Tag Archives: ಭ್ರಷ್ಟಾಚಾರದ ವಿರುದ್ಧ ಭಾರತ

ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ

– ರವಿ ಕೃಷ್ಣಾರೆಡ್ಡಿ

ನೆನ್ನೆ (27/5/12) ಸಂಜೆಗೆಲ್ಲ ಬಹುಶಃ ದೇಶದ ಬಹಳಷ್ಟು ಜನರಿಗೆ ಐಪಿಎಲ್ ‌ಫೈನಲ್ ಪಂದ್ಯದ ಸಾಂಕ್ರಾಮಿಕ ಜ್ವರ ಹಬ್ಬಿತ್ತು. ಆಟವೂ ಸಹ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿತ್ತು. ಕೊನೆಯ ಚೆಂಡಿನ ತನಕವೂ ಹೋರಾಟ ಬಿಡದ ಧೋನಿ ಈ ಪಂದ್ಯದಲ್ಲೂ ಅಂತಹುದೇ ಅಂತ್ಯ ಕಾಣಿಸಬಹುದೇ ಎನ್ನುವುದು ಬಹುಶಃ ಬಹುತೇಕ ಎಲ್ಲರಲ್ಲೂ ಇದ್ದ ಕುತೂಹಲ. ಇನ್ನು, ಟಿವಿಯಲ್ಲಿ ಕಂಡ ಕೆಲವು ದೃಶ್ಯಗಳಂತೂ ಚಿತ್ರವಿಚಿತ್ರವಾಗಿದ್ದವು. ತಲೆಯ ಮೇಲೆ ಕೈಇಟ್ಟುಕೊಂಡಿದ್ದವರು ಹಲವರಾದರೆ ದೇವರಿಗೆ ಮೊರೆ ಇಡುತ್ತಿದ್ದವರೂ ಹಲವರಿದ್ದರು. ಭಾವನಾತ್ಮಕವಾಗಿ ಇದು ನಮ್ಮನ್ನು ಚಲಿಸಬೇಕು ಎನ್ನಲು ಇದು ದೇಶದೇಶಗಳ ನಡುವೆ ನಡೆದ ಪಂದ್ಯವಲ್ಲ. ದೇಶದೊಳಗಿನ ರಾಜ್ಯಗಳೊಳಗಿನ ಪಂದ್ಯ ಎನ್ನುವ ಹಾಗೂ ಇಲ್ಲ. ಬೆಂಗಳೂರಿನ ರಾಹುಲ್ ದ್ರಾವಿಡ್ ದೂರದ ರಾಜಸ್ಥಾನ ತಂಡದ ನಾಯಕ. ಕೊಲ್ಕತ್ತದ ಗಂಗೂಲಿ ಪುಣೆ ತಂಡದ ನಾಯಕ. ನೆನ್ನೆ ನಡೆದ ಪಂದ್ಯದಲ್ಲಿಯೇ ದೆಹಲಿಯ ಗೌತಮ್ ಗಂಭೀರ್ ಕೊಲ್ಕತ್ತ ತಂಡವನ್ನು ನಡೆಸಿದರೆ ಜಾರ್ಖಂಡ್‌ನ ಧೋನಿ ಚೆನ್ನೈ ತಂಡದ ನಾಯಕ. ಆಟಗಾರರ ಮತ್ತು ತಂಡದ ನಾಯಕರ ಒತ್ತಡವನ್ನು ಅರ್ಥ ಮಾಡಿಕೊಳ್ಳಬಹುದು. ಅವರಿಗೆ ಈ ಆಟಗಳು ಕೇವಲ ಆಟ ಎನ್ನುವುದಕ್ಕಿಂತ ಹೆಚ್ಚು ಮಹತ್ವದ್ದವು. ತಮ್ಮ ಭವಿಷ್ಯದ ಸ್ಥಾನ ಮತ್ತು ಹಣದ ಹರಿವಿನ ಯೋಚನೆಯೇ ಅವರಿಗೆ ಬಹುಶಃ ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಆದರೆ, ಅಲ್ಲಿದ್ದ ಪ್ರೇಕ್ಷಕರ ಕಾತರಗಳು ಮತ್ತು ದಿಗಂತದೆಡೆಗಿನ ಮೊರೆಗಳು ಅತಾರ್ಕಿಕವಾದವುಗಳು. ಆಟವನ್ನು ಸವಿಯಲಾರದ ಮೂಢರು. ಬದುಕು ತೀರಾ ವೈಯಕ್ತಿಕವಾಗುತ್ತಿದೆ ಮತ್ತು ಅಸಹ್ಯವಾಗುತ್ತಿದೆ.

ಆದರೂ, ಈ ಐಪಿಎಲ್ ಪಂದ್ಯಗಳ ಒಂದು ಸೊಗಸು ಎಂದರೆ ಅದು ಒಂದು ರೀತಿಯಲ್ಲಿ ಎರಡು ವಿಶ್ವತಂಡಗಳ ಆಟ. ಪ್ರಾಂತ್ಯಗಳ, ಭಾಷೆಗಳ, ದೇಶದ ಗಡಿ ದಾಟಿ ಈ ತಂಡಗಳು ರೂಪುಗೊಂಡಿವೆ. ಆಸ್ಟ್ರೇಲಿಯದ ಆಕ್ರಮಣಕಾರಿ ಆಟಗಾರನಿಗೆ ಜೊತೆಯಾಗಿ ನ್ಯೂಜಿಲೆಂಡ್‌ನ ಜಂಟಲ್‌ಮನ್, ವೆಸ್ಟ್ ಇಂಡೀಸ್‌ನ ದೈತ್ಯಶಕ್ತಿಯ ಕಪ್ಪು ಆಟಗಾರನಿಗೆ ಹೆಗಲುಕೊಟ್ಟು ಆಡುವ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಅಂತ್ಯದ ನಂತರ ಆಡಲು ಇಳಿದ ಬಿಳಿಯ ದೈತ್ಯ, ಈಗಾಗಲೆ ದಂತಕತೆಯಾಗಿರುವ ಶತಕೋಟ್ಯಾಧಿಪತಿ ಆಟಗಾರನೊಂದಿಗೆ ಭಾರತದ ಯಾವುದೊ ಮೂಲೆಯ ಚಿಕ್ಕ ಪಟ್ಟಣದಿಂದ ಬಂದ ಬಡಯುವಕ; ನಿಜಕ್ಕೂ ಇದೊಂದು ಒಳ್ಳೆಯ ಜಾಗತೀಕರಣದ ಸುಂದರ ಉದಾಹರಣೆ. ದೇಶ-ಪ್ರಾಂತ್ಯ-ಭಾಷೆ-ಜನಾಂಗಗಳ ಗಡಿ ಮೀರಿ ಏಕ-ತಂಡವಾಗಿ ಆಡುತ್ತಿರುವ ಬಹುಶಃ ವಿಶ್ವದ ಏಕೈಕ ಕ್ರೀಡಾಕೂಟ. (ಇದರ ಜೊತೆಗೆ ಈ ಕ್ರೀಡಾಕೂಟದಿಂದ ಸಾಧ್ಯವಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನೂ—ಗುಣಾತ್ಮಕವಾದವುಗಳನ್ನು, ನಿರಾಕರಿಸುವಂತಿಲ್ಲ.)

ದೇಶ ನೆನ್ನೆ ಈ ಆಟದ ಕುತೂಹಲದಲ್ಲಿ ಮತ್ತು ಭಾನುವಾರದ ಸಂಜೆಯ ರಜೆಯ ವಿರಾಮದಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಘಟನೆ ಜರುಗಿತು. ಮೂರು ದಿನದಿಂದ ಪ್ರತಿದಿನವೂ ಜಗನ್‍ಮೋಹನ್ ರೆಡ್ಡಿಯನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಸಂಸ್ಥೆ ನೆನ್ನೆ ಸಂಜೆಗೆ ರೆಡ್ಡಿಯನ್ನು ಬಂಧಿಸುವ ನಿರ್ಧಾರ ತೆಗೆದುಕೊಂಡಿತು. ಈಗ ಜಗನ್‌ಮೋಹನ್ ರೆಡ್ಡಿ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಕೆರಳ ಹೊರತುಪಡಿಸಿ ದಕ್ಷಿಣದ ಇತರ ಮೂರೂ ರಾಜ್ಯಗಳಲ್ಲಿ ಭ್ರಷ್ಟಾಚಾರ ಎನ್ನುವುದು ಕಳೆದ ಒಂದೂವರೆ ದಶಕದಿಂದ ಅತಿ ಸಾಮಾನ್ಯವಾಗಿ ಹೋಗಿದೆ. ತಮಿಳುನಾಡಿನ ಜಯಲಲಿತ ದಶಕದ ಹಿಂದೆಯೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಜೈಲಲ್ಲಿ ಕುಳಿತಿದ್ದರು. ಅವರ ನಂತರ ಬಂದ ಕರುಣಾನಿಧಿ ಸರ್ಕಾರದ ಭ್ರಷ್ಟತೆಯೂ ಕಮ್ಮಿ ಇರಲಿಲ್ಲ. ರಾಜ, ಕನಿಮೊಳಿಗಳು ದೆಹಲಿ ಮಟ್ಟದಲ್ಲಿ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಕರುಣಾನಿಧಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರು ಇಂದು ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಕೇಸುಗಳಲ್ಲಿ ಬಂಧನಕ್ಕೊಳಗಾಗುತ್ತಿರುವುದು ಹೊರಗೆ ಹೆಚ್ಚಿಗೆ ಗೊತ್ತಾಗಿಲ್ಲ. ಸ್ಟ್ಯಾಲಿನ್ ಮತ್ತವರ ಮಗನ ಮೇಲೆಯೂ ಆಪಾದನೆಗಳಿವೆ. ಜಯಲಲಿತರಂತಹ ಜಯಲಲಿತರವರೇ ಇಂದು ತಮಿಳುನಾಡಿನಲ್ಲಿ ಸಂತಳಂತೆ ಕಾಣಿಸುತ್ತಿದ್ದಾರೆ ಎಂದರೆ ಕರುಣಾನಿಧಿಯವರ ಪಕ್ಷದ ಭ್ರಷ್ಟಾಚಾರ ಯಾವ ಹಂತಕ್ಕೆ ಹೋಗಿರಬಹುದು ಎನ್ನುವುದನ್ನು ಊಹಿಸಬಹುದು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅವರ ಕುಟುಂಬ ಮಾಡಿದ ಆಸ್ತಿ ಮತ್ತು ದುಡ್ಡಿನ ಬಗ್ಗೆ ಅನೇಕ ಆರೋಪ ಮತ್ತು ಊಹಾಪೋಹಗಳಿವೆ. ನಾಯ್ಡು‌ರವರ ಪತ್ನಿಯ ಒಡೆತನದ ಹೆರಿಟೇಜ್ ಡೈರಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ರಾಜ್ಯದ ಕೆ‍ಎಂ‌ಎಫ್‌ಗೆ ಸೆಡ್ಡು ಹೊಡೆದಿತ್ತು. ಈ ಡೈರಿ ಆರಂಭವಾಗಿರುವುದೇ ಭ್ರಷ್ಟಾಚಾರದ ಹಣದಿಂದ ಎಂಬ ಆಪಾದನೆಗಳಿತ್ತು. ಸಾಮಾನ್ಯ ಬಡರೈತನ ಮಗ ಚಂದ್ರಬಾಬು ನಾಯ್ಡುರವರ ಕುಟುಂಬದ ಆಸ್ತಿ ಸಾವಿರಾರು ಕೋಟಿಗಳಲ್ಲಿ ಇದೆ ಎಂದು 2004ರಲ್ಲಿಯೇ ಅಲ್ಲಿಯ ಅವರ ರಾಜಕೀಯ ವಿರೋಧಿಗಳು ಆರೋಪಗಳನ್ನು ಮಾಡುತ್ತಿದ್ದರು. ಆದರೆ ಅವರ ನಂತರ ಬಂದ ವೈಎಸ್‌ಆರ್ ಆಡಳಿತ ಮತ್ತು ಅವರ ಮನೆಯವರ ಭ್ರಷ್ಟತೆ ಇಂದು ನಾಯ್ಡುರವರನ್ನು ಅಲ್ಲಿ ಸಂತನನ್ನಾಗಿ ಮಾಡಿದೆಯೇನೊ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇಂದು ಇಡೀ ದೇಶದಲ್ಲಿ ತಮ್ಮ ಕುಟುಂಬದ ರಾಜಕೀಯ ಅಧಿಕಾರ ದುರುಪಯೋಗಪಡಿಸಿಕೊಂಡು ಅತಿ ಹೆಚ್ಚು ಹಣ ಮತ್ತು ಬೇನಾಮಿ ಆಸ್ತಿ ಸಂಪಾದಿಸಿದ ರಾಜಕಾರಣಿ ಇದ್ದರೆ ಅದು ಜಗನ್‌ಮೋಹನ್ ರೆಡ್ಡಿ. ತನ್ನ ತಂದೆ ಮುಖ್ಯಮಂತ್ರಿಯಾಗಿದ್ದ ಕೇವಲ ಐದೂವರೆ ವರ್ಷಗಳಲ್ಲಿ ಈ ಮಟ್ಟದ ಅಕ್ರಮ ಆಸ್ತಿ ಮತ್ತು ರಾಜಕೀಯ ಬಲವನ್ನು ದೇಶದ ಇನ್ನೊಂದು ರಾಜಕೀಯ ಕುಟುಂಬ ಮಾಡಿರುವ ಸಾಧ್ಯತೆ ಕಮ್ಮಿ. ನಮ್ಮ ರಾಜ್ಯದ ಯಡ್ಡಯೂರಪ್ಪನವರಿಗಿಂತ ಹೆಚ್ಚಿನ ಮಟ್ಟದ ನಿರಂಕುಶತೆ ಮತ್ತು ಇನ್ನೂ ಹೆಚ್ಚಿನ ಸರ್ವಾಧಿಕಾರತ್ವ ಇದ್ದ ವ್ಯಕ್ತಿ ರಾಜಶೇಖರ ರೆಡ್ಡಿ. 2009ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋತಿದ್ದರೆ ಅದಕ್ಕೆ ಕಾರಣ ಅಲ್ಲಿ  ಕಾಂಗ್ರೆಸ್‌ನ ಹಣಕಾಸು ಸಂಪನ್ಮೂಲಗಳನ್ನು ಸರಿಗಟ್ಟಲಾಗದೆ ಹೋದದ್ದು. ರಾಜಶೇಖರ ರೆಡ್ಡಿ ಬದುಕಿದ್ದರೆ ಅವರು ಇಂದು ಎದುರಿಸಬಹುದಿದ್ದ ಸ್ಥಿತಿ ಬಹುಶಃ ನಮ್ಮ ರಾಜ್ಯದಲ್ಲಿ ಇಂದು ಯಡ್ಡಯೂರಪ್ಪ ಎದುರಿಸುತ್ತಿರುವ ಸ್ಥಿತಿಗಿಂತ ಭಿನ್ನವಿರುತ್ತಿರಲಿಲ್ಲ. ಮಗನ ಸ್ಥಾನದಲ್ಲಿ ಅಪ್ಪ-ಮಗ ಇಬ್ಬರೂ ಇರುತ್ತಿದ್ದರು. (ಇದನ್ನು ಅಷ್ಟು ಖಚಿತವಾಗಿ ಹೇಳಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಜನಾರ್ದನ ರೆಡ್ಡಿ, ರಾಜಶೇಖರ ರೆಡ್ಡಿ, ಜಗನ್‌ಮೋಹನ್ ರೆಡ್ಡಿ ಇವರ ಮೇಲೆಲ್ಲ ಸಿಬಿಐ ಈ ರೀತಿ ಎರಗಿ ಬೀಳುತ್ತಿತ್ತು ಎಂದು ಅಷ್ಟೇನೂ ಸ್ವಾಯತ್ತವಲ್ಲದ, ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷದ ಒಲವುಗಳನ್ನು ಅರಿತು ಕೆಲಸ ಮಾಡುವ ಸಿಬಿಐ ಸಂಸ್ಥೆಯ ಇತಿಹಾಸ ಅರಿತವರು ಹೇಳಲಾರರು. ಆದರೆ, ಸಿಬಿಐ ಇವೆಲ್ಲವನ್ನೂ ಮೀರಿ ಕಾರ್ಯ ನಿರ್ವಹಿಸಬೇಕಾದ ಸಂದರ್ಭಗಳು ಬರುತ್ತವೆ.  ಉದಾಹರಣೆಗೆ, ಸುಪ್ರೀಮ್‌ಕೋರ್ಟ್ ಆದೇಶದ ಮೇರೆಗೆ, ಮತ್ತು ನಮ್ಮ ನ್ಯಾಯಾಂಗ ಭ್ರಷ್ಟವಾಗಿಲ್ಲದ ಸಂದರ್ಭದಲ್ಲಿ.)

ಇನ್ನು ನಮ್ಮ ರಾಜ್ಯದಲ್ಲಿ 2000 ದಿಂದೀಚೆಗೆ ನಡೆದಿರುವ ಭ್ರಷ್ಟಾಚಾರ ಗೊತ್ತಿರುವುದೆ. ಪ್ರತಿ ಮಂತ್ರಿ-ಮುಖ್ಯಮಂತ್ರಿಯೂ ಹಿಂದಿನ ಮಂತ್ರಿ-ಮುಖ್ಯಮಂತ್ರಿಯನ್ನು ಮೀರಿಸುತ್ತ ಬಂದರು. ಈ ಸ್ವಚ್ಛಂದ ಭ್ರಷ್ಟಾಚಾರದ ಪ್ರಯುಕ್ತವಾಗಿಯೇ ಒಮ್ಮೆ ರಾಜ್ಯದ ಐದು ಜನ ಶಾಸಕರು ಜೈಲಿನಲ್ಲಿ ಇದ್ದರು. ರಾಜ್ಯದ ಪುಣ್ಯವೋ ಪಾಪವೋ ಈಗ ಎಲ್ಲರೂ ಹೊರಗಿದ್ದಾರೆ. (ಇನ್ನೂ ಒಳಗಿರುವವರ ಶಾಸಕತ್ವ ಈಗಾಗಲೆ ಮುಗಿದಿದೆ, ಇಲ್ಲವೆ ಕೆಲವೇ ದಿನಗಳಲ್ಲಿ ಮುಗಿಯಲಿದೆ.)

ಒಂದು ರೀತಿಯಲ್ಲಿ ತಮಿಳುನಾಡಿನ ಜನರಿಗಿಂತ ನಮ್ಮ ರಾಜ್ಯದ ಮತ್ತು ಆಂಧ್ರಪ್ರದೇಶದ ಜನ ಕಮ್ಮಿ ನ್ಯಾಯವಂತಿಕೆ ತೋರಿಸುತ್ತಿದ್ದಾರೆ. ಅವರ ನ್ಯಾಯಾನ್ಯಾಯ ವಿವೇಚನೆಗೆ ರೋಗ ಬಡಿದಿರುವುದು ಜಾತಿ ಎಂಬ ಕ್ಷುದ್ರ ಆಲೋಚನೆಯಿಂದ. ಆಂಧ್ರದಲ್ಲಿ ಕೇವಲ  ಐದಾರು ಪ್ರತಿಶತ ಇರುವ ರೆಡ್ಡಿ ಜಾತಿಯ “ಜಾತಿವಾದಿ” ಜನ ಜಗನ್‌ಮೋಹನ್ ರೆಡ್ಡಿಯ ಪರ ನಿಂತಿರುವ ಹಾಗಿದೆ. ಅವರಿಗೆ ಎಲ್ಲಕ್ಕಿಂತ ಜಾತಿ ಮುಖ್ಯವಾಗಿದೆ. ಜಗನ್ ಬಂಧನ ಮುಂದಿನ ದಿನಗಳಲ್ಲಿ ಆತನಿಗೆ ಇನ್ನೂ ಹೆಚ್ಚಿನ ರಾಜಕೀಯ ಮತ್ತು ಜಾತಿ ಬಲ ತಂದುಕೊಟ್ಟರೂ ಆಶ್ಚರ್ಯಪಡುವ ಹಾಗೆ ಇಲ್ಲ. ಇನ್ನು ಒಂದೆರಡು ವಾರದಲ್ಲಿ ಅಲ್ಲಿ ನಡೆಯಲಿರುವ 18 ವಿಧಾನಸಭೆ ಮತ್ತು ಒಂದು ಲೋಕಸಭೆ ಉಪಚುನಾವಣೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಆತನ ವೈಕಾಪಾ (ವೈಎಸ್‍ಆರ್ ಕಾಂಗ್ರೆಸ್ ಪಾರ್ಟಿ) ಗೆದ್ದರೆ ಆಶ್ಚರ್ಯಪಡುವಂತಹುದ್ದೇನೂ ಇಲ್ಲ. ಕರ್ನಾಟಕದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ. ಸುಮಾರು 14-15 ಪ್ರತಿಶತ ಇರುವ ಲಿಂಗಾಯತ ಜಾತಿಯ “ಜಾತಿವಾದಿ” ಜನ ಯಡ್ಡಯೂರಪ್ಪನವರ ಪರ ಇರುವಂತೆ ತೋರಿಸುತ್ತಿದ್ದಾರೆ. ಉಗಿಸಿಕೊಳ್ಳಲೂ ಯೋಗ್ಯರಲ್ಲದ, ಬಸವಣ್ಣನ ಹೆಸರು ಹೇಳಲೂ ಅರ್ಹರಲ್ಲದ ಕೆಲವು ಹೀನ ಮಠಾಧೀಶರಂತೂ ಈ ಸಮುದಾಯದ ಸಾಂಘಿಕ ಮತ್ತು ಸಮಷ್ಟಿ ನ್ಯಾಯಪ್ರಜ್ಞೆಯನ್ನೇ ಅವಮಾನ ಮಾಡುತ್ತಿದ್ದಾರೆ. ಕೆಲವು ನಿವೃತ್ತ ನ್ಯಾಯಾಧೀಶರೂ ಜಾತಿ ಕಾರಣಕ್ಕೆ ತಮ್ಮ ನ್ಯಾಯದ ಪರಿಕಲ್ಪನೆಯನ್ನೇ ಬದಲಾಯಿಸಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ರುಜುವಾತಾದರೂ ಹಲವು ಕ್ಷೇತ್ರಗಳಲ್ಲಿ ಯಡ್ಡಯೂರಪ್ಪ ಮತ್ತು ಅವರ ಬೆಂಬಲಿಗರನ್ನು ಜಾತಿವಾದಿಗಳು ಗೆಲ್ಲಿಸುವ ಮತ್ತು ಅವರ ವಿರೋಧಿಗಳನ್ನು ಸೋಲಿಸುವ ಎಲ್ಲಾ ಸಾಧ್ಯತೆಗಳೂ ಇವೆ.  ಜಾತಿವಾದಿಗಳಿಗೆ ತಮ್ಮ ಜಾತಿಯ ಮುಖಂಡನೊಬ್ಬ ಮಾಡಿದ ಭ್ರಷ್ಟಾಚಾರ ಭ್ರಷ್ಟಾಚಾರ ಅಲ್ಲವೇ ಅಲ್ಲ. ಬೇರೆ ಜಾತಿಯವನು ಮಾಡಿದರೆ ಮಾತ್ರ ಅದು ಭ್ರಷ್ಟಾಚಾರ.

ನೆನ್ನೆಯ ಬಂಧನ ನನ್ನನ್ನೂ ಒಳಗೊಂಡಂತೆ ದೇಶದ ಅನೇಕ ಪ್ರಜಾಪ್ರಭುತ್ವ ಪ್ರೇಮಿಗಳಲ್ಲಿ ಒಂದಿಷ್ಟು ಸಂತಸ ತಂದಿರಬಹುದು. ಆದರೆ, ಈಗಾಗಲೆ ಇಂತಹ ಹಲವಾರು ಬಂಧನಗಳು ಆಗಿಹೋಗಿವೆ. ಇವರು ಜೈಲಿನಿಂದ ಹೊರಗೆ ಬಂದಾಗ ಆರತಿ ಬೆಳಗಿ ವೀರೋಚಿತ ಸ್ವಾಗತಗಳು ಸಿಗುತ್ತವೆ. ಈ ನೆನಪು ಮತ್ತು ವಾಸ್ತವವೇ ನಮ್ಮೆಲ್ಲರನ್ನು ಒಂದೆಡೆಗೆ ಕಾರ್ಯೋನ್ಮುಖರಾಗಲು ಎಳೆಯಬೇಕು. ಆದರೆ ಎಲ್ಲಕ್ಕಿಂತ ಸುಲಭವಾಗಿ ಇದು ನಮ್ಮನ್ನು ಸಿನಿಕರನ್ನಾಗಿ ಮಾಡುತ್ತಿದೆ.

ಏನಾಗಬೇಕು ಎಂದು ಗೊತ್ತಿರುವವರು ಇಲ್ಲಿ ಅನೇಕರಿದ್ದಾರೆ. ಹೇಗೆ ಮಾಡಬೇಕು ಎಂದು ತೋರಿಸಲು ಮಾತ್ರ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ದೇಶದ ಪ್ರಜೆಗಳಲ್ಲಿ ಜಾತಿ ಮತ್ತು ಸ್ವಹಿತಾಸಕ್ತಿ ಮೀರಿದ ನ್ಯಾಯಪ್ರಜ್ಞೆ ಬೆಳೆಯದ ಹೊರತು ಇಲ್ಲಿ ಗುಣಾತ್ಮಕ ಪರಿಣಾಮಗಳು ಮತ್ತು ಬದಲಾವಣೆಗಳು ಸಾಧ್ಯವಾಗುವುದಿಲ್ಲ. ಅಂತಹ ಪರಿವರ್ತನೆಯನ್ನು ಸಾಧ್ಯವಾಗಿಸಿಕೊಳ್ಳುವುದು ಹೇಗೆ?

ಬೆತ್ತಲಾದರು, ನಮ್ಮ ಕರ್ನಾಟಕದ ನಕಲಿ ಬಸವಣ್ಣ


– ಡಾ.ಎನ್. ಜಗದೀಶ್ ಕೊಪ್ಪ


 

ನಮ್ಮ ಕರ್ನಾಟಕ ಸರ್ಕಾರದ ಘನವೆತ್ತ ಅಬಕಾರಿ ಸಚಿವರಾದ ಸಿ.ರೇಣುಕಾಚಾರ್ಯರಿಂದ, ಬಾಡಿಗೆ ಜನರ ಸಮಾವೇಶಗಳಲ್ಲಿ, ದೇವರಾಜ ಅರಸುವಿನಿಂದ ಹಿಡಿದು, ಗಾಂಧಿ, ಬುದ್ಧ, ಅಂಬೇಡ್ಕರ್‌ವರೆಗೆ ಹೋಲಿಕೆಯಾಗಿ, ನಂತರ ಒಮ್ಮೊಮ್ಮೆ ಒಳಗಿರುವ ಪರಮಾತ್ಮ ಹೆಚ್ಚಾದಾಗ, ಕರ್ನಾಟಕದ ಬಸವೇಶ್ವರ ಎಂದೆಲ್ಲಾ ಹಾಡಿ ಹೊಗಳಿಸಿಕೊಂಡಿದ್ದ, ಲಿಂಗಾಯತ ಸಮುದಾಯದ ಮಹಾನ್ ನಾಯಕ(?) ಯಡಿಯೂರಪ್ಪಗೆ ಸಿ.ಬಿ.ಐ. ನೇಣಿನ ಕುಣಿಕೆ ಹತ್ತಿರವಾಗುತ್ತಿದೆ. ಶುಕ್ರವಾರ ಬೆಳಿಗ್ಗೆ ಸಿ.ಇ.ಸಿ. ತನ್ನ ವರದಿಯನ್ನ ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸುತ್ತಿದ್ದಂತೆ, ಯಡಿಯೂರಪ್ಪನವರ ರಾಜಕೀಯದ ಅಂತಿಮ  ಅಧ್ಯಾಯ ಆರಂಭಗೊಂಡಿದೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇಂತಹ ಅಧ್ವಾನದ, ಭ್ರಷ್ಟಾಚಾರದ ಶಿಖರದಂತಿರುವ ಮುಖ್ಯಮಂತ್ರಿಯನ್ನು ಯಾರೂ ನೋಡಿರಲಿಲ್ಲ. ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಯಾವ ಅಳುಕು ಇಲ್ಲದೆ, ಭಂಡತನದಿಂದ ಜಾತಿ ಮತ್ತು ಧರ್ಮದ ರಾಜಕೀಯ ಮಾಡಿದ ಮುಖ್ಯಮಂತ್ರಿ ಎಂದರೆ, ಅದು ಯಡಿಯೂರಪ್ಪ ಮಾತ್ರ.

ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂಬ ಕುಖ್ಯಾತಿಗೆ ಒಳಗಾದ ಈ ವ್ಯಕ್ತಿಗೆ ಇನ್ನಾದರೂ ಬುದ್ಧಿ ಬರಬಹುದು ಎಂದು ಜನತೆ ನಿರೀಕ್ಷಿಸಿದ್ದರು. ಆದರೆ, ಈ ಮನುಷ್ಯ ಮಾಡಿದ್ದೇನು? ಜೈಲಿನಿಂದ ಹೊರಬರುವಾಗಲೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಜೈಲು ಸೇರಿ ನಂತರ ಬಿಡುಗಡೆಗೊಂಡಂತೆ ತನ್ನ ಎರಡು ಬೆರಳು ಎತ್ತಿ ತೋರಿಸಿಕೊಂಡು ಹೊರಬಂದ ಬಗೆಯನ್ನು ಗಮನಿಸಿದ ಕರ್ನಾಟಕದ ಜನತೆ ಅಂದೇ ತೀರ್ಮಾನಿಸಿಬಿಟ್ಟಿತು, ಇದೊಂದು ಅವಿವೇಕತನದ ಪರಕಾಷ್ಟೆ ಮತ್ತು ರಿಪೇರಿಯಾಗದ ಗಿರಾಕಿ  ಎಂದು.

ಪರಪ್ಪನ ಅಗ್ರಹಾರದ ಜೈಲು ಪಾಲಾಗುತಿದ್ದಂತೆ, ಇಲ್ಲಸಲ್ಲದ ರೋಗದ ನೆಪದಲ್ಲಿ ಜಯದೇವ ಆಸ್ಪತ್ರೆ, ನಂತರ ಬೆಡ್‌ಶೀಟ್ ಮರೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸೇರಿ ನಾಟಕವಾಡಿದ ಇದೇ ಯಡಿಯೂರಪ್ಪ, ಬಿಡುಗಡೆಯ ನಂತರ ಮುಖ್ಯಮಂತ್ರಿ ಕುರ್ಚಿಗಾಗಿ, ಇಡೀ ದೇಶ ಮತ್ತು ರಾಜ್ಯವನ್ನು ಹುಚ್ಚುನಾಯಿ ಕಡಿದ ವ್ಯಕ್ತಿಯಂತೆ ತಿರುಗುವುದನ್ನು ಗಮನಿಸಿದರೆ, ಈ ವ್ಯಕ್ತಿಯ ಆಕಾಂಕ್ಷೆ, ಅಧಿಕಾರದ ಲಾಲಸೆ ಯಾವ ಮಟ್ಟದಲ್ಲಿದೆ ಎಂಬುದನ್ನ ನೀವೇ ಊಹಿಸಬಹುದು.

ಅಧಿಕಾರದ ಚುಕ್ಕಾಣಿ ಹಿಡಿದ ಯಾವುದೇ ನಾಯಕನ ಸುತ್ತ ಒಳ್ಳೆಯ ಅಧಿಕಾರಿಗಳ ವರ್ಗ, ಅಥವಾ ಸಹೋದ್ಯೋಗಿಗಳು ಇರಬೇಕು. ಆದರೆ, ಯಡಿಯೂರಪ್ಪನವರ ಬಳಿ ಇದ್ದವರ ಪಟ್ಟಿಯನ್ನ ಒಮ್ಮೆ ಹಾಗೇ ಗಮನಿಸಿ ನೋಡಿ, ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ಯಮಣ್ಯ ನಾಯ್ಡು, ಹರತಾಳು ಹಾಲಪ್ಪ, ಲಕ್ಷಣ ಸವಡಿ, ಸಿ.ಸಿ.ಪಾಟೀಲ್, ಕೃಷ್ಣ ಪಾಲೇಮರ್, ಜನಾರ್ಧನ ರೆಡ್ಡಿ,… ಇವರುಗಳ ಪುರಾಣವನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಹೋಗಲಿ ಒಳ್ಳೆಯ ರಾಜಕೀಯ ಸಲಹೆಗಾರರು ಇದ್ದರೆ? ಅದೂ ಇಲ್ಲ. ಯಡ್ಡಿಯ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ. ಪುಟ್ಟಸ್ವಾಮಿ ಎಂಬ ಆಸಾಮಿ ತನ್ನ ಹುದ್ದೆಯ ಜವಾಬ್ದಾರಿಯನ್ನು ಮರೆತು ಯಡಿಯೂರಪ್ಪನ ಪರವಾಗಿ ದೇವೇಗೌಡರ ಕುಟುಂಬದ ವಿರುದ್ಧ ಬೊಗಳುವ ನಾಯಿಯಾಗಿ ಕೆಲಸ ಮಾಡಿದ್ದೇ ಹೆಚ್ಚು. ಈತನ ಪುರಾಣ ಕೂಡ ರೋಚಕವಾದುದು, ಜೊತೆಗೆ ಅದೊಂದು ದೊಡ್ಡ ಅಧ್ಯಾಯ.

ಈತ ಮಂಡ್ಯ ಜಿಲ್ಲೆ ಮದ್ದೂರು ತಾಲೋಕಿನ ಪ್ರಮುಖ ಹೋಬಳಿ ಕೇಂದ್ರವಾದ ನನ್ನೂರಾದ ಕೊಪ್ಪ ಗ್ರಾಮದಿಂದ ಐದು ಕಿ.ಮಿ. ದೂರವಿರುವ ಬೆಕ್ಕಳಲೆ ಗ್ರಾಮದವನು. ಮಂಡ್ಯ ಹಾಗೂ ತುಮಕೂರು ಜಿಲ್ಲೆಯನ್ನು ಬೇರ್ಪಡಿಸುವ ಶಿಂಷಾ ನದಿ ತೀರದ ಕಟ್ಟಕಡೆಯ ಆ ಗ್ರಾಮದಿಂದ ಬಂದ ಈ ವ್ಯಕ್ತಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, 1966ರಲ್ಲಿ ಬೆಂಗಳೂರಿನ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ( ಈಗಿನ ಬಿ.ಡಿ.ಎ.) ನಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆಗೆ ಸೇರಿದವನು. 1976ರಲ್ಲಿ ತಾನೇ ನಾಯಕನಾಗಿ ನಟಿಸಿ, ನಿರ್ಮಿಸಿದ ಕನ್ನಡ ಚಿತ್ರವೊಂದರ ಮೂಲಕ ಬರೋಬ್ಬರಿ 36 ಲಕ್ಷ ಕಳೆದುಕೊಂಡವನು (ಜಯಂತಿ ಈ ಚಿತ್ರದ ನಾಯಕಿ). ನಿವೃತ್ತಿಯ ದಿನ ಹತ್ತಿರವಾಗುತಿದ್ದಂತೆ ತನ್ನ ಗಾಣಿಗ ಜಾತಿಸಮುದಾಯವನ್ನು ರಾಜ್ಯಾದ್ಯಂತ ಸಂಘಟಿಸಿ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರ ಬೆಂಬಲದಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು  ಎಂ.ಎಲ್.ಸಿ. ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷನಾಗಿ ಅಧಿಕಾರದ ರುಚಿ ಕಂಡವನು. ಹತ್ತು ವರ್ಷದ ಹಿಂದೆ ಬೃಹತ್ ಉದ್ದಿಮೆದಾರನಾಗಲು ಹೊರಟು, ಮೈಸೂರಿನ ವಿಮಾನ ನಿಲ್ದಾಣದ ಎದುರು (ನಂಜನಗೂಡು ರಸ್ತೆಯ ಮಂಡಕಳ್ಳಿ ಬಳಿ) ಪ್ಲಾಸ್ಟಿಕ್ ಚೀಲ ತಯಾರಿಸುವ ಫ್ಯಾಕ್ಟರಿ ತೆಗೆದು ಮುಚ್ಚಿದವನು ( ಬಿ.ಜೆ.ಪಿ. ಸ್ಯಾಕ್ಸ್ ಪ್ರೈ ಲಿಮಿಟೆಡ್). ಇದಕ್ಕಾಗಿ ಕೆ.ಎಸ್.ಎಫ್.ಸಿ.ಯಿಂದ ಮಾಡಿದ ಸಾಲ ಒಂದೂವರೆ ಕೋಟಿ ರೂಪಾಯಿಗೂ ಅಧಿಕ. ಈಗ ಅಂದಾಜು ಮೂರು ಕೋಟಿ ರೂ ದಾಟಿರಬಹುದು. ಸಾಲ ತೀರಿಸಲಾಗದೇ, ಯಡಿಯೂರಪ್ಪನ ಮೊರೆ ಹೊಕ್ಕ ಈತ ಸುದ್ದಿಗೋಷ್ಟಿಯಲ್ಲಿ ಸತ್ಯ ಹರಿಶ್ಚಂದ್ರನ ತುಂಡಿನಂತೆ ಮಾತನಾಡುವುದನ್ನು ನೀವೆಲ್ಲಾ ಗಮನಿಸಿದ್ದೀರಿ.

ಈವರೆಗೆ ಯಡಿಯೂರಪ್ಪ ಮಾಡಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಕೇವಲ ಕರ್ನಾಟಕದಲ್ಲಿ ಮಾತ್ರ ಸುದ್ಧಿಯಾಗುತಿತ್ತು. ಈಗ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿ ರಾಷ್ಟ್ರಮಟ್ಟದ ಚರ್ಚೆಯಾಗಿ ಮಾರ್ಪಟ್ಟು ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಇಷ್ಟೆಲ್ಲಾ ಅಪರಾಧ ಮಾಡಿಯೂ, ಯಡಿಯೂರಪ್ಪ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವ ದಾಟಿ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಹನ್ನೆರೆಡು ವರ್ಷ ಅನ್ನ ಕಾಣದ ವ್ಯಕ್ತಿ ಭಕ್ಷಭೋಜನದ ತಟ್ಟೆಯ ಎದರು ಕುಳಿತು ತಿನ್ನುವಂತೆ, ಮುಖ್ಯಮಂತ್ರಿಯ ಗಾದಿಯಲ್ಲಿ ಕುಳಿತು, ದೇಣಿಗೆ ಹೆಸರಿನಲ್ಲಿ, ತಾನು, ತನ್ನ ಮಕ್ಕಳು, ಅಳಿಯ ಸೇರಿ ಎಂಜಲು ಕಾಸಿಗೆ ಕೈಯೊಡ್ಡಿದ ರೀತಿ ನಿಜಕ್ಕೂ ಸಾರ್ವಜನಿಕವಾಗಿ ಅಸಹ್ಯ ಮೂಡಿಸುವಂತಹದ್ದು.

ಇಡೀ ಯಡಿಯೂರಪ್ಪನವರ ಕುಟುಂಬವನ್ನು ದಾರಿ ತಪ್ಪಿಸಿದ್ದು ಮಾಲೂರಿನ ಶಾಸಕ ಕೃಷ್ಣಯ್ಯ ಶೆಟ್ಟಿ ಎಂಬಾತ. ಸದಾ ತಿರುಪತಿ ತಿಮ್ಮಪ್ಪನ ಧ್ಯಾನದಲ್ಲಿರುವ ಈತ ಕೈಯಲ್ಲಿ ಉಂಡೆನಾಮ ಹಿಡಿದು ತಿರುಗುವ ಆಸಾಮಿ. ನೀವು ಯಾಮಾರಿದರೆ, ಹಣೆಗೆ ಮಾತ್ರವಲ್ಲ, ಮುಕುಳಿಗೂ ನಾಮ ಬಳಿಯುವಲ್ಲಿ ನಿಸ್ಸೀಮ.

ತನ್ನ ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ಪಡೆದರೆ ತಪ್ಪೇನು ಎಂದು ವಾದಿಸುವ ಯಡಿಯೂರಪ್ಪನವರಿಗೆ ನಮ್ಮ ಪ್ರಶ್ನೆ ಇಷ್ಟೆ: ನಲವತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು, ಶಾಸಕನಾದಾಗ, ವಿರೋಧಪಕ್ಷದ ನಾಯಕನಾದಾಗ, ಅಥವಾ ಉಪಮುಖ್ಯಮಂತ್ರಿಯಾಗಿದ್ದಾಗ ಬಾರದ ದೇಣಿಗೆ ಮುಖ್ಯಮಂತ್ರಿಯಾದಾಗ ಹೇಗೆ ಬಂತು?

ದೇಣಿಗೆ ಪಡೆದದ್ದು ಸತ್ಯವೇ ಆಗಿದ್ದರೆ, ಸುದ್ದಿ ಬಹಿರಂಗವಾಗುತಿದ್ದಂತೆ ರಾತ್ರೋರಾತ್ರಿ ಬೆಂಗಳೂರಿನ ರಾಜಮಹಲ್ ವಿಲಾಸ ಬಡಾವಣೆಯ ಮೈಸೂರು ಬ್ಯಾಂಕಿನಿಂದ 20 ಕೋಟಿ ಹಣವನ್ನು ತೆಗೆದು ಖಾತೆ ಮುಚ್ಚಿದ್ದು ಏಕೆ? ಅಕ್ರಮಗಳ ಕುರಿತು ಧಾರವಾಡದ ಎಸ್.ಆರ್. ಹಿರೇಮಠ ಸಿ.ಇ.ಸಿ.ಗೆ ದಾಖಲೆ ಸಲ್ಲಿಸುತಿದ್ದಂತೆ ಗಣಿ ಉದ್ಯಮಿ ಪ್ರವೀಣ್ ಚಂದ್ರ ಎಂಬುವರಿಂದ ಪಡೆದ ಐದು ಕೋಟಿ ದೇಣಿಗೆ ಹಣವನ್ನು ಈಗ ಸಾಲ ಎಂದು ವಾದಿಸುತ್ತಿರುವುದಾದರು ಏಕೆ? 

ಕರ್ನಾಟಕದ ಜನತೆಯನ್ನು ಯಡಿಯೂರಪ್ಪ ಕಿವಿಗೆ ಹೂ ಮುಡಿಯುವ ಗಿರಾಕಿಗಳು ಎಂದು ಭಾವಿಸಿದಂತಿದೆ.

ತಾನು ಹಂಚಿದ ಎಂಜಲು ಪ್ರಸಾದ ತಿಂದು, ಬಹುಪರಾಕು ಹೇಳುವ ಕೆಲವು ಮಾನಗೆಟ್ಟ ಮಠಾಧೀಶರು ಮತ್ತು ಲಿಂಗಾಯುತ ನಾಯಕರಿಂದ ಆಧುನಿಕ ಬಸವೇಶ್ವರ ಎಂದು ಹಾಡಿ ಹೊಗಳಿಸಿಕೊಳ್ಳುವ ಯಡಿಯೂರಪ್ಪ ಒಮ್ಮೆ ಗಾಲಿ ಜನಾರ್ಧನ ರೆಡ್ಡಿಯನ್ನು ನೆನಪಿಸಿಕೊಳ್ಳುವುದು ಒಳಿತು. ತಾನು ಅಪ್ಪಟ 24 ಕ್ಯಾರೆಟ್ ಚಿನ್ನ ಎಂದು ಘೋಷಿಸಿಕೊಂಡಿದ್ದ ಈ ಗಣಿಕಳ್ಳ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಾ, ತುಕ್ಕುಹಿಡಿಯುವ ಕಬ್ಬಿಣವಾಗಿದ್ದಾನೆ. ಈತನ ಅಮೇದ್ಯ ತಿಂದು ಬಳ್ಳಾರಿಯ ಬೀದಿ, ಬೀದಿಯಲ್ಲಿ ಆಧುನಿಕ ಕೃಷ್ಣದೇವರಾಯ ಎಂದು ಹಾಡಿ ಹೊಗಳಿದ ನಾಯಿ ನರಿಗಳೆಲ್ಲಾ ಈಗ ಚೆಲ್ಲಾಪಿಲ್ಲಿಯಾಗಿವೆ.

ತಾನು ಎಸಗಿರುವ ಅಕ್ಷಮ್ಯ ಅಪರಾಧಗಳಿಗೆ ಯಾವ ಯಜ್ಞವಾಗಲಿ, ದೇವರಾಗಲಿ ರಕ್ಷಣೆಗೆ ಬರಲಾರವು. ಈ ಸತ್ಯವನ್ನು ಅರಿತು, ಕಾನೂನಿನ ಮುಂದೆ ತಲೆಬಾಗಿ, ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ನಿವೃತ್ತಿಯಾಗುವುದೊಂದೇ ಈಗ ಯಡಿಯೂರಪ್ಪನವರ ಪಾಲಿಗೆ ಉಳಿದಿರುವ ಏಕೈಕ ಮಾರ್ಗ. ಅದನ್ನು ಹೊರತು ಪಡಿಸಿ, ನನ್ನ ಈ ಅವಸ್ಥೆಗೆ ವಿರೋಧ ಪಕ್ಷಗಳು ಕಾರಣ, ನನ್ನ ಪಕ್ಷದ ಹಿತಶತ್ರುಗಳು ಕಾರಣ ಎಂದು ಬೊಬ್ಬಿರಿದರೆ, ಅದನ್ನು ಜಾಣತನವೆಂದು ಕರೆಯುವುದಿಲ್ಲ. ಬದಲಿಗೆ, ಹುಚ್ಚುತನ ಎಂದು ಕರೆಯಲಾಗುತ್ತದೆ.


ಕಳೆದ ಶುಕ್ರವಾರ Central Empowered Committee ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ ನಮ್ಮ ಓದುಗರಿಗೆ ಇಲ್ಲಿ ಲಭ್ಯವಿದೆ.

ಮತ್ತೆ ಕೋಮಾ ಸ್ಥಿತಿಯಲ್ಲಿ ಲೋಕಪಾಲ ಮಸೂದೆ

-ಡಾ.ಎಸ್.ಬಿ.ಜೋಗುರ

ಕಳೆದ ವರ್ಷವಿಡೀ  ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟ ಜನಲೋಕಪಾಲ್ ಮಸೂದೆ ಸಿಡಿಯದಿರುವ ಪಟಾಕಿಯಂತೆ ಟುಸ್… ಎಂದದ್ದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಾಮಾಣಿಕವಾಗಿ ಮಾತನಾಡುವವರಿಗೆ ಕೊಂಚ ನಿರಾಶೆಯನ್ನುಂಟು ಮಾಡಿರುವುದು ಸ್ವಾಭಾವಿಕವೇ ಆದರೂ ರಾಜಕೀಯ ಶಕ್ತಿಗಳು ಹಗ್ಗ ಕೊಟ್ಟು ಕೈ ಕಟ್ಟಿಕೊಳ್ಳಲು ತಯಾರಿಲ್ಲ ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ. ಅವೇನಿದ್ದರೂ ಬಾಯಿ ಮಾತಿನ ಮೂಲಕವೇ ರಾಜಕೀಯ ವಿಪ್ಲವಗಳನ್ನು ಹುಟ್ಟುಹಾಕಬಲ್ಲವೇ ಹೊರತು ಕಾರ್ಯಾತ್ಮಕವಾಗಿ ಅಲ್ಲ. ಹಾಗಾಗಿಯೇ ರಾಜ್ಯಸಭೆಯಲ್ಲಿ ಅದಕ್ಕೆ ಗ್ರೀನ್ ಸಿಗ್ನಲ್ ಸಿಗದಿರುವುದು ನಿರೀಕ್ಷಿತವೇ ಎನ್ನುವಂತಿದೆ. ಆಳುವ ಮತ್ತು ವಿರೋಧ ಪಕ್ಷಗಳೆರಡೂ ಚುನಾವಣೆಯ ಸಂದರ್ಭದಲ್ಲಿ ಕೋಮಾ ಸ್ಥಿತಿಯಲ್ಲಿರುವ ಈ ಲೋಕಪಾಲ್ ಮಸೂದೆಯ ಬಗ್ಗೆ ತಮಗೆ ತಿಳಿದಂತೆ ಮತದಾರನ ಎದುರು ವಿವರಿಸಿ ಲಾಭ ಗಿಟ್ಟಿಸಿಕೊಳ್ಳುವ ಕಸರತ್ತಿನಲ್ಲಿದ್ದಾರೆ. ಈ ಲೋಕಪಾಲ ಬಿಲ್ ರಾಜ್ಯಸಭೆಯವರೆಗೂ ಬಂದು ಅಟಕಾಯಿಸಿಕೊಂಡಿರುವುದು ಇದೇ ಮೊದಲಂತೂ ಅಲ್ಲ. ಈ ಮುಂಚೆ ಸುಮಾರು ಹನ್ನೊಂದು ಬಾರಿ ಈ ಮಸೂದೆಯು ಸದ್ಯದ ಹಂತದವರೆಗೆ ಬಂದು ತಲುಪಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿರುವುದಿದೆ. 1968 ರಿಂದಲೂ ಈ ಬಗೆಯ ಮರಳಿ ಯತ್ನವ ಮಾಡುವ ಕೆಲಸ ನಿರಂತರವಾಗಿ ನಡದೇ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಅದು ಜಾರಿಯಾಗಲಿದೆ ಎಂದೆನ್ನುವಾಗಲೇ ಅದು ಕೋಮಾ ಹಂತವನ್ನು ತಲುಪುವ ಸ್ಥಿತಿ ಮಾಮೂಲಾಗಿದೆ.

ಭ್ರಷ್ಟಾಚಾರ ವಿರೋಧಿ ಆಂದೋಲನ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ದೇಶವ್ಯಾಪಿಯಾದ ಒಂದು ದೊಡ್ಡ ಚಳವಳಿಯನ್ನೇ ರೂಪಿಸಿತ್ತಾದರೂ ಅವರ ಅಂತಿಮ ಉದ್ದೇಶ ಮಾತ್ರ ಸಾಕಾರಗೊಳ್ಳದಿರುವುದು ವಿಷಾದನೀಯವೇ ಹೌದು. ಜಾರಿಗೊಳಿಸುವುದಿದ್ದರೆ ಬಲಿಷ್ಟ ಜನಲೋಕಪಾಲ ಜಾರಿಗೊಳಿಸಿ, ಇಲ್ಲದಿದ್ದರೆ ಬೇಡ ಎಂದು ಪಟ್ಟು ಹಿಡಿದ ಅಣ್ಣಾ ತನ್ನ ಆರೋಗ್ಯವನ್ನು ನಿರ್ಲಕ್ಷಿಸಿಯೂ ಹೋರಾಟ, ಸತ್ಯಾಗ್ರಹವನ್ನು ಆರಂಭಿಸಿರುವುದಿತ್ತು. ಅಣ್ಣಾನ ಹೋರಾಟಕ್ಕೆ ಸಿಕ್ಕ ಬೆಂಬಲ ಆಳುವ ಪಕ್ಷದ ಸಾಮರ್ಥ್ಯವನ್ನೇ ಕೆಣಕಿದಂತಿತ್ತು. ಹೀಗಾಗಿ ಅಣ್ಣಾನನ್ನು ಬಂಧಿಸಿ ಬಿಡುಗಡೆ ಮಾಡಿಯೂ ಆಯಿತು. ನಂತರ ಬಿಡುಗಡೆ ಮಾಡಿ ಅವರ ಸತ್ಯಾಗ್ರಹಕ್ಕೆ ರಾಮಲೀಲಾದಂತಹ ಚಾರಿತ್ರಿಕವಾದ ಸ್ಥಳವನ್ನೇ ನೀಡಿತು.

ಅಣ್ಣಾ ಒಡ್ಡುವ ಶರತ್ತುಗಳನ್ನು ಒಪ್ಪಿಕೊಂಡು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಸರ್ಕಾರ ರಾಜ್ಯಸಭೆಯಲ್ಲಿ ಜನಲೋಕಪಾಲ ಮಸೂದೆಯನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯುವುದರಲ್ಲಿ ಅದರದೇಯಾದ ಕೆಲ ರಾಜಕೀಯ ಕಾರಣಗಳು ಇರಬಹುದಾದರೂ ಆ ಮೂಲಕ ಪರೋಕ್ಷವಾಗಿ  ಅಣ್ಣಾ ಹೋರಾಟದ ಸತ್ವ ಕಡಿಮೆ ಮಾಡುವಲ್ಲಿಯೂ ಅವರ ರಾಜಕೀಯ ಧೋರಣೆ ಕಾರಣವಾಯಿತು. ಅದೇ ವೇಳೆಗೆ ಈ ಜನಲೋಕಪಾಲ ಮಸೂದೆಯನ್ನು ಯಾರು ವಿರೋಧಿಸಿದರು ಎನ್ನುವುದಕ್ಕಿಂತಲೂ ರಾಜಕೀಯ ಹಿತಾಸಕ್ತಿಗಳ ಗಮನವೇ ಇಲ್ಲಿ ಮುಖ್ಯವಾಗಿ ಬಲಿಷ್ಟ ಲೋಕಪಾಲ ಮಸೂದೆ ಸೊರಗುವಂತಾಯಿತು. ಅದೇ ವೇಳೆಗೆ ಅಣ್ಣಾ ಬಳಗದಲ್ಲಿಯ ಕೆಲವರ ಮಾತುಗಳಲ್ಲಿ ಗೊಂದಲಗಳು, ರಾಜಕೀಯ ಪಕ್ಷವೊಂದರ ಪರವಾದ ಮಾತುಗಳಂತೆ ಕೇಳಬರತೊಡಗಿದವು. ಪರಿಣಾಮವಾಗಿ ಕಳೆದ ಜನವರಿಯಲ್ಲಿ ಅಣ್ಣಾ ಟೀಮಿಗೆ ಇದ್ದ ನಾಯಕತ್ವದ ರಭಸ ವರ್ಷದ ಅಂತ್ಯದಲ್ಲಿ ತನ್ನ ಗಡುಸುತನವನ್ನು ಕಳೆದುಕೊಳ್ಳತೊಡಗಿತು.

ಜನತೆಗೆ ಅದರಲ್ಲೂ ದುಡಿದು ಬದುಕುವ ಸಾಮಾನ್ಯರಿಗೆ ಈ ಲೋಕಪಾಲ ಮಸೂದೆಯ ಜಾರಿಗೊಳ್ಳುವಿಕೆ, ಜಾರಿಯಾಗದಿರುವಿಕೆ ಎರಡೂ ಅಷ್ಟಾಗಿ ಬಾಧಿಸುವುದಿಲ್ಲ. ಹಾಗೆಯೇ ಭ್ರಷ್ಟಾಚಾರದ ವಿರೋಧಿ ಆಂದೋಲನವನ್ನು ನಿರಂತರವಾಗಿ ನೆನಪಿಟ್ಟು ಆ ದಿಶೆಯಲ್ಲಿ ನಡೆಯಬೇಕಾದ ನಿರಂತರ ಹೋರಾಟವನ್ನು ರೂಪಿಸುವಷ್ಟು ಇವರ ಬದುಕು ಸುಭದ್ರವಾಗಿಲ್ಲ. ಈಗ ಅದೇ ಅಣ್ಣಾ ಮತ್ತೆ ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿದರೆ ಸಾಮಾನ್ಯ ಮಧ್ಯಮವರ್ಗದ ಜನ ಮೊದಲಿನ ಹುರುಪಿನಲ್ಲಿಯೇ ಅಣ್ಣಾ ಕೂಗಿಗೆ ಸ್ಪಂದಿಸುತ್ತಾರೆ ಎಂದು ಹೇಳುವಂತಿಲ್ಲ. ಯಾಕೆಂದರೆ ಸಾಮಾನ್ಯನ ಬದುಕೇ ಹಾಗಿದೆ. ಆತ ಯಾವುದನ್ನೂ ತುಂಬಾ ದೀರ್ಘ ಕಾಲದವರೆಗೆ ನೆನಪಿಟ್ಟುಕೊಳ್ಳಲಾರ. ಜೊತೆಗೆ ಅತ್ಯಂತ ಬೇಗ ಆತ ಒಂದು ವ್ಯವಸ್ಥೆಯ ಬಗ್ಗೆ ಸಿನಿಕತನವನ್ನು ಹೊಂದುವುದೂ ಇದೆ.

ನಮ್ಮ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ತಮ್ಮ ಕರಾಳ ವ್ಯವಹಾರಗಳಿಗೆ ಕುತ್ತು ಬರುವಂತಹ ಯಾವ ನಿಯಮಗಳನ್ನೂ ಇಲ್ಲಿಯವರೆಗೆ ಒಪ್ಪಿಕೊಂಡಿರುವುದು ತೀರಾ ಅಪರೂಪ. ಅಂತಹದರಲ್ಲಿ ಪ್ರಧಾನಮಂತ್ರಿಯನ್ನೊಳಗೊಂಡು ಎಲ್ಲರೂ ಲೋಕಪಾಲ ಮಸೂದೆಗೆ ಒಳಪಡಬೇಕು ಎನ್ನುವ ಅಣ್ಣಾನ ಒತ್ತಾಸೆ ಈಡೇರುವದಾದರೂ ಹೇಗೆ..?

ಅಣ್ಣಾ ಜನಲೋಕಪಾಲ ಮಸೂದೆಯ ವಿಷಯದಲ್ಲಿ ತನ್ನ ಮಿತಿಗಳನ್ನೂ ಮೀರಿ ಹೋರಾಟ ಮಾಡಿದ. ಹಾಗೆಯೇ ಹಿಂದೆಂದೂ ಯಾರಿಗೂ ಸಿಗದ ಅಪಾರ ಪ್ರಮಾಣದ ಜನಬೆಂಬಲವೂ ಅವನಿಗೆ ದೊರೆಯಿತು. ಅಂತಿಮವಾಗಿ ಆಗಬೇಕಾದ ಮಹತ್ತರವಾದ ಕೆಲಸವೊಂದು ಹಾಗೇ ಉಳಿದುಹೋಯಿತು. ಪರೋಕ್ಷವಾಗಿ ಈ ಬಗೆಯ ಬಲಿಷ್ಟ ಲೋಕಪಾಲ ಮಸೂದೆ ಬಹುತೇಕ ರಾಜಕಾರಣಿಗಳಿಗೆ ಬೇಕಾಗದಿರುವಂತೆ, ಭ್ರಷ್ಟ ಅಧಿಕಾರಿ ಸಮೂಹಕ್ಕೂ ಬೇಕಾಗಿಲ್ಲ. ಇನ್ನು ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗವಹಿಸಿದ ಜನಸಾಮಾನ್ಯ ಮಾತ್ರ ತನ್ನ ದೈನಂದಿನ ಕೆಲಸ ಕಾರ್ಯಗಳ ನಿರ್ವಹಣೆಯಲ್ಲಿ ಎಂದಿನಂತೆ ಲಂಚ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾ ಹಾಯಾಗಿದ್ದಾನೆ. ಮತ್ತೆ ಅಣ್ಣಾ ಒಂದೊಮ್ಮೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಕರೆ ನೀಡಿದರೆ ಭ್ರಷ್ಟಾಚಾರ ವಿಷಯದಲ್ಲಿ ಅಪಾರ ಪ್ರಮಾಣದಲ್ಲಿ ಮಾತಾಡಿ, ಆ ಬಗ್ಗೆ  ಕೇಳಿ ಯಥಾಸ್ಥಿತಿಯನ್ನೇ ಅನುಭವಿಸುವಂತಾದ ಜನ ಅದೇ ಮೊದಲಿನ ಪ್ರಮಾಣದಲ್ಲಿ ಅಣ್ಣಾಗೆ ಸಾಥ್ ನೀಡುತ್ತಾರೆಂದು ನನಗನಿಸದು.

ವೈಜ್ಞಾನಿಕ ಮನೋಭಾವ ಮತ್ತು ದೇಶದ ಮುನ್ನಡೆಯ ಸಂಬಂಧ

-ಆನಂದ ಪ್ರಸಾದ್

ವಿಜ್ಞಾನವು ಇಂದು ನಮ್ಮ ಜೀವನದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಜೀವನಕ್ಕೆ ನೆಮ್ಮದಿಯನ್ನೂ, ಸಂತೋಷವನ್ನೂ, ಭದ್ರತೆಯನ್ನೂ ಕೊಡುವಲ್ಲಿ ವಿಜ್ಞಾನದ ಪಾತ್ರ ಮಹತ್ತರವಾದುದು. ಒಂದು ಕಾಲವಿತ್ತು, ಅದೂ ಹೆಚ್ಚು ಹಿಂದಿನದಲ್ಲ ಕೆಲವೇ ದಶಕಗಳ ಹಿಂದೆ ಜನ ಪ್ಲೇಗು, ಮಲೇರಿಯಾ, ಕ್ಷಯ, ರೇಬೀಸ್, ಕಾಲರಾ ಮೊದಲಾದ ರೋಗಗಳು ಬಂದರೆ ಸಾವನ್ನೇ ಎದುರು ನೋಡಬೇಕಾಗಿತ್ತು. ವಿಜ್ಞಾನವು ಇವುಗಳ ಕಾರಣಗಳನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಔಷಧಿಗಳನ್ನು ಕಂಡು ಹಿಡಿದು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಲಕ್ಷಾಂತರ ಅಮೂಲ್ಯ ಜೀವಗಳನ್ನು ಉಳಿಸಿದೆ, ಉಳಿಸುತ್ತಿದೆ. ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸಿದ ಕಾರಣವೇ ವಿಜ್ಞಾನಿಗಳು ಇಂಥ ಮುನ್ನಡೆಯನ್ನು ಸಾಧಿಸಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಪರಂಪರೆ ಹಾಗೂ ಸಮುದಾಯದಿಂದ ಭಿನ್ನವಾಗಿ ಚಿಂತಿಸುವವರಿಗೆ ಸೂಕ್ತ ಪ್ರೋತ್ಸಾಹ ಇಲ್ಲ, ಬದಲಿಗೆ ಕಿರುಕುಳ ಸಿಕ್ಕುತ್ತದೆ. ಹೀಗಾಗಿ ಭಾರತವು ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನ ಹೊಂದಿದ್ದರೂ ವಿಶ್ವಖ್ಯಾತಿಯ ವಿಜ್ಞಾನಿಗಳನ್ನು ಬೆಳೆಸಲಿಲ್ಲ. ಲಕ್ಷಾಂತರ ಜೀವಗಳನ್ನು ಉಳಿಸಲು ಕಾರಣವಾದ ವಿಜ್ಞಾನಿಗಳನ್ನು ನಮ್ಮ ಯಾವ ಟಿವಿ ವಾಹಿನಿಗಳೂ ಕೊಂಡಾಡಿದ್ದು, ಹಾಡಿ ಹೊಗಳುವುದು ಬಿಡಿ, ಕನಿಷ್ಠ ಅವರ ಪರಿಚಯವನ್ನೂ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದು ಕಾಣುವುದಿಲ್ಲ. ಆದರೆ ಪವಾಡ ಪುರುಷರನ್ನು ಮಾತ್ರ ಅಪಾರವಾಗಿ ಹಾಡಿ ಹೊಗಳುವುದನ್ನು ಕಾಣುತ್ತೇವೆ. ಜ್ಯೋತಿಷಿಗಳು, ವಾಸ್ತು ಎಂಬ ಹೆಸರಿನಲ್ಲಿ ಮೋಸ ಮಾಡುವ ಜನರಿಗೆ ನಮ್ಮ ಟಿವಿ ಮಾಧ್ಯಮದಲ್ಲಿ ಅಗ್ರ ಸ್ಥಾನ.

ಕೆಲವು ದಶಕಗಳ ಹಿಂದೆ ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುವುದು ಹಲವಾರು ಗಂಟೆಗಳನ್ನು ಅಥವಾ ದಿನಗಳನ್ನೇ ತೆಗೆದುಕೊಳ್ಳುತ್ತಿತ್ತು ಹಾಗೂ ಭಾರೀ ಶ್ರಮದಾಯಕವಾಗಿತ್ತು. ಇಂದು ಒಂದು ಊರಿನಿಂದ ಇನ್ನೊಂದು ಊರಿಗೆ ಸುಲಭವಾಗಿ ಸಂಚರಿಸ ಬಹುದಾದರೆ ಅದಕ್ಕೆ ಕಾರಣ ವಿಜ್ಞಾನಿಗಳು ರೂಪಿಸಿದ ಆಧುನಿಕ ಮೋಟಾರು ವಾಹನಗಳು ಹಾಗೂ ತಂತ್ರಜ್ಞಾನಗಳು. ಈ ಯಾವ ತಂತ್ರಜ್ಞಾನವನ್ನೂ ರೂಪಿಸಿದವರು ನಮ್ಮ ದೇಶದವರಲ್ಲ. ನಮ್ಮ ದೇಶದಲ್ಲಿ ಏನಿದ್ದರೂ ಅದು ಪರದೇಶದಿಂದ ಆಮದು ಮಾಡಿಕೊಂಡ ತಂತ್ರಜ್ಞಾನ. ಇದಕ್ಕೆ ಕಾರಣ ಹೊಸ ತೆರನಾಗಿ ಯೋಚಿಸಲು ಅವಕಾಶ ಕೊಡದ ನಮ್ಮ ಬಾಗಿಲು ಮುಚ್ಚಿದ ಮಾನಸಿಕತೆ. ನಾವು ಎಲ್ಲವೂ ಶಾಸ್ತ್ರಗಳಲ್ಲಿ ಹೇಳಿದೆ ಎಂದು ಹೊಸದನ್ನು ಚಿಂತಿಸುವುದನ್ನೇ ಬಿಟ್ಟಿದ್ದೇವೆ. ನಮ್ಮ ಮಾನಸಿಕತೆ ಇನ್ನೂ ಹಲವು ಶತಮಾನಗಳ ಹಿಂದೆ ಇದೆ. ಇದರ ಪರಿಣಾಮವೇ ಇಂದು ನಾವು ಟಿವಿ ವಾಹಿನಿಗಳಲ್ಲಿ ನೋಡುತ್ತಿರುವ ಅವೈಜ್ಞಾನಿಕ ಚಿಂತನೆಗಳ ಮಹಾಪೂರ. ಇಂದು ಒಂದು ನಿಮಿಷದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಜನರನ್ನು ಸಂಪರ್ಕಿಸಲು ಸಾಧ್ಯ. ಅದಕ್ಕೆ ಕಾರಣವಾಗಿರುವುದು ಕೂಡ ವಿಜ್ಞಾನವೇ. ಯಾವುದೇ ಹಳ್ಳಿ ಮೂಲೆಯಲ್ಲಿದ್ದರೂ ಇಂದು ಸಾಮಾನ್ಯ ಮನುಷ್ಯನೂ ಡಿ.ಟಿ. ಹೆಚ್ ತಂತ್ರಜ್ಞಾನದ ಮೂಲಕ ಹತ್ತಾರು ಟಿವಿ ವಾಹಿನಿಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಿರುವುದು ವಿಜ್ಞಾನದ ಕೊಡುಗೆಯಿಂದಲೇ. ಆದರೆ ಆ ತಂತ್ರಜ್ಞಾನ ಮಾತ್ರ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಬಳಕೆಯಾಗುತ್ತಿಲ್ಲ. ಇದು ಎಂಥಾ ವಿಪರ್ಯಾಸ! ನಮ್ಮ ಮನೋಭಾವ ಜಡ್ಡುಗಟ್ಟಿದೆ. ಹೀಗಾಗಿ ನಮ್ಮ ದೇಶ ಪ್ರಗತಿಶೀಲ ಚಿಂತನೆಯಲ್ಲಿ ಬಹಳ ಹಿಂದುಳಿದಿದೆ. ನಮ್ಮ ಜನ ಇನ್ನೂ ಆದಿವಾಸಿ ಮನೋಭಾವದಿಂದ ಹೊರಬಂದಿಲ್ಲ ಎಂಬುದು ನಮ್ಮ ಟಿವಿ ವಾಹಿನಿಗಳನ್ನು ಬೆಳಗ್ಗೆ 6 ರಿಂದ 10 ಘಂಟೆವರೆಗೆ ನೋಡಿದರೆ ಅರ್ಥವಾಗುತ್ತದೆ.

ಇಂದು ವಿಜ್ಞಾನದ ಬೆಳವಣಿಗೆಯಿಂದಾಗಿ ಆಹಾರ ಭದ್ರತೆ ಬಂದಿದೆ. ಬರಗಾಲ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಕೋಪಗಳಿಂದ ಜನ ಆಹಾರ ಇಲ್ಲದೆ ಬಳಲುವ ಪರಿಸ್ಥಿತಿ ಸಂಪೂರ್ಣ ಮಾಯವಾಗಿದೆ. ಹಲವಾರು ಯಂತ್ರಗಳು ಬಂದಿರುವುದರಿಂದಾಗಿ ಮಾನವನ ದೈಹಿಕ ಶ್ರಮ ಎಷ್ಟೋ ಕಡಿಮೆಯಾಗಿದೆ. ಇದನ್ನೆಲ್ಲಾ ಸಾಧ್ಯವಾಗಿಸಿದ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರಬೇಕು . ಆದರೆ ವಾಸ್ತವವಾಗಿ ವಿಜ್ಞಾನಕ್ಕೆ ಹಾಗೂ ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರುವುದು ಕಂಡು ಬರುತ್ತಿಲ್ಲ. ನಮ್ಮ ಮಾಧ್ಯಮಗಳಲ್ಲೂ ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ ಮನ್ನಣೆ ಅಷ್ಟಕ್ಕಷ್ಟೇ. ವೈಜ್ಞಾನಿಕ ಮನೋಭಾವವಂತೂ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ.

ನಮ್ಮ ದೇಶದಲ್ಲಿ ಹೊಸ ಚಿಂತನೆಗಳಿಗೆ ಬರ ಇದೆ. ಹೀಗಾಗಿಯೇ ದೇಶದ ರಾಜಕೀಯ ರಂಗ ಮರಗಟ್ಟಿದೆ. ದೇಶದ ಶಾಸಕಾಂಗ ವ್ಯವಸ್ಥೆ ಹೊಸ ಜನೋಪಯೋಗಿ ಕಾನೂನುಗಳನ್ನು ರೂಪಿಸಲು ಬಹುತೇಕ ವಿಫಲವಾಗಿದೆ. ಕಾರ್ಯಾಂಗ ಜಡ್ಡುಗಟ್ಟಿದೆ. ನ್ಯಾಯಾಂಗವೂ ಭಾರೀ ವಿಳಂಬ ಗತಿಯಲ್ಲಿ ತೆವಳುತ್ತಿದೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿ ಸುಧಾರಣೆಗಳನ್ನು ತರಬೇಕೆಂಬ ಚಿಂತನೆಯೇ ಇಲ್ಲದಿರುವುದು. ಕಾಲ ಕಾಲಕ್ಕೆ ದೇಶದ ಕಾನೂನುಗಳಲ್ಲಿ ಜನೋಪಯೋಗಿ ಸುಧಾರಣೆ ಮಾಡದೇ ಹೋದರೆ ಪ್ರಜಾಪ್ರಭುತ್ವ ಜಡ್ಡುಗಟ್ಟುತ್ತದೆ. ಇದನ್ನೆಲ್ಲಾ ಮಾಡಬೇಕಾದವರು ಯಾರು?  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನೆಲ್ಲಾ ಮಾಡುವ ಸಾಮರ್ಥ್ಯ ಇರುವುದು ಶಾಸಕಾಂಗಕ್ಕೆ. ಆದರೆ ನಮ್ಮ ಶಾಸಕಾಂಗಕ್ಕೆ ಆಯ್ಕೆಯಾಗುವವರಲ್ಲಿ ವೈಜ್ಞಾನಿಕ ಮನೋಭಾವ ಇಲ್ಲವೇ ಇಲ್ಲವೆಂದರೂ ಸರಿ. ಹೀಗಾಗಿ ಎಲ್ಲೆಡೆಯೂ ಹೊಸ ಚಿಂತನೆಗಳ ಬರ ಇದೆ.

ದೇಶದ ಮಾಧ್ಯಮ ರಂಗವನ್ನು ನೋಡಿದರೆ ಇದೇ ಸ್ಥಿತಿ ಇದೆ. ಇಲ್ಲಿಯೂ ಮೂಢ ನಂಬಿಕೆಗಳ ಸವಾರಿ ಅವ್ಯಾಹತವಾಗಿ ನಡೆಯುತ್ತಿದೆ. ಮಾಧ್ಯಮಗಳನ್ನು ಮಾರುಕಟ್ಟೆ ಶಕ್ತಿಗಳು ನಿಯಂತ್ರಿಸುತ್ತಿರುವುದರಿಂದ ಇಲ್ಲಿ ಯಾವುದೇ ಹೊಸ ಚಿಂತನೆಗಳನ್ನು ನಿರೀಕ್ಷಿಸುವಂತಿಲ್ಲ. ಇಂಥ ಸಂದರ್ಭದಲ್ಲಿ ಏನಾದರೂ ಬದಲಾವಣೆ, ಹೊಸತನ ತರುವ ಸಾಮರ್ಥ್ಯ ಇರುವುದು ಬಂಡವಾಳಗಾರರಿಗೆ ಮಾತ್ರ. ಬಂಡವಾಳಗಾರರಿಗೆ ದೇಶದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕೆಂಬ ತುಡಿತ ಇದ್ದರೆ ಇಂದೂ ಕೂಡ ಮಾರುಕಟ್ಟೆ ಶಕ್ತಿಗಳನ್ನೂ ಮೀರಿ ಹೊಸ ಚಿಂತನೆಗಳಿಗೆ, ವೈಜ್ಞಾನಿಕ ಮನೋಭಾವಕ್ಕೆ ತಮ್ಮ ಮಾಧ್ಯಮಗಳಲ್ಲಿ ಒತ್ತು ಕೊಡಲು ಸಾಧ್ಯವಿದೆ. ತಮ್ಮ ಬೇರೆ ಉದ್ಯಮಗಳಲ್ಲಿ ಬರುವ ಅಪಾರ ಲಾಭದ ಒಂದಂಶವನ್ನು ಬಳಸಿ ಮಾಧ್ಯಮಗಳನ್ನು ನಡೆಸಲು ಸಾಧ್ಯವಿದೆ.

ಮಾಧ್ಯಮಗಳನ್ನು ನಡೆಸಲು ಜಾಹೀರಾತುಗಳನ್ನೇ, ಮಾರುಕಟ್ಟೆ ಶಕ್ತಿಗಳನ್ನೇ ಅವಲಂಬಿಸ ಬೇಕಾದ ಅಗತ್ಯವಿಲ್ಲ. ನಮ್ಮ ಭಾರೀ ಬಂಡವಾಳಗಾರರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ದೇಶಭಕ್ತಿಯ ಕೊರತೆ ಇರುವುದರಿಂದಾಗಿ ಇಂಥ ಒಂದು ಚಿಂತನೆಯೇ ಅವರಲ್ಲಿ ಕಂಡುಬರುತ್ತಿಲ್ಲ. ನಮ್ಮ ಬಹುತೇಕ ಬಂಡವಾಳಗಾರರೂ ಕಂದಾಚಾರ, ಮೌಢ್ಯ, ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಯಾಗಿದ್ದಾರೆ. ಇಲ್ಲದೆ ಹೋಗಿದ್ದರೆ, ಕೆಲವೇ ಕೆಲವು ಬಂಡವಾಳಗಾರರಾದರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿದ್ದರೆ ಇಂದು ದೇಶದ ಸ್ಥಿತಿಯನ್ನೇ ಗಮನಾರ್ಹವಾಗಿ ಬದಲಾಯಿಸಲು ಸಾಧ್ಯವಾಗುತ್ತಿತ್ತು. ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಲು ಇಂದು ಸಾಧ್ಯವಿರುವುದು ಟಿವಿ ಮಾಧ್ಯಮಕ್ಕೆ. ಈ ಮಾಧ್ಯಮವನ್ನು ಬಳಸಿಕೊಂಡೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನಪರವಾಗಿ ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಮಾಡಬೇಕಾಗಿರುವುದು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ. ಈ ಕೆಲಸ ವೈಯಕ್ತಿಕವಾಗಿ ಇಂದು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರ ಸಂಘಟನೆ ಮಾಡಿಕೊಂಡು ಇಡೀ
ದೇಶದಲ್ಲಿ ಜಾಗೃತಿ ಮಾಡಬೇಕಾದರೆ ಜೀವವನ್ನೇ ತೇಯಬೇಕಾದೀತು. ತಮ್ಮ ಕುಟುಂಬ, ವೃತ್ತಿ ಬಿಟ್ಟು ಅದಕ್ಕೆ ಯಾರೂ ಸಿದ್ಧರಿರುವುದಿಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇದೇ ಕೆಲಸವನ್ನು ಟಿವಿ ಮಾಧ್ಯಮವು ಸುಲಭವಾಗಿ, ಏಕಕಾಲದಲ್ಲಿ ಮಾಡಲು ಸಾಧ್ಯವಿದೆ. ವೈಜ್ಞಾನಿಕ ಮನೋಭಾವ ಇರುವ ಕೆಲವು ಜನ ಬಂಡವಾಳಗಾರರು ತಮ್ಮ ಇತರ ಉದ್ಯಮಗಳ ಭಾರೀ ಲಾಭಾಂಶದ ಒಂದು ಅಂಶವನ್ನು ಜನಪರ, ದೇಶಪರ ಟಿವಿ ಮಾಧ್ಯಮವನ್ನು ಕಟ್ಟಲು ಬಳಸಿದರೆ ದೇಶದಲ್ಲಿ ಭಾರೀ ಬದಲಾವಣೆಯನ್ನೇ ತರಲು ಸಾಧ್ಯವಿದೆ.

ಇಂದು ನಮ್ಮ ದೇಶದಲ್ಲಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಇವುಗಳಲ್ಲಿ ಮಹತ್ತರ ಬದಲಾವಣೆ ಆಗಬೇಕಾದ ಅಗತ್ಯ ಇದೆ. ಶಾಸಕಾಂಗದಲ್ಲಿ ಮಹತ್ತರ ಬದಲಾವಣೆ ತರಬೇಕಾದರೆ ಇಂದು ದೇಶಭಕ್ತರ ಹೊಸ ರಾಷ್ಟ್ರೀಯ ಪಕ್ಷವನ್ನು ಕಟ್ಟಬೇಕಾದ ಅಗತ್ಯ ಇದೆ. ಆ ಪಕ್ಷವು ಚುನಾವಣೆಗಳಲ್ಲಿ ನಿಂತು ಗೆದ್ದು ಸರ್ಕಾರ ರೂಪಿಸಿ ಜನಪರವಾದ ಕಾನೂನುಗಳನ್ನು ರೂಪಿಸುವ ಮೂಲಕ ಕಾರ್ಯಾಂಗ ಹಾಗೂ ನ್ಯಾಯಾಂಗದಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯವಿದೆ. ತನ್ಮೂಲಕ ಇಡೀ ರಾಷ್ಟ್ರದ ಸ್ಥಿತಿಯನ್ನು ಬದಲಾಯಿಸಲು ಪ್ರಜಾಸತ್ತಾತ್ಮಕವಾಗಿಯೇ ಸಾಧ್ಯವಿದೆ. ಹೊಸ ಪಕ್ಷವನ್ನು ರೂಪಿಸುವಾಗ ಅದರಲ್ಲಿ ಅತ್ಯಂತ ಸ್ಪಷ್ಟವಾದ ನಿಯಮಗಳನ್ನು ರೂಪಿಸಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಉದಾಹರಣೆಗೆ ಪಕ್ಷದ ಅಧ್ಯಕ್ಷ ಸ್ಥಾನ ಚುನಾವಣೆಗಳ ಮೂಲಕವೇ ಅಯ್ಕೆಯಾಗಬೇಕು, ಪಕ್ಷದಲ್ಲಿ ವಂಶವಾಹಿ ಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತೆ ನಿಯಮ ರೂಪಿಸುವುದು, ಚುನಾವಣೆಗಳಲ್ಲಿ ನಿಲ್ಲುವವರಿಗೆ ನಿರ್ದಿಷ್ಟ ಅರ್ಹತೆಯನ್ನು ನಿಗದಿ ಪಡಿಸುವುದು; ಭ್ರಷ್ಟರು, ಆಪಾದಿತರು, ಅಪರಾಧಿಗಳು ಚುನಾವಣೆಗಳಿಗೆ ಸ್ಪರ್ಧಿಸದಂತೆ ನಿಯಮ ರೂಪಿಸುವುದು; ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಇತರ ಮಂತ್ರಿಗಳ ಸ್ಥಾನಗಳಿಗೆ ಅರ್ಹತೆಯೊಂದನ್ನೇ ಆಧಾರವಾನ್ನಗಿಸುವುದು; ಪಕ್ಷದ ನೀತಿ ನಿಯಮ ಉಲ್ಲಂಘಿಸಿದವರನ್ನು ಹೊರಹಾಕಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವುದು, ಪಕ್ಷದೊಳಗೆ ಗುಂಪುಗಾರಿಕೆಗೆ ಅವಕಾಶವಾಗದಂತೆ ನಿಯಮ ರೂಪಿಸುವುದು ಮೊದಲಾದವುಗಳನ್ನು ಮಾಡಿದರೆ ರಾಜಕೀಯ ಪಕ್ಷ ಭ್ರಷ್ಟ ಹಾಗೂ ಜನವಿರೋಧಿಯಾಗುವುದನ್ನು ತಪ್ಪಿಸಬಹುದು. ಇದನ್ನು ಈಗ ಇರುವ ರಾಜಕೀಯ ಪಕ್ಷಗಳೂ ಮಾಡಬಹುದು.

ಒಂದು ಸ್ಪಷ್ಟವಾದ ಪರ್ಯಾಯ ಚಿಂತನೆಗಳ, ಜನಪರ ಸೈದ್ದಾಂತಿಕ ಧೋರಣೆಯ ರಾಷ್ಟ್ರೀಯ ಪಕ್ಷವು ರೂಪುಗೊಂಡರೆ ಅದರ ಪರವಾಗಿ ನಮ್ಮ ಟಿವಿ ವಾಹಿನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರೆ ಅದು ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡುವುದು ಅಸಾಧ್ಯವೇನೂ ಅಲ್ಲ. ದೇಶದಾದ್ಯಂತ ಈಗ ಇರುವ ರಾಜಕೀಯ ಪಕ್ಷಗಳಿಂದ ರೋಸಿ ಹೋಗಿರುವ ಜನತೆ ಹೊಸತನಕ್ಕಾಗಿ ಹಂಬಲಿಸುತ್ತಿರುವುದು ಸಹಜವೇ ಆಗಿದೆ. ಜನ ಸ್ವಚ್ಛ, ಭ್ರಷ್ಟಾಚಾರ ರಹಿತ ಬದಲಾವಣೆಗಾಗಿ ಹಂಬಲಿಸುತ್ತಿರುವುದು ಅಣ್ಣಾ ಹಜಾರೆಯವರ ಹೋರಾಟದ ಸಮಯದಲ್ಲಿ ಕಂಡು ಬಂದಿದೆ. ಆದರೆ ಆ ಹೋರಾಟ ರಾಜಕೀಯಕರಣಗೊಂಡು ದುರ್ಬಲವಾಗಿದೆ. ಅಣ್ಣಾ ಹಜಾರೆ ಹಾಗೂ ಅವರ ತಂಡದಲ್ಲಿ ವೈಜ್ಞಾನಿಕ ಮನೋಭಾವದ ಕೊರತೆ ಇರುವುದೂ ಕಂಡು ಬಂದಿದೆ. ಇದೇ ತಂಡದಲ್ಲಿ ಸ್ಪಷ್ಟವಾದ ವೈಜ್ಞಾನಿಕ ಮನೋಭಾವ ಇದ್ದಿದ್ದರೆ ಇದು ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಬೆಳೆಸಲು ಸಾಧ್ಯವಾಗುತ್ತಿತ್ತು. ಈಗ ಹಜಾರೆಯವರ ಹೋರಾಟವನ್ನು ನೋಡುವುದಾದರೆ ಅದು ಒಂದು ರಾಜಕೀಯ ಪಕ್ಷದ ಪರವಾಗಿ ದೇಶದಲ್ಲಿ ಜನಾಭಿಪ್ರಾಯ ಹುಟ್ಟು ಹಾಕಲು ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಹೀಗಾಗಿ ಅದು ದುರ್ಬಲವಾಗಿದೆ. ಈಗ ಹಜಾರೆಯವರು ಯಾವ ಪಕ್ಷದ ಪರವಾಗಿ ಹವಾ ಉಂಟು ಮಾಡಲು ಬಯಸುತ್ತಿದ್ದಾರೋ ಆ ಪಕ್ಷವು ಉಳಿದ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಹಾಗೂ ಆ ಪಕ್ಷದಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸ್ಥಾನವೂ ಇಲ್ಲದಿರುವುದೂ ಕಂಡು ಬರುತ್ತದೆ.

ನೀವು ಪದವೀಧರರೇ? ನಿಮ್ಮ ಜವಾಬ್ದಾರಿ ನಿರ್ವಹಿಸಿ…

ಸ್ನೇಹಿತರೆ,

ಇದನ್ನು ನಾನು ರಾಮಚಂದ್ರ ಗೌಡ ಎಂಬ ಮಾಜಿ ಸಚಿವರ ಪ್ರಸ್ತಾಪದೊಂದಿಗೆ ಆರಂಭಿಸುತ್ತೇನೆ. ಕಾಸಗಲ ಕುಂಕುಮ ಇಟ್ಟುಕೊಂಡೇ ಜನರಿಗೆ ಕಾಣಿಸುವ ಈ ಕುಂಕುಮಧಾರಿ ನಿಮಗೆ ಗೊತ್ತಿರಲೇಬೇಕು. ರೇಣುಕಾಚಾರ್ಯ ಎಂಬ ಹಾಲಿ ಮಂತ್ರಿ ಯಡ್ಡ್‌ಯೂರಪ್ಪನವರಿಗೆ ಜೊತೆಬಿಡದಂತೆ ಕಾಣಿಸಿಕೊಳ್ಳುತ್ತಿರುವುದಕ್ಕಿಂತ ಮೊದಲು ಯಡ್ಡ್‌ಯೂರಪ್ಪನವರ ಜೊತೆಗೆ ಸದಾ ಕಾಣಿಸುತ್ತಿದ್ದವರು ಇವರು. ಒಂದೂವರೆ ವರ್ಷದ ಹಿಂದಿನ ತನಕ ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದವರು.

ಪ್ರತಿ ಸರ್ಕಾರ ಬಗ್ಗೆ ಜನರಿಗೆ ಅನ್ನಿಸುತ್ತಿರುತ್ತದೆ, ‘ಇದು ಇತಿಹಾಸದಲ್ಲಿಯೇ ಕೆಟ್ಟ ಸರ್ಕಾರ,’ ಎಂದು. ಆದರೆ ಈಗಿನ ಹಾಲಿ ಬಿಜೆಪಿ ಸರ್ಕಾರದ ಬಗ್ಗೆಯಂತೂ ಆ ಮಾತನ್ನು ಪೂರ್ವಾಗ್ರಹಗಳಿಲ್ಲದೇ ಹೇಳಬಹುದು. ಇದಕ್ಕಿಂತ ಕೆಟ್ಟ ಸರ್ಕಾರ ಹಿಂದೆಂದೂ ಬಂದಿರಲಿಲ್ಲ. ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಅತಿ ಭ್ರಷ್ಟ ಮುಖ್ಯಮಂತ್ರಿ ಎನ್ನಿಸಿದ್ದ ಬಂಗಾರಪ್ಪನವರೇ ಅವರು ತೀರಿಕೊಳ್ಳುವ ಹೊತ್ತಿಗೆ ದೇವಮಾನವರಾಗಿ ಕಾಣಿಸುತ್ತಿದ್ದರು. ಅದಕ್ಕೆ ಕಾರಣ ಬಂಗಾರಪ್ಪ ಭ್ರಷ್ಟಾಚಾರಿಗಳಲ್ಲ ಎಂದು ರುಜುವಾತಾಯಿತು ಎಂದಲ್ಲ. ಈ ಬಿಜೆಪಿ ಸರ್ಕಾರದ ಮುಂದೆ ಹಿಂದಿನ ದರೋಡೆಕೋರರು ಭ್ರಷ್ಟರು ದುಷ್ಟರೆಲ್ಲ ಸಂತರಾಗಿ ಕಾಣಿಸುತ್ತಿದ್ದಾರೆ ಎಂದು ಹೇಳಿದರೆ ಅಷ್ಟೇ ಸಾಕು. ಉಳಿದದ್ದು ತಾನಾಗಿ ಅರ್ಥವಾಗಬೇಕು.

ಇಂತಹ ಬ್ರಹ್ಮಾಂಡ ಭ್ರಷ್ಟ ಸರ್ಕಾರದಲ್ಲೂ, ಅಪಮೌಲ್ಯ ಮತ್ತು ಅನೀತಿಗಳನ್ನೆ ಹಾಸು ಹೊದ್ದು ಉಸಿರಾಡುತ್ತಿರುವ ಈ ಸರ್ಕಾರದಲ್ಲೂ ಭ್ರಷ್ಟಾಚಾರದ ವಿಚಾರಕ್ಕೆ ಒಬ್ಬ ಮಂತ್ರಿಯ ರಾಜೀನಾಮೆ ಕೇಳಿ ಪಡೆಯಲಾಯಿತು. ಅಂದರೆ ಆ ಹಗರಣ ಇನ್ನೆಷ್ಟು ಸ್ಪಷ್ಟವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಮೈಸೂರು ಮತ್ತು ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಭ್ರಷ್ಟ ರೀತಿನೀತಿಗಳ, ನೌಕರಿ ಮಾರಾಟದ, ಹಗರಣ ಅದು. ಅದರ ರೂವಾರಿ ಈ ರಾಮಚಂದ್ರ ಗೌಡರು. ಬಿಜೆಪಿಯಂತಹ ಬಿಜೆಪಿಗೇ, ಯಡ್ಡ್‌ಯೂರಪ್ಪನಂತಹ ಯಡ್ಡ್‌ಯೂರಪ್ಪನವರಿಗೇ ಆ ಹಗರಣವನ್ನು, ರಾಮಚಂದ್ರ ಗೌಡರನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ರಾಮಚಂದ್ರ ಗೌಡರ ರಾಜೀನಾಮೆಯನ್ನು ಬಲವಂತವಾಗಿ ಪಡೆಯಬೇಕಾಯಿತು. ಗೌಡರ ಸಚಿವ ಸ್ಥಾನ ಹೋಯಿತು. ಆದರೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸಂಪುಟದರ್ಜೆಯ ಸ್ಥಾನಮಾನ ಸಿಕ್ಕಿತು. ಆ ಹಗರಣದ ಬಗ್ಗೆ ವಿಚಾರಣೆ ನಡೆಯಲಿಲ್ಲ. ಆರೋಪ ಸುಳ್ಳು ಎಂದು ಸಾಬೀತಾಗಲಿಲ್ಲ. ಸಚಿವ ಸ್ಥಾನ ಕಿತ್ತುಕೊಂಡು ಮತ್ತೊಂದು ಸಂಪುಟ ದರ್ಜೆ ಸ್ಥಾನಮಾನ ಕೊಟ್ಟದ್ದೇ ಶಿಕ್ಷೆ ಎಂದುಕೊಳ್ಳಬೇಕಾದ ಬುದ್ದಿವಂತಿಕೆ ಜನರದ್ದು. ಇನ್ನು, ಅವರ ಶಾಸಕ ಸ್ಥಾನಕ್ಕಂತೂ ಯಾವುದೇ ಸಮಸ್ಯೆಯಾಗಲಿಲ್ಲ.

ಅಂದ ಹಾಗೆ, ಈ ರಾಮಚಂದ್ರ ಗೌಡರು ಬೆಂಗಳೂರು ನಗರ ಮತ್ತು ಜಿಲ್ಲೆಯ ಪದವೀಧರರನ್ನು ಪ್ರತಿನಿಧಿಸುತ್ತಿರುವ ವಿಧಾನಪರಿಷತ್ ಶಾಸಕ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ನಮ್ಮ ಅಕ್ಷರಸ್ತ, ವಿದ್ಯಾವಂತ, ಘನತೆವೆತ್ತ, ಬುದ್ದಿವಂತ, ಜವಾಬ್ದಾರಿಯುತ ಪದವೀಧರರು ನೇರವಾಗಿ ಮತ್ತು ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವ ತಮ್ಮ ಪ್ರತಿನಿಧಿ.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರು ಒಮ್ಮೆ ತಲೆತಗ್ಗಿಸಿದರೆ ಅದು ಅವರ ಒಳ್ಳೆಯತನವನ್ನು ತೋರಿಸುತ್ತದೆ.

ಆದರೆ ತಲೆತಗ್ಗಿಸಿದವರು ಮತ್ತು ಇಂತಹ ಕೃತ್ಯದಲ್ಲಿ ಭಾಗಿಯಾಗಬಾರದು ಎಂದುಕೊಂಡವರಿಗೆ ಒಂದು ಅವಕಾಶ ಇನ್ನು ನಾಲ್ಕು ತಿಂಗಳಿನಲ್ಲಿ ಬರಲಿದೆ. ಇದೇ ರಾಮಚಂದ್ರ ಗೌಡರು ಬಿಜೆಪಿಯಿಂದ ಬೆಂಗಳೂರಿನ ಪದವೀಧರರಿಂದ ಪುನರಾಯ್ಕೆ ಅಗಲು ಹೊರಟಿದ್ದಾರೆ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾಗಿದ್ದರೆ ಬರಲಿರುವ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಪಾಲ್ಗೊಳ್ಳಿ ಮತ್ತು ಮತ ಚಲಾಯಿಸಿ ಎಂದು ಆಗ್ರಹಿಸಿದರೆ ಅದು ಕಠಿಣವಾದ ಅಥವ ಅಹಂಕಾರದ ಆಗ್ರಹವಲ್ಲ ಎಂದು ಭಾವಿಸುತ್ತೇನೆ.

ಅಂದ ಹಾಗೆ, ಮಿಕ್ಕ ಪಕ್ಷಗಳ ಅಭ್ಯರ್ಥಿಗಳೂ ರಾಮಚಂದ್ರ ಗೌಡರಿಗಿಂತ ಉತ್ತಮರು ಎಂದೇನೂ ನಾನು ಹೇಳುವುದಿಲ್ಲ. ಆದರೆ ಅವರು ಹೊಸಬರೇ ಆಗಿರುತ್ತಾರೆ. ಕನಿಷ್ಟ “ಅನುಮಾನದ ಲಾಭ”ವಾದರೂ (Benefit of the Doubt) ಅವರಿಗೆ ಸಿಗಬೇಕು. ಮತ್ತು ನಿಲ್ಲಲಿರುವ ಅಭ್ಯರ್ಥಿಗಳಲ್ಲಿ ಇರುವುದರಲ್ಲೇ ಉತ್ತಮರನ್ನು ಆರಿಸುವ ಜವಾಬ್ದಾರಿ ನಮ್ಮದು. ಮತ್ತು ನಾವು ಈ ಭ್ರಷ್ಟರಿಗೆ ಮತ್ತು ಅಯೋಗ್ಯರಿಗೆ ವಿರುದ್ಧವಾಗಿ ಚಲಾಯಿಸುವ ಒಂದೊಂದು ಮತಕ್ಕೂ ಅವರಿಗೆ ಬೀಳುವ ಮತಕ್ಕಿಂತ ಹೆಚ್ಚಿನ ಮೌಲ್ಯ, ನೈತಿಕತೆ ಮತ್ತು ಪ್ರಾಮಾಣಿಕತೆ ಇರುತ್ತದೆ.

ಆದರೆ, ನೀವು ಪದವೀಧರರಾಗಿದ್ದರೂ ಮತ ಚಲಾಯಿಸಲು ಮೊದಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಅದು ಬಹಳ ಸುಲಭ. ಒಂದು ಅರ್ಜಿ ತುಂಬಬೇಕು. ಅದರಲ್ಲಿ ನಿಮ್ಮ ಹೆಸರು, ವಿಳಾಸ, ನಿಮ್ಮ ಪದವಿ ಮತ್ತು ಅದನ್ನು ಪಡೆದ ವರ್ಷ, ಇಷ್ಟೇ ತುಂಬಬೇಕಿರುವುದು. (ಅರ್ಜಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.) ಇಷ್ಟು ತುಂಬಿದ ಅರ್ಜಿಯನ್ನು ನಿಮ್ಮ ಪದವಿ ಪ್ರಮಾಣ ಪತ್ರ ಮತ್ತು ನಿಮ್ಮ ವಿಳಾಸವನ್ನು ದೃಢೀಕರಿಸುವ ದಾಖಲೆಯ ಎರಡು ಪ್ರತಿಗಳೊಂದಿಗೆ (ವೋಟರ್ ಕಾರ್ಡ್/ರೇಷನ್ ಕಾರ್ಡ್/ವಿದ್ಯುತ್ ಅಥವ ಫೋನ್ ಬಿಲ್/ಬಾಡಿಗೆ ಕರಾರು ಪತ್ರ, ಇತ್ಯಾದಿಗಳಲ್ಲಿ ಯಾವುದಾದರೂ ಒಂದು) ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲಿ ಕೊಟ್ಟರೆ ಮುಗಿಯಿತು. ಇದು ಅಸಾಧ್ಯವೂ ಅಲ್ಲ. ಮಾಡದೆ ಸುಮ್ಮನಿದ್ದುಬಿಡುವಷ್ಟು ಅಪ್ರಾಮಾಣಿಕರೂ ಪಲಾಯನವಾದಿಗಳೂ ನೀವಲ್ಲ. ಅಲ್ಲವೇ?

ಮತ್ತು, ಇದು ಕೇವಲ ಬೆಂಗಳೂರಿನ ಪದವೀಧರರಿಗಷ್ಟೇ ಸೀಮಿತವಲ್ಲ. ರಾಜ್ಯದ ಎಲ್ಲಾ ಪದವೀಧರರಿಗೂ ಸಂಬಂಧಿಸಿದ್ದು. ಪ್ರತಿಯೊಬ್ಬ ಪದವೀಧರನಿಗೂ ಒಬ್ಬ ವಿಧಾನಪರಿಷತ್ ಶಾಸಕನನ್ನು ಆಯ್ಕೆ ಮಾಡಿಕೊಳ್ಳುವ ಒಂದು ವೋಟ್ ಇದೆ. ಹೆಸರು ನೊಂದಾಯಿಸಿ. ಚುನಾವಣೆಯ ದಿನ ಯೋಗ್ಯರಿಗೆ ಮತ ಚಲಾಯಿಸಿ. ಈ ಅಸಂಗತ ಸಮಯದಲ್ಲಿ, ಅಪ್ರಾಮಾಣಿಕತೆ, ಭ್ರಷ್ಟಾಚಾರ ತಾಂಡವನೃತ್ಯ ಮಾಡುತ್ತಿರುವ ಕರ್ನಾಟಕದ ಈ ಅಸಹಾಯಕ ಪರಿಸ್ಥಿತಿಯಲ್ಲಿ ಒಂದಷ್ಟು ಯೋಗ್ಯರನ್ನು ಪ್ರಾಮಾಣಿಕರನ್ನು ಶಾಸನಸಭೆಗೆ ಕಳುಹಿಸಿ. ಹಳ್ಳಿಯ ಜನ, ಸ್ಲಮ್ಮಿನ ಜನ, ಬಡವರು, ಜಾತಿವಾದಿಗಳು, ದುಡ್ಡಿಗೆ ಮತ್ತು ಜಾತಿಗೆ ಮರುಳಾಗಿ ವೋಟ್ ಮಾಡುತ್ತಾರೆ ಅನ್ನುತ್ತೀರಲ್ಲ, ಅವರ್‍ಯಾರಿಗೂ ಅವಕಾಶ ಇಲ್ಲದ ಈ ಚುನಾವಣೆಯಲ್ಲಿ ನೀವು ಹಾಗೆ ಅಲ್ಲ ಎಂದು ನಿರೂಪಿಸಿ. ಮಾರ್ಗದರ್ಶಕರಾಗಿ. ಮುಂದಾಳುಗಳಾಗಿ. ನೀವು ಪಡೆದ ಪದವಿಗೂ ಒಂದು ಘನತೆ ಇದೆ ಎಂದು ತೋರಿಸಿ.

ನೀವು ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಪದವೀಧರರಾದರೆ, ಈ ವೆಬ್‌ಸೈಟಿನಲ್ಲಿ ನಿಮ್ಮ ತುಂಬಿದ ಅರ್ಜಿ ಮತ್ತು ಸಲ್ಲಿಸಬೇಕಾದ ಸರ್ಕಾರಿ ಕಚೇರಿ ಮತ್ತು ವಿಳಾಸ ಎಲ್ಲವೂ ಸುಲಭವಾಗಿ ಲಭ್ಯವಿದೆ. ಅದನ್ನು ಬಳಸಿಕೊಳ್ಳಿ. ನಗರದ ಹೊರಗಿರುವವರಾದರೆ, ನಿಮ್ಮ ತಾಲ್ಲೂಕಿನ ತಹಸಿಲ್ದಾರ್ ಕಚೇರಿ ಅರ್ಜಿ ತಲುಪಿಸಬೇಕಾದ ಸ್ಥಳ ಎನ್ನಿಸುತ್ತದೆ. ನಿಮ್ಮ ತಹಸಿಲ್ದಾರ್ ಕಚೇರಿಗೆ ಫೋನ್ ಮಾಡಿ ತಿಳಿದುಕೊಳ್ಳಿ.  ಕೊನೆಯ ದಿನಾಂಕ ಎಂದೆಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಸಾಧ್ಯವಾದಷ್ಟು ಬೇಗ ಮಾಡಿ.

ಸ್ಪೈಡರ್‌ಮ್ಯಾನ್ ಸಿನೆಮಾದಲ್ಲಿ ಒಂದು ವಾಕ್ಯ ಬರುತ್ತದೆ: “With great power comes great responsibility.” ನಾವು ಪಡೆದುಕೊಳ್ಳುವ ಪದವಿಯೊಂದಿಗೆ ನಮಗೆ ಜವಾಬ್ದಾರಿಗಳೂ ಅವಕಾಶಗಳೂ ಅನುಕೂಲಗಳೂ ಬರುತ್ತವೆ. ಆ ಜವಾಬ್ದಾರಿಗಳನ್ನು ನಿಭಾಯಿಸಲು ನಾವು ಅನರ್ಹರು ಅಥವ ಆಗದವರು ಎಂದಾದರೆ ಆ ಪದವಿಗೂ ಅನುಕೂಲಗಳಿಗೂ ನಾವು ಅನರ್ಹರು. ಇನ್ನೊಬ್ಬರನ್ನು ದೂರುತ್ತ ಸಿನಿಕರಾಗುತ್ತ ಇರುವುದಕ್ಕಿಂತ ನಾವು ನಮ್ಮ ನಾಗರಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಿರೋಣ.

ಇಷ್ಟನ್ನು ಈ ಸಂದರ್ಭದಲ್ಲಿ ಕರ್ನಾಟಕದ ಪದವೀಧರರಿಂದ ಬಯಸುವುದು ತಪ್ಪೆಂದಾಗಲಿ ಅಪರಾಧವೆಂದಾಗಲಿ ನಾನು ಭಾವಿಸುತ್ತಿಲ್ಲ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ