Category Archives: ಸರಣಿ-ಲೇಖನಗಳು

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-11)


– ಡಾ.ಎನ್.ಜಗದೀಶ್ ಕೊಪ್ಪ


 

The seed ye sow, another reaps;
The wealth ye find, another keeps;
The robes ye weave, another wears;
The arms ye forge, another bears
-Shelley.

ಇವರ ಮೇಲೆ ದಾಳಿ ಮಾಡಿದ್ದ, ನರಸಿಂಗ್‌ಪುರ್‌ ಗ್ರಾಮದ ಜಮೀನ್ದಾರ ಬಿಜಿಲಿಸಿಂಗ್ ಹಾಗೂ ಅವನ ಸೇವಕರನ್ನು ಹಾಡು ಹಗಲೇ ಬೀದಿಯಲ್ಲಿ ಕೊಚ್ಚಿಹಾಕಿ, ಅವರ ದೇಹದ ತುಂಡುಗಳನ್ನು ರಸ್ತೆಯುದ್ಧಕ್ಕೂ ಬಿಸಾಡಿದರು. ಒಂದು ವರ್ಷ ಪಶ್ಚಿಮ ಬಂಗಾಳ ಮತ್ತು ಆಂಧ್ರದಲ್ಲಿ 1960 ರ ದಶಕದಲ್ಲಿ ಹೊತ್ತಿಕೊಂಡ ನಕ್ಸಲ್ ಹೋರಾಟದ ಕಿಡಿ, 70ರ ದಶಕದ ವೇಳೆಗೆ ಚಳವಳಿಯ ಪ್ರಮುಖ ನಾಯಕರಾದ ವೆಂಪಟಾಪು ಸತ್ಯನಾರಾಯಣ ಮತ್ತು ಚಾರುಮುಜಂದಾರ್ ಇವರ ಹತ್ಯೆಯಿಂದ ಈ ಎರಡು ರಾಜ್ಯಗಳಲ್ಲಿ ಕೆಲವು ದಿನಗಳ ಕಾಲ ತಣ್ಣಗಾಯಿತಾದರೂ, ಅದು ಭಾರತದ ಹನ್ನೊಂದು ರಾಜ್ಯಗಳಿಗೆ ವ್ಯಾಪಿಸುವಲ್ಲಿ ಸಹಕಾರಿಯಾಯಿತು. ಒರಿಸ್ಸಾ, ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಮ್, ಜಮ್ಮು, ಕಾಶ್ಮೀರ, ತಮಿಳುನಾಡು, ಕೇರಳ, ರಾಜಸ್ಥಾನ್, ದೆಹಲಿ ರಾಜ್ಯಗಳಿಗೆ ನಕ್ಸಲ್ ಹೋರಾಟದ ಬೆಂಕಿಯ ನದಿ ಹರಿಯಿತಾದರೂ, ಅದು ತನ್ನ ಕಾವನ್ನು ಉಳಿಸಿಕೊಂಡಿದ್ದು, ಕೇವಲ ನಾಲ್ಕು ರಾಜ್ಯಗಳಲ್ಲಿ ಮಾತ್ರ. ಒರಿಸ್ಸಾ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಬೆಂಕಿಯ ಕಾವು ಇನ್ನೂ ಜೀವಂತವಾಗಿದೆ. 70ರ ದಶಕದಲ್ಲಿ ಚಾರುವಿನ ಸಾವಿಗೆ ಮುನ್ನ ಈ ರಾಜ್ಯಗಳಲ್ಲಿ ನಡೆದ ಘಟನೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ.

ಬಿಹಾರದ ಮುಜಾಪುರ್ ಜಿಲ್ಲೆಯ ಮುಶ್ರಾಯ್ ಎಂಬ ತಾಲೂಕಿನ ಹಳ್ಳಿಗಳ ಹತ್ತುಸಾವಿರ ಜನತೆ ಪ್ರಪಥಮ ಬಾರಿಗೆ ಜಮೀನ್ದಾರರ ವಿರುದ್ಧ ಸಿಡಿದೆಳುವುದರ ಮೂಲಕ ಬಿಹಾರದಲ್ಲಿ ಕೆಂಪು ಬಾವುಟವನ್ನು ಹಾರಿಸಿದರು. ಇವರೆಲ್ಲರೂ ಭೂಹೀನ ಕೃಷಿ ಕಾಮರ್ಮಿಕರಾಗಿದ್ದು, ದಲಿತ ವರ್ಗಕ್ಕೆ ಸೇರಿದವರಾಗಿದ್ದರು. ಉತ್ತರ ಬಿಹಾರದ ಈ ಪ್ರಾಂತ್ಯದ ಜನ, ಪಶ್ಚಿಮ ಬಂಗಾಳದ ಸಿಲಿಗುರಿಯ ನಕ್ಸಲ್‌ಬಾರಿ ಹಳ್ಳಿಯಲ್ಲಿ ನಡೆದ ಘಟನೆಯಿಂದ ಪ್ರೇರಿತರಾಗಿದ್ದು ವಿಶೇಷ. ಮೊದಲಿಗೆ ಗಂಗಾಪುರ್ ಎಂಬ ಸಾಮಾನ್ಯ ಹಳ್ಳಿಯಲ್ಲಿ ಕೃಷಿಕಾರ್ಮಿಕರು, 1968ರ ಏಪ್ರಿಲ್ ತಿಂಗಳಿನಲ್ಲಿ  ಜಮೀನ್ದಾರನ ಹೊಲಕ್ಕೆ ದಾಳಿ ಇಟ್ಟು, ಬೆಳೆದಿದ್ದ ಅರಾರ್ ಎಂಬ ದ್ವಿದಳ ಧಾನ್ಯದ ಬೆಳೆಯನ್ನು ಕುಯಿಲು ಮಾಡಿ ಕೊಂಡೊಯ್ದರು. ಇದರಿಂದ ಸಿಟ್ಟಿಗೆದ್ದ ಬಿಜಿಲಿಸಿಂಗ್ ಎಂಬ ಜಮೀನ್ದಾರ, ಮುನ್ನೂರು ಗೂಂಡಾ ಸೇವಕರನ್ನು ಕರೆದು ಕೊಂಡು, ಆನೆಯ ಮೇಲೆ, ಕಲ್ಲು, ಬಡಿಗೆ, ಇವುಗಳನ್ನು ಹೇರಿಕೊಂಡು ಬಂದು, ಹಳ್ಳಿಗಳಿಗೆ ದಾಳಿ ಇಟ್ಟು, ಎಲ್ಲಾ ದಲಿತ ಕೂಲಿ ಕಾರ್ಮಿಕರನ್ನ ಮನಸೋ ಇಚ್ಚೆ ಥಳಿಸಿದ.

ಈ ಘಟನೆ ಇಡೀ ಪ್ರಾಂತ್ಯದ ರೈತರು ಮತ್ತು ಕೂಲಿ ಕಾರ್ಮಿಕರನ್ನು ಕೆರಳಿಸಿತು. ಹನ್ನೆರೆಡು ಹಳ್ಳಿಗಳ ಎಲ್ಲಾ ದಲಿತರು, ರೈತರು, ಸಂಘಟಿತರಾಗಿ, ಸತ್ಯನಾರಾಯಣಸಿಂಗ್ ಎಂಬಾತನ ನೇತೃತ್ವದಲ್ಲಿ  “ಕಿಸಾನ್ ಸಂಗ್ರಾಮ್ ಸಮಿತಿ” ಮತ್ತು “ಗ್ರಾಮ್ ರಕ್ಷಣ್ ದಳ್” ಎಂಬ ಹೆಸರಿನಲ್ಲಿ ಸಮಿತಿಗಳನ್ನು ರಚಿಸಿಕೊಂಡರು. ಇವರಿಗೆ ಗೆರಿಲ್ಲಾ ಯುದ್ಧ ತಂತ್ರಗಳ ತರಬೇತಿ ನೀಡಲು, ನೆರೆಯ ಪಶ್ಚಿಮಬಂಗಾಳದಿಂದ ನಾಯಕರು ಬಂದು, ದಾಳಿಗೆ ಮಾರ್ಗದರ್ಶನ ನೀಡಿದರು. 1969 ಜನವರಿ ವೇಳೆಗೆ ಚಂಡಮಾರುತದಂತೆ ಉತ್ತರ ಬಿಹಾರವನ್ನು ಆವರಿಸಿಕೊಂಡ ಹೋರಾಟಗಾರರು, ಶೋಷಣೆಯನ್ನೇ ವೃತ್ತಿ ಮಾಡಿಕೊಂಡಿದ್ದ ಭೂಮಾಲಿಕರಿಗೆ, ಬಡ್ಡಿ ಹಣದ ಲೇವಾದೇವಿಗಾರರಿಗೆ ಹಿಂಸೆಯ ರುಚಿಯನ್ನು ಪ್ರಥಮ ಬಾರಿಗೆ ತೋರಿಸಿಕೊಟ್ಟರು. ಹಿಂದೊಮ್ಮೆದ ಅವಧಿಯಲ್ಲಿ ಹದಿಮೂರು ಮಂದಿ ಭೂಮಾಲೀಕರು ಹತ್ಯೆಯಾಗುವುದರ ಮೂಲಕ ಉತ್ತರ ಬಿಹಾರವೆಂದರೆ, ಭೂಮಾಲೀಕರ ರುಧ್ರಭೂಮಿ ಎಂಬಂತಾಯಿತು. ಮುಜಾಪುರ್ ಜಿಲ್ಲೆಯ ಈ ಹೋರಾಟ ಸಹಜವಾಗಿ ದರ್ಭಾಂಗ ಮತ್ತು ಚಂಪಾರಣ್ಯ ಜಿಲ್ಲೆಗಳಿಗೂ ಹರಡಿತು. ಇದರ ಜೊತೆಗೆ ಚೋಟಾ ನಾಗ್ಪುರ್ ಪ್ರದೇಶದಲ್ಲಿ ಆದಿವಾಸಿಗಳ ಪ್ರತ್ಯೇಕ ಹೋರಾಟ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿತು. ಎಂ,ಎಂ,ಜಿ. (Man, Money, Gun) ಇದರ ನೇತೃತ್ವವನ್ನು ಬಂಗಾಳಿ ಮೂಲದ ಸುಬೋತ್ರ ರಾಯ್ ಎಂಬಾತ ವಹಿಸಿಕೊಂಡಿದ್ದ. ಈ ತಂಡದ ಬಹುತೇಕ ಸದಸ್ಯರು ನಗರ ಜೀವನದಿಂದ ಬಂದವರಾಗಿದ್ದರಿಂದ ಅರಣ್ಯದಲ್ಲಿ ಅಡಗಿ ಹೋರಾಟ ನಡೆಸಲು ಸಾಧ್ಯವಾಗದೆ, ಅತಿ ಶೀಘ್ರದಲ್ಲಿ ಬಿಹಾರ ಪೊಲೀಸರಿಂದ ಬಂಧಿತರಾದರು. 54 ಮಂದಿ ಬಂಧಿತ ಸದಸ್ಯರಲ್ಲಿ ಮೇರಿ ಟೈಲರ್ ಎಂಬ ಓರ್ವ ಬ್ರಿಟಿಷ್ ಯುವತಿ ಸಿಕ್ಕಿ ಬಿದ್ದುದು ವಿಶೇಷ. (ವಿಚಾರಣೆಯ ನಂತರ ಈಕೆಯನ್ನ ತಾಯ್ನಾಡಿಗೆ ಗಡಿಪಾರು ಮಾಡಲಾಯಿತು)

ಬಿಹಾರ ಪೊಲೀಸರ ಕಾರ್ಯಾಚರಣೆಯ ನಡುವೆಯೂ, ನಕ್ಸಲ್ ಚಳವಳಿ, ರಾಂಚಿ ಮತ್ತು ಸಿಂಘಭೂಮಿ ಜಿಲ್ಲೆಗಳಿಗೆ ಹರಡಿತು. ಇದರಿಂದಾಗಿ ಚೋಟಾ ಕಲ್ಕತ್ತ ಎಂದು ಕರೆಯಲ್ಪಡುತ್ತಿದ್ದ ಜೆಮ್‌ಶೆಡ್‌‍ಪುರ ನಕ್ಸಲ್ ಹಾವಳಿಗೆ ತುತ್ತಾಗಬೇಕಾಯಿತು. 1970ರ ಅಕ್ಡೋಬರ್ ತಿಂಗಳಿನಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಟಾಟ ಕಂಪನಿ ನೌಕರರ ವಸತಿ ಕಾಲೋನಿಯ ಭದ್ರತಾ ದಳದ ಅಧಿಕಾರಿಯೊಬ್ಬನನ್ನು ಹೋರಾಟಗಾರರು ಕೊಂದು ಹಾಕಿದರು. ಇದಕ್ಕೂ ಮುನ್ನ ಆಗಸ್ಟ್ ತಿಂಗಳಿನಲ್ಲಿ ಶಾಲಾ ಕಟ್ಟಡಗಳನ್ನು ಧ್ವಂಸಗೊಳಿಸಿದ ನಕ್ಸಲ್ ಹೋರಾಟಗಾರರು ಜೆಮ್‌ಸೆಡ್‌ಪುರಕ್ಕೆ ತಾವು ಕಾಲಿಟ್ಟರಿವ ಬಗ್ಗೆ ಸರ್ಕಾರಕ್ಕೆ ಪರೋಕ್ಷ ಸೂಚನೆಯನ್ನು ನೀಡಿದ್ದರು. 1971 ರಲ್ಲಿ ಸರ್ಕಾರಕ್ಕೆ ಸೇರಿದ ನಾಲ್ಕು ಸಾರಿಗೆ ಬಸ್ಸುಗಳನ್ನು ಸುಟ್ಟು ಹಾಕಿದ್ದಲ್ಲದೆ,  ಜೆಮ್‌ಸೆಡ್‌ಪುರ ವಿಮಾನ ಕ್ಲಬ್‌ಗೆ ಸೇರಿದ ಪುಷ್ವಕ್ ಎಂಬ ಲಘು ವಿಮಾನವನ್ನು ಬಾಂಬ್ ಇಟ್ಟು ಸ್ಪೋಟಿಸಿದರು. ಪಶ್ಚಿಮ ಬಂಗಾಳದ ಗೋಪಿಬಲ್ಲಬಪುರ ಜಿಲ್ಲೆಯ ಗಡಿಭಾಗ ಹೊಂದಿದ್ದ, ಸಿಂಘಭೂಮಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಿಂಸೆ, ಕೊಲೆಯ ಯತ್ನ ಮತ್ತು ಲೂಟಿಗಳು ನಡೆದವು. ಈ ಎಲ್ಲಾ ಘಟನೆಗಳ ಹಿಂದೆ ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ನಕ್ಸಲ್ ನಾಯಕರ ಕೈವಾಡವಿತ್ತು. ಚಾರು ಮುಜಂದಾರ್ ಬೆಂಬಲಿಗರು, ಬಿಹಾರದಲ್ಲಿ ಮೇಲ್ವರ್ಗದ ಜಾತಿ ಮತ್ತು ಶ್ರೀಮಂತ ಸಮುದಾಯದ ಶೋಷಣೆಯಿಂದ ನರಳಿದ್ದ ದಲಿತರಿಗೆ, ಭೂಹೀನ ಕೃಷಿ ಕಾರ್ಮಿಕರಿಗೆ ನಕ್ಸಲ್ ಹೋರಾಟದ ದೀಕ್ಷೆ ನೀಡುವುದರ ಮೂಲಕ ಬಿಹಾರದಲ್ಲಿ ನಕ್ಸಲ್ ಅಧ್ಯಾಯಕ್ಕೆ ನಾಂದಿ ಹಾಡಿದರು.

ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಒಂದು ಎನಿಸಿರುವ ಉತ್ತರ ಪ್ರದೇಶಕ್ಕೆ 1970 ರಲ್ಲಿ ಚಾರುವಿನ ಹತ್ಯೆಯ ನಂತರ ನಕ್ಸಲ್ ಹೋರಾಟ ವ್ಯಾಪಿಸಿತು. ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಹಳ್ಳಿಗಳನ್ನ, ಬಡವರನ್ನ, ಮತ್ತು ಹಿಂದುಳಿದ ಜಾತಿಯ ಸಮುದಾಯಗಳನ್ನು ಹೊಂದಿರುವ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನು ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯಗಳು ಪಡೆದಿವೆ. ಬಡತನ, ಶೋಷಣೆ ಮತ್ತು ಅನ್ಯಾಯಗಳೇ ತಾಂಡವವಾಡುವ ಈ ಪ್ರದೇಶಗಳಲ್ಲಿ ನಕ್ಸಲ್ ಹೋರಾಟ ಹರಡುವುದು ಕಷ್ಟಕರವೇನಲ್ಲ ಎಂಬ ಸತ್ಯವನ್ನು ಪಶ್ಚಿಮ ಬಂಗಾಳದ ಮತ್ತು ಆಂಧ್ರದ ನಕ್ಸಲ್ ನಾಯಕರು ಚೆನ್ನಾಗಿ ಅರಿತಿದ್ದರು. ಉತ್ತರ ಪ್ರದೇಶದಲ್ಲಿ ನಕ್ಸಲ್ ಚಳವಳಿ ಆರಂಭಗೊಂಡಿದ್ದು, ಉತ್ತರ ಭಾಗದ ಲಕ್ಷೀಪುರ್ ಜಿಲ್ಲೆಯಲ್ಲಿ. ಇದು, ತೆಹ್ರಿ ಪ್ರಾಂತ್ಯಕ್ಕೆ ಹೊಂದಿಕೊಂಡಿದ್ದು, ಅರಣ್ಯ ಪ್ರದೇಶದಿಂದ ಆವೃತ್ತವಾಗಿದೆ. ಥಾರುಸ್ ಎಂಬ ಬುಡಕಟ್ಟು ಜನಾಂಗ ಹೆಚ್ಚಾಗಿ ವಾಸಿಸುವ ಈ ಪ್ರದೇಶದಲ್ಲಿ, 1960ರ ದಶಕದಲ್ಲಿ ಉತ್ತರಪ್ರದೇಶ ಸರ್ಕಾರ ಆದಿವಾಸಿಗಳಿಗೆ ಒಂದು ವಿಶೇಷ ಕಾನೂನನ್ನು ರೂಪಿಸಿತ್ತು. ಯಾವುದೇ ಆದಿವಾಸಿ ಕುಟುಂಬ 10 ರಿಂದ 12 ಎಕರೆ ಅರಣ್ಯ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು, ಬೇಸಾಯ ಮಾಡಬಹುದು ಎಂಬ ಈ ಕಾಯ್ದೆ ನಿಜಕ್ಕೂ ಆದಿವಾಸಿಗಳ ಪಾಲಿಗೆ ವರದಾನವಾಗಿತ್ತು. ಆದರೆ, ಇಲ್ಲೂ ಕೂಡ, ಅಕ್ಷರ ಲೋಕದಿಂದ ವಂಚಿತರಾದ ಈ ಮುಗ್ಧ ಜನಾಂಗ ದಳ್ಳಾಳಿಗಳಿಂದ ಮತ್ತು ಜಮೀನ್ದಾರರಿಂದ ವಂಚಿತರಾಗಬೇಕಾಯಿತು. ವಿಶ್ವನಾಥ ತಿವಾರಿ ಎಂಬ ನಕ್ಸಲ್ ನಾಯಕನ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 1969 ರಿಂದ 1972 ರ ನಡುವೆ ಅನೇಕ ಹಿಂಸಾಚಾರದ ಘಟನೆ ಮತ್ತು ಭೂಮಾಲೀಕರ ಹತ್ಯೆಗಳು ಜರುಗಿದವು. ಇದರ ಜೊತೆ ಜೊತೆಗೆ ನೆರೆಯ ಪಾಲಿಯ ಜಿಲ್ಲೆಗೆ ಹಿಂಸಾತ್ಮಕ ಹೋರಾಟ ವ್ಯಾಪಿಸಿತು.

ಪಾಲಿಯ ಜಿಲ್ಲೆ ನೇಪಾಳದ ಗಡಿ ಭಾಗವನ್ನು ಹೊಂದಿದ್ದರಿಂದ ನಾಯಕರಿಗೆ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ನೆರೆಯ ನೇಪಾಳಕ್ಕೆ ಪಲಾಯನ ಮಾಡಲು ಸೂಕ್ತ ಸ್ಥಳವಾಗಿತ್ತು. ಪಾಲಿಯ ಜಿಲ್ಲೆ ಜೊತೆಗೆ ಕಾನ್ಪುರ, ವಾರಾಣಾಸಿ, ಫರುಕ್ಕಾಬಾದ್, ಉನ್ನಾವೊ, ರಾಯ್ ಬರೇಲಿ, ಮೊರದಾಬಾದ್, ಅಜಮ್ಘರ್ ಜಿಲ್ಲೆಗಳಿಗೆ ನಕ್ಸಲ್ ಚಳವಳಿ ವ್ಯಾಪಿಸಿ 70ರ ದಶಕದಲ್ಲಿ ಸಣ್ಣ ಪುಟ್ಟ ಘಟನೆಗಳು ನಡೆದವು. ಉತ್ತರ ಪ್ರದೇಶದಲ್ಲಿ ಅಲ್ಲಿನ ಜನರ ಬಡತನ ಮತ್ತು ಅನಕ್ಷರತೆಯ ಕಾರಣದಿಂದ ನಕ್ಸಲ್ ಹೋರಾಟ ಪ್ರಭಾವಶಾಲಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಕರಪತ್ರ ಮತ್ತು ಭಾಷಣ ಗಳ ಮೂಲಕ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡುವುದಕ್ಕೆ ಅಲ್ಲಿನ ನಾಯಕರು ತಮ್ಮ ಸಮಯವನ್ನು ವಿನಿಯೋಗಿಸಿದರು. ಆದರೆ, ಹಸಿದವನ ಮುಂದೆ ಉಪದೇಶ ಪ್ರಯೋಜನಕ್ಕೆ ಬಾರದು ಎಂಬಂತೆ, ಅಲ್ಲಿನ ಬಡವರನ್ನು ಹೋರಾಟಕ್ಕೆ ಸೆಳೆಯುವ ಯತ್ನ ವಿಫಲವಾಯಿತು.

ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವೆ ಇರುವ ಒರಿಸ್ಸಾದ ಕೊರಾಪೇಟ್ ಮತ್ತು ಗಂಜಾಂ ಜಿಲ್ಲೆಗಳಿಗೆ 1968 ರಲ್ಲೇ ನಕ್ಸಲ್ ಚಳವಳಿ ವ್ಯಾಪಿಸಿತ್ತು. ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಹೋರಾಟದಿಂದ ಸ್ಪೂರ್ತಿ ಪಡೆದಿದ್ದ ಇಲ್ಲಿನ ಡಿ.ಬಿ.ಎಂ. ಪಟ್ನಾಯಕ್, ಜಲಧರ್ನಂದಾ, ರಬಿದಾಸ್, ಕುಂದನ್ರಾಮ್, ನಾಗಭೂಷಣ ಪಟ್ನಾಯಕ್, ಧೀನಬಂಧುಸಮಲ್, ಜಗನ್ನಾಥ್ ಮಿಶ್ರಾ ಮುಂತಾದವರು ಹೋರಾಟದ ಮುಂಚೂಣಿಯಲ್ಲಿದ್ದರು. 1969 ರಲ್ಲಿ ಚಾರುಮುಜಂದಾರ್ ಮನವಿ ಮೇರೆಗೆ ತಮ್ಮ ಸಂಘಟನೆಯನ್ನು ಸಿ.ಪಿ.ಎಂ. (ಎಮ್.ಎಲ್) ಸಂಘಟನೆಯೊಂದಿಗೆ ವಿಲೀನಗೊಳಿಸಿದರು. ಅಲ್ಲದೆ ಒರಿಸ್ಸಾದ ಜಿಲ್ಲೆಗಳ ಹೋರಾಟದ ನಿರ್ವಹಣೆಯನ್ನು ಕ್ರಮವಾಗಿ, ಪಶ್ಚಿಮ ಬಂಗಾಳ ಮತ್ತು ಆಂಧ್ರದ ನುರಿತ ತಂಡಗಳಿಗೆ ವಹಿಸಲಾಗಿತ್ತು. ಒರಿಸ್ಸಾದಲ್ಲಿ ಪ್ರಥಮ ಹಿಂಸಾಚಾರದ ಘಟನೆ 1971ರ ಪೆಬ್ರವರಿ 21 ರಂದು, ಸರ್ಕಾರದ ಮಾಹಿತಿದಾರರು ಎಂಬ ಆರೋಪದಡಿ ಶಾಲಾಶಿಕ್ಷಕ ಹಾಗೂ ಗ್ರಾಮಸಹಾಯಕ ಇವರನ್ನು ಹತ್ಯೆ ಮಾಡುವುದರೊಂದಿಗೆ ಪ್ರಾರಂಭವಾಯಿತು. ಅದೇ ವರ್ಷ ಜುಲೈ 5ರಂದು ಬೊಲ್ಲ ಎಂಬ ಹಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ಪೇದೆಯನ್ನು ಇರಿದು ಗಾಯಗೊಳಿಸಿ, ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಈ ಎರಡು ಘಟನೆಗಳು ಸಂಭವಿಸಿದ ಕೆಲ ದಿನಗಳಲ್ಲೇ ಒರಿಸ್ಸಾದ ಹೋರಾಟದ ನಾಯಕತ್ವ ವಹಿಸಿದ್ದ, ಪಶ್ಚಿಮ ಬಂಗಾಳದ ಅಸೀಮ್‌ಚಟರ್ಜಿ ಮತ್ತು ಸಂತೋಷ್ ರಾಣ ಇವರ ಬಂಧನದೊಂದಿಗೆ ಮೊದಲ ಹಂತದ ಹೋರಾಟ ತಣ್ಣಗಾಯಿತು. ಇದರ ಪರಿಣಾಮವಾಗಿ ಎರಡನೇ ವರ್ಗದ ನಾಯಕರು ನೆರೆಯ ಆಂಧ್ರ ಮತ್ತು ಪಶ್ಚಿಮ ಬಂಗಾಳಕ್ಕೆ ಪಲಾಯನಗೈದು ನೆಲೆಕಂಡುಕೊಂಡರು.

ಮಧ್ಯಪ್ರದೇಶದ ಈಗಿನ ಛತ್ತೀಸ್‌ಗಡ್ ರಾಜ್ಯಕ್ಕೆ ಸೇರಿರುವ ರಾಯ್‌ಪುರ, ದರ್ಗ್, ಬಿಲಾಸ್ಪುರ, ಬಸ್ತರ್, ರಾಯ್‌ಗರ್ ಜಿಲ್ಲೆಗಳಲ್ಲಿ 70ರ ದಶಕದಲ್ಲಿ ನಕ್ಸಲ್ ಹೋರಾಟ ಕಾಲಿಟ್ಟಿತು. (2000ನೇ ಇಸವಿಯಲ್ಲಿ ಛತ್ತೀಸ್‌ಗಡ್ ಮಧ್ಯಪ್ರದೇಶದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯಿಸಿತು.)  ಇಲ್ಲಿನ ಜೊಗುರಾಯ್ ಎಂಬ ಮಾವೋವಾದಿ ಕಮ್ಯೂನಿಷ್ಟ್ ಪಕ್ಷದ ನಾಯಕ ಬುಡಕಟ್ಟು ಜನಾಂಗವನ್ನು “ಕ್ರಾಂತಿಕಾರಿ ಕಿಸಾನ್ ಮಜ್ದೂರ್” ಎಂಬ ಸಂಘಟನೆಯ ಹೆಸರಿನಲ್ಲಿ ಒಂದುಗೂಡಿಸಿ ಸರ್ಕಾರದ ವಿರುದ್ಧ ಯುದ್ಧ ಸಾರಿದನು. ಕ್ರಮೇಣ ಚಳವಳಿ, ಭೂಪಾಲ್, ಜಬಲ್ ಪುರ, ಉಜ್ಜಯನಿ ಜಿಲ್ಲೆಗಳಿಗೂ ಹರಡಿತು. ಪಂಜಾಬ್ ಹರಿಯಾಣ ರಾಜ್ಯಗಳಿಗೆ ದೆಹಲಿ ಮೂಲಕ ನಕ್ಸಲ್ ಚಳವಳಿಯನ್ನು ವಿಸ್ತರಿಸುವ ಪ್ರಯತ್ನ ನಡೆಯಿತಾದರೂ ಅದು ಯಶಸ್ವಿಯಾಗಲಿಲ್ಲ. 1971 ರಲ್ಲಿ ಸಂಗ್ರೂರ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಡೆಪ್ಯೂಟಿ ಪೊಲೀಸ್ ಸೂಪರಿಡೆಂಟೆಂಟ್ ಒಬ್ಬನನ್ನು ಹತ್ಯೆ ಮಾಡಲಾಯಿತು. ಯುವ ವಿದ್ಯಾರ್ಥಿಗಳು, ಮತ್ತು ಕೆಳವರ್ಗದ ಜನರನ್ನು ಸಂಘಟಿಸುವ ಯತ್ನ ಯಶಸ್ವಿಯಾಗಲಿಲ್ಲ. ಇದಕ್ಕಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಲೋಕ್ ಯುಧ್ಧ್, ಪೀಪಲ್ಸ್ ಪಾಥ್, ಎಂಬ ಎರಡು ಪತ್ರಿಕೆಗಳನ್ನು ಸಹ ಹೊರ ತರಲಾಗಿತ್ತು.

1970 ರ ದಶಕದ ಪ್ರಾರಂಭದ ದಿನಗಳಲ್ಲಿ ಚಾರುಮುಜಂದಾರ್ ಕನಸಿನಂತೆ ದೇಶಾದ್ಯಂತ ನಕ್ಸಲ್ ಹೋರಾಟ ವಿಸ್ತರಿಸಲು ಎಲ್ಲಾ ಬಗೆಯ ಪ್ರಯತ್ನ ನಡೆಯಿತು. ಮಹಾರಾಷ್ಟ್ರ, ರಾಜಸ್ಥಾನ, ಜಮ್ಮು, ಕಾಶ್ಮೀರ, ಕೇರಳ ತಮಿಳುನಾಡು. ಈಶಾನ್ಯ ಭಾಗದ ಅಸ್ಸಾಮ್ ಮುಂತಾದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೆಲೆಯೂರಿ, ಒಂದು ಅಥವಾ ಎರಡು ಹಿಂಸಾತ್ಮಕ ಘಟನೆಗಳಿಗೆ ಚಳವಳಿ ಸೀಮಿತಗೊಂಡಿತು. ಪ್ರಾಯೋಗಿಕವಾಗಿ ಮಾವೋವಾದಿ ನಕ್ಸಲಿಯರ ಪ್ರಥಮ ಹಂತದ ಹೋರಾಟ ದೇಶಾದ್ಯಂತ ಯಶಸ್ವಿಯಾಗದಿದ್ದರೂ, ಸೈದ್ಧಾಂತಿಕವಾಗಿ ಹಲವಾರು ಯುವ ಮನಸ್ಸುಗಳನ್ನ ಚಳವಳಿಗೆ ಸೆಳೆದುಕೊಳ್ಳುವಲ್ಲಿ ಸಫಲವಾಯಿತು. ದೇಶದ ಅಧಿಕಾರದ ಕೇಂದ್ರ ಬಿಂದುವಾಗಿರುವ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ಸೇರ್ಪಡೆಗೊಂಡರು. ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ, ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್, ಸೆಂಟ್ ಸ್ಟೀಪನ್ ಕಾಲೇಜು, ದೆಹಲಿ ವಿ.ವಿ. ಇವುಗಳಿಂದ ಸಾವಿರಾರು ವಿದ್ಯಾರ್ಥಿಗಳು ನಕ್ಸಲ್ ಹೋರಾಟಕ್ಕೆ ದುಮುಕಿದರು, ಇವರುಗಳಲ್ಲಿ, ವೈದ್ಯಕೀಯ ಮತ್ತು ಇಂಜಿನೀಯರಿಂಗ್ ವಿದ್ಯಾರ್ಥಿಗಳು, ಮತ್ತು ಸರ್ಕಾರದ ಹಿರಿಯ ಐ.ಎ.ಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳು ಸೇರಿದ್ದು ವಿಶೇಷ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ತಮ್ಮ ಗೆಳೆಯರಿಂದ ಆಕರ್ಷಿತರಾದ ಹಲವು ವಿದ್ಯಾಥಿನೀಯರು, ವಿಶೇಷವಾಗಿ, ಲೇಡಿ ಶ್ರಿರಾಮ್ ಕಾಲೇಜಿನಿಂದ ಬಂದವರು ಹೋರಾಟದ ನದಿಗೆ ಧುಮುಕಿದರು.

ದೆಹಲಿಯ ಈ ವಿದ್ಯಾರ್ಥಿಗಳ ಸಂಘಟನೆ ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ವಿಚಾರ ಸಂಕಿರಣ, ನಾಟಕ ಪ್ರದರ್ಶನ ಮುಂತಾದವುಗಳನ್ನು ಏರ್ಪಡಿಸುವುದರ ಮೂಲಕ ಎಡಪಂಥೀಯ ಸಿದ್ಧಾಂತಗಳನ್ನು ಜೀವಂತವಾಗಿಟ್ಟಿತು. ಇದು ಮುಂದಿನ ದಿನಗಳಲ್ಲಿ ಅಂದರೆ, 1980 ದಶಕದಲ್ಲಿ ಪ್ರಾರಂಭವಾದ ಪೀಪಲ್ಸ್ ವಾರ್ ಹೆಸರಿನ ಎರಡನೇ ಹಂತದ  ನಕ್ಸಲ್ ಹೋರಾಟಕ್ಕೆ ಭದ್ರ ಬುನಾದಿ ಹಾಕಿತು.

(ಮುಂದುವರಿಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-10)


– ಡಾ.ಎನ್.ಜಗದೀಶ್ ಕೊಪ್ಪ


 

ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ಹತ್ತಿ ಉರಿದು ತಣ್ಣಗಾದ ನಕ್ಸಲ್ ಹಿಂಸಾಚಾರದ ಹೋರಾಟ, ಪಶ್ಚಿಮ ಬಂಗಾಳದಲ್ಲಿ ಫಿನಿಕ್ಸ್ ಹಕ್ಕಿಯಂತೆ ಜನ್ಮ ತಾಳಿತು. ಈ ಬಾರಿಯ ಹೋರಾಟಕ್ಕೆ ಆವೇಶ, ಕೆಚ್ಚು, ಇವುಗಳ ಜೊತೆಗೆ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ಮನೋಭಾವ ಎದ್ದು ಕಾಣುತ್ತಿತ್ತು. ಶ್ರೀಕಾಕುಳಂ ಜಿಲ್ಲೆಯ ನಾಯಕರ ಹತ್ಯೆ ಎಲ್ಲರನ್ನು ಕೆರಳಿಸಿತ್ತು ಹಾಗಾಗಿ ಸೈದ್ಧಾಂತಿಕ ವಿಚಾರಗಳನ್ನು ಬದಿಗಿರಿಸಿದ ಇಲ್ಲಿನ ನಾಯಕರು ಸರ್ಕಾರದ ಜೊತೆ ಹಿಂಸಾತ್ಮಕ ಮಾರ್ಗದಲ್ಲಿ ಹೋರಾಟಕ್ಕೆ ಮುಂದಾದರು. ಮಧ್ಯಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಮಿಡ್ನಾಪುರ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡ, ಪಶ್ಚಿಮ ಬಂಗಾಳದ ನಾಯಕರು, ತಮ್ಮ ಹೋರಾಟವನ್ನು ದೆಬ್ರಾ ಮತ್ತು ಗೋಪಿಬಲ್ಲಬಪುರ್ ಜಿಲ್ಲೆಗಳಿಗೆ ವಿಸ್ತರಿಸಿದರು. ಈ ಜಿಲ್ಲೆಗಳಲ್ಲಿ ಸಂತಾಲ್, ಲೊದಸ್ ಮತ್ತು ಒರಯನ್ ಎಂಬ ಬುಡಕಟ್ಟು ಜನಾಂಗ ಅತಿ ಹೆಚ್ಚು ಪ್ರಮಾಣದಲ್ಲಿ ವಾಸವಾಗಿದ್ದುದು ಕಾರಣವಾಗಿತ್ತು. ಇವರೆಲ್ಲರೂ ಕೃಷಿ ಕೂಲಿಕಾರ್ಮಿಕರಾಗಿದ್ದರು ಜೊತೆಗೆ ಒಂದಿಷ್ಟು ಮಂದಿ ಜಮೀನ್ದಾರರ ಭೂಮಿಯನ್ನು ಗೇಣಿಗೆ ಪಡೆದು ರೈತರಾಗಿ ದುಡಿಯುತ್ತಿದ್ದರು.

ನಕ್ಸಲ್‌ಬಾರಿ ಹೋರಾಟದ ನಂತರ ಪಶ್ಚಿಮ ಬಂಗಾಳದಲ್ಲಿ ಈ ಮೂರು ಜಿಲ್ಲೆಗಳನ್ನು ತಮ್ಮ ಹೋರಾಟಕ್ಕೆ ಆಯ್ದುಕೊಳ್ಳಲು ಹಲವು ಕಾರಣಗಳಿದ್ದವು. ಗೋಪಿಬಲ್ಲಬಪುರ್ ಎಂಬ ಜಿಲ್ಲೆ ಅರಣ್ಯದಿಂದ ಆವೃತ್ತವಾಗಿ, ತನ್ನ ಗಡಿಭಾಗದಲ್ಲಿ ಬಿಹಾರ್ ಮತ್ತು ಒರಿಸ್ಸಾ ರಾಜ್ಯವನ್ನು ಹೊಂದಿತ್ತು. ಪೊಲೀಸರ ದಾಳಿಯ ಸಂದರ್ಭದಲ್ಲಿ ನೆರೆಯ ರಾಜ್ಯಗಳಿಗೆ ನಾಯಕರು ನುಸುಳಿ ಹೋಗಲು ಪ್ರಶಸ್ತವಾಗಿತ್ತು. ಪಕ್ಕದ ಮಿಡ್ನಾಪುರ ಜಿಲ್ಲೆಯಿಂದ ಈ ಜಿಲ್ಲೆಗೆ ಸುವರ್ಣರೇಖ ಎಂಬ ನದಿಗೆ ಕಟ್ಟಲಾಗಿದ್ದ ಸೇತುವೆ ಮಾತ್ರ ಸಂಪರ್ಕದ ಮಾರ್ಗವಾಗಿತ್ತು. ಹಾಗಾಗಿ ಸೇತುವೆ ಬಳಿ ಕಾವಲು ಕೂತರೆ, ಗೋಪಿಬಲ್ಲಬಪುರ್ ಜಿಲ್ಲೆಗೆ ಯಾರು ಬಂದರೂ ನಕ್ಸಲ್ ಚಳವಳಿಗಾರರಿಗೆ ತಿಳಿಯುತ್ತಿತ್ತು. ದೆಬ್ರಾ ಜಿಲ್ಲೆಯು ಕೊಲ್ಕತ್ತಾ-ಮುಂಬೈ ನಗರಗಳ ನಡುವಿನ ಹೆದ್ದಾರಿಯಲ್ಲಿತ್ತು. ಕೊಲ್ಕತ್ತಾ ನಗರದಿಂದ ನಾಯಕರು ಬಂದು ಹೋಗಲು ಈ ಜಿಲ್ಲೆ ಅವರ ಪಾಲಿಗೆ ಪ್ರಶಸ್ತ ಸ್ಥಳವಾಗಿತ್ತು. ಆದರೆ, ಈ ಪ್ರದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆ ಇದ್ದುದರಿಂದ ಗೆರಿಲ್ಲಾ ಯುದ್ಧ ತಂತ್ರಕ್ಕೆ ಇಲ್ಲಿ ಸಾಧ್ಯವಿರಲಿಲ್ಲ.

1967 ರಲ್ಲಿ ಸಿಲಿಗುರಿ ಪ್ರಾಂತ್ಯದ ನಕ್ಸಲ್‌ಬಾರಿ ಹೋರಾಟದ ನಂತರ ಕಮ್ಯೂನಿಷ್ಟ್ ಪಕ್ಷ ವಿಭಜನೆಯಾದ ನಂತರ ಮಾವೋವಾದಿ ಕಮ್ಯೂನಿಷ್ಟ್ ಪಕ್ಷಕ್ಕೆ ಬಂದ ಬಹುತೇಕ ನಾಯಕರು ಈ ಮೂರು ಜಿಲ್ಲೆಗಳಿಂದ ಬಂದವರಾಗಿದ್ದು, ಅವರೆಲ್ಲರೂ ಚಾರುಮುಜಂದಾರ್‌ಗೆ ನಿಷ್ಠೆ ತೋರಿಸಿದ್ದರು. ಇವರಲ್ಲಿ ದೆಬ್ರಾ ಜಿಲ್ಲೆಯ ಬಾಬುದೇಬ್ ಮಂಡಲ್ ಎಂಬಾತ ವೃತ್ತಿಯಲ್ಲಿ ವಕೀಲನಾಗಿದ್ದು, 1967 ರ ಅಸೆಂಬ್ಲಿ ಚುನಾವಣೆಯಲ್ಲಿ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವನಾಗಿದ್ದ. ಗೋಪಿಬಲ್ಲಬಪುರ್ ಜಿಲ್ಲೆಯ ಗುಣಧರ್‌ಮುರ್ಮು ಎಂಬಾತ ಸ್ಥಳೀಯ ಬುಡಕಟ್ಟು ಜನಾಂಗದ ನಾಯಕನಾಗಿದ್ದ. ಇವರೆಲ್ಲರಿಗೆ ಸ್ಪೂರ್ತಿಯಾಗಿದ್ದವರು, ಸಂತೋಷ್ ರಾಣಾ ಮತ್ತು ಅಸಿಮ್ ಚಟರ್ಜಿ ಎಂಬ ಯುವ ನಾಯಕರು. ಇವರಲ್ಲಿ ಸಂತೋಷ್ ರಾಣಾ ಕೊಲ್ಕತ್ತಾ ವಿ.ವಿ.ಯಿಂದ ಎಮ್.ಎಸ್ಸಿ ಮತ್ತು ಎಂ.ಟೆಕ್. ಪದವೀಧರನಾದರೆ, ಅಸಿಮ್ ಚಟರ್ಜಿ ಪ್ರಸಿಡೆನ್ಸಿ ಕಾಲೇಜಿನಿಂದ ಬಿ.ಎಸ್ಸಿ. ಪಡೆದು ಹೊರಬಂದಿದ್ದ. (ಅಸಿಮ್ ಚಟರ್ಜಿ ಅವರ ಇತ್ತಿಚೆಗಿನ ಚಿತ್ರ ಗಮನಿಸಿ: ಪಾರ್ಶ್ವವಾಯುಪೀಡಿತರಾಗಿದ್ದಾರೆ.)

ಸಂತೋಷ್ ರಾಣ ಗೋಪಿಬಲ್ಲಬಪುರ ಜಿಲ್ಲೆಯ ನಯಬಸಾನ್ ಎಂಬ ಹಳ್ಳಿಯಲ್ಲಿ ಶಿಕ್ಷಕ ವೃತ್ತಿಯನ್ನು ಕೈಗೊಂಡು, ಅಲ್ಲಿನ ಸಂತಾಲ್ ಬುಡಕಟ್ಟು ಜನಾಂಗದ ರೈತರನ್ನು ಮತ್ತು ಕೃಷಿಕೂಲಿ ಕಾರ್ಮಿಕರನ್ನು ಸಂಘಟಿಸತೊಡಗಿದ. ಅಸಿಮ್ ಚಟರ್ಜಿ ಕೊಲ್ಕತ್ತ ನಗರದ ಯುವ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಪ್ರೆರೇಪಿಸತೊಡಗಿದ. ಈ ಇಬ್ಬರೂ ನಾಯಕರು, ಅಲ್ಲಿ ಜಮೀನ್ದಾರರ ಬಗ್ಗೆ, ಹಾಗೂ ಅಸಮಾನತೆಯಿಂದ ಕೂಡಿದ್ದ ಅವರ ಗೇಣಿ ಪದ್ಧತಿ ಮತ್ತು ಕೂಲಿದರದ ಬಗ್ಗೆ ಅಲ್ಲಿನ ಬುಡಕಟ್ಟು ಜನಕ್ಕೆ ವಿವರಿಸಿ, ಸರ್ಕಾರದ ಪಾಳು ಬಿದ್ದಿರುವ ಜಮೀನನ್ನು ಉಳುಮೆ ಮಾಡಲು ಪ್ರೊತ್ಸಾಹಿಸಿದರು. ಅಸಿಮ್ ಚಟರ್ಜಿಯ ಮಾತುಗಳಿಂದ ಪ್ರೇರಿತರಾದ ಹಲವಾರು ಪದವೀಧರರು ನಗರದ ಬದುಕನ್ನು ತ್ಯೆಜಿಸಿ ಬಂದು, ಹಳ್ಳಿಗಳಲ್ಲಿ ಸಂತಾಲ್ ಬುಡಕಟ್ಟು ಜನಾಂಗದ ಜೊತೆ ವಾಸಿಸತೊಡಗಿದರು. ಇವರಲ್ಲಿ ಅನೇಕ ಮಂದಿ ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಪದವೀಧರರು ಇದ್ದದು ವಿಶೇಷ. ಇವರುಗಳು. ಸಂತಾಲ್ ಬುಡಕಟ್ಟು ಜನಾಂಗದ ಸಾಮಾನ್ಯ ಕಾಯಿಲೆಗಳಿಗೆ ಉಪಚರಿಸುತ್ತಾ, ಅವರುಗಳ ಔಷಧದ ಖರ್ಚನ್ನು ತಾವೇ ಭರಿಸುತ್ತಾ, ಆದಿವಾಸಿಗಳು ವಾಸಿಸುತ್ತಿದ್ದ ಗುಡಿಸಲು, ರಸ್ತೆಗಳನ್ನು ಸುಧಾರಿಸಿ, ಅವರ ವಿಶ್ವಾಸಕ್ಕೆ ಪಾತ್ರರಾದರು.

ದೆಬ್ರಾ ಜಿಲ್ಲೆಯಲ್ಲಿ ಭೂರಹಿತ ಕೃಷಿ ಕೂಲಿಕಾರ್ಮಿಕರ ವೇತನ ಹೋರಾಟಕ್ಕೆ ನಾಂದಿಯಾಡಿತು. ಈ ಮುನ್ನ ಕಮ್ಯೂನಿಷ್ಟ್ ಪಕ್ಷದಲ್ಲಿದ್ದ ಅಲ್ಲಿನ ನಾಯಕರಾದ, ಗುಣಧರ್ ಮುರ್ಮು ಮತ್ತು ಬಾಬುದೇಬ್ ಮಂಡಲ್ ಇಬ್ಬರನ್ನೂ ಪಕ್ಷ ಉಚ್ಛಾಟಿಸಿದ್ದ ಕಾರಣ ಇವರಿಬ್ಬರೂ ಮಾವೋವಾದಿ ಕಮ್ಯೂನಿಷ್ಟ್ ಪಕ್ಷ ಸೇರಿ ಆದಿವಾಸಿಗಳನ್ನು ಹೋರಾಟಕ್ಕೆ ಸಜ್ಜುಗೊಳಿಸಿದರು. ಇವೆಲ್ಲವುಗಳ ಪರಿಣಾಮವಾಗಿ. 1969ರ ಆಗಸ್ಟ್ ತಿಂಗಳಿನಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ನಕ್ಸಲ್ ಹೋರಾಟಗಾರರ ಬಹು ಮುಖ್ಯವಾದ ಕಾರ್ಯಾಚರಣೆ 1969 ರ ಸೆಪ್ಟಂಬರ್ 27 ರಂದು ಆರಂಭಗೊಂಡಿತು. ಗೋಪಿಬಲ್ಲಬಪುರ ಜಿಲ್ಲೆಯಲ್ಲಿ ಸಂತೋಷ್ ರಾಣ ನೇತೃತ್ವದಲ್ಲಿ ಹೋರಾಟಗಾರರು, ನಗೆನ್ ಸೇನಾಪತಿ ಎಂಬ ಜಮೀನ್ದಾರನ ಮನೆ ಮೇಲೆ ದಾಳಿ ಮಾಡಿ, ಅವನ್ನು ಮತ್ತು ಅವನ ಸಹೋದರನನ್ನು ತೀವ್ರವಾಗಿ ಗಾಯಗೊಳಿಸಿ, ಬಂದೂಕು ಮತ್ತು ಭತ್ತದ ಫಸಲನ್ನು ದೋಚಿದರು.

ಅಕ್ಟೋಬರ್ 16 ರಂದು ಸಂತೋಷ್ ರಾಣನ ತಮ್ಮ ಮಿಹಿರ್ ರಾಣನ ನೇತೃತ್ವದ ತಂಡ, ಚೌ ಬಝಾರ್ ಎಂಬ ಹಳ್ಳಿಗೆ ನುಗ್ಗಿ ಅಲ್ಲಿನ ಜಮೀನ್ದಾರನೊಬ್ಬನನ್ನು ಕೊಂದುಹಾಕಿತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಹನ್ನೆರೆಡು ಜಮೀನ್ದಾರರು ನಕ್ಸಲ್ ಹೋರಾಟಕ್ಕೆ ಬಲಿಯಾದರು. ಇತ್ತ ದೆಬ್ರಾ ಜಿಲ್ಲೆಯಲ್ಲಿ ಗುಣಧರ್ ಮುರ್ಮು ನೇತೃತ್ವದ ಆದಿವಾಸಿ ಹೋರಾಟಗಾರರು, ಏಳು ಮಂದಿ ಜಮೀನ್ದಾರರನ್ನು ಬಲಿತೆಗೆದುಕೊಂಡರು. ಇವರಲ್ಲಿ ಕೆಲವರು, ಹೋರಾಟವನ್ನು ಬಗ್ಗು ಬಡಿಯಲು ಆಗಮಿಸಿದ್ದ ಪೊಲೀಸರಿಗೆ ಆಶ್ರಯ ನೀಡಿದ್ದರು. ಈ ಹಿಂಸಾತ್ಮಕ ಘಟನೆಗಳಿಂದ ಬೆದರಿದ ಜಮೀನ್ದಾರರು ತಮ್ಮ ಮನೆಗಳನ್ನು ತೊರೆದು ಬಂದು, ಮಿಡ್ನಾಪುರ್ ಜಿಲ್ಲಾ ಕೇಂದ್ರದಲ್ಲಿ ಆಶ್ರಯ ಪಡೆಯತೊಡಗಿದರು. ಇದರಿಂದ ಎಚ್ಚೆತ್ತುಕೊಂಡ ಪಶ್ಚಿಮ ಬಂಗಾಳ ಸರ್ಕಾರ ಮಿಡ್ನಾಪುರ್, ದೇಬ್ರಾ, ಮತ್ತು ಗೋಪಿಬಲ್ಲಬಪುರ ಜಿಲ್ಲೆಗಳಿಗೆ ಪೊಲೀಸ್ ತುಕಡಿಗಳನ್ನು ಕಳುಹಿಸಿ, ಕಂಡಲ್ಲಿ ಗುಂಡಿಕ್ಕುವಂತೆ ಆದೇಶ ನೀಡಿತು. ಇದು ನಕ್ಸಲ್ ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿತು. ಅಲ್ಲಿಯವರೆಗೆ ಜಮೀನ್ದಾರರನ್ನೆ ಗುರಿಯಾಗಿಸಿಕೊಂಡಿದ್ದ ನಕ್ಸಲ್ ಹೋರಾಟ ಪ್ರಪಥಮವಾಗಿ ಸರ್ಕಾರದತ್ತ ತಿರುಗಿತು. ಹೋರಾಟಗಾರರು, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ಧ್ವಂಸ ಮಾಡತೊಡಗಿದರು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಸತ್ಯನಾರಾಯಣ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ನಿರ್ಧಯವಾಗಿ ಎನ್ ಕೌಂಟರ್ ಹೆಸರಿನಲ್ಲಿ ಕೊಂದುಹಾಕಿದ್ದರಿಂದ, ಈ ಘಟನೆಯಿಂದ ಕ್ಷುದ್ರಗೊಂಡಿದ್ದ ನೇತಾರ ಚಾರು ಮುಜಂದಾರ್ ಒಂದು ರೀತಿಯಲ್ಲಿ ಸರ್ಕಾರದ ವಿರುದ್ಧ ಯುದ್ಧವನ್ನೇ ಘೋಷಣೆ ಮಾಡಿದ್ದ. 1975 ರ ಒಳಗೆ ನಕ್ಸಲ್ ಹೋರಾಟದ ಮೂಲಕ ಭಾರತದ ಆಡಳಿತ ಚುಕ್ಕಾಣಿಯನ್ನು ತನ್ನ ಕೈಗೆ ತೆಗೆದುಕೊಳ್ಳಬೇಕೆಂದು ಆವನ ಗುರಿಯಾಗಿತ್ತು. ಚಾರುವಿನ ಪ್ರೇರಣೆಯಿಂದ ನಕ್ಸಲ್ ಹೋರಾಟ ತೀವ್ರಗೊಂಡ ಕಾರಣ ಮತ್ತಷ್ಟು ಶೋಷಿತ ಜಮೀನ್ದಾರರ ತಲೆಗಳು ಉರುಳಿದವು. ತನ್ನ ಕಾಮುಕತನದಿಂದಾಗಿ ಆದಿವಾಸಿಗಳಿಂದ ರಣಹದ್ದು ಎಂದು ಕರೆಸಿಕೊಳ್ಳುತ್ತಿದ್ದ ಗೋಪಿಬಲ್ಲಬಪುರ ಜಿಲ್ಲೆಯ ಅಶು ಮಹಾಪಾತ್ರ ಎಂಬ ಜಮೀನ್ದಾರನನ್ನು 1970 ಮಾರ್ಚ್ 5 ರಂದು ಅವನ ಮನೆಯೆದುರು ಹತ್ಯೆಗೆಯ್ಯಲಾಯಿತು.

ಇದಾದ ಎರಡುದಿನಗಳಲ್ಲೇ ಇದೇ ಹೋರಾಟಗಾರರು, ಕೇದಾರ್‌ಘೋಶ್ ಎಂಬಾತನನ್ನು ಮತ್ತು ಅವನ ಮಗನನ್ನು ಕೊಂದು ಹಾಕಿದರು.  ಮಾರ್ಚ್ 21 ರಂದು ನಕ್ಸಲ್ ಹೋರಾಟಕ್ಕೆ ಪ್ರತಿಯಾಗಿ ಗೂಂಡಾಪಡೆಯನ್ನು ಕಟ್ಟಿಕೊಂಡು ರಕ್ಷಣೆಪಡೆದಿದ್ದ ನಾರಾಯನ್‌ಪತಿ ಎಂಬ ಜಮೀನ್ದಾರ ಮತ್ತು ಅವನ ಗೂಂಡಾಗಳನ್ನು ಗುಣಧರ್ ಮುರ್ಮು ನೇತೃತ್ವದಲ್ಲಿ ಆದಿವಾಸಿಗಳು, ಮೈ ಮೇಲಿನ ಇರುವೆ ಹೊಸಕಿ ಹಾಕಿದಂತೆ ಹೊಸಕಿ ಹಾಕಿದರು. ಹಿಂದೊಮ್ಮೆ ಹೋರಾಟಗಾರರಿಂದ ತಪ್ಪಿಸಿಕೊಂಡಿದ್ದ, ಕನೈ ಕ್ವಿಟಿ ಎಂಬ ಜಮೀನ್ದಾರ ಕೊನೆಗೂ ದೆಬ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಕ್ಸಲಿಯರ ಸಿಟ್ಟಿಗೆ  ಬಲಿಯಾದ. ಮಾರ್ಚ್ 22 ರಂದು ಹೈಫುದ್ದೀನ್ ಮಲ್ಲಿಕ್ ಎಂಬ ಮುಸ್ಲಿಂ ಜಮೀನ್ದಾರನನ್ನು, ಮಾರುಕಟ್ಟೆಯಿಂದ ಹಿಂತಿರುಗಿ ಬರುತ್ತಿರುವ ಸಂದರ್ಭದಲ್ಲಿ ತಡೆದು ನಿಲ್ಲಿಸಿದ ಆದಿವಾಸಿ ಹೋರಾಟಗಾರರು, ಮುಖ್ಯ ರಸ್ತೆಯಲ್ಲಿ ಅವನ ರುಂಡ ಮುಂಡ ಬೇರ್ಪಡುವಂತೆ ಕೊಚ್ಚಿ ಹಾಕಿದರು.

ಪೃಥ್ವಿಯ ಒಡಲೊಳಗೆ ಅಡಿಗಿದ್ದ ಅಗ್ನಿ ಜ್ವಾಲೆಯೊಂದು ಅನಿರೀಕ್ಷಿತವಾಗಿ ಸ್ಪೋಟಗೊಳ್ಳುವಂತೆ ಬುಗಿಲೆದ್ದ ನಕ್ಸಲಿಯರ ಹಿಂಸಾಚಾರಕ್ಕೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸತ್ತಿದ್ದ ಕಾಂಗ್ರೆಸ್ ಮತ್ತು ಕಮ್ಯೂನಿಷ್ಟ್ ಪಕ್ಷಗಳ ಸಂಯುಕ್ತ ಸರ್ಕಾರ ದಿಕ್ಕು ಕಾಣದಂತೆ ತತ್ತರಿಸಿ ಹೋಯಿತು. ಆ ಸರ್ಕಾರದಲ್ಲಿ ಗೃಹ ಮಂತ್ರಿಯಾಗಿದ್ದವರು ಜ್ಯೋತಿಬಸು. ಅವರು ಧರ್ಮ ಸಂಕಟಕ್ಕೆ ಸಿಲುಕಿ ಹೋದರು. ಹೋರಾಟಗಾರರೆಲ್ಲಾ ಅವರದೇ ಪಕ್ಷದಿಂದ ಸಿಡಿದು ಹೋದವರು. ಅವರ ಮೇಲೆ ಹಿಂಸೆಯ ರೂಪದಲ್ಲಿ ಪ್ರತಿಕಾರದ ಸೇಡು ತೀರಿಸಿಕೊಳ್ಳಲು ವ್ಯಯಕ್ತಿವಾಗಿ ಜ್ಯೋತಿಬಸುರವರಿಗೆ ಮನಸ್ಸಿರಲಿಲ್ಲ. ಮಾತುಕತೆಯ ಮೂಲಕ ಹೋರಾಟಕ್ಕೆ ಅಂತ್ಯ ಹಾಕಬೇಕೆನ್ನುವುದು ಅವರ ಗುರಿಯಾಗಿತ್ತು. ಆದರೆ, ಅಂತಿಮವಾಗಿ ಅವರು ಸರ್ಕಾರದ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿಯಬೇಕಾಯಿತು.

ನಕ್ಸಲ್ ಪೀಡಿತ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಪೊಲೀಸ್ ತುಕುಡಿಗಳನ್ನು ರವಾನಿಸಿದರೂ ಕೂಡ, ಪೊಲೀಸರಿಂದ ಸರ್ಕಾರಿ ಕಟ್ಟಡಗಳನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಸ್ಥಳೀಯ ಜನರ ಜೊತೆ ನಕ್ಸಲ್ ಹೋರಾಟಗಾರರು ಹೊಂದಿದ್ದ ಸುಮಧುರ ಬಾಂಧವ್ಯದಿಂದಾಗಿ, ಪೊಲೀಸರಿಗೆ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗಲಿಲ್ಲ.  ಜೊತೆಗೆ ನಕ್ಸಲಿಯರ ಹೋರಾಟ ಬೀರ್ ಭೂಮಿ ಜಿಲ್ಲೆಗೆ ವಿಸ್ತರಿಸಿತು. ಈ ಜಿಲ್ಲೆಯಲ್ಲಿ ತಾಂಡವಾಡುತ್ತಿದ್ದ ಬಡತನ ಮತ್ತು ವಿದ್ಯಾವಂತ ಯುವಕರ ನಿರುದ್ಯೋಗ ಚಳವಳಿಗೆ ಪರೋಕ್ಷವಾಗಿ ಕಾರಣವಾಯಿತು. ಸುದೇವ್ ಬಿಶ್ವಾಸ್ ಎಂಬ ಇಂಜಿನೀರಿಂಗ್ ಪದವೀಧರ, ಕ್ಷಿತೀಶ್ ಚಟರ್ಜಿ ಎಂಬ ಎಂ.ಎಸ್ಸಿ, ಪದವೀಧರ, ಹಾಗೂ ಬಿರೇನ್ ಘೋಷ್ ಎಂಬ ವಿಜ್ಙಾನ ಪದವೀಧರ ಈ ಮೂವರು ಸೇರಿ ಬೀರ್ ಭೂಮಿ ಜಿಲ್ಲೆಯನ್ನು ನಕ್ಸಲ್ ರಣರಂಗವಾಗಿ ಪರಿವರ್ತಿಸಿದರು. ಪಶ್ಚಿಮ ಬಂಗಾಳದಲ್ಲಿ 1970 ರ ಜುಲೈ ತಿಂಗಳಿನಿಂದ 1971 ರ ಜೂನ್‌ವರೆಗೆ ಸಾವಿರಾರು ಹಿಂಸಾತ್ಮಕ ಘಟನೆಗಳು ಜರುಗಿದವು.70 ರ ಡಿಸಂಬರ್‌ವರೆಗೆ ಪ್ರತಿಭಟನೆಯಿಂದ ಕೂಡಿದ್ದ ಚಳವಳಿ 1971ರ ಜನವರಿ ತಿಂಗಳಿನಲ್ಲಿ ಹಿಂಸೆಯ ರೂಪಕ್ಕೆ ತಿರುಗತೊಡಗಿತು. ಜನವರಿಯಲ್ಲಿ 44, ಪೆಬ್ರವರಿಯಲ್ಲಿ 90, ಮಾರ್ಚ್ ತಿಂಗಳಿನಲ್ಲಿ 116, ಏಪ್ರಿಲ್‌ನಲ್ಲಿ 119, ಮೇ ತಿಂಗಳಲ್ಲಿ 76 ಮತ್ತು ಜೂನ್‌ನಲ್ಲಿ 100 ಘಟನೆಗಳು ನಡೆದವು.

ನಕ್ಸಲ್ ಚಟುವಟಿಕೆ ತೀವ್ರಗತಿಯಲ್ಲಿ ಹರಡುತ್ತಿರುವುದನ್ನ ಮನಗಂಡ ಸರ್ಕಾರ, ಪೊಲೀಸ್ ತುಕಡಿಗಳ ಜೊತೆಗೆ ಅರೆಸೈನಿಕ ಪಡೆ ಸೇರಿದಂತೆ ವಿವಿಧ ಪಡೆಗಳನ್ನು ಕಾರ್ಯಾಚರಣೆಗೆ ಬಳಸಿತು. ರಜಪೂತ್ ಇನ್‌ಪೆಂಟ್ರೆಯ ಐದು ತುಕಡಿಗಳನ್ನು ಸರ್ಕಾರಿ ಕಟ್ಟಡಗಳ ರಕ್ಷಣೆಗೆ ರವಾನಿಸಲಾಯಿತು. ಬೀರ್ ಭೂಮಿ ಜಿಲ್ಲೆಯಲ್ಲಿರುವ ಬೊಲಾಪುರ್ ಸಮೀಪದ ರವೀಂದ್ರನಾಥ ಟ್ಯಾಗರ್‌ರವರ ಶಾಂತಿನಿಕೇತನ ಆಶ್ರಮ ಮತ್ತು ವಿಶ್ವಭಾರತಿ ವಿ.ವಿ.ಯ ಕಟ್ಟಡಗಳಿಗೆ ವಿಶೇಷ ರಕ್ಷಣೆ ಒದಗಿಸಲಾಯಿತು. ಉಳಿದ ತುಕಡಿಗಳು ನಕ್ಸಲಿಯರ ವಿರುದ್ಧ ಕಾರ್ಯಾಚರಣೆಗೆ ಇಳಿದವು. ಸರ್ಕಾರದ ನಿಯಂತ್ರಣದ ನಡುವೆಯೂ, ನಕ್ಸಲ್ ಹೋರಾಟ. ಕೊಲ್ಕತ್ತ ನಗರಕ್ಕೆ ಹೊಂದಿಕೊಂಡಂತೆ ಇರುವ 24 ಪರಗಣ ಜಿಲ್ಲೆ ಮತ್ತು ಹೌರ, ಬುರ್ದ್ವಾನ್, ಮಾಲ್ಡ, ಹೂಗ್ಲಿ, ನಾಡಿಯ ಜಿಲ್ಲೆಗಳಿಗೆ ವ್ಯಾಪಿಸಿತು ಅಲ್ಲಿನ ಕೆಲವು ಕಾರ್ಮಿಕ ಸಂಘಟನೆಗಳು ಚಾರು ಮುಜಂದಾರನ ಹೋರಾಟಕ್ಕೆ ಕೈಜೋಡಿಸಿದವು.

ಕಾಡ್ಗಿಚ್ಚಿನಂತೆ ಇಡೀ ಪಶ್ಚಿಮ ಬಂಗಾಳವನ್ನು ನಕ್ಸಲ್ ಚಳವಳಿ ಆವರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಸರ್ಕಾರದ ಅವಧಿ ಮುಗಿದು 1972 ರಲ್ಲಿ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿತು. ಇಂತಹ ಒಂದು ಸಮಯಕ್ಕಾಗಿ ಕಾದು ಕುಳಿತ್ತಿದ್ದ ಪಶ್ಚಿಮ ಬಂಗಾಳ ಪೊಲೀಸರು, ನಕ್ಸಲಿಯರ ಹುಟ್ಟಡಗಿಸಲು, ಆಂಧ್ರ ಪೊಲೀಸರ ಮಾದರಿಯನ್ನು ಅನುಸರಿಸಲು ಮುಂದಾದರು. ಇದರ ಪ್ರಥಮ ಪ್ರಯತ್ನವಾಗಿ ಕೊಲ್ಕತ್ತ ನಗರದಲ್ಲಿ ಭೂಗತನಾಗಿದ್ದ ನಾಯಕ ಚಾರುಮುಜಂದಾರ್‌‍ನನ್ನು ಮುಗಿಸಲು ಸಂಚು ರೂಪಿಸಿದರು. 1972ರ ಜುಲೈ 16 ರಂದು. ಕೊಲ್ಕತ್ತ ನಗರದ ರಹಸ್ಯ ಸ್ಥಳವೊಂದರಲ್ಲಿ ಚಾರುವನ್ನು ಬಂಧಿಸಿ ಲಾಲ್‌ಬಜಾರ್ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ವಿಚಾರಣೆಯ ನೆಪದಲ್ಲಿ ನಿರಂತರ 11 ದಿನಗಳ ಕಾಲ ಚಿತ್ರಹಿಂಸೆ ನೀಡಿ ಜುಲೈ 28ರ ಮಧ್ಯರಾತ್ರಿ ಒಂದುಗಂಟೆಗೆ ಕೊಂದು ಹಾಕಿದರು. ಪೊಲೀಸ್ ಕಸ್ಟಡಿಯಲ್ಲಿದ್ದ 12 ದಿನಗಳ ಕಾಲ ವಕೀಲರಿಗೆ, ಚಾರುವಿನ ಗೆಳೆಯರಿಗೆ, ಮತ್ತು ಅವನ ಬಂಧುಗಳಿಗೆ ಪೊಲೀಸರು ಭೇಟಿಗೆ ಅವಕಾಶ ನೀಡಲಿಲ್ಲ. ಜುಲೈ 28ರ ರಾತ್ರಿ ಚಾರುಮುಜಂದಾರ್ ಅಸುನೀಗಿದಾಗ, ಮರಣೋತ್ತರ ಶವ ಪರೀಕ್ಷೆಯನ್ನು ಸಹ ಮಾಡಿಸದೆ, ಅವನ ಬಂಧುಗಳನ್ನು ಠಾಣೆಗೆ ಕರೆಸಿ, 29ರ ಬೆಳಗಿನ ಜಾವ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಿಬಿಟ್ಟರು.

ಆಗರ್ಭ ಶ್ರೀಮಂತ ಜಮೀನ್ದಾರ ಕುಟುಂಬದಲ್ಲಿ ಹುಟ್ಟಿ, ಭೂರಹಿತ ಬಡವರಿಗಾಗಿ ಹೋರಾಟ ಮಾಡುತ್ತಾ, ಬಡವನಂತೆ ಬದುಕಿದ ಚಾರುಮುಜಂದಾರ್ ತನ್ನ ಕೊನೆಯ ದಿನಗಳಲ್ಲಿ ಅನಾಮಿಕನಂತೆ ಪೊಲೀಸರ ನಡುವೆ ನಡು ರಾತ್ರಿಯಲ್ಲಿ ಪ್ರಾಣ ಬಿಟ್ಟಿದು ಹೋರಾಟದ ವಿಪರ್ಯಾಸಗಳಲ್ಲಿ ಒಂದು. ವರ್ತಮಾನದಲ್ಲಿ ನಕ್ಸಲಿಯರು ಪೊಲೀಸರ ಮೇಲೆ ಮುಗಿಬಿದ್ದು ಅವರನ್ನು ನಿರ್ಧಯವಾಗಿ ಏಕೆ ಕೊಲ್ಲುತಿದ್ದಾರೆ ಎಂದು ಪ್ರಶ್ನೆ ಕೇಳುವವರಿಗೆ, ಚಾರುವಿನ ಅಮಾನುಷವಾದ ಸಾವಿನಲ್ಲಿ ಉತ್ತರ ಅಡಗಿದೆ. ನಾಯಕರ ಹತ್ಯೆಯ ಮೂಲಕ ಚಳವಳಿಯ ಬೇರು ಕಿತ್ತೊಗೆಯಬಹುದೆಂದು ನಿರೀಕ್ಷಿಸಿದ್ದ ಪೊಲೀಸರಿಗೆ ಮತ್ತು ಸರ್ಕಾರಗಳಿಗೆ ಭವಿಷ್ಯದಲ್ಲಿ ಗಂಡಾಂತರ ಕಾದಿತ್ತು. ಏಕೆಂದರೆ, ಪಶ್ಚಿಮ ಬಂಗಾಳದಲ್ಲಿ ಹೋರಾಟದ ಜ್ವಾಲೆ ಆ ಕ್ಷಣಕ್ಕೆ ನಂದಿ ಹೋದರೂ ಕೂಡ, ಅದು ಆರಿ ಹೋಗುವ ಮುನ್ನ ಪಕ್ಕದ ಬಿಹಾರ, ಉತ್ತರಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳಿಗೆ ಅಗ್ನಿ ಸ್ಪರ್ಶ ನೀಡಿ, ಕಾಡ್ಗಿಚ್ಚಿನಂತೆ ಹರಡಲು ಸಹಾಯಕವಾಗಿತ್ತು.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 23)


– ಡಾ.ಎನ್.ಜಗದೀಶ್ ಕೊಪ್ಪ


 

1925ರ ಡಿಸಂಬರ್ ತಿಂಗಳಿನಲ್ಲಿ ಕ್ರಿಸ್‌ಮಸ್ ಹಬ್ಬದ ಆಚರಣೆ ಹಾಗೂ ಒಂದಿಷ್ಟು ವಿಶ್ರಾಂತಿಗಾಗಿ ನೈನಿತಾಲ್‌ಗೆ ಬಂದ ಕಾರ್ಬೆಟ್‌‍ಗೆ ಮತ್ತೇ ರುದ್ರಪ್ರಯಾಗಕ್ಕೆ ಹೋಗಿ ನರಭಕ್ಷಕನನ್ನು ಬೇಟೆಯಾಡಬೇಕೆಂದು ಮನಸ್ಸಿನಲ್ಲಿ ಕೊರೆಯುತಿತ್ತು. ಆದರೆ, ನೈನಿತಾಲ್ ಹಾಗೂ ದೂರದ ತಾಂಜೇನಿಯಾದಲ್ಲಿನ ಅವನ ಕೃಷಿ ಮತ್ತು ಎಸ್ಟೇಟ್ ವ್ಯವಹಾರಗಳು ಅವನಿಗೆ ಅಡ್ಡಿಯಾಗುತಿದ್ದವು. ಜೊತೆಗೆ ಚಳಿಗಾಲದ ಶೀತಗಾಳಿ ಅವನ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಇವತ್ತು ಕೂಡ, ಸಂಜೆ ಆರರ ನಂತರ ನಾವು ನೈನಿತಾಲ್, ಅಲ್ಮೋರ. ರಾಣಿಖೇತ್, ರುದ್ರಪ್ರಯಾಗ ಅಥವಾ ಮನಾಲಿಯಲ್ಲಿ ಗಾಳಿಗೆ ಮೈಯೊಡ್ಡಿ ನಿಲ್ಲಲು ಸಾಧ್ಯವಾಗುವುದಿಲ್ಲ. ಇನ್ನು 85 ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ನೀವೇ ಊಹಿಸಿ.

ಕಾರ್ಬೆಟ್‌ ರುದ್ರಪ್ರಯಾಗದಿಂದ ನೈನಿತಾಲ್‌ಗೆ ವಾಪಸ್ ಬಂದ ನಂತರ, ನರಭಕ್ಷಕ ಚಿರತೆ ರುದ್ರಪ್ರಯಾಗದ ಆಸುಪಾಸಿನ ಹಳ್ಳಿಗಳಲ್ಲಿ ಅಸಂಖ್ಯಾತ ಮೇಕೆ, ಹಸುಗಳು ಅಲ್ಲದೇ, ಹತ್ತು ಜನರನ್ನು ಬಲಿತೆಗೆದುಕೊಂಡಿತ್ತು. ಈ ಎಲ್ಲಾ ಸುದ್ಧಿಗಳು ಕಾರ್ಬೆಟ್‌ಗೆ ಇಬ್ಸ್‌ಟನ್ ಮೂಲಕ ತಲಪುತಿದ್ದವು. ಏಪ್ರಿಲ್ ತಿಂಗಳಿನಲ್ಲಿ ಬೇಸಿಗೆ ಆರಂಭವಾಗುತಿದ್ದಂತೆ, ಕಾಬೆಟ್ ತನ್ನ ಸಂಗಡಿಗರೊಂದಿಗೆ ಮತ್ತೆ ರುದ್ರಪ್ರಯಾಗಕ್ಕೆ ನರಭಕ್ಷಕನ ಬೇಟೆಗೆ ಹೊರಟ. ಈ ಬಾರಿ ಅವನು ಕಾಲ್ನಡಿಗೆ ಅಥವಾ ಕುದುರೆ ಸವಾರಿ ಬದಲಿಗೆ, ನೈನಿತಾಲ್ ಗಿರಿಧಾಮದ ಕೆಳಗಿರುವ ಕತಂಗೊಂಡಂನಿಂದ ರೈಲಿನಲ್ಲಿ ಹರಿದ್ವಾರ, ಕೋಟದ್ವಾರದ ಮೂಲಕ ರುದ್ರಪ್ರಯಾಗ ತಲುಪಿದನು ಇದರಿಂದಾಗಿ 8-10 ದಿನಗಳ ಕಾಲ್ನಡಿಗೆಯ ಪ್ರಯಾಣದ ಸಮಯ ಉಳಿತಾಯವಾಯಿತು.

ಕಾರ್ಬೆಟ್‌ ತನ್ನ ನೆಚ್ಚಿನ ಭಂಟ ಮಾಧೂಸಿಂಗ್ ಮತ್ತು ಸೇವಕರೊಡನೆ ರುದ್ರಪ್ರಯಾಗ ತಲುಪುವ ವೇಳೆಗೆ, ಛಾರ್ ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಕೇದಾರನಾಥ, ಮತ್ತು ಬದರಿನಾಥ ಯಾತ್ರೆಗಾಗಿ ದೇಶಾದ್ಯಂತ ಭಕ್ತರು ಆಗಮಿಸುತಿದ್ದರು. ಎಲ್ಲಾ ಪಟ್ಟಣಗಳು ಮತ್ತು ಯಾತ್ರೆಯ ಹಾದಿಯಲ್ಲಿದ್ದ ಹಳ್ಳಿಗಳು ಭಕ್ತರಿಂದ ತುಂಬಿ ತುಳುಕುತಿದ್ದವು.. ನರಭಕ್ಷಕ ಚಿರತೆ ಯಾತ್ರೆಯ ಹಾದಿಯಲ್ಲಿರುವ ಹಳ್ಳಿಗಳನ್ನ ಗುರಿಯಾಗಿರಿಸಿಕೊಂಡು ನರಬಲಿ ತೆಗೆದುಕೊಳ್ಳುವುದನ್ನು ಆರಂಭಿಸಿತ್ತು.

ಎರಡನೇ ಬಾರಿ ರುದ್ರಪ್ರಯಾಗಕ್ಕೆ ಕಾರ್ಬೆಟ್‌ ಮತ್ತು ಅವನ ತಂಡ ಬಂದಾಗ ಜಿಲ್ಲಾಧಿಕಾರಿ ಇಬ್ಸ್‌ಟನ್ ಬಂದು ಇವರನ್ನು ಸೇರಿಕೊಳ್ಳಲಾಗಲಿಲ್ಲ. ಪೌರಿಯಲ್ಲಿ ಸರ್ಕಾರದ ಕೆಲಸದ ಒತ್ತಡದಿಂದಾಗಿ ವಾರ ಕಳೆದು ಪತ್ನಿ ಜೀನ್ ಬರುವುದಾಗಿ, ಸಂದೇಶ ಕಳಿಸಿ, ಕಾರ್ಬೆಟ್‌ ಮತ್ತು ಅವನ ತಂಡಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿದ್ದನು.

ಕಾರ್ಬೆಟ್‌ ಬರುವುದರೊಳಗೆ, ರುದ್ರಪ್ರಯಾಗದ ಸನೀಹದ ಗೋಲಬಾರಿ ಹಳ್ಳಿಯಲ್ಲಿ ನರಭಕ್ಷಕ ಮಧ್ಯವಯಸ್ಸಿನ ಹೆಂಗಸೊಬ್ಬಳನ್ನು ಬಲಿತೆಗೆದುಕೊಂಡಿತ್ತು. ಆ ನತದೃಷ್ಟ ಮಹಿಳೆ ಕತ್ತಲಾದ ಕಾರಣ ತನ್ನ ಹಳ್ಳಿಗೆ ಹಿಂತಿರುಗಲಾರದೆ, ಪಂಡಿತನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಸೋಜಿಗವೆಂದರೆ, ಐವತ್ತಕ್ಕೂ ಪ್ರವಾಸಿಗರು ಮಲಗಿದ್ದ ವಿಶಾಲವಾದ ಜಾಗದಲ್ಲಿ ಎಲ್ಲರನ್ನು ಬಿಟ್ಟು ಈಕೆಯನ್ನು ಮಿಸುಕಾಡಲು ಆಸ್ಪದ ನೀಡದೆ, ಕೊಂದು ಹೊತ್ತೊಯ್ದು ತಿಂದು ಹಾಕಿತ್ತು.

ಈ ಘಟನೆಯ ಹಿಂದಿನ ಐದು ದಿನಗಳ ಹಿಂದೆ ಇದೇ ನರಭಕ್ಷ ಪಕ್ಕದ ಹಳ್ಳಿಯಲ್ಲಿ ರಾತ್ರಿಯ ವೇಳೆ ಜಾನುವಾರುಗಳಿಗೆ ಮೇವನ್ನು ಹಾಕುತಿದ್ದ ರೈತ ಮಹಿಳೆಯ ಮೇಲೆ ದಾಳಿ ಮಾಡಿತ್ತು. ಮೇವು ಕತ್ತರಿಸಲು ಆಕೆ ಕೈಯಲ್ಲಿ ಕುಡಗೋಲು ಇದ್ದ ಕಾರಣ ಅದರ ಮೂತಿಗೆ ಬಲವಾಗಿ ಹೊಡೆದು ತಪ್ಪಿಸಿಕೊಂಡಿದ್ದಳು. ಆದರೂ ಅದು ಅವಳ ಮೊಣಕಾಲಿನ ಹಿಂಬದಿಯ ಮಾಂಸ ಖಂಡವನ್ನು ಬಲವಾಗಿ ಕಚ್ಚಿ ಹಿಡಿದು ಗಾಯಗೋಳಿಸಿತ್ತು. ಇದೇ ರೀತಿ ನರಭಕ್ಷಕ ದಾಳಿಯಿಂದ ಬದುಕುಳಿದ ಇನ್ನೋರ್ವ ವ್ಯಕ್ತಿಯೆಂದರೆ, ಪಂಡಿತ. ಅವನು ಒಮ್ಮೆ ತನ್ನ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಪ್ರವಾಸಿಗರ ಜೊತೆ ಮಲಗಿದ್ದಾಗ, ನಡುರಾತ್ರಿ ಉಸಿರು ಕಟ್ಟಿದ ಅನುಭವವಾಗಿ ಬಾಗಿಲು ತೆರೆದು ಹೊರಗಿನ ಹಜಾರಕ್ಕೆ ಬಂದ ತಕ್ಷಣ ಕಾದು ಕುಳಿತಿದ್ದ ನರಭಕ್ಷಕ ಇವನ ಮೇಲೆ ಎರಗಿತ್ತು. ಕಂಬದ ಬಳಿ ಅವನು ನಿಂತಿದ್ದರಿಂದ ಅದನ್ನು ಬಲವಾಗಿ ತಬ್ಬಿ ಹಿಡಿದು, ಚಿರತೆಯ ಹೊಟ್ಟೆಗೆ ಬಲವಾಗಿ ಒದ್ದು ಅದರ ಹಿಡಿತದಿಂದ ಬಿಡಿಸಿಕೊಂಡಿದ್ದ. ಆದರೆ, ಅದರ ಬಲವಾದ ಉಗುರುಗಳು ಅವನ ಕತ್ತನ್ನು ಸೀಳಿ, ಅನ್ನನಾಳ, ಮತ್ತು ಶ್ವಾಸನಾಳಗಳೆರಡನ್ನು ಘಾಸಿಗೊಳಿಸಿದ್ದವು. ರುದ್ರಪ್ರಯಾಗದ ಆಸ್ಪತ್ರೆಯಲ್ಲಿ ನಾಲ್ಕು ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದನು.

ಈ ಬಾರಿ ನರಭಕ್ಷಕ ಚಿರತೆಯನ್ನು ಅರಸಿಕೊಂಡು ಹಳ್ಳಿಗಳನ್ನು ಸುತ್ತುವ ಬದಲು. ಯಾತ್ರಿಕರ ಹಾದಿಯಲ್ಲಿ ಗಸ್ತು ತಿರುಗುತ್ತಿರುವ ಅದನ್ನು ಹಾದಿಯ ಸಮೀಪದಲ್ಲೇ ಮೇಕೆಯೊಂದನ್ನು ಕಟ್ಟಿ ಕಾಕಿ, ಮರದ ಮೇಲೆ ಕುಳಿತು ಬೇಟೆಯಾಡಬೇಕೆಂದು ಕಾರ್ಬೆಟ್‌ ತೀರ್ಮಾನಿಸಿದನು. ಅಷ್ಟರ ವೇಳೆಗೆ ರುದ್ರಪ್ರಯಾಗಕ್ಕೆ ಆಗಮಿಸಿದ ಇಬ್ಸ್‌ಟನ್ ದಂಪತಿಗಳು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

ಯಾತ್ರಿಕರ ಹಾದಿಯಲ್ಲಿ ಹೊಂಚು ಹಾಕಿ ಪ್ರತಿ ಐದು ದಿನಕ್ಕೊಮ್ಮೆ ಮನುಷ್ಯರನ್ನು ಬಲಿತೆಗೆದುಕೊಳ್ಳತಿದ್ದ ನರಭಕ್ಷಕನನ್ನು ಹೊಡೆಯಲು, ಗೋಲಬಾರಿ ಹಳ್ಳಿಯ ಪಂಡಿತನ ಮನೆಯ ಮೊಭಾಗದ ಹಳ್ಳದಲ್ಲಿರುವ ಕಾಡಿಗೆ ಸಂಪರ್ಕ ಕಲ್ಪಿಸುವ ಹಾದಿಯೇ ಸೂಕ್ತ ಎಂದು ಕಾರ್ಬೆಟ್‌ ನಿರ್ಧರಿಸಿದನು. ಅಲ್ಲೊಂದು ಮಾವಿನ ಮರವಿದ್ದ ಕಾರಣ ಆ ಸ್ಥಳವನ್ನು ಬೇಟೆಗಾಗಿ ಆಯ್ಕೆ ಮಾಡಿಕೊಂಡನು. ತನ್ನ ಸೇವಕರನ್ನು ಕರೆಸಿ ಮರದ ಮೇಲೆ ಮಚ್ಚಾನು ಕಟ್ಟಿಸಿ, ಪಕ್ಕದ ಹಳ್ಳಿಯೊಂದರಿಂದ ಮೇಕೆಯೊಂದನ್ನು ಖರೀದಿಸಿ ತಂದನು. ಸಾಮಾನ್ಯವಾಗಿ ಮನುಷ್ಯರ ಬೇಟೆಗಾಗಿ ಪಕ್ಕದ ಕಾಡಿನಿಂದ ಚಿರತೆ ಈ ಹಾದಿಯಲ್ಲಿ ಬರುತಿದ್ದುದನ್ನು ಅದರ ಹೆಜ್ಜೆಯ ಗುರುತುಗಳಿಂದ ಕಾರ್ಬೆಟ್‌ ದೃಢಪಡಿಸಿಕೊಂಡಿದ್ದ.

ಈ ಬಾರಿ ನರಭಕ್ಷಕನ ಬೇಟೆ ವಿಫಲವಾದರೆ, ಮತ್ತೇ ನಾನು ರುದ್ರಪ್ರಯಾಗಕ್ಕೆ ಬರಲಾರೆ ಎಂದು ಕಾರ್ಬೆಟ್‌ ಜಿಲ್ಲಾಧಿಕಾರಿ ಇಬ್ಸ್‌ಟನ್‌ಗೆ ತಿಳಿಸಿದ್ದ. ಇದರ ಸಲುವಾಗಿಯೇ ಅವನ ಹಲವಾರು ವ್ಯವಹಾರಗಳು ಕುಂಠಿತಗೊಂಡಿದ್ದವು. ತಾನು ತುರ್ತಾಗಿ ಬೇಟಿ ನೀಡಬೇಕಾಗಿದ್ದ ತಾಂಜೇನಿಯ ಪ್ರವಾಸವನ್ನು ಕಳೆದ ಮೂರು ತಿಂಗಳಿನಿಂದ ಮುಂದೂಡತ್ತಲೇ ಬಂದಿದ್ದನು.

ಕಾರ್ಬೆಟ್‌ ಮೇಕೆಯ ಕೊರಳಿಗೆ ಗಂಟೆಯನ್ನು ಕಟ್ಟಿ ಅದನ್ನು ಮಾವಿನ ಮರದ ಸಮೀಪ ಕೇವಲ 20 ಅಡಿ ದೂರದಲ್ಲಿ ಕಟ್ಟಿ ಹಾಕಿ ಪ್ರತಿದಿನ ಸಂಜೆ ಬಂದು ರಾತ್ರಿಯೆಲ್ಲಾ ನರಭಕ್ಷಕನಿಗೆ ಕಾಯಲು ಆರಂಭಿಸಿದ. ಮಾವಿನ ಮರ ಎತ್ತರವಿದ್ದ ಕಾರಣ ಚಿರತೆಗೆ ಕಾರ್ಬೆಟ್‌ನ ಸುಳಿವು ಸಿಗಲು ಸಾಧ್ಯವಿರಲಿಲ್ಲ. ಹೀಗೆ ಸತತ ಹತ್ತು ರಾತ್ರಿಗಳನ್ನು ಮರದ ಮೇಲೆ ಕುಳಿತು ಕಾದರೂ ಏನೂ ಫಲ ಸಿಗದ ಕಾರಣ ಅವನಲ್ಲಿ ಹತಾಶೆಯ ಮನೋಭಾವ ಮೋಡತೊಡಗಿತು. ಇನ್ನೆರೆಡು ದಿನ ಕಾದು, ಈ ನರಭಕ್ಷಕನ ಶಿಕಾರಿ ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿ, ಹೋಗೋಣವೆಂದು ಕಾರ್ಬೆಟ್‌ ಅಂತಿಮವಾಗಿ ದೃಢ ನಿಶ್ಚಯಕ್ಕೆ ಬಂದ. ಆದರೆ, ಅವನ ಕಾಯುವಿಕೆಯನ್ನು ನಿರಾಶೆಗೊಳಿಸದೆ, ಹನ್ನೊಂದನೇ ದಿನದ ರಾತ್ರಿ 9 ಗಂಟೆ ಸುಮಾರಿಗೆ ನರಭಕ್ಷಕ ಚಿರತೆ ಮಾವಿನ ಮರದ ಬಳಿ ಕಟ್ಟಿ ಹಾಕಿದ್ದ ಮೇಕೆಯ ಬಳಿ ಬಂತು. ಈ ಬಾರಿ ನೈನಿತಾಲ್‌ನಿಂದ ಖರೀದಿಸಿ ತಂದಿದ್ದ ನೇರವಾಗಿ ಬೆಳಕು ಚೆಲ್ಲುವ ಟಾರ್ಚ್ ಒಂದನ್ನು ಬಂದೂಕದ ನಳಿಕೆಗೆ ಕಾರ್ಬೆಟ್‌ ಜೋಡಿಸಿಕೊಂಡಿದ್ದ. ಕತ್ತಲೆಯಲ್ಲಿ ಮೈಯೆಲ್ಲವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಂಡು ನೋಡತೊಗಿದ. ಮೇಕೆಯ ಸನೀಹ ಬಂದು ಕುಳಿತ ಚಿರತೆ ಅದರ ಮೇಲೆ ಎರಗುವ ಮುನ್ನ ಸುತ್ತ ಮುತ್ತ ಅಪಾಯವಿರಬಹುದೇ ಎಂಬಂತೆ ಸುತ್ತೆಲ್ಲಾ ನೋಡತೊಡಗಿತು. ಮೇಕೆ ಗಾಬರಿಯಿಂದ ಅಲುಗಾಡಿದ ಪರಿಣಾಮ ಅದರ ಕೊರಳಿದ್ದ ಗಂಟೆಯ ಶಬ್ಧ ಕಾರ್ಬೆಟ್‌ಗೆ ಕೇಳತೊಡಗಿತು. ತಕ್ಷಣವೆ ಟಾರ್ಚ್ ಬೆಳಕು ಬಿಟ್ಟ. ಮೇಕೆ ಮೇಲೆ ಎರಗಲು ಭೂಮಿಯ ಮೇಲೆ ಕವುಚಿ ಹಾಕಿ ಕುಳಿತ ನರಭಕ್ಷಕ ಬೆಳಕು ಬಂದ ಮಾವಿನ ಮರದತ್ತ ನೋಡತೊಡಗಿತು. ಕೂಡಲೇ ಕಾರ್ಬೆಟ್‌ ಗುಂಡು ಹಾರಿಸಿಬಿಟ್ಟ. ಆ ಕತ್ತಲೆಯಲ್ಲಿ ಏನು ಜರುಗಿದೆ ಎಂಬುದು ತಿಳಿಯದ ಸ್ಥಿತಿ. ಗುಂಡಿನ ಶಬ್ಧ ಕೇಳಿ, ಕೇವಲ ನೂರೈವತ್ತು ಅಡಿ ದೂರದಲ್ಲಿದ್ದ ಮನೆಯ ಬಾಗಿಲು ತೆರೆದು ಹೊರಬಂದ ಪಂಡಿತ ಜೋರಾಗಿ ಅರುಚುತ್ತಾ, ’ಸಾಹೇಬ್ ಗುಂಡಿಗೆ ಚಿರತೆ ಸಿಕ್ತಾ?’ ಎಂದು ಕೇಳಿದ. ಕಾರ್ಬೆಟ್‌ಗೆ ಆ ಕ್ಷಣದಲ್ಲಿ ಪಂಡಿತನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತು. ಆವನ ಕೂಗಿಗೆ ಕಾರ್ಬೆಟ್‌ ಉತ್ತರಿಸಲಿಲ್ಲ.

ಆಕಾಶದಲ್ಲಿ ಕತ್ತಲೆಯಿದ್ದ ಕಾರಣ ಚಂದ್ರನ ಬೆಳಕಿಗೆ ಬೆಳಗಿನ ಜಾವ ಮೂರು ಗಂಟೆಯವರೆಗೆ ಕಾಯಬೇಕಿತ್ತು. ಸ್ವಲ್ಪ ಸಮಯದ ನಂತರ ಮೇಕೆಯ ಗಂಟೆ ಸದ್ದು ಮತ್ತೇ ಕೇಳಿದ ನಂತರ ಕಾರ್ಬೆಟ್‌ಗೆ ಕುತೂಹಲ ಹೆಚ್ಚಾಗತೊಡಗಿತು. ಮರದ ಮೇಲಿನ ಭಾಗಕ್ಕೆ ಹೋಗಿ ಸುತ್ತೆಲ್ಲಾ ವೀಕ್ಷಿಸತೊಡಗಿದ. ಏನೂ ಕಾಣಲಿಲ್ಲ. ಬೆಳಗಿನ ಜಾವದವರೆಗೆ ಕಾಯೋಣವೆಂದುಕೊಂಡು ಮರದಮೇಲೆ ನಿದ್ರೆಗೆ ಮೊರೆಹೋದ.

ಬೆಳಗಿನ ಜಾವ ಬೆಳಕರಿದ ಮೇಲೆ ಮರದಿಂದ ಇಳಿದು ಬಂದ ಕಾರ್ಬೆಟ್‌ ಮೇಕೆಯ ಹತ್ತಿರ ಬಂದಾಗ ಅದು ಏನೂ ನಡೆದಿಲ್ಲವೆಂಬಂತೆ ತನ್ನ ಬಳಿ ಇದ್ದ ಸೊಪ್ಪನ್ನು ಮೇಯುತ್ತಲಿತ್ತು. ಆದರೆ, ಅದರ ಬಳಿ ನೆಲದ ಮೇಲೆ ರಕ್ತದ ಕೋಡಿಯೇ ಹರಿದಿತ್ತು. ಮುಂದೆ ಸುಮಾರು ಐವತ್ತು ಅಡಿ ದೂರದಲ್ಲಿ ನರಭಕ್ಷಕ ಸಾವಿಗೀಡಾಗಿ ನೆಲಕ್ಕೊಗಿತ್ತು. ಅದರ ಬಳಿ ಬಂದು ಸಾವನ್ನು ಖಚಿತಪಡಿಸಿಕೊಂಡ ಕಾರ್ಬೆಟ್‌ ತನ್ನ ಎರಡು ಕೈಗಳನ್ನು ಆಕಾಶಕ್ಕೆ ಎತ್ತಿ ಹಿಡಿದು ಜೋರಾಗಿ ಹುರ್ರಾ ಎನ್ನುತ್ತಾ ಒಮ್ಮೆ ಕುಪ್ಪಳಿಸಿಸಿಬಿಟ್ಟ. ಇಡೀ ಗೋಲಬಾರಿ ಗ್ರಾಮಸ್ಥರು ಮತ್ತು ಕಾರ್ಬೆಟ್‌ನ ಸಂಗಡಿಗರು ಓಡೋಡಿ ಬಂದರು. ನಾಲ್ಕು ಮೈಲಿ ದೂರದ ಪ್ರವಾಸಿ ಮಂದಿರದಲ್ಲಿದ್ದ ಇಬ್ಸ್‌ಟನ್‌ಗೆ ಸುದ್ಧಿ ತಲುಪಿದಾಕ್ಷಣ ಕುದುರೆ ಹತ್ತಿ ಸ್ಥಳಕ್ಕೆ ಬಂದ ಅವನು, ತಾನು ಈ ಪ್ರಾಂತ್ಯದ ಜಿಲ್ಲಾಧಿಕಾರಿ ಎಂಬುದನ್ನು ಮರೆತು ಚಿರತೆಯ ಕಳೇಬರದ ಸುತ್ತಾ ಸಂತೋಷದಿಂದ ನರ್ತಿಸಿದನು. ಹಳ್ಳಿಗರ ಪ್ರಶಂಸೆ, ಮತ್ತು ಕೃತಜ್ಙತೆಯ ನಡುವೆ ಮಾತು ಬಾರದ ಮೂಕನಂತೆ ಕುಳಿತಿದ್ದ ಕಾರ್ಬೆಟ್‌, ಅವರು ತಂದುಕೊಟ್ಟ ಚಹಾ ಹೀರುತ್ತಾ, ಉದ್ವೇಗ ತಡೆದುಕೊಳ್ಳಲಾಗದೆ, ಒಂದೇ ಸಮನೆ ಸಿಗರೇಟು ಸೇದತೊಡಗಿದ.

ಸುಮಾರು ಏಳು ಅಡಿ ಉದ್ದ, 180 ಕೆ.ಜಿ. ಗಿಂತಲೂ ಹೆಚ್ಚು ತೂಕವಿದ್ದ ವಯಸ್ಸಾದ ಗಂಡು ನರಭಕ್ಷಕ ಚಿರತೆಯನ್ನು ಕಾರ್ಬೆಟ್‌ ಮತ್ತು ಇಬ್ಸ್‌ಟನ್ ಇಬ್ಬರೂ ಪರಿಶೀಲಿಸತೊಡಗಿದರು. ಪ್ರಥಮ ಬಾರಿಗೆ ರುದ್ರಪ್ರಯಾಗದ ಸೇತುವೆ ಮೇಲೆ ಸಾಗಿ ಬರುತಿದ್ದಾಗ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಹಾರಿಸಿದ್ದ ಗುಂಡಿನಿಂದಾಗಿ ಅದರ ಮುಂಗಾಲಿನ ಎರಡು ಉಗುರು ಕಿತ್ತು ಹೋಗಿದ್ದವು. ಅಲ್ಲದೇ, ಕಾರ್ಬೆಟ್‌ ನ ಗುಂಡಿನಿಂದ ಒಮ್ಮೆ ಕೂದಲೆಳೆಯ ಅಂತರದಿಂದ ತಪ್ಪಿಸಿಕೊಂಡಿದ್ದ ಅದರ ಕುತ್ತಿಗೆ ಭಾಗದಲ್ಲಿ ಗುಂಡು ಸವರಿಕೊಂಡು ಹೋದ ಗಾಯದ ಗುರುತು ಹಾಗೇ ಇತ್ತು. ಸೈನೈಡ್ ಪಾಷಣವನ್ನು ತಿಂದು ಬದುಕುಳಿದ ಪ್ರಯುಕ್ತ ಅದರ ನಾಲಗೆ ಕಪ್ಪಾಗಿತ್ತು. ಇವೆಲ್ಲಾ ಆಧಾರಗಳಿಂದ ಇದೇ ರುದ್ರಪ್ರಯಾಗದ ನರಭಕ್ಷಕ ಎಂಬ ತೀರ್ಮಾನಕ್ಕೆ ಬರಲಾಯಿತು.

ಚಿರತೆಯನ್ನು ಮೆರವಣಿಗೆಯಲ್ಲಿ ರುದ್ರಪ್ರಯಾಗದ ಪ್ರವಾಸಿ ಮಂದಿರಕ್ಕೆ ಹೊತ್ತು ತರಲಾಯಿತು. ಸತತ ಎರಡು ದಿನಗಳ ಕಾಲ ಇಡೀ ಪ್ರಾಂತ್ಯದ ಜನರೆಲ್ಲಾ ಸತ್ತು ಮಲಗಿದ್ದ ಭಯಾನಕ ನರಭಕ್ಷಕನನ್ನು ಒಮ್ಮೆ ನೋಡಿ ಹಿಡಿಶಾಪ ಹಾಕುತ್ತಾ ಹೋದರೆ, ಇದರ ದೆಶೆಯಿಂದ ತಮ್ಮ ಜಾನುವಾರುಗಳು, ಹಾಗೂ ಸಂಬಂಧಿಕರನ್ನು ಕಳೆದುಕೊಂಡ ಜನ ಕಾರ್ಬೆಟ್‌ ನ ಕಾಲಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುತಿದ್ದರು. ಈ ಸಂಭ್ರಮದ ನಡುವೆ ಬದುಕುಳಿದ ಮೇಕೆ ಕೂಡ ಜಿಮ್ ಕಾರ್ಬೆಟ್‌ನಷ್ಟೇ ಪ್ರಸಿದ್ದಿ ಪಡೆಯಿತು. ಸಕಾರದ ವತಿಯಿಂದ ಇಬ್ಸ್‌ಟನ್ ಅದರ ಕುತ್ತಿಗೆಗೆ ಒಂದು ತಾಮ್ರ ಮತ್ತು ಹಿತ್ತಾಳೆಯ ಪಟ್ಟಿಯೊಂದನ್ನು ಮಾಡಿಸಿ ಹಾಕಿದ. ಅದೃಷ್ಟದ ಮೇಕೆಯೆಂದು ರುದ್ರಪ್ರಯಾಗದ ಪ್ರಾಂತ್ಯದಲ್ಲಿ ಹೆಸರುವಾಸಿದ ಅದನ್ನು ಹಲವಾರು ಜನ ಬಂದು ನೋಡುತಿದ್ದರು. ಅದರ ಯಜಮಾನನಿಗೆ ಮತ್ತೇ ಉಡುಗರೆಯಾಗಿ ಕಾರ್ಬೆಟ್‌ ಮೇಕೆಯನ್ನು ನೀಡಿದ. ಅವನು ಅದು ಸಾಯುವವರೆಗೂ ಮಾಲೀಕ ಅತ್ಯಂತ ಜತನದಿಂದ ನೋಡಿಕೊಂಡಿದ್ದು ವಿಶೇಷ.

ಈ ಒಂದು ನರಭಕ್ಷಕ ಚಿರತೆಯ ಬೇಟೆಯಿಂದಾಗಿ ಕಾರ್ಬೆಟ್‌ ವಿಶ್ವ ಪ್ರಸಿದ್ಧನಾದ. ಅವನ ಸಂದರ್ಶನಕ್ಕಾಗಿ ಜಗತ್ತಿನ ದಿನಪತ್ರಿಕೆಗಳ ವರದಿಗಾರರು ಮುಗಿಬಿದ್ದರು. ಸರ್ಕಾರ ಕೂಡ ಅವನನ್ನು ಅತ್ಯಂತ ಗೌರವದಿಂದ ಸನ್ಮಾನಿಸಿತು. ಅಲ್ಲದೇ ಅವನು ರುದ್ರಪ್ರಯಾಗದ ಚಿರತೆಯನ್ನು ಕೊಂದ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿಲ್ಲಿಸಿತು. ಈಗಲೂ ಕೂಡ ರುದ್ರಪ್ರಯಾಗದ ಸಮೀಪದ ಗೋಲ್ಬಾರಿ ಹಳ್ಳಿಯಲ್ಲಿರುವ ಆ ಸ್ಮಾರಕಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬೇಟಿ ನೀಡುತ್ತಾರೆ.

(ಮುಂದುವರೆಯುವುದು)

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-9)


– ಡಾ.ಎನ್.ಜಗದೀಶ್ ಕೊಪ್ಪ


 

The greatest of evils and the worst of crimes is poverty. -Bernard Shaw

ಶ್ರೀಕಾಕುಳಂ ಜಿಲ್ಲೆಯನ್ನು ಬೆಂಕಿ ಮತ್ತು ಬಿರುಗಾಳಿಯಂತೆ ಆವರಿಸಿಕೊಂಡ ನಕ್ಸಲ್ ಹೋರಾಟ, ಹೇಳಲು ಬಾಯಿಲ್ಲದೆ, ಎದುರಿಸಲು ಆತ್ಮ ಸ್ಥೈರ್ಯವಿಲ್ಲದೆ, ನರಳಿದ್ದ ಬುಡಕಟ್ಟು ಜನಾಂಗದ ಪುರುಷರು ಹಾಗೂ  ಮಹಿಳೆಯರಿಗೆ ಅನಿರೀಕ್ಷಿತವಾಗಿ ಸ್ವಾಭಿಮಾನದ ಬದುಕನ್ನು ಅವರೆದುರು ಅನಾವರಣಗೊಳಿಸಿತ್ತು. ಅದೇ ರೀತಿ ಪಟ್ಟಭದ್ರ ಹಿತಾಶಕ್ತಿಗಳ ಬೇರುಗಳನ್ನು ಬುಡಸಮೇತ ಅಲುಗಾಡಿಸಿತು.
ಜನಸಾಮಾನ್ಯರು ನಡೆಸಿದ ಪಂಚಾಯಿತಿ ಸಭೆಯಲ್ಲಿ ಕೈಕಟ್ಟಿ ನಿಂತು ಅವರು ಒಮ್ಮತದಿಂದ ನೀಡುವ ತೀರ್ಪಿಗೆ ಭೂಮಾಲಿಕರು, ದಲ್ಲಾಳಿಗಳು, ಬಡ್ಡಿ ವ್ಯಾಪಾರದ ಸಾಹುಕಾರರು ಪ್ರತಿರೋಧವಿಲ್ಲದೆ ತಲೆಬಾಗಿದರು.

1969 ರ ಮೆ11 ರಂದು ಪತನಪಟ್ನಂ ತಾಲೂಕಿನ ಎತಮನಗುಡ ಎಂಬ ಹಳ್ಳಿಯ ಜಮೀನ್ದಾರನಾದ ಐವತ್ತು ವರ್ಷದ ಪಿ.ಜಮ್ಮುನಾಯ್ಡು ಎಂಬಾತನನ್ನು 200 ಮಂದಿ ಹೋರಾಟಗಾರರು ಅವನ ಮನೆಯಿಂದ ಅನಾಮತ್ತಾಗಿ ಎತ್ತಿ ಹಾಕಿಕೊಂಡು ಬಂದು, ಪಂಚಾಯಿತಿ ಸಭೆ ಮುಂದೆ ನಿಲ್ಲಿಸಿದರು. ಈತನಿಗೆ ಏಳು ಮಂದಿ ಪತ್ನಿಯರು ಅವರಲ್ಲಿ ಇವನು ಅಪಹರಿಸಿಕೊಂಡು ಹೋಗಿದ್ದ ಬುಡಕಟ್ಟು ಜನಾಂಗದ ನಾಲ್ವರು ಮಹಿಳೆಯರಿದ್ದರು. ಆ ನಾಲ್ವರಲ್ಲಿ ಇಬ್ಬರು, ಇನ್ನೂ ಅಪ್ರಾಪ್ತ ಬಾಲಕಿಯರು. ಈತ ಪೊಲೀಸರ ಬೆಂಬಲದಿಂದ ಆದಿವಾಸಿಗಳ 600 ಎಕರೆಗೂ ಹೆಚ್ಚು ಭೂಮಿಯನ್ನು ಕಬಳಿಸಿದ್ದ. ಸಭೆಯಲ್ಲಿ ಆತನಿಗೆ ಅವನ ಸಹೋದರರು ಮತ್ತು ಪತ್ನಿಯರ ಎದುರೇ, ಸಾವಿನ ಶಿಕ್ಷೆಯನ್ನು ವಿಧಿಸಲಾಯಿತು. ಜಮೀನ್ದಾರನ ರುಂಡ ಮುಂಡವನ್ನು ಎಲ್ಲರೆದುರು ಬೇರ್ಪಡಿಸಿ, ರುಂಡವನ್ನು ಊರಿನ ಮಧ್ಯಭಾಗದಲ್ಲಿ ಕೆಂಪು ಧ್ವಜದೊಂದಿಗೆ ನೇತು ಹಾಕಲಾಯಿತು.

ಮತ್ತೊಂದು ಘಟನೆಯಲ್ಲಿ ಬಡ್ಡಿ ವ್ಯಾಪಾರಿಯೊಬ್ಬನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಈತ ಆದಿವಾಸಿಗಳಿಗೆ ವರ್ಷವೊಂದಕ್ಕೆ ಒಂದು ರೂಪಾಯಿಗೆ ಪ್ರತಿಯಾಗಿ ಐದು ರೂಪಾಯಿ ಬಡ್ಡಿ ಹಣ ಕಲೆ ಹಾಕುತ್ತಿದ್ದ. ನೂರು ರೂಪಾಯಿ ಪಡೆದ ಬಡರೈತ ವರ್ಷ ತುಂಬಿದ ನಂತರ ಈತನಿಗೆ ಆರು ನೂರು ನೀಡಬೇಕಾಗಿತ್ತು. ಈ ಬಡ್ಡಿ ವ್ಯಾಪಾರಿ ಆದಿವಾಸಿ ರೈತರಿಂದ ಹಣದ ಬದಲು ಅವರು ಕಾಡಿನಲ್ಲಿ ಕಲೆ ಹಾಕುತ್ತಿದ್ದ ಹುಣಸೆ ಹಣ್ಣನ್ನು ಪಡೆಯುತ್ತಿದ್ದ. ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 1600 ರೂ. ಇದ್ದರೆ, ಈ ವ್ಯಾಪಾರಿ ಆದಿವಾಸಿ ರೈತರಿಂದ ಕೇವಲ 600 ರೂ. ಗಳಿಗೆ ಪಡೆಯುತ್ತಿದ್ದ. ಸಾಲದ ಸುಳಿಗೆ ಸಿಲುಕಿದ ಆದಿವಾಸಿಗಳು, ಅವನು ಕೇಳಿದ ಬೆಲೆಗೆ ಹುಣಸೆ ಹಣ್ಣನ್ನು ನೀಡಿ ಸಾಲದಿಂದ ವಿಮುಕ್ತಿಯಾಗುತ್ತಿದ್ದರು. ವಿಚಾರಣೆಯಲ್ಲಿ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡು, ಬಡ್ಡಿ ಹಣವನ್ನು ಹಿಂತಿರುಗಿಸಲು ಒಪ್ಪಿ. ಪ್ರಾಣ ಭಿಕ್ಷೆಗೆ ಅಂಗಲಾಚಿದ ಫಲವಾಗಿ, ವ್ಯಾಪಾರಿಗೆ ದಂಡವಿಧಿಸಿ ಬಿಡುಗಡೆಗೊಳಿಸಲಾಯಿತು.

ಇಂತಹ ವಿವೇಚನೆಯ ತೀರ್ಮಾನಗಳ ನಡುವೆಯೂ, ಹೋರಾಟದ ಸಂಭ್ರಮದಲ್ಲಿ ಉದ್ರಿಕ್ತರಾಗಿದ್ದ ಆದಿವಾಸಿಗಳಿಗೆ ಎಲ್ಲಾ ರೀತಿಯ ವಿವೇಚನೆ ಹಾಗೂ ಮಾನವೀಯತೆಯ ಗುಣಗಳು ಮಾಯವಾಗಿದ್ದವು. ಸೇಡಿನ ಜ್ವಾಲೆ ಅವರ ಮುಖದಲ್ಲಿ ಹತ್ತಿ ಉರಿಯುತ್ತಿತ್ತು. ಸೂರ್ಯ ಚಂದ್ರ ಇರುವವರೆಗೂ ಪಟ್ಟಭದ್ರ ಹಿತಾಶಕ್ತಿಗಳು ನಮ್ಮ ತಂಟೆಗೆ ಬರಬಾರದು ಎಂಬ ಪಾಠವನ್ನು ಅವರಿಗೆ ಕಲಿಸುವ ಹಠಮಾರಿತನವಿತ್ತು. ಹಿಂಸೆಗೆ ಹಿಂಸೆಯೇ ಪ್ರತ್ತ್ಯುತ್ತರ ಎಂಬ ಕಟು ನಿರ್ಧಾರ ಸಹ ಅವರಲ್ಲಿ ಬೇರೂರಿತ್ತು.

ಶ್ರೀಕಾಕುಳಂ ಜಿಲ್ಲೆಯಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ ಅಗ್ನಿ ಪರ್ವತದ ಜ್ವಾಲೆಯಂತೆ ಭುಗಿಲೆದ್ದ ಆದಿವಾಸಿಗಳ ಪ್ರತಿಭಟನೆಗೆ ನಾಗರಿಕ ಜಗತ್ತು ಬೆಚ್ಚಿಬಿದ್ದಿತು. ಆಂಧ್ರ ಸರ್ಕಾರಕ್ಕೆ ಏನೂ ತೋಚದಂತಾಯಿತು. ಏಕೆಂದರೆ, ಹೋರಾಟಗಾರರು ನಡೆಸುತ್ತಿದ್ದ ನರಹತ್ಯೆಗೆ, ಸ್ವತಃ ಪೊಲೀಸರೇ ನಡುಗಿ ಹೋಗಿದ್ದರು. ಇದರಿಂದಾಗಿ ಹೋರಾಟದ ಜ್ವಾಲೆ ಕಾಡ್ಗಿಚ್ಚಿನಂತೆ ಆಂಧ್ರದ ಇತರೆ ಜಿಲ್ಲೆಗಳಾದ ಕಮ್ಮಮ್, ವಾರಂಗಲ್, ಅದಿಲಾಬಾದ್, ಕರೀಂನಗರದ ಪ್ರದೇಶಗಳಿಗೂ ಹರಡಿತು ಟಿ.ನಾಗಿರೆಡ್ಡಿ ಎಂಬ ನಾಯಕ ಈ ಜಿಲ್ಲೆಗಳಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ. ನಕ್ಸಲ್ ಚಳವಳಿ ಕೇವಲ ಐದು ತಿಂಗಳ ಅವಧಿಯಲ್ಲಿ ತೆಲಂಗಾಣ ಪ್ರಾಂತ್ಯದ 10 ಸಾವಿರ ಚದುರ ಕಿ.ಮಿ. ವ್ಯಾಪ್ತಿಯ ಹಳ್ಳಿಗಳಿಗೆ ಹರಡಿ, ನಾಲ್ಕು ಲಕ್ಷ ಜನ ಹೋರಾಟಕ್ಕೆ ಕೈ ಜೋಡಿಸಿದರು.

ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಆಂಧ್ರ ಸರ್ಕಾರ, ಹೋರಾಟಕ್ಕೆ ಸಂಬಂಧಿಸಿದಂತೆ 1969 ರ ಡಿಸಂಬರ್ ತಿಂಗಳಿನಲ್ಲಿ ನಾಗಿರೆಡ್ಡಿ ಸೇರಿದಂತೆ ಏಳು ಜನ ಪ್ರಮುಖ ನಾಯಕರನ್ನು ಬಂಧಿಸಿತು. ನಾಗಿರೆಡ್ಡಿಯ ಬಂಧನದ ನಂತರ ಅವನ ಅನುಪ ಸ್ಥಿತಿಯಲ್ಲಿ ಚಂದ್ರಪುಲ್ಲ ರೆಡ್ಡಿ ಹೋರಾಟವನ್ನು ಮುನ್ನಡೆಸಿದನು. ಹಿಂಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 1969 ರ ಆಗಸ್ಟ್ ತಿಂಗಳ 12 ರಂದು. ಆಂಧ್ರ ಸರ್ಕಾರ ವಿಶಾಖಪಟ್ಟಣದಲ್ಲಿ, ನೆರೆಯ ಒರಿಸ್ಸಾ ಮತ್ತು ಮಧ್ಯಪ್ರದೇಶದ ಅಧಿಕಾರಿಗಳ ಜೊತೆ ಗುಪ್ತ ಸಮಾಲೋಚನೆ ನಡೆಸಿತು. ಅಲ್ಲದೇ, ನೇರ ಕಾರ್ಯಾಚರಣೆಗೆ ಮುಂದಾಯಿತು. ಈ ಕಾರ್ಯಾಚರಣೆಯ ಮುಖ್ಯ ಗುರಿ ನಕ್ಸಲ್ ಚಳವಳಿಯ ನಾಯಕರನ್ನು ಎನ್‌ಕೌಂಟರ್ ಹೆಸರಿನಲ್ಲಿ ಮುಗಿಸುವುದಾಗಿತ್ತು.

1969 ರ ಅಂತ್ಯದ ವೇಳೆಗೆ ತೆಲಂಗಾಣ ಮತ್ತು ಶ್ರೀಕಾಕುಳಂ ಜಿಲ್ಲೆಯಲ್ಲಿ ಪ್ರಮುಖ ನಾಯಕರಾದ ಭಾಸ್ಕರ ರಾವ್, ತಮ್ಮಡ ಗಣಪತಿ, ನಿರ್ಮಲ ಕೃಷ್ಣಮೂರ್ತಿ, ಸುಬ್ಬರಾವ್ ಪ್ರಾಣಿಗ್ರಹಿ, ರಮೇಶ್ಚಂದ್ರ ಸಾಹು ಇವರು ಆಂಧ್ರ ಪೊಲೀಸರ ಬಂಧನಕ್ಕೆ ಒಳಗಾಗಿ, ಪೊಲೀಸರ ಎನ್‌ಕೌಂಟರ್ ಎಂಬ ನರಹತ್ಯೆಗೆ ಪರ್ವತದ ನಿರ್ಜನ ಪ್ರದೇಶದಲ್ಲಿ ಬಲಿಯಾದರು. ಭಾರತದ ನಕ್ಸಲ್ ಹೋರಾಟದ ಇತಿಹಾಸದಲ್ಲಿ ಇದು ಪ್ರಥಮ ಎನ್‌ಕೌಂಟರ್ ಪ್ರಕರಣ. ಸಂಧಾನದ ಮೂಲಕ ಬಗೆ ಹರಿಯಬಹುದಾಗಿದ್ದ ಆದಿವಾಸಿಗಳ ನ್ಯಾಯಯುತವಾದ ಹೋರಾಟಕ್ಕೆ ಪ್ರತಿಯಾಗಿ ಆಂಧ್ರ ಸರ್ಕಾರ ಮತ್ತು ಅಲ್ಲಿನ ಪೊಲೀಸರು, ಹಿಂಸೆಯ ಹಾದಿ ತುಳಿದರು. ನಕ್ಸಲಿಯರನ್ನು ಶಾಶ್ವತವಾಗಿ ಹಿಂಸೆಯನ್ನು ತುಳಿಯುವಂತೆ ಮಾಡಿದರು.

ವರ್ತಮಾನದ ನಾಗರಿಕ ಸಮಾಜದಲ್ಲಿ ಹಿಂಸೆಯನ್ನು ಪ್ರತಿಪಾದಿಸುವುದು, ಅಥವಾ ಬೆಂಬಲಿಸುವುದು, ಅವಿವೇಕತನ. ಅಷ್ಟೇ ಅಲ್ಲ, ಅದೊಂದು ಅನಾಗರಿಕ ನಡುವಳಿಕೆ ಕೂಡ. ಆದರೆ, ನಕ್ಸಲಿಯರು, ವರ್ತಮಾನದ ಭಾರತದಲ್ಲಿ ದೇಶಾದ್ಯಂತ ಪೊಲೀಸರನ್ನ ಏಕೆ ಇಷ್ಟೊಂದು ನಿರ್ಧಯವಾಗಿ ಕೊಲ್ಲುತ್ತಿದ್ದಾರೆ ಎಂಬ ಪ್ರಶ್ನೆಗೆ ನಾವು ಉತ್ತರ ಹುಡುಕುತ್ತಾ ಹೊರಟರೆ, ಅದು ನಮ್ಮನ್ನು ಮೇಲ್ಕಂಡ ದುರಂತದ ಕಥನದ ಬಳಿ ಕರೆದು ತಂದು ನಿಲ್ಲಿಸುತ್ತದೆ.

ನಕ್ಸಲಿಯರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಗುಡ್ಡಗಾಡಿನ ರೈತರು, ಕೃಷಿ ಕೂಲಿಕಾರ್ಮಿಕರು, ಆದಿವಾಸಿಗಳು, ಈ  ದೇಶದ ಭದ್ರತೆಗೆ, ಅಥವಾ ಆಂಧ್ರ ಸರ್ಕಾರದ ಪತನಕ್ಕೆ ಎಂದೂ ಒಳಸಂಚು ರೂಪಿಸಿದವರಲ್ಲ, ಮೇಲಾಗಿ ಅವರ್‍ಯಾರು ವಿದೇಶಿ ಆಕ್ರಮಣಕಾರರೂ ಆಗಿರಲಿಲ್ಲ. ಅವರ ಬೇಡಿಕೆಗಳು ಕೂಡ ಅತಿ ಸಾಮಾನ್ಯವಾಗಿದ್ದವು. ಅವರು ಬಯಸಿದ್ದು ಯಾವುದೇ ರೀತಿಯ ಕಿರುಕುಳವಿಲ್ಲದ ನೆಮ್ಮದಿಯ ಬದುಕನ್ನು ಮಾತ್ರ. ಆದರೆ, ಈ ನಮ್ಮ ಸರ್ಕಾರಗಳು, ಆಳುವ ಪ್ರತಿನಿಧಿಗಳು ಇವರುಗಳಿಗೆ ಮಾಡಿದ್ದಾದರೂ ಏನು? ಇವರ ಬದುಕನ್ನು ಶೋಷಿಸುವುದನ್ನೇ ವೃತ್ತಿ ಮಾಡಿಕೊಂಡ ಭೂಮಾಲೀಕರ ಕೈಗೆ ಒಪ್ಪಿಸಿ ಇಡೀ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತ್ತಿತು. ಅಸಮಾನತೆ, ಅತ್ಯಾಚಾರ, ಶೋಷಣೆಗಳೇ ತಾಂಡವಾಡುತ್ತಿದ್ದ ವ್ಯವಸ್ಥೆಯಲ್ಲಿ ಆದಿವಾಸಿಗಳು, ಪ್ರಾಣಿಗಳಂತೆ ಬದುಕಿ ಜಂಗಲ್‌ರಾಜ್ಯದ ಕಾನೂನಿಗೆ ತಮ್ಮಗಳ ಇಡೀ ಜೀವನವನ್ನೇ ಒತ್ತೆಯಿಡಬೇಕಾಯಿತು.

ಹೋರಾಟದ ಆರಂಭದ ದಿನಗಳಲ್ಲಿ ಈ ಆದಿವಾಸಿಗಳ ಬೇಡಿಕೆಗೆ ಸರ್ಕಾರ ಮುಕ್ತ ಮನಸ್ಸಿನಿಂದ ಸ್ಪಂದಿಸಿದ್ದರೆ, ನಕ್ಸಲಿಯರ ಹಿಂಸಾಚಾರದ ಇತಿಹಾಸ ಇಲ್ಲಿಯವರೆಗೂ ಮುಂದುವರಿಯುತ್ತಿತ್ತೆ? ಇದು ನಮ್ಮ ನಮ್ಮ ಆತ್ಮಸಾಕ್ಷಿಗೆ ನಾವು ಹಾಕಿಕೊಳ್ಳಬೇಕಾದ ಪ್ರಶ್ನೆ. ಅವರುಗಳು ಯಾವ ಸಾಮ್ರಾಜ್ಯದ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿರಲಿಲ್ಲ. ಈ ನೆಲದಲ್ಲಿ ಪ್ರಕೃತಿಯ ಮಕ್ಕಳಾಗಿ ಹುಟ್ಟಿ, ಇಲ್ಲಿನ ಸಮಾಜಕ್ಕೆ ಅಥವಾ ಪರಿಸರಕ್ಕೆ ಯಾವ ಕೇಡನ್ನೂ ಬಗೆದಿರಲಿಲ್ಲ. ಆಳುವ ಸರ್ಕಾರಗಳು ಜೀವ ಭಯದ ಮೂಲಕ ಚಳವಳಿಯ ಹುಟ್ಟಡಗಿಸಲು ಹೋಗಿ, ಸಣ್ಣದಾಗಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದವು. ಇದು ಎಂತಹ ಅವಿವೇಕತನದ ನಡುವಳಿಕೆ ಎಂದರೆ, ಬಾಯಾರಿ ನೀರಿಗಾಗಿ ಬೊಗಸೆಯೊಡ್ಡಿದವನ ಕೈಗೆ ಕುಡಿಯುವ ನೀರು ಸುರಿಯುವ ಬದಲು, ಮೂತ್ರ ವಿಸರ್ಜನೆ ಮಾಡಿದಂತೆ. ಇದನ್ನು ಜಾಣ್ಮೆಯ ನಡೆಎನ್ನಲಾಗದು. ಅಮಾನುಷ ಕ್ರಿಯೆ ಎಂದು ಕರೆಲಾಗುತ್ತದೆ. ನಕ್ಸಲ್ ಹೋರಾಟದ ಇತಿಹಾಸದುದ್ದಕ್ಕೂ ಸರ್ಕಾರಗಳು ಇಂತಹ ಅವಿವೇಕತನಗಳನ್ನು ಮಾಡಿಕೊಂಡು ಬಂದಿವೆ. ಈ ನೆಲದಲ್ಲಿ ಮುಕ್ತವಾದ ಮಾತುಕತೆ ಅಥವಾ ಸಂಧಾನದ ಮೂಲಕ ಬಗೆ ಹರಿಯದ ಸಮಸ್ಯೆಗಳು ಯಾವುವೂ ಇಲ್ಲ ಎಂಬ ಕಟು ಸತ್ಯವನ್ನು ನಮ್ಮ ಜನಪ್ರತಿನಿಧಿಗಳು ಮತ್ತು ಸರ್ಕಾರಗಳು ಮೊದಲು ಅರಿಯಬೇಕು.

ನಕ್ಸಲ್ ನಾಯಕರ ಎನ್‌ಕೌಂಟರ್ ಘಟನೆ ನಕ್ಸಲಿಯ ಹೋರಾಟಗಾರರಲ್ಲಿ ಬೆದರಿಕೆಯನ್ನು ಹುಟ್ಟು ಹಾಕುವ ಬದಲು, ಅವರನ್ನು ಮತ್ತಷ್ಟು ಕೆರಳಿಸಿತು. ಈ ಘಟನೆಗೆ ಪ್ರತಿಯಾಗಿ ಅವರು, 1970 ಜನವರಿ 8 ರಂದು ಮತ್ತೊಬ್ಬ ಜಮೀನ್ದಾರನ ಹತ್ಯೆಯನ್ನು ಅತ್ಯಂತ ಭೀಕರವಾಗಿ ನಡೆಸಿದರು. ಸೋಂಪೇಟ ತಾಲೂಕಿನ ಭಾವನಪುರಂ ಎಂಬ ಹಳ್ಳಿಯ ಹೊರವಲಯದ ತೋಟದಲ್ಲಿ ವಾಸವಾಗಿದ್ದ ವೂನ ಸವರಯ್ಯ ಎಂಬ ಜಮೀನ್ದಾರನನ್ನು ಅವನ ಹೆಂಡತಿ, ಮಕ್ಕಳೆದುರು, ಕತ್ತರಿಸಿ ಹಾಕಿ ಅವನ ದೇಹದ ಅಂಗಾಂಗಗಳನ್ನು ಮನೆಯ ಮುಂಭಾಗದಲ್ಲಿ ತೋರಣದಂತೆ ಕೆಂಪು ಬಾವುಟಗಳ ಸಮೇತ ನೇತು ಹಾಕಲಾಯಿತು. ಅಲ್ಲದೆ, ಅವನ ರಕ್ತದಲ್ಲಿ ಗೋಡೆಯ ಮೇಲೆ ಬರಹವೊಂದನ್ನು ಬರೆಯುವುದರ ಮೂಲಕ ತಾಕತ್ತಿದ್ದರೆ, ನಮ್ಮ ಹೋರಾಟವನ್ನು ನಿಗ್ರಹಿಸಿ ಎಂಬ ಸವಾಲನ್ನು ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಹಾಕಲಾಗಿತ್ತು.

ಬಹುತೇಕ ನಾಯಕರು ಎನ್‌ಕೌಂಟರ್‌ಗೆ ಬಲಿಯಾದ ನಂತರ, ಆಂಧ್ರ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದೆ, ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ಗಿರಿಜನರನ್ನು ಸಂಘಟಿಸುವ ಸಂಪೂರ್ಣ ಹೊಣೆ ವೆಂಪಟಾಪು ಸತ್ಯನಾರಾಯಣನ ಮೇಲೆ ಬಿತ್ತು. ಇಂತಹ ವೇಳೆಯಲ್ಲಿ ಸತ್ಯನಾರಾಯಣನಿಗೆ ಅದಿಬಟ್ಲ ಕೈಲಾಸಂ ಎಂಬ ಅದ್ಭುತ ಸಂಘಟನಾಕಾರನೊಬ್ಬ ನೆರವಾದ. ನಾಯಕರ ಹತ್ಯೆಯಿಂದ ಆದಿವಾಸಿ ಹೋರಾಟಗಾರರು ಎದೆಗುಂದಿರಲಿಲ್ಲ. ದಿನನಿತ್ಯ ಜಮೀನ್ದಾರರ ಕೈಗೆ ಸಿಕ್ಕಿ ಸಾಯುವ ಬದಲು, ಪೋಲೀಸರನ್ನು ಎದುರಿಸಿ ಒಂದೇ ದಿನ ಸಾಯೋಣ ಎಂಬ ದೃಢ ನಿರ್ಧಾರಕ್ಕೆ ಅವರೆಲ್ಲಾ ಬದ್ಧರಾಗಿದ್ದರು. ಆದರೆ ಅವರನ್ನು ಮುನ್ನಡೆಸುವ ನಾಯಕರು ಇರಲಿಲ್ಲ. ಈ ಕೊರತೆ ಅವರನ್ನು ಕಾಡುತ್ತಿತ್ತು.

ಶ್ರೀಕಾಕುಳಂ ಜಿಲ್ಲೆಯ ಎನ್‌ಕೌಂಟರ್ ಘಟನೆಯಿಂದ ತೀವ್ರ ಹತಾಶನಾದವನಂತೆ ಕಂಡುಬಂದ ಚಾರುಮುಜಂದಾರ್ ದೂರದ ಕೊಲ್ಕತ್ತ ನಗರದಿಂದ ಆಂಧ್ರದ ಕಾಮ್ರೇಡ್‌ಗಳಿಗೆ ಪ್ರತಿದಿನ ಪತ್ರ ಬರೆದು ಅವರುಗಳನ್ನು ಹೋರಾಟಕ್ಕೆ ಹುರಿದುಂಬಿಸುತ್ತಿದ್ದ. 1970 ರ ಜುಲೈ ತಿಂಗಳಿನಲ್ಲಿ ಪತ್ರ ಬರೆದು, ಈಗ ನೂರು ಸದಸ್ಯರಿರುವ ದಳಗಳನ್ನು ವಿಭಜಿಸಿ, ತಲಾ 10 ರಿಂದ 20 ಸದಸ್ಯರಿರುವ ದಳಗಳನ್ನಾಗಿ ಮಾಡಿ ಎಂದು ಸತ್ಯನಾರಾಯಣನಿಗೆ ಸಲಹೆ ನೀಡಿದ. ಪೊಲೀಸರ ಎನ್‌ಕೌಂಟರ್‌ನಿಂದ ಆಗಿರುವ ಹಿನ್ನಡೆಯಿಂದ ನಕ್ಸಲ್ ಹೋರಾಟ ಚೇತರಿಸಿಕೊಳ್ಳುತ್ತದೆ ಎಂಬ ಆಶಾಭಾವನೆ ಚಾರುವಿಗಿತ್ತು. ಆದರೆ, ಜುಲೈ 18 ರಂದು, ವೆಂಪಟಾಪು ಸತ್ಯನಾರಾಯಣ ಮತ್ತು ಕೈಲಾಸಂ ಇಬ್ಬರನ್ನು ಸರೆಹಿಡಿದ ಆಂಧ್ರ ಪೊಲೀಸರು. ಅವನ್ನು ಪಾರ್ವತಿಪುರಂ ತಾಲೂಕಿನ ಬೋರಿಬೆಟ್ಟ ಎಂಬಲ್ಲಿಗೆ ಕರೆದೊಯ್ದು, ಬೆಟ್ಟದ ತುದಿಯಲ್ಲಿ ನಿರ್ಧಯವಾಗಿ ಗುಂಡಿಟ್ಟು ಕೊಂದು, ಎನ್‌ಕೌಂಟರ್ ಹೆಸರಿನಲ್ಲಿ ಈ ಹತ್ಯೆಗೆ ತೇಪೆ ಹಚ್ಚಿದರು.

ಈ ಇಬ್ಬರು ನಾಯಕರ ಹತ್ಯೆಯಿಂದಾಗಿ ಶ್ರೀಕಾಕುಳಂ ಪ್ರಾಂತ್ಯದ ಆದಿವಾಸಿ ರೈತರ ಮೊದಲ ಹಂತದ ಹೋರಾಟಕ್ಕೆ ತೆರೆಬಿದ್ದಿತು. ಆದರೆ, ನಕ್ಸಲ್ ಹೋರಾಟವೆಂಬ ಅಗ್ನಿ ಪರ್ವತದ ಲಾವಾರಸ ನೆರೆಯ ರಾಜ್ಯಗಳಿಗೆ ವ್ಯಾಪಿಸಿ, ಹತ್ತು ವರ್ಷಗಳ ನಂತರ ಮತ್ತೇ ತೆಲಂಗಾಣ ಪ್ರಾಂತ್ಯದಲ್ಲಿ, ಪ್ರಜಾಸಮರಂ (ಪೀಪಲ್ಸ್ ವಾರ್) ಎಂಬ  ಹೆಸರಿನಲ್ಲಿ ಉದ್ಭವಗೊಂಡು, ಕೊಂಡಪಲ್ಲಿ ಸೀತಾರಾಮಯ್ಯ ಎಂಬ ನಾಯಕನನ್ನು ಹುಟ್ಟು ಹಾಕಿತು. ಸೋಜಿಗದ ಸಂಗತಿಯೆಂದರೆ, ಸೀತಾರಾಮಯ್ಯ ಕೂಡ, ನಕ್ಸಲ್ ಹೋರಾಟಕ್ಕೆ ದುಮುಕುವ ಮುನ್ನ, ಸತ್ಯನಾರಾಯಣನಂತೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದ.

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 22)


– ಡಾ.ಎನ್.ಜಗದೀಶ್ ಕೊಪ್ಪ


 

ಚಿರತೆಯ ಆರ್ಭಟ ಮತ್ತು ಗುಂಡಿನ ಸದ್ದು ಕೇಳಿದ ರುದ್ರಪ್ರಯಾಗದ ಜನ ನರಭಕ್ಷಕ ಗುಂಡಿಗೆ ಬಲಿಯಾಗಿದೆ ಎಂದು ಭಾವಿಸಿ, ಲಾಟೀನು, ದೊಣ್ಣೆ ಸಮೇತ, ಕಾರ್ಬೆಟ್ ಮತ್ತು ಇಬ್ಸ್‌ಟನ್ ಕುಳಿತ್ತಿದ್ದ ಸ್ಥಳಕ್ಕೆ ಓಡೋಡಿ ಬಂದರು. ಹಳ್ಳಿಯ ಜನರೆಲ್ಲಾ ಬಂದಿದ್ದರಿಂದ ಧೈರ್ಯ ಮಾಡಿದ ಕಾರ್ಬೆಟ್ ಮರದಿಂದ ಕೆಳಗಿಳಿದು ಟಾರ್ಚ್‌ ಬೆಳಕಿನ ಸಹಾಯದಿಂದ ಹಳ್ಳದಲ್ಲಿ ಚಿರತೆಗಾಗಿ ತಡಕಾಡಿದ. ತನ್ನ ಮುಂಗಾಲುಗಳು ಕತ್ತರಿಯಲ್ಲಿ ಸಿಲುಕಿದ್ದ ಕಾರಣ ಚಲಿಸಲಾರದೆ, ಅದರಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದ ಚಿರತೆಯನ್ನು ಹಳ್ಳದಲ್ಲಿ ಕಂಡಾಕ್ಷಣ ತಡ ಮಾಡದೆ, ಕಾರ್ಬೆಟ್ ಅದರ ತಲೆಗೆ ಗುಂಡುಹಾರಿಸಿದ. ಅತ್ಯಂತ ಹತ್ತಿರದಿಂದ ಹಾರಿಸಿದ ಗುಂಡಿನ ಹೊಡೆತಕ್ಕೆ ಕ್ಷಣಾರ್ಧದಲ್ಲೇ ಚಿರತೆ ಸಾವನ್ನಪ್ಪಿತು.

ಕಗ್ಗತ್ತಲೆಯಲ್ಲಿ ಸತ್ತು ಮಲಗಿದ ಚಿರತೆಯನ್ನು ನೋಡಿದಾಕ್ಷಣ ಗ್ರಾಮಸ್ಥರ ಸಂತಸ ಎಲ್ಲೇ ಮೀರಿತು. ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರನ್ನು ಹೆಗಲ ಮೇಲೆ ಎತ್ತಿ ಕುಣಿದಾಡಿದರು. ಬಿದರಿನ ಗಳಕ್ಕೆ ಚಿರತೆಯನ್ನು ಕಟ್ಟಿ ಆ ರಾತ್ರಿಯಲ್ಲೇ ಪ್ರಯಾಗದ ಪಟ್ಟಣದಲ್ಲಿ ಮೆರವಣಿಗೆ ಮಾಡಿದರು. ಕಾರ್ಬೆಟ್‌ನನ್ನೂ ಸಹ ಬಿಡದೆ, ಊರಿನ ಹೊರವಲಯದಿಂದ ಮೆರವಣಿಗೆಯಲ್ಲಿ ಹೊತ್ತು ತಂದರು. ಎಲ್ಲರೂ ನರಭಕ್ಷಕ ಗುಂಡಿಗೆ ಬಲಿಯಾಯಿತು ಎಂದು ನಂಬಿದ್ದರು. ಆದರೆ, ಕಾರ್ಬೆಟ್ ಅದನ್ನು ಖಚಿತ ಪಡಿಸಿಕೊಳ್ಳವ ತನಕ ನಂಬಲು ಸಿದ್ದನಿರಲಿಲ್ಲ. ಈ ಹಿಂದೆ ಶಿಕಾರಿಯ ಸಂದರ್ಭದಲ್ಲಿ ನೋಡಿದ್ದ ಚಿರತೆಗೂ, ಈಗ ಬಲಿಯಾಗಿರುವ ಚಿರತೆಯ ಮೈಬಣ್ಣದಲ್ಲಿನ ಅಲ್ಪ ವ್ಯತ್ಯಾಸ ಕಾರ್ಬೆಟ್‌ನನ್ನು ಗೊಂದಲದಲ್ಲಿ ದೂಡಿತ್ತು.

ಪ್ರವಾಸಿ ಮಂದಿರದ ಬಳಿಗೆ ಚಿರತೆಯ ಶವ ತಂದ ನಂತರ ಅದರ ಕುತ್ತಿಗೆ ಭಾಗವನ್ನು ಸೂಕ್ಷ್ಮವಾಗಿ ಗಮನಿಸಿದ. ಕೇವಲ ಎಂಟು ಹತ್ತು ದಿನಗಳ ಹಿಂದೆ ಕೂದಲೆಳೆಯ ಹಂತರದಿಂದ ಪಾರಾಗಿದ್ದ ನರಭಕ್ಷಕನಿಗೆ ಗುಂಡು ಅದರ ಕುತ್ತಿಗೆಯನ್ನು ಸವರಿಕೊಂಡು ಹೋಗಿತ್ತು, ಅಲ್ಲದೇ ಆ ಭಾಗದಲ್ಲಿ ಅದರ ಕೂದಲುಗಳು ಉದುರಿಹೋಗಿದ್ದವು. ಆದರೆ, ಈ ಚಿರತೆಯಲ್ಲಿ ಅದರ ಯಾವ ಲಕ್ಷಣಗಳು ಕಾಣಲಿಲ್ಲ. ಹಾಗಾಗಿ ಇದು ನರಭಕ್ಷಕ ಚಿರತೆಯಲ್ಲ, ಬೇರೊಂದು ಗಂಡು ಚಿರತೆ ಎಂದು ಜಿಮ್ ಕಾರ್ಬೆಟ್ ನಿರ್ಧರಿಸಿದ. ಆದರೆ, ಇವನ ತೀರ್ಮಾನವನ್ನು ಇಬ್ಸ್‌ಟನ್ ಆಗಲಿ, ರುದ್ರಪ್ರಯಾಗದ ಜನರಾಗಲಿ ನಂಬಲು ಸಿದ್ಧರಿರಲಿಲ್ಲ. ಸದ್ಯಕ್ಕೆ ಯಾವುದೇ ವಾದವಿವಾದ ಬೇಡ, ಕನಿಷ್ಟ ಒಂದು ವಾರ ಮೊದಲಿನ ಹಾಗೆ ರಾತ್ರಿ ವೇಳೆ ಎಚ್ಚರ ವಹಿಸಿ ಎಂದು ಪ್ರಯಾಗದ ಜನರಿಗೆ ಕಾರ್ಬೆಟ್ ಮನವಿ ಮಾಡಿಕೊಂಡ.

ತಡರಾತ್ರಿ ಪ್ರವಾಸಿ ಮಂದಿರದಲ್ಲಿ, ಇಬ್ಸ್‌ಟನ್ ಅವನ ಪತ್ನಿ ಜೀನ್ ಜೊತೆ ಕುಳಿತು ಊಟ ಮಾಡುವಾಗ, ತಕ್ಣಣ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುವುದು ಬೇಡ ಎಂದು ಕಾರ್ಬೆಟ್ ಇಬ್ಸ್‌ಟನಗೆ ಮನವಿ ಮಾಡಿದ. ಅದಕ್ಕೆ ಅವನು ಸಮ್ಮತಿ ಸೂಚಿಸಿದ. ಮಾರನೇ ದಿನ ಬೆಳಿಗ್ಗೆ ಪೌರಿಯಿಂದ ಬಂದಿದ್ದ ಕೆಲವು ಕಾಗದ ಪತ್ರಗಳನ್ನು ವಿಲೇವಾರಿ ಮಾಡುವುದರಲ್ಲಿ ಇಬ್ಸ್‌ಟನ್ ನಿರತನಾದ. ಕಾರ್ಬೆಟ್ ತನ್ನ ಸಹಾಯಕರಿಗೆ ಚಿರತೆಯ ಚರ್ಮ ಸುಲಿಯಲು ತಿಳಿಸಿ, ಮಂದಾಕಿನಿ ನದಿಯಲ್ಲಿ ಮೀನು ಬೇಟೆಯಾಡಲು ಹೊರಟ. ಕಾರ್ಬೆಟ್ ನರಭಕ್ಷಕನ ಸಾವಿನ ಬಗ್ಗೆ ಖಚಿತಪಡಿಸಿಕೊಳ್ಳಲು ಒಂದು ವಾರ ಸಮಯ ಕೇಳಿದ್ದ ಆದರೆ, ಕೇವಲ ಎರಡು ದಿನಗಳ ಅವಧಿಯಲ್ಲಿ ನರಭಕ್ಷಕ ನದಿಯಾಚೆಗಿನ ಹಳ್ಳಿಯಲ್ಲಿ ಪ್ರತ್ಯಕ್ಷವಾಗಿ ಒಬ್ಬ ಹೆಂಗಸನ್ನು ಬಲಿತೆಗೆದುಕೊಂಡ ವಿಷಯವನ್ನು ಹಳ್ಳಿಗರು ಬೆಳಗಿನ ಜಾವ ಪ್ರವಾಸಿ ಮಂದಿರಕ್ಕೆ ಬಂದು ಕಾರ್ಬೆಟ್‌ಗೆ ಮುಟ್ಟಿಸಿದರು.

ಕಾರ್ಬೆಟ್‌ನ ಸಂಶಯ ಕಡೆಗೂ ನಿಜವಾಯಿತು. ಆ ವೇಳೆಗಾಗಲೇ ಇಬ್ಸ್‌ಟನ್ ವಾಪಸ್ ಪೌರಿಗೆ ಮತ್ತು ಕಾರ್ಬೆಟ್ ನೈನಿತಾಲ್‌ಗೆ ಹೋಗಿ ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಂಡು ಬರುವುದೆಂದು ನಿರ್ಧಾರವಾಗಿತ್ತು. ಇಬ್ಬರೂ ಎರಡು ದಿನಗಳ ಮಟ್ಟಿಗೆ ತಮ್ಮ ಕಾರ್ಯಕ್ರಮವನ್ನು ಮುಂದೂಡಿ, ಹೆಂಗಸು ಬಲಿಯಾಗಿದ್ದ ಹಳ್ಳಿಗೆ ಕುದುರೆಯೇರಿ ಹೊರಟರು. ಊರ ಹೊರ ವಲಯದಲ್ಲಿ ಹೆಂಗಸಿನ ಶವವಿದ್ದ ಜಾಗದಲ್ಲಿ ಆಕೆಯ ಸಂಬಂಧಿ ಕಾರ್ಬೆಟ್ ಬರುವಿಕೆಗಾಗಿ ಕಾಯುತ್ತಿದ್ದ. ಕಾರ್ಬೆಟ್‌ಗೆ ರಾತ್ರಿ ನಡೆದ ಘಟನೆಯನ್ನು ವಿವರಿಸಿದ. ಚಿರತೆಗೆ ಬಲಿಯಾದ ಹೆಂಗಸಿನ ಶವವಿದ್ದ ಜಾಗ ಮತ್ತು ಆಕೆಯ ಮನೆ ಎಲ್ಲವನ್ನು ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಸೂಕ್ಷ್ಮವಾಗಿ ಅವಲೋಕಿಸಿದರು.

ಹಿಂದಿನ ರಾತ್ರಿ ಮಳೆಯಾಗಿದ್ದ ಕಾರಣ ನರಭಕ್ಷಕನ ಹೆಜ್ಜೆ ಗುರುತು ಎಲ್ಲೆಡೆ ಸ್ಪಷ್ಟವಾಗಿ ಮೂಡಿದ್ದವು. ಮನೆಯಿಂದ ದೃಡವಾಗಿದ್ದ, ಐವತ್ತು ಕೆ.ಜಿ. ಗೂ ಹೆಚ್ಚು ತೂಕವಿದ್ದ ಹೆಂಗಸಿನ ಶವವನ್ನು ಎಲ್ಲಿಯೂ ಭೂಮಿಗೆ ತಾಗದಂತೆ ಬಾಯಲ್ಲಿ ಕಚ್ಚಿ ಹಿಡಿದು ಸಾಗಿದ್ದ ನರಭಕ್ಷಕ ಚಿರತೆಯ ಸಾಮರ್ಥ್ಯದ ಬಗ್ಗೆ ಕಾರ್ಬೆಟ್ ನಿಜಕ್ಕೂ ಬೆರಗಾದ. ಸಂಜೆ ನಾಲ್ಕು ಗಂಟೆಯ ವೇಳೆಗೆ ಶವವಿದ್ದ ಜಾಗದಿಂದ ಸುಮಾರು 60 ಅಡಿ ದೂರದಲ್ಲಿದ್ದ ಮರವೇರಿ ರಾತ್ರಿ ಹತ್ತು ಗಂಟೆಯವರೆಗೂ ಚಿರತೆಗಾಗಿ ಕಾಯಲು ಇಬ್ಬರೂ ನಿರ್ಧರಿಸಿದರು. ಕಾರ್ಬೆಟ್‌ನ ಸೇವಕರು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳಸಿದ್ದರಿಂದ ಅವರಿನ್ನೂ ಹಳ್ಳಿ ತಲುಪಿರಲಿಲ್ಲ. ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲು ಹಳ್ಳಿಯ ಮುಖಂಡನಿಗೆ ತಿಳಿಸಿದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಇಬ್ಬರೂ ಕೋವಿ, ಟಾರ್ಚ್ ಮತ್ತು ಪೆಟ್ರೋಮ್ಯಾಕ್ಸ್ ಜೊತೆ ಹೊರಟು ಮರವೇರಿ ಕುಳಿತರು.

ಗ್ರಾಮಸ್ಥರು ಚಿರತೆ ಉತ್ತರ ದಿಕ್ಕಿನ ಕಾಡಿನತ್ತ ಹೋಯಿತು ಎಂದು ತಿಳಿಸಿದ್ದರಿಂದ, ಎತ್ತರದ ಕೊಂಬೆಯೇರಿದ ಇಬ್ಸ್‌ಟನ್ ಉತ್ತರ ದಿಕ್ಕಿಗೆ ಮುಖಮಾಡಿ ಕೈಯಲ್ಲಿ ಬಂದೂಕ ಹಿಡಿದು ಕುಳಿತರೆ, ಕಾರ್ಬೆಟ್ ಇನ್ನೊಂದು ದಿಕ್ಕಿಗೆ ಮುಖಮಾಡಿ ಕುಳಿತ. ಪೆಟ್ರೋಮ್ಯಾಕ್ಸ್ ಮೇಲೆ ತೆಗೆದುಕೊಂಡು ಹೋಗಲು ಸಾಧ್ಯವಾಗದೆ ಮರದ ಬುಡದ ಪೊಟರೆಯಲ್ಲಿ ಇಟ್ಟರು. ಇಬ್ಬರ ಬಳಿ ಟಾರ್ಚ್ ಇತ್ತಾದರೂ ಅವುಗಳ ಬ್ಯಾಟರಿಗಳು ಶಕ್ತಿಗುಂದಿದ್ದವು. ಆದರೂ ನರಭಕ್ಷಕ ಬಂದರೆ, ಗುರಿಯಿಡುವ ಆತ್ಮವಿಶ್ವಾಸ ಇಬ್ಬರಿಗೂ ಇತ್ತು. ಆದರೆ, ಇವರ ನಿರೀಕ್ಷೆ ಮೀರಿ, ಉತ್ತರ-ದಕ್ಷಿಣ ದಿಕ್ಕುಗಳನ್ನು ಬಿಟ್ಟು ಪಶ್ಚಿಮ ದಿಕ್ಕಿನ ಪರ್ವತದಿಂದ ನರಭಕ್ಷಕ ಇಳಿದು ಬರುವುದನ್ನು ಕಾಡು ಕೋಳಿಗಳು ಕೂಗುವುದರ ಮೂಲಕ ಸೂಚನೆ ನೀಡಿದವು. ಇವರು ಕುಳಿತ್ತಿದ್ದ ಮರಕ್ಕೂ ಆ ಪಶ್ಚಿಮ ದಿಕ್ಕಿನ ನಡುವೆ ಕಲ್ಲು ಬಂಡೆ ಅಡ್ಡಿಯಾದ್ದರಿಂದ ಇಬ್ಬರೂ ಸರಸರನೆ ಮರದಿಂದ ಇಳಿದು ಕಲ್ಲು ಬಂಡೆ ಏರಲು ನಿರ್ಧರಿಸಿದರು. ಅದಕ್ಕಾಗಿ ಪೊಟರೆಯಲ್ಲಿ ಇಟ್ಟಿದ್ದ ಪೆಟ್ರೋಮ್ಯಾಕ್ಸ್ ತೆಗೆದು ಹತ್ತಿಸಿದರು. ಆದರೆ, ಇಬ್ಸ್‌ಟನ್ ಅದನ್ನು ಹಿಡಿದು ಬಂಡೆಯತ್ತ ಸಾಗುತ್ತಿರುವಾಗ, ನೆಲದ ಮೇಲಿನ ಕಲ್ಲೊಂದಕ್ಕೆ ತಾಗಿಸಿಬಿಟ್ಟ. ಇದರಿಂದಾಗಿ ಅದರ ಗಾಜು ಮತ್ತು ರೇಷ್ಮೆ ಬತ್ತಿ ಎರಡೂ ಉದುರಿಹೋದವು. ಆದರೂ ಅದರಿಂದ ಸಣ್ಣನೆಯ ನೀಲಿ ಜ್ವಾಲೆ ಹೊರಹೊಮ್ಮುತ್ತಿತ್ತು ಇದರ ಸಾಮರ್ಥ್ಯ ಕೇವಲ ಐದಾರು ನಿಮಿಷ ಎಂದು ಇಬ್ಸ್ ಹೇಳಿದ ಕೂಡಲೇ ಕಾರ್ಬೆಟ್, ಕತ್ತಲೆಯಲ್ಲಿ ಇಲ್ಲಿರುವುದು ಅಪಾಯಕಾರಿ ಎಂದು ನಿರ್ಧರಿಸಿ, ಹಳ್ಳಿಯತ್ತ ಹೆಜ್ಜೆ ಹಾಕಲು ಇಬ್ಸ್‌ಟನ್‌ಗೆ ಸೂಚಿಸಿದ.

ಇಬ್ಸ್ ಉರಿಯುತ್ತಿರುವ ಪೆಟ್ರೋಮ್ಯಾಕ್ಸ್‌ನ ಸಣ್ಣ ಜ್ವಾಲೆಯ ಬೆಳಕಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಕಾರ್ಬೆಟ್ ಅವನ ಹಿಂದೆ ಬಂದೂಕ ಹಿಡಿದು ಪ್ರತಿ ಎರಡು ಹೆಜ್ಜೆಗೆ ಒಮ್ಮೆ ಹಿಂತಿರುಗಿ ನೋಡಿ ಹೆಜ್ಜೆ ಹಾಕುತ್ತಿದ್ದ. ಕತ್ತಲೆಯಲ್ಲಿ ನರಭಕ್ಷಕ ಯಾವ ಕ್ಷಣದಲ್ಲಾದರೂ ನಮ್ಮ ಮೇಲೆ ದಾಳಿ ಮಾಡಬಹುದೆಂಬ ಅಂಜಿಕೆ ಆ ಕ್ಷಣದಲ್ಲಿ ಕಾರ್ಬೆಟ್‌ನನ್ನು ಬಲವಾಗಿ ಕಾಡಿತು ಕೊನೆಗೂ ಪೆಟ್ರೋಮ್ಯಾಕ್ಷ್ ಆರಿ ಹೋಗುವ ಮುನ್ನ ಊರಿನ ಹೊರಭಾಗದಲ್ಲಿದ್ದ ರೈತನ ಮನೆ ಬಾಗಿಲಿಗೆ ಮುಟ್ಟಿದ್ದರು. ಕಾರ್ಬೆಟ್ ಬಾಗಿಲು ಬಡಿದು ವಿನಂತಿಸಿಕೊಂಡ ಮೇಲೆ ರೈತ ಬಾಗಿಲು ತೆರೆದು, ಅವರಿಗೆ ಚಹಾ ಮಾಡಿಕೊಟ್ಟು, ಅವನ ಸೇವಕರು ಉಳಿದುಕೊಂಡಿದ್ದ ಮನೆಯ ಬಗ್ಗೆ ಮಾಹಿತಿ ನೀಡಿದ. ಅವನಿಂದ ಚಿಮಣಿ ಎಣ್ಣಿಯ ಒಂದು ಪುಟ್ಟ ಲಾಂಧ್ರವೊಂದನ್ನು ಪಡೆದು, ಅದರ ಮಂದ ಬೆಳಕಿನಲ್ಲಿ ಆ ಮನೆಯಲ್ಲಿದ್ದ ಕೆಲವು ಗಂಡಸರ ನೆರವಿನಿಂದ ಕಾರ್ಬೆಟ್ ಮತ್ತು ಇಬ್ಸ್‌ಟನ್ ಸೇವಕರು ಉಳಿದುಕೊಂಡಿದ್ದ ಮನೆ ತಲುಪಿದರು. ಮನೆಯ ಬಾಗಿಲಲ್ಲಿ ಮಲಗಿದ್ದ ಬೀದಿ ನಾಯಿ ಇವರನ್ನು ಕಾಲು ಮೂಸಿ ಸ್ವಾಗತಿಸಿತು. ಮನೆಯೊಳಗೆ ಹೋಗಿ, ಇಬ್ಬರೂ ಮಲಗಲು ಸಿದ್ಧರಾಗುವ ವೇಳೆಗೆ ನಾಯಿ ವಿಚಿತ್ರವಾಗಿ ಬೊಗಳತೊಡಗಿತು. ಅವರು ಉಳಿದು ಕೊಂಡಿದ್ದ ರಸ್ತೆಯಿಂದ ಹತ್ತು ಅಡಿ ಎತ್ತರದ ಪ್ರದೇಶದಲ್ಲಿದ್ದ ಕಾರಣ ಮೆಟ್ಟಲಿನ ಮೇಲೆ ನಿಂತಿದ್ದ ನಾಯಿ ಒಂದೇ ದಿಕ್ಕಿನಿತ್ತ ಮುಖ ಮಾಡಿ ಬೊಗಳುತ್ತಿತ್ತು. ನಾಯಿಯ ಈ ವರ್ತನೆಯಿಂದ ನರಭಕ್ಷಕ ನಮ್ಮನ್ನು ಮನೆಯವರಿಗೂ ಹಿಂಬಾಲಿಸಿಕೊಂಡು ಬಂದಿದೆ ಎಂಬ ಸೂಚನೆ ಕಾರ್ಬೆಟ್‌ಗೆ ಸಿಕ್ಕಿತು. ಮನೆಯ ಕಿಟಕಿ, ಬಾಗಿಲುಗಳನ್ನು ಮತ್ತಷ್ಟು ಭದ್ರಪಡಿಸಿ ಮಲಗಿದ ಜೊತೆಗೆ ನಾಯಿ ಬಾಗಿಲಲ್ಲಿ ಇದ್ದ ಕಾರಣ ಅವನಿಗೆ ಆತಂಕ ಮತ್ತು ಭಯ ಇಲ್ಲವಾಗಿತ್ತು.

ಬೆಳಿಗ್ಗೆ ಎದ್ದು ನೋಡಿದಾಗ, ಕಾರ್ಬೆಟ್‌ಗೆ ಚಿರಪರಿಚಿತವಾದ ಅದೇ ನರಭಕ್ಷಕನ ಹೆಜ್ಜೆಗುರುತುಗಳು ಮನೆಯ ಮುಂಭಾಗದಲ್ಲಿ ಮೂಡಿದ್ದವು. ಬೆಳಿಗ್ಗೆ ತಿಂಡಿ ಮುಗಿಸಿದ ಕಾರ್ಬೆಟ್ ಮತ್ತೆ ಹೆಂಗಸಿನ ಶವ ಇದ್ದ ಜಾಗಕ್ಕೆ ಹೋಗಿ ನೋಡಿ ಬಂದ. ಆ ರಾತ್ರಿ ಚಿರತೆ ಶವವನ್ನು ಮುಟ್ಟಿರಲಿಲ್ಲ. ಮಧ್ಯಾದ ವೇಳೆಗೆ ರುದ್ರಪ್ರಯಾಗದಲ್ಲಿದ್ದ ಜಿನ್ ಕತ್ತರಿಯನ್ನು ತರಿಸಿಕೊಂಡ ಕಾರ್ಬೆಟ್, ಸಂಜೆ ಮತ್ತೇ ಹೆಂಗಸಿನ ಶವವಿದ್ದ ಸ್ಥಳಕ್ಕೆ ತೆರಳಿ, agave ಬರುವ ಹಾದಿಯಲ್ಲಿ ಕತ್ತರಿಯನ್ನಿಟ್ಟು, ರುದ್ರಪ್ರಯಾಗದಲ್ಲಿ ಸಂಗ್ರಹಿಸಿದ್ದ ಸೈನೈಡ್ ವಿಷದ ಮಾತ್ರೆಗಳನ್ನು ಶವದ ಅಂಗಾಂಗಳ ನಡುವೆ ಹುದುಗಿಸಿ ಇಟ್ಟ. ಚಾಣಾಕ್ಷ ನರಭಕ್ಷಕ ಇವೆರಡರಲ್ಲಿ ಒಂದಕ್ಕೆ ಬಲಿಯಾಗುವುದು ಖಚಿತ ಎಂದು ಅವನು ನಂಬಿದ್ದ. ಆ ರಾತ್ರಿ ಕೂಡ ಅವನ ನಿರೀಕ್ಷೆ ಹುಸಿಯಾಯಿತು. ಇನ್ನು ಕಾಯುವುದು ಪ್ರಯೋಜವಿಲ್ಲ ಎಂದು ತೀರ್ಮಾನಿಸದ ಕಾರ್ಬೆಟ್, ಹೆಂಗಸಿನ ಸಂಬಂಧಿಕರಿಗೆ ಶವವನ್ನು ಅಂತ್ಯ ಸಂಸ್ಕಾರ ಮಾಡಲು ತಿಳಿಸಿ, ನೈನಿತಾಲ್‌ಗೆ ಹೊರಡಲು ಅನುವಾದ.

ಇಬ್ಸ್‌ಟನ್‌ನ ಹದಿನೈದು ದಿನಗಳ ರಜೆ ಮುಗಿದ ಕಾರಣ ಅವನೂ ಕೂಡ ಪೌರಿಗೆ ವಾಪಸ್ ಹಿಂತಿರುಗಬೇಕಿತ್ತು. ತಮ್ಮ ತಮ್ಮ ಸಾಮಾನುಗಳನ್ನು ಪ್ರಯಾಣಕ್ಕೆ ಸಿದ್ಧಪಡಿಸುತ್ತಿದ್ದ ವೇಳೆಗೆ ನಾಲ್ಕು ಮೈಲಿ ದೂರದಲ್ಲಿ ನರಭಕ್ಷಕ ಹಸುವೊಂದನ್ನು ಬಲಿತೆಗೆದುಕೊಂಡ ಸುದ್ಧಿ ಕಾರ್ಬೆಟ್‌ಗೆ ಮುಟ್ಟಿತು. ನೈನಿತಾಲ್‌ಗೆ ಹೋಗುವ ದಾರಿಯಲ್ಲಿ ಅದನ್ನು ಗಮನಿಸಿ ಹೋಗೋಣವೆಂದು ತನ್ನ ಸೇವಕರೊಂದಿಗೆ ಕಾರ್ಬೆಟ್ ಹಳ್ಳಿಯತ್ತ ಪ್ರಯಾಣ ಬೆಳಸಿದ. ಇಲ್ಲು ಕೂಡ ನರಭಕ್ಷಕ ಚಿರತೆ ಮನೆಗೆ ನುಗ್ಗಲುಯತ್ನಿಸಿ, ವಿಫಲವಾದ ನಂತರ ಕೊಟ್ಟಿಗೆಗೆ ನುಗ್ಗಿ ಹಸುವನ್ನು ಕೊಂದು ಕೊಂಡೊಯ್ದಿತ್ತು. ಪ್ರಯಾಣ ಮತ್ತು ನಿರಂತರವಾಗಿ ಅನೇಕ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು ಆಯಾಸಗೊಂಡಿದ್ದ ಕಾರ್ಬೆಟ್ ಹಸುವಿನ ಕಳೇಬರಕ್ಕೆ ವಿಷವನ್ನು ಬೆರಸಿ, ಜಿನ್ ಕತ್ತರಿಯನ್ನು ಸನೀಹದ ದಾರಿಯಲ್ಲಿ ಇರಿಸಿದ. ಕತ್ತಲಾಗುವ ಮುನ್ನವೇ ರಾತ್ರಿಯ ಊಟ ಮುಗಿಸಿ, ದೋರದ ಪೈನ್ ಮರದ ಮೇಲೆ ಕಟ್ಟಲಾಗಿದ್ದ ಮಚ್ಚಾನ್ ಮೇಲೆ ಬಂದು ಮಲಗಿ ನಿದ್ರಿಸಿದ.

ಕತ್ತರಿಗೆ ನರಭಕ್ಷಕ ಸಿಲುಕಿಕೊಂಡರೆ, ಹೋಗಿ ಗುಂಡು ಹಾರಿಸಿ ಕೊಲ್ಲುವುದು ಅವನ ಯೋಜನೆಯಾಗಿತ್ತು. ಆದರೆ, ಚಾಣಾಕ್ಷತನದ ನರಭಕ್ಷಕ ಅಡಕತ್ತರಿಯನ್ನು ದಾಟಿ ಹಸುವಿನ ಕಳೇಬರವನ್ನು ಬೇರೊಂದು ಜಾಗಕ್ಕೆ ಎಳೆದೊಯ್ದು ತಿಂದು ಮುಗಿಸಿತ್ತು. ಬೆಳಿಗ್ಗೆ ಎದ್ದು ನೋಡಿದ ಕಾರ್ಬೆಟ್, ಹಳ್ಳಿಯ ಜನರನ್ನು ಕರೆಸಿ ಸುತ್ತಮುತ್ತಲಿನ ಕಾಡನ್ನು ಜಾಲಾಡಿಸಿದ ಎಲ್ಲಿಯೂ ಚಿರತೆ ಸತ್ತು ಬಿದ್ದಿರುವ ಕುರುಹು ಕಾಣಲಿಲ್ಲ. ಸಾಮಾನ್ಯವಾಗಿ ಬೆಕ್ಕು ಮತ್ತು ಚಿರತೆಗಳು ವಿಷವನ್ನು ತಿಂದ ಸಮಯದಲ್ಲಿ ಗರಿಕೆ ಹುಲ್ಲನ್ನು ತಿಂದು ವಾಂತಿ ಮಾಡುತ್ತವೆ. ಇಲ್ಲಿಯೂ ಸಹ ನರಭಕ್ಷಕ ವಿಷ ತಿಂದರೂ ಸಾವಿನಿಂದ ಪಾರಾಗಿತ್ತು. ಈ ಘಟನೆಯಿಂದ ಒಂದು ರೀತಿಯಲ್ಲಿ ತೀವ್ರ ಹತಾಶನಾದಂತೆ ಕಂಡು ಬಂದ ಕಾರ್ಬೆಟ್ ಹಳ್ಳಿಯ ಜನರಿಗೆ ಎಚ್ಚರಿಕೆಯಿಂದ ಇರಲು ಹೇಳಿ, ವಿಶ್ರಾಂತಿ ಪಡೆದು ಮತ್ತೆ ಮರಳಿ ಬರತ್ತೇನೆ ಎಂಬ ಭರವಸೆ ನೀಡಿ ನೈನಿತಾಲ್‌ನತ್ತ ಪ್ರಯಾಣ ಬೆಳಸಿದ.

(ಮುಂದುವರಿಯುವುದು)