Category Archives: ಹುಲಿಕಲ್ ನಟರಾಜ್

ಕನ್ನಡ ಶಾಲೆಗಳಿಗೆ ಬಿತ್ತು ಬೀಗ – ಕನ್ನಡ ಭಾಷೆಗೆ ಬಂತು ಕುತ್ತು

 -ಹುಲಿಕಲ್ ನಟರಾಜ್

“ನಾನು ಕೂಲಿ ಕೆಲಸ ಮಾಡ್ಕೊಂಡು ಜೀವ್ನ ಮಾಡ್ದೆ.  ಕೂಲಿ ಮಾಡಿದ್ರೂ ಪರವಾಗಿಲ್ಲ, ನನ್ನ ದುಡ್ಡೆಲ್ಲಾ ಅವ್ನಿಗೆ ಓದಕ್ಕೆ ಸುರುದ್ರೂ ಪರವಾಗಿಲ್ಲ ನನ್ನ ಮಗ ಇಂಗ್ಲಿಷ್ ಶಾಲೆನಲ್ಲೇ ಓದ್ಬೇಕ್,”

“ನೋಡ್ರಿ ಪಕ್ಕದ ಮನೆ ಹುಡ್ಗಿ ಇಂಗ್ಲಿಷ್ನಲ್ಲಿ ಹ್ಯಾಂಗ್ ಮಾತ್ನಾಡ್ತಾಳೆ. ನನ್ನ ಮಗಳೂ ಅವಳ್ಗೆ ಎದೆ ಸೀಳಿದ್ರೂ ಒಂದಕ್ಷರ ಬರಲ್ಲ. ಅವ್ಳ್ನ ಇಂಗ್ಲಿಷ್ ಶಾಲ್ಗೆ  ಸೇರ್ಸಿ ಅಂತಾ ಬಡ್ಕೊಂಡೆ.  ನನ್ನ ಮಾತು ಯಾರೂ ಕೇಳ್ಲಿಲ್ಲ.”

ಇದು ಇಂದಿನ ಗಂಡ ಹೆಂಡತಿ ನಡುವಿನ ಮಾತು.

ಇಂಗ್ಲಿಷ್ ಶಾಲೇಲಿ ಓದಿದ್ರೆ ಮಹಾ ಬುದ್ದಿವಂತ. ಕನ್ನಡ ಶಾಲೇಲಿ ಓದಿದ್ರೆ ಬಹಳ ದಡ್ಡ ಎಂಬ ಮಾತು ಎಲ್ಲರ ಮನದಲ್ಲಿ ಹಾಸುಹೊಕ್ಕಾಗಿದೆ.

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವ ನುಡಿ ಬಹಳ ಹಿಂದಿನದು. ಈಗ ಇಂಗ್ಲಿಷ್‌ಗಾಗಿ ಮಕ್ಕಳನ್ನ ಇಂಗ್ಲಿಷ್ ಶಾಲೆಗೆ ಸೇರಿಸಿ ನಿಮ್ಮ ಮಗ-ಮಗಳು ಕಲ್ಪವೃಕ್ಷವಾಗುತ್ತಾರೆ ಎಂಬ ಮಾತು ಜನಜನಿತ.

ಕನ್ನಡ ಬೆಳೆಸಬೇಕು, ರಕ್ಷಣೆ ಮಾಡಬೇಕು, ಕನ್ನಡವೇ ನನ್ನ ಉಸಿರು, ಕನ್ನಡ ತಾಯಿ ಸೇವೆಯೇ ನಮ್ಮ ಸಂಘದ ಧ್ಯೇಯ, ಕನ್ನಡ ಮಾತನಾಡುವವರಿಗೆ ಕೆಲಸ ಕೊಡಬೇಕು ಎಲ್ಲೆಲ್ಲೂ ಕನ್ನಡ ಇರ್ಬೇಕು, ಕನ್ನಡಕ್ಕಾಗಿ ನನ್ನ ಪ್ರಾಣ ಬೇಕಾದ್ರೆ ಬಿಡುತ್ತೀವಿ ಎಂದೆಲ್ಲ ಕನ್ನಡ ಭಾಷೆ ಬಗ್ಗೆ ಉಗ್ರ ಹೇಳಿಕೆ ನೀಡುವವರೂ ತಮ್ಮ ಮಕ್ಕಳನ್ನ ಇಂದು ಇಂಗ್ಲಿಷ್ ಶಾಲೆಗೆ  ಸೇರಿಸಿದ್ದಾರೆ. ಇನ್ನು  ಅಂತಹವರು ಕನ್ನಡದ ಶಾಲೆಗಳ ಬಗ್ಗೆ ಮಾತನಾಡಲು ಸಾಧ್ಯನಾ?

ಪ್ರೀತಿ ಸಿಗೋದು ಮಾತೃ ಭಾಷೇಲಿ

ಆದುನಿಕ ಜಗತ್ತಿನ ಜಾಗತೀಕರಣದ ಯುಗದಲ್ಲಿ ಇಂಗ್ಲಿಷ್ ಭಾಷೆಯ ವ್ಯಾಮೋಹದ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳು  ಅಲ್ಪ ಸ್ವಲ್ಪ  ತಮ್ಮ ಅಸ್ತಿತ್ವ ಉಳಿಸಿಕೊಂಡು ಬಂದರೂ ಇನ್ನು ಕೆಲವೇ ದಿನಗಳಲ್ಲಿ ಮುಚ್ಚುವ ಕಾಲ ದೂರವಿಲ್ಲ. ಕನ್ನಡ ಶಾಲೆಯಲ್ಲಿ ಓದಿದ ಜನ ಐಎಎಸ್ ಐಪಿಎಸ್ ಉತ್ತೀರ್ಣರಾಗಿ ಉನ್ನತ ಅಧಿಕಾರಿಗಳಾಗಿದ್ದಾರೆ. ನೀವು ಯಾವುದೇ ಮಾತೃ ಭಾಷೆಯ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಸಂಘಟನಾ ಪ್ರವೃತ್ತಿ, ಹಂಚಿ ತಿನ್ನುವ ಮನೋಭಾವ, ಮನುಷ್ಯ ಮನುಷ್ಯನಾಗಿ ಬಾಳುವ ಮನೋವೃತ್ತಿ ಆ ಮಕ್ಕಳಲ್ಲಿ ಇರುತ್ತದೆ. ಏಕೆಂದರೆ ಬಡತನದ ಬೇಗೆಯಲ್ಲಿ  ಕಷ್ಟವನ್ನು ಸಹಿಸಿಕೊಂಡು ತಮ್ಮ ಜೊತೆ ಇರುವುದನ್ನೇ ಹಂಚಿತಿನ್ನುವ ಗುಣವನ್ನು ತಮ್ಮ ಭಾಷೆ ಕಲಿಸುತ್ತದೆ. ಅಲ್ಲದೆ ಕಷ್ಟಗಳ ಪರಿಪಾಠ ಬಳುವಳಿಯಾಗಿ ಬಂದಿರುವುದರಿಂದ  ಕಷ್ಟಸುಖಗಳ ನಡುವೆ ತಂದೆ ತಾಯಿ ಹೊಡೆದಾಟದ ನಡುವೆಯೂ ಅವರ ಪ್ರೀತಿ ಒಡನಾಟದ  ಜೀವನ ಮಕ್ಕಳಿಗೂ ಬಳುವಳಿಯಾಗಿರುತ್ತದೆ.

ಕನ್ನಡ ಶಾಲೆಗಳು ಏಕೆ ಮುಚ್ಚುತ್ತಿವೆ ?

ಕನ್ನಡ ಶಾಲೆಯಲ್ಲಿ ವೃತ್ತಿ ಮಾಡುತ್ತಿರುವ ಶಿಕ್ಷಕನಿಂದ ಹಿಡಿದೂ ಕನ್ನಡ ಶಾಲೆಗಳು ಉಳಿಯಬೇಕು ಎಂದು ಆಂದೋಲನ ಮಾಡುತ್ತಿರುವ ಸಂಘಟನೆಗಳವರೆಗೆ ಯಾರೂ ತಮ್ಮ ಮಕ್ಕಳನ್ನು ಕನ್ನಡ  ಶಾಲೆಗೆ ಸೇರಿಸಿಲ್ಲ  ಕನ್ನಡ ಶಾಲೆಯಲ್ಲಿ ಬೋದಿಸುತ್ತಿರುವ  ಶಿಕ್ಷಕನಿಗೆ ವೃತ್ತಿಯಲ್ಲಿ ಬದ್ದತೆ ,ಪ್ರಾಮಾಣಿಕತೆ ಅರ್ಪಣಾ ಮನೋಭಾವ ಇದ್ದರೂ  ತನ್ನ ಮಗುವನ್ನು ಕನ್ನಡ ಶಾಲೆಗೆ  ಸೇರಿಸದೆ ಬೇರೆ ಮಗುವನ್ನು ಸೇರಿಸಿ ಎಂದು ಕೇಳುವ ನೈತಿಕ ಸ್ಥೆರ್ಯ ಎಲ್ಲಿಂದ ಬರಬೇಕು, ಕನ್ನಡ ಶಾಲೆಯಿಂದ ಲಕ್ಷಾಂತರ ಜೀವನ ನಡೆಸುತ್ತಿರುವ ಅಧಿಕಾರಿಗಳವರೆವಿಗೂ ತಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಸೇರಬೇಕು ಎನ್ನುವ ಗುಣ ಇರುವುದರಿಂದಲೇ ಸದರಿ ಸಾಲಿನಲ್ಲಿ 1250  ಕನ್ನಡ ಶಾಲೆಗಳು ಮುಚ್ಚುತ್ತಿವೆ.

ಶಾಲೆಯ ಹೊರಗೆ ಹೆಚ್ಚು ಕೆಲಸ

ಸರ್ಕಾರಿ ಶಿಕ್ಷಕರು ಶಾಲೆಯಲ್ಲದೆ  ಜನಗಣತಿಯಿಂದ ಹಿಡಿದು ದನಗಣತಿವರೆಗೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.ಇದರ ಮದ್ಯೆ ತಮ್ಮ ಸ್ವಂತ ಕೆಲಸಕ್ಕೆ ಹೆಚ್ಚು ಹೊತ್ತು ಕೊಡುತ್ತಾರೆ .ಖಾಸಗಿ ಶಾಲೆಯ ಶಿಕ್ಷಕರ ಸೇವೆ  ಪಾಠಕ್ಕಾಗಿ ಹೆಚ್ಚು ಕಾಲ ಮೀಸಲಿಡಬೇಕಾಗುತ್ತದೆ, ಮಕ್ಕಳು ರ್‍ಯಾಂಕ್ ಬಂದರೆ ಅವರಿಗೆ ಶಾಲೆಯಲ್ಲಿ ವೇತನ ಇಲ್ಲದಿದ್ದರೆ ಶಾಲೆಯಿಂದ ಗೇಟ್ ಪಾಸ್. ಖಾಸಗಿ ಶಾಲೆಯಲ್ಲಿ ತರಬೇತಿ ಪಡೆಯದವರೇ ಹೆಚ್ಚು . ಸರ್ಕಾರಿ ಶಾಲೆಗೆ ಆಯ್ಕೆಯಾಗಿ ಉಳಿದ ಶಿಕ್ಷಕರು ಖಾಸಗಿ ಶಾಲೆಯಲ್ಲಿರುತ್ತಾರೆ . ರ್‍ಯಾಂಕ್ ಪಡೆದ ಬುದ್ದಿವಂತ ತರಬೇತಿ ಪಡೆದ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿಯೇ ಹೆಚ್ಚು . ಆದರೆ ಫಲಿತಾಂಶ ಖಾಸಗಿ ಶಾಲೆಯಲ್ಲಿ 100 ಸರ್ಕಾರಿ ಶಾಲೆಯಲ್ಲಿ ಶೂನ್ಯ. ಇಂದು ಜನ ಸಾಮಾನ್ಯನಿಗೂ ಸರ್ಕಾರಿ ಶಾಲೆ ಮೇಲೆ ನಂಬಿಕೆ ಇಲ್ಲದ್ದು. ಅಲ್ಲದೆ ಇಂದು ಖಾಸಗಿ ಶಾಲೆಯ ಟ್ರಂಡ್ ಬಹಳವಾಗಿರುವುದು.

  • ಸರ್ಕಾರ  ಶಾಲೆಗಳಿಗೆ ಭೌತಿಕ ಸವಲತ್ತು ನೀಡಿದರೆ ಸಾಲದು ಶಾಲೆಯಲ್ಲಿರುವ ಶಿಕ್ಷಕರಿಗೆ  ಶಾಲೆಯ ಉಳಸುವಿಕೆ ಹಾಗೂ ಕರ್ತವ್ಯದಲ್ಲಿ ಭದ್ದತೆ ಬಗ್ಗೆ ತರಬೇತಿ ನೀಡಬೇಕು.
  • ತಾನು ಕಲಿಸುವ ಮತ್ತು ವೇತನ ಪಡೆಯುತ್ತಿರುವ  ಶಾಲೆಯ ಅಸ್ಥಿತ್ವದ ಬಗ್ಗೆ ಶಿಕ್ಷಕರು ಚಿಂತಿಸ ಬೇಕು.
  • ಸರ್ಕಾರ ಕೇವಲ ರ್‍ಯಾಂಕ್ ನೀಡುವ ಶಾಲೆಗಳಿಗಿಂತ ಬದುಕು ರೂಪಿಸುವ ಶಾಲೆಗಳಿಗೆ ಒತ್ತು  ನೀಡಬೇಕು.
  • ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಕನ್ನಡ  ಶಾಲೆಗಳಿಗೆ ಹೆಚ್ಚು ಅನುದಾನ ನೀಡಬೇಕು.
  • ಪೋಷಕರು ರ್‍ಯಾಂಕ್‌ಗೆ ಮಾರು ಹೋಗದೆ ಮಗುವಿಗೆ  ಪ್ರೀತಿ ಕೊಟ್ಟು ಪ್ರೀತಿ ಪಡೆಯುತ್ತಾ ಮಾನವೀಯ ಸಂಬಂಧಗಳ ಉಳಿವಿಗೆ ಗಮನ ನೀಡಬೇಕು.
  • ಶಿಕ್ಷಕರು  ವೇತನ ವಿಳಂಬವಾದರೆ  ಸಂಘಟನೆ  ಮಾಡಿಕೊಂಡು ಹೇಗೆ ತಮ್ಮ ಸವಲತ್ತು ಪಡೆಯುತ್ತಾರೋ ಹಾಗೇ ಶಾಲೆ ಉಳಿಸಿ ಅಭಿವೃದ್ದಿಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಬೇಕು.
  • ಶಿಕ್ಷಕರು ಮತ್ತು  ಜನಪ್ರತಿನಿದಿಗಳು, ಜನಸಾಮಾನ್ಯರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು  ಕನ್ನಡ ಶಾಲೆಗೆ ಸೇರಿಸಬೇಕು,
  • ಶಿಕ್ಷಕರು  ಕಲಿಕೆಯಲ್ಲಿ ಸದಾ ವಿದ್ಯಾರ್ಥಿಯಾಗಿ ಹೊಸತನ್ನು ಅಳವಡಿಸಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮತ್ತು ಸಂಶೋಧನೆ ಮಾಡುತ್ತಾ ಮಕ್ಕಳಿಗೆ ಹೊಸತನ್ನು ಕಲಿಸಿದರೆ ಶಾಲೆ ಉಳಿಯುತ್ತವೆ.

ಗೊತ್ತಿಲ್ಲದ ಶಿಕ್ಷಣ ಕೊನೆಗೆ ಪರದಾಟ…

ಕೆಲವು ಸಂಗತಿಗಳು ನಮ್ಮ ಸುತ್ತಲೇ ನಡೆದರೂ ಅವುಗಳ ಮೇಲೆ ನಮಗೆ ನಿಯಂತ್ರಣವಿರುವುದಿಲ್ಲ. ಆ ಹುಡುಗಿಯ ಹೆಸರು ಪುಷ್ಪ. ಹುಡುಗಿ ಹತ್ತನೆಯ ತರಗತಿ ಮುಗಿಸಿದ ನಂತರ ಕಾಲೇಜಿಗೆ ಸೇರಿಸದೆ ಆಕೆಗೆ ಮದುವೆ ಮಾಡಲು ನಿರ್ಧರಿಸಿದರು.

ಆಕೆಯ ಪೋಷಕರು ಹಳ್ಳಿಯಲ್ಲಿದ್ದರೂ ನನಗೆ ಗೊತ್ತಿದ್ದರಿಂದ ನಾನು ಅವರಿಗೆ ಕಿರಿಯ ವಯಸ್ಸಿನಲ್ಲಿ ಮದುವೆ ಮಾಡದಂತೆ ಎಚ್ಚರಿಸಿದೆ. ಆದರೆ ಅವರು ನನ್ನ ಎಚ್ಚರಿಕೆಯನ್ನೂ ಧಿಕ್ಕರಿಸಿ ಆಕೆಯನ್ನು ವಿವಾಹ ಬಂಧನಕ್ಕೆ ಒಳಪಡಿಸಿದರು.

ಕೆಲವು ದಿನಗಳ ನಂತರ ಆ ಹುಡುಗಿಯನ್ನು ನೋಡಲು ಹೊರಟೆ. ಹುಡುಗಿಯನ್ನು ಒಂದು ದೇವಸ್ಥಾನದಲ್ಲಿ ಇರಿಸಿದ್ದರು. ಕುಟುಂಬದ ಎಲ್ಲರ ಮುಖದಲ್ಲೂ ಒಂದು ಬಗೆಯ ಭಯವಿತ್ತು. ಆ ಹುಡುಗಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಹುಡುಗಿ ತುಂಬಾ ಸುಸ್ತಾದಂತೆ ಕಂಡುಬಂದಳು. ಆಕೆಯ ಪೋಷಕರು, `ರಾತ್ರಿ ಆದರೆ ಸಾಕು. ಭಯಪಡುತ್ತಾಳೆ. ದೀಪ ಆರಿಸಿದರೆ ಕಿರುಚಾಡುತ್ತಾಳೆ. ಏನೇನೋ ವಿಚಿತ್ರವಾಗಿ ಆಡುತ್ತಿದ್ದಾಳೆ,’ ಎಂದರು.

ಆರೋಗ್ಯಪೂರ್ಣವಾಗಿ ನಳನಳಿಸುತ್ತಿದ್ದ ಹುಡುಗಿ ಹೀಗಾಗಿದ್ದು ನೋಡಿ ನನಗೆ ಬಹಳ ದುಃಖವಾಯಿತು.

ಆ ಹುಡುಗಿಯ ಗಂಡನನ್ನು ಮಾತನಾಡಿಸಿದೆ. “ಯಾಕಪ್ಪಾ ನಿನ್ನ ಹೆಂಡತಿ ಭಯಪಡುತ್ತಾಳಂತೆ. ಅವಳಿಗೇನಾದರೂ ಹೊಡೆಯೋದು, ಬಡಿಯೋದು ಮಾಡಿದೆಯೋ ಹೇಗೆ?” ಎಂದೆ.

ಅದಕ್ಕೆ ಆತ, “ಇಲ್ಲ ಸರ್, ಅವಳೆಂದರೆ ನನಗೆ ಇಷ್ಟ. ನನ್ನ, ಅವಳ ಮೊದಲ ರಾತ್ರಿಯಾದ ನಂತರ ಹೀಗೆ ಭಯಪಡಲು ಪ್ರಾರಂಭಿಸಿದ್ದಾಳೆ. ಮೊದ ಮೊದಲು ಸುಮ್ಮನಿದ್ದಳು. ನಂತರ ಹೆದರೋಕೆ ಪ್ರಾರಂಭಿಸಿದಳು. ಹೀಗಾಗಿ ಅವಳ ತಂದೆ ತಾಯಿ ಮನೆಗೆ ಕರೆದುಕೊಂಡು ಹೋದರು,” ಎಂದ.

ನನಗೆ ಸಮಸ್ಯೆ ಸ್ಪಷ್ಟವಾಯಿತು. ಇದು ಲೈಂಗಿಕತೆಯ ತಿಳಿವಳಿಕೆ ಇಲ್ಲದಿದ್ದರಿಂದ ಉಂಟಾದ ಸಮಸ್ಯೆ.

ಆ ಹುಡುಗಿಯನ್ನು ಸ್ತ್ರೀವೈದ್ಯರಲ್ಲಿಗೆ ಕರೆದೊಯ್ದು ಲೈಂಗಿಕತೆಯ ಪೂರ್ಣ ಮಾಹಿತಿಯನ್ನು ವೈದ್ಯರ ಮೂಲಕ ಕೊಟ್ಟ ನಂತರ ಅವರು ಸುಖ ಸಂಸಾರ ನಡೆಸುತ್ತಿದ್ದಾರೆ.

ಲೈಂಗಿಕತೆಯ ಶಿಕ್ಷಣ ನೀಡಬೇಕು ಎನ್ನುವ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತಿರುತ್ತದೆ. ಪುರುಷರಿಗೂ, ಮಹಿಳೆಯರಿಗೂ ವಿವಾಹದ ನಂತರ ತಮ್ಮ ಜವಾಬ್ದಾರಿಗಳೇನು ಎಂಬ ತಿಳಿವಳಿಕೆ ಇಲ್ಲದಿದ್ದಲ್ಲಿ ಸಂಕಷ್ಟ ಖಂಡಿತ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ಅಜ್ಞಾನ ತಂದಿತ್ತ ಸಂಕಷ್ಟ!

ಚಿತ್ರದುರ್ಗದಲ್ಲಿರುವ ಮುರುಘಾ ಮಠದಲ್ಲಿ “ಶರಣ ಸಂಸ್ಕೃತಿ” ವೈಚಾರಿಕ ಪ್ರಜ್ಞೆಯ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಪ್ರತಿ ವರ್ಷ ಸಂಜೆ ಈ ಕಾರ್ಯಕ್ರಮ ಶುರುವಾಗಿ ಮಧ್ಯರಾತ್ರಿವರೆಗೂ ನಡೆಯುತ್ತಿತ್ತು. ಆ ದಿನ ಈ ಕಾರ್ಯಕ್ರಮಕ್ಕೆ ಸಾಕಷ್ಟು ಜನ ಆಗಮಿಸಿದ್ದರು. ನನ್ನ ಭಾಷಣವನ್ನು ಬಹಳ ಮಂದಿ ಮೆಚ್ಚಿಕೊಂಡರು. ನನ್ನ ಕೋಣೆಯ ಪಕ್ಕದಲ್ಲೇ ಇದ್ದವರು ತಮ್ಮನ್ನು ಪರಿಚಯಿಸಿಕೊಂಡರು. ನಂತರ ಅವರನ್ನು ಕಾಡುತ್ತಿದ್ದ ಸಮಸ್ಯೆಯೊಂದನ್ನು ಬಿಚ್ಚಿಟ್ಟರು.

“ಸರ್, ನಮ್ಮ ಮಗನಿಗೆ ಸುಮಾರು ಐದು ತಿಂಗಳಿಂದ ಭಾನಾಮತಿ ಹಿಡಿದಿದೆ. ಇದರಿಂದ ನಾವು ಇಲ್ಲಿ ಒಂದು ತಿಂಗಳಿಂದ ಉಳಿದುಕೊಂಡಿದ್ದೀವಿ,” ಎಂದರು. ಭಾನಾಮತಿ ಎಂಬ ಸಮಸ್ಯೆಯಿಂದ ಬಳಲುತ್ತಿರುವವರು ನಾನು ಕಂಡಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪುರುಷರಲ್ಲಿ ಕಡಿಮೆಯೇ. ಆದರೆ ಇಲ್ಲಿ ಮೂವತ್ತು ವರ್ಷದ ಆರೋಗ್ಯಪೂರ್ಣ ಯುವಕ ಭಾನಾಮತಿಯ ಸಂಕಷ್ಟಕ್ಕೆ ಸಿಲುಕಿಕೊಂಡಿರುವುದು ನನಗೆ ಬಹಳ ಬೇಸರ ಮೂಡಿಸಿತು. ಹಾಗೆಯೇ ಅವನ ವಿವರಗಳನ್ನು ಕೇಳುತ್ತಾ ಹೊರಟಂತೆ ಇದೊಂದು ವಿಸ್ಮಯಕಾರಕ ಘಟನೆ ಎನ್ನಿಸಿತು.

ದಷ್ಟಪುಷ್ಟವಾದ, ಬಲಿಷ್ಟ ಮೈಕಟ್ಟು ಹೊಂದಿದ ಈ ಯುವಕ ವಿದ್ಯಾವಂತ ಕೂಡ. ಆರು ತಿಂಗಳ ಹಿಂದೆ ಯುವತಿಯೊಡನೆ ವಿವಾಹವೂ ಆಯಿತು. ಮದುವೆಯಾಗುವವರೆಗೂ ಎಲ್ಲವೂ ಚೆನ್ನಾಗಿತ್ತು. ಮದುವೆಯಾಗಿ ಮೊದಲ ರಾತ್ರಿ ಪ್ರಾರಂಭವಾಯಿತು ನೋಡಿ ಅಲ್ಲಿಂದ ಹುಚ್ಚನಂತೆ ಆಡಲಾರಂಭಿಸಿದ. ಹೆಂಡತಿಯ ಮುಖ ಕಂಡರೆ ದೂರ ಓಡುತ್ತಿದ್ದ. ಆಕೆಯನ್ನು ನೋಡಿದರೆ ಅವನ ಮೈ ಬೆವರಿ ತೊಪ್ಪೆಯಾಗುತ್ತಿತ್ತು. ಇದನ್ನು ನೋಡಿ ಆಕೆ ತನ್ನ ತಂದೆ ತಾಯಿಗೆ ತಿಳಿಸಿದಳು. ಅವರು ಮೊದಲಿಗೆ ಅರಿಶಿನದ ಮೈನಲ್ಲಿ ಹೊರಗಡೆ ಓಡಾಡಿ ಗಾಳಿ ಮೆಟ್ಟಿಕೊಂಡಿರಬಹುದು ಎಂದುಕೊಂಡರು. ಸರಿಯಾಗುತ್ತದೆ ಎನ್ನುವ ಭರವಸೆಯನ್ನೂ ತುಂಬಿದರು.

ನಂತರ ಯಥಾಪ್ರಕಾರ ಎಲ್ಲ ದೇವರುಗಳಿಗೂ ಹರಕೆ ಹೊತ್ತು, ಮಂತ್ರ, ತಾಯಿತ ಕಟ್ಟಿಸಿದರೂ ಪ್ರಯೋಜನವಾಗಲಿಲ್ಲ. ವೈದ್ಯರ ಸಲಹೆ ಪಡೆದರೂ ಅಷ್ಟೇನೂ ಲಾಭವಾಗಲಿಲ್ಲ. ಎಲ್ಲಿ ಹೋದರೂ ಆತನಲ್ಲಿ ದೋಷ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಆತನ ಕಿರುಚಾಟವಂತೂ ನಿಲ್ಲಲಿಲ್ಲ. ರಾತ್ರಿಯಾದರೆ ವಿಚಿತ್ರ ಆಟ, ಬೆಳಿಗ್ಗೆ ಮಂಕು ಕವಿದಂತೆ ನೋಟ.

ಮನೆದೇವರ ಬಳಿಗೆ ಹೋಗಿಬನ್ನಿ ಎಂದರು. ಅದನ್ನೂ ಮಾಡಿದೆವು. ಆದರೆ ಅದೂ ಅಲ್ಪಕಾಲೀನ. ಅಲ್ಲಿದ್ದಷ್ಟು ಕಾಲ ಚೆನ್ನಾಗಿದ್ದ. ಇಲ್ಲಿ ಬಂದ ನಂತರ ಅದೇ ರಾಗ ಅದೇ ಹಾಡು!

ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದೆ ಈ ಮಠದಲ್ಲಿದ್ದೇವೆ ಎಂದರು. ನಾನು ಅವರ ವಿಳಾಸ, ಮೊಬೈಲ್ ಸಂಖ್ಯೆ ಪಡೆದುಕೊಂಡು ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿ ಬೀಳ್ಕೊಂಡೆ.

ನಂತರ ಆ ನವದಂಪತಿಗಳನ್ನು ಒಂದು ಬಾರಿ ನನ್ನ “ಪವಾಡ ರಹಸ್ಯ ಬಯಲು” ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಇಬ್ಬರೂ ಜೊತೆಯಲ್ಲಿದ್ದರು.

ಕಾರ್ಯಕ್ರಮ ಮುಗಿದ ನಂತರ ದಂಪತಿಗಳು ನಮ್ಮ ಮನೆಯಲ್ಲೇ ಉಳಿದರು. ಮೊದಲಿಗೆ ಆತನ ಪತ್ನಿಯನ್ನು ಕೌನ್ಸೆಲ್ಲಿಂಗ್ ಮಾಡಲಾರಂಭಿಸಿದೆ. ನಿಮ್ಮ ನಡುವೆ ಏನಾದರೂ ಭಿನ್ನಾಭಿಪ್ರಾಯ ಇದೆಯೇ? ಅಥವಾ ಲೈಂಗಿಕ ಅನುಭವ ಪಡೆದುಕೊಳ್ಳುವ ವಿಷಯದಲ್ಲಿ ಪರಸ್ಪರ ಅರಿವಿನ ಕೊರತೆಯುಂಟಾಯಿತೇ? ಇತ್ಯಾದಿ ವಿಷಯಗಳನ್ನು ಕೇಳುತ್ತಾ ಹೋದೆ.

ಆಕೆ, “ಸರ್ ಅವರು ನನ್ನನ್ನು ಮುಟ್ಟೇ ಇಲ್ಲ. ನನ್ನ ಮುಖ ನೋಡಿದರೆ ಹೆದರಿಕೊಳ್ಳುತ್ತಾರೆ. ಅವರ ಮುಖ ಬೆವರುತ್ತದೆ. ಮೊದಲ ದಿನದಿಂದಲೂ ಇದು ನಡೆದಿದೆ. ಅಂದಿನಿಂದ ಅವರ ಜೊತೆ ಮಲಗೋದೇ ಬಿಟ್ಟಿದ್ದೇನೆ. ಅವರು ಸುಖವಾಗಿರಲಿ ಎನ್ನೋದೇ ನನ್ನ ಆಸೆ,” ಎನ್ನುತ್ತಾ ಕಣ್ಣೀರುಗರೆದಳು.

ನಂತರ ಆತನಲ್ಲಿ ವಿಷಯ ಪ್ರಸ್ತಾಪಿಸಿದೆ. “ಯಾಕಪ್ಪ ನಿನ್ನ ಹೆಂಡತಿಯ ಹತ್ತಿರ ಮಲಗಿದರೆ ಹುಚ್ಚನಂತೆ ಆಡ್ತೀಯಾ? ಈ ಮದುವೆ ನಿನಗೆ ಇಷ್ಟವಿರಲಿಲ್ಲವಾ? ಅಥವಾ ಆ ಹುಡುಗಿ ಇಷ್ಟ ಆಗಿಲ್ವಾ?…” ಪ್ರಶ್ನಿಸಿದೆ.

“ಹಾಗೇನೂ ಇಲ್ಲ ಸರ್, ಆಕೆ ಬಹಳ ಒಳ್ಳೆಯವಳು. ಅವಳನ್ನು ನಾನು ತುಂಬಾ ಪ್ರೀತಿಸುತ್ತೇನೆ,” ಎಂದ.

“ಹಾಗಿದ್ದರೆ ನಿಮ್ಮ ನಡುವೆ ಇರುವ ಸಮಸ್ಯೆ ಏನು?” ಎಂದಿದ್ದಕ್ಕೆ ಆತ, “ನನಗೆ ಪುರುಷತ್ವ ಅಂದರೆ ಏನು ಅಂತ ಗೊತ್ತಿಲ್ಲ. ಹೆಂಡತಿಯೊಡನೆ ಏನು ಮಾಡಬೇಕು ಎನ್ನೋದೂ ಗೊತ್ತಿಲ್ಲ. ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಅದರ ಬಗ್ಗೆ ಮಾತನಾಡೋದಕ್ಕೆ ಬಹಳ ಮುಜುಗರ. ಆದ್ದರಿಂದ ಅದನ್ನು ಧೈರ್ಯವಾಗಿ ಹೇಳಲಾಗದೆ ಈ ರೀತಿ ಆಡುತ್ತಿದ್ದೇನೆ,” ಎಂದ.

ಅವರಿಬ್ಬರನ್ನೂ ಕೂಡಲೇ ವೈದ್ಯರ ಬಳಿ ಕರೆದೊಯ್ದು ಈ ಲೈಂಗಿಕತೆಯ ಕುರಿತು ಅವರಿಗೆ ಅರಿವನ್ನು ನೀಡುವಂತೆ ಕೇಳಿದೆ.

ಅವರು ಸೂಕ್ತ ಸಲಹೆ ನೀಡಿ ಅವನ ಹಿಂಜರಿಕೆ ನಿವಾರಣೆಗೆ ಔಷಧವನ್ನೂ ನೀಡಿದರು. ನಂತರ ಆತ ತನ್ನ ಸಾಂಸಾರಿಕ ಜೀವನವನ್ನು ಸುಖವಾಗಿ ನಡೆಸಲು ಆರಂಭಿಸಿದ. ಈಗ ಅವರಿಗೂ ಒಂದು ಮುದ್ದಾದ ಹೆಣ್ಣುಮಗುವಿದೆ. ಸುಖೀ ಕುಟುಂಬವಾಗಿದೆ.

ಆದ್ದರಿಂದ ನಮ್ಮಲ್ಲಿ ಏನಾದರೂ ಸಮಸ್ಯೆ ಇದ್ದಲ್ಲಿ ಅದನ್ನು ನಮ್ಮ ಹತ್ತಿರದವರ ಬಳಿ ಹೇಳಿಕೊಂಡರೆ ಅದಕ್ಕೆ ಪರಿಹಾರ ದೊರೆಯಬಹುದು. ಅದನ್ನು ಹೊರತುಪಡಿಸಿ ಒಳಗೇ ಕೊರಗಿದರೆ ಈ ರೀತಿ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ.

(ಚಿತ್ರಕೃಪೆ: ವಿಕಿಪೀಡಿಯ)

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

ಹಾವಿನ ನಂಜುಂಡ ಈ ನಂಜಪ್ಪ!

ನಾವು ನಮ್ಮ ಅರಿವಿಗೆ ನಿಲುಕದ ಎಷ್ಟೋ ಸಂಗತಿಗಳನ್ನು ದೆವ್ವ ಅಥವಾ ದೇವರಿಗೆ ಆರೋಪಿಸಿ ಅದು ಅಲೌಕಿಕ ಶಕ್ತಿ ಎಂದೇ ಪ್ರತಿಪಾದಿಸುತ್ತೇವೆ. ಇದಕ್ಕೆ ವಿದ್ಯಾವಂತರೂ ಹೊರತಲ್ಲ. ನೀವು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತರಾದರೂ ಕೆಲವು ವಿಸ್ಮಯಕಾರಕ ಸಂಗತಿಗಳ ಹಿಂದಿನ ವಾಸ್ತವಾಂಶ ಗೊತ್ತೇ ಆಗುವುದಿಲ್ಲ. ಅಂತಹುದೊಂದು ಘಟನೆ ಅಲ್ಲಿ ನನಗೆ ಎದುರಾಗಿತ್ತು.

ಆತ ಎಷ್ಟೋ ಮಂದಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು. ಆದರೆ ಅವರಿಗೂ ಪರಿಹರಿಸಲಾಗದಂತಹ ಒಂದು ಕಗ್ಗಂಟಾದ ಸಮಸ್ಯೆ ಅವರ ಬೆನ್ನು ಹತ್ತಿತ್ತು. ಆ ದಿನ ನಾನೊಂದು ಶಾಲೆಯಲ್ಲಿ ಪವಾಡಗಳ ಹಿಂದಿನ ರಹಸ್ಯಗಳನ್ನು ಅನಾವರಣ ಮಾಡುತ್ತಿದ್ದೆ. ಕಾರ್ಯಕ್ರಮ ಮುಗಿದ ಕೂಡಲೇ ಆ ವೈದ್ಯರು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಬಿಚ್ಚಿಟ್ಟರು.

ಅವರ ಬಳಿಗೆ ಒಬ್ಬ ರೋಗಿ ಬಂದಿದ್ದ. ಅವನಿಗೆ ಯಾರೂ ವಿವರಿಸಲಾಗದಂತಹ ವಿಚಿತ್ರ ಕಾಯಿಲೆ! ಭಾನಾಮತಿಯೇ ಇರಬಹುದು! ನಿಜಕ್ಕೂ ನಿಮಗೆ ಇದೊಂದು ಸವಾಲು ಎನ್ನುತ್ತಲೇ ಅವರು ನನ್ನನ್ನು ಕರೆದೊಯ್ದರು. ನನಗಂತೂ ಬಹಳ ಕುತೂಹಲ ಹುಟ್ಟಿತು. ಏನಿರಬಹುದು?

ಮೈಸೂರಿನಿಂದ ನೂರು ಕಿಲೋಮೀಟರ್ ದೂರದಲ್ಲಿ ಪಾಲ್ಕಿ ಎಂಬ ಗ್ರಾಮ. ಅಲ್ಲಿ ನಂಜಪ್ಪ ಎಂಬವನಿಗೇ ಈ ವಿಚಿತ್ರ ಕಾಯಿಲೆ. ಆತ ಕೆಲ ತಿಂಗಳ ಹಿಂದೆ ಗಟ್ಟಿಮುಟ್ಟಾಗಿದ್ದ ಆಳು. ಕೃಷಿ ಕೆಲಸ ಮಾಡುತ್ತಾ ಇದ್ದುದರಲ್ಲಿ ನೆಮ್ಮದಿಯಿಂದಲೇ ಇದ್ದ. ಆದರೆ ಈ ವಿಚಿತ್ರ ಕಾಯಿಲೆ ಹತ್ತಿಕೊಂಡಿದ್ದೇ ನೋಡಿ, ಊಟ ಸೇರದಾಯಿತು. ಸದಾ ಮಂಕು ಬಡಿದ ಹಾಗೆ ಕುಳಿತಿರುತ್ತಾನೆ. ಮನೆಯವರಿಗೆಲ್ಲಾ ಆತಂಕ ಹುಟ್ಟಿಸಿದ್ದಾನೆ. ಕೊನೆಗೆ ಈತ ಬದುಕುವನೋ ಇಲ್ಲವೋ ಎಂಬಂತೆ ಇದ್ದಾನೆ. ಅರವತ್ತು ಕೆಜಿ ತೂಕವಿದ್ದವನು ಈಗ ಮೂವತ್ತಕ್ಕೆ ಇಳಿದಿದ್ದಾನೆ… ಇತ್ಯಾದಿ ವಿವರಗಳನ್ನು ನೀಡಿದರು.

ಅಲ್ಲಿಗೆ ಹೋದೆವು. ನಂಜಪ್ಪ ನಿಸ್ತೇಜವಾಗಿದ್ದ. ಬದುಕಿನ ನಿತ್ಯದ ವ್ಯಾಪಾರಗಳಲ್ಲಿ ಆತನಿಗೆ ಆಸಕ್ತಿಯೇ ಹೊರಟುಹೋಗಿತ್ತು.

ಕಾರಣ ಇಷ್ಟೇ. ಒಂದು ದಿನ ಹೊಲದಿಂದ ನಡೆದುಕೊಂಡು ಬರುತ್ತಿರುವಾಗ ಒಂದು ಕೇರೆಹಾವು ಕಚ್ಚಿಬಿಟ್ಟಿತ್ತು. ಅದು ವಿಷಪೂರಿತ ಹಾವು ಅಲ್ಲದಿದ್ದರೂ ಅದು ನಾಗರಹಾವೇ ಎಂದು ಆತ ನಂಬಿದ್ದ. ನಿಜಕ್ಕೂ ನಾಗರಹಾವು ಕಚ್ಚಿದ್ದರೆ ಆತ ಚಿಕಿತ್ಸೆ ಪಡೆಯದೆ ಇಷ್ಟು ದಿನ ಬದುಕಲು ಸಾಧ್ಯವೇ ಇರಲಿಲ್ಲ. ಅದರಲ್ಲಿ ವಿಷವಿದ್ದಲ್ಲಿ!

ತನಗೆ ಹಾವು ಕಡಿದಿದೆ. ಅದರ ವಿಷ ಮೈನಲ್ಲಿದೆ. ನಾನು ಸತ್ತುಹೋಗಬಹುದು ಎಂಬ ಕೊರಗು ಅವನಲ್ಲಿ ಮೂಡಿತ್ತು. ಇದರಿಂದ ರಾತ್ರಿಯೆಲ್ಲಾ ಕೂಗಾಡುತ್ತಿದ್ದ. ಹಾವಿನ ಭಯ ಅವನನ್ನು ಕಂಗೆಡಿಸಿತ್ತು. ಹಾದಿಬೀದಿಯಲ್ಲಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದ.

ಇದರಿಂದ ಇಡೀ ಕುಟುಂಬ ಸಂಕಷ್ಟದಲ್ಲಿ ಸಿಲುಕಿತ್ತು. ನಂಜಪ್ಪ ಊಟ, ನಿದ್ರೆಯ ಕಡೆಗೆ ಆಸಕ್ತಿ ಕಳೆದುಕೊಂಡಿದ್ದ. ಅಜ್ಞಾನ ಒಮ್ಮೊಮ್ಮೆ ನಮ್ಮನ್ನು ಎಂತಹ ಇಕ್ಕಟ್ಟಿಗೆ ಸಿಲುಕಿಸುತ್ತದೆ ಎನ್ನುವುದಕ್ಕೆ ನಂಜಪ್ಪ ಜೀವಂತ ಉದಾಹರಣೆಯಾಗಿದ್ದ. ಇದು ನಿಜಕ್ಕೂ ಮಾನಸಿಕ ಕಾಯಿಲೆಯೇ ಹೊರತು ದೈಹಿಕ ಕಾಯಿಲೆ ಅಲ್ಲವೇ ಅಲ್ಲ ಎಂದು ನನಗೆ ಅರ್ಥವಾಗಿತ್ತು. ಅದನ್ನು ದೂರ ಮಾಡುವುದು ಹೇಗೆ ಎಂಬುದೇ ನಮ್ಮ ಮುಂದಿದ್ದ ಸಮಸ್ಯೆ.

ವಿಶೇಷ ಎಂದರೆ ಇದನ್ನು ಭಾನಾಮತಿ ಎಂದು ಯಾರೋ ನಂಬಿಸಿದ್ದರು. ಅದನ್ನು ಕುಟುಂಬವೂ ನಂಬಿಕೊಂಡಿತ್ತು. ಭಾನಾಮತಿಯಿಂದ ಬಿಡುಗಡೆ ಪಡೆಯಲೂ ಅವರು ಮಾಡಿದ ಪ್ರಯತ್ನಗಳು ಒಂದೆರಡಲ್ಲ.

ನನಗೆ ನಂಜಪ್ಪನನ್ನು ನೋಡುತ್ತಲೇ ಒಂದು ಉಪಾಯ ಹೊಳೆಯಿತು. ಅದನ್ನು ಯಾರಿಗೂ ಹೇಳದೆ ಜಾರಿಗೆ ತಂದೆ.

ಒಂದು ಹಲ್ಲು ಕಿತ್ತ ನಾಗರಹಾವು ತರಿಸಿದೆ. ನಂಜಪ್ಪ ನಿದ್ರಾವಶವಾಗುವಂತೆ ಮಾಡಿ ಆತನಿಂದಲೇ ಹಾವು ಕಚ್ಚಿದ ಜಾಗವನ್ನು ತೋರಿಸುವಂತೆ ಸೂಚಿಸಿದೆ. ಆತನ ಸುಪ್ತಮನಸ್ಸಿನಲ್ಲಿ ಹಾವು ಬರುವಂತೆ ಮಾಡಿದೆ. ಆತನ ಸುಪ್ತ ಮನಸ್ಸಿನಲ್ಲಿ ಹಾವು ಬಂದಿತು. ಕಚ್ಚಿದ ಜಾಗ ತೋರಿಸುವಂತೆ ಸೂಚಿಸಿದೆ. ತೋರಿಸಿದ. ಆತ ತೋರಿಸಿದ ಸ್ಥಳಕ್ಕೆ ಒಂದು ಬ್ಲೇಡ್‌ನಿಂದ ಗಾಯ ಮಾಡಿದೆ. ಅಲ್ಲಿಂದ ಹೊರಬಂದ ರಕ್ತವನ್ನು ಹಾವಿನ ಮೂತಿಗೆ ಬಳಿದೆ. ನಂತರ ಆತನನ್ನು ಕಣ್ಣು ಬಿಡಲು ಹೇಳಿದೆ.

ಕಣ್ಣು ಬಿಟ್ಟವನೇ ‘ಇದೇ ಹಾವು ನನಗೆ ಕಚ್ಚಿದ್ದು,’ ಎಂದ! ಎದ್ದು ಮನೆಯೆಲ್ಲಾ ಕುಣಿದಾಡಿದ. ಅವನ ಸಂತೋಷ ಮೇರೆ ಮೀರಿತು. ಅವನಿಗೆ ಅ ಹಾವು ಗೊತ್ತಿಲ್ಲವಾದರೂ ಅದೇ ಹಾವು ತನ್ನ ದೇಹದಿಂದ ವಿಷ ಹೀರಿದೆ ಎಂಬ ಸಂಗತಿ ಅವನಲ್ಲಿ ಅಪಾರ ಖುಷಿ ಹುಟ್ಟುಹಾಕಿತ್ತು.

ಮನುಷ್ಯನನ್ನು ಗುರುತು ಹಿಡಿಯಬಹುದು. ಹಾವುಗಳನ್ನೂ ಹೀಗೆ ಒಮ್ಮೆ ನೋಡಿದ ಕೂಡಲೇ ಗುರುತು ಹಿಡಿಯಲು ಸಾಧ್ಯವೇ? ಒಟ್ಟಿನಲ್ಲಿ ನಂಜಪ್ಪನಂತೂ ತನಗೆ ಕಚ್ಚಿದ ಹಾವು ಅದೇ ಎಂದು ನಂಬಿದ. ಸರಿಯಾಗಿ ಹಾವು ಕಚ್ಚಿದ ಸ್ಥಳದಲ್ಲಿ ಅದೇ ಹಾವು ವಿಷ ಹೀರಿದೆ ಎನ್ನುವುದನ್ನೂ ತೋರಿಸಿದೆ. ನಂಜಪ್ಪ ಖುಷಿಯಿಂದ ಕುಣಿದಾಡಿದ. ಇನ್ನು ನಿನ್ನ ಮೈಯಲ್ಲಿ ವಿಷವಿಲ್ಲ. ಇನ್ನು ಭಯ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದೆ. ನಂಜಪ್ಪ ಮಾತ್ರವಲ್ಲದೆ ಆತನ ಕುಟುಂಬ ಸದಸ್ಯರೆಲ್ಲರೂ ಸಂತೋಷಪಟ್ಟರು.

ಈಗ ನಂಜಪ್ಪ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾನೆ. ಒಂದು ತಪ್ಪು ತಿಳಿವಳಿಕೆ ಜೀವಕ್ಕೇ ಎರವಾಗಬಲ್ಲುದು ಎನ್ನುವುದಕ್ಕೆ ನಂಜಪ್ಪನೇ ಉದಾಹರಣೆ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com

(ಚಿತ್ರಕೃಪೆ: ವಿಕಿಪೀಡಿಯ)

ಸಾಲದಿಂದ ಬೆನ್ನೇರಿದ ಭಾನಾಮತಿ!

ಅದು ನನ್ನ ವಾರ್ಷಿಕ ರಜೆಯ ಸಮಯ. ಕುಟುಂಬ ಸಮೇತ ಗೋವಾ ಟ್ರಿಪ್ ಮಾಡಬೇಕು ಎನ್ನುವುದು ನನ್ನ ಆಲೋಚನೆ. ಆದರೆ ಒಂದೇ ಒಂದು ಫೋನ್ ಕಾಲ್ ನನ್ನ ಯೋಜನೆಯನ್ನು ವಿಫಲಗೊಳಿಸಿತು. ಅದು ಬಳ್ಳಾರಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಕರೆ.

ಅಲ್ಲಿ ಹೋದರೆ ಒಂದು ವಿಸ್ಮಯ ಎದುರಾಯಿತು. ಅಲ್ಲಿನ ಜನರ ಮುಂದೆ ಕಾರ್ಯಕ್ರಮ ನೀಡಿದ ನಂತರ, “ಸರ್, ನೀವು ಈ ದೆವ್ವ, ಮಾಟ, ಮಂತ್ರ ನಂಬಲ್ಲ ಅಲ್ಲವಾ? ಗಾಣಗಾಪುರಕ್ಕೆ ಬನ್ನಿ. ಅಲ್ಲಿ 25 ವಯಸ್ಸಿನ ಹುಡುಗ ಮರ ತಿರುಗುಮುರುಗಾಗಿ ಹತ್ತುತ್ತಾನೆ. ಇದಕ್ಕೆ ಏನು ಹೇಳ್ತೀರಿ?” ಎಂದರು. ಆ ಹುಡುಗನ ವಿಶಿಷ್ಟ ಶಕ್ತಿಗೆ ಬೇರೆ ಕಾರಣಗಳಿರಬಹುದು. ಆದರೆ ಅದಕ್ಕೂ ಅತೀಂದ್ರಿಯ ಶಕ್ತಿಗಳಿಗೂ ಸಂಬಂಧವಿಲ್ಲ ಎನ್ನೋದು ನನ್ನ ದೃಢ ನಂಬಿಕೆ. ಆದರೂ ಅವನನ್ನು ಭೇಟಿ ಮಾಡುವ ಕುತೂಹಲ ನನ್ನಲ್ಲೂ ಇತ್ತು.

ಬಳ್ಳಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಗಾಣಗಾಪುರಕ್ಕೆ ಹೊರಟೆ. ಗಾಣಗಾಪುರದ ದೇವಾಲಯದಲ್ಲಿ ಸಮಯದಲ್ಲಿ ದೇವಸ್ಥಾನದಲ್ಲಿ ಘಂಟೆ ನಗಾರಿಗಳು ಜೋರಾಗಿ ಶಬ್ದ ಮಾಡುತ್ತಿದ್ದವು. ಅದೇ ಸಮಯದಲ್ಲಿ ಒಂದು ಹುಡುಗ ದಿಢೀರನೆ ಓಡಿಹೋಗಿ ಮರ ಉಲ್ಟಾ ಹತ್ತಿ ಮರದ ತುದಿಯಲ್ಲಿ ಹುಚ್ಚನಂತೆ ಕುಣೀಯೊಕೆ ಶುರು ಮಾಡಿದ. ಅಲ್ಲಿದ್ದ ಜನರು ಕುತೂಹಲದಿಂದ ಅದನ್ನು ವೀಕ್ಷಿಸುತ್ತಿದ್ದರು.

ಅಲ್ಲಿದ್ದವರನ್ನು ವಿಚಾರಿಸಿದೆ. “ಸರ್, ಇಲ್ಲಿ 20 ವರ್ಷದಿಂದ, 12 ಘಂಟೆಗೆ ಸರಿಯಾಗಿ ದತ್ತ ಮಹಾರಾಜರಿಗೆ ಆರತಿ ನಡೆಯುತ್ತೆ. ಆ ಸಮಯದಲ್ಲಿ ನಗಾರಿಗಳು ಬಾರಿಸುತ್ತಿದ್ದಂತೆ ಇಲ್ಲಿರುವ ಕೆಲವರು ಮೈಮೇಲೆ ದೇವರು, ದೆವ್ವ ಬಂದ ಹಾಗೆ ಆಡುತ್ತಾರೆ.” ಎಂದರು. ಸುಮಾರು 40 ಜನರು ಈ ರೀತಿ ಆಡೋದನ್ನ ನಾನು ನೋಡಿದೆ. ಅದರಲ್ಲಿ ಕೆಲವರನ್ನು ಮಾತನಾಡಿಸಿದೆ. ಮತ್ತೊಂದು ಕಡೆ ಹುಡುಗ  ತಿರುಗಾ ಮುರುಗಾ ಮರ ಹತ್ತಿ ತುದಿಯಲ್ಲಿ ಹುಚ್ಚನಂತೆ ಕುಣೀತಾ ಇದ್ದ.  ನಗಾರಿಗಳ ಶಬ್ದ ನಿಂತಾಗ ಅಲ್ಲಿರುವ ಜನರು ಮಾಮೂಲು ಸ್ಥಿತಿಗೆ ಬಂದರು. ಆ ಹುಡುಗನನ್ನು ಸುಮಾರು ಅಧ ಗಂಟೆಯಿಂದ ಗಮನಿಸುತ್ತಿದ್ದೆ. ಅವನು ಮರದಿಂದ ಕೆಳಗೆ ಇಳಿಯುತ್ತಿದ್ದಂತೆ ಅವನನ್ನು ಸಮಾಧಾನವಾಗಿ ಮಾತನಾಡಿಸಿದೆ…

“ಯಾವೂರಪ್ಪ ನಿಂದು, ಬಹಳ ಜೋರಾಗಿ ಕುಣೀತಾ ಇದ್ದೆ?”
“ಮಹಾರಾಷ್ಟ್ರ.”
“ಎಷ್ಟು ತಿಂಗಳಿಂದ ಇಲ್ಲಿದ್ದೀಯಾ?”
“ಮೂರು ತಿಂಗಳಿಂದ”
“ಇಲ್ಲಿಗೆ ಯಾಕೆ ಬಂದೆ?”
“ಏನು ಅಂತ ಹೇಳ್ಲಿ ಸರ್, ನೀವೇನಾದರು ನನ್ನ ಕಥೆ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ.” ಕುತೂಹಲ ಹುಟ್ಟಿಸಿದ.
“ಅಂತ ಕಥೆ ಏನಪ್ಪ ನಿಂದು?”
“ಏನು ಹೇಳಲಿ ಸರ್, ಮೂರುತಿಂಗಳ ಹಿಂದೆ ನನ್ನ ಹೊಟ್ಟೆ ಶೇಕ್ ಆಗೋದು, ಎದೆ ಜೋರಾಗಿ ಬಡಿದುಕೊಳ್ಳೋದು ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಸರಿಯಾಗಿ ಊಟ ಸೇರಲ್ಲ.”
“ನಿನ್ನ ಜೊತೆ ಯಾರಿದ್ದಾರೆ?”
“ನನ್ನ ಇಬ್ಬರು ಗೆಳೆಯರ ಜೊತೆಯಲ್ಲಿದ್ದೇನೆ. ಇಲ್ಲಿರುವವರೂ ನನ್ನ ಗೆಳೆಯರೇ.”
“ಇದೆಲ್ಲ ಸರಿ ಕಣಪ್ಪ. ಅರ್ಧ ಗಂಟೆ ಮುಂಚೆ ಮರ ಹತ್ತಿ ಕುಣೀತಾ ಇದ್ದೆ. ಈಗ ಮಾಮೂಲಾಗಿ ಮಾತನಾಡುತ್ತಿದ್ದೀಯ. ಇದು ಹೇಗೆ?”
“ಸರ್, ನಗಾರಿಗಳ ಸದ್ದು ಕೇಳಿದರೆ ಈ ತರ ಆಗುತ್ತದೆ,” ಎಂದ.
“ನನಗೂ ಶಬ್ದ ಕೇಳಿಸಿತು. ಆದರೆ ನಾನೇನು ಕುಣಿದಿಲ್ಲ …ಅದ್ಯಾಕೆ ನೀನು ಮಾತ್ರ?”
“ಸರ್, ನನಗೆ ಗೊತ್ತಿರುವವರು ಯಾರೋ ಭಾನಾಮತಿ ಮಾಡಿಸಿದ್ದಾರೆ. ಅದರಿಂದ ಹೀಗಾಗುತ್ತಿದೆ,” ಎಂದ. ಆ ಹುಡುಗ ಭಾನಾಮತಿಯ ಭ್ರಮೆಯಲ್ಲಿದ್ದ.

ನಂತರ ನಾನು ಅವನೊಂದಿಗೆ ಅಲ್ಲಿಗೇ ಮಾತು ನಿಲ್ಲಿಸಿ ಅವನ ಗೆಳೆಯನನ್ನು ಕರೆದು ಮಾತನಾಡಿಸಿದೆ.

“ನೋಡಪ್ಪ ನಿನ್ನ ಗೆಳೆಯನಿಗೆ ಯಾವ ಭಾನಾಮತಿಯೂ ಆಗಿಲ್ಲ. ಅವನು ಬೇಕಂತಲೇ ಹೀಗೆ ಆಡುತ್ತಿದ್ದಾನೆ ಎಂದು ನನಗೆ ಗೊತ್ತು. ನಿಜ ಹೇಳು. ನಾನು ಯಾರಿಗೂ ಹೇಳೋಲ್ಲ. ಅವು ಏಕೆ ಹೀಗೆ ಆಡುತ್ತಿದ್ದಾನೆ?”

ನಿಜ ಹೇಳದಿದ್ದರೆ ಇದನ್ನು ಟಿ.ವಿ.ಯಲ್ಲಿ ಹಾಕಿಸಿ ಪ್ರಚಾರ ಮಾಡುವ ಬೆದರಿಕೆಯನ್ನೂ ಹಾಕಿದೆ. ಆಗ ದಾರಿಗೆ ಬಂದ.

“ಸರ್, ಅವನು ಊರಲ್ಲಿ ತಂದೆ ತಾಯಿಗೆ ಗೊತ್ತಿಲ್ಲದ ಹಾಗೆ ಕಂಡವರ ಹತ್ತಿರವೆಲ್ಲ ಮೈ ತುಂಬಾ ಸಾಲ ಮಾಡೊಕೊಂಡಿದ್ದ. ಆ ಸಾಲ ತೀರಿಸಲಾಗದೆ ಭಾನಾಮತಿ ಎಂಬ ನೆಪ ಹುಡುಕಿಕೊಂಡ. ಯಾರಾದರೂ ಸಾಲ ವಾಪಸ್ ಕೇಳೋಕೆ ಬಂದರೆ ವಿಚಿತ್ರವಾಗಿ ಆಡುತ್ತಿದ್ದ. ಅದರಿಂದ ಜನಗಳು ಅವನ ಹತ್ತಿರ ಕೇಳೋದೆ ಬಿಟ್ಟಿಬಿಟ್ಟರು,” ಎಂದ.

ಮತ್ತೂ ವಿಶೇಷ ಎಂದರೆ, ಅವನು ಚಿಕ್ಕಂದಿನಿಂದಲೇ ಯೋಗಾಭ್ಯಾಸ ಮಾಡಿದ್ದಾನೆ. ಯೋಗಶಕ್ತಿಯನ್ನು ಬಳಸಿಕೊಂಡು ಮೈಮೇಲೆ ತನ್ನ ತಾನೆ ಮ್ಯೆಯನ್ನು ನಡುಗಿಸೋದು. ನರಗಳೆಲ್ಲ ಕಾಣುವ ಹಾಗೆ ಮಾಡುವುದು. ಹೊಟ್ಟೆ ಅಲ್ಲಾಡಿಸುವುದು… ಇತ್ಯಾದಿ ವಿದ್ಯೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ.

ಹುಲಿಕಲ್ ನಟರಾಜ್
ಪವಾಡ ಸಂಶೋಧನಾ ಕೇಂದ್ರ(ರಿ)
ದೊಡ್ಡಬಳ್ಳಾಪುರ-561203
ಮೊ:9481776616
miraclebuster_nataraj@yahoo.com