Category Archives: ಸರಣಿ-ಲೇಖನಗಳು

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-27)


– ಡಾ.ಎನ್.ಜಗದೀಶ್ ಕೊಪ್ಪ


1939 ರಲ್ಲಿ ಭಾರತಕ್ಕೆ ವೈಸ್‌ರಾಯ್ ಹುದ್ದೆಗೆ ನೇಮಕವಾಗಿ ದೆಹಲಿಗೆ ಬಂದ ಲಿನ್‌ಲಿಥ್‌ಗೌ, ಜಿಮ್ ಕಾರ್ಬೆಟ್‌ನ ಲೇಖನಗಳನ್ನು ಓದಿ ಅವುಗಳಿಂದ ಪ್ರಭಾವಿತನಾಗಿ, ಕಾರ್ಬೆಟ್‌ನನ್ನು ದೆಹಲಿಗೆ ಕರೆಸಿ ಅವನನ್ನು ಪರಿಚಯಿಸಿಕೊಂಡು ತನ್ನ ಕುಟುಂಬ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಂಡ. ಲಿನ್‌ಲಿಥ್‌ಗೌ ವೃತ್ತಿಯಲ್ಲಿ ಅಧಿಕಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಿರ್ಜನ ಅರಣ್ಯ ಪ್ರದೇಶದಲ್ಲಿ ಅಲೆಯುವುದು, ರಾತ್ರಿ ಟೆಂಟ್ ಹಾಕಿ ಅಲ್ಲಿಯೇ ತಂಗುವುದು, ಮೀನು ಶಿಕಾರಿ ಮಾಡುವುದನ್ನು ಹವ್ಯಾಸ ಮಾಡಿಕೊಂಡಿದ್ದ. ಹಾಗಾಗಿಯೇ ಲಿನ್‌ಲಿಥ್‌ಗೌ‌ಗೆ ಕಾರ್ಬೆಟ್‌ನ ಅಭಿರುಚಿಗಳು ಇಷ್ಟವಾದವು. ಆನಂತರ ಇಬ್ಬರೂ ಸಮಾನ ಮನಸ್ಕ ಗೆಳೆಯರಾಗಿ ಉತ್ತರ ಭಾರತದ ಕಾಡುಗಳಲ್ಲಿ ವಾರಾಂತ್ಯ ಕಳೆಯುತ್ತಿದ್ದರು.

ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ತಪ್ಪದೇ ನೈನಿತಾಲ್ ಹಾಗೂ ಕಲದೊಂಗಿ ಮತ್ತು ಚೋಟಿಹಲ್ದಾನಿ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ ವೈಸ್‌ರಾಯ್ ಕುಟುಂಬ ಜಿಮ್ ಕಾರ್ಬೆಟ್ ಮತ್ತು ಅವನ ಸಹೋದರಿ ಮ್ಯಾಗಿ ಜೊತೆ ವಾರಗಟ್ಟಲೆ ಕಾಲ ಕಳೆಯುತ್ತಿತ್ತು. ಕಲದೊಂಗಿಯಲ್ಲಿದ್ದ ಮನೆಗೆ ವೈಸ್‌ರಾಯ್ ಬಂದಾಗ ಕಾರ್ಬೆಟ್ ಕಲದೊಂಗಿ ಮತ್ತು ಚೋಟಿ ಹಲ್ದಾನಿಯ ರೈತರು, ಕಾರ್ಮಿಕರು ಎಂಬ ಬೇಧ ಭಾವವಿಲ್ಲದೆ ಎಲ್ಲರನ್ನೂ ತನ್ನ ಮನೆಗೆ ಕರೆಸಿ ದೇಶದ ಪ್ರಥಮ ಪ್ರಜೆಯಂತಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌಗೆ ಪರಿಚಯ ಮಾಡಿಕೊಡುತ್ತಿದ್ದ. ಮನೆಯಲ್ಲಿ ಚಹಾ ಕೂಟ ಏರ್ಪಡಿಸಿ ಭಾರತದ ಬಡತನ ಮತ್ತು ಇಲ್ಲಿನ ಜನರ ಮುಗ್ಧತೆ, ಅಜ್ಙಾನ, ಇವುಗಳನ್ನು ವಿವರಿಸುತ್ತಾ, ಬಡತನದ ನಡುವೆಯೂ ಬಹು ಸಂಸ್ಕೃತಿ, ಭಾಷೆ ಮತ್ತು ಧರ್ಮ ಇವುಗಳ ನಡುವೆ ಇರುವ ಸಾಮರಸ್ಯವನ್ನು, ಇಲ್ಲಿನ ಜನರ ಪ್ರಾಮಾಣಿಕತೆಯನ್ನು ಬಲು ಅರ್ಥಗರ್ಭಿತವಾಗಿ ವೈಸ್‌ರಾಯ್ ಕುಟುಂಬಕ್ಕೆ ಮತ್ತು ಅವನ ಜೊತೆ ಬರುತ್ತಿದ್ದ ಅಧಿಕಾರಿಗಳಿಗೆ ಕಾರ್ಬೆಟ್ ಮನವರಿಕೆ ಮಾಡಿಕೊಡುತ್ತಿದ್ದ.

ದೆಹಲಿಯ ಔತಣಕೂಟವೊಂದರಲ್ಲಿ ಅನುಭವಗಳನ್ನು ಕೃತಿಗೆ ಇಳಿಸುವಂತೆ ಒತ್ತಾಯಿಸಿದ್ದ ಅಧಿಕಾರಿಯ ಪತ್ನಿ ಲೇಡಿ ವೈಲೆಟ್‌ಹೇಗ್ ಮಾತಿನಿಂದ ಉತ್ತೇಜಿತನಾಗಿ ಪತ್ರಿಕೆಗಳಲ್ಲಿ ಲೇಖನ ಬರೆಯಲು ಆರಂಭಿಸಿದ ಕಾರ್ಬೆಟ್ ಇವುಗಳನ್ನು ಪುಸ್ತಕದ ರೂಪದಲ್ಲಿ ತರುವ ಬಗ್ಗೆ ವೈಸರಾಯ್ ಲಿನ್‌ಲಿಥ್‌ಗೌನ ಸಲಹೆ ಕೇಳಿದ. ಜಿಮ್ ಕಾರ್ಬೆಟ್‌ನ ನರಭಕ್ಷಕ ಹುಲಿ ಮತ್ತು ಚಿರತೆಗಳ ಅನುಭವಗಳನ್ನು ಸ್ವತಃ ಕೇಳಿ, ಲೇಖನಗಳ ಮೂಲಕ ಓದಿ ಪುಳಕಿತನಾಗಿದ್ದ ವೈಸ್‌ರಾಯ್ ಲಿನ್‌ಲಿಥ್‌ಗೌ ಪುಸ್ತಕ ಪ್ರಕಟನೆಗೆ ಉತ್ತೇಜನ ನೀಡಿದ.

ಕಾರ್ಬೆಟ್ ಅದುವರೆಗೆ ಇಂಡಿಯನ್ ವೈಲ್ಡ್ ‌ಲೈಪ್ ಪತ್ರಿಕೆಗೆ ಬರೆದಿದ್ದ ’ದ ಲಾಸ್ಟ್ ಪ್ಯಾರಡೈಸ್’ ಮತ್ತು “ವೈಲ್ಡ್ ಲೈಪ್ ಇನ್ ದ ವಿಲೇಜ್”, “ದ ಟೆರರ್ ದಟ್ ವಾಕ್ಸ್ ಇನ್ ದ ನೈಟ್”,  “ದ ಫಿಶ್ ಆಪ್ ಮೈ ಡ್ರೀಮ್ಸ್” ಹಾಗೂ “ಪೂರ್ಣಗಿರಿ ಅಂಡ್ ಇಟ್ಸ್ ಮಿಸ್ಟೀರಿಯಸ್ ಲೈಟ್ಸ್”, ಈ ಲೇಖನಗಳ ಸಂಗ್ರಹವನ್ನು ಜಂಗಲ್ ಸ್ಟೋರಿಸ್ ಎಂಬ ಹೆಸರಿನಲ್ಲಿ  104 ಪುಟಗಳ ಮೊದಲ ಕೃತಿಯನ್ನಾಗಿ ಹೊರತಂದ. ಪುಸ್ತಕ ನೈನಿತಾಲ್ ಪಟ್ಟಣದಲ್ಲಿದ್ದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಣವಾಯಿತು. ನೂರು ಪ್ರತಿಗಳನ್ನು ಮಾತ್ರ ಮುದ್ರಣ ಮಾಡಲಾಗಿತ್ತು. ಅದರ ಕರಡಚ್ಚು ತಿದ್ದುವುದರಿಂದ ಹಿಡಿದು, ಪ್ರಸ್ತಾವನೆ ಬರೆಯುವ ಹೊಣೆಯನ್ನು ವೈಸ್‌ರಾಯ್ ಲಿನ್‌ಲಿಥ್‌ಗೌ ಹೊತ್ತಿದ್ದು ವಿಶೇಷವಾಗಿತ್ತು.

ಪುಸ್ತಕ ಪ್ರಕಟಣೆ ಮೂಲಕ ಲೇಖಕನೂ ಆದ ಕಾರ್ಬೆಟ್‌ನ ಜೀವನ ನೈನಿತಾಲ್ ಗಿರಿಧಾಮದಲ್ಲಿ ಒಂದು ರೀತಿ ಆರಾಮದಾಯಕ ನಿವೃತ್ತಿ ಜೀವನವಾಗಿತ್ತು. ಬೆಳಿಗ್ಗೆ ಸಂಜೆ ಸಹೋದರಿ ಮ್ಯಾಗಿ ಜೊತೆ ಪರ್ವತದ ಕಿರುದಾರಿಗಳಲ್ಲಿ ವಾಕ್ ಮಾಡುತ್ತಿದ್ದ. ಹಗಲಿನಲ್ಲಿ ತನ್ನ ಮೆಚ್ಚಿನ ನಾಯಿಯ ಜೊತೆ ನೈನಿ ಮತ್ತು ಬೀಮ್ ಸರೋವರಕ್ಕಿಂತ ಚಿಕ್ಕದಾಗಿದ್ದ, ಊರಾಚೆಗಿನ ಅರಣ್ಯದ ನಡುವೆ ಇದ್ದ ಸರೋವರದಲ್ಲಿ ಮೀನು ಶಿಕಾರಿ ಮಾಡುವುದು ಅವನ ಹವ್ಯಾಸವಾಗಿತ್ತು. ಮೀನಿಗೆ ಗಾಳ ಹಾಕಿ ಧ್ಯಾನಸ್ತ ಮನುಷ್ಯನಂತೆ ಕುಳಿತಿರುತ್ತಿದ್ದ ಕಾರ್ಬೆಟ್‌ನ ಹೃದಯದೊಳಗೆ ಆ ಕ್ಷಣಗಳಲ್ಲಿ ಭವಿಷ್ಯದ ಬದುಕಿನ ಬಗ್ಗೆ ಜಿಜ್ಞಾಸೆಗಳು ಮೂಡುತ್ತಿದ್ದವು. ಅವನ ಎದೆಯೊಳಗೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಸಿಸಬೇಕೆ? ಬೇಡವೆ? ಎಂಬ ಪ್ರಶ್ನೆಗಳ ಬಿರುಗಾಳಿ ಏಳುತ್ತಿತ್ತು.

1930 ರಲ್ಲಿ ಭಾರತದಾದ್ಯಂತ ಗಾಂಧೀಜಿ ನಡೆಸಿದ ಉಪ್ಪಿನ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು. ತೀರಾ ಹತ್ತಿರದಿಂದ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು, ಬ್ರಿಟಿಷರ ಕುರಿತಾದ ಅವರ ಅಸಹನೆಯನ್ನು ಕಂಡಿದ್ದ ಕಾರ್ಬೆಟ್‌ಗೆ ಮುಂದಿನ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇಂಗ್ಲೆಂಡ್ ಮೂಲದ ಪ್ರಜೆಯಾಗಿ ಇಲ್ಲಿ ಬದುಕುವುದು ದುಸ್ತರ ಎಂಬ ಅಭದ್ರತೆಯ ಭಾವನೆ ಮೂಡತೊಡಗಿತು. ಭಾರತದಲ್ಲಿ ಹುಟ್ಟಿ, ಅಪ್ಪಟ ಭಾರತೀಯನಂತೆ ಬದುಕಿದ ಜಿಮ್ ಕಾರ್ಬೆಟ್ ತನ್ನ ಕೊನೆಯ ದಿನಗಳಲ್ಲಿ ಏಕೆ ಭಾರತವನ್ನು ತೊರೆದು ಹೋಗಿ, ಕೀನ್ಯಾದಲ್ಲಿ ಅನಾಮಿಕನಂತೆ ಅಸುನೀಗಿದ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಮೂಲವನ್ನು ಹುಡುಕಿದರೆ, ಇದಕ್ಕೆ ಮೂಲ ಕಾರಣ ಅವನ ತಾಯಿ ಮೇರಿ ಕಾರ್ಬೆಟ್ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು. ಆಕೆ 1857ರ ಸಿಪಾಯಿ ದಂಗೆಯ ಸಮಯದಲ್ಲಿ ಭಾರತದ ಸೈನಿಕರು ಉತ್ತರ ಭಾರತದ ನಗರಗಳಲ್ಲಿ ಆಂಗ್ಲರನ್ನು ಹೆಂಗಸರು, ಮಕ್ಕಳೆನ್ನದೆ ನಡುಬೀದಿಯಲ್ಲಿ ತರಿದು ಹಾಕಿದ್ದನ್ನು ಕಣ್ಣಾರೆ ಕಂಡವಳು. ಜೊತೆಗೆ ತನ್ನ ಮೊದಲ ಪತಿ ಭಾರತೀಯರ ದಾಳಿಗೆ ತುತ್ತಾದಾಗ ಅದಕ್ಕೆ ಸಾಕ್ಷಿಯಾದವಳು. ಈ ಎಲ್ಲಾ ಕಥೆಗಳನ್ನ ಚಿಕ್ಕಿಂದಿನಲ್ಲೇ ಕಾರ್ಬೆಟ್‌ಗೆ ವಿವರಿಸುತ್ತಾ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಬ್ರಿಟಿಷರಿಗೆ, ಅವರ ಆಸ್ತಿ ಪಾಸ್ತಿಗಳಿಗೆ ಉಳಿಗಾಲವಿಲ್ಲ ಎಂಬ ಭಯದ ಬೀಜವನ್ನು ಬಿತ್ತಿದ್ದಳು. ಅದು ಮುಂದಿನ ದಿನಗಳಲ್ಲಿ, ಅಂದರೆ ಕಾರ್ಬೆಟ್‌ನ ಕೊನೆಯ ದಿನಗಳಲ್ಲಿ ಅವನ ಎದೆಯೊಳಗೆ ಹೆಮ್ಮರವಾಗಿ ಬೆಳೆದು ನಿಂತಿತು.

ಭಾರತ ತೊರೆಯುವ ನಿರ್ಧಾರವನ್ನು ಬಹಿರಂಗವಾಗಿ ಎಲ್ಲಿಯೂ ಪ್ರಕಟಿಸದೆ ತನ್ನ ಸಹೋದರಿ ಮ್ಯಾಗಿ ಜೊತೆ ಸುದೀರ್ಘವಾಗಿ ಚರ್ಚಿಸಿ ನಂತರ ಭಾರತ ತೊರೆಯಲು ನಿರ್ಧರಿಸಿದ ಕಾರ್ಬೆಟ್ ನೈನಿತಾಲ್ ಗಿರಿಧಾಮದಲ್ಲಿದ್ದ ಅವನ ಕುಟುಂಬದ ಎಲ್ಲಾ ಮನೆಗಳು (ಎಂಟು ಅತಿಥಿ ನಿವಾಸಗಳು) ಮತ್ತು ನಿವೇಶನಗಳು, ಹಾಗೂ ಅಂತಿಮವಾಗಿ ತಾವು ವಾಸಿಸುತ್ತಿದ್ದ ಗಾರ್ನಿಹೌಸ್ ಎಂಬ ಬೃಹತ್‌ಬಂಗಲೆಯನ್ನು ಮಾರಾಟ ಮಾಡಿದನು. ಈ ಬಂಗಲೆಯನ್ನು ಖರೀದಿಸಿದ ಸಕ್ಕರೆ ವ್ಯಾಪಾರಿ, ಶರ್ಮ ಎಂಬಾತ ಸ್ವರ್ಗದ ಮೇಲೆ ಭೂಮಿಯ ತುಣುಕೊಂದನ್ನು ಖರೀದಿಸಿದ್ದೀನಿ ಎಂದು ತನ್ನ ಬಂಧು ಮಿತ್ರರ ಜೊತೆ ತನ್ನ ಸಂತಸ ಹಂಚಿಕೊಂಡ. ಆಸ್ತಿ ಮಾರಾಟ ಮತ್ತು ಅಂಗಡಿ (ಮ್ಯಾಥ್ಯು ಅಂಡ್ ಕೊ) ಮಾರಾಟದಿಂದ ಬಂದ ಹಣದಲ್ಲಿ ಅರ್ಧ ಭಾಗವನ್ನು ತನ್ನ ಮತ್ತು ಸಹೋದರಿ ಹೆಸರಿನಲ್ಲಿ ಇನ್ಸೂರೆನ್ಸ್ ಕಂಪನಿಯಲ್ಲಿ ತೊಡಗಿಸಿದ. ಉಳಿದರ್ಧ ಹಣವನ್ನು ಜೊತೆಯಲ್ಲಿ ಇಟ್ಟಕೊಂಡು, ನಂಬಿಕಸ್ಥರಿಗೆ ಸಾಲವಾಗಿ ನೀಡತೊಡಗಿದ.

ಕಾರ್ಬೆಟ್ ಬಳಿ ಜೈಪುರದ ಮಹಾರಾಜ ಕೂಡ ವಾರ್ಷಿಕ ಬಡ್ಡಿಗೆ ಹಣವನ್ನು ಸಾಲವಾಗಿ ಪಡೆಯುತ್ತಿದ್ದ. ನೈನಿತಾಲ್‌ನ ಎಲ್ಲಾ ಆಸ್ತಿ ಮಾರಿದ ಜಿಮ್ ಕಾರ್ಬೆಟ್ ತನ್ನ ಬಳಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂಬಿಕಸ್ತ ಸೇವಕರನ್ನ ಕಾರ್ಬೆಟ್ ಮರೆಯಲಿಲ್ಲ. ಅವರಿಗೆ ಮನೆ ಕಟ್ಟಿಸಿಕೊಟ್ಟು, ತನ್ನ ಮನೆಗಳಲ್ಲಿ ಇದ್ದ  ಮಂಚ, ಮೇಜು, ಕುರ್ಚಿ ಮುಂತಾದ ಸಾಮಾನುಗಳನ್ನು ಉಚಿತವಾಗಿ ಹಂಚಿದ. ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇರಿಸಿದ. ಅವನ ಶಿಕಾರಿ ಸಾಹಸಗಳಿಂದ ಹಿಡಿದು, ಮೊಕಮೆಘಾಟ್ ರೈಲ್ವೆ ನಿಲ್ದಾಣ ಮತ್ತು ನೈನಿತಾಲ್‌ನ ನಿವೃತ್ತಿಯ ಬದುಕಿನ ವರೆಗೂ ಸೇವೆ ಸಲ್ಲಿಸಿದ ಮಾದೂಸಿಂಗ್ ಮೋತಿಸಿಂಗ್, ಅವನ ಮಗ ಬಲ್ವ, ಹಾಗೂ ರಾಮ್ ಸಿಂಗ್ ಬಲಸಿಂಗ್ ಇವರೆಲ್ಲರೂ ಶಾಶ್ವತವಾಗಿ ನೆಮ್ಮದಿಯ ಬದುಕು ಕಂಡುಕೊಳ್ಳುವಂತೆ ಮಾಡಿದ. ಇವರ ಜೊತೆಗೆ ಚಳಿಗಾಲದ ತನ್ನ ಹಳ್ಳಿಯಾದ ಚೊಟಿಹಲ್ದಾನಿಯ ಮುಸ್ಲಿಮ್ ಗೆಳೆಯ ಬಹುದ್ದೂರ್ ಖಾನ್ ಮತ್ತು ಬಾಲ್ಯದಲ್ಲಿ ಶಿಕಾರಿ ಕಲಿಸಿದ ಕುನ್ವರ್ ಸಿಂಗ್ ಇವರಿಗೂ ಕೂಡ ಆರ್ಥಿಕ ನೆರವು ನೀಡಿದ. ಆದರೆ, ನಾನು ಭಾರತ ತೊರೆಯುತ್ತಿದ್ದೇನೆ ಎಂಬ ಸುಳಿವನ್ನು ಎಲ್ಲಿಯೂ ಕಲದೊಂಗಿ ಮತ್ತು ಚೋಟಿ ಹಲ್ದಾನಿ ಹಳ್ಳಿಗಳ ಜನರಿಗೆ ಕಾಬೆಟ್ ಬಿಟ್ಟುಕೊಡಲಿಲ್ಲ. ಅವರ ಮನಸನ್ನು ನೋಯಿಸಲು ಇಚ್ಚಿಸದೇ ಕಲದೊಂಗಿಯಲ್ಲಿದ್ದ ಅವನ ಬಂಗಲೆಯನ್ನು ಮಾರಾಟ ಮಾಡದೇ ಹಾಗೆಯೇ ಉಳಿಸಿಕೊಂಡ.

ಜಿಮ್ ಕಾರ್ಬೆಟ್‌ನ ಈ ನೋವಿನ ವಿದಾಯದ ಸಂದರ್ಭವನ್ನು ವಿವೇಚಿಸಿದರೆ, ಇದು ಆ ಕಾಲಘಟ್ಟದಲ್ಲಿ  ಕಾರ್ಬೆಟ್ ಒಬ್ಬ ಮಾತ್ರ ಅನುಭವಿಸಿದ ಸಂಕಟ ಮತ್ತು ತಳಮಳಗಲ್ಲ. ಭಾರತದಲ್ಲಿದ್ದ ಎಲ್ಲಾ ಬ್ರಿಟಿಷರ ತಲ್ಲಣ ಮತ್ತು ತಳಮಳವೂ ಹೌದು ಎನಿಸುತ್ತದೆ. ಭಾರತದಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ, ಇಲ್ಲಿನ ಚಿಕ್ಕಮಗಳೂರು, ನೀಲಗಿರಿ, ಕೇರಳ, ಡಾರ್ಜಲಿಂಗ್ ಅಸ್ಸಾಂ ಮುಂತಾದ ಕಡೆ ಕಾಫಿ ಮತ್ತು ಚಹಾ ತೋಟಗಳನ್ನು ಮಾಡಿಕೊಂಡಿದ್ದ ಬ್ರಿಟಿಷ್ ಅಧಿಕಾರಿಗಳು 1947ರಲ್ಲಿ ಭಾರತಕ್ಕೆ ಸ್ವತಂತ್ರ್ಯ ಬಂದಾಗ ತಮ್ಮ ಆಸ್ತಿಗಳನ್ನು ಮಾರಿ, ಜೀವ ಭಯದಿಂದ ತಾಯ್ನಾಡಿಗೆ ಮರಳಿದರು. ಆದರೆ, ಆರೋಗ್ಯ, ಮತ್ತು ಶಿಕ್ಷಣದ ಸೇವೆಯ ಉದ್ದೇಶಕ್ಕಾಗಿ ಭಾರತಕ್ಕೆ ಬಂದಿದ್ದ ಮಿಷನರಿ ಸಂಸ್ಥೆಗಳು, ಅದರ ಕಾರ್ಯಕರ್ತರು ಮಾತ್ರ ಧೈರ್ಯದಿಂದ ಇಲ್ಲೆ ಉಳಿದು ನೆಲೆ ಕಂಡುಕೊಂಡರು.

ಜಿಮ್ ಕಾರ್ಬೆಟ್ ಭಾರತ ತೊರೆಯಲು ಸಿದ್ಧತೆ ನಡೆಸುತ್ತಿದ್ದ ಸಮಯದಲ್ಲೇ ಎರಡನೇ ಮಹಾಯುದ್ಧ ಆರಂಭಗೊಂಡಿತು. ಬ್ರಿಟಿಷರ ಪರ ಭಾರತೀಯ ಸೇನೆ ಹೋರಾಟ ನಡಸಬೇಕೆ ಬೇಡವೇ ಎಂಬುದರ ಬಗ್ಗೆ ಗಾಂಧೀಜಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಜಿಜ್ಙಾಸೆ ಉಂಟಾಯಿತು. ಯುದ್ಧ ಮುಗಿದ ನಂತರ ಭಾರತಕ್ಕೆ ಸ್ವಾತಂತ್ರ್ಯ ನೀಡಲಾಗುವುದು ಎಂಬ ನಿರ್ಣಯವನ್ನು ಇಂಗ್ಲೆಂಡಿನ ಸಂಸತ್ತಿನಲ್ಲಿ ಅಂಗೀಕರಿಸಿದ ಮೇಲೆ ಇಲ್ಲಿನ ನಾಯಕರು ಭಾರತೀಯ ಸೈನಿಕರು ಬ್ರಿಟಿಷ್ ಸೇನೆಯ ಪರವಾಗಿ ಯುದ್ಧದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದರು.

ಆ ವೇಳೆಗಾಗಲೇ ಮಿತ್ರ ರಾಷ್ಟ್ರಗಳ ಮೇಲೆ ಮಿಂಚಿನ ದಾಳಿ ನಡೆಸುತ್ತಾ ಮುನ್ನುಗ್ಗುತ್ತಿದ್ದ ಜಪಾನ್ ಸೇನೆ ಭಾರತದ ನೆರೆಯ ರಾಷ್ಟ್ರ ಬರ್ಮಾದವರೆಗೆ ಬಂದು ನಿಂತಿತ್ತು. ಭಾರತದಲ್ಲಿದ್ದ ಬ್ರಿಟಿಷ್ ಸೇನೆಯ ಜೊತೆಗೆ ಭಾರತೀಯ ಸೇನೆಯನ್ನು ಬರ್ಮಾ ಗಡಿಭಾಗಕ್ಕೆ ಕಳಿಸಿಕೊಡಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಆದರೆ, ಬರ್ಮಾದ ಮಳೆಕಾಡುಗಳಲ್ಲಿ, ಮತ್ತು ಅಲ್ಲಿನ ಶೀತ ಪ್ರದೇಶದಲ್ಲಿ ಅನುಭವವಿರದ ನಮ್ಮ ಸೈನಿಕರು ಹೋರಾಟ ಮಾಡುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಹಾಗಾಗಿ ಸರ್ಕಾರ ಜಿಮ್ ಕಾರ್ಬೆಟ್‌ನ ಮೊರೆ ಹೋಗಿ, ಅರಣ್ಯದಲ್ಲಿ ಸೈನಿಕರು ಯುದ್ಧ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ತರಬೇತಿ ನೀಡುವಂತೆ ಕೇಳಿಕೊಂಡಿತು. ಇದಕ್ಕಾಗಿ  ಭಾರತದ ಬ್ರಿಟಿಷ್ ಸರ್ಕಾರ 1944ರ ಫೆಬ್ರವರಿಯಲ್ಲಿ ಮಧ್ಯ ಪ್ರದೇಶದ ದಂಡಕಾರಣ್ಯದಲ್ಲಿ ಅಲ್ಪಾವಧಿಯ ತರಬೇತಿ ಶಿಬಿರಗಳನ್ನು, ಕಾರ್ಬೆಟ್ ನೃತೃತ್ವದಲ್ಲಿ ಆಯೋಜಿಸಿತು.

ವಿಶ್ವದ ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್ ಪರ ಫ್ರಾನ್ಸ್ ರಣಭೂಮಿಯಲ್ಲಿ ಹೋರಾಟ ನಡೆಸಿ ಅನುಭವ ಹೊಂದಿದ್ದ, ಕಾರ್ಬೆಟ್, ಸೈನಿಕರಿಗೆ, ಅರಣ್ಯ, ಅಲ್ಲಿನ ಜೀವಜಾಲ, ಅವುಗಳ ವೈಶಿಷ್ಟ್ಯತೆ ಮತ್ತು ವರ್ತನೆ ಇವುಗಳೆಲ್ಲವನ್ನು ಪರಿಚಯ ಮಾಡಿಕೊಟ್ಟ. ಅಪಾಯಕಾರಿ ಪ್ರಾಣಿಗಳು ಹತ್ತಿರ ಸುಳಿಯುವ ಸಂದರ್ಭದಲ್ಲಿ ಯಾವ ಪಕ್ಷಿ ಮತ್ತು ಪ್ರಾಣಿಗಳು ಹೇಗೆ ಸೂಚನೆ ನೀಡುತ್ತವೆ, ಅವುಗಳ ಧ್ವನಿ ಹೇಗಿರುತ್ತದೆ ಎಂಬುದನ್ನ ಅನುಕರಣೆ ಮಾಡಿ ತೋರಿಸಿಕೊಟ್ಟ. ಕಾಡಿನಲ್ಲಿ ದಿಕ್ಕು ತಪ್ಪಿದಾಗ ಅನುಸರಿಸಬೇಕಾದ ಕ್ರಮ, ಸೊಳ್ಳೆ, ಜೇನು ನೊಣ ಮುಂತಾದ ಕ್ರಿಮಿ ಕೀಟಗಳ ಕಡಿತದಿಂದ ತಪ್ಪಿಸಿಕೊಳ್ಳಲು ಯಾವ ಗಿಡದ ಸೊಪ್ಪಿನ ರಸವನ್ನು ಶರೀರಕ್ಕೆ ಲೇಪಿಸಬೇಕೆಂಬುದನ್ನು ಸಹ ಕಾರ್ಬೆಟ್ ಸೈನಿಕರಿಗೆ ಮನವರಿಕೆ ಮಾಡಿಕೊಟ್ಟ. ಹಸಿವು, ನೀರಡಿಕೆ ಇವುಗಳನ್ನು ನೀಗಿಸುವ ಸಹಕಾರಿಯಾಗುವ ಕಾಡಿನಲ್ಲಿ ದೊರೆಯಬಹುದಾದ ಹಣ್ಣು ಹಂಪಲಗಳ ಬಗ್ಗೆ ಮಾಹಿತಿ ನೀಡಿದ. ಮಳೆಕಾಡುಗಳಲ್ಲಿ  ಮನುಷ್ಯರಿಗೆ ಎದುರಾಗುವ ಅತಿದೊಡ್ಡ ಸಮಸ್ಯೆಯೆಂದರೆ, ಜಿಗಣೆಗಳ ಕಾಟ. ಇವುಗಳ ನಿವಾರಣೆಗೆ ಪ್ರತಿಯೊಬ್ಬ ಸೈನಿಕ ತನ್ನ ಬಳಿ ತಂಬಾಕು ಮತ್ತು ಸುಣ್ಣವನ್ನು  ಇಟ್ಟುಕೊಳ್ಳುವಂತೆ ಸೂಚಿಸಿದ.

ಜೊತೆಗೆ ಸರ್ಕಾರದ ಮನವೊಲಿಸಿ ಪ್ರತಿಯೊಬ್ಬ ಸೈನಿಕನು ತನ್ನ ಕಾಲುಗಳ ಮಂಡಿಯವರೆಗೂ ಸುತ್ತಿಕೊಳ್ಳಲು ನುಣುಪಾದ ರೇಷ್ಮೆಯ ಬಟ್ಟೆಯನ್ನು ಒದಗಿಸಿಕೊಟ್ಟ. ಜಿಗಣೆಗಳಿಗೆ ಹಿಡಿತ ಸಿಗಲಾರದೆ ಕಾಲಿಗೆ ಹತ್ತಿಕೊಳ್ಳಲಾರವು ಎಂಬುದು ಕಾರ್ಬೆಟ್ ತನ್ನ ಅನುಭವದಲ್ಲಿ ಕಂಡುಕೊಂಡ ಸತ್ಯವಾಗಿತ್ತು. ಹೀಗೆ ಬ್ರಿಟಿಷ್ ಮತ್ತು ಭಾರತೀಯ ಸೈನಿಕರನ್ನು ಸಜ್ಜುಗೊಳಿಸಿ, ಬರ್ಮಾದ ಯುದ್ದ ಭೂಮಿಗೆ ಕಳಿಸಿಕೊಟ್ಟ ಜಿಮ್ ಕಾರ್ಬೆಟ್, ಆ ಬೇಸಿಗೆಯ ದಿನಗಳಲ್ಲಿ ತನ್ನ ವೃದ್ಧಾಪ್ಯವನ್ನು ಲೆಕ್ಕಿಸದೆ ಬರ್ಮಾಕ್ಕೆ ತೆರಳಿ ಸೈನಿಕರ ಆಹಾರ ಸರಬರಾಜು ವ್ಯವಸ್ಥೆಯ ಉಸ್ತುವಾರಿಗೆ ನಿಂತ. ಆ ವೇಳೆಗೆ ಅವನ ವಯಸ್ಸು ಎಪ್ಪತ್ತು ವರುಷಗಳು. 1945ರಲ್ಲಿ ಜಪಾನ್ ಮತ್ತು ಜರ್ಮನಿ ರಾಷ್ಟ್ರಗಳ ಸೋಲಿನಿಂದ ಎರಡನೇ ಮಹಾಯುದ್ಧ ಕೊನೆಗೊಂಡಾಗ, ಭಾರತದ ಬ್ರಿಟಿಷ್ ಸರ್ಕಾರ ಜಿಮ್ ಕಾರ್ಬೆಟ್‌ನ ಸೇವೆಯನ್ನು ಮನ್ನಿಸಿ ಆತನಿಗೆ ’ಕಂಪಾನಿಯನ್ ಆಫ್ ದ ಇಂಡಿಯನ್ ಎಂಪೈರ್’ ಎಂಬ ಭಾರತದ ಅತ್ಯನ್ನುತ ಮಿಲಿಟರಿ ಗೌರವ ನೀಡಿ ಸನ್ಮಾನಿಸಿತು.

                                                                                       (ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ -26)


– ಡಾ.ಎನ್.ಜಗದೀಶ್ ಕೊಪ್ಪ 


 

ಉತ್ತರ ಭಾರತದ ಅರಣ್ಯ ಮತ್ತು ಅದರೊಳಗಿನ ಜೀವಸಂಕುಲಗಳ ರಕ್ಷಣೆಗಾಗಿ ಜಿಮ್ ಕಾರ್ಬೆಟ್ ಕೈಗೊಂಡ ಅಭಿಯಾನ ಅವನಿಗೆ ನಿರೀಕ್ಷೆಗೂ ಮೀರಿ ಯಶಸ್ಸನ್ನು ತಂದು ಕೊಟ್ಟಿತು. ಭಾರತದ ಬ್ರಿಟಿಷ್ ಸರ್ಕಾರ, ಅರಣ್ಯ ಕುರಿತಂತೆ ಅರಣ್ಯಾಧಿಕಾರಿಗಳಿಗೆ ತರಬೇತಿ ಮತ್ತು ಮಾಹಿತಿ ನೀಡಲು ಕಾರ್ಬೆಟ್‌ನನ್ನು ನಿಯೋಜಿಸಿತು. 1930ರ ದಶಕದಲ್ಲಿ ಭಾರತದಲ್ಲಿ ಸಾಮಾನ್ಯ ಹುದ್ದೆಗಳನ್ನು ಹೊರತು ಪಡಿಸಿದರೆ, ಮುಖ್ಯವಾದ ಹುದ್ದೆಗಳು ಬ್ರಿಟಿಷರ ಅಧೀನದಲ್ಲಿದ್ದವು. ಇಲ್ಲಿ ಅರಣ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಹುತೇಕ ಬ್ರಿಟಿಷ್ ಅಧಿಕಾರಿಗಳು ಭಾರತದ ಅರಣ್ಯವೆಂದರೆ, ಬೆಚ್ಚಿಬೀಳುತ್ತಿದ್ದರು. ಶೀತಪ್ರದೇಶವಾದ ಇಂಗ್ಲೆಂಡ್‌ನಿಂದ ಬಂದ ಅವರು, ಭಾರತದ ಉಷ್ಣವಲಯದ ಕಾಡುಗಳ ಸಸ್ಯ ವೈವಿಧ್ಯ, ತರಾವರಿ ಹಾವುಗಳು, ವಿಷಜಂತುಗಳು, ಅಪಾಯಕಾರಿ ಪ್ರಾಣಿಗಳು ಇವುಗಳಿಂದ ಭಯ ಭೀತರಾಗುತ್ತಿದ್ದರು.

ಹೀಗೆ ಅರಣ್ಯ ಮತ್ತು ತನ್ನ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆಗೆ ಪಣತೊಟ್ಟು ದುಡಿಯುತ್ತಿದ್ದಂತೆ ಕಾರ್ಬೆಟ್ ಅರವತ್ತನೇ ವರ್ಷಕ್ಕೆ ಕಾಲಿಟ್ಟ. ಇದೇ ವೇಳೆಗೆ 85 ವರ್ಷ ದಾಟಿದ ಅವನ ಹಿರಿಯ ಮಲಸಹೋದರಿ ಡೊಯಲ್ ವೃದ್ಧಾಪ್ಯದ ಕಾರಣದಿಂದ ಮಾನಸಿಕ ಸಮತೋಲನ ಕಳೆದುಕೊಂಡಳು. ಅವಳನ್ನು ನಿಯಂತ್ರಿಸುವುದು ಕಾರ್ಬೆಟ್ ಮತ್ತು ಅವನ ಅಕ್ಕ ಮ್ಯಾಗಿಗೆ ಕಷ್ಟವಾಯಿತು. ಡೊಯಲ್ ಕೆಲವೊಮ್ಮೆ ತೊಟ್ಟಿದ್ದ ಬಟ್ಟೆಯನ್ನು ಕಳಚಿ ಮನೆಯ ಗೇಟ್ ದಾಟಿಬಿಡುತ್ತಿದ್ದಳು. ಇದು ಕಾರ್ಬೆಟ್‌ಗೆ ತೀರಾ ಮುಜುಗರವನ್ನುಂಟು ಮಾಡುತ್ತಿತ್ತು. ಅವಳನ್ನು ನಿಯಂತ್ರಿಸಲು. ಭಾರತೀಯ ಮೂಲದ ನಾಲ್ಕು ಸೇವಕಿಯರನ್ನು ನೇಮಕಮಾಡಿಕೊಂಡಿದ್ದ.  ಡೊಯಲ್ ಒಂದು ವರ್ಷ ಕಾಯಿಲೆಯಿಂದ ಬಳಲಿ ನಂತರ ಅಸುನೀಗಿದಾಗ, ಅಕ್ಕ ತಮ್ಮ ಇಬ್ಬರೂ, ಅವಳ ಸಾವಿನ ಸಂಕಟದ ನಡುವೆಯೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಡೊಯಲ್ ಸಾವಿನೊಂದಿಗೆ 1857ರ ಸಿಪಾಯಿ ದಂಗೆಗೆ ಸಾಕ್ಷಿಯಾಗಿದ್ದ ಕಡೆಯ ಜೀವವೊಂದು ಕಳಚಿಬಿದ್ದಂತಾಯಿತು. ಕಾರ್ಬೆಟ್‌ನ ತಾಯಿ ಮೇರಿ ಮೊದಲ ಪತಿಯಿಂದ ಪಡೆದಿದ್ದ ಮೂವರು ಮಕ್ಕಳಲ್ಲಿ ಡೊಯಲ್ ಕೂಡ ಒಬ್ಬಳಾಗಿದ್ದಳು. ಮೇರಿಯ ಮೊದಲ ಪತಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆಗ್ರಾದಲ್ಲಿ ನಡೆದ 1857ರ ಸಿಪಾಯಿ ದಂಗೆ  ಹೋರಾಟದಲ್ಲಿ ಭಾರತೀಯ ಸಿಪಾಯಿಗಳ ಕೈಯಲ್ಲಿ ಹತ್ಯೆಯಾದಾಗ, ಬಾಲಕಿಯಾಗಿದ್ದ ಡೊಯಲ್ ತಾಯಿಯ ಜೊತೆ ನೈನಿತಾಲ್ ಗಿರಿಧಾಮ ಸೇರಿಕೊಂಡಿದ್ದಳು. ಕಾರ್ಬೆಟ್‌ನ ಪಾಲಿಗೆ ಹಿರಿಯಕ್ಕನಂತೆ ಇದ್ದ ಈಕೆ ಜೀವನ ಪೂರ್ತಿ ಅವಿವಾಹಿತಳಾಗಿ ಉಳಿದಳು.

ಡೊಯಲ್‌ನ ಸಾವಿನ ನಂತರ ಕಾರ್ಬೆಟ್ ಕುಟುಂಬದಲ್ಲಿ ಮ್ಯಾಗಿ ಮತ್ತು ಕಾರ್ಬೆಟ್ ಮಾತ್ರ ಉಳಿದುಕೊಂಡರು. ಉಳಿದ ಸಹೋದರ ಸಹೋದರಿಯರು ಉದ್ಯೋಗ ನಿಮಿತ್ತ ಇಂಗ್ಲೆಂಡ್, ಆಫ್ರಿಕಾ, ಕೀನ್ಯಾ ಮುಂತಾದ ಕಡೆ ವಲಸೆ ಹೊರಟು ಅಂತಿಮವಾಗಿ ಅಲ್ಲಿಯೇ ನೆಲೆ ನಿಂತರು. ಕಾರ್ಬೆಟ್‌ನಂತೆ ಮ್ಯಾಗಿ ಕೂಡ ಸರಳ ಜೀವನ ಮೈಗೂಡಿಸಿಕೊಂಡಿದ್ದಳು. ಸರಳವಾದ ಉಡುಪುಗಳನ್ನು ಧರಿಸುತ್ತಿದ್ದಳು. ವಿಶೇಷ ಕಾರ್ಯಕ್ರಮಗಳು ಇಲ್ಲವೇ ಔತಣಕೂಟಗಳಿಗೆ ಮಾತ್ರ ಒಳ್ಳೆಯ ಉಡುಪು ಧರಿಸುತ್ತಿದ್ದಳು. ಮನೆಯಲ್ಲಿ ಸೇವಕ, ಸೇವಕಿಯರು ಇದ್ದ ಕಾರಣ ಆಕೆಗೆ ಮನೆಗೆಲಸದ ಒತ್ತಡಗಳು ಇರಲಿಲ್ಲ. ಮ್ಯಾಗಿ ಕೂಡ ಕಾರ್ಬೆಟ್ ನಂತೆ ಹಿಂದಿ ಸೇರಿದಂತೆ ಸ್ಥಳಿಯ ಭಾಷೆಗಳನ್ನು ಅಸ್ಖಲಿತವಾಗಿ ಮಾತನಾಡುವುದನ್ನ ಕಲಿತಿದ್ದಳು. ಇದು ಆಕೆಗೆ ಸ್ಥಳೀಯ ಸೇವಕರೊಂದಿಗೆ ನಿಕಟ ಸಂಬಂಧ ಹೊಂದಲು ಸಾಧ್ಯವಾಯಿತು. ಮ್ಯಾಗಿಯ ಬದುಕು ತಮ್ಮನ ಹಾಗೆ ಸರಳತೆಯಿಂದ ಕೂಡಿದ್ದರೂ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮತ್ತು ಶುದ್ಧವಾದ ಗಾಳಿ ಬೆಳಕು ಸದಾ ಮನೆಯೊಳಗೆ ಇರುವಂತೆ ನೋಡಿಕೊಳ್ಳುತ್ತಿದ್ದಳು. ಅದರಂತೆ ಮನೆಯನ್ನು ಆಕೆ ಸದಾ ಸುಸ್ಥಿತಿಯಲ್ಲಿ ಇಟ್ಟಿದ್ದ ಕಾರಣ. ಅವಳು ಮತ್ತು ಕಾರ್ಬೆಟ್ ವಾಸಿಸುತ್ತಿದ್ದ ಗಾರ್ನಿಹೌಸ್ ಬಂಗಲೆ ನೈನಿತಾಲ್ ಪಟ್ಟಣದಲ್ಲಿ ಹೆಸರುವಾಸಿಯಾಗಿತ್ತು.

ಆ ವೇಳೆಗಾಗಲೇ ನೈನಿತಾಲ್ ಪಟ್ಟಣಕ್ಕೆ ವಿದ್ಯುತ್ ಬಂದಿದ್ದರೂ ಕೂಡ ಯಾವುದೇ ಆಡಂಬರದ ಬದುಕು ಅವರದಾಗಿರಲಿಲ್ಲ. ಮನೆಯಲ್ಲಿ ಸಾಕಿಕೊಂಡಿದ್ದ, ಆನೆ, ಕುದುರೆ, ನಾಯಿ, ಬಗೆಬಗೆಯ ಪಕ್ಷಿಗಳು ಇವುಗಳ ಮೇಲ್ವಿಚಾರಣೆಗೆ ಸೇವಕರು, ಅವರ ಕುಟುಂಬಗಳು. ಎಲ್ಲರೂ ಸೇರಿ ಕಾರ್ಬೆಟ್ ಕುಟುಂಬ ಒಂದು ಮಿನಿ ಭಾರತವಿದ್ದಂತೆ ಇತ್ತು. ಸೇವಕರ ಮಕ್ಕಳ ಶಾಲಾ ಶುಲ್ಕ, ಅವರ ಬಟ್ಟೆ, ಪುಸ್ತಕ ಇವುಗಳ ಖರ್ಚನ್ನು ಸ್ವತಃ ಕಾರ್ಬೆಟ್ ಭರಿಸುತ್ತಿದ್ದ. ಮಳೆಗಾಲ ಮತ್ತು ಚಳಿಗಾಲದಲ್ಲಿ ಯಾರಾದರೂ ಕಾಯಿಲೆ ಬಿದ್ದರೆ, ಮನೆಯಲ್ಲಿ ಇರುತ್ತಿದ್ದ ಔಷಧಿಗಳ ಜೊತೆ, ರೋಗಿಗಳನ್ನು ತಾಯಿಯಂತೆ ಉಪಚರಿಸುವ ಗುಣವನ್ನು ಸಹೋದರಿ ಮ್ಯಾಗಿ ಮೈಗೂಡಿಸಿಕೊಂಡಿದ್ದಳು.

ಕಾರ್ಬೆಟ್ ರೂಢಿಸಿಕೊಂಡಿದ್ದ ಪರಿಸರ ರಕ್ಷಣೆಯ ಗುಣದಿಂದಾಗಿ ಅವನಿಗೆ ದೂರದ ದೆಹಲಿಯ ವೈಸ್‌ರಾಯ್ ಕುಟುಂಬವೂ ಸೇರಿದಂತೆ, ಹಲವು ಉನ್ನತ ಅಧಿಕಾರಿಗಳ ಕುಟುಂಬದಿಂದ ಔತಣ ಕೂಟಕ್ಕೆ ಆಹ್ವಾನ ಬರುತ್ತಿತ್ತು. ಅಂತಹ ಸಂದರ್ಭದಲ್ಲಿ ತನ್ನ ಅಕ್ಕ ಮ್ಯಾಗಿಯನ್ನು ಕಾರ್ಬೆಟ್ ಜೊತೆಯಲ್ಲಿ ದೆಹಲಿಗೆ ಕರೆದೊಯ್ಯುತ್ತಿದ್ದ. ಔತಣಕೂಟ ತಡರಾತ್ರಿವರೆಗೂ ನಡೆಯುತ್ತಿತ್ತು. ಜಿಮ್ ಕಾರ್ಬೆಟ್ ಅಲ್ಲಿ ಶಿಕಾರಿ ಕಥೆಗಳನ್ನು, ಹಾಗೂ ಅವನು ಬೇಟೆಯಾಡಿದ ನರಹಂತಕ ಚಿರತೆಗಳ ಕಥೆಯನ್ನು ರೋಮಾಂಚಕಾರಿಯಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಿದ್ದ. ಅವನ ಸಾಹಸದ ಕಥೆಗಳನ್ನು ಇಡೀ ಶರೀರವನ್ನು ಕಿವಿಯಾಗಿಸಿಕೊಂಡು ಅಧಿಕಾರಿಗಳ ಕುಟುಂಬದ ಸದಸ್ಯರು ಆಲಿಸುತ್ತಿದ್ದರು. ಇಂತಹ ಅದ್ಬುತ ರೋಮಾಂಚಕಾರಿ ಕಥನಗಳನ್ನು ನೀವು ಏಕೆ ಬರೆದು ದಾಖಲಿಸಬಾರದು? ಎಂಬ ಪ್ರಶ್ನೆ ಅಧಿಕಾರಿಯೋರ್ವನ ಪತ್ನಿಯಿಂದ ಬಂದಾಗ, ಆಕ್ಷಣಕ್ಕೆ  ಕಾರ್ಬೆಟ್‌ಗೆ ಹೌದೆನಿಸಿತು. ಹೌದು ಬರೆಯಲೇ ಬೇಕು. ಬರೆಯುತ್ತೀನಿ ಎಂದು ಆಕೆ ಆಶ್ವಾಸನೆ ನೀಡಿದ. ಹಾಗಾಗಿ ಕಾರ್ಬೆಟ್ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಅನುಭವಗಳನ್ನು ದಾಖಲಿಸಲು ನಿರ್ಧರಿಸಿದ.

1931ರ “ದ ಹಂಟರ್ ಆನ್ಯುಯಲ್” ಎಂಬ ಪತ್ರಿಕೆಯಲ್ಲಿ ಕಾರ್ಬೆಟ್ ’ಪಿಪಾಲ್ ಪಾನಿ ಟೈಗರ್’ ಎಂಬ ಹುಲಿಯೊಂದನ್ನು ಬೇಟೆಯಾಡಿದ ಪ್ರಸಂಗವನ್ನು ಪ್ರಥಮವಾಗಿ ಬರೆದು ಪ್ರಕಟಿಸಿದ. ಈ ರೋಚಕ ಅನುಭವಕ್ಕೆ ಪೂರಕವಾಗಿ ಪತ್ರಿಕೆಯ ಸಂಪಾದಕ ಶಿಕಾರಿ ಕುರಿತಂತೆ ಅರ್ಥಪೂರ್ಣ ಲೇಖನವೊಂದನ್ನು ಸಹ ಬರೆದಿದ್ದ. ಇದರಿಂದಾಗಿ ಕಾರ್ಬೆಟ್‌ನ ಮೊದಲ ಬರಹಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಜೊತೆಗೆ ಅವನಿಗ ಬರವಣಿಗೆ ಕುರಿತಾಗಿ ಆತ್ಮವಿಶ್ವಾಸ ಹೆಚ್ಚಿಸಿತು. ನಂತರ ನೈನಿತಾಲ್ ಗಿರಿಧಾಮದಲ್ಲಿ ಪ್ರಕಟವಾಗುತ್ತಿದ್ದ “ನೈನಿತಾಲ್ ರಿವ್ಯೂ ಆಪ್ ದ ವೀಕ್ಲಿ” ಪತ್ರಿಕೆಗೆ ಪರಿಸರ ರಕ್ಷಣೆ ಮತ್ತು ಕುಮಾವನ್ ಪ್ರಾಂತ್ಯದ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರಂತರವಾಗಿ ಲೇಖನಗಳನ್ನು ಬರೆಯಲು ಆರಂಭಿಸಿದ. ಈ ಪತ್ರಿಕೆ ನೈನಿತಾಲ್ ಗಿರಿಧಾಮದ ಆಂಗ್ಲ ಸಮುದಾಯದಲ್ಲಿ ಜನಪ್ರಯತೆ ಪಡೆದಿತ್ತು. ಅಲ್ಲದೆ, ಬೇಸಿಗೆಯಲ್ಲಿ ನೈನಿತಾಲ್‌ಗೆ ಬರುತ್ತಿದ್ದ ದೆಹಲಿಯ ಬ್ರಿಟಿಷ್ ಅಧಿಕಾರಿಗಳು ಈ ಪತ್ರಿಕಗೆ ಚಂದದಾರರಾಗಿದ್ದರು. ಕಾರ್ಬೆಟ್ ಪತ್ರಿಕೆಯಲ್ಲಿ ಏನೇ ಬರೆದರೂ ಅದು ದೂರದ ದೆಹಲಿಗೆ ತಲುಪುತಿತ್ತು.

ಈ ವೇಳೆಯಲ್ಲಿ ಭಾರತ ಉಪಖಂಡದ ಗೌರ್ನರ್ ಆಗಿದ್ದ ಸರ್ ಮಾಲ್ಕಮ್‌ ಹೈಲಿ ಎಂಬಾತ ಭಾರತದ ಅರಣ್ಯಗಳನ್ನು ಸಂರಕ್ಷಿಸುವ ಕುರಿತಂತೆ ಗಂಭೀರವಾಗಿ ಆಲೋಚನೆ ಮಾಡಿ, ಜಿಮ್ ಕಾರ್ಬೆಟ್ ಮತ್ತು ಆರ್ಕ್ಷ್‌ಪರ್ಡ್ ವಿ.ವಿ.ಯ ಕಾನೂನು ಪದವೀಧರ ಹಸನ್ ಅಬಿದ್ ಜಪ್ರಿ ಇವರನ್ನು ಭಾರತೀಯ ವನ್ಯ ಮೃಗ ರಕ್ಷಣೆ ಕುರಿತ ಇಲಾಖೆಗೆ ಗೌರವ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ. ಅಬಿದ್ ಜಪ್ರಿ ಕಾನೂನು ಪದವೀಧರನಾಗಿದ್ದ. ಕಾರ್ಬೆಟ್ ಅರಣ್ಯ ಮತ್ತು ವನ್ಯ ಜೀವಿಗಳ ತಜ್ಞನಾದುದರ ಫಲವಾಗಿ ಈ ಇಬ್ಬರೂ ತಜ್ಞರು ವನ್ಯ ಮೃಗ ರಕ್ಷಣೆಗೆ  ಕಾನೂನು ಸೇರಿದಂತೆ ಹಲವಾರು ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದರು.

‘ಇಂಡಿಯನ್ ವೈಲ್ಡ್ ಲೈಪ್’ ಹೆಸರಿನ ಪತ್ರಿಕೆಯೊಂದನ್ನು ರೂಪಿಸಿ, ಅಬಿದ್ ಜಪ್ರಿ ಸಂಪಾದಕತ್ವದಲ್ಲಿ ಪ್ರಕಟಿಸಲು ಆರಂಭಿಸಿದರು. ಈ ಪತ್ರಿಕೆಯಲ್ಲಿ ಭಾರತದ ಉಷ್ಣವಲಯದ ಅರಣ್ಯ ಮತ್ತು ಅವುಗಳ ವೈಶಿಷ್ಟ್ಯ, ಅಲ್ಲಿ ವಾಸಿಸುವ ಪ್ರಾಣಿಗಳ ವೈವಿಧ್ಯತೆ ಮತ್ತು ಅವುಗಳ ಜೀವನ ಚಕ್ರ ಹೀಗೆ ಎಲ್ಲಾ ಮಾಹಿತಿಗಳು ಇರುತ್ತಿದ್ದವು. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ಪಾಲಿಗೆ ಮಾರ್ಗದರ್ಶಿಯಂತಿತ್ತು.
ಗೌರ್ನರ್ ಸರ್ ಮಾಲ್ಕಮ್ ಹೈಲಿ ಕೂಡ ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳವನಾಗಿದ್ದ. ಇದರ ಸದುಪಯೋಗ ಪಡಿಸಿಕೊಂಡ ಕಾರ್ಬೆಟ್, ಕಲದೊಂಗಿ ಮತ್ತು ಚೋಟಿ ಹಲ್ದಾನಿಗೆ ಸನೀಹದಲ್ಲಿ ಇದ್ದ ಸಾವಿರಾರು ಎಕರೆ ಅರಣ್ಯ ಪ್ರದೇಶವನ್ನು ಅಭಯಾರಣ್ಯವಾಗಿ ಮಾರ್ಪಡಿಸುವ ಪ್ರಸ್ತಾಪವನ್ನು ಗೌರ್ನರ್ ಮುಂದಿಟ್ಟ. ಭಾರತದಂತಹ ಸೀಮಿತ ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಪ್ರಾಣಿಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಾರ್ಬೆಟ್ ಇಂತಹ ಕೃತ್ಯಗಳಿಂದ ಅರಣ್ಯದಲ್ಲಿ ವನ್ಯಮೃಗಗಳ ಸಮತೋಲನ ಕಾಯ್ದುಕೊಳ್ಳುವುದು ಕಷ್ಟ ಎಂಬ ವಿಷಯವನ್ನು ಮಾಲ್ಕಮ್ ಹೈಲಿ ಮನವರಿಕೆ ಮಾಡಿಕೊಟ್ಟ. ಉತ್ತರ ಭಾರತದ ಅರಣ್ಯಗಳಲ್ಲಿ ಮೋಜಿಗಾಗಿ ಹಲವಾರು ಸಂಸ್ಥಾನಗಳ ಮಹಾರಾಜರು ಮತ್ತು ಬ್ರಿಟಿಷ್ ಅಧಿಕಾರಿಗಳು ಬೇಟೆಯಾಡುತ್ತಿರುವುದನ್ನು ಕಂಡು ಸ್ವತಃ ಅರಣ್ಯಾಧಿಕಾರಿಗಳ ಜಗಳವಾಡಿ ಮನಸ್ತಾಪ ಕಟ್ಟಿಕೊಂಡಿದ್ದ ಜಿಮ್ ಕಾರ್ಬೆಟ್‌ಗೆ, ಭಾರತದಲ್ಲಿ ಆಯ್ದ ಕೆಲವು ಅರಣ್ಯ ಪ್ರದೇಶಗಳನ್ನು ಕನಿಷ್ಟ ಐದು ವರ್ಷಗಳ “ಕಾಲ ಅಭಯಾರಣ್ಯೆ” ಎಂದು ಘೋಷಿಸಿ ಪ್ರಾಣಿಗಳ ಬೇಟೆಯನ್ನು ನಿಷೇಧಿಸಬೇಕು ಎಂಬುದು ಅವನ  ಮಹದಾಸೆಯಿತ್ತು.

ಆಫ್ರಿಕಾದ ಅರಣ್ಯಗಳಲ್ಲಿ ಬೇಟೆಯಾಡಿ ಅನುಭವವಿದ್ದ ಕಾರ್ಬೆಟ್‌ಗೆ ಅಲ್ಲಿನ ಲಕ್ಷಾಂತರ ಹೆಕ್ಟೇರ್ ಪ್ರದೇಶದ ವಿಸ್ತೀರ್ಣದ ಬಗ್ಗೆ ಮತ್ತು ಭಾರತದ ಸೀಮಿತ ಅರಣ್ಯ ಪ್ರದೇಶದ ವೈವಿಧ್ಯಮಯ ಸಸ್ಯ ಸಂಪತ್ತು, ವನ್ಯ ಜೀವಿಗಳ ಕುರಿತು ಮಾಹಿತಿ ಇತ್ತು. ಇದನ್ನು ಗೌರ್ನರ್‌ಗೆ ಮನವರಿಕೆ ಮಾಡಿಕೊಟ್ಟ. ಇದರ ಫಲವಾಗಿ ಕಲದೊಂಗಿ ಸಮೀಪದ ಮುನ್ನೂರು ಚದುರ ಕಿಲೋಮೀಟರ್ ಅರಣ್ಯ ಪ್ರದೇಶವನ್ನು ಭಾರತ ಸರ್ಕಾರ 1934ರಲ್ಲಿ ಅಭಯಾರಣ್ಯ ಎಂದು ಅಧಿಕೃತವಾಗಿ ಘೋಷಿಸಿತು. ಈ ಅರಣ್ಯದ ನಡುವೆ ರಾಮಗಂಗಾ ನದಿ ಹರಿಯುತ್ತಿದ್ದು, ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಊರಿಗೆ ರಾಮ್‌ನಗರ್ ಎಂಬ ಹೆಸರು ಬಂದಿದೆ. ಈಗ ಪಟ್ಟಣವಾಗಿ ಬೆಳೆದಿರುವ ರಾಮ್‌ನಗರ್‌ನಲ್ಲಿ ಅಭಯಾರಣ್ಯದ ಉಸ್ತುವಾರಿ ನೋಡಿಕೊಳ್ಳಲು ಅರಣ್ಯ ಕಚೇರಿಯನ್ನು ತೆರೆಯಲಾಗಿದೆ.

1974ರಲ್ಲಿ ರಾಮಗಂಗಾ ನದಿಗೆ ಅಣೆಕಟ್ಟು ನಿರ್ಮಿಸಿದರ ಫಲವಾಗಿ 54 ಹೆಕ್ಟೇರ್ ಅರಣ್ಯ ಪ್ರದೇಶ ಹಿನ್ನಿರಿನಲ್ಲಿ ಮುಳುಗಡೆಯಾಯಿತು. ಈ ನಷ್ಟವನ್ನು ಸರಿದೂಗಿಸಲು ಭಾರತ ಸರ್ಕಾರ ಮತ್ತೇ ಇನ್ನೂರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅಭಯಾರಣ್ಯಕ್ಕೆ ಸೇರ್ಪಡೆ ಮಾಡಿತು. 1955ರಲ್ಲಿ ಜಿಮ್ ಕಾರ್ಬೆಟ್ ನಿಧನ ಹೊಂದಿದ ನಂತರ 1957ರಲ್ಲಿ ಹುಲಿಗಳ ರಕ್ಷಿತ ತಾಣವಾಗಿದ್ದ ಈ ಪ್ರದೇಶವನ್ನು ಜಿಮ್ ಕಾರ್ಬೆಟ್ ಅಭಯಾರಣ್ಯ ಎಂದು ಭಾರತ ಸರ್ಕಾರ ನಾಮಕರಣ ಮಾಡಿದೆ. ವಾಸ್ತವವಾಗಿ ಜಿಮ್ ಕಾರ್ಬೆಟ್‌ಗಿಂತ ಮೊದಲು ಈ ಪ್ರಾಂತ್ಯದಲ್ಲಿ ಅರಣ್ಯಾಧಿಕಾರಿಗಳಾಗಿದ್ದ ಇ.ಆರ್.ಸ್ಟೀವನ್ ಮತ್ತು ಇ.ಎ.ಸ್ಮಿತೀಸ್ ಎಂಬುವರು ಈ ಅರಣ್ಯ ಪ್ರದೇಶವನ್ನು ಆಭಯಾರಣ್ಯ ಎಂದು ಘೋಷಿಸಲು ಸರ್ಕಾರಕ್ಕೆ 1924 ಮತ್ತು 1927ರಲ್ಲಿ ಶಿಫಾರಸ್ಸು ಮಾಡಿದ್ದರು. ಆದರೆ, ಕಾರ್ಬೆಟ್‌ನ ಆತ್ಮೀಯ ಗೆಳೆಯ ಹಾಗೂ ತಾಂಜೇನಿಯಾದ ಕೃಷಿ ತೋಟದ ಪಾಲುದಾರ, ವಿಂದಮ್ ಕುಮಾವನ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿದ್ದ ವೇಳೆ ಇವರ ಶಿಫಾರಸ್ಸುಗಳನ್ನ ತಿರಸ್ಕರಿಸಿದ್ದನು. ಏಕೆಂದರೆ, ಸ್ವತಃ ಬೇಟೆಗಾರನಾಗಿದ್ದ ವಿಂದಮ್‌ಗೆ ವನ್ಯಮೃಗಗಳ ಶಿಕಾರಿ ಎಂಬುದು ಹವ್ಯಾಸವಾಗಿರದೆ ವ್ಯಸನವಾಗಿತ್ತು. ಅಂತಿಮವಾಗಿ ಆ ಇಬ್ಬರು ಅಧಿಕಾರಿಗಳ ಕನಸು ಕಾರ್ಬೆಟ್ ಮೂಲಕ ನೆನಸಾಯಿತು.

ಈಗ ಉತ್ತರಾಂಚಲ ರಾಜ್ಯಕ್ಕೆ ಸೇರಿರುವ ಜಿಮ್ ಕಾರ್ಬೆಟ್ ಅಭಯಾರಣ್ಯಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ರಾಮ್‌ನಗರ್ ಪಟ್ಟಣದಲ್ಲಿರುವ ಅರಣ್ಯ ಕಚೇರಿಯಲ್ಲಿ ಅನುಮತಿ ಪಡೆದು ಇಲಾಖೆ ನೀಡುವ ವಾಹನವನ್ನು ಬಾಡಿಗೆ ಪಡೆದು ಅರಣ್ಯವನ್ನು ವೀಕ್ಷಣೆ ಮಾಡಬಹುದು. ಅರಣ್ಯ ಸಫಾರಿಗೆ ನಮ್ಮ ಜೊತೆಯಲ್ಲಿ ಒಬ್ಬ ಅರಣ್ಯ ರಕ್ಷಕನನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು. ಐದು ಜನರ ವಾಹನ ಶುಲ್ಕ 1,200 ರೂಪಾಯಿ, ಅರಣ್ಯ ರಕ್ಷಕನ ಶುಲ್ಕ 300 ರೂ. ಮತ್ತು ಅರಣ್ಯ ಭೇಟಿ ಶುಲ್ಕ 250 ರೂ.ಗಳನ್ನು ಪ್ರವಾಸಿಗರಿಂದ ವಸೂಲಿ ಮಾಡಲಾಗುತ್ತಿದೆ. ಯಾವುದೇ ಆಹಾರ, ಬೆಂಕಿಪೊಟ್ಟಣ, ಸಿಗರೇಟ್  ಮುಂತಾದವುಗಳಿಗೆ ನಿಷೇಧ ಹೇರಲಾಗಿದೆ. ಅಲ್ಲಿನ ಅರಣ್ಯ ಇಲಾಖೆ ಪ್ರವಾಸಿಗರಿಂದ ಅಪಾರ ಪ್ರಮಾಣದಲ್ಲಿ ಹಣ ವಸೂಲಿ ಮಾಡುತ್ತಿದ್ದರೂ ಕೂಡ, ಅಭಯಾರಣ್ಯ ಪ್ರದೇಶವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವಲ್ಲಿ ಸೋತಿದೆ. ಅಲ್ಲಿನ ಅಧಿಕಾರಿಗಳು, ಸಫಾರಿಗೆ ಬಳಸುವ ಖಾಸಾಗಿ ವಾಹನಗಳ ಮಾಲೀಕರ ಜೊತೆ ಕೈ ಜೋಡಿಸಿ, ಪ್ರವಾಸಿಗರಿಂದ ಹಣ ಸುಲಿಯುವುದರಲ್ಲಿ ಮಾತ್ರ ನಿಸ್ಸೀಮರಾಗಿದ್ದಾರೆ. ಇದು ಜಿಮ್ ಕಾರ್ಬೆಟ್‌ನಂತಹ ಅಪ್ರತಿಮ ವ್ಯಕ್ತಿಗೆ ಅಲ್ಲಿನ ಸರ್ಕಾರ ಮಾಡುತ್ತಿರುವ ಅಪಮಾನವಲ್ಲದೆ, ಬೇರೇನೂ ಅಲ್ಲ.

                                                                              (ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-25)


– ಡಾ.ಎನ್.ಜಗದೀಶ್ ಕೊಪ್ಪ


1924ರ ಮೇ 16 ರಂದು ಜಿಮ್ ಕಾರ್ಬೆಟ್‌ನ ತಾಯಿ ಮೇರಿ ಕಾರ್ಬೆಟ್ ತೀರಿಕೊಂಡಾಗ ಇಡೀ ನೈನಿತಾಲ್ ಪಟ್ಟಣದಲ್ಲಿ ಆ ದಿನ ಶೋಕಾಚರಣೆಯನ್ನು ಆಚರಿಸಲಾಯಿತು. ಅಲ್ಲಿನ ಆಂಗ್ಲ ಸಮುದಾಯದಲ್ಲಿ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ಮಹಿಳೆಯಾಗಿದ್ದ ಮೇರಿ ಕಾರ್ಬೆಟ್ ಎಲ್ಲರ ನೋವು, ನಲಿವುಗಳಿಗೆ ಸ್ಪಂದಿಸುವ ಹೃದಯವಂತ ಮಹಿಳೆಯಾಗಿದ್ದಳು. 1857ರ ಸಿಪಾಯಿ ದಂಗೆಯಲ್ಲಿ ತನ್ನ ಪತಿಯನ್ನು ಕಳೆದುಕೊಂಡು ತನ್ನ ಮೂವರು ಮಕ್ಕಳೊಂದಿಗೆ ಆಗ್ರಾ ಕೋಟೆಯನ್ನು ಹಾರಿ ಜೀವ ಉಳಿಸಿಕೊಳ್ಳುವ ಸಲುವಾಗಿ ನೈನಿತಾಲ್ ಸೇರಿದ ಈಕೆ, ನಂತರ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮರು ವಿವಾಹವಾಗಿ, ಕಾರ್ಬೆಟ್ ಕುಟುಂಬಕ್ಕೆ ಆಧಾರಸ್ಥಂಭವಾಗಿ ನಿಂತ ದಿಟ್ಟ ಮಹಿಳೆ ಮೇರಿ. ತನ್ನ ಬದುಕಿನುದ್ದಕ್ಕೂ ಎದುರಿಸಿದ ಹೋರಾಟಗಳು, ಸಂಕಷ್ಟಗಳ ಬಗ್ಗೆ ಪೂರ್ಣ ಅರಿವಿದ್ದ ಮೇರಿ ಸದಾ ಕುಟುಂಬದ ಭದ್ರತೆ ಮತ್ತು ಭವಿಷ್ಯದ ಜೀವನದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಆಕೆಯ ಇಂತಹ ದೃಢನಿರ್ಧಾರದಿಂದಾಗಿ ನೈನಿತಾಲ್ ಗಿರಿಧಾಮದಲ್ಲಿ ಕಾರ್ಬೆಟ್ ಕುಟುಂಬ ಪ್ರತಿಷ್ಟಿತ ಕುಟುಂಬವಾಗಿ ಬೆಳೆಯಲು ಸಾಧ್ಯವಾಯಿತು.

ಮೇರಿಯ ಸಾವು, ಕಾರ್ಬೆಟ್ ಹಾಗೂ ಅವಿವಾಹಿತರಾಗಿ ಉಳಿದುಹೋಗಿದ್ದ, ಸಹೋದರಿ ಮ್ಯಾಗಿ ಮತ್ತು ಮಲಸಹೋದರಿ ಡೊಯಲ್ ಪಾಲಿಗೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿತು. ವಯಸ್ಸಾಗಿದ್ದ ಮೇರಿಯ ಸಾವು ನಿರಿಕ್ಷೀತವಾದರೂ, 60 ವರ್ಷದ ಡೊಯಲ್, 50 ವಯಸ್ಸಿನ ಕಾರ್ಬೆಟ್ ಮತ್ತು 52 ವರ್ಷದ ಮ್ಯಾಗಿ ಇವರೆಲ್ಲರ ಪಾಲಿಗೆ ಆ ವಯಸ್ಸಿನಲ್ಲೂ ಅಕ್ಷರಶಃ ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಇವರೆಲ್ಲರೂ ಅವಿವಾಹಿತರಾಗಿ ಉಳಿದುಕೊಂಡ ಕಾರಣ, ಅವರ ಬೇಕು ಬೇಡಗಳನ್ನು ಪೂರೈಸುವ ಹೊಣೆಗಾರಿಕೆ ಮೇರಿಯದಾಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳು ವಿವಾಹವಾಗದಿದ್ದರೂ, ವಿಚಲಿತಲಾಗದ, ಆಕೆ ಅವರನ್ನು ಎಂದಿಗೂ ಅನೈತಿಕತೆಯ ಹಾದಿ ತುಳಿಯದಂತೆ ಎಚ್ಚರ ವಹಿಸಿ ಘನತೆಯಿಂದ ಬೆಳೆಸಿದ್ದಳು.

ತಾಯಿಯ ನಿಧನಾನಂತರ ನಿಧಾನವಾಗಿ ಚೇತರಿಸಿಕೊಂಡ ಕಾರ್ಬೆಟ್ ತಾನು ತನ್ನ ಕೆಲವು ಸೇವಕರೊಂದಿಗೆ ಮೌಂಟ್ ಪ್ಲೆಸೆಂಟ್ ಮೌಂಟೆನ್ ಎಂಬ ತಮ್ಮ ಕುಟುಂಬದ ಇನ್ನೊಂದು ಮನೆಯಲ್ಲಿ ವಾಸಿಸತೊಡಗಿದ. ತನ್ನಿಬ್ಬರು ಸಹೋದರಿಯರು ಗಾರ್ನಿ ಹೌಸ್ ಬಂಗಲೆಯಲ್ಲಿ ವಾಸಿಸತೊಡಗಿದರು. ಈ ನಡುವೆ ಕಾರ್ಬೆಟ್‌ಗೆ ತಾಯಿ ನಿಧನವಾದ ಒಂದು ತಿಂಗಳ ನಂತರ ವೈವಾಹಿಕ ಜೀವನದ ಬಗ್ಗೆ ಆಸಕ್ತಿ ಮೂಡತೊಡಗಿತು. ಅಕಸ್ಮಾತ್ತಾಗಿ ಅವನ ಎದೆಯೊಳೆಗೆ ಪ್ರೀತಿ ಮೊಳಕೆಯೊಡೆದು, ಅದು ಚಿಗುರುವ ಮುನ್ನವೇ ಬಾಡಿಹೋಯಿತು. ನಂತರ ಈ ಘಟನೆ ದುರಂತದಲ್ಲಿ ಅಂತ್ಯ ಕಂಡಿತು.

ಐವತ್ತು ವಯಸ್ಸಿನ ಕಾರ್ಬೆಟ್‌ಗೆ ಆ ಕಾಲದಲ್ಲಿ ವಿವಾಹವಾಗುವುದು ಕಷ್ಟದ ಸಂಗತಿಯಾಗಿರಲಿಲ್ಲ. ಬ್ರಿಟಿಷ್ ಆಳ್ವಿಕೆಯ ಆ ಸಮಯದಲ್ಲಿ ಉತ್ತರ ಭಾರತದಲ್ಲಿ ವಾಸವಾಗಿದ್ದ ಬಹುತೇಕ ಆಂಗ್ಲ ಸಮುದಾಯದ ವಿಧವೆಯರೂ, ವಿಧುರರು ಮರು ವಿವಾಹವಾಗುತ್ತಿದ್ದುದು ಸಾಮಾನ್ಯವಾಗಿತ್ತು. ವಾಸ್ತವವಾಗಿ ಕಾರ್ಬೆಟ್ ತಾಯಿ ಮೇರಿ ಕೂಡ ತನ್ನ ಮೊದಲ ಪತಿಯಿಂದ ಪಡೆದಿದ್ದ ಮೂರು ಮಕ್ಕಳ ಜೊತೆ ಕಾರ್ಬೆಟ್‌ನ ತಂದೆ ಕ್ರಿಷ್ಟೋಪರ್‌ನನ್ನು ಮದುವೆಯಾಗಿದ್ದಳು. ಕಾರ್ಬೆಟ್‌ಗೆ ಇಂತಹ ಅನೇಕ ಆಹ್ವಾನಗಳು ಬಂದರೂ ಕೂಡ ಅವನು ತಿರಸ್ಕರಿಸುತ್ತಾ ಬಂದಿದ್ದ.

ತನ್ನ ತಾಯಿಯ ಸಾವಿನ ನಂತರ ಒಂದು ತಿಂಗಳಲ್ಲೇ 19ರ ಹೆಲನ್ ಎಂಬ ಯುವತಿಯ ಮೋಹಕ್ಕೆ ಒಳಗಾಗಿ ಅವಳನ್ನು ಅಪಾರವಾಗಿ ಪ್ರೀತಿಸತೊಡಗಿದ. ಈಕೆ, ಕಾರ್ಬೆಟ್ ಸ್ನೇಹಿತನಾಗಿದ್ದ ಅರಣ್ಯಾಧಿಕಾರಿಯೊಬ್ಬನ ಹೆಂಡತಿಯ ತಂಗಿಯಾಗಿದ್ದಳು. ಹೆಲನ್ ಇಂಗ್ಲೆಂಡ್‌ನಿಂದ ತನ್ನ ತಂದೆ ತಾಯಿಯ ಜೊತೆ ಪ್ರವಾಸಕ್ಕಾಗಿ ಭಾರತಕ್ಕೆ ಬಂದಾಗ ನೈನಿತಾಲ್ ಗಿರಿಧಾಮದಲ್ಲಿದ್ದ ಅಕ್ಕನ ಮನೆಯಲ್ಲಿ ಕಾರ್ಬೆಟ್‌ನ ಪರಿಚಯ ಬೆಳೆಯಿತು. ನಂತರ ಅವನ ಜೊತೆ ಕಾಡು ಅಲೆಯುವುದು, ಮೀನು ಶಿಕಾರಿಮಾಡುವುದು, ಸಂಜೆ ವೇಳೆ, ಕ್ಲಬ್‌ನಲ್ಲಿ ಟೆನ್ನೀಸ್ ಕ್ರೀಡೆ ಹೀಗೆ ಮೂರು ತಿಂಗಳ ಇವರಿಬ್ಬರ ಒಡನಾಟ ನಿರಂತರ ಮುಂದುವರಿಯಿತು. ಹೆಲನ್‌ಳ ನಡೆ ನುಡಿಯಿಂದ ಆಕರ್ಷಿತನಾದ ಕಾರ್ಬೆಟ್‌ಗೆ ಈಕೆ ನನಗೆ ಸಂಗಾತಿಯಾಗಲು ಸೂಕ್ತ ಹೆಣ್ಣು ಮಗಳು ಎಂದು ಅನಿಸತೊಡಗಿತು. ಹೆಲೆನ್ ಕೂಡ. ಜಿಮ್ ಕಾರ್ಬೆಟ್‌ಗಿದ್ದ ಅಭಿರುಚಿ, ನೈನಿತಾಲ್ ಪಟ್ಟಣದಲ್ಲಿ ಅವನಿಗಿದ್ದ ಗೌರವ ಇವೆಲ್ಲವನ್ನು ಗಮನಿಸಿದ್ದ ಹೆಲನ್ ಮಾನಸಿಕವಾಗಿ ಅವನನ್ನು ಸ್ವೀಕರಿಸಲು ತಯಾರಿದ್ದಳು. ನೈನಿತಾಲ್‌ನ ಜನತೆ ಸಹ ಇವರಿಬ್ಬರ ಗೆಳೆತನ, ತಿರುಗಾಟ ಎಲ್ಲವನ್ನು ಗಮನಿಸಿ, ಅಂತಿಮವಾಗಿ ಜಿಮ್ ಕಾರ್ಬೆಟ್‌ಗೆ ಒಬ್ಬ ಸಂಗಾತಿ ಸಿಕ್ಕಳು ಎಂದು ಮಾತನಾಡಿಕೊಂಡರು. ಆದರೆ ಅವರೆಲ್ಲರ ನಿರೀಕ್ಷೆ ಹುಸಿಯಾಯಿತು. ಒಂದು ದಿನ ಕಾರ್ಬೆಟ್ ತನ್ನ ಗೆಳೆಯರ ಮೂಲಕ ಹೆಲನ್‌ಳನ್ನು ಮದುವೆಯಾಗುವ ಪ್ರಸ್ತಾಪವನ್ನು ಆಕೆಯ ತಂದೆ ತಾಯಿಗಳ ಮುಂದಿಟ್ಟ. ಆದರೆ, ವಯಸ್ಸಿನ ಕಾರಣಕ್ಕಾಗಿ ನೇರವಾಗಿ ಅವನ ಪ್ರಸ್ತಾಪವನ್ನು ತಿರಸ್ಕರಿಸಿದ ಆಕೆಯ ಪೋಷಕರು ಹೆಲನ್ ಜೊತೆ ಇಂಗ್ಲೆಂಡ್‌ಗೆ ತಕ್ಷಣವೇ ಹಿಂತಿರುಗಿಬಿಟ್ಟರು.

ಈ ಘಟನೆ ಮಾನಸಿಕವಾಗಿ ಕಾರ್ಬೆಟ್‌ನನ್ನು ತೀವ್ರ ಅಘಾತಕ್ಕೊಳಪಡಿಸಿತು. ಇದರಿಂದಾಗಿ ಅವನು ಹಲವು ತಿಂಗಳು ಕಾಲ ಮೌನಿಯಾಗಿಬಿಟ್ಟ. ನೋವನ್ನು ಮರೆಯಲು. ತಾಂಜೇನಿಯಾದ ಕೃಷಿತೋಟಕ್ಕೆ ತೆರಳಿ ಸ್ವಲ್ಪದಿನ ಇದ್ದು, ಆಫ್ರಿಕಾದ ಕಾಡುಗಳಲ್ಲಿ ಗೆಳೆಯರ ಜೊತೆ ಶಿಕಾರಿಯಲ್ಲಿ ತೊಡಗಿಕೊಂಡ. ಆದರೂ ಹೆಲನ್‌ಳನ್ನು ಮರೆಯಲು ಅವನಿಂದ ಸಾಧ್ಯವಾಗಲಿಲ್ಲ. ಅದೇ ವೇಳೆಗೆ ತಾಂಜೇನಿಯ ಕೃಷಿ ಪಾರ್ಮ್‌ಗೆ ಅವನ ಪಾಲುದಾರನಾಗಿದ್ದ ವಿಂದಮ್ ಕಿನ್ಯಾ ತ್ಯಜಿಸಿ, ಇಂಗ್ಲೆಂಡಿನ ತನ್ನ ಪೂರ್ವಿಕರ ಮನೆಯಲ್ಲಿ ನೆಲೆಸಿದ್ದ. ಅಂತಿಮವಾಗಿ ಹೆಲನ್ ಮುಂದೆ ತನ್ನ ಪ್ರೀತಿಯನ್ನು ನಿವೇದನೆ ಮಾಡಿಕೊಳ್ಳಲು ಕಾರ್ಬೆಟ್ ನೇರವಾಗಿ ಇಂಗ್ಲೇಂಡ್‌ಗೆ ತೆರಳಿದ. ವಿಂದಮ್ ಮನೆಯಲ್ಲಿದ್ದುಕೊಂಡು ಆಕೆಯನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಅವನಿಗೊಂದು ಅಘಾತಕಾರಿ ಸುದ್ಧಿಯೊಂದು ಕಾದಿತ್ತು. ಎಡಿನ್‌ಬರೊ ನಗರದಲ್ಲಿ ವಾಸವಾಗಿದ್ದ ಹೆಲನ್‌ಗೆ ಆಕೆಯ ಕುಟುಂಬದವರು ವಿವಾಹ ನಿಶ್ಚಯ ಮಾಡಿ, ಸಿದ್ಧತೆಯಲ್ಲಿ ತೊಡಗಿರುವುದನ್ನು ಕಂಡು ನಿರಾಶನಾದ ಕಾರ್ಬೆಟ್, ವಾಪಸ್ ಭಾರತಕ್ಕೆ ಹಿಂತಿರುಗಿದ. ಈ ಘಟನೆಯ ನಂತರ ವಿವಾಹವಾಗುವ ವಿಚಾರವನ್ನು ಶಾಶ್ವತವಾಗಿ ಕಾರ್ಬೆಟ್ ತನ್ನ ಮನಸಿನಿಂದ ತೆಗೆದುಹಾಕಿಬಿಟ್ಟ. ಪ್ರಾಣಿ, ಪಕ್ಷಿ, ಪರಿಸರ, ಮತ್ತು ಈ ನೆಲದ ಸಂಸ್ಕೃತಿಯ ಎಳೆಯ ಮಕ್ಕಳು ಅವನ ಆರಾಧನೆಯ ಕೇಂದ್ರ ಬಿಂದುವಾದರು. ಯಾರಾದರೂ ವಿವಾಹವಾಗುವ ಪ್ರಸ್ತಾಪವನ್ನು ಕಾರ್ಬೆಟ್ ಮುಂದಿಟ್ಟರೆ, ಭಾರತವೇ ನನ್ನ ಪತ್ನಿ, ಇಲ್ಲಿನ ಈ ಮಕ್ಕಳು ನನ್ನ ಮಕ್ಕಳು ಎನ್ನುವುದರ ಮೂಲಕ ಆಹ್ವಾನವನ್ನು ನಿರಾಕರಿಸುತ್ತಿದ್ದ.

ಜಗತ್ತಿನ ಯಾವುದೇ ಧರ್ಮ, ಪುರಾಣಗಳು, ಅಥವಾ ವೇದ ಉಪನಿಷತ್ತುಗಳು ಏನೇ ಹೇಳಲಿ, ಲೌಕಿಕ ಜಗತ್ತಿನ ಮನುಷ್ಯನೊಬ್ಬ ಹಸಿವು, ಮತ್ತು ಕಾಮವನ್ನು ಗೆಲ್ಲುವುದು ಸಾಮಾನ್ಯ ಸಂಗತಿಯೇನಲ್ಲ. ಈ ಕಾರಣಕ್ಕಾಗಿ ಏನೊ? ನಮ್ಮ ಋಷಿಪುಂಗವರು ಅಂತಹ ಸಾಹಸ ಮಾಡಲಾರದೆ, ಪತ್ನಿಯರೊಡನೆ ಕಾಡಿನ ಆಶ್ರಮದಲ್ಲಿ ವಾಸವಾಗಿಬಿಟ್ಟರು. ಕಾರ್ಬೆಟ್‌ಗೆ ವಿಷಯದಲ್ಲೂ ಇಂತಹದ್ದೇ ಅನುಮಾನಗಳು ಕಂಡು ಬರುತ್ತವೆ ಆದರೆ, ಯಾವುದೇ ನಿಖರ ದಾಖಲೆಗಳು ಸಿಗುತ್ತಿಲ್ಲ. ರುದ್ರ ಪ್ರಯಾಗ ಪ್ರಾಂತ್ಯಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿದ್ದ ಇಬ್ಸ್‌ಟನ್ ಪತ್ನಿ ಜೀನ್ ಜೊತೆ ಕಾರ್ಬೆಟ್‌ಗೆ ಸಂಬಂಧವಿತ್ತು ಎಂಬ ಅನುಮಾನಗಳು ಚರಿತ್ರೆಯಲ್ಲಿ ದಾಖಲಾಗಿವೆ. ಇಬ್ಸ್‌ಟನ್ ಕಾರ್ಯನಿಮಿತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ಸಮಯದಲ್ಲಿ ಜೀನ್, ದಿನಗಟ್ಟಲೆ ಹಗಲು ರಾತ್ರಿ ಎನ್ನದೆ ಕಾಡಿನಲ್ಲಿ ಶಿಕಾರಿಯ ನೆಪದಲ್ಲಿ ಕಾರ್ಬೆಟ್ ಜೊತೆ ಕಾಲ ಕಳೆಯುತ್ತಿದ್ದಳು. ಅವರಿಬ್ಬರ ನಡುವೆ ಗುಪ್ತವಾಗಿ ಪತ್ರ ವ್ಯವಹಾರ ಕೂಡ ನಡೆಯುತಿತ್ತು. ಆದರೆ, ಇವರಿಬ್ಬರ ಈ ಸಂಬಂಧ ಕೇವಲ ಭಾವನಾತ್ಮಕ ಸಂಬಂಧವೆ? ಅಥವಾ ಅದನ್ನೂ ಮೀರಿದ ದೈಹಿಕ ಆಕರ್ಷಣೆಯೆ? ಎಂಬುದರ ಬಗ್ಗೆ ಯಾವ ನಿಖರ ದಾಖಲೆಯೂ ಇಲ್ಲ. ಒಟ್ಟಾರೆ, ತನ್ನ ಪ್ರೀತಿಯ ವಿಫಲತೆಯ ನಂತರ ಕಾರ್ಬೆಟ್ ಪರಿಸರದತ್ತ ಮುಖ ಮಾಡಿ ಅದರ ರಕ್ಷಣೆಗೆ ಮುಂದಾದ. ಈವರೆಗೆ ಬಂದೂಕ ಹಿಡಿದು ಕಾಡು ಅಲೆಯುತ್ತಿದ್ದ ಕಾರ್ಬೆಟ್, ನಂತರದ ದಿನಗಳಲ್ಲಿ ಕ್ಯಾಮರಾ ಹಿಡಿದು ಕಾಡು ಅಲೆಯ ತೊಡಗಿದ.

1092 ಮತ್ತು 30 ರ ದಶಕದಲ್ಲಿ ಭಾರತದಲ್ಲಿ ಛಾಯಾಚಿತ್ರವಾಗಲಿ, ಅದರ ಬಳಕೆಯಾಗಲಿ ಹೇಳಿಕೊಳ್ಳುವಂತಹ ಪ್ರಸಿದ್ಧಿಗೆ ಬಂದಿರಲಿಲ್ಲ. ಕ್ಯಾಮರಾ ಕೂಡ ಜನಸಾಮಾನ್ಯರಿಗೆ ನಿಲುಕುತ್ತಿರಲಿಲ್ಲ. ಆದರೆ, ಕಾರ್ಬೆಟ್ ಕೊಲ್ಕತ್ತ ನಗರಕ್ಕೆ ತೆರಳಿ ಒಂದು ಸ್ಥಿರ ಚಿತ್ರ ತೆಗೆಯ ಬಹುದಾದ ಕ್ಯಾಮರಾ ಮತ್ತು 16 ಎಂ.ಎಂ.ನ ಚಲನಚಿತ್ರ ತೆಗೆಯಬಹುದಾದ ಕ್ಯಾಮರಾ ಮತ್ತು ಅವುಗಳಿಗೆ ಬೇಕಾದ ಕಪ್ಪು ಬಿಳುಪಿನ ಕಚ್ಛಾ ಫಿಲಂಗಳನ್ನು ಕೊಂಡುತಂದ. ಅಂದಿನ ದಿನಗಳಲ್ಲಿ ಬಳಕೆಯಲ್ಲಿದ್ದ  ಕ್ಯಾಮರಾಗಳಲ್ಲಿ ಜೂಂ ಲೆನ್ಸ್, ಆಗಲಿ, ಕ್ಲೋಸ್ ಅಪ್ ಚಿತ್ರ ತೆಗೆಯಬಹುದಾದ ಲೆನ್ಸ್‌ಗಳಾಗಲಿ ಇರುತ್ತಿರಲಿಲ್ಲ. ಯಾವುದೇ ಪ್ರಾಣಿಗಳ ಚಿತ್ರವನ್ನು ಹತ್ತಿರದಿಂದ ತೆಗೆಯಬೇಕಾದರೆ, ಪ್ರಾಣಿಗಳ ಹತ್ತಿರವೇ ನಿಂತು ತೆಗೆಯಬೇಕಾಗಿತ್ತು. ಹಾಗಾಗಿ ವನ್ಯಮೃಗ ಛಾಯಾಚಿತ್ರಣ ಎಂಬುದು ಅಪಾಯಕಾರಿ ಹವ್ಯಾಸವಾಗಿತ್ತು. ಅರಣ್ಯವನ್ನು, ಅಲ್ಲಿನ ಪ್ರಾಣಿಗಳ ಚಲನವಲನಗಳನ್ನು ಚೆನ್ನಾಗಿ ಅರಿತ್ತಿದ್ದ ಕಾರ್ಬೆಟ್, ನೀರಿನ ತಾಣವಿರುವ ಪ್ರದೇಶದಲ್ಲಿ ಪೊದೆಯ ಹಿಂದೆ ಅಡಗಿ ಪ್ರಾಣಿಗಳ ಚಿತ್ರಗಳನ್ನು ತೆಗೆಯುತ್ತಿದ್ದ. ಅಪಾಯಕಾರಿ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆಗಳ ಚಿತ್ರಗಳನ್ನು ತೆಗೆಯಲು ಕೆಲವೊಮ್ಮೆ ಆನೆಗಳ ಮೇಲೆ ಸವಾರಿ ಹೋಗಿ ಹತ್ತಿರದಿಂದ ತೆಗೆಯುವ ಹವ್ಯಾಸ ಬೆಳಸಿಕೊಂಡಿದ್ದ.

ಕೇವಲ ಐದಾರು ವರ್ಷಗಳಲ್ಲಿ ಬಗೆ ಬಗೆಯ ಪಕ್ಷಿಗಳು, ಪತಂಗ, ಜಿಂಕೆ, ನವಿಲು, ಸೇರಿದಂತೆ ಹುಲಿ, ಚಿರತೆ, ಸಿಂಹಗಳ ಸಾವಿರಾರು ಚಿತ್ರಗಳನ್ನು ತೆಗೆದು ದಾಖಲಿಸಿದ್ದ. ಅದೇ ರೀತಿ ಸಾವಿರಾರು ಅಡಿ ಉದ್ದದ 16 ಎಂ.ಎಂ. ನ ಚಿತ್ರೀಕರಣವನ್ನು ಮಾಡಿದ್ದ. (ಈ ಅಪರೂಪಪದ ಚಿತ್ರಗಳು ಈಗ ಲಂಡನ್ನಿನ ಬಿ.ಬಿ.ಸಿ. ಛಾನಲ್ ಸಂಗ್ರಹದಲ್ಲಿವೆ). ಚಿತ್ರಗಳ ಜೊತೆ ಜೊತೆಯಲ್ಲಿ ಪ್ರಾಣಿ ಪಕ್ಷಿಗಳ ಬದುಕನ್ನು ಸಂಗ್ರಹಿಸಿ, ಇವುಗಳ ಬಗ್ಗೆ ಕಾಲೇಜಿನಲ್ಲಿ, ಕ್ಲಬ್ಬುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ವಿದ್ಯಾರ್ಥಿ ಮತ್ತು ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕಾರ್ಬೆಟ್ ರೂಢಿಸಿಕೊಂಡ. ಅತ್ಯಂತ ಹುರುಪಿನಿಂದ ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರ್ಬೆಟ್. ತನ್ನ ಈ ಹೊಸ ಪ್ರವೃತ್ತಿಯಿಂದಾಗಿ ನಂತರದ ದಿನಗಳಲ್ಲಿ ಅಂದರೇ, 1932ರ ವೇಳೆಗೆ ಜಗತ್ ಪ್ರಸಿದ್ದ ಅರಣ್ಯ ಸಂರಕ್ಷಕನಾಗಿ ಪ್ರಖ್ಯಾತಿ ಹೊಂದಿದ.

                                                (ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-12)


– ಡಾ.ಎನ್.ಜಗದೀಶ್ ಕೊಪ್ಪ


1960ರ ದಶಕದಲ್ಲಿ ಹಿಂಸಾತ್ಮಕ ಘಟನೆಗಳ ಮೂಲಕ ಬೆಂಕಿ, ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟಕ್ಕೆ 70ರ ದಶಕದ ನಂತರ ಚಾರು ಮತ್ತು ಅವನ ಸಂಗಡಿಗರ ಹತ್ಯೆಯಿಂದಾಗಿ ಹಿನ್ನಡೆಯುಂಟಾಯಿತು. ಚಾರು ಮುಜುಂದಾರ್ ಮತ್ತು ವೆಂಪಟಾಪು ಸತ್ಯನಾರಾಯಣ ಇವರಿಬ್ಬರೂ ಕನಸು ಕಂಡಿದ್ದಂತೆ ಕೃಷಿಕೂಲಿ ಕಾರ್ಮಿಕರ ಹಾಗೂ ಆದಿವಾಸಿಗಳ ಬದುಕು ಹಸನಾಗದಿದ್ದರೂ ಅವರುಗಳ ಸಾಮಾಜಿಕ ಬದುಕಿನಲ್ಲಿ ಒಂದು ಮಹತ್ತರ ಬದಲಾವಣೆಯ ಕ್ರಾಂತಿಗೆ ನಕ್ಸಲ್ ಹೋರಾಟ ಕಾರಣವಾಯಿತು.

ನಕ್ಸಲ್ ಹೋರಾಟಕ್ಕೆ ಮುನ್ನ ಪೂರ್ವ ಮತ್ತು ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳಲ್ಲಿ, ದಲಿತರು, ಹಿಂದುಳಿದವರು, ಹಾಗೂ ಬಡ ಆದಿವಾಸಿಗಳು ಜಮೀನ್ದಾರರ ಪಾಳೇಗಾರ ಸಂಸ್ಕೃತಿಯಿಂದ ನಲುಗಿಹೋಗಿದ್ದರು. ಯಾರೊಬ್ಬರು ತಲೆಗೆ ಮುಂಡಾಸು ಕಟ್ಟುವಂತಿರಲಿಲ್ಲ. ಕಾಲಿಗೆ ಚಪ್ಪಲಿ ಧರಿಸುವಂತಿರಲಿಲ್ಲ, ತಮ್ಮ ಮನೆಯ ಒಳಗೆ ಅಥವಾ ಹೊರಗೆ ಚಾರ್ ಪಾಯ್ ಮಂಚ ಬಳಸುವಂತಿರಲಿಲ್ಲ. (ತೆಂಗಿನ ಅಥವಾ ಸೆಣಬಿನ ನಾರು ಹಗ್ಗದಲ್ಲಿ ನೇಯ್ದು ಮಾಡಿದ ಮಂಚ. ಈಗಿನ ಹೆದ್ದಾರಿ ಪಕ್ಕದ ಡಾಬಗಳಲ್ಲಿ ಇವುಗಳನ್ನು ಕಾಣಬಹುದು) ಅಷ್ಟೇ ಏಕೆ? ತಮ್ಮ ಸೊಂಟಕ್ಕೆ ಪಂಚೆ ಅಥವಾ ಲುಂಗಿ ಕಟ್ಟುವಂತಿರಲಿಲ್ಲ. ನಕ್ಸಲರ ಆಗಮನದಿಂದಾಗಿ, ಆಂಧ್ರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ಶತ ಶತಮಾನಗಳ ಕಾಲ ಮುಕ್ತ ಪ್ರಾಣಿಗಳಂತೆ ಬದುಕಿದ್ದ ಬಡಜನತೆ ತಲೆ ಎತ್ತಿ ನಡೆಯುವಂತಾಯಿತು. ನಾವು ಸಿಡಿದೆದ್ದರೆ, ಭೂಮಿಯನ್ನು ತಲೆಕೆಳಗಾಗಿ ಮಾಡಬಲ್ಲೆವು ಎಂಬ ಆತ್ಮ ವಿಶ್ವಾಸವನ್ನು ನಕ್ಸಲ್ ಹೋರಾಟ ದೀನದಲಿತರಿಗೆ ತಂದುಕೊಟ್ಟಿತು. ನಕ್ಸಲಿಯರ ಈ ಹೋರಾಟ ಚಾರುವಿನ ಅನಿರೀಕ್ಷಿತ ಸಾವಿನಿಂದಾಗಿ, ಮುಂದಿನ ಒಂದು ದಶಕದ ಅವಧಿಯಲ್ಲಿ ಬಹುತೇಕ ಕವಲು ಹಾದಿಯಲ್ಲಿ ಸಾಗಿತು. ಏಕೆಂದರೆ, ಹೋರಾಟವನ್ನು ಯಾವ ಮಾರ್ಗದಲ್ಲಿ ಕೊಂಡೊಯ್ಯಬೇಕು ಎಂಬುದರ ಬಗ್ಗೆ ನಾಯಕರಲ್ಲಿ ಜಿಜ್ಞಾಸೆ ಮೂಡಿ, ಭಿನ್ನಭಿಪ್ರಾಯಕ್ಕೆ ಕಾರಣವಾಯಿತು. ಚಾರು ಮುಜುಂದಾರ್ ಕನಸಿದ್ದ ಹೋರಾಟದ ಮಾರ್ಗವನ್ನು (ಗೆರಿಲ್ಲಾ ಯುದ್ಧ ತಂತ್ರ ಮತ್ತು ಹಿಂಸೆ) ತುಳಿಯಲು ಹಲವು ನಾಯಕರಿಗೆ ಇಷ್ಟವಿರಲಿಲ್ಲ. ಚಾರು ರೂಪಿಸಿದ್ದ ಹೋರಾಟದ ಮೂರು ಮುಖ್ಯ ಸೂತ್ರಗಳೆಂದರೆ,

  • ಪ್ರತಿ ಹಂತದಲ್ಲಿ ಸಶಸ್ತ್ರಗಳನ್ನು ಬಳಸಿ, ಕಾರ್ಯಕರ್ತರ ಮನಸ್ಸನ್ನು ಸದಾ ಶತ್ರುಗಳ ವಿರುದ್ದ ಉನ್ಮಾದದ ಸ್ಥಿತಿಯಲ್ಲಿ ಇಡಬೇಕು. ಇದಕ್ಕಾಗಿ ಪ್ರತಿದಿನ ಭೂ ಮಾಲೀಕರ ಪಾಳೆಗಾರ ಸಂಸ್ಕೃತಿಯ ವಿರುದ್ಧ ಯುದ್ಧ ಜರುಗುತ್ತಲೇ ಇರಬೇಕು.
  • ನಕ್ಸಲ್ ಹೋರಾಟಕ್ಕೆ ಎಲ್ಲಾ ವಿದ್ಯಾವಂತ ವರ್ಗ ಧುಮುಕುವಂತೆ ಪ್ರೇರೇಪಿಸಬೇಕು. ವಿಶೇಷವಾಗಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ನಗರಗಳಲ್ಲಿ ಗುಪ್ತ ಸಭೆಗಳನ್ನು ನಡೆಸಬೇಕು. ಅವರುಗಳಿಗೆ ಬಡವರ ಬವಣೆಗಳನ್ನು ಮನಮುಟ್ಟುವಂತೆ ವಿವರಿಸಬೇಕು. ಪ್ರತಿ ನಗರ ಹಾಗೂ ಪಟ್ಟಣಗಳಲ್ಲಿ ನಾಲ್ಕು ಅಥವಾ ಐದು ಜನರ ತಂಡವನ್ನು ತಯಾರಿಸಿ ನಕ್ಸಲ್ ಸಿದ್ಧಾಂತ ಎಲ್ಲೆಡೆ ಹರಡುವಂತೆ ನೋಡಿಕೊಳ್ಳಬೇಕು.
  • ಗ್ರಾಮಗಳಲ್ಲಿ ಕೃಷಿಕರು, ಕೂಲಿಗಾರರು ಇವರುಗಳನ್ನು ಸಂಘಟಿಸಿ, ಸಣ್ಣ ಮಟ್ಟದ ರ್‍ಯಾಲಿಗಳನ್ನು ನಡೆಸುವುದರ ಮೂಲಕ ಅವರುಗಳಿಗೆ ಶ್ರೀಮಂತರ ಸುಲಿಗೆ, ಸರ್ಕಾರದ ಇಬ್ಬಂದಿತನ, ಇವುಗಳನ್ನು ವಿವರಿಸಿ, ಅವರನ್ನು ಶೋಷಣೆಯಿಂದ ಮುಕ್ತರಾಗಲು ಹೋರಾಟವೊಂದೇ ಅಂತಿಮ ಮಾರ್ಗ ಎಂಬ ಮನಸ್ಥಿತಿಗೆ ತಂದು ನಿಲ್ಲಿಸಬೇಕು.

ಆದರೆ, ಇವುಗಳನ್ನು ಅನುಷ್ಠಾನಗೊಳಿಸಲು ಕೆಲವು ನಾಯಕರಿಗೆ ಮನಸ್ಸಿರಲಿಲ್ಲ.

ಚಾರು ಮುಜುಂದಾರ್‌ಗೆ 1975 ರ ಒಳಗೆ ಇಡೀ ಭಾರತವನ್ನು ಮಾವೋವಾದಿ ಕಮ್ಯೂನಿಷ್ಟರ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಹೆಬ್ಬಯಕೆ ಇತ್ತು. ಈ ಕಾರಣಕ್ಕಾಗಿ ಅವನು ಯುವಜನರನ್ನು ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದ. ವಸಾಹತು ಕಾಲದಲ್ಲಿ ಬ್ರಿಟಿಷರ ಶೋಷಣೆ, ಸ್ವಾತಂತ್ರ್ಯದ ನಂತರದ ಶ್ರೀಮಂತ ಭೂಮಾಲೀಕರು, ಮತ್ತು ಭ್ರಷ್ಟ ಅಧಿಕಾರಿಗಳ ಶೋಷಣೆಯ ಬಗ್ಗೆ ಯುವ ಜನಾಂಗಕ್ಕೆ ಮನಮುಟ್ಟುವಂತೆ ತಲುಪಿಸುವಲ್ಲಿ ಅವನು ಯಶಸ್ವಿಯಾದ. ಜೊತೆಗೆ ರಾಷ್ಟ್ರೀಯ ನಾಯಕರ ಬಗ್ಗೆ ವಿಶೇಷವಾಗಿ, ಗಾಂಧಿ, ನೆಹರೂ, ಪಟೇಲ್, ರವೀಂದ್ರನಾಥ ಟ್ಯಾಗೂರ್, ಈಶ್ವರ ಚಂದ್ರ ವಿದ್ಯಾಸಾಗರ್ ಇವರುಗಳ ಬಗ್ಗೆ ಯುವಜನಾಂಗದಲ್ಲಿ ಇದ್ದ ಗೌರವ ಭಾವನೆಯನ್ನು ಅಳಿಸಿಹಾಕಿದ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಭಾರತದ ಬಡ ರೈತರ ಬಗ್ಗೆ, ಕೃಷಿಕೂಲಿ ಕಾರ್ಮಿಕರ ಬಗ್ಗೆ ಧ್ವನಿ ಎತ್ತದ ಈ ನಾಯಕರುಗಳೆಲ್ಲಾ ಚಾರುವಿನ ದೃಷ್ಟಿಯಲ್ಲಿ ಸೋಗಲಾಡಿತನದ ವ್ಯಕ್ತಿಗಳು ಎಂಬಂತಾಗಿದ್ದರು. ಚಾರುವಿನ ಪ್ರಚೋದನಕಾರಿ ಭಾಷಣ ಪಶ್ಚಿಮ ಬಂಗಾಳದಲ್ಲಿ ಹಲವು ಬಿಸಿ ರಕ್ತದ ತರುಣರನ್ನು ನಕ್ಸಲ್ ಹೋರಾಟಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು. ಪೊಲೀಸ್ ಠಾಣೆಗಳನ್ನು, ಮತ್ತು ಸರ್ಕಾರಿ ಕಚೇರಿ ಕಟ್ಟಡಗಳನ್ನು ಚಾರು ಹಿಂಸಾತ್ಮಕ ದಾಳಿಗೆ ಗುರಿಯಾಗಿರಿಸಿಕೊಂಡಿದ್ದ. ಇದಕ್ಕೆ ಮೂಲ ಕಾರಣ, ಒಂದು ಕಡೆ ಸರ್ಕಾರದ ನೈತಿಕತೆಯನ್ನು ಕುಗ್ಗಿಸುತ್ತಾ, ಇನ್ನೊಂದೆಡೆ, ಸಂಘಟನೆಗೆ ಬೇಕಾದ ಬಂದೂಕಗಳು ಮತ್ತು ಗುಂಡುಗಳನ್ನು ಅಪಹರಿಸುವುದು ಅವನ ಉದ್ದೇಶವಾಗಿತ್ತು.

ಚಾರು ಮುಜುಂದಾರ್ ತಾನು ಪೊಲೀಸರಿಂದ 1971 ರಲ್ಲಿ ಹತ್ಯೆಯಾಗುವ ಮುನ್ನ, ಪಶ್ಚಿಮ ಬಂಗಾಳದಲ್ಲಿ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಕೇವಲ ಒಂದು ವರ್ಷದ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 3200 ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿದ್ದ. ಕೊಲ್ಕತ್ತ ನಗರವೊಂದರಲ್ಲೇ ಕಾರ್ಯಕರ್ತರು ಸೇರಿದಂತೆ ಒಟ್ಟು 139 ಮಂದಿ ಹತ್ಯೆಯಾದರು. ಇವರಲ್ಲಿ 78 ಮಂದಿ ಪೊಲೀಸರು ನಕ್ಸಲ್ ದಾಳಿಗೆ ಬಲಿಯಾದರು. ನಕ್ಸಲರು ಒಂದು ವರ್ಷದಲ್ಲಿ ಪೊಲೀಸ್ ಠಾಣೆಗಳಿಂದ 370 ಬಂದೂಕುಗಳನ್ನು ಅಪಹರಿಸುವಲ್ಲಿ ಯಶಸ್ವಿಯಾದರು. ಪಶ್ಚಿಮ ಬಂಗಾಳದ ಹೋರಾಟ ಪರೋಕ್ಷವಾಗಿ ಬಿಹಾರ್ ಮತ್ತು ಆಂಧ್ರ ರಾಜ್ಯದಲ್ಲಿ ಪರಿಣಾಮ ಬೀರಿ. ಅಲ್ಲಿಯೂ ಕೂಡ ಕ್ರಮವಾಗಿ 220 ಮತ್ತು 70 ಹಿಂಸಾತ್ಮಕ ಘಟನೆಗಳು ಜರುಗಿದವು. ಇದು ಅಂತಿಮವಾಗಿ ಚಾರುವಿನ ಹತ್ಯೆಗೆ ಪಶ್ಚಿಮ ಬಂಗಾಳದ ಪೊಲೀಸರನ್ನು ಪ್ರಚೋದಿಸಿತು.

ಚಾರುವಿನ ಸಾವಿನ ನಂತರ ಮಾವೋವಾದಿ ಸಂಘಟನೆ ಎರಡನೇ ವರ್ಗದ ನಾಯಕರ ಸ್ವಾರ್ಥ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಒಟ್ಟು 30 ಗುಂಪುಗಳಾಗಿ ಸಿಡಿದುಹೋಯಿತು. ಎಲ್ಲರ ಗುರಿ ಒಂದಾದರೂ ಕೂಡ ಬಹುತೇಕ ನಾಯಕರು ಹೋರಾಟದ ಮುಂಚೂಣಿಗೆ ಬರುವ ಆಸೆಯಿಂದ, ನಮ್ಮ ಕರ್ನಾಟಕದ ರೈತಸಂಘ, ದಲಿತ ಸಂಘಟನೆ ಮತ್ತು ಕನ್ನಡ ಪರ ಸಂಘಟನೆಗಳ ಮಾದರಿಯಲ್ಲಿ  ಒಡೆದು ಚೂರಾಯಿತು. ಇವುಗಳಲ್ಲಿ ಮುಖ್ಯವಾಗಿ ಚಾರುವಿನ ಸಿದ್ಧಾಂತವನ್ನು ಒಪ್ಪಿಕೊಂಡ ಒಂದು ಸಂಘಟನೆ ಹಾಗೂ ವಿರೋಧಿಸುವ ಇನ್ನೊಂದು ಸಂಘಟನೆ ಇವೆರಡು ಮಾತ್ರ ಜೀವಂತವಾಗಿ ನಕ್ಸಲ್ ಚಳವಳಿಯನ್ನು ಮುಂದುವರಿಸಿದವು. ಉಳಿದವುಗಳು ಸ್ಥಳೀಯ ನಾಯಕರ ನೇತೃತ್ವದಲ್ಲಿ ಆಯಾ ಪ್ರಾಂತ್ಯಗಳಿಗೆ ಸೀಮಿತವಾದವು.

ನಕ್ಸಲ್ ಹೋರಾಟವನ್ನು ಮುನ್ನಡೆಸುತ್ತಾ, ಮಾವೋತ್ಸೆ ತುಂಗನ ಪರಮ ಆರಾಧಕನಾಗಿದ್ದ ಚಾರು ಮುಜುಂದಾರ್ ಹೋರಾಟದ ಉನ್ಮಾದದಲ್ಲಿ ಮಾವೋನ ಪ್ರಮುಖ ಸಿದ್ಧಾಂತವನ್ನು ಮರೆತದ್ದು ಪ್ರಥಮ ಹಂತದ ಹೋರಾಟದ ಯಶಸ್ವಿಗೆ ಅಡ್ಡಿಯಾಯಿತು. ಮಾವೋತ್ಸೆ ತುಂಗನ ಪ್ರಕಾರ, ಕಮ್ಯೂನಿಷ್ಟರು ಭವಿಷ್ಯ ನುಡಿಯುವ ಜೋತಿಷಿಗಳಲ್ಲ. ಅವರು ಸಮಾಜ ಮತ್ತು ಜನತೆ ಸಾಗಬೇಕಾದ ದಿಕ್ಕನ್ನು ಮತ್ತು ಮಾರ್ಗವನ್ನು ತೋರುವವರು ಮಾತ್ರ. ಕಮ್ಯೂನಿಷ್ಟರು ಅಭಿವೃದ್ಧಿಗೆ ಮಾರ್ಗದರ್ಶಕರೇ ಹೊರತು, ಇಂತಹದ್ದೇ ನಿರ್ದಿಷ್ಟ ಸಮಯದಲ್ಲಿ ಗುರಿ ತಲುಪಬೇಕೆಂಬ ಹುಚ್ಚು ಆವೇಶವನ್ನು ಇಟ್ಟುಕೊಂಡವರಲ್ಲ. ಚಾರು, ಮಾವೋನ ಇಂತಹ ಮಾತುಗಳನ್ನು ಮರೆತ ಫಲವೋ ಏನೊ, ಪರೋಕ್ಷವಾಗಿ ದುರಂತ ಸಾವನ್ನು ಕಾಣಬೇಕಾಯಿತು.

ಇದೇ ವೇಳೆಗೆ 1970ರ ಆಗಸ್ಟ್ 11 ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಜ್ಯಸಭೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ದೇಶಾದ್ಯಂತ ನಕ್ಸಲಿಯ ಚಟುವಟಿಕೆಗಳನ್ನು ಹತ್ತಿಕ್ಕಲು ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಣೆಗೆ ಆದೇಶ ನೀಡಿದರು. ಅರೆಸೇನಾಪಡೆ ಮತ್ತು ಆಯಾ ರಾಜ್ಯಗಳ ವಿಶೇಷ ಪೊಲೀಸ್ ಪಡೆಯೊಂದಿಗೆ “ಆಪರೇಷನ್ ಸ್ಟೀಪಲ್ ಚೇಸ್” ಎಂಬ ಹೆಸರಿನಲ್ಲಿ ಪ್ರಾರಂಭವಾದ ಕಾರ್ಯಾಚರಣೆಯಿಂದಾಗಿ 1971ರ ಜುಲೈನಲ್ಲಿ ಸಂಭವಿಸಿದ ಚಾರುವಿನ ಮರಣಾನಂತರ, ಎಲ್ಲಾ ರಾಜ್ಯಗಳಲ್ಲಿ ನಕ್ಸಲ್ ಚಳವಳಿಯ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಯಿತು. ನಕ್ಸಲ್ ಹೋರಾಟ ಮುಗಿಸಲು ಹೋರಾಡಿ ಎಂದು ಇಂದಿರಾ ನೀಡಿದ ಕರೆಗೆ ಅಭೂತಪೂರ್ವ ಯಸಸ್ಸು ದೊರಕಿತು. ದೇಶದ ಎಲ್ಲಾ ನಕ್ಸಲ್ ನಾಯಕರು ಬಂಧಿತರಾಗಿ ಸರೆಮನೆಗೆ ತಳ್ಳಲ್ಪಟ್ಟರು. ಪ್ರಮುಖ ನಾಯಕರಾದ ಕನುಸನ್ಯಾಲ್, ಜಂಗಲ್ ಸಂತಾಲ್, ನಾಗಭೂಷಣ್ ಪಟ್ನಾಯಕ್, ಕುನ್ನಿಕಲ್ ನಾರಾಯಣನ್, ಅಶೀಮ್ ಚಟರ್ಜಿ, ಹೀಗೆ, ಆಂಧ್ರದಲ್ಲಿ 1400, ಬಿಹಾರದಲ್ಲಿ 2000, ಪಶ್ಚಿಮ ಬಂಗಾಳದಲ್ಲಿ 4000, ಕೇರಳ, ಉತ್ತರಪ್ರದೇಶ, ಮಧ್ಯಪ್ರದೇಶ, ಒರಿಸ್ಸಾದಲ್ಲಿ 1000 ಮಂದಿ ನಕ್ಸಲ್ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರುಗಳನ್ನು ಬಂಧಿಸಲಾಯಿತು. ಇದರಿಂದಾಗಿ ಸುಮಾರು ಆರು ವರ್ಷಗಳ ಕಾಲ (1971 ರಿಂದ 1977 ರ ವರೆಗೆ) ನಕ್ಸಲ್ ಹೋರಾಟಕ್ಕೆ ಹಿನ್ನಡೆಯುಂಟಾಯಿತು.

ಈ ನಡುವೆ ಚಾರು ಸಿದ್ಧಾಂತದಿಂದ ದೂರವಾಗಿ ತಮ್ಮದೇ ಬಣಗಳನ್ನು ಕಟ್ಟಿಕೊಂಡಿದ್ದ ಹಲವರು ನಕ್ಸಲ್ ಹೋರಾಟವನ್ನು ಜೀವಂತವಾಗಿ ಇಡುವಲ್ಲಿ ಸಫಲರಾದರು. ಚಾರು ಸಿದ್ಧಾಂತವನ್ನು ಒಪ್ಪಿಕೊಂಡವರು ಲಿನ್ ಬಯೋ ಗುಂಪು ಎಂದೂ, ವಿರೋಧಿ ಬಣವನ್ನು ಲಿನ್ ಬಯೋ ವಿರೋಧಿ ಬಣವೆಂದು ಕರೆಯುವ ವಾಡಿಕೆ ಆದಿನಗಳಲ್ಲಿ ಚಾಲ್ತಿಯಲ್ಲಿತ್ತು. (ಲಿನ್ ಬಯೋ ಎಂಬಾತ ಚೀನಾದಲ್ಲಿ ಮಾವೋ ನಂತರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಮ್ಯೂನಿಷ್ಟ್ ನಾಯಕ.) ಬಿಹಾರದಲ್ಲಿ ಅತ್ಯಂತ ಹಿಂದುಳಿದ ಜಾತಿಗಳಾದ ಅಹಿರ್, ಕುರ್ಮಿಸ್ ಮತ್ತು ಕೊಯಿರಿಸ್ ಜಾತಿಯ ಜನರನ್ನ ಜಗದೀಶ್ ಮಾತೊ ಎಂಬ ಶಿಕ್ಷಕ ಸಂಘಟಿಸಿ ಹೋರಾಟಕ್ಕೆ ಚಾಲನೆ ನೀಡಿದ. ಇವನಿಗೆ ರಾಮೇಶ್ವರ್ ಅಹಿರ್ ಎಂಬಾತ ಜೊತೆಯಾಗಿ ನಿಂತ. ಇವರಿಬ್ಬರ ಮುಖ್ಯ ಗುರಿ, ಕೆಳಜಾತಿಯ ಜನರನ್ನು ಇನ್ನಿಲ್ಲದಂತೆ ಶೋಷಿಸುತ್ತಿದ್ದ ಭೂಮಾಲೀಕರುಗಳನ್ನ ನಿರ್ನಾಮ ಮಾಡುವುದೇ ಆಗಿತ್ತು. ದೇಶದ ಪ್ರಮುಖ ನಕ್ಸಲ್ ನಾಯಕರಲ್ಲಾ ಬಂಧಿಗಳಾಗಿ ಜೈಲುಗಳಲ್ಲಿ ಕೊಳೆಯುತ್ತಿರುವಾಗ ಇವರಿಬ್ಬರು ಸಾರಿದ ಸಮರ ಬಿಹಾರ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವನ್ನೂ ನಡುಗಿಸಿತು. 1971 ರಿಂದ 77 ರ ಅವಧಿಯಲ್ಲಿ ಇವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 90 ಮಂದಿ ಭೂಮಾಲೀಕರು ನಿರ್ಧಯವಾಗಿ ಕೊಲ್ಲಲ್ಪಟ್ಟರು. ಕೊನೆಗೆ ಬಿಹಾರ ಪೊಲೀಸರು ‘ಆಪರೇಷನ್ ಥಂಡರ್’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಜಗದೀಶ್ ಮಾತೊ, ಮತ್ತು ರಾಮೇಶ್ವರ್ ಅಹಿರ್ ಇಬ್ಬರನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡುವುದರೊಂದಿಗೆ ನಕ್ಸಲ್ ಹೋರಾಟವನ್ನು ಸದೆಬಡಿದರು.

ಈ ನಡುವೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲೂ ಸಹ ಚಾರು ಸಿದ್ಧಾಂತವನ್ನು ವಿರೋಧಿಸಿ ಹೊರಬಂದಿದ್ದ ನಕ್ಸಲರ ಬಣವೊಂದು ನಾಗಿರೆಡ್ಡಿಯ ನೇತೃತ್ವದಲ್ಲಿ ಸಂಘಟಿತವಾಯಿತು. ಇದೇ ರೀತಿ ಮತ್ತೇ ಬಿಹಾರದಲ್ಲಿ ಸತ್ಯನಾರಾಯಣಸಿಂಗ್ ನೇತೃತ್ವದಲ್ಲಿ ನಕ್ಸಲ್ ಬಣವೊಂದು ತಲೆಎತ್ತಿತು. ನಕ್ಸಲ್ ಚಳವಳಿಯಲ್ಲಿ ಚಾರು ಮುಜುಂದಾರ್ ಉಗ್ರವಾದದ ಹೋರಾಟವನ್ನು ಅಳಿಸಿ ಹಾಕಿ, ಸಮಾಜದ ಎಲ್ಲಾ ವರ್ಗದ ಜನತೆಯ ವಿಶ್ವಾಸಗಳಿಸಿಕೊಂಡು ಹೋರಾಟವನ್ನು ಮುನ್ನೆಡಸಬೇಕೆಂಬುದು, ಸತ್ಯನಾರಾಯಣಸಿಂಗ್‌ನ ಆಶಯವಾಗಿತ್ತು. ಈ ಕಾರಣಕ್ಕಾಗಿ ಅವನು ಮೊದಲು ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿದ. 1975ರ ಆ ದಿನಗಳಲ್ಲಿ ನಕ್ಸಲ್ ಹೋರಾಟವನ್ನು ಪ್ರಜಾಪ್ರಭುತ್ವದ ಹಾದಿಯಲ್ಲಿ ಹೋರಾಟದ ಮೂಲಕ ಕೊಂಡೊಯ್ಯಬೇಕೆಂಬುದು ಅವನ ಕನಸಾಗಿತ್ತು. ಸಾಧ್ಯವಾದರೆ, ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಚುನಾವಣೆಗೆ ನಿಂತು, ದಲಿತರು ಮತ್ತು ಬಡವರ ಶೋಷಣೆಯ ವಿರುದ್ಧ ಜನಪ್ರತಿನಿಧಿಗಳ ಸಭೆಯಲ್ಲಿ ಹೋರಾಡಬೇಕೆಂದು ಸತ್ಯನಾರಾಯಣ ಸಿಂಗ್ ಕರೆಯಿತ್ತ. ಈತನ ಹಲವಾರು ವಿಚಾರಗಳಿಗೆ ನಾಯಕರು ವಿಶೇಷವಾಗಿ ಕನುಸನ್ಯಾಲ್, ಅಶೀಮ್ ಚಟರ್ಜಿ, ನಾಗಭೂಷಣ್ ಪಟ್ನಾಯಕ್ ಮುಂತಾದವರು ಜೈಲಿನಿಂದಲೇ ತಮ್ಮ ವಿರೋಧ ವ್ಯಕ್ತಪಡಿಸಿದರು.

1975 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ, ಭಾರತದ ಎಲ್ಲಾ ರಾಜ್ಯಗಳಲ್ಲಿ ತಲೆ ಎತ್ತಿರುವ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಇದರಿಂದಾಗಿ ಹೊರಗೆ ಉಳಿದಿದ್ದ ಇನ್ನಿತರೆ 650 ಮಂದಿ ನಾಯಕರೂ ಸಹ ಜೈಲು ಸೇರಬೇಕಾಯಿತು. ಯಾವುದೇ ಹಿಂಸೆಯ ಘಟನೆಯಲ್ಲಿ ಪಾಲ್ಗೊಳ್ಳದ ಸತ್ಯನಾರಾಯಣ ಸಿಂಗ್ ಬಿಹಾರ ರಾಜ್ಯದಲ್ಲಿ ಭೂಗತನಾಗುವುದರ ಮೂಲಕ ಬಂಧನದಿಂದ ತಪ್ಪಿಕೊಂಡ.

1977 ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಪತನಗೊಂಡು, ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರದ ಗದ್ದುಗೆ ಹಿಡಿಯಿತು. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿ, ಚರಣ್ ಸಿಂಗ್ ಗೃಹ ಮಂತ್ರಿಯಾಗಿ ಆಯ್ಕೆಯಾದರು. ಗೃಹ ಮಂತ್ರಿ ಚರಣ್‌ಸಿಂಗ್‌ರವರನ್ನು ಭೇಟಿಯಾದ ಸತ್ಯನಾರಾಯಣಸಿಂಗ್, ಜನತಾ ಪಕ್ಷಕ್ಕೆ ಮಾವೋವಾದಿಗಳ ಕಮ್ಯೂನಿಷ್ಟ ಪಕ್ಷದ ಬೆಂಬಲವಿದೆ ಎಂದು ತಿಳಿಸಿ, ಯಾವ ಕಾರಣಕ್ಕೂ ದೇಶದ ಆಂತರೀಕ ಭದ್ರತೆಗೆ ಧಕ್ಕೆಯುಂಟುಮಾಡುವುದಿಲ್ಲ ಎಂದು ಭರವಸೆ ನೀಡಿದ; ಅಲ್ಲದೆ ಮಿಸಾ ಅಡಿ ಬಂಧನದಲ್ಲಿರುವ ನಕ್ಸಲ್ ನಾಯಕರನ್ನು ಬಿಡುಗಡೆಗೊಳಿಸಲು ಮನವಿ ಮಾಡಿದ.

ಲೋಕಸಭೆಯ ಸದಸ್ಯ ಹಾಗೂ ಆಲ್ ಇಂಡಿಯ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್ ಅಂಡ್ ಡೆಮಾಕ್ರಟಿಕ್ ರೈಟ್ಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದ ಕೃಷ್ಣಕಾಂತ್ ಇವರ ದೆಹಲಿ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸತ್ಯನಾರಾಯಣ ಸಿಂಗ್, ಹಿಂಸೆ ನಮ್ಮ ಗುರಿಯಲ್ಲ. ಪ್ರಜಾಪ್ರಭುತ್ವದ ಅಹಿಂಸಾತ್ಮಕ ಹೋರಾಟಕ್ಕೆ ನಕ್ಸಲಿಯರ ಬೆಂಬಲವಿದೆ ಎಂದು ಘೋಷಿಸಿದ. ಆದರೆ, ಜೈಲು ಸೇರಿದ್ದ ಬಹುತೇಕ ನಾಯಕರು, ಸರ್ಕಾರದ ಜೊತೆಗಿನ ಮಾತುಕತೆಗೆ ನಮ್ಮ ಸಹ ಮತವಿಲ್ಲ ಎಂದು ಜಂಟಿಹೇಳಿಕೆ ನೀಡಿದರು. ಈ ಹೇಳಿಕೆಗೆ ಕನುಸನ್ಯಾಲ್, ಜಂಗಲ್ ಸಂತಾಲ್, ಅಶೀಮ್ ಚಟರ್ಜಿ ಹಾಗೂ ಸುರೇನ್ ಬೋಸ್ ಮುಂತಾದವರು ಸಹಿ ಹಾಕಿದ್ದರು.

ಅಂತಿಮವಾಗಿ 1977ರ ಮೇ 3 ರಂದು ಪ್ರಧಾನಿ ಮುರಾರ್ಜಿ ದೇಸಾಯಿ ನಕ್ಸಲ್ ನಾಯಕರ ವಿರುದ್ಧ ಇರುವ ಮೊಕದ್ದಮೆಗಳನ್ನು ಹಿಂಪಡೆದು, ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿದರು. ಈ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಹುದ್ದೆ ಏರಿದ್ದ ಜ್ಯೋತಿಬಸು ತಮ್ಮ ರಾಜ್ಯದಲ್ಲಿ ಬಂಧಿತರಾಗಿದ್ದ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಲ್ಲದೆ, ನೆರೆಯ ಆಂಧ್ರ ಮತ್ತು ಬಿಹಾರ, ಒರಿಸ್ಸಾದಲ್ಲಿ ಬಂಧನದಲ್ಲಿದ್ದವರನ್ನು ಬಿಡುಗಡೆಗೊಳಿಸುವಲ್ಲಿ ಸಫಲರಾದರು.

1977ರ ಅಂತ್ಯದ ವೇಳೆಗೆ ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಸತ್ಯನಾರಾಯಣ ಸಿಂಗ್ ಬಣದ ಐವರು ಅಭ್ಯರ್ಥಿಗಳು (ಪ.ಬಂಗಾಳದಲ್ಲಿ ಮೂವರು, ಬಿಹಾರ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬರು) ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅಂತಿಮವಾಗಿ, ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಕ್ಷೇತ್ರದಿಂದ ನಕ್ಸಲ್ ನಾಯಕ ಸಂತೋಷ್ ರಾಣಾ ಇವನ ಪತ್ನಿ ನಾಗರೀಕ ಹಕ್ಕುಗಳ ಹೋರಾಟಗಾರ್ತಿ, ಜಯಶ್ರೀ ರಾಣಾ ಗೆಲ್ಲುವಲ್ಲಿ ಯಶಸ್ವಿಯಾದಳು.

ಹೀಗೆ ಚಾರು ಮುಜುಂದಾರನ ನಿಧನದ ನಂತರ ಹಲವು ಬಣಗಳಾಗಿ ಸಿಡಿದುಹೋದ ನಕ್ಸಲ್ ಹೋರಾಟ, 1971 ರಿಂದ 1980ರ ವರೆಗೆ ನಿರಂತರ ಒಂಬತ್ತು ವರ್ಷಗಳ ಕಾಲ ನಾಯಕರ ತಾತ್ವಿಕ ಸಿದ್ಧಾಂತ ಮತ್ತು ಆಚರಣೆಗೆ ತರಬೇಕಾದ ಪ್ರಯೋಗಗಳ ಕುರಿತ ಭಿನ್ನಾಭಿಪ್ರಾಯದಿಂದ ತನ್ನ ಶಕ್ತಿ ಮತ್ತು ಸಾಮಥ್ಯವನ್ನು ಕುಂದಿಸಿಕೊಂಡಿತು. ಆದರೆ,  1980ರ ದಶಕದಲ್ಲಿ ಮತ್ತೇ ಫಿನಿಕ್ಸ್ ಹಕ್ಕಿಯಂತೆ ಪ್ರಜಾಸಮರ (ಪೀಪಲ್ಸ್ ವಾರ್ ಗ್ರೂಪ್) ಹೆಸರಿನಲ್ಲಿ ತಲೆ ಎತ್ತಿ ನಿಂತಿತು. ಇದನ್ನು ನಕ್ಸಲ್ ಇತಿಹಾಸದಲ್ಲಿ ಎರಡನೇ ಹಂತದ ಹೋರಾಟ ಎಂದು ಗುರುತಿಸಲಾಗುತ್ತಿದೆ. ಇದರ ಪ್ರಮುಖ ನಾಯಕರು, ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ, ಕಿಶನ್ ಜಿ, ರಾಜೇಂದ್ರಕುಮಾರ್ ಭಾಸ್ಕರ್, ಸಾಕೇತ್ ರಾಜನ್, ಸುನೀತ್ ಕುಮಾರ್ ಘೋಸ್ ಮುಂತಾದವರು.

 (ಮೊದಲ ಹಂತದ ಅಂತಿಮ ಅಧ್ಯಾಯ)


ಕೊನೆಯ ಮಾತು- ಪ್ರಿಯ ಓದುಗ ಮಿತ್ರರೇ, ಇಲ್ಲಿಗೆ ನಕ್ಸಲ್ ಇತಿಹಾಸದ ಮೊದಲ ಹಂತದ  ಹನ್ನೆರೆಡು ಅಧ್ಯಾಯಗಳ ಜೊತೆ ನನ್ನ ಕಥನವನ್ನು ಮುಗಿಸುತ್ತಿದ್ದೇನೆ. ಎರಡು ಮತ್ತು ಮೂರನೇ ಹಂತದ ನಕ್ಸಲ್ ಇತಿಹಾಸವನ್ನು ನೀವು ನವಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ನನ್ನ ಕೃತಿಯಲ್ಲಿ ಓದಬಹುದು. ಮತ್ತೇ ಒಂದಿಷ್ಟು ಅಧ್ಯಯನಕ್ಕಾಗಿ  ಜುಲೈ ಮೊದಲವಾರ ಮಹಾರಾಷ್ಟ್ರ, ಛತ್ತೀಸ್‌ಘಡ್ ಮತ್ತು ಮಧ್ಯಪ್ರಧೇಶ ರಾಜ್ಯಗಳ ನಡುವೆ ಇರುವ ದಂಡಕಾರಣ್ಯ (ಗಡ್ ಚಿರೋಲಿ, ದಂತೆವಾಡ, ರಾಯ್‌ಪುರ್, ಗೊಂಡಿಯ, ಬಾಳ್‌ಘಾಟ್) ಪ್ರದೇಶಕ್ಕೆ ತೆರಳುತ್ತಿದ್ದೇನೆ. ಜೊತೆಗೆ ಭಾರತದ ನಕ್ಸಲ್ ಪೀಡಿತ ಪ್ರದೇಶಗಳ ಕುರಿತಂತೆ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನಗಳನ್ನು ಒಳಗೊಂಡ 60ಕ್ಕೂ ಹೆಚ್ಚು ಪ್ರಬಂಧಗಳು “ಲಂಡನ್ ಸ್ಕೂಲ್ ಆಪ್ ಎಕನಾಮಿಕ್ಸ್” ಸಂಸ್ಥೆಯಿಂದ ಪ್ರಕಟವಾಗಿವೆ. ಅಲ್ಲದೇ ಇಂಗ್ಲೇಂಡಿನ ಕೇಂಬ್ರಿಡ್ಜ್ ವಿ.ವಿ. ಯ ಸಮಾಜ ಶಾಸ್ತ್ರಜ್ಞರು ಅಧ್ಯಯನ ಮಾಡಿರುವ ಪೂರ್ವ ಭಾರತದ ಬುಡಕಟ್ಟು ಜನಾಂಗಗಳ ಸ್ಥಿತಿ ಗತಿಯ ಬಗ್ಗೆ ಮಾಡಿರುವ ಅಧ್ಯಯನ ಕೂಡ ಪ್ರಕಟವಾಗಿದೆ. ಸದ್ಯಕ್ಕೆ ಕಥನಕ್ಕೆ ವಿರಾಮ ಹೇಳಿ ಅಧ್ಯಯನದ ಈ ಕೃತಿಗಳನ್ನು ಅವಲೋಕಿಸುತ್ತಿದ್ದೇನೆ.

ನಮಸ್ಕಾರ.
ಡಾ.ಎನ್. ಜಗದೀಶ್ ಕೊಪ್ಪ

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 24 )


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ವಯಸ್ಸಾಗುತ್ತಿದ್ದಂತೆ, ಜೀವನದ ವಿಶ್ರಾಂತಿಯ ಬಯಕೆ ಹೆಚ್ಚಾಗತೊಡಗಿತು. ನೈನಿತಾಲ್ ಪಟ್ಟಣದ ಪುರಸಭೆಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ. ಜೊತೆಗೆ ಮೊಕಮೆಘಾಟ್‌ನ ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಅಲ್ಲಿನ ಸರಕು ಮತ್ತು ಕಲ್ಲಿದ್ದಲು ಸಾಗಾಣಿಕೆಯ ಗುತ್ತಿಗೆಯನ್ನ ತನ್ನ ಬಳಿ ಎರಡು ದಶಕಕ್ಕೂ ಹೆಚ್ಚು ಕಾಲ ದುಡಿದ ನಿಷ್ಟಾವಂತ ಕೂಲಿಕಾರ್ಮಿಕರಿಗೆ ವಹಿಸಿ, ಅವರ ಪರವಾಗಿ ತಾನೇ ರೈಲ್ವೆ ಇಲಾಖೆಗೆ ಠೇವಣಿ ಹಣವನ್ನು ತುಂಬಿದ. ಎರಡು ದಶಕ ನನ್ನ ಜೊತೆ ದುಡಿದ ನಿಮಗೆ ಮತ್ತು ನಿಮ್ಮ ಪ್ರೀತಿಗೆ ನಾನು ನೀಡಬಹುದಾದ ಕಾಣಿಕೆ ಇದೊಂದೇ ಎಂದು ಅಗಲಿಕೆಯ ಸಂದರ್ಭದಲ್ಲಿ ಹೆಮ್ಮೆಯಿಂದ ಕಾರ್ಬೆಟ್ ಘೋಷಿದ. ನೈನಿತಾಲ್ ಪಟ್ಟಣದಲ್ಲಿ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರವನ್ನು ತಾಯಿ ಮೇರಿ ಕಾರ್ಬೆಟ್ ಹಾಗೂ ಮ್ಯಾಥ್ಯು ಕಂಪನಿಯ ವ್ಯವಹಾರವನ್ನು ಸಹೋದರಿ ಮ್ಯಾಗಿ ಹಾಗೂ ಮಲಸಹೋದರಿ ಮೇರಿಡೊಯಲ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಕಾರಣ, ಕಾರ್ಬೆಟ್ ಆಪ್ರಿಕಾದ ತಾಂಜೇನಿಯಾದ ಕೃಷಿ ಚಟುವಟಿಕೆಗಳತ್ತ ಗಮನ ನೀಡತೊಡಗಿದ.

ನೈನಿತಾಲ್ ಗಿರಿಧಾಮದ ಪ್ರತಿಷ್ಟಿತ ಯುರೋಪಿಯನ್ ಕುಟುಂಬಗಳಲ್ಲಿ ಕಾರ್ಬೆಟ್ ಕುಟುಂಬಕ್ಕೆ ಮಹತ್ವದ ಸ್ಥಾನವಿತ್ತು. ಅಲ್ಲಿನ ಜನ ಎಲ್ಲಾ ವ್ಯವಹಾರಗಳಿಗೆ ಕಾರ್ಬೆಟ್‌ನ ತಾಯಿ ಮೇರಿಯನ್ನು ಆಶ್ರಯಿಸುತ್ತಿದ್ದರು. ಮೇರಿ ಕಾರ್ಬೆಟ್ ಜೀವನ ಪೂರ್ತಿ ಹೋರಾಟ ನಡೆಸಿ ಬದುಕು ಕಟ್ಟಿಕೊಂಡ ಪರಿಣಾಮ ಸದಾ ತನ್ನ ಕುಟುಂಬ ಭದ್ರತೆ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಳು. ಮುಂದೆ ಎಂತಹದ್ದೇ ಸಂದರ್ಭಗಳಲ್ಲಿ ತಾನಾಗಲಿಗಲಿ, ಅಥವಾ ತನ್ನ ಮಕ್ಕಾಳಾಗಲಿ ಸಂಕಷ್ಟಕ್ಕೆ ಸಿಲುಕಬಾರದು ಎಂಬುದು ಮೇರಿಯ ನಿಲುವಾಗಿತ್ತು. ಹಾಗಾಗಿ ಸಂಪಾದಿಸಿದ ಹಣಕ್ಕೆ ಮೇರಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದಳು. ನೈನಿತಾಲ್ ಪಟ್ಟಣದಲ್ಲಿ ಅಷ್ಟೆಲ್ಲಾ ಆಸ್ತಿ ಇದ್ದರೂ ಕೂಡ ತನ್ನ ಹಾಗೂ ಮಕ್ಕಳ ಹೆಸರಿನಲ್ಲಿ ಬ್ಯಾಂಕುಗಳಲ್ಲಿ ಹಣವನ್ನು ಠೇವಣಿ ಇಡುತ್ತಿದ್ದಳು. ಜಿಮ್ ಕಾರ್ಬೆಟ್ ಹೊರತುಪಡಿಸಿ, ಇಡೀ ಕುಟುಂಬದ ಎಲ್ಲರೂ ಯಾವುದಕ್ಕೂ ಕೊರತೆ ಇಲ್ಲದಂತೆ ಐಷಾರಾಮದ ಬದುಕನ್ನು ರೂಢಿಸಿಕೊಂಡಿದ್ದರು. ಜಿಮ್ ಕಾರ್ಬೆಟ್ ಮಾತ್ರ ಎಂದೂ ದುಂದುವೆಚ್ಚಕ್ಕೆ ಅಥವಾ ಐಷಾರಾಮದ ಬದುಕಿಗೆ ಮನಸೋತವನಲ್ಲ. ಅವನ ಕೈಯಲ್ಲಿ ಕಾಡಿಗೆ ಶಿಕಾರಿಗೆ ತೆರಳುವ ಸಂದರ್ಭದಲ್ಲಿ ಮಾತ್ರ ರಿಸ್ಟ್ ವಾಚೊಂದು ಇರುತ್ತಿತ್ತು. ಉಳಿದಂತೆ ಸಾಧಾರಣ ಉಡುಪುಗಳಲ್ಲಿ ಇರುವುದು ಅವನ ಹವ್ಯಾಸವಾಗಿತ್ತು. ತಲೆಗೊಂದು ಹ್ಯಾಟ್ ಧರಿಸುವುದು ಅವನ ಮೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿತ್ತು. ರಾತ್ರಿ ಎರಡು ಪೆಗ್ ವಿಸ್ಕಿ ಮತ್ತು ದಿನಕ್ಕೆ ಇಪ್ಪತ್ತು ಸಿಗರೇಟ್ ಸೇದುವ ಹವ್ಯಾಸ, ಬೇಸರವಾದಾಗಲೆಲ್ಲಾ ಹಾಲಿಲ್ಲದ ಕಪ್ಪು ಚಹಾ ಕುಡಿಯುವ ಅಭ್ಯಾಸ ಅವನಿಗಿತ್ತು.

ಜಿಮ್ ಕಾರ್ಬೆಟ್ ಯಾವಾಗಲೂ ಅರಣ್ಯಕ್ಕೆ ಕಾಡ್ಗಿಚ್ಚು ಆವರಿಸಿಕೊಳ್ಳುವ ಸಂದರ್ಭದಲ್ಲಿ ಹೆಚ್ಚು ಚಿಂತಾಕ್ರಾಂತನಾಗುತ್ತಿದ್ದ. ಆಫ್ರಿಕಾದಲ್ಲಿ ವಿಶೇಷವಾಗಿ ಕೀನ್ಯಾ ಮತ್ತು ತಾಂಜೇನಿಯ ಕಾಡುಗಳಲ್ಲಿ ಬೇಸಿಗೆ ಸಮಯದಲ್ಲಿ ನೈಸರ್ಗಿಕವಾಗಿ ಕಾಡ್ಗಿಚ್ಚು ಆವರಿಸಿಕೊಳ್ಳುವುದನ್ನು ನೋಡಿದ್ದ. ಆದರೆ, ಇದಕ್ಕೆ ತದ್ವಿರುದ್ಧವಾಗಿ ಭಾರತದಲ್ಲಿ ಮರಗಳ್ಳರು ಮತ್ತು ಅಕ್ರಮ ಬೇಟೆಗಾರರು ಕಾಡಿಗೆ ಬೆಂಕಿ ಇಡುವುದನ್ನು ಕಂಡು ಬಹುವಾಗಿ ನೊಂದುಕೊಳ್ಳತ್ತಿದ್ದ. ಈ ಕಾರಣಕ್ಕಾಗಿ ಬೇಸಿಗೆಯ ಸಮಯದಲ್ಲಿ ಕಲದೊಂಗಿ ಮತ್ತು ಚೋಟಾಹಲ್ದಾನಿಯ ರೈತರನ್ನು ಕರೆದುಕೊಂಡು ಅರಣ್ಯದಲ್ಲಿ ಅಲೆದಾಡಿ ಕಾಡ್ಗಿಚ್ಚು ಆವರಿಸದಂತೆ ಎಚ್ಚರಿಕೆ ವಹಿಸುತ್ತಿದ್ದ. ಬಿದಿರು ಬೆಳೆದಿರುವ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡುವಂತೆ ಸ್ಥಳಿಯರಿಗೆ ಕರೆ ನೀಡುತ್ತಿದ್ದ. ಇಡೀ ಕುಮಾವನ್ ಪ್ರಾಂತ್ಯದ ಅರಣ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇಂಜಿನಿಯರ್‌ಗಳು ವೈದ್ಯರು ಕಾರ್ಬೆಟ್‌ಗೆ ಪರಿಚತರಾಗಿದ್ದರು. ಅವರು ಭೇಟಿಯಾದಾಗಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಅವರ ಯೋಗಕ್ಷೇಮ ವಿಚಾರಿಸಿ, ಅವರ ಸೇವೆ ಬಗ್ಗೆ ಮಾಹಿತಿ ಪಡೆದು ಸಲಹೆ ನೀಡುತ್ತಿದ್ದ. ಮತ್ತು ವೃತ್ತಿಯಲ್ಲಿ ಇರಬೇಕಾದ ಕಾಳಜಿಗಳ ಬಗ್ಗೆ ವಿವರಿಸಿ ಹೇಳುತ್ತಿದ್ದ. ಭಾರತದ ಗೌರ್ವನ್ ಜನರಲ್‌ಗಳು. ಪ್ರಾಂತ್ಯದ ಜಿಲ್ಲಾಧಿಕಾರಿಗಳು, ಕಾರ್ಬೆಟ್‌ಗೆ ಗೆಳೆಯರಾದ ಕಾರಣ ಅಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಜಿಮ್ ಕಾರ್ಬೆಟ್ ಕುರಿತು ಭಯ ಮಿಶ್ರಿತ ಗೌರವವಿತ್ತು.

ತಾನು ವಾಸಿಸುತ್ತಿದ್ದ ನೈನಿತಾಲ್ ಗಿರಿಧಾಮದ ಪರಿಸರ ಅತಿಯಾದ ಪ್ರವಾಸಿಗರ ಭೇಟಿಯಿಂದಾಗಿ ಕಲುಷಿತವಾಗುತ್ತಿರುವುದನ್ನು ಕಂಡ ಕಾರ್ಬೆಟ್ ನಾಗರೀಕ ಸಮಿತಿಯೊಂದನ್ನು ರಚಿಸಿಕೊಂಡು, ಅದರ ರಕ್ಷಣೆಗೆ ಮುಂದಾದ. ಇದು ನಾಗರೀಕ ಸಮಿತಿಯಿಂದ ಸಾಧ್ಯವಿಲ್ಲ ಎಂಬುದನ್ನ ಮನಗಂಡಕೂಡಲೇ ಕಾರ್ಬೆಟ್ ಮತ್ತೇ ಅಲ್ಲಿನ ಪುರಸಭೆಗೆ ಸ್ಪರ್ಧಿಸಿ ಆಯ್ಕೆಯಾಗುವುದರ ಜೊತೆಗೆ ಉಪಾಧ್ಯಕ್ಷನ ಸ್ಥಾನ ಅಲಂಕರಿಸಿ, ನೈನಿತಾಲ್ ಪರಿಸರದ ರಕ್ಷಣೆಗೆ ಮುಂದಾದ. ಪಟ್ಟಣದ ಜನತೆ ಕುಡಿಯುವ ನೀರಿನ ಗುಣ ಮಟ್ಟ ಅಳೆಯಲು ಸಣ್ಣದೊಂದು ಪ್ರಯೋಗಾಲವೊಂದನ್ನು ನಿರ್ಮಿಸಿದ. ಮನೆಗಳಿಂದ ಹೊರಬರುವ ಕೊಳಚೆ ನೀರು ಅಲ್ಲಿನ ಸರೋವರ ಸೇರದಂತೆ ಮಾಡಲು ಪ್ರಪಥಮವಾಗಿ ಒಳಚರಂಡಿ ವ್ಯವಸ್ಥೆಯನ್ನು ಜಾರಿಗೆ ತಂದ. ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಪಟ್ಟಣದ ರಸ್ತೆಗಳಲ್ಲಿ ಸಾಲು ಮರಗಳ ಸಸಿಗಳನ್ನು ನೆಟ್ಟು ಪೋಷಿಸಿದ. ಎಲ್ಲಾ ಧರ್ಮದ ಜನರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಸ್ಮಶಾನ ಭೂಮಿಗಳನ್ನು ನಿರ್ಮಿಸಿದ. ಪಟ್ಟಣದ ಹೃದಯ ಭಾಗದಲ್ಲಿದ್ದ ನೈನಿ ಸರೋವರದ ಸುತ್ತ-ಮುತ್ತ ತಡೆಗೋಡಯನ್ನು ನಿರ್ಮಿಸಿ, ರಸ್ತೆಯ ಕೊಳಚೆ ನೀರು ಸರೋವರಕ್ಕೆ ಸೇರದಂತೆ ಮಾಡಿ, ಅಪರೂಪದ ಮಷೀರ್ ಜಾತಿಯ ಮೀನುಗಳನ್ನು ಸಾಕುವ ಯೋಜನೆಯೊಂದನ್ನು ರೂಪಿಸಿದ. ರಾತ್ರಿಯ ವೇಳೆ ಕೆಲವರು ಮೀನು ಶಿಕಾರಿಯಲ್ಲಿ ತೊಡಗಿರುವದನ್ನು ಕಂಡು, ಸರೋವರದಲ್ಲಿ  ಮೀನು ಶಿಕಾರಿ ನಿಷೇದಿಸಿದ ಕಾನೂನನ್ನು ಜಾರಿಗೆ ತಂದ.

ಅತಿ ವೇಗವಾಗಿ ಬೆಳೆಯುತ್ತಿದ್ದ ನೈನಿತಾಲ್ ಗಿರಿಧಾಮಕ್ಕೆ ಬೆಳೆವಣಿಗೆಗೆ ಕಡಿವಾಣ ಹಾಕಲು, ಸುತ್ತ ಮುತ್ತಲಿನ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ವಸತಿ ಪ್ರದೇಶಗಳು ತಲೆ ಎತ್ತುವುದಕ್ಕೆ ಕಡಿವಾಣ ಹಾಕಿ, ಬಹುಮಹಡಿ ಕಟ್ಟಡಗಳಿಗೆ ಉತ್ತೇಜನ ನೀಡಿದ. ಕಣ್ಣೆದುರು, ವೇಗವಾಗಿ ಬೆಳೆಯುತ್ತಿರುವ ನಾಗರೀಕತೆಯಿಂದ ಅರಣ್ಯ ನಾಶವಾಗುತ್ತಿರುವುದನ್ನು ಮನಗಂಡು, ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ ಕುಮಾವನ್ ಪ್ರಾಂತ್ಯದ ಅರಣ್ಯ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಂದಾದ. ಕೆಲವೊಮ್ಮೆ ಸರ್ಕಾರದ ನಿರ್ಧಾರಗಳು ಅವನಲ್ಲಿ ಜಿಗುಪ್ಸೆ ಮೂಡಿಸುತ್ತಿದ್ದವು.

ಭಾರತದಲ್ಲಿ ಆಗ ತಾನೇ ವಿಸ್ತಾರಗೊಳ್ಳುತ್ತಿದ್ದ ರೈಲ್ವೆ ಯೋಜನೆಗಳಿಗೆ ಈಶಾನ್ಯ ರಾಜ್ಯಗಳ ಅರಣ್ಯ ಮತ್ತು ಹಿಮಾಲಯ ತಪ್ಪಲಿನ ಅರಣ್ಯ ಪ್ರದೇಶ ಬಲಿಯಾಗುತ್ತಿರುದನ್ನು ಕಂಡು ಕಾರ್ಬೆಟ್ ನೊಂದುಕೊಳ್ಳುತ್ತಿದ್ದ. ರೈಲ್ವೆ ಹಳಿಗಳ ಕೆಳಗೆ ಹಾಸಲು ವಯಸ್ಸಾದ ಸದೃಢ ಮರಗಳನ್ನು ಕಡಿದು ಹಾಕುವುದರ ಬಗ್ಗೆ ಅವನು ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ. ಮರ ಕಡಿದ ಜಾಗದಲ್ಲಿ ಅತಿ ಶೀಘ್ರವಾಗಿ ಬೆಳೆಯವ ಮರಗಳನ್ನು ಬೆಳಸುವ ಸರ್ಕಾರದ ಯೋಜನೆಗಳಿಗೆ ಪ್ರತಿಭಟಿಸಿದ. ಆಯಾ ಪ್ರದೇಶದ ಬೌಗೂಳಿಕ ಲಕ್ಷಣಗಳಿಗೆ ಅನುಸಾರವಾಗಿ ಒಕ್ ಮತ್ತು ದೇವದಾರು ಮರಗಳನ್ನು ಬೆಳೆಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿದ. ಸರ್ಕಾರ ಮತ್ತು ಅಧಿಕಾರಿಗಳು ಅರಣ್ಯವನ್ನು ಮತ್ತು ಅಲ್ಲಿನ ಮರಗಳನ್ನು ವಾಣಿಜ್ಯ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಕಾರ್ಬೆಟ್‌ಗೆ ತೀವ್ರ ಅಸಹನೆಯಿತ್ತು. ಮರಗಳ ನಾಶದಿಂದ ಗೂಡು ಕಟ್ಟಲು ಪರಿತಪಿಸುತಿದ್ದ ಪಕ್ಷಿಗಳನ್ನು ಕಂಡಾಗ ಕಾರ್ಮೆಟ್ ತೀವ್ರವಾಗಿ ನೊಂದುಕೊಳ್ಳುತ್ತಿದ್ದ. ಒಮ್ಮೊಮ್ಮೆ ತನ್ನ ಅಂತರಂಗಕ್ಕೆ ತಾನೇ ಪ್ರಶ್ನೆಗಳನ್ನು ಹಾಕಿಕೊಂಡು, ಪರಿಸರ ಕುರಿತಂತೆ ತನ್ನ ನಿಲುವುಗಳಲ್ಲಿ ದ್ವಂದ್ವ ಇರುವುದನ್ನು ಕಂಡು ಮುಜುಗರ ಪಟ್ಟುಕೊಂಡ. ಇದಕ್ಕೆ ಪ್ರಾಯಸ್ಛಿತ್ತವಾಗಿ ಎಲ್ಲಾ ಬಗೆಯ ಅರಣ್ಯ ಶಿಕಾರಿಗಳಿಗೆ ತಿಲಾಂಜಲಿ ನೀಡಲು ನಿರ್ಧರಿಸಿದ.

ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟನೆಂದರೆ, ಮತ್ತೇ ರಾತ್ರಿಗೆ ಹಿಂತಿರುಗುತ್ತಿದ್ದ ಜಿಮ್ ಕಾರ್ಬೆಟ್ ತನ್ನ ವಯಸ್ಸು ಮಾಗುತ್ತಿದ್ದಂತೆ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಮತ್ತು ಪರಿಸರ ರಕ್ಷಿಸುವಲ್ಲಿ ಆಸಕ್ತಿ ತೋರತೊಡಗಿದ. ನೈನಿತಾಲ್ ಪಟ್ಟಣದ ರಸ್ತೆಗಳ ಅಗಲೀಕರಣಕ್ಕಾಗಿ ಸರ್ಕಾರದ ಲೋಕೋಪಯೊಗಿ ಇಲಾಖೆ ಮರಗಳನ್ನು ಕಡಿಯಲು ಮುಂದಾದಾಗ, ಪ್ರತಿಭಟಿಸಿ ತಡೆಯೊಡ್ಡಿದ. ಕಾರ್ಬೆಟ್, ರಸ್ತೆಗಾಗಿ ನೆಲಕ್ಕೆ ಉರುಳುವ ಮರಗಳ ಬದಲಾಗಿ ಅವುಗಳ ಸಂಖ್ಯೆಯ ದುಪ್ಪಟ್ಟು ಮರಗಳನ್ನು ನೆಡಲಾಗುವುದೆಂದು ಸರ್ಕಾರದಿಂದ ಆಶ್ವಾಸನೆ ಪಡೆದು ನಂತರವಷ್ಟೇ ರಸ್ತೆಯ ಅಗಲೀಕರಣಕ್ಕೆ ಅನುವು ಮಾಡಿಕೊಟ್ಟ. ಪಟ್ಟಣ ಪುರಸಭೆಯ ಹಿರಿಯ ಉಪಾಧ್ಯಕ್ಷ ಹಾಗೂ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದ ಕಾರ್ಬೆಟ್‌ನ ಕಾಳಜಿಗಳ ಬಗ್ಗೆ ಅಥವಾ ಆತನ ನಿಲುವುಗಳ ಬಗ್ಗೆ ಪ್ರಶ್ನಿಸುವ ಧೈರ್ಯ ನೈನಿತಾಲ್ ಪಟ್ಟಣ ಮಾತ್ರವಲ್ಲ, ಕುಮಾವನ್ ಪ್ರಾಂತ್ಯದಲ್ಲಿ ಯಾರಿಗೂ ಇರಲಿಲ್ಲ. ಪ್ರಾಣಿ ಮತ್ತು ಪರಿಸರ ಕುರಿತು ಅಪಾರ ಕಾಳಜಿ ಬೆಳಸಿಕೊಂಡಿದ್ದ. ಕಾರ್ಬೆಟ್, ಸಾಮಾನ್ಯ ಜನತೆಗೆ ಈ ಕುರಿತು ಜಾಗೃತಿ ಮೂಡಿಸಲು ಹೊಸದೊಂದು ಯೋಜನೆಯನ್ನು ರೂಪಿಸಿದ. ಕ್ಯಾಮರಾ ಮೂಲಕ ಪ್ರಾಣಿ, ಪಕ್ಷಿಗಳ ಚಿತ್ರವನ್ನು ಸರೆಹಿಡಿದು ಅವುಗಳ ಬದುಕನ್ನು ಜನಸಾಮಾನ್ಯರಿಗೆ ವಿವರಿಸುವುದು, ಅವನ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು.

(ಮುಂದುವರಿಯುವುದು)