Tag Archives: ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಊಳಿಗಮಾನ್ಯ ವ್ಯವಸ್ಥೆಯ ಕಡೆಗೆ ಭಾರತ

 – ಆನಂದ ಪ್ರಸಾದ್

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಸ್ವಾತಂತ್ರ್ಯಾನಂತರ ರೂಪುಗೊಂಡು ಆರಂಭದಲ್ಲಿ ಹೆಚ್ಚಿನ ಹಣದ ಪ್ರಭಾವವಿಲ್ಲದೆ ನಡೆಯುತ್ತಿತ್ತು.  ಇತ್ತೀಚಿನ ವರ್ಷಗಳಲ್ಲಿ ಇದು ಹಣವುಳ್ಳವರು ಹಣ, ಹೆಂಡ, ಸೀರೆ ಹಾಗೂ ಮತದಾರರಿಗೆ ವಿವಿಧ ಬಗೆಯ ಕೊಡುಗೆಗಳನ್ನು ನೀಡಿ ಮತವನ್ನು ಖರೀದಿಸುವ ವ್ಯವಹಾರವಾಗಿ ಮಾರ್ಪಾಟಾಗಿದೆ.  ಇಂಥ ವ್ಯವಸ್ಥೆಯಲ್ಲಿ ಹೆಚ್ಚು ಹಣ ಹೊಂದಿದವರೇ ಗೆದ್ದು ಮತ್ತೆ ದೇಶವನ್ನು ಐದು ವರ್ಷಗಳ ಕಾಲ ಲೂಟಿ ಮಾಡಿ ಪುನಃ ಆ ಹಣದ ಒಂದಂಶವನ್ನು ಚುನಾವಣೆಗಳಲ್ಲಿ ಹಂಚಿ ಗೆದ್ದು ಬರುವ ಪರಿಸ್ಥಿತಿ ಬಂದಿದೆ.  ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುಡ್ಡಿರುವವರ ಕಾಲಿನಡಿಯಲ್ಲಿ ಬಿದ್ದು ನರಳುತ್ತಿದೆ ಮತ್ತು ಊಳಿಗಮಾನ್ಯ ವ್ಯವಸ್ಥೆಯಾಗಿ ಮಾರ್ಪಾಟಾಗಿದೆ.  ಇದಕ್ಕೆ ಯಾರು ಹೊಣೆ?  ಇದಕ್ಕೆ ಹಣ, ಹೆಂಡ, ಸೀರೆ ಹಾಗೂ ಇನ್ನಿತರ ವಸ್ತುಗಳನ್ನು ಸ್ವೀಕರಿಸಿ ಮತವನ್ನು ಮಾರಿಕೊಳ್ಳುವ ಮತದಾರರೇ ಕಾರಣ.  ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ತೆಗೆದುಕೊಳ್ಳುವವರು ಇದ್ದಾಗ ಮಾತ್ರ ಹಣವಂತರು ಇಂಥ ಅಡ್ಡದಾರಿಯನ್ನು ಹಿಡಿದು ಗೆಲ್ಲಲು ಸಾಧ್ಯವಾಗುತ್ತದೆ.  ಸ್ವಾಭಿಮಾನ ಉಳ್ಳ ಮತದಾರರು ಇದ್ದರೆ ಇಂಥ ಆಮಿಷಗಳನ್ನು ಖಡಾಖಂಡಿತವಾಗಿ ವಿರೋಧಿಸಿ ತರಾಟೆಗೆ ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದರೆ ಆಮಿಷ ಒಡ್ಡಿ ಓಟು ಖರೀದಿಸುವ ಧೈರ್ಯ ಯಾವ ಹಣವಂತನಿಗೂ ಬpillars_of_democracyರುತ್ತಿರಲಿಲ್ಲ.  ಹೀಗಾಗಿ ಇಂಥ ಪ್ರವೃತ್ತಿ ಬೆಳೆಯಲು ನಮ್ಮ ಮತದಾರರೇ ಹೆಚ್ಚು ಜವಾಬ್ದಾರರು.  ಇದನ್ನು ಆರಂಭದಲ್ಲೇ ವಿರೋಧಿಸಿ ಹಣ ಹಾಗೂ ಇನ್ನಿತರ ಕೊಡುಗೆಗಳನ್ನು ನೀಡುವ ಅಭ್ಯರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರೆ  ಇಂಥ ಕೆಟ್ಟ ಪ್ರವೃತ್ತಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ.

ಬಡತನ ಹಾಗೂ ಅಜ್ಞಾನ ಈ ರೀತಿ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂದು ಹೇಳಿ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ.  ನಮ್ಮ ಮತದಾರರ ನೈತಿಕ ಅಧಃಪತನವೇ ಇದಕ್ಕೆ ಕಾರಣ.  ಕೇವಲ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಮಾತ್ರವೇ ಭ್ರಷ್ಟವಾಗಿಲ್ಲ ಮತದಾರರೂ ಭ್ರಷ್ಟರಾಗಿದ್ದಾರೆ, ನೈತಿಕ ಅಧಃಪತನವನ್ನು ಹೊಂದಿದ್ದಾರೆ ಎಂಬುದನ್ನು ಈ ಪ್ರವೃತ್ತಿ ಎತ್ತಿ ತೋರಿಸುತ್ತದೆ.  ಇತ್ತೀಚೆಗೆ ಟಿವಿ ವಾಹಿನಿಯೊಂದರಲ್ಲಿ ಈ ರೀತಿ ಹಣ ತೆಗೆದುಕೊಂಡು ಓಟು ಹಾಕುವುದನ್ನು ಮತದಾರರು ಸಮರ್ಥಿಸಿದ್ದು ಹೇಗೆಂದರೆ ಜನಪ್ರತಿನಿಧಿಗಳು ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮಾಡುವುದಿಲ್ಲವೇ, ಹೀಗಿರುವಾಗ ನಾವು ಓಟಿಗಾಗಿ ಹಣ ತೆಗೆದುಕೊಂಡರೆ ಏನು ತಪ್ಪು ಎಂಬುದಾಗಿತ್ತು.  ಇಂಥ ಮತದಾರರು ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಉದ್ಧಾರವಾಗುವುದಾದರೂ ಹೇಗೆ?  ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಅಗುವುದು.  ಮತದಾರರು ಚುನಾವಣಾ ಅಭ್ಯರ್ಥಿಗಳ ಜೊತೆ ಕೈ ಜೋಡಿಸಿ ಅನೈತಿಕತೆಯನ್ನು ಪ್ರೋತ್ಸಾಹಿಸುತ್ತಿರುವ ಕಾರಣವೇ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗೇ ಗಂಡಾಂತರಕಾರಿಯಾಗಿಬೆಳೆಯುತ್ತಿದೆ.  ಹೀಗಾಗಿ ನಮ್ಮ ಚುನಾವಣಾ ವ್ಯವಸ್ಥೆ ಭ್ರಷ್ಟವಾಗಿದೆ ಎಂದಾದರೆ ಅದಕ್ಕೆ ಮತದಾರರು ಹೆಚ್ಚು ಜವಾಬ್ದಾರರು.  ಏಕೆಂದರೆ ಮತದಾರರು ಬಹುಸಂಖ್ಯಾತರು, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ಅವರು ಅಲ್ಪಸಂಖ್ಯಾತರು.  ಬಹುಸಂಖ್ಯಾತ ಇರುವ ಮತದಾರರು ಅಲ್ಪಸಂಖ್ಯೆಯಲ್ಲಿ ಇರುವ ಅಭ್ಯರ್ಥಿಗಳು ಹಣ, ಹೆಂಡ ಹಾಗೂ ಇನ್ನಿತರ ಕೊಡುಗೆಗಳನ್ನು ಹಂಚಲು ಬರುವಾಗ ತರಾಟೆಗೆ ತೆಗೆದುಕೊಳ್ಳಲು ಅವಕಾಶ ಇದೆ.  ಹೀಗೆ ಎಲ್ಲ ಮತದಾರರೂ ಇಂಥ ಅನೈತಿಕ ಕೆಲಸವನ್ನು ತರಾಟೆಗೆ ತೆಗೆದುಕೊಂಡರೆ ಯಾವುದೇ ಅಭ್ಯರ್ಥಿಗೂ ಇಂಥವುಗಳನ್ನು ಹಂಚುವ ಧೈರ್ಯ ಬರಲಾರದು.

ಚುನಾವಣಾ ಆಯೋಗ ಹಣ ಹಾಗೂ ಇನ್ನಿತರ ಆಮಿಷಗಳನ್ನು ಒಡ್ಡುವವರು ಹಾಗೂ ಅವುಗಳನ್ನು ತೆಗೆದುಕೊಳ್ಳುವವರು ಇಬ್ಬರ ಮೇಲೂ ಜಾಮೀನುರಹಿತ ಬಂಧನಕ್ಕೆ ಅವಕಾಶ ನೀಡುವ ಕಾನೂನು ತರಲು ಯೋಚಿಸುತ್ತಿದ್ದು ಇದನ್ನು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಿದೆ ಎಂದು ತಿಳಿದುಬಂದಿದೆ.  ಇಂಥ ಕಾನೂನು ತಂದರೂ ಮತದಾರರು ನೈತಿಕವಾಗಿ ಬೆಳೆಯದಿದ್ದರೆ ಹೆಚ್ಚಿನ ಪ್ರಯೋಜನ ಆಗಲಾರದು ಏಕೆಂದರೆ ಇದೆಲ್ಲ ಮತದಾರರು ಹಾಗೂ ಅಭ್ಯರ್ಥಿಗಳು ಜೊತೆಗೂಡಿ ನಡೆಸುತ್ತಿರುವ ಅನೈತಿಕ ಕಾರ್ಯವಾದುದರಿಂದ ಇದು ಕಾನೂನಿನ ಕಣ್ಣು ತಪ್ಪಿಸಿ ಕದ್ದು ಮುಚ್ಚಿ ನಡೆಯುವ ವ್ಯವಹಾರವಾಗಿದೆ.  ಹೀಗಾಗಿ ಇದನ್ನು ಮತದಾರರು ವಿರೋಧಿಸದ ಹೊರತು ನ್ಯಾಯಾಲಯದಲ್ಲಿ ಸಾಬೀತುಪಡಿಸುವುದು ಅಸಾಧ್ಯ.  ಮತದಾರರೇ ನೈತಿಕವಾಗಿ ಅಧಃಪತನ ಹೊಂದಿದ್ದಾಗ ಈ ಕದ್ದುಮುಚ್ಚಿ ನಡೆಯುವ ವ್ಯವಹಾರ ನಡೆಯುತ್ತಿರುವ ಬಗ್ಗೆ ಆಯೋಗಕ್ಕೆ ಸಾಕ್ಷ್ಯ ಸಹಿತ ದೂರು ನೀಡುವವರಾದರೂ ಯಾರು?

 
ಮತದಾರರು ನೈತಿಕವಾಗಿ ದೃಢತೆ ಬೆಳೆಸಿಕೊಂಡರೆ ಹಣ ಹಾಗೂ ಇನ್ನಿತರ ಕೊಡುಗೆ ನೀಡಿ ಓಟು ಖರೀದಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಊಳಿಗಮಾನ್ಯ ವ್ಯವಸ್ಥೆಯಾಗಿ ಪರಿವರ್ತಿಸುತ್ತಿರುವ ಕೆಟ್ಟ ಪ್ರವೃತ್ತಿಯನ್ನು ತಡೆಯಲು ಸಾಧ್ಯ.  ಮತದಾರರೇ ಭ್ರಷ್ಟರಾದರೆ ನಮ್ಮ ನಾಗರಿಕತೆಯ ಅಧಃಪತನ ತಡೆಯುವುದು ಸಾಧ್ಯವಿಲ್ಲ.  ಬಡತನ ಹಣ ತೆಗೆದುಕೊಂಡು ಓಟು ಹಾಕಲು ಕಾರಣ ಎಂಬುದು ಒಪ್ಪತಕ್ಕ ಮಾತಲ್ಲ.  ಬಡತನವಿದ್ದರೂ ದುಡಿದು ತಿನ್ನುವ ಸ್ವಾಭಿಮಾನ ಬೆಳೆಸಿಕೊಂಡವರು ಎಂಜಲು ಕಾಸಿಗೆ ಕೈಯೊಡ್ಡುವುದಿಲ್ಲ.  ಸ್ವಾಭಿಮಾನವಿಲ್ಲದ, ದೇಶದ ಬಗ್ಗೆ ಕಾಳಜಿ ಇಲ್ಲದ ಮತದಾರರು ಮಾತ್ರ ಈ ರೀತಿ ಎಂಜಲು ಕಾಸಿಗೆ ಕೈಯೊಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಗೆಡವಲು ಮುಖ್ಯ ಕಾರಣರಾಗುತ್ತಿದ್ದಾರೆ.  ಇಂಥ ಪ್ರವೃತ್ತಿಯನ್ನು ಸಾಮೂಹಿಕವಾಗಿ ವಿರೋಧಿಸುವ, ತರಾಟೆಗೆ ತೆಗೆದುಕೊಳ್ಳುವ ಎಚ್ಚರ ಬೆಳೆದರೆ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ.  ಇಲ್ಲದಿದ್ದರೆ ಇದು ಉಳ್ಳವರ, ಭ್ರಷ್ಟರ ಪ್ರಭುತ್ವವಾಗಿ ಮಾತ್ರ ಮುಂಬರುವ ದಿನಗಳಲ್ಲಿ ಪರಿವರ್ತನೆಯಾಗಲಿದೆ.  ಹಾಗಾದರೆ ಅದಕ್ಕೆ ನಮ್ಮ ಮತದಾರರೇ ಜವಾಬ್ದಾರರು.  ಹಾಗಾಗದಂತೆ ತಡೆಯುವ ಹಕ್ಕು ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಕ್ಕಿದೆ.  ಅದನ್ನು ಬಳಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವುದು ಅವರ ಕೈಯಲ್ಲಿಯೇ ಇದೆ.

ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ

– ರವಿ ಕೃಷ್ಣಾರೆಡ್ಡಿ

ನೆನ್ನೆ (27/5/12) ಸಂಜೆಗೆಲ್ಲ ಬಹುಶಃ ದೇಶದ ಬಹಳಷ್ಟು ಜನರಿಗೆ ಐಪಿಎಲ್ ‌ಫೈನಲ್ ಪಂದ್ಯದ ಸಾಂಕ್ರಾಮಿಕ ಜ್ವರ ಹಬ್ಬಿತ್ತು. ಆಟವೂ ಸಹ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿತ್ತು. ಕೊನೆಯ ಚೆಂಡಿನ ತನಕವೂ ಹೋರಾಟ ಬಿಡದ ಧೋನಿ ಈ ಪಂದ್ಯದಲ್ಲೂ ಅಂತಹುದೇ ಅಂತ್ಯ ಕಾಣಿಸಬಹುದೇ ಎನ್ನುವುದು ಬಹುಶಃ ಬಹುತೇಕ ಎಲ್ಲರಲ್ಲೂ ಇದ್ದ ಕುತೂಹಲ. ಇನ್ನು, ಟಿವಿಯಲ್ಲಿ ಕಂಡ ಕೆಲವು ದೃಶ್ಯಗಳಂತೂ ಚಿತ್ರವಿಚಿತ್ರವಾಗಿದ್ದವು. ತಲೆಯ ಮೇಲೆ ಕೈಇಟ್ಟುಕೊಂಡಿದ್ದವರು ಹಲವರಾದರೆ ದೇವರಿಗೆ ಮೊರೆ ಇಡುತ್ತಿದ್ದವರೂ ಹಲವರಿದ್ದರು. ಭಾವನಾತ್ಮಕವಾಗಿ ಇದು ನಮ್ಮನ್ನು ಚಲಿಸಬೇಕು ಎನ್ನಲು ಇದು ದೇಶದೇಶಗಳ ನಡುವೆ ನಡೆದ ಪಂದ್ಯವಲ್ಲ. ದೇಶದೊಳಗಿನ ರಾಜ್ಯಗಳೊಳಗಿನ ಪಂದ್ಯ ಎನ್ನುವ ಹಾಗೂ ಇಲ್ಲ. ಬೆಂಗಳೂರಿನ ರಾಹುಲ್ ದ್ರಾವಿಡ್ ದೂರದ ರಾಜಸ್ಥಾನ ತಂಡದ ನಾಯಕ. ಕೊಲ್ಕತ್ತದ ಗಂಗೂಲಿ ಪುಣೆ ತಂಡದ ನಾಯಕ. ನೆನ್ನೆ ನಡೆದ ಪಂದ್ಯದಲ್ಲಿಯೇ ದೆಹಲಿಯ ಗೌತಮ್ ಗಂಭೀರ್ ಕೊಲ್ಕತ್ತ ತಂಡವನ್ನು ನಡೆಸಿದರೆ ಜಾರ್ಖಂಡ್‌ನ ಧೋನಿ ಚೆನ್ನೈ ತಂಡದ ನಾಯಕ. ಆಟಗಾರರ ಮತ್ತು ತಂಡದ ನಾಯಕರ ಒತ್ತಡವನ್ನು ಅರ್ಥ ಮಾಡಿಕೊಳ್ಳಬಹುದು. ಅವರಿಗೆ ಈ ಆಟಗಳು ಕೇವಲ ಆಟ ಎನ್ನುವುದಕ್ಕಿಂತ ಹೆಚ್ಚು ಮಹತ್ವದ್ದವು. ತಮ್ಮ ಭವಿಷ್ಯದ ಸ್ಥಾನ ಮತ್ತು ಹಣದ ಹರಿವಿನ ಯೋಚನೆಯೇ ಅವರಿಗೆ ಬಹುಶಃ ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಆದರೆ, ಅಲ್ಲಿದ್ದ ಪ್ರೇಕ್ಷಕರ ಕಾತರಗಳು ಮತ್ತು ದಿಗಂತದೆಡೆಗಿನ ಮೊರೆಗಳು ಅತಾರ್ಕಿಕವಾದವುಗಳು. ಆಟವನ್ನು ಸವಿಯಲಾರದ ಮೂಢರು. ಬದುಕು ತೀರಾ ವೈಯಕ್ತಿಕವಾಗುತ್ತಿದೆ ಮತ್ತು ಅಸಹ್ಯವಾಗುತ್ತಿದೆ.

ಆದರೂ, ಈ ಐಪಿಎಲ್ ಪಂದ್ಯಗಳ ಒಂದು ಸೊಗಸು ಎಂದರೆ ಅದು ಒಂದು ರೀತಿಯಲ್ಲಿ ಎರಡು ವಿಶ್ವತಂಡಗಳ ಆಟ. ಪ್ರಾಂತ್ಯಗಳ, ಭಾಷೆಗಳ, ದೇಶದ ಗಡಿ ದಾಟಿ ಈ ತಂಡಗಳು ರೂಪುಗೊಂಡಿವೆ. ಆಸ್ಟ್ರೇಲಿಯದ ಆಕ್ರಮಣಕಾರಿ ಆಟಗಾರನಿಗೆ ಜೊತೆಯಾಗಿ ನ್ಯೂಜಿಲೆಂಡ್‌ನ ಜಂಟಲ್‌ಮನ್, ವೆಸ್ಟ್ ಇಂಡೀಸ್‌ನ ದೈತ್ಯಶಕ್ತಿಯ ಕಪ್ಪು ಆಟಗಾರನಿಗೆ ಹೆಗಲುಕೊಟ್ಟು ಆಡುವ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಅಂತ್ಯದ ನಂತರ ಆಡಲು ಇಳಿದ ಬಿಳಿಯ ದೈತ್ಯ, ಈಗಾಗಲೆ ದಂತಕತೆಯಾಗಿರುವ ಶತಕೋಟ್ಯಾಧಿಪತಿ ಆಟಗಾರನೊಂದಿಗೆ ಭಾರತದ ಯಾವುದೊ ಮೂಲೆಯ ಚಿಕ್ಕ ಪಟ್ಟಣದಿಂದ ಬಂದ ಬಡಯುವಕ; ನಿಜಕ್ಕೂ ಇದೊಂದು ಒಳ್ಳೆಯ ಜಾಗತೀಕರಣದ ಸುಂದರ ಉದಾಹರಣೆ. ದೇಶ-ಪ್ರಾಂತ್ಯ-ಭಾಷೆ-ಜನಾಂಗಗಳ ಗಡಿ ಮೀರಿ ಏಕ-ತಂಡವಾಗಿ ಆಡುತ್ತಿರುವ ಬಹುಶಃ ವಿಶ್ವದ ಏಕೈಕ ಕ್ರೀಡಾಕೂಟ. (ಇದರ ಜೊತೆಗೆ ಈ ಕ್ರೀಡಾಕೂಟದಿಂದ ಸಾಧ್ಯವಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನೂ—ಗುಣಾತ್ಮಕವಾದವುಗಳನ್ನು, ನಿರಾಕರಿಸುವಂತಿಲ್ಲ.)

ದೇಶ ನೆನ್ನೆ ಈ ಆಟದ ಕುತೂಹಲದಲ್ಲಿ ಮತ್ತು ಭಾನುವಾರದ ಸಂಜೆಯ ರಜೆಯ ವಿರಾಮದಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಘಟನೆ ಜರುಗಿತು. ಮೂರು ದಿನದಿಂದ ಪ್ರತಿದಿನವೂ ಜಗನ್‍ಮೋಹನ್ ರೆಡ್ಡಿಯನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಸಂಸ್ಥೆ ನೆನ್ನೆ ಸಂಜೆಗೆ ರೆಡ್ಡಿಯನ್ನು ಬಂಧಿಸುವ ನಿರ್ಧಾರ ತೆಗೆದುಕೊಂಡಿತು. ಈಗ ಜಗನ್‌ಮೋಹನ್ ರೆಡ್ಡಿ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಕೆರಳ ಹೊರತುಪಡಿಸಿ ದಕ್ಷಿಣದ ಇತರ ಮೂರೂ ರಾಜ್ಯಗಳಲ್ಲಿ ಭ್ರಷ್ಟಾಚಾರ ಎನ್ನುವುದು ಕಳೆದ ಒಂದೂವರೆ ದಶಕದಿಂದ ಅತಿ ಸಾಮಾನ್ಯವಾಗಿ ಹೋಗಿದೆ. ತಮಿಳುನಾಡಿನ ಜಯಲಲಿತ ದಶಕದ ಹಿಂದೆಯೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಜೈಲಲ್ಲಿ ಕುಳಿತಿದ್ದರು. ಅವರ ನಂತರ ಬಂದ ಕರುಣಾನಿಧಿ ಸರ್ಕಾರದ ಭ್ರಷ್ಟತೆಯೂ ಕಮ್ಮಿ ಇರಲಿಲ್ಲ. ರಾಜ, ಕನಿಮೊಳಿಗಳು ದೆಹಲಿ ಮಟ್ಟದಲ್ಲಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕರುಣಾನಿಧಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಇಂದು ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಕೇಸುಗಳಲ್ಲಿ ಬಂಧನಕ್ಕೊಳಗಾಗುತ್ತಿರುವುದು ಹೊರಗೆ ಹೆಚ್ಚಿಗೆ ಗೊತ್ತಾಗಿಲ್ಲ. ಸ್ಟ್ಯಾಲಿನ್ ಮತ್ತವರ ಮಗನ ಮೇಲೆಯೂ ಆಪಾದನೆಗಳಿವೆ. ಜಯಲಲಿತರಂತಹ ಜಯಲಲಿತರವರೇ ಇಂದು ತಮಿಳುನಾಡಿನಲ್ಲಿ ಸಂತಳಂತೆ ಕಾಣಿಸುತ್ತಿದ್ದಾರೆ ಎಂದರೆ ಕರುಣಾನಿಧಿಯವರ ಪಕ್ಷದ ಭ್ರಷ್ಟಾಚಾರ ಯಾವ ಹಂತಕ್ಕೆ ಹೋಗಿರಬಹುದು ಎನ್ನುವುದನ್ನು ಊಹಿಸಬಹುದು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅವರ ಕುಟುಂಬ ಮಾಡಿದ ಆಸ್ತಿ ಮತ್ತು ದುಡ್ಡಿನ ಬಗ್ಗೆ ಅನೇಕ ಆರೋಪ ಮತ್ತು ಊಹಾಪೋಹಗಳಿವೆ. ನಾಯ್ಡು‌ರವರ ಪತ್ನಿಯ ಒಡೆತನದ ಹೆರಿಟೇಜ್ ಡೈರಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಜ್ಯದ ಕೆ‍ಎಂ‌ಎಫ್‌ಗೆ ಸೆಡ್ಡು ಹೊಡೆದಿತ್ತು. ಈ ಡೈರಿ ಆರಂಭವಾಗಿರುವುದೇ ಭ್ರಷ್ಟಾಚಾರದ ಹಣದಿಂದ ಎಂಬ ಆಪಾದನೆಗಳಿತ್ತು. ಸಾಮಾನ್ಯ ಬಡರೈತನ ಮಗ ಚಂದ್ರಬಾಬು ನಾಯ್ಡುರವರ ಕುಟುಂಬದ ಆಸ್ತಿ ಸಾವಿರಾರು ಕೋಟಿಗಳಲ್ಲಿ ಇದೆ ಎಂದು 2004ರಲ್ಲಿಯೇ ಅಲ್ಲಿಯ ಅವರ ರಾಜಕೀಯ ವಿರೋಧಿಗಳು ಆರೋಪಗಳನ್ನು ಮಾಡುತ್ತಿದ್ದರು. ಆದರೆ ಅವರ ನಂತರ ಬಂದ ವೈಎಸ್‌ಆರ್ ಆಡಳಿತ ಮತ್ತು ಅವರ ಮನೆಯವರ ಭ್ರಷ್ಟತೆ ಇಂದು ನಾಯ್ಡುರವರನ್ನು ಅಲ್ಲಿ ಸಂತನನ್ನಾಗಿ ಮಾಡಿದೆಯೇನೊ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂದು ಇಡೀ ದೇಶದಲ್ಲಿ ತಮ್ಮ ಕುಟುಂಬದ ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು ಅತಿ ಹೆಚ್ಚು ಹಣ ಮತ್ತು ಬೇನಾಮಿ ಆಸ್ತಿ ಸಂಪಾದಿಸಿದ ರಾಜಕಾರಣಿ ಇದ್ದರೆ ಅದು ಜಗನ್‌ಮೋಹನ್ ರೆಡ್ಡಿ. ತನ್ನ ತಂದೆ ಮುಖ್ಯಮಂತ್ರಿಯಾಗಿದ್ದ ಕೇವಲ ಐದೂವರೆ ವರ್ಷಗಳಲ್ಲಿ ಈ ಮಟ್ಟದ ಅಕ್ರಮ ಆಸ್ತಿ ಮತ್ತು ರಾಜಕೀಯ ಬಲವನ್ನು ದೇಶದ ಇನ್ನೊಂದು ರಾಜಕೀಯ ಕುಟುಂಬ ಮಾಡಿರುವ ಸಾಧ್ಯತೆ ಕಮ್ಮಿ. ನಮ್ಮ ರಾಜ್ಯದ ಯಡ್ಡಯೂರಪ್ಪನವರಿಗಿಂತ ಹೆಚ್ಚಿನ ಮಟ್ಟದ ನಿರಂಕುಶತೆ ಮತ್ತು ಇನ್ನೂ ಹೆಚ್ಚಿನ ಸರ್ವಾಧಿಕಾರತ್ವ ಇದ್ದ ವ್ಯಕ್ತಿ ರಾಜಶೇಖರ ರೆಡ್ಡಿ. 2009ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋತಿದ್ದರೆ ಅದಕ್ಕೆ ಕಾರಣ ಅಲ್ಲಿ  ಕಾಂಗ್ರೆಸ್‌ನ ಹಣಕಾಸು ಸಂಪನ್ಮೂಲಗಳನ್ನು ಸರಿಗಟ್ಟಲಾಗದೆ ಹೋದದ್ದು. ರಾಜಶೇಖರ ರೆಡ್ಡಿ ಬದುಕಿದ್ದರೆ ಅವರು ಇಂದು ಎದುರಿಸಬಹುದಿದ್ದ ಸ್ಥಿತಿ ಬಹುಶಃ ನಮ್ಮ ರಾಜ್ಯದಲ್ಲಿ ಇಂದು ಯಡ್ಡಯೂರಪ್ಪ ಎದುರಿಸುತ್ತಿರುವ ಸ್ಥಿತಿಗಿಂತ ಭಿನ್ನವಿರುತ್ತಿರಲಿಲ್ಲ. ಮಗನ ಸ್ಥಾನದಲ್ಲಿ ಅಪ್ಪ-ಮಗ ಇಬ್ಬರೂ ಇರುತ್ತಿದ್ದರು. (ಇದನ್ನು ಅಷ್ಟು ಖಚಿತವಾಗಿ ಹೇಳಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಜನಾರ್ದನ ರೆಡ್ಡಿ, ರಾಜಶೇಖರ ರೆಡ್ಡಿ, ಜಗನ್‌ಮೋಹನ್ ರೆಡ್ಡಿ ಇವರ ಮೇಲೆಲ್ಲ ಸಿಬಿಐ ಈ ರೀತಿ ಎರಗಿ ಬೀಳುತ್ತಿತ್ತು ಎಂದು ಅಷ್ಟೇನೂ ಸ್ವಾಯತ್ತವಲ್ಲದ, ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷದ ಒಲವುಗಳನ್ನು ಅರಿತು ಕೆಲಸ ಮಾಡುವ ಸಿಬಿಐ ಸಂಸ್ಥೆಯ ಇತಿಹಾಸ ಅರಿತವರು ಹೇಳಲಾರರು. ಆದರೆ, ಸಿಬಿಐ ಇವೆಲ್ಲವನ್ನೂ ಮೀರಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭಗಳು ಬರುತ್ತವೆ.  ಉದಾಹರಣೆಗೆ, ಸುಪ್ರೀಮ್‌ಕೋರ್ಟ್ ಆದೇಶದ ಮೇರೆಗೆ, ಮತ್ತು ನಮ್ಮ ನ್ಯಾಯಾಂಗ ಭ್ರಷ್ಟವಾಗಿಲ್ಲದ ಸಂದರ್ಭದಲ್ಲಿ.)

ಇನ್ನು ನಮ್ಮ ರಾಜ್ಯದಲ್ಲಿ 2000 ದಿಂದೀಚೆಗೆ ನಡೆದಿರುವ ಭ್ರಷ್ಟಾಚಾರ ಗೊತ್ತಿರುವುದೆ. ಪ್ರತಿ ಮಂತ್ರಿ-ಮುಖ್ಯಮಂತ್ರಿಯೂ ಹಿಂದಿನ ಮಂತ್ರಿ-ಮುಖ್ಯಮಂತ್ರಿಯನ್ನು ಮೀರಿಸುತ್ತ ಬಂದರು. ಈ ಸ್ವಚ್ಛಂದ ಭ್ರಷ್ಟಾಚಾರದ ಪ್ರಯುಕ್ತವಾಗಿಯೇ ಒಮ್ಮೆ ರಾಜ್ಯದ ಐದು ಜನ ಶಾಸಕರು ಜೈಲಿನಲ್ಲಿ ಇದ್ದರು. ರಾಜ್ಯದ ಪುಣ್ಯವೋ ಪಾಪವೋ ಈಗ ಎಲ್ಲರೂ ಹೊರಗಿದ್ದಾರೆ. (ಇನ್ನೂ ಒಳಗಿರುವವರ ಶಾಸಕತ್ವ ಈಗಾಗಲೆ ಮುಗಿದಿದೆ, ಇಲ್ಲವೆ ಕೆಲವೇ ದಿನಗಳಲ್ಲಿ ಮುಗಿಯಲಿದೆ.)

ಒಂದು ರೀತಿಯಲ್ಲಿ ತಮಿಳುನಾಡಿನ ಜನರಿಗಿಂತ ನಮ್ಮ ರಾಜ್ಯದ ಮತ್ತು ಆಂಧ್ರಪ್ರದೇಶದ ಜನ ಕಮ್ಮಿ ನ್ಯಾಯವಂತಿಕೆ ತೋರಿಸುತ್ತಿದ್ದಾರೆ. ಅವರ ನ್ಯಾಯಾನ್ಯಾಯ ವಿವೇಚನೆಗೆ ರೋಗ ಬಡಿದಿರುವುದು ಜಾತಿ ಎಂಬ ಕ್ಷುದ್ರ ಆಲೋಚನೆಯಿಂದ. ಆಂಧ್ರದಲ್ಲಿ ಕೇವಲ  ಐದಾರು ಪ್ರತಿಶತ ಇರುವ ರೆಡ್ಡಿ ಜಾತಿಯ “ಜಾತಿವಾದಿ” ಜನ ಜಗನ್‌ಮೋಹನ್ ರೆಡ್ಡಿಯ ಪರ ನಿಂತಿರುವ ಹಾಗಿದೆ. ಅವರಿಗೆ ಎಲ್ಲಕ್ಕಿಂತ ಜಾತಿ ಮುಖ್ಯವಾಗಿದೆ. ಜಗನ್ ಬಂಧನ ಮುಂದಿನ ದಿನಗಳಲ್ಲಿ ಆತನಿಗೆ ಇನ್ನೂ ಹೆಚ್ಚಿನ ರಾಜಕೀಯ ಮತ್ತು ಜಾತಿ ಬಲ ತಂದುಕೊಟ್ಟರೂ ಆಶ್ಚರ್ಯಪಡುವ ಹಾಗೆ ಇಲ್ಲ. ಇನ್ನು ಒಂದೆರಡು ವಾರದಲ್ಲಿ ಅಲ್ಲಿ ನಡೆಯಲಿರುವ 18 ವಿಧಾನಸಭೆ ಮತ್ತು ಒಂದು ಲೋಕಸಭೆ ಉಪಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಆತನ ವೈಕಾಪಾ (ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ) ಗೆದ್ದರೆ ಆಶ್ಚರ್ಯಪಡುವಂತಹುದ್ದೇನೂ ಇಲ್ಲ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಸುಮಾರು 14-15 ಪ್ರತಿಶತ ಇರುವ ಲಿಂಗಾಯತ ಜಾತಿಯ “ಜಾತಿವಾದಿ” ಜನ ಯಡ್ಡಯೂರಪ್ಪನವರ ಪರ ಇರುವಂತೆ ತೋರಿಸುತ್ತಿದ್ದಾರೆ. ಉಗಿಸಿಕೊಳ್ಳಲೂ ಯೋಗ್ಯರಲ್ಲದ, ಬಸವಣ್ಣನ ಹೆಸರು ಹೇಳಲೂ ಅರ್ಹರಲ್ಲದ ಕೆಲವು ಹೀನ ಮಠಾಧೀಶರಂತೂ ಈ ಸಮುದಾಯದ ಸಾಂಘಿಕ ಮತ್ತು ಸಮಷ್ಟಿ ನ್ಯಾಯಪ್ರಜ್ಞೆಯನ್ನೇ ಅವಮಾನ ಮಾಡುತ್ತಿದ್ದಾರೆ. ಕೆಲವು ನಿವೃತ್ತ ನ್ಯಾಯಾಧೀಶರೂ ಜಾತಿ ಕಾರಣಕ್ಕೆ ತಮ್ಮ ನ್ಯಾಯದ ಪರಿಕಲ್ಪನೆಯನ್ನೇ ಬದಲಾಯಿಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ರುಜುವಾತಾದರೂ ಹಲವು ಕ್ಷೇತ್ರಗಳಲ್ಲಿ ಯಡ್ಡಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಜಾತಿವಾದಿಗಳು ಗೆಲ್ಲಿಸುವ ಮತ್ತು ಅವರ ವಿರೋಧಿಗಳನ್ನು ಸೋಲಿಸುವ ಎಲ್ಲಾ ಸಾಧ್ಯತೆಗಳೂ ಇವೆ.  ಜಾತಿವಾದಿಗಳಿಗೆ ತಮ್ಮ ಜಾತಿಯ ಮುಖಂಡನೊಬ್ಬ ಮಾಡಿದ ಭ್ರಷ್ಟಾಚಾರ ಭ್ರಷ್ಟಾಚಾರ ಅಲ್ಲವೇ ಅಲ್ಲ. ಬೇರೆ ಜಾತಿಯವನು ಮಾಡಿದರೆ ಮಾತ್ರ ಅದು ಭ್ರಷ್ಟಾಚಾರ.

ನೆನ್ನೆಯ ಬಂಧನ ನನ್ನನ್ನೂ ಒಳಗೊಂಡಂತೆ ದೇಶದ ಅನೇಕ ಪ್ರಜಾಪ್ರಭುತ್ವ ಪ್ರೇಮಿಗಳಲ್ಲಿ ಒಂದಿಷ್ಟು ಸಂತಸ ತಂದಿರಬಹುದು. ಆದರೆ, ಈಗಾಗಲೆ ಇಂತಹ ಹಲವಾರು ಬಂಧನಗಳು ಆಗಿಹೋಗಿವೆ. ಇವರು ಜೈಲಿನಿಂದ ಹೊರಗೆ ಬಂದಾಗ ಆರತಿ ಬೆಳಗಿ ವೀರೋಚಿತ ಸ್ವಾಗತಗಳು ಸಿಗುತ್ತವೆ. ಈ ನೆನಪು ಮತ್ತು ವಾಸ್ತವವೇ ನಮ್ಮೆಲ್ಲರನ್ನು ಒಂದೆಡೆಗೆ ಕಾರ್ಯೋನ್ಮುಖರಾಗಲು ಎಳೆಯಬೇಕು. ಆದರೆ ಎಲ್ಲಕ್ಕಿಂತ ಸುಲಭವಾಗಿ ಇದು ನಮ್ಮನ್ನು ಸಿನಿಕರನ್ನಾಗಿ ಮಾಡುತ್ತಿದೆ.

ಏನಾಗಬೇಕು ಎಂದು ಗೊತ್ತಿರುವವರು ಇಲ್ಲಿ ಅನೇಕರಿದ್ದಾರೆ. ಹೇಗೆ ಮಾಡಬೇಕು ಎಂದು ತೋರಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇಶದ ಪ್ರಜೆಗಳಲ್ಲಿ ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ ಬೆಳೆಯದ ಹೊರತು ಇಲ್ಲಿ ಗುಣಾತ್ಮಕ ಪರಿಣಾಮಗಳು ಮತ್ತು ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಅಂತಹ ಪರಿವರ್ತನೆಯನ್ನು ಸಾಧ್ಯವಾಗಿಸಿಕೊಳ್ಳುವುದು ಹೇಗೆ?

ಪ್ರಸಕ್ತ ಭಾರತದಲ್ಲಿ ರಾಷ್ಟ್ರೀಯ ನಾಯಕರ ಕೊರತೆ

-ಆನಂದ ಪ್ರಸಾದ್

ವರ್ತಮಾನ ಕಾಲದ ಭಾರತದ ರಾಜಕೀಯವನ್ನು ನೋಡಿದರೆ ರಾಷ್ಟ್ರೀಯ ನಾಯಕರಿಲ್ಲದೆ ದೇಶವು ಬಳಲುತ್ತಿದೆ. ಒಂದು ದೇಶವು ಅಭಿವೃದ್ಧಿಯಾಗಬೇಕಾದರೆ ದೂರದೃಷ್ಟಿಯುಳ್ಳ ರಾಷ್ಟ್ರೀಯ ನಾಯಕರು ಇರಬೇಕು. ದೇಶದ ಸಾಂಸ್ಕೃತಿಕ, ರಾಜಕೀಯ, ವೈಜ್ಞಾನಿಕ ಹಿನ್ನೆಲೆಯ ಅರಿವು ರಾಷ್ಟ್ರೀಯ ನಾಯಕರಿಗೆ ಇರಬೇಕು. ರಾಷ್ಟ್ರೀಯ ನಾಯಕರಿಗೆ ದೇಶದ ಜನತೆಯ ಜೊತೆ ನೇರ ಸಂಪರ್ಕ ಇರಬೇಕು. ಇಡೀ ದೇಶದಲ್ಲಿ ಆಗಾಗ ಪ್ರವಾಸ ಕೈಗೊಂಡು ಅಲ್ಲಿನ ಜನರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಚಾಕಚಕ್ಯತೆ ಹಾಗೂ ಮನಸ್ಸು ಇರಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ ಇಂದು ಭಾರತದಲ್ಲಿ ರಾಷ್ಟ್ರೀಯ ನಾಯಕರು ಯಾವ ಪಕ್ಷದಲ್ಲಿಯೂ ಇರುವಂತೆ ಕಾಣುವುದಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ನಾಯಕರು ಎನಿಸಿಕೊಂಡವರು ಪ್ರಚಾರಕ್ಕೆ ಬರುವುದನ್ನು ಬಿಟ್ಟರೆ ಉಳಿದ ಸಮಯದಲ್ಲಿ ಯಾವುದೇ ನಾಯಕರು ರಾಷ್ಟ್ರ ಸಂಚಾರ ಮಾಡುತ್ತಿರುವುದು ಕಂಡು ಬರುವುದಿಲ್ಲ. ಹೀಗಾಗಿ ಇಂದಿನ ನಮ್ಮ ರಾಷ್ಟ್ರೀಯ ಪಕ್ಷಗಳು ಎನಿಸಿಕೊಂಡ ಪಕ್ಷಗಳಿಗೂ ರಾಷ್ಟ್ರದ ಮೂಲಭೂತ ಸಮಸ್ಯೆಗಳ ಅರಿವು ಇಲ್ಲ ಮತ್ತು ನೆಲದ ಜೊತೆ ಸಂಪರ್ಕವೇ ಇಲ್ಲ. ಹೀಗಾಗಿ ಇಡೀ ದೇಶಕ್ಕೆ ನಾಯಕತ್ವ ನೀಡಬಲ್ಲ ಮುತ್ಸದ್ಧಿಗಳ ಕೊರತೆ ಇದೆ.

ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿರುವ ಸೋನಿಯಾ ಗಾಂಧಿಯವರಿಗೆ ಜನರ ನೇರ ಸಂಪರ್ಕ ಇರುವಂತೆ ಕಾಣುವುದಿಲ್ಲ. ಭವಿಷ್ಯದ ನಾಯಕ ಎಂದು ಕಾಂಗ್ರೆಸ್ ಬಿಂಬಿಸುತ್ತಿರುವ ರಾಹುಲ್ ಗಾಂಧಿಗೂ ಜನತೆಯ ನೇರ ಸಂಪರ್ಕ ಇಲ್ಲ. ಹೀಗಾದರೆ ಒಂದು ರಾಷ್ಟ್ರೀಯ ಪಕ್ಷ ಬೆಳೆಯುವುದಾದರೂ ಹೇಗೆ? ದೇಶದ ಹಾಗೂ ರಾಜ್ಯದ ಆಗುಹೋಗುಗಳನ್ನು ತನ್ನ ಸುತ್ತ ಕಟ್ಟಿಕೊಂಡ ಒಂದಿಷ್ಟು ಮಂದಿಯ ಮೂಲಕವೇ ಅರಿಯುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದಲ್ಲಿದೆ. ಹೀಗಾದಾಗ ನಿಜ ಸ್ಥಿತಿ ಏನೆಂದು ತಿಳಿಯುವ ಸಂಭವ ಕಡಿಮೆ. ತನ್ನ ಸುತ್ತ ಮುತ್ತ ಇರುವ ಮಂದಿ ಹೇಳಿದ್ದೇ ನಿಜ ಎಂಬ ಪರಿಸ್ಥಿತಿ ಇದರಿಂದ ರೂಪುಗೊಳ್ಳುತ್ತದೆ. ಪಕ್ಷದ ಅಧ್ಯಕ್ಷರಾಗಿರುವವರು ತಾನೇ ಸ್ವತಹ: ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಣಯ ತೆಗೆದುಕೊಳ್ಳದೆ ಹೋದರೆ ರಾಷ್ಟ್ರೀಯ ನಾಯಕತ್ವ ಬೆಳೆಯಲಾರದು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಾಗ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟು ಅಲ್ಲಿನ ಆಗುಹೋಗುಗಳನ್ನು ತಿಳಿಯುತ್ತಾ ಸ್ಥಳೀಯ ನಾಯಕರಿಗೆ ಸಲಹೆ ಸೂಚನೆ ಕೊಡುವುದು ಮತ್ತು ಪಡೆಯುವುದು ಮಾಡುವುದರಿಂದ ರಾಜ್ಯಗಳಲ್ಲಿ ಪಕ್ಷ ಬಲವರ್ಧನೆಗೊಳ್ಳಬಹುದು ಮತ್ತು ಹೀಗೆ ಮಾಡುವುದರಿಂದ ದೇಶದ ಎಲ್ಲೆಡೆ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಲು ಸಾಧ್ಯ. ಕಾಂಗ್ರೆಸ್ ಪಕ್ಷದ ವೆಬ್‍ಸೈಟ್ ನೋಡಿದರೆ ಅಲ್ಲಿಯೂ ಜನರ ಜೊತೆ ನೇರ ಸಂಪರ್ಕಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಜನರು ದೇಶದ ಯಾವುದೇ ಭಾಗದಿಂದಾದರೂ ತಮ್ಮ ಸಲಹೆ, ಸೂಚನೆ, ಸಮಸ್ಯೆಗಳನ್ನು ಪಕ್ಷಕ್ಕೆ ಹಾಗೂ ಪಕ್ಷದ ಅಧ್ಯಕ್ಷರಿಗೆ ತಿಳಿಸಲು ವ್ಯವಸ್ಥೆಯನ್ನು ಒಂದು ಉತ್ತಮ ಪಕ್ಷವು ಮಾಡಬೇಕು ಮತ್ತು ಜನರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಬೇಕು. ಹೀಗೆ ಮಾಡುವುದರಿಂದ ಪಕ್ಷದ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಬೆಳೆಯಲು ಸಾಧ್ಯ.

ಬಿಜೆಪಿ ಎಂಬ ಇನ್ನೊಂದು ರಾಷ್ಟ್ರೀಯ ಪಕ್ಷದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿಯೂ ಪಕ್ಷದ ಅಧ್ಯಕ್ಷರಿಗೆ ರಾಜ್ಯಗಳ ಜೊತೆ ನೇರ ಸಂಪರ್ಕ ಇಲ್ಲ. ಅದರ ವೆಬ್‍ಸೈಟ್‍ನಲ್ಲೂ ಜನರು ನೇರವಾಗಿ ಸಂಪರ್ಕಿಸುವ ವ್ಯವಸ್ಥೆ ಇಲ್ಲ. ಬಿಜೆಪಿಯಲ್ಲಿಯೂ ರಾಷ್ಟ್ರೀಯ ನಾಯಕರ ಅಭಾವ ಇದೆ. ಉಳಿದಂತೆ ಕೆಲವು ಪಕ್ಷಗಳು ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಇದ್ದರೂ ಅವುಗಳ ಪ್ರಭಾವ ಪ್ರಾದೇಶಿಕ ಮಾತ್ರವೇ ಆಗಿದೆ. ಹೀಗಾಗಿ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳು ಇಲ್ಲವೆಂದೇ ಹೇಳಬಹುದು. ಈ ಎರಡೂ ಪಕ್ಷಗಳ ನೀತಿಯೂ ಉದಾರೀಕರಣದ ನಂತರ ಒಂದೇ ಆಗಿದೆ ಎಂಬ ದೂರು ಇದೆ. ಹೀಗಾಗಿ ಇವುಗಳನ್ನು ಬಿಟ್ಟು ಇನ್ನೊಂದು ಪರ್ಯಾಯ ರಾಷ್ಟ್ರೀಯ ಪಕ್ಷ ಇಲ್ಲದಿರುವುದರಿಂದ ಜನರಿಗೆ ಆಯ್ಕೆಯೇ ಇಲ್ಲದಂತೆ ಆಗಿದೆ. ತೃತೀಯ ರಂಗ ಎಂದು ರೂಪುಗೊಳ್ಳಬಹುದಾದ ಒಂದು ರಂಗದಲ್ಲಿ ರಾಷ್ಟ್ರೀಯ ವರ್ಚಸ್ಸಿನ ನಾಯಕರು ಕಾಣಿಸುತ್ತಿಲ್ಲ. ಇರುವ ನಾಯಕರೆಲ್ಲರೂ ಪ್ರಾದೇಶಿಕ ರಾಜಕೀಯಕ್ಕೆ ಸೀಮಿತವಾಗಿರುವುದರಿಂದಾಗಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದು ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟುಗೂಡಿಸಿ ಸಂಭಾಳಿಸಿಕೊಂಡು ಹೋಗುವುದು ಸಾಧ್ಯವಾಗದ ಒಂದು ಪರಿಸ್ಥಿತಿ ಇದೆ. ಇಂಥ ಸ್ಥಿತಿ ಇರುವುದರಿಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಅಸಾಧ್ಯವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ಬಹಳಷ್ಟು ರಾಷ್ಟ್ರೀಯ ನಾಯಕರು ರೂಪುಗೊಂಡಿದ್ದರು. ಗಾಂಧಿ, ನೆಹರೂ, ಪಟೇಲ್ ಮೊದಲಾದ ನಾಯಕರು ರಾಷ್ಟ್ರದಲ್ಲಿ ಆಗಾಗ ಪ್ರವಾಸ ಮಾಡುತ್ತಾ ಜನರ ಜೊತೆ ನೇರ ಸಂಪರ್ಕ ಇರಿಸಿಕೊಂಡ ಕಾರಣ ಇಡೀ ರಾಷ್ಟ್ರದಲ್ಲಿ ಅವರಿಗೆ ವರ್ಚಸ್ಸು ಇತ್ತು. ಇಂದು ಅಂಥ ರಾಷ್ಟ್ರೀಯ ನಾಯಕರು ಇಲ್ಲದೆ ಹೋಗಿರುವುದರಿಂದಾಗಿಯೇ ಪ್ರಾದೇಶಿಕ ಪಕ್ಷಗಳು ಬೆಳೆದು ರಾಷ್ಟ್ರೀಯ ಹಿತಾಸಕ್ತಿಗಳು ಮರೆಯಾಗಿ ಪ್ರಾದೇಶಿಕ ಹಿತಾಸಕ್ತಿಗಳು ತಾಂಡವವಾಡುತ್ತಿದ್ದು ದೇಶದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆಯೇ ರೂಪುಗೊಳ್ಳದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲ ವಾಪಾಸ್ ಪಡೆಯುವ ಬೆದರಿಕೆ ಹಾಕಿ ತಮ್ಮ ರಾಜ್ಯಕ್ಕೆ ಮಾತ್ರ ಅನುಕೂಲ ಮಾಡಿಕೊಂಡು ಉಳಿದ ರಾಜ್ಯಗಳನ್ನು ಕಡೆಗಣಿಸುವ ಪ್ರವೃತ್ತಿಯಿಂದಾಗಿ ಮೈತ್ರಿರಂಗದ ರಾಜಕೀಯ ದೇಶದಲ್ಲಿ ಅಸಮಾನತೆಯನ್ನು ಹುಟ್ಟು ಹಾಕಲು ಕಾರಣವಾಗಿದೆ. ಇಂಥ ಪ್ರವೃತ್ತಿ ರಾಷ್ಟ್ರ ಹಿತಕ್ಕೆ ಮಾರಕ ಎಂಬುದರಲ್ಲಿ ಸಂದೇಹವಿಲ್ಲ. ಇಂಥ ಪ್ರವೃತ್ತಿಯಿಂದ ಹೊರಬರಬೇಕಾದರೆ ರಾಷ್ಟ್ರೀಯ ಪಕ್ಷಗಳನ್ನು ಜನರು ಬೆಂಬಲಿಸಬೇಕಾದ ಅಗತ್ಯ ಇದೆ.

ಅಲ್ಲದೆ ದೇಶದಲ್ಲಿ ಈಗ ಇರುವ ಎರಡು ಪ್ರಧಾನ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಇನ್ನೂ ಒಂದು ರಾಷ್ಟ್ರವ್ಯಾಪಿ ಪಕ್ಷವನ್ನು ರೂಪಿಸಬೇಕಾದ ಅಗತ್ಯ ಇದೆ ಅಥವಾ ಈಗ ಇರುವ ಪ್ರಾದೇಶಿಕ ಪಕ್ಷಗಳು ಸ್ಪಷ್ಟವಾದ ಸೈದ್ದಾಂತಿಕ ಆಧಾರದಲ್ಲಿ ಒಂದು ರಾಷ್ಟ್ರೀಯ ರಂಗವನ್ನು ರಚಿಸಿಕೊಂಡು ಚುನಾವಣೆಗಳಲ್ಲಿ ಸಾಮಾನ್ಯ ಪ್ರಣಾಳಿಕೆಯಡಿಯಲ್ಲಿ ಒಟ್ಟಾಗಿ ಹೋರಾಡಿ ಒಂದು ರಾಷ್ಟ್ರೀಯ ಸರ್ಕಾರ ರೂಪಿಸುವ ಪರಿಸ್ಥಿತಿ ಬರುವಂತೆ ಮಾಡಬೇಕಾದ ಅಗತ್ಯ ಇದೆ. ಇಂಥ ರಾಷ್ಟ್ರೀಯ ರಂಗವನ್ನು ರಚಿಸುವಾಗಲೇ ಸಂಕುಚಿತ ಪ್ರಾದೇಶಿಕ ಬೇಡಿಕೆಗಳಿಗಾಗಿ ಬೆಂಬಲ ವಾಪಸ್ ಪಡೆಯಲು ಅವಕಾಶ ನೀಡದಂಥ ಒಂದು ಪ್ರಣಾಳಿಕೆಯನ್ನು ರಚಿಸಬೇಕಾಗುತ್ತದೆ ಮತ್ತು ಅದಕ್ಕೆ ಎಲ್ಲರೂ ಬದ್ಧರಾಗಿ ನಡೆದುಕೊಳ್ಳುವ ಲಿಖಿತ ದಾಖಲೆಯ ಭರವಸೆಯನ್ನು ಪಡೆದುಕೊಳ್ಳುವಂತೆ ಮಾಡಬೇಕಾದ ಅಗತ್ಯ ಇದೆ.

(ಚಿತ್ರಕೃಪೆ: ವಿಕಿಪೀಡಿಯ)

ಅಪಪ್ರಚಾರದ ಪತ್ರಿಕೋದ್ಯಮ, ನಕ್ಸಲ್ ಹಣೆಪಟ್ಟಿ ಕಟ್ಟಲು ಅತ್ಯುತ್ಸಾಹ

ಸದಾನಂದ ಕೋಟ್ಯಾನ್

ತಪ್ಪು ಮಾಡುವುದು ಮಾನವನ ಸಹಜ ಗುಣ. ಆದರೆ ನಮ್ಮ ಸಮಾಜದಲ್ಲಿ ತಪ್ಪು ಮಾಡದೇ ಇರುವವರನ್ನು ತಪ್ಪು ದಾರಿಗೆ ಎಳೆಯವ ಜನ ಕೂಡಾ ಕಡಿಮೆ ಇಲ್ಲ. ಇಂತಹ ಪಾತ್ರವನ್ನು ಉದಯವಾಣಿ ಸಮರ್ಥವಾಗಿ ನಿಭಾಯಿಸಿದೆ. ಎಲ್ಲೋ ಕಾಡಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಹೊರಟ ಹುಡುಗನೊಬ್ಬನಿಗೆ ಈ ಕಾಡಲ್ಲಿ ಹುಟ್ಟಿದ್ದೇ ತಪ್ಪಾಯ್ತು ಅನ್ನಿಸುವ ಮಟ್ಟಿಗೆ ಪೊಲೀಸರಿಗಿಂತಲೂ ಉದಯವಾಣಿ ಕಾಟ ಕೊಡುತ್ತಿದೆ. ವಿನಾಕಾರಣ ಪೊಲೀಸರ ಅತಿಥಿಯಾಗಿರುವ ಕುತ್ಲೂರಿನ ವಿಠ್ಠಲ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಈತ ಹನ್ನೊಂದು ವರ್ಷದ ಮಗುವಾಗಿರುವಾಗಲೇ ನಕ್ಸಲರ ಸಮಾವೇಶದಲ್ಲಿ ಭಾಗವಸಿದ್ದ ಎಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿದೆ. ಯಾರೂ ಊಹೆ ಮಾಡಲೂ ಸಾದ್ಯವಾಗದ ಮಾಹಿತಿ ತಮಗೆ ಸಿಕ್ಕಿದೆ ಅನ್ನುವ ರೀತಿಯಲ್ಲಿ ಕತೆ ಹೇಳುವ ಈ ಪತ್ರಿಕೆಗೆ ಕನಿಷ್ಠ ಪ್ರಜ್ಞೆಯಾದರೂ ಇರಬೇಕಿತ್ತು.

ನಕ್ಸಲ್ ಬೆಂಬಲಿಗ ಎಂಬ ಆರೋಪ ಹೊರಿಸಿ ನಕ್ಸಲ್ ನಿಗ್ರಹ ದಳದ ಪೊಲೀಸರು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಪತ್ರಿಕೋಧ್ಯಮ ವಿದ್ಯಾರ್ಥಿಯನ್ನು ಬಂಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವನ್ನು ಸರ್ಕಾರ ನಕ್ಸಲ್ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಕುತ್ಲೂರು ಗ್ರಾಮದಲ್ಲಿ ಈಗ 22 ಮನೆಗಳಿದ್ದು, ಎಲ್ಲಾ ಕುಟುಂಬಗಳು ಮಲೆಕುಡಿಯ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು. ಕಾಡಿನೊಳಗೆ ಊರನ್ನು ಹೊಂದಿರುವ ಈ ಗ್ರಾಮದಲ್ಲಿ ಎಸ್ಎಸ್ಎಲ್‍ಸಿ ಪಾಸು ಮಾಡಿದ ಹುಡುಗನೆಂದರೆ ಅದು ವಿಠ್ಠಲ ಮಾತ್ರ. ಬಸ್ಸು ಇಳಿದು ದಟ್ಟ ಕಾಡಿನಲ್ಲಿ ಮೂರು ಗಂಟೆ ನಡೆಯಬೇಕಿರುವ ಈ ಗ್ರಾಮದ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ವಿಠ್ಠಲ ಪರಿಚಿತನಾಗಿದ್ದ. ವಿಠ್ಠಲನ ಓದುವ ಆಶೆಯನ್ನು ಅರಿತು ಮಂಗಳೂರು ನಗರಕ್ಕೆ ಕರೆದುಕೊಂಡು ಬಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋಧ್ಯಮ ವಿಭಾಗಕ್ಕೆ ಪ್ರವೇಶಾತಿಗಳನ್ನು ಮಾಡಿಸಿದ್ದೇ ಮಂಗಳೂರಿನ ಪತ್ರಕರ್ತರು. ಆನಂತರ ವಿಠ್ಠಲ ಹಿಂತಿರುಗಿ ನೋಡಿದ್ದೇ ಇಲ್ಲ. ನೂರು ಶೇಕಡಾ ಹಾಜರಾತಿಯನ್ನು ಹೊಂದಿರುವ ವಿಠ್ಠಲ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಎರಡು ತಿಂಗಳಿನಿಂದ ಶೇಕಡಾ 80ಕ್ಕಿಂತಲೂ ಅಧಿಕ ಹಾಜರಾತಿಯನ್ನು ಹೊಂದಿದ್ದಾನೆ ಎಂದು ವಿವಿ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ಡಾ.ವಹಿದಾ ಸುಲ್ತಾನ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. (ದಾಖಲೆಗಳು ಇವೆ)

ಉಡುಪಿ ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯ ಪ್ರಯುಕ್ತ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದ ಪೊಲೀಸರು ಬಿಗಿಯಾದ ನಕ್ಸಲ್ ಕೂಂಬಿಂಗ್ ನಡೆಸುತ್ತಿದ್ದರು. ಕುತ್ಲೂರು ಗ್ರಾಮಕ್ಕೂ ಎಎನ್ಎಫ್ ಸಿಬ್ಬಂದಿ ಬಂದಿದ್ದರು. ಎಲ್ಲಾ ಮಲೆಕುಡಿಯ ಕುಟುಂಬಗಳ ಮನೆಗೆ ತೆರಳಿದ ಎಎನ್ಎಫ್ ಸಿಬ್ಬಂದಿಗಳು ರಾತ್ರಿಯಾಗುತ್ತಿದ್ದಂತೆ ವಿಠ್ಠಲನ ಮನೆಯಲ್ಲಿ ಉಳಿದುಕೊಂಡರು. ಅಲ್ಲೇ ವಿಠ್ಠಲನ ತಾಯಿಯಿಂದ ಅಡುಗೆ ಮಾಡಿಸಿ ಉಂಡ ಎಎನ್ಎಫ್ ಸಿಬ್ಬಂದಿಗೆ ಅದೇನು ಅನ್ನಿಸಿತೋ ಗೊತ್ತಿಲ್ಲ, ರಾತ್ರೋ ರಾತ್ರಿ ಎದ್ದು ವಿಠ್ಠಲನ ತಂದೆ ನಿಂಗಣ್ಣ ಮಲೆಕುಡಿಯರ ವಿಚಾರಣೆಗೆ ತೊಡಗಿದರು. ನಕ್ಸಲರ ಬಗ್ಗೆ ಏನೇನೂ ಗೊತ್ತಿಲ್ಲದ ವೃದ್ದ ವಿಠ್ಠಲನ ತಂದೆಯ ಕಾಲು ಮುರಿಯುವವರೆಗೆ ಹೊಡೆದರು. ಮರುದಿನ ಮಂಗಳೂರು ಹಾಸ್ಟೆಲ್‍ನಲ್ಲಿದ್ದ ವಿಠ್ಠಲ್‍ಗೆ ವಿಷಯ ತಿಳಿದು ತಂದೆಯನ್ನು ನೋಡಲು ಮನೆಗೆ ಬಂದಾಗ ವಿಠ್ಠಲ್‍ನನ್ನೂ ಬಂಧಿಸಿ ವೇಣೂರು ಠಾಣೆಗೆ ಕರೆದೊಯ್ದರು. ತಂದೆಯ ಕಾಲು ಮುರಿದಿದ್ದನ್ನು ಪತ್ರಕರ್ತರ ಮಧ್ಯೆ ಇರುವ ಪತ್ರಿಕೋಧ್ಯಮದ ವಿದ್ಯಾರ್ಥಿ ವಿಠ್ಠಲ್ ಸುಧ್ಧಿ ಮಾಡಿಸುತ್ತಾನೆ ಎಂಬ ಮುಂದಾಲೋಚನೆಯಿಂದ ಎಎನ್ಎಫ್ ಪೊಲೀಸರು ವಿಠ್ಠಲನನ್ನು ಬಂಧಿಸಿದ್ದಾರೆ. ಮತ್ತೆ ಎಎನ್ಎಫ್ ಸಿಬ್ಬಂದಿಗಳೇ ಆತನ ತಂದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಶುರುವಾಯಿತು ಉದಯವಾಣಿ ಟಾರ್ಚರ್

ವಿವಿ ವಿದ್ಯಾರ್ಥಿ ವಿಠ್ಠಲ್ ಬಗ್ಗೆ ಎಲ್ಲಾ ಪತ್ರಕರ್ತರಿಗೂ ಗೊತ್ತು. ಆತನ ಬಂಧನದ ನಂತರ ಎಲ್ಲಾ ಪತ್ರಿಕೆಗಳು ವಿಠ್ಠಲ್ ಪರವಾಗಿಯೇ ಸುದ್ಧಿ ಮಾಡಿದವು. ಪೊಲೀಸರು ವಿನಾಕಾರಣ ತಂದೆಯನ್ನು ನೋಡಲು ಹೋದ ಹಾಸ್ಟೆಲ್ ವಾಸಿ ವಿದ್ಯಾರ್ಥಿಯನ್ನು ನಕ್ಸಲ್ ಬೆಂಬಲಿಗ ಎಂದು ಹಣೆಪಟ್ಟಿ ಕಟ್ಟಿ ಆತನ ಭವಿಷ್ಯ ಹಾಳು ಮಾಡಿದರು ಎಂದೇ ಬರೆದವು. ಆದರೆ ಪ್ರಾರಂಭದಿಂದಲೂ ಉದಯವಾಣಿ ಮಾತ್ರ ಪೊಲೀಸರ ಪರವಾಗಿಯೇ ವರದಿಗಳನ್ನು ಬರೆಯಲಾರಂಭಿಸಿತು. ಜೈಲಿನಲ್ಲಿರುವ ವಿಠ್ಠಲನೇ ಹೇಳುವ ಪ್ರಕಾರ ಪೊಲೀಸ್ ಕಸ್ಟಡಿಯಲ್ಲಿದ್ದ ವಿಠ್ಠಲ್‍ಗೆ ಪೊಲೀಸರು ಕನಿಷ್ಠ ಲಾಠಿಯಿಂದಲೂ ಹೊಡೆದಿಲ್ಲವಂತೆ. ಆದರೆ ಉದಯವಾಣಿ ಮಾತ್ರ ಕೊಟ್ಟ ಹಿಂಸೆ ಎಂತಹ ಪೊಲೀಸ್ ಟಾರ್ಚರನ್ನೂ ಮೀರಿಸುವಂತದ್ದು.

ವೃದ್ಧೆ ತಾಯಿಯನ್ನೂ ಬಿಡದ ವರದಿ

ವರದಿಯ ಪ್ರಾರಂಭದಲ್ಲಿ ವಿಠ್ಠಲ್‍ನ ವೃದ್ದೆ ತಾಯಿಯನ್ನು ಟೀಕೆ ಮಾಡಿ ಬರೆಯಲಾಗಿದೆ. “ಈತನ ತಾಯಿ ಕೂಡಾ ನಕ್ಸಲರೆಂದರೆ ಯಾರು ಎಂಬುದು ನಮಗೆ ಗೊತ್ತಿಲ್ಲ ಎಂದು ಗೋಳಾಡಿದ್ದರು………'” ಎಂದಿದೆ. ವಿಠ್ಠಲನ ತಾಯಿಯನ್ನು ನೋಡಿದರೆ ಅಳು ಬರುವ ರೀತಿಯಲ್ಲಿ ಅವರಿದ್ದಾರೆ. ತಾಯಿ ಹೃದಯ ಬಲ್ಲ ಎಂತವನೂ ಈ ರೀತಿ ವೃದ್ಧ ತಾಯಿಯ ಬಗ್ಗೆ ಬರೆಯಲಾರ. (ತಾಯಿಯ ಫೋಟೋ ನೋಡಿ) ಕಾಡಿನಲ್ಲಿ ಹುಟ್ಟಿ, ಕಾಡುತ್ಪತ್ತಿ ಸಂಗ್ರಹಿಸಿ ಬೆಳೆದ ವಿಠ್ಠಲನ ತಾಯಿ ಹೊನ್ನಮ್ಮರಿಗೆ ತುಳು ಭಾಷೆ ಬಿಟ್ಟು ಬೇರೇನೂ ತಿಳಿಯದು. ಅವರು ಮಾತನಾಡಿದ್ದು ಕೇಳಬೇಕೆಂದರೆ ಅವರ ಮುಖದ ಹತ್ತಿರ ನಮ್ಮ ಕಿವಿಯನ್ನು ಕೊಂಡೊಯ್ಯಬೇಕಾಗುತ್ತದೆ. ಉದಯವಾಣಿ ವರದಿಗಾರ ಬೆಳ್ತಂಗಡಿಯಲ್ಲಿ ಆ ಅಮ್ಮನ ಬಳಿ ಮಾತನಾಡಿದ್ದೂ ಅದೇ ರೀತಿ. ಕಾಲೇಜು ದಾಖಲೆಗಳನ್ನು ಪಡೆಯಲು ಮಂಗಳೂರಿಗೆ ಕರೆ ತಂದಿದ್ದ ಈ ತಾಯಿಯನ್ನು ಮಗನನ್ನು ನೋಡಲು ಜೈಲಿಗೆ ಕರೆದುಕೊಂಡು ಬಂದರೆ “ಉಂದು ಎನ್ನ ಮಗೆ ಕಲ್ಪುನ ಶಾಲೆನಾ” (ಇದು ನನ್ನ ಮಗ ಕಲಿಯುತ್ತಿರುವ ಶಾಲೆಯ?) ಅಂತ ಕೇಳುತ್ತಾರೆ. ಇಂತವರು ಗೋಳಾಡಿ ನಾಟಕ ಮಾಡಲು ಸಾದ್ಯಾನಾ ಎಂಬ ಕನಿಷ್ಠ ಮಾನವೀಯ ಮುಖವಾದರೂ ಪತ್ರಕರ್ತರಿಗೆ ಇರಬೇಕಲ್ವೇ..

ಮಗುವಾಗಿದ್ದಾಗಲೇ ನಕ್ಸಲರ ಆಹ್ವಾನ !

ವಿಠ್ಠಲ ಮಗುವಾಗಿದ್ದಾಗಲೇ ನಕ್ಸಲರಿಂದ ಆಹ್ವಾನ ಪಡೆದಿದ್ದ ಎಂಬ ಎಕ್ಸ್‌ಕ್ಲೂಸಿವ್ ವರದಿಯನ್ನು ಉದಯವಾಣಿ ಪ್ರಕಟಿಸಿದೆ. “2001 ರಲ್ಲಿ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರಿನಲ್ಲಿ ನಡೆದ ನಕ್ಸಲರ ಸಮಾವೇಶದಲ್ಲಿ ವಿಠ್ಠಲ ಭಾಗವಹಿಸಿದ್ದ. ಅದೂ ನಕ್ಸಲರ ಆಹ್ವಾನದ ಮೇರೆಗೆ!” ಎಂದು ಆಶ್ಚರ್ಯ ಸೂಚನ ಚಿನ್ಹೆಯನ್ನು ಹಾಕಿದೆ. ಪೊಲೀಸ್ ಎಫ್ಐಆರ್ ಮತ್ತು ವಿವಿ ದಾಖಲೆಗಳ ಪ್ರಕಾರ ಈಗ ವಿಠ್ಠಲನಿಗೆ 23 ವರ್ಷ. 2001 ರಲ್ಲಿ ಆತನಿಗೆ 12 ವರ್ಷ ಆಗಿರಬಹುದು. ಅಂದರೆ ಆರನೇ ತರಗತಿ ವಿದ್ಯಾರ್ಥಿ ನಕ್ಸಲ್ ಸಮಾವೇಶದಲ್ಲಿ ಭಾಗವಹಿಸಿದ್ದ. ಶಾಲಾ ಬಾಲಕನೊಬ್ಬ ನಕ್ಸಲ್ ಸಮಾವೇಶದಲ್ಲಿ ಭಾಗವಹಿಸಲು ನಕ್ಸಲರು ಸಮಾವೇಶವನ್ನೇನು ಊರ ಜಾತ್ರೆಯ ಹೊರಾಂಗಣದಲ್ಲಿ ಚಪ್ಪರ ಹಾಕಿ ಮಾಡ್ತಾರಾ? ಸೈದ್ದಾಂತಿಕವಾಗಿ ಗನ್ನು ಹಿಡಿದು ವ್ಯವಸ್ಥೆಯ ವಿರುದ್ಧ (ಕೆಟ್ಟ) ಹೋರಾಟ ಮಾಡುತ್ತಿರುವ ನಕ್ಸಲರು ನೀಲಿ ಬಿಳಿ ಯೂನಿಫಾರಂ ಹಾಕಿ ಐಸ್ ಕ್ಯಾಂಡಿ ಚೀಪುವ ಶಾಲಾ ಬಾಲಕನಿಗೆ ವಿಶೇಷ ಆಹ್ವಾನ ನೀಡಲು ಅವರೇನು ತಲೆಕೆಟ್ಟವರೇ? ಸುಮಾರು 30 ರಿಂದ 40 ಮಂದಿ ಈ ಸಮಾವೇಶದಲ್ಲಿ ಭಾಗವಹಿಸಿದ್ದರು ಎಂದು ವಿಠ್ಠಲ ಮಾಹಿತಿ ನೀಡಿದ್ದಾನೆ ಮತ್ತು ಯಾರ್ಯಾರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನೂ ಆತ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಉದಯವಾಣಿ ವರದಿಯಲ್ಲಿ ಹೇಳಲಾಗಿದೆ. ಮಾರ್ಚ್ 20 ರ ಉದಯವಾಣಿಯಲ್ಲಿ ಈ ವರದಿ ಪ್ರಕಟವಾಗಿದೆ. ಮಾರ್ಚ್ 19 ಕ್ಕೆ ವಿಠ್ಠಲನ ಪೊಲೀಸ್ ಕಸ್ಟಡಿ ಅಂತ್ಯವಾಗಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ನಕ್ಸಲರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರೆ ಪೊಲೀಸರು ನಕ್ಸಲರ ಜಾಡು ಹಿಡಿಯಲು ಆತನ ಪೊಲೀಸ್ ಕಸ್ಟಡಿ ವಿಸ್ತರಣೆಗೆ ಮನವಿ ಮಾಡಬೇಕಿತ್ತು. ಆದರೆ ನ್ಯಾಯಾಧೀಶರ ಎದುರು ಹಾಜರುಪಡಿಸಿದ ಪೊಲೀಸರು ಕಸ್ಟಡಿ ವಿಸ್ತರಣೆಗೆ ಮನವಿ ಮಾಡಲೇ ಇಲ್ಲ. ಆದ್ದರಿಂದಲೇ ಪೊಲೀಸ್ ಕಸ್ಟಡಿ ಅಂತ್ಯವಾಗಿ 19ರ ರಾತ್ರಿಯಿಂದಲೇ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಂದೆಡೆ ನಕ್ಸಲರ ಬಗ್ಗೆ ಆತನ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದೇ ಹೌದಾದಲ್ಲಿ ಅದನ್ನು ಪೊಲೀಸ್ ಮೂಲಗಳು ಎಂದು ಸಂಶಯಾಸ್ಪದವಾಗಿ ವರದಿ ಮಾಡಬೇಕಿರಲಿಲ್ಲ. ಎಸ್ಪಿಯ ಬಳಿಯೋ, ಐಜಿಪಿ ಬಳಿಯೋ ಹೇಳಿಕೆ ಪಡೆದು ಪ್ರಕಟಿಸಬಹುದಿತ್ತು. ಉದಯವಾಣಿಯ ಈ ಸುದ್ಧಿ ಮೂಲವೇ ಒಂದು ಕಟ್ಟು ಕತೆಯಷ್ಟೆ. ಪೊಲೀಸರಿಗೆ ಈತ ನಕ್ಸಲ್ ಬಗ್ಗೆ ಮಾಹಿತಿ ನೀಡಿದ್ದೂ ಹೌದೇ ಆಗಿದ್ದಲ್ಲಿ ಬೆಳ್ತಂಗಡಿ ಪೊಲೀಸರು ತಕ್ಷಣ ಆ ಎಲ್ಲಾ ಮಾಹಿತಿಯನ್ನು ಗುಪ್ತಚರ ಇಲಾಖೆ ಮತ್ತು ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಪೊಲೀಸರು ಅವ್ಯಾವುದನ್ನೂ ಈವರೆಗೂ ಮಾಡಿಲ್ಲ.

ಎಡವಟ್ಟು ಮಾಡಿದ ಸ್ಪಷ್ಟಣೆ

ಮಾರ್ಚ್ 20ರ ಉದಯವಾಣಿಯಲ್ಲಿ 2001 ರಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ನಕ್ಸಲ್ ಸಮಾವೇಶ ನಡೆದಿದ್ದು, ಅದರಲ್ಲಿ ವಿಠ್ಠಲ್ ಪಾಲ್ಗೊಂಡಿದ್ದ ಎಂಬ ವರದಿಯ ಬಗ್ಗೆ ಮಾರ್ಚ್ 21ರ ಆವೃತ್ತಿಯಲ್ಲಿ ಸ್ಪಷ್ಟಣೆ ನೀಡಲಾಗಿದೆ. 2011 ರ ಸಮಾವೇಶದಲ್ಲಿ ವಿಠ್ಠಲ್ ಪಾಲ್ಗೊಂಡಿದ್ದ ಎಂಬುದು ಮುದ್ರಣ ದೋಷದಿಂದಾಗಿ 2001 ಎಂದಾಗಿತ್ತು ಎಂದು ಸ್ಪಷ್ಟೀಕರಿಸಲಾಗಿದೆ. ನಕ್ಸಲ್ ವಿಷಯದಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸ್ಪೆಷಲ್ ಸ್ಟೋರಿ ಮಾಡುವವರು ಆ ವಿಷಯದ ಬಗ್ಗೆ ಆಳವಾಗಿ ಆಧ್ಯಯನ ಮಾಡಿರಬೇಕು. ಕಂಡಂತಹ ಸುದ್ದಿ ಬರೆಯಲು ವಿಶೇಷ ಅಧ್ಯಯನ ಬೇಕಿಲ್ಲ. ವಿಶೇಷ ತನಿಖಾ ವರದಿ ಬರೆಯುವಾಗ ಅಧ್ಯಯನ ಅತ್ಯಗತ್ಯ. ಮೊನ್ನೆ ಮೊನ್ನೆ ಅಂದರೆ ಇದೇ ತಿಂಗಳ 11ರಂದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಎಂಬ ಗ್ರಾಮದ ಕಾಡಿನಲ್ಲಿ ನಕ್ಸಲ್ ಸಮಾವೇಶ ನಡೆದಿತ್ತು. ಅಲ್ಲಿಗೆ ಪೊಲೀಸ್ ದಾಳಿ ನಡೆದಿದ್ದು, ಪೊಲೀಸ್ ಪೇದೆಗೆ ಗಾಯ ಆಗಿದ್ದು, ಅಪಾರ ಪ್ರಮಾಣದ ಗ್ರಾನೈಟ್, ಮದ್ದು ಗುಂಡುಗಳು, ಗನ್‍ಗಳು ಇರುವ ಹತ್ತು ಕ್ಯಾಂಪ್‍ಗಳು ಪತ್ತೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ನಕ್ಸಲ್ ವಿಚಾರಧಾರೆ ಎನ್ನುವುದು ಪಕ್ಕಾ ರಾಜಕೀಯ ವಿಷಯ. ನಕ್ಸಲರು ಸಿಪಿಐ (ಮಾವೋವಾದಿ) ಎಂಬ ನಿಷೇದಿತ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದವರಾಗಿರುತ್ತಾರೆ. ಇದು ನಿಷೇದಿತವಾದರೂ ನಕ್ಸಲರಿಗೆ ಇದೊಂದು ರಾಜಕೀಯ ಪಕ್ಷ. ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳಂತೆಯೇ ಮಾವೋವಾದಿ ಕಮ್ಯೂನಿಸ್ಟ್ ಪಕ್ಷ ಕೂಡಾ ವಾರ್ಷಿಕ ಸಮಾವೇಶಗಳನ್ನು ನಡೆಸುತ್ತದೆ. ಅದಕ್ಕಾಗಿ ಅದು ಎಲ್ಲಾ ಕಮ್ಯೂನಿಸ್ಟ್ ಪಕ್ಷಗಳಂತೆ ವರ್ಷಕ್ಕೊಂದು ಬೇರೆ ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡುತ್ತದೆ. 2011 ರಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ಸಮಾವೇಶ ನಡೆಸಿದ್ದರೆ, 2012 ರಲ್ಲಿ ಮತ್ತೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆಯಲ್ಲಿ ಸಮಾವೇಶ ನಡೆಸಲು ಸಾಧ್ಯವೇ ಇಲ್ಲ. ಇದೆಲ್ಲಾ ರಾಜಕೀಯ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. 2011 ರಲ್ಲಿ ಕುತ್ಲೂರಿನಲ್ಲಿ ನಕ್ಸಲ್ ಸಮಾವೇಶ ನಡೆದಿದೆ ಎಂದಿಟ್ಟುಕೊಳ್ಳೋಣ. ಕುತ್ಲೂರಿನ ಇಬ್ಬರು ಯುವಕರು ನಕ್ಸಲರಾಗಿ ಎನ್‍ಕೌಂಟರ್‌ಗೆ ಗುರಿಯಾದ ನಂತರ ಮತ್ತು ಇಲ್ಲಿಯದ್ದೇ ಯುವತಿ ಸುಂದರಿ ಎಂಬಾಕೆ ನಕ್ಸಲ್ ನಾಯಕಿಯಾದ ನಂತರ ಪ್ರತೀ ದಿನ ಎಎನ್ಎಫ್‍ನ ಅಥವಾ ವೇಣೂರು ಠಾಣೆಯ ಕನಿಷ್ಠ ಒರ್ವ ಸಿಬ್ಬಂದಿ ಈ ಕಾಡಿನಲ್ಲಿ ನಿತ್ಯ ಬೀಟ್ ಮಾಡ್ತಾ ಇರ್ತಾರೆ. ಎರಡು ದಿನಕ್ಕೊಮ್ಮೆ ಐದರಿಂದ ಆರು ಎಎನ್ಎಫ್ ಪೊಲೀಸರ ತಂಡ ಇಲ್ಲಿಗೆ ಭೇಟಿ ಕೊಡುತ್ತದೆ. ಕುತ್ಲೂರಿನಲ್ಲಿ ಕಳೆದ ವರ್ಷ ಸಮಾವೇಶ ನಡೆದಿದ್ದು ಹೌದೇ ಆದಲ್ಲಿ ಕಳೆದ ವರ್ಷದ ಯಾವ ದಿನ ಯಾವ ಕಾರಣಕ್ಕಾಗಿ ಪೊಲೀಸರು ಕುತ್ಲೂರಿಗೆ ಭೇಟಿ ಕೊಟ್ಟಿಲ್ಲ ಎಂದು ಪೊಲೀಸರು ಉತ್ತರಿಸಬೇಕಾಗುತ್ತದೆ.

ಪ್ರಜಾಪ್ರಭುತ್ವವನ್ನು ಒಪ್ಪುವ ಯಾವುದೇ ವ್ಯಕ್ತಿ ನಿಷೇದಿತ ನಕ್ಸಲ್ ಚಳವಳಿಯನ್ನು ಒಪ್ಪುವಂತೆಯೇ ಇಲ್ಲ. ಹಾಗೆಂದು ಕಾಡಿನ ಮೂಲ ನಿವಾಸಿಗಳು ನಕ್ಸಲರ ಜೊತೆ ಸಂಪರ್ಕದಲ್ಲಿದ್ದರೆ ಅದು ಮೂಲ ನಿವಾಸಿಗಳ ತಪ್ಪಲ್ಲ. ವಿದ್ಯುತ್, ದೂರವಾಣಿ, ರಸ್ತೆ ಸಂಪರ್ಕಗಳೇ ಇಲ್ಲದ ದಟ್ಟ ಕಾಡಲ್ಲಿ ವಾಸಿಸೋ ಮಲೆಕುಡಿಯರ ಮನೆಗೆ ನಕ್ಸಲರು ಬಂದೂಕು ಹಿಡಿದುಕೊಂಡು ಬಂದು ಅನ್ನ ನೀರು ಕೇಳಿದರೆ ಕೊಡದೇ ಇರಲು ಬದುಕೇನು ಸಿನೇಮಾ ಕಥೆಯಲ್ಲ. ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ನಕ್ಸಲರ ಉಪಟಳ. ನೀಡದೇ ಇದ್ದರೆ ಪೊಲೀಸರ ಕಿರುಕುಳ. ಪೊಲೀಸರು ಮತ್ತು ವ್ಯವಸ್ಥೆ ಮಲೆಕುಡಿಯರ ಬಗ್ಗೆ ಹೊಂದಿರೋ ನಿಲುವುಗಳು ಮತ್ತು ಮಾಡೋ ದೌರ್ಜನ್ಯಗಳೇ ನಕ್ಸಲರು ಮಲೆಕುಡಿಯ ಮೇಲೆ ಪ್ರಭಾವ ಬೀರಲು ಬಳಸೋ ಅಸ್ತ್ರಗಳು. ಅಂತದ್ದರಲ್ಲಿ ಮುಖ್ಯವಾಹಿನಿಗೆ ಬರಬೇಕು ಎಂದುಕೊಂಡ ವಿಠ್ಠಲ್‍ನಂತಹ ಯುವಕರನ್ನು ಎಎನ್ಎಫ್‍ನವರು ಬಂಧಿಸಿ ಕಿರುಕುಳ ನೀಡಿದಾಗ ಪೊಲೀಸರದ್ದೇ ಸರಿ ಎಂದು ಪೊಲೀಸರ ಪರ ವಹಿಸಿದರೆ ಅದು ನಕ್ಸಲ್ ಪರವಾಗಿರುತ್ತದೆ ಎಂಬುದು ನಮಗೆ ಗೊತ್ತಿರಬೇಕು

ವಂಶವಾಹಿ ಪ್ರಜಾಪ್ರಭುತ್ವ – ಕಾರಣಗಳು ಮತ್ತು ಪರಿಹಾರ

-ಆನಂದ ಪ್ರಸಾದ್

ಭಾರತದಲ್ಲಿ ಸ್ವಾತಂತ್ರ್ಯದ ನಂತರ ವಂಶವಾಹಿ ಪ್ರಜಾಪ್ರಭುತ್ವ ಬೆಳೆದು ನಿಂತಿದೆ. ಆರಂಭದಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿತ್ತು. ನಂತರ ಇದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಬೆಳೆದಿದ್ದು ಹಿಂದಿದ್ದ ರಾಜರ ಆಳ್ವಿಕೆಯನ್ನೇ ಹೋಲುತ್ತಿದೆ. ನೆಪಮಾತ್ರಕ್ಕೆ ಐದು ವರ್ಷಗಳಿಗೊಮ್ಮೆ (ಅಥವಾ ಅವಧಿಪೂರ್ವ) ಚುನಾವಣೆಗಳು ನಡೆಯುತ್ತಿದ್ದರೂ ಹೆಚ್ಚಿನ ಬದಲಾವಣೆ ಏನೂ ಕಂಡು ಬರುತ್ತಿಲ್ಲ. ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಕುಟುಂಬ, ಕರ್ನಾಟಕದಲ್ಲಿ ದೇವೇಗೌಡ ಕುಟುಂಬ, ಆಂಧ್ರದಲ್ಲಿ ಚಂದ್ರಬಾಬು ನಾಯ್ಡು, ಒರಿಸ್ಸಾದಲ್ಲಿ ನವೀನ ಪಾಟ್ನಾಯಕ್, ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದಲ್ಲಿ ಮಾಯಾವತಿ ಮತ್ತು ಮುಲಾಯಂ ಸಿಂಗ್, ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್, ಬಾಳ್ ಠಾಕ್ರೆ, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಹೀಗೆ ವ್ಯಕ್ತಿ ಕೇಂದ್ರಿತ ಅಥವಾ ಕುಟುಂಬ ಕೇಂದ್ರಿತ ಪಕ್ಷಗಳು ಬೆಳೆದು ನಿಂತಿವೆ. ಕುಟುಂಬ ಅಥವಾ ವ್ಯಕ್ತಿ ಕೇಂದ್ರಿತ ನೆಲೆಯನ್ನು ಮೀರಿ ಏಕೆ ಭಾರತದಲ್ಲಿ ರಾಜಕೀಯ ಪಕ್ಷಗಳು ಯಶಸ್ವಿಯಾಗುತ್ತಿಲ್ಲ, ಇದಕ್ಕೆ ಏನು ಕಾರಣ ಎಂಬ ಬಗ್ಗೆ ಭಾರತದಲ್ಲಿ ಚಿಂತನೆ ನಡೆಯುತ್ತಿಲ್ಲ.

ಪ್ರಜಾಪ್ರಭುತ್ವದ ಯಶಸ್ಸಿಗೆ ಮತ್ತು ಬೆಳವಣಿಗೆಗೆ ಸೈದ್ದಾಂತಿಕ ನೆಲೆಯಲ್ಲಿ ಪಕ್ಷಗಳು ಸಂಘಟಿತವಾಗಬೇಕು. ಎಲ್ಲ ಪಕ್ಷಗಳು ಸೈದ್ಧಾಂತಿಕ ನೆಲೆಯಲ್ಲಿ ತಮ್ಮ ಪಕ್ಷಗಳು ರೂಪುಗೊಂಡಿವೆ ಎಂದು ಹೇಳುತ್ತಿದ್ದರೂ ಆಂತರಿಕ ಪ್ರಜಾಪ್ರಭುತ್ವವನ್ನು ತಮ್ಮ ಪಕ್ಷಗಳಲ್ಲಿ ಅಳವಡಿಸಿಕೊಂಡಿಲ್ಲ. ಕೆಲವು ಪಕ್ಷಗಳಲ್ಲಿ ಕಾಟಾಚಾರಕ್ಕಾಗಿ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ನಡೆದರೂ ಒಬ್ಬ ವ್ಯಕ್ತಿಯೇ ಅಥವಾ ಒಂದು ಕುಟುಂಬದ ಸದಸ್ಯರು ಮಾತ್ರವೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಭಾರತದ ರಾಜಕೀಯ ಪಕ್ಷಗಳ ದೌರ್ಬಲ್ಯ. ಇದಕ್ಕೆ ಆ ಕುಟುಂಬದ ಸದಸ್ಯರೇ ಕಾರಣ ಎಂದು ಹೇಳುವಂತಿಲ್ಲ. ಇದಕ್ಕೆ ಒಟ್ಟು ಭಾರತೀಯರ ಮನಸ್ಥಿತಿಯೇ ಕಾರಣ ಎನಿಸುತ್ತದೆ.

ಭಾರತೀಯ ರಾಜಕಾರಣಿಗಳಲ್ಲಿ ಅಧಿಕಾರದ ಲಾಲಸೆ ಹಾಗೂ ಗುಂಪುಗಾರಿಕೆ ತುಂಬಿಕೊಂಡಿರುವುದು ಇದಕ್ಕೆ ಕಾರಣವೆನಿಸುತ್ತದೆ. ಒಂದು ಕುಟುಂಬದ ವ್ಯಕ್ತಿ ಅಧ್ಯಕ್ಷನಾಗಿರದ ಪಕ್ಷದಲ್ಲಿ ಆ ಪಕ್ಷವು ಚೂರು ಚೂರಾಗುವುದು ಭಾರತದ ರಾಜಕಾರಣದ ದುರಂತ. ಉದಾಹರಣೆಗೆ ಸೋನಿಯಾ ಗಾಂಧಿ, ರಾಜೀವ ಗಾಂಧಿ ನಿಧನದ ನಂತರ ರಾಜಕೀಯಕ್ಕೆ ಕೆಲ ವರ್ಷಗಳು ಬಂದಿರಲಿಲ್ಲ. ನೆಹರೂ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಚೂರು ಚೂರಾಗುವ ಭೀತಿ ಉಂಟಾಗಿತ್ತು ಮತ್ತು ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರದ ಪಕ್ಷದಲ್ಲಿ ಕಾಂಗ್ರೆಸ್ ಪಕ್ಷವು ಒಂದಾಗಿ ಇರುತ್ತಿರಲಿಲ್ಲ. ನೆಹರೂ ಕುಟುಂಬದ ಸದಸ್ಯ ನಾಯಕ ಸ್ಥಾನದಲ್ಲಿದ್ದರೆ ಮಾತ್ರ ಕಾಂಗ್ರೆಸ್ ಒಟ್ಟಾಗಿ ಉಳಿಯುತ್ತದೆ ಇಲ್ಲದೆ ಹೋದ ಪಕ್ಷದಲ್ಲಿ, ಪಕ್ಷದಲ್ಲಿ ಆಂತರಿಕ ಕಚ್ಚಾಟ ತಾರಕಕ್ಕೇರಿ ಚೂರು ಚೂರಾಗುವ ಪರಿಸ್ಥಿತಿ ಇದೆ. ಇದಕ್ಕೆ ನಮ್ಮ ರಾಜಕಾರಣಿಗಳ ಅಧಿಕಾರದಾಹವೇ ಕಾರಣ.

ಇದೇ ಪರಿಸ್ಥಿತಿ ಇಂದು ಭಾರತೀಯ ಜನತಾ ಪಕ್ಷದಲ್ಲೂ ಇದೆ. ಅಲ್ಲಿ ಯಜಮಾನಿಕೆಯ ಸ್ಥಾನವನ್ನು ಸಂಘ ಪರಿವಾರ ಎಂಬ ಸಂವಿಧಾನಬಾಹಿರ ಶಕ್ತಿ ಪಡೆದುಕೊಂಡಿದೆ. ಸಂಘವು ತೇಪೆ ಹಾಕುತ್ತಿರುವ ಕಾರಣ ಬಿಜೆಪಿ ಎಂಬ ಪಕ್ಷವು ಒಂದಾಗಿ ಉಳಿದಿದೆ ಇಲ್ಲದೆ ಹೋದರೆ ಅದು ಕೂಡ ಚೂರು ಚೂರಾಗಿ ಹೋಗುತ್ತದೆ. ಇನ್ನು ಉಳಿದ ಪ್ರಾದೇಶಿಕ ಪಕ್ಷಗಳ ಸ್ಥಿತಿಯೂ ಅಷ್ಟೇ. ಅಲ್ಲಿಯೂ ಒಂದು ಕುಟುಂಬದ ಕೈಯಲ್ಲಿ ಇರುವ ಪಕ್ಷ ಒಂದಾಗಿ ಉಳಿದಿದೆ ಮತ್ತು ಆ ಕುಟುಂಬಕ್ಕೆ ತಗ್ಗಿ ಬಗ್ಗಿ ನಡೆಯುವ ವ್ಯಕ್ತಿಗಳಿಗೆ ಮಾತ್ರ ಮಣೆ. ಇದಕ್ಕೆ ಅಪವಾದವಾಗಿ ಇರುವುದು ಇಂದು ಎಡ ಪಕ್ಷಗಳು ಮಾತ್ರ. ಆದರೆ ಎಡ ಪಕ್ಷಗಳಿಗೆ ಬಂಗಾಲ, ಕೇರಳ ಹೊರತುಪಡಿಸಿದರೆ ಹೆಚ್ಚಿನ ಅಸ್ತಿತ್ವ ಇಲ್ಲ. ಕಾಂಗ್ರೆಸ್ಸೇತರ ಪಕ್ಷವಾಗಿ ಅಧಿಕಾರ ಹಿಡಿದ ಜನತಾ ಪಕ್ಷವು ಅಧಿಕಾರದ ಕಚ್ಚಾಟದಿಂದಾಗಿಯೇ ಚೂರುಚೂರಾಗಿದೆ. ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ನಮ್ಮ ರಾಜಕಾರಣಿಗಳಿಗೆ ಒಂದಾಗಿ ದೇಶದ ಹಿತಕ್ಕಾಗಿ ಕೆಲಸ ಮಾಡುವ ಮನೋಭಾವ ಇಲ್ಲ.

ರಾಜಕೀಯಕ್ಕೆ ಬರುವವರಿಗೆ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳು ಅರ್ಥವಾಗದೆ ಇರುವುದು ಮತ್ತು ಸಂವಿಧಾನದ ಆಶೋತ್ತರಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಕಂಡು ಬರುತ್ತದೆ. ಸೈದ್ಧಾಂತಿಕ ನೆಲೆಯಲ್ಲಿ ರಾಜಕೀಯ ಪಕ್ಷಗಳನ್ನು ರೂಪಿಸಿ ಗಟ್ಟಿಯಾಗಿ ಸೈದ್ದಾಂತಿಕ ದೃಢತೆಯನ್ನು ಕಾಪಾಡಿಕೊಂಡು ಬರದಿರುವುದೆ ಇಂಥ ಪರಿಸ್ಥಿತಿಗೆ ಕಾರಣ. ಸೈದ್ಧಾಂತಿಕ ನೆಲೆಯಲ್ಲಿ ಒಂದುಗೂಡಿ ಕೆಲಸ ಮಾಡುವುದು ಭಾರತೀಯ ರಾಜಕಾರಣಿಗಳಿಗೆ ಗೊತ್ತೇ ಇಲ್ಲ. ಅದು ಗೊತ್ತಿದ್ದರೆ ಅಧಿಕಾರಕ್ಕಾಗಿ ಕಚ್ಚಾಡುವ, ಪಕ್ಷವನ್ನೇ ಚೂರು ಚೂರು ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪರಿಹಾರವಾದರೂ ಏನು? ಪಕ್ಷಕ್ಕೆ ವ್ಯಕ್ತಿಗಳನ್ನು ಸೇರಿಸಿಕೊಳ್ಳುವಾಗ ಪಕ್ಷದ ಸಿದ್ಧಾಂತವನ್ನು ವಿವರಿಸಿ ಸಿದ್ಧಾಂತವನ್ನು ಮೀರಿದರೆ ಪಕ್ಷದಿಂದ ಹೊರಹಾಕುವ ಸ್ಪಷ್ಟ ಧೋರಣೆಗಳನ್ನು ರಾಜಕೀಯ ಪಕ್ಷಗಳು ಹೊಂದಿದರೆ ಇಂಥ ಪರಿಸ್ಥಿತಿಯನ್ನು ಬಹುತೇಕ ತಡೆಯಬಹುದು. ಹೀಗೆ ಮಾಡಬೇಕಾದರೆ ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾದ ಸಿದ್ಧಾಂತ ಇರಬೇಕಾಗುತ್ತದೆ. ಈಗ ಇರುವ ಯಾವ ರಾಜಕೀಯ ಪಕ್ಷಗಳಿಗೂ (ಎಡ ಪಕ್ಷಗಳನ್ನು ಹೊರತು ಪಡಿಸಿ) ಸ್ಪಷ್ಟ ಸಿದ್ಧಾಂತವೇ ಇಲ್ಲದಿರುವುದು ಭಾರತದ ಸಮಕಾಲೀನ ರಾಜಕೀಯದ ದುರಂತ. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಡುವ ರಾಜಕೀಯ ಪಕ್ಷಗಳೇ ಇರುವಾಗ ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದಾದರೂ ಹೇಗೆ?

ಭಾರತದ ರಾಜಕೀಯಕ್ಕೆ ತೃತೀಯ ರಂಗವೊಂದರ ಅವಶ್ಯಕತೆ ಇದೆಯೇ ಎಂದರೆ ಅಂಥ ಒಂದು ಅವಶ್ಯಕತೆ ಇದೆ ಎನಿಸುತ್ತದೆ. ಆದರೆ ಅಂಥ ತೃತೀಯ ರಂಗವೊಂದು ಸ್ಪಷ್ಟವಾದ ಸೈದ್ಧಾಂತಿಕ ಧೋರಣೆ ಹೊಂದಿರಬೇಕು ಮತ್ತು ಎಲ್ಲರಿಗೂ ಒಪ್ಪಿಗೆಯಾಗುವ ಒಂದು ದೀರ್ಘಕಾಲೀನ ಪ್ರಣಾಳಿಕೆ ಹೊಂದಿರಬೇಕು. ಹಾಗಿರದೆ ಬರಿಯ ಅಧಿಕಾರಕ್ಕಾಗಿ ರೂಪುಗೊಳ್ಳುವ ತೃತೀಯ ರಂಗ ಯಶಸ್ವಿಯಾಗುವುದಿಲ್ಲ ಮತ್ತು ಹೆಚ್ಚು ಸಮಯ ಬಾಳುವುದಿಲ್ಲ. ತೃತೀಯ ರಂಗದಲ್ಲಿ ಒಟ್ಟುಗೂಡುವ ಪಕ್ಷಗಳಿಗೆ ದೀರ್ಘಕಾಲೀನ ಸೈದ್ದಾಂತಿಕ ಬದ್ಧತೆ ಇಲ್ಲದೆ ಹೋಗುವುದು, ಅಧಿಕಾರಕ್ಕಾಗಿ ಸಿದ್ಧಾಂತವನ್ನೂ ಮೀರಿ ತಮಗೆ ಒಪ್ಪಿಗೆಯಾಗದ ಸಿದ್ಧಾಂತದ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಅವಕಾಶವಾದಿ ಪ್ರವೃತ್ತಿ ತೋರುವುದೇ ಸಂಭಾವ್ಯ ತೃತೀಯ ರಂಗದ ಪಕ್ಷಗಳ ದೊಡ್ಡ ದೌರ್ಬಲ್ಯವಾಗಿದೆ. ಅವು ಆ ದೌರ್ಬಲ್ಯವನ್ನು ಮೀರಿ ನಿಂತರೆ ಅಂಥ ಒಂದು ತೃತೀಯ ರಂಗ ರೂಪುಗೊಳ್ಳಬಹುದು, ತನ್ನ ಅವಧಿಪೂರ್ಣ ಆಡಳಿತ ನೀಡಲು ಸಾಧ್ಯ. ದ್ವಿಪಕ್ಷೀಯ ಆಡಳಿತಕ್ಕಿಂತ ಇನ್ನೂ ಒಂದು ಪರ್ಯಾಯ ಇರುವುದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಏಕೆಂದರೆ ದ್ವಿಪಕ್ಷೀಯ ವ್ಯವಸ್ಥೆ ಇದ್ದರೆ ಹೇಗಿದ್ದರೂ ಆಡಳಿತ ವಿರೋಧಿ ಅಲೆಯಿಂದ ಮುಂದಿನ ಸಾರಿ ತನಗೆ ಆಡಳಿತ ಸಿಗುತ್ತದೆ ಎಂಬ ನಿರ್ಲಕ್ಷ್ಯ ರಾಜಕೀಯ ಪಕ್ಷಗಳಲ್ಲಿ ಬೆಳೆಯುತ್ತದೆ ಮತ್ತು ತಮ್ಮನ್ನು ಬಿಟ್ಟರೆ ಬೇರೆ ಗತಿಯಿಲ್ಲ ಎಂಬ ಅಹಂಕಾರವೂ ಬೆಳೆಯುತ್ತದೆ. ತ್ರಿಪಕ್ಷೀಯ ವ್ಯವಸ್ಥೆ ಇದ್ದರೆ ರಾಜಕೀಯ ಪಕ್ಷಗಳು ಸ್ವಲ್ಪ ಎಚ್ಚರಿಕೆಯಿಂದ ಇರಲು ಸಾಧ್ಯ.

ಸದ್ಯದ ಭಾರತೀಯ ರಾಜಕೀಯವನ್ನು ಅವಲೋಕಿಸಿದರೆ ಆರೋಗ್ಯಕರ ಸೈದ್ದಾಂತಿಕ ನೆಲೆಗಟ್ಟಿನ ರಾಜಕೀಯ ಸ್ವಾತಂತ್ರ್ಯ ನಂತರದ ಆರು ದಶಕಗಳಲ್ಲಿ ಬೆಳೆಸುವಲ್ಲಿ ನಾವು ವಿಫಲರಾಗಿದ್ದೇವೆ. ಇಂಥ ಒಂದು ಆರೋಗ್ಯಕರ ಸೈದ್ದಾಂತಿಕ ರಾಜಕೀಯ ಜಾಗೃತಿ ಬೆಳೆಯಲು ಇನ್ನು ಎಷ್ಟು ದಶಕಗಳು ಅಥವಾ ಶತಮಾನಗಳು ಬೇಕೋ ಊಹಿಸಲಾಗುವುದಿಲ್ಲ. ಭಾರತೀಯರು  ಜಡ   ಪ್ರವೃತ್ತಿಯವರಾಗಿರುವುದರಿಂದ ಮತ್ತು ಇಲ್ಲಿ ಯಾವುದೇ ಹೊಸ ಚಿಂತನೆಗಳಿಗೆ ಸ್ಥಾನ ಇಲ್ಲದಿರುವುದರಿಂದ ಯಾವುದೇ ಕ್ಷೇತ್ರದಲ್ಲೂ ಹೊಸತನ ತರುವುದು ಬಹಳ ಕಷ್ಟವಾಗಿದೆ. ಹೀಗಾಗಿ ಉಳಿದ ಕ್ಷೇತ್ರಗಳಂತೆ ರಾಜಕೀಯ ಕ್ಷೇತ್ರದಲ್ಲೂ ವಂಶವಾಹಿ ಪ್ರಜಾಪ್ರಭುತ್ವದಿಂದ ನಿಜವಾದ ಪ್ರಜಾಪ್ರಭುತ್ವದೆಡೆಗೆ ನಮ್ಮ ದೇಶ ಯಾವಾಗ ಪರಿವರ್ತನೆಯಾಗುವುದೋ ಹೇಳಲಾಗದು. ಅಲ್ಲಿಯವರೆಗೆ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸತನ ತರಲು ಸಾಧ್ಯವಿದೆ.

ಆಧುನಿಕ ವೈಜ್ಞಾನಿಕ ಚಿಂತನೆಯವರು ಈಗಿರುವ ವಂಶವಾಹಿ ಪ್ರಜಾಪ್ರಭುತ್ವ ಕುಟುಂಬಗಳಲ್ಲೇ ರೂಪುಗೊಂಡರೆ ಅಂಥ ಸಾಧ್ಯತೆ ಇದೆ. ಈಗಿರುವ ವಂಶವಾಹಿ ಪ್ರಜಾಪ್ರಭುತ್ವದಲ್ಲೇ ಹೊಸ ಚಿಂತನೆಗಳನ್ನು ತರಲು ಸಾಕಷ್ಟು ಅವಕಾಶ ಇದೆ ಏಕೆಂದರೆ ಪಕ್ಷಗಳಲ್ಲಿ ಕುಟುಂಬದ ವ್ಯಕ್ತಿಗಳಲ್ಲೇ ಅಧಿಕಾರ ಕೇಂದ್ರೀಕೃತವಾಗಿರುವುದರಿಂದ ಅವರು ತೆಗೆದುಕೊಳ್ಳುವ ಪ್ರಗತಿಪರ ನಿರ್ಧಾರಗಳಿಗೆ ಪಕ್ಷದೊಳಗೆ ಅಷ್ಟಾಗಿ ವಿರೋಧ ಬರುವ ಸಾಧ್ಯತೆ ಇಲ್ಲ. ಹೀಗಿದ್ದರೂ ಪ್ರಗತಿಪರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕುಟುಂಬ ಪ್ರಭುತ್ವಗಳಿಗೆ ಸಾಧ್ಯವಾಗದೆ ಇರಲು ಅವರಲ್ಲಿ ರಾಜಕೀಯ ಚಿಂತನೆ ಹಾಗೂ ವ್ಯಾಪಕ ಓದಿನ ಕೊರತೆ ಇರುವುದೇ ಕಾರಣ. ವಂಶವಾಹಿ ಪ್ರಭುತ್ವ ಇರುವ ಕುಟುಂಬಗಳ ಹೊಸ ತಲೆಮಾರುಗಳು ಹೆಚ್ಚು ಹೆಚ್ಚು ಪ್ರಗತಿಶೀಲ ಚಿಂತನೆ ಅಳವಡಿಸಿಕೊಳ್ಳಲು ವ್ಯಾಪಕ ಅಧ್ಯಯನದ ಅವಶ್ಯಕತೆ ಇದೆ ಹಾಗೂ ದೇಶದ ಪರ್ಯಟನೆ ಮಾಡಿ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ವಂಶವಾಹಿ ಪ್ರಭುತ್ವದ ಹೊಸ ತಲೆಮಾರಿಗೆ ಅಸಾಧ್ಯವೇನೂ ಅಲ್ಲ.