Category Archives: ಸರ್ಜಾಶಂಕರ ಹರಳಿಮಠ

ಆತಂಕವಾಗುತ್ತಿರುವುದು ದುಡಿಯುತ್ತಿದ್ದವರು ಸೋಮಾರಿಗಳಾಗುತ್ತಿದ್ದಾರೆಂದೋ? ಸೋಮಾರಿಗಳಾಗಿದ್ದವರು ದುಡಿಯಬೇಕಾಗಿದೆಯೆಂದೋ?!

– ಸರ್ಜಾಶಂಕರ್ ಹರಳಿಮಠ

ಈಗ ಎಲ್ಲ ಕಡೆ ಒಂದೇ ದೂರು ಕೆಲಸಗಾರರು ಸಿಗುತ್ತಿಲ್ಲ ಎಂಬುದು. ಈ ಮಾತಿನೊಂದಿಗೆ ಅವರು ಇನ್ನೊಂದು ಮಾತನ್ನೂ ಸೇರಿಸುವುದನ್ನು ಮರೆಯುವುದಿಲ್ಲ. ಅದೆಂದರೆ “ದಿನಕ್ಕೆ ೫೦೦ ರೂಪಾಯಿ ಕೊಟ್ಟರೂ..”

ಸರ್ಕಾರ ಅನ್ನಭಾಗ್ಯ ಯೋಜನೆಯಡಿ ರೂಪಾಯಿಗೊಂದರಂತೆ ೩೦ ಕೆ.ಜಿ ಅಕ್ಕಿ ಕೊಡುತ್ತಿರುವುದೂ ಟೀಕೆಗೆ ಒಳಗಾಗಿದೆ. (ಈಗ ಒಬ್ಬರಿಗೆ ೫ ಕೆಜಿ ಅಕ್ಕಿ ಉಚಿತ ಯೋಜನೆ) ಕೆಲವು ಸಾಹಿತಿಗಳೂ ಇದಕ್ಕೆ ದನಿಗೂಡಿಸಿದ್ದಾರೆ. ಸರ್ಕಾರ ಜನರನ್ನು ಪುಕ್ಕಟೆ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ india-poverty-hungerಮಾಡುತ್ತಿದೆ ಎನ್ನುವುದು ಇವರೆಲ್ಲರ ಆಕ್ಷೇಪ.

ಕೆಲಸಗಾರರು ಸಿಗುತ್ತಿಲ್ಲ, ಸರ್ಕಾರ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂಬ ಈ ಟೀಕೆಗಳಲ್ಲಿ ಸತ್ಯದ ಅಂಶಗಳಿವೆ. ಆದರೆ ಇದಕ್ಕೆ ಬೇರೆ ಆಯಾಮಗಳೂ ಇವೆ ಎಂಬುದು ಚಿಂತಿಸಬೇಕಾದ ಸಂಗತಿ.

ನಮ್ಮ ಶಿಕ್ಷಣವೇ ದೈಹಿಕ ದುಡಿಮೆಯಿಂದ ನಮ್ಮನ್ನು ವಿಮುಖರನ್ನಾಗಿ ಮಾಡಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಉನ್ನತ ಶಿಕ್ಷಣ ಪಡೆದ ರೈತರ ಮಕ್ಕಳು ಹಳ್ಳಿಯಲ್ಲಿ ಉಳಿದರೂ ತಮ್ಮ ತಂದೆ ತಾಯಿಗಳಂತೆ ಗದ್ದೆ ತೋಟಗಳಲ್ಲಿ ದುಡಿಯಲಾರದವರಾಗಿದ್ದಾರೆ. ಹಿಂದೆ ಈ ರೈತರ ಮನೆಗಳಲ್ಲಿ ದುಡಿಯುತ್ತಿದ್ದ ಕೂಲಿಕಾರರ ಮಕ್ಕಳು ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ನಗರದತ್ತ ತೆರಳಿದ್ದಾರೆ. ಇವರು ನಗರದತ್ತ ಉದ್ಯೋಗಕ್ಕೆ ತೆರಳಿರುವುದು ಕೇವಲ ದುಡಿಮೆಗೆ ಮಾತ್ರವಲ್ಲ ಎಂಬುದು ಮುಖ್ಯವಾದ ಸಂಗತಿ.

ಒಂದು ನಗರದ ಕಾರ್ಖಾನೆಯಲ್ಲಿ ಕೆಲಸ ಮಾಡುವುದಕ್ಕೂ, ಹಳ್ಳಿಯಲ್ಲಿ ದೊಡ್ಡ ಭೂಮಾಲೀಕರ ಬಳಿ ಕೂಲಿ ಕೆಲಸ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಾರ್ಖಾನೆಯಲ್ಲಿ ಕೆಲಸಗಾರ ಮತ್ತು ಮಾಲೀಕನ ನಡುವಿನ ಸಂಬಂಧ ಕೆಲಸಗಾರ ಮತ್ತು ಮಾಲೀಕನ ಸಂಬಂಧಷ್ಟಕ್ಕೆ ಸೀಮಿತವಾಗಿರುತ್ತದೆ. ಆದರೆ ಹಳ್ಳಿಯಲ್ಲಿ ಕೂಲಿ ಕೆಲಸದೊಂದಿಗೆ ಜಾತಿಯ ಅವಮಾನ, ಅಸ್ಪೃಶ್ಯತೆ ಎಲ್ಲವೂ ಬಿಡಿಸಲಾಗದಂತೆ ತಳುಕು ಹಾಕಿಕೊಂಡಿರುತ್ತವೆ. Gadag Farmersಶಿಕ್ಷಣ ಇದನ್ನೆಲ್ಲ ಯುವ ತಲೆಮಾರಿನ ಅರಿವಿಗೆ ತರುತ್ತಿರುತ್ತದೆ. ಇದರಿಂದ ಬಿಡುಗಡೆ ಪಡೆಯಲೂ ಕೃಷಿಕೆಲಸ ಬಿಟ್ಟು ನಗರದತ್ತ ಹೋಗುವವವರ ಸಂಖ್ಯೆ ಅಧಿಕ. ಇದನ್ನು ಅರಿತಿರುವ ಹಳ್ಳಿಯ ಭೂಮಾಲೀಕರು ಇತ್ತೀಚೆಗೆ ಕೂಲಿ ದರವನ್ನು ಏರಿಸಿದ್ದಾರೆ. ಜಾತಿಯನ್ನು ಮೀರಿ ವ್ಯಕ್ತಿಗೌರವವನ್ನು ಕೊಡುವ ಅನಿವಾರ್ಯತೆಗೂ ಒಳಗಾಗಿದ್ದಾರೆ. ಹಾಗೆಂದು ಲಗಾಯ್ತಿನಿಂದ ಉತ್ತಮ ಸಂಬಳವನ್ನು ಕೊಟ್ಟು ಕೆಲಸಗಾರರನ್ನು ತಮ್ಮ ಮನೆಯ ಸದಸ್ಯರಂತೆ ಪ್ರೀತಿಯಿಂದ ಕಾಣುವ ಭೂಮಾಲೀಕರು ಇಲ್ಲವೆಂದಲ್ಲ. ಆದರೆ ಅಂಥಹವರು ತುಂಬ ವಿರಳ.

ಜೀವನಕ್ಕೆ ಅಕ್ಕಿ ಒಂದು ಸಿಕ್ಕರೆ ಸಾಕೆ? ನಾವೆಲ್ಲರೂ ಕೇವಲ ಅಕ್ಕಿಗಾಗಿ ದುಡಿಯುತ್ತಿದ್ದೇವೆಯೇ? ಒಂದು ವೇಳೆ ನಮಗೂ ೩೦ ಕೆಜಿ ಅಕ್ಕಿ ಉಚಿತವಾಗಿ ಸಿಕ್ಕರೆ ನಾವೂ ಬೇರೆ ಕೆಲಸ ಮಾಡದೆ ಸೋಮಾರಿಗಳಾಗಿ ಮನೆಯಲ್ಲೇ ಕುಳಿತುಕೊಳ್ಳುತ್ತೇವೆಯೇ? ಅನ್ನ ಮಾತ್ರ ನಮ್ಮ ಅಗತ್ಯವಾದರೆ ೧ ರಿಂದ ೩ ದಿನದ ದುಡಿಮೆಯ ಆದಾಯದಲ್ಲಿಯೇ ತಿಂಗಳಿಗಾಗುವಷ್ಟು ನಾವು ಗಳಿಸಬಲ್ಲೆವು? ಮತ್ಯಾಕೆ ನಾವು ತಿಂಗಳು ಪೂರ್ತಿ ದುಡಿಯುತ್ತಿದ್ದೇವೆ?

ಮೂರೋತ್ತಿನ ಊಟ ಮಾತ್ರ ಜನರ ಅಗತ್ಯವಲ್ಲ. ನಮ್ಮದೇ ಒಂದು ಚಿಕ್ಕ ಮನೆ ಕಟ್ಟಿಕೊಳ್ಳಬೇಕು. ಮನೆ ಕಟ್ಟಿಕೊಳ್ಳಲು ಒಂದು ನಿವೇಶನ ಬೇಕು. ಮಕ್ಕಳಿಗೆ ಒಂದು ಒಳ್ಳೆಯ ಶಾಲೆಯಲ್ಲಿ ಶಿಕ್ಷಣ ಕೊಡಿಸಬೇಕು. ಮಕ್ಕಳಿಗೆ ಮದುವೆ ಮಾಡಬೇಕು.. ನಮಗೆಲ್ಲ ಗೊತ್ತು, ಇವೆಲ್ಲಾ ನಮ್ಮ ನಮ್ಮ ಸಣ್ಣ ಕನಸುಗಳಾದರೂ ಇದನ್ನು ಸಾಕಾರಗೊಳಿಸಿಕೊಳ್ಳಲು ಜೀವನಪರ್ಯಂತ ದುಡಿಯಬೇಕು ಎಂಬುದು. ಮಧ್ಯಮವರ್ಗದ ಬಹುತೇಕರಿಗೆ ಸೈಟು ಕೊಳ್ಳುವುದು, ಮನೆ ಕಟ್ಟುವುದು ಅವರ ಜೀವನಪರ್ಯಂತ ಸಾಕಾರವಾಗದ ಕನಸು.

ಮಧ್ಯಮವರ್ಗದ ನಮ್ಮೆಲ್ಲರ ಕನಸುಗಳು ಕೂಲಿಕಾರ್ಮಿಕರಿಗೆ ಇರುವುದಿಲ್ಲವೆಂದೂ, ಅವರು ೩೦ ಕೆ.ಜಿ ಪುಕ್ಕಟೆ ಅಕ್ಕಿ ಪಡೆದು ಸೋಮಾರಿಗಳಾಗಿ ಇರುತ್ತಾರೆ ಎಂದು ಹೇಗೆ ಭಾವಿಸುವುದು?

ಸಮಾಜ ದುಡಿಯುವ ಜನರನ್ನು ಸದಾ ದುಡಿಯುವವರನ್ನಾಗಿಯೇ ನೋಡುತ್ತದೆ. ಆ ವರ್ಗ ದುಡಿಯುವುದರಲ್ಲಿ ಏರುಪೇರಾದಲ್ಲಿ ನಮಗೆ ತಳಮಳ ಶುರುವಾಗುತ್ತದೆ. ಅವರು ಸೋಮಾರಿಗಳಾಗುತ್ತಿದ್ದಾರೆ ಎಂದು ದೂರುತ್ತೇವೆ. ಸರ್ಕಾರ ಅವರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ ಎಂದು ಟೀಕಿಸುತ್ತೇವೆ. ಅದು ಸರಿ, ಆದರೆ ಅವರು ಹತ್ತಾರು ತಲೆಮಾರುಗಳಿಂದ ದುಡಿಯುತ್ತಲೇ ಇದ್ದಾರೆ, ಇದರಿಂದ ಅವರಿಗೆ ಸಿಕ್ಕ ಲಾಭವೇನು? ಇನ್ನೂ ಏಕೆ ಅವರು ಗುಡಿಸಲುಗಳಲ್ಲಿಯೇ ಇದ್ದಾರೆ? ಈ ಬಗ್ಗೆ ಎಂದೂ ಚಿಂತಿಸದ ನಾವು ಈಗ ಅವರು ಸೋಮಾರಿಗಳಾಗುತ್ತಿದ್ದಾರೆ ಎಂದು ಆತಂಕ ಪಡುತ್ತಿದ್ದೇವೆ. ‘ಮನುಷ್ಯ ಸೋಮಾರಿಯಾದರೆ ಆತನ ಕುಟುಂಬ ನಾಶವಾಗುತ್ತದೆ’ ಇತ್ಯಾದಿಯಾಗಿ ದುಡಿಯುವ ಕುಟುಂಬಗಳ ಬಗ್ಗೆ ನಾವು ಕಾಳಜಿ ತೋರುತ್ತಿದ್ದೇವೆ. ಇದು ದುಡಿಸಿಕೊಳ್ಳುವವರ ಅಷಾಢಭೂತಿತನ. ನಿಜವಾಗಿ ನಮ್ಮ ಆತಂಕವಿರುವುದು ಈವರೆಗೂ ಬಿಡುವಿಲ್ಲದೆ ದುಡಿಯುತ್ತಿದ್ದವರು ಸೋಮಾರಿಗಳಾಗುತ್ತಿದ್ದಾರೆ ಎಂಬುದಲ್ಲ, ದುಡಿಯುವವರಿಲ್ಲದೆ ನಾವೀಗ ಮೈಬಗ್ಗಿಸಿ ದುಡಿಯಬೇಕಾಗಿದೆಯಲ್ಲ ಎಂಬುದು!

‘ಸರ್ಕಾರ ಜನರನ್ನು ಪುಕ್ಕಟೆ ಅಕ್ಕಿ ಕೊಟ್ಟು ಸೋಮಾರಿಗಳನ್ನಾಗಿ ಮಾಡುತ್ತಿದೆ’ ಎಂಬ ಟೀಕೆ ದುಡಿಸಿಕೊಳ್ಳುವವರಿಂದ Siddaramaiah-annyabhagyaಬರುವುದು ಅಚ್ಚರಿಯ ಸಂಗತಿಯಲ್ಲ. ಆದರೆ ಇಂತಹ ಟೀಕೆಗಳನ್ನು ಸಮರ್ಥಿಸುವ ಸಾಹಿತಿಗಳಿಗಾದರೂ ಕ್ಷಣಕಾಲ ಇದರ ಇನ್ನಿತರ ಆಯಾಮಗಳನ್ನು ಅರಿಯುವಂತಾಗಬೇಕು. ಏಕೆಂದರೆ ಹೊರನೋಟಕ್ಕೆ ಇದು ಸರ್ಕಾರದ ಬಗೆಗಿನ ಟೀಕೆಯಂತೆ ಕಂಡರೂ ಇದು ದುಡಿಯುವ ವರ್ಗದ ಸ್ವಾಭಿಮಾನ ಮತ್ತು ಘನತೆಯನ್ನೇ ಪ್ರಶ್ನಿಸುತ್ತಿದೆ.

ಸುಡುಹಗಲ ಸೊಲ್ಲು : ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ


– ಸರ್ಜಾಶಂಕರ ಹರಳಿಮಠ


 

[ದಿ.23 ಮತ್ತು 24 ರಂದು ಧಾರವಾಡದಲ್ಲಿ ಕರ್ನಾಟಕ ಜನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಆತ್ಮವಿಮರ್ಶೆಯ ಮಾತುಗಳು.]

ಈ ಹೊತ್ತು, ನೆರಳೇ ಇಲ್ಲದ ಸುಡು ಹಗಲಿನಲ್ಲಿ ನಿಂತಿರುವಂತೆ ನನಗೆ ಭಾಸವಾಗುತ್ತಿದೆ. ನೀರಿಲ್ಲದೆ ಒಣಗಿರುವ ಬಾಯಲ್ಲಿ ನಾನಾಡುವ ಈ ಕೆಳಗಿನ ಮಾತುಗಳು ನಿಮಗೆ ಕರ್ಕಶವೆನಿಸಬಹುದು, ಹೇಳದೆ ನನಗೆ ಬೇರೆ ದಾರಿಯಿಲ್ಲ.

ಎಲ್ಲಾ ಕಾಲವೂ ಬಿಕ್ಕಟ್ಟಿನದೇ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ಮಾತು ಸ್ವಲ್ಪ ಸಮಸ್ಯಾತ್ಮಕವಾದದ್ದು ಎಂದು ಅನ್ನಿಸುತ್ತಿದೆ. ಕಾಲಕ್ಕೆ ಸ್ಪಂದಿಸುವ ರೀತಿಯಲ್ಲಿ ಕಾಲ ಕೆಲವರಿಗೆ ಬಿಕ್ಕಟ್ಟಿನದಾಗಿಯೂ ಹಲವರಿಗೆ ಬಿಕ್ಕಟ್ಟಿಲ್ಲದ ನೆಮ್ಮದಿಯದ್ದಾಗಿಯೂ ಕಾಣಬಹುದು. ಒಂದು ಪತ್ರಿಕಾಗೋಷ್ಟಿಯಲ್ಲಿ janasahitya-samaveshaರೈತನಾಯಕರೊಬ್ಬರಿಗೆ ಪತ್ರಕರ್ತರು ರೈತಸಂಘದ ನಿಮ್ಮ ಬಣವೇಕೆ ಯಾವುದೇ ಹೋರಾಟ ಮಾಡುತ್ತಿಲ್ಲ ಎಂದು ಕೇಳಿದಾಗ ಅವರು ತಣ್ಣಗೆ ಉತ್ತರಿಸಿದ್ದೇನೆಂದರೆ ‘ರೈತರಿಗೆ ಸದ್ಯ ಯಾವುದೇ ಸಮಸ್ಯೆಯಿಲ್ಲ, ಅದಕ್ಕೆ ಹೋರಾಟವನ್ನೂ ಹಮ್ಮಿಕೊಂಡಿಲ್ಲ.’ ಆದರೆ ಅವರು ಈ ಮಾತು ಆಡುವಾಗಲೂ ವಿದ್ಯುತ್ ಸಮಸ್ಯೆಯಿಂದ, ಕುಸಿತಗೊಂಡ ಬೆಲೆಗಳಿಂದಾಗಿ ರೈತರು ತತ್ತರಿಸುತ್ತಿದ್ದರು, ದೊಡ್ಡ ಉದ್ಯಮಿಗಳಿಗಾಗಿ ಇವರ ಕೃಷಿಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿತ್ತು, ಮತ್ತು ಸಾಲದಿಂದ ದಿಕ್ಕೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ರೈತಮುಖಂಡರು ಈ ಕಾರಣಗಳನ್ನಿಟ್ಟುಕೊಂಡು ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿದ್ದರು. ಆದರೀಗ ಅವರು ನೆಮ್ಮದಿಯಾಗಿದ್ದರು. ಏಕೆಂದರೆ ಸರ್ಕಾರ ಅವರಿಗೆ ತಿಂಗಳಿಗೆ ಲಕ್ಷ ರೂಪಾಯಿ ಆದಾಯದ ನಿಗಮವೊಂದರ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿತ್ತು.

ಹಾಗೆಯೇ, ನಮ್ಮ ನಾಡಿನ ಗಾಳಿಯಾಡುವ ಪ್ರತಿಸ್ಥಳದಲ್ಲೂ ಸಮಸ್ಯೆಗಳಿವೆ, ಸಂಕಟಗಳಿವೆ. ಧರ್ಮದ ಕಾರಣಕ್ಕೆ ಕೊಲೆಗಳು, ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು, ಕೃಷಿಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ರೈತರು, ಬಿಗಿಯಾಗುತ್ತಿರುವ ಜಾತಿ ಸಂಕೋಲೆಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ಅಗೋಚರವಾದ ಆಕೆಯ ಮೇಲಿನ ಕುಟುಂಬದೊಳಗಿನ ಹಿಂಸೆಗಳು… ಇಂತಹ ನೂರು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಆದರೆ ಇದನ್ನು ತಮ್ಮ ಸಮಸ್ಯೆಯೆಂದು ತಮ್ಮೊಳಗೆ ತೆಗೆದುಕೊಳ್ಳುವವರಿಗೆ ಮಾತ್ರ ಇದು ಸಮಸ್ಯೆ. ಈ ಎಲ್ಲಾ ಸಂಕಟಗಳಿಗೆ ಎಷ್ಟು ಜನ ಮಿಡಿಯುತ್ತಾರೆಂಬುದನ್ನು ಅಂದಾಜಿಸುವುದೂ ಒಂದು ಬಗೆಯಲ್ಲಿ ಕಷ್ಟದ ಕೆಲಸ. ಈ ಸಂಕಟಗಳಿಗೆ ಮರುಗುವವರ ಸಂಖ್ಯೆ ಸಾಕಷ್ಟಿರಬಹುದು. ಆದರೆ ಇವರ ಮರುಗುವಿಕೆ ಸಂಕಟದ ನಿವಾರಣೆಯ ದಿಕ್ಕಿನಲ್ಲಿ ಕ್ರಿಯಾತ್ಮಕವಾಗದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಈ ಕ್ರಿಯೆ ಎನ್ನುವುದು ಕೂಡ ಹಲವು ಬಗೆಯದ್ದು. ಈ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಅದನ್ನು ನಿವಾರಿಸಲು ಹೋರಾಟಗಾರ ಪ್ರಯತ್ನಿಸುತ್ತಾನೆ. ಸಂವೇದನಾಶೀಲ ಲೇಖಕ ತನ್ನ ಬರವಣಿಗೆಯಲ್ಲಿ ಅದನ್ನು ಎದುರುಗೊಳ್ಳುತ್ತಾನೆ. ತನ್ನ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಲು ಲೇಖಕ ಹೋರಾಟಗಾರನಿಗೆ ನೆರವು ನೀಡಿದ್ದು ಇತಿಹಾಸದುದ್ಧಕ್ಕೂ ನಡೆದಿದೆ. ಕುವೆಂಪು ಅವರ ಸಾಹಿತ್ಯ ಕರ್ನಾಟಕದಲ್ಲಿ ಶೂದ್ರ ಚಳುವಳಿಯನ್ನು ನಿರ್ದೇಶಿಸಿದ್ದನ್ನು ಇಲ್ಲಿ ನಾವು ಗಮನಿಸಬಹುದು. ಲಂಕೇಶ್ ಪತ್ರಿಕೆ ಈ ನಿಟ್ಟಿನಲ್ಲಿ ದೊಡ್ಡ ಕೆಲಸವನ್ನೇ ಮಾಡಿತು. ದಲಿತ ಚಳವಳಿ, ರೈತ ಚಳವಳಿ ಈ ನಾಡಿನಲ್ಲಿ ಒಂದು ಕಾಲಘಟ್ಟದ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಇದರಲ್ಲೆಲ್ಲ ಲೇಖಕ ಸಮೂಹದ ಪಾತ್ರವೂ ಮುಖ್ಯವಾಗಿದೆ. ಆದರಿಂದು ಲೇಖಕರಾದ ನಾವು ಎಷ್ಟು ಜನ ಲೋಕದ ನಿತ್ಯಸಂಕಟಗಳಿಗೆ ಸ್ಪಂದಿಸುತ್ತಿದ್ದೇವೆ ಎನ್ನುವುದು ಪ್ರಶ್ನೆ.

ಈ ಕಾಲಘಟ್ಟ ಒಬ್ಬ ಲೇಖಕನಿಂದ ಸಮಾಜಕ್ಕೆ ಸ್ಪಂದಿಸುವ, ಅದನ್ನು ತಿದ್ದುವ ಬರವಣಿಗೆಯನ್ನು ಮಾತ್ರವಲ್ಲ, ಆತನಿಂದ ಹೋರಾಟವನ್ನೂ ನಿರೀಕ್ಷಿಸುತ್ತಿದೆ ಎನಿಸುತ್ತಿದೆ. ‘ಸುಮ್ಮನೆ ಬರೆದುಕೊಂಡಿದ್ದರೆ ಸಾಲದು, ಬರೆದಿದ್ದನ್ನು ಸಾಧಿಸಲು ಬೀದಿಗಿಳಿಯಿರಿ’ ಎಂದು ಹೋರಾಟಗಾರರ ಬಾಯಲ್ಲಿ ಸಮಾಜವೇ ಹೇಳಿಸುತ್ತಿದೆ ಎನಿಸುತ್ತಿದೆ.

ಬಂಡಾಯ ಸಾಹಿತ್ಯ ಸಂಘಟನೆ ಅಥವಾ ಜಾಗೃತ ಸಾಹಿತ್ಯ ಸಮ್ಮೇಳನ ಅಂತಿಮವಾಗಿ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರೂ ಅದು ನೇರವಾಗಿ ಸಾಹಿತ್ಯದ ಉದ್ದೇಶವನ್ನು ಪ್ರಶ್ನಿಸುತಿತ್ತು. ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಕುರಿತು ಮರುಚಿಂತನೆ ಮತ್ತು ಹೊಸ ಸಮಾಜ ನಿರ್ಮಾಣಕ್ಕೆ ಬೇಕಾದ ನೆಲೆ ಹಾಗೂ ಪ್ರೇರಣೆಗಳ ಕುರಿತು ಕರ್ನಾಟಕ ಜನಸಾಹಿತ್ಯ ಸಮಾವೇಶ ನಡೆಯುತ್ತಿದೆಯೆಂದು ನಾವಿಲ್ಲಿ ಹೇಳಿಕೊಂಡರೂ ಅದಕ್ಕಿಂತಲೂ ಮಿಗಿಲಾದ ನಮ್ಮೆದುರಿನ ಬಿಕ್ಕಟ್ಟುಗಳನ್ನು ನಾವು ಮುಖಾಮುಖಿಯಾಗಲೇಬೇಕಾಗಿದೆ. ಸಾಹಿತ್ಯಕ್ಷೇತ್ರವನ್ನೊಳಗೊಂಡು ಎಲ್ಲ ಕ್ಷೇತ್ರಗಳೂ ಭ್ರಷ್ಟಗೊಂಡಿರುವ, ಸಾಹಿತಿಗಳನ್ನೂ ಒಳಗೊಂಡಂತೆ ಸಂವೇದನಾರಹಿತ ಸಮಾಜ ರೂಪುಗೊಳ್ಳುತ್ತಿರುವ, ಒಂದು ರೀತಿಯಲ್ಲಿ ಸಾಹಿತಿಗಳನ್ನೂ ಒಳಗೊಂಡಂತೆ ಎಲ್ಲರಲ್ಲೂ ಜಾತಿಪ್ರಜ್ಞೆ ಹರಳುಗಟ್ಟುತ್ತಿರುವ ಅತ್ಯಂತ ಸಂಕೀರ್ಣ ಕಾಲಘಟ್ಟವಿದು. ಈ ಕಾಲವನ್ನು ಮುಖಾಮುಖಿಯಾಗಲು ಬಾಹ್ಯ ಸಮಾಜಕ್ಕೆ ಮಾತ್ರವಲ್ಲ ಸ್ವತಃ ನಮಗೂ ಆತ್ಮವಿಮರ್ಶೆಯ ಚಿಕಿತ್ಸೆ ಬೇಕಾಗಿದೆ. ನಮ್ಮ ಮಿತಿಗಳನ್ನು ಮೀರುತ್ತ ಹೊಸ ದಿಗಂತದೆಡೆಗೆ ನೋಡಬೇಕಾಗಿದೆ.

“…ಸಾಹಿತಿ ಪ್ರತ್ಯೇಕ ಜೀವಿಯಾಗಿ ಉಳಿದು ಉಪಯೋಗವಿಲ್ಲ. ತನ್ನ ಜನತೆಯ ಸುಖ ದುಃಖಗಳಲ್ಲಿ, ರಾಗ ದ್ವೇಷಗಳಲ್ಲಿ, ಧಾರ್ಮಿಕತೆಯಲ್ಲಿ, ಕನಸು ಮನಸುಗಳಲ್ಲಿ, ಕೊನೆಗೆ ಅಂಧಶ್ರದ್ಧೆಗಳಲ್ಲಿ ಕೂಡ ಅವನು ಒಂದಾಗಬೇಕು. ಈ ಸಂಗತಿ ಸಾಹಿತ್ಯದ ಆದರ್ಶವಾಗಿರದೆ ಅದರ ಮೂಲಭೂತ ಅವಶ್ಯಕತೆಯಾಗಿದೆ…” [ಲಂಕೇಶ್]. ಆದರೆ ಸಾಹಿತಿಗಳ ಜವಾಬ್ದಾರಿ ಈಗ ಇನ್ನೂ ಹೆಚ್ಚಿದೆ.

ಜಾಗೃತ ಸಾಹಿತ್ಯ ಸಮ್ಮೇಳನದ ತಮ್ಮ ಉದ್ಘಾಟನಾ ಭಾಷಣದಲ್ಲಿ lankeshಲಂಕೇಶ್ ಅವರು ಈ ಸಮ್ಮೇಳನ ಸಂಘಟಿಸಲು ಕಾರಣವಾದ ಅಂಶಗಳನ್ನು ಪ್ರಸ್ತಾಪಿಸುತ್ತ ಸಾಹಿತ್ಯಿಕ ಕಾರಣಗಳನ್ನು ವಿವರವಾಗಿ ಚರ್ಚಿಸುತ್ತ “ಅಗತ್ಯ ಬಿದ್ದರೆ” ಒಟ್ಟಾಗಿ ಜನವಿರೋಧಿ ಘಟನೆಗಳ ವಿರುದ್ಧ ಪ್ರತಿಭಟಿಸುವ ವಾತಾವರಣ ಮೂಡಿಸುವುದು ಅನಿವಾರ್ಯವಾಗಿತ್ತು ಎಂದು, ಇದು ಸಾಹಿತ್ಯದ ಅಂತಹ ಪ್ರಧಾನವಾದ ಕೆಲಸವಲ್ಲ ಎಂಬ ದನಿಯಲ್ಲಿ ಹೇಳುತ್ತಾರೆ. ಬಹುಶಃ ಆ ಕಾಲವೂ ಸಾಹಿತಿಗಳಿಂದ ಹೋರಾಟವನ್ನು ನಿರೀಕ್ಷಿಸುತ್ತಿರಲಿಲ್ಲವೇನೋ. ಆದರೆ ಪ್ರತಿಕ್ಷಣವೂ ಜನವಿರೋಧಿ ಕೃತ್ಯಗಳು ಜರುಗುವ ಈ ಹೊತ್ತಿನಲ್ಲಿ ಇಂತಹವುಗಳನ್ನು ಪ್ರತಿಭಟಿಸುವ ಮತ್ತು ಪ್ರತಿಭಟಿಸುವ ವಾತಾವರಣವನ್ನು ಮೂಡಿಸುವುದೇ ಸಾಹಿತಿಗಳ ಮತ್ತು ಸಾಹಿತ್ಯದ ಆದ್ಯತೆಯ ಜವಾಬ್ದಾರಿ ಎಂದು ನನಗನ್ನಿಸುತ್ತಿದೆ.

ಆದರೆ ಬಹುತೇಕ ಸಾಹಿತಿಗಳು ಹೋರಾಟದ ಬಗ್ಗೆ ಕಳಕಳಿ ತೋರಿದರೂ ಅದು ವಿಶ್ವಾಸಾರ್ಹ ಎನಿಸುತ್ತಿಲ್ಲ. ಪ್ರಧಾನವೆಂದು ತೋರುವ ಸಾಹಿತ್ಯಲೋಕ ಹೋರಾಟಗಾರರನ್ನು ಮತ್ತು ಹೋರಾಟನಿರತ ಲೇಖಕಮಿತ್ರರನ್ನು ಒಂದು ಬಗೆಯ ಅಸ್ಪೃಶ್ಯ ಭಾವನೆಯಲ್ಲಿ ನೋಡುವುದನ್ನು ಗಮನಿಸಬಹುದು. ಮೂಲಭೂತವಾಗಿ ಹೋರಾಟಗಳ ಬಗ್ಗೆಯೇ ಸಾಹಿತ್ಯವಲಯಕ್ಕೆ ಅಸ್ಪೃಶ್ಯ ಭಾವನೆಯಿರುವಂತಿದೆ. ಹೋರಾಟಗಳು ಕಣ್ಮರೆಯಾಗಿವೆ ಎಂದು ಮತ್ತೆ ಮತ್ತೆ ದುಃಖಗೊಂಡವರಂತೆ ಗೊಣಗುವ ಸಾಹಿತಿಗಳು ಸದ್ಯ ಚಾಲ್ತಿಯಲ್ಲಿರುವ ಮಹಿಳಾಪರ ಹೋರಾಟ, ಕೋಮು ಸೌಹಾರ್ದ ಚಳವಳಿ, ಎಡಪಂಥೀಯ ಚಳವಳಿಗಳಲ್ಲಿ ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದ್ದಾರೆ? ಗಣಿದೊರೆಗಳ ಅಟ್ಟಹಾಸಕ್ಕೆ, ಭ್ರಷ್ಟ ರಾಜಕಾರಣಿಗಳ ಸ್ವಜನಪಕ್ಷಪಾತವನ್ನು ಎದುರಿಸಲಾರದೆ ಚಳವಳಿಗಳೂ ಕಳೆಗುಂದುತ್ತಿದ್ದಾಗ ಕಾನೂನು ಹೋರಾಟದ ಮೂಲಕ ಇವರನ್ನೆಲ್ಲ ಜೈಲಿಗಟ್ಟಿದ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ ಇದೇ ಧಾರವಾಡದ ಎಸ್.ಆರ್.ಹಿರೇಮಠರನ್ನು ಸಾಹಿತ್ಯಲೋಕದ ಎಷ್ಟು ಜನ ಬೆಂಬಲಿಸಿದ್ದೇವೆ? ಚಳವಳಿಗಳಿಗೆ ಪೂರಕವಾಗಿ ಎಷ್ಟು ಸಾಹಿತ್ಯ ರಚಿಸಿದ್ದೇವೆ? ಹೋರಾಟಗಾರರು ನಮ್ಮ ಬೆಂಬಲ ಕೇಳಿದಾಗ ಎಷ್ಟರಮಟ್ಟಿಗೆ ಸ್ಪಂದಿಸಿದ್ದೇವೆ?

ಸರ್ಕಾರಿ ಹುದ್ದೆಯಲ್ಲಿರುವ ಸಾಹಿತಿಗಳು ಆ ಕಾರಣಕ್ಕೆ ನೇರವಾಗಿ ಚಳುವಳಿಗಲ್ಲಿ ಭಾಗವಹಿಸಲಾಗದೆಂದು ನೀಡುವ ಕಾರಣ ಹುರುಳಿಲ್ಲದ್ದು. ಹೀಗಿದ್ದರೂ ಪರೋಕ್ಷವಾಗಿ ಚಳುವಳಿಗಳಲ್ಲಿ ಭಾಗವಹಿಸಲು ಸಾಧ್ಯವಿದೆ. ಬ್ರಿಟೀಷ್ ಸರ್ಕಾರದ ವಿರುದ್ಧ ನಾಟಕಗಳನ್ನು ಮಾಡುತ್ತ ಸ್ವಾತಂತ್ರ್ಯ ಚಳುವಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದ ಕನ್ನಡ ಮತ್ತು ಮರಾಠಿ ರಂಗಭೂಮಿಯ ಕಲಾವಿದರು ಸರ್ಕಾರ ಇಂತಹ ನಾಟಕಗಳನ್ನು ನಿಷೇಧಿಸಿದಾಗ ಪುರಾಣದ ಘಟನೆಗಳನ್ನು ನೆಪವಾಗಿರಿಸಿಕೊಂಡು ಚಳುವಳಿಗೆ ಪ್ರೇರಕವಾದ ನಾಟಕಗಳನ್ನಾಡುತ್ತಿದ್ದುದನ್ನು ಇತ್ತೀಚೆಗೆ ಬಿಡುಗಡೆಗೊಂಡ karnataki“ಅಮೀರ್ ಬಾಯಿ ಕರ್ನಾಟಕಿ” ಕೃತಿ ಹೃದಯಂಗಮವಾಗಿ ಚಿತ್ರಿಸುತ್ತದೆ. ಪ್ರಭುತ್ವವನ್ನು ಜಾಣತನದಿಂದ ಮರೆಮಾಚಿ ಹೋರಾಟಕ್ಕೆ ಬೆಂಬಲಿಸುವ ಇಂತಹ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಇದೂ ಸಾಧ್ಯವಾಗದಿದ್ದರೆ ಕನಿಷ್ಟ ಹೋರಾಟಗಳಿಗೆ ಆರ್ಥಿಕ ನೆರವನ್ನಂತೂ ನೀಡಲು ಸಾಧ್ಯವಿದೆ. ಆದರೆ ವೈಯುಕ್ತಿಕವಾಗಿ ಉತ್ತಮ ಆದಾಯ ತರುವ ನೌಕರಿಗಳಲ್ಲಿರುವ ಸಾಹಿತಿಗಳು ಹೋರಾಟಗಳಿಗೆ ಎಷ್ಟರಮಟ್ಟಿನ ಹಣಕಾಸಿನ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರ ನಿರಾಶಾದಾಯಕವಾಗಿದೆ.

ನಾವು ಇಲ್ಲಿ ಏಕೆ ಸೇರುತ್ತಿದ್ದೇವೆ? ಸಾಹಿತ್ಯ ಜನರಿಂದ ದೂರ ಹೋಗುತ್ತಿದೆ ಅಥವಾ ಸಾಹಿತ್ಯ ಕ್ಷೇತ್ರವನ್ನು ಕಾರ್ಪೋರೆಟ್ ವಲಯ ಕಬ್ಜಾ ಮಾಡಿಕೊಳ್ಳುತ್ತಿದೆ, ಇದನ್ನು ತಪ್ಪಿಸಿ ಜನರತ್ತ ಸಾಹಿತ್ಯವನ್ನು ಕೊಂಡೋಯ್ಯಬೇಕು ಎಂಬ ಉದ್ದೇಶದಿಂದ ತಾನೇ? ಆದರೆ ಇಂತಹ ಕಾಳಜಿಯ ಬಗ್ಗೆ ನೈಜ ಪ್ರಾಮಾಣಿಕತೆ ನಮ್ಮೆಲ್ಲರಲ್ಲೂ ಇದೆಯೇ?

ನಾವು ನಮ್ಮ ಬೆನ್ನು ತಿರುಗಿಸಿ ನೋಡಿದಾಗ ಹಿಂದೆಯೂ ಆ ಕಾಲಘಟ್ಟದ ಒಟ್ಟಾರೆ ಇಂತಹುದೇ ಉದ್ದೇಶಗಳಿಗಾಗಿಯೇ ಹುಟ್ಟಿದ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಜಾಗೃತ ಸಾಹಿತ್ಯ ಸಮಾವೇಶದೊಳಗೆ ಸೇರಿದವರು ಏನೇನಾದರು? ಸಾಮುದಾಯಿಕವಾಗಿ ಈ ಸಂಘಟನೆಗಳು ಆ ಕಾಲಘಟ್ಟದ ತುರ್ತಿಗೆ ಸ್ಮಂದಿಸಿದ್ದನ್ನು ಮರೆಯಲಾಗುವುದಿಲ್ಲ. ಆದರೆ ಈ ಸಮ್ಮೇಳನಗಳಲ್ಲಿ ಒಟ್ಟಾದವರು ಎಷ್ಟು ಜನ ತಮ್ಮ ವಿಚಾರಗಳಿಗೆ ಬದ್ಧರಾಗಿ ಉಳಿದಿದ್ದಾರೆ? ಕೆಲವರು ಅಧಿಕಾರ ಸ್ಥಾನಗಳಿಗಾಗಿ ರಾಜಕಾರಣಿಗಳನ್ನೂ ಮೀರಿಸುವ ಕೆಲಸಗಳಲ್ಲಿ ತೊಡಗಿದರು. ಸಾಹಿತ್ಯ ಸಮ್ಮೇಳನಗಳಲ್ಲಿ ಮೆರವಣಿಗೆ ವಿರೋಧಿಸಿದ್ದ ದೊಡ್ಡ ಸಾಹಿತಿಗಳು ತಾವು ಅಧ್ಯಕ್ಷರಾದಾಗ ಮುತ್ತೈದೆಯರ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಇನ್ನೊಬ್ಬರು ನಾಲ್ಕು ಜನ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಸಂಭ್ರಮಿಸಿದರು. ನಾಳೆ ನಾವುಗಳು ಕೂಡ ಇಲ್ಲಿ ಮಾಡುವ ಭಾಷಣಗಳ ವಿರುದ್ಧ ಹೋದರೂ ನನಗೆ ಅಚ್ಚರಿಯಿಲ್ಲ. ಯಾಕೆಂದರೆ ನಾವೆಲ್ಲಾ ಈ ಆಕಾಂಕ್ಷೆಗಳಿಂದ ದೂರವಾಗಿ ನಮ್ಮನ್ನು ನಾವೇ ಮೀರಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಸಾಕ್ಷಿಗಳೆಲ್ಲಿದೆ?

ಈ ಐಡೆಂಟಿಟಿ ಕ್ರೈಸಿಸ್ ಎಲ್ಲರ ಸಮಸ್ಯೆ. ಬಹುಶಃ ನಮ್ಮಲ್ಲಿ ಒಂದಷ್ಟು ಜನ ಪ್ರಶಸ್ತಿ, ಸನ್ಮಾನ, ಬೇರೆ ವೇದಿಕೆಗಳಲ್ಲಿ ಸ್ಥಾನಮಾನಗಳು ದೊರಕಿದ್ದರೆ ಇಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎನಿಸುತ್ತದೆ. ಅದನ್ನು ಇನ್ನಷ್ಟು ವಿವರವಾಗಿ ಹೇಳಬಯಸುತ್ತೇನೆ.

ಇಂದು ಪತ್ರಿಕೆಗಳು ಬಂಡವಾಳಶಾಹಿಗಳ ಕೈಯಲ್ಲಿವೆ. ಇವು ಜನಪರ ಪತ್ರಿಕೆಗಳು, ಇವು ಜನವಿರೋಧಿ ಪತ್ರಿಕೆಗಳು ಎಂದು ಸರಳವಾಗಿ ವಿಂಗಡಿಸಲಾಗದಂತೆ ಇವುಗಳ ಸ್ವರೂಪವಿದೆ. ಇಲ್ಲಿ ಎಲ್ಲಿ ತಾನು ಬರೆಯಬೇಕು ಎನ್ನುವುದನ್ನು ನಿರ್ಧರಿಸಿಕೊಳ್ಳಲಾಗದಷ್ಟು ನಾವಿಂದು ಅಸಹಾಯಕರಿದ್ದೀವಿ. ಆದರೆ ಪ್ರಚ್ಚನ್ನ ಕೋಮುವಾದಿಯಾಗಿರುವ ಪತ್ರಿಕೆಗಳಲ್ಲಿ ನಾವೇಕೆ ಕಾಣಿಸಿಕೊಳ್ಳುತ್ತಿದ್ದೇವೆ? ಯಥಾಸ್ಥಿತಿವಾದಿಗಳಾದ ಮಠಗಳು, ಕರಾವಳಿಯಲ್ಲಿ ರಾಕ್ಷಸನಂತೆ ಬೆಳೆದ ಹಿಂದೂ ಕೋಮುವಾದ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಸಣ್ಣ ಪ್ರಮಾಣದಲ್ಲಿ ಮೂಡಿದ ಮುಸ್ಲಿಂ ಮೂಲಭೂತವಾದಕ್ಕೆ ಮೂಲವಾದವರು ನಡೆಸುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಭ್ರಮದಿಂದ ಭಾಗವಹಿಸಲು ನಮಗೆ ಹೇಗೆ ಸಾಧ್ಯವಾಗುತ್ತದೆ?

ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು, ಸಮಾರಂಭಗಳಲ್ಲಿ ಸನ್ಮಾನಿಸಿಕೊಳ್ಳುವುದು ಬಹುಶಃ ಎಲ್ಲರಲ್ಲಿಯೂ ಇರುವ ದೌರ್ಬಲ್ಯವಿರಬೇಕು.

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ’ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ, ಅದನ್ನು ಬೇಕಾದರೆ ವಾಪಸು ಕೊಡುತ್ತೇನೆ’ ಎಂದಿದ್ದ ಗೊಪಾಲಕೃಷ್ಣ ಅಡಿಗರು ಇನ್ನೊಂದು ಪ್ರಶಸ್ತಿ ಬಂದಾಗ ಖುಷಿಯಿಂದ ಪಡೆದಿದ್ದರು. ಇದನ್ನು ಪ್ರಶ್ನಿಸಿದರೆ ‘ನಾನೂ ಮನುಷ್ಯನೇ ಅಲ್ಲವೆ’ ಎಂದು ಸಣ್ಣದನಿಯಲ್ಲಿ ಸಮರ್ಥಿಸಿಕೊಂಡಿದ್ದರು. ಇದನ್ನು ಮೀರದೆ ನಮಗೆ ಗತ್ಯಂತರವಿಲ್ಲ. ನಾವು ಪ್ರಕಟವಾಗುವ ಮತ್ತು ನಾವು ಮಾತನಾಡಲು ನಿಲ್ಲುವ ಜಾಗದ ಬಗ್ಗೆ ನಾವು ಖಚಿತವಾಗಿರದಿದ್ದರೆ ನಾವಾಡುವ ಮಾತೂ ವಿಶ್ವಾಸಾರ್ಹತೆ ಪಡೆಯುವುದಿಲ್ಲ.

ಇನ್ನೊಂದು ನಮ್ಮನ್ನು ಇನ್ನೂ ನಿಯಂತ್ರಿಸುತ್ತಿರುವ ಜಾತಿಪ್ರಜ್ಞೆ. ನಿಜವಾಗಿಯೂ ನಾವು ಜಾತ್ಯಾತೀತರಾಗಿದ್ದೇವೆಯೇ ಅಥವಾ ಹೊರನೋಟಕ್ಕೆ ಹಾಗೆ ನಟಿಸುತ್ತಿದ್ದೇವೆಯೇ ಎಂಬ ಅನುಮಾನ ಬರುತ್ತಿದೆ.

ಇನ್ನು ನಮ್ಮನ್ನು ಆವರಿಸಿರುವ ‘ದಾಹ’.

ಒಂದು ಘಟನೆ ನೆನಪಾಗುತ್ತಿದೆ. ಶಿವಮೊಗ್ಗದಲ್ಲಿ ಹಲವು ಕಾಲ ನೆಲೆಸಿದ್ದ ಸಾಹಿತಿಗಳೊಬ್ಬರು ಯಾವುದೋ ಕಾರಣಕ್ಕೆ ಬೇರೆ ಜಿಲ್ಲೆಗೆ ಹೋಗಿ ನೆಲೆಸಿದರು. ಅವರು ಇಲ್ಲಿಂದ ಹೋಗಿ ಅನೇಕ ವರ್ಷಗಳಾದ ನಂತರದ ಈ ಕಾಲದಲ್ಲಿ ಶಿವಮೊಗ್ಗದಲ್ಲಿ ತಲೆ ತಿರುಗಿಸುವಂತಹ ಬದಲಾವಣೆಗಳಾಗಿವೆ. ಭೂದಾಹದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಿಂದಾಗಿ ಹತ್ತು ಸಾವಿರವಿದ್ದ ಕನಿಷ್ಟ ಅಳತೆಯ ನಿವೇಶನದ ಬೆಲೆ ಹದಿನೈದು-ಇಪ್ಪತ್ತು ಲಕ್ಷಕ್ಕೇರಿದೆ. ಸಾಮಾನ್ಯರಿರಲಿ, ಮೇಲ್ಮಧ್ಯಮ ವರ್ಗದವರೂ ನಿವೇಶನದ ಕನಸು ಕಾಣದಂತಾಗಿದೆ. ಕಡಿಮೆ ದರದಲ್ಲಿ ಸಿಗುವ ನಗರಸಭೆಯ ನಿವೇಶನಕ್ಕೆ ಅನೇಕ ವರ್ಷ ಕಾಯಬೇಕಾಗಿದೆ. ಅದೂ ಸಿಗುತ್ತದೆಂಬ ಗ್ಯಾರಂಟಿಯಿಲ್ಲ. ಈ ಸಮಯದಲ್ಲಿಯೇ ಸಾಹಿತಿಗಳಿಗೆ ಹದಿನೈದು ವರ್ಷದ ಹಿಂದೆ ತಾವು ಶಿವಮೊಗ್ಗದಲ್ಲಿದ್ದಾಗ ಅಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಕ್ಕೆ ಅರ್ಜಿ ಹಾಕಿದ್ದು ನೆನಪಾಗಿದೆ. ಸೀನಿಯಾರಿಟಿ ಬೇರೆ ಇದ್ದುದರಿಂದ ಅವರು ಅರ್ಜಿ ಹಾಕಿದ್ದಾರೆ. ಅವರಿಗದು ಸಿಕ್ಕಿದೆ ಕೂಡ. ಆದರೆ ಅವರಿಗೆ ಅವರು ನೆಲೆನಿಂತ ಊರಲ್ಲಿಯೇ ಸ್ವಂತ ಮನೆಯಿದೆ. ಮಕ್ಕಳು ಇವರಿಗೆ ಪ್ರೀತಿಯಿಂದ ಇನ್ನೊಂದು ನಿವೇಶನವನ್ನು ಕೊಂಡುಕೊಟ್ಟಿದ್ದಾರೆ. ಶಿವಮೊಗ್ಗದ ನಿವೇಶನದಲ್ಲೇನೂ ಮನೆ ಕಟ್ಟುವುದಿಲ್ಲ. ಇದನ್ನರಿತು ಇನ್ನೂ ನಿವೇಶನ ಇರದ ಬಾಡಿಗೆ ಮನೆಯಿಲ್ಲಿರುವ shimoga-udaಅವರ ಪರಿಚಿತರೊಬ್ಬರು ಅವರನ್ನು ನೀವೀಗ ಮಂಜೂರಾದ ನಿವೇಶನವನ್ನು ಮಾರುತ್ತೀರಾ ಎಂದು ಕೇಳಿದ್ದಾರೆ. ಹೌದು ಎನ್ನುವ ಉತ್ತರ ಬಂದಿದೆ. ಉತ್ಸಾಹಗೊಂಡ ಇವರು ಬೆಲೆ ಕೇಳಿದ್ದಾರೆ. ಅವರು ಹೇಳಿದ ಬೆಲೆ ಕೇಳಿ ಇವರು ಭೂಮಿಗಿಳಿದು ಹೋಗಿದ್ದಾರೆ. ಆದರೆ ಸಾಹಿತಿಗಳೇನೂ ಇಲ್ಲದ ಬೆಲೆ ಹೇಳಿರಲಿಲ್ಲ. ಆ ನಿವೇಶನದ ಈಗಿನ ಮಾರುಕಟ್ಟೆ ದರ ಇಪ್ಪತ್ತೈದು ಲಕ್ಷ. ಅಷ್ಟನ್ನೇ ಅವರು ಹೇಳಿದ್ದು. ಅವರು ಆ ನಿವೇಶನ ಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೊಟ್ಟ ಹಣ ಮೂರು ಲಕ್ಷ ಮಾತ್ರವಾಗಿತ್ತು.!

ಈ ದಾಹಕ್ಕೆ ಏನೆನ್ನುವುದು? ಇಂತಹ ದಾಹವೇ ನಮ್ಮನ್ನು ಜನರತ್ತ ಹೋಗದಿರುವಂತೆ ತಡೆದಿರುವುದು. ಜಾಗತೀಕರಣದ ಪರಿಣಾಮವಾದ ಈ ಮೇರೆಯಿಲ್ಲದ ದಾಹವೇ ಎಲ್ಲರಂತೆ ನಮ್ಮನ್ನೂ ಕೆಟ್ಟ ಲೋಭಿಗಳನ್ನಾಗಿ ಮಾಡಿದೆ. ಇಂತಹ ದಾಹಗಳನ್ನು ಮೀರದಿದ್ದರೆ ನಾವು ಈ ಸಮಾವೇಶದಲ್ಲಿ ಮಾತನಾಡುವುದೆಲ್ಲ ಹಾಸ್ಯಗೋಷ್ಟಿಯ ರಂಜನೆಯ ಮಾತಾಗುತ್ತದೆ.

ಇಷ್ಟೆಲ್ಲಾ ಒಂದು ರೀತಿಯ ಉಪದೇಶಾತ್ಮಕವಾಗಿ ಹೇಳಿದ ನಾನೂ ಈ ತಲೆಮಾರಿನ ಸಾಹಿತಿಗಳು ಮೀರಬೇಕಾದ ಈವರೆಗೆ ಹೇಳಿದ ಮಿತಿಗಳನ್ನು ಹೊಂದಿರಬಹುದು. ಕಡು ಆತ್ಮವಿಮರ್ಶೆಯಲ್ಲಿ ಧ್ಯಾನಿಸದಿದ್ದರೆ, ಎಲ್ಲರಂತೆ ನಮ್ಮನ್ನೂ ಆವರಿಸಿರುವ ‘ದಾಹ’ವನ್ನು ನೀಗಿಕೊಳ್ಳದಿದ್ದರೆ, ನಮ್ಮ ಆಳದಲ್ಲಿರಬಹುದಾದ ಜಾತಿಕುರುಹುಗಳನ್ನು ಮೀರದಿದ್ದರೆ, ನಾಡನ್ನು ಬಾಧಿಸುತ್ತಿರುವ ಸಂಕಟಗಳ ನಿವಾರಣೆಯ ಹೋರಾಟಗಳಿಗೆ ಕೈಜೋಡಿಸದಿದ್ದರೆ, ಪ್ರಶಸ್ತಿ ಸನ್ಮಾನಗಳ ಗುಂಗಿನಿಂದ ಹೊರಬರದಿದ್ದರೆ, ನಮ್ಮಿಂದ ನಮ್ಮ ಜನಕ್ಕೆ ಏನೂ ದಕ್ಕುವುದಿಲ್ಲ. ಮಾತ್ರವಲ್ಲ ನಮ್ಮಿಂದ ಒಳ್ಳೆಯ ಸಾಹಿತ್ಯ ನಿರ್ಮಾಣವೂ ಸಾಧ್ಯವಾಗುವುದಿಲ್ಲ.