Category Archives: ಸರಣಿ-ಲೇಖನಗಳು

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ – 19)


– ಡಾ.ಎನ್.ಜಗದೀಶ್ ಕೊಪ್ಪ


 

ಜಿಮ್ ಕಾರ್ಬೆಟ್‌ಗೆ ರುದ್ರಪ್ರಯಾಗದ ನರಭಕ್ಷಕ ಚಿರತೆಯನ್ನು ಬೇಟೆಯಾಡಿ ಕೊಲ್ಲಬೇಕು ಎಂದು ಅನಿಸಿದರೂ ಕೂಡ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದ ಕಾರಣ ಅವನು ಈ ಬಗ್ಗೆ ಮನಸ್ಸು ಮಾಡಿರಲಿಲ್ಲ. ಆ ವೇಳೆಗಾಗಲೇ ಐವತ್ತು ವರ್ಷವನ್ನು ದಾಟಿದ್ದ ಕಾರ್ಬೆಟ್ ಮೊದಲಿನಂತೆ, ನರಭಕ್ಷಕ ಹುಲಿ ಅಥವಾ ಚಿರತೆಗಳನ್ನು ಬೆನ್ನಟ್ಟಿ ವಾರಗಟ್ಟಲೇ ಸರಿಯಾದ ಊಟ ತಿಂಡಿಯಿಲ್ಲದೆ, ರಾತ್ರಿಗಳನ್ನು ಮರದ ಮೇಲೆ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈ ಬಾರಿ ಸರ್ಕಾರದ ಪರವಾಗಿ ರುದ್ರಪ್ರಯಾಗದ ಚಿರತೆಯನ್ನು ಬೇಟೆಯಾಡಲು ಮನವಿ ಪತ್ರ ಬರೆದ, ಜಿಲ್ಲಾಧಿಕಾರಿ ವಿಲಿಯಮ್ ಇಬ್ಸ್‌ಟನ್ ಕಾರ್ಬೆಟ್‌ನ ಆತ್ಮೀಯ ಗೆಳೆಯನಾಗಿದ್ದ.

ಇಬ್ಸ್‌ಟನ್ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ತನ್ನ ಪತ್ನಿ ಸಮೇತನಾಗಿ ಅಲ್ಲಿಗೆ ಬಂದಿದ್ದ. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಕಾಲೇಜಿನ ಪದವೀಧರನಾದ ಆತ 1909 ರಲ್ಲಿ ಭಾರತೀಯ ನಾಗರೀಕ ಸೇವೆಗೆ ಆಯ್ಕೆಯಾಗಿ, ಭಾರತಕ್ಕೆ ಬಂದಿದ್ದ. ವಯಸ್ಸಿನಲ್ಲಿ ಕಾರ್ಬೆಟ್‌‍ಗಿಂತ ಹತ್ತುವರ್ಷ ಚಿಕ್ಕವನಾದರೂ ಆತನಿಗಿದ್ದ, ಮೀನು ಶಿಕಾರಿ, ಕುದುರೆ ಸವಾರಿ, ಮತ್ತು ಬಿಡುವಾದಾಗ ಕಾಡು ಅಲೆಯುವ ಹವ್ಯಾಸ ಇವುಗಳಿಂದ ಕಾರ್ಬೆಟ್‌ಗೆ ತೀರಾ ಹತ್ತಿರದ ಸ್ನೇಹಿತನಾಗಿದ್ದ. ಅಧಿಕಾರಿಗಳಲ್ಲಿ ವಿಂಧಮ್‌ನನ್ನು ಹೊರತುಪಡಿಸಿ, ಇಬ್ಸ್‌ಟನ್‌ನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕಾರ್ಬೆಟ್ ಅವನನ್ನು ಪ್ರೀತಿಯಿಂದ ಇಬ್ಬಿ ಎಂದು ಕರೆಯುತ್ತಿದ್ದ. ಈತ ಕೂಡ, ವಿಂದಮ್ ರೀತಿಯಲ್ಲಿ ಭಾರತೀಯರನ್ನು ತುಂಬು ಹೃದಯದಿಂದ ಕಾಣುತ್ತಿದ್ದುದ್ದು ಕಾರ್ಬೆಟ್‌ಗೆ ಆತನ ಬಗ್ಗೆ  ಪ್ರೀತಿ ಹೆಚ್ಚಾಗಲು ಕಾರಣವಾಗಿತ್ತು.

ಇಂತಹ ಸನ್ನೀವೇಶದಲ್ಲಿ ಇಬ್ಸ್‌ಟನ್ ಮನವಿಯನ್ನು ನಿರಾಕರಿಸಲಾರದೆ, ಚಿರತೆಯ ಬೇಟೆಗೆ ಹೊರಡಲು ಕಾರ್ಬೆಟ್ ನಿರ್ಧರಿಸಿದ. ಈ ಬಾರಿ ವಯಸ್ಸಿನ ಕಾರಣದಿಂದಾಗಿ ಬೇಟೆಗೆ ಹೋಗಲು ಅವನ ಸಹೋದರಿ ಮ್ಯಾಗಿ ಕೂಡ ಆಕ್ಷೇಪ ವ್ಯಕ್ತಪಡಿಸಿದಳು. ಅವಳನ್ನು ಸಮಾದಾನ ಪಡಿಸಿ. ಆರು ಮಂದಿ ಘರವಾಲ್ ಜನಾಂಗದ ಸೇವಕರು, ಹಾಗೂ ಬೇಟೆಯ ಸಂದರ್ಭದಲ್ಲಿ ತನ್ನ ಜೊತೆಯಿರಲು ನೆಚ್ಚಿನ ಭಂಟ ಮಾಧೂಸಿಂಗ್ ಜೊತೆ ಕಾರ್ಬೆಟ್ ಘರ್‍ವಾಲ್‌ನತ್ತ ಹೊರಟ. ಈ ಬಾರಿ ಜಿಲ್ಲಾಧಿಕಾರಿ ಇಬ್ಸ್‌‌‌ಟನ್ ಪ್ರಯಾಣಕ್ಕಾಗಿ ಕುದುರೆ ವ್ಯವಸ್ಥೆ ಮಾಡಿದ್ದರಿಂದ ಕಾರ್ಬೆಟ್ ಮತ್ತು ಅವನ ಸಂಗಡಿಗರ ಪ್ರಯಾಣ ತ್ರಾಸದಾಯಕವೆನಿಸಲಿಲ್ಲ.

ಕಾರ್ಬೆಟ್ ತನ್ನ ಸೇವಕರ ಜೊತೆ ಕುದುರೆ ಮತ್ತು ಕಾಲ್ನಡಿಗೆ ಮೂಲಕ ರಾಣಿಖೇತ್, ಅದ್‌ಬಾದ್ರಿ ಮತ್ತು ಕರ್ಣಪ್ರಯಾಗದ ಮೂಲಕ ರುದ್ರಪ್ರಯಾಗವನ್ನು ತಲುಪುವುದಕ್ಕೆ ಹತ್ತುದಿನಗಳು ಹಿಡಿಯಿತು. ಆ ವೇಳೆಗಾಗಲೇ ನರಭಕ್ಷಕ ಚಿರತೆ ಮತ್ತೊಬ್ಬನನ್ನು ಬಲಿತೆಗೆದುಕೊಂಡಿತ್ತು. ಕಮೇರ ಎಂಬ ಹಳ್ಳಿಯಲ್ಲಿ ಬದರಿನಾಥ್ ಯಾತ್ರಿಕರಿಗಾಗಿ ಹೊಟೇಲ್ ನಡೆಸುತ್ತಿದ್ದ ಪಂಡಿತನೊಬ್ಬನ ಮನೆಯಿಂದ ರಾತ್ರಿ ವೇಳೆ ಮಲಗಿದ್ದ ಓರ್ವ ಸಾಧುವನ್ನು ನರಭಕ್ಷಕ ಎಳೆದೊಯ್ದು ಕೊಂದುಹಾಕಿತ್ತು. ಆದಿನ ಸಂಜೆ ಇಪ್ಪತ್ತುಕ್ಕೂ ಹೆಚ್ಚು ಮಂದಿ ಇದ್ದ ಯಾತ್ರಿಕರು ಮಳೆಯ ಕಾರಣ ಪ್ರಯಾಣ ಮುಂದುವರಿಸಲಾರದೆ, ಪಂಡಿತನಲ್ಲಿ ವಸತಿ ವ್ಯವಸ್ಥೆಗೆ ಆಶ್ರಯ ಕೋರಿದ್ದರು. ಗುಡ್ಡಗಳ ಒರಟು ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ ಸುಮಾರು ಸುತ್ತಲೂ ಎಂಟು ಅಡಿ ಎತ್ತರದ ಗೋಡೆ ನಿರ್ಮಾಣ ಮಾಡಿ ತಗಡಿನ ಶೀಟ್ ಹೊದಿಸಿದ್ದ ಅವನ ಹೊಟೇಲ್ ಹಿಂಭಾಗದ ಕೋಣೆಯನ್ನು ಪಂಡಿತ ಆ ರಾತ್ರಿ ಯಾತ್ರಿಕರಿಗೆ ತಂಗಲು ನೀಡಿದ್ದ. ಕಿಟಕಿ ಬಾಗಿಲುಗಳಿಲ್ಲದ ಆ ಕೋಣೆಗೆ ಹಲವೆಡೆ ಬೆಳಕು ಬರಲು ಗೋಡೆಯಲ್ಲಿ ದೊಡ್ಡ ಮಟ್ಟದ ರಂಧ್ರಗಳನ್ನು ಹಾಗೇ ಬಿಡಲಾಗಿತ್ತು. ಬಾಗಿಲಿಗೆ ತಗಡಿನ ಒಂದು ಹೊದಿಕೆಯನ್ನು ಮುಚ್ಚಿ ಅದು ಗಾಳಿಗೆ ಬೀಳದಂತೆ ಕಲ್ಲನ್ನು ಅದಕ್ಕೆ ಒರಗಿಸಿ ಇಡಲಾಗಿತ್ತು. ನರಭಕ್ಷಕ ಆ ರಾತ್ರಿ ಯಾವ ಸುಳಿವು ಸಿಗದಂತೆ ಬಾಗಿಲಿನ ಕಲ್ಲನ್ನು ಪಕ್ಕಕ್ಕೆ ಸರಿಸಿ, ಒಳಗೆ ಪ್ರವೇಶ ಮಾಡಿ, ಕೋಣೆಯೊಳಗೆ ಮಲಗಿದ್ದ ಇಪ್ಪತ್ತು ಜನರ ಪೈಕಿ ಸಾಧುವಿನ ಕುತ್ತಿಗೆಗೆ ಬಾಯಿ ಹಾಕಿ ಅವನಿಂದ ಯಾವುದೇ ಶಬ್ಧ ಬರದಂತೆ ಮಾಡಿ ಎತ್ತೊಯ್ದಿತ್ತು. ಹೋಟೇಲ್‌ನ ಅನತೀ ದೂರದಲ್ಲಿ ಹರಿಯುತ್ತಿದ್ದ ನದಿ ತೀರದ ಬಳಿ ಆತನ ದೇಹವನ್ನು ಅರೆ ಬರೆ ತಿಂದು ಬಿಸಾಡಿ ಹೋಗಿತ್ತು.

ಈ ಘಟನೆಯಿಂದ ಎಚ್ಚೆತ್ತು ಕೊಂಡ ಜಿಲ್ಲಾಧಿಕಾರಿ ಇಬ್ಸ್‌ಟನ್ ಚಿರತೆ ಇಲ್ಲೆ ಕಾಡಿನಲ್ಲಿರಬಹುದೆಂದು ಊಹಿಸಿ ಆದಿನ ತೂಗು ಸೇತುವೆಯನ್ನು ಬಂದ್ ಮಾಡಿಸಿ ಎರಡು ಸಾವಿರ ಜನರೊಂದಿಗೆ ಸುತ್ತಮುತ್ತಲಿನ ಕಾಡನ್ನು ಜಾಲಾಡಿದ. ಸ್ವತಃ ನುರಿತ ಶಿಕಾರಿಕಾರನಾದ ಇಬ್ಸ್‌ಟನ್ ನರಭಕ್ಷಕ ಸೇತುವೆ ದಾಟಿ ಆಚೆಕಡೆಗಿನ ಕಾಡು ಸೇರಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದ. ಆದರೆ, ಅವನು ಒಂದು ವಿಷಯದಲ್ಲಿ ಎಡವಿದ್ದ. ಅದೆನೇಂದರೆ,ಸಾಮಾನ್ಯವಾಗಿ ಹಸಿವಾದಾಗ ಬೇಟೆಯಾಡುವ ನರಭಕ್ಷಕ ಚಿರತೆ ಅಥವಾ ಹುಲಿಗಳು ತಮ್ಮ ಬೇಟೆಯನ್ನು ದೂರದ ಕಾಡಿಗೆ ಒಯ್ದು ಗುಪ್ತ ಸ್ಥಳವೊಂದರಲ್ಲಿ ಇಟ್ಟು ಎರಡರಿಂದ ಮೂರು ದಿನ ತಿನ್ನುವುದು ವಾಡಿಕೆ ಅವುಗಳು ತಾವು ಬೇಟೆಯಾಡಿದ ಪ್ರಾಣಿಗಳನ್ನು ಅಲ್ಲೆ ತಿಂದು ಬಿಸಾಡಿ ಹೋಗಿದ್ದರೆ, ಅವುಗಳು ಆ ಸ್ಥಳಕ್ಕೆ ಮತ್ತೇ ವಾಪಸ್ ಬರುವುದಿಲ್ಲ ಎಂದೇ ಅರ್ಥ. ಇಲ್ಲಿ ಕೂಡ ಚಿರತೆ ಆ ರಾತ್ರಿಯೇ ಸಾಧುವಿನ ಕಳೆಬರವನ್ನು ಅರ್ಧತಿಂದು, ತೂಗುಸೇತುವೆಯನ್ನು ದಾಟಿ ಬಹು ದೂರದವರೆಗೆ ಸಾಗಿಬಿಟ್ಟಿತ್ತು.

ಕಾರ್ಬೆಟ್ ರುದ್ರಪ್ರಯಾಗದ ತಲುಪಿದ ನಂತರ ಅವನಿಗೆ ನರಭಕ್ಷಕ ಬೇಟೆಯಾಡುತ್ತಿರುವ ಪ್ರದೇಶಗಳ ನಕ್ಷೆಯ ಹೊರತಾಗಿ ಬೇರೆ ಯಾವುದೇ ಮಾಹಿತಿ ದೊರಕಲಿಲ್ಲ. ನಕ್ಷೆಯನ್ನು ಮುಂದೆ ಹರಡಿಕೊಂಡು ಜನವಸತಿ ಪ್ರದೇಶಗಳನ್ನು ಕಾರ್ಬೆಟ್ ಗುರುತು ಮಾಡತೊಡಗಿದ. ಅಲಕಾನದಿಗೆ ಎರಡು ತೂಗು ಸೇತುವೆಗಳಿದ್ದದನ್ನು ಅವನು ಗಮನಿಸಿದ. ನದಿಯ ಒಂದು ಬದಿಯಲ್ಲಿ ಯಾವುದೇ ಹಳ್ಳಿಗಳು ಇಲ್ಲದ ಕಾರಣ ಚಿರತೆ ತನ್ನ ಬೇಟೆಗಾಗಿ ಸೇತುವೆ ದಾಟಿ ಜನರಿರುವ ವಸತಿ ಪ್ರದೇಶಕ್ಕೆ ಬರುತ್ತಿದೆ ಎಂದು ಊಹಿಸಿದ. ಅವನ ಈ ಊಹೆಗೆ ಚಿಟ್ಪಾವಲ್ ಹಳ್ಳಿ ಸಮೀಪದ ತೂಗು ಸೇತುವೆಯ ಸಮೀಪದ ಪಂಡಿತನ ಮನೆಯಲ್ಲಿ ಸಾಧು ನರಭಕ್ಷನಿಗೆ ಬಲಿಯಾದದ್ದು ಬಲವಾದ ಕಾರಣ ವಾಗಿತ್ತು. ಈ ಕಾರಣಕ್ಕಾಗಿ ಚಿರತೆ ಜನವಸತಿ ಪ್ರದೇಶದ ಅಂಚಿನ ಕಾಡಿನಲ್ಲೇ ಇರಬೇಕೆಂದು ಅಂದಾಜಿಸಿದ. ಇದಕ್ಕಾ ಗೋಲಬಾರಿ ಎಂಬ ಹಳ್ಳಿ ಸಮೀಪದ ಹೊರವಲಯದ ಕಾಡಿನ ನಡುವೆ ಇದ್ದ ಪ್ರವಾಸಿ ಬಂಗಲೆಯಲ್ಲಿ ತನ್ನ ಸೇವಕರೊಡನೆ ಉಳಿಯಲು ನಿರ್ಧರಿಸಿದ.

ಚಿರತೆಯ ಜಾಡು ಕಂಡು ಹಿಡಿಯುವ ನಿಟ್ಟಿನಲ್ಲಿ ಎರಡು ಮೇಕೆಗಳನ್ನು ಕೊಂಡು ತಂದು ಅವುಗಳಲ್ಲಿ ಒಂದನ್ನು ದಟ್ಟ ಕಾಡಿನ ನಡುವೆ, ಮತ್ತೊಂದನ್ನು ಗೋಲಬಾರಿ ಹಳ್ಳಿಗೆ ಕಾಡಿನಿಂದ ಸಂಪರ್ಕ ಕಲ್ಪಿಸುವ ಹಾದಿಯಲ್ಲಿ ಮರಗಳಿಗೆ ಕಟ್ಟಿ ಹಾಕಿ ಬಂದ. ಮಾರನೇ ದಿನ ಮೇಕೆ ಕಟ್ಟಿ ಹಾಕಿದ ಸ್ಥಳಗಳಿಗೆ ಹೋಗಿ ನೋಡಿದಾಗ. ಕಾಡಿನಲ್ಲಿ ಕಟ್ಟಿ ಹಾಕಿದ್ದ ಮೇಕೆ ಚಿರತೆಗೆ ಬಲಿಯಾಗಿತ್ತು. ಆದರೆ, ಅದನ್ನು ತಿನ್ನದೇ ಹಾಗೆಯೇ ಉಳಿಸಿ ಹೋಗಿರುವುದು ಕಾರ್ಬೆಟ್‌ನ ಜಿಜ್ಙಾಸೆಗೆ ಕಾರಣವಾಯಿತು. ಬೇರೆ ಯಾವುದಾದರೂ ಪ್ರಾಣಿ ದಾಳಿ ಮಾಡಿರಬಹುದೆ? ಎಂಬ ಪ್ರಶ್ನೆಯೂ ಒಮ್ಮೆ ಅವನ ತಲೆಯಲ್ಲಿ ಸುಳಿದು ಹೋಯಿತು. ಆದರೂ ಪರೀಕ್ಷಿಸಿ ಬಿಡೋಣ ಎಂಬಂತೆ ಮೇಕೆಯ ಕಳೇಬರದ ಸ್ಥಳದಿಂದ ಸುಮಾರು ಐವತ್ತು ಅಡಿ ದೂರದಲ್ಲಿ ಮಧ್ಯಾಹದಿಂದ ಸಂಜೆ ಮಬ್ಬು ಕತ್ತಲೆ ಕವಿಯುವವರೆಗೂ ಬಂದೂಕ ಹಿಡಿದು ಕಾದು ಕುಳಿತ. ಆದರೆ, ಮೇಕೆಯ ಕಳೇಬರದ ಹತ್ತಿರಕ್ಕೆಯಾವ ಪ್ರಾಣಿಯೂ ಸುಳಿಯಲಿಲ್ಲ. ಕತ್ತಲು ಆವರಿಸುತಿದ್ದಂತೆ ಇಲ್ಲಿರುವುದು ಅಪಾಯ ಎಂದು ಭಾವಿಸಿದ ಕಾರ್ಬೆಟ್, ಪ್ರವಾಸಿ ಬಂಗಲೆಯತ್ತ ಹಿಂತಿರುಗಿದ. ಕಾಡಿನಲ್ಲಿ ಅದರಲ್ಲೂ ವಿಶೇಷವಾಗಿ ಅಪಾಯಕಾರಿ ಪ್ರಾಣಿಗಳು ಇರುವ ಪ್ರದೇಶದಲ್ಲಿ ಎಡಬಲದ ಪ್ರದೇಶಗಳನ್ನು ಗಮನಿಸದೇ ನೇರವಾಗಿ ನಡೆಯುದು ಅಪಾಯಕಾರಿ ಎಂಬುದನ್ನು ಕಾರ್ಬೆಟ್ ಅರಿತ್ತಿದ್ದ. ಸಾಮಾನ್ಯವಾಗಿ ಹುಲಿ, ಚಿರತೆಗಳು ಹಿಂಬದಿಯಿಂದ ಆಕ್ರಮಣ ಮಾಡುವುದನ್ನು ಅರಿತ್ತಿದ್ದ ಅವನು ಪ್ರತಿ ಎರಡು ಮೂರು ಹೆಜ್ಜೆಗೊಮ್ಮೇ ನಿಂತು ಹಿಂತಿರುಗಿ ನೋಡುತ್ತಿದ್ದ. ನಡೆಯುವಾಗ ಕೂಡ ಎಡ ಬಲ ಗಮನ ಹರಿಸಿ ತನ್ನ ಇಡೀ ಶರೀರವನ್ನು ಕಣ್ಣು ಮತ್ತು ಕಿವಿಯಾಗಿಸಿಕೊಳ್ಳುತ್ತಿದ್ದ. ಅದೃಷ್ಟವೆಂದರೆ, ಅವನ ಈ ಎಚ್ಚರಿಕೆಯೇ ಅಂದು ಅವನನ್ನು ನರಭಕ್ಷಕ ಚಿರತೆಯ ದಾಳಿಯಿಂದ ಪಾರು ಮಾಡಿತ್ತು. ಆದಿನ ರಾತ್ರಿ ಪ್ರವಾಸಿ ಬಂಗಲೆಯಲ್ಲಿ ಮಲಗಿ ಬೆಳಿಗ್ಗೆ ಎದ್ದು ನೋಡುವಾಗ, ಚಿರತೆ, ದಾರಿಯುದ್ದಕ್ಕೂ ಕಾರ್ಬೆಟ್‌‍ನನ್ನು ಹಿಂಬಾಲಿಸಿಕೊಂಡು ಪ್ರವಾಸಿ ಮಂದಿರದವರೆಗೂ ಬಂದು ಇಡೀ ಕಟ್ಟಡವನ್ನು ಎರಡು ಮೂರು ಬಾರಿ ಸುತ್ತು ಹಾಕಿ ವಾಪಸ್ ಹೋಗಿರುವುದನ್ನು ಅದರ ಹೆಜ್ಜೆ ಗುರುತುಗಳು ಹೇಳುತ್ತಿದ್ದವು. ಚಿರತೆಯ ಹೆಜ್ಜೆ ಗುರುತು ಗಮನಿಸಿದ ಕಾರ್ಬೆಟ್ ಇದೊಂದು ಯವ್ವನ ದಾಟಿದ ವಯಸ್ಸಾದ ನರಭಕ್ಷಕ ಚಿರತೆ ಎಂಬುದನ್ನು ಖಚಿತಪಡಿಸಿಕೊಂಡ.

  (ಮುಂದುವರಿಯುವುದು)

 

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ-5)


– ಡಾ.ಎನ್.ಜಗದೀಶ್ ಕೊಪ್ಪ


 

ಅನಿರೀಕ್ಷಿತವಾಗಿ ಜರುಗಿದ ನಕ್ಸಲ್‌ಬಾರಿ ಹಿಂಸಾಚಾರದ ಘಟನೆ ಕಮ್ಯೂನಿಷ್ಟ್ ಪಕ್ಷವನ್ನು ತನ್ನ ಸಿದ್ಧಾಂತ ಹಾಗೂ ಪ್ರಣಾಳಿಕೆ ಕುರಿತಾದ ವಿಷಯಗಳ ಬಗೆಗಿನ ಆತ್ಮಾವಲೋಕನಕ್ಕೆ ಪ್ರೇರೇಪಿಸಿತು. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಷ್ಟ್ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತ ಬಾರದ ಕಾರಣ, ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಕಾರಣಕ್ಕಾಗಿ, ಕಾಂಗ್ರೆಸ್ ಪಕ್ಷಕ್ಕೆ ತನ್ನ ನಿಜವಾದ ನಿಲುವುಗಳನ್ನು ಮನವರಿಕೆ ಮಾಡಿಕೊಡುವ ಜವಬ್ದಾರಿ ಕೂಡ ಕಮ್ಯೂನಿಷ್ಟ್ ಪಕ್ಷದ ಮೇಲೆ ಇತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಹಿಂಸಾಚಾರ ಕುರಿತಂತೆ ಪಕ್ಷದ ಕಾರ್ಯಕರ್ತರಲ್ಲಿ ಹಲವು ಅನುಮಾನಗಳು, ಗೊಂದಲಗಳು ಸೃಷ್ಟಿಯಾಗ ತೊಡಗಿದವು. ಈ ಎಲ್ಲಾ ಗೊಂದಲಗಳಿಂದ ಹೊರಬಂದು ಪಕ್ಷದ ಭವಿಷ್ಯದ ನಿಲುವುಗಳನ್ನು ಸ್ಪಷ್ಟಪಡಿಸಬೇಕಾದ ಅನಿವಾರ್ಯ ಸ್ಥಿತಿಗೆ ನಾಯಕರು ಸಿಲುಕಿದರು ಏಕೆಂದರೆ, ಪಕ್ಷದ ಕಾರ್ಯಕರ್ತರ ಮೇಲೆ ನಾಯಕತ್ವದ ಹಿಡಿತವಿಲ್ಲ ಎಂಬುದನ್ನು ಈ ಘಟನೆ ಅನಾವರಣಗೊಳಿಸಿತ್ತು. ಜೊತೆಗೆ ಡಾರ್ಜಲಿಂಗ್ ಜಿಲ್ಲೆ ಮತ್ತು ಸಿಲಿಗುರಿ ಪ್ರಾಂತ್ಯದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದು ಮೈತ್ರಿ ಸರ್ಕಾರದ ಅಸಮರ್ಥತೆಯನ್ನು ಸಹ ಎತ್ತಿ ತೋರಿಸಿತ್ತು.

ಪಕ್ಷದಲ್ಲಿ ಶಿಸ್ತು ಹಾಗೂ ತತ್ವ ಸಿದ್ಧಾಂತಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 1967 ರ ಆಗಸ್ಟ್ 17 ಮತ್ತು 18 ರಂದು ಪಕ್ಷದ ಕಾರ್ಯಕಾರಿಣಿ ಸಭೆಯನ್ನು ತಮಿಳುನಾಡಿನ ಮಧುರೈ ನಗರದಲ್ಲಿ ಕರೆಯಲಾಯಿತು. ಪಕ್ಷದಲ್ಲಿ ಬಾಹ್ಯಶಕ್ತಿಗಳು ಮಧ್ಯಪ್ರವೇಶ ಮಾಡಿ ಕಾರ್ಯಕರ್ತರನ್ನು ಹಾದಿ ತಪ್ಪಿಸುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಅಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಲವು ನಾಯಕರಿಂದ ಒತ್ತಾಯ ಕೇಳಿ ಬಂದ ಹಿನ್ನಲೆಯಲ್ಲಿ ಸಭೆ ಕರೆಯಲಾಯಿತು. ಕೇಂದ್ರ ಸಮಿತಿಯ ಸಭೆಯಲ್ಲಿ, ಪಕ್ಷದ ಕೆಲವರು, ಬಾಹ್ಯ ರಾಷ್ಟ್ರಗಳ (ಚೀನಾ) ಪ್ರೇರಣೆಗಳಿಂದ ಪಕ್ಷವನ್ನು, ಹಾಗೂ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುತ್ತಿರುವ ಬಗ್ಗೆ ಗಂಭೀರವಾಗಿ ಚರ್ಚಿಸಿ, ಭಾರತದ ಕಮ್ಯೂನಿಷ್ಟ್ ಪಕ್ಷಕ್ಕೆ ಯಾವುದೇ ಹೊರಗಿನ ರಾಷ್ಟ್ರಗಳ ಮಾರ್ಗದರ್ಶನ ಬೇಕಾಗಿಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು.

ಪಕ್ಷದ ಭವಿಷ್ಯದ ದೃಷ್ಟಿಯಿಂದ ಮುಂದೆ ಪಕ್ಷದ ಆಂತರೀಕ ವಿಷಯಗಳಲ್ಲಿ ನೇರ ಪ್ರವೇಶಿಸಿ, ಸಲಹೆ ನೀಡುವ ಅಧಿಕಾರವನ್ನು ಸಹ ಪಕ್ಷದ ಕೇಂದ್ರ ಸಮಿತಿಗೆ ನೀಡಲಾಯಿತು. 1960 ರ ದಶಕದ ಕಮ್ಯೂನಿಷ್ಟ್ ಪಕ್ಷದಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಚೀನಾ ಮತ್ತು ಸೋವಿಯತ್ ರಷ್ಯಾ ಕಮ್ಯೂನಿಷ್ಟ್ ವಿಚಾರಧಾರೆಗಳು ಲಗ್ಗೆ ಇಟ್ಟ ಪರಿಣಾಮ ಈ ರೀತಿಯ ಗೊಂದಲಗಳು ಸಾಮಾನ್ಯವಾಗಿದ್ದವು. ಅಂತಿಮವಾಗಿ 1968 ರ ಏಪ್ರಿಲ್ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ಬರ್ದ್ವಾನ್‌ನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಚೀನಾ ಮಾದರಿಯ ಹೋರಾಟವನ್ನು ಕೈಬಿಡಲು ನಿರ್ಧರಿಸಲಾಯಿತು.

ಪಕ್ಷದ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ ಚಾರು ಮುಜಂದಾರ್ ಇದು ಪಕ್ಷವನ್ನು ಮತ್ತು ಕಾರ್ಯಕರ್ತರನ್ನು ಮತ್ತೇ ಸಾಮಾನ್ಯ ಸ್ಥಿತಿಗೆ ಎಳೆದೊಯ್ಯುವ ನಿರ್ಧಾರ ಎಂದು ಆರೋಪಿಸಿದನು. ಇಂತಹ ಸ್ಥಿತಿಯಲ್ಲಿ ಅಸಮಾನತೆಯನ್ನು ಬಿತ್ತಿ ಪೋಷಿಸುತ್ತಿರುವ ಸರ್ಕಾರಗಳು ಮತ್ತು ದುಷ್ಟಶಕ್ತಿಗಳ ವಿರುದ್ಧ ಯುದ್ಧ ಅನಿವಾರ್ಯ ಎಂದು ಪ್ರತಿಪಾದಿಸಿದ ಚಾರು ಮತ್ತು ಅವನ ಗೆಳೆಯರು ಮಾರ್ಕ್ಸ್‌‍ವಾದದ ಕಮ್ಯುನಿಷ್ಟ್ ಪಕ್ಷವನ್ನು ತೈಜಿಸಲು ನಿರ್ಧರಿಸಿದರು. ಅಮೇರಿಕಾದ ಬಂಡವಾಳ ನೀತಿಯನ್ನು ಪರೋಕ್ಷವಾಗಿ ಅಪ್ಪಿಕೊಂಡು ದ್ವಂದ್ವ ನೀತಿಯನ್ನು ಅನುಸರಿಸುತ್ತಿರುವ ಸೋವಿಯತ್ ರಷ್ಯಾದ ಕಮ್ಯೂನಿಷ್ಟ್ ಪ್ರಣಾಳಿಕೆಯನ್ನು ಸಹ ತಿರಸ್ಕರಿಸಿದರು.

ತಾವು ಈಗ ಅನುಸರಿಸಬೇಕಾದ ತೀವ್ರಗಾಮಿ ಧೋರಣೆಗಳ ಬಗ್ಗೆ ಚರ್ಚಿಸಿ ಸಭೆಯಲ್ಲಿ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಅವುಗಳೆಂದರೆ:

  1. ಎಲ್ಲಾ ಹಂತದಲ್ಲೂ ಹೋರಾಟವನ್ನು ತೀವ್ರಗೊಳಿಸುವುದು, ನಕ್ಷಲ್‌ಬಾರಿ ಮಾದರಿಯ ಹೋರಾಟಕ್ಕೆ ರೈತರು ಮತ್ತು ಆದಿವಾಸಿಗಳನ್ನು ಸಜ್ಜುಗೊಳಿಸುವುದು.
  2. ಪ್ರತಿ ಹಳ್ಳಿಯಲ್ಲಿ ತೀವ್ರಗಾಮಿ ಮನೋಭಾವದ ಯುವಕರ ಪಡೆಯನ್ನು ಹುಟ್ಟು ಹಾಕಿ, ರೈತರು, ಕೃಷಿಕೂಲಿ ಕಾರ್ಮಿಕರು, ವ್ಯವಸಾಯ ಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳನ್ನು ಹೋಗಲಾಡಿಸುವುದು.
  3. ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಯ ಜೊತೆಗೆ ಮಾವೋತ್ಸೆ ತುಂಗನ ವಿಚಾರಗಳನ್ನು ಪಕ್ಷದ ಸಂಘಟನೆಯಲ್ಲಿ ಅಳವಡಿಸಿಕೊಂಡು, ಭಾರತದ ಸಂದರ್ಭಕ್ಕೆ ಅನುಗುಣವಾಗಿ ಕೆಲವು ಮಾರ್ಪಾಡು ಮಾಡಿಕೊಂಡು ಇವುಗಳ ಹಾದಿಯಲ್ಲಿ ಕಟ್ಟುನಿಟ್ಟಾಗಿ ನಡೆಯುವುದು.

ಇವುಗಳನ್ನು  ಆಚರಣೆಗೆ ತರುವ ನಿಟ್ಟಿನಲ್ಲಿ 1968 ಅಂತ್ಯದ ವೇಳೆಗೆ ಕೊಲ್ಕತ್ತ ನಗರದಲ್ಲಿ ಎಲ್ಲಾ ಉಗ್ರ ಕಮ್ಯೂನಿಷ್ಟ್ ವಾದಿಗಳ ಸಭೆಯನ್ನು ಗುಪ್ತವಾಗಿ ಕರೆಯಲಾಗಿತ್ತು. ಕ್ರಾಂತಿಕಾರಕ ವಿಚಾರಗಳನ್ನು ಆಚರಣೆಗೆ ತರಲು ಅಖಿಲ ಭಾರತ ಮಟ್ಟದಲ್ಲಿ ಒಂದು ಸಮನ್ವಯ ಸಮಿತಿಯನ್ನು ಸಹ ರಚಿಸಲಾಯಿತು. ಸಭೆಯ ನಂತರ ಚಾರು ಮುಜಂದಾರ್ ಮಾವೋ ವಿಚಾರಧಾರೆಯ ಅಡಿಯಲ್ಲಿ ಭಾರತದಲ್ಲಿ ಪ್ರಜಾಸತ್ತಾತ್ಮಕವಾದ ಕ್ರಾಂತಿಕಾರಕ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸಲಾಗುವುದು ಎಂದು ಘೊಷಿಸಿದನು. ಕೊಲ್ಕತ್ತ ಸಭೆಯ ನಿರ್ಣಯಕ್ಕೆ ಆಂಧ್ರದ ನಾಯಕ ನಾಗಿರೆಡ್ಡಿ ಕೆಲವು ಆಕ್ಷೇಪ ಎತ್ತಿದನು. ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಸಂಘಟನೆಯನ್ನು ಒಳಗೊಳ್ಳದ ಯಾವುದೇ ಹೋರಾಟಕ್ಕೆ ಜಯ ಸಿಗಲಾರದು ಎಂಬುದು ಆಂಧ್ರ ನಾಯಕರ ಅಭಿಪ್ರಾಯವಾಗಿತ್ತು. ನೂತನ ಪಕ್ಷದ ಸಂಘಟನೆಯ ಗೊಂದಲ ಹೀಗೆ ಮುಂದುವರಿದಾಗ, 1969 ರ ಫೆಬ್ರವರಿಯಲ್ಲಿ ಸಭೆ ಸೇರಿದ ನಾಯಕರು, ಪಕ್ಷದ ಸಮನ್ವಯ ಸಮಿತಿಯ ನಿಷ್ಕ್ರೀಯತೆಯ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರು. ಇದೇ ವೇಳೆಗೆ ಚೀನಾ ಸರ್ಕಾರ ಹಾಗೂ ಅಲಿನ್ಲ ಕಮ್ಯೂನಿಷ್ಟ್ ಪಕ್ಷ  ಭಾರತದ ಎಡಪಂಥೀಯ ಪಕ್ಷದ ಆಂತರೀಕ ವಿಷಯಗಳಿಗೆ ತಲೆ ಹಾಕಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದವು. ಈ ಅವಕಾಶವನ್ನು ಬಳಸಿಕೊಂಡು ಭಾರತದಲ್ಲಿ ಮಾರ್ಕ್ಸ್ ವಿಚಾರಧಾರೆಗೆ ಪರ್ಯಾಯವಾಗಿ ಮತ್ತೊಂದು ಸಂಘಟನೆ ಅತ್ಯಾವಶ್ಯಕ ಎಂಬ ಬೀಜವನ್ನು ಇಲ್ಲಿನ ಉಗ್ರಗಾಮಿ ನಾಯಕರ ತಲೆಯೊಳಕ್ಕೆ ಚೀನಾ ಬಿತ್ತನೆ ಮಾಡಿತು. ಜೊತೆಗೆ ಸಂಘಟನೆಗೆ ಅವಶ್ಯಕವಾದ ಹಣ, ಶಸ್ರಾಸ್ತ್ರ ಪೂರೈಸುವ ಭರವಸೆ ನೀಡಿತು. ಅಂದಿನ ಶ್ರೀಲಂಕಾದ ಕಮ್ಯೂನಿಷ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯನಾದ ಷಣ್ಮುಗದಾಸ್‌ನನ್ನು ನೇಪಾಳ ಮೂಲಕ ಚೀನಾಕ್ಕೆ ಕರೆಸಿಕೊಂಡ ಅಲ್ಲಿನ ಸರ್ಕಾರ ಆತನ ಮೂಲಕ ಎಲ್ಲಾ ಸಂದೇಶಗಳನ್ನು ಭಾರತದ ಉಗ್ರಗಾಮಿ ನಾಯಕರಿಗೆ ರವಾನಿಸಿತು.

ಇದರಿಂದ ಪ್ರೇರಣೆಗೊಂಡ ಇಲ್ಲಿನ ನಾಯಕರು 1969 ರ ಏಪ್ರಿಲ್ 22 ರಂದು ಲೆನಿನ್‌ನ ಶತಮಾನೋತ್ಸವ ಜನ್ಮದಿನಾಚರಣೆಯಂದು ಹೊಸ ಪಕ್ಷದ ಅಸ್ತಿತ್ವವನ್ನು ಘೋಷಿಸಿದರು. ಪಕ್ಷಕ್ಕೆ ಕಮ್ಯೂನಿಷ್ಟ್ ಪಾರ್ಟಿ (ಮಾರ್ಕ್ಸ್ ಮತ್ತು ಲೆನಿನ್) ಬಣ ಎಂದು ಹೆಸರಿಸಲಾಯ್ತು. ಪಕ್ಷವನ್ನು ಹುಟ್ಟು ಹಾಕುವುದರ ಜೊತೆಗೆ ಕ್ರಾಂತಿಕಾರಕ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಲಾಯಿತು. ಭಾರತ ದೇಶ ಅರೆ ವಸಾಹತುಶಾಯಿ ಮತ್ತು ಅರೆ ದಬ್ಬಾಳಿಕೆಯ ವ್ಯವಸ್ಥೆಯಲ್ಲಿ ನರಳುತ್ತಿದೆ, ಇಲ್ಲಿ ಅಧಿಕಾರಿಗಳು ಮತ್ತು ಭೂಮಾಲೀಕರು, ಬಂಡವಾಳಶಾಹಿಗಳ ಕೈಗೊಂಬೆಯಾಗಿ ವರ್ತಿಸುತ್ತಾ ಬಡಜನತೆಯನ್ನು ಶೋಷಿಸುತ್ತಿದ್ದಾರೆ. ಇಲ್ಲಿ ಈ ವ್ಯವಸ್ಥೆಗೆ ಭಾರತ ಸರ್ಕಾರ ಅಮೇರಿಕಾದ ಬಂಡವಾಳ ನೀತಿಯನ್ನು ಮತ್ತು ಸೋವಿಯತ್ ರಷ್ಯಾದ ಅರೆಬೆಂದ ಸಮಾಜವಾದ ನೀತಿಯನ್ನು ಅನುಸರಿಸುತ್ತಿರುವುದೇ ಈ ದುರಂತಕ್ಕೆ ಕಾರಣ ಎಂದು ಪ್ರಣಾಳಿಕೆಯಲ್ಲಿ ಇಲ್ಲಿನ ವ್ಯವಸ್ಥೆಯನ್ನು ಕಟು ವಿಮರ್ಶೆಗೆ ಒಳಪಡಿಸಲಾಗಿತ್ತು. ಭಾರತದ ದುಡಿಯುವ ವರ್ಗ ಮತ್ತು ರೈತರ ದಯನೀಯವಾದ ಈ ಸ್ಥಿತಿಯಲ್ಲಿ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ಅತ್ಯಗತ್ಯ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಬಲವಾಗಿ ಪ್ರತಿಪಾದಿಸಲಾಗಿತ್ತು.

ಸರ್ಕಾರದ ವಿರುದ್ಧ ವ್ಯವಸ್ಥಿತ ಹೋರಾಟಕ್ಕೆ ಗೆರಿಲ್ಲಾ ಯುದ್ಧವೊಂದೇ ಅನಿವಾರ್ಯ ಮಾರ್ಗ ಎಂದು ತಿಳಿಸಿ ಇದಕ್ಕಾಗಿ ಗ್ರಾಮ ಮಟ್ಟದಲ್ಲಿ ರೈತರು, ಕೂಲಿಕಾರ್ಮಿಕರು, ಮತ್ತು ಆದಿವಾಸಿಗಳನ್ನು ಸಂಘಟಿಸಿ ಹೋರಾಟಕ್ಕೆ ಸಿದ್ಧವಾಗಬೇಕೆಂದು ಪಕ್ಷ ಕರೆ ನೀಡಿತ್ತು. ಪಕ್ಷದ ಸಂಘಟನೆಯನ್ನು ಅತ್ಯಂತ ಗೋಪ್ಯವಾಗಿ ಮಾಡಬೇಕೆಂದು ಹಾಗೂ ಯಾವ ಕಾರಣಕ್ಕೂ ಸಂಘಟನೆಯಲ್ಲಿ ನಿರತರಾದ ನಾಯಕರ ಮಾಹಿತಿಯನ್ನು ವಿಶೇಷವಾಗಿ ವ್ಯಯಕ್ತಿಕ ಮಾಹಿತಿಯನ್ನು ಪಕ್ಷದ ಕಾರ್ಯಕತ್ರಿಗೂ ತಿಳಿಸಬಾರದೆಂದು ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಲಾಯಿತು. ಈ ಕಾರಣಕ್ಕಾಗಿ ಈ ಹಿಂದೆ ಸಿಲಿಗುರಿ ಪ್ರಾಂತ್ಯದಲ್ಲಿ ಕಿಸಾನ್‌ಸಭಾ ಘಟಕಗಳನ್ನು ಸಂಘಟಿಸಿದ ಮಾದರಿಯನ್ನು ಅಂದರೆ, ಬಹಿರಂಗಸಭೆ ಕೈಬಿಟ್ಟು, ಪ್ರತಿಯೊಬ್ಬ ವ್ಯಕ್ತಿಯ ಜೊತೆ ಮಾತುಕತೆ ಮತ್ತು ಸಂಧಾನದ  ಪಕ್ಷವನ್ನು ತಳಮಟ್ಟದಿಂದ ಕಟ್ಟಲು ನಾಯಕರು ನಿರ್ಧರಿಸಿದರು. ಇದು ಭಾರತದ ರಾಜಕೀಯ ಇತಿಹಾಸದ ಎಡಪಂಥೀಯ ವಿಚಾರ ಧಾರೆಗಳ ಸಮಾನ ಮನಸ್ಕ ವ್ಯಕ್ತಿಗಳಲ್ಲಿ ಗೊಂದಲ, ಜಿಜ್ಙಾಸೆ ಮೂಡಿಸಿ, ತಮ್ಮ ಮುಂದಿನ ಮಾರ್ಗ ಯಾವುದು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತು.

(ಮುಂದುವರಿಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್ ಕಥನ-18)


– ಡಾ.ಎನ್.ಜಗದೀಶ್ ಕೊಪ್ಪ


ನರಭಕ್ಷಕ ಹುಲಿಗಳ ಬೇಟೆಯಿಂದಾಗಿ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಖ್ಯಾತಿ ಹೊಂದಿದ ಜಿಮ್ ಕಾರ್ಬೆಟ್ ಮಾನಸಿಕವಾಗಿ ಪ್ರಾಣಿ ಮತ್ತು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ. ತನ್ನ ಕಣ್ಣ ಮುಂದೆ ಅರಣ್ಯ ನಶಿಸಿ ಹೋಗುತ್ತಿರುವುದು ಮತ್ತು ಕಾಡಿನ ಪ್ರಾಣಿಗಳು ಶಿಕಾರಿಗಾರರ ತೆವಲಿಗೆ ಬಲಿಯಾಗುತ್ತಿರುವುದರ ಬಗ್ಗೆ ವೈಯಕ್ತಿಕವಾಗಿ ನೊಂದುಕೊಂಡಿದ್ದ. ಈ ಕಾರಣಕ್ಕಾಗಿ ನರಭಕ್ಷಕ ಪ್ರಾಣಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪ್ರಾಣಿಗಳನ್ನು ಬೇಟೆಯಾಡುವುದನ್ನು ಅವನು ನಿಲ್ಲಿಸಿದ್ದ.

ಜಿಮ್ ಕಾರ್ಬೆಟ್ ಬದುಕಿನಲ್ಲಿ, ಹಾಗೂ ಅವನ ಶಿಕಾರಿಯ ಅನುಭವದಲ್ಲಿ ಅತಿ ದೊಡ್ಡ ಸವಾಲು ಎದುರಾದದ್ದು, ರುದ್ರ ಪ್ರಯಾಗದ ನರಭಕ್ಷಕ ಚಿರತೆಯನ್ನು ಕೊಲ್ಲುವ ಸಂದರ್ಭದಲ್ಲಿ ಮಾತ್ರ. ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ಸುಮಾರು 800 ಚದುರ ಕಿ. ಮಿ. ಪ್ರದೇಶದ ವ್ಯಾಪ್ತಿಯಲ್ಲಿ ನಿರಂತರ ಎಂಟು ವರ್ಷಗಳ ಕಾಲ ನರಮನುಷ್ಯರನ್ನು ಬೇಟೆಯಾಡುತ್ತಾ, ಸರ್ಕಾರವನ್ನು, ಸ್ಥಳೀಯ ಜನತೆಯನ್ನು ಆತಂಕದ ಮಡುವಿಗೆ ನೂಕಿದ್ದ ಈ ಚಿರತೆಯನ್ನು ಕೊಲ್ಲಲು ಜಿಮ್ ಕಾರ್ಬೆಟ್ ನಡೆಸಿದ ಸಾಹಸ, ಪಟ್ಟ ಪಾಡು ಒಂದು ಮಹಾ ಕಾವ್ಯದಂತೆ ರೋಮಾಂಚಕಾರಿಯಾದ ಕಥನ. ಈ ನರಭಕ್ಷಕನ ಬೇಟೆಗಾಗಿ ಅಂದಿನ ದಿನಗಳಲ್ಲಿ ಇಡೀ ಜಗತ್ತು ಎದುರು ನೋಡುತ್ತಿತ್ತು ಏಕೆಂದರೆ, ಪ್ರತಿದಿನ 50 ರಿಂದ 100 ಕಿ.ಮಿ. ದೂರ ಸಂಚರಿಸುತ್ತಾ ಇದ್ದ ಈ ಚಿರತೆಯ ಪ್ರತಿ ನರಬೇಟೆಯೂ ಜಗತ್ತಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ಸುದ್ಧಿಯಾಗಿತ್ತು. ಇಂಗ್ಲೆಂಡಿನ ಪಾರ್ಲಿಮೆಂಟ್‌‌‍ನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ವಿಚಾರದ ಬದಲಿಗೆ, ಈ ನರಭಕ್ಷಕ ಚಿರತೆಯ ಬಗ್ಗೆ ತೀವ್ರತರವಾದ ಚರ್ಚೆಗಳು ನಡೆಯುತ್ತಿದ್ದವು.

ಕಾಡಿನ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾದ ಚಿರತೆ ಸಾಮಾನ್ಯವಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವ ಸಾಧ್ಯತೆ ಬಹುತೇಕ ಕಡಿಮೆ. ಸಿಂಹ ಅಥವಾ ಹುಲಿ ಬೇಟೆಯಾಡಿ ತಿಂದು ಮುಗಿಸಿದ ಪ್ರಾಣಿಗಳ ಅವಶೇಷ ಅಥವಾ ವಯಸ್ಸಾಗಿ ಸತ್ತು ಹೋದ ಪ್ರಾಣಿಗಳ ಕಳೇಬರಗಳನ್ನು ತಿನ್ನುವುದು ಚಿರತೆಗಳ ಪವೃತ್ತಿ. ಆದರೆ, ರುದ್ರಪ್ರಯಾಗದ ಈ ನರಭಕ್ಷಕ ಚಿರತೆ ಆಕಸ್ಮಾತ್ತಾಗಿ ನರಭಕ್ಷಕ ಪ್ರಾಣಿಯಾಗಿ ಪರಿವರ್ತನೆ ಹೊಂದಿತ್ತು. ಇದಕ್ಕೆ ಸ್ಥಳೀಯ ಜನರ ಸಾಂಸ್ಕೃತಿಕ ಆಚರಣೆಗಳು ಕೂಡ ಪರೋಕ್ಷವಾಗಿ ಕಾರಣವಾಗಿದ್ದವು. ರುದ್ರಪ್ರಯಾಗ ಹಿಮಾಲಯದ ಪವಿತ್ರ ಕ್ಷೇತ್ರಗಳ ನಡುವಿನ ಸಂಗಮ ಕ್ಷೇತ್ರಗಳಲ್ಲಿ ಒಂದು. ಹಿಮಾಲಯದ ತಪ್ಪಲಲ್ಲಿ ಹುಟ್ಟಿ ಉತ್ತರದಿಂದ ದಕ್ಷಿಣ ದಿಕ್ಕಿಗೆ ಹರಿಯುವ ಮಂದಾಕಿನಿ ಹಾಗೂ ಅಲಕನಂದಾ ನದಿಗಳು ರುದ್ರಪ್ರಯಾಗದಲ್ಲಿ ಒಂದುಗೂಡಿ, ಮುಂದೆ ಗಂಗಾನದಿಯಾಗಿ ಹರಿದು, ಮುಂದೆ ಹೃಷಿಕೇಶ ಹರಿದ್ವಾರ, ವಾರಣಾಸಿ ಮುಂತಾದ ಪವಿತ್ರ ಕ್ಷೇತ್ರಗಳ ತಟದಲ್ಲಿ ಹರಿದು ಕೊಲ್ಕತ್ತಾ ಬಳಿ ಹೂಗ್ಲಿ ನದಿಯಾಗಿ ಹೆಸರು ಬದಲಿಸಿಕೊಂಡು ಬಂಗಾಳ ಕೊಲ್ಲಿ ಸೇರುತ್ತದೆ.

ಭಾರತದ ಹಿಂದೂ ಸಮುದಾಯದ ಪಾಲಿಗೆ ಗಂಗಾ ನದಿ ಪುಣ್ಯನದಿ. ಇದು ಇಲ್ಲಿ ಜನಗಳ ಧಾರ್ಮಿಕ ಮನೋಭೂಮಿಯಲ್ಲಿ ಒಂದು ಅಚ್ಚಳಿಯದ ಹೆಸರು. ಹಿಂದು ಭಕ್ತರ ಪಾಲಿಗೆ ಚಾರ್‌ಧಾಮ್ ಎಂದು ಕರೆಸಿಕೊಳ್ಳುವ ಹೃಷಿಕೇಶ, ಹರಿದ್ವಾರ, ಬದರಿನಾಥ್ ಹಾಗೂ ಕೇದಾರನಾಥ ಇವುಗಳನ್ನು ಸಂದರ್ಶಿಸುವುದು ಅವರ ಜೀವಮಾನದ ಕನಸು ಮತ್ತು ಹೆಬ್ಬಯಕೆ. ಹಾಗಾಗಿ ಈ ಸ್ಥಳಗಳು ವರ್ಷಪೂರ್ತಿ ದೇಶದ ವಿವಿಧೆಡೆಗಳಿಂದ ಬರುವ ಭಕ್ತರಿಂದ ತುಂಬಿ ತುಳುಕುತ್ತವೆ. ಹೃಷಿಕೇಶದಿಂದ ಹೊರಟ ಭಕ್ತರು ರುದ್ರಪ್ರಯಾಗದ ಬಳಿ ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಬೇರೆ ಬೇರೆ ದಾರಿ ಹಿಡಿದು ಸಾಗಬೇಕು. ಆ ಕಾಲದಲ್ಲಿ ಬಹುತೇಕ ಪ್ರಯಾಣವನ್ನು ಕಾಲು ನಡಿಗೆಯಲ್ಲೇ ಕ್ರಮಿಸಬೇಕಿತ್ತು ಇಂತಹ ಸಂದರ್ಭದಲ್ಲಿ ವಯಸ್ಸಾದ ಭಕ್ತರು ನಡುದಾರಿಯಲ್ಲಿ ಅಸುನೀಗಿದರೆ, ಅವರುಗಳ ಶವವನ್ನು ನದಿಯ ಕೊರಕಲು ಪ್ರದೇಶಕ್ಕೆ ನೂಕಿ ಮುಂದುವರಿಯುವುದು ಅನಿವಾರ್ಯವಾಗಿತ್ತು. ಜೊತೆಗೆ ಹಿಮಾಲಯದ ತಪ್ಪಲಿನ ಬಹುತೇಕ ಹಳ್ಳಿಗಳು ಪರ್ವತದ ಮೇಲಿದ್ದ ಕಾರಣ ಅಲ್ಲಿ ಜನರೂ ಸಹ ಸತ್ತವರ ಬಾಯಿಗೆ ಒಂದಿಷ್ಟು ಬೆಂಕಿಯ ಕೆಂಡವನ್ನು ಹಾಕಿ ಪರ್ವತದ ಮೇಲಿಂದ ಶವವನ್ನು ಹಳ್ಳಕ್ಕೆ ತಳ್ಳುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಇಂತಹ ಒಂದು ಸಂದರ್ಭದಲ್ಲಿ ಸತ್ತ ಪ್ರಾಣಿಗಳ ಆಹಾರವನ್ನು ಅರಸುತ್ತಿದ್ದ ಚಿರತೆ ಮನುಷ್ಯರ ಶವಗಳನ್ನು ತಿನ್ನುವುದರ ಮೂಲಕ ನರಭಕ್ಷಕ ಪ್ರಾಣಿಯಾಗಿ ಅಲ್ಲಿನ ಜನರನ್ನು ಕಾಡತೊಡಗಿತ್ತು.

ಜಿಮ್ ಕಾರ್ಬೆಟ್ ನೈನಿತಾಲ್‌ನಲ್ಲಿ ಇರುವಾಗಲೇ ರುದ್ರಪ್ರಯಾಗದ ನರಭಕ್ಷಕ ಚಿರತೆಯು ಮನುಷ್ಯರನ್ನು ಬೇಟೆಯಾಡುತ್ತಿರುವುದನ್ನು ಪತ್ರಿಕೆಯಲ್ಲಿ ಓದಿ ತಿಳಿದಿದ್ದ, ಬ್ರಿಟಿಷ್ ಸರ್ಕಾರ ಕೂಡ ಇದನ್ನು ಕೊಂದು ಹಾಕಲು ಹವ್ಯಾಸಿ ಬೇಟೆಗಾರರಿಗೆ ಆಹ್ವಾನ ನೀಡಿ 10 ಸಾವಿರ ರೂಪಾಯಿ ಬಹುಮಾನ ಘೋಷಿಸಿತ್ತು, ಜೊತೆಗೆ ಆ ಪ್ರದೇಶದ ಜನರಿಗೆ ಮುಕ್ತವಾಗಿ ಬಂದೂಕಿನ ಪರವಾನಗಿ ನೀಡಿತ್ತು. ಹಿಮಾಲಯದ ಪರ್ವತದ ಪ್ರದೇಶಗಳಿಂದ ಬಂದ ಸೈನಿಕರಿಗೆ ರಜೆಯ ಮೇಲೆ ಊರಿಗೆ ತೆರಳುವಾಗ ಬಂದೂಕವನ್ನು ತೆಗೆದುಕೊಂಡು ಹೋಗಲು ಅನುಮತಿಯನ್ನು ಸಹ ನೀಡಿತು ನರಭಕ್ಷಕ ಚಿರತೆಯನ್ನು ಕೊಲ್ಲಲು ಸರ್ಕಾರ ಇಷ್ಟೇಲ್ಲಾ ವ್ಯವಸ್ಥೆ ಮಾಡಿರುವಾಗ ನಾನು ಮಾಡುವುದಾದರೂ ಏನು? ಎಂಬುದು ಕಾರ್ಬೆಟ್‌ನ ನಿಲುವಾಗಿತ್ತು. ಕಾರ್ಬೆಟ್‌ಗೆ ಈ ನರಭಕ್ಷಕಕನ ಬಗ್ಗೆ ಪ್ರಥಮಬಾರಿಗೆ ಸುದ್ಧಿ ತಿಳಿದಾಗ ಅವನು ನೈನಿತಾಲ್ ಸಿನಿಮಾ ಮಂದಿರದಲ್ಲಿ ಇಂಗ್ಲಿಷ್ ಸಿನಿಮಾವೊಂದನ್ನು ನೋಡುತ್ತಾ ಕುಳಿತಿದ್ದ. ಆರು ವರ್ಷಗಳ ನಂತರವೂ ಯಾರ ಕೈಗೂ ಸಿಗದೆ, ಸೆರೆ ಹಿಡಿಯಬಹುದಾದ ಎಲ್ಲಾ ವಿಧವಾದ ಉಪಾಯಗಳಿಗೂ ಜಗ್ಗದೆ ಚಿರತೆ ತನ್ನ ದಾಳಿಯನ್ನು ಮುಂದುವರಿಸಿತ್ತು. ಎರಡು ಬಾರಿ ಅದೃಷ್ಟವಶಾತ್ ಸಾವಿನ ಕುಣಿಕೆಯಿಂದ ಅದು ಪಾರಾಗಿತ್ತು.

ಒಮ್ಮೆ ರುದ್ರಪ್ರಯಾಗದ ಸಮೀಪದ ಹಳ್ಳಿಯ ಬಯಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ಚಿರತೆ ಅವನನ್ನು ಕೊಂದು ಸಮೀಪದ ಹಳ್ಳವೊಂದಕ್ಕೆ ಕೊಂಡೊಯ್ದು ತಿನ್ನುತ್ತಿರುವಾಗ ಇದನ್ನು ಕಂಡ ಕೆಲವು ಗ್ರಾಮಸ್ಥರು ದೊಣ್ಣೆ, ಮಚ್ಚು, ಕೊಡಲಿಗಳಿಂದ, ನರಭಕ್ಷಕನನ್ನು ಬೆನ್ನಟ್ಟಿದ್ದರು. ಅದು ಭಯದಿಂದ ಮನುಷ್ಯನ ಶವದೊಂದಿಗೆ ಓಡಿ ಹೋಗಿ ಸಮೀಪದ ಗುಹೆಯನ್ನು ಹೊಕ್ಕಿತು. ಕೂಡಲೇ ಗ್ರಾಮಸ್ಥರು ಗುಹೆಯ ಬಾಗಿಲಿಗೆ ಮುಳ್ಳು ಕಂಟಿ, ಮರದಬೊಡ್ಡೆ ಹಾಗೂ ಕಲ್ಲುಗಳನ್ನು ಅಡ್ಡ ಇಟ್ಟು ಚಿರತೆ ಹೊರಬಾರದಂತೆ ಭದ್ರಪಡಿಸಿದರು. ಸತತ ಐದು ದಿನಗಳ ಕಾಲ ಗುಹೆಯ ಬಾಗಿಲಲ್ಲಿ ಅವರೆಲ್ಲಾ ಕಾದು ಕುಳಿತರೂ ಸಹ ಗುಹೆಯ ಒಳಗಿನಿಂದ ಯಾವ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಸಂಶಯಗೊಂಡ ಒಬ್ಬಾತ ಗುಹೆಬಾಗಿಲಿಗೆ ಅಡ್ಡಲಾಗಿರಿಸಿದ್ದ ಮುಳ್ಳು ಮತ್ತು ಕಲ್ಲುಗಳನ್ನು ತೆಗೆಯುತಿದ್ದಂತೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಕ್ಷಣಾರ್ಧದಲ್ಲಿ ಹೊರಕ್ಕೆ ನೆಗೆದ ನರಭಕ್ಷಕ ಚಿರತೆ ಜನರ ನಡುವೆ ಓಡಿ ಹೋಗಿ ಕಾಡು ಹೊಕ್ಕಿತು. ಅನಿರೀಕ್ಷಿತವಾಗಿ ಜರುಗಿದ ಈ ಘಟನೆಯಿಂದ ಭಯ ಭೀತರಾದ ಅಷ್ಟೂ ಜನ ಗುಂಡಿನ ಶಬ್ಧಕ್ಕೆ ಬೆದರಿ ಮರದಿಂದ ಹಾರುವ ಹಕ್ಕಿಗಳಂತೆ ಚಲ್ಲಾಪಿಲ್ಲಿಯಾಗಿದ್ದರು.

ಇನ್ನೊಮ್ಮೆ ಇಬ್ಬರು ಬ್ರಿಟಿಷ್ ಅಧಿಕಾರಿಗಳ ಗುಂಡಿನ ದಾಳಿಯಿಂದ ಇದೇ ನರಭಕ್ಷಕ ಚಿರತೆ ಕ್ಷಣ ಮಾತ್ರದಲ್ಲಿ ಪಾರಾಗಿತ್ತು. ರುದ್ರಪ್ರಯಾಗ ಪಟ್ಟಣದಿಂದ ಕೇದಾರನಾಥಕ್ಕೆ ಹೋಗುವ ದಾರಿಯಲ್ಲಿ 24 ಕಿ.ಮಿ. ದೂರದಲ್ಲಿ ಕರ್ಣಪ್ರಯಾಗ ಎಂಬ ಜನವಸತಿ ಪ್ರದೇಶವಿದ್ದು ಈ ಎರಡು ಊರುಗಳ ನಡುವೆ ಅಲಕಾನಂದಾ ನದಿ ರಭಸದಿಂದ ಹರಿಯುತ್ತದೆ. ಪ್ರಯಾಣಿಕರು ನದಿ ದಾಟಲು ಅಡ್ಡಲಾಗಿ ತೂಗು ಸೇತುವೆಯೊಂದನ್ನು ಕಟ್ಟಲಾಗಿದೆ. ನರಭಕ್ಷಕ ರುದ್ರಪ್ರಯಾಗಕ್ಕೆ ಬರಬೇಕಾದರೆ, ಈ ಸೇತುವೆ ದಾಟಿ ಬರಬೇಕಿತ್ತು. ಏಕೆಂದರೆ, ಅತ್ಯಂತ ವೇಗವಾಗಿ ರಭಸದಲ್ಲಿ ಹರಿಯುವ ಅಲಕನಂದಾ ನದಿಯನ್ನು ಅದು ಈಜುವುದು ಸಾಧ್ಯವಿರಲಿಲ್ಲ. ಹಾಗಾಗಿ ಇಬ್ಬರೂ ಅಧಿಕಾರಿಗಳು ಸೇತುವೆಯ ಎರಡು ಬದಿಯಿದ್ದ ಗೋಪುರಗಳ ಮೇಲೆ ನಿರಂತರ 60 ದಿನಗಳ ರಾತ್ರಿ ಕಾವಲು ಕುಳಿತರು. ಕಡೆಗೂ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಒಂದು ದಿನ ತಡರಾತ್ರಿಯ ಬೆಳಗಿನ ಜಾವ ಎರಡು ಗಂಟೆಯ ಸಮಯದಲ್ಲಿ ಸೇತುವೆ ಮೇಲೆ ನರಭಕ್ಷಕ ನಡೆದು ಬಂತು. ಸೇತುವೆಯ ಮಧ್ಯದವರೆಗೆ ಬರುವುದನ್ನೇ ಕಾಯುತ್ತಿದ್ದ ಅವರಲ್ಲಿ, ರುದ್ರಪ್ರಯಾಗದ ದಿಕ್ಕಿನ ಗೋಪುರದಲ್ಲಿ ಕುಳಿತಿದ್ದ ಅಧಿಕಾರಿ ತಡಮಾಡದೇ, ನರಭಕ್ಷಕನತ್ತ ಗುರಿಯಿಟ್ಟು ಗುಂಡುಹಾರಿಸಿದ. ಬಂದೂಕಿನಿಂದ ಸಿಡಿದ ಗುಂಡು ಚಿರತೆಗೆ ಬಡಿಯುವ ಬದಲು, ಅದರ ಮುಂಗಾಲಿನ ಸಮೀಪ ಸೇತುವೆಗೆ ಬಿಗಿಯಲಾಗಿದ್ದ ಮರದ ಹಲಗೆಗೆ ತಾಗಿತು. ಆದರೂ ಕೂಡ ಗುಂಡಿನಿಂದ ಸಿಡಿದ ಚೂರೊಂದು ಅದರ ಕಾಲನ್ನು  ಘಾಸಿಗೊಳಿಸಿತ್ತು. ಗುಂಡಿನ  ಶಬ್ಧಕ್ಕೆ ಬೆದರಿದ ಚಿರತೆ ತಾನು ಬಂದ ದಾರಿಯತ್ತ ಹಿಂತಿರುಗಿ ಶರವೇಗದಿಂದ ಓಡುತ್ತಿರುವಾಗ, ಅತ್ತ ಕರ್ಣಪ್ರಯಾಗದ ದಿಕ್ಕಿನ ಗೋಪುರದಲ್ಲಿದ್ದ ಅಧಿಕಾರಿ ತನ್ನ ಪಿಸ್ತೂಲಿಂದ ಆರು ಗುಂಡುಗಳನ್ನು ಹಾರಿಸಿದ ಆದರೆ, ಎಲ್ಲವೂ ಗುರಿತಪ್ಪಿ ನರಭಕ್ಷಕ ಸಾವಿನ ಬಾಯಿಂದ ಪಾರಾಗಿತ್ತು. ನಂತರ ಗೋಪುರದಿಂದ ಕೆಳಗಿಳಿದು ಬಂದ ಇಬ್ಬರೂ ಸ್ಥಳವನ್ನು ಅವಲೋಕಿಸಿ. ಗುಂಡಿನ ದಾಳಿಯಿಂದ ಚಿರತೆ ಗಂಭೀರವಾಗಿ ಗಾಯಗೊಂಡು ಸತ್ತಿರಬಹುದೆಂದು ನದಿಯ ಇಕ್ಕೆಲಗಳಲ್ಲಿ ಬೆಳಕರಿದ ಮೇಲ ಎಲ್ಲೆಡೆ ಜಾಲಾಡಿದರು. ಆದರೆ, ಚಿರತೆಯ ಯಾವ ಸುಳಿವು ಸಿಗಲಿಲ್ಲ. ಈ ಘಟನೆ ಸಂಭವಿಸಿದ ಐದು ತಿಂಗಳವರೆಗೆ ಎಲ್ಲಿಯೂ ನರಭಕ್ಷಕನ ದಾಳಿ ನಡೆಯಲಿಲ್ಲವಾದ್ದರಿಂದ ಎಲ್ಲರೂ ಅದು ಗುಂಡೇಟಿನಿಂದ ಅಸುನೀಗಿದೆ ಎಂದು ಭಾವಿಸಿ ನಿಟ್ಟುಸಿರು ಬಿಟ್ಟಿದ್ದರು, ಆದರೆ, ಐದು ತಿಂಗಳ ತರುವಾಯ ನರಬಲಿಯ ಬೇಟೆಯೊಂದಿಗೆ ನರಭಕ್ಷಕ ಚಿರತೆ ತಾನು ಇನ್ನೂ ಸತ್ತಿಲ್ಲವೆಂದು ಅಪಾಯದ ಸೂಚನೆಯನ್ನು ರುದ್ರಪ್ರಯಾಗದ ಪ್ರಾಂತ್ಯದ ಜನತೆಗೆ ರವಾನಿಸಿ, ಮತ್ತೆ ಎಲ್ಲರನ್ನು ಆತಂಕದ ಮಡುವಿಗೆ ನೂಕಿತು.

ಒಂದು ಸಂಜೆ ನೈನಿತಾಲ್‌ನ ಕ್ಲಬ್‌ನಲ್ಲಿ ಗೆಳೆಯರೊಂದಿಗೆ ವಿಸ್ಕಿ ಕುಡಿಯುತ್ತಾ ಕುಳಿತ್ತಿದ್ದ ಕಾರ್ಬೆಟ್, ನರಭಕ್ಷಕ ಚಿರತೆಯ ಬಗ್ಗೆ ಎಲ್ಲರೂ ಮಾತನಾಡುವುದನ್ನು ಸುಮ್ಮನೇ ಕೇಳಿಸಿಕೊಳ್ಳುತ್ತಾ ಕುಳಿತ್ತಿದ್ದ. ಶಿಕಾರಿ ಹವ್ಯಾಸವಿದ್ದ ಹಲವಾರು ಯೂರೋಪಿಯನ್ನರು ಅಲ್ಲಿದ್ದರು. ಸರ್ಕಾರ ನರಭಕ್ಷಕ ಬೇಟೆಗೆ ಸರ್ಕಾರ ಆಹ್ವಾನವಿತ್ತಿದ್ದರೂ ಯಾರೊಬ್ಬರೂ ಹೋಗಲು ಅಂಜುತ್ತಿದ್ದರು. ಚಿರತೆಯನ್ನು ಕೊಲ್ಲಲು ಸರ್ಕಾರ ಅಂತಿಮವಾಗಿ ಅದು ಬೇಟೆಯಾಡುತ್ತಿದ್ದ ಪ್ರಾಣಿಗಳು ಅಥವಾ ಮನುಷ್ಯರ ಶವಕ್ಕೆ ಸೈನೈಡ್ ಮತ್ತು ಇತರೆ ವಿಷಗಳನ್ನು ಹಾಕಿ ಕೊಲ್ಲಲು ಪ್ರಯತ್ನಿದರೂ ಇದರಿಂದ ಯಾವ ಪ್ರಯೋಜನವಾಗಲಿಲ್ಲ. ಈ ಎಲ್ಲಾ ಘಟನೆಗಳ ನಡುವೆ ಈ ನರಭಕ್ಷಕ ಚಿರತೆಗೆ ದೈವಿಶಕ್ತಿ ಇದೆ ಎಂಬ ಪುಕಾರು ಎಲ್ಲೆಡೆ ಹಬ್ಬಿದ ಪರಿಣಾಮ ಜನರಲ್ಲಿ ಭೀತಿ ಮತ್ತಷ್ಟು ಹೆಚ್ಚಾಯಿತು. ಅಂದು ರಾತ್ರಿ ಕಾರ್ಬೆಟ್ ಕ್ಲಬ್‌ನಿಂದ ಮನೆಗೆ ಬರುವುದರೊಳಗೆ ಘರ್ವಾಲ್ ಪ್ರಾಂತ್ಯದ ಜಿಲ್ಲಾಧಿಕಾರಿ ಇಬ್ಸೋಟನ್‌ನಿಂದ ಕಾಗದದ ಲಕೋಟೆಯೊಂದು ಬಂದಿತ್ತು. ಸರ್ಕಾರದ ಪರವಾಗಿ ಇಬ್ಸೋಟನ್ ನರಭಕ್ಷ ಚಿರತೆಯನ್ನು ಬೇಟೆಯಾಡಲು ಜಿಮ್ ಕಾರ್ಬೆಟ್‌ನನ್ನು ವಿನಂತಿಸಿಕೊಂಡಿದ್ದ. ಈ ಪತ್ರ ಕಾರ್ಬೆಟ್‌ನನ್ನು ಇಕ್ಕಟ್ಟಿಗೆ ಸಿಲುಕಿಸಿತು.

                                                (ಮುಂದುವರಿಯುವುದು)

 

ಎಂದೂ ಮುಗಿಯದ ಯುದ್ಧ (ನಕ್ಸಲ್ ಕಥನ – 4)


– ಡಾ.ಎನ್.ಜಗದೀಶ್ ಕೊಪ್ಪ


 

ನಕ್ಸಲ್‌ಬಾರಿ ಪ್ರತಿಭಟನೆಯ ಯಶಸ್ವಿನ ಬಗ್ಗೆ ಚಳವಳಿಗಾರರಾಗಲಿ ಅಥವಾ ಈ ಹಿಂಸಾಚಾರ ಮತ್ತು ಚಳವಳಿಯನ್ನು ಹತ್ತಿಕ್ಕಿದ ಬಗ್ಗೆ ಪಶ್ಚಿಮ ಬಂಗಾಳದ ಸರ್ಕಾರವಾಗಲಿ ಉಭಯ ಬಣಗಳು ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಏಕೆಂದರೆ, ಈ ಘಟನೆ ಸರ್ಕಾರ ಮತ್ತು ಪ್ರತಿಭಟನಾಗಾರರಿಗೆ ಪರೋಕ್ಷವಾಗಿ ಹಲವಾರು ಎಚ್ಚರಿಕೆಯ ಪಾಠಗಳನ್ನು ಕಲಿಸಿಕೊಟ್ಟಿತು.

ಯಾವುದೇ ಒಂದು ಚಳವಳಿಯನ್ನು ಪ್ರಲೋಭನೆ ಮತ್ತು ಆಮಿಷದ ಮೂಲಕ ಹುಟ್ಟು ಹಾಕುವುದು ಅತಿಸುಲಭ ಆದರೆ, ಅದನ್ನು ನಿಯಂತ್ರಿಸುವ ನೈತಿಕತೆ ಮತ್ತು ತಾಕತ್ತು ಈ ಎರಡುಗುಣಗಳು ನಾಯಕನಿಗಿರಬೇಕು. ಭಾರತದ ಸಂದರ್ಭದಲ್ಲಿ ಅಂತಹ ತಾಕತ್ತು ಮಹಾತ್ಮಗಾಂಧಿಗೆ ಇತ್ತು. ಅವರು ಎಷ್ಟೋಬಾರಿ ಭಾರತ ಸ್ವಾತಂತ್ರ್ಯ ಚಳವಳಿ ದಿಕ್ಕು ತಪ್ಪಿದಾಗಲೆಲ್ಲಾ ಇಡೀ ಚಳವಳಿಯನ್ನು ಸ್ಥಗಿತಗೊಳಿಸಿದ್ದರು. ಇದಕ್ಕೆ ಚೌರಿಚೌರ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿ ಮತ್ತು ಪೊಲೀಸರ ಹತ್ಯಾಕಾಂಡದ ಘಟನೆ ನಮ್ಮೆದುರು ಸಾಕ್ಷಿಯಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇರುವ, ಸಮುದಾಯದ ನೋವನ್ನು ತನ್ನ ವ್ಯಯಕ್ತಿಕ ನೋವೆಂಬಂತೆ ಪರಿಭಾವಿಸುವ ವ್ಯಕ್ತಿಗಳು ಮಾತ್ರ ನಾಯಕತ್ವದ ಗುಣ ಹೊಂದಿರುತ್ತಾರೆ. ಅಂತಹ ಗುಣ ಈ ನೆಲದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣರವರಿಗೆ ಇತ್ತು.

ಇಂತಹ ಯಾವುದೇ ಗುಣಗಳು ಕಿಸಾನ್‌ಸಭಾ ಮೂಲಕ ರೈತರು ಮತ್ತು ಗೇಣಿದಾರರು, ಹಾಗೂ ಕೃಷಿ ಕೂಲಿಕಾರ್ಮಿಕರ ಬಗ್ಗೆ ಧ್ವನಿ ಎತ್ತಿದ ಚಾರು ಮುಜುಂದಾರ್ ಅಥವಾ ಕನು ಸನ್ಯಾಲ್‌ಗೆ ಇರಲಿಲ್ಲ. ಇಂತಹ ದೂರದೃಷ್ಟಿಕೋನದ ಕೊರತೆ ಒಂದು ಜನಪರ ಚಳವಳಿಯಾಗಬೇಕಿದ್ದ ಮಹತ್ವದ ಘಟನೆಯನ್ನು ಹಿಂಸೆಯ ಹಾದಿಗೆ ನೂಕಿಬಿಟ್ಟಿತು. ಗಾಂಧಿಯ ವಿಚಾರ ಧಾರೆಯ ಬಗ್ಗೆ ಅಪನಂಬಿಕೆ ಹೊಂದಿದ್ದ ಈ ಎಡಪಂಥೀಯ ನಾಯಕರಿಗೆ ತಮ್ಮದೇ ಪಶ್ಚಿಮ ಬಂಗಾಳದಲ್ಲಿ 1860 ರ ದಶಕದಲ್ಲಿ ರೈತರು ನಡೆಸಿದ ನೀಲಿ ಕ್ರಾಂತಿಯಾದರೂ ಮಾದರಿಯಾಗಬೇಕಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಈಸ್ಟ್ ಇಂಡಿಯ ಕಂಪನಿ ಮತ್ತು ಪ್ಲಾಂಟರ್‌ಗಳ ವಿರುದ್ಧ ಸ್ಥಳೀಯ ಗೇಣಿದಾರ ರೈತರು ನಡೆಸಿದ ಕಾನೂನು ಬದ್ಧ, ಹಾಗೂ ಅಹಿಂಸಾತ್ಮಕ ಹೋರಾಟವನ್ನು ಮಾವೋವಾದಿ ಬೆಂಬಲಿಗರು ಅವಲೋಕಿಸಬೇಕಿತ್ತು. ಏಕೆಂದರೆ, ಅಣುಬಾಂಬ್‌ಗಿಂತ ಅಹಿಂಸೆ ಎಂಬ ಅಸ್ತ್ರ ಹೆಚ್ಚು ಪರಿಣಾಮಕಾರಿ ಎಂಬುದನ್ನು ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟ ಈ ನೆಲದಲ್ಲಿ ಯಾರೂ ಹಿಂಸೆಯನ್ನು ಪ್ರತಿಪಾದಿಸಲಾರರು, ಅಥವಾ ಬೆಂಬಲಿಸಲಾರರು.

ಭಾರತೀಯ ಮುಗ್ದ ರೈತರನ್ನು ನಿರಂತರವಾಗಿ ಶೋಷಿಸಿಕೊಂಡ ಬಂದ ಇತಿಹಾಸ ಇಂದು ನಿನ್ನೆಯದಲ್ಲ, ಅದಕ್ಕೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷರ ವಸಾಹತು ಶಾಹಿಯ ಆಡಳಿತ, ಅವರ ಭೂಕಂದಾಯ ಪದ್ಧತಿ, ಆರ್ಥಿಕ ನೀತಿಗಳು ಇವೆಲ್ಲವೂ ರೈತರ ರಕ್ತವನ್ನು ಹೀರಿವೆ. ಅನಕ್ಷರತೆ, ಸಂಘಟನೆಯ ಕೊರತೆ ಇಂತಹ ಶೋಷಣೆಗೆ ಪರೋಕ್ಷವಾಗಿ ಕಾರಣವಾದವು. 1859-60 ರಲ್ಲಿ ಪಶ್ಚಿಮ ಬಂಗಾಳದ ರೈತರು ನೀಲಿ ಬೆಳೆಯ ವಿರುದ್ಧ ಬಂಡಾಯವೆದ್ದ ಘಟನೆ ಭಾರತದ ಇತಿಹಾಸದಲ್ಲಿ ಪ್ರಥಮ ರೈತರ ಬಂಡಾಯವೆಂದು ಕರೆಯಬಹುದು. ಈಸ್ಷ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಬಹುತೇಕ ಪ್ಲಾಂಟರ್‌ಗಳು ಯರೋಪಿಯನ್ನರೇ ಆಗಿದ್ದರು. ತಮ್ಮ ತಾಯ್ನಾಡಿನ ಕಂಪನಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಗೇಣಿದಾರರನ್ನು ನೀಲಿ ಬೆಳೆ ಬೆಳೆಯುವಂತೆ ಒತ್ತಾಯಿಸುತ್ತಿದ್ದರು. ರೈತರು, ತಮ್ಮ ಕುಟುಂಬದ ಆಹಾರಕ್ಕಾಗಿ ಭತ್ತ ಬೆಳೆಯಲು ಆಸ್ಪದ ನೀಡದೆ ಕಿರುಕುಳ ನೀಡುತ್ತಿದ್ದರು. ರೈತರು ಕಷ್ಟ ಪಟ್ಟು ಬೆಳೆದ ನೀಲಿ ಬೆಳೆಗೆ ಅತ್ಯಂತ ಕಡಿಮೆ ಬೆಲೆಯನ್ನ ನೀಡಲಾಗುತಿತ್ತು. ಪ್ಲಾಂಟರ್‌ಗಳ ಆದೇಶವನ್ನು ಧಿಕ್ಕರಿಸಿದ ರೈತರನ್ನು ತಮ್ಮ ಮನೆಗಳಲ್ಲಿ ಕೂಡಿ ಕಾಕಿ ಚಾಟಿ ಏಟಿನ ಶಿಕ್ಷೆ ನೀಡಲಾಗುತ್ತಿತ್ತು. ಇದಕ್ಕಾಗಿ ಪ್ರತಿಯೊಬ್ಬ ಬ್ರಿಟಿಷ್ ಪ್ರಜೆಯ ಮನೆಯಲ್ಲಿ ಪ್ರತ್ಯೇಕ ಕೊಠಡಿಗಳಿದ್ದವು ಇವುಗಳನ್ನು ವಿಪ್ಟಿಂಗ್‌ಹೌಸ್ ಎಂದು ಕರೆಯಲಾಗುತ್ತಿತ್ತು. ಚಾಟಿ ಏಟು ಹೊಡೆಯಲು ಭಾರತೀಯ ಗುಲಾಮರನ್ನು ನೇಮಕ ಮಾಡಲಾಗಿತ್ತು ಪ್ರತಿ ಒಂದು ಏಟಿಗೆ ಒಂದಾಣೆಯನ್ನು (ಒಂದು ರೂಪಾಯಿಗೆ ಹದಿನಾರು ಆಣೆ) ಏಟು ತಿನ್ನುವ ರೈತನೇ ಭರಿಸಬೇಕಾಗಿತ್ತು.

ಇಂತಹ ಕ್ರೂರ ಅಮಾನವೀಯ ಶೋಷಣೆಯನ್ನು ಸಹಿಸಲಾರದೆ, ರೈತರು ಸಣ್ಣ ಪ್ರಮಾಣದ ಗುಂಪುಗಳ ಮೂಲಕ ಪ್ರತಿಭಟಿಸಲು ಮುಂದಾದರು. ಇದೇ ಸಮಯಕ್ಕೆ ಸರಿಯಾಗಿ ಕಲರೋವ ಜಿಲ್ಲೆಯ ಜಿಲ್ಲಾಧಿಕಾರಿ ರೈತರ ಪರವಾಗಿ ಆದೇಶವನ್ನು ಹೊರಡಿಸಿ, ಗೇಣಿ ಪಡೆದ ಭೂಮಿಯನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲು ರೈತರು ಸ್ವತಂತ್ರರು ಹಾಗೂ ತಮಗಿಷ್ಟ ಬಂದ ಬೆಳೆ ತೆಗೆಯುವುದು ಅವರ ವ್ಯಯಕ್ತಿಕ ಹಕ್ಕು ಎಂದು ಘೋಷಿಸಿದನು. ಇದು ರೈತರಿಗೆ ನೂರು ಆನೆಯ ಬಲ ತಂದುಕೊಟ್ಟಿತು. ದಿಗಂಬರ ವಿಶ್ವಾಸ್ ಮತ್ತು ವಿಷ್ಣು ವಿಶ್ವಾಸ್ ಎಂಬ ವಿದ್ಯಾವಂತ ರೈತರ ನೇತೃತ್ವದಲ್ಲಿ ದೊಡ್ಡ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಇದರಿಂದ ಆತಂಕಗೊಂಡ ಪ್ಲಾಂಟರ್‌ಗಳು ತಮ್ಮ ಭೂಮಿಯ ಗೇಣಿ ದರ ಹೆಚ್ಚಿಸುವುದರ ಮೂಲಕ ರೈತರನ್ನು ಮಣಿಸಲು ಯತ್ನಿಸದರು. ಒಗ್ಗೂಡಿದ ರೈತರು ಗೇಣಿ ಕೊಡುವುದಿರಲಿ, ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದರು. ಸಂಪೂರ್ಣವಾಗಿ ನೀಲಿ ಬೆಳೆ ತೆಗೆಯುವುದನ್ನು ನಿಲ್ಲಿಸಿ ತಮಗೆ ಬೇಕಾದ ಆಹಾರ ಬೆಳೆಗಳ ಕೃಷಿಯಲ್ಲಿ ತೊಡಗಿಕೊಂಡರು. ಅನಿವಾರ್ಯವಾಗಿ ಕಚ್ಚಾ ವಸ್ತುಗಳಿಲ್ಲದೆ ಪಶ್ಚಿಮ ಬಂಗಾಳದ ಎಲ್ಲಾ ಕಂಪನಿಗಳು ಮುಚ್ಚತೊಡಗಿದವು. ಈ ಆಂದೋಲನದ ಮತ್ತೊಂದು ವೈಶಿಷ್ಟತೆಯೆಂದರೆ, ಮುಗ್ಧ ರೈತರ ಬಂಡಾಯಕ್ಕೆ ಬಂಗಾಲದ ಎಲ್ಲಾ ವಿದ್ಯಾವಂತರು, ಬುದ್ಧಿಜೀವಿಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದರು. ಇವರೆಲ್ಲರೂ ಬಂಗಾಳದಾದ್ಯಂತ ಸಭೆ ನಡೆಸಿ ರೈತರ ಜ್ವಲಂತ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಸಮಾಜ ಮತ್ತು ಸರ್ಕಾರದ ಗಮನ ಸೆಳೆದರು. ಹರೀಶ್ಚಂದ್ರ ಮುಖರ್ಜಿಯವರ ‘ “ಹಿಂದೂ ದೇಶ ಭಕ್ತ” ಎಂಬ ಪತ್ರಿಕೆ ಹಾಗೂ “ಧೀನ ಬಂಧು ಮಿತ್ರ” ಅವರ “ನೀಲಿ ದರ್ಪಣ” ಎಂಬ ನಾಟಕ ಜನಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು ಕೊನೆಗೆ ಎಚ್ಚೆತ್ತುಕೊಂಡ ಸರ್ಕಾರ ಒಂದು ಆಯೋಗವನ್ನು ರಚಿಸಿ ರೈತರ ಸಮಸ್ಯೆ ಪರಿಹರಿಸಲು ಮುಂದಾಯಿತು.

ಇಂತಹ ಒಂದು ಅನನ್ಯವಾದ ಅಪೂರ್ವ ಇತಿಹಾಸವಿದ್ದ ಬಂಗಾಳದ ನೆಲದಲ್ಲಿ ರೈತರ, ಕೃಷಿ ಕೂಲಿಕಾರ್ಮಿಕರ ನೆಪದಲ್ಲಿ ರಕ್ತ ಸಿಕ್ತ ಇತಿಹಾಸದ ಅಧ್ಯಾಯ ಆರಂಭಗೊಂಡಿದ್ದು ನೋವಿನ ಹಾಗೂ ವಿಷಾದಕರ ಸಂಗತಿ. ನಕ್ಸಲ್‌ಬಾರಿಯ ಹಿಂಸಾತ್ಮಕ ಹೋರಾಟ ಪಶ್ಚಿಮ ಬಂಗಾಳ ಸೇರಿದಂತೆ ಆಂಧ್ರಪ್ರದೇಶದಲ್ಲಿ ಹಲವು ಮಹತ್ವದ ಬದಲಾವಣೆಗೆ ಕಾರಣವಾಯಿತು. ಅವುಗಳಲ್ಲಿ ಕನು ಸನ್ಯಾಲ್ ಸಮರ್ಥಿಸಿಕೊಂಡ ಪ್ರಮುಖವಾದ ಅಂಶಗಳೆಂದರೆ.

  1. ವಂಶಪಾರಂಪರ್ಯವಾಗಿ ಬೀಡು ಬಿಟ್ಟಿದ್ದ ಪಾಳೇಗಾರತನದ ಅಡಿಪಾಯ ಬಿರುಕು ಬಿಟ್ಟಿತು.
  2. ಜಮೀನ್ದಾರರ ಮನೆಯಲ್ಲಿದ್ದ ರೈತರ ಒಪ್ಪಂದ ಪತ್ರಗಳೆಲ್ಲಾ ನಾಶವಾದವು.
  3.  ಅನೈತಿಕತೆಯ ಮಾರ್ಗದಲ್ಲಿ ಶ್ರೀಮಂತ ಜಮೀನ್ದಾರರು ಮತ್ತು ಬಡ ರೈತರ ನಡುವೆ ಏರ್ಪಟ್ಟಿದ್ದ ಒಪ್ಪಂದಗಳನ್ನು ಶೂನ್ಯ ಎಂದು ಘೋಷಿಸಲಾಯಿತು.
  4. ಹಳ್ಳಿಗಳಲ್ಲಿ ಜಮೀನ್ದಾರರು ಪೋಷಿಸಿಕೊಂಡು ಬಂದಿದ್ದ ಅಮಾನವೀಯ ಮುಖದ ಎಲ್ಲಾ ಕಾನೂನು, ಕಟ್ಟಳೆಗಳನ್ನು ರದ್ದು ಪಡಿಸಲಾಯಿತು.
  5. ಮುಕ್ತವಾಗಿ ನಡೆದ ವಿಚಾರಣೆಯಲ್ಲಿ ಶೋಷಣೆ ಮಾಡುತ್ತಿದ್ದ ಜಮೀನ್ದಾರರನ್ನು ಕಠಿಣವಾಗಿ ಶಿಕ್ಷೆಗೆ ಒಳಪಡಿಸಲಾಯಿತು.
  6. ಜಮೀನ್ದಾರರೊಂದಿಗೆ ಬೆಳೆದು ಬಂದಿದ್ದ ಗೂಂಡಾ ಪಡೆ ಸಂಪೂರ್ಣನಾಶವಾಯಿತು.
  7. ಕೇವಲ ಬಿಲ್ಲು ಬಾಣಗಳೋಂದಿಗೆ ಸೆಣಸಾಡುತ್ತಿದ್ದ ಪ್ರತಿಭಟನಾನಿರತ ರೈತರಿಗೆ ಜಮೀನ್ದಾರರ ಮನೆಯಲ್ಲಿ ಅಪಹರಿಸಿ ತಂದ ಬಂದೂಕಗಳು ಹೊಸ ಆಯುಧಗಳಾದವು.
  8. ಜಮೀನ್ದಾರರ ಬಗ್ಗೆ ರೈತರಿಗೆ ಇದ್ದ ಭಯ ಭೀತಿ ಕಾಣದಾದವು.
  9. ರಾತ್ರಿ ವೇಳೆ  ಹಳ್ಳಗಳನ್ನು ಕಾಯಲು ರೈತರು, ಕಾರ್ಮಿಕರು ಮತ್ತು ಆದಿವಾಸಿಗಳಿಂದ ಕೂಡಿದ ಗಸ್ತು ಪಡೆಯೊಂದು ಸೃಷ್ಟಿಸಲಾಯಿತು.
  10. ಕಿಸಾನ್‌ಸಭಾ ಸಂಘಟನೆಯೊಳಗೆ ಕ್ರಾಂತಿಕಾರಿ ತಂಡವೊಂದನ್ನು ಹುಟ್ಟು ಹಾಕಲಾಯಿತು.

ಈ ಹೊರಾಟ ಕುರಿತಂತೆ ನಕ್ಸಲ್ ಚರಿತ್ರೆಯ ಸಂಪುಟಗಳನ್ನೇ ಬರೆದಿರುವ ಬಂಗಾಳಿ ಲೇಖಕ ಸಮರ್‌ಸೇನ್ ಬಣ್ಣಿಸುವುದು ಹೀಗೆ: ನಕ್ಸಲ್‌ಬಾರಿಯ ಪ್ರತಿಭಟನೆ ಎಡಪಂಥೀಯ ತತ್ವ ಸಿದ್ಧಾಂತಗಳಲ್ಲಿ ಹುದುಗಿಹೋಗಿದ್ದ ಹಲವು ಕ್ರಾಂತಿಕಾರಿ ಅಂಶಗಳನ್ನು ರೈತರ ಬಂಡಾಯದ ಮೂಲಕ ಹೊರಹಾಕಿದೆ. ಸಿದ್ಧಾಂತ ಮತ್ತು ಪ್ರಯೋಗಗಳ ನಡುವೆ ಇದ್ದ ಅಂತರವನ್ನು ಇದು ಕಡಿಮೆ ಮಾಡಿತು. ತೆಲಂಗಾಣ ರೈತರ ಹೋರಾಟ ಕೂಡ ಇದಕ್ಕೆ ಪೂರಕವಾಗಿ ಪರಿಣಮಿಸಿತು. ಹಿಂಸೆಯ ಮೂಲಕ ಶೋಷಣೆ ಕೂಪಕ್ಕೆ ತಳ್ಳಲ್ಪಟ್ಟಿದ್ದ ಎಲ್ಲಾ ಶೋಷಿತರು ತಮ್ಮ ತಮ್ಮ ನಿಜವಾದ ಸ್ಥಾನಮಾನಗಳನ್ನು ಗುರುತಿಸಿಕೊಂಡರು. ರಾಜಕೀಯವಾಗಿ, ಆಡಳಿತಾತ್ಮಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಹೋರಾಟದ ಮೂಲಕ ಅವರು ಮತ್ತಷ್ಟು ಸದೃಢರಾದರು.

ಸಮರ್ ಸೇನ್‌ರವರ ಅತಿ ರಂಜಿತವಾದ ಈ ಹೇಳಿಕೆ ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದು ಮೇಲು ನೋಟಕ್ಕೆ ಕಂಡು ಬರುತ್ತದೆ. ಏಕೆಂದರೆ, ಒಂದು ಪಕ್ಷದ ಸಿದ್ಧಾಂತದ ಚೌಕಟ್ಟಿನಲ್ಲಿ ನಡೆಯಬೇಕಾದ ಹೋರಾಟದ ಲಕ್ಷಣಗಳನ್ನು ನಕ್ಸಲ್‌ಬಾರಿಯ ಹೋರಾಟ ಒಳಗೊಂಡಿರಲಿಲ್ಲ. ಜೊತೆಗೆ ಅದು ಸಿಲಿಗುರಿ ಪ್ರಾಂತ್ಯದ ಎಲ್ಲಾ ಸಮೂಹದ ಚಳವಳಿಯಾಗಿರಲಿಲ್ಲ. ಎಲ್ಲಾ ವರ್ಗದ ಭಾವನೆಗಳನ್ನು ಕ್ರೋಢೀಕರಿಸುವಲ್ಲಿ ಹೋರಾಟ ವಿಫಲವಾಯಿತು. ಜಮೀನ್ದಾರರ ಶೋಷಣೆಯ ಬಗ್ಗೆ ನ್ಯಾಯ ಪಡೆಯಲು ಪರ್ಯಾಯ ಮಾರ್ಗಗಳಿದ್ದರೂ ಕೂಡ ಕಾನೂನನ್ನು ಸ್ವತಃ ರೈತರು, ಆದಿವಾಸಿಗಳು ಕೈಗೆತ್ತಿಕೊಂಡಿದ್ದು ಪ್ರಜಾಪ್ರಭುತ್ವ ಸರ್ಕಾರದ ವ್ಯವಸ್ಥೆಯಲ್ಲಿ ಒಪ್ಪುವಂತಹ ಸಂಗತಿಗಳಲ್ಲ. 1919 ರಿಂದ ಭಾರತದಲ್ಲಿ ಬೇರು ಬಿಟ್ಟು, ಮಾರ್ಕ್ಸ್ ಮತ್ತು ಲೆನಿನ್ ವಿಚಾರಧಾರೆಗಳ ಅಡಿಯಲ್ಲಿ ಸಾಗಿದ್ದ ಕಮ್ಯೂನಿಷ್ಟ್ ಪಕ್ಷಕ್ಕೆ ಚೀನಾದ ಮಾವೋತ್ಸೆ ತುಂಗನ ಉಗ್ರವಾದಿ ನಿಲುವುಗಳು ಜೀರ್ಣಿಸಿಕೊಳ್ಳಲು ಕಷ್ಟವಾಯಿತು. ಇದನ್ನು ಮಾವೋನ ಮಾತುಗಳಲ್ಲಿ ಹೇಳಬಹುದಾದರೆ, ನಮ್ಮ ಕಾಲುಗಳಿಗೆ ತಕ್ಕಂತೆ ಪಾದರಕ್ಷೆಗಳು ಇರಬೇಕೆ ಹೊರತು, ಪಾದರಕ್ಷೆ ಅಳತೆಗೆ ನಮ್ಮ ಕಾಲಿನ ಪಾದಗಳನ್ನು ಕತ್ತರಿಸಿಕೊಳ್ಳಬಾರದು. ನಕ್ಸಲ್‌ಬಾರಿಯ ಘಟನೆಯಲ್ಲಿ ಆದದ್ದು ಕೂಡ ಇದೇ ಸಂಗತಿ.

(ಮುಂದುವರೆಯುವುದು)

ಬಿಳಿ ಸಾಹೇಬನ ಭಾರತ (ಕಾರ್ಬೆಟ್‌ ಕಥನ-17)


– ಡಾ.ಎನ್.ಜಗದೀಶ್ ಕೊಪ್ಪ


 

ಮಧ್ಯಾಹ್ನದವರೆಗೆ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಚೇತರಿಸಿಕೊಂಡ ಕಾರ್ಬೆಟ್‌, ಭೋಜನದ ನಂತರ ಬದ್ರಿಯನ್ನು ಕರೆದುಕೊಂಡು ಮತ್ತೇ ಹೋರಿಯ ಕಳೇಬರವಿದ್ದ ಸ್ಥಳಕ್ಕೆ ಧಾವಿಸಿದ. ಕಳೆದ ರಾತ್ರಿ ಮಳೆ ಬಿದ್ದ ಪರಿಣಾಮ ಹುಲಿಯ ಹೆಜ್ಜೆಗುರುತುಗಳು ಒದ್ದೆ ನೆಲದ ಮೇಲೆ ಮೂಡಿದ್ದವು. ಈ ನರಭಕ್ಷಕ ಕೂಡ ವಯಸ್ಸಾದ ಹುಲಿ ಎಂಬುದನ್ನ ಕಾರ್ಬೆಟ್‌ ಹೆಜ್ಜೆ ಗುರುತಿನ ಮೂಲಕ ಖಚಿತಪಡಿಸಿಕೊಂಡ. ಕಳೆದ ರಾತ್ರಿ ತನ್ನ ಮೇಲೆ ಎರಗಲು ಪ್ರಯತ್ನಿಸಿದ್ದ ಸ್ಥಳದಿಂದ ಅನತಿ ದೂರದ ಪೊದೆಯೊಂದಕ್ಕೆ ನಡೆದು ಹೋಗಿರುವ ಗುರುತು ಪತ್ತೆ ಹಚ್ಚಿದ ಕಾರ್ಬೆಟ್‌ಗೆ ನರಭಕ್ಷಕ ಹತ್ತಿರದಲ್ಲೇ ವಿಶ್ರಾಂತಿ ಪಡೆಯುತ್ತಿದೆ ಎಂಬುದು  ಖಾತರಿಯಾಯಿತು. ಇದನ್ನು ಕೂಡ ಚಂಪಾವತ್ ನರಭಕ್ಷಕನನ್ನು ಕೊಂದ ರೀತಿಯಲ್ಲೇ ಗ್ರಾಮಸ್ಥರ ಸಹಾಯದಿಂದ ಬೇಟೆಯಾಡಬೇಕು ಎಂದು ನಿರ್ಧರಿಸಿದ ಅವನು, ಬದ್ರಿಯ ಜೊತೆ ವಾಪಸ್ ಪ್ರವಾಸಿ ಮಂದಿರಕ್ಕೆ ಹಿಂತಿರುಗಿದ

ಸಂಜೆ ಕತ್ತಲಾಗುವ ಮುನ್ನವೇ ನರಭಕ್ಷಕನನ್ನು ಬೇಟೆಯಾಡಬೇಕು ಎಂದು ನಿರ್ಧಾರವಾದ ಕೂಡಲೇ ಹುಲಿಯನ್ನು ಬೆದರಿಸಲು ಒಂದಷ್ಟು ಜನರನ್ನು ಕಲೆ ಹಾಕಲು ನಿರ್ಧರಿಸಿದ ಕಾರ್ಬೆಟ್‌ ಮುಕ್ತೇಶ್ವರದ ಅಂಚೆಕಛೇರಿ ಬಳಿ ಬಂದು ಜನರಿಗೆ ಪರಿಸ್ಥಿತಿಯನ್ನು ವಿವರಿಸಿದ. ನಂತರ  ಬದ್ರಿಯ ನೆರವಿನೊಂದಿಗೆ ಮುವತ್ತು ಜನರನ್ನು ಕರೆದುಕೊಂಡು ತನ್ನ ಸಹಾಯಕರೊಡನೆ ನರಭಕ್ಷಕ ಮಲಗಿದ್ದ ಪೊದೆಯತ್ತ ಹೆಜ್ಜೆ ಹಾಕತೊಡಗಿದ..ಕಳೆದ ರಾತ್ರಿಯ ಭೀಕರ ಅನುಭವ ಅವನಲ್ಲಿ ನರಭಕ್ಷಕ ಹುಲಿಯನ್ನು ಕೂಡಲೇ ಬೇಟೆಯಾಡಬೇಕೆಂಬ ಆಕ್ರೋಶವನ್ನು ಹೆಚ್ಚಿಸಿತ್ತು.

ಹೋರಿಯ ಕಳೇಬರವಿದ್ದ ಸುಮಾರು 100 ಅಡಿ ದೂರದಲ್ಲಿ ದಟ್ಟವಾದ ಪೊದೆಯೊಳಗೆ ನರಭಕ್ಷಕ ಆಶ್ರಯ ಪಡೆದಿತ್ತು. ಸಮತಟ್ಟಾದ ನೆಲದಿಂದ ದೂರದಲ್ಲಿ ಸ್ವಲ್ಪ ಇಳಿಜಾರಿನಿಂದ ಕೂಡಿದ್ದ ಆ ಸ್ಥಳದಿಂದ ಯಾವುದೇ ಕಾರಣಕ್ಕೂ ಹುಲಿ ನುಸುಳಿ ಮತ್ತೆ ಬಯಲು ಪ್ರದೇಶಕ್ಕೆ ಹೋಗಬಾರದೆಂದು ಗ್ರಾಮಸ್ಥರಿಗೆ ಎಚ್ಚರಿಸಿ ಎಲ್ಲರನ್ನೂ ಆ ತಗ್ಗು ಪ್ರದೇಶದ ಮೇಲ್ಭಾಗದಲ್ಲಿ ರಕ್ಷಣೆಗಾಗಿ ನಿಲ್ಲಿಸಿದ. ಅದೇ ವೇಳೆ ತನ್ನ ಸಹಾಯಕ ಗೋವಿಂದಸಿಂಗ್ ಎಂಬಾತನಿಗೆ ಕಾರ್ಬೆಟ್‌ ಸೂಚನೆ ನೀಡುತಿದ್ದಾಗ, ಕಾರ್ಬೆಟ್‌ ನಿಂತಿದ್ದ ಸ್ಥಳದ ಹಿಂಬದಿಯಲ್ಲಿ 400 ಅಡಿಯ ದೂರದಲ್ಲಿ ನರಭಕ್ಷಕ ಮೇಲಿನ ಸಮತಟ್ಟಾದ ಪ್ರದೇಶದಲ್ಲಿದ್ದ ಕುರುಚಲು ಗಿಡಗಳ ನಡುವೆಯಿಂದ ಮತ್ತೆ ತನ್ನ ಬೇಟೆಯ ಆಹಾರವಿದ್ದ ಸ್ಥಳದತ್ತ ತೆರಳುತ್ತಿರುವುದನ್ನು ಗಮನಿಸಿದ ಗೋವಿಂದಸಿಂಗ್,  ಈ ಬಗ್ಗೆ ಏನೂ  ಮಾತನಾಡದೆ ಬರೀ ಕಣ್ಣಿನಲ್ಲೇ ಕಾರ್ಬೆಟ್‌ಗೆ ಸೂಚನೆ ನೀಡಿದ. ಆಶ್ಚರ್ಯ ಮತ್ತು ಕುತೂಹಲದಿಂದ ಹಿಂತಿರುಗಿ ನೋಡಿದ ಕಾರ್ಬೆಟ್‌ಗೆ  ಗಿಡಗಳ ನಡುವೆ ನಿಧಾನವಾಗಿ ತೆವಳುತ್ತಾ , ಪೊದೆಯತ್ತ ಸಾಗುತಿದ್ದ ನರಭಕ್ಷಕನ ದರ್ಶನವಾಯಿತು.  ಕೂಡಲೇ ಯಾರೊಬ್ಬರೂ ಗದ್ದಲ ಮಾಡಬಾರದೆಂದು ಎಲ್ಲರಿಗೂ ತುಟಿಯ ಮೇಲೆ ಬೆರಳಿಟ್ಟು ಮೌನವಾಗಿ ಎಚ್ಚರಿಸಿ. ತನ್ನ ಜೋಡು ನಳಿಕೆಯ ಬಂದೂಕದೊಂದಿಗೆ ಕಾರ್ಬೆಟ್‌ ಪೊದೆಯತ್ತ ಮೆಲ್ಲ ಮೆಲ್ಲನೆ ಹೆಜ್ಜೆ ಇರಿಸುತ್ತಾ ನಡೆದ.
 
ನರಭಕ್ಷಕ ವಿಶ್ರಾಂತಿ ಪಡೆಯುತಿದ್ದ ಜಾಗದ ಸುತ್ತಮುತ್ತ ಲಂಟಾನದ ಗಿಡಗಳು ದಟ್ಟವಾಗಿ ಬೆಳೆದುನಿಂತ ಕಾರಣ ಕಾರ್ಬೆಟ್‌ ಗಿಡಗಳ ಕೆಳಗೆ ತೂರಿ ಸುರಂಗ ಮಾರ್ಗದಲ್ಲಿ ಚಲಿಸುವಂತೆ ತೆವುಳುತ್ತಾ ಸಾಗತೊಡಗಿದ. ಅತ್ಯಂತ ಕಡಿದಾಗಿದ್ದ ಆ ಜಾಗದಲ್ಲಿ ಒಮ್ಮೆ ಅವನ ಹಿಡಿತಕ್ಕೆ ಯಾವ ಗಿಡದ ಆಸರೆಯೂ ಸಿಗದೆ ಕೆಳಕ್ಕೆ ಜಾರಿದಾಗ ಅವನು ಧರಿಸಿದ್ದ ಹ್ಯಾಟ್ ಗಿಡಗಳ ನಡುವೆ ಸಿಕ್ಕಿ ಹಾಕಿಕೊಂಡಿತು. ಕೊನೆಗೆ ಒಂಡು ಗಿಡದ ಬೇರನ್ನು ಬಲವಾಗಿ ಹಿಡಿದುಕೊಂಡು ಕಾರ್ಬೆಟ್‌ ಸಾವರಿಸಿಕೊಳ್ಳತಿದ್ದಂತೆ, ಪಕ್ಕೆದ ಪೊದೆಯಲ್ಲಿ ಕೇವಲ 40 ಅಡಿ ದೂರದಲ್ಲಿ ನರಭಕ್ಷಕ ಮೂಳೆ ಜಗಿಯುತ್ತಿರುವ ಸದ್ದು ಕೇಳ ಬರತೊಡಗಿತು. ಶಬ್ದ ಬರುತಿದ್ದ ದಿಕ್ಕಿನತ್ತ ನೋಡುತ್ತಾ, ಬಂದೂಕವನ್ನು ಎದಗೇರಿಸಿದ ಕಾರ್ಬೆಟ್‌ ನರಭಕ್ಷಕ ಕುಳಿತಿರುವ ಸುಳಿವನ್ನು ಪತ್ತೆ ಹಚ್ಚುವ ಸಲುವಾಗಿ ಮೆಲ್ಲ ಮೆಲ್ಲನೆ ಕುಳಿತ ಸ್ಥಿತಿಯಲ್ಲಿ ಕದಲತೊಡಗಿದ. ಅದೇ ವೇಳೆಗೆ ಹಿಂಬದಿಯಲ್ಲಿ ಸಹಾಯಕ  ಗೋವಿಂದಸಿಂಗ್ ಗಿಡದಲ್ಲಿ ಸಿಲುಕಿದ್ದ  ಕಾರ್ಬೆಟ್‌ನ ಹ್ಯಾಟ್‌ನೊಂದಿಗೆ ಅಲ್ಲಿಗೆ ಹಾಜರಾದ. ಅವನನ್ನು ಹಿಂದಕ್ಕೆ ತಳ್ಳಿದ ಕಾರ್ಬೆಟ್‌ ಮಾತನಾಡುವುದಿರಲಿ, ಉಸಿರು ಕೂಡ ಬಿಡದಂತೆ ಸನ್ನೆ ಮೂಲಕ ಅವನಿಗೆ ಎಚ್ಚರಿಸಿದ.

ನರಭಕ್ಷಕ ಕುಳಿತಿದ್ದ ಜಾಗಕ್ಕೆ ಇಪ್ಪತ್ತು ಅಡಿ ಅಂತರವಿರುವಷ್ಟು ಸನಿಹಕ್ಕೆ ಬಂದ ಕಾರ್ಬೆಟ್‌ ಒಂದು ಅಂದಾಜಿನ ಮೇಲೆ ಮೂಳೆಯ ಜಗಿಯುವಿಕೆ ಶಬ್ದವನ್ನೇ ಗುರಿಯಾಗಿಸಿಕೊಂಡು ಬಂದೂಕದಿಂದ ಗುಂಡು ಹಾರಿಸಿದ. ದುರದೃಷ್ಟವಶಾತ್ ಅದು ನರಭಕ್ಷನಿಂದ ಕೇವಲ ಅರ್ಧ ಅಡಿ ದೂರದಲ್ಲಿ ಹಾಯ್ದು ಹೋಗಿ ಮರವೊಂದಕ್ಕೆ ಬಡಿಯಿತು. ಗುಂಡಿನ ಶಬ್ದಕ್ಕೆ ಬೆಚ್ಚುವ ಬದಲು ಕೆರಳಿ ನಿಂತ ನರಭಕ್ಷಕ ಘರ್ಜಿಸುತ್ತಾ ಸುತ್ತೆಲ್ಲಾ ನೋಡತೊಡಗಿತು.

ನರಭಕ್ಷಕ ಮನುಷ್ಯ ವಾಸನೆಯನ್ನು ಗ್ರಹಿಸಿ ತನ್ನತ್ತಾ ಬರುತ್ತಿರುವುದನ್ನು ಗಮನಿಸಿದ ಕಾರ್ಬೆಟ್‌ ನಿಧಾನವಾಗಿ ಹಿಂದಕ್ಕೆ ಚಲಿಸಿ ಕಲ್ಲು ಬಂಡೆಯೊಂದನ್ನು ತನ್ನ ಬೆನ್ನಿಗೆ ಆಸರೆಯಾಗ್ಟ್ಟುಕೊಂಡು ಕಾಯತೊಡಗಿದ. ಕೆಲವೇ ಕ್ಷಣಗಳಲ್ಲಿ ಅವನ ಎದರು ನರಭಕ್ಷಕ ಪ್ರತ್ಯಕ್ಷವಾಗಿಬಿಟ್ಟಿತು.  ಕೇವಲ ಆರು ಅಡಿಯಷ್ಟು ಹತ್ತಿರ ಬಂದು ಮುಖಾಮುಖಿಯಾದ ಇದನ್ನು ಹೊಡೆಯಲು ಇದೇ ಸರಿಯಾದ ಸಮಯವೆಂದು ನಿರ್ಧರಿಸಿದ ಕಾರ್ಬೆಟ್‌ ಎದೆಗುಂದದೆ ತಕ್ಷಣವೇ ಗುಂಡು ಹಾರಿಸಿದ. ಗುಂಡು ನೇರವಾಗಿ ನರಭಕ್ಷಕ ಕುತ್ತಿಗೆಯ ಹಿಂಭಾಗಕ್ಕೆ ತಗುಲಿತು. ಅತಿ ಸನಿಹದಿಂದ ಗುಂಡು ಹಾರಿಸಿದ ಪರಿಣಾಮ ಒಂದೇ ಗುಂಡಿಗೆ ಅದು ನರಳಾಟ ಅಥವಾ ಯಾವುದೇ ಚೀತ್ಕಾರವಿಲ್ಲದೆ ದೊಪ್ಪನೆ ನೆಲಕ್ಕೆ ಉರುಳಿಬಿತ್ತು. ಗುಂಡು ನರಭಕ್ಷಕನ ದೇಹವನ್ನು ಸೀಳಿ ಹೊರಗೆ ಹಾರಿ ಹೋಗಿತ್ತು. ಕಾರ್ಬೆಟ್‌ ತನ್ನ ಸಹಾಯಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನರಭಕ್ಷನನ್ನು ಪರಿಶೀಲಿಸಿದಾಗ ಅದು ಒಂಟಿ ಕಣ್ಣಿನ ಮುದಿಯಾದ ಹೆಣ್ಣು ಹುಲಿಯಾಗಿತ್ತು. ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಈ ಹೆಣ್ಣು ಹುಲಿ ಪೊದೆಯಲ್ಲಿ ಕುಳಿತು ಕಾಡುಕೋಳಿಗಳನ್ನು ಬೇಟೆಯಾಡುತಿತ್ತು ಇಂತಹದ್ದೇ ಒಂದು ಸಂದರ್ಭದಲ್ಲಿ ಪೊದೆಯ ಬಳಿ ಕಟ್ಟಿಗೆ ಅರಸಲು ಬಂದ ಮಹಿಳೆಯನ್ನು ಬಲಿ ತೆಗೆದುಕೊಂಡು.ನಂತರ ಇದು ತನ್ನ ಬೇಟೆಗಾಗಿ ಮನುಷ್ಯರನ್ನು ಬೆನ್ನಟ್ಟಿ ನಾಲ್ವರನ್ನು  ಬಲಿ ತೆಗೆದುಕೊಂಡಿತ್ತು.

ಈ ನರಭಕ್ಷಕನ ಶಿಕಾರಿಯ ನಂತರ ಪನಾರ್ ಎಂಬ ಹಳ್ಳಿಯಲ್ಲಿ ನರಭಕ್ಷಕ ಚಿರತೆ ಕಾಣಿಸಿಕೊಂಡು ಮನುಷ್ಯರನ್ನು ಬೇಟೆಯಾಡುತ್ತಿರುವ ಸುದ್ಧಿ ಮತ್ತೆ ಕಾರ್ಬೆಟ್‌ಗೆ ತಲುಪಿತು . ಹಲವಾರು ವೈಯಕ್ತಿಕ ಕೆಲಸಗಳ ಒತ್ತಡದ ನಡುವಯೂ ಕೂಡೆ ಪನಾರ್ ಎಂಬ ಸಣ್ಣ ಹಳ್ಳಿಗೆ ಬೇಟಿ ನೀಡಿದ ಕಾರ್ಬೆಟ್‌ ಪಕ್ಕದ ಡೊಲ್ ಎಂಬ ಹಳ್ಳಿಯಲ್ಲಿದ್ದ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡ.

ಪನಾರ್ ಹಳ್ಳಿಯ ಹತ್ತಿರದ ಗುಡ್ಡವೊಂದನ್ನು ತನ್ನ ನೆಲೆಯಾಗಿಸಿಕೊಂಡಿದ್ದ ಚಿರತೆ ರಾತ್ರಿಯ ವೇಳೆ ಮನುಷ್ಯರನ್ನು ಬೇಟೆಯಾಡುತಿತ್ತು. ಕಾರ್ಬೆಟ್‌ ಪ್ರವಾಸಿ ಮಂದಿರದಲ್ಲಿ ಉಳಿದುಕೊಂಡಿದ್ದ ದಿನವೇ ಚಿರತೆ ಮಹಿಳೆಯೊಬ್ಬಳನ್ನು ಕೊಂದು ಗುಡ್ಡಕ್ಕೆ ಹೊತ್ತೊಯ್ದು ತಿಂದು ಹಾಕಿತ್ತು. ಪನಾರ್ ಹಳ್ಳಿಯ ಯುವ ರೈತನೊಬ್ಬ ರಾತ್ರಿ ತನ್ನ ಮನೆಯ ಬಾಗಿಲು ತೆರದು ಮಲಗಿದ್ದಾಗ ಆತನ ಹದಿನೆಂಟು ವರ್ಷದ ಹೆಂಡತಿಯನ್ನ ನರಭಕ್ಷಕ ಚಿರತೆ ಬಲಿತೆಗೆದುಕೊಂಡಿತ್ತು. ಮರುದಿನ ಮನೆಗೆ ಬೇಟಿ ನೀಡಿದ ಕಾರ್ಬೆಟ್‌ ರಾತ್ರಿ ಆ ಮನೆಯಲ್ಲಿ ಉಳಿದುಕೊಂಡು ಚಿರತೆಯ ಬೇಟೆಗಾಗಿ ಕಾದು ಕುಳಿತರೂ ಪ್ರಯೋಜನವಾಗಲಿಲ್ಲ. ಎರಡು ದಿನ ಹಳ್ಳಿಯಲ್ಲಿದ್ದು ಬೇಟೆಯಾಡದೇ ಬರಿಗೈಲಿ ವಾಪಸ್ ನೈನಿತಾಲ್‌ಗೆ ಬಂದ ಕಾರ್ಬೆಟ್‌ ಮರುದಿನ ಮೊಕಮೆಘಾಟ್‌ಗೆ ತೆರಳಿದ.

ಆದರೆ, ಡಿಸಂಬರ್ ತಿಂಗಳಿನ ಕ್ರಿಸ್‌ಮಸ್ ರಜೆಗೆ ನೈನಿತಾಲ್‌ನ ತನ್ನ ಮನೆಗೆ ಬಂದ ಸಂದರ್ಭದಲ್ಲಿ ಸೊನೌಲಿ ಎಂಬ ಹಳ್ಳಿಯಲ್ಲಿ ಕಾಣಿಸಿಕೊಂಡ ನರಭಕ್ಷಕ ಚಿರತೆಯೊಂದನ್ನು ಬೇಟೆಯಾಡಿ ಹಳ್ಳಿಯ ಜನರನ್ನು ಪ್ರಾಣಾಪಾಯದಿಂದ ಕಾಪಾಡಿದ. ಚಿರತೆ ಹಳ್ಳಿಗೆ ಬರುತಿದ್ದ ದಾರಿಯಲ್ಲಿ ರಾತ್ರಿ ವೇಳೆ ಮೇಕೆಯೊಂದನ್ನು ಕಟ್ಟಿ ಅದರ ಮೂಲಕ ಚಿರತೆಯನ್ನ ಆಕರ್ಷಿಸಿ ಒಂದೇ ರಾತ್ರಿಯಲ್ಲಿ ನರಭಕ್ಷಕನನ್ನು ಕಾರ್ಬೆಟ್‌ ಬೇಟೆಯಾಡಿದ. ಈ ಎಲ್ಲಾ ಘಟನೆಗಳಿಂದ 1907 ರಿಂದ 1910ರವರೆಗೆ ಉತ್ತರ ಹಿಮಾಲಯದಲ್ಲಿ ಜನಸಾಮಾನ್ಯರ ಪಾಲಿಗೆ ದುಸ್ವಪ್ನವಾಗಿದ್ದ  ನರಭಕ್ಷಕ ಹುಲಿ ಮತ್ತು ಚಿರತೆಗಳನ್ನು ಬೇಟೆಯಾಡಿದ ಕೀರ್ತಿ ಕಾರ್ಬೆಟ್‌ಗೆ ಸಲ್ಲಿತು. ಜಿಮ್ ಕಾರ್ಬೆಟ್‌ನ ಈ ಮಾನವೀಯ ಗುಣದ ಸೇವೆಯಿಂದಾಗಿ ಅಂದು ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರ ಅವನನ್ನು ವಿಶೇಷ ಗಣ್ಯ ವ್ಯಕ್ತಿ ಎಂದು ಪರಿಗಣಿಸಿ ಗೌರವಿಸತೊಡಗಿತು. ಈ ಕಾರಣಕ್ಕಾಗಿ ಬೇಸಿಗೆಯ ದಿನಗಳಲ್ಲಿ ಮಸ್ಸೂರಿ ಅಥವಾ ನೈನಿತಾಲ್‌ಗೆ ಭೇಟಿ ನೀಡುತಿದ್ದ ವೈಸ್ರಾಯ್ ಮತ್ತು ಅವರ ಕುಟುಂಬ ಕಾರ್ಬೆಟ್‌‌ನ ಅತಿಥಿಗಳಾಗಿ ಅವನ ಮನೆಯಲ್ಲಿ ಉಳಿದುಕೊಳ್ಳುತಿದ್ದರು.

ಸೋಜಿಗದ ಸಂಗತಿಯೆಂದರೆ, ಇವತ್ತಿಗೂ ನೈನಿತಾಲ್ ಗಿರಿಧಾಮದ ಅಂಚಿನಲ್ಲಿರುವ ಹಳ್ಳಿಗಳಲ್ಲಿ ಒಂದು ನಂಬಿಕೆಯಿದೆ. ಅಲ್ಲಿ ಕಾಡುದಾರಿಯಲ್ಲಿ ಪುಟ್ಟದಾದ ಹನುಮಾನ್ ದೇವಾಲಯಗಳಿವೆ. ಜೊತೆಗೆ ಕೆಲವು ದೇವಸ್ಥಾನಗಳಲ್ಲಿ ಜಿಮ್ ಕಾರ್ಬೆಟ್‌ನ ಕಪ್ಪು ಬಿಳುಪಿನ ಫೋಟೊಗಳಿವೆ. ಕಾಡುಪ್ರಾಣಿಗಳಿಂದ ಹನುಮಾನ್  ಮತ್ತು ಕಾರ್ಪೆಟ್ (ಕಾರ್ಬೆಟ್‌) ಸಾಹೇಬ್ ನಮ್ಮನ್ನು ರಕ್ಷಿಸಿಸುತಿದ್ದಾರೆ ಎಂದು ಅಲ್ಲಿನ ಜನ ನಂಬಿಕೊಂಡಿರುವುದನ್ನು ಈಗಲೂ ನಾವು ಕಾಣಬಹುದು.

(ಮುಂದುವರಿಯುವುದು)