Category Archives: ಶುಕ್ಲಾಂ ಸಕಲೇಶಪುರ

ಯಾರಿಗೆ ಬಂತು ಸ್ವಾತಂತ್ರ್ಯ? ಗಂಗೂರಿನ ದಲಿತರ ಪಾಲಿಗಂತೂ ಇಲ್ಲ!

– ಶುಕ್ಲಾಂ ಸಕಲೇಶಪುರ

ಪಬ್ಲಿಸಿಟಿ ಹುಚ್ಚಿಗಾಗಿ ದಲಿತರಿಗೆ ಕಟಿಂಗ್ ಮಾಡಲು ಬಂದವರು ಹಳೇಬೀಡು ಹತ್ತಿರದ ಗಂಗೂರಿನಲ್ಲಿ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಏನೂ ತಪ್ಪಿಲ್ಲದ ಅಮಾಯಕ ಐದು ದಲಿತ ಯುವಕರು ಇಂದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೆಲವು ಮಹಿಳೆಯರೂ ಸೇರಿದಂತೆ ಒಟ್ಟು 20 ಮಂದಿ ಕೇಸು ಎದುರಿಸುತ್ತಿದ್ದಾರೆ. Gangoor-1ಅವರ ವಿರುದ್ಧ ದಾಖಲಾಗಿರುವ ಆರೋಪಗಳು: ಅಕ್ರಮ ಕೂಟ (ಸೆ.143 ಭಾದಂಸ), ಧಾರ್ಮಿಕ ಭಾವನೆಗಳಿಗೆ ಧಕ್ಕೆ (ಸೆ.295ಎ, 298) ಮತ್ತು ಹೆಣ್ಣಿನ ಮಾನಭಂಗ ಯತ್ನ (ಸೆ.354). ಸಾಮೂಹಿಕ ಕ್ಷೌರ ಮಾಡಿ ಹೋದ ಮುತ್ತುರಾಜ ತಮ್ಮ ಮೊಬೈಲ್ ದೂರವಾಣಿಯ ಸ್ವಿಚ್ ಆಫ್ ಮಾಡಿಕೊಂಡು ಬಹುಶಃ ಬೆಂಗಳೂರಿನಲ್ಲಿ ಹಾಯಾಗಿದ್ದಾರೆ. ಆದರೆ ಅಮಾಯಕ ಹುಡುಗರು ಆಕ್ರೋಶದಿಂದ, ವಿಷಾದದಿಂದ, ಅತೀವ ನೋವಿನಿಂದ ಜೈಲಿನಲ್ಲಿ ದಿನ ತಳ್ಳುತ್ತಿದ್ದಾರೆ. ಆಗಿರುವ ಅವಮಾನ ತಾಳಲಾರದೆ, ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.

ಆಗಿದ್ದಿಷ್ಟು…

ಗಂಗೂರು ಹಳೇಬೀಡು ಹೋಬಳಿಯ ಹಳ್ಳಿ. ಅಲ್ಲಿ ಹತ್ತಿರ ಹತ್ತಿರ 500 ಕುಟುಂಬಗಳಿರಬಹುದು. ಐವತ್ತು ಕುಟಂಬಗಳು ದಲಿತರವು. ಉಳಿದವರು ಮೇಲ್ವರ್ಗದವರು. ಅದೇ ಊರಿನಲ್ಲಿ ಒಂದು ಕಟಿಂಗ್ ಶಾಪ್ ಇತ್ತು. ಮುಜರಾಯಿ ಇಲಾಖೆ ಪಟ್ಟಿಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನವಿದೆ. ಹಲವು ವರ್ಷಗಳಿಂದ ನಡೆದುಬಂದಿರುವ ಕ್ರಮಗಳೇನೆಂದರೆ, ದಲಿತರಿಗೆ ಆ ದೇವಸ್ಥಾನಕ್ಕೆ ಪ್ರವೇಶವಿಲ್ಲ. ಕಟಿಂಗ್ ಶಾಪ್ ನಡೆಸುವ ಕ್ಷೌರಿಕ ಸಮುದಾಯದವರು, ದಲಿತರನ್ನು ಒಳ ಸೇರಿಸುವಂತಿಲ್ಲ. ವೈಯಕ್ತಿಕವಾಗಿ ಕ್ಷೌರಿಕನಿಗೆ ಆ ಬಗ್ಗೆ ವಿರೋಧವಿಲ್ಲ. ಆದರೆ ದಲಿತರನ್ನು ಸೇರಿಸಿದರೆ, ಸವರ್ಣೀಯರು ಅವನ ಬಳಿ ಬರುವುದಿಲ್ಲ ಎಂದು ತಾಕೀತು ಮಾಡಿದ್ದರು. ಆ ಕಾರಣ ಅವನು ದಲಿತರಿಗೆ ಕಟಿಂಗ್ ಮಾಡುತ್ತಿರಲಿಲ್ಲ. ಯುವಕರು ಪಕ್ಕದ ಊರಿಗೆ (ಸಾತೇನಹಳ್ಳಿ) ಹೋಗಿ ಕಟಿಂಗ್ ಅಥವಾ ಶೇವಿಂಗ್ ಮಾಡಿಸಿಕೊಂಡು ಬರುತ್ತಿದ್ದರು.

ಅಷ್ಟೇ ಅಲ್ಲ, ಈ ಊರಿನಲ್ಲಿ ದಲಿತರಿಗೆ ಸವಲತ್ತುಗಳು ಸಿಗುತ್ತಿಲ್ಲ. ವಿವಿಧ ಯೋಜನೆಗಳಲ್ಲಿ ಮನೆಗಳು ಮಂಜೂರಾದರೆ ಈ ಊರಿನ ದಲಿತರಿಗೆ ಸಿಗುತ್ತಿದ್ದದು ಬೆರಳೆಣಿಕೆಯಷ್ಟು. ನ್ಯಾಯಬೆಲೆ ಅಂಗಡಿಗೆ ಅಕ್ಕಿ, ಗೋಧಿ ತರಲು ಹೋದರೆ, ಅಲ್ಲಿರುವ ಸವರ್ಣೀಯರು ಭಿಕ್ಷೆ ಹಾಕುತ್ತಿರ ಧಿಮಾಕಿನಲ್ಲಿ ಗತ್ತು ತೋರಿಸುತ್ತಾರೆ. Gangoor-5ನಿಗದಿತ ದುಡ್ಡಿಗಿಂತ ಮೂವತ್ತು – ನಲವತ್ತು ರೂಪಾಯಿ ಕೇಳಿದರೂ ಕೊಡಬೇಕು. ಇಲ್ಲವಾದರೆ ಆ ತಿಂಗಳ ಪಡಿತರ ಇಲ್ಲ.

ಬಹಳ ವರ್ಷಗಳಿಂದ ಹೀಗೆ ನಡೆಯುತ್ತಿತ್ತು. ಇತ್ತೀಚೆಗಿನ ಜನರೇಷನ್‌ನ ಯುವಕರು ಒಂದಿಷ್ಟು ಕಲಿತವರು. ಬೇರೆ ಬೇರೆ ಊರುಗಳಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ದಲಿತರು ಅನುಭವಿಸುತ್ತಿರುವ ಅವಮಾನಗಳ ಬಗ್ಗೆ ಆಕ್ರೋಷ ಬೆಳೆಸಿಕೊಂಡಿದ್ದಾರೆ. ಅವರು ಸಂಬಳ ತಗೊಂಡು ಒಳ್ಳೆ ಅಂಗಿ-ಪ್ಯಾಂಟು ಹಾಕಿಕೊಂಡು ಊರಿಗೆ ಬಂದರೆ, ಮೇಲ್ವರ್ಗದವರು.. “ಏನು ಧಿಮಾಕು ನೋಡೋ ಈ ಹುಡುಗರಿಗೆ. ನಮ್ಮೆದುರಿಗೆ ಹೀಗೆ ಮೆರೆಯೋ ಹಂಗಾಗಿದ್ದಾರೆ..” ಎಂದು ಟೀಕಿಸಿದ್ದನ್ನು ಕೇಳಿಸಿಕೊಂಡಿದ್ದಾರೆ. ಅವರಲ್ಲಿ ಜಾಗೃತಿ ಮೂಡಿದಂತೆ ’ಅಂಬೇಡ್ಕರ ಯುವಕ ಸಂಘ’ ಎಂದು ಕಟ್ಟಿಕೊಂಡಿದ್ದಾರೆ. ಈಗ್ಗೆ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲಾಧಿಕಾರಿಗೆ, ಸಮಾಜ ಕಲ್ಯಾಣ ಅಧಿಕಾರಿಗೆ, ಬೇಲೂರು ತಹಸೀಲ್ದಾರ್‌ಗೆ ಮನವಿ ಕೊಟ್ಟರು. ಊರಿನಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ಇಲ್ಲ. ಇಂತಹ ಜಾತಿ ಆಧಾರಿತ ತಾರತಮ್ಯಕ್ಕೆ ಅಂತ್ಯ ಹಾಡಿ ಎಂದು ಕೇಳಿಕೊಂಡರು.

ವಿಚಿತ್ರ ಎಂದರೆ ಈ ದೇವಸ್ಥಾನದ ಕಟ್ಟಡಕ್ಕೆ ಇದೇ ದಲಿತರು ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿದ್ದಾರೆ. ಶ್ರಮದಾನ ಮಾಡಿದ್ದಾರೆ. ದಲಿತ ಯುವಕ ಶಿವಕುಮಾರ್‌ನ ಹಿರಿಯರು ಇದೇ ದೇವಾಲಯದ ಮುಖ್ಯದ್ವಾರಕ್ಕೆ ತಮ್ಮ ಜಮೀನನಲ್ಲಿದ್ದ ಹಲಸಿನ ಮರ ಕೊಡುಗೆಯಾಗಿ ನೀಡಿದ್ದಾರೆ. (ವಿಚಿತ್ರವೆಂದರೆ, ಅದೇ ಶಿವಕುಮಾರ್ ಇಂದು ಜೈಲಿನಲ್ಲಿದ್ದಾನೆ). ಆದರೂ ದಲಿತರಿಗೆ ಪ್ರವೇಶ ಇಲ್ಲ!

ಮನವಿಯ ಪರಿಣಾಮ ಬೇಲೂರಿನ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿದರು. ದೇವಸ್ಥಾನಕ್ಕೆ ಪ್ರವೇಶ ನಿಷೇಧ ಜಾರಿಯಲ್ಲಿರುವುದು ಮನವರಿಕೆಯಾಯಿತು. ಕಟಿಂಗ್ ಶಾಪ್ ಮಾಲೀಕನನ್ನು ಮಾತನಾಡಿಸಿದರು. ದಲಿತರಿಗೆ ನೀನು ಪ್ರವೇಶ ಕೊಡದಿದ್ದರೆ, ನೀನು ಈ ವ್ಯವಹಾರ ಮಾಡುವಂತಿಲ್ಲ ಎಂದು ಆದೇಶ ನೀಡಿದರು. ಅದರಂತೆ, ಅವನ ಅಂಗಡಿಗೆ ಬೀಗ ಬಿತ್ತು.

ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಎಂದರೆ ದಲಿತ ಯುವಕರು ಎಲ್ಲಿಯೂ ಸಂಯಮ ಕಳೆದುಕೊಳ್ಳಲಿಲ್ಲ. Gangoor-2ಜಿಲ್ಲಾ ಆಡಳಿತಕ್ಕೆ ಮನವಿ ಕೊಟ್ಟು ಹದಿನೈದು ದಿನಗಳ ಕಾಲ ಕಾದರು. ಅವರು ಆತುರ ಮಾಡುವ ಉದ್ದೇಶ ಇದ್ದಿದ್ದರೆ, ಎಂದೋ ಕೆಲ ಸವರ್ಣೀಯರ ವಿರುದ್ಧ ಅಸ್ರೃಶ್ಯತಾ ನಿಷೇಧ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ನ್ಯಾಯ ಕೇಳಬಹುದಿತ್ತು. ಆದರೆ ಊರಿನಲ್ಲಿ ಶಾಂತಿ ಕದಡಬಾರದು ಎಂಬ ಏಕೈಕ ಉದ್ದೇಶದಿಂದ ಅವರು ಹಾಗೆ ಮಾಡಲಿಲ್ಲ.

ಫೆಬ್ರವರಿ 10 ರಂದು ಜಿಲ್ಲಾಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದರು. ಆ ಮೂಲಕ ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಅನಿಷ್ಟ ಪದ್ಧತಿಗೆ ಅಂತ್ಯ ಹಾಡಿದರು. ಇದೇ ಹೊತ್ತಲ್ಲಿ ಕೆಲ ಸವರ್ಣೀಯರಿಗೆ ಈ ಎಲ್ಲಾ ಬೆಳವಣಿಗೆಗಳಿಂದ ಬೇಸರವಿತ್ತು. ದೇವಾಲಯ ’ಅಪವಿತ್ರ’ ಆಯ್ತಲ್ಲೋ ಎಂದು ಕೆಲ ಮೇಲ್ವರ್ಗದ ಹೆಣ್ಣುಮಕ್ಕಳು ಕಣ್ಣೀರಿಟ್ಟರು. ಆದರೆ ಯಾರೂ ದಲಿತರ ಪ್ರವೇಶವನ್ನು ಪ್ರತಿಭಟಿಸುವ ಹಂತಕ್ಕೆ ಹೋಗಲಿಲ್ಲ.

ವಿವಾದ ಹುಟ್ಟಿದ್ದು…

ಈ ಎಲ್ಲಾ ಬೆಳವಣಿಗೆಗಳು ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ವಿಸ್ತೃತವಾಗಿ ವರದಿಯಾದವು. ಬೆಂಗಳೂರಿನ ಮುತ್ತುರಾಜ್ ರಾಜ್ಯಾದ್ಯಂತ ಹೆಸರಿರುವ ನಟ, ಕಲಾವಿದ, ಸವಿತಾ ಸಮಾಜದ ಮುಖಂಡ ಹಾಗೂ ಸೃಜನಶೀಲ ಕ್ಷೌರಿಕ. ಹಿರಿಯ ಸಾಹಿತಿ, ಕಲಾವಿದರನ್ನು ಸಂಪರ್ಕಿಸಿ ಅವರ ಹೇರ್ ಕಟ್ ಮಾಡುವ ಮೂಲಕ ಮಾಧ್ಯಮಗಳಲ್ಲಿ ಪ್ರಸಿದ್ಧಿ ಪಡೆದವರು. ಇವರ ಕಣ್ಣಿಗೆ ಗಂಗೂರಿನ ಬೆಳವಣಿಗೆಗಳು ಬಿದ್ದವು.

ಅವರು ಫೆ.11 ರ ಬೆಳಗ್ಗೆಯೇ ಹಾಸನಕ್ಕೆ ಆಗಮಿಸಿದರು. ತಮ್ಮ ವೃತ್ತಿಯ ಬಾಂಧವರನ್ನು ಸಂಪರ್ಕಿಸಿದರು. ಅದಕ್ಕಿಂತ ಉತ್ಸಾಹದಲ್ಲಿ ಪತ್ರಕರ್ತರನ್ನು ಸಂಪರ್ಕಿಸಿ ತಾನು ಗಂಗೂರಿಗೆ ಹೋಗಿ ದಲಿತರಿಗೆ ಕ್ಷೌರ ಮಾಡುತ್ತೇನೆ ಬನ್ನಿ ಎಂದು ಕರೆದರು. ಅಂತೆಯೇ ಊರು ತಲುಪಿದರು. Gangoor-3ದಲಿತ ಯುವಕರಿಗಾಗಿ ತಡಕಾಡಿದರು. ಸಿಕ್ಕವರು ಒಬ್ಬರೋ-ಇಬ್ಬರೋ ಅಷ್ಟೆ. ಆ ಹೊತ್ತಲ್ಲಿ ಊರಲ್ಲಿದ್ದ ಕೆಲವರು ಸಿಕ್ಕಿದ್ದಾರೆ ಅಷ್ಟೆ. ಆದರೆ ಮುತ್ತುರಾಜ್ ಸುಮ್ಮನಾಗಲಿಲ್ಲ. ಅದೇ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಿದ್ದಾರೆ. ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಹುಡುಗರಿಗೆ ಕಟಿಂಗ್ ಮಾಡಲು ಅನುಮತಿ ಪಡೆದು ಹತ್ತು ಮಕ್ಕಳಿಗೆ ಕಟಿಂಗ್ ಮಾಡಿದ್ದಾರೆ. ಅವರಲ್ಲಿ ದಲಿತರು, ಸವರ್ಣೀಯರು ಇದ್ದರು. ಒಬ್ಬ ಹುಡುಗಿಯ ಕೂದಲನ್ನೂ ಕತ್ತರಿಸಿದ್ದಾರೆ.

ಈ ಘಟನೆ ಊರಿನ ಜನರಿಗೆ ಗೊತ್ತಾಗುತ್ತಿದ್ದಂತೆಯೇ ಪೋಷಕರು ಆಕ್ರೋಶದಿಂದ ಶಾಲೆಗೆ ಬಂದು ದಾಂಧಲೆ ನಡೆಸಿದರು. ಆ ಹೊತ್ತಿಗೆ ಮುತ್ತುರಾಜ್ ಅಂಡ್ ಗ್ಯಾಂಗ್ ಊರಲ್ಲಿರಲಿಲ್ಲ. ’ನಮ್ಮ ಹುಡುಗರ ಹೇರ್ ಕಟ್ ಮಾಡಿಸಲು ನಿಮಗೆ ಅನುಮತಿ ಕೊಟ್ಟವರಾರು..? ನಾವು ಧರ್ಮಸ್ಥಳಕ್ಕೆಂದು ಮುಡಿ ಬಿಡಿಸಿದ್ದೆವು. ಅದ್ಹೆಂಗೆ ಕಟ್ ಮಾಡಿಸಿದರಿ. ಇವತ್ತು ಮಂಗಳವಾರ ಬೇರೆ, ನಾವು ಮಂಗಳವಾರ ಹೇರ್ ಕಟ್ ಮಾಡಿಸೋಲ್ಲ..” – ರೊಚ್ಚಿಗೆದ್ದರು ಜನ. ಇಡೀ ಊರಿನ ಗ್ರಾಮಸ್ಥರೆಲ್ಲ ಶಾಲೆಯ ಆವರಣದಲ್ಲಿ ಜಮಾಯಿಸಿದರು. ಪ್ರತಿಭಟನೆ ಕಾವು ಏರುತ್ತಿತ್ತು. ಜಿಲ್ಲಾಧಿಕಾರಿ, ಎಸ್.ಪಿ. ಸಮಾಜ ಕಲ್ಯಾಣ ಅಧಿಕಾರಿ, ತಹಸೀಲ್ದಾರ್.. ಎಲ್ಲರೂ ಊರಿಗೆ ಹೋಗಬೇಕಾಯಿತು.

ದಲಿತರ ದೇವಾಲಯ ಪ್ರವೇಶದಿಂದ ಒಳಗೊಳಗೇ ಕ್ರುದ್ಧಗೊಂಡಿದ್ದ ಅವರಿಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಅವಕಾಶ ಸಿಕ್ಕಿತು. ಶಾಲಾ ಆವರಣದಲ್ಲಿ, ವಿದ್ಯಾರ್ಥಿಗಳ ಹೇರ್ ಕಟ್ ಗೆ ಅವಕಾಶ ಮಾಡಿಕೊಟ್ಟ ಶಿಕ್ಷಕ ಆಕ್ರೋಶಕ್ಕೆ ಗುರಿಯಾದರು. ಶಿಕ್ಷಣ ಇಲಾಖೆಯ ಹಿರಿಯರು ಸ್ಥಳಕ್ಕೆ ಬರಬೇಕಾಯಿತು. ಇಷ್ಟಕ್ಕೆಲ್ಲಾ ಕಾರಣ ದಲಿತರ ಜೊತೆಗೂಡಿ ಸವರ್ಣೀಯ ಹುಡುಗ/ಹುಡುಗಿಯರ ಹೇರ್ ಕಟ್ ಮಾಡಿದ್ದು.

ರಾತ್ರಿ ಹತ್ತರವರೆಗೆ ಆಕ್ರೋಶಗೊಂಡಿದ್ದ ಪೋಷಕರನ್ನು ಸಮಾಧಾನಪಡಿಸಲು ಜಿಲ್ಲಾಧಿಕಾರಿ, ಎಸ್.ಪಿ ಹರಸಾಹಸ ಮಾಡಬೇಕಾಯಿತು. ಸಮಾಧಾನ ಪಡಿಸುವ ಕ್ರಮವಾಗಿ, ಹೇರ್ ಕಟ್ ಮಾಡಿಸಲು ಕಾರಣರಾದರು ಎಂಬ ಆರೋಪದ ಮೇಲೆ 20 ಜನರ ವಿರುದ್ಧ ದೂರು ದಾಖಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಆರೋಪಿ ನಂಬರ್ 1. ಇತರರ ಪೈಕಿ ಮುತ್ತುರಾಜ್ ಕೂಡ ಒಬ್ಬರು. ಉಳಿದ ಹದಿನೆಂಟು ಜನ ಊರ ದಲಿತರು. ಅವರ ಹೆಸರುಗಳನ್ನು ಕೊಟ್ಟಿದ್ದು ಆ ಊರಿನ ಸವರ್ಣೀಯರು. ಆ ಪಟ್ಟಿಯಲ್ಲಿ ದೇವಾಲಯ ಪ್ರವೇಶ ಪ್ರಕ್ರಿಯೆಯ ಮುಂದಾಳತ್ವ ವಹಿಸಿದ್ದ ಅನೇಕರಿದ್ದರು. ಅವರಲ್ಲಿ ಕೆಲವರು ಈ ಹೇರ್ ಕಟ್ ಪ್ರಸಂಗ ನಡೆದಾಗ ದೂರದ ಹಾಸನದಲ್ಲಿದ್ದರೂ, ಅವರ ಮೇಲೆ ಹೇರ್ ಕಟ್ ಮಾಡಿಸಲು ಪ್ರಚೋದನೆ ನೀಡಿದರು ಎಂದು ಆರೋಪಿಸಿ ದೂರು ದಾಖಲಾಗಿದೆ. ಉದ್ವಿಗ್ನಗೊಂಡಿದ್ದ ಹಳ್ಳಿಯ ಪರಿಸ್ಥಿತಿ ತಿಳಿಗೊಳಿಸಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಜಿಲ್ಲಾಡಳಿತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತದೆ, ಆದರೆ ಹಾಗಂತ ಅಮಾಯಕರನ್ನು ಜೈಲಿಗೆ ತಳ್ಳಿದ್ದು ಸರಿಯೆ?

ಮುತ್ತುರಾಜ್ ಇಲ್ಲಿ ಬಂದು ಸಾಧಿಸುವಂತದ್ದೇನೂ ಇರಲಿಲ್ಲ. ಕಾರಣ ಇಷ್ಟೆ. ಬೇರೆ ಊರಿನಿಂದ ಬಂದು ಒಂದು ದಿನದ ಮಟ್ಟಿಗೆ ಹೇರ್ ಕಟಿಂಗ್ ಮಾಡುವ ಮೂಲಕ ಬಗೆಹರಿಸುವಂತಹ ಸಮಸ್ಯೆ ಇದಾಗಿರಲಿಲ್ಲ. ಅದೇ ಊರಿನ ಕ್ಷೌರಿಕ ದಲಿತರಿಗೂ ಕ್ಷೌರ ಮಾಡಲು ಸಿದ್ಧನಿದ್ದರು. ಆದರೆ, ಅದಕ್ಕೆ ಮೇಲ್ವರ್ಗದವರ ವಿರೋಧವಿತ್ತು. ಆ ಕಾರಣ ಆತ ದಲಿತರಿಗೆ ಕಟಿಂಗ್ ಮಾಡುತ್ತಿರಲಿಲ್ಲ. ಮುಖ್ಯವಾಗಿ ಬದಲಾಗಬೇಕಿದ್ದು ಸವರ್ಣೀಯರ ಮನಸ್ಥಿತಿ, ಅವರ ಆಲೋಚನ ವಿಧಾನ. ಅಂತಹ ಪರಿಣಾಮಗಳಿಗೆ ಯಾವುದೇ ಪ್ರಯತ್ನ ಮಾಡದ ಮುತ್ತುರಾಜ್ ಏಕಾಏಕಿ ಶಾಲೆಯ ಆವರಣದಲ್ಲಿ ಕಟಿಂಗ್ ಮಾಡಿ ಸಾಧಿಸಿದ್ದೇನು? ಪ್ರಚಾರದ ಹುಚ್ಚು ಅಲ್ಲದೆ, ಅವರ ಉದ್ದೇಶದಲ್ಲಿ ಮತ್ತೇನೂ ಕಾಣುವುದಿಲ್ಲ. ಇಲ್ಲವಾದಲ್ಲಿ, ಸುದ್ದಿ ತಿಳಿದ ತಕ್ಷಣ ಮಾಧ್ಯಮ ತಂಡದೊಂದಿಗೆ ಆ ಹಳ್ಳಿಗೆ ಭೇಟಿ ಕೊಡುವುದರ ಅಗತ್ಯವೇನಿತ್ತು?

ಮುತ್ತುರಾಜ್ ತಮ್ಮ ಈ ಪ್ರಸಂಗದಿಂದ ಸವರ್ಣೀಯರು ತಮಗೆ ದಲಿತರ ಮೇಲಿದ್ದ ಆಕ್ರೋಶವನ್ನು ಪೊಲೀಸ್ ಕೇಸಿನ ಮೂಲಕ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟರು. Gangoor-4ಇಂತಹದೊಂದು ಅವಕಾಶವನ್ನು ’ದುರುಪಯೋಗ’ ಮಾಡಿಕೊಂಡ ಅವರು ಆ ಪ್ರಸಂಗದ ವೇಳೆ ಆ ಊರಿನಲ್ಲಿ ಇಲ್ಲದಿದ್ದ ಹುಡುಗರ ಹೆಸರನ್ನು ಕೇಸಿನಲ್ಲಿ ದಾಖಲು ಮಾಡಿದರು. ಆ ಮೂಲಕ ’ದೇವಾಲಯ ಪ್ರವೇಶ’ ದ ಪ್ರಯತ್ನ ನಡೆಸಿದವರಿಗೆ ’ತಕ್ಕ ಪಾಠ’ ಕಲಿಸಿದ್ದೇವೆಂದು ಅವರು ಬೀಗುತ್ತಿರಬಹುದು!

ಶಾಂತಿ ನೆಲೆಸುವ ನೆಪ ಇಟ್ಟುಕೊಂಡು, ಮೇಲ್ವರ್ಗದವರು ಕೊಟ್ಟ ಹೆಸರುಗಳ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಅವರ ಹಿಂದೆ ಬಿದ್ದಿದ್ದಾರೆ. ಇದುವರೆಗೆ ಆರು ಮಂದಿ ಅರೆಸ್ಟ್ ಆಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದವರನ್ನು ಸದ್ಯದಲ್ಲೇ ಬಂಧಿಸಿದರೂ ಅಚ್ಚರಿ ಇಲ್ಲ. ಪಟ್ಟಿಯಲ್ಲಿ ಇನ್ನೂ ಕೆಲವು ಮಹಿಳೆಯರಿದ್ದಾರೆ. ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಮುತ್ತುರಾಜ್ ದೂರದಲ್ಲೆಲ್ಲೋ ಹಾಯಾಗಿದ್ದಾರೆ.

ದಲಿತರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿದುದರ ಪರಿಣಾಮ ಇಷ್ಟೆಲ್ಲಾ ಎದುರಿಸಬೇಕಾಯಿತು. ಇಂತಹ ಘಟನೆಗಳು ಹಕ್ಕುಗಳಿಗೆ ಒತ್ತಾಯಿಸುವ ಎಷ್ಟೋ ದಲಿತರ ಉತ್ಸಾಹವನ್ನು ಬಾಡಿಸುತ್ತವೆ. ಈಗ ಆ ಊರಲ್ಲಿ, ಈ ಯುವಕರನ್ನು ಹಿರಿಯರು ಇದೇ ಕಾರಣಕ್ಕೆ ಬಯ್ಯುತ್ತಿದ್ದಾರೆ. ’ಇಷ್ಟು ದಿನ ನಾವು ಇರಲಿಲ್ಲವಾ, ಹಂಗೆ ಇರೋಕೆ ಇವರಿಗೇನು ಬಂದಿತ್ತು ಕಷ್ಟ. ಈಗ ಜೈಲಲ್ಲಿ ಕುಂತು ಅನುಭವಿಸುತ್ತಿದ್ದಾರೆ..” ಎಂದು ಮಾತನಾಡುತ್ತಿದ್ದಾರೆ. ಹಾಗಾದರೆ, ಆ ಅಮಾಯಕ ದಲಿತ ಹುಡುಗರು ಮಾಡಿದ್ದ ತಪ್ಪಾದರು ಏನು?

ದಲಿತ ಪರ ಇರುವ ಮನಸುಗಳಿಗೆ ಕಾಡುವ ಬಹು ಮುಖ್ಯ ಪ್ರಶ್ನೆ: ಯಾರೋ ಬಂದು ದಲಿತ ಹುಡುಗರ ಜೊತೆಯಾಗಿ ನಮ್ಮ ಹುಡುಗರ ಹೇರ್ ಕಟ್ ಮಾಡಿದರು ಎಂಬ ಕಾರಣಕ್ಕೆ ಅವಮಾನವಾಯಿತು ಎಂದು ರೊಚ್ಚಿಗೇಳುವ ಮೇಲ್ವರ್ಗದವರಿಗೆ, ಶತಶತಮಾನಗಳ ಕಾಲ ಅವಮಾನವನ್ನು ಉಂಡು, ಹೊದ್ದು, ಅನುಭವಿಸಿ ಬದುಕುತ್ತಿರುವ ದಲಿತರ ಬಗ್ಗೆ ಏನೂ ಅನ್ನಿಸುತ್ತಿಲ್ಲವೆ?

ತಮ್ಮ ಮಲ ಅವರು ಹೊತ್ತಾಗ, ತಮ್ಮ ಕೊಟ್ಟಿಗೆಯ ದನ ಸತ್ತಾಗ ಅವರು ಬಂದು ’ದೇವರ ಹೆಣ’ವನ್ನು ಊರಾಚೆಗೆ ಸಾಗಿಸಿದಾಗ, ಅವರು ನೀರು ಬೇಕೆಂದಾಗಲೆಲ್ಲ ಎರಡು ಅಡಿ ದೂರದಲ್ಲೇ ನಿಂತು ಮೇಲಿಂದ ಹುಯ್ದಾಗ, ತಮ್ಮ ಕಸವನ್ನು ಅವರು ಬಾಚಿದಾಗ, ಇಷ್ಟು ವರ್ಷಕಾಲ ಭೂಮಿಯ ಒಡೆತನ ಇಲ್ಲದೆ, ಶಿಕ್ಷಣ ಇಲ್ಲದೆ ವ್ಯಥೆ ಪಟ್ಟು ಇಂದಿಗೂ ಅಸ್ಪೃಶ್ಯರೇ ಆಗಿ ಉಳಿಸಿರುವ ಬಗ್ಗೆ ಒಂದು ಸಾರಿಯಾದರು ’ಅವಮಾನ’ ಆಗಲಿಲ್ಲವೇ ಈ ಮೇಲ್ವರ್ಗದವರಿಗೆ?

ನಾಯಿ, ನರಿ, ನೊಣ ಈ ದೇವಸ್ಥಾನಕ್ಕೆ ಹೋಗಬಹುದು, ಆದರೆ ದಲಿತರಿಗೆ ಪ್ರವೇಶವಿಲ್ಲ!

– ಶುಕ್ಲಾಂ ಸಕಲೇಶಪುರ

’ದಲಿತರು ಆ ದೇವಸ್ಥಾನಕ್ಕೆ ಹೋದರೆ, ಅವರಿಗೆ ಅಪಾಯ ಶತಃಸಿದ್ಧ’, ಇಂತಹದೊಂದು ಸುಳ್ಳು (ಇಂತಹ ಸುಳ್ಳನ್ನು ನಂಬಿಕೆ ಎಂದೂ ಕರೆಯಬಹುದು) ಸಕಲೇಶಪುರ ತಾಲೂಕಿನ ಗಡಿ ಭಾಗದ ಕಾಗಿನಹರೆ ಹಳ್ಳಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಬಲವಾಗಿ ಹಬ್ಬಿದೆ. ಆ ಕಾರಣ ಶತಮಾನದಷ್ಟು ಹಳೆಯದಾದ ದೇವಸ್ಥಾನಕ್ಕೆ ಇಂದಿಗೂ ಸ್ಥಳೀಯ ದಲಿತರು ಹೋಗುವುದಿಲ್ಲ. ಆ ದೇವಸ್ಥಾನಕ್ಕೆ ಅಷ್ಟೇ ಅಲ್ಲ, kaginahare-shiradi-temple-1ಆ ದೇವಸ್ಥಾನ ಇರುವ ಕಾಗಿನಹರೆಗೆ ಹೋಗಲೂ ಹಿಂಜರಿಯುತ್ತಾರೆ. ಇದುವರೆಗೆ ಒಬ್ಬೇ ಒಬ್ಬ ದಲಿತನೂ, ಆ ಊರಲ್ಲಿ ಮನೆ ಮಾಡಿಲ್ಲ. ಆ ಮೂಲಕ ದಲಿತರಿಗೆ ಆ ಊರು ಒಂದರ್ಥದಲ್ಲಿ ನಿಷೇಧಿತ ಪ್ರದೇಶ. ಆದರೆ ಅಲ್ಲಿಯ ಮುಂದುವರಿದ ಜನಾಂಗದವರ ಹೊಲ, ಗದ್ದೆ, ತೋಟಗಳಿಗೆ ಕಾರ್ಮಿಕರಾಗಿ ದುಡಿಯಲಷ್ಟೇ ದಲಿತರು ಅರ್ಹರು. ಸುಂದರ ಪಶ್ಚಿಮ ಘಟ್ಟಗಳ ಬುಡದಲ್ಲಿರುವ ಆ ಹಳ್ಳಿಯಲ್ಲಿ ಅವರು ನೆಲೆಯೂರುವಂತಿಲ್ಲ!

ಹತ್ತಾರು ವರ್ಷಗಳ ಹಿಂದೆ ಕೆಲ ದಲಿತರು ಗೊತ್ತಿಲ್ಲದೆ ಆ ದೇವಸ್ಥಾನ ಆವರಣ ಪ್ರವೇಶ ಮಾಡಿ ನೋವುಂಡರಂತೆ. ಆ ಕಾರಣ ಇಂದಿಗೂ, ಆ ಭಾಗದ ಆಸ್ತಿಕ ದಲಿತರಲ್ಲಿ, ಕಾಗಿನಹರೆಯ ಚಾಮುಂಡಿ ಎಂದರೆ ಭಯ. ದೂರದ ತಮಿಳು ನಾಡು, ಕೇರಳಗಳಿಂದ ಕೂಡ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಪಕ್ಕದಲ್ಲೇ ಇರುವ ದಲಿತರು ಮಾತ್ರ ಇತ್ತ ತಲೆ ಹಾಕುವುದಿಲ್ಲ. ’ನಾವು ಅತ್ತ ತಲೆ ಹಾಕಿ ಮಲಗುವುದೂ ಇಲ್ಲ, ಆ ದಿಕ್ಕಿನ ಕಡೆಗೆ ಮುಖ ಹಾಕಿ ನಮಸ್ಕಾರ ಕೂಡ ಮಾಡುವುದಿಲ್ಲ..’ ಎಂದು ಅನೇಕ ದಲಿತರು ಹೇಳುವುದುಂಟು. ಕೆಲ ವರ್ಷಗಳ ಹಿಂದೆ ’ಇಲ್ಲಿ ದಲಿತರಿಗೆ ಪ್ರವೇಶ ಇಲ್ಲ’ ಎಂಬ ಬೋರ್ಡ್ ಕೂಡ ಹಾಕಿದ್ದರು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಇಲ್ಲಿಯ ಚಾಮುಂಡಿಗೆ ದಲಿತರು ಆಗಿ ಬರೋಲ್ಲವಂತೆ! ಇಂತಹದೊಂದು ಸುಳ್ಳನ್ನು ಸೃಷ್ಟಿಸಿದ್ದು ಯಾರು? ನಿಸ್ಸಂಶಯವಾಗಿ ದಲಿತರಂತೂ ಆಗಿರಲಿಕ್ಕಿಲ್ಲ. ಅಸ್ಪೃಶ್ಯತೆಯನ್ನು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಮುಂದುವರಿದ ಜನಾಂಗದವರು ಇಂತಹದೊಂದು ಸುಳ್ಳನ್ನು ಸೃಷ್ಟಿಸಿ, ದಲಿತರು ಈ ದೇವಸ್ಥಾನಕ್ಕೆ ಬರಲು ಅರ್ಹರಲ್ಲ ಎಂದು ಸಾರಿದರು. ಆ ಮೂಲಕ ದಲಿತರನ್ನು ಮುಖ್ಯವಾಹಿನಿಯಿಂದ ದೂರ ಇಡಬಹುದು. ಅಷ್ಟೇ ಅಲ್ಲ, ಅವರನ್ನು ದೇವಸ್ಥಾನದಿಂದ, ಆ ಊರಿನಿಂದ ದೂರ ಇಡಬಹುದು. ಈ ಉದ್ದೇಶಗಳಲ್ಲದೆ ಬೇರೆ ಯಾವ ಉದ್ದೇಶಗಳೂ ಕಾರಣವಲ್ಲ. ಹಾಗಿಲ್ಲದಿದ್ದರೆ, ನಾಯಿ, ನರಿ, ನೊಣ, ಸೊಳ್ಳೆ..ಕಣ್ಣಿಗೆ ಕಾಣದ ಅಮೀಬಾ, ಬ್ಯಾಕ್ಟೀರಿಯಾಗಳೆಲ್ಲಾ ಆ ದೇವಸ್ಥಾನದ ಆವರಣಕ್ಕೆ ಹೋಗಬಹುದು, ಆದರೆ ದಲಿತರು ಮಾತ್ರ ಅಲ್ಲ ಎನ್ನಲು ಬೇರೇನು ಕಾರಣ ಇದ್ದೀತು?

ಕಾಗಿನಹರೆ ಇಂದು ಸಕಲೇಶಪುರ ಎಂಬ ಮೀಸಲು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಕ್ಷೇತ್ರವನ್ನು ಪ್ರತಿನಿಧಿಸುವ kaginahare-shiradi-temple-2ಶಾಸಕ ಹೆಚ್.ಕೆ. ಕುಮಾರಸ್ವಾಮಿ ದಲಿತರು. ಅನೇಕ ಬಾರಿ ಜನರ ಮತ ಕೇಳಲು, ಆ ಊರಿಗೆ ಹೋಗಿದ್ದ ಕುಮಾರಸ್ವಾಮಿ, ಇದುವರೆಗೂ ಆ ದೇವಸ್ಥಾನಕ್ಕೆ ಕಾಲಿಟ್ಟಿಲ್ಲ. ಊರಿನ ಪ್ರವೇಶದಲ್ಲಿಯೇ ಆ ದೇವಸ್ಥಾನ ಇರುವುದರಿಂದ, ಅದು ಕಣ್ಣಿಗೆ ಬಿದ್ದಿಲ್ಲ ಎಂದು ಹೇಳಲಾಗದು. ಊರ ಮಂದಿ ಹೇಳುವ ಪ್ರಕಾರ, ಶಾಸಕರಿಗೆ ವ್ಯವಸ್ಥಿತವಾಗಿ ಪ್ರಚಾರ ಆಗಿರುವ ನಂಬಿಕೆ (ಅರ್ಥಾತ್ ಸುಳ್ಳು) ಬಗ್ಗೆ ಗೊತ್ತಿರುವುದರಿಂದ ಅವರು ದೇವಸ್ಥಾನ ಪ್ರವೇಶ ಮಾಡಿಲ್ಲ.

ಜಾತಿ ಎನ್ನುವುದು ಇಲ್ಲವೇ ಇಲ್ಲ. ಅದು ವಸಾಹತುಶಾಹಿಯ ಸೃಷ್ಟಿ ಎಂದು ಬೊಬ್ಬಿಡುವ ಮಂದಿಗೆ ಇದೆಲ್ಲವೂ ಅರ್ಥವಾಗುವುದು ಯಾವಾಗ? ಸಕಲೇಶಪುರ, ಹೆತ್ತೂರು, ಹೊಂಗಡಹಳ್ಳ, ಅತ್ತಿಹಳ್ಳಿ, ಬಾಳೇಹಳ್ಳದಂತಹ ಊರುಗಳಲ್ಲಿರುವ ದಲಿತರನ್ನು ಒಮ್ಮೆ ’ಕಾಗಿನಹರೆ ಚಾಮುಂಡಿಗೆ ಹೋಗಿದ್ದೀರಾ..?’ ಎಂದು ಕೇಳಿ ನೋಡಿ. ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಕಾರಣ ಇಷ್ಟೆ… ತಲೆತಲಾಂತರಗಳಿಂದ ಅವರ ಪೂರ್ವಿಕರು ಅವರಿಗೆ ಹೇಳಿರುವುದು ’ಆ ದೇವಿಯ ಬಗ್ಗೆ ಮಾತನಾಡಬಾರದು, ಅವಳನ್ನು ನೋಡಬಾರದು..’ ಇಂದಿಗೂ ಅಲ್ಲಿ ಅದೇ ಸಂಪ್ರದಾಯ ಮುಂದುವರೆಯುತ್ತಿದೆ. ಪೂಜೆಗೆ ಅರ್ಹಳಾಗುವ ದೇವತೆಯೊಬ್ಬಳನ್ನು ಕೆಲವೇ ಸಮುದಾಯಗಳಿಗೆ ಸೀಮಿತ ಮಾಡುವುದೆಂದರೆ ಏನು? ’ಒಬ್ಬ ದೇವತೆಯೂ, ತನ್ನ ಭಕ್ತರನ್ನು ಜಾತಿಯ ಲೆಕ್ಕಾಚಾರದಲ್ಲಿ ನೋಡುತ್ತಾಳಾ…?’- ಎಂಬ ಕನಿಷ್ಟ ಸಾಮಾನ್ಯ ಜ್ಞಾನದ ಪ್ರಶ್ನೆ ಅಲ್ಲಿಯ ಮುಂದುವರಿದ ಜನಾಂಗದ ಜನರಿಗೆ ಏಕೆ ಕಾಡಲಿಲ್ಲ?

ಇಲ್ಲಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಕೊಡಿಸುವ ಪ್ರಶ್ನೆಯಿಲ್ಲ. ಒಂದು ನಿರ್ದಿಷ್ಟ ಪ್ರದೇಶದ ಪ್ರವೇಶಕ್ಕೆ ಅವರು ಅನರ್ಹರು ಎಂದು ಸಾರುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಪ್ರಯತ್ನ. ಅವರನ್ನು ಹಾಗೆ ಕುಗ್ಗಿಸಿದರೆ, ಅವರು ಆ ದೇವಸ್ಥಾನದತ್ತ ಸುಳಿಯುವುದಿಲ್ಲ. ಆ ಊರಿನ ಕಡೆಗೂ ತಲೆಹಾಕುವುದಿಲ್ಲ ಎಂಬ ಹುನ್ನಾರ ಇದೆ. ನೈಸರ್ಗಿಕ ಸಂಪನ್ಮೂಲಗಳು ಕೇವಲ ಕೆಲವರ ಸ್ವತ್ತಾಗಿ ಉಳಿಯಬೇಕು ಎಂಬ ಉದ್ದೇಶವೂ ಇದರ ಹಿಂದಿದೆ.