಾಗಿ ಆರೋಗ್ಯಕರವಾಗಿ ಸದೃಢ ನಾಗರೀಕರಾಗಿ ಬೆಳೆಯಬೇಕು. ಆ ಮೂಲಕ ಮಕ್ಕಳ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಗುರುತಿಸಿದೆ. ಬೆಳೆಯುತ್ತಿರುವ/ವಿಕಾಸ ಹೊಂದುತ್ತಿರುವ ಎಲ್ಲ ಮಕ್ಕಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರತ್ತಲೂ ರಾಷ್ಟ್ರೀಯ ಮಕ್ಕಳ ನೀತಿ ಒತ್ತು ನೀಡುತ್ತದೆ.”

– ಇದು ರಾಷ್ಟ್ರೀಯ ಮಕ್ಕಳ ನೀತಿ 2013 ರ ಘೋಷ ವಾಕ್ಯ! ಕೇಳಲು ಎಷ್ಟು ಸುಂದರವಾಗಿದೆಯಲ್ಲವೇ? ನಮ್ಮ ದೇಶದ ಮಕ್ಕಳೆಲ್ಲರೂ ನಿಜಕ್ಕೂ ಇಂತಹ ಅಪೂರ್ವ ಅವಕಾಶಗಳನ್ನು ಪಡೆದು ತಮ್ಮ ಬಾಲ್ಯವನ್ನು ಮುಕ್ತವಾಗಿ ಅನುಭವಿಸುವಂತಾದರೆ……… ಏನು ಮಾಡುವುದು? ನಮ್ಮ ದೇಶದ ಸಾಮಾಜಿಕ ಸಂದರ್ಭದಲ್ಲಿ ಕನಿಷ್ಠ ಅಂತಹ ದುಬಾರಿ ಕನಸು ಕೂಡ ಬೀಳುವುದಿಲ್ಲವಲ್ಲ! ಇನ್ನು ಮಕ್ಕಳ ದಿನಾಚರಣೆಯನ್ನು ಆಚರಿಸುವ ಸಂಭ್ರಮವನ್ನು ಎಲ್ಲಿಂದ ಕಡ ತರುವುದು?

ನಮ್ಮ ದೇಶದಲ್ಲಿ ಕಳೆದ ಒಂದೆರಡು ದಶಕದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕತೆ ವಿಚಾರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಮಧ್ಯಮ ಆದಾಯವಿರುವ ದೇಶಗಳಿಗೆ ಹೋಲಿಸಿದರೆ ಬಾರತದಲ್ಲಿ ಮಕ್ಕಳ ಪೋಷಣೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಮಕ್ಕಳ ಪೋಷಣೆ ವಿಚಾರದಲ್ಲಿ 1995 ರವರೆಗೆ ಭಾರತ ವಿಶ್ವದಲ್ಲಿಯೇ 12ನೇ ಸ್ಥಾನದಲ್ಲಿ ಇತ್ತು. ನಂತರದ ಇತ್ತೀಚೆಗಿನ ವರ್ಷಗಳಲ್ಲಿ ಅದು 112ನೇ ಸ್ಥಾನಕ್ಕೆ ಇಳಿದಿದೆ ಎಂದು ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ “ಸೇವ್ ದಿ ಚೈಲ್ಡ್” ಅಂತರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ತಿಳಿಸುತ್ತದೆ.

ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕಾಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲ ರಾಷ್ಟ್ರಗಳಲ್ಲಿ ಮಕ್ಕಳ ಪೋಷಣೆಯ ಗುಣಮಟ್ಟವನ್ನು ಸಮೀಕ್ಷೆ ಮಾಡಲಾಗಿದೆ. ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿದ್ದರೂ ಈ ಪ್ರಗತಿ ಬಡವರು ಮತ್ತು ಕಡುಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ ಎಂದು ಸಂಸ್ಥೆಯ ವರದಿ ತಿಳಿಸುತ್ತದೆ. ಮಕ್ಕಳನ್ನು ಉತ್ತಮವಾಗಿ ಪೋಷಣೆ ಮಾಡುವ ವಿಚಾರದಲ್ಲಿ ಜಪಾನ್ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಸ್ವಿಟ್ಜರ್‌ಲ್ಯಾಂಡ್, ಬ್ರಿಟನ್,ಮತ್ತು ನಾರ್ವೆ ದೇಶಗಳಿವೆ.

ಭಾರತದಲ್ಲಿ ಅದೇ ಮೊದಲ ಬಾರಿಗೆ ಜಾರಿಯಾದ 1974 ರ ಮಕ್ಕಳ ರಾಷ್ಟ್ರೀಯ ನೀತಿ, ಮಕ್ಕಳನ್ನೂ ವ್ಯಕ್ತಿಗಳೆಂದು ಗಣಿಸಿದ್ದಕ್ಕೊಂದು ಉದಾಹರಣೆ. ಅಲ್ಲಿಂದ ಮುಂದೆ 1986 ರ ರಾಷ್ಟ್ರೀಯ ಶಿಕ್ಷಣ ನೀತಿ, 1993 ರ ರಾಷ್ಟ್ರೀಯ ಪೌಷ್ಟಿಕಾಂಶ ನೀತಿ, 2000 ದ ರಾಷ್ಟ್ರೀಯ ಜನಸಂಖ್ಯಾ ನೀತಿ, 2003 ರ ರಾಷ್ಟ್ರೀಯ ಮಕ್ಕಳ ಶಾಸನಾಧಿಕಾರ, 2005 ರ ರಾಷ್ಟ್ರೀಯ ಮಕ್ಕಳ ಕಾರ್ಯಯೋಜನೆ, ಮತ್ತೆ ಇತ್ತೀಚೆಗಿನ 2013 ರ ರಾಷ್ಟ್ರೀಯ ಮಕ್ಕಳ ನೀತಿ……. ಎಲ್ಲವೂ ಮಕ್ಕಳ ವಿವಿಧ ರೋಗನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ 100 ಶೇಕಡಾ ಹಾಕಿಸಬೇಕೆಂದು, ಜನನ-ಮರಣ-ವಿವಾಹ ನೋಂದಣಿ, ಗರ್ಭಿಣಿ ಹಾಗು ಮಗುವಿನ ಸುರಕ್ಷತೆ, ಮಕ್ಕಳ ಶಿಕ್ಷಣ, ಹೆಣ್ಣುಭ್ರೂಣಹತ್ಯೆಯ ಸಂಪೂರ್ಣ ನಿಷೇಧ, ಹೆಣ್ಣುಮಗುವಿನ ಮರಣ ಪ್ರಮಾಣ ಕಡಿಮೆ ಮಾಡುವುದು, ಬಾಲ್ಯವಿವಾಹ ನಿಷೇಧ, ಎಲ್ಲ ರೀತಿಯ ದೌರ್ಜನ್ಯ ನಿಷೇಧ, ಆರೈಕೆ, ಪೋಷಣೆ ಮತ್ತು ರಕ್ಷಣೆ ಬಗ್ಗೆ ಮಕ್ಕಳ ಮೂಲಭೂತ ಅವಶ್ಯಕತೆ ಪೂರೈಸಲು ಸಂವಿಧಾನಾತ್ಮಕ ಹಕ್ಕುಗಳನ್ನಾಧರಿಸಿ ರೂಪಿಸಲಾಗಿದೆ. ಇದರಲ್ಲಿ ಸಾಮುದಾಯಿಕವಾದ ಮಕ್ಕಳೆಲ್ಲರ ಜೊತೆಗೆ ಬಡತನರೇಖೆಗಿಂತಾ ಕೆಳಗಿರುವ ಮಕ್ಕಳು, ಬೀದಿಮಕ್ಕಳು, ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳು, ಗುಡ್ಡಗಾಡಿನ ಮಕ್ಕಳು, ತಳಸಮುದಾಯದ ಮಕ್ಕಳ ಕುರಿತು ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ……

ಇಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಬದುಕು ಅಪಾಯಕಾರಿಯಾಗುತ್ತಾ ಸಾಗಿದೆ. ಜನ್ಮ ನೀಡುವ ತಾಯಿ ಹಾಗೂ ನವಜಾತ ಶಿಶು ಇಬ್ಬರ ಪಾಲಿಗೂ ಭಾರತ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ. ಭಾರತದಲ್ಲಿ ಹುಟ್ಟುವ ಪ್ರತಿ ಮೂರರಲ್ಲಿ ಒಂದು ಮಗು ಹುಟ್ಟಿದ ದಿನದಂದೇ ಅಸುನೀಗುತ್ತದೆಂದರೆ, ಈ ದೇಶದಲ್ಲಿ ಮಕ್ಕಳು ಸುಪುಷ್ಟರಾಗಿ, ಆರೋಗ್ಯವಾಗಿದ್ದಾರೆಂದು ಹೇಳಲು ಸಾಧ್ಯವೇ? ನಮ್ಮ ರಾಷ್ಟ್ರದಲ್ಲಿ ಪ್ರತಿ ವರ್ಷ 3,09,000 ಶಿಶುಗಳು ಹುಟ್ಟಿದ ದಿನದಂದೇ ಸಾವಿಗೀಡಾಗುತ್ತಿವೆ. ಹುಟ್ಟಿದ ದಿನದಂದೇ ಶಿಶುಗಳು ಅತ್ಯಧಿಕವಾಗಿ ಸಾವನ್ನಪ್ಪುವ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದರೆ ಮಕ್ಕಳ ಪಾಲಿಗೆ ಇದಕ್ಕಿಂಥಾ ನಿಷ್ಕಾಳಜಿಯ ವಿಷಯ ಇನ್ಯಾವುದಿದೆ? ಹಾಗಾದರೆ ನಮ್ಮ ಮಕ್ಕಳ ಪರವಾದ ನೀತಿ, ಕಾಯ್ದೆ, ಕಾರ್ಯಕ್ರಮ, ಯೋಜನೆಗಳು, ಅದರ ಅನುಷ್ಠಾನಕ್ಕಿರುವ ವಿವಿಧ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಚಿವಾಲಯ, ಇಲಾಖೆಗಳು, ಸಮಿತಿಗಳು, ಆಯೋಗಗಳು ಏನು ಮಾಡುತ್ತಿವೆ? ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮಕ್ಕಳ ರಕ್ಷಣೆ, ಪೋಷಣೆಗಾಗಿಯೇ ವ್ಯಯಿಸುತ್ತಿದ್ದರೂ ನಿರೀಕ್ಷಿತ ಫಲ ಇನ್ನೂ ಕಾಣಲಾಗಿಲ್ಲವೆಂದರೆ ಇದಕ್ಕಿಂತಾ ದುರಂತ ಬೇರೇನಿದೆ?

ಭಾರತದಲ್ಲಿ 0-6 ವರ್ಷದವರೆಗಿನ ಮಕ್ಕಳ ಪ್ರಮಾಣ 2001 ರಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 15.9 ರಷ್ಟಿದ್ದುದು ಈಗ 2011 ರ ಜನಗಣತಿಯ ಪ್ರಕಾರ ಅದು ಶೇಕಡಾ 13.1 ಕ್ಕೆ ಕುಸಿದಿದೆ. ಅಂದರೆ ಮಕ್ಕಳ ಜನನ ಪ್ರಮಾಣದಲ್ಲಿ ಈ ಹತ್ತು ವರ್ಷಗಳಲ್ಲಿ ತೀವ್ರ ಕುಸಿತ ಉಂಟಾಗಿದೆ. ಒಳ್ಳೆಯದೇ ಆಯ್ತು. ಕುಟುಂಬ ಯೋಜನೆಯ ಪ್ರತಿಫಲವಿರಬಹುದು ಎಂದು ಬೀಗುವಂತೆಯೂ ಇಲ್ಲ! ಈ ಸಮಸ್ಯೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿದ್ದರೆ ಪರವಾಗಿಲ್ಲ. ಆದರೆ ವಸ್ತುಸ್ಥಿತಿ ಅತ್ಯಂತ ಭೀಕರವಾಗಿದೆ.

ಕೇಂದ್ರ ಸರ್ಕಾರ ರೂಪಿಸಿರುವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ-1994 [ದುರ್ಬಳಕೆ ಮತ್ತು ತಡೆ] ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲವಾದ ಕಾರಣ ಅಪರಾಧ ಎಸಗಿದ ವೈದ್ಯರು ಶಿಕ್ಷೆಗೊಳಗಾಗುವುದು ಅಪರೂಪ. ಹೀಗಾಗಿ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಲಿಂಗ ಅನುಪಾತ ಅಸಮತೋಲನ ಮಿತಿಮೀರುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಕಳೆದೊಂದು ದಶಕದಲ್ಲಿ ನಡೆದ ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಟ್ರಾಸೌಂಡ್ ಸ್ಕ್ಯಾಂನಿಂಗ್ ಸೇರಿ ಇತರೆ ಆಧುನಿಕ ಪರಿಕ್ಷಾ ವಿಧಾನಗಳಿಂದ ಭ್ರೂಣಲಿಂಗ ಪತ್ತೆ ಅಥವಾ ಆಯ್ಕೆ ಚಟುವಟಿಕೆ ಸದ್ದಿಲ್ಲದೇ ನಡೆಯುತ್ತಿದೆ. ಇದರ ಪರಿಣಾಮವಾಗಿ ಹೆಣ್ಣುಶಿಶುಗಳು ಗರ್ಭದಲ್ಲೇ ನಿಷ್ಕರುಣೆಯಿಂದ ಹತ್ಯೆಗೀಡಾಗುತ್ತಿವೆ. ಇದರಿಂದ ಗಂಡು ಮಕ್ಕಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳ ಜನನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಟುಕರು ಯಾರು? ಎಂದರೆ ನಾವಲ್ಲ ಎಂಬ ಉತ್ತರ ಎಲ್ಲರಿಂದಲೂ ಬರುತ್ತದೆ. ಹಾಗಾದರೆ ಹೆಣ್ಣುಮಕ್ಕಳೇಕೆ ಮತ್ತು ಹೇಗೆ ಗರ್ಭದಲ್ಲೇ ಕರಗಿ ಹೋಗುತ್ತಿದ್ದಾರೆ?

ಪ್ರತಿ 1000 ಗಂಡುಮಕ್ಕಳಿಗೆ ನಮ್ಮ ರಾಜ್ಯದಲ್ಲಿ 1991 ರಲ್ಲಿ 960 ಹೆಣ್ಣುಮಕ್ಕಳಿದ್ದುದು, 2001 ರಲ್ಲಿ 946 ಕ್ಕೆ ಕುಸಿದಿದೆ. 2011 ರಲ್ಲಿ 943 ಆಗಿದೆ! ಹಾಗೇ ದೇಶದಲ್ಲಿ ಈ ಅನುಪಾತ 1991 ರಲ್ಲಿ 945 ಇದ್ದುದು 2001 ರಲ್ಲಿ 927 ಕ್ಕೆ ಇಳಿದು 2011 ರಲ್ಲಿ 914 ಕ್ಕೆ ಕುಸಿದಿದೆ. ಹೆಣ್ಣುಮಕ್ಕಳ ಪ್ರಮಾಣ ಹೀಗೇ ಕುಸಿಯುತ್ತಾ ಹೋದರೆ ಸಮಾಜದಲ್ಲಿ ಸಮತೋಲನ ಬರಲು ಹೇಗೆ ಸಾಧ್ಯ? ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಕುಟುಂಬ ಯೋಜನೆಯಿಂದಲ್ಲ ಬದಲಿಗೆ ಸಮಾಜದ ಕ್ರೌರ್ಯದಿಂದ ಎಂದು ಯಾವ ನಾಲಿಗೆಯಿಂದ ಹೇಳಿಕೊಳ್ಳೋಣ? ಭಾರತದಲ್ಲಿ ಪ್ರತಿ ವರ್ಷ ಅಂದಾಜು 6 ರಿಂದ 10 ಲಕ್ಷ ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಸುಮಾರು 2 ಕೋಟಿಗೂ ಹೆಚ್ಚು ಹೆಣ್ಣು ಜೀವಗಳನ್ನು ಭೂಮಿಗೇ ಕಾಲಿಡದಂತೆ ಹೊಸಕಿ ಹಾಕಲಾಗಿದೆ ಎಂದರೆ ಹೆಣ್ಣಿನ ಕುರಿತು ನಮ್ಮ ಸಮಾಜಕ್ಕಿರುವ ಮನೋಧೋರಣೆ ಬದಲಿಸಲು ಯಾವ ದೇವರಿಗೆ ಮೊರೆಯಿಡೋಣ? infant-mortalityಸದ್ಯ ಗಂಡು-ಹೆಣ್ಣಿನ ಅನುಪಾತ 100;84 ಕ್ಕೆ ಇಳಿದಿದ್ದು ಅದು ಸಮಾಜದಲ್ಲಿ ಅಸಮತೋಲನವನ್ನು ಸೃಷ್ಟಿಸಿ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ದೌರ್ಜನ್ಯ, ಶೋಷಣೆ ಹೆಚ್ಚಳಕ್ಕೆ ಕಾರಣವಾಗುತ್ತಿದ್ದರೂ ನಮ್ಮ ಸರ್ಕಾರಗಳು ಇದನ್ನೊಂದು ಗಂಭೀರ ವಿಷಯವೆಂದೇ ಪರಿಗಣಿಸುತ್ತಿಲ್ಲವೆಂದರೆ ಮತ್ತೆ ಯಾರಲ್ಲಿ ನಾವು ನ್ಯಾಯ ಕೇಳಬೇಕು?

ಭ್ರೂಣಹತ್ಯೆಯ ತೂಗುಕತ್ತಿಯಿಂದ ಅಪ್ಪಿತಪ್ಪಿ ಮಕ್ಕಳು ಪಾರಾಗಿ ಬಂದರೂ ಅಸಮಾನ ಭಾರತದ ನೆಲದಲ್ಲಿ ಉಂಡುಡಲು ನೆಟ್ಟಗಿಲ್ಲದ ಮಕ್ಕಳು ಅಪೌಷ್ಠಿಕತೆ, ರಕ್ತಹೀನತೆಯಲ್ಲಿ ನರಳಿ ರೋಗಿಷ್ಟಗೊಳ್ಳುವ ಸಂದರ್ಭಗಳೂ ಹೆಚ್ಚಿವೆ. ಕೇಂದ್ರ ಸರ್ಕಾರದ ಯೋಜನೆಯಂತೆ 0-6 ವರ್ಷದ ಮಕ್ಕಳ ಪೋಷಣೆಗಾಗಿ ಕರ್ನಾಟಕ ರಾಜ್ಯದಲ್ಲಿ ಹಳ್ಳಿಗಳು ಹಾಗೂ ನಗರ ಪ್ರದೇಶದ ಸ್ಲಂಗಳಲ್ಲಿ 64,518 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 39,54,292 ಮಕ್ಕಳು ದಾಖಲಾಗಿದ್ದಾರೆ. ಅದರಲ್ಲಿ 43,951 ಮಕ್ಕಳು ತೀವ್ರ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದರೆ, 10,86,820 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ! ಈ ಮಕ್ಕಳಿಗೆ ಬಿಸಿಯೂಟ, ಹಾಲಿನ ಜೊತೆಗೇ ಮೊಟ್ಟೆ ಕೂಡ ಕೊಡಲಾಗುತ್ತಿದೆ. ಆದರೂ ಅಧಿಕಾರಿಗಳ ಕಾರ್ಯಕ್ಷಮತೆ ಉತ್ತಮವಿದ್ದ ಕಡೆಗಳಲ್ಲಿ ಮಾತ್ರ ಇಂತಹ ಮಕ್ಕಳ ಪೋಷಣೆ ಸಮರ್ಥವಾಗಿ ನಡೆಯುತ್ತಿದ್ದು, ಮಿಕ್ಕ ಕಡೆಗಳಲ್ಲಿ ಹೆಚ್ಚಿನ ಲೋಪಗಳು ಕಂಡು ಬರುತ್ತಿವೆ. ಮೊನ್ನೆಯಷ್ಟೇ ಕೊಪ್ಪಳದಲ್ಲಿ ಇಂತಹ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ನೀಡುತ್ತಿರುವುದು ವರದಿಯಾಗಿದೆ. ನಿಗದಿತ ಪ್ರಮಾಣಕ್ಕಿಂತಾ ಕಡಿಮೆ ದರ ಹಾಗೂ ಕಡಿಮೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಿ ಮಕ್ಕಳ ಪೌಷ್ಟಿಕಾಂಶದಲ್ಲೂ ಲಾಭ ಮಾಡಿಕೊಳ್ಳುವ ಸರ್ಕಾರಿ ಬಕಾಸುರರಿಂದ ಅಸಹಾಯಕ ಮಕ್ಕಳನ್ನು ಕಾಪಾಡುವವರ್‍ಯಾರು?

ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಇಂದಿಗೂ ಮಕ್ಕಳ ತೂಕವನ್ನು ಅಳೆಯುವ ತೂಕದ ಯಂತ್ರವೇ ಇಲ್ಲ! ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ವಯಸ್ಸು ಮತ್ತು ತೂಕದ ಸಮೀಕರಣದ ನಕ್ಷೆಯನ್ನು ನೀಡಿದ್ದು ಅದನ್ನು ಅಂಗನವಾಡಿಗಳಿಗೆ ವಿತರಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದ ಮಾನದಂಡ ಹೊಂದಿರುವ ಆ ನಕ್ಷೆಯ ಪ್ರಕಾರ ಮಕ್ಕಳ ತೂಕವನ್ನೇನಾದರೂ ಸರಿಯಾಗಿ ನೋಡಿ ದಾಖಲಿಸಿದರೆ, ಅಪ್ಪಟ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿ ಮಕ್ಕಳ ಆರೋಗ್ಯ, ರಕ್ತಹೀನತೆ, ಅಪೌಷ್ಟಿಕತೆಯನ್ನು ಅಳೆದರೆ ಅನಾರೋಗ್ಯ ಹೊಂದಿದ ಮಕ್ಕಳ ಸಂಖ್ಯೆ ದುಪ್ಪಟ್ಟೋ, ಮೂರು ಪಟ್ಟೋ ಹೆಚ್ಚಾಗಬಹುದೇನೋ! ಈಗಲೂ ಕಾರ್ಯಕರ್ತೆಯರಿಗೆ ಅಳೆಯಲು ಬರುವುದಿಲ್ಲವೆಂದು ಮಕ್ಕಳ ಎತ್ತರವನ್ನು ಅಳೆಯುವ ಕೋಷ್ಟಕ ಅಂಗನವಾಡಿಗಳಲ್ಲಿ ಇಲ್ಲ. ಅಪರಿಪೂರ್ಣ ವಿಧಾನದಲ್ಲೇ ಇಂದಿಗೂ ಮಕ್ಕಳ ಪೌಷ್ಟಿಕತೆಯನ್ನು ಅಂದಾಜಿಸಲಾಗುತ್ತಿದೆಯಷ್ಟೇ ಹೊರತು ಸರಿಯಾದ ಸಮೀಕ್ಷೆಗಳು ಆಗಿಯೇ ಇಲ್ಲ. ೧೯೭೫ರಲ್ಲೇ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಜಾರಿಯಾಗಿದೆ. ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದ್ದರೂ ಇನ್ನೂ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕತೆಯ ಮಟ್ಟದಲ್ಲಿ ನಿರೀಕ್ಷಿತ ಬದಲಾವಣೆಗಳಾಗಿಲ್ಲ. ಅಪೌಷ್ಟಿಕತೆಯಿಂದ ನಿತ್ರಾಣಗೊಂಡು ಮಕ್ಕಳು ಸಾವನ್ನಪ್ಪುವುದು ನಿಂತಿಲ್ಲ. ಹಿಂದಿನ ವರ್ಷಗಳ ಅಂಕಿಅಂಶಗಳನ್ನು ಹೋಲಿಸಿ ಈ ವರ್ಷ ಸುಧಾರಿಸಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಾರೆ ಮಕ್ಕಳ ಸಂಬಂಧಿತ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು!

ಪೋಷಣೆಯ ಜೊತೆಗೆ ಅಂಗನವಾಡಿ ಕೇಂದ್ರಗಳು 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಜವಾಬ್ದಾರಿಯನ್ನೂ ಹೊತ್ತಿವೆ. ಆದರೆ ಇದಕ್ಕೆ ವಯೋಮಾನಕ್ಕೆ ತಕ್ಕಂತೆ, ಶಿಸ್ತುಬದ್ಧ ನಿಗದಿತ ನಮೂನೆಯ ಪಠ್ಯವಾಗಲಿ, ಪ್ರತ್ಯೇಕ ಶಾಲಾ ಕೊಠಡಿಯಾಗಲಿ ಇಲ್ಲ. ಹೀಗಾಗಿ ಅದೊಂದು ಪಾಲಿಸುವ, ಪೋಷಿಸುವ, ಆಡಿಸುವ ಮನೆಯಷ್ಟೇ! ಅದೇ ವಯಸ್ಸಿನ ಖಾಸಗಿ ಕಿಂಡರ್‌ಗಾರ್ಡನ್‌ನಲ್ಲಿ ಕಲಿಯುವ ಮಕ್ಕಳು ನರ್ಸರಿ, ಎಲ್‌ಕೆಜಿ, ಯುಕೆಜಿಗಳನ್ನು ಈ ಶಿಕ್ಷಣಕ್ಕಾಗಿಯೇ ಸಿಧ್ಪಡಿಸಿದ ನಿಗದಿತ ನಮೂನೆಯ ಪಠ್ಯವನ್ನಾಧರಿಸಿ ಶಿಸ್ತುಬದ್ಧವಾಗಿ ಕಲಿಯುತ್ತಾರೆ. ವಿಪರ್ಯಾಸವೆಂದರೆ ನಮ್ಮ 3-6 ವರ್ಷಗಳ ಮಕ್ಕಳ ವಿದ್ಯಾಭ್ಯಾಸದ ಕುರಿತು ಎಲ್ಲಿಯೂ ದಾಖಲಿಸಬೇಕಾದ ಅವಶ್ಯಕತೆ ಇಲ್ಲ! ಖಾಸಗಿಯವರು ತಾವೇ ಗುತ್ತಿಗೆ ಪಡೆದವರಂತೆ ನಡೆಸುತ್ತಿರುವ ಈ ಪೂರ್ವಪ್ರಾಥಮಿಕ ಹಂತದ ಶಿಕ್ಷಣ ಸಂಸ್ಥೆಗಳು ಸರ್ಕಾರದ ಯಾವುದೇ ಇಲಾಖೆಯಡಿಯೂ ನೋಂದಣಿಯಾಗುವ ಅವಶ್ಯಕತೆಯಿಲ್ಲ. ಯಾವ ಯಾರ ಒಪ್ಪಿಗೆಯನ್ನೂ ಪಡೆಯದೇ ಕನಿಷ್ಟ ಮೂಲಭೂತ ಸೌಲಭ್ಯಗಳೂ ಇಲ್ಲದೇ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಇಂತಹ ಖಾಸಗಿ ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿದ್ದರೂ ಕೇಳುವವರೇ ಇಲ್ಲ! ಇಲ್ಲಿ ಕಲಿಯುತ್ತಿರುವ ಲಕ್ಷಾಂತರ ಮಕ್ಕಳ ಪೌಷ್ಟಿಕತೆಯ ಬಗ್ಗೆಯಾಗಲಿ, ರಕ್ಷಣೆಯ ಬಗ್ಗೆಯಾಗಲಿ, ಶಿಕ್ಷಣದ ಬಗ್ಗೆಯಾಗಲಿ, ಮಕ್ಕಳ ಹಕ್ಕುಗಳ ಉಲ್ಲಂಘನೆಯ ಬಗ್ಗೆಯಾಗಲೀ ಸರ್ಕಾರ ಒಮ್ಮೆಯೂ ಯೋಚಿಸಿಯೇ ಇಲ್ಲ! 800px-Children_at_the_Bannu_Jail[1]ಇನ್ನು ಅಧ್ಯಯನ, ಸಮೀಕ್ಷೆ, ದಾಖಲೀಕರಣ ದೂರದ ಮಾತು! ಅಂತಹ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವೂ ಇಲ್ಲವೆಂದರೆ, ಇದನ್ನು ದುರಂತವೆನ್ನದೇ ಏನೆನ್ನೋಣ? ಖಾಸಗಿಯಲ್ಲಿ ಕಲಿಯುತ್ತಿರುವ ಮಕ್ಕಳು ಮಕ್ಕಳಲ್ಲವೇ? ಹಾಗಿದ್ದರೆ ಸರ್ಕಾರದ ನೀತಿ ನಿಯಮ ಯೋಜನೆಗಳು ಈ ಮಕ್ಕಳಿಗೇಕೆ ಅನ್ವಯವಾಗುವುದಿಲ್ಲ? ಅಪೌಷ್ಟಿಕತೆಯೂ ಸರ್ಕಾರ ನಡೆಸುವ ಅಂಗನವಾಡಿ ಮಕ್ಕಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಖಾಸಗಿ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗಲ್ಲ ಎಂದು ಸರ್ಕಾರವೇ ನಿರ್ಧರಿಸಿಬಿಟ್ಟಿದೆ! ಅಲ್ಲಿಯೂ ಸಾವಿರಾರು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿರುವ ಸಾಧ್ಯತೆಗಳು ಖಂಡಿತಾ ಹೆಚ್ಚಿವೆ. ಈ ಅಸಮಾನತೆ ಎರಡೂ ನೆಲೆಗಳಲ್ಲಿ, ಶಿಕ್ಷಣ ಹಾಗೂ ಆರೋಗ್ಯ ಎರಡೂ ಕ್ಷೇತ್ರಗಳಲ್ಲಿ ಅತ್ಯಂತ ಸಹಜವೆಂಬಂತೆ ನಡೆಯುತ್ತಿದ್ದರೂ ಸರ್ಕಾರ ಕುರುಡಾಗಿದೆ. ಸಾರ್ವತ್ರಿಕವಾಗಿ ಎಲ್ಲ ಮಕ್ಕಳ ಆರೋಗ್ಯ,-ಶಿಕ್ಷಣದ ಬಗ್ಗೆ ಕೂಡ ಸರ್ಕಾರ ನಿಯಂತ್ರಣ ಹೊಂದುವುದು ಯಾವಾಗ?

ಹಾಗೆ ನೋಡಿದರೆ, ಮನೋವಿಜ್ಞಾನಿಗಳ ಪ್ರಕಾರ 5 ವರ್ಷದವರೆಗಿನ ಮಗುವಿಗೆ ಶಾಲೆಯೇ ಬೇಡ. ಈ ವಯಸ್ಸಿನಲ್ಲಿ ಮಗು ನಡವಳಿಕೆಯ ಶಿಕ್ಷಣ, ಶೌಚ ನಿಯಮ, ಆಹಾರ ತೆಗೆದುಕೊಳ್ಳುವ ಕ್ರಮ, ಸಣ್ಣಪುಟ್ಟ ಶಿಷ್ಟಾಚಾರವನ್ನು ಮಾತ್ರ ಕಲಿಯಬೇಕಿರುತ್ತದೆ. ಅದನ್ನು ಹಾಡುತ್ತಾ, ಆಡುತ್ತಾ, ಕಟ್ಟುತ್ತಾ ಮುರಿಯುತ್ತಾ ಮಗು ತನ್ನಷ್ಟಕ್ಕೆ ತಾನೇ ಕಲಿಯಬೇಕು. ಆದರೆ ಈಗ ಅದನ್ನು ಶಾಲಾ ಪೂರ್ವ ಅವಧಿಯ ಶಿಕ್ಷಣದಲ್ಲಿ ಶಿಕ್ಷೆ, ಗದರಿಸುವಿಕೆ, ಬಲವಂತದಿಂದ ಹೇರಲಾಗುತ್ತಿದೆ. ಬಲವಂತದ ಯಾವುದೇ ಶಿಕ್ಷಣ ಮಗುವಿನಲ್ಲಿ ಪ್ರೀತಿಯನ್ನು ಮೂಡಿಸುವ ಬದಲಿಗೆ ಮನೋದೈಹಿಕ ಸಮಸ್ಯೆಗಳಾಗಿ ಕಾಡಲಾರಂಭಿಸಿವೆ. ಅವುಗಳನ್ನು ನಿರ್ಲಕ್ಷಿಸಿದರೆ ಮಗು ಅಸ್ವಸ್ಥ ಮನಸಿನ ವ್ಯಕ್ತಿಯಾಗಿ ರೂಪುಗೊಂಡು ಕುಟುಂಬಕ್ಕೆ, ಸಮಾಜಕ್ಕೆ ಹೊರೆಯಾಗುತ್ತದೆ. ಇದನ್ನು ಪೋಷಕರಿಗೆ ಅರ್ಥ ಮಾಡಿಸುವುದಾದರು ಯಾರು? ಮತ್ತು ಹೇಗೆ? ಬಾಲ್ಯದಲ್ಲಿನ ಪ್ರೀತಿ ಕಾಳಜಿ, ಉತ್ತಮ ಗಮನಿಸುವಿಕೆಯಲ್ಲಿ ಬೆಳೆದ ಮಗು ಮಾತ್ರ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆದರೆ ಅಂಥಹಾ ಪ್ರೀತಿ, ಕಾಳಜಿ, ಗಮನಿಸುವಿಕೆಗೆ ಈಗ ಸಮಯವಾದರೂ ಯಾರಿಗಿದೆ? ಇದೆಲ್ಲಾ ಮಾರುಕಟ್ಟೆಯಲ್ಲಿ ಸಿಕ್ಕುವಂತಿದ್ದರೆ, ಎಷ್ಟು ದರವಾದರೂ ಸರಿ ಉಳ್ಳವರು ಕೊಂಡು ತಂದು ಕೊಟ್ಟು ಬಿಡುತ್ತಿದ್ದರೇನೋ! ಇಂದು ಎಲ್ಲವೂ ವ್ಯಾಪಾರಿ ಮನೋಭಾವದ ಕೊಡು-ಕೊಳುವ ವ್ಯವಹಾರದ ಮಟ್ಟಕ್ಕೆ ಬಂದು ನಿಂತು ಬಿಟ್ಟಿರುವುದರಿಂದ ಮಕ್ಕಳೂ ಸರಕುಗಳಾಗಿ ಮಾತ್ರ ಕಾಣುತ್ತಿದ್ದಾರೆ! ಈ ಸ್ಥಿತಿಯಿಂದ ಅವರನ್ನು ಕಾಪಾಡುವವರ್‍ಯಾರು?

ಮಕ್ಕಳೆಂದರೆ ಅರಳಲು ಕಾದಿರುವ ಮೊಗ್ಗುಗಳು. ಅದಕ್ಕೆ ತಕ್ಕ ಗಾಳಿ ನೀರು ಬೆಳಕಿನ ಪೂರಕ ವಾತಾವರಣವನ್ನು ಮುಕ್ತವಾಗಿ, ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿ ಪೋಷಕರು, ಸಮಾಜ, ಸರ್ಕಾರದ ಮೇಲಿದೆ. ಈ ಹೊಣೆಯನ್ನು ಹೊತ್ತು ಕೊಂಡರೆ ಮಾತ್ರ, ‘ನಾವು ಮಕ್ಕಳನ್ನು ಪ್ರೀತಿಸುತ್ತೇವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದೇನೋ!

ಹಿಜಡಾಗಳು: ಅವರೂ ಮನುಷ್ಯರು!


– ರೂಪ ಹಾಸನ


 

ಮಂಗಳ ಮುಖಿಯರು! ನಿಜ. ಇಷ್ಟು ಸುಂದರವಾದ ಹೆಸರನ್ನು ಇತ್ತೀಚೆಗೆ ಅವರಿಗೆ ಅದ್ಯಾರು ಇಟ್ಟಿದ್ದೋ? ಆದರೆ ಅವರ ಬದುಕು ಇಷ್ಟು ಸುಂದರವೂ ಅಲ್ಲ. ಮಂಗಳಕರವೂ ಅಲ್ಲದಿರುವುದು ವಾಸ್ತವದ ದುರಂತ. ಸಾಮಾನ್ಯವಾಗಿ ಹಿಜಡಾಗಳೆಂದು ನಾವು ಗುರುತಿಸುವ ಇವರ ಕೆಲವು ದುರ್ವರ್ತನೆಯ ಬಗ್ಗೆ ಆಗೀಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಆದರೆ ಅವರ ಇಂತಹ ಅಸಭ್ಯ ನಡವಳಿಕೆಗೆ ಕಾರಣವೇನು? ಎಂದು ಹುಡುಕುತ್ತ ಹೊರಟರೆ ಮನ ಕರಗಿಸುವಂತಾ ಸತ್ಯಗಳು ಹೊರಬೀಳುತ್ತವೆ.

ಪ್ರಕೃತಿ ಒಂದೊಂದು ಜೀವವನ್ನೂ ಒಂದೊಂದು ಭಿನ್ನ ಗುಣ, ಸ್ವಭಾವ, ರೂಪ, ಮನಸ್ಸುಗಳಿಂದ ಸೃಷ್ಟಿಸಿರುವುದು, Transexual, transgenders and Aravani gay men in Tamil Nadu, Indiaಅದರ ವೈವಿಧ್ಯತೆಗೆ ಸಾಕ್ಷಿಯಾಗಿರುವಂತೆ, ಪಕ್ಷಪಾತದ ಅಸಮತೆಯ ವೈರುಧ್ಯತೆಗೂ ಉದಾಹರಣೆಯಾಗಿದೆ. ಗಂಡು-ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರಾ ಒಪ್ಪಿಕೊಂಡು, ಅದರ ಆಧಾರದಿಂದ ಎಲ್ಲ ಬಗೆಯ ‘ವ್ಯವಸ್ಥೆ’ಯನ್ನೂ ರೂಪಿಸಿಕೊಂಡಿರುವ ನಮಗೆ ಈ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ‘ಅಂತರ್‌ಲಿಂಗೀ’ಯರು, ಅಥವಾ ‘ಮೂರನೆ ಲಿಂಗ’ದವರ ಬದುಕಿನ ಕುರಿತು ತಿಳಿಯಲಾರಂಭಿಸಿದ್ದು ತೀರಾ ಇತ್ತೀಚೆಗಷ್ಟೇ. ಈ ಮೊದಲು ಅವರು ಇರಲಿಲ್ಲವೆಂದಲ್ಲ. ೪೦೦೦ ವರ್ಷಗಳ ಹಿಂದಿನ ಇತಿಹಾಸದಲ್ಲಿಯೇ ಅವರ ಕುರಿತು ದಾಖಲೆಗಳಿವೆ. ಆದರೆ ಅವರನ್ನು ಮನುಷ್ಯರೆಂದು ನಾವು ಪರಿಗಣಿಸಿಯೇ ಇಲ್ಲವಾದ್ದರಿಂದ, ಸಾಮಾನ್ಯ ಮನುಷ್ಯನಿಗಿರುವ ಹಕ್ಕುಗಳಿಂದ ಅವರು ವಂಚಿತರಾಗಿದ್ದಾರೆ. ಇದರ ಜೊತೆಗೆ ಅವರನ್ನು ಅಶ್ಲೀಲ, ಅಸಭ್ಯ ಪದಗಳಿಂದ ಗುರುತಿಸಿ ನೋಯಿಸುವ, ಹಿಂಸಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ. ಹೆಚ್ಚಾಗಿ ಗಂಡು ದೇಹದಲ್ಲಿರುವ ಹೆಣ್ಣು ಮನಸ್ಸಿನ, ಹೆಣ್ಣಿನ ಸಂವೇದನೆಯುಳ್ಳ ಈ ಹಿಜಡಾಗಳು[ಹೆಣ್ಣು ದೇಹದಲ್ಲಿ ಗಂಡು ಸಂವೇದನೆಯುಳ್ಳವರೂ ಇರುತ್ತಾರೆ] ಬುದ್ಧಿ ತಿಳಿದಾಗಿನಿಂದಲೂ ಕುಟುಂಬದಿಂದ, ಸಮಾಜದಿಂದ ಅನುಭವಿಸುವ ನೋವು, ತಾತ್ಸಾರ ಅವರ್ಣನೀಯವಾದುದು. ಈ ಹೆಚ್ಚಿನ ಹಿಜಡಾಗಳು ತಮ್ಮ ಬುದ್ಧಿ-ಭಾವಗಳು ಹೆಣ್ತನದ್ದೆಂದು, ತಾವು ಗಂಡು ದೇಹದಿಂದ ಮುಕ್ತಿ ಹೊಂದಿ ಹೆಣ್ಣಾಗಲು, ಸಹಜವಾಗಿ ಹೆಣ್ಣಿನಂತೆಯೇ ಬದುಕಲು ಪಡುವ ಯಾತನೆ, ಗಂಡು ಹೆಣ್ಣಿನ ನಡುವೆ ಇರುವ ದೈಹಿಕ, ಮಾನಸಿಕ, ಜೈವಿಕ ವ್ಯತ್ಯಾಸಗಳಿಗೆ ಜೀವಂತ ಸಾಕ್ಷಿಯಾಗಿ ನಮಗೆ ಕಾಣುತ್ತದೆ.

ಪ್ರಾಣಿ ಮೂಲದವರಾದ ನಮಗೆ ಎಲ್ಲ ಸ್ವರೂಪದ ದೈಹಿಕ ಹಸಿವು ಸಹಜವಾಗಿ ಅರ್ಥವಾಗುತ್ತದೆ. ಈ ಕುರಿತು ಅನೇಕ ಸಾಹಿತ್ಯ ಕೃತಿಗಳು, transgenders-indiaಚಲನಚಿತ್ರಗಳೂ ಬಂದಿವೆ. ಕೆಲವು ವೈಭವೀಕರಣಗಳೂ ಈ ಪಟ್ಟಿಗೆ ಸೇರುತ್ತವೆ. ಬೇರೆ ಬೇರೆ ಅಭಿವ್ಯಕ್ತಿ ಮಾಧ್ಯಮಗಳಲ್ಲೂ ಅದು ಹಲವೊಮ್ಮೆ ನೈಜವಾಗಿಯೂ ಮತ್ತೆ ಕೆಲವೊಮ್ಮೆ ಹಸಿ ಹಸಿಯಾಗಿಯೂ, ಕೃತಕವಾಗಿಯೂ ಮೂಡಿ ಬಂದಿವೆ. ಆದರೆ ಮನಸ್ಸಿನ ಅಥವಾ ಭಾವನಾತ್ಮಕ ಹಸಿವನ್ನು ಅರ್ಥೈಸಿಕೊಳ್ಳಲು ಸರಿಯಾದ ಪೂರ್ವಸಿದ್ಧತೆ ನಮಗಿನ್ನೂ ಆಗಿಯೇ ಇಲ್ಲ! ಮನುಷ್ಯರಾಗಿರುವುದರಿಂದಲೇ ಅದನ್ನು ಇನ್ನಾದರೂ ಪ್ರಯತ್ನಪೂರ್ವಕವಾಗಿಯಾದರೂ ಕಲಿಯಬೇಕಿದೆ. ಮನಸ್ಸನ್ನು ಆ ನಿಟ್ಟಿನಲ್ಲಿ ಪಳಗಿಸಿಕೊಳ್ಳಬೇಕಿದೆ. ದೇಹದ ಹಸಿವಿನ ಹಿಂಗುವಿಕೆಗೆ ನೀಡುವ ಪ್ರಾಮುಖ್ಯತೆಯನ್ನು ಭಾವನಾತ್ಮಕ ಹಸಿವಿನ ಪೂರೈಸುವಿಕೆಗೂ ನೀಡಿದ್ದರೆ, ಮನಸ್ಸಿನ ಆಧಾರಿತವಾಗಿ ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಗಳಾಗಿದ್ದರೆ ನಾವು ಕಟ್ಟಿಕೊಂಡಿರುವ ಈ ಸಮಾಜ ಇಷ್ಟು ಕ್ಷುದ್ರವೂ, ಅಸೂಕ್ಷ್ಮವೂ, ನಿರ್ಭಾವುಕವೂ ಆಗುತ್ತಿರಲಿಲ್ಲ. ಆಗ ಅದು ಹೆಚ್ಚು ಆರ್ದ್ರವೂ, ಆಪ್ತವೂ ಆಗಿರುತ್ತಿತ್ತು. ಪ್ರೀತಿ, ಅಕ್ಕರೆ, ಕಾಳಜಿ, ಗಮನಿಸುವಿಕೆಗಳಿಗಾಗಿ ಹಂಬಲಿಸುವ ಮನಸುಗಳಿಗೆ ಮತ್ತೆ ಮತ್ತೆ ನಿರ್ಲಕ್ಷ್ಯ, ಅವಮಾನ, ಅಸಮಾನತೆಯ ಘಾಸಿ ಮಾಡಿದರೆ ಅವು ಮತ್ತೆಂದೂ ಅರಳದಂತೆ ದಹಿಸಿಹೋಗುತ್ತವೆ. ಸಿಟ್ಟಿನಿಂದ ವ್ಯವಸ್ಥೆಯ ವಿರುದ್ಧ ತಿರುಗಿ ನಿಲ್ಲುತ್ತವೆ, ದಂಗೆ ಏಳುತ್ತವೆ, ಕೆಲವೊಮ್ಮೆ ಅಸಹಾಯಕತೆಯಿಂದ ಒರಟಾಗಿ, ಅಮಾನವೀಯವಾಗಿಯೂ ವರ್ತಿಸಬಹುದು. ಇದು ಯಾವುದೇ ಮನುಷ್ಯ ಜೀವಿಗೆ ಅನ್ವಯಿಸುವ ಮನೋವಿಜ್ಞಾನದ ಮೂಲ ಪಾಠ. ಹಿಜಡಾಗಳ ವರ್ತನೆಯ ಹಿಂದೆ ಕೆಲಸ ಮಾಡುವುದು ಇದೇ ಭಾವವಿಕಾರ.

ಹಾಸನದಲ್ಲಿ ಈಗ್ಗೆ ಮೂರು ವರ್ಷದ ಹಿಂದೆ ಈ ಮೂರನೆ ಲಿಂಗದವರ ಕುರಿತು ಕರ್ನಾಟಕದಲ್ಲಿಯೇ ಅದೇ ಮೊದಲ ಬಾರಿಗೆ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರ ಕುರಿತು, ಅವರ ಬದುಕು, ನೋವು-ನಲಿವು, ತಲ್ಲಣ-ಅವಮಾನಗಳ ಬಗ್ಗೆ, ಆ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ eunuch-beggingಹಾಗೂ ಕೆಲಸ ಮಾಡುತ್ತಿರುವವರಿಂದ ವಿವರವಾಗಿ ಅರಿಯುವ ಅವಕಾಶ ಲಭ್ಯವಾಗಿತ್ತು. ಇದರ ಜೊತೆಗೆ ಸ್ವತಹ ನಿರ್ದಿಷ್ಟ ಲಿಂಗ ಪರಿವರ್ತನೆ ಹೊಂದಿದ ಕೆಲವು ಅಂತರ್‌ಲಿಂಗೀಯರೇ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂವೇದನೆಗಳ ಬಗ್ಗೆ ಹೇಳಿಕೊಳ್ಳುವಾಗ, ಸಂವಾದದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವಾಗ ಎಂಥಹ ಕಲ್ಲೆದೆಯೂ ಕರಗಿ ನೀರಾಗಿ ಹೋಗುವಂತಾ ಸನ್ನಿವೇಶ.

ಮುಖ್ಯವಾಗಿ ಹಿಜಡಾಗಳ ನಿರ್ದಿಷ್ಟ ಲಿಂಗ ನಿರ್ಧಾರವಾಗದ ಕಾರಣ ಅವರು ಬಾಲ್ಯದಿಂದಲೂ ಶಿಕ್ಷಣ, ಉದ್ಯೋಗ, ಆರೋಗ್ಯ, ಕಾನೂನು, ಸಾಮಾಜಿಕ ಸ್ಥಾನ-ಮಾನ ಎಲ್ಲದರಲ್ಲಿಯೂ ತಾರತಮ್ಯವನ್ನು ಅನುಭವಿಸುತ್ತಾರೆ. ಭಾರತೀಯ ಕಾನೂನು ಹಿಜಡಾಗಳಿಗಿರುವ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ! ಅವರಿಗೆ ಓಟಿನ ಹಕ್ಕಿಲ್ಲ, ಆಸ್ತಿಯ ಹಕ್ಕಿಲ್ಲ, ವಿವಾಹವಾಗುವ ಹಕ್ಕಿಲ್ಲ, ನಮ್ಮಂತೆ ಯಾವ ಬಗೆಯ ಗುರುತಿನ ಚೀಟಿಗಳನ್ನೂ ಹೊಂದುವ ಹಕ್ಕು ಇಲ್ಲ. [ಈಗ ಆ ಕುರಿತು ಜಾಗೃತಿ ಮೂಡಿ, ಪ್ರಯತ್ನಗಳು ಆಗುತ್ತಿವೆ.] ಎಲ್ಲಕ್ಕಿಂಥಾ ಪ್ರಮುಖವಾಗಿ ಕುಟುಂಬ ಹಾಗೂ ಸಮಾಜದ ಸಹಜ ಪ್ರೀತಿ ಇವರಿಗೆ ಸಿಗುವುದಿಲ್ಲ. ಇಷ್ಟೆಲ್ಲಾ ‘ಇಲ್ಲ’ಗಳಿರುವುದರಿಂದಲೇ ಬದುಕಲು ಭಿಕ್ಷಾಟನೆ ಮಾಡುವುದು, ಲೈಂಗಿಕ ಕಾರ್ಯಕರ್ತರಾಗುವುದು, ಅಥವಾ ಗುಂಪಾಗಿ, ಬಲವಂತದಿಂದ ಹಣ ವಸೂಲಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ನಮ್ಮ ಕಾನೂನಿನಲ್ಲಿ ಅನುಮತಿ ಇಲ್ಲದಿರುವುದರಿಂದ ಅತ್ಯಂತ ಗೋಪ್ಯವಾಗಿ ಅವರ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗಳು, ಕೆಲವೊಮ್ಮೆ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತವೆ. ತಮ್ಮದೊಂದು ಗುರುತಿಸುವಿಕೆ ಹಾಗೂ ಅಸ್ತಿತ್ವಕ್ಕಾಗಿ ಅವರು ನಿರ್ದಿಷ್ಟ ಲಿಂಗವನ್ನು ಹೊಂದುವುದು, ಅದಕ್ಕಾಗಿ ಈ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಬಹಳ ಮುಖ್ಯವಾದರೂ ಇದಕ್ಕೆ ಬೇಕಾದ ಹಣ ಹೊಂದಿಸಲು ವಿವಿಧ ಅಡ್ಡ ಮಾರ್ಗಗಳನ್ನೂ ಇವರು ಹಿಡಿಯಬೇಕಾಗುತ್ತದೆ. ಬೇರೆ ರೀತಿಯ ಅಂಗವೈಕಲ್ಯ ಅಥವಾ ಮನೋವೈಕಲ್ಯತೆ ಇರುವ ಮಕ್ಕಳಿಗಾದರೂ ಕುಟುಂಬ, ಸಮಾಜ ಒಂದಿಷ್ಟು ಕಾಳಜಿ, ಅನುಕಂಪ ತೋರುತ್ತದೆ. ಸಾಕು ಪ್ರಾಣಿಗಳನ್ನೂ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತದೆ. ಆದರೆ ಇವರನ್ನು ಮಾತ್ರ ಎಲ್ಲ ರೀತಿಯಿಂದಲೂ ಬಾಲ್ಯದಿಂದಲೇ ಅಸಡ್ಡೆಯಿಂದ ಕಾಣಲಾಗುತ್ತದೆ. ಉಳ್ಳವರ ಮನೆಯಲ್ಲಿ ಇಂತಹ ಮಕ್ಕಳು ಹುಟ್ಟಿದ್ದರೆ ಅದನ್ನು ಗೌಪ್ಯವಾಗಿಟ್ಟು ಇನ್ನೊಂದು ರೀತಿಯಲ್ಲಿ ಅವರ ಸಂವೇದನೆಗಳಿಗೆ ಅನ್ಯಾಯ ಮಾಡಲಾಗುತ್ತದೆ. ಅವರಿಗೆ ಮದುವೆಯನ್ನೂ ಮಾಡಿ ಇಬ್ಬರ ಬದುಕನ್ನೂ ಹಾಳುಮಾಡುವುದೂ ನಡೆದೇ ಇದೆ. living-smile-vidyaಆರ್ಥಿಕವಾಗಿ ಹಿಂದುಳಿದವರು ಮನೆ ಬಿಟ್ಟು, ನಗರ ಪ್ರದೇಶಗಳಲ್ಲಿ ತಮ್ಮಂತಹುದೇ ಸಮಸ್ಯೆ ಇರುವವರೊಂದಿಗೆ ಸೇರಿಕೊಳ್ಳುವುದು, ತನ್ಮೂಲಕ ಪರಸ್ಪರರಿಗೆ ಸಹಾಯಕರಾಗಿ ಬದುಕುತ್ತಿರುವುದನ್ನು ಕಾಣುತ್ತಿದ್ದೇವೆ.

ಮುಖ್ಯವಾಹಿನಿಯಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇವರು ಈಗ ಕೆಲಮಟ್ಟಿಗೆ ಸಂಘಟಿತರಾಗಿದ್ದಾರೆ. ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ಗೌರವಯುತ, ಮನುಷ್ಯ ಸಹಜ ಬಾಳಿಗಾಗಿ ಹೋರಾಟವನ್ನೂ ನಡೆಸುತ್ತಿದ್ದಾರೆ. ಹೀಗೆ ಸಂಘಟಿತರಾಗದಿದ್ದರೆ ಅಲ್ಪಸಂಖ್ಯಾತರಾದ ಇವರು ಲೈಂಗಿಕ ಕಿರುಕುಳಕ್ಕೂ, ದೌರ್ಜನ್ಯಗಳಿಗೂ ಗುರಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈಗಲೂ ಹಿಜಡಾ ಲೈಂಗಿಕ ಕಾರ್ಯಕರ್ತೆಯರು ಸಾರ್ವಜನಿಕವಾಗಿ, ಪೊಲೀಸ್ ಠಾಣೆ, ಸೆರೆಮನೆ ಮತ್ತು ತಮ್ಮ ಮನೆಗಳಲ್ಲಿಯೂ ಅತ್ಯಂತ ಅಮಾನುಷವಾಗಿ ಶೋಷಣೆಗೆ ಒಳಗಾಗುತ್ತಾರೆ. living-smile-vidya-kannadaಹಿಜಡಾ ಆಗಿದ್ದು ಈಗ ಹೆಣ್ಣಾಗಿ ಪರಿವರ್ತನೆ ಹೊಂದಿರುವ ತಮಿಳುನಾಡಿನ ಲಿವಿಂಗ್ ಸ್ಮೈಲ್ ವಿದ್ಯಾ ತನ್ನ ಆತ್ಮಕಥೆ “ನಾನು ಅವನಲ್ಲ ಅವಳು” ನಲ್ಲಿ ‘ಸ್ವರ್ಗ ಬೇಕೆಂದೇನೂ ನಾನು ಕೇಳುತ್ತಿಲ್ಲ, ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು. ನನ್ನಂತೆಯೇ ಇರುವ ಇತರ ಹಿಜಡಾಗಳಿಗಾಗಿಯೂ’ ಎನ್ನುವ ಮಾತು ಅವರು ಮತ್ತು ಅವರಂತವರು ಅನುಭವಿಸುತ್ತಿರುವ ಹೃದಯವಿದ್ರಾವಕ ನೋವಿಗೆ ಹಿಡಿದ ಕನ್ನಡಿಯಾಗಿದೆ.

ಇಂದು ಹಲವು ಹಿಜಡಾಗಳ ಆತ್ಮಕಥೆಗಳು ಬೇರೆ ಬೇರೆ ಭಾಷೆಯಲ್ಲಿ ಹೊರಬರುತ್ತಿವೆ. ಈ ಕಥನಗಳು ಅವರ ಬದುಕಿನ ಅವಶ್ಯಕತೆ, ಸಾಮಾಜಿಕ ಹಕ್ಕಿಗಾಗಿ ಅವರ ಹೋರಾಟ, ಕೌಟುಂಬಿಕ ಸಂಘರ್ಷ, ಅವರ ಸಮುದಾಯದ ಧಾರ್ಮಿಕ ನಂಬಿಕೆಗಳು, ಜೀವನಕ್ರಮ, ಗಂಡು ದೇಹದಲ್ಲಿ ಹೆಣ್ಣು ಸಂವೇದನೆಯೊಂದಿಗೆ, ಅಥವಾ ಹೆಣ್ಣು ದೇಹದಲ್ಲಿ ಗಂಡು ಸಂವೇದನೆಯೊಂದಿಗೆ ಬದುಕಬೇಕಾದ ಮಾನಸಿಕ ತುಮುಲ, ಅದನ್ನು ಸಮುದಾಯಕ್ಕೆ ಅರ್ಥಮಾಡಿಸಲಾಗದ ಅಸಹಾಯಕತೆಯನ್ನು ಕಣ್ಣಿಗೆ ಕಟ್ಟುವಂತೆ ಹಿಡಿದಿಟ್ಟಿವೆ. ಜೊತೆಗೆ ಅವರ ಆತ್ಮಕಥೆಗಳ ತುಣುಕಿನಂತಿರುವ ಹಿಜಡಾ ಕಾವ್ಯ [ಅಂತರ್‌ಜಾಲದಲ್ಲಿ ಈ ತಾಣಗಳಿವೆ] ಅವರ ಪ್ರೀತಿಗಾಗಿನ ಅದಮ್ಯ ಹಂಬಲ, ಭಾವನಾತ್ಮಕ ಸಾಂಗತ್ಯಕ್ಕಾಗಿನ ತಹತಹಿಸುವಿಕೆ, ಸಾಮಾಜಿಕ ಅವಮಾನ-ನೋವನ್ನು ಸಮರ್ಥವಾಗಿ ಕಟ್ಟಿಕೊಡುತ್ತಾ ನಮ್ಮನ್ನು ಆರ್ದ್ರಗೊಳಿಸುತ್ತವೆ.

ಮುಂಬಯಿಯ ಸಮುದಾಯ ಆರೋಗ್ಯ ಸಂಸ್ಥೆಯಾದ ‘ದ ಹಮ್‌ಸಫರ್ ಟ್ರಸ್ಟ್’ ಭಾರತದಲ್ಲಿ ಸಧ್ಯ ಸುಮಾರು 5 ರಿಂದ 6 ದಶಲಕ್ಷ ಹಿಜಡಾಗಳಿದ್ದಾರೆಂದು ಅಂದಾಜಿಸಿದೆ. ಆದರೆ ಇವರಲ್ಲಿ ಕೇವಲ 8% ಹಿಜಡಾಗಳು ಮಾತ್ರ ನಿರ್ದಿಷ್ಟ ಲಿಂಗದ ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ನಿರ್ದಿಷ್ಟ [ಗಂಡು-ಹೆಣ್ಣು] ಗುರುತಿಸುವಿಕೆಯ ಅಸ್ತಿತ್ವವನ್ನು ಪಡೆದಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನವರು ‘ನಿರ್ವಾಣ’ ಎಂದು ಕರೆಯುತ್ತಾರೆ. 2005 ರಿಂದ ಭಾರತೀಯ ಪಾಸ್‌ಪೋರ್ಟ್‌ಗಳಲ್ಲಿ ಮೂರನೇ ಲಿಂಗೀಯರನ್ನು ಗುರುತಿಸುವ ವ್ಯವಸ್ಥೆಯಾಗಿದೆ. ಜೊತೆಗೆ 2009 ರಲ್ಲಿ ಭಾರತ ಸರ್ಕಾರ ಇವರನ್ನು ಮೂರನೇ ಲಿಂಗದವರೆಂದು ಗುರುತಿಸಿ ಮತದಾನದಲ್ಲಿ, ಮತದಾನದ ಗುರುತಿನ ಚೀಟಿಯಲ್ಲಿ ನಮೂದಿಸಲು ತೀರ್ಮಾನಿಸಿದೆ. ಜೊತೆಗೆ 2011 ರಲ್ಲಿ ನಡೆದ ಜನಗಣತಿಯಲ್ಲಿ ಮೊದಲ ಬಾರಿಗೆ ಇವರನ್ನು ಪ್ರತ್ಯೇಕವಾಗಿ ಗುರುತಿಸುವ ಕ್ರಮವನ್ನೂ ಭಾರತ ಸರ್ಕಾರ ಕೈಗೊಂಡಿರುವುದು ಆಶಾದಾಯಕವಾದ ವಿಚಾರವಾಗಿದೆ. ತಮಿಳುನಾಡು ಸರ್ಕಾರ ಮೊದಲ ಬಾರಿಗೆ ಅವರನ್ನು ‘ಟಿ’ ಎಂಬ ಲಿಂಗ ಚಿಹ್ನೆಯ ಮುಖಾಂತರ ಗುರುತಿಸಲು ಈ ಹಿಂದೆಯೇ ಕ್ರಮ ಕೈಗೊಂಡಿತ್ತು.

ಆದರೆ ಹಿಜಡಾಗಳು ಇತರ ಗಂಡು-ಹೆಣ್ಣುಗಳಂತೆಯೇ ಸಮಾನವಾಗಿ ಬದುಕಲು, ನಮ್ಮ ಸರ್ಕಾರ ಹಾಗೂ ಸಮಾಜದಿಂದ ಇನ್ನೂ ಅನೇಕ ಸೂಕ್ತ ಬದಲಾವಣೆಗಳು ಆಗಬೇಕಿದೆ. ಅವರ ಮುಖ್ಯವಾದ ಬೇಡಿಕೆ ಎಂದರೆ ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆ ಕಾನೂನುಬದ್ಧವಾಗಬೇಕು ಎಂಬುದು. ಇದರೊಂದಿಗೆ, ಶಸ್ತ್ರಚಿಕಿತ್ಸೆಯ ನಂತರ ಹೆಣ್ಣಾಗಿ ಅಥವಾ ಗಂಡಾಗಿ ಬದಲಾಗಿದ್ದಕ್ಕೆ ಪ್ರಮಾಣಪತ್ರ ಸಿಗಬೇಕು. ರೇಷನ್‌ಕಾರ್ಡ್, ಪಾಸ್‌ಪೋರ್ಟ್, ವೀಸಾ, ಗುರುತಿನಚೀಟಿ ಯಾವುದೇ ತೊಡಕಿಲ್ಲದೇ ಸಿಗುವಂತಾಗಬೇಕು. ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬುದಾಗಿದೆ. ಪ್ರಜಾಪ್ರಭುತ್ವದ ಹಣೆಪಟ್ಟಿ ಕಟ್ಟಿಕೊಂಡಿರುವ ದೇಶವೊಂದು ತಾನಾಗಿಯೇ ಇದನ್ನೆಲ್ಲಾ ಮಾಡಬೇಕಾಗಿರುವುದು ಅದರ ಜವಾಬ್ದಾರಿ.

ಸಾಮಾಜಿಕವಾಗಿ, ಅವರ ಪ್ರಕೃತಿದತ್ತ ಸಮಸ್ಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯವಾದ ಕೆಲಸ. ಶಾಲಾಪಠ್ಯಗಳಲ್ಲೂ ಈ ಮಾಹಿತಿಯನ್ನು ಅಳವಡಿಸಿದರೆ ಮುಂದಿನ ಪೀಳಿಗೆ ಇವರ ಕುರಿತು ಋಣಾತ್ಮಕ ಭಾವನೆಗಳನ್ನಿರಿಸಿಕೊಳ್ಳುವುದು ತಪ್ಪಬಹುದು. ಬರಹ, ಚಲನಚಿತ್ರ, ಸಾಕ್ಷ್ಯಚಿತ್ರ, ಧಾರಾವಾಹಿಗಳ ಮೂಲಕ ಹಿಜಡಾಗಳ ಬದುಕಿನ ನೋವು-ಸಂಘರ್ಷಗಳನ್ನು ಪರಿಚಯಿಸುವ ಕೆಲಸಗಳಾಗಬೇಕಿದೆ. ಮಾಧ್ಯಮಗಳಲ್ಲಿ ಅವರ ಕುರಿತು ಅಮಾನವೀಯವಾಗಿ ಚಿತ್ರಿಸುವ, ಸಾರ್ವಜನಿಕವಾಗಿ ಅವರನ್ನು ವಿನಾಕಾರಣ ಅಶ್ಲೀಲ, ಅವಾಚ್ಯ ಶಬ್ಧಗಳಿಂದ ಕೆಣಕುವ ಸಂದರ್ಭಗಳಲ್ಲಿ ಕಾನೂನಿನರೀತ್ಯ ಶಿಕ್ಷೆಯಾಗುವಂತಾ ಶಾಸನಗಳು ಜಾರಿಯಾಗಬೇಕು. ಮುಖ್ಯವಾಗಿ ಹಿಜಡಾಗಳ ಬದುಕು, ಸಮಸ್ಯೆಯ ಕುರಿತು ಮಾನವಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಹಾಗೂ ಸಮಾಜವಿಜ್ಞಾನಿಗಳು ವೈಜ್ಞಾನಿಕ ನೆಲೆಗಳಲ್ಲಿ ಹೆಚ್ಚಿನ ಸಂಶೋಧನೆ, ಸಮೀಕ್ಷೆ ನಡೆಸಿ ಜನರಲ್ಲಿ ಅವರ ಕುರಿತು ಸಹಜ ಪ್ರೀತಿ, ಅಂತಃಕರಣಗಳನ್ನು ಮೂಡಿಸಲು ನೆರವಾಗಬೇಕಿದೆ.

ಒಟ್ಟಾರೆ ಹಿಜಡಾಗಳ ಕುರಿತು ಸಮಾಜದ ಧೋರಣೆ ಬದಲಾಗಬೇಕಿದೆ. ಅವರ ಪ್ರಕೃತಿದತ್ತವಾದ ಹುಟ್ಟನ್ನು ಸಹಾನುಭೂತಿಯಿಂದ ಕಂಡು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಕೆಲಸಗಳ ಜೊತೆಗೆ, ನಮ್ಮಂತೆಯೇ ಸಾಮಾಜಿಕ-ನಾಗರಿಕ ಹಕ್ಕುಗಳನ್ನು ತುರ್ತಾಗಿ ನೀಡಬೇಕಿದೆ. ಮುಖ್ಯವಾಗಿ ಅವರು ಪ್ರಾಣಿಗಳಲ್ಲ ನಮ್ಮಂತೆಯೇ ಮನುಷ್ಯರು ಎಂದು ಒಪ್ಪಿಕೊಂಡರೆ, ಅವರ ನೋವು-ಸಂಕಟಗಳು ನಮಗೆ ಅರ್ಥವಾದರೆ, ನಾವೆಂದಿಗೂ ಅವರೊಂದಿಗೆ ಅಮಾನವೀಯವಾಗಿ ವರ್ತಿಸುವುದಿಲ್ಲ. ಅವರಿಗೂ ನಮ್ಮಿಂದ ಮನುಷ್ಯ ಸಹಜ ಪ್ರೀತಿ ಸಿಕ್ಕರೆ ಅವರ ವರ್ತನೆಯೂ ಖಂಡಿತಾ ಕೆಟ್ಟದಾಗಿರಲು ಸಾಧ್ಯವಿಲ್ಲ.

ಸಮಾನ ಶಿಕ್ಷಣದೆಡೆಗಿನ ಪಯಣ…….


– ರೂಪ ಹಾಸನ


 

ಹಳ್ಳಿಗಳ ಸರ್ಕಾರಿ ಶಾಲೆಗಳ ಮಕ್ಕಳಿಗಾಗಿ ನಮ್ಮ ಪ್ರೇರಣಾ ವಿಕಾಸ ವೇದಿಕೆಯಿಂದ ನಡೆಸುವ ನಿರಂತರ ಕಾರ್ಯಕ್ರಮಗಳಿಂದಾಗಿ ಬಹಳಷ್ಟು ವಿಶೇಷಗಳು, ವೈರುಧ್ಯಗಳೂ ಕಣ್ಣಿಗೆ ಬೀಳುತ್ತಿರುತ್ತವೆ. ಈಗ್ಗೆ 3-4 ವರ್ಷದ ಹಿಂದೆ ಹಳ್ಳಿಯ ಶಾಲೆಯೊಂದರಲ್ಲಿ ಕಾರ್ಯಕ್ರಮದಲ್ಲಿದ್ದಾಗ ಹೆಣ್ಣುಮಕ್ಕಳೇ ಹೆಚ್ಚಾಗಿದ್ದರು. ಈಗ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ಜನರಲ್ಲೂ ಜಾಗೃತಿ ಮೂಡಿದೆ ಎನಿಸಿ ಸಮಾಧಾನವಾಗಿತ್ತು. ಆದರೆ ಮುಂದೆ ಬೇರೆ ಹಳ್ಳಿಗಳ ಶಾಲೆಗಳಿಗೆ ಹೋದಾಗಲೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಾಣಲಾರಂಭಿಸಿದಾಗ ಸಂದೇಹ ಕಾಡಲಾರಂಭಿಸಿತು. ಸಮಾಜದಲ್ಲಿ ಹೆಣ್ಣುಮಕ್ಕಳು ಹುಟ್ಟುವ ಸಂಖ್ಯೆಯೇ ಗಣನೀಯ ಪ್ರಮಾಣದಲ್ಲಿ ಕುಸಿದಿರುವಾಗ, ಶಾಲೆಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿರಲು ಹೇಗೆ ಸಾಧ್ಯ? ಅನುಮಾನದಿಂದ ಶಿಕ್ಷಕ ಮಿತ್ರರನ್ನು ಅಡ್ಡಪ್ರಶ್ನೆ ಮಾಡಲಾರಂಭಿಸಿದಾಗ ತಿಳಿದದ್ದು…… ಈಗ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಉಳಿದಿರುವವರು ಬಡ ಹೆಣ್ಣುಮಕ್ಕಳು ಮತ್ತು ತಳಸಮುದಾಯದ ಮಕ್ಕಳು! ಹತ್ತಿರದಲ್ಲೆಲ್ಲೂ ಖಾಸಗಿ ಶಾಲೆಗಳಿಲ್ಲದೇ, ಅನಿವಾರ್ಯವಾಗಿ ಸರ್ಕಾರಿ ಶಾಲೆಯನ್ನೇ ಅವಲಂಬಿಸಬೇಕಾದಲ್ಲಿ ಮಾತ್ರ ಜಾತಿ, ವರ್ಗ, ಲಿಂಗ ಭೇದವಿಲ್ಲದೇ kannada-schoolಎಲ್ಲರೂ ಸರ್ಕಾರಿ ಶಾಲೆಗೇ ಬರುತ್ತಾರಷ್ಟೇ. ಆಯ್ಕೆ ಇದ್ದರೆ ಹೆಚ್ಚಿನ ಉಳ್ಳವರು ಬಯಸುವುದು ಕಾನ್ವೆಂಟ್‌ಗಳನ್ನೇ. ಅದರಲ್ಲೂ ಒಂದೇ ಮನೆಯಲ್ಲಿ ಗಂಡು-ಹೆಣ್ಣುಮಕ್ಕಳಿಬ್ಬರೂ ಇದ್ದರೆ, ಬಡತನವಿದ್ದರೂ ಕಷ್ಟಪಟ್ಟಾದರೂ ಗಂಡನ್ನು ಕಾನ್ವೆಂಟ್ ಶಾಲೆಗೆ ಸೇರಿಸಿ, ಹೆಣ್ಣನ್ನು ಸರ್ಕಾರಿ ಶಾಲೆಗೆ ಸೇರಿಸಲಾಗುತ್ತದೆ! ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೆ, ದುರ್ಬಲರು, ಶೋಷಿತರು ಹೇಗೆ ಅಂಚಿಗೆ ತಳ್ಳಲ್ಪಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ.

ಸ್ವಾತಂತ್ರ್ಯ ದೊರೆತ ಎರಡು ದಶಕಗಳ ನಂತರ ಹುಟ್ಟಿ, ಗ್ರಾಮೀಣ ಪ್ರದೇಶದ ಸಾಮಾಜಿಕ ಭೇದವಿಲ್ಲದೇ ಕಿಕ್ಕಿರಿದು ತುಂಬಿರುತ್ತಿದ್ದ ಸರ್ಕಾರಿ ಶಾಲೆಗಳಲ್ಲಿ ಓದಿದ ನನ್ನಂತವರಿಗೆ, ಕಳೆದೆರಡು ದಶಕಗಳಿಂದ ಆಗುತ್ತಿರುವ ವೇಗದ ಬದಲಾವಣೆ ದಿಗ್ಭ್ರಮೆ ಮೂಡಿಸುತ್ತಿದೆ. ನಮ್ಮ ಭಾರತಕ್ಕೆ ಇದೆಲ್ಲಾ ಏನಾಗಿ ಹೋಯ್ತು? ಎಲ್ಲೆಲ್ಲೂ ಅಸಮಾನತೆಯೇ ತಾಂಡವವಾಡುತ್ತಿರುವಂತೆ ಯಾಕೆ ಕಾಣುತ್ತಿದೆ? ಇದನ್ನು ಎಲ್ಲಿಂದ ಸರಿಪಡಿಸುವುದು? ಸರಿಪಡಿಸುವವರಾರು? ಹೇಗೆ ಸರಿಪಡಿಸುವುದು? ಎಂಬ ಪ್ರಶ್ನೆಗಳು ಕಾಡಲಾರಂಭಿಸುತ್ತವೆ.

ಸಮ ಸಮಾಜವೆಂಬ ಬಂಗಲೆಯ ಅಡಿಪಾಯವಾದ, ಸಮಾನ ಶಿಕ್ಷಣ ವ್ಯವಸ್ಥೆ ಎಂಬುದೇ ಒಂದು ಆದರ್ಶದ ಸ್ಥಿತಿ ಇರಬಹುದೇ? ಅದನ್ನು ಎಂದಿಗೂ ಸಾಧಿಸಲು ಸಾಧ್ಯವಾಗುವುದಿಲ್ಲವೇ? ಆದರೆ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಉಳ್ಳ ಅಮೆರಿಕಾ, ಕ್ಯೂಬಾ, ಚೈನಾ, ರಷ್ಯಾ, ಬ್ರಿಟನ್ ರಾಷ್ಟ್ರಗಳು ಕಣ್ಣೆದುರಿಗಿವೆಯಲ್ಲಾ? ಅಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ? ಇಲ್ಲಿ ಅಂತಹ ಪ್ರಯತ್ನಗಳು ಆಗಲೇ ಇಲ್ಲವೇ? – ಚರಿತ್ರೆಯ ಗರ್ಭವನ್ನು ಬಗೆಯುತ್ತಾ ಹೊರಟರೆ, ಅಸಹನೀಯ ಸತ್ಯಗಳು ಕಣ್ಣ ಮುಂದೆ ನಿಲ್ಲುತ್ತವೆ.

ನಿಜವಾದ ಸಮಾನತೆಯ ಅಡಿಪಾಯದ ಶಿಕ್ಷಣ ಹಕ್ಕು ಕಾಯ್ದೆ ಮೊದಲು ಮಂಡನೆಯಾದದ್ದು ಸ್ವಾತಂತ್ರ್ಯಪೂರ್ವದ 1882 ರಲ್ಲಿ ಜ್ಯೋತಿ ಬಾ ಫುಲೆ ಅವರಿಂದ. phuleಅದುವರೆಗೆ ಕೆಲವೇ ಕೆಲವು ಮೇಲ್ಜಾತಿ, ಮೇಲ್ವರ್ಗದ ಪುರುಷರಿಗೆ ಸೀಮಿತವಾಗಿದ್ದ ಶಿಕ್ಷಣ, ಎಲ್ಲರ ಹಕ್ಕು ಎಂದು ಪ್ರತಿಪಾದಿಸಿದ್ದು, ಜೊತೆಗೆ ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಡಗೂಡಿ ಮಹಿಳೆ ಮತ್ತು ತಳಸಮುದಾಯದವರಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, ಶಿಕ್ಷಣ ಮತ್ತು ಸಮಾನತೆ ಕುರಿತ ಅವರ ನಿಜವಾದ ಕಾಳಜಿಯನ್ನು ತೋರಿಸುತ್ತದೆ. ಆ ನಂತರ ಗೋಪಾಲಕೃಷ್ಣ ಗೋಖಲೆಯವರು 1911 ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಬಿಲ್ ಮಂಡನೆ ಮಾಡಿದಾಗ ಬಹುಸಂಖ್ಯಾತರ ವಿರೋಧವನ್ನು ಎದುರಿಸಬೇಕಾಯ್ತು. ಇದರ ವಿರುದ್ಧವಾಗಿ ೧೧೦೦೦ ವಿರೋಧಿ ಸಹಿಗಳನ್ನು ಸಂಗ್ರಹಿಸಲಾಯ್ತು. 1937 ರವರೆಗೂ ಈ ಬಿಲ್ ಪಾಸ್ ಆಗಲಿಲ್ಲ. ಮಹಾತ್ಮಾ ಗಾಂಧಿ ಎಲ್ಲರಿಗೂ ಶಿಕ್ಷಣ ಎಂಬುದಕ್ಕೆ ಪರವಾಗಿ ವಾದಿಸಿದ್ದು ಗಟ್ಟಿಯಾಗಿ ನಿಂತಿದ್ದು ಒಂದು ಇತಿಹಾಸ. ರಾಜ ಮಹಾರಾಜರು, ಸಾಮಂತರು, ಭೂಮಾಲಿಕರು ಎಲ್ಲರಿಗೂ ಶಿಕ್ಷಣ ಕೊಟ್ಟರೆ ಆಳುಗಳ ಕೆಲಸವನ್ನು ಮಾಡುವವರ್‍ಯಾರು ಎಂದು ಪ್ರತಿರೋಧ ಒಡ್ಡಿದರು. ಸ್ವಾತಂತ್ರ್ಯಾ ನಂತರ 1948-49 ರಲ್ಲಿ ಅಸೆಂಬ್ಲಿಯಲ್ಲಿ ಮತ್ತೆ ಉಚಿತ ಶಿಕ್ಷಣದ ಕುರಿತು ಚರ್ಚೆಗಳಾಯ್ತು. ಅಲ್ಲಿಯವರೆಗೆ 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂದಿದ್ದು 11 ವರ್ಷಕ್ಕೆ ಇಳಿಸಬೇಕೆಂದು ಭೂಮಾಲೀಕರು ವಾದ ಮಾಡಿದರು. ಆದರೆ ಅಂಬೇಡ್ಕರ್ ಅವರು 11 ವರ್ಷದ ನಂತರ ಮಕ್ಕಳು ಬಾಲಕಾರ್ಮಿಕರಾಗುತ್ತಾರೆಂಬ ಭವಿಷ್ಯವನ್ನು ಮುಂದಾಲೋಚಿಸಿ 14 ವರ್ಷದವರೆಗಿನ ಶಿಕ್ಷಣವನ್ನು ಕಡ್ಡಾಯಗೊಳಿಸಲು ಒಪ್ಪಿಸಿದರು. ಆದರೆ ನಮ್ಮ ಅಸಮಾನ ಭಾರತದ ಸಾಮಾಜಿಕ ವ್ಯವಸ್ಥೆಗೆ ಇದರೊಂದಿಗೇ ಸಮಾನ ಶಿಕ್ಷಣ ವ್ಯವಸ್ಥೆಯೂ ಕಡ್ಡಾಯವಾಗಿ ಜಾರಿಗೊಳ್ಳಬೇಕಿತ್ತು. ಏಕೋ ಕಡ್ಡಾಯ ಶಿಕ್ಷಣದ ಕುರಿತೇ ನಡೆದ ಸುದೀರ್ಘ ಚರ್ಚೆಗಳು ಸಮಾನ ಶಿಕ್ಷಣದವರೆಗೆ ಆ ಹಂತದಲ್ಲಿ ತಲುಪಲೇ ಇಲ್ಲ.

ಭಾರತದಲ್ಲಿ ಬಹುಶಃ ಅತಿ ಹೆಚ್ಚು ಚರ್ಚೆಗೊಳಗಾಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇಂದಿಗೂ ಶಿಕ್ಷಣಕ್ಕೆ ಸಂಬಂಧಿಸಿದ 3000 ಕೇಸುಗಳು ಜೀವಂತವಾಗಿರುವುದೇ ಇದಕ್ಕೆ ಸಾಕ್ಷಿ. ಎಷ್ಟೆಲ್ಲಾ ಸಂಘರ್ಷಗಳಾದರೂ ಸಂವಿಧಾನದ ಮೂಲ ಆಶಯವಾದ ಸಮಾನತೆ, ಸಾಮಾಜಿಕ ನ್ಯಾಯ, govt-school-kidsತಾರತಮ್ಯರಹಿತವಾದ ಶಿಕ್ಷಣದಿಂದ ನಿಧಾನಕ್ಕೆ ದೂರ ಸರಿಯುತ್ತಾ, ಇವುಗಳನ್ನೇ ಒಡೆದು ದೊಡ್ಡ ಗೋಡೆಗಳನ್ನು ಕಟ್ಟಿ ಶ್ರೇಣೀಕೃತ ಶಿಕ್ಷಣ ವ್ಯವಸ್ಥೆಯನ್ನು ಬೆಳೆಸಲಾಗುತ್ತಿದೆಯೆಂಬುದೇ ದುರಂತ. ವರ್ಗ ಹಾಗೂ ಪಟ್ಟಭದ್ರಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಕ್ಕಿ ಇಂದು ಶಿಕ್ಷಣವೂ ಒಂದು ವ್ಯಾಪಾರವಾಗಿಬಿಟ್ಟಿದೆ. ಸಾಮಾಜಿಕ-ಆರ್ಥಿಕತೆಯ ದಟ್ಟವಾದ ತಾರತಮ್ಯಕ್ಕೆ ಒಳಗಾಗಿದ್ದ, ಅಸಮಾನತೆಯೇ ತಾಂಡವವಾಡುತ್ತಿದ್ದ ನಮ್ಮ ದೇಶ, ಸಮಾನತೆಯ ಆಶಯದ ಸಂವಿಧಾನವನ್ನು ರೂಪಿಸಿಕೊಂಡ ನಂತರವಾದರೂ ಇದನ್ನೆಲ್ಲಾ ಮೀರಲು ತನ್ನದೇ ಆದ ಸಶಕ್ತ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿತ್ತಲ್ಲವೇ? ಪ್ರಯತ್ನಗಳು ಆಗಲೇ ಇಲ್ಲವೆಂದಲ್ಲ……

ಸಮಾನ ಶಾಲಾ ವ್ಯವಸ್ಥೆಯನ್ನು ಪ್ರತಿಪಾದಿಸುವ 1964-66 ರ ಕೊಥಾರಿ ಆಯೋಗ ಸಮಾನ ಶಿಕ್ಷಣದ ಆಶಯದ ಸಾರ್ವಜನಿಕ ಶಾಲಾ ವ್ಯವಸ್ಥೆಯ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ, ಸಾಮಾಜಿಕ ಬದಲಾವಣೆಯನ್ನು ತರುವ ದೊಡ್ಡ ಕನಸನ್ನು ಕಂಡಿತ್ತು. ಸಮಾನ ಶೈಕ್ಷಣಿಕ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಭದ್ರ ತಳಪಾಯವಾಗುವುದಲ್ಲದೇ ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವ ಆಶಯವಿತ್ತು. ಅದು ಸಾಕಾರವಾಗಿದ್ದರೆ ಬಹುಶಃ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಮಹತ್ತರವಾದ ಬದಲಾವಣೆಗಳಾಗಿರುತ್ತಿದ್ದವು. ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಜಾತಿ, ಮತ, ಲಿಂಗ, ಆರ್ಥಿಕ-ಸಾಮಾಜಿಕ ಸ್ಥಿತಿ ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ಶಿಕ್ಷಣವೆಂಬುದಕ್ಕೆ ಮಾತ್ರ ಪ್ರಾಮುಖ್ಯತೆ ನೀಡುವ ಆರೋಗ್ಯಕರವಾದ ಆಶಯವಿತ್ತು. ನೆರೆಹೊರೆ ಶಾಲಾ ಪದ್ಧತಿಯ ಮೂಲಕ ಒಂದು ಪ್ರದೇಶದ ಮಕ್ಕಳು rte_schoolಯಾವುದೇ ಭೇದವಿಲ್ಲದೇ, ಒಂದೇ ಶಾಲೆಯಲ್ಲಿ ಓದುವ ವ್ಯವಸ್ಥೆಯ ಜೊತೆಗೆ ಸಂಪೂರ್ಣವಾಗಿ ಉಚಿತವಾದ ಶಿಕ್ಷಣವನ್ನು ಸರ್ಕಾರವೇ ನೀಡುವುದರೊಂದಿಗೆ ಕನಿಷ್ಠ ಮಟ್ಟದ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಶಾಲೆಗಳೂ ಹೊಂದಬೇಕೆಂದು ವಿಧಿಸಲಾಗಿತ್ತು. ಎಲ್ಲಕ್ಕಿಂಥಾ ಮುಖ್ಯವಾಗಿ ಪ್ರಾಥಮಿಕ ಹಂತದವರೆಗೆ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿತ್ತು. ಇವು ಸಮಾನತೆಯನ್ನು ಬಯಸುವವರೆಲ್ಲರೂ ಒಪ್ಪಿಕೊಳ್ಳುವಂತಹಾ ಆಶಯಗಳೇ.

ಈ ಕೊಥಾರಿ ಆಯೋಗದ ಶಿಫಾರಸ್ಸಿನಂತೆ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲು 1968, 1986 ಮತ್ತು 1992 ರ ರಾಷ್ಟ್ರೀಯ ಶಿಕ್ಷಣ ನೀತಿಗಳು ಭರವಸೆಯನ್ನೇನೋ ನೀಡಿದವು. ಆದರೆ ಅದನ್ನು ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನಗಳು ಆಗಲೇ ಇಲ್ಲ. ಈ ಉನ್ನತ ಕನಸಿನ ಸಾಕಾರಕ್ಕಾಗಿ ದೇಶದ ಒಟ್ಟು ಉತ್ಪನ್ನದ ಶೇಕಡ 6 ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಕೊಥಾರಿ ಆಯೋಗ ಸೂಚಿಸಿದ್ದರೂ, ಇದುವರೆಗೂ ಯಾವ ಸರ್ಕಾರವೂ ಶೇಕಡ 3 ರ ಮೀಸಲನ್ನೂ ಮೀರಿಲ್ಲದಿರುವುದು ನಮ್ಮ ಪಟ್ಟಭದ್ರಹಿತಾಸಕ್ತಿಗಳಿಗೆ ಶೈಕ್ಷಣಿಕ ಕ್ಷೇತ್ರದ ಬಗೆಗಿನ ನಿರ್ಲಕ್ಷ್ಯವನ್ನೂ, ಮಾನವ ಸಂಪನ್ಮೂಲದ ಅಭಿವೃದ್ಧಿ ಕುರಿತು ಆಮೂಲಾಗ್ರ ಬದಲಾವಣೆಯ ಕನಸುಗಳಿಲ್ಲದಿರುವುದನ್ನು ಸೂಚಿಸುತ್ತದೆ. ಆಳುವ ವರ್ಗವಾಗಲೀ ಅಧಿಕಾರಶಾಹಿಯಾಗಲೀ ಕೊಥಾರಿ ಆಯೋಗದ ಮಹತ್ವವನ್ನು ಅರಿಯಲೇ ಇಲ್ಲ. ಅಥವಾ ಅರಿತರೂ ಅಸಮಾನತೆಯನ್ನೇ ಉಂಡುಡುವ ಪೂರ್ವಾಗ್ರಹಪೀಡಿತ ಮನಸ್ಸುಗಳು ಅದನ್ನು ಸದ್ದಿಲ್ಲದೇ ಪಕ್ಕಕ್ಕಿಟ್ಟವೋ? ಒಟ್ಟಿನಲ್ಲಿ ಶಿಫಾರಸ್ಸು ಮೂಲೆಗುಂಪಾಯ್ತು.

1986 ರಲ್ಲಿ ಎಚ್ಚೆತ್ತ ಸರ್ಕಾರ, ಈ ಶಿಫಾರಸ್ಸು ಜಾರಿಯಾಗದೇ ಇರುವುದಕ್ಕೆ ಕಾರಣಗಳನ್ನು ಹುಡುಕಲು ಆಚಾರ್ಯ ರಾಮಮೂರ್ತಿ ಸಮಿತಿಯನ್ನು ನೇಮಿಸಿತು. ಅದು ಸಮುದಾಯದಲ್ಲಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆ ಆಳವಾಗಿ ಬೇರೂರಿರುವುದರಿಂದ ಪರಸ್ಪರರಲ್ಲಿ ಅಸಹನೆ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೇರಲಾಗುವುದಿಲ್ಲ, ಗುಣಾತ್ಮಕ ಶಿಕ್ಷಣ ಬೇಕೆನಿಸಿದ ಪೋಷಕರು ತಮಗೆ ಬೇಕೆನಿಸಿದ ಕಾನ್ವೆಂಟ್‌ಗಳಿಗೆ ಮಕ್ಕಳನ್ನು ಕಳಿಸುತ್ತಾರೆ ಅಲ್ಲಿ ಜಾತಿ-ಮತಗಳ ತಾರತಮ್ಯವಿಲ ಎಂದು ಹೇಳಿತು. ಆದರೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳ ನಡುವಿನ ವರ್ಗ ತಾರತಮ್ಯ, ಹಾಗೂ ಆಂಗ್ಲಭಾಷೆ ಹಾಗೂ ಮಾತೃಭಾಷಾ ಮಾಧ್ಯಮದ ಮಕ್ಕಳ ನಡುವಿನ ವ್ಯತ್ಯಾಸ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಈಗ ಅಗಾಧವಾಗಿ ಬೆಳೆದು ನಿಂತಿದೆ. private-schoolಸಮಾನ ಶಿಕ್ಷಣವೆಂಬುದು ಅಸಮಾನತೆಯನ್ನು ತೊಡೆಯುವಲ್ಲಿನ ಪ್ರಮುಖ ಅಸ್ತ್ರವಾಗಿರುವುದರಿಂದ, ಅದು ಹೇರಿಕೆ ಎಂದೆನಿಸದೇ ಕಷ್ಟವಾದರೂ ಎಲ್ಲರೂ ಅನುಸರಿಸಲೇ ಬೇಕಾದ ಕಾನೂನಾಗಬೇಕು. ಆಗ ಸಾಮಾಜಿಕ ಅಸಮಾನತೆಯನ್ನು ಮೀರುವ ಸ್ಪಷ್ಟ ಮಾರ್ಗಗಳು ಕಾಣಲಾರಂಭಿಸುತ್ತದೆ. ಸಮುದಾಯದಲ್ಲಿ, ಸಮಾಜದಲ್ಲಿ ಅಸಮಾನತೆಯನ್ನು ತೊಡೆಯಲೆಂದೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು ಎಂಬುದನ್ನು ನಾವು ಮರೆಯಬಾರದು. ಅಸಮಾನತೆಯ ಯಥಾಸ್ಥಿತಿಯೇ ಮುಂದುವರೆಯುವುದಾದರೆ ಇದನ್ನು ಸಂವಿಧಾನಬದ್ಧ ಪ್ರಜಾಪ್ರಭುತ್ವವಾದಿ ದೇಶವೆಂದು ಏಕೆ ಹೇಳಬೇಕು?

ಜೊತೆಗೆ ತಮ್ಮದೇ ಆದ ಶಾಲೆಗಳನ್ನು ತೆರೆದು ನಿರ್ವಹಿಸುವ ಹಕ್ಕು ಸಂವಿಧಾನದಲ್ಲಿಯೇ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ದೊರಕಿರುವುದರಿಂದ ಇದೂ ಸಮಾನ ಶಿಕ್ಷಣ ವ್ಯವಸ್ಥೆಗೆ ಮಾರಕ ಮತ್ತು ಸರ್ಕಾರವೇ ಒಂದು ಸೀಮಿತ ವರ್ಗಕ್ಕಾಗಿ ಸೈನಿಕ ಶಾಲೆ, ನವೋದಯ ವಿದ್ಯಾಶಾಲೆ, ಕೇಂದ್ರೀಯ ಶಾಲೆಗಳನ್ನು ನಡೆಸುವುದೇ ಸಂವಿಧಾನ ವಿರೋಧಿ ನಿಲುವು ಎಂದು ಸಮಿತಿ ಆರೋಪಿಸಿದ್ದರಲ್ಲಿ ಕೊಂಚ ವಾಸ್ತವಾಂಶವಿದೆ. ಆದರೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುತ್ತಲೇ ಐಕ್ಯತೆಯ ಆಶಯವನ್ನೂ ಅಳವಡಿಸಿಕೊಳ್ಳಲು ಸಂವಿಧಾನದಲ್ಲೇ ಇರುವ ಅಪಾರ ಸಾಧ್ಯತೆಗಳೆಡೆಗೆ ನಾವಿಂದು ಗಮನಹರಿಸಬೇಕಾಗಿದೆ. ಇದರೊಂದಿಗೇ ಕಾನ್ವೆಂಟ್‌ಗಳು ದುಬಾರಿ ವಂತಿಗೆ, ಶುಲ್ಕ ಪಡೆದು ಉತ್ತಮ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯವನ್ನು ನೀಡಲಾರಂಭಿಸಿದ್ದು, ಆ ಮಟ್ಟದ ವ್ಯವಸ್ಥೆಯನ್ನು ಒದಗಿಸಲು ಸರ್ಕಾರ ಸೋತಿದ್ದು, ಖಾಸಗಿಗೆ ಕಡಿವಾಣವಿಲ್ಲದ ಸರ್ಕಾರಿ ನುಸುಳುಗಳು ಸಮಾನ ಶಿಕ್ಷಣ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯಾಗಿವೆ. ಖಾಸಗಿ ಶಾಲಾ ವ್ಯವಸ್ಥೆ ಈ 15-20 ವರ್ಷಗಳಲ್ಲಿ ಉಳ್ಳವರು-ಇಲ್ಲದವರ ಮಧ್ಯೆ ಬೃಹತ್ ಕಂದಕ ಸೃಷ್ಟಿಸಿಬಿಟ್ಟಿದೆ.

ಸಂವಿಧಾನದ 350[ಎ] ಕಲಂ ಪ್ರಾಥಮಿಕ ಹಂತದವರೆಗಾದರೂ ಮಾತೃಭಾಷೆ ಶಿಕ್ಷಣಕ್ಕೆ ಆಯಾ ರಾಜ್ಯ ಸರ್ಕಾರಗಳು ಅನುವು ಮಾಡಿಕೊಟ್ಟು tribal-schools-educationಮಕ್ಕಳ ಹಕ್ಕನ್ನು ಕಾಪಾಡಬೇಕೆಂದು ಪ್ರತಿಪಾದಿಸುತ್ತದೆ. 2009 ರಲ್ಲಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ ಕೂಡ ಇದನ್ನೇ ಹೇಳುತ್ತದೆ. 19[ಎ] ಕಲಂ ಮಗುವಿನ ಮಾತೃಭಾಷೆಯ ಕಲಿಕೆಗೆ ಒತ್ತು ನೀಡುತ್ತದೆ. ಅದನ್ನು ನಿರ್ಲಕ್ಷಿಸಿ ಬೇರೆ ಭಾಷೆಯನ್ನು ಹೇರುವುದರಿಂದ ಮಕ್ಕಳ ನಿಜವಾದ ವ್ಯಕ್ತಿತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಗು ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಕ್ರಿಯಾಶೀಲತೆಯನ್ನೂ ಕಳೆದುಕೊಳ್ಳುತ್ತದೆ. ಆದರೆ ನಮ್ಮ ಸರ್ಕಾರಗಳು, ಜೊತೆಗೆ ನ್ಯಾಯಂಗವೂ ಈ ಆಶಯಕ್ಕೆ ಗಂಭೀರವಾದ ಒತ್ತನ್ನು ನೀಡದಿರುವುದು ನಿಜಕ್ಕೂ ಖೇದಕರ.

ಜಾಗತೀಕರಣದ ದಾಳಿಯಿಂದಾಗಿ ಪ್ರಾದೇಶಿಕ ಸಂಸ್ಕೃತಿ, ಭಾಷೆ, ಜಾನಪದೀಯ ಸತ್ವ ನಿಧಾನಕ್ಕೆ ಕಣ್ಮರೆಯಾಗುತ್ತಿರುವುದನ್ನು ಕಾಣುತ್ತಿದ್ದೆವೆ. ಆಧುನಿಕ ಅವಶ್ಯಕತೆಗಳ ನೆಪ ಹೇಳಿ ನಾವೂ ಆಂಗ್ಲಭಾಷೆ ಕಲಿಕೆಯೆಡೆಗೆ ಮುಖ ಮಾಡುತ್ತಿದ್ದೇವೆ. ನಮ್ಮ ಉಚ್ಛ ನ್ಯಾಯಾಲಯವೂ ಶಾಲೆ ಹಾಗೂ ಭಾಷಾ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೇ ಕೊಟ್ಟಿದ್ದು ಸಮಾನ ಶಿಕ್ಷಣ ವ್ಯವಸ್ಥೆಯೆಡೆಗಿನ ಹಿನ್ನೆಡೆಯಾಗಿದೆ. ಕಳೆದ 19 ವರ್ಷದಿಂದ ನಡೆಯುತ್ತಿರುವ ಕರ್ನಾಟಕದ ಭಾಷಾ ಮಾಧ್ಯಮದ ವಿವಾದವನ್ನು ಮೊನ್ನೆ ಸರ್ವೋಚ್ಛ ನ್ಯಾಯಾಲಯ, ಇದರಲ್ಲಿ ಸಂವಿಧಾನಾತ್ಮಕ ತೊಡಕುಗಳಿರುವುದರಿಂದ ಸಾಂವಿಧಾನಿಕ ಪೀಠವೇ ಇದನ್ನು ಬಗೆಹರಿಸಲೆಂದು ಹೇಳಿ ಕೈ ತೊಳೆದುಕೊಂಡಿದೆ. ತೀರ್ಪು ಭಾಷಾಮಾಧ್ಯಮದ ಪರವಾಗಿ ಬಂದರೆ ಭಾರತದ ಒಟ್ಟು ಶೈಕ್ಷಣಿಕ ವ್ಯವಸ್ಥೆಯೇ ಬದಲಾಗುವ ಸಾಧ್ಯತೆಗಳಿವೆ. ಹೀಗೆ ಸಮಾನ ಶಿಕ್ಷಣಕ್ಕಾಗಿ ನಡೆದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದಕ್ಕೆ ಬಹುಶಃ ನಮ್ಮನ್ನಾಳುವ ಪ್ರಭುಗಳಿಗೆ ಇಚ್ಛಾಶಕ್ತಿ ಇಲ್ಲದ್ದು, ಆಡಳಿತಯಂತ್ರದ ವೈಫಲ್ಯ, ನ್ಯಾಯಾಂಗದ ವ್ಯತಿರಿಕ್ತ ತೀರ್ಪುಗಳು, ಜನರ ನಿರಾಸಕ್ತಿ ಎಲ್ಲವೂ ಕಾರಣವಿರಬಹುದೆನಿಸುತ್ತದೆ.

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಲೇ ರೂಪಿತವಾದ 2009 ರ ಶಿಕ್ಷಣ ಹಕ್ಕು ಕಾಯ್ದೆಯಿಂದ ಸಮಾನ ಶಿಕ್ಷಣ ಸಾಧ್ಯವೆಂದು ಸರ್ಕಾರ ಹೇಳುತ್ತಿದೆ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಇದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯೇ ಹೊರತು ಸಮಾನ ಶಿಕ್ಷಣ ಕಾಯ್ದೆಯಲ್ಲ! ನಮ್ಮ ಸಂವಿಧಾನದಲ್ಲೇ ಶಿಕ್ಷಣವನ್ನು ಒಂದು ಹಕ್ಕಾಗಿ ಪರಿಗಣಿಸಿದ ನಂತರ ಇದಕ್ಕಾಗಿ ಇನ್ನೊಂದು ಕಾಯ್ದೆಯ ಅವಶ್ಯಕತೆಯೂ ಇರಲಿಲ್ಲ. ಜೊತೆಗೆ ಶೇಕಡಾ 25 ರ ಹಿಂದುಳಿದ ವರ್ಗಗಳ ಮೀಸಲಾತಿ, ಶಿಕ್ಷಣ ಖಾಸಗೀಕರಣದ ಸ್ಪಷ್ಟ ನಿದರ್ಶನವಾಗಿದೆ. ಈ ಮೀಸಲಾತಿಯೇ ಕೆಲವೇ ವರ್ಷಗಳಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿ ಶಾಲೆಗಳು ಮುಚ್ಚಲ್ಪಟ್ಟರೆ, ಇನ್ನೂ ಶಾಲೆಯಿಂದ ಹೊರಗುಳಿದ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಕೊಡುವವರಾರು? ಲಾಭಕ್ಕಾಗಿ ಶಾಲೆಯೆಂಬ ಅಂಗಡಿಗಳನ್ನು ತೆರೆದಿರುವ ಖಾಸಗಿಯವರು ಕಾಳಜಿಯಿಂದ ಮಕ್ಕಳನ್ನು ಹುಡುಕಿ ತಂದು ಶಿಕ್ಷಣ ನೀಡುವ ಜವಾಬ್ದಾರಿ ಹೊರುತ್ತಾರೆಯೇ? ಎಲ್ಲವನ್ನೂ ಖಾಸಗಿಯವರೇ ನಿರ್ವಹಿಸುವುದಾದರೆ ಸರ್ಕಾರದ ಹೊಣೆಗಾರಿಕೆಯೇನು? ಜೊತೆಗೆ 6 ವರ್ಷದ School_children_line_Cochin_Kerala_Indiaಒಳಗಿನ ಮಕ್ಕಳ ವಿದ್ಯಾಭ್ಯಾಸದ ಕುರಿತು ಈ ಕಾಯ್ದೆ ಮತ್ತು ಇದುವರೆಗಿನ ಎಲ್ಲಾ ಸರ್ಕಾರಿ ಶೈಕ್ಷಣಿಕ ನೀತಿಗಳೂ ಮೌನವಾಗಿರುವುದು ಏನನ್ನು ಸೂಚಿಸುತ್ತದೆ? ಸರ್ಕಾರದಿಂದ ಈ ವಯಸ್ಸಿನ ಮಕ್ಕಳಿಗೆ ಯಾವುದೇ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದರಿಂದ ಸಹಜವಾಗಿ ಅವರು ಖಾಸಗಿ ವ್ಯವಸ್ಥೆಯ ಮೊರೆ ಹೋಗುತ್ತಾರೆ. ಇಂತಹವರು 6 ವರ್ಷ ತುಂಬಿದ ನಂತರ ಮತ್ತೆ ಸರ್ಕಾರಿ ಶಾಲೆಗಳಿಗೆ ಹಿಂದಿರುಗುತ್ತಾರೆ ಎಂಬ ನಿರೀಕ್ಷೆಯೇ ಮೂರ್ಖತನದ್ದಾಗುತ್ತದೆ. ಖಾಸಗಿಗೆ ಕಡಿವಾಣ ಸಾಧ್ಯವಿಲ್ಲವೆಂದಾದರೆ ಶಿಕ್ಷಣ ರಾಷ್ಟ್ರೀಕರಣವೊಂದೇ ಅಂತಿಮ ಮದ್ದೇನೋ ಎನಿಸುತ್ತದೆ. ಈ ಶಿಕ್ಷಣ ಹಕ್ಕು ಕಾಯ್ದೆಗೇ ನೆರೆಹೊರೆ ತತ್ವವನ್ನು ಮೂಲವಾಗಿಟ್ಟುಕೊಂಡು ಖಾಸಗಿ ಹಾಗೂ ಸರ್ಕಾರಿ ಶಾಲೆಗಳೆರಡಕ್ಕೂ ಅನ್ವಯಿಸುವಂತೆ ಸಮಾನ ಶಾಲಾ ವ್ಯವಸ್ಥೆ, ಸಮಾನ ಪಠ್ಯ, ಸಮಾನ ಮೂಲಭೂತ ಸೌಲಭ್ಯಗಳಿರುವ, ಆಯಾ ರಾಜ್ಯಗಳ ಮಾತೃಭಾಷೆಯನ್ನು ಪ್ರಾಥಮಿಕ ಹಂತದವರೆಗಾದರೂ ಶಿಕ್ಷಣ ಮಾಧ್ಯಮವಾಗಿಸಿ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಕಲಿಸುವ ಸಮಾನ ಶಿಕ್ಷಣವನ್ನು ಪ್ರತಿಪಾದಿಸುವ ತಿದ್ದುಪಡಿ ತಂದರೆ ಮಾತ್ರ ಏನಾದರೂ ಬೇರುಮಟ್ಟದ ಗುಣಾತ್ಮಕ ಬದಲಾವಣೆಗಳಾಗಬಹುದೆನಿಸುತ್ತದೆ.

“ಮಾತೃಭಾಷೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಒಳಗೊಂಡೇ ಸಮಾನ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಖಾಸಗಿ ಶಿಕ್ಷಣ ವ್ಯವಸ್ಥೆ ತಾರತಮ್ಯಕ್ಕಾಗಿಯಲ್ಲದೇ, ಲಾಭಕ್ಕಾಗಿಯಲ್ಲದೇ ಸರ್ಕಾರದ ನಿಯೋಜಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ರಾಜ್ಯ ಸರ್ಕಾರದ ಆದೇಶ-ಶಿಸ್ತು ಮತ್ತು ರಾಷ್ಟ್ರೀಯ ಶೈಕ್ಷಣಿಕ ನೀತಿಯಡಿಯೇ ಕೆಲಸ ಮಾಡಬೇಕು. ೬ವರ್ಷಕ್ಕೆ ಮೊದಲಿನಿಂದ ಹಿಡಿದು ೧೪ವರ್ಷದವರೆಗೆ ಸಂಪೂರ್ಣ ಉಚಿತ ಶಿಕ್ಷಣ, ಸರ್ಕಾರ ನೀಡಬೇಕು ಮತ್ತು ವಿಕೇಂದ್ರಿತ ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವನ್ನು ಸರ್ಕಾರವೇ ನೀಡಬೇಕು. ಸಂವಿಧಾನದ ಸಮಾನತೆಯ ತತ್ವಕ್ಕೆ ಬದ್ಧವಾಗಿ ಶಿಕ್ಷಣ ವ್ಯವಸ್ಥೆಯಿರಬೇಕು. ಸಮಾನ ಶಿಕ್ಷಣವನ್ನು ಏಕರೂಪ ಶಿಕ್ಷಣವೆಂದು ಗ್ರಹಿಸಿದ್ದರಿಂದ ಇದರ government_schoolಬಗ್ಗೆ ದ್ವಂದ್ವವೇರ್ಪಟ್ಟಿದೆ. ಅದನ್ನು ಸರಿಯಾದ ಕ್ರಮದಲ್ಲಿ ತಿಳಿಹೇಳಿ ಜನಾಭಿಪ್ರಾಯ ಮೂಡಿಸಬೇಕು,” ಎನ್ನುತ್ತಾರೆ ಖ್ಯಾತ ಶಿಕ್ಷಣತಜ್ಞ ಅನಿಲ್ ಸದ್ಗೋಪಾಲ್.

ಇತ್ತೀಚೆಗೆ ಕರ್ನಾಟಕ ಸರ್ಕಾರ ನೆರೆಹೊರೆ ಶಾಲಾ ನಿಯಮವನ್ನು ಅನುಸರಿಸಿ ಪಬ್ಲಿಕ್ ಶಾಲೆಗಳನ್ನು ಸದ್ಯಕ್ಕೆ ಪ್ರತಿ ಜಿಲ್ಲೆಯ ಒಂದು ಗ್ರಾಮಪಂಚಾಯಿತಿಯಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸುವ ಪ್ರಸ್ತಾಪ ಮಾಡಿದೆ. ಸುತ್ತಲಿನ ಸರ್ಕಾರಿ ಶಾಲೆಗಳನ್ನು ಇದರಲ್ಲಿ ವಿಲೀನಗೊಳಿಸುವ ಉದ್ದೇಶವಿದೆ. ಆದರೆ ಈ ನೆರೆಹೊರೆ ನಿಯಮ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯಿಸಿ ಖಾಸಗಿ ಶಾಲೆಗಳನ್ನು ಇದರಿಂದ ಹೊರಗಿಟ್ಟರೆ ಅದು ಅಸಮಾನತೆಯನ್ನು ಮತ್ತಷ್ಟು ವೃದ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ವೈವಿಧ್ಯತೆಯ ಭಾರತ ದೇಶಕ್ಕೆ ಐಕ್ಯತೆಯನ್ನು ಕಲಿಸಲಾಗುವುದು ಸಮಾನ ಶಿಕ್ಷಣ ವ್ಯವಸ್ಥೆಯಿಂದ. ಇದನ್ನು ಗುರಿಯೆಡೆಗಿನ ಪಯಣವಾಗಿಸಿ, ಹಂತ ಹಂತವಾಗಿ ಸಮಾನತೆಯನ್ನು ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲು ಸರ್ಕಾರ ಗಟ್ಟಿ ಮನಸು ಮಾಡಿದರೆ ಮಾತ್ರ ಈ ಆಶಾವಾದ ಉಳಿದೀತೇನೋ?