Category Archives: ಕಾನ್ಶಿರಾಂ

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-2


– ಶ್ರೀಧರ್ ಪ್ರಭು


ಕಾನ್ಶಿರಾಂ ಹುಟ್ಟಿದ್ದು ೧೫ ಮಾರ್ಚ್ ೧೯೩೪ ರಲ್ಲಿ ಪಂಜಾಬಿನ ರೂಪನಗರ ಜಿಲ್ಲೆಯ ಖವಾಸ್ಪುರ್ ಹೋಬಳಿಯ ಪಿಥಿಪುರ ಬಂಗ ಎಂಬ ಹಳ್ಳಿಯಲ್ಲಿ.

ಬಾಬು ಮಂಗು ರಾಮ ಚೌಧರಿ (೧೮೮೬-೧೯೮೦) ಎಂಬ ದಲಿತ ನಾಯಕ ೧೯೨೦ ರ ದಶಕದಲ್ಲಿ ಪಂಜಾಬಿನಲ್ಲಿ ’ಆದಿ-ಧರ್ಮ’ವೆಂಬ ಸಮಾನತೆಯ ಆಶಯವುಳ್ಳ ಚಳುವಳಿಯನ್ನು ಹುಟ್ಟುಹಾಕಿದರು. ಇಂದು ಹದಿನೈದನೆ ಶತಮಾನದ ಭಕ್ತಿ ಚಳುವಳಿಯ ಸಂತ ರಾಮದಾಸರ ಬೋಧನೆಗಳನ್ನು ವರ್ತಮಾನಕ್ಕೆ ಅಳವಡಿಸಿಕೊಂಡು ವೈದಿಕ ಧರ್ಮದಲ್ಲಿನ ಕೊಳಕುಗಳನ್ನು ತೊಳೆಯುವ ಪ್ರಯತ್ನವಾಗಿತ್ತು. ಕಾನ್ಶಿರಾಂ ಅವರ ಕುಟುಂಬ ರವಿದಾಸರ ಪಂಥಕ್ಕೆ ಸೇರಿದ್ದು ನಂತರದಲ್ಲಿ ಆದಿ-ಧರ್ಮದ ಚಳವಳಿಗೆ ಸೇರಿಕೊಂಡಿತ್ತು.

೧೯೩೦ ರ ದಶಕ – ಸಾಮಾಜಿಕ ಮತ್ತು ರಾಜಕೀಯ ತಲ್ಲಣಗಳ ಅವಧಿ
೧೯೩೦ ರ ದಶಕದ ಪಂಜಾಬಿನ ಸನ್ನಿವೇಶವನ್ನು ಗಮನಿಸಿ. ಇಂದಿನ ಹಿಮಾಚಲ ಪ್ರದೇಶ, ಹರಿಯಾಣ ಮತ್ತು ವಿಭಜನೆಯ ನಂತರ ಪಾಕಿಸ್ತಾನದ ಭಾಗವಾಗಿರುವ ಪ್ರಾಂತ್ಯಗಳೆಲ್ಲವೂ ಸೇರಿದ – ಪಂಜಾಬ್ – ಇತಿಹಾಸದುದ್ದಕ್ಕೂ undivided-punjabಅನೇಕ ಸಾಮಾಜಿಕ ರಾಜಕೀಯ ಕ್ರಾಂತಿಗಳು, ಸಂಘರ್ಷಗಳು, ಆಕ್ರಮಣಗಳಿಗೆ ಸಾಕ್ಷಿಯಾದ ನಾಡು. ಇಲ್ಲಿ ಹರಿದ ಐದು ನದಿಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆ, ವೈದಿಕ ಧರ್ಮ, ಬೌದ್ಧ ಧರ್ಮ, ನಂತರದಲ್ಲಿ ಇಸ್ಲಾಂ ಮತ್ತು ಸಿಖ್ ಧರ್ಮಗಳಿಗೆ ತೊಟ್ಟಿಲಾಗಿದ್ದವು. ಫಲವತ್ತಾದ ಐದು ನದಿಗಳು ಹುಟ್ಟಿ ಹರಿಯುವ ಪಂಜಾಬಿನ ಉತ್ತರದಲ್ಲಿ ಹಿಮಾಲಯವಿದ್ದರೆ, ದಕ್ಷಿಣ ಮತ್ತು ನೈಋತ್ಯ ಭಾಗದಲ್ಲಿ ಬರಡು ಮರುಭೂಮಿಯಿದೆ. ಹೀಗೆಯೇ ಒಂದು ಕಡೆ ಅತ್ಯಂತ ಕ್ರಾಂತಿಕಾರಿ ನಿಲುವಿನ ಭಕ್ತಿ ಪಂಥ, ಸಿಖ್ ಧರ್ಮ, (ಪಂಜಾಬಿನಲ್ಲಿ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ) ಆರ್ಯ ಸಮಾಜಗಳು ಹೇಗೆ ಪಂಜಾಬಿನಲ್ಲಿ ಹುಟ್ಟಿದವೋ ಅತ್ಯಂತ ವಿಷಮಪೂರಿತ ಧಾರ್ಮಿಕ ಮೂಲಭೂತವಾದವೂ ಇದೇ ನಾಡಿನಲ್ಲಿ ಬೆಳೆಯಿತು.ಎಲ್ಲ ರೀತಿಯ ಧಾರ್ಮಿಕ ಮತ್ತು ಜಾತಿ ವಿಷಮತೆಗಳ ಕುಲುಮೆಯಲ್ಲಿ ಬೆಂದ ಪಂಜಾಬಿಗೆ ಹಲವು ಕಾಲಮಾನಗಳಲ್ಲಿ ಹಲವು ಬಗೆಯ ನಂಜು ತಗುಲಿದೆ.

ಅವಿಭಜಿತ ಪಂಜಾಬಿನಲ್ಲಿ ೧೯೩೦ ರ ದಶಕದಲ್ಲಿ ಒಂದು ಕಡೆ ಉಗ್ರ ಮುಸ್ಲಿಂ ಮೂಲಭೂತವಾದ ದೈತ್ಯಾಕಾರವಾಗಿ ಬೆಳೆಯುತ್ತಿತ್ತು. ಒಂದು ಕಾಲದ ದೇಶಭಕ್ತ ಮಹಾಕವಿ ಅಲ್ಲಮಾ ಇಕ಼್ಬಾಲ್ ಇದೇ ದಶಕದಲ್ಲಿ ದೇಶ ವಿಭಜನೆಯ ಕೂಗು ಹಾಕಿದರು. ಅದರ ಮುಂದುವರಿಕೆಯ ಭಾಗವಾಗಿ ಜಿನ್ನಾ ಅತ್ಯಂತ ಪ್ರಗತಿಪರ ನಿಲುಮೆಯನ್ನು ತೊರೆದು ಒಬ್ಬ ಕೋಮುವಾದಿಯಾಗಿ ಬೆಳೆದದ್ದು ಪಂಜಾಬಿನಲ್ಲೇ. First_edition_of_Annihilation_of_Casteಇನ್ನೊಂದೆಡೆ ಪಂಜಾಬಿನ ಯುವ ಜನತೆ ಅತ್ಯುಗ್ರ ಹಿಂದೂ ಮೂಲಭೂತವಾದದ ಕಡೆ ಹೆಜ್ಜೆ ಹಾಕತೊಡಗಿದ್ದರು. ಹಿಂದೂ ಧರ್ಮದ ಐಕ್ಯತೆಯ ಉದ್ದೇಶ ದಿಂದ ಸ್ಥಾಪಿತವಾದ ಆರ್ಯ ಸಮಾಜ ಒಂದು ಉಗ್ರ ಧಾರ್ಮಿಕ ಸಂಘಟನೆಯ ಸ್ವರೂಪ ಪಡೆದಿತ್ತು. ಈ ಆರ್ಯ ಸಮಾಜದ ಭಾಗವಾಗಿದ್ದ ‘ಜಾತ್ – ಪಾತ್ ತೊಡಕ್ ಮಂಡಲ’ ದ ಯುವಕರು ಸಂಘಟಿಸಿದ್ದ ಸಭೆಯೊಂದರಲ್ಲಿ ಬಾಬಾ ಸಾಹೇಬರನ್ನು ಆಹ್ವಾನಿಸಿದ್ದು ನಂತರದಲ್ಲಿ ವಾಚನವಾಗದ ಅವರ ಭಾಷಣ “ಜಾತಿವಿನಾಶ” (Annihilation of Caste) ಪ್ರಬಂಧದ ಸ್ವರೂಪದಲ್ಲಿ ಹೊರಬಂದದ್ದು, ಪೂನ ಒಪ್ಪಂದವಾದದ್ದು ಈ ದಶಕದಲ್ಲಿಯೇ. ಹಾಗೆಯೇ, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರು ನೇಣುಗಂಬವೆರಿದ್ದೂ ಇದೇ ದಶಕದಲ್ಲಿ. ಒಟ್ಟಿನಲ್ಲಿ ಕಾನ್ಶಿರಾಂ ಹುಟ್ಟಿದ ಕಳೆದ ಶತಮಾನದ ಮೂವತ್ತರ ದಶಕ ಭಾರತವು ನಾನಾ ರೀತಿಯ ಕ್ರಾಂತಿ ಕುಲುಮೆಯಲ್ಲಿ ಕುದ್ದ ಅವಧಿ.

ಅಗಲಿದ ಯುಗ ಪ್ರವರ್ತಕ
೧೯೩೬ ರಲ್ಲಿ ಬಾಬಾ ಸಾಹೇಬ್ ‘ಸ್ವತಂತ್ರ ಕಾರ್ಮಿಕರ ಪಕ್ಷ’ (Indepedent Labour Party) ಎಂಬ ಪಕ್ಷವನ್ನು ಹುಟ್ಟು ಹಾಕಿದರೂ ಅದು ಯಶಸ್ಸು ಕಂಡಿರಲಿಲ್ಲ. ಚೆನ್ನೈ ನಲ್ಲಿ ೧೯೪೪ ರ ಸೆಪ್ಟೆಂಬರ್ ೨೪ ರಂದು ಬಾಬಾಸಾಹೇಬ್ ಒಂದು ಐತಿಹಾಸಿಕ ಕರೆ ನೀಡಿ “ನಮ್ಮ ಅಂತಿಮ ಗುರಿ ಈ ದೇಶವನ್ನು ಅಳುವುದು” ಎಂದು ಘೋಷಿಸಿದ್ದರು. ರಾಜಕೀಯ ಸ್ವಾತಂತ್ರ್ಯ ಬಂದ ನಲವತ್ತರ ದಶಕವು ಸಂದು ಐವತ್ತರ ದಶದ ಅಂಚಿಗೆ ಭಾರತವು ಬಂದು ನಿಂತಾಗ ಬಾಬಾ ಸಾಹೇಬ್ ದೇಶದ ಮೊದಲ ನೆಹರು ಮಂತ್ರಿ ಮಂಡಲದಲ್ಲಿ ಕಾನೂನು ಮಂತ್ರಿಗಳಾದರು. ನಂತರದಲ್ಲಿ ಸೆಪ್ಟೆಂಬರ್ ೨೯, ೧೯೫೧ರಲ್ಲಿ ಮಹಿಳೆಯರ ಹಕ್ಕು ರಕ್ಷಣೆ ಮತ್ತು ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ವಿಚಾರದಲ್ಲಿ ತಮ್ಮದೇ ಮಂತ್ರಿಮಂಡಲದ ಸಹೋದ್ಯೋಗಿಗಳು ಅಸಹಕಾರ ತೋರಿದ್ದನ್ನು ಪ್ರತಿಭಟಿಸಿ ರಾಜೀನಾಮೆ ಇತ್ತರು. Young_Ambedkar೧೯೫೬ ರ ಅಂಚಿಗೆ ಬಾಬಾ ಸಾಹೇಬರನ್ನು ಕಳೆದುಕೊಂಡ ದಲಿತ ಚಳುವಳಿ ಬಹುತೇಕವಾಗಿ ಅನಾಥವಾಗಿತ್ತು.

೩ ಅಕ್ಟೋಬರ್ ೧೯೫೭ ರಲ್ಲಿ ಬಾಬಾ ಸಾಹೇಬರ ಆಶಯಗಳನ್ನು ಹೊತ್ತ ರಿಪಬ್ಲಿಕನ್ ಪಾರ್ಟಿ ಸ್ಥಾಪನೆಯಾಯಿತು. ಒಂದೇ ವರ್ಷದಲ್ಲಿ ಒಟ್ಟಾರೆ ತಳಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸಾಗಬೇಕಿದ್ದ ಈ ಪಕ್ಷ ಕೇವಲ ಮಹಾರಾಷ್ಟ್ರದ ಮಹರ್ ಸಮುದಾಯದ ಒಂದು ಪಕ್ಷವಾಗಿ ಪರಿವರ್ತನೆಯಾಯಿತು.

ಹೊಸ ಯುಗ ಪ್ರವರ್ತಕನೊಬ್ಬನ ಜನನ:
ಕಾನ್ಶಿರಾಂರ ತಂದೆಯ ತಂದೆ ತಾತ ಮೊದಲನೇ ಮಹಾ ಯುದ್ಧದಲ್ಲಿ ಸೇನಾ ಸೇವೆ ಸಲ್ಲಿಸಿದ್ದರು. ಅವರ ಪರಿವಾರದಲ್ಲಿ ಅವರ ತಂದೆಯವರನ್ನು ಬಿಟ್ಟು ಬಹುತೇಕ ಹಿರಿಯರೂ ಸೈನ್ಯದಲ್ಲಿ ಸೇವೆ ಸಲ್ಲಿಸಿದವರೇ ಆಗಿದ್ದರು. ಇನ್ನು ಅವರ ಪರಿವಾರ ಬಹು ಹಿಂದೆ ಸಿಖ್ ಧರ್ಮಕ್ಕೆ ಸೇರಿದ್ದ ಕಾರಣ ಬಹುತೇಕ ದಲಿತ ಕುಟುಂಬಗಳ ಮೇಲೆ ಜರುಗುವಷ್ಟು ಪ್ರಮಾಣದ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ಕ್ರೌರ್ಯ ಅವರನ್ನು ತಟ್ಟಿರಲಿಲ್ಲ.

ರೂಪನಗರದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದ ಕಾನ್ಶಿರಾಂ ೧೯೫೫ ರಲ್ಲಿ ಇಂದಿನ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನನಲ್ಲಿನ ಸರ್ವೇ ಆಫ್ ಇಂಡಿಯಾ ಸೇರಿಕೊಂಡರು. ಯೌವನದಲ್ಲಿ ಕಾನ್ಶಿರಾಂರನ್ನು ದೇಹದಾಢ್ಯದಲ್ಲಿ ಮೀರಿಸಿದವರೇ ಇರಲಿಲ್ಲ. ಡೆಹ್ರಾಡೂನ್ ನಲ್ಲಿ ನಡೆಯುತ್ತಿದ್ದ ಅನೇಕ ಸೈಕಲ್ ಸ್ಪರ್ಧೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು. ಹಾಗೆಯೇ ಡೆಹ್ರಾಡೂನ್ ಸುತ್ತಮುತ್ತಲಿನ ಕೆಮ್ಟಿ ಜಲಪಾತ, ಮಸ್ಸೂರಿ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಸೈಕಲ್ ಮುಖಾಂತರವೇ ಸಂಚರಿಸಿದ್ದರು. ಡೆಹ್ರಾಡೂನ್ನಲ್ಲಿ ಶುರುವಾದ ಅವರ ಸೈಕಲ್ ಯಾತ್ರೆ ಅವರ ಜೀವನದಾದ್ಯಂತ ಮುಂದುವರೆದಿತ್ತು.

೧೯೫೬ ರ ಡಿಸೆಂಬರ್ ೭ ರಂದು ಶುಕ್ರವಾರ ಕಾನ್ಶಿರಾಂ ಎಂದಿನಂತೆ ತಮ್ಮ ಕಚೇರಿಗೆ ಹೋದರು. ಅಲ್ಲಿ ತಮ್ಮ ಒಬ್ಬ ಸಹೋದ್ಯೋಗಿ ಪರಶುರಾಮ್ ಅಂದು ಊಟ ತಂದಿರಲಿಲ್ಲ. ತಮ್ಮ ಊಟವನ್ನು ಹಂಚಿಕೊಳ್ಳಲು ಕಾನ್ಶಿರಾಂ ಅವರನ್ನು ಕೇಳಿಕೊಂಡರು. ತುಂಬಾ ದುಃಖ ಮತ್ತು ಬೇಸರದಲ್ಲಿದ್ದ ಈ ಸಹೋದ್ಯೋಗಿ ಅಂದು ತಾವು ಉಪವಾಸವಿರುವುದಾಗಿ ತಿಳಿಸಿದರು. ಅದಕ್ಕೆ ಕಾರಣ ವಿಚಾರಿಸಿದಾಗ ಪರಶುರಾಮ್ ‘ನೆನ್ನೆ ದಿನ ಬಾಬಾಸಾಹೇಬ್ ಮಹಾ ಪರಿನಿಬ್ಬಾಣ ಹೊಂದಿದ್ದಕ್ಕೆ ನಾನು ಶೋಕಾಚರಣೆಯಲ್ಲಿದ್ದೇನೆ’ ಎಂದು ತಿಳಿಸಿದರು.

ಅದೇ ಮೊದಲ ಬಾರಿ ಕಾನ್ಶಿರಾಂ ಬಾಬಾಸಾಹೇಬ ಮತ್ತವರ ಮಹತಿಯನ್ನು ಕುರಿತು ಅರಿತದ್ದು. ತಕ್ಷಣವೇ ಕಾನ್ಶಿರಾಂ ಪರಶುರಾಮರಿಂದ ಬಾಬಾಸಾಹೇಬರ ಪಟವೊಂದನ್ನು ಪಡೆದು ತಮ್ಮ ಕೋಣೆಯಲ್ಲಿ ಹಾಕಿಕೊಳ್ಳುತ್ತಾರೆ. ಹಾಗೆಯೇ ತುಂಬಾ ಅಂದಿನ ದಿನಗಳಲ್ಲಿ ದುರ್ಲಭವಾಗಿದ್ದ ಬಾಬಾಸಾಹೇಬರ ಬರಹಗಳನ್ನು ಸಂಗ್ರಹಿಸಲು ತೊಡಗುತ್ತಾರೆ. ಅಂದಿನಿಂದಲೇ ಶುರುವಾದ ದಮನಿತರ ಕುರಿತ ಕಾಳಜಿ ಮತ್ತು ತಮ್ಮ ಗುರಿಯನ್ನು ತಲುಪಲು ಬೇಕಿರುವ ಶ್ರದ್ಧೆಯನ್ನು ಕಾನ್ಶಿರಾಂ ತಮ್ಮ ಕೊನೆಯುಸಿರಿನವರೆಗೂ ಕಾಪಾಡಿಕೊಂಡು ಬಂದರು.

ಕಾನ್ಶಿರಾಂ ಪುಣೆಯಲ್ಲಿರುವಾಗ ಬಾಬಾಸಾಹೇಬರ ಬಹುತೇಕ ಪ್ರಬಂಧ ಮತ್ತು ಲೇಖನಗಳನ್ನು ಓದಿಕೊಂಡರು. ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ ಕೃತಿ ಎಂದರೆ ಬಾಬಾಸಾಹೇಬರ ‘ಅನಿಹಿಲೇಶನ್ ಆಫ್ ಕಾಸ್ಟ (“Annihilation of Caste”). ಈ ಪ್ರೌಢ ಪ್ರಬಂಧವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ಓದಿಕೊಂಡರು. ಹೀಗಿರುವಾಗ ೧೯೬೫ ರ ಆರಂಭದಲ್ಲಿ ಕೇಂದ್ರ ಸರಕಾರ ತನ್ನ ರಜಾ ಪಟ್ಟಿಯನ್ನು ಪರಿಷ್ಕರಿಸಿ ಪ್ರಕಟಣೆ ಹೊರಡಿಸಿತು. ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ರದ್ದುಗೊಳಿಸಿ ತಿಲಕ ಜಯಂತಿಗೆ ರಜಾ ಘೋಷಿಸಿ ದೀಪಾವಳಿಗೆ ಒಂದು ದಿನ ಜಾಸ್ತಿ ರಜೆ ಕೊಡಲಾಗಿತ್ತು. kanshiramಇದನ್ನು ಪ್ರತಿಭಟಿಸಿ ರಾಜಸ್ಥಾನದ ದಲಿತ ಉದ್ಯೋಗಿ ದೀನಾ ಭಾನ ಎಂಬುವವರು ಅಂದಿನ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಮಾಡಿದರು. ದೀನಾರನ್ನು ಕೇಂದ್ರ ಸರಕಾರದ ಸೇವೆಯಿಂದ ಸಸ್ಪೆಂಡ್ ಮಾಡಲಾಯಿತು.

ಇದನ್ನು ಪ್ರತಿಭಟಿಸಿ ರಾಷ್ಟ್ರಾದ್ಯಂತ ಚಳುವಳಿಯನ್ನು ಸಂಘಟಿಸಿದ ಕಾನ್ಶಿರಾಂ ದೀನಾ ಭಾನರಿಗೆ ಕಾನೂನು ನೆರವನ್ನೂ ಒದಗಿಸಿ ಕೊಡುತ್ತಾರೆ. ರಾಷ್ಟ್ರವ್ಯಾಪಿ ಚಳವಳಿಗೆ ಮಂಡಿಯೂರಿದ ಸರಕಾರ ಬುದ್ಧ ಮತ್ತು ಅಂಬೇಡ್ಕರ್ ಜಯಂತಿಗಳ ರಜೆಯನ್ನು ಮರುಸ್ಥಾಪನೆ ಮಾಡಿತು; ಹಾಗೆಯೇ ದೀನಾ ಭಾನರನ್ನೂ ಕೆಲಸಕ್ಕೆ ಸೇರಿಸಿಕೊಂಡಿತು. ಈ ಸಂಘಟಿತ ಹೋರಾಟದಿಂದ ಪ್ರೇರಣೆಗೊಂಡ ಮನ್ಯವರರು ೧೯೬೫ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಸಾರ್ವಜನಿಕ ಜೀವನಕ್ಕೆ ಧುಮುಕುತ್ತಾರೆ.

ಅಂದು ಆವರು ತೊಟ್ಟ ಪ್ರತಿಜ್ಞೆ: “I will never get married, I will never acquire any property, I will never visit my home, I will devote and dedicate the rest of my life to achieve the goals of Phule-Ambedkar movement.” (“ನಾನೆಂದೂ ಮದುವೆಯಾಗುವುದಿಲ್ಲ, ನಾನೆಂದಿಗೂ ಅಸ್ತಿಯನ್ನು ಸಂಪಾದಿಸುವುದಿಲ್ಲ, ನನ್ನ ಮನೆಗೆ ಎಂದಿಗೂ ಹೋಗುವುದಿಲ್ಲ, ನನ್ನ ಸಂಪೂರ್ಣ ಜೀವನವನ್ನು ಫುಲೆ-ಅಂಬೇಡ್ಕರ್ ಚಳುವಳಿಗೆ ಮುಡಿಪಾಗಿಡುತ್ತೇನೆ.”)

(ಮುಂದುವರೆಯುತ್ತದೆ…)

ಕಾನ್ಶಿರಾಂ – ಕಲ್ಲಿದ್ದಲ ಕಗ್ಗತ್ತಲೆಯನ್ನು ಕೊಹಿನೂರೊಂದು ಕಳೆದ ಕಥೆ : ಭಾಗ-1


– ಶ್ರೀಧರ್ ಪ್ರಭು


ಪುಣ್ಯನಗರಿಯಲ್ಲೊಂದು ಒಪ್ಪಂದ

ಅವನು ವಿಶ್ವನಾಥ. ಅವನೇ ಜಗನ್ನಾಥ. ಆ ಲೋಕ ಈ ಲೋಕ ಸಮಸ್ತ ಲೋಕಗಳ ನಿಖಿಲ ಚರಾ ಚರಗಳಿಗೆಲ್ಲ ನಾಥ. ಇವೆಲ್ಲಾ ಲೋಕಗಳ ನಡುಮಧ್ಯದಲ್ಲಿದ್ದು ಸಮಸ್ತ ಲೋಕಗಳಿಗೂ ಬೆಳಕು ನೀಡುವ ನಗರಿ – ಕಾಶಿ – ಅವನ ರಾಜಧಾನಿ. ಇಂಥಹ ಪರಮ ಪವಿತ್ರ ಕಾಶಿಯ ಹೃದಯವೆಂದರೆ ಮದ ಮತ್ತು ಮೋಹವನ್ನು ಮರ್ದಿಸಿ ಮದನ ಮೋಹನನೆನಿಸಿಕೊಂಡಿದ್ದ ಮಾಳವೀಯರು. ಅಂಥಹ ಮಾಳವೀಯರಂಥಹ ಮಾಳವೀಯರಿಗೆ ಸಮಸ್ತ ವಿಶ್ವದ ಹಿಂದೂ ಸಮಾಜದ ಪರವಾಗಿ ಭರತ ಭೂಮಿಯ ಮಾಂಗಲ್ಯದಂತಿದ್ದ ಮಹಾತ್ಮರ ಆತ್ಮವನ್ನು ಪರಮಾತ್ಮನೊಂದಿಗೆ ಲೀನವಾಗದಂತೆ ತಡೆಯುವ ಮಹತ್ತರ ಜವಾಬ್ದಾರಿ.

ಈ ಪಾರಮಾರ್ಥಿಕ ಕರ್ತವ್ಯಕ್ಕೆ ಮುಹೂರ್ತ ನಿಗದಿಯಾಗಿದ್ದು ಪರಮ ಭಯಂಕರನಾದ ಯಮದೇವನಿಗೆ ಸ್ವಂತ ಅಣ್ಣನಾದ ಶನಿದೇವರು ಅಧಿಪತಿಯಾಗಿರುವ ಶನಿವಾರ. ಕೆಂಪು ಮುಸುಡಿಯ ಮ್ಲೇಚ್ಚರು ಇನ್ನು ಅವರ ದಾಸ್ಯ ಸುಖವನ್ನೇ ನೆಚ್ಚಿದ ನಮ್ಮವರು ೧೯೩೨ ರನೇಯದ್ದು ಎಂದು ಕರೆಯುವ ವರ್ಷದ ಒಂಬತ್ತನೇ ತಿಂಗಳು. ಈ ಪುಣ್ಯ ಕಾರ್ಯಕ್ಕೆ ನಿಗದಿಯಾದ ಸ್ಥಳವೂ ಪುರಾಣ ಪ್ರಸಿದ್ದ ಪೇಶ್ವೆಗಳು ಆಳಿದ ಪುಣ್ಯ ಪುರಿ ಪುಣೆ. ಕೊನೆಗೂ ಪುಣೆ ಆ ಮಹಾನ್ ಒಪ್ಪಂದಕ್ಕೆ ಸಾಕ್ಷಿಯಾಯಿತು. ಪುಣೆಯ ಪುಣ್ಯದಿಂದ ದೇವ ನಿರ್ಮಿತ ವರ್ಣಾಶ್ರಮ ಧರ್ಮ ಚಿರಕಾಲ ರಕ್ಷಿಸಲು ಮಹಾತ್ಮರು ತೊಟ್ಟ ಸಂಕಲ್ಪ ಸಾರ್ಥಕವಾಯಿತು.

ಇದೆಲ್ಲಾ ನಡೆದು ಬರೋಬ್ಬರಿ ಅರ್ಧ ಶತಮಾನ ಉರುಳಿತು. ಈಗ ಮ್ಲೇಚ್ಚರ ವರ್ಷ ೧೯೮೨. ಪುಣೆಯ ಪುಣ್ಯ ಒಪ್ಪಂದದ ದಿನವೇ, ಈ ಘೋರ ಕಲಿಯುಗದಲ್ಲಿ ದೆಹಲಿಯೆಂದು ಕರೆಯಲಾಗುವ ಇಂದ್ರಪ್ರಸ್ಥದ ಕರೋಲ್ ಬಾಗ್ ಎಂಬಲ್ಲಿ ಒಬ್ಬ ನಗಣ್ಯ ಅತಿಶೂದ್ರ ಚಮ್ಮಾರರ ವಂಶದ ವ್ಯಕ್ತಿಯೊಬ್ಬ ಅಂಗ್ರೇಜಿ ಭಾಷೆಯಲ್ಲಿ “ಚಮಚಾ ಯುಗ” ವೆಂಬ ಪುಸ್ತಕ ಬರೆದು ಪ್ರಕಟಿಸಿದ. ಕ್ಷರದ ಲವ ಮಾತ್ರವೂ ಸೋಕದಂತೆ ಯುಗ ಯುಗಾದಿಗಳಿಂದ ಅಕ್ಷರವನ್ನು ಅತ್ಯಂತ ಜೋಪಾನವಾಗಿ ರಕ್ಷಿಸಿಕೊಂಡು ಬಂದಿದ್ದ ಸಮುದಾಯವನ್ನು ನಾಚಿಸುವಂತೆ ಈ ನವ ಸಾಕ್ಷರ ಇಂಗ್ಲಿಷ್ ಪುಸ್ತಕವೊಂದನ್ನು ಬರೆದು ಬಿಟ್ಟಿದ್ದ! ಅದೂ ಏನೆಂದು? ನಮ್ಮ ಪುಣ್ಯಪುರಿಯ ಒಪ್ಪಂದದ ದಿನವೇ ಚಮಚಾಗಳಿಗೆ ಯುಗಾದಿಯೆಂದು. ಇದನ್ನು ಬರೆದದ್ದು ಚಮಚಾಗಳಿಗೋಸ್ಕರವಾದರೂ, ಅದನ್ನು ಓದಲು ಈ ಚಮಚಾಗಳು ತಮ್ಮನ್ನು ಹಿಡಿದಿದ್ದ ಕೈಗಳ ಅನುಮತಿ ಕೋರಿದವು; ಎಂದಿನಂತೆ ಅನುಮತಿ ನಿರಾಕರಣೆಯಾಯಿತು. ಕೈಗಳು ಮಾತ್ರ ಈ ಪುಸ್ತಕವನ್ನು ಚೆನ್ನಾಗಿ ಮಸ್ತಕಕ್ಕೆ ಇಳಿಸಿಕೊಂಡರು. ಅದರೂ ಈ ಚಮಚಾಗಳ ಹಣೆ ಬರಹ ಗೊತ್ತಿದ್ದ ಕಾರಣ ಕೈಗಳು ಸುಮ್ಮನೆ ಕಿಸಕ್ಕೆಂದು ಒಮ್ಮೆ ನಕ್ಕು ಸುಮ್ಮನಾದವು. ಉತ್ತರ ದೇಶದ ಕೈಗಳ ರಾಣಿಗೆ ಮಾತ್ರ ಅಪಾಯದ ಗ್ರಹಿಕೆಯಾಯಿತು. ಇನ್ನು ಕೈಗಳ ಶೋಭೆಯನ್ನು ನೂರ್ಮಡಿಗೊಳಿಸಿ ಕಂಗೊಳಿಸುತ್ತಿದ್ದ ಕಮಲಕ್ಕೆ ಮಾತ್ರ ಬೇಗ ಈ ಅಪಾಯದ ಅರಿವಾಗಿತ್ತು.

ಇದಾಗಿ ಹತ್ತು ವಸಂತಗಳು ಕಳೆದವು. ಅನೇಕ ವರ್ಷಗಳು ಕರದಲ್ಲೇ ಶೋಭಿಸಿದ ಕಮಲವು ಕರವನ್ನೇ ನುಂಗಿ ಹಾಕಿತ್ತು. ಇನ್ನೊಂದು ರೀತಿ ನೋಡಿದರೆ ಕರಕ್ಕೂ ಕಮಲಕ್ಕೂ ಸಂಪೂರ್ಣ ತಾದಾತ್ಮ್ಯ ಸಾಧ್ಯವಾಗಿತ್ತು. ಹೀಗಾಗಿಯೇ, ಪುಣ್ಯ ಪುರಿಯ ಒಪ್ಪಂದಕ್ಕೆ ಸಹಿ ಹಾಕುವಂತೆ ನಾವು ಮಣಿಸಿದ ಬಹುಜನ ಶುದ್ರಾತಿಶೂದ್ರರ ಮಹಾ ಪುರುಷ ಬಾಬಾ ಸಾಹೇಬರ ಪುಣ್ಯ ತಿಥಿಯಂದೇ ರಾಮ ಜನ್ಮ ಭೂಮಿಗೆ ಮುಕ್ತಿಯೆಂದು ಕರಕಮಲಗಳು ನಿಶ್ಚಯ ಮಾಡಿಯಾಗಿತ್ತು. ಇನ್ನು ಕರಕಮಲಗಳ ಸ್ವಯಂ ಸೇವೆ ಸ್ವೀಕರಿಸುವ ಅಧಿಪತಿಗಳ ಆಶೀರ್ವಾದದಿಂದ ‘ಕರ’ ಸೇವೆ ಸಾಂಗವಾಗಿ ನೆರವೇರಿ ದೇಶ ಶತಮಾನಗಳ ಅಪಮಾನದಿಂದ ಮುಕ್ತಿಹೊಂದಿತು. ರಾಮ ರಾಜ್ಯ ಸ್ಥಾಪನೆಗೆ ಕ್ಷಣ ಗಣನೆ ಶುರುವಾಯಿತು.

ಇದಾಗಿ ಕೆಲಕಾಲ ಸಂದು ಈಗ ೧೯೯೫ ನೆ ವರ್ಷದ ಮಧ್ಯ ಭಾಗ. ಪುರುಷರಲ್ಲಿ ಸರ್ವೋತ್ತಮ ಶ್ರೀರಾಮಚಂದ್ರನ ಅನುಜ ಲಕ್ಷ್ಮಣನು ಕಟ್ಟಿಸಿದ ಊರು ಲಖನೌನಲ್ಲಿ ಬಡ ಚಮ್ಮಾರನ ಮಗಳೊಬ್ಬಳು ತನ್ನ ಎಡಗಾಲ ಹೆಬ್ಬೆರಳನ್ನು ಅಕಾರಣವಾಗಿ ನೆಲಕ್ಕೆ ಸೋಕಿಸಿದಳು. ಆ ಸಪ್ಪಳವನ್ನು ಕೇಳಿಸಿಕೊಂಡ ಗಂಗೆಯಲ್ಲಿ ಮಿಂದೆದ್ದು ಬಂದ ವಿರ್ಪೋತ್ತಮ ದಿವಾನರಾದಿಯಾಗಿ ಸಮಸ್ತ ಅಧಿಕಾರಿ ಗಣ ನತಮಸ್ತಕವಾಗಿ, ವಿನೀತ ಭಾವದಿಂದ ಕೈಮುಗಿತು ನಿಂತು “ಏನಪ್ಪಣೆ” ಎಂದಿತು!

ಯಾವ ಅರ್ಯಾವರ್ತವು ಎರಡು ಸಾವಿರ ವರ್ಷಗಳ ಕಾಲ ಬುದ್ಧನನ್ನು ಧಿಕ್ಕರಿಸಿ ವೈದಿಕ ದಿಗ್ವಿಜಯಕ್ಕೆ ಸಾಕ್ಷಿಯಾಗಿತ್ತೋ, mayawati_kashiramಅದೇ ನಾಡು ಇಂದು, ಎರಡು ಸಾವಿರ ವರ್ಷಗಳು ಕಳೆದ ಮೇಲೆ, ನಲವತ್ತು ವರ್ಷದ ಪ್ರಾಯವನ್ನೂ ತಲುಪಿರದ ಬಡ ದಲಿತನ ಮಗಳೊಬ್ಬಳನ್ನು ತನ್ನ ಭಾಗ್ಯದ ಅಧಿನಾಯಕಿ ಎಂದು ಒಪ್ಪಿಕೊಳ್ಳುವ ಅನಿವಾರ್ಯಕ್ಕೆ ಬಂದು ನಿಂತಿತ್ತು!

ಕಾಶಿಯನ್ನು ಆಳಿದ್ದ ಮಾಳವೀಯರು, ಸ್ವರ್ಗದಲ್ಲೇ ಒಮ್ಮೆ ನರಳಿದರು. ಅವರು ೧೯೩೨ ರಲ್ಲಿ, ಮಹಾತ್ಮರ ಅಣತಿಯಂತೆ, ಸ್ಥಾಪಿಸಿದ ಚಮಚಾ ಯುಗ ಮತ್ತೆ ೧೯೯೨ ರಲ್ಲಿ ಸ್ಥಾಪನೆ ಯಾಗಲು ಹೊರಟಿದ್ದ ರಾಮನ ಯುಗ ಮುಗ್ಗರಿಸಿದವು!

ಆ ‘ಕಾಶಿ’ ಯ ಶಕ್ತಿ ಮತ್ತು ಈ ‘ರಾಮ’ನ ಬಲ, ಕಾನ್ಶಿರಾಂನೆಂಬ ಸಾಮಾನ್ಯರಲ್ಲಿನ ಅಸಾಮಾನ್ಯನ ಬಲದ ಮುಂದೆ kanshiramಮೊಣಕಾಲೂರಿ ಬಿಟ್ಟಿತ್ತು. ಬುದ್ಧನನ್ನು ಮತ್ತು ಧಮ್ಮವನ್ನು ಧಿಕ್ಕರಿಸಿ ಸ್ಥಾಪಿಸಿದ ದ್ವಿಜ ಸಾಮ್ರಾಜ್ಯದ ಧ್ವಜ ಅರ್ಧಕ್ಕೆ ಇಳಿದಿತ್ತು. ತಿಲಕ, ತಕ್ಕಡಿ ಮತ್ತು ತಲವಾರುಗಳ ದೈತ್ಯ ಶಕ್ತಿ ಮತ್ತು ಕುಯುಕ್ತಿಗಳು ಇವರ ದಲಿತ ಬಹುಜನ ಸಂಘಟನಾ ಶಕ್ತಿಯ ಮುಂದೆ ಹುಡಿಯಾಗಿ ಹೋದವು!

ಆದರೆ ಇದರ ರೂವಾರಿ, ಸಾಧಕ ಮತ್ತು ಸೂತ್ರಧಾರ ಮಾನ್ಯವರ ಇದಾವುದರಿಂದಲೂ ಅತಿ ಪುಳಕಗೊಳ್ಳದೆ ಸಂಪೂರ್ಣ ನಿರ್ಲಿಪ್ತ ಭಾವದಿಂದ ತಮ್ಮ ಸಂಘಟನೆಯ ಕೆಲಸದಲ್ಲಿ ತಲ್ಲೀನರಾಗಿದ್ದರು.

ಇಂದು ಯಾವುದೇ ನಿಲುವಿನ ರಾಜಕೀಯ ಚಿಂತಕ ಅಥವಾ ಕಾರ್ಯಕರ್ತ ಅಥವಾ ನಾಯಕನೊಬ್ಬ ಅಗತ್ಯವಾಗಿ ಓದಬೇಕಾದದ್ದೆಂದರೆ ಮಾನ್ಯವರರ ಜೀವನ ಚರಿತ್ರೆ. ಇದು ಭಾರತದ ಅತ್ಯಂತ ಸಂಘರ್ಷಮಯ ಮತ್ತು ರೋಚಕ ಅಧ್ಯಾಯಗಳಲ್ಲೊಂದು.

ಇದೆಲ್ಲಾ ಅತಿರಂಜಿತವಾದ ನಾಟಕೀಯ ಮತ್ತು ಪೌರಾಣಿಕ ಶೈಲಿಯಲ್ಲಿ ಹೇಳಲು ಕಾರಣವಿದೆ. ಕಾನ್ಶಿರಾಮ್ ಪ್ರವೇಶವಾಗುವವರೆಗೆ ಅಧುನಿಕ ಭಾರತದ ರಾಜಕೀಯ ಚರಿತ್ರೆಯು ಗಾಂಧಿ ಕೇಂದ್ರಿತವಾಗಿದ್ದು ಹಾಗೆಯೇ ಸಂಪೂರ್ಣವಾಗಿ ಹಿಂದೂ ಮೇಲ್ಜಾತಿಯ ಗಂಡಸಿನ ಮನಸ್ಥಿತಿಯಲ್ಲೇ ಅದ್ದಿ ಹೋಗಿತ್ತು. ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟು ನಂತರದಲ್ಲಿ ಅಧಿಕಾರ ತ್ಯಾಗ ಮಾಡಿದ್ದನ್ನು ಹೀಗೆಯೇ ಒಂದು ದೈವೀ ಪವಾಡದಂತೆ ವರ್ಣಿಸಲಾಗುತ್ತಿತ್ತು. ನಂತರದಲ್ಲೂ ಸೋನಿಯಾ ಗಾಂಧಿಯವರ ಅಧಿಕಾರ ತ್ಯಾಗದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. kanshiram-mayawatiಅಂದು ಸಂಸತ್ ಭವನದಲ್ಲಿ ಅತಿ ಹೆಚ್ಚು ಕಣ್ಣೀರು ಸುರಿಸಿದ ಮಾಜಿ ಪತ್ರಕರ್ತೆ ಮತ್ತು ಅಂದಿನ ಸಂಸದೆಯೊಬ್ಬರು ನಾಳೆಯಿಂದ ದೇಶವೇ ಇರದೇನೋ ಎಂಬಂತೆ ಪ್ರಲಾಪಿಸಿದ್ದರು. ಆದರೆ ಶತ ಶತಮಾನಗಳಿಂದ ಅನ್ನ ಮತ್ತು ಅಕ್ಷರಕ್ಕೆ ಹಾತೊರೆದ ವರ್ಗಗಳ ವ್ಯಕ್ತಿಯೊಬ್ಬ ಮೊಟ್ಟ ಮೊದಲ ಬಾರಿಗೆ ವೈದಿಕ ಶೋಷಣೆಯ ಕೇಂದ್ರಸ್ಥಾನದ ಗರ್ಭಗುಡಿಯನ್ನು ನಿಯಂತ್ರಿಸುವ ಅವಕಾಶ ಸಿಕ್ಕಿದ್ದರೂ, ಅದನ್ನು ಒಬ್ಬ ದಲಿತ ಮಹಿಳೆಗೆ ಬಿಟ್ಟು ಕೊಟ್ಟ ಪವಾಡವನ್ನು ದೇಶವಿಂದು ಮರೆತೇ ಬಿಟ್ಟಿದೆ. ಒಟ್ಟಾರೆ, ಅಧುನಿಕ ಭಾರತದ ನೈಜ ಪವಾಡವೆಂದರೆ ಕಾನ್ಶಿರಾಂ.

ನಮ್ಮ ಗಾದೆಗಳು ಯಾರನ್ನೂ ನೇರವಾಗಿ ಬೈಯ್ಯುವುದಿಲ್ಲ. ‘ಎಲ್ಲಾ ರಾಜಕಾರಣಿಗಳೂ ಬ್ರಷ್ಟರು’ ಎನ್ನುವ ಬದಲು ಹಿಂದಿ ಗಾದೆಯೊಂದು “ಕಲ್ಲಿದ್ದಲಿನ ವ್ಯಾಪಾರ ಮಾಡುವವರ ಮುಖ ಒಮ್ಮೆಯಾದರೂ ಕಪ್ಪಾಗಲೇ ಬೇಕು” ಎನ್ನುತ್ತದೆ. ಭಾರತದ ರಾಜಕೀಯವೆಂದರೇನೇ ಒಂದು ದೊಡ್ಡ ಕತ್ತಲು ಕವಿದ ಕಲ್ಲಿದ್ದಲಿನ ಗಣಿ, ಕಾನ್ಶಿರಾಂ ಅದರ ಕತ್ತಲೆಯನ್ನು ಕೆಲಹೊತ್ತಿಗಾದರೂ ಕಳೆದ ಕೋಹಿನೂರ್. ಅವರ ಚಿಂತನೆಯನ್ನು ಒಪ್ಪದಿರುವ ಜನರು ಚಿಂತನೆಯ ಹೊಸ ಹೊಳಹನ್ನು ಒಪ್ಪದಿರುವುದಿಲ್ಲ.

ಕಾನ್ಶಿರಾಮರ ಮೂಸೆಯನ್ನು ಸೇರಿದ ಅನೇಕ ‘ಚಮಚಾ’ಗಳು ದೊಡ್ಡ ದೊಡ್ಡ ಹತ್ಯಾರುಗಳಾಗಿ ಹೊರಬಂದರು. ಇದಕ್ಕೂ ಮುಖ್ಯವಾಗಿ, ಅಂಬೇಡ್ಕರ್ ತೀರಿಹೋದ ಮೂರು ನಾಲ್ಕು ದಶಕಗಳ ಅವಧಿಯಲ್ಲಿಯೇ ಅದು ಬರೀ ಪುಸ್ತಕದ ಬದನೆಕಾಯಿಯಲ್ಲ Young_Ambedkarಬದಲಿಗೆ ಅಧಿಕಾರ ಸಾಧನೆಗೊಂದು ಕೈಪಿಡಿಯೆಂದು ಸಿದ್ಧವಾಯಿತು. ಯುಗ ಪ್ರವಾದಿಯೊಬ್ಬನ ಸಿದ್ಧಾಂತಕ್ಕೆ ಇಷ್ಟು ಬೇಗ ಮನ್ನಣೆ ಕೊಡಿಸಿದ ಮತ್ತೊಬ್ಬ ಪ್ರವಾದಿ ಕಾನ್ಶಿರಾಂ.

ಅಕ್ಟೋಬರ್ ಒಂಬತ್ತರಂದು ಕಾನ್ಶಿರಾಂ ನಮ್ಮನ್ನಗಲಿ ಹತ್ತಿರ ಹತ್ತಿರ ಒಂದು ದಶಕ; ಆದರೆ ಅವರ ಸಂದೇಶ ಮತ್ತು ಚಿಂತನೆ ಎಂದಿಗೂ ಚಿರಾಯು.

(ಮುಂದುವರೆಯುವುದು…)